56 ಇಂಚಿನ ಎದೆಯ ಪರಿಣಾಮ : ವಿಷಗಾಳಿಯ ಭಾರತ

-ಬಿ.ಶ್ರೀಪಾದ ಭಟ್

ಒಂದು, ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಪ್ರಯುಕ್ತ 2, ಎಪ್ರಿಲ್ 2014 ರಂದು ಬಿಹಾರ್ ನ ನವಾಡ ದಲ್ಲಿ ನರೇಂದ್ರ ಮೋದಿ ಮಾಡಿದ ಭಾಷಣದ ಸಾರಾಂಶ “ನಾನು ದ್ವಾರಕಾ ನಗರದಿಂದ ಬಂದಿದ್ದೇನೆ ಮತ್ತು ದ್ವಾರಕೆಯೊಂದಿಗೆ ಯದುವಂಶಿಗಳಿಗೆ (ಬಿಹಾರದ ಯಾದವ ಸಮುದಾಯವನ್ನು ಉದ್ದೇಶಿಸಿ) modi_bjp_conclaveನೇರವಾದ ಸಂಪರ್ಕವಿದೆ. ಈ ಸಂಬಂಧದಿಂದಾಗಿ ನಾನು ಇಂದು ನನ್ನ ಮನೆಯಲ್ಲಿದ್ದೇನೆ ಎನ್ನುವ ಭಾವನೆ ಉಂಟಾಗುತ್ತಿದೆ. ಆದರೆ ಶ್ರೀ ಕ್ರಿಷ್ಣನನ್ನು ಪೂಜಿಸುವ, ಗೋವನ್ನು ತಮ್ಮ ದಿನಬಳಕೆಗೆ ಬಳಸುವ, ಪೂಜಿಸುವ ಇದೇ ಯಾದವರ ನಾಯಕರು ಈ ಪ್ರಾಣಿಗಳನ್ನು ಹೆಮ್ಮೆಯಿಂದ ನಾಶಪಡಿಸುವ ಜನರೊಂದಿಗೆ ಸೌಹಾರ್ದಯುತವಾಗಿ ವ್ಯವಹಾರ ಮಾಡುತ್ತಿದ್ದಾರೆ. ನಾವು ‘ಹಸಿರು ಕ್ರಾಂತಿ’ (ಗ್ರೀನ್ ರೆವಲ್ಯೂಶನ್)ಯ ಕುರಿತಾಗಿ ಕೇಳಿದ್ದೇವೆ, ನಾವು ಬಿಳಿ ಕ್ರಾಂತಿ (ವೈಟ್ ರೆವಲ್ಯೂಶನ್) ಕುರಿತಾಗಿ ಕೇಳಿದ್ದೇವೆ. ಆದರೆ ದೆಹಲಿ ಸರ್ಕಾರಕ್ಕೆ (ಯುಪಿಎ2) ಈ ಕ್ರಾಂತಿಗಳು ಬೇಕಾಗಿಲ್ಲ. ಅವರು ಇಂದು ಪಿಂಕ್ ರೆವಲ್ಯೂಶನ್ ಕುರಿತಾಗಿ ಸಮರ್ಥನೆಗೆ ತೊಡಗಿದ್ದಾರೆ. ಇದೇನೆಂದು ನಿಮಗೆ ಗೊತ್ತೆ (ಜನರನ್ನು ಉದ್ದೇಶಿಸಿ). ಅದು ಅವರ ಆಟ. ಅವರು ದೇಶವನ್ನು ಕತ್ತಲೆಯಲ್ಲಿಟ್ಟಿದ್ದಾರೆ. ನೀವು ಪ್ರಾಣಿಯೊಂದನ್ನು ವಧೆ ಮಾಡಿದಾಗ ಆಗ ಆ ಮಾಂಸದ ಬಣ್ಣವು ಪಿಂಕ್ ಆಗಿರುತ್ತದೆ. ಇದನ್ನೇ ‘ಪಿಂಕ್ ರೆವಲ್ಯೂಶನ್’ ಎಂದು ಕರೆಯುತ್ತಾರೆ. ಕೇಂದ್ರ ಸರ್ಕಾರವು ಈ ಮಾಂಸದ ರಫ್ತಿನಿಂದ ಅತ್ಯಧಿಕ ಆದಾಯ ಗಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ನಮ್ಮ ದಿನಬಳಕೆಯ ವಸ್ತುಗಳನ್ನು ಕದ್ದು ಬಾಂಗ್ಲಾ ದೇಶಕ್ಕೆ ಸಾಗಿಸಲಾಗುತ್ತಿದೆ. ದೇಶದಾದ್ಯಾಂತ ಈ ವಧಾಖಾನೆಗಳು ಕ್ರಿಯಾಶೀಲವಾಗಿವೆ. ಅಷ್ಟೇ ಅಲ್ಲ ದೆಹಲಿ ಸರ್ಕಾರವು ರೈತರಿಗೆ, ಯಾದವರಿಗೆ ಗೋವುಗಳನ್ನು ಪಾಲನೆ ಮಾಡಲು ಸಬ್ಸಿಡಿಯನ್ನು ಕೊಡುವುದಿಲ್ಲ, ಆದರೆ ಈ ಗೋವುಗಳನ್ನು ವಧೆ ಮಾಡುವ ವಧಾಖಾನೆಗಳಿಗೆ, ಹಾಲಿನ ನದಿಗಳನ್ನು ನಾಶಮಾಡುವವರಿಗೆ ಸಬ್ಸಿಡಿಯನ್ನು ಕೊಡುತ್ತದೆ. 2012ರಲ್ಲಿ ಹಿಂದೂ ರಾಜನೆಂದು ಖ್ಯಾತಿ ಗಳಿಸಿದ ಮಹಾರಾಣಾ ಪ್ರತಾಪ್ ಜನ್ಮ ದಿನದ ಸಮಾರಂಭದಲ್ಲಿ ಮಾತನಾಡುತ್ತಾ ನರೇಂದ್ರ ಮೋದಿಯವರು ರಾಣಾ ಪ್ರತಾಪ್ ಗೋರಕ್ಷಣೆಗಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಆದರೆ ಇಂದು ಏನಾಗುತ್ತಿದೆ? ಸುಪ್ರೀಂ ಕೋರ್ಟ ಸಹ ಇಂದು ರಾಷ್ಟ್ರೀಯ ಗೋವು ಸಂರಕ್ಷಣ ಮಸೂದೆಯ ಅವಶ್ಯಕತೆ ಇದೆ ಎಂದು ಹೇಳುತ್ತಿದೆ. ಆದರೆ ವೋಟ್ ಬ್ಯಾಂಕ್ ರಾಜಕಾರಕ್ಕಾಗಿ ಕೇಂದ್ರ ಸರ್ಕಾರವು ಈ ಮಸೂದೆಯನ್ನು ತರಲು ತಿರಸ್ಕರಿಸುತ್ತಿದೆ. ಹಣವನ್ನು ಗಳಿಸಲು ಗೋ ಮಾತೆಯನ್ನು ವಧೆ ಮಾಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ” ಎಂದು ಹೇಳಿದ್ದಾರೆ. (ಕೃಪೆ ; ಶೋಯೆಬ್ ಡೇನಿಯಲ್).

28, ಸೆಪ್ಟೆಂಬರ್, 2015ರಂದು ಪಶ್ಚಿಮ ಉತ್ತರ ಪ್ರದೇಶದ ದಾದ್ರಿ ಗ್ರಾಮದಲ್ಲಿ ಕಮ್ಮಾರ ವೃತ್ತಿಯನ್ನು ಮಾಡುತ್ತಿದ್ದ 51 ವರ್ಷದmohamad-ikhlaq-or-akhlaq-dadri ‘ಮೊಹಮ್ಮದ್ ಅಕ್ಲೇಖ್ ಅವರನ್ನು ತಮ್ಮ ಮನೆಯಲ್ಲಿ ದನದ ಮಾಂಸವನ್ನು ಬಚ್ಚಿಟ್ಟಿದ್ದಾರೆ ಎಂದು ಆಪಾದಿಸಿ ಹಿಂದೂ ಮತಾಂಧ ಯುವಕರು ಹತ್ಯೆ ಮಾಡಿದರು. ಆದರೆ ಅಕ್ಲೇಖ್ ಒಬ್ಬ ಸರಳ ಮುಸ್ಲಿಂ ನಾಗರಿಕರಾಗಿದ್ದರು. ಅವರ ಹಿರಿಯ ಮಗ ಸರ್ತಾಜ್ ಅವರು ಬಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಕಿರಿಯ ಮಗ ದಾನೀಶ್ ಈ ಮತಾಂಧರ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಜೀವ ಮರಣದ ನಡುವೆ ಹೋರಾಡುತ್ತಿದ್ದಾರೆ..

ಈ ಹತ್ಯೆಯನ್ನು ಖಂಡಿಸುತ್ತಾ ಶಿವ ವಿಶ್ವನಾಥನ್ ಅವರು ಹಿಂಸೆಯು ಮನಸ್ಸಿನ ಭಾವನೆಗಳ ಅಭಿವ್ಯಕ್ತಿ. ಈ ಹಿಂಸೆಯು ವರ್ಗೀಕರಣದ ತರ್ಕವನ್ನು ಅನುಸರಿಸುತ್ತದೆ ಮತ್ತು ಐಡಿಯಾಲಜಿಯು ಇದನ್ನು ಛಲದಿಂದ ಸಮರ್ಥಿಸಿಕೊಳ್ಳುತ್ತದೆ, ಇದು ನನ್ನನ್ನು ಭಯಗೊಳಿಸುತ್ತದೆ. ಒಬ್ಬ ವ್ಯಕ್ತಿ ಸತ್ತಿದ್ದಾನೆ ಇಲ್ಲಿ ನಾವು ಬೀಫ್ ಕುರಿತಾಗಿ ಒಂದು ಬಗೆಯ ದೇಶಪ್ರೇಮವನ್ನು ಮುಖ್ಯವಾಗಿಟ್ಟುಕೊಂಡು ಚರ್ಚೆಯಲ್ಲಿ ತೊಡಗಿದ್ದೇವೆ. 50 ವರ್ಷದ ಮೊಹಮ್ಮದ್ ಅವರು ಕೊಲೆಗೀಡಾಗಿದ್ದಾರೆ. ಆದರೆ ಈ ಘಟನೆಯನ್ನು ಬಳಸಿಕೊಳ್ಳುತ್ತಿರುವ ಬಗೆಯು ಈ ದುಷ್ಕೃತ್ಯಕ್ಕೆ ಒಂದು ಬಗೆಯ ಕೇಡಿನ ಕವಚವನ್ನು ತೊಡಿಸಿದೆ. ಆಹಾರದ ತರ್ಕವು ಕೊಲೆಯ ತರ್ಕವಾಗಿ ವಿಶದಪಡಿಸಿದೆ.

ಒಂದು ಪವಿತ್ರವಾದ ಗೋವನ್ನು ರಕ್ಷಿಸಲು ನೀವು ಮನುಷ್ಯನ ಪವಿತ್ರತೆಯನ್ನು ನಿರಾಕರಿಸಬಹುದು ಮತ್ತು ಕೇವಲ ಅನುಮಾನದ ಅಂಶಗಳಿಂದಲೇ ಅವನನ್ನು ಕೊಲೆ ಮಾಡಬಹುದು. ಬಿಜೆಪಿ ರಾಜಕಾರಣಿಗಳು ಬಹಿರಂಗವಾಗಿ ರಂಗಕ್ಕೆ ಧುಮುಕಿ ಈ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಧಾನ ಮಂತ್ರಿಯವರು ಮಾತ್ರ ಮೌನದಿಂದಿದ್ದಾರೆ. ಈ ಪೂರ್ವಸಂಕಲ್ಪದ ಮೌನವು ಈ ಚಿಂತಾದಾಯಕ ಪರಿಸ್ಥಿತಿಗೆ ಕೇಡಿನ ಸ್ಪರ್ಶವನ್ನು ನೀಡಿದೆ. ನರೇಂದ್ರ ಮೋದಿಯವರ ಮೌನವು ವಿಶ್ಲೇಷಣೆಗೆ ಯೋಗ್ಯವಾಗಿದೆ. ಈ ವ್ಯಕ್ತಿಯು ಹಿಂದೊಮ್ಮೆ ಮನಮೋಹನ್ ಸಿಂಗ್ ಅವರ ದೌರ್ಬಲ್ಯವನ್ನು ಗೇಲಿ ಮಾಡಿದ್ದರು. ಆದರೆ ಇಂದು ಸ್ವತಃ ತಾವೇ ಒಬ್ಬ ದೌರ್ಬಲ್ಯ ರಾಜಕಾರಣಿಯಾಗಿದ್ದಾರೆ. ಮೋದಿಯವರ ಈ ಮೌನವು ದುಖತಪ್ತವಾದ ಶೋಕದ ಮೌನವಲ್ಲ. ಭಂಡತನದಿಂದ ಕೂಡಿದ ಈ ಮೌನವು ಬಲಿಪಶುವಿಗೆ ಘನತೆಯನ್ನು ನಿರಾಕರಿಸುತ್ತದೆ. ಇಂಡಿಯಾದ ನಾಗರಿಕರಿಗಿಂತಲು ನೀವು ಹೆಚ್ಚಿನ ಭಾರತೀಯರು ಎಂದು ಅನಿವಾಸಿ ಭಾರತೀಯರಿಗೆ ಹೇಳುವ ಪ್ರಧಾನ ಮಂತ್ರಿಯು ಭಾರತದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವವನ ತಂದೆ ಕೊಲೆಯಾದಾಗ ಅದು ನಡೆದೇ ಇಲ್ಲವೆಂಬಂತೆ ಹಗಲುವೇಷದಿಂದ ವರ್ತಿಸುತ್ತಾರೆ. ಮೋದಿಯವರ ಈ ವರ್ತನೆಯು ದಾದ್ರಿ ಗ್ರಾಮದ ಈ ಘಟನೆಯು ಮುಝಫರ್ ನಗರದಷ್ಟೇ ಭಯಹುಟ್ಟಿಸುತ್ತದೆ ಎಂದು ಹೇಳುತ್ತಾರೆ.

ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಮೌನವು ತನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ, ತಾನು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎನ್ನುವ ಠೇಂಕಾರದಿಂದ ಕೂಡಿದೆ. ಈ ದೇಶಕ್ಕೂ ತಾನೂ ಏನನ್ನೂ ಉತ್ತರಿಸುವ ಅಗತ್ಯವಿಲ್ಲ ಎನ್ನುವಂತಿದೆ ಈ ವಿಶ್ವಾಸದ್ರೋಹದ ಮೌನ. ಆದರೆ ಮೋದಿಯವರ ಈ ಮರೆಮೋಸದ ಮೌನವನ್ನು ಅಣಕಿಸುವಂತೆ ಬಿಜೆಪಿ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಮೋದಿ ಸರ್ಕಾರದ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಅವರು “ಈ ಕೊಲೆಯು ಒಂದು ಆಕಸ್ಮಿಕ ಘಟನೆ, ಮನೆಯಲ್ಲಿ ಮಟನ್ ಅನ್ನು ಗೋಮಾಂಸವೆಂದು ತಪ್ಪಾಗಿ ಭಾವಿಸಿದೆ ಅಷ್ಟೇ. ಅಷ್ಟಕ್ಕೂ ಈ ಗುಂಪು ಸುದೈವಕ್ಕೆ ಅಕ್ಲೇಖ್ ಅವರನ್ನು ಮಾತ್ರ ಕೊಲೆ ಮಾಡಿದೆ, ಇದು ಕಮ್ಯುನಲ್ ಹತ್ಯೆ ಅಲ್ಲ, ಏಕೆಂದರೆ ಈ ಹತ್ಯೆ ಮಾಡಿದ ಗುಂಪು ಮನೆಯಲ್ಲಿದ್ದ 17 ವಯಸ್ಸಿನ ಮಗಳನ್ನು ಅತ್ಯಾಚಾರ ಮಾಡಲಿಲ್ಲ” ಎಂದು ವ್ಯಾಖ್ಯಾನಿಸಿದ್ದಾರೆ.

ಉ.ಪ್ರ.ದ ಪಶ್ಚಿಮ ಘಟಕದ ಬಿಜೆಪಿ ಉಪಾಧ್ಯಕ್ಷ ಶ್ರೀಚಂದ್ ಶರ್ಮ ಅವರು “ಬಲಿಪಶುವಾದ ಕುಟುಂಬವನ್ನು ಗೋಹತ್ಯೆDadri-lynching ನಿಷೇಧದ ಕಾನೂನಿನ ಅಡಿಯಲ್ಲಿ ಕೇಸು ದಾಖಲಿಸಬೇಕು” ಎಂದು ಹೇಳಿದ್ದಾರೆ. ಮುಜಫರ್ ನಗರದ ಕೋಮು ಗಲಭೆಯ ಆರೋಪಿ ಬಿಜೆಪಿ ಸಂಸದ ಸಂಗೀತ್ ಸೋಮ್ ಅವರು “ಒಂದು ಧರ್ಮದವರನ್ನು ಓಲೈಸಲು ಅಕ್ಲೇಖ್ ಅವರ ಕೊಲೆಯ ಹಿನ್ನಲೆಯಲ್ಲಿ ಅಮಾಯಕರನ್ನು ಬಂಧಿಸಿದರೆ ತಕ್ಕ ಉತ್ತರವನ್ನು ಕೊಡುತ್ತೇವೆ” ಎಂದು ಎಚ್ಚರಿಸಿದ್ದಾರೆ. ಆರೆಸೆಸ್ ಸಂಚಾಲಕ, ಬಿಜೆಪಿಯ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಅವರು “ಮೊಹ್ಮದ್ ಅಕ್ಲೇಖ್ ಬೀಫ್ ತಿಂದಿದ್ದಾರೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಕೊಲೆಯಾಗಿದ್ದಾರೆ” ಎಂದು ಬರೆದಿದ್ದಾರೆ. ಈ ಮತೀಯವಾದಿ ಸಂಘ ಪರಿವಾರದ ನಾಯಕರು ಅಕ್ಲೇಖ್ ಅವರ ಕುಟುಂಬ ಬೀಫ್ ತಿಂದಿದ್ದಾರೆ ಎನ್ನುವ ಅನುಮಾನದ ಮೇಲೆ ಅವರ ಕೊಲೆಯಾಗಿದೆ. ಆದರೆ ಅವರ ಮನೆಯಲ್ಲಿ ಇದ್ದದ್ದು ಮಟನ್ ಎಂದು ಸಾಬೀತಾಗಿರುವುದರಿಂದ ಅಕ್ಲೇಖ್ ಅವರ ಕುಟುಂಬ ನಿರಪರಾಧಿಗಳು. ಆದರೆ ಇದು ಒಂದು ಆಕಸ್ಮಿಕ ಘಟನೆ ಎಂದು ಮುಚ್ಚಿ ಹಾಕುತ್ತಿದ್ದಾರೆ.

ಇಲ್ಲಿ ಸಂಘ ಪರಿವಾರದ ಕ್ರೌರ್ಯ ಯಾವ ಮಟ್ಟದಲ್ಲಿದೆಯೆಂದರೆ “ಒಂದು ವೇಳೆ ಅಕ್ಲೇಖ್ ಅವರ ಮನೆಯಲ್ಲಿರುವುದು ಬೀಫ್ ಎಂದು ಸಾಬೀತಾಗಿದ್ದರೆ ಈ ಕೊಲೆ ಸಮರ್ಥನೀಯವಾಗಿರುತ್ತಿತ್ತು” ಎನ್ನುವಂತಿದೆ. ಈ ಬೀಫ್ ತಿನ್ನುವದರ ವಿರುದ್ಧದ ಪ್ರತಿಭಟನೆಗಳನ್ನು 19ನೇ ಶತಮಾನದಲ್ಲಿ ಆರ್ಯ ಸಮಾಜದ ದಯಾನಂದ ಸರಸ್ವತಿ ಅವರು ಉದ್ಘಾಟಿಸಿದರು. ಇದು ಇಂದು ದಾದ್ರಿಯ ಅಕ್ಲೇಖ್ ಅವರ ಕೊಲೆಯವರೆಗೆ ಬಂದು ತಲುಪಿದೆ. ಈ ಮಧ್ಯದ ದಶಕಗಳಲ್ಲಿ ಅನೇಕ ಬಗೆಯ ಗೋಹತ್ಯ ನಿಷೇಧದ ಉದ್ರೇಕಕಾರಿ ಭಾಷಣಗಳು, ಬೀಫ್ ತಿನ್ನುವವರ ಮೇಲೆ ಹಲ್ಲೆ, ಕೊಲೆಗಳು ನಡೆದುಹೋಗಿವೆ. ರಾಷ್ಟ್ರೀಯವಾದದ ಫ್ರೇಮಿನಲ್ಲಿ ಮತೀಯವಾದ, ಬಹುಸಂಖ್ಯಾತ ತತ್ವ, ಪುರೋಹಿತಶಾಹಿಗಳೂ ಬೆರೆತು ಹೋಗಿವೆ.

ಈ ಸಂಘ ಪರಿವಾರದ ಮೂಲಭೂತವಾದದ ವರ್ತನೆಗಳು ಮತ್ತು ಕೋಮುವಾದದ ಫೆನಟಿಸಂ ಸಮಾಜದಲ್ಲಿ ಒಂದು ಬಗೆಯ ಕ್ರೌರ್ಯ ಮತ್ತು ಹಿಂಸೆಯನ್ನು ಹುಟ್ಟುಹಾಕಿದ್ದರೆ ಮತ್ತೊಂದೆಡೆ 2014ರಲ್ಲಿ ಅಭಿವೃದ್ಧಿ ಮತ್ತು ಎಲ್ಲರ ವಿಕಾಸ ಎನ್ನುವ ಸ್ಲೋಗನ್ನೊಂದಿಗೆ ಯುವ ಜನತೆ ಮತ್ತು ಮಧ್ಯಮವರ್ಗವನ್ನು ಮೋಸಗೊಳಿಸಿ ಅಧಿಕಾರಕ್ಕೆ ಬಂದ ಮೋದಿಯವರ ಒಂದು ವರ್ಷದ ಆಡಳಿತ ಸಂಪೂರ್ಣವಾಗಿ ಹತೋಟಿ ಕಳೆದುಕೊಂಡಿದೆ. ಆರಂಭದಿಂದಲೂ ಈ ಬಕಾಸುರ ಬಂಡವಾಳಶಾಹಿಯ ಆರಾಧಕ ಮೋದಿಯವರ ಅನುಸಾರ ಅಭಿವೃದ್ಧಿಯೆಂದರೆ ಉಪಭೋಗ ಸಂಸ್ಕೃತಿಯ ವೈಭವೀಕರಣ, ಸರಕನ್ನು ಕೊಳ್ಳಲು ಹಣದ ಗಳಿಕೆ ಮತ್ತು ಡಿಜಿಟಲ್ ಇಂಡಿಯಾ ಎನ್ನುವ ಪಾಶ್ಚಿಮಾತ್ಯ ತಂತ್ರಜ್ಞಾನದ ಆಮದು ಹೀಗೆ ಗೊತ್ತುಗುರಿಯಿಲ್ಲದೆ ಸಾಗುತ್ತದೆ. ಆರಂಭದಲ್ಲಿ ಅಬ್ಬರ ಪ್ರಚಾರದೊಂದಿಗೆ ಶುರುವಾದ ಜನಧನ ಯೋಜನೆಯಡಿಯಲ್ಲಿ ಬಹುಪಾಲು ಬ್ಯಾಂಕುಗಳಲ್ಲಿ ಶೂನ್ಯ ಖಾತೆಗಳಿದ್ದರೆ, ಒಂದು ವರ್ಷದ ನಂತರವೂ ಸ್ವಚ್ಛ ಭಾರತ ಯೋಜನೆಯು ಇನ್ನೂ ಪ್ರಾರಂಭದ ಹಂತದಲ್ಲೇ ಮಲಗಿದೆ ಮತ್ತು ಇದರಲ್ಲಿ ಭಾಗವಹಿಸಿದ ರಾಜಕಾರಣಿಗಳ ಬಂಡವಾಳವೂ ಬಯಲಾಗಿದೆ.

ಅತ್ಯಂತ ಅಬ್ಬರದ ಮಾರ್ಕೆಟಿಂಗ್ ನಿಂದ ಪ್ರಚಾರಗೊಳ್ಳುತ್ತಿರುವ ‘ಡಿಜಿಟಲ್ ಇಂಡಿಯಾ’ ಎನ್ನುವ ಇ ಆಡಳಿತದ ಆಶಯಗಳು ಫೇಸ್ಬುಕ್ ನ ಇಂಟನರನೆಟ್.ಆರ್ಗ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ಅಪಾದನೆಗಳ ಜೊತೆಗೆ ಇಲ್ಲಿನ ಬಳಕೆದಾರರಿಗೆ ಅನೇಕ ಬಗೆಯಲ್ಲಿ ನಿರ್ಬಂಧನೆಗಳನ್ನು ಒಡ್ಡುತ್ತದೆ ಮತ್ತು ಅವರ ವೈಯುಕ್ತಿಕ ಸ್ವಾತಂತ್ರವನ್ನು ಮೊಟಕುಗೊಳಿಸುತ್ತದೆ. ಅಂಗುಶ್ಕಾಂತ ಅವರು “ದುಖತಪ್ತ ಮೊಹಮ್ಮದ್ ಅಕ್ಲೇಖ್ ಕುಟುಂಬಕ್ಕೆ ಈ ಡಿಜಿಟಲ್ ಇಂಡಿಯಾ ಯಾವ ಉಪಕಾರವನ್ನು ಮಾಡಿದೆ? ವಾಟ್ಸ್ಅಪ್, ಫೇಸ್ ಬುಕ್, ಟಿಟ್ಟರ್ ನಂಹ ಸಾಮಾಜಿಕ ಜಾಲತಾಣಗಳು ಯಾವ ಬಗೆಯಲ್ಲಿ ಸರ್ತಾಜ್ ಅವರನ್ನು ಡಿಜಿಟಲ್ ಇಂಡಿಯಾದ ಮೂಲಕ ನ್ಯಾಯವನ್ನು ಒದಗಿಸಬಲ್ಲವು? ಯುವ ಮಹಿಳೆಯು ತನ್ನ ಕೆಲಸದ ಜಾಗದಲ್ಲಿ ದಿನನಿತ್ಯ ಅನುಭವಿಸುವ ತಾರತಮ್ಯ ಮತ್ತು ಶೋಷಣೆಗೆ ಈ ಅಭಿವೃದ್ಧಿ ಈ ಮೇಲಿನ ಬಗೆಯದಾಗಿ ಸ್ಪಂದಿಸುತ್ತದೆ ಎನ್ನುವ ಸತ್ಯಸಂಗತಿಯು ಕೊಲೆಯಾದ ಅಕ್ಲೇಖ್ ನ ಪಾಲಿಗೂ ಸಹ ಸತ್ಯವಾಗಿರುತ್ತದೆ’ ಎಂದು ಹೇಳುತ್ತಾರೆ.

ಸಂಘ ಪರಿವಾರದ ಬ್ರಾಹ್ಮಿನಿಸಂ ಮತ್ತು ಮೋದಿಯವರ ಕ್ಯಾಪಿಟಲಿಸಂ ಎರಡೂ ಸಸ್ಯಾಹಾರ ಮತ್ತುgujarat_violence_1 ಮಾಂಸಾಹಾರವನ್ನು ದೇಶಪ್ರೇಮ ಆಧಾರದಲ್ಲಿ ವರ್ಗೀಕರಿಸಿದೆ. ಮಾಂಸಹಾರಿಯು ದೇಶದ್ರೋಹಿ ಎನ್ನುವ ತಾರ್ಕಿಕ ಅಂತ್ಯಕ್ಕೆ ಮುಟ್ಟಲು ತನ್ನ ಫ್ಯಾಸಿಸಂ ಚಟುವಟಕೆಗಳ ಮೂಲಕ ಸಂಘ ಪರಿವಾರವು ಪ್ರಜಾಪ್ರಭುತ್ವದ ಬುನಾದಿಯನ್ನು ಭಗ್ನಗೊಳಿಸುತ್ತಿದೆ. ಇಂದು ಅಹಾರವನ್ನು ಬಳಸಿಕೊಂಡು ಅಲ್ಪಸಂಖ್ಯಾತರನ್ನು, ದಲಿತರನ್ನು ಕೊಲೆಯ ತರ್ಕದಲ್ಲಿ ಅಂತ್ಯಗೊಳಿಸುವುದನ್ನು ದಾದ್ರಿ ಗ್ರಾಮದ ಹಿಂಸೆಯ ಮೂಲಕ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಇಲ್ಲಿ ಬಾಬರಿ ಮಸೀದಿಯ ಧ್ವಂಸ ಮತ್ತು ಆ ಮೂಲಕ ನಡೆದ ಹತ್ಯೆಗಳು, 2002ರ ಗುಜರಾತ್ ಗಲಭೆ ಮತ್ತು ಹತ್ಯಾಕಾಂಡದ ನಂತರ ಇಂದು ದಾದ್ರಿ ಕೊಲೆಯು ಆಹಾರವೂ ಒಂದು ಸಂಕೇತವಾಗಿಯೂ ಆ ಮೂಲಕ ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳ ವಿರುದ್ಧ ಬುಹುಸಂಖ್ಯಾತ ಧರ್ಮದ ಹಿಂಸೆಗೆ ಯಾವುದೇ ಪ್ರತಿಬಂಧವಿಲ್ಲ ಮತ್ತು ನ್ಯಾಯಾಂಗದ ಹಂಗೂ ಇಲ್ಲವೆಂದು ಸಾಬೀತುಪಡಿಸುತ್ತದೆ. ಏಕೆಂದರೆ 2002ರಲ್ಲಿ ಹರ್ಯಾಣದ ಜಾಜ್ಜರ್ ಗ್ರಾಮದಲ್ಲಿ ದನವನ್ನು ಕೊಂದು ಮಾಂಸವನ್ನು ಸುಲಿಯುತ್ತಿದ್ದಾರೆ ಎನ್ನುವ ಅನುಮಾನದ ಮೇಲೆ 5 ದಲಿತರನ್ನು ಸಜೀವವಾಗಿ ಹತ್ಯೆ ಮಾಡಿದ್ದರು. ದಲಿತ ಯುವಕನೊಬ್ಬ ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದಾಗ ಅವನನ್ನು ಜೀವಂತವಾಗಿ ಬೆಂಕಿ ಹಚ್ಚಿ ಸಾಯಿಸಿದರು. ಇದು ನಿಜಕ್ಕೂ ಘೋರವಾದ ದಿನಗಳು. ಇಲ್ಲಿನ ‘ಅನುಮಾನಿತರು’ ಮತ್ತು ‘ಅವಮಾನಿತರ’ ಬದುಕು ಬಹುಸಂಖ್ಯಾತ ಹಿಂದೂಗಳ ಹಂಗಿನಲ್ಲಿದೆ ಎನ್ನುವ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುವ ಸಂಘ ಪರಿವಾರ ತಮ್ಮ ಪುರೋಹಿತಶಾಹಿ ತತ್ವಗಳನ್ನು ಉಲ್ಲಂಘಿಸಿದವರನ್ನು ಸದೆಬಡೆಯಲು ತನ್ನ ಯುವಪಡೆಗೆ ಹತ್ಯಾರಗಳನ್ನು ಕೊಟ್ಟು ಹಲ್ಲೆ, ಕೊಲೆ, ಅತ್ಯಾಚಾರಕ್ಕೆ ಪ್ರಚೋದಿಸುತ್ತಿದೆ. ಮತ್ತೊಂದು ದೊಡ್ಡ ವ್ಯಂಗವೆಂದರೆ ಇದನ್ನು ಖಂಡಿಸುತ್ತಿರುವ ಕೆಲವೇ ಬಿಜೆಪಿ ನಾಯಕರು ಈ ಕೊಲೆಯಿಂದ ಮೋದಿಯವರ ಅಭಿವೃದ್ಧಿ ಯೋಜನೆಗಳಿಗೆ ಧಕ್ಕೆ ಉಂಟಾಗುತ್ತದೆ, ವಿದೇಶಗಳಲ್ಲಿ ಭಾರತದ ಮಾನ ಹರಾಜಾಗುತ್ತದೆ ಎಂದು ಗೋಳಿಡುತ್ತಿದ್ದಾರೆ.

ಆದರೆ ದುರಂತವೆಂದರೆ ಕಳೆದ 10 ವರ್ಷಗಳಲ್ಲಿ ಬಂಡವಾಳಶಾಹಿಗಳ ಅಭಿವೃದ್ಧಿಯನ್ನು ಸಾಧಿಸಿದ ಗುಜರಾತ್ ನಲ್ಲಿ ಕೋಮುವಾದಿ ಶಕ್ತಿಗಳು ಇಂದಿಗೂ ಬಲಶಾಲಿಯಾಗಿವೆ. ಧರ್ಮಗಳು ಸಂಪೂರ್ಣವಾಗಿ ಧೃವೀಕರಣಗೊಂಡು ಬಹುಸಂಖ್ಯಾತ ತತ್ವದ ಫೆನಟಿಸಂ ಮೇಲುಗೈ ಸಾಧಿಸಿದೆ. ಇದು ಮೋದಿ ಮಾದರಿಯ ಅಭಿವೃದ್ಧಿಗೆ ಜೀವಂತ ಸಾಕ್ಷಿ. ಏಕೆಂದರೆ ಈ ಮೋದಿ ಮಾದರಿಯ ಅಭಿವೃದ್ಧಿಯ ಪ್ರಭುತ್ವದಲ್ಲಿ ಫ್ಯಾಸಿಸಂ ಮತ್ತು ಮತೀಯವಾದ ಪ್ರಜಾಪ್ರಭುತ್ವದಲ್ಲಿ ಕರಗಿ ಹೋಗುವುದಿಲ್ಲ. ಇವು ಮತ್ತಷ್ಟು ಗಟ್ಟಿಗೊಳ್ಳುತ್ತವೆ. ಧಾರ್ಮಿಕ ಮೂಲಭೂತವಾದದ ಅರಾಜಕತೆ ತುಂಬಿಕೊಳ್ಳುತ್ತದೆ. ಏಕೆಂದರೆ ಮೋದಿ ಮತ್ತವರ ಸಚಿವರು ಇದೇ ಆರೆಸೆಸ್ ನ ನೀರು ಕುಡಿದು ಬೆಳೆದವರು. ಅದರ ಎಲ್ಲಾ ಮತೀಯವಾದಿ ಚಿಂತನೆಗಳನ್ನು ಅರಗಿಸಿಕೊಂಡ ಸ್ವಯಂಸೇವಕರು. ಇವರೆಲ್ಲಾ ತಂತ್ರಜ್ಞಾನದ ಅಭಿವೃದ್ಧಿ, ಡಿಜಿಟಲ್ ಇಂಡಿಯಾ ಎಂದು ಮಾತನಾಡತೊಡಗಿದಾಗ ಅದು ಕೋಮುವಾದಿ ಪ್ರಚೋದನೆಗಳನ್ನು, ಉದ್ರೇಕಕಾರಿ ಭಾಷಣಗಳನ್ನು, ಧಾರ್ಮಿಕ ಫೆನಟಿಸಂ ಅನ್ನು ಪ್ರಚಾರ ಮಾಡುವ ತಂತ್ರಜ್ಞಾನವಾಗಿರುತ್ತದೆ. ಮೋದಿ ಅಭಿವೃದ್ಧಿ ತರಲು ಬಯಸಿರುವ ವಾಟ್ಸ್ ಅಪ್, ಟ್ವಟ್ಟರ್, ಫೇಸ್ಬುಕ್ ತಂತ್ರಜ್ಞಾನದಲ್ಲಿ ಬೀಫ್ ತಿನ್ನುವವರ, ಮಾಂಸಹಾರಿಗಳ ವಿರುದ್ಧ ಪ್ರಚೋದನಕಾರಿ ಬೋಧನೆಗಳು, ಇಸ್ಲಾಂ ಧರ್ಮದ ವಿರುದ್ಧ ನಿರಂತರ ವಾಗ್ದಾಳಿಗಳು ಮುಂತಾದ ಹಿಂದು ರಾಷ್ಟ್ರೀಯತೆಯ ಕೂಗುಮಾರಿತನವು ನಿರಂತರವಾಗಿ ಪ್ರಸಾರವಾಗುತ್ತಿರುತ್ತವೆ.

ಈ 56 ಇಂಚಿನ ಎದೆಯ ಪ್ರಧಾನ ಮಂತ್ರಿಯವರ ಆಡಳಿತದಲ್ಲಿ ಪ್ರಜಾಪ್ರಭುತ್ವ, ಮಾನವೀಯತೆ, ಮಾನವತವಾದDadri_Lynching_Sartaz ಮಣ್ಣುಗೂಡುತ್ತವೆ ಮತ್ತು ಇಂದು ಆಗುತ್ತಿರುವುದೂ ಇದೇ. ಈ ಮೋದಿ ಮತ್ತು ಅವರ ಸಂಘ ಪರಿವಾರ ಹಿಂಸೆಗೆ ಹೊಸ ಹೊಸ ಭಾಷ್ಯೆಗಳನ್ನು ಬರೆಯುತ್ತಿದ್ದಾರೆ. ಶಿವ ವಿಶ್ವನಾಥನ್ ಅವರು “ಮೋದಿ ಕೋಮುವಾದದ ತಿಳುವಳಿಕೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಆದರೆ ಮೋದಿಯವರು ಹಿಂಸೆಯ ಭಾಷೆಗಳಿಗೆ ಕೊಡುಗೆಯನ್ನು ನೀಡಿದ್ದಾರೆ” ಎಂದು ಹೇಳಿದ್ದಾರೆ. ಆದರೆ ಈ ಕೊಲೆಗಡುಕರ ಗುಂಪಿಗೆ ಮತ್ತು ಈ ಹಿಂದೂ ರಾಷ್ಟ್ರೀಯವಾದಿಗಳಿಗೆ ಅಕ್ಲೇಖ್ ಅವರ ಮಗ ಪ್ರತಿಕ್ರಯಿಸುತ್ತಾ “ಕೆಲ ದುಷ್ಟಶಕ್ತಿಗಳು ತಮ್ಮ ತಂದೆಯನ್ನು ಹತ್ಯೆ ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಲೇಬೇಕು, ಸಾರೇ ಜಹಾ ಸೆ ಅಚ್ಛಾ ಹಿಂದುಸ್ತಾನ್ ಹಮಾರಾ” ಎಂದು ಅತ್ಯಂತ ಘನತೆಯಿಂದ ನುಡಿದ. ಅಕ್ಲೇಖ್ ಅವರ ಕುಟುಂಬ ಅತ್ಯಂತ ಮಾನವೀಯತೆ, ಬುದ್ಧನ ಕರುಣೆಯಿಂದ ತಮ್ಮ ಘನತೆಯನ್ನು, ಜೀವಪರ ಗುಣಗಳ ಮೂಲಕ ಈ ಕೊಲೆಗಡುಕರಿಗೆ ಉತ್ತರಿಸಿದ್ದಾರೆ. ಆದರೆ ನಾವು ???

One thought on “56 ಇಂಚಿನ ಎದೆಯ ಪರಿಣಾಮ : ವಿಷಗಾಳಿಯ ಭಾರತ

  1. Ananda Prasad

    ಭಾರತವು ಪಾಕಿಸ್ತಾನದ ಮೂಲಭೂತವಾದೀ ಹಾದಿಯಲ್ಲಿ ಸಾಗುವ ಲಕ್ಷಣಗಳನ್ನು ತೋರಿಸುತ್ತಿದೆ. ಪಾಕಿಸ್ತಾನದಲ್ಲಿ ಹೆಸರಿಗೆ ಚುನಾಯಿತ ಸರ್ಕಾರವಿದೆ ಆದರೆ ಪ್ರಧಾನಿ ಸೈನ್ಯ ಹಾಗೂ ಮೂಲಭೂತವಾದಿ ನಾಯಕರ ಹಿಡಿತದಲ್ಲಿ ಸ್ವತಂತ್ರವಾಗಿ ಆಡಳಿತ ನಡೆಸದ ಪರಿಸ್ಥಿತಿ ಇದೆ. ಈಗೀಗ ಭಾರತದಲ್ಲಿಯೂ ಇಂಥದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಿಚಾರವಾದಿಗಳು, ಪ್ರಗತಿಪರ ಲೇಖಕರು ಹತ್ಯೆಗೊಳಗಾಗುತ್ತಿದ್ದಾರೆ. ಮತೀಯ ಅಸಹನೆ, ಬೇರೆಯವರ ಆಹಾರ ಪದ್ಧತಿಯ ಮೇಲೆ ಆಕ್ರಮಣದಂಥ ಫ್ಯಾಸಿಸ್ಟ್ ನಿಲುವುಗಳು ಹೆಚ್ಚುತ್ತಿವೆ. ಧಾರ್ಮಿಕ ಸಂಘಟನೆಗಳು ವ್ಯವಸ್ಥಿತವಾಗಿ ಮತೀಯ ಹಿಂಸೆಯನ್ನು ಒಂದು ಪ್ರಾಣಿಯ ನೆಪದಲ್ಲಿ ಉದ್ರೇಕಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಮ್ಮ ಪ್ರಧಾನಿ ಬಾಯಿ ತೆರೆಯದೆ ಮೌನವಾಗಿದ್ದಾರೆ. ಇದು ನಿಧಾನವಾಗಿ ದೇಶ ಮೂಲಭೂತವಾದಿ ಹಾದಿಯಲ್ಲಿ ನಡೆಯುತ್ತಿರುವ ಸ್ಪಷ್ಟ ಲಕ್ಷಣವಾಗಿದೆ. ಪೊಲೀಸ್ ವ್ಯವಸ್ಥೆಯೊಳಗೆ ಮೂಲಭೂತವಾದಿ ಧಾರ್ಮಿಕ ಸಂಘಟನೆಗಳಿಗೆ ಸೇರಿದ ಅರೆಬೆಂದ ಮನೋಸ್ಥಿತಿಯ ಯುವಕರನ್ನು ಸೇರಿಸಿ ಆಡಳಿತವನ್ನು ಕೈಗೆ ತೆಗೆದುಕೊಳ್ಳುವ ಧಾರ್ಮಿಕ ಸಂಘಟನೆಗಳ ಒಳಸಂಚು ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ. ಇದೇ ರೀತಿ ಅರೆಬೆಂದ ಮನೋಸ್ಥಿತಿಯ ಜನರನ್ನು ಆಡಳಿತ, ನ್ಯಾಯಾಂಗ, ಸೈನ್ಯ ಹೀಗೆ ಎಲ್ಲೆಡೆಯೂ ತುಂಬುವ ಒಳಸಂಚೂ ನಡೆಯುತ್ತಿರಬಹುದು. ಹೀಗಾದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೆಷ್ಟು ಸಮಯ ಇಲ್ಲಿ ಉಳಿದೀತು ಎಂಬುದು ಸರ್ವರೂ ಯೋಚಿಸಬೇಕಾದ ವಿಚಾರವಾಗಿದೆ. ಹೀಗಾಗಿ ದೇಶದ ಪ್ರಜ್ಞಾವಂತರು ಎಚ್ಚತ್ತುಕೊಳ್ಳಬೇಕಾಗಿರುವುದು ಅಗತ್ಯ.

    Reply

Leave a Reply

Your email address will not be published. Required fields are marked *