Daily Archives: September 23, 2015

ಶೌಚಾಲಯ ಇರುವುದೇ ಮುಖ್ಯವಲ್ಲ..!


– ಡಾ.ಎಸ್.ಬಿ. ಜೋಗುರ


ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತದ ಅಡಿಯಲ್ಲಿ ಇಡೀ ದೇಶದಲ್ಲಿ ಆರೋಗ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಅನೇಕ ಬಗೆಯ ಸ್ವಚ್ಚತಾ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಿರುವ ವೇಗದಲ್ಲಿಯೇ ದೇಶದ ಜನರು ಪರಿವರ್ತನೆಗೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಯಾವಾಗಲೂ ಭೌತ ಸಂಸ್ಕೃತಿಯ ವೇಗದ ಸಮಸಮನಾಗಿ ಅಭೌತ ಸಂಸ್ಕೃತಿ ಬದಲಾವಣೆ ಹೊಂದುವುದು ಸಾಧ್ಯವಿಲ್ಲ ಅಲ್ಲೊಂದು ಅಂತರ ಇದ್ದೇ ಇರುತ್ತದೆ. ನೀವು ಕೊಂಡು ತಂದ ಹೊಸ ಮೊಬೈಲ್ ಒಂದಕ್ಕೆ ನೀವು ಸೆಟ್ ಆಗಲು ತೆಗೆದುಕೊಳ್ಳುವ ಸಮಯದಂತೆ. opendefecation_women_indiaಅದೂ ಅಲ್ಲದೇ ಬಯಲು ಶೌಚಾಲಯ ಎನ್ನುವುದು ನಮ್ಮಲ್ಲಿ ಅನೇಕ ವರ್ಷಗಳಿಂದಲೂ ಒಂದು ಸಂಪ್ರದಾಯವಾಗಿ, ನಮ್ಮ ಜೀವನ ವಿಧಾನದ ಭಾಗವಾಗಿ ಉಳಿದು ಬಂದಿರುವದಿದೆ. ಅಷ್ಟು ಮಾತ್ರವಲ್ಲದೇ ಮನೆಯಲ್ಲಿಯೇ ಇಲ್ಲವೇ ಮನೆಯ ಹತ್ತಿರ ಶೌಚಾಲಯಗಳನ್ನು ಕಟ್ಟಿ ಬಳಸುವ ಕ್ರಮವನ್ನು ಇಷ್ಟಪಡದಿರುವ ಒಂದು ತಲೆಮಾರು ಇನ್ನೂ ನಮ್ಮೊಂದಿಗಿದೆ. ಅವರು ಮನೆಯಲ್ಲಿಯ ಶೌಚಾಲಯದಲ್ಲಿ ಕುಳಿತು ಶೌಚ ಮಾಡುವುದನ್ನು ಅಸಹ್ಯ ಮತ್ತು ಅಹಿತಕರ ಎಂದೇ ಬಗೆಯುತ್ತಾರೆ. ಅಷ್ಟು ಮಾತ್ರವಲ್ಲ, ಎದ್ದು ತಿರುಗಾಡಲಾಗದವರು, ವಯಸ್ಸಾದವರಿಗೆ ಮಾತ್ರ ಈ ಬಗೆಯ ಶೌಚಾಲಯಗಳು ತಾವು ಏನಿದ್ದರೂ ಬಯಲು ಕಡೆಗೆ ಹೋಗುವವರು ಎನ್ನುವ ವಿಚಾರ ಅವರದು. ಛೇ.. ಛೇ..ಮನೆಯಲ್ಲಿ ತಮಗೆ ಸರಿ ಹೊಂದುವದಿಲ್ಲ ನಾವು ಯಾವಾಗಲೂ ಹೊರಗೇ ಹೋಗುವವರು. ಮನೆಯಲ್ಲಿ ಕುಳಿತು.. ಮಾಡುವುದೇ..? ನಮ್ಮ ಮನಸು ಒಪ್ಪುವದಿಲ್ಲ ಎನ್ನುವ ಮನ:ಸ್ಥಿತಿಯವರು ನಮ್ಮ ಗ್ರಾಮೀಣ ಭಾಗಗಳಲ್ಲಿ ಈಗಲೂ ಇದ್ದೇ ಇದ್ದಾರೆ ಹೀಗಾಗಿ ಪ್ರಧಾನಿಯವರು ನಿರೀಕ್ಷಿಸುವ ವೇಗದಲ್ಲಿಯೇ ಶೌಚಾಲಯದ ವಿಷಯವಾಗಿ ಪರಿವರ್ತನೆಯನ್ನು ತರಲಾಗುವದಿಲ್ಲ. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಪ್ರಜ್ಞೆ ಇಂದಿಗೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಗಾಂಧೀಜಿಯವರು ತಮ್ಮ ಸರ್ವೋದಯ ಸಮಾಜದ SwachhBharath_Modiಸ್ಥಾಪನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ, ರಸ್ತೆಗಳನ್ನು ನಿರ್ಮಿಸುವ ಕನಸು ಕಂಡಿದ್ದರು ಅದು ಕೂಡಾ ಸರ್ವೋದಯ ಸಮಾಜದ ಲಕ್ಷಣಗಳಲ್ಲಿ ಒಂದಾಗಿತ್ತು. ಆದರೆ ಆ ವಿಚಾರ ಕೇವಲ ಉಟೋಪಿಯಾ ಹಂತದಲ್ಲಿಯೇ ಉಳಿದದ್ದು ವಿಷಾದನೀಯ. ಈಗೀಗ ಸ್ವಚ್ಚ ಭಾರತದ ಅಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಶೌಚಾಲಯಕ್ಕೆ ಸಂಬಂಧಿಸಿ ಒಂದು ಅಭೂತಪೂರ್ವವಾದ ಕ್ರಾಂತಿ, ಬದಲಾವಣೆ ಸಾಧ್ಯವಾಗತೊಡಗಿದೆ. ಆ ದಿಸೆಯಲ್ಲಿ ಅದಾಗಲೇ ಸುಮಾರು 6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಸುಮಾರು 1.3 ಕೋಟಿ ಶೌಚಾಲಯಗಳು ಬಳಕೆಯಾಗದೇ ವ್ಯರ್ಥವಾಗಿ ಹಾಳಾಗುತ್ತಿವೆ. ಅದಕ್ಕೆ ಕಾರಣ ನಮ್ಮ ಜನತೆಯ ಮನಸ್ಥಿತಿ ಇನ್ನೂ ಸಾಕಷ್ಟು ಬದಲಾಗಿಲ್ಲ. ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವರಾದ ಬೀರೆಂದ್ರ ಸಿಂಗ್ ಚೌಧರಿ ಹೇಳುವ ಹಾಗೆ ಸ್ಚಚ್ಚ ಭಾರತದ ಅಡಿಯಲ್ಲಿ ರೂಪಿಸಲಾದ ಕಾರ್ಯಕ್ರಮಗಳ ಯಶಸ್ಸು ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಅವರ ಮನೋಭಾವಗಳಲ್ಲಿಯ ಬದಲಾವಣೆಯನ್ನು ಅವಲಂಬಿಸಿವೆ ಎನ್ನುತ್ತಾರೆ.

ನಮ್ಮ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಇನ್ನೂ ಪರಿಸ್ಥಿತಿ ಸಾಕಷ್ಟು ಪರಿವರ್ತನೆಯಾಗಿಲ್ಲ. ಬಯಲು ಶೌಚಾಲಯವೇ Women-cleaning-toilet-in-Indiaಅವರಿಗೆ ಹಿತಕರ ಎನ್ನುವ ಮನೋಭಾವವಿರುವವರು ಇನ್ನೂ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬೆಳಿಗ್ಗೆ ಎದ್ದದ್ದೇ ಕೈಯಲ್ಲಿ ತಂಬಿಗೆ ಹಿಡಿದು ತಮ್ಮ ಗದ್ದೆ ಕಡೆ ನಡೆಯುವದೇ ಒಂದು ಪರಿಪಾಠವಾಗಿರುವ ಪ್ರದೇಶಗಳಲ್ಲಿ ಹೀಗೆ ಸರಕಾರ ನಿರ್ಮಿಸಿದ ಶೌಚಾಲಯಗಳ ಬಳಕೆ ಹೆಚ್ಚೆಂದರೆ ಆ ಕುಟುಂಬದ ಮಹಿಳೆಯರು ಮತ್ತು ವಯಸ್ಸಾದವರಿಗೆ ಸೀಮಿತ ಎನ್ನುವಂಥಾ ಸ್ಥಿತಿ ನಿರ್ಮಾಣವಾದದ್ದು ವಿಪರ್ಯಾಸ. ಇಂಥಾ ಮನೋಭಾವದವರಿಂದಾಗಿಯೇ ಈ 1.3 ಕೋಟಿ ಶೌಚಾಲಯಗಳು ಬಳಕೆಯಾಗದೇ ಹಾಳಾಗುವ ಸ್ಥಿತಿಯನ್ನು ತಲುಪಬೇಕಾಯಿತು. ಬಯಲಲ್ಲಿ ಶೌಚ ಮಾಡುವದರ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುವ ಅವಶ್ಯಕತೆಯಿದೆ. 2019 ರಷ್ಟಿಗೆ ಇಡೀ ದೇಶದಲ್ಲಿ ಬಯಲು ಶೌಚಾಲಯ ಪದ್ಧತಿ ಇರದಂತೆ ಮಾಡುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿರುವದಿದೆ. ಅದರೊಂದಿಗೆ ದೇಶದ ಗ್ರಾಮೀಣ ಭಾಗಗಳಲ್ಲಿ ಕೊಳಚೆಯ ಸ್ಥಿತಿಯನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ಆಯಾ ಗ್ರಾಮೀಣ ಪ್ರದೇಶಗಳ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸುಮಾರು 7 ಲಕ್ಷ ರೂಪಾಯಿಯಿಂದ ಆರಂಭಿಸಿ 20 ಲಕ್ಷ ರೂಪಾಯಿಯವರೆಗೆ ಘನತ್ಯಾಜ್ಯ ನಿರ್ವಹಣೆಗಾಗಿಯೇ ಹಣಕಾಸಿನ ನೆರವನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಇಡೀ ದೇಶದಾದ್ಯಂತ 19800 ಕೋಟಿ ರೂ ಹಣವನ್ನು ಶೌಚಾಲಯಗಳ ನಿರ್ವಹಣೆಯಲ್ಲಿ ಖರ್ಚು ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ 10800 ಕೋಟಿ ರೂಪಾಯಿ ಹಣವನ್ನು ದೇಶದ ಈಶಾನ್ಯ ಭಾಗದ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗುವುದು. ನಮ್ಮ ದೇಶದ ಗ್ರಾಮೀಣ ಪರಿಸರದಲ್ಲಿ ಇನ್ನೂ ಸಾಕಷ್ಟು ಪರಿವರ್ತನೆಗಳಾಗಬೇಕಿದೆ. ಮುಖ್ಯವಾಗಿ ಜನರ ಮನೋಭಾವದಲ್ಲಿ ಬದಲಾಗಬೇಕು. ಕೇಂದ್ರ ಸರಕಾರ ಇಲ್ಲವೇ ರಾಜ್ಯ ಸರಕಾರದ ಯಾವುದೇ ಯೋಜನೆಗಳು ಅರ್ಥವತ್ತಾಗಿ ಜಾರಿಯಾಗಬೇಕಾದರೆ ಜನಜಾಗೃತಿ ಮತ್ತು ಅವರ ಮನೋಭಾವಗಳಲ್ಲಿ ಬದಲಾವಣೆ ಅಗತ್ಯ.

ಕೇವಲ ಶೌಚಾಲಯಗಳನ್ನು ಕಟ್ಟಿಸಿಕೊಡುವುದು ಮಾತ್ರ ಮುಖ್ಯವಾಗದೇ ಅದನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವ ಬಗ್ಗೆಯೂ ಹೇಳಿಕೊಡಬೇಕು. toilet-india-awarenessಚೈನಾದಂಥಾ ರಾಷ್ಟ್ರಗಳಲ್ಲಿ ಶೌಚಾಲಯಗಳನ್ನು ಹ್ಯಾಪಿ ಹೋಮ್ ಎಂದು ಕರೆಯಲಾಗುತ್ತದೆ. ಅದೇ ಮಟ್ಟದ ವಾತಾವರಣವನ್ನು ನಮ್ಮಲ್ಲೂ ಕಾಯ್ದುಕೊಳ್ಳುವ ಅಗತ್ಯವಿದೆ. ನಮ್ಮಲ್ಲಿ ಇಂದಿಗೂ ಐದು ಲಕ್ಷಕ್ಕಿಂತಲೂ ಹೆಚ್ಚು ಹಳ್ಳಿಗಳಿವೆ. ಅಲ್ಲಿಯ ಜನರು ಈ ಬಗೆಯ ಶೌಚಾಲಯಗಳನ್ನು ಬಳಸುವಾಗ ತಾವು ಬಯಲಿಗೆ ಹೋಗುವದಕ್ಕಿಂತಲೂ ಇದು ತುಂಬಾ ಹಿತಕರವಾಗಿದೆ ಎನ್ನುವ ಮನೋಭಾವ ಮೂಡಬೇಕು. ಹಾಗಾಗಬೇಕಾದರೆ ಶೌಚಾಲಯಗಳನ್ನು ಬಳಸುವ ಬಗ್ಗೆ ಮತ್ತು ಶುಚಿಯಾಗಿಡುವ ಬಗ್ಗೆ ಗ್ರಾಮೀಣ ಭಾಗದ ಜನತೆಗೆ ಸೂಕ್ತವಾದ ತಿಳುವಳಿಕೆ ಮತ್ತು ಮಾರ್ಗದರ್ಶನ ಮಾಡಬೇಕು.