Author Archives: Aniketana

ಕೊಲುವುದುಚಿತವೇ ಹೇಳು ಕೈಸದರದವರನು…?

ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ವರ್ತಮಾನದ ಸಾಂಸ್ಕೃತಿಕ ಸಂದರ್ಭದಲ್ಲಿ ವಿಭಿನ್ನ ಕಾರಣಗಳಿಗಾಗಿ ಅತಿಹೆಚ್ಚು ಸಂವಾದಕ್ಕೆ ತೆರೆದುಕೊಳ್ಳುತ್ತಿರುವ Kanakadasa_artವ್ಯಕ್ತಿತ್ವ ಕನಕನದು. ವ್ಯಾಸಕೂಟದ ನಂಟಿನಿಂದ ದಾಸನಾಗಿ, ವೈಚಾರಿಕತೆಯಿಂದ ಜೀವಪರ ಚಿಂತಕನಾಗಿ, ಸಾಮಾಜಿಕ ಹಿನ್ನೆಲೆಯಿಂದ ಜಾತಿ ಅಸ್ಮಿತೆಯ ಐಕಾನ್ ಆಗಿ, ಹೀಗೆ ಬೇರೆ ಬೇರೆ ನೆಲೆಗಳಿಂದ ಕನಕ ವಿವೇಚನೆಗೊಳಗಾಗುತ್ತಿದ್ದಾನೆ. ಐತಿಹಾಸಿಕವಾಗಿ ಕನಕ ಬದುಕಿದ ಮಧ್ಯಕಾಲೀನಯುಗ ಮತಪರಂಪರೆಯ ನೆಲೆಯಿಂದ ಆರೂಢ, ನಾಥ, ಸೂಫಿ ಮುಂತಾದ ಜನಧರ್ಮಗಳ ಭಾಗವಾಗಿದ್ದ ಶ್ರಮಣ ಪರಂಪರೆಗಳ ನಡುವಿನ ಕೊಡುಕೊಳುಗೆಯ ಕಾಲ. ಮತಪಂಥಗಳ ಎಲ್ಲೆಕಟ್ಟುಗಳನ್ನು ಮೀರಿ ಅರಿವಿನ ಹುಡುಕಾಟದಲ್ಲಿ ನಿರತವಾದ ಈ ಅವಧೂತ ಪರಂಪರೆಯ ಬೇರುಗಳು ಬಲವಾಗಿ ಊರಿನಿಂತ ಕಾಲ. ರಾಜಕೀಯವಾಗಿ ವಿಜಯನಗರದಂತಹ ಅರಸುಪರಂಪರೆಯೊಂದು ತನ್ನೆಲ್ಲಾ ವೈಭವವನ್ನು ಅನುಭವಿಸಿಯೂ ಶಿಥಿಲಗೊಂಡ ಸಂಕ್ರಮಣ ಕಾಲ. ಅಧಿಕಾರ ಮತ್ತು ಲೋಲುಪತೆಗಾಗಿ ಜನ ಮತ್ತು ನಾಡನ್ನು ದಿಕ್ಕೆಡಿಸುವಂತೆ ಪಾಳೆಪಟ್ಟುಗಳ ನಡುವಿನ ತಿಕ್ಕಾಟಗಳ ಕಾಲ. ಇಂತಹ ಐತಿಹಾಸಿಕ ಘಟ್ಟವನ್ನು ಹಾದುಬಂದ ಕನಕ ಅಭಿವ್ಯಕ್ತಿಯ ಬಹುಪ್ರಕಾರಗಳಲ್ಲಿ ತೊಡಗಿಕೊಂಡವನು. ಕೀರ್ತನೆ, ಮುಂಡಿಗೆ, ಷಟ್ಪದಿ, ಸಾಂಗತ್ಯಗಳಲ್ಲಿ ಪುರಾಣ ಮತ್ತು ಕಲ್ಪಕತೆಗಳಿಗೆ ಕಾವ್ಯದ ರೂಪುಕೊಟ್ಟವನು. ಇಂತಹ ಕನಕನನ್ನು ನಾವಿಂದು ಬೇರೆ ತೆರನಾಗಿ ಪ್ರವೇಶಿಸಿಸಬೇಕಿದೆ. ಯಾಕೆಂದರೆ ನಾವು ಬದುಕುತ್ತಿರುವುದು ಅಧಿಕಾರದ ಏಣಿಯೇರಲು ಜೀವಹಿಂಸೆಯ ಕಸುಬನ್ನು ಕರಗತಮಾಡಿಕೊಂಡವರು ಆರ್ಭಟಿಸುತ್ತಿರುವ ಕಾಲದಲ್ಲಿ. ಅಧಿಕಾರ ಮತ್ತು ಕ್ರೌರ್ಯದ ಒಡನಾಟಗಳು ಹೆಚ್ಚು ಹೆಚ್ಚು ನಿಕಟಗೊಳ್ಳುತ್ತಿರುವ ಕಾಲದಲ್ಲಿ. ಕಾಲದ ಈ ಒತ್ತಾಸೆ ಮತ್ತು ಸಾಂಸ್ಕೃತಿಕ ಆನ್ವಯಿಕತೆಯ ಕಾರಣಕ್ಕೆ, ದಾಸತ್ವ ಹಾಗೂ ಜಾತಿಅಸ್ಮಿತೆಯ ಅಸ್ತಿತ್ವಗಳಿಂದಾಚೆ ಕನಕನಲ್ಲಿ ದೊರೆಯುವ ಜೀವಪರ ಧ್ವನಿಯನ್ನು ನಾವು ಹುಡುಕಿಕೊಳ್ಳಬೇಕಿದೆ.

ಕನಕ ವಿರಚಿತ ನಳಚರಿತೆಯನ್ನು ಗಮನಿಸುವುದಾದರೆ ಅದರ ಕಥನಹಂದರ ಪಾರಂಪರಿಕವಾದುದು. ಕೃತಿಯೇ ಹೇಳಿಕೊಂಡಂತೆ ಇದು ಸೂತಮುನಿಯಿಂದ ಅಗಸ್ತ್ಯನ ಮೂಲಕ ರೋಮಶನವರೆಗೆ ಮುನಿಕುಲದ ನಡುವೆ ಹೇಳು-ಕೇಳು ಮಾದರಿಯಲ್ಲಿ ಹರಿದುಬಂದ ಕಥೆ. ಕವಿಗೆ ಇಂತಹ ರೂಢಿ ಕಥಾನಕದ ಮೂಲವಿನ್ಯಾಸದಲ್ಲಿ ಬದಲಾವಣೆ ಇಲ್ಲವೇ ಸೇರ್ಪಡೆಯ ಸ್ವಾತಂತ್ರ ಕಡಿಮೆ. ಆದರೂ ತನ್ನ ಭಾಷಿಕ ವಿನ್ಯಾಸದಲ್ಲಿ ಆತ ತುಂಬಬಹುದಾದ ಸಮಕಾಲೀನ ಜೀವನಾನುಭವದ ಸ್ವಾತಂತ್ರ್ಯವನ್ನು ಆತನಿಂದ ಕಸಿಯಲಾಗದು. ಕೃತಿಯೊಂದನ್ನು ಓದಲಾಗುವ ಕಾಲ ಉತ್ಪಾದಿಸುವ ಅರ್ಥವನ್ನೂ ನಿರ್ಬಂಧಿಸಲಾಗದು. ಹಾಗಾಗಿ ಕೃತಿಯ ಎಲ್ಲ ವಿವರಗಳಿಗೆ ಕೃತಿಕಾರನನ್ನೇ ಹೊಣೆಗಾರನಾಗಿಸದೆ, ಚರಿತ್ರೆ ಮತ್ತು ವರ್ತಮಾನದ ಉಭಯ ನೆಲೆಗಳಲ್ಲಿ ಕೃತಿಯೊಳಗಿನ ಸಂಗತಿಗಳೊಂದಿಗೆ ಸಂವಾದದ ಮುಕ್ತ ಅವಕಾಶವು ಪ್ರತೀ ಸಾಹಿತ್ಯ ಕೃತಿಯಲ್ಲೂ ಇರುತ್ತದೆ. ಈ ಕಾರಣದಿಂದ ನಳಚರಿತೆಯು ನಳನೊಬ್ಬನ ಕಥೆಯಲ್ಲ. ಅದು ಲೋಕಸಂದರ್ಭದ ಪ್ರಭು ಚರಿತ್ರೆಯನ್ನು ವಿವರಿಸಿಕೊಳ್ಳುವ ಅವಕಾಶವೂ ಹೌದು. ಈ ಹಿನ್ನೆಲೆಯಲ್ಲಿ ‘ನಳಚರಿತೆ’ಯೊಳಗಿನ ಪ್ರಭುತ್ವದ ಸಾಂಪ್ರದಾಯಿಕ ಮುಖ ಹಾಗೂ ಜನಧ್ವನಿಗೆ ಕಿವಿಯಾಗುವ ಅದರ ಜೀವಪರಮುಖಗಳನ್ನು ಒಟ್ಟೊಟ್ಟಿಗೆ ಇರಿಸಿಕೊಂಡು ಪ್ರಭು ಚರಿತೆಯ ಕುರಿತಾದ ಕೆಲವು ಟಿಪ್ಪಣಿರೂಪದ ಮಾತುಗಳನ್ನು ಇಲ್ಲಿ ಮುಂದಿಡಲಾಗಿದೆ.

ಕೃತಿ ಕಟ್ಟಿಕೊಡುವ ರೂಢಮೂಲ ಪ್ರಭುಚರಿತೆಯ ಸ್ವರೂಪ

”ಭೂತಳೇಂದ್ರರೊಳಧಿಕಬಲ ವಿಖ್ಯಾತನಹ ನಳಚಕ್ರವರ್ತಿಯುಯು ಭೂತಳವ ಪಾಲಿಸಿದನಾತನ ವಿಮಲಚರಿತೆ”ಯೇ ತನ್ನ ಕಥಾವಸ್ತು ಎಂದು ಕೃತಿ ಘೋಷಿಸಿಕೊಳ್ಳುತ್ತದೆ. ಪಾರದರ್ಶಕತೆ, ಪರಿಶುದ್ಧತೆಯ ಅರ್ಥ ಸೂಚಿಸುವಂತೆ ಅದನ್ನು ‘ವಿಮಲಚರಿತೆ’ ಎನ್ನುತ್ತದೆ. ರಾಜಚರಿತೆಯೊಂದನ್ನು ವಿಮಲಚರಿತೆ ಎನ್ನುವಲ್ಲಿ ಯಾವ ಅಂಶಗಳಿಗೆ ಮಾನ್ಯತೆ ದಕ್ಕಿದೆ? ರಾಜಕಥನವನ್ನು ಹೀಗೆ ಕೈವಾರಿಸುವವರು ಯಾರು? ಈ ವಿಮಲಚರಿತೆಯ ಹೂರಣದಲ್ಲಿರುವ ಸಾಂಸ್ಥಿಕ ಸಂಗತಿಗಳು ಯಾವುವು? ಪಾರಂಪರಿಕ ರಾಜ ಚರಿತ್ರೆಯನ್ನು ಕಟ್ಟುತ್ತಲೇ ಕನಕನ ರಾಜ ಚರಿತೆಯು ಈ ಚೌಕಟ್ಟನ್ನು ಎಲ್ಲಿ ಮೀರುತ್ತದೆ? ಅದರ ಆಶಯಗಳಾವುವು?- ಈ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳ ಮೂಲಕ ಕೃತಿಯೊಳಗಿನ ಪ್ರಭುಚರಿತ್ರೆಯ ವಿನ್ಯಾಸವನ್ನು ನಾವು ಹುಡುಕಿಕೊಳ್ಳಬೇಕಿದೆ. ಹೀಗೆ ಹುಡುಕುವಲ್ಲಿ ಅರಸುತನದ ಸಾಂಸ್ಥಿಕ ಗುಣಗಳಾದ ಪ್ರದರ್ಶಕತೆ, ಯಥಾಸ್ಥಿತಿ ಕಾಯುವಿಕೆ, ಯುದ್ಧ, ಹಿಂಸೆ ಮತ್ತು ವ್ಯಸನಾದಿಗಳ ರೂಢಿಯ ನಿರೂಪಣೆಯೇ ನಳಚರಿತದಲ್ಲಿಯೂ ಕಾಣಿಸುತ್ತದೆ. ಇವುಗಳ ಜೊತೆಗೆ ಮಾನವೀಯ ಆಶಯದ ಭಾಗವಾಗಿ ಅದು ಅರಸನ ಕ್ರಿಯಾಚರಣೆೆಯಲ್ಲಿ ಕೇಳಿಸಿಕೊಳ್ಳುವಿಕೆ ಮತ್ತು ನಾಚುವಿಕೆಯನ್ನು ತರುತ್ತದೆ! ಹೀಗೆ ಲೋಕದ ಅರಸುತನಕ್ಕೊಂದು ಮಾನವೀಯ ಮುಖದಂತೆಯೂ ಹೊಳೆದುಬಿಡುವ ಕಾರಣಕ್ಕಾಗಿ ನಳಚರಿತೆ ವಿಮಲಚರಿತೆ ಎನಿಸಿಕೊಳ್ಳಲು ಅರ್ಹವಾಗುತ್ತದೆ.

ನಳಚರಿತೆಯಲ್ಲಿ ಅರಸೊತ್ತಿಗೆಯ ಸಮೃದ್ಧಿಯ ಕರುಹುಗಳ ಸುದೀರ್ಘ ವಿವರಗಳಿವೆ. ಖ್ಯಾತಿ, ಕೀರ್ತಿಗಳೆಂಬ ಅಭೌತಿಕ ಸಂಗತಿಗಳೊಂದಿಗೆ ಅಸಂಖ್ಯRichest-Indians ಗೋಪುರ, ದೇಗುಲ, ಬಹುಗಾತ್ರದ ಪ್ರಾಕಾರಗಳ, ಮಹತ್ತು ಬೃಹತ್ತುಗಳೆಂಬ ಭೌತಿಕರಚನೆಗಳ ಕೊಂಡಾಟವಿದೆ. ”ದಿಗಂತದವನೀಶ್ವರರು ಕಪ್ಪವ ತೆರುವರಗಣಿತ ದುರವಿಜಯ ದೋರ್ಬಲರು ಮಣಿಮಯಮಕುಟವರ್ಧನರು ಚರಣಕಾನತರಾಗಿ ನಳಭೂವರನ ಭಜಿಸುತಲಿರ್ದರು…….” ಎಂದು ಬಲ ಮತ್ತು ಸಂಪತ್ತಿನ ಕೀರ್ತನೆ ಇದೆ. ಇದು ಅರಸೊತ್ತಿಗೆಯೆಂದರೆ, ಬಲಹೀನರ ಸ್ವಾತಂತ್ರ್ಯಹರಣ ಮತ್ತು ಬಲಾಢ್ಯರ ಸಂಪತ್ತಿನ ಪ್ರದರ್ಶನ ಎಂಬ ಸಾಂಪ್ರದಾಯಿಕ ನಿರೂಪಣೆಯೇ. ಸಾಮ್ರಾಜ್ಯಶಾಹಿ ಹಾಗೂ ಧಾರ್ಮಿಕ ಗುರುತುಗಳ ವೈಭವ ಅಥವಾ ಮೆರವಣಿಗೆಯನ್ನೇ ಯಶಸ್ವೀ ಪ್ರಭುತ್ವವೊಂದರ ಹೆಗ್ಗುರುತೆಂದು ಕರೆಯುವ ಬಗೆ. ನಮ್ಮೆದುರಿಗೆ ಇಡಲಾಗುತ್ತಿರುವ ಕಾರ್ಪೋರೇಟ್ ಅಭಿವೃದ್ಧಿ ಮಾದರಿಗಿಂತ ಇದು ಭಿನ್ನವಲ್ಲ. ಜಗತ್ತಿನ ಕೋಟ್ಯಾಧಿಪತಿಗಳ ಸಾಲಿಗೆ ಸೇರಲು ಮುನ್ನುಗ್ಗುತ್ತಿರುವ ಉದ್ಯಮಪತಿಗಳು ಮತ್ತು ಅವರ ರಕ್ಷಣೆಗೆ ನಿಂತ ರಾಜಕೀಯ ಶಕ್ತಿಗಳನ್ನು ಹೊಸ ಮನ್ವಂತರದ ಹರಿಕಾರರೆಂದು ಕೀರ್ತಿಸುತ್ತಿರುವ ಇಂದಿನ ಮಾಧ್ಯಮಗಳ ಸಮೃದ್ಧಿ ನಿರೂಪಣೆಯೂ ಇದೇ ಮಾದರಿಯದು.

ಇನ್ನು ಆಡಳಿತದ ವಿವರಗಳನ್ನು ನೀಡುತ್ತಾ ಕೃತಿ ನಳಮಹಾರಾಜನ ಪ್ರಭುತ್ವವನ್ನು, ”ಕ್ರೋದಗಳಿಲ್ಲದಿಹ ಸದ್ಧರ್ಮಜೀವಿಗಳ ಮೆರೆದಾಟದ ತಾಣ” ಎನ್ನುತ್ತದೆ. ಸದ್ಧರ್ಮ ಜೀವಿಗಳ ಸದ್ಧರ್ಮದ ಸ್ವರೂಪವಾಗಿ, ”ಪತಿಯರಿಗೆ ವಂಚಿಸರು ಸತಿಯರು, ಸುತರು ಪಿತೃಗಳನುಡಿಗಳನು ತಾವತಿಗಳೆಯರಾಚಾರ ವರ್ಣಾಶ್ರಮಧರ್ಮದಲಿ ಮತಿಯುತರು. …….. ಜನಸಮ್ಮತದೊಳೊಪ್ಪುವುದು ನೈಷದನೃಪನರಾಜ್ಯದಲಿ”ಎಂಬ ವಿವರಗಳಿವೆ. ಇದು ರೂಢಮೂಲ ಆಚರಣೆಗಳ ಉಲ್ಲಂಘನೆಯಿಲ್ಲದ ಯಥಾಸ್ಥಿತಿಯ ಕಾಯ್ದುಕೊಳ್ಳುವಿಕೆ. ಪ್ರಮಾಣಬದ್ದ ರೂಪಗಳ ರಕ್ಷಣೆಯ ಮೂಲಕ ಸಾಧಿಸಿದ ಪಾರಂಪರಿಕ ಅಧಿಕಾರಕೇಂದ್ರಗಳ ಬಲವರ್ಧನೆ. ಆಳುವ ಕೇಂದ್ರಗಳು ಉಲ್ಲೇಖಿಸುವ ಸುವರ್ಣಯುಗಗಳೆಲ್ಲವೂ ಬಹುಮಟ್ಟಿಗೆ ಈ ಮಾದರಿಗಳೇ. ಇದೆಲ್ಲವನ್ನೂ ಕಾವ್ಯದೊಳಗೆ ನಿರೂಪಿಸುವವನು ರೋಮಶಮುನಿ! ಚರಿತ್ರೆಗೂ ಚರಿತೆಯ ನಿರ್ಮಾತೃಗಳಿಗೂ ಇರುವ ರಾಜಕೀಯ ಸಂಬಂಧದ ನೆಲೆಯಲ್ಲಿಯೇ ಈ ವಿವರಗಳನ್ನು ಗಮನಿಸಬೇಕು. ಆಗ ಸಾಂಸ್ಥಿಕಮೌಲ್ಯಗಳ ಪ್ರಶ್ನೆಯಿಲ್ಲದ ಅನುಸರಣೆಯನ್ನೇ ‘ಸದ್ಧರ್ಮದ ಮೆರೆದಾಟದ ತಾಣ’ವಾಗಿ ನಿರೂಪಿಸುವ ಕಾರಣಗಳು ಗೋಚರವಾಗುತ್ತವೆ. ಪ್ರಜಾಸತ್ತಾತ್ಮಕಯುಗ ಒದಗಿಸಿದ ಪ್ರಶ್ನಿಸುವ ಅವಕಾಶಗಳು ಮೂಲಭೂತವಾದಿಗಳಿಗೆ ಯಾಕೆ ಸದ್ಧರ್ಮದ ಕೇಡಿನಂತೆಯೇ ಕಾಣಿಸುತ್ತವೆ ಎಂಬುದು ಅರಿವಾಗುತ್ತದೆ. ಸಾಮಾಜಿಕನ್ಯಾಯವನ್ನು ಅನುಷ್ಠಾನಕ್ಕೆ ತರುವ ಸಾಂವಿಧಾನಿಕ ಸಂಸ್ಥೆಗಳು, ಹಕ್ಕು ಕೇಳುವ ಜನಸಾಮಾನ್ಯರ ಚಳವಳಿಗಳು ಯಾಕೆ ಧರ್ಮನಾಶಕ ಎನಿಸುತ್ತವೆ ಎನ್ನುವುದೂ ಸ್ಪಷ್ಟವಾಗುತ್ತವೆ. ಯಾಕೆಂದರೆ ಈ ಮಾದರಿಯ ಸಮ್ಮತಿ ಉತ್ಪಾದಿಸುವ ಶಕ್ತಿ ಕೇಂದ್ರದಲ್ಲಿ ಸಹಜವಾಗಿಯೇ, ‘ಮಂತ್ರಿ ಪುರೋಹಿತರೂ, ಅರಸನನ್ನು ರಂಜಿಸುವ ಮಲ್ಲಗಾಯಕರೂ,(ಗಣಿಕೆಯರಾಗಿ) ವನಿತೆಯರೂ’ ಅವಕಾಶ ಗಿಟ್ಟಿಸುತ್ತಾರೆ. ಅಧಿಕಾರ ಸ್ಥಾಪಿಸಲು ಕೊರಳುನೀಡುವ ಯೋಧರಾಗಲೀ, ಬೆವರಿನ ಬೆಲೆಯನ್ನು ತೆರಿಗೆಯಾಗಿ ನೀಡುವ ಜನರಾಗಲೀ ಅಂಚಿನಲ್ಲಿಯೇ ಉಳಿದುಬಿಡುತ್ತಾರೆ. ನಳಚರಿತೆ ಚಿತ್ರಿಸುವ ರಾಜಸಭೆಗಳು ಇದಕ್ಕಿಂತ ಭಿನ್ನವಲ್ಲ. ಎಲ್ಲ ಕಾಲಗಳ ರೋಮಶರುಗಳೂ ಸದ್ಧರ್ಮಪಾಲನೆ ಎಂದು ಕರೆದಿರುವುದು ಸಮಾನತೆ ಇಲ್ಲದ ಈ ಸಂವಿಧಾನವನ್ನೇ. ನಳಚರಿತೆಯಲ್ಲಿನ ಪ್ರಭುಚರಿತೆಗೆ ಆಳುವವರ ಕಣ್ಣಿನ ನಿರೂಪಣೆಯ ಚರಿತ್ರೆಯ ಮುಖವೂ ಒಂದಿದೆ.

ನಳಚರಿತೆ ಕಟ್ಟಿಕೊಡುವ ಪ್ರಭುತ್ವದ ಅಂತಃಕರಣದ ಮುಖವಾಗಿ ನಾಚುವಿಕೆ.

ತನ್ನ ಘೋಷಣೆಯ ನಿರ್ಮಲ ಚಾರಿತ್ರ್ಯಕ್ಕನುಸಾರವಾಗಿ ಕೃತಿಯಲ್ಲಿ ನಳಪ್ರಭುವಿನ ಮಾನವೀಯ ಮುಖವೊಂದಿದೆ. ಈ ಭಾಗ ಸಾಂಸ್ಥಿಕ ವ್ಯವಸ್ಥೆಯೊಂದು ತನ್ನ ರಾಚನಿಕ ಸ್ವರೂಪಕ್ಕನುಸಾರವಾಗಿ ಪಡೆಯಬಹುದಾದ ಅಪಮೌಲ್ಯಗಳ ನಡುವೆಯೂ ಹೊಂದಿರುವ ಮಾನವೀಯವಾಗಿಸಿಕೊಳ್ಳುವ ದಾರಿಯಂತಿದೆ. ಸಾಮಾನ್ಯ ಹಂಸವೊಂದು ಅರಸನಿಗೆ ಇಲ್ಲಿ ಮಾನವೀಯತೆಯ ಪಾಠ ಹೇಳುತ್ತದೆ! ಪಾಠವಷ್ಟೇ ಮುಖ್ಯವಲ್ಲ, ಪಾಠಕನಿಗೂ ಆ ಯೋಗ್ಯತೆ ಇರಬೇಕು. ನಳಚರಿತೆ ಪಾಠದೊಂದಿಗೆ ಪಾಠಕನನ್ನೂ ಅದಕ್ಕೆ ತಕ್ಕಂತೆಯೇ ಚಿತ್ರಿಸುತ್ತದೆ. ಅದೊಂದು ದೊಡ್ಡ ಘಟನೆ ಏನಲ್ಲ. ನಳಮಹಾರಾಜನ ಬೇಟೆಯ ನಡುವಣ ಪುಟ್ಟ ಘಟನೆ. ಕೆಲವೇ ಷಟ್ಪದಿಗಳಿಗೆ ಸೀಮಿತವಾದುದು. ಆದರೆ ಇಡಿಯ ಕೃತಿಸಂದರ್ಭದಲ್ಲಿ ಪ್ರಭುತ್ವದ ಮಾನವೀಯ ಮುಖವೊಂದನ್ನು ಅನಾವರಣ ಮಾಡುವ ಮುಖ್ಯ ಸಂದರ್ಭವದು.

ರಾಜರುಗಳ ಸಪ್ತವ್ಯಸನಗಳಲ್ಲೊಂದು ಬೇಟೆ. ಅದು ಅರಸರ ಪಾಲಿನ ಮೋಜು. ಆದರೆ ಫಲಿತಾಂಶದಲ್ಲಿ ಜೀವಹಿಂಸೆ. ನಳ ಹಂಸವನ್ನು ಬೇಟಿಯಾಗುವುದು ಈ ಕೊಲುದಾಣದಲ್ಲಿ. ಕೊಲ್ಲಲೆಂದೇ ಕಾಡಿಗೆ ದಾಳಿಯಿಟ್ಟ ತಂಡದ ನಾಯಕನಾದ ನಳನಿಗೆ ಬಲಿಪಶುವಿನ ಸ್ಥಾನದಲ್ಲಿ ನಿಂತು ಹಂಸ ಜೀವದಬೆಲೆ ಕುರಿತು ಪಾಠಹೇಳುತ್ತದೆ. ಈ ಪಾಠ ವಿನಯಪೂರ್ವಕವಾಗಿದೆ, ತೀಕ್ಷ್ಣವಾದ ಪ್ರಶ್ನೆಗಳನ್ನೂ ಒಳಗೊಂಡಿದೆ. ತನ್ನ ರೂಪಕ್ಕೆ ಮಾರುವೋಗಿ ಕೈಚಾಚಿದ ನಳನ ಕೈಯ್ಯಲ್ಲಿ ಬಂಧಿಯಾಗುವ ಹಂಸದ ಪ್ರತೀ ಮಾತೂ ರಾಜನಾದವನು ಪಾಲಿಸಬೇಕಾದ ರಾಜಧರ್ಮವನ್ನು ಎಚ್ಚರಿಸುವ ಜೊತೆಗೆ ಎಲ್ಲಾ ಮಾದರಿಯ ಅಧಿಕಾರದ ಹಿಂಸೆಯೆನ್ನು ಮೊನೆಯಲಗುಗಳಂತೆ ಇರಿಯುತ್ತವೆ.- “ಕೈಸದರದವರನು ಕೊಲುವುದುಚಿತವೆ ಹೇಳು?, ತರವೆ ಬಿಡು ಪರಹಿಂಸೆ ದೋಷವಿದು, (ನನ್ನ ಮನೆಯಲಿ) ಮಡದಿ ಸುತರುಮ್ಮಳವ ನೋಡು” ಎಂದು ಪ್ರಶ್ನೆಯ ಮೇಲೆ ಪ್ರಶ್ನೆಯ ಬಾಣ ಎಸೆಯುವ ಹಂಸವನ್ನು ಕೊಲ್ಲುವ ಉದ್ದೇಶ ನಳನಿಗಿಲ್ಲ. ಅದಕ್ಕೆಂದು ಆತ ಹಿಡಿದವನಲ್ಲ. ಆತ ಮಾಡಹೊರಡದ ಕೊಲೆಯ ಕುರಿತು ಹಂಸ ಆತನನ್ನು ಪ್ರಶ್ನಿಸುತ್ತಿದೆ. ಹಂಸದ ಪ್ರಶ್ನೆಗೆ ನಳ ಸಮರ್ಥನೆಯ ಪ್ರತ್ಯುತ್ತರ ನೀಡುವುದಿಲ್ಲ, ನಾಚುತ್ತಾನೆ. ಇದಷ್ಟೇ ಅಲ್ಲಿನ ಸಂವಾದ. ಇಲ್ಲಿನ ಹಂಸದ ಮಾತು ಮತ್ತು ನಳನ ಪ್ರತಿಕ್ರಿಯೆಗಳೆರಡೂ ಮೌಲಿಖವಾದುವು. ಹಂಸ ತನ್ನನ್ನು ಪ್ರಕಟಿಸಿಕೊಂಡು ಮಹತ್ವಪಡೆಯುತ್ತದೆ, ಆತ ಉತ್ತರಿಸದೆ, ಸಮರ್ಥಿಸಿಕೊಳ್ಳದೆ, ಮಾತನಾಡದೆ, ನಾಚುವ ಮೂಲಕ ದೊಡ್ಡವನಾಗುತ್ತಾನೆ.

ಮೊದಲನೆಯದಾಗಿ ಹಂಸದ ಪ್ರಶ್ನೆ ತನ್ನನ್ನಷ್ಟೇ ಗಮನಿಸಕೊಂಡ ವ್ಯಕ್ತಿಗತ ಅಹವಾಲಿನಂತಿದ್ದರೂ, ಅದು ಹಂಸ ಮತ್ತು ನಳನgujarat_violence_1 ನಡುವಿನ ವ್ಯಕ್ತಿಗತ ವ್ಯವಹಾರವಷ್ಟೇ ಅಲ್ಲ. ಇಲ್ಲಿ ಹಂಸಕ್ಕೊಂದು ಪ್ರತಿನಿಧೀಕರಣದ ಛಾಯೆ ಇದೆ. ಅಧಿಕಾರರಹಿತ ‘ಕೈಸದರದ’ ಜೀವಜಗತ್ತೊಂದರ ಪ್ರತಿನಿಧಿಯಾಗುವ ಮೂಲಕ ಅದರ ಪ್ರಶ್ನೆಗಳು ಜೀವಜಗತ್ತಿನ ಸಾಮಾನ್ಯರ ಪ್ರಶ್ನೆಗಳಾಗುತ್ತವೆ. ಎರಡನೆಯದಾಗಿ ನಳ ಇರುವುದು ಕೊಲುದಾಣವಾದ ಬೇಟೆಯಲ್ಲಿ. ಅದು ಆಹಾರದ ಅಗತ್ಯಕ್ಕಾಗಿ ನಡೆವ ಕಾಡುಬೇಡರ ಬೇಟೆಯಲ್ಲ. ನಾಡ ಅರಸನ ಮೋಜು. ಇನ್ನು ಬೇಟೆ ಎಂದರೆ ಜೀವಗಳ ಶಿಕಾರಿ, ಹುಡುಕಿ ಕೊಲ್ಲುವ ಕ್ರಿಯೆ. ಪ್ರತಿರೋಧಿಸಿದವರನ್ನು ಇದಿರಿಸುವ ಯುದ್ಧವಲ್ಲ. ತಮ್ಮಷ್ಟಕ್ಕೆ ಬದುಕುವವರನ್ನು ಬದುಕಲು ಬಿಡದೆ ಹುಡುಕಿಕೊಲ್ಲುವ ಪರಿ. ಬಸುರಿಯ ಒಡಲಿಗೂ ಶೂಲವಿಕ್ಕಿ ಕೇಕೆ ಹಾಕಬಲ್ಲ ಕೈಸದರದವರ ನಿಷ್ಕಾರಣವಾದ ಕೊಲೆ. ಒಂದರ್ಥದಲ್ಲಿ ಕೊಲೆಯ ವ್ಯಾಪಾರ. ಹೀಗೊಂದು ವ್ಯಾಪಾರವನ್ನೇ ಶುರುವಿಟ್ಟುಕೊಂಡಲ್ಲಿ ಪಶ್ಚಾತ್ತಾಪವೆಂಬುದು ಸಾಧ್ಯವೇ ಇಲ್ಲ. ಯಾಕೆಂದರೆ ವ್ಯಾಪಾರವೆಂಬುದು ಯಾವಾಗಲೂ ಲಾಭದ ಖುಷಿಯಲ್ಲಿ ಉಳಿದವರ ನಷ್ಠವನ್ನು ಗಣಿಸುವ ಗೋಜಿಗೆ ಹೋಗದು. ವ್ಯಾಪಾರಿಯೊಬ್ಬನಲ್ಲಿ ಕಚ್ಚಾವಸ್ತುವಿನ ಕುರಿತ ಕರುಣೆ ಇರಲು ಸಾಧ್ಯವೇ? ವ್ಯಾಪಾರಿ ವ್ಯಾಪಾರಿಯೇ ಅಲ್ಲವೇ? ಖುಷಿ ಎನ್ನುವುದು ಮಾರುಕಟ್ಟೆಯ ಮಾತು. ಇದು ಖುಷಿಯ ಬೇಟೆ. ಮೂರನೆಯದಾಗಿ ಬೇಟೆಯೊಂದು ವ್ಯಸನ. ವ್ಯಸನವೆಂದರೆ ಹುಚ್ಚು ಎಂಬ ಅರ್ಥವೂ ಇದೆ. ಹಾಗೆಂದು ಅರ್ಥೈಸಿದಲ್ಲಿ ಇದು ಕೊಂದು ಖುಷಿ ಅನುಭವಿಸುವ ಹುಚ್ಚು. ನಾಲ್ಕನೆಯದಾಗಿ ಅದು ಪ್ರಾಣಿ-ಪಕ್ಷಿಗಳ ಶಿಕಾರಿಯಾದ ಕಾಡಬೇಟೆಯಷ್ಟೇ ಅಲ್ಲ. ಮಾನವಜೀವದ ನಾಡಶಿಕಾರಿಯೂ ಹೌದು. ಯಾಕೆಂದರೆ ಆ ಹಿಂಸೆಗೆ ಕುಟುಂಬ ಬದುಕಿನ ಸಾಮಾಜಿಕಸತ್ಯಗಳು ಬೆಸೆದುಕೊಳ್ಳುತ್ತಿವೆ. ಸತ್ತವರಿಗಾಗಿ ಅಳುವವರ ಪಾಡು ನೋಡುವಂತೆ ಹೇಳುವ ಹಂಸನ ಮಾತಿನಲ್ಲಿ ಈ ಧ್ವನಿಯಿದೆ. ಆದರೆ ಲೋಕದ ಕೊಲುದಾಣಗಳೆಲ್ಲವೂ ಹಾಗೆಯೇ ಮುಂದುವೆರೆದಿವೆ. ಅಧಿಕಾರವು ತಾನು ಪ್ರಾಯೋಜಿಸುತ್ತಿರುವ ಹಿಂಸೆಯಲ್ಲಿ ನೊಂದವರ ದನಿ ಆಲಿಸುವುದನ್ನೇ ನಿರಾಕರಿಸಿಕೊಂಡಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಗುಳೆಹೊರಟ ಬಸುರಿಬಾಣಂತಿಯರ ಹೊಟ್ಟೆಗೂ ಈಟಿಯಿರಿದು ಸೀಳಿಹಾಕಿ ಚೀರಲು ಅದಕ್ಕೆ ಸಾಧ್ಯವಾಗುತ್ತಿದೆ. ಅಳುವವರ ಮುಖನೋಡಿ ಕರಗುವ ಪಶ್ಚಾತ್ತಾಪದ ಮಾನವೀಯ ಸೂಕ್ಷ್ಮತೆ ನಾಪತ್ತೆಯಾಗಿದೆ.

ನಮ್ಮೆದುರಿಗಿನ ಅಧಿಕಾರ ಮತ್ತು ಹಿಂಸೆಯ ಮಾದರಿಗಳೊಂದಿಗೆ ಶಿಕಾರಿಯ ಕಾರಣ ಮತ್ತು ನೆಲೆಗಳೂ ವೈವಿಧ್ಯವಾಗಿವೆ. ಮತೀಯವಾದಿ ರಾಷ್ಟ್ರೀಯತೆ ಪ್ರೇರೇಪಣೆಯ ಫಲಿತದ ಹಿಂಸೆ ಅಂಥ ಶಿಕಾರಿಗಳಲ್ಲೊಂದು. ಇದು ಪರಿಕಲ್ಪಿಸಿಕೊಡುತ್ತಿರುವ ‘ಸ್ವ’ ಮತ್ತು ‘ಅನ್ಯ’ದ ಮಾದರಿಗಳು ನೆಲದ್ರೋಹದ ಆರೋಪದಲ್ಲಿ ಸಮುದಾಯಗಳ ಮೂಲೋತ್ಪಾಟನೆಯನ್ನು ನೆಲಗೌರವದ ಬಿರುದಿಗೊಳಪಡಿಸುತ್ತಿದೆ. ಇನ್ನು ಅಭಿವೃದ್ಧಿಯ ಹೊಸಪರಿಭಾಷೆಗಳಡಿಗೆland accquisition ನಿರ್ಮಾಣಗೊಳ್ಳುತ್ತಿರುವ ಹೊಸ ಆರ್ಥಿಕವಲಯಗಳ ಹಿಂಸೆ ಸಮೃದ್ಧಿಯ ಸಮರ್ಥನೆ ಪಡೆಯುತ್ತಿವೆ. ಶತಮಾನಗಳ ಕಾಲದಿಂದ ಬದುಕಿದ ನೆಲೆಗಳನ್ನು ಕಳೆದುಕೊಳ್ಳುವುದು ನ್ಯಾಯಸಮ್ಮತವಾಗುತ್ತಿದೆ. ತಮ್ಮ ಹಕ್ಕು ಕೇಳುವುದು ಅಭಿವೃದ್ಧಿಯ ವಿರೋಧವೆನಿಸಿ, ಹತ್ತಿಕ್ಕಲ್ಪಡುವುದು ಕಾನೂನು ಮತ್ತು ಸುವ್ಯವಸ್ಥೆಯ ಅಗತ್ಯವಾಗುತ್ತಿದೆ. ಜಾತಿನೆಲೆಯ ಅಧಿಕಾರಶಕ್ತಿಗಳು ತಮ್ಮ ಪಾರಂಪರಿಕ ಯಜಮಾನ್ಯಕ್ಕಾಗಿ ನಡೆಸುವ ದೌರ್ಜನ್ಯಗಳಿಗೆ ಸಹಾನುಭೂತಿಯ ಕಣ್ಣುಗಳು ಸಿಗುತ್ತಿವೆ. ಇದರ ಜೊತೆಗೆ ಸಮುದಾಯ ಸಂಪತ್ತಿನ ಯಜಮಾನಿಕೆಗಾಗಿ ನಡೆಸುವ ಎಲ್ಲ ಬಗೆಯ ಭ್ರಷ್ಟಾಚಾರಗಳು ಸಾಮಾಜಿಕ ಒಪ್ಪಿಗೆಯನ್ನು ಪಡೆದುಕೊಳ್ಳುತ್ತಿವೆ. ಪ್ರಭುತ್ವವು ತನ್ನ ದುಡಿಮೆ ಅಥವಾ ಕ್ರಿಯೆಯನ್ನು ಎಲ್ಲ ಬಗೆಯ ನೈತಿಕತೆಯಿಂದ ವಿಮುಖವಾಗಿಸಿಕೊಂಡು ಉತ್ತರದಾಯಿತ್ವವನ್ನಾಗಲೀ, ನೈತಿಕಭಯವನ್ನಾಗಲೀ ಎದುರಾಗುತ್ತಲೇ ಇಲ್ಲ. ಸಂವಾದವನ್ನೇ ನಿರಾಕರಿಸುವ ಮೂಲಕ ಸಂವೇದನೆಯನ್ನೂ ಕಳೆದುಕೊಂಡಿರುವ ಈ ಅಧಿಕಾರಕೇಂದ್ರಗಳು ನಾಚುವ ಪ್ರಶ್ನೆಯನ್ನೇ ಎದುರಾಗುತ್ತಿಲ್ಲ. ಪ್ರಭುತ್ವವು ಹೀಗೆ ತನ್ನ ಎದೆಗಡಲನ್ನು ಇಂಗಿಸಿಕೊಂಡು ನಿರ್ಮಿಸಿಕೊಳ್ಳುತ್ತಿರುವ ನಾಚುವಿಕೆಯ ಮರಳುಗಾಡಿನಿಂದಾಗಿಯೇ ನೆಲೆಕಳೆದುಕೊಳ್ಳುತ್ತಿರುವ ಸಂತ್ರಸ್ತರು ಹಾಗೂ ತಲೆಕಳೆದುಕೊಳ್ಳುತ್ತಿರುವ ಗಲಬೆಗದ್ದಲದ ಬಲಿಪಶುಗಳು ಆಕಾಶನೋಡಿಕೊಂಡು ಅಳುತ್ತಾ ಕೂರುವ ಗೋಳು ಮುಂದುವರಿಯುತ್ತಲೇ ಇದೆ.

ಹೀಗೆ ಪ್ರಭುತ್ವವನ್ನು ರಾಜತ್ವದ ಸಂಸ್ಥೆಯಿಂದಾಚೆಗೆ ವಿಸ್ತರಿಸಿಕೊಂಡು ನೋಡಿದಾಗ ಕಾವ್ಯದಲ್ಲಿನ ಪ್ರಭುಚರಿತದ ಮಾನವೀಯ ಮುಖ ಮತ್ತಷ್ಟು ಜೀವಪರ ಎನಿಸುತ್ತದೆ. state-violenceರಾಷ್ಟ್ರವೆಂಬ ಕಲ್ಪಿತಾವೃತ್ತಿಯಲ್ಲಿ ಮತೀಯ ಸಂಖ್ಯಾಶಕ್ತಿಗಳೂ, ಜಾತಿ ಮತ್ತು ಆರ್ಥಿಕತೆಯ ಸಂದರ್ಭದಲ್ಲಿನ ಜಾತಿ ಹಾಗೂ ವರ್ಗಶಕ್ತಿಗಳು ಈ ನೆಲೆಯ ಜೀವಪರ ಸಂವಾದ ಸಾಧ್ಯತೆಗೆ ಹೊರಳಿಕೊಂಡಲ್ಲಿ, ಆರೋಗ್ಯಕರ ಅಧಿಕಾರದ ಚರಿತ್ರೆಯೊಂದು ಖಂಡಿತಾ ಸಾಧ್ಯವಿದೆ. ‘ಬದುಕಿ ಬದುಕಲು ಬಿಡಿ’ಯೆಂಬುದು ಎಲ್ಲ ಕಾಲದ ಅಧಿಕಾರವಂಚಿತರ ಕೂಗು ಮತ್ತು ಆಶಯ. ಅಧಿಕಾರರಹಿತರು ಮಾತಿಲ್ಲದವರೂ ಹೌದು. ಇಲ್ಲಿ ಹಂಸ ಭಾಷೆಗೆ ದನಿಯಿಲ್ಲದವರ ದನಿಯ ಸಾಂಕೇತಿಕ ಅರ್ಥವಿದೆ. ನಳನ ಪ್ರತಿಕ್ರೀಯೆ ಅಂತಹ ದಮನಿತರ ನಿರೀಕ್ಷೆಯ ಮೂರ್ತರೂಪ. ಹಿಂಸೆಯನ್ನು ಧರಿಸಿಕೊಂಡೇ ಇರುವ ಪ್ರಭುತ್ವವು ಅದನ್ನು ತ್ಯಜಿಸಿಬಿಡಬೇಕು ಎನ್ನುವುದಕ್ಕಿಂತ, ಅಶಕ್ತರ ಮೇಲೆ ಪ್ರಯೋಗಿಸಕೂಡದೆಂಬುದೇ ನಳಚರಿತೆಯ ಆಶಯ. ಆದರೆ ಬಲಪ್ರಯೋಗಿಸಿಯೂ ಅಶಕ್ತರ ಸಹನೆಯನ್ನೇ ಆಗ್ರಹಿಸುವ ಪ್ರಭುತ್ವ ಪ್ರಾಯೋಜಿತ ಹಿಂಸೆಯನ್ನೇ ಜಗತ್ತು ಮತ್ತೆ ಮತ್ತೆ ಎದುರಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಚರಿತ್ರೆಯುದ್ದಕ್ಕೂ ವಿರೋಧದ ಕೂಗುಗಳೆದ್ದಿವೆ. ಕೇಳುವ ಮತ್ತು ನಾಚುವ ಎರಡನ್ನೂ ಮರೆತ ಪ್ರಭುತ್ವದ ಕಾರ್ಖಾನೆಗಳಿಂದ ಗ್ರೆಗರಿಪತ್ರಾವೊ, ಎಸ್ಇಜೆಡ್, ರಾಷ್ಟ್ರೀಯಉದ್ಯಾನವನ, ಬೆಂಡಿಗೇರಿ, ಕಂಬಾಲಪಲ್ಲಿ, ಗ್ಯಾಸ್ಚೇಂಬರ್, ನರೋಡಾ ಪಾಟಿಯಾ, ಬೆಸ್ಟ್ ಬೇಕರಿಗಳೆಂಬ ಕೊಲುದಾಣಗಳ ಸರಣಿ ಬೆಳೆಯುತ್ತಲೇ ಇದೆ. ಸಾಕ್ಷಿನಾಶದ ಮೂಲಕ ಪಡೆಯುವ ಬಿಡುಗಡೆಯೂ ನಿರ್ದೋಷಿತನದ ಪ್ರಮಾಣ ಪತ್ರವಾಗುತ್ತಿದೆ. ಕೆಳಹಂತದ ನ್ಯಾಯಾಲಯಗಳು ವಿಧಿಸಿದ ಶಿಕ್ಷೆಯನ್ನು ಮೇಲುಹಂತದಲ್ಲಿ ಪ್ರಶ್ನಿಸಿ ಉರುಳಿಂದ ಬಚಾವಾಗುವ ಚೌಕಾಶಿ ಹೆಚ್ಚುತ್ತಿದೆ. ತಪ್ಪಾದುದುಂಟೆ? ಎಂದು ಕೇಳಿಕೊಳ್ಳುವ ಅಂತಃಕರಣವೇ ಸತ್ತು ಬಿದ್ದಿದೆ. ಹೆಣದ ಬಣವೆಯ ಮೇಲೆ ಅಧಿಕಾರದ ನೆಲೆಕಂಡುಕೊಳ್ಳುವುದನ್ನು ಕರಗತಮಾಡಿಕೊಂಡ ಅಧಿಕಾರಶಕ್ತಿಗಳ ಎದೆಯಕಡಲಲ್ಲಿ ಉಸುಕುತುಂಬಿದೆ. ಅಂತಃಸಾಕ್ಷಿಯ ನೀರಹನಿ ಬತ್ತಿಹೋಗಿದೆ. ತಮ್ಮನ್ನು ಮನುಷ್ಯರು ಎಂದುಕೊಳ್ಳುವುದಕ್ಕಿಂತ ಹುಲಿ-ಸಿಂಹಗಳೆಂದೇ ಸಾರಿಕೊಳ್ಳುವ ಈ ಟೊಳ್ಳು ಅಂತರಂಗಗಳು ಕೊಲುವುದುಚಿತವೇ? ಎಂದು ಕೇಳುತ್ತಲೇ ಇರುವ ನಿಲುಗಡೆಯಿಲ್ಲದ ಪ್ರಶ್ನೆಗೆ ನಾಚುವ ಬದಲು ನಾಲಿಗೆ ಕಸರತ್ತು ನಡೆಸುತ್ತಿವೆ. ಇವುಗಳ ಬಾಯಿ ತೆರೆದುಕೊಂಡೇ ಇದೆ. ಕೇಳುವ ಕಿವಿ ಮತ್ತು ಕರಗುವ ಎದೆಗಳಷ್ಟೇ ಸತ್ತಿವೆ. ಹೀಗೆ ಸಂವೇದನೆಯನ್ನೇ ಕಳೆದುಕೊಂಡ ಅಧಿಕಾರಚರಿತ್ರೆಯ ನಡುವೆ, ‘ಕೇಳುವ ಕಿವಿ ಮತ್ತು ನಾಚುವ ಮನಸ್ಸು’ಗಳೆರಡನ್ನೂ ಕಾಪಿಟ್ಟುಕೊಂಡ ನಳಚರಿತೆ ಅರಸೊತ್ತಿಗೆಗೂ ವಿಮಲಚರಿತೆಯನ್ನು ಸಾಧ್ಯವಾಗಿಸಿದೆ.

ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ


– ಡಾ. ಅಶೋಕ್ ಕೆ.ಆರ್.


 

ವರುಷದ ಹಿಂದಿನಿಂದಲೇ ಪ್ರಾರಂಭವಾಗಿದ್ದ ಚುನಾವಣಾ ತಯಾರಿಗಳು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ವೇಗೋತ್ಕರ್ಷಕ್ಕೊಳಗಾಗಿವೆ. ಚುನಾವಣಾ ತಯಾರಿಗಳು ಆರಂಭಗೊಂಡ ದಿನದಿಂದಲೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ‘ಸಮರ’ ಎಂದೇ ಬಿಂಬಿಸಲಾಗುತ್ತಿದೆ. ಚುನಾವಣೆ ಘೋಷಣೆಯಾದ ನಂತರದಲ್ಲೂ ವಿಷಯಾಧಾರಿತ ಚರ್ಚೆಗಳು ಮುನ್ನೆಲೆಗೆ ಬರದಿರುವುದು ನಮ್ಮ ಪ್ರಜಾಪ್ರಭುತ್ವ ಹಿಡಿಯುತ್ತಿರುವ ಜಾಡನ್ನು ತೋರುತ್ತಿದೆಯೇ? ಈಗಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಭಾಷಣಗಳಲ್ಲಿ ಕಾಂಗ್ರೆಸ್ ಮತ್ತದರ ನಾಯಕರ ಬಗೆಗಿನ ಅವಹೇಳನಕಾರಿ ಮಾತುಗಳು ಮತ್ತು ಕಾಂಗ್ರೆಸ್ಸಿಗರ ಭಾಷಣಗಳಲ್ಲಿ ನರೇಂದ್ರ ಮೋದಿ ಬಗೆಗಿನ ವ್ಯಂಗ್ಯಮಿಶ್ರಿತ ಕೆಲವೊಮ್ಮೆ ಅಸಂಬದ್ಧ ಮಾತುಗಳೇ ವಿಜೃಂಭಿಸುತ್ತಿದೆಯೇ ಹೊರತು ಅಧಿಕಾರಕ್ಕೆ ಬಂದರೆ ತಾವು ನೀಡಬಹುದಾದ ಆಡಳಿತದ ಮಾದರಿಯ ಬಗೆಗಿನ ವಿಚಾರಗಳು ಚರ್ಚೆಗೊಳಪಡುತ್ತಲೇ ಇಲ್ಲ. ಇವತ್ತಿನ ಚುನಾವಣಾ ಮಾದರಿಯು ಪ್ರಜಾಪ್ರಭುತ್ವದ ಅಣಕವಾಡುತ್ತಿದೆ.

ಪ್ರಜೆಗಳಿಂದ ಆಯ್ದು ಬಂದ ನೇತಾರ ಅವರನ್ನು ಮುನ್ನಡೆಸುವವನಾದಾಗ ಪ್ರಜಾಪ್ರಭುತ್ವದ ನಿಜ ಅರ್ಥ ಸಾರ್ಥಕವಾಗುತ್ತದೆ. ಆದರೆ ಈಗಿನ ಪ್ರಜಾಪ್ರಭುತ್ವ ಪ್ರಜೆಗಳಿಂದ ಆರಿಸಿ ಬಂದಮೇಲೆ ಪ್ರಜೆಗಳ ಮೇಲೆ ಪ್ರಭುತ್ವ ಸಾಧಿಸುವುದಷ್ಟೇ ಆಗಿ ಹೋಗುತ್ತಿದೆ. ಈ ರೀತಿಯ ಸಿನಿಕತನವೂ ತಾತ್ಕಾಲಿಕವೆ? ಪ್ರತಿ ಬಾರಿಯ ಚುನಾವಣೆಯ ಸಂದರ್ಭದಲ್ಲೂ ಹಿಂದಿನ ಚುನಾವಣೆಯ ಸಂದರ್ಭ ಈಗಿನದಕ್ಕಿಂತ ಉತ್ತಮವಾಗಿತ್ತು ಎಂಬ ಭಾವ ಮೂಡಿಸುತ್ತದೆಯಾ? ಪ್ರತಿ ಬಾರಿ ಹೊಸತೊಂದು ಆಶಯದೊಂದಿಗೆ ಹೊಸ ಸರಕಾರಕ್ಕೆ1 ಅವಕಾಶ ಕೊಟ್ಟ ನಂತರ ಕೆಲವೇ ತಿಂಗಳುಗಳಲ್ಲಿ ಅಥವಾ ವರ್ಷ ಕಳೆಯುವಷ್ಟರಲ್ಲಿ ‘ಅಯ್ಯೋ ಹೋದ ಸರಕಾರವೇ ಪರವಾಗಿರಲಿಲ್ಲ’ ಎಂಬ ಭಾವನೆ ಮೂಡಲಾರಂಭಿಸುತ್ತದೆ! ಹತ್ತು ವರುಷದ ಮನಮೋಹನಸಿಂಗ್ ಆಡಳಿತದಿಂದ ಬೇಸತ್ತ ಜನ ಅಟಲ್ ಬಿಹಾರಿ ವಾಜಪೇಯಿಯ ಗುಣಗಾನ ಮಾಡುತ್ತಾರೆ. ಅಟಲ್ ಆಡಾಳಿತಾವಧಿಯಲ್ಲಿ ನಡೆದ ಹಗರಣಗಳು ನರಸಿಂಹ ರಾವ್ ಅವರೇ ವಾಸಿ ಕಣ್ರೀ ಎಂಬಂತೆ ಮಾಡಿಬಿಡುತ್ತವೆ! ಸಮ್ಮಿಶ್ರ ಸರಕಾರಗಳಿಂದ ಬೇಸತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಆರಿಸಿದ ನಂತರ ಬಿಜೆಪಿಯ ಆಡಳಿತ ವೈಖರಿಯಿಂದ ಸುಸ್ತೆದ್ದು ‘ಕಾಂಗ್ರೆಸ್ಸೇ ವಾಸಿ’ ಎಂದು ಬಿಜೆಪಿಯನ್ನು ಸೋಲಿಸುತ್ತಾರೆ ಜನ. ಇನ್ನು ಕೆಲವು ದಿನಗಳಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ತನ್ನ ದೌರ್ಬಲ್ಯ, ನಿಷ್ಕ್ರಿಯತೆಗಳಿಂದ ಹಳೆಯ ಸರಕಾರವೇ ಒಳ್ಳೆಯದಿತ್ತು ಎಂಬ ಭಾವ ಮೂಡಿಸಿದರೆ ಅಚ್ಚರಿಪಡಬೇಕಿಲ್ಲ! ನಮ್ಮ ನಿರೀಕ್ಷೆಗೆ ತಕ್ಕಂತೆ ಸರಕಾರಗಳು ಕಾರ್ಯನಿರ್ವಹಿಸಲು ವಿಫಲವಾದಾಗ ಈಗಾಗಲೇ ಸೋತು ಮೂಲೆಯಲ್ಲಿರುವ ಕಳೆದ ಬಾರಿ ಆಡಳಿತ ನಡೆಸಿದ ಪಕ್ಷದ ಬಗೆಗೆ ಮೃದು ದೋರಣೆ ತಳೆದುಬಿಡಲಾಗುತ್ತದೆ. ಬಹುಶಃ ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಎಂದು ಎಷ್ಟೇ ದೊಡ್ಡ ದನಿಯಲ್ಲಿ ಕೂಗುತ್ತಿದ್ದರೂ ಯು.ಪಿ.ಎ 2ರ ಆಡಳಿತ ಜನರಲ್ಲಿ ಬೇಸರ ಮೂಡಿಸಿದೆ ಮತ್ತು ಬೇಸರ ಅಟಲ್ ನೇತೃತ್ವದ ಎನ್.ಡಿ.ಎ ವಾಸಿಯಿತ್ತು ಎನ್ನುವಂತೆ ಮಾಡುತ್ತಿರುವುದು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ 2009ರ ಚುನಾವಣೆಯಲ್ಲಿ ಎನ್.ಡಿ.ಎ ಉತ್ತಮ ಎಂಬ ಚರ್ಚೆಗಳು ನಡೆದಿರಲಿಲ್ಲ, ಕಾರಣ ಯು.ಪಿ.ಎ ತನ್ನ ಮೊದಲ ಆಡಳಿತಾವಧಿಯಲ್ಲಿ ಹೆಚ್ಚಿನ ಹಗರಣಗಳನ್ನೇನೂ ಮಾಡಿಕೊಂಡಿರಲಿಲ್ಲ. ಹಗರಣಗಳು, ಜಾಗತೀಕರಣಕ್ಕೆ ಒಡ್ಡಿಕೊಂಡ ಪರಿಣಾಮವಾಗಿ ಆರ್ಥಿಕ ಶಿಸ್ತು ದೇಶದ ಆಡಳಿತದ ಕೈಹಿಡಿತದಿಂದ ತಪ್ಪಿಸಿಕೊಂಡು ಜನರನ್ನು ಬವಳಿಕೆಗೆ ಒಳಪಡಿಸಿದ ರೀತಿ ಮತ್ತು ವರ್ಷದಿಂದ ವರ್ಷಕ್ಕೆ ತನ್ನ ಹಿಡಿತವನ್ನು ಬಲಗೊಳಿಸುಕೊಳ್ಳುತ್ತಲೇ ಸಾಗುತ್ತಿರುವ ಭ್ರಷ್ಟಾಚಾರ ಯು.ಪಿ.ಎಯನ್ನು 2014ರ ಚುನಾವಣೆಯಲ್ಲಿ ಸೋಲುವಂತೆ ಮಾಡುವುದು ಹೆಚ್ಚು ಕಡಿಮೆ ನಿಶ್ಚಯವಾಗಿದೆ.

ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸ್ವಯಂಕೃತ ತಪ್ಪುಗಳಿಂದ ಮತ್ತು ಮೋದಿ ಅಲೆಯಿಂದ ಸೋಲನುಭವಿಸುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಬಹುತೇಕ ಜನರಿಗೂ ಅದೇ ಭಾವನೆಯಿದೆ. ಆದರೆ ಕಾಂಗ್ರೆಸ್ಸನ್ನು ಕಡೆಗಣಿಸಿ ಉಳಿದ ಪಕ್ಷಗಳು ಚುನಾವಣೆ ತಯ್ಯಾರಿ ಮಾಡಿದರೆ ಮತ್ತೆ ಕಾಂಗ್ರೆಸ್ ಅನಿರೀಕ್ಷಿತ ಅಘಾತ ನೀಡಿಬಿಡಬಹುದು. ಈಗಿನ ಬಿ.ಜೆ.ಪಿ ಕೇವಲ ಒಬ್ಬ ವ್ಯಕ್ತಿಯ ಖ್ಯಾತಿಯ ಮೇಲೆ ಚುನಾವಣೆ ಎದುರಿಸಲು ಸನ್ನದ್ಧವಾಗಿದ್ದರೆ 2004ರಲ್ಲಿ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ‘ಇಂಡಿಯಾ ಶೈನಿಂಗ್’ ಎಂಬ ಘೋಷ ವಾಕ್ಯದೊಂದಿಗೆ ಈಗಿನದಕ್ಕಿಂತಲೂ ಹೆಚ್ಚಿನ ಅಬ್ಬರದೊಂದಿಗೆ ಪ್ರಚಾರವಾರಂಭಿಸಿತ್ತು. ಮಾಧ್ಯಮಗಳಲ್ಲೂ ‘ಇಂಡಿಯಾ ಶೈನಿಂಗ್’ನದ್ದೇ ಮಾತು. ಜನರಲ್ಲೂ ಅದೇ ಮಾತು. ಮಾತುಗಳ ಹಿಂದಿನ ಮೌನದಲ್ಲಿ ಹರಿಯುವ ವಿಚಾರಗಳ ಬಗ್ಗೆ ಪ್ರಚಾರದಬ್ಬರದಲ್ಲಿ ಯಾರೂ ಗಮನಹರಿಸದ ಕಾರಣ ಯಾವ ಹೆಚ್ಚಿನ ಪ್ರಚಾರವನ್ನೂ ಮಾಡದೆ ಮಾಧ್ಯಮಕ್ಕೆ ಪ್ರಿಯರೂ ಆಗದೆ ಕಾಂಗ್ರೆಸ್ ಎಲ್ಲರಿಗೂ ಅಚ್ಚರಿ ನೀಡುವ ರೀತಿಯಲ್ಲಿ ಗೆದ್ದು ಬಂದಿತ್ತು. 2009ರ ಚುನಾವಣೆಯಲ್ಲಿ ಸಹಿತ ಎನ್.ಡಿ.ಎ ಅಧಿಕಾರವಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವಾದರೂ ಕೊನೆಗೆ ಮತ್ತೆ ಗೆದ್ದು ಬಂದಿದ್ದು ಯು.ಪಿ.ಎ! ಎಲ್ಲೋ ಒಂದೆಡೆ ಜನರ ಮನಸ್ಥಿತಿಯನ್ನು ಅರಿಯಲು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ವಿಫಲವಾಗುತ್ತಿವೆಯಾ?

ಜನರ ಮನಸ್ಥಿತಿ ಅರಿಯುವುದಕ್ಕಿಂತ ಹೆಚ್ಚಾಗಿ ಜನರ ಯೋಚನಾ ಲಹರಿಯನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸುವ ಕಾರ್ಯದಲ್ಲಿ ಇಂದಿನ ರಾಜಕೀಯ ಪಕ್ಷಗಳ ನೇತಾರರು ನಿರತರಾಗಿದ್ದಾರೆ. ಈ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಖರೀದಿಸುತ್ತಾರೆ, ಮಾಧ್ಯಮಗಳ ಮಾಲೀಕತ್ವ ವಹಿಸುತ್ತಾರೆ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೋಗುತ್ತಿರುವ ಭ್ರಷ್ಟಾಚಾರವನ್ನು ಬಳಸಿಕೊಳ್ಳುತ್ತ ತಮ್ಮ ಪರವಾಗಿರುವ ವರದಿಗಳಷ್ಟೇ ಪ್ರಸಾರವಾಗುವಂತೆ ಮಾಡಿಬಿಡುತ್ತಾರೆ. 2014ರ ಚುನಾವಣೆಯ ಬಗೆಗೆ ಅನೇಕ ವಾಹಿನಿಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಬಿ.ಜೆ.ಪಿ ಏಕಾಂಗಿಯಾಗಲ್ಲದಿದ್ದರೂ ತನ್ನ ನೇತೃತ್ವದ ಎನ್.ಡಿ.ಎ ಮುಖಾಂತರ ಸರಕಾರ ನಿರ್ಮಿಸಲು ಅಗತ್ಯವಾದ ಸ್ಥಾನಗಳ ಸಮೀಪಕ್ಕೆ ಬರುತ್ತದೆ. ಎನ್.ಡಿ.ಎ ನಂತರದ ಸ್ಥಾನದಲ್ಲಿ ಇತರರು (ತೃತೀಯ ರಂಗ) ಬಂದರೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ನೂರರ ಹತ್ತಿರತ್ತಿರ ಬಂದರೆ ಅದೇ ಪುಣ್ಯ ಎಂಬ ಅಂಶ ಬಹುತೇಕ ವಾಹಿನಿಗಳ ಚುನಾವಣಾ ಸಮೀಕ್ಷೆಯ ಅಭಿಪ್ರಾಯ. ಈ ಸಮೀಕ್ಷೆಗಳ ಆಧಾರದ ಮೇಲೆ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಾರಂಭವಾಗಿತ್ತು. ಚರ್ಚೆಗಳು ಮತ್ತಷ್ಟು ಮುಂದುವರೆಯುತ್ತಿದ್ದವೋ ಏನೋ ನ್ಯೂಸ್ ಎಕ್ಸ್ ಪ್ರೆಸ್ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಮೀಕ್ಷೆಗಳನ್ನು ಹಣ ನೀಡುವ ಅಭ್ಯರ್ಥಿ – ಪಕ್ಷಗಳ ಅನುಕೂಲಕ್ಕೆ ತಿರುಚಲಾಗುತ್ತದೆ ಎಂಬ ಸಂಗತಿ ಹೊರಬಂದ ನಂತರ ಸಮೀಕ್ಷೆಗಳ ಬಗೆಗಿನ ಚರ್ಚೆಗಳು ಮಾಯವಾಗಿಬಿಟ್ಟಿವೆ! ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಮಾಧ್ಯಮಗಳ ಸಮೀಕ್ಷೆಗಳು ವಿಫಲವಾದುದಕ್ಕೂ ಇದೇ ಕಾರಣವಿರಬಹುದಾ?

ಚುನಾವಣೆಯ ಸಂದರ್ಭಗಳಲ್ಲಿ ಕಳೆದೊಂದು ದಶಕದಿಂದ ಹೆಚ್ಚು ಚರ್ಚೆಗೊಳಗಾಗುತ್ತಿರುವುದು “ಪೇಯ್ಡ್ ನ್ಯೂಸ್” ಎಂಬ ಅನಿಷ್ಟ ಸಂಪ್ರದಾಯ. ಹಣದಿಂದpaid-news ಮಾಧ್ಯಮಗಳ ಮುಖಪುಟವನ್ನು, ವಾಹಿನಿಗಳ ಸಮಯವನ್ನೇ ಖರೀದಿಸುವ ಸಂಪ್ರದಾಯ. ಪೇಯ್ಡ್ ನ್ಯೂಸನ್ನು ತಡೆಯಲು ಚುನಾವಣಾ ಆಯೋಗ ಕಾಳಜಿ ವಹಿಸುತ್ತಿದ್ದರೂ ಮತ್ತೊಂದು ಮಗದೊಂದು ಹೊಸ ಹೊಸ ರೂಪದಲ್ಲಿ ಪೇಯ್ಡ್ ನ್ಯೂಸ್ ಕಾಣಿಸಿಕೊಳ್ಳುತ್ತಲೇ ಇದೆ. ಇತ್ತೀಚೆಗಷ್ಟೇ ಪ್ರಜಾವಾಣಿಯಲ್ಲಿ ಧಾರವಾಡ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ತಮ್ಮ ಹಿಂಬಾಲಕರ ಮೂಲಕ ಅಲ್ಲಿನ ಸ್ಥಳೀಯ ಪತ್ರಕರ್ತರಿಗೆ ಉಡುಗೊರೆಗಳನ್ನು ನೀಡಿದ ವಿಚಾರ ಬಹಿರಂಗವಾಗಿತ್ತು. ‘ಜೋಶಿಯವರ ಪರವಾಗಿ ಬರೆಯಿರಿ, ಅದು ಸಾಧ್ಯವಾಗದಿದ್ದಲ್ಲಿ ಕಡೇ ಪಕ್ಷ ವಿರುದ್ಧ ವಿಚಾರಗಳನ್ನು ಬರೆಯಬೇಡಿ’ ಎಂಬುದವರ ಬೇಡಿಕೆಯಾಗಿತ್ತು! ಚುನಾವಣೆ ಸಂದರ್ಭದಲ್ಲಿ ಪತ್ರಕರ್ತರು ಲಕ್ಷಗಟ್ಟಲೆ ಹಣ ಮಾಡುವುದು ಈಗ ತೀರ ರಹಸ್ಯ ಸಂಗತಿಯಾಗೇನೂ ಉಳಿದಿಲ್ಲ. ಈ ರೀತಿಯ ಭ್ರಷ್ಟಾಚಾರವನ್ನೂ ತಡೆಗಟ್ಟಬಹುದೇನೋ. ಆದರೆ ರಾಜಕಾರಣಿಗಳೇ ವಾಹಿನಿಗಳ ಮಾಲೀಕರಾದ ಸಂದರ್ಭದಲ್ಲಿ ಪೇಯ್ಡ್ ನ್ಯೂಸ್ ಪಡೆಯುವ ಆಯಾಮವೇ ಬೇರೆ. ಕರ್ನಾಟಕದಲ್ಲಿ ಇದಕ್ಕೆ ಮೊದಲ ಉದಾಹರಣೆ ವಿಜಯ ಕರ್ನಾಟಕ ಪತ್ರಿಕೆ. ವಿಜಯ ಕರ್ನಾಟಕದ ಮಾಲೀಕತ್ವವನ್ನು ಹೊಂದಿದ್ದ ಸಂದರ್ಭದಲ್ಲಿ ವಿಜಯ ಸಂಕೇಶ್ವರ್ ಅವರದೇ ಪಕ್ಷವನ್ನೂ ಕಟ್ಟಿದ್ದರು. ಚುನಾವಣೆಯ ಸಮಯದಲ್ಲಿ ಇಡೀ ವಿಜಯ ಕರ್ನಾಟಕದ ತುಂಬಾ ಅವರ ಪಕ್ಷದ ಅಭ್ಯರ್ಥಿಗಳದೇ ಸುದ್ದಿ! ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಪಕ್ಷಕ್ಕೆ ಇವರ ಪಕ್ಷದವರದೇ ಪ್ರಬಲ ಪೈಪೋಟಿ! ಇಷ್ಟೆಲ್ಲ ಅಬ್ಬರದ ನಂತರವೂ ಅವರ ಪಕ್ಷ ಗೆಲುವು ಕಂಡಿದ್ದು ಕೆಲವೇ ಕೆಲವು ಸ್ಥಾನಗಳಲ್ಲಿ ಮಾತ್ರ. ಇತ್ತೀಚಿನ ಉದಾಹರಣೆಯಾಗಿ ಕಸ್ತೂರಿ, ಜನಶ್ರೀ ಮತ್ತು ಸುವರ್ಣ ವಾಹಿನಿಯನ್ನು ಗಮನಿಸಬಹುದು. ಕಸ್ತೂರಿಯಲ್ಲಿ ಸತತವಾಗಿ ಜೆ.ಡಿ.ಎಸ್ ಮುಖಂಡರ ವರಿಷ್ಟರ ಭಾಷಣಗಳ ಪ್ರಸಾರವಾಗುತ್ತದೆ. ಜನಶ್ರೀ ವಾಹಿನಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ಸಿನ ಪರವಾಗಿ ಹೆಚ್ಚಿನ ಸುದ್ದಿಗಳನ್ನು ಪ್ರಸಾರ ಮಾಡುತಿತ್ತು. ಕಳೆದೊಂದು ವಾರದಿಂದ ಸುವರ್ಣದಲ್ಲಿ ‘ಆಧಾರ್’ ಕಾರ್ಡ್ ವಿರುದ್ಧವಾಗಿ ಅಭಿಯಾನವೇ ನಡೆಯುತ್ತಿದೆ. ದೇಶದ ಹಣ ಪೋಲಾಗುವ ಬಗ್ಗೆ ಕ್ರೋಧಗೊಂಡು ಈ ಅಭಿಯಾನ ನಡೆಸಿದ್ದರೆ ಬೆಂಬಲಿಸಬಹುದಿತ್ತೇನೋ. ಆದರೆ ಈ ಅಭಿಯಾನ ನಡೆಯುತ್ತಿರುವುದು ಆಧಾರ್ ಸಂಸ್ಥೆಯ ಮಾಜಿ ಮುಖ್ಯಸ್ಥ ನಂದನ್ ನಿಲೇಕಿಣಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾರಣದಿಂದ! ಮತ್ತು ಸುವರ್ಣ ವಾಹಿನಿ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿದೆ. ಮತ್ತವರು ಬಿಜೆಪಿಯ ಬೆಂಬಲಿಗರೆಂಬುದು ‘ಆಧಾರ್’ ವಿರುದ್ಧದ ಇಡೀ ಅಭಿಯಾನವನ್ನೇ ಅನುಮಾನದಿಂದ ನೋಡುವಂತೆ ಮಾಡಿಬಿಡುತ್ತದೆ. ಈ ರೀತಿಯ ಸುದ್ದಿ ಪ್ರಸಾರಗಳೂ ಕೂಡ ಪೇಯ್ಡ್ ನ್ಯೂಸಿನ ಅಡಿಯಲ್ಲಿ ಬರಬೇಕಲ್ಲವೇ?

ತೀರ ಜಯಪ್ರಕಾಶ ನಾರಾಯಣರ ಚಳುವಳಿಗೆ ಹೋಲಿಸುವುದಕ್ಕಾಗದಿದ್ದರೂ ಅರವಿಂದ ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ ಪಕ್ಷ’ ದೇಶದಲ್ಲಿ ಮೂಡಿಸಿದ ಸಂಚಲನ ದೊಡ್ಡದು. ’ಅರವಿಂದ ಕೇಜ್ರಿವಾಲ್ ಮತ್ತವರ ಪಕ್ಷಕ್ಕೆ ಸೈದ್ಧಾಂತಿಕ ತಳಹದಿಯೇ ಇಲ್ಲ, ದೆಹಲಿಯಲ್ಲಿ ಆಡಳಿತ ನಡೆಸುವ ಅವಕಾಶ ಸಿಕ್ಕರೂ kejriwal_aap_pti_rallyಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗದ ಹೇಡಿ, ಅರಾಜಕತೆ ಸೃಷ್ಟಿಸುವ ಪ್ರತಿಭಟನೆಗಳನ್ನು ನಡೆಸುವುದರಲ್ಲಷ್ಟೇ ತೃಪ್ತ, ಕೇಜ್ರಿವಾಲ ಅಲ್ಲ ಕ್ರೇಜಿವಾಲ, ಅವರ ಪಕ್ಷಕ್ಕೆ ಒಂದು ನಿರ್ದಿಷ್ಟ ಉದ್ದೇಶ ಗುರಿ ಇಲ್ಲ, ಎಎಪಿ ಕಾಂಗ್ರೆಸ್ಸಿನ ಬಿ ಟೀಮ್, ಕಂಡವರನ್ನೆಲ್ಲ ಕಚ್ಚುವ ಅಭ್ಯಾಸ ಅರವಿಂದರಿಗೆ….’ ಇನ್ನೂ ಅನೇಕಾನೇಕ ಹೇಳಿಕೆಗಳು ಆಮ್ ಆದ್ಮಿ ಪಕ್ಷದ ಬಗ್ಗೆ ಕೇಳಿಬರುತ್ತಿದೆ. ಅಂದಹಾಗೆ ಆಮ್ ಆದ್ಮಿ ಪಕ್ಷ ಇನ್ನೂ ಬಾಲ್ಯಾವಸ್ಥೆಯಲ್ಲಿದೆ! ತೀರ ಇತ್ತೀಚೆಗೆ ಬಂದ ಒಂದು ಹೊಸ ರಾಜಕೀಯ ಪಕ್ಷದ ಬಗ್ಗೆ ದಶಕಗಳಿಂದ ರಾಜಕೀಯವನ್ನೇ ಅರೆದು ಕುಡಿಯುತ್ತಿರುವ ಪಕ್ಷಗಳ್ಯಾಕೆ ಇಷ್ಟೊಂದು ಮಾತನಾಡುತ್ತಿವೆ? ‘ಈ ಕಾಂಗ್ರೆಸ್ಸಿನವರು ಎಲ್ಲಿ ಹೋದರೂ ಮೋದಿ ಮೋದಿ ಅಂತ ಮಾತನಾಡುತ್ತಾರೆ. ಅಷ್ಟೇ ಸಾಕಲ್ಲವೇ ಮೋದಿ ಎಷ್ಟು ಖ್ಯಾತಿ ಹೊಂದಿದ್ದಾರೆ ಎಂದು ತಿಳಿಸಲು’ ಎಂದು ನಗುತ್ತಿದ್ದ ಬಿಜೆಪಿ ಮತ್ತದರ ಪ್ರಧಾನಿ ಅಭ್ಯರ್ಥಿ ನರೇಂದ್ರೆ ಮೋದಿ ಈಗ ಹೋದಬಂದಲ್ಲೆಲ್ಲ ಅರವಿಂದ್ ಕೇಜ್ರಿವಾಲರ ಬಗ್ಗೆ ಮಾತನಾಡುತ್ತಿದ್ದಾರೆ! ದೆಹಲಿಯಲ್ಲಿ ಒಂದಷ್ಟು ಸ್ಥಾನಗಳನ್ನಷ್ಟೇ ಗೆದ್ದಿದ್ದ ಆಮ್ ಆದ್ಮಿ ಪಕ್ಷದ ಬಗ್ಗೆ ಮತ್ತು ಅರವಿಂದ್ ಕೇಜ್ರಿವಾಲರ ಬಗ್ಗೆ ಇಷ್ಟೊಂದು ಭಯವ್ಯಾಕೆ? ತಮ್ಮೆಲ್ಲಾ ತಿಕ್ಕಲುತನ, ಅಪ್ರಬುದ್ಧ ನಿರ್ಧಾರಗಳ ನಡುವೆಯೂ ಅರವಿಂದ್ ಕೇಜ್ರಿವಾಲ್ ತಮ್ಮ ಅಮಾಯಕತೆಯನ್ನು ಕಳೆದುಕೊಂಡಿಲ್ಲ. ಅವರ ಅಮಾಯಕತೆಯೇ ಯಾವ ಅಂಜಿಕೆಯೂ ಇಲ್ಲದೆ ಸತ್ಯವನ್ನು ಹೇಳಿಸಿಬಿಡುತ್ತಿದೆ. ಎಲ್ಲ ಸತ್ಯಗಳಿಗೂ ಸಾಕ್ಷ್ಯಗಳನ್ನೊದಗಿಸುವುದು ಅಸಾಧ್ಯ ಎಂಬ ಸಂಗತಿ ಗೊತ್ತಿದ್ದರೂ ಸತ್ಯವನ್ನು ನಿರ್ಬಿಡೆಯಿಂದ ಹೇಳುವುದಕ್ಕೆ ಹಿಂಜರಿಯುತ್ತಿಲ್ಲ. ಮತ್ತು ಆ ಸತ್ಯಕ್ಕೆ ಉಳಿದ ಪಕ್ಷಗಳು ಭಯಭೀತರಾಗುತ್ತಿದ್ದಾವೆ! ಎಲ್ಲಿಯವರೆಗೆ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರೋ ಅಲ್ಲಿಯವರೆಗೆ ಬಿ.ಜೆ.ಪಿ, ಅದರ ಅಂಗಸಂಸ್ಥೆಗಳು ಮತ್ತು ಬಿ.ಜೆ.ಪಿ ಬೆಂಬಲಿಗರು ಕೇಜ್ರಿವಾಲರನ್ನು ಬೆಂಬಲಿಸುತ್ತಿದ್ದರು. ಇದಕ್ಕೆ ಕಾರಣ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಆ ಪ್ರತಿಭಟನೆ ಕೇಂದ್ರೀಕ್ರತವಾಗಿತ್ತು. ಆಮ್ ಆದ್ಮಿ ಪಕ್ಷ ಕಟ್ಟುವಾಗಲೂ ಅವರ ಬೆಂಬಲ ಮುಂದುವರೆದಿತ್ತು. ದೆಹಲಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮತಗಳನ್ನು ಆಮ್ ಆದ್ಮಿ ಪಕ್ಷ ಸೆಳೆದುಕೊಂಡು ತಮಗೆ ಬಹುಮತ ದೊರೆಯುವುದು ನಿಶ್ಚಿತ ಎಂಬ ನಿರ್ಣಯಕ್ಕೆ ಬಂದಿತ್ತು ಬಿ.ಜೆ.ಪಿ. ಆದರೆ ಯಾವಾಗ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಸಿನ ಮತಗಳ ಜೊತೆಜೊತೆಗೆ ಬಿ.ಜೆ.ಪಿಯ ಮತಗಳನ್ನೂ ಸೆಳೆಯಲಾರಂಭಿಸಿತೋ ಬಿ.ಜೆ.ಪಿ ಮತ್ತದರ ಬೆಂಬಲಿಗರ ಪ್ರೀತಿ ಕಡಿಮೆಯಾಯಿತು. ಉದ್ದಿಮೆಗಳು ಪಕ್ಷಗಳನ್ನು ಮತ್ತು ಪಕ್ಷಗಳ ಸರಕಾರಗಳನ್ನು ನಿಯಂತ್ರಿಸುವ ಬಗೆಯನ್ನು ಘಂಟಾಘೋಷವಾಗಿ ಸಾರುತ್ತ ನರೇಂದ್ರ ಮೋದಿ ಕೂಡ ಅದಾನಿ ಅಂಬಾನಿಗಳ ಕೈಗೊಂಬೆ ಎಂಬ ಕಟುಸತ್ಯವನ್ನು ತಿಳಿಸಲಾರಂಭಿಸಿದ ಮೇಲೆ ಅರವಿಂದ ಕೇಜ್ರಿವಾಲರ ಬಗೆಗಿನ ಅಪಸ್ವರಗಳು ಹೆಚ್ಚುತ್ತಾ ಸಾಗಿದವು. ಉದ್ಯಮಪತಿಗಳನ್ನು ಎದುರಿಹಾಕಿಕೊಂಡು ಎಷ್ಟರ ಮಟ್ಟಿಗೆ ಮುಂದುವರೆಯಬಲ್ಲರು ಕೇಜ್ರಿವಾಲ್?

ಪ್ರಜಾಪ್ರಭುತ್ವದ ಆರೋಗ್ಯ ಸುಧಾರಿಸಲು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ತರಹದ ಪಕ್ಷಗಳು ಅವಶ್ಯಕವಾದರೂ ಎಷ್ಟರ ಮಟ್ಟಿಗೆ ಅವರು ಸುಧಾರಣೆ ತರಲು ಸಾಧ್ಯ ಎಂದು ಗಮನಿಸಿದರೆ ಈಗಲೇ ನಿರಾಶೆಯಾಗಿಬಿಡುತ್ತದೆ. ತಮ್ಮದಿನ್ನೂ ಹೊಸ ಪಕ್ಷ, ಪ್ರತಿಭಟನೆ, ಭಾಷಣಗಳ ಜೊತೆಜೊತೆಗೆ ಪಕ್ಷ ಸಂಘಟನೆಗೂ ಒತ್ತು ಕೊಡಬೇಕು ಎಂಬ ವಿಚಾರ ಮರೆತುಬಿಟ್ಟಿದ್ದಾರೆ. ಆತುರಾತುರದಲ್ಲಿ ಸಾಧ್ಯವಾದಷ್ಟೂ ಕಡೆ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಆತುರದ ಕಾರಣದಿಂದ ಉಳಿದ ರಾಜಕೀಯ ಪಕ್ಷಗಳು ಮಾಡುವಂತೆ ಸಿನಿಮಾದವರಿಗೆ ಟಿಕೇಟು ಕೊಟ್ಟಿದ್ದಾರೆ. ಟಿಕೇಟು ನೀಡಲು ಅವರು ಸಿನಿಮಾದವರು ಎಂಬುದಷ್ಟೇ ಮಾನದಂಡ. ಸಿನಿಮಾ ಕ್ಷೇತ್ರದವರಿಗೆ ಟಿಕೇಟು ಹಂಚಲು ಬಹುತೇಕ ಎಲ್ಲ ಪಕ್ಷಗಳೂ ತುದಿಗಾಲಲ್ಲಿ ನಿಂತಿವೆ. ಸಿನಿಮಾದ ನಂತರ ಹೆಚ್ಚು ಪ್ರಚಾರ ಪಡೆಯುವ ಕ್ರಿಕೆಟ್ ಆಟಗಾರರನ್ನೂ ಚುನಾವಣಾ ಅಖಾಡಕ್ಕೆ ಇಳಿಸಲಾಗಿದೆ. ವಿವಿಧ ಕ್ಷೇತ್ರದವರು ರಾಜಕೀಯಕ್ಕೆ ಬರುವುದು ಉತ್ತಮ ಸಂಗತಿಯೇನೋ ಹೌದು. ಆದರೆ ಭಾರತದಲ್ಲಿ ಸಿನಿಮಾ – ಕ್ರಿಕೆಟ್ಟಿನಲ್ಲಿ ಪಡೆದ ಖ್ಯಾತಿಯಿಂದ ರಾಜಕೀಯಕ್ಕೆ ಪ್ರವೇಶ ಮಾಡಿರುವವರಲ್ಲಿ ಎಷ್ಟು ಜನ ಸಾಮಾಜಿಕ ಮನೋಭಾವದಿಂದ ಕೆಲಸ ನಿರ್ವಹಿಸಿದ್ದಾರೆ ಎಂದು ಗಮನಿಸಿದರೆ ನಿರಾಶೆಯಾಗುವುದೇ ಹೆಚ್ಚು.

ಮೋದಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲರ ಗದ್ದಲದಲ್ಲಿ ಮುಖ್ಯವಾಹಿನಿಗಳು ಬಹುಶಃ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ತೃತೀಯ ರಂಗದ ಶಕ್ತಿಯನ್ನು. ರಾಷ್ಟ್ರೀಯ ಪಕ್ಷಗಳು ಎಂಬ ಪದವೇ ಬಹಳಷ್ಟು ರಾಜ್ಯಗಳಲ್ಲಿ ಸವಕಲಾಗಿ ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ರಾಷ್ಟ್ರೀಯ ಪಕ್ಷಗಳು ಉಸಿರಾಡುವಂತಹ ಪರಿಸ್ಥಿತಿ ಇದೆ. ಹರ್ ಹರ್ ಮೋದಿ, ಘರ್ ಘರ್ ಮೋದಿ ಎಂದರಚುತ್ತಾ ಇನ್ನೂ ಅನೇಕಾನೇಕ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಲೇವಡಿ ಮಾಡುತ್ತಿರುವ “ಮೋದಿ ಬ್ರಿಗೇಡ್”ಗೆ ಕೂಡ ಸತ್ಯದ ಅರಿವಿದೆ. ಎಷ್ಟೇ ಮೋದಿ ಅಲೆ ಎಂದಬ್ಬರಿಸಿದರೂ ಕೊನೆಗೆ ರಾಜ್ಯಗಳ ‘ಸಣ್ಣ’ ಪಕ್ಷಗಳ ನೆರವಿಲ್ಲದೆ ಬಿಜೆಪಿ ಕೂಡ ಅಧಿಕಾರಕ್ಕೆ ಬರಲಾರದು, ಮೋದಿ ಪ್ರಧಾನಿಯಾಗಲಾರರು ಎಂದು. ತೃತೀಯ ರಂಗಕ್ಕೆ ಚಾಲನೆ ನೀಡುವ ಪ್ರಯತ್ನ ನಡೆಯಿತಾದರೂ ಹತ್ತಾರು ಪಕ್ಷಗಳಲ್ಲಿ ಅನೇಕರು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗಿರುವುದರಿಂದ ಚುನಾವಣಾ ಪೂರ್ವ ಹೊಂದಾಣಿಕೆ ಎಂಬುದು ಇನ್ನೂ ಸಾಧ್ಯವಾಗಿಲ್ಲ. ಬಿ.ಜೆ.ಪಿ, ಕಾಂಗ್ರೆಸ್ಸಿನಂತಹ ಪಕ್ಷದೊಳಗೇ ಟಿಕೇಟ್ ಹಂಚಿಕೆಯ ಸಂದರ್ಭದಲ್ಲಿ ಅಸಮಾಧಾನ ಭುಗಿಲೆದ್ದು ಪಕ್ಷಾಂತರ ಮಾಡುವವರು, ಪಕ್ಷೇತರರಾಗಿ ಸ್ಪರ್ಧಿಸುವವರ ಸಂಖೈ ಹೆಚ್ಚಿರುವಾಗ ಪ್ರಾದೇಶಿಕ ಪಕ್ಷಗಳ ನಡುವಿನ ಕಿತ್ತಾಟಗಳು ಅನಿರೀಕ್ಷಿತವೇನಲ್ಲ. ಇನ್ನೆರಡು ತಿಂಗಳಿನಲ್ಲಿ ಹದಿನಾರನೇ ಲೋಕಸಭೆಯ ಚುಕ್ಕಾಣಿ ಹಿಡಿಯುವವರಾರು ಎಂಬುದು ನಿಕ್ಕಿಯಾಗುತ್ತದೆ. ಮಾಧ್ಯಮಗಳ ಸಮೀಕ್ಷೆಗಳು, ನಮ್ಮ ವೈಯಕ್ತಿಕ ಅಭಿಪ್ರಾಯಗಳು, ಪೇಯ್ಡ್ ನ್ಯೂಸುಗಳೆಲ್ಲ ಏನೇ ಹೇಳಿದರೂ ಕೊನೆಗೆ ಚುನಾವಣೆಯ ದಿನ ಮತ ಹಾಕುವವನ ಮನಸ್ಥಿತಿಯ ಮೇಲೆ ರಾಜಕೀಯ ಪಕ್ಷಗಳ ರಾಜಕಾರಣಿಗಳ ಭವಿಷ್ಯ ನಿರ್ಧರಿತವಾಗುತ್ತದೆ. ಯಾರೇ ಅಧಿಕಾರಕ್ಕೆ ಬಂದರೂ ವರುಷ ಕಳೆಯುವದರೊಳಗೆ ‘ಅಯ್ಯೋ ನಮ್ಮ ಮನಮೋಹನಸಿಂಗೇ ವಾಸಿಯಿದ್ದ ಕಣ್ರೀ. ಇದೇನ್ರೀ ಇವರದು ಇಂತಹ ಕರ್ಮ’ ಎನ್ನುವ ಪರಿಸ್ಥಿತಿ ಬಾರದಿರಲಿ ಎಂದು ಆಶಿಸೋಣ.

“ಕಿವಿ ಮತ್ತು ಕಣ್ಣಿನ ತಜ್ಞರು ತುರ್ತಾಗಿ ಬೇಕಾಗಿದ್ದಾರೆ”


-ಬಿ. ಶ್ರೀಪಾದ್ ಭಟ್


ಪ್ರಸೂನ್ ಜೋಶಿ ಎನ್ನುವ ಸೂಕ್ಷ್ಮ ಸಂವೇದನೆಯ ಕವಿ  (ನಿಜಕ್ಕೂ ಈತನೇ ಬರೆದನಾ ಎಂದು ಅಘಾತವಾಗುತ್ತದೆ) ಬಿಜೆಪಿ ಪಕ್ಷದ ಪ್ರಚಾರಕ್ಕಾಗಿ ಸೌಗಂಧ್ ( ಪ್ರತಿಜ್ಞೆ) ಎನ್ನುವ ಕವನವನ್ನು ಬರೆದುಕೊಟ್ಟಿದ್ದಾನೆ.ಇದರ ಕೆಲವು ಸಾಲುಗಳು ಹೀಗಿವೆ

ಈ ಮಣ್ಣಿನೊಂದಿಗೆ ನನ್ನದೊಂದು ಪ್ರತಿಜ್ಞೆ ಇದೆ
ನಾನು ದೇಶವನ್ನು ನಾಶವಾಗಲು ಬಿಡುವುದಿಲ್ಲ
ನಾನು ದೇಶವನ್ನು ನಾಶವಾಗಲು ಬಿಡುವುದಿಲ್ಲ
ನಾನು ದೇಶವನ್ನು ಮಂಡಿಯೂರಲು ಬಿಡುವುದಿಲ್ಲ
ನಾನು ಭಾರತಮಾತೆಗೆ ವಚನ ನೀಡುತ್ತೇನೆ
’ನಿನ್ನ ಶಿರವನ್ನು ತಗ್ಗಿಸಲು ಬಿಡುವುದಿಲ್”
ಈ ಬಾರಿ ಏನೇ ಆಗಲಿ ದೇಶವನ್ನು ನಾಶವಾಗಲು ಬಿಡುವುದಿಲ್ಲ.

ಇದರಲ್ಲಿನ ಅನೇಕ ಸಾಲುಗಳನ್ನು ನರೇಂದ್ರ ಮೋದಿಯ ಧ್ವನಿಯಲ್ಲಿ ಹೇಳಿಸಲಾಗಿದೆ. ಇದು ದೇಶದ ಎಲ್ಲ ಎಫ್ಎಮ್ ಚಾನಲ್ ಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ modi_hindu_nationalistಬಿತ್ತರಗೊಳ್ಳುತ್ತಿದೆ. ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ಪ್ರಚಾರಕ್ಕಾಗಿ ದೇಶವನ್ನು ಈ ರೀತಿ ರಾಷ್ಟ್ರೀಯತೆಯೊಂದಿಗೆ ಸಮೀಕರಿಸಿ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಇಲ್ಲಿ ಅವಶ್ಯಕತೆ ಇಲ್ಲದಿದ್ದರೂ ’ದೇಶವನ್ನು ನಾಶವಾಗಲು ಬಿಡುವುದಿಲ್ಲ’, ’ತಲೆ ತಗ್ಗಿಸಲು ಬಿಡುವುದಿಲ್ಲ’, ’ನನ್ನ ಪ್ರತಿಜ್ಞೆ ’ ಎನ್ನುವಂತಹ ಪ್ರಚೋದನಾಕಾರಿ ಸ್ಲೋಗನ್ ಗಳನ್ನು ಪ್ರಚಾರದ ಹೆಸರಿನಲ್ಲಿ ಬಳಕೆಗೆ ತಂದಿರುವ ಅಂಶ ತಿಳಿಯುತ್ತದೆ. ಬೇರೆ ಸಂದರ್ಭದಲ್ಲಿ ಯಾವುದೋ ಒಂದು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಲು ತಮ್ಮ ಪ್ರಜೆಗಳನ್ನು ಹುರಿದಂಬಿಸಲು ಈ ರೀತಿಯಾಗಿ ಕವನಗಳು ಬಳಕೆಯಾಗಲ್ಪಡುತ್ತವೆ. ಆದರೆ ಇಂಡಿಯಾಗೆ ಸ್ವಾತಂತ್ರ ಬಂದು 67 ವರ್ಷಗಳಾದವು. ಇಂಡಿಯಾದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡು 67 ವರ್ಷಗಳಾದವು. ಸದ್ಯಕ್ಕಂತೂ ಯಾವುದೇ ಯುದ್ಧದ ಭೀತಿಯಿಲ್ಲ. ಆದರೂ ಯಾಕಿಂತಹ ಮತೀಯವಾದದ ಪ್ರಚೋದನಾತ್ಮಕ ಹಾಡು?

ಇದು ಶುದ್ಧ ಆರೆಸ್ಸೆಸ್ ನ ಕೋಮುವಾದಿ ಶೈಲಿ. ಒಂದೆಡೆ ರಾಷ್ಟ್ರೀಯವಾದವೇ ಒಂದು ಬಗೆಯಲ್ಲಿ ಮತೀಯವಾದವನ್ನು ಪ್ರತಿನಿಧಿಸುತ್ತಿದ್ದರೆ ಇನ್ನೊಂದೆಡೆ ಆರೆಸಸ್ ನಾವೆಲ್ಲಾ ಹಿಂದೂ ರಾಷ್ಟ್ರೀಯವಾದಿಗಳು ಎಂದು ಪ್ರಚಾರ ಮಾಡುತ್ತಿರುವುದು ಮುಂದಿನ ಕ್ಷೊಭೆಯ ದಿನಗಳ ಮುನ್ಸೂಚನೆಯಂತಿದೆ. ಈ ಹಿಂದೂ ರಾಷ್ಟ್ರೀಯವಾದದ ಮುಂದುವರೆದ ಭಾಗವಾಗಿಯೇ ಕಾಶ್ಮೀರದ ರಕ್ತಸಿಕ್ತ ನೆಲದಲ್ಲಿ ನಿಂತು ಮೋದಿ, ಏಕೆ 47, ಏಕೆ ಅಂಟೋನಿ, ಏಕೆ 49 ಎಂದು ನೆತ್ತರ ದಾಹದಿಂದ ಮಾತನಾಡಿದ್ದು. ಹಾಗಿದ್ದರೆ ದಲಿತರ, ಆದಿವಾಸಿಗಳ ಪಾಡನ್ನು ಕೇಳುವವರು ಯಾರು? ಅಲ್ಪಸಂಖ್ಯಾತರ ಮುಂದಿನ ಬದುಕು ಹೇಗೆ? ರೈತರು ಭವಿಷ್ಯವೇನು? ಮಹಿಳೆಯ ಬವಣೆಗಳ ಕತೆ ಏನು? ಇವೆಲ್ಲವಕ್ಕೆ ಉತ್ತರವೆಂದರೆ ಮೇಲಿನ ಮತಿಯವಾದದ ರಾಷ್ಟ್ರೀಯವಾದಿ ಹಾಡು. ಅಂದರೆ  ದೇಶ ಇಂದು ಸಂಕಷ್ಟದಲ್ಲಿದೆ. ಹಿಂದುತ್ವ ಅಪಾಯಕ್ಕೊಳಗಾಗಿದೆ. ಹೀಗಾಗಿ, ಮೇಲಿನ ಪ್ರಶ್ನೆಗಳನ್ನು ಕೇಳಬೇಡಿ ಎನ್ನುವಂತಿದೆ ಮತೀಯವಾದಿ ರಾಷ್ಟ್ರೀಯವಾದದ ಹಾಡು.

ಅಷ್ಟಕ್ಕೂ 2014ರ ಪ್ರಜಾಪ್ರಭುತ್ವದ ಚುನಾವಣೆಯನ್ನೇ ಒಂದು ಯುದ್ಧವೆಂದು ಪರಿಗಣಿಸಿದೆಯೇ ಸಂಘಪರಿವಾರ? ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಅವರು ಹೇಳುತ್ತಾರೆ “ಈ ಹಾಡು ಟೈಮ್ಸ್ ನೌ ಛಾನಲ್ ನ ಅರ್ನಾಬ್ ಗೋಸ್ವಾಮಿಗೆ ಹುಟ್ಟುಹಬ್ಬದ ಹಾಡಿನಂತಿದೆ. ಇದು ಪ್ರಧಾನ ಮಂತ್ರಿ ಆಗಲುಬಯಸುವ ಅಭ್ಯರ್ಥಿಗಂತೂ ಅಲ್ಲ. ಯುವ ಜನತೆ ಜಾಗತಿಕವಾಗಿ ಚಿಂತಿಸುತ್ತಿರುವ ಇಂದಿನ ಸಂದರ್ಭದಲ್ಲಿ ಈ ಹಾಡು ಬಿಜೆಪಿಯಿಂದ ಬಂದಿದೆ” ( ಔಟ್ಲುಕ್ 2,ಎಪ್ರಿಲ್ 2014).

ಅಲ್ಲವೇ? ಸದರಿ ಮೋದಿಯೇ ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಯ ಪರವಾಗಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ವಿದೇಶಿ ಕಂಪನಿಗಳನ್ನು ಬಂಡವಾಳ ಹೂಡಿಕೆಗಾಗಿ ಓಲೈಸಲಾಗುತ್ತಿದೆ. ಇನ್ನು ಸೋ ಕಾಲ್ಡ್ ಮಧ್ಯಮ ಮತ್ತು ಮೇಲ್ವರ್ಗ ಮೋದಿಯನ್ನು ಬೆಂಬಲಿಸುತ್ತಿರುವುದು ಸಹ ಈ ಬಂಡವಾಳಶಾಹಿಯ ಜಾಗತೀಕರಣದ ಕಾರಣಕ್ಕಾಗಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಸಂಘ ಪರಿವಾರದ ಪ್ರಣಾಳಿಕೆಗಳಲ್ಲಿ ಅದಕ್ಕೆ ವಿರುದ್ಧವಾಗಿ ಜನರನ್ನು ಕೆರಳಿಸುವ ಈ ಮತೀಯವಾದಿ ರಾಷ್ಟ್ರೀಯವಾದದ ಹಾಡೇಕೆ ??

ರಾಷ್ಟ್ರೀಯವಾದದ ಪರಿಕಲ್ಪನೆಯೇ ಹಾಗೆ. ರಾಷ್ಟ್ರೀಯವಾದದ ಕುರಿತಾಗಿ ಆರ್ವೆಲ್ ಹೀಗೆ ಹೇಳುತ್ತಾನೆ

“ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಒಂದೇ ಎನ್ನುವಂತೆ ಅತ್ಯಂತ ಸಡಿಲವಾಗಿ ಬಳಸುತ್ತಾರೆ. ರಾಷ್ಟ್ರೀಯವಾದಿಗಳು ತಮ್ಮ ಕಡೆಯ ಜನರು ನಡೆಸಿದ ದೌರ್ಜನ್ಯವನ್ನು ನಿರಾಕರಿಸುವುದಿಲ್ಲ, ಅಷ್ಟೇಕೆ  ಆ ದೌರ್ಜನ್ಯಗಳ ಕುರಿತು ಕೇಳಲೂ ನಿರಾಕರಿಸುತ್ತಾರೆ. ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ನಾನು ಅರ್ಥ ಮಾಡಿಕೊಂಡ ಪ್ರಕಾರ ’ಮೊದಲು ಮನುಷ್ಯನನ್ನು ಕ್ರಿಮಿಗಳ ರೀತಿಯಲ್ಲಿ ವಿಂಗಡಿಸಿ ನಂತರ ಆ ಲಕ್ಷಾಂತರ ಮಾನವ ಜೀವಿಗಳಿಗೆ ಒಳ್ಳೆಯವರು ಹಾಗೂ ಕೆಟ್ಟವರೆಂದು ನಿಖರವಾಗಿ ಹಣೆಪಟ್ಟಿಯನ್ನು ನೀಡುವುದು. ಅದರೆ ಇದಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಯೊಬ್ಬ ಒಳ್ಳೆಯದು ಮತ್ತು ಕೆಟ್ಟದನ್ನು ಮೀರಿ ತನ್ನನ್ನು ಒಂದು ದೇಶದೊಂದಿಗೆ ಅಥವಾ ಗುಂಪಿನೊಂದಿಗೆ ಗುರುತಿಸಿಕೊಂಡು ತನ್ನ ಐಡೆಂಟಿಟಿಯ ಹಿತಾಸಕ್ತಿಯನ್ನೇ ಪ್ರಧಾನ ಆಶಯವನ್ನಾಗಿರಿಸಿಕೊಳ್ಳುವುದು.’ ಆದರೆ ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಬೆರಸಲಾಗುವುದಿಲ್ಲ. ಏಕೆಂದರೆ ಇವೆರೆಡೂ ಪರಸ್ಪರ ವಿರುದ್ಧ ಆಶಯಗಳನ್ನು ಒಳಗೊಂಡಿವೆ.

ನನ್ನ ಪ್ರಕಾರ ದೇಶಪ್ರೇಮವೆಂದರೆ ’ಒಂದು ಜೀವನ ಕ್ರಮಕ್ಕೆ, ಒಂದು ನಿರ್ದಿಷ್ಟ ಸ್ಥಳಕ್ಕೆ ತನ್ನನ್ನು ಸಮರ್ಪಿಸಿಕೊಂಡು ತಾನು ನಂಬಿದ ಆ ಜೀವನ ಕ್ರಮ ಹಾಗೂ ನಿರ್ದಿಷ್ಟ ಸ್ಥಳವು ಶ್ರೇಷ್ಠವಾದುದೆಂದು ನಂಬುವುದು.’ ಆದರೆ ಈ ನಂಬುಗೆಯನ್ನು ಮತ್ತೊಬ್ಬರ ಮೇಲೆ ಹೇರಲಾಗುವುದಿಲ್ಲ. ದೇಶಪ್ರೇಮವು ಸಾಂಸ್ಕೃತಿಕವಾಗಿ ತನ್ನದೇ ಶೈಲಿಯನ್ನು ರೂಢಿಸಿಕೊಂಡು ಪ್ರವೃತ್ತಿಯಲ್ಲ್ಲಿ ರಕ್ಷಣಾತ್ಮಕವಾಗಿರುತ್ತದೆ. ಆದರೆ ರಾಷ್ಟ್ರೀಯತೆಯು ಅಧಿಕಾರದ ದಾಹದ ಹಂಬಲದೊಂದಿಗೆ ಬೆರೆತುಕೊಂಡಿರುತ್ತದೆ. ಹಾಗೂ ಅಧಿಕಾರ ದಾಹವು ಆತ್ಮವಂಚನೆಯಿದ ಪ್ರೇರಿತವಾಗಿರುತ್ತದೆ. ಇವೆರೆಡನ್ನೂ ಎಂದೂ ಬೇರ್ಪಡಿಸಲಾಗುವುದಿಲ್ಲ.

ಪ್ರತಿಯೊಬ್ಬ ರಾಷ್ಟ್ರೀಯತವಾದಿಯ ಮೂಲಭೂತ ಗುರಿಯು ಮತ್ತಷ್ಟು ಅಧಿಕಾರವನ್ನು, ಮತ್ತಷ್ಟು ಅಂತಸ್ತನ್ನು ಗಳಿಸುವುದಾಗಿರುತ್ತದೆ. ಇದನ್ನೆಲ್ಲ ತಾನು ನಿಖರವಾಗಿ ಗುರುತಿಸಿಕೊಂಡ ಒಂದು ನಿರ್ದಿಷ್ಟ ಗುಂಪಿಗಾಗಿ, ತಾನು ಗುರುತಿಸಿಕೊಂಡ ದೇಶದ ಹಿತಾಸಕ್ತಿಗಾಗಿ ಮಾಡುತ್ತಿದ್ದೇನೆ ಎಂದು ರಾಷ್ಟ್ರೀಯತವಾದಿಯು ಪ್ರತಿಪಾದಿಸಿಕೊಳ್ಳುತ್ತಾನೆ. ಸದಾ ಪೈಪೋಟಿಯ ಅಂತಸ್ತಿನ ಕಲ್ಪನೆಯಲ್ಲೇ ವಿಹರಿಸುವ ಈ ರಾಷ್ಟ್ರೀಯತವಾದಿಯ ಸಂವೇದನೆಗಳು ಖುಣಾತ್ಮಕವಾಗಿರುತ್ತವೆ ಎಂದು ಪರಿಭಾವಿಸಬಹುದು. ಆತನ ಚಿಂತನೆಗಳು, ಮಾನಸಿಕ ಧೃಡತೆಯು ಪ್ರೋತ್ಸಾಹಕವಾಗಿರಬಹುದು ಅಥವಾ ನಿಂದನಾತ್ಮಕವಾಗಿರಬಹುದು. ಆದರೆ ಅದು ಸದಾಕಾಲ ಸೋಲುಗೆ ಲವುಗಳನ್ನು ಕುರಿತಾಗಿ, ಅವಮಾನಗಳ ಕುರಿತಾಗಿಯೇ ಧ್ಯಾನಿಸುತ್ತಿರುತ್ತದೆ.

ರಾಷ್ಟ್ರೀಯತವಾದಿಯು ಸಮಾಕಾಲೀನ ಇತಿಹಾಸವನ್ನು ಶಕ್ತಿಕೇಂದ್ರಗಳ ಕಟ್ಟುವಿಕೆ ಮತ್ತು ಕೆಡವುವಿಕೆಯ ನಿರಂತರ ಕ್ರಿಯೆಯನ್ನಾಗಿಯೇ ಭಾವಿಸುತ್ತಾನೆ. ಈ ಸಂದರ್ಭದಲ್ಲಿ ತನ್ನನ್ನು ಕಟ್ಟುವಿಕೆಯ ಭಾಗವಾಗಿಯೂ ತನ್ನ ಶತೃವನ್ನು ಕೆಡವುವಿಕೆಯ ಭಾಗವಾಗಿಯೂ ಗುರುತಿಸುತ್ತಾನೆ. ಆತನ ಅಪ್ರಾಮಾಣಿಕತೆ ಕುಖ್ಯಾತವಾಗಿದ್ದರೂ ತನ್ನನ್ನು ತಾನು ಸರಿಯಾದ ದಾರಿಯಲ್ಲಿ ಇರುವವನೆಂದು ಪ್ರಚುರಪಡಿಸಿಕೊಳ್ಳುತ್ತಾನೆ. ರಾಷ್ಟ್ರೀಯತಾವಾದಿಯು ತನ್ನ ಶಕ್ತಿಕೇಂದ್ರದ ಶ್ರೇಷ್ಠತೆಯ ಕುರಿತಾಗಿ ಅಪಾರವಾದ ಕುರುಡು ಭ್ರಾಂತಿಯನ್ನು ಹೊಂದಿರುತ್ತಾನೆ. ತನ್ನ ಗುಂಪಿನ ನಂಬಿಕೆಯ ಹೊರತಾಗಿ ಬೇರೇನನ್ನು ಚಿಂತಿಸುವುದಿಲ್ಲ, ಮಾತನಾಡುವುದಿಲ್ಲ. ರಾಷ್ಟ್ರೀಯತಾವಾದಿಗೆ ತನ್ನ ಸ್ವಾಮಿಭಕ್ತಿ, ರಾಜನಿಷ್ಠೆಯನ್ನು ತೊರೆಯುವುದು ಅಸಾಧ್ಯದ ಮಾತೇ ಸರಿ. ತನ್ನ ಶಕ್ತಿ ಕೇಂದ್ರದ ಮೇಲೆ, ತನ್ನ ಗುಂಪಿನ ಮೇಲೆ ಸಣ್ಣ ರೀತಿಯ ಆರೋಪಗಳು, ಕೀಟಲೆಗಳು ಹಾಗೂ ತನ್ನ ವಿರೋಧಿ ಪಾಳಯದ ಕುರಿತಾಗಿ ಪ್ರಶಂಸೆಯ ಮಾತುಗಳು ರಾಷ್ಟ್ರೀಯತಾವಾದಿಯ ಮನಸ್ಸಿನಲ್ಲಿ ಅಗಾಧವಾದ ತಳಮಳವನ್ನು ಹುಟ್ಟುಹಾಕುತ್ತವೆ.  ಈ ತಳಮಳದಿಂದ ಹೊರಬರಲು ಆತ ಪ್ರತಿರೋಧದ ಮಾರ್ಗಗಳನ್ನು, ಬಲತ್ಕಾರದ ಮಾರ್ಗಗಳನ್ನು ಬಳಸುತ್ತಾನೆ.

ಒಂದು ವೇಳೆ ದೇಶವೊಂದು ಆತನ ಶಕ್ತಿಕೇಂದ್ರವಾಗಿದ್ದರೆ ಆ ದೇಶದ ನೀರು, ಸಾಹಿತ್ಯ, ಕ್ರೀಡೆ, ಧಾರ್ಮಿಕತೆ, ಕಲೆ, ಭಾಷೆ, ಸ್ವದೇಶಿ ಜನರ ಸೌಂದರ್ಯ ಮುಂತಾದವುಗಳ ಕುರಿತಾಗಿ ಶ್ರೇಷ್ಟತೆಯ ವ್ಯಸನವನ್ನು ಬೆಳೆಸಿಕೊಂಡಿರುತ್ತಾನೆ. ಕಡೆಗೆ ಈ ಶ್ರೇಷ್ಟತೆಯ ವ್ಯಸನ ತನ್ನ ಶಕ್ತಿ ಕೇಂದ್ರವಾದ ತನ್ನ ದೇಶದ ಹವಾಮಾನದವೆರೆಗೂ ವ್ಯಾಪಿಸಿಕೊಂಡಿರುತ್ತದೆ. ಪ್ರತಿಯೊಬ್ಬ ರಾಷ್ಟ್ರೀಯತಾವಾದಿಗೆ ತನ್ನ ಭಾಷೆಯ ಔನ್ಯತೆಯ ಕುರಿತಾಗಿ ಪ್ರಚಾರವನ್ನು ನಡೆಸುವ ಹಪಾಹಪಿತನವಿರುತ್ತದೆ. ಪ್ರತಿಯೊಬ್ಬ ರಾಷ್ಟ್ರೀಯತಾವಾದಿಯು ತನ್ನ ಶಕ್ತಿಕೇಂದ್ರವು ನಡೆಸುವ ದೌರ್ಜನ್ಯಗಳನ್ನು ಅತ್ಯಂತ ಸಮಂಜಸವೆಂದು ಸಮರ್ಥಿಸಿಕೊಳ್ಳುತ್ತಾನೆ ಅಥವಾ ಆ ದೌರ್ಜನ್ಯಗಳು ಹತ್ಯಾಕಾಂಡದ ಸ್ವರೂಪದ್ದಾಗಿದ್ದರೆ ಅತ್ಯಂತ ಜಾಣತನದಿಂದ, ಮರೆ ಮೋಸದ ಗುಣದಿಂದ ಆ ಹತ್ಯಾಕಾಂಡಗಳನ್ನು ನಿರ್ಲಕ್ಷಿಸುತ್ತಾನೆ.”

ಅರ್ವೆಲ್ ನ ಮೇಲಿನ ಚಿಂತನೆಗಳು ನಮ್ಮ ಸಂಘ ಪರಿವಾರದ ಇಂದಿನ ಫ್ಯಾಸಿಸ್ಟ್ ಸ್ವರೂಪದ ರಾಜಕೀಯ ಸಂಘಟನೆಗೆ ಸಂಪೂರ್ಣವಾಗಿ ತಾಳೆಯಾಆಗುತ್ತವೆ. ಎಕನಾಮಿಕ್ಸ್ ಟೈಮ್ಸ್ ನಲ್ಲಿ ಬಂದ ಒಂದು ವರದಿ ಹೀಗಿದೆ. “ಒಂದು ವೇಳೆ ಬಿಜೆಪಿ ನೇತೃತ್ವದ ಎನ್ ಡಿ ಎ ಗುಂಪು ಅಧಿಕಾರಕ್ಕೆ ಬಂದರೆ ಸಂಘಪರಿವಾರದ ಹಿಂದುತ್ವದ ಅಜೆಂಡಾಗಳು ತೆಳುಗೊಂಡು ಮೂಲೆಗುಂಪಾಗಬಾರದೆಂದು ನಿರ್ಧರಿಸಿರುವ ಆರೆಸ್ಸೆಸ್ 2000 ಸ್ವಯಂಸೇವಕರನ್ನು ಕೆಲತಿಂಗಳುಗಳ ಕಾಲ ಬಿಜೆಪಿಗೆ ಪರಭಾರೆಯಾಗಿ ಕಳುಹಿಸಲು ನಿರ್ಧರಿಸಿದೆ.

ಮಾಮೂಲಿ ಸಂದರ್ಭದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಹಿರಿಯ ನಾಯಕರು ಅದರ ನೇತೃತ್ವ ವಹಿಸುತ್ತಿದ್ದರು. ಆ ಸಂದರ್ಭದಲ್ಲಿ 09a671d9-189f-4b8a-893f-4833f370ce93HiResಆರೆಸಸ್ ನ ಪಾತ್ರ ನಿರ್ವಾತದಲ್ಲಿರುತಿತ್ತು.  ಆದರೆ ಈಗಿನ ಬದಲಾದ ಸಂದರ್ಭದಲ್ಲಿ ಹಾಗಾಗಲಿಕ್ಕೆ ಬಿಡದ ಆರೆಸಸ್ ತನ್ನ hardcore ಸ್ವಯಂಸೇವಕರನ್ನು ಬಿಜೆಪಿ ಪಕ್ಷದಲ್ಲಿ ಆಯಕಟ್ಟಿನ ಜಾಗಗಳಲ್ಲಿ ತುಂಬಿ ಅತ್ಯಂತ ಕರಾರುವಕ್ಕಾಗಿ ತನ್ನ ಹಿಂದುತ್ವದ ಅಜೆಂಡಾಗಳನ್ನು ಜಾರಿಗೊಳಿಸಲು ತಿರ್ಮಾನ ಕೈಗೊಂಡಿದೆ. ತನ್ನ ಸಂಘಟನೆಯ ಅಜೆಂಡಾಗಳು ಪಕ್ಷದ ಹಿರಿಯ ನಾಯಕರ ದರ್ಬಾರಿನಲ್ಲಿ ನಿರ್ಲಕ್ಷ್ಯಕ್ಕೊಳಗಾಗಬಾರದೆಂಬುದೇ ಈ ತಿರ್ಮಾನಕ್ಕೆ ಕಾರಣ. ಇದು ಮುಂದಿನ ಮೂರು ವರ್ಷಗಳ ಕಾಲದ ದೂರಗಾಮಿ ಯೋಜನೆಯೆಂದು ಆರೆಸಸ್ ಮೂಲಗಳು ತಿಳಿಸಿವೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಆರೆಸಸ್ ನ ಮೂವರು ಹಿರಿಯ ಸ್ವಯಂಸೇವಕರನ್ನು ಆಯಕಟ್ಟಿನ, ಸೂಕ್ಷ್ಮ ಸ್ಥಳಗಳಲ್ಲಿ ಸಂಘ ಪರಿವಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅವರೆಂದರೆ ಲಕ್ನೋದಲ್ಲಿ ರತ್ನಾಕರ ಪಾಂಡೆ, ವಾರಣಾಸಿಯಲ್ಲಿ ಚಂದ್ರಶೇಖರ ಪಾಂಡೆ, ರಾಯ ಬರೇಲಿಯಲ್ಲಿ ಭವಾನಿ ಸಿಂಗ್. ಇದೇ ಬಗೆಯ ಯೋಜನೆಗಳು ಇತರ ರಾಜ್ಯಗಳಲ್ಲಿಯೂ ಜಾರಿಗೊಳ್ಳುತ್ತಿವೆ. ಆರೆಸಸ್ ಈ ಕಾರ್ಯತಂತ್ರವನ್ನು ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. 1988-89ರಲ್ಲಿ ‘ಮುಧುಕರ ದತ್ತಾತ್ರೇಯ ಬಾಳಾಸಾಹೇಬ ದೇವರಸ’ ಅವರು ಆರೆಸಸ್ ನ ಮುಖ್ಯಸ್ಥರಾಗಿದ್ದಾಗ ಆಗ ಆರೆಸಸ್ ನ ಪ್ರಚಾರಕರಾಗಿದ್ದ ನರೇಂದ್ರ ಮೋದಿ, ಗೋವಿಂದಾಚಾರ್ಯ, ಶೇಷಾದ್ರಿ ಚಾರಿಯವರನ್ನು ಬಿಜೆಪಿಯಲ್ಲಿ ಆರೆಸಸ್ ಸಿದ್ಧಾಂತವನ್ನು ಗಟ್ಟಿಗೊಳಿಸಲು ಆ ಪಕ್ಷಕ್ಕೆ ವಲಸೆ ಕಳುಹಿಸಿದ್ದರು. ಶೇಷಾದ್ರಿ ಚಾರಿಯವರು, “ಆಗ ಬಿಜೆಪಿ ಪಕ್ಷವು ಅತ್ಯಂತ ದುರ್ಬಲವಾಗಿತ್ತು. ಅದಕ್ಕಾಗಿ ನಮ್ಮ ಸ್ವಯಂಸೇವರನ್ನು ಅಲ್ಲಿಗೆ ಕಳುಹಿಸುತ್ತಿದ್ದೆವು. ಆದರೆ ಪ್ರತಿಯೊಬ್ಬ ಸ್ವಯಂಸೇವಕನೂ ಬಿಜೆಪಿಯಲ್ಲಿರಬೇಕೆಂದು ಆರೆಸಸ್ ಬಯಸುವುದೇ ಇಲ್ಲ.  ಆದರೆ ಪಕ್ಷವೂ ನಿರ್ಲಕ್ಷಕ್ಕೊಳಗಾಗಬಾರದು” ಎಂದು ಹೇಳಿದ್ದರು.

2009ರಲ್ಲಿ ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಸೋತನಂತರ ಪಕ್ಷದ ಮೇಲೆ ಆರೆಸಸ್ ಹಿಡಿತ ಬಲಗೊಳ್ಳುತ್ತಿದೆ. ಆ ಸಂದರ್ಭದಲ್ಲಿ ನಿತೀಶ್ ಗಡ್ಕರಿಯವರನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದು ಈ ನಿಟ್ಟಿನಲ್ಲಿ ಆರೆಸಸ್ ತೆಗೆದುಕೊಂಡಂತಹ ಮೊದಲ ಹೆಜ್ಜೆ. ನಂತರ ಗಡ್ಕರಿ  ಧರ್ಮೇಂದ್ರ್  ಪ್ರಧಾನ, ಜೆ.ಪಿ.ನಂದ, ಮುರಳೀಧರ ರಾವ್, ವಿ.ಸತೀಶ್, ಸೌದಾನ್ ಸಿಂಗ್ ರಂತಹ ಪ್ರಭಾವಿ ಆರೆಸಸ್ ತಂಡವನ್ನೇ ಪಕ್ಷದೊಳಗೆ ಕರೆತಂದರು. ” ( ಎಕನಾಮಿಕ್ಸ್ ಟೈಮ್ಸ್, ಎಪ್ರಿಲ್ 2, 2014)

ಮೇಲಿನ ವರದಿ ಮತೀಯವಾದಿ ಆರೆಸಸ್ ಸಂಘಟನೆ ಅತ್ಯಂತ aggressive ಆಗಿ ತನ್ನ ಮುಂದಿನ ಹೆಜ್ಜೆಗಳನ್ನು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದೊಂದು ಸಣ್ಣ ಉದಾಹರಣೆ. ಆರೆಸಸ್ ನ  ಅಂಗ ಸಂಸ್ಥೆಗಳು ಎಲ್ಲಾ ದಿಕ್ಕುಗಳಿಂದಲೂ ಬಿಜೆಪಿ ಪಕ್ಷದೊಳಗೆ ಧಾವಿಸುತ್ತಿವೆ. ಮತೀಯವಾದಿ ರಾಷ್ಟ್ರೀಯವಾದ ಮತ್ತು ರಾಜಕೀಯದ ಅಧಿಕಾರದೆಡೆಗೆ ದಾಪುಗಾಲಿಡುತ್ತಿರುವ ಆರೆಸಸ್ ನ  ಕೋಮುವಾದಿ ಶಕ್ತಿಗಳೊಂದಿಗೆ ಎನ್ ಡಿ ಎ ಮೈತ್ರಿಕೂಟದ ಇತರ ಪಕ್ಷಗಳು ಹೇಗೆ ಧ್ರುವೀಕರಣಗೊಳ್ಳುತ್ತವೆ ಎಂದು ಕಾದು ನೋಡಬೇಕಾಗಿದೆ.

ಕಡೆಗೆ ಎಪ್ರಿಲ್  7,  2014ರ ಔಟ್ ಲುಕ್ ಪತ್ರಿಕೆಯಲ್ಲಿ ಪತ್ರಕರ್ತ ಕುಮಾರ್ ಕೇತ್ಕರ್ ತಮ್ಮ ಲೇಖನದಲ್ಲಿ ಒಂದು ಕಡೆ ಹೀಗೆ ಬರೆಯುತ್ತಾರೆ “ನಾನು ಅಹಮದಾಬಾದಿನಲ್ಲಿದ್ದಾಗ ಒಬ್ಬ ವಿದೇಶಿ ಪತ್ರಕರ್ತನನ್ನು ಭೇಟಿಯಾದೆ. ಈ ವಿದೇಶಿ ಪತ್ರಕರ್ತ ಮೋದಿಯ ಗುಜರಾತ್ ನ ಅಭಿವೃದ್ಧಿಯ ಕುರಿತಾಗಿ ವರದಿ ಮಾಡಲು ಬಂದಿದ್ದ. ಆತ ಕಛ್ ಪ್ರಾಂತ ಮತ್ತು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದ. ಆತನೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ನಂತರ ಆ ವಿದೇಶಿ ಪತ್ರಕರ್ತ ನನಗೆ ಒಬ್ಬ ಕಿವಿ ಮತ್ತು ಕಣ್ಣು ತಜ್ಞರು ಗೊತ್ತಿದ್ದರೆ ಹೇಳಿ ಎಂದು ಕೇಳಿದ. ಈ ರೀತಿಯ ಕಿವಿ ಮತ್ತು ಕಣ್ಣಿನ ತಜ್ಞರು ಇರುವುದಿಲ್ಲ, ನಿಮಗೇತಕ್ಕೆ ಎಂದು ಪ್ರಶ್ನಿಸಿದೆ. ಸ್ವಲ್ಪ ಹೊತ್ತು ಧೀರ್ಘ ಮೌನದ ನಂತರ ನಿಟ್ಟುಸಿರು ಬಿಟ್ಟು ಆ ವಿದೇಶಿ ಪತ್ರಕರ್ತ ಹೇಳಿದ ‘ ನಾನು ಬಹಳ ದಿನಗಳಿಂದ ಈ ಗುಜರಾತ್ ಮಾಡೆಲ್ ಕುರಿತಾಗಿ ಕೇಳುತ್ತಿದ್ದೇನೆ. ಇಲ್ಲಿನ ಅಭಿವೃದ್ಧಿಯ ಕುರಿತಾಗಿ ಕೇಳುತ್ತಿದ್ದೇನೆ. ಆದರೆ ಗುಜರಾತ್ ರಾಜ್ಯದ ಯಾವ ಹಳ್ಳಿಯಲ್ಲಿಯೂ ಈ ಅಭಿವೃದ್ಧಿ ನನಗೆ ಕಾಣಲಿಲ್ಲ. ಅಂದರೆ ಈ ಗುಜರಾತ್ ಅಭಿವೃದ್ಧಿಯ ಕುರಿತಾಗಿ ಅತ್ಯಂತ ಬೊಬ್ಬಿಡುವ ಶಬ್ದಗಳನ್ನು ನನ್ನ ಕಿವಿಯು ಕೇಳಿದ್ದನ್ನು ನನ್ನ ಕಣ್ಣು ನೋಡಲಿಕ್ಕೆ ಆಗಲೇ ಇಲ್ಲ. ಅಂದರೆ ನನ್ನ ಕಣ್ಣು ಮತ್ತು ಕಿವಿಯ ನಡುವೆ ಹೊಂದಾಣಿಕೆ ತಪ್ಪಿರಬೇಕು. ಒಂದು ವೇಳೆ ಸರಿಯಿದ್ದಿದ್ದರೆ ನಾನು ಈ ಮಹಾನ್ ನೇತಾರ ಮೋದಿ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿಯನ್ನು ಕಾಣುತ್ತಿದ್ದೆ.  ಆದರೆ ನನಗೆ ಕಾಣುತ್ತಿಲ್ಲ’.

ಚುನಾವಣಾ ಬಹಿಷ್ಕಾರದ ಭಾರತ


– ಅರುಣ್ ಜೋಳದಕೂಡ್ಲಿಗಿ


 

ಚುನಾವಣೆ ಘೋಷಣೆಯಾಗುತ್ತಲೇ ಅದರ ಜತೆ ಚುನಾವಣಾ ಬಹಿಷ್ಕಾರದ ಸುದ್ದಿಗಳೂ ಬೆನ್ನತ್ತುತ್ತವೆ. ಇದು ಯಾವುದೊಂದು ಪಕ್ಷದ 1ಪರವಿರೋಧವೂ ಆಗಿರದೆ ಇಡೀ ವ್ಯವಸ್ಥೆಯ ಬಗೆಗಿನ ಸಿಟ್ಟಿನ ಭಾಗವಾಗಿರುತ್ತವೆ. ಈತನಕ ಈಡೇರದ ಬೇಡಿಕೆಯೊಂದನ್ನು ಮುಂದಿಟ್ಟು, ತತಕ್ಷಣಕ್ಕೆ ಈಡೇರಿಸುವ ಒತ್ತಡ ತಂದು ಚುನಾವಣೆಯನ್ನು ಬಹಿಷ್ಕರಿಸುವುದಿದೆ. ಈ ಸಲದ ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ದೇಶದಾದ್ಯಂತ ಅಲ್ಲಲ್ಲಿ ಮತ ಬಹಿಷ್ಕಾರದ ವರದಿಗಳಾಗಿವೆ. ಈ ಬಹಿಷ್ಕಾರಕ್ಕಿರುವ ಕಾರಣಗಳನ್ನು ನೋಡಿದರೆ ಇಡೀ ದೇಶ ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟುಗಳನ್ನು ಇವು ಬೆರಳು ಮಾಡಿ ತೋರುತ್ತವೆ. ಜನಸಾಮಾನ್ಯರು ಕನಿಷ್ಠ ಸೌಲಭ್ಯಗಳಿಗಾಗಿ ಪರದಾಡುತ್ತಿರುವ ಚಿತ್ರಗಳು ಸಾಲುಗಟ್ಟಿ ನಿಲ್ಲುತ್ತವೆ. ಈ ಚಿತ್ರಗಳ ಮಾತಿಗೆ ಕಿವಿಯಾದರೆ ಚುನಾವಣೆ ಬಹಿಷ್ಕಾರದ ಭಾರತದ ಬಹುರೂಪಗಳು ತೆರೆದುಕೊಳ್ಳುತ್ತವೆ.

ಸಾಮಾನ್ಯವಾಗಿ ಪ್ರಜಾಪ್ರಭುತ್ವ ಸರಕಾರದ ಚುನಾವಣಾ ಪದ್ದತಿಯನ್ನುPoll-Boycot ತಾತ್ವಿಕವಾಗಿ ವಿರೋಧಿಸುತ್ತಾ ಬಂದಿರುವ ನಕ್ಸಲರು ಪ್ರತಿ ಚುನಾವಣೆಗೂ ಮುನ್ನ ಮತ ಬಹಿಷ್ಕಾರದ ಕರೆ ಕೊಡುವುದಿದೆ. ನಕ್ಸಲ್ ನೆಲೆಯ ಕೆಲವು ಪ್ರದೇಶಗಳಲ್ಲಿಯೂ ಇದರ ವರದಿಯಾಗಿದೆ. ಮಾರ್ಚ್ 10 ರಂದು ಛತ್ತೀಸ್ ಘಡ್ ರಾಜ್ಯದ ಸೆಕ್ಯುರಿಟಿ ಫೋರ್ಸ್ ನ 16 ಜನರು ನಕ್ಸಲೈಟರ ಗುಂಡಿಗೆ ಬಲಿಯಾದರು. ಈ ಮೂಲಕ ಸಾಂಕೇತಿಕವಾಗಿ ನಕ್ಸಲ್ ನೆಲೆಯ ಎಂಟು ರಾಜ್ಯಗಳಲ್ಲಿ ಚುನಾವಣೆ ಬಹಿಷ್ಕರಿಸುವ ಸಂದೇಶವನ್ನು ಜನತೆಗೆ ರವಾನೆ ಮಾಡಿದಂತಾಗಿದೆ.

ಮಣಿಪುರದ ಮಾವೋಯಿಸ್ಟ್ ಕಮುನಿಷ್ಟ್ ಪಾರ್ಟಿ ಚುನಾವಣೆಯನ್ನು ಬಹಿಷ್ಕರಿಸುವ ತಿರ್ಮಾನವನ್ನು ಪ್ರಕಟಿಸಿದೆ. ಸದ್ಯಕ್ಕಿರುವ ಚುನಾವಣಾ ಮಾದರಿ ಜನತೆಯಲ್ಲಿ ಸಶಕ್ತ ಬದಲಾವಣೆ ತರುವಂತಿಲ್ಲ. ಭಾರತ ಕಂಡ ನೂರಾರು ಚುನಾವಣೆಗಳು ಆರಿಸಿದ ಜನಪ್ರತಿನಿಧಿಗಳ ಆಡಳಿತ ವೈಖರಿ ಬಡವ ಶ್ರೀಮಂತರ ಅಂತರವನ್ನು ಹೆಚ್ಚಿಸಿದೆಯೇ ವಿನಃ ಕಡಿಮೆ ಮಾಡಿಲ್ಲ ಎಂದು ಅದು ಬಹಿಷ್ಕಾರವನ್ನು ಸಮರ್ಥಿಸಿಕೊಂಡಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯು, ನಿರೀಕ್ಷೆಯಂತೆ ಸ್ವತಂತ್ರ್ಯ ರಾಜ್ಯದ ಕನಸಿನ ಪ್ರದೇಶಗಳಲ್ಲಿ ಮತ ಬಹಿಷ್ಕಾರಗಳಿಗೆ ಕಾರಣವಾಗಿದೆ. ಮಹರಾಷ್ಟ್ರದ ಗದ್ಚಿರೋಲಿ ಜಿಲ್ಲೆಯ ಎಟಪಲ್ಲಿ ತಾಲೂಕಿನ 47 ಹಳ್ಳಿಗಳು ವಿದರ್ಭ ಪ್ರತ್ಯೇಕ ರಾಜ್ಯ ರಚನೆಯ ಕಾರಣಕ್ಕೆ ಮತಬಹಿಷ್ಕಾರ ಮಾಡಿವೆ. ರಾಷ್ಟ್ರೀಯ ಜನಹಿತವಾದಿ ಯುವ ಸಮಿತಿಯು ಇದರ Poll-Boycot-Newsನಾಯಕತ್ವ ವಹಿಸಿದೆ. ’ಪ್ರತ್ಯೇಕ ರಾಜ್ಯ ರಚನೆಯ ಬೇಡಿಕೆಯೊಂದಿಗೆ, ಇಲ್ಲಿನ ಆಡಳಿತ ನಮ್ಮ ಭಾಗಕ್ಕೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸೋತಿದೆ, ಎಟಪಲ್ಲಿ ಭಾಗದ ಬುಡಕಟ್ಟುಗಳಿಗೆ ಯಾವುದೇ ಸೌಲಭ್ಯ ಕಲ್ಪಿಸಲಾಗಿಲ್ಲ” ಎಂದು ಆರೋಪಿಸಿ, ಪ್ರತ್ಯೇಕ ಅಹೇರಿ ಜಿಲ್ಲೆ ರಚನೆಗೂ ಒತ್ತಾಯಿಸಿದ್ದಾರೆ.

ಮುಂಬೈನ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪುನರ್ವಸತಿ ಯೋಜನೆಯನ್ನು ವಿರೋಧಿಸಿ ಆ ಭಾಗದ ಆರು ಹಳ್ಳಿಗಳು ಚುನಾವಣೆಯನ್ನು ಬಹಿಷ್ಕರಿಸಿವೆ. ಈ ಜನರು ರಾಜಕಾರಣಿಗಳಲ್ಲಿ ಯಾವುದೆ ಭರವಸೆಯನ್ನಿಟ್ಟಿಲ್ಲ ಎಂದಿದ್ದಾರೆ. ಪುನರ್ವಸತಿ ಯೋಜನೆ ಮತ್ತು ಪರಿಹಾರದ ಕ್ರಮ ಅವೈಜ್ಞಾನಿಕವಾಗಿದ್ದು, 2009 ರಿಂದಲೂ ಈ ಜನರು ವಸತಿರಹಿತ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಪುಣೆ ಭಾಗದ ಘೋರಪಡಿ ಮತ್ತು ಮುಂಧ್ವಾ ಭಾಗದ ಜನರು ಅತಿಯಾದ ಟ್ರಾಫಿಕ್ ಸಮಸ್ಯೆಗೆ ಬೇಸತ್ತು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಕಾರಣ ಎರಡು ರೈಲ್ವೆ ಬ್ರಿಡ್ಜ್ ನಿರ್ಮಾಣವಾದರೆ ಈ ಭಾಗದ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ. ಆದರೆ ಐದಾರು ವರ್ಷಗಳಿಂದ ಈ ಸಮಸ್ಯೆಯಿದ್ದರೂ, ಬ್ರಿಡ್ಜ್ ಗಾಗಿ ಒತ್ತಾಯ ಪ್ರತಿಭಟನೆಗಳು ನಡೆದರೂ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಹಾಗಾಗಿ ನಾವು ಮತಚಲಾಯಿಸದೆ ವಿರೋಧಿಸುತ್ತೇವೆ ಎಂದು ಈ ಸಮಸ್ಯೆಯ ಹೋರಾಟಗಾರರು ಹೇಳುತ್ತಾರೆ.

ಮೇಘಾಲಯ ರಾಜ್ಯದ ಮಾವೈತ್ ಭಾಗದ ನೂರು ಹಳ್ಳಿಗಳು ಚುನಾವಣ ಬಹಿಷ್ಕರವನ್ನು ಘೋಷಿಸಿವೆ. “1965 ರಲ್ಲಿ ನಿರ್ಮಿಸಿದ ರಸ್ತೆಯನ್ನು ಈತನಕವೂ ಮರು ನಿರ್ಮಾಣ ಮಾಡಿಲ್ಲ. ಹಾಗಾಗಿ 50 ವರ್ಷಗಳಿಂದಲೂ ಹೊಸ ರಸ್ತೆಗಳನ್ನು ನಾವು ಕಂಡಿಲ್ಲ. ಹಳೆ ರಸ್ತೆಗಳ ರಿಪೇರಿಯನ್ನೂ ನೋಡಿಲ್ಲ.” ಎನ್ನುವುದು ಇಲ್ಲಿಯ ಜನರ ಅಳಲು. ಹಾಗಾಗಿ ಕನಿಷ್ಠ ಸೌಲಬ್ಯಗಳಿಗಾಗಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಒಂದು ಲಕ್ಷದ ಎಪ್ಪತ್ತು ಸಾವಿರದಷ್ಟಿರುವ ಗುತ್ತಿಗೆ ಆಧಾರದ ಶಿಕ್ಷಕರು (ಶಿಕ್ಷಾ ಮಿತ್ರಾಸ್) ಚುನಾವಣೆ ಬಹಿಷ್ಕರಿಸಿದ್ದಾರೆ. 3,500 ರಷ್ಟು ಕನಿಷ್ಠ ವೇತನ ಪಡೆಯುತ್ತಿರುವ ಈ ಶಿಕ್ಷಕರು ಉತ್ತರ್ಖಾಂಡ್ ರಾಜ್ಯದಲ್ಲಿರುವ 13,000 ರೂ ವೇತನ ಮಾದರಿಯನ್ನು ಜಾರಿಗೊಳಿಸುವಂತೆ ಕೋರಿದ್ದಾರೆ. ಕಳೆದ ನವಂಬರ್ ನಿಂದ ವೇತನವಿಲ್ಲದ ಈ ಶಿಕ್ಷಕರನ್ನು ಚುನಾವಣೆಯ ಕೆಲಸಕ್ಕೂ ನಿಯೋಜಿಸಲಾಗಿದೆ. “ಸರಕಾರಿ ಲೆಕ್ಕದಲ್ಲಿ ನೌಕರರೇ ಅಲ್ಲದ ನಮ್ಮನ್ನು ಚುನಾವಣೆ ಕೆಲಸಕ್ಕೆ ನಿಯೋಜಿಸುವುದಾದರೂ ಯಾಕೆ?” ಎನ್ನುವುದು ಈ ಶಿಕ್ಷಕರ ಅಳಲು. ಅರುಣಾಚಲ ಪ್ರದೇಶದ ಸರ್ವ ಶಿಕ್ಷ ಅಭಿಯಾನದ ಶಿಕ್ಷಕರು ಕಳೆದ ಆರು ತಿಂಗಳಿಂದ ಸರಕಾರ ಸಂಬಳ ಕೊಡದಿರುವ ಕಾರಣ ಮುಂದುಮಾಡಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಅಂತೆಯೇ ಮತಗಟ್ಟೆಯ ಕೆಲಸಕ್ಕೆ ಹಾಜರಾಗದಿರುವ ಬಗ್ಗೆ ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಾರಿಯ ಮತ ಬಹಿಷ್ಕಾರದಲ್ಲಿ ಬುಡಕಟ್ಟು ಸಮುದಾಯಗಳು ಎಚ್ಚೆತ್ತಿರುವುದು ಗಮನಿಸಬೇಕಾದ ಸಂಗತಿ. ಅಸ್ಸಾಂನ ಗರೊ ಸಮುದಾಯಕ್ಕೆ ಪ್ರತ್ಯೇಕ ಅಕಾಡೆಮಿ ರಚಿಸುವುದಾಗಿ ಮಾತು ಕೊಟ್ಟ ಅಲ್ಲಿನ ಮುಖ್ಯಮಂತ್ರಿ ಭರವಸೆಯನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಗರೊ ಸಮುದಾಯ ಚುನಾವಣೆಯನ್ನು ವಿರೋಧಿಸಿದೆ. ಕಾಮರೂಪ ಮತ್ತು ಗೋಲ್ಪಾರ ಜಿಲ್ಲೆಯ 390 ಹಳ್ಳಿಗಳಲ್ಲಿ 3 ಲಕ್ಷದಷ್ಟಿರುವ ಈ ಸಮುದಾಯ ತಮ್ಮನ್ನು ಅಸ್ಸಾಂ ಸರಕಾರ ನಿರ್ಲಕ್ಷಿಸಿರುವ ಬಗ್ಗೆ ಕಿಡಿಕಾರಿದೆ. 

ಒಡಿಶಾ ರಾಜ್ಯದ ಕೊರಪುಟ್ ಜಿಲ್ಲೆಯ ಎರಡು ಲಕ್ಷದಷ್ಟು ಮತದಾರರಿರುವ ಐದು ಪ್ರಮುಖ ಬುಡಕಟ್ಟುಗಳು ಚುನಾವಣಾ ಬಹಿಷ್ಕಾರದ ನಿರ್ಧಾರ ಪ್ರಕಟಿಸಿವೆ. “ಈವರೆಗೂ ಬುಡಕಟ್ಟುಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಒಡಿಶಾ ಸರಕಾರವು ಬುಡಕಟ್ಟು ಸಮುದಾಯಗಳನ್ನು ಕಡೆಗಣಿಸಿದೆ. ಇದಕ್ಕೆ ಪ್ರತಿಯಾಗಿ ನಾವು ಮತ ಚಲಾವಣೆಯನ್ನು ಮಾಡುವುದಿದಿಲ್ಲ.” ಎಂದು ಕೊರಪುಟ್ ಜಿಲ್ಲಾ ವನವಾಸಿ ಮಹಾಸಂಘದ ಅಧ್ಯಕ್ಷ ಗೋಕುಲ್ ಚಂದ್ರ ಕೋಡ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸುತ್ತಮುತ್ತಣ ನೆಲೆಸಿದ ಲಿಂಬೂ ಸಮುದಾಯ ಚುನಾವಣೆಯನ್ನು ವಿರೋಧಿಸಿದೆ. 1.6 ಲಕ್ಷದಷ್ಟಿರುವ ಲಿಂಬೂ ಸಮುದಾಯದ ಬೇಡಿಕೆಗಳಿಗೆ ಪಶ್ಚಿಮ ಬಂಗಾಳ ಸರಕಾರ ಸ್ಪಂದಿಸುತ್ತಿಲ್ಲ ಎನ್ನುವುದು ಇವರ ಸಿಟ್ಟಿಗೆ ಕಾರಣ. ಲಿಂಬೂ ಸಮುದಾಯದ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವಂತೆಯೂ, ತಮ್ಮ ಲಿಂಬೂಗಳ ಆಡುಭಾಷೆಯನ್ನೇ ನಮ್ಮ ಮಕ್ಕಳು ಕಲಿಯುವ ಪಠ್ಯದಲ್ಲಿ ಅಳವಡಿಸಬೇಕೆಂದು ಈ ಸಮುದಾಯ ಬೇಡಿಕೆ ಸಲ್ಲಿಸುತ್ತಲೇ ಇದೆ.

ಉತ್ತರ ಪ್ರದೇಶದ ಬರೇಲಿಯ ಗಣೇಶನಗರದ ಮೂರು ಸಾವಿರದಷ್ಟು ಮತದಾರರು ನಾಗರಿಕ ಸೌಲಭ್ಯಗಳ ದುಸ್ಥಿತಿಯ ಕಾರಣಕ್ಕೆ ಮತ ಬಹಿಷ್ಕರಿಸಿದ್ದಾರೆ. ‘ನೀವು ಮತ ಯಾಚಿಸಿದರೆ, ನಾವು ಹೆಬ್ಬೆರಳನ್ನು ಕೆಳಗೆ ಮಾಡಿ ನಿಮ್ಮ ಸೋಲನ್ನು ಸೂಚಿಸುತ್ತೇವೆ’ ‘ನೀವು ಎಂಪಿ ಆಗುವ ಮೊದಲು, ಬನ್ನಿ ನಮ್ಮ ನಿಕೃಷ್ಟ ಬದುಕನ್ನೊಮ್ಮೆ ನೋಡಿ’, ‘ಓ ಅಥಿತಿಯೇ, ನಮ್ಮ ಮನೆಗೆ ಬರದಿರು, ನಮ್ಮ ಪ್ರದೇಶದಲ್ಲಿ ನೀರು ಬತ್ತಿ ಹೋಗಿದೆ’ ಮುಂತಾದ ಪೋಸ್ಟರುಗಳನ್ನು ಅಂಟಿಸಿ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. “ಹತ್ತು ವರ್ಷಗಳಿಂದ ಚರಂಡಿಯ ಕಾಮಗಾರಿಯೇ ನಡೆದಿಲ್ಲ, ಇಡೀ ಏರಿಯಾ ಹಂದಿಗಳ ವಾಸಸ್ಥಾನವಾಗಿದೆ, ಪ್ರತಿ ಮನೆಯಲ್ಲಿಯೂ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಒಬ್ಬೊಬ್ಬ ರೋಗಿಗಳಿದ್ದಾರೆ. ಬಾಡಿಗೆದಾರರು ಮನೆಗಳನ್ನು ಖಾಲಿಮಾಡುತ್ತಿದ್ದಾರೆ. ಸ್ವಂತ ಮನೆಯವರಿಗೆ ಮನೆ ಮಾರುವುದೊಂದೇ ದಾರಿ.” ಎಂದು ಈ ಭಾಗದ ಸುನಿತಾ ಸಿಂಗ್ ಹೇಳುತ್ತಾರೆ.

ತಮಿಳುನಾಡಿನ ಪುಡುಕೊಟ್ಟಾಯ್ ಮುನಿಸಿಪಲ್ ವ್ಯಾಪ್ತಿಯ ಕಾಮರಾಜಪುರಂ ನಿವಾಸಿಗಳು ನಗರದಾದ್ಯಾಂತ ಚುನಾವಣೆ ಬಹಿಷ್ಕಾರದ ಪೋಸ್ಟರುಗಳನ್ನು ಅಂಟಿಸಿದ್ದಾರೆ. ಇವರ ಮುಖ್ಯ ಬೇಡಿಕೆ ಕಾಮರಾಜಪುರಂ ಭಾಗದಲ್ಲಿ ಸುಮಾರು ವರ್ಷಗಳಿಂದಲೂ ವಾಸಿಸುವ ನಿವಾಸಿಗಳ ಮನೆ ಜಾಗದ ಪಟ್ಟವನ್ನು ಕೊಡದಿರುವುದು. ಅಂತೆಯೇ ಮೂಲಭೂತ ಸೌಕರ್ಯಕ್ಕಾಗಿ ನಿರಂತರ ಬೇಡಿಕೆಗೆ ಸರಕಾರ ಸ್ಪಂದಿಸದಿರುವುದೇ ಕಾರಣ ಎನ್ನಲಾಗಿದೆ. ಈ ಭಾಗದ ಕಾಮರಾಜಪುರಂ ಯುವ ಸಂಘಟನೆಯು ಇದರ ಮುಂದಾಳತ್ವವನ್ನು ವಹಿಸಿದೆ. ಶ್ರೀಪೆರಂಬದೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಲ್ಲವಪುರಂ ಮುನಿಸಿಪಾಲಿಟಿ ವ್ಯಾಪ್ತಿಯ ನಿವಾಸಿಗಳು ಕೂಡ ಮೂಲಭೂತ ಸೌಕರ್ಯಗಳ ಕೊರತೆಯ ಕಾರಣಕ್ಕೆ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಕಳೆದ ಸಪ್ಟಂಬರ್ ನಲ್ಲಿ ದೇಶದಾದ್ಯಂತ ಆತಂಕ ಹುಟ್ಟಿಸಿದ ಮತೀಯ ಗಲಬೆಗೆ ತುತ್ತಾದ ಉತ್ತರ ಪ್ರದೇಶದ ಮುಜಾಫರ್ ನಗರದ ಜನರು ಚುನಾವಣೆಯ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಗಲಬೆ ಪ್ರದೇಶದಿಂದ ಸ್ಥಳಾಂತರಿಸಿದ 66 ಕುಟುಂಬಗಳು ಮತ ಬಹಿಷ್ಕರಿಸುವುದಾಗಿ ಹೇಳಿವೆ. “ನಾವು ನೊಂದಿದ್ದೇವೆ, ನಮಗೆ ಯಾವ ಸರಕಾರದ ಬಗೆಗೂ, ರಾಜಕಾರಣಿಗಳ ಬಗೆಗೂ ಭರವಸೆ ಉಳಿದಿಲ್ಲ.” ಎಂದಿದ್ದಾರೆ. ಗಲಭೆ ಕಾರಣಕ್ಕೆ ಸ್ಥಳಾಂತರಿಸಿದ ಕುಟುಂಬಗಳು ಶೆಡ್ಡುಗಳಲ್ಲಿ ಜೀವಿಸುತ್ತಿವೆ. ಅಲ್ಲಿ ಅವರ ಮತಪಟ್ಟಿಯೂ ಇಲ್ಲ. ಬದಲಾಗಿ ತಮ್ಮ ಊರುಗಳಿಗೆ ಹೋಗಿ ಮತ ಚಲಾಯಿಸುವ ಉತ್ಸಾಹವೂ ಅವರಲ್ಲಿಲ್ಲ.

ಕರ್ನಾಟಕದ ಮತ ಬಹಿಷ್ಕಾರದ ಸುದ್ದಿಗಳು ವಿಶಿಷ್ಟವಾಗಿವೆ. ತೆಲಂಗಾಣ ಪ್ರತ್ಯೇಕ ರಾಜ್ಯದ ಬಿಸಿ ಕರ್ನಾಟಕಕ್ಕೂ ಹಬ್ಬಿದೆ. ಕರ್ನಾಟಕದ ಮಡಿಕೇರಿPoll-Boycot-Karnataka ಜಿಲ್ಲೆಯಲ್ಲಿ ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆ ಬಲ ಪಡೆದುಕೊಂಡಿದೆ. ಕೊಡವ ರಾಷ್ಟ್ರೀಯ ಮಂಡಳಿ (ಸಿ.ಎನ್.ಸಿ)ಈ ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಒಡ್ಡಿದೆ. ಅಂತೆಯೇ ತುಳುನಾಡು ಹೋರಾಟ ಸಮಿತಿಯೂ ಕಾರ್ಯ ಪ್ರವೃತ್ತವಾಗಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸುವುದಾಗಿ ತುಳುನಾಡು ಪ್ರತ್ಯೇಕತಾವಾದಿಗಳು ಹೇಳಿದ್ದಾರೆ. ಈ ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ..

ಮಾಜಿ ಯೋಧರು, ಹುತ್ಮಾತ್ಮರ ಕುಟುಂಬದವರಿಗೆ ಕನಿಷ್ಟ ನಿವೇಶನ ಕೊಡದ, ಅರ್ಜಿ ನೀಡಿದ್ದಕ್ಕೆ ಸ್ಪಂದನೆ ನೀಡದ ಸರಕಾರಕ್ಕೆ ಪಾಠ ಕಲಿಸಲು ಚುನಾವಣೆ ಬಹಿಷ್ಕಾರ ಹಾಕುವ ಎಚ್ಚರಿಕೆ ಮಾಜಿ ಸೈನಿಕರಿಂದ ಬಂದಿದೆ. ಮಳೆಗೆ ಹಾನಿಯಾದ ಬೆಳೆಗೆ ತಕ್ಷಣ ಪರಿಹಾರ ನೀಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಆಳಂದ ತಾಲೂಕಿನ ಬೆಳಮಗಿ ಗ್ರಾಮಸ್ಥರು ಹೇಳಿದ್ದಾರೆ.

ಪೌಲ್ಟ್ರಿ ಫಾರಂಗಳ ಅಸಮರ್ಪಕ ನಿರ್ವಹಣೆಯ ಕಾರಣಕ್ಕೆ ಹೆಚ್ಚುತ್ತಿರುವ ನೊಣಗಳ ಕಾಟದಿಂದ ಬೇಸತ್ತ ದಾವಣಗೆರೆ ಭಾಗದ ಬೆಳವನೂರು, ಹನುಮಂತಪುರ ಗ್ರಾಮಸ್ಥರು ಮತ ಬಹಿಷ್ಕರಿಸಿದ್ದಾರೆ. ಹಬ್ಬಕ್ಕೆ ಸಿಹಿ ಮಾಡಿದರೆ ನೊಣಗಳ ಸಮೂಹವೇ ದಾಳಿ ಇಡುತ್ತವೆ. ನೊಣಗಳಿಗೆ ಹೆದರಿ ಹಬ್ಬ ಮಾಡದಂತಾಗಿದ್ದೇವೆ. ಗ್ರಾಮದ ವ್ಯಾಪ್ತಿಯಲ್ಲಿ ಮೂರು ಸರ್ಕಾರಿ ಶಾಲೆಗಳಿದ್ದು, ಸೊಳ್ಳೆ ಪರದೆಯೊಳಗೆ ಮಕ್ಕಳ ಆಟ, ಊಟ, ಪಾಠ ನಡೆಯುವಂತಾಗಿದೆ. ಹಾಗಾಗಿ ಪೌಲ್ಟ್ರಿ ಫಾರಂಗಳನ್ನು ತೆರವುಗೊಳಿಸುವುದಕ್ಕೆ ಚುನಾವಣೆಗೆ ಬಹಿಷ್ಕಾರ ಹಾಕುವುದರ ಮೂಲಕ ಒತ್ತಡ ತರುವ ಪ್ರಯತ್ನ ಮಾಡುತಿದ್ದಾರೆ..

ಹಳೇಬೀಡು ಭಾಗದಲ್ಲಿ ಯಗಚಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸಿ, ಚುನಾವಣ ಪ್ರಚಾರ ಮತ್ತು ಸಭೆ ಸಮಾರಂಭಗಳಿಗೆ ಅವಕಾಶ ಕೊಡದಿರುವ ಬಗ್ಗೆ ರೈತ ಸಂಘ ಎಚ್ಚರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸುತ್ತಮುತ್ತಲ ಇನಾಂ ಭೂಮಿಯ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಕೃಷಿಕರಿಗೆ ನೋಟೀಸ್ ನೀಡಿದೆ. ಹಾಗಾಗಿ ಇನಾಂ ಭೂಮಿಯ ಸಂತ್ರಸ್ಥರು ಹೋರಾಟಕ್ಕೆ ಸಜ್ಜಾಗಿ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಒಡ್ಡಿದ್ದಾರೆ.

ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಕೇಂದ್ರದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಈ ಭಾಗದ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ಸಮೀಪದ ಅಮಜೂರು ಕ್ಯಾಂಪ್, 10ನೇ ಕಾಲುವೆ ಕ್ಯಾಂಪ್, ಜನತಾ ಕಾಲೊನಿಗಳಲ್ಲಿ ಸತ್ತರೆ ಹೂಳಲು ಸ್ಮಶಾನವೆ ಇಲ್ಲ. 60 ವರ್ಷಗಳಿಂದ ಸ್ಮಶಾನದ ಜಾಗಕ್ಕಾಗಿ ಈ ಜನರು ಪರದಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ಸ್ಮಶಾನಕ್ಕಾಗಿ ಮತ ಬಹಿಷ್ಕರಿಸುತ್ತಿದ್ದಾರೆ.

ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಒಳಪಡುವ ಅಂಚೆತಿಟ್ಟು ಗಿರಿಜನ ಹಾಡಿಯಲ್ಲಿ ಜೇನುಕುರುಬ, ಸೋಲಿಗ, ಪಂಜಿಎರವ ಜನಾಂಗದವರು ವಾಸಿಸುತ್ತಿದ್ದು, ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಡಿತರ ಧಾನ್ಯಕ್ಕೆ ಕಾಡಿನಿಂದ ಮಾಲ್ದಾರೆಗೆ 3 ಕಿ.ಮೀ. ನಡೆಯಬೇಕು. ಸೀಮೆಎಣ್ಣೆ ಸಿಗದೆ ಬದುಕು ಕತ್ತಲಾಗಿದೆ. ಚುನಾವಣೆ ವೇಳೆ ಭರವಸೆ ನೀಡುವ ಜನಪ್ರತಿನಿಧಿಗಳು ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂಬುದು ವನವಾಸಿಗಳ ಆರೋಪ. ಹಾಗಾಗಿ 30ಕ್ಕೂ ಹೆಚ್ಚು ಕುಟುಂಬಗಳು ಮೂಲಸೌಲಭ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ.

ಈ ವಿರೋಧದ ಬಹುರೂಪಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜ ಮುಖಗಳನ್ನು ಕಾಣಿಸುತ್ತಿವೆ. ಇಲ್ಲಿನ ಬಹುಪಾಲು ಪ್ರತಿರೋಧ ದಾಖಲಾಗಿರುವುದು ರಸ್ತೆ, ನೀರು ಒಳಗೊಂಡಂತೆ ಕನಿಷ್ಠ ಸೌಲಭ್ಯಗಳಿಗಾಗಿ ಎನ್ನುವುದನ್ನು ನೆನಪಿಡಬೇಕು. ಅಂತೆಯೇ ಈ ಬೇಡಿಕೆಗಳು ದಿಢೀರನೆ ಹುಟ್ಟಿದವುಗಳಲ್ಲ, ಬದಲಾಗಿ ಶಾಶ್ವತವಾಗಿ ಕುರುಡು/ಕಿವುಡಾದ ಸರಕಾರವನ್ನು ಎಚ್ಚರಿಸುವ ಭಾಗವಾಗಿ ಹುಟ್ಟಿದವು. ಈ ಬಹಿಷ್ಕಾರಗಳ ಹಿಂದೆ, ಚುನಾಯಿತ ಅಭ್ಯರ್ಥಿಯು ಮತ್ತೆ ಸಿಗುವುದಿಲ್ಲ, ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ ಎನ್ನುವ ಆತಂಕವಿದೆ. ಇದು ಚುನಾವಣಾ ವ್ಯವಸ್ಥೆಯ ಬಗೆಗೆ, ಪ್ರಜಾಪ್ರಭುತ್ವ ಸರಕಾರಗಳ ಬಗೆಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗುತ್ತಿರುವುದನ್ನು ತೋರಿಸುತ್ತಿದೆ.

ಘೋಷಿತ ಮತ ಬಹಿಷ್ಕಾರದಂತೆ, ಅಘೋಷಿತವಾಗಿ ಮತ ಚಲಾಯಿಸದೆ ನುಣುಚಿಕೊಳ್ಳುವ ಜನರ ಸಂಖ್ಯೆಯೂ ದೊಡ್ಡದಿದೆ. ಹಾಗಾಗಿಯೇ ಶೇ 30 ಯಾ 20 ರಷ್ಟು ಮತ ಚಲಾಯಿಸದ ಪ್ರಜೆಗಳು ತಮ್ಮೊಳಗೆ ಮತ ಬಹಿಷ್ಕಾರದ ಸಾತ್ವಿಕ ಸಿಟ್ಟನ್ನು ಪ್ರಕಟಿಸುತ್ತಿರಬಹುದು. ಈ ಬಗೆಯ ಪ್ರತಿರೋಧಗಳು ಚುನಾಯಿತ ಸದಸ್ಯರಿಗೆ ಪ್ರಾಥಮಿಕ ಪಾಠಗಳಾಗಬೇಕಿದೆ. ಈ ಪಾಠಗಳಿಂದ ಅವರು ಕಲಿಯುವುದು ಸಾಕಷ್ಟಿದೆ. ಈಗಿರುವ ಸ್ಥಿತಿಯನ್ನು ನೋಡಿದರೆ ‘ಕಲಿಯುತ್ತಾರೆ’ ಎಂದು ಭಾವಿಸುವುದು ಕೂಡ ಹಾಸ್ಯಾಸ್ಪದ ಸಂಗತಿಯಂತೆ ಕಾಣುತ್ತಿದೆ.

ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಹರಿಯುವ ಕಣ್ಣೀರಿಗೆ ಕೊನೆ ಇಲ್ಲವೇ?


-ಇರ್ಷಾದ್


 

 

 

“ ನನ್ನ ಕುರಿತು ಅತೀ ಕೆಟ್ಟ ಶಬ್ಧಗಳ ಬಳಕೆ ಮಾಡಿ ಅವಮಾನ ಮಾಡಿದ್ದಾರೆ. ಮಹಿಳೆಯೆಂದುmodannana-tamma ನೋಡದೇ 30 ರಷ್ಟು ಯುವಕರ ಗುಂಪು ನನ್ನನ್ನು ಸುತ್ತುವರಿದು ಹೀನವಾಗಿ ನಿಂದಿಸಿದ್ದಾರೆ. ನನ್ನ ಸೀರೆಯನ್ನು ಎಳೆಯೋದಕ್ಕೆ ಮುಂದಾಗಿದ್ದಾರೆ. ಈ ಎಲ್ಲಾ ಯುವಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಕೆಲ ಯುವಕರು ಹಿಂದೂ ಪರ ಸಂಘಟನೆಯೊಂದರ ಸದಸ್ಯರು. ಅನ್ಯಾಯವಾದ ನನಗೆ ದಯಮಾಡಿ ನ್ಯಾಯ ಕೊಡಿಸಿ” ಹೀಗನ್ನುತ್ತಾ ಕಣ್ಣೀರು ಸುರಿಸುತ್ತಾ ತನ್ನ ಮನದಾಳದ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದು ಮಂಗಳೂರು ಮಹಾನಗರ ಪಾಲಿಕೆಯ ಕುಳಾಯಿ ವಾರ್ಡ್ ನ ಸದಸ್ಯೆ ಪ್ರತಿಭಾ ಕುಳಾಯಿ. ಅದೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಸಮ್ಮುಖದಲ್ಲಿ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ.

ದಕ್ಷಿಣ ಕನ್ನಡ ಜಿಲ್ಲೆಯ ಅನೈತಿಕ ಪೊಲೀಸರಿಗೆ ಇಂಥಹಾ ನೂರಾರು ಹೆಣ್ಣುಮಕ್ಕಳ ಕಣ್ಣೀರ ಸುರಿಸಿದ “ಹೆಗ್ಗಳಿಕೆ” ಯ ಇತಿಹಾಸವಿದೆ. ಪ್ರತಿಭಾ ಕುಳಾಯಿ ಕಣ್ಣೀರಿಟ್ಟ ಹಾಗೆ ಸಾಕಷ್ಟು ಅಮಾಯಕ ಯುವತಿಯರು, ಮಹಿಳೆಯರು ಸಂಸ್ಕೃತಿ ರಕ್ಷಕರ ಕೆಂಗಣ್ಣಿಗೆ ಸಿಲುಕಿ ಕಣ್ಣೀರಿಟ್ಟಿದ್ದಾರೆ. ಸುಶಿಕ್ಷಿತ ಮಹಿಳೆಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿ ಪ್ರತಿಭಾ ಕುಳಾಯಿ ಮಾಧ್ಯಮದ ಮುಂದೆ ಬಂದು ತನ್ನ ಅಳಲನ್ನು ತೋಡಿಕೊಂಡು ನ್ಯಾಯ ಕೊಡಿಸಿ ಎಂದು ಕೇಳುವ ಧೈರ್ಯವನ್ನು ತೋರಿಸಿದ್ದಾರೆ. ಆದರೆ ಈ ನೈತಿಕ ಪೊಲೀಸರ ಗುಂಡಾಗಿರಿಗೆ ಬಲಿಯಾಗಿ ಅದೆಷ್ಟೋ ಕಾಲೇಜು ವಿದ್ಯಾರ್ಥಿನಿಯರು, ಅಮಾಯಕ ಮಹಿಳೆಯರು ಮಾನ ಮಾರ್ಯಾದೆಗೆ ಅಂಜಿ ಮನೆಯಲ್ಲೇ ಕುಳಿತು ನಿತ್ಯ ಕಣ್ಣೀರಿಟ್ಟಿದ್ದಾರೆ ಹಾಗೂ ಕಣ್ಣೀರಿಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸರ ಕೆಂಗಣ್ಣಿಗೆ ಬಿದ್ದು ಅಸಹಾಯಕ ಹೆಣ್ಮಕ್ಕಳು ಕಣ್ಣೀರಿಟ್ಟಿದ್ದು ದೇಶಕ್ಕೆ ಗೊತ್ತಾಗಿರುವುದು 2008 ರಲ್ಲಿ ನಡೆದ ಪಬ್New ದಾಳಿ ಸಂಧರ್ಭದಲ್ಲಿ. ಹಿಂದೂ ಸಂಘಟನೆಯ ಕಾರ್ಯಕರ್ತರು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ದಾಳಿ ಮಾಡಿದ್ದರು. ಪಬ್ ಒಳಗಡೆ ಇದ್ದ ಯುವಕ –ಯುವತಿಯರನ್ನು ಎಳೆದಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದರು. ಅವಮಾನಕ್ಕೀಡಾದ ಯುವತಿಯರು ಕಣ್ಣೀರು ಸುರಿಸುತ್ತಾ ಎದ್ದು ಬಿದ್ದು ನೈತಿಕ ಪೊಲೀಸರಿಂದ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನ ಪಡುತ್ತಿದ್ದರು. ನೈತಿಕ ಪೊಲೀಸರ ದಾಳಿಗೆ ಸುಸ್ತಾಗಿ ಅತ್ತ ಅವಮಾನವನ್ನೂ ಸಹಿಸಿಕೊಳ್ಳಲಾಗದೇ ಇತ್ತ ಅನ್ಯಾಯವನ್ನು ಪ್ರತಿಭಟಿಸಲಾಗದೆ ಕಣ್ಣೀರು ಸುರಿಸಿ ಅಷ್ಟಕ್ಕೆ ಸುಮ್ಮನಾದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಣಿನ ಕಣ್ಣೀರು ಅಷ್ಟಕ್ಕೆ ನಿಲ್ಲಲಿಲ್ಲ. ನಂತರದಲ್ಲಿ ಮತ್ತೊಮ್ಮೆ ಕರಾವಳಿಯ ಹೆಣ್ಣಿನ ಕಣ್ಣೀರನ್ನು ದೇಶ ನೋಡಿದ್ದು 2012 ರಲ್ಲಿ ನಡೆದ ಹೋಂ ಸ್ಟೇ ದಾಳಿಯ ಸಂಧರ್ಭದಲ್ಲಿ. ಪತ್ರಕರ್ತ ನವೀನ್ ಸೂರಿಂಜೆಯ mangalore_moral1ಕ್ಯಾಮರಾ ಕಣ್ಣಿನಲ್ಲಿ ಅಮಾಯಕ ಹೆಣ್ಣುಮಕ್ಕಳ ಕಣ್ಣೀರು ಸೆರೆಯಾಗಿತ್ತು. ಸ್ನೇಹಿತನೊಬ್ಬನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಬಂದಿದ್ದ ಕೆಲವು ಯುವತಿಯರನ್ನು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಮತ್ತೆ ನೈತಿಕ ಪೊಲೀಸರು ಕಾಡಿದ್ದರು. ಅಲ್ಲಿದ್ದ ಹೆಣ್ಮಕ್ಕಳ ಮೇಲೆ ರಾಕ್ಷಸೀಯ ವರ್ತನೆ ತೋರಿಸಿ ಮನಬಂದಂತೆ ಥಳಿಸಿ ಮಾನಭಂಗ ಮಾಡಿದ್ದರು. ಸಂತಸದ ಪಾರ್ಟಿಗೆ ಆಗಮಿಸಿದ್ದ ಹೆಣ್ಮಕ್ಕಳ ಕಣ್ಣಿನಲ್ಲಿ ಹರಿಯುತ್ತಿದ್ದ ಕಣ್ಣೀರ ಕೋಡಿಯನ್ನು ನಾಗರಿಕ ಸಮಾಜ ನೋಡಿತ್ತು. ಅಲ್ಲಿಯೂ ಹೆಣ್ಣು ಅಸಹಾಯಕಲಾಗಿದ್ದಳು. ಸಮಾಜದ ಮುಂದೆ ಬಂದು ತಮ್ಮ ಮೇಲೆ ಅಮಾನುಷವಾಗಿ ವರ್ತಿಸಿದ ರಾಕ್ಷಸರ ವಿರುದ್ಧ ಸೆಟೆದು ನಿಲ್ಲಲು ಆಕೆಗೆ ಸಾಧ್ಯವಾಗಲಿಲ್ಲ. ಅವಮಾನದ ಕಣ್ಣೀರೇ ಆಕೆಯ ಪಾಲಿಗೆ ಅಂತಿಮವಾಯಿತು. ಈ ಎಲ್ಲಾ ಸಂಧರ್ಭಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೈತಿಕ ಪೊಲೀಸರ ದಾಳಿ ಒಳಗಾಗಿ ಹೆಣ್ಣು ಸುರಿಸಿದ ಅವಮಾನದ ಕಣ್ಣೀರನ್ನು ದೇಶ ನೋಡಿತು. ನಾಗರಿಕ ಸಮಾಜ ಪ್ರತಿಭಟಿಸಿತು. ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿತ್ತು. ಆದರೂ ವ್ಯವಸ್ಥೆಯ ವೈಫಲ್ಯದಿಂದ ಅಸಹಾಯಕರಾದ ಹೆಣ್ಮಕ್ಕಳ ಕಣ್ಣೀರನ್ನು ದೇಶದ ಜನರ ಮುಂದಿಟ್ಟ ತಪ್ಪಿಗೆ ಪತ್ರಕರ್ತ ನವೀನ್ ಸೂರಿಂಜೆ 4 ತಿಂಗಳುಗಳ ಕಾಲ ಜೈಲಲ್ಲಿ ಕೊಳೆಯುವಂತಾಯಿತು.

ಇವುಗಳು ನಾವು ನೀವು ಕಂಡ ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಮಕ್ಕಳ ಕಣ್ಣೀರಾಗಿವೆ. ಹೀಗೆ ನಿತ್ಯ ಇಂಥಹಾ ಸಾಕಷ್ಟು ಅಮಾಯಕ ಹೆಣ್ಮಕ್ಕಳು ಉಭಯ ಧರ್ಮಗಳ ಸಂಘಟನೆಗಳ ನೈತಿಕ ಪೊಲೀಸರ ಕಾಟಕ್ಕೆ ಬಲಿಯಾಗಿ ಕಣ್ಣೀರನ್ನು ಸುರಿಸುತ್ತಲೇ ಇದ್ದಾರೆ.

  • ಒಂದು ವರ್ಷದ ಹಿಂದೆ ಮಂಗಳೂರಿನ ಬಜ್ಪೆಯಲ್ಲಿ ಹಿಂದು ಯುವಕನೊಬ್ಬನ ಜೊತೆಯಲ್ಲಿ ಮುಸ್ಲಿಂ ಯುವತಿಯೊಬ್ಬಳು ಕಾರಲ್ಲಿ ತಿರುಗಾಡಿದನ್ನು ಕಂಡು ಮುಸ್ಲಿಂ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಯುವಕರ ಗುಂಪು ಜೋಡಿಗಳ ಮೇಲೆ ಮುಗಿಬಿದ್ದಿತ್ತು. ಹಲ್ಲೆಯನ್ನೂ ನಡೆಸಿತ್ತು. ಆ ಸಂಧರ್ಭದಲ್ಲೂ ಅವಮಾನಕ್ಕೆ ಒಳಗಾದ ಮುಸ್ಲಿಂ ಯುವತಿ ಕಣ್ಣೀರಿಟ್ಟಿದ್ದಳು. ಕೈಮುಗಿದು ಅತ್ತು ಗೋಗರಿದಿದ್ದಳು ಆ ಕತ್ತಲಲ್ಲಿ ಅವಳ ಕಣ್ಣೀರು ಯಾರಿಗೂ ಕಾಣಲಿಲ್ಲ.
  • ಸುರತ್ಕಲ್ ಬೀಚ್ ನಲ್ಲಿ ಮುಸ್ಲಿಂ ಯುವಕನೊಬ್ಬನ ಜೊತೆ ಹಿಂದೂ ಯುವತಿಯೊಬ್ಬಳು ಸುತ್ತಾಡುತ್ತಿದ್ದಿದ್ದನ್ನು ಕಂಡ ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಯುವಕರು ದಾಳಿ ಮಾಡಿದ್ದರು. ಅಲ್ಲಿಯೂ ಇದೇ ಪರಿಸ್ಥಿತಿ. ಧರ್ಮ ರಕ್ಷಣೆಯ ಹೆಸರಲ್ಲಿ ಅವಮಾನಕ್ಕೊಳಗಾದ ಹೆಣ್ಣು ಅಲ್ಲಿಯೂ ಕಣ್ಣೀರಿಟ್ಟಿದ್ದಳು ಸಮುದ್ರ ಗಾಳಿಯ ಹೊಡೆತಕ್ಕೆ ಆಕೆಯ ಕಣ್ಣೀರು ಅಲ್ಲೇ ಆರಿ ಹೋಗಿತ್ತು.
  • ಮಂಗಳೂರಿನ ಸುರತ್ಕಲ್ ನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳು ತಾನು ಮದುವೆಯಾಗಲಿರುವ ತನ್ನದೇ ಕೋಮಿನ ಯುವಕನ ಜೊತೆಯಲ್ಲಿದ್ದಾಗ ಅವರ ಮೇಲೂ ನೈತಿಕ ಪೊಲೀಸರ ಕಣ್ಣು ಬಿದ್ದಿತ್ತು. ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಗುಂಪು ಅವರ ಮೇಲೆ ಮುಗಿಬಿದ್ದಿತ್ತು. ಎಲ್ಲರ ಮುಂದೆ ಅವಮಾನಕ್ಕೀಡಾದ ಯುವತಿ ಕಣ್ಣೀರು ಸುರಿಸುತ್ತಿದ್ದಳು. ಪಾಪ ಬಡವರಾದ ದೂರದ ಜಾರ್ಖಂಡ್ ಯುವತಿಯ ಕಣ್ಣೀರು ಜಿಲ್ಲೆಯ ಪೊಲೀಸರಿಗೆ ಕಣ್ಣೀರಾಗಿ ಕಾಣಲೇ ಇಲ್ಲ.
  • ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಮುಸ್ಲಿಂ ಮಹಿಳೆಯೊಬ್ಬಳಿಗೆ ಸಹಾಯಮಾಡುವ ನೆಪದಲ್ಲಿ ಸಲುಗೆಯಿಂದಿದ್ದಾರೆ ಎಂಬ ಕಾರಣವನ್ನಿಟ್ಟು ಸ್ಥಳೀಯ ಪತ್ರಕರ್ತ ವಿ.ಟಿ ಪ್ರಸಾದ್ ಮೇಲೆ ಮುಸ್ಲಿಂ ಸಂಘಟನೆಯೊಂದಕ್ಕೆ ಸೇರಿದ ಯುವಕರ ಗುಂಪು ಹಲ್ಲೆ ನಡೆಸಿತ್ತು. ವಿ.ಟಿ ಪ್ರಸಾದ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಲ್ಪಟ್ಟ ಮುಸ್ಲಿಂ ಮಹಿಳೆಗೆ ಹಲ್ಲೆಕೋರರು ಧರ್ಮದ ಜಾಗೃತಿಯ ಹೆಸರಲ್ಲಿ ಅವಮಾನ ಮಾಡಿದ್ದರು. ಅಲ್ಲಿಯೂ ಆ ಬಡಪಾಯಿ ಮಹಿಳೆ ಕಣ್ಣೀರು ಸುರಿಸಿದ್ದಳು. ಪಾಪ ಆಕೆ ಧರಿಸಿದ ಬುರ್ಖಾ ಪರದೆಯ ಒಳಗಿನ ಕಣ್ಣುಗಳಿಂದ ಸುರಿಯುತ್ತಿದ್ದ ಕಣ್ಣೀರು ಹೊರ ಜಗತ್ತಿಗೆ ಕಾಣಲೇ ಇಲ್ಲ.

ಇವುಗಳು ಕೆಲವೊಂದು ಉದಾಹರಣೆಗಳಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗೆ ನಿತ್ಯ ಮಹಿಳೆ ಕಣ್ಣೀರು ಸುರಿಯುತ್ತಲೇ ಇದ್ದಾಳೆ. ಈ ಕಣ್ಣೀರು ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಇನ್ನು ಕೆಲವು ಪ್ರಕರಣಗಳು ಹೊರ ಪ್ರಪಂಚದ ಗಮನಕ್ಕೆ ಬಾರದೇ ಮುಚ್ಚಿಹೋಗುತ್ತವೆ. ನೈತಿಕ ಪೊಲೀಸ್ ಗಿರಿ ಪದ್ದತಿಯನ್ನು ಹಿಂದೂ ಪರ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸಿದವು. ಅದನ್ನು ಮುಸ್ಲಿಂ ಪರ ಸಂಘಟನೆಗಳು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿವೆ. ಏಟಿಗೆ ಇದಿರೇಟು ಎಂಬ ಮಾದರಿಯಲ್ಲಿ ಉಭಯ ಕೋಮುಗಳ ಸಂಘಟನೆಗಳು ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಯನ್ನು ಮಾಡುತ್ತಾ ಬರುತ್ತಿವೆ. ಇದಕ್ಕೆ ಬಲಿಯಾಗುತ್ತಿರುವವರು ಉಭಯ ಧರ್ಮಗಳ ಅಮಾಯಕ ಯುವಕ –ಯುವತಿಯರು. ಮಾರ್ಚ್ 31 ರಂದು ಮಂಗಳೂರಿನ ಸುರತ್ಕಲ್ ಕೋಡಿಕೆರೆಯಲ್ಲಿ ಮಹಿಳಾ ಕಾರ್ಪೋರೇಟರ್ ಮೇಲೆ ನಡೆದದ್ದು ಇಂಥಹಾ ನೈತಿಕ ಪೊಲೀಸರ ದಾಳಿಯೇ.

ಪಾಲಿಕೆ ಸದಸ್ಯೆ ಪ್ರತಿಭಾ ಮೇಲಿನ ಅಕ್ರಮಣಕ್ಕೆ ಕಾರಣ ಅವರು ಸಂಸ್ಕೃತಿಯ ಚೌಟಕ್ಕಿನ unnamedಎಲ್ಲೆ ಮೀರಿದ್ದಾರೆ ಎಂಬ ನೈತಿಕ ಪೊಲೀಸರ ಸಂಶಯ. ಇದುವೇ ಇವರ ನಿದ್ದೆಗೆಡಲು ಪ್ರಮುಖ ಕಾರಣವಾಗಿರುವುದು. ಪ್ರತಿಭಾ ಕುಳಾಯಿ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂಧರ್ಭದಲ್ಲಿ ಅವರನ್ನು ಅಡ್ಡಗಟ್ಟಿದ ತಂಡ ಅವರನ್ನು ತರಾಟೆಗೆ ತೆಗೆದುಕೊಂಡ ಸಂಧರ್ಭದಲ್ಲಿ ನಿಂದಿಸಿದ ರೀತಿ, ಅದಕ್ಕಾಗಿ ಬಳಸಿದ ಪದಗಳು ಇದನ್ನು ಸಾಬೀತುಪಡಿಸುತ್ತವೆ. ವಿಪರ್ಯಾಸವೆಂದರೆ ಮಹಿಳಾ ಜನಪ್ರತಿನಿಧಿಯ ಮೇಲೆ ದೌರ್ಜನ್ಯ ನಡೆಸಿದವರನ್ನು ಬಂಧಿಸಲು ತಮ್ಮ ಕ್ಷೇತ್ರದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವ ಬದಲಾಗಿ ಆ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಪ್ರತಿಭಾ ಅವರ ಜೊತೆ ಮಾಧ್ಯಮದ ಮುಂದೆ ಬಂದು ಹಲ್ಲೆಕೋರನ್ನು ಬಂಧಿಸಿ ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸುವಂತೆ ಕೇಳಿಕೊಳ್ಳುವುದರ ಹಾಸ್ಯಾಸ್ಪದ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿಯ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ನಡೆದಿತ್ತು. ಇದು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡುಮಾಡಿತ್ತು. ಜಿಲ್ಲೆಯಲ್ಲಿ ನಡೆಯುತ್ತಿದ್ದ ನೈತಿಕ ಪೊಲೀಸ್ ಗಿರಿಯನ್ನೇ ಪ್ರಮುಖ ಚುನಾವಣಾ ವಿಚಾರವನ್ನಾಗಿಸಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣಾ ಕಣಕ್ಕಿಳಿದಿತ್ತು. ಅದರಲ್ಲಿ ಯಶಸ್ಸನ್ನೂ ಗಿಟ್ಟಿಸಿಕೊಂಡಿತ್ತು. ಸರ್ಕಾರ ರಚನೆಯಾದ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ರಮನಾಥ್ ರೈ , ಆರೋಗ್ಯ ಸಚಿವ ಯು.ಟಿ ಖಾದರ್ ಸೇರಿದಂತೆ ಅನೇಕ ಮುಖಂಡರು ನೈತಿಕ ಪೊಲೀಸ್ ಗಿರಿಯ ಕಡಿವಾಣವೇ ನಮ್ಮ ಗುರಿ ಎಂದರು. ಆದರೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಬಿಜೆಪಿ ಆಡಳಿತ ಅವಧಿಯಲ್ಲಿ ಪ್ರಮುಖ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಕಾರ್ಯ ಆಗಿತ್ತು. ಆದರೆ ಇದೀಗ ಕಾಂಗ್ರೆಸ್ ಆಡಳಿತದಲ್ಲಿ ಎಲ್ಲೆ ಮೀರುತ್ತಿರುವ ನೈತಿಕ ಪೊಲೀಸ್ ಗಿರಿಯ ಆರೋಪಿಗಳನ್ನು ಕನಿಷ್ಠ ಪಕ್ಷ ಬಂಧಿಸುವ ಕಾರ್ಯವೂ ನಡೆಯದೇ ಇರುವುದು ವಿಪರ್ಯಾಸ. ಆಡಳಿತ ಯಂತ್ರದ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ ಇಲ್ಲಿ ಎದ್ದು ಕಾಣುತ್ತಿದೆ. ಹೀಗೆ ನೈತಿಕ ಪೊಲೀಸರ ಅಟ್ಟಹಾಸಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಈ ಜಿಲ್ಲೆಯ ಇನ್ನೆಷ್ಟು ಅಮಾಯಕ ಹೆಣ್ಮಕ್ಕಳು ಕಣ್ಣೀರು ಸುರಿಸಬೇಕಾಗಿ ಬರುತ್ತೋ ?