ಮಾಧ್ಯಮದಲ್ಲೂ ‘ಅಹಿಂದ’ ಇರಬೇಕು – ದಿನೇಶ್ ಅಮೀನ್ ಮಟ್ಟು

ಇದು ಪ್ರತಿ ಪತ್ರಕರ್ತ ಕೇಳಲೇಬೇಕಾದ ಭಾಷಣ

ಭಾಷಣ: ದಿನೇಶ್ ಅಮೀನ್ ಮಟ್ಟು

ನಿರೂಪಣೆ: ಎನ್.ರವಿಕುಮಾರ್ ಶಿವಮೊಗ್ಗ

 

(ಕರ್ನಾಟಕ ಮಾಧ್ಯಮ ಅಕಾಡೆಮಿ ಅಕ್ಟೋಬರ್ 3 ರಂದು ಕರ್ನಾಟಕ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಹಾಗೂ ಉರ್ದು ರಿಪೋಟರ್ಸ್ ಫೋರಂನ ಸಹಯೋಗದಲ್ಲಿ ರಾಯಚೂರಿನಲ್ಲಿ ‘ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಮಾಧ್ಯಮ ಕಾರ್ಯಾಗಾರ’ ವನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಾಡಿನ ಹಿರಿಯ ಪತ್ರಕರ್ತರು, ಚಿಂತಕರಾದ ಶ್ರೀಯುತ ದಿನೇಶ್ಅಮೀನ್ ಮಟ್ಟು ಅವರು ಆಶಯ ಮಾತುಗಳನ್ನಾಡಿದ್ದರು. ಅವರ ಈ ಅರ್ಥಪೂರ್ಣ ಮಾತುಗಳನ್ನು ಇಲ್ಲಿ ದಾಖಲಿಸಲಾಗಿದೆ.)

ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಮ್ಮ ಪೊನ್ನಪ್ಪ ಅವರು ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಅಕಾಡೆಮಿಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಒಂದು ರೀತಿಯಲ್ಲಿ ಅಕಾಡೆಮಿ ಪಾಲಿಗೆ ನಾನೂ ಕೂಡಾ ಅಸ್ಪೃಶ್ಯನಾಗಿದ್ದೆ. ಈ ಕಾರ್ಯಾಗಾರದ ವಿಷಯ ಕೂಡಾ ಅದೇ ಆಗಿದೆ. ಅದೇನೇ ಇರಲಿ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪೊನ್ನಪ್ಪ ಅವರನ್ನು ನಾನು ಅಭಿನಂದಿಸುತ್ತೇನೆ.

ಕೆಲವುವರ್ಷdinesh-aminmattuಗಳ ಹಿಂದೆ ದೆಹಲಿಯಲ್ಲಿದ್ದಾಗ ಕರ್ನಾಟಕದ ಪರಿಚಿತ ಬುದ್ದಿಜೀವಿರಾಜಕಾರಣಿಯೊಬ್ಬರು ಭೇಟಿಯಾಗಿದ್ದರು. ಇತ್ತೀಚೆಗೆ ಮಾಧ್ಯಮದಲ್ಲಿ ಜಾತೀಯತೆ ಜಾಸ್ತಿಯಾಗಿದೆ ಎಂದು ಅವರು ಬಹಳ ವಿಷಾದದಿಂದ ಹೇಳುತ್ತಿದ್ದರು. “ನನಗೆ ಅರ್ಥ ಆಗಲಿಲ್ಲ” ಎಂದೆ. ಅವರು “ಇಲ್ಲ ಈಗೆಲ್ಲಾ ಮಾಧ್ಯಮಗಳಲ್ಲಿ ಜಾತಿಗೊಂದು ಗುಂಪು ಹುಟ್ಟಿಕೊಂಡಿದೆ” ಅಂದರು. ನಾನು ಅವರ ಮುಖವನ್ನು ನೋಡುತ್ತಿದ್ದೆ, ಅವರು ಯಾವುದೋ ದುರುದ್ದೇಶದಿಂದ ಹೇಳುತ್ತಿದ್ದಾರೆಂದು ನನಗನಿಸಲಿಲ್ಲ. ಅವರು ಬಹಳ ಸಹಜವಾಗಿ ಹೇಳಿದ್ದರು. “ಹಿಂದೆ ಮಾಧ್ಯಮದಲ್ಲಿ ಜಾತಿ ಇರಲಿಲ್ಲವಾ?” ಎಂದು ನಾನು ಅವರನ್ನು ಕೇಳಿದೆ.

ಬಹಳಷ್ಟುಮಂದಿಗೆ ಇತ್ತೀಚೆಗೆ ಹೀಗೆ ಅನಿಸಲಿಕ್ಕತ್ತಿದೆ. ಎಲ್ಲದರಲ್ಲಿಯೂ ಜಾತಿ ಬಂದಿದೆ, ಮಾಧ್ಯಮದಲ್ಲಿ ಜಾತಿ ಬಂದಿದೆ. ರಾಜಕೀಯದಲ್ಲಿ ಜಾತಿಬಂದಿದೆ. ಎಲ್ಲಾ ಕಡೆ ಜಾತಿ ಬಂದಿದೆ ಎಂದು ಹೇಳುತ್ತಿರುತ್ತಾರೆ. ಹಾಗಾದರೆ ಜಾತಿ ಇರಲಿಲ್ಲವೇ? ಅದು ಬಹಳ ಮುಖ್ಯವಾದ ಪ್ರಶ್ನೆ. ನಾನು ಆ ರಾಜಕಾರಣಿಯನ್ನು ಮತ್ತೆ ಕೇಳಿದೆ, “ಸುಮ್ಮನೆ ಕಣ್ಮುಚ್ಚಿಕೊಂಡು ನಿಮಗೆ ಪರಿಚಯವಿರುವ ಎಲ್ಲಾ ಪತ್ರಕರ್ತರನ್ನು ನೆನೆಪಿಸಿಕೊಳ್ಳಿ. ಅದರಲ್ಲಿ ಯಾವ ಯಾವ ಜಾತಿಯವರಿದ್ದಾರೆ ಎಂಬುದು ಗೊತ್ತಾಗುತ್ತದೆ” ಅಂದೆ. ಆಗ ಅವರಿಗೆ ನಿಧಾನವಾಗಿ ಅರ್ಥವಾಗುತ್ತಾ ಹೋಯಿತು.

ಈ ದೇಶದ ಪತ್ರಿಕೆಗಳ ಸಂಪಾದಕರ ಜಾತಿಯಾವುದೆಂದು ಲೆಕ್ಕಹಾಕಿ, ಈ ಪತ್ರಿಕೆಗಳಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವ ಪತ್ರಕರ್ತರು ಯಾರು? ಅವರು ಯಾವ ಯಾವ ಜಾತಿಯವರು ಎಂದು ನೋಡುತ್ತಾ ಹೋದರೆ ಈ ದೇಶದ ಮಾಧ್ಯಮದಲ್ಲಿಯೂ ಎಷ್ಟೋ ವರ್ಷಗಳಿಂದ ಜಾತಿಯತೆ ಇತ್ತು ಎಂಬ ವಾಸ್ತವ ಅರ್ಥವಾಗುತ್ತದೆ. ಬಹಳಷ್ಟು ಮಂದಿ ತೀರಾ ಸಹಜವಾಗಿ ಈ ರಾಜ್ಯದಲ್ಲಿ ದೇವರಾಜಅರಸು ಅವರಿಂದ ಜಾತೀಯತೆ ಬಂತು ಎಂದು ಹೇಳ್ತಾರೆ. ಆದರೆ ವಾಸ್ತವ ಸಂಗತಿ ಬೇರೆ ಇದೆ. ಯಾವಾಗ ಹಾವನೂರು ಆಯೋಗದ ವರದಿ ಅನುಷ್ಠಾನಕ್ಕೆ ಬಂತೋ, ಯಾವಾಗ ಅವಕಾಶ ವಂಚಿತರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅವಕಾಶ ಸಿಕ್ಕಿತೊ, ರಾಷ್ಟ್ರ ಮಟ್ಟದಲ್ಲಿ ಮಂಡಲ್ ಆಯೋಗದ ವರದಿ ಯಾವಾಗ ಜಾರಿಗೆ ಬಂತೋ, ಆಗ ಅವಕಾಶ ವಂಚಿತರಿಗೂ ಅವಕಾಶಗಳು ಕೆಲವು ಕ್ಷೇತ್ರಗಳಲ್ಲಿ ಸಿಗುವಂತಾಯಿತು. ಅದರ ನಂತರ ರಾಜಕೀಯವಾಗಿ ಕೂಡಾ ಈ ಅವಕಾಶ ವಂಚಿತರು ಪ್ರಾತಿನಿಧ್ಯ ಪಡೆಯುವಂತಾಯಿತು. ಆಗ ಇದ್ದಕ್ಕಿಂತ ಹಾಗೆ ರಾಜಕೀಯದಲ್ಲಿ, ಮಾಧ್ಯಮದಲ್ಲಿ ಎಲ್ಲಾ ಕಡೆ ಜಾತಿ ಬಂದಿದೆ ಎಂಬ ಅಭಿಪ್ರಾಯ ತೇಲಿಬರಲಾರಂಭಿಸಿತು.

1996ರಲ್ಲಿ ದೆಹಲಿಯಲ್ಲಿ ವಾಷಿಂಗ್ಟನ್ ಪೋಷ್ಟ್ ನ ಬ್ಯೂರೋ ಚೀಫ್ ಆಗಿದ್ದ ಆಫ್ರಿಕನ್ ಮೂಲಕ ಅಮೆರಿಕನ್ ಕೆನ್ನತ್ ಕೂಪರ್ ಅವರು ಮೊದಲ ಬಾರಿಗೆ ಭಾರತದ ಮಾಧ್ಯಮ ಲೋಕದಲ್ಲಿರುವ ಜಾತಿಯತೆ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದರು. ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂದು ಅವರು ಹುಡುಕುತ್ತಾ ಹೋಗುತ್ತಾರೆ. ಕಣ್ಣಿಗೆ ಬಹಳ ಮಂದಿ ಕಾಣೋದೆ ಇಲ್ಲ! ಉನ್ನತ ಹುದ್ದೆಗಳಲ್ಲಿ ಅವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಯಾಕೆ ಹೀಗೆ ಎಂದು ಅವರು ಲೇಖನ ಬರೆಯುತ್ತಾರೆ. ‘ ಭಾರತದ ಮಾಧ್ಯಮಗಳಲ್ಲಿ ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಕೆಳಜಾತಿಗಳ ಪ್ರಾತಿನಿಧ್ಯವೇ ಇಲ್ಲ’ ಎಂದು ಅವರು ಬರೆದಿದ್ದರು.

ಅದರ ನಂತರ ಬಿ.ಎನ್ ಉನಿಯಾಲ್ ಎಂಬ ಪಯೋನಿಯರ್ ಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರು ಈ ಬಗ್ಗೆ ಲೇಖನದ ಮೂಲಕ ಗಮನಸೆಳೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅಧಿಕಾರಕ್ಕೆ ಬಂದ ಮೇಲೆ ಬಿಎಸ್ಪಿ ಮತ್ತು ಪತ್ರಕರ್ತರ ನಡುವೆ ಯಾಕೆ ಸಂಘರ್ಷ ನಡೆಯುತ್ತಿದೆ ಎನ್ನುವುದನ್ನು ವರದಿ ಮಾಡಲು ಮಾಹಿತಿ ಸಂಗ್ರಹಕ್ಕಾಗಿ ದಲಿತ ಪತ್ರಕರ್ತರನ್ನು ಹುಡುಕಲು ಹೊರಡುತ್ತಾರೆ. ಅವರಿಗೆ ಯಾವ ದಲಿತ ಪತ್ರಕರ್ತರು ಸಿಗುವುದಿಲ್ಲ. ಇದರಿಂದ ಕಳವಳಗೊಂಡು 30 ವರ್ಷಗಳನ್ನು ಪತ್ರಿಕಾ ವೃತ್ತಿಯಲ್ಲಿ ಕಳೆದಿದ್ದ ಅವರು ಈ ಅವಧಿಯಲ್ಲಿ ತಾನು ಭೇಟಿ ಮಾಡಿದ ದಲಿತ ಪತ್ರಕರ್ತರು ಯಾರಿದ್ದಾರೆ ಎಂದು ನೆನಪುಮಾಡಿಕೊಳ್ಳಲು ಪ್ರಯತ್ತಿಸುತ್ತಾರೆ. ಅವರಿಗೆ ಒಂದೇ ಒಂದು ಹೆಸರು ನೆನಪಿಗೆ ಬರುವುದಿಲ್ಲ. ಇದನ್ನು ಅವರು ಮೊದಲ ಬಾರಿಗೆ ಪಯೋನಿಯರ್ ಪತ್ರಿಕೆಯಲ್ಲಿ ದಾಖಲಿಸುತ್ತಾರೆ.

ಇದರ ನಂತರ ರಾಬಿನ್ ಜೆಫ್ರಿಎಂಬ ಇನ್ನೊಬ್ಬ ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕ ಪ್ರಾಧ್ಯಾಪಕ ಇದರ ಬಗ್ಗೆ ಅಧ್ಯಯನ ಮಾಡಿ ಲೇಖನ ಬರೆದಿದ್ದಾರೆ. ‘ಹೆಚ್ಚು ಕಡಿಮೆ ಭಾರತದ ಮಾಧ್ಯಮದಲ್ಲಿ ದಲಿತ ವರದಿಗಾರರು ಮತ್ತು ಉಪ ಸಂಪಾಕದರು ಇಲ್ಲವೇ ಇಲ್ಲ. ದಲಿತರ ಮಾಲಿಕತ್ವದ ಪತ್ರಿಕೆಯಾಗಲಿ, ದಲಿತ ಸಂಪಾದಕರಾಗಲಿ ಇಲ್ಲವೇ ಇಲ್ಲ’ ಎಂದು ರಾಬಿನ್ ಜೆಫ್ರಿ ಬರೆದಿದ್ದರು. ‘ಮೀಸಲಾತಿ ವಿರೋಧಿ ಚಳುವಳಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್ ಗಳು ಏಕಪಕ್ಷೀಯವಾಗಿ ವರದಿ ಮಾಡಲು ಪತ್ರಿಕಾ ಕಚೇರಿಯಲ್ಲಿರುವ ಜಾತೀಯತೆ ಕಾರಣ’ ಎಂದು ಸಿದ್ದಾರ್ಥ ವರದರಾಜನ್ ‘ದಿ ಹಿಂದೂ’ ವಿನಲ್ಲಿ ಬರೆದಿದ್ದರು. ಇದರ ನಂತರ 2006ರಲ್ಲಿ ಸಿಎಸ್ ಡಿಎಸ್ ದೆಹಲಿಯಲ್ಲಿ ಮಾಡಿದ ಸಮೀಕ್ಷೆ ಇನ್ನಷ್ಟು ಕಳವಳಕಾರಿ ಅಂಶಗಳನ್ನು ಬಯಲು ಮಾಡಿತ್ತು. ಸಂಸ್ಥೆ ಸಮೀಕ್ಷೆ ನಡೆಸಿದ ದೆಹಲಿಯ 32 ಹಿಂದಿ ಮತ್ತು ಇಂಗ್ಲೀಷ್ ಪತ್ರಿಕೆಗಳ 315 ನೀತಿ ನಿರ್ಧಾರಕ ಹುದ್ದೆಗಳಲ್ಲಿ, ಹೆಚ್ಚುಕಡಿಮೆ ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಶೇಕಡಾ 90 ಮತ್ತು ಟಿವಿ ಚಾನೆಲ್ ಗಳಲ್ಲಿ ಶೇಕಡಾ 79ರಷ್ಟು ಮೇಲ್ಜಾತಿ ಪತ್ರಕರ್ತರೇ ತುಂಬಿದ್ದರು’ ಎಂದು ಆ ಸಮೀಕ್ಷೆ ತಿಳಿಸಿತ್ತು. ಇದು ಇಂದಿನ ಭಾರತದ ಮಾಧ್ಯಮದ ಸ್ಥಿತಿ.

ಮಾಧ್ಯಮಗಳು ಹೀಗೆ ಯಾಕೆ ವರ್ತಿಸುತ್ತಿವೆ ಎಂಬ ಬಗ್ಗೆ ಮಾತನಾಡುವ ಮೊದಲು ದಿನಪತ್ರಿಕಗೆಳ, ಟಿ.ವಿ ಚಾನಲ್ ಗಳ ಮಾಲೀಕರು, ಮುಖ್ಯಸ್ಥರು ಯಾರು, ಅಲ್ಲಿನ ಟಾಪ್ 10 ಹುದ್ದೆಗಳಲ್ಲಿ ಯಾರಿದ್ದಾರೆ ಎಂದು ತಿಳಿದು ಕೊಂಡರೆ ಸಾಕು. ಆಗ ಯಾವ ಸರ್ಕಾರದ ಬಗ್ಗೆ, ಯಾವ ರಾಜಕಾರಣಿ ಬಗ್ಗೆ, ಯಾವ ಅಧಿಕಾರಿ ಬಗ್ಗೆ ಮಾಧ್ಯಮಗಳು ಯಾಕೆ ಹೀಗೆ ವರ್ತಿಸುತ್ತಿವೆ ಎನ್ನುವುದು ಗೊತ್ತಾಗಬಹುದು. ಇದು ಅಪ್ರಿಯವಾದ ಸತ್ಯ.

ಇದಕ್ಕೆಬಹಳಷ್ಟುಕಾರಣಗಳಿವೆ, ಅಧ್ಯಯನಗಳು ಕೂಡಾ ನಡೆದಿವೆ. ಇಂತಹ ಅಧ್ಯಯನ ಕನ್ನಡ ಮಾಧ್ಯಮ ರಂಗದ ಬಗ್ಗೆಯೂ ನಡೆಯಬೇಕಾಗಿದೆ. ದೆಹಲಿಯ ಏಜಾಜ್ ಆಶ್ರಫ್ ಎಂಬ ಪತ್ರಕರ್ತರೊಬ್ಬರು ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿದ್ದರು. ದೆಹಲಿಯಲ್ಲಿ 1965ರಲ್ಲಿಯೇ ಸ್ಥಾಪನೆಗೊಂಡ ಸರ್ಕಾರಿ ಸ್ವಾಮ್ಯದ ಐಐಎಂಸಿ ಎಂಬ ಪತ್ರಿಕೋದ್ಯಮ ಪಾಠ ಮಾಡುವ ಸಂಸ್ಥೆ ಇದೆ. ಅಲ್ಲಿ ಮೀಸಲಾತಿಯೂ ಇರುವುದರಿಂದ ಒಂದಷ್ಟು ದಲಿತರು ಖಂಡಿತ ಅಲ್ಲಿ ಶಿಕ್ಷಣ ಪಡೆದಿರುತ್ತಾರೆ. ಹೀಗಿದ್ದರೂ ಅವರ್ಯಾರೂ ಪತ್ರಿಕಾ ಕಚೇರಿಗಳಲ್ಲಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಏಜಾಜ್ ಆಶ್ರಫ್ ಅವರನ್ನು ಕಾಡುತ್ತದೆ. ಸರ್ಕಾರಿ ಕಾಲೇಜುಗಳು ಮತ್ತು ಯೂನಿರ್ವಸಿಟಿಗಳಲ್ಲಿ ಮೀಸಲಾತಿ ಸೌಲಭ್ಯದ ಮೂಲಕ ದಲಿತರು, ಹಿಂದುಳಿದವರ್ಗಗಳು ಮತ್ತು ಅಲ್ಪಸಂಖ್ಯಾತರು ಅಡ್ಮೀಷನ್ ಪಡೆಯುತ್ತಾರೆ. ಆ ನಂತರ ಅವರಲ್ಲಿ ಎಷ್ಟು ಮಂದಿ ಈ ಮಾಧ್ಯಮ ಸಂಸ್ಥೆಗಳನ್ನು ಸೇರಿಕೊಳ್ಳುತ್ತಾರೆ? ಅವರಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಾರೆ ಎಂಬ ಬಗ್ಗೆ ಅಧ್ಯಯನ ನಡೆಸಿ ಏಜಾಜ್ ಆಶ್ರಫ್ ದಿ.ಹೂಟ್ (thehoot.org) ಎಂಬ ವೆಬ್ ಸೈಟ್ ನಲ್ಲಿ ಬಹಳ ದೀರ್ಘವಾದ ಲೇಖನ ಬರೆದಿದ್ದಾರೆ.

ಅದರಲ್ಲಿ ಸಂತೋಷ್ ವಾಲ್ಮೀಕಿ ಎಂಬ ದಲಿತ ಪತ್ರಕರ್ತನ ವ್ಯಥೆಯ ಕತೆ ಇದೆ. ಇವರು ಹಿಂದೂಸ್ಥಾನ ಟೈಮ್ಸ್ ನ ಲಕ್ನೋ ಬ್ಯೂರೋ ಚೀಫ್ ಆಗಿದ್ದಾರೆ. ಅವರೊಬ್ಬ ಕುಡುಕ ಚಾಲಕನ ಮಗ, ದೆಹಲಿಯ ಬೀದಿಗಳಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು . ಬಹಳ ಕಷ್ಟ ಪಟ್ಟು ಡಿಗ್ರಿ ಮುಗಿಸುತ್ತಾರೆ. ಆಮೇಲೆ ಸ್ನಾತಕೋತ್ತರ ಪದವಿಗಾಗಿ ಅರ್ಜಿ ಹಾಕಿದಾಗ ಇಂಟರ್ ವ್ಯೂನಲ್ಲಿ . ‘ನೀನು ಪ್ರತಿದಿನ ಎಷ್ಟು ಪೇಪರ್ ಗಳನ್ನು ಓದುತ್ತಿ?’ ಎಂದು ಕೇಳಿದ್ದರಂತೆ. ‘ನಾನು ಪ್ರತಿದಿನ ಒಂಭತ್ತು ಪೇಪರ್ ಓದುತ್ತೇನೆ’ ಎಂದು ಅವರು ಉತ್ತರಿಸಿದ್ದರಂತೆ. ಸಂದರ್ಶಕರಿಗೆ ಆಶ್ಚರ್ಯ ಆಗುತ್ತದೆ. ಪತ್ರಿಕೆ ಮಾರುತ್ತಿದ್ದ ನಾನು ಆಸಕ್ತಿಯಿಂದ ಓದುವ ಹವ್ಯಾಸ ಬೆಳೆಸಿಕೊಂಡ ಕಾರಣದಿಂದಾಗಿ ಪತ್ರಕರ್ತನಾಗಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.. ಅದರ ನಂತರ ತಾನು ಹೇಗೆ ತಾನು ಪತ್ರಕರ್ತ ಆದೆ ಎಂದು ಅವರು ಹೇಳುತ್ತಾ ಹೋಗುತ್ತಾರೆ. ಇವತ್ತು ಇಲ್ಲಿ ಸೇರಿರುವ ನೀವು ಇದನ್ನು ತಿಳಿದುಕೊಳ್ಳಬೇಕು.

ದೆಹಲಿಯ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ದಲಿತ ಪತ್ರಕರ್ತನನ್ನು ಏಜಾಜ್ ಆಶ್ರಫ್ ಭೇಟಿ ಮಾಡುತ್ತಾರೆ. ಜಾತಿಯಲ್ಲಿ ಕುರುಬನಾಗಿರುವ ಈ ಪತ್ರಕರ್ತ ತಾನು ಹೇಗೆ ಇಂಗ್ಲೀಷ್ ಕಲಿತೆ ಎನ್ನುವುದನ್ನು ಹೇಳುತ್ತಾನೆ. ಈತ ಇಂಗ್ಲೀಷ್ ಪತ್ರಿಕೆಗಳನ್ನು ಓದಿ ಅದರಲ್ಲಿ ತನಗೆ ಅರ್ಥವಾಗದ ಪದಗಳನ್ನು ನೋಟ್ ಮಾಡಿಕೊಂಡು ಅವಗಳಿಗೆ ಶಬ್ದಕೋಶ ನೋಡಿ ಅರ್ಥ ಬರೆದುಕೊಳ್ಳುತ್ತಿದ್ದನಂತೆ. ಇಂಗ್ಲೀಷ್ ವಾಕ್ಯಗಳನ್ನು ಏಕಾಂತದಲ್ಲಿ ಕೂತು ಜೋರಾಗಿ ಉಚ್ಚರಿಸಿ ಓದುತ್ತಿದ್ದನಂತೆ.ಕೊನೆಗೆ ಬಿಪಿಓ ಸೇರಿಕೊಂಡು ಅಲ್ಲಿ ವಾಯ್ಸ್ ಟ್ರೇನಿಂಗ್ ಪ್ರೋಗ್ರಾಮ್ ಮೂಲಕ ಇಂಗ್ಲೀಷ್ ಉಚ್ಚಾರ ಕಲಿತಿದ್ದನಂತೆ.

ಅಂದರೆ ಈ ಭಾರತದ ವ್ಯವಸ್ಥೆ ಹೇಗಿದೆಯೆಂದರೆ ಕೆಲವರು ಲಿಫ್ಟ್ನಲ್ಲಿ ಸರ್ರನೆ ಮೇಲೇರಿ ಹೋಗಿಬಿಡುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗುತ್ತದೆ. ನೀವೆಲ್ಲಾ ಏನಿಲ್ಲಿ ಸೇರಿದ್ದೀರಿ, ನೀವು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ. ನಿಮಗೆ ಲಿಫ್ಟ್ ಸಿಗೋದಿಲ್ಲ. ಇದು ಭಾರತದ ಇವತ್ತಿನ ಮಾಧ್ಯಮದ ಪರಿಸ್ಥಿತಿ.

ಮಾಧ್ಯಮದಲ್ಲಿಯಾಕೆ ಎಲ್ಲ ಜಾತಿ-ಧರ್ಮಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಯಾರಾದರೂ ಕೇಳಬಹುದು. ನೋಡಿ, ಇತ್ತೀಚೆಗೆ ಮೀಸಲಾತಿಯಾಕೆ ಬೇಕು ಎಂಬ ಬಗ್ಗೆ ದೊಡ್ಡದಾಗಿ ಡಿಬೇಟ್ ನಡೆಯುತ್ತಿದೆ. ಈ ಪ್ರಶ್ನೆಗೆ ಮಾಧ್ಯಮ ರಂಗದಲ್ಲಿ ಉತ್ತರ ಇದೆ. ಎಲ್ಲಿ ಮೀಸಲಾತಿ ಇದೆಯೋ ಅಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಪ್ರಾತಿನಿಧ್ಯ ಇದೆ. ರಾಜಕೀಯದಲ್ಲಿ ದಲಿತರ ಪ್ರಾತಿನಿಧ್ಯ ಇರುವುದಕ್ಕೆ ಮೀಸಲಾತಿ ಕಾರಣ. ಆದರೆ ಮೀಸಲಾತಿ ಇಲ್ಲದ ಮಾಧ್ಯಮದಲ್ಲಿ, ನ್ಯಾಯಾಂಗದಲ್ಲಿ ದಲಿತರ ಪ್ರಾತಿನಿಧ್ಯ ಇಲ್ಲ. ಅಂದರೆ ಮೀಸಲಾತಿ ಕಾನೂನಿನ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ಸಿಕ್ಕಿದೆ ವಿನಃ ಅದು ಅವರ ಅರ್ಹತೆಯನ್ನು ಗುರುತಿಸಿ ಕೊಟ್ಟದ್ದಲ್ಲ.

ಮನುಷ್ಯ ಪರಿಸರದ ಕೂಸು. ದಲಿತರು, ಹಿಂದುಳಿದ ಜಾತಿಯವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಾಡಿನಿಂದ, ಬಡಕುಟುಂಬಗಳಿಂದ ಮತ್ತು ರೈತ ಸಮುದಾಯದಿಮದ ಬಂದವರು. ಅವರಿಗೆ ಹೊರಜಗತ್ತಿನ exposure ಬಹಳ ಕಡಿಮೆ. ನನ್ನ ಮಗಳಿಗೆ ಸಿಕ್ಕ exposure ನನಗೆ ಸಿಕ್ಕಿರಲಿಲ್ಲ. ನಾನು ಕುಗ್ರಾಮದಿಂದ ಬಂದವನು. ದೋಣಿಯಲ್ಲಿ ಹೋಗಿ ಕಾಲೇಜು ಶಿಕ್ಷಣ ಮುಗಿಸಿದವನು. ಮುಂಗಾರು ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದಾಗಲೂ ನಿತ್ಯ ದೋಣಿ ದಾಟಿಕೊಂಡೇ ಮಂಗಳೂರು ಹೋಗುತ್ತಿದ್ದವನು. ನನಗೆ ಲಿಫ್ಟ್ ಸಿಕ್ಕಿರಲಿಲ್ಲ, ಮೆಟ್ಟಿಲು ಹತ್ತಿಕೊಂಡೇ ಬಂದವನು. ನಾನು ಆಗಲೆ ಹೇಳಿದ ಹಾಗೆ ನಾವೆಲ್ಲ ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗಿದೆ. ಪ್ರತಿಭೆ ಹುಟ್ಟಿನಿಂದಲೇ ಬರುವುದಿಲ್ಲ, ಅವಕಾಶ ಸಿಕ್ಕಿದಾಗ ಅದು ಅರಳುತ್ತದೆ ಅಷ್ಟೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದಲ್ಲಿಯೂ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವಕಾಶ ಸಿಗದೆ ಅವರಲ್ಲಿ ಎಷ್ಟೊ ಪ್ರತಿಭೆಗಳು ಮುದುಡಿಹೋಗುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಒಬ್ಬನನ್ನು ಸುಲಭದಲ್ಲಿ ನಾಶಮಾಡಬಹುದು. ಅದು ಬಹಳ ಸುಲಭ, ಏಕೆಂದರೆ ಅವನಿಗೆ ನೀವು ಹೊಡೆಯಬೇಕಾಗಿಲ್ಲ. ಬಡಿಯಬೇಕಾಗಿಲ್ಲ, ದೈಹಿಕವಾಗಿ ಹಲ್ಲೆ ನಡೆಸಬೇಕಾಗಿಲ್ಲ. ಅವನಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟರೆ ಸಾಕು, ಅವು ಕೆಲಸ ಬಿಟ್ಟು ಓಡಿ ಹೋಗುತ್ತಾನೆ. ದೆಹಲಿಯಲ್ಲಿ ಸರ್ವೆ ನಡೆದಾಗ ಬಹಳಷ್ಟು ಮಂದಿ ಪತ್ರಿಕೋದ್ಯಮದ ವ್ಯಾಸಂಗ ಪಡೆದು ವೃತ್ತಿಗೆ ಯಾಕೆ ಬಂದಿಲ್ಲ ಎಂದು ಕೇಳಿದರೆ ಇದೇ ಉತ್ತರ ಕೊಟ್ಟಿದ್ದಾರೆ.

ತಮಿಳುನಾಡಿನ ಒಂದಷ್ಟು ದಲಿತ ಪತ್ರಕರ್ತರು ಕೂಡಾ ಇಂತಹ ಅನುಭವಗಳನ್ನು ದಾಖಲಿಸಿದ್ದಾರೆ. ಅವನ್ನು ಓದಿದರೆ ನಿಮಗೆ ಅರ್ಥವಾಗುತ್ತದೆ. ಪತ್ರಿಕಾ ಕಚೇರಿಗಳಲ್ಲಿ ಒಬ್ಬ ದಲಿತನನ್ನು, ಹಿಂದುಳಿದ ವರ್ಗದವನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ, ಅದರ ವಿವರಗಳಿಗೆ ಹೋಗುವುದಿಲ್ಲ. ಈಗ ಸ್ವಲ್ಪ ಕಡಿಮೆ ಆಗಿದೆ. ಮಾನಸಿವಾಗಿ ಕಿರುಕುಳ ಕೊಟ್ಟಾಗ ಅವನ ತಲೆ ಓಡುವುದಿಲ್ಲ. ಅವನಿಂದ ತಪ್ಪುಗಳಾಗುತ್ತವೆ. ಹಳ್ಳಿಗಾಡಿನ ಜನ, ದಲಿತರು, ಹಿಂದುಳಿದವರ್ಗಗಳ ಜನ ಮಾತನಾಡುವ ಭಾಷೆ ಒರಟಾಗಿರುತ್ತದೆ. ಇವತ್ತು ಟಿ.ವಿ ಚಾನಲ್ ಗಳಲ್ಲಿ ಗ್ರಾಂಥಿಕವಾದ ಮಂಗಳೂರು ಕನ್ನಡ ಮಾತನಾಡುವವರಿಗೆ ಮಾತ್ರ ಹೆಚ್ಚಿನ ಅವಕಾಶ ಸಿಗುತ್ತಿದೆ. ಈ ಕಾರಣದಿಂದಾಗಿಯೇ  ಹೆಚ್ಚಿನ ಆ್ಯಂಕರ್ ಗಳು ಮಂಗಳೂರಿನಿಂದ ಬಂದವರಾಗಿದ್ದಾರೆ. ರಾಯಚೂರು, ಗುಲ್ಬರ್ಗಾ, ಧಾರವಾಡ ಕಡೆಯ ಭಾಷೆ ಅಲ್ಲಿ ನಡೆಯುವುದಿಲ್ಲ. ಅದೇನಿದ್ದರೂ ಸಿನಿಮಾ, ನಾಟಕಗಳಲ್ಲಿ ಹಾಸ್ಯ ಪಾತ್ರಗಳಿಗೆ ಸೀಮಿತ. ಭಾಷೆಗೂ ಐಡೆಂಟಿಟಿ ಇದೆ ಎನ್ನುವುದನ್ನು ತಿಳಿದುಕೊಂಡು ಅವರ ಅನುಭವಕ್ಕೂ ಒಂದು ಬೆಲೆ ಇದೆ ಎಂದು ಗುರುತಿಸಿ ಅವಕಾಶ ನೀಡುವ ಮಾಧ್ಯಮಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

 
ನಾನು ಕೆಲಸ ಮಾಡಿದ ಪ್ರHari Kumarಜಾವಾಣಿಯಲ್ಲಿ ನೀವು ಇಲ್ಲಿ ಸೇರಿರುವ ವರ್ಗದಿಂದ ಬಂದವರು ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿರುವ ಪೊನ್ನಪ್ಪ, ಬಿ.ಕೆ ರವಿ ಎಲ್ಲ ಪ್ರಜಾವಾಣಿ ಯಿಂದ ಬಂದವರು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಇದು ಕೂಡಾ ಬಹಳ ಪ್ರಜ್ಞಾ ಪೂರ್ವಕವಾಗಿ ಮಾಡಿದ ಬದಲಾವಣೆ. ಕೆ.ಎನ್.ಹರಿಕುಮಾರ್ ಅವರು ತಮ್ಮ ಅಜ್ಜನಿಂದ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡ ನಂತರ ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಸೇರಿಸಿಕೊಳ್ಳಬೇಕು ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದರಿಂದ ಬಹಳಷ್ಟು ಜನ ಈ ವರ್ಗಕ್ಕೆ ಸೇರಿದವರಿಗೆ ಅವಕಾಶ ಸಿಗುವಂತಾಯಿತು. ಅವರೆಲ್ಲರೂ ಪ್ರತಿಭಾವಂತ ಪತ್ರಕರ್ತರು. ರಂಜಾನ್ ದರ್ಗಾ ರಿಂದ ಹಿಡಿದು ಇಂದೂಧರ್ ಹೊನ್ನಾಪುರ, ಶಿವಾಜಿ ಗಣೇಶನ್, ಡಿ.ವಿ ರಾಜಶೇಖರ್ ಮೊದಲಾದವರು ಪತ್ರಕರ್ತರಾಗಿದ್ದು ಹೀಗೆ. ಒಬ್ಬ ಸಂಪಾದಕ ಪ್ರಜ್ಞಾ ಪೂರ್ವಕವಾಗಿ ಆ ನಿರ್ಧಾರ ಮಾಡಿದ ಕಾರಣಕ್ಕಾಗಿ ಅವರ ಪ್ರತಿಭೆಗೆ ಅವಕಾಶ ಸಿಕ್ಕಿತು. ಅವರು ಬೆಳೆಯಲು ಸಾಧ್ಯವಾಯಿತು.

ಇದು ನಮ್ಮ ಇವತ್ತಿನ ಮಾಧ್ಯಮ ಕ್ಷೇತ್ರದಲ್ಲಿ ಕಾಣುತ್ತಿಲ್ಲ.

ಇದರ ಪರಿಣಾಮ ಬೇರೆ ಬೇರೆ ರೀತಿಯಲ್ಲಿ ಆಗುತ್ತಿದೆ. ಮುಖ್ಯಮಂತ್ರಿಗಳಿಗೆ ಸರಿಯಾದ ಪ್ರಚಾರ ಸಿಗ್ತಾ ಇಲ್ಲ ಎಂದು ಕೆಲವರು ಬಂದು ನನ್ನ ಹತ್ತಿರ ದು:ಖ ತೋಡಿಕೊಳ್ತಾರೆ. ಪ್ರಚಾರ ಅಂದ್ರೆ ಏನು? ಎಂದು ನನಗೂ ಆಶ್ಚರ್ಯವಾಗುತ್ತದೆ. ಇನ್ನು ಕೆಲವರು ನೀವು ಮೀಡಿಯಾವನ್ನು ಮ್ಯಾನೇಜ್ ಮಾಡಬೇಕು ಎಂದು ಸಲಹೆ ಕೊಡುತ್ತಾರೆ. ಇದನ್ನು ನಮ್ಮ ಮುಖ್ಯಮಂತ್ರಿಗಳು ಒಪ್ಪುತ್ತಿಲ್ಲ. ನನಗೂ ಅದರಲ್ಲಿ ನಂಬಿಕೆ ಇಲ್ಲ.

ಮಾಧ್ಯಮಕ್ಕೊಂದು ಧರ್ಮವಿದೆ. ಆ ಪತ್ರಿಕಾ ಧರ್ಮವನ್ನು ಸಂಪಾದಕ, ಪತ್ರಕರ್ತ ಪಾಲಿಸಿದರೆ ಯಾವುದೇ ಮ್ಯಾನೇಜ್ ಮೆಂಟ್ ಬೇಕಿಲ್ಲ. ಯಾವ ಒತ್ತಡವೂ ಬೇಕಿಲ್ಲ. ಯಾವ ಆಮಿಷಗಳು ಬೇಕಿಲ್ಲ. ಪತ್ರಿಕೆಗಳು, ಪತ್ರಕರ್ತರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಸಾಕು. ನಮ್ಮ ಮುಖ್ಯಮಂತ್ರಿಗಳು ಇದನ್ನೆ ಹೇಳಿದ್ದಾರೆ. ಅವರ ವಿರುದ್ದ ಯಾವುದೇ ವರದಿ ಬಂದರೂ ಇಲ್ಲಿಯವರೆಗೂ ಅವರು ಯಾವ ಮಾಧ್ಯಮ ಪ್ರತಿನಿಧಿಗೂ ಪೋನ್ ಮಾಡಿ ಯಾಕೆ ಇದನ್ನು ಬರೆದಿದ್ದೀಯಾ ಅಂತ ಕೇಳಿಲ್ಲ. ನನ್ನ ಹತ್ತಿರವೂ ‘ನೀನು ಇದನ್ನು ಕೇಳಬೇಕು’ ಎಂದು ಹೇಳಿಲ್ಲ.

ಸರ್ಕಾರದ ಪರವಾಗಿ ಇಲ್ಲಿ ಪ್ರಚಾರಕ್ಕೆ ನಾನು ಬಂದಿಲ್ಲ. ಉದಾಹರಣೆಗಾಗಿ ಹೇಳುತ್ತಿದ್ದೇನೆ. ಅನ್ನಭಾಗ್ಯ ಎಂಬ ಯೋಜನೆಯಿಂದ ರಾಜ್ಯದ ಸುಮಾರು 1 ಕೋಟಿ ಕುಟುಂಬಗಳಿಗೆ ಲಾಭವಾಗುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಅಂತ ತಿಳಿದುಕೊಂಡರೂ 4 ಕೋಟಿ ಜನರಿಗೆ ಇದರ ಪ್ರಯೋಜನ ತಲುಪುತ್ತಿದೆ. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 4 ಕೋಟಿ ಜನ ಇದರ ಫಲಾನುಭವಿಗಳು. ಇದನ್ನು ಈಗ ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಲಾಗಿದೆ. ಹೀಗಿದ್ದರೂ ಕೂಡ ಮಾಧ್ಯಮ ದಲ್ಲಿ ಅನ್ನ ಭಾಗ್ಯ ದಲ್ಲಿ ಕಲ್ಲು ಹುಡುಕಾಟದ ಪ್ರವೃತ್ತಿ ಇವತ್ತಿಗೂ ನಿಂತಿಲ್ಲ. ಯೋಜನೆಯ ಅನುಷ್ಟಾನದಲ್ಲಿ ಒಂದಷ್ಟು ಲೋಪ-ದೋಷಗಳು ಖಂಡಿತ ಇರಬಹುದು. ಕಳ್ಳ ಸಂತೆ, ದುರುಪಯೋಗ ಇತ್ಯಾದಿ ಆಗುತ್ತಿರಬಹುದು. ಲಾಭದ ಲೆಕ್ಕ ಹಾಕಿದರೆ ದೋಷಗಳು ನಗಣ್ಯವಾದುದು. ಹೀಗಿದ್ದರೂ ಯಾಕೆ ನೆಗೆಟಿವ್ ಪ್ರಚಾರ? ರಾಜ್ಯದ ಜನಸಂಖ್ಯೆಯಲ್ಲಿ ಶೇ. 80 ರಷ್ಟು ಜನ ದಲಿತರು, ಹಿಂದುಳಿದವರ್ಗಕ್ಕೆ ಸೇರಿದವರು ಮತ್ತು ಅಲ್ಪಸಂಖ್ಯಾತರು. ಅವರೆಲ್ಲರೂ ಅನ್ನಭಾಗ್ಯದ ಫಲಾನುಭವಿಗಳು. ಈ ಮಾಧ್ಯಮಗಳು ಅವರ ಅಭಿಪ್ರಾಯಗಳನ್ನು ಭಾವನೆಗಳನ್ನು ರಿಪ್ಲೆಕ್ಟ್ ಮಾಡುತ್ತಿದೆಯೇ?. ಏಕೆಂದರೆ ಈ ಫಲಾನುಭವಿಗಳು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದಿಲ್ಲ. ಅನ್ನ ಭಾಗ್ಯದಿಂದ ನಮಗೆ ಲಾಭವಾಗಿದೆ ಎಂದು ಬೀದಿಗೆ ಬಂದು ಕೂಗಿ ಹೇಳುವುದಿಲ್ಲ. ಟಿ.ವಿ ಚಾನಲ್ ಗಳ ಸ್ಟುಡಿಯೋಗಳಲ್ಲಿ ಬಂದು ಚರ್ಚೆಯಲ್ಲಿ ಕೂರುವುದಿಲ್ಲ. ಅವರಿಗೆ ಧ್ವನಿ ಇಲ್ಲ. ದನಿ ಇಲ್ಲದವರಿಗೆ ಮಾಧ್ಯಮ ದನಿ ಅಗಬೇಕಲ್ಲವೇ?.

ಶಾದಿ ಭಾಗ್ಯಬಗ್ಗೆ ದೊಡ್ಡ ವಿವಾದ ಆಯ್ತು. ಯಾಕೆ ಆಗಬೇಕು? ಯಾರು ಅದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಬಜೆಟ್ ನಲ್ಲಿ ಒಂದಿಷ್ಟು ದುಡ್ಡು ಕೊಟ್ಟಿರುತ್ತಾರೆ. ಆ ದುಡ್ಡಿನಿಂದ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಅವರು ಏನಾದ್ರೂ ಮಾಡ್ಲಿ, ಶಾದಿ ಭಾಗ್ಯನಾದ್ರೂ ಮಾಡ್ಲಿ, ಇನ್ನೂಂದು ಮಾಡ್ಲಿ, ಅದು ಅವರ ಬಜೆಟ್. 1000 ಕೋಟಿ ರೂಪಾಯಿ ಏನು ಕೊಟ್ಟಿದೆ ಅದು ಅವರ ದುಡ್ಡು. ಆದರೆ ಬರೀ ಮುಸ್ಲಿಮರಿಗೆ ಯಾಕೆ ಕೊಟ್ಟಿದ್ದೀರಿ? ಉಳಿದವರಿಗೆ ಯಾಕೆ ಕೊಟ್ಟಿಲ್ಲ ಅಂದ್ರೆ, ಉಳಿದವರಿಗೆ ಬೇರೆ ಸೌಲಭ್ಯಗಳಿವೆ ಅದನ್ನು ಅವರು ತಗೋಳ್ತಾರೆ. ಈ ರೀತಿ ಹೇಳುವಂತಹ ಸಮಚಿತ್ತದ ಬರವಣಿಗೆ ನಮಗೆ ಕಾಣುತ್ತಿಲ್ಲ.

ಇನ್ನು ಮೂಢನಂಬಿಕೆ ನಿಷೇಧ ಮಸೂದೆ. ಇಲ್ಲಿ ಸೇರಿರುವ ನಮಗೆಲ್ಲರಿಗೂ ಸಂಭಂಧಿಸಿದ್ದು ಮೂಢ ನಂಬಿಕೆ ನಿಷೇಧ ಕರಡು ಮಸೂದೆ ಬಗ್ಗೆ ಇಷ್ಟೆಲ್ಲಾ ವರದಿಗಳು ಬಂತಲ್ಲಾ, ಆ ರೀತಿ ವರದಿ ಮಾಡಿದವರಲ್ಲಿ ಕೆಲವರನ್ನು ಮಸೂದೆ ಪೂರ್ಣವಾಗಿ ಓದಿದ್ದೀರಾ ಎಂದು ಕೇಳೀದ್ದೇನೆ. ಬಹಳ ಮಂದಿ ಧೈರ್ಯದಿಂದ ಓದಿದ್ದೇನೆ ಎಂದು ಉತ್ತರಿಸಿಲ್ಲ. ಹೆಚ್ಚಿನವರು ಮಸೂದೆಯಲ್ಲಿನ ಪ್ರಿಯಾಂಬಲ್ ಓದಿ ಭಾವುಕರಾಗಿ ಅತಿರೇಕದ ವರದಿಗಳನ್ನು ಮಾಡಿದ್ದರು. ಮೂಲ ಮಸೂದೆಯಲ್ಲಿ ಅಂತಹ ಯಾವುದೇ ವಿಷಯಗಳಿರಲಿಲ್ಲ. ಆದರೆ ಆ ರೀತಿಯ ಪ್ರಚಾರ, ಒತ್ತಡಗಳಿಂದ ಸರ್ಕಾರವೇ ಹಿಂದೆ ಸರಿಯಬೇಕಾಯಿತು. ಇಂದು ಮೂಢನಂಬಿಕೆ ಕಾಯ್ದೆ ಯಾರಿಗೆ ಬೇಕಾಗಿದೆಯೆಂದರೆ ಅಶಿಕ್ಷಿತರಿಗೆ, ಬಡವರಿಗೆ ಬೇಕು. ದಲಿತ, ಹಿಂದುಳಿದವರಿಗೆ , ಅಲ್ಪಸಂಖ್ಯಾತರಿಗೆ ಬೇಕು. ಏಕೆಂದರೆ ಶೋಷಣೆಗೀಡಾಗುತ್ತಿರುವವರು ಇದೇ ಸಮುದಾಯದವರು. ಇದೇ ಸಮುದಾಯದ ದನಿ ಮಾಧ್ಯಮಗಳಲ್ಲಿ ಕೇಳಿಬಂದಿದ್ದರೆ ಇವತ್ತು ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಬರುತ್ತಿತ್ತು. ಬಹುಶಃ ಎಂ.ಎಂ ಕಲಬುರ್ಗಿ ಅವರ ಹತ್ಯೆಯೂ ಆಗುತ್ತಿರಲಿಲ್ಲ.

ನಮ್ಮ ಮಾಧ್ಯಮಗಳು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭಿವೃದ್ದಿ ಬಗ್ಗೆ ಮಾತನಾಡುವಾಗ ಈ ಮಾಧ್ಯಮಗಳಲ್ಲಿರುವ ತಾರತಮ್ಯ, ಪೂರ್ವಗ್ರಹಗಳನ್ನು ಮರೆತು ಮಾತನಾಡುವಂತಿಲ್ಲ. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಜಾತೀಯತೆ ಕಡಿಮೆಯಾಗುತ್ತಿದೆ. ಆದರೆ ಭಾಷಾ ಪತ್ರಿಕೋದ್ಯಮದಲ್ಲಿ, ಕನ್ನಡ ,ಹಿಂದಿ ಗುಜರಾತಿ ಮೊದಲಾದ ಭಾಷೆಗಳ ಪತ್ರಿಕೆಗಳಲ್ಲಿ ಇನ್ನೂ ಕಡಿಮೆಯಾಗಿಲ್ಲ. ಅಲ್ಲಿ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಳಿದರೆ ತಾವು ಅನುಭವಿಸುತ್ತಿರುವ ಅವಮಾನ, ಕಿರುಕುಳಗಳ ಕತೆ ಹೇಳಬಹುದು. ಪ್ರತಿಭೆ ಒಂದಿದ್ದರೆ ಸಾಲದು, ವೃತ್ತಿಯಲ್ಲಿ ಎದುರಾಗುವ ಅನ್ಯಾಯ, ಅವಮಾನ, ಪ್ರತಿಕೂಲಗಳನ್ನು ಎದುರಿಸಲೂ ಅವನು ರೆಡಿಯಾಗಬೇಕು. ಮತ್ತೆ ಮತ್ತೆ ನಾನು ಹೇಳುತ್ತೇನೆ ಪ್ರಜಾವಾಣಿಯಲ್ಲಿ ನಾನುprajavani ವಿವೇಕಾನಂದ ಅವರ ಬಗ್ಗೆ ಅಂಕಣ ಬರೆದೆ. ನಾನು ಸುಳ್ಳು ಬರೆದಿಲ್ಲ, ಅವರಿಗೆ ಅವಮಾನ ಮಾಡಿಲ್ಲ, ವಿವೇಕಾನಂದರು ಮಾಂಸ ತಿನ್ನುತಿದ್ದರು ಎನ್ನುವುದನ್ನು ನಾನು ಈಗಲೂ ಹೇಳುತ್ತೇನೆ, ಅದನ್ನು ವಿರೋಧಿಸುವವರು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಕರೆದರೆ ನಾನು ಸಿದ್ದ. ವಿವೇಕಾನಂದರು ಮಾಂಸಹಾರಿಗಳಲ್ಲ ಎಂದು ಅವರು ಸಾಬೀತು ಮಾಡಿದರೆ ನಾನು ಬರೆಯುವ ಹವ್ಯಾಸದಿಂದಲೇ ನಿವೃತ್ತಿ ಆಗುತ್ತೇನೆ. ಸತ್ಯವನ್ನೇ ಹೇಳಿದ್ದೇನೆ. ಆದರೆ ಅದರ ಬಗ್ಗೆ ಅಪಪ್ರಚಾರ ವ್ಯಾಪಕವಾಗಿ ನಡೆಯಿತು.ನಮ್ಮ ಪತ್ರಿಕೆಗೆ,ನನಗೆ ಬೆದರಿಕೆ ಎದುರಾಯಿತು. ನಾನು ಇದರ ಬಗ್ಗ ಉಲ್ಲೇಖ ಮಾಡಲು ಕಾರಣ ಇದೆ. ಅಂತಹದ್ದೊಂದು ಅಂಕಣ ಬರೆದು ನಾನು ಪಾರಾಗಲೂ ಕಾರಣ ಆಗ ನನ್ನ ಸಂಪಾದಕರಾಗಿದ್ದ ಕೆ.ಎನ್ ಶಾಂತಕುಮಾರ್. ಅವರು ನನ್ನ ಪರವಾಗಿ ಕಲ್ಲು ಬಂಡೆಯಂತೆ ನಿಂತಿದ್ದರು. ಆತ ತಪ್ಪು ಬರೆದಿಲ್ಲ, ಅದಕ್ಕಾಗಿ ಅವನಾಗಲಿ, ನಾನಾಗಲಿ ಕ್ಷಮೆ ಕೇಳೋದಿಲ್ಲ ಎಂದು ಅವರು ಗಟ್ಟಿಯಾಗಿ ನಿಂತುಬಿಟ್ಟರು.ಈ ರೀತಿಯ ಸಂಪಾದಕರಿದ್ದರೆ ಮಾತ್ರ ಸಾಮಾಜಿಕ ಕಳಕಳಿಯ ಪತ್ರಿಕೋದ್ಯಮ ನಡೆಸಿಕೊಂಡು ಹೋಗಲು ಸಾಧ್ಯ.

ಮಾಧ್ಯಮ ರಂಗದಲ್ಲಿರುವ ಪೂರ್ವಗ್ರಹಕ್ಕೆ ಇತ್ತೀಚಿನ ಇಬ್ಬರು ಸ್ವಾಮಿಗಳ ಉದಾಹರಣೆ ಸಾಕು. ರಾಘವೇಶ್ವರ ಸಾಮೀಜಿಯ ಪ್ರಕರಣವನ್ನು ಬಹಳಷ್ಟು ಮಂದಿ ನಿತ್ಯಾನಂದ ಸ್ವಾಮಿ ಪ್ರಕರಣಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನಿತ್ಯಾನಂದ ಸ್ವಾಮೀಜಿ ಒಬ್ಬ ಹಿಂದುಳಿದ ಜಾತಿಯವ, ರಾಘವೇಶ್ವರ ಸ್ವಾಮೀಜಿ ಬ್ರಾಹ್ಮಣ. ಈ ಹೋಲಿಕೆ ತಪ್ಪು ಅಂತ ನನಗೆ ಅನಿಸುವುದಿಲ್ಲ. ನಿತ್ಯಾನಂದ ಸ್ವಾಮಿಗೆ ಮಾಧ್ಯಮದಲ್ಲಿ ಸಿಕ್ಕ ಟ್ರೀಟ್ ಮೆಂಟ್ ರಾಘವೇಶ್ವರ ಸ್ವಾಮೀಜಿಗೆ ಸಿಗಲಿಲ್ಲ. ನನಗೆ ಒಬ್ಬ ಪತ್ರಕರ್ತ ಹೇಳುತ್ತಿದ್ದ ನಿತ್ಯಾನಂದನ ಆಶ್ರಮದ ಕಾಂಪೌಂಡ್ ಹೊರಗಡೆ ಕಾಂಡೂಮ್ ಗಳನ್ನು ಹಾಕಿ ಅವರೇ ಅದನ್ನು ಶೂಟ್ ಮಾಡಿ ನೋಡಿ ನಿತ್ಯಾನಂದಸ್ವಾಮೀಜಿ ಕಾಂಪೌಂಡ್ ಹೊರಗಡೆ ಕಾಂಡೊಂಮ್ ಸಿಕ್ಕಿದೆ ಅವರು ವ್ಯಭಿಚಾರಿ ಎಂದು ತೋರಿಸಿದ್ದರಂತೆ.
ನೀವು ಖೈರ್ಲಾಂಜಿ ಬಗ್ಗೆ ಕೇಳಿದ್ದೀರಿ. ದಲಿತರ ಇಡೀ ಕುಟುಂಬವನ್ನೆ ಹತ್ಯೆ ಮಾಡಲಾಯಿತು. ಮೊದಲು ಅಲ್ಲಿಯ ಎಲ್ಲಾ ಪತ್ರಿಕೆಗಳು ಇದೊಂದು ಅನೈತಿಕ ಸಂಬಂಧ ಎನ್ನುವ ರೀತಿ ವರದಿ ಮಾಡಿವೆ. ನಂತರ ಬೇರೆ ಕಡೆಗಳಿಂದ ಹೋದ ಪತ್ರಿಕಾ ವರದಿಗಾರರು, ಕೆಲವು ದಲಿತ್ ಆಕ್ಟಿವಿಟಿಸ್ ಗಳು, ಅದರಲ್ಲೂ ಇಂಗ್ಲೀಷ್ ಪತ್ರಿಕೆಗಳು ಗಮನ ಸೆಳೆದಾಗ ನಿಜಸಂಗತಿ ಬಯಲಿಗೆ ಬಂತು. ನೀವು ಕಂಬಾಲಪಲ್ಲಿ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ದಲಿತರ ಮೇಲೆ ನಡೆದ ಎಲ್ಲಾ ದೌರ್ಜನ್ಯಗಳನ್ನು ನೋಡಿ, ಕೋಮುಗಲಭೆಗಳನ್ನು ನೋಡಿ ನಮಗೆ ಮಾಧ್ಯಮಗಳಲ್ಲಿರುವ ಜಾತಿ ಪೂರ್ವಗ್ರಹ ಗೊತ್ತಾಗುತ್ತದೆ.

ನನಗೆ ವಿಶ್ವದ ಬಹುದೊಡ್ಡ ಬುದ್ದಿಜೀವಿ ನೋಮ್ ಚಾಮ್ ಸ್ಕಿ ಹೇಳಿರುವ ‘ಸಮ್ಮತಿಯ ಉತ್ಪಾದನೆ’ (Manufacturing conseChomskynt) ನೆನಪಾಗುತ್ತದೆ. ಅಂದರೆ ಅಭಿಪ್ರಾಯಗಳನ್ನು ಉತ್ಪಾದನೆ ಮಾಡೋದು. ಉದಾಹರಣೆಗೆ ದಲಿತರ ಮೇಲೆ ಮೇಲ್ಜಾತಿಯ ಜನ ಹಲ್ಲೆ ನಡೆಸಿದಾಗ ನೀವು ಅದನ್ನು ದಲಿತರ ಮೇಲಿನ ಹಲ್ಲೆ ಅಂತಲೂ ರಿಪೋರ್ಟ್ ಮಾಡಬಹುದು, ಇಲ್ಲವೆ ಎರಡು ಗುಂಪುಗಳ ನಡುವಿನ ಘರ್ಷಣೆ ಅಂತಲೂ ರಿಪೋರ್ಟ್ ಮಾಡಬಹುದು. ಆದರೆ ಬಹಳ ಸಾರಿ ವೈಯುಕ್ತಿಕ ಕಾರಣಕ್ಕಾಗಿ ಹಲ್ಲೆ ಯಾಗಿದೆ, ಅನೈತಿಕ ಸಂಬಂಧದ ಕಾರಣಕ್ಕಾಗಿ ಹೆಣ್ಣುಮಗಳನ್ನು ಸಾಯಿಸಿದ್ದಾರೆ ಎಂದೆಲ್ಲ ವರದಿಯಾಗುತ್ತದೆ. ರೈತರ ಪ್ರತಿಭಟನೆ, ಸತ್ಯಾಗ್ರಹಗಳನ್ನು ದೊಂಬಿ ಎಂದು ಬರೆಯುವುದೂ ಉಂಟು.

 

ಕೋಮುಗಲಭೆಗಳ ವರದಿಗಳಲ್ಲಿಯೂ ಇಂತಹ ಲೋಪಗಳನ್ನು ಕಾಣಬಹುದು. ಕೋಮುಗಲಭೆಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರನ್ನು ವಿಲನ್ ಗಳನ್ನಾಗಿ ಮಾಡಲಾಗುತ್ತದೆ. ಮುಸ್ಲಿಮರು ಪ್ರಚೋದಿಸಿದರು, ಅದಕ್ಕಾಗಿ ಹಿಂದೂಗಳು ಸೇಡು ತೀರಿಸಿಕೊಂಡರು ಎನ್ನುವ ವರದಿಗಳು ಸಾಮಾನ್ಯ. ದೆಹಲಿಯ ಪಕ್ಕದಲ್ಲಿಯೇ ಇರುವ ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ವ್ಯಕ್ತಿಯ ಮನೆಯಲ್ಲಿ ಭೀಫ್ ಇದೆ ಎಂಬ ಕಾರಣಕ್ಕಾಗಿ ಬೆಂಕಿ ಹಚ್ಚಿ ಕೊಂದುಬಿಟ್ಟರು. ಅಲ್ಲಿ ಬೀಫ್ ಇರಲಿಲ್ಲ ಎಂದು ತನಿಖೆ ಹೇಳುತ್ತಿದೆ. ಅರ್ನಾಬ್ ಗೋಸ್ವಾಮಿ ಇದರ ಬಗ್ಗೆ ಎಷ್ಟು ಷೋ ಮಾಡಿದರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಕಂಬಳಿ ತಗೋಂಡ್ರು, ಚಾಪೆ ತಗೋಂಡ್ರು ಅಂತ 1 ಗಂಟೆ ಬೇಕಾದರೆ ಅವರು ಚರ್ಚೆ ಮಾಡ್ತಾರೆ. ಇಂತಹ ಉದಾಹರಣೆಗಳನ್ನು ಬಹಳಷ್ಟು ಕೊಡುತ್ತಾ ಹೋಗಬಹುದು. ಆದರೆ ಇದಕ್ಕೆ ಪರಿಹಾರವೇನು? ಸುಲಭದ ಪರಿಹಾರ ನೀವೆಲ್ಲರೂ ಲಿಫ್ಟ್ ಗಾಗಿ ಕಾಯದೆ ಮೆಟ್ಟಿಲು ಹತ್ತಿಕೊಂಡು ಹೋಗಲಿಕ್ಕೆ ರೆಡಿಯಾಗಬೇಕು.
ನನ್ನ ತಾಯಿ ಅನಕ್ಷರಸ್ಥೆ, ನನ್ನ ತಂದೆ ಬ್ಯಾಂಕ್ ಜವಾನರಾಗಿದ್ದರು. ಬಿ.ಕಾಂ ಓದಿದ್ದೇ ನಾನು ಬ್ಯಾಂಕ್ ಗೆ ಸೇರಲಿಕ್ಕೆ. ಆದರೆ ಬ್ಯಾಂಕ್ ಸೇರಬೇಕೆಂದು ಅನಿಸಲಿಲ್ಲ. ಪತ್ರಿಕೋದ್ಯಮದ ಹಾದಿ ಸುಗಮವಾಗಿ ಇರಲಿಲ್ಲ. ಮುಂಗಾರು ಪತ್ರಿಕೆ ಯಲ್ಲಿ ತಿಂಗಳ ಸಂಬಳವನ್ನು ನಾಲ್ಕು ಕಂತುಗಳಲ್ಲಿ ತೆಗೆದುಕೊಂಡು, ಆರೋಗ್ಯ ಕೆಡಿಸಿಕೊಂಡು ಬಹಳ ಕಷ್ಟ ಪಟ್ಟು ಇಲ್ಲಿಯ ವರೆಗೆ ಬಂದಿದ್ದೇನೆ. ನನಗೆ ಈ ವೃತ್ತಿಯಲ್ಲಿ ಮುಂದುವರೆಯಬೇಕು ಎಂಬ ಛಲ ಇದ್ದ ಕಾರಣಕ್ಕೆ ಇದು ಸಾಧ್ಯವಾಗಿದೆ. ಪತ್ರಕರ್ತರು ಟ್ರಾನ್ಸ್ ಫರ್ ಎಂದರೆ ಕಂಗಾಲಾಗಿ ಬಿಡುತ್ತಾರೆ. ಎಲ್ಲರಿಗೂ ಬೆಂಗಳೂರು ಬೇಕು, ಜಿಲ್ಲೆಗಳಲ್ಲಿ ಕೆಲಸ ಮಾಡುವುದು ಬೇಡ. ಬೆಂಗಳೂರಿನಲ್ಲಿದ್ದ ನನ್ನನ್ನು ಟ್ರಾನ್ಸ್ ಫರ್ ಮಾಡುತ್ತೇನೆ ಎಂದು ಹೇಳಿದಾಗ ‘ಎಲ್ಲಾದ್ರೂ ಮಾಡಿ, ಮರುಭೂಮಿಗಾದ್ರೂ ಮಾಡಿ ಹೋಗ್ತೀನಿ’ ಎಂದು ಹೇಳಿದ್ದೆ. ಮರುಭೂಮಿಯಲ್ಲಿ ಒಳ್ಳೆಯ ವರದಿಗಳನ್ನು ಮಾಡಲು ಅವಕಾಶಗಳಿರುತ್ತವೆ. ಇದರಿಂದಾಗಿಯೇ ನನಗೆ ದೆಹಲಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಮಾನಸಿಕವಾಗಿ ಇಂತಹದ್ದೊಂದು ಸಿದ್ಧತೆ ಮಾಡಿಕೊಳ್ಳದಿದ್ದರೆ, ಅಧ್ಯಯನ ಮಾಡದಿದ್ದರೆ, ಸಮಾಜವನ್ನು ಎದುರಿಸುವುದನ್ನು ಕಲಿಯದಿದ್ದರೆ ಪತ್ರಕರ್ತರಾಗಲು ಕಷ್ಟವಾಗಬಹುದು. ನಿಮ್ಮಲ್ಲಿ ಮಹತ್ವಾಕಾಂಕ್ಷೆ ಇರಬೇಕು, ಜತೆಗೆ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನವನ್ನೂ ಮಾಡಬೇಕು.

ಈ ನಿಟ್ಟಿನಲ್ಲಿ ಸರ್ಕಾರಮತ್ತುವೃತ್ತಿಸಂಬಂಧಿಸಂಸ್ಥೆಗಳುಕೂಡಾ ಒಂದಿಷ್ಟು ಕೆಲಸ ಮಾಡಬೇಕಾಗುತ್ತದೆ. ನಾನು ಒಂದು ಉದಾಹರಣೆ ಕೊ746px-ChicagoDefender.svgಟ್ಟು ಮಾತು ಮುಗಿಸುತ್ತೇನೆ. 1978 ರಲ್ಲಿ ಅಮೆರಿಕನ್ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ (ASNE) ಅಲ್ಲಿನ ಮಾಧ್ಯಮಗಳಲ್ಲಿ ಕಪ್ಪು ಜನಾಂಗದವರ ಪ್ರಾತಿನಿಧ್ಯ ಎಷ್ಟಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿತ್ತು. ಅಲ್ಲಿನ ಜನಸಂಖ್ಯೆಯಲ್ಲಿ ಕರಿಯರು ಶೇ.36 ರಷ್ಟಿದ್ದಾರೆ. ಆದರೆ ಮಾಧ್ಯಮದಲ್ಲಿ ಅವರು ಪ್ರಾತಿನಿಧ್ಯ ಕೇವಲ ಶೇ 4 ರಷ್ಟು ಮಾತ್ರ ಎಂದು ಸಮೀಕ್ಷೆಯಿಂದ ತಿಳಿದುಬಂದಿತ್ತು. 2000 ನೇ ವರ್ಷದಲ್ಲಿ ಅಮೆರಿಕದ ಮಾಧ್ಯಮ ಕ್ಷೇತ್ರದಲ್ಲಿ ಕರಿಯರ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಇರುವಂತೆ ಮಾಡಬೇಕೆಂದು ASNE ನಿರ್ಧಾರಕ್ಕೆ ಬರುತ್ತದೆ. ಅಲ್ಲಿರುವ ಒಂದು ಸಾವಿರಕ್ಕೂ ಹೆಚ್ಚಿನ ಸರ್ಕ್ಯೂಲೇಶನ್ ಇರುವ 1446 ಪತ್ರಿಕೆಗಳಲ್ಲಿ 950 ಪತ್ರಿಕೆಗಳು ಅಸೋಸಿಯೇಷನ್ನಿನ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸುತ್ತವೆ. ಅವರೇನೂ ಮೀಸಲಾತಿ ಕೊಡುವುದಿಲ್ಲ. ಅವರಿಗಾಗಿ ಉದ್ಯೋಗ ಮೇಳ ನಡೆಸುತ್ತಾರೆ, ತರಬೇತಿಕೊಡುತ್ತಾರೆ, ವಿದ್ಯಾರ್ಥಿ ವೇತನಗಳನ್ನು ಸ್ಥಾಪಿಸುತ್ತಾರೆ.ಇದನ್ನು ಮಾಡ್ತಾ, ಮಾಡ್ತಾ 2000 ಇಸವಿಗೆ ಅಲ್ಲಿಯ ಕರಿಯರ ಪ್ರಾತಿನಿಧ್ಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚದೆ ಇದ್ದರೂ ಅದು ಶೇ.13ಕ್ಕೆ ತಲುಪಿತ್ತು. ಇವತ್ತು ಅಮೇರಿಕಾದಲ್ಲಿ ದಲಿತರದ್ದೇ ಆದ ‘ಎಬೋನಿ’ ‘ಚಿಕಾಗೋ ಡಿಫೆಂಡರ್’ ಮೊದಲಾದ ಪತ್ರಿಕೆಗಳಿವೆ.

ಚೆನ್ನೈ ನಲ್ಲಿರುವ ‘ಏಷ್ಯನ್ಸ್ಕೂಲ್ಆಫ್ಜರ್ನಲಿಸಂ’ ದಲಿತರಿಗೆ ಸ್ಕಾಲರ್ಶಿಪ್ ಕೊಡ್ತಾರೆ. ಅದಕ್ಕೆ ಬೇಕಾದ ಅಭ್ಯರ್ಥಿಗಳೇ ಸಿಕ್ತಾ ಇಲ್ಲವಂತೆ. ನಮ್ಮಲ್ಲೂ ಕೂಡ ಕೊರತೆಗಳಿವೆ. ಆ ಮಟ್ಟದ ಎಂಟ್ರೆನ್ಸ್ ಪರೀಕ್ಷೆ ಎದುರಿಸಲು ಒಂದಿಷ್ಟು ತಯಾರಿಗಳು ಬೇಕಾಗುತ್ತವೆ. ದಲಿತ ಅಭ್ಯರ್ಥಿಗಳು ಸಿಗದೆ ಇದ್ದಾಗ ಆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿತ್ತು. ಇತ್ತೀಚೆಗೆ ಆ ಸಂಸ್ಥೆಯ ಸ್ಕಾಲರ್ ಶಿಫ್ ಪಡೆದು ಹಲವಾರು ದಲಿತರು ಜರ್ನಲಿಸ್ಟ್ ಗಳಾಗಿದ್ದಾರೆ. ಇಂತಹ ಪ್ರಯತ್ನ ಎಲ್ಲಾ ಕಡೆಗಳಿಂದಲೂ ನಡೆಯಬೇಕು. ಇದಕ್ಕೆ ಅಮೇರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಮಾಡಿದ ಕೆಲಸವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಡಬೇಕು, ಪತ್ರಕರ್ತರ ಸಂಘಗಳು ಮಾಡ ಬೇಕು, ಪತ್ರಿಕೆಗಳೂ ಮಾಡಬೇಕು.

ನಮ್ಮ ಪತ್ರಕರ್ತರ ಸಂಘಟನೆಗಳುಲಕ್ಷಾಂತರ ರೂಪಾಯಿಕಲೆಕ್ಟ್ಮಾಡಿ, ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಒಳ್ಳೆಯ ಊಟ ಹಾಕುವುದರಿಂದ ಒಳ್ಳೆಯ ಪತ್ರಕರ್ತರನ್ನು ರೂಪಿಸಲು ಸಾಧ್ಯವಿಲ್ಲ. ನೀವು ಬಸ್ ಪಾಸ್ ತೆಗೊಳ್ಳಿ, ಸೈಟ್ ತಗೊಳ್ಳಿ, ಪರವಾಗಿಲ್ಲ, ಒಬ್ಬರಿಗೆ ಒಂದು ಸೈಟ್ ಇರಬೇಕು. ನಾನು ಅದರ ಪರವಾಗಿ ಇದೀನಿ, ಆದರೆ ಕಸುಬುಗಾರಿಕೆಯನ್ನು ಪ್ರೋಫೆಷನಲಿಸಂ ಬೆಳೆಸಲು ಏನು ಮಾಡಿದಿರಿ ಎಂಬುದನ್ನು ಸರ್ಕಾರದ ನೆರವಿನಿಂದಲೇ ನಡೆ07-asiancollegeofjournalismಯುತ್ತಿರುವ ಮಾಧ್ಯಮ ಅಕಾಡೆಮಿ ಸೇರಿದಂತೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಅಮೇರಿಕಾದ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ಡಿ ಮಾಡಿದ ಸಮೀಕ್ಷೆಯನ್ನು ನಾವೇಕೆ ಮಾಡಲಾಗುತ್ತಿಲ್ಲ. ಕನ್ನಡದ ಮಾಧ್ಯಮಗಳಲ್ಲಿ ಅಹಿಂದ ವರ್ಗಕ್ಕೆ ಸೇರಿದವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ಸರ್ವೇ ಮಾಡಬಹುದು. ವಿರೋಧ ಎದುರಾಗಬಹುದು. ಇದೊಂದು ಅಹಿಂದ ಸರಕಾರ ಅದಕ್ಕೆ ಈ ಸರ್ವೆ ಎಂಬ ಟೀಕೆಗಳು ಬರಬಹುದು. ನಾನು ನನ್ನ ಬ್ರೀಫ್ ಮೀರಿ ಮಾತನಾಡುತ್ತಿದ್ದೇನೆ.. ಎಂದು ನನಗೂ ಅನ್ನಿಸುತ್ತಿದೆ…ನಿಮಗೂ ಅನ್ನಿಸಬಹುದು. ಆದರೆ ನಾನು ಹೃದಯದಿಂದ ಮಾತನಾಡುತ್ತಿದ್ದೇನೆ. ನನ್ನ ಹೃದಯದ ಭಾರ ಇಳಿಸಲಿಕ್ಕೆ ಮಾತನಾಡುತ್ತಿದ್ದೇನೆ.

 

ಕೇವಲ ರಾಜಕೀಯದಲ್ಲಿ ಅಹಿಂದ ಬಂದರೆ ಅದು ಯಶಸ್ವಿಯಾಗುವುದಿಲ್ಲ. ಅದು ಮಾಧ್ಯಮ, ಉದ್ಯಮ,ಶಿಕ್ಷಣ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಬರಬೇಕು. ಸಾಮಾಜಿಕ ನ್ಯಾಯ ಎಂದರೆ ಒಬ್ಬರಿಂದ ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದಲ್ಲ. ಎಲ್ಲರಿಗೂ ನ್ಯಾಯವನ್ನು ಕೊಡುವಂತಹುದು. ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ ಎಲ್ಲರಿಗೂ ಸಿಗಬೇಕು. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಬಹಳ ಧೀರ್ಘವಾದ ಪರಂಪರೆ ಇದೆ. ಸಾಮಾಜಿಕ ನ್ಯಾಯದ ಮೊದಲ ಚಳುವಳಿಕಾರ ಬಸವಣ್ಣ. ಬಸವಣ್ಣನಿಂದ ಪ್ರಾರಂಭವಾದರೂ ಅದರ ನಂತರ ದೇವರಾಜ ಅರಸು, ನಾಲ್ವಡಿ ಕೃಷ್ಣರಾಜ ಒಡೆಯರ್, ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಆದರೆ ಕೇವಲ ರಾಜಕೀಯದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಅಂತ ನೀವು ತೀರ್ಮಾನಿಸಿಬಿಟ್ಟರೆ, ಸಾಮಾಜಿಕ ನ್ಯಾಯವನ್ನು ಅಲ್ಲಿಯೂ ಅನುಷ್ಠಾನಕ್ಕೆ ಬರಲಿಕ್ಕೆ ಈ ವ್ಯವಸ್ಥೆ ಬಿಡುವುದಿಲ್ಲ. ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಬೂಸಾ ಅಂತ ಹೇಳದೆ ಇದ್ದಿದ್ದರೆ ಇವತ್ತು ಕನ್ನಡ ಸಾಹಿತ್ಯ ಈ ಪ್ರಮಾಣದಲ್ಲಿ, ಆಳ-ಅಗಲಕ್ಕೆ ಬೇರು-ಬಿಳಲು ಬಿಟ್ಟು ಬೆಳೆಯುತ್ತಿರಲಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಅವರು ಆ ರೀತಿ ಹೇಳಿದಾಗ ಇಡೀ ಕನ್ನಡ ಸಾಹಿತ್ಯಲೋಕದ ಬರಹಗಾರರು ಮತ್ತು ಓದುಗರು ಬೆಚ್ಚಿಬಿದ್ದಿದ್ದರು. ಅಂತಹದ್ದೊಂದು ಶಾಕ್ ‍ಟ್ರೀಟ್ ಮೆಂಟ್ ಮಾಧ್ಯಮ ಕ್ಷೇತ್ರಕ್ಕೂ ಅಗತ್ಯ ಇದೆ. ಮಾಧ್ಯಮದಲ್ಲಿ ಸಮಾಜದ ಪ್ರತಿಬಿಂಬ ಕಾಣಬೇಕು. ಅದರಲ್ಲಿ ಒಡಕಲು ಬಿಂಬ ಕಾಣಬಾರದು. ಪರಿಪೂರ್ಣ ಚಿತ್ರ ಕಾಣಬೇಕು. ಅದು ನಮಗೆ ಕಾಣ್ತಾ ಇದೆಯಾ? ಎಂಬುದು ಇವತ್ತಿನ ಪ್ರಶ್ನೆ. ಏಕೆಂದರೆ ಮಾಧ್ಯಮವಾಗಲಿ, ಸಾಹಿತ್ಯವಾಗಲಿ, ರಾಜಕೀಯವಾಗಲಿ ಅಲ್ಲಿ ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರು ಭಾಗವಹಿಸದೇ ಇದ್ದರೆ, ಅದರಲ್ಲಿ ಎಲ್ಲಾ ಲೋಕದ ಅನುಭವಗಳು ಅಭಿವ್ಯಕ್ತಿಗೊಳ್ಳದೆ ಇದ್ದರೆ, ಅದು ಅಪೂರ್ಣವಾಗುತ್ತದೆ. ಅದು ಪಾರ್ಶಿಯಲ್ ಆಗಿರುತ್ತದೆ. ಬಯಾಸ್ಡ್ ಅಗಿರುತ್ತದೆ.

 

ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಜಾತಿಗಳ, ವರ್ಗಗಳ ಪ್ರಾತಿನಿಧ್ಯವಿರಬೇಕು. ಅವರವರ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯವಿರಬೇಕು. ಅದು ಅಸ್ತವ್ಯಸ್ತವಾದರೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ, ಮಾಧ್ಯಮ ಕೂಡಾ . ನಮ್ಮ ರಾಜಕೀಯ ಧುರೀಣರು ಪ್ರಜ್ಞಾವಂತರಿದ್ದಾರೆ ಅವರು ಸಾಮಾಜಿಕ ನ್ಯಾಯವನ್ನು ವಿರೋಧಿಸಲಾರರು. ಏಕೆಂದರೆ ಸಾಮಾಜಿಕ ನ್ಯಾಯ ಎಂಬುದು ಸಂವಿಧಾನದ ಆಶಯ. ನೀವು ಆ ನ್ಯಾಯವನ್ನು ಕೊಡದೆ ಇದ್ದರೆ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದ್ದೀರಿ ಎಂದೇ ಅರ್ಥ. ಬಹಳ ಕಷ್ಟ ಇದೆ. ನನ್ನ ಕಿರಿಯ ದಲಿತ ಸ್ನೇಹಿತ ಲಿಂಗರಾಜ್ ಅಂತ ಇಲ್ಲಿದ್ದಾರೆ. ಈತ ಹಟ್ಟಿ ಗೋಲ್ಡ್ ಮೈನ್ ನ ಕಾರ್ಮಿಕರ ಮಗ. ನಾಲ್ಕು ವರ್ಷದ ಹಿಂದೆ ನನ್ನ ಆಫೀಸ್ ಗೆ ಬಂದಿದ್ದ. ಅವನು ಡಿಗ್ರಿ ಮಾಡಿದ್ದ, ಪೋಸ್ಟ್ ಗ್ರಾಜುಯೇಶನ್ ಮುಗಿಸಿದ್ದ. ಅವನು ಪಿ.ಹೆಚ್.ಡಿ ಮಾಡಲಿಕ್ಕೆ ರಿಜಿಸ್ಟರ್ ಮಾಡಿದ್ರೆ ಅವನಿಗೆ ಗೈಡ್ ಮಾಡಲಿಕ್ಕೆ ಯಾರೂ ಒಪ್ತಾ ಇಲ್ಲ. ಇದು ಅವನೊಬ್ಬನ ಕಥೆಯಲ್ಲ. ಈ ಸಮುದಾಯದ ಅನೇಕ ವಿದ್ಯಾರ್ಥಿಗಳು, ಹುಡುಗರು ನನ್ನ ಸಂಪರ್ಕದಲ್ಲಿದ್ದಾರೆ. ಇಂತಹ ಸಂಘಟನೆಗಳ ಬೆಂಬಲ ಅವರಿಗೆ ಬೇಕಾಗಿದೆ.

 

ಸರ್ಕಾರವೇ ಮುಂದೆ ನಿಂತು ಎಲ್ಲವನ್ನೂ ಮಾಡಲಾಗುವುದಿಲ್ಲ. ಇಲ್ಲಿರುವ ಹಿರಿಯರು, ಸಮುದಾಯದಲ್ಲಿರುವ ಪ್ರಜ್ಞಾವಂತರು ಎಲ್ಲಾ ಜಾತಿ, ವರ್ಗದ ಜನ ಇಂತಹವರ ಬೆಂಬಲಕ್ಕೆ ನಿಂತು ಬೆಳೆಸಬೇಕಾಗಿದೆ. ಆ ಕೆಲಸವನ್ನು ಮಾಧ್ಯಮ ಅಕಾಡೆಮಿ ಮತ್ತು ಪತ್ರಕರ್ತರ ಸಂಘಟನೆಗಳು ಮಾಡುತ್ತದೆ. ರಾಜಕೀಯ ಧುರೀಣರು ಇದಕ್ಕೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂಬ ಆಶಯದೊಂದಿಗೆ ಮಾತುಗಳನ್ನು ಮುಗಿಸುತ್ತೇನೆ.

13 thoughts on “ಮಾಧ್ಯಮದಲ್ಲೂ ‘ಅಹಿಂದ’ ಇರಬೇಕು – ದಿನೇಶ್ ಅಮೀನ್ ಮಟ್ಟು

  1. Sumanasa

    “ಎಲ್ಲಾ ಜಾತಿಗಳ, ವರ್ಗಗಳ ಪ್ರಾತಿನಿಧ್ಯವಿರಬೇಕು. ಅವರವರ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯವಿರಬೇಕು.”

    ನಮ್ಮ ರಾಜ್ಯಕ್ಕೆ ಒಬ್ಬನೇ ಮುಖ್ಯಮಂತ್ರಿ ಇದ್ದರೆ ಒಂದೇ ಜಾತಿಗೆ ಪ್ರಾತಿನಿಧ್ಯ ಸಿಗುತ್ತದೆ. ಇದು ದಿನೇಶ್ ಅಮೀನ ಮಟ್ಟು ಅವರ ಆಶಯಕ್ಕೆ ವಿರುದ್ಧವಾದುದರಿಂದ ನಾಡಿನ ಎಲ್ಲಾ ಜಾತಿಗೊಬ್ಬ ಮುಖ್ಯಮಂತ್ರಿ ಇರತಕ್ಕದ್ದು. ಮಾನ್ಯ ಸಿದ್ದರಾಮಯ್ಯನವರು ಕುರುಬ ಜಾತಿಯ ಪ್ರತಿನಿಧಿಯಾಗಿರುವುದರಿಂದ ಅವರು ಕುರುಬರಿಗೆ ಮಾತ್ರ ಮುಖ್ಯಮಂತ್ರಿ ಆಗತಕ್ಕದ್ದು. ಕುರುಬರಷ್ಟೇ ಅಲ್ಲ ರಾಜ್ಯದಲ್ಲಿ ಇರುವ ಸಹಸ್ರಾರು ಜಾತಿಯವರು ಅವರ ಜಾತಿಗೆ ಸೇರಿದ ಒಬ್ಬರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡತಕ್ಕದ್ದು. ಹಾಗೆ ಪ್ರತಿ ಜಾತಿಗೂ ಅದರ ಜನಸಂಖ್ಯೆಗನುಗುಣವಾಗಿ ಒಂದು ಮಂತ್ರಿ ಮಂಡಲ ಇರತಕದ್ದು. ನಾಡಿನ ಸಹಸ್ರಾರು ಮುಖ್ಯಮಂತ್ರಿಗಳೂ ಸಹಸ್ರಾರು ಮಂತ್ರಿಮಂಡಲಗಳೂ ಹಗಲೂ ರಾತ್ರಿ ತಮ್ಮ ಜಾತಿಯ ಅಭ್ಯುದಯಕ್ಕೆ ದುಡಿಯತಕ್ಕದ್ದು. ಆಗ ಅಮೀನ ಮಟ್ಟು ಅವರು ಕಂಡ ಸಾಮಾಜಿಕ ನ್ಯಾಯದ ಕನಸು ನನಸಾಗುತ್ತದೆ.

    Reply
  2. Sumanasa

    ನನ್ನ ನೆಚ್ಚಿನ ಪತ್ರಕರ್ತರಾದ ದಿನೇಶ್ ಅಮೀನ ಮಟ್ಟು ಅವರ ಮಾಧ್ಯಮದಲ್ಲೂ ಅಹಿಂದ ಇರಬೇಕು ಎಂಬ ಅಭಿಪ್ರಾಯವು ನಿಜಕ್ಕೂ ಚಿಂತನಯೋಗ್ಯವಾಗಿದೆ. ನಮ್ಮ ರಾಜ್ಯದಲ್ಲಿ ಅಹಿಂದ ವರ್ಗದಲ್ಲಿ ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಈ ಎಲ್ಲಾ ಜಾತಿಗಳಿಗೂ ಸಾಮಾಜಿಕ ನ್ಯಾಯದ ಲಾಭ ಸಿಗಬೇಕಾದರೆ ಖಂಡಿತ ಮಾಧ್ಯಮದಲ್ಲೂ ಅಹಿಂದ ವರ್ಗದ ಜಾತಿಗಳಿಗೆ ಪ್ರಾತಿನಿಧ್ಯ ಇರತಕ್ಕದ್ದು. ಅಮೀನ ಮಟ್ಟು ಅವರೇನೋ ಅಹಿಂದ ಹರಿಕಾರ ಸಿದ್ದರಾಮಯ್ಯನವರ ಕಣ್ಣಿಗೆ ಬಿದ್ದು ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ ಪಟ್ಟಕ್ಕೆ ಏರಿದರು, ಅವರಂತೆ ಅಹಿಂದ ವರ್ಗದ ಸಾವಿರಾರು ಜಾತಿಗಳ ಪ್ರತಿನಿಧಿಗಳೂ ಮುಂದೆ ಬರತಕ್ಕದ್ದು. ಆದರೆ ಸಿದ್ದರಾಮಯ್ಯನವರ ನಂತರ ಏನಾಗುತ್ತದೋ ಗೊತ್ತಿಲ್ಲ. ಹಾಲಿ ಮುಖ್ಯಮಂತ್ರಿಗಳಿಗೆ ಅಹಿಂದ ವರ್ಗದ ಬಗ್ಗೆ ಇರುವ ಪ್ರೀತಿ ಹಾಗೂ ಕಾಳಜಿಯ ಲಾಭವನ್ನು ಅಮೀನ ಮಟ್ಟು ಅವರಷ್ಟೇ ಅಲ್ಲ ಪೊನ್ನಪ್ಪ, ಬಿ.ಕೆ ರವಿ ಮೊದಲಾದ ಅಹಿಂದ ಪತ್ರಕರ್ತರೂ ಪಡೆದರೆ ಚೆನ್ನಾಗಿರುತ್ತದೆಯಲ್ಲವೇ? ಸಿದ್ದರಾಮಯ್ಯನವರು ಇನ್ನು ಎರಡು ವರ್ಷಗಳಾದರೂ ಅಧಿಕಾರದಲ್ಲಿರುತ್ತಾರೆ ಎಂದು ಆಶಿಸಬಹುದು. ಎರಡು ವರ್ಷ ಅಂದರೆ ೧೦೪ ವಾರಗಳು. ಈ ೧೦೪ ವಾರಗಳಲ್ಲಿ ಪ್ರತಿ ವಾರಕ್ಕೊಬ್ಬ ಅಹಿಂದ ವರ್ಗದ ಪತ್ರಕರ್ತನೊಬ್ಬನನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರನಾಗಿ ನಿಯಮಿಸಿದರೆ ಕನಿಷ್ಠ ೧೦೦ ಜಾತಿಗಳಿಗೆ ಪ್ರಾತಿನಿಧ್ಯ ಒದಗಿಸುವ ಸುವರ್ಣ ಅವಕಾಶ ಸಿಗುತ್ತದೆ. ಈ ಎಲ್ಲಾ ಅಹಿಂದ ಜಾತಿಗಳ ಪ್ರತಿನಿಧಿಗಳಿಗೆ ಒಂದು ವಾರದ ಮಟ್ಟಿಗಾದರೂ ನಾಡಿನ ಮುಖ್ಯಮಂತ್ರಿಗಳಿಗೆ ಮಾಧ್ಯಮ ಬಗ್ಗೆ ಸಲಹೆ ನೀಡುವ ಅವಕಾಶದ ಜೊತೆಗೆ ತಮ್ಮ ಜಾತಿಯ ಶೋಷಿತರ ಬಡವರ ಅಹವಾಲುಗಳನ್ನು ಮುಖ್ಯಮಂತ್ರಿಗಳ ಕಿವಿ ಮುಟ್ಟಿಸಲು ಸಾಧ್ಯವಾಗುತ್ತದೆ. ಆದುದರಿಂದ ಅಮೀನ ಮಟ್ಟು ಅವರಲ್ಲಿ ಸವಿನಯ ಪ್ರಾರ್ಥನೆ. ದಯವಿಟ್ಟು ನಿಮ್ಮ ಸ್ಥಾನಕ್ಕೆ ಇಂದೇ ಈಗಲೇ ರಾಜಿನಾಮೆ ಕೊಟ್ಟು ಆ ಸ್ಥಾನವನ್ನು ಮತ್ತೊಂದು ಅಹಿಂದ ಜಾತಿಯ ಪತ್ರಕರ್ತರು ತುಂಬಲು ಅವಕಾಶ ಮಾಡಿಕೊಡಿ.

    Reply
    1. ಸೀತಾ

      ಹೌದು, ಮಾಧ್ಯಮ ಸಲಹಾಗಾರ ಹುದ್ದೆಗೂ ಅಹಿಂದದಲ್ಲೇ ಒಳಮೀಸಲಾತಿ ಇರತಕ್ಕದ್ದು ಎಂಬ ನಿಮ್ಮ ಮಾತು ತಕ್ಕುದಾದುದು. ಅಮೀನ ಮಟ್ಟು ಅವರೊಬ್ಬರೇ ಏಕೆ ಐದು ವರ್ಷಗಳ ಕಾಲ ಆ ಹುದ್ದೆಯ ಸುಖವನ್ನು ಅನುಭವಿಸಬೇಕು? ಅಹಿಂದ ವರ್ಗದ ಇತರ ಪ್ರತಿಭಾಶಾಲಿ ಪತ್ರಕರ್ತರಿಗೂ ಸಿದ್ದರಾಮಯ್ಯನವರ ಕಾಲದಲ್ಲೇ ಮಾಧ್ಯಮ ಸಲಹಾಗಾರನಾಗುವ ಅವಕಾಶವನ್ನು ಕಲ್ಪಿಸಿಕೊಡುವುದರಲ್ಲೇ ಸಾಮಾಜಿಕ ನ್ಯಾಯವಿದೆ. ಅಷ್ಟೇ ಅಲ್ಲ ಅಮೀನ ಮಟ್ಟು ಅವರು ತಾವಾಗಿಯೇ ಸ್ಥಾನ ತೆರವು ಮಾಡದಿದ್ದಲ್ಲಿ ಅಹಿಂದ ವರ್ಗದವರೇ ಸಾಮಾಜಿಕ ನ್ಯಾಯಕ್ಕಾಗಿ ಅವರ ರಾಜಿನಾಮೆ ಕೇಳುವ ಸಾಧ್ಯತೆಗಳಿವೆ.

      Reply
  3. BNS

    ಭಾರತದಲ್ಲಿ ವಿಚಾರವಂತರೆನಿಸಿಕೊಂಡವರ ಚಿಂತನೆ ವಿತಂಡವಾದಕ್ಕೆ ಜಾಗಮಾಡಿಕೊಡುತ್ತಿರುವುದರ ದ್ಯೋತಕ ಶ್ರೀ ದಿನೇಶ್ ಅಮೀನಮಟ್ಟು ಅವರ ಈ ಲೇಖನ ಎಂದರೆ ಅಡ್ಡಿಯಿಲ್ಲ. ಪತ್ರಕರ್ತರಾಗಲು ಬೇಕಿರುವ ಅರ್ಹತೆ ಪತ್ರಿಕೋದ್ಯಮದ ಪದವಿ ಅಲ್ಲ ಎನ್ನುವುದನ್ನು ಹಲವು ಪ್ರತಿಭಾವಂತರು ನಿರೂಪಿಸಿದ್ದಾರೆ. ಪತ್ರಿಕೋದ್ಯಮ ಡಿಪ್ಲೊಮಾ/ ಸ್ನಾತಕ ಪದವಿಗಳ ಒಂದು, ಎರಡು ಅಥವಾ ಮೂರುವರ್ಷದ ಅವಧಿಯಲ್ಲಿ ಇಡೀ ವೃತ್ತಿಜೀವನಕ್ಕೆ ಬೇಕಾದ ಎಲ್ಲ ವ್ಯಾಸಂಗವನ್ನು ಮಾಡಿ ಮುಗಿಸುವುದು ಅಸಾಧ್ಯ. ಇಂಥ ಪದವಿಯನ್ನು ಗಳಿಸಿದರೂ, ಆ ವೃತ್ತಿಗೆ ಬೇಕಾದ ಮನೋಭೂಮಿಕೆ ಇಲ್ಲದಿದ್ದರೆ ಪತ್ರಕರ್ತರಾಗುವುದು ಹೇಗೆ ಸಾಧ್ಯ?

    ಎಲ್ಲ ವೃತ್ತಿಗಳಲ್ಲಿ ‘ಮೀಸಲಾತಿ’ ಬೇಕು ಎಂದು ಹುಯಿಲೆಬ್ಬಿಸುವ ಜನರು ಈ ಸೂಕ್ಷವನ್ನೇಕೆ ಗಮನಿಸಲಾರರು? ವೃತ್ತಿ ಶಿಕ್ಷಣ, ತನ್ಮೂಲಕ ಖಚಿತ ಉದ್ಯೋಗದ ಭರವಸೆ ಮರೀಚಿಕೆಯಾದಾಗ ವೃತ್ತಿ ಶಿಕ್ಷಣ ಪಡೆಯಲು ಕೆಲವೇ ಅಂಕಗಳಿಂದ ವಂಚಿತರಾದ ಪ್ರತಿಭಾವಂತ ವಿದ್ಯಾರ್ಥಿಗಳು ಇತರ ವೃತ್ತಿಗಳ ಕಡೆಗೆ ಗಮನಹರಿಸಿದ್ದರಿಂದ ಈ ಸಹಸ್ರಮಾನ (millennium) ದ ಮೊದಲ ದಶಕದ ತನಕ ಓದಿ, ಪರಿಶ್ರಮ ಹಾಕಿದಂತಹ ವಿದ್ಯಾರ್ಥಿಗಳು ಅನಾಕರ್ಷಕ ವೃತ್ತಿಗಳನ್ನೂ ತಮ್ಮದಾಗಿಸಿಕೊಂಡರು. ಕೆಲವು ಕ್ಷಣಗಳ ಪ್ರಖ್ಯಾತಿಯನ್ನು ಹೊರತು ಪಡಿಸಿ ಮಿಕ್ಕಂತೆ ಅನಿಶ್ಚಿತತೆಯೇ ದಿನನಿತ್ಯದ ವಾಸ್ತವಾದ ಪತ್ರಿಕೋದ್ಯಮಕ್ಕೂ ಭಾರತದ ಆರ್ಥಿಕ ಸುಧಾರಣೆಗಳು ಒಂದು ಹೊಸ ಭವಿಷ್ಯವನ್ನು ಕೊಟ್ಟವು. ಈಗ ಪತ್ರಿಕೋದ್ಯಮದಲ್ಲೂ ಉದ್ಯೋಗಾವಕಾಶದ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ, ಅಹಿಂದವರ್ಗಗಳಿಗೂ ಪತ್ರಿಕೋದ್ಯಮದಲ್ಲಿ ಅವಕಾಶವಿರಲಿ ಎನ್ನುವ ಘೋಷಣೆ ಹೊರಬರುತ್ತಿದೆ. ಇದು ಖಾಸಗಿ ಉದ್ಯಮವಲಯದಲ್ಲೂ ಮೀಸಲಾತಿ ಇರಲಿ ಎನ್ನುವ ಘೋಷಣೆಯನ್ನೇ ಹೋಲುತ್ತದಲ್ಲವೆ?

    Reply
  4. Ananda Prasad

    ಮಾಧ್ಯಮ ಕ್ಷೇತ್ರದಲ್ಲಿ ಅಹಿಂದ ಅಥವಾ ಮೀಸಲಾತಿ ಬಂದರೂ/ತಂದರೂ ವಿಶೇಷ ಪ್ರಯೋಜನ ಆಗಲಿಕ್ಕಿಲ್ಲ ಏಕೆಂದರೆ ಮಾಧ್ಯಮದಲ್ಲಿ ಕೆಲಸ ಮಾಡುವವರು ಅದರ ಮಾಲಿಕರ ಇಷ್ಟಾನಿಷ್ಟಗಳು, ರಾಜಕೀಯ ನಿಲುವುಗಳು/ಒಲುಮೆಗಳು, ಮಾಲಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬುದು ಕಟು ವಾಸ್ತವ. ಹೀಗಾಗಿ ಮಾಧ್ಯಮದಲ್ಲಿ ಅಹಿಂದ/ಮೀಸಲಾತಿ ತರುವ ಬದಲು ದಲಿತರು ತಮ್ಮದೇ ಆದ ಮಾಧ್ಯಮಗಳನ್ನು ಹೊಂದುವುದು ಅಗತ್ಯ. ದಲಿತ ರಾಜಕೀಯ ಪಕ್ಷಗಳು ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಮಾಯಾವತಿಯವರು ತಮ್ಮ ಪ್ರತಿಮೆ ನಿರ್ಮಿಸಲು ಕೋಟ್ಯಂತರ ರೂಪಾಯಿ ವ್ಯಯಿಸುವ ಬದಲು ದಲಿತರ ಮಾಧ್ಯಮ, ಪತ್ರಿಕೆ, ಟಿವಿ ವಾಹಿನಿ ಕಟ್ಟಲು ಹಣ ವಿನಿಯೋಗಿಸಿದ್ದರೆ ದಲಿತರ ದನಿಗೆ ಹೆಚ್ಚಿನ ಬಲ ಬರುತ್ತಿತ್ತು. ಅದೇ ರೀತಿ ದಲಿತ ಉದ್ಯಮಿಗಳು ಕೂಡ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಇಲ್ಲದಿದ್ದರೆ ಮೇಲ್ವರ್ಗದವರ ಏಕಸ್ವಾಮ್ಯ ಇರುವ ಮಾಧ್ಯಮ ಕ್ಷೇತ್ರದಿಂದ ದಲಿತರಿಗೆ ನ್ಯಾಯ ಸಿಗುವ ಸಾಧ್ಯತೆ ಇಲ್ಲವೇ ಇಲ್ಲ.

    Reply
    1. Sumanasa

      ಆನಂದ ಪ್ರಸಾದ್ ಅವರೇ, ನಿಮ್ಮ ಸಲಹೆ ಸೂಕ್ತವಾಗಿದೆ. ತಕ್ಷಣವೇ ಸಿದ್ದರಾಮಯ್ಯನವರು “ಮಾಧ್ಯಮ ಭಾಗ್ಯ” ಯೋಜನೆಯನ್ನು ಘೋಷಿಸಿತಕ್ಕದ್ದು ಹಾಗೂ ತನ್ಮೂಲಕ ಅಹಿಂದ ಮಾಧ್ಯಮಗಳನ್ನು ಬೆಳೆಸಲು ದೊಡ್ಡ ಪ್ರಮಾಣದ ಬಡ್ಡಿ ರಹಿತ ಸಾಲವನ್ನು ಕೊಡತಕ್ಕದ್ದು.

      Reply
  5. asha k

    I thank my stars because my boss never looked at my caste while offering me a job as a journalist. If he had done so, I would not been left out. My boss looked at my marks statements, asked me to appear for a written test and then conducted an interview which was one-on-one, and offered me the job offer letter, He and his successors have given various responsibilities without considering my caste and gender profile. They have set an example for me.

    Reply
  6. mallikarjun

    ದಿನೇಶ್ ಅಮಿನಮಟ್ಟು ಅವರಿಗೆ ರಾಜ್ಯ ಸರಕಾರವನ್ನು ಮೆಚ್ಚಿಸಲು ಕಾರಣ ಬೇಕು ಅದನ್ನು ಈ ರೀತಿ ಹರಿಯಬಿಟ್ಟಿದ್ದಾರೆ. ರಾಜ್ಯ ಸರಕಾರದ ಕೆಲ ಯೋಜನೆಗಳನ್ನು ವಿರೋಧಿಸಿದ್ದು ಇವರಿಗೆ ನುಂಗಲಾರದ ತುತ್ತಾಗಿದೆ. ಅನ್ನಭಾಗ್ಯ ಯಾರಿಗೆ ತಲುಪಿದೆ ಅಥವಾ ತಲುಪುತ್ತಿಲ್ಲ ಎನ್ನುವುದು ಬೆಂಗಳೂರು-ದೆಹಲಿಯಲ್ಲಿ ಕುಳಿತು ಯೋಚಿಸದರೆ ಗೊತ್ತಾಗುವುದಿಲ್ಲ. ಉಚಿತ ಅಕ್ಕಿ ತೆಗೆದುಕೊಂಡು ಅಂಗಡಿಗಳಲ್ಲಿ ಮಾರುವ ಪದ್ಧತಿ ಈಗಲೂ ಜಾರಿಯಲ್ಲಿದೆ. ನ್ಯಾಯ ಬೆಲೆಯಿಂದ ತಂದ ಅಕ್ಕಿ ಹೋಗುವುದು ಮನೆಗಲ್ಲ ನೇರವಾಗಿ ಕಿರಾಣಿ ಅಂಗಡಿಗೆ ಅದನ್ನು ಮೊದಲು ಅರಿಯಿರಿ. ಇನ್ನೊಬ್ಬ ನನ್ನ ಸಹಪಾಠಿ ಉಚಿತ ಅಕ್ಕಿ ಸಿಗುವ ದಿನದಿಂದ ಫಲಾನುಭವಿಗಳು ಕೆಲಸಕ್ಕೆ ಹೊಗುತ್ತಿಲ್ವಂತೆ ಹೇಳಿದ. ಅಕ್ಕಿ ಮಾರೋದು ಕುಡಿಯೋದು, ಮನೆಗೆ ಬಂದು ಹೆಂಡತಿ ಮಕ್ಕಳನ್ನ ಹೊಡೆಯುವುದು ಇದೆಲ್ಲ ಇವರ ಗಮನಕ್ಕೆ ಬರೋಲ್ಲ…………………………

    Reply
  7. bhatmahesht

    ಜಗತ್ತಿನಲ್ಲಿ ಕೇವಲ ೦.೨೫% ಗಿಂತ ಕಡಿಮೆ ಜನಸಂಖ್ಯೆಯಿರುವ ಯಹೂದಿ ಜನಾಂಗದವರು ಇಲ್ಲಿಯವರೆಗೆ ೧೦೦ ಕ್ಕೂ ಹೆಚ್ಚು ಅಂದರೆ ಸುಮಾರು ೨೫ ಪ್ರತಿಶತದಷ್ಟು ನೊಬೆಲ್ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಅಂದರೆ ಯಹೂದಿ ಜನಾಂಗದವರು ತೆಗೆದುಕೊಂಡಿರುವ ನೊಬೆಲ್ ಪ್ರಶಸ್ತಿಗಳ ಸಂಖ್ಯೆ ಅವರ ಜನಾಂಗದ ಜನಸಂಖ್ಯೆಗಿಂತ ಸುಮಾರು ನೂರುಪಟ್ಟು ಹೆಚ್ಚು.
    ಅಮೀನಮಟ್ಟುರವರ ಸಲಹೆಗಳನ್ನು ನೊಬೆಲ್ ಪ್ರಶಸ್ತಿ ಕೊಡುವವರೂ ಮುಂದಿನ ಸಾರಿ ಮಾನದಂಡವಾಗಿ ಇಟ್ಟುಕೊಳ್ಳಬೇಕು.

    Reply
  8. TNK

    If a poor man sells a portion of his ration to the shop , it is not a sin. He has many pressing needs which he can not meet, may be the education of his children. Let us not forget that it is due to the sweat of such workers we get our food. Appreciate Dinesh Mattu for his sincere feelings towards the voiceless.

    Reply
  9. Anonymous

    ಜಾತಿವಾದಿಗಳು ಅದೆಗೆ ಉರಿದಿಕೊಳ್ಳುತ್ತಾರೆ ನೋಡಿದರೆ ಇನ್ನು ಆ ಪತ್ರಿಕಾರಂಗದಲ್ಲಿ ಹೇಗಿರಬಹುದು ಇವರ ಉರಿತ

    Reply

Leave a Reply to mylaralinga Cancel reply

Your email address will not be published. Required fields are marked *