ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1


– ಶ್ರೀಧರ್ ಪ್ರಭು


ಪುಣ್ಯನಗರಿಯಲ್ಲೊಂದು ಒಪ್ಪಂದ

ಅವನು ವಿಶ್ವನಾಥ. ಅವನೇ ಜಗನ್ನಾಥ. ಆ ಲೋಕ ಈ ಲೋಕ ಸಮಸ್ತ ಲೋಕಗಳ ನಿಖಿಲ ಚರಾ ಚರಗಳಿಗೆಲ್ಲ ನಾಥ. ಇವೆಲ್ಲಾ ಲೋಕಗಳ ನಡುಮಧ್ಯದಲ್ಲಿದ್ದು ಸಮಸ್ತ ಲೋಕಗಳಿಗೂ ಬೆಳಕು ನೀಡುವ ನಗರಿ – ಕಾಶಿ – ಅವನ ರಾಜಧಾನಿ. ಇಂಥಹ ಪರಮ ಪವಿತ್ರ ಕಾಶಿಯ ಹೃದಯವೆಂದರೆ ಮದ ಮತ್ತು ಮೋಹವನ್ನು ಮರ್ದಿಸಿ ಮದನ ಮೋಹನನೆನಿಸಿಕೊಂಡಿದ್ದ ಮಾಳವೀಯರು. ಅಂಥಹ ಮಾಳವೀಯರಂಥಹ ಮಾಳವೀಯರಿಗೆ ಸಮಸ್ತ ವಿಶ್ವದ ಹಿಂದೂ ಸಮಾಜದ ಪರವಾಗಿ ಭರತ ಭೂಮಿಯ ಮಾಂಗಲ್ಯದಂತಿದ್ದ ಮಹಾತ್ಮರ ಆತ್ಮವನ್ನು ಪರಮಾತ್ಮನೊಂದಿಗೆ ಲೀನವಾಗದಂತೆ ತಡೆಯುವ ಮಹತ್ತರ ಜವಾಬ್ದಾರಿ.

ಈ ಪಾರಮಾರ್ಥಿಕ ಕರ್ತವ್ಯಕ್ಕೆ ಮುಹೂರ್ತ ನಿಗದಿಯಾಗಿದ್ದು ಪರಮ ಭಯಂಕರನಾದ ಯಮದೇವನಿಗೆ ಸ್ವಂತ ಅಣ್ಣನಾದ ಶನಿದೇವರು ಅಧಿಪತಿಯಾಗಿರುವ ಶನಿವಾರ. ಕೆಂಪು ಮುಸುಡಿಯ ಮ್ಲೇಚ್ಚರು ಇನ್ನು ಅವರ ದಾಸ್ಯ ಸುಖವನ್ನೇ ನೆಚ್ಚಿದ ನಮ್ಮವರು ೧೯೩೨ ರನೇಯದ್ದು ಎಂದು ಕರೆಯುವ ವರ್ಷದ ಒಂಬತ್ತನೇ ತಿಂಗಳು. ಈ ಪುಣ್ಯ ಕಾರ್ಯಕ್ಕೆ ನಿಗದಿಯಾದ ಸ್ಥಳವೂ ಪುರಾಣ ಪ್ರಸಿದ್ದ ಪೇಶ್ವೆಗಳು ಆಳಿದ ಪುಣ್ಯ ಪುರಿ ಪುಣೆ. ಕೊನೆಗೂ ಪುಣೆ ಆ ಮಹಾನ್ ಒಪ್ಪಂದಕ್ಕೆ ಸಾಕ್ಷಿಯಾಯಿತು. ಪುಣೆಯ ಪುಣ್ಯದಿಂದ ದೇವ ನಿರ್ಮಿತ ವರ್ಣಾಶ್ರಮ ಧರ್ಮ ಚಿರಕಾಲ ರಕ್ಷಿಸಲು ಮಹಾತ್ಮರು ತೊಟ್ಟ ಸಂಕಲ್ಪ ಸಾರ್ಥಕವಾಯಿತು.

ಇದೆಲ್ಲಾ ನಡೆದು ಬರೋಬ್ಬರಿ ಅರ್ಧ ಶತಮಾನ ಉರುಳಿತು. ಈಗ ಮ್ಲೇಚ್ಚರ ವರ್ಷ ೧೯೮೨. ಪುಣೆಯ ಪುಣ್ಯ ಒಪ್ಪಂದದ ದಿನವೇ, ಈ ಘೋರ ಕಲಿಯುಗದಲ್ಲಿ ದೆಹಲಿಯೆಂದು ಕರೆಯಲಾಗುವ ಇಂದ್ರಪ್ರಸ್ಥದ ಕರೋಲ್ ಬಾಗ್ ಎಂಬಲ್ಲಿ ಒಬ್ಬ ನಗಣ್ಯ ಅತಿಶೂದ್ರ ಚಮ್ಮಾರರ ವಂಶದ ವ್ಯಕ್ತಿಯೊಬ್ಬ ಅಂಗ್ರೇಜಿ ಭಾಷೆಯಲ್ಲಿ “ಚಮಚಾ ಯುಗ” ವೆಂಬ ಪುಸ್ತಕ ಬರೆದು ಪ್ರಕಟಿಸಿದ. ಕ್ಷರದ ಲವ ಮಾತ್ರವೂ ಸೋಕದಂತೆ ಯುಗ ಯುಗಾದಿಗಳಿಂದ ಅಕ್ಷರವನ್ನು ಅತ್ಯಂತ ಜೋಪಾನವಾಗಿ ರಕ್ಷಿಸಿಕೊಂಡು ಬಂದಿದ್ದ ಸಮುದಾಯವನ್ನು ನಾಚಿಸುವಂತೆ ಈ ನವ ಸಾಕ್ಷರ ಇಂಗ್ಲಿಷ್ ಪುಸ್ತಕವೊಂದನ್ನು ಬರೆದು ಬಿಟ್ಟಿದ್ದ! ಅದೂ ಏನೆಂದು? ನಮ್ಮ ಪುಣ್ಯಪುರಿಯ ಒಪ್ಪಂದದ ದಿನವೇ ಚಮಚಾಗಳಿಗೆ ಯುಗಾದಿಯೆಂದು. ಇದನ್ನು ಬರೆದದ್ದು ಚಮಚಾಗಳಿಗೋಸ್ಕರವಾದರೂ, ಅದನ್ನು ಓದಲು ಈ ಚಮಚಾಗಳು ತಮ್ಮನ್ನು ಹಿಡಿದಿದ್ದ ಕೈಗಳ ಅನುಮತಿ ಕೋರಿದವು; ಎಂದಿನಂತೆ ಅನುಮತಿ ನಿರಾಕರಣೆಯಾಯಿತು. ಕೈಗಳು ಮಾತ್ರ ಈ ಪುಸ್ತಕವನ್ನು ಚೆನ್ನಾಗಿ ಮಸ್ತಕಕ್ಕೆ ಇಳಿಸಿಕೊಂಡರು. ಅದರೂ ಈ ಚಮಚಾಗಳ ಹಣೆ ಬರಹ ಗೊತ್ತಿದ್ದ ಕಾರಣ ಕೈಗಳು ಸುಮ್ಮನೆ ಕಿಸಕ್ಕೆಂದು ಒಮ್ಮೆ ನಕ್ಕು ಸುಮ್ಮನಾದವು. ಉತ್ತರ ದೇಶದ ಕೈಗಳ ರಾಣಿಗೆ ಮಾತ್ರ ಅಪಾಯದ ಗ್ರಹಿಕೆಯಾಯಿತು. ಇನ್ನು ಕೈಗಳ ಶೋಭೆಯನ್ನು ನೂರ್ಮಡಿಗೊಳಿಸಿ ಕಂಗೊಳಿಸುತ್ತಿದ್ದ ಕಮಲಕ್ಕೆ ಮಾತ್ರ ಬೇಗ ಈ ಅಪಾಯದ ಅರಿವಾಗಿತ್ತು.

ಇದಾಗಿ ಹತ್ತು ವಸಂತಗಳು ಕಳೆದವು. ಅನೇಕ ವರ್ಷಗಳು ಕರದಲ್ಲೇ ಶೋಭಿಸಿದ ಕಮಲವು ಕರವನ್ನೇ ನುಂಗಿ ಹಾಕಿತ್ತು. ಇನ್ನೊಂದು ರೀತಿ ನೋಡಿದರೆ ಕರಕ್ಕೂ ಕಮಲಕ್ಕೂ ಸಂಪೂರ್ಣ ತಾದಾತ್ಮ್ಯ ಸಾಧ್ಯವಾಗಿತ್ತು. ಹೀಗಾಗಿಯೇ, ಪುಣ್ಯ ಪುರಿಯ ಒಪ್ಪಂದಕ್ಕೆ ಸಹಿ ಹಾಕುವಂತೆ ನಾವು ಮಣಿಸಿದ ಬಹುಜನ ಶುದ್ರಾತಿಶೂದ್ರರ ಮಹಾ ಪುರುಷ ಬಾಬಾ ಸಾಹೇಬರ ಪುಣ್ಯ ತಿಥಿಯಂದೇ ರಾಮ ಜನ್ಮ ಭೂಮಿಗೆ ಮುಕ್ತಿಯೆಂದು ಕರಕಮಲಗಳು ನಿಶ್ಚಯ ಮಾಡಿಯಾಗಿತ್ತು. ಇನ್ನು ಕರಕಮಲಗಳ ಸ್ವಯಂ ಸೇವೆ ಸ್ವೀಕರಿಸುವ ಅಧಿಪತಿಗಳ ಆಶೀರ್ವಾದದಿಂದ ‘ಕರ’ ಸೇವೆ ಸಾಂಗವಾಗಿ ನೆರವೇರಿ ದೇಶ ಶತಮಾನಗಳ ಅಪಮಾನದಿಂದ ಮುಕ್ತಿಹೊಂದಿತು. ರಾಮ ರಾಜ್ಯ ಸ್ಥಾಪನೆಗೆ ಕ್ಷಣ ಗಣನೆ ಶುರುವಾಯಿತು.

ಇದಾಗಿ ಕೆಲಕಾಲ ಸಂದು ಈಗ ೧೯೯೫ ನೆ ವರ್ಷದ ಮಧ್ಯ ಭಾಗ. ಪುರುಷರಲ್ಲಿ ಸರ್ವೋತ್ತಮ ಶ್ರೀರಾಮಚಂದ್ರನ ಅನುಜ ಲಕ್ಷ್ಮಣನು ಕಟ್ಟಿಸಿದ ಊರು ಲಖನೌನಲ್ಲಿ ಬಡ ಚಮ್ಮಾರನ ಮಗಳೊಬ್ಬಳು ತನ್ನ ಎಡಗಾಲ ಹೆಬ್ಬೆರಳನ್ನು ಅಕಾರಣವಾಗಿ ನೆಲಕ್ಕೆ ಸೋಕಿಸಿದಳು. ಆ ಸಪ್ಪಳವನ್ನು ಕೇಳಿಸಿಕೊಂಡ ಗಂಗೆಯಲ್ಲಿ ಮಿಂದೆದ್ದು ಬಂದ ವಿರ್ಪೋತ್ತಮ ದಿವಾನರಾದಿಯಾಗಿ ಸಮಸ್ತ ಅಧಿಕಾರಿ ಗಣ ನತಮಸ್ತಕವಾಗಿ, ವಿನೀತ ಭಾವದಿಂದ ಕೈಮುಗಿತು ನಿಂತು “ಏನಪ್ಪಣೆ” ಎಂದಿತು!

ಯಾವ ಅರ್ಯಾವರ್ತವು ಎರಡು ಸಾವಿರ ವರ್ಷಗಳ ಕಾಲ ಬುದ್ಧನನ್ನು ಧಿಕ್ಕರಿಸಿ ವೈದಿಕ ದಿಗ್ವಿಜಯಕ್ಕೆ ಸಾಕ್ಷಿಯಾಗಿತ್ತೋ, mayawati_kashiramಅದೇ ನಾಡು ಇಂದು, ಎರಡು ಸಾವಿರ ವರ್ಷಗಳು ಕಳೆದ ಮೇಲೆ, ನಲವತ್ತು ವರ್ಷದ ಪ್ರಾಯವನ್ನೂ ತಲುಪಿರದ ಬಡ ದಲಿತನ ಮಗಳೊಬ್ಬಳನ್ನು ತನ್ನ ಭಾಗ್ಯದ ಅಧಿನಾಯಕಿ ಎಂದು ಒಪ್ಪಿಕೊಳ್ಳುವ ಅನಿವಾರ್ಯಕ್ಕೆ ಬಂದು ನಿಂತಿತ್ತು!

ಕಾಶಿಯನ್ನು ಆಳಿದ್ದ ಮಾಳವೀಯರು, ಸ್ವರ್ಗದಲ್ಲೇ ಒಮ್ಮೆ ನರಳಿದರು. ಅವರು ೧೯೩೨ ರಲ್ಲಿ, ಮಹಾತ್ಮರ ಅಣತಿಯಂತೆ, ಸ್ಥಾಪಿಸಿದ ಚಮಚಾ ಯುಗ ಮತ್ತೆ ೧೯೯೨ ರಲ್ಲಿ ಸ್ಥಾಪನೆ ಯಾಗಲು ಹೊರಟಿದ್ದ ರಾಮನ ಯುಗ ಮುಗ್ಗರಿಸಿದವು!

ಆ ‘ಕಾಶಿ’ ಯ ಶಕ್ತಿ ಮತ್ತು ಈ ‘ರಾಮ’ನ ಬಲ, ಕಾನ್ಶಿರಾಂನೆಂಬ ಸಾಮಾನ್ಯರಲ್ಲಿನ ಅಸಾಮಾನ್ಯನ ಬಲದ ಮುಂದೆ kanshiramಮೊಣಕಾಲೂರಿ ಬಿಟ್ಟಿತ್ತು. ಬುದ್ಧನನ್ನು ಮತ್ತು ಧಮ್ಮವನ್ನು ಧಿಕ್ಕರಿಸಿ ಸ್ಥಾಪಿಸಿದ ದ್ವಿಜ ಸಾಮ್ರಾಜ್ಯದ ಧ್ವಜ ಅರ್ಧಕ್ಕೆ ಇಳಿದಿತ್ತು. ತಿಲಕ, ತಕ್ಕಡಿ ಮತ್ತು ತಲವಾರುಗಳ ದೈತ್ಯ ಶಕ್ತಿ ಮತ್ತು ಕುಯುಕ್ತಿಗಳು ಇವರ ದಲಿತ ಬಹುಜನ ಸಂಘಟನಾ ಶಕ್ತಿಯ ಮುಂದೆ ಹುಡಿಯಾಗಿ ಹೋದವು!

ಆದರೆ ಇದರ ರೂವಾರಿ, ಸಾಧಕ ಮತ್ತು ಸೂತ್ರಧಾರ ಮಾನ್ಯವರ ಇದಾವುದರಿಂದಲೂ ಅತಿ ಪುಳಕಗೊಳ್ಳದೆ ಸಂಪೂರ್ಣ ನಿರ್ಲಿಪ್ತ ಭಾವದಿಂದ ತಮ್ಮ ಸಂಘಟನೆಯ ಕೆಲಸದಲ್ಲಿ ತಲ್ಲೀನರಾಗಿದ್ದರು.

ಇಂದು ಯಾವುದೇ ನಿಲುವಿನ ರಾಜಕೀಯ ಚಿಂತಕ ಅಥವಾ ಕಾರ್ಯಕರ್ತ ಅಥವಾ ನಾಯಕನೊಬ್ಬ ಅಗತ್ಯವಾಗಿ ಓದಬೇಕಾದದ್ದೆಂದರೆ ಮಾನ್ಯವರರ ಜೀವನ ಚರಿತ್ರೆ. ಇದು ಭಾರತದ ಅತ್ಯಂತ ಸಂಘರ್ಷಮಯ ಮತ್ತು ರೋಚಕ ಅಧ್ಯಾಯಗಳಲ್ಲೊಂದು.

ಇದೆಲ್ಲಾ ಅತಿರಂಜಿತವಾದ ನಾಟಕೀಯ ಮತ್ತು ಪೌರಾಣಿಕ ಶೈಲಿಯಲ್ಲಿ ಹೇಳಲು ಕಾರಣವಿದೆ. ಕಾನ್ಶಿರಾಮ್ ಪ್ರವೇಶವಾಗುವವರೆಗೆ ಅಧುನಿಕ ಭಾರತದ ರಾಜಕೀಯ ಚರಿತ್ರೆಯು ಗಾಂಧಿ ಕೇಂದ್ರಿತವಾಗಿದ್ದು ಹಾಗೆಯೇ ಸಂಪೂರ್ಣವಾಗಿ ಹಿಂದೂ ಮೇಲ್ಜಾತಿಯ ಗಂಡಸಿನ ಮನಸ್ಥಿತಿಯಲ್ಲೇ ಅದ್ದಿ ಹೋಗಿತ್ತು. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ನಂತರದಲ್ಲಿ ಅಧಿಕಾರ ತ್ಯಾಗ ಮಾಡಿದ್ದನ್ನು ಹೀಗೆಯೇ ಒಂದು ದೈವೀ ಪವಾಡದಂತೆ ವರ್ಣಿಸಲಾಗುತ್ತಿತ್ತು. ನಂತರದಲ್ಲೂ ಸೋನಿಯಾ ಗಾಂಧಿಯವರ ಅಧಿಕಾರ ತ್ಯಾಗದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. kanshiram-mayawatiಅಂದು ಸಂಸತ್ ಭವನದಲ್ಲಿ ಅತಿ ಹೆಚ್ಚು ಕಣ್ಣೀರು ಸುರಿಸಿದ ಮಾಜಿ ಪತ್ರಕರ್ತೆ ಮತ್ತು ಅಂದಿನ ಸಂಸದೆಯೊಬ್ಬರು ನಾಳೆಯಿಂದ ದೇಶವೇ ಇರದೇನೋ ಎಂಬಂತೆ ಪ್ರಲಾಪಿಸಿದ್ದರು. ಆದರೆ ಶತ ಶತಮಾನಗಳಿಂದ ಅನ್ನ ಮತ್ತು ಅಕ್ಷರಕ್ಕೆ ಹಾತೊರೆದ ವರ್ಗಗಳ ವ್ಯಕ್ತಿಯೊಬ್ಬ ಮೊಟ್ಟ ಮೊದಲ ಬಾರಿಗೆ ವೈದಿಕ ಶೋಷಣೆಯ ಕೇಂದ್ರಸ್ಥಾನದ ಗರ್ಭಗುಡಿಯನ್ನು ನಿಯಂತ್ರಿಸುವ ಅವಕಾಶ ಸಿಕ್ಕಿದ್ದರೂ, ಅದನ್ನು ಒಬ್ಬ ದಲಿತ ಮಹಿಳೆಗೆ ಬಿಟ್ಟು ಕೊಟ್ಟ ಪವಾಡವನ್ನು ದೇಶವಿಂದು ಮರೆತೇ ಬಿಟ್ಟಿದೆ. ಒಟ್ಟಾರೆ, ಅಧುನಿಕ ಭಾರತದ ನೈಜ ಪವಾಡವೆಂದರೆ ಕಾನ್ಶಿರಾಂ.

ನಮ್ಮ ಗಾದೆಗಳು ಯಾರನ್ನೂ ನೇರವಾಗಿ ಬೈಯ್ಯುವುದಿಲ್ಲ. ‘ಎಲ್ಲಾ ರಾಜಕಾರಣಿಗಳೂ ಬ್ರಷ್ಟರು’ ಎನ್ನುವ ಬದಲು ಹಿಂದಿ ಗಾದೆಯೊಂದು “ಕಲ್ಲಿದ್ದಲಿನ ವ್ಯಾಪಾರ ಮಾಡುವವರ ಮುಖ ಒಮ್ಮೆಯಾದರೂ ಕಪ್ಪಾಗಲೇ ಬೇಕು” ಎನ್ನುತ್ತದೆ. ಭಾರತದ ರಾಜಕೀಯವೆಂದರೇನೇ ಒಂದು ದೊಡ್ಡ ಕತ್ತಲು ಕವಿದ ಕಲ್ಲಿದ್ದಲಿನ ಗಣಿ, ಕಾನ್ಶಿರಾಂ ಅದರ ಕತ್ತಲೆಯನ್ನು ಕೆಲಹೊತ್ತಿಗಾದರೂ ಕಳೆದ ಕೋಹಿನೂರ್. ಅವರ ಚಿಂತನೆಯನ್ನು ಒಪ್ಪದಿರುವ ಜನರು ಚಿಂತನೆಯ ಹೊಸ ಹೊಳಹನ್ನು ಒಪ್ಪದಿರುವುದಿಲ್ಲ.

ಕಾನ್ಶಿರಾಮರ ಮೂಸೆಯನ್ನು ಸೇರಿದ ಅನೇಕ ‘ಚಮಚಾ’ಗಳು ದೊಡ್ಡ ದೊಡ್ಡ ಹತ್ಯಾರುಗಳಾಗಿ ಹೊರಬಂದರು. ಇದಕ್ಕೂ ಮುಖ್ಯವಾಗಿ, ಅಂಬೇಡ್ಕರ್ ತೀರಿಹೋದ ಮೂರು ನಾಲ್ಕು ದಶಕಗಳ ಅವಧಿಯಲ್ಲಿಯೇ ಅದು ಬರೀ ಪುಸ್ತಕದ ಬದನೆಕಾಯಿಯಲ್ಲ Young_Ambedkarಬದಲಿಗೆ ಅಧಿಕಾರ ಸಾಧನೆಗೊಂದು ಕೈಪಿಡಿಯೆಂದು ಸಿದ್ಧವಾಯಿತು. ಯುಗ ಪ್ರವಾದಿಯೊಬ್ಬನ ಸಿದ್ಧಾಂತಕ್ಕೆ ಇಷ್ಟು ಬೇಗ ಮನ್ನಣೆ ಕೊಡಿಸಿದ ಮತ್ತೊಬ್ಬ ಪ್ರವಾದಿ ಕಾನ್ಶಿರಾಂ.

ಅಕ್ಟೋಬರ್ ಒಂಬತ್ತರಂದು ಕಾನ್ಶಿರಾಂ ನಮ್ಮನ್ನಗಲಿ ಹತ್ತಿರ ಹತ್ತಿರ ಒಂದು ದಶಕ; ಆದರೆ ಅವರ ಸಂದೇಶ ಮತ್ತು ಚಿಂತನೆ ಎಂದಿಗೂ ಚಿರಾಯು.

(ಮುಂದುವರೆಯುವುದು…)

One thought on “ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1

Leave a Reply to natarajappa Cancel reply

Your email address will not be published. Required fields are marked *