ನವೀನ್ ಸೂರಿಂಜೆ
ಅವತ್ತು ಆಯಿಶಾ ಆಸ್ಮಿನ್ ಎಂಬ ವಿದ್ಯಾರ್ಥಿನಿಗೆ ಬುರ್ಕಾ ಧರಿಸಿ ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಸುದ್ದಿ ಬಂದ ತಕ್ಷಣ ನಾನು ಸುದಿಪ್ತೋ ಮೊಂಡಲ್ , ಶ್ರೀನಿಧಿ, ವಿನೋಭ, ಸತ್ಯ ಬಂಟ್ವಾಳದ ಎಸ್ ವಿ ಎಸ್ ಕಾಲೇಜಿಗೆ ತೆರಳಿದ್ದೆವು. ಸುದ್ದಿ ಮಾಡುವ ಉದ್ದೇಶದಿಂದ ತೆರಳಿದ್ದ ನಮಗೆ ಅಲ್ಲಿನ ಪ್ರಾಂಶುಪಾಲರು ಅಧಿಕೃತವಾಗಿ ಹೇಳಿಕೆ ಕೊಟ್ಟಿದ್ದೇನೆಂದರೆ, ”ನೋಡಿ ಇವತ್ತು ಬುರ್ಕಾ ಹಾಕಿಕೊಂಡು ಬರಲು ಅನುಮತಿ ಕೊಟ್ಟರೆ, ನಾಳೆಯಿಂದ ಕಾಲೇಜಿನ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ. ಶಾಲೆಯ ಶಿಸ್ತು ಹಾಳಾಗುತ್ತದೆ. ಅದಕ್ಕೆ ಬುರ್ಕಾ ಹಾಕಿಕೊಂಡು ಪ್ರವೇಶ ಬೇಡ”.
ಅವತ್ತು ಬಂಟ್ವಾಳದ ಎಸ್ ವಿ ಎಸ್ ಕಾಲೇಜಿನ ಪ್ರಾಂಶುಪಾಲರು ಹೇಳಿದಂತೆ ಆಗಲಿಲ್ಲ. ವಿದ್ಯಾರ್ಥಿನಿ ನಾಳೆಯಿಂದ ಬುರ್ಕಾ ಹಾಕಿಕೊಂಡು ಬರಬಾರದು ಎಂದರೆ ಆಕೆಯ ಶೈಕ್ಷಣಿಕ ಭವಿಷ್ಯವೇ ತುಂಡಾಗುತ್ತದೆ. ಬುರ್ಕಾ ಬೇಕೇ ಬೇಡವೇ ಎನ್ನುವುದು ಬೇರೆಯದ್ದೇ ಚರ್ಚೆ. ನಾಳೆಯಿಂದಲೇ ತೆಗೆಯಬೇಕು ಎಂದು ನಿರ್ಭಂಧ ವಿಧಿಸೋದ್ರಿಂದ ಆಕೆಯ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದುಕೊಂಡು ನಾವು ಆಯಿಶಾ ಆಸ್ಮಿನ್ ಗೆ ಬುರ್ಕಾ ಧರಿಸಿ ಕಾಲೇಜು ಪ್ರವೇಶ ನಿರಾಕರಣೆಯ ಸುದ್ದಿ ಮಾಡಿದ್ವಿ. ಅದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಕೊನೆಗೆ ಕಾಲೇಜು ಆಡಳಿತ ಮಂಡಳಿ ಬುರ್ಕಾದೊಂದಿಗೆ ಆಯಿಶಾ ಆಸ್ಮಿನ್ ಗೆ ಪ್ರವೇಶಕ್ಕೆ ಅವಕಾಶ ನೀಡಿತ್ತು. ಆದರೆ ಅವತ್ತು ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದನ್ನು ಇಂದು ಸುಳ್ಯ ತಾಲೂಕಿನ ಪೆರ್ವಾಜೆಯ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಗಳು ಜಾರಿಗೆ ತಂದಿದ್ದಾರೆ. ಬುರ್ಕಾ ಹಾಕಿಕೊಂಡು ಬರುವುದಾದರೆ ನಾವೂ ಕೂಡಾ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಹಠ ಹಿಡಿದಿದ್ದಾರೆ.
ಸುಳ್ಯದ ಪೆರುವಾಜೆ ಕಾಲೇಜಿನಲ್ಲಿ ಎಬಿವಿಪಿಯ ಸೂಚನೆಯಂತೆ ಬುರ್ಕಾ ನಿಷೇದಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟಿದ್ದರು. ಸ್ವಲ್ಪ ಹಿಂದಕ್ಕೆ ಹೋಗೋಣ. ಅಂದು ಜೆ ಎನ್ ಯು ನಲ್ಲಿ ಕನ್ಹಯ್ಯ ಕುಮಾರ್ ಬಡತನ, ಹಸಿವು, ಅಸಮಾನತೆಯಿಂದ ಸ್ವಾತಂತ್ರ್ಯ ಬೇಕು ಎಂದು ಕೇಳಿದಾಗ ಇದೇ ಎಬಿವಿಪಿಯವರು ಬೊಬ್ಬೆ ಹಾಕಿದ್ದರು. ಜೆ ಎನ್ ಯು ವಿದ್ಯಾರ್ಥಿಗಳಿಗೆ ನಮ್ಮ ತೆರಿಗೆಯ ಹಣದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅವರಿಗೆ ಶಿಕ್ಷಣ ಪಡೆಯುವುದರ ಹೊರತಾಗಿ ಇದೆಲ್ಲಾ ರಾಜಕೀಯ ಏಕೆ ಬೇಕು ಎಂದು ಎಬಿವಿಪಿ ಪ್ರಶ್ನೆ ಮಾಡಿತ್ತು. ಪೆರುವಾಜೆ ಸರಕಾರಿ ಕಾಲೇಜಿನಲ್ಲಿ ಕೂಡಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುತ್ತಿರುವುದು ನಮ್ಮದೇ ತೆರಿಗೆ ಹಣದಲ್ಲಿ. ಇಲ್ಯಾಕೆ ರಾಜಕೀಯ ಬೇಕಿದೆ ಎಂದು ಎಬಿವಿಪಿ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂಬುದು ಬೇರೆ ವಿಚಾರ. ಇರಲಿ.
ಶಬರಿಮಲೆ ವೃತದ ಸಂಧರ್ಭದಲ್ಲಿ ಕಪ್ಪು ಶಾಲನ್ನು ಧರಿಸಿಕೊಂಡು ಹಲವು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ಮುಸ್ಲಿಂ ವಿದ್ಯಾರ್ಥಿಗಳಾಗಲೀ, ತರಗತಿ ಉಪನ್ಯಾಸಕರಾಗಲೀ, ಆಡಳಿತ ಮಂಡಳಿಯಾಗಲೀ ವಿರೋಧ ವ್ಯಕ್ತಪಡಿಸಿದ ಉದಾಹರಣೆಗಳು ಇಲ್ಲ. ಕೆಲವೇ ದಿನಗಳ ಕಾಲ ಹಾಕುವ ಧಾರ್ಮಿಕ ವಸ್ತ್ರಾಧಾರಣೆಯ ಬಗ್ಗೆ ಆಕ್ಷೇಪ ಎತ್ತುವುದು ಕೂಡಾ ಸರಿಯಾದುದಲ್ಲ. ಬುರ್ಕಾದ ವಿಚಾರ ಹಾಗಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಆವರಣದೊಳಗೆ ಬುರ್ಕಾ ಹಾಕಿದರೂ ತರಗತಿಯಲ್ಲಿ ಬುರ್ಕಾ ಹಾಕಿಕೊಂಡು ಕೂರುವುದಿಲ್ಲ. ಎಲ್ಲಾ ವಿದ್ಯಾರ್ಥಿನಿಯರಂತೆ ಸಮವಸ್ತ್ರದಲ್ಲೇ ಪಾಠ ಕೇಳುತ್ತಾರೆ.
ಬುರ್ಕಾ ಎನ್ನುವುದು ಪುರುಷ ಮನಸ್ಥಿತಿಯ ಹೇರಿಕೆ ಎನ್ನುವುದು ಮತ್ತೊಂದು ವಾದ. ಹಾಗಂತ ಏಕಾಏಕಿ ಒಬ್ಬರ ವಸ್ತ್ರವನ್ನು ತಕ್ಷಣದಿಂದಲೇ ಬದಲಾಯಿಸಬೇಕು ಎಂದು ತಾಕೀತು ಮಾಡುವುದು ಯಾವ ನ್ಯಾಯ ?
ಮೂಡಬಿದ್ರೆಯ ಜೈನ್ ಕಾಲೇಜಿನಲ್ಲೂ ಇಂತಹುದೇ ಪ್ರಸಂಗ ಎದುರಾಗಿತ್ತು. ವಿದ್ಯಾರ್ಥಿನಿಯರು ಬುರ್ಕಾ ಧರಿಸಿಕೊಂಡು ಕಾಲೇಜಿಗೆ ಬರಬಾರದು ಎಂದು ದಿಢೀರನೆ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು. ಬುರ್ಕಾ ಧರಿಸಿ ಕಾಲೇಜಿಗೆ ಪ್ರವೇಶವಿಲ್ಲ ಎಂದು ಕಾಲೇಜಿಗೆ ವಿದ್ಯಾರ್ಥಿನಿ ಸೇರುವ ದಿನವೇ ಖಾತ್ರಿ ಪಡಿಸಿದ್ದರೆ ಅಥವಾ ಕಾಲೇಜಿನ ನಿಯಮಾವಳಿ ಪುಸ್ತಕದಲ್ಲೇ ಅದನ್ನು ಸ್ಪಷ್ಟಪಡಿಸಿ, ನಂತರ ವಿದ್ಯಾರ್ಥಿನಿ ಕಾಲೇಜಿಗೆ ಪ್ರವೇಶಾತಿಯನ್ನು ಪಡೆದಿದ್ದರೆ ಆಡಳಿತ ಮಂಡಳಿಯ ತಾಕೀತಿಗೊಂದು ಅರ್ಥ ಇರುತ್ತಿತ್ತು. ಆದರೆ ಈವರೆಗೂ ಇಲ್ಲದ ಒಂದು ಆಕ್ಷೇಪ ಒಮ್ಮಿಂದೊಮ್ಮೆಲೆ ಬಂದಾಗ ಅದರ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸಬಾರದು ಎಂದು ಬಯಸುವ ಮನಸ್ಥಿತಿಗಳ ಕೈವಾಡ ಇರುವುದು ಖಚಿತವಾಗುತ್ತದೆ. ಹಾಗಾಗಿಯೇ ಮೂಡಬಿದ್ರೆ ಜೈನ್ ಕಾಲೇಜಿನ ಬುರ್ಕಾ ನಿಷೇಧವನ್ನು ನಾವು ಒಂದು ತಂಡವಾಗಿ ಸುದ್ದಿ ಮಾಡಿದ್ದೆವು. ಸುದ್ದಿ ಬಂದ ನಂತರ ಕಾಲೇಜಿನ ಪರ ಅಥವಾ ಬಲಪಂಥೀಯರ ಪರ ಇದ್ದ ಕೆಲ ಪತ್ರಕರ್ತರು ಸಾಹಿತಿ ಸಾರಾ ಅಬುಬಕ್ಕರ್ ಹೇಳಿಕೆಯನ್ನು ಪಡೆದುಕೊಂಡರು. ಸ್ತ್ರೀವಾದಿ ಸಾರ ಅಬೂಬಕ್ಕರ್ ಬುರ್ಕಾ ವಿರೋಧಿ. ಹಾಗಂತ ಅವರು ಘಟನೆಯ ಹಿನ್ನಲೆಯನ್ನು ಅಭ್ಯಸಿಸದೇ “ಬುರ್ಕಾ ನಿಷೇದ ಮಾಡಿದ್ದು ಕಾಲೇಜು ಆಡಳಿತ ಮಂಡಳಿಯ ಉತ್ತಮ ನಿಲುವು” ಎಂದು ಬಿಟ್ಟರು. ಇದನ್ನೇ ಕಾಯುತ್ತಿದ್ದ ಪತ್ರಕರ್ತರು ಸಾರಾ ಅಬೂಬಕ್ಕರ್ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಂಡರು.
ಇಷ್ಟಕ್ಕೂ ಬುರ್ಕಾವನ್ನು ಪ್ರಗತಿಪರರು ಸ್ತ್ರಿವಾದದ ನೆಲೆಯಲ್ಲಿ ವಿರೋಧಿಸುತ್ತಾರೆ. ಈ ಎಬಿವಿಪಿಗೆ ಸೇರಿದ ಹುಡುಗರು ಯಾಕೆ ವಿರೋಧಿಸುತ್ತಾರೆ ಎಂಬ ಸ್ಪಷ್ಟನೆಯನ್ನು ಕೊಡಬೇಕು. ವಿದ್ಯಾರ್ಥಿನಿಯರು ಚಿಕ್ಕ ಚಿಕ್ಕ ಡ್ರೆಸ್ ಗಳನ್ನು ಹಾಕಿಕೊಂಡು ಬಂದರೆ ಅದನ್ನು ನೈತಿಕತೆಯ ಹೆಸರಲ್ಲಿ ಇದೇ ಎಬಿವಿಪಿಯವರು ವಿರೋಧಿಸುತ್ತಾರೆ. ಪೂರ್ತಿ ಮೈಮುಚ್ಚಿಕೊಂಡು ಬಂದರೆ ಬುರ್ಕಾದ ಹೆಸರಿನಲ್ಲಿ ವಿರೋಧಿಸುತ್ತಾರೆ. ಇದು ಎಂತಹ ದ್ವಂದ್ವತೆ ? ಬುರ್ಕಾ ಎನ್ನುವುದು ಪುರುಷರು ಮಹಿಳೆಯರ ಮೇಲೆ ಹೇರಿರುವ ವಸ್ತ್ರ ಸಂಹಿತೆ ಅನ್ನೋ ಕಾರಣಕ್ಕಾಗಿ ಎಬಿವಿಪಿ ವಿರೋಧಿಸುತ್ತದೆ ಎಂದಾದರೆ, ವಸ್ತ್ರದ ವಿಷಯದಲ್ಲಿ ಆರ್ ಎಸ್ ಎಸ್ ನಿಲುವುಗಳೆಲ್ಲವನ್ನೂ ಎಬಿವಿಪಿ ವಿರೋಧ ಮಾಡಬೇಕಾಗುತ್ತದೆ. ಆದರೆ ಕಾರಣವೇ ಇಲ್ಲದೆ ಬುರ್ಕಾವನ್ನು ವಿರೋಧಿಸುವುದು, ಬುರ್ಕಾ ಧರಿಸಿಕೊಂಡು ವಿದ್ಯಾರ್ಥಿನಿಯರು ಕಾಲೇಜಿಗೆ ಬರಬಾರದೆಂದು ತಡೆಯುವುದು ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುವ ಸಂಚಲ್ಲದೆ ಬೇರೇನೂ ಅಲ್ಲ ಎಂಬುದಂತೂ ಸ್ಪಷ್ಟ.
ಮುಸ್ಲಿಂ ಸ್ತ್ರೀಯರು ಬುರ್ಖಾ ಧರಿಸಿದರೆ ಈ ನಾಲಾಯಕ್ ಗಳಿಗೇನು ತೊಂದರೆಯಂತೆ? ರಾಮಾಯಣ 2/171ರಲ್ಲಿ ರಾಮ ಸೀತೆಗೆ ಹಿಜಾಬ್ ಧರಿಸಲು ಆದೇಶವನ್ನು ನೀಡುತ್ತಾನೆ. ಹಾಗಾದರೆ ಹಿಂದು ಸಹೋದರಿಯರು ಯಾಕೆ ಧರಿಸುತ್ತಿಲ್ಲ?
ಸರಕಾರಿ ಸಂಸ್ಥೆಯೆಂದರೆ ಬರೀ ಒಂದು ವರ್ಗದ ಜನರಿಗೆ ಸೀಮಿತವಾದುದಲ್ಲ. ಹಾಗೇ ನೋಡಿದರೆ ಸರಕಾರಿ ಸಂಸ್ಥೆಗಳಲ್ಲಿ ಹಿಂದು ದೇವರುಗಳು ಫೋಟೋಗಳು ನೇತಾಡುತ್ತಿರುತ್ತದೆ. ಹಿಂದುಗಳ ಹಬ್ಬವನ್ನು ಅಲ್ಲಿ ಅಚರಿಸಲು ಅನುಮತಿಯಿದೆ. ಮುಸ್ಲಿಮರು ಯಾವತ್ತಾದರು ಇದರ ಮೇಲೆ ನಿರ್ಬಂಧ ಹೇರಬೇಕೆಂದು ಪಟ್ಟು ಹಿಡಿದಿದ್ದಾರ? ಯಾಕೆಂದರೆ ಇಸ್ಲಾಂ ಸ್ಪಷ್ಟವಾಗಿ ಹೇಳಿದೆ ಅನ್ಯಧರ್ಮಿಯರನ್ನು, ಅವರ ಸಂಪ್ರದಾಯಗಳನ್ನು ಗೌರವಿಸಿ ಎಂದು. ಮುಸ್ಲಿಂ ಸ್ತ್ರೀಯರು ಬುರ್ಖಾನ್ ಧರಿಸುವುದರ ಉದ್ದೇಶ ಅವರ ದೇಹದ ರಕ್ಷಣೆಗೆ ಹೊರತು ಇಸ್ಲಾಮಿನ ಸಂಪ್ರದಾಯ ಅಂತಲ್ಲ ಅದನ್ನ ಈ ಸಂಘಿಗಳು ಅರ್ಥಮಾಡಿಕೊಳ್ಳಬೇಕು.
ಸಮಾನತೆಯ ಮಂತ್ರ ಎಲ್ಲೆಲ್ಲೂ ಕೇಳಿಬರುತ್ತಿರುವ ಈ ಕಾಲದಲ್ಲಿ ಇನ್ನೂ ಏಳನೇ ಶತಮಾನದ ಅರಬ್ಬೀಗಳ ಹಾಗೆ ಸ್ತ್ರೀಯರ ದೇಹದ ರಕ್ಷಣೆಗೆ ಬೂರ್ಖಾ ಎನ್ನುವವರಿಗೆ ಮೊದಲು ಬೂರ್ಖಾ ತೊಡಿಸತಕ್ಕದ್ದು.
“ಅಂದು ಜೆ ಎನ್ ಯು ನಲ್ಲಿ ಕನ್ಹಯ್ಯ ಕುಮಾರ್ ಬಡತನ, ಹಸಿವು, ಅಸಮಾನತೆಯಿಂದ ಸ್ವಾತಂತ್ರ್ಯ ಬೇಕು ಎಂದು ಕೇಳಿದಾಗ” ನಿಜವಾಗಿಯೂ ನಿದ್ರೆ ಮಾಡುತ್ತಿರುವವರನ್ನು ಎಬ್ಬಿಸಬಹುದು, ನಿದ್ರೆ ಮಾಡುವವರಂತೆ ನಟಿಸುತ್ತಿರುವವರನ್ನಲ್ಲ.
ಫೆಬ್ರವರಿ 9 ಆಫ್ಸಲ್ ಪರ ಆಜಾದಿ ಘೋಷಣೆ ಕೂಗಿ, ಜೈಲಿನಿಂದ ಬಂದು ಹಸಿವು ಬಡತನದ ಬಗ್ಗೆ ಮಾತಾಡುವುದು
ನವೀನ್ ಸೂರಿಂಜೆ ಅವರಿಗೆ —ನಿಮ್ಮ ಲೇಖನ ‘ತರ್ಕಬದ್ಧವಾಗಿದೆ’. ಯಾವ ತರ್ಕಕ್ಕೂ ಭಂಗ ಬರದಂತೆ ಅಚ್ಚುಕಟ್ಟಾಗಿ ಬರೆದಿದ್ದೀರಿ. ತಮಗೆ ಒಂದೆರೆಡು ಪ್ರಶ್ನೆಗಳು ಅಥವಾ ನನ್ನ ಕೆಲವು ಸಂದೇಹಗಳು.
೧. ಕಾಲೇಜು ಸೇರುವ ಮುನ್ನವೇ ಅದರ ನಿಯಮಾವಳಿಯ ಪುಸ್ತಕದಲ್ಲಿ ‘ಬುರ್ಕಾ’ ಧರಿಸಿದವರಿಗೆ ಪ್ರವೇಶವಿಲ್ಲ ಹಾಗೂ ಶಬರಿಮಲೈ ದೇವಸ್ಥಾನಕ್ಕೆ ಹೋಗುವ ಸೀಸನ್ ನಲ್ಲಿ ಕಪ್ಪು ಬಟ್ಟೆ ಧರಿಸಿಕೊಂಡು ಬರಬಾರದು ಎಂದು ನಮೂದಿಸಬೇಕು ಎಂಬುದು ಸರಿಯಾದ ಕ್ರಮ.
೨. ಒಂದು ವೇಳೆ ಮೊದಲೇ ನಮೂದಿಸಿದ್ದರೆ ಈಗ ನಡೆಯುತ್ತಿರುವ ‘ಅಸಹಕಾರ’ ಚಳುವಳುವಳಿ/ವಿರೋಧ ಬೇರೆ ರೀತಿಯಲ್ಲಿ ಕಾಲೇಜಿನ ತರಗತಿಗಳ ಪ್ರಾರಂಭದಲ್ಲೇ ನಡೆಯುತ್ತಿತ್ತು ಅಲ್ಲವೇ? ಈ ರೀತಿಯ ‘ಮಾನವ ಹಕ್ಕುಗಳ ಮೇಲೆ ದಬ್ಬಾಳಿಕೆ’ ನಡೆಸುವ ಅಧಿಕಾರ ಕಾಲೇಜಿನ ಪ್ರಿನ್ಸಿಪಾಲರ /ಆಡಳಿತ ಮಂಡಳಿಯ ಅಧಿಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸರ್ಕಾರಕ್ಕೆ,ಕೋರ್ಟಿಗೆ ಅಹವಾಲು ಸಲ್ಲಿಸಲು ಹೋಗುತ್ತಿರಲಿಲ್ಲ ಎಂಬುದಕ್ಕೆ ಖಾತರಿಯೇನಾದರೂ ಇದೆಯೇ?
೩. ಸಮಾಜ ಅದರಲ್ಲೂ ಹಿಂದೂಗಳು ಹಳೆಯ ಕಂದಾಚಾರಗಳಿಂದ ಮುಕ್ತರಾಗಿಲ್ಲ. ಅವರಿಂದಲೇ ಸಮಾಜ, ದೇಶ ಈ ಸ್ಥಿತಿಗೆ ಬಂದಿರುವುದು ಎಂದು ವೇದಿಕೆ , ಮೈಕು ಸಿಕ್ಕಾಕ್ಷಣ,ಹರಿಹಾಯುವ ಪ್ರಗತಿಪರರು,ಲೇಖಕರು,ಪತ್ರಿಕೋದ್ಯಮದ ರಂಗದಲ್ಲಿರುವವರು ಸೇರಿದಂತೆ ಬಹುಪಾಲು ಜನಗಳು ಆಗಾಗ ಹೇಳುತ್ತಿರುತ್ತಾರೆ. ಹೌದಲ್ಲವೇ? ಆದರೆ ಇದೆ ಮಂದಿ ಹಿಂದುಯೇತರ ಜನಗಳ ಬಗ್ಗೆ,ಮತ,ಧರ್ಮದವರ ವಿಷಯ ಬಂದಾಗ ಏಕೆ ಮೌನವಾಗುತ್ತಾರೆ?