Monthly Archives: August 2015

ಸರಕಾರಿ ದುಡ್ಡಿನ ಸಮುದಾಯ ಭವನಕ್ಕೂ ಜಾತಿ ಹೆಸರು

                                                                                                                           – ಜೀವಿ

ಮುಂಜಾನೆ ಎಳೆ ಬಿಸಿಲು ಏರುತ್ತಿತ್ತು. ಬಿಸಿಲಿಗೆ ಎದುರಾಗಿ ಬೂದಿ ಜವರಪ್ಪ ಕುಳಿತ್ತಿದ್ದ. ಚಡ್ಡಿ ಸಂಟದ ಮೇಲಿರುವ ಬದಲಿಗೆ ಕೈಯಲ್ಲಿತ್ತು. ಚಡ್ಡಿ ಬದಲಿಗೆ ಹರುಕು ಪಂಚೆಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದ. ಕಣ್ಣು ಅಷ್ಟಾಗಿ ಕಾಣಿಸದಿದ್ದರೂ ಚಡ್ಡಿಯಲ್ಲಿ ಏನೋ ಹುಡುಕಾಡುತ್ತಿದ್ದ. ಸತ್ತ ದನಕರುಗಳ ಚರ್ಮ ಸುಲಿದು ಮಾರಾಟ ಮಾಡುವುದು ಬೂದಿ ಜವರಪ್ಪನ ಕೆಲಸ. ಸತ್ತ ದನದಲ್ಲಿ ತನಗೆ ಬೇಕಾದ ಮಾಂಸ ತಂದು ಒಣಗಿಸಿ ಇಟ್ಟುಕೊಳ್ಳುತ್ತಿದ್ದ. ಅವನ ಮನೆಗೆ ಎದುರಿನದ್ದೆ ನನ್ನ ಮನೆಯಾಗಿದ್ದರಿಂದ ಹೆಚ್ಚು ಸಲಿಗೆ ಇತ್ತು. ಆಗೊಮ್ಮೆ ಈಗೊಮ್ಮೆ ಅವನು ಹೇಳಿದ ಸಣ್ಣಪುಟ್ಟ ಕೆಲಸ ಮಾಡಿ ನಾನೂ ಸುಟ್ಟ ಕೊರ ಬಾಡಲ್ಲಿ ಪಾಲು ಪಡೆಯುತ್ತಿದೆ. ಚರ್ಮ ಸುಲಿಯೋದು ಬಾರಿ ಸುಲಭ, ಕಾಲೇಜಿಗೆ ರಜೆ ಇದ್ದಾಗ ನನ್ನ ಜೊತೆ ಬಾsevalal_samudhaya_bhavan ಕಸುಬು ಕಲಿಸಿಕೊಡ್ತಿನಿ ಅನ್ನುತ್ತಿದ್ದ.

ಚರ್ಮ ಸುಲಿದು ಮಾರಾಟ ಮಾಡುತ್ತಿದ್ದರಿಂದ ಚಡ್ಡಿ ಜೇಬಿನಲ್ಲಿ ಪುಡಿಗಾಸು ಇದ್ದೇ ಇರುತ್ತಿತ್ತು. ತೊಳೆಯದೆ ಮಾಸಿ ಹೋಗಿದ್ದ ಚಡ್ಡಿ ಕೈಯಲ್ಲಿ ಹಿಡಿದಿದ್ದ ಬೂದಿ ಜನವರಪ್ಪ ಏನು ಮಾಡುತ್ತಿದ್ದಾನೆ ಎಂಬುದು ದೂರಕ್ಕೆ ಕಾಣಿಸಲಿಲ್ಲ. ಕುತೂಹಲ ತಡೆಯಲಾರದೆ ಹತ್ತಿರಕ್ಕೆ ಹೋದೆ. ‘ಬಡ್ಡಿ ಮಗ್ನವು ಜಾಸ್ತಿ ಆಗಿ, ರಾತ್ರಿಯೆಲ್ಲ ನಿದ್ದೆ ಇಲ್ಲ ಕಣೊ ಹುಡುಗ’ ಎಂದ. ಚಡ್ಡಿಯ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿದ್ದ ಕೂರೆಗಳನ್ನು ಹುಡುಕಿ ಕೊಲ್ಲುತ್ತಿರುವುದು ಅರ್ಥವಾಯಿತು. ಕಣ್ಣಿನ ದೃಷ್ಟಿ ಕಡಿಮೆ ಇದ್ದ ಕಾರಣಕ್ಕೆ ಕೂರೆ ಹುಡುಕಿ ಕೊಡು ಎಂದು ನನಗೆ ಹೇಳಿದ. ತೊಳೆದು ತಿಂಗಳಾಗಿರುವ ಚಡ್ಡಿ ಮುಟ್ಟಲು ನಾನು ಒಪ್ಪಲಿಲ್ಲ. ಕೊರ ಬಾಡ ಸುಟ್ಟು ಕೊಡ್ತಿನಿ ಎಂಬ ಆಸೆ ಹುಟ್ಟಿಸಿ ಕೂರೆ ಹುಡುಕುವ ಕೆಲಸ ನನಗೊಪ್ಪಿಸಿದ. ಹೈಸ್ಕೂಲ್ ಹಾಸ್ಟೆಲ್ನಲ್ಲಿದ್ದಾಗ ನನ್ನ ಚಡ್ಡಿಯಲ್ಲೂ ಕೂರೆಗಳು ಜಾಗ ಪಡೆದಿದ್ದ ಕಾರಣ ಕೂರೆಗಳನ್ನು ಕುಕ್ಕುವ ಅಭ್ಯಾಸ ಮೊದಲೇ ರೂಢಿಯಾಗಿತ್ತು. ಕೂರೆ ಹುಡುಕಿ ಕುಕ್ಕುವ ಕೆಲಸ ಮುಂದುವರಿದಿತ್ತು. ಓಡಿ ಬಂದ ಕಾಳಕ್ಕ ದಾಸಪ್ಪನ ಸಾವಿನ ಸುದ್ದಿ ತಿಳಿಸಿದಳು. ಒಂದೆರಡು ತಿಂಗಳಿಂದ ಜೀವ ಬಿಗಿ ಹಿಡಿದು ಮೂಲೆ ಸೇರಿದ್ದ ದಾಸಪ್ಪ ಕೊನೆಯುಸಿರೆಳೆದಿದ್ದ್ದ. ನನ್ನ ಕೈಲಿದ್ದ ಚಡ್ಡಿ ಕಿತ್ಕೊಂಡು ಅಲ್ಲೆ ಹಾಕಿಕೊಂಡ ಬೂದಿ ಜವರಪ್ಪ ಸಾವಿನ ಮನೆಯತ್ತ ತೆರಳಿದ.

ನೆಂಟರಿಷ್ಟರಿಗೆ ಸುದ್ದಿ ಮುಟ್ಟಿಸಿ ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿತು. ದಾಸಪ್ಪನಿಗೆ ಇದ್ದ ಮೂರು ಮಕ್ಕಳು ಸೇರಿ ತಿಥಿ ಕಾರ್ಯವನ್ನು ದೊಡ್ಡದಾಗಿ ಮಾಡಲು ತೀಮರ್ಾನಿಸಿದರು. 2001-02ನೇ ಸಾಲಿನಲ್ಲಿ ಸಂಸದರ ನಿಧಿಯ ನೆರವಿನಿಂದ ಸಮುದಾಯ ಭವನವೊಂದು ಊರಿನಲ್ಲಿ ತಲೆ ಎತ್ತಿತು. 10 ಲಕ್ಷ ವೆಚ್ಚದಲ್ಲಿ ಕಟ್ಟಿದ ದೊಡ್ಡ ಸಮುದಾಯ ಭವನ ಅದಾಗಿತ್ತು. ಆ ತನಕ ಬೀದಿ ಅಥವಾ ಮನೆಗಳಲ್ಲಿ ನಡೆಯುತ್ತಿದ್ದ ಮದುವೆ, ತಿಥಿ ಹಾಗೂ ಇನ್ನಿತರ ಸಮಾರಂಭಗಳ ಊಟ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡವು. ಎಲ್ಲರೂ ಸೇರಿ ದಾಸಪ್ಪನ ತಿಥಿ ಕಾರ್ಯವನ್ನು ಸಮುದಾಯ ಭವನದಲ್ಲೆ ಮಾಡಲು ನಿರ್ಧರಿಸಿದರು.

11ನೇ ದಿನಕ್ಕೆ ತಿಥಿ ಕಾರ್ಯದ ಊಟ ಸಮುದಾಯ ಭವನದಲ್ಲಿ ನಡೆಯಿತು. ಊರಿನ ದಲಿತರು ಮತ್ತು ನೆಂಟರಿಷ್ಟರು ಊಟ ಮಾಡಿದರು. ಊರ ಮುಂದೆ ಮೇಲ್ವರ್ಗದ ಮನೆಗಳ ನಡುವೆ ಸಮುದಾಯ ಭವನ ಇರುವ ಕಾರಣ ಜಾತಿಯ ಅರಿವಿಲ್ಲದ ಮೇಲ್ಜಾತಿ ಹತ್ತಾರು ಮಕ್ಕಳು ಊಟ ಮಾಡಿ ಮನೆಗೆ ಹೋದರು. ಊಟ ಮಾಡಿ ಹೋದ ಮಕ್ಕಳನ್ನು ಕಂಡು ಹೆತ್ತವರ ಕೋಪ ನೆತ್ತಿಗೇರಿತು. ಹೊಲೇರ ಮನೆ ಊಟ ಮಾಡಿದ ಮಕ್ಕಲ ಕೈ ಬಾಸುಂಡೆ ಬರುವಂತೆ ಒದೆ ಬಿದ್ದವು. ಮೈಲಿಗೆಯಾಗಿದ್ದ ಮಕ್ಕಳಿಗೆ ಸ್ನಾನ ಮಾಡಿಸಿ ದೇವರಿಗೆ ಕೈಮುಗಿಸಿದರು. ಏನೋ ಮಕ್ಕಳು ತಿಳಿಯದೆ ತಪ್ಪು ಮಾಡಿದ್ದಾರೆ. ಕ್ಷಮಿಸಿ ಬಿಡು ದೇವರೆ ಎಂದು ಬೇಡಿಕೊಂಡರು.

ದಲಿತರ ಮನೆ ತಿಥಿ ಊಟವನ್ನು ಮೇಲ್ವರ್ಗದ ಮಕ್ಕಳು ಮಾಡಿರುವ ಸುದ್ದಿ ಊರ ತುಂಬ ಹರಡಿತು. ಪಂಚಾಯ್ತಿ ಸೇರಿ ಮೇಲ್ವರ್ಗ ಮಕ್ಕಳಿಗೆ ಊಟ ಹಾಕಿದ ದಾಸಪ್ಪನ ಮಗ ಸ್ವಾಮಿಯನ್ನೂ ಕರೆಸಿದರು. ಸಮುದಾಯಭವನದಲ್ಲಿ ತಿಥಿ ಕಾರ್ಯ ಮಾಡಲು ಅವಕಾಶ ಕೊಟ್ಟ ತಪ್ಪಿಗೆ ನಿಮ್ಮ ಮನೆ ಊಟನಾ ನಮ್ಮ ಮಕ್ಕಳಿಗೆ ತಿನ್ನಿಸಿದ್ದೀಯಾ? ಎಂದು ರೇಗಿದರು. ಮಕ್ಕಳಿಗೆ ಅರಿವಿಲ್ಲ, ಮಾಂಸದೂಟದ ಆಸೆಗೆ ಬಂದು ಕುಳಿತರೆ ಊಟ ಹಾಕಿ ಜಾತಿ ಕೆಡ್ಸಿದ್ದೀರಲ್ಲ ನೀವು ಹೊಟ್ಟೆಗೇ ಏನು ತಿಂತೀರಿ? ಎಂದು ಪ್ರಶ್ನೆ ಮಾಡಿದರು. ನಾನೇನ್ ಮಾಡ್ಲಿ ಗೌಡ್ರೇ, ಊಟಕ್ಕೆ ಕುಳಿತ ಮಕ್ಕಳನ್ನು ಏಳಿಸಿ ಕಳಿಸೋದು ಹೇಗೆ ಅಂತ ಊಟ ಹಾಕಿದ್ವಿ ಎಂದು ಸ್ವಾಮಿ ಉತ್ತರ ನೀಡಿದ. ನೀವೇನ್ ಮಾಡ್ತಿರಾ? ಊಟ ಹಾಕಿ ಜಾತಿ ಕೆಡಿಸೊ ಕೆಲಸ ಮಾಡಿ ಆಯ್ತಲ್ಲ. ಅದ್ಕೆ ನಿಮ್ಮನ್ನು ಎಲ್ಲಿ ಇಡಬೇಕೋ, ಅಲ್ಲೆ ಇಡಬೇಕಿತ್ತು. ಏನೋ ಹೋಗ್ಲಿ ಅಂತ ಊರ ಮುಂದಿರುವ ಸಮುದಾಯಭವನದಲ್ಲಿ ಅವಕಾಶ ಕೊಟ್ಟರೆ ನಮ್ಮ ಮಕ್ಕಳಿಗೆ ಊಟ ಹಾಕಿ ಊರು-ಹೊಲಗೇರಿ ಒಂದು ಮಾಡಿದ್ದೀರಿ ಎಂದು ಮೇಲ್ವರ್ಗವರು ಸ್ವಾಮಿ ಮೇಲೆ ಎಗರಿದರು. ಹಿಂದೊಮ್ಮೆ ಯುವಕರಿಗೆ ಊಟ ಹಾಕಿದ ತಪ್ಪಿಗೆ ದಂಡ ಕಟ್ಟಿದ್ದನ್ನು ಮರೆತಿದ್ದೀರಿ. ಈಗ ಕಾನೂನು ನಿಮ್ಮ ಪರ ಇದೆ ಅಂತ ಹೀಗೆಲ್ಲಾ ಮಾಡ್ತಾ ಇದ್ದೀರಿ. ಇದು ನಡೆಯೊಲ್ಲ, ಇದೇ ಕೊನೆ ಇನ್ಮುಂದೆ ದಲಿತರ ಕಾರ್ಯಕ್ರಮಗಳಿಗೆ ಸಮುದಾಯಭವನ ನೀಡ ಬಾರದು ಎಂಬ ನಿರ್ಣಯ ಕೈಗೊಂಡರು.

ಸರಕಾರದ ಸಮುದಾಯಭವನದಲ್ಲಿ ನಮ್ಮ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರೇ ಯಾವ ನ್ಯಾಯ ಗೌಡ್ರೆ? ನೀವು ತಿನ್ನುವ ಕುರಿ, ಕೋಳಿ, ಹಂದಿ ಮಾಂಸದ ಊಟನೇ ನಾವು ಮಾಡಿದ್ದೀವಿ. ಆಕಸ್ಮಿಕವಾಗಿ ಮಕ್ಕಳು ಬಂದು ಊಟ ಮಾಡಿದ್ದಾರೆ. ನಾವೇನು ನಿಮ್ಮ ಮಕ್ಕಳಿಗೆ ದನದ ಮಾಂಸದ ತಿನ್ನಿದ್ದೀವಾ? ಎಂದು ಸ್ವಾಮಿ ಪ್ರಶ್ನೆ ಮಾಡಿದ.

ಬಿಟ್ರೆ ಅದನ್ನು ತಿನ್ನಸ್ತೀರಿ, ಅದಕ್ಕೆ ಇನ್ಮುಂದೆ ನೀಮ್ಮ ಜಾತಿಯವರ ಕಾರ್ಯಕ್ರಮಗಳನ್ನು ನಿಮ್ಮ ಕೇರಿಯಲ್ಲೇ ಮಾಡಿಕೊಳ್ಳಿ, ಊರು ಮುಂದೆ ಬಂದು ಜಾತಿ ಹಾಳು ಮಾಡಬೇಡಿ ಎಂದು ಮೇಲ್ವರ್ಗದವರು ಆಜ್ಞೆ ಮಾಡಿದರು. ಸಮುದಾಯಭವನ ಸಕರ್ಾರದ ಆಸ್ತಿ. ಅಲ್ಲಿ ಕೆಳಜಾತಿಯವರ ಕಾರ್ಯಕ್ರಮಗಳಿಗೆ ಅವಕಾಶ ಕೊಡದಿದ್ದರೆ ಕಾನೂನಿನ ಮೊರೆ ಹೋಗ್ತೀವಿ ಎಂದು ಸ್ವಾಮಿ ಹೇಳಿದ. ಎಲ್ಲಾದ್ರು ಹೋಗಿ ಹಾಳಾಗಿ, ಸಮುದಾಯಭವನ ಮಾತ್ರ ಕೊಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಇನ್ನು ಇವರ ಬಳಿ ಕೇಳಿ ಪ್ರಯೋಜನ ಇಲ್ಲ ಎಂದುಕೊಂಡು ತಮ್ಮ ಕೇರಿಗೆ ಬಂದ ದಲಿತರು, ಸಮುದಾಯಭವನ ಕಟ್ಟಿಸಿರುವುದು ಸಂಸದರ ನಿಧಿಯ ಹಣದಲ್ಲಿ. ಅವರ ಬಳಿಯೇ ಹೋಗೋಣ ಎಂದು ಮಾತನಾಡಿಕೊಂಡರು. ಅವರನ್ನು ಹಿಡಿಯೋದು ಕಷ್ಟ, ಅವರ ಮಗ ಎಂಎಲ್ಎ ಅಲ್ವಾ? ಅವರದೇ ಎಲ್ಲಾ ಕಾರುಬಾರು. ಅವರ ಹತ್ತಿರವೇ ಹೋಗಿ ನಿವೇದನೆ ಮಾಡಿಕೊಳ್ಳೋಣ. ಎಂಎಲ್ಎ ಹೇಳಿದ್ರೆ ಬಾಗಿಲು ತೆಗೆಯಲೇ ಬೇಕು. ನಾಳೇಯೇ ಹೋಗಿ ಎಂಎಲ್ಎ ಕಾಣೋಣ ಎಂದು ತೀಮರ್ಾನಿಸಿದರು.

ಮರುದಿನ ಬೆಳಗ್ಗೆಯೇ ಬಸ್ ಹತ್ತಿದ್ದ ದಲಿತರು, ಎಂಎಲ್ಎ ಮನೆ ಮುಂದೆ ಹಾಜರಾದರು. ಬೆಳಗ್ಗೆಯೇ ದಲಿತರ ದರ್ಶನ ಮಾಡಿದರೆ ಅಪಶಕುನ ಎಂದು ನಂಬಿರುವ ಶಾಸಕನ ಮುಂದೆ ನಿಂತರು. ಊರು ಕೇರಿ ಪರಿಚಯ ಮಾಡಿಕೊಂಡ ನಂತರ ತಲೆ ಮೇಲೆತ್ತಿ ಅವರ ಮುಖ ನೋಡದ ಶಾಸಕ, ಅದೇ ಸಮುದಾಯಭವನದಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ಹಠ ನಿಮಗೇಕೆ? ಹೊಲೇರ ಮನೆ ಕಾರ್ಯದಲ್ಲಿ ಮೇಲ್ಜಾತಿ ಮಕ್ಕಳಿಗೆ ಊಟಕ್ಕೆ ಹಾಕೋದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದ. ‘ನಿಮಗೇ ಪ್ರತ್ಯೇಕವಾಗಿ ಸಣ್ಣದೊಂದು ಸಮುದಾಯಭವನ ಕಟ್ಟಿಸಿಕೊಡ್ತಿನಿ, ಈಗಿರುವ ಭವನಕ್ಕೆ ನೀವು ಕಾಲಿಡುವುದು ಬೇಡ’ ಎಂದು ಆದೇಶ ಮಾಡಿ ನೀವಿನ್ನು ಹೊರಡಿ ಎಂದ. ನ್ಯಾಯ ಅರಸಿ ಬಂದ ದಲಿತರ ಮುಖ ಸಪ್ಪಗಾಯಿತು. ಎಂಎಲ್ಎ ಕಂಡು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದ ವಿಷಯ ಊರಿನಲ್ಲಿ ಹರಡಿತು. ಎಂಎಲ್ಎ ನಮ್ಮ ಜಾತಿಯವನೇ, ನಮ್ಮನ್ನು ಬಿಟ್ಟುಕೊಡುತ್ತಾನೆಯೇ? ಎಂದು ಮೇಲ್ಜಾತಿಯವರು ಬೀಗಿದರು.

ಮತ್ತೆ ದಲಿತರ ಸಭೆ ಸೇರಿಸಿದ ಸ್ವಾಮಿ, ಎಂಎಲ್ಎ ಬೇಡ ಎಂದರೂ ಬಿಡೋದು ಬೇಡ. ಕಾನೂನಿನ ಮೊರೆ ಹೋಗಿ ಸಮುದಾಯಭವನದಲ್ಲಿ ಅವಕಾಶ ಪಡೆದುಕೊಳ್ಳೋಣ ಎಂದು ಹೇಳಿದ. ಆದರೆ ಸ್ವಾಮಿ ಸೇರಿ ಮೂರ್ನಾಲ್ಕು ಮಂದಿ ಹೊರತಾಗಿ ಬೇರ್ಯಾರು ಅದಕ್ಕೆ ಒಪ್ಪಲಿಲ್ಲ. ನಮ್ಮ ಮತ್ತು ಮೇಲ್ವರ್ಗದ ಸಂಬಂಧ ಇಷ್ಟಕ್ಕೆ ಮುಗಿಯುವುದಿಲ್ಲ. ನಾವು ಕಾನೂನಿ ಹೋರಾಟಕ್ಕೆ ಇಳಿದರೆ ಮೇಲ್ವರ್ಗದವರು ಊರಿಂದ ಬಹಿಷ್ಕಾರ ಹಾಕ್ತಾರೆ. ಮದುವೆ ಆಗಬೇಕಿರುವ ಹೆಣ್ಣು ಮಕ್ಕಳು ಮನೆಗೊಂದು poverty-in-indiaಬೆಳೆದು ನಿಂತಿವೆ. ಹಣ ಬೇಕೆಂದರೆ ಅವರ ಬಳಿಯೇ ಕೈಚಾಚಬೇಕು. ಅವರನ್ನು ವಿರೋಧ ಮಾಡಿಕೊಂಡು ಬದುಕಲು ಸಾಧ್ಯವಿಲ್ಲ. ನಮಗೆ ಪ್ರತ್ಯೇಕ ಸಮುದಾಯಭವನ ಕಟ್ಟಿಕೊಡುವುದಾಗಿ ಎಂಎಲ್ಎ ಹೇಳಿದ್ದಾನೆ. ಮತ್ತೆ ಮೇಲ್ವರ್ಗದವರನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಹಾಗಾಗಿ ಉಳಿದವರು ಸುಮ್ಮನಾದರು.
ಕೆಲವೇ ದಿನಗಳಲ್ಲಿ ಸಮುದಾಯಭವನ ಎಂದಿದ್ದ ನಾಮಫಲಕ ಒಕ್ಕಲಿಗರ ಸಮುದಾಯಭವನವಾಗಿ ಪರಿವರ್ತನೆಯಾಯಿತು. ಈ ಘಟನೆ ನಡೆದು 13 ವರ್ಷ ಕಳೆದಿದೆ. ದಲಿತರಿಗೆ ಪ್ರತ್ಯೇಕ ಸಮುದಾಯಭವನ ಇಂದಿಗೂ ನಿಮರ್ಾಣ ಆಗಿಲ್ಲ. ಒಕ್ಕಲಿಗರ ಸಮುದಾಯಭವನಕ್ಕೆ ದಲಿತರು ಕಾಲಿಡಲು ಸಾಧ್ಯವಾಗಿಲ್ಲ. ಅದೇ ಎಂಎಲ್ಎ ಇಂದಿಗೂ ಅದೇ ಕ್ಷೇತ್ರದ ಪ್ರತಿನಿಧಿ

ಒಳ್ಳೆಯ ಮುಸ್ಲಿಂ ಅಂದರೆ ಏನು?

ಇಂಗ್ಲೀಷ್ : ಸಾಬಾ ನಕ್ವಿ
ಅನುವಾದ : ಬಿ.ಶ್ರೀಪಾದ ಭಟ್

ಜುಲೈ 30 ರಂದು ಎರಡು ದೇಹಗಳನ್ನು ಮುಸ್ಲಿಂರ ಶವ ಸಂಸ್ಕಾರಕ್ಕೆ ಬಳಸುವ ಸಡಿಲವಾದ ಹೊದಿಕೆಗಳಿಂದ ಸುತ್ತಲಾಗಿತ್ತು. ಇವರಲ್ಲಿ ಒಬ್ಬರನ್ನು ರಾಷ್ಟ್ರೀಯ ಹೀರೋ ಎಂದು ಕರೆಯಲಾಗಿತ್ತು ಮತ್ತು ಅವರ ದೇಹವನ್ನು ರಾಷ್ಟ್ರೀಯ ಧ್ಜಜದಿಂದ ಸುತ್ತಲಾಗಿತ್ತು, ಮತ್ತೊಬ್ಬರನ್ನು ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಗಿತ್ತು. ನಮ್ಮ ಕಣ್ಣ ಮುಂದೆ ಒಳಿತು ಕೆಡಕುಗಳ ನೈತಿಕತೆಯ ನೃತ್ಯ ನಡೆಯುತ್ತಿರುವಾಗ ಈ ಎರಡು ಸಾವುಗಳು ವಿಭಿನ್ನ ಕಾರಣಗಳಿಗಾಗಿ, ವಿಭಿನ್ನ ರೀತಿಗಳಿಗಾಗಿ ರಾಷ್ಟ್ರೀಯ ರಸಾನುಭವಗಳನ್ನು ತಂದುಕೊಡುತ್ತಿರುವಂತಿವೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಬಾಂಬೆ apj-kalamಸ್ಪೋಟದ ಅಪರಾಧಿ ಯಾಕುಬ್ ಮೆನನ್ ಇವರಿಬ್ಬರನ್ನೂ ಒಂದೇ ದಿನದಂದು ಶವ ಸಂಸ್ಕಾರ ಮಾಡುತ್ತಿರುವುದು ಒಂದು ಕಾಕತಾಳೀಯ.

ಆದರೆ ಜಗತ್ತಿನ ಅತಿ ದೊಡ್ಡ ದೇಶದಲ್ಲಿ, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಜಗತ್ತಿನ ಮೂರನೇ ದೇಶದಲ್ಲಿ ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ರೂಢಿಬದ್ಧ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ನುಡಿಕಟ್ಟನ್ನು ಅಮೇರಿಕಾದ ಮಾಜಿ ಅಧ್ಯಕ್ಷ ಜಾರ್ಜ ಬುಶ್ ಅದನ್ನು 9/11 ಸಂದರ್ಭದಲ್ಲಿ ಬಳಸಿದ್ದರು. ಇದನ್ನೇ ಬಳಸಿಕೊಂಡು ಮೊಹಮ್ಮದ್ ಮಂದಾನಿ ಅವರು “Good Muslim, Bad Muslim: America, the Cold War, and the Roots of Terror” ಎನ್ನುವ ಪುಸ್ತಕವನ್ನು ಸಹ ಬರೆದಿದ್ದರು. ಈ ಪುಸ್ತಕದಲ್ಲಿ ‘ಒಳ್ಳೆಯ’ ಮತ್ತು ‘ಕೆಟ್ಟ’ ಎನ್ನುವ ಪದಬಳಕೆಯನ್ನು ಆ ಧರ್ಮದ ಪಾವಿತ್ರ್ಯತೆ ಅಥವಾ ಅದರ ಕೊರತೆಯನ್ನು ಆಧರಿಸಿ ಹೇಳಿದ್ದಲ್ಲ. ಬದಲಾಗಿ ಅಮೇರಿಕಾದ ವಿದೇಶಾಂಗ ನೀತಿಯು ತನ್ನ ಉಪಯುಕ್ತತೆಗೆ ಅನುಕೂಲವಾಗುವಂತೆ ನಿರ್ಧರಿಸುವ ತೀರ್ಪಿನ ಆಧಾರದ ಮೇಲೆ ಬಳಸಾಗುತ್ತದೆ. ಯಾವ ಇಮೇಜ್ ಅನ್ನು ಅವರು ನಿರ್ಮಿಸುತ್ತಾರೆಯೋ ಅದರ ಮೇಲೆ ಸಹ ನಿರ್ಧಾರವಾಗುತ್ತದೆ

ಆಕಸ್ಮಿಕವೋ ಎಂಬಂತೆ ಮುಸ್ಲಿಂ ಧರ್ಮದವರಾಗಿದ್ದ ಅಬ್ದುಲ್ ಕಲಾಂ ಇಂಡಿಯಾದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿರುವಷ್ಟರ ಮಟ್ಟಿಗೆ ಮೇರು ವ್ಯಕ್ತಿತ್ವದವರಾಗಿದ್ದರೆ? ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳು ಏನೇ ಇರಲಿ (ಅದರ ಕುರಿತಾಗಿಯೂ ತಕರಾರುಗಳಿವೆ) ಕಲಾಂ ಅವರನ್ನು ಮತ್ತು ಅವರ ಜನಪ್ರಿಯತೆಯನ್ನು ಸಮಾಜ ಮತ್ತು ರಾಜಕೀಯ-ಮಿಲಿಟರಿಯ ಸಂಕೀರ್ಣತೆಯು ರೂಪಿಸಿತ್ತು. ಭವಿಷ್ಯದಲ್ಲಿ ಇಂಡಿಯಾ ದೇಶವು ಮಿಲಿಟರಿಯಲ್ಲಿ ಸೂಪರ್ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಕಲಾಂ ಅವರ ದರ್ಶನವಾಗಿತ್ತು. ಕಾಣ್ಕೆಯಾಗಿತ್ತು. ಅವರು ಒಬ್ಬ ಸರಳವಾದ “ಮಿಸೈಲ್ ಮನುಷ್ಯ”ರಾಗಿದ್ದರು ಮತ್ತು ಅವರ ಪುಸ್ತಕಗಳು ಬೇರೆ ಲೇಖಕರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು, ಅವರ ಭಾಷಣದ ಸಭಾಂಗಣಗಳು ಸದಾಕಾಲ ಹೌಸ್‍ಫುಲ್ ಆಗಿರುತ್ತಿದ್ದವು. ಅವರನ್ನು ಮಕ್ಕಳು ಆರಾಧಿಸುತ್ತಿದ್ದರು. ಅವರ ಸರಳತೆ ಮಕ್ಕಳನ್ನು ಸೆಳೆಯುತ್ತಿತ್ತು

ಮತ್ತು ಅವರು ಇಂಡಿಯಾ ದೇಶ ಬಯಸುವಂತಹ ಒಬ್ಬ ಪರಿಪೂರ್ಣ ಮುಸ್ಲಿಂ ಆಗಿದ್ದರು. ತಮ್ಮ ಎದೆಯ ಮೇಲೆ ಧರ್ಮವನ್ನು ಛಾಪಿಸಿಕೊಳ್ಳದ, ಸಾಧಾರಣ ಹಿನ್ನೆಲೆಯಿಂದ ಬಂದಂದತಹ, ಸ್ವಪರಿಶ್ರಮದಿಂದ ಮೇಲಕ್ಕೇರಿದ ವ್ಯಕ್ತಿ. ಗಡ್ಡಧಾರಿಯಾದ, ಸದಾ ಅವ್ಯವಸ್ಥೆಯ ghetto ಗಳಲ್ಲಿ ಬದುಕುವ ಪೀಡಕನಂತೆ ಕಂಗೊಳಿಸುವ ರೂಢಿಗತ ಮುಸ್ಲಿಂರ ಪರಿಕಲ್ಪನೆಗಿಂತ ಸಂಪೂರ್ಣ ಭಿನ್ನವಾಗಿದ್ದರು. ಮುಖ್ಯವಾಗಿ ಕಲಾಂ ಎಂದಿಗೂ ವ್ಯವಸ್ಥೆಯನ್ನು ವಿರೋಧಿಸಿರಲಿಲ್ಲ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸಿರಲಿಲ್ಲ. ಇದಕ್ಕೆ ಬದಲಾಗಿ ಅವರು ಪ್ರಭುತ್ವದ ವ್ಯವಸ್ಥೆಯನ್ನು ಮತ್ತು ಅದರ ಮಿಲಿಟರಿ-ಕೈಗಾರಿಕಾ ಸಂಕೀರ್ಣತೆಯನ್ನು ವೈಭವೀಕರಿಸಿದ್ದರು. ಬಲಪಂಥೀಯರು ಸದಾ ಕರೆದುಕೊಳ್ಳುವ ಬಲಪಂಥೀಯ ಐಡಿಯಾಲಜಿಯ ಶೈಲಿಯ ‘ದೇಶವನ್ನು ಕಟ್ಟುವ’ ಮಾದರಿಗೆ ಉಪಯುಕ್ತರಾಗಿದ್ದರು. ಅಷ್ಟಕ್ಕೂ ರಾಷ್ಟ್ರಪತಿ ಹುದ್ದೆಗೆ ಅವರ ಹೆಸರನ್ನು ಸೂಚಿಸಿದ್ದು ಬಿಜೆಪಿ ಪಕ್ಷದ ನಾಯಕ ಎ.ಬಿ.ವಾಜಪೇಯಿ.The Prime Minister Shri Atal Bihari Vajpayee calls on the President Dr. A.P.J. Abdul Kalam in New Delhi on July 25, 2002 (Thursday) ಆರೆಸ್ಸಸ್‍ನ ಮುಖವಾಣಿ ‘ಪಾಂಚಜನ್ಯ’ದ ಆಗಿನ ಸಂಪಾದಕರಾಗಿದ್ದ ತರುಣ್ ವಿಜಯ್ ಅವರು 2002ರಲ್ಲಿ ಔಟ್‍ಲುಕ್ ವಾರಪತ್ರಿಕೆಗೆ ಬರೆದ ಅಂಕಣದಲ್ಲಿ “ಭಾರತೀಕರಣವೆಂದರೆ ಹಿಂದುತ್ವ. ಇದರ ಅರ್ಥ ಮುಸ್ಲಿಂರು ಹಿಂದೂಯಿಸಂಗೆ ಮತಾಂತರವಾಗಬೇಕು ಅಂತಲ್ಲ, ಅಥವಾ ಕ್ರಿಶ್ಚಿಯನ್ನರು ದೇವಸ್ಥಾನಗಳಿಗೆ ಭೇಟಿ ಕೊಡಬೇಕಂತಲೂ ಅಲ್ಲ. ಬದಲಾಗಿ ನೀನು ಏನು ಆಗಬೇಕೆಂದುಕೊಳ್ಳುತ್ತೀಯಾ ಅದೇ ಅದರ ಅರ್ಥ. ಡಾ.ಅಬ್ದುಲ್ ಕಲಾಂ ಅವರ ಕಾಣ್ಕೆಯಂತೆ” ಎಂದು ಬರೆದಿದ್ದರು ಮತ್ತು ಇಸ್ರೋದಲ್ಲಿ ಕಲಾಂ ಅವರ ಸಹೋದ್ಯೋಗಿಗಳು ಅವರನ್ನು ಕಲಾಂ ಐಯ್ಯರ್ ಎಂದು ಕರೆಯುತ್ತಿದ್ದರು ಎಂದು ಹೆಮ್ಮಯಿಂದ ಬರೆದಿದ್ದರು. ಕಲಾಂ ಅವರ ಈ ನಾಮಕರಣಕ್ಕೆ ಅವರು ಸಸ್ಯಾಹಾರಿಯಾಗಿದ್ದರು, ಅವರು ಸಂಸ್ಕೃತದಲ್ಲಿ ಪರಿಣಿತರಾಗಿದ್ದರು, ಭಗವದ್ಗೀತವನ್ನು ಓದಿಕೊಂಡಿದ್ದರು ಮತ್ತು ವೀಣೆಯನ್ನು ನುಡಿಸುತ್ತಿದ್ದರು ಎನ್ನುವ ಗುಣಗಳೂ ಕಾರಣವಾಗಿದ್ದವು.

ದಿನನಿತ್ಯ ಯೋಗ, ಸೂರ್ಯ ನಮಸ್ಕಾರ ಮಾಡುವ, ಗೀತೆಯ ಭಾಗಗಳನ್ನು ಓದಲು ಪ್ರಯತ್ನಿಸುವ ಅನೇಕರು ಕಲಾಂರ ಮೇಲಿನ ಗುಣಗಳು ಅವರನ್ನು ಮುಸ್ಲಿಂ ಎನ್ನುವ ಅಂಶವನ್ನು ತೆಳುಗೊಳಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ನಾನು ಇದನ್ನು ಸಂದೇಹಿಸುತ್ತೇನೆ. ದೆಹಲಿಯ ಲುಟ್ಯೇನ್ ಪ್ರದೇಶದಲ್ಲಿರುವ ಔರಂಗಜೇಬ್ ರಸ್ತೆಯನ್ನು ಮರು ನಾಮಕರಣ ಮಾಡಿ ಅದಕ್ಕೆ ಕಲಾಂ ಅವರ ಹೆಸರಿಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವವರೊಂದಿಗೆ ನನ್ನ ಸಹಮತವಿಲ್ಲ. ನನ್ನ ಒಂದು ಸಲಹೆ ಈ ಔರಂಗಜೇಬ್ ರಸ್ತೆಗೆ ದಾರಾ ಶಿಖೋವ ಅವರ ಹೆಸರನ್ನು ಇಡಬೇಕು. ಇತಿಹಾಸ ಗೊತ್ತಿಲ್ಲದವರಿಗೆ ಈ ದಾರಾ ಶಿಖೋವನನ್ನು ಶಹಜಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು ಮತ್ತು ಈತನನ್ನು ಔರಂಗಜೇಬ್ ಸಾಯಿಸಿದ್ದ. ಈ ದಾರಾ ಶಿಖೋವ ಬಹುರೂಪಿ ಸಂಸ್ಕೃತಿಯ ವಕ್ತಾರನಾಗಿದ್ದ. ಕೋಮು ಸೌಹಾರ್ದತೆಗೆ ತುಡಿಯುತ್ತಿದ್ದ. ಸಂಸ್ಕೃತದಿಂದ 50 ಉಪನಿಷದ್‍ಗಳನ್ನು ಪರ್ಷಿಯನ್‍ಗೆ ಅನುವಾದ ಮಾಡಿದ್ದ.

ಯಾಕುಬ್ ಮೆಮನ್‍ಗೆ ಮೇಲಿನ ಯಾವುದೇ ಛಾಯೆಗಳಿರಲಿಲ್ಲ. ಆತ ಕೇವಲ ಕೆಟ್ಟ ಮುಸ್ಲಿಂನಾಗಿದ್ದ. ವ್ಯಾಪಕವಾದ ಭಯೋತ್ಪಾದನೆಯ ಸಂಚಿಗೆ ಸೆಳೆಯಲ್ಪಟ್ಟ ಸುಶಿಕ್ಷಿತ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ. ಅಷ್ಟಕ್ಕೂ ಮುಸ್ಲಿಂ ಎಂದರೆ ಭಯೋತ್ಪಾದಕ ಎನ್ನುವ ಪ್ರಚಲಿತ ನಿರ್ಮಿತಿಯನ್ನು ಇಡೀ ಜಗತ್ತು ಒಕ್ಕೊರಲಿನಿಂದ ಒಪ್ಪಿಕೊಂಡಿದೆ. ಯಾಕೂಬ್ ಅನಾಯಾಸವಾಗಿ ಈ ಚೌಕಟ್ಟಿನಲ್ಲಿ ತುಂಬಿಕೊಳ್ಳುತ್ತಾನೆ. ಆದರೆ ಯಾಕೂಬ್‍ನ ಕತೆಗಳಲ್ಲಿ ತುಂಬಾ ಸೂಕ್ಷ್ಮ ವ್ಯತ್ಯಾಸಗಳಿವೆ. ಮತ್ತು ಈ ಸೂಕ್ಷ್ಮ ವ್ಯತ್ಯಾಸಗಳನ್ನು ವ್ಯವಸ್ಥೆಯು ಅನುಕಂಪದ ಮನಸ್ಥಿತಿಯಿಂದ ಅರ್ಥ ಮಾಡಿಕೊಳ್ಳುವುದೂ ಇಲ್ಲ. ಇವರೆಲ್ಲಾ ಪ್ರಶ್ನೆಗಳನ್ನು ಎತ್ತುತ್ತಲೇ ಜೊತೆಗೆ ಸಾಧ್ಯತೆಗಳನ್ನೂ ಸೂಚಿಸುತ್ತಾರೆ. ಯಾಕೂಬ್ ತಾನು ಮಾಡಿದ ಕೃತ್ಯಕ್ಕೆ ಕ್ಷಮೆ ಕೇಳುತ್ತಾನೆಯೇ? ಆತನಿಗೆ ಪ್ರಾಯಶ್ಚಿತವಾಗಿದೆಯೇ? ಆತ ಭಾರತದ ಏಜೆನ್ಸಿಗಳೊಂದಿಗೆ ಡೀಲ್ ಮಾಡಿಕೊಂಡಿದ್ದಾನೆಯೇ? ಅದರ ಅನುಸಾರ ಆತನ ಕುಟುಂಬವನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರುವುದರ ಕುರಿತಾಗಿ ಒಪ್ಪಂದವಾಗಿದೆಯೇ? ಶಿಕ್ಷೆಯನ್ನು ನಿರೀಕ್ಷಿಸುತ್ತಾನೆಯೇ? ಆದರೆ ವ್ಯವಸ್ಥೆಯಿಂದ ನ್ಯಾಯವನ್ನೂ ಬಯಸುತ್ತಾನೆಯೇ?

ಆತನ ಸಾವಿನಲ್ಲಿ ಯಾಕೂಬ್‍ನನ್ನು ಮಿತಿ ಮೀರಿದ ವ್ಯಕ್ತಿಯನ್ನಾಗಿ ನೋಡುತ್ತಿರುವ ಇಂದಿನ ಸಂದರ್ಭದಲ್ಲಿ ಈ ಎಲ್ಲಾ ಪ್ರಶ್ನೆಗಳು ಗಾಳಿಯಲ್ಲಿ ತೇಲುತ್ತಿವೆ. ಒಂದು ವೇಳೆ ಆತ ಬದುಕಿದ್ದರೆ ಜೀವಾವಧಿ ಶಿಕ್ಷೆಗೊಳಗಾಗಿರುವ ಇತರೇ ಖೈದಿಗಳಂತೆ ಆತನೂ ಜೈಲಿನಲ್ಲಿ ಮರೆತು ಹೋಗುತ್ತಿದ್ದ. ಆದರೆ ಆತನ ಸಾವನ್ನು ಅಷ್ಟು ಸುಲುಭವಾಗಿ ಮಣ್ಣು ಮಾಡಲಾಗುವುದಿಲ್ಲ. ಅಪಾಯವೇನೆಂದರೆ ಯಾಕೂಬ್‍ನನ್ನು ಹುತಾತ್ಮನನ್ನಾಗಿ ಮಾಡುವುದರಿಂದ ದೇಶ ವಿರೋಧಿ ಶಕ್ತಿಗಳಿಗೆ ಹೆಚ್ಚಿನ ಲಾಭವಿದೆ

ತನ್ನ ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ಪುಸ್ತಕದಲ್ಲಿ goodmuslimbadmuslimಮಂದಾನಿ ‘ವಿಸ್ತೃತವಾದಕ್ಕೆ ನೈತಿಕ ಮೇಲುಹೊದಿಕೆಯಾಗಿ ನಿಯೋಜಿಸಲ್ಪಡುವ, ಬಳಸಲ್ಪಡುವ ಮುಸ್ಲಿಂ ಮತ್ತು ಇಸ್ಲಾಂ ಕ್ಯಾರಿಕೇಚರ್’ ಅನ್ನು ತೆರೆದಿಡುತ್ತಾನೆ. ಭಯೋತ್ಪಾದನೆಯ ವಿಶ್ಲೇಷಣೆಯನ್ನು ವ್ಯವಸ್ಥೆಯೊಳಗಿನ ಹುಳುಕುಗಳನ್ನು ತೋರಿಸುವುದಕ್ಕೆ ಬಳಸಿಕೊಳ್ಳವುದಿಲ್ಲ, ಬದಲಾಗಿ ರಾಜ್ಯದ ನೀತಿಯನ್ನಾಗಿ ಬಳಸಿಕೊಳ್ಳತ್ತಾರೆ ಎಂದು ಹೇಳುತ್ತಾನೆ. ಆ ಭಯೋತ್ಪಾದನೆಯ ಕೃತ್ಯಗಳಿಗೆ ಕಾರಣಗಳನ್ನು ಪರೀಕ್ಷಿಸುವುದೇ ಭಯೋತ್ಪಾದನೆಗೆ ಸಮರ್ಥನೆಯಾಗುತ್ತದೆ ಮತ್ತು ಇದು ದೇಶದ ಹಿತಕ್ಕೆ ಮಾರಕವಾಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ಬೋಧಿಸಲಾಗುತ್ತದೆ ಮತ್ತು ಇದು ಯಾಕೂಬ್ ಮೆಮನ್ ವಿಚಾರದಲ್ಲಿಯೂ ಸತ್ಯ.. ಮತೊಂದು ಮಗ್ಗುಲಿನಿಂದ ಹೇಳಬೇಕೆಂದರೆ ಪ್ರಧಾನ ಧಾರೆಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆ ಮತ್ತು ವಿವರಣೆಗಳಲ್ಲಿ ಈ ಬಾಂಬೆ ಬಾಂಬ್ ಸ್ಪೋಟಕ್ಕೆ ಕಾರಣವಾದ ಬಾಂಬೆಯಲ್ಲಿ ನಡೆದ ಹತ್ಯೆ ಮತ್ತು ಕೋಮು ಗಲಭೆಗಳ ಕುರಿತಾಗಿ ಕೈಗೆತ್ತಿಕೊಳ್ಳುವುದೂ ಇಲ್ಲ. ಅದರ ನೆನಪನ್ನೂ ಮಾಡಿಕೊಳ್ಳುವುದಿಲ್ಲ ಅಥವಾ ಈ ಬಾಂಬೆ ಗಲಭೆಗಳು ನಂತರದ ಬಾಂಬೆ ಬಾಂಬ್ ಸ್ಪೋಟಕ್ಕೆ ಮೂಲ ಕಾರಣವಾದ ಬಾಬರಿ ಮಸೀದಿ ಧ್ವಂಸದ ದುಷ್ಕೃತ್ಯಗಳು ಸ್ವಲ್ಪವೂ ಚರ್ಚೆಗೆ ಒಳಪಡುವುದಿಲ್ಲ. ಈ ಬಾಂಬೆ ಕೋಮು ಗಲಭೆಗಳಿಗೆ, ಬಾಬರಿ ಮಸೀದಿ ಧ್ವಂಸಕ್ಕೆ ಕಾರಣಕರ್ತರು ಇಂದಿಗೂ ಶಿಕ್ಷೆಗೆ ಒಳಗಾಗಿಲ್ಲ. ಆದರೆ ನಾವು ಭಯೋತ್ಪಾದನೆಯು ಸಾಮಾಜಿಕ-ರಾಜಕೀಯ ನೆಲೆಯ ಒಂದು ರೋಗಪರಿಶೋಧಕ ಗೂಡಿಗೆ ತಳ್ಳಲ್ಪಟ್ಟಿರುವುದನ್ನು ಕುರಿತಾಗಿ ಚರ್ಚಿಸುತ್ತೇವೆ

ಆದರೆ ಈ ದೇಶದ ವಿಶೇಷವೇನೆಂದರೆ ಇಲ್ಲಿ ಪರ್ಯಾಯ ಚರ್ಚೆಗಳಿಗೆ ಅವಕಾಶಗಳಿವೆ. ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆಯಂದ ವಿನಾಯಿತಿ ಕೊಡಿಸಲು ಕಡೆಗಳಿಗೆವರೆಗೂ ಅಪೀಲು ಮಾಡಿದ ಫ್ರೊಫೆಸರ್‌ಗಳು, ಚಿಂತಕರು, ಹೋರಾಟಗಾರರು, ವಕೀಲರು ಮತ್ತು ಕೆಲ ಎಡಪಂಥೀಯ ಪಕ್ಷಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಪೋಲೀಸರು, ನ್ಯಾಯಾಂಗ ಮತ್ತು ಕಾರ್ಯಾಂಗದೊಂದಿಗೆ ಮುಖಾಮುಖಿಯಾದಾಗ ಸದಾ ಬಲಿಪಶುಗಳಾಗುವ ಇಂಡಿಯಾದ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳಿಗಾಗಿ ಕೆಲಸ ಮಾಡುವ ಒಂದು ಸಹನೀಯ ವ್ಯವಸ್ಥೆಯನ್ನು ಕಲ್ಪಿಸುವುದು ಇವರೆಲ್ಲರ ಆಶಯಗಳಾಗಿತ್ತು.

ರಾಷ್ಟ್ರಪತಿಗಳಾಗಿ ಕಲಾಂ ಅವರು ಮರಣದಂಡನೆ ಶಿಕ್ಷೆಯನ್ನು ವಿರೋಧಿಸಿದ್ದರು. ಇವರು ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆ ವಿಧಿಸುತ್ತಿದ್ದರೆ ಅಥವಾ ಅನುಕಂಪೆ ತೋರಿಸುತ್ತಿದ್ದರೆ? ಇಂದಿಗೂ ನಮಗೆ ಇದು ಆಶ್ಚರ್ಯವೇ.

ಗ್ರಾಮೀಣ ಮಹಿಳಾ ಜಾಗೃತಿಯಲ್ಲಿಯೇ ಆಕೆಯ ವಿಮೋಚನೆಯಿದೆ


– ಡಾ.ಎಸ್.ಬಿ. ಜೋಗುರ


ಲಿಂಗಾಧರಿತ ಶ್ರಮವಿಭಜನೆ ಮಹಿಳೆಯನ್ನು ತಲೆತಲಾಂತರದಿಂದಲೂ ಶೋಷಣೆ ಮಾಡಿಕೊಂಡು ಬರುವಲ್ಲಿ ಮುಖ್ಯ ಕಾರಣವಾಯಿತು. ಸಾಮರ್ಥ್ಯ ಮತ್ತು ಸತ್ವಗಳನ್ನು ಕಡೆಗಣಿಸಿ ಮಾತನಾಡುವ ಈ ಲಿಂಗ ತಾರತಮ್ಯದ ಧೋರಣೆ ಮಹಿಳೆಯ ಸಬಲೀಕರಣದಲ್ಲಿ ಒಂದು ಬಹು ದೊಡ್ಡ ತೊಡಕಾಗಿ ಕಾಡುವುದು. ಮಹಿಳೆಯ ಜೈವಿಕತೆಯನ್ನು ಆಧರಿಸಿ ಮಾಡಬಹುದಾದ ಎಲ್ಲ ಬಗೆಯ ಶೋಷಣೆಗಳನ್ನು ವಿಶ್ವದ ಬಹುತೇಕ ಸಮುದಾಯಗಳು ಅನುಸರಿಸುವದಿದೆ. ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ನಡೆಯುವ ಫೀಮೇಲ್ ಜೆನಿಟಲ್ ಮ್ಯುಟಿಲೇಶನ್ ಮತ್ತು ಋತುಮತಿಯಾದಾಗ ನಮ್ಮ ಗ್ರಾಮೀಣ ಭಾಗಗಳಲ್ಲಿ ‘ನಮ್ಮ ಹುಡುಗಿ ದೊಡ್ದವಳಾದಳು’ ಅಂತ ಆಚರಿಸುವ ಪರಂಪರೆಗಳಿಗಿಂತಲೂ ತೀರಾ ಭಿನ್ನವಾಗಿಲ್ಲ. Ancient_Womenಒಂದು ಕಡೆ ಹಿಂಸೆ ಮತ್ತು ಕ್ರೌರ್ಯವಿದೆ. ಇನ್ನೊಂದು ಕಡೆ ಆಚರಣೆಯ ಹೆಸರಲ್ಲಿ ನಡೆಯಬಹುದಾದ ಶೋಷಣೆಯಿದೆ. ತೀರಾ ಖಾಸಗಿಯಾಗಿರುವ ಜೈವಿಕ ವಿಷಯವೊಂದನ್ನು ಡಂಗುರ ಸಾರುವ ಮೂಲಕ ಆಕೆ ದೊಡ್ಡವಳಾದಳು ಎಂದು ಊರ ಜನರಿಗೆ ಊಟ ಹಾಕುವ ಪರಿಪಾಠವೇ ಒಂದು ಶೋಷಣೆಯ ಮುಖವಾಗಿದೆ. ಇನ್ನು ಹಾಗೆ ಋತುಮತಿಯಾದಾಗ ಮಹಿಳೆಯನ್ನು ತೀರಾ ನಿಕೃಷ್ಟವಾಗಿ ನಡೆಯಿಸಿಕೊಳ್ಳುವ ಪರಿಪಾಠಗಳು ಇಂದಿಗೂ ಮಡಿವಂತ ಮನಸುಗಳಿರುವ ಮನೆಗಳಲ್ಲಿ ನಿರಾತಂಕವಾಗಿ, ನಿರಂತರವಾಗಿ ಮುಂದುವರೆದಿದೆ. ಆಕೆಯ ಮನೆಯಲ್ಲಿಯೇ ಏನೋ ಒಂದು ಧಾರ್ಮಿಕ ಸಮಾರಂಭ ಇಲ್ಲವೇ ಕಾರ್ಯಕ್ರಮವಿದ್ದರೆ ಈ ಋತುಮತಿಯಾದ ಮಹಿಳೆ ಮಹಾನ್ ಪ್ರಮಾದ್ ಮಾಡಿದವರಂತೆ ದೂರ ಕತ್ತಲು ಕೋಣೆಯಲ್ಲಿ ಅಜ್ಞಾತಳಂತೆ ಉಳಿಯುವ.. ತನ್ನ ತಪ್ಪಿನ ಹುಡುಕಾಟದಲ್ಲಿಯೇ ಮೂರು ದಿನ ಕಳೆಯುವ ಪರಿಪಾಠಕೆ ಒಗ್ಗಿಕೊಂಡು ಬಿಡುವದರಲ್ಲಿಯೇ ಮಹಿಳಾ ಶೋಷಣೆ ಅಡಕವಾಗಿದೆ.

೧೯೬೦ ದಶಕದ ಕೊನೆಯಲ್ಲಿ ಜನಪ್ರಿಯವಾದ ತೀವ್ರಗಾಮಿ ಸ್ತ್ರೀವಾದವು ಮಹಿಳೆಯ ಶೋಷಣೆಯ ವಿವಿಧ ಮುಖಗಳನ್ನು ತೀವ್ರವಾಗಿ ಪ್ರತಿಭಟಿಸಿರುವದಿದೆ. ತೀವ್ರವಾದಿ ಗುಂಪಿನ ವಿಚಾರವಾದಿಗಳಾದ ಶುಲಾ ಮಿತ್, ಕೇತ್ ಮಿಲ್ಲೆಟ್, ಏಡ್ರಿಯನ್ ರಿಚ್ ರವರು ತಾಯ್ತನ ಎನ್ನುವುದು ಮಹಿಳಾ ಶೋಷಣೆಯ ಮೂಲ ಆ ಮೂಲಕ ಅವಳ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವ ಕುಂಟಿತಗೊಳ್ಳುತ್ತದೆ. ಜೈವಿಕ ಸಂತಾನೋತ್ಪತ್ತಿಯ ಬದಲಾಗಿ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಸಂತಾನ ಪ್ರಕ್ರಿಯೆಗೆ ಅನುವು ಮಾಡಿಕೊಡಬೇಕು ಎಂದಿರುವದಿದೆ. ಈ ಚಿಂತಕರು ಹೇಳುವದರಲ್ಲಿ ಅರ್ಥವಿಲ್ಲದಿಲ್ಲ. ಆದರೆ ನೈಸರ್ಗಿಕವಾದ ಕ್ರಿಯೆಯನ್ನು ಯಾಂತ್ರಿಕಗೊಳಿಸುವ ಕ್ರಮ ಮಾತ್ರ ಸಹ್ಯವೆನಿಸುವದಿಲ್ಲ. ಇದರಿಂದ ಮನುಷ್ಯ ಸಂಬಂಧಗಳು ನಿರೀಕ್ಷಿಸಲಾಗದಷ್ಟು ಯಾಂತ್ರಿಕವಾಗಬಹುದಾದ ಅಪಾಯಗಳಿವೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಪಾವಗಡ, ಕೊರಟಗೆರೆ ತಾಲೂಕುಗಳ ಕೆಲ ಕಡೆಗಳಲ್ಲಿ ಗೊಲ್ಲರ ಹಟ್ಟಿಗಳಲ್ಲಿ ಈ ತಾಯ್ತನ ಮತ್ತು ಹೆಣ್ಣು ಋತುಮತಿಯಾಗುವ ಪ್ರಕ್ರಿಯೆಗಳನ್ನು ಅತ್ಯಂತ ಆಘಾತಕಾರಿ ಎನ್ನುವ ಹಾಗೆ ಆಚರಿಸಲಾಗುತ್ತದೆ. ಹಸಿ ಬಾಣಂತಿ ಮತ್ತು ಮಗು ೧೫ ದಿನಗಳಿಂದ ೩ ತಿಂಗಳುಗಳ ಕಾಲ ಊರ ಹೊರಗಿನ ಗುಡಿಸಲುಗಳಲ್ಲಿ muslim-womanವಾಸವಾಗಿರಬೇಕು. ಋತುಮತಿಯಾದ ಮಹಿಳೆಗೂ ಈ ಬಗೆಯ ನಿರ್ಬಂಧಗಳಿವೆ. ಈ ಬಗೆಯ ಅನಿಷ್ಟ ಪದ್ಧತಿಗಳನ್ನು ಬಹಳ ವ್ಯವಸ್ಥಿತವಾಗಿ ಇಲ್ಲಿಯವರೆಗೂ ಅಲ್ಲಿ ಕಾಪಾಡಿಕೊಂಡು ಬರಲಾಗಿದೆ. ಕಳೆದ ಅನೇಕ ವರ್ಷಗಳಿಂದಲೂ ಕೆಲವು ಸಂಘಟನೆಗಳು ಈ ಬಗೆಯ ಅನುಸರಣೆ ಸರಿಯಲ್ಲ, ಅದೊಂದು ಮೌಢ್ಯ ಎನ್ನುವ ತಿಳುವಳಿಕೆ ನೀಡುತ್ತಾ ಬಂದಿರುವ ಪರಿಣಾಮವಾಗಿ ಈಗೀಗ ಅಲ್ಲಿ ಈ ಬಗೆಯ ಆಚರಣೆಗಳು ತಮ್ಮ ಪ್ರಾಧಾನ್ಯತೆಯನ್ನು ಕಳೆದುಕೊಳ್ಳುತ್ತಿವೆ. ತನ್ನದಲ್ಲದ ತಪ್ಪಿಗೆ, ತಪ್ಪೇ ಅಲ್ಲದ ಜೈವಿಕ ಕ್ರಿಯೆಗಳಿಗೆ ಹೀಗೆ ಬಹಿಷ್ಕೃತ ರೂಪ ಕೊಟ್ಟು ಆಚರಿಸುವ ಕ್ರಮ ಸರಿಯಲ್ಲ. ಈಗೀಗ ಈ ಗೊಲ್ಲರ ಹಟ್ಟಿಗಳಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನು ಈ ಬಗೆಯ ಅನಿಷ್ಟಗಳನ್ನೇ ಶಿಷ್ಟಾಚಾರಗಳನ್ನಾಗಿ ಆಚರಿಸುವ ಅನೇಕ ಜನಸಮುದಾಯಗಳು ನಮ್ಮ ನಡುವೆ ಇವೆ. ಅಲ್ಲಿಯೂ ಕೂಡಾ ಹೀಗೆ ಬದಲಾವಣೆಯ ಗಾಳಿ ಬೀಸಬೇಕು ಇಲ್ಲವೇ ಬೀಸುವಂತೆ ಮಾಡಬೇಕು. ಗೊಲ್ಲರ ಹಟ್ಟಿಯ ಜನರೀಗ ಈ ಬಗೆಯ ಆಚರಣೆಗಳನ್ನು ವಿರೋಧಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ಈ ಬಗೆಯ ಬೆಳವಣಿಗೆಗಳು ಮಾತ್ರ ಮಹಿಳಾ ಶೋಷಣೆಯನ್ನು ತಡೆಯಬಲ್ಲವು.

ಯಾವುದೇ ಒಂದು ಅಹಿತಕರವಾದ ಪದ್ಧತಿ ಮತ್ತು ಆಚರಣೆಯ ವಿರುದ್ಧ ಪ್ರತಿಭಟನೆಗಳು ಹೊರಗಿನಿಂದ ನಡೆಯುವ ಬದಲಾಗಿ ಒಳಗಿನಿಂದಲೇ ನಡೆಯಬೇಕು ಅಂದಾಗ ಮಾತ್ರ ಆ ಬಗೆಯ ಆಚರಣೆಗಳನ್ನು ಕೈ ಬಿಡುವುದು ಸಾಧ್ಯ. ಮಹಿಳೆಯನ್ನು ಮತ್ತು ಆಕೆಯ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸುವಲ್ಲಿ ನಮ್ಮ ಸಮಾಜ ಇಂದಿಗೂ ಯಶಸ್ವಿಯಾಗಿಲ್ಲ. ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಅವಳ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. woman-unchainedಕುಟುಂಬದೊಳಗಿನ ಆಕೆಯ ಕಾರ್ಯವನ್ನು ಅನುತ್ಪಾದಕ ಎಂದು ಪರಿಗಣಿಸುವಲ್ಲಿಯೇ ಒಂದು ಬಹುದೊಡ್ಡ ದೋಷವಿದೆ. ಕೇವಲ ಮಾರುಕಟ್ಟೆ ಮತ್ತು ಆದಾಯವನ್ನು ಗಮನಿಸಿ ಆಕೆಯ ಕಾರ್ಯಚಟುವಟೆಗಳನ್ನು ಗುರುತಿಸುವುದು ಸರಿಯಲ್ಲ. ಗಂಡು-ಹೆಣ್ಣು ಎನ್ನುವ ಎರಡು ಲಿಂಗಗಳು ಜೈವಿಕವಾದ ಪ್ರಬೇಧಗಳೇ ಹೊರತು ಶ್ರೇಷ್ಟ ಮತ್ತು ಕನಿಷ್ಟತೆಯನ್ನು ಸೂಚಿಸಲು ಇರುವ ಪದಗಳಲ್ಲ. ಮಹಿಳೆ ಎಲ್ಲ ಬಗೆಯ ಸಾಮರ್ಥ್ಯಗಳನ್ನು ತೋರಿಯಾದ ಮೇಲೆಯೂ ನಾವು ಆಕೆಯನ್ನು ಸಮಾನತೆಯ ತಳಹದಿಯ ಮೇಲೆ ಗಮನಿಸದಿರುವುದು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿಯ ದೋಷವಲ್ಲದೇ ಮತ್ತೇನು..? ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿಯ ಮಹಿಳೆ ಇಂದಿಗೂ ಕೇವಲ ಯಂತ್ರದಂತೆ ದುಡಿಯುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ಸ್ತ್ರೀಪರ ಹೋರಾಟ ಮತ್ತು ಆಕೆಯ ಶೋಷಣೆಗಳನ್ನು ಕುರಿತು ಮಾತನಾಡುವಷ್ಟು ಜಾಗೃತಳಾಗಿಲ್ಲ. ಆಕೆಯ ಕಣ್ಣೆದುರೇ ಗಂಡಾಳಿಗೊಂದು ಕೂಲಿ, ಹೆಣ್ಣಿಗೊಂದು ಕೂಲಿ ಅಂತ ವಿತರಿಸಿದರೂ ಆಕೆ ನೋಡಿಕೊಂಡು ಅದೇ ಸರಿ ಎನ್ನುವಂತೆ ಸುಮ್ಮನಿದ್ದಾಳೆ. ಪರಿಣಾಮವಾಗಿ ಆಕೆಗೆ ಗ್ರಾಮೀಣ ಭಾಗಗಳಲ್ಲಿ ತನ್ನತನವೇ ಇಲ್ಲದಂತಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಜಾಗೃತರಾಗುವ ಅವಶ್ಯಕತೆ ಎಲ್ಲ ಬಗೆಯ ಮಹಿಳಾ ಹೋರಾಟಗಳಿಗಿಂತಲೂ ಮುಂಚೂಣಿಯದಾಗಬೇಕು. ಅಂದಾಗ ಮಹಿಳಾ ಹೋರಾಟ ಮತ್ತು ವಿಮೋಚನೆ ಎನ್ನುವ ಪದಗಳು ಹೆಚ್ಚೆಚ್ಚು ಅರ್ಥ ಪಡೆಯುತ್ತವೆ.

ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ : ಮಹಾತ್ಮ ಮತ್ತು ಮಹಾತಾಯಿ


– ಶ್ರೀಧರ್ ಪ್ರಭು


ಯಮದೂತರಂತಿದ್ದ ಅವರಿಬ್ಬರ ಅವನ ಹೆಗಲುಗಳ ಮೇಲೆ ಭಾರವಾದ ಮೂಟೆಗಳು. ಪುಣೆಯ ಗರ್ಭದಲ್ಲಿರುವ ಆ ಪುಟ್ಟ ಗಲ್ಲಿಯನ್ನು ಹುಡುಕುವಷ್ಟರಲ್ಲಿ ಇವರಿಬ್ಬರಿಗೂ ಮೈಯೆಲ್ಲಾ ಬೆವರಿ ಹೋಗಿತ್ತು. ಸುಮಾರು ಹತ್ತು ಹನ್ನೆರಡು ಹೆಣ್ಣು ಮಕ್ಕಳನ್ನು ಕೂಡಿಸಿಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಆ ತಾಯಿಗೆ ಈ ಇಬ್ಬರು ಧಡೂತಿ ಗಾತ್ರದ ಆಸಾಮಿಗಳನ್ನು ನೋಡಿ ಒಂದು ಕ್ಷಣ ಉಸಿರೇ ನಿಂತು ಹೋಯಿತು!

ನಾಲ್ಕೈದು ದಿವಸದ ಹಿಂದೆ ಮಧ್ಯ ರಾತ್ರಿಯ ವೇಳೆ ಮನೆಯ ಕಿಟಕಿ ಸರಳುಗಳನ್ನು ಮುರಿದು ಇವರಿಬ್ಬರೂ ಕೊಡಲಿ ಬಾಕು ಹಿಡಿದುಕೊಂಡು ಈ ತಾಯಿ ಮತ್ತವರ ಗಂಡನನ್ನು ಕೊಲೆ ಮಾಡಲು ಬಂದಿದ್ದರು. ತಕ್ಷಣ ಎಚ್ಹೆತ್ತುಕೊಂಡ ತನ್ನ ಪತಿ, ಅಂಥಹ ಕರಾಳ ರಾತ್ರಿ ಕೊಲೆಗಾರರನ್ನು ದಿಟ್ಟಿಸಿ ನೋಡುತ್ತಾ ತನಗೆ ಹೇಳಿದ ಮಾತುಗಳು ಅವರಿಗೆ ನೆನಪಾದವು:

“ಸಾವಿತ್ರಿ, ಇವರು ರಾಮೊಶಿಗಳು; ವೈದಿಕಶಾಹಿಯ ಅತಿ ಕ್ರೂರ ವಿಕೃತಿಗೆ ಬಲಿಯಾದ ಜನ. ಇವರದ್ದೇನೂ ತಪ್ಪಿಲ್ಲ. ಶತ ಶತಮಾನಗಳಿಂದ ಪುರೋಹಿತಶಾಹಿ ಸಮಾಜ ಇವರನ್ನು ವಿದ್ಯೆಯಿಂದ ವಂಚಿಸಿ ಬಿಡಿಗಾಸಿಗಾಗಿ ಹೇಯ ಕೃತ್ಯಗಳನ್ನು ಮಾಡಲು ದೂಡಿದೆ. ನಮ್ಮ ಕ್ರೂರ ಸಮಾಜದ ವಾಸ್ತವವೆಂದರೆ, ಇವರ ಕೈಯಲ್ಲೇ ಕೊಲೆಯಾಗಲು ಹೊರಟಿದ್ದೇನೆ. ಇಂಥಹ ದಲಿತ ದಮನಿತರ ಪರವಾಗಿ ಶ್ರಮಿಸಿ ಇವರಿಗೇ ನನ್ನ ಜೀವ ಸಮರ್ಪಿಸಲು ಸಂತೋಷವೆನಿಸುತ್ತಿದೆ. ಅದಿರಲಿ… ನಾನು ಸತ್ತ ಮೇಲೆ ಕೂಡ ನಮ್ಮ ಕೆಲಸ ನಿಲ್ಲಿಸಬೇಡ. ಇವರ ಮಕ್ಕಳನ್ನು ನಮ್ಮ ಶಾಲೆಯಲ್ಲೇ ಓದಿಸಿ ವಿದ್ಯಾವಂತರನ್ನಾಗಿ ಮಾಡು.”

ಅಷ್ಟು ಹೇಳಿದ್ದೆ ತಡ. ಈ ಕೊಲೆಗಾರರು ಕೊಡಲಿ ಕೆಳಗಿಳಿಸಿದ್ದರು.

” ಸ್ವಾಮಿ! ನೀವು ಶಾಲೆ ನಡೆಸುತ್ತಿದ್ದೀರಾ? ಅಲ್ಲಿ ನಮ್ಮ ಮಕ್ಕಳು ಓದಬಹುದೇ?”

“ನೀವು ನಿಮ್ಮ ಕೆಲಸ ಮುಗಿಸಿ. ಅದೆಲ್ಲ ನಿಮಗ್ಯಾಕೆ?” ಪತಿ ಅತ್ಯಂತ ಶಾಂತ ಚಿತ್ತರಾಗಿ ಹೇಳಿದರು.

ತಕ್ಷಣ ಕೈ ಮುಗಿದು ನಿಂತ ಇವರಿಬ್ಬರೂ ಹೇಳಿದರು “ಸ್ವಾಮಿ, ನಿಮ್ಮಿಬ್ಬರನ್ನು ಕೊಲೆ ಮಾಡಲು ನಮಗೆ ತಲಾ ಒಂದು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಸರಿಯಾಗಿ ಐದು ರೂಪಾಯಿ ಕೂಡ ಕೈಯಲ್ಲಿ ಹಿಡಿದು ನೋಡಿದ ಜನವಲ್ಲ ನಾವು…. ಆದರೆ, ನಿಮ್ಮಂತಹ ಮಹಾತ್ಮರನ್ನು ಕೊಲೆ ಮಾಡಿ ಅದೆಂತಹ ಮಹಾ ಪಾತಕ ಮಾಡುತ್ತಿದ್ದೆವು!!!”

೧೮೪೮ ರಲ್ಲಿ ಪುಣೆಯ ವೈದಿಕರು-ಸಂಪ್ರದಾಯವಾದಿಗಳು ಜ್ಯೋತಿ ರಾವ್ ಗೋವಿಂದರಾವ್ ಫುಲೆ ಮತ್ತವರ ಪತ್ನಿ ಸಾವಿತ್ರಿ ಬಾಯಿಯವರನ್ನು ಕೊಲೆ ಮಾಡಲು ಎರಡು ಸಾವಿರ ರೂಪಾಯಿಯ ಸುಪಾರಿ ನೀಡಿದ್ದರೆಂದರೆ ಈ ದಂಪತಿ ಅದೆಂತಹ ಕ್ರಾಂತಿಯ ಕಿಡಿ ಹಚ್ಚಿದ್ದರೆಂದು ಊಹಿಸಿಕೊಳ್ಳಿ!

ಮಹಾತ್ಮಾ ಫುಲೆ ಹಚ್ಚಿದ ಕ್ರಾಂತಿಯ ಕಿಡಿ ನಂತರದ ಅನೇಕ ಸಾಮಾಜಿಕ ಮತ್ತು ರಾಜಕೀಯ ಪರಿವರ್ತನೆಗಳಿಗೆ ಮೂಲ ಸ್ರೋತವಾಗಿತ್ತು. ಆದರೂ ಫುಲೆ ದಂಪತಿಯ ಸಮಾಜಪರ ಕಾರ್ಯಗಳ ಹರವು ತುಂಬಾ ವಿಸ್ತೃತ.

ಕ್ರಾಂತಿಯ ಹರಿಕಾರ

ಫುಲೆಯವರು ಮಹಾತ್ಮಾ ಫುಲೆ ಕೇವಲ ಜಾತಿ ವಿರೋಧಿ ಚಳುವಳಿ ಮಾತ್ರ ನಡೆಸಲಿಲ್ಲ; ಭಾರತದ ಶಿಕ್ಷಣ ಕ್ರಾಂತಿಯ ಹರಿಕಾರರಾಗಿದ್ದರು. ಪ್ರಖ್ಯಾತ ಶೈಕ್ಷಣಿಕ ಇತಿಹಾಸಕಾರ ಸರ್ ಹೆನ್ರಿ ಶಾರ್ಪ್ ಹೇಳುವಂತೆ:

“ಜ್ಯೋತಿಬಾ ಮಹಿಳಾ ಶಿಕ್ಷಣ ಕ್ರಾಂತಿಯ ಕಿಡಿ ಹಚ್ಚಿದಾಗ ಭಾರತದ ಮೆಲ್ವರ್ಗಗಳು ಹಾಡಿ ಹೊಗಳುವ ಸುಧಾರಕರಾದ ಮಹಾದೇವ ರಾನಡೆ ಹತ್ತು ವರ್ಷದ ಹಸುಳೆ, ಇನ್ನು ಅಗರ್ಕರ್. ಕೆ. ಕರ್ವೆ, ಪಂಡಿತಾ ರಾಮಾಬಾಯಿ, ಮೋಹನದಾಸ ಗಾಂಧಿಯವರು ಹುಟ್ಟೇ ಇರಲಿಲ್ಲ.”

೧೮೭೬ರಲ್ಲಿ ಅವರು ಪ್ರಾರಂಭಿಸಿದ “ವಿಕ್ಟೋರಿಯ ಅನಾಥಾಲಯ” ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಅನೇಕ ವಿಧವೆಯರಿಗೆ ಆಶ್ರಯ ನೀಡಿ ಅನೇಕ ವಿಧವೆಯರ ಮಕ್ಕಳು ಶಿಕ್ಷಣ ಮತ್ತು ಪಡೆಯಲು ಸಹಾಯ ಮಾಡಿತು.

ಪುಣೆಯಲ್ಲಿ ತನ್ನದೇ ಜಾತಿಯ ವಂಚಕನೊಬ್ಬನ ಬಲಿಗೆ ಬಿದ್ದ ಬ್ರಾಹ್ಮಣ ವಿಧವೆಯೋಬ್ಬಳಿಗೆ ಅಲ್ಲಿನ ಬ್ರಾಹ್ಮಣ ಸಮಾಜ ಸಾಯಿಸಲು ಹವಣಿಸುತ್ತಿತ್ತು. mahatma-jyoti-rao-phuleಫುಲೆ ದಂಪತಿ ತಮ್ಮ ಮನೆಯಲ್ಲಿ ರಕ್ಷಣೆ ನೀಡಿ ಅವಳಿಗೆ ಜನಿಸಿದ ಯಶವಂತನೆಂಬ ಬಾಲಕನನ್ನು ಫುಲೆ ದಂಪತಿಗಳು ದತ್ತು ಪಡೆದು ಸಾಕಿ ಸಲಹಿ ವೈದ್ಯನನ್ನಾಗಿ ಮಾಡುತ್ತಾರೆ.

ತಾಯಿ ಸಾವಿತ್ರಿ ಬಾಯಿಯ ತ್ಯಾಗ ಬಹು ದೊಡ್ಡದು. ಜನರ ಸೇವೆಯಲ್ಲೇ ತಮ್ಮ ಪ್ರಾಣ ವನ್ನು ಸಮರ್ಪಿಸಿದರು ಈ ಮಹಾತಾಯಿ. ಪುಟ್ಟ ಬಾಲ ವಿಧವೆಯರನ್ನು ಕೊಂದು ಹಾಕುವ ಕ್ರೂರ ಪದ್ಧತಿ ಇದ್ದ ಕಾಲದಲ್ಲಿ ಈ ತಾಯಿ “ಬಾಲ ಹತ್ಯಾ ಪ್ರತಿಬಂಧಕ ಗೃಹ” ತೆರೆದರು.

ಅಮ್ಮ ಸಾವಿತ್ರಿ, ವಿಶ್ವದ ಪ್ರಥಮ ಮಹಿಳಾ ಚಳುವಳಿಗಾರ್ತಿ ಎಂದು ವಿಶ್ವ ವಿಖ್ಯಾತ ಚಿಂತಕಿ ಟಿಫಾನಿ ವೇಯ್ನ್ ತಮ್ಮ “Feminist Writings from Ancient Times to the Modern World: A Global Sourcebook and History.” ಪುಸ್ತಕದಲ್ಲಿ ಹೇಳುತ್ತಾರೆ.

೧೮೯೭ ರಲ್ಲಿ ಭೀಕರವಾದ ಪ್ಲೇಗ್ ರೋಗ ಹರಡಿತು. ತಮ್ಮ ಅರವತ್ತಾರರ ಇಳಿ ವಯಸ್ಸಿನಲ್ಲೂ ವೈದ್ಯನಾಗಿದ್ದ ಮಗ ಯಶವಂತನ ಜತೆ ಸೇರಿ ಮಹಾಮಾತೆ ಸಾವಿತ್ರಿ ಬಾಯಿ ಸಾವಿರಾರು ರೋಗಿಗಳ ಸೇವೆ ಮಾಡಿ ಜನತೆಗೊಸ್ಕರ ತಮ್ಮ ಪ್ರಾಣ ವನ್ನೇ ಅರ್ಪಿಸಿದರು!

ತಾಯಿ ಸಾವಿತ್ರಿ ಒಬ್ಬ ಕವಿಯಿತ್ರಿ ಕೂಡ; ಎರಡು ಕವನ ಸಂಕಲನಗಳನ್ನು ಇವರ ಮರಣಾನಂತರ ಬಿಡುಗಡೆಗೊಳಿಸಲಾಯಿತು. ಎಂಥೆಂಥವರಿಗೆಲ್ಲ ಪದ್ಮ ಪ್ರಶಸ್ತಿ – ಭಾರತರತ್ನ ಕೊಡುವ ಸರಕಾರ ಈ ಮಹಾತಾಯಿಯ ಹೆಸರಿನಲ್ಲಿ ಒಂದು ಅಂಚೆ ಚೀಟಿ ಬಿಡುಗಡೆ ಮಾಡಿದ್ದೂ ಬಿಟ್ಟರೆ ಇನ್ನೇನೂ ಮಾಡಿಲ್ಲ! ಕೇವಲ ತೀರ ಇತ್ತೀಚಿಗೆ (೨೦೧೪) ಪುಣೆ ವಿಶ್ವ ವಿದ್ಯಾಲಯಕ್ಕೆ ಇವರ ಹೆಸರನ್ನು ಇಡಲಾಗಿದೆ. ಅಷ್ಟು ಬಿಟ್ಟರೆ ಈ ವಿಶ್ವವಂದ್ಯೆ ಮಹಾತಾಯಿಯ ತ್ಯಾಗವನ್ನು ಸ್ಮರಿಸುವ ಅಮರಗೊಳಿಸುವ ಯಾವ ಪ್ರಯತ್ನಗಳೂ ನಡೆದಿಲ್ಲ.

ಫುಲೆ ಮತ್ತು ಭಾರತದ ಮಾತೃ ಭಾಷಾ ಕ್ರಾಂತಿ

ಮಹಾತ್ಮಾ ಫುಲೆಯವರ ಸಾಮಾಜಿಕ ಸುಧಾರಣೆಯ ವ್ಯಕ್ತಿತ್ವದ ಮಜಲು ಬಹುಶೃತ. ಆದರೆ ಫುಲೆ ಸಾಧನೆ ಅಷ್ಟು ಮಾತ್ರಕ್ಕೆ ಸೀಮಿತವಾಗಿರಲಿಲ್ಲ.phule ನಮ್ಮ ಚರಿತ್ರೆ ಅವರಿಗೆ ಸಲ್ಲಬೇಕಾದ ಗೌರವದ ಒಂದು ಪ್ರತಿಶತ ಕೂಡ ಸಲ್ಲಿಸಿಲ್ಲ. ಫುಲೆ ದಂಪತಿಗಳು ಕೇವಲ ಒಂದು ಜಾತಿಗೆ ಸೇರಿದವರು ಎಂದು ವ್ಯವಸ್ಥಿತ ಅಪಪ್ರಚಾರ ನಡೆಸಿ ಅವರ ಮಹಾತ್ಮೆಯನ್ನು ಮುಚ್ಚಿ ಹಾಕುವ ಪ್ರಯತ್ನ ಚರಿತ್ರೆಯುದ್ದಕ್ಕೂ ನಡೆಯುತ್ತಲೇ ಬಂದಿದೆ. ಫುಲೆ ಕೇವಲ ಜಾತಿ ವಿರೋಧಿ ಹೋರಾಟಗಳ ನೇತಾರರಗಿರಲಿಲ್ಲ; ಸಂಪೂರ್ಣ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದರು.

ಫುಲೆಯವರ ಅನೇಕ ಸಾಧನೆಗಳು ಚರಿತ್ರೆಯ ಗರ್ಭದಲ್ಲಿ ಹುಡುಗಿ ಹೋಗಿವೆ. ಅವುಗಳಲ್ಲಿ ಒಂದೆರಡನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.

೧೬೭೪ ರಲ್ಲಿ ಶಿವಾಜಿಯ ಪಟ್ಟಾಭಿಷೇಕವಾದ ನಂತರ ಶುರುವಾಗಿದ್ದು “ದಕ್ಷಿಣಾ ಪದ್ಧತಿ”. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬೊಕ್ಕಸದ ಒಂದು ಬಹು ದೊಡ್ಡ ಮೊತ್ತವನ್ನು ಬ್ರಾಹ್ಮಣರಿಗೆ ದಕ್ಷಿಣೆಯ ರೂಪದಲ್ಲಿ ನೀಡಲಾಗುತ್ತಿತ್ತು. ಶಿವಾಜಿಯ ನಂತರದಲ್ಲಿ ಪೇಶ್ವೆ ಆಡಳಿತ ಶುರುವಾದ ಮೇಲಂತೂ ಈ ದಕ್ಷಿಣೆಯ ಪದ್ಧತಿ ಉಚ್ಹ್ರಾಯಕ್ಕೇರಿತು.

ಪುಣೆಯ ಅರವತ್ತು ಸಾವಿರ ಬ್ರಾಹ್ಮಣರಿಗೆ ಸುಮಾರು ಹತ್ತು ಲಕ್ಷ ರೂಪಾಯಿ ಹಂಚಲಾಯಿತು! ಹತ್ತೊಂಬತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಹಂಚಿದ (೧೮೦೦-೧೮೧೦) ವಾರ್ಷಿಕ ಮೊತ್ತ ಬರೋಬ್ಬರಿ ಹತ್ತು ಲಕ್ಷಕ್ಕೆ ಇಂದಿನ ದಿನಗಳಲ್ಲಿ ಎಷ್ಟು ಮೌಲ್ಯವೆಂದು ಅರ್ಥಶಾಸ್ತ್ರ ಬಲ್ಲವರು ಹೇಳಬೇಕು! ಒಟ್ಟಾರೆ ಎರಡನೇ ಬಾಜಿರಾಯ ವಸ್ತುಶಃ ತನ್ನ ಇಡೀ ಖಜಾನೆಯನ್ನೇ ಬ್ರಾಹ್ಮಣರ ಪಾದಕ್ಕೆ ಅರ್ಪಿಸಿದ್ದ!

ಆಂಗ್ಲರು ಮರಾಠರನ್ನು ಸೋಲಿಸಿದ ನಂತರದಲ್ಲಿ ಲಾರ್ಡ್ ಎಲ್ಫಿನ್ಸ್ಟನ್ ಈ “ದಕ್ಷಿಣಾ ಫಂಡ್” ನ ಮೊತ್ತವನ್ನು ವಾರ್ಷಿಕ ಹತ್ತು ಲಕ್ಷದಿಂದ ಇಪ್ಪತ್ತು ಸಾವಿರಕ್ಕಿಳಿಸಿದ. ಪುಣೆಯ ಕೆಲ ಸುಧಾರಣಾವಾದಿ ಬ್ರಾಹ್ಮಣರು ಈ ದಕ್ಷಿಣೆಯನ್ನು ಬ್ರಾಹ್ಮಣರ ಸಂಸ್ಕೃತ ಪಾಂಡಿತ್ಯಕ್ಕೆ ಮೀಸಲಿರಿಸುವ ಬದಲು Jyotirao Phuleಮರಾಠಿ ಭಾಷೆಯ ವಿಕಾಸಕ್ಕೆ ವಿನಿಯೋಗಿಸಬೇಕು ಎಂದು ಸಹಿ ಸಂಗ್ರಹ ಚಳುವಳಿ ಪ್ರಾರಂಭಿಸಿದರು.

ಹತ್ತಿರ ಹತ್ತಿರ ಒಂದು ಲಕ್ಷ ಸಂಖ್ಯೆಯ ಪುಣೆಯ ಬಹುಸಂಖ್ಯಾತ ಬ್ರಾಹ್ಮಣ ವರ್ಗ ಒಂದು ಕಡೆ; ಬೆರಳೆಣಿಕೆಯ ಕೆಲವೇ ಸುಧಾರಣಾವಾದಿಗಳು ಇನ್ನೊಂದೆಡೆ. ತಾವು ಅಳುತ್ತಿದ್ದ ಪ್ರಜೆಗಳಲ್ಲೇ ಅತ್ಯಂತ ಪ್ರಭಾವಿ ವರ್ಗವಾಗಿದ್ದ ಬ್ರಾಹ್ಮಣರನ್ನು ಎದುರು ಹಾಕಿಕೊಳ್ಳಲು ಬ್ರಿಟಿಷರು ಹಿಂದೆ ಮುಂದೆ ನೋಡುತ್ತಿದ್ದರು. ಸುಧಾರಣಾವಾದಿ ಬ್ರಾಹ್ಮಣರ ಒಂದು ವರ್ಗ ಫುಲೆ ಯವರನ್ನು ತಮ್ಮ ನೇತೃತ್ವ ವಹಿಸುವಂತೆ ಕೇಳಿಕೊಂಡಿತು.

ಎಷ್ಟರ ಮಟ್ಟಿಗೆ ಎಂದರೆ ಮರಾಠಿ ಭಾಷೆಗೆ ದಕ್ಷಿಣ ಫಂಡ್ ಕೊಡಬೇಕು ಎಂದು ಒತ್ತಾಯಿಸಿ ಬಗ್ಗೆ ನಡೆದ ಸಭೆಯಲ್ಲಿ ಮನವಿ ಸಲ್ಲಿಸಲು ನನ್ನ ಹೆಸರು ಬೇಡ ತನ್ನ ಹೆಸರು ಬೇಡ ಎಂದು ಬ್ರಾಹ್ಮಣರು ಗಾಬರಿ ಗೊಂಡಾಗ, ಬ್ರಾಹ್ಮಣರ ಪರವಾಗಿ ಸ್ವತಃ ಫುಲೆ ತಾವೇ ತಮ್ಮ ಹೆಸರಿನಲ್ಲೇ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕಾಯಿತು. ಯಾವಾಗ ಫುಲೆ ಯವರ ಹೆಸರು ಮುಂದಕ್ಕೆ ಬಂತೋ ಬ್ರಾಹ್ಮಣ ಸಂಪ್ರದಾಯವಾದಿಗಳು ಬಾಲವನ್ನೇ ಬಿಚ್ಚಲಿಲ್ಲ. ಫುಲೆ ಸಂಘಟಿಸಿದ ಮೆರವಣಿಗೆಗೆ ರಕ್ಷಣೆ ಕೊಡಲು ಪುಣೆಯ ಸುಮಾರು ೨೫೦ ದಲಿತ-ಶೂದ್ರ ಪೈಲ್ವಾನರು ಮುಂದೆ ಬಂದರು, ಒಂದು ಲಕ್ಷದ ಹತ್ತಿರ ಸಂಖ್ಯಾಬಲದ ವಿಪ್ರೋತ್ತಮರು ಬಾಲ ಮುದುರಿ ಲಟಿಕೆ ಮುರಿಯುತ್ತಾ ಮನೆಯಲ್ಲೇ ಕುಳಿತುಕೊಂಡರು.

ಕೇವಲ ಇಪ್ಪತ್ತು-ಇಪ್ಪಂತ್ತೊಂದು ವರ್ಷ ಪ್ರಾಯದ ಜ್ಯೋತಿಬಾ ಫುಲೆ ತಮ್ಮ ಮೂರರಷ್ಟು ಪ್ರಾಯದ ಜನರನ್ನು ಸಂಘಟಿಸಿ ಹೋರಾಟ ನಡೆಸಿ “ದಕ್ಷಿಣಾ ಫಂಡ್” ನ್ನು ಮರಾಠಿ ಭಾಷೆಯ ವಿಕಾಸಕ್ಕೆ ಬಳಸುವಂತೆ ಮಾಡಿದರು.

ಹೀಗೆ ಮರಾಠಿಯ ವಿಕಾಸನದ ಪ್ರಕ್ರಿಯೆ ಪ್ರತಿಯೊಂದು ನೆಲದ ಭಾಷೆಯ ವಿಕಸನದ ಹೋರಾಟದ ಕಿಡಿ ಹಚ್ಚಿತು!

ಕೇವಲ ಬ್ರಾಹ್ಮಣರಿಗೆ ಮೀಸಲಾಗಿದ್ದ “ಹಿಂದೂ ಕಾಲೇಜ್” ನ್ನು ಎಲ್ಲರಿಗೂ ಮುಕ್ತಗೊಳಿಸಿ ಮರಾಠಿಯ ಬೆಳವಣಿಗೆಗೆ ಮಾತ್ರವಲ್ಲ ಒಂದಿಡೀ ಜನಾಂಗ ಶಿಕ್ಷಣ ಹೊಂದಲು ಕಾರಣರಾದ ಖ್ಯಾತಿ ಕೂಡ ಮಹಾತ್ಮಾ ಫುಲೆಯವರಿಗೆ ಸಲ್ಲಬೇಕು. ಫುಲೆ ನೇತೃತ್ವದ ಜಾಗೃತ ನಾಗರೀಕರ ಹೋರಾಟಕ್ಕೆ ಮಣಿದ ಬ್ರಿಟಿಷ್ ಸರಕಾರ ದಕ್ಷಿಣಾ ಫಂಡ್ ನ್ನು ಮರಾಠಿ ಭಾಷೆಗೆ ಮೀಸಲಿಟ್ಟಿತು. ಸಂಸ್ಕೃತ ಪಾಂಡಿತ್ಯದ ನೆಪದಲ್ಲಿ ಕೇವಲ ಬ್ರಾಹ್ಮಣರ ದುಂದು ವೆಚ್ಚ ಭರಿಸಲು ಬಳಕೆಯಾಗುತ್ತಿದ್ದ ಲಕ್ಷಗಟ್ಟಲೆ ಹಣ ನೆಲದ ಭಾಷೆಯ ವಿಕಾಸಕ್ಕೆ ಬಳಕೆಯಾಗತೊಡಗಿತು. ಈ ಹೋರಾಟವೇ, ಭಾಷಾ ಚಳುವಳಿ ಮತ್ತು ಸಮ್ಮೇಳನಗಳನ್ನು ಸಂಘಟಿಸಲು ಬೇಕಾದ ಭದ್ರ ಅರ್ಥಿಕ ಬುನಾದಿಯನ್ನು ಒದಗಿಸಿತು. ಫುಲೆಯವರು ಚಾಲನೆ ಕೊಟ್ಟ ಈ ಜನರ ಭಾಷಾ ವಿಕಾಸದನ ಈ ಪ್ರಕ್ರಿಯೆಯಿಂದಾಗಿಯೇ ಭಾಷಾವಾರು ಪ್ರಾಂತಗಳ ನಿರ್ಮಾಣದ ಚಿಂತನೆಗೆ ಚಾಲನೆ ಸಿಕ್ಕಿತು.

ಆದ್ದರಿಂದಲೇ, ಕನ್ನಡ ಸೇರಿದಂತೆ ಭಾರತದ ಎಲ್ಲಾ ಭಾಷಾ ಸಮ್ಮೇಳನಗಳನ್ನು ನಡೆಸುವ ಸಂದರ್ಭಗಳಲ್ಲಿ ಮಹಾತ್ಮಾ ಫುಲೆಯವರನ್ನು ನೆನೆದು ಕೈ ಮುಗಿಯಬೇಕು.

ಭಾರತದ ಮೊಟ್ಟ ಮೊದಲ ಕಾನೂನು ನೆರವು ಕೇಂದ್ರ – ಜನ ಸಾಮಾನ್ಯರಿಗೆ ದಕ್ಕಿದ ಧಾರ್ಮಿಕ ಹಕ್ಕು

ಫುಲೆಯವರಿಗೆ ಶೂದ್ರ ದಲಿತರಿಗಿಂತ ಜಾಸ್ತಿ ಬ್ರಾಹ್ಮಣ ಸಮಾಜವೇ ಹೆಚ್ಚು ಋಣಿಯಾಗಿರಬೇಕು. ಬ್ರಾಹ್ಮಣ ವಿಧವೆಯರ ಕೇಶಮುಂಡನೆ ಮಾಡಬಾರದು Savitribai-Phuleಎಂದು ಫುಲೆ ಸವಿತಾ ಸಮಾಜಕ್ಕೆ ಕಟ್ಟಳೆ ವಿಧಿಸಿದ್ದರು!

ಅದೇ ಹೊತ್ತಿಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸಂಸ್ಥಾಪಕ ಸದಸ್ಯ, ಅಂದಿನ ಕಾಲದ ಅತ್ಯುನ್ನತ ಸಮಾಜ ಸುಧಾರಕರೆನಿಸಿಕೊಂಡಿದ್ದ ಬ್ರಾಹ್ಮಣ ಸಮಾಜದ ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆ ಏನು ಮಾಡುತ್ತಿದ್ದರು ಗೊತ್ತೇ? ರಾನಡೆ ಮಾಡಿದ ಮೊದಲ ಘನಂದಾರಿ ಕೆಲಸವೆಂದರೆ, “ಬಾಲಾಜಿ ಪಾಟೀಲ್” ಮುಕದ್ದಮೆಯಲ್ಲಿ ಬ್ರಾಹ್ಮಣರನ್ನು ಕರೆಸದೇ ನಡೆಸುವ ಮತ್ತು ಬ್ರಾಹ್ಮಣರಿಗೆ ದಕ್ಷಿಣೆ ಕೊಡದ ಮದುವೆಯೇ ಅನೂರ್ಜಿತ ಎಂದು ತೀರ್ಪು ಕೊಟ್ಟಿದ್ದು! ಈ ತೀರ್ಪನ್ನು ಸತ್ಯಶೋಧಕ ಸಮಾಜ ಮುಂಬೈ ಉಚ್ಚ ನ್ಯಾಯಾಲಯಕ್ಕೆ ಕೊಂಡು ಹೋಗಿ ಅನೂರ್ಜಿತ ಗೊಳಿಸಿಲ್ಲ ದಿದ್ದರೆ ಎನೇನು ಅನಾಹುತಗಳಾಗುತ್ತಿದ್ದವೋ! ರಾನಡೆ ಮಾಡಿದ ಎರಡನೇ ಘನಂದಾರಿ ಕೆಲಸವೆಂದರೆ, ಬಹು ದೊಡ್ಡ ಸುಧಾರಕನೆಂದು ತೋರಿಸಿಕೊಳ್ಳಲು ತಾವು ನಲವತ್ತರ ಅಂಚಿನಲ್ಲಿದ್ದಾಗ ತಮ್ಮ ಪತ್ನಿ ತೀರಿಕೊಂಡಾಗ ಕೇವಲ ಹನ್ನೊಂದು ವರ್ಷ ಪ್ರಾಯದ ಬಾಲ ವಿಧವೆಯನ್ನು ಮದುವೆಯಾಗಿದ್ದು! ಹೀಗಿದ್ದೂ ರಾನಡೆಯವರಿಗೆ ಇಂದು ಒಬ್ಬ ಸಮಾಜ ಸುಧಾರಕನ ಪಟ್ಟ ಪಟ್ಟಿದ್ದಾರೆ!

ಸೆಪ್ಟೆಂಬರ್ ೨೪, ೧೮೭೩ ರಲ್ಲಿ ಫುಲೆಯವರು ಸ್ಥಾಪಿಸಿದ “ಸತ್ಯಶೋಧಕ ಸಮಾಜ” ಮಹಾರಾಷ್ಟ್ರದ ಪ್ರತಿ ಹಳ್ಳಿಯಲ್ಲೂ ಸಾಮಾಜಿಕ ಸಂಚಲನವನ್ನು ಹುಟ್ಟು ಹಾಕಿತು. ನಮ್ಮ ಉತ್ತರ ಕರ್ನಾಟಕದಲ್ಲೂ ಜನಪ್ರೀಯವಾಗಿರುವ “ಗೀ ಗೀ ಪದಗಳ” ಮುಖಾಂತರ ಜನ ಜಾಗೃತಿ ಸಾಧಿಸಲಾಯಿತು. ಸತ್ಯಶೋಧಕ ಸಮಾಜದ ನೇತೃತ್ವದಲ್ಲಿ ಲಕ್ಷಾಂತರ ಅಬ್ರಾಹ್ಮಣರು ವೈದಿಕರ ನೆರವಿಲ್ಲದೇ ಮದುವೆ, ಅಂತ್ಯ ಕ್ರಿಯೆ, ಪುಣ್ಯ ತಿಥಿಗಳನ್ನು ಮಾಡತೊಡಗಿದರು. ಪುರೋಹಿತಶಾಹಿಗಳಿಗೆ ಮೈಯೆಲ್ಲಾ ಪರಚಿಕೊಳ್ಳುವಂತಾಯಿತು!

ಪ್ರತಿವರ್ಷವೂ ಊರಿನ ಬ್ರಾಹ್ಮಣರನ್ನು ಕರೆಸಿ ಶಾಸ್ತ್ರೋಕ್ತ ರೀತ್ಯ ದಶಪಿಂಡ ಕ್ರಿಯೆ ಮಾಡಿಸುತ್ತಿದ್ದ ಅಹಮದ್ ನಗರ ಜಿಲ್ಲೆಯ ಭಾವಡಿ ಎಂಬ ಹಳ್ಳಿಯ ಬಲವಂತ ಲಕ್ಷ್ಮಣ ಘಾಟ್ಪಂಡೆ ಎಂಬುವವರ ಶೂದ್ರ ಕುಟುಂಬ ಈ ಬಾರಿ ಬ್ರಾಹ್ಮಣರನ್ನು ಕರೆಯಿಸಲಿಲ್ಲ; ಬದಲಿಗೆ ಭಕ್ತಿಯಿಂದ ಹಿರಿಯರನ್ನು ಮನಸಾ ವಂದಿಸಿ ನದಿ ದಡದಲ್ಲಿ ಮಿಂದೆದ್ದು ಬಂದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಬಾಳ ಗಣುಜಿ ನವಲೆ ಎಂಬ ಬ್ರಾಹ್ಮಣ, ಮಹಾರಾಷ್ಟ್ರದ ನಿಖಿಲ ಬ್ರಾಹ್ಮಣ ಸಮಾಜದ ಕುಮ್ಮಕ್ಕು ಪಡೆದು ಇವರ ಮೇಲೆ ಒಂದು ಮೊಕದ್ದಮೆಯನ್ನೇ ಜಡಿದು ಬಿಟ್ಟ! ಬ್ರಾಹ್ಮಣರ ವಾದವೇನೆಂದರೆ ಬ್ರಾಹ್ಮಣ್ಯ / ಪೌರೋಹಿತ್ಯವೆಂಬುದು ಸರಕಾರೀ ಪದವಿಗೆ ಸಮಾನ. ಯಾರೇ ಆಗಲಿ ಬ್ರಾಹ್ಮಣರ ಮುಖಾಂತರವೇ ಪೂಜೆ ಮಾಡಿಸಬೇಕು, ಇಲ್ಲದಿದ್ದರೆ ಅದು ಕಾನೂನು ಬಾಹಿರ! ಆದ್ದರಿಂದ, ಜುಲ್ಮಾನೆ ಕಟ್ಟಿ ಕೊಡಬೇಕು! ಬ್ರಾಹ್ಮಣರನ್ನು ಕರೆಯಿಸದೆ ಪೂಜೆ ಪುನಸ್ಕಾರ ಮಾಡಿಸಿದರೆ ಶೂದ್ರರು ದಂಡ ಕಟ್ಟಬೇಕು!!

ತಾಲೂಕು ಮಟ್ಟದ ಕೋರ್ಟ್ ನಲ್ಲಿ ಶುರುವಾದ ಈ ಮುಕದ್ದಮೆ ಸುಮಾರು ಇಪ್ಪತ್ತು ವರ್ಷ ನಡೆದು ಬೊಂಬಾಯಿ ಉಚ್ಚ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳ ವಿಭಾಗೀಯ ಪೀಠದವರೆಗೂ ಹೋಯಿತು. ಕೊನೆಗೂ ಶೂದ್ರ ಸಮಾಜ ಗೆದ್ದಿತು!

ಘಾಟ್ಪಂಡೆಯ ಮುಕದ್ದಮೆ [(1918) 20 BOMLR 454] ಮಾತ್ರವಲ್ಲ, ಅಂದಿನ ಪ್ರತಿ ಸಾಮಾಜಿಕ ಸಂಘರ್ಷದ ಪರಿಣಾಮವಾಗಿ ಕೋರ್ಟಿನ 1998-savitribai_phule[1]ಮೆಟ್ಟಲೇರುತ್ತಿದ್ದ ಅಥವಾ ನೂಕಲ್ಪಡುತಿದ್ದ ಸಾವಿರಾರು ದಲಿತ-ಶೂದ್ರರಿಗೆ ಬೆನ್ನೆಲುಬಾಗಿ ನಿಂತಿದ್ದ “ಸತ್ಯಶೋಧಕ ಸಮಾಜ”, ಭಾರತದ ಮೊಟ್ಟ ಮೊದಲ ‘ಕಾನೂನು ನೆರವು ಕೇಂದ್ರ’ (Legal Aid Clinic) ವಾಗಿತ್ತು; ಅಷ್ಟೇ ಅಲ್ಲ, ಶತಮಾನ ಗಳ ನಂತರ ಬಂದ ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆಗಳಿಗೆ ಮೂಲ ಪ್ರೇರೇಪಣೆ.

ಸತ್ಯ ಶೋಧಕ ಸಮಾಜದ ನೆರವಿನಿಂದ ನಡೆದ ಮುಕದ್ದಮೆಗಳನ್ನು ನೂರಾರು ವಕೀಲರು ಉಚಿತವಾಗಿ ಇಲ್ಲವೇ ಅತಿ ಕಡಿಮೆ ಖರ್ಚಿಗೆ ನಡೆಸಿ ಕೊಟ್ಟರು; ಸಾಮಾಜಿಕ ಕಾರ್ಯಕರ್ತರು ತಮ್ಮ ತನು ಮನ ಧನ ಅರ್ಪಿಸಿ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿ ಕೂಡ ಸತ್ಯವನ್ನು ಗೆಲ್ಲಿಸಿದರು. ಧಾರ್ಮಿಕ ಸ್ವಾತಂತ್ರದ, ಅಷ್ಟೇ ಅಲ್ಲ, ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆ ಮತ್ತು ಕಾನೂನು ನೆರವು ಕೇಂದ್ರಗಳ ಪಿತಾಮಹ ಕೂಡ ಫುಲೆಯವರು.

ಭಾರತವನ್ನು ಕಟ್ಟಿದ್ದು ಅದಕ್ಕೆ ಕಣ್ಣು ಕೊಟ್ಟಿದ್ದು ಭಾರತದಲ್ಲಿ ಮಹೋನ್ನತ ಸಾಧನೆಗೈದ ಶೂದ್ರ ಮತ್ತು ದಲಿತರು. ಆದರೆ ಅವರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಸಮೀಕರಿಸಿ ನೋಡಲಾಗುತ್ತದೆ. ಅವರು ಒಟ್ಟಾರೆ ಸಮಾಜದ ಒಳಿತಿಗೆ ಶ್ರಮಿಸಿದ ಸಮಸ್ತ ಮಜಲುಗಳನ್ನು ಸಂಶೋಧಿಸುವ ಪ್ರಯತ್ನ ನಡೆಯಬೇಕು.

ಫುಲೆ ನೈಜ ಅರ್ಥದಲ್ಲಿ ಮಹಾತ್ಮ – ತಾಯಿ ಸಾವಿತ್ರಿಬಾಯಿಯವರು ವಿದ್ಯೆ ಕೊಟ್ಟ ಸರಸ್ವತಿ ಎಂದು ಪ್ರತಿ ಭಾರತೀಯ ಅರಿತಾಗಲೇ ಭಾರತ ನೈಜ ಅರ್ಥದಲ್ಲಿ ಸ್ವತಂತ್ರವಾಯಿತು ಎಂದುಕೊಳ್ಳಬಹುದು.

ಕದಿಯದ ಭತ್ತಕ್ಕೆ ಹರಕೆ ಹೊತ್ತು ಬೆನ್ನು ಚುಚ್ಚಿಸಿಕೊಂಡವರು

ಶೋಷಿತರಿಗೆ ಮೊದಲು, ತಾವು ಶೋಷಣೆಗೆ ಒಳಗಾಗಿದ್ದೇವೆ ಅನ್ನೋದು ಅರ್ಥ ಆಗೋದು ಯಾವಾಗ..

– ಜೀವಿ

ಸುತ್ತ ಏಳು ಹಳ್ಳಿ ಜನ ಸೇರಿ ಆಚರಿಸುವ ಜಾತ್ರೆಯಲ್ಲಿ ಭಾಗವಹಿಸುವುದನ್ನು ಅವ್ವ ತನಗೆ ಬುದ್ದಿ ತಿಳಿದ ದಿನದಿಂದ ಒಮ್ಮೆಯೂ ತಪ್ಪಿಸಿಕೊಂಡಿಲ್ಲ. ತಾತ-ಮುತ್ತಾನ ಕಾಲದಿಂದ ನಡೆದಿರುವ ಉಡಸಲಮ್ಮ ಜಾತ್ರೆ ಎಂದರೆ ಎಲ್ಲಿಲ್ಲದ ಭಕ್ತಿ ಅವ್ವನಲ್ಲಿದೆ. ಈ ವರ್ಷ(2015) ಏಪ್ರಿಲ್ ಮೊದಲ ವಾರದಲ್ಲಿ ನಡೆದ ಜಾತ್ರೆಗೆ ಎಲ್ಲ ಸಿದ್ದತೆಗಳು ನಡೆದಿದ್ದವು. ಎಲ್ಲರೂ ಹೊಸ ಬಟ್ಟೆ ತೊಟ್ಟು ಅತ್ತಿತ್ತ ಅಡ್ಡಾಡುತ್ತಿದ್ದರು. ಆದರೆ ಅವ್ವ ಮಾತ್ರ ಈ ಬಾರಿ ನಾನು ಜಾತ್ರೆಗೆ ಹೋಗSidi-1ಲಾರೆ ಎಂದು ಹಠ ಹಿಡಿದು ಕುಳಿತಿದ್ದಳು. ಹೆಂಡತಿ ಮಕ್ಕಳೊಂದಿಗೆ ಆಗ ತಾನೆ ಮನೆಗೆ ಹೋಗಿದ್ದ ನನ್ನನ್ನು ಕೊಲೆಗಾರನಿಗಿಂತ ಅಪರಾಧಿ ಸ್ಥಾನದಲ್ಲಿ ಕಂಡು ಶಪಿಸಿದಳು. ಮನೆ ಮುರುಕ ಕೆಲಸ ಮಾಡಿದ ನಿನ್ನಂತವನಿಗೆ ಜನ್ಮ ಕೊಟ್ಟಿದ್ದಕ್ಕೂ ಸಾರ್ಥಕವಾಯಿತು ಎಂದು ಕಣ್ಣೀರ ಧಾರೆ ಹರಿಸಿದಳು. ಹೆತ್ತ ಕರುಳಿಗೇ ಅಪರಾಧಿಯಂತೆ ಕಂಡ ನಾನು ಹಾಗೇ ಕಣ್ಣಂಚು ಒದ್ದೆ ಮಾಡಿಕೊಂಡು ಮೂಲೆಗೊರಗಿ ಕುಳಿತೆ. ಅವ್ವನ ಈ ದುಃಖಕ್ಕೆ ಬಲವಾದ ಕಾರಣವೂ ಇತ್ತು.

ಜಾತ್ರೆಯಲ್ಲಿ ಏಳು ಊರಿನ ತಲಾ ಒಂದೊಂದು ಬಂಡಿ ಮತ್ತು ಮೂರು ತೇರನ್ನು ಕೆಂಡದಲ್ಲಿ ಎಳೆದಾಡಿದ ನಂತರ ಅದರಲ್ಲಿ ಒಂದೂರಿನ ದಲಿತರನ್ನು ಸಿಡಿಗೇರಿಸುವ ಪದ್ದತಿ ಇದೆ. ಸಿಡಿಗೆ ಏರುವ ದಲಿತರು ಏಳು ದಿನದಿಂದ ಸಂಸಾರ ತೊರೆದು ಉಪವಾಸ ವ್ರತ ಮಾಡಬೇಕು. ಕೊನೆಯ ದಿನ ಅವರ ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಚುಚ್ಚಲಾಗುತ್ತದೆ. ಮಹಿಳೆಯರು ಬಾಯಿಗೆ ದಬ್ಬಳದಂತ ಸರಳನ್ನು ಚುಚ್ಚಿಕೊಳ್ಳುತ್ತಾರೆ. ಎಲ್ಲರೂ ಜಾತ್ರೆ ದಿನ ದೇವಸ್ಥಾನದ ಮುಂದೆ ಹಾಜರಾಗುತ್ತಾರೆ. ಪುರುಷರು ಸಿಡಿ ಏರಿ ಮೂರು ಸುತ್ತು ಸುತ್ತಿ ಶಿಕ್ಷೆ ರೂಪದಲ್ಲಿ ಹರಕೆ ತೀರಿಸುತ್ತಾರೆ. ತನ್ನ ಪೂರ್ವಜರು ಮಾಡಿರುವ ತಪ್ಪಿಗೆ ಶಿಕ್ಷೆ ಪಡೆಯುತ್ತಿದ್ದೇವೆ ಎಂಬ ಭಾವನೆ ದಲಿತರಲ್ಲಿದೆ.

ಹಿಂದೊಮ್ಮೆ ಹೊಟ್ಟೆಗೆ ಗತಿ ಇಲ್ಲದ ದಲಿತ ಕುಟುಂಬಗಳು ಕಣದಲ್ಲಿ ರಾಶಿ ಹಾಕಿದ್ದ ಭತ್ತವನ್ನು ಕದ್ದು ತಂದಿದ್ದರಂತೆ. ಅದರ ಮಾಲೀಕರು ಪೊಲೀಸರಿಗೆ ದೂರು ನೀಡಿ ಭತ್ತ ಉದುರಿರುವ ಜಾಡು ಹಿಡಿದು ದಲಿತ ಕೇರಿಗೆ ಬಂದಿದ್ದರಂತೆ. ಸಿಕ್ಕಿ ಬೀಳುವ ಆತಂಕದಲ್ಲಿ ಉಡಸಲಮ್ಮನನ್ನು ಮನದಲ್ಲೆ ನೆನದು ಸಂಕಷ್ಟದಿಂದ ಪಾರು ಮಾಡಿದರೆ ಜಾತ್ರೆಯಲ್ಲಿ ಎರಡು ವರ್ಷಕ್ಕೊಮ್ಮೆ ಸಿಡಿ ಏರುತ್ತೇವೆ ಎಂದು ಹರಕೆ ಮಾಡಿಕೊಂಡಿದ್ದರಂತೆ. ಕೂಡಲೇ ಮನೆಯಲ್ಲಿದ್ದ ಭತ್ತದ ಬಣ್ಣ ಬದಲಾಗಿ ಪೊಲೀಸರು ವಾಪಸ್ ಹೋದರಂತೆ. ಸೆರೆ ಬಿಡಿಸಿಕೊಂಡ ದೇವರಿಗೆ ಶಿಕ್ಷೆ ರೂಪದ ಹರಕೆ ತೀರಿಸುವುದು ನಮ್ಮ ಕರ್ತವ್ಯ ಎಂದು ಇಂದಿಗೂ ದಲಿತರು ನಂಬಿದ್ದಾರೆ. ಬಿಳಿ ಭತ್ತ ಕ್ಷಣಾರ್ಧದಲ್ಲಿ ಕೆಂಭತ್ತವಾಗಿ ಬಣ್ಣ ಬದಲಾಯಿತು. ಈ ಮಾಯ ಮಂತ್ರ ನಡೆಯುತ್ತಿದ್ದ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಇತ್ತು ಎಂಬುದನ್ನೂ ನಂಬಲಾಗುತ್ತಿದೆ. ಈ ಕತೆಯನ್ನು ನನಗೆ ಅವ್ವನೇ ಹತ್ತಾರು ಬಾರಿ ಹೇಳಿದ್ದಳು. ಅವ್ವನ ಮುತ್ತಜ್ಜ, ಅಜ್ಜ, ಅಪ್ಪ ಎಲ್ಲರೂ ಸಿಡಿ ಏರಿದವರು. ಈಗ ಅಣ್ಣಂದಿರು, ಅವರ ಮಕ್ಕಳು, ಅಕ್ಕನ ಮಕ್ಕಳು ಎಲ್ಲರೂ ಸಿಡಿ ಏರುತ್ತಿದ್ದಾರೆ. ಹಾಗಾಗಿ ಅವ್ವನಿಗೆ ಉಡಸಲಮ್ಮನ ಬಗ್ಗೆ ಅಪಾರ ಭಕ್ತಿ.

ದಲಿತರಿಗೇ ಅರಿವಿಲ್ಲದೆ ಅವರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಹಲವು ದಿನಗಳಿಂದ ನನಗೆ ಬೇಸರವಿತ್ತು. ಜಾತ್ರೆ ಹಿಂದಿನ ದಿನ ಆಪ್ತರೊಂದಿಗೆ ನಾಳೆ ನಡೆಯಲಿರುವ ಸಿಡಿ ಹೆಸರಿನ ಶೋಷಣೆ ಬಗ್ಗೆ ವಿವರಿಸಿದ್ದೆ. ಹೇಗಾದರೂ ತಡೆಯಬೇಕಲ್ಲ ಎಂದುಕೊಂಡು ಪತ್ರಿಕೆಗಳಲ್ಲಿ ವರದಿ ಮಾಡಲು ನಿರ್ಧರಿಸಿದೆವು. ತಹಸೀಲ್ದಾರ್ ಗೆ ಕರೆ ಮಾಡಿ ಪ್ರತಿಕ್ರಿಯೆ ಕೇಳಿದೆವು. ಅವರು ಈ ವಿಷಯ ನನ್ನ ಗಮನದಲ್ಲಿದ್ದು, ತಡೆಯುವ ಪ್ರಯತ್ನ ಮಾಡುತ್ತೇವೆ ಎಂದರು. ಅಮಾನವೀಯ ಸಿಡಿ ಪದ್ದತಿ ಜೀವಂತ ಇರುವುದು ಮತ್ತು ತಹಸೀಲ್ದಾರ್ ತಡೆಯುವ ಪ್ರಯತ್ನ ಮಾಡುವುದನ್ನು ಪತ್ರಿಕೆಗಳಲ್ಲಿ ವರದಿ ಮಾಡಿದೆವು. ಆಂಗ್ಲ ಪತ್ರಿಕೆ ಸೇರಿ ಮೂರು ಪತ್ರಿಕೆಗಳಲ್ಲಿ ಸುದ್ದಿ ಜಾತ್ರೆ ದಿನವೇ ಪ್ರಕಟವಾಯಿತು.

ತಹಸೀಲ್ದಾರ್ ಕೂಡ ಗ್ರಾಮಕ್ಕೆ ಹೋಗಿ ದಲಿತರಿಗೆ ಕೊಂಡಿ ಚುಚ್ಚುವುದು ಮತ್ತು ಅಮಾನವೀಯವಾಗಿ ಸಿಡಿ ಏರುವ ಪದ್ದತಿಗಳನ್ನು ಮಾಡಕೂಡದು ಎಂದು ತಾಕೀತು ಮಾಡಿ ಬಂದಿದ್ದರು. ಅದಾಗಲೇ ಕೊಂಡಿ ಚುಚ್ಚುವ ಕಾರ್ಯ ಮುಗಿದಿತ್ತು. ಹಾಗಾಗಿ ಈ ವರ್ಷ ಸಿಡಿ ಏರಿಕೊಳ್ಳಿ, ಮುಂದಿನ ದಿನಗಳಲ್ಲಿ ಇದು ನಡೆಯ ಕೂಡದು ಎಂದು ಹೇಳಿ ಹೋಗಿದ್ದರು. ಪೊಲೀಸರೊಂದಿಗೆ ತಹಸೀಲ್ದಾರ್ ಬಂದು ಹೋಗಿರುವುದು ಮತ್ತು ಮುಂದಿನ ದಿನಗಳಲ್ಲಿ ಜಾತ್ರೆ ನಿಲ್ಲಲಿದೆ ಎಂಬ ಗುಲ್ಲು ಸುತ್ತ ಏಳು ಹಳ್ಳಿಯಲ್ಲೂ ಹರಡಿತ್ತು. ಅದು ಅವ್ವನ ಕಿವಿಗೂ ಮುಟ್ಟಿತ್ತು. ಹಿಂದಿನ ದಿನ ವರದಿ ಮಾಡುವಾಗ ಜಾತ್ರೆಯಲ್ಲಿರುವ ಆಚರಣೆಗಳ ಬಗ್ಗೆ ಅವ್ವನ ಬಳಿಯೂ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದೆ. ಹಾಗಾಗಿ ಓದಲು ಬರದಿದ್ದರೂ ಅವ್ವನಿಗೆ ಇದು ನನ್ನ ಕೆಲಸವೇ ಎಂದು ಗೊತ್ತಾಗಿತ್ತು.

ರಚ್ಚೆ ಹಿಡಿದಂತೆ ಅವ್ವ ಅಳುತ್ತಿದ್ದಳು. ಸಿಡಿ ಏರುವುದನ್ನು ಅಧಿಕಾರಿಗಳು ತಡೆದರೆ ಮುಂದೆ ಉಡಸಲಮ್ಮನ ಶಾಪಕ್ಕೆ ತನ್ನ ತವರು ಮನೆ ಜನ ಹಾಗೂ ನಾನು ತುತ್ತಾಗುತ್ತೇವೆ ಎಂಬುದು ಅವ್ವನ ಆತಂಕ. ಸಿಡಿ ಏರಲಿಲ್ಲ ಎಂಬ ಕಾರಣಕ್ಕೆ ಯಾರನ್ನಾದರೂ ದೇವಿ ಬಲಿ ಪಡೆದರೆ ಅವರ ಕುಟುಂಬಕ್ಕೆ ನೀನು ಹೊಣೆಯಾಗುತ್ತೀಯಾ?, ಜಾತ್ರೆ ನಿಲ್ಲಲು ನೀನೂ ಕಾರಣವಾದೆ ಎಂಬ ಸಿಟ್ಟಿಗೆ ಆಕೆ ನಿನ್ನನ್ನೂ ಬಲಿ ಪಡೆದುಕೊಂಡರೆ ನಾವೇನು ಮಾಡಬೇಕು? ಎಂದು ಪ್ರಶ್ನೆಗಳ ಸುರಿಮಳೆಗೈದಳು. ಮನೆಯಲ್ಲಿದ್ದವರೆಲ್ಲ ಸೇರಿ ಸಮಾಧಾನ ಮಾಡಿದರೂ ಅವ್ವನ ದುಃಖ ಕಡಿಮೆಯಾಗಲಿಲ್ಲ. ಯಾವುದೇ ಕಾರಣಕ್ಕೂ ನಾನು ಜಾತ್ರೆಗೆ ಬರಲಾರೆ ಎಂದು ಪಟ್ಟು ಹಿಡಿದಳು. ಜಾತ್ರೆಯಲ್ಲಿ ಯಾರದರೂ ನಿನ್ನ ಮಗ ಈ ಕೆಲಸ ಮಾಡಿದ್ದಾನೆ, ಸರಿಯೇ? ಎಂದು ಪ್ರಶ್ನೆ ಮಾಡಿದರೆ ಏನು ಹೇಳಲಿ?. ತವರೂರಿನ ಜನರಿಗೆ ಹೇಗೆ ಮೂಖ ತೋರಲಿ? ಎಂದು ಕಣ್ಣೀರಿಟ್ಟಳು.

ಆ ಸಮಯಕ್ಕೆ ಜಾತ್ರೆಗೆಂದು ಬಂದ ಅಕ್ಕ, ಅವ್ವನನ್ನು ಸಮಾಧಾನ ಮಾಡಿದಳು. ಸಿಡಿ ಕಂಬಕ್ಕೆ ದಲಿತರೇ ಏಕೆ ಏರಬೇಕು?, ತಪ್ಪು ಅಥವಾ ಶೋಷಣೆ ಎಂದು ಈವರೆಗೆ ನಮಗೆ ಅನ್ನಿಸಿರಲಿಲ್ಲ. ಈಗ ಅವನು ಪತ್ರಿಕೆಯಲ್ಲಿ ಬರೆದ ನಂತರ ತಪ್ಪಲ್ಲವೇ ಎನ್ನಿಸುತ್ತಿದೆ. ಸಿಡಿಗಂಬದಿಂದ ಕೆಳಗಿರುವ ಕೆಂಡಕ್ಕೆ ಬಿದ್ದು ಯಾರಾದರೂ ಪ್ರಾಣ ಕಳೆದುಕೊಂಡರೆ ಯಾರು ಹೊಣೆ? ದೇವರು ಬಂದು ಕಾಪಾಡಲು ಸಾಧ್ಯವೇ?, ಅವನ ಕೆಲಸ ಅವನು ಮಾಡಿದ್ದಾನೆ, ಅವನಿಗೇನು ತೊಂದರೆ ಆಗಲ್ಲ ಎಂದು ಅಕ್ಕ ಅವ್ವನಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದಳು. ಕೊನೆಗೂ ಹೇಗೋ ಮನವೊಲಿಸಿ ಅವ್ವನನ್ನು ಅಕ್ಕ ಜಾತ್ರೆಗೆ ಕರೆದೊಯ್ದಳು. ಕಣ್ಣೀರಿಡುತ್ತಲೇ ಅವ್ವ ಜಾತ್ರೆಯತ್ತ ನಡೆದಳು. ನಾನು ಮಾತ್ರ ಜಾತ್ರೆ ಕಡೆ ತಲೆ ಹಾಕಬಾರದು ಎಂದು ಆಜ್ಞೆ ಮಾಡಿದಳು.Sidi-2

ಮಡದಿ-ಮಕ್ಕಳೆಲ್ಲ ಜಾತ್ರೆ ಕಳುಹಿಸಿ ಗೆಳೆಯ ರಾಜನೊಂದಿಗೆ ಮನೆಯಲ್ಲೆ ಉಳಿದುಕೊಂಡೆ. ಆಪ್ತಮಿತ್ರ ಮಡಿಕೆ ಸತ್ತ ನಂತರ ನಡೆಯುತ್ತಿದ್ದ ಮೊದಲ ಜಾತ್ರೆಯಾದ್ದರಿಂದ ಉತ್ಸಾಹ ಕೂಡ ಕುಂದಿ ಹೋಗಿತ್ತು. ರಾಜನೊಂದಿಗೆ ಮಹೇಶನ ಸಮಾಧಿ ಸ್ಥಳ ಹಾಗೂ ಅತ್ತಿತ್ತ ಸುತ್ತಾಡಿಕೊಂಡು ಕಾಲ ಕಳೆದೆ. ಜಾತ್ರೆ ಕಡೆಯಿಂದ ಓಡಿ ಬಂದ ಸತೀಶನ ಕೋಪ ನೆತ್ತಿಗೇರಿತ್ತು. ಉಡಸಲಮ್ಮ ಮೈಮೇಲೆ ಬಂದವಳಂತೆ ಕುಣಿಯುತ್ತಿದ್ದ. ನೀವೆಲ್ಲಾ ಎಲ್ಲಿ ಹೋಗಿದ್ದೀರಿ ನಮ್ಮ ಮೇಲೆ ಇಂದಿಗೂ ದೌರ್ಜನ್ಯ ನಡೆಯುತ್ತಿದೆ ಎಂದು ಸಿಟ್ಟಿನಿಂದಲೇ ನನ್ನತ್ತ ಬಂದ. ಸಮಾಧಾನ ಮಾಡಿ ಏನಾಯಿತು ಎಂದು ಕೇಳಿದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತೀಶ, ಜಾತ್ರೆಗೆಂದು ಬಂದಿದ್ದ. ನಮ್ಮೂರಿನಿಂದ ಹೋಗುವ ತೇರಿನೊಂದಿಗೆ ಜಾತ್ರೆ ಸೇರಿಕೊಂಡಿದ್ದ. ಕೆಂಡದಲ್ಲಿ ಕಾಲಾಡಿ ದೇವಸ್ಥಾನ ಸುತ್ತು ಹಾಕುವ ಸಂದರ್ಭದಲ್ಲಿ ತೇರು ಎಳೆಯಲು ಕೈಜೋಡಿಸಲು ಮುಂದಾಗಿದ್ದಾನೆ. ಎಲ್ಲರ ಜೊತೆ ತೇರು ಮುಟ್ಟಿ ಎಳೆಯಲು ಉತ್ಸಾಹದಲ್ಲಿ ನಿಂತಿದ್ದಾನೆ. ಅಷ್ಟರಲ್ಲಿ ಅಲ್ಲಿದ್ದ ಮೇಲ್ಜಾತಿಯವರು ಆತನನ್ನು ಹೊರ ಹೋಗುವಂತೆ ಸೂಚಿಸಿದ್ದಾರೆ. ನಿಮ್ಮವರು ತೇರು ಮುಟ್ಟುವಂತಿಲ್ಲ. ಆದರೂ ಕಳೆದ ವರ್ಷ ನೀವೆಲ್ಲ ತೇರು ಎಳೆದು ಮೈಲಿಗೆ ಮಾಡಿದ್ದೀರಿ. ಪರಿಣಾಮವಾಗಿ ಕಳಸವೇ ಬಿದ್ದು ಹೋಗಿತ್ತು. ಈ ವರ್ಷವೂ ಆ ರೀತಿ ಆಗುವುದು ಬೇಡ ಎಂದು ಉಪದೇಶ ಹೇಳಿದ್ದಾರೆ.

ಆದರೆ ಅದಕ್ಕೊಪ್ಪದ ಸತೀಶ ತೇರು ಎಳದೇ ತೀರುತ್ತೇನೆ, ಆಗಿದ್ದಾಗಲಿ ಎಂದು ನಿಂತಿದ್ದಾನೆ. ಅಷ್ಟರಲ್ಲಿ ಮೇಲ್ಜಾತಿ ಯುವಕರು ಮತ್ತು ಸತೀಶನ ನಡುವೆ ಮಾತಿಗೆ ಮಾತು ಬೆಳೆದಿದೆ. ಗುಂಪು ಸೇರಿಕೊಂಡ ಹಿನ್ನೆಲೆಯಲ್ಲಿ ಸತೀಶನ ತಮ್ಮ ಹರೀಶನೂ ಓಡಿ ಬಂದು ನಾವ್ಯಾಕೆ ತೇರು ಎಳೆಯಬಾರದು ಎಂದು ಕೇಳಿದ್ದಾನೆ. ಆದರೆ ಅಷ್ಟರಲ್ಲಿ ಅಲ್ಲಿಗೆ ಓಡಿ ಬಂದ ಸತೀಶನ ಅಕ್ಕ ವಾಣಿ ಇಬ್ಬರನ್ನು ಸಮಾಧಾನ ಮಾಡಿ ಕರೆದೊಯ್ದಿದ್ದಾಳೆ. ಅವರು ಸಾಕಷ್ಟು ಮಂದಿ ಇದ್ದಾರೆ, ಏನಾದರೂ ಮಾಡಿ ಬಿಡುತ್ತಾರೆ. ತೇರು ಎಳೆದು ನಮಗೇನು ಆಗಬೇಕಿಲ್ಲ, ಬನ್ನಿ ಎಂದು ಎಳೆದೊಯ್ದಿದ್ದಾಳೆ. ಅದೇ ಸಿಟ್ಟಿನಿಲ್ಲಿ ಜಾತ್ರೆ ಬಿಟ್ಟು ಮನೆ ಕಡೆ ಬಂದ ಸತೀಶ ನನ್ನ ಬಳಿ ಸಿಟ್ಟು ತೋಡಿಕೊಂಡ. ನಾನು ಇದ್ದಿದ್ದರೂ ತೇರು ಎಳೆಯಲು ನಿನಗ ಅವಕಾಶ ಕೊಡಿಸಲು ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈ ಅಸ್ಪಶ್ಯತೆ ಆಚರಣೆ ವಿರುದ್ಧ ಸ್ಥಳದಲ್ಲೆ ಧರಣಿ ಮಾಡಬಹುದಿತ್ತು ಎಂದೆ. ಈಗಲೂ ಕಾಲ ಮಿಂಚಿಲ್ಲ, ತೇರು ಮುಟ್ಟಲು ಅವಕಾಶ ನೀಡಿದೆ ಅಸ್ಪಶ್ಯತೆ ಆಚರಣೆ ಮಾಡಿ, ಎಲ್ಲರೆದುರು ನಿನ್ನನ್ನು ಅವಮಾನ ಮಾಡಿದ್ದರೆ. ಅವರ ಹೆಸರು ಗೊತ್ತಿದ್ದರೆ ಹೇಳು, ಅಂತವರ ವಿರುದ್ಧ ಠಾಣೆಗೆ ಹೋಗಿ ಮೊಕದ್ದಮೆ ದಾಖಲಿಸೋಣ ಎಂದೆ. ಸ್ನೇಹಿತರು ಮತ್ತು ಕೆಲವು ಅಧಿಕಾರಿಗಳನ್ನು ಸಂಪರ್ಕ ಮಾಡಿ ಹೇಗೆ ಮುಂದುವರಿಯಬೇಕು ಎಂಬ ಸಲಹೆ ಪಡೆದುಕೊಂಡೆ.

ಅದಕ್ಕೂ ಮುನ್ನ ನಿಮ್ಮ ಅಪ್ಪ-ಅಮ್ಮನನ್ನು ಕೇಳಿಕೊಂಡು ಬಾ ಎಂದು ಕಳುಹಿಸಿಕೊಟ್ಟೆ. ಸತೀಶ-ಹರೀಶ ಇಬ್ಬರೂ ಹೋಗಿ ಅವರಪ್ಪನನ್ನು ಕರೆತಂದರು. ನಾವೇ ಠಾಣೆಗೆ ಹೋಗಿ ದೂರು ಕೊಟ್ಟರೆ ಊರಿನವರು ಬೇಸರ ಮಾಡಿಕೊಳ್ಳುತ್ತಾರೆ. ಹಾಗಾಗಿ ದಲಿತ ಕೇರಿಯ ಎಲ್ಲರನ್ನೂ ಒಂದು ಮಾತು ಕೇಳಿಬಿಡೋಣ ಎಂದರು ಅವರಪ್ಪ. ನಾನು ಕೂಡ ಸ್ವಲ್ಪ ತಾಳ್ಮೆ ಉಳಿಸಿಕೊಂಡೆ. ಏನೂ ಕಾಣದ ಮಕ್ಕಳನ್ನು ಕರೆದೊಯ್ದು ಪೊಲೀಸ್, ಕಂಪ್ಲೆಂಟ್, ಕೋರ್ಟ್ ಅಂತ ಅಲೆಸುತ್ತಿದ್ದಾನೆ ಎಂದು ಸತೀಶನ ಅಪ್ಪ-ಅಮ್ಮ ನನಗೆ ಶಾಪ ಹಾಕಬಾರದು ಎಂಬ ಕಾರಣಕ್ಕೆ ಸ್ವಲ್ಪ ಹೊತ್ತು ಕಾದು ನೋಡಿದೆ. ಜೊತೆಯಲ್ಲೆ ಇದ್ದ ರಾಜ ಹೇಳಿದ ’ಇದು ಆಗದೆ ಇರುವ ಕೆಲಸ, ನೀನು ಜಾತ್ರೆಗೆ ಬಂದಿದ್ದೀಯ ಸುಮ್ಮನೆ ಬಾಡೂಟ ಮುಗಿಸಿಕೊಂಡು ಹೋಗು’ ಎಂದು ಸಲಹೆ ನೀಡಿದ.

ಅವನ ಮಾತು ಕೇಳದ ನಾನು ಜಾತ್ರೆ ಮುಗಿಸಿಕೊಂಡು ಆಗಾಗ ಬರುತ್ತಿದ್ದವರನ್ನೆಲ್ಲ ತಡೆದು ಘಟನೆಯನ್ನು ವಿವರಿಸಿದೆ. ಯುವಕರು ಹೌದು ಈಗಲೂ ಅಸ್ಪಶ್ಯತೆ ಆಚರಿಸುತ್ತಿರುವವರಿಗೆ ಬುದ್ದಿ ಕೆಲಸಬೇಕು ಎಂದರು. ಆದರೆ ಹಿರಿಯರಲ್ಲಿ ಬಹುತೇಕರು ನಾವೆಂದೂ ತೇರು ಮುಟ್ಟಿಲ್ಲ. ಕೇರಿಯಲ್ಲಿ ತಮ್ಮಯ್ಯನ ಮಗಳು ಮೈನೆರಿದ್ದಾಳೆ, ಸೂತಕ ಇದ್ದರೂ ತೇರು ಮುಟ್ಟಿರುವುದು ನಿನ್ನದೇ ತಪ್ಪು’ ಎಂದು ಸತೀಶನನ್ನು ಆರೋಪಿ ಮಾಡಿದರು. ‘ನೀನೋ ಹಬ್ಬ-ಜಾತ್ರೆಯಲ್ಲಿ ಊರಿಗೆ ಬಂದು ಹೋಗುತ್ತೀಯ. ನಿನ್ನ ಮಾತು ಕೇಳಿ ಪೊಲೀಸ್ ಠಾಣೆಗೆ ಹೋದರೆ ಮುಂದಾಗುವ ಅನಾಹುತಗಳನ್ನು ನಿತ್ಯೆ ಇಲ್ಲೆ ಇರುವ ನಾವು ಅನುಭವಿಸಬೇಕು. ಮುಂದೆ ಎದುರಾಗುವ ಕಷ್ಟ-ಸುಖದಲ್ಲಿ ಹಣಕ್ಕೆ ಅವರ ಮುಂದೆಯೇ ಕೈ ಚಾಚಬೇಕು. ಆಗಿದ್ದು ಆಗಿ ಹೋಗಿದೆ. ಊರಿನಲ್ಲಿ ಶಾಂತಿ ಕದಡುವ ಕೆಲಸ ಮಾಡಬೇಡ’ ಎಂದು ನನಗೂ ಚುಚ್ಚಿದರು. ಮೊದಲೇ ಸೂಚನೆ ನೀಡಿದ್ದ ರಾಜ ನನ್ನತ್ತ ನೋಡಿ ‘ನಿನಗಿದು ಬೇಕಿತ್ತೇ, ನಾನು ಮೊದಲೇ ಹೇಳಲಿಲ್ಲವೇ?, ಹೋಗು ಹೆಂಡತಿ-ಮಕ್ಕಳು ಜಾತ್ರೆಯಿಂದ ಬಂದಿದ್ದರೆ ಊಟ ಮಾಡಿ ನಿನ್ನ ಕೆಲಸ ನೋಡಿಕೊ’ ಎಂದು ಗದರಿಸಿದ. ಬೇರೆ ದಾರಿಯಿಲ್ಲದೆ ದುಃಖ ನುಂಗಿಕೊಂಡು ಮನೆಗೆ ಬಂದೆ.