Monthly Archives: June 2016

ಪ್ರೊ.ಕೆ.ರಾಮದಾಸ್ ಪ್ರತಿಭಟನೆ ಮತ್ತು ‘ರಾಮ’ ರಾಜ್ಯ!

ಕೆ.ಎಸ್. ಮಧು

ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲ. ಮೈಸೂರಿನ ಉಸ್ತುವಾರಿ ಅಂದಿನ ಸಚಿವ ಎಚ್.ವಿಶ್ವನಾಥ್ ರ ಕೈಯಲ್ಲಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜು ಆವರಣದಲ್ಲೊಂದು ಕಾರ್ಯಕ್ರಮ. ಮುಖ್ಯ ಅತಿಥಿಯಾಗಿ ವಿಶ್ವನಾಥ್ ಭಾಗವಹಿಸಿದ್ದರು. ಅವರು ಇನ್ನೇನು ತಮ್ಮ ಮಾತುಗಳನ್ನು ಆರಂಭಿಸಬೇಕಿತ್ತು. ಆಗ ಅದೆಲ್ಲಿದ್ದವರೋ ಎಂಬಂತೆ ವಿಚಾರವಾದಿ ಕೆ.ರಾಮದಾಸ್ ಎದ್ದು ನಿಂತರು. ‘ನಿಷೇಧವಾಗಿರುವ ಪ್ರಾಣಿ ಬಲಿಯನ್ನು ಮಾಡಿಬಂದಿರುವ ಮಂತ್ರಿ ನೀನು. ನೀನು ಆ ಹುದ್ದೆಗೆ ನಾಲಾಯಕ್..” ಎಂದು ದನಿ ಎತ್ತಿದರು. ಬೆಳವಣಿಗೆಯಿಂದ ಸ್ವಲ್ಪ ವಿಚಲಿತರಾದ ‘ನೀವು ನಾಲಾಯಕ್ ವಿಚಾರವಾದಿ’ ಎಂದು ಜಗಳಕ್ಕೆ ನಿಂತರು.

ಸಚಿವರಾದ ವಿಶ್ವನಾಥ್ ಅವರ ಕುಟುಂಬ ಕೆಲವೇ ದಿನಗಳ ಹಿಂದೆ ತಮ್ಮ ಊರಿನ ಹತ್ತಿರದ ದೇವರಿಗೆ ಕುರಿ ಬಲಿ ಕೊಟ್ಟು ಊಟ ಏರ್ಪಡಿಸಿದ್ದರು ಎಂಬ ಸುದ್ದಿ ಅದೇ ದಿನ ವರದಿಯಾಗಿತ್ತು. ಆ ಸುದ್ದಿಯನ್ನು ಓದಿದ ರಾಮದಾಸ್ ಅವರು, ಒಬ್ಬ ಮಂತ್ರಿಯಾದವProf.Ramadas-3ರು ಹೀಗೆ ಮಾಡುವುದು ಸರಿಯಲ್ಲ, ಹಾಗಾಗಿ ಅವರನ್ನು ನೇರಾನೇರ ಎಲ್ಲರ ಎದುರು ಟೀಕಿಸಬೇಕು ಎಂದು ತಮ್ಮ ಒಂದೆರಡು ಗೆಳೆಯರೊಂದಿಗೆ ಆ ಕಾರ್ಯಕ್ರಮಕ್ಕೆ ಹೋಗಿ ಹಾಗೆ ವಾದಕ್ಕಿಳಿದಿದ್ದರು.

ನೆನಪಿರಲಿ. ಅಂದಿಗೆ, ರಾಮದಾಸ್ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ. ವಿಶ್ವನಾಥ್ ಕ್ಯಾಬಿನೆಟ್ ದರ್ಜೆಯ ಮಂತ್ರಿ. ಇಂದು ರಾಮದಾಸ್ ನಮ್ಮ ಮಧ್ಯೆ ಇಲ್ಲ. ಆದರೆ ವಿಶ್ವನಾಥ್ ಸೇರಿದಂತೆ, ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅನೇಕರು ಇಂದು ಇದ್ದಾರೆ.

ಈಗ ಹೇಳಿ, ಇಂತಹದೊಂದು ಸನ್ನಿವೇಶವನ್ನು ನಾವು ಇಂದು ಕಾಣಬಹುದೇ? ಕ್ಯಾಬಿನೆಟ್ ದರ್ಜೆಯ ಮಂತ್ರಿ ಬೇಡ, ತನ್ನ ಊರಿನ ಶಾಸಕನನ್ನು ಟೀಕಿಸುವುದು ಒತ್ತಟ್ಟಿಗಿರಲಿ, ಎದುರು ನಿಂತು ಕತ್ತು ಬಗ್ಗಿಸದೆ ಮಾತನಾಡುವ ಸಾಮರ್ಥ್ಯ ಎಷ್ಟು ಪ್ರಾಧ್ಯಾಪಕರಿಗಿದೆ? ಕೆಲ ಕಾಲೇಜುಗಳಲ್ಲಿ ಶಾಸಕರು ಬಂದಾಗ ಕಾಲಿಗೆ ಬಿದ್ದ ಪ್ರಾಂಶುಪಾಲರುಗಳಿದ್ದಾದರೆ, ಪ್ರಾಧ್ಯಾಪಕರುಗಳಿದ್ದಾರೆ. ಇಂತಹವರಿಂದ ಹುಡುಗರು ಕಲಿಯುವುದೇನನ್ನು?

ಪ್ರೊ.ಕೆ.ರಾಮದಾಸ್ ಅವರ ಉದಾಹರಣೆಯನ್ನು ಈಗಿನ ಕೆಲ ಹುಡುಗರಿಗೆ ಹೇಳಿದರೆ, ‘ಇವನ್ಯಾರೋ ಸುಳ್ಳು ಹೇಳುತ್ತಿದ್ದಾನೆ’ ಎನ್ನಿಸಬಹುದು. ಏಕೆಂದರೆ ಇಂದಿನ ಪರಿಸ್ಥಿತಿ ಹಾಗಿದೆ. ಅಂತಹದೊಂದು ಘಟನೆ ಈ ಹೊತ್ತಲ್ಲಿ ನಡೆದಿದ್ದರೆ, ಏನೆಲ್ಲಾ ಆಗುತ್ತಿತ್ತು ಎನ್ನುವುದನ್ನು ಒಂದ್ಸಾರಿ ಯೋಚನೆ ಮಾಡೋಣ. “ಏ. Vishwa-1ಯಾರಲ್ಲಿ ಪೊಲೀಸರು, ಈತನನ್ನು ಒಳಗೆ ಹಾಕಿ..” – ಎಂದು ಆಜ್ಞೆ ಹೊರಡಿಸಬಹುದಾದ ಮಂತ್ರಿ, ಶಾಸಕರು ನಮ್ಮ ಮಧ್ಯೆ ಇದ್ದಾರೆ. “ಅದ್ಸರಿ, ಹೀಗೆ ಅವರು ಮಂತ್ರಿಯವರನ್ನು ಟೀಕೆ ಮಾಡಲು ಹೋಗುವಾಗ, ಕಾಲೇಜಿಗೆ ರಜೆ ಹಾಕಿದ್ರಾ..ಅಥವಾ ಹುಡಗರಿಗೆ ಪಾಠ ಮಾಡೋದನ್ನು ಬಿಟ್ಟು ಮಂತ್ರಿಗೆ ಪಾಠ ಮಾಡೋಕೆ ಬಂದಿದ್ದರಾ.?” – ಹೀಗೆ ಪ್ರಶ್ನೆ ಮಾಡುವ ಮಾಧ್ಯಮದವರಿದ್ದಾರೆ.

ರಾಮದಾಸ್ ಅಂತಹವರು ತಮ್ಮ ಅಂತಹದೊಂದು ಪ್ರತಿಭಟನೆಯ ಮೂಲಕ ಒಬ್ಬ ಶಿಕ್ಷಕ ಒಂದು ವರ್ಷ ಕಾಲ ಪಾಠ ಮಾಡಿ ಹುಡುಗರಿಗೆ ತಿಳಿಸುವುದಕ್ಕಿಂತ ಹೆಚ್ಚಿನ ಮೌಲ್ಯಯುತವಾದದ್ದನ್ನು ಬೋಧಿಸಿದ್ದರು. ಹಾಗೆ ಪಾಠ ಮಾಡುವವರು ಇಂದು ಬೇಕಾಗಿದ್ದಾರೆ. ಆದರೆ ನಮ್ಮನ್ನಾಳುವ ಸರಕಾರಕ್ಕೆ ಇಂತಹವರ ಅಗತ್ಯ ಇದ್ದಂತೆ ಕಾಣುವುದಿಲ್ಲ. ಇಲ್ಲವಾಗಿದ್ದಲ್ಲಿ, ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ಬಂಧನವಾಗುತ್ತಿರಲಿಲ್ಲ. ಅವರು ತಮ್ಮ ಮಾನವ ಹಕ್ಕುಗಳ ಬಗೆಗಿನ ಉಪನ್ಯಾಸದಲ್ಲಿ ಹೇಳಿದ್ದಿಷ್ಟೆ. “ರಾಮ ಸೀತೆಯನ್ನು ಶಂಕಿಸಿ, ಅಗ್ನಿ ಪ್ರವೇಶ ಮಾಡಲು ಹೇಳುವ ಮೂಲಕ, ಆತ ಸೀತೆಯ ಹಕ್ಕುಗಳನ್ನು ನಿರಾಕರಿಸಿದ್ದ”. ಅದೊಂದು ಮಾತನ್ನು ಸಹಿಸಿಕೊಳ್ಳಲಾಗದವರು ದೂರು ಕೊಟ್ಟರು. ಅವರ ಬಂಧನವಾಯ್ತು. ಅಷ್ಟರ ಮಟ್ಟಿಗೆ ನಮ್ಮದು ರಾಮ ರಾಜ್ಯ…ಸಿದ್ದರಾಮ ರಾಜ್ಯ!

ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆ ಹಾಗೂ  ಸಂತ್ರಸ್ತರ ಗೋಳು


-ಇರ್ಷಾದ್ ಉಪ್ಪಿನಂಗಡಿ


“ನನಗೆ ನಾಲ್ಕು ಎಕರೆ ಕೃಷಿ ಇದೆ. ಕೃಷಿ ನನ್ನ ಪಾಲಿನ ದೇವರು. ಕಷ್ಟ ಪಟ್ಟು ತನ್ನ ಮಕ್ಕಳಂತೆ ಈ ಜಮೀನಿನಲ್ಲಿ ಮರಗಿಡಗಳನ್ನು  ನೆಟ್ಟು ಬೆಳೆಸಿದ್ದೇನೆ. ಇದೀಗ ಕೈಗಾರಿಕೆಗಂತ ನನ್ನ ಭೂಮಿಯನ್ನ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಜೀವ ಹೋದರೂ ನನ್ನMRPL ಜಮೀನನ್ನು ಕಂಪನಿಗೆ ಬಿಟ್ಟು ಕೊಡುವುದಿಲ್ಲ. ನನ್ನ ಬದುಕನ್ನು ಉಳಿಸಿಕೊಳ್ಳಲು ಅದ್ಯಾವ ರೀತಿಯ ಹೋರಾಟಕ್ಕೂ ನಾನು ತಯಾರಿದ್ದೀನಿ” ಹೀಗೆ ಆಕ್ರೋಶ ಭರಿತ ದುಖಃದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡವರ ಹೆಸರು ಮೊಂತಿ ಡಿಸೋಜಾ. ಮಂಗಳೂರಿನ ಪೆರ್ಮುದೆ ನಿವಾಸಿಯಾಗಿರುವ ಮೊಂತಿ ಡಿಸೋಜಾಗೆ 78 ವರ್ಷ. ನಡೆಯಲು ಆಧಾರಕ್ಕಾಗಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಬೆಳೆದು ನಿಂತ ಪೈರು, ಹಚ್ಚ ಹಸಿರಾಗಿರುವ ತೋಟವನ್ನು ತೋರಿಸುತ್ತಾ ಕಂಪನಿಯವರು ಕೇಳ್ತಾರಂತಾ ಇದನ್ನೆಲ್ಲಾ ಬಿಟ್ಟುಕೊಟ್ಟು ನಾನು ಎಲ್ಲಿಗೆ ಹೋಗಲಿ ಅಂದಾಗ ಅವರ ಕಣ್ಣಲ್ಲಿ ಕಣ್ಣೀರು ತೊಟ್ಟಿಕ್ಕುತಿತ್ತು. ಹತ್ತು ವರ್ಷದ ಹಿಂದೆ ಕೂಡಾ ಮೊಂತಿ ಡಿಸೋಜಾರಿಗೆ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ರಾಜ್ಯ ಸರ್ಕಾರ ರೈತರ ಕೃಷಿ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿತ್ತು. ಭಾರೀ ಹೋರಾಟ ನಡೆಸಿ ಮೊಂತಿ ಡಿಸೋಜಾ ತನ್ನ ಕೃಷಿ ಭೂಮಿಯನ್ನ ಉಳಿಸಿಕೊಂಡಿದ್ದರು. ಒಲಿದುಕೊಂಡ ಭೂಮಿಯಲ್ಲಿ ಕೃಷಿ ಅಭಿವೃದ್ದಿಗೊಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಏನಂತೆ, ಇದೀಗ ಮತ್ತೆ ಎಂ.ಆರ್.ಪಿ.ಎಲ್  ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ ಸಾವಿರಾರು ಎಕರೆ ಭೂಸ್ವಾಧೀನಕ್ಕೆ ಮುಂದಾಗಿದೆ. ಪರಿಣಾಮ ಭೂಸ್ವಾಧೀನದ ಭೂತ ಮೊಂತಿಬಾಯಿಯವರನ್ನು ಮತ್ತೊಮ್ಮೆ ಕಾಡಲಾರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಎಂ.ಆರ್.ಪಿ.ಎಲ್ ಕಾಲಿಟ್ಟಾಗಿನಿಂದಲೂ ಅದು ಸ್ಥಳೀಯರ ನಿದ್ದೆಗೆಡೆಸಿದೆ. 2006 ರಲ್ಲಿ ಎಂ.ಆರ್.ಪಿ.ಎಲ್wiliyam disoza ನೇತ್ರತ್ವ ಹಾಗೂ ಪಾಲುಗಾರಿಕೆಯಲ್ಲಿ ರೂಪು ತಳೆದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ರಾಜ್ಯ ಸರ್ಕಾರ ಈಗಾಗಲೇ 2017 ಎಕರೆ ಜಮೀನನ್ನು ರೈತರಿಂದ ಕಿತ್ತು ಕೊಟ್ಟಿದೆ. ಈ ಪೈಕಿ ಎಸ್.ಇ.ಜೆಡ್ ನೊಳಗೆ ವಿವಿಧ ಘಟಕಗಳ ಸ್ಥಾಪನೆಗಾಗಿ ಬಳಕೆಯಾಗಿರುವುದು ಕೇವಲ 717 ಎಕರೆ. ಉಳಿದ 1300 ಎಕರೆ ಜಮೀನು ಖಾಲಿ ಇದ್ದರೂ ತೃಪ್ತಿಗೊಳ್ಳದ ಎಂ.ಆರ್.ಪಿ.ಎಲ್ ಇದೀಗ ಮತ್ತೆ ಮಂಗಳೂರು ತಾಲೂಕಿನ ತೂಕೂರು, ಬೈಕಂಪಾಡಿ, ತಣ್ಣೀರುಬಾವಿ, ಕಳವಾರು, ಬಾಳ, ಜೋಕಟ್ಟೆ, ಪೆರ್ಮುದೆ, ಕುತ್ತೆತ್ತೂರು, ಸೂರಿಂಜೆ ಹಾಗೂ ದೇಲಂತಬೆಟ್ಟು ಗ್ರಾಮಗಳ ಸುಮಾರು 1050 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಡುವಂತೆ ಕರ್ನಾಟಕ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಅಲ್ಲದೆ ಮುಂದಿನ ಹಂತದಲ್ಲಿ 3000 ಎಕರೆಗೂ ಮೀರಿದ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳುವ ಗುರಿ ಎಮ್.ಆರ್.ಪಿ.ಎಲ್ ನದ್ದು. ಸರ್ಕಾರವೂ ಕಂಪನಿಯ ಈ ಎಲ್ಲಾ ಬೇಡಿಕೆಗೆ ಅಸ್ತು ಅಂದಿದೆ. ಪರಿಣಾಮ ಜನರು ತಾವು ಶ್ರಮಪಟ್ಟು ಬೆಳೆಸಿದ ಕೃಷಿ, ಜಮೀನು, ಮನೆ ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪೆರ್ಮುದೆ, ಕುತ್ತೆತ್ತೂರು ಗ್ರಾಮ ಮಂಗಳೂರು ನಗರದಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಈ ಗ್ರಾಮದ ಜನಸಂಖ್ಯೆ ಸುಮಾರುpermude-sez-3 6000. ಗ್ರಾಮದ ಶೇ. 75 ರಷ್ಟು ಜನರು ಕೃಷಿಕರು. ಭತ್ತ, ಅಡಿಕೆ, ತೆಂಗು, ಬಾಳೆ, ತರಕಾರಿ ಇಲ್ಲಿಯ ಪ್ರಮುಖ ಕೃಷಿ. 2006 ರಲ್ಲಿ ಎಸ್.ಇ.ಜೆಡ್ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಹಾಗೂ ದೇಲಂತ ಬೆಟ್ಟು ಗ್ರಾಮಗಳು ಒಳಗೊಂಡಿದ್ದವು. ಆದರೆ ಬಲವಂತದ ಭೂಸ್ವಾಧೀನದ ವಿರುದ್ಧವಾಗಿ ನಡೆದ ತೀವ್ರ ಹೋರಾಟದ ಹಿನ್ನೆಲೆಯಲ್ಲಿ 2011 ರಲ್ಲಿ ಭೂಸ್ವಾಧೀನದಿಂದ ಈ ಗ್ರಾಮಗಳನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಎಮ್.ಆರ್.ಪಿ.ಎಲ್ ನಾಲ್ಕನೇ ಹಂತಕ್ಕಾಗಿ ಭೂಸ್ವಾಧೀನದ ಪ್ರಕ್ರಿಯೆ ಚುರುಕು ಪಡೆಯುತ್ತಿರುವಂತೆ ಈ ಗ್ರಾಮದ ಜನರು ಆತಂಕಿತರಾಗಿದ್ದಾರೆ.

ವಿಲಿಯಂ ಡಿಸೋಜಾ ಕುತ್ತೆತ್ತೂರಿನ ನಿವಾಸಿ. ನಮ್ಮನ್ನು ಬರಮಾಡಿಕೊಂಡು ಕುತ್ತೆತ್ತೂರಿನ ಹಚ್ಚ ಹಸಿರಾದ ವಾತಾವರಣವನ್ನು ತೋರಿಸಲು ತಮ್ಮ ಜೀಪ್ ನಲ್ಲಿ ಕರೆದೊಯ್ದರು. ವಿಲಿಯಂ ಡಿಸೋಜಾರಿಗೆ 15 ಎಕರೆ ಜಮೀನಿದೆ. ಇವರ ಜಮೀನಿನಲ್ಲೊಮ್ಮೆ ನಿಂತು ಎಲ್ಲಿ ಕಣ್ಣು ಹಾಯಿಸಿದರೂ ಸಮೃದ್ದವಾಗಿ ಬೆಳೆದು ನಿಂತ ಕೃಷಿತೋಟ ನಮ್ಮನ್ನು ಸೆಳೆಯುತ್ತದೆ. ಪುಟ್ಟ ಮನೆ, ಹೆಂಡತಿ ಇಬ್ಬರು ಮಕ್ಕಳ ಜೊತೆ ನೆಮ್ಮದಿಯ ಪರಿಸರದಲ್ಲಿ ಜೀವನ ನಡೆಸುತ್ತಿರುವ ವಿಲಿಯಂಗೆ ಇದೀಗ ಎಲ್ಲವನ್ನೂ ಕಳೆದುಕೊಳ್ಳುತ್ತೇನೆಂಬ ಆತಂಕ. “ನಾನು ನನ್ನ ಸ್ವಂತ ಜಮೀನನ್ನು ಮಾರಿ ಬಿಟ್ಟು ಎಂ.ಆರ್.ಪಿ.ಎಲ್ ಕೂಲಿಯಾಳಾಗಲು ತಯಾರಿಲ್ಲ. ಮೈಮುರಿದು ಗದ್ದೆ ತೋಟ ಬೆಳೆಸಿದ್ದೇನೆ. ಉತ್ತಮ ಆದಾಯಗಳಿಸಿ ಯಾರ ಹಂಗಿಲ್ಲದೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಇದೀಗ ಎಮ್.ಆರ್.ಪಿ.ಎಲ್ ಕಂಪನಿ ನನ್ನ ಜಮೀನಿಗೆ ಕನ್ನ ಹಾಕ್ತಿದೆ. ನನ್ನನ್ನು ಕೊಂದರೂ ನನ್ನ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ” ಅಂತಿದ್ದಾರೆ ವಿಲಿಯಂ. ವಿಲಿಯಂ ಡಿಸೋಜಾ ಎಂ.ಆರ್.ಪಿ.ಎಲ್ ಭೂಸ್ವಾಧೀನದಿಂದ ರೈತರ ಕೃಷಿ ಭೂಮಿಯನ್ನ ಸಂರಕ್ಷಿಸಲು ಹುಟ್ಟಿಕೊಂಡ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷರು. ಗ್ರಾಮದ ಮನೆಮನೆಗಳನ್ನು ಸುತ್ತಿಕೊಂಡು ಭೂಸ್ವಾಧೀನದ ವಿರುದ್ಧ ಹೋರಾಟಕ್ಕೆ ಧುಮುಕುವಂತೆ ರೈತರನ್ನು ಸಂಘಟಿಸುವವರಲ್ಲಿ ಇವರೂ ಒಬ್ಬರಾಗಿದ್ದಾರೆ.

ಇದು ಕೇವಲ ಮೊಂತಿ ಡಿಸೋಜಾ, ವಿಲಿಯಂ ಡಿಸೋಜಾರಂತಹ ಕೃಷಿಕರ ಆತಂಕ ಮಾತ್ರವಲ್ಲ. ಪೆರ್ಮುದೆ, ಕುತ್ತೆತ್ತೂರು ಗ್ರಾಮದpermude-sez ಎಲ್ಲಾ ಕೃಷಿಕರ ಆತಂಕ ಕೂಡಾ ಹೌದು. ಕುತ್ತೆತ್ತೂರಿನ ನಾಗೇಶ್ ಎಂಬುವವರಿಗೆ 6 ಎಕರೆ ಜಮೀನಿದೆ. ಇವರ ತೋಟ ವರ್ಷವಿಡೀ ಹಸಿರಿನಿಂದ ಕಂಗೊಳಿಸುತ್ತೆ. ಎಲ್ಲಾ ರೀತಿಯ ಬೇಸಾಯವನ್ನು ತನ್ನ ಫಲವತ್ತಾದ ಭೂಮಿಯಲ್ಲಿ ನಾಗೇಶ್ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಕೃಷಿ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿದ್ದು ಅವರ ಮನೆ ದೈವದ ಸ್ಥಾನ. “ಕೃಷಿ ದೈವದೇವರುಗಳನ್ನು ಬಿಟ್ಟು ಇಲ್ಲಿಂದ ಹೊರಹೋಗೋದಕ್ಕಿಂತ ಹೋರಾಡಿ ಸಾಯೋದೇ ಲೇಸು” ಅನ್ನುತ್ತಾರೆ ನಾಗೇಶ್. ಇವರಂತೆ ಪೆರ್ಮುದೆಯ ನಿವಾಸಿ ರಾಘವೇಂದ್ರ. ಇವರು ವೃತ್ತಿಯಲ್ಲಿ ಅರ್ಚಕರು. ತೋಟದ ನಡುವಿನ ಮನೆಗೆ ಅವರನ್ನ ಮಾತನಾಡಿಸಲೆಂದು ಹೋದಾಗ ಮಾವಿನ ರಸದಿಂದ ತಯಾರಿಸಿದ ರುಚಿಯಾದ ತಿಂಡಿಯನ್ನು ನಮಗೆ ಸವಿಯಲು ನೀಡಿ ಇದು ನಿಮ್ಮ ಸಿಟಿಯಲ್ಲಿ ಸಿಗುತ್ತಾ ಮಾರಾಯರೇ ಎಂದು ನಗುತ್ತಾ ಮಾತಿಗಿಳಿದರು. “ನಾವೇನು ಕೈಗಾರಿಕೆಗಳ ವಿರೋಧಿಗಳಲ್ಲ ಆದ್ರೆ ಇವರಿಗೆ ಕೃಷಿ ಭೂಮಿಯೇ ಯಾಕೆ ಬೇಕು? ಎಮ್.ಆರ್.ಪಿ.ಎಲ್ ನಂತಹಾ ಕೈಗಾರಿಕೆ ಇಲ್ಲಿಗೆ ಬಂದ ನಂತರ ಇಲ್ಲಿನ ಪರಿಸರ, ಜೀವವೈವಿದ್ಯ ನಾಶವಾಗುತ್ತಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಮೀರಿ  ಕೈಗಾರಿಕೆ ಬೆಳೆಯುತ್ತಿದೆ” ಎನ್ನುತ್ತಾ ತಮ್ಮ ತೋಟದ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ಎರಡೂವರೆ ಎಕರೆ ಜಮೀನಿನಲ್ಲಿ ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ರಾಘವೇಂದ್ರ ಬೆಳೆಸಿದ್ದಾರೆ. ಉತ್ತಮ ಪರಿಹಾರ ಸಿಗುತ್ತಲ್ಲಾ, ಕೈತುಂಬಾ ಹಣ ಸಿಗುತ್ತಲ್ವಾ ಮತ್ತೆ ನೀವು ಯಾಕೆ ಎಮ್.ಆರ್.ಪಿ.ಎಲ್ ಗೆ ಭೂಮಿ ಕೊಡುವುದಿಲ್ಲಾ ಎಂಬ ಪ್ರಶ್ನೆಗೆ “ಈ ಹಿಂದೆ ಹಣದ ದುರಾಸೆಗೆ ಬಿದ್ದು ಭೂಮಿ ಕೊಟ್ಟವರ ದುಸ್ಥಿತಿಯನ್ನ ಕಣ್ಣಾರೆ ಕಂಡಿದ್ದೇವೆ. ನಾವು ಅದನ್ನು ಅನುಭವಿಸಲು ಸಾಧ್ಯವಿಲ್ಲ. ನಮ್ಮ ಕೃಷಿ ಭೂಮಿಯಲ್ಲಿ ನಮ್ಮ ಭಾವನೆಗಳಿವೆ, ಇಲ್ಲಿ ನಮಗೆ ನೆಮ್ಮದಿಯಿದೆ ನಮ್ಮ ಬದುಕನ್ನು ಬಲವಂತವಾಗಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ” ಎನ್ನುತ್ತಾ ಮಾತು ಮುಗಿಸುವಾಗ ಅರ್ಚಕರ ಕಣ್ಣು ಕೆಂಪಾಗಿತ್ತು.

ಹೀಗೆ ಪೆರ್ಮುದೆ, ಕುತ್ತೆತ್ತೂರು ಗ್ರಾಮದಲ್ಲಿ ಮಾತಿಗೆ ಸಿಕ್ಕ ಬಹುತೇಕ ರೈತರ ಅಭಿಪ್ರಾಯ ಒಂದೇ ಆಗಿತ್ತು. ಯಾವುದೇ ಕಾರಣಕ್ಕೂVidya ಕಂಪನಿಗೆ ನಮ್ಮ ಕೃಷಿ ಭೂಮಿಯನ್ನು ನೀಡುವುದಿಲ್ಲವೆಂಬುವುದಾಗಿದೆ. ರೈತರ ವಿರೋಧದ ನಡುವೆಯೂ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ಎಮ್.ಆರ್.ಪಿ.ಎಲ್ ವಿರುದ್ಧ ಇವರೆಲ್ಲಾ ಸಂಘಟಿತರಾಗುತಿದ್ದಾರೆ. ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನೇತ್ರತ್ವದಲ್ಲಿ ತಮ್ಮ ನೆಲ ಜನ ಉಳಿಸಿಕೊಳ್ಳಲು ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದಾರೆ. “ನಮಗೆ ರೈತರ ಕೃಷಿ ಭೂಮಿ ಹಾಗೂ ಅವರ ಬದುಕು ಇಲ್ಲಿಯ ಪರಿಸರ ಮುಖ್ಯವಾಗಿವೆಯೇ ಹೊರತು ಎಮ್.ಆರ್.ಪಿ.ಎಲ್ ನಂತಹ ಕಂಪನಿಯಲ್ಲ. ಖಾಲಿ ಬಿದ್ದಿರುವ ಹೆಚ್ಚುವರಿ ಭೂಮಿ ಎಮ್.ಆರ್.ಪಿ.ಎಲ್ ಬಳಿ ಇದ್ದರೂ ಮತ್ತೆ ಮತ್ತೆ ಭೂಸ್ವಾಧೀನಕ್ಕೆ ಮುಂದಾಗೋ ಉದ್ದೇಶವೇನು” ಎಂದು ಪ್ರಶ್ನಿಸುತ್ತಾರೆ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಮೂಲಕ ಈ ಭಾಗದ ರೈತರ ಹೋರಾಟಕ್ಕೆ ಮುಂದಾಳತ್ವವನ್ನು ನೀಡುತ್ತಿರುವ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್. “ಭೂಮಿ ಕೊಡಲೊಪ್ಪದ ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ. ಈ ಹಿಂದೆ ಎಸ್.ಇ.ಜೆಡ್ ಗಾಗಿ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಂಡಾಗ ಅದರ ವಿರುದ್ಧ ಹೋರಾಟ ನಡೆಸಿ ಭೂಮಿ ಉಳಿಸಿಕೊಂಡಿದ್ದೇವೆ. ಇದೀಗ ಮತ್ತೊಂದು ಹಂತದ ಹೋರಾಟ ಶುರುವಾಗಿದೆ” ಅನ್ನುತ್ತಾರೆ ವಿದ್ಯಾ ದಿನಕರ್.

ಪೆರ್ಮುದೆ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲೂ ಭೂಸ್ವಾಧೀನ ಪ್ರಕ್ರಿಯೆಗೆ ಆಕ್ಷೇಪಣೆ ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇಷ್ಟಾಗಿಯೂ ಜನರಿಗೆ ಹಾಗೂ ಸ್ಥಳೀಯ ಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೆ ಗುಪ್ತವಾಗಿ ಭೂಸ್ವಾಧೀನದ ಪ್ರಕ್ರಿಯೆಗೆ ಎಮ್.ಆರ್.ಪಿ.ಎಲ್ ಮುಂದಾಗುತ್ತಿರುವುದು ಆತಂಕಕಾರಿ ವಿಚಾರ ಎಂಬುವುದು ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಾ ಅಭಿಪ್ರಾಯ. ಇಷ್ಟೆಲ್ಲಾ ಪ್ರಬಲ ವಿರೋಧಗಳ ನಡುವೆಯೂ ಎಮ್.ಆರ್.ಪಿ.ಎಲ್ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಹಿಂಭಾಗಿಲ ಮೂಲಕ ಪ್ರಯತ್ನ ನಡೆಸುತ್ತಿದೆ. ಊರಿನ ಜನರಿಗೂ, ಸ್ಥಳೀಯ ಗ್ರಾಮಪಂಚಾಯತ್ ಗೂ ಯಾವುದೇ ಮಾಹಿತಿ ನೀಡದೆ ಗ್ರಾಮದ ಸರ್ವೇ ಕಾರ್ಯ ನಡೆಸಲು ಎಮ್.ಆರ್.ಪಿ.ಎಲ್ ಸಿಬಂಧಿ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಸರ್ವೇ ನಡೆಸಲು ಬಂದ ಸಿಬ್ಬಂದಿಯನ್ನ ಬೆನ್ನಟ್ಟಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಕಂಪನಿ ಹಾಗೂ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಸ್ಥಳೀಯರನ್ನು ಚೂಬಿಟ್ಟು ರೈತರಿಗೆ ಅಮಿಷ ಒಡ್ಡುವ ಕೆಲಸದಲ್ಲೂ ಕಂಪನಿ ನಿರತವಾಗಿದೆ.

ದೈತ್ಯ ಕಂಪನಿಯ ದುರಾಸೆಯ ಭೂಬೇಡಿಕೆ ವಿರುದ್ಧದ ಹೋರಾಟ ಕೇವಲ ಪೆರ್ಮುದೆ ಕುತ್ತೆತ್ತೂರು ಗ್ರಾಮದ ಜನರಿಗಷ್ಟೇ ಸೀಮಿತವಾಗಬಾರದು. ಕಾರಣ ಎಮ್,ಆರ್.ಪಿ.ಎಲ್ ಭೂಬೇಡಿಕೆ ಅಷ್ಟು ಸುಲಭವಾಗಿ ತಣಿಯುವಂತಹದಲ್ಲ. ಇಂದು ಪೆರ್ಮುದೆ, ಕುತ್ತೆತ್ತೂರು ಗ್ರಾಮಸ್ಥರು ಎದುರಿಸುತ್ತಿರುವ ಆತಂಕ, ಅತಂತ್ರತೆ ಮುಂದಿನ ದಿನಗಳಲ್ಲಿ ಮಂಗಳೂರಿನ ಸುತ್ತಮುತ್ತಲ ಹಳ್ಳಿಯ ಜನರದ್ದಾಗಬಹುದು. ಈ ನಿಟ್ಟಿನಲ್ಲಿ ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆಯ ವಿರುದ್ಧದ ರೈತ ಹೋರಾಟಕ್ಕೆ ಕೈಜೋಡಿಸಬೇಕಿದೆ. ಇಲ್ಲವಾದಲ್ಲಿ ಕೈಗಾರೀಕರಣ ಎಂಬ ಹೆಸರಿನ ಬುಲ್ಡೋಜರ್ ಬಾಯಿಗೆ ಮತ್ತಷ್ಟು ರೈತ ಸಮುದಾಯ ಬಲಿಯಾಗೋದಂತೂ ನಿಶ್ಚಿತ.

ನೆಡುತೋಪು ಕಾಡಾದ ಕತೆ…

 – ಪ್ರಸಾದ್ ರಕ್ಷಿದಿ

35 ವರ್ಷಗಳ ಹಿಂದಿನ ಮಾತು ಕರ್ನಾಟಕದಲ್ಲಿ ರೈತಸಂಘ ಪ್ರಬಲವಾಗಿದ್ದ ಕಾಲ. ಆಗ ಅರಣ್ಯ ಇಲಾಖೆಯ ಸಿಬ್ಬಂದಿಗೂ ರೈತರಿಗೂ ನಿತ್ಯ ಜಟಾಪಟಿ ಇದ್ದೇ ಇರುತ್ತಿತ್ತು. ಮಲೆನಾಡಿನಲ್ಲಂತೂ ಅರಣ್ಯ ಇಲಾಖೆಯೇ ರೈತನ ಪ್ರಥಮ ಶತ್ರುವೆಂದು ಜನ ಭಾವಿಸತೊಡಗಿದ್ದರು. ಅಂತಹ ಸಮಯದಲ್ಲಿ ನಮ್ಮ ಸಕಲೇಶಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಎಲ್ಲೆಲ್ಲಿ ಸಿ ಮತ್ತುಡಿ ವರ್ಗದ ಜಮೀನು ಇದೆಯೋ ಅಲ್ಲೆಲ್ಲ ಸಾಮಾಜಿಕ ಅರಣ್ಯ ಅಂದರೆ ನೆಡುತೋಪುಗಳನ್ನು ಬೆಳೆಸುವ ಕಾರ್ಯಕ್ರಮ ಪ್ರಾರಂಭಿಸಿತು. ಆದರೆ ಆ ಮೊದಲೇ ಕಂದಾಯ ಇಲಾಖೆ ನೌಕರ- ಅಧಿಕಾರಿಗಳು, ಅಲಕ್ಷ್ಯ ಮತ್ತು ಬೇಜವಾಬ್ದಾರಿ ವರ್ತನೆಯಿಂದ ಸಾವಿರಾರು ಎಕರೆ ಗೋಮಾಳ, ಮತ್ತು ಕೃಷಿಯೋಗ್ಯ ಜಮೀನನ್ನು ಕೂಡಾ ಸಿ ಮತ್ತು ಡಿ (ಅಂದರೆ ಬಂಜರು ಮತ್ತು ಕಲ್ಲು ಭೂಮಿ, ಏನೂ ಬೆಳೆಯಲಾಗದ್ದು) ಎಂದು ಗುರ್ತಿಸಿ ಅರಣ್ಯ ಇಲಾಖೆಗೆ ಕೊಟ್ಟಿದ್ದರು. ಹೆಚ್ಚಿನ ಕಡೆಗಳಲ್ಲಿಸ್ಥಳ ಪರೀಕ್ಷೆ ನಡೆಸದೆ ಕಛೇರಿಯಲ್ಲೇ ಕುಳಿತು ಸರ್ಕಾರಿಯೆಂದು ಕಂಡ ಸರ್ವೆ ನಂಬರುಗಳನ್ನೆಲ್ಲಾ ಬಂಜರೆಂದು ಗುರುತಿಸಿದ್ದರು.
ಸಾಮಾಜಿಕ ಅರಣ್ಯ ಮಾಡುತ್ತೇನೆಂದು ಇಲಾಖೆ ಗಿಡ ನೆಡಲು ಪ್ರಾರಂಭ ಮಾಡಿದಾಗ ಅದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾಯ್ತು. ಎಲ್ಲೆಲ್ಲಿ ರೈತ ಸಂಘ ಪ್ರಬಲವಾಗಿದೆಯೋ ಅಲ್ಲೆಲ್ಲೂ ಅರಣ್ಯ ಇಲಾಖೆಗೆ ಗಿಡ ನೆಡಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಇವರು ಗಿಡ ನೆಡಬೇಕೆಂದುಕೊಂಡ ಜಮೀನು ಕೃಷಿಯೋಗ್ಯ ಜಮೀನಾಗಿದ್ದು ದಾಖಲೆಯಲ್ಲಿ ಮಾತ್ರ ಬಂಜರಾಗಿತ್ತು. ಹಾಗಾಗಿ ದಾಖಲೆಯಲ್ಲಿರುವ ಸಿ ಮತ್ತು ಡಿ ವರ್ಗದ ಎಷ್ಟೋ ಜಮೀನು ಆಗಲೇ ಭೂಮಾಲಿಕರಿಂದ ಮತ್ತು ಸ್ವಲ್ಪಮಟ್ಟಿಗೆ ಭೂರಹಿತರಿಂದಲೂ ಒತ್ತುವರಿಯಾಗಿದ್ದವು. ಅಲ್ಲೆಲ್ಲೂ ರೈತ ಸಂಘದ ಕಾರ್ಯಕರ್ತರು ಗಿಡ ನೆಡಲು ಬಿಡಲೇ ಇಲ್ಲ. ಕೆಲವು ಕಡೆ ನೆಟ್ಟ ಗಿಡಗಳನ್ನು ಕಿತ್ತೆಸೆಯುವ ಕಾರ್ಯಕ್ರಮವೂ ನಡೆಯಿತು.

ನೆಲ 35 ವರ್ಷದ ಹಿಂದೆ ಹೀಗೆ ಬೋಳಾಗಿತ್ತು

ನೆಲ 35 ವರ್ಷದ ಹಿಂದೆ ಹೀಗೆ ಬೋಳಾಗಿತ್ತು

ಆದರೆ ಕೆಲವು ಕಡೆಗಳಲ್ಲಿ ನಿಜವಾದ ಬಂಜರು ಭೂಮಿ ಇತ್ತು ಇಂತಹ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 700 ಎಕರೆಗಳಷ್ಟು ಬೋಳುಗುಡ್ಡವಿತ್ತು ಅಲ್ಲಿ ಹಲವಾರು ದಶಕಗಳಿಂದ ದನ ಮೇಯ್ದು ಬೋಳಾಗಿ ಸರಿಯಾಗಿ ಹುಲ್ಲು ಕೂಡಾ ಹುಟ್ಟುತ್ತಿರಲಿಲ್ಲ. ನಾವೊಂದಷ್ಟು ಜನ ಗೆಳೆಯರು ಇಂತಹ ಭೂಮಿಯಲ್ಲಿ ಗಿಡ ಬೆಳೆಯಲಿ ಮುಂದೆ ಇದು ನಮ್ಮದೇ ಊರಿನ ಆಸ್ತಿಯಾಗುತ್ತದೆ ಎಂದುಕೊಂಡು. ಅಲ್ಲಿ ಗಿಡನೆಡುವಂತೆ ಅರಣ್ಯ ಇಲಾಖೆಯವರನ್ನು ಕೇಳಿಕೊಂಡು ಬೆಂಬಲವಾಗಿ ನಿಂತೆವು. ಅದಕ್ಕೆ ಎರಡು ಕಾರಣಗಳಿದ್ದವು.

 

 

ಮೊದಲನೆಯದಾಗಿ ಆ ಬೋಳುಗುಡ್ಡಗಳಲ್ಲಿ ಹಸಿರೇ ಇರಲಿಲ್ಲ. ಬೇಸಗೆಯಲ್ಲಂತೂ ಪೂರ್ತಿ ನೆಲ ಕಾದು ಬಿಸಿಯಾಗಿ ಒಣಗಿರುತ್ತಿತ್ತು. ಅದರಲ್ಲಿ ಮಳೆನೀರೂ ಇಂಗುತ್ತಿರಲಿಲ್ಲ. ಎರಡನೆಯದಾಗಿ ನಮ್ಮ ಹಾಗೂ ಪಕ್ಕದ ಪಂಚಾಯತಿಗಳಲ್ಲಿ ಆ ಕಾಲಕ್ಕೇ ಜಮೀನಿಲ್ಲದ ಕೂಲಿಕಾರ್ಮಿಕರಿಗೆ ಜನತಾ ಮನೆಗಳನ್ನು ಕಟ್ಟಿಕೊಡುವ ಕಾರ್ಯಕ್ರಮ ಒಂದು ಚಳುವಳಿಯಂತೆ ನಡೆದು ನೂರಾರು ಮನೆಗಳಾಗಿ ಅವರೆಲ್ಲರಿಗೂ ಸೌದೆ ದೊರೆಯುವುದು ಸಮಸ್ಯೆಯಾಗಿತ್ತು. ಹತ್ತಿರದಲ್ಲೇ ಕೆಲಸಕ್ಕೇ ಹೋಗುವವರು, ಅವರು ಕೆಲಸಕ್ಕೆ ಹೋಗುತ್ತಿದ್ದ ಸ್ಥಳದಿಂದ (ಕಾಫೀ ತೋಟಗಳು) ಸೌದೆಯನ್ನು ತರುತ್ತಿದ್ದರು. ಆದರೆ ದೂರ ದೂರ ಕೆಲಸಕ್ಕೆ ಹೋಗುವವರು ಅಥವಾ ಬೇರೇನಾದರೂ ಸಣ್ಣಪುಟ್ಟ ಕೆಲಸ ಮಾಡುವ ಇತರರಿಗೆ ಸೌದೆಯಿಲ್ಲದೆ ಹತ್ತಿರ ತೋಟಗಳಲ್ಲಿ ಸೌದೆ ಕದಿಯುವುದು ಅನಿವಾರ್ಯವಾಗುತ್ತಿತ್ತು. ಊರಿನ ಪಕ್ಕದಲ್ಲೇ ಸಾಮಾಜಿಕ ಅರಣ್ಯವಾದರೆ ಸೌದೆ

 ನೆಡುತೋಪು ಇಂದು

ನೆಡುತೋಪು ಇಂದು

ಮತ್ತಿತರ ಅಗತ್ಯ ವಸ್ತುಗಳಾದ ಸೊಪ್ಪು, ಗಳ, ಕಂಬ ಇತ್ಯಾದಿಗಳ ಪೂರೈಕೆಗೂ ಅನುಕೂಲವಾಗುತ್ತಿತ್ತು.

 

 

ನಾವು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ನಮ್ಮೂರಿನ ಬೋಳುಗುಡ್ಡಗಳಲ್ಲಿ ಗಿಡನೆಡುವಂತೆ ಕೇಳಿಕೊಂಡೆವು. ಅರಣ್ಯಾಧಿಕಾರಿಗಳು ಕೂಡಲೇ ಕೆಲಸ ಪ್ರಾರಂಭಿಸಿದರು. ನಾವು ರೈತ ಸಂಘದ ಸದಸ್ಯರೇ ಆಗಿದ್ದರೂ ಈ ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದ ರೈತಸಂಘದೊಳಗೇ ಜಗಳ ಪ್ರಾರಂಭವಾಯಿತು. ನಾವು ಬೋಳುಗುಡ್ಡಗಳಲ್ಲಿ ಗಿಡನೆಡುವುದೇ ಸೂಕ್ತ ಎಂಬ ನಮ್ಮ ನಿಲುವಿನಿಂದ ಹಿಂದೆ ಸರಿಯದೆ ಬಲವಾಗಿ ನಿಂತೆವು.
ಆದರೆ ಆಗಲೂ ಅರಣ್ಯ ಇಲಾಖೆ ನೆಟ್ಟದ್ದು ಅಕೇಷಿಯಾವನ್ನೇ. ಅದರೊಂದಿಗೆ ಅರಣ್ಯ ಇಲಾಖೆಯಲ್ಲಿ ಗಿಡನೆಡುವ ಸಲುವಾಗಿ ತೆಗೆಯುವ ಅಡ್ಡ ಚರಂಡಿಯ ಮತ್ತು ಇತರ ಕೆಲಸಗಳ ಕೂಲಿ ವಿಚಾರದಲ್ಲಿ ಸುಳ್ಳು ಲೆಕ್ಕ ತೋರಿಸಿದ್ದಾರೆದು ತಕರಾರಾಗಿ ಮತ್ತೊಂದು ಹೋರಾಟಕ್ಕೆ ನಾವು ತಯಾರಾಗಬೇಕಾಯಿತು. ಅಂತೂ ಹೇಗೋ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 400 ಎಕರೆಗಳಷ್ಟು ಅಕೇಷಿಯಾ ನೆಡುತೋಪು ನಿರ್ಮಾಣವಾಯಿತು. ಆವೇಳೆಗಾಗಲೇ ರೈತ ಸಂಘವೂ ದುರ್ಬಲವಾಗುತ್ತ ಬಂದಿತ್ತು.
ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ, ನಿಜವಾದ ಪರಿಸರ ಕಾಳಜಿಯುಳ್ಳವರೊಬ್ಬರು ವಲಯ ಅರಣ್ಯಾಧಿಕಾರಿಯಾಗಿ ಬಂದರು. ಆನಂತರದ ದಿನಗಳಲ್ಲಿ ಅವರು ಅಕೇಷಿಯಾದೊಂದಿಗೆ ಅನೇಕ ಬೇರೆ ಬೇರೆ ಸ್ಥಳೀಯ ಕಾಡು ಜಾತಿಯ ಗಿಡಗಳನ್ನೂ ನೆಡಿಸಿದರು. ಅವರಿದ್ದಾಗ ಕಳ್ಳನಾಟಾ ದಂದೆ ಮಾಡಿದವರನ್ನು ಎಳೆದು ತಂದು ಅವರ ಕೈಯಲ್ಲೇ “ಪ್ರಾಯಶ್ಚಿತ್ತ ಮಾಡಿಕೊಳ್ಳಿ” ಎಂದು ನೂರಾರು ಗಿಡಗಳನ್ನು ನೆಡಿಸುತ್ತಿದ್ದರು!.

 

ಆ ಅಧಿಕಾರಿ ವರ್ಗವಾದ ನಂತರ ಇಲಾಖೆ ಹಳೇ ಚಾಳಿಗೆ ಬಿತ್ತು. ಅಲ್ಲದೆ ಈಗ ಯಾರ ವಿರೋಧವೂ ಇಲ್ಲದ್ದರಿಂದ, ಖಾಲಿಯೆಂದು ಕಂಡ ಈಚಲು ದೀಣೆಗಳಲ್ಲೂ ಗಿಡನೆಟ್ಟು, ಈಚಲು ದೀಣೆಗಳು ನಾಶವಾಗಿ ಅದರೊಂದಿಗೆ ಅನೇಕ ಜಾತಿಯ ಕಾಡು ಹಣ್ಣುಗಳು, ಸಣ್ಣ ಪ್ರಾಣಿಗಳು ನಾಮಾವಶೇಷವಾದವು, ಎಷ್ಟೋ ಕಡೆಗಳಲ್ಲಿ ಖಾಲಿ ಬಿದ್ದಿದ್ದ ಹಿಡುವಳಿ ಜಾಗಗಳಲ್ಲೂ ಅಕೇಷಿಯಾ ನೆಟ್ಟರು. (ಈಗ ಅವೆಲ್ಲ ತಕರಾರಿನಲ್ಲಿದೆ) ಯಾಕೆಂದರೆ ಅಕೇಷಿಯಾ ಬೆಳೆದು ಖರ್ಚು ತೋರಿಸುವುದು ಸುಲಭದ ಕೆಲಸವಾಗಿತ್ತು.
ನಮ್ಮೂರ ಪಂಚಾಯತಿ ಕೇಂದ್ರದ ಪಕ್ಕದಲ್ಲೇ ಇರುವ ಅಗಲಟ್ಟಿ ಗ್ರಾಮದಲ್ಲಿ 250 ಎಕರೆಗಳಷ್ಟು ದೊಡ್ಡದಾದ ಅಕೇಷಿಯಾ ನೆಡುತೋಪು ಇದೆ. ಇದಕ್ಕೊಂದು ಗ್ರಾಮಾರಣ್ಯ ಸಮಿತಿಯೂ ಇದೆ. ಈ ನೆಲ 35 ವರ್ಷದ ಹಿಂದೆ ಒಂದು ಮರವೂ ಇಲ್ಲದ ಬೋಳುಗುಡ್ಡ ವಾಗಿತ್ತು. ನಮ್ಮಲ್ಲಿ ಕಾಡಿನಂತೆ ಬೆಳೆಯುವ ಲಂಟಾನ ಕೂಡಾ ಇಲ್ಲಿ ಬೆಳೆಯುತ್ತಿರಲಿಲ್ಲ.
ಲಂಟಾನದ ಬಗ್ಗೆ ಬೇರೆ ಬೇರೆ ಪ್ರದೇಶದ ರೈತರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಆದರೆ ಯಾಲಕ್ಕಿ ಮತ್ತು ಕಾಫಿ ಬೆಳೆಯುವ ನಮ್ಮ ತಾಲ್ಲೂಕುಗಳಲ್ಲಿ ಇದು ತುಂಬಾ ಉಪಕಾರಿ ಸಸ್ಯ. ಇದು ಬೆಳೆದಲ್ಲಿ ನೆಲ ಮೃದುವಾಗಿರುತ್ತದೆ. ಸಸಿ ಮಡಿಗಳಲ್ಲಿ ಕುಕ್ಕೆ ತುಂಬಲು ಲಂಟಾನ ಪೊದೆಗಳಿರುವ ಪ್ರದೇಶದ ಮಣ್ಣು ತುಂಬಾ ಒಳ್ಳೆಯದು. ಯಾಲಕ್ಕಿ-ಕಾಫೀ ಬೀಜ ಒಗ್ಗು ಹಾಕಿದಾಗ ಮಡಿಗಳಿಗೆ ಮುಚ್ಚಲು ಲಂಟಾನ ಕಡ್ಡಿಗಳನ್ನೇ ಬಳಸುತ್ತಾರೆ. ಇದರ ಪೊದೆಗಳ ಮಧ್ಯೆ ಹಕ್ಕಿಗಳಿಂದ ಬೀಜ ಪ್ರಸಾರವಾಗಿ ಇತರ ಗಿಡಗಳು ಹುಟ್ಟಿಬೆಳೆದು ಆ ನೆಲ ನಿಧಾನವಾಗಿ ಕಾಡಾಗುತ್ತದೆ. ಲಂಟಾನ ಈ ಪ್ರದೇಶದಲ್ಲಿ ಉಪಕಾರಿಯಾಗಿರಲು ಇಲ್ಲಿ ಬೀಳುವ ಹೆಚ್ಚು ಮಳೆಯೂ ಕಾರಣವಿರಬಹುದು. ಕಡಿಮೆ ಮಳೆಬೀಳುವ ಮತ್ತು ಒಣ ನೆಲದ ರೈತರು ಲಂಟಾನವನ್ನು ದೂರುವುದನ್ನು ಕೇಳಿದ್ದೇನೆ.
ನಮ್ಮ ಅಗಲಟ್ಟಿ ಗ್ರಾಮದ ನೆಡುತೋಪಿನಲ್ಲಿ ಹೆಚ್ಚಿನಂಶ ಅಕೇಷಿಯಾ ಮಾತ್ರವೇ ಇದ್ದರೂ ಅಲ್ಲಿ ಲಂಟಾನವೂ ಬೆಳೆಯತೊಡಗಿತು. ಅದರೊಂದಿಗೆ ಇತರ ಸಣ್ಣ ಪುಟ್ಟ ಗಿಡಗಳೂ ಮೊಳೆತವು. ಅಕೇಷಿಯಾ ಮೊದಲನೆಯ ಖಟಾವಿಗೆ ಬರುವ ವೇಳೆಗೆ ಅದರಡಿಯಲ್ಲಿ ಲಂಟಾನವೂ ಇತರ ಗಿಡಗಳೂ ವ್ಯಾಪಕವಾಗಿ ಬೆಳೆದಿದ್ದವು.
ಅಕೇಷಿಯಾ ಮೊದಲ ಖಟಾವಿನ ನಂತರ. ಈಗ ಮತ್ತೊಮ್ಮೆ ಬೆಳೆಯುತ್ತಿದೆ. ಆದರೆ ಇತರ ನೂರಾರು ಕಾಡು ಜಾತಿಯ ಗಿಡಮರಗಳು ಬೆಳೆದು ನಿಜವಾದ ಕಾಡಿನಂತೆ ಕಾಣತೊಡಗಿದೆ.
ಖ್ಯಾತ ಪರಿಸರವಾದಿ ಸುಂದರಲಾಲ ಬಹುಗುಣ ಅವರು ಗುಂಡ್ಯ ಜಲವಿದ್ಯುತ್ ಯೋಜನೆ ವಿರೋಧದ ಹೋರಾಟಕ್ಕೆ ಬಂದಾಗ ಒಂದು ರಾತ್ರಿ ನಮ್ಮೂರಿನಲ್ಲೂ ಉಳಿದಿದ್ದರು. ಈ ನೆಡುತೋಪಿನ ಪಕ್ಕದಲ್ಲೇ ಇರುವ ನಮ್ಮ ರಂಗಮಂದಿರದಲ್ಲಿ ಕುಳಿತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಗ್ರಾಮಸ್ಥರೊಬ್ಬರು, ಸುಂದರಲಾಲ ಬಹುಗುಣ ಬಂದದ್ದರಿಂದ ನೆಡುತೋಪಿಗೆ ಅವರ ಹೆಸರನ್ನಿಡಲು ಸೂಚಿಸಿದರು. ಅದಕ್ಕೆ ಉತ್ತರವಾಗಿ ಬಹುಗುಣ ಅವರು, ‘ನನ್ನ ಹೆಸರಿಡಬೇಡಿ ಇದು ನೆಡುತೋಪು, ಅಂದರೆ “ಟಿಂಬರ್ ಮೈನ್” ಇದನ್ನು ನಿಜವಾದ ಕಾಡಾಗಿ ಪರಿವರ್ತಿಸಿ.’ ಎಂದರು.

 

ನಮ್ಮೂರಿನಲ್ಲಿ ಸುಂದರಲಾಲ ಬಹುಗುಣ

ನಮ್ಮೂರಿನಲ್ಲಿ ಸುಂದರಲಾಲ ಬಹುಗುಣ

ನಮ್ಮೂರ ನೆಡುತೋಪು ನಿಧಾನವಾಗಿ ಕಾಡಾಗುತ್ತಿದೆ. ಈಗ ನಮ್ಮ ಮುಂದಿರುವ ಸವಾಲೆಂದರೆ ಎಲ್ಲೆಲ್ಲಿ ಅರಣ್ಯ ಲಾಖೆ ನೆಡುತೋಪುಗಳು ಇವೆಯೋ ಅಲ್ಲಿ ಅಕೇಷಿಯಾವನ್ನು ಖಟಾವು ಮಾಡಿ ಬೇರೆ ಜಾತಿ, ಅಂದರೆ ಆಯಾಪ್ರದೇಶದ ಸಸ್ಯಗಳನ್ನೇ ನೆಡಬೇಕು ಎಂದು ಒತ್ತಾಯಿಸುವುದು. ನಡು ನಡುವೆ ಒಂದೊಂದು ಅಕೇಷಿಯಾವೂ ಇದ್ದರೆ ತೊಂದರೆ ಏನಿಲ್ಲ. ಒಂದೇ ರೀತಿಯ (ಮೋನೋಕಲ್ಚರ್)ಸಸ್ಯಗಳನ್ನು ಬೆಳೆಸಲು ಅವಕಾಶ ಕೊಡಬಾರದು.

 

ಒಟ್ಟಾಗಿ ಹೋರಾಡಿ ಒತ್ತಾಯ ತಂದರೆ ಯಾವುದೂ ಅಸಾಧ್ಯವಲ್ಲ.

ಕಡಿಮೆ ಮಕ್ಕಳ ಶಾಲೆಗಳು: ಕೇವಲ ಭಾವನಾತ್ಮಕವಾಗಿ ನೋಡೋದು ಬೇಡ

– ಪ್ರಸಾದ್ ರಕ್ಷಿದಿ

ಈಗ ಶಾಲೆಗಳು ಪ್ರಾರಂಭವಾಗುವ ಸಮಯ. ಎಂದಿನಂತೆ ಸರಕಾರಿ ಶಾಲೆಗಳ ದುಸ್ಥಿತಿ, ಖಾಸಗಿ ಶಾಲೆಗಳ ಸುಲಿಗೆ, ತಾರತschool-3ಮ್ಯ ನೀತಿ, ಆರ್.ಟಿ.ಇ. ಗೆ ಸ್ಪಂದಿಸದಿರುವುದು. ಹಳ್ಳಿ ಮಕ್ಕಳ ಸಮಸ್ಯೆಗಳು ಎಲ್ಲವೂ ಚರ್ಚೆಗೆ ಬರುತ್ತವೆ. ಒಂದಿಷ್ಟು ಪ್ರತಿಭಟನೆ, ಭಾಷಣಗಳು, ಅಧಿಕಾರಸ್ಥರ ಹೇಳಿಕೆ ವಾದ-ವಿವಾದ, ವ್ಯಂಗ್ಯ ,ತಮಾಷೆಗಳೆಲ್ಲ ಮುಗಿದು ಯಥಾಸ್ಥಿತಿ ಮುಂದುವರಿಯುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಮತ್ತು ಹೊಸದಾಗಿ ದಾಖಲಾಗುವವರ ಸಂಖ್ಯೆ ಎರಡೂ ಇಳಿಯುತ್ತಿದೆ.

 

ಈಗಲೂ ಎಲ್ಲ ಕೊರತೆಗಳ ನಡುವೆಯೂ ಹಲವು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೆಳಮಧ್ಯಮ ಮತ್ತು ಬಡಜನರ ಮಕ್ಕಳೇ ಹೆಚ್ಚಾಗಿರುವ ಶಾಲೆಗಳ ಫಲಿತಾಂಶ ಮತ್ತು ಇತರ ಚಟುವಟಿಕೆಗಳೂ ಉತ್ತಮವಾಗಿವೆ. ಇದಕ್ಕೆ ಅಲ್ಲಿರುವ ಶಿಕ್ಷಕರು ಮತ್ತು ಪ್ರದೇಶದ- ಊರಿನ ಆಸಕ್ತ ಜನರೂ ಕಾರಣರಿರುತ್ತಾರೆ. ಆದರೆ ಈ ರೀತಿಯ ಶಾಲೆಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ.

 

ಇದಕ್ಕೆ ಹಲವಾರು ಕಾರಣಗಳನ್ನು ಹೇಳುತ್ತ ಹೋಗಬಹುದು. ಇಂದು ಇಡೀ ಭಾರತದ ಸಾಮಾಜಿಕ –ಸಾಂಸ್ಕೃತಿಕ, ಕೃಷಿ , ಉದ್ಯಮ ಎಲ್ಲವೂ ಖಾಸಗೀಕರಣಕ್ಕೊಳಗಾಗಬೇಕಾದ ಒತ್ತಡದಲ್ಲಿರುವಾಗ, ಶಿಕ್ಷಣ ಕ್ಷೇತ್ರ ಮಾತ್ರ ಇದಕ್ಕೆ ಹೊರತಾಗುವುದು ಹೇಗೆ. ಇಡೀ ಭಾರತವೇ ಕೆಲವೇ ಜನರ ಖಾಸಗಿ ಆಸ್ತಿಯಾಗುವತ್ತ ಸಾಗುತ್ತಿರುವಾಗ. ಶಿಕ್ಷಣ ಕ್ಷೇತ್ರವನ್ನು ಅದಕ್ಕೆ ಹೊರತಾಗಿ ಉಳಿಸಿಕೊಳ್ಳುವದಕ್ಕೆ ಬೇಕಾದ ಇಚ್ಛಾಶಕ್ತಿನ್ನಾಗಲೀ, ಜನಬಲವನ್ನಾಗಲೀ ನಾವು ಹೊಂದಿದ್ದೇವೆಯೆ?

 

ಅಧಿಕಾರವನ್ನು ಗಳಿಸಿದ ಹೊಸರಲ್ಲಿ ನಮ್ಮೂರಿಗೆ ಬಂದಿದ್ದ ರಾಜ್ಯ ಶಿಕ್ಷಣ ಸಚಿವರು, ನಮ್ಮೂರ ಶಾಲೆಯನ್ನು ನೋಡಿ ಸಂತೋಷ ಪಟ್ಟರು. ಹಾಗೇ ಖಾಸಗಿಯಾಗಿ ಮಾತನಾಡುತ್ತ. “ಎಲ್ಲ ಶಾಲೆಗಳನ್ನು ಉತ್ತಮ ಪಡಿಸಲು ಆರುಸಾವಿರ ಕೋಟಿ ರೂಗಳ ಅವಶ್ಯಕತೆಯಿದೆ, ನಮ್ಮಲ್ಲಿ ಅಷ್ಟು ಹಣವಿಲ್ಲ. ಅದಕ್ಕಾಗಿ, ಕಾರ್ಪೋರೇಟ್ ವಲಯದ ಸಹಾಯ ಕೇಳಲಿದ್ದೇನೆ” ಎಂದರು. ಅವರ ಉದ್ದೇಶವೇನೋ ಒಳ್ಳೆಯದೇ, ಆದರೆ ಇದೊಂದು ರೀತಿ ದೇಶವನ್ನೇ ಇನ್ನೊಬ್ಬನಿಗೆ ನೀಡಿ ಹತ್ತುಎಕರೆ ನೆಲವನ್ನು ಬೇಡಿದಂತಲ್ಲವೇ?

 

ಆಗಲೇ ಅವರು ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಆ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿ ಒಂದು ಕೇಂದ್ರದಲ್ಲಿ ಶಾಲೆ ನಡೆಸುವ ಯೋಜನೆಯನ್ನು ಹೇಳಿದರು. ವಾಸ್ತವದಲ್ಲಿ ಇದು ಅವರ ಯೋಜನೆಯೇನಲ್ಲ. ಹಿಂದಿನ ಸರಕಾರವೂ ಈ ಮಾತನ್ನು ಹೇಳಿತ್ತು. ಮತ್ತು ಬುದ್ದಿಜೀವಿಗಳ ವಲಯದಿಂದ ವಿರೋಧವೂ ವ್ಯಕ್ತವಾಗಿತ್ತು.

 

ಆದರೆ ನಮ್ಮಲ್ಲಿ ಅನೇಕರು, ಗ್ರಾಮೀಣ ಪ್ರದೇಶಗಳ ವಾಸ್ತವವನ್ನು ಅರಿಯದೆ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿಮಾಡಲಾಗುತ್ತಿದೆ. ಇದು ಕನ್ನschool-1ಡ ವಿರೋಧಿ ಮತ್ತು ಜನವಿರೋಧಿ ನೀತಿ ಎನ್ನುತ್ತಿದ್ದಾರೆ. ಇಂದು ಬರಗೂರು ರಾಮಚಂದ್ರಪ್ಪ ಮೊದಲಾದವರೂ ಸರ್ಕಾರಿ ಶಾಲೆ ಮುಚ್ಚಲು ತಮ್ಮ ವಿರೋಧವಿದೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಹಲವು ಶಾಲೆಗಳು ಮಕ್ಕಳಿಲ್ಲದೆ ಖಾಲಿ ಬಿದ್ದಿವೆ.

 

ಅನೇಕ ಬಾರಿ ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸಗಳಿಂದ ಒಳ್ಳೆಯದೇ ಆಗುತ್ತದೆಯೆಂಬ ಖಾತರಿಯೇನೂ ಇಲ್ಲ. ಇದಕ್ಕೆ ಆರ್. ಟಿ.ಇ.ಕಾನೂನು ಒಂದು ಉದಾಹರಣೆ. ಅದನ್ನು ಬಳಸಿಕೊಂಡೇ ಹಲವಾರು ಗ್ರಾಮೀಣ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಮಕ್ಕಳನ್ನು ತಮ್ಮತ್ತ ಸೆಳೆದುಕೊಂಡರು. ಅಲ್ಲಿ ಸೇರಿದ ನಂತರವಷ್ಟೇ ಪೋಷಕರಿಗೆ ಅಲ್ಲಿನ ಬೇನಾಮಿ ಸುಲಿಗೆ ತಿಳಿಯಿತು. ಅದಲ್ಲದೆ, ಅಲ್ಲಿ ಈ ಬಡ ಮಕ್ಕಳು ತಾರತಮ್ಯ ಮತ್ತು ಅವಮಾನಕ್ಕೊಳಗಾಗುತ್ತಿದ್ದರೂ ಸಹ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾರೆಂಬ ಹುಸಿ ಹೆಮ್ಮೆಯಲ್ಲಿ ಕುಳಿತರು. ಅತಿ ಪ್ರತಿಷ್ಟಿತ ಶಾಲೆಗಳು ಆರ್.ಟಿ.ಇ.ಕಾನೂನಿಗೆ ಯಾವ ಕಿಮ್ಮತ್ತನ್ನೂ ಕೊಡದೆ ಕುಳಿತಿವೆ. ಅವರನ್ನು ಮಾತನಾಡಿಸುವ, ಕೇಳುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ. ಯಾಕೆಂದರೆ ಈ ಶಾಲೆಗಳ ಮಾಲೀಕರು, ಸರ್ಕಾರದಲ್ಲೂ ಪಾಲುದಾರರು.(ಆರ್.ಟಿ.ಇ.ಕಾನೂನಿನಿಂದಲೇ ನಗರಗಳಲ್ಲೂ ಅನೇಕ ಸರ್ಕಾರಿ ಶಾಲೆಗಳು ಕಲಿಯುವವರಿಲ್ಲದೆ ಹೇಗೆ ಬರಿದಾಗಿವೆಯೆಂಬುದನ್ನು ಗೆಳೆಯರೊಬ್ಬರು ಇತ್ತೀಚೆಗೆ ಫೇಸ್ ಬುಕ್ ನಲ್ಲಿ ವಿವರಿಸಿದ್ದರು)

 

ಇನ್ನೀಗ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಒಂದೇ ಕೇಂದ್ರದಲ್ಲಿ ಶಾಲೆ ನಡೆಸುವ ಬಗ್ಗೆ. ಇದನ್ನು ನಾವು ಯಾವುದೇ ಪೂರ್ವಗ್ರಹವಿಲ್ಲದೆ ಯೋಚಿಸಿದರೆ ಒಳಿತು. ಹಿಂದೆಯೂ ಇದನ್ನು ಬುದ್ದಿಜೀವಿಗಳು ವಿರೋಧಿಸಿದ್ದರು ಇಂದೂ ವಿರೋಧಿಸುತ್ತಿದ್ದಾರೆ. ಆದರೆ ನಮ್ಮ ದೇಶದಂತಹ ಭೌಗೋಳಿಕವಾಗಿ ಸಾಮಾಜಿಕವಾ ಅಪಾರ ಭಿನ್ನತೆ, ವಿವಿಧತೆಗಳನ್ನು ಹೊಂದಿರು ನಾಡಿನಲ್ಲಿ ಅದು ಉದ್ಯೋಗ ಖಾತ್ರಿಯಿರಲಿ, ಅನ್ನಭ್ಯಾಗ್ಯವಾಗಿರಲಿ. ಅಥವಾ ಯಾವುದೇ ಸರ್ಕಾರದ ನೀತಿ ನಿಯಮಗಳಿರಲಿ ಪ್ರತಿಯೊಂದು ಪ್ರದೇಶಕ್ಕೂ ಅಲ್ಲಿನ ಅವಶ್ಯಕ್ಕೆ ತಕ್ಕಂತೆ ರೂಪಿಸುವುದು ಅಗತ್ಯ, ಹಾಗೆಯೇ ಅದನ್ನು ವಿರೋಧಿಸುವಾಗಲು ಸಾರಾಸಗಟಾಗಿ ವಿರೋಧಿಸದೆ. ತೊಂದರೆಯಾಗುವಲ್ಲಿ ಮಾತ್ರ ವಿರೋಧಿಸಬೇಕು. ಇಲ್ಲವಾದಲ್ಲಿ ನಮ್ಮ ಉದ್ದೇಶಕ್ಕೆ ವಿರುದ್ಧವಾದ ಫಲ ದೊರೆಯುತ್ತದೆ.

 

ಇದಕ್ಕೊಂದು ಉದಾಹರಣೆಯೆಂದರೆ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ ಏಕೋಪಾದ್ಯಾಯ ಶಾಲೆಯಾಗಿ ಪ್ರಾರಂಭವಾಗಿ, ಇದೀಗ ಕೆಲವು ವರ್ಷಗಳಿಂದ, ನಮ್ಮತಾಲ್ಲೂಕಿನಲ್ಲಿ ಎರಡನೇ ಅತಿಹೆಚ್ಚು ಮಕ್ಕಳು ಕಲಿಯುತ್ತಿರುವ ಶಾಲೆಯಾಗಿದೆ. (ಕಳೆದ ಐದು ವರ್ಷಗಳಲ್ಲಿ ಇಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುತ್ತಲಿನ ಹಳ್ಳಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ). ಇದು ಪಂಚಾಯತ್ ಕೇಂದ್ರದಲ್ಲಿದ್ದು ಸುತ್ತ ಏಳುಗ್ರಾಮಗಳಲ್ಲಿ ಶಾಲೆಗಳಿವೆ, ಅವುಗಳಲ್ಲಿ ಮೂರು ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಅಲ್ಲಿ ಕಲಿಯುತ್ತಿರುವವರ ಸಂಖ್ಯೆ ಕ್ರಮವಾಗಿ ಏಳು, ಹನ್ನೊಂದು, ಇಪ್ಪತ್ಮೂರು, ಒಂಭತ್ತು, ಹದಿನೈದು, ನಲುವತ್ತೆರಡು, ಮತ್ತೊಂದರಲ್ಲಿ ಕೇವಲ ಮೂರು ಮಕ್ಕಳಿದ್ದಾರೆ. ಸರ್ಕಾರಿ ಕಾನೂನಿನಂತೆ ಈಗ ಏಕೋಪಾಧ್ಯಾಯ ಶಾಲೆ ಇರುವಂತಿಲ್ಲ. ಹಾಗಾಗಿ ಈ ಎಲ್ಲ ಶಾಲೆಗಳಲ್ಲೂ ಇಬ್ಬರು ಶಿಕ್ಷಕರು ಇರಲೇಬೇಕು (ಅದರೆ ಎಲ್ಲೂ ಇಲ್ಲ). ಕೇಂದ್ರ ಶಾಲೆಯಾದ ನಮ್ಮೂರ ಶಾಲೆಯಲ್ಲಿ ಸುಮಾರು ಇನ್ನೂರು ಮಕ್ಕಳಿದ್ದು ಆರು ಜನ ಶಿಕ್ಷಕರಿದ್ದಾರೆ. ಇವರಲ್ಲಿ ಒಬ್ಬರನ್ನೋ ಇಬ್ಬರನ್ನೋ ಪ್ರತಿದಿನ ಹತ್ತಿರದ ಶಾಲೆಗಳಿಗೆ ಡೆಪ್ಟೇಷನ್ ಮೇಲೆ ಕಳುಹಿಸುತ್ತಲೋ ಇನ್ನೊಬ್ಬರು ಶಾಲಾ ಸಂಬಂಧಿತ ಕೆಲಸ, ಮೀಟಿಂಗುಗಳಿಗೋ ಹೋಗುತ್ತಿರುತ್ತಾರೆ. (ಇದಲ್ಲದೆ ಅನೇಕ ಸರ್ಕಾರಿ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದು ನಡೆದೇ ಇದೆ) ಹೀಗಾಗಿ ಇತ್ತ ಆ ಶಾಲೆಗಳಲ್ಲೂ ಪಾಠವಿಲ್ಲ. ಕೇಂದ್ರ ಶಾಲೆಯಲ್ಲೂ ಪಾಠವಿಲ್ಲದ ಸ್ಥಿತಿಯಿದೆ.

 

ಹತ್ತಿರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೆರಡು ತರಗತಿಗಳಿಗೆ ಮಕ್ಕಳೇ ಇಲ್ಲ. ಹೊಸ ಯೋಜನೆಯಂತೆ ಇವುಗಳಲ್ಲಿ ಐದು ಶಾಲೆಗಳು ಮುಚ್ಚಿಹೋಗುತ್ತವೆ. ಆದರೆ ಅಲ್ಲಿಂದ ಹೆಚ್ಚುವರಿಯಾಗಿ ಆರುಜನ ಶಿಕ್ಷಕರು ದೊರೆಯುತ್ತಾರೆ. ಆ ಹಳ್ಳಿಗಳಲ್ಲಿ ಈಗ ಹಲವು ಶಾಲಾಕೊಠಡಿಗಳು ಖಾಲಿಬಿದ್ದಿವೆ. ಮತ್ತು ಇನ್ನೂಹೆಚ್ಚುವರಿ ಕೊಠಡಿಗಳನ್ನು ಕಟ್ಟಿ ‘ಬಿಲ್’ ವಿದ್ಯೆಯನ್ನು ಪ್ರದರ್ಶಿಸುತ್ತಿದ್ದಾರೆ. (ಈ ಎಲ್ಲ ಹಳ್ಳಿಗಳಿಗೂ ಈಗ ಖಾಸಗಿ ಶಾಲೆಯ ವಾಹನಗಳು ಬರುತ್ತಿವೆ. ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ) ಅಲ್ಲಿಯೇಶಾಲೆಯನ್ನು ಉಳಿಸಿಕೊಳ್ಳುವುದರಿಂದ ಯಾವುದೇ ಅನುಕೂಲವಿಲ್ಲ. ಇದನ್ನು ಭಾವನಾತ್ಮಕವಾಗಿ ನೋಡುವುದರಿಂದ ಖಂಡಿತ ಕನ್ನಡ ಶಾಲೆಗಾಗಲೀ. ಭಾಷೆಗಾಗಲೀ ಯಾವುದೇ ಪ್ರಯೋಜನವಿಲ್ಲ. ಒಂದುವೇಳೆ ಹತ್ತಿschool-4ದರಲ್ಲೆಲ್ಲೂ ಶಾಲೆಯೇ ಇಲ್ಲದಿದ್ದರೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಆ ಶಾಲೆಯನ್ನು ಉಳಿಸಿಕೊಳ್ಳಬೇಕು.

 

ನಮ್ಮೂರು ಮಲೆನಾಡಿನ ಹಳ್ಳಿ . ಇಲ್ಲಿಗೆ ಅನ್ವಯಿಸಿದ್ದೇ ಇನ್ನೊಂದೆಡೆಗೆ ಅನ್ವಯಿಸಬೇಕಾಗಿಲ್ಲ. ಆದ್ದರಿಂದ ಇದನ್ನು ಭಾವನಾತ್ಮಕವಾಗಿ ಭಾಷಾ ಸಮಸ್ಯೆಯಾಗಿ ನೋಡದೆ. ಆಡಳಿತಾತ್ಮಕವಾಗಿ ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ನೋಡಬೇಕು. ಇಲ್ಲವಾದಲ್ಲಿ ನಾವು ಬಯಸಲಿ ಬಿಡಲಿ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂಲೇ ಮುಚ್ಚುವ ಪ್ರಸಂಗ ಬರುತ್ತದೆ.