ತ್ರಿಪುರಾದಲ್ಲಿ ಬುದ್ದ, ಭೀಮರ ಕಮ್ಯೂನಿಸಂ : ರಕ್ತಚರಿತೆಯಲ್ಲಿ ಚಿರಸ್ಥಾಯಿ ಸೌಹಾರ್ದದ ಹೆಸರುಗಳು

Naveen Soorinje


ನವೀನ್ ಸೂರಿಂಜೆ


ತ್ರಿಪುರಾದಲ್ಲಿ ಎಡಪಂಥೀಯರ ಮೇಲೆ ಇಷ್ಟೊಂದು ರೀತಿಯ ದಾಳಿ ನಡೆಯುತ್ತಿದ್ದರೂ ಅವರ ಸಹನೆ ಅಚ್ಚರಿ ಮೂಡಿಸುತ್ತೆ. ಬುದ್ದ, ಅಂಬೇಡ್ಕರ್ ಜೊತೆಗೆ ಲೆನಿನ್ ಕ್ರಾಂತಿಗೆ ಮುಂದಾದರೆ ಬಹುಶಃ ತ್ರಿಪುರಾದ ಕಮ್ಯುನಿಷ್ಟರಾಗಬಹುದು. ಐಪಿಎಫ್’ಟಿ, ಎನ್.ಎಲ್.ಎಫ್.ಟಿ, ಎಟಿಟಿಎಫ್ ದಾಳಿ ಇವತ್ತಿನದ್ದಲ್ಲ. ಈಗಿನದ್ದಕ್ಕಿಂತಲೂ ಕರಾಳ ದಾಳಿ ಪ್ರತ್ಯೇಕತಾವಾದಿಗಳಿಂದ ನಡೆದಿತ್ತು. ಈಗ ನಡೆಯುತ್ತಿರೋದು ಪ್ರಭುತ್ವದ ಜೊತೆಗೂಡಿದ ಬಂದೂಕುದಾರಿಗಳ ದಾಳಿ. ವಿಚಿತ್ರ ಎಂದರೆ ಬುಡಕಟ್ಟು ಪ್ರತ್ಯೇಕ ರಾಜ್ಯ ಅಥವಾ ದೇಶಕ್ಕಾಗಿ ನಡೆಯುತ್ತಿದ್ದ ಬುಡಕಟ್ಟುಗಳ ಬಾಂಗ್ಲಾ ಪ್ರೇರಿತ ಸಶಸ್ತ್ರ ಹೋರಾಟಕ್ಕೆ ಬಲಿಯಾಗಿರೋದು ಎಡಪಂಥದ ಬುಡಕಟ್ಟು ನಾಯಕರೇ ಅತ್ಯಧಿಕ. ಬುಡಕಟ್ಟು ಅಲ್ಲದ ಮುಸ್ಲೀಮರು ಮತ್ತು ದಲಿತರನ್ನು ಬುಡಕಟ್ಟು ಉಗ್ರರು ಕೊಲೆ ಮಾಡಲು ಬಂದಾಗ ಅದಕ್ಕೆ ಎದುರು ನಿಂತು ಕೊಲೆಯಾದವರೆಲ್ಲರೂ ಸಿಪಿಐಎಂ ನ ಬುಡಕಟ್ಟು ನಾಯಕರು, ಶಾಸಕರು, ಸಚಿವರು. ಇದಕ್ಕೊಂದು ಧೀರ್ಘ ರಕ್ತಸಿಕ್ತ ಇತಿಹಾಸವೇ ಇದೆ.

ಅದು 1996 ಜನವರಿ ತಿಂಗಳು. ಸಿಮ್ನ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಶಾಸಕ ಪ್ರಣಬ್ ದೆಬ್ಬರ್ಮಾರನ್ನು ಹಾಡುಹಗಲೇ ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ಭಯೋತ್ಪಾದನೆ ಮಾಡುತ್ತಿರುವ ಪ್ರತ್ಯೇಕತಾವಾದಿಗಳು ಅಪಹರಣ ಮಾಡಿದರು. ಬರೋಬ್ಬರಿ ಹನ್ನೊಂದು ತಿಂಗಳ ಬಳಿಕ ಪ್ರಣಬ್ ದೆಬ್ಬರ್ಮಾ ತಪ್ಪಿಸಿಕೊಂಡು ಬಂದರು.

1996 ಮೇ 12 ರಂದು ಎಟಿಟಿಎಫ್ ( ಆಲ್ ತ್ರಿಪುರ ಟೈಗರ್ಸ್ ಫೋರ್ಸ್) ಬಂದೂಕುದಾರಿಗಳು ಬುಡಕಟ್ಟು ಅಲ್ಲದ ದಲಿತರ ಮೇಲೆ ದಾಳಿ ಮಾಡುತ್ತಾರೆ. ಅದನ್ನು ತಡೆಯಲು ಹೋದ ಸಿಪಿಐಎಂ ಹಿರಿಯ ಮುಖಂಡರೂ ಆಗಿರುವ ಬುಡಕಟ್ಟು ಸಮುದಾಯದ ಚಂದ್ರ ಮೋಹನ್ ದೆಬ್ಬರ್ಮಾ ಕೊಲೆಗೀಡಾಗುತ್ತಾರೆ. ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ನಡೆದ ಹೋರಾಟದಲ್ಲಿ ಬುಡಕಟ್ಟು ಅಲ್ಲದ ಏಳು ಜನರನ್ನು ರಕ್ಷಿಸಲು ಸಿಪಿಐಎಂ ನ ಬುಡಕಟ್ಟು ನಾಯಕ ಪ್ರಾಣತ್ಯಾಗ ಮಾಡುತ್ತಾರೆ.

ವಿಪರ್ಯಾಸ ಎಂದರೆ 1997 ಮೇ ಯವರೆಗೆ ಒಟ್ಟು ಒಂದು 300 ಜನ ಸಿಪಿಐಎಂ ಅಥವಾ ಸಿಪಿಐಎಂ ಬೆಂಬಲಿತ ಬುಡಕಟ್ಟು ಜನರು ಪ್ರತ್ಯೇಕತಾವಾದಿಗಳ ದಾಳಿಗೆ ಒಳಗಾಗಿ ಸತ್ತಿದ್ದಾರೆ ಎಂದು ಸರಕಾರ ಅಧಿಕೃತವಾಗಿ ಘೊಷಿಸಿತು.

ಅದು ತ್ರಿಪುರಾದ ಚಮನು ಗ್ರಾಮ. ಟೀ ಎಸ್ಟೇಟ್ ಮತ್ತು ಕಾಡಂಚಿನ ಕೃಷಿಯಲ್ಲಿ ತೊಡಗಿಕೊಂಡಿದ್ದ ಅಸಂಘಟಿತ ಕೃಷಿ ಕಾರ್ಮಿಕರನ್ನು ಎಡಪಂಥೀಯ ಕಾರ್ಮಿಕ ಚಳುವಳಿ ಸಂಘಟಿಸುತ್ತಿತ್ತು. 1997 ಜೂನ್ 09 ರಂದು ಎನ್.ಎಲ್.ಎಫ್.ಟಿ ಪ್ರತ್ಯೇಕತಾವಾದಿಗಳು ಗುಡ್ಡದ ತುದಿಯಿಂದ ಗೆರಿಲ್ಲಾ ಮಾದರಿಯಲ್ಲಿ ಎರಡು ಬಾರಿ ದಾಳಿ ನಡೆಸಿ ಚಮನು ಗ್ರಾಮದಲ್ಲಿ ಕಾರ್ಮಿಕ ಸಂಘಟನೆಯ 9 ಕಾರ್ಯಕರ್ತರನ್ನು ಬಲಿ ತೆಗೆದುಕೊಂಡಿತು. ಆ ಬಳಿಕ ನಡೆದ ಸಂಘರ್ಷದಲ್ಲಿ ಪ್ರತ್ಯೇಕತಾವಾದಿಗಳು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಕೊಲ್ಲುತ್ತಾರೆ.

ಅಕ್ಟೋಬರ್ 1998 ರಲ್ಲಿ ಎಟಿಟಿಎಫ್ ( ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್) ಉಗ್ರರು 34 ಸಿಪಿಐಎಂ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದರು. ಸಾವಿಗೀಡಾದವರಲ್ಲಿ ಇಬ್ಬರು ಸಿಪಿಐಎಂ ನ ಹಿರಿಯ ನಾಯಕರು. ಅದರಲ್ಲಿ ಒಬ್ಬರು ಸಿಪಿಐಎಂ ನ ಬುಡಕಟ್ಟು ನಾಯಕರೂ ಆಗಿದ್ದ ಮಾಜಿ ಶಾಸಕರು. ಈ ಘಟನೆಯ ಬಳಿಕವೂ ಸುಮಾರು 47 ಎಡಪಂಥದ ಬೆಂಬಲಿಗ ನಾಗರಿಕರನ್ನು ಎಟಿಟಿಎಫ್ ಉಗ್ರರು ಅಪಹರಿಸಿದರು.

1997 ಮಾರ್ಚ್ 20 ರಂದು ಸಿಪಿಐಎಂ ಹಿತೈಷಿ ಮಾಜ್ ಸಂತೋಷ್ ಪ್ರವಕರ್ ಮತ್ತು ನೈಕ್ ಕೋಟ್ ಶಿವಾಜಿ ತುಕಾರಾಂ ಎಂಬವರನ್ನು ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಕಾರ್ಯಕರ್ತರು ಗುಂಡಿಕ್ಕಿ ಕೊಲೆ ಮಾಡಿದರು.

1998 ರಲ್ಲಿ ತ್ರಿಪುರಾ ಸರಕಾರದ ಆರೋಗ್ಯ ಮತ್ತು ನಗರ ಅಭಿವೃದ್ದಿ ಸಚಿವರಾಗಿದ್ದ ಬಿಮಲ್ ಸಿನ್ಹರವರ ದತ್ತು ಸಹೋದರ ಬಿಕ್ರಂ ಸಿನ್ಹರನ್ನು ಎಟಿಟಿಎಫ್ ಉಗ್ರರು ಅಪಹರಿಸುತ್ತಾರೆ. ತನ್ನ ದತ್ತು ಸಹೋದರನನ್ನು ಬಿಡಿಸಿಕೊಂಡು ಬರಲು ಆರೋಗ್ಯ ಸಚಿವ ಬಿಮಲ್ ಸಿನ್ಹರು ಮಾತುಕತೆಗಾಗಿ ತನ್ನ ಮತ್ತೊಬ್ಬ ಸಹೋದರ ಬಿದ್ಯುತ್ ಸಿನ್ಹ ಜೊತೆ ಪ್ರತ್ಯೇಕತಾವಾದಿಗಳ ಅಡಗುತಾಣಕ್ಕೆ ತೆರಳುತ್ತಾರೆ. ಅವಾಂಗ ಘಾಟ್ ಬಳಿಯ ದಲೈ ನದಿ ಬಳಿಯ ತೀರದಲ್ಲಿ ಮಾತುಕತೆ ನಡೆಯುತ್ತದೆ. ದತ್ತು ಸಹೋದರನ ಬಿಡುಗಡೆಗೆ ಎಲ್ಲಾ ಷರತ್ತುಗಳಿಗೆ ಒಪ್ಪಲು ಸಿಪಿಐಎಂ ಸಚಿವ ಬಿಮಲ್ ಸಿನ್ಹ ಸಿದ್ದರಿದ್ದರೂ ಕಮ್ಯೂನಿಷ್ಠ್ ಸಿದ್ದಾಂತವನ್ನೇ ಬಿಡಬೇಕು ಮತ್ತು ಪ್ರದೇಶದಲ್ಲಿ ಸಂಘಟನೆ ಮಾಡಬಾರದು ಎಂಬ ಷರತ್ತಿಗೆ ಸಚಿವರು ಒಪ್ಪಲಿಲ್ಲ. ಕೊನೆಗೆ ಮಾರ್ಚ್ 31 ರಂದು ಎಟಿಟಿಎಫ್ ಉಗ್ರರು ಸಚಿವ ಬಿಮಲ್ ಸಿನ್ಹ ಮತ್ತು ಸಹೋದರ ಬಿದ್ಯುತ್ ಸಿನ್ಹರನ್ನು ಗುಂಡಿಕ್ಕಿ ಸಾಯಿಸುತ್ತಾರೆ.

ಇದಾದ ಬಳಿಕ ತ್ರಿಪುರಾ ಸರಕಾರವು ಕೇಂದ್ರ ಗೃಹ ಇಲಾಖೆಗೆ ನೀಡಿದ ಮಾಹಿತಿಯಂತೆ 1998 ರವರೆಗೆ ಪ್ರತ್ಯೇಕತಾವಾದಿಗಳು ಸಿಪಿಐಎಂ ಬೆಂಬಲಿಸುವ 800 ನಾಗರಿಕರ ಕೊಲೆ ಮಾಡಿದ್ದಾರೆ. ಅದರಲ್ಲಿ ಒಬ್ಬರು ಸಿಪಿಐಎಂ ಸರಕಾರದ ಆರೋಗ್ಯ ಸಚಿವರೂ ಸೇರಿದ್ದರು. ಅಲ್ಲಿಯವರೆಗೆ ಒಟ್ಟು 2000 ಜನರನ್ನು ಅಪಹರಿಸಲಾಗಿದ್ದು, ಅದರಲ್ಲಿ ಬಹುತೇಕರು ಹಿಂದಿರುಗಿ ಬಂದಿಲ್ಲ ಎಂದು ಘೊಷಿಸಲಾಯಿತು.

1998 ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಆರಂಭವಾಗಿ ಸೆಪ್ಟೆಂಬರ್ ವರೆಗೆ ಎನ್ ಎಲ್ ಎಫ್ ಟಿ ಮತ್ತು ಎಟಿಟಿಎಫ್ ತನ್ನ ಹತ್ಯಾಕಾಂಡವನ್ನು ನಡೆಸುತ್ತದೆ. 32 ಎಡ ಕಾರ್ಯಕರ್ತರನ್ನು ಈ ಅವಧಿಯಲ್ಲಿ ಪ್ರತ್ಯೇಕತಾವಾದಿ ಉಗ್ರರು ಕೊಲೆ ಮಾಡಿದ್ದರು. ಅದರಲ್ಲಿ ಸಿಪಿಐಎಂ ಹಿರಿಯ ಮುಖಂಡ ಅನಿಲ್ ಬೈದ್ಯ ಕೂಡಾ ಸೇರಿದ್ದಾರೆ. ಇದೇ ಅವಧಿಯಲ್ಲಿ 28 ಸಿಪಿಐಎಂ ಬೆಂಬಲಿತರನ್ನು ಎಟಿಟಿಎಫ್ ಒತ್ತೆಯಾಳಾಗಿ ಇರಿಸಿಕೊಂಡಿತು.

ಸಿಪಿಐಎಂ ನಾಯಕ ಕಿಶೋರ್ ದೆಬ್ಬರ್ಮಾ ಎಂಬವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಸಂಘರ್ಷ ನಡೆಸುತ್ತಿದ್ದ ಪ್ರತ್ಯೇಕತಾವಾದಿಗಳು ಸಕ್ರೀಯರಾಗಿದ್ದ ಪ್ರದೇಶದಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರರ ಮಧ್ಯೆ ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿದ್ದರು. ಇದು ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಗುರಿಯಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯ್ತು. ಈ ರೀತಿ ಹುತಾತ್ಮರಾದ ಎಡನಾಯಕ ಕಿಶೋರ್ ದೆಬ್ಬರ್ಮಾ ಸ್ಮರಣಾರ್ಥ 1998 ಆಗಸ್ಟ್ 24 ರಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಕ್ರಿಕೆಟ್ ಟೂರ್ನಮೆಂಟ್ ಅನ್ನು ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ನಡುವಿನ ಸೌಹಾರ್ಧದ ಕ್ರೀಡಾಕೂಟ ಎಂದು ಸಿಪಿಐಎಂ ಕರೆಯಿತು. ಈ ಕ್ರೀಡಾಕೂಟವನ್ನು ಗುರಿಯಾಗಿರಿಸಿ ಪ್ರತ್ಯೇಕತಾವಾದಿ ಉಗ್ರರು ದಾಳಿಯನ್ನು ನಡೆಸುತ್ತಾರೆ. ಎಡ ವಿದ್ಯಾರ್ಥಿ ಚಳುವಳಿಯಲ್ಲಿ ಸಕ್ರೀಯರಾಗಿದ್ದ ಹದಿನೇಳರ ಹರೆಯದ ಮಹಿಳಾ ಕ್ರಿಕೆಟರ್ ಕಾಜಲ್ ದೆಬ್ಬರ್ಮಾ ಮತ್ತು ಇಬ್ಬರನ್ನು ಎನ್ ಎಲ್ ಎಫ್ ಟಿ ಬಂದೂಕುದಾರಿಗಳು ಗುಂಡಿಟ್ಟು ಕೊಲೆ ಮಾಡಿದರು. ಇದು ಇಂದಿಗೂ ಕಮ್ಯನಿಷ್ಟರ ಸ್ಮೃತಿಪಟಲದಲ್ಲಿ ಹಾಗೇ ಉಳಿದುಕೊಂಡ ನೋವಾಗಿದೆ.

1998 ಆಗಸ್ಟ್ 16 ರಂದು ಬಂದೂಕುದಾರಿಗಳು ಸಾದರ್ ಉಪವಿಭಾಗದ ನರೇಂದ್ರಪುರ ಟಿ ಎಸ್ಟೇಟ್ ನಲ್ಲಿ ಕಾರ್ಮಿಕರನ್ನು ಸಂಘಟಿಸುತ್ತಿದ್ದ ಐದು ಜನ ಬುಡಕಟ್ಟು ಅಲ್ಲದ ಸಿಪಿಐಎಂ ಬೆಂಬಲಿಗರನ್ನು ಕೊಲೆ ಮಾಡಿದರು.

ಪ್ರತ್ಯೇಕತಾವಾದಿಗಳು ಪ್ರಬಲವಾಗಿರುವ ಟಕರ್ಜಾಲ ಮತ್ತು ಕಂಚಾನ್ಮಾಲ ಪ್ರದೇಶದಲ್ಲಿ 1999 ಫೆಬ್ರವರಿ 02 ರಂದು ಎಡಚಳುವಳಿಗೆ ಬೆಂಬಲ ಕೊಡುತ್ತಿದ್ದ 6 ಸಣ್ಣ ಉದ್ಯಮಿಗಳನ್ನು ಕೊಲೆ ಮಾಡಿ ಅವರ ಮನೆಗಳನ್ನು ಸುಟ್ಟು ಹಾಕಲಾಯ್ತು. ಅದರ ಮುಂದುವರಿದ ಭಾಗವಾಗಿ ಸಿಪಿಐಎಂನ ಇಬ್ಬರು ಬುಡಕಟ್ಟು ನಾಯಕರನ್ನು ಕೊಲೆ ಮಾಡಲಾಯ್ತು. 500 ಗುಡಿಸಲುಗಳಿಗೆ ಬೆಂಕಿ ಹಾಕಲಾಯ್ತು. 600 ಜನರು ಆ ಊರನ್ನೇ ತೊರೆದರು ಎಂದು ಪೊಲೀಸ್ ಕಡತದಲ್ಲಿ ದಾಖಲಾಗಿದೆ.

2000 ನೇ ಇಸವಿಯ ಎಪ್ರಿಲ್ 15 ರಂದು ಕಲ್ಯಾಣ್ಪುರ ಗ್ರಾಮದಲ್ಲಿ ಸುಮಾರು 25 ರಷ್ಟಿದ್ದ ಎನ್ ಎಲ್ ಎಫ್ ಟಿ ಉಗ್ರರ ದಾಳಿಗೆ ಹಲವು ಮನೆ ಅಂಗಡಿಗಳು ದ್ವಂಸ ವಾದವು. 12 ಜನರನ್ನು ಗುರುತಿಸಿ ಎಡ ಬೆಂಬಲಿತರು ಅನ್ನೋ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಈ ದಾಳಿಗೆ 7 ಜನ ಗಾಯಗೊಂಡರು.

ಇದಾದ ಬಳಿಕ ಎಪ್ರಿಲ್ 27 ರಂದು ಘಾರ್ಜಿ ಎಂಬ ಊರಲ್ಲಿ ಎನ್ ಎಲ್ ಎಫ್ ಟಿ ಉಗ್ರರು 24 ಗಂಟೆಯಲ್ಲಿ ನಾಲ್ಕು ಜನರನ್ನು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಅದರಲ್ಲಿ ಸಿಪಿಐಎಂ ನಾಯಕನ ಸಹೋದರನಾಗಿರುವ ನರಾಯ್ ಸರ್ಕಾರ್ ಕೂಡಾ ಸೇರಿದ್ದರು. ಸಿಪಿಐಎಂ ಮುಖಂಡರ ಇಬ್ಬರು ಅಕ್ಕ ತಂಗಿಯರನ್ನು ಉಗ್ರರು ಅತ್ಯಾಚಾರ ಮಾಡಿ ಕೊಲೆ ಮಾಡುವ ಹೀನ ಕೃತ್ಯವನ್ನೂ ನಡೆಸುತ್ತಾರೆ.

ಮೇ 18 ರಂದು ಕೊವೈ ಮತ್ತು ತೆಲಿಯಮುರ ಪ್ರದೇಶದಲ್ಲಿ ಒಂದು ವಾರದ ಕಾಲ ನಡೆದ ಜನಾಂಗಿಯ ಘರ್ಷಣೆಯಲ್ಲಿ 50 ಜನ ಸಾಯುತ್ತಾರೆ. ಅದರಲ್ಲಿ ಹೆಚ್ಚಿನವರು ಬೆಂಗಾಲಿ ದಲಿತರು ಮತ್ತು ಮುಸ್ಲೀಮರಾಗಿದ್ದು ಹಲವರು ಸಿಪಿಐಎಂ ಕಾರ್ಯಕರ್ತರು. ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಸಂಘರ್ಷ ಸೃಷ್ಟಿಸಿ ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸುವ ಸಿಐಎ ಪ್ರೇರಿತ ಪ್ರತ್ಯೇಕತಾವಾದಿಗಳು ಈ ಕೃತ್ಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇರ ಆರೋಪ ಮಾಡಿದ್ದರು.

ಈ ದಾಳಿಗಳ ಸಂಧರ್ಭದಲ್ಲೇ ಟಿಟಿಎಎಡಿಸಿಗೆ ನಡೆದ ಚುನಾವಣೆಯಲ್ಲಿ ಐಪಿಎಫ್ ಟಿ ಪ್ರತ್ಯೇಕತಾವಾದಿಗಳು ಗೆಲುವು ಸಾಧಿಸುತ್ತಾರೆ. ಆಗ ಇನ್ನಷ್ಟೂ ಗಲಾಟೆಗಳಾಗುತ್ತೆ. ಟಿಟಿಎಎಡಿಸಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಾಸವಿರುವ ಬುಡಕಟ್ಟು ಅಲ್ಲದ ದಲಿತ ಮತ್ತು ಮುಸ್ಲಿಮರನ್ನು ಓಡಿಸಲು ಐಪಿಎಫ್ ಟಿ ನಿರ್ಧರಿಸುತ್ತದೆ. ಅದರ ಭಾಗವಾಗಿ ಬಾಗ್ಬೇರ್, ರತಿಯಾ, ಚಕ್ಮಾ ಘಾಟ್ ನಲ್ಲಿ ಜನವಸತಿ ಪ್ರದೇಶದಲ್ಲಿ ಐಪಿಎಫ್ ಟಿ ಪ್ರೇರಿತ ಎಟಿಟಿಎಫ್ ಉಗ್ರರು ಏಕಕಾಲದಲ್ಲಿ ದಾಳಿ ನಡೆಸುತ್ತಾರೆ. ಈ ದಾಳಿಯಲ್ಲಿ 45 ಜನ ಸಾವಿಗೀಡಾಗುತ್ತಾರೆ. 60 ಜನರು ಎನ್ ಎಲ್ ಎಫ್ ಟಿ ಬಂದೂಕುದಾರಿಗಳಿಂದ ತಪ್ಪಿಸಿಕೊಂಡು ಬಾಗ್ಬೇರ್ ನಿಂದ ಕಾಂಚಾಪುರ್ ಗೆ ತೆರಳುತ್ತಿದ್ದರು. ಅವರನ್ನೂ ಸುತ್ತುವರಿದ ಉಗ್ರರು ಮತ್ತೆ 25 ಮುಸ್ಲೀಮರನ್ನು ಕೊಲೆ ಮಾಡುತ್ತಾರೆ.

2000 ನೇ ಇಸವಿಯ ಸೆಪ್ಟೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಎನ್ ಎಲ್ ಎಫ್ ಟಿ ಗೆರಿಲ್ಲಾ ಸೇನೆ ದಾಳಿಗೆ 30 ಎಡ ಕಾರ್ಯಕರ್ತರು ಸಾವಿಗೀಡಾಗುತ್ತಾರೆ. ಅದರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು.

2001 ಕ್ಕೆ ಕಾಲಿರಿಸುತ್ತಿದ್ದಂತೆ 9 ಬುಡಕಟ್ಟು ಜನಾಂಗದವರನ್ನು ಎಡ ಚಳುವಳಿಯಲ್ಲಿ ಇದ್ದಾರೆ ಎನ್ನುವ ಕಾರಣಕ್ಕಾಗಿ ಫಲ್ಗುಂಜ್ಯೊ ಪಾರ ಎಂಬ ಊರಲ್ಲಿ ಕೊಲೆ ನಡೆಸಲಾಯ್ತು. ಮೂರು ದಿನ ಊರಲ್ಲಿ ಕರ್ಫ್ಯೂ ಹೇರಲಾಯ್ತು.

2001 ರ ಮಾರ್ಚ್ 3 ರವರೆಗೆ ಮೂರು ತಿಂಗಳು ಪ್ರತ್ಯೇಕತಾವಾದಿಗಳ ಗನ್ನು ಸ್ಬಲ್ಪ ವಿಶ್ರಾಂತಿ ಪಡೆದಿತ್ತು. ಮಾರ್ಚ್ ಮೂರರಂದು ಸಿಪಿಐಎಂ ಪ್ರಭಾವ ಹೆಚ್ಚಿರುವ ಬಾಂಪುರ್ ನಲ್ಲಿ 13 ಜನರನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಸಾವಿಗೀಡಾದವರಲ್ಲಿ 9 ಜನ ಪೊಲೀಸರು.

2002 ಅಕ್ಟೋಬರ್ ತಿಂಗಳಲ್ಲಿ ಪ್ರತ್ಯೇಕತಾವಾದಿ ಗಳು ಆರ್ಮಿ ಡ್ರೆಸ್ ನಲ್ಲಿ ಬಂದು ಧರ್ಮನಗರದಲ್ಲಿ ಎಡ ಕಾರ್ಯಕರ್ತನ ಮನೆ ಮೇಲೆ ದಾಳಿ ಮಾಡಿ ಒಬ್ಬನನ್ನು ಕೊಂದು 15 ಜನರನ್ನು ಕಿಡ್ನಾಪ್ ಮಾಡುತ್ತಾರೆ.

2003 ಮೇ ಯಲ್ಲಿ ಒಟ್ಟು 32 ಜನರನ್ನು ಎಟಿಟಿಎಫ್ ಕೊಲೆ ಮಾಡುತ್ತೆ. ಅದರಲ್ಲಿ ಏಳು ಜನ ಮಕ್ಕಳು, ಎಂಟು ಜನ ಹೆಂಗಸರು ಕೂಡಾ ಕೊಲೆಯಾಗುತ್ತಾರೆ. ಇದೇ ತಿಂಗಳು ಸಮ್ನ ಜಿಲ್ಲೆಯ ಜೋಗೇಶ್ವರ್ ನಗರದಲ್ಲಿ ಸಿಪಿಐಎಂ ರಚನೆ ಮಾಡಿದ್ದ ನಿರಾಶ್ರಿತರ ಕಾಲನಿಗೆ ನುಗ್ಗಿ 20 ಬೆಂಗಾಲಿಗಳನ್ನು ಬುಡಕಟ್ಟು ಪ್ರತ್ಯೇಕತಾವಾದಿಗಳು ಕೊಲೆ ಮಾಡುತ್ತಾರೆ.

ಸಧ್ಯ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಡಳಿತ ನಡೆದುತ್ತಿರುವ ಐಪಿಎಫ್’ಟಿ ಸಹೋದರ ಸಂಘಟನೆ ಎಟಿಟಿಎಫ್ ಮತ್ತು ಬಾಂಗ್ಲಾದೇಶದ ಮುಸ್ಲಿಂ ಮೂಲಭೂತವಾದಿಗಳು ಬಹುತೇಕ ಜಂಟಿ ಕಾರ್ಯಾಚರಣೆ ನಡೆಸುತ್ತಾರೆ. ಬಾಂಗ್ಲಾ ನುಸುಳುಕೋರರ ಕ್ಯಾಂಪ್ ಆಗಿರುವ ಸಚ್ಚಾರಿ ಗ್ರಾಮದಿಂದ ಬಂದ ಎಟಿಟಿಎಫ್ ಉಗ್ರರು ಮಹರ್ಚುರ್ ಮಾರುಕಟ್ಟೆ ಪ್ರದೇಶದ ಗುಡಿಸಲು ಸುಟ್ಟು ಹಾಕಿ ಗುಂಡಿನ ಸುರಿಮಳೆಗೈಯುತ್ತಾರೆ. ಅದರಲ್ಲಿ ಹಲವು ಮಕ್ಕಳನ್ನು ಕ್ಲೋಸ್ಡ್ ರೇಂಜ್ ಶೂಟ್ ಮಾಡಿ ಕೊಲ್ಲಲಾಗುತ್ತದೆ. ಅದೊಂದೇ ರಾತ್ರಿ 9 ಜನ ಸಾವಿಗೀಡಾದರು.

ಇದಾದ ಬಳಿಕ ಸಿಪಿಐಎಂ ಮಹಿಳಾ ನಾಯಕಿ ರಸ್ಮಾಲಾ ದೆಬ್ಬರ್ಮಾ ಅವರನ್ನು ಕೊಲೆ ಮಾಡಲಾಯ್ತು. ಮೇ 07 ಉತ್ತರ ತ್ರಿಪುರಾದ ಕೈಲಾಶ್ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಾಟಿಕ್ರೆಯಲ್ಲಿ ಸಿಪಿಐಎಂ ಕಾರ್ಯಕರ್ತ ನಿಲಿಮೇಶ್ ಪೌಲ್ ಮತ್ತು ಅವರ ಪತ್ನಿ ಅಲ್ಪನಾ ಪೌಲ್ ಅವರನ್ನು ಕೊಲೆ ಮಾಡಲಾಯಿತು.

2004 ಜೂನ್ 8 ರಂದು ದಲೈ ಜಿಲ್ಲೆಯ ಅಂಬಾಸದಲ್ಲಿ ಎನ್ ಎಲ್ ಎಫ್ ಟಿ ಮುಖಂಡ ರಾಣಮಾಯಿ‌ ನೇತೃತ್ವದ ಗುಂಪು ಒಬ್ಬರನ್ನು ಕೊಂದು ಮೂವರನ್ನು ಕಿಡ್ನಾಪ್ ಮಾಡ್ತಾರೆ.

ಜೂನ್ 13 ರಲ್ಲಿ ಕಾನ್ಪುಯಿ ಜಿಲ್ಲೆಯಲ್ಲಿ ಎಡ ಚಳುವಳಿಯನ್ನು ಬೆಂಬಲಿಸುತ್ತಿದ್ದ ಎರಡು ಉದ್ಯಮಿಗಳನ್ನು ಕೊಲೆ ಮಾಡಿ 24 ಜನರನ್ನು ಅಪಹರಿಸಲಾಯಿತು.

2004 ಅಕ್ಟೋಬರ್ 22 ರಂದು ಸಿಪಿಐಎಂ ಹಿರಿಯ ನಾಯಕರಾಗಿದ್ದ ಮಾಜಿ ಶಾಸಕ ಆನಂದ್ ರೊಹಾಜ ಮತ್ತು ಅವರ ಪುತ್ರ ಜೋಯ್ ರೊಹಾಜ ಸೇರಿದಂತೆ ನಾಲ್ಕು ಜನರನ್ನು ದಲೈ ಜಿಲ್ಲೆಯಲ್ಲಿ ಎನ್ ಎಲ್ ಎಫ್ ಟಿ ಉಗ್ರರು ಕೊಲೆ ಮಾಡಿದರು. ಇದಲ್ಲದೆ 1993 ರಿಂದ 2000 ಇಸವಿಯವರೆಗೆ ನಡೆದ 389 ದಾಳಿ ಘಟನೆಯಲ್ಲಿ 49 ಸೈನಿಕರು ಹತರಾಗಿದ್ದಾರೆ.

ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ಬಂದೂಕು ಹೋರಾಟ ನಡೆಸುತ್ತಿರುವ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಸಿಪಿಐಎಂ ಸರಕಾರದ ಬುಡಕಟ್ಟು ಶಾಸಕರು, ಮಾಜಿ ಶಾಸಕರು, ಸಚಿವರು, ಎಡ ಕಾರ್ಯಕರ್ತರ ಮನೆ ಮಕ್ಕಳನ್ನು ಸುಟ್ಟು ಹಾಕಿದ್ದಾರೆ. ಆದರೆ ಭೂಗತ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ನ ಯುವಕ ಮನೆ ಕುಟುಂಬಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಿಪಿಐಎಂ ಸರಕಾರ ಭದ್ರತೆ ನೀಡಿದೆ. 25 ವರ್ಷ ಆಡಳಿತ ನಡೆಸುತ್ತಿರುವ ಎಡ ಸರಕಾರ ತನ್ನ ಕಾರ್ಯಕರ್ತರ ಮೇಲೆ ನಿಯಂತ್ರಣವನ್ನು ಸ್ವಲ್ಪ ಸಡಿಲಗೊಳಿಸಿತ್ತಿದ್ದರೂ ಸಹ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಪ್ರಾಬಲ್ಯ ಹೊಂದಿರುವ ಟಕರ್ಜಾಲ, ಸಚಿಯಬಾರಿಯಂತಹ ಗ್ರಾಮಗಳು, ಅವರನ್ನು ಬೆಂಬಲಿಸುವ ಕುಟುಂಬಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಆದರೆ ಸಿಪಿಐಎಂ ಸರಕಾರ ಉಗ್ರರ ದಾಳಿಯನ್ನು ಸಂವಿದಾನಾತ್ಮಕವಾಗಿ ಎದುರಿಸಿತ್ತು. ಯಾರು ದಾಳಿ ಮಾಡಿದ್ದಾರೋ ಅವರ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿತ್ತೇ ಹೊರತು ಎಡ ಕಾರ್ಯಕರ್ತರು ದಾಳಿಕೋರರ ಮಾದರಿಯಲ್ಲೇ ಉತ್ತರ ಕೊಟ್ಟಿಲ್ಲ. ಬುಡಕಟ್ಟು ಉಗ್ರರ ಮೇಲಿನ ದಾಳಿ ಅಮಾಯಕ ಬುಡಕಟ್ಟುಗಳ ಮಾರಣ ಹೋಮಕ್ಕೆ ಕಾರಣವಾಗಬಾರದು ಎಂಬ ಸಿಪಿಐಎಂ ನಿಲುವು ಇದಕ್ಕೆ ಕಾರಣವಾಯ್ತು. ಅಂಬೇಡ್ಕರ್, ಬುದ್ದರನ್ನು ಒಳಗೊಂಡ ಮಾರ್ಕ್ಸ್ ವಾದ ತ್ರಿಪುರಾದ ಎಡಚಳುವಳಿಯನ್ನು ಸಧ್ಯದ ದಿನದಲ್ಲಿ ಸಂಕಷ್ಟಕ್ಕೆ ದೂಡಿದರೂ ಅಂತಿಮವಾಗಿ ಜಯಗಳಿಸುತ್ತದೆ ಎಂಬ ನಿರೀಕ್ಷೆ.

Leave a Reply

Your email address will not be published. Required fields are marked *