ಮತೀಯ ಸಂಘಟನೆಗಳ ಸೇವಾಕಾರ್ಯ ಹಾಗೂ ಹಿಂದಿರುವ ಹಿಡನ್ ಅಜೆಂಡಾ

– ಇರ್ಷಾದ್ ಉಪ್ಪಿನಂಗಡಿ

ಪಕ್ಕದ ರಾಜ್ಯ ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಮಹಾ ಪ್ರವಾಹ ಅಪಾರ ಪ್ರಮಾಣದ ಜೀವ ಹಾಗೂ ಆಸ್ತಿ ಪಾಸ್ತಿ ಹಾನಿಯನ್ನು ಉಂಟುಮಾಡಿತ್ತು. ಮಹಾ ಪ್ರವಾಹಕ್ಕೆ ತುತ್ತಾಗಿ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಹಾಯಕ್ಕೆ ಧಾವಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಹಲವಾರು ಸಂಘಟನೆಗಳು, ಸ್ವಯಂ ಸೇವಕರು, ವಿದ್ಯಾರ್ಥಿಗಳು, ವೈದ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಜೀವದ ಹಂಗು ತೊರೆದು ಸ್ವಂದಿಸಿದರು. ಆಹಾರ, ಹಣಕಾಸು, ದಿನಬಳಕೆಯ ವಸ್ತುಗಳ ನೆರವಿನ ಜೊತೆಗೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಹೀಗೆ, ದುರಂತದ ಸಂದರ್ಭಗಳಲ್ಲಿ ಸಹಜೀವಿಯ ರಕ್ಷಣೆಗೆ ಜನರು, ಸಂಘಸಂಸ್ಥೆಗಳು ಧಾವಿಸಿದ್ದು ಇದೇ ಮೊದಲೇನಲ್ಲ. ದೇಶದಲ್ಲಿ ಈ ಹಿಂದೆಯೂ ಸಂಭವಿಸಿದ ಹಲವಾರು ಪಾಕೃತಿಕ ವಿಕೋಪದ ಪರಿಸ್ಥಿತಿಯಲ್ಲಿ ಸರ್ಕಾರಿ ರಕ್ಷಣಾ ಕಾರ್ಯಾಚರಣೆ ಪಡೆಗಳೊಂದಿಗೆ ಜನರು ಹಾಗೂ ಖಾಸಗಿ ಸಂಘಸಂಸ್ಥೆಗಳು ಭಾಗಿಯಾಗಿ ತಮ್ಮ ಕೈಲಾದ ಸಹಾಯವನ್ನು ಮಾಡಿ ಮಾನವೀಯತೆಯನ್ನು ಮೆರೆದಿವೆ. ಇಂತಹ 

ಸನ್ನಿವೇಶಗಳಲ್ಲಿ ತೊಂದರೆಗೊಳಗಾದ ಜನರ ಸಹಾಯಕ್ಕೆ ಧಾವಿಸುವ ಹಲವಾರು ರಾಜಕೀಯ ಹಾಗೂ ರಾಜಕೀಯ ರಹಿತ ಸಂಘಸಂಸ್ಥೆಗಳ ಪೈಕಿ ಹಲವರಿಗೆ ಪ್ರಾಮಾಣಿಕ ಉದ್ದೇಶ ಇರುತ್ತದೆ. ಮತ್ತೆ ಕೆಲವರಿಗೆ ಸೇವೆಯ ಜೊತೆಗೆ ಪ್ರಚಾರ ಪಡೆಯುವ ಉದ್ದೇಶವೂ ಇರುತ್ತದೆ. ಹೀಗೆ ಒಂದಿಷ್ಟು ಪ್ರಚಾರ ಪಡೆದುಕೊಳ್ಳುವುದು ತಪ್ಪು ಎಂದು ಹೇಳುವುದು ಅಷ್ಟೊಂದು ಸಮಂಜಸವಲ್ಲ. ಆದರೆ ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸುವ ಮತಾಂಧ ವಿಚಾರಧಾರೆಗಳನ್ನು ಹೊಂದಿರುವ ರಾಜಕೀಯ/ ಧಾರ್ಮಿಕ ಸಂಘಟನೆಗಳ ಕಾರ್ಯವೈಖರಿ ಹಾಗೂ ಹಿಡನ್ ಅಜೆಂಡಾ ಇಲ್ಲಿ ಚರ್ಚೆಯಾಗಲೇ ಬೇಕು.

ಸಂಘ ಪರಿವಾರದ ಸಂಘಟನೆಗಳು ದೇಶದ ಯಾವುದೇ ಭಾಗದಲ್ಲಿ ಪಾಕೃತಿಕ ವಿಕೋಪಗಳು ನಡೆದಂತಹ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸುತ್ತವೆ. ಇದು ಸಂಘಪರಿವಾರದ ಸಂಘಟನಾ ಕಾರ್ಯತಂತ್ರದ ಭಾಗವೂ ಹೌದು. ಗುಜರಾತ್ ಭೂಕಂಪದ ಘಟನೆಯಿಂದ ಹಿಡಿದು, ಬಿಹಾರ ನೆರೆ, ನೇಪಾಲ ಭೂಕಂಪ ಹಾಗೂ ಇತ್ತೀಚಿನ ಕೇರಳ ಹಾಗೂ ಕೊಡಗು ಮಹಾಪ್ರವಾಹದ ಸಂದರ್ಭದಲ್ಲೂ ಸಂಘಪರಿವಾರದ ಸ್ವಯಂಸೇವಕರು ಖಾಕಿ ಚೆಡ್ಡಿ ತೊಟ್ಟು ಕಾರ್ಯಾಚರಣೆಗೆ ಇಳಿದಿದ್ದಾರೆ. ಇಷ್ಟೇ ಯಾಕೆ 1965 ಇಂಡಿಯಾ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ದೆಹಲಿಯಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡುವ ಕೆಲಸವನ್ನೂ ಸಂಘಪರಿವಾರ ಮಾಡಿತ್ತು. ಅಂದಿನ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಸಂಘಟನೆಯ ಪ್ರಮುಖರು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಶಾಸ್ತ್ರಿ ಒಪ್ಪಿಗೆ ಸೂಚಿಸಿದ್ದರಂತೆ. ಸಂಘಪರಿವಾರದ ಮತಾಂಧತೆ ಹಾಗೂ ರಕ್ತಪಾತದದ ಇತಿಹಾಸದ ಕುರಿತಾಗಿ ಚರ್ಚೆ ನಡೆಯುವ ಸಂದರ್ಭದಲ್ಲಿ ಸಂಘಟನೆಯ ಇಂತಹ ಸೇವಾ ಕಾರ್ಯಗಳನ್ನು ಮುಂದಿಟ್ಟು ಹಲವರು ಸಮರ್ಥನೆಯನ್ನು ಕೊಡುತ್ತಾರೆ. ಇದು ಕೇವಲ ಹಿಂದುತ್ವ ಮತೀಯ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ. 

ಇತ್ತೀಚೆಗೆ ಮುಸ್ಲಿಂ ಸಮುದಾಯದಲ್ಲಿ ಆಳವಾಗಿ ಬೇರೂರುತ್ತಿರುವ ಮತೀಯ ಸಂಘಟನೆ ಹಾಗೂ ಅದರ ರಾಜಕೀಯ ಪಕ್ಷ ಕೂಡಾ ಸೇವಾ ಕಾರ್ಯವನ್ನು ತಮ್ಮ ಕಾರ್ಯತಂತ್ರದ ಒಂದು ಭಾಗವಾಗಿ ಅಳವಡಿಸಿಕೊಂಡಿದೆ. ಕೇರಳ ಹಾಗೂ ಕೊಡಗು ಮಹಾ ಪ್ರವಾಹದ ಸಂದರ್ಭದಲ್ಲಿ ಮುಸ್ಲಿಂ ಮೂಲಭೂತವಾದಿ ಸಂಘಟನೆಯೊಂದರ ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಸಂತ್ರಸ್ತರ ಶಿಬಿರಗಳನ್ನು ಶಿಸ್ತು ಬದ್ಧವಾಗಿ ನಡೆಸುವ ಮೂಲಕ ಜನರಿಂದ ಮೆಚ್ಚುಗೆಯನ್ನು ಪಡೆದುಕೊಂಡರು. ಜೊತೆಗೆ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದರು. ಸರ್ಕಾರಿ ಅಧಿಕಾರಿಗಳಿಂದಲೂ ಪ್ರಶಂಸೆಯನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು.

ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಹಲವಾರು ಅಂಶಗಳಿವೆ. ಹಿಂದೂ ಹಾಗೂ ಮುಸ್ಲಿಂ ಮತೀಯ ವಿಚಾರಧಾರೆ ಹೊಂದಿರುವ ಸಂಘಟನೆಗಳು ಅಪಾಯದ ಸಂದರ್ಭಗಳಲ್ಲಿ ಜನರ ರಕ್ಷಣೆಗೆ ಸ್ವಯಂಸ್ಪೂರ್ತಿಯಿಂದ ಧಾವಿಸಿದರೆ ಅದು ತಪ್ಪೆಂದು ವಾದಿಸಲು ಅಸಾಧ್ಯ. ಆದರೆ , ಅವರ ಸೇವಾ ಮನೋಭಾವದ ಹಿಂದಿರುವ ಗುಪ್ತ ಉದ್ದೇಶ ಏನು ಎಂಬುವುದನ್ನು ಅರಿತು

ಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸೇವಾ ಮನೋಭಾವದ ಜೊತೆಗೆ ಸಂಘಟನೆಯನ್ನು ವಿಸ್ತರಿಸುವ ಹಾಗೂ ಕ್ಯಾಡರ್ ಗಳನ್ನು ತಯಾರಿಸುವ ಉದ್ದೇಶಗಳನ್ನು ಇವರು ಹೊಂದಿದ್ದಾರೆ ಎಂಬುದು ಸ್ಪಷ್ಟ. ಜೊತೆಗೆ ಪ್ರಮುಖವಾಗಿ ಅಂತಹಾ ಸಂಘಟನೆಗಳ ಬಗ್ಗೆ ಜನಸಮಾನ್ಯರು ಹೊಂದಿರುವ ಭಾವನೆಗಳನ್ನು ಬದಲಾಯಿಸಲು ಈ ಸಂದರ್ಭಗಳನ್ನು ಒಂದು ಅವಕಾಶವಾಗಿ ಬಳಸುತ್ತಾರೆ ಎಂಬುದು ಗಮನಿಸಬೇಕಾದ ವಿಚಾರ. ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಸರ್ಕಾರಿ ವ್ಯವಸ್ಥೆಗಳಿಗಿಂತಲೂ ತಾವು ವೇಗವಾಗಿ ಸ್ಪಂದಿಸುತ್ತೇವೆ ಹಾಗೂ ತಮ್ಮ ಸಮುದಾಯದ ಜನರ ಮನಸ್ಸಿಗೆ ತಟ್ಟುವಂತಹ ಕೆಲಸವನ್ನು ಮಾಡುವ ಮೂಲಕ ಜನರ ವಿಶ್ವಾಸವನ್ನು ಪಡೆದುಕೊಳ್ಳುವ ವ್ಯವಸ್ಥಿತ ಅಜೆಂಡಾವನ್ನು ಇವರು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ ಭಾರತೀಯ ಸೇನೆ ತಲುಪದಂತಹ ಸ್ಥಳಕ್ಕೂ ನಮ್ಮ ಸಂಘಟನೆ ತಲುಪಿದೆ ಎಂಬ ಸಂದೇಶ ಹೊಂದಿದ ಪೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದರ ಜೊತೆಗೆ ಇತರ ಸಮುದಾಯದ ಜನರಿಗೆ ಸಹಾಯ ಮಾಡುವ ಮೂಲಕ ಅದನ್ನು ಮಾಧ್ಯಮಗಳ ಗಮನಕ್ಕೆ ತಂದು ತಮಗೆ ಅಂಟಿದ ಕಲೆಗಳನ್ನು ತೊಡೆದುಹಾಕುವ ಪ್ರಯತ್ನವನ್ನೂ ಕೋಮುವಾದಿ ಸಂಘಟನೆಗಳು ಮಾಡುತ್ತವೆ. ಈ ನಿಟ್ಟಿನಲ್ಲಿ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಮತೀಯವಾದಿ ಸಂಘಟನೆಗಳು ಅನುಸರಿಸುತ್ತಿರುವ ಕಾರ್ಯತಂತ್ರ ಭಿನ್ನವಾಗಿರುತ್ತದೆ.

ಯಾವುದೇ ಧರ್ಮ- ಜಾತಿ, ಬಡವ- ಶ್ರೀಮಂತ ಎಂದು ನೋಡದೆ ಎಲ್ಲವನ್ನೂ ಕೊಚ್ಚಿಕೊಂಡು ಹೋದ ಕೊಡಗು ಮಹಾಪ್ರವಾಹದಿಂದ ಸಂತ್ರಸ್ತರಾದ ಜನರು ಆಶ್ರಯ ಪಡೆದುಕೊಳ್ಳುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಧರ್ಮದ ಆಧಾರದಲ್ಲಿ ವಿಭಜನೆ ಕಾಣ ಸಿಕ್ಕಿತ್ತು. ಸಂಪೂರ್ಣ ಜಿಲ್ಲಾಡಳಿತದ ಹಿಡಿತದಲ್ಲಿರುವ ಪರಿಹಾರ ಕೇಂದ್ರಗಳಲ್ಲಿ ಎಲ್ಲಾ ಸಮುದಾಯದ ನಿರಾಶ್ರಿತ ಜನರಿದ್ದರು. ಸರ್ಕಾರ ನಡೆಸುವ ಪರಿಹಾರ ಕೇಂದ್ರಗಳ ಜೊತೆಗೆ ಎರಡೂ ಧರ್ಮದ ಮತೀಯವಾದಿ ಸಂಘಟನೆಗಳ ಸೇವಾಘಟಕಗಳು ನಡೆಸುತ್ತಿರುವ ಸಂತ್ರಸ್ತರ ಕೇಂದ್ರಗಳಿದ್ದವು. ಹೀಗೆ ನಿರಾಶ್ರಿತರ ಕೇಂದ್ರಗಳನ್ನು ತಮ್ಮ ಹಿಡಿತದಲ್ಲಿ ನಡೆಸುವ ಮೂಲಕ ತಮ್ಮ ತಮ್ಮ ಸಮುದಾಯಗಳಿಗೆ ಅಗತ್ಯ ಸಂದರ್ಭಗಳಲ್ಲಿ ನೆರವಿಗೆ ಬರುವವರು ನಾವೇ ಎಂಬುವುದನ್ನು ಸಾರಿ ಹೇಳುವ ಗುಪ್ತ ಉದ್ದೇಶ ಇದರಲ್ಲಿ ಅಡಗಿದೆ. ಸೂಕ್ಷ್ಮವಾಗಿ ಇವುಗಳನ್ನು ಗಮನಿಸಿದರೆ ಮತೀಯ ವಿಭಜನೆಯ ಆಳವನ್ನು ತೆರೆದಿಡುತ್ತವೆ. ಈ ಮೂಲಕ ಮತೀಯ ಧ್ರವೀಕರಣಕ್ಕೆ ಎರಡು ಧರ್ಮದ ಮತೀಯವಾದಿ ಸಂಘಟನೆಗಳು ದಾರಿ ಮಾಡಿಕೊಡುತ್ತಿವೆ. ಸರ್ಕಾರದ ಹಾಗೂ ಅಧಿಕಾರಿಗಳ ವೈಫಲ್ಯಗಳು ಕೋಮುವಾದಿ ಸಂಘಟನೆಗಳಿಗೆ ಇಂತಹ ಸಂದರ್ಭಗಳಲ್ಲಿ ತಮ್ಮ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸುವ ಮೂಲಕ ಅದರ ಲಾಭವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತಿದೆ ಎಂಬುವುದು ಸತ್ಯ.

ಧರ್ಮದ ಆಧಾರದಲ್ಲಿ ದೇಶದಲ್ಲಿ ಕೋಮುವಾದವನ್ನು ಭಿತ್ತಿ ಮಹಾ ವಿಕೋಪವನ್ನು ಸೃಷ್ಟಿಸಿದ ಮತಾಂಧರು ಈ ದೇಶಕ್ಕೆ ಮಾಡಿರುವ ಹಾನಿ ಅಪಾರ. ಪ್ರಕೃತಿ ವಿಕೋಪಗಳಿಂದಾದ ಹಾನಿಯನ್ನು ಸರಿಡಿಸಲು ಸರ್ಕಾರಕ್ಕೆ ಅಬ್ಬಬ್ಬಾ ಅಂದರೆ ಒಂದೆರಡು ವರ್ಷಗಳು ಸಾಕಾಗಬಹುದು. ಆದರೆ ಧರ್ಮದ ಹೆಸರಿನಲ್ಲಿ ದ್ವೇಷದ ಭಾವನೆ ಭಿತ್ತಿ ಜನರ ಮನಸ್ಸುಗಳನ್ನು ವಿಭಜಿಸುವ ಮೂಲಕ ಉಂಟುಮಾಡಿದ ಹಾನಿಯನ್ನು ಸರಿಪಡಿಸಲು ಅಸಾಧ್ಯ. ಮತೀಯ ಸಂಘಟನೆಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ರಕ್ಷಣೆಗೆ ಧಾವಿಸಿ ಅವರು ಮಾಡಿದ ಸೇವಾಕಾರ್ಯಗಳಿಗಿಂತ ಹತ್ತು ಪಟ್ಟು ಅಧಿಕ ಪ್ರಚಾರ ಪಡೆದುಕೊಂಡು ತಮ್ಮ ಪಾಪ ಕೃತ್ಯಗಳಿಗೆ ಸಮರ್ಥನೆಯನ್ನು ನೀಡುವುದರ ಜೊತೆಗೆ ಜನರ ಮನಸ್ಸಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಹಿಡನ್ ಅಜೆಂಡಾವನ್ನು ನಾವು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಾಗಿದೆ.

 

Leave a Reply

Your email address will not be published. Required fields are marked *