ಪ್ರತಿ ಸವಾಲಿಗೂ ಸಿದ್ಧ ಉತ್ತರ – ಬುದ್ಧ-ಚಾಣಕ್ಯರ ಬಿಹಾರ


– ಶ್ರೀಧರ್ ಪ್ರಭು


ಪರಿಹಾರವೇ ಇಲ್ಲವೇನೋ ಎಂಬಂಥ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಇತಿಹಾಸದುದ್ದಕ್ಕೂ ದಿಟ್ಟ ಮತ್ತು ಸರ್ವಕಾಲಿಕ ಪರಿಹಾರ ನೀಡಿದ ನಾಡು ಬಿಹಾರ. ಸಿದ್ಧಾರ್ಥ ಗೌತಮನನ್ನು ಬುದ್ಧನನ್ನಾಗಿ, ಚಂಡ ಅಶೋಕನನ್ನು ದೇವನಾಂಪ್ರಿಯನನ್ನಾಗಿ, ಜಯಪ್ರಕಾಶರನ್ನು ಲೋಕನಾಯಕನನ್ನಾGautama-Buddhaಗಿ ಮಾಡಿ ಸಮಸ್ತ ನಾಡಿಗೆ ಬೆಳಕು ನೀಡಿದ ನಾಡು ಬಿಹಾರ.  ಆರ್ಯಭಟ, ಕೌಟಿಲ್ಯ, ಚಂದ್ರಗುಪ್ತ ಮೌರ್ಯ, ಗುರು ಗೋವಿಂದ ಸಿಂಹ ಹೀಗೆ ಸಾವಿರ ಸಾವಿರ ರತ್ನಗಳ ಖನಿ ಬಿಹಾರ. ನಳಂದದ (ನಳಂದಾ ಎಂದರೆ ಕೊನೆಯಿಲ್ಲದೆ ಮಾಡುವ ದಾನ) ವಿಶ್ವವಿದ್ಯಾಲಯದಿಂದ ಮೊದಲ್ಗೊಂಡು ಶಿಕ್ಷಣದ ಉತ್ತುಂಗವನ್ನು ಸಾಧಿಸಿದವರ, ಬೌದ್ಧ ಧರ್ಮವನ್ನು ಪ್ರಪಂಚಕ್ಕೆ ಮುಟ್ಟಿಸಿದವರ ಬಿಹಾರ ಅತ್ಯಂತ ಜಾಗೃತ ಭೂಮಿ. ನಮ್ಮ ದೇಶದ ಪ್ರತಿ ಹತ್ತು ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಬಿಹಾರದವರು. ಅನೇಕ ಪ್ರತಿಭಾವಂತ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ವಿಜ್ಞಾನಿಗಳನ್ನು ಕೊಡುಗೆ ನೀಡಿದ ಬಿಹಾರ ಇಂದು ತನ್ನ ಮುಂದಿದ್ದ ಬಹುದೊಡ್ಡ ಸವಾಲಿಗೆ ತನ್ನದೇ ಛಾತಿ ಮೆರೆದು ಉತ್ತರಿಸಿದೆ.

ಬಿಹಾರ್ ರಾಜಕಾರಣದ ಹಿನ್ನೋಟ

ಹಲವು ಸಾಮಾಜಿಕ, ರಾಜಕೀಯ ಚಳುವಳಿಗಳಿಗೆ ಮಡಿಲಾಗಿದ್ದ ಬಿಹಾರವನ್ನು ಸ್ವಾತಂತ್ರ್ಯಾ ನಂತರ ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿಗಳು ಬಿಹಾರದವರೇ ಅದರೂ, ರಾಜಕೀಯ ಇಚ್ಛಾ ಶಕ್ತಿ ಮತ್ತು ಒಂದು ನಿರ್ದಿಷ್ಟ ಗೊತ್ತು ಗುರಿಯಿಲ್ಲದ ನೀತಿಗಳಿಂದಾಗಿ ಬಿಹಾರವನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು.

ಹಾಗೆ ನೋಡಿದರೆ ನೆಹರೂ ಸಂಪುಟದಲ್ಲಿ ಬಿಹಾರಕ್ಕ ಎರಡೇ ಸ್ಥಾನ ಸಿಕ್ಕಿದ್ದು. ಒಬ್ಬರು ಸಂಸದೀಯjp-jayaprakash-narayan ವ್ಯವಹಾರಗಳ ಖಾತೆ ಸಚಿವ ಸತ್ಯನಾರಾಯಣ ಸಿನ್ಹಾ ಇನ್ನೊಬ್ಬರು ಕಾರ್ಮಿಕ ಸಚಿವ ಬಾಬು ಜಗಜೀವನ ರಾಮ. ಬೌದ್ಧಿಕ ವಲಯಗಳಲ್ಲಿ ಬಿಹಾರ ಅಪಾರ ಸಾಧನೆ ಮೆರೆದಿತ್ತು. ಜಗಜೀವನ್ ರಾಮ್ ಇನ್ನೊಬ್ಬ ಬಿಹಾರದ ನಾಯಕ ಅನುಗ್ರಹ ನಾರಾಯಣ ಸಿನ್ಹಾ ಜೊತೆಗೆ ೧೯೪೭ ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ ಹೋಗಿ ಉಪನ್ಯಾಸ ನೀಡಿ ಬಂದಿದ್ದರು. ಹೀಗೆ ಬಿಹಾರದ ಪ್ರಭಾವಳಿ ಸಾಕಷ್ಟಿದ್ದರೂ, ಸಾಮಾಜಿಕ ಅಸಮಾನತೆಯ ನಿರ್ಮೂಲನೆಗೆ ಒತ್ತು ಸಿಗದ ಕಾರಣ ಬಿಹಾರದ ದಲಿತ ಮತ್ತು ಹಿಂದುಳಿದವರ ಬದುಕು ಒಂದು ದೊಡ್ಡ ಕಾರಾಗೃಹದಲ್ಲಿ ಬಂಧಿತ ಕೈದಿಗೂ ಕೀಳಾಗಿತ್ತು. ಇಡೀ ಬಿಹಾರವೇ ಒಂದು ಜೀತದ ಮನೆಯಾಗಿತ್ತು. ಬಿ ಪಿ ಮಂಡಲ್ (ಮಂಡಲ ಆಯೋಗದ ಕರ್ತ) ಕೆಲ ಸಮಯ ಮುಖ್ಯ ಮಂತ್ರಿಯಾದದ್ದು ಬಿಟ್ಟರೆ ದಲಿತ ಮತ್ತು ಹಿಂದುಳಿದವರಿಗೆ ಇಲ್ಲಿ ಅಧಿಕಾರವೇ ಸಿಗಲಿಲ್ಲ.

ಆದರೆ ೧೯೭೦ ರಲ್ಲಿ ಮೊದಲ ಬಾರಿಗೆ ಅಂದಿನ ಸಮಾಜವಾದಿ ಪಕ್ಷ  ಅಧಿಕಾರಕ್ಕೆ ಬಂದು ಕರ್ಪೂರಿ ಠಾಕುರ್ ಮುಖ್ಯ ಮಂತ್ರಿಯಾದರು. ಹೆಸರಿಗೆ ಮಾತ್ರ ಠಾಕುರ್ ಆಗಿದ್ದ ಇವರು ನೈಜ ಅರ್ಥದಲ್ಲಿ ಬಿಹಾರದ ತಳಸಮುದಾಯಕ್ಕೆ ನಾಯಕತ್ವ ನೀಡಿದರು. ಲಾಲು ಪ್ರಸಾದ್, ನಿತೀಶ್, ಪಾಸ್ವಾನ್ ಸೇರಿದಂತೆ ಇಂದಿನ ಬಿಹಾರದ ಬಹುತೇಕ ದಲಿತ ಮತ್ತು ಹಿಂದುಳಿದವರ ನಾಯಕರನ್ನು ಬೆಳೆಸಿದರು. ಬಿಹಾರವನ್ನು ಮೇಲ್ಜಾತಿಗಳ ಹಿಡಿತದಿಂದ ಮುಕ್ತಿಗೊಳಿಸಿದ  ಮೊದಲ ಕೀರ್ತಿ ಸಲ್ಲಬೇಕಾದದ್ದು ಜನನಾಯಕರಾದ ಕರ್ಪೂರಿಯವರಿಗೆ.

ಅವರ ಸಮಾಜವಾದಿ ಗರಡಿಯಲ್ಲಿ ಬೆಳೆದ ನಾಯಕತ್ವ ೧೯೭೫ ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು. devegowda-vpsingh-chandrashekar-gujralತುರ್ತು ಪರಿಸ್ಥಿತಿಯ ವಿರೋಧಿಸಿ ಕಟ್ಟಿದ ಚಳುವಳಿಯ ಕಾವಿನಲ್ಲಿ ನೆಂದ ಬಿಹಾರದ ಜನಮಾನಸ ಮತ್ತೆ ಕರ್ಪೂರಿ ಯವರನ್ನು ನಾಯಕನನ್ನಾಗಿ ಆರಿಸಿತು. ಆದರೆ ನಂತರದಲ್ಲಿ ಬಂದ ಕಾಂಗ್ರೆಸ್ ಪಕ್ಷ ೧೯೯೦ ರ ವರೆಗೂ  ಅಧಿಕಾರದಲ್ಲಿತ್ತು. ಜಗನ್ನಾಥ ಮಿಶ್ರಾ ಸರಕಾರದ ಆಡಳಿತದಿಂದ ಬೇಸತ್ತು ಹೋಗಿದ್ದ ಜನತೆ ಅಂದಿನ ಯುವ ನಾಯಕ ಲಾಲೂ ಪ್ರಸಾದರನ್ನು ಸಿಂಹಾಸನದ ಮೇಲೆ ಕೂರಿಸಿತು. ಬಾಬರಿ ಮಸೀದಿ ಕೆಡವುವ ಆಂದೋಲನದಲ್ಲಿ ಮಗ್ನವಾಗಿದ್ದವರು ಕೋಮು ದಳ್ಳುರಿ ಅಂಟಿಸಿ ಬಿಟ್ಟಿದ್ದರೂ ಅದರ ಬೇಗುದಿಯಿಂದ ಬಿಹಾರ ಬಚಾವಾಗಿತ್ತು.

ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಅಡ್ವಾಣಿಯವರ ರಥಯಾತ್ರೆಯನ್ನು ತಡೆದ ಲಾಲೂ ಪ್ರಸಾದ್ ಇಂದು ಬಿಹಾರದ ಜನತೆಯ ಮಧ್ಯೆ ಮತ್ತೆ ಕಿಂಗ್ ಮೇಕರ್ ಆಗಿ ಪ್ರಸ್ತುತರಾಗಿದ್ದಾರೆ. ಬಿಹಾರದ ಚುನಾವಣಾ ಫಲಿತಾಂಶ ಬಂದ ಮೇಲೆ ನಿತೀಶ್ ಗೆಲುವಿಗೆ ಕಾರಣವಾದ ಅನೇಕಾನೇಕ ಅಂಶಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಕೆಲ ಪ್ರಮುಖ ಮಾಧ್ಯಮಗಳು ಇಡೀ ಚುನಾವಣೆಯ ಯಶಸ್ಸಿಗೆ ಪ್ರಶಾಂತ್ ಕಿಶೋರ್ ಎಂಬ ಮೋದಿಯವರ ಆಪ್ತ ವಲಯದ ಚುನಾವಣಾ ತಂತ್ರ ನಿಪುಣ ಕಾರಣ ಎಂದು ಹೊಗಳಿವೆ. ಕೆಲವರು ಜಾತಿ ಸಮೀಕರಣದ ಕಾರಣ ನೀಡಿ ಇದು ಜಾತಿ ಲೆಕ್ಕಾಚಾರಗಳ ಮೇಲಿನ ಗೆಲುವು ಎಂದಿದ್ದಾರೆ.

ಒಂದು ಚುನಾವಣೆಯ ಯಶಸ್ಸು ಒಬ್ಬ ವ್ಯಕ್ತಿ ಅಥವಾ ಬರಿ ಜಾತಿ ಲೆಕ್ಕಾಚಾರಗಳ ಮೊತ್ತವಾಗಿ  ನೋಡದೇ ಬಿಹಾರದ ಜನಸಾಮಾನ್ಯ ಇಷ್ಟೊಂದು ಸ್ಪಷ್ಟ ಬಹುಮತ ನೀಡಲು ಕಾರಣವಾದ ಬಹು ಮುಖ್ಯ ಆದರೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗದ ಅಂಶಗಳನ್ನು ನಾವು ಗಮನಿಸಬೇಕಿದೆ.

ಲಾಲೂ ಎಂಬ ಮಾಂತ್ರಿಕ

ನಮ್ಮ ಚಡ್ಡಿ ಚತುರರು ಇಂಗ್ಲೀಷ್ ಬರದ ಗಾವಂಟಿ ಗಮಾರ ಎಂದು ಬಿಂಬಿಸುವ ಲಾಲೂ ಪ್ರಸಾದ್ ಎಂಬ lalu-sharad-biharಅದ್ಭುತ ಶಕ್ತಿ ಈ ಗೆಲುವಿನ ರೂವಾರಿ ಮೊದಲ ಕಾರಣ. ಲೋಕಸಭಾ ಚುನಾವಣೆಯಲ್ಲಿಯೇ ಪಾಸ್ವಾನ್ ಎಂಬ ದಲಿತ ನಾಯಕ ಬಿಜೆಪಿ ಬುಟ್ಟಿಗೆ ಬಿದ್ದಿದ್ದರು. ನಂತರದಲ್ಲಿ ಮಾಂಝಿಯವರನ್ನು ಓಲೈಸಿ ಮಹದಲಿತರನ್ನು ಸೆಳೆಯುವ ಪ್ರಯತ್ನವಾಯಿತು. ದಲಿತರ ಅಲ್ಪ ಸ್ವಲ್ಪ ಮತ ಪಡೆಯಬಲ್ಲ ಸಮರ್ಥ್ಯವಿದ್ದ ಬಿಎಸ್ಪಿ ಮತ್ತು ಎಡ ಪಕ್ಷಗಳು ಈ ಚುನಾವಣೆಗಳು ಶುರುವಾಗುವ ಮೊದಲೇ ತಾವು ಸ್ವಾತಂತ್ರ್ಯ ವಾಗಿ ಹೋರಾಟ ಮಾಡುವುದಾಗಿ ಘೋಷಿಸಿ ಬಿಟ್ಟಿದ್ದವು. ಲಾಲೂ ಅವರ ಸಮೀಪವರ್ತಿ ಪಪ್ಪು ಯಾದವರನ್ನು ಕೂಡ ಬಿಜೆಪಿ ಸೆಳೆದುಬಿಟ್ಟಿತ್ತು. ಹೀಗೆ ದಲಿತ ಮತ್ತು ಯಾದವ ಮತದಾರದ ಮಧ್ಯೆ ಬಿಜೆಪಿ ಬೇರೂರಲು ಸಾಕಷ್ಟು ಪ್ರಯತ್ನ ಮಾಡಿ ತಕ್ಕ ಮಟ್ಟಿಗೆ ಸಫಲವಾಯಿತು. ಇವ್ಯಾವುದನ್ನೂ ಲಕ್ಷಿಸದ ಲಾಲೂ ಬಿಹಾರದ ಅಸಲಿ ಸಂಘಟನಾ ಸಾಮರ್ಥ್ಯ ಮೆರೆದರು. ಬಿಹಾರದ ಹೃದಯವನ್ನು ಬಲ್ಲ ಲಾಲೂ ತಮ್ಮ ಸಂಪೂರ್ಣ ಶಕ್ತಿಯನ್ನು ಪಣಕ್ಕೆ ಒಡ್ಡಿ ಪರಿಹರಿಸಲು ಸಾಧ್ಯವೇ ಇಲ್ಲದ ಸವಾಲುಗಳನ್ನು ಸ್ವೀಕರಿಸಿದರು. ನಿತೀಶ್ ರನ್ನು  ಮುಖ್ಯಮಂತ್ರಿ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಸಮರ್ಥನೆಯನ್ನೂ ಪಡೆದರು. ಸೋನಿಯಾ ಮತ್ತು ರಾಹುಲ್ರನ್ನು ಎಷ್ಟು ಬೇಕೋ ಅಷ್ಟೇ ಪ್ರಯೋಗಿಸಿದ ಲಾಲೂ ಸಂಪೂರ್ಣವಾಗಿ ಚುನಾವಣೆಯನ್ನು ಬೇರುಮಟ್ಟದ ಸಂಘಟನೆಯ ಭಾರ ಹೊತ್ತರು. ಅಪ್ರತಿಮ ವಾಗ್ಮಿ ಮತ್ತು ಮನಸೆಳೆಯುವ ಮಾತುಗಳಿಗೆ ಹೆಸರಾದ ಲಾಲೂ ಚುನಾವಣೆಯ ಮೊದಲು ಮತ್ತು ನಂತರದಲ್ಲಿ ನಡೆದ ಯಾವುದೇ ಭಾಷಣ ಮತ್ತು ಪತ್ರಿಕಾಗೋಷ್ಠಿಗಳಲ್ಲಿ  ನಿತೀಶ್ ತಮ್ಮ ಜೊತೆಗಿದ್ದರೆ ಮೊದಲ ಪ್ರಾಶಸ್ತ್ಯ ನಿತೀಶ್ ಗೇ ನೀಡಿದರು. ಸೀಟು ಹೊಂದಾಣಿಕೆಯಲ್ಲಿ ನಿತೀಶ್ ಮತ್ತು ಲಾಲೂ ತಾದಾತ್ಮ್ಯ ಅನುಕರಣೀಯ ವಾಗಿತ್ತು. ಸಣ್ಣ ಪುಟ್ಟ ಸ್ಥಳೀಯ ಗಲಾಟೆಗಳನ್ನು ಸಮರ್ಥವಾಗಿ ಲಾಲೂ ನಿಭಾಯಿಸಿದರು.

ನಿತೀಶ್ ಎಂಬ ಮೌನ ಸಾಧಕ

ಎರಡನೇ ಬಹು ಮುಖ್ಯ ಅಂಶ ನಿತೀಶ್ ಆಡಳಿತಾವಧಿಯಲ್ಲಿನ ಅವರ ಅದ್ಭುತ ಸಾಧನೆ. ಎಲೆಕ್ಟ್ರಿಕಲ್ ಎಂಜಿನೀರಿಂಗ್ ಪದವೀಧರ ನಿತೀಶ್ ಭಾರತೀಯ ತಾಂತ್ರಿಕ ಸೇವೆಯಲಿದ್ದು ನಂತರ ರಾಜಕೀಯಕ್ಕೆ ಹೊರಳಿದವರು. ನಿತೀಶ್ ಅತ್ಯಧ್ಭುತ lalu_nitishಪ್ರತಿಭಾವಂತ ಆಡಳಿತಗಾರ. ೨೦೦೯ ರಲ್ಲಿ ಲೋಕಪಾಲದ ಸುದ್ದಿಯೇ ಇಲ್ಲದಾಗ ಅತ್ಯಂತ ಪುರೋಗಾಮಿ ಬಿಹಾರ ವಿಶೇಷ ನ್ಯಾಯಾಲಯಗಳ ಕಾಯಿದೆ, ೨೦೦೯ ನ್ನು ಜಾರಿಗೆ ತಂದು ಸದ್ದಿಲ್ಲದೇ ಬ್ರಷ್ಟಾಚಾರವನ್ನು ಮಟ್ಟ ಹಾಕಿದರು. ಬ್ರಷ್ಟ ಅಧಿಕಾರಿಗಳ ಮನೆಗಳನ್ನು ಜಪ್ತಿ ಮಾಡಿ ಶಾಲೆ, ಆಸ್ಪತ್ರೆ, ಗ್ರಂಥಾಲಯ ಮತ್ತು ಸಮುದಾಯ ಭವನಗಳನ್ನಾಗಿ ಪರಿವರ್ತಿಸಿಬಿಟ್ಟರು. ಬಿಹಾರ ಅರ್ಥಿಕ ಪ್ರಗತಿಯ ಹೊಸ ಮೈಲುಗಲ್ಲು ಮೀಟಿತು. ನಿತೀಶ್ ಹಳ್ಳಿ ಹಳ್ಳಿ ಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ  ಶಾಲೆ ಮತ್ತು ಉದ್ಯೋಗ ಪಸರಿಸಿದರು. ಹೆಣ್ಣು ಮಕ್ಕಳಿಗೆ ಉಚಿತ ಸಮವಸ್ತ್ರ, ಸೈಕಲ್ ಮತ್ತು ವಿದ್ಯಾರ್ಥಿ ವೇತನ ಜಾರಿ ಮಾಡಿದರು. ಮಧ್ಯಾಹ್ನದ ಊಟ ಯೋಜನೆ ಅತ್ಯಂತ ಸಮರ್ಪಕವಾಗಿ ಜಾರಿ ಮಾಡಿದರು. ಆರು ಗಂಟೆಯ ಮೇಲೆ ಹೆಣ್ಣುಮಕ್ಕಳು ಹೋಗಲಿ ಗಂಡಸರೇ ಮನೆಯಿಂದ ಹೊರಬರುವ ಪ್ರಮೇಯವಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ನಿತೀಶ್ ಈ ಚಿತ್ರಣ ಬದಲಿಸಿಬಿಟ್ಟರು. ಕಾನೂನು ಸುವ್ಯವಸ್ಥೆ ಸ್ಥಾಪನೆಯಾದ ನಂತರದಲ್ಲಿ ಬಿಹಾರದ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾನ್ವಿತ ವರ್ಗ ಭಾರತದ ಮತ್ತು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದು ಬಿಹಾರದಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯಾಪಾರ ಕೈಗೊಂಡರು. ೨೦೧೩ ರಲ್ಲಿ ವಾಣಿಜ್ಯ ಸಂಸ್ಥೆ ಬಿಹಾರ ಮತ್ತು ಗುಜರಾತ್ ಮಧ್ಯೆ ಹೋಲಿಕೆ ಮಾಡಿ ಒಂದು ವರದಿ ಮಾಡಿತು. ಈ ವರದಿಯ ಪ್ರಕಾರ ಗುಜರಾತ್ ಖಾಸಗಿ ವಲಯಕ್ಕೆ ಮಣೆ ಹಾಕಿ ಬಂಡವಾಳ ಹೂಡಿಸಿ ಲಾಭ ಮಾಡಿಸಿದ್ದರೆ, ಬಿಹಾರದಲ್ಲಿ ಸರಕಾರವೇ ಅಗತ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಲಾಭ ಜನರಿಗೇ ದಕ್ಕುವಂತೆ ಮಾಡಿತ್ತು. ಬಡವರ ಹೊಟ್ಟೆ ಮೇಲೆ ಹೊಡೆದು ಭೂಮಿ ವಶಪಡಿಸಿಕೊಳ್ಳದೇ, ಯಾವುದೇ ಅಬ್ಬರದ ಪ್ರಚಾರ ವಿಲ್ಲದೆ, ಸೇಡು ದ್ವೇಷದ ರಾಜಕಾರಣ ಮಾಡದೇ ನಿತೀಶ್ ಅತ್ಯಧ್ಭುತವನ್ನು ಸಾಧಿಸಿ ತೋರಿಸಿದ್ದರು. ಲಾಲೂ ಬಗ್ಗೆ ಅಲ್ಲಲ್ಲಿ ಅಸಮಾಧಾನವಿದ್ದ ಮೇಲ್ವರ್ಗ ಕೂಡ ನಿತೀಶ್ ಎಂದರೆ ಗೌರವಿಸುತ್ತಿತ್ತು. ಮೋದಿಯವರು ನಿತೀಶ್ರ ಕುರಿತು ವಯಕ್ತಿಕ ಟೀಕೆ ಮಾಡಿದಾಗ ನಿತೀಶ್ ಆಡಳಿತದ ಸಮಬಾಳ್ವೆಯ ಮಹತಿ ಅರಿತಿದ್ದ ಈ ವರ್ಗ ತನ್ನ ಸೇಡು ತೀರಿಸಿಕೊಂಡಿತು.

ಕೇಂದ್ರದ ಕುರಿತ ಹತಾಶೆ    

ಮೂರನೆಯ ಕಾರಣ,  ಬಿಹಾರದ ಜನತೆಗೆ ಮೋದಿ ಆಡಳಿತದ ಕುರಿತು ಆದ ತೀವ್ರ ಹತಾಶೆ. ಲೋಕಸಭಾ ಚುನಾವಣೆಯಲ್ಲಿ ನಲವತ್ತರಲ್ಲಿ ಮೂವತ್ತೊಂದು ಸ್ಥಾನ ಗೆದ್ದ ಬಿಜೆಪಿಯಿಂದ ಜನತೆಗೆ ಅಪಾರ ನಿರೀಕ್ಷೆಗಳಿದ್ದವು. ಬಿಹಾರ ಆರ್ಯಭಟನ ನಾಡು ಇಲ್ಲಿಯ ಜನಸಾಮಾನ್ಯರೂ ಗಣಿತದಲ್ಲಿ ಮಹಾ ಪ್ರಕಾಂಡರು! ಮೋದಿಯವರ ಲೋಕ ಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಪ್ಯಾಕೇಜ್ ನ ಒಂದೊಂದು ರೂಪಾಯಿಯ ಲೆಕ್ಕವನ್ನೂ ಬಾಯಲ್ಲೇ ಹೇಳುವಷ್ಟು ಬುದ್ಧಿವಂತರು. ಇವರ ನಿರೀಕ್ಷೆಗಳು ಸಂಪೂರ್ಣ bihar-modi-nitishಸುಳ್ಳಾಗಿ ಜನಜೀವನ ಇನ್ನಷ್ಟು ದುರ್ಭರವಾದಾಗ ಮೋದಿಯವರ ಮೂವತ್ತೈದು ಸಭೆಗಳ ಸೇಡುಭರಿತ ವಯಕ್ತಿಕ ಟೀಕೆಭರಿತ ಭಾಷಣಗಳು ಜನತೆಗೆ ಕರ್ಕಶ ಶಬ್ದದಂತೆ ಕೇಳಿಸಿದವು.

ನಿತೀಶ್ ಲಾಲೂ ಜೋಡಿಯ ಬಿಹಾರದ ಗೆಲುವಿಗೆ ದೀರ್ಘಕಾಲೀನ ಐತಿಹಾಸಿಕ ಕಾರಣಗಳಿವೆ. ಬರಿ ಪ್ರಚಾರ ವೈಖರಿ, ಸೇಡಿನ ಭಾಷಣ, ಒಬ್ಬ ವ್ಯಕ್ತಿಯ ಚಾತುರ್ಯ ಯಾವ ಚುನಾವಣೆಯನ್ನು ಗೆಲ್ಲಿಸಲೂ ಸಾಧ್ಯವಾಗದು.

ಕೋಮು ಭಾವನೆಗಳ ತಿರಸ್ಕಾರ

ಇನ್ನೊಂದು ಕಾರಣ ಬಿಹಾರದ ಮತದಾರ MIM ನಂಥಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳ ಬಗ್ಗೆ ಸ್ಪಷ್ಟತೆ ಮೆರೆದದ್ದು. ನಿತೀಶರ ಒಂದು ಕಾಲದ ಬಿಜೆಪಿ ಮೈತ್ರಿಯನ್ನು ಮುಂದಿಟ್ಟು ಮುಸ್ಲಿಮರಿಗೆ ತಮ್ಮದೇ ಜನಾಂಗದ ನಾಯಕತ್ವದ ನೆಲೆ ಬೇಕು ಎಂದು ಪ್ರಚಾರ ಮಾಡಿ ಒಂದು ಒಕ್ಕೂಟದ ಭಾಗವಾಗಿ ಸ್ಪರ್ಧಿಸಿದ ಪಪ್ಪು ಮತ್ತು ಒವೈಸಿಗಳು ಗಾಳಿಯಲ್ಲಿ ತೂರಿಹೊಗಿದ್ದಾರೆ. ಮಹಾರಾಷ್ಟ್ರದಲ್ಲಾದಂತೆ ಮುಸ್ಲಿಂ ಮೂಲಭೂತವಾದಿ ಪಕ್ಷ MIM ಗೆ ಯಾವ ಬೆಂಬಲವೂ ಸಿಕ್ಕಿಲ್ಲ. ‘ಅತಿಂ ಸರ್ವತ್ರ ವರ್ಜಯೇತ್’ bjp-bihar-election-amitshahಎಂಬಂತೆ ಹಿಂದೂ ಮತ್ತು ಮುಸ್ಲಿಂ ಕೋಮುವಾದಕ್ಕೆ ಬಲಿಯಾಗದೇ ಬಿಹಾರದ ಜನತೆ ತಮ್ಮ ಬೌದ್ಧಿಕ ಮತ್ತು ನೈತಿಕ ಬಲ ಪ್ರದರ್ಶಿಸಿದ್ದಾರೆ. ತಮ್ಮ ವೋಟು ಒಡೆಯಲು ಮಾಡಿದ ಸಂಚನ್ನು ಮತದಾರರು ತುಂಬಾ ಸರಿಯಾಗಿ ಗ್ರಹಿಸಿದರು. ಗೋವನ್ನು ಬಳಸಿ ಸಮಾಜವನ್ನು ಕೋಮು ಆಧಾರದ ಮೇಲೆ ಒಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ.

ಶರದ್ ಯಾದವ್ ಎಂಬ ಮುತ್ಸದ್ದಿ

ಇನ್ನೊಂದು ಮುಖ್ಯ ಕಾರಣ ರಾಷ್ಟ್ರ ಮಟ್ಟದಲ್ಲಿ ಮೀಡಿಯಾ ಮತ್ತು ಬುದ್ಧಿಜೀವಿಗಳನ್ನು ತಮ್ಮೊಂದಿಗೆ ಸೆಳೆಯಲು ಸಮರ್ಥರಾದ ಜೆಡಿಯು ಅಧ್ಯಕ್ಷರಾದ ಶರದ್ ಯಾದವ್. ಇವರು ಇಂಜಿನಿಯರಿಂಗ್ ಪದವಿಯಲ್ಲಿ ಸ್ವರ್ಣ ಪದಕ ಪಡೆದ ಪ್ರತಿಭಾವಂತ. ಇವರ ನಿರೀಕ್ಷೆ ಎಷ್ಟು ನಿಖರವಾಗಿತ್ತೆಂದರೆ ಚುನಾವಣಾ ಫಲಿತಾಂಶ ಬರುವ ಕೆಲವೇ ದಿನಗಳ ಮೊದಲು ಶರದ್ ಯಾದವ್ ತಮಗೆ ೧೫೦ ಸ್ಥಾನಗಳು ಖಚಿತ ಎಂದು ನುಡಿದಿದ್ದರು. ನಿತೀಶ ಗಿಂತ ಸಾಕಷ್ಟು ಹಿರಿಯರೂ ಆದ ಇವರು ನಿತೀಶ್ ನೇತೃತ್ವವನ್ನು ಶರತ್ತಿಲ್ಲದೇ ಒಪ್ಪಿ ಒಬ್ಬ ನೈಜ ಮುತ್ಸದ್ದಿಯಂತೆ ಕಾರ್ಯ ನಿರ್ವಹಿಸಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಗೌರವ ತಂದು ಕೊಟ್ಟರು.

ಮಮತೆಯ ಕರೆಯೋಲೆ

ಒಂದು ಚಿಕ್ಕ ಆದರೆ ಕಡೆಗಣಿಸಲು ಆಗದ ಅಂಶವೆಂದರೆ, ಮಮತಾ ಬ್ಯಾನರ್ಜಿ ಬಿಹಾರದ swabhimaan-rally_sonia-nitish-laluಜನತೆಗೆ ಮಹಗಠ ಬಂಧನದ ಪರ ನಿಲ್ಲಲು ಕರೆ ಕೊಟ್ಟರು. ಸೀಮಂಚಲವೆಂದು ಕರೆಯಲ್ಪಡುವ ಪುರ್ನಿಯ, ಕಟಿಹಾರ್, ಕಿಷೆನ್ ಗಂಜ್, ಅರಾರಿಯ, ಮಿಥಿಲ ಪ್ರಾಂತ ಗಳಲ್ಲಿ ಸಾಕಸ್ಟು ಸಂಖ್ಯೆಯಲ್ಲಿರುವ ಬಂಗಾಳಿಗಳು ಲಾಲೂ ನಿತೀಶ್ ಪರ ನಿಂತರು. ಜಾತ್ಯತೀತ ವೋಟಿನ ವಿಭಜನೆಯಾಗದಂತೆ ತಡೆಯುವಲ್ಲಿ  ಕೆಜ್ರಿವಾಲ್ ಮತ್ತು ಮಮತಾ ಬೆಂಬಲ ರಾಷ್ಟ್ರೀಯ ವಾಗಿಯೂ ಮಹತ್ತರವಾಗಿತ್ತು. ಬಿಹಾರದ ಚುನಾವಣಾ ರಂಗ ಸಮಾನ ಮನಸ್ಕರನ್ನು ಒಂದು ಮಾಡಿತು.

ಕಾಂಗ್ರೆಸ್ ಪುನರುಜ್ಜೀವನ

ಕಾಂಗ್ರೆಸ್ ಪ್ರಚಾರವನ್ನು ಸಾಕಷ್ಟು ಕಡಿಮೆ ಗೊಳಿಸಿದ ಬಿಹಾರದ ಸ್ಥಳೀಯ ನಾಯಕತ್ವ ಅನಗತ್ಯ ಗೊಂದಲಗಳನ್ನು ನಿವಾರಿಸಿತು. ರಾಹುಲ್ ಭಾಷಣದ ಟೀಕೆ, ಸೋನಿಯಾರ ಭಾಷೆಯ ಕುರಿತು ಅನಗತ್ಯ ವಿವಾದ ಇತ್ಯಾದಿ ಇಲ್ಲಿ ಕಾಣಸಿಗಲೇ ಇಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಮರುಜೀವ ಪಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ವೋಟು ಸಿಗದೇ ಹೋಗಬಹುದು ಆದರೆ ಕಾಂಗ್ರೆಸ್ಸಗೆ ಅಲ್ಲಿ ಬಹು ದೊಡ್ಡ ಸಂಘಟನೆಯಿದೆ. ಇದರ ಸಂಪೂರ್ಣ ಲಾಭ ಈ ಬಾರಿ ದಕ್ಕಿದೆ.

ಪ್ಯಾಕೇಜ್ ಮರೆಯದಿರಲಿ

ಇನ್ನೊಂದು ಮಾತು. ಜನರು ತಮ್ಮ ನಾಯಕರ ಗುಣಾವಗುಣಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಕಡೆ ತುಂಬಾ ನಿರೀಕ್ಷೆ ಇಟ್ಟುಕೊಂಡ ಒಬ್ಬ ಪ್ರಧಾನ ಮಂತ್ರಿಯವರು ರಾಜಕೀಯ ವಿರೋಧಿಗಳ ಕುಟುಂಬ, ಮಕ್ಕಳು ಇತ್ಯಾದಿಗಳ ಕುರಿತು ಟೀಕೆ ಮಾಡುತ್ತಿದ್ದಾರೆ, ಒಬ್ಬ ನೈಜ ಮುತ್ಸದ್ದಿಯ ಮಾದರಿಯಲ್ಲಿ ಯಾವುದಕ್ಕೂ ತೀಕ್ಷ್ಣವಾಗಿ ಮತ್ತು ವಯಕ್ತಿಕ ಮಟ್ಟಕ್ಕಿಳಿದು ಪ್ರತಿಕ್ರಯಿಸದ ಲಾಲೂ-ನಿತೀಶರನ್ನೂ ಮೌನವಾಗಿ ತುಲನೆ ಮಾಡುತ್ತಿತ್ತು. ಜನತೆಯ ತೀರ್ಮಾನ ಈಗ ದೇಶದ ಮುಂದಿದೆ. ತಮ್ಮ ಒಂದು ಕಾಲದ ಬಲಗೈ modi-in-biharಬಂಟ ಪಪ್ಪು ಯಾದವ್ ಮತ್ತವರ ಹೆಂಡತಿಯ ತಮ್ಮ ಸುಭಾಷ್ ಯಾದವ್ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ‘ಲಾಲು ಸುಮ್ಮನೇ ವೋಟು ಒಡೆಯಲು ಕಣದಲ್ಲಿದ್ದಾರೆ; ಗೆಲವು ಖಂಡಿತಾ ನಮ್ಮದೇ ಎಂದಾಗ’, ಲಾಲೂ ಅವರಿಗೆ ಸೊಪ್ಪು ಕೂಡ ಹಾಕಲಿಲ್ಲ. ಮೋದಿಯವರು ಅತಿಯಾಗಿ ಕೆಣಕಿದಾಗ ಮಾತ್ರ ಲಾಲೂ ಮೋದಿಯವರಿಗೆ ತಾಕತ್ತಿದ್ದರೆ ತಮ್ಮೊಂದಿಗೆ ಇಂಗ್ಲಿಷ್ ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು. ಈ ಸವಾಲನ್ನು ಮೋದಿಯವರು ಸ್ವೀಕರಿಸುವ ಔದಾರ್ಯ ತೋರಲಿಲ್ಲವೇಕೋ?

ಬಿಹಾರದ ಗೆಲುವು ಮೈಮರೆಸಬಾರದು. ಜನತೆಯ ಹೆದರಿಕೆ ಬರುವಷ್ಟು ಅಪಾರ ಪ್ರಮಾಣದ ನಿರೀಕ್ಷೆ ನೋಡಿದರೆ ನಿತೀಶ್ ರ ಜವಾಬ್ದಾರಿ ಎಷ್ಟು ದೊಡ್ಡದು ಎಂದು ಗೋಚರವಾಗುತ್ತದೆ.

ಹಾಗೆಯೇ, ನಿತೀಶರನ್ನು ಒಬ್ಬ ವೈರಿಯಂತೆ ಕಾಣದೇ ಈ ದೇಶದ ಪ್ರಧಾನಿಗಳು ತಾವು ಆಶ್ವಾಸನೆ ನೀಡಿದಂತೆ ಬಿಹಾರದ ಜನತೆಗೆ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೊಟ್ಟು ಒಬ್ಬ ನೈಜ ಮುತ್ಸದ್ದಿಯಂತೆ ನಡೆದುಕೊಳ್ಳಬೇಕು.

ಲಾಲೂ ಅವರೊಂದಿಗೆ ಇಂಗ್ಲಿಷ್ ಸಂವಾದದ ಸವಾಲು ಮರೆತರೂ ಪರವಾಗಿಲ್ಲ ಮೂವತ್ತೊಂದು ಸಂಸದರನ್ನು ತಮಗೆ ಕೊಟ್ಟ ಬಿಹಾರದ ಅಭಿವೃದ್ಧಿಯ ಪ್ಯಾಕೇಜ್ ಮಾತ್ರ ಮರೆಯಬಾರದು.

ಬುದ್ಧ ನಕ್ಕ ನಾಡು ಬಿಹಾರ ಹೌದಾದರೂ, ಮಾತಿಗೆ ತಪ್ಪಿದರೆ, ಪಾಟಲಿಪುತ್ರದ ಚಾಣಕ್ಯನ ಮಾದರಿ ಸೇಡು ತೀರಿಸದೆ ಸುಮ್ಮನಿರುವ ಜಾಯಮಾನದ್ದಲ್ಲ!

27 thoughts on “ಪ್ರತಿ ಸವಾಲಿಗೂ ಸಿದ್ಧ ಉತ್ತರ – ಬುದ್ಧ-ಚಾಣಕ್ಯರ ಬಿಹಾರ

  1. ಸೀತಾ

    ಲಾಲೂ-ನಿತೀಶ್ ಜೋಡಿಯ ವಿಜಯದ ಅಸಲೀ ರೂವಾರಿಗಳಾದ ಬಿಹಾರದ ಮತದಾರರಿಗೆ ಅಭಿನಂದನೆಗಳು. ಈ ಗೆಲುವಿನ ಲಾಭವನ್ನು ಲಾಲೂ-ನಿತೀಶ್ ಜೋಡಿ ಇನ್ನೈದು ವರ್ಷಗಳ ಕಾಲ ಪಡೆಯುವಾಗ ಮತದಾರರನ್ನು ಮರೆಯದಿರಲಿ.

    Reply
  2. Ananda Prasad

    ಬಿಹಾರದ ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಸಲ ನಿಜವಾದ ಫಲಿತಾಂಶಕ್ಕೆ ಹತ್ತಿರದ ಸಮೀಕ್ಷೆ ನೀಡುತ್ತೇವೆ ಎಂಬ ಹೆಗ್ಗಳಿಕೆ ಹೊಂದಿದ್ದ ಚಾಣಕ್ಯದ ಸಮೀಕ್ಷೆ ಸಂಪೂರ್ಣ ತಿರುವುಮುರುವಾಯಿತು. ಚಾಣಕ್ಯದ ಚುನಾವಣೋತ್ತರ ಸಮೀಕ್ಷೆ ಈ ಬಾರಿ ಬಿಜೆಪಿ ಮೈತ್ರಿಕೂಟಕ್ಕೆ ೧೫೫ ಸೀಟುಗಳನ್ನು ನೀಡಿತ್ತು ಆದರೆ ನಿಜವಾದ ಫಲಿತಾಂಶ ಬಂದಾಗ ಇದರಿಂದ ಹತ್ತಿರ ಹತ್ತಿರ ನೂರು ಸೀಟುಗಳನ್ನು ಕಳೆಯಬೇಕಾಗಿ ಬಂತು. ಅತಿ ನಂಬಿಕೆಯ ಸಮೀಕ್ಷೆ ಎಂಬ ಗರಿಯನ್ನು ಮುಡಿಗೇರಿಸಿಕೊಂಡವರ ಸಮೀಕ್ಷೆ ಈ ರೀತಿ ತಲೆಕೆಳಗಾದರೆ ಇವರ ವಿಶ್ವಾಸಾರ್ಹತೆ ಹೇಗೆ ಉಳಿದೀತು?

    ದೇಶಾದ್ಯಂತ ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು, ಕಲಾವಿದರು ದೇಶದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ವಿರುದ್ಧ ಸೌಮ್ಯ ಪ್ರತಿಭಟನೆಯ ರೂಪದಲ್ಲಿ ಪ್ರಶಸ್ತಿ ವಾಪಸ್ ಮಾಡಿದ ವಿದ್ಯಮಾನ ಚುನಾವಣಾ ಫಲಿತಾಂಶದ ಮೇಲೆ ಖಚಿತವಾಗಿಯೂ ಪ್ರಭಾವ ಬೀರಿದೆ. ಅಧಿಕಾರದ ಅಮಲಿನಲ್ಲಿ ಬಿಜೆಪಿ ಇದನ್ನು ಕಾಂಗ್ರೆಸ್ ಸಾಹಿತಿಗಳ ಪ್ರತಿಭಟನೆ ಎಂದು ರಾಜಕೀಯಕರಣಗೊಳಿಸಿದರೂ, ಲೇವಡಿ ಮಾಡಿದರೂ ಪ್ರಶಸ್ತಿ ವಾಪಸ್ ಮಾಡಿದವರು ನೈಜ ಕಾಳಜಿಯಿಂದ ಮಾಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಪ್ರಶಸ್ತಿ ವಾಪಾಸ್ ಮಾಡಿದ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಹಾಗೂ ಈ ಕುರಿತು ದನಿಯೆತ್ತಿದವರು ಪ್ರಗತಿಪರ, ಮಾನವೀಯ ಕಾಳಜಿಯ, ಉದಾರವಾದಿ ವ್ಯಕ್ತಿತ್ವ ಹೊಂದಿದವರು. ಪ್ರಪಂಚದ ಸಾಹಿತಿಗಳು, ವಿಜ್ಞಾನಿಗಳು, ಚಿಂತಕರಲ್ಲಿ ಬಹುತೇಕರು (ಶೇಕಡಾ ೯೦ಕ್ಕೂ ಅಧಿಕ) ಪ್ರಗತಿಪರ ಚಿಂತನೆ ಹೊಂದಿದವರೇ ಆಗಿದ್ದಾರೆ ಮತ್ತು ಅವರು ಇರಬೇಕಾದುದು ಕೂಡಾ ಹಾಗೆ ಏಕೆಂದರೆ ಅವರಿಗೆ ಉಳಿದ ಜನಸಾಮಾನ್ಯರಿಗಿಂತ ಹೆಚ್ಚಿನ ಪ್ರತಿಭೆ, ಚಿಂತನಾಶಕ್ತಿ ಇರುತ್ತದೆ. ಹೀಗಾಗಿ ಬುದ್ಧಿಜೀವಿಗಳು ಜನಸಾಮಾನ್ಯರಂತೆ ಸಂಕುಚಿತ ಮನೋಭಾವದಿಂದ ಚಿಂತಿಸಲು ಸಾಧ್ಯವಿಲ್ಲ. ಹೀಗಾಗಿಯೇ ಪ್ರಪಂಚದಾದ್ಯಂತ ಬುದ್ಧಿಜೀವಿಗಳ ಚಿಂತನೆಗಳಿಗೆ ಮಾನ್ಯತೆ ಇದೆ. ನಾಗರಿಕತೆ, ವಿಜ್ಞಾನ, ಸಾಹಿತ್ಯ, ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲು ಬುದ್ಧಿಜೀವಿಗಳ ಚಿಂತನೆಗಳೇ ಮೂಲಾಧಾರ ಎಂಬುದು ಎಲ್ಲರೂ ತಿಳಿಯಬೇಕಾದ ಅಗತ್ಯ ಇದೆ.

    ಮೋದಿಯವರು ವಿದೇಶಗಳಲ್ಲಿ ಹೋಗಿ ನಮ್ಮದು ಗಾಂಧಿ ಹಾಗೂ ಬುದ್ಧನ ನಾಡು ಎಂದು ತಾವು ಒಬ್ಬ ಉದಾರವಾದಿ ನಾಯಕನಂತೆ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಆದರೆ ದೇಶದೊಳಗೆ ಅದನ್ನು ಪಾಲಿಸುವುದಿಲ್ಲ. ಹೀಗಾಗಿಯೇ ದೇಶದ ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು ತಮ್ಮ ಪ್ರಶಸ್ತಿ ವಾಪಸ್ ಮಾಡುವಂಥ ಗಂಭೀರ ಪ್ರತಿಭಟನೆಗೆ ಇಳಿದಿದ್ದಾರೆ.

    ಬಿಹಾರದಲ್ಲಿ ನಡೆದ ಚುನಾವಣೆಗಳಲ್ಲಿ ಜನ ಮೋದಿ ನೇತೃತ್ವದ ಸರ್ಕಾರದ ವಿಫಲತೆಗೆ ಪ್ರತಿಫಲವಾಗಿ ತಮ್ಮ ಸಿಟ್ಟನ್ನು ತೋರಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಮೋದಿ ಸರ್ಕಾರ ತಾನು ಅಧಿಕಾರಕ್ಕೆ ಬರುವ ಮೊದಲು ನೀಡಿಯ ಯಾವ ಆಶ್ವಾಸನೆಗಳನ್ನೂ ಪೂರೈಸಿಲ್ಲ. ಇದರಿಂದ ಜನಸಾಮಾನ್ಯರು ಸಿಟ್ಟುಗೊಂಡಿದ್ದಾರೆ ಹಾಗೂ ಅವರ ಜೀವನ ಯುಪಿಎ ೨ ಸರ್ಕಾರದ ಅವಧಿಗಿಂತ ಹೆಚ್ಚು ದುರ್ಬರವಾಗಿದೆ. ಈ ಸಿಟ್ಟು ಬಿಹಾರದ ಚುನಾವಣೆಗಳಲ್ಲಿ ವ್ಯಕ್ತವಾಗಿದೆ. ಇಲ್ಲದಿದ್ದರೆ ಯಾರನ್ನು ಭ್ರಷ್ಟ ಹಾಗೂ ಜಂಗಲ್ರಾಜ್ ಜನಕ ಎಂದು ಮೋದಿ ಹಂಗಿಸಿದ್ದರೋ ಅಂಥ ಲಾಲೂ ಪಕ್ಷವನ್ನೇ ಅತಿ ದೊಡ್ಡ ಪಕ್ಷವಾಗಿ ಜನ ಚುನಾಯಿಸುತ್ತಿರಲಿಲ್ಲ.

    ಮೋದಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಡಾಲರ್ ವಿರುದ್ಧ ರೂಪಾಯಿ ದರ ಏರಲು ಕಾಂಗ್ರೆಸ್ ನೇತೃತ್ವದ ಸರ್ಕಾರದ ಅರ್ಥಿಕ ನೀತಿಯೇ ಕಾರಣ ಎಂದು ಹರಿಹಾಯ್ದಿದ್ದರು. ಮೋದಿ ಅಧಿಕಾರ ವಹಿಸಿಕೊಂಡಾಗ ಡಾಲರ್ ವಿರುದ್ಧ ರೂಪಾಯಿ ದರ ೫೯-೬೦ ರೂಪಾಯಿ ಆಸುಪಾಸು ಇತ್ತು. ಈಗ ಡಾಲರ್ ವಿರುದ್ಧ ರೂಪಾಯಿ ದರ ೬೬ ರೂಪಾಯಿಗೆ ಏರಿದೆ. ಇದರ ಪರಿಣಾಮವಾಗಿ ಆಮದು ವಸ್ತುಗಳ ಬೆಲೆ ಹೆಚ್ಚುತ್ತದೆ. ಈಗ ಡಾಲರ್ ವಿರುದ್ಧ ರೂಪಾಯಿ ದರ ಹೆಚ್ಚಲು ಯಾರು ಕಾರಣ ಎಂದು ಮೋದಿ ಹೇಳುತ್ತಾರೆ?

    Reply
  3. ಸೀತಾ

    “ದೇಶಾದ್ಯಂತ ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು, ಕಲಾವಿದರು ದೇಶದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ವಿರುದ್ಧ ಸೌಮ್ಯ ಪ್ರತಿಭಟನೆಯ ರೂಪದಲ್ಲಿ ಪ್ರಶಸ್ತಿ ವಾಪಸ್ ಮಾಡಿದ ವಿದ್ಯಮಾನ ಚುನಾವಣಾ ಫಲಿತಾಂಶದ ಮೇಲೆ ಖಚಿತವಾಗಿಯೂ ಪ್ರಭಾವ ಬೀರಿದೆ.”

    ಹೌದು ಆನಂದ ಪ್ರಸಾದ್, ಇವರೆಲ್ಲಾ ಎಡಪಂಥೀಯರು ಹಾಗೂ ಕಾಂಗ್ರೆಸ್ ಪಕ್ಷದ ಪರೋಕ್ಷ ಪ್ರೋತ್ಸಾಹದಿಂದಲೇ ಪ್ರಶಸ್ತಿ ವಾಪಾಸು ಮಾಡುವ ನಾಟಕ ಮಾಡಿದರು ಅಂತ ಎಲ್ಲರಿಗೂ ತಿಳಿದಿದೆ. ಬಿಹಾರ ಚುನಾವಣೆ ಹೊತ್ತಿಗೆ ಇವರ ನಾಟಕದ ಮೊದಲ ಅಂಕ ತಾರಕಕ್ಕೆ ಏರಿತ್ತು ಫಲಿತಾಂಶ ಬಂದ ನಂತರ. ತಿರುಗಿ ಅಸ್ಸಾಂ ಚುನಾವಣೆಯ ಹೊತ್ತಿಗೆ ನಾಟಕದ ಎರಡನೆಯ ಅಂಕ ಶುರುವಾಗಲಿದೆ. ಆಗಲಾದರೂ ಇವರು ಸರಕಾರದಿಂದ ಪಡೆದ ಪ್ರಶಸ್ತಿಗಳನ್ನಷ್ಟೇ ಅಲ್ಲ ಸೌಲತ್ತು ಲಾಭ (ಸೈಟು/ಅಪಾರ್ಟ್ಮೆಂಟ್/ಗ್ರಾಂಟ್ ಇತ್ಯಾದಿ)ವನೂ ಹಿಂದಿರುಗಿಸಲಿದ್ದಾರೆ ಎಂದು ಆಶಿಸೋಣವೇ?

    Reply
  4. G.W.Carlo

    ಮೇಲ್ಕಂಡ ಸಾಹಿತಿಗಳು ಪ್ರಶಸ್ತಿಯೊಂದಿಗೆ ಸೈಟು, ಅಪಾರ್ಟ್ ಮೆಂಟು ಇತ್ಯಾದಿ ಪಡೆದುಕೊಂಡಿದ್ದರೆ ಅದನ್ನೂ ಹಿಂದಿರುಗಿಸುವುದು ಸೀತಾ ಅವರು ಹೇಳಿದಂತೆ ಸರಿಯಾದ ಕ್ರಮ. ಇಂತವರ ಬಗ್ಗೆ ಸೀತಾರವರ ಬಳಿ ಮಾಹಿತಿ ಇರಬಹುದು. ದಯವಿಟ್ಟು ಅದನ್ನು ಪ್ರಕಟಿಸಿ ಅವರನ್ನು ಎಕ್ಸ್ ಪೋಸ್ ಮಾಡಿ ಸೀತಾರವರೆ,

    Reply
    1. ಸೀತಾ

      ಸ್ವತಹ ದೇವನೂರ ಮಹಾದೇವ ಅವರೇ ಹೇಳಿದ್ದಾರೆ ಪ್ರಶಸ್ತಿಗಳ ಕಾರಣದಿಂದ ತನಗೆ ಲಭಿಸಿದ ಸೌಲತ್ತು ಸೌಕರ್ಯ ಸ್ಥಾನಮಾನ ಹಿಂದಿರುಗಿಸಲಾಗುತ್ತಿಲ್ಲ ಆ ಬಗ್ಗೆ ಖೇದವಿದೆ ಅಂತ. ಅವರಿಗಿರುವ ಆತ್ಮಸಾಕ್ಷಿ ಮಿಕ್ಕ ಲೇಖಕರಲ್ಲಿ ಇಲ್ಲವೇ? ಅಥವಾ ಅವರೆಲ್ಲರೂ ಯಾರಾದರೂ ತಮ್ಮನ್ನು ಎಕ್ಸ್ ಪೋಸ್ ಮಾಡಲಿ ಎನ್ನುವಷ್ಟು ಭಂಡರಾಗಿದ್ದಾರೆಯೇ?

      ಆರ್ ಟಿ ಐ ಮೂಲಕ ಜಿ ಕೆಟಗರಿ ಸೈಟು ಪಡೆದವರ ಪಟ್ಟಿಯನ್ನು ತಾವೇ ಪಡೆಯಬಹುದು ಕಾರ್ಲೋ ಅವರೇ.

      Reply
  5. Ananda Prasad

    ದೇಶವು ಸ್ವಾತಂತ್ರ್ಯಾನಂತರ ಹಿಂದೆಂದೂ ಕಂಡರಿಯದ ಧಾರ್ಮಿಕ ಮೂಲಭೂತವಾದದತ್ತ ಹೊರಳುತ್ತಿದೆ. ಇದುವೇ ಇಂದು ದೇಶದಲ್ಲಿ ಕಂಡುಬರುತ್ತಿರುವ ಅಸಹನೆ ಹಾಗೂ ಅಸಹಿಷ್ಣುತೆಗೆ ಕಾರಣ. ಸ್ವಾತಂತ್ರ್ಯಾನಂತರ ಹಿಂದೆ ದೇಶದಲ್ಲಿ ಸಾಕಷ್ಟು ಕೋಮು ಗಲಭೆಗಳು, ಹತ್ಯಾಕಾಂಡಗಳು ನಡೆದಿವೆ ಆಗೆಲ್ಲ ಯಾಕೆ ಸಾಹಿತಿಗಳು, ಕಲಾವಿದರು ಪ್ರಶಸ್ತಿ ಮರಳಿಸಿಲ್ಲ ಎಂಬ ಒಂದು ಪ್ರಶ್ನೆಯನ್ನು ಆಡಳಿತದಲ್ಲಿರುವ ಬಿಜೆಪಿ ಹಾಗೂ ಅದರ ಸೈದ್ಧಾಂತಿಕ ಮಾರ್ಗದರ್ಶಕರು ಎತ್ತಿ ಈಗ ಪ್ರಶಸ್ತಿ ಮರಳಿಸಿದ, ಮರಳಿಸುತ್ತಿರುವವರ ಪ್ರತಿಭಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ತ್ತಿದ್ದಾರೆ. ಹಿಂದೆ ನಡೆದ ಯಾವುದೇ ಕೋಮುಗಲಭೆ, ಹತ್ಯಾಕಾಂಡಗಳಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಆಗುವ ಸನ್ನಿವೇಶ ನಿರ್ಮಾಣವಾಗಿರಲಿಲ್ಲ. ಇದೀಗ ಇಂಥ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿಯೇ ಸೂಕ್ಷ್ಮ ಸಂವೇದನಾಶೀಲರಾದ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಎಚ್ಚತ್ತುಕೊಂಡು ದೇಶದ ಜನಮಾನಸವನ್ನು ಎಚ್ಚರಿಸುವ ಸಲುವಾಗಿ ತಮ್ಮ ಪ್ರಶಸ್ತಿಗಳನ್ನು ಮರಳಿಸುತ್ತಿದ್ದಾರೆ. ಇಂದು ದೇಶದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಜನರು ಮತದಾನದ ಮೂಲಕ ಪೂರ್ಣ ಬಹುಮತ ನೀಡಿ ಸ್ಥಾಪಿಸಿರುವುದು ಧಾರ್ಮಿಕ ಮೂಲಭೂತವಾದಿಗಳ ಪರವಾಗಿರುವ ಸರಕಾರವಾಗಿದೆ. ಹೀಗಾಗಿ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ಅಪಾರ ಬಲ ಬಂದಿದೆ. ಇದರ ಪರಿಣಾಮವಾಗಿ ಸಮಾಜವು ಧಾರ್ಮಿಕ ಮೂಲಭೂತವಾದದತ್ತ ಹೊರಳುತ್ತಿದೆ. ಒಮ್ಮೆ ದೇಶದ ಹಿಡಿತ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಕೈಗೆ ಸಿಕ್ಕಿದರೆ ಅದರಿಂದ ಹೊರಬರುವುದು ಬಹಳ ಕಠಿಣ. ಇದಕ್ಕೆ ಉತ್ತಮ ಉದಾಹರಣೆ ಪಾಕಿಸ್ತಾನ.

    ಪಾಕಿಸ್ತಾನದಲ್ಲಿ ಚುನಾಯಿತ ಸರ್ಕಾರ ಇದ್ದರೂ ಧಾರ್ಮಿಕ ಮೂಲಭೂತವಾಗಿ ಸಂಘಟನೆಗಳು ಹಾಗೂ ಅವುಗಳಿಗೆ ಬೆಂಬಲವಾಗಿರುವ ಮಿಲಿಟರಿಯ ಅಪ್ಪಣೆ ಇಲ್ಲದೆ ಚುನಾಯಿತ ಸರ್ಕಾರ ಯಾವುದೇ ಕೆಲಸವನ್ನು ಸ್ವತಂತ್ರವಾಗಿ ನಡೆಸಲಾರದ ಪರಿಸ್ಥಿತಿ ಸ್ವಾತಂತ್ರ್ಯ ಲಭಿಸಿದ ಲಾಗಾಯ್ತಿನಿಂದ ಇದೆ. ಇಂಥ ಸ್ಥಿತಿ ನಮ್ಮ ದೇಶಕ್ಕೆ ಬರುವುದು ಬೇಡ ಎಂಬುದೇ ಎಚ್ಚತ್ತ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳ ಒಕ್ಕೊರಲ ದನಿಯಾಗಿದೆ. ನಮ್ಮ ದೇಶದಲ್ಲಿಯೂ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಆಡಳಿತ, ನ್ಯಾಯಾಂಗ, ಮಿಲಿಟರಿ, ಪೋಲೀಸ್ ಬಲ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಮಾಧ್ಯಮ ಸಂಸ್ಥೆಗಳು ಮೊದಲಾದ ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಪರವಾಗಿರುವ ಜನರನ್ನು ತೂರಿಸುವ ಕೆಲಸವನ್ನು ಆರಂಭಿಸಿವೆ. ಒಮ್ಮೆ ಇವುಗಳ ಆಯಕಟ್ಟಿನ ಸ್ಥಾನಗಳಿಗೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಲ್ಲಿ ತಮ್ಮ ಮೆದುಳು ತಿಕ್ಕಿಸಿಕೊಂಡ ವ್ಯಕ್ತಿಗಳು ಹಿಡಿತ ಸಾಧಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತಾ ಹೋಗುತ್ತದೆ ಹಾಗೂ ಅಂತಿಮವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಹೀಗೆ ಆಗದಂತೆ ಆರಂಭದಲ್ಲೇ ತಡೆಯುವುದು ವಿವೇಕ. ಆ ವಿವೇಕವನ್ನೇ ಈಗ ನಮ್ಮ ಎಚ್ಚತ್ತ ಸಾಹಿತಿಗಳು, ಚಿಂತಕರು, ಕಲಾವಿದರು, ವಿಜ್ಞಾನಿಗಳು ಮೊದಲಾದ ಸೂಕ್ಷ್ಮ ಮತಿಯ ಪರಿಸ್ಥಿತಿಯನ್ನು ಗ್ರಹಿಸಬಲ್ಲವರು ಮಾಡುತ್ತಿರುವುದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಮಾತಿನಂತೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಹುನ್ನಾರಗಳನ್ನು ಮೊಳಕೆಯಲ್ಲಿರುವಾಗಲೇ ಚಿವುಟಿಹಾಕುವುದು ವಿವೇಕ, ಇಲ್ಲದೆ ಹೋದರೆ ಮುಂದೆ ದೇಶದ ಜನರೇ ಇದರ ಕಹಿಫಲವನ್ನು ಪಾಕಿಸ್ತಾನ ಯಾವ ರೀತಿ ಅನುಭವಿಸುತ್ತಿದೆಯೋ ಅದೇ ರೀತಿ ನಮ್ಮ ದೇಶದಲ್ಲಿಯೂ ಅನುಭವಿಸಬೇಕಾದೀತು.

    Reply
  6. Salam Bava

    ” ಸಂತ ,ಸಾಹಿತಿ ದೇವನೂರ ಮಹಾದೇವ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಶನಿವಾರ ವಾಪಸು ಮಾಡಿದ್ದಾರೆ.
    ಈ ಸಂಬಂಧ ಪ್ರಶಸ್ತಿಯ ಮೊತ್ತ  25 ಸಾವಿರ ನಗದು ಹಿಂತಿರುಗಿಸಿದ್ದಾರೆ. ಅವರ ಹೇಳಿಕೆ -‘ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ, ಹತ್ಯೆ ಮಾಡಿದವರ ಪತ್ತೆಗೆ ವಿಶೇಷ ತಂಡ ರಚಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.ಯಾವುದೇ ಆಳ್ವಿಕೆಯು ಸಂವೇದನಾಶೀಲವಾಗಲು ಹಾಗೂ ಸಮಾಜಮುಖಿಯಾಗಲು ಲೇಖಕ, ಕಲಾವಿದ, ಪ್ರಜ್ಞಾವಂತರು ಸರ್ಕಾರಕ್ಕೆ ಅಂಕುಶದಂತೆ ಇರಬೇಕು ಎಂದು ನಂಬಿಕೊಂಡಿರುವ ನಾನು, ಇತ್ತೀಚಿನ ‘ಅಸಹಿಷ್ಣುತೆಗಾಗಿ ಪ್ರಶಸ್ತಿ ಹಿಂತಿರುಗಿಸುತ್ತಿರುವ’ ಈ ಸಂದರ್ಭದಲ್ಲಿ ನನ್ನ ಸ್ವಭಾವಕ್ಕೆ ವಿರುದ್ಧವಾಗಿ ಸಂಯಮಿಸಿಕೊಂಡೇ ಬಂದೆ. ಆದರೆ, ಯಾವಾಗ ಕೆಲ ಲೇಖಕ–ಕಲಾವಿದರು ಆಳ್ವಿಕ ಪರ ಸಂಘಟಿತರಾಗಿ ನಿಂತರೋ ಅದು ಕೇಡಿನ ಲಕ್ಷಣ ಅನ್ನಿಸಿಬಿಟ್ಟಿತು. ಇದಕ್ಕೆ ಜಿಗುಪ್ಸೆಗೊಂಡು, ನಾನು ಪಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದೇನೆ. ಈಗ ಹಿಂತಿರುಗಿಸುತ್ತಿರುವುದು ಸಾಂಕೇತಿಕವಾಗಿ ಮಾತ್ರವೆ. ಯಾಕೆಂದರೆ, ಅವುಗಳನ್ನು ಪಡೆದಿದ್ದರಿಂದ ಪರೋಕ್ಷವಾಗಿ ಪಡೆದಿರಬಹುದಾದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚವೂ ನನಗಿದೆ.”
    ಈ ಒಂದು ಪ್ರಶಸ್ತಿ ವಾಪಸಾತಿ ಕ್ರಿಯೆ ಇಡೀ ಪ್ರಕ್ರಿಯೆಗೆ ಇನ್ನೂ ಹೆಚ್ಹಿನ ಕ್ರೆಡಿಬಿಲಿಟಿ ಯನ್ನು ಕೊಟ್ಟಿದೆ ,ಇಂದು ದೇಶದ ಉದ್ದಗಲಕ್ಕೂ ಅಸಹಿಷ್ಣುತೆಯ ಆಕೃತಿಗಳು ಅಂಗೈಮೇಲಿನ ನಲ್ಲಿಕಾಯಿಯಷ್ಟು ಸ್ಪಷ್ಟವಾಗಿ ಕಾಣುತ್ತಿವೆ. ಈ ಸತ್ಯವನ್ನು ರಾಜಕೀಯ ವ್ಯಕ್ತಿಗಳು ಮರೆ ಮಾಚುವುದು ಅಥವಾ ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಳ್ಳುವುದು ನಮಗೆ ಅಂತಹ ಆಶ್ಚರ್ಯಕರ ವಿಷಯವಾಗಿ ಕಾಣುವುದಿಲ್ಲ. ಆದರೆ ಅನುಪಮ್ ಖೇರ್ ರಂಥಾ ಅನೇಕ ಪ್ರತಿಭಾವಂತ ಬರಹಗಾರರು, ಬುದ್ಧಿಜೀವಿಗಳು ‘ಅಸಹಿಷ್ಣುತೆ ಎಂಬುದು ಎಲ್ಲಿದೆ? ಕೆಲವು ಅಹಿತಕರ ಘಟನೆಗಳಿಗೆ ಬಣ್ಣಕಟ್ಟಿ ದೇಶದ ಮಾನವನ್ನು ಹರಾಜಿಗಿಡಬೇಡಿ, ನಮ್ಮದು ಸಹಿಷ್ಣುತೆಯ ದೇಶ, ಈಗ ಎಲ್ಲೆಲ್ಲೂ ಸಹಿಷ್ಣುತೆ ತುಂಬಿ ತುಳುಕುತ್ತಿದೆ’ ಎಂದು ಹೇಳಿಕೆ ನೀಡುತ್ತ ತಮ್ಮ ಆತ್ಮಸಾಕ್ಷಿಯನ್ನು ಒತ್ತಿಗಿಟ್ಟಿದಾರೆ . ತಮ್ಮದೇ ಸಹಕಲಾವಿದ ಶಾರುಕ್ ಖಾನ್ ತಮ್ಮ ಆತ್ಮ ಸಾಕ್ಹಿಗೆ ಅನುಗುಣವಾಗಿ ಒಂದು ಹೇಳಿಕೆ ಕೊಟ್ಟದ್ದಕೆ ,ಅವರನ್ನು ಮಾನಸಿಕ ಪೀಡನೆಗೆ ಒಳಪಡಿಸಿದಾಗ ಒಂದೇ, ಒಂದು ಸಾಂತ್ವನ ಹೇಳದೆ ,ದೆಲ್ಹಿಗೆ ಬಾಡಿಗೆಯ ನಿಯೋಗ ಕೊಂಡೋದರು .
    ಪ್ರಶಸ್ತಿ ಹಿಂದಿರುಗಿಸಿದವರ ಕುರಿತಾಗಿ – ಅವರು ಎಡಪಂಥೀಯರು ,ಕಾಂಗ್ರಸ್ ಅನುಭಾವಿಗಳು ,ದೇಶದ್ರೋಹಿಗಳು ,ಸೈಟ್ ವಾಪಸು ಮಾಡದವರು ಎಂದೆಲ್ಲಾ ನಿರಂತರ ಪ್ರಹಾರ ನಡೆಯುತ್ತಿದೆ . ಹಿಂದಿ ಸಾಹಿತಿ ಉದಯ ಪ್ರಕಾಶ್ ,ನಯನತಾರ ಸೈಗಲ್ ರಿಂದ ಹಿಡಿದು ನಮ್ಮ ದೇವನೂರರ ತನಕ ಸಾದಾರಣ ೫೫ ಜನರ ಪ್ರಾಮಾಣಿಕತೆಯನ್ನು ,ಅವರ ಬದ್ದತೆಯನ್ನು ಯಾವ ಓರ್ವ ಸಾದಾರಣ ಅರಿವಿನ ವ್ಯಕ್ತಿಯೂ ಪ್ರಶ್ನಿಸಲಾರ ,ಆದರೆ ಸಂಘ ಪರಿವಾರಿ ಬೆಂಬಲಿಗರಿಗೆ ಕೇವಲ ಅವರ ನೇರ ಮಾತ್ರಾ ಕಾಣುವುದು ! ದೇಶದ ಪ್ರತಿ ಷ್ತ್ಘಿತ ,ಬಲಪಂಥಿಯ ಮತ್ತು ಮೋದಿ ಬೆಂಬಲಿಗ ವೀಕ್ಲಿ “ಇಂಡಿಯಾ ಟುಡೇ” ಸಹಾ ತನ್ನ ಲೇಖನದಲ್ಲಿ ಈ ತರಹದ ಅಸಹಿಷ್ಣುತೆಯನ್ನು ತೀವ್ರವಾಗಿ ಖಂಡಿಸಿದೆ .
    ಎಲ್ಲಾ ಶಾಂತಿಪ್ರಿಯ ,ದೇಶಪ್ರೇಮಿ ಭಾರತೀಯರೂ ಈ ಸಾಹಿತಿಗಳ ,ಬುದ್ದಿಜೀವಿ ಗಳ ಕ್ರಮಕ್ಕೆ ಬೆಂಬಲ ಕೊಡಬೇಕು. ತಮ್ಮ ಜೀವನಕ್ರಮ ,ಮತ್ತು ಜೀವವನ್ನೇ ಪಣಕ್ಕಿಟ್ಟು ದೇಶದ ಸಾಂವಿದಾನಿಕ ಮೌಲ್ಯಗಳ ರಕ್ಷಣೆಗೆ ನಿಂತ ಅವರನ್ನು ಅಭಿನಂದಿಸಬೇಕು . ಅವರ ಈ ಕ್ರಮ ಸಹಾ ಬಿಹಾರದ ಪಲಿತಾಂಶದಲ್ಲಿ ಗುಣಾತ್ಮಕವಾಗಿ ಪರಿಣಾಮ ಬೀರಿದೆ .

    Reply
    1. ಸೀತಾ

      ‘ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ, ಹತ್ಯೆ ಮಾಡಿದವರ ಪತ್ತೆಗೆ ವಿಶೇಷ ತಂಡ ರಚಿಸಬೇಕು’

      ಕರ್ನಾಟಕ ಸರಕಾರ ಏಕೆ ಈ ಬಗ್ಗೆ ಇನ್ನೂ ಕಾರ್ಯೋನ್ಮುಖವಾಗಿಲ್ಲ? ದೇವನೂರ ಮಹದೇವ ಅವರ ಸಮಾಜವಾದಿ ಸ್ನೇಹಿತರೇ ಆಗಿರುವ ಮಾನ್ಯ ಜನನಾಯಕ ಸಿದ್ದರಾಮಯ್ಯನವರು ಸ್ವತಃ ಆಸಕ್ತಿ ತಳೆದು ತನಿಖೆ ಪ್ರಗತಿ ಸಾಧಿಸುವಂತೆ ಮಾಡಬಹುದಿತ್ತಲ್ಲ. ಸಿ ಐ ಡಿ ತನಿಖೆ ಏನನ್ನೂ ಪತ್ತೆ ಹಚ್ಚದೆ
      ಇರುವಾಗ ಸಿ ಬಿ ಐ ಗೆ ಏಕೆ ತನಿಖೆಯನ್ನು ವಹಿಸಿಕೊಟ್ಟಿಲ್ಲ? ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಹತ್ಯೆ ಪ್ರಕರಣದಲ್ಲೂ ಹೀಗೇ ಆಗಿದೆ. ಆಕೆಯ ಹತ್ಯೆಯ ಹಿಂದೆ ಇರಬಹುದಾದ ಪಿತೂರಿ ಬಹಿರಂಗವಾಗದೇ ಹೋಗಿದೆ. ಸುನಂದಾ ಹತ್ಯೆ ಹಿಂದೆ ದಾವೂದ್ ಇಬ್ರಾಹಿಮ್ ನೇತೃತ್ವದ ದುಬಾಯಿ ಮಾಫಿಯಾದ ಕೈವಾಡವಿದೆ ಎಂದು ಮಾನ್ಯ ಸುಬ್ರಹ್ಮಣ್ಯ ಸ್ವಾಮಿಯವರು ಅನುಮಾನ ವ್ಯಕ್ತ
      ಪಡಿಸಿದ್ದಾರೆ. ಕಲ್ಬುರ್ಗಿ ಹತ್ಯೆ ಕೂಡ ಮಾಫಿಯ ಸ್ಟೈಲಿನಲ್ಲಿ ಆಗಿದೆ. ಇಲ್ಲೂ ದುಬಾಯಿ ಮಾಫಿಯಾದ ಕೈವಾಡ ಇರಬಹುದೇ? ಇತ್ತೀಚೆಗೆ ಭಾರತದ ಪೋಲೀಸರ ಕೈಗೆ ಸಿಕ್ಕಿ ಬಿದ್ದ ಛೋಟಾ ರಾಜನ್ ಬಳಿ ಸುನಂದಾ ಹಾಗೂ ಕಲ್ಬುರ್ಗಿ ಹತ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಬಹುದೇ? ಸತ್ಯ ಏನೆಂದು ಸ್ಪಷ್ಟವಾಗಬೇಕು ಹಾಗೂ ಅಲ್ಲಿಯ ವರೆಗೆ ದೇವನೂರ ಮಹಾದೇವ ಮೊದಲಾದ ಸಾಹಿತಿಗಳು ರಾಜ್ಯದ ಗೃಹಮಂತ್ರಿ ಹಾಗೂ ಪೋಲೀಸ್ ಇಲಾಖೆ ಮೇಲೆ ತನಿಖೆ ಪ್ರಗತಿ ಕಾಣುವಂತೆ ಒತ್ತಡ ಹೇರತಕ್ಕದ್ದು.

      Reply
  7. Salam Bava

    ಮುಖ್ಯ ಮಂತ್ರಿಗಳು ತನಿಖೆ ತ್ವರಿತ ಗತಿಯಿಂದ ಸಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ,ಇದರಲ್ಲಿ ಭಾಂದವ್ಯದ ಪ್ರಶ್ನೆ ಎಲ್ಲಿ !ದೇವನೂರರ ಇಡೀ ಹೇಳಿಕೆಯನ್ನು ತೆಗೆದುಕೊಂಡು ಪ್ರತಿಕಯಿಸದೇ ಒಂದು ವಾಕ್ಯ ಮಾತ್ರಾ ಯಾಕೆ ? . ಇನ್ನು ಸುನಂದಾ ಸಾವು ,ದುಬೈ ಮಾಫಿಯ ಕುರಿತು ಅನ್ವೇಷಿಸಲು ಸುಬ್ರಮಣ್ಯ ಸ್ವಾಮಿ ಕೇಂದ್ರವನ್ನು ಒತ್ತಾಯಿಸಲಿ .

    Reply
    1. ಸೀತಾ

      ಬಾವ ಭಾಯಿ,

      ದೇವನೂರು ಮಹಾದೇವ ಅವರು “ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ, ಹತ್ಯೆ ಮಾಡಿದವರ ಪತ್ತೆಗೆ ವಿಶೇಷ ತಂಡ ರಚಿಸಬೇಕು” ಅಂತ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ತನಿಖೆ ತ್ವರಿತ ಗತಿಯಿಂದ ಸಾಗುತ್ತಿದೆ” ಎಂದು ಹೇಳಿಕೆ ನೀಡಿದ್ದಾರೆ. ಈ ಎರಡು ಹೇಳಿಕೆಗಳನ್ನು ಗಮನಿಸಿದಾಗ ಇಲ್ಲಿ ಎರಡೇ ಸಾಧ್ಯತೆಗಳಿರುವುದು ಬುದ್ಧಿ ಇರುವ ಬಾಲಕರಿಗೂ ಅರ್ಥವಾಗುತ್ತದೆ:

      ೧) ಮುಖ್ಯಮಂತ್ರಿ ಹೇಳಿಕೆ ಸತ್ಯ, ದೇವನೂರ ಅವರ ಹೇಳಿಕೆ ಸತ್ಯವಲ್ಲ. ತನಿಖೆ ತ್ವರಿತ ಗತಿಯಿಂದ ಸಾಗುತ್ತಿದೆ ಎಂಬುದು ಸತ್ಯವಾಗಿದ್ದರೆ ಸರಕಾರ ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಅಂತ ಹೇಳುವುದು ತಪ್ಪಲ್ಲವೇ?
      ೨) ದೇವನೂರು ಸತ್ಯ ಹೇಳಿದ್ದಾರೆ, ಮುಖ್ಯಮಂತ್ರಿ ಅವರ ಹೇಳಿಕೆಯಲ್ಲಿ ಸತ್ಯವಿಲ್ಲ. ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸತ್ಯವಾಗಿದ್ದರೆ ತನಿಖೆ ತ್ವರಿತ ಗತಿಯಿಂದ ಸಾಗುತ್ತಿದೆ ಎಂಬುದು ಸುಳ್ಳಲ್ಲವೇ?

      ಈ ಎರಡು ಸಾಧ್ಯತೆಗಳಲ್ಲಿ ನಿಮ್ಮ ಆಯ್ಕೆ ಯಾವುದು?

      Reply
  8. Salam Bava

    ಸಾಂದರ್ಭಿಕವಾಗಿ ಇಬ್ಬರ ಸ್ಟಾಂಡ್ ಸಹಾ ಸರಿ,ಅವರಿಬ್ಬರ ಹೇಳಿಕೆಯಲ್ಲಿ ಯಾವುದೇ ಕ್ಲೀಷವಿಲ್ಲ . ಒಬ್ಬರು ಆಡಳಿತಶಾಹಿಯ ನಿಲುಮೆ ,ಮತ್ತೊಬ್ಬರದ್ದು ಓರ್ವ ಜವಾಬ್ದಾರಿಯುತ ನಾಗರಿಕನದ್ದು . ಸುಬ್ರಮಣ್ಯ ಸ್ವಾಮಿಗೂ ಸ್ವಲ್ಪ ನೆನೆಪಿಸೋಣ

    Reply
    1. ಸೀತಾ

      “ಸಾಂದರ್ಭಿಕವಾಗಿ ಇಬ್ಬರ ಸ್ಟಾಂಡ್ ಸಹಾ ಸರಿ”

      ಹಹ್ಹಹಹ! ಇದು ನಿಮ್ಮ ಬೌದ್ಧಿಕ ದಿವಾಳಿತನವನ್ನೂ ಶುದ್ಧಾಂಗ ಅಪ್ರಮಾಣಿಕತೆಯನ್ನೂ ಬಯಲು ಮಾಡಿದೆ ಬಾವ ಭಾಯಿ! ಸಂತೆ ಮೊಳ ನೇಯ್ದ ಹಾಗೆ ವಿತ್ತಂಡ ವಾದ ಮಾಡುತ್ತಾ ಹೃದಯದೊಳಗಿರುವ ಮತೀಯ ನಂಜನ್ನು ಕಾರುತ್ತಾ ವರ್ತಮಾನವನ್ನು ವಿಷಮಯಗೊಳಿಸಬೇಡಿ. ನಾನು ಈ ಹಿಂದೆಯೇ ಹೇಳಿದ ಹಾಗೆ ಚಿತ್ತ ಶುದ್ಧಿ ಭಾವ ಶುದ್ಧಿ ಹಯು ವಾಕ್ ಶುದ್ಧಿ ಮಾಡಿಕೊಳ್ಳಿ. ಅಟ್ ಲೀಸ್ಟ್ ಟ್ರೈ ಮಾಡಿ ನೋಡಿ.

      Reply
      1. Sumanasa

        ಅಯ್ಯೋ ಸೀತಾ ಅವರೇ ಎಲ್ಲಾ ಬಿಟ್ಟು ಈ ‘ಬಾವ’ಯ್ಯನಿಗೆ ಬುದ್ಧಿ ಹೇಳಲು ಹೋಗಿದ್ದೀರಲ್ಲ! ಇವರು ಮೊದಲಿಂದಲೂ ಹೀಗೆ ವಿತ್ತಂಡ ವಾದ ಮಾಡುತ್ತಲೇ ಬಂದಿದ್ದಾರೆ, ಇದೇನು ಹೊಸದಲ್ಲ! ಹಿಂದೊಮ್ಮೆ ಸೌದಿ ಅರೇಬಿಯಾದಲ್ಲಿ ಏಕೆ ಭಾರತೀಯರಿಗೆ ದೇವಸ್ಥಾನ ಕಟ್ಟಲು ಅವಕಾಶ ಕೊಡುತ್ತಿಲ್ಲ, ಧಾರ್ಮಿಕ ಹಬ್ಬ ಆಚರಿಸಲು ಸ್ವಾತಂತ್ರ್ಯವಿಲ್ಲ ಎಂದು ಓದುಗರು ಪ್ರಶ್ನೆ ಕೇಳಿದಾಗ ಇವರು ಕೊಟ್ಟ ಉತ್ತರವಂತೂ ವಹಾಬ್ಬಿಗಳಿಗೆ ಖುಷಿ ಕೊಡುವ ಹಾಗೆ ಇತ್ತು! ತನ್ನ ಮತೀಯವಾದದ ಕುರುಡಿನಲ್ಲಿ ಮಿಕ್ಕವರಿಗೆ ಮಾನವೀಯತೆಯ ಪಾಠ ಹೇಳುವ ಅನೇಕರಿದ್ದಾರೆ ನಮ್ಮ ನಡುವೆ. ಚಿತ್ತ ಶುದ್ಧಿ ಭಾವ ಶುದ್ಧಿ ವಾಕ್ ಶುದ್ಧಿಎಲ್ಲಾ ಇವರಿಗೆ ಸಾಧ್ಯವೇ ಸೀತಾ???

        Reply
      2. Salam Bava

        ನಿಮ್ಮದು ಪ್ಯಾಶಿಸ್ಟ್ ಮನೋವ್ರತ್ತಿ ,ನಿಮಗೆ ಪ್ರಾಮಾಣಿಕ ಚರ್ಚೆ ಬೇಡ . ನಿಮ್ಮದೇ ಪಕ್ಷದ ಕೇಂದ್ರ ಸರಕಾರದಲ್ಲಿ ,ಪ್ರಧಾನಿಯೂ ಸೇರಿ ಇಬ್ಬಂದಿತನ ತೋರಿಸುವರು ಪ್ರತಿ ಹೆಜ್ಜೆ ,ಹೆಜ್ಜೆಗೂ ಸಿಕ್ಕುತ್ತಾರೆ.ಇಲ್ಲಿ ಕರ್ನಾಟಕ ಕಂಡ ಇಬ್ಬರು ಅತ್ಯಂತ ಪ್ರಾಮಾಣಿಕ ಪ್ರಮುಖರು ,ಪ್ರೊ ! ಕಲಬುರ್ಗಿಯವರ ಹತ್ಯೆಯ ತನಿಖೆಯ ಕುರಿತಾಗಿ – ದೇವನೂರರು ತಮ್ಮ ಕಳಕಳಿಯನ್ನು ಮತ್ತು ಮುಖ್ಯಮಂತ್ರಿಗಳು ತಮ್ಮ ಸರಕಾರ ಕ್ಯೆಗೊಂಡ ಕ್ರಮವನ್ನು ವಿಶದೀಕರಿಸಿದ್ದಾರೆ . ಈ ದೇಶದ ಎಲ್ಲಾ ಶೋಷಿತರ ದೀನ ,ದಲಿತರ ,ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ದ ,ಸಮಾಜದ ಮುಖವಾಣಿಯಾದ ಸಾಹಿತಿಗಳು ,ಬುದ್ದಿಜೀವಿಗಳು ಒಡ್ಡಿದ ಪ್ರತಿರೋದ ಅತ್ಯಂತ ಪರಿಣಾಮ ಬೀರಿದೆ . ಇದನ್ನು ಬೌದ್ದಿಕ,ಅಪ್ರಾಮಾಣಿಕ,ನಂಜು ಎಂದೆಲ್ಲಾ ಹಲಬುವುದು ಯಾಕೆ ?
        ಬಿಹಾರದ ಜನತೆ ಮಾತಿನ ಮೋಡಿಗಾರನ ಮಾತಿಗೆ ಮರುಳಾಗದೆ -ಸ್ವಾತಂತ್ರ್ಯ ,ಸಮಾನತೆ,ಜಾತ್ಯತೀತತೆ ,ಬ್ರಾತತ್ವವನ್ನು ಭಾರತೀಯ ಮಣ್ಣಿನಲ್ಲಿ ನೆಲೆನಿಲ್ಲುವಂತೆ ಮಾಡ್ಡಿದ್ದನ್ನು ನಿಮಗೆ ಜೀರ್ಣಿಸಲು ಆಗುತ್ತಿಲ್ಲ .
        ಇನ್ನು ಒಂದು ಸಿಹಿ ಸುದ್ದಿ – ನನಗೆ ಸಿಕ್ಕಿದ ಒಂದು ವಾರ್ತೆಯಂತೆ,ಡಾ ಬಂಜಗೆರೆ ಜಯಪ್ರಕಾಶ್ರವರು ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರವನ್ನು ನಯವಾಗಿ ತಿರಸ್ಕರಿಸಿದ್ದಾರೆ .
        ಈ ಸುದ್ದಿಯನ್ನು ಸಂಬಂದ ಪಟ್ಟವರು ದ್ರಡೀಕರಿಸಬೇಕು

        Reply
        1. ಸೀತಾ

          “ನಿಮ್ಮದು ಪ್ಯಾಶಿಸ್ಟ್ ಮನೋವ್ರತ್ತಿ”

          ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ.

          “ನಿಮ್ಮದೇ ಪಕ್ಷದ ಕೇಂದ್ರ ಸರಕಾರದಲ್ಲಿ ,ಪ್ರಧಾನಿಯೂ ಸೇರಿ ಇಬ್ಬಂದಿತನ ತೋರಿಸುವರು ಪ್ರತಿ ಹೆಜ್ಜೆ ,ಹೆಜ್ಜೆಗೂ ಸಿಕ್ಕುತ್ತಾರೆ.”

          ಹೆಹೆ! ಕೇಂದ್ರಸರಕಾರದ ಪಕ್ಷಕ್ಕೂ ನನಗೂ ಇರುವ ಸಂಬಂಧ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧ.

          “ದೇವನೂರರು ತಮ್ಮ ಕಳಕಳಿಯನ್ನು ಮತ್ತು ಮುಖ್ಯಮಂತ್ರಿಗಳು ತಮ್ಮ ಸರಕಾರ ಕ್ಯೆಗೊಂಡ ಕ್ರಮ”

          ಇವೆರಡರ ನಡುವೆ ಇರುವ ವೈರುಧ್ಯ ಗೊಂದಲವನ್ನು ಸ್ಪಷ್ಟಗೊಳಿಸಿದ ಮೇಲೂ ಇಬ್ಬರನ್ನೂ ಸಮರ್ಥಿಸಿಕೊಂಡು ಮಾತನಾಡುವವರು ನಿಜಕ್ಕೂ ನಿಮ್ಮಂತಹ ತರ್ಕಹೀನ ಮೂರ್ಖರೇ ಸರಿ.

          “ಇದನ್ನು ಬೌದ್ದಿಕ,ಅಪ್ರಾಮಾಣಿಕ,ನಂಜು ಎಂದೆಲ್ಲಾ ಹಲಬುವುದು ಯಾಕೆ”

          ಹಲುಬುತ್ತಿರುವುದು ನಿಮ್ಮ ಎಲುಬಿಲ್ಲದ ನಾಲಿಗೆ. ಪ್ರಶಸ್ತಿ ವಾಪಾಸು ಮಾಡುವುದರ ಹಿಂದಿನ ರಾಜಕೀಯ ಕುತಂತ್ರ ಈಗಾಗಲೇ ಬಯಲಾಗಿದೆ. ಎಲ್ಲಾ ಗೊತ್ತಿದ್ದೂ ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ನಿಮ್ಮ ಕುಟಿಲ ಬುದ್ಧಿ ಕೂಡ ಬಹಿರಂಗವಾಗಿದೆ.

          “ಬಿಹಾರದ ಜನತೆ ಮಾತಿನ ಮೋಡಿಗಾರನ ಮಾತಿಗೆ ಮರುಳಾಗದೆ -ಸ್ವಾತಂತ್ರ್ಯ ,ಸಮಾನತೆ,ಜಾತ್ಯತೀತತೆ ,ಬ್ರಾತತ್ವವನ್ನು ಭಾರತೀಯ ಮಣ್ಣಿನಲ್ಲಿ ನೆಲೆನಿಲ್ಲುವಂತೆ ಮಾಡ್ಡಿದ್ದನ್ನು ನಿಮಗೆ ಜೀರ್ಣಿಸಲು ಆಗುತ್ತಿಲ್ಲ .”

          ಬಿಹಾರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ನೆಲೆ ನಿಂತಿರುವುದು ಯಾದವ ಹಾಗೂ ಕುರ್ಮಿ ಜಾತಿಗಳ ಪ್ರಾಬಲ್ಯ ಹಾಗೂ ಯಜಮಾನಿಕೆ. ಹೀಗಾಗಿ ಬಿಹಾರದ ಬಡ ಜನರು ಮುಸಲ್ಮಾನರು ಸೇರಿದಂತೆ ಬಿಹಾರ ಬಿಟ್ಟು ದೂರದ ಬೆಂಗಳೂರು ದೆಹಲಿಗೆ ಬದುಕುವ ಮಾರ್ಗ ಅರಸಿ ವಲಸೆ ಹೋಗುತ್ತಾ ಬಂದಿದ್ದಾರೆ. ಸತ್ಯ ಏನೆಂದು ತಿಳಿದು ಮಾತನಾಡಿ ಬಾವಯ್ಯ.

          Reply
          1. ಸೀತಾ

            ಪ್ರಭುಗಳೇ, ನೀವೂ ನಾವೂ ಎಲ್ಲರೂ ಮೆಚ್ಚುವ ಮಾನ್ಯ ಯೋಗೇಂದ್ರ ಯಾದವ್ ಅವರೇ ಹೀಗೆ ಹೇಳಿದ್ದಾರೆ “Lalu coming back is not a way forward for Bihar.” ಎಂದ ಮೇಲೆ ಬಿಹಾರದ ಚುನಾವಣೆ ಫಲಿತಾಂಶದ ಬಗ್ಗೆ ಸಂತೋಷ ಪಡುವುದು ನಿಜಕ್ಕೂ ಮೂರ್ಖತನ.

          2. Salam Bava

            ಮಗದೊಮ್ಮೆ ತಮ್ಮ ಸಣ್ಣತನ,ಕುತ್ಸಿತ ಭುದ್ದಿ ,ನೀಚ ಹೇಳಿಕೆ ಮತ್ತು ಅಸಹನೆಯನ್ನು ಯಾರು ವಾ೦ತಿ ಮಾಡಿದೆನ್ದ್ದುವರ್ತಮಾನದ ಎಲ್ಲಾ ಓದುಗರಿಗೆ ನಿಚ್ಚಳವಾಗಿ ತಿಳಿಯಿತು.
            “ಪ್ರಭುಗಳೇ, ನೀವೂ ನಾವೂ ಎಲ್ಲರೂ ಮೆಚ್ಚುವ ಮಾನ್ಯ ಯೋಗೇಂದ್ರ ಯಾದವ್ ಅವರೇ ಹೀಗೆ ಹೇಳಿದ್ದಾರೆ “Lalu coming back is not a way forward for Bihar.”
            ಯೋಗೇ೦ದ್ರ ಯಾದವ- ನಿತೀಶರನ್ನು NDTV ಯಲ್ಲಿ ತು೦ಬಾ ಹೊಗಳಿದ್ದಾರಲ್ಲಾ! ಸಿದ್ದರಾಮಯ್ಯರ ಅಳ್ವಿಕೆಯನ್ನು ಮೆಚ್ಚಿದ್ದಾರಲ್ಲ.ಅವರ ಅನ್ನಭಾಗ್ಯ,ಕ್ಕ್ಷೀರ ಭಾಗ್ಯ ಮು೦ತಾದ ಯೋಜನೆಗಳಿ೦ದ ಪ್ರಭಾವಿತರಾಗಿದ್ದರು .ಇನ್ನು ನೀವು ನ೦ಬುವ ಸಿದ್ದಾ೦ತದ ಕಡು ವಿರೋದಿಯಾದ ಅವರು ಕೇವಲ ಲಾಲೂಪ್ರಸಾದರನ್ನು ಮಾತ್ರಾ- not a way forward for Bihar.”ಎ೦ದು ಹೇಳಿದ್ದನ್ನು ತು೦ಬಾ ಮನಸ್ಸಿಗೆ ಹಚ್ಚಿಕೊ೦ಡ್ಡಿದ್ದು ಮಾತ್ರಾ ನಿಮ್ಮ ವಿರೋಧಾಭಾಸವನ್ನು ತೋರಿಸುತ್ತದೆ!

          3. ಸೀತಾ

            “ತಮ್ಮ ಸಣ್ಣತನ,ಕುತ್ಸಿತ ಭುದ್ದಿ ,ನೀಚ ಹೇಳಿಕೆ ಮತ್ತು ಅಸಹನೆಯನ್ನು ಯಾರು ವಾ೦ತಿ ಮಾಡಿದೆನ್ದ್ದು”

            ಕನ್ನಡಿ ನೋಡಿ ತಾವೇ ಕನ್ಫಾರ್ಮ್ ಮಾಡಿಕೊಳ್ಳಿ ಬಾವಯ್ಯ!

            “ನೀವು ನ೦ಬುವ ಸಿದ್ದಾ೦ತದ ಕಡು ವಿರೋದಿಯಾದ ಅವರು”

            ಹೆಹೆ! ಯೋಗೇಂದ್ರ ಯಾದವ್ ಅವರದ್ದು ನಿಮ್ಮ ಹಾಗೆ ವಹಾಬಿ ಸಿದ್ಧಾಂತವೆ ಬಾವಯ್ಯ? 😛 (ಹಿಂದೆ ನೀವು ಸೌದಿ ಅರೇಬಿಯಾದಲ್ಲಿ ಭಾರತೀಯರಿಗೆ ದೇವಸ್ಥಾನ/ಚರ್ಚು/ಗುರುದ್ವಾರ ಏಕೆ ಇಲ್ಲ ಎಂಬ ಪ್ರಶ್ನೆಗೆ ಕೊಟ್ಟ ಉತ್ತರವೇ ಸಾರಿದೆ ನಿಮ್ಮದು ಅರೇಬಿಯಾದ ವಹಾಬಿ ಸಿದ್ಧಾಂತ ಅಂತ.) ಹೆಹೆ! ಯೋಗೇಂದ್ರ ಯಾದವ್ ಅವರ ಯೋಗ್ಯತೆಯ ನೂರನೆಯ ಒಂದು ಭಾಗವೂ ಇಲ್ಲದ ತಮ್ಮಿಂದ ನಾನು ಸಿದ್ಧಾಂತದ ಪಾಠ ಹೇಳಿಸಿಕೊಳ್ಳಬೇಕೇ ಬಾವಯ್ಯ? 😉

            ಬಿಹಾರದ ಬಗ್ಗೆ ನಿಜವಾದ ಕಳಕಳಿ ಇದ್ದುದರಿಂದಲೇ ಯೋಗೇಂದ್ರ ಯಾದವ್ ಅವರು ಲಾಲೂ ಮತ್ತೆ ಪ್ರಬಲರಾದುದರ ಬಗ್ಗೆ ಅಪಾರ ಆತಂಕ ವ್ಯಕ್ತ ಪಡಿಸಿದ್ದು. ಈ ಲಾಲೂ ಎಂತಹವರೆಂದು ಇಡೀ ಪ್ರಪಂಚಕ್ಕೆ ಗೊತ್ತಿದೆ ಆದರೆ ಈ ಬಾವಯ್ಯನಿಗೆ ಮಾತ್ರ ಗೊತ್ತಿಲ್ಲ!

  9. ಸೀತಾ

    ಪ್ರಭುಗಳೇ, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಮಂತ್ರಿ ಮಂಡಲದಲ್ಲಿ ಲಾಲೂ ಅವರ ಸುಪುತ್ರ ತೇಜಸ್ವೀ ಉಪಮುಖ್ಯಮಂತ್ರಿಯಾಗಿರುತ್ತಾರೆ ಅಂತ ವರದಿಯಾಗಿದೆ. ಅನನುಭವಿ ತೇಜಸ್ವಿಗೆ ಮಣೆ ಹಾಕಲು ಆರ್ ಜೆ ಡಿ ಯ ಹಿರಿಯ ಧುರೀಣ ಅಬ್ದುಲ್ ಬಾರಿ ಸಿದ್ದಿಕ್ಕಿ ಅವರನ್ನು ಕಡೆಗಣಿಸಲಾಗಿದೆ. ಇದೇನಾ ನಿತೀಶ್/ಲಾಲೂ ಘಟಬಂಧನವನ್ನು ಪೂರ್ಣವಾಗಿ ಬೆಂಬಲಿಸಿದ ಮುಸ್ಲಿಂ ಸಮುದಾಯಕ್ಕೆ ಲಾಲೂ ಸಲ್ಲಿಸಿರುವ ಕೃತಜ್ಞತೆ? ಈ ಬಗ್ಗೆ ತಾವೇನು ಹೇಳಲು ಬಯಸುತ್ತೀರಿ?

    Reply
  10. Shridhar Prabhu

    ಸೀತಾ ಅವರೇ, ನಿಮಗೆ ಮುಸ್ಲಿಂ ಸಮುದಾಯದ ಬಗೆಗಿರುವ ಮನದಾಳದ ಪ್ರೀತಿ ಕಂಡು ಮನಸ್ಸು ತುಂಬಿ ಬಂದಿತು! ಈ ದೇಶದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬರಿಗೂ ಮುಸ್ಲಿಮರ ಬಗ್ಗೆ ನಿಮ್ಮಷ್ಟೇ ನಿಷ್ಕಲ್ಮಶ ಕಾಳಜಿ ಸ್ಫುರಿಸಲಿ ಎಂದು ಆಶಿಸುವೆ!

    Reply
    1. ಸೀತಾ

      ಖಂಡಿತ ಸರ್ ನಿಮ್ಮ ಆಸೆ ನನಸಾಗಲಿ. ಅದು ಮೊಟ್ಟಮೊದಲು ಬಿಹಾರದಿಂದಲೇ ಶುರುವಾಗಲಿ. ಎಲ್ಲ ಸವಾಲುಗಳಿಗೆ ಉತ್ತರ ಕೊಡುವ ಛಾತಿ ಇರುವ ನಿತೀಶ್ ಭಾಯಿ ಅವರು ಅಬ್ದುಲ್ ಬಾರಿ ಸಿದ್ದಿಕ್ಕಿ ಅವರನ್ನು ಲಾಲೂ ಪುತ್ರನ ಜಾಗದಲ್ಲಿ ಉಪಮುಖ್ಯಮಂತ್ರಿಯಾಗಿ ಕೂರಿಸಲಿ. ಆಗ ಇಡೀ ದೇಶವೇ ನಿತೀಶ್ ಮಾರ್ಗವನ್ನು ಅನುಸರಿಸುತ್ತದೆ. ಏನಂತೀರ?

      Reply
  11. Salam Bava

    ಸೀತರಾಮ್ರೆ ,ನಿಮ್ಮ ಈ ಕಮೆಂಟು ಶುದ್ದ ಅಸಂಬದ್ದ . ನಾನು ಎಂದೂ ,ಎಲ್ಲ್ಲಿಯೂ ಹಿಂದೂ ಸಮುದಾಯವನ್ನು ಟೀಕೆ ಮಾಡಿಲ್ಲ ,ಅಥವಾ ಅವರ ಧಾರ್ಮಿಕ ಬಾವನೆಗೆ ನೋವುಂಟು ಮಾಡಿಲ್ಲ . ನಾನು ಟೀಕಿಸಿದ್ದು ಸಂಘಿ ಪ್ಯಾಸಿಸಂನ್ನು ,ಸಂವಿದಾನ ,ಸಮಾಜವಾದ ಮತ್ತು ಜಾತ್ಯತೀತತೆಯ ಮೇಲಾಗುವ ಧಾಳಿಯನ್ನು .
    ಇನ್ನು ಅಬ್ಬುಬಕ್ಕರ್ ಮೌಲ್ವಿಯವರ ಹೇಳಿಕೆಯಾಗಲಿ , ಅಥವ ಶಬರಿ ಮಲೆಯಲ್ಲಿ ಹೆಂಗಸರ ಕುರಿತಾಗಿ ಇರುವ ಕಟ್ಟು ,ಕಟ್ಟಳೆ ಗಳಾಗಲಿ ಅದು ಆಂತರಿಕವಾದ ಸಾಮುದಾಯಿಕ ಪ್ರಶ್ನೆ . ಅದನ್ನು ಅವರೇ ಆಂತರಿಕವಾಗಿ ಪರಿಹರಿಸುತ್ತಾರೆ . ಕೇರಳದ ಹಲವಾರು ಮುಸ್ಲಿಂ ನಾಯಕರೇ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ . ಅಚ್ಚುತ್ಯಾನಂದನ್ರ ಎಡ ಪಕ್ಷದವರಲ್ಲ್ಲವೇ ? ಅದು ನಿಮ್ಮ ಜಾಣ ಮರೆವೇ !
    ಅದರಿಂದ ಒಂದು ದೇಶದಲ್ಲಿ ಅಶಾಂತಿ ,ಪ್ಯಾಸಿಸಂ ,ಸಂವಿದಾನದ ದಿಕ್ಕಾರ ,ಅಲ್ಪಸಂಖ್ಯಾತರ ,ದಲಿತರ ,ಮೇಲೆ ದೌರ್ಜನ್ಯ ಮತ್ತು ಬಲಾಡ್ಯರು ,ಭಂಡವಾಳಿಶಾಹಿಗಳ ವಿಜೃಂಭಣೆ ಮತ್ತು ದುರ್ಬ್ರಲರ ಶೋಷಣೆಯನ್ನು ಈ ಕೆಲವೊಂದು ಘಟನೆಗಳಿಗೆ ತಳಕು ಹಾಕುವುದು ಯಾಕೆ ?

    Reply
    1. ಸೀತಾ

      ಬಾವ ಭಾಯಿ, ಅಬೂಬಕ್ಕರ್ ಎಂಬ ಮತಾಂಧ ಸುನ್ನಿ ನಾಯಕನನ್ನು ಮೀಡಿಯಾ ಮುಂದೆ ಟೀಕಿಸುವ ನಿಮ್ಮಂತಹ ಜಾಣ ಮುಸಲ್ಮಾನರು ತೆರೆಯ ಹಿಂದೆ ಅವನ ವಾದವನ್ನು ಸಮರ್ಥಿಸುತ್ತಾರೆ ಹಾಗೂ ಅವನ ಬೆಂಬಲಕ್ಕೆ ನಿಲ್ಲುತ್ತಾರೆ. ಇದು ವಾಸ್ತವದ ಸತ್ಯ. ಆದುದರಿಂದ ಮಹಿಳೆಯರ ಬಗ್ಗೆ ಅಬೂಬಕ್ಕರನಿಗೆ ಇರುವ ಗೃಹೀತಗಳು ಆತನ ವೈಯಕ್ತಿಕ ಚಿಂತನೆ ಎಂದೂ ಸುನ್ನಿ ಸಮುದಾಯದ ಆಂತರಿಕ ವಿಷಯವೆಂದೂ ತಳ್ಳಿ ಹಾಕುವುದು ಸರಿಯಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮಡೆಸ್ನಾನ ಆಚರಣೆಯೂ ಮಲೆಕುಡಿಯರ ಆಂತರಿಕ ವಿಷಯವೇ ಅಲ್ಲವೇ? ಆದರೆ ಅದನ್ನು ಅದೆಷ್ಟೋ ಪ್ರಜ್ಞಾವಂತ ಹಿಂದೂಗಳು ವಿರೋಧಿಸಿ ಕೋರ್ಟಿಗೂ ಹೋಗಿದ್ದಾರಲ್ಲವೇ? ಅದೇ ರೀತಿ ಮುಸಲ್ಮಾನ ಹೆಣ್ಣುಮಕ್ಕಳ ಮೂಲಭೂತ ಘನತೆಯನ್ನು ಘಾಸ ಮಾಡುವ ಅಬೂಬಕ್ಕರನ ಧೋರಣೆಗಳನ್ನು ಸುನ್ನಿ ಸಮುದಾಯದ ಒಳಗೂ ಹೊರಗೂ ಕೋರ್ಟಿನಲ್ಲೂ ಪ್ರಶ್ನಿಸಬೇಕಾಗಿದೆ.

      Reply
  12. Shridhar Prabhu

    ಸೀತಾ ಅವರೇ.

    ಲಾಲೂ ಮಾತ್ರವಲ್ಲ ಯಾವ ರಾಜಕಾರಣಿಯ ಕುಟುಂಬ ರಾಜಕಾರಣವನ್ನು ನಾನು ಖಂಡಿತಾ ಒಪ್ಪುವುದಿಲ್ಲ. ತಮ್ಮ ಮಗನ ಬದಲು ರಾಷ್ಟ್ರೀಯ ಜನತಾದಳದ ಯಾವುದಾದರೂ ಒಬ್ಬ ಮುಖಂಡರನ್ನು ಉಪ ಮುಖ್ಯಮಂತ್ರಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು ಎಂಬುದನ್ನು ನಾನು ಒಪ್ಪುತ್ತೇನೆ.

    ಒಂದು ಪರಿಪಕ್ವ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಸಿದ್ಧಾಂತದ ಆಧಾರದ ಮೇಲೆ ನಡೆಯಬೇಕು. ನೀತಿ ಮುಖ್ಯವಾಗಬೇಕೇ ವಿನಃ ನೇತಾ ಅಲ್ಲ. ಆದರೆ ದುರ್ಭಾಗ್ಯವಶಾತ್ ಬಿಹಾರದ ಚುನಾವಣೆಗಳೂ ಸೇರಿದಂತೆ ಭಾರತದ ಬಹುತೇಕ ಚುನಾವಣೆಗಳು ವ್ಯಕ್ತಿ ಕೇಂದ್ರಿಕವಾಗಿವೆ. ಈ ಸಂಪ್ರದಾಯ ಸಧ್ಯಕ್ಕೆ ನಿಲ್ಲುವ ಸೂಚನೆಗಳು ಕಾಣಿಸುತ್ತಿಲ್ಲ.

    ಬಿಹಾರದಲ್ಲಿ ನಡೆದ ಚುನಾವಣೆಗಳು ನಿರ್ವಿವಾದವಾಗಿ ಮೋದಿ ಮತ್ತು ನಿತೀಶ್ ಮಧ್ಯದ ನೇರ ಹಣಾಹಣಿ. ಬಿಹಾರದ ಜನತೆ ಲಾಲೂ ಯಾದವ್ ಸೇರಿದಂತೆ ಯಾವುದೇ ಪಕ್ಷದ ಯಾವುದೇ ನೇತಾರರನ್ನು ನೋಡಿ ಮತ ಹಾಕಿಲ್ಲ. ಹಾಗೆಯೇ ಭಾಜಪ ಕೂಡ ಮೋದಿಯವರ ವಯಕ್ತಿಕ ವರ್ಚಸ್ಸನ್ನೇ ನೆಚ್ಚಿಕೊಂಡಿತ್ತು. ಮೋದಿ ಮತ್ತು ನಿತೀಶ್ ಮಧ್ಯೆ ಬಿಹಾರ ನಿತೀಶರನ್ನು ಆಯ್ದುಕೊಂಡಿದೆ. ಸಂಯುಕ್ತ ಜನತಾದಳ ತನ್ನ ಸ್ವಂತ ಶಕ್ತಿಯಿಂದ ಗೆದ್ದುಕೊಂಡ ಅನೇಕ ಕ್ಷೇತ್ರಗಳನ್ನೂ ಲಾಲೂ ಅವರ ಪಾರ್ಟಿಗೆ ಬಿಟ್ಟು ಕೊಟ್ಟು ಸಮ್ಮಿಶ್ರ ರಾಜಕಾರಣದ ಧರ್ಮವನ್ನು ಕಾಪಾಡಬೇಕಾಯಿತು. ಆದರೆ ನಿತೀಶ್ ಅವರ ವಯಕ್ತಿಕ ವರ್ಚಸ್ಸು ಬಿಹಾರದ ಚುನಾವಣೆಗಳ ಮೇಲೆ ಅತ್ಯಂತ ಗಾಢ ಪ್ರಭಾವ ಬೀರಿದೆ ಎಂದು ಅವರ ವಿರೋಧಿಗಳೂ ಒಪ್ಪುತ್ತಾರೆ. ಹಾಗಾಗಿ ಲಾಲೂ ಅಥವಾ ಸುಶೀಲ್ ಮೋದಿ ಅಥವಾ ಇನ್ಯಾವುದೇ ಬಿಹಾರದ ನಾಯಕರು ಇಲ್ಲಿ ಗೌಣ.

    ಇಂದು ಒಂದು ಕಾಲದಲ್ಲಿ ಲಾಲೂ vs. ಇತರರು ಎಂಬ ಸಂದರ್ಭ ಇತ್ತು. ಯೋಗೇಂದ್ರ ಯಾದವರು ಹೇಳಿದ ಮಾತು ಆ ಕಾಲಕ್ಕೆ ಸರಿಹೋಗುತ್ತದೆ. ಯೋಗೇಂದ್ರ ಯಾದವರು ಲಾಲೂ ಬಗ್ಗೆ ಕಳವಳ ವ್ಯಕ್ತಪಡಿಸಿದರೇ ಹೊರತು ಭಾಜಪವನ್ನು ಸಮರ್ಥಿಸಲಿಲ್ಲವಲ್ಲ. ಅರವಿಂದ ಕೆಜ್ರಿವಾಲ್ ಅವರೊಂದಿಗಿನ ವೈಮಸ್ಸಿನ ಕಾರಣದಿಂದ ಕೂಡ ಯಾದವ್ ಹೀಗೆ ಹೇಳಿರಬಹುದು. ನೀವು ನಾವು ಮತ್ತು ಅನೇಕರು ಅಭಿಮಾನಪಡುವ ಯೋಗೇಂದ್ರ ಯಾದವ್ ಅವರಿಗೆ ಲಾಲೂ ಅವರಿಗಿಂತ ಭಾಜಪ ಹೆಚ್ಚು ಅಪಥ್ಯ ಎಂಬುದನ್ನು ನೀವೂ ಸಹ ಒಪ್ಪುತ್ತೀರಿ ಎಂದುಕೊಳ್ಳುತ್ತೇನೆ.

    Reply
    1. ಸೀತಾ

      ಸರಿ ಪ್ರಭುಗಳೇ, ಕೆಲವೇ ವರ್ಷಗಳ ಹಿಂದೆ ಹಿಂದುತ್ವವಾದಿ ಭಾಜಪದ ಸಖ್ಯದಿಂದ ಅಧಿಕಾರಕ್ಕೆ ಬಂದ ನಿತೀಶ್ ಸಾಹೇಬರು ಇಂದು ಜಾತಿವಾದಿ ಲಾಲೂ ಅವರ ಸಖ್ಯದಿಂದ ಅಧಿಕಾರ ಉಳಿಸಿಕೊಂಡಿದ್ದಾರೆ. ಯಾವುದು ಯೋಗೇಂದ್ರ ಯಾದವ್ ಅವರಿಗೆ ನಿತೀಶ್ ಅವರ ತತ್ವಹೀನ ಅಧಿಕಾರ ಲಾಲಸೆ ಎಂದು ಭಾಸವಾಗಿದೆಯೋ ಅದು ನಿಮಗೆ ಸಮ್ಮಿಶ್ರ ರಾಜಕಾರಣದ ಧರ್ಮವಾಗಿ ಕಂಡಿದೆ! ಇರಲಿ, ನಿಮ್ಮ ಹಾಗೆ ಇನ್ನೂ ಅನೇಕರ ವೈರುಧ್ಯಗಳ ಉತ್ತಮ ವಿಶ್ಲೇಷಣೆಯನ್ನು ಈ ಅಂಕಣ ಬರಹದಲ್ಲಿ ಕಾಣಬಹುದು: _http://bit.ly/1SGrdBw

      Reply
  13. Reader

    ಬಿಹಾರದ ಚುನಾವಣೆ ಮಾತ್ರವಲ್ಲ ಈ ಸರ್ವಾಧಿಕಾರಿ ಪ್ರವೃತ್ತಿಯ ಮೋದಿ ಅಧಿಕಾರ ವಹಿಸದಾಗಿನಿಂದ ಮಹಾರಾಷ್ಟ್ರದ ಚುನಾವಣೆಯೊಂದನ್ನು ಹೊರತಾಗಿಸಿದಂತೆ,ಸ್ಥಳೀಯಾಡಳಿತ (ಇದೀಗ ಗುಜರಾತಿನದ್ದೂ) ಸಹಿತ ಭಾಜಪ ಮುಗ್ಗರಿಸಲು ಆರಂಭಿಸಿದೆ. ಅದರಲ್ಲಿ ಆಶ್ಚರ್ಯಪಡುವಷ್ಟು ರಹಸ್ಯವಾದುದು ಏನೂ ಇಲ್ಲ. ಯಾಕೆಂದರೆ ಭಾರತದ ಜನರಲ್ಲಿ ಅತ್ಯಧಿಕ ಮಂದಿ ಅವಿದ್ಯಾವಂತರಿರಬಹುದಾದರೂ ಭಾರತೀಯರು ಅಷ್ಟೊಂದು ಅವಿವೇಕಿಗಳಲ್ಲ ಆದ್ದರಿಂದ ಯಾರನ್ನೂ ಎಂದೆಂದಿಗೂ ವಂಚಿಸಲು ಸಾಧ್ಯವಿಲ್ಲ.

    ಅಂದಿನ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದ, ಅಂದಿದ್ದ ಬೆಲೆಯೇರಿಕೆ,ಜತೆಗೆ ಇಂದಿಗೂ ಅಸ್ತಿತ್ವದಲ್ಲಿರುವ ಅದರ ಪಿತ್ರಾರ್ಜಿತ ನಾಯಕತ್ವ ಹೀಗೆ ಇವೆಲ್ಲವುಗಳಿಂದ ಬೇಸತ್ತಿದ್ದ ಜನರಿಗೆ ಮಾದ್ಯಮಗಳು ಸೃಷ್ಟಿಸಿದ್ದ ಮೋದಿಯ ಕಾರ್ಮೋಡದಿಂದ ಉತ್ತಮ ಮಳೆಬೆಳೆಯನ್ನು ನಿರೀಕ್ಷಿಸಿದ್ದರಿಂದ ಉಂಟಾದ ಪ್ರಮಾದವೇ ಇಂದು ನಾವು ಅನುಭವಿಸುತ್ತಿರುವ ಅಲ್ಪಸಂಖ್ಯಾತ ಸವರ್ಣೀಯ ಪ್ರಾಬಲ್ಯದ ಸರಕಾರವಾಗಿದೆ. ಹಾಗೆಂದು ಅದು ಮೇಲ್ಜಾತಿ ನಿಯಂತ್ರಣದಲ್ಲಿರುವ ಮಾಧ್ಯಮವು ಸೃಷ್ಟಿಸಿದ ಕೃತಕ ಮೋಡದಿಂದ ನಾವು ಮೂಢರಾದೆವು ಎಂಬ ವಾಸ್ತವವನ್ನರಿತು ತಮ್ಮ ಆಶಾಗೋಪುರಗಳ ಭ್ರಮೆಯಿಂದ ಹೊರ ಬರಲು ಈ ಸರ್ಕಾರ ಹೆಚ್ಚಿನ ಸಮಯವೇನೂ ಜನರಿಗೆ ನೀಡದೆ ಕ್ಷಿಪ್ರವಾಗಿಯೇ ತನ್ನ ನಿಜ ಬಣ್ಣವನ್ನು ಬಟ್ಟಾಬಯಲಾಗಿಸಿಕೊಂಡಿದೆ.

    ಕಪ್ಪು ಹಣ ವಾಪಸಾತಿಯಾಗಿಸಿ ತಮ್ಮೆಲ್ಲರ ಜೇಬಿಗೆ ಲಕ್ಷಗಳನ್ನು ತುಂಬಿಸುವ ಸುಳ್ಳು ಆಶ್ವಾಸನೆ ಸೇರಿದಂತೆ ಅವು ಯಾವೆಲ್ಲಾ ಸುಳ್ಳು ಭರವಸೆಗಳು ನೀಡಿದ್ದವು ಎಂದು ಒಂದೊಂದಾಗಿ ಉಲ್ಲೇಖಿಸುವ ಅಗತ್ಯವಿರಲಾರದು (ಪ್ರತಿವಾದಿಗಳು ಇದ್ದರೆ ಅವೆಲ್ಲವೂ ಸಿದ್ದವಾಗಿದೆ) ಹೀಗೆ ತಾವು ಮೋಸ ಹೋದೆವು ಎಂದು ತಿಳಿದ ಕೂಡಲೇ ಜನರು ಸಹಜವಾಗಿಯೇ ಅದಕ್ಕೆ ನೀಡುವ ಬೆಂಬಲದಿಂದ ಹೊರಬಂದರು ಅದರ ಪ್ರತಿಫಲವೇ ಈ ಬದಲಾವಣೆಯಾಗಿದೆ.

    ಮಾತ್ರವಲ್ಲ ಇನ್ನೂ ಬದಲಾವಣೆಯಾಗಲಿದೆ. ಅದೇಕೆಂದರೆ ಭಾರತದ ವೈಶಿಷ್ಟ್ಯವಾದ ವಿವಿಧತೆಯಲ್ಲಿ ಐಕ್ಯತೆಯನ್ನು (Unity in Diversity) ಯನ್ನು ಯಾವ ಸಂಘಪರಿವಾರದ ಯಾವ ಕೇಸರಿ ಗೂಂಡಾಗಳಿಂದಲೂ ಅಳಿಸಲು ಸಾಧ್ಯವಿಲ್ಲ ಎಂಬುವುದು ಸಾಬೀತಾಗಲಿದೆ. ಇವರ ನಕಲಿ ಹಿಂದುತ್ವ ಅಧಿಕಾರ ಲಾಲಸೆಯದ್ದೆ ವಿನಃ ನೈಜ ಹಿಂದೂ ಧರ್ಮಕ್ಕೂ ಜನಸಾಮಾನ್ಯರನ್ನು ವಿಭಜಿಸುವ ಇವರ ಸ್ವಾರ್ಥ ರಾಜಕಾರಣಕ್ಕೂ ಸಂಬಂಧವೇ ಇಲ್ಲ ಎಂಬ ಸತ್ಯವನ್ನು ಮತದಾರರು ಮನಗಾಣುತ್ತಿದ್ದಾರೆ. ಉಳಿದಂತೆ ಭಾಜಪ ಸರ್ಕಾರದಲ್ಲಿ ಯಾವ ಸಾಹಿತಿಗಾಗಲೀ,ವಿಜ್ಞಾನಿಗಾಗಲೀ ಬುದ್ದಿಜೀವಿಗಳಿಗಾಗಲೀ ಅದಾವ ಮನಸ್ತಾಪವೂ ಇಲ್ಲ ಹಾಗಿದ್ದಿದ್ದರೆ ಇಂದು ಕಾಣುವ ಪ್ರಶಸ್ತಿ ವಾಪಸಾತಿಯ ವಿದ್ಯಮಾನ ಯಾಕಾಗಿ ಈ ಮೊದಲಿನ ವಾಜಪೇಯಿಯವರ ಭಾಜಪ ಸರಕಾರಕ್ಕೆದುರಾಗಲಿಲ್ಲ ಎಂಬುವುದು ಪ್ರಶ್ನಾರ್ಹವಾಗಿದೆ. ಇನ್ನು ಸಹಿಷ್ಣುತೆಯನ್ನು ಹೊಂದಿರದ, ಕೋಮುವಾದದಿಂದ ಮಂಕಾದ ಬರಡು ಹೃದಯಗಳಿಗೆ ಅಸಹಿಷ್ಣುತೆ ಗೋಚರವಾಗುವುದಾದರೂ ಹೇಗೆ? ಯಾರನ್ನೂ ಮನುಷ್ಯವರ್ಗವೆಂದು ಕಾಣಲಾಗದ ಅವರು ಪ್ರತಿಯೊಬ್ಬರನ್ನು ಹಿಂದೂ ಮುಸ್ಲಿಂ ಕ್ರೈಸ್ತ ಎಂಬೋಪಾದಿಯಲ್ಲಿ ನೋಡುವ ಹೃದಯ ಶುದ್ದಿಯಾಗುವವರೆಗೆ ಎಲ್ಲಿದೆ ಅಸಹಿಷ್ಣುತೆ ಎಂದು ತಡಕಾಡುತ್ತಾ ಗೊಣಗುತ್ತಲೇ ಇರುವರು. ಸಾಮಾಜಿಕ ಅಂತರ್ಜಾಲ ತಾಣಗಳು ಲಭಿಸಿದ್ದಲ್ಲೆಲ್ಲಾ ತಮ್ಮ ಹಳಸಿದ ಮನೋಭಾವನೆಯನ್ನು ವಾಂತಿ ಮಾಡುತ್ತಲೇ ಇರುವರು.

    ಇತಿ,

    ವರ್ತಮಾನದ ಓದುಗ.

    Reply
  14. jana snehi

    ರೀಡರ್ ರವರು ನೀಡಿದ ಅಂಟಿಪಾಟಿಕ್ ಫಲಿಸಿರಬೇಕು. ಕೋಮುವ್ಯಾಧಿಯಿಂದಾಗಿ ವಾಂತಿ ಮಾಡುವ ಪ್ರತಿಕ್ರಿಯೆಗಳು ಸದ್ಯಕ್ಕೆ ಸ್ಥಗಿತಗೊಂಡವು.

    ಕೋಮುವಾದದ ಮೂಲಕ ಮೇಲ್ಜಾತಿ ಪ್ರಾಬಲ್ಯವನ್ನು ಉಳಿಸಲು ಹೆಣಗಾಡುವ ಅದಕ್ಕಾಗಿ ಹಿಂದುತ್ವ ಮಂತ್ರವ ಜಪಿಸಿ ಅಮಾಯಕ ಹಿಂದುಳಿದವರ್ಗದ ಜನಗಳಿಗೆ (ಅವರು ಯಾವ ರೀತಿಯಲ್ಲಿಯೂ ಮೇಲ್ಜಾತಿಗಳಿಗೆ ಸಮಾನವಲ್ಲದಿದ್ದರೂ,ಹಿಂದೂ ಅರ್ಚಕ ಸ್ಥಾನಕ್ಕೆ,ಅಷ್ಟಮಟಗಳಿಗೆ ಮಟಾಧಿಪಥಿಗಾಗಲೀ ಅನರ್ಹರಾಗಿದ್ದರೂ ಕೂಡಾ) ನೀವು (ಎಷ್ಟೇ ಹಿಂದೆ ಆದರೂ) (ನಮಗೆ ಮತ ನೀಡಿ ಅಧಿಕಾರದಲ್ಲಿರಿಸಲು) ನೀವೂ ಹಿಂದೂವೇ ಆಗಿರುವಿರಿ ಎಂದೇ ಬಿಂಬಿಸಿ ಅಲ್ಪ ಸಂಖ್ಯಾತ ಸವರ್ಣೀಯ ವರ್ಗವು ತಮ್ಮನ್ನು ಬಹುಸಂಖ್ಯಾತರೆಂದು ಘೋಷಿಸಿಕೊಂಡಿದೆ.

    ಆದ್ದರಿಂದ ಅವುಗಳಿಗೆ ವ್ಯತಿರಿಕ್ತವಾದ ವಾಸ್ತವಿಕತೆಗಳನ್ನು ವಿವರಿಸುವ ಅದಾವ ಸಾಚಾ ಲೇಖನವನ್ನು ನೋಡಿದರೂ ಈ ಜನಗಳಿಗೆ ಅದೆಷ್ಟು ಉತ್ತಮ ಬರಹವಿದ್ದರೂ ಅದರಲ್ಲಿ ವೈರುಧ್ಯಗಳೇ ಕಾಣಿಸುತ್ತವೆ.ಮಾತ್ರವಲ್ಲ ಈ ಸಕಾಲಿಕ ಸತ್ಯಗಳನ್ನು ಜೀರ್ಣಿಸಲಾಗದೆ, ವಾಂತಿ ಮಾಡಲು ಆರಂಭಿಸುತ್ತಾರೆ. ಒಂದೊಂದೇ ವಿಷಯಗಳನ್ನು ಪ್ರಾಮಾಣಿಕವಾಗಿ ಪುರಾವೆಗಳಿಂದ ಮಂಡಿಸುವ ಲೇಖನವಿದ್ದರೆ ಇವುಗಳನ್ನು ಓದುತ್ತಲೇ ತಲೆಸುತ್ತುವಿಕೆ ಶುರುವಾಗಿ ಕೊನೆಗೆ ಬೇಕಾಬಿಟ್ಟಿಯಾಗಿ ಪ್ರತಿಕ್ರಿಯೆಗಳ ಮೂಲಕ ಕಾರಿಕೊಳ್ಳುತ್ತಾ ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಇನ್ನಷ್ಟು ಪ್ರಮಾಣಗಳನ್ನು ಹೊಂದಿರುವ ಪ್ರತಿಕ್ರಿಯೆ ಕಂಡರೆ ತಮ್ಮ ವಾದ ಮಂಡಿಸಿದಷ್ಟೂ ಮತ್ತಷ್ಟು ನಗ್ನರಾಗುವೆವು ಎಂದರಿತಾಗ ಇವೆಲ್ಲವೂ ಕೊನೆಯಾಗಿ ಸುಮ್ಮನಿರುತ್ತಾರೆ. ಈ ಹಿಂದೊಮ್ಮೆ ವಿದೇಶಿ ಉದ್ಯೋಗಿಗಳನ್ನು ಭಯೋತ್ಪಾದಕರು ಎಂದು ಜರೆದ ಪ್ರತಿಕ್ರಿಯೆ ನೀಡಿದ ವ್ಯಕ್ತಿಯಲ್ಲಿ ಅದರ ಬಗ್ಗೆ ಓದುಗರೊಬ್ಬರು ಸ್ಪಷ್ಟೀಕರಣ ಬಯಸಿದಾಗ ಅಷ್ಟೊಂದು ಬೇಜವಬ್ಧಾರಿಯಾಗಿ ತನ್ನ ನೀಚ ಮನೋಭಾವನೆ ವ್ಯಕ್ತಗೊಳಿಸಿದ ಆ ವ್ಯಕ್ತಿ ಧೀರ್ಘ ಕಾಲಕ್ಕೆ ಪ್ರತಿಕ್ರಿಯೆ ನೀಡುವುದರಿಂದಲೇ ನಾಪತ್ತೆಯಾಗಿದ್ದರು.

    ಜನಸ್ನೇಹಿ

    Reply

Leave a Reply to Shridhar Prabhu Cancel reply

Your email address will not be published. Required fields are marked *