ಗಾಂಧಿ ಜಯಂತಿ ಕಥಾಸ್ಪರ್ಧೆ 2015 : ತೀರ್ಪುಗಾರರ ಮಾತು

– ಭಾರತೀದೇವಿ.ಪಿ

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ವರ್ತಮಾನ ನಡೆಸುವ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದ ಒಟ್ಟು 23 ಕತೆಗಳನ್ನು ಓದುವಾಗ ನನಗೆ ತೀವ್ರವಾಗಿ ಕಾಡಿದ್ದು ಕತೆಗಳ ಕುರಿತಾದ ನಮ್ಮ ಪೂರ್ವಗ್ರಹೀತಗಳು ಯಾವ ಯಾವ ಬಗೆಯಲ್ಲಿ ನಮ್ಮ ಪ್ರಜ್ಞೆಯಲ್ಲಿ ಬೇರೂರಿಬಿಟ್ಟಿವೆ ಮತ್ತು ಆ ಜಾಡಿನಲ್ಲಿ ಕತೆಗಾರ ಹೇಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂಬ ಸಂಗತಿಗಳು. ಕಾರಂತ, ತೇಜಸ್ವಿ, ಕುಂ.ವೀ, ವೈದೇಹಿ ಮೊದಲಾದವರ ಕಥಾಹಂದರಗಳು ಸರಳೀಕರಣಗೊಂಡು ಇಲ್ಲಿನ ಹಲವು ಕತೆಗಳಲ್ಲಿ ಕಾಣಿಸಿಕೊಂಡಿವೆ.

ಅನುಭವಗಳ ದಟ್ಟತೆ ಇದ್ದ ಮಾತ್ರಕ್ಕೆ ಒಂದು ನೆರೇಷನ್ ಕತೆಯಾಗಿಬಿಡುತ್ತದೆಯೇ? ಕತೆಯೆಂದ ಕೂಡಲೇ ವರ್ತಮಾನಕ್ಕೆ ಮುಖಾಮುಖಿಯಾಗುವುದಕ್ಕಿಂತ ಹೆಚ್ಚಾಗಿ ಬಾಲ್ಯದ, ಗ್ರಾಮ್ಯ ಜಗತ್ತಿಗೆ ಉತ್ಸಾಹದಿಂದ ಹೊರಳುವುದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ವಿಶಿಷ್ಟ ಸೊಗಡಿನ ಭಾಷೆಯಿದ್ದ ಮಾತ್ರಕ್ಕೆ ಕತೆ ಶ್ರೀಮಂತವಾಗಿಬಿಡುತ್ತದೆಯೇ? ಪೂರ್ವನಿರ್ಧರಿತ ವಿಷಯಗಳನ್ನು gandhi-katha-spardge-2015ತಿಳಿಯಪಡಿಸುವುದಕ್ಕೆ ಕತೆಯ ಹಂದರವನ್ನು ಹೆಣೆಯುವುದು ಕತೆಯ ಸಾಧ್ಯತೆಯನ್ನೇ ಕುಂಠಿತಗೊಳಿಸುವುದಿಲ್ಲವೇ? ಐಡಿಯಾಲಜಿಯನ್ನು ತಿಳಿಯಪಡಿಸುವುದಕ್ಕೆ ಹೆಣೆಯುವ ಕತೆಯ ಆವರಣ ಸೃಜನಶೀಲ ಬರಹದ ಸೀಮೆಗಳನ್ನು ನಿರ್ಬಂಧಿಸುವುದಿಲ್ಲವೇ?

ಹೀಗೆ ನೋಡಿದಾಗ ಕತೆಯ ಕಸುಬುಗಾರಿಕೆ ಸಿದ್ಧಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಹೆಣೆದ ಕತೆಗಳಿಗಿಂತ ತುಸು ಒರಟು, ಹಸಿ ಎನಿಸಿದರೂ ಬದುಕಿನ ಅನಂತ ಸಾಧ್ಯತೆಗಳ ಕಿಟಕಿಯನ್ನು ತೆರೆದೇ ಇರಿಸಿಕೊಂಡ ಕತೆಗಳು ಆಪ್ತವಾಗುತ್ತವೆ. ಕತೆಯನ್ನು ಹೇಳುವ ಪ್ರಕ್ರಿಯೆಯಲ್ಲೇ ಕತೆ ಮತ್ತು ಕತೆಗಾರ ಜೊತೆಜೊತೆಗೇ ತಮಗೇ ಅರಿಯದ ಬದುಕಿನ ಅಜ್ಞಾತಗಳನ್ನು ತಟ್ಟುತ್ತಾ ಸಾಗುವ ಕ್ರಿಯೆ ಎಲ್ಲೆಲ್ಲಿ ಕಾಣುತ್ತದೋ ಅಂತಹ ಕತೆಗಳು ಓದುಗನಿಗೂ ಬದುಕಿನ ಸಂಕೀರ್ಣತೆಯ ದರ್ಶನ ಮಾಡಿಸುತ್ತವೆ. ಅವು ಪ್ರಾದೇಶಿಕತೆ, ವ್ಯಕ್ತಿ, ತತ್ವಗಳ ಮೇರೆ ಮೀರಿ ಎಲ್ಲರ ಕತೆಗಳೂ ಆಗಿಬಿಡುತ್ತವೆ. ಈ ದಿಕ್ಕಿನಲ್ಲಿ ಇಲ್ಲಿನ ಕೆಲವು ಕತೆಗಳು ಇವೆ.

ಸ್ಪರ್ಧೆಗೆ ಬಂದಿರುವ ಒಟ್ಟು 23 ಕತೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದ ಕತೆ ಶಾಂತಿ.ಕೆ.ಎ ಅವರ ‘ಪಯಣ’. ಬದುಕಿನ ಸಂಕೀರ್ಣತೆ ಸಮಾಜದ ಸೀಮಿತ ನೈತಿಕ ಸೀಮೆಗಳನ್ನು ಮೀರಿದ್ದು. ಯಾವ ತೀರ್ಮಾನ, ಪಶ್ಚಾತ್ತಾಪ ಅಥವಾ ಹಲುಬುವಿಕೆಗಳಿಲ್ಲದೆ ಬದುಕಿನ ವರ್ತಮಾನವನ್ನು ತೀವ್ರವಾಗಿ ಅನುಭವಿಸುವ ಬಗೆ ಈ ಕತೆಯಲ್ಲಿ ಮೂಡಿದೆ. ಇದು ಒಂದು ಬಗೆಯ ಎಚ್ಚರದ ಕನಸು. ಇದನ್ನು ಕಥನವಾಗಿಸುವ ಪ್ರಕ್ರಿಯೆಯಲ್ಲಿ ಅವರ ಭಾಷಾ ಬಳಕೆಯ ಸೂಕ್ಷ್ಮತೆ ಮತ್ತು ಎಚ್ಚರ ವಿಶಿಷ್ಟವಾಗಿದೆ.

ಎರಡನೇ ಬಹುಮಾನ ಗಳಿಸಿದ ಹನುಮಂತ ಹಾಲಿಗೇರಿ ಅವರ ‘ಹಾಳು ಸುಡುಗಾಡ ಬದುಕು’ ಕತೆ ವಿವರಗಳ ಮೂಲಕ ಅನುಭವವನ್ನು ತೀವ್ರವಾಗಿ ಕಟ್ಟಿಕೊಡುತ್ತದೆ.  ಬದುಕು ಮತ್ತು ಧರ್ಮಗಳ ಅಸ್ತಿತ್ವದ ಹೊಯ್ದಾಟದಲ್ಲಿ ಹೆಣ ಸುಡುವ ಕಾಯಕ ನಡೆಸುವ ದರಿಯಜ್ಜನಂಥವರ ಬದುಕು ಚಿಂದಿಯಾಗುವುದನ್ನು ಕತೆ ಪರಿಣಾಮಕಾರಿಯಾಗಿ ಹೇಳುತ್ತದೆ. ಹೆಚ್ಚು ಸಂಕೀರ್ಣತೆಗೆ ವಾಲದೇ ದಟ್ಟ ವಿವರಗಳೇ ಈ ಕತೆಯ ಶಕ್ತಿಯಾಗಿದೆ.

ಮೂರನೇ ಬಹುಮಾನ ಗಳಿಸಿದ ಸಂವರ್ಥ ಸಾಹಿಲ್ ಅವರ ಕತೆ ‘ಮನ್ವಂತರ’ ಹಲವು ನೆಲೆಗಳಲ್ಲಿ ಬದುಕಿನ ಚಲನೆಯ ಗತಿಗೆ ಸೂಕ್ಷ್ಮವಾಗಿ ಪ್ರತಿಕ್ರಯಿಸುತ್ತದೆ. ಹಿಂದಿನ ತಲೆಮಾರಿನ ಜೀವ ಬದಲಾದ ಗತಿಗೆ ಸ್ಪಂದಿಸುತ್ತಾ, ಜೊತೆಗಿರುವವರ ಬಗ್ಗೆ ವಿಮರ್ಶಾತ್ಮಕವಾಗಿ ಇರುತ್ತಲೇ ಕೆಲವೊಂದು ವಿಚಾರಗಳಲ್ಲಿ ಹಳೆಯ ಜಾಡನ್ನು ಬಿಡದೆ ಒದ್ದಾಡುವ ಬಗೆಯನ್ನು ಸಂವರ್ಥ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇವರ ಜೊತೆ ಇವರಂತೆಯೇ ಭಿನ್ನ ಭಿನ್ನ ಗತಿಯಲ್ಲಿ ಸ್ಥಿತ್ಯಂತರಗಳಿಗೆ ಒಡ್ಡಿಕೊಳ್ಳುವ ಹಿರಿಯ, ಯುವ ಜೀವಗಳಿವೆ. ಈ ತೊಳಲಾಟಗಳನ್ನು, ಚಲನೆಯನ್ನು ದಾಖಲಿಸುವಲ್ಲಿ ಭಾಷೆಯ ಬಳಕೆ ಇನ್ನಷ್ಟು ಸೂಕ್ಷ್ಮವಾಗಿದ್ದರೆ ಕತೆಗೆ ವಿಸ್ತಾರವಾದ ಆಯಾಮ ದೊರೆಯುತ್ತಿತ್ತು. ಪಾತ್ರಗಳ ಸರಳೀಕರಣವಾಗುವುದು ತಪ್ಪುತ್ತಿತ್ತು.

ಮಹಾಂತೇಶ ನವಲ್‍ಕಲ್ ಅವರ ‘ಪಾಕಿಸ್ತಾನದಿಂದ ಪತ್ರ’ ದೇಶ ಇಬ್ಭಾಗವಾದಾಗ ಮನಸ್ಸುಗಳೂ ಒಡೆಯುತ್ತಾ ಹೇಗೆ ಸಹಜ ಮನುಷ್ಯ ಸಂಬಂಧಗಳ ಬಗೆಗೂ ಸಂವೇದನೆ ಕಳೆದುಕೊಂಡಿವೆ ಎಂಬುದನ್ನು ಹೇಳುತ್ತದೆ. ಮನಮುಟ್ಟುವಂತೆ ಕತೆಯ ನಿರೂಪಣೆ ಇದ್ದರೂ ಅದು ಕಾಣದ ದಾರಿಗಳನ್ನು ತಡಕುವ ಯತ್ನ ಮಾಡುವುದಿಲ್ಲ.

ಸ್ವಾಲಿಹ್ ತೋಡಾರ್ ಅವರ ‘ಉಡುಗೊರೆ’ ಹೊಟ್ಟೆಪಾಡಿಗಾಗಿ ಪರದೇಶದಲ್ಲಿ ಏನೆಲ್ಲ ಪಾಡು ಪಡುವ ಪುಡಿಮೋನು ಅರಬ್ ದೇಶಗಳ ಆಂತರಿಕ ಸಂಘರ್ಷಗಳಿಂದ ಬದುಕುವ ದಾರಿ ಕಳೆದುಕೊಂಡು ಊರಲ್ಲೂ ನೆಲೆ ಕಾಣದೆ ನಲುಗುವ ಕತೆ. ಧರ್ಮ, ಸ್ವಾರ್ಥಗಳ ಮೇಲಾಟದಲ್ಲಿ ಪುಡಿಮೋನುವಿನಂತಹ ಬಡವರ ಬದುಕು ಮೂರಾಬಟ್ಟೆಯಾಗುವುದು, ಪುಡಿಮೋನು ಉಳ್ಳವರನ್ನು ಅನುಕರಿಸ ಹೋಗಿ ಕೈಲಿದ್ದ ಅಲ್ಪಸ್ವಲ್ಪವನ್ನೂ ಕಳೆದುಕೊಳ್ಳುವುದು ಇವೆಲ್ಲವೂ ಓದುವಾಗ ವಿಷಾದ ಮೂಡಿಸುತ್ತದೆ. ಈ ಕತೆ ಓದುವಾಗ ಹಲವು ಕತೆಗಳ ನೆರಳು ಕಾಣುವುದು ಸುಳ್ಳಲ್ಲ.

ಇವು ಒಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ಇಲ್ಲಿನ ಕತೆಗಳನ್ನು ಓದಿದಾಗ ನನಗನಿಸಿದ ಸಂಗತಿಗಳು. ಕತೆಗಳ ಬಗ್ಗೆ ಹಿಂದೆಂದಿಗಿಂತ ಹೆಚ್ಚು ತಲೆಕೆಡಿಸಿಕೊಳ್ಳಲು ಕಾರಣವಾದ ಹಾಗೂ ವಿಭಿನ್ನ ಅನುಭವಗಳಿಗೆ ಒಡ್ಡಿಕೊಳ್ಳುವ ಅವಕಾಶವನ್ನು ಕತೆಗಳ ಓದಿನ ಮೂಲಕ ನೀಡಿದ ಎಲ್ಲ ಕತೆಗಾರರಿಗೆ ನಾನು ಆಭಾರಿ.

Leave a Reply

Your email address will not be published. Required fields are marked *