ನಮ್ಮೂರಿನ “ಯೆತ್ನಳ್ಳ” ಹೊಳೆಯಾದದ್ದು

– ಪ್ರಸಾದ್ ರಕ್ಷಿದಿ

ನಮ್ಮೂರಿನ ರಂಗ ಚಟುವಟಿಕೆಗಳು ಮತ್ತು ಆಮೂಲಕ ನಾವು ಕಟ್ಟಿಕೊಂಡ ಬದುಕು, ಹೋರಾಟಗಳು ದುಖಃ-ಸಂಭ್ರಮಗಳು, ಅದರ ಮೂಲಕ ಹೊರಜಗತ್ತಿನೊಡನೆ ನಾವು ನಡೆಸುತ್ತಿರುವ ಸಂವಾದ, ಈ ಎಲ್ಲದರ ಜೊತೆ ಎತ್ತಿನ ಹಳ್ಳದ ಸಂಬಂಧವಿದೆ. ಸಂಬಂಧ ಅನ್ನುವುದು ಯಾವಾಗಲೂ ದೊಡ್ಡದೇ.

“ಲಕ್ಷಯ್ಯ” ಎಂಬ ಅನಕ್ಷರ ಕೂಲಿಕಾರ್ಮಿಕನೊಬ್ಬ, ಸ್ವಾಭಿಮಾನಿಯಾಗಿ, ಸ್ವಾಧ್ಯಾಯಿಯಾಗಿ ಅಕ್ಷರಕಲಿತು, ತಲೆಯೆತ್ತಿ ನಿಲ್ಲುವ ಘಟನೆ (ನೋಡಿ: ಇದೇ ಲೇಖಕನ ‘ಬೆಳ್ಳೇಕೆರೆ ಹಳ್ಳಿ ಥೇಟರ್’) ಮುಂದೆ ನಮ್ಮೂರಿನ ರಾತ್ರಿ ಶಾಲೆಗೆ, ಆ ಶಾಲೆಯ ಅಕ್ಷರದಾಹಿಗಳ ಮೂಲಕ ನಮ್ಮೆಲ್ಲ ಸಾಂಸ್ಕøತಿಕ ಸಾಹಸಗಳಿಗೆ ಕಾರಣವಾಯಿತು. “ಲಕ್ಷ್ಮಯ್ಯ”ನ ಸ್ವಾಧ್ಯಾಯದ ಹಿನ್ನೆಲೆಯಲ್ಲಿ ಎತ್ತಿನ ಹಳ್ಳದ ಸಂಗೀತವಿದೆ. ಆತ ನನ್ನಿಂದ ಕಾಗುಣಿತವನ್ನು ಹೇಳಿಸಿಕೊಂಡು ಗುಟ್ಟಾಗಿ ಯಾರಿಗೂ ತಿಳಿಯದಂತೆ ರಾಗವಾಗಿ ಹಾಡಿ ಬಾಯಿಪಾಠ ಮಾಡಿಕೊಂಡದ್ದು ಇದೇ ಎತ್ತಿನ ಹಳ್ಳದಲ್ಲಿ ಸ್ನಾನ ಮಾಡುತ್ತ, ಈಜಾಡುತ್ತ. ಎತ್ತಿನ ಹಳ್ಳದ ನೀರಿನಲ್ಲಿ ಗುಣಿತಾಕ್ಷರಗಳು ಅನುರಣಗೊಂಡಿವೆ.

ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿರುವ ಮೂರ್ಕಣ್ಣು ಗುಡ್ಡ ಬೆಟ್ಟಸಾಲಿನಲ್ಲಿ ಎತ್ತಿನ ಹಳ್ಳ ಹುಟ್ಟುತ್ತದೆ. ಅಲ್ಲಿ ಮೂರು ತೊರೆಗಳು ಹುಟ್ಟುತ್ತವೆ. ಎತ್ತಿನಹಳ್ಳ, ಚಿಟ್ಟನಹಳ್ಳ ಮತ್ತು ಜಪಾವತಿ. yettinahole_streamಉಳಿದೆರಡು ತೊರೆಗಳು ಪೂರ್ವಕ್ಕೆ ಹರಿದು ಹೇಮಾವತಿಯ ಮಡಿಲಿಗೆ ಬಿದ್ದರೆ, ಎತ್ತಿನಹಳ್ಳ ಪಶ್ಚಿಮಾಭಿಮುಖಿ. ಇದರ ಹರಿವು, ಎಂಟ್ಹತ್ತು ಕಿಲೋಮೀಟರುಗಳು ಅಷ್ಟೆ. ನಂತರ ಶಿರಾಡಿ ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಲೀನವಾಗುತ್ತದೆ.

ನಾವೆಲ್ಲ ಚಿಕ್ಕವರಿದ್ದಾಗ ಬೇಸಗೆಯ ರಜಾದಿನಗಳಲ್ಲಿ ಕಾಲ ಕಳೆಯುತ್ತಿದ್ದುದು, ಈಜು ಕಲಿತದ್ದು ಎತ್ತಿನ ಹಳ್ಳದಲ್ಲೇ ಆ ಕಾಲದಲ್ಲಿ ಮಧ್ಯಾಹ್ನದ ವೇಳೆಗೆ ನೂರಾರು ದನಕರುಗಳನ್ನು ನೀರಿಗಾಗಿ ಎತ್ತಿನಹಳ್ಳಕ್ಕೆ ತರುತ್ತಿದ್ದರು. ಆಗ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಗೋಮಾಳವೂ ಇತ್ತು. ದನಕಾಯುವ ಹುಡುಗರ ದಂಡೇ ಅಲ್ಲಿ ನೆರೆಯುತ್ತಿತ್ತು. ಬುಗುರಿ, ಚಿಣ್ಣಿಂದಾಡು ಆಡುತ್ತಾ, ಬೀಡಿ ಸೇದುತ್ತ, ನಿತ್ಯ ಜಲಕ್ರೀಡೆಯ ವೈಭೋಗದಲ್ಲಿದ್ದ ಆ ಹುಡುಗರನ್ನು ಕಂಡಾಗ. ಶಾಲೆಗೆ ಹೋಗಲೇಬೇಕಾದ ಶಿಕ್ಷೆಗೊಳಗಾಗಿದ್ದ ನಮ್ಮಂತವರಿಗೆ, ದನಕಾಯುವವರು ಪರಮ ಸುಖಿಗಳೆಂದು ಅನ್ನಿಸಿ ಬುಗುರಿ, ಚಿಣ್ಣಿದಾಂಡಿಗಾಗಿ ಅವರ ಸ್ನೇಹಕ್ಕೆ ಹಾತೊರೆಯುತ್ತಿದ್ದೆವು. ಹರಕು ಬಟ್ಟೆ ತೊಟ್ಟು ಒಪ್ಪೊತ್ತಿನ ಊಟದ ಶ್ರೀಮಂತಿಕೆಯಲ್ಲಿದ್ದ ಆ ದನಗಾಹಿಗಳಿಗೆ, ಸಾಲೆ ಕಲಿಯುತ್ತಿದ್ದ ನಮ್ಮಂತವರ ಬಗ್ಗೆ ವಿಶೇಷ ಗೌರವವೇನೂ ಇರಲಿಲ್ಲ. ಅವರೆಲ್ಲ ನಮ್ಮನ್ನು ಕೈಲಾಗದ ‘ಹೇತ್ಲಾಂಡಿ’ಗಳಂತೆ ಕಾಣುತ್ತಿದ್ದರಲ್ಲದೆ, ತಾವುಗಳು ಮಹಾನ್ ವೀರಾಧಿವೀರರಂತೆ ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಅವರದ್ದೇ ಆದ ಅನೇಕ ತರದ ಸಾಹಸದ ರೋಚಕ ಕತೆಗಳಿರುತ್ತಿದ್ದವು. ಅವುಗಳಲ್ಲಿ ಮಾಮುಬ್ಯಾರಿಯ ಅಂಗಡಿಯಿಂದ ಕದ್ದ ಬೀಡಿ ಬಂಡಲಿನ ಕತೆ, ಇನ್ಯಾರದೋ ತೋಟದಲ್ಲಿ ಬೈನೆ ಬಿಚ್ಚಿ ಸೇಂದಿ ಕುಡಿದು ಏಟುತಿಂದದ್ದು ಮುಂತಾದ ಸಾಹಸಗಳಿರುತ್ತಿದ್ದವು.

ಎತ್ತಿನಹಳ್ಳದ ಎರಡೂ ದಡಗಳ ಉದ್ದಕ್ಕೂ ಸೊಂಪಾಗಿ ಬೆಳೆದ ವಾಟೆ ಮೆಳೆಗಳಿದ್ದವು. ಸುತ್ತಲಿನ ಗ್ರಾಮಗಳ ಸಮಸ್ತ ಕೃಷಿ ಚಟುವಟಿಕೆಗಳಿಗೆ ಪೂರಕ ಸಾಮಗ್ರಿಗಳಾದ ಅಂದರೆ ಕುಕ್ಕೆ, ಮಂಕರಿ, ಪಾತಿ-ಚಪ್ಪರಗಳಿಗೆ , ಮಳೆಗಾಲಕ್ಕೆ ಗೊರಗ, ಗುಡಿಸಲುಗಳ ಮಾಡಿಗೆ ಹುಲ್ಲು ಹೊದೆಸಲು ಅಡ್ಡಗಳು, ಗೋಡೆಗೆ ನೆರಿಕೆ, ತಟ್ಟಿ, ಎಲ್ಲಕ್ಕೂ ಎತ್ತಿನ ಹಳ್ಳದ ವಾಟೆಯೇ ಆಧಾರ. ಎಲ್ಲ ದನಗಾಹಿಗಳ ಕೈಯಲ್ಲೂ ದನಗಳನ್ನು ಅಟ್ಟುವ ಕೋಲಿನೊಂದಿಗೆ ವಾಟೆಯಿಂದ ತಯಾರಿಸಿದ ಕೊಳಲೂ ಇರುತ್ತಿತ್ತು. ದನಗಾಹಿಗಳು ದಾರಿಯುದ್ದಕ್ಕೂ ಯಾವುದಾದರೂ ಸಿನಿಮಾ ಹಾಡಿನ ಅಥವಾ ಜಾನಪದ ಗೀತೆಗಳ ದಾಟಿಯನ್ನು ನುಡಿಸುತ್ತ ಸಾಗುತ್ತಿದ್ದರು, ಇದು ಬಹಳ ದೂರದವರೆಗೆ ಕೇಳುತ್ತಿತ್ತು. ಅವರಲ್ಲೂ ಅನೇಕರು ಸುಶ್ರಾವ್ಯವಾಗಿ ನುಡಿಸುತ್ತಿದ್ದು ಮಾರ್ಗದರ್ಶನ ದೊರೆತಿದ್ದರೆ ಉತ್ತಮ ಕೊಳಲು ವಾದಕರಾಗುವ ಸಾಧ್ಯತೆ ಇತ್ತು. ಎತ್ತಿನ ಹಳ್ಳದ ಬಳಿ ಮೇಳೈಸಿರುತ್ತಿದ್ದ ನೂರಾರು ದನಕರುಗಳ ಹಿಂಡು ವಾಪಸ್ ಹೋಗುವಾಗ ತಮ್ಮ ಒಡೆಯನ ಕೊಳಲಿನ ದನಿಯನ್ನನುಸರಿಸಿ ತಮ್ಮತಮ್ಮ ಗುಂಪನ್ನು ಸೇರಿಕೊಳ್ಳುತ್ತಿದ್ದವು.

ಹಿಂದಿನ ಕಾಲದಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಎತ್ತಿನ ಗಾಡಿಗಳು, ಇದೇ ಎತ್ತಿನ ಹಳ್ಳದ ಬಳಿ ತಂಗುತ್ತಿದ್ದವಂತೆ. ಎತ್ತುಗಳನ್ನು ತೊಳೆದು, ನೀರು ಕುಡಿಸಿ ದಣಿವಾರಿಕೊಳ್ಳುತ್ತಿದ್ದ ಈ ಸ್ಥಳವನ್ನು ಎತ್ತಿನ ಹಳ್ಳವೆಂದು ಕರೆದಿರಬೇಕು. ಮುಂದೆ ಇದೇ ಹೆಸರು ರೂಡಿಗೆ ಬಂತು. ಜನರ ಬಾಯಲ್ಲಿ “ಯೆತ್ನಳ್ಳ”ವಾಯಿತು. (ಸಕಲೇಶಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸ್ಥಳಕ್ಕೆ “ಎತ್ತಿನಹಳ್ಳ” ಎಂದೇ ಹೆಸರು. ಇದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನದಿತಿರುವು ಯೋಜನೆಯ ಅಣೆಕಟ್ಟೊಂದು ನಿರ್ಮಾಣವಾಗುತ್ತಿದೆ).

ಹೀಗೆ ಹಾಡುತ್ತ, ಕುಣಿಯುತ್ತ, ಮಳೆಗಾಲದಲ್ಲಿ ಆರ್ಭಟಿಸುತ್ತ, ಭೋರ್ಗರೆಯುತ್ತ, ತಣ್ಣಗೆ ಹರಿಯುತ್ತಿದ್ದ, ಎತ್ತಿನ ಹಳ್ಳಕ್ಕೆ ಶುಕ್ರ, ಶನಿಯೋ ಅಂತೂ ಒಂದು ದೆಸೆ ಪ್ರಾರಂಭವಾದದ್ದು, ಮೂರೂವರೆ ದಶಕಗಳ ಹಿಂದೆ. ಸಕಲೇಶಪುರ yettinahole_streamನಗರಕ್ಕೆ ಪೂರೈಕೆಯಾಗುತ್ತಿರುವ ಹೇಮಾವತಿ ನದಿಯ ನೀರು ಕಲುಷಿತವಾಗಿದೆ, ಕುಡಿಯಲು ಯೋಗ್ಯವಾಗಿಲ್ಲ ಎಂದು ಕೆಲವರು ಅದಕ್ಕೆ ಪರಿಹಾರವನ್ನು ಹುಡುಕತೊಡಗಿದರು. ಅಂದಿನ ರಾಜಕಾರಣಿಗಳು, ಸಕಲೇಶಪುರ ಪುರಸಭೆಯ ಹಿರಿಯರೂ ಸೇರಿ ಎತ್ತಿನ ಹಳ್ಳದ ನೀರನ್ನು ಸಕಲೇಶಪುರ ನಗರಕ್ಕೆ ತಂದರೆ ಶುದ್ಧವಾದ ನೀರು ಸಿಗುತ್ತದೆಂದು ಭಾವಿಸಿದರು. ಇದಕ್ಕೆ ಅಂದಿನ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ಎನ್.ಕೆ.ಗಣಪಯ್ಯನವರೂ ದನಿಗೂಡಿದರು. ಗಣಪಯ್ಯನವರ “ಹಾರ್ಲೆ ಎಸ್ಟೇಟ್” ಕೂಡಾ ಎತ್ತಿನ ಹಳ್ಳದ ಪಕ್ಕದಲ್ಲೇ ಇತ್ತು. ಹಾರ್ಲೆ ಎಸ್ಟೇಟಿನ ಪಕ್ಕದಲ್ಲಿ ಸಣ್ಣ ಕಟ್ಟೆಯೊಂದನ್ನು ಕಟ್ಟಿ ನೀರನ್ನು ಆರು ಕಿ.ಮೀ ದೂರದ ಸಕಲೇಪುರಕ್ಕೆ ತರುವ ಸಣ್ಣಯೋಜನೆ ಇದಾಗಿತ್ತು. ಆದರೆ ಬಹಳ ಬೇಗ ಈ ಯೋಜನೆಯ ಮೇಲೆ ಅಧಿಕಾರಿಗಳ, ರಾಜಕಾರಣಿಗಳ ಗಮನ ಹರಿಯಿತು. ಎತ್ತಿನಹಳ್ಳದ ನೀರನ್ನು ಬರಿಯ ಸಕಲೇಶಪುರ ನಗರಕ್ಕೆ ತರುವುದರೊಂದಿಗೆ, ಸ್ವಲ್ಪ ದೊಡ್ಡ ಯೋಜನೆಯನ್ನಾಗಿ ಮಾಡಿ ಹೇಮಾವತಿ ನದಿಗೆ ಸೇರಿಸಿದರೆ ನೀರಾವರಿಗೂ ಮತ್ತಷ್ಟು ನೀರು ದೊರೆಯುವುದೆಂಬ ಮಾತು ಕೇಳಿಬರತೊಡಗಿತು. ಇದನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದವರು ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಹೆಚ್.ಸಿ. ಶ್ರೀಕಂಠಯ್ಯ. ಆಗಲೇ ಮುಂದಾಗಲಿರುವ ಅನಾಹುತವನ್ನು ಗ್ರಹಿಸಿ ಎನ್.ಕೆ.ಗಣಪಯ್ಯ ಈ ಯೋಜನೆಯನ್ನು ವಿರೋಧಿಸತೊಡಗಿದರು. ಆಗ ಕೆಲವರು “ಈಗ ಗಣಪಯ್ಯ ತನ್ನ ಕಾಫಿತೋಟ ಮುಳುಗಡೆ ಆಗುತ್ತೆ ಅಂತ ವಿರೋಧ ಮಾಡ್ತಾರೆ, ಮೊದ್ಲು ಶುರು ಮಾಡಿದ್ದೂ ಇವರೇ” ಎಂದು ದೂರತೊಡಗಿದರು. ವಾಸ್ತವದ ಸಂಗತಿಯೆಂದರೆ, ಈ ಯೋಜನೆಯಿಂದ ಗಣಪಯ್ಯನವರ ತೋಟ ಮುಳಗಡೆಯಾಗುತ್ತಿರಲಿಲ್ಲ, ಬದಲಿಗೆ ಅಕ್ಕ ಪಕ್ಕದ ಕೆಲವು ಕಾಫಿ ತೋಟಗಳು ಭಾಗಶಃ ಮುಳುಗಡೆಯಾಗುತ್ತಿದ್ದವು.

ಆ ನಂತರದ ದಿನಗಳಲ್ಲಿ ಇದಕ್ಕಾಗಿ ಸರ್ವೆ ಇತ್ಯಾದಿ ಕಾರ್ಯಗಳು ಪ್ರಾರಂಭವಾದವು. ಪ್ರತಿನಿತ್ಯ ನೀರಿನ ಹರಿವನ್ನು ಅಳೆಯಲು ಒಬ್ಬ ನೌಕರನ ನೇಮಕವೂ ಆಯ್ತು. ಹಾರ್ಲೆ ಎಸ್ಟೇಟಿನ ಬಳಿ ಎತ್ತಿನ ಹಳ್ಳಕ್ಕೆ, ಅಬ್ಬಿ ಹಳ್ಳ ಎನ್ನುವ ಪುಟ್ಟ ತೊರೆಯೊಂದು ಸೇರುವ ಜಾಗವಿದೆ. ಅಲ್ಲಿ ಕಟ್ಟೆಯೊಂದನ್ನು ಕಟ್ಟಿ ನಾಲೆಯಮೂಲಕ, ಹೆಬ್ಬಸಾಲೆ, ಮಾವಿನಕೂಲು, ಗ್ರಾಮಗಳನ್ನು ಹಾದು, ಸಕಲೇಶಪುರ ಮೂಡಿಗೆರೆ ರಸ್ತೆಯನ್ನು ಹಾರ್ಲೆಕೂಡಿಗೆ ಎನ್ನುವ ಸ್ಥಳದಲ್ಲಿ ದಾಟಿ, ಗಾಣದಹೊಳೆ ಗ್ರಾಮವನ್ನು ಸೇರಿ ಅಲ್ಲಿಂದ ಹೇಮಾವತಿ ನದಿಗೆ ನೀರನ್ನು ಸಾಗಿಸುವ ಯೋಜನೆಯೂ ಸುದ್ದಿಯಾಯಿತು. ಯಾರ ಜಮೀನು ಹೋಗಬಹುದು, ಪರಿಹಾರವೆಷ್ಟು ಸಿಕ್ಕೀತು ಎನ್ನುವ ಲೆಕ್ಕಾಚಾರಗಳು ಪ್ರಾರಂಭವಾದವು. ಇದೆಲ್ಲ ಆಗಲು ಇನ್ನೂ ಇಪ್ಪತ್ತು ವರ್ಷವಾದರೂ ಬೇಕು. ಆವಾಗ ನೋಡೋಣ ಎನ್ನುವವರೂ ಇದ್ದರು.

ಆಗಿನ ಅಂದಾಜಿನ ಪ್ರಕಾರ, ಹಾರ್ಲೆ ಎಸ್ಟೇಟಿನ ಬಳಿ ಕಟ್ಟೆಯನ್ನು ಕಟ್ಟಿ ನೀರನ್ನು ತಿರುಗಿಸಿದರೆ,ಎತ್ತಿನ ಹಳ್ಳದಿಂದ ದೊರೆಯುವ ನೀರಿನ ಪ್ರಮಾಣ ಸುಮಾರು ಒಂದೂವರೆ ಟಿ.ಎಮ್.ಸಿ ಎಂದು ನೀರಾವರಿ ಇಲಾಖೆ ಪ್ರಕಟಿಸಿತ್ತು.

ನಂತರದ ವರ್ಷಗಳಲ್ಲಿ ಈ ನೀರು ತಿರುಗಿಸುವ ಯೋಜನೆ ಗುಪ್ತಗಾಮಿನಿಯಾಗಿ ಹರಿಯುತ್ತಲೇಇತ್ತು.

ಎತ್ತಿನ ಹಳ್ಳಕ್ಕೆ ಈ ಕಟ್ಟೆಯನ್ನು ಕಟ್ಟಲು ಯೋಜಿಸಿದ್ದ ಜಾಗ ಪೂರ್ಣ ಚಂದ್ರ ತೇಜಸ್ವಿಯವರ ಮೆಚ್ಚಿನ ತಾಣಗಳಲ್ಲಿ ಒಂದು. tejasviಅವರು ಎಪ್ಪತ್ತರ ದಶಕದಲ್ಲಿ ಹಲವು ಬಾರಿ ಇಲ್ಲಿಗೆ ಮೀನು ಹಿಡಿಯಲು ಬರುತ್ತಿದ್ದರು. ಆಗ ನಮ್ಮ ಸುತ್ತಮುತ್ತಲಿನ ಗ್ರಾಮಗಳ ಕೆಲವರು ಯುವಕರೂ ಅವರೊಂದಿಗೆ ಹೋಗುವುದಿತ್ತು. ಆಗಿನ್ನೂ ಈ ಎತ್ತಿನ ಹಳ್ಳದ ನೀರನ್ನು ಸಕಲೇಶಪುರಕ್ಕೆ ಸಾಗಿಸುವ ಮಾತಷ್ಟೆ ಪ್ರಚಾರದಲ್ಲಿತ್ತು. ನನ್ನ ಗೆಳೆಯರು ಯಾರೋ ತೇಜಸ್ವಿಯವರಿಗೆ. ಈ ವಿಚಾರವನ್ನು ತಿಳಿಸಿದ್ದರು. ಅದಕ್ಕೆ ತೇಜಸ್ವಿ “ಹೇಮಾವತಿ ನೀರು ಕ್ಲೀನಿಲ್ಲ ಅಂದ್ರೆ ಅದನ್ನ ಕೆಡಸಿದವ್ರು ಯಾರು, ನಾವೇ ಅಲ್ವೆ, ಈಗೆಲ್ಲ ಏನೇನೋ ವಿಧಾನಗಳು ಬಂದಿವೆ, ಅದೇ ನೀರನ್ನು ಕ್ಲೀನ್ ಮಾಡಿ ಬಳಸಬೇಕು, ಮನೆಬಾಗಲ ನೀರು ಕೆಡಸಿ ಇನ್ನೊಂದು ಕಡೆಯಿಂದ ನೀರು ತರ್ತೀನಿ ಅನ್ನೋದು ಮೂರ್ಖತನ ಕಣ್ರೀ ನೀವೆಲ್ಲಾ ವಿರೋಧಿಸಬೇಕು” ಎಂದಿದ್ದರಂತೆ. ನಂತರದ ದಿನಗಳಲ್ಲಿ ತೇಜಸ್ವಿಯವರೂ ಇತ್ತ ಬರುವುದನ್ನು ಕಡಿಮೆ ಮಾಡಿದರು. (ಇತ್ತೀಚೆಗೆ ಖಾಸಗಿ ಟಿ.ವಿ ಛಾನಲ್ ಒಂದಕ್ಕೆ ತೇಜಸ್ವಿಯವರ ಬಗ್ಗೆ ನಾವೊಂದಷ್ಟು ಜನ ಗೆಳೆಯರು ಸೇರಿ, ಸಾಕ್ಷ್ಯ ಚಿತ್ರವೊಂದನ್ನು ಮಾಡಿದೆವು, ಆಗ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎತ್ತಿನ ಹೊಳೆಯೋಜನೆ ಪೂರ್ಣಗೊಂಡರೆ ಈ ಸ್ಥಳಗಳೆಲ್ಲ ನೆನಪು ಮಾತ್ರವಾಗಲಿದೆ)

ಎತ್ತಿನಹಳ್ಳ ಹುಟ್ಟಿ ಹರಿಯುವ ಮೂರ್ಕಣ್ಣುಗುಡ್ಡ ಸಾಲಿನ ತಪ್ಪಲಿನಲ್ಲೇ ನಮ್ಮ ರಂಗ ತಂಡವೂ ಹುಟ್ಟಿ ಬೆಳೆದಿದೆ. ಎಪ್ಪತ್ತರ ದಶಕದ ಕೊನೆಯಭಾಗದಲ್ಲಿ ಹುಟ್ಟಿದ ನಮ್ಮ ರಂಗಬಳಗದ ಗೆಳೆಯರೆಲ್ಲ ಸೇರಿ, ಹತ್ತು ವರ್ಷಗಳ ಚಟುವಟಿಕೆಯ ನಂತರ ಪ್ರಥಮ ಬಾರಿಗೆ ರಂಗ ತರಬೇತಿ ಶಿಬಿರವೊಂದನ್ನು ಆಯೋಜಿಸಿದ್ದೆವು. ಅದರ ಉದ್ಘಾಟನೆಯನ್ನು ತೇಜಸ್ವಿಯವರೇ ನಡೆಸಿಕೊಟ್ಟರು. ಆ ದಿನ ನಮ್ಮೂರ ಶಾಲಾಮಕ್ಕಳಿಂದ ನಾಟಕ ಪ್ರದರ್ಶನವಿತ್ತು. ನಾಟಕವನ್ನು ನಾನೇ ಬರೆದು ನಿರ್ದೇಶಿಸಿದ್ದೆ. ನಾಟಕದ ಹೆಸರು “ಮೂರ್ಕಣ್ಣು ಗುಡ್ಡ”. ನಾಟಕದ ವಸ್ತುವೂ ಪರಿಸರ ನಾಶದಿಂದಾಗುವ ಹಾನಿಯ ಬಗ್ಗೆ ಇತ್ತು. ಮಕ್ಕಳ ಅಭಿನಯವನ್ನು ತೇಜಸ್ವಿಯವರು ತುಂಬಾ ಮೆಚ್ಚಿಕೊಂಡರು. ಮುಂದೆ ನಮ್ಮ ರಂಗ ತಂಡಕ್ಕೆ. “ಪ್ರಕೃತಿ ರಂಗ ಮಂಚ” ಎಂದೇ ಹೆಸರಿಟ್ಟೆವು.

ಈಗ ನಮ್ಮೆಲ್ಲ ರಂಗ ಚಟುವಟಿಕೆಗಳು ನಡೆಯುತ್ತಿರುವ, ಇನ್ನೂ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರಕ್ಕೆ ‘ಪೂರ್ಣಚಂದ್ರ ತೇಜಸ್ವಿ ರಂಗಮಂದಿರ’ ವೆಂದು ಕರೆದಿದ್ದೇವೆ. ಇಲ್ಲಿ ನಿಂತು ನೋಡಿದರೆ, ಪೂರ್ವ ದಿಕ್ಕಿಗೆ ಸಕಲೇಶಪುರದ ಮಂಜ್ರಾಬಾದ್ ಕೋಟೆಯೂ, ದಕ್ಷಿಣದಲ್ಲಿ ಬಾನಿನಂಚಿಗೆ ಕುಮಾರ ಪರ್ವತವೂ ಪಶ್ಚಿಮದಲ್ಲಿ ಮೂರ್ಕಣ್ಣು ಗುಡ್ಡ ಸಾಲೂ, ವಾಯುವ್ಯದಲ್ಲಿ ದೂರದಲ್ಲಿ ಬಾಬಾಬುಡನ್ ಗಿರಿಶಿಖರಗಳೂ ಗೋಚರಿಸುತ್ತವೆ. ರಂಗಮಂದಿರದಲ್ಲಿ ನಿಂತು, ಅಲ್ಲಿಂದಲೇ ಸಂಪೂರ್ಣ ಎತ್ತಿನ ಹಳ್ಳದ ಜಲಾನಯನ ಪ್ರದೇಶವನ್ನು ವೀಕ್ಷಿಸಬಹುದು.

ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಹಾಗೂ ಕಾಡುಮನೆ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳು ಪ್ರಾರಂಭವಾದ್ದರಿಂದ, ಎತ್ತಿನ ಹಳ್ಳವನ್ನು ತಿರುಗಿಸುವ ಯೋಜನೆಯ ಮಾತು ಹಿನ್ನೆಲೆಗೆ ಸರಿಯಿತು. ಈ ನೀರನ್ನು ತಿರುಗಿಸಿದರೆ ಕೆಳಭಾಗದಲ್ಲಿ ಸ್ಥಾಪಿಸಿರುವ ಜಲವಿದ್ಯುತ್ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗುವುದರಿಂದ ಇದನ್ನು ಕೈಬಿಡಲಾಗುವುದೆಂದೇ ಎಲ್ಲರೂ ನಂಬಿದರು. ಈ ವಿದ್ಯುತ್ ಯೋಜನೆಗಳಲ್ಲಿ ಕೆಲವು ಆನೆದಾರಿಯಲ್ಲೇ ಅಡ್ಡವಾಗಿ ಸ್ಥಾಪಿತವಾದವು. ಇದರಿಂದಾಗಿ ಸುತ್ತಲಿನ ಗ್ರಾಮಗಳಲ್ಲಿ ಆನೆ ಮತ್ತಿತರ ಕಾಡುಪ್ರಾಣಿಗಳಿಂದ ತೊಂದರೆಯೂ ಆರಂಭವಾದವು. ಆದರೆ ಈ ಜಲ ವಿದ್ಯುತ್ ಯೋಜನೆಗಳಿಂದ ನಮ್ಮೂರು ಬೆಳಕಾದೀತೆಂತು ಕಾದು ಕುಳಿತವರಿಗೆ ನಿರಾಸೆಯಾದದ್ದು ಈ ವಿದ್ಯುತ್ ಆಂದ್ರದ ಪಾಲಾಗಿದೆಯೆಂದು ತಿಳಿದಾಗ.

ಇದೊಂದಿಗೆ ಮಲೆನಾಡಿನ ಅತ್ಯಂತ ಸೂಕ್ಷ್ಮ ಹಾಗೂ ಸುಂದರ ಅರಣ್ಯಪ್ರದೇಶಗಳಾದ ಬಿಸಲೆ, ಕಾಗಿನಹರೆ, ಹೊಂಗಡಹಳ್ಳ ಪ್ರದೇಶಗಳನ್ನೆಲ್ಲ ಮುಳುಗಿಸಿ ವಿದ್ಯುತ್ ತಯಾರಿಸುವ ‘ಗುಂಡ್ಯಜಲ ವಿದ್ಯುತ್‍ಯೋಜನೆ’ಯೂ ಪ್ರಕಟವಾಯ್ತು. yettinahole-projectನಂತರ ನಡೆದ ಹೋರಾಟದ ವಿವರಗಳು ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.

ಗುಂಡ್ಯ ಜಲ ವಿದ್ಯುತ್ ಯೋಜನೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಯಿತು. ಸುಂದರಲಾಲ ಬಹುಗುಣ ಅವರೂ ಬಂದು ಈ ಹೋರಾಟದಲ್ಲಿ ಭಾಗಿಯಾದರು. ನಮ್ಮೂರಿನಲ್ಲೂ ಒಂದು ರಾತ್ರಿ ಉಳಿದರು. ನಮ್ಮ ರಂಗಮಂದಿರದಲ್ಲಿ ಕುಳಿತು ಜನರನ್ನು ಭೇಟಿಯಾದರು ಮಾತನಾಡಿದರು. ಅವರೂ ಕೂಡಾ ರಂಗಕರ್ಮಿಗಳೆಂದು ನಮಗೆ ತಿಳಿದ್ದು ಆಗಲೇ. ಪೂರ್ಣಚಂದ್ರ ತೇಜಸ್ವಿ ರಂಗಮಂದಿರದ ಅಹ್ಲಾದಕರ ಪರಿಸರದಿಂದ ಖುಷಿಗೊಂಡಂತಿದ್ದ ಬಹುಗುಣ ಲಹರಿಬಂದಂತೆ ಮಾತನಾಡುತ್ತ ಹೋದರು. ಚಿಪ್ಕೊ ಚಳಿವಳಿಯಿಂದ ಆರಂಭಿಸಿದ ಅಜ್ಜನ ಮಾತು ಹೆಚ್ಚಾಗಿ ರಂಗಭೂಮಿಯ ಸುತ್ತಲೇ ತಿರುಗಿತು. ಬೀದಿ ನಾಟಕ, ಹಾಡುಗಳ ಮೂಲಕ ಜನ ಸಂಘಟನೆ ಮಾಡಿದ ದಿನಗಳನ್ನು ನೆನಪಿಸಿಕೊಂಡು ಉತ್ಸಾಹದಿಂದ ಮಾತನಾಡಿದರು. ‘ಭಾಷಣಕ್ಕೆ ಬಾಯಿ ಮಾತ್ರ ಇದೆ, ಆದರೆ ರಂಗಭೂಮಿಗೆ ಬಾಯಿ, ಕಣ್ಣು, ಕಿವಿ ಎಲ್ಲವೂ ಇವೆ ಹಾಗಾಗಿ ಯಾವುದೇ ಚಳುವಳಿಗೂ ರಂಗಭೂಮಿ ಅತ್ಯಂತ ಶಕ್ತ ಮಾಧ್ಯಮ ನಾಟಕಗಳನ್ನು ನೋಡಲು ಮಕ್ಕಳು ದೊಡ್ಡವರು ಮಹಿಳೆಯರು,ಎಲ್ಲರೂ ಬರುತ್ತಾರೆ ಅದರಲ್ಲೂ ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಕರುಣಾಮಯಿಗಳು, ನಾಟಕ ನೇರವಾಗಿ ಹೃದಯಕ್ಕೆ ತಟ್ಟುವುದರಿಂದ ಅದರ ಪರಿಣಾಮ ಮಹಿಳೆಯರಲ್ಲಿ ಹೆಚ್ಚಿನದಾಗಿರುತ್ತದೆ. ಅದರಿಂದ ಚಳುವಳಿಗೂ ಹೆಚ್ಚಿನ ಬಲ ಬರುತ್ತದೆ’ ಎಂದ ಅವರು, ನೀವು ಈ ಪರಿಸರ ಕಾಳಜಿಯ ಯಾತ್ರೆಯನ್ನು ರಂಗಕ್ರಿಯೆಗಳ ಮೂಲಕವೂ ಮುಂದುವರಿಸಿ, ಈ ಕೆಲಸವನ್ನು ಯಾವ ಭಾಷಣಕಾರರಾಗಲೀ ಸರ್ಕಾರವಾಗಲೀ ಮಾಡಲಾಗದು, ಎಂದರು. ಪರಿಸರ ಯಾತ್ರೆಯ ಕಾರ್ಯಕ್ರಮದಬಗ್ಗೆ ಮಾತನಾಡುತ್ತ ನಾವು ಮಾಡುವ ಈ ಕೆಲಸ ಮನುಷ್ಯರಿಗೆ ಮಾತ್ರವಲ್ಲ ಇಡೀ ಭೂಮಂಡಲದ ಉಳಿವಿಗೆ ಆ ಮೂಲಕ ಸಕಲ ಜೀವರಾಶಿಯ ಉಳಿವಿಗೆ ಅಗತ್ಯ ಆದರೆ ನಮಗೆ ಹಿರಿಯರಿಗೆ ಇನ್ನು ಹೆಚ್ಚು ಕಾಲಾವಕಾಶ ಉಳಿದಿಲ್ಲ. ನಮ್ಮ ಮುಂದಿರುವ ಈ ಎಳೆಯರಿಗೆ ಸಾಕಷ್ಟು ಅವಕಾಶವಿದೆ ಆದ್ದರಿಂದ ಮಕ್ಕಳೇ ನಮ್ಮ ಮುಂದಿನ ಭರವಸೆ, ಎಂದ ಅವರು, ನಿಮ್ಮ ಪರಿಸರ ಯಾತ್ರೆಗೆ ನಾನೇನು ಕೊಡಬಲ್ಲೆ ಒಂದು ಧ್ಯೇಯವಾಕ್ಯ ನೀಡುತ್ತೇನೆ, “ಥಿes ಣo ಐiಜಿe, ಓo ಣo ಆeಚಿಣh” ಇದು ನಿಮ್ಮ ಚಿಂತನೆಯಲ್ಲಿರಲಿ, ಇದೇ ಪರಿಸರದ ಉಳಿವಿಗೆ ದಾರಿ ತೋರುತ್ತದೆ ಎಂದರು.

ನಿಧಾನವಾಗಿ ಗುಂಡ್ಯ ಜಲವಿದ್ಯುತ್ ಯೋಜನೆ ಹಿನ್ನೆಲೆಗೆ ಸರಿಯಿತು.

ಆ ಸಂದರ್ಭದಲ್ಲಿ “ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ” ಎಂಬ ಬೀದಿ ನಾಟಕವನ್ನು ನಾವು (ಜೈಕರ್ನಾಟಕ ಸಂಘ ಬೆಳ್ಳೇಕೆರೆ) ಸಿದ್ಧಪಡಿಸಿಕೊಂಡು ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿದೆವು. ಮೈಸೂರಿನ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲೂ ಇದನ್ನು ಪ್ರದರ್ಶಿಸಿದೆವು. ಸ್ವಲ್ಪ ಸಮಯದ ಹಿಂದಷ್ಟೇ ಮೈಸೂರು ನಗರಕ್ಕೇ ಕಾಡಾನೆ ನುಗ್ಗಿ ಬಂದು ಇಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದರು.

ಮಲೆನಾಡಿನಲ್ಲಿ ಆನೆಗಳು ಅನೇಕ ವರ್ಷಗಳಿಂದಲೂ ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿ. ಮಲೆನಾಡಿನ ಜನ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನುyettinahole-project-diverting-west-flowing-water-to-an-arid-land ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ. ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ.

ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತವು, ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸಿದರು. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋದವು. ಪರಂಪರಾಗತ ಆನೆದಾರಿಗಳು ತುಂಡರಿಸಿಹೋದವು. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯೆತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ, ಕೆಲವೊಮ್ಮೆ ಮೋಟಾರ್ ರ್ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಗಾಂಜಾ ಬೆಳೆ ಮತ್ತು ಕಳ್ಳನಾಟಾದಂದೆಯಂತಹ ಕಾನೂನುಬಾಹಿರ ಕೃತ್ಯಗಳು ಕೂಡಾ ಪಶ್ಚಿಮಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳಿಗೆ ದೊಡ್ಡಪ್ರಮಾಣದಲ್ಲಿ ತೊಂದರೆಯನ್ನುಂಟುಮಾಡಿವೆ.

ಇಷ್ಟೆಲ್ಲ ಆಗುವಾಗಲೂ ನಮ್ಮ “ಯೆತ್ನಳ್ಳ” ತಣ್ಣಗೆ ಹರಿಯುತ್ತಲೇಇತ್ತು.

ಕೋಲಾರ- ತುಮಕೂರು ಪ್ರದೇಶಗಳಿಗೆ ನೀರೊದಗಿಸುವ ಪ್ರಸ್ತಾಪ ಬಂದಾಗಲೂ ಮೊದಲಿಗೆ ರಾಜಕಾರಣಿಗಳು ಹೇಳಿದ್ದು ಪಶ್ಚಿಮಕ್ಕೆ ಹರಿದು ‘ವ್ಯರ್ಥ’ವಾಗುತ್ತಿರುವ ನೇತ್ರಾವತಿ ನದಿಯ ಬಗ್ಗೆಯೇ. ಆದರೆ ಜನರ ವಿರೋಧದ ಸುಳಿವು ಸಿಕ್ಕಿದೊಡನೆಯೇ ಅವರ ಭಾಷೆ ನುಡಿಕಟ್ಟುಗಳು ಬದಲಾದವು. ನೇತ್ರಾವತಿ ನದಿಯ ಬದಲಾಗಿ ಘಟ್ಟದ ಮೇಲ್ಭಾಗದಲ್ಲಿ ಪಶ್ಚಿಮದತ್ತ ಹರಿಯುವ ಎತ್ತಿನ ಹಳ್ಳದಂತಹ ಸಣ್ಣ ಸಣ್ಣ ಹೊಳೆಗಳನ್ನು ಒಗ್ಗೂಡಿಸಿ, ಬಯಲು ಸೀಮೆಯ ಜನರಿಗೆ ಕುಡಿಯುವ ನೀರೊದಗಿಸುವ ಅತ್ಯಂತ ಅಗತ್ಯದ ಯೋಜನೆಯಿದೆಂದು ಬಿಂಬಿಸಿದರು. ಮಲೆನಾಡಿನ ಮತ್ತು ಕರಾವಳಿಯ ಜನರಿಗೆ ಹೀಗೆ ಹೇಳಿ, ಬಯಲು ಸೀಮೆಯ ಜನರ ಮುಂದೆ ಇಪ್ಪತ್ತನಾಲ್ಕು ಟಿ.ಎಮ್.ಸಿ ನೀರಿನ ಚಿತ್ರಣ ನೀಡಿದರು. ಇಷ್ಟು ನೀರೊದಗಿಸುವ ಜಲಮೂಲ ಸಣ್ಣ “ಹಳ್ಳ”ವಾಗಿರಲು ಸಾಧ್ಯವಿಲ್ಲ ಎಂದೋ ಎನೋ. “ಎತ್ತಿನ ಹಳ್ಳ” ಮೊದಲು ರಾಜಕಾರಣಿಗಳ ಬಾಯಲ್ಲಿ ನಂತರ ವ್ಯಾಪಕವಾಗಿ ಮಾಧ್ಯಮಗಳಲ್ಲಿ “ಎತ್ತಿನಹೊಳೆ” ಯೋಜನೆಯಾಯಿತು.

ಹೀಗೆ ನಮ್ಮ “ಯೆತ್ನಳ್ಳ” ಎತ್ತಿನಹೊಳೆಯಾಗಿ ಲೋಕವಿಖ್ಯಾತವಾಯಿತು.

ಕಳೆದ ಮೂರು ದಶಕಗಳಲ್ಲಿ ಬೇರೆ ಕಡೆಗಳಂತೆ ಮಲೆನಾಡಿನಲ್ಲೂ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇಲ್ಲಿನ ಯುವಜನರು ವಿದ್ಯಾವಂತರಾಗಿ, ಕುಶಲಕರ್ಮಿಗಳಾಗಿ ಬೇರೆಡೆಗೆ ಹೋಗಿದ್ದರೂ, ಗದ್ದೆ ಬೇಸಾಯವನ್ನುಳಿದು ಇತರ ಕಾಫಿ, ಮೆಣಸು, ಶುಂಠಿ ಮುಂತಾದ ವಾಣಿಜ್ಯ ಬೆಳೆಗಳ ಕೃಷಿ ಹೆಚ್ಚಾಗಿದೆ. ಯಂತ್ರೋಪಕರಣಗಳ ಬಳಕೆ, ನೀರಾವರಿ ಎರಡೂ ಹೆಚ್ಚಳವಾಗಿದ್ದು ನೀರಿನ ಬಳಕೆ ಗಣನೀಯವಾಗಿ ಹೆಚ್ಚಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಾಫಿ ತೋಟಗಳು, ವ್ಯಾಪಕವಾಗಿ ಕಾರ್ಪೊರೇಟ್ ಧನಿಗಳ ಕೈಸೇರುತ್ತಿದೆ. ಇವರು ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯಗಳಿಂದ ಕೂಲಿಕಾರ್ಮಿಕರನ್ನು ಕರೆತರುತ್ತಿರುವುದರಿಂದ, ಜನವಸತಿ ಹೆಚ್ಚಾಗುತ್ತಿದೆ. ಇದರೊಂದಿಗೆ ಸರ್ಕಾರದ ಅನೇಕ ಯೋಜನೆಗಳ ಮೂಲಕ ಸ್ವಂತ ನಿವೇಶನ-ಮನೆ ಹೊಂದಿದವರೂ ಹೆಚ್ಚಾಗಿದ್ದಾರೆ. ಇವೆಲ್ಲವೂ ಸೇರಿ ಮಲೆನಾಡಿನಲ್ಲೂ ಕೃಷಿ ಮಾತ್ರವಲ್ಲ ಕುಡಿಯುವ ನೀರಿನ ಬೇಡಿಕೆಯೂ ಹೆಚ್ಚಿದೆ. ಕಳೆದೆರಡು ದಶಕಗಳಲ್ಲಿ ಕೊರೆದ ಕೊಳವೆಬಾವಿಗಳು ನಿರುಪಯುಕ್ತವಾಗಿವೆ. ಆದ್ದರಿಂದ ಇಲ್ಲೂ ಸಹ ಹಳ್ಳ-ಹೊಳೆಗಳ ನೀರನ್ನೇ ಜನರು ಬಳಸತೊಡಗಿದ್ದಾರೆ.

ಎತ್ತಿನಹಳ್ಳದ ಜಲಾನಯನ ಪ್ರದೇಶದಲ್ಲೇ ಸುಮಾರು ಏಳೆಂಟು ಸಾವಿರ ಎಕರೆಗಳಷ್ಟು, ಕಾಫಿ ತೋಟಗಳಿವೆ. ಏಲಕ್ಕಿ ಮೆಣಸು, ಅಡಿಕೆ ಬೆಳೆಯೂ ಸಾಕಷ್ಟಿದೆ. ಈ ಪ್ರದೇಶದಲ್ಲೇ ಬರುವ ಹೆಗ್ಗದ್ದೆ, ದೋಣಿಗಾಲ್, ಕುಂಬರಡಿ, ನಡಹಳ್ಳಿ, ಹೆಬ್ಬಸಾಲೆ, yettinahole_works-ringsಮಾವಿನಕೂಲು, ಗಾಣದಹೊಳೆ, ರಕ್ಷಿದಿ. ಕ್ಯಾಮನಹಳ್ಳಿ, ಅಗಲಟ್ಟಿ ಮುಂತಾದ ಗ್ರಾಮಗಳಿವೆ. ಇವುಗಳಲ್ಲಿ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿಗೂ ಇಂದು ಎತ್ತಿನಹಳ್ಳದ ನೀರೇ ಆಧಾರ. ಈ ಎಲ್ಲಾ ಗ್ರಾಮಪಂಚಾಯತಿಗಳು ಕುಡಿಯುವನೀರಿನ ಯೋಜನೆಯಲ್ಲಿ ಎತ್ತಿನಹಳ್ಳದ ನೀರನ್ನು ಬಳಸುತ್ತಿವೆ. ಈ ಎಲ್ಲ ಕಾರಣಗಳಿಂದ ಕಡು ಬೇಸಗೆಯಲ್ಲಿ ಎತ್ತಿನಹಳ್ಳ ಸಂಪೂರ್ಣ ಬರಿದಾಗುವ ಹಂತ ತಲಪಿರುತ್ತದೆ.

ರಕ್ಷಿದಿ, ಅಗಲಟ್ಟಿ ಗ್ರಾಮಗಳಲ್ಲಿ ಹಾಗೂ ನಮ್ಮ ರಂಗಮಂದಿರದಲ್ಲಿ ಬಳಸುತ್ತಿರುವುದೂ ಎತ್ತಿನಹಳ್ಳದ ನೀರನ್ನೇ. ವೇದಿಕೆಗಳಿಂದ ಮಾತನಾಡುವಾಗೆಲ್ಲ ನಾವು ‘ನಮಗಿದೇ ಗಂಗೆ, ಕಾವೇರಿ, ಗೋದಾವರಿ’ ಎನ್ನುತ್ತೇವೆ.

ಇಷೆಲ್ಲ ಇದ್ದರೂ ಗುಂಡ್ಯಜಲವಿದ್ಯುತ್ ಯೋಜನೆ ಅಥವಾ ಎತ್ತಿನಹೊಳೆ ತಿರುವು ಯೋಜನೆಗೆ ಸ್ಥಳೀಯರ ವಿರೋಧ ಕಡಿಮೆ. ಹೋರಾಟ-ಹಾರಾಟವೇನಿದ್ದರೂ ಹೊರಗಿನವರದ್ದು ಎಂಬ ಮಾತು ಆಗಾಗ, ಮಾಧ್ಯಮಗಳಲ್ಲಿ, ಮತ್ತು ಮುಖ್ಯವಾಗಿ ರಾಜಕಾರಣಿಗಳ ಮಾತಿನಲ್ಲಿ ಕೇಳಿಬರುತ್ತದೆ.

ಆದರೆ ಇವರೆಲ್ಲ ಹೇಳುತ್ತಿರುವಷ್ಟು ಸರಳವಾಗಿ ಈ ಸಮಸ್ಯೆ ಖಂಡಿತ ಇಲ್ಲ. ಮೊದಲನೆಯದಾಗಿ ಪರಿಸರವನ್ನು ಉಳಿಸಬೇಕೆನ್ನುವವರಲ್ಲೂ ಹಲವು ಅಭಿಪ್ರಾಯಗಳಿವೆ. ಇವರೆಲ್ಲರೂ ಪರಿಸರದ ಬಗ್ಗೆ ನಿಜವಾದ ಕಾಳಜಿಯನ್ನು ಇಟ್ಟುಕೊಂಡಿರುವವರೇ, ಆದರೆ ಆಧುನಿಕ ಜೀವನ ಕ್ರಮವನ್ನು ಒಪ್ಪಿಕೊಂಡ ಮೇಲೆ ಸ್ವಲ್ಪ ಮಟ್ಟಿನ ರಾಜಿ ಅನಿವಾರ್ಯ ಎನ್ನುವವರಿದ್ದಾರೆ. ನಮಗೆ ರಸ್ತೆ, ವಿದ್ಯುತ್, ಮುಂತಾದವು ಬೇಕೇಬೇಕು ಎಂದಮೇಲೆ ಅರಣ್ಯನಾಶವೂ ಅನಿವಾರ್ಯವಾದ್ದರಿಂದ ಮರಗಿಡಗಳನ್ನು ಬೆಳೆದರಾಯ್ತು ಎಂದುಕೊಂಡವರಿದ್ದಾರೆ. ನೀರಿಲ್ಲದವರಿಗೆ ನೀರು ನೀಡುವುದು, ಪುಣ್ಯಕಾರ್ಯ ಎನ್ನುವವರಿದ್ದಾರೆ. ಹಾಗೇ ಪರಿಸರದ ವಿಚಾರದಲ್ಲಿ ಯಾವದೇ ರಾಜಿಗೂ ಸಿದ್ಧವಿಲ್ಲದವರೂ ಇದ್ದಾರೆ.

ಈ, ಎಲ್ಲ ವಿಚಾರಗಳನ್ನು ಬಿಟ್ಟು ಯೋಚನೆ ಮಾಡಿದರೂ ಕೂಡಾ ಈ ಜಲವಿದ್ಯುತ್ ಯೋಜನೆಗಳಿಗಾಗಲೀ, ನದೀತಿರುವು ಯೋಜನೆಗಳಿಗಾಗಲೀ, ಪಶ್ಚಿಮ ಘಟ್ಟಗಳ ಜೀವ ವೈವಿದ್ಯವನ್ನು ನಾಶ ಮಾಡುವ ಯಾವುದೇ ಯೋಜನೆಗೆ ಸ್ಥಳೀಯ ಕೃಷಿಕರಿಂದ ಅಥವಾ ಕೃಷಿಕಾರ್ಮಿಕರಿಂದ ಯಾಕೆ ವ್ಯಾಪಕವಾದ ವಿರೋಧ ಬರುತ್ತಿಲ್ಲ ?. ಇದಕ್ಕೆ ಹಲವು ಕಾರಣಗಳಿವೆ. ಪರಿಸರವಾದಿಗಳ ಸಂಘಟನಾತ್ಮಕ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಾರಣವಿದ್ದರೆ. ಇನ್ನಿತರೆ ಕಾರಣಗಳು ಹಲವಿವೆ. ಮುಖ್ಯವಾಗಿ ಇಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ. ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿ ಹೋಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನ ಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಆ ಪ್ರದೇಶದ ಪಾರಂಪರಿಕ ಬೆಳೆಗಳನ್ನು ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಇದರೊಂದಿಗೆ ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಹಲವು ಯೋಜನೆಗಳಿಂದಾಗಿ ನಡೆದ ಅರಣ್ಯಪ್ರದೇಶದ ಅತಿಕ್ರಮಣದಿಂದಾಗಿ ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೃಷಿಗೆ ಕೆಲಸಗಾರರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ. ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ಕೃಷಿಕ ನಿರಾಶನಾಗಿ ಕುಳಿತಿದ್ದಾನೆ. (ಈ ಭಾಗದ ಜಮೀನನ್ನು ಕಾರ್ಪೊರೇಟ್ ವಲಯದವರೂ ಸಹ ಖರೀದಿಸುತ್ತಿಲ್ಲ). ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ. ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿಪಡೆಯಬಹುದು, ಇಲ್ಲವೇ ಯೋಜನೆಗಳಿಂದಾಗಿ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವುದರಿಂದ ಬೇರೇನಾದರೂ ಕೆಲಸವೋ ವ್ಯಾಪಾರವೋ ಮಾಡಬಹುದೆಂಬ ಹವಣಿಕೆಯಲ್ಲಿದ್ದಾನೆ. ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಸಾಧ್ಯವಿದ್ದವರು ಈಗಾಗಲೇ ತಮ್ಮ ಕಾಫಿ ತೋಟಗಳನ್ನು ಉದ್ಯಮಿಗಳಿಗೆ ಮಾರಿದ್ದಾರೆ. ಅಲ್ಲೆಲ್ಲ ರೆಸಾರ್ಟುಗಳು ಪ್ರಾರಂಭವಾಗಿವೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು.

ದೊಡ್ಡ ಕೈಗಾರಿಕೆಗಳಿಗೆ ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು. ಯಾವುದೇ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರವಾಗಿರುತ್ತದೆ.

ಇನ್ನು ಇಲ್ಲಿರುವ ಹಳೆಯ ತಲೆಮಾರಿನ ಸ್ಥಳೀಯ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿ ದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಇದಕ್ಕಿಂತ ಶಕ್ತಿಶಾಲಿ, ಪ್ರಭಾವಶಾಲಿ ಗುಂಪೊಂದಿದೆ. ಇವರಲ್ಲಿ ಕೆಲವರು ನೇರವಾಗಿ ಅಭಿವೃದ್ಧಿಯ ಹರಿಕಾರರಂತೆ ಮಾತನಾಡುತ್ತ ಈ ಎಲ್ಲ ಯೋಜನೆಗಳನ್ನು ನೇರವಾಗಿ ಸಮರ್ಥಿಸುತ್ತ ಈ ಮೊದಲು ತಿಳಿಸಿದ, ಸ್ವಲ್ಪ ಮಟ್ಟಿಗೆ ರಾಜಿ ಅನಿವಾರ್ಯ ಎನ್ನುವ, ಪ್ರಗತಿಪರರ ಹಾಗೂ ಬುದ್ಧಿಜೀವಿಗಳ ಮಾತನ್ನು ತಮ್ಮ ಸಮರ್ಥನೆಗಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ಇವರಿಗಿಂತಲೂ ಹೆಚ್ಚು ಅಪಾಯಕಾರಿಗಳು. ಇವರು ಈ ಯೋಜನೆಗಳನ್ನು ವಿರೋಧಿಸುವವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾ, ಈ ಎಲ್ಲ ಯೋಜನೆಗಳ ಅನುಷ್ಟಾನವಾದರೆ ತಮಗೆ ದೊರೆಯಬಹುದಾದ ಲಾಭದ ಲೆಕ್ಕಾಚಾರದಲ್ಲಿರುತ್ತಾರೆ.

ಇವರುಗಳು ಮಾತ್ರವಲ್ಲ, ಈ ಎಲ್ಲ ಯೋಜನೆಗಳಿಂದ ಲಾಭಪಡೆಯುವವರು, ಇನ್ನೂ ಅನೇಕರಿದ್ದಾರೆ. ಇವರಲ್ಲಿ ಗುತ್ತಿಗೆದಾರರದು, ಮರದ ವ್ಯಾಪಾರಿಗಳು, ಮರಳು ದಂಧೆಯವರು, ಗ್ರಾನೈಟ್ ಗಣಿಗಾರಿಕೆಯವರು, ರಿಯಲ್ ಎಸ್ಟೇಟ್ ದಳ್ಳಾಳಿಗಳು, yettinahole-ringsಮತ್ತು ಇವರಿಂದ ಲಾಭ ಪಡೆಯುತ್ತಿರುವ ಅನೇಕ ಸ್ಥಳೀಯರು ಮತ್ತು ಕೆಲವರು ಪರ್ತಕರ್ತರೂ ಇದ್ದಾರೆ. ಇವರಿಗೆ ಜಲವಿದ್ಯುತ್ ಯೋಜನೆಯಾಗಲೀ, ನದೀ ತಿರುವು ಯೋಜನೆಯಾಗಲೀ, ರಸ್ತೆ ನಿರ್ಮಾಣವಾಗಲೀ ಯಾವ ವೆತ್ಯಾಸವೂ ಇಲ್ಲ. ಯಾವುದೇ ಯೋಜನೆ ಇವರ ಪಾಲಿಗೆ ಹಿಂಡುವ ಹಸುವಾಗಬಲ್ಲದು. ಇವರುಗಳು ಬಹಳ ಸಮರ್ಥವಾಗಿ ಸ್ಥಳೀಯ ಜನರಲ್ಲಿ ಹೊಸ ಆಸೆ-ಆಕಾಂಕ್ಷೆಗಳನ್ನು ತುಂಬಬಲ್ಲರು. ಈ ಕಾರಣಗಳಿಂದಾಗಿ ಈ ಎಲ್ಲ ಯೋಜನೆಗಳ ವಿರೋಧವಾಗಿ ಸಭೆ, ಜಾತಾ, ಸತ್ಯಾಗ್ರಹ, ಜನಾಭಿಪ್ರಾಯ ಸಂಗ್ರಹ ಸಭೆ ಏನೇ ನಡೆಯಲಿ, ಸ್ಥಳೀಯ ಕೃಷಿಕ-ಕಾರ್ಮಿಕರಿಂದ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿಲ್ಲ, ಆದ್ದರಿಂದ ಈ ಕಾರ್ಯಕ್ರಮಗಳಲ್ಲಿ ಹೊರಗಿನವರ ಸಂಖ್ಯೆಯೇ ಹೆಚ್ಚಾಗಿ ಕಾಣಸಿಗುತ್ತದೆ ಇದರಿಂದಾಗಿ ಈ ಯೋಜನೆಗಳಿಗೆ ಸ್ಥಳೀಯರ ವಿರೋಧವಿಲ್ಲ, ಈ ಪರಿಸರವಾದಿಗಳು ಹೊರಗಿನವರು, ಹೊಟ್ಟೆ ತುಂಬಿದ ಸುಶಿಕ್ಷಿತರು, ಮೇಲ್ವರ್ಗದ ಜನ, ಇತ್ಯಾದಿ ವಾದಗಳು ಹುಟ್ಟಿಕೊಳ್ಳುತ್ತಿವೆ.

ಕೆಲವು ತಿಂಗಳ ಹಿಂದೆ ತುಮಕೂರಿನ ಶಾಲೆಯೊಂದರ ಮಕ್ಕಳು ಎತ್ತಿನಹೊಳೆ ಯೋಜನೆಯ ಬಗ್ಗೆ ಮತ್ತು ಎತ್ತಿನಹೊಳೆ ಪರಿಸರದ ಅಧ್ಯಯನಕ್ಕಾಗಿ ಬಂದಿದ್ದರು ಮೂರುದಿನಗಳಕಾಲ ನಮ್ಮ ರಂಗ ಮಂದಿರದಲ್ಲಿ ಉಳಿದು, ಎತ್ತಿನಹಳ್ಳ ಹುಟ್ಟುವಲ್ಲಿಂದ ಕೆಂಪೊಳೆ ಸೇರುವ ತನಕದ ಒಟ್ಟು ಜಲಾನಯನ ಪ್ರದೇಶದಲ್ಲಿ ತಿರುಗಾಡಿದರು. ಜೀವ ವೈವಿದ್ಯವನ್ನೆಲ್ಲ ನೋಡಿದರು. ದಾಖಲಿಸಿದರು. ಪೋಟೋತೆಗೆದುಕೊಂಡರು. ಇಲ್ಲಿಯ ನೆಲದ ವಿಸ್ತೀರ್ಣ, ಹಾಗೂ ಅದೇಸ್ಥಳದ ಮೇಲ್(ಏರಿಯಲ್)ವಿಸ್ತೀರ್ಣ, ಮಳೆಮಾಪನ ವಿಧಾನಗಳು, (ಕಾಫಿ ತೋಟಗಳಲ್ಲಿ ಪ್ರತಿದಿನ ಮಳೆಮಾಪನ ಮಾಡುವುದು ಬ್ರಿಟಿಷರ ಕಾಲದಿಂದಲೂ ನಡೆದು ಬಂದಿದೆ). ಒಂದು ಟಿ.ಎಮ್.ಸಿ ನೀರೆಂದರೆ ಎಷ್ಟು?. ವರ್ಷಕ್ಕೆ ಸರಾಸರಿ ನೂರರಿಂದ ನೂರಿಪ್ಪತ್ತು ಇಂಚುಗಳಷ್ಟು ಮಳೆಬೀಳುವ ಈ ಜಲಾನಯನ ಪ್ರದೇಶದಲ್ಲಿ ಒಂದು ಮಳೆಗಾಲದಲ್ಲಿ ಭೂಮಿಗೆ ಬೀಳುವ ನೀರಿನ ಒಟ್ಟು ಮೊತ್ತ. ಅದರಲ್ಲಿ ಆವಿಯಾಗುವ ಪ್ರಮಾಣ, ಭೂಮಿಯಲ್ಲಿ ಇಂಗುವ ಪ್ರಮಾಣ, ಈ ಪ್ರದೇಶದ ಜೀವರಾಶಿಗೆ ಬಳಕೆಗೆ ಬೇಕಾದ ನೀರು ಇವೆಲ್ಲವನ್ನೂ ಕಳೆದು, ಹೆಚ್ಚುವರಿಯಾಗಿ ಸಿಗಬಹುದಾದ ನೀರು ಹೀಗೆ ಎಲ್ಲವನ್ನೂ ತಾವೇ ಪ್ರಾಯೋಗಿಕವಾಗಿ ನೋಡಿ ಕಲಿತು, ಕೊಳವೆಗಳ ಮೂಲಕ ಸಾಗಿಸಬಹುದಾದ ನೀರು ಎತ್ತಿನ ಹಳ್ಳದಲ್ಲಿ ದೊರಕುವುದು ಕೇವಲ ಮೂರರಿಂದ ಮೂರೂವರೆ ಟಿ.ಎಮ್.ಸಿ. ಮಾತ್ರ ಎಂದು ಲೆಕ್ಕಹಾಕಿದರು. ಎತ್ತಿನಹಳ್ಳವಲ್ಲದೆ, ಸರ್ಕಾರ ಹೇಳುವ ಕಾಡುಮನೆಹಳ್ಳ, ಕೆಂಕೇರಿಹಳ್ಳ, ಮಂಜನಹಳ್ಳ ಸೇರಿದರೂ ಒಟ್ಟು ನೀರಿನ ಮೊತ್ತ ಎಂಟರಿಂದ ಒಂಭತ್ತು ಟಿ.ಎಮ್.ಸಿ ಮೀರಲಾರದೆಂದು ತೀರ್ಮಾನಿಸಿದರು. ಅಂದರೆ ಈಗಾಗಲೇ ತಯಾರಿಸಿಟ್ಟಿರುವ ಬೃಹತ್ ಗಾತ್ರದ ಕೊಳವೆಗಳಿಗೂ ಇಲ್ಲಿರುವ ನೀರಿನ ಪ್ರಮಾಣಕ್ಕೂ ತಾಳೆಯಾಗುವುದಿಲ್ಲವೆಂದು. ಅವರಿಗೂ ಅರಿವಾಯ್ತು. ಇಪ್ಪತ್ತನಾಲ್ಕು ಟಿ.ಎಮ್.ಸಿ. ನೀರು ದೊರೆಯಬೇಕಾದರೆ ಘಟ್ಟದ ಕೆಳಗಿನ ನೇತ್ರಾವತಿಯನ್ನೋ ಕುಮಾರಧಾರೆಯನ್ನೋ ತಿರುಗಿಸುವುದು ಅನಿವಾರ್ಯವೆಂದು, ಅದರಿಂದ ಅಲ್ಲಿನ ಪರಿಸರಕ್ಕೆ ಇನ್ನೂ ಹೆಚ್ಚಿನ ಹಾನಿ ಆಗಲಿದೆ ಎಂದು ಮಕ್ಕಳು ಅಭಿಪ್ರಾಯಪಟ್ಟರು.

ಈ ಮಕ್ಕಳೆಲ್ಲ ಎತ್ತಿನಹೊಳೆ ಯೋಜನೆಯ ಫಲಾನುಭವಿ ಪ್ರದೇಶಗಳ ಮಕ್ಕಳು, ಇವರೊಂದಿಗೆ ನಮ್ಮೂರ ಶಾಲೆಯ ಅದೇ ವಯಸ್ಸಿನ ಮಕ್ಕಳೊಂದಿಗೆ ಮಾತನಾಡಲು ಬಿಟ್ಟೆವು. ಮಕ್ಕಳು ಅವರವರೇ ಮಾತಾಡಿ ಕೊನೆಗೆ ತೀರ್ಮಾನಿಸಿದ್ದೆಂದರೆ “ತುಮಕೂರಿನ ನೀರಿನ ಸಮಸ್ಯೆ ಅಲ್ಲಿಯ ಜನರು ಅಲ್ಲೇ ಪರಿಹಾರ ಕಂಡುಕೊಳ್ಳಬೇಕು… ಹಾಗೇ ಮಲೆನಾಡಿನ ಜನ ತಮ್ಮ ಪ್ರಾಣಿಗಳಕಾಟ ಇತ್ಯಾದಿ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು”ಎಂದು.

ಇವರೆಲ್ಲ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು. ಆ ಮಕ್ಕಳಿಗಿರುವ ಅರಿವು- ಕಾಳಜಿ ನಮಗಿದ್ದಿದ್ದರೆ……….

ಕೇಂದ್ರ ಸರ್ಕಾರವೀಗ ಹಸಿರುನಾಶಕ್ಕೆ ಹಸಿರು ನಿಶಾನೆ ತೋರಿದೆ. ನಮ್ಮ ರಂಗತಂಡ “ಎತ್ತಿನ ಹೊಳೆ” ಎಂಬ ನಾಟಕವನ್ನು ರಚಿಸಿಕೊಂಡು ತಾಲೀಮಿನಲ್ಲಿ ತೊಡಗಿದೆ.

Leave a Reply

Your email address will not be published. Required fields are marked *