ಮಲೆನಾಡಿನ ಮಹಾಮಳೆ

– ಪ್ರಸಾದ್ ರಕ್ಷಿದಿ

ಈ ವರ್ಷ ಮಲೆನಾಡಿಗೆ ಆಪತ್ತು ತಂದು ಮಳೆ “ಶತಮಾನದ ಮಳೆ” ಎಂದೇ ಪ್ರಖ್ಯಾತವಾಯಿತು. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅನಾಹುತ ತಂದ ಈ ಮಳೆಗಾಲದಲ್ಲಿ ಅತಿ ಹೆಚ್ಚು ತೊಂದರೆಯಾದದ್ದು ಕೊಡಗಿಗೆ, ನಂತರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲವು ಭಾಗಗಳು ಮತ್ತು ಅಲ್ಲಲ್ಲಿ ಕೆಲವು ಕಡೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ. (ಕೇರಳದ ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ)

ಕಾಫಿ ನಾಡಿನಲ್ಲಿ ಮಳೆಯನ್ನು ಅಳೆಯುವ ಪದ್ಧತಿ ಬ್ರಿಟಿಷರ ಕೊಡುಗೆ. ಹಾಗಾಗಿ ಇಲ್ಲಿ ಅನೇಕ ಕಡೆಗಳಲ್ಲಿ ಮಳೆ ಅಳೆಯುವುದು ಒಂದು ನಿತ್ಯವಿಧಿಯಾಗಿದ್ದು ಕೆಲವು ಕಾಫಿ ಎಸ್ಟೇಟುಗಳಲ್ಲಿ ಒಂದು ಶತಮಾನಕ್ಕೂ ಹೆಚ್ಚುಕಾಲದ ಮಳೆ ದಾಖಲೆ ದೊರೆಯುತ್ತದೆ.

ಕಳೆದ ಮೂರು ವರ್ಷಗಳು ಅತಿ ಕಡಿಮೆ ಮಳೆಯ ವರ್ಷಗಳು. ಈ ವರ್ಷವೂ ಅದೇ ರೀತಿ ಮುಂದುವರೆದಿದ್ದರೆ ಅನೇಕ ಕಡೆಗಳಲ್ಲಿ ಕಾಫಿ ಮತ್ತು ಮೆಣಸಿನ ಬೆಳೆ ಬೆಳೆಯುವುದು ಅಸಾಧ್ಯವೆನ್ನುವ ಸ್ಥಿತಿ ಬರುತ್ತಿತ್ತು, ಬೇಸಗೆಯಲ್ಲಿ ತೋಟಕ್ಕೆ ನೀರು ಹನಿಸುವುದಿರಲಿ, ಕುಡಿಯಲೂ ನೀರಿಲ್ಲದ ಸ್ಥಿತಿ ಮಲೆನಾಡಿನ ಹಲವು ಕಡೆಗಳಲ್ಲಿ ಇತ್ತು. ಹಾಗಾಗಿ ಈ ವರ್ಷವಾದರೂ ಒಳ್ಳೆಯ ಮಳೆಯಾಗಲಿ ಎಂದು ಎಲ್ಲರೂ ಹಾರೈಸಿದ್ದರು.

ವರ್ಷಕ್ಕೆ ಸುಮಾರು ಸರಾಸರಿ ನೂರಾ ಹತ್ತು ಇಂಚುಗಳಷ್ಟು ಮಳೆ ಬೀಳುವ ನಮ್ಮೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಂಬತ್ತು ಇಂಚು ದಾಟಿರಲಿಲ್ಲ. ಕಳೆದ ಒಂದು ಶತಮಾನದ ದಾಖಲೆಯಂತೆ ನಮ್ಮೂರಿನಲ್ಲಿ ಅತಿ ಹೆಚ್ಚು ಮಳೆಯಾದದ್ದೆಂದರೆ ಒಂದು ವರ್ಷಕ್ಕೆ ನೂರಾ ಅರುವತ್ತೆರಡು ಇಂಚುಗಳು(1962ರಲ್ಲಿ) ಆಗಲೂ ಈ ದಿನಾಂಕಕ್ಕೆ ಈ ವರ್ಷ ಬಂದಷ್ಟು ಮಳೆಯಾಗಿರಲಿಲ್ಲವೆನ್ನುವುದಷ್ಟೇ ಮತ್ತು ಮಧ್ಯೆ ಮಧ್ಯೆ ಮಳೆ ಬಿಡುವನ್ನು ಕೂಡಾ ಕೊಟ್ಟಿತ್ತು. ಈ ವರ್ಷ 10/9//2018 ರವರೆಗೆ ಒಟ್ಟು ನೂರಾ ನಲುವತ್ತೆರಡು ಇಂಚು ಮಳೆಯಾಗಿದೆ. (ಈಗ ಒಂದು ವಾರದಿಂದ ಬಿಸಿಲಿದೆ) ಮತ್ತು ಈ ವರ್ಷದ ಮಳೆಗಾಲ ಜೂನ್ ಮೂರನೇ ತಾರೀಖಿನಿಂದ ಪ್ರಾರಂಭವಾಗಿ ಎಂಬತ್ತೊಂಬತ್ತು ದಿನಗಳ ಕಾಲ ಬಿಡದೆ ಸುರಿದಿದೆ.

ಒಂದು ಇಂಚು ಮಳೆಯೆಂದರೆ ಒಂದು ಎಕರೆಯ ಮೇಲೆ ಸುಮಾರು ಒಂದು ಲಕ್ಷದ ಎಂಟುಸಾವಿರ ಲೀಟರ್ ನೀರು. ಅಂದರೆ ಈವರ್ಷ ಇದುವರೆಗೆ ನಮ್ಮೂರಿನಲ್ಲಿ ಬಿದ್ದ ನೀರಿನ ಪ್ರಮಾಣ ಒಂದು ಎಕರೆಯ ಮೇಲೆ ಸುಮಾರು ಒಂದೂವರೆ ಕೋಟಿ ಲೀಟರ್ ಗಳಷ್ಟು ನೀರು! ಈ ಪ್ರಮಾಣದ ಮಳೆಯಾಗಿಯೂ ನಮ್ಮೂರಿನಲ್ಲಿ ಭೂಕುಸಿತ ಆಗಿಲ್ಲ. ನಾವೊಂದಷ್ಟು ಜನ ಗೆಳೆಯರೊಡಗೂಡಿ, ಭೂಕುಸಿತ ಉಂಟಾಗಿರುವ ಕೊಡಗು

ಹಾಗೂ ಸಕಲೇಶಪುರ ತಾಲ್ಲೂಕಿನ ಹಲವು ಸ್ಥಳಗಳಿಗೆ, ಇದುವರೆಗೆ ಮೂರು ನಾಲ್ಕು ಬಾರಿ ಹೋಗಿ ಬಂದೆವು. ಈ ವರ್ಷದ ಅನಾಹುತಗಳ ಬಗ್ಗೆ ಅನೇಕ ಅಭಿಪ್ರಾಯಗಳು, ವರದಿಗಳು ಹೇಳಿಕೆಗಳು, ಬಂದಿವೆ ವಾಗ್ವಾದಗಳು ನಡೆದಿವೆ, ವಿಜ್ಞಾನಿಗಳು, ರೈತರು, ರಾಜಕಾರಣಿಗಳು ಹೀಗೆ ಬೇರೆ ಬೇರೆ ಜನರು ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಈ ಎಲ್ಲವನ್ನೂ ಗಮನಿಸಿ ನಾನು, ನನ್ನ ಅನುಭವಗಳನ್ನು ಇಲ್ಲಿದಾಖಲಿಸಿದ್ದೇನೆ.

ಈ ವರ್ಷ ಮಲೆನಾಡಿನಲ್ಲಿ ಆದ ಅನಾಹುತಗಳಿಗೆ ಕಾರಣವನ್ನು ಹುಡುಕುತ್ತ, ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ. ಮುಖ್ಯವಾಗಿ ಎರಡು ವಿಧದ ಕಾರಣಗಳನ್ನು ಕಾಣಬಹುದು. ಮೊದಲನೆಯದು ಪ್ರಾಕೃತಿಕ. ಮುಖ್ಯವಾಗಿ ನಿರಂತರವಾಗಿ ಸುರಿದ ಮಳೆ, ಹಾಗೂ ಅನೇಕರು ಹೇಳಿದಂತೆ ಭೂಕಂಪ, ಅಥವಾ ಭೂಮಿಯ ಒಳಗಡೆಯಿಂದಾದ ಯಾವುದೋ ಬದಲಾವಣೆ. ಎರಡನೆಯದ್ದು ಮಾನವ ನಿರ್ಮಿತ ಕಾರಣಗಳು. ಅರಣ್ಯನಾಶ, ಗುಡ್ಡಗಳ ನೆತ್ತಿಯವರೆಗಿನ ಕೃಷಿ, ಹೈವೇಗಳ ನಿರ್ಮಾಣ, ಅಣೆಕಟ್ಟುಗಳು ,ವಿದ್ಯುತ್ ಯೋಜನೆಗಳು, ರೈಲ್ವೇ ಮುಂತಾದ ನೂರಾರು ಅಭಿವೃದ್ಧಿ ಕಾರ್ಯಗಳು. ಜೆ.ಸಿ.ಬಿಗಳಿಂದ ಗುಡ್ಡಗಳನ್ನು ಕಡಿದು ರಸ್ತೆ ಮಾಡಿರುವುದು, ಮನೆ-ರೆಸಾರ್ಟು ಹೋಮ್ ಸ್ಟೇಗಳ ನಿರ್ಮಾಣ,ಹಲವು ಕಡೆಗಳಲ್ಲಿ ಗುಡ್ಡದ ಮೇಲೂ ನಿರ್ಮಿಸಿರುವ ಕೆರೆಗಳು ಮುಂತಾದವುಗಳು.

ಗುಡ್ಡದ ಮೇಲಿನ ಕೆರೆಗಳ ನಿರ್ಮಾಣಕ್ಕೆ ಕಳೆದ ಕೆಲವು ವರ್ಷಗಳಿಂದ ಕಡಿಮೆ ಮಳೆಯಾದ ಕಾರಣ ಅನೇಕ ಕಡೆಗಳಲ್ಲಿ ಗುಡ್ಡದ ಮೇಲೆ ಎತ್ತರದ ಸ್ಥಳಗಳಲ್ಲಿ ಕೆರೆಗಳನ್ನು ನಿರ್ಮಿಸತೊಡಗಿದರು. ಇದಕ್ಕೆ ಸರ್ಕಾರದ ಕೃಷಿಹೊಂಡ ಯೋಜನೆಯೂ ನೆರವಿಗೆ ಬಂತು. ಇಲ್ಲಿ ಸಂಗ್ರಹವಾದ ನೀರಿನಿಂದ ಬೇಸಗೆಯಲ್ಲಿ ಗುರುತ್ವ ಶಕ್ತಿಯಿಂದ ತೋಟಕ್ಕೆ ನೀರಾವರಿ ಮಾಡುವುದು, ಸಾಧ್ಯವಾದರೆ ಮಳೆಗಾಲದಲ್ಲಿ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುವುದು ಇದರ ಉದ್ದೇಶ.

ಹತ್ತು ಸಾವಿರ ಚದರಡಿ ಯಿಂದ ಹಿಡಿದು ಒಂದು ಎಕರೆಯಷ್ಟು ವಿಸ್ತಾರದ ಆರರಿಂದ ಏಂಟು ಅಡಿ ಆಳದವರೆಗಿನ ಈ ಕೆರೆಗಳು. ಎರಡು ಲಕ್ಷ ಲೀಟರ್ ನಿಂದ ಹಿಡಿದು ಒಂದು ಕೋಟಿ ಲೀಟರ್ ನಷ್ಟು ನೀರನ್ನು ಸಂಗ್ರಹಿಸಬಲ್ಲವು. ಅಂದರೆ ಹತ್ತುಸಾವಿರ ಚದರಡಿಯ ಕೃಷಿ ಹೊಂಡದಲ್ಲಿಎರಡು ಸಾವಿರ ಟನ್ ತೂಕದ ನೀರು ಸಂಗ್ರಹವಾದರೆ,ಒಂದು ಎಕರೆ ಕೆರೆಯಲ್ಲಿ ಹತ್ತುಸಾವಿರ ಟನ್ ತೂಕದ ನೀರು. ಈ ನೀರಿಗೆ ಘನ ವಸ್ತುವಿನಂತೆ ಬರಿಯ ತೂಕವಲ್ಲದೆ ಹರಿಯುವ ಗುಣ. ಜಿನುಗಿ ತೂರಿಹೋಗುವ ಶಕ್ತಿ ಮತ್ತು ಎಲ್ಲದಿಕ್ಕಿಗೆ ಒತ್ತುವ “ಹೈಡ್ರೋ ಡೈನಮಿಕ್ ಪ್ರೆಷರ್” ಇರುತ್ತದೆ. ಅದು ಎತ್ತರದಲ್ಲಿ ಭೂಮಿಯ ಮೇಲೆ ವರ್ತಿಸುವ ರೀತಿ ಮತ್ತು ಶಕ್ತಿಯನ್ನುಪರಿಗಣಿಸಬೇಕು.

ಮಳೆಯೊಂದರಿಂದಲೇ ಇಷ್ಟೆಲ್ಲ ಅನಾಹುತಗಳು ಆಗಿದ್ದರೆ, ವ್ಯಾಪಕವಾಗಿ ಎಲ್ಲ ಕಡೆಯೂ ಆಗಬೇಕಿತ್ತು. ಭೂಕುಸಿತವಾದ ಅನೇಕ ಕಡೆಗಳಲ್ಲೂ ಮಧ್ಯೆ ಒಂದೆರಡುಬಾರಿ ಮಳೆ ವಾರದ ಬಿಡುವು ಕೊಟ್ಟಿತ್ತೆಂದು ಅಲ್ಲಿ ವಾಸವಿದ್ದವರೇ ಹೇಳುತ್ತಾರೆ. ನಿರಂತರ ಮಳೆಯಾದ ಹಲವು ಸ್ಥಳಗಳಲ್ಲಿ ಭೂಕುಸಿತವಾಗಿಲ್ಲ. ಇನ್ನು ಭೂಕುಸಿತಕ್ಕೆ ಭೂಕಂಪವೇ ಕಾರಣವಾಗಿದ್ದರೆ. ಈಗ ವರದಿಯಾಗಿರುವ ರಿಕ್ಟರ್ ಸ್ಕೇಲ್ 3.4 ರ ಭೂಕಂಪ ಮಲೆನಾಡಿನಲ್ಲಿ ಅನೇಕ ಬಾರಿ ಆಗಿದೆ. ಹಾಗೇನಾದರೂ ಭೂಕಂಪದಿಂದ ಭೂಕುಸಿತ ಅಥವಾ ಮನೆಗಳ ನಾಶ ಈಗ ಆಗಿರುವುದಕ್ಕಿಂತ ಎಷ್ಟೋ ಪಾಲು ಹೆಚ್ಚಿರುತ್ತಿತ್ತು. ಈಗ ಕುಸಿದ ಮನೆಗಳಿಗಿಂತ ಇನ್ನೂ ಅಪಾಯವೆನಿಸುವ ನೂರಾರು ಸ್ಥಳಗಳಲ್ಲಿ ಏನೂ ಆಗಿಲ್ಲ. ಮತ್ತು ಭೂಕಂಪದ ಪರಿಣಾಮ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಬೊಟ್ಟುಮಾಡಿದಂತಿರದೆ, ವ್ಯಾಪಕವಾಗಿರುತ್ತದೆ. ಹಾಗಾಗಿ ಈ ಭೂಕಂಪ ಮಳೆಯೊಂದಿಗೆ ಸೇರಿ ಭೂಕುಸಿತ ಮುಂತಾದ ವಿದ್ಯಮಾನಗಳ ಪರಿಣಾಮವನ್ನು ಹೆಚ್ಚಿಸಿರಬಹುದಷ್ಟೇ ಹೊರತು ಅದೇ ಕಾರಣವಲ್ಲ.

ಪ್ರತಿ ವರ್ಷ ಬೀಳುವ ಒಟ್ಟು ಮಳೆಯ ಅಳತೆಯ ದಾಖಲೆಯನ್ನಿಟ್ಟುಕೊಂಡು, ಈ ವರ್ಷ ಹೆಚ್ಚು ಮಳೆಯಾಗಿದೆ. ಆದ್ದರಿಂದ ಹೆಚ್ಚು ನೀರಿದೆ. ಆಥವಾ ಭೂಮಿಯಲ್ಲಿ ಇರುವ ತೇವಾಂಶ ಮತ್ತು ಒರತೆಯ ಪ್ರಮಾಣ ಎಷ್ಟಿದೆ ಎಂದೋ, ಹಾಗೆಯೇ ಇದರಿಂದ ಬೆಳೆಗೆ ಅನುಕೂಲ-ಅನಾನುಕೂಲವಿದೆಯೇ ಎಂದೋ ನಿರ್ಧರಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿ ವರ್ಷದ ಮಳೆಗಾಲವೂ ಒಂದು ಬೇರೆಯೇ ವಿದ್ಯಮಾನ.
ಉದಾಹರಣೆಗೆ ಕಾಫಿ ಬೆಳೆಯಲ್ಲಿ ಫೆಬ್ರವರಿ ಮಾರ್ಚ್ ತಿಂಗಳ ಬೀಳುವ “ಹೂವಿನ ಮಳೆ” ಆ ವರ್ಷದ ಪೂರ್ಣ ಫಸಲಿನ ಪ್ರಮಾಣವನ್ನು ನಿರ್ಧರಿಸಿ ಬಿಡುತ್ತವೆ. ನಂತರ ವರ್ಷವಿಡೀ ಬೀಳುವ ಮಳೆಯ ಮಾದರಿ ಆ ವರ್ಷದ ಬೆಳೆಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಅಂದರೆ ಬಿಡುವು ಕೊಟ್ಟು ಬರುತ್ತದೆಯೇ ಇಲ್ಲ ಒಂದೇ ಸಮನೆ ಸುರಿದು ಬೆಳೆಯನ್ನು ನಾಶ ಮಾಡುತ್ತದೆಯೇ, ಆಥವಾ ಉದ್ದಕ್ಕೂಸೋನೆ ಮಳೆಯಾಗಿ ಒಟ್ಟು ಮಳೆಯ ಪ್ರಮಾಣ ಕಡಿಮೆ ಇದ್ದರೂ ತೋಟವೆಲ್ಲ ರೋಗಕ್ಕೆ ತುತ್ತಾಗುವಂತೆ ಮಾಡಿ ಫಸಲನ್ನು ನಾಶಮಾಡಿದೆಯೇ ಎಂದು ಗಮನಿಸಬೇಕು. ಅದೇ ರೀತಿ ಆ ವರ್ಷ ಗಾಳಿಬೀಸಿದ ವೇಗ ಎಷ್ಟು. ಒಟ್ಟು ಎಷ್ಟು ದಿನಗಳ ಕಾಲ ಗಾಳಿ ಬೀಸಿದೆ ಎನ್ನುವುದನ್ನೂ ಗಮನಿಸಬೇಕು. ಯಾಕೆಂದರೆ ಗಾಳಿಯ ಜೊತೆಗೂಡಿದ ಮಳೆ ಭೂಮಿಯನ್ನು ಇನ್ನಷ್ಟು ತಂಪಾಗಿದೆ ಶೀತವೇರಿಸುತ್ತದೆ. ಈ ವರ್ಷದ ಮಹಾಮಳೆಯಲ್ಲಿ ಗಾಳಿಬೀಸಿದ ವೇಗವೂ ಹೆಚ್ಚಾಗಿರಲಿಲ್ಲ ಮತ್ತು ಗಾಳಿಬೀಸಿದ ದಿನಗಳ ಸಂಖ್ಯೆಯೂ ಕಡಿಮೆ. ಹಾಗೇನಾದರೂ ವಾಡಿಕೆಯಂತೆ ಕೆಲವು ವರ್ಷಗಳಲ್ಲಿ ಬೀಸುವ ಮಳೆಗಾಲದ ಗಾಳಿ ಈ ಬಾರಿ ಬೀಸಿದ್ದರೆ, ಈ ವರ್ಷದ ಅನಾಹುತ ಇನ್ನೂ ಹೆಚ್ಚಾಗುತ್ತಿತ್ತು. ಆದ್ದರಿಂದ ನಾವು,ಭೂಮಿಯಲ್ಲಿ ಇಂಗಿರಬಹುದಾದ ನೀರು, ಜಲಮೂಲಗಳ ಪರಿಸ್ಥಿತಿ ಎಲ್ಲವೂ ಸೇರಿದಂತೆ ಯಾವುದೇ ಒಂದು ವರ್ಷ ಮಳೆಯಿಂದಾದ ಪರಿಣಾಮವನ್ನು ತೀರ್ಮಾನಿಸಬೇಕಾದರೆ ಆ ವರ್ಷ ಬಿದ್ದ ಮಳೆಯ ಪ್ರಮಾಣವೊಂದೇ ಅಲ್ಲ, ಮಳೆ ಬಿದ್ದ ಮಾದರಿ. ಮಧ್ಯೆ ಕೊಟ್ಟಂತಹ ಬಿಡುವಿನ ಮತ್ತು ಬಿಸಿಲಿನ ದಿನಗಳು. ಬೀಸಿದ ಗಾಳಿಯ ವೇಗ ಮತ್ತು ಪ್ರಮಾಣ, ಉಷ್ಣಾಂಶವೂ ಸೇರಿದಂತೆ ಹಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ.

 

ಇನ್ನು ಮಾನವ ನಿರ್ಮಿತ ಕಾರಣಗಳನ್ನು ಪರಿಶೀಲಿಸಿದರೆ, ಹೈವೇಗಳ ಕುಸಿತ. ರಸ್ತೆಗಳೇ ಕೊಚ್ಚಿಹೋಗಿರುವುದು. ಯಾರೆಷ್ಟೇ ಮುಚ್ಚಿಟ್ಟರೂ ಎತ್ತಿನಹೊಳೆಯೋಜನೆ. ಮತ್ತು ಜಲವಿದ್ಯುತ್ ಯೋಜನೆಗಳ ಸ್ಥಳಗಳಲ್ಲಿ ಉಂಟಾಗಿರುವ ವ್ಯಾಪಕ ಹಾನಿ ಎದ್ದು ಕಾಣುತ್ತಿದೆ.ಅರಣ್ಯ ಪ್ರದೇಶದಲ್ಲಿ ಮಾಡುವ ಯಾವುದೇ ಯೋಜನೆಯಿರಲಿ, ಹೊಸ ರಸ್ತೆಗಳ ನಿರ್ಮಾಣ ಅನಿವಾರ್ಯವಾಗುತ್ತದೆ. ಈ ರಸ್ತೆಗಳು ಆ ಯೋಜನೆಯ ಸಮಯದಲ್ಲಿ ಮಾತ್ರವಲ್ಲ ಮುಗಿದ ನಂತರವೂ, ಮ

ರಗಳ್ಳತನ, ಪ್ರಾಣಿಗಳಬೇಟೆ. ನದಿ ಮೂಲದ ವರೆಗೂ ಮರಳು ಗಣಿಗಾರಿಕೆಗೆ ಅನುಕೂಲ ಮಾಡಿಕೊಟ್ಟು ಮತ್ತಷ್ಟು ವಿನಾಶಕ್ಕೆ ಆರಣವಾಗುತ್ತದೆ. ಪ್ರತಿಯೊಂದು ಅಭಿವೃದ್ಧಿಯೋಜನೆಗಳ ಜೊತೆಯಲ್ಲೇ ಆಗಿರುವ ಅರಣ್ಯನಾಶವೂ ಕಣ್ಣಿಗೆ ಗೋಚರಿಸುತ್ತದೆ. ಆದರೆ ಕಣ್ಣಿಗೆ ಕಾಣದ ಅರಣ್ಯನಾಶ ಇನ್ನೊಂದು ಬಗೆಯದ್ದಿದೆ. ಇದು ಖಾಸಗಿ ವಲಯದ್ದು. ವ್ಯಾಪಕವಾದ ಕೃಷಿ, ಅದೂ ಗುಡ್ಡಗಳ ಮೇಲೆ-ಗುಡ್ಡಗಳ ನೆತ್ತಿಯ ತನಕ ನಡೆದಿದೆ, ಗುಡ್ಡದ ನೆತ್ತಿಯಲ್ಲಿ ಇರಬೇಕಾ ಶೋಲಾ ಅರಣ್ಯ ಮತ್ತು ಹುಲ್ಲುಗಾವಲುಗಳು ಅನೇಕ ಕಡೆಗಳಲ್ಲಿ ತೋಟಗಳಾಗಿವೆ. ಇದರಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ಎಷ್ಟುಸಾವಿರ ಎಕರೆಗಳು ಎಂದು ಸರ್ಕಾರವೇ ಹೇಳಬೇಕು. ಆದರೆ ಅಲ್ಲೆಲ್ಲ ಇದ್ದ ನೈಸರ್ಗಿಕ ಅರಣ್ಯ ನಾಶವಾಗಿದೆ.

ಈ ಬಾರಿ ಅನಾಹುತಗಳಾದ ಪ್ರದೇಶಗಳಲ್ಲಿರುವುದು ಮುಖ್ಯವಾಗಿ ಕಾಫಿ ಬೆಳೆ. ಇದು ಇಂದು ನಾನಾ ಬಗೆಯ ಸಂಕಷ್ಟಗಳಿಂದ ನರಳುತ್ತಿದೆ. ಹವಾಮಾನದಲ್ಲಾದ ವೈಪರೀತ್ಯ ಮತ್ತು ಉಷ್ಣಾಂಶ ಹೆಚ್ಚಳದಿಂದಾಗಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿಲ್ಲ. ಹೆಚ್ಚಿನ ತೋಟಗಳಲ್ಲಿ ರೋಬಸ್ಟ ಬೆಳೆ ಬೆಳೆಯಲು ಪ್ರಾರಂಭಿಸಿದ್ದಾರೆ. ಇದರಿಂದಾಗಿಯೂ ತೋಟಗಳಲ್ಲಿನ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮೆಣಸಿನ ಬೆಳೆ ನಿರಂತರ ರೋಗಕ್ಕೆ ತುತ್ತಾಗುತ್ತಿದೆ. ಅರಣ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಿಂದ ತೋಟಗಳಲ್ಲಿ ಕಾಡು ಪ್ರಾ

ಣಿಗಳ ಕಾಟ ಹೆಚ್ಚಾಗಿ. ಆದಾಯವಿಲ್ಲದ ಕಾಫಿಬೆಳೆಗಾರರರು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಕಷ್ಟು ರೆಸಾರ್ಟು -ಹೋಮ್ ಸ್ಟೇಗಳನ್ನು ನಿರ್ಮಿಸಿಕೊಂಡು ಒಂದಷ್ಟು ಆದಾಯ ಗಳಿಸತೊಡಗಿದರು. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆ

ತು. ನೂರಾರು ಜನರಿಗೆ ಉದ್ಯೋಗವೂ ದೊರೆಯುವಂತಾಯಿತು. ಆದರೆ ಇದರಲ್ಲಿ ಲಾಭವಿದೆಯೆಂದು ಕಂಡುಕೊಂಡ ರಾಜಕಾರಣಿಗಳು, ಉದ್ಯಮಿಗಳು, ಎಲ್ಲಾರೀತಿಯ ದಂಧೆಕೋರರು ಇತ್ತ ನುಗ್ಗಿದರು.ಇದರಿಂದಾಗಿರುವ ಸಾಮಾಜಿಕ, ಹಾಗೂ ಪರಿಸರ ಸಮಸ್ಯೆಗಳು ಬೇರೆಯೇ ಇವೆ.

ಈ ರೀತಿಯ ನೂರಾರು ರೆಸಾರ್ಟುಗಳು, ಅರಣ್ಯದ ಅಂಚಿನಲ್ಲಿ, ಸರ್ಕಾರಿ ಭೂಮಿಯ ಒತ್ತುವರಿಯಲ್ಲಿ ಇವೆ. ಗುಡ್ಡಗಳನ್ನು ಕಡಿದು ರಸ್ತೆಗಳನ್ನು ಮಾಡಿದ್ದಾರೆ. ಇವೆಲ್ಲದರ ಜೊತೆ ವಸತಿಗಾಗಿ ಹೆಚ್ಚಿದ ಒತ್ತಡದಿಂದ ಗುಡ್ಡಗಳನ್ನು ಕಡಿದು ಮೆಟ್ಟಿಲು ಮೆಟ್ಟಿಲುಗಳಾಗಿ ಮನೆಗಳನ್ನು ಕಟ್ಟಲಾಗಿದೆ. ಇವೆಲ್ಲವೂ ಭೂ ಮೇಲ್ಮೈಯನ್ನು ಬದಲಿಸಿವೆ. ರಸ್ತೆಗಳಿರಲಿ. ಹೆದ್ದಾರಿಗಳಿರಲಿ ನಗರ ಪ್ರದೇಶವಿರಲಿ ಸರಿಯಾಗಿ ನೀರು ಹರಿದು ಹೋಗುವ ವ್ಯವಸ್ಥೆಯೇ ಇಲ್ಲ.ಹೆದ್ದಾರಿಗಳನ್ನುಳಿದು, ಅನೇಕ ರಸ್ತೆಗಳಲ್ಲಿ ಕೇವಲ ಕಿಲೋಮೀಟರಿಗೊಂದರಂತೆ ಮೋರಿಗಳಿವೆ.

ಈ ಎಲ್ಲ ವಿದ್ಯಮಾನಗಳಿಂದ ಆದಂತ ಭೂಸವಕಳಿ. ಭೂವಿನ್ಯಾಸದ ಬದಲಾವಣೆಗಳು ಪ್ರಾಕೃತಿಕ ವಿಕೋಪದ ಜೊತೆ ಸೇರಿಯೇ ಈ ರೀತಿಯ ಅನಾಹುತಗಳು ಉಂಟಾಗಿವೆ. ಆದರೆ ಇದುವರೆಗಿನ ಎಲ್ಲ ಅಭಿಪ್ರಾಯ ಮತ್ತು ಹೇಳಿಕೆಗಳು, ಬಹುಷಃ ಆರು ಜನ ಕುರುಡರು ಆನೆಯನ್ನು ವರ್ಣಿಸಿದ ಕತೆಯಂತೆ ಕಂಡುಬರುತ್ತಿದೆ.

ಆದರೆ ರಾಜಕಾರಣಿಗಳು. ಮತ್ತು ಸಮಾಜದ ಕೆಲವು ವರ್ಗಗಳ ಜನ ಈಗಿನ ಎಲ್ಲ ಅನಾಹುತಗಳನ್ನು ಭೂಕಂಪ ಇಲ್ಲವೇ “ಶತಮಾನದ ಮಳೆ”ಯ ತಲೆಗೆ ಕಟ್ಟುವ ಹುನ್ನಾರದಲ್ಲಿದ್ದಾರೆ. ಯಾಕೆಂದರೆ ಯಾವುದೇ ರೀತಿಯ “ಅಭಿವೃಧ್ಧಿ” ಕಾರ್ಯಕ್ರಮಗಳೇ ರಾಜಕಾರಣಿಗಳಿಗೆ. ಗುತ್ತಿಗೆದಾರರಿಗೆ, ದಂಧೆಕೋರರಿಗೆ ಸದಾ ಹಾಲುಕರೆಯುವ ಹಸು. ಇದರೊಂದಿಗೆ ಈಗ ರೆಸಾರ್ಟ್ ಉದ್ಯಮವೂ ಸೇರಿದೆ.ಇದೀಗ ಮತ್ತೆ ಕೊಡಗಿನ ಮೂಲಕ ಕೇರಳಕ್ಕೆ ಪವರ್ ಟ್ರಾನ್ಸ್ ಮಿಷನ್ ಲೈನ್ ಹಾಗೂ ರೈಲ್ವೇ ಸಂಪರ್ಕಕ್ಕೆ ಕೇರಳ ಸರ್ಕಾರ

ದ ಒತ್ತಡವೂ ಹೆಚ್ಚಿದೆ. ಇದರಿಂದ ಸಿಗಬಹುದಾದ ರಾಜಕೀಯ ಮತ್ತು ಆರ್ಥಿಕಲಾಭವನ್ನು ಪಡೆಯಲು ಎಲ್ಲರೂ ಪಕ್ಷಾತೀತರಾಗಿ ಸಿದ್ಧರಾಗುತ್ತಿದ್ದಾರೆ.  ಹಾಗಾದರೆ ಈ ಮಳೆಯಿಂದ ಏನೂ ತೊಂದರೆ ಆಗಿಲ್ಲವೇ ಎಂದರೆ ಖಂಡಿತ ಆಗಿದೆ. ಕಳೆದ ಕೆಲವು ವರ್ಷಗಳಂತೆ ಈ

 ಭಾಗದಲ್ಲಿ ಈ ವರ್ಷವೂ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ ಬಹುಷಃ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ ಎನಿಸುತ್ತದೆ. ನಾವು ನಮ್ಮ ಎಲ್ಲ ಪ್ರಕೃತಿ ವಿರೋಧಿ ಕೆಲಸಗಳನ್ನು ಇನ್ನಷ್ಟು ಉಗ್ರವಾಗಿ ಮುಂದುವರೆಸುತ್ತಿದ್ದೆವು ಆದರೆ ಮುಂದೆ ಒಂದು ದಿನ ಇದಕ್ಕಿಂತ ಹೆಚ್ಚಿನ ದುರಂತ ಖಂಡಿತ ಕಾದಿರುತ್ತಿತ್ತು.

ಇಷ್ಟು ಮಳೆಯಾದ ಪ್ರದೇಶಗಳನ್ನು ನೋಡುತ್ತ ಬಂದರೆ ಒಂದು ವಿಷಯ ಮನದಟ್ಟಾಗುತ್ತದೆ. ಈಗ ಭೂಕುಸಿತ ಉಂಟಾಗಿರುವ ಪ್ರದೇಶಗಳೆಲ್ಲ ಜಲದ ಕಣ್ಣುಗಳು. ಈ ವರ್ಷ ಸುರಿದ ಮಳೆಗೆ ಭೂಮಿಯ ಒಳಭಾಗದಲ್ಲಿ ಸಂಗ್ರಹವಾಗಿ ನಿರಂತರ ಹೊಳೆ ಹಳ್ಳಗಳಿಗೆ ನೀರೂಡುತ್ತಿದ್ದ ಅಂತರ್ಜಲ ಸಂಗ್ರಹಾಗಾರಗಳು ಒಡೆದು ಛಿದ್ರವಾಗಿವೆ ಮತ್ತು ಬಸಿದು ಹೋಗಿವೆ. ಇದರಿಂದಾಗಿ ಕೇವಲ ಒಂದು ವಾರದ ಬಿಸಿಲಿಗೆ ಹಳ್ಳಗಳಲ್ಲಿ ನೀರು ಬರಿದಾದಂತೆ ಕಾಣುತ್ತಿದೆ. ಯಾಕೆಂದರೆ ಸಂಗ್ರಹಾಗಾರಗಳು ಬರಿದಾದಂತಿವೆ.

ನಾವು ಇತ್ತೀಚಿಗೆ ನೋಡಿದ ಹೆಚ್ಚಿನ ಎಲ್ಲ ಭೂಕುಸಿತವಾಗಿರುವುದು ಸ್ವಾಭಾವಿಕ ಒರತೆಗಳಿದ್ದ ಪ್ರದೇಶಗಳಲ್ಲಿ ಭೂಕುಸಿತದ ಸ್ಥಳಗಳ ಜನರ ಅನುಭವದಂತೆ, ಭೂಕುಸಿತವಾಗುವ ಹಿಂದಿನ ದಿನವೇ ಅದರೆ ಕೆಲವು ಲಕ್ಷಣಗಳು ಕಂಡಿವೆ. ಅಂದರೆ ಭೂಮಿ ಬಿರುಕು ಬಿಟ್ಟಿರುವುದು, ಏನೋ ಶಬ್ದ ಕೇಳಿಸಿದ್ದು ಇತ್ಯಾದಿ. ಆದರೆ ಭೂಕುಸಿತವಾಗುವ ಮೊದಲು ಸುಮಾರಾಗಿ ಬೆಟ್ಟದ ಮಧ್ಯ ಭಾಗದಲ್ಲಿ ಫ್ರೆಷರ್ ಕುಕ್ಕರ್ ನ ವಾಲ್ವ್ ತೆರದುಕೊಂಡಂತೆ ಅಪಾರ ಒತ್ತಡದಿಂದ ಸುಮಾರು ಹತ್ತರಿಂದ ಹದಿನೈದು ಅಡಿಗಳಷ್ಟು ವ್ಯಾಸದ ದೊಡ್ಡ ಗಾತ್ರದ ನೀರು ಇಪ್ಪತ್ತರಿಂದ ಮೂವತ್ತು ಅಡಿಗಳಷ್ಟು ಎತ್ತರಕ್ಕೆ ಚಿಮ್ಮತೊಡಗಿದೆ. ಅಲ್ಲಿಂದ ಪ್ರಾರಂಭವಾದ ಭೂಮಿಯ ಜಾರುವಿಕೆ ಮರ ಮಣ್ಣು ಕಲ್ಲು ಎಲ್ಲವನ್ನೂ ಕೆಳಕ್ಕೆ ತಳ್ಳುತ್ತಾ ಪ್ರಪಾತವನ್ನೇ ನಿರ್ಮಿಸುತ್ತಾ ಕೆಳಗೆ ಬಂದು ತಗ್ಗಿನಲ್ಲಿ ಬಯಲು ಅಥವಾ ಹೊಳೆ ಸಿಗುವವರೆಗೂ ಸಾಗಿದೆ.

ಈ ವಿದ್ಯಮಾನ ಕೊಡಗಿನ ಸೋಮವಾರಪೇಟೆ ಸಮೀಪದ ಕಿರಗಂದೂರು ಮುಂತಾದ ಹಲವು ಕಡೆಗಳಲ್ಲಿ ಹಗಲೇ ನಡೆದಿದ್ದರೆ. ಮಡಿಕೇರಿ ಮಂಗಳೂರು ರಸ್ತೆಯ ಜೋಡುಪಾಲದಂತಹ ಸ್ಥಳಗಳಲ್ಲಿ ರಾತ್ರಿಯ ವೇಳೆ ನಡೆದಿದೆ. ಈಗ ಸ್ಥಳಗಳಲ್ಲಿ ಇಡೀ ಗುಡ್ಡವನ್ನು ಮೇಲಿನಿಂದ ಕೆಳಕ್ಕೆ ಉದ್ದಕ್ಕೆ ಸೀಳಿ ತುಂಡೊಂದನ್ನು ಹೊರಕ್ಕೆ ತೆಗೆದಂತೆ ಕಾಣುತ್ತದೆ. ಈ ಬಗೆಯ ಕುಸಿತವೇ ಹೆಚ್ಚಾಗಿ ಎಲ್ಲ ಕಡೆಗಳಲ್ಲಿ ಕಂಡುಬರುವುದು. ಈ ವರ್ಷದ ನಿರಂತರ ಮಳೆಯಿಂದಾಗಿ ಭೂಮಿಯ ಒಳಭಾಗದಲ್ಲಿ ಸಂಗ್ರವಾದ ಅಪಾರ ಜಲರಾಶಿ ಒತ್ತಡದಿಂದ ಒಡೆದು ಹೊರಬಂದಂತೆ ತೋರುತ್ತದೆ. ಹೀಗೆ ಒಡೆದು ಹೊರಬರುವ ಮುಂಚೆ ಅದು ಭೂಮಿಯ ಒಳಭಾಗದಲ್ಲೂ ಅನೇಕ ಬದಲಾವಣೆ ಕುಸಿತಗಳನ್ನು ಮಾಡಿರಬಹುದು, ಈ ಪ್ರದೇಶದ ಭೂರಚನೆಯೂ ಅದಕ್ಕೆ ಅನುಗುಣವಾಗಿಯೇ ಇದೆ. ಹಾಗಾಗಿ ಬೆಟ್ಟಗಳು ಮೇಲಿನಿಂದ ಕೆಳಗಿನ ವರೆಗೆ ಸೀಳುಬಿಟ್ಟು ನೀರು ಅಪಾರಪ್ರಮಾಣದಲ್ಲಿ ಒಂದೇಬಾರಿ ಸೋರಿಹೋಗಿ ದೊಡ್ಡ ಪ್ರಮಾಣದ ಪ್ರವಾಹ ಉಂಟಾಯಿತಲ್ಲದೆ. ಮಳೆ ನಿಂತ ತಕ್ಷಣ ಪಾತ್ರೆ ಬರಿದಾದಂತೆ ಹೊರಗೆ ಹರಿಯುವ ನೀರಿನ ಪ್ರಮಾಣ ಒಮ್ಮೆಲೆ ಕುಸಿದಿರಬೇಕು. (ಇತ್ತೀಚಿನ ಡ್ರೋನ್ ಚಿತ್ರಗಳು ಇದನ್ನೇ ಸೂಚಿಸುತ್ತವೆ) ಆದರೆ ಭೂಕುಸಿತವಾಗದ ಸ್ಥಳಗಳಲ್ಲೂ ಅಂದರೆ ಇತರ ಕಡೆಗಳ ಹೊಳೆಗಳಲ್ಲೂ ನೀರೇಕೆ ಕಡಿಮೆಯಾಯಿತು.

ಇದರೊಂದಿಗೆ ಇನ್ನೊಂದು ಪ್ರಮುಖ ವಿಚಾರವನ್ನು ಗಮನಿಸಬೇಕು. ಅದು ಮರಳುಗಣಿಗಾರಿಕೆ. ಇಂದು ಮರಳು ಗಣಿಗಾರಿಕೆ, ನದಿಗಳು ಸಮುದ್ರ ಸೇರುವ ಅಳಿವೆಯಿಂದ ಪ್ರಾರಂಭವಾಗಿ ನದೀ ಮೂಲದವರೆಗೂ ನಡೆದಿದೆ.ಈ ಮರಳು ಲೂಟಿ ನದೀ ತಳವನ್ನೇ ಬಗೆದು ಖಾಲಿಮಾಡಿದೆ. ಕಳೆದ ವರ್ಷಗಳಲ್ಲಿ ಬಿದ್ದ ಅತಿಕಡಿಮೆ ಮಳೆಯಿಂದಾಗಿ ಇಡೀ ವರ್ಷವೇ ಹೊಳೆ ಹಳ್ಳಗಳಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣವೂ ಕಡಿಮೆಯೇ ಇತ್ತು. ಈ ವರ್ಷ ಮಳೆ ಹೆಚ್ಚು ಬೀಳುತ್ತಿದ್ದ ಕಾಲದಲ್ಲಿ ತುಂಬಿ ಹರಿದು ಮಳೆನೀಂತ ಕೂಡಲೇ ಕಡಿಮೆಯಾಗಲು ಕಾರಣ ನದೀತಳ ಮತ್ತು ಪಾತ್ರಗಳಲ್ಲಿ ನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ನದಿಗೆ ಮರು ಪೂರಣ ಮಾಡುತ್ತಿದ್ದ ಮರಳು ಮಾಯವಾಗಿರುವುದು. ಇದರಿಂದಾಗಿ ನಮಗೆ ಈ ವರ್ಷ ಎಲ್ಲಕಡೆಗಳಲ್ಲೂ ಇದ್ದಕ್ಕಿದ್ದಂತೆ ನೀರು ಕಡಿಮೆಯಾದಂತೆ ಕಾಣಿಸುತ್ತಿದೆ. ಈ ವರ್ಷವಂತೂ ಆ ಸ್ಥಳಗಳಲ್ಲಿ ಕೆಸರು ಹೂಳು ತುಂಬಿ ನೀರು ಹಿಡಿದಿಡುವ ಶಕ್ತಿ ಇನ್ನಷ್ಟು ಕಡಿಮೆಯಾಗಿದೆ. ಹೂಳಿನ ಮೇಲೆ ಬಿಸಿಲು ಬಿದ್ದಕೂಡಲೇ ನೀರು ಆವಿಯಾಗಿ ಒಣಗಿ ಗಟ್ಟಿಯಾಗುತ್ತದೆ. ಮರಳಿನಂತೆ ಒಳಭಾಗದಲ್ಲೇ ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ.

ಆದರೆ ಇತ್ತೀಚೆಗೆ ಪತ್ರಿಕೆಗಳಲ್ಲಿ “ಈ ವರ್ಷ ಒಂದೇ ಬಾರಿಗೆ ದೊಡ್ಡ ಪ್ರಮಾಣದ ಮಳೆ ಬಂದಿದ್ದರಿಂದ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗಿರುವುದು ಹೀಗೆ ಬೇಗ ನೀರಿನ ಹರಿವು ಕಡಿಮೆಯಾಗಲು ಕಾರಣ” ಎಂದು ಕೆಲವರು ಭೂವಿಜ್ಞಾನಿಗಳು ಹೇಳಿದರೆಂದು ವರದಿಯಾಗಿದೆ. ಈ ಮಾತು ಅವಲೋಕನ ,ಅಧ್ಯಯನಗಳಿಲ್ಲದ ಬೀಸು ಹೇಳಿಕೆಯಷ್ಟೆ. ಆ ರೀತಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಿಲ್ಲ ಯಾಕೆಂದರೆ ಸುಮಾರು ಎಂಬತ್ತು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆ, ಪ್ರತಿವರ್ಷ ನೀರಿನ ಒರತೆಯಾಗುವ ಸ್ಥಳಗಳಲ್ಲದೆ ಅನೇಕ ಹೊಸ ಒರತೆಗಳೂ ಸೃಷ್ಟಿಯಾಗಿದ್ದವು. ಇವೆಲ್ಲ ಪ್ರತಿ ವರ್ಷಕ್ಕಿಂತ 

ಹೆಚ್ಚು ಪ್ರಮಾಣದ ನೀರು ಭೂಮಿಯಲ್ಲಿ ಇಂಗಿರುವುದಕ್ಕೆ ಸಾಕ್ಷಿಯಾಗಿದ್ದವು.ಜಲದ ಕಣ್ಣುಗಳು ಒತ್ತಡದಿಂದ ಸಿಡಿದು ಭೂಮಿಯನ್ನು ತೊಡೆದುಹಾಕಿ ಮಾಡಿರುವ ಅನಾಹುತದಲ್ಲಿ ನಮ್ಮ ಪಾಲೂ ಖಂಡಿತ ಇದೆ. ಇನ್ನು ಮುಂದಾದರೂ ಪ್ರಕೃತಿಯೊಡನೆ ಸಹಬಾಳ್ವೆ ನಡೆಸಲು ನಾವು ಕಲಿಯದಿದ್ದರೆ ಮುಂದೆಯೂ ಕೂಡಾ ಇಂಥದ್ದು ಆಗದಂತೆ ತಡೆಯಲು ಸಾಧ್ಯವಿಲ್ಲ.

 

(20/09/2018)

Leave a Reply

Your email address will not be published. Required fields are marked *