ನಡೆದರಷ್ಟೇ ಮೂಡುವುದು ಹೊಸ ದಾರಿ, ನುಡಿದರಷ್ಟೇ ಕೇಳುವುದು ಹೊಸ ಹಾಡು

ಬಿ.ಶ್ರೀಪಾದ ಭಟ್

ಎಲ್ಲವೂ ಆಗಿ ಹೋಗಿದೆ, ಮತ್ತು ಎಲ್ಲವೂ ಉಳಿದಿದೆ

ಆದರೆ ನಾವು ಮುನ್ನುಗ್ಗುವದೇ ನಮ್ಮ ಕಾರ್ಯಭಾರ

ರಸ್ತೆಗಳನ್ನು ನಿರ್ಮಿಸುತ್ತಾ ಸಾಗುವುದು

ಸಮುದ್ರವನ್ನು ಸೀಳಿಕೊಂಡ ರಸ್ತೆಗಳು

ಪಯಣಿಗನೆ, ನಿನ್ನ ಹೆಜ್ಜೆ ಗುರುತುಗಳೇ ರಸ್ತೆ

ಮತ್ತೇನಿಲ್ಲ

ಪಯಣಿಗನೇ ಅಲ್ಲಿ ರಸ್ತೆಯೇ ಇಲ್ಲ

ನಡೆದರಷ್ಟೇ ಮೂಡುವುದು ಹೊಸ ದಾರಿ

ನಮ್ಮ ನಡೆಯೇ ರಸ್ತೆ

  • ಅಂಟೋನಿಯೋ ಮಕಾಡೋ

ನಮ್ಮ ವರ್ತಮಾನದ ಪರಿಸ್ಥಿತಿ ಎಷ್ಟು ಕ್ರೌರ್ಯದಿಂದ ತುಂಬಿಕೊಂಡಿದೆಯೆಂದರೆ ಪ್ರಸ್ತುತ ಸಂದರ್ಭದಲ್ಲಿ ಇಲ್ಲಿನ ಸಮಾಜ, ಸಂಸ್ಕೃತಿ ಕಂಡರಿಯದಷ್ಟು ಸಂಕೀರ್ಣವಾಗಿದೆ, ಜಟಿಲವಾಗಿದೆ, ವಿಕೃತಗೊಂಡಿದೆ. ಮುಂದಿನ ಹೆಜ್ಜೆ ಇಲ್ಲವೇನೋ ಎನ್ನುವ ಆತಂಕ ಕಾಡುತ್ತಿದೆ. ಇಲ್ಲಿ ಪರಸ್ಪರ ಮಾತುಕತೆ, ಸೌಹಾರ್ದ ಬದುಕು ಸಾಧ್ಯವಿಲ್ಲ ಎನ್ನುವ ವಿಷಮ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಸಂಘ ಪರಿವಾರ ಕೇಂದ್ರದಲ್ಲಿ ಮೋದಿ ನಾಯಕತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆರೆಸ್ಸಸ್ನ ಹಿಡನ್ ಅಜೆಂಡಾಗಳೆಲ್ಲಾ ಇಂದು ಓಪನ್ ಅಜೆಂಡಗಳಾಗಿ ಕ್ರಮೇಣ ಆಡಳಿತದ ಎಲ್ಲಾ ಹಂತಗಳಲ್ಲಿ samavesha-4ವ್ಯಾಪಿಸಿಕೊಳ್ಳುತ್ತಿದೆ. ಸಂಘ ಪರಿವಾರದ ದ್ವೇಷದ ಮತೀಯವಾದದ ರಾಜಕಾರಣಕ್ಕೆ ಮೊದಲ ಬಲಿ ಮುಸ್ಲಿಂ ಸಮುದಾಯ. ಸಂಘಿಗಳ ಬಹುಸಂಖ್ಯಾತವಾದದ ಫ್ಯಾಸಿಸಂನ ಫಲವಾಗಿ ಇಂದು ದಲಿತರು, ಆದಿವಾಸಿಗಳು ಮತ್ತು ಮುಸ್ಲಿಂ ಸಮುದಾಯದ ಮೇಲೆ ಸದಾ ಹಿಂಸಾತ್ಮಕ ಹಲ್ಲೆ, ದೌರ್ಜನ್ಯ, ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಪುರಾವೆಯಾಗಿ ನೂರಾರು ಉದಾಹರಣೆಗಳನ್ನು ಕೊಡಬಹುದು.

 
ಪ್ರತಿಯೊಂದು ಧರ್ಮದ ಜನರು ಬಹುಬೇಗ ಪರಸ್ಪರ ವಿಶ್ವಾಸ, ಸಹನೆ, ಸಂಯಮ, ವಿವೇಚನೆಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹಿಂದುತ್ವದ ಅಸಹನೆಗೆ, ಹಿಂಸೆಗೆ, ಪಶು ಪ್ರವೃತ್ತಿಗೆ ಮೊದಲ ಬಲಿಯಾಗುತ್ತಿರುವುದು ದಲಿತ-ಮುಸ್ಲಿಂ ಸಮುದಾಯ. ಆದರೆ ಸಂವಿಧಾನ ಸಮರ್ಪಣೆಯ ಸಂದರ್ಭದಲ್ಲಿಯೇ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿ, ಒಂದು ವೋಟು, ಒಂದು ಮೌಲ್ಯ ಎಂದು ತುಂಬಾ ಮಾರ್ಮಿಕವಾಗಿ ಹೇಳಿದ್ದರು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಚಲಾಯಿಸುವ ಹಕ್ಕಿರುತ್ತದೆ, ಅದು ಮೌಲ್ಯಯುತವಾಗಿರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದ ಮಾತುಗಳು ಇಂದಿಗೂ ಪ್ರಸ್ತುತ ಮತ್ತು ತುಂಬಾ ವಾಸ್ತವ. ಏಕೆಂದರೆ ದಲಿತರ, ತಳ ಸಮುದಾಯಗಳ ಸಹಕಾರವಿಲ್ಲದೆ ಇಂದು ಯಾವುದೇ ರಾಜಕೀಯ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ದಲಿತ ಸಮುದಾಯಕ್ಕೆ ಉಳಿದುಕೊಂಡಿರುವ ವೋಟಿನ ಮೌಲ್ಯವು ಅವರ ಪರವಾಗಿ ಕಟ್ಟ ಕಡೆಯ ಗುರಾಣಿಯಂತೆ ಬಳಕೆಯಾಗುತ್ತಿದೆ.

 

ಆದರೆ ಮುಸ್ಲಿಂ ಸಮುದಾಯಕ್ಕೆ ಈ ಅದೃಷ್ಟವಿಲ್ಲ. ಮುಸ್ಲಿಂರ ಮತಗಳ ಅವಶ್ಯಕತೆಯೇ ಇಲ್ಲದೆ ಬಿಜೆಪಿ ಸರ್ಕಾರವು 2014ರ ಕೇಂದ್ರ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಿತು ಮತ್ತು ಮುಸ್ಲಿಂ ಮತಗಳ ಬೆಂಬಲವಿಲ್ಲದೆಯೇ 2017ರ ಉ.ಪ್ರ. ಚುನಾವಣೆಯಲ್ಲಿ ದೈತ್ಯ ಬಹುಮತ ಪಡೆಯಿತು. ಸಂಘ ಪರಿವಾರದ 72 ಸಂಸದರಲ್ಲಿ ಒಬ್ಬ ಮುಸ್ಲಿಂ ಸಂಸದನಿಲ್ಲ (ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೇ ಇಳಿಸಿರಲಿಲ್ಲ), ಉ.ಪ್ರ. ವಿಧಾನಸಭೆಯ 315 ಬಿಜೆಪಿ ಶಾಸಕರರಲ್ಲಿ ಒಬ್ಬ ಮುಸ್ಲಿಂ ಶಾಸಕನಿಲ್ಲ (ಒಬ್ಬ ಮುಸ್ಲಿಂ ಅಭ್ಯಥರ್ಿಗೂ ಟಿಕೆಟ್ ಕೊಟ್ಟಿರಲಿಲ್ಲ). ಇಂದು ಪ್ರಜಾಪ್ರಭುತ್ವದ ಜೀವಂತಿಕೆಯನ್ನು, ಸಂಸದೀಯ ಪ್ರಜಾಪ್ರಭುತ್ವವನ್ನು ಚುನಾವಣ ಫಲಿತಾಂಶದ ಆಧಾರದಲ್ಲಿ ಆ ಮೂಲಕ ಸಂಸದರ, ಶಾಸಕರ ಸಂಖ್ಯಾಬಲದ ಆಧಾರದ ಮೇಲೆ, ಬಹುಮತದ ಮೇಲೆ ನಿರ್ಧರಿಸಲಾಗುತ್ತಿದೆ. ದಶಕಗಳ ಕಾಲ ಕಾಂಗ್ರೆಸ್ ನ ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿಯೇ ಗೆಟ್ಟೋಗಳಲ್ಲಿ ನರಳಬೇಕಾದ ಸ್ಥಿತಿಯಲ್ಲಿರುವ ಮುಸ್ಲಿಂ ಸಮುದಾಯವು ಆಗ ಕನಿಷ್ಠ ತನ್ನ ಆಸ್ತಿತ್ವವನ್ನು ಉಳಿಕೊಂಡಿತ್ತು. ಇಂದು ಸಂಘ ಪರಿವಾರದ ಹಿಂಸಾತ್ಮಕ ಹಿಂದುತ್ವದ ಹೆಸರಿನ ಆಕ್ರಮಣದಲ್ಲಿ ಆ ಓಲೈಕೆಯ ರಾಜಕಾರಣವೂ ಮುಗಿದ ಅಧ್ಯಾಯವಾಗಿದೆ ಮತ್ತು ಮುಸ್ಲಿಂರ ಆಸ್ತಿತ್ವವೇ ಇಂದು ಪ್ರಶ್ನಾರ್ಹವಾಗುತ್ತಿದೆ.

samavesha-1

2006ರ ಸಾಚಾರ್ ಕಮಿಟಿಯ ಅಧ್ಯಯನದ ಅನುಸಾರ 6-14 ವಯಸ್ಸಿನ ಶೇಕಡಾ 25% ಮುಸ್ಲಿಂ ಮಕ್ಕಳು ಶಾಲೆಗೆ ದಾಖಲು ಆಗುತ್ತಿಲ್ಲ ಅಥವಾ ಮಧ್ಯದಲ್ಲಿಯೇ ಶಾಲೆ ತೊರೆಯುತ್ತಿದ್ದಾರೆ. ಪದವಿ ಕಾಲೇಜುಗಳಲ್ಲಿ 30 ವಿದ್ಯಾರ್ಥಿಗಳ ಪೈಕಿ ಒಬ್ಬ ಮಾತ್ರ ಮುಸ್ಲಿಂ ಇರುತ್ತಾನೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ 50 ವಿದ್ಯಾಥರ್ಿಗಳ ಪೈಕಿ ಒಬ್ಬ ಮುಸ್ಲಿಂ ಇರುತ್ತಾನೆ. ಇತರೇ ಅಲ್ಪಸಂಖ್ಯಾತರಿಗೆ ನೀಡುವ ಸಾಲದಲಿ ಕಾಲು ಭಾಗಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯಕ್ಕೆ ದೊರಕುತ್ತಿದೆ. ಐಎಸ್ ಶ್ರೇಣಿಯಲ್ಲಿ ಶೇಕಡಾ 3, ಐಪಿಎಸ್ ಶ್ರೇಣಿಯಲ್ಲಿ ಶೇಕಡಾ 4, ಐಎಫ್ಎಸ್ ಶ್ರೇಣಿಯಲ್ಲಿ ಶೇಕಡಾ 1.8 ಪ್ರಮಾಣದಲ್ಲಿ ಮುಸ್ಲಿಂರಿದ್ದಾರೆ. ಭಾರತೀಯ ರೇಲ್ವೆಯಲ್ಲಿ 4.5, ಪೋಲೀಸ ಕಾನಸ್ಟೇಬಲ್ಗಳಲ್ಲಿ ಶೇಕಡಾ 6, ಆರೋಗ್ಯ ವಲಯದಲ್ಲಿ ಶೇಕಡಾ 4 ಪ್ರಮಾಣದಲ್ಲಿದ್ದಾರೆ. ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಮುಗಿಯದ ವ್ಯಥೆ.

 
ಒಂದು ದೇಶವು ತನ್ನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಮೇಲೆ ಆ ದೇಶವನ್ನು ಅರಿತುಕೊಳ್ಳಬಹುದು ಎಂದು ವಿವರಿಸಿದ ಗಾಂಧಿಯವರ ಆಶಯವನ್ನು ಸಂಪೂರ್ಣ ಧ್ವಂಸಗೊಳಿಸಿರುವ ಸಂಘ ಪರಿವಾರ ಮತ್ತು ಇಲ್ಲಿನ ಹಿಂದುತ್ವದ ರಾಜಕಾರಣದ ಫಲವಾಗಿ ಭಾರತದ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯವು ಇಂದು ಅನುಮಾನಿತರು ಮತ್ತು ಅವಮಾನಿತರಾಗಿ ಬದುಕುತ್ತಿದ್ದಾರೆ. ಈ ಆರೆಸ್ಸಸ್ನ ಸಾಂಸ್ಕೃತಿಕ ಹೆಜಮಿನಿಯ ಹಿಂಸಾತ್ಮಕ ರಾಜಕಾರಣದಲ್ಲಿ ಮತ್ತು ಬಹುಸಂಖ್ಯಾತವಾದದ ಬೆಂಬಲಿತ ನಾಗರಿಕರ ಅಸಹನೆ ಮತ್ತು ಕ್ರೌರ್ಯದಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ನಲುಗಿ ಹೋಗಿದೆ. ಘನತೆಯನ್ನೆ ಕಳೆದುಕೊಂಡು ಅನುಮಾನಿತರು ಮತ್ತು ಅವಮಾನಿತರಾಗಿ ಜೀವಿಸಬೇಕಾದಂತಹ ದುರಂತ ಪರಿಸ್ಥಿತಿಯಲ್ಲಿ ಇಂದು ಮುಸ್ಲಿಂ ಸಮುದಾಯ ಬದುಕುತ್ತಿದೆ.samavesha-2

 
ಈ ಪ್ರಭುತ್ವ-ವ್ಯವಸ್ಥೆಯ ಹಿಂಸಾತ್ಮಕ ದೌರ್ಜನ್ಯ ಮತ್ತು ಕ್ರೌರ್ಯಕ್ಕೆ ನಾವು ಹೇಗೆ ಪ್ರತಿಕ್ರಯಿಸಬೇಕು? ಹೇಗೆ ಮುಖಾಮುಖಿಯಾಗಬೇಕು? ಮೌನವಾಗಿ ಈ ವಿಷಬೆಂಕಿಯಲ್ಲಿ ಉರಿದು ಬೂದಿಯಾಗುವುದರ ಮೂಲಕವೇ? ಅಥವಾ ಕೇವಲ ಘೋಷಣೆ, ಆತ್ಮಸಾಕ್ಷಿಯಿಲ್ಲದ ಸೆಮಿನಾರಿನ ಬೌದ್ಧಿಕ ಕಸರತ್ತಿನ ಭಾಷಣಗಳ, ಸೈದ್ಧಾಂತಿಕ ತಿಕ್ಕಾಟಗಳ ಸ್ವರತಿಯಲ್ಲಿ ಕಳೆದುಹೋಗುವುದರ ಮೂಲಕವೇ? ಆದರೆ ಈ ಮಾದರಿಗಳು ನಮ್ಮನ್ನು ನಾವು ನಿಂತ ಸ್ಥಳದಲ್ಲಿಯೇ ಬಂದಿಸುತ್ತವೆ, ಸಿದ್ಧ ಮಾದರಿಗಳಿಗೆ ಸಾಂಸ್ಥೀಕರಣಗೊಳಿಸಿ ನಮ್ಮನ್ನು ಸುತ್ತಿದಲ್ಲೇ ಹೂತು ಹಾಕುತ್ತವೆ. ನಮ್ಮನ್ನು ಎಲ್ಲಿಯೂ ಮುಟ್ಟಿಸದ ಈ ಸವಕಲು ಮಾದರಿಗಳನ್ನು ಬಿಟ್ಟು ಇನ್ನೂ ಹಲವಾರು ದಾರಿಗಳಿರಬಹುದೇ ಎನ್ನುವ ಪ್ರಶ್ನೆ ಹಾಕಿಕೊಳ್ಳುತ್ತಾ ನಮಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಸಾಗಿದಾಗ ಕಡೆಗೂ ಸ್ವತಃ ಮುಸ್ಲಿಂ ಸಮುದಾಯವು ತನಗೆ ತಾನೇ ಈ ಕತ್ತಲ ದಾರಿಯಿಂದ ಬಿಡುಗಡೆ ಕಂಡುಕೊಳ್ಳಬೇಕು ಎನ್ನುವ ಅಸೀಮ ನಂಬಿಕೆ ಮಾತ್ರ ಇಂದು ಹುಲ್ಲುಕಡ್ಡಿಯ ಆಸರೆಯಾಗಿ ಉಳಿದುಕೊಂಡಿದ್ದು ವಿಪರ್ಯಾಸ. ಅಂತರಂಗದ ಮೂಲಭೂತವಾದ ಮತ್ತು ಬಹಿರಂಗ ಮತೀಯವಾದದ ಹಿಂಸೆಯಿಂದ ಮುಕ್ತಿ ಹೊಂದಲು ಒಂದು ಕ್ರಾಂತಿಯನ್ನು ನಿರೀಕ್ಷಿಸುವುದರ ಬದಲಾಗಿ, ನಾಯಕನ ಬರುವಿಕೆಗೆ ಕಾಯುವುದರ ಬದಲಾಗಿ ನಮಗೆ ನಾವೇ ಮೊದಲ ನಡಿಗೆಯನ್ನು ಆರಂಬಿಸಬೇಕು ಎನ್ನುವ ಅನಿವಾರ್ಯ ಪರಿಸ್ಥಿತಿಯಲ್ಲಿದೆ ಭಾರತದ ಮುಸ್ಲಿಂ ಸಮುದಾಯ.

 

samavesha-3
ಈ ತಾರ್ಕಿಕ ಜಿಜ್ಞಾಸೆಯ ಫಲವೇನೋ ಎಂಬಂತೆ ಸಿಪಿ(ಐ)ಎಂ ಪಕ್ಷದ ಅಂಗಪಕ್ಷವಾದ ಡಿವೈಎಸ್ಎಫ್(ಡಿಫಿ) ಸಂಘಟನೆ ತನ್ನ ಅನೇಕ ದ್ವಂದಗಳ, ತಾಕಲಾಟಗಳ ಮಂಥನದ ನಂತರ, ತನ್ನ ಮಡಿವಂತಿಕೆಯನ್ನು ಕಳಚಿಕೊಳ್ಳುತ್ತಿದೆಯನೋ ಎಂದು ಭರವಸೆ ಮೂಡಿಸುವಂತೆ ಮುಸ್ಲಿಂ ಯುವ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಿತು. ಕಮ್ಯುನಿಷ್ಟ್ ಪಕ್ಷವು ಧರ್ಮದ ಹೆಸರಿನಲ್ಲಿ ಸಮಾವೇಶ ನಡೆಸುವುದೇ ಒಂದು ಹಾಸ್ಯಾಸ್ಪದವಲ್ಲವೇ ಎನ್ನುವ ಪ್ರಶ್ನೆಗಳ ಬಾಣಗಳು ಎಲ್ಲಾ ದಿಕ್ಕುಗಳಿಂದಲೂ ಬಂದು ತೀಕ್ಷಣವಾಗಿ ಎದೆಗೆ ಬೀಳತೊಡಗಿದಾಗ ಡಿಫಿ ಸಂಘಟನೆ ಮುಸ್ಲಿಂ ಯುವ ಸಮಾವೇಶ ವು ಧಾರ್ಮಿಕ ಸಮ್ಮೇಳನ ಅಲ್ಲ ಅದು ಅನುಮಾನಿತರ ಮತ್ತು ಅವಮಾನಿತರ ದುಖ ದುಮ್ಮಾನಗಳ ಅಭಿವ್ಯಕ್ತಿಗೆ ಒಂದು ವೇದಿಕೆ ಮಾತ್ರ ಎಂದು ಸ್ಪಷ್ಟೀಕರಣವನ್ನು ನೀಡಿತು.

 

ಇಂದು ಅತಂತ್ರರಾಗಿರುವ ಮುಸ್ಲಿಂ ಸಮುದಾಯ ಮುರುಟಿಹೋದ ತನ್ನ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲು ತಮಗೆ ತಾವೇ ನಡೆಸುತ್ತಿರುವ ಒಂದು ಹುಡುಕಾಟ ಮತ್ತು ಈ ಹುಡುಕಾಟಕ್ಕೆ ಒಂದು ತೋಳಿನ ಆಸರೆಯಾಗಿ ಈ ಮುಸ್ಲಿಂ ಯುವ ಸಮಾವೇಶ ಎಂದು ಡಿಫಿ ಸಂಘಟನೆ ವಿವರಿಸಿತು. ಆದರೆ ತಮ್ಮ ಆಸ್ತಿತ್ವಕ್ಕೆ ಸಂಚಕಾರ ಬಂದಂತಿದೆ ಎಂಬಂತೆ ವತರ್ಿಸಿದ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಕಮ್ಯುನಿಷ್ಟ್ ಪಕ್ಷದ ಈ ಹೊಸದಾದ, ರಿಸ್ಕ್ ಎನ್ನಬಹುದಾದ ಆದರೆ ಅಷ್ಟೇ ಬಿಕ್ಕಟ್ಟಾದ ಪ್ರಯೋಗವನ್ನು ಹಿಗ್ಗಾಮುಗ್ಗ ಟೀಕಿಸಲಾರಂಬಿಸಿದ್ದು ಸಹಜವೇ ಆಗಿತ್ತು, ಏಕೆಂದರೆ ಧಾರ್ಮಿಕ ಮೂಲಭೂತವಾದಿಗಳಿಗೆ ತನ್ನ ಧರ್ಮದ ಪ್ರತಿಯೊಬ್ಬನೂ ತನ್ನ ಆಸ್ತಿ ಎನ್ನುವ ಯಜಮಾನಿಕೆ ಇರುತ್ತದೆ. ಇದನ್ನು ಕಳೆದುಕೊಳ್ಳಲು ಧಾರ್ಮಿಕ ಮೂಲಭೂತವಾದಿಗಳು ಬಯಸಲಾರರು. ಆದರೆ ಈ ಬಾರಿಯ ಯುವ ಮುಸ್ಲಿಂ ಸಮಾವೇಶದ ಕುರಿತಾದ ಇವರ ತಕರಾರು ಮತ್ತು ಟೀಕೆಗಳು ಸ್ವತಃ ದುರ್ಬಲಗೊಂಡಿದ್ದು ಮಾತ್ರ ವಿಶೇಷ.

 
ಆದರೆ ಈ ವೈರುಧ್ಯಗಳಿಗೆ ಸ್ವತಃ ಕಮ್ಯುನಿಷ್ಟ್ ಪಕ್ಷವೂ ಹೊಣೆ ಹೊರಬೇಕಾಗುತ್ತದೆ ಎನ್ನುವುದನ್ನು ಯಾವ ಪ್ರಜ್ಞಾವಂತನೂ ಅಲ್ಲಗೆಳೆಯಲಾರ. ದಶಕಗಳ ಕಾಲ ಜಾತಿ, ಧರ್ಮ ಆಧಾರಿತ ಚರ್ಚೆಯನ್ನು, ಸಂಘಟನೆಯನ್ನು ನಿರಂತರವಾಗಿ ಅಲ್ಲಗೆಳೆಯುತ್ತ, ತಿರಸ್ಕರಿಸುತ್ತ ಬಂದ ಕಮ್ಯನಿಷ್ಟ್ ಪಕ್ಷಗಳು ಜಾತಿ ಪದ್ಧತಿಯ ಸಂಕೀರ್ಣತೆಯನ್ನು ಕರಾರುವಕ್ಕಾಗಿ ಅರಿಯದಿರುವುದು ಅವರ ಸಂಘಟನೆಗೆ ದೊಡ್ಡ ಮಿತಿಯಾಗಿದ್ದು ಕಟು ವಾಸ್ತವ. ಇಂಡಿಯಾದ ಸಂದರ್ಭದಲ್ಲಿ ಅಸಮಾನತೆ ಎಂದರೆ ಅದು ಕೇವಲ ವರ್ಗ ಸಮಸ್ಯೆ ಮಾತ್ರವಲ್ಲ ಅದು ಜಾತಿ ಪದ್ಧತಿಯ ಕರಾಳ ಆಚರಣೆಯೂ ಸಹ ಎಂದು ಎಡ ಪಕ್ಷಗಳಿಗೆ ಆರಿವಾಗಲು 21ನೇ ಶತಮಾನದ ಅಂಬೇಡ್ಕರ್ವಾದದ ತೀಕ್ಷ್ಣ ವಿಮರ್ಶೆಗಳು ಕಾರಣವಾಗಬೇಕಾಯಿತು. ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ತಾರತಮ್ಯಕ್ಕೆ ಕಳೆದ ದಶಕಗಳಲ್ಲಿ ತಾನು ತೋರಿದ ನಿರ್ಲಕ್ಷ್ಯಕ್ಕೆ ಪ್ರಾಯಶ್ಚಿತವೇನೋ ಎಂಬಂತೆ ಒಂದು ಆತ್ಮಾವಲೋಕನದ ಉದಾರಹಣೆಯಂತಿತ್ತು ಈ ಡಿವೈಎಫ್ಐ ಸಂಘಟಿಸಿದ್ದ ಮುಸ್ಲಿಂ ಯುವ ಸಮಾವೇಶ.

 

pic-logo
ಕನವರಿಕೆ, ವ್ಯಸನಗಳನ್ನು ಹಿಂದಕ್ಕೆ ದೂಡಿ ಹೊಸ ದಾರಿಯ ಹುಡುಕಾಟಕ್ಕಾಗಿ ನಡೆಸಿದ ಈ ಆತ್ಮಾವಲೋಕನದ ಯುವ ಮುಸ್ಲಿಂ ಸಮಾವೇಶ ಎರಡು ದಿನಗಳ ಚರ್ಚೆ, ಸಂವಾದ, ಭಾಷಣಗಳ ಮೂಲಕ ಉತ್ತರ ಕಂಡುಕೊಂಡಿತೇ ಎನ್ನುವ ಪ್ರಶ್ನೆಗೆ ಪ್ರತ್ಯುತ್ತರವೂ ಸಹ ಕ್ಲೀಷೆಯಾಗಿರುತ್ತದೆ. ಏಕೆಂದರೆ ಯಾವುದೂ ಇಲ್ಲಿ ಸುಲಭವಲ್ಲ. ಆದರೆ ಉದಾತ್ತವಾದ ಮತ್ತು ಮಾನವೀಯ ಆಶಯಗಳನ್ನೊಳಗೊಂಡಿದ್ದ ಈ ಯುವ ಮುಸ್ಲಿಂ ಸಮಾವೇಶ ಎರಡು ದಿನದ ಕ್ರಮವಿಧಿಯನ್ನು ರೂಪಿಸುವಲ್ಲಿ ಕೊಂಚ ಜಡತ್ವವನ್ನು ಒಳಗೊಂಡಿತೇನೋ ಅನಿಸುತ್ತಿತ್ತು. ಅಲ್ಲಿ ಮುಸ್ಲಿಂ ಸಮುದಾಯದ ದು:ಖ ದುಮ್ಮಾನಗಳ ಅಭಿವ್ಯಕ್ತಿಗಿಂತಲೂ ವಿಚಾರ ಮಂಡನೆಗೆ ಹೆಚ್ಚಿನ ಒತ್ತು ನೀಡಿದಂತಿತ್ತು. ಆದರೆ ಈ ಮಿತಿಯನ್ನು ಮೀರಿ ಕೆಲವು ವಿಚಾರಪ್ರಚೋದಕ ಮತ್ತು ಆತ್ಮವಿಮರ್ಶೆಯ ಚರ್ಚೆಗಳು ನಡೆದಿದ್ದು ಮುದಗೊಳಿಸುವಂತಿತ್ತು. ಅದರಲ್ಲೂ ಇಸ್ಲಾಂ ಧರ್ಮ, ಕಟ್ಟಳೆಗಳು, ಸಾಂಸ್ಕೃತಿಕ ಅಸ್ಮಿತೆ, ಸಾಹಿತ್ಯ ಮತ್ತು ಅದರ ಎಲ್ಲಾ ಸಾಧಕಬಾಧಕ  ಗಳ ಕುರಿತಾಗಿ ಎರಡು ಗೋಷ್ಠಿಗಳಲ್ಲಿ ನಡೆದ ದೀರ್ಘ ಚರ್ಚೆ ಇಡೀ ಸಮ್ಮೇಳನದ ಹೈಲೈಟ್. ಇದು ಯುವ ಮುಸ್ಲಿಂ ಸಮುದಾಯಕ್ಕೆ ನಿಜಕ್ಕೂ ಒಂದು ಉತ್ತಮ ಪಾಠದಂತಿತ್ತು. ಆದರೆ ಇಡೀ ಎರಡು ದಿನಗಳ ಸಮಾವೇಶದಲ್ಲಿ ವೇದಿಕೆ ಮೇಲೆ, ಚರ್ಚೆಗಳಲ್ಲಿ ಮಹಿಳೆಯ ಅನುಪಸ್ತಿತಿ ಬಹುವಾಗಿ ಕಾಡುತ್ತಿತ್ತು ಮತ್ತು ಇಂದು ದೇಶಾದ್ಯಾಂತ ಅತಿಯಾಗಿ ಚರ್ಚಿತವಾಗುತ್ತಿರುವ ಮತ್ತು ಶೋಷಣೆಗೊಳಗಾಗಿರುವ ಮುಸ್ಲಿಂ ಮಹಿಳೆಯ ದುಖ ದುಮ್ಮಾನಗಳ ಅಭಿವ್ಯಕ್ತಿಗೆ ಅವಶ್ಯಕವಾದ ಮಹಿಳಾ ದನಿಯ ಕೊರತೆ ಒಂದು ಮಿತಿಯಾಗಿದ್ದಂತೂ ನಿಜ.

 
ರಾಗದ್ವೇಷಗಳಿಂದ ಕಲುಷಿತಗೊಳ್ಳದೆ ಮುಂದೆ ಹೇಗೆ ಮತ್ತು ಮುಂದೆ ಯಾರಿಗಾಗಿ ಎನ್ನುವ ಅನಿವಾರ್ಯ ಪ್ರಶ್ನೆಗಳನ್ನು ಕೇಳಿಕೊಳ್ಳುವಲ್ಲಿ ಸಧ್ಯಕ್ಕೆ ತಾತ್ಕಾಲಿಕವಾಗಿ ಈ ಯುವ ಮುಸ್ಲಿಂ ಸಮಾವೇಶ ಯಶಸ್ವಿಯಾಗಿದೆ. ಈ ಪ್ರಶ್ನೆಗಳನ್ನು ತನ್ನ ಮುಂದಿನ ಕ್ರಿಯೆಗಳ ಭಾಗವಾಗಿಸಿಕೊಂಡು ಉತ್ತರಕ್ಕೆ ತಡಕಾಡತೊಡಗಿದಾಗ ಮಾತ್ರ ಅದರ ಸಾರ್ಥಕತೆ ಗೋಚರವಾಗಲಾರಂಬಿಸುತ್ತದೆ. ಜನಪ್ರಿಯ ರಾಜಕೀಯ, ಧಾರ್ಮಿಕ ಸಿದ್ಧಾಂತಗಳಿಗೆ ಬಲಿಯಾಗದಂತೆ ತನ್ನ ಮುಸ್ಲಿಂ ಯುವಕರನ್ನು ಹೇಗೆ ರೂಪಿಸುತ್ತದೆ ಎನ್ನುವುದರ ಮೇಲೆ ಈ ಯುವ ಮುಸ್ಲಿಂ ಸಮಾವೇಶದ ಅರ್ಥಪೂರ್ಣತೆ ಅಡಗಿದೆ. ಸಾಮುದಾಯಿಕ ಫಲಶ್ರುತಿಗಳನ್ನು ನೀಡಬಲ್ಲಂತಹ ಕ್ರಿಯೆಗಳನ್ನು ಮುಂದಿನ ದಿನಗಳಲ್ಲಿ ಹೇಗೆ ಕಟ್ಟುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

 

Leave a Reply

Your email address will not be published. Required fields are marked *