Daily Archives: November 12, 2015

ಶಾಂತಿ ಕದಡುವವರ ಮಧ್ಯೆ ನೆಮ್ಮದಿಯನ್ನು ಕನವರಿಸುತ್ತಾ…

​ಎಸ್. ಸದಾನಂದ

ಕೆಲ ವರ್ಷಗಳ ಹಿಂದೆ ಮಧ್ಯಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ನಡೆದ ಘಟನೆ ಇದು.

ಆಗ ನಿವೃತ್ತಿ ಅಂಚಿನಲ್ಲಿದ್ದ ಶಿಕ್ಷಕರೊಬ್ಬರು ಪ್ರತಿ ದಿನ ವಾಕಿಂಗ್ ನಲ್ಲಿ ಆ ಪತ್ರಿಕೆಯ ವರದಿಗಾರರನ್ನು ಭೇಟಿಯಾಗಿ ವಿಷ್ ವಿನಮಯ ಮಾಡಿಕೊಳ್ಳುತ್ತಿದ್ದರು. ಒಂದು ದಿನ pic 2ವರದಿಗಾರರನ್ನು ತಡೆದು ನಿಲ್ಲಿಸಿ “ದಯವಿಟ್ಟು ನಾಳೆಯಿಂದ ನಿಮ್ಮ ಪತ್ರಿಕೆ ನಮ್ಮ ಮನೆಗೆ ಹಾಕುವುದನ್ನು ನಿಲ್ಲಿಸಬೇಕು. ನಿಮ್ಮ ಪ್ರಸರಣ ವಿಭಾಗದವರಿಗೆ ತಿಳಿಸಲು ಸಾಧ್ಯವೇ” ಎಂದರು. ಮನವಿಯನ್ನು ಸ್ವೀಕರಿಸಿದ ವರದಿಗಾರ ಸಂಬಂಧಪಟ್ಟವರಿಗೆ ಮಾಹಿತಿ ತಲುಪಿಸಿ ಅವರ ಮನೆಗೆ ಪತ್ರಿಕೆ ಹೋಗುವುದು ನಿಂತಿತು.

 

ಮತ್ತೆ ಕೆಲ ದಿನಗಳ ನಂತರ ಅಂತಹದೇ ವಾಕಿಂಗ್ ಸಂದರ್ಭವೊಂದರಲ್ಲಿ ಭೇಟಿಯಾದ ವರದಿಗಾರರನ್ನು ಆ ಶಿಕ್ಷಕರು ಮತ್ತೆ ನಿಲ್ಲಿಸಿದರು. “ನಿಮ್ಮ ಪತ್ರಿಕೆಯನ್ನು ನಿಲ್ಲಿಸಿದ್ದಕ್ಕೆ ನಿಮಗೆ ಬೇಸರ ಆಗಿರಬಹುದು. ಆದರೆ ನಿಮ್ಮೊಂದಿಗೆ ಆ ನನ್ನ ತೀರ್ಮಾನಕ್ಕೆ ಕಾರಣವನ್ನು ತಿಳಿಸಿಬೇಕಿದೆ” ಎಂದು ಮಾತು ಮುಂದುವರಿಸಿದರು… “ನನಗೆ ಕಾಲೇಜು ಓದುವ ಮಗನಿದ್ದಾನೆ. ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಕೆಲ ಅಂಕಣಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ನೆರೆಹೊರೆಯವರನ್ನು ಅನುಮಾನದಿಂದ ನೋಡುವ ಸನ್ನಿವೇಶ ಸೃಷ್ಟಿಯಾಗಲು ಪ್ರಚೋದನಕಾರಿಯಾಗಿವೆ. ಇನ್ನೂ ಎಳೆಯ ಹರೆಯದಲ್ಲಿರುವ ಮಗ ಅವನ್ನು ಓದಿ, ದಿಕ್ಕು ತಪ್ಪಿ ಮತಾಂಧನಾಗಿ ಯಾವುದೋ ಕೃತ್ಯದಲ್ಲಿ ಭಾಗಿಯಾಗಿ ಜೈಲುಪಾಲಾದರೆ ಏನು ಗತಿ? ನಾನೀಗ ನಿವೃತ್ತಿ ಅಂಚಿನಲ್ಲಿದ್ದೇನೆ. ನಿವೃತ್ತಿ ನಂತರ ನಾನು ನೆಮ್ಮದಿಯಾಗಿ ಮನೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಯನ್ನು ನೋಡಿಕೊಂಡು ಇರಬೇಕೆಂದು ಬಯಸುತ್ತೇನೆ. ಜೈಲಿಗೆ ಹೋದ ಮಗನಿಗೆ ನಾನು ಬುತ್ತಿ ತೆಗೆದುಕೊಂಡು ಜೈಲಿನ ಬಾಗಿಲು ಕಾಯುವ ಕಾಯಕ ಬೇಡ..ಹಾಗಾಗಿ ನಿಮ್ಮ ಪತ್ರಿಕೆ ನಿಲ್ಲಿಸಿದೆ. ನೀವು ಬೇಸರ ಮಾಡಿಕೊಳ್ಳಬೇಡಿ,” ಎಂದು ಆ ಶಿಕ್ಷಕರು ಮುಂದೆ ಹೋದರು.

 

ಈ ಘಟನೆಯ ಪರಿಚಯ ಇರುವ ಅನೇಕರಿಗೆ ಇದು ಮತ್ತೆ ಮತ್ತೆ ನೆನಪಾಗಿ ಕಾಡುವುದುಂಟು. ಈ ಹೊತ್ತು ಮೂಡಬಿದ್ರೆಯಲ್ಲಿ ಕೊಲೆಯಾದ ಯುವಕ, ಮಂಗಳೂರಿನಲ್ಲಿ ಕೋಮು ಸಂಘಟನೆಗಳ ಪ್ರಚೋದನೆಗೆ ಮರುಳಾಗಿ ವಿವಿಧ ಗಲಭೆಗಳಲ್ಲಿ ಸಿಲುಕಿ ಜೈಲುಪಾಲಾಗಿರುವ ಹತ್ತಾರು ಯುವಕರು, ಯಾರದೋ ಜಯಂತಿ, ಮತ್ತಾರದೋ ಮೆರವಣಿಗೆ ಎಂದಾಕ್ಷಣ ಬೀದಿಗೆ ಬಂದು ಕಲ್ಲು, ಬಾವುಟ ಹಿಡಿದು ನಿಲ್ಲುವ ಮಂದಿಯನ್ನು ನೋಡಿದಾಗಲೆಲ್ಲಾ ಈ ಮೇಲಿನ ಘಟನೆ ನೆನಪಾಗದೆ ಇರದು.

girish-karnad

ಕೊಡಗಿನಲ್ಲಿ ಒಬ್ಬರು ಹತ್ಯೆಯಾದರೆ, (ಅದು ಯಾವ ಕಾರಣಕ್ಕೆ ಎಂಬುದು ಇನ್ನೂ ಸ್ಪಷ್ಟವಿಲ್ಲ) ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಅಲ್ಲಿಯ ಶಾಸಕ ಹೇಳಿಕೆ ನೀಡುತ್ತಾರೆ. ಇಡೀ ರಾಜ್ಯದ ನಾಯಕರೆಲ್ಲಾ ಆ ಊರಿಗೆ ಹೋಗಿ ಬಾಯಿಗೆ ಬಂದ ಹಾಗೆ ಮಾತನಾಡಿ ಹಿಂಸೆಯನ್ನು ವ್ಯಾಪಕಗೊಳಿಸುತ್ತಾರೆ. ಏಕೆ ಶಾಂತಿ ಬೇಡ? ಅವರಿಗೆ ಅಶಾಂತಿ ನೆಲೆಸಿದಷ್ಟೂ ಲಾಭವೇ? ಎದುರಿಗಿದ್ದು ನೋಡಿದವರಂತೆ, ಕೆಳಗೆ ಬೀಳಿಸಿ ಕಲ್ಲಿನಿಂದ ಜಜ್ಜಿ ಕೊಂದರು ಎಂದು ಹೇಳಿಕೆ ನೀಡುತ್ತಾರೆ ಕೆಲವರು. ಇವರಿಗೇಕೆ ಜವಾಬ್ದಾರಿ ಬಾರದು?

ನಮ್ಮಲ್ಲಿರುವ ವೈವಿಧ್ಯತೆಯನ್ನು ಧಿಕ್ಕರಿಸುವ, ಶೋಷಣೆಯನ್ನು ಪೋಷಿಸುವ ಹಾಗೂ ಇನ್ನೊಂದು ಧರ್ಮದವರನ್ನು ಶತ್ರುವಂತೆ ಕಾಣುವ ಮನಸುಗಳ ಮಧ್ಯೆ ಬದುಕಬೇಕಿರುವುದನ್ನು ನನೆಸಿಕೊಂಡರೆ ಆತಂಕವಾಗುತ್ತದೆ. ಪುಟ್ಟ ಪುಟ್ಟ ಮಕ್ಕಳಿರುವ ಕೆಲ ಪೋಷಕರಂತೂ ಮಕ್ಕಳು ಎದುರಿಸಬೇಕಿರುವ ನಾಳೆಗಳ ಬಗ್ಗೆ ಸಾಕಷ್ಟು ಚಿಂತಿತರಾಗಿದ್ದಾರೆ. ಹೀಗೆ ಮಾಧ್ಯಮದ ಕೆಮರಾಗಳ ಮುಂದೆ, ಪತ್ರಿಕೆಗಳ ಅಂಕಣಗಳಲ್ಲಿ ಕಿಡಿ ಹಚ್ಚುವವರು ನೆಮ್ಮದಿಯಾಗೇ ಇರುತ್ತಾರೆ. ಸಂದರ್ಭ ಬಂದಾಗ ಪಕ್ಷಾಂತರ ಮಾಡಿ ‘ಕ್ರಾಂತಿಕಾರಿ’ ಪೋಸು ಕೊಟ್ಟು ಮ್ಯಾಗಜೀನ್ ಗಳಿಗೆ ಮುಖಪುಟದ ರೂಪದರ್ಶಿಯಾಗುತ್ತಾರೆ! ಆದರೆ ಬಲಿಪಶುವಾಗುವುದು ಅಮಾಯಕರು. ಬಡವರ ಮಕ್ಕಳು ಹಾಗೂ ಅನಾಥರಾಗುವವರು ವೃದ್ಧ ಪೋಷಕರು.

 

ಬುದ್ಧಿ ಹೇಳಬೇಕಾದ ಜೀವಿಗಳು ಪ್ರಶಸ್ತಿ, ಸನ್ಮಾನ, ಸ್ಥಾನಮಾನಗಳಲ್ಲಿ ಮೈಮರೆತು ಭಾಷಣಗಳಿಗೆ ಸೀಮಿತರಾಗಿ ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅವರು ಆಕ್ಟಿವ್. ಇಲ್ಲವಾದಲ್ಲಿ ಯಾವುದೋ ಸಿನಿಮಾದ ವಿಲನ್ ಪಾತ್ರಗಳಲ್ಲಷ್ಟೇ ದರ್ಶನ. ಈ ದೇಶ ಪ್ರಪಂಚದಲ್ಲಿ ನಂಬರ್ 1 ಪಟ್ಟ ಪಡೆದುಕೊಂಡು ಏನೂ ಆBhagawanಗಬೇಕಿಲ್ಲ. ಮನುಷ್ಯನ ಮೆದುಳು ವಿಕಾಸ ಗೊಳ್ಳದೆ, ಅಭಿವೃದ್ಧಿ ಏನಾದರೇನು? ಬಿಹಾರದ ನೆಲದಲ್ಲಿ ನಿಂತು, ನೀವು ನಮಗೆ ಓಟು ಹಾಕಿ ಗೆಲ್ಲಿಸದಿದ್ದರೆ, ಪಾಕಿಸ್ತಾನದಲ್ಲಿ ಪಟಾಕಿ ಹಚ್ಚುತ್ತಾರೆ ಅಂತ ಒಬ್ಬ. ಮತ್ತೊಬ್ಬ ನಿಮ್ಮ ಮೀಸಲಾತಿಯನ್ನು ಅಲ್ಪಸಂಖ್ಯಾತರು ತಿನ್ನುತ್ತಿದ್ದಾರೆ ಎಂದು ಹಲ್ಲು ಮಸೆಯುತ್ತಾನೆ. ಸಂವಿಧಾನದ ಆಶಯಗಳಿಗೆ ಬದ್ಧನಾಗಿ ಕಾರ್ಯನಿರ್ವಹಿಸಿ ಹೀಗೆ ಓಟಿಗಾಗಿ ಸಮಾಜ ಒಡೆಯುವ ಮಾತನಾಡಿದವನ ಹೆಸರು ಪ್ರಧಾನಿ! ಈ ಕಡಿ-ಕೊಲ್ಲು ಮಾತುಗಳಿಗೆ ಸಾಮಾಜಿಕ ತಾಣಗಳಲ್ಲಿ ಜಯಕಾರಗಳು.

 

ಬುದ್ಧಿವಂತ, ವಿಚಾರವಂತ, ಓದಿಕೊಂಡಿರುವವನು, ಸಂಶೋಧಕ, ಪ್ರಗತಿಪರ – ಎನ್ನುವ ಪದಗಳನ್ನು ಅದೆಷ್ಟರ ಮಟ್ಟಿಗೆ ಹೀಯಾಳಿಸಲಾಗಿದೆ ಎಂದರೆ, ಯಾರೂ ತನ್ನನ್ನು ತಾನು ಹಾಗೆ ಪರಿಚಯ ಮಾಡಿಕೊಳ್ಳಲು ಹಿಂಜರಿಯುವಷ್ಟು. (ವಿಚಿತ್ರ ಎಂದರೆ ಇತ್ತೀಚೆಗೆ ಮಾನ್ಯತೆ ಪಡೆಯುತ್ತಿರುವ ಮತ್ತೊಂದು ಡೆಸಿಗ್ನೇಷನ್ – ಸಂಸ್ಕೃತಿ ಚಿಂತಕ!) ಇಂತಹ ಬೆಳವಣಿಗೆ ಅಧ್ಯಯನ ಎನ್ನುವ ಕ್ರಿಯೆ ಬಗ್ಗೆಯೇ ನವ ತರುಣರಲ್ಲಿ ನಿರ್ಲಕ್ಷ್ಯ ಉಂಟು ಮಾಡುವಷ್ಟು. There is no respect for scholarship. ಥ್ಯಾಂಕ್ ಗಾಡ್, ಇಂತಹವರ ಕಾಲದಲ್ಲಿ ಕುವೆಂಪು, ವಿವೇಕಾನಂದ ರಂತಹವರು ಬದುಕಲಿಲ್ಲ. ಇಲ್ಲವಾಗಿದ್ದಲ್ಲಿ ಅವರ ಒಂದೊಂದು ಮಾತು, ಹೇಳಿಕೆಗಳು ಟಿಆರ್ ಪಿ ಹಿಂದೆ ಬಿದ್ದಿರುವವರ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಬುಲೆಟಿನ್ ಗಳಿಗೆ ಸರಕಾಗಿರುತ್ತಿದ್ದವು! ಮಾರನೆಯ ದಿನ ಅವರ ಗಡಿಪಾರಿಗೆ ಒತ್ತಾಯಿಸಿ ಬೀದಿಗಿಳಿಯುತ್ತಿದ್ದರು. ಕೆಲ ಮಾಜಿ ಮಂತ್ರಿ ಮಹಾಶಯರು ಅವರನ್ನು ಸಾರಸಗಟಾಗಿ ‘ಹುಚ್ಚ’ ರೆಂದು ಪ್ರಮಾಣ ಪತ್ರ ಕೊಡುತ್ತಿದ್ದರು.
ಇಂದು ಗಿರೀಶ್ ಕಾರ್ನಾಡ್ ಅವರನ್ನು ಅನೇಕ ರಾಜಕಾರಣಿಗಳು, ಸ್ವಾಮೀಜಿಗಳು ‘ಹುಚ್ಚ’ ಎಂದು ಕರೆದರು. ಆಯ್ತು ಅವರಿಗೆ ಸ್ವಾತಂತ್ರ್ಯ ಇದೆ, ಕರೆಯಲಿ. ಆದರೆ ಕರೆಯುವ ಮುನ್ನ ಒಂದೇ ಒಂದು ಬಾರಿ ಕಾರ್ನಾಡರ ‘ತುಘಲಕ್’ ನಾಟಕವನ್ನು ಓದಿದ್ದರೆ ಚೆನ್ನಾಗಿತ್ತಲ್ಲವೆ. ಆದರೆ, ಈಗ ಅಂತಹ ಮಾತನ್ನೇ ಹೇಳುವಂತಿಲ್ಲ. “ಅವನ್ಯಾವ ಸೀಮೆ ರೈಟರ್ ಅಂತ ಓದಬೇಕು…” ಎಂದು ಜಗಳಕ್ಕೆ ಬರುತ್ತಾರೆ. ಲೇಖಕರೊಬ್ಬರನ್ನು ಸಂದರ್ಶನಕ್ಕೆ ಕರೆದಾಗ, ಅವರ ಲೇಖನಗಳನ್ನು ಓದಿಕೊಂಡಿರಬೇಕಲ್ಲವೇ. ಆದರೆ ‘ಅಧ್ಯಯನದ ಅಗತ್ಯವೇ ಇಲ್ಲ’ ಎನ್ನುವವರ ಧಾಟಿ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ, ಸೃಜನಶೀಲ ಬರೆವಣಿಗೆಯಲ್ಲಿರುವವರ ವಾದವೂ ಹೀಗೇ ಆಗಿತ್ತು. ನಾನು ನನ್ನ ಹಿಂದಿನ ಲೇಖಕರನ್ನು ಓದಿಕೊಳ್ಳುವುದಿಲ್ಲ. ಅದರ ಅಗತ್ಯ ನನಗಿಲ್ಲ ಎನ್ನುವವರು ಭಾರೀ ಆತ್ಮವಿಶ್ವಾಸದಿಂದಲೇ ತಮ್ಮ ವಾದ ಮಂಡಿಸಿದರು.
ಆದರೆ ಈಗ ಸೃಜನೇತರ ಬರವಣಿಗೆ/ಮಾಧ್ಯಮದಲ್ಲಿ ತೊಡಗಿಸಿಕೊಂಡವರೂ ಅದೇ ಧಾಟಿಯಲ್ಲಿ ಮಾತಿಗಿಳಿಯುತ್ತಿದ್ದಾರೆ. ಕೆ.ಎಸ್. ಭಗವಾನ್ ಅವರ ವಿಚಾರದ ಬಗ್ಗೆ ತಕರಾರುಗಳಿರಲಿ. ಆದರೆ, ಆ ಮನುಷ್ಯ ತನ್ನ ವೃತ್ತಿಯ 30ಕ್ಕೂ ಹೆಚ್ಚು ವರ್ಷ ಈ ನೆಲದ ಸಾವಿರಾರು ಹುಡುಗರಿಗೆ ಶೇಕ್ಸ್ ಪಿಯರ್ ಪರಿಚಯಿಸಿದ, ಮನೋಜ್ಞವಾಗಿ ಪಾಠ ಮಾಡಿದವರು ಎನ್ನುವ ಕಾರಣಕ್ಕೆ ಕನಿಷ್ಟ ಗೌರವ ಬೇಡವೆ? ಒಬ್ಬ ‘ಏ ಭಗವಾನ್…’ ಎಂದು ಗದರಿದರೆ, ಮತ್ತೊಬ್ಬ “ನಿಮ್ಮಂ ತಹವರಿಗೇಕೆ ಭಗವಾನ್ ಎಂಬ ಹೆಸರು..” ಎಂದು ಪ್ರಶ್ನಿಸುತ್ತಾನೆ.
download
ಹಿಂಸೆಯಿಲ್ಲದ, ದ್ವೇಷ ಇಲ್ಲದ ನಾಳೆಗಳಿಗಾಗಿ ಈ ಹೊತ್ತಿನ ಯುವಕರಿಗೆ ಜಾತಿ, ವರ್ಣ, ಧರ್ಮದ ಆಚೆಗೆ ನಿಲ್ಲುವ ಒಂದಿಷ್ಟು ಆದರ್ಶ ವ್ಯಕ್ತಿತ್ವಗಳನ್ನು ಅಮೂಲಾಗ್ರವಾಗಿ ಓದಿಕೊಳ್ಳಿ ಎಂದು ಹೇಳುವ ಹಿರಿಯರು ಬೇಕಾಗಿದ್ದಾರೆ. ಟೀವಿ ಸ್ಟುಡಿಯೋಗಳಲ್ಲಿ ಕುಳಿತು ಏರಿದ ದಿನಯಲ್ಲಿ ಮಾತನಾಡುವವರಷ್ಟೇಬುದ್ಧಿವಂತರಲ್ಲ ಎನ್ನುವುದನ್ನು ಎದೆಗೆ ನಾಟುವಂತೆ ಹೇಳುವವರ ಅಗತ್ಯವಿದೆ.