Author Archives: admin1

ಅಭಿಮಾನಿಗಳು ಮತ್ತು ಅವತಾರಗಳು

-ಡಾ.ಎನ್.ಜಗದೀಶ್ ಕೊಪ್ಪ

ಇದು ನಾವು ಬದುಕುತ್ತಿರವ ವರ್ತಮಾನದ ಸಮಾಜದ ಅಧೋಗತಿಯೋ? ಅಥವಾ ನಮ್ಮ ಜನಸಾಮಾನ್ಯರ ವೈಚಾರಿಕ ಪ್ರಜ್ಞೆಯ ದಾರಿದ್ರ್ಯವೋ? ಅರ್ಥವಾಗುತ್ತಿಲ್ಲ.. ಕಳೆದ 21 ರ ಶುಕ್ರವಾರ ಯಡಿಯೂರಪ್ಪನವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕಿನಕೆರೆಯ 20 ಮಂದಿ ಗ್ರಾಮಸ್ಥರು, ಯಡಿಯೂರಪ್ಪ ಅಭಿಮಾನಿಗಳು ಎಂಬ ಬ್ಯಾನರ್ ಅಡಿಯಲ್ಲಿ ಅಲ್ಲಿನ ಮಣ್ಣನ್ನು ತಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಾಗಿಲಿನಲ್ಲಿ ಕಾದಿದ್ದರು.
ಯಡಿಯೂರಪ್ಪನವರ ಕೈಯಲ್ಲಿ ಆ ಮಣ್ಣನ್ನು ಮುಟ್ಟಿಸಿ ನಂತರ ಹಂಚಿಕೊಳ್ಳುವ ಬಯಕೆ ಅವರದಾಗಿತ್ತು (ಬಹುಶಃ ತಿನ್ನಲಿಕ್ಕೆ ಇರಬಹುದು). ಈ ಅಂಧಾಭಿಮಾನವನ್ನು ಹೇಗೆಂದು ವ್ಯಾಖ್ಯಾನಿಸಲಿ? ನಾಡಿನಲ್ಲಿ ಕಣ್ಣೆದುರೇ ಕರಗಿ ಹೋಗುತ್ತಿರುವ ವೈಚಾರಿಕ ಪ್ರಜ್ಞೆಯ ದುರಂತವೆನ್ನಲೆ?

ತಲೆಯೆತ್ತುತ್ತಿರುವ ಮೂರನೇ ದರ್ಜೆಯ ಸಂಸ್ಕೃತಿಯೆದುರಿನ ನಮ್ಮ ಅಸಹಾಯಕತೆ ಎನ್ನಬೇಕೆ?
ಇತ್ತೀಚಿನ ದಿನಗಳಲ್ಲಿ ಯಾವುದೇ ರಂಗದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿಗಳ ಪಾಲಿಗೆ ಅಭಮಾನಿಗಳು ಎಂಬ ಸಂಗತಿ ವಿಮೋಚನೆಯಾಗದ ಶಾಪದಂತಾಗಿದೆ, ತನ್ನ ಅಭಿಮಾನಿಗಳನ್ನು ದೇವರೆಂದು ಕರೆದ ತಮ್ಮ ಬದುಕಿನುದ್ದಕ್ಕೂ ಆರಾಧಿಸಿದ ಡಾ. ರಾಜ್ ಕುಮಾರ್ ರವರಿಗೆ ಅವರ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಈ  ಅಭಿಮಾನಿಗಳು ಕೊಟ್ಟ ಬಳುವಳಿ ಎಂತಹದ್ದು ಎಂಬುದು ಕನ್ನಡಿಗರೆಲ್ಲಾ  ಬಲ್ಲ ಸಂಗತಿ. ರಾಜ್ ಕುಟಂಬಕ್ಕೆ ಅಂತಿಮ ಗೌರವ ಸಲ್ಲಿಸಲು ಬಿಡದ ಇಂತಹ ಅಭಿಮಾನಿಗಳು ಜಗತ್ತಿನಲ್ಲಿ ಯಾರಿಗೂ ಬೇಡ ಎಂದು ಆ ಕ್ಷಣದಲ್ಲಿ ಎಲ್ಲರಿಗೂ ಅನಿಸಿದ್ದು ನಿಜ.
ಅಭಿಮಾನವೆಂಬುದು ವ್ಯಕ್ತಿಯೊಬ್ಬನ ಅನನ್ಯ ಸಾಧನೆ ಕುರಿತಂತೆ ಜನ ಸಾಮಾನ್ಯರ ಅಂತರಂಗದ ಆರಾಧನೆ ಹೊರತು, ಅದು ಬಹಿರಂಗ ಪ್ರದರ್ಶನವಲ್ಲ. ಸಂಗೀತ, ನೃತ್ಯ,  ಸಾಹಿತ್ಯ, ಕ್ರೀಡೆ, ರಂಗಭೂಮಿ, ಸಿನಿಮಾ, ಹೀಗೆ ಹಲವಾರು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪೂರ್ವ ಸಾಧನೆ ಮಾಡಿದವರನ್ನು ಮೆಚ್ಚುವುದು, ಅವರ ಬದ್ಧತೆಯ ಬಗ್ಗೆ ಶ್ಲಾಘನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂಸ್ಕೃತಿಕ ಅಭಿರುಚಿ, ಇಂತಹ ಅಭಿಮಾನ ಸಾಧಕರಿಗೆ ತಾವು ಸಾಗುತ್ತಿರುವ ಮಾರ್ಗದಲ್ಲಿ ಇನ್ನಷ್ಟು ಆತ್ಮ ವಿಶ್ವಾಸ ತಂದುಕೊಡುವಂತಹದ್ದು..
ಆದರೆ ಇಂದು ನಮ್ಮ ಮುಂದೆ ನಡೆಯುತ್ತಿರುವುದು ದಿಢೀರನೆ ಹುಟ್ಟಿಕೊಂಡ ಕಟೌಟ್ ಹಾಗೂ ಫ್ಲೆಕ್ಸ್ ಸಂಸ್ಕೃತಿಯ  ನಾಯಕರ ಕುರುಡು ಆರಾಧನೆ ಮಾತ್ರ. ಇದು ಸಾಮಾಜಿಕ ಬದುಕಿನ ಸ್ವಾಸ್ಥವನ್ನು ಕೆಡಿಸುವಂತಿದೆ. ಈ ಸಮಾಜಕ್ಕೆ, ಈ ನಾಡಿಗೆ, ಅಥವಾ ಈ ನೆಲಕ್ಕೆ ಈ ರೀತಿಯ ಹುಸಿ ಸಂಸ್ಕೃತಿಯ ನಾಯಕರ ಕೊಡುಗೆ ಏನು? ಅವರ ಅಭಿಮಾನಿಗಳು ಎನಿಸಿಕೊಂಡವರಿಗೂ ಸಹ ಉತ್ತರ ಗೊತ್ತಿಲ್ಲ. ಏಕೆಂದರೆ ಅಭಿಮಾನಗಳ ಸಂಘ ಎಂಬುದು ಕೆಲವರ ಪಾಲಿಗೆ ಲಾಭದಾಯಕ ದಂಧೆಯಾಗಿದೆ.
ಸುಮ್ಮನೆ ಹಾಗೆ ಈ ಪಟ್ಟಿ ಗಮನಿಸಿ, ಯಡಿಯೂರಪ್ಪ ಅಭಿಮಾನಿಗಳಸಂಘ, ವಿದಾನಸೌಧದ ಕಚೇರಿಯಲ್ಲಿ ಸಚಿವ ಸೋಮಣ್ಣ ಪಕ್ಷದ ಕಾರ್ಯಕರ್ತನಿಂದ ಚಪ್ಪಲಿ ಏಟು ತಿಂದದ್ದಕ್ಕೆ, ಪ್ರತಿಭಟಿಸುವ ಸಲುವಾಗಿ ಹುಟ್ಟಿಕೊಂಡ ಸೋಮಣ್ಣ ಅಭಿಮಾನಿಗಳ ಸಂಘ, ವರ್ತೂರು ಪ್ರಕಾಶ್ ಅಭಿಮಾನಿಗಳ ಸಂಘ, ರೇಣುಕಾಚಾರ್ಯ ಅಭಿಮಾನಿಗಳ ಸಂಘ (ಈ ಸಂಘ ಈ ಬಾರಿಯ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಬ್ಯಾನರ್ ಹಿಡಿದು  ಕಲಾವಿದರ ಜೊತೆ  ಸಾಗಿತು.) ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅಭಿಮಾನಿಗಳ ಸಂಘ, ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ, ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘ, ಈ ಪಟ್ಟಿಯನ್ನು ನೀವು ರಾಜ್ಯದ ಎಲ್ಲಾ ಶಾಸಕರಿಗೆ, ಸಚಿವರಿಗೆ ಮತ್ತು ಸಂಸದರಿಗೂ ಅನ್ವಯಿಸಬಹುದು. ಯಾವ ಪುರುಷಾರ್ಥಕ್ಕೆ ಈ ಅಭಿಮಾನಿಗಳ ಸಂಘಗಳು?
ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲುಪಾಲಾದ ನಟನೊಬ್ಬನಿಗೆ ಗುಡಿ ಗೋಪುರಗಳ ಮುಂದೆ ಕಾಯಿ ಹೊಡೆದು ಕ ರ್ಪೂರ ಹಚ್ಚಿದ, ಕಣ್ಣೀರ ಧಾರೆ ಸುರಿಸಿದ ಅಭಿಮಾನಿಗಳನ್ನು ನೀವೆಲ್ಲಾ ಗಮನಿಸಿದ್ದೀರಿ ಇದು ಈ ನಾಡಿನ ಸಾಮಾಜಿಕ ಅಥವಾ ಸಾಂಸ್ಕೃತಿಕ ಲೋಕದ  ಬದುಕು ಅಧಃಪತನದ ಪಾತಾಳಕ್ಕೆ ಇಳಿದಿರುವ ಸಂಕೇತವೆ  ಎಂಬುದರ ಕುರಿತು ನಾಡಿನ ಎಲ್ಲಾ ಪ್ರಜ್ಞಾವಂತರು ಗಂಭೀರವಾಗಿ ಆಲೋಚಿಸಬೇಕಾದ ವಿಷಯ.
ಮನುಷ್ಯನೊಬ್ಬನ ವರ್ತನೆಯ  ತಿಕ್ಕಲುತನದ ಪರಮಾವಧಿ ಎನ್ನಬಹುದಾದ ಈ ಅತಿರೇಕ ಹುಟ್ಟಿಕೊಂಡದ್ದು ನಮ್ಮ ನೆರೆಯ ತಮಿಳುನಾಡಿನಲ್ಲಿ. 1950ರ ದಶಕದಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಯನ್ನು ರಾಮಸ್ವಾಮಿ ಪೆರಿಯಾರ್ ಹುಟ್ಟುಹಾಕಿದ ಸಂದರ್ಭದಲ್ಲಿ ಅವರ ಗರಡಿಯಲ್ಲಿ ಪಳಗಿ  ಪ್ರವರ್ಧಮಾನಕ್ಕೆ ಬಂದ ಸಿ.ಎನ್. ಅಣ್ಣಾದೊರೆ, ಮತ್ತು ಎಂ. ಕರುಣಾನಿಧಿ ತಮ್ಮ ಅಸ್ಖಲಿತ ಹಾಗೂ ಅದ್ಘುತ ತಮಿಳು ಭಾಷಣಗಳಿಂದ ಅಲ್ಲಿನ ಜನರ ಮನಗೆದ್ದರು, ಇದೇ ವೇಳೆ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಹೇರಿದ್ದನ್ನು ತೀವ್ರವಾಗಿ ಖಂಡಿಸಿ, ತಮಿಳು ಭಾಷೆ, ಸಂಸ್ಕೃತಿ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸಿದರು. ಜೊತೆಗೆ ಈ ಇಬ್ಬರು ನಾಯಕರು ತಮಿಳು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದರ ಮೂಲಕ ಚಳುವಳಿಯ ಸಂದೇಶಗಳನ್ನು ತಮಿಳರ ಮನಮುಟ್ಟುವಂತೆ ಮಾಡಿದರು. ಇವರ ಎಲ್ಲಾ ಸಿನಿಮಾಗಳಿಗೆ ಎಂ.ಜಿ.ರಾಮಚಂದ್ರನ್ ನಾಯಕನಾದದ್ದು ವಿಶéೇಷ. ಇದು ಅಲ್ಲಿನ ಜನರಲ್ಲಿ ನಾಯಕರ ಬಗ್ಗೆ ಅಭಿಮಾನ ಬೆಳೆಯಲು ಕಾರಣವಾಯಿತು. ಇವರ ಈ ಹೋರಾಟ 1967ರಲ್ಲಿ ತಮಿಳುನಾಡಿನಲ್ಲಿ ಪ್ರಪಥಮ ಬಾರಿಗೆ ಕಾಂಗ್ರೇಸೇತರ ಡಿ.ಎಂ.ಕೆ. ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿ, ಅಣ್ಣಾದೊರೆ ಮುಖ್ಯಮಂತ್ರಿಯಾದರು. ಆದರೆ ಕೇವಲ ಎರಡು ವರ್ಷದಲ್ಲಿ ಅಂದರೆ 1969ರಲ್ಲಿ ಅಣ್ಣಾದೊರೆ ಆಕಸ್ಮಿಕವಾಗಿ ನಿಧನರಾದಾಗ 26 ಮಂದಿ ತಮಿಳು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 12 ಮಂದಿ ಚಲಿಸುವ ರೈಲಿನಿಂದ ಬಿದ್ದು ಸಾವಿಗೆ ಶರಣಾಗಿದ್ದರು. ಅವರ ಅಂತಿಮ ಸಂಸ್ಕಾರಕ್ಕೆ ಅಂದಿನ ಮದ್ರಾಸ್ ನಗರದ ಮೆರೀನಾ ಬೀಚ್ ಬಳಿ 14 ಲಕ್ಷ ಅಭಿಮಾನಿಗಳು ಸೇರಿದ್ದು ಇಂದಿಗೂ ವಿಶ್ವದಾಖಲೆ.

ಇದೇ ಪರಂಪರೆ 1987ರಲ್ಲಿ ನಟ ಹಾಗೂ ತಮಿಳುನಾಡಿನ  ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ ನಿಧನರಾದಾಗ ಮುಂದುವರೆದು 19 ಮಂದಿ ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 7 ಮಂದಿ ಸೀಮೆಎಣ್ಣೆ ಸುರಿದುಕೊಂಡು ಸಾವನ್ನಪ್ಪಿದರು. ಇಂತಹ ಅತಿರೇಕದ ಅಭಿಮಾನ ಸಿನಿಮಾ ನಟರ ಮೂಲಕ ಮುಂದುವರಿದು, ಅದು ಕನರ್ಾಟಕದಲ್ಲೂ ಹುಚ್ಚು ಹೊಳೆಯಾಗಿ ಹರಿಯುತ್ತಾ ಇದೀಗ ನಮ್ಮ ನಟರುಗಳನ್ನು ಮತ್ತು ರಾಜಕೀಯ ನಾಯಕರನ್ನು ಆವರಿಸಿಕೊಂಡಿದೆ. ಅಭಿಮಾನಿ ಸಂಘವನ್ನು ನೇರವಾಗಿ ತಿರಸ್ಕರಿದ ಏಕೈಕ ದಕ್ಷಿಣಭಾರತದ ನಟನೆಂದರೆ, ಕಮಲ್ ಹಾಸನ್ ಮಾತ್ರ. ಇಂತಹ ವಿವೇಚನೆ ನಮ್ಮ ಜನಪ್ರತಿನಿಧಿಗಳಿಗೆ ಬರಬೇಕಾಗಿದೆ. ಜೊತೆಗೆ ಈ ಅಭಿಮಾನಿಗಳ ಅತಿರೇಕಗಳನ್ನು ರೋಚಕತೆಯಿಂದ ಬಿಂಬಿಸುವ ನಮ್ಮ ದೃಶ್ಯ ಮಾಧ್ಯಮಗಳು ಕೂಡ ಒಮ್ಮೆ ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಕೆಂಪು ದೀಪದ ಗೂಟದ ಕಾರಿನ ನೆಪದಲ್ಲಿ..

– ಚಿದಂಬರ ಬೈಕಂಪಾಡಿ

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಕೆಲವರಿಗೆ ಅದೇನೋ ಒಂಥಾರಾ… ಅನ್ನಿಸುತ್ತಿರಬೇಕಲ್ಲವೇ?. ನಗೆಯ ಮೂಲಕವೇ ಎಲ್ಲರನ್ನೂ ಗೆಲ್ಲುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುವ ಸದಾನಂದ ಗೌಡರು ಇಡುತ್ತಿರುವ ಒಂದೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಪಕ್ಷ ರಾಜಕಾರಣ ಅದೇನೇ ಇದ್ದರೂ ಮುಖ್ಯಮಂತ್ರಿಯಾಗಿ ಅವರು ಕರ್ನಾಟಕವನ್ನು ಹೇಗೆ ಮುನ್ನಡೆಸುತ್ತಾರೆನ್ನುವುದು ಬಹುಮುಖ್ಯವಾಗುತ್ತದೆ.

ನೆನೆಪಿರಬಹುದು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ಕನಸಿನ ಪಂಚಾಯತ್‌ರಾಜ್ ವ್ಯವಸ್ಥೆ ಅವರ ನಿಧನದ ನಂತರ ಹೇಗಾಗಿಹೋಯಿತು ಎನ್ನುವುದು.
ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಕನಸುಕಂಡ ದಿವಂಗತ ರಾಮಕೃಷ್ಣ ಹೆಗಡೆಯವರಿಗೆ ಸಾಥ್ ನೀಡಿದ ದಿವಂಗತ ಅಬ್ದುಲ್ ನಜೀರ್ ಸಾಬ್ ಯಾನೇ ನೀರು ಸಾಬ್ ನಂತರ ಪಂಚಾಯತ್‌ರಾಜ್ ವ್ಯವಸ್ಥೆ ಮೊನಚುಕಳೆದುಕೊಂಡು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಂತಾಗಿದೆ.

ಯಾಕಿಷ್ಟು ಪೀಠಿಕೆಯೆಂದರೆ ಮೊನ್ನೆ ತಾನೇ ಬೆಂಗಳೂರಲ್ಲಿ ರಾಜ್ಯದ ವಿವಿಧ ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಸಭೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಜರಗಿದಾಗ ಗಮನ ಸೆಳೆದ ಒಂದು ಬೇಡಿಕೆ. ‘ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಕಾರಿಗೆ ಕೆಂಪು ದೀಪ ಅಳವಡಿಸಲು ಅನುಮತಿ ಕೊಡಬೇಕು’ ಎನ್ನುವುದು. ಸಭೆಯ ಕಲಾಪವನ್ನು
ಟಿವಿಯಲ್ಲಿ ಗಮನಿಸುತ್ತಿದ್ದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮಾತನಾಡುತ್ತಾ (ನಗು ನಗುತ್ತಲೇ) ‘ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು ಕೆಂಪುದೀಪವಿರುವ ಗೂಟದ ಕಾರು ಬೇಕೆನ್ನುತ್ತಿದ್ದಾರೆ. ನಿಜ, ಗೂಟದ ಕಾರಲ್ಲಿ ತಿರುಗಾಡಬೇಕೆನ್ನುವ ಆಸೆ ಅವರಿಗಿದೆ, ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರ ಕಾರುಗಳಿಗೆ ಕೆಂಪು
ದೀಪ ಅಳವಡಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ, ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಕೆಲಸ ಕಾರ್ಯಗಳನ್ನು ಮಾಡಲಾಗುವುದು’. ಮುಂದೆ ಟಿವಿ ವಾರ್ತಾ ವಾಚಕಿಯ ಮುಖ-ಧ್ವನಿ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾಗ ೧೯೮೭ರಲ್ಲಿ ಜ್ಯಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರುಗಳಿಗೆ ಕೆಂಪು ದೀಪ ಅಳವಡಿಸಿದ, ಜಿಲ್ಲಾಪಂಚಾಯತ್ ಲೋಗೋ ಇರುವ ಬಾವುಟ ಸಿಕ್ಕಿಸಿಕೊಂಡ ಗೂಟದ ಕಾರಿತ್ತು. ರಾಜ್ಯ ಸಚಿವರಿಗಿರುವ ಎಲ್ಲಾ ಸ್ಥಾನಮಾನಗಳನ್ನು ಕೊಟ್ಟಿದ್ದರು. ಹಳ್ಳಿಯ ಕಿರಿದಾದ ರಸ್ತೆಗಳಲ್ಲಿ ಕೆಂಪುದೀಪದ ಗೂಟದ ಕಾರು ಕಂಡು ಮಕ್ಕಳು ರೋಮಾಂಚನಗೊಳ್ಳುತ್ತಿದ್ದರು. ಕಾರು ನಿಂತ ಕೂಡಲೇ ಕಾರಿನ ಬಾಗಿಲು ತೆರೆಯಲು ಹಳ್ಳಿಯ ಪುಢಾರಿಗಳು ಮುಗಿಬೀಳುತ್ತಿದ್ದರು. ಜಿಲ್ಲಾಪಂಚಾಯತ್ ಅಧ್ಯಕ್ಷರು ಕಾರಿನಿಂದ ಇಳಿಯುತ್ತಿದ್ದಂತೆಯೇ ಜಿಲ್ಲಾಮಂತ್ರಿಗೆ ಅದ್ದೂರಿ ಸ್ವಾಗತ ನೀಡಲಾಗುತ್ತಿತ್ತು.

ಜಿಲ್ಲಾಪಂಚಾಯತ್ ಅಧ್ಯಕ್ಷರೆಂದರೆ ಜಿಲ್ಲೆಯ ಪ್ರಥಮಪ್ರಜೆ. ಪ್ರೊಟೋಕಾಲ್ ಪ್ರಕಾರ ಅವರಿಗೆ ಗಣ್ಯರನ್ನು ಬರಮಾಡಿಕೊಳ್ಳಲು ಅವಕಾಶವಿತ್ತು. ಹಿರಿಯ ಐಎಎಸ್  ಅಧಿಕಾರಿ ಮುಖ್ಯಕಾರ್ಯದರ್ಶಿಯಾಗಿದ್ದರು. ಜಿಲ್ಲಾಪಂಚಾಯತ್ ವ್ಯಾಪ್ತಿಗೆ ಬರುವ ಅಧಿಕಾರಿಗಳು, ಸಿಬ್ಬಂಧಿಗಳಿಗೆ ರಜೆ ಮಂಜೂರುಮಾಡುವ ಅಧಿಕಾರ ಜಿಲ್ಲಾಪಂಚಾಯತ್ ಅಧ್ಯಕ್ಷರಿಗಿತ್ತು. ಶಿಕ್ಷಕರನ್ನು ಸ್ಥಳೀಯವಾಗಿಯೇ ನೇಮಕ ಮಾಡಿಕೊಳ್ಳಲು ಡಿಎಲ್‌ಆರ್‌ಸಿ ಸಮಿತಿ ಅಸ್ತಿತ್ವದಲ್ಲಿತ್ತು. ಜಿಲ್ಲೆಯ ಯಾವುದೇ ಹಳ್ಳಿಯಲ್ಲಿ ರಸ್ತೆ, ಚರಂಡಿ, ಡಾಮರೀಕರಣ, ಕಿಂಡಿ ಅಣೆಕಟ್ಟು, ಕೊಳವೇ ಬಾವಿ ಕೊರೆಯುವುದು, ನೀರು ಸರಬರಾಜು ಮಾಡುವುದು ಇತ್ಯಾದಿ..ಇತ್ಯಾದಿಗಳೆಲ್ಲವೂ ಜಿಲ್ಲಾಪಂಚಾಯತ್ ಸದಸ್ಯರ ಸಲಹೆ ಆಧರಿಸಿ ಅನುಷ್ಠಾನಕ್ಕೆ ತರುವ ಅವಕಾಶವಿತ್ತು, ಎಲ್ಲದಕ್ಕೂ ಜಿಲ್ಲಾಪಂಚಾಯತ್‌ಗೇ ಪರಮಾಧಿಕಾರ.

ಜಿಲ್ಲಾಪಂಚಾಯತ್ ಸಭೆ ತೆಗೆದುಕೊಂಡ ನಿರ್ಣಯವನ್ನು ಜ್ಯಾರಿಗೆ ತರಲು ಮುಖ್ಯಕಾರ್ಯದರ್ಶಿ (ಈಗ ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಬದ್ಧರಿದ್ದರು. ಸರ್ಕಾರದ ಗಮನಕ್ಕೆ ತರಬಹುದು. ಸರ್ಕಾರದ ಯಾವುದೇ ಸುತ್ತೋಲೆಗಳು, ಆದೇಶಗಳು ಜಿಲ್ಲಾಪಂಚಾಯತ್ ಮೇಲೆ ಸವಾರಿ ಮಾಡುವಂತಿರಲಿಲ್ಲ. ಶಾಸಕರು ಜಿಲ್ಲಾಪಂಚಾಯತ್ ಸಭೆಗೆ ಕಾಯಂ ಆಹ್ವಾನಿತರು. ಶಾಸಕರು ಸಲಹೆ ಕೊಡಬಹುದು ಹೊರತು ಜಿಲ್ಲಾಪಂಚಾಯತ್ ಸದಸ್ಯರ ಭಾವನೆಗಳಿಗೆ ವಿರೋಧ ಮಾಡುವಂತಿಲ್ಲ. ಜಿಲ್ಲಾಪಂಚಾಯತ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ.

ಇದು ಗಾಂಧಿ ಕಂಡಿದ್ದ ರಾಮರಾಜ್ಯ, ಜನರ ಕೈಗೇ ಅಧಿಕಾರ ಎನ್ನುವ ನಿಜವಾದ ಅರ್ಥ. ಆರುತಿಂಗಳಿಗೊಮ್ಮೆ ಕಡ್ಡಾಯವಾಗಿ ಗ್ರಾಮ ಸಭೆ ನಡೆಯಬೇಕು, ಆ ಸಭೆಯಲ್ಲಿಯೇ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆಮಾಡಬೇಕು. ಈ ಕಾರಣಕ್ಕಾಗಿಯೇ ಅಂದು ಜಿಲ್ಲಾಪಂಚಾಯತ್ ಸದಸ್ಯರ ಮನೆ ಮುಂದೆ ಬೆಳಗಾಗುವ ಮುನ್ನವೇ ಜನಜಂಗುಳಿ ಇರುತ್ತಿತ್ತು. ಶಾಸಕರು ಹಳ್ಳಿಯ ಜನರಿಗೆ ಅನಿವಾರ್ಯವಾಗಿರಲಿಲ್ಲ. ಅವರಿಗೆ ಜಿಲ್ಲಾಪಂಚಾಯತ್ ಸದಸ್ಯನೇ ಶಾಸಕ, ಜಿಲ್ಲಾಪಂಚಾಯತ್ ಅಧ್ಯಕ್ಷರೇ ಜಿಲ್ಲೆಯ ಮುಖ್ಯಮಂತ್ರಿ.

ಓರ್ವ ಸಾಮಾನ್ಯ ವರದಿಗಾರನಾಗಿ ನಾನು ಜಿಲ್ಲಾಪಂಚಾಯತ್ ಕಾರ್ಯಕಲಾಪಗಳನ್ನು ಅಂದು ಹತ್ತಿರದಿಂದ ಕಂಡು ಅನುಭವಿಸಿದ ಸಂಗತಿಗಳು. ಜಿಲ್ಲಾಪಂಚಾಯತ್ ಸಭೆಗೆ ಬರುವವರು ಅಧ್ಯಕ್ಷರಿಗೆ ಕೈಜೋಡಿಸಿ ವಂದಿಸಿ ಸಭಾಂಗಣ ಪ್ರವೇಶಿಸಬೇಕು, ಹೋಗುವಾಗಲೂ ಹಾಗೆಯೇ ಕೈಮುಗಿದು ನಿರ್ಗಮಿಸಬೇಕು. ವಿಧಾನ ಸಭಾ ಕಲಾಪಗಳ ಪಡಿಯಚ್ಚು ಅಂದಿನ ಜಿಲ್ಲಾಪಂಚಾಯತ್ ಸಭೆಗಳು.

ಅಂದಿನ ದಿನಗಳಲ್ಲಿ ಜಿಲ್ಲಾಪಂಚಾಯತ್ ಸದಸ್ಯರ ವಾದವೈಖರಿ, ವಿಷಯ ಮಂಡನೆ ವಿಧಾಸಭೆಯೊಳಗಿನ ಕಲಾಪದಂತೆಯೇ (ಹಿಂದಿನ ವಿಧಾನ ಸಭೆಯ ಕಲಾಪ- ಇಂದಿನದ್ದಲ್ಲ) ಇರುತ್ತಿತ್ತು. ಪಕ್ಷ ರಾಜಕಾರಣಕ್ಕೆ ಅವಕಾಶವಿರಲಿಲ್ಲ, ಅಭಿವೃದ್ಧಿ ಹೇಗೆ ?, ಎಲ್ಲಿ ಆಗಬೇಕು ?, ಯಾವ ರೀತಿ ಮಾಡಬೇಕು ?, ಅದರಿಂದ ಹಳ್ಳಿಯ
ಜನರಿಗೆ ಆಗುವ ಪ್ರಯೋಜನ ಎಷ್ಟು ?- ಇವುಗಳ ಸುತ್ತಲೇ ಚರ್ಚೆ ಇರುತ್ತಿತ್ತು.

ಈಗ ಹಿಂದಿನ ಜಿಲ್ಲಾಪಂಚಾಯತ್ ಒಂದು ನೆನಪು ಮಾತ್ರ. ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಅವರ ಕಲ್ಪನೆಯ ಜಿಲ್ಲಾಪಂಚಾಯತ್ ಕಳೆದುಹೋಗಿದೆ. ಸರ್ಕಾರದ ಕಪಿಮುಷ್ಠಿಯಲ್ಲಿ ಜಿಲ್ಲಾಪಂಚಾಯತ್ ನಲುಗುತ್ತಿದೆ. ಜಿಲ್ಲಾಪಂಚಾಯತ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಎಷ್ಟು ಬೆಲೆ ಇದೆ ಎನ್ನುವುದನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಸರ್ಕಾರದ ಸುತ್ತೋಲೆ, ಆದೇಶಗಳೇ ಮುಖ್ಯ ಹೊರತು ಸದಸ್ಯರ ಭಾವನೆಗೆ ಈಗ ಕವಡೆ ಕಿಮ್ಮತ್ತು ಇಲ್ಲ.

ಆದ್ದರಿಂದ ಈಗ ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು ಕೇಳುತ್ತಿರುವ ಕೆಂಪು ದೀಪದ ಗೂಟದ ಕಾರು ಕೊಡುವುದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿ ಕಷ್ಟವಾಗುವುದಿಲ್ಲ. ಆದರೆ ಇಂಥ ಬೇಡಿಕೆಯಿಟ್ಟು, ಅದು ಈಡೇರಿದರೆ ಸಂತೃಪ್ತರಾಗಿ ಬಿಡುವ  ಅಧ್ಯಕ್ಷರುಗಳಿಗೆ ಒಂದೇ ಒಂದು ಪ್ರಶ್ನೆ ನೀವು ಕೆಂಪುದೀಪದ ಗೂಟದ ಕಾರಿನಲ್ಲಿ ಸುತ್ತಾಡಿದರೆ ಹಳ್ಳಿ ಉದ್ಧಾರವಾಗುವುದೇ?

ನಿಮಗೆ ಸ್ವತಂತ್ರ ಅಧಿಕಾರಬೇಡವೇ ? ಎಲ್ಲಿ ರಸ್ತೆಯಾಗಬೇಕು, ಎಲ್ಲಿ ಚರಂಡಿಯಾಗಬೇಕೆಂದು ನಿರ್ಧರಿಸುವ ಅಧಿಕಾರ ನಿಮಗಿದೆಯೇ? ಜಿಲ್ಲಾಪಂಚಾಯತ್ ಸಭೆಯಲ್ಲಿ ನೀವು ಮಾಡಿದ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೈತೊಳೆದುಕೊಳ್ಳುತ್ತಾರೆ, ಸರ್ಕಾರದ ಸುತ್ತೋಲೆ, ಆದೇಶಗಳನ್ನು ಭಗವದ್ಗೀತೆಯಂತೆ ಕಾಣುತ್ತಾರಲ್ಲಾ ನಿಮ್ಮ ಧ್ವನಿಗೇನು ಬೆಲೆ ಇದೆ ?

ರಾಜ್ಯ ಸರ್ಕಾರದ ಅನುದಾನವನ್ನು ಸದಸ್ಯರಾದವರು ತಮ್ಮ ಕ್ಷೇತ್ರಗಳಿಗೆ ನೇರವಾಗಿ ಹಂಚಿಕೆ ಮಾಡಿಸಿಕೊಳ್ಳಲು ಸಾಧ್ಯವೇ ? ಅಧ್ಯಕ್ಷರೇ ನಿಮ್ಮ ಜಿಲ್ಲಾಪಂಚಾಯತ್‌ನಲ್ಲಿ ಸಾಮಾನ್ಯ ಸಿಬ್ಬಂದಿಯ ಮೇಲೆ ಕ್ರಮ ಜರಗಿಸುವ ಅಧಿಕಾರವಿದೆಯೇ ನಿಮಗೆ ?
ಮುಖ್ಯಮಂತ್ರಿ ಸದಾನಂದ ಗೌಡರು ನಗುನಗುತ್ತಲೇ ಗೂಟದ ಕಾರು ಒದಗಿಸುವ ಸುಳಿವು ಕೊಟ್ಟರು, ಅಧ್ಯಕ್ಷರು ಖುಷಿಯಾದರು, ನನಗೂ ಖುಷಿ. ಆದರೆ ಕಳೆದುಹೋದ ಜಿಲ್ಲಾಪಂಚಾಯತ್ ವ್ಯವಸ್ಥೆಯ ಬಗ್ಗೆ ನೋವಿದೆ.

ಹೊಸದಿಕ್ಕಿನತ್ತ ನಾಡನ್ನು ಮುನ್ನಡೆಸುವ, ರಾಜ್ಯವನ್ನು ಕಟ್ಟಿಬೆಳೆಸುವ ಸಂಕಲ್ಪ ಮಾಡಿರುವ ಸದಾನಂದ ಗೌಡರಿಗೆ, ಕಳೆದುಹೋಗಿರುವ ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಹುಟ್ಟುಹಾಕಿದ್ದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹುಡುಕಿಕೊಡಲು ಸಾಧ್ಯವೇ ? ಹೆಗಡೆ, ನಜೀರ್ ಸಾಬ್ ಈಗಲೂ ಹಳ್ಳಿಯ ಜನರಿಗೆ ನೆನಪಾಗುತ್ತಾರೆ ಯಾಕೆಂದರೆ ಅವರು ಜನರ ಮನಸ್ಸಿನಲ್ಲಿ ಬೇರೂರಿದ್ದಾರೆ. ಮಂಡೆಕೋಲಿನಂಥ ಕುಗ್ರಾಮದಲ್ಲಿ ಜನಿಸಿ ವಿಧಾನ ಸೌಧದ ಸೂತ್ರಹಿಡಿದಿರುವ ಈ ಕಾಲಘಟ್ಟದಲ್ಲಿ ಹಳ್ಳಿಯ ಜನರ ಪರವಾಗಿ ಒಂದೇ ಒಂದು ಬೇಡಿಕೆ ಜನರ ಕೈಗೆ ನಿಜವಾದ ಅಧಿಕಾರ ಕೊಡಿ, ಸಾಧ್ಯವೇ ?

ಸಾವೆಂಬುದು ಬದುಕಿನಲ್ಲಿ ಬರುವ ಏಕೈಕ ಆಮಂತ್ರಣ

ತಂತ್ರಜ್ಙಾನ ರಂಗದಲ್ಲಿ ದಂತ ಕಥೆಯಂತೆ ಬದುಕಿ ಇದೇ 5 ರಂದು ತೀರಿಹೋದ ಸ್ಟೀವ್ ಜಾಬ್ಸ್‌ದು ತನ್ನ ಹೊಸ ಹೊಸ ಅವಿಷ್ಕಾರಗಳ ಮೂಲಕ ಇಂದಿನ ತಲೆಮಾರಿನ ಹೃದಯಗಳಲ್ಲಿ ಶಾಶ್ವತ ನಿಲ್ಲುವಂತಹ ವ್ಯಕ್ತಿತ್ವ. ಸಾವಿನ ತೂಗುಕತ್ತಿಯ ಕೆಳಗೇ ಬದುಕು ದೂಡುತ್ತಾ ಜಗತ್ತಿನ ಮಾಹಿತಿ ರಂಗಕ್ಕೆ ಐಪ್ಯಾಡ್, ಐಪಾಡ್, ಐಪೊನ್ ಗಳನ್ನು ನೀಡಿದ ಅಪ್ರತಿಮ ಸಾಹಸಿ, ಸ್ಟೀವ್. 2005 ರ ಜೂನ್ 12 ರಂದು ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿ.ವಿ.ಯ ಘಟಿಕೋತ್ಸವದಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳಲು ಸಿದ್ಧವಾಗಿದ್ದ ಯುವ ಜನಾಂಗವನ್ನು ಕುರಿತು ಸ್ಟೀವ್ ಮಾಡಿದ ಭಾಷಣ ಇಂದಿಗೂ ಪ್ರಸಿದ್ಧವಾಗಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

ಡಾ.ಎನ್. ಜಗದೀಶ್ ಕೊಪ್ಪ

ನಾನು 17 ನೇ ವಯಸ್ಸಿನಲ್ಲಿ ಓದಿದ ವಾಕ್ಯ ನನಗಿನ್ನೂ ನೆನಪಿದೆ. ಆ ಸಾಲುಗಳು ಹೀಗಿದ್ದವು: “ಈ ದಿನವೇ ನನ್ನ ಕಡೆಯ ದಿನವೆಂದು ನೀನು ಬದುಕಿದರೇ ನಿನ್ನ ನಿರ್ಧಾರ ಸರಿ.”‘ ಕಳೆದ 33 ವರ್ಷಗಳಿಂದಲೂ ನನ್ನನ್ನು ಈ ಸಾಲುಗಳು ಕಾಡುತ್ತಾ ಬದುಕನ್ನ ಮುನ್ನೆಡೆಸಿವೆ. ಪ್ರತಿ ದಿನ ಬೆಳಿಗ್ಗೆ ಕನ್ನಡಿಯ ಮುಂದೆ ನಿಂತು ನಾನು ಕೇಳಿಕೊಳ್ಳುತ್ತೇನೆ, ” ಈದಿನ ನಿನ್ನ ಕೊನೆಯ ದಿನವಿರಬಹುದೆ?” ಆವಾಗ ನನ್ನ ಒಳ ಮನಸ್ಸು ಹೇಳುತ್ತದೆ, “ಇಲ್ಲ ಇನ್ನೂ ಹಲವಾರು ದಿನಗಳು ಸರತಿಯ ಸಾಲಿನಲ್ಲಿ ಕಾಯುತ್ತಿವೆ,” ಎಂದು. ಆಗ ನನಗನಿಸುತ್ತದೆ, ಹೌದು, ನನ್ನಿಂದ ಕೆಲವು ಬದಲಾವಣೆಗಳು ಆಗಬೇಕಾಗಿದೆಯೆಂದು. ನಾನು ಸಧ್ಯದಲ್ಲೇ ಸಾಯುತ್ತೀನಿ ಎಂದು ನಾನು ಬಲ್ಲೆ, ಈ ಕಾರಣಕ್ಕಾಗಿ ಬದುಕಿನಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಬಾಚಿ ತಬ್ಬಿಕೊಳ್ಳುತಿದ್ದೇನೆ. ಏಕೆಂದರೆ, ಸಾವಿನ ಸಮ್ಮುಖದಲ್ಲಿ ಸಂತೋಷ, ಮುಜುಗರ, ವೈಫಲ್ಯ ಇವೆಲ್ಲವೂ ಗೌಣ. ಹಾಗಾಗಿ ಬದುಕಿನ ವಾಸ್ತವ ಸಂಗತಿಗಳ ಬಗ್ಗೆ ಯೋಚಿಸುತ್ತೇನೆ. ಸಾವಿನ ಮೂಲಕ ಬದುಕಿನಲ್ಲಿ ಎದುರಿಸಬೇಕಾದ ಹಲವಾರು ಸಂಗತಿಗಳು ದೂರವಾಗುತ್ತವೆ. ನೀನು ಈಗಾಗಲೇ ಬತ್ತಲೆಯಾಗಿರುವಾಗ ನಿನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನೀನು ನಡೆಯಲೇಬೇಕು ಎಂಬುದು ನನ್ನ ಅಂತರಂಗದ ಧ್ವನಿಯಾಗಿದೆ.

ಒಂದು ವರ್ಷದ ಹಿಂದೆ ಬೆಳಗಿನ ಜಾವ ಆಸ್ಪತ್ರೆಯಲ್ಲಿ ನನ್ನ ದೇಹವನ್ನು ತಪಾಸಣೆಗೆ ಒಳಪಡಿಸಿದಾಗ ನನ್ನ ಮೆದೋಜೀರಕ ಗ್ರಂಥಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ದೃಢಪಟ್ಟಿತು. ನನಗೆ ಮೇದೋಜೀರಕ ಗ್ರಂಥಿ ಅಂದರೆ ಏನೆಂಬುದು ಗೊತ್ತಿರಲಿಲ್ಲ, ವೈದ್ಯರು ಈ ಬಗ್ಗೆ ವಿವರಿಸಿ, ಬಹಳ ದಿನ ಬದುಕುವ ಆಸೆಯನ್ನ ನಾನು ತ್ಯಜಿಸುವಂತೆ ಸೂಚಿಸಿದರು. ಅವರ ಸೂಚನೆ ಸಾವಿಗೆ ಸಿದ್ಧವಾಗಿರು ಎಂಬಂತಿತ್ತು. ಜೊತೆಗೆ ನನ್ನ ಮಕ್ಕಳಿಗೆ, ಪತ್ನಿಗೆ ಮುಂದಿನ ಹತ್ತು ವರ್ಷಗಳಲ್ಲಿ ನಾನು ಏನು ಹೇಳಬೇಕೆಂದಿದ್ದೆ ಅವೆಲ್ಲವನ್ನು ಕೆಲವೇ ತಿಂಗಳಲ್ಲಿ ಹೇಳಿ ಮುಗಿಸು ಎಂಬಂತಿತ್ತು. ಇದರಿಂದ ನನ್ನ ಕುಟುಂಬಕ್ಕೆ ಒಳಿತಾಗಿ ನನ್ನ ಸಾವಿನ ದಾರಿ ಸುಗಮವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿತ್ತು. ಆ ದಿನ ಸಂಜೆಯವರೆಗೆ ಆಸ್ಪತ್ರೆಯಲ್ಲಿ ನನ್ನನ್ನು ಇರಿಸಿಕೊಂಡು ನನ್ನ ಗಂಟಲಿನ ಹಾಗೂ ಹೊಟ್ಟೆಯ ಒಳ ಭಾಗದ ಮಾಂಸದ ತುಣುಕುಗಳನ್ನು ತೆಗೆದು, ಜೈವಿಕ ಪರೀಕ್ಷೆಗೆ ಒಳಪಡಿಸಲಾಯ್ತು. ಆ ಸಂದರ್ಭದಲ್ಲಿ ಅಲ್ಲಿದ್ದ ನನ್ನ ಪತ್ನಿಗೆ ವೈದ್ಯರು ಹೊಸ ಭರವಸೆಯೊಂದನ್ನು ಕೊಟ್ಟರು. ಶಸ್ರಚಿಕಿತ್ಸೆ ಮೂಲಕ ರೋಗಕ್ಕೆ ತುತ್ತಾಗಿರುವ ಭಾಗಗಳನ್ನು ತೆಗೆದು ಇನ್ನಷ್ಟು ಹೊಸ ಜೀವಕೋಶಗಳನ್ನು ಬೆಳೆಸುವುದರ ಮೂಲಕ ಸಾವನ್ನು ಒಂದಷ್ಟು ವರ್ಷಗಳ ಕಾಲ ಮುಂದೂಡಬಹುದೆಂಬುದೇ ವೈದ್ಯರ ಭರವಸೆಯಾಗಿತ್ತು. ನಿರಾಸೆಯ ಕಡಲಲ್ಲಿ ಮುಳುಗಿದ್ದವನಿಗೆ ಅದೊಂದು ಸಣ್ಣ ಭರವಸೆಯ ಬೆಳಕು ನನ್ನ ಪಾಲಿಗೆ.

ನಾನು ಯುವಕನಾಗಿದ್ದಾಗ “Whole Earth Catalog” (ಜಗತ್ತಿನ ವಿಷಯಗಳು) ಎಂಬ ಪುಸ್ತಕ ಪ್ರಕಟವಾಗಿತ್ತು. ನನ್ನ ತಲೆಮಾರಿನ ಪಾಲಿಗೆ ಅದೊಂದು ಬೈಬಲ್. ಇದನ್ನು ಸಿದ್ಧಪಡಿಸಿದವರು ಇಲ್ಲೇ ಸಮೀಪದ ಮೆನ್ಲೊ ಪಾರ್ಕ್ ನಲ್ಲಿರುವ ಸ್ಟೀವರ್ಟ್ ಬ್ರಾಂಡ್. ಅವರು ಈ ಪುಸ್ತಕಕ್ಕೆ ಕಾವ್ಯದ ಸ್ಪರ್ಶ ನೀಡಿದ್ದರು. 1960ರ ನಂತರ ನಾವೆಲ್ಲ ಬಲ್ಲಂತೆ ಪರ್ಸನಲ್ ಕಂಪ್ಯೂಟರ್‌ಗಳು ಆವಿಷ್ಕಾರಗೊಂಡು, ಟೈಪ್‌ರೈಟರ್‌ಗಳು, ಪೋಲಾರೈಡ್ ಕ್ಯಾಮೆರಾಗಳು, ಕತ್ತರಿಗಳು ನೇಪಥ್ಯಕ್ಕೆ ಸರಿದವು. ಸ್ಟೀವರ್ಟ್ ಮತ್ತು ಅವನ ತಂಡ ಜಗತ್ತಿನ ವಿಷಯಗಳು ಕುರಿತಾದ ಕೊನೆಯ ಸಂಪುಟವನ್ನು 1970ರಲ್ಲಿ ಹೊರತಂದಿತು. ಅದು ಇವತ್ತಿನ ಗೂಗಲ್‌ನ ಪುಸ್ತಕ ರೂಪ, ಗೂಗಲ್ ಬರುವುದಕ್ಕೆ 35 ವರ್ಷಗಳ ಹಿಂದೆಯೇ, ಎನ್ನಬಹುದು. ಅದೊಂದು ಆದರ್ಶವಾದಿಯಾಗಿತ್ತು. ಹಾಗೆಯೇ ಉಪಯುಕ್ತ ಸಲಕರಣೆಗಳಿಂದ ಮತ್ತು ಉತ್ತಮ ಚಿಂತನೆಗಳಿಂದ ತುಂಬಿತುಳುಕುತ್ತಿತ್ತು. ನನಗೆ ಆ ಕೊನೆಯ ಸಂಪುಟದ ಹಿಂಬದಿಯ ರಕ್ಷಾ ಪುಟದಲ್ಲಿ ಪ್ರಕಟವಾಗಿದ್ದ ಬೆಟ್ಟ ಹತ್ತುತ್ತಿರುವ ಯುವಕರ ಚಿತ್ರಹಾಗೂ ಅದರ ಕೆಳಗೆ ಮುದ್ರಿಸಿದ್ದ “ಸದಾ ಹಸಿವಿನಿಂದಿರು ಮತ್ತು ಸದಾ ಮೂರ್ಖನಂತಿರು” ಎಂಬ ವಾಕ್ಯ ಈಗಲೂ ನೆನಪಿದೆ. ಇಲ್ಲಿ ಹಸಿವೆಂದರೆ ಜ್ಞಾನದ ಹಸಿವು. ಮೂರ್ಖನಂತೆ ಬದುಕುವುದೆಂದರೆ ನಮ್ಮ ಅಹಂಗಳನ್ನು ತ್ಯಜಿಸುವುದು ಎಂದರ್ಥ. ಇಂತಹ ನಾಣ್ಣುಡಿಗಳು ನಿಮ್ಮ ಬದುಕನ್ನು ಮುನ್ನಡೆಸಲಿ ಎಂದು ಹಾರೈಸುತ್ತೇನೆ. ವಂದನೆಗಳು.

(ಚಿತ್ರಕೃಪೆ: ವಿಕಿಪೀಡಿಯ)

ಅಲ್ಲಾ ನೆನಪಿನಲ್ಲಿ ಅಂಬಾರಿ

ಇಂದು ನಾಡಿನೆಲ್ಲೆಡೆ ವಿಜಯ ದಶಮಿ. ನನ್ನ ಸೀಮೆಯಾದ ಮೈಸೂರು ಹಾಗೂ ಬಳ್ಳಾರಿಯ ಹೊಸಪೇಟೆಯ ಸುತ್ತಮುತ್ತ ಈ ಹಬ್ಬಕ್ಕೆ ವಿಶೇಷವಿದೆ. ದಸರಾ ಮೂಲತಃ ವಿಜಯನಗರ ಅರಸರು ಹುಟ್ಟಿ ಹಾಕಿದ ಹಬ್ಬ. ಹಂಪಿಯಲ್ಲಿ ದಸರಾ ನಡೆಯುತಿದ್ದ ಸಮಯದಲ್ಲೇ ಶ್ರಿರಂಗಪಟ್ಟಣದಲ್ಲಿ ವಿಜಯನಗರ ದೊರೆಗಳ ದಂಡನಾಯಕರು ಪ್ರಾರಂಭಿಸಿದ ಈ ನಾಡ ಹಬ್ಬವನ್ನು ಮುಂದೆ ಯದುವಂಶದ ದೊರೆಗಳು ಮೈಸೂರಿನಲ್ಲಿ ಮುಂದುವರಿಸಿದರು.

ಇವತ್ತಿಗೂ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಂದು ವಿಜಯನಗರದ ದೊರೆಗಳಿಗೆ ಸೈನಿಕರಾಗಿದ್ದ ವಾಲ್ಮೀಕಿ ಜನಾಂಗದ ಮನೆಗಳಲ್ಲಿ ಇರುವ ಕತ್ತಿ ಗುರಾಣಿ, ಭರ್ಜಿ ಮುಂತಾದವುಗಳಿಗೆ ಆಯುಧ ಪೂಜೆಯ ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ಇತ್ತೀಚಿಗಿನ ದಿನಗಳಲ್ಲಿ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಪ್ರಾಯೋಜಕತ್ವ ಪಡೆದು ವಿಜೃಂಭಣೆಯಿಂದ ನಡೆದರೂ ಸಹ ಸ್ಥಳೀಯರ ಪಾಲಿಗೆ ಇದೊಂದು ಮದುವಣಗಿತ್ತಿ ಇಲ್ಲದ ಮದುವೆಯಂತೆ. 60 ರ ದಶಕದಲ್ಲಿ ಅಂಬಾರಿಯಲ್ಲಿ ಕುಳಿತು ಸಾಗುತಿದ್ದ ನನ್ನ ನಾಡಿನ ಅಂದಿನ ದೊರೆಯನ್ನು ನೋಡುವುದೇ ಪುಣ್ಯವೆಂದು ನನ್ನ ಹಿರೀಕರು ನಂಬಿದ್ದರು. ದೊರೆಯಿಲ್ಲದ ಅಂಬಾರಿ ಬಗ್ಗೆ ನನ್ನ ಜನಕ್ಕೆ ಈಗ ಆಸಕ್ತಿ ಕಡಿಮೆ.

ಮಂಡ್ಯ ಜಿಲ್ಲೆಯ ನನ್ನೂರಿಂದ ಎತ್ತಿನ ಬಂಡಿಯಲ್ಲಿ ಹೋಗಿ ಮೈಸೂರು ಬೀದಿಯಲ್ಲಿ ನನ್ನಪ್ಪನ ಹೆಗಲ ಮೇಲೆ ಕುಳಿತು ಅಂಬಾರಿಯಲ್ಲಿ ಸಾಗುತಿದ್ದ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಅವರ ಹಿಂಬದಿಯಲ್ಲಿ ಕೂರುತಿದ್ದ ಬಾಲಕ ಶ್ರಿಕಂಠದತ್ತ ಒಡೆಯರ್ ಇವರ ದೃಶ್ಯಗಳ ನೆನಪು ಇಂದಿಗೂ ನನ್ನಲ್ಲಿ ಹಸಿರಾಗಿವೆ.

ಹಳೆಯ ಸಂಗತಿಗಳು ಏನೇ ಇರಲಿ, ಒಂಬತ್ತು ದಿನಗಳ ನವರಾತ್ರಿಯ ಸಡಗರ ಮುಕ್ತಯಗೊಳ್ಳುವುದು ದಸರಾ ಅಂಬಾರಿಯ ಮೆರವಣಿಗೆಯೊಂದಿಗೆ. ಈಗ ನಡೆಯುತ್ತಿರುವ ಅಂಬಾರಿ ಮೆರವಣಿಗೆಯಲ್ಲಿ ನಾವು ಗಮನಿಸಬೇಕಾದ ಒಂದು ವಿಶೆಷವಿದೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಪ್ರತಿಮೆ ಹೊತ್ತು ಸಾಗುವ ಬಲರಾಮ ಎಂಬ ಆನೆಯ ಮಾವುತ ಹಾಗೂ ಅದರ ಕಾವಡಿಗಳು ಮುಸಲ್ಮಾನರು ಎಂಬುದು ವಿಶೇಷ. ನಮ್ಮ ಗಮನವೆಲ್ಲಾ ಅಂಬಾರಿ ಮತ್ತು ಅದನ್ನು ಹೊತ್ತ ಆನೆ ಬಗ್ಗೆ ಕೇಂದ್ರೀಕೃತವಾಗುವುದರಿಂದ ನಾವು ಅವರನ್ನು ಗಮನಿಸುವುದಿಲ್ಲ. ಅದು ತಪ್ಪಲ್ಲ. ಏಕೆಂದರೆ, ನಮ್ಮ ಸಂಸ್ಕೃತಿಯ ಗ್ರಹಿಕೆಯ ನೆಲೆಗಟ್ಟೆ ಅಂತಹದು. ಮೆರವಣಿಗೆಯಲ್ಲಿ ಸಾಗುವ ಮದುಮಗ ಮಾತ್ರ ನಮಗೆ ಮುಖ್ಯವಾಗುತ್ತಾನೆ. ಅವನ ಮುಖ ನಮಗೆ ಕಾಣಲಿ ಎಂದು ತಲೆಮೇಲೆ ದೀಪ ಹೊತ್ತು ಕತ್ತಲೆಯಲಿ ಉಳಿದು ಹೋದವರು ಎಂದೂ ನಮಗೆ ಮುಖ್ಯರಾಗುವುದಿಲ್ಲ. ಅಂತಹದೇ ಕಥೆ ಈ ಅನಾಮಿಕರದು.

ಬಲರಾಮನ ಮಾವುತ ಝಕಾವುಲ್ಲಾ ಸರ್ಕಾರಿ ಸೇವೆಯಿಂದ ನಿವೃತ್ತನಾಗಿ ಎಷ್ಟೋ ವರ್ಷಗಳು ಸಂದಿವೆ, ಆದರೂ ಅಂಬಾರಿ ಮೆರವಣಿಗೆಗಾಗಿ ತಾನು ಪಳಗಿಸಿದ ಆನೆ ಬಲರಾಮನ ಸಂಗಾತಿಯಾಗಿ ತಿಂಗಳು ಕಾಲ ಮೈಸೂರಿನಲ್ಲಿದ್ದು ತನ್ನ ಸೇವೆ ಮುಗಿಸಿ ಎಲೆ ಮರೆ ಕಾಯಿಯಂತೆ ತನ್ನೂರಿಗೆ ಹೊರಟುಬಿಡುತ್ತಾನೆ. ಕಾವಡಿಗಳಾಗಿ ಕೆಲಸ ಮಾಡುವ ಪಾಷ ಮತ್ತು ಅಕ್ರಂ ಆನೆಯೊಂದಿಗೆ ಅರಣ್ಯದ ಬಿಡಾರ ಸೇರುತ್ತಾರೆ.

ಆನೆಗಳನ್ನು ಸದ್ದು ಗದ್ದಲ ಹಾಗೂ ಅಪಾರ ಜನಸ್ತೋಮದ ನಡುವೆ ಶಾಂತ ಸ್ಥಿತಿಯಲ್ಲಿ ಇರುವಂತೆ ನಿಯಂತ್ರಿಸುವುದು ಸುಲಭದ ಸಂಗತಿಯಲ್ಲ. ಅವುಗಳ ಮನಸ್ಸನ್ನು ಅರಿತು, ಆ ಮೂಕ ಪ್ರಾಣಿಗಳ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಮಾವುತನಿಗೆ ಇರಬೇಕು. ಇದಕ್ಕಾಗಿ ದಸರಾ ಮುನ್ನಾ ತಿಂಗಳುಗಟ್ಟಳೆ ಅವುಗಳ ಜೊತೆ ಒಡನಾಡಿ ಅವುಗಳು ಶಾಂತರೀತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.

ದಸರ ಹಿಂದಿನ ದಿನದ ಬೆಳಿಗ್ಗೆಯಿಂದಲೇ ಆನೆಗಳ ಶೃಂಗಾರ ಕಾರ್ಯ ಆರಂಭವಾಗುತ್ತದೆ.ಆ ಕ್ಷಣದಿಂದ ಇವರಿಗೆ ಊಟ ನಿದ್ರೆ ಸೇರುವುದಿಲ್ಲ. ಅಂಬಾರಿಯ ಮೆರವಣಿಗೆ ದಿನದಂದು ಉಪವಾಸವಿದ್ದು , ಮೆರವಣಿಗೆ ಆರಂಭವಾಗುವ ಹೊತ್ತಿನಲ್ಲಿ ಇವರು ಅಲ್ಲಾನನ್ನು ನೆನೆದು ಪ್ರಾರ್ಥಿಸುತ್ತಾರೆ. ತಾಯಿ ಚಾಮುಂಡೇಶ್ವರಿಗೆ, ಚಿನ್ನದ ಅಂಬಾರಿಗೆ ಏನೂ ಧಕ್ಕೆಯಾಗಂತೆ ಅಲ್ಲಾನನ್ನು ಬೇಡಿಕೊಂಡು ಇವರು ಹೊರಟರೆ, ಊಟ ಮಾಡುವುದು ಸಂಜೆ ಅಂಬಾರಿ ಸುಸೂತ್ರವಾಗಿ ಬನ್ನಿ ಮಂಟಪ ತಲುಪಿ ವಾಪಸ್ ಅರಮನೆ ಆವರಣಕ್ಕೆ ಬಂದ ನಂತರವೇ..

ತಮ್ಮ ಧರ್ಮ ಅಥವಾ ಸಂಸ್ಕೃತಿಯಲ್ಲದ ಒಂದು ನಾಡ ಹಬ್ಬಕ್ಕೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಈ ಅನಾಮಿಕ ಜೀವಗಳೆಲ್ಲಿ? ಹಿಂದು ಧರ್ಮದ ರಕ್ಷಣೆಯ ಹೆಸರಿನಲ್ಲಿ ಮೂರು ಕಾಸಿನ ಚಿಂತನೆಗಳ ತಲೆ ತುಂಬಾ ಹೊತ್ತು ವಿಷ ಬಿತ್ತುವ ಮೂಲಭೂತವಾದಿಗಳೆಲ್ಲಿ? ಸುಮ್ಮನೆ ಒದು ಕ್ಷಣ ಯೋಚಿಸಿ.

ಇವತ್ತಿಗೂ ಮಾವುತ ಕಾಯಕದಲ್ಲಿ ಹೆಚ್ಚಿನ ಮಂದಿ ಮುಸ್ಲಿಮರು ತೊಡಗಿಕೊಂಡಿದ್ದು, ಜೊತೆಗೆ ಅನಕ್ಷರಸ್ತರಾಗಿದ್ದಾರೆ. ಇಂತಹ ಮಾವುತರು, ಕಾವಡಿಗಳು ಮತ್ತು ಶಿವಮೊಗ್ಗದ ಆಂಜನೇಯ ದೇವಸ್ಥಾನಕ್ಕೆ ಬೆಳಗಿನ ಪೂಜೆಗೆ ಕಳೆದ 60-70 ವರ್ಷಗಳಿಂದ ಹೂವು ಪೂರೈಸುವ ಮುಸ್ಮಿಂ ಕುಟುಂಬ ಹಾಗೂ ಗುಜರಾತಿನ ರಿಪ್ಲಿಕಾ ರಸ್ತೆಯಲ್ಲಿರುವ ಶ್ರೀ ರಾಮ ದೇಗುಲಕ್ಕೆ ಎಣ್ಣೆ ಬತ್ತಿ ಪೂರೈಸುವ ಬಡ ಮುಸಲ್ಮಾನ ಇವರನ್ನು ನೆನದಾಗ ಜಾತಿಯ ಬಗ್ಗೆ, ಧರ್ಮದ ಬಗ್ಗೆ ಮಾತನಾಡುವುದು ಕೂಡ ಅಪಮಾನ ಮತ್ತು ಅಮಾನುಷ ಎಂದು ಒಮ್ಮೇಲೆ ಅನಿಸಿಬಿಡುತ್ತದೆ.

-ಡಾ.ಎನ್. ಜಗದೀಶ್ ಕೊಪ್ಪ
(ಮಾವುತರ ಬಗ್ಗೆ ಗಮನ ಸೆಳೆದ ಪ್ರಜಾವಾಣಿಯ ರಾಜೇಶ್ ಶ್ರೀವನ ಇವರಿಗೆ ನನ್ನ ಕೃತಜ್ಙತೆಗಳು.)

pic courtesy: gulfkannada.com, mahensimmha.blogspot.com

ಮಲ ಸುರಿದುಕೊಂಡವರಿಗೆ ಇನ್ನೂ ನೆಲೆ ಇಲ್ಲ: ಮಲ ಹೊರುವುದು ನಿಂತಿಲ್ಲ

-ಹನುಮಂತ ಹಾಲಿಗೇರಿ

ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದ ಸವಣೂರು ಪುರಸಭೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ತಲೆ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಸವಣೂರಿನ ಭಂಗಿ ಸಮುದಾಯಕ್ಕೆ ಇನ್ನೂ ನೆಲೆ ಸಿಕ್ಕಿಲ್ಲ! ಮಲ ಹೊರುವ ಅನಿಷ್ಟ ಪದ್ದತಿಯೂ ನಿಂತಿಲ್ಲ.

ಮಲ ಸುರಿದುಕೊಂಡು ಒಂದು ವರ್ಷದ ಮೇಲೆ ಎರಡು ತಿಂಗಳು ಕಳೆದಿದ್ದು,  ಇಷ್ಟೊಂದು ದಿನಗಳಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ವಾರ್ತಾಭಾರತಿಯು ಭಂಗಿ ಸಮುದಾಯದ ಮಂಜುನಾಥ್ ಭಂಗಿಯವರಿಂದ ಮಾಹಿತಿ ಸಂಗ್ರಹಿಸಿತು. ಒಂದು ರೀತಿಯ ಉದಾಸೀನತೆಯಿಂದಲೆ ಮಾತಿಗಿಳಿದ ಮಂಜುನಾಥ್ ಅವರು ಪತ್ರಿಕೆಯೊಂದಿಗೆ ಮಾತಿಗಿಳಿದರು.

ಮಲ ಸುರಿದುಕೊಂಡ ವಿಷಯವು ದೇಶದಾದ್ಯಂತ ಬಿಸಿಬಿಸಿಯಾಗಿ ಸುದ್ದಿಯಾಗುತ್ತಿರುವಾಗ ಸವಣೂರು ಪುರಸಭೆಯು ನಗರದ ಹೊರಗೆ ಮನೆ ಕಟ್ಟಿಸಿ ಕೊಡುವುದಾಗಿ ಹೇಳಿತ್ತು. ಅದರಂತೆ ಜನತಾ ಮನೆಗಳನ್ನು ಕಟ್ಟಿಸಿದ್ದರೂ ಕೂಡ ಅವುಗಳ ಗೊಡೆಗಳು ಕಟ್ಟಿದ ತಿಂಗಳುಗಳಲ್ಲಿಯೆ ಬಿರುಕುಬಿಟ್ಟು ಬೀಳತೊಡಗಿದ್ದರಿಂದ ನಮ್ಮವರ್ಯಾರು ಈ ಬಿರುಕುಬಿಟ್ಟ ಮನೆಗೆ ಹೋಗಿಲ್ಲ. ಆ ಜನತಾ ಮನೆಗಳಿಗೆ ವಿದ್ಯುತ್ ದೀಪದ ವ್ಯವಸ್ಥೆಯನ್ನೂ ಮಾಡಿಲ್ಲ. ಹೀಗಾಗಿ ನಾವು ಇನ್ನು ಕೂಡ ಅದೆ ಮುರುಕಲು ಗುಡಿಸಲುಗಳಲ್ಲಿ ಕಾಲ ತಳ್ಳುತ್ತಿದ್ದೇವೆ ಎಂದು ಅವರು ಅಲವತ್ತುಕೊಂಡರು.

ಕೈ ಎತ್ತಿದ ಮುರಘಾ ಶರಣರು: `ನೀವು ಮತ್ತೆ ಮಲ ಸುರಿದುಕೊಳ್ಳುವ ಪ್ರಯತ್ನ ಮಾಡಬೇಡಿ. ನಿಮಗೆ ಮಠದ ಖರ್ಚಿನಲ್ಲಿಯೆ ಮನೆ ಕಟ್ಟಿಸಿಕೊಡಲಾಗುವುದು’ ಎಂದು ಮಾಧ್ಯಮಗಳ ಮುಂದೆ ಚಿತ್ರದುರ್ಗದ ಮುರುಘಾ ಶರಣರು ಘೋಷಿಸಿದ್ದರು. ಆದರೆ ಘೋಷಿಸಿ ವರ್ಷ ಕಳೆದಿದ್ದರೂ ಶ್ರೀಗಳು ಸವಣೂರಿನತ್ತ ತಲೆ ಹಾಕಲಿಲ್ಲ. “ಈ ಬಗ್ಗೆ ಶರಣರನ್ನೆ ಕೇಳಲು ನಾವೆಲ್ಲರೂ ಒಂದು ದಿನ ಶ್ರೀಗಳ ಮಠಕ್ಕೆ ಪಾದ ಬೆಳೆಸಿದೆವು. ಶ್ರೀಗಳನ್ನು ಕಂಡು ಅವರು ನೀಡಿದ್ದ ವಚನವನ್ನು ನೆನಪಿಸಿದೆವು. ಆದರೆ ಶ್ರೀಗಳು `ನಾನು ಕಟ್ಟಿಸಿಕೊಡುತ್ತೇನೆ ಎಂದು ಹೇಳಿರಲಿಲ್ಲ. ಸರಕಾರದಿಂದ ಕಟ್ಟಿಸಿಕೊಡುತ್ತೇನೆ’ಎಂದು ಹೇಳಿದ್ದೆ ಎಂದು ಜಾರಿಕೊಂಡರು,” ಎಂದು ಮಂಜುನಾಥ್ ಹೇಳಿದರು.

ಮಲ ಹೊರುವುದು ಇನ್ನು ನಿಂತಿಲ್ಲ: ಪುರಸಭೆ ಮಲ ಹೊರುವ ಪದ್ದತಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ ಕೂಡ ಈ ಅನಿಷ್ಟ ಪದ್ದತಿ ಇನ್ನೂ ನಿಂತಿಲ್ಲ. ನಗರದ ಜನರು ತಮ್ಮ ಮನೆಗಳಲ್ಲಿನ ಶೌಚಾಲಯಗಳು ತುಂಬಿ ಬಾಯಿ ಕಟ್ಟಿದರೆ ನಮ್ಮ ಮನೆಗಳ ಹತ್ತಿರ ಬಂದು, ಹೆಚ್ಚು ಹಣದ ಆಸೆ ತೋರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಕಹಿಸತ್ಯವನ್ನು ಅವರು ಒಪ್ಪಿಕೊಂಡರು.

ಮನೆ ಕೇಳಿದರೆ ದನ ಕೊಡಿಸಿದರು: ನಾವು ಮನೆ ಕೇಳಿದರೆ ಪುರಸಭೆಯವರು ಸಾಲದ ಮೇಲೆ ನಮಗೆ ದನ, ಕುರಿ, ಮೇಕೆಗಳನ್ನು ಕೊಡಿಸಿದರು. ನಮಗೆ ಮನೆ ಇಲ್ಲದ್ದರಿಂದ ಅವುಗಳನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ನಮಗೆ ಅವುಗಳನ್ನು ಸಾಕುವ ವಿಧಾನ ಗೊತ್ತಿರಲಿಲ್ಲ. ಅವುಗಳಿಗೆ ಮೇವು ಕೂಡ ಇಲ್ಲದ್ದರಿಂದ ಅವುಗಳಲ್ಲಿ ಕೆಲವು ಸತ್ತವು. ಉಳಿದವುಗಳನ್ನು ನಾವೆ ಮಾರಿದೆವು. ಈಗ ಅವುಗಳ ಮೇಲಿನ ಸಾಲ ತೀರಿಸಿ ಎಂದು ಪುರಸಭೆ ಪೀಡಿಸುತ್ತಿದೆ ಎಂದು ಅವರು ದೂರಿದರು.

ಖಾಯಂ ಕೆಲಸ ಕೊಟ್ಟಿಲ್ಲ: ಖಾಯಂ ಕೆಲಸ ಕೊಡುತ್ತೇವೆ ಎಂದು ಸರಕಾರದ ಮಂತ್ರಿಗಳು ಹೇಳಿದ್ದರು. ಆದರೆ ಇಂದು ಗುತ್ತಿಗೆ ಆಧಾರದ ಮೇಲೆ ಕಡಿಮೆ ಸಂಬಳ ನೀಡಿ ಪೌರ ಕಾಮರ್ಿಕರಾಗಿ ದುಡಿಸಿಕೊಳ್ಳುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನವೀಯ ಆಧಾರದ ಮೇಲೆ `ಒಂದು ಸಲ ವಿಶೇಷ ನೇಮಕಾತಿ’ ಯೋಜನೆ ಅಡಿಯಲ್ಲಿ ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಈ ಬಗ್ಗೆ ಈಗ ಸರಕಾರದವರು ಮಾತನಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಸರಕಾರದ ಕಣ್ಣು ತೆರೆಯಲಿ
ಕಳೆದ ರವಿವಾರ ನಾಡಿನ ಹಿರಿಯ ಕವಿ ಎಸ್.ಜಿ.ಸಿದ್ದರಾಮಯ್ಯ ಅವರು ತಮ್ಮ ಇತ್ತೀಚಿಗಿನ `ಅರಿವು ನಾಚಿತ್ತು’ ಆಧುನಿಕ ವಚನಗಳ ಕೃತಿಯನ್ನು ಇದೆ ಸವಣೂರಿನ ಭಂಗಿ ಸಮುದಾಯದ ಮಂಜುನಾಥ್ ಅವರಿಂದ ಮಲ ಸುರಿದಕೊಂಡ  ಸ್ಥಳದಲ್ಲಿಯೆ ಬಿಡುಗಡೆ ಮಾಡಿಸಿದ್ದರು.

ಅವರು ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿ, “ಭಂಗಿ ಸಮುದಾಯದವರ ಬೇಡಿಕೆಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಮತ್ತು ಅವರ ಬೇಡಿಕೆಗಳು ಮತ್ತೊಮ್ಮೆ ನಾಡಿನಾದ್ಯಂತ ಚರ್ಚೆಯಾಗಬೇಕು. ಆ ಮೂಲಕ ರಾಜ್ಯ ಸರಕಾರದ ಕಣ್ಣು ತೆರೆಸಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಿಂದ ದೂರವಿರುವ ಸವಣೂರಿಗೆ ಹೋಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,” ಎಂದು ತಿಳಿಸಿದರು.

ಮೀನುಗಳ ದುರ್ವಾಸನೆಯಲ್ಲಿ ದಿನದ ಬದುಕು: ನಾವು ವಾಸಿಸುವ ಬಡಾವಣೆಯ ಮುಂದೆಯೆ ಕೆಲವರು ಹಸಿ ಮೀನುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಅದರ ದುರ್ವಾಸನೆಯಿಂದಾಗಿ ಹಲವಾರು ರೋಗಗಳು ನಮ್ಮ ಮನೆಯ ಹೆಣ್ಣ್ಣುಮಕ್ಕಳನ್ನು ಸದಾ ಹಾಸಿಗೆಯಲ್ಲಿಯೆ ಇರುವಂತೆಯೆ ಮಾಡುತ್ತಿದ್ದವು. ಇದು ಕೂಡ ಮಲ ಸುರಿದುಕೊಳ್ಳಲು ಕಾರಣವಾಗಿತ್ತು. ಆದರೆ ಪ್ರತಿಭಟನೆಯ ನಂತರ ಮೀನು ವ್ಯಾಪಾರವನ್ನು ಬಂದ್ ಮಾಡಿದ್ದರು. ಈಗ ಮತ್ತೆ ಮೀನು ವ್ಯಾಪಾರ ನಮ್ಮ ಗುಡಿಸಲುಗಳ ಮುಂದೆಯೆ ಪ್ರಾರಂಭವಾಗಿದೆ. ಇದರ ಬಗ್ಗೆ ಪುರಸಭೆ ಯಾವ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

ಮಲ ಸುರಿದಕೊಂಡ ಸಂದರ್ಭದಲ್ಲಿ ಇಡಿ ಆಡಳಿತ ಯಂತ್ರವೇ ಸವಣೂರಿಗೆ ಪಾದ ಬೆಳೆಸಿ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ನಿಧಾನಕ್ಕೆ ಮಲ ಸುರಿದಕೊಂಡ ಸುದ್ದಿ ರದ್ದಿ ಸೇರಿದ ಮೇಲೆ ಸರಕಾರ ತಾನು ನೀಡಿದ್ದ ಭರವಸೆಯನ್ನು ಮರೆತು ನಿದ್ರೆಗೆ ಜಾರಿರುವುದು ದುರದೃಷ್ಟಕರ. ಸವಣೂರಿನ ಭಂಗಿಗಳು ರೋಸಿ ಹೋಗಿ ಮತ್ತೊಮ್ಮೆ ಮಲ ಸುರಿದುಕೊಳ್ಳುವ ಮುನ್ನವೆ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಮಾನವೀಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿ
ಈ ಹಿಂದೆ ಗ್ರಾಮೀಣ ಕೃಪಾಂಕ ಯೋಜನೆಯಡಿ ನೇಮಕ ಮಾಡಿಕೊಂಡಿದ್ದ ನೌಕರರನ್ನು ಕಾನೂನು ತೊಡಕಿನಿಂದ ಮತ್ತೆ ರದ್ದುಪಡಿಸಿ ಮನೆಗೆ ಕಳುಹಿಸಲಾಗಿತ್ತು. ಆಗ ಬಹಳಷ್ಟು ನೌಕರರು ಸರಕಾರದ ನಿರ್ಧಾರದಿಂದ ರೋಸಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರ ಕೂಡಲೆ ಕಾರ್ಯೋನ್ಮುಖವಾಗಿ ಅಳಿದುಳಿದ ನೌಕರರನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನವೀಯ ಆಧಾರದ ಮೇಲೆ `ಒಂದು ಸಲ ವಿಶೇಷ ನೇಮಕಾತಿ’ ಯೋಜನೆ ಅಡಿಯಲ್ಲಿ  ನೇಮಕ ಮಾಡಿಕೊಂಡಿತ್ತು. ಅದೆ ರೀತಿಯಲ್ಲಿ ಈ ಸವಣೂರಿನ ಬಂಗಿ ಸಮುದಾಯದ ಯುವಕರನ್ನು ನೇಮಕ ಮಾಡಿಕೊಳ್ಳಬೇಕಿದೆ
-ಬಿ.ಶ್ರೀನಿವಾಸ್, ಜಿಲ್ಲೆಯ ಕಥೆಗಾರರು