ಕಲ್ಯಾಣ ಕರ್ನಾಟಕದಲ್ಲೊಂದು ಜ್ಞಾನ ದಾಸೋಹ

-ಶ್ರೀಧರ ಪ್ರಭು

ಈಗಿನ ದಿನಮಾನದಲ್ಲಿ ಒಂದೊಳ್ಳೆ ಮೌಲಿಕ ಕಾರ್ಯಕ್ರಮ ಸಂಘಟಿಸುವುದಕ್ಕಿಂತ ಹೆಚ್ಚು ಕಷ್ಟದ ಕೆಲಸ ಇನ್ನೊಂದಿಲ್ಲ. ನೂರು ಜನ ಬರಬಹುದು ಎಂದುಕೊಂಡ ಕಡೆ ಇಪ್ಪತ್ತು ಜನ ಬಂದಿರುತ್ತಾರೆ. ಸರಕಾರದ ಕಾರ್ಯಕ್ರಮವಾಗಿದ್ದರಂತೂ ಹೆಚ್ಚಿನ ಜನ ಬರುವುದು ಪ್ರಯಾಣ ಭತ್ಯೆಗಾಗಿ. ಒಂದು ಬಾರಿ ಹೆಸರು ನೋಂದಾಯಿಸಿ ಹೋದವರು ಗೋಷ್ಠಿಗಳ ಕಡೆಗೆ ತಲೆಯಿಟ್ಟೂ ಮಲಗುವುದಿಲ್ಲ. ಇನ್ನು ಈ ಗೋಷ್ಠಿಗಳು ಬಿಸಿಲು ನಾಡಿನಲ್ಲಿದ್ದರಂತೂ ಯಾವ ನರಪಿಳ್ಳೆಯೂ ಇತ್ತ ಸುಳಿಯುವುದಿಲ್ಲ.

ಇದೆಲ್ಲ ನನಗೆನಿಸಿದ್ದು ಮೊನ್ನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿಯ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ೮ ಮತ್ತು ೯ ನೇ ತಾರೀಕು ಬಾಬಾ ಸಾಹೇಬರ ವಿಚಾರಗಳ ಕುರಿತು ಎರಡು ದಿನಗಳ ವಿಚಾರ ಗೋಷ್ಠಿಗೆ ನನ್ನನ್ನು ಆಹ್ವಾನಿಸಿದಾಗ.

ಹೆಚ್ಚೆಂದರೆ ಹತ್ತಿಪ್ಪತ್ತು ಜನ ಕಾಟಾಚಾರಕ್ಕೆಂದು ಸೇರಿರುತ್ತಾರೆ. ಆದರೂ ಅವರ ಉತ್ಸಾಹಕ್ಕೆ ಭಂಗ ಬರಬಾರದು ಎಂದುಕೊಂಡು ಸ್ವಲ್ಪ ಮಟ್ಟಿನ ಅನಾರೋಗ್ಯವನ್ನೂ ಕಡೆಗಣಿಸಿ ರಣ ಬಿಸಿಲಿನ ಹೆದರಿಕೆಯನ್ನೂ ಮೆಟ್ಟಿನಿಂತು ಜೇವರ್ಗಿಗೆ ಬಂದಿಳಿದಿದ್ದೆ.

ಜೇವರ್ಗಿಯ ಯುವ ಪ್ರಾಧ್ಯಾಪಕರಾದ ಡಾ. ಕರಿಗುಳೇಶ್ವರ ಮತ್ತು ಅಲ್ಲಿನ ಗ್ರಂಥಾಲಯದ ವಿಜ್ಞಾನದ ಮುಖ್ಯಸ್ಥರಾದ ವಿನೋದ್ ಕುಮಾರ್ ಮತ್ತಿತರರ ಯುವಜನರ ತಂಡ ಜೇವರ್ಗಿಯಲ್ಲಿ ವಿಚಾರ ಸಂಕಿರಣವನ್ನು ನಿಜವಾಗಲೂ ರಾಷ್ಟ್ರ ಮಟ್ಟಕ್ಕೇರಿಸಿದ್ದರು. ಪ್ರತಿನಿಧಿಗಳ ಪ್ರಯಾಣ ವ್ಯವಸ್ಥೆ, ಊಟ, ಉಪಚಾರ, ವಸತಿsridhar prabhuಯಿಂದ ಮೊದಲ್ಗೊಂಡು ವಿಷಯ ಮಂಡನೆಯವರೆಗೆ ಯಾವ ವಿಚಾರದಲ್ಲಿ ಪರಿಗಣಿಸಿದರೂ ಇದನ್ನೊಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣವೆಂದು ಖಚಿತವಾಗಿ ಹೇಳಬಹುದಿತ್ತು.

ಎರಡು ದಿನ ಮುಂಚಿತವಾಗಿ ಸ್ವಯಂ ಚಾಲಿತ ಎಸ್ ಎಂ ಎಸ್ ಅಲರ್ಟ್ ವ್ಯವಸ್ಥೆ ಮಾಡಲಾಗಿ ಎಲ್ಲರಿಗೂ ಏಕ ಕಾಲಕ್ಕೆ ಸಂಕಿರಣದ ವೇಳಾಪಟ್ಟಿ ಲಭ್ಯವಿತ್ತು. ಹಾಗೆಯೆ, ಒಂದು ವೆಬ್ಸೈಟಿಗೆ ಸಹ ಚಾಲನೆ ನೀಡಿ ಆನ್ಲೈನ್ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಪ್ರಿಂಟರ್, ಪ್ರೊಜೆಕ್ಟರ್ ಮತ್ತು ಧ್ವನಿಮುದ್ರಕ ವ್ಯವಸ್ಥೆ ಜೊತೆಗೆ ವಾತಾನುಕೂಲ ಪಂಖೆಗಳು ನಮ್ಮ ಸ್ವಾಗತಕ್ಕೆ ಕಾದಿದ್ದವು. ಪ್ರಮುಖವಾಗಿ, ಯಾವ ಗೋಷ್ಠಿಯೂ ಸಮಯವನ್ನು ಮೀರಲಿಲ್ಲ. ಎಲ್ಲಾ ಗೋಷ್ಠಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಪಾಲ್ಗೊಂಡು ಪ್ರಬಂಧ ಮಂಡಿಸಿದರು.

ಪ್ರಬಂಧಮಂಡನೆಯಿಂದ ಮೊದಲ್ಗೊಂಡು ಇಡೀ ವಿಚಾರಗೋಷ್ಠಿಯನ್ನು ಆಂಗ್ಲಭಾಷೆಯಲ್ಲೇ ನಡೆಸಿಕೊಡಲಾಗಿತ್ತು. ನನ್ನಂಥವರು ಕೆಲವರು ಕನ್ನಡದಲ್ಲಿ ಮಾತಾಡಿದ್ದು ಬಿಟ್ಟರೆ ಹೈದರಾಬಾದ್ ಕರ್ನಾಟಕ ಹಳ್ಳಿಗಾಡಿನಿಂದ ಬಂದ ಬಹುತೇಕ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಲಲಿತ ಇಂಗ್ಲಿಷ್ ಭಾಷೆಯಲ್ಲೇ ಪ್ರಬಂಧ ಮಂಡಿಸಿದರು. ನಾನಿಲ್ಲಿ ಹೇಳಿದ್ದು ಕೇವಲ ೩೦-೪೦% ವಿಚಾರಗಳನ್ನು ಮಾತ್ರ. ಹೆಚ್ಚಿನದನ್ನೂ ನಾನೇ ಕಣ್ಣಾರೆ ನೋಡಿದ್ದೆನಾದರೂ ನಂಬಿಸಿಕೊಳ್ಳಲು ನನಗೇ ಸಾಧ್ಯವಾಗುತ್ತಿಲ್ಲ! ಹೆಚ್ಚು ಹೇಳಲು ಹೋದರೆ ನೀವು ಉತ್ಪ್ರೇಕ್ಷೆಯೆಂದುಕೊಂಡು ಬಿಡುವ ಸಂಭವವಿದೆ!

ಜೇವರ್ಗಿಯ ಜನಸಂಖ್ಯೆ ಹೆಚ್ಚೆಂದರೆ ಇಪ್ಪತ್ತೈದು ಸಾವಿರವಿರಬಹುದು. ಇಲ್ಲಿನ ಈ ಸರಕಾರಿ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಕಾಲೇಜಿನ ಅತ್ಯುನ್ನತ ಗುಣಮಟ್ಟದಿಂದಾಗಿ ಇಲ್ಲಿ ಯಾವುದೇ ಖಾಸಗಿ ಕಾಲೇಜು ಸಹ ನಡೆಯುತ್ತಿಲ್ಲ. ಯಾರೂ ಖಾಸಗಿ ಕಾಲೇಜುಗಳತ್ತ ಮೂಸಿಯೂ ನೋಡುತ್ತಿಲ್ಲ. ಅತ್ಯಂತ ಕಡಿಮೆ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನಿಟ್ಟುಕೊಂಡು ಕಾಲೇಜು ನಡೆಸುತ್ತಿರುವ ಪ್ರಾಚಾರ್ಯರು ಸಿಬ್ಬಂದಿಗೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾರೆ. ಸಿಬ್ಬಂದಿಯಲ್ಲಿ ಈರ್ಷೆ ಮತ್ತು ಕೀಳು ಭಾವನೆಗಳಿಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸಮಾಡುತ್ತಿದ್ದಾರೆ. ಬಾಬಾ ಸಾಹೇಬರ ಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿ ಮತ್ತು ಧರ್ಮಗಳವರು ಆಸಕ್ತಿಯಿಂದ ಪಾಲ್ಗೊಂಡು ದುಡಿಯುತ್ತಿದ್ದಾರೆ

ಹೈದರಾಬಾದ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಮಿಯನ್ ಆದಿತ್ಯ ಬಿಸ್ವಾಸ್ ಸಾಕಷ್ಟು ಆರ್ಥಿಕ ಸಹಕಾರ ನೀಡಿದ್ದಾರೆ ಮತ್ತು ಸ್ಥಳೀಯ ಮುಖಂಡರು ಊಟದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲವಕ್ಕೂ ಹೆಚ್ಚಾಗಿ ಅಲ್ಲಿನ ವಿದ್ಯಾರ್ಥಿಗಳು ಹಗಲಿರುಳೂ ದುಡಿದು ವಿಚಾರ ಸಂಕಿರಣಕ್ಕೆ ಅದ್ಭುತ ಯಶಸ್ಸು ದೊರಕಿಸಿದ್ದಾರೆ.

ಇದೆಲ್ಲವನ್ನೂ ನೋಡಿದರೆ ಕಲ್ಯಾಣ ಕರ್ನಾಟದ ಕನಸು ಇಲ್ಲಿಂದಲೇ ನಿಜವಾಗುವಂತೆ ಭಾಸವಾಗುತ್ತದೆ!

ಅಂದ ಹಾಗೆ ನಿಮಗೊಂದು ವಿಶೇಷ ಗೊತ್ತಿರಲಿ. ಕಲಬುರಗಿ ಮತ್ತು ಜೇವರ್ಗಿಯ ದಾರಿಯಲ್ಲಿರುವ ಕಿರಣಗಿ ಎಂಬ ಪುಟ್ಟ ಗ್ರಾಮದ ಬಗ್ಗೆ ೧೯೬೨ ರಲ್ಲಿ ನಮ್ಮ ದೇಶದ ಮೇಲೆ ಚೀನಾ ಅಕ್ರಮಣವಾದಾಗ ನಿಜಲಿಂಗಪ್ಪನವರ ಸರಕಾರದಲ್ಲಿದ್ದ ಯುವ ಸಚಿವ ವೀರೇಂದ್ರ ಪಾಟೀಲರು ಈ ಗ್ರಾಮಕ್ಕೆ ಭೇಟಿಯಿತ್ತು ದೇಶಕ್ಕೆ ಸಹಾಯ ಮಾಡುವಂತೆ ಗ್ರಾಮಸ್ಥರನ್ನು ಕೋರಿದಾಗ, ಈ ಗ್ರಾಮದ ಪ್ರತಿಯೊಬ್ಬರೂ ತಮ್ಮ ಬಳಿಯಲ್ಲಿದ್ದ ಚಿನ್ನವೆಲ್ಲವನ್ನೂ ದೇಶಕ್ಕೆ ಧಾರೆಯೆರೆದು ಕೊಟ್ಟಿದ್ದರು!! ಹೀಗೆ ಈ ಒಂದೇ ಗ್ರಾಮದಿಂದ ನೂರು ತೊಲ ಬಂಗಾರವನ್ನು ದೇಶಕ್ಕಾಗಿ ನೀಡಿದ ಕೀರ್ತಿಗಾಗಿ ಕಿರಣಗಿಯನ್ನು ಅಂದಿನಿಂದ ಹೊನ್ನ ಕಿರಣಗಿ ಎಂದು ಕರೆಯಲಾಗುತ್ತದೆ!

ಅಣ್ಣ ಬಸವಣ್ಣನ ಅನುಭವ ಮಂಟಪದ ಖನಿ, ಬಂದೇನವಾಜರ ಕಾರುಣ್ಯದ ಬೀಡು, ವಿಜ್ಞಾನೇಶ್ವರನ ಜ್ಞಾನಸ್ಥಾನ, ಅಮೋಘವರ್ಷರ ವೈಭವದ ನಾಡು ಇನ್ನೆಷ್ಟು ಅದ್ಭುತಗಳನ್ನು ತನ್ನ ಗರ್ಭದಲ್ಲಿಟ್ಟು ಸಲಹುತ್ತಿದೆಯೋ ಬಲ್ಲವರ್ಯಾರು!!

One thought on “ಕಲ್ಯಾಣ ಕರ್ನಾಟಕದಲ್ಲೊಂದು ಜ್ಞಾನ ದಾಸೋಹ

  1. VINODKUMAR

    Respected Shridhar Prabhu Sir,

    Thank you very much for your valuable feedback/Article on our seminar. we are really inspired by your speech delivered on “Dr. B. R. Ambedkar and Future of India.” on behalf our college, we thank you for being part of the Two Days National Seminar.

    Reply

Leave a Reply

Your email address will not be published. Required fields are marked *