ಪಯಣ: ಗಾಂಧೀ ಜಯಂತಿ ಕಥಾಸ್ಪರ್ಧೆ 2015- ಬಹುಮಾನ ಪಡೆದ ಕಥೆ


-ಶಾಂತಿ ಕೆ.ಎ.


“ಮ್ಯಾಡಮ್ ಸ್ಸಾರಿ ಐ ಕುಡಂಟ್ ಹೆಲ್ಪ್ ಯು.. ದಿ ಅದರ್ ಆಕ್ಯುಪೆಂಟ್ ಹ್ಯಾಸ್ ಕಮ್ .. ಯು ಹ್ಯಾವ್ ಟು ಶೇರ್ ದಿಸ್ ಸೀಟ್ ವಿಥ್ ಹಿಮ್.” ಟಿ ಟಿ ನಿರ್ಭಾವುಕನಾಗಿ ಹೇಳಿ ಅತ್ತ ಹೋಗುವಾಗ ಮೇಲಿನ ಬರ್ತ್ ನಲ್ಲಿ ಕುಳಿತಿದ್ದ ತಮಿಳು ಹುಡುಗ ಕಿಸಕ್ಕನೆ ನಕ್ಕ. ಮ್ಯಾಡಂ, ನಿಮ್ಮ ಪ್ರೇಯರ್ ವೇಸ್ಟ್ ಆಯ್ತು ನೋಡಿ.. “ನಾನು ತುಟಿ ತಿರುಗಿಸುತ್ತ ನಕ್ಕೆ. ಹಾಗೆ ನಗುವಾಗ ನಾ ಬೇಕಂತಲೇ ತುಸು ಹೆಚ್ಚೇ ತುಟಿ ವಾರೆ ಮಾಡಿ ನಕ್ಕೆನೇನೋ ಅನಿಸಿ ತಕ್ಷಣ ನಗು ಕರಗಿಸಿ ಆ ಭಾಗೇಶನ ದಾರಿ ಕಾಯತೊಡಗಿದೆ. ಜೊತೆಗೆ ಆ ತಮಿಳು ಹುಡುಗ ಮತ್ತು ಎದುರಿನ ಸೀಟಿನಲ್ಲಿದ್ದ ನಾಯ್ಡು ಸರ್ ಮತ್ತು ಆ ಮೂವರು ಮಧ್ಯವಯಸ್ಸಿನ ಗಂಡಸರು ಕೂಡ ಅವನದೇ ದಾರಿ ಕಾಯುತ್ತಿರುವಂತೆ ನನಗೆ ಅನಿಸಿತು. ಬರುವ ಮೊದಲೇ ಅದೋ ಬಂತು ಬಂತು ಇದೋ ಬಂತು ಅಂತ ಕಾದ ಭೂತವೊಂದು ಪ್ರತ್ಯಕ್ಷವಾಗುತ್ತಿದೆಯೇನೋ ಎಂಬಷ್ಟು ಕುತೂಹಲ ಅಲ್ಲಿ ಸಡನ್ನಾಗಿ ಎದ್ದು ನಿಂತಿತ್ತು, ಅದೇನೂ ಸುಖಾ ಸುಮ್ಮನೆ ಬಂದದ್ದಲ್ಲ ಬಿಡಿ.. ಅದಕೂ ಮುಂಚೆ ನಾವೆಲ್ಲ ಭಾಗೇಶನನ್ನು ಬಾಯಿಗೆ ಹಾಕಿಕೊಂಡು ಜಗಿದುಗಿದಿದ್ದೆವು. ಬಹುಃಶ ಇದರಲ್ಲಿ ಪ್ರಧಾನ ಪಾತ್ರ ನಂದೇ ಇರಬೇಕು. ಅಪರಿಚಿತ ಹುಡುಗನೊಬ್ಬನ ಜೊತೆ ಸೀಟು ಹಂಚಿಕೊಳ್ಳುವ ಪುಳಕ ಮತ್ತು ಭಯಮಿಶ್ರಿತ ಕುತೂಹಲ ನಂಗಿರಲಿಲ್ಲವೆಂದರೆ ಅದು ಅಪ್ಪಟ ಸುಳ್ಳಾದೀತು. ಆದರೆ ಅದನ್ನ ಯಾರಿಗೂ ತೋರಿಸಬಾರದಿತ್ತಲ್ಲ..! ಅದಕ್ಕೇ ಎಲ್ಲರಿಗಿಂತಲೂ ತುಸು ಹೆಚ್ಚಾಗೇ ಮಾತಾಡಿದ್ದೆನೇನೋ …

ಇದಕ್ಕಿಂತ ಮುಂಚೆ ಒಮ್ಮೆ ಥೇಟ್ ಹೀಗೇ ಆಗಿತ್ತು. ಅವತ್ತು ನಾನೂ ನನ್ನ ಗಂಡ ಸುಬ್ರಮಣಿಯೂ ಮದುವೆಯಾದ ಹೊಸತರಲ್ಲಿart-2 ಹೀಗೇ ಒಂದೇ ಸೀಟು ಹಂಚಿಕೊಳ್ಳಬೇಕಾದ ಸಂದರ್ಭವೊಂದು ಬಂದಿತ್ತು. ಅವೊತ್ತು ನಿಜಕ್ಕು ಅವತ್ತು ನಾನು ವಿಚಿತ್ರವಾದ ಎಕ್ಸೈಟ್ಮೆಂಟಿನಲ್ಲಿ ಚಡಪಡಿಸಿದ್ದೆ. ಅತ್ತೆ, ಮಾವ, ನಾದಿನಿ ಅವಳ ಸಂಸಾರ ಸಾರ ಸಗಟಿನ ಜೊತೆಗೆ ಇದ್ದೂ ಇದ್ದೂ ಅವತ್ತು ಮೊದಲ ಬಾರಿಗೆ ಗಂಡನೊಡನೆ  ಟ್ರೈನಿನಲ್ಲಿ ಒಂದೇ ಸೀಟು ಹಂಚಿಕೊಂಡು ಚೆನ್ನೈನತ್ತ ಹೊರಟಿದ್ದ ಎಳೆಯ ಖುಷಿಯದು. ಪುಟ್ಟಶಾಲಿನಲ್ಲಿ ಕಾಲುಗಳನ್ನ ಮುಚ್ಚಿಕೊಂಡು, ತುಟಿಗಳಲ್ಲಿ ಸುಮ್ಮ ಸುಮ್ಮನೆ ಇಣುಕಿ ನೋಡುತ್ತಿದ್ದ ನಾಚಿಕೆಯ ನಗುವನ್ನು ಸೈರಿಸಿಕೊಂಡು ನನ್ನದೇ ನನ್ನವನಾಗಿದ್ದ ಅವನತ್ತ ಮೆಲುವಾಗಿ ಕಾಲು ಚಾಚಿದ್ದೆ. ಆ ತುದಿಯಲ್ಲಿ ಅವನು,ಈ ತುದಿಯಲ್ಲಿ ನಾನು! ನಮ್ಮ ತುಂಬಿದ ಮನೆಯೊಳಗೆ ನಾನು ಎಲ್ಲಿ ಕಳೆದು ಹೋಗುತ್ತಿದ್ದೆ ನೋ ನನಗೇ ತಿಳಿಯುತ್ತಿರಲಿಲ್ಲ. ಗಂಡನ ಕೆಲಸವೇ ಅಂಥದು. ಬೆಳಗೆ ಏಳು ಗಂಟೆಗೆಲ್ಲ ಹೊರಟರೆ ಬರುವುದು ರಾತ್ರಿ ಕವಿದು ಕತ್ತಲಾಗಿ ಬಸ್ಸೆಲ್ಲ ನಿಂತು ಲಾರಿಗಳಷ್ಟೇ ಓಡಾಡುವ ಸರ ಹೊತ್ತಿನಲ್ಲಿ. ರೂಮಿನಲ್ಲಿ ಅತ್ತೆ ಒಬ್ಬಳೆ ಅಡ್ಡಾಗಿ ಹೂಸು ಬಿಡುತ್ತ ಒದ್ದಾಡುತ್ತಿದ್ದರೆ ಇತ್ತ ಹಾಲಿನಲ್ಲಿ ಮಾವ ರಾತ್ರಿಯಿಡೀ ಕೆಮ್ಮುತ್ತ, ಬೀಡಿ ಸೇದುತ್ತ, ಘಳಿಗೆಗೊಮ್ಮೆ ಎದ್ದು ಉಚ್ಚೆ ಹುಯ್ಯುತ್ತ ಬೆಳಕು ಹರಿಸುತ್ತಿರುತ್ತಿದ್ದ. ನಡು ನಡುವೆ ಒಮ್ಮೊಮ್ಮೆ ಎದ್ದು “ನೋಡು ಯಾರೋ ಕರೀತ ಇದಾರೆ, ಹಿಂದಿನ ಬೀದಿಯಲ್ಲಿ ದೆವ್ವ ಇದೆ “ಅಂತೆಲ್ಲ ಹೇಳುತ್ತ ನಡು ರಾತ್ರಿಯಲಿ ಬಾಗಿಲಿಗೆ ಹಳೆಯ ಚಪ್ಪಲಿ ಕಟ್ಟಿಟ್ಟು ಮನೆಯ ಸುತ್ತ ಮೂತ್ರ ಮಾಡುತ್ತ ಸುತ್ತುತ್ತಿರುತ್ತಿದ್ದ. ಇಷ್ಟೆಲ್ಲ ರಂಪ ಆಗುತ್ತಿರುವಾಗ ಇವನು ಅದ್ಯಾವುದೋ ಮಧ್ಯರಾತ್ರಿಯಲ್ಲಿ ಮನೆಗೆ ಬಂದು ಮಾರ್ಕೆಟ್ಟಿನಲ್ಲಿ ಬಿಸಾಕಿದ ಈರುಳ್ಳಿ ಮೂಟೆಯಂತೆ ಅಸಡ್ಡಾಳಾಗಿ ಅಡ್ಡಾಗುತ್ತಿದ್ದ. ಅವನು ಸ್ನಾನ ಮಾಡಿ ಬರಲಿ ಅಂತ ನನಗನಿಸುತ್ತಿತ್ತು ಆದರೆ ಸ್ನಾನ ಮಾಡಿಯೂ ಏನೂ ಕಾರ್ಯವಿರಲಿಲ್ಲ.. ಆ ಹಾಲಿ ನಲ್ಲಿ ನಾನು, ಇವನು, ಮಾವ, ಕೆಳಗೆ ಹಾಸಿಕೊಂಡು ನಾದಿನಿ ಮತ್ತವಳ ಸಂಸಾರ. ಅಲ್ಲಿ ಏನೂ ನಡೆಯಬೇಕಿರಲಿಲ್ಲ ….ಒಂಚೂರಾದರೂ ಏನಾದರೂ ನಡೆಯಲಿ ಅಂತ ನಾನು ಕಾದ ಮಣ್ಣಿನಂತೆ ಹೊಗೆಯಾಡುತ್ತ ಮಲಗಿದ್ದರೆ ಇವನು ಒಲಿಯದ ಬಿರುಮೋಡದಂತೆ ತನ್ನದೇ ಲೋಕದಲ್ಲಿ ತೇಲುತ್ತಿದ್ದ. ಅಷ್ಟೆಲ್ಲ ದಾಟಿ ಅದೇ ಮೊದಲು! ಅವನೊಂದಿಗೆ ಅಷ್ಟು ಖುಷಿಯಿಂದ ಹೊರಟ ಮೊದಲ ಪಯಣ. ಅವನತ್ತ ನಿಡಿದಾಗಿ ಕಾಲು ಚಾಚಿ ಅವನ ಕಾಲುಗಳಿಗೆ ಕಚಗುಳಿ ಇಡುವ ಪ್ರಯತ್ನ ಮಾಡಿದ್ದೆ ಕಣ್ಣುಗಳು ಚೆಲ್ಲುಚೆಲ್ಲು ನಾಚಿಕೆಯೊಂದನ್ನು ಚೆಲ್ಲುತ್ತಿದ್ದಿರಬೇಕು. “ಏ ಕಾಲ್ತೆಗಿ, ನನ್ನ ಪ್ಯಾಂಟ್ ಲೈಟ್ ಕಲರಿದೆ ನೋಡು ..” ಅವನು ಸಿಡುಕಿದಂತೆ ಹೇಳಿದ್ದ ..ನಾ ಮಿಡುಕಿ ಬಿದ್ದಿದ್ದೆ. ಕಣ್ಣುಗಳಲ್ಲಿ ಹೊತ್ತಿಕೊಂಡಿದ್ದ.. ಬೆಳಕು ಹಠಾತ್ತನೆ ನಂದಿ ಹೋಗಿ ಮುಖ ಕಪ್ಪಿಟ್ಟಿತ್ತು. ನಾನು ಮಾತಾಡದೆ ಹೊರಗೆ ಕಣ್ಣುಕೀಲಿಸಿ ಕತ್ತಲನ್ನು ಕಣ್ತುಂಬಿಕೊಳ್ಳತೊಡಗಿದ್ದೆ. “ನೀನು ಮಲಕೋ ನಾಳೆ ನಿಂಗೆ ಎಕ್ಸಾಮ್ ಇದೆಯಲ್ಲ.. “ಅವನು ಅಲ್ಲಿಂದ ಎದ್ದುಹೋಗಿ ಟ್ರೈನಿನ ಬಾಗಿಲ ಪಕ್ಕ ಬಹಳ ಹೊತ್ತು ನಿಂತಿದ್ದ. ನಾನು ಜೋಕಾಲಿಯಾಡುತ್ತಿದ್ದ ಟ್ರೈನಿನ ಬರ್ತಿಗೆ ಅಂಟಿಕೊಂಡು ಕಾಲು ಕೊಕ್ಕರಿಸಿ ಮಲಗಿದ್ದೆ. ಅವತ್ತು ರಾತ್ರಿಯ ಬೇಗೆಯ ಹೊತ್ತಿನಲೊಮ್ಮೆ ಅನಿಸಿತ್ತು.. ಒಂದು ವೇಳೆ ಬೇರೆ ಯಾವುದಾದರೂ ಹುಡುಗನೊಂದಿಗೆ ಹೀಗೆ ಬರ್ತ್ ಹಂಚಿಕೊಳ್ಳುವ ಹಾಗಿರುತ್ತಿದ್ದರೆ! ಅದೆಲ್ಲ ನಡೆದು  ವರುಷ ಹತ್ತಾಯಿತು. ಬದುಕು ನಿರ್ಭಾವುಕ ಹೆದ್ದಾರಿಯ ಹಾಗೆ ಸಂದ  ಸದ್ದುಗಳನ್ನೆಲ್ಲ ಒಳಗೆಳೆದುಕೊಳ್ಳುತ್ತ ತಾನು ಮೌ ನವಾಗಿ ಹೋಯ್ತು. ನಡೆದಷ್ಟೂ ಬೆಳೆಯುತ್ತಿರುವ ಬದುಕು ಎಂದಾದರೂ ಒಮ್ಮೆ ನಿಲುಗಡೆಗೆ ಬರುವುದೇ.. ಅಲ್ಲಿಯ ತ ನಕ ಹೀಗೇ ನಡೆಯುವುದು, ಯಾರಿಗೆ ಗೊತ್ತು ಯಾವ ತಿರುವಿನಲ್ಲಿ ಯಾವ ಸೋಜಿಗ ಅವಿತಿದೆಯೋ… ಹಾಗಂದುಕೊಂಡೇ ನಡೆದುಬಿಟ್ಟಿದ್ದೇನೆ. ಭರ್ತಿ ಹತ್ತು ವರ್ಷಗಳು!  ಬೆಂದಿದ್ದು ನೊಂದಿದ್ದು ಎಲ್ಲ ಮುಗಿದು ಬಿಸಿಯೇರಿ ತಣ್ಣಗಾದ ಸಂಧಿಪರ್ವ. ಬದುಕು ನಿಜಕ್ಕೂ ಒಂದು ಸ್ಥರಕ್ಕೆ ಬಂದಿತ್ತು.. ಏನೂ ಅಲ್ಲದೆ ಸುಮ್ಮನೇ ಸಂತೋಷವಾಗಿರುವುದನ್ನ ರೂಢಿಸಿಕೊಂಡು ಕಲಿತುಬಿಟ್ಟಿತ್ತು. ಅಲ್ಲೀತಂಕ ಸಂತೋಷವಾಗಿರೋದನ್ನ ಕೂಡ ಕಲಿ ಬಹುದು ಅಂತ ನನಗೆ ಗೊತ್ತೇ ಇರಲಿಲ್ಲ.

“ಸೀಟು ಕನ್ಫರ್ಮ್ ಇಲ್ಲ ಆರ್ ಎ ಸಿ. ಬಂದಿದೆ., ನೀನು ಯಾವುದಕ್ಕೂ ಬೇಗ ಹೊರಟುಬಿಡು .ಗುರ್ತಿರೋ ಟಿ ಟಿ ಇದ್ದರೆ ಒಂಚೂರು ಒಳ್ಳೆದು, ಸೆಬಾಸ್ಟಿನ್ ಡ್ಯೂಟಿ ಮೇಲಿದ್ದಾನ ನೋಡು” ಅಂತ ಸುಬ್ರಮಣಿ ಫೋನಿಸಿದ್ದ. ಅಂದುಕೊಂಡಂತೆಯೇ ಸೆಬಾಸ್ಟಿನ್ ಡ್ಯೂಟಿ ಮೇಲಿರಲಿಲ್ಲ.., ನನ್ನ ಸೀಟು ಭಾಗೇಶನೊಡನೆ ಹಂಚಿಕೆಯಾಗಿತ್ತು. ಅವನು ಬಾರದಿರಲಿ ಅಂತ ಎಲ್ಲರೆದುರು ಸುಳ್ಳೇ ಬೇಡಿದ್ದೆ ..ಇದೀಗ ಅವನು ಬರುತ್ತಿದ್ದಾನೆ ನಿಜಕ್ಕೂ. ಅವನೇನಾದರೂ ಹೇಳುವ ಮೊದಲೇ ನಾನು ಸರಿದು ಕೂತೆ. ಸೈಡ್ ಬರ್ಥ್ ಬೇರೆ. ಮನಸು ಮಾಡಿದ್ದರೆ ನಾಯ್ಡು ಸರ್ ಅವರ ಸೀಟ್ ನನಗೆ ಬಿಡಬಹುದಿತ್ತು ಆದರೆ ಅವರೆಲ್ಲ ಸದ್ದಿಲ್ಲದೆ ಕುತೂಹಲಿಗಳಾಗಿದ್ದಾರೆ ಅನಿಸಿತು. ಒಳ್ಳೆ ಎತ್ತರ ಅವನದು. ಕಂದು ಬಣ್ಣದ ಜೀನ್ಸ್ ಮೇಲೆ ನೀಲಿ ಟಿ ಶರ್ಟು. ಯಾವುದೋ ಮೋಹಕ ಸ್ಪ್ರೇ ಹೊಡಕೊಂಡಿದ್ದಾನೆ, ಅದು ಅವನ ಬೆವರಿ ನೊಡನೆ ಸೇರಿ ಅದು ಹಿತವಾಗಿ ತಾಗುತ್ತಿದೆ. ಎಸಿ ಕೋಚಿನ ಗದಗುಟ್ಟಿಸುವ ಚಳಿ..ಭಗವಂತ !ಮನಸೇ ಸುಮ್ಮನೆ ಸದ್ದು ಮಾಡದೆ ಮಲಗು ಅಂತ ನಾ ಒಳಗೊಳಗೇ ಅದನ್ನು ಸಮಾಧಾನಿಸಿದೆ. ಅವನು ನನ್ನತ್ತ ಒಂದು ಕುತೂಹಲಕ್ಕೂ ನೋಡಲಿಲ್ಲ.. ನಾನು ಮನಸನ್ನು ತಡವಿ ಸುಮ್ಮನಾಗಿಸಿ ಕೈಯಲ್ಲಿದ್ದ ಪುಸ್ತಕದೊಳಗೆ ಹುದುಗಿದಂತೆ ಮಾಡುತ್ತ ಕಡೆಗಣ್ಣಲ್ಲಿ ಅವನ ಚಲನವಲನಗಳನ್ನು ನೋಡಿದೆ. ಅವನ ಬಳಿ ಕೊಳೆಯಾದ ಬ್ಯಾಗೊಂದಿತ್ತು. ಅದು ಬಹಳ ದಿನಗಳಿಂದ ಅವನಿಗಾಗಿ ಜೀವ ತೇಯುತ್ತಿರುವುದು ಸ್ಪಷ್ಟವಿತ್ತು. ಅವನು ಸರಸರನೆ ಒಂದು ಬೆಡ್ಶೀಟೆತ್ತಿ ಕಾಲಿನ ಮೇಲೆ ಹಾಕಿಕೊಂಡು ಆ ತುದಿಯಲಿ ಕಾಲು ಮಡಚಿ ಕುಳಿತು ಬ್ಯಾಗಿನೊಳಗಿಂದ ಇಯರ್ ಫೋನ್ ಎತ್ತಿ ಕಿವಿಗೆ ಹಾಕಿಕೊಂಡು ಹಾಡು ಕೇಳುವವನಂತೆ ಮೊಬೈಲಿನಲ್ಲಿ ಕಣ್ಣು ಕೀಲಿಸಿ ಕುಳಿತ. ಅವನೀಗ ನನ್ನೆದುರು ಕೂತು ನನ್ನ ಫೋಟೋ ತೆಗೆದರೆ ಏನು ಗತಿ ಅದು ನನಗೆ ಗೊತ್ತಾಗುವ ಬಗೆ ಹೇಗೆ ಅಂತ ನನಗೆ ದಿ ಗಿಲಾಯಿತು. ಮೆಲ್ಲಗೆ ಕತ್ತೆತ್ತಿ ಪಕ್ಕದ ಸೀಟಿನಲ್ಲಿ ಕೂತಿದ್ದ ನಾಯ್ಡು ಸರ್ ನತ್ತ  ನೋಡಿದೆ ಅವರಿಗೂ ಏನೋ ಹೊಳೆದಿ ರಬೇಕು, ಅವರು ಅಕ್ಕರೆ ತೋರುವವರ ಹಾಗೆ “ಬೆಡ್ಶೀಟ್ ಹೊದ್ದುಕೊಂಡು ಕೂತ್ಕೋಮ್ಮ, ನಾವೆಲ್ಲ ಇಲ್ವೇ.. ಸಧ್ಯ ನಂಗೆ ಸ್ವಲ್ಪ ಸ್ಟ್ರೈನ್ ಆಗಿದೆ ಮಲಗ್ತೀನಿ ಅಂತ ಬರ್ತ್ ಬಿಡಿಸಿಕೊಂಡು ಮಲಗಿದ್ದರು. ನಾನು ಮುಖ ಕೊಡಬಾರದೆಂಬ ಭಯದಿಂದ ಮತ್ತಷ್ಟು ಬಗ್ಗಿ ಪುಸ್ತಕ ಓದುವಂತೆ ಮಾಡಿದೆ. “ಹಲ್ಲೋ ಮ್ಯಾಡಮ್,ಯಾಕಷ್ಟು ಅನ್ಕಂಫರ್ಟೇಬಲ್ ಆಗಿ ಕೂತ್ಕೊಂಡಿದೀರ? ಆರಾಮಾಗಿ ಕೂತ್ಕೊಳ್ಳಿ” ಅವನ ಕನ್ನಡ ಸ್ಪಷ್ಟವಿತ್ತು, ಅಂದರೆ ತಮಿಳವನೋ ತೆಲುಗಿನವನೋ ಅಲ್ಲ,ಅಪ್ಪಟ ಕನ್ನಡದವನೇ ಇರಬೇಕೆನಿಸಿತು. ” ಅಲ್ಲ ನೀವು ಮೊಬೈಲ್ ನಲ್ಲಿ ಏನು ನೋಡತಾ ಇದೀರ?,” “ಯಾಕೆ ?”ನನ್ನ ಪ್ರಶ್ನೆಯಿಂದ ಅವನೊಂಚೂರು ಇರಿಟೇಟ್ ಆಗಿರುವುದು ಸ್ಪಷ್ಟವಿತ್ತು. ಆದರೆ ನಾನು ನಿರ್ಧರಿಸಿದ್ದೆ. ಸುಮ್ಮನೆ ಮನದಲ್ಲೇ ಏನಾದರೊಂದು ಕಲ್ಪಿಸಿಕೊಂಡು ಕಷ್ಟಪಡೋದಕ್ಕಿಂತ ನೇರ ಮಾತಾಡೋದೇ ಸರಿಯೆನಿಸಿತ್ತು. “ಹಾಗಲ್ಲ, ನೋಡಿ ನೀವು ಏನು ನೋಡೋದಿದ್ದರೂ, ಫೋನು ಕೆಳಗೆ ಇಟ್ಕೊಂಡು ನೋಡಿ, ಅದೆಂಥ ನನ್ನ ಮುಖದ ನೇರ ಇಟ್ಕೊಂಡೆಂತ ನೋಡುದು? ಆಮೇಲೆ ನೀವು ನಂದು ಪೋಟೋ ತೆಗಿಯುದಿಲ್ಲಾಂತ ಎಂಥ ಗ್ಯಾರಂಟಿ?” “ಮ್ಯಾಡಂ, ಸುಮ್ನೆ ಇಲ್ದೇ ಇರೋ ಐಡಿಯಾ ಎಲ್ಲ ಕೊಡ್ಬೇಡಿ, ಇಷ್ಟೊತ್ತು ಹಾಗೆಲ್ಲ ಯೋಚನೆ ಮಾಡಿರ್ಲಿಲ್ಲ, ಇವಾಗ ನ್ನಿಸ್ತಿದೆ ಯಾಕ್ ಮಾಡ್ಬಾರದು ಅಂತ, ನೀವು ಚಂದ ಇದೀರಿ..ಯೂಸ್ ಆಗತ್ತೆ” ಅವನು ಮೀಸೆಯಡಿ ನಗುತ್ತಿರುವುದನ್ನು ಕಣ್ಣುಗಳು ಬಿಚ್ಚಿಡುತ್ತಿದ್ದವು.

“ಏನ್ ಮಾತಾಡ್ತಾ ಇದೀರ? ” ಕೋಪ ಬಂದರೂ.. ನೀವು ಚಂದ ಇದೀರ ಅಂದದ್ದು ಹಿತವಾಗೇ ಕೇಳಿಸಿತ್ತು. “ಏನಾಯ್ತಮ್ಮ , ಎನೀ ಪ್ರಾಬ್ಲಮ್ ?” ನಾಯ್ಡು ಸರ್ ಸೀಟು ಬಿಟ್ಟೆದ್ದಿದ್ದರು. “ನಥಿಂಗ್ ಅಂಕಲ್, ಸುಮ್ನೆ ತಮಾಷೆಗಂದೆ ಮ್ಯಾಡಮ್, ಹಾಗೆಲ್ಲ ಏನೂ ಮಾಡಲ್ಲ..ಯು ಪ್ಲೀಸ್ ಬಿ ಕಂ ಫರ್ಟೇಬಲ್. ನೀವು ಬೇಕಾದ್ರೆ ಆ ಅಂಕಲ್ ನ ಕರೆದು ಕೂರಿಸ್ಕೊಳ್ಳಿ, ನಾ ಅವರ ಸೀಟಲ್ಲಿ ಕೂತ್ಕೊತ್ತೀನಿ” ಅವನು ಬೇಕಂತಲೇ ತುಂಬ ನಾಟಕೀಯವಾಗಿ ಮಾತಾಡುತ್ತಿದ್ದಾನೆ ಅನಿಸಿ ನನಗೆ ಪೆಚ್ಚಾಯ್ತು. ನಾಯುಡು ಸರ್ ಬೇರೆ ತಮ್ಮ ಬುಡಕ್ಕೆ ಬರುತ್ತಿರುವ ಸಮಸ್ಯೆಯನ್ನು ನಾಜೂಕಾಗಿ ತಳ್ಳಿ ಹಾಕುವ ಸನ್ನಾಹದಲ್ಲಿ, “ಅದೆಲ್ಲ ಏನೂ ಬೇಡ ನೀ ಮೊಬೈಲು ಮಡಿಲಲ್ಲಿಟ್ಟುಕೊಂಡು ನೋಡು..ಸಾಕು, ನಾನೇ ಒಬ್ಬ ಬಿಪಿ ಪೇಷಂಟ್ ನಂಗೆ ಟೆನ್ಶನ್ ಕೊಡಬೇಡಿ ಅನ್ನುತ್ತ ಮುಸುಕೆಳೆದು ಮಲಗಿ ಬಿಟ್ಟರು. ಈ ಭಾಗೇಶನ ತುಟಿಯಲ್ಲಿ ಮತ್ತೆ ಸಣ್ಣ ತುಂಟ ನಗು. “ಸರಿ ಅಂಕಲ್ ನೀವು ಮಲಗಿ ನಾ ಲೈಟ್ ಆಫ್ ಮಾಡ್ತೀ ನಿ.” ಅನ್ನುತ್ತ ಅವನು ಕರ್ಟನ್ ಎಳೆದು ಲೈಟ್ ಆರಿಸಿದಾಗ ನಂಗೆ ನಿಜಕೂ ಧಿಗ್ಗೆಂದಿದತ್ತು. ಆದರೆ ಯಾವುದನ್ನೂ ತೋರಿಸಿಕೋ ಬಾರದು ಅನ್ನುತ್ತ ನಿರುಮ್ಮಳವಾಗಿ ಕುಳಿತವಳಂತೆ ಬುಕ್ ಮುಚ್ಚಿ ಸುಮ್ಮನೆ ಆನಿ ಕುಳಿತೆ. “ಮ್ಯಾಡಂ,ನಿಮ್ಮ ಬೆಡ್ ಲೈಟ್ ಆನ್ ಮಾಡ್ಕೊಳ್ಳೀ, ಅದರಲ್ಲೇ ಓದಬಹುದು.” ಅವನು ಹಾಗನ್ನುತ್ತ ಮೊಬೈಲು ಮುಚ್ಚಿ ಹಾಡಿನಲ್ಲೇ ಕಳೆದು ಹೋಗುತ್ತಿರುವವನಂತೆ ಕಣ್ಮುಚ್ಚಿ ಹಿಂದಕ್ಕೊರಗಿದ. ಚೇ ಚೇ ನಾನೇ ಅವಸರ ಪಟ್ಟೆನಾ, ಈ ಪ್ರಯಾಣವನ್ನು ಚೆಂದಗೊಳಿಸಿಕೊಳ್ಳಬಹುದಿತ್ತೇನೋ..ಮಿಡುಕಿದೆ.. “ನೀವು ಬೆಂಗಳೂರಿನ ತನಕವಾ?” ಮಾತು ಮುಂದುವರಿಸಬೇಕೆನಿಸಿತ್ತು. “ಇಲ್ಲ ಮೇಡಂ ಚೆನ್ನೈ ಗೆ ಅಲ್ಲಿ ಒಂದು ಇಂಟರ್ವ್ಯೂ ಅಟೆಂಡ್ ಮಾಡೂದಿದೆ” “ಯಾತರದ್ದು?” “ಟಿ ಸಿ ಎಸ್ ನಲ್ಲಿ. ನೋಡಬೇಕು” ಗುಡ್ಲಕ್, ಅದು ತರಮಣಿಲಿದೆ ಅಲ್ವಾ?” ಮ್, ಅಲ್ಲಿಗೆ ಹೋಗೋಕೆ ಹೇಗೆ? ಬಸ್ ಹಿಡೀಬೇಕಾ? ಆಟೋದಲ್ಲಿ ಹೋಗಬಹುದಾ?” “ಬಸ್ ಬೇಕಾದಷ್ಟಿವೆ, ಬಸ್ಸಲ್ಲೇ ಹೋಗಿ. ದೂರ ಇದೆ ಅದು, ನಮ್ಮಲ್ಲಿ ಬಸ್ ಫೇರ್ ಕಡಿಮೆ ಇದೆ, ಇಲ್ಲಾಂದ್ರೆ ಪ್ರಿ ಪೇಯ್ಡ್ ಆಟೋ ಕೂಡಾ ಸಿಗುತ್ತೆ ಸಮಸ್ಯೆ ಏನಾಗಲ್ಲ” “ಮ್…”

“…” “ನೀವು ಚೆನ್ನೈನಲ್ಲೇ ಸೆಟಲ್ಡಾ?” “ಸಧ್ಯಕ್ಕೆ ಅಲ್ಲಿದೀವಿ, ಆದ್ರೆ ಸೆಟಲ್ ಆಗೋದು ಅಂತ ಏನಿಲ್ಲ, ಅಸಲು ಮನುಷ್ಯ ಸಾಯೋ ತಂಕ ಸೆಟಲ್ ಆಗಕ್ಕಾಗಕ್ಕಾಗಲ್ಲಾಂತ ನಂಗನ್ಸುತ್ತೆ” ಹೀಗಂದ ಮೇಲೆ ನಾನ್ಯಾಕೋ ಅವನನ್ನ ಇಂಪ್ರೆಸ್ ಮಾಡುವಂತೆ ಮಾತಾಡಬೇಕು ಅನ್ಕೊಂತಾ ಮಾತಾಡ್ತಾ ಇದೀನೇನೋ ಅನಿಸಿ ತಲೆ ಕೊಡವಿದೆ. ಅವನು ನಕ್ಕ..”ವಿನೋದವಾಗಿದೆ ನಿಮ್ಮ ಮಾತು, ಆದರೆ ಒಪ್ಪತಕ್ಕಂತ್ತದ್ದೇ ಬಿಡಿ” “ಅದೇನು ಹಾಡು ಕೇಳುತ್ತಿದ್ದೀರಿ..ನಮಗೂ ಕೇಳಿಸಿ ಅಲ್ಲ” “ಓ ಅದರಲ್ಲೇನು, ಚಂದ ಹಾಡು ನೀವೂ ಕೇಳಿ..” ಅವನು ಇಯರ್ ಫೋನ್ ಕಿತ್ತ. ‘ಪಾಸ್ ಆಯಿಯೇ..ಕಿ ಹಮ್ ನಹೀ ಆಯೇಂಗೆ ಬಾರ್ ಬಾರ್…. ‘ಆ ಹಗುರ ಮೌನವನು ಭೇದಿಸಿಕೊಂಡು ಮಧುರ ಹಾಡು ಹೊಮ್ಮಿತು. ಗಂಡು ದನಿ. “ಇದ್ಯಾರ ಹಾಡು?” ಇದು ಸನಮ್ ಪುರಿ ಹಾಡು,ಹಳೇ ಹಾಡುಗಳನ್ನೇ ತುಸು ಹೊಸತಾಗಿ ಟ್ರೈ ಮಾಡಿದ್ದಾನೆ ನಂಗೆ ತುಂಬ ಇಷ್ಟದ ಹಾಡುಗಳಿವು. “ನಂಗೂ ಇಷ್ಟವಾಯ್ತು” ಅವನು ಚೆಂದಗೇ ಹಾಡುತ್ತಿದ್ದ, ಲಗ್ ಜಾ ಗಲೇ ನನ್ನ ಅತ್ಯಂತ ಇಷ್ಟದ ಹಾಡು.

ನಮ್ಮಿಬ್ಬರ ನಡುವೆ ಹಾಡು ತೇಲತೊಡಗಿತು.ನಾಯ್ಡು ಸರ್, ತಮಿಳು ಹುಡುಗ ಎಲ್ಲ ಮಲಗಿದ್ದಂತೇ ತೋರಿತು. ಮುಚ್ಚಿದ ಕರ್ಟನ್ನಿನ ಮಂದ ದೀಪದ ಬೆಳಕಲ್ಲಿ, ಮಧುರ ಹಾಡುಗಳ ಜೊತೆ, ಹಿತವಾಗಿ ಓಲಾಡುತ್ತ ಹೋಗುತ್ತಿರುವ ಟ್ರೈನಿನ ಓಟಕ್ಕೆ ತಕ್ಕಂತೆ ನನ್ನ ಎದೆಯೂ ಮಿಡಿಯತೊಡಗಿತ್ತು. ಎದುರಿಗೆ ಹರೆಯದ ಕುದುರೆಯಂಥ ಹುಡುಗ.. ಇಲ್ಲಿ ಬಯಕೆಯ ನಿಗಿ ಕೆಂಡ ನುಂಗಿ ಒಳಗೊಳಗೇ ಬೇಯುತ್ತಿರುವ ಸುಡುಸುಡು ಹೆಣ್ಣು!.. ಭಗವಂತ ಈ ಬಯಕೆ ಬಲಿಯದಂತೆ ಕಾಯಿ.. ನಾನು ಮೆಲ್ಲಗೆ ಅವನತ್ತ ನೋಡಿದೆ. ಅವನು ಹಿಂದಕ್ಕೆ ತಲೆ ಒರಗಿಸಿಕೊಂಡು ಕಣ್ಣು ಮುಚ್ಚಿಕೊಂಡಿದ್ದ. ಅವನನ್ನು ಆ ಭಂಗಿಯಲ್ಲಿ ನೋಡಲು ಆರ್ಕಷಕವೆನಿಸಿತು. ಇನ್ನೂ ರಾತ್ರಿಯ ಹತ್ತೂವರೆಯಷ್ಟೇ. ಬೆಳಗಾಗೋದು ಯಾವಾಗ, ಅಲ್ಲೀ ತಂಕ ಹೀಗೇ ಕಾಲು ಮುದುರಿಕೊಂಡು ಹೇಗೆ ಕೂರುವುದು? ಯೋಚಿಸುತ್ತಿರುವಂತೇ ಸುಬ್ರಮಣಿಯ ಫೋನು. “ಏನು ಸೀಟಿಂದು ಏನಾದ್ರೂ ಆಯ್ತಾ? ಸೆಬಾಸ್ಟಿನ್ ನಂ ಗೆ ಫೋನ್ ಮಾಡಿದೆ, ನಾಟ್ ರೀಚೇಬಲ್ ಇದೆ, ನಿಂಗೆ ಸಿಕ್ಕಿದ ನಾ? “ಇಲ್ಲ, ಸಧ್ಯಕೆ ಒಂದು ಹುಡುಗನ ಜೊತೆ ಸೀಟು ಹಂಚ್ಕೊಂಡಿದೀನಿ, ಸಧ್ಯಕ್ಕೆ ಒಕೆ. ನಾಳೆ ಮಾತಾಡ್ತೀನಿ, ಎಲ್ಲ ಮಲಗಿದಾರೆ ..” “ಸರಿ ಸರಿ, ಬೆಳಗೆ ನಾ ಸ್ಟೇಷನ್ನಿಗೆ ಬರ್ತೀನಿ, ನೀನು ಆರಾಮಾಗಿ ಕೂತ್ಕೋ.. ಕಾಲು ಚಾಚ್ಕೊಂಡು ಕೂತ್ಕೋ” ಸುಬ್ರಮಣಿಯ ಪ್ರೀತಿಯನು ಹೇಗೆ ಅರ್ಥೈಸುವುದೆಂದೇ ತಿಳಿಯುವುದಿಲ್ಲ. ಅವನು ಏನನ್ನೂ  ದೊಡ್ಡದಾಗಿ ಹೇಳಿಕೊಳ್ಳುವುದಿಲ್ಲ.. ಅವನ ಹಾಗೆ ಮಾತಾಡದೆ ಸುಮ್ಮನಿರುವುದಾದರೆ ನಾನು ಎದೆಯೊಡೆದು ಸತ್ತೇ ಹೋದೇನು. ಅಷ್ಟು ದೊಡ್ಡ ಮನೆಯೊಳಗೆ ಗಡಿಯಾರದ ಟಿಕ್ ಟಿಕ್ ನಷ್ಟೇ ನೀರಸವಾಗಿ ಬದುಕು ಚಲಿಸುತ್ತಲೇ ಇತ್ತು… ಅಪರೂಪಕ್ಕೊಮ್ಮೆ ಒಂದು ಮಾತಾಡುವ ಸುಬ್ರಮಣಿ, ದಿನದ ಅಷ್ಟೂ ಹೊತ್ತೂ ಹಳೆಯ ಹಾಡುಗಳಿಗೆ ಜೋತು ಬೀಳುವ ನಾನು. “ನಮ್ಮ ಮನೆಯೊಳಗೆ ಜೀವ ತುಂಬುವುದೇ ಹಾಡುಗಳೂ.” ಮನಸಿನ ಮಾತು ದನಿ ಪಡೆದು ಹೊರಬಂದಿತ್ತು. “ಎಲ್ಲದಕ್ಕೂ ಅನುಭವಿಸುವ ಮನಸಿರಬೇಕು ಮೇಡಂ, ನೋಡಿ ಆ ಸರ್ದಾರ್ಜಿ ಹಾಡಿನ ವಾಲ್ಯುಮ್ ಕಡಿಮೆ ಮಾಡೂಂತ ಹೇಳ್ತಿದ್ದಾನೆ” ” ನಿಜ.. ಅವರಿಗೆ ಬರ್ತ್ ಸಿಕ್ಕಿದೆಯಲ್ಲ ಮಲಗುವ ಯೋಚನೆ. ಇರಲಿ ಕಡಿಮೆ ಮಾಡಿ.” “ಸರಿ ಮಾಡ್ತೀನಿ ಬಿಡಿ” ಅವನು ವಾಲ್ಯೂಮ್ ಕಡಿಮೆ ಮಾಡಿ ನನ್ನತ್ತ ನೋಡಿದ.

ನನಗೆ ಮಾತು ಮುಂದುವರಿಸುವ ತವಕ..”ಇಬ್ಬರಿಗೂ ಸರಿಯೆನಿಸುವ ವಿಚಾರ ಮೂರನೆಯವನೊಬ್ಬನಿಗೆ ಸರಿಯೆನಿಸದೇ ಇರಬಹುದು, ಅಥವಾ ಇಡೀ ಜಗತ್ತೇ ಒಪ್ಪಿಕೊಂಡಂತೆ ಕಾಣುವ ವಿಚಾರವನ್ನೂ ವಿರೋಧಿಸಲು ಯಾರಾದರೂ ಇದ್ದೇ ಇರುತ್ತಾರೆ ಅಲ್ಲವೇ?”

“ನಿಜವೇ, ಇಲ್ಲಿ ವಿಚಾರ ಸರಿಯೋ ತಪ್ಪೋ ಅನ್ನುವುದಕ್ಕಿಂತ ಯಾರು ಹೇಗೆ ಭಾವಿಸುತ್ತಾರೆಂಬುವುದೇ ಮುಖ್ಯವಾಗುತ್ತದೇನೋ.., ಅವರಿವರಿಗೆ ಕಂಡಂತೆ” ಅವನು ಉತ್ತರಿಸಿದ.

“ಆದರೆ ಅದೆಲ್ಲದರಾಚೆಗೆ ಸತ್ಯವೆಂಬುವುದೊಂದು ಇಲ್ಲವೇ ಹಾಗಾದರೇ?” ನಾನು ಕೇಳಿದೆ.

“ಈ ಸತ್ಯ ಕೂಡ ಸೋಜಿಗವಾದ್ದೇ,ಅದು ಒಂದೇ ಸಮಯದಲ್ಲಿ ಇಬ್ಬರ ಕಣ್ಣಿಗೆ ಬೇರೆಬೇರೆಯಾಗಿ ಕಾಣಬಹುದು..,ಈಗ ನೋಡಿ ನಾವಿಲ್ಲಿ ಕೂತಿರುವುದು ಸಧ್ಯದ ಸತ್ಯ ಅಂತಾದರೆ ಅದು ಎದುರಿಗೆ ಕೂತವರ ಕಣ್ಣಿಗೆ ಬೇರೆ ಬೇರೆ ರೀತಿಯಾಗಿ ಕಾಣಿಸುತ್ತಿದೆ ಅನಿಸುವುದಿಲ್ಲವೇ? ಅವರವರ ಭಾವದಂತೆ ?ಮ್ ?”

 “ಅಂದರೇನು? ಬೇರೆ ದಾರಿಯಿಲ್ಲ ಅದಕ್ಕೆ ಕೂತಿದೀವಿ ಅಷ್ಟೇ, ಅಷ್ಟು ಬಿಟ್ಟರೆ ಇಲ್ಲಿ ಬೇರೇನಿದೆ ಕಾಣಲು?”

“ಏನೂ ಇಲ್ಲವೇ? ಕೆಲವೊಮ್ಮೆ ವಾಸ್ತವ ಸತ್ಯ ಹೊರಗೆ ಪ್ರಕಟಗೊಳ್ಳುವುದೇ ಇಲ್ಲ, ಅದರ ಬದಲು ಅದರ ಹಾಗೇ ಕಾಣುವ ಮತ್ತೊಂದೇನೋ ಅಲ್ಲಿ ಗೋಚರಿಸುತ್ತಿರುತ್ತದೆ” ಅವನು ಸಣ್ಣಗೆ ನಗುತ್ತ ಹೇಳಿದ.

“ಆದರೆ ಎಲ್ಲ ಭ್ರಮೆಗಳಾಚೆಗೂ .., ಸತ್ಯ ತನ್ನ ಸರದಿ ಬರುವವರೆಗೆ ಸುಮ್ಮನೇ ನಿಂತಿರುತ್ತದೆ” ಹೀಗನ್ನುತ್ತ ನನ್ನ ಮನಸು ಕದಡಿತು. ಈಗ ತನ್ನೊಳಗೆ ಇರುವ ಸತ್ಯವೇನು? ಅದನ್ನು ಮುಟ್ಟಿ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಸ್ವತಃ ತನಗೇ ಭಯವಾಗುತ್ತದೆ! ಅದಷ್ಟೇನೆ? ನಾ ಎಷ್ಟೇ ಧೃಢವಾಗಿ ಕೂತಿರುವುದು ನಿಜವೇ ಆದರೂ.. ವಾಸ್ತವ ಸತ್ಯ ಅದಲ್ಲ.

ಅಲ್ಲವೇ? ತಾನು ಈ ಕ್ಷಣ ಕುಳಿತಲ್ಲೇ ಕರಗಿ ನದಿಯಾಗುತ್ತಿಲ್ಲವೇ? ಬಹುಃಶabstract-painting-sex ಇರಬಹುದೇನೋ ಅನಿಸಿದಾಗ ತನ್ನ ಯೋಚನೆಯ ಧಾಟಿಯ ಬಗೆ ತನಗೇ ಕೆಡುಕೆನಿಸಿ ದಿಗಿಲಾಗಿ ತಲೆ ಕೊಡವಿದೆ. ಇದರಲ್ಲಿ ಸತ್ಯ ಯಾವುದು? ಆ ಕ್ಷಣಕ್ಕೆ ದಕ್ಕಿದ ಭಾವವಷ್ಟೇ ಸತ್ಯ ಅನ್ನುವುದಾದರೆ ಸತ್ಯವೂ ಕಾಲಕ್ಕನುಗುಣವಾಗಿ ರೂಪಂತರ ಆಗಬಲ್ಲುದೇ? ಅದು ಬದಲಾಗುವಂಥದ್ದಾದರೆ ಅದು ಸತ್ಯ ಹೇಗಾದೀತು? ಸತ್ಯ ಅವಿಚ್ಛಿನ್ನವಾದರಷ್ಟೇ ಅಲ್ಲವೇ ಅದು ಸತ್ಯವೆ ನಿಸಿಕೊಳ್ಳುವುದು? ಹುಟ್ಟು ಮತ್ತು ಸಾವಿನ ಹೊರತಾಗಿ ಮತ್ತೊಂದು ಅವಿಚ್ಛಿನ್ನ ಸತ್ಯ ಇಡೀ ಜಗತ್ತು ಆಕಾಶ ಪಾತಾಳದಲ್ಲೂ ಇಲ್ಲವೇನೋ ಅನಿಸಿ ಸತ್ಯದ ಅಸ್ತಿತ್ವದ ಬಗೆಗಿನ ಗೊಂದಲ ಮತ್ತೂ ಗುಮಿಗುಡಿದಂತೆ ಕಂಡಿತು. ನಾನು ನನ್ನೊಳಗೆ ಹೀಗೆ ಗೊಂದಲವನು ಕರಗಿಸಿಕೊಳ್ಳುತ್ತಿರುವ ಘಳಿಗೆಯಲ್ಲಿ ಅವನು ಖುಕ್ಕನೆ ನಕ್ಕಂತೆ ಕೇಳಿಸಿತು. ನೋಡಿದರೆ ಅವನು ಕಣ್ಣುಮುಚ್ಚಿ ಹಾಡಿನೊಳಗೆ ತಲ್ಲೀನನಾಗಿರುವಂತೆ ಕಂಡ. ಹಾಗಾದರೆ ಅವನು ನಗಲಿಲ್ಲವೇ? ನಕ್ಕಂತೇ ಕೇಳಿಸಿತಲ್ಲ.. ಅವನೊಳಗೆ ಅದ್ಯಾವ ಸತ್ಯ ಓಡುತ್ತಿದೆಯೋ.. ಅನಿಸಿ ಈಗ ನನಗೇ ನಗು ಬಂದು ಖಿಲ್ಲನೆ ನಕ್ಕೆ. ಅವನು ಕಣ್ಣುತೆರೆದು ನೋಡಿ, ಇದನ್ನು ನಾನು ಊಹಿಸಿದ್ದೆ ಎಂಬಂತೆ ಮುಗುಳ್ನಕ್ಕ, ಈ ಮುಗುಳ್ನಗು ಅವನು ನನ್ನ ಗುಟ್ಟು ಹಿಡಿದನೇನೋ ಎಂಬ ಗೊಂದಲವೊಂದನ್ನು ನನ್ನೊಳಗೆ ಹೊಸತಾಗಿ ಹುಟ್ಟುಹಾಕಿ ವಿಷಯ ಸತ್ಯ ಶೋಧದಿಂದ ಬೇರೆಡೆಗೆ ಜಿಗಿಯಿತು. ಇನ್ನು ತಡೆಯಲಿಕ್ಕಿಲ್ಲ ಅನಿಸಿ.. “ನಾನು ಕಾಲು ಚಾಚಿ ಕೂರಬೇಕು ಅಂದು ಕೊಂಡಿರುವೆ, ಎನೀ ಪ್ರಾಬ್ಲಮ್ ಫಾರ್ ಯು” ಅಂತ ಕೇಳಿದೆ? “ಅದಕ್ಕೇನು ಕೂತ್ಕೊಳ್ಳಿ ಆದರೆ ನೀವು ಸರ್ಯಾಗಿ ಕಂಫರ್ಟೇಬಲ್ ಆಗಿ ಕೂರಬೇಕೆಂದರೆ ಬಹುಃಶ ನಾನೂ ಕಾಲು ಚಾಚಿ ಕೂರಬೇಕಾಗಬಹುದು” ಅಂದ. ನಾನು ಅವನ ಮುಖವನ್ನು ಓದುವ ಯತ್ನ ಮಾಡಿ ಸೋತೆ.. ಬೆಡ್ ಲೈಟಿನ ಮಂದಬೆಳಕಲ್ಲಿ ಅವು ಸರಿಯಾದ ಬಣ್ಣ ಹೊರಗೆ ತೋರದೆ, ಬೇರೆಯದೇ ರೂಪ ಪ್ರಕಟಿಸುತ್ತಿತ್ತು. “ಏನು ನೋಡ್ತಿದೀರಿ? ಇಷ್ಟೊಂದು ಗಹನವಾಗಿ? ಬ್ಲಡೀ ಹಿಡನ್ ಟ್ರೂತ್! ನಾವಾದರೂ ಯಾಕೆ ಅದನ್ನು ಕೆಣಕಲು ಹೋಗಬೇಕು,ಅದಿರುವ ಪಾಡಿಗೆ ಇರುತ್ತದೆ, ಈ ಜಗತ್ತಿನ ಅತ್ಯಂತ ಅಪಾಯಕಾರಿ ಶೋಧವೆಂದರೆ ಸತ್ಯ ಶೋಧ! ಅದನ್ನು ಹುಡುಕಹೊರಟವನು ಅದೆಷ್ಟು ನುಣುಪಿನ ನುಣುಪನ್ನು ತಲುಪಿಬಂದರೂ ಎಲ್ಲೋ ಏನೋ ಅ ಪೂರ್ಣವಾಗೇ ಉಳಿದಿರುತ್ತದೆ, ಅದು ಇಂದಿಲ್ಲದಿದ್ದರೂ ನಾಳೆ ಗೋಚರಿಸುತ್ತದೆ ಹಾಗಾಗಿ ನಾವು ಸತ್ಯವನ್ನು ಶೋದಿಸಲೇಬಾರದು. ಆ ಕ್ಷಣವನ್ನಷ್ಟೇ ನಂಬಬೇಕು.” ಅರೆ! ಅವನ ಮಾತಿಂದ ನಾನು ಸೋಜಿಗಗೊಂಡೆ, ಮನಸು ಗಿನಸು ಓದ್ತಾನಾ ಹೇಗೆ? ಹಾಳಾದವನು, ಎಲ್ಲ ಬಿಟ್ಟು ನನ್ನ ಸೀಟಿಗೆ ಅಥವಾ ನಾನು ಅವನ ಸೀಟಿಗೇ ಬರಬೇಕೆಂದರೆ ಇಲ್ಲೇನೋ ಸೋಜಿಗದ ಸತ್ಯವೊಂದು ಹುದುಗಿರಬೇಕು, ಯಾರೋ ಇದನ್ನೆಲ್ಲ ನಮಗರಿವಿಲ್ಲದೆ ನಿರ್ದೇಶಿಸುತ್ತಿದ್ದಾರೆ ಅನ್ನುವ ಭಾವನೆ ಒಂದು ಬಗೆಯ ಭಯವನ್ನೂ, ನಿರ್ಭೀಡೆತೆಯನ್ನೂ ಒಟ್ಟಿಗೇ ನನ್ನೊಳಗೆ ತಂದವು. ಆದದ್ದಾಗಲಿ, ನಾವು ಈ ಕ್ಷಣವನ್ನಷ್ಟೇ ನಂಬಬೇಕು.. ಅನ್ನುವ ಭಾವ ಅತ್ಯಂತ ಅಪ್ಯಾಯಮಾನವೆನಿಸಿ ಒಳಗೆ ನಸೆನಸೆ ಮಾಡುತ್ತಿದ್ದ ಸಣ್ಣ ಭಯ ಕರಗಿತು. ನಾನು ದಿಟ್ಟ ಕಾಲು ಚಾಚಿ ಆರಾಮಮಾಗಿ ಹಿಂದಕ್ಕೆ ಒರಗಿ ಕೂತೆ. ಹಾಗೆ ಕೂರುವಾಗ ಮುದುರಿಕೊಂಡಿದ್ದ ಕೀಲುಗಳೆಲ್ಲ ಸಡಿಲಾಗಿ ತೀರ ವಿಲಾಸವಾಗಿ ಮೈ ಮುರಿಯಬೇಕೆನ್ನುವ ಹಾಯಾದ ಭಾವವೊಂದು ಒಳಗಿಂದ ತೇಲಿ ದೇಹ ಹಗುರಾಯ್ತು. ಅವನೂ ಕಾಲು ಚಾಚಿ ಕೂತ, ಅವನಿಗೂ ಹಾಗೇ ಅನಿಸಿರಬೇಕು ಅವನು ಕೈಮೇಲೆತ್ತಿ ಹಗುರಾಗಿ ಮೈಮುರಿದೇ ತೀರಿದ. ಎದುರು ಬರ್ತಿನ ಮೇಲೆ ನಾಯ್ಡು ಸರ್, ಮತ್ತು ಆ ಸರ್ದಾರ್ಜಿ ಗ್ಯಾಂಗ್ ಮಲಗಿರಬಹುದೇ ಅನುಮಾನ ಕಾಡಿತು. ಮಲಗಿರಬೇಕು, ಇಲ್ಲವಾದರೆ ಇಷ್ಟೊತ್ತಿಗೆ ಹಾಡು ನಿಲ್ಲಿಸಿ ಅಂತ ತಕರಾರ ಹೂಡದೇ ಇರುತ್ತಿರಲಿಲ್ಲ ಅನಿಸಿ ಮತ್ತೂ ಹಾಯೆನಿಸಿತು. ಅವರ್ಯಾರೂ ತಾವು ಹೀಗೆ ಕೂತಿರುವುದನ್ನ ಕಂಡಿಲ್ಲ ಆದರೆ ಖಂಡಿತಾ ಊಹಿಸಿಕೊಂಡಿರುತ್ತಾರೆ ಅನಿಸಿದಾಗ ಖುಷಿಯೆನಿಸಿತು. ಅಷ್ಟೂ ಯೋಚಿಸ್ದೇ ಬಿಡ್ತಾರಾ ಬೋಳೀಮಕ್ಕಳು, ಹಾಗೇ ನೋಡಿದರೆ ಇರೋ ಒಂದೇ ಸಾಧ್ಯತೆ ಇದು, ಕಾಲು ಚಾಚಿ ಕೂತರೇ ನು ಅಷ್ಟರಿಂದ ಅದೇನು ನಡೆದು ಹೋಗುವುದುಂಟು? ಆದರೆ ನಿಜಕ್ಕೂ ಏನೂ ನಡೆಯುತ್ತಿಲ್ಲವೇ? ಅವನ ತೊಡೆಯನ್ನು ನನ್ನ ಕಾಲು ತಲುಪಿದೆ, ಬೆಡ್ಶೀಟ್ನಿಂದ ಕಾಲುಗಳನ್ನ ಮುಚ್ಚಿಕೊಂಡಿದ್ದೇನಾದರೂ ಯಾವುದೋ ಒಂದು ಹಿತವಾದ ಶಾಖ?ಶಾಖದಂಥದ್ದೇ ಏನೋ ಒಂದು ಅವನ ತೊಡೆಗಳಿಂದ ಹಾದು ನನ್ನ ಹೆಬ್ಬರಳಿಗೆ ಇಳಿದು ಕಾಲುಂಗುರದ ಬೆರಳಿಗೆ ಹಾದು, ಅಂಗಾಲಿಡೀ ತುಂಬಿ, ಮೀನಖಂಡದ ಮೇಲೆ ಹತ್ತಿ, ತೊಡೆಯನೆಲ್ಲ ತುಂಬಿ, ಮುಂಬರಿದು ಮತ್ತೆಲ್ಲೋ ಜಮೆಯಾಗಿ, ಮತ್ತೂ ಹಾಗೆ ಮೇಲು ಮೇಲಕ್ಕೆ ತಲುಪಿ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ ಅನಿಸಿತು. ಚಿಕ್ಕಂದಿ ನಲ್ಲಿ ಗೆಳತಿಯೊಬ್ಬಳು ಹೇಳಿದ ಕಥೆಯೊಂದು ಆ ಸಮಯದಲ್ಲಿ ನೆನಪಾಗಿ ತಾನಾದರೂ ಅದಕ್ಕಿಂತ ಯಾವ ಬಗೆಯಲ್ಲೂ ಬೇರೆಯಿಲ್ಲವೇನೋ ಅನಿಸಿ ಈ  ಹೋಲಿಕೆಯೇ ವಿಭಿನ್ನವೆನಿಸಿ ಮೋಜೆನಿಸಿತು. ಅದೊಮ್ಮೆ ಒಬ್ಬ ಬೆಳಬೆಳಗೆದ್ದು ಹೊಲಕ್ಕೆ ಉಳಲೆಂದು ಹೋದಾಗ, ಅಲ್ಲೊಬ್ಬಳು ಅತಿ ಲಾವಣ್ಯವತಿ ಸುಂದರಿಯನ್ನ ಕಾಣುತ್ತಾನೆ. ಹದವಾದ ಮಳೆ, ಮಂಜು ಎಲ್ಲ ಕರಗಿದ ಆ ನಸುಮುಂಜಾನೆ ಹೊತ್ತಿನಲ್ಲಿ ಮಂಜಿನದೇ ಬಣ್ಣದ ಬಿಳೀ ಸೀರೆಯುಟ್ಟು ಕೂದಲು ಇಳಿಬಿಟ್ಟ ಕೂದಲ ಕಡು ಮೋಹಕ ಚೆಲುವೆ. ಅವಳನ್ನು ಕಂಡೊಡನೇ ಇವನು ಕರುಣೆಯಲಿ, ಕಾತರದಲಿ ಉಕ್ಕಿ, ಅವಳು ಯಾರು ಏನು, ಕುಲ ಗೋತ್ರ ಕೇಳಲಾಗಿ, ಅವಳು ಕಣ್ಣಂಚಿನಲ್ಲಿ ಮಂಜಿನಂತ ಕಣ್ಣೀರಿಳಿಸಿ, ತಾನು ಕೇರಳದವಳೆಂದೂ ಅನಾಥೆಯೆಂದೂ, ಆಶ್ರಯ ಬೇಕೆಂದೂ ಕೇಳುತ್ತಾಳೆ ಅದಕ್ಕವನು ಒಂದಿಷ್ಟೂ ತಡವರಿಸದೇ ಆ ಮಂಜಿನಂಥ ಸುಂದರಿಯ ತಲೆಗೆ ತನ್ನ ಗೊರಬು ಹಾಕಿ ಅವಳನ್ನು ಮನೆಗೆ ಕರೆತರುತ್ತಾನೆ. ಮ ನೆಯಲ್ಲಿ ಅವನೊಬ್ಬನೇ.. ಮದುವೆ ಬೇರೆ ಆಗಿಲ್ಲ, ಇಂಥ ಸುಂದರಿಯನ್ನು ಮದುವೆಯಾಗುವುದಕ್ಕಿಂತ ಬೇರೆ ಭಾಗ್ಯವುಂಟೇ ಎಂದವನು ಒಳಗೊಳಗೇ ಖುಷಿ ಪಡುತ್ತಾನೆ. ‘ಬೆಳಬೆಳಗೆ ನಿಮ್ಮ ಕೆಲಸ ಕೆಡಿಸಿದ ಹಾಗಾಯ್ತ, ಹೋಗಿ ಅದೇನು ಹೊಲದ ಕೆಲಸ ಮುಗಿಸಿ ಬನ್ನಿ ನಾನು ರೊಟ್ಟಿ ಮಾಡಿಟ್ಟು ನಿಮಗೆ ಕಾಯುತ್ತೇನೆ’ ಎಂದು  ಆ ಮಂಜಿನ ಸುಂದರಿ ಅವನನ್ನು ಹೊಲಕ್ಕೆ ಕಳಿಸಿ ಕದ ಮುಚ್ಚಿಕೊಳ್ಳುತ್ತಾಳೆ. ಸರಿ ಇವನು ಹೊಲದ ಕೆಲಸ ಮುಗಿಸಿ ಸಮಾ ಹಸಿವಿನಲಿ ಮನೆಗೆ ಬಂದು ಇವಳನ್ನ ಕರೀತಾನೇ ಕರೀತಾನೇ, ಆದರೆ ಅವಳು ಹೊರಗೇ ಬರಲ್ಲ! ಸರಿ ಅಂತ ತಾನೇ ಒಳಹೋಗಿ ನೋಡಿದರೆ ಅವಳು ಅಡುಗೆ ಮನೇಲಿ ರೊಟ್ಟಿ ಸುಡ್ತಾ ಇರ್ತಾಳೆ, ಒಲೆಗೆ ಸೌದೆ ಹಾಕಿದಾಳಾ ಅಂದ್ರೆ ಇಲ್ಲ! ತನ್ನ ಕಾಲುಗಳನ್ನೇ ಒಟ್ಟಿಕೊಂಡು ಬೆಂಕಿ ಉರಿಸ್ತಾ ಇದಾಳೆ! ಅವನಿಗೆ ಆಗ ಎಲ್ಲ ಖಾತ್ರಿಯಾಗುತ್ತದೆ, ಇದು ಹೆಣ್ಣಲ್ಲ ಮೋಹಿನಿ! ಅವನು ಸತ್ನೋ ಬಿದ್ನೋ ಅಲ್ಲಿಂದ ಪರಾರಿಯಾಗ್ತಾನೆ. ಇದು ಕಥೆ. ನಾನು ಕಥೆ ಮುಗಿಸಿ ಪಕ ಪಕ ನಕ್ಕೆ. ಅವನು ನಗಲಿಲ್ಲ, ಬದಲಿಗೆ “ಸಧ್ಯ ನಿಮಗೆ ನಾನು ಭಸ್ಮಾಸುರನ ಥರ ಕಾಣಿಸ್ತಿಲ್ಲ ತಾನೇ ?” ಅಂತ ಕೇಳಿಬಿಟ್ಟ. ನಾನು ಗಾಬರಿಯಾದೆ, ಇದು ಕಾಕತಾಳೀಯವಷ್ಟೇ ಆಗಿರಲೂ ಬಹುದು, ಆದರೆ ಅವನ ಪ್ರಶ್ನೆ ಅತ್ಯಂತ ನೇರವಾಗಿದೆ, ಇದು ಮೋಹಿನಿಯ ಹೆಸರು ಕೇಳುತ್ತ ಹುಟ್ಟಿಕೊಂಡ ಸಹಜ ಪ್ರಶ್ನೆಯೋ ಅಥವಾ, ಅವನ ತೊಡೆಯಂಚಿಗೆ ತಗುಲಿಕೊಂಡು ತಾನು ಥೇಟ್ ಅದೇ ಮೋಹಿನಿಯ ಹಾಗೆ ಉರಿಯುತ್ತಿದ್ದೇನೆಂಬ ಸತ್ಯದ ಜಾಡು ಹಿಡಿದೇ ಹೀಗೆ ಕೇಳುತ್ತಿರುವನೇ? ಹಾಗೆ ನೋಡಿದರೆ ಅವನೇ ವಾಸಿ ಅಟ್ಲೀಸ್ಟ್ ಅವನಿಗೊಂದು ಪ್ರಾಂಜಲ ಮನಸಿದೆ, ನಾನೇ ಇಲ್ಲಿ ಅನಾವಶ್ಯಕವಾಗಿ ಮೋಹಿನಿಯ ರಂಗಪ್ರವೇಶ ಮಾಡಿಸಿ ಅಂತರಾಳದ ಗುಟ್ಟೊಂದನ್ನು ಬೇರೆ ಬಣ್ಣದಲ್ಲಿ ಕಟ್ಟಿಕೊಡಲು ನೋಡಿದೆನೇ ನೋ! ಇಲ್ಲವಾದರೆ ಎಲ್ಲಬಿಟ್ಟು ಈ ಹೊತ್ತಲ್ಲಿ ಈ ಭಾಗೇಶನೆಂಬ ನಾಮಮಾತ್ರ ಪರಿಚಿತನೆದುರು ಈ ಮೋಹಿನೀ ಕಥಾವೃತ್ತಾಂತ ಆಡುವ ಪ್ರಮೇಯವಾದರೂ ಏನಿತ್ತು. ಅವನು ಸರಿಯಾದ ಜಾಡೇ ಹಿಡಿದಿದ್ದಾನೆ, ನಾನು ಉತ್ತರಿಸದೆ ಮತ್ತೆ ನಕ್ಕೆ. ಅಂದರೂ ಆ ಇಕ್ಕಟ್ಟಿನ ಸಮಯದಲ್ಲೂ ತುಂಬ ಸಹಜವಾಗೆಂಬಂತೆ ಬಂದೊದಗಿ ಉಪಕರಿಸಿದ ನಗು ಎಂದಿಗಿಂತಲೂ ಅಪ್ಯಾಯಮಾನವೆನಿಸಿತು.

“ಮ್ಯಾಡಂ ಬೆಂಗಳೂರು ಬಂತು ನೋಡಿ, ನಾನು ಇಳಿದು ಕುಡಿಯಲೇನಾದರೂ ತರಲೇ? ತಿನ್ನಲು?” ಅವನು ಏಳುತ್ತ ಕೇಳಿದ. ಅವನು ಹಾಗೆ ಎದ್ದಾಗ ನನ್ನೊಳಗಿನ ಕುದಿತವೂ ಒಂದು ನಿಲುಗಡೆಗೆ ಬಂತು. “ಕಾಫಿ ಆಗಬಹುದು.ಇಲ್ಲವಾದರೆ ಇನ್ನು ಸ್ವಲ್ಪ ಹೊತ್ತಿಗೆ ನಿದ್ರೆ ಬಂದು ಕಂಗೆಡಿಸಬಹುದು, ಅದಕ್ಕಾದರೂ ಒಂದು ಕಾಫಿ ಆಗಲೇ ಬೇಕು, ಜೊತೆಗೆ ಈ ಚಳಿ ಬೇರೆ.” ನಾನು ಈಗ ನಿಜಕ್ಕೂ ನಡುಗಿದೆ. ಮೈಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಆರಿದ್ದಕ್ಕೋ ಏನೋ..! ಅವನೂ ಕೈಯುಜ್ಜುತ್ತ ಅದನ್ನೇ ಅನುಮೋದಿಸಿದ, “ಹೌದು ಚಳಿಯಾಗುತ್ತಿದೆ.” ಚಳಿಯಾಗುತ್ತಿದೆ? ಅಂದರೆ ಅವನೂ ಉರಿಯುತ್ತಿದ್ದನೆ? ಅವನ ಕಾಲುಗಳು ತೀರ ನನ್ನ ಸೊಂಟವನ್ನೇ ತಲುಪುವಷ್ಟು ಹತ್ತಿರವಿದ್ದವು! ನಾನು ತಲೆಕೊಡವಿ ಕರ್ಟನ್ ಸರಿಸಿ ಅವನು ಹೋದ ದಿಕ್ಕಿಗೆ ನೋಡಿದೆ. ನಾಯ್ಡು ಸರ್ ಎದ್ದು ಕೂತು ಲೈಟ್ ಹಾಕಿದ್ದರು, ” ಏನಮ್ಮ, ಆರ್ ಯು ಒಕೆ?” ಅವರು ಕಕ್ಕುಲತಿಯ ಗೆರೆಗಳನ್ನು ಮುಖದಲ್ಲಿ ಮೂಡಿಸುತ್ತ ಮೃದುವಾಗಿ ಕೇಳಿದರು. ಆದರೆ ಆ ಗೆರೆಗಳು ಪೊಳ್ಳೆಂದು ನನಗೆ  ಖಚಿತವಾಗಿ ಅನಿಸಿತು.” “ಯಸ್ ಅಂಕಲ್, ಹುಡುಗ ಒಳ್ಳೆಯವನೆನಿಸಿದ, ನಾವೀಗ ದೋಸ್ತರಾಗಿದೇವೆ” ಅಂದೆ. ಇದನ್ನು ಧೃಡವಾಗಿ ಹೇಳುವ ಭರದಲ್ಲಿ ತುಸು ನಿಷ್ಠುರವಾಗೇ ಹೇಳಿಬಿಟ್ಟೆನೇನೋ ಮನಸು ಮಿಡುಕಿತು. ಹಿಂದೆಯೇ ಯಾರಿಗೆ ಗೊತ್ತು, ಅಂಕಲ್ ಮುಖದಲ್ಲಿ ಕಂಡ ಅಕ್ಕರೆಯ ಹೊಳಹು ನಿಜವಿದ್ದಿರಲೂ ಬಹುದು ಅನಿಸಿ ತುಸು ಮೆತ್ತಗಾಗಿ.”ಇರೋದರಲ್ಲೇ ,ದೋಸ್ತಿ ಮಾಡಿಕೊಳ್ಳೋದೇ ಅತ್ಯಂತ ಬೆಸ್ಟ್ ಆಯ್ಕೆ ಅನಿಸಿತು ಅಂಕಲ್, ಸುಮ್ಮನೆ ಇಲ್ಲದ ಗೊಂದಲಗಳಿಗೆ ತಲೆಕೊಡುವುದಕ್ಕಿಂತ ಸೇಫಾದ ಒಂದು ದೋಸ್ತಿ ಮಾಡೋದು ಒಳ್ಳೇದು ಅಲ್ವಾ?” ಅಂದೆ. ಹೀಗನ್ನುತ್ತ ನನ್ನ ನಾ ಅವರೆದುರು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಅವರಿಗೂ ಸೇರಿದಂತೆ ನನಗೂ ನಿಚ್ಚಳವಾಗಿತ್ತು. ಇದು ಅವರಿಗೆ ಬೇಕಿತ್ತೋ ಇಲ್ಲವೋ ಗೊತ್ತಿಲ್ಲ ಅಸಲು ನ ನಗಾದರೂ ಬೇಕಿತ್ತೇ? ಹೀಗೆ ಅವರಿಗೆ ಹೇಳುವ ಮೂಲಕ ನಾನು ಏನು ನಿರೂಪಿಸುತ್ತಿದ್ದೇನೆ? ನೀವಂದುಕೊಂಡ ಹಾಗೆ ನಾನು ಅವನ ಸ್ಪರ್ಶಕೆ ಕರಗಲಿಲ್ಲ, ಉರಿಯಲಿಲ್ಲ ..ಅತ್ಯಂತ ಸಹಜವಾಗಿ ,ಸರಳವಾಗಿ ಯಾವೊಂದು ಕಲಕಾಟವೂ ಇಲ್ಲದೆ, ನಿದ್ರೆಗೆ ಬಿದ್ದ ನೀರಿನ ಕೊಳದಹಾಗೆ ಇದೇನೆ ಅಂತಲಾ? ನನ್ನನ್ನು ಇವರೆಲ್ಲ ಸುಳ್ಳೆ ನಂಬಲಿ ಎಂಬ ಆಸೆಯಾದರೂ ಯಾಕೆ? ಯೋಚನೆ ಹರಿಯುತ್ತ ಹೋಯಿತು. ” ವೆರಿ ಗುಡ್ ಯಂಗ್ ಲೇಡಿ,” ಈಗ ಮಾತಾಡಿದ್ದು ನಾಯುಡು ಸರ್ ಪಕ್ಕದ ಸೀಟಿನ ಹಿಂದೀ ತಾತ. ನಾನು ನಕ್ಕೆ. ಅದಕ್ಕೆ ಜೀವವಿತ್ತಾ? ಆದರೂ ಈ ದೋಸ್ತನೆಂಬ ರಿಲೇಶನ್ಶಿಪ್ಪಿನ ಎಳೆಯನ್ನು ಎಷ್ಟುದ್ದಕ್ಕೂ ವಿಸ್ತರಿಸಬಹುದು ಬಿಡು, ನಾ ಸುಳ್ಳಾಡಿಲ್ಲ  ಅಂದುಕೊಂಡು ನನ್ನೊಳಗೇ ಸಮಾಧಾನ ಪಟ್ಟುಕೊಳ್ಳುತ್ತ ಇನ್ನಷ್ಟು ಚಂದ ನಗುವ ಯತ್ನ ಮಾಡಿದೆ, ನಮ್ಮ ಮೇಲಿನ ಬರ್ತಿನಿಂದ ತಮಿಳು ಹುಡುಗ ಕೆಳಗೆ ಇಣುಕಿ ನನ್ನೆ ನೋಡುತ್ತ ನನ್ನ ಕಂಗಳನ್ನು ಸೆರೆಹಿಡಿದು ನಕ್ಕ,ಅದರಲ್ಲಿ ಒಂದು ಆಶೆಯೂ ಹತಾಶೆಯೂ ಅಡಗಿರುವ ಸಾಧ್ಯತೆ ನನಗೆ ಕಂಡಿತು. ಅದು ನಾನೇ ಆಗಬೇಕೆಂದೇನೂ ಅಲ್ಲ, ಆದರೂ ಅಪರಿಚಿತಳೊಬ್ಬಳೊಡನೆ ಸೀಟುಹಂಚಿಕೊಳ್ಳುತ್ತ ಹೊಸ ದೋಸ್ತಿ ಮಾಡಿಕೊಳ್ಳುವುದು ಅವನಿಗೂ ರೊಮ್ಯಾಂಟಿಕ್ ಅನಿಸಿರಬೇಕೇನೋ, ನಾನೇನು ಅಂಥ ಮಾಹಾ ಸುಂದರಿಯಲ್ಲ ಆದರೂ ಈ ಕತ್ತಲೆಗೆ ಬೆಳಕಿನಲ್ಲಿ ಕೂಡ ಕಾಣದ ಕೆಲವು ಸತ್ಯವನ್ನು ಕಾಣಿಸುವ ಶಕ್ತಿಯಿರುತ್ತದೆ ಇದನ್ನು ನಾವು ಒಪ್ಪಬೇಕು.. ಆದರೆ ಇದೆಲ್ಲ ಸುಬ್ರಮಣಿಗೇಕೆ ಹೊಳೆಯುವುದಿಲ್ಲ? ಅವನು ನನ್ನ ಎಷ್ಟೊಂದು ಮುಚ್ಚಟೆ ಮಾಡುತ್ತಾನೆ, ಆದರೆ ಅದೇಕೆ ಅಷ್ಟೊಂದು ರೋಮಾಂಚಕ ಅನಿಸುವುದಿಲ್ಲ? ಅಸಲು ಪ್ರೀತಿಯೆಂದರೆ ಹೇಗಿರುತ್ತದೆ, ಎಲ್ಲಿರುತ್ತದೆ? ಯಾರಿಗೆ ಹೇಗೆ ಪ್ರೀತಿಸಿದರೆ ಇಷ್ಟವಾಗುತ್ತದೆ? ಅಥವಾ ಈ ಪ್ರೀತಿಯೆಂಬ ಪ್ರೀತಿ ಕೂಡಾ ಹೋಗ್ತಾ ಹೋಗ್ತಾ ಯಾವ ನವಿರತೆಯನ್ನೂ ಅರಳಿಸದೆ ಸುಮ್ಮನೆ ಅಭ್ಯಾಸವಾಗಿಬಿಡುತ್ತದೆಯೇ? ಈ ಪ್ರೀತಿ ಕೂಡ ಸತ್ಯದ ಹಾಗೇ ಬಗೆದಷ್ಟೂ ವಿವಿಧ ಆಯಾಮಗಳನ್ನ ಕೊಡುತ್ತ, ಹಿಡಿದಷ್ಟೂ ನುಣುಚಿಕೊಳ್ಳುವ ಹಾವಸೆಕಲ್ಲಿನಂತೆ ತೋರಿತು.

“ಮೇಡಂ ತಗೊಳ್ಳಿ ಕಾಫೀ,” ಅವನು ಹಾಗೆ ಕಾಫೀ ತಂದಾಗ ಅಕ್ಕರೆಯುಳ್ಳವನೇ ಅನಿಸಿ ಅವನ ಮೇಲೆ ನನಗೂ ಅಕ್ಕರೆ ಉಕ್ಕಿತು. ಆ ಖುಷಿಗೆ ಕಾಫಿ ಮತ್ತಷ್ಟು ಸೊಗಸೆನಿಸಿತು.

” ಏನು ವಿಶೇಷ ಮೈಸೂರಿಗೆ ಬಂದದ್ದು ?” ನಡುವಿನ ಮೌನ ಸರಿಸಲೆಂಬಂತೆ ಅವನು ಹಠಾತ್ತನೆ ಕೇಳಿದ.

” ಇಲ್ಲಿ ನನ್ನ ತಂಗಿ ಇರುತ್ತಾಳೆ, ಹೊಸತಾಗಿ ಮದುವೆಯಾಗಿದೆ, ಅಷ್ಟರಲ್ಲೇ ಗಂಡ ಹೆಂಡಿರ ನಡುವೆ ಏನೋ ಸಮಸ್ಯೆ”

“ಏನಂತಾರೆ ಇಬ್ಬರೂ?”ಅವನು ಮತ್ತೆ ಕರ್ಟನ್ ಎಳೆದು ಲೈಟ್ ನಿಲ್ಲಿಸಿದ. ಎಂಜಿನ್ ಬದಲಿಸಿದ್ದು ಮುಗಿದಿರಬೇಕು, ರೈಲು ಸಣ್ಣಗೊಮ್ಮೆ ಸೊಂಟ ಕುಲುಕಿ ವೇಗ ಪಡೆದುಕೊಂಡು ಓಡತೊಡಗಿತು. “ನಮ್ಮ ಹುಡುಗಿದೇ ಸಮಸ್ಯೆ, ಏನೋ ಹೊಂದಾಣಿಕೆ ಆಗ್ತಿಲ್ಲ, ಇದನ್ನ ಬರಾಖಾಸ್ತ್ ಮಾಡುವಾಂತಾಳೆ.”

“ಮದುವೆಯಾದ ಒಡನೇ ಹೀಗಂತಾಳೆ ಅಂದರೆ ಅವಳೇನೋ ಹೊಸ ಸತ್ಯ ಕಂಡು ಹಿಡಿದಿರಬೇಕು.” ಹಾಗನ್ನುತ್ತ ಅವನು ತುಂಟತನದಿಂದ ನಗುತ್ತಿದ್ದಾನೆ ಅನಿಸಿತು.

“ತಮಾಶೆಯ ಸಮಯವೇ ಇದು?” ನಾನು ರೇಗಿದೆ.

“ಹಾಗಲ್ಲರಿ, ಹೊಳೆದಿದ್ದೆಲ್ಲ ಸತ್ಯವೇ ಆಗಿರಬೇಕಿಲ್ಲ, ಎಲ್ಲ ಕಾಲಾಂತರದಲ್ಲಿ ಬದಲಾಗುತ್ತೆ, ಯಾವುದಕ್ಕೂ ಒಂಚೂರು ಸಮಯ ಕೊಡು ಅಂತ ಹೇಳಿ”

“ಹಾಗಂದರೆ ಎಲ್ಲಿ ಕೇಳ್ತಾಳೆ! ಎಷ್ಟು ಖರ್ಚು ಮಾಡಿ, ಊರೆಲ್ಲ ಕರೆದು  ನಡೆಸಿದ ಮದುವೆ ಗೊತ್ತೆ? ಇದನ್ನೀಗ ಮುರೀಬೇಕೆಂದರೆ..”

“ಅವಳು ಮದುವೆ ಮುರಿಯದೆ, ಅತ್ತ ಅಲ್ಲೂ ಸಂತೋಷವಾಗಿರದೇ ಇದ್ದರೆ ಮಾಡಿದ ಖರ್ಚೇನಾದರೂ ತಿರುಗಿ ಬಂದೀತೆ? ಖರ್ಚಾಗಿದ್ದು ಮುಗಿದ ವಿಷಯ, ಅದೀಗ ಅವರು ಒಂದಾಗಿ ಬದುಕಿದರೂ ಬೇರೆಯಾದರೂ ಯಾವ ಬದಲಾವಣೆ ಕಾಣದ ವಿಷಯ, ಅದಕ್ಯಾಕೆ ಯೋಚಿಸ್ತೀರಿ? ಮುಖ್ಯ ಅವರ ಸಂತೋಷ.. ಅದನ್ನಷ್ಟೇ ಯೋಚಿಸಬೇಕು.”

ಅವನ ಮಾತುಗಳು ನನಗೆ ಹಿಡಿಸಿದವು. ಆದರೆ ಇದನ್ನು ಕಾರ್ಯಗತಗೊಳಿಸುವಾಗಲೂ ಇಷ್ಟೇ ಖುಷಿಯಾಗಬಹುದು ಅನಿಸಲಿಲ್ಲ. ಮದುವೆಯೆಂಬುದನ್ನು ಅದು ಹೇಗೋ ಮನೆತನದ ಮರ್ಯಾದೆಯ ಜೊತೆಗೆ ಜೋಡಿಸಿಕೊಂಡು ನಾವೆಲ್ಲ ಸಿಲುಕಿ ತಪಿಸುತ್ತಿದ್ದೇವೋ ಅ ನಿಸಿತು.

“ನಿಮ್ಮ ಮದುವೆ ಆಗಿದೆಯೇ?” ನಾನು ವಿಷಯ ಬದಲಿಸಿದೆ.

“ಇನ್ನೂ ಇಲ್ಲ, ಇದಿನ್ನೂ ಒಂದು ಬ್ರೇಕಪ್ ಆಗಿದೆ.. ಮೊದಲು ಅದರಿಂದ ಹೊರಗೆ ಬರಬೇಕು, ಆಮೇಲೆ ಮದುವೆ.”

“ಮ್? ಸೋಸ್ಯಾಡ್..”

“ಸ್ಯಾಡ್ ಏನಿಲ್ಲ ಬಿಡಿ ,ಒಳ್ಳೇದೇ ಆಯ್ತು. ಮೂರು ವರ್ಷ ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ವಿ, ಬೆಂಗಳೂರಲ್ಲಿ ಒಟ್ಟಿಗೇ ಕೆಲಸ ಮಾಡುತ್ತಿದ್ವಿ, ಮೊದಲೆಲ್ಲ ಚೆನ್ನಾಗೇ ಇತ್ತು ಅದೇನೋ ಕಡೆಗೆ ಸರಿ ಬರಲಿಲ್ಲ”

“ತೀರ ಸರಿ ಮಾಡಲಿಕ್ಕೇ ಆಗದ ಸಮಸ್ಯೆಯೇ?” ನನ್ನ ಕುತೂಹಲ ಅನವಶ್ಯಕವೋ ಏನೋ ಅಂತೂ ತಡೆಯಲಾರದೆ ಕೇಳಿಬಿಟ್ಟಿದ್ದೆ.

“ಹಾಗೇ ಒಂಥರ. ಮೊದಲು ಒಂದು ವರ್ಷ ಏನೂ ಇರಲಿಲ್ಲ ಆದರೆ ಆಮೇಲೆ ಹೆಚ್ಚೇ ಹತ್ತಿರ ಬಂದ್ವಿ. ಈಗೇನೋ ಅವಳು ಹೇಳ್ತಾಳೆ ಶಿ ಕಾಂಟ್ ಎಂಜಾಯ್ ಸೆಕ್ಸ್ ವಿಥ್ ಮಿ ಅಂತ, ಸಾರಿ ಇಫ್ ಐ ಆಮ್ ಟೂ ಡಿರೆಕ್ಟ್.” ‘ನೀವಿಬ್ಬರೂ ಕೂತು ಮಾತಾಡಬಹುದಿತ್ತು, ತೀರ ಸಾಲ್ವ್ ಮಾಡಲಿಕ್ಕಾಗದ ಸಮಸ್ಯೆಯೇನಲ್ಲ ಇದು, ಯು ಶುಡ್ ಹ್ಯಾವ್ ಗಾನ್ ಫಾರ್ ಅ ಕೌನ್ಸಲಿಂಗ್, ಮೆಡಿಕಲ್ ಫೀಲ್ಡ್ ಭಾಳ ಅಡ್ವಾನ್ಸ್ ಆಗಿರೋ ಹೊತ್ತಲ್ಲಿ…….. ‘ನನ್ನ ಮ ನಸು ಮಾತುಗಳನ್ನ ಮಥಿಸಿ ಒಂದನ್ನೂ ಹೊರಬಿಡದೆ ಕಾಯಿತು. ಇಬ್ಬರಿಗೂ ಬೇಕೆನಿಸದ ಹೊರತು ಅದೆಂಥ ಪ್ರಣಯ….? ಮಿಲನವೆಂಬುದು ಒಂದು ಸಂಭ್ರಮವಾಗಬೇಕು.. ಮನಸುಗಳು ಸೇರದ ಹೊರತು ಸಂಭ್ರಮ ಅಶಕ್ಯ. “ಓ..ಈಸ್ ದಟ್?” ನಾನು ನನ್ನ ದನಿ ಆದಷ್ಟು ನಿರ್ವಿಕಾರವಾಗಿರುವಂತೆ ಗಮನವಿಟ್ಟು ಮಾತಾಡಿದೆ. “ಮ್ ಹೌದು, ಲೈಫ್ ಲಿ ಅಲ್ಟಿಮೇಟಾಗಿ ಬೇಕಾಗಿರೋದು ಸಂತೋಷ, ಏನಿತ್ತೋ ಏನಿಲ್ವೋ ಖುಷಿಯಾಗಿದಿ ವಾ, ಅದು ಸಾಕು.. ಒಂದು ವೇಳೆ ಖುಷಿಯಿಲ್ಲಾಂದರೆ ಅದೇನೇ ಇರಲಿ ಅಲ್ಲಿಂದ ಹೊರಬಂದುಬಿಡಬೇಕು. ” “ಐ ಡೂ ಬಿಲೀವ್ ಇನ್ ದಿಸ್ ಕಾನ್ಸೆಪ್ಟ್” ನಾನು ನಕ್ಕೆ. ನಾನೀಗ ಕಾಲುಗಳನ್ನ ಮಡಿಸಿ ಕುಳಿತಿದ್ದೆ, ಹಾಗೊಂದು ವೇಳೆ ಕಾಲು ಚಾಚಿದರೂ ಪುಳಕವೇಳದ ಒಂದು ತಂಪು ಸ್ನೇಹ ಅಲ್ಲಿ ಎದ್ದಿದೆಯೆಂದು ತೋರಿ, ಅಷ್ಟು ಹೊತ್ತು ಬೆಂದಿದ್ದೇ ಸುಳ್ಳೆನಿಸಿತು. “ಮತ್ತೆ?” ನಾನು ಮೌನ ಮುರಿದೆ. ಬೆಳಕಿನ ಕಿಡಿಗಷ್ಟೇ ಕಾಯುತ್ತಿದ್ದನೇನೋ ಎಂಬಂತೆ ಅವನು ಮಾತಿನ ಮತಾಪು ಹಚ್ಚಿದ. ಮಾತಿನ ಅಲೆಯೊಳಗೆ ಇಂಥದ್ದು ಅನ್ನಲಾಗದಂತೆ ಬಹಳಷ್ಟು ವಿಷಯಗಳು ಬಂದು ಹೋದವು. ಅಸಲು ನಿದ್ರೆಯೆಂಬುದು ಅದೆಲ್ಲಿ ಫೇರಿ ಕಿತ್ತಿತೋ.. ಇದು ಬಹುಃಶ ಬದುಕಿನುದ್ದಕ್ಕೂ ನೆನಪಲ್ಲುಳಿಯಬಹುದಾದ ದಿನವೇ ಅನಿಸಿ ಮುದವೆನಿಸಿತು. ಆದರೂ ಈ ಮನಸು ಯಾರೋ ಅಪರಿಚಿತನೊಂದಿಗೆ ಇಷ್ಟು ಸರಾಗವಾಗಿ ತೆರೆದುಕೊಳ್ಳುತ್ತಿರುವುದಾದರೂ ಏಕೆ…? ಅಸಲು ಯಾರೋ ಒಬ್ಬರು  ಯಾಕಾದರೂ ನಮಗೆ ಇಷ್ಟವಾಗ್ತಾರೆ ..? ಅಕಾರಣವಾಗಿ..? ದಾರಿ ಕ್ರಮಿಸಿದ್ದೇ ತಿಳಿದಿರಲಿಲ್ಲ.. ಬೆಳಗಿನ ಐದು ಘಂಟೆಯಾಗಿತ್ತಾದರೂ ನಿದ್ರೆ ಸುಳಿದಿರಲಿಲ್ಲ.. “ಇನ್ನು ಸ್ವಲ್ಪ ಹೊತ್ತಿಗೆಲ್ಲ ನಾ ಇಳಿಯೋ ಸ್ಟೇಷನ್ನು ಬರುತ್ತೆ, ಪೆರಂಬೂರು, ಅಂದರೂ ಇವತ್ತಿನ ರಾತ್ರಿ ನಿದ್ರೆಯಿಲ್ಲದೆ ಕಳೆದೆ!” ನನ್ನ ದನಿಯಲ್ಲಿ ಒಂದೆಳೆ ವಿಷಾದವೂ, ಒಂದೆಳೆ ಸಂತೋಷವೂ ಹದವಾಗಿ ಬೆರೆತಿತ್ತು.

 “ಓ ಪೆರಂಬೂರು! ನಮ್ಮತ್ತೆ ಒಬ್ಬರು ಅಲ್ಲಿರ್ತಾ ಇದ್ದರು, ಆಗ ಅಲ್ಲಿ ಬಂದಿದ್ದೆ ಆಮೇಲೆ ಇದೇ ನೋಡಿ ಬರ್ತಿರೋದು, ಸರಿ ನಾನೊಂಚೂರು ಕಣ್ಮುಚ್ತೀನಿ, ಇಲ್ಲಾಂದರೆ ಇಂಟರ್ವ್ಯೂವ್ ನಲ್ಲಿ ನನ್ನ ನಿದ್ರೆ ಮುಖಕ್ಕೆ ಮೈನಸ್ ಆಗಬಹುದು” ಅವನು ನಕ್ಕ, ಮೋಹಕವಾಗಿ ಕಾಣ್ತಾನೆ ಅನಿಸಿ ಅನಿವರ್ಚನೀಯ ಮುದ್ದು ಉಕ್ಕಿತು.

“ಸರಿ ಆರಾಮಾಗಿ ಕಾಲು ಚಾಚಿ ಮಲಗಿ ನಾ ಸರಿದು ಕೂರ್ತೇನೆ.” ನಾನು ಸರಿದೆ. ಅವನ ಹರವಾದ ಎದೆ,art-1 ಎದೆಯಮೇಲಿಟ್ಟ ರೋಮಭರಿತ ಒರಟೆನಿಸುವ ಕೈಗಳು, ಅನಾಸಕ್ತಿಯಿಂದ ಹರಡಿಕೊಂಡ ತಲೆಗೂದಲು, ಅಷ್ಟೇ ಅನಾಸಕ್ತಿಯಿಂದ ಹರಡಿಕೊಂಡ ಗಡ್ಡ.., ಬಿಗಿದ ತುಟಿ..ನಸುವೇ ಸುರುಗಿದ ಹುಬ್ಬು.. ಅಷ್ಟಾದರೂ ಮುಖದಲ್ಲಿ ತೇಲುತ್ತಿದ್ದ ನಿರಾಳತೆ.. ಅಥವಾ ನಿರ್ಲಕ್ಷ್ಯತೆಯೂ ಇರಬಹುದು..ಒಟ್ಟು ನಂಗೆ ಇಷ್ಟವಾದ, ಮತ್ತೊಮ್ಮೆ ಸಣ್ಣಗೆ ಆಸೆ ಹುಟ್ಟುವಷ್ಟು ಇಷ್ಟವಾದ. ಸೊಂಟದ ಬುಡಕ್ಕೆ ತಗುಲುತ್ತಿದ್ದ ಅವನ ಕಾಲುಗಳು ಆರಿದ ಕೆಂಡಕೆ ಕಿಡಿ ತಗುಲಿಸತೊಡಗಿದ್ದವು. ಹಾಗೇ ಬಗ್ಗಿ ಅವನ ತುಟಿಯನ್ನು ಮುದ್ದಿಸಿದರೆ ಎಂಬ ವಾಂಛೆಯೊಂದು ಬಲವಾಗಿ ಕರ್ಟನ್ನನ್ನು ಜೋರಾಗಿ ಹಿಡಿದೆಳೆದು.. ತಲೆ ಕೊಡವಿದೆ. ಒಳಗೆ ಇಷ್ಟೊಂದು ಬಲವಾಗಿ ಕಾಡುತ್ತಿರುವ ಈ ಮೋಹ ಮದಿರೆಯ ಹಾಗೆ ಸುಡುತ್ತಿತ್ತು.. ನಶೆಯೇರಿಸುತ್ತಿತ್ತು. ಇನ್ನೇನು ಎರಡು ಸ್ಟೇಷನ್ ದಾಟಿದರೆ ಪೆರಂಬೂರು..ಇವನು ಮರಳಿ ಸಿಗುತ್ತಾನೋ ಇಲ್ಲವೋ, ಸಿಗಬೇಕಂತಲೂ ಏನಿಲ್ಲ, ಸಧ್ಯಕ್ಕೆ ಇಷ್ಟೊಂದು ಬೇಕೆನಿಸುತ್ತಿರುವ ಇವನು ಮತ್ತು ನನ್ನ  ನಡುವಿನ ಕುತೂಹಲಗಳು ಕೂಡ ಒಂದಿನ ಮುಗಿದು..ತಣ್ಣನೆಯ ಸೋ ಕಾಲ್ಡ್ ಅಂಡರ್ಸ್ಟ್ಯಾಂಡಿಂಗ್ ಫೇಸೊಂದು ಓಡಿದರೂ ಓಡಬಹುದು, ಅದೆಲ್ಲ ಸಾಯಲಿ ಈಗ ಈ ಕ್ಷಣ ಬೇಕೆನಿಸುತ್ತಿರುವ ಇವನ ತುಟಿಗಳನ್ನು ಮುದ್ದಿಸದ ಹೊರತು ಬಿಡುಗಡೆಯಿಲ್ಲ ಅನಿಸಿ ಒಳಗೆ ಒತ್ತಡ ಬಲವಾಯ್ತು. ಇದಕ್ಕೆ ಅವನ ಪ್ರತಿಕ್ರಿಯೆ ಏನಿರಬಹುದು….,ಇಂಥದ್ದೊಂದು ತಳಮಳದ ಸಮಯ ಇದುವರೆಗೂ ಬಂದಿರಲಿಲ್ಲ..!

ಇದ್ದಿದ್ದೇ ಒಂದು ಬ್ಯಾಗು, ಅದನ್ನೆಳೆದು ಹೊರಗಿಟ್ಟೆ, ಕರ್ಟನ್ ಸರಿಸಿ ನೋಡಿದರೆ ಪಕ್ಕದ ಬರ್ತಿನವರಿನ್ನೂ ಮಲಗೇ ಇದ್ದರು.. ಅವರು ಸೀದಾ ಸೆಂಟ್ರಲ್ ಗೆ  ಇರಬೇಕು. ನಿರಾಳವಾಗಿ ಮಲಗಿದ್ದರು. ವಿಳ್ಳಿವಾಕ್ಕಂ ಕೂಡ ಬಂತು, ಇನ್ನು ಹತ್ತು ನಿಮಿಷವೂ ಇಲ್ಲ…ನಾನು ಅವನ ಮೇಲೆ ಬಗ್ಗಿದೆ…ಅವನ ತುಟಿಗಳು ಬಿಸಿಯಾಗಿದ್ದು..ನನ್ನ ತುಟಿಯೊಳಗೆ ತುಂಬುವಷ್ಟು ತುಂಬಿಕೊಂಡಿದ್ದವು…ಅವನ ಎದೆಗೆ ಬಿದ್ದವಳಿಗೆ ಆ ಕ್ಷಣ ಭೂಮಿ  ನಿಂತಿದೆ ಅನಿಸಿತು… ಅವನು ತಡೆಯಲಿಲ್ಲ.. ಅವಕ್ಕಾಗಲೂ  ಇಲ್ಲ..ತೋಳುಗಳಿಂದ ಬಳಸಿ ನನ್ನ ಸೋಲಿಸುವಷ್ಟು ತೀವ್ರವಾದ… ಇದು ಬೇಕಿತ್ತೇ ಬೇಡವೇ ಮನಸು ಶಂಕೆಗೆ ಹೊರತಾಗಿ ನಿಂತು ಸಹಕರಿಸಿತು.. ದೇಹ ಹಗುರಾಗಿ ಕಾಲುಗಳು ತಾರಾಡಿದವು. ಅವನ ನಂಬರ್  ಪಡೆಯಬಹುದಿತ್ತು.. ಆದರೆ ಪಡೆಯಲಿಲ್ಲ.. ಮತ್ತೆ ಸಿಗು ಅನ್ನಬಹುದಿತ್ತು ಅದನ್ನೂ ಹೇಳಲಿಲ್ಲ. ಅವನು ನನ್ನ ಲಗೇಜೆತ್ತಿಕೊಂಡು  ಹಿಂದೆಯೇ ಬಂದ. ಕೈಗೆ ಲಗೇಜ್ ಇಟ್ಟು ಮೆಲ್ಲಗೆ ಕೈ ಅದುಮಿದ.. ಅದರಲ್ಲಿ ಏನೆಲ್ಲವೂ ಇತ್ತು.. ಅದೆಲ್ಲ ಸಮ್ಮತ ಎಂಬಂತೆ ನನ್ನ ಕಂಗಳು ಮೃದುವಾಗಿರಬೇಕು. ಪ್ಲ್ಯಾಟ್ಫಾರ್ಮ್ ನಲ್ಲಿ ಸುಬ್ರಮಣಿ ನಿಂತಿದ್ದ.. ಅದೇ ಹಳೆಯ ಕಪ್ಪು ಶಾರ್ಟ್ಸ್,ತಿಳಿಹಳದಿ ಟಿ ಶರ್ಟು ಮತ್ತು ನಿರ್ವಿಕಾರ ಮುಖದೊಡನೆ ಶಾಂತವಾಗಿ ನಿಂತಿದ್ದ. ನಾನು ತಿರುಗಿ ನೋಡಿ ಭಾಗೇಶನಿಗೆ ಕೈಯಾಡಿಸಿದೆ. ನನ್ನ ಕಣ್ಣುಗಳ ಹೊಳಪು,ತುಟಿಯ ಕೆಂ ಪು ಸುಬ್ರಮಣಿಯ ಕಣ್ಣುಗಳಿಗೆ ಬೀಳಲೇ ಇಲ್ಲವೇ? ಹೋಗಲಿ ಕೈಯಾಡಿಸಿದ ಚಂದದಹುಡುಗನೂ? “ನಿದ್ದೆ ಮಾಡಕ್ಕಾಯ್ತಾ?” ಅವನು ಲಗೇಜ್ ಇಸಿದುಕೊಳ್ತಾ ಕೇಳಿದ. “ಇಲ್ಲ ಮನೆಗೆ ಹೋಗಿ ಮಲಗೋದೇ.. ನೀರು ಬಿಸಿಗಿಟ್ಟಿದ್ದೀಯಾ?” “ಎಲ್ಲ ರೆಡಿ ಇದೆ,ನೀನು ನಾಷ್ಟ ಮಾಡಿ ಮಲಗು” ಮೆಟ್ಟಿಲಿಳಿದು ಅವನ ಜೊತೆ ಬೈಕಿನಲ್ಲಿ ಕೂಡುವಾಗ ತಂಗಿ ಫೋನಿಸಿದಳು “ಅಕ್ಕ,ತಲುಪಿದ್ಯಾ?ನಂಗೆ ಇಲ್ಲಿ ತಲೆ ಬಿಸಿ ಮಾರಾಯ್ತಿ”

“ನೋಡು, ತಲೆ ಕೆಡಿಸಿಕೋ ಬೇಡ, ಬದುಕನ್ನ ಬಂದಂತೆ ಬದುಕ್ತಾ ಹೋಗಬೇಕು..ಕಣ್ಣಿಗೆ ಕಂಡಿದ್ದು, ಅನಿಸಿದ್ದೆಲ್ಲ ಅಂತಿಮ ಸತ್ಯವಲ್ಲ.. ಸತ್ಯ ಕೂಡ ಆಗಾಗ ಬದಲಾದ ಬಣ್ಣದಲ್ಲಿ ಕಾಣಸಿಗುತ್ತದೆ.. ಹಾಗಾಗಿ ಸಧ್ಯ ಕಂಡ ಸತ್ಯವನ್ನೇ ನೆಚ್ಚಿಕೊ ಬೇಡ, ನಾಳೆ ಹೊಸ ಸತ್ಯವೊಂದು ಕಾಣಬಹುದು..,ಸಮಯದ ಜೊತೆ ನಡಿ..,ಇವತ್ತು ಕಾಣುತ್ತಿರೋ ಸತ್ಯ ನಾಳೆ ಸುಳ್ಳೆನಿಸಬಹುದು.. ಅವಸರಕೆ ಬೀಳಬೇಡ, ಬದುಕು ಹೊಸ ಹೊಸಸತ್ಯಗಳನ್ನ ಆಗಾಗ ಹೊಳೆಯಿಸುತ್ತೆ…..” ನಾನೇನು ಮಾತಾಡುತ್ತಿದ್ದೆನೋ..ಅವಳಿಗೇನು ಹೊಳೀತೋ..

“ಥೂ ನೀ ಫೋನಿಡು ಮಾರಾಯ್ತಿ..” ಅವಳು ಬಿರುಸಿನಿಂದ ಕಟ್ ಮಾಡಿದಳು. ಖುಕ್ಕನೆ ಒಂದು ನಗು ಕೇಳಿದಂತಾಯ್ತು. ಸುಬ್ರಮಣಿ ನಕ್ಕನೇ…?

One thought on “ಪಯಣ: ಗಾಂಧೀ ಜಯಂತಿ ಕಥಾಸ್ಪರ್ಧೆ 2015- ಬಹುಮಾನ ಪಡೆದ ಕಥೆ

  1. chalam

    ತುಂಬಾನೇ ಕಾಡಿಸುವ ಕತೆ.ಆಪ್ತವಾದ ಬರಹಶೈಲಿ ನಮ್ಮನ್ನು ಒಳಗೊಳ್ಳಿಸದೇ ಬಿಡುವುದಿಲ್ಲ.ಧನ್ಯವಾದಗಳು ಶಾಂತಿ.ಕೆ.ಎ

    Reply

Leave a Reply

Your email address will not be published. Required fields are marked *