Monthly Archives: October 2015

ಆ್ಯಂಕರಿಂಗ್‍ v/s ಪತ್ರಿಕೋದ್ಯಮ!


-ವಿಶ್ವಾಸ್ ಕೆ


ಇದು ಸುದ್ದಿ ಓದುತ್ತಿರುವವರೇ ಸುದ್ದಿಯಾಗುತ್ತಿರುವ ಕಾಲ. ಕನ್ನಡವನ್ನು ಕನ್ನಡದ ರೀತಿಯಲ್ಲೇ ಓದುತ್ತಿದ್ದ, K S Bhagavanಸುದ್ದಿಗಳ ಹಿಂದಿರುವ ಭಾವಗಳನ್ನು ವೀಕ್ಷಕರಿಗೆ ತಲುಪಿಸುತ್ತಿದ್ದ, ಕನ್ನಡದ ಸುದ್ದಿ ಮಾಧ್ಯಮಕ್ಕೆ ಒಂದೊಳ್ಳೆಯ ಮಾದರಿಯಾಗಬಲ್ಲ ಸಾಧ್ಯತೆ ಹೊಂದಿದ್ದ ರೆಹಮಾನ್‍ ಹಾಸನ್‍, ಬಿಗ್‍ಬಾಸ್ ಮನೆಪಾಲಾಗಿದ್ದಾರೆ. ಮತ್ತೆಂದೂ ಹಳೆಯ ರೆಹಮಾನ್ ಸಿಗುವ ಸಾಧ್ಯತೆಗಳಿಲ್ಲ. ಹೀಗಿರುವಾಗಲೇ ಈ ವಾರ ಕನ್ನಡದ ಎರಡು ಸುದ್ದಿ ವಾಹಿನಿಗಳಲ್ಲಿ ಚಿಂತಕ ಭಗವಾನ್ ಸಂದರ್ಶನಗಳು ಪ್ರಸಾರವಾಗಿವೆ. ಭಗವಾನ್ ಮಾತು, ಅವರ ಪ್ರತಿಪಾದನೆಗಳು ಸುದ್ದಿಯಾಗುವ ಜಾಗದಲ್ಲಿ, ಅವರನ್ನು ಸಂದರ್ಶಿಸಿದ ಇಬ್ಬರೂ ಆ್ಯಂಕರ್‍ಗಳು ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಪರ ಮತ್ತು ವಿರೋಧದ ದನಿಗಳು ಸದ್ದುಮಾಡುತ್ತಿವೆ. ಫೋನ್ ಕಾಲ್‍ಗಳು ‘ಸೌಂಡ್ ಕ್ಲೌಡ್’ ನಲ್ಲಿ ಬಿಕರಿಗಿಡಲಾಗಿದೆ. ಎರಡೂ ಪ್ರತ್ಯೇಕ ಘಟನೆಗಳಾದರೂ, ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಜತೆಗೆ, ಕನ್ನಡದ ಸುದ್ದಿವಾಹಿನಿಗಳು, ಒಂದು ದಶಕದ ನಂತರವೂ ಎದುರಿಸುತ್ತಿರುವ ವೃತ್ತಿಪರತೆಯ ಕೊರತೆಯನ್ನು ಎತ್ತಿಹಿಡಿಯುತ್ತಿವೆ.

ಅವರು ರಂಗನಾಥ್ ಭಾರಧ್ವಾಜ್. ರಾಮೋಜಿ ಕನಸಿನ ಈ-ಟಿವಿ ಕನ್ನಡದಲ್ಲಿ ವಾರ್ತಾ ನಿರೂಪಕರಾಗಿದ್ದವರು. ನಂತರ ನಾನಾಚಾನಲ್‍ಗಳನ್ನು ನಾನಾರೀತಿಯ ಹುದ್ದೆಗಳನ್ನು ನಿಭಾಯಿಸಿದವರು. ಇದೀಗ ಅಂಬಾನಿ ಎಂಬ ಈ ದೇಶದ ಸಿರಿವಂತನ ಒಡೆತನಕ್ಕೆ ಮಾರಿಸಿಕೊಂಡ ಈ-ಟಿವಿ ಕನ್ನಡ ಸುದ್ದಿವಾಹಿನಿಯ ಎಡಿಟರ್ ಇನ್ ಚೀಫ್. ಇವರು ಒಂದು ತಿಂಗಳಿಂದ ಸಂದರ್ಶನ ನೀಡುವಂತೆ ಭಗವಾನ್ ಅವರಿಗೆ ದುಂಬಾಲುಬಿದ್ದದರು. ಅದಕ್ಕೆ ಅವರ ಹತ್ತಿರದ ಕೆಲವರಿಗೆ ಕರೆಮಾಡಿ, ಭಗವಾನ್ ಜತೆಗೆ ಮಾತುಕತೆಗೆ ಬರಲು ಅಹ್ವಾನಿಸಿದ್ದರು. ಭಗವಾನ್ ಬಂದರುಕೂಡ. ಬಹುಶಃ ರಂಗನಾಥ್ ಅಂತಹ ಅನುಭವಿ ಪತ್ರಕರ್ತ ಈ ಸಮಯದಲ್ಲಿ ಭಗವಾನ್ ಅವರ ಬಗ್ಗೆ ಅಧ್ಯಯನಕ್ಕೆ ಮೀಸಲಿಡಬೇಕಿತ್ತು. ಅವರ ಕೃತಿಗಳನ್ನು ಗುಡ್ಡೆಹಾಕಿಕೊಂಡು ಓದಬೇಕಿತ್ತು. ಅವರ ವಿವಾದಿತ ಮಾತುಗಳನ್ನು ರಿವಿಝಿಟ್‍ ಮಾಡಬೇಕಿತ್ತು. ನಂತರ, ಅವರ ಜತೆಗಿನ ಸಂದರ್ಶನಕ್ಕೆ ಪ್ರಶ್ನೆಗಳನ್ನು ರೆಡಿ ಮಾಡಿಕೊಳ್ಳಬೇಕಿತ್ತು. ಆದ್ರೆ, ರಂಗನಾಥ್‍ ಮಾಡಿದ್ದೇನು? ಬಲಪಂಥೀಯ ಹಿನ್ನೆಲೆಯವರಿಗೆ ಕರೆಮಾಡಿ, “ಲೆಫ್ಟ್-ರೈಟ್” ತಗೊಳ್ಳಿ ಎಂದುಬಿಟ್ಟರು.

ವಾಟರ್ ಗೇಟ್ ಹಗರಣ ಹೊರಬಿದ್ದ ನಂತ್ರ ಅಮೆರಿಕಾದ ಅಧ್ಯಕ್ಷರಾಗಿದ್ದ ನಿಕ್ಸನ್ ರಾಜೀನಾಮೆಕೊಟ್ಟರು. ಆದ್ರೆ, ಅವರು ಎಲ್ಲಿಯೂRanganth Bharadhwaj ತಮ್ಮ ತಪ್ಪಿನ ಕುರಿತು ಚಿಕ್ಕ ವಿಷಾದವನ್ನೂ ವ್ಯಕ್ತಪಡಿಸಿರಲಿಲ್ಲ. ಈ ಸಮಯದಲ್ಲಿ ಆಸ್ಟ್ರೇಲಿಯಾದ ಸುದ್ದಿವಾಹಿನಿಗಳಿಗೆ ಸಂದರ್ಶನಗಳನ್ನು ನಡೆಸಿಕೊಡುತ್ತಿದ್ದ ಫ್ರೋಸ್ಟ್ ಎಂಬ ಪತ್ರಕರ್ತ ನಿಕ್ಸನ್ ಇಂಟರ್ವ್ಯೂಗೆ ಮುಂದಾದ. ಅದಕ್ಕೆನಿಕ್ಸನ್ ವಿರೋಧಿಸುತ್ತಿದ್ದ ಒಂದಿಬ್ಬರನ್ನು ಜತೆ ಇಟ್ಟುಕೊಂಡು ಅಧ್ಯಯನ ಶುರುಮಾಡಿದ. ನಿಕ್ಸನ್ ಅವರ ಪ್ರತಿನಡೆಯನ್ನೂ ಅವನು ಪರೀಕ್ಷೆಗೆ ಒಳಪಡಿಸಿದ. ನಂತ್ರವಷ್ಟೆ ನಿಕ್ಸನ್ ಸಂದರ್ಶನವನ್ನು ಶೂಟ್ ಮಾಡಲಾಯಿತು. ಮೊದಲಬಾರಿಗೆ ನಿಕ್ಸನ್ ಕಣ್ಣೀರುಹಾಕಿದರು. ನಾನು ಜನರನ್ನು ತಪ್ಪುಹಾದಿಗೆ ಎಳೆದೆ ಎಂದುಒಪ್ಪಿಕೊಂಡರು. ಆ ಒಂದು ಸಂದರ್ಶನದಿಂದಾಗಿ ಫ್ರೋಸ್ಟ್ ನೇ ಮಾತಾಗಿಹೋದ್ರು. ಬಹುಶಃ ಈ ಕಾರಣಕ್ಕೆ ನಾವಿಲ್ಲಿ, ಸಂದರ್ಶನಗಳ ವಿಚಾರ ಬಂದಾಗ ನಿಕ್ಸನ್ ಮತ್ತು ಫ್ರೋಸ್ಟ್  ನಡುವೆ ನಡೆದ ಈ ಸಂದರ್ಶನವನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ರಂಗನಾಥ್ ಅಂತಹ ಹಿರಿಯ ಪತ್ರಕರ್ತ ಇದನ್ನು ಗಮನಿಸದೇ ಹೋದ ಬಗೆಯೇ ಸೋಜಿಗ ಎನ್ನಿಸುತ್ತದೆ. ಭಗವಾನ್ ಮಾತುಗಳು ತಪ್ಪು, ಅವುಗಳಿಂದ ಸಮಾಜ ಹಾಳಾಗುತ್ತಿದೆ ಎಂದು ಅವರು ನಂಬಿಕೊಂಡಿದ್ದರೆ, ಅದು ಅವರ ನಂಬಿಕೆ. ಅದರ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಹುದೇ ಹೊರತು, ಅದನ್ನು ತಪ್ಪು ಎಂದು ಹೇಳುವುದು ಕಷ್ಟ. ಆದ್ರೆ, ಒಬ್ಬ ಪತ್ರಕರ್ತರಾಗಿ ರಂಗನಾಥ್‍, ತಮ್ಮ ಭಿನ್ನಾಭಿಪ್ರಾಯಗಳನ್ನು ಪ್ರತಿಪಾದನೆ ಮಾಡಲು ಹೊರಡುತ್ತಾರೆ. ಅಲ್ಲಿ ವೃತ್ತಿಪರತೆಯಾಗಲೀ, ಸಿದ್ಧತೆ ಯಾಗಲೀ ಕಾಣುವುದಿಲ್ಲ. ಹಿಂದೆ ಅವರೊಮ್ಮೆ ನಟ ಪ್ರಕಾಶ್ ರಾಜ್ ಅವರ ಸಂದರ್ಶನ ಮಾಡಿದ್ದರು. ಮೊದಲುಪ್ರಕಾರ ಪ್ರಕಾಶ್ ರಾಜ್ ಅವರ ಹೊಗಳಿಕೆಗೆ ಸಂದರ್ಶನದ ಸಮಯವನ್ನು ಮೀಸಲಿಟ್ಟರು. ನಂತ್ರ, ಕಾಲೆಳೆಯಲು ಹೋದರು. ಆದ್ರೆ, ಸಮಚಿತ್ತವನ್ನು ಕಾಯ್ದುಕೊಂಡಿದ್ದ ಪ್ರಕಾಶ್ ರಾಜ್  ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬಹುಶಃ ಇದನ್ನು ನಿರೀಕ್ಷಿಸದೇ ಇದ್ದ ರಂಗನಾಥ್, ಕೊನೆ ಕೊನೆಯಲ್ಲಿ ಬುಸುಗುಡಲು ಶುರುಮಾಡಿದರು. ಆಗಲೂ, ಜೀವನಾನುಭವವನ್ನು ಕಂಡಿದ್ದ ನಟ ಫಾರ್ಮ್ ಕಳೆದುಕೊಳ್ಳಲಿಲ್ಲ. ಒಬ್ಬ ಪತ್ರಕರ್ತ ಸಿದ್ಧತೆ ಇಲ್ಲದೆ ಹೇಗೆ ಸಂದರ್ಶನ ನಡೆಸಬಾರದು ಎಂಬುದಕ್ಕೆ ಈ ಸಂದರ್ಶನವೊಂದು ಪಾಠ. ಇದು ನಡೆದ ವರ್ಷದ ನಂತ್ರ ಭಗವಾನ್ ‍ಸಂದರ್ಶನ. ರಂಗನಾಥ್ ಸುಧಾರಿಸಿಕೊಂಡಂತೆ ಕಾಣಿಸುವುದಿಲ್ಲ. ಇದರಿಂದ ವೈಯುಕ್ತಿಕವಾಗಿ ರಂಗನಾಥ್ ಅವರಿಗೆ ಲಾಭನಷ್ಟಗಳಿಗಿಂತ, ಪತ್ರಿಕೋದ್ಯಮದ ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ಯಾಕೆಂದರೆ, ಪತ್ರಿಕೋದ್ಯಮ ವ್ಯಕ್ತಿಗಳನ್ನು ಮೀರಿದ್ದು. ಅದು ಜರ್ನಲಿಸಂ. ಇಸಂ ಅಂದ್ರೆನೇ ಧರ್ಮ!

ಇನ್ನು, ಚಂದನ್ ಶರ್ಮ ಸಂದರ್ಶನದ ಬಗ್ಗೆ. ಚಂದನ್ ವಿದೇಶದಲ್ಲಿ ಓದಿದ್ದು. ಅದಕ್ಕಿಂತ ಹೆಚ್ಚಾಗಿ ಬಳ್ಳಾರಿChandan Sharma ಎಂಬ ಸುಡುನಾಡಿನಲ್ಲಿ ಅಜ್ಜಿ ಪ್ರೀತಿಯೊಂದಿಗೆ ಬೆಳೆದವರು. ಸುದ್ದಿ ಮತ್ತು ಮನೋರಂಜನೆ ಎಂಬ ಎರಡೂ ದೋಣಿಯಲ್ಲಿ ಕಾಲಿಟ್ಟವರು. ಇತ್ತ ಸಂದರ್ಶನದ ನೆಪದಲ್ಲಿ ಸಿನೆಮಾ ನಟರನ್ನು ಮಾತನಾಡಿಸುತ್ತಲೇ, ಅತ್ತ ಟಿವಿ ಸೀರಿಯಲ್‍ಗಾಗಿ ಬಣ್ಣಹಚ್ಚಿದವರು. ಅಂತವರು ಮೊನ್ನೆ ಭಗವಾನ್ ಜತೆಗೆ ಸಂದರ್ಶನದ ಹೆಸರಿನಲ್ಲಿ ಬಾಲಿಶ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಉದಾಹರಣೆಗೆ; ನೀವ್ಯಾಕೆ ಭಗವಾನ್ ಅಂತ ಹೆಸರಿಟ್ಟುಕೊಂಡಿದ್ದೀರಾ? ನೂರು ಚಿಲ್ಲರೆ ರೂಪಾಯಿ ಕೊಟ್ಟರೆ ಹೆಸರು ಚೇಂಜ್ ಮಾಡಿಸಬಹುದಲ್ಲಾ? ಭಗವಾನ್ ಅಂದ್ರೆ ಬುದ್ಧ ಅಂತೀರಾ? ಬುದ್ಧ ದೇವರಲ್ಲವಾ? ಹೀಗೆ ಅವರ ಪ್ರಶ್ನೆಗಳ ಸರಮಾಲೆಸಾಗಿದೆ. ಬುದ್ಧ ದೇವರಲ್ಲ ಮಗು, ನೀನು ಅಲ್ಪಜ್ಞಾನಿ ಅಂದಿದ್ದಾರೆ ಭಗವಾನ್. ಇದಕ್ಕಿಂತ ಹೆಚ್ಚು ಚಂದನ್ ಬಗ್ಗೆ ಏನೇ ಹೇಳಿದರೂ ಅತೀ ಅನ್ನಿಸುತ್ತದೆ. ಇನ್ನೂ ಮಾಗದ ವಯಸ್ಸು, ಜೀವನಾನುಭವದ ಕೊರತೆ ಮತ್ತು ಜನರ್ನಲಿಸಂ ಎಂಬ ಪವಿತ್ರ ಕೆಲಸಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.

ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡುವುದಾದರೆ, ಇಲ್ಲಿ ರಂಗನಾಥ್ ಮತ್ತು ಭಾರಧ್ವಾಜ್ ಗಳಿಗಿಂತ ಪತ್ರಿಕೋದ್ಯಮದ ಇತಿಹಾಸ ದೊಡ್ಡದು. ಕನ್ನಡದ ಪಾಲಿಗೆ ಸುದ್ದಿವಾಹಿನಿಗಳು ಬಂದು ಒಂದು ದಶಕ ಕಳೆದಿದೆ ಅಷ್ಟೆ. ಇನ್ನೂ ಈ ಕ್ಷೇತ್ರ ತನ್ನ ಬಾಲ್ಯಾವಸ್ಥೆಯಲ್ಲಿದೆ. ಹೊಸ ಪ್ರತಿಭೆಗಳು ಪ್ರವೇಶವಾಗುತ್ತಿದೆ. ಅವರಿಗೆಲ್ಲಾ, ಟಿವಿಚಾನಲ್‍ಗಳಲ್ಲಿ  ಹೇಗೆ  ಸಂದರ್ಶನಗಳನ್ನು ನಡೆಸಬೇಕು ಎಂಬುದಕ್ಕಿಂತ, ಹೇಗೆ ನಡೆಸಬಾರದು ಎಂಬುದನ್ನು ಇವರಿಬ್ಬರು ಅಮೂಲ್ಯ ಪಾಠವೊಂದನ್ನು ನೀಡಿದ್ದಾರೆ.

ಮನ್ವಂತರ : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

ಸಂವರ್ತಸಾಹಿಲ್

“ಇಲ್ಲ ಸಾರ್ ತಲುಪಿಲ್ಲ.”

“ನಾನು ಕಳುಹಿಸಿ ಹತ್ತು ದಿನದ ಮೇಲಾಯ್ತು.”

“ಅಡ್ರೆಸ್ ಸರಿ ಬರ್ದಿದ್ದೀರಾ?”

“ಹೌದು. ಸರಿಯಾಗೇ ಬರೆದಿದ್ದೇನೆ.”

“ಆದರೂ ಬಂದಿಲ್ಲ ಯಾಕೋ ಗೊತ್ತಿಲ್ಲ.”

ಫೋನ್ ಇಟ್ಟ ಶ್ರೀನಿವಾಸ ಮೇಷ್ಟ್ರಿಗೆ ಸಿಟ್ಟು ಬಂದಿತ್ತು. ಫೋನ್ ಇಟ್ಟ ರಭಸಕ್ಕೆ ಟೀಪಾಯಿ ಅಂಚಿನಲ್ಲಿ ಇದ್ದ ಪೆನ್ ಸ್ಟಾಂಡ್ ಗುರುತ್ವಾಕರ್ಷಣೆಯನ್ನು ನಿರೂಪಿಸಿತ್ತು. ಮಧ್ಯಾಹ್ನಕ್ಕೆ ಅಡುಗೆ ತಯಾರಿಸುತ್ತಿದ್ದ ಮೇಷ್ಟ್ರ artಹೆಂಡತಿ ಅಡುಗೆಮನೆಯ ಬಾಗಿಲ ತನಕ ಬಂದು ಇವರು ಪೆನ್ ಸ್ಟಾಂಡ್ ಎತ್ತಿಡುವುದನ್ನು ನೋಡಿ ಮತ್ತೆ ಗ್ಯಾಸ್ ಒಲೆಯ ಬಳಿಗೆ ಹೋದರು.

ಒಂದೆರಡು ನಿಮಿಷ ಬಿಟ್ಟು ಅಡುಗೆ ಮನೆ ಹೊಕ್ಕ ಮೇಷ್ಟ್ರು, “ತರಕಾರಿ ಹೆಚ್ಚಿ ಕೊಡ್ಲಾ?” ಎಂದು ವಿಚಾರಿಸಿದರೆ ಹೆಂಡತಿ, “ಬೇಡ” ಎಂದು ತನ್ನ ಕೆಲಸ ಮುಂದುವರಿಸಿದರು. ಮತ್ತೆ ತನ್ನ ಕೊಠಡಿಗೆ ಹೋದ ಮೇಷ್ಟ್ರು ತನ್ನ ಕಪಾಟಿನ ಒಳಕ್ಕೆ ಇಟ್ಟಿದ್ದ ಹಲವು ಪುಸ್ತಕಗಳಲ್ಲಿ ಒಂದನ್ನು ಆಯ್ದು ಓದಲು ಆರಂಬಿಸಿದರು. ಓದುತ್ತ ಓದುತ್ತಾ ಹಾಗೆ ನಿದ್ದೆ ಹೋದರು.

ಕುಕ್ಕರ್ ಸೀಟಿ ಹೊಡೆದಾಗ ಎಚ್ಚರಾದ ಮೇಷ್ಟ್ರು ಹೋಗಿ ಹೆಂಡತಿ ಬಳಿ, “ನಿನಗೋಸ್ಕರ ಹಪ್ಪಳ ಕಾಯಿಸಿಕೋ ಬೇಕಾದ್ರೆ,” ಎಂದರೆ ಹೆಂಡತಿ “ನನಗೆ ಈ ಸೆಖೆಗೆ ಗಂಜಿ ಊಟ ಮಾತ್ರ ಸಾಕು ಅಂತಾಗಿದೆ,” ಎಂದರು. ಅಲ್ಲೇ ಇದ್ದ ಡ್ರಮ್ಮಿನ ಒಳಗಿಂದ ಒಂದು ಲೋಟ ನೀರು  ಕುಡಿದು ಮೇಷ್ಟ್ರು, “ನನ್ನ ಲೇಖನ ತಲುಪಲೇ ಇಲ್ಲ ಅಂತಾ ಹೇಳ್ತಾರಲ್ಲಾ ಪ್ರತಿ ಸತಿ,” ಎಂದು ಸುಮಾರು ಹೊತ್ತಿನಿಂದ ಒಳಗೇ ಇಟ್ಟುಕೊಂಡಿದ್ದ ಕೊರಗನ್ನು ಹೊರ ಹಾಕಿದರು. “ನೀವು ಅಡ್ರೆಸ್ ಸರಿಯಾಗೇ ಬರ್ದಿದ್ರಾ?” ಎಂದು ಹೆಂಡತಿ ಕೇಳಿದಾಗ ಸಿಟ್ಟುಗೊಂಡ ಮೇಷ್ಟ್ರು, “ಏನು ನನಗೆ ಬರೆಯಲಿಕ್ಕೆ ಗೊತ್ತಿಲ್ಲವಾ?” ಎಂದು ಗುಡುಗಿ ರಭಸದಲ್ಲಿ ಅಡುಗೆಮನೆಯಿಂದ ಹೊರಹೋದರು.

ಕಪಾಟಿನ ಗಾಜಿಗಂಟಿ ಕೂತಿದ್ದ ಧೂಳನ್ನು ಒರೆಸುತ್ತಿದ್ದ ಮೇಷ್ಟ್ರನ್ನು ಅವರ ಹೆಂಡತಿ ಊಟಕ್ಕೆ ಕರೆದರು. ಕೈ ತೊಳೆದುಕೊಂಡು ಊಟಕ್ಕೆ ಕೂತ ಶ್ರೀನಿವಾಸ ಮೇಷ್ಟ್ರು, “ರಿನ್ಜೆನ್ ಫೋನ್ ಮಾಡಿದ್ಲಾ?” ಎಂದು ಹೆಂಡತಿಯನ್ನು ಕೇಳಿದರು. “ಹೌದು ಮಾಡಿದ್ಲು. ಬರ್ತಾಳನ್ತೆ ಈ ವಾರ,” ಎಂದು ಹೇಳುತ್ತಾ ಹೆಂಡತಿ ಗಂಜಿ ಬಳಸಿದರು.

ನಾಸ್ತಿಕರಾದ ಮೇಷ್ಟ್ರು ತಮ್ಮ ಮಗಳಿಗೆ ಬೌದ್ಧ ಹೆಸರಾದ ರಿನ್ಜೆನ್ ಅನ್ನು ಆಯ್ಕೆ ಮಾಡಿದ್ದರು. ರಿನ್ಜೆನ್ ಎಂದರೆ ಬೌಧಿಕ ಶಕ್ತಿ ಉಳ್ಳಾಕೆ ಎಂದು. ಆಕೆಯೂ ತನ್ನಂತೆ ಆಗಬೇಕು ಎಂಬುದು ಮೇಷ್ಟ್ರ ಆಸೆಯಾಗಿತ್ತು. ಬೌಧಿಕ ಮತ್ತು ವೈಚಾರಿಕವಾಗಿ ಇವರಂತೆ ಆದ ರಿನ್ಜೆನ್ ಸ್ವಭಾವದಲ್ಲಿ ಮಾತ್ರ ತನ್ನ ತಾಯಿಯಂತೆ ಮೃದು ಸ್ವಭಾವದವಳಾಗಿ ಬೆಳೆದಳು.

“ಈ ಬಾರಿ ನೀವೇ ಒಮ್ಮೆ ಮಾತಾಡಿ ಅವಳ ಹತ್ರ,” ಎಂದು ಹೆಂಡತಿ ಹೇಳಿದರೆ ಮೇಷ್ಟ್ರು “ಅವಳಿಷ್ಟ. ಹೆಚ್ಚು ಒತ್ತಾಯ ಮಾಡಬಾರದು,” ಎಂದರು.

“ಒತ್ತಾಯ ಮಾಡಬಾರದೇನೋ ಹೌದು, ಆದರೆ ಒಬ್ಬಳೇ ಇರೋದು ಅಂದ್ರೆ ಅದೂ ಕಷ್ಟ.”

“ಹೊಸ ಕಾಲ ಇದು. ಹೊಸ ಕಾಲದ ಹುಡುಗಿ ಅವಳು. ಏನೂ ಕಷ್ಟ ಆಗೋಲ್ಲ.”

“ಕಾಲ ಯಾವುದೇ ಆದರೂ ಮನುಷ್ಯ ಒಂಟಿಯಾಗಿ ಬದುಕಲಾರ.”

ಏನೂ ಉತ್ತರಿಸದೆ ಮೇಷ್ಟ್ರು ಊಟ ಮಾಡುತ್ತಾ ಹೋದರು. ಊಟ ಮುಗಿಸಿ ತಟ್ಟೆ ತೊಳೆದಿಟ್ಟು ಒಂದೆರಡು ಘಂಟೆ ನಿದ್ರಿಸಿದರು. ಇವರಿಗೆ ಎಚ್ಚರಾದಾಗ ಇವರ ಹೆಂಡತಿ ಇನ್ನೂ ಮಲಗಿಕೊಂಡೆ ಇದ್ದರು. ಅಡುಗೆ ಮನೆಗೆ ಹೋಗಿ ಎರಡು ಕಪ್ ಚಹಾ ತಯಾರಿಸಿದ ಮೇಷ್ಟ್ರು ಬಂದು ಹೆಂಡತಿಯನ್ನು, “ಘಂಟೆ ನಾಲ್ಕುವರೆಯಾಯಿತು” ಎಂದು ಎಬ್ಬಿಸಿ ಬಿಸಿ ಚಹಾ ಕೊಟ್ಟರು.

ತಾವು ಮತ್ತು ತಮ್ಮ ಹೆಂಡತಿ ಕುಡಿದ ಚಹದ ಲೋಟೆಯನ್ನು ಮೇಷ್ಟ್ರು ತೊಳೆಯುತ್ತಿರುವಾಗ ಮನೆಯ ಬಾಗಿಲು ಯಾರೋ ಬಡಿದರು. ಲೋಟಗಳನ್ನು ಇನ್ನೂ ಸಂಪೂರ್ಣವಾಗಿ ತೊಳೆದಿರದ ಕಾರಣ ಮೇಷ್ಟ್ರು ಅಲುಗಾಡಲಿಲ್ಲ. ಆದರೆ ಮೇಷ್ಟ್ರ ಕಿವಿ ಬಾಗಿಲ ಕಡೆ ಕೇಂದ್ರಗೊಂಡಿತ್ತು. ಹೆಂಡತಿ ಬಾಗಿಲು ತೆಗೆಯುವ ಸದ್ದು ಕೇಳಿದಾಗ ನೆಟ್ಟಗಿದ್ದ ಕಿವಿಯನ್ನು ಸ್ವಲ್ಪ ಸಡಿಲಗೊಳಿಸಿದ್ದರು.

“ಬಾ ಮಾರಾಯ…” ಎಂಬ ಹೆಂಡತಿಯ ಸ್ವರ ಕೇಳಿದ ಮೇಷ್ಟ್ರು ಬಹಳ ಕುತೂಹಲದಿಂದ ಬೇಗಬೇಗನೆ ಲೋಟೆ ತೊಳೆದಿಟ್ಟು ಹೊರಬಂದರು. ಅವರ ಹಳೆಯ ಶಿಷ್ಯನಾದ ಶ್ರೀಕರ್ ಬಂದಿದ್ದ.

ರಿನ್ಜೆನ್ ಸಹಪಾಟಿಯಾಗಿದ್ದ ಈತ ಶ್ರೀನಿವಾಸ್ ಮೇಷ್ಟ್ರ ಮೆಚ್ಚಿನ ಶಿಷ್ಯರಲ್ಲಿ ಒಬ್ಬ. ಮೊದಮೊದಲಿಗೆ ಮೇಷ್ಟ್ರನ್ನು ಶ್ರೀಕರ್ abstract-art-sheepಇಷ್ಟ ಪಡುತ್ತಿರಲಿಲ್ಲ ಮತ್ತು ಶ್ರೀಕರ್ ಎಂದರೆ ಮೇಷ್ಟರಿಗೂ ಅಷ್ಟಕ್ಕೇ ಅಷ್ಟೇ. ಆದರೆ ಶಾಲೆ ಮುಗಿದ ನಂತರ ಮೇಷ್ಟ್ರ ಪಾಠ ಅವರ ವೈಚಾರಿಕತೆ ಶ್ರೀಕರನಿಗೆ ಹೆಚ್ಹು ಅರ್ಥವಾಗಿ ಮೇಷ್ಟ್ರ ಅಭಿಮಾನಿಯಾಗಿದ್ದ. ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋಗಿದ್ದರೂ ರಜೆಯಲ್ಲಿ ಊರಿಗೆ ಬಂದಾಗ ತಪ್ಪದೆ ಮೇಷ್ಟ್ರನ್ನು ಭೇಟಿ ಆಗಿ, “ನೀವು ಆವಾಗ ಹೇಳಿದ ಮಾತು ಈಗ ಅರ್ಥ ಆಗ್ತಿದೆ,” ಎಂದು ಮೇಷ್ಟ್ರೊಂದಿಗೆ ಘಂಟೆಗಟ್ಟಲೆ ಮಾತನಾಡಿ ಹೋಗುತ್ತಿದ್ದ. ಮೊದಮೊದಲಿಗೆ ಈತನ್ನು ಎಲ್ಲಾ ಹುಡುಗರಂತೆ ಎಂದು ಭಾವಿಸಿದ್ದ ಮೇಷ್ಟ್ರು ಆಮೇಲೆ ಈತ ತನ್ನ ಪ್ರಭಾವಕ್ಕೆ ಒಳಗಾಗಿ ತಾನು ನಂಬಿದ್ದ ಸಿದ್ಧಾಂತಕ್ಕೆ ಬಾಗಿ ಅದರಲ್ಲೇ ಮಾಗಿದ ಕಾರಣ ತನ್ನ ಬಗ್ಗೆಯೂ ಹೆಮ್ಮೆ ಪಡುತ್ತಾ ಅವನನ್ನು ಮೆಚ್ಚಲಾರಂಭಿಸಿದ್ದರು.

“ಏನೋ ಮಾರಾಯ ಯಾವಾಗ ಬಂದಿ ಊರಿಗೆ?”

“ಎರಡು ವಾರ ಆಯ್ತು”

“ಸರಿ… ಎಲ್ಲಿರೋದು ಇವಾಗ?”

“ಅಹ್ಮೆದಾಬಾದಿನಲ್ಲಿ.”

“ಖುಷಿಯಲ್ಲಿ ಇದ್ದಿಯಲ್ವಾ?”

“ಹ್ಞೂ ಸಾರ್.”

ಹೀಗೆ ಮೇಷ್ಟ್ರು ಮತ್ತು ಶ್ರೀಕರ್ ಮಾತನಾಡುತ್ತಾ ಇರಬೇಕಾದರೆ ಮೇಷ್ಟ್ರ ಹೆಂಡತಿ, “ಚಹಾ ಕುಡಿತಿಯಾ ಇಲ್ಲ ಜ್ಯೂಸು ಮಾಡಲಾ?” ಎಂದು ವಿಚಾರಿಸಿದರು. “ಜ್ಯೂಸ್” ಎಂದ ಶ್ರೀಕರ್.

“ನಿಮ್ಮ ಆರೋಗ್ಯ ಸರಿ ಇಲ್ಲ ಅಂತ ಗೊತ್ತಾಯ್ತು…”

“ಪ್ರಿನ್ಸಿಪಾಲ ಆಗಾದಾಗಿನಿಂದ ಒತ್ತಡ ಜಾಸ್ತಿ ಆಗಿ ಕ್ರಮೇಣ ಹದಗೆಡುತ್ತಾ ಬಂತು ಮಾರಾಯ.”

“ಓಹ್… ನಿಮ್ಮ ರಿಟೈರ್ಮೆಂಟ್ ದಿನ ನಾನು ಬಂದು ಭೇಟಿ ಆಗಿದ್ದೆ ನಿಮ್ಮನ್ನು ಆಫೀಸಿನಲ್ಲಿ. ಆಗ ಹೇಳ್ತಾ ಇದ್ರಿ.”

“ಹೌದು ಮಾರಾಯ. ಆ ಗಣಪತಿ ಮೇಷ್ಟ್ರು ಎಷ್ಟು ಕಾಟ ಕೊಟ್ಟರು ಅಂದ್ರೆ. ಸಾಕು ಸಾಕಾಗಿ ಹೋಯಿತು.”

ಶ್ರೀನಿವಾಸ್ ಮೇಷ್ಟ್ರು ತರಗತಿಯಲ್ಲಿ ಅನಗತ್ಯವಾಗಿ ಪಠ್ಯೇತರ ವಿಷಯಗಳ ಕುರಿತು ಮಾತನಾಡಿ ಮಕ್ಕಳ ಮನಸ್ಸು ಹಾಳು ಮಾಡುತ್ತಾರೆ ಮತ್ತು ಅವರನ್ನು ಇನ್ಫ್ಲುಯೆನ್ಸ್ ಮಾಡಲು ಪ್ರಯತ್ನಿಸುತ್ತಾರೆ ಎಂಬುದು ಗಣಪತಿ ಮೇಷ್ಟ್ರ ವಾದವಾಗಿತ್ತು. ಅದರ ಕುರಿತು ಇತರೆ ಸಹೋದ್ಯೋಗಿಗಳ ಜೊತೆ ಅವರು ಹಲಾವಾರು ವರ್ಷಗಳಿಂದ ಮಾತನಾಡುತ್ತಲೇ ಬಂದಿದ್ದರು ಮತ್ತು ಹೆಚ್ಚಿನವರಿಗೆ ಗಣಪತಿ ಮೇಷ್ಟ್ರ ಮಾತು ಸರಿ ಅನ್ನಿಸುತ್ತಿತ್ತು.

“ಸೈದ್ಧಾಂತಿಕವಾಗಿ ಅವರಿಗೆ ನನ್ನ ಬಗ್ಗೆ ಭಿನ್ನಾಭಿಪ್ರಾಯ. ಆದರೆ ಅದನ್ನು ನೇರ ಹೇಳುತ್ತಿರಲಿಲ್ಲ. ಹಿಂದಿನಿಂದ ಪಿತೂರಿ ನಡೆಸುವುದು. ನನ್ನ ಕೆಲಸದ ಬಗ್ಗೆ ದೂರು ನೀಡಲು ಬಾರೀ ಪ್ರಯತ್ನ ನಡೆಸಿದರು. ಆದರೆ ಆಗಲಿಲ್ಲ. ನನಗೆ ಗೊತ್ತಿತ್ತು. ಅದಿಕ್ಕೆ ಉಪಪ್ರಾಂಶುಪಾಲ ಆಗ್ತಾ ಇದ್ದ ಹಾಗೆ ನನ್ನ ರಾಜಕೀಯ ಚಟುವಟಿಕೆ ಸ್ವಲ್ಪ ಕಡಿಮೆ ಮಾಡಿದೆ. ನನ್ನ ವಿರುದ್ಧ ಸಂಚು ಹೂಡುತ್ತಿದ್ದರು ಎಂಬುದು ಗೊತ್ತಿದ್ದೂ ನಾನು ಜಾಗ್ರತೆ ವಹಿಸದಿದ್ದರೆ ಹೇಗೆ?”

ಈ ಎಲ್ಲಾ ಮಾತುಗಳನ್ನೂ ತಮ್ಮ ರಿಟೈರ್ಮೆಂಟ್ ದಿನದಂದು ಮೇಷ್ಟ್ರು ಶ್ರೀಕರ್ ಬಳಿ ಹೇಳಿಕೊಂಡಿದ್ದರು. ಅವರು ಎಷ್ಟೋ ವಿಷಯಗಳನ್ನು ಹೀಗೆ ಮತ್ತೆ ಮತ್ತೆ ಹೇಳಿಕೊಳ್ಳುತ್ತಿದರೆ ಈತ ಅವರ ಮಾತು ಕೇಳೋರು ಯಾರು ಇಲ್ಲ ಇರಬೇಕು ಅಂತ ಅಂದುಕೊಂಡು ತುಟಿಕ್ಪಿಟಿಕ್ ಎನ್ನದೆ ಅವ್ರ ಮಾತನ್ನು ಕೇಳುತ್ತಿದ್ದ ಮತ್ತೆ ಮತ್ತೆ. ಅವರು ಅಲ್ಪವಿರಾಮ ನೀಡಿದಾಗ ಬೇರೆ ಯಾವುದೋ ವಿಷಯದ ಪ್ರಸ್ತಾಪ ಮಾಡಿ ಹೊಸ ಮಾತು ಆರಂಭಿಸುವ ಕಲೆ ಇವನಿಗೆ ಗೊತ್ತಿತ್ತು. ಆದರೆ ಯಾವ ವಿಷಯವನ್ನೂ ತಾನು ಮಾತನಾಡಬೇಕು ಅಂತ ಅಂದುಕೊಂಡಿರುವ ವಿಷಯಕ್ಕೆ ತಂದು ತಲುಪಿಸುವ ಕಲೆ ಮೇಷ್ತ್ರಿಗಿತ್ತು.

ಹೀಗೆ ಅದೇ ಗಣಪತಿ ಮೇಷ್ಟ್ರು ನಡೆಸಿದ ಸಂಚಿನ ಮಾತು ಮತ್ತು ಪ್ರಾಂಶುಪಾಲನಾಗಿದ್ದಾಗ ಇದ್ದ ಒತ್ತಡದ ಮಾತು ಮತ್ತೆ ಮೇಷ್ಟ್ರು ಆರಂಬಿಸಿದಾಗ ಅವರು ಬರವಣಿಗೆ ಕಡಿಮೆ ಗೊಳಿಸಿದ್ದು ಅದೇ ಸಮಯದಲ್ಲಿ ಅಲ್ಲವೆ ಎಂದು ಪ್ರಶ್ನಿಸಿದ ವಿಷಯ ಬದಲಿಸುವ ಪ್ರಯತ್ನದಲ್ಲಿ. ಆಗ ಮೇಷ್ಟ್ರು “ಹೌದು” ಎನ್ನುತ್ತಾ ತಾನು ಬರೆಯುತ್ತಿದ್ದ ನ್ಯಾಯಪರ ಮತ್ತು ಅನ್ಯಾಯದ ವಿರುದ್ಧದ ಬರವಣಿಗೆಯನ್ನು ಗಣಪತಿ ಮೇಷ್ಟ್ರು ಒಂದೆರಡು ಬಾರಿ ಮ್ಯಾನೇಜ್ಮೆಂಟ್ ಅವರಿಗೆ ಕಳುಹಿಸಿ ಇದು ದೇಶದ್ರೋಹಿ ಬರವಣಿಗೆ ಎಂದು ದೂರು ಸಲ್ಲಿಸಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಡ ಹೇರಿದ್ದನ್ನು ನೆನಪಿಸಿಕೊಂಡು ಆ ಕಾರಣಕ್ಕಾಗಿಯೇ ತಾನು ಉಪಪ್ರಾಂಶುಪಾಲ ಆಗುತ್ತಿದ್ದಂತೆಯೇ ಮಕ್ಕಳನ್ನು ಆಲೋಚಿಸುವಂತೆ ಮಾಡುವುದೇ ದೊಡ್ಡ ಕ್ರಾಂತಿ ಎಂದು ಭಾವಿಸಿ ಅವರ ಕಡೆ ಹೆಚ್ಚು ಗಮನ ಹರಿಸಲು ಆರಂಬಿಸಲು ನಿರ್ಧರಿಸಿದ್ದನ್ನು ಹೇಳಿಕೊಂಡರು. ಆಮೇಲೆ ಒಂದರೆ ಕ್ಷಣ ಸುಮ್ಮನಾಗಿ, “ಆದರೆ ನನ್ನ ಅಭಿಪ್ರಾಯ ನನ್ನ ಸಿದ್ಧಾಂತ ಮಕ್ಕಳಿಗೂ ಬೇಡ ಆಗಿತ್ತು,” ಅಂದರು. ಆ ಮಾತು ಹೇಳುವಾಗ ಅವರ ಮುಖದಲ್ಲಿ ಒಂದು ನಗುವಿತ್ತು. ಅದು ತಮಗಿದ್ದ ನೋವನ್ನು ಮುಚ್ಚಿಡಲು ತುಟಿಗೆ ಅಂಟಿಸಿಕೊಂಡ ನಗು ಎಂದು ಶ್ರೀಕರನಿಗೆ ಗೊತ್ತಿತ್ತು.

“ಬೇರೆಯವರ ಬಗ್ಗೆ ಗೊತ್ತಿಲ್ಲ ಸರ್. ನನ್ನ ಬದುಕಿಗಂತೂ ತಿರುವು ಸಿಕ್ಕಿದ್ದು ನಿಮ್ಮ ಕ್ಲಾಸಿನಲ್ಲಿ ಕೂತ ಕಾರಣಕ್ಕೆಯೇ.”

“ಅದೇ ಮಾರಾಯ. ನಾನು ಪರೀಕ್ಷೆಗೆ ತಯಾರಿ ನಡೆಸುವ ಮೇಷ್ಟ್ರಲ್ಲ. ಬದುಕಿಗೆ ತಯಾರಿ ನಡೆಸುವ ಮೇಷ್ಟ್ರು. ಆದರೆ ಮಕ್ಕಳಿಗೆ ಪರೀಕ್ಷೆಗೆ ತಯಾರಿ ನಡೆಸುವವರೇ ಬೇಕು! ನಾನು ಕಲಿಸಲು ಆರಂಬಿಸಿದ ದಿನದಲ್ಲಿ ಮಕ್ಕಳು ಸ್ವಲ್ಪವಾದರೂ ಆಸಕ್ತಿ ತೋರಿಸುತ್ತಿದ್ದರು. ನಿಮ್ಮ ಸಮಯದಲ್ಲಿ ಇದ್ದ ವಿದ್ಯಾರ್ಥಿಗಳು ಮಾತ್ರ….” ಎಂದು ಅರೆಕ್ಷಣ ಮೌನ ಆದ ಮೇಷ್ಟ್ರು ಮಾತು ಮುಂದುವರಿಸುತ್ತಾ, “ಅವರ ತಪ್ಪಲ್ಲ ಬಿಡು. ಜಾಗತೀಕರಣದ ಸಂದರ್ಭದಲ್ಲಿ ಬೆಳೆದ ಮಕ್ಕಳು ನೀವೆಲ್ಲಾ…” ಎಂದರು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುವ ರೀತಿಯಲ್ಲಿ.

ಅಷ್ಟುಹೊತ್ತಿಗೆ ಮೇಷ್ಟ್ರ ಹೆಂಡತಿ ಲಿಂಬೆ ಜ್ಯೂಸು ತೆಗೆದುಕೊಂಡು ಬಂದರು. “ಕುಡಿಬೇಡ. ಸ್ವಲ್ಪ ಇರು. ಸಕ್ಕರೆ ಹಾಕಲಿಲ್ಲ ಅದಿಕ್ಕೆ. art-1ತರುತ್ತೇನೆ ಈಗ,” ಎನ್ನುತ್ತಾ ಇವನಿಗೊಂದು ಗ್ಲಾಸ್ ಜ್ಯೂಸ್ ಮತ್ತೆ ಮೇಷ್ತ್ರಿಗೊಂದು ಗ್ಲಾಸ್ ಜ್ಯೂಸ್ ಕೊಟ್ಟರು. ತಕ್ಷಣ ಅಡುಗೆ ಮನೆಗೆ ಹೋಗಿ ಸಕ್ಕರೆಯ ಡಬ್ಬಿ ತೆಗೆದುಕೊಂಡು ಬಂದು, “ಎರಡು ಚಮಚ ಹಾಕ್ಲಾ?” ಎಂದು ಕೇಳಿದರೆ ಶ್ರೀಕರ್, “ಎರಡೂವರೆ ಹಾಕಿ,” ಎಂದ. ಎರಡೂವರೆ ಚಮಚ ಸಕ್ಕರೆ ಹಾಕಿ ಚಮಚವನ್ನು ಬಿಟ್ಟು ಹೋದರು. ಆ ಚಮಚದ ಸಹಾಯದಿಂದ ಶ್ರೀಕರ್ ಸಕ್ಕರೆ ಕರಗಿಸಿಕೊಳ್ಳುತ್ತಾ ಇರಲು ಸಕ್ಕರೆ ಡಬ್ಬಿ ಅಡುಗೆಮನೆಯಲ್ಲಿ ಇಟ್ಟು ಮೇಷ್ಟ್ರ ಹೆಂಡತಿ ವಾಪಸ್ ಬಂದರು.

“ನೀವು ಇನ್ನೂ ಸೆರ್ವಿಸಿನಲ್ಲಿ ಇದ್ದೀರಾ?” ಎಂದು ಮೇಷ್ಟ್ರ ಹೆಂಡತಿಯನ್ನು ಕೇಳಿದ ಶ್ರೀಕರ್.

“ಇಲ್ಲ. ಎರಡು ವರ್ಷ ಆಯ್ತು ರಿಟೈರ್ ಆಗಿ,” ಎಂದ ಮೇಷ್ಟ್ರ ಹೆಂಡತಿ “ನೀ ಜ್ಯೂಸ್ ಕುಡಿತಿರುವ ಗ್ಲಾಸ್ ನನ್ನ ಫೇರ್ವೆಲ್ ದಿನ ನನ್ನ ಸ್ಟೂಡೆಂಟ್ಸ್ ಕೊಟ್ಟಿದ್ದು,” ಎಂದು ಪ್ರಸನ್ನವದನರಾಗಿ ಹೇಳಿದರು.

ಹುಬ್ಬು ಹಾರಿಸಿ ಶ್ರೀಕರ್ “ಓಹ್” ಎನ್ನುವಾಗ ಮೇಷ್ಟ್ರು ಹೇಳಿದರು, “ದೊಡ್ಡ ಫೇರ್ವೆಲ್ ಕಾರ್ಯಕ್ರಮ ಮಾರಾಯ ಇವಳಿಗೆ! ನನಗೆ ಒಂದು ಫೇರ್ವೆಲ್ ಸಹ ಕೊಡಲಿಲ್ಲ ನಮ್ಮ ಶಾಲೆಯವರು! ಅಧಿಕಾರ ಹಸ್ತಾಂತರ ಮಾಡಿದ್ದು ಬಂದಿದ್ದು.” ಇದನ್ನು ಹೇಳುತ್ತಿದ್ದ ಮೇಷ್ಟ್ರು ಇದ್ದಕ್ಕಿದಂತೆ ತಮ್ಮ ಮಾತಿನ ವೇಗ ಬದಲಿಸಿ, “ಅಲ್ಲ, ನನಗೆ ಅದೆಲ್ಲ ಬೇಕಿಲ್ಲ. ಆದರೆ ಈ ಗಣಪತಿ ಮತ್ತು ಅವನ ಹಿಂಬಾಲಕರ ಅಲ್ಪತನ ನೋಡು” ಎಂದರು.

ಮೇಷ್ಟ್ರು ರಿಟೈರ್ ಆಗಿದ್ದ ದಿನ ಶ್ರೀಕರ್ ಅವರನ್ನು ಭೇಟಿ ಆದಾಗ ಮೇಷ್ಟ್ರು ಅವರಿಗೆ ಅವರ ಸಹೋದ್ಯೋಗಿಗಳು ಕಿರುಕುಳ ಕೊಟ್ಟಿದ್ದ ಕತೆಗಳನ್ನು ಹೇಳಿ, “ಸಧ್ಯ ಇವೆಲ್ಲಾ ಮುಗಿತು. ಇನ್ನು ಮೇಲೆ ನನ್ನ ಬರವಣಿಗೆ ಮುಂದುವರಿಸಬೇಕು. ಅಧ್ಯಯನ ಮತ್ತು ಬರವಣಿಗೆ ನನ್ನ ರಿಟೈರ್ಮೆಂಟ್ ಪ್ಲಾನ್,” ಎಂದಿದ್ದರು. ಅದನ್ನೇ ನೆನಪಿಸಿ ಶ್ರೀಕರ್ ಮೇಷ್ಟ್ರನ್ನು ಬರವಣಿಗೆ ಯಾಕೆ ಮಾಡುತ್ತಿಲ್ಲ ಎಂದು ಕೇಳಿದರೆ ಮೇಷ್ಟ್ರು ಹೇಳಿದರು, “ಸುಮಾರು ಲೇಖನ ಬರೆದು ಕಳಿಸಿದೆ. ಆದರೆ ತಲುಪಲೇ ಇಲ್ಲ ಅಂತಾರೆ ಪ್ರತಿ ಸತಿ.”

“ಸಾರ್, ಪೋಸ್ಟಲ್ ಸೆರ್ವಿಸ್ ಹದಗೆಟ್ಟಿದೆ. ಯಾವುದೋ ಎಲ್ಲೂ ಸರಿಯಾಗಿ ತಲುಪೋದೇ ಇಲ್ಲ. ನೀವು ಕಂಪ್ಯೂಟರ್ ಕಲಿಲ್ವಾ?”

“ಕಂಪ್ಯೂಟರ್ ಮೇಲೆ ಕೈಯಿಂದ ಬರೆದಷ್ಟೇ ವೇಗವಾಗಿ ಬರೆಯಲು ಆಗೋದಿಲ್ಲ. ಆಲೋಚನೆ ಫಾಸ್ಟ್ ಆಗಿ ಓಡ್ತಾ ಇರ್ತದೆ ಅದಕ್ಕೆ ಟೈಪಿಂಗ್ ಸ್ಪೀಡ್ ಮ್ಯಾಚ್ ಆಗೋಲ್ಲ. ಮತ್ತೆ ಕೈಯಿಂದ ಬರೆದೆ ಅಭ್ಯಾಸ ನೋಡು.”

“ಮತ್ತಿನೊಂದು ವಿಷ್ಯ ಇದೆ ಸಾರ್. ಈಗೀಗ ಪತ್ರಿಕೆಗಳಲ್ಲಿ ಡೆಸ್ಕ್ ಕೆಲಸಕ್ಕೆ ಬಂದಿರೋರೆಲ್ಲ ಹೊಸ ಹುಡುಗರು. ಅವರಿಗೆಲ್ಲ ಕೈಬರಹ ನೋಡಿ ಗೊತ್ತಿಲ್ಲ. ಅದನ್ನ ಓದಿ ಪ್ರೂಫ್ ನೋಡಿ ಟೈಪ್ ಮಾಡೋದೆಲ್ಲ ಆಗೋ ವಿಷ್ಯ ಅಲ್ಲ ಅವರಿಗೆ. ಅದಕ್ಕೊ ಕೆಲವೊಮ್ಮೆ ಲೇಖನ ತಲುಪಿಲ್ಲ ಅಂತ ಸುಳ್ಳೇ ಹೇಳ್ತಾರಂತೆ. ಇದನ್ನ ಪತ್ರಿಕೆಯೊಂದರಲ್ಲಿ ಕೆಲಸ ಮಾಡೋ ಒಬ್ಬ ಫ್ರೆಂಡ್ ಹೇಳಿದ್ದು ಸಾರ್ ನನಗೆ.”

“ಓಹ್, ಹೀಗೆಲ್ಲ ಇದೆಯಾ? ಅಲ್ಲ ಮಾರಾಯ ಒಂದು ಕಾಲದಲ್ಲಿ ಕೈಕಾಲು ಹಿಡಿತಾ ಇದ್ರೂ ನಂದು ಒಂದು ಲೇಖನ ಬರೆದು ಕೊಡಿ ಅಂತ. ಈಗ ಕಳಿಸಿದರೂ ತಲುಪಿಲ್ಲ ಅಂತ ಸುಳ್ಳು ಹೇಳೋ ಕಾಲ ಬಂತು,” ಎಂದು ಮೇಷ್ಟ್ರು ನಗಾಡಿದರು. ಶ್ರೀಕರ್ ಅವರ ನಗುವಿಗೆ ನಗುವಿನ ಸಾಥ್ ನೀಡಿದಾಗ ಮೇಷ್ಟ್ರು “ಒಂದು ನಿಮಿಷ” ಎಂದು ಒಳಗೆ ಹೋದರು.

ಶ್ರೀಕರ್ ತಾನು ಈ ವಿಷ್ಯ ಯಾಕಾದರೂ ಹೇಳಿದೆನೋ ಎಂದು ಅನಿಸತೊಡಗಿತು. ಆಗ ಮೇಷ್ಟ್ರ ಹೆಂಡತಿ ಸಣ್ಣಗಿನ ತಮ್ಮ ಸ್ವರವನ್ನು ಇನ್ನಷ್ಟು ಸಣ್ಣದಾಗಿಸಿ ಹೇಳಿದರು, “ತುಂಬಾ ನೋವು ಮಾಡಿಕೊಂಡಿದ್ದಾರೆ ಮಾರಾಯ. ಇವರಿಗೆ ಒಂದು ಕಾಲದಲ್ಲಿ ಇದ್ದ ಯಾವ ಫ್ರೆಂಡ್ಸ್ ಇವತ್ತು ಇಲ್ಲ. ಅವರ ತಪ್ಪು ಸಹ ಅಲ್ಲ ಬಿಡು. ಇವರು ಶಾಲೆ ಕೆಲಸಕ್ಕೆ ಅಂತ ಬೇರೆ ಎಲ್ಲದರಿಂದ ಹಿಂದೆ ಸರಿದರು ನೋಡು ಬಹುಷ್ಯ ಆಗ ಇವರ ಫ್ರೆಂಡ್ಸ್ ಎಲ್ಲ ಬೇರೆ ಟೀಂ ಕಟ್ಟಿಕೊಂಡು ಕೆಲಸ ಮುಂದುವರಿಸಿದರು. ಹೊಸ ಜನ ಸೇರಿಕೊಂಡರು. ಈಗ ಅವರ ಕೆಲಸ ಮತ್ತು ಹೊಸ ಟೀಂ ನಡುವೆ ಇವರ ನೆನಪಾಗುವುದಿಲ್ಲ. ಒಮ್ಮೆ ಇವರೇ ಹೋಗಿದ್ದರು. ಮೊದಲಿದ್ದಷ್ಟು ಜನ ಈಗ ಇಲ್ಲ ಅಂತಿದ್ರು. ಅಲ್ಲಿ ಇದು ಸರಿ ಇಲ್ಲ ಅದು ಸರಿ ಇಲ್ಲ ಹೀಗಲ್ಲ ಹಾಗಲ್ಲ ಅಂತೆಲ್ಲ ಹೇಳಿದ್ರು. ಚಳುವಳಿ ಅಂದ್ರೆ ನಾಲ್ಕಾರು ಚಟುವಟಿಕೆ ಅಲ್ಲ ಅಂತೆಲ್ಲ ಹೇಳಿದರಂತೆ. ಹೊಸ ಹುಡುಗರು ಇವರ ಮಾತು art-3ಯಾಕೆ ಕೇಳ್ತಾರೆ? ಅವರು ಮಾತು ಕೇಳಲಿಲ್ಲ ಅಂತ ಇವರಿಗೆ ಸಿಟ್ಟು. ಮತ್ತೆ ಹೋಗಲಿಲ್ಲ. ಅವರು ಸಹ ಕರೆಯಲಿಲ್ಲ. ಆದರೆ ನನಗೆ ಬೇಜಾರ್ ಆಗೋದು ಏನು ಗೊತ್ತ. ಹೊಸ ಹುಡುಗರು ಬಿಡು ಇವರ ಹಳೆ ದೋಸ್ತಿಗಳು ಸಹ ಇವರಿಗೆ ಆರೋಗ್ಯ ಕೆಟ್ಟಿದೆ ಅಂತ ಗೊತ್ತಾಗಿಯೂ ಒಂದು ಸತಿ ಮಾತನಾಡಿಸಲು ಬರಲಿಲ್ಲ. ಆಪರೇಷನ್ ಆಗಿದೆ ಅಂತ ಅವರಿಗೆಲ್ಲಾ ಗೊತ್ತು. ಆಪರೇಷನ್ ಆದಮೇಲೆ ಸರಿಯಾಗಿ ನಿಂತುಕೊಳ್ಳಲೂ ಆಗುದಿಲ್ಲ ಕೂತುಕೊಳ್ಳಲೂ ಆಗುದಿಲ್ಲ ಅಂತ ಸಹ ಗೊತ್ತು. ಆದರೂ ಯಾರು ಬರಲಿಲ್ಲ. ಪೇಟೆಯಲ್ಲಿ ನನಗೆಲ್ಲಾದರು ಸಿಕ್ಕರೆ ವಿಚಾರಿಸ್ತಾರೆ ಅಷ್ಟೇ. ಇವರಿಗಂತೂ ಅದು ತುಂಬಾನೇ ನೋವಾಗಿದೆ. ದಿನ ಹೇಳ್ತಾರೆ. ನಾನೇನು ಮಾಡೋದು ಮಾರಾಯ. ನೀನಾದ್ರು ಆಗೊಮ್ಮೆ ಈಗೊಮ್ಮೆ ಬಂದು ಹೋಗ್ತಾ ಇರು.”

ಮೇಷ್ಟ್ರ ಹೆಂಡತಿ ಇವನ್ನೆಲ್ಲ ಹೇಳಿ ಮುಗಿಸಿದ ಹೊತ್ತಿಗೆ ಸರಿಯಾಗಿ ಮೇಷ್ಟ್ರು ಒಳಗಿಂದ ಬಂದರು ಮೂಗಿಗೆ ನಶ್ಯ ಏರಿಸುತ್ತಾ, ಕಂಕುಳಿನಲ್ಲಿ ಒಂದು ಪುಸ್ತಕ ಇಟ್ಟುಕೊಂಡು. ಅವರು ಬರುತ್ತಿರುವ ಸೂಚನೆ ಸಿಕ್ಕಿದ ಮೇಷ್ಟ್ರ ಹೆಂಡತಿ ತಕ್ಷಣ ವಿಷಯ ಬದಲಾಯಿಸಿ “ರಿನ್ಜೆನ್ ಸಂಪರ್ಕದಲ್ಲಿ ಇದ್ದಾಳ?” ಎಂದು ವಿಚಾರಿಸಿದರು.

“ಕೆಲವೊಮ್ಮೆ ಫೇಸ್ಬುಕ್ ನಲ್ಲಿ ಚಾಟ್ ಮಾಡುತ್ತೇನೆ. ಇಲ್ಲದೆ ಇದ್ರೆ ಅವಳು ಏನಾದ್ರೂ ಫೋಟೋ ಹಾಕಿದಾಗ ನೋಡಿ ಗೊತ್ತಾಗುತ್ತೆ ಎಲ್ಲಿ ಹೋದಳು ಎಲ್ಲಿ ಬಂದ್ಲು ಅಂತ.”

“ಅದೇ ಅವಳು ಸಹ ಅವ್ರ ಮದ್ವೆ ಆಯ್ತು ಇವರಿಗೆ ಮಗುವಾಯ್ತು ಅಂತೆಲ್ಲ ಹೇಳ್ತಾ ಇರ್ತಾಳೆ. ಅವರು ಇನ್ನೂ ಟಚ್ನಲ್ಲಿ ಇದ್ದಾರ ಅಂತ ಕೇಳಿದ್ರೆ. ಇಲ್ಲ ಫೇಸ್ಬುಕ್ ಅಲ್ಲಿ ಫೋಟೋ ಹಾಕೊಂಡಿದ್ರು ಅಂತ ಹೇಳ್ತಾಳೆ. ಮಜಾ ಅನ್ಸೋತ್ತೆ ಕೇಳಿದ್ರೆ ಈ ಫೇಸ್ಬುಕ್ ವಿಚಾರ.”

ಆಗ ಮೇಷ್ಟ್ರು ತುಟಿ ಎರಡು ಮಾಡಿ, “ಅವಳಿಗೆ ಆ ನಿಮ್ಮ ಕ್ಲಾಸ್ಮೇಟ್ ಅಜಿಂಕ್ಯ ಮೋಸ ಮಾಡಿದ್ದಲ್ಲ ಮಾರಾಯ. ಇಷ್ಟ ಪಟ್ಟು ಮದುವೆ ಆಗಿದ್ದು ಇಬ್ಬರು. ಮದ್ವೆ ಆಗೋ ತನಕ ಎಲ್ಲ ಪ್ರೀತಿ ಪ್ರೇಮ. ಆಮೇಲೆ ಇವಳು ಹೆಂಡತಿ ತರ ಇರ್ಬೇಕು ಅಂತ ತಕರಾರು ಅವನದ್ದು. ಈಗ ಡೈವೋರ್ಸಿಗೆ ಅಪ್ಲೈ ಮಾಡಿದ್ದಾರೆ. ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ ಇದೆ.”

ಸುಮ್ಮನೆ ತಲೆ ಅಲುಗಾಡಿಸುತ್ತಿದ್ದ ಶ್ರೀಕರ್ “ಯಾರೋ ಫ್ರೆಂಡ್ಸ್ ಹೇಳಿ ಗೊತ್ತಾಯ್ತು ಅವರಿಬ್ಬರು ಈಗ ಒಟ್ಟಿಗೆ ಇಲ್ಲ ಅಂತ. ನಾನು ಮತ್ತೆ ಹೆಚ್ಚೇನೂ ಕೇಳಲು ಹೋಗಲಿಲ್ಲ,” ಎಂದ.

ಮೇಷ್ಟ್ರು ಏನೋ ಹೇಳುತ್ತಾರೆ ಎನ್ನುವಂತಿದ್ದಾಗ ಮೇಷ್ಟ್ರ ಹೆಂಡತಿ ನುಡಿದರು, “ಅಲ್ಲ ಮಾರಾಯ, ಇವಳಿಗಾದ್ರೆ ಬಿಡು ಅವನು ಸರಿಗಿರ್ಲಿಲ್ಲ. ಆದರೆ ನಿಮ್ಮ ಫ್ರೆಂಡ್ಸ್ ಅಲ್ಲೇ ಎಷ್ಟು ಜನರ ಡಿವೋರ್ಸ್ ಆಯ್ತು. ನಿಮ್ಮ ಜನರೇಶನ್ ಅವರಿಗೆ ಸಂಸಾರ ನಡೆಸೋದು ಗೊತ್ತಿಲ್ಲ. ಸಂಸಾರ ಅಂದ್ರೆ ಅಡ್ಜಸ್ಟ್ ಮಾಡಿಕೊಳ್ಳೋದು,” ಎಂದರು. ಆಗ ಮೇಷ್ಟ್ರು, “ಆಗದವರೊಂದಿಗೆ ಅಡ್ಜಸ್ಟ್ ಮಾಡಿಕೊಳ್ಳೋ ಅಗತ್ಯ ಇಲ್ಲ. ಒಂದು ರೀತಿಯಲ್ಲಿ ಇದು ಸರಿ,” ಎನ್ನುವಾಗ ಅವರ ಹೆಂಡತಿ, “ಏನು ಅಡ್ಜಸ್ಟ್ ಮಾಡಿಕೊಳ್ಳೋ ಅಗತ್ಯ ಇಲ್ಲ ಅಂದ್ರೆ? ನಿಮ್ಮೊಟ್ಟಿಗೆ ನಾನು ಅಡ್ಜಸ್ಟ್ ಮಾಡಿಕೊಂಡು ಇಷ್ಟು ವರ್ಷ ಇರಲಿಲ್ಲವ?” ಎಂದರು.

ಈ ಮಾತು ಕೇಳಿ ತುಸು ನಕ್ಕು ಮೇಷ್ಟ್ರು ಶ್ರೀಕರನನ್ನು ನೋಡುತ್ತಾ ಹೇಳಿದರು, “ಅದಂತೂ ಸತ್ಯ ನೋಡು. ನನ್ನನ್ನು ನನ್ನ ಹಟಮಾರಿತನವನ್ನು ಸಹಿಸಿ ಅನ್ನೋದಕ್ಕಿಂತ ಹೆಚ್ಚಾಗಿ ಅರ್ಥ ಮಾಡಿಕೊಂಡು ಬದುಕಿದ್ದಾಳೆ.”

“ನಿನಗೆ ಗೊತ್ತಿಲ್ಲ ಶ್ರೀಕರ್ ಇವರೊಂದಿಗೆ ಬಾಳುವುದು ಅಷ್ಟು ಸುಲಭ ಇರಲಿಲ್ಲ. ಆದರೂ ಬದುಕಿದೆ. abstract-painting-sexಅದೇನು ಹೆಗ್ಗಳಿಕೆಯ ಮಾತಲ್ಲ. ಮದುವೆ ಅಂತ ಆದ ಮೇಲೆ ಇರಬೇಕಪ್ಪ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅಡ್ಜಸ್ಟ್ ಮಾಡಿಕೊಂಡು. ಆದರೆ ನಿಮ್ಮ ಜನರೇಶನ್ ಅವರಿಗೆ ಇದೆಲ್ಲ ಗೊತ್ತೇ ಇಲ್ಲ. ಅದಿಕ್ಕೆ ಮದುವೆ ಆದ ಮುಂದಿನ ತಿಂಗಳೇ ಬೇರೆ ಆಗ್ತಾರೆ,” ಎಂದ ಮೇಷ್ಟ್ರ ಹೆಂಡತಿ ಗೇರ್ ಬದಲಿಸಿ, “ನೀನು ಮದ್ವೆ ಆಗಬಹುದಲ್ಲ ಈಗ,” ಎಂದು ಹೇಳಿದರು.

ಏನು ಹೇಳಬೇಕೋ ತಿಳಿಯದೆ ಶ್ರೀಕರ್, “ಹಾಂ ಆಗಬಹುದೇನೋ,” ಎಂದು ತಕ್ಷಣ ಮೇಷ್ಟ್ರ ಕಡೆ ತಿರುಗಿ “ಯಾವ ಪುಸ್ತಕ ಸರ್ ಅದು,” ಎಂದು ಕೇಳಿದ.

“ಹೇಗೆ ಮಾತು ಬದಲಾಯಿಸ್ತಾನೆ ನೋಡು” ಎಂದು ನಗುತ್ತ ಹೇಳಿದ ಮೇಷ್ಟ್ರು ಶ್ರೀಕರ್ ಕೈಯಿಂದ ಗ್ಲಾಸ್ ತೆಗೆದುಕೊಂಡು ತನ್ನ ಕುರ್ಸಿಯ ಪಕ್ಕದಲ್ಲಿ ಇದ್ದ ಗ್ಲಾಸ್ ಒಟ್ಟು ಸೇರಿಸಿ ತನ್ನ ಹೆಂಡತಿ ಕೈಯ್ಗೆ ಕೊಟ್ಟರು. ಅವರು ಆ ಗ್ಲಾಸುಗಳನ್ನು ತೆಗೆದುಕೊಂಡು ಅಡುಗೆ ಮನೆಗೆ ನಡೆಯುತ್ತಿದ್ದರೆ ತನ್ನ ತೊಡೆ ಮೇಲೆ ಇಟ್ಟುಕೊಂಡಿದ್ದ ಪುಸ್ತಕ ಶ್ರೀಕರ್ ಕೈಗೆ ನೀಡುತ್ತಾ ಹೇಳಿದರು, “ಹೊಬ್ಸಬಾಂನ ಕೊನೆ ಪುಸ್ತಕ ಇದು. ಫ್ರಾಕ್ಚರ್ಡ್ ಟೈಮ್ಸ್ ಅಂತ,” ಎನ್ನುವಾಗ ಶ್ರೀಕರ್, “ಹಾಂ ಗೊತ್ತು ಇದರ ಬಗ್ಗೆ ಓದಿದೆ,” ಎಂದ.

“ಬೇಕಿದ್ರೆ ತೆಗೊಂಡು ಹೋಗು ನಾನು ಓದಿ ಆಯ್ತು.”

“ಇಲ್ಲ ಸಾರ್ ನಾನು ಕಿಂಡಲ್ ಅಲ್ಲಿ ಖರೀದಿಸಿದೆ.”

“ಓಹ್ ನಿನ್ನ ಹತ್ರನೋ ಬಂತಾ ಇದೆಲ್ಲ. ಈ ರಿನ್ಜೆನ್ ಹತ್ರ ಸಹ ಇದೆ. ಅವಳು ಕಾದಂಬರಿ ಎಲ್ಲ ಓದೋದು ಅದರಲ್ಲೇ ಇವಾಗ. ನನ್ನ ಲೈಬ್ರರಿಯಷ್ಟೇ ದೊಡ್ಡ ಕಲೆಕ್ಷನ್ ತನ್ನ ಬಳಿ ಇದೆ ಅದು ಮನೆ ಜಾಗ ತಿನ್ನೋದಿಲ್ಲ ಅಂತ ತಮಾಷೆ ಮಾಡ್ತಾಳೆ.”

“ಸರ್ ನಿಮ್ಮ ಲೈಬ್ರರಿ ಅಷ್ಟು ದೊಡ್ಡದಿರಲಿಕ್ಕಿಲ್ಲ ಅವಳ ಲೈಬ್ರರಿ” ಎಂದ ಶ್ರೀಕರ್ ನಗುತ್ತ.

“ಊರೂರು ಸುತ್ತಿ ಚಹಾ ಕಾಪಿ ಬಿಟ್ಟು ಖರೀದಿ ಮಾಡಿದ್ದು ಮಾರಾಯ ಅಷ್ಟೆಲ್ಲ ಪುಸ್ತಕ.”

“ಗೊತ್ತು ಸರ್. ಹೇಳಿದ್ರಿ ಆ ಕತೆ ಒಂದ್ಸತಿ.”

ಅಡುಗೆಮನೆಯಿಂದ ಹೊರಗೆ ಬಂಡ ಮೇಷ್ಟ್ರ ಹೆಂಡತಿ ಕೇಳಿದ್ರು, “ಅಲ್ಲ… ನಾನು ಕೇಳ್ತೇನೆ ಅಂತ ಬೇಸರ ಮಾಡ್ಕೋಬೇಡ. ಆದ್ರೆ ನಿಂಗೆ ಮದುವೆ ವಯಸ್ಸಾಗಿದೆ. ಯಾಕೆ ಮದುವೆ ಆಗಬಾರದು?”

“ಅವನು ಯಾರನ್ನೋ ನೋಡಿಕೊಂಡಿರಬೇಕು,” ಎಂದು ಹೆಂಡತಿಯನ್ನು ನೋಡುತ್ತಾ ಹೇಳಿದ ಮೇಷ್ಟ್ರು ಇವನ ಕಡೆ ಮುಖ ತಿರುಗಿಸಿ “ಮನೆಯವರಿಗೆ ಬೇಕಿದ್ರೆ ನಾನು ಮಾತಾಡ್ತೇನೆ ಮಾರಾಯ” ಎಂದರು.

“ಇಲ್ಲ ಸಾರ್. ನನಗೆ ಮದ್ವೆ ಸಂಸಾರ ಇದರ ಬಗ್ಗೆ ಎಲ್ಲ ನಂಬಿಕೆ ಇಲ್ಲ.”

“ನಂಬಿಕೆ? ಅದೆಂತ ದೇವರೋ ಇಲ್ಲ ಭೂತವೋ ನಂಬಲಿಕ್ಕೆ?” ಮೇಷ್ಟ್ರ ಹೆಂಡತಿ ಪ್ರಶ್ನೆ ಮಾಡಿದರು. ಸ್ವರ ಸ್ವಲ್ಪ ಖಡಕ್ ಆಗಿತ್ತು.

“ಅಲ್ಲ. ನಂಬಿಕೆ ಅಂದ್ರೆ ಅಂಥಾ ನಂಬಿಕೆ ಅಲ್ಲ,” ಎಂದು ಶ್ರೀಕರ್ ಹೇಳುತ್ತಿರುವಾಗ ಮೇಷ್ಟ್ರು ಮಧ್ಯಕ್ಕೆ ಮಾತನಾಡಿದರು, “ಗೊತ್ತಾಯ್ತು. ಲಿವ್-ಇನ್ ಅಂತಾರಲ್ಲ ಅದ್ರ ಮೇಲೆಯಾ ನಿನಗೆ ನಂಬಿಕೆ?”

“ಅದೇ ಬೆಸ್ಟ್ ಅಲ್ವಾ ಸರ್. ಹೆಚ್ಚ್ ಸ್ವತಂತ್ರ ಅಲ್ವಾ ಅದು,” ಎಂದು ಶ್ರೀಕರ್ ವಾದಿಸಿದ.

“ಒಪ್ತೇನೆ. ಆದರೆ ಯಾಕೋ ಒಪ್ಪಿಗೆ ಆಗ್ತಾ ಇಲ್ಲ,” ಎಂದರು ಮೇಷ್ಟ್ರು. ಮೇಷ್ಟ್ರ ಹೆಂಡತಿ ಸುಮ್ಮನೆ ಒಳಗೆ ನಡೆದರು.

“ಹಾಗಾದ್ರೆ ಯಾರದೋ ಜೊತೆಗಿದ್ದೀಯ ಇವಾಗ?” ಎಂದು ಮೇಷ್ಟ್ರು ಪ್ರಶ್ನೆ ಕೇಳಿದರೆ ಶ್ರೀಕರ್, “ಇಲ್ಲ ಸಾರ್. ಒಬ್ಬನೇ ಇರೋದು. ಆದರೆ ನನ್ನ ಅಭಿಪ್ರಾಯ ತಿಳಿಸಿದ್ದು ಅಷ್ಟೇ. ಹಾಗೆ ಇರಲಿಕ್ಕೆ ಶುರು ಮಾಡಿದ್ರೆ ಮನೆಯವರಿಗೆ ಏನು ಹೇಳೋದು ಅನ್ನೋದು ಸಮಸ್ಯೆ ಆಗೊತ್ತೆ ಆಮೇಲೆ,” ಹೇಳಿ ನಕ್ಕ. ಮೇಷ್ಟ್ರು ಸಹ ನಕ್ಕರು.

ಒಳಗಿಂದ ಹೊರ ಬಂದ ಮೇಷ್ಟ್ರ ಹೆಂಡತಿ ಊಟಕ್ಕೆ ನಿಲ್ಲು. ಅಡುಗೆ ಮಾಡುತ್ತೇನೆ ಎಂದರೆ ಶ್ರೀಕರ್ ನಿರಾಕರಿಸಿದ. ಮೇಷ್ಟ್ರು “ಒತ್ತಾಯ ಮಾಡಬೇಡ, ಅವನಿಗೇನು ಕೆಲಸ ಇದೆಯೋ ಏನೋ,” ಎಂದು ಹೆಂಡತಿಗೆ ಹೇಳಿದರು. ತಕ್ಷಣವೇ ಹೊರಡುವುದು ಉಚಿತ ಇಲ್ಲವಾದಲ್ಲಿ ಊಟಕ್ಕೆ ನಿಲ್ಲಬೇಕಾಗುತ್ತದೆ ಎಂದು ಶ್ರೀಕರ್, “ಹೊರಡುತ್ತೇನೆ” ಎಂದ.

“ಹೊರಡ್ತೀಯ?” ಕೇಳಿದರು ಮೇಷ್ಟ್ರ ಹೆಂಡತಿ.

“ಹೌದು. ಕೆಲವು ಫ್ರೆಂಡ್ಸ್ ಜೊತೆ ಊಟಕ್ಕೆ ಹೋಗೋ ಪ್ಲಾನ್ ಇದೆ.”

“ಸರಿ ಮಾರಾಯ ಹಾಗಿದ್ರೆ, ಹೋಗೋ ಮೊದಲು ಇನ್ನೊಮ್ಮೆ ಬಂದು ಹೋಗು” ಎಂದ ಮೇಷ್ಟ್ರು, “ಓದೋದು ಬರಿಯೋದು ಮಾಡ್ತಾ ಇರು,” ಎಂದರು.

“ಸರಿ” ಎಂದ ಶ್ರೀಕರ್, “ನೀವು ಕಂಪ್ಯೂಟರ್ ಕಲೀರಿ ಸಾರ್. ಆಗ ಖಂಡಿತ ಪ್ರಕಟ ಮಾಡ್ತಾರೆ. ನಾನು ಇಲ್ಲೇ ಊರಲ್ಲೇ ಇದಿದ್ದರೆ ನಿಮ್ಮ ಲೇಖನ ನಾನೇ ಟೈಪ್ ಮಾಡಿ ಕಳಿಸ್ತಿದ್ದೆ. ಹಾಗೆ ಯಾರಾದ್ರು ಸಿಗ್ತಾರ ನೋಡಿ.”

“ಬೇಡ ಮಾರಾಯ. ಯಾರಿಗೆ ಬೇಕಿದೆ ಈಗ ನನ್ನ ವಿಚಾರ ನನ್ನ ಅಭಿಪ್ರಾಯ ಎಲ್ಲ?”

ಶ್ರೀಕರನಿಗೆ ಏನು ಹೇಳಬೇಕೋ ತೋಚದೆ, “ಬರ್ತೇನೆ ಸರ್,” ಎಂದು ಹಿಂದೆ ನಿಂತಿದ್ದ ಮೇಷ್ಟ್ರ ಹೆಂಡತಿಯನ್ನು ನೋಡಿ, “ಬರ್ತೇನೆ ಮೇಡಂ” ಎಂದ. ಇಬ್ಬರು, “ಸರಿ ಹೋಗಿ ಬಾ” ಎಂದರು.

ಶ್ರೀಕರ್ ಹೋದ ಬೆನ್ನಿಗೆ ಮೇಷ್ಟ್ರ ಹೆಂಡತಿ ಅಡುಗೆಮನೆಗೆ ಹೋಗಿ ಅಡುಗೆ ಆರಂಬಿಸಿದರೆ ಮೇಷ್ಟ್ರು, “ಮ್ಯಾಚ್ ಇದೆ,” The_Totoal_Defeat_abstract_human_bodyಎಂದು ಎಂದು ಟಿ.ವಿ. ಹಾಕಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಅಡುಗೆ ಮನೆಗೆ ಬಂದು ಒಂದು ಲೋಟ ನೀರು ಕುಡಿಯುತ್ತಾ, “ದರಿದ್ರ ಐ.ಪಿ.ಎಲ್. ಆಟದ ಜೀವ ತೆಗೆದುಹಾಕಿದೆ,” ಎಂದರು. “ಆದರೂ ನೋಡ್ತೀರಲ್ಲ,” ಎಂದು ಹೆಂಡತಿ ಹೇಳಿದಾಗ, “ಏನ್ ಮಾಡ್ಲಿ. ಟೆಸ್ಟ್ ಆಟ ಕಡಿಮೆ ಆಗಿದೆ. ಇದನ್ನೇ ನೋಡ್ಬೇಕು ನನ್ನ ಚಪಲಕ್ಕೆ,” ಎಂದು ಅಡುಗೆ ಮನೆಯಿಂದ ಹೊರ ನಡೆದರು.

ಸುಮಾರು ಒಂದು ಗಂಟೆ ಬಳಿಕ ಹೆಂಡತಿ ಊಟಕ್ಕೆ ಕರೆದಾಗ ಬಂದು ಒಂದು ತುತ್ತು ಉಂಡು ಮಾತ್ರ ತೆಗೆದುಕೊಂಡು ಮೇಷ್ಟ್ರು ಬಟ್ಟೆ ಒಣಗಿಸುವ ಜಾಗದಲ್ಲಿ ನೇತುಹಾಕಿದ್ದ ಬಾಳೆಗೊನೆಯಿಂದ ಎರಡು ಹಣ್ಣು ಕೊಯ್ದು ಒಂದನ್ನು ಹೆಂಡತಿಗೆ ನೀಡಿ ತಾನೂ ಒಂದು ತಿಂದರು.

ಮೇಷ್ಟ್ರ ಹೆಂಡತಿ ಪಾತ್ರೆ ತೊಳೆದು ಮಲಗುವ ಕೋಣೆ ಸೇರುವ ಹೊತ್ತಿಗೆ ಮೇಷ್ಟ್ರು ಹಾಸಿಗೆ ಮೇಲೆ ಅಡ್ಡ ಬಿದ್ದಾಗಿತ್ತು. ಪಕ್ಕದಲ್ಲೇ ಮಲಗಿದ ಹೆಂಡತಿ ಹೇಳಿದರು, “ನಾನು ಕಂಪ್ಯೂಟರ್ ಕಲ್ತು ನಿಮ್ಮ ಲೇಖನ ಟೈಪ್ ಮಾಡಿ ಕಳಿಸಿದರೆ ಆಗಬಹುದೇನೋ. ನನಗೂ ಟೈಮ್ ಪಾಸ್ ಆಗೊತ್ತೆ. ಈ ವಾರ ರಿನ್ಜೆನ್ ಬಂದಾಗ ಅವಳ ಹತ್ರ ಕೇಳೋಣ ಕಡಿಮೆ ಕ್ರಯದ ಒಳ್ಳೆ ಕಂಪ್ಯೂಟರ್ ಯಾವುದು ಅಂತ.”

***

ಹೌದು, ಮಾಧ್ಯಮ ‘ಜಾತೀಯತೆ’ ಯಿಂದ ಮುಕ್ತವಾಗಬೇಕು

– ಶಂಶೀರ್ ಬುಡೋಳಿ

ಸಿಎಂ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರವರ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮತ್ತಷ್ಟು ಕಹಿ ವಿಚಾರಗಳನ್ನ ಇಲ್ಲಿ ಹಂಚಿಕೊಳ್ಳಲು ನಾನು ಇಚ್ಛೆಪಡುತ್ತೇನೆ.

ಇದಕ್ಕೆ ವಿರೋಧ ವ್ಯಕ್ತವಾಗಲೂಬಹುದು, ಸಹಮತ ದೊರೆಯಲೂಬಹುದು. ಆದರೆ ಕೆಲವೊಂದು ಸತ್ಯಗಳನ್ನ ಹೇಳಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಮಾಧ್ಯಮಕ್ಕೆ ಎಂಟ್ರಿ ಕೊmediaಡುವ ವೇಳೆ ಕೆಲವೊಂದು ವಿಚಾರಕ್ಕೆ, ಕೆಲವೊಂದು ವ್ಯಕ್ತಿಗಳಿಗೆ ನಾನು ಕೂಡಾ ಅಸ್ಪೃಶ್ಯನಾಗಿದ್ದೆ..!

ಖಾಸಗಿ ನ್ಯೂಸ್ ಚಾನೆಲ್ನಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿರುವ ನನಗೆ ಸತ್ಯವೊಂದನ್ನ ಬಿಟ್ಟು ಏನನ್ನೂ ಹೇಳೋಕೇ ಆಗಲ್ಲ. ಮಾಧ್ಯಮಗಳು ಇರೋದು ಜನಹಿತಕ್ಕಾಗಿ. ಆದರೆ ಇವತ್ತು ಈ ಎಲ್ಲಾ ಆಶಯಗಳಿಗೆ ಬೆಲೆನೇ ಸಿಗುತ್ತಿಲ್ಲ ಎಂಬ ಬೇಸರನೂ ಇದೆ. ಸಂವಿಧಾನದ ಮೂಲ ಆಶಯಗಳನ್ನೇ ಗಾಳಿಗೆ ತೂರಲಾಗುತ್ತಿದೆ. ಕಾರಣ ನಮ್ಮ ಮೇಲಿರುವ ಹುದ್ದೆಗಳಲ್ಲಿ ಸಮಾನ ಮನಸ್ಕರು ಇಲ್ಲದಿರುವುದು! ಇದಕ್ಕೆ ಏನೋ, ಜನರಿಗೆ ನ್ಯೂಸ್ ಚಾನೆಲ್ ಅಂದರೆ ಈಗೀಗ ನಿರಾಸೆ ಮೂಡುತ್ತಿರುವುದು ಹಾಗೂ ಪತ್ರಕರ್ತರು ಆಗಾಗ ಚಾನೆಲ್ನಿಂದ ಚಾನೆಲ್ಗೆ `ಜಂಪ್’ ಆಗುತ್ತಿರುವುದು.

‘ಮೀಸಲಾತಿ’ಗಾಗಿ ದೇಶದಲ್ಲಿ ಹೋರಾಟ ನಡೆಯುತ್ತಿರುವ ಈ ಹೊತ್ತಲ್ಲಿ ಮಾಧ್ಯಮದಲ್ಲೂ ಮೀಸಲಾತಿ ಬೇಕಾ..? ಬೇಡವಾ..? ಎಂಬ ಪ್ರಶ್ನೆ ಉದ್ಭವಿಸುವುದು ಸರಿ. ಇಡೀ ಭಾರತೀಯ ಮಾಧ್ಯಮ ಲೋಕದತ್ತ ನೋಡಿದಾಗ ಇಲ್ಲಿ ‘ಜಾತೀಯತೆ’ ಪ್ರಬಲವಾಗಿ ಬೇರೂರಿದ್ಯಾ.. ಎಂಬ ಪ್ರಶ್ನೆ ಹೆಚ್ಚಿನ ಮಂದಿಯಲ್ಲಿದೆ. ಯಾಕೆಂದರೆ ನೀವೊಮ್ಮೆ ಭಾಷಾವಾರು ನ್ಯೂಸ್ ಚಾನೆಲ್, ಪತ್ರಿಕೆಗಳಲ್ಲಿ, ರೇಡಿಯೋ ಚಾನೆಲ್, ವೆಬ್ ಸೈಟ್ಗಳಲ್ಲಿ ಹಾಗೂ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿರುವವರು ಯಾರೆಂದು ಕಣ್ಣಾಡಿಸಿ. ಉನ್ನತ ಸ್ಥಾನ ಎಂದು ಕರೆಯಲ್ಪಡುವ ಹುದ್ದೆಗಳಲ್ಲಿ ಯಾವ್ಯಾವ ಜಾತಿಯವರು ಇದ್ದಾರೆಂಬುದು ನಿಮಗೆ ಗೊತ್ತಾಗುತ್ತೆ. ಅಂದರೆ ಯಾವ ರೀತಿ ಈ ಕ್ಷೇತ್ರದಲ್ಲಿ ‘ಜಾತೀಯತೆ’ ಎಂಬುದು ನುಸುಳಿತು ಎನ್ನುವುದೇ ದೊಡ್ಡ ಪ್ರಶ್ನೆ. ನನ್ನ ಪ್ರಕಾರ ಮಾಧ್ಯಮ ‘ಜಾತೀಯತೆ’ಯಿಂದ ಮುಕ್ತವಾಗಬೇಕು. ಮನುಷ್ಯತ್ವ ಇರುವ ಮಂದಿ ಜಾಸ್ತಿಯಾಗಬೇಕು. ಆ ಜಾತಿ, ಈ ಜಾತಿ ಅನ್ನೋದನ್ನ ತೊಲಗಿಸಿ, ಸಮಾಜದ ಹಿತಕ್ಕಾಗಿ ದುಡಿಯುವವರ ಸಂಖ್ಯೆ ಜಾಸ್ತಿಯಾಗಬೇಕು.

ಪ್ರಜಾಪ್ರಭುತ್ವ ದೇಶದಲ್ಲಿರುವ ಮಾಧ್ಯಮವೊಂದು ‘ಜಾತೀಯತೆ’ ಮಾಡಿ ಸುದ್ದಿ ಪ್ರಸಾರ ಮಾಡುವುದು ಎಷ್ಟು ಸರಿ..? ಈ ದೇಶ, ನೆಲ, ಜಲ ಯಾವ ರೀತಿ ಹಿಂದೂ, ಮುಸ್ಲಿಂ, ಜೈನ, ಸಿಖ್ ಹೀಗೆ ಮುಂತಾದ ಧರ್ಮೀಯರಿಗೆ ಬದುಕಲು ಅವಕಾಶ ನೀಡಿದೆಯೋ ಅದೇ ರೀತಿ ಮಾಧ್ಯಮದಲ್ಲಿಯೂ ಸಹ ಎಲ್ಲಾ ಧರ್ಮ, ಜಾತಿಯವರಿಗೂ ಪ್ರಾತಿನಿಧ್ಯ ಸಿಗಬೇಕು.

ಒಂದಂತೂ ಸತ್ಯ. ಕನ್ನಡ ಮಾಧ್ಯಮ ಇಂದು ‘ಜಾತೀಯತೆ’, `ಜಿಲ್ಲಾವಾರು ಬೇದಭಾವ’ದ ಸುಳಿಯಲ್ಲಿ ಸಿಲುಕಿದೆ. ಅದಕ್ಕಿಂತಲೂ ಬಳಲುತ್ತಿದೆ ಅಂತಾ ಹೇಳಬಹುದು. ಕರಾವಳಿ, ಮಲೆನಾಡು, ಉತ್ತರ
ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮೈಸೂರು ಕರ್ನಾಟಕ ಎಂದು ವಿಂಗಡಿಸುವ ಮಂದಿ ಜಾಸ್ತಿಯಾಗುತ್ತಿದ್ದಾರೆ. ಹೀಗಾಗಿ ಪತ್ರಕರ್ತರ ಮಧ್ಯೆ `ಮಾನಸಿಕ ಸಂಘರ್ಷ’ ನಡೀತಿದೆ ಅಂತಾ ಹೇಳಬಹುದು. ಪತ್ರಕರ್ತರೇನೂ ದೇವತಾ ಪುರುಷರಲ್ಲ. ಆದರೆ ಸಮಾಜದ ಪಾಲಿಗೆ ಅವರು ಪ್ರಮುಖ ವ್ಯಕ್ತಿಗಳು ಅಷ್ಟೇ. ಸುಲಭವಾಗಿ ಹೇಳುವುದಾದರೆ ಸಮಾಜವನ್ನ ಸರಿದಾರಿಯಲ್ಲಿ ನಡೆಸುವಂತಹವರು. ಸರಿದಾರಿಗೆ ಹೋಗಿ ಅಂತಾ ದಾರಿ ತೋರಿಸುವವರು.

ಹಣಬಲ, ಅಧಿಕಾರ ಬಲ ಹೊಂದಿದವರು ಇವತ್ತು ಮಾಧ್ಯಮವನ್ನ ಆಳುತ್ತಿದ್ದಾರೆ. ಕನ್ನಡದಲ್ಲಿ ಇವತ್ತು 11 ನ್ಯೂಸ್ ಚಾನೆಲ್ಗಳಿವೆ. 6 ಎಂಟರ್ಟೈನ್ಮೆಂಟ್ ಚಾನೆಲ್ಗಳಿವೆ. ಇದರ ಜತೆಗೆ ಮ್ಯೂಸಿಕ್, ಕಾಮಿಡಿ, ಮೂವೀಸ್, ಧಾರ್ಮಿಕ, ಮಕ್ಕಳ ಚಾನೆಲ್ಗಳಿವೆ. ಇವೆಲ್ಲಾ ಯಾರ ಒಡೆತನದಲ್ಲಿವೆ ಎಂಬುದನ್ನ ನೀವು ನೋಡುತ್ತಾ ಹೋದರೆ ಎಲ್ಲವೂ ಅರ್ಥವಾಗುತ್ತೆ. ಯಾವ್ಯಾವ ಜಾತಿಯವರಿಗೆ ನಮ್ಮ ಮಾಧ್ಯಮದಲ್ಲಿ ಎಷ್ಟು ಮನ್ನಣೆ ಸಿಗುತ್ತಿದೆ ಅಂತಾನೂ ಗೊತ್ತಾಗುತ್ತೆ. ಹಣದಾಸೆಗೋ, ಪ್ರಚಾರಕ್ಕಾಗಿಯೋ ಇವತ್ತು ಕೆಲ ಮಂದಿ ಮಾಧ್ಯಮ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಾನೆಲ್ಗಳನ್ನ, ಪತ್ರಿಕೆಗಳನ್ನ ಕಟ್ಟುತ್ತಿದ್ದಾರೆ. ಸಿನಿಮಾ ಮಾಡುವವರೂ ಇದ್ದಾರೆ. ಹೀಗಾಗಿ ವಿವಿಧ ಮನೋಭಾವದ ಪತ್ರಕರ್ತರ ಮಧ್ಯೆ ಮಾನಸಿಕ ಸಂಘರ್ಷ ನಡೆಯುತ್ತಿದೆ ಅಂತಾ ಹೇಳಬಹುದು. ಹೀಗಾಗಿ ಸುದ್ದಿ ಪ್ರಸಾರದ ವಿಷಯದಲ್ಲಿ ತಾರತಮ್ಯ ಕಾಣುತ್ತಿದೆ. ಪರಿಣಾಮ ಜನರಿಗೆ ಗೊಂದಲವುಂಟಾಗುತ್ತಿದೆ.
ಯೆಸ್. ನಾವೆಲ್ಲಾ ಸಮಾನ ಮನಸ್ಕರು. ಪ್ರಗತಿಪರ ಇರುವವರು. ಮನುಷ್ಯತ್ವ ಪರ ಇರುವವರು. ಧರ್ಮದ ತಳಹದಿಯಲ್ಲಿ ಬದುಕುವವರು. ಆಶಾದಾಯಕವಾದ, ಹೊಸ ಆದರ್ಶಗಳನ್ನ, ಹೊಸ ಚಿಂತನೆಗಳನ್ನ ಇಟ್ಟುಕೊಂಡು ಕಷ್ಟಪಟ್ಟು, ಬಹಳ ವಿರೋಧಭಾಸಗಳನ್ನ, ಅವಮಾನವನ್ನ, ಸವಾಲುಗಳನ್ನ ಎದುರಿಸಿ ಸಮಾಜದ ಪರವಾಗಿ ದುಡಿಯಬೇಕೆಂದು ಏನೇನೋ ಕನಸುಗಳನ್ನ ಕಟ್ಟಿಕೊಂಡು ಇವತ್ತು ಮಾಧ್ಯಮ ರಂಗಕ್ಕೆ ಎಂಟ್ರಿ ಕೊಡುವುದು ಸುಲಭದ ಮಾತಲ್ಲ. ಬರವಣಿಗೆ ಎಂಬ ಪ್ರತಿಭೆ ಜತೆಗೆ ಅಲ್ಪಸಂಖ್ಯಾತರ, ದಲಿತ, ಹಿಂದುಳಿದ, ಶೋಷಿತರ, ಅಸ್ಪೃಶ್ಯರ ಪರ ಹಾಗೂ ನೊಂದವರ ಪರ ನಾನು ದುಡಿಯಬೇಕೆಂಬ ಕನಸುಗಳನ್ನಿಟ್ಟುಕೊಂಡು ಮಾಧ್ಯಮ ರಂಗಕ್ಕೆ ( ಸ್ನಾತಕೋತ್ತರ ಪದವಿ ಪಡೆದು) ಎಂಟ್ರಿ ಕೊಟ್ಟೆ. ಖುಷಿ ಸಂಗತಿ ಏನೆಂದರೆ ಇಂತಹುದೇ ಆಶಯ ಹೊಂದಿರುವ ದೈನಿಕ ಪತ್ರಿಕೆಯಲ್ಲಿ ಮೊದಲು ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ಒಂದು ಭಾಗ್ಯ. ಆ ಪತ್ರಿಕೆ ನನಗೆ ಕಲಿಸಿದ ಪತ್ರಿಕೋದ್ಯಮದ ಪಾಠ ನನ್ನ ಬದುಕಿಗೆ ದಾರಿ. ಹಾಗೆಯೇ ಆ ಪತ್ರಿಕೆ ಇವತ್ತಿಗೂ ನನ್ನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಇಂತಹ ಪತ್ರಿಕೆ ಇದೆ ಅನ್ನೋದೇ ಸಂತೋಷದ ವಿಷಯ.
ಸಿಇಓ, ಪ್ರಧಾನ ಸಂಪಾದಕ, ಸಂಪಾದಕ, ಸಹಾಯಕ ಸಂಪಾದಕ ಹೀಗೆ ಉನ್ನತ ಮಟ್ಟದ ಜವಾಬ್ದಾರಿ ಹೊಂದಿರುವ ಹುದ್ದೆಗಳಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಜಾತಿಗಳ ಪ್ರಮಾಣ ಬಹಳ ಕಡಿಮೆ ಇದೆ. ಮೊದಲಿಗಿಂತ ಈಗೀಗ ಮುಸ್ಲಿಮ್ ಸಮುದಾಯದಲ್ಲಿ ಮಾಧ್ಯಮ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಕೆಲವರು ಪತ್ರಿಕೋದ್ಯಮದಲ್ಲಿ ಶಿಕ್ಷಣ ಪಡೆದು ಮಾಧ್ಯಮ ರಂಗಕ್ಕೆ ಬರಲು ಉತ್ಸುಕರಾಗಿದ್ದಾರೆ. ಅಂದಮಾತ್ರಕ್ಕೆ ಇವರಿಗೆ ಭರ್ಜರಿ ಸ್ವಾಗತವೇನೂ ಇಲ್ಲಿ ಸಿಗುತ್ತಿಲ್ಲ. ಯಾಕಂದ್ರೆ ಜಾತಿ, ಪ್ರಾಂತ್ಯವಾರು ಸಂಘರ್ಷದಿಂದ ಬಳಲಿರುವ ಕೆಲ ಮಾಧ್ಯಮದಲ್ಲಿ ಮುಸ್ಲಿಮ್, ದಲಿತ, ಹಿಂದುಳಿದ ವರ್ಗದ ವ್ಯಕ್ತಿಯನ್ನ ನೇಮಕ ಮಾಡುವಾಗ ಹಿಂದೆ-ಮುಂದೆ ನೋಡುವ ಮಂದಿಯೇ ಜಾಸ್ತಿ. ಅವನಲ್ಲಿ ಶೈಕ್ಷಣಿಕ ಅರ್ಹತೆ, ಪ್ರತಿಭೆ, ಕೆಲಸ ಮಾಡುವ ಸಾಮರ್ಥ್ಯ ಇದ್ದರೂ ನೇಮಕ ಮಾಡುವಲ್ಲಿ ಹಿಂದೇಟು ಹಾಕಲಾಗುತ್ತಿದೆ. ಸಂದರ್ಶನದ ವೇಳೆ ಮಾನಸಿಕವಾಗಿ ಕುಗ್ಗಿಸುವಂತೆ ವರ್ತಿಸುವ ಮಂದಿಯೂ ಇದ್ದಾರೆ. ಒಂದು ವೇಳೆ ನೇಮಕ ಮಾಡಿದರೂ ಕಡಿಮೆ ಸಂಬಳ ನೀಡಿ ನೇಮಕ ಮಾಡಲಾಗುತ್ತದೆ. ಇದಕ್ಕೆ ನೊಂದು ಎಷ್ಟೋ ಮಂದಿ ಪತ್ರಿಕೋದ್ಯಮದ ಸಹವಾಸವೇ ಬೇಡ ಅಂತಾ ಬೇರೆ ಕ್ಷೇತ್ರಕ್ಕೋ, ವಿದೇಶಕ್ಕೋ ಹೋಗಿ ದುಡಿಯುತ್ತಿದ್ದಾರೆ.
ನನ್ನಲ್ಲಿ ಒಮ್ಮೆ ಹಿರಿಯ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ‘ಅಲ್ಲ, ಈ ಮುಸ್ಲಿಮ್, ದಲಿತ, ಹಿಂದುಳಿದ ವರ್ಗದ ಯುವಕ-ಯುವತಿಯರು ಪತ್ರಿಕೋದ್ಯಮದಲ್ಲಿ, ಪದವಿಯೋ/ ಸ್ನಾತಕೋತ್ತರ ಪದವಿಯೋ ಪಡೆದು ಎಲ್ಲಿಗೆ ಹೋಗುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ಹೇಳಿದೆ. ‘ಸರ್, ಸಾಮಾಜಿಕ ಕಳಕಳಿಯುಳ್ಳ ಮಂದಿ ನಮ್ಮ ಮಧ್ಯೆ ಇಲ್ಲ ಅಂತಲ್ಲ. ಆದರೆ ಕಡಿಮೆ ಸಂಬಳದಲ್ಲಿ ಜೀವನಪೂರ್ತಿ ದುಡಿಯಿರಿ’ ಅಂತಾ ಆರಂಭದಲ್ಲೇ ಹೇಳಿದರೆ ಅವರೇನೂ ಮಾಡುತ್ತಾರೆ? ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊಂದಿರುವವರು ಈ ಸಂಬಳದಲ್ಲಿ ದುಡಿಯಿರಿ ಅಂತಾ ಹೇಳಿದರೆ ಏನ್ ಮಾಡುತ್ತಾರೆ? ಅಂದೆ..’ ಹೀಗಾಗಿ ಇಂದು ಮಾಧ್ಯಮದಲ್ಲಿ ಅರಳಬೇಕಾಗಿದ್ದ ಪ್ರತಿಭೆಗಳು ಅವಕಾಶ ಸಿಗದೇ ಸಾಯುತ್ತಿವೆ. ಆದರೆ ನನ್ನಂತಹ ಆಶಾವಾದಿಗಳು, ಪ್ರಗತಿಪರರು, ಹೊಸ ಆಲೋಚನೆಯನ್ನ, ಗುರಿಗಳನ್ನ ಹೊಂದಿರುವವರು ಅಪಮಾನ, ನಿರ್ಲಕ್ಷ್ಯವನ್ನ ಎದುರಿಸುತ್ತಾ ಅದರ ಜೊತೆಗೆ ಹೋರಾಡುತ್ತಿರುವುದರಿಂದಲೇ ಇವತ್ತು ನೆಲೆಯೂರಲು ಸಾಧ್ಯವಾಗಿದೆ.

ಹೆಚ್ಚಿನ ಪತ್ರಕರ್ತ ಮಿತ್ರರು ಇತರರಿಗೆ ಆದ ಅನ್ಯಾಯ, ಮೋಸದ ಬಗ್ಗೆ ವರದಿ ಮಾಡುತ್ತಾರೆ. ಆದರೆ ತಮಗಾದ ಅನ್ಯಾಯದ ಬಗ್ಗೆ ಸಮಾಜದ ಜೊತೆ ಹೇಳಿಕೊಳ್ಳಲು ಇಚ್ಛೆಪಡಲ್ಲ. ಕಾರಣ ವೃತ್ತಿ ಗೌರವ..!

ಯೆಸ್. ಅಮಿನ್ಮಟ್ಟುರವರು ತಮ್ಮ ಭಾಷಣದಲ್ಲಿ ಹೇಳಿದಂತೆ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವವರ ಮೇಲೆ ಹೊಡೆಯಲ್ಲ, ಬಡಿಯಲ್ಲ, ಹಲ್ಲೆ ಮಾಡಲ್ಲ. ಬದಲು ಮಾನಸಿಕವಾಗಿ ಕಿರುಕುಳ ಕೊಟ್ಟರೆ ಸಾಕು, ಅವರಾಗಿಯೇ ಕೆಲಸ ಬಿಟ್ಟು ಹೋಗುತ್ತಾರೆ ಎಂಬ ಮಾತು ನಿಜ. ಇದಕ್ಕೆ ನಾನೊಂದು ಮಾತನ್ನ ಸೇರಿಸುತ್ತೇನೆ. ಅದೇನೆಂದರೆ ಕಡಿಮೆ ಸಂಬಳ ಕೊಟ್ಟು ಸಹ ಬೇಗನೇ ಓಡಿಸುವ ಮಂದಿನೂ ಇದ್ದಾರೆ..! ನನ್ನ ಪ್ರಕಾರ ಇಂತಹ ಕಡೆ ಕೆಲಸ ಮಾಡುವ ನನ್ನ ಪತ್ರಕರ್ತ ಮಿತ್ರರು ಹೇಡಿಯಂತೆ ಓಡಬಾರದು. ಹೋರಾಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಸಂಬಳ ಜಾಸ್ತಿ ಗಿಟ್ಟಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಡಿಯೇ ನಿರ್ಗಮಿಸಬೇಕು..!
ದೈಹಿಕವಾಗಿ ಕಿರುಕುಳ ಕೊಡುವುದಕ್ಕಿಂತ ಮಾನಸಿಕವಾಗಿ ಕಿರುಕುಳ ಕೊಟ್ಟರೆ ಆತನ ಮಾನಸಿಕ ನೆಮ್ಮದಿಗೆ ಭಂಗ ತರಬಹುದು. ಇದು ಉನ್ನತ ಸ್ಥಾನದಲ್ಲಿರುವ ಮಂದಿ ಕೆಲಸಗಾರರನ್ನ ಓಡಿಸಲು ಕಂಡುಕೊಂಡಿರುವ ಹೊಸ ಮಾರ್ಗ. ಹೀಗೆ ಮಾಡಿದರೆ ಕೆಲಸದಲ್ಲಿ ತಪ್ಪು ಆಗುತ್ತೆ. ಇದನ್ನೇ ನೆಪವನ್ನಾಗಿಟ್ಟುಕೊಂಡು ಇವತ್ತು ಎಷ್ಟೋ ಮಂದಿಯನ್ನ ಕೆಲಸದಿಂದ ತೆಗೆದು ಹಾಕಲಾಗಿದೆ.
ಯಾವುದೇ ವ್ಯಕ್ತಿ ಇರಲಿ, ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೋ, ಅದನ್ನ ಪ್ರೋತ್ಸಾಹಿಸುವ ಬದಲು ಆತನಲ್ಲಿರುವ ನೆಗೆಟಿವ್ ಅಂಶಗಳನ್ನೇ ಎತ್ತಿಕೊಂಡು ಮತ್ತೆ ಮತ್ತೆ ಕೀಳರಿಮೆ ಮೂಡಿಸುವಂತೆ ಆತನ ಜೊತೆ ವರ್ತಿಸುವಸುವ ಮಂದಿಗೇನೂ ಕಡಿಮೆ ಇಲ್ಲ. ಸುಮ್ನೆ ಮೂದಲಿಸುತ್ತಾ ಆತನನ್ನ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ವೇಳೆ ನಗು, ಮೌನದಿಂದ ಉತ್ತರ ನೀಡಿ ಅಂತಹ ವಿರೋಧಿಗಳನ್ನ ಸೋಲಿಸಬೇಕು. ಇನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವುದಕ್ಕಿಂತ ವಾಮ ಮಾರ್ಗದಲ್ಲೋ ಹಣ ಮಾಡುವ ಮಂದಿನೂ ಇದ್ದಾರೆ. ಇನ್ನು ಕೆಲಸಕ್ಕಿಂತ ‘ಮಾತಿನ ಕೆಲಸ’ ಮಾಡುವ ಮಂದಿನೂ ಜಾಸ್ತಿ..! ಇದು ನಮ್ಮ ಮುಂದಿರುವ ವಾಸ್ತವ ಸಂಗತಿ.
ಒಂದು ಕಡೆ ಏಕಪಕ್ಷೀಯವಾಗಿ ವರದಿ ಪ್ರಸಾರ ಆಗುತ್ತಿರುವುದಕ್ಕೆ ಈ ಜಾತೀಯತೆಯೇ ಕಾರಣ. ಜೊತೆಗೆ ಪ್ರಾಂತ್ಯವಾರು ಭೇದಭಾವ. ಹಿಂದಿ, ಇಂಗ್ಲೀಷ್ ಚಾನೆಲ್ಗಳಲ್ಲಿ ಮುಸ್ಲಿಮ್, ದಲಿತ, ಹಿಂದುಳಿದ ವರ್ಗದ ಮಂದಿಗೆ ಒಳ್ಳೆಯ ಅವಕಾಶ ದೊರೆಯುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಇದ್ಯಾಕೆ ಸಾಧ್ಯವಾಗುತ್ತಿಲ್ಲ..? ನಮ್ಮ ಕನ್ನಡ ಟಿವಿ ಮಾಧ್ಯಮದಲ್ಲಿ ಎಷ್ಟು ಮಂದಿ ಸೆಕ್ಯುಲರ್ ಎಡಿಟರ್ಗಳಿದ್ದಾರೆ..? ಎರಡು-ಮೂರೋ ಮಂದಿ ಇದ್ದಾರೆ. ಇವರು ನಮ್ಮ ಜೊತೆಗೆ ಇದ್ದಾರೆ ಅನ್ನೋದೇ ಸಮಾಧಾನ, ಖುಷಿ. ಇನ್ನು ನಾವು, ನೀವು ಚಿಂತಿಸಬೇಕಾದ್ದು ಬಹಳವಿದೆ. ಪ್ರಗತಿಪರ ಚಿಂತನೆಯುಳ್ಳ ಯುವಕ-ಯುವತಿಯರಿಗೆ ಅವಕಾಶ ಕಡಿಮೆ ನೀಡಲಾಗುತ್ತಿದೆ. ಅಂದ ಮಾತ್ರಕ್ಕೆ ಎಲ್ಲಾ ಮಾಧ್ಯಮಗಳು ಜಾತೀಯತೆ ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಬದಲು ಮೂಲ ಆಶಯಗಳನ್ನ ಮರೆತಂತಿದೆ. ಇನ್ನು ಕೆಲ ಮಾಧ್ಯಮಗಳಲ್ಲಿರುವ ಮಂದಿ ಜಾತೀಯತೆ ಪರವಾಗಿರುವುದರಿಂದ್ದ ಎಲ್ಲಾ ಮಾಧ್ಯಮಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಮೂಲ ಆಶಯವನ್ನ ಮರೆತು ಸುದ್ದಿ ಮಾಡಲು ಹೋದರೆ ಏನಾಗುತ್ತೆ, ಹೇಳಿ..?

 

ಇವತ್ತು ನಮ್ಮ ಮುಂದೆ ಪ್ರಗತಿಪರ ಚಿಂತನೆಯುಳ್ಳ ಪತ್ರಿಕೆ ಯಾವುದು ಅಂತಾ ಕೇಳಿದರೆ ಉತ್ತರ ಕೇವಲ ಮೂರೇ ಅಂತಾ ಹೇಳಬಹುದು. ಆದರೆ ಪ್ರಗತಿಪರ ಚಿಂತನೆಯುಳ್ಳ ಚಾನೆಲ್ ಇಲ್ಲ. ಕನ್ನಡ ಮಾಧ್ಯಮಕ್ಕೆ ಅಲ್ಪಸಂಖ್ಯಾತ, ದಲಿತ, ಹಿಂದುಳಿದ, ಶೋಷಿತರ, ಅಸ್ಪೃಶ್ಯರ ಪರ ಹಾಗೂ ನೊಂದವರ ಪರವಾಗಿರುವ ಟಿವಿ ಚಾನೆಲ್ವೊಂದು ಬೇಕು. ಜೊತೆಗೆ ಪ್ರಗತಿಪರ ಚಿಂತನೆಯುಳ್ಳ ಸಂಪಾದಕರು ಬೇಕು.. ಅದರ ಅಗತ್ಯತೆ ಜರೂರಾಗಿದೆ. ಅದು ಕೂಡಿ ಬರುವ ಕಾಲ ಸನ್ನಿಹಿತವಾಗಿದೆ..!

 

ಕನ್ನಡ ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಾಗಿ ಕರಾವಳಿ, ಮಲೆನಾಡು ಮಂದಿನೇ ಜಾಸ್ತಿ. ಇದಕ್ಕೆ ಕಾರಣನೂ ಇದೆ. ಯಾಕೆಂದರೆ ಈ ಭಾಗದಲ್ಲಿ ಪತ್ರಿಕೋದ್ಯಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಾಗೆಯೇ ಪತ್ರಿಕೋದ್ಯಮ ಕಲಿಸುವ ಕಾಲೇಜುಗಳಿವೆ. ಜೊತೆಗೆ ಪ್ರೋತ್ಸಾಹನೂ ಜಾಸ್ತಿ. ಅಲ್ಲದೇ ಈಗಿರುವ ನ್ಯೂಸ್ ಚಾನೆಲ್ಗಳಲ್ಲಿ ನ್ಯೂಸ್ ರೀಡರ್ ಗಳು ಸಹ ಈ ಭಾಗದ ಮಂದಿನೇ ಜಾಸ್ತಿ. ಇದೆಷ್ಟು ನಿಜವೋ, ಅಷ್ಟೇ ನಿಜವಾದ ಇನ್ನೊಂದು ಸಂಗತಿ – ಸುದ್ದಿಮನೆಯಲ್ಲಿ ಇಂದಿಗೂ ಕರಾವಳಿ, ಮಲೆನಾಡು ಭಾಗದ ಯುವಕ-ಯುವತಿಯರನ್ನ (ಅದರಲ್ಲೂ ಮುಸ್ಲಿಮ್, ದಲಿತ) ನ್ಯೂಸ್ ರೀಡರೋ, ಆ್ಯಂಕರೋ ಮಾಡೋಕೇ ಹಿಂದೇಟು ಹಾಕಲಾಗುತ್ತಿದೆ. ಕಾರಣವಲ್ಲದ ಕಾರಣ ನೀಡಿ ಅಂದರೆ ‘ಮಂಗಳೂರಿನವರಿಗೆ/ ಮುಸ್ಲಿಮರಿಗೆ ಕನ್ನಡ ಬರಲ್ಲ’ ಹೀಗೆ ಏನೇನೋ ಅಸಂಬದ್ಧ ಕಾರಣ ಹೇಳಿ ಅವಕಾಶದಿಂದ ವಂಚಿತರನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಮುಸ್ಲಿಮ್, ದಲಿತ, ಹಿಂದುಳಿದ ವರ್ಗಗಳ ಯುವಕ-ಯುವತಿಯರಿಗೆ ಈ ವಿಷಯದಲ್ಲಿ ಟಾರ್ಚರೇ ನೀಡಲಾಗುತ್ತೆ. ಅವರಿಗೆ ‘ಟ್ರೈನಿಂಗ್’ ನೆಪದಲ್ಲಿ ತಿಂಗಳುಗಟ್ಟಲೇ ಹಿಂಸೆ ನೀಡಲಾಗುತ್ತದೆ. ಮನುಷ್ಯತ್ವವನ್ನ ಮರೆತವರೇ ಹೆಚ್ಚಾಗುತ್ತಿದ್ದಾರೆ. ‘ನನಗೆ ಮಾತ್ರ ಗೊತ್ತು’ ಅನ್ನೋರೇ ಜಾಸ್ತಿ. ತಮ್ಮ ಬಳಿ ಪ್ರತಿಭೆ ಇದ್ದರೂ ಅದನ್ನ ಬೆಳೆಸುವ ನಾಯಕರು ಕಡಿಮೆ ಇದ್ದಾರೆ.
ನನ್ನ ಪ್ರಕಾರ ಮಾಧ್ಯಮದಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಜಾತಿಭೇದ ಇರಬಾರದು. ಪ್ರಾಂತ್ಯವಾರು ದ್ವೇಷ ಇರಬಾರದು. ಎಲ್ಲಾ ಧರ್ಮ, ಜಾತಿಯವರಿಗೂ ಪ್ರಾತಿನಿಧ್ಯ ಕೊಡಬೇಕು. ಪ್ರತಿಭೆಗೆ, ಸಾಮರ್ಥ್ಯಕ್ಕೆ, ಪ್ರಾಮಾಣಿಕವಾಗಿ ಕೆಲಸ ಮಾಡುವ ಮಂದಿಗೆ ಅವಕಾಶ ನೀಡಬೇಕು. ಇಂತಹ ದೃಢ ನಿರ್ಧಾರವನ್ನು ಮಾಡುವವರು ಸಂಪಾದಕರು ಬೇಕಾಗಿದ್ದಾರೆ. ಕನ್ನಡ, ಗುಜರಾತಿ ಹೀಗೆ ಕೆಲ ಭಾಷಾ ಮಾಧ್ಯಮದಲ್ಲಿ ಜಾತೀಯತೆ ತೊಲಗಬೇಕೆಂದರೆ ಪ್ರಗತಿಪರ ಚಿಂತನೆಯುಳ್ಳ ಸಂಪಾದಕರ ಸಂಖ್ಯೆ ಜಾಸ್ತಿಯಾಗಬೇಕು. ಸುದ್ದಿಯನ್ನ ಸುದ್ದಿಯಾಗಿ ನೀಡುವ ಪತ್ರಕರ್ತರ ಸಂಖ್ಯೆ ಹೆಚ್ಚಾಗಬೇಕು. ಇದು ಕಾಲದ ಅನಿವಾರ್ಯತೆ ಕೂಡಾ. ಜನರ ಬೇಡಿಕೆ ಕೂಡಾ.

ಮಾಧ್ಯಮದಲ್ಲೂ ‘ಅಹಿಂದ’ ಇರಬೇಕು – ದಿನೇಶ್ ಅಮೀನ್ ಮಟ್ಟು

ಇದು ಪ್ರತಿ ಪತ್ರಕರ್ತ ಕೇಳಲೇಬೇಕಾದ ಭಾಷಣ

ಭಾಷಣ: ದಿನೇಶ್ ಅಮೀನ್ ಮಟ್ಟು

ನಿರೂಪಣೆ: ಎನ್.ರವಿಕುಮಾರ್ ಶಿವಮೊಗ್ಗ

 

(ಕರ್ನಾಟಕ ಮಾಧ್ಯಮ ಅಕಾಡೆಮಿ ಅಕ್ಟೋಬರ್ 3 ರಂದು ಕರ್ನಾಟಕ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಹಾಗೂ ಉರ್ದು ರಿಪೋಟರ್ಸ್ ಫೋರಂನ ಸಹಯೋಗದಲ್ಲಿ ರಾಯಚೂರಿನಲ್ಲಿ ‘ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಮಾಧ್ಯಮ ಕಾರ್ಯಾಗಾರ’ ವನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಾಡಿನ ಹಿರಿಯ ಪತ್ರಕರ್ತರು, ಚಿಂತಕರಾದ ಶ್ರೀಯುತ ದಿನೇಶ್ಅಮೀನ್ ಮಟ್ಟು ಅವರು ಆಶಯ ಮಾತುಗಳನ್ನಾಡಿದ್ದರು. ಅವರ ಈ ಅರ್ಥಪೂರ್ಣ ಮಾತುಗಳನ್ನು ಇಲ್ಲಿ ದಾಖಲಿಸಲಾಗಿದೆ.)

ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಮ್ಮ ಪೊನ್ನಪ್ಪ ಅವರು ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಅಕಾಡೆಮಿಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಒಂದು ರೀತಿಯಲ್ಲಿ ಅಕಾಡೆಮಿ ಪಾಲಿಗೆ ನಾನೂ ಕೂಡಾ ಅಸ್ಪೃಶ್ಯನಾಗಿದ್ದೆ. ಈ ಕಾರ್ಯಾಗಾರದ ವಿಷಯ ಕೂಡಾ ಅದೇ ಆಗಿದೆ. ಅದೇನೇ ಇರಲಿ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪೊನ್ನಪ್ಪ ಅವರನ್ನು ನಾನು ಅಭಿನಂದಿಸುತ್ತೇನೆ.

ಕೆಲವುವರ್ಷdinesh-aminmattuಗಳ ಹಿಂದೆ ದೆಹಲಿಯಲ್ಲಿದ್ದಾಗ ಕರ್ನಾಟಕದ ಪರಿಚಿತ ಬುದ್ದಿಜೀವಿರಾಜಕಾರಣಿಯೊಬ್ಬರು ಭೇಟಿಯಾಗಿದ್ದರು. ಇತ್ತೀಚೆಗೆ ಮಾಧ್ಯಮದಲ್ಲಿ ಜಾತೀಯತೆ ಜಾಸ್ತಿಯಾಗಿದೆ ಎಂದು ಅವರು ಬಹಳ ವಿಷಾದದಿಂದ ಹೇಳುತ್ತಿದ್ದರು. “ನನಗೆ ಅರ್ಥ ಆಗಲಿಲ್ಲ” ಎಂದೆ. ಅವರು “ಇಲ್ಲ ಈಗೆಲ್ಲಾ ಮಾಧ್ಯಮಗಳಲ್ಲಿ ಜಾತಿಗೊಂದು ಗುಂಪು ಹುಟ್ಟಿಕೊಂಡಿದೆ” ಅಂದರು. ನಾನು ಅವರ ಮುಖವನ್ನು ನೋಡುತ್ತಿದ್ದೆ, ಅವರು ಯಾವುದೋ ದುರುದ್ದೇಶದಿಂದ ಹೇಳುತ್ತಿದ್ದಾರೆಂದು ನನಗನಿಸಲಿಲ್ಲ. ಅವರು ಬಹಳ ಸಹಜವಾಗಿ ಹೇಳಿದ್ದರು. “ಹಿಂದೆ ಮಾಧ್ಯಮದಲ್ಲಿ ಜಾತಿ ಇರಲಿಲ್ಲವಾ?” ಎಂದು ನಾನು ಅವರನ್ನು ಕೇಳಿದೆ.

ಬಹಳಷ್ಟುಮಂದಿಗೆ ಇತ್ತೀಚೆಗೆ ಹೀಗೆ ಅನಿಸಲಿಕ್ಕತ್ತಿದೆ. ಎಲ್ಲದರಲ್ಲಿಯೂ ಜಾತಿ ಬಂದಿದೆ, ಮಾಧ್ಯಮದಲ್ಲಿ ಜಾತಿ ಬಂದಿದೆ. ರಾಜಕೀಯದಲ್ಲಿ ಜಾತಿಬಂದಿದೆ. ಎಲ್ಲಾ ಕಡೆ ಜಾತಿ ಬಂದಿದೆ ಎಂದು ಹೇಳುತ್ತಿರುತ್ತಾರೆ. ಹಾಗಾದರೆ ಜಾತಿ ಇರಲಿಲ್ಲವೇ? ಅದು ಬಹಳ ಮುಖ್ಯವಾದ ಪ್ರಶ್ನೆ. ನಾನು ಆ ರಾಜಕಾರಣಿಯನ್ನು ಮತ್ತೆ ಕೇಳಿದೆ, “ಸುಮ್ಮನೆ ಕಣ್ಮುಚ್ಚಿಕೊಂಡು ನಿಮಗೆ ಪರಿಚಯವಿರುವ ಎಲ್ಲಾ ಪತ್ರಕರ್ತರನ್ನು ನೆನೆಪಿಸಿಕೊಳ್ಳಿ. ಅದರಲ್ಲಿ ಯಾವ ಯಾವ ಜಾತಿಯವರಿದ್ದಾರೆ ಎಂಬುದು ಗೊತ್ತಾಗುತ್ತದೆ” ಅಂದೆ. ಆಗ ಅವರಿಗೆ ನಿಧಾನವಾಗಿ ಅರ್ಥವಾಗುತ್ತಾ ಹೋಯಿತು.

ಈ ದೇಶದ ಪತ್ರಿಕೆಗಳ ಸಂಪಾದಕರ ಜಾತಿಯಾವುದೆಂದು ಲೆಕ್ಕಹಾಕಿ, ಈ ಪತ್ರಿಕೆಗಳಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವ ಪತ್ರಕರ್ತರು ಯಾರು? ಅವರು ಯಾವ ಯಾವ ಜಾತಿಯವರು ಎಂದು ನೋಡುತ್ತಾ ಹೋದರೆ ಈ ದೇಶದ ಮಾಧ್ಯಮದಲ್ಲಿಯೂ ಎಷ್ಟೋ ವರ್ಷಗಳಿಂದ ಜಾತಿಯತೆ ಇತ್ತು ಎಂಬ ವಾಸ್ತವ ಅರ್ಥವಾಗುತ್ತದೆ. ಬಹಳಷ್ಟು ಮಂದಿ ತೀರಾ ಸಹಜವಾಗಿ ಈ ರಾಜ್ಯದಲ್ಲಿ ದೇವರಾಜಅರಸು ಅವರಿಂದ ಜಾತೀಯತೆ ಬಂತು ಎಂದು ಹೇಳ್ತಾರೆ. ಆದರೆ ವಾಸ್ತವ ಸಂಗತಿ ಬೇರೆ ಇದೆ. ಯಾವಾಗ ಹಾವನೂರು ಆಯೋಗದ ವರದಿ ಅನುಷ್ಠಾನಕ್ಕೆ ಬಂತೋ, ಯಾವಾಗ ಅವಕಾಶ ವಂಚಿತರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅವಕಾಶ ಸಿಕ್ಕಿತೊ, ರಾಷ್ಟ್ರ ಮಟ್ಟದಲ್ಲಿ ಮಂಡಲ್ ಆಯೋಗದ ವರದಿ ಯಾವಾಗ ಜಾರಿಗೆ ಬಂತೋ, ಆಗ ಅವಕಾಶ ವಂಚಿತರಿಗೂ ಅವಕಾಶಗಳು ಕೆಲವು ಕ್ಷೇತ್ರಗಳಲ್ಲಿ ಸಿಗುವಂತಾಯಿತು. ಅದರ ನಂತರ ರಾಜಕೀಯವಾಗಿ ಕೂಡಾ ಈ ಅವಕಾಶ ವಂಚಿತರು ಪ್ರಾತಿನಿಧ್ಯ ಪಡೆಯುವಂತಾಯಿತು. ಆಗ ಇದ್ದಕ್ಕಿಂತ ಹಾಗೆ ರಾಜಕೀಯದಲ್ಲಿ, ಮಾಧ್ಯಮದಲ್ಲಿ ಎಲ್ಲಾ ಕಡೆ ಜಾತಿ ಬಂದಿದೆ ಎಂಬ ಅಭಿಪ್ರಾಯ ತೇಲಿಬರಲಾರಂಭಿಸಿತು.

1996ರಲ್ಲಿ ದೆಹಲಿಯಲ್ಲಿ ವಾಷಿಂಗ್ಟನ್ ಪೋಷ್ಟ್ ನ ಬ್ಯೂರೋ ಚೀಫ್ ಆಗಿದ್ದ ಆಫ್ರಿಕನ್ ಮೂಲಕ ಅಮೆರಿಕನ್ ಕೆನ್ನತ್ ಕೂಪರ್ ಅವರು ಮೊದಲ ಬಾರಿಗೆ ಭಾರತದ ಮಾಧ್ಯಮ ಲೋಕದಲ್ಲಿರುವ ಜಾತಿಯತೆ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದರು. ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂದು ಅವರು ಹುಡುಕುತ್ತಾ ಹೋಗುತ್ತಾರೆ. ಕಣ್ಣಿಗೆ ಬಹಳ ಮಂದಿ ಕಾಣೋದೆ ಇಲ್ಲ! ಉನ್ನತ ಹುದ್ದೆಗಳಲ್ಲಿ ಅವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಯಾಕೆ ಹೀಗೆ ಎಂದು ಅವರು ಲೇಖನ ಬರೆಯುತ್ತಾರೆ. ‘ ಭಾರತದ ಮಾಧ್ಯಮಗಳಲ್ಲಿ ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಕೆಳಜಾತಿಗಳ ಪ್ರಾತಿನಿಧ್ಯವೇ ಇಲ್ಲ’ ಎಂದು ಅವರು ಬರೆದಿದ್ದರು.

ಅದರ ನಂತರ ಬಿ.ಎನ್ ಉನಿಯಾಲ್ ಎಂಬ ಪಯೋನಿಯರ್ ಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರು ಈ ಬಗ್ಗೆ ಲೇಖನದ ಮೂಲಕ ಗಮನಸೆಳೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅಧಿಕಾರಕ್ಕೆ ಬಂದ ಮೇಲೆ ಬಿಎಸ್ಪಿ ಮತ್ತು ಪತ್ರಕರ್ತರ ನಡುವೆ ಯಾಕೆ ಸಂಘರ್ಷ ನಡೆಯುತ್ತಿದೆ ಎನ್ನುವುದನ್ನು ವರದಿ ಮಾಡಲು ಮಾಹಿತಿ ಸಂಗ್ರಹಕ್ಕಾಗಿ ದಲಿತ ಪತ್ರಕರ್ತರನ್ನು ಹುಡುಕಲು ಹೊರಡುತ್ತಾರೆ. ಅವರಿಗೆ ಯಾವ ದಲಿತ ಪತ್ರಕರ್ತರು ಸಿಗುವುದಿಲ್ಲ. ಇದರಿಂದ ಕಳವಳಗೊಂಡು 30 ವರ್ಷಗಳನ್ನು ಪತ್ರಿಕಾ ವೃತ್ತಿಯಲ್ಲಿ ಕಳೆದಿದ್ದ ಅವರು ಈ ಅವಧಿಯಲ್ಲಿ ತಾನು ಭೇಟಿ ಮಾಡಿದ ದಲಿತ ಪತ್ರಕರ್ತರು ಯಾರಿದ್ದಾರೆ ಎಂದು ನೆನಪುಮಾಡಿಕೊಳ್ಳಲು ಪ್ರಯತ್ತಿಸುತ್ತಾರೆ. ಅವರಿಗೆ ಒಂದೇ ಒಂದು ಹೆಸರು ನೆನಪಿಗೆ ಬರುವುದಿಲ್ಲ. ಇದನ್ನು ಅವರು ಮೊದಲ ಬಾರಿಗೆ ಪಯೋನಿಯರ್ ಪತ್ರಿಕೆಯಲ್ಲಿ ದಾಖಲಿಸುತ್ತಾರೆ.

ಇದರ ನಂತರ ರಾಬಿನ್ ಜೆಫ್ರಿಎಂಬ ಇನ್ನೊಬ್ಬ ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕ ಪ್ರಾಧ್ಯಾಪಕ ಇದರ ಬಗ್ಗೆ ಅಧ್ಯಯನ ಮಾಡಿ ಲೇಖನ ಬರೆದಿದ್ದಾರೆ. ‘ಹೆಚ್ಚು ಕಡಿಮೆ ಭಾರತದ ಮಾಧ್ಯಮದಲ್ಲಿ ದಲಿತ ವರದಿಗಾರರು ಮತ್ತು ಉಪ ಸಂಪಾಕದರು ಇಲ್ಲವೇ ಇಲ್ಲ. ದಲಿತರ ಮಾಲಿಕತ್ವದ ಪತ್ರಿಕೆಯಾಗಲಿ, ದಲಿತ ಸಂಪಾದಕರಾಗಲಿ ಇಲ್ಲವೇ ಇಲ್ಲ’ ಎಂದು ರಾಬಿನ್ ಜೆಫ್ರಿ ಬರೆದಿದ್ದರು. ‘ಮೀಸಲಾತಿ ವಿರೋಧಿ ಚಳುವಳಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್ ಗಳು ಏಕಪಕ್ಷೀಯವಾಗಿ ವರದಿ ಮಾಡಲು ಪತ್ರಿಕಾ ಕಚೇರಿಯಲ್ಲಿರುವ ಜಾತೀಯತೆ ಕಾರಣ’ ಎಂದು ಸಿದ್ದಾರ್ಥ ವರದರಾಜನ್ ‘ದಿ ಹಿಂದೂ’ ವಿನಲ್ಲಿ ಬರೆದಿದ್ದರು. ಇದರ ನಂತರ 2006ರಲ್ಲಿ ಸಿಎಸ್ ಡಿಎಸ್ ದೆಹಲಿಯಲ್ಲಿ ಮಾಡಿದ ಸಮೀಕ್ಷೆ ಇನ್ನಷ್ಟು ಕಳವಳಕಾರಿ ಅಂಶಗಳನ್ನು ಬಯಲು ಮಾಡಿತ್ತು. ಸಂಸ್ಥೆ ಸಮೀಕ್ಷೆ ನಡೆಸಿದ ದೆಹಲಿಯ 32 ಹಿಂದಿ ಮತ್ತು ಇಂಗ್ಲೀಷ್ ಪತ್ರಿಕೆಗಳ 315 ನೀತಿ ನಿರ್ಧಾರಕ ಹುದ್ದೆಗಳಲ್ಲಿ, ಹೆಚ್ಚುಕಡಿಮೆ ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಶೇಕಡಾ 90 ಮತ್ತು ಟಿವಿ ಚಾನೆಲ್ ಗಳಲ್ಲಿ ಶೇಕಡಾ 79ರಷ್ಟು ಮೇಲ್ಜಾತಿ ಪತ್ರಕರ್ತರೇ ತುಂಬಿದ್ದರು’ ಎಂದು ಆ ಸಮೀಕ್ಷೆ ತಿಳಿಸಿತ್ತು. ಇದು ಇಂದಿನ ಭಾರತದ ಮಾಧ್ಯಮದ ಸ್ಥಿತಿ.

ಮಾಧ್ಯಮಗಳು ಹೀಗೆ ಯಾಕೆ ವರ್ತಿಸುತ್ತಿವೆ ಎಂಬ ಬಗ್ಗೆ ಮಾತನಾಡುವ ಮೊದಲು ದಿನಪತ್ರಿಕಗೆಳ, ಟಿ.ವಿ ಚಾನಲ್ ಗಳ ಮಾಲೀಕರು, ಮುಖ್ಯಸ್ಥರು ಯಾರು, ಅಲ್ಲಿನ ಟಾಪ್ 10 ಹುದ್ದೆಗಳಲ್ಲಿ ಯಾರಿದ್ದಾರೆ ಎಂದು ತಿಳಿದು ಕೊಂಡರೆ ಸಾಕು. ಆಗ ಯಾವ ಸರ್ಕಾರದ ಬಗ್ಗೆ, ಯಾವ ರಾಜಕಾರಣಿ ಬಗ್ಗೆ, ಯಾವ ಅಧಿಕಾರಿ ಬಗ್ಗೆ ಮಾಧ್ಯಮಗಳು ಯಾಕೆ ಹೀಗೆ ವರ್ತಿಸುತ್ತಿವೆ ಎನ್ನುವುದು ಗೊತ್ತಾಗಬಹುದು. ಇದು ಅಪ್ರಿಯವಾದ ಸತ್ಯ.

ಇದಕ್ಕೆಬಹಳಷ್ಟುಕಾರಣಗಳಿವೆ, ಅಧ್ಯಯನಗಳು ಕೂಡಾ ನಡೆದಿವೆ. ಇಂತಹ ಅಧ್ಯಯನ ಕನ್ನಡ ಮಾಧ್ಯಮ ರಂಗದ ಬಗ್ಗೆಯೂ ನಡೆಯಬೇಕಾಗಿದೆ. ದೆಹಲಿಯ ಏಜಾಜ್ ಆಶ್ರಫ್ ಎಂಬ ಪತ್ರಕರ್ತರೊಬ್ಬರು ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿದ್ದರು. ದೆಹಲಿಯಲ್ಲಿ 1965ರಲ್ಲಿಯೇ ಸ್ಥಾಪನೆಗೊಂಡ ಸರ್ಕಾರಿ ಸ್ವಾಮ್ಯದ ಐಐಎಂಸಿ ಎಂಬ ಪತ್ರಿಕೋದ್ಯಮ ಪಾಠ ಮಾಡುವ ಸಂಸ್ಥೆ ಇದೆ. ಅಲ್ಲಿ ಮೀಸಲಾತಿಯೂ ಇರುವುದರಿಂದ ಒಂದಷ್ಟು ದಲಿತರು ಖಂಡಿತ ಅಲ್ಲಿ ಶಿಕ್ಷಣ ಪಡೆದಿರುತ್ತಾರೆ. ಹೀಗಿದ್ದರೂ ಅವರ್ಯಾರೂ ಪತ್ರಿಕಾ ಕಚೇರಿಗಳಲ್ಲಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಏಜಾಜ್ ಆಶ್ರಫ್ ಅವರನ್ನು ಕಾಡುತ್ತದೆ. ಸರ್ಕಾರಿ ಕಾಲೇಜುಗಳು ಮತ್ತು ಯೂನಿರ್ವಸಿಟಿಗಳಲ್ಲಿ ಮೀಸಲಾತಿ ಸೌಲಭ್ಯದ ಮೂಲಕ ದಲಿತರು, ಹಿಂದುಳಿದವರ್ಗಗಳು ಮತ್ತು ಅಲ್ಪಸಂಖ್ಯಾತರು ಅಡ್ಮೀಷನ್ ಪಡೆಯುತ್ತಾರೆ. ಆ ನಂತರ ಅವರಲ್ಲಿ ಎಷ್ಟು ಮಂದಿ ಈ ಮಾಧ್ಯಮ ಸಂಸ್ಥೆಗಳನ್ನು ಸೇರಿಕೊಳ್ಳುತ್ತಾರೆ? ಅವರಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಾರೆ ಎಂಬ ಬಗ್ಗೆ ಅಧ್ಯಯನ ನಡೆಸಿ ಏಜಾಜ್ ಆಶ್ರಫ್ ದಿ.ಹೂಟ್ (thehoot.org) ಎಂಬ ವೆಬ್ ಸೈಟ್ ನಲ್ಲಿ ಬಹಳ ದೀರ್ಘವಾದ ಲೇಖನ ಬರೆದಿದ್ದಾರೆ.

ಅದರಲ್ಲಿ ಸಂತೋಷ್ ವಾಲ್ಮೀಕಿ ಎಂಬ ದಲಿತ ಪತ್ರಕರ್ತನ ವ್ಯಥೆಯ ಕತೆ ಇದೆ. ಇವರು ಹಿಂದೂಸ್ಥಾನ ಟೈಮ್ಸ್ ನ ಲಕ್ನೋ ಬ್ಯೂರೋ ಚೀಫ್ ಆಗಿದ್ದಾರೆ. ಅವರೊಬ್ಬ ಕುಡುಕ ಚಾಲಕನ ಮಗ, ದೆಹಲಿಯ ಬೀದಿಗಳಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು . ಬಹಳ ಕಷ್ಟ ಪಟ್ಟು ಡಿಗ್ರಿ ಮುಗಿಸುತ್ತಾರೆ. ಆಮೇಲೆ ಸ್ನಾತಕೋತ್ತರ ಪದವಿಗಾಗಿ ಅರ್ಜಿ ಹಾಕಿದಾಗ ಇಂಟರ್ ವ್ಯೂನಲ್ಲಿ . ‘ನೀನು ಪ್ರತಿದಿನ ಎಷ್ಟು ಪೇಪರ್ ಗಳನ್ನು ಓದುತ್ತಿ?’ ಎಂದು ಕೇಳಿದ್ದರಂತೆ. ‘ನಾನು ಪ್ರತಿದಿನ ಒಂಭತ್ತು ಪೇಪರ್ ಓದುತ್ತೇನೆ’ ಎಂದು ಅವರು ಉತ್ತರಿಸಿದ್ದರಂತೆ. ಸಂದರ್ಶಕರಿಗೆ ಆಶ್ಚರ್ಯ ಆಗುತ್ತದೆ. ಪತ್ರಿಕೆ ಮಾರುತ್ತಿದ್ದ ನಾನು ಆಸಕ್ತಿಯಿಂದ ಓದುವ ಹವ್ಯಾಸ ಬೆಳೆಸಿಕೊಂಡ ಕಾರಣದಿಂದಾಗಿ ಪತ್ರಕರ್ತನಾಗಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.. ಅದರ ನಂತರ ತಾನು ಹೇಗೆ ತಾನು ಪತ್ರಕರ್ತ ಆದೆ ಎಂದು ಅವರು ಹೇಳುತ್ತಾ ಹೋಗುತ್ತಾರೆ. ಇವತ್ತು ಇಲ್ಲಿ ಸೇರಿರುವ ನೀವು ಇದನ್ನು ತಿಳಿದುಕೊಳ್ಳಬೇಕು.

ದೆಹಲಿಯ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ದಲಿತ ಪತ್ರಕರ್ತನನ್ನು ಏಜಾಜ್ ಆಶ್ರಫ್ ಭೇಟಿ ಮಾಡುತ್ತಾರೆ. ಜಾತಿಯಲ್ಲಿ ಕುರುಬನಾಗಿರುವ ಈ ಪತ್ರಕರ್ತ ತಾನು ಹೇಗೆ ಇಂಗ್ಲೀಷ್ ಕಲಿತೆ ಎನ್ನುವುದನ್ನು ಹೇಳುತ್ತಾನೆ. ಈತ ಇಂಗ್ಲೀಷ್ ಪತ್ರಿಕೆಗಳನ್ನು ಓದಿ ಅದರಲ್ಲಿ ತನಗೆ ಅರ್ಥವಾಗದ ಪದಗಳನ್ನು ನೋಟ್ ಮಾಡಿಕೊಂಡು ಅವಗಳಿಗೆ ಶಬ್ದಕೋಶ ನೋಡಿ ಅರ್ಥ ಬರೆದುಕೊಳ್ಳುತ್ತಿದ್ದನಂತೆ. ಇಂಗ್ಲೀಷ್ ವಾಕ್ಯಗಳನ್ನು ಏಕಾಂತದಲ್ಲಿ ಕೂತು ಜೋರಾಗಿ ಉಚ್ಚರಿಸಿ ಓದುತ್ತಿದ್ದನಂತೆ.ಕೊನೆಗೆ ಬಿಪಿಓ ಸೇರಿಕೊಂಡು ಅಲ್ಲಿ ವಾಯ್ಸ್ ಟ್ರೇನಿಂಗ್ ಪ್ರೋಗ್ರಾಮ್ ಮೂಲಕ ಇಂಗ್ಲೀಷ್ ಉಚ್ಚಾರ ಕಲಿತಿದ್ದನಂತೆ.

ಅಂದರೆ ಈ ಭಾರತದ ವ್ಯವಸ್ಥೆ ಹೇಗಿದೆಯೆಂದರೆ ಕೆಲವರು ಲಿಫ್ಟ್ನಲ್ಲಿ ಸರ್ರನೆ ಮೇಲೇರಿ ಹೋಗಿಬಿಡುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗುತ್ತದೆ. ನೀವೆಲ್ಲಾ ಏನಿಲ್ಲಿ ಸೇರಿದ್ದೀರಿ, ನೀವು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ. ನಿಮಗೆ ಲಿಫ್ಟ್ ಸಿಗೋದಿಲ್ಲ. ಇದು ಭಾರತದ ಇವತ್ತಿನ ಮಾಧ್ಯಮದ ಪರಿಸ್ಥಿತಿ.

ಮಾಧ್ಯಮದಲ್ಲಿಯಾಕೆ ಎಲ್ಲ ಜಾತಿ-ಧರ್ಮಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಯಾರಾದರೂ ಕೇಳಬಹುದು. ನೋಡಿ, ಇತ್ತೀಚೆಗೆ ಮೀಸಲಾತಿಯಾಕೆ ಬೇಕು ಎಂಬ ಬಗ್ಗೆ ದೊಡ್ಡದಾಗಿ ಡಿಬೇಟ್ ನಡೆಯುತ್ತಿದೆ. ಈ ಪ್ರಶ್ನೆಗೆ ಮಾಧ್ಯಮ ರಂಗದಲ್ಲಿ ಉತ್ತರ ಇದೆ. ಎಲ್ಲಿ ಮೀಸಲಾತಿ ಇದೆಯೋ ಅಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಪ್ರಾತಿನಿಧ್ಯ ಇದೆ. ರಾಜಕೀಯದಲ್ಲಿ ದಲಿತರ ಪ್ರಾತಿನಿಧ್ಯ ಇರುವುದಕ್ಕೆ ಮೀಸಲಾತಿ ಕಾರಣ. ಆದರೆ ಮೀಸಲಾತಿ ಇಲ್ಲದ ಮಾಧ್ಯಮದಲ್ಲಿ, ನ್ಯಾಯಾಂಗದಲ್ಲಿ ದಲಿತರ ಪ್ರಾತಿನಿಧ್ಯ ಇಲ್ಲ. ಅಂದರೆ ಮೀಸಲಾತಿ ಕಾನೂನಿನ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ಸಿಕ್ಕಿದೆ ವಿನಃ ಅದು ಅವರ ಅರ್ಹತೆಯನ್ನು ಗುರುತಿಸಿ ಕೊಟ್ಟದ್ದಲ್ಲ.

ಮನುಷ್ಯ ಪರಿಸರದ ಕೂಸು. ದಲಿತರು, ಹಿಂದುಳಿದ ಜಾತಿಯವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಾಡಿನಿಂದ, ಬಡಕುಟುಂಬಗಳಿಂದ ಮತ್ತು ರೈತ ಸಮುದಾಯದಿಮದ ಬಂದವರು. ಅವರಿಗೆ ಹೊರಜಗತ್ತಿನ exposure ಬಹಳ ಕಡಿಮೆ. ನನ್ನ ಮಗಳಿಗೆ ಸಿಕ್ಕ exposure ನನಗೆ ಸಿಕ್ಕಿರಲಿಲ್ಲ. ನಾನು ಕುಗ್ರಾಮದಿಂದ ಬಂದವನು. ದೋಣಿಯಲ್ಲಿ ಹೋಗಿ ಕಾಲೇಜು ಶಿಕ್ಷಣ ಮುಗಿಸಿದವನು. ಮುಂಗಾರು ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದಾಗಲೂ ನಿತ್ಯ ದೋಣಿ ದಾಟಿಕೊಂಡೇ ಮಂಗಳೂರು ಹೋಗುತ್ತಿದ್ದವನು. ನನಗೆ ಲಿಫ್ಟ್ ಸಿಕ್ಕಿರಲಿಲ್ಲ, ಮೆಟ್ಟಿಲು ಹತ್ತಿಕೊಂಡೇ ಬಂದವನು. ನಾನು ಆಗಲೆ ಹೇಳಿದ ಹಾಗೆ ನಾವೆಲ್ಲ ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗಿದೆ. ಪ್ರತಿಭೆ ಹುಟ್ಟಿನಿಂದಲೇ ಬರುವುದಿಲ್ಲ, ಅವಕಾಶ ಸಿಕ್ಕಿದಾಗ ಅದು ಅರಳುತ್ತದೆ ಅಷ್ಟೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದಲ್ಲಿಯೂ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವಕಾಶ ಸಿಗದೆ ಅವರಲ್ಲಿ ಎಷ್ಟೊ ಪ್ರತಿಭೆಗಳು ಮುದುಡಿಹೋಗುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಒಬ್ಬನನ್ನು ಸುಲಭದಲ್ಲಿ ನಾಶಮಾಡಬಹುದು. ಅದು ಬಹಳ ಸುಲಭ, ಏಕೆಂದರೆ ಅವನಿಗೆ ನೀವು ಹೊಡೆಯಬೇಕಾಗಿಲ್ಲ. ಬಡಿಯಬೇಕಾಗಿಲ್ಲ, ದೈಹಿಕವಾಗಿ ಹಲ್ಲೆ ನಡೆಸಬೇಕಾಗಿಲ್ಲ. ಅವನಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟರೆ ಸಾಕು, ಅವು ಕೆಲಸ ಬಿಟ್ಟು ಓಡಿ ಹೋಗುತ್ತಾನೆ. ದೆಹಲಿಯಲ್ಲಿ ಸರ್ವೆ ನಡೆದಾಗ ಬಹಳಷ್ಟು ಮಂದಿ ಪತ್ರಿಕೋದ್ಯಮದ ವ್ಯಾಸಂಗ ಪಡೆದು ವೃತ್ತಿಗೆ ಯಾಕೆ ಬಂದಿಲ್ಲ ಎಂದು ಕೇಳಿದರೆ ಇದೇ ಉತ್ತರ ಕೊಟ್ಟಿದ್ದಾರೆ.

ತಮಿಳುನಾಡಿನ ಒಂದಷ್ಟು ದಲಿತ ಪತ್ರಕರ್ತರು ಕೂಡಾ ಇಂತಹ ಅನುಭವಗಳನ್ನು ದಾಖಲಿಸಿದ್ದಾರೆ. ಅವನ್ನು ಓದಿದರೆ ನಿಮಗೆ ಅರ್ಥವಾಗುತ್ತದೆ. ಪತ್ರಿಕಾ ಕಚೇರಿಗಳಲ್ಲಿ ಒಬ್ಬ ದಲಿತನನ್ನು, ಹಿಂದುಳಿದ ವರ್ಗದವನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ, ಅದರ ವಿವರಗಳಿಗೆ ಹೋಗುವುದಿಲ್ಲ. ಈಗ ಸ್ವಲ್ಪ ಕಡಿಮೆ ಆಗಿದೆ. ಮಾನಸಿವಾಗಿ ಕಿರುಕುಳ ಕೊಟ್ಟಾಗ ಅವನ ತಲೆ ಓಡುವುದಿಲ್ಲ. ಅವನಿಂದ ತಪ್ಪುಗಳಾಗುತ್ತವೆ. ಹಳ್ಳಿಗಾಡಿನ ಜನ, ದಲಿತರು, ಹಿಂದುಳಿದವರ್ಗಗಳ ಜನ ಮಾತನಾಡುವ ಭಾಷೆ ಒರಟಾಗಿರುತ್ತದೆ. ಇವತ್ತು ಟಿ.ವಿ ಚಾನಲ್ ಗಳಲ್ಲಿ ಗ್ರಾಂಥಿಕವಾದ ಮಂಗಳೂರು ಕನ್ನಡ ಮಾತನಾಡುವವರಿಗೆ ಮಾತ್ರ ಹೆಚ್ಚಿನ ಅವಕಾಶ ಸಿಗುತ್ತಿದೆ. ಈ ಕಾರಣದಿಂದಾಗಿಯೇ  ಹೆಚ್ಚಿನ ಆ್ಯಂಕರ್ ಗಳು ಮಂಗಳೂರಿನಿಂದ ಬಂದವರಾಗಿದ್ದಾರೆ. ರಾಯಚೂರು, ಗುಲ್ಬರ್ಗಾ, ಧಾರವಾಡ ಕಡೆಯ ಭಾಷೆ ಅಲ್ಲಿ ನಡೆಯುವುದಿಲ್ಲ. ಅದೇನಿದ್ದರೂ ಸಿನಿಮಾ, ನಾಟಕಗಳಲ್ಲಿ ಹಾಸ್ಯ ಪಾತ್ರಗಳಿಗೆ ಸೀಮಿತ. ಭಾಷೆಗೂ ಐಡೆಂಟಿಟಿ ಇದೆ ಎನ್ನುವುದನ್ನು ತಿಳಿದುಕೊಂಡು ಅವರ ಅನುಭವಕ್ಕೂ ಒಂದು ಬೆಲೆ ಇದೆ ಎಂದು ಗುರುತಿಸಿ ಅವಕಾಶ ನೀಡುವ ಮಾಧ್ಯಮಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

 
ನಾನು ಕೆಲಸ ಮಾಡಿದ ಪ್ರHari Kumarಜಾವಾಣಿಯಲ್ಲಿ ನೀವು ಇಲ್ಲಿ ಸೇರಿರುವ ವರ್ಗದಿಂದ ಬಂದವರು ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿರುವ ಪೊನ್ನಪ್ಪ, ಬಿ.ಕೆ ರವಿ ಎಲ್ಲ ಪ್ರಜಾವಾಣಿ ಯಿಂದ ಬಂದವರು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಇದು ಕೂಡಾ ಬಹಳ ಪ್ರಜ್ಞಾ ಪೂರ್ವಕವಾಗಿ ಮಾಡಿದ ಬದಲಾವಣೆ. ಕೆ.ಎನ್.ಹರಿಕುಮಾರ್ ಅವರು ತಮ್ಮ ಅಜ್ಜನಿಂದ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡ ನಂತರ ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಸೇರಿಸಿಕೊಳ್ಳಬೇಕು ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದರಿಂದ ಬಹಳಷ್ಟು ಜನ ಈ ವರ್ಗಕ್ಕೆ ಸೇರಿದವರಿಗೆ ಅವಕಾಶ ಸಿಗುವಂತಾಯಿತು. ಅವರೆಲ್ಲರೂ ಪ್ರತಿಭಾವಂತ ಪತ್ರಕರ್ತರು. ರಂಜಾನ್ ದರ್ಗಾ ರಿಂದ ಹಿಡಿದು ಇಂದೂಧರ್ ಹೊನ್ನಾಪುರ, ಶಿವಾಜಿ ಗಣೇಶನ್, ಡಿ.ವಿ ರಾಜಶೇಖರ್ ಮೊದಲಾದವರು ಪತ್ರಕರ್ತರಾಗಿದ್ದು ಹೀಗೆ. ಒಬ್ಬ ಸಂಪಾದಕ ಪ್ರಜ್ಞಾ ಪೂರ್ವಕವಾಗಿ ಆ ನಿರ್ಧಾರ ಮಾಡಿದ ಕಾರಣಕ್ಕಾಗಿ ಅವರ ಪ್ರತಿಭೆಗೆ ಅವಕಾಶ ಸಿಕ್ಕಿತು. ಅವರು ಬೆಳೆಯಲು ಸಾಧ್ಯವಾಯಿತು.

ಇದು ನಮ್ಮ ಇವತ್ತಿನ ಮಾಧ್ಯಮ ಕ್ಷೇತ್ರದಲ್ಲಿ ಕಾಣುತ್ತಿಲ್ಲ.

ಇದರ ಪರಿಣಾಮ ಬೇರೆ ಬೇರೆ ರೀತಿಯಲ್ಲಿ ಆಗುತ್ತಿದೆ. ಮುಖ್ಯಮಂತ್ರಿಗಳಿಗೆ ಸರಿಯಾದ ಪ್ರಚಾರ ಸಿಗ್ತಾ ಇಲ್ಲ ಎಂದು ಕೆಲವರು ಬಂದು ನನ್ನ ಹತ್ತಿರ ದು:ಖ ತೋಡಿಕೊಳ್ತಾರೆ. ಪ್ರಚಾರ ಅಂದ್ರೆ ಏನು? ಎಂದು ನನಗೂ ಆಶ್ಚರ್ಯವಾಗುತ್ತದೆ. ಇನ್ನು ಕೆಲವರು ನೀವು ಮೀಡಿಯಾವನ್ನು ಮ್ಯಾನೇಜ್ ಮಾಡಬೇಕು ಎಂದು ಸಲಹೆ ಕೊಡುತ್ತಾರೆ. ಇದನ್ನು ನಮ್ಮ ಮುಖ್ಯಮಂತ್ರಿಗಳು ಒಪ್ಪುತ್ತಿಲ್ಲ. ನನಗೂ ಅದರಲ್ಲಿ ನಂಬಿಕೆ ಇಲ್ಲ.

ಮಾಧ್ಯಮಕ್ಕೊಂದು ಧರ್ಮವಿದೆ. ಆ ಪತ್ರಿಕಾ ಧರ್ಮವನ್ನು ಸಂಪಾದಕ, ಪತ್ರಕರ್ತ ಪಾಲಿಸಿದರೆ ಯಾವುದೇ ಮ್ಯಾನೇಜ್ ಮೆಂಟ್ ಬೇಕಿಲ್ಲ. ಯಾವ ಒತ್ತಡವೂ ಬೇಕಿಲ್ಲ. ಯಾವ ಆಮಿಷಗಳು ಬೇಕಿಲ್ಲ. ಪತ್ರಿಕೆಗಳು, ಪತ್ರಕರ್ತರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಸಾಕು. ನಮ್ಮ ಮುಖ್ಯಮಂತ್ರಿಗಳು ಇದನ್ನೆ ಹೇಳಿದ್ದಾರೆ. ಅವರ ವಿರುದ್ದ ಯಾವುದೇ ವರದಿ ಬಂದರೂ ಇಲ್ಲಿಯವರೆಗೂ ಅವರು ಯಾವ ಮಾಧ್ಯಮ ಪ್ರತಿನಿಧಿಗೂ ಪೋನ್ ಮಾಡಿ ಯಾಕೆ ಇದನ್ನು ಬರೆದಿದ್ದೀಯಾ ಅಂತ ಕೇಳಿಲ್ಲ. ನನ್ನ ಹತ್ತಿರವೂ ‘ನೀನು ಇದನ್ನು ಕೇಳಬೇಕು’ ಎಂದು ಹೇಳಿಲ್ಲ.

ಸರ್ಕಾರದ ಪರವಾಗಿ ಇಲ್ಲಿ ಪ್ರಚಾರಕ್ಕೆ ನಾನು ಬಂದಿಲ್ಲ. ಉದಾಹರಣೆಗಾಗಿ ಹೇಳುತ್ತಿದ್ದೇನೆ. ಅನ್ನಭಾಗ್ಯ ಎಂಬ ಯೋಜನೆಯಿಂದ ರಾಜ್ಯದ ಸುಮಾರು 1 ಕೋಟಿ ಕುಟುಂಬಗಳಿಗೆ ಲಾಭವಾಗುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಅಂತ ತಿಳಿದುಕೊಂಡರೂ 4 ಕೋಟಿ ಜನರಿಗೆ ಇದರ ಪ್ರಯೋಜನ ತಲುಪುತ್ತಿದೆ. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 4 ಕೋಟಿ ಜನ ಇದರ ಫಲಾನುಭವಿಗಳು. ಇದನ್ನು ಈಗ ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಲಾಗಿದೆ. ಹೀಗಿದ್ದರೂ ಕೂಡ ಮಾಧ್ಯಮ ದಲ್ಲಿ ಅನ್ನ ಭಾಗ್ಯ ದಲ್ಲಿ ಕಲ್ಲು ಹುಡುಕಾಟದ ಪ್ರವೃತ್ತಿ ಇವತ್ತಿಗೂ ನಿಂತಿಲ್ಲ. ಯೋಜನೆಯ ಅನುಷ್ಟಾನದಲ್ಲಿ ಒಂದಷ್ಟು ಲೋಪ-ದೋಷಗಳು ಖಂಡಿತ ಇರಬಹುದು. ಕಳ್ಳ ಸಂತೆ, ದುರುಪಯೋಗ ಇತ್ಯಾದಿ ಆಗುತ್ತಿರಬಹುದು. ಲಾಭದ ಲೆಕ್ಕ ಹಾಕಿದರೆ ದೋಷಗಳು ನಗಣ್ಯವಾದುದು. ಹೀಗಿದ್ದರೂ ಯಾಕೆ ನೆಗೆಟಿವ್ ಪ್ರಚಾರ? ರಾಜ್ಯದ ಜನಸಂಖ್ಯೆಯಲ್ಲಿ ಶೇ. 80 ರಷ್ಟು ಜನ ದಲಿತರು, ಹಿಂದುಳಿದವರ್ಗಕ್ಕೆ ಸೇರಿದವರು ಮತ್ತು ಅಲ್ಪಸಂಖ್ಯಾತರು. ಅವರೆಲ್ಲರೂ ಅನ್ನಭಾಗ್ಯದ ಫಲಾನುಭವಿಗಳು. ಈ ಮಾಧ್ಯಮಗಳು ಅವರ ಅಭಿಪ್ರಾಯಗಳನ್ನು ಭಾವನೆಗಳನ್ನು ರಿಪ್ಲೆಕ್ಟ್ ಮಾಡುತ್ತಿದೆಯೇ?. ಏಕೆಂದರೆ ಈ ಫಲಾನುಭವಿಗಳು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದಿಲ್ಲ. ಅನ್ನ ಭಾಗ್ಯದಿಂದ ನಮಗೆ ಲಾಭವಾಗಿದೆ ಎಂದು ಬೀದಿಗೆ ಬಂದು ಕೂಗಿ ಹೇಳುವುದಿಲ್ಲ. ಟಿ.ವಿ ಚಾನಲ್ ಗಳ ಸ್ಟುಡಿಯೋಗಳಲ್ಲಿ ಬಂದು ಚರ್ಚೆಯಲ್ಲಿ ಕೂರುವುದಿಲ್ಲ. ಅವರಿಗೆ ಧ್ವನಿ ಇಲ್ಲ. ದನಿ ಇಲ್ಲದವರಿಗೆ ಮಾಧ್ಯಮ ದನಿ ಅಗಬೇಕಲ್ಲವೇ?.

ಶಾದಿ ಭಾಗ್ಯಬಗ್ಗೆ ದೊಡ್ಡ ವಿವಾದ ಆಯ್ತು. ಯಾಕೆ ಆಗಬೇಕು? ಯಾರು ಅದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಬಜೆಟ್ ನಲ್ಲಿ ಒಂದಿಷ್ಟು ದುಡ್ಡು ಕೊಟ್ಟಿರುತ್ತಾರೆ. ಆ ದುಡ್ಡಿನಿಂದ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಅವರು ಏನಾದ್ರೂ ಮಾಡ್ಲಿ, ಶಾದಿ ಭಾಗ್ಯನಾದ್ರೂ ಮಾಡ್ಲಿ, ಇನ್ನೂಂದು ಮಾಡ್ಲಿ, ಅದು ಅವರ ಬಜೆಟ್. 1000 ಕೋಟಿ ರೂಪಾಯಿ ಏನು ಕೊಟ್ಟಿದೆ ಅದು ಅವರ ದುಡ್ಡು. ಆದರೆ ಬರೀ ಮುಸ್ಲಿಮರಿಗೆ ಯಾಕೆ ಕೊಟ್ಟಿದ್ದೀರಿ? ಉಳಿದವರಿಗೆ ಯಾಕೆ ಕೊಟ್ಟಿಲ್ಲ ಅಂದ್ರೆ, ಉಳಿದವರಿಗೆ ಬೇರೆ ಸೌಲಭ್ಯಗಳಿವೆ ಅದನ್ನು ಅವರು ತಗೋಳ್ತಾರೆ. ಈ ರೀತಿ ಹೇಳುವಂತಹ ಸಮಚಿತ್ತದ ಬರವಣಿಗೆ ನಮಗೆ ಕಾಣುತ್ತಿಲ್ಲ.

ಇನ್ನು ಮೂಢನಂಬಿಕೆ ನಿಷೇಧ ಮಸೂದೆ. ಇಲ್ಲಿ ಸೇರಿರುವ ನಮಗೆಲ್ಲರಿಗೂ ಸಂಭಂಧಿಸಿದ್ದು ಮೂಢ ನಂಬಿಕೆ ನಿಷೇಧ ಕರಡು ಮಸೂದೆ ಬಗ್ಗೆ ಇಷ್ಟೆಲ್ಲಾ ವರದಿಗಳು ಬಂತಲ್ಲಾ, ಆ ರೀತಿ ವರದಿ ಮಾಡಿದವರಲ್ಲಿ ಕೆಲವರನ್ನು ಮಸೂದೆ ಪೂರ್ಣವಾಗಿ ಓದಿದ್ದೀರಾ ಎಂದು ಕೇಳೀದ್ದೇನೆ. ಬಹಳ ಮಂದಿ ಧೈರ್ಯದಿಂದ ಓದಿದ್ದೇನೆ ಎಂದು ಉತ್ತರಿಸಿಲ್ಲ. ಹೆಚ್ಚಿನವರು ಮಸೂದೆಯಲ್ಲಿನ ಪ್ರಿಯಾಂಬಲ್ ಓದಿ ಭಾವುಕರಾಗಿ ಅತಿರೇಕದ ವರದಿಗಳನ್ನು ಮಾಡಿದ್ದರು. ಮೂಲ ಮಸೂದೆಯಲ್ಲಿ ಅಂತಹ ಯಾವುದೇ ವಿಷಯಗಳಿರಲಿಲ್ಲ. ಆದರೆ ಆ ರೀತಿಯ ಪ್ರಚಾರ, ಒತ್ತಡಗಳಿಂದ ಸರ್ಕಾರವೇ ಹಿಂದೆ ಸರಿಯಬೇಕಾಯಿತು. ಇಂದು ಮೂಢನಂಬಿಕೆ ಕಾಯ್ದೆ ಯಾರಿಗೆ ಬೇಕಾಗಿದೆಯೆಂದರೆ ಅಶಿಕ್ಷಿತರಿಗೆ, ಬಡವರಿಗೆ ಬೇಕು. ದಲಿತ, ಹಿಂದುಳಿದವರಿಗೆ , ಅಲ್ಪಸಂಖ್ಯಾತರಿಗೆ ಬೇಕು. ಏಕೆಂದರೆ ಶೋಷಣೆಗೀಡಾಗುತ್ತಿರುವವರು ಇದೇ ಸಮುದಾಯದವರು. ಇದೇ ಸಮುದಾಯದ ದನಿ ಮಾಧ್ಯಮಗಳಲ್ಲಿ ಕೇಳಿಬಂದಿದ್ದರೆ ಇವತ್ತು ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಬರುತ್ತಿತ್ತು. ಬಹುಶಃ ಎಂ.ಎಂ ಕಲಬುರ್ಗಿ ಅವರ ಹತ್ಯೆಯೂ ಆಗುತ್ತಿರಲಿಲ್ಲ.

ನಮ್ಮ ಮಾಧ್ಯಮಗಳು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭಿವೃದ್ದಿ ಬಗ್ಗೆ ಮಾತನಾಡುವಾಗ ಈ ಮಾಧ್ಯಮಗಳಲ್ಲಿರುವ ತಾರತಮ್ಯ, ಪೂರ್ವಗ್ರಹಗಳನ್ನು ಮರೆತು ಮಾತನಾಡುವಂತಿಲ್ಲ. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಜಾತೀಯತೆ ಕಡಿಮೆಯಾಗುತ್ತಿದೆ. ಆದರೆ ಭಾಷಾ ಪತ್ರಿಕೋದ್ಯಮದಲ್ಲಿ, ಕನ್ನಡ ,ಹಿಂದಿ ಗುಜರಾತಿ ಮೊದಲಾದ ಭಾಷೆಗಳ ಪತ್ರಿಕೆಗಳಲ್ಲಿ ಇನ್ನೂ ಕಡಿಮೆಯಾಗಿಲ್ಲ. ಅಲ್ಲಿ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಳಿದರೆ ತಾವು ಅನುಭವಿಸುತ್ತಿರುವ ಅವಮಾನ, ಕಿರುಕುಳಗಳ ಕತೆ ಹೇಳಬಹುದು. ಪ್ರತಿಭೆ ಒಂದಿದ್ದರೆ ಸಾಲದು, ವೃತ್ತಿಯಲ್ಲಿ ಎದುರಾಗುವ ಅನ್ಯಾಯ, ಅವಮಾನ, ಪ್ರತಿಕೂಲಗಳನ್ನು ಎದುರಿಸಲೂ ಅವನು ರೆಡಿಯಾಗಬೇಕು. ಮತ್ತೆ ಮತ್ತೆ ನಾನು ಹೇಳುತ್ತೇನೆ ಪ್ರಜಾವಾಣಿಯಲ್ಲಿ ನಾನುprajavani ವಿವೇಕಾನಂದ ಅವರ ಬಗ್ಗೆ ಅಂಕಣ ಬರೆದೆ. ನಾನು ಸುಳ್ಳು ಬರೆದಿಲ್ಲ, ಅವರಿಗೆ ಅವಮಾನ ಮಾಡಿಲ್ಲ, ವಿವೇಕಾನಂದರು ಮಾಂಸ ತಿನ್ನುತಿದ್ದರು ಎನ್ನುವುದನ್ನು ನಾನು ಈಗಲೂ ಹೇಳುತ್ತೇನೆ, ಅದನ್ನು ವಿರೋಧಿಸುವವರು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಕರೆದರೆ ನಾನು ಸಿದ್ದ. ವಿವೇಕಾನಂದರು ಮಾಂಸಹಾರಿಗಳಲ್ಲ ಎಂದು ಅವರು ಸಾಬೀತು ಮಾಡಿದರೆ ನಾನು ಬರೆಯುವ ಹವ್ಯಾಸದಿಂದಲೇ ನಿವೃತ್ತಿ ಆಗುತ್ತೇನೆ. ಸತ್ಯವನ್ನೇ ಹೇಳಿದ್ದೇನೆ. ಆದರೆ ಅದರ ಬಗ್ಗೆ ಅಪಪ್ರಚಾರ ವ್ಯಾಪಕವಾಗಿ ನಡೆಯಿತು.ನಮ್ಮ ಪತ್ರಿಕೆಗೆ,ನನಗೆ ಬೆದರಿಕೆ ಎದುರಾಯಿತು. ನಾನು ಇದರ ಬಗ್ಗ ಉಲ್ಲೇಖ ಮಾಡಲು ಕಾರಣ ಇದೆ. ಅಂತಹದ್ದೊಂದು ಅಂಕಣ ಬರೆದು ನಾನು ಪಾರಾಗಲೂ ಕಾರಣ ಆಗ ನನ್ನ ಸಂಪಾದಕರಾಗಿದ್ದ ಕೆ.ಎನ್ ಶಾಂತಕುಮಾರ್. ಅವರು ನನ್ನ ಪರವಾಗಿ ಕಲ್ಲು ಬಂಡೆಯಂತೆ ನಿಂತಿದ್ದರು. ಆತ ತಪ್ಪು ಬರೆದಿಲ್ಲ, ಅದಕ್ಕಾಗಿ ಅವನಾಗಲಿ, ನಾನಾಗಲಿ ಕ್ಷಮೆ ಕೇಳೋದಿಲ್ಲ ಎಂದು ಅವರು ಗಟ್ಟಿಯಾಗಿ ನಿಂತುಬಿಟ್ಟರು.ಈ ರೀತಿಯ ಸಂಪಾದಕರಿದ್ದರೆ ಮಾತ್ರ ಸಾಮಾಜಿಕ ಕಳಕಳಿಯ ಪತ್ರಿಕೋದ್ಯಮ ನಡೆಸಿಕೊಂಡು ಹೋಗಲು ಸಾಧ್ಯ.

ಮಾಧ್ಯಮ ರಂಗದಲ್ಲಿರುವ ಪೂರ್ವಗ್ರಹಕ್ಕೆ ಇತ್ತೀಚಿನ ಇಬ್ಬರು ಸ್ವಾಮಿಗಳ ಉದಾಹರಣೆ ಸಾಕು. ರಾಘವೇಶ್ವರ ಸಾಮೀಜಿಯ ಪ್ರಕರಣವನ್ನು ಬಹಳಷ್ಟು ಮಂದಿ ನಿತ್ಯಾನಂದ ಸ್ವಾಮಿ ಪ್ರಕರಣಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನಿತ್ಯಾನಂದ ಸ್ವಾಮೀಜಿ ಒಬ್ಬ ಹಿಂದುಳಿದ ಜಾತಿಯವ, ರಾಘವೇಶ್ವರ ಸ್ವಾಮೀಜಿ ಬ್ರಾಹ್ಮಣ. ಈ ಹೋಲಿಕೆ ತಪ್ಪು ಅಂತ ನನಗೆ ಅನಿಸುವುದಿಲ್ಲ. ನಿತ್ಯಾನಂದ ಸ್ವಾಮಿಗೆ ಮಾಧ್ಯಮದಲ್ಲಿ ಸಿಕ್ಕ ಟ್ರೀಟ್ ಮೆಂಟ್ ರಾಘವೇಶ್ವರ ಸ್ವಾಮೀಜಿಗೆ ಸಿಗಲಿಲ್ಲ. ನನಗೆ ಒಬ್ಬ ಪತ್ರಕರ್ತ ಹೇಳುತ್ತಿದ್ದ ನಿತ್ಯಾನಂದನ ಆಶ್ರಮದ ಕಾಂಪೌಂಡ್ ಹೊರಗಡೆ ಕಾಂಡೂಮ್ ಗಳನ್ನು ಹಾಕಿ ಅವರೇ ಅದನ್ನು ಶೂಟ್ ಮಾಡಿ ನೋಡಿ ನಿತ್ಯಾನಂದಸ್ವಾಮೀಜಿ ಕಾಂಪೌಂಡ್ ಹೊರಗಡೆ ಕಾಂಡೊಂಮ್ ಸಿಕ್ಕಿದೆ ಅವರು ವ್ಯಭಿಚಾರಿ ಎಂದು ತೋರಿಸಿದ್ದರಂತೆ.
ನೀವು ಖೈರ್ಲಾಂಜಿ ಬಗ್ಗೆ ಕೇಳಿದ್ದೀರಿ. ದಲಿತರ ಇಡೀ ಕುಟುಂಬವನ್ನೆ ಹತ್ಯೆ ಮಾಡಲಾಯಿತು. ಮೊದಲು ಅಲ್ಲಿಯ ಎಲ್ಲಾ ಪತ್ರಿಕೆಗಳು ಇದೊಂದು ಅನೈತಿಕ ಸಂಬಂಧ ಎನ್ನುವ ರೀತಿ ವರದಿ ಮಾಡಿವೆ. ನಂತರ ಬೇರೆ ಕಡೆಗಳಿಂದ ಹೋದ ಪತ್ರಿಕಾ ವರದಿಗಾರರು, ಕೆಲವು ದಲಿತ್ ಆಕ್ಟಿವಿಟಿಸ್ ಗಳು, ಅದರಲ್ಲೂ ಇಂಗ್ಲೀಷ್ ಪತ್ರಿಕೆಗಳು ಗಮನ ಸೆಳೆದಾಗ ನಿಜಸಂಗತಿ ಬಯಲಿಗೆ ಬಂತು. ನೀವು ಕಂಬಾಲಪಲ್ಲಿ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ದಲಿತರ ಮೇಲೆ ನಡೆದ ಎಲ್ಲಾ ದೌರ್ಜನ್ಯಗಳನ್ನು ನೋಡಿ, ಕೋಮುಗಲಭೆಗಳನ್ನು ನೋಡಿ ನಮಗೆ ಮಾಧ್ಯಮಗಳಲ್ಲಿರುವ ಜಾತಿ ಪೂರ್ವಗ್ರಹ ಗೊತ್ತಾಗುತ್ತದೆ.

ನನಗೆ ವಿಶ್ವದ ಬಹುದೊಡ್ಡ ಬುದ್ದಿಜೀವಿ ನೋಮ್ ಚಾಮ್ ಸ್ಕಿ ಹೇಳಿರುವ ‘ಸಮ್ಮತಿಯ ಉತ್ಪಾದನೆ’ (Manufacturing conseChomskynt) ನೆನಪಾಗುತ್ತದೆ. ಅಂದರೆ ಅಭಿಪ್ರಾಯಗಳನ್ನು ಉತ್ಪಾದನೆ ಮಾಡೋದು. ಉದಾಹರಣೆಗೆ ದಲಿತರ ಮೇಲೆ ಮೇಲ್ಜಾತಿಯ ಜನ ಹಲ್ಲೆ ನಡೆಸಿದಾಗ ನೀವು ಅದನ್ನು ದಲಿತರ ಮೇಲಿನ ಹಲ್ಲೆ ಅಂತಲೂ ರಿಪೋರ್ಟ್ ಮಾಡಬಹುದು, ಇಲ್ಲವೆ ಎರಡು ಗುಂಪುಗಳ ನಡುವಿನ ಘರ್ಷಣೆ ಅಂತಲೂ ರಿಪೋರ್ಟ್ ಮಾಡಬಹುದು. ಆದರೆ ಬಹಳ ಸಾರಿ ವೈಯುಕ್ತಿಕ ಕಾರಣಕ್ಕಾಗಿ ಹಲ್ಲೆ ಯಾಗಿದೆ, ಅನೈತಿಕ ಸಂಬಂಧದ ಕಾರಣಕ್ಕಾಗಿ ಹೆಣ್ಣುಮಗಳನ್ನು ಸಾಯಿಸಿದ್ದಾರೆ ಎಂದೆಲ್ಲ ವರದಿಯಾಗುತ್ತದೆ. ರೈತರ ಪ್ರತಿಭಟನೆ, ಸತ್ಯಾಗ್ರಹಗಳನ್ನು ದೊಂಬಿ ಎಂದು ಬರೆಯುವುದೂ ಉಂಟು.

 

ಕೋಮುಗಲಭೆಗಳ ವರದಿಗಳಲ್ಲಿಯೂ ಇಂತಹ ಲೋಪಗಳನ್ನು ಕಾಣಬಹುದು. ಕೋಮುಗಲಭೆಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರನ್ನು ವಿಲನ್ ಗಳನ್ನಾಗಿ ಮಾಡಲಾಗುತ್ತದೆ. ಮುಸ್ಲಿಮರು ಪ್ರಚೋದಿಸಿದರು, ಅದಕ್ಕಾಗಿ ಹಿಂದೂಗಳು ಸೇಡು ತೀರಿಸಿಕೊಂಡರು ಎನ್ನುವ ವರದಿಗಳು ಸಾಮಾನ್ಯ. ದೆಹಲಿಯ ಪಕ್ಕದಲ್ಲಿಯೇ ಇರುವ ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ವ್ಯಕ್ತಿಯ ಮನೆಯಲ್ಲಿ ಭೀಫ್ ಇದೆ ಎಂಬ ಕಾರಣಕ್ಕಾಗಿ ಬೆಂಕಿ ಹಚ್ಚಿ ಕೊಂದುಬಿಟ್ಟರು. ಅಲ್ಲಿ ಬೀಫ್ ಇರಲಿಲ್ಲ ಎಂದು ತನಿಖೆ ಹೇಳುತ್ತಿದೆ. ಅರ್ನಾಬ್ ಗೋಸ್ವಾಮಿ ಇದರ ಬಗ್ಗೆ ಎಷ್ಟು ಷೋ ಮಾಡಿದರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಕಂಬಳಿ ತಗೋಂಡ್ರು, ಚಾಪೆ ತಗೋಂಡ್ರು ಅಂತ 1 ಗಂಟೆ ಬೇಕಾದರೆ ಅವರು ಚರ್ಚೆ ಮಾಡ್ತಾರೆ. ಇಂತಹ ಉದಾಹರಣೆಗಳನ್ನು ಬಹಳಷ್ಟು ಕೊಡುತ್ತಾ ಹೋಗಬಹುದು. ಆದರೆ ಇದಕ್ಕೆ ಪರಿಹಾರವೇನು? ಸುಲಭದ ಪರಿಹಾರ ನೀವೆಲ್ಲರೂ ಲಿಫ್ಟ್ ಗಾಗಿ ಕಾಯದೆ ಮೆಟ್ಟಿಲು ಹತ್ತಿಕೊಂಡು ಹೋಗಲಿಕ್ಕೆ ರೆಡಿಯಾಗಬೇಕು.
ನನ್ನ ತಾಯಿ ಅನಕ್ಷರಸ್ಥೆ, ನನ್ನ ತಂದೆ ಬ್ಯಾಂಕ್ ಜವಾನರಾಗಿದ್ದರು. ಬಿ.ಕಾಂ ಓದಿದ್ದೇ ನಾನು ಬ್ಯಾಂಕ್ ಗೆ ಸೇರಲಿಕ್ಕೆ. ಆದರೆ ಬ್ಯಾಂಕ್ ಸೇರಬೇಕೆಂದು ಅನಿಸಲಿಲ್ಲ. ಪತ್ರಿಕೋದ್ಯಮದ ಹಾದಿ ಸುಗಮವಾಗಿ ಇರಲಿಲ್ಲ. ಮುಂಗಾರು ಪತ್ರಿಕೆ ಯಲ್ಲಿ ತಿಂಗಳ ಸಂಬಳವನ್ನು ನಾಲ್ಕು ಕಂತುಗಳಲ್ಲಿ ತೆಗೆದುಕೊಂಡು, ಆರೋಗ್ಯ ಕೆಡಿಸಿಕೊಂಡು ಬಹಳ ಕಷ್ಟ ಪಟ್ಟು ಇಲ್ಲಿಯ ವರೆಗೆ ಬಂದಿದ್ದೇನೆ. ನನಗೆ ಈ ವೃತ್ತಿಯಲ್ಲಿ ಮುಂದುವರೆಯಬೇಕು ಎಂಬ ಛಲ ಇದ್ದ ಕಾರಣಕ್ಕೆ ಇದು ಸಾಧ್ಯವಾಗಿದೆ. ಪತ್ರಕರ್ತರು ಟ್ರಾನ್ಸ್ ಫರ್ ಎಂದರೆ ಕಂಗಾಲಾಗಿ ಬಿಡುತ್ತಾರೆ. ಎಲ್ಲರಿಗೂ ಬೆಂಗಳೂರು ಬೇಕು, ಜಿಲ್ಲೆಗಳಲ್ಲಿ ಕೆಲಸ ಮಾಡುವುದು ಬೇಡ. ಬೆಂಗಳೂರಿನಲ್ಲಿದ್ದ ನನ್ನನ್ನು ಟ್ರಾನ್ಸ್ ಫರ್ ಮಾಡುತ್ತೇನೆ ಎಂದು ಹೇಳಿದಾಗ ‘ಎಲ್ಲಾದ್ರೂ ಮಾಡಿ, ಮರುಭೂಮಿಗಾದ್ರೂ ಮಾಡಿ ಹೋಗ್ತೀನಿ’ ಎಂದು ಹೇಳಿದ್ದೆ. ಮರುಭೂಮಿಯಲ್ಲಿ ಒಳ್ಳೆಯ ವರದಿಗಳನ್ನು ಮಾಡಲು ಅವಕಾಶಗಳಿರುತ್ತವೆ. ಇದರಿಂದಾಗಿಯೇ ನನಗೆ ದೆಹಲಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಮಾನಸಿಕವಾಗಿ ಇಂತಹದ್ದೊಂದು ಸಿದ್ಧತೆ ಮಾಡಿಕೊಳ್ಳದಿದ್ದರೆ, ಅಧ್ಯಯನ ಮಾಡದಿದ್ದರೆ, ಸಮಾಜವನ್ನು ಎದುರಿಸುವುದನ್ನು ಕಲಿಯದಿದ್ದರೆ ಪತ್ರಕರ್ತರಾಗಲು ಕಷ್ಟವಾಗಬಹುದು. ನಿಮ್ಮಲ್ಲಿ ಮಹತ್ವಾಕಾಂಕ್ಷೆ ಇರಬೇಕು, ಜತೆಗೆ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನವನ್ನೂ ಮಾಡಬೇಕು.

ಈ ನಿಟ್ಟಿನಲ್ಲಿ ಸರ್ಕಾರಮತ್ತುವೃತ್ತಿಸಂಬಂಧಿಸಂಸ್ಥೆಗಳುಕೂಡಾ ಒಂದಿಷ್ಟು ಕೆಲಸ ಮಾಡಬೇಕಾಗುತ್ತದೆ. ನಾನು ಒಂದು ಉದಾಹರಣೆ ಕೊ746px-ChicagoDefender.svgಟ್ಟು ಮಾತು ಮುಗಿಸುತ್ತೇನೆ. 1978 ರಲ್ಲಿ ಅಮೆರಿಕನ್ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ (ASNE) ಅಲ್ಲಿನ ಮಾಧ್ಯಮಗಳಲ್ಲಿ ಕಪ್ಪು ಜನಾಂಗದವರ ಪ್ರಾತಿನಿಧ್ಯ ಎಷ್ಟಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿತ್ತು. ಅಲ್ಲಿನ ಜನಸಂಖ್ಯೆಯಲ್ಲಿ ಕರಿಯರು ಶೇ.36 ರಷ್ಟಿದ್ದಾರೆ. ಆದರೆ ಮಾಧ್ಯಮದಲ್ಲಿ ಅವರು ಪ್ರಾತಿನಿಧ್ಯ ಕೇವಲ ಶೇ 4 ರಷ್ಟು ಮಾತ್ರ ಎಂದು ಸಮೀಕ್ಷೆಯಿಂದ ತಿಳಿದುಬಂದಿತ್ತು. 2000 ನೇ ವರ್ಷದಲ್ಲಿ ಅಮೆರಿಕದ ಮಾಧ್ಯಮ ಕ್ಷೇತ್ರದಲ್ಲಿ ಕರಿಯರ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಇರುವಂತೆ ಮಾಡಬೇಕೆಂದು ASNE ನಿರ್ಧಾರಕ್ಕೆ ಬರುತ್ತದೆ. ಅಲ್ಲಿರುವ ಒಂದು ಸಾವಿರಕ್ಕೂ ಹೆಚ್ಚಿನ ಸರ್ಕ್ಯೂಲೇಶನ್ ಇರುವ 1446 ಪತ್ರಿಕೆಗಳಲ್ಲಿ 950 ಪತ್ರಿಕೆಗಳು ಅಸೋಸಿಯೇಷನ್ನಿನ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸುತ್ತವೆ. ಅವರೇನೂ ಮೀಸಲಾತಿ ಕೊಡುವುದಿಲ್ಲ. ಅವರಿಗಾಗಿ ಉದ್ಯೋಗ ಮೇಳ ನಡೆಸುತ್ತಾರೆ, ತರಬೇತಿಕೊಡುತ್ತಾರೆ, ವಿದ್ಯಾರ್ಥಿ ವೇತನಗಳನ್ನು ಸ್ಥಾಪಿಸುತ್ತಾರೆ.ಇದನ್ನು ಮಾಡ್ತಾ, ಮಾಡ್ತಾ 2000 ಇಸವಿಗೆ ಅಲ್ಲಿಯ ಕರಿಯರ ಪ್ರಾತಿನಿಧ್ಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚದೆ ಇದ್ದರೂ ಅದು ಶೇ.13ಕ್ಕೆ ತಲುಪಿತ್ತು. ಇವತ್ತು ಅಮೇರಿಕಾದಲ್ಲಿ ದಲಿತರದ್ದೇ ಆದ ‘ಎಬೋನಿ’ ‘ಚಿಕಾಗೋ ಡಿಫೆಂಡರ್’ ಮೊದಲಾದ ಪತ್ರಿಕೆಗಳಿವೆ.

ಚೆನ್ನೈ ನಲ್ಲಿರುವ ‘ಏಷ್ಯನ್ಸ್ಕೂಲ್ಆಫ್ಜರ್ನಲಿಸಂ’ ದಲಿತರಿಗೆ ಸ್ಕಾಲರ್ಶಿಪ್ ಕೊಡ್ತಾರೆ. ಅದಕ್ಕೆ ಬೇಕಾದ ಅಭ್ಯರ್ಥಿಗಳೇ ಸಿಕ್ತಾ ಇಲ್ಲವಂತೆ. ನಮ್ಮಲ್ಲೂ ಕೂಡ ಕೊರತೆಗಳಿವೆ. ಆ ಮಟ್ಟದ ಎಂಟ್ರೆನ್ಸ್ ಪರೀಕ್ಷೆ ಎದುರಿಸಲು ಒಂದಿಷ್ಟು ತಯಾರಿಗಳು ಬೇಕಾಗುತ್ತವೆ. ದಲಿತ ಅಭ್ಯರ್ಥಿಗಳು ಸಿಗದೆ ಇದ್ದಾಗ ಆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿತ್ತು. ಇತ್ತೀಚೆಗೆ ಆ ಸಂಸ್ಥೆಯ ಸ್ಕಾಲರ್ ಶಿಫ್ ಪಡೆದು ಹಲವಾರು ದಲಿತರು ಜರ್ನಲಿಸ್ಟ್ ಗಳಾಗಿದ್ದಾರೆ. ಇಂತಹ ಪ್ರಯತ್ನ ಎಲ್ಲಾ ಕಡೆಗಳಿಂದಲೂ ನಡೆಯಬೇಕು. ಇದಕ್ಕೆ ಅಮೇರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಮಾಡಿದ ಕೆಲಸವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಡಬೇಕು, ಪತ್ರಕರ್ತರ ಸಂಘಗಳು ಮಾಡ ಬೇಕು, ಪತ್ರಿಕೆಗಳೂ ಮಾಡಬೇಕು.

ನಮ್ಮ ಪತ್ರಕರ್ತರ ಸಂಘಟನೆಗಳುಲಕ್ಷಾಂತರ ರೂಪಾಯಿಕಲೆಕ್ಟ್ಮಾಡಿ, ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಒಳ್ಳೆಯ ಊಟ ಹಾಕುವುದರಿಂದ ಒಳ್ಳೆಯ ಪತ್ರಕರ್ತರನ್ನು ರೂಪಿಸಲು ಸಾಧ್ಯವಿಲ್ಲ. ನೀವು ಬಸ್ ಪಾಸ್ ತೆಗೊಳ್ಳಿ, ಸೈಟ್ ತಗೊಳ್ಳಿ, ಪರವಾಗಿಲ್ಲ, ಒಬ್ಬರಿಗೆ ಒಂದು ಸೈಟ್ ಇರಬೇಕು. ನಾನು ಅದರ ಪರವಾಗಿ ಇದೀನಿ, ಆದರೆ ಕಸುಬುಗಾರಿಕೆಯನ್ನು ಪ್ರೋಫೆಷನಲಿಸಂ ಬೆಳೆಸಲು ಏನು ಮಾಡಿದಿರಿ ಎಂಬುದನ್ನು ಸರ್ಕಾರದ ನೆರವಿನಿಂದಲೇ ನಡೆ07-asiancollegeofjournalismಯುತ್ತಿರುವ ಮಾಧ್ಯಮ ಅಕಾಡೆಮಿ ಸೇರಿದಂತೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಅಮೇರಿಕಾದ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ಡಿ ಮಾಡಿದ ಸಮೀಕ್ಷೆಯನ್ನು ನಾವೇಕೆ ಮಾಡಲಾಗುತ್ತಿಲ್ಲ. ಕನ್ನಡದ ಮಾಧ್ಯಮಗಳಲ್ಲಿ ಅಹಿಂದ ವರ್ಗಕ್ಕೆ ಸೇರಿದವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ಸರ್ವೇ ಮಾಡಬಹುದು. ವಿರೋಧ ಎದುರಾಗಬಹುದು. ಇದೊಂದು ಅಹಿಂದ ಸರಕಾರ ಅದಕ್ಕೆ ಈ ಸರ್ವೆ ಎಂಬ ಟೀಕೆಗಳು ಬರಬಹುದು. ನಾನು ನನ್ನ ಬ್ರೀಫ್ ಮೀರಿ ಮಾತನಾಡುತ್ತಿದ್ದೇನೆ.. ಎಂದು ನನಗೂ ಅನ್ನಿಸುತ್ತಿದೆ…ನಿಮಗೂ ಅನ್ನಿಸಬಹುದು. ಆದರೆ ನಾನು ಹೃದಯದಿಂದ ಮಾತನಾಡುತ್ತಿದ್ದೇನೆ. ನನ್ನ ಹೃದಯದ ಭಾರ ಇಳಿಸಲಿಕ್ಕೆ ಮಾತನಾಡುತ್ತಿದ್ದೇನೆ.

 

ಕೇವಲ ರಾಜಕೀಯದಲ್ಲಿ ಅಹಿಂದ ಬಂದರೆ ಅದು ಯಶಸ್ವಿಯಾಗುವುದಿಲ್ಲ. ಅದು ಮಾಧ್ಯಮ, ಉದ್ಯಮ,ಶಿಕ್ಷಣ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಬರಬೇಕು. ಸಾಮಾಜಿಕ ನ್ಯಾಯ ಎಂದರೆ ಒಬ್ಬರಿಂದ ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದಲ್ಲ. ಎಲ್ಲರಿಗೂ ನ್ಯಾಯವನ್ನು ಕೊಡುವಂತಹುದು. ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ ಎಲ್ಲರಿಗೂ ಸಿಗಬೇಕು. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಬಹಳ ಧೀರ್ಘವಾದ ಪರಂಪರೆ ಇದೆ. ಸಾಮಾಜಿಕ ನ್ಯಾಯದ ಮೊದಲ ಚಳುವಳಿಕಾರ ಬಸವಣ್ಣ. ಬಸವಣ್ಣನಿಂದ ಪ್ರಾರಂಭವಾದರೂ ಅದರ ನಂತರ ದೇವರಾಜ ಅರಸು, ನಾಲ್ವಡಿ ಕೃಷ್ಣರಾಜ ಒಡೆಯರ್, ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಆದರೆ ಕೇವಲ ರಾಜಕೀಯದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಅಂತ ನೀವು ತೀರ್ಮಾನಿಸಿಬಿಟ್ಟರೆ, ಸಾಮಾಜಿಕ ನ್ಯಾಯವನ್ನು ಅಲ್ಲಿಯೂ ಅನುಷ್ಠಾನಕ್ಕೆ ಬರಲಿಕ್ಕೆ ಈ ವ್ಯವಸ್ಥೆ ಬಿಡುವುದಿಲ್ಲ. ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಬೂಸಾ ಅಂತ ಹೇಳದೆ ಇದ್ದಿದ್ದರೆ ಇವತ್ತು ಕನ್ನಡ ಸಾಹಿತ್ಯ ಈ ಪ್ರಮಾಣದಲ್ಲಿ, ಆಳ-ಅಗಲಕ್ಕೆ ಬೇರು-ಬಿಳಲು ಬಿಟ್ಟು ಬೆಳೆಯುತ್ತಿರಲಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಅವರು ಆ ರೀತಿ ಹೇಳಿದಾಗ ಇಡೀ ಕನ್ನಡ ಸಾಹಿತ್ಯಲೋಕದ ಬರಹಗಾರರು ಮತ್ತು ಓದುಗರು ಬೆಚ್ಚಿಬಿದ್ದಿದ್ದರು. ಅಂತಹದ್ದೊಂದು ಶಾಕ್ ‍ಟ್ರೀಟ್ ಮೆಂಟ್ ಮಾಧ್ಯಮ ಕ್ಷೇತ್ರಕ್ಕೂ ಅಗತ್ಯ ಇದೆ. ಮಾಧ್ಯಮದಲ್ಲಿ ಸಮಾಜದ ಪ್ರತಿಬಿಂಬ ಕಾಣಬೇಕು. ಅದರಲ್ಲಿ ಒಡಕಲು ಬಿಂಬ ಕಾಣಬಾರದು. ಪರಿಪೂರ್ಣ ಚಿತ್ರ ಕಾಣಬೇಕು. ಅದು ನಮಗೆ ಕಾಣ್ತಾ ಇದೆಯಾ? ಎಂಬುದು ಇವತ್ತಿನ ಪ್ರಶ್ನೆ. ಏಕೆಂದರೆ ಮಾಧ್ಯಮವಾಗಲಿ, ಸಾಹಿತ್ಯವಾಗಲಿ, ರಾಜಕೀಯವಾಗಲಿ ಅಲ್ಲಿ ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರು ಭಾಗವಹಿಸದೇ ಇದ್ದರೆ, ಅದರಲ್ಲಿ ಎಲ್ಲಾ ಲೋಕದ ಅನುಭವಗಳು ಅಭಿವ್ಯಕ್ತಿಗೊಳ್ಳದೆ ಇದ್ದರೆ, ಅದು ಅಪೂರ್ಣವಾಗುತ್ತದೆ. ಅದು ಪಾರ್ಶಿಯಲ್ ಆಗಿರುತ್ತದೆ. ಬಯಾಸ್ಡ್ ಅಗಿರುತ್ತದೆ.

 

ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಜಾತಿಗಳ, ವರ್ಗಗಳ ಪ್ರಾತಿನಿಧ್ಯವಿರಬೇಕು. ಅವರವರ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯವಿರಬೇಕು. ಅದು ಅಸ್ತವ್ಯಸ್ತವಾದರೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ, ಮಾಧ್ಯಮ ಕೂಡಾ . ನಮ್ಮ ರಾಜಕೀಯ ಧುರೀಣರು ಪ್ರಜ್ಞಾವಂತರಿದ್ದಾರೆ ಅವರು ಸಾಮಾಜಿಕ ನ್ಯಾಯವನ್ನು ವಿರೋಧಿಸಲಾರರು. ಏಕೆಂದರೆ ಸಾಮಾಜಿಕ ನ್ಯಾಯ ಎಂಬುದು ಸಂವಿಧಾನದ ಆಶಯ. ನೀವು ಆ ನ್ಯಾಯವನ್ನು ಕೊಡದೆ ಇದ್ದರೆ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದ್ದೀರಿ ಎಂದೇ ಅರ್ಥ. ಬಹಳ ಕಷ್ಟ ಇದೆ. ನನ್ನ ಕಿರಿಯ ದಲಿತ ಸ್ನೇಹಿತ ಲಿಂಗರಾಜ್ ಅಂತ ಇಲ್ಲಿದ್ದಾರೆ. ಈತ ಹಟ್ಟಿ ಗೋಲ್ಡ್ ಮೈನ್ ನ ಕಾರ್ಮಿಕರ ಮಗ. ನಾಲ್ಕು ವರ್ಷದ ಹಿಂದೆ ನನ್ನ ಆಫೀಸ್ ಗೆ ಬಂದಿದ್ದ. ಅವನು ಡಿಗ್ರಿ ಮಾಡಿದ್ದ, ಪೋಸ್ಟ್ ಗ್ರಾಜುಯೇಶನ್ ಮುಗಿಸಿದ್ದ. ಅವನು ಪಿ.ಹೆಚ್.ಡಿ ಮಾಡಲಿಕ್ಕೆ ರಿಜಿಸ್ಟರ್ ಮಾಡಿದ್ರೆ ಅವನಿಗೆ ಗೈಡ್ ಮಾಡಲಿಕ್ಕೆ ಯಾರೂ ಒಪ್ತಾ ಇಲ್ಲ. ಇದು ಅವನೊಬ್ಬನ ಕಥೆಯಲ್ಲ. ಈ ಸಮುದಾಯದ ಅನೇಕ ವಿದ್ಯಾರ್ಥಿಗಳು, ಹುಡುಗರು ನನ್ನ ಸಂಪರ್ಕದಲ್ಲಿದ್ದಾರೆ. ಇಂತಹ ಸಂಘಟನೆಗಳ ಬೆಂಬಲ ಅವರಿಗೆ ಬೇಕಾಗಿದೆ.

 

ಸರ್ಕಾರವೇ ಮುಂದೆ ನಿಂತು ಎಲ್ಲವನ್ನೂ ಮಾಡಲಾಗುವುದಿಲ್ಲ. ಇಲ್ಲಿರುವ ಹಿರಿಯರು, ಸಮುದಾಯದಲ್ಲಿರುವ ಪ್ರಜ್ಞಾವಂತರು ಎಲ್ಲಾ ಜಾತಿ, ವರ್ಗದ ಜನ ಇಂತಹವರ ಬೆಂಬಲಕ್ಕೆ ನಿಂತು ಬೆಳೆಸಬೇಕಾಗಿದೆ. ಆ ಕೆಲಸವನ್ನು ಮಾಧ್ಯಮ ಅಕಾಡೆಮಿ ಮತ್ತು ಪತ್ರಕರ್ತರ ಸಂಘಟನೆಗಳು ಮಾಡುತ್ತದೆ. ರಾಜಕೀಯ ಧುರೀಣರು ಇದಕ್ಕೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂಬ ಆಶಯದೊಂದಿಗೆ ಮಾತುಗಳನ್ನು ಮುಗಿಸುತ್ತೇನೆ.

ಹಾಳು ಸುಡಗಾಡ ಬದುಕು : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಹನುಮಂತ ಹಾಲಿಗೇರಿ

ಈಗ ದನೇ ಅನ್ನದ ಕೂಡ ಬದನಿಕಾಯಿ ಚಟ್ನಿ ನಂಚ್ಕೊಂಡು ಊಟದ ಶಾಸ್ತ್ರ ಮುಗಿಸಿ ಕೋಲಿ ಮುಂದಿನ ಅಂಗಳದೊಳಗ ಪ್ಲ್ಯಾಸ್ಟಿಕ್ ತಟ್ ಹಾಸ್ಕೊಂಡು ಕಾಲುಚಾಚ್ಕೊಂಡು ಮಾತೆವ್ವ ಕುಂತಿದ್ಲು. ಆಕಿ ಸುಮ್ಮನ ಕುಂತಂಗ ಕಂಡ್ರೂ ಆಕಿ ದವಡೆಗಳು ಒಂದು ಸಂವನ ಮೆಲಕ್ಕ ಹಾಕುತಿದ್ವು. ಆಕಿ ಗಂಡ ದರಿಯ ಅಆಅಬ್ ಅಂತ ಡೆರಿಕಿ ಹೊಡಕೋತ ಮುಗಿಲ ಮ್ಯಾಲಿನ ಚಿಕ್ಕಿ ನೊಡಕೋತ ಅಂಗಾತ ಬಿದ್ದಕೊಂಡಿದ್ದ.

ಆಗಷ್ಟೆ ಕಂಬಳಿಯಂಥ ಕರಿ ಮುಗಿಲ ತುಂಬ ಚಿತ್ತಾರ ಮೂಡಿಸಿದ್ದ ಚಿಕ್ಕಿಗೊಳು ಮಿಣುಕುಮಿಣುಕಾಗಿ ಒಂದೊಂದೆ ಮಾಯವಾಗತೊಡಗಿದ್ದವು. ಚಂದಪ್ಪ ಇವನೌನ ಮಳಿ ಬರುವಂಗಾತು ಅನ್ಕೊಂಡು ಗೂಡು ಸೇರಿದ್ದ. ಗುಡುಲ್ ದಡುಲ್ ಎಂಬ ಗುಡುಗು, ಅದರ ಹಿಂದೆಯೇ ಒಮ್ಮೆಲೆ ನೂರು ಸಾವಿರ ಬಲ್ಬು ಬೆಳಗಿದಂಗಳ ಕೋಲ್ಮಿಂಚು…

‘ಆ..ಉ… ಉಉಂ, ಅಯ್ಯಯ್ಯ. ಎವ್ವಾ ಬೇ ಯಾಕೋ ಬೆನ್ನಿನ ನರಾ ಜಗ್ಗಾಕ ಹತ್ಯಾವು..’ ಮಗಳು ಸ್ಟೇಲ್ಲಾಳ ನರಳುವ ದ್ವನಿ ಆ ಮಳೆ ಗಾಳಿಯಲ್ಲಿ ಅಸ್ಪಷ್ಟವಾಗಿ ತೇಲಿ ಹೋಯ್ದಂತಾಯಿತು.

‘ಮಗಳ ಬ್ಯಾನಿ ತಿನ್ನಾಕ ಹತ್ತಿದಂಗ ಕಾಣತೈತಿ. ಏ ಯೇಸು ತಂದೆ, ಇನ್ನು ಸ್ವಲ್ಪ ಹೊತ್ತು ಮಳಿಗಾಳಿ ಶುರು ಮಾಡಬ್ಯಾಡೋ ಎಪ್ಪ’ ಮಾತೆವ್ವ ಮನದೊಳಗ ಬೇಡ್ಕೊಂಡ್ಲು. ‘ಹೋಗು, ಯಾವುದಾದ್ರೂ ಆಟೋ ಕರಕೊಂಡು ಬರೊಗು ದವಾಖಾನಿಗೆ ಹೋಗೂನು’  kt_shivaprasad-art-familyಮಾತೆವ್ವ ಒದರುತ್ತಲೇ ಮಗಳತ್ತ ದಾವಿಸಿದಳು.

ಆಟೋ ಇಲ್ಲವೆಂದು ವಾಪಸ್ ಬಂದ ಗಂಡನಿಗೆ ಶಪಿಸುತ್ತಾ ಗೇಟ್‍ವರೆಗೆ ಮಗಳನ್ನು ನಡೆಸಿಕೊಂಡು ಬಂದ ಮಾತೆವ್ವ ಸಿಕ್ಕ ಬೇಂದ್ರೆ ಬಸ್ ಹತ್ತಿಸಿಕೊಂಡು ಕೆಎಂಸಿ ಆಸ್ಪತ್ರೆಗೆ ಬಂದಿದ್ದಳು. ಮಗಳು ಹೆರಿಗೆ ವಾರ್ಡೊಳಗೆ ಹೋದ ಮೇಲೂ ಎಷ್ಟೋ ಹೊತ್ತಿನ ಮಟಾ ದರಿಯ ಕಾಯ್ದುಕೊಂಡು ಅಲ್ಲೆ ನಿಂತಿದ್ದ. ‘ಯಜ್ಜ ನಿಂದೆನು ಕೆಲಸ ಇಲ್ಲ. ನೀ ಹೊರಗ ಹೋಗು ಎಲ್ಲ ಸರಿ ಆಕೈತಿ’ ಅಂತ ಒಬ್ಬಾಕಿ ನರ್ಸ್ ಹೇಳಿದ್ದರಿಂದ ಮುದುಕಗ ಇರಿಸು ಮುರುಸಾತು. ನಿಧಾನಕ್ಕ ಕಾಲು ಎಳಕೊಂಡು ಆಸ್ಪತ್ರೆ ಗೇಟ್‍ಮಟಾ ಬಂದ. ಅಲ್ಲೊಂದು ಪಟ್ಟಿ ಅಂಗಡಿ ಮುಂದ ಲೈಟ್ ಉರಿತಿತ್ತು. ಅಲ್ಲಿ ಹೊಗಿ ಒಂದು ಬೀಡಿ ತುಗೊಂಡು ಅಲೆಅಲೆಯಗಿ ಹೊಗೆಬಿಟ್ಟ. ಮನಸ್ಸು ದೇಹ ಸ್ವಲ್ಪ ಹಗೂರ ಆದಂಗಾದ್ವು. ಮತ್ತೆ  ದವಾಖಾನಿ ಕಡೆಗೆ ಬರತೊಡಗಿದ. ಅಲ್ಲೊಂದು ಮುಚ್ಚಿದ ಬಾಗಿಲು ಬಿಲ್ಡಿಂಗ್ ಕಾಣಿಸಿತು. ಮಗಳು ಹೆರಿಗೆ ಇನ್ನು ಮೂರ್ನಾಲ್ಕು ತಾಸಾಗಬಹುದು ಅಂದುಕೊಂಡು ಮುಚ್ಚಿದ ಬಾಗಿಲ ಮುಂದೆ ಅಡ್ಡಾದ.

***

ಸರು ಬಿಟ್ಟು ಸರು ಹಣಿಯುವ ಮಳೆಯ ಜಿಟಿ ಜಿಟಿ. ಆಗಾಗ ಮುತ್ತಿಕ್ಕುವ ಸೊಳ್ಳೆಗಳಿಂದಾಗಿ ದರಿಯನಿಗೆ ನಿದ್ದಿ ಸುಳಿಯೊಲ್ಲದು. ಮೇಲಾಗಿ ನೆನಪುಗಳು ಸ್ಪರ್ಧೆಗೆ ಬಿದ್ದವವರಗತೆ ನಾ ಮುಂದು ತಾಮುಂದು ಎಂದು ಮುಕುರಿ ಪಟ ಬಿದ್ದಿದ್ದವು.

ಹಂಗ ನೋಡಿದ್ರ ಅವನ ಜನ್ಮನಾಮ ದೊರೆರಾಜ್. ಅಂವ ಮಾಡುತ್ತಿದ್ದ ವೃತ್ತಿಯ ಕಾರಣದಿಂದಲೋ, ಅವನ ಪೂರ್ತಿ ಹೆಸರನ್ನು ಕರೆಯುವುದು ತಮಗೆ ಅವಮಾನ ಎಂದುಕೊಂಡೋ ಮರ್ಯಾದಸ್ತ ಜನರು ಅವನ ಹೆಸರನ್ನು ತಮ್ಮ ಹುಬ್ಬಳಿಗೆ ಸುತ್ತಲಿನ ಆಡುಭಾಷೆಗೆ ಹೊಂದಿಸಿಕೊಂಡು ದರ್ಯಾ ಎಂದು, ಇನ್ನಷ್ಟು ಮುಂದೆ ಹೋಗಿ ದರಿದ್ರ ದರ್ಯಾ ಎಂದು ಕರೆತಿದ್ರು. ದರಿಯನ ಮೂರ್ನಾಲ್ಕು ತಲೆಮಾರುಗಳ ಹಿಂದಿನ ಪೂರ್ವಿಕರು ಆಂದ್ರ ಪ್ರದೇಶದ ಸುಡುಗಾಡು ಕಾಯುವ ಕಾಪಾಲಿಕ ಎಂಬ ಅದ್ಯಾವದೋ ಹೀನ ಬುಡಕಟ್ಟಿನವರು. ಅಲ್ಲಿ ಅದ್ಯಾವ ಕಾರಣಕ್ಕೋ ನೆಲೆ ಕಳೆದುಕೊಂಡು ಹುಬ್ಬಳ್ಳಿಗೆ ಬಂದು ಇಲ್ಲಿನ ಸುಡುಗಾಡುಗಟ್ಟೆಗಳಲ್ಲಿ ನೆಲೆ ನಿಂತಿದ್ದರು.

ಯಾರಾದ್ರೈ ಸತ್ತರೇ ಮಾತ್ರ ಇವರಿಗೆ ಹೊಟೆ ತುಂಬ ಊಟ. ಒಂದು ಕಡೆ ಹೆಣ ಬೇಯಿಸ್ತಾ ಇದ್ದರೆ ಇನ್ನೊಂದು ಕಡೆ ಹೆಣದ ಮೇಲಿನ ಅಕ್ಕಿಯನ್ನು ತಾಯಿ ಬೇಯಿಸೋದನ್ನೆ ನೋಡಿಕೊಂಡೆ ದರಿಯ ದೊಡ್ಡವನಾಗಿದ್ದ. ಒಮ್ಮೊಮ್ಮೆ ಜಾಸ್ತಿ ಚಿಲ್ಲರೆ ಕಾಸು ಸಿಕ್ಕರೆ ಅವತ್ತು ಅಪ್ಪ ಒಂದೆರಡು ಪಾಕೀಟು ಸೆರೆ ಮತ್ತು ಚಿಕ್ಕನ್ ಪೀಸು ತರ್ತಿದ್ದ.

ಒಂದೊಂದು ಸಲ ಬಾಳ ಇಚಿತ್ರ ಹೆಣ ಬರತಿದ್ವು. ಕಾಲ ಇದ್ದರ ಕೈ ಇರಲ್ಲ. ಎರಡು ಇದ್ದರ ತಲೆ ಇರ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲವೂ ಇದ್ರು ಹೆಣ ಪೂರ್ತಿ ಕೊಳತು ಮುಟ್ಟಿದರ ಹರ್ಕೊಂಡು ಬರುವಂಗ ಇರ್ತಿತ್ತು. ಒಂದೊಂದು ಹೆಣ ಅಂತ್ರೂ ಕಿಂವು ರಕ್ತದಿಂದ ತುಂಬ್ಕೊಂಡು ಅಕರಾಳ ವಿಕರಾಳ ಆಗಿರುತಿದ್ವು. ಒಮ್ಮೊಮ್ಮೆ ಕೆಎಂಸಿಯಿಂದ ಪೊಲೀಸರಿಂದ ಫೋನ್ ಬರೋದು, ಅಲ್ಲಿಂದ ಕೊಯ್ದ ಪಂಚನಾಮೆ ಮಾಡಿದ ಹೆಣ ಸುಡಾಕ ಅಷ್ಟೋ ಇಷ್ಟು ದುಡ್ಡು ಕೊಡ್ತಿದ್ರು. ಎಷ್ಟೋ ಹೆಣಗಳಿಗೆ ವಾರಸುದಾರರೆ ಇರ್ತಿರಲಿಲ್ಲ. ಒಮ್ಮೊಮ್ಮೆ ತಿಂಗಳಾನುಗಟ್ಲೆ ಯಾರೂ ಸಾಯದೆ ಉಪವಾಸ ಇದ್ರ, ಒಮ್ಮೊಮ್ಮೆ ಎಕ್ಸಿಡೆಂಟ್ ಆದೋರು, ವಿಷ ಕುಡ್ದೋರು, ಉರ್ಲು ಹಾಕೊಂಡೋರ ಹತ್ತಾರು ಹೆಣ ಬರ್ತಿದ್ವು. abstract-art-sheepಆಗೆಲ್ಲ ಎಲ್ಲರಿಗೂ ಕೈ ತುಂಬ ಹೆಣ ಸುಡೋ ಕೆಲಸ. ಸುಗ್ಗಿಯೋ ಸುಗ್ಗಿ. ಪಾಪ ಎಷ್ಟೆಷ್ಟು ಸಣ್ಣ ಸಣ್ಣ ಮಕ್ಕಳೆಲ್ಲ ವಿಷ ಕುಡ್ದು ಉರ್ಲು ಹಾಕ್ಕೊಂಡು ಹೆಣ ಆಗಿ ಬಂದ್ರ ಅವುನ್ನ ಸುಡೋದು ಬಾಳ ಕಷ್ಟ ಆಕ್ತಿತ್ತು. ಗೆರೆ ಕೊರ್ದು ಚಿತ್ರ ಬಿಡಿಸಿ ಬಣ್ಣ ತುಂಬಿದ ಗೊಂಬಿಯಂಥೋರ ಮೈಗೆ ಬೆಂಕಿ ಹಾಕೋದಂದ್ರ ಹ್ಯಾಂಗ ಮನಸ್ಸು ಬರ್ತದ. ಆ ಮಕ್ಕಳನ್ನು ಆಡಿಸಿ ಬೆಳಿಸಿ ದೊಡ್ಡವರನ್ನಾಗಿ ಮಾಡಿದ ಹೆತ್ತೊಡಲುಗಳು ಅಳ್ಳೋದು ಕೇಳಿಸಿದ್ರಂತೂ ಕಳ್ಳ ಚುರಕ್ ಅಂತಿತ್ತು.

ಹೆಣ ಸುಡ್ತಾ ಸುಡ್ತಾನೆ ದೊರೆರಾಜ್‍ನ ರಟ್ಟೆ ಬಲ್ತಿದ್ವು. ಅವಂಗ ಹೆಣ್ಣು ನೋಡುವ ಜವಾಬ್ದಾರಿಯನ್ನ ಅಪ್ಪ ಶುರುವಿಟ್ಟುಕೊಂಡಿದ್ದ. ಹೆಣ ಸುಡೋನಿಗೆ ಮತ್ಯಾರು ಹೆಣ್ಣು ಕೊಡಬೇಕು, ಹೆಣ ಸುಡೋರ ಮಕ್ಕಳೆ ಆಗಬೇಕಲ್ವೆ? ಆಗಾಗ ತನ್ನ ಹಳೆಯ ಸಂಬಂಧಿಕರ ಮನೆಗೆ ಹೋದಾಗ ಬೇಕಂತ್ಲೆ ಮಾತಿನ ಮುಂದೆ ಮಗ ವಯಸ್ಸಿಗ ಬಂದ ವಿಷಯವನ್ನು ತರುತ್ತಿದ್ದ. ಅವನಂಗೆ ಹೆಣ ಸುಡೋರು ಹುಬ್ಬಳಿ ದಾರವಾಡ ಸೀಮಿ ಸುಡುಗಾಡದೊಳಗ ಸಿಗೂದಿಲ್ಲ ಅಂತ ಮೀಸಿ ತಿರುತ್ತಿದ್ದ. ಅಪ್ಪನ ಮಾತು ನಂಬಿ ಸುತ್ತಲಿನ ಸಣ್ಣ ಸಣ್ಣ ಪಟ್ಟಣಗಳ ಸುಡುಗಾಡುಗಳಲ್ಲಿ ಬೀಡು ಬಿಟ್ಟಿದ್ದ ಹೆಣ್ಣು ಹೆತ್ತವರು ಬಂದು ಹೋಗಿ ಮಾಡುವುದನ್ನು ಶುರುವಿಟ್ಟುಕೊಂಡಿದ್ದರು.

ರೈತರಿಗೆ ಜಮೀನು ಜಾನುವಾರು ಆಸ್ತಿ ಆದ್ರ, ಇವರಿಗೆ ಸುಡಗಾಡೇ ಆಸ್ತಿ ಇದ್ದಂಗ. ಹೆಣ್ಣು ಕೊಡಲಿಕ್ಕೆ ಬಂದವರೆಲ್ಲ ಸುಡುಗಾಡನ್ನು ಅಡ್ಡಾಡಿ ನೋಡತಿದ್ರು. ಸುಡುಗಾಡಿನ ವಿಸ್ತಾರ, ಸುಡುಗಾಡು ಸುತ್ತಲಿನ ವಾರ್ಡುಗಳ ಜನಸಂಖ್ಯೆ, ಅವರ ಶ್ರೀಮಂತಿಕೆ, ಅವರ ಚಟಾದಿಗಳು, ರೋಗ ರುಜಿನಗಳನ್ನು ಮನದಲ್ಲೆ ಲೆಕ್ಕ ಹಾಕಿಕೊಂಡು ತಮ್ಮ ಮಗಳನ್ನು ಇಲ್ಲಿಗೆ ಸೊಸೆಯಾಗಿ ಕಳಿಸಿದರೆ ಮಗಳು ಸುಖವಾಗಿ ಇರಬಹುದೆ ಎಂಬುದನ್ನು ಅಂದಾಜಿಸಿಕೊಂಡು ಮಾತುಕತೆಗೆ ಮುಂದಾಗುತ್ತಿದ್ದರು. ಐದಾರು ಮಾತುಕತೆಗಳು ಮುಂದುವರೆಯಲಿಲ್ಲವಾದರೂ ನಂತರದ ಸಂಬಂಧ ನಿಕ್ಕಿಯಾಗಿ ದೊರೆರಾಜನಿಗೆ ಮಾತೆವ್ವ ಜೊತೆಯಾಗಿ ಬಂದಿದ್ದಳು. ದೊರೆರಾಜ ದರ್ಯಾ ಆದ ಹಾಗೆ ಮೇರಿಮಾತಾ ಹೋಗಿ ಆ ನೆಲದ ನುಡಿಗನುಗುಣವಾಗಿ ಮಾತೆವ್ವ ಆಗಿದ್ದಳು. ವರ್ಷದಲ್ಲಿ ಮಗಳು ಸ್ಟೆಲ್ಲಾ ತೊಡೆ ಏರಿದ್ದಳು.

ಮಗಳು ವಯಸ್ಸಿಗೆ ಬಂದು ಆಕೆಯ ಮದುವೆ ಹ್ಯಾಂಗ ಮಾಡೋದು ಅಂತ ಮಾತೆವ್ವ ಚಿಂತಿಗೆ ಬಿದ್ದು ದರ್ಯಾನ ಜೀವ ತಿನ್ನುವ ಸಮಯದಲ್ಲೆ ಮುನ್ಸಿಪಾಲ್ಟಿಯ ಪೌರ ಕಾರ್ಮಿಕನೊಬ್ಬ ಸುಡುಗಾಡಿನ ಗೇಟಿನ ಮುಂದಿನ ರಸ್ತೆಯಲ್ಲಿ ದಿನಾಲೂ ಕಸ ಹೊಡೆಯಲು ಬಂದು ಇವಳನ್ನು ಬುಟ್ಟಿಗೆ ಹಾಕಿಕೊಂಡಿದ್ದರಿಂದ ಮಗಳ ಮದುವೆಯ ಚಿಂತೆ ದೂರಾಗಿತ್ತು.

***

ಯಾರೋ ಕೋಲಿಂದ ತಿವಿದಂಗಾಗಿ ದರೆಯಪ್ಪ ಗಾಬರಿಯಾಗಿ ಹೊದ್ದ ಲುಂಗಿಯಿಂದ ಮುಖ ಹೊರಗ್ಹಾಕಿ ನೋಡಿದರೆ ಪೊಲೀಸ್. ಸಡನ್ನಾಗಿ ಎದ್ದು ಕುಳಿತ.

‘ಹೆಣದ ಮನಿ ಮುಂದ ಮಲಕ್ಕೊಂಡಿಯಲ್ಲೋ ಹುಚ್ಚಗಿಚ್ಚ ಹಿಡದದನ ನಿನಗ. ವಾಚಮನ್ ಏನಾದ್ರೂ ನಿದ್ದೆಗಣ್ಣಾಗ ಬಂದು ಹೆಣ ಇಲ್ಯಾಕ ಬಾಗಲದಾಗ ಬಿದೈತಿ ಅಂತ ತಗ್ದು ಒಳಗ ಒಗ್ದ ಅಂದ್ರ ಏನು ಮಾಡ್ತಿ, ನಡಿ ನಡಿ ಅಕ್ಕಾಡಿ’ ಅಂದ. ದರ್ಯಾಮುಖ ಕಿವುಚುತ್ತಲೇ ಲುಂಗಿ ಸುಟಗೊಂಡು ಹೆರಿಗೆ ವಾರ್ಡ್ ಮುಂದ ಹೋಗಿ ಅಲ್ಲಿನ ಬೆಂಚ್ ಮೇಲೆ ಕುಂಡಿ ಊರಿದ.

ಮತ್ತೆ ಸುಡಿಗಾಡಿನದೆ ನೆನಪುಗಳು, ಇವನೌನ ಇವತ್ತೊಂದಿನ ಸುಡುಗಾಡು ಬಿಟ್ಟು ಬಂದಿನಿ, ಆದ್ರ ಅದು ನನ್ನ ಬಿಡೊಲ್ಲದು ಅಂತ ನಗಿ ಬಂತು. ಸುಡುಗಾಡಿಗೆ ಹೆಣ ತರುವವರೆಲ್ಲ ತಮ್ಮ ಮೃತ ಬಂಧುವನ್ನು ಯಾರನ್ನಾದರೂ ಹುಗಿದಲ್ಲಿ ಹುಗಿಬಾರದು, ಹೊಸ ಜಾಗಾನೇ ಬೇಕು ಎಂದು ಹಟ ಹಿಡಿಯುವವರನ್ನು ಕಂಡು ಅವನಿಗೆ ಸಿಕ್ಕಾಪಟ್ಟಿ ನಗುಬರತಿತ್ತು. ಪರಪಂಚದ ತುಂಬಾ ಜನಾನ ತುಂಬ್ಯಾರ, ಅವರಿಗೆಲ್ಲ ಹೊಸ ಜಾಗ ಹುಡುಕ್ಕೋತ ಹೊಂಟರ ಇಡಿ ಪರಪಂಚನೆ ಗೋರಿಗಳಿಂದ ತುಂಬಿಕೋತೈತಿ. ಇಂಥ ಸಣ್ಣ ವಿಚಾರ ಈ ಜನಕ್ಕ ಹೊಳಿದುಲ್ಲಲಾ ಅಂತ ಅನಕೋತ ’ಈ ಜಾಗ ಪ್ರೆಸ್ ಐತ್ರಿ ಸಾಹೆಬರ,’ ಅಂತ ಸುಳಸುಳ್ಳೆ ಹೇಳಿ ಕೆಲಸ ಶುರು ಮಾಡ್ತಿದ್ದ. ಆದ್ರ ಮಜಕೂರ ಅಂದ್ರ ಅಲ್ಲಿ ಇನ್ನು ಕೊಳಿಲಾರದ ಕೈ ಕಾಲಿನ ಎಲುಬುಗೊಳು ಸಿಕ್ಕು ದರಿಯನನ್ನು ಅಡಕತ್ತರ್ಯಾಗ ಸಿಲುಕಿಸುತ್ತಿದ್ದವು. ಕೆಲವರಂತೂ ತಾವು ಸಾಯುದಕಿಂತ ಮೊದಲ ಪಾಲಿಕೆಗೆ artಒಂದಿಷ್ಟು ದುಡ್ಡು ಕೊಟ್ಟು ನನ್ನ ಇಲ್ಲೆ ಹುಗಿಬೇಕು, ಹುಗಿದ ಮ್ಯಾಲ ಗೋರಿ ಕಟ್ಟಿ ಅದರ ಮೇಲೆ ತಮಗೆ ಬೇಕಾದ ದೇವರ ಚಿತ್ರವನ್ನು ಕೆತ್ತಬೇಕು ಅಂತ ಕಂಡಿಶನ್ ಹಾಕಿದ ಮ್ಯಾಲ ಸಾಯತಿದ್ರು. ಈ ಜಲಮು ಶಾಶ್ವತ ಅಲ್ಲ ಅಂತ ಗೊತ್ತಿದ್ದು ಇರೂಮಟ ಅದು ನಂದು ಇದು ನಂದು ಅಂತ ಬಡಿದಾಡೂ ಜನ, ತಾವು ಸತ್ತ ಮ್ಯಾಲೂ ತಮ್ಮ ಗೋರಿಗಾಗಿ ಬಡಿದಾಡತಾರಂದ್ರ….

ಎಲ್ಲ ಸುಡುಗಾಡದಾಗೂ ಗೋರಿ ಕಟ್ಟಿಸಿಗೋತ ಹೊಂಟಿದ್ದರಿಂದ ಪರಪಂಚದ ಸುಡುಗಾಡಗೊಳೆಲ್ಲ ಗೋರಿಗೊಳಿಂದ ತುಂಬಿ ಬಿಟ್ಟಾವು. ಅದಕ್ಕಂತ ಇತ್ತಿತ್ತಲಾಗ ಹೆಣ ಸುಡಾಕೂ ಒಂದು ಮಷಿನು ಕಂಡು ಹಿಡಿದಾರ.

ಮಷಿನ್ ಅಂದಕೂಡ್ಲೆ ದರ್ಯಾನ ತಲ್ಯಾಗ ಸೊಟ್ರಾಮ ಮತ್ತು ಅವನ ಸುಡುಗಾಡು ನೆನಪಾತು. ಇತ್ತೀಚೆಗಷ್ಟೆ ದರ್ಯಾ ಸೊಟ್ರಾಮನ ಸುಡುಗಾಡು ಹೊಕ್ಕು ಬಂದಿದ್ದ. ಹೋದ ಕೂಡ್ಲೆ ದಂಗಾಗಿ ಬಿಟ್ಟಿದ್ದ. ನಳದ ಮುಂದ ಕೊಡಪಾನ ಪಾಳೆಕ ಇಟ್ಟಂಗ ಐದಾರು ಹೆಣ ದಾರ್ಯಾಗ ಇಟ್ಟಿದ್ದರು. ಅದರಾಗ ಬಾಳಷ್ಟ ಹೆಣ ಮುದುಕುರವೆ ಆಗಿದ್ದರಿಂದ್ಲೋ ಏನೋ, ಆ ಹೆಣಗಳ ಸಂಬಂಧಿಕರು ಅಷ್ಟೆನೂ ದುಖಃ ಪಡದೆ ನಿರಾಳರಾದವರಂತೆ ಅಲ್ಲೆ ಬೆಂಚಿಕಲ್ಲಿಗೆ ಒರಗಿಕೊಂಡು ಅನು ತನು ಮಾತಾಡಕೋತ ಕುಂತಿದ್ರು. ಹೆಣದ ಬಾಯಲ್ಲಿ ನೊಣ ಹೋಗಿ ಬಂದರೂ ಅವರ್ಯಾರಿಗೂ ಖಬರಿರಲಿಲ್ಲ. ಮಧ್ಯಾಹ್ನದ ಮಟಾ ಮಾತ್ರ ರಜೆ ಹಾಕಿ ಸಂಸ್ಕಾರಕ್ಕೆಂದು ಬಂದಿದ್ದ ಹೆಣಗಳ ಕೆಲ ಸಂಬಂಧಿಕರ ಬೇಗ ಮುಗಿದುಬಿಟ್ಟರೆ ಸಾಕು. ಇಲ್ಲಂದ್ರ ರಜೆ ಮುಂದುವರೆಸಬೇಕಾಕೈತೋ ಅಂತ ದಿಗಿಲಿಗೆ ಬಿದ್ದಿದ್ದರು.

ಅಲ್ಲೆ ಇದ್ದ ಸೊಟ್ರಾಮ ಗುಟಕಾ ಜಗಿತಾ ಎತ್ತಲೋ ನೋಡಕೋತ ಕುಂತಿದ್ದ. ‘ಯಾಕೋ ರಾಮ್ಯಾ ಆರಾಮಿಲ್ಲೇನು, ಮುಖ ಒಂಥರಾ ಆಗೈತೆಲ್ಲ. ಯಾಕ ಕೆಲಸ ಶುರು ಹಚ್ಚಗೋಬೇಕಿಲ್ಲ. ಸುಡಗಾಡಕ್ಕ ಇಷ್ಟೊಂದು ಹೆಣ ಬಂದಾವು. ಏಳು ನಾನು ಕೈ ಜೋಡಿಸ್ತಿನಿ’ ಅಂತ ದರ್ಯಾ ಅವನ ಹತ್ತಿರಕ್ಕೆ ಸರಿದ.

ಇಷ್ಟ ಸಾಕಿತ್ತು, ಸೊಟ್ರಾಮನ ಕಣ್ಣು ತೇವಗೊಂಡವು. ‘ಆ ಹೆಣಗಳನ್ನು ದಫನ್ ಮಾಡೋದು ನನ್ನ ಕೆಲಸ ಅಲ್ಲೋ ಕಾಕಾ. ಅಲ್ಲೊಂದು ದೆವ್ವದಂತ ಮಷೀನ್ ಐತಿ, ಅದು ನನ್ನ ಕೆಲಸ ಕಸಕೊಂಡು ಕುಂತೈತಿ. ಹೊಟ್ಟಿ ತುಂಬ ಊಟ ಮಾಡಿ, ಎರಡ್ಮೂರು ತಿಂಗಳಾತೋ ಕಾಕಾ, ಮಷಿನ್ ಯಾವತ್ತೋ ಬಂದೈತೋ ಅವತ್ತಿಂದ ಮೈ ತುಂಬಾ ಕೆಲಸಾನು ಇಲ್ಲ, ಹೊಟ್ಟಿ ತುಂಬ ಊಟಾನೂ ಇಲ್ಲ. ಇಲ್ಲಿಂದ ಎಲ್ಯಾರ ದೂರ ಹೋಗಬೇಕು ಅಂತ ಅನಿಸತೈತಿ. ಆದ್ರ ಎಲ್ಲಿ ಹೋಗಬೇಕು, ಏನು ಮಾಡಬೇಕು ಅನ್ನೊದು ತಿಳಿವಲ್ಲದಂಗ ಆಗೇತಿ’ ಅಂತ ನೆಲಕ್ಕ ದೃಷ್ಟಿ ಚೆಲ್ಲಿದ.

ದರ್ಯಾಗ ಅವತ್ತು ದೊಡ್ಡ ವಿಚಿತ್ರ ನೋಡಿದಂಗಾತು. ‘ಕಲಿಕಾಲ ಬರತೈತಿ, ಹಡಿಯಾಕ ಮಷೀನು, ದಪನ್ ಮಾಡಾಕ ಮಷೀನು ಬರತಾವು. ತೂಗಿ ತಿಂದು ತಿಣುಕಿ ಹೇಲೋ ಕಾಲ ದೂರಿಲ್ಲ’ ಅಂತ ಬುಡಬುಡಿಕ್ಯಾ ಹೋದ ವರ್ಷ ಹೇಳಿದ್ದನ್ನೆ ದೇನಿಸಿಕೊತ ಕುಂತ.

ಅಷ್ಟರೊಳಗ ಕರೆಂಟ್ ಬಂದುವಂಥ ಯಾರೊ ಒಬ್ಬ ಒದರಿದ್ರು. ಹೆಣ ಮಷೀನ್ ಬಾಯಾಗ ಕೋಡೋದನ್ನ ನೋಡಾಕಂತ ದರ್ಯಾ ಎದ್ದು ಬಂದ. ಎಲ್ಲ ಪೂಜಾವಿಧಿ ಮೂಗಿದ ಮ್ಯಾಲ ಅಂಗಡಿ ಬಾಗಿಲದಂಥ ಷಟರ್ ಮ್ಯಾಲ ಎಳದು ಅದರೊಳಗ ಹೆಣ ತುರುಕತಿದ್ರು. ಮತ್ತ ಬಾಗಲು ಹಾಕಿ ಒಂದೈದು ನಿಮಿಷ ಬಿಟ್ಟು ಷೆಟರ್ ತೆಗದು ನೋಡಿದರ ಅಲ್ಲಿ ಹೆಣ ಮಂಗ ಮಾಯ. ಈಗಷ್ಟೆ ಹೆಣ ತಿಂದರೂ ಹಸಿವು ನೀಗದಂತಿದ್ದ ಅಲ್ಲಿನ ನಿಗಿ ನಿಗಿ ಕೆಂಡ ಬಾಯ್ದೆರೆದು ತನ್ನನ್ನೆ ಕರೆದಂತಾಗಿ ದರೆಪ್ಪ ಅಲ್ಲಿಂದ ಕಣ್ ಕಿತ್ತಿದ್ದ.

ಆ ಮಷೀನ್ ಪಕ್ಕವೇ ಪ್ಯಾಂಟು ಶರಟು ಹಾಕಿದ್ದ ಒಬ್ಬ ಹುಡುಗ ಆಪೀಸರ್ ದಿಮಾಕಿನಲ್ಲಿ ಬಟನ್ ಒತ್ತುವುದು ಆರ್ಸೂದು ಮಾಡ್ತಿದ್ದ. ಅಂವನನ್ನು ತೋರಿಸಿದ ಸೊಟ್ರಾಮ ‘ಮಷಿನು ನಡಿಸಾಕಂತ ಅವಂಗ ಸರಕಾರ ಪಂದ್ರ ಸಾವಿರ ಪಗಾರ ಕೊಡೋ ನೌಕರಿ ಕೊಟ್ಟೈತಿ. ಬಟನ್ ಚಾಲೂ ಮಾಡೂದು ಬಂದ್ ಮಾಡೂದು ಅಷ್ಟ ಅಂವನ ಕೆಲಸ. ಇವನೌನ ನಾವಿಲ್ಲಿ ಮೈ ನೂಸುವಂಗ ತೆಗ್ಗ ತೊಡೋದು, ಹೆಣ ಸುಡೊದು ಮಾಡಿದ್ರೂ ನಯ್ಯಾಪೈಸೆ ಕೊಡೂದಿಲ್ಲ.’ ಸೊಟ್ರಾಮ ಸುಡುವ ಬಿಸಲಲ್ಲಿ ಬೆವರಿಳಿಸಿಕೊಂಡು ಕೊತಕೊತ ಕುದಿಯುವ ತನ್ನ ನೋವು ತೋಡಿಕೊಂಡ. ಅವನಿಗೆ ಏನು ಹೇಳಬೇಕಂಬೂದು ಗೊತ್ತಾಗದ ದರ್ಯಾ ಸ್ವಲ್ಪ ಹೊತ್ತಿನ ಮ್ಯಾಲ ತನ್ನ ಸುಡುಗಾಡಿನ ದಾರಿ ಹಿಡಿದಿದ್ದ. ಈ  ಮಾಯಾವಿ ಮಷೀನು ತಮ್ಮ ಮಂದಿಯ ಬದುಕನ್ನೆ ನುಂಗುವುದಾದರೆ ಯಾಕಿದನ್ನು ಕಂಡು ಹಿಡಿದರೋ, ನಾವೇನು ಅನ್ಯಾಯ ಮಾಡಿದ್ದೇವೆಯೋ, ಎಂಥ ಕಾಲ ಬಂತು. ಮುಂದ ತುತ್ತಿಡಾಕೂ ಮಷೀನು, ಹಿಂದ ಕುಂಡಿ ತೊಳಿಯಾಕೂ ಮಷೀನು ಬಂದು ನಮ್ಮಂಥ ಬಡವರು ಬದುಕಾಕ ದಾರಿನೇ ಇಲ್ಲದಂಗಾತೋ ಅಂತ ಸೊಟ್ರಾಮನ ಬಡಬಡಿಕೆ ದರೆಪ್ಪನನ್ನು ಬೆನ್ನು ಬೀಡದೆ ಹಿಂಬಾಲಿಸಿ ಗೋಳು ಹೊಯ್ಕೊಳುತ್ತಿತ್ತು.

ಹಿಂಗ ನೆನಪುಗಳ ಜಾತ್ರೆ ನೆರೆದು ದಗ್ಗುದುಳಿಯುತ್ತಿರುವಾಗಲೇ ದರೆಪ್ಪ ಸುಸ್ತಾಗಿ ನಿದ್ದಿ ಉಡಿಯಾಗ ಬಿದ್ದಿದ್ದ.

***

ಬೆಳಗಿನ ಜಾವ ಯಾವಾಗಲೋ ದರ್ಯಾನನ್ನು ಎಬ್ಬಿಸಿಕೊಂಡು ಸಿಕ್ಕ ಆಟೋ ಹಿಡಿದುಕೊಂಡು ಸುಡುಗಾಡಿಗೆ ಕರೆದುಕೊಂಡು ಬಂದಿದ್ದಳು ಮಾತೆವ್ವ. ಮಳೆ ತಣ್ಣಗೆ ಹಣಿಯುತ್ತಲೆ ಇತ್ತು. ನಾಲ್ಕು ಗೋಡೆಯ ಮೇಲೆ ತಗಡಿನ ಶೀಟು ಹೊದಿಸಿರುವ ಒಂದು ಗೂಡಿನಲ್ಲಿಯೇ ಇವರ ವಂಶದ ಬಳ್ಳಿ ಚಿಗಿತು ಹಬ್ಬತೊಡಗಿ ಈ ಹಂತಕ್ಕೆ ಬಂದಿತ್ತು. ಆ ಗೂಡಿನಲ್ಲೆ ಈಗ ಸ್ಟೇಲ್ಲಾಳ ಬಾಣಂತನವಾಗಬೇಕು.

ಆ ಬೆಳಗ್ಗೆ ಮನೆಗೆ ಬಂದರೆ ಮನೆ ತುಂಬ ತಟ ತಟ, ಯಾವತ್ತೋ ಹೊದೆಸಿದ ತಗಡುಗಳು ಅಲ್ಲಲ್ಲಿ ತೂತು ಬಿದ್ದ ಸೋರುತ್ತಿದ್ದವು. ಬಾಗಿಲುಗಳಿಲ್ಲದ ಕಿಡಕಿಯಿಂದ ರಾಜೋರೋಷವಾಗಿ ಪ್ರವೇಶ ಮಾಡುತ್ತಿದ್ದ ಮಳೆಗಾಳಿಗೆ ಮಾತೆವ್ವ ಉಡಿಯಲ್ಲಿನ ಮಗು ಅವಚಿಕೊಂಡು ದಿಗಿಲಿಗೆ ಬಿದ್ದು ದರ್ಯಾನತ್ತ ನೋಡಿದಳು. ನಿದ್ದೆಯ ಮಂಪರಿನಲ್ಲಿದ್ದ ದರ್ಯಾ ಸಿಕ್ಕ ಹಾಸಿಗೆ ತುಗೊಂಡು ರುದ್ರಮಂಟಪದ ಕಡೆ ಹೊಂಟಬಿಟ್ಟಿದ್ದ.

‘ಎ ಮೂಳಾ, ಹಂಗ ಹೊಂಟೆಲ್ಲ, ಅಟು ಖಬರೈತಿಲ್ಲ ನಿಂಗ, ಮಗಳ ಹಸಿ ಮೈಯ್ಯಾಕಿ ಆದಾಳ ಅನ್ನೂದರ ಗೊತ್ತೈತಿಲ್ಲೋ. ಮನಿ ನೋಡಿದರ ಒಂದ ಸಂವನ ಸೋರತೈತಿ. ಹೋಗು. ಎನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲ ಕಿಡಕಿ ಬಂದ್ ಮಾಡಿ ಬಾ.’ ಅಂತ ಆದೇಶಿಸಿಬಿಟ್ಟಳು.

ಸುರಿಯುವ ಮಳೆಯೊಳಗ ರೇಗಾಡುತ್ತಲೇ ಹೊರಗೆ ಹೋದ ದರಿಯ ಕಿಡಕಿ ಹ್ಯಾಂಗ ಮುಚ್ಚೋದು ಅಂತ ಸ್ವಲ್ಪ ಹೊತ್ತು ವಿಚಾರ ಮಾಡ್ದ. ಏನೇನೋ ದೇನಕಿ ಹಾಕ್ಕೊಂಡು ಹುಡುಕಾಡಿದ. ಏನೂ ಸಿಗಲಿಲ್ಲ. ಅದೆ ಹೊತ್ತಲ್ಲಿ ಬಿದ್ದ ಕೋಲ್ಮಿಂಚಿನ ಬೆಳಕಲ್ಲಿ ಗೋರಿಗಳ ಮೇಲೆ ಹುಗಿಯಲಾಗಿದ್ದ ನಾಮಫಲಕಗಳು ಇವನನ್ನು ಕರದಂಗಾತು. ಜೀವವಿರುವ ಮನುಷ್ಯರಿಗಿಂತ ಸತ್ತ ಮನುಷ್ಯರೆ ಒಳ್ಳೆಯವರು ಎನ್ನುವ ಅವನು ನಂಬಿದ ಏಕೈಕ ತತ್ವ ಈ ಸಮಯದಲ್ಲಿ ಮತ್ತೆ ನೆನಪಿಗೆ ಬಂದು ಮನಸ್ಸು ಅರಳಿತು. ನೂರಾರು ವರ್ಷದ ಹಿಂದ ಗೊರಿಗಳೊಳಗ ಮಲ ಮುಂತಾದ ಸಜ್ಜನರು ‘ಬಾ ದರ್ಯಾ’ ಅಂತ ಕರೆದಂಗಾತು. ಈ ಹಿರಿಕರ ಶತಮಾನದ ಗೋರಿಗಳು ತಮ್ಮ ಮೈಮೇಲಿನ ಗಚ್ಚು ಸಿಮೆಂಟ್ ಉದುರಿ ಹೋಗಿ ಕೇವಲ ಮೂಲೆಗಲ್ಲು, ನಾಮಪಲಕಗಳ ಅಸ್ತಿಪಂಜರವನ್ನು ಮಾತ್ರ ಹೊದ್ದು ನಿಂತಿದ್ದವು. ಕೆಲವು ಗೋರಿಗಳ ನಾಮಪಲಕವೂ ಕಳಚಿ ಬಿದ್ದು, ಯಾವುದೂ ಶಾಶ್ವತವಲ್ಲ ಎಂಬ ಲೋಕ ನೀತಿಗೆ ಸಾಕ್ಷಿಯಾಗಿದ್ದವು.  ದರ್ಯಾ ತನಗೆ ಬೇಕಾದ ಆಕಾರದ ಐದಾರು ನಾಮಫಲಕಗಳನ್ನು ತಂದು ಗಾಳಿ ಮಳೆ ಪ್ರವೇಶಿಸದಂತೆ ಕೋಲಿಯ ಕಿಡಕಿಗಳಿಗೆ ಮುಚ್ಚಿದ.

ಒಳಗೆ ಮಗು ಕಿಲ ಕಿಲ ಅಂತ ನಗುತ್ತಿತ್ತು. ಹೆರಿಗೆ ಸುಸ್ತಿನಲ್ಲಿದ್ದ ಮಗಳು ನಿದ್ದೆ ಹೋಗಿದ್ದಳು. ಮಾತೆವ್ವ ಮಗಳು ಮೊಮ್ಮಗಳಿಗೆ ಮಳೆ ನೀರು ಸಿಡಿಯದಂತೆ ಹಗ್ಗದ ಮಂಚದ ಮೇಲೆ ಪ್ಲ್ಯಾಸ್ಟಿಕ್ ಹಾಳೆಯೊಂದನ್ನು ಕಟ್ಟುತ್ತಿದ್ದಳು. ಒಂದೆರಡು ಗೋಣಿ ಚೀಲಗಳನ್ನು ತೆಗೆದುಕೊಂಡ ದರ್ಯಾ ಮಲಗಲು ರುದ್ರಮಂಟಪದತ್ತ ಹೆಜ್ಜೆ ಹಾಕಿದ. ನಿದ್ರೆ ಕಣ್ತುಂಬುವವರೆಗೆ ನೆನಪುಗಳು ಅವನಿಗೆ ಮತ್ತೆ ಜೊತೆಯಾದವು.

ಮರುದಿನ ಬೆಳಗ್ಗೆ ಮಾತೆವ್ವ ಹಾಸಿಗೆ ಜಗ್ಗಿ ಎಬ್ಬಿಸಿದಾಗಲೇ ಅವನಿಗೆ ಎಚ್ಚರವಾದುದು. ‘ಒಂದು ಬದುಕು ಬರೂದೈತಿ. ಒಂದು ಕುಣಿ ರೆಡಿ ಮಾಡಬೇಕು, ಎದ್ದೇಳು.’ ಅಂತ ಹಾಸಿಗೆ ಜಗ್ಗತೊಡಗಿದಳು. ತಮ್ಮೊಡಲಿಗೆ ಅನ್ನ ಹಾಕುವ ಹೆಣಗಳನ್ನೆ ಬದುಕು ಎಂದು ಕರೆಯುವ ಕಾಯಕ ಜೋಡಿಯದು.

‘ಇನ್ನೊಂದು ತಾಸಿನ್ಯಾಗ ತರ್ತಾರಂತ ಜಲ್ದಿ ಎಳು’ ಅನಕೋತ ಅಂವ ಹೊಳ್ಳಿ ಮಕ್ಕೊಂಡು ಗಿಕ್ಕೊಂಡಾನು ಅಂತ ಅಂವನ ಕೌದಿಯನ್ನು ಬಗಲಲ್ಲಿ ಇಟ್ಟುಕೊಂಡೆ ಮಾತೆವ್ವ ಕೋಲಿ ಕಡೆ ನಡೆದಳು. ಅವಳ ಹಿಂದಿಂದ ಆಕಳಿಸಿಕೊತ ಹೊದ ದರಿಯ ಬಿಸಿ ಬಿಸಿ ಚಾ ಕುಡ್ದು ಮೊಮ್ಮಗಳಿಗೆ ಮುಖ ನೋಡಿ ನಿನ್ನ ದರ್ಶನದಿಂದ ಇವತ್ತು ಚಲೋತಂಗ ಚಿಲ್ಲರೆ ಬರಲೆವ್ವ ನಿಮ್ಮವ್ವಗ ಕೋಳಿ ಸಾರು ಮಾಡಿ ಹಾಕ್ತೆನಿ ಅನಕೋತ ಸಲಕಿ ಕೆಬ್ಬಣ ಪುಟ್ಟಿ ತುಗೊಂಡು ಹೊರ ನಡೆದ.

ಒಂದು ಮೂಲೇಲಿ ಜಾಗ ಗುರುತಿಸಿ ಹಡ್ಡಬೇಕಂದವನಿಗೆ ಏನೋ ನೆನಪಾಗಿ ಸುಡುಗಾಡಿನ ಗೇಟ್‍ಕಡೆ ನಡೆದ. ಸುಡುಗಾಡಿನ ತಿರುವಿನಲ್ಲಿದ್ದ ಸರೆ ಅಂಗಡಿಗೆ ಹೋಗಿ ಉದ್ರಿ ಹೇಳಿ ಒಂದು ಬಾಟಲಿ ಹೊಟ್ಟಿಗಿಳಿಸಿ ಬಂದು ಕುಣಿ ತೋಡತೊಡಗಿದ. ಸ್ವಲ್ಪ ಹೊತ್ತಿಗೆ ತನ್ನ ಸೆರಗನ್ನೆ ಸಿಂಬಿಯನ್ನಾಗಿ ಮಾಡಕೋತ ಮನಾತೆವ್ವನೂ ಬಂದೂ ಜೋಡಾದ್ಲು. ಇಂವ ಕ್ಷಣ ಕ್ಷಣಕ್ಕೂ ಕುಣಿಯೊಳಗ ಇಳಿಯುತ್ತಾ ಹೋದಂತೆ ಮಾತೆವ್ವಳೂ ಕುಣಿಯೊಳಗ ಇಳಿದ್ಲು. ಇಂವ ಸಲಕಿಗೆ ತುಂಬೋದು, ಮಾತೆವ್ವ ಬುಟ್ಟಿ ಹೊರಗ ಚೆಲ್ಲೋದು ಸೂರ್ಯ ಹೆಗಲ ಮೇಲೆ ಬರೂವರೆಗೂ….

***

ಕುಣ್ಯಾಗ ಹೆಣ ಇಟ್ಟ ಮಂದಿ ನಿರುಮ್ಮಳಾಗಿ ಮನೆ ಕಡೆ ಹೊರಡುವಾಗಲೇ ಅವರಿಗೆ ಆ ನಾಮಪಲಕಗಳು ಕಣ್ಣಿಗೆ ಬಿದ್ದು ಮುಂದಿನ ವೀಪರೀತಕ್ಕೆ ಕಾರಣವಾಗಿದ್ದವು. ಆ ಗುಂಪಿನಲ್ಲಿದ ಕಹಿರಸ (ಕರ್ನಾಟಕ ಹಿಂದೂ ರಕ್ಷಣಾ ಸಮಿತಿ) ಮುಖಂಡನೊಬ್ಬನ ಚುರುಕುಗಣ್ಣುಗಳಲ್ಲಿ ಕಿಡಕಿಗೆ ಆಸರಾಗಿ ಇಟ್ಟಿದ್ದ ಆ ನಾಮಫಲಕಗಳು ಪ್ರತಿಫಲಿಸಿ ಅವು ಕೆಂಪಾಗಲು ಕಾರಣವಾಗಿದ್ದವು. ‘ಅಯ್ಯೋ ನಮ್ಮ ಹಿರಿಕರು ಉಲ್ಟಾ ಪಲ್ಟಾ ಕುಂತಾರ, ಕರಿರಿ ಆ ಕಿರಿಸ್ತಾನ್ ಬೊಳಿ ಮಗನ್ನ’ ಅಂತ ಚೀರಾಡತೋಡಗಿದ್ದನ್ನು ನೋಡಿದ ಮಾತೆವ್ವ ಭಯದಿಂದ ಥರಗುಟ್ಟಿ ಒಳಗೆ ದನಿವಾರಿಸಿಕೊಳ್ಳುತ್ತಿದ್ದ ಗಂಡನನ್ನು ಕರೆದಳು. ದರ್ಯಾ ತೇಲಗಣ್ಣು ಮೇಲುಗಣ್ಣು ಹಾಕೋತ ಬಂದ ನಿಂತ.

‘ಮಗನ ಇಂವನ್ಯಾಕ ಇಲ್ಲಿ ಇಟಗೊಂಡಿದ್ದಿ, ಸೊಕ್ಕ ಮೈ ಏರಿತೇನ’
‘ಎಪ್ಪ ರಾತ್ರಿ ಮಳಿ ಬರತಿತ್ತ ಅದಕ್ಕ..’
‘ಅದಕ್ಕ ನಮ್ಮ ಹಿರಿಯಾರ ಬೇಕೇನೋ ಮಗನ ನಿನಗ.. ಯಾರನ್ನ ಕೇಳಿ ತೊಗೊಂಡಿ.’
‘ಎಪ್ಪ ಯಾರನ್ನೇನು ಕೇಳೋದು. ಹುಟ್ಟಿದಾಗಿಂದ ಇಲ್ಲಿ ಬದುಕೇನಿ, ಈ ಸುಡಗಾಡ ನನ್ನ ಮನಿ, ಇಲ್ಲಿ ಮಕ್ಕೊಂಡರಲ್ಲಾ, ಈ ಗೋರಿಗಳೊಳಗ, ಅವರು ನಮ್ಮ ದೇವರು.. ನನ್ನ ಮೊಮ್ಮಗಳ ಕಷ್ಟ ನೋಡಲಾರದ ಅವರ ನನಗ ಈ ಪಾಠಿಗಲ್ಲು ತೊಗೊಂಡು ಹೋಗು ಅಂದ್ರು, ಅಂದಕ್ಕ ತಂದ ಇಟಗೊನ್ನಿ.’

ಒಂದಿಷ್ಟು ಜನ ಕೊಳ್ಳೆಂದು ನಕ್ಕರು. ಆದ್ರ ಒಬ್ಬ ‘ಮಗನ್ನ ಸುಳ್ಳು ಹೇಳತಿ’ ಅಂತ ಗುಂಪಿನಲ್ಲಿದ್ದವನೊಬ್ಬ ಜಾಡಿಸಿ ಒದ್ದೆಬಿಟ್ಟ! ಇನ್ನೊಂದಿಷ್ಟು ಜನ ಬಿದ್ದವನ ತುಳಿಯಲು ಮುಂದೆ ಸರಿದರು.
ಗುಂಪಿನಲ್ಲಿದ್ದ ಹಿರಿಯನೊಬ್ಬ ಇದನ್ನೆಲ್ಲ ನೋಡಲಾರದೆ ‘ಏ ಒದಿಬ್ಯಾಡ್ರೋ ಅಟ್ರಾಸಿಟಿ ಕೇಸ್ ಹಾಕಿದ್ರ ಜಡಾ ಆಕೈತಿ’ ಅಂತ ಅವರನ್ನೆಲ್ಲ ಹಿಂದೆ ಸರಿಸಿದ.

ಕಹಿರಸ ಮುಖಂಡ ಇನ್ನು ಬುಸುಗುಡುತ್ತಲೇ ಇದ್ದ. ‘ಕಿರಿಸ್ತಾನ ಮಗನ್ನ ನಮ್ಮ ಸುಡುಗಾಡಿಂದ ಒದ್ದೋಡಿಸುವರೆಗೂ ನಮ್ಮ ಹಿರಿಕರ ಈ ಗೋಳು ತಪ್ಪುವಂಗಿಲ್ಲ. ಮೊದಲು ಇಂವನ ಮ್ಯಾಲೆ ಒಂದು ಕೇಸು ಜಡಿಯೋನು ಬರ್ಯೋ’ ಅಂತ ಒಂದಿಷ್ಟು ಗುಂಪು ಹೊಂಡಿಸಿಗೊಂಡು ಹೊರಟೇ ಬಿಟ್ಟ. ಹೋಗುವ ಮುನ್ನ ಸಾಕ್ಷಿಗಿರಲೆಂದು ತನ್ನ ಮೊಬೈಲ್‍ನಿಂದ ಉಲ್ಟಾ ಪಲ್ಟಾ ಇಟ್ಟಿದ್ದ ನಾಮಫಲಕಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ.

ಅವನಿಗೆ ಕ್ರಿಶ್ಚಿಯನ್ ಅನುಯಾಯಿಗಳ ಮೇಲೆ, ಅದರಲ್ಲೂ ಯಾರ ಯಾರದೋ ಮಾತು ಕೇಳಿ ತಮ್ಮ ಧರ್ಮವನ್ನೆ ಮಾರಿಕೊಂಡವರ ಮೇಲೆ ಬಹಳ ಸಿಟ್ಟಿತ್ತು. ಭಾರತ ಹಿಂದೂಗಳ ದೇಶವೆಂದು ಆತ ಬಲವಾಗಿ ನಂಬಿದ್ದ. ಹೇಗಾದರೂ ಮಾಡಿ ಅನ್ಯ ಧರ್ಮದ ಕುನ್ನಿಗಳನ್ನ ಓಡಿಸೋಣ ಎಂದು ಆಗಾಗ ಸಭೆಗಳಲ್ಲಿ ಭಾಷಣ ಮಾಡುತ್ತಿದ್ದ. ಆತ ಬಹಳ ದಿನಗಳ ನಂತರ ಮಾತನ್ನು ಕೃತಿಗಿಳಿಸಲು ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದೆಂಬ ಹುಮ್ಮಸ್ಸಿನಲ್ಲಿದ್ದ.

ಮುಸಲರ ಹುಡಗನೊಬ್ಬ ಹಿಂದೂ ಹುಡುಗಿಗೆ ಕಿಚಾಯಿಸಿದ್ದರ ಪ್ರಕರಣವೊಂದರ ಬಗ್ಗೆ ತಲೆಬಿಸಿ ಮಾಡಿಕೊಂಡ ಕುಂತಿದ್ದ ಪಿಎಸ್‍ಐ ಸೂರ್ಯರೆಡ್ಡಿ ಅವರು ಕಹಿರಸ ಸಂಘಟನೆಯವರು ತಂದ ದೂರನ್ನು ಆಲಿಸಿ ಮತ್ತಷ್ಟು ಗರಂ ಆಗಿದ್ದರು. ‘ಕೇವಲ ನಾಮಫಲಕಗಳ ಕಳುವು ಅಂಥ ಕೇಸು ಜಡಿದರೆ ಅದು ಸ್ಟ್ರಾಂಗ್ ಆಗೂದಿಲ್ಲ. ಸುಡಾಗಾಡಿನ್ಯಾಗ ಅಸ್ತಿಪಂಜರ, ಎಲುಬು, ಆಗಷ್ಟೆ ಹುಗಿದ ಹೆಣ ಮಾರ್ತಾನ ಅಂತ ಕೇಸ್ ಜಡಿರಿ. ಒಂದಷ್ಟು ವರ್ಷ ಕಂಬಿ ಎಣಿಸಲಿ ಮಗಾ’ ಅಂತ ತಮಗೆ ತಿಳಿದ ಕೆಲವು ಸೆಕ್ಷೆನ್‍ಗಳ ನಂಬರ್ ಹೇಳಿ ತಮ್ಮ ತಲೆಬಿಸಿಯನ್ನು ಸ್ವಲ್ಪಮಟ್ಟಿಗೆ ತಣ್ಣಗೆ ಮಾಡಿಕೊಂಡರು. ಜೊತೆಗೆ ಕಹಿರಸ ಸಂಘಟನೆ ಮುಖ್ಯಸ್ಥರಿಂದ ಶಹಬ್ಬಾಷಗಿರಿ ಸಿಕ್ಕು ಮತ್ತಷ್ಟು ಖುಷಿಗೊಂಡರು.

ಇಲ್ಲಿ ಕೇಸು ಜಡಿಯಲಾಗುತ್ತಿದ್ದರೆ ಅಲ್ಲಿ ರುದ್ರಮಂಟಪದೊಳಗೆ ನೆಮ್ಮದಿಯ ನಿದ್ದೆಯಲ್ಲಿದ್ದವನನ್ನು ಪೋಲೀಸ್ ಪೆದೆಗಳು ಎಳೆದು ತಂದರು. ಅಷ್ಟೊತ್ತಿಗಾಗಲೇ ಕಹಿರಸ ವೇದಿಕೆಯ ಸಮಾಜಸೇವಕರು ತಮಗೆ ಗೊತ್ತಿದ್ದ ಟಿವಿ ರೀಪೋರ್ಟ್‍ರ್‍ಗಳಿಗೆ ಪೋನಾಯಿಸಿ ಕರೆಸಿಕೊಂಡು ತಮ್ಮ ಸೇವೆಯನ್ನು ಸಾಧ್ಯಂತವಾಗಿ ವಿವರಿಸುವಲ್ಲಿ ತಲ್ಲೀನರಾಗಿದ್ದರು. ಅಲ್ಲಿಗೆ ಯಾವದೋ ಲೋಕದ ಪ್ರಾಣಿಯಂತೆ ಹಿಡಿದು ತರಲಾದ ದರ್ಯಾನನ್ನು ನೋಡಿದ ಟಿವಿ ವರದಿಗಾರರು ತಮ್ಮ ಕ್ಯಾಮರಾವನ್ನು ದರಿಯನತ್ತ ತಿರುಗಿಸಿದರು. ಕೇಸಿನ ತಳಬುಡವನ್ನು ಅರಿಯದ ದರಿಯ ಎಂದಿನಂತೆ ಹಲ್ಕಿರಿದು ಪೋಜು ಕೊಟ್ಟ. ಅವನನ್ನು ಸ್ಟೇಷನ್ನಿನಲ್ಲೆ ಇದ್ದ ಕಂಬಿಯೊಳಗೆ ನೂಕಿ ಕೀಲಿ ಜಡಿಯಲಾಯಿತು. ಇದ್ಯಾವುದರ ತಳಬುಡವೂ ಅರ್ಥವಾಗದ, ಅರ್ಥೈಸಿಕೊಳ್ಳಲು ಪ್ರಯತ್ನಿಸದ ದರಿಯ ಅಲ್ಲಿಯೆ ಟಾವೆಲ್ಲು ಚೆಲ್ಲಿ ಅಡ್ಡಾಗಿಬಿಟ್ಟ. ಬಹುಶಃ ಕುಡಿದದ್ದು ಇನ್ನು ಇಳಿಯದಿದ್ದುದರಿಂದ ಮತ್ತೆ ನೆನಪುಗಳ ಲೋಕದಲ್ಲಿ ವಿಹರಿಸಿ ನಿದ್ರೆಯ ಪಾತಳಿಗೆ ಬಿದ್ದು ನಿರಮ್ಮಳನಾದ.

ಇತ್ತ ಮಾದ್ಯಮಗಳಲ್ಲಿ ನೋಡಿ ಈ ಪ್ರಕರಣವನ್ನು ಗಂಭೀರವಾಗಿ ಕೆಲವು ದೇಶಭಕ್ತರು ದೇಶದ ರಕ್ಷಣೆಗಾಗಿ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಒಟ್ಟಾದರು. ತುರ್ತು ಸಭೆಗಳನ್ನು ನಡೆಸಿದರು. ಇದರ ಫಲವಾಗಿ ಮಾರನೆ ದಿನವೇ ಸುಡುಗಾಡಿನ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಯಿತು. ಹೆಣ, ಅಸ್ತಿಪಂಜರ ಮಾರಾಟ ಮಾಡುವ, ಹಿಂದೂ ಗೋರಿಗಳನ್ನು ದ್ವಂಸಗೊಳಿಸಿ ಸಮಾಜದ ಕೋಮು ಸೌಹಾರ್ದವನ್ನು ಕೆಡಿಸುತ್ತಿರುವ ಕ್ರಿಶ್ಚಿಯನ್ ದೊರೆರಾಜ್‍ನ ಕುಟುಂಬವನ್ನು ಕೂಡಲೆ ಸ್ಮಶಾನದಿಂದ ಎತ್ತಂಗಡಿ ಮಾಡುವವರೆಗೂ ನಮ್ಮ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದರು. ಇದೆ ವೇಳೆ ಪ್ರತಿಭಟನಾಕಾರರಿಂದ ಮಾತೆವ್ವನ ಮನೆ ಮೇಲೆ ಕಲ್ಲುಗಳು ಬಿದ್ದವು. ಸುದ್ದಿ ತಿಳಿದ ಅಳಿಯ ಮುನ್ಸಿಪಾಲ್ಟಿ ನೌಕರ ಗಂಗರಾಜು ಎಲ್ಲಿದ್ದವನೋ ಓಡೋಡಿ ಬಂದು ತಾಬಡತೋಬಡ ತನ್ನ ಬಾಣಂತಿ ಹೆಂಡತಿ ಮತ್ತು ಅತ್ತೆ ಮಾತೆವ್ವನನ್ನು ತನ್ನ ತಗಡಿನ ಮನೆಗೆ ಸಾಗಿಸಿದ.

ಹೆಣಗಳ್ಳತನ ಘೋರವಾದ ಅಪರಾಧವೇ ಆದ್ದರಿಂದ ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿಗಳು ದರಿಯನಿಗೆ 5 ವರ್ಷ ಸಜೆಯನ್ನು ವಿಧಿಸಿದರು.

***

5 ವರ್ಷಗಳಲ್ಲಿ ಏನೇನೆಲ್ಲ ಬದಲಾಗಿತ್ತು. ಅಳಿಯ ಗಂಗರಾಜು ತನ್ನ ಹೆಂಡತಿ ಮತ್ತು ಮಾತೆವ್ವನನ್ನು ತನ್ನ ಮನೆಯಲ್ಲೆ ಇಟ್ಟುಕೊಂಡು ಬಿಟ್ಟಿದ್ದ. ಸಂಸಾರ ಪೂರ್ತಿ ದರಿಯನೊಂದಿಗೆ ಸಣ್ಣಪುಟ್ಟದಕ್ಕೆಲ್ಲ ಜಗಳಾಡಿಕೊಂಡೆ ಕಳಿದಿದ್ದ ಮಾತೆವ್ವ ಅಳಿಯನ ಮನೆ ಸೇರಿದ ಮೇಲೆ ಯಾರೊಂದಿಗೂ ಮಾತನಾಡುವುದನ್ನು ಬಿಟ್ಟು ಗಂಡನ ನೆನಪಲ್ಲಿ ದಿನವೂ ಕುಸಿಯುತ್ತಾ ಹೋಗಿ ಒಂದಿನ ಮಣ್ಣಲ್ಲಿ ಸೇರಿಹೋದಳು.

ಐದು ವರ್ಷದ ನಂತರ ಬಿಡುಗಡೆಗೊಂಡ ದರಿಯಜ್ಜ ಸುಡುಗಾಡಿಗೆ ಬಂದರೆ ಅಲ್ಲೇನಿದೆ ಮಣ್ಣು? ದರಿಯನ ಕುಟುಂಬದ ಅರಮನೆಯಂತಿದ್ದ ಮುರುಕಲು ಮನೆಯನ್ನು ಯಾವತ್ತೋ ಬಿಳಿಸಲಾಗಿದೆ. ಒಂದಲ್ಲಾ ಎರಡು ವಿದ್ಯುತ್ ಶವಾಗಾರಗಳನ್ನು ಜೋಡಿಸಲಾಗಿದೆ. ಅವುಗಳನ್ನು ನಡೆಸಲು ಪ್ಯಾಂಟು ಶರಟಿನ ನೌಕರರು ಪಾಳಿಯಲ್ಲಿದ್ದ ಹೆಣಗಳನ್ನು ಕಬ್ಬು ನುರಿಸುವಂತೆ ನುರಿಸುತ್ತಿದ್ದಾರೆ.

ಗೇಟ್ ಒಳಗೆ ನುಸುಳಿದ ಈ ಅಜ್ಜನನ್ನು ಕಂಡು ರಾಂಗಾದ ಕಾವಲುಗಾರ ‘ಏಯ್ ಯಜ್ಜಾ ಯಾಕ ಒಳಗ ಬರ್ತಿ? ಇಲ್ಲಿ ಜೀವ ಇರಾಕಿಲೆ ಒಳಗ ಬರಾಕ ಆಗೂದಿಲ್ಲ ಹೋಗ್ಹೋಗ’ ಅಂದ.

‘ಹಂಗಲ್ಲೊ ತಮ್ಮ ನನ್ನ ಹೆಂಡತಿ ಮಕ್ಕಳು ಇಲ್ಲೆ ಅದಾರ. ನನ್ನ ಮನಿ ಇಲ್ಲೇ ಐತೋ’ ಅಂತ ದರಿಯಜ್ಜ ಏನೇನೊ ಬಡಬಡಿಸತೊಡಗಿದ. ಕಾವಲುಗಾರನಿಗೆ ನಗು ಬಂತು. ಹೀಗೆಂದುಕೊಂಡೆ ಬರುವ ಹುಚ್ಚರನ್ನು ಆತ ಈ ಹಿಂದೆಯೂ ನೋಡಿದ್ದ. ಬಹುಶಃ ಅಜ್ಜನ ಹೆಂಡತಿ ಮಕ್ಕಳು ಯಾವದೋ ದುರಂತದಾಗ ಸತ್ತ ಮ್ಯಾಲ ಅವರನ್ನ ಇಲ್ಲೆ ಮಣ್ಣು ಮಾಡಿರಬೇಕು. ಅವರ ಸಾವು ಅಜ್ಜಗ ಹುಚ್ಚ ಹಿಡಿಸೈತಿ, ಪಾಪ. ಅನ್ಕೊಂಡ ಕಾವಲುಗಾರನಿಗೆ ಆ ಕ್ಷಣದಲ್ಲಿ ಹಳ್ಳಿಯಲ್ಲಿರುವ ತನ್ನ ತಂದೆಯ ನೆನಪಾದ. ಆದರೂ ಆತ ಅಸಹಾಯಕ. ಅತ್ಲಾಗ ಹೋಗ ಯಜ್ಜಾ, ರಾತ್ರಿ ಬಾಳ ಆಗೇತಿ ಅಂತ ಗೇಟ್ ಹಾಕತೋಡಗಿದ. drought-kelly-stewart-sieckತನ್ನ ಶಕ್ತಿ ಮೀರಿ ಗೇಟ್‍ಒಳಗೆ ನುಸಳಲು ಪ್ರಯತ್ನಿಸಿದ ದರಿಯಜ್ಜ ಕೊನೆಗೂ ಅದು ಸಾಧ್ಯವಾಗದೆ ಗೇಟ್ ಹೊರಗೆ ಉಳಿದು ಮುಸಗುಡತೊಡಗಿದ.

ಇದಾದ 8 ದಿನಗಳವರೆಗೂ ಅಜ್ಜ ಗೇಟ್ ಪಕ್ಕದ ಗಿಡದ ನೆರಳಲ್ಲಿ ತಳ ಊರಿದ್ದ. ಗೇಟ್ ಸಪ್ಪಳವಾದಾಗೊಮ್ಮೆ ಗೇಟ್ ಹತ್ತಿರ ಕಾಲೆಳೆದುಕೊಂಡು ಬರುತ್ತಿದ್ದ. ಒಳಗೆ ನುಸಳಲು ಸಾಧ್ಯವಾಗದೆ ಸೋತು ಗಿಡದ ಬಡ್ಡಿಗೆ ಹಿಂತಿರುಗುತ್ತಿದ್ದ. ಬರಬರುತ್ತ ಗೇಟಿನ ಕಡೆ ಕೇವಲ ಮಲಗಿದಲ್ಲಿಂದಲೇ ದೃಷ್ಟಿ ಹಾಯಿಸುತ್ತಿದ್ದ. 9ನೆ ದಿನ ಅಪರಾಹ್ನ ನೊಣಗಳು ಅವನ ದೇಹದೊಳಗೆ ಹೋಗಿಬರುವುದನ್ನು ಮಾಡುವ ಮೂಲಕ ಅವನ ಜೀವ ಹೋಗಿದ್ದನ್ನು ಜಗತ್ತಿಗೆ ಸಾರಲು ಯತ್ನಿಸುತ್ತಿದ್ದವು. ಆದರೆ, ತನ್ನದೆಯಾದ ಜಂಜಡದೊಳಗೆ ಮುಳುಗಿದ್ದ ಈ ಜಗತ್ತು ಇದ್ಯಾವುದರ ಪರಿವೆಯಿಲ್ಲದೆ ಬೈಕು, ಕಾರುಗಳಲ್ಲಿ ಕುಳಿತು ಓಡುತ್ತಲೇ ಇತ್ತು. ಎಲ್ಲಿಗೆ ಮುಟ್ಟುತ್ತೋ?

***