ವಾಟ್ಸಾಪ್ ನಲ್ಲಿ ಜೊತೆಯಾದವರು ಒಟ್ಟಿಗೆ ಕುಳಿತು ಸಿನಿಮಾ ನೋಡಿದರು

  • – ಶಿವರಾಂ ಕೆಳಗೋಟೆ

‘ಚೋಮನ ದುಡಿ’ ಸಿನಿಮಾ ಪ್ರದರ್ಶನ ಮುಗಿಯಿತು. ಅಭಿಪ್ರಾಯ ಹಂಚಿಕೊಳ್ಳುವ ಸಮಯ. ಹೊಸಪೇಟೆ ಮೂಲದ ವಿದ್ಯಾರ್ಥಿನಿ ಮಾತನಾಡುತ್ತಾ, “ಈ ಸಿನಿಮಾ ನಾನು ಎರಡು-ಮೂರು ಬಾರಿ ನೋಡಿದ್ದೇನೆ. ಚೋಮನನ್ನು ನೋಡಿದಾಗಲೆಲ್ಲಾ ನನಗೆ ನನ್ನೂರಲ್ಲಿರುವ ದೊಡ್ಡಪ್ಪ ನೆನಪಾಗುತ್ತಾರೆ. ನಾನು ಚಿಕ್ಕಂದಿನಿಂದ ನೋಡುತ್ತಿದ್ದೇನೆ, ಅವರು ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಾರೆ. ತುಂಡು ಭೂಮಿಯನ್ನು ಹೊಂದುವ ಅವರ ಕನಸು ಇಂದಿಗೂ ಈಡೇರಿಲ್ಲ. ಈ ಸಿನಿಮಾ ನಮ್ಮದೇ ಕತೆ ಅನ್ನಿಸುತ್ತೆ” ಎಂದರು.

 

ನೆನಪಿರಲಿ – ಶಿವರಾಮ ಕಾರಂತರುwhatsapp-image-2016-09-24-at-10-35-50 ಚೋಮನ ದುಡಿ ಕಾದಂಬರಿ ಬರೆದದ್ದು 1930 ರ ದಶಕದಲ್ಲಿ. ಅದು ಬಿ.ವಿ.ಕಾರಂತರ ನಿರ್ದೇಶನದಲ್ಲಿ ಸಿನಿಮಾ ಆದದ್ದು 1975 ರಲ್ಲಿ. ಮೊನ್ನೆಯಷ್ಟೆ ಮಂಗಳೂರಲ್ಲಿ ಈ ಸಿನಿಮಾ ಪ್ರದರ್ಶನ ನಡೆಯಿತು. ಈ ಸುದೀರ್ಘ ಕಾಲಾವಧಿಯಲ್ಲಿ ನೇತ್ರಾವದಿ ಸಾಕಷ್ಟು ಹರಿದಿದ್ದಾಳೆ, ಚೋಮನಂತಹವರ ಬದುಕಲ್ಲಿ ಬದಲಾವಣೆ ಆದದ್ದು ಕಡಿಮೆ. ಅದೇ ಚೋಮನದುಡಿ ಕಾದಂಬರಿ ಬರೆದು, ಚೋಮನ ಭೂಮಿ ಹೊಂದುವ ಕನಸನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟ ಶಿವರಾಮ ಕಾರಂತರು 1970 ರ ದಶಕದ ಭೂಸುಧಾರಣೆ ಕಾಯಿದೆ ಜಾರಿ ಹೊತ್ತಿಗೆ ಬದಲಾಗಿದ್ದಂತೆ ಕಾಣುತ್ತಾರೆ. ಅವರು ‘ಒಬ್ಬರಿಂದ ಕಿತ್ತು ಮತ್ತೊಬ್ಬರಿಗೆ ಭೂಮಿ ಕೊಡುವ’ ಬಗ್ಗೆ ಟೀಕೆಯ ಧಾಟಿಯಲ್ಲಿ ಮಾತನಾಡಿದ್ದರು ಎಂದು ಉಡುಪಿಯ ಉಪನ್ಯಾಸಕಿ ನೆನಪಿಸಿಕೊಂಡರು.

ಈ ಮೇಲಿನ ಸಂದರ್ಭ ನಡೆದದ್ದು ಕಳೆದ ಶನಿವಾರ ಮತ್ತು ಭಾನುವಾರ (ಸೆ.24-25) ಮನುಜಮತ ವಾಟ್ಸಾಪ್ ಗುಂಪು ಮತ್ತು ಮಂಗಳೂರಿನ ಸಹಮತ ಫಿಲ್ಮ್ ಸೊಸೈಟಿ ಒಟ್ಟಿಗೆ ಆಯೋಜಿಸಿದ್ದ ಸಿನಿ ಉತ್ಸವದಲ್ಲಿ. ಸೋಷಿಯಲ್ ಮೀಡಿಯಾದ ಫೇಸ್ ಬುಕ್, ವಾಟ್ಸಾಪ್ ಗಳ ಬಗ್ಗೆ ಅಲ್ಲಲ್ಲಿ ನೆಗೆಟಿವ್ ಕಾಮೆಂಟುಗಳನ್ನು ಕೇಳುತ್ತಿರುತ್ತೇವೆ. ಆದರೆ ಪಾಸಿಟಿವ್ ಬೆಳವಣಿಗೆಗಳೂ ಈ ಸೋಷಿಯಲ್ ಮೀಡಿಯಾ ಟೂಲ್ ಗಳಿಂದ ಸಾಧ್ಯವಾಗಿದೆ ಎನ್ನುವುದಕ್ಕೆ ಮನುಜಮತ ಗುಂಪೂ ಒಂದು ಸಾಕ್ಷಿ. 2015 ರಲ್ಲಿ ಸಮಾನ ಮನಸ್ಕರು ಎಂಬ ಕಾರಣಕ್ಕೆ ಒಂದು ಗುಂಪು ರೂಪ ಪಡೆಯಿತು. ಅದರ ಕರ್ತೃ ಬರಹಗಾರ ಹರ್ಷಕುಮಾರ್ ಕುಗ್ವೆ. ನಾಡಿನಾದ್ಯಂತ ಬೇರೆ ಬೇರೆ ಹಿನ್ನೆಲೆಯ ಜನರನ್ನು ಒಂದೆಡೆ ಸೇರಿಸಿದರು. ಚರ್ಚೆಗಳು ಬಿರುಸಾಗಿ ನಡೆದವು. ಕೆಲ ಹಿರಿಯರಂತೂ ರಾತ್ರಿಯೆಲ್ಲಾ ಹಲವು ವಿಚಾರಗಳ ಚರ್ಚೆಗಳಲ್ಲಿ ಪಾಲ್ಗೊಂಡ ಉದಾಹರಣೆಗಳು ಬೇಕಾದಷ್ಟಿವೆ. ಅಲ್ಲಲ್ಲಿ ಈ ಗುಂಪಿನ ಚಟುವಟಿಕೆಗಳು ಚರ್ಚೆಗೆ ಬರುತ್ತಿದ್ದವು. ಆ ಬಗ್ಗೆ ಕೇಳಿ ತಿಳಿದಿದ್ದ ಹಲವwhatsapp-image-2016-09-25-at-20-02-00ರಂತೂ ಹೇಗಾದರೂ ಮಾಡಿ ಈ ಗುಂಪಿಗೆ ಸೇರಿಕೊಳ್ಳಬೇಕೆಂದು ನಾನಾ ಪ್ರಯತ್ನ ಮಾಡಿದರು. ಕೆಲವರು ಅಡ್ಮಿನ್ ಗಳಿಗೆ ಬೇರೆಯವರ ಮೂಲಕ ಶಿಫಾರಸ್ಸು ಮಾಡಿಸಿದಂತಹ ಸಂದರ್ಭಗಳೂ ಇದ್ದವು.

ಈ ಗುಂಪಿನ ವಿಶೇಷ ಎಂದರೆ, ಇಲ್ಲಿಯವರು ಮೊಬೈಲ್ ಆಚೆಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿದ್ದು. ಬೆಂಗಳೂರು ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಎಂ.ಬಿ.ರಾಮಮೂರ್ತಿಯವರೂ ಈ ಗುಂಪಿನ ಆಕ್ಟಿವ್ ಸದಸ್ಯ. ಅವರಿಗೆ ಸೇರಿದ್ದ ಭೂಮಿಯಲ್ಲಿ ಸದಸ್ಯರೆಲ್ಲಾ ಸೇರಿ ವನಮಹೋತ್ಸವ ಕಾರ್ಯಕ್ರಮ ಮಾಡಿದರು. ಸದಸ್ಯರು ಖುದ್ದು ಹೋಗಿ ನೆಟ್ಟ ಗಿಡಗಳ ಬಗ್ಗೆ ಆಗಾಗ ಅಪ್ ಡೇಟ್ ಈ ಗುಂಪಿನಲ್ಲಿರುತ್ತೆ. ಸುಂದರ ಮಲೆಕುಡಿಯ ಎಂಬ ಕಾರ್ಮಿಕನನ್ನು ಮಾಲೀಕ ಹೀನಾಯವಾಗಿ ಹಿಂಸಿಸಿದಾಗ, ಮಾನವೀಯ ನೆಲೆಯಲ್ಲಿ ಈ ಗುಂಪಿನ ಸದಸ್ಯರು ಹಣ ಸಂಗ್ರಹಿಸಿ ಕೊಟ್ಟರು. ದೀನ ದಲಿತರ ಶೋಷಣೆಯಂತ ಪ್ರಕರಣಗಳು ನಡೆದಾಗ ಇಲ್ಲಿಯ ಸದಸ್ಯರು ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡಿದ್ದಾರೆ.whatsapp-image-2016-09-25-at-21-30-38

 

ಈ ಚಟುವಟಿಕೆಗಳ ಮುಂದುವರಿದ ಭಾಗವೇ ಸಿನಿ ಉತ್ಸವಗಳು. ಮೊದಲ ಬಾರಿಗೆ ಶಿವಮೊಗ್ಗ ಹತ್ತಿರದ ಸದಸ್ಯರು ಕುಪ್ಪಳಿಯಲ್ಲಿ ಎರಡು ದಿನದ ಸಿನಿ ಉತ್ಸವ ಮಾಡಿದರು. ನಂತರ ಸಿನಿ ತೇರು ಹಾಸನ ತಲುಪಿತು. ಕಳೆದ ಮೇ ತಿಂಗಳಲ್ಲಿ ಉಡುಪಿಯಲ್ಲಿಯೂ ಉತ್ಸವ ಇತ್ತು. ಸದ್ಯ ಮಂಗಳೂರಿನಲ್ಲಿ ನಡೆದದ್ದು ನಾಲ್ಕನೆಯದು. ಹರ್ಷ ಕುಮಾರ್ ಕುಗ್ವೆ, ಕಿರಣ್ ಕುಮಾರ್ ಮಾರಶೆಟ್ಟಿಹಳ್ಳಿ, ಪ್ರತಿಭಾ ಸಾಗರ, ಹಿರಿಯರಾದ ಕೆ.ಫಣಿರಾಜ್, ಸುಮಾ, ಉಡುಪಿಯ ಬಲ್ಲಾಳ್ ಅವರು, ಸುಮಾ, ಹಾಸನದ ರೋಹಿತ್ ಇಂತಹ ಅನೇಕ ಮಂದಿ (ಕೆಲವರ ಹೆಸರು ಇಲ್ಲಿ ಬಿಟ್ಟಿರಬಹುದು) ಈ ಹಬ್ಬಗಳನ್ನು ಯಶಸ್ವಿಯಾಗಿ ಆಯೋಜಿಸುವುದರಲ್ಲಿ ಪರಿಶ್ರಮ ಪಟ್ಟಿದ್ದಾರೆ.

whatsapp-image-2016-09-25-at-09-40-35

ನಾಲ್ಕೂ ಹಬ್ಬಗಳಲ್ಲಿ ಸರಾಸರಿ 50-60 ಮಂದಿ ಪಾಲ್ಗೊಂಡರು. ಹಾಗಂತ ಇಲ್ಲಿ ಬರುವವರೆಲ್ಲಾ ಸಿನಿ ಪ್ರಿಯರು ಅಥವಾ ಸಿನಿಮಾ ಬಗ್ಗೆ ಆಸಕ್ತಿ ಉಳ್ಳವರು ಎಂದಷ್ಟೇ ಹೇಳಿದರೆ ನ್ಯಾಯ ಸಲ್ಲಿಸಿದಂತಾಗುವುದಿಲ್ಲ. ಎಲ್ಲಾ ಜನಪರ ಮನಸುಗಳು ಬಯಸುವ ಬದಲಾವಣೆಗೆ ಸಿನಿಮಾಗಳು ಬಹುಮುಖ್ಯ ಮಾಧ್ಯಮ ಎಂದು ನಂಬಿರುವವರು ಹಾಗೂ ಗೆಳೆಯರೊಂದಿಗೆ ಸಿನಿಮಾ ನೋಡುವ ಕ್ರಿಯೆಯೇ ಒಂದು ವಿಶೇಷ ಎಂದು ತಿಳಿದುಕೊಂಡವರು.

ಮಲಯಾಳಂನ ಜಯನ್ ಚೇರಿಯನ್ ನಿರ್ದೇಶಿದಿ ಪಾಪಿಲಾನ್ ಬುದ್ಧ ಸಿನಿಮಾ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು. ಸಿನಿಮಾ ಒಂದು ವಿಷಾದದ ನಿಶಬ್ದದೊಂದಿಗೆ ಮುಗಿಯುತ್ತದೆ. ನಿರ್ದೇಶಕನ ಯಶಸ್ಸು ಎಂದರೆ, ಪ್ರೇಕ್ಷಕರು ಕೂಡ ಅದೇ ನಿಶಬ್ದವನ್ನು ಮತ್ತಷ್ಟು ಕಾಲ ಕೊಂಡೊಯ್ಯುತ್ತಾರೆ. ಸಿನಿಮಾ ನೋಡಿ ಮಲಗಿದವರಿಗೆ ರಾತ್ರಿ ಅಸ್ಪಷ್ಟ ಕನಸುಗಳಲ್ಲಿ ಅದೇ ಸಿನಿಮಾದ ದೃಶ್ಯಗಳು ಬಂದಿದ್ದೂ ಸುಳ್ಳಲ್ಲ. ಮರಾಠಿ ಸಿನಿಮಾ ಸೈರಟ್ ನಿರ್ದೇಶಕ ನಾಗರಾಜ್ ಮಂಜುಳೆಯವರ ಈ ಮೊದಲ ಚಿತ್ರ ಫಂಡ್ರಿ ಕೂಡಾ ನೋಡುಗರನ್ನು ಹಿಡಿದಿಟ್ಟಿದ್ದು ಮಾತ್ರವಲ್ಲ, ಆwhatsapp-image-2016-09-25-at-09-12-17ತ್ಮಾವಲೋಕನ ಮಾಡಿಕೊಳ್ಳಿರೋ ಎಂಬಂತೆ ‘ಕಲ್ಲಲ್ಲಿ ಹೊಡೆದು’ ಹೇಳಿತು. To Kill a Mocking Bird, The Day after Everyday, Never Judge People by their Appearance – ಇವು ಭಾಗವಹಿಸಿದವರು ನೋಡಿದ ಇತರ ಚಿತ್ರಗಳು. ಜಾತಿ, ಲಿಂಗ ಹಾಗೂ ಬಣ್ಣದ ಕಾರಣಗಳಿಗಾಗಿ ಶೋಷಣೆಗೆ ತುತ್ತಾದವರ ಕತೆಗಳನ್ನು ಆಧರಿಸಿದ ಸಿನಿಮಾಗಳಿವು. ಕಾರ್ಯಕ್ರಮ ಆರಂಭವಾಗಿದ್ದು ನಂಗೇಲಿ ನಾಟಕದೊಂದಿಗೆ. ಚಿಂತಕ ಚಂದ್ರ ಪೂಜಾರಿ ಆರಂಭದ ಮಾತುಗಳನ್ನಾಡಿದರು.

ಮಂಗಳೂರು ಸಹಮತದ ಐವಾನ್ ಡಿಸಿಲ್ವಾ, ನಾದ, ವಾಣಿ, ಕಿಟ್ಟಣ್ಣ ಮತ್ತಿತರರು ಉತ್ಸಾಹದಿಂದ ಕಾರ್ಯಕ್ರಮ ಆಯೋಜಿಸಿದ್ದರು. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಮಾಡುವ ಉದ್ದೇಶ ಈ ಬಳಗದ ಸದಸ್ಯರದು.

ಫೋಟೋಗಳು: ಐವಾನ್ ಡಿಸಿಲ್ವಾ.

Leave a Reply

Your email address will not be published. Required fields are marked *