Daily Archives: June 4, 2016

ಕಡಿಮೆ ಮಕ್ಕಳ ಶಾಲೆಗಳು: ಕೇವಲ ಭಾವನಾತ್ಮಕವಾಗಿ ನೋಡೋದು ಬೇಡ

– ಪ್ರಸಾದ್ ರಕ್ಷಿದಿ

ಈಗ ಶಾಲೆಗಳು ಪ್ರಾರಂಭವಾಗುವ ಸಮಯ. ಎಂದಿನಂತೆ ಸರಕಾರಿ ಶಾಲೆಗಳ ದುಸ್ಥಿತಿ, ಖಾಸಗಿ ಶಾಲೆಗಳ ಸುಲಿಗೆ, ತಾರತschool-3ಮ್ಯ ನೀತಿ, ಆರ್.ಟಿ.ಇ. ಗೆ ಸ್ಪಂದಿಸದಿರುವುದು. ಹಳ್ಳಿ ಮಕ್ಕಳ ಸಮಸ್ಯೆಗಳು ಎಲ್ಲವೂ ಚರ್ಚೆಗೆ ಬರುತ್ತವೆ. ಒಂದಿಷ್ಟು ಪ್ರತಿಭಟನೆ, ಭಾಷಣಗಳು, ಅಧಿಕಾರಸ್ಥರ ಹೇಳಿಕೆ ವಾದ-ವಿವಾದ, ವ್ಯಂಗ್ಯ ,ತಮಾಷೆಗಳೆಲ್ಲ ಮುಗಿದು ಯಥಾಸ್ಥಿತಿ ಮುಂದುವರಿಯುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಮತ್ತು ಹೊಸದಾಗಿ ದಾಖಲಾಗುವವರ ಸಂಖ್ಯೆ ಎರಡೂ ಇಳಿಯುತ್ತಿದೆ.

 

ಈಗಲೂ ಎಲ್ಲ ಕೊರತೆಗಳ ನಡುವೆಯೂ ಹಲವು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೆಳಮಧ್ಯಮ ಮತ್ತು ಬಡಜನರ ಮಕ್ಕಳೇ ಹೆಚ್ಚಾಗಿರುವ ಶಾಲೆಗಳ ಫಲಿತಾಂಶ ಮತ್ತು ಇತರ ಚಟುವಟಿಕೆಗಳೂ ಉತ್ತಮವಾಗಿವೆ. ಇದಕ್ಕೆ ಅಲ್ಲಿರುವ ಶಿಕ್ಷಕರು ಮತ್ತು ಪ್ರದೇಶದ- ಊರಿನ ಆಸಕ್ತ ಜನರೂ ಕಾರಣರಿರುತ್ತಾರೆ. ಆದರೆ ಈ ರೀತಿಯ ಶಾಲೆಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ.

 

ಇದಕ್ಕೆ ಹಲವಾರು ಕಾರಣಗಳನ್ನು ಹೇಳುತ್ತ ಹೋಗಬಹುದು. ಇಂದು ಇಡೀ ಭಾರತದ ಸಾಮಾಜಿಕ –ಸಾಂಸ್ಕೃತಿಕ, ಕೃಷಿ , ಉದ್ಯಮ ಎಲ್ಲವೂ ಖಾಸಗೀಕರಣಕ್ಕೊಳಗಾಗಬೇಕಾದ ಒತ್ತಡದಲ್ಲಿರುವಾಗ, ಶಿಕ್ಷಣ ಕ್ಷೇತ್ರ ಮಾತ್ರ ಇದಕ್ಕೆ ಹೊರತಾಗುವುದು ಹೇಗೆ. ಇಡೀ ಭಾರತವೇ ಕೆಲವೇ ಜನರ ಖಾಸಗಿ ಆಸ್ತಿಯಾಗುವತ್ತ ಸಾಗುತ್ತಿರುವಾಗ. ಶಿಕ್ಷಣ ಕ್ಷೇತ್ರವನ್ನು ಅದಕ್ಕೆ ಹೊರತಾಗಿ ಉಳಿಸಿಕೊಳ್ಳುವದಕ್ಕೆ ಬೇಕಾದ ಇಚ್ಛಾಶಕ್ತಿನ್ನಾಗಲೀ, ಜನಬಲವನ್ನಾಗಲೀ ನಾವು ಹೊಂದಿದ್ದೇವೆಯೆ?

 

ಅಧಿಕಾರವನ್ನು ಗಳಿಸಿದ ಹೊಸರಲ್ಲಿ ನಮ್ಮೂರಿಗೆ ಬಂದಿದ್ದ ರಾಜ್ಯ ಶಿಕ್ಷಣ ಸಚಿವರು, ನಮ್ಮೂರ ಶಾಲೆಯನ್ನು ನೋಡಿ ಸಂತೋಷ ಪಟ್ಟರು. ಹಾಗೇ ಖಾಸಗಿಯಾಗಿ ಮಾತನಾಡುತ್ತ. “ಎಲ್ಲ ಶಾಲೆಗಳನ್ನು ಉತ್ತಮ ಪಡಿಸಲು ಆರುಸಾವಿರ ಕೋಟಿ ರೂಗಳ ಅವಶ್ಯಕತೆಯಿದೆ, ನಮ್ಮಲ್ಲಿ ಅಷ್ಟು ಹಣವಿಲ್ಲ. ಅದಕ್ಕಾಗಿ, ಕಾರ್ಪೋರೇಟ್ ವಲಯದ ಸಹಾಯ ಕೇಳಲಿದ್ದೇನೆ” ಎಂದರು. ಅವರ ಉದ್ದೇಶವೇನೋ ಒಳ್ಳೆಯದೇ, ಆದರೆ ಇದೊಂದು ರೀತಿ ದೇಶವನ್ನೇ ಇನ್ನೊಬ್ಬನಿಗೆ ನೀಡಿ ಹತ್ತುಎಕರೆ ನೆಲವನ್ನು ಬೇಡಿದಂತಲ್ಲವೇ?

 

ಆಗಲೇ ಅವರು ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಆ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿ ಒಂದು ಕೇಂದ್ರದಲ್ಲಿ ಶಾಲೆ ನಡೆಸುವ ಯೋಜನೆಯನ್ನು ಹೇಳಿದರು. ವಾಸ್ತವದಲ್ಲಿ ಇದು ಅವರ ಯೋಜನೆಯೇನಲ್ಲ. ಹಿಂದಿನ ಸರಕಾರವೂ ಈ ಮಾತನ್ನು ಹೇಳಿತ್ತು. ಮತ್ತು ಬುದ್ದಿಜೀವಿಗಳ ವಲಯದಿಂದ ವಿರೋಧವೂ ವ್ಯಕ್ತವಾಗಿತ್ತು.

 

ಆದರೆ ನಮ್ಮಲ್ಲಿ ಅನೇಕರು, ಗ್ರಾಮೀಣ ಪ್ರದೇಶಗಳ ವಾಸ್ತವವನ್ನು ಅರಿಯದೆ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿಮಾಡಲಾಗುತ್ತಿದೆ. ಇದು ಕನ್ನschool-1ಡ ವಿರೋಧಿ ಮತ್ತು ಜನವಿರೋಧಿ ನೀತಿ ಎನ್ನುತ್ತಿದ್ದಾರೆ. ಇಂದು ಬರಗೂರು ರಾಮಚಂದ್ರಪ್ಪ ಮೊದಲಾದವರೂ ಸರ್ಕಾರಿ ಶಾಲೆ ಮುಚ್ಚಲು ತಮ್ಮ ವಿರೋಧವಿದೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಹಲವು ಶಾಲೆಗಳು ಮಕ್ಕಳಿಲ್ಲದೆ ಖಾಲಿ ಬಿದ್ದಿವೆ.

 

ಅನೇಕ ಬಾರಿ ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸಗಳಿಂದ ಒಳ್ಳೆಯದೇ ಆಗುತ್ತದೆಯೆಂಬ ಖಾತರಿಯೇನೂ ಇಲ್ಲ. ಇದಕ್ಕೆ ಆರ್. ಟಿ.ಇ.ಕಾನೂನು ಒಂದು ಉದಾಹರಣೆ. ಅದನ್ನು ಬಳಸಿಕೊಂಡೇ ಹಲವಾರು ಗ್ರಾಮೀಣ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಮಕ್ಕಳನ್ನು ತಮ್ಮತ್ತ ಸೆಳೆದುಕೊಂಡರು. ಅಲ್ಲಿ ಸೇರಿದ ನಂತರವಷ್ಟೇ ಪೋಷಕರಿಗೆ ಅಲ್ಲಿನ ಬೇನಾಮಿ ಸುಲಿಗೆ ತಿಳಿಯಿತು. ಅದಲ್ಲದೆ, ಅಲ್ಲಿ ಈ ಬಡ ಮಕ್ಕಳು ತಾರತಮ್ಯ ಮತ್ತು ಅವಮಾನಕ್ಕೊಳಗಾಗುತ್ತಿದ್ದರೂ ಸಹ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾರೆಂಬ ಹುಸಿ ಹೆಮ್ಮೆಯಲ್ಲಿ ಕುಳಿತರು. ಅತಿ ಪ್ರತಿಷ್ಟಿತ ಶಾಲೆಗಳು ಆರ್.ಟಿ.ಇ.ಕಾನೂನಿಗೆ ಯಾವ ಕಿಮ್ಮತ್ತನ್ನೂ ಕೊಡದೆ ಕುಳಿತಿವೆ. ಅವರನ್ನು ಮಾತನಾಡಿಸುವ, ಕೇಳುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ. ಯಾಕೆಂದರೆ ಈ ಶಾಲೆಗಳ ಮಾಲೀಕರು, ಸರ್ಕಾರದಲ್ಲೂ ಪಾಲುದಾರರು.(ಆರ್.ಟಿ.ಇ.ಕಾನೂನಿನಿಂದಲೇ ನಗರಗಳಲ್ಲೂ ಅನೇಕ ಸರ್ಕಾರಿ ಶಾಲೆಗಳು ಕಲಿಯುವವರಿಲ್ಲದೆ ಹೇಗೆ ಬರಿದಾಗಿವೆಯೆಂಬುದನ್ನು ಗೆಳೆಯರೊಬ್ಬರು ಇತ್ತೀಚೆಗೆ ಫೇಸ್ ಬುಕ್ ನಲ್ಲಿ ವಿವರಿಸಿದ್ದರು)

 

ಇನ್ನೀಗ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಿ ಒಂದೇ ಕೇಂದ್ರದಲ್ಲಿ ಶಾಲೆ ನಡೆಸುವ ಬಗ್ಗೆ. ಇದನ್ನು ನಾವು ಯಾವುದೇ ಪೂರ್ವಗ್ರಹವಿಲ್ಲದೆ ಯೋಚಿಸಿದರೆ ಒಳಿತು. ಹಿಂದೆಯೂ ಇದನ್ನು ಬುದ್ದಿಜೀವಿಗಳು ವಿರೋಧಿಸಿದ್ದರು ಇಂದೂ ವಿರೋಧಿಸುತ್ತಿದ್ದಾರೆ. ಆದರೆ ನಮ್ಮ ದೇಶದಂತಹ ಭೌಗೋಳಿಕವಾಗಿ ಸಾಮಾಜಿಕವಾ ಅಪಾರ ಭಿನ್ನತೆ, ವಿವಿಧತೆಗಳನ್ನು ಹೊಂದಿರು ನಾಡಿನಲ್ಲಿ ಅದು ಉದ್ಯೋಗ ಖಾತ್ರಿಯಿರಲಿ, ಅನ್ನಭ್ಯಾಗ್ಯವಾಗಿರಲಿ. ಅಥವಾ ಯಾವುದೇ ಸರ್ಕಾರದ ನೀತಿ ನಿಯಮಗಳಿರಲಿ ಪ್ರತಿಯೊಂದು ಪ್ರದೇಶಕ್ಕೂ ಅಲ್ಲಿನ ಅವಶ್ಯಕ್ಕೆ ತಕ್ಕಂತೆ ರೂಪಿಸುವುದು ಅಗತ್ಯ, ಹಾಗೆಯೇ ಅದನ್ನು ವಿರೋಧಿಸುವಾಗಲು ಸಾರಾಸಗಟಾಗಿ ವಿರೋಧಿಸದೆ. ತೊಂದರೆಯಾಗುವಲ್ಲಿ ಮಾತ್ರ ವಿರೋಧಿಸಬೇಕು. ಇಲ್ಲವಾದಲ್ಲಿ ನಮ್ಮ ಉದ್ದೇಶಕ್ಕೆ ವಿರುದ್ಧವಾದ ಫಲ ದೊರೆಯುತ್ತದೆ.

 

ಇದಕ್ಕೊಂದು ಉದಾಹರಣೆಯೆಂದರೆ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ ಏಕೋಪಾದ್ಯಾಯ ಶಾಲೆಯಾಗಿ ಪ್ರಾರಂಭವಾಗಿ, ಇದೀಗ ಕೆಲವು ವರ್ಷಗಳಿಂದ, ನಮ್ಮತಾಲ್ಲೂಕಿನಲ್ಲಿ ಎರಡನೇ ಅತಿಹೆಚ್ಚು ಮಕ್ಕಳು ಕಲಿಯುತ್ತಿರುವ ಶಾಲೆಯಾಗಿದೆ. (ಕಳೆದ ಐದು ವರ್ಷಗಳಲ್ಲಿ ಇಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುತ್ತಲಿನ ಹಳ್ಳಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ). ಇದು ಪಂಚಾಯತ್ ಕೇಂದ್ರದಲ್ಲಿದ್ದು ಸುತ್ತ ಏಳುಗ್ರಾಮಗಳಲ್ಲಿ ಶಾಲೆಗಳಿವೆ, ಅವುಗಳಲ್ಲಿ ಮೂರು ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಅಲ್ಲಿ ಕಲಿಯುತ್ತಿರುವವರ ಸಂಖ್ಯೆ ಕ್ರಮವಾಗಿ ಏಳು, ಹನ್ನೊಂದು, ಇಪ್ಪತ್ಮೂರು, ಒಂಭತ್ತು, ಹದಿನೈದು, ನಲುವತ್ತೆರಡು, ಮತ್ತೊಂದರಲ್ಲಿ ಕೇವಲ ಮೂರು ಮಕ್ಕಳಿದ್ದಾರೆ. ಸರ್ಕಾರಿ ಕಾನೂನಿನಂತೆ ಈಗ ಏಕೋಪಾಧ್ಯಾಯ ಶಾಲೆ ಇರುವಂತಿಲ್ಲ. ಹಾಗಾಗಿ ಈ ಎಲ್ಲ ಶಾಲೆಗಳಲ್ಲೂ ಇಬ್ಬರು ಶಿಕ್ಷಕರು ಇರಲೇಬೇಕು (ಅದರೆ ಎಲ್ಲೂ ಇಲ್ಲ). ಕೇಂದ್ರ ಶಾಲೆಯಾದ ನಮ್ಮೂರ ಶಾಲೆಯಲ್ಲಿ ಸುಮಾರು ಇನ್ನೂರು ಮಕ್ಕಳಿದ್ದು ಆರು ಜನ ಶಿಕ್ಷಕರಿದ್ದಾರೆ. ಇವರಲ್ಲಿ ಒಬ್ಬರನ್ನೋ ಇಬ್ಬರನ್ನೋ ಪ್ರತಿದಿನ ಹತ್ತಿರದ ಶಾಲೆಗಳಿಗೆ ಡೆಪ್ಟೇಷನ್ ಮೇಲೆ ಕಳುಹಿಸುತ್ತಲೋ ಇನ್ನೊಬ್ಬರು ಶಾಲಾ ಸಂಬಂಧಿತ ಕೆಲಸ, ಮೀಟಿಂಗುಗಳಿಗೋ ಹೋಗುತ್ತಿರುತ್ತಾರೆ. (ಇದಲ್ಲದೆ ಅನೇಕ ಸರ್ಕಾರಿ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದು ನಡೆದೇ ಇದೆ) ಹೀಗಾಗಿ ಇತ್ತ ಆ ಶಾಲೆಗಳಲ್ಲೂ ಪಾಠವಿಲ್ಲ. ಕೇಂದ್ರ ಶಾಲೆಯಲ್ಲೂ ಪಾಠವಿಲ್ಲದ ಸ್ಥಿತಿಯಿದೆ.

 

ಹತ್ತಿರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೆರಡು ತರಗತಿಗಳಿಗೆ ಮಕ್ಕಳೇ ಇಲ್ಲ. ಹೊಸ ಯೋಜನೆಯಂತೆ ಇವುಗಳಲ್ಲಿ ಐದು ಶಾಲೆಗಳು ಮುಚ್ಚಿಹೋಗುತ್ತವೆ. ಆದರೆ ಅಲ್ಲಿಂದ ಹೆಚ್ಚುವರಿಯಾಗಿ ಆರುಜನ ಶಿಕ್ಷಕರು ದೊರೆಯುತ್ತಾರೆ. ಆ ಹಳ್ಳಿಗಳಲ್ಲಿ ಈಗ ಹಲವು ಶಾಲಾಕೊಠಡಿಗಳು ಖಾಲಿಬಿದ್ದಿವೆ. ಮತ್ತು ಇನ್ನೂಹೆಚ್ಚುವರಿ ಕೊಠಡಿಗಳನ್ನು ಕಟ್ಟಿ ‘ಬಿಲ್’ ವಿದ್ಯೆಯನ್ನು ಪ್ರದರ್ಶಿಸುತ್ತಿದ್ದಾರೆ. (ಈ ಎಲ್ಲ ಹಳ್ಳಿಗಳಿಗೂ ಈಗ ಖಾಸಗಿ ಶಾಲೆಯ ವಾಹನಗಳು ಬರುತ್ತಿವೆ. ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ) ಅಲ್ಲಿಯೇಶಾಲೆಯನ್ನು ಉಳಿಸಿಕೊಳ್ಳುವುದರಿಂದ ಯಾವುದೇ ಅನುಕೂಲವಿಲ್ಲ. ಇದನ್ನು ಭಾವನಾತ್ಮಕವಾಗಿ ನೋಡುವುದರಿಂದ ಖಂಡಿತ ಕನ್ನಡ ಶಾಲೆಗಾಗಲೀ. ಭಾಷೆಗಾಗಲೀ ಯಾವುದೇ ಪ್ರಯೋಜನವಿಲ್ಲ. ಒಂದುವೇಳೆ ಹತ್ತಿschool-4ದರಲ್ಲೆಲ್ಲೂ ಶಾಲೆಯೇ ಇಲ್ಲದಿದ್ದರೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಆ ಶಾಲೆಯನ್ನು ಉಳಿಸಿಕೊಳ್ಳಬೇಕು.

 

ನಮ್ಮೂರು ಮಲೆನಾಡಿನ ಹಳ್ಳಿ . ಇಲ್ಲಿಗೆ ಅನ್ವಯಿಸಿದ್ದೇ ಇನ್ನೊಂದೆಡೆಗೆ ಅನ್ವಯಿಸಬೇಕಾಗಿಲ್ಲ. ಆದ್ದರಿಂದ ಇದನ್ನು ಭಾವನಾತ್ಮಕವಾಗಿ ಭಾಷಾ ಸಮಸ್ಯೆಯಾಗಿ ನೋಡದೆ. ಆಡಳಿತಾತ್ಮಕವಾಗಿ ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ನೋಡಬೇಕು. ಇಲ್ಲವಾದಲ್ಲಿ ನಾವು ಬಯಸಲಿ ಬಿಡಲಿ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂಲೇ ಮುಚ್ಚುವ ಪ್ರಸಂಗ ಬರುತ್ತದೆ.