Monthly Archives: November 2017

ಬಿಲ್ಲವರ ರಾಮಮಂದಿರ, ಧರ್ಮ ಸಂಸತ್ತು ಮತ್ತು ಧರ್ಮಸ್ಥಳ

Naveen Soorinje


ನವೀನ್ ಸೂರಿಂಜೆ


ಉಡುಪಿಯಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಧರ್ಮ ಸಂಸತ್ತು ನಡೆಯುತ್ತಿದೆ. ನವೆಂಬರ್ 24, 25, 26 ರಂದು ಮೂರು ದಿನಗಳ ಕಾಲ ಹಿಂದೂ ಧರ್ಮದ ಕುರಿತು ಕಾಲಕ್ಷೇಪ ನಡೆಯಲಿದೆ. ಈ ಧರ್ಮಸಂಸತ್ತಿನಲ್ಲಿ ರಾಮ ಮಂದಿರದ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ವಿಹಿಂಪ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಾಯ್ ತೊಗಾಡಿಯಾ ಈಗಾಗಲೇ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ರಾಮ ಮಂದಿರದ ಗೋಷ್ಠಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ಉಡುಪಿಗೂ ಸಂಬಂಧವೇ ಇಲ್ಲ. ಬಾಬರಿ ಮಸೀದಿ ಕೆಡವುದರ ಭಾಗವಾಗುವುದರ ಮೂಲಕ ರಾಮಮಂದಿರ ಪ್ರಕರಣದಲ್ಲಿ ಸಂಬಂಧ ಬೆಳೆಸಿದ್ದಾರಷ್ಟೆ. ಅದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರಿಗೂ ರಾಮ ಮಂದಿರಕ್ಕೂ ನೇರ ಸಂಬಂಧವಿದೆ. ಬಿಲ್ಲವರಿಗೆ ಮಾತ್ರವಲ್ಲ ಕರ್ನಾಟಕದ ಅಷ್ಟೂ ಬಿಲ್ಲವ ಜಾತಿಗಳು, ಉಪಜಾತಿಗಳಿಗೂ ರಾಮ ಮಂದಿರ ಮತ್ತು ಧರ್ಮ ಸಂಸತ್ತಿನ ಸಂಬಂಧವಿದೆ.

ರಾಮ ಮಂದಿರಕ್ಕಾಗಿನ ಧರ್ಮ ಸಂಸತ್ತನನ್ನು ವಿರೋಧಿಸುವುದರ ಮೂಲಕ ಬಿಲ್ಲವರು, ಈಡಿಗರು ತಮ್ಮ ಸ್ವಾಭಿಮಾನದ ರಾಮ ಮಂದಿರವನ್ನು ಮುನ್ನಲೆಗೆ ತರಬೇಕಿದೆ. ಹೊಸ ತಲೆಮಾರಿನ ಬಿಲ್ಲವ ಯುವಕರಿಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ.

ಈ ಧರ್ಮ ಸಂಸತ್ತಿನ ರೂವಾರಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳಾಗಿದ್ದರೆ ಆಕ್ಷೇಪವಿರಲಿಲ್ಲ. ಅವರು ಅದನ್ನು ಮಾಡಿಕೊಂಡೇ ಬಂದಿದ್ದಾರೆ. ಪೇಜಾವರ ಸ್ವಾಮೀಜಿ ಜೊತೆಗೆ ಮುಂಡಾಸುದಾರಿ ಧಾರ್ಮಿಕ ವ್ಯಕ್ತಿ ಕೂಡಾ ಧರ್ಮ ಸಂಸತ್ತಿನ ರುವಾರಿಯಾಗಿದ್ದಾರೆ. ಇದು ಬಿಲ್ಲವರ ಆತ್ಮಾಭಿಮಾನವನ್ನು ಜಾಗೃತಗೊಳಿಸಬೇಕಿದೆ.

ಅದು 1989 ನೇ ಇಸವಿ. ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಚಿಕ್ಕದಾದ ನಿತ್ಯಾನಂದ ಮಂದಿರವೊಂದನ್ನು ಪ್ರಾರಂಭಿಸುತ್ತಾರೆ. ನಾರಾಯಣ ಗುರುಗಳ ಪರಮ ಭಕ್ತರಾಗಿರುವ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ಕೇರಳದ ಶಿವಗಿರಿಯಲ್ಲಿ ಆಧ್ಯಾತ್ಮಿಕ ಪಾಂಡಿತ್ಯವನ್ನು ಪಡೆದಿದ್ದರು. ಆಗಷ್ಟೇ ಭೂಸುಧಾರಣೆಯ ಲಾಭವನ್ನು ಪಡೆಯುತ್ತಿದ್ದ ಬಿಲ್ಲವರಲ್ಲಿ ಶಿಕ್ಷಣ, ಉದ್ಯೋಗ, ಸಂಘಟನೆಯ ಜಾಗೃತಿಯನ್ನು ತನ್ನ ಪುಟ್ಟ ಆಶ್ರಮದ ಮೂಲಕ ಮಾಡುತ್ತಿದ್ದರು.

ಬಿಲ್ಲವರು ಬ್ರಾಹ್ಮಣರ ದೇವಸ್ಥಾನಗಳಿಗೆ ನಡೆದುಕೊಳ್ಳುವುದನ್ನು ಗಮನಿಸಿದ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು 2003 ರಲ್ಲಿ ಕನ್ಯಾಡಿಯಲ್ಲಿ ಬೃಹತ್ ರಾಮ ಮಂದಿರ ಕಟ್ಟಲು ಯೋಜನೆ ಸಿದ್ದಪಡಿಸುತ್ತಾರೆ. ಈ ರಾಮ ಮಂದಿರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಿಂದ ಕೇವಲ ನಾಲ್ಕು ಕಿಮಿ ದೂರದಲ್ಲಿರುತ್ತದೆ.

ಯಾವಾಗ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ವೈಭವಪೋತ ರಾಮಮಂದಿರವನ್ನು ನಿರ್ಮಿಸಲು ಯೋಜನೆ ಸಿದ್ದಪಡಿಸಿದ್ದಾರೆ ಎಂದು ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿಗೆ ತಿಳಿಯುತ್ತದೋ ಅಲ್ಲಿಂದ ಇನ್ನಿಲ್ಲದ ಅಡ್ಡಿಗಳು ಪ್ರಾರಂಭವಾಗುತ್ತವೆ. ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿ ಬಿಲ್ಲವರ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ತಿಳಿದ ಬಿಲ್ಲವ ಸಮಾಜದ ಪ್ರಮುಖರು, ಜನಾರ್ಧನ ಪೂಜಾರಿ, ವಸಂತ ಬಂಗೇರರಂತಹ ರಾಜಕಾರಣಿಗಳು ಸ್ವಾಮೀಜಿ ಜೊತೆ ನಿಲ್ಲುತ್ತಾರೆ.

ಯಾವಾಗ ಆತ್ಮಾನಂದ ಸರಸ್ವತಿ ಸ್ವಾಮೀಜಿಯ ರಾಮ ಮಂದಿರದ ಜೊತೆ ಜನಾರ್ಧನ ಪೂಜಾರಿಯಂತಹ ರಾಜಕಾರಣಿಗಳು ನಿಂತರೋ ಆಗ ಈ ಮುಂಡಾಸುಧಾರಿಗೆ ಆತ್ಮನಂದ ಸ್ವಾಮಿಯನ್ನು ದೈಹಿಕವಾಗಿ ಅಶಕ್ತನನ್ನಾಗಿಸುವುದು ಒಂದೇ ದಾರಿಯಾಗಿ ಉಳಿದಿತ್ತು. ಇಲ್ಲದೇ ಇದ್ದರೆ ತನ್ನ ಪ್ರತಿಷ್ಠಿತ, ಪ್ರಖ್ಯಾತ ದೇವಸ್ಥಾನದ ಆದಾಯಕ್ಕೆ ಬಿಲ್ಲವರ ರಾಮ ಮಂದಿರ ಅಡ್ಡಿಯಾಗುತ್ತಿತ್ತು. ಈ ಕಾರಣಕ್ಕಾಗಿ ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿ ಅಕ್ಷರಶ ಆತ್ಮಾನಂದ ಸರಸ್ವತಿ ಮೇಲೆ ದಾಳಿ ಮಾಡಿಸಿದರು. ಎಲ್ಲಾ ದಾಳಿಗಳ ಹೊರತಾಗಿಯೂ ಆತ್ಮಾನಂದ ಸರಸ್ವತಿ ಸ್ವಾಮೀಜಿ ದೃತಿಗೆಡಲಿಲ್ಲ. 2003 ರಲ್ಲಿ ಭವ್ಯವಾದ ಕನ್ಯಾಡಿ ರಾಮ ಮಂದಿರ ನಿರ್ಮಾಣವಾಯ್ತು. ಈಗಲೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಹೋಗುವ ದಾರಿಯಲ್ಲಿ ಸುಂದರವಾದ ಬಿಲ್ಲವರ ರಾಮ ಮಂದಿರ ಸಿಗುತ್ತದೆ.

ಇಂತಹ ಸಾಧಕ ಆತ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬಿಲ್ಲವರು, ಈಡಿಗರ 24 ಉಪಜಾತಿಗಳು ಕುಲಗುರುವಾಗಿ ಒಪ್ಪಿಕೊಳ್ಳುತ್ತದೆ. ಕನ್ನಡ ಕುಲಕೋಟಿ ಗೌರವಿಸುವ, ಕನ್ನಡದ ಮತ್ತೊಂದು ಹೆಸರು ಎಂದು ಬಣ್ಣಿಸಲಾಗುವ ವರನಟ ಡಾ ರಾಜ್ ಕುಮಾರ್ ಕೂಡಾ ಆತ್ಮಾನಂದ ಸರಸ್ವತಿ ಸ್ವಾಮೀಜಿ ಶಿಷ್ಯರಾಗಿದ್ದರು. ಡಾ ರಾಜ್ ಕುಮಾರ್ ಈ ರಾಮಮಂದಿರಕ್ಕೆ ಅಪಾರವಾದ ಕೊಡುಗೆಗಳನ್ನೂ ಕೊಟ್ಟಿದ್ದಾರೆ.

ಬಿಲ್ಲವರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ಯಾಡಿ ರಾಮ ಮಂದಿರ ಸ್ಥಾಪನೆಗೆ ಅಡ್ಡಿಯಾಗಿದ್ದ, ಬಿಲ್ಲವರ ಗುರುವೊತ್ತಮ ಆತ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬದುಕಿನುದ್ದಕ್ಕೂ ಇನ್ನಿಲ್ಲದಂತೆ ಕಾಡಿದ ವ್ಯಕ್ತಿಯ ನೇತೃತ್ವದಲ್ಲಿ ಉತ್ತರ ಪ್ರದೇಶದ ರಾಮಮಂದಿರಕ್ಕಾಗಿ ಉಡುಪಿಯಲ್ಲಿ ಧರ್ಮ ಸಂಸತ್ತು ನಡೆಯುತ್ತಿದೆ. ಉಡುಪಿ ಮಂಗಳೂರು ಬಿಲ್ಲವರು ಬಹುಸಂಖ್ಯಾತರಾಗಿರೋ ನಾಡು. ಧರ್ಮಸಂಸತ್ತಿನ ಬಹುತೇಕ ಸ್ವಯಂ ಸೇವಕರೂ ಬಿಲ್ಲವರೇ. 2003 ರಿಂದ 2017 ಬಹಳ ದೀರ್ಘ ಸಮಯವಲ್ಲ. ಶೋಷಿತ ಬಿಲ್ಲವ ಸಮುದಾಯವೊಂದು ಅಷ್ಟು ಬೇಗ ಇತಿಹಾಸವನ್ನು ಮರೆಯುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.

ಕಮ್ಯುನಿಷ್ಟರು, ಮದರ್ ತೆರೆಸಾ, ಕ್ರಿಶ್ಚಿಯನ್ನರು ಮತ್ತು ಪ್ರತಿಕ್ರಿಯಾತ್ಮಕ ಕೋಮುವಾದ

Naveen Soorinje


ನವೀನ್ ಸೂರಿಂಜೆ


ಆರ್.ಎಸ್.ಎಸ್ ಮತ್ತು ಪಿ.ಎಫ್.ಐ ಚರ್ಚೆಯ ವೇಳೆ ಹಲವು ಚಿಂತಕರು ಒಂದು ಸಾಮಾನ್ಯ ವಾದವನ್ನು ಮುಂದಿಡುತ್ತಾರೆ. ಪಿ.ಎಫ್.ಐ ಮತ್ತು ಆರ್.ಎಸ್.ಎಸ್ ಅನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ; ಪಿ.ಎಫ್.ಐ ನ ಕೋಮುವಾದ ಕ್ರಿಯೆಗೆ ಪ್ರತಿಕ್ರಿಯೆಯಷ್ಟೇ ಎನ್ನುವುದು. ಇದೇ ಚರ್ಚೆಯನ್ನು ಮುಂದುವರೆಸಿದಲ್ಲಿ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಹಾಗಾದರೆ ಕ್ರಿಶ್ಚಿಯನ್ ಸಮುದಾಯದಲ್ಲಿ ಯಾಕೆ ಆರ್.ಎಸ್.ಎಸ್ ಗೆ ಪ್ರತಿಕ್ರಿಯೆಯಾಗಿ ಪಿ.ಎಫ್.ಐ ರೀತಿಯ ಪ್ರತಿಕ್ರಿಯಾತ್ಮಕ ಸಂಘಟನೆಗಳು ಬೆಳೆದಿಲ್ಲ?

ಹಲವರಿಗೆ ತಿಳಿದಿರಲಿಕ್ಕಿಲ್ಲ. ಆರ್.ಎಸ್.ಎಸ್, ಪಿ.ಎಫ್.ಐ ರೀತಿಯಲ್ಲಿ ಕ್ರಿಶ್ಚಿಯನ್ನರಲ್ಲೂ ಒಂದು ಪ್ರತಿಗಾಮಿ, ಪ್ರತಿಕ್ರಿಯಾತ್ಮಕ ಸಂಘಟನೆ ಹುಟ್ಟಿಕೊಂಡಿತ್ತು. ಅದರ ಹೆಸರು ಸ್ಯಾಕ್ ! ಮಂಗಳೂರಿನಲ್ಲಿ ಚರ್ಚ್ ಗಳ ಮೇಲೆ ಭಜರಂಗದಳ ದಾಳಿ ಮಾಡಿದ ಸಂಧರ್ಭದಲ್ಲಿ ಈ ಸ್ಯಾಕ್ ಸಂಘಟನೆ ಸ್ವಲ್ಪ ಸದ್ದು ಮಾಡಿತ್ತು. ಆಗ ನೈತಿಕ ಪೊಲೀಸ್ ಗಿರಿಯೂ ಸುದ್ದಿಯಲ್ಲಿತ್ತು. ಹಿಂದೂ ಹುಡುಗಿಯರು ಮುಸ್ಲಿಂ ಯುವಕನ ಜೊತೆ ಇದ್ದರೆ ಭಜರಂಗದಳದ ದಾಳಿ, ಮುಸ್ಲಿಂ ಹುಡುಗಿ ಹಿಂದೂ ಹುಡುಗನ ಜೊತೆ ಇದ್ದರೆ ಪಿ.ಎಫ್.ಐ ದಾಳಿಗಳು ವ್ಯಾಪಕವಾಗಿ ನಡೆಯುತ್ತಿದ್ದವು. ಆಗ ಕ್ರಿಶ್ಚಿಯನ್ ಹುಡುಗಿಯರು ಹಿಂದೂ ಮುಸ್ಲಿಂ ಸಮುದಾಯದ ಹುಡುಗರ ಜೊತೆ ಇದ್ದರೆ ನಾವು ಸಹಿಸೋದಿಲ್ಲ ಎಂದು ಸ್ಯಾಕ್ ಹೇಳಿಕೊಂಡಿತ್ತು.

ಇವತ್ತು ಆರ್.ಎಸ್.ಎಸ್ ಅನ್ನು ನಿಷೇಧ ಮಾಡಬೇಕೆಂದು ಪಿ.ಎಫ್.ಐ ಆಗ್ರಹಿಸಿದರೆ, ಪಿ.ಎಫ್.ಐ ಅನ್ನು ನಿಷೇದಿಸಬೇಕು ಎಂದು ಆರ್.ಎಸ್.ಎಸ್ ಆಗ್ರಹಿಸುತ್ತಿದೆ. ಈ ಎರಡೂ ಸಂಘಟನೆಗಳು ನಿಯಂತ್ರಣಕ್ಕೆ ಅರ್ಹವಾಗಿವೆ ಎಂದು ಪ್ರಗತಿಪರರ ವಾದವಾಗಿರುವಂತದ್ದು. ಆದರೆ ಸ್ಯಾಕ್ ಅನ್ನು ನಿಷೇದಿಸಬೇಕು ಎಂದು ಯಾರೂ ಆಗ್ರಹಿಸುವ ಪ್ರಮೇಯವೇ ಬಂದಿಲ್ಲ. ಅದಕ್ಕೆ ಕಾರಣ ಕ್ರಿಶ್ಚಿಯನ್ ಸಮುದಾಯದಲ್ಲಿ ಸಹಜವಾಗಿಯೇ ಇರುವ ಆಧುನಿಕತೆ, ಶಿಸ್ತು, ಸ್ವನಿಯಂತ್ರಣ ಮತ್ತು ಮಾನವಪ್ರೇಮ. ಅಂತಹ ಅದಮ್ಯ ಜೀವಪ್ರೇಮ ಮತ್ತು ಶಿಸ್ತಿಗೆ ಕಾರಣ ಅಲ್ಲಿ ಆಗಿಹೋಗಿರುವ ಮದರ್ ತೆರೇಸಾರಂತಹ ಅಸಂಖ್ಯ ಅಸಂಖ್ಯ ಮಾನವ ಪ್ರೇಮಿಗಳು.

ಕಲ್ಲಡ್ಕ ಪ್ರಭಾಕರ ಭಟ್ಟ ಜಗದೀಶ ಕಾರಂತ ಸೇರಿದಂತೆ ಯಾವುದೇ ಹಿಂದುತ್ವವಾದಿಗಳ ಭಾಷಣ ಕೇಳಿದಲ್ಲಿ ಅಲ್ಲೊಂದು ವಾಕ್ಯ ಬರುತ್ತದೆ. ಮುಸ್ಲೀಮರ ರೀಚಾರ್ಜ್ ಅಂಗಡಿಯಲ್ಲಿ ಮೊಬೈಲ್ ರೀಚಾರ್ಜ್ ಮಾಡಬೇಡಿ, ಹಿಂದೂಗಳ ಗೂಡಂಗಡಿಯಲ್ಲಿ ಮುಸ್ಲೀಮರನ್ನು ಹೆಚ್ಚು ಹೊತ್ತು ನಿಲ್ಲಿಸಬೇಡಿ ಎಂಬ ಕ್ಷುಲ್ಲಕ ಮಾತುಗಳು ಸಾಮಾನ್ಯ. ಆದರೆ ಚರ್ಚ್ ದಾಳಿಯ ಸಂಧರ್ಭದಲ್ಲಿ ಇಳಿ ವಯಸ್ಸಿನ ಸನ್ಯಾಸಿನಿಯರ ಮೇಲೆ ಬಾಸುಂಡೆ ಬರುವಂತೆ ಬಾರಿಸಿದರೂ ಅನಾಥಾಲಯಗಳಲ್ಲಿ ಹಿಂದೂಗಳ ಸೇವೆ ಮಾಡಬೇಡಿ, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಬೇಡಿ, ಬುದ್ದಿಮಾಂದ್ಯ ಹಿಂದೂ ಮಕ್ಕಳಿಗೆ ಉಚಿತ ವಿದ್ಯಾಬ್ಯಾಸ ಕೊಡಬೇಡಿ ಎಂಬ ಮಾತುಗಳು ಎಲ್ಲೂ ಕೇಳಿಬರಲಿಲ್ಲ. ಇಂತಹ ಸೇವಾ ಮನೋಭಾವವೇ ಆ ಸಮುದಾಯವನ್ನು ಹಲವು ಸಂಕಟಗಳಿಂದ ಪಾರುಮಾಡಿದೆ.

ಚರ್ಚ್ ಗಳ ಮೇಲೆ ದಾಳಿ ನಡೆದಾಗ ಬೆರಳೆಣಿಕೆಯ ಹುಡುಗರು ಕಲ್ಲು ತೂರಾಟ ನಡೆಸಿದ್ದು ಬಿಟ್ಟರೆ ಕ್ರಿಶ್ಚಿಯನ್ನರು ಪ್ರತಿದಾಳಿಗಿಳಿಯಲಿಲ್ಲ. ದಾಳಿಗೊಳಗಾದ ಚರ್ಚ್ ಗಳ ಜಾಗದಲ್ಲಿ ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಕಲ್ಪಿಸಿಕೊಂಡರೆ ದಕ್ಷಿಣ ಕನ್ನಡದ ಸ್ಥಿತಿ ಊಹಿಸಲೂ ಅಸಾದ್ಯವಾಗಿರುತಿತ್ತು. ಅಲ್ಲಿವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ನರು ಮೊದಲ ಬಾರಿಗೆ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಕೆಲವರು ಕಲ್ಲು ತೂರಾಟ ನಡೆಸಿದ್ದರೂ ಯಾವುದೇ ಚರ್ಚ್ ನ ಮುಖ್ಯಸ್ಥರು ಅದನ್ನು ಬೆಂಬಲಿಸಲಿಲ್ಲ ಮತ್ತು ಮುಂದುವರಿಸಲು ಬಿಡಲಿಲ್ಲ.

ಅವತ್ತು ಚರ್ಚ್ ದಾಳಿ ಸಂಬಂಧ ಬಿಷಪ್ ಅಲೋಶಿಯಸ್ ಪ್ಲಾವ್ ಡಿಸೋಜಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಅಷ್ಟರಲ್ಲಿ ಬಿಜೈ ಚರ್ಚ್ ನೊಳಗೆ ಪೊಲೀಸರು ನುಗ್ಗುತ್ತಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣ ಬೈಕನ್ನೇರಿ ಹೊರಟೆ. ಮಾಜಿ ಸಚಿವ ನಾಗರಾಜ ಶೆಟ್ಟರ ಮನೆ ದಾಟುತ್ತಿದ್ದಂತೆ ಚರ್ಚ್ ಬಳಿಯ ಸ್ಮಶಾನದಲ್ಲಿ ಒಂದು ಗುಂಪು ಕಲ್ಲು ತೂರಾಟ ನಡೆಸಲಾರಂಬಿಸಿತ್ತು. ಕಲ್ಲು ನೇರವಾಗಿ ನನ್ನ ಬೈಕ್ ಡೂಂಗೆ ಬಿದ್ದು ಡೂಮ್ ಪುಡಿಯಾಯ್ತು. ಇದರ ಮಾಹಿತಿ ತಿಳಿದ ಕಿರಿಯ ಫಾದರ್ ಒಬ್ಬರು ನನಗೆ ಕರೆ ಮಾಡಿ ಬೈಕ್ ಡ್ಯಾಮೇಜ್ ನ ಪರಿಹಾರ ಕೊಡುತ್ತೇನೆ ಎಂದಿದ್ದಲ್ಲದೆ ಯುವಕರ ಕೃತ್ಯಕ್ಕೆ ಕ್ಷಮೆ ಕೇಳಿದ್ದರು. “ಮೊದಲು ಕ್ರಿಶ್ಚಿಯನ್ ಯುವಕರಿಗೆ ಪ್ರತಿಭಟನೆಯನ್ನು ಕಲಿಸಬೇಕು. ಮೊದಲ ಬಾರಿ ಬೀದಿಗಿಳಿದಿರೋದ್ರಿಂದ ಹೀಗಾಗಿದೆ. ಸ್ವಲ್ಪ ಎಡಪಂಥೀಯರ ಜೊತೆ ನಿಮ್ಮ ಯುವಕರನ್ನು ಬೆರೆಸಿ” ಅಂದಿದ್ದೆ.

ಆ ನಂತರದ ಬೆಳವಣಿಗೆಯಲ್ಲಿ ಚರ್ಚ್ ದಾಳಿ ಸಂತ್ರಸ್ತರ ಜೊತೆ ನಿಂತಿದ್ದು ಎಡಪಂಥೀಯರು ಮಾತ್ರ. ಕ್ರಿಶ್ಚಿಯನ್ ಸಮುದಾಯವನ್ನು ಅಭದ್ರತೆಯಿಂದ ಹೊರತರುವ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಆಗ್ರಹಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಮಾಡುವ ಜವಾಬ್ದಾರಿ ಎಡಪಂಥೀಯರದ್ದೇ ಆಗಿದೆ. ಈ ಸಂಧರ್ಭದಲ್ಲಿ ಕ್ರಿಶ್ಚಿಯನ್ನರ ಅತ್ಯುನ್ನತ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನುಡಿದ ‘ಕಮ್ಯುನಿಷ್ಟರು ಕ್ರಿಶ್ಚಿಯನ್ನರಂತೆಯೇ ಚಿಂತಿಸುತ್ತಾರೆ’ ಎಂಬ ಮಾತುಗಳು ಉಲ್ಲೇಖನೀಯ. ಈ ಹಿನ್ನಲೆಯಲ್ಲಿ  ಕ್ರಿಶ್ಚಿಯನ್ ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ನವಂಬರ್ ೬ ರಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಮದರ್ ತೆರೇಸಾ ವಿಚಾರ ವೇದಿಕೆ ಅಶ್ರಯದಲ್ಲಿ ನಡೆಯಲಿರುವ ಮದರ್ ತೆರೆಸಾ ನೆನಪಿನ ಕಾರ್ಯಕ್ರಮ ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಂಡಿದೆ.