Author Archives: editor

ಮಲೆನಾಡಿನ ಮಹಾಮಳೆ

– ಪ್ರಸಾದ್ ರಕ್ಷಿದಿ

ಈ ವರ್ಷ ಮಲೆನಾಡಿಗೆ ಆಪತ್ತು ತಂದು ಮಳೆ “ಶತಮಾನದ ಮಳೆ” ಎಂದೇ ಪ್ರಖ್ಯಾತವಾಯಿತು. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅನಾಹುತ ತಂದ ಈ ಮಳೆಗಾಲದಲ್ಲಿ ಅತಿ ಹೆಚ್ಚು ತೊಂದರೆಯಾದದ್ದು ಕೊಡಗಿಗೆ, ನಂತರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲವು ಭಾಗಗಳು ಮತ್ತು ಅಲ್ಲಲ್ಲಿ ಕೆಲವು ಕಡೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ. (ಕೇರಳದ ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ)

ಕಾಫಿ ನಾಡಿನಲ್ಲಿ ಮಳೆಯನ್ನು ಅಳೆಯುವ ಪದ್ಧತಿ ಬ್ರಿಟಿಷರ ಕೊಡುಗೆ. ಹಾಗಾಗಿ ಇಲ್ಲಿ ಅನೇಕ ಕಡೆಗಳಲ್ಲಿ ಮಳೆ ಅಳೆಯುವುದು ಒಂದು ನಿತ್ಯವಿಧಿಯಾಗಿದ್ದು ಕೆಲವು ಕಾಫಿ ಎಸ್ಟೇಟುಗಳಲ್ಲಿ ಒಂದು ಶತಮಾನಕ್ಕೂ ಹೆಚ್ಚುಕಾಲದ ಮಳೆ ದಾಖಲೆ ದೊರೆಯುತ್ತದೆ.

ಕಳೆದ ಮೂರು ವರ್ಷಗಳು ಅತಿ ಕಡಿಮೆ ಮಳೆಯ ವರ್ಷಗಳು. ಈ ವರ್ಷವೂ ಅದೇ ರೀತಿ ಮುಂದುವರೆದಿದ್ದರೆ ಅನೇಕ ಕಡೆಗಳಲ್ಲಿ ಕಾಫಿ ಮತ್ತು ಮೆಣಸಿನ ಬೆಳೆ ಬೆಳೆಯುವುದು ಅಸಾಧ್ಯವೆನ್ನುವ ಸ್ಥಿತಿ ಬರುತ್ತಿತ್ತು, ಬೇಸಗೆಯಲ್ಲಿ ತೋಟಕ್ಕೆ ನೀರು ಹನಿಸುವುದಿರಲಿ, ಕುಡಿಯಲೂ ನೀರಿಲ್ಲದ ಸ್ಥಿತಿ ಮಲೆನಾಡಿನ ಹಲವು ಕಡೆಗಳಲ್ಲಿ ಇತ್ತು. ಹಾಗಾಗಿ ಈ ವರ್ಷವಾದರೂ ಒಳ್ಳೆಯ ಮಳೆಯಾಗಲಿ ಎಂದು ಎಲ್ಲರೂ ಹಾರೈಸಿದ್ದರು.

ವರ್ಷಕ್ಕೆ ಸುಮಾರು ಸರಾಸರಿ ನೂರಾ ಹತ್ತು ಇಂಚುಗಳಷ್ಟು ಮಳೆ ಬೀಳುವ ನಮ್ಮೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಂಬತ್ತು ಇಂಚು ದಾಟಿರಲಿಲ್ಲ. ಕಳೆದ ಒಂದು ಶತಮಾನದ ದಾಖಲೆಯಂತೆ ನಮ್ಮೂರಿನಲ್ಲಿ ಅತಿ ಹೆಚ್ಚು ಮಳೆಯಾದದ್ದೆಂದರೆ ಒಂದು ವರ್ಷಕ್ಕೆ ನೂರಾ ಅರುವತ್ತೆರಡು ಇಂಚುಗಳು(1962ರಲ್ಲಿ) ಆಗಲೂ ಈ ದಿನಾಂಕಕ್ಕೆ ಈ ವರ್ಷ ಬಂದಷ್ಟು ಮಳೆಯಾಗಿರಲಿಲ್ಲವೆನ್ನುವುದಷ್ಟೇ ಮತ್ತು ಮಧ್ಯೆ ಮಧ್ಯೆ ಮಳೆ ಬಿಡುವನ್ನು ಕೂಡಾ ಕೊಟ್ಟಿತ್ತು. ಈ ವರ್ಷ 10/9//2018 ರವರೆಗೆ ಒಟ್ಟು ನೂರಾ ನಲುವತ್ತೆರಡು ಇಂಚು ಮಳೆಯಾಗಿದೆ. (ಈಗ ಒಂದು ವಾರದಿಂದ ಬಿಸಿಲಿದೆ) ಮತ್ತು ಈ ವರ್ಷದ ಮಳೆಗಾಲ ಜೂನ್ ಮೂರನೇ ತಾರೀಖಿನಿಂದ ಪ್ರಾರಂಭವಾಗಿ ಎಂಬತ್ತೊಂಬತ್ತು ದಿನಗಳ ಕಾಲ ಬಿಡದೆ ಸುರಿದಿದೆ.

ಒಂದು ಇಂಚು ಮಳೆಯೆಂದರೆ ಒಂದು ಎಕರೆಯ ಮೇಲೆ ಸುಮಾರು ಒಂದು ಲಕ್ಷದ ಎಂಟುಸಾವಿರ ಲೀಟರ್ ನೀರು. ಅಂದರೆ ಈವರ್ಷ ಇದುವರೆಗೆ ನಮ್ಮೂರಿನಲ್ಲಿ ಬಿದ್ದ ನೀರಿನ ಪ್ರಮಾಣ ಒಂದು ಎಕರೆಯ ಮೇಲೆ ಸುಮಾರು ಒಂದೂವರೆ ಕೋಟಿ ಲೀಟರ್ ಗಳಷ್ಟು ನೀರು! ಈ ಪ್ರಮಾಣದ ಮಳೆಯಾಗಿಯೂ ನಮ್ಮೂರಿನಲ್ಲಿ ಭೂಕುಸಿತ ಆಗಿಲ್ಲ. ನಾವೊಂದಷ್ಟು ಜನ ಗೆಳೆಯರೊಡಗೂಡಿ, ಭೂಕುಸಿತ ಉಂಟಾಗಿರುವ ಕೊಡಗು

ಹಾಗೂ ಸಕಲೇಶಪುರ ತಾಲ್ಲೂಕಿನ ಹಲವು ಸ್ಥಳಗಳಿಗೆ, ಇದುವರೆಗೆ ಮೂರು ನಾಲ್ಕು ಬಾರಿ ಹೋಗಿ ಬಂದೆವು. ಈ ವರ್ಷದ ಅನಾಹುತಗಳ ಬಗ್ಗೆ ಅನೇಕ ಅಭಿಪ್ರಾಯಗಳು, ವರದಿಗಳು ಹೇಳಿಕೆಗಳು, ಬಂದಿವೆ ವಾಗ್ವಾದಗಳು ನಡೆದಿವೆ, ವಿಜ್ಞಾನಿಗಳು, ರೈತರು, ರಾಜಕಾರಣಿಗಳು ಹೀಗೆ ಬೇರೆ ಬೇರೆ ಜನರು ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಈ ಎಲ್ಲವನ್ನೂ ಗಮನಿಸಿ ನಾನು, ನನ್ನ ಅನುಭವಗಳನ್ನು ಇಲ್ಲಿದಾಖಲಿಸಿದ್ದೇನೆ.

ಈ ವರ್ಷ ಮಲೆನಾಡಿನಲ್ಲಿ ಆದ ಅನಾಹುತಗಳಿಗೆ ಕಾರಣವನ್ನು ಹುಡುಕುತ್ತ, ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ. ಮುಖ್ಯವಾಗಿ ಎರಡು ವಿಧದ ಕಾರಣಗಳನ್ನು ಕಾಣಬಹುದು. ಮೊದಲನೆಯದು ಪ್ರಾಕೃತಿಕ. ಮುಖ್ಯವಾಗಿ ನಿರಂತರವಾಗಿ ಸುರಿದ ಮಳೆ, ಹಾಗೂ ಅನೇಕರು ಹೇಳಿದಂತೆ ಭೂಕಂಪ, ಅಥವಾ ಭೂಮಿಯ ಒಳಗಡೆಯಿಂದಾದ ಯಾವುದೋ ಬದಲಾವಣೆ. ಎರಡನೆಯದ್ದು ಮಾನವ ನಿರ್ಮಿತ ಕಾರಣಗಳು. ಅರಣ್ಯನಾಶ, ಗುಡ್ಡಗಳ ನೆತ್ತಿಯವರೆಗಿನ ಕೃಷಿ, ಹೈವೇಗಳ ನಿರ್ಮಾಣ, ಅಣೆಕಟ್ಟುಗಳು ,ವಿದ್ಯುತ್ ಯೋಜನೆಗಳು, ರೈಲ್ವೇ ಮುಂತಾದ ನೂರಾರು ಅಭಿವೃದ್ಧಿ ಕಾರ್ಯಗಳು. ಜೆ.ಸಿ.ಬಿಗಳಿಂದ ಗುಡ್ಡಗಳನ್ನು ಕಡಿದು ರಸ್ತೆ ಮಾಡಿರುವುದು, ಮನೆ-ರೆಸಾರ್ಟು ಹೋಮ್ ಸ್ಟೇಗಳ ನಿರ್ಮಾಣ,ಹಲವು ಕಡೆಗಳಲ್ಲಿ ಗುಡ್ಡದ ಮೇಲೂ ನಿರ್ಮಿಸಿರುವ ಕೆರೆಗಳು ಮುಂತಾದವುಗಳು.

ಗುಡ್ಡದ ಮೇಲಿನ ಕೆರೆಗಳ ನಿರ್ಮಾಣಕ್ಕೆ ಕಳೆದ ಕೆಲವು ವರ್ಷಗಳಿಂದ ಕಡಿಮೆ ಮಳೆಯಾದ ಕಾರಣ ಅನೇಕ ಕಡೆಗಳಲ್ಲಿ ಗುಡ್ಡದ ಮೇಲೆ ಎತ್ತರದ ಸ್ಥಳಗಳಲ್ಲಿ ಕೆರೆಗಳನ್ನು ನಿರ್ಮಿಸತೊಡಗಿದರು. ಇದಕ್ಕೆ ಸರ್ಕಾರದ ಕೃಷಿಹೊಂಡ ಯೋಜನೆಯೂ ನೆರವಿಗೆ ಬಂತು. ಇಲ್ಲಿ ಸಂಗ್ರಹವಾದ ನೀರಿನಿಂದ ಬೇಸಗೆಯಲ್ಲಿ ಗುರುತ್ವ ಶಕ್ತಿಯಿಂದ ತೋಟಕ್ಕೆ ನೀರಾವರಿ ಮಾಡುವುದು, ಸಾಧ್ಯವಾದರೆ ಮಳೆಗಾಲದಲ್ಲಿ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುವುದು ಇದರ ಉದ್ದೇಶ.

ಹತ್ತು ಸಾವಿರ ಚದರಡಿ ಯಿಂದ ಹಿಡಿದು ಒಂದು ಎಕರೆಯಷ್ಟು ವಿಸ್ತಾರದ ಆರರಿಂದ ಏಂಟು ಅಡಿ ಆಳದವರೆಗಿನ ಈ ಕೆರೆಗಳು. ಎರಡು ಲಕ್ಷ ಲೀಟರ್ ನಿಂದ ಹಿಡಿದು ಒಂದು ಕೋಟಿ ಲೀಟರ್ ನಷ್ಟು ನೀರನ್ನು ಸಂಗ್ರಹಿಸಬಲ್ಲವು. ಅಂದರೆ ಹತ್ತುಸಾವಿರ ಚದರಡಿಯ ಕೃಷಿ ಹೊಂಡದಲ್ಲಿಎರಡು ಸಾವಿರ ಟನ್ ತೂಕದ ನೀರು ಸಂಗ್ರಹವಾದರೆ,ಒಂದು ಎಕರೆ ಕೆರೆಯಲ್ಲಿ ಹತ್ತುಸಾವಿರ ಟನ್ ತೂಕದ ನೀರು. ಈ ನೀರಿಗೆ ಘನ ವಸ್ತುವಿನಂತೆ ಬರಿಯ ತೂಕವಲ್ಲದೆ ಹರಿಯುವ ಗುಣ. ಜಿನುಗಿ ತೂರಿಹೋಗುವ ಶಕ್ತಿ ಮತ್ತು ಎಲ್ಲದಿಕ್ಕಿಗೆ ಒತ್ತುವ “ಹೈಡ್ರೋ ಡೈನಮಿಕ್ ಪ್ರೆಷರ್” ಇರುತ್ತದೆ. ಅದು ಎತ್ತರದಲ್ಲಿ ಭೂಮಿಯ ಮೇಲೆ ವರ್ತಿಸುವ ರೀತಿ ಮತ್ತು ಶಕ್ತಿಯನ್ನುಪರಿಗಣಿಸಬೇಕು.

ಮಳೆಯೊಂದರಿಂದಲೇ ಇಷ್ಟೆಲ್ಲ ಅನಾಹುತಗಳು ಆಗಿದ್ದರೆ, ವ್ಯಾಪಕವಾಗಿ ಎಲ್ಲ ಕಡೆಯೂ ಆಗಬೇಕಿತ್ತು. ಭೂಕುಸಿತವಾದ ಅನೇಕ ಕಡೆಗಳಲ್ಲೂ ಮಧ್ಯೆ ಒಂದೆರಡುಬಾರಿ ಮಳೆ ವಾರದ ಬಿಡುವು ಕೊಟ್ಟಿತ್ತೆಂದು ಅಲ್ಲಿ ವಾಸವಿದ್ದವರೇ ಹೇಳುತ್ತಾರೆ. ನಿರಂತರ ಮಳೆಯಾದ ಹಲವು ಸ್ಥಳಗಳಲ್ಲಿ ಭೂಕುಸಿತವಾಗಿಲ್ಲ. ಇನ್ನು ಭೂಕುಸಿತಕ್ಕೆ ಭೂಕಂಪವೇ ಕಾರಣವಾಗಿದ್ದರೆ. ಈಗ ವರದಿಯಾಗಿರುವ ರಿಕ್ಟರ್ ಸ್ಕೇಲ್ 3.4 ರ ಭೂಕಂಪ ಮಲೆನಾಡಿನಲ್ಲಿ ಅನೇಕ ಬಾರಿ ಆಗಿದೆ. ಹಾಗೇನಾದರೂ ಭೂಕಂಪದಿಂದ ಭೂಕುಸಿತ ಅಥವಾ ಮನೆಗಳ ನಾಶ ಈಗ ಆಗಿರುವುದಕ್ಕಿಂತ ಎಷ್ಟೋ ಪಾಲು ಹೆಚ್ಚಿರುತ್ತಿತ್ತು. ಈಗ ಕುಸಿದ ಮನೆಗಳಿಗಿಂತ ಇನ್ನೂ ಅಪಾಯವೆನಿಸುವ ನೂರಾರು ಸ್ಥಳಗಳಲ್ಲಿ ಏನೂ ಆಗಿಲ್ಲ. ಮತ್ತು ಭೂಕಂಪದ ಪರಿಣಾಮ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಬೊಟ್ಟುಮಾಡಿದಂತಿರದೆ, ವ್ಯಾಪಕವಾಗಿರುತ್ತದೆ. ಹಾಗಾಗಿ ಈ ಭೂಕಂಪ ಮಳೆಯೊಂದಿಗೆ ಸೇರಿ ಭೂಕುಸಿತ ಮುಂತಾದ ವಿದ್ಯಮಾನಗಳ ಪರಿಣಾಮವನ್ನು ಹೆಚ್ಚಿಸಿರಬಹುದಷ್ಟೇ ಹೊರತು ಅದೇ ಕಾರಣವಲ್ಲ.

ಪ್ರತಿ ವರ್ಷ ಬೀಳುವ ಒಟ್ಟು ಮಳೆಯ ಅಳತೆಯ ದಾಖಲೆಯನ್ನಿಟ್ಟುಕೊಂಡು, ಈ ವರ್ಷ ಹೆಚ್ಚು ಮಳೆಯಾಗಿದೆ. ಆದ್ದರಿಂದ ಹೆಚ್ಚು ನೀರಿದೆ. ಆಥವಾ ಭೂಮಿಯಲ್ಲಿ ಇರುವ ತೇವಾಂಶ ಮತ್ತು ಒರತೆಯ ಪ್ರಮಾಣ ಎಷ್ಟಿದೆ ಎಂದೋ, ಹಾಗೆಯೇ ಇದರಿಂದ ಬೆಳೆಗೆ ಅನುಕೂಲ-ಅನಾನುಕೂಲವಿದೆಯೇ ಎಂದೋ ನಿರ್ಧರಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿ ವರ್ಷದ ಮಳೆಗಾಲವೂ ಒಂದು ಬೇರೆಯೇ ವಿದ್ಯಮಾನ.
ಉದಾಹರಣೆಗೆ ಕಾಫಿ ಬೆಳೆಯಲ್ಲಿ ಫೆಬ್ರವರಿ ಮಾರ್ಚ್ ತಿಂಗಳ ಬೀಳುವ “ಹೂವಿನ ಮಳೆ” ಆ ವರ್ಷದ ಪೂರ್ಣ ಫಸಲಿನ ಪ್ರಮಾಣವನ್ನು ನಿರ್ಧರಿಸಿ ಬಿಡುತ್ತವೆ. ನಂತರ ವರ್ಷವಿಡೀ ಬೀಳುವ ಮಳೆಯ ಮಾದರಿ ಆ ವರ್ಷದ ಬೆಳೆಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಅಂದರೆ ಬಿಡುವು ಕೊಟ್ಟು ಬರುತ್ತದೆಯೇ ಇಲ್ಲ ಒಂದೇ ಸಮನೆ ಸುರಿದು ಬೆಳೆಯನ್ನು ನಾಶ ಮಾಡುತ್ತದೆಯೇ, ಆಥವಾ ಉದ್ದಕ್ಕೂಸೋನೆ ಮಳೆಯಾಗಿ ಒಟ್ಟು ಮಳೆಯ ಪ್ರಮಾಣ ಕಡಿಮೆ ಇದ್ದರೂ ತೋಟವೆಲ್ಲ ರೋಗಕ್ಕೆ ತುತ್ತಾಗುವಂತೆ ಮಾಡಿ ಫಸಲನ್ನು ನಾಶಮಾಡಿದೆಯೇ ಎಂದು ಗಮನಿಸಬೇಕು. ಅದೇ ರೀತಿ ಆ ವರ್ಷ ಗಾಳಿಬೀಸಿದ ವೇಗ ಎಷ್ಟು. ಒಟ್ಟು ಎಷ್ಟು ದಿನಗಳ ಕಾಲ ಗಾಳಿ ಬೀಸಿದೆ ಎನ್ನುವುದನ್ನೂ ಗಮನಿಸಬೇಕು. ಯಾಕೆಂದರೆ ಗಾಳಿಯ ಜೊತೆಗೂಡಿದ ಮಳೆ ಭೂಮಿಯನ್ನು ಇನ್ನಷ್ಟು ತಂಪಾಗಿದೆ ಶೀತವೇರಿಸುತ್ತದೆ. ಈ ವರ್ಷದ ಮಹಾಮಳೆಯಲ್ಲಿ ಗಾಳಿಬೀಸಿದ ವೇಗವೂ ಹೆಚ್ಚಾಗಿರಲಿಲ್ಲ ಮತ್ತು ಗಾಳಿಬೀಸಿದ ದಿನಗಳ ಸಂಖ್ಯೆಯೂ ಕಡಿಮೆ. ಹಾಗೇನಾದರೂ ವಾಡಿಕೆಯಂತೆ ಕೆಲವು ವರ್ಷಗಳಲ್ಲಿ ಬೀಸುವ ಮಳೆಗಾಲದ ಗಾಳಿ ಈ ಬಾರಿ ಬೀಸಿದ್ದರೆ, ಈ ವರ್ಷದ ಅನಾಹುತ ಇನ್ನೂ ಹೆಚ್ಚಾಗುತ್ತಿತ್ತು. ಆದ್ದರಿಂದ ನಾವು,ಭೂಮಿಯಲ್ಲಿ ಇಂಗಿರಬಹುದಾದ ನೀರು, ಜಲಮೂಲಗಳ ಪರಿಸ್ಥಿತಿ ಎಲ್ಲವೂ ಸೇರಿದಂತೆ ಯಾವುದೇ ಒಂದು ವರ್ಷ ಮಳೆಯಿಂದಾದ ಪರಿಣಾಮವನ್ನು ತೀರ್ಮಾನಿಸಬೇಕಾದರೆ ಆ ವರ್ಷ ಬಿದ್ದ ಮಳೆಯ ಪ್ರಮಾಣವೊಂದೇ ಅಲ್ಲ, ಮಳೆ ಬಿದ್ದ ಮಾದರಿ. ಮಧ್ಯೆ ಕೊಟ್ಟಂತಹ ಬಿಡುವಿನ ಮತ್ತು ಬಿಸಿಲಿನ ದಿನಗಳು. ಬೀಸಿದ ಗಾಳಿಯ ವೇಗ ಮತ್ತು ಪ್ರಮಾಣ, ಉಷ್ಣಾಂಶವೂ ಸೇರಿದಂತೆ ಹಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ.

 

ಇನ್ನು ಮಾನವ ನಿರ್ಮಿತ ಕಾರಣಗಳನ್ನು ಪರಿಶೀಲಿಸಿದರೆ, ಹೈವೇಗಳ ಕುಸಿತ. ರಸ್ತೆಗಳೇ ಕೊಚ್ಚಿಹೋಗಿರುವುದು. ಯಾರೆಷ್ಟೇ ಮುಚ್ಚಿಟ್ಟರೂ ಎತ್ತಿನಹೊಳೆಯೋಜನೆ. ಮತ್ತು ಜಲವಿದ್ಯುತ್ ಯೋಜನೆಗಳ ಸ್ಥಳಗಳಲ್ಲಿ ಉಂಟಾಗಿರುವ ವ್ಯಾಪಕ ಹಾನಿ ಎದ್ದು ಕಾಣುತ್ತಿದೆ.ಅರಣ್ಯ ಪ್ರದೇಶದಲ್ಲಿ ಮಾಡುವ ಯಾವುದೇ ಯೋಜನೆಯಿರಲಿ, ಹೊಸ ರಸ್ತೆಗಳ ನಿರ್ಮಾಣ ಅನಿವಾರ್ಯವಾಗುತ್ತದೆ. ಈ ರಸ್ತೆಗಳು ಆ ಯೋಜನೆಯ ಸಮಯದಲ್ಲಿ ಮಾತ್ರವಲ್ಲ ಮುಗಿದ ನಂತರವೂ, ಮ

ರಗಳ್ಳತನ, ಪ್ರಾಣಿಗಳಬೇಟೆ. ನದಿ ಮೂಲದ ವರೆಗೂ ಮರಳು ಗಣಿಗಾರಿಕೆಗೆ ಅನುಕೂಲ ಮಾಡಿಕೊಟ್ಟು ಮತ್ತಷ್ಟು ವಿನಾಶಕ್ಕೆ ಆರಣವಾಗುತ್ತದೆ. ಪ್ರತಿಯೊಂದು ಅಭಿವೃದ್ಧಿಯೋಜನೆಗಳ ಜೊತೆಯಲ್ಲೇ ಆಗಿರುವ ಅರಣ್ಯನಾಶವೂ ಕಣ್ಣಿಗೆ ಗೋಚರಿಸುತ್ತದೆ. ಆದರೆ ಕಣ್ಣಿಗೆ ಕಾಣದ ಅರಣ್ಯನಾಶ ಇನ್ನೊಂದು ಬಗೆಯದ್ದಿದೆ. ಇದು ಖಾಸಗಿ ವಲಯದ್ದು. ವ್ಯಾಪಕವಾದ ಕೃಷಿ, ಅದೂ ಗುಡ್ಡಗಳ ಮೇಲೆ-ಗುಡ್ಡಗಳ ನೆತ್ತಿಯ ತನಕ ನಡೆದಿದೆ, ಗುಡ್ಡದ ನೆತ್ತಿಯಲ್ಲಿ ಇರಬೇಕಾ ಶೋಲಾ ಅರಣ್ಯ ಮತ್ತು ಹುಲ್ಲುಗಾವಲುಗಳು ಅನೇಕ ಕಡೆಗಳಲ್ಲಿ ತೋಟಗಳಾಗಿವೆ. ಇದರಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ಎಷ್ಟುಸಾವಿರ ಎಕರೆಗಳು ಎಂದು ಸರ್ಕಾರವೇ ಹೇಳಬೇಕು. ಆದರೆ ಅಲ್ಲೆಲ್ಲ ಇದ್ದ ನೈಸರ್ಗಿಕ ಅರಣ್ಯ ನಾಶವಾಗಿದೆ.

ಈ ಬಾರಿ ಅನಾಹುತಗಳಾದ ಪ್ರದೇಶಗಳಲ್ಲಿರುವುದು ಮುಖ್ಯವಾಗಿ ಕಾಫಿ ಬೆಳೆ. ಇದು ಇಂದು ನಾನಾ ಬಗೆಯ ಸಂಕಷ್ಟಗಳಿಂದ ನರಳುತ್ತಿದೆ. ಹವಾಮಾನದಲ್ಲಾದ ವೈಪರೀತ್ಯ ಮತ್ತು ಉಷ್ಣಾಂಶ ಹೆಚ್ಚಳದಿಂದಾಗಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿಲ್ಲ. ಹೆಚ್ಚಿನ ತೋಟಗಳಲ್ಲಿ ರೋಬಸ್ಟ ಬೆಳೆ ಬೆಳೆಯಲು ಪ್ರಾರಂಭಿಸಿದ್ದಾರೆ. ಇದರಿಂದಾಗಿಯೂ ತೋಟಗಳಲ್ಲಿನ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮೆಣಸಿನ ಬೆಳೆ ನಿರಂತರ ರೋಗಕ್ಕೆ ತುತ್ತಾಗುತ್ತಿದೆ. ಅರಣ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಿಂದ ತೋಟಗಳಲ್ಲಿ ಕಾಡು ಪ್ರಾ

ಣಿಗಳ ಕಾಟ ಹೆಚ್ಚಾಗಿ. ಆದಾಯವಿಲ್ಲದ ಕಾಫಿಬೆಳೆಗಾರರರು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಕಷ್ಟು ರೆಸಾರ್ಟು -ಹೋಮ್ ಸ್ಟೇಗಳನ್ನು ನಿರ್ಮಿಸಿಕೊಂಡು ಒಂದಷ್ಟು ಆದಾಯ ಗಳಿಸತೊಡಗಿದರು. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆ

ತು. ನೂರಾರು ಜನರಿಗೆ ಉದ್ಯೋಗವೂ ದೊರೆಯುವಂತಾಯಿತು. ಆದರೆ ಇದರಲ್ಲಿ ಲಾಭವಿದೆಯೆಂದು ಕಂಡುಕೊಂಡ ರಾಜಕಾರಣಿಗಳು, ಉದ್ಯಮಿಗಳು, ಎಲ್ಲಾರೀತಿಯ ದಂಧೆಕೋರರು ಇತ್ತ ನುಗ್ಗಿದರು.ಇದರಿಂದಾಗಿರುವ ಸಾಮಾಜಿಕ, ಹಾಗೂ ಪರಿಸರ ಸಮಸ್ಯೆಗಳು ಬೇರೆಯೇ ಇವೆ.

ಈ ರೀತಿಯ ನೂರಾರು ರೆಸಾರ್ಟುಗಳು, ಅರಣ್ಯದ ಅಂಚಿನಲ್ಲಿ, ಸರ್ಕಾರಿ ಭೂಮಿಯ ಒತ್ತುವರಿಯಲ್ಲಿ ಇವೆ. ಗುಡ್ಡಗಳನ್ನು ಕಡಿದು ರಸ್ತೆಗಳನ್ನು ಮಾಡಿದ್ದಾರೆ. ಇವೆಲ್ಲದರ ಜೊತೆ ವಸತಿಗಾಗಿ ಹೆಚ್ಚಿದ ಒತ್ತಡದಿಂದ ಗುಡ್ಡಗಳನ್ನು ಕಡಿದು ಮೆಟ್ಟಿಲು ಮೆಟ್ಟಿಲುಗಳಾಗಿ ಮನೆಗಳನ್ನು ಕಟ್ಟಲಾಗಿದೆ. ಇವೆಲ್ಲವೂ ಭೂ ಮೇಲ್ಮೈಯನ್ನು ಬದಲಿಸಿವೆ. ರಸ್ತೆಗಳಿರಲಿ. ಹೆದ್ದಾರಿಗಳಿರಲಿ ನಗರ ಪ್ರದೇಶವಿರಲಿ ಸರಿಯಾಗಿ ನೀರು ಹರಿದು ಹೋಗುವ ವ್ಯವಸ್ಥೆಯೇ ಇಲ್ಲ.ಹೆದ್ದಾರಿಗಳನ್ನುಳಿದು, ಅನೇಕ ರಸ್ತೆಗಳಲ್ಲಿ ಕೇವಲ ಕಿಲೋಮೀಟರಿಗೊಂದರಂತೆ ಮೋರಿಗಳಿವೆ.

ಈ ಎಲ್ಲ ವಿದ್ಯಮಾನಗಳಿಂದ ಆದಂತ ಭೂಸವಕಳಿ. ಭೂವಿನ್ಯಾಸದ ಬದಲಾವಣೆಗಳು ಪ್ರಾಕೃತಿಕ ವಿಕೋಪದ ಜೊತೆ ಸೇರಿಯೇ ಈ ರೀತಿಯ ಅನಾಹುತಗಳು ಉಂಟಾಗಿವೆ. ಆದರೆ ಇದುವರೆಗಿನ ಎಲ್ಲ ಅಭಿಪ್ರಾಯ ಮತ್ತು ಹೇಳಿಕೆಗಳು, ಬಹುಷಃ ಆರು ಜನ ಕುರುಡರು ಆನೆಯನ್ನು ವರ್ಣಿಸಿದ ಕತೆಯಂತೆ ಕಂಡುಬರುತ್ತಿದೆ.

ಆದರೆ ರಾಜಕಾರಣಿಗಳು. ಮತ್ತು ಸಮಾಜದ ಕೆಲವು ವರ್ಗಗಳ ಜನ ಈಗಿನ ಎಲ್ಲ ಅನಾಹುತಗಳನ್ನು ಭೂಕಂಪ ಇಲ್ಲವೇ “ಶತಮಾನದ ಮಳೆ”ಯ ತಲೆಗೆ ಕಟ್ಟುವ ಹುನ್ನಾರದಲ್ಲಿದ್ದಾರೆ. ಯಾಕೆಂದರೆ ಯಾವುದೇ ರೀತಿಯ “ಅಭಿವೃಧ್ಧಿ” ಕಾರ್ಯಕ್ರಮಗಳೇ ರಾಜಕಾರಣಿಗಳಿಗೆ. ಗುತ್ತಿಗೆದಾರರಿಗೆ, ದಂಧೆಕೋರರಿಗೆ ಸದಾ ಹಾಲುಕರೆಯುವ ಹಸು. ಇದರೊಂದಿಗೆ ಈಗ ರೆಸಾರ್ಟ್ ಉದ್ಯಮವೂ ಸೇರಿದೆ.ಇದೀಗ ಮತ್ತೆ ಕೊಡಗಿನ ಮೂಲಕ ಕೇರಳಕ್ಕೆ ಪವರ್ ಟ್ರಾನ್ಸ್ ಮಿಷನ್ ಲೈನ್ ಹಾಗೂ ರೈಲ್ವೇ ಸಂಪರ್ಕಕ್ಕೆ ಕೇರಳ ಸರ್ಕಾರ

ದ ಒತ್ತಡವೂ ಹೆಚ್ಚಿದೆ. ಇದರಿಂದ ಸಿಗಬಹುದಾದ ರಾಜಕೀಯ ಮತ್ತು ಆರ್ಥಿಕಲಾಭವನ್ನು ಪಡೆಯಲು ಎಲ್ಲರೂ ಪಕ್ಷಾತೀತರಾಗಿ ಸಿದ್ಧರಾಗುತ್ತಿದ್ದಾರೆ.  ಹಾಗಾದರೆ ಈ ಮಳೆಯಿಂದ ಏನೂ ತೊಂದರೆ ಆಗಿಲ್ಲವೇ ಎಂದರೆ ಖಂಡಿತ ಆಗಿದೆ. ಕಳೆದ ಕೆಲವು ವರ್ಷಗಳಂತೆ ಈ

 ಭಾಗದಲ್ಲಿ ಈ ವರ್ಷವೂ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ ಬಹುಷಃ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ ಎನಿಸುತ್ತದೆ. ನಾವು ನಮ್ಮ ಎಲ್ಲ ಪ್ರಕೃತಿ ವಿರೋಧಿ ಕೆಲಸಗಳನ್ನು ಇನ್ನಷ್ಟು ಉಗ್ರವಾಗಿ ಮುಂದುವರೆಸುತ್ತಿದ್ದೆವು ಆದರೆ ಮುಂದೆ ಒಂದು ದಿನ ಇದಕ್ಕಿಂತ ಹೆಚ್ಚಿನ ದುರಂತ ಖಂಡಿತ ಕಾದಿರುತ್ತಿತ್ತು.

ಇಷ್ಟು ಮಳೆಯಾದ ಪ್ರದೇಶಗಳನ್ನು ನೋಡುತ್ತ ಬಂದರೆ ಒಂದು ವಿಷಯ ಮನದಟ್ಟಾಗುತ್ತದೆ. ಈಗ ಭೂಕುಸಿತ ಉಂಟಾಗಿರುವ ಪ್ರದೇಶಗಳೆಲ್ಲ ಜಲದ ಕಣ್ಣುಗಳು. ಈ ವರ್ಷ ಸುರಿದ ಮಳೆಗೆ ಭೂಮಿಯ ಒಳಭಾಗದಲ್ಲಿ ಸಂಗ್ರಹವಾಗಿ ನಿರಂತರ ಹೊಳೆ ಹಳ್ಳಗಳಿಗೆ ನೀರೂಡುತ್ತಿದ್ದ ಅಂತರ್ಜಲ ಸಂಗ್ರಹಾಗಾರಗಳು ಒಡೆದು ಛಿದ್ರವಾಗಿವೆ ಮತ್ತು ಬಸಿದು ಹೋಗಿವೆ. ಇದರಿಂದಾಗಿ ಕೇವಲ ಒಂದು ವಾರದ ಬಿಸಿಲಿಗೆ ಹಳ್ಳಗಳಲ್ಲಿ ನೀರು ಬರಿದಾದಂತೆ ಕಾಣುತ್ತಿದೆ. ಯಾಕೆಂದರೆ ಸಂಗ್ರಹಾಗಾರಗಳು ಬರಿದಾದಂತಿವೆ.

ನಾವು ಇತ್ತೀಚಿಗೆ ನೋಡಿದ ಹೆಚ್ಚಿನ ಎಲ್ಲ ಭೂಕುಸಿತವಾಗಿರುವುದು ಸ್ವಾಭಾವಿಕ ಒರತೆಗಳಿದ್ದ ಪ್ರದೇಶಗಳಲ್ಲಿ ಭೂಕುಸಿತದ ಸ್ಥಳಗಳ ಜನರ ಅನುಭವದಂತೆ, ಭೂಕುಸಿತವಾಗುವ ಹಿಂದಿನ ದಿನವೇ ಅದರೆ ಕೆಲವು ಲಕ್ಷಣಗಳು ಕಂಡಿವೆ. ಅಂದರೆ ಭೂಮಿ ಬಿರುಕು ಬಿಟ್ಟಿರುವುದು, ಏನೋ ಶಬ್ದ ಕೇಳಿಸಿದ್ದು ಇತ್ಯಾದಿ. ಆದರೆ ಭೂಕುಸಿತವಾಗುವ ಮೊದಲು ಸುಮಾರಾಗಿ ಬೆಟ್ಟದ ಮಧ್ಯ ಭಾಗದಲ್ಲಿ ಫ್ರೆಷರ್ ಕುಕ್ಕರ್ ನ ವಾಲ್ವ್ ತೆರದುಕೊಂಡಂತೆ ಅಪಾರ ಒತ್ತಡದಿಂದ ಸುಮಾರು ಹತ್ತರಿಂದ ಹದಿನೈದು ಅಡಿಗಳಷ್ಟು ವ್ಯಾಸದ ದೊಡ್ಡ ಗಾತ್ರದ ನೀರು ಇಪ್ಪತ್ತರಿಂದ ಮೂವತ್ತು ಅಡಿಗಳಷ್ಟು ಎತ್ತರಕ್ಕೆ ಚಿಮ್ಮತೊಡಗಿದೆ. ಅಲ್ಲಿಂದ ಪ್ರಾರಂಭವಾದ ಭೂಮಿಯ ಜಾರುವಿಕೆ ಮರ ಮಣ್ಣು ಕಲ್ಲು ಎಲ್ಲವನ್ನೂ ಕೆಳಕ್ಕೆ ತಳ್ಳುತ್ತಾ ಪ್ರಪಾತವನ್ನೇ ನಿರ್ಮಿಸುತ್ತಾ ಕೆಳಗೆ ಬಂದು ತಗ್ಗಿನಲ್ಲಿ ಬಯಲು ಅಥವಾ ಹೊಳೆ ಸಿಗುವವರೆಗೂ ಸಾಗಿದೆ.

ಈ ವಿದ್ಯಮಾನ ಕೊಡಗಿನ ಸೋಮವಾರಪೇಟೆ ಸಮೀಪದ ಕಿರಗಂದೂರು ಮುಂತಾದ ಹಲವು ಕಡೆಗಳಲ್ಲಿ ಹಗಲೇ ನಡೆದಿದ್ದರೆ. ಮಡಿಕೇರಿ ಮಂಗಳೂರು ರಸ್ತೆಯ ಜೋಡುಪಾಲದಂತಹ ಸ್ಥಳಗಳಲ್ಲಿ ರಾತ್ರಿಯ ವೇಳೆ ನಡೆದಿದೆ. ಈಗ ಸ್ಥಳಗಳಲ್ಲಿ ಇಡೀ ಗುಡ್ಡವನ್ನು ಮೇಲಿನಿಂದ ಕೆಳಕ್ಕೆ ಉದ್ದಕ್ಕೆ ಸೀಳಿ ತುಂಡೊಂದನ್ನು ಹೊರಕ್ಕೆ ತೆಗೆದಂತೆ ಕಾಣುತ್ತದೆ. ಈ ಬಗೆಯ ಕುಸಿತವೇ ಹೆಚ್ಚಾಗಿ ಎಲ್ಲ ಕಡೆಗಳಲ್ಲಿ ಕಂಡುಬರುವುದು. ಈ ವರ್ಷದ ನಿರಂತರ ಮಳೆಯಿಂದಾಗಿ ಭೂಮಿಯ ಒಳಭಾಗದಲ್ಲಿ ಸಂಗ್ರವಾದ ಅಪಾರ ಜಲರಾಶಿ ಒತ್ತಡದಿಂದ ಒಡೆದು ಹೊರಬಂದಂತೆ ತೋರುತ್ತದೆ. ಹೀಗೆ ಒಡೆದು ಹೊರಬರುವ ಮುಂಚೆ ಅದು ಭೂಮಿಯ ಒಳಭಾಗದಲ್ಲೂ ಅನೇಕ ಬದಲಾವಣೆ ಕುಸಿತಗಳನ್ನು ಮಾಡಿರಬಹುದು, ಈ ಪ್ರದೇಶದ ಭೂರಚನೆಯೂ ಅದಕ್ಕೆ ಅನುಗುಣವಾಗಿಯೇ ಇದೆ. ಹಾಗಾಗಿ ಬೆಟ್ಟಗಳು ಮೇಲಿನಿಂದ ಕೆಳಗಿನ ವರೆಗೆ ಸೀಳುಬಿಟ್ಟು ನೀರು ಅಪಾರಪ್ರಮಾಣದಲ್ಲಿ ಒಂದೇಬಾರಿ ಸೋರಿಹೋಗಿ ದೊಡ್ಡ ಪ್ರಮಾಣದ ಪ್ರವಾಹ ಉಂಟಾಯಿತಲ್ಲದೆ. ಮಳೆ ನಿಂತ ತಕ್ಷಣ ಪಾತ್ರೆ ಬರಿದಾದಂತೆ ಹೊರಗೆ ಹರಿಯುವ ನೀರಿನ ಪ್ರಮಾಣ ಒಮ್ಮೆಲೆ ಕುಸಿದಿರಬೇಕು. (ಇತ್ತೀಚಿನ ಡ್ರೋನ್ ಚಿತ್ರಗಳು ಇದನ್ನೇ ಸೂಚಿಸುತ್ತವೆ) ಆದರೆ ಭೂಕುಸಿತವಾಗದ ಸ್ಥಳಗಳಲ್ಲೂ ಅಂದರೆ ಇತರ ಕಡೆಗಳ ಹೊಳೆಗಳಲ್ಲೂ ನೀರೇಕೆ ಕಡಿಮೆಯಾಯಿತು.

ಇದರೊಂದಿಗೆ ಇನ್ನೊಂದು ಪ್ರಮುಖ ವಿಚಾರವನ್ನು ಗಮನಿಸಬೇಕು. ಅದು ಮರಳುಗಣಿಗಾರಿಕೆ. ಇಂದು ಮರಳು ಗಣಿಗಾರಿಕೆ, ನದಿಗಳು ಸಮುದ್ರ ಸೇರುವ ಅಳಿವೆಯಿಂದ ಪ್ರಾರಂಭವಾಗಿ ನದೀ ಮೂಲದವರೆಗೂ ನಡೆದಿದೆ.ಈ ಮರಳು ಲೂಟಿ ನದೀ ತಳವನ್ನೇ ಬಗೆದು ಖಾಲಿಮಾಡಿದೆ. ಕಳೆದ ವರ್ಷಗಳಲ್ಲಿ ಬಿದ್ದ ಅತಿಕಡಿಮೆ ಮಳೆಯಿಂದಾಗಿ ಇಡೀ ವರ್ಷವೇ ಹೊಳೆ ಹಳ್ಳಗಳಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣವೂ ಕಡಿಮೆಯೇ ಇತ್ತು. ಈ ವರ್ಷ ಮಳೆ ಹೆಚ್ಚು ಬೀಳುತ್ತಿದ್ದ ಕಾಲದಲ್ಲಿ ತುಂಬಿ ಹರಿದು ಮಳೆನೀಂತ ಕೂಡಲೇ ಕಡಿಮೆಯಾಗಲು ಕಾರಣ ನದೀತಳ ಮತ್ತು ಪಾತ್ರಗಳಲ್ಲಿ ನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ನದಿಗೆ ಮರು ಪೂರಣ ಮಾಡುತ್ತಿದ್ದ ಮರಳು ಮಾಯವಾಗಿರುವುದು. ಇದರಿಂದಾಗಿ ನಮಗೆ ಈ ವರ್ಷ ಎಲ್ಲಕಡೆಗಳಲ್ಲೂ ಇದ್ದಕ್ಕಿದ್ದಂತೆ ನೀರು ಕಡಿಮೆಯಾದಂತೆ ಕಾಣಿಸುತ್ತಿದೆ. ಈ ವರ್ಷವಂತೂ ಆ ಸ್ಥಳಗಳಲ್ಲಿ ಕೆಸರು ಹೂಳು ತುಂಬಿ ನೀರು ಹಿಡಿದಿಡುವ ಶಕ್ತಿ ಇನ್ನಷ್ಟು ಕಡಿಮೆಯಾಗಿದೆ. ಹೂಳಿನ ಮೇಲೆ ಬಿಸಿಲು ಬಿದ್ದಕೂಡಲೇ ನೀರು ಆವಿಯಾಗಿ ಒಣಗಿ ಗಟ್ಟಿಯಾಗುತ್ತದೆ. ಮರಳಿನಂತೆ ಒಳಭಾಗದಲ್ಲೇ ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ.

ಆದರೆ ಇತ್ತೀಚೆಗೆ ಪತ್ರಿಕೆಗಳಲ್ಲಿ “ಈ ವರ್ಷ ಒಂದೇ ಬಾರಿಗೆ ದೊಡ್ಡ ಪ್ರಮಾಣದ ಮಳೆ ಬಂದಿದ್ದರಿಂದ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗಿರುವುದು ಹೀಗೆ ಬೇಗ ನೀರಿನ ಹರಿವು ಕಡಿಮೆಯಾಗಲು ಕಾರಣ” ಎಂದು ಕೆಲವರು ಭೂವಿಜ್ಞಾನಿಗಳು ಹೇಳಿದರೆಂದು ವರದಿಯಾಗಿದೆ. ಈ ಮಾತು ಅವಲೋಕನ ,ಅಧ್ಯಯನಗಳಿಲ್ಲದ ಬೀಸು ಹೇಳಿಕೆಯಷ್ಟೆ. ಆ ರೀತಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಿಲ್ಲ ಯಾಕೆಂದರೆ ಸುಮಾರು ಎಂಬತ್ತು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆ, ಪ್ರತಿವರ್ಷ ನೀರಿನ ಒರತೆಯಾಗುವ ಸ್ಥಳಗಳಲ್ಲದೆ ಅನೇಕ ಹೊಸ ಒರತೆಗಳೂ ಸೃಷ್ಟಿಯಾಗಿದ್ದವು. ಇವೆಲ್ಲ ಪ್ರತಿ ವರ್ಷಕ್ಕಿಂತ 

ಹೆಚ್ಚು ಪ್ರಮಾಣದ ನೀರು ಭೂಮಿಯಲ್ಲಿ ಇಂಗಿರುವುದಕ್ಕೆ ಸಾಕ್ಷಿಯಾಗಿದ್ದವು.ಜಲದ ಕಣ್ಣುಗಳು ಒತ್ತಡದಿಂದ ಸಿಡಿದು ಭೂಮಿಯನ್ನು ತೊಡೆದುಹಾಕಿ ಮಾಡಿರುವ ಅನಾಹುತದಲ್ಲಿ ನಮ್ಮ ಪಾಲೂ ಖಂಡಿತ ಇದೆ. ಇನ್ನು ಮುಂದಾದರೂ ಪ್ರಕೃತಿಯೊಡನೆ ಸಹಬಾಳ್ವೆ ನಡೆಸಲು ನಾವು ಕಲಿಯದಿದ್ದರೆ ಮುಂದೆಯೂ ಕೂಡಾ ಇಂಥದ್ದು ಆಗದಂತೆ ತಡೆಯಲು ಸಾಧ್ಯವಿಲ್ಲ.

 

(20/09/2018)

ಮತೀಯ ಸಂಘಟನೆಗಳ ಸೇವಾಕಾರ್ಯ ಹಾಗೂ ಹಿಂದಿರುವ ಹಿಡನ್ ಅಜೆಂಡಾ

– ಇರ್ಷಾದ್ ಉಪ್ಪಿನಂಗಡಿ

ಪಕ್ಕದ ರಾಜ್ಯ ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಮಹಾ ಪ್ರವಾಹ ಅಪಾರ ಪ್ರಮಾಣದ ಜೀವ ಹಾಗೂ ಆಸ್ತಿ ಪಾಸ್ತಿ ಹಾನಿಯನ್ನು ಉಂಟುಮಾಡಿತ್ತು. ಮಹಾ ಪ್ರವಾಹಕ್ಕೆ ತುತ್ತಾಗಿ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಹಾಯಕ್ಕೆ ಧಾವಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಹಲವಾರು ಸಂಘಟನೆಗಳು, ಸ್ವಯಂ ಸೇವಕರು, ವಿದ್ಯಾರ್ಥಿಗಳು, ವೈದ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಜೀವದ ಹಂಗು ತೊರೆದು ಸ್ವಂದಿಸಿದರು. ಆಹಾರ, ಹಣಕಾಸು, ದಿನಬಳಕೆಯ ವಸ್ತುಗಳ ನೆರವಿನ ಜೊತೆಗೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಹೀಗೆ, ದುರಂತದ ಸಂದರ್ಭಗಳಲ್ಲಿ ಸಹಜೀವಿಯ ರಕ್ಷಣೆಗೆ ಜನರು, ಸಂಘಸಂಸ್ಥೆಗಳು ಧಾವಿಸಿದ್ದು ಇದೇ ಮೊದಲೇನಲ್ಲ. ದೇಶದಲ್ಲಿ ಈ ಹಿಂದೆಯೂ ಸಂಭವಿಸಿದ ಹಲವಾರು ಪಾಕೃತಿಕ ವಿಕೋಪದ ಪರಿಸ್ಥಿತಿಯಲ್ಲಿ ಸರ್ಕಾರಿ ರಕ್ಷಣಾ ಕಾರ್ಯಾಚರಣೆ ಪಡೆಗಳೊಂದಿಗೆ ಜನರು ಹಾಗೂ ಖಾಸಗಿ ಸಂಘಸಂಸ್ಥೆಗಳು ಭಾಗಿಯಾಗಿ ತಮ್ಮ ಕೈಲಾದ ಸಹಾಯವನ್ನು ಮಾಡಿ ಮಾನವೀಯತೆಯನ್ನು ಮೆರೆದಿವೆ. ಇಂತಹ 

ಸನ್ನಿವೇಶಗಳಲ್ಲಿ ತೊಂದರೆಗೊಳಗಾದ ಜನರ ಸಹಾಯಕ್ಕೆ ಧಾವಿಸುವ ಹಲವಾರು ರಾಜಕೀಯ ಹಾಗೂ ರಾಜಕೀಯ ರಹಿತ ಸಂಘಸಂಸ್ಥೆಗಳ ಪೈಕಿ ಹಲವರಿಗೆ ಪ್ರಾಮಾಣಿಕ ಉದ್ದೇಶ ಇರುತ್ತದೆ. ಮತ್ತೆ ಕೆಲವರಿಗೆ ಸೇವೆಯ ಜೊತೆಗೆ ಪ್ರಚಾರ ಪಡೆಯುವ ಉದ್ದೇಶವೂ ಇರುತ್ತದೆ. ಹೀಗೆ ಒಂದಿಷ್ಟು ಪ್ರಚಾರ ಪಡೆದುಕೊಳ್ಳುವುದು ತಪ್ಪು ಎಂದು ಹೇಳುವುದು ಅಷ್ಟೊಂದು ಸಮಂಜಸವಲ್ಲ. ಆದರೆ ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸುವ ಮತಾಂಧ ವಿಚಾರಧಾರೆಗಳನ್ನು ಹೊಂದಿರುವ ರಾಜಕೀಯ/ ಧಾರ್ಮಿಕ ಸಂಘಟನೆಗಳ ಕಾರ್ಯವೈಖರಿ ಹಾಗೂ ಹಿಡನ್ ಅಜೆಂಡಾ ಇಲ್ಲಿ ಚರ್ಚೆಯಾಗಲೇ ಬೇಕು.

ಸಂಘ ಪರಿವಾರದ ಸಂಘಟನೆಗಳು ದೇಶದ ಯಾವುದೇ ಭಾಗದಲ್ಲಿ ಪಾಕೃತಿಕ ವಿಕೋಪಗಳು ನಡೆದಂತಹ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸುತ್ತವೆ. ಇದು ಸಂಘಪರಿವಾರದ ಸಂಘಟನಾ ಕಾರ್ಯತಂತ್ರದ ಭಾಗವೂ ಹೌದು. ಗುಜರಾತ್ ಭೂಕಂಪದ ಘಟನೆಯಿಂದ ಹಿಡಿದು, ಬಿಹಾರ ನೆರೆ, ನೇಪಾಲ ಭೂಕಂಪ ಹಾಗೂ ಇತ್ತೀಚಿನ ಕೇರಳ ಹಾಗೂ ಕೊಡಗು ಮಹಾಪ್ರವಾಹದ ಸಂದರ್ಭದಲ್ಲೂ ಸಂಘಪರಿವಾರದ ಸ್ವಯಂಸೇವಕರು ಖಾಕಿ ಚೆಡ್ಡಿ ತೊಟ್ಟು ಕಾರ್ಯಾಚರಣೆಗೆ ಇಳಿದಿದ್ದಾರೆ. ಇಷ್ಟೇ ಯಾಕೆ 1965 ಇಂಡಿಯಾ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ದೆಹಲಿಯಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡುವ ಕೆಲಸವನ್ನೂ ಸಂಘಪರಿವಾರ ಮಾಡಿತ್ತು. ಅಂದಿನ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಸಂಘಟನೆಯ ಪ್ರಮುಖರು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಶಾಸ್ತ್ರಿ ಒಪ್ಪಿಗೆ ಸೂಚಿಸಿದ್ದರಂತೆ. ಸಂಘಪರಿವಾರದ ಮತಾಂಧತೆ ಹಾಗೂ ರಕ್ತಪಾತದದ ಇತಿಹಾಸದ ಕುರಿತಾಗಿ ಚರ್ಚೆ ನಡೆಯುವ ಸಂದರ್ಭದಲ್ಲಿ ಸಂಘಟನೆಯ ಇಂತಹ ಸೇವಾ ಕಾರ್ಯಗಳನ್ನು ಮುಂದಿಟ್ಟು ಹಲವರು ಸಮರ್ಥನೆಯನ್ನು ಕೊಡುತ್ತಾರೆ. ಇದು ಕೇವಲ ಹಿಂದುತ್ವ ಮತೀಯ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ. 

ಇತ್ತೀಚೆಗೆ ಮುಸ್ಲಿಂ ಸಮುದಾಯದಲ್ಲಿ ಆಳವಾಗಿ ಬೇರೂರುತ್ತಿರುವ ಮತೀಯ ಸಂಘಟನೆ ಹಾಗೂ ಅದರ ರಾಜಕೀಯ ಪಕ್ಷ ಕೂಡಾ ಸೇವಾ ಕಾರ್ಯವನ್ನು ತಮ್ಮ ಕಾರ್ಯತಂತ್ರದ ಒಂದು ಭಾಗವಾಗಿ ಅಳವಡಿಸಿಕೊಂಡಿದೆ. ಕೇರಳ ಹಾಗೂ ಕೊಡಗು ಮಹಾ ಪ್ರವಾಹದ ಸಂದರ್ಭದಲ್ಲಿ ಮುಸ್ಲಿಂ ಮೂಲಭೂತವಾದಿ ಸಂಘಟನೆಯೊಂದರ ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಸಂತ್ರಸ್ತರ ಶಿಬಿರಗಳನ್ನು ಶಿಸ್ತು ಬದ್ಧವಾಗಿ ನಡೆಸುವ ಮೂಲಕ ಜನರಿಂದ ಮೆಚ್ಚುಗೆಯನ್ನು ಪಡೆದುಕೊಂಡರು. ಜೊತೆಗೆ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದರು. ಸರ್ಕಾರಿ ಅಧಿಕಾರಿಗಳಿಂದಲೂ ಪ್ರಶಂಸೆಯನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು.

ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಹಲವಾರು ಅಂಶಗಳಿವೆ. ಹಿಂದೂ ಹಾಗೂ ಮುಸ್ಲಿಂ ಮತೀಯ ವಿಚಾರಧಾರೆ ಹೊಂದಿರುವ ಸಂಘಟನೆಗಳು ಅಪಾಯದ ಸಂದರ್ಭಗಳಲ್ಲಿ ಜನರ ರಕ್ಷಣೆಗೆ ಸ್ವಯಂಸ್ಪೂರ್ತಿಯಿಂದ ಧಾವಿಸಿದರೆ ಅದು ತಪ್ಪೆಂದು ವಾದಿಸಲು ಅಸಾಧ್ಯ. ಆದರೆ , ಅವರ ಸೇವಾ ಮನೋಭಾವದ ಹಿಂದಿರುವ ಗುಪ್ತ ಉದ್ದೇಶ ಏನು ಎಂಬುವುದನ್ನು ಅರಿತು

ಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸೇವಾ ಮನೋಭಾವದ ಜೊತೆಗೆ ಸಂಘಟನೆಯನ್ನು ವಿಸ್ತರಿಸುವ ಹಾಗೂ ಕ್ಯಾಡರ್ ಗಳನ್ನು ತಯಾರಿಸುವ ಉದ್ದೇಶಗಳನ್ನು ಇವರು ಹೊಂದಿದ್ದಾರೆ ಎಂಬುದು ಸ್ಪಷ್ಟ. ಜೊತೆಗೆ ಪ್ರಮುಖವಾಗಿ ಅಂತಹಾ ಸಂಘಟನೆಗಳ ಬಗ್ಗೆ ಜನಸಮಾನ್ಯರು ಹೊಂದಿರುವ ಭಾವನೆಗಳನ್ನು ಬದಲಾಯಿಸಲು ಈ ಸಂದರ್ಭಗಳನ್ನು ಒಂದು ಅವಕಾಶವಾಗಿ ಬಳಸುತ್ತಾರೆ ಎಂಬುದು ಗಮನಿಸಬೇಕಾದ ವಿಚಾರ. ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಸರ್ಕಾರಿ ವ್ಯವಸ್ಥೆಗಳಿಗಿಂತಲೂ ತಾವು ವೇಗವಾಗಿ ಸ್ಪಂದಿಸುತ್ತೇವೆ ಹಾಗೂ ತಮ್ಮ ಸಮುದಾಯದ ಜನರ ಮನಸ್ಸಿಗೆ ತಟ್ಟುವಂತಹ ಕೆಲಸವನ್ನು ಮಾಡುವ ಮೂಲಕ ಜನರ ವಿಶ್ವಾಸವನ್ನು ಪಡೆದುಕೊಳ್ಳುವ ವ್ಯವಸ್ಥಿತ ಅಜೆಂಡಾವನ್ನು ಇವರು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ ಭಾರತೀಯ ಸೇನೆ ತಲುಪದಂತಹ ಸ್ಥಳಕ್ಕೂ ನಮ್ಮ ಸಂಘಟನೆ ತಲುಪಿದೆ ಎಂಬ ಸಂದೇಶ ಹೊಂದಿದ ಪೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದರ ಜೊತೆಗೆ ಇತರ ಸಮುದಾಯದ ಜನರಿಗೆ ಸಹಾಯ ಮಾಡುವ ಮೂಲಕ ಅದನ್ನು ಮಾಧ್ಯಮಗಳ ಗಮನಕ್ಕೆ ತಂದು ತಮಗೆ ಅಂಟಿದ ಕಲೆಗಳನ್ನು ತೊಡೆದುಹಾಕುವ ಪ್ರಯತ್ನವನ್ನೂ ಕೋಮುವಾದಿ ಸಂಘಟನೆಗಳು ಮಾಡುತ್ತವೆ. ಈ ನಿಟ್ಟಿನಲ್ಲಿ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಮತೀಯವಾದಿ ಸಂಘಟನೆಗಳು ಅನುಸರಿಸುತ್ತಿರುವ ಕಾರ್ಯತಂತ್ರ ಭಿನ್ನವಾಗಿರುತ್ತದೆ.

ಯಾವುದೇ ಧರ್ಮ- ಜಾತಿ, ಬಡವ- ಶ್ರೀಮಂತ ಎಂದು ನೋಡದೆ ಎಲ್ಲವನ್ನೂ ಕೊಚ್ಚಿಕೊಂಡು ಹೋದ ಕೊಡಗು ಮಹಾಪ್ರವಾಹದಿಂದ ಸಂತ್ರಸ್ತರಾದ ಜನರು ಆಶ್ರಯ ಪಡೆದುಕೊಳ್ಳುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಧರ್ಮದ ಆಧಾರದಲ್ಲಿ ವಿಭಜನೆ ಕಾಣ ಸಿಕ್ಕಿತ್ತು. ಸಂಪೂರ್ಣ ಜಿಲ್ಲಾಡಳಿತದ ಹಿಡಿತದಲ್ಲಿರುವ ಪರಿಹಾರ ಕೇಂದ್ರಗಳಲ್ಲಿ ಎಲ್ಲಾ ಸಮುದಾಯದ ನಿರಾಶ್ರಿತ ಜನರಿದ್ದರು. ಸರ್ಕಾರ ನಡೆಸುವ ಪರಿಹಾರ ಕೇಂದ್ರಗಳ ಜೊತೆಗೆ ಎರಡೂ ಧರ್ಮದ ಮತೀಯವಾದಿ ಸಂಘಟನೆಗಳ ಸೇವಾಘಟಕಗಳು ನಡೆಸುತ್ತಿರುವ ಸಂತ್ರಸ್ತರ ಕೇಂದ್ರಗಳಿದ್ದವು. ಹೀಗೆ ನಿರಾಶ್ರಿತರ ಕೇಂದ್ರಗಳನ್ನು ತಮ್ಮ ಹಿಡಿತದಲ್ಲಿ ನಡೆಸುವ ಮೂಲಕ ತಮ್ಮ ತಮ್ಮ ಸಮುದಾಯಗಳಿಗೆ ಅಗತ್ಯ ಸಂದರ್ಭಗಳಲ್ಲಿ ನೆರವಿಗೆ ಬರುವವರು ನಾವೇ ಎಂಬುವುದನ್ನು ಸಾರಿ ಹೇಳುವ ಗುಪ್ತ ಉದ್ದೇಶ ಇದರಲ್ಲಿ ಅಡಗಿದೆ. ಸೂಕ್ಷ್ಮವಾಗಿ ಇವುಗಳನ್ನು ಗಮನಿಸಿದರೆ ಮತೀಯ ವಿಭಜನೆಯ ಆಳವನ್ನು ತೆರೆದಿಡುತ್ತವೆ. ಈ ಮೂಲಕ ಮತೀಯ ಧ್ರವೀಕರಣಕ್ಕೆ ಎರಡು ಧರ್ಮದ ಮತೀಯವಾದಿ ಸಂಘಟನೆಗಳು ದಾರಿ ಮಾಡಿಕೊಡುತ್ತಿವೆ. ಸರ್ಕಾರದ ಹಾಗೂ ಅಧಿಕಾರಿಗಳ ವೈಫಲ್ಯಗಳು ಕೋಮುವಾದಿ ಸಂಘಟನೆಗಳಿಗೆ ಇಂತಹ ಸಂದರ್ಭಗಳಲ್ಲಿ ತಮ್ಮ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸುವ ಮೂಲಕ ಅದರ ಲಾಭವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತಿದೆ ಎಂಬುವುದು ಸತ್ಯ.

ಧರ್ಮದ ಆಧಾರದಲ್ಲಿ ದೇಶದಲ್ಲಿ ಕೋಮುವಾದವನ್ನು ಭಿತ್ತಿ ಮಹಾ ವಿಕೋಪವನ್ನು ಸೃಷ್ಟಿಸಿದ ಮತಾಂಧರು ಈ ದೇಶಕ್ಕೆ ಮಾಡಿರುವ ಹಾನಿ ಅಪಾರ. ಪ್ರಕೃತಿ ವಿಕೋಪಗಳಿಂದಾದ ಹಾನಿಯನ್ನು ಸರಿಡಿಸಲು ಸರ್ಕಾರಕ್ಕೆ ಅಬ್ಬಬ್ಬಾ ಅಂದರೆ ಒಂದೆರಡು ವರ್ಷಗಳು ಸಾಕಾಗಬಹುದು. ಆದರೆ ಧರ್ಮದ ಹೆಸರಿನಲ್ಲಿ ದ್ವೇಷದ ಭಾವನೆ ಭಿತ್ತಿ ಜನರ ಮನಸ್ಸುಗಳನ್ನು ವಿಭಜಿಸುವ ಮೂಲಕ ಉಂಟುಮಾಡಿದ ಹಾನಿಯನ್ನು ಸರಿಪಡಿಸಲು ಅಸಾಧ್ಯ. ಮತೀಯ ಸಂಘಟನೆಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ರಕ್ಷಣೆಗೆ ಧಾವಿಸಿ ಅವರು ಮಾಡಿದ ಸೇವಾಕಾರ್ಯಗಳಿಗಿಂತ ಹತ್ತು ಪಟ್ಟು ಅಧಿಕ ಪ್ರಚಾರ ಪಡೆದುಕೊಂಡು ತಮ್ಮ ಪಾಪ ಕೃತ್ಯಗಳಿಗೆ ಸಮರ್ಥನೆಯನ್ನು ನೀಡುವುದರ ಜೊತೆಗೆ ಜನರ ಮನಸ್ಸಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಹಿಡನ್ ಅಜೆಂಡಾವನ್ನು ನಾವು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಾಗಿದೆ.

 

ನಾಗರ ಹುತ್ತದಲ್ಲಿ ವೈದಿಕರು !

ನಾಗಾರಾಧನೆ ಎಂಬ ಕಿರುಸಂಸ್ಕೃತಿಯ ತುರ್ತು ರಕ್ಷಣೆ ಮುಂದಾಗಬೇಕಿದೆ ತುಳುವರು!

                                                                                                                            – ನವೀನ್ ಸೂರಿಂಜೆ

ಕರಾವಳಿಯಲ್ಲಿ ನಡೆಯುವ ನಾಗರಪಂಚಮಿಗೂ, ಕರ್ನಾಟಕದ ಇತರ ಭಾಗದಲ್ಲಿ ನಡೆಯುವ ನಾಗರಪಂಚಮಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರಾವಳಿಯಲ್ಲಿ ನಾಗನ ಕಲ್ಲನ್ನು ಬ್ರಾಹ್ಮಣರು ಹೊರತುಪಡಿಸಿ ಉಳಿದವರು ಮುಟ್ಟುವಂತೆಯೇ ಇಲ್ಲ. ಉಳಿದ ಜಾತಿಗಳವರು ಕೊಡುವ ಪೂಜಾ ಸಾಮಾಗ್ರಿಗಳಿಂದ ಬ್ರಾಹ್ಮಣರಷ್ಟೇ ಪೂಜೆ ಮಾಡಬೇಕು. ಕರಾವಳಿ ಹೊರತುಪಡಿಸಿದ ಕಡೆಯೆಲ್ಲಾ ನೇರವಾಗಿ ಯಾವುದೇ ಜಾತಿಗಳವರು ನಾಗಕಲ್ಲನ್ನು ಮುಟ್ಟಿ ನೇರವಾಗಿ ಪೂಜೆ ಮಾಡಬಹುದು. ವಾಸ್ತವವಾಗಿ ಈ ನಾಗನಿಗೂ ವೈದಿಕರಿಗೂ ಸಂಬಂಧವೇ ಇಲ್ಲ. ಮದ್ವಾಚಾರ್ಯರು, ಶಂಕರಾಚಾರ್ಯರ ಪ್ರಭಾವದಿಂದಾಗಿ ಶೂದ್ರರ ನಾಗರಾಧನೆಯ ಸಂಸ್ಕೃತಿಯನ್ನೇ ದರೋಡೆ ಮಾಡಲಾಯಿತು.

ನಾಗ ಅಥವಾ ಸರ್ಪನಿಗೆ ಪಂಚಮಿಯಾಗಲೀ, ನಾಗಮಂಡಲವಾಗಲೀ, ಅಶ್ಲೇಷ ಬಲಿಯಾಗಲೀ ಕೊಡುವ ಕ್ರಮವೇ ಇರಲಿಲ್ಲ. ಕರಾವಳಿಯಲ್ಲಿ ನಾಗಬೆಮ್ಮೆರು ಹಿಂದೂಗಳ ಮೂಲ ದೈವ. ಭೂತಾರಾಧನೆಯ ರೀತಿಯಲ್ಲೇ ನಾಗಾರಾಧನೆಯನ್ನು ದಲಿತರು ಶೂದ್ರರು ಮಾಡುತ್ತಿದ್ದರು. ನಾಗ ಅಥವಾ ಸರ್ಪನಿಗೆ ಪಂಚಮಿಯಾಗಲೀ, ನಾಗಮಂಡಲವಾಗಲೀ, ಅಶ್ಲೇಷ ಬಲಿಯಾಗಲೀ ಕೊಡುವ ಕ್ರಮವೇ ಇರಲಿಲ್ಲ. ಕರಾವಳಿಯಲ್ಲಿ ನಾಗಬೆಮ್ಮೆರು ಹಿಂದೂಗಳ ಮೂಲ ದೈವ. ಭೂತಾರಾಧನೆಯ ರೀತಿಯಲ್ಲೇ ನಾಗಾರಾಧನೆಯನ್ನು ದಲಿತರು ಶೂದ್ರರು ಮಾಡುತ್ತಿದ್ದರು. ಭೂತಾರಾಧನೆಯಲ್ಲಿ ವೈದಿಕ ಧರ್ಮ ನುಸುಳಲು ಇನ್ನೂ ಪ್ರಯತ್ನಿಸುತ್ತಿದೆಯಾದರೆ, ನಾಗಾರಾಧನೆಯನ್ನು ಭಾಗಶಃ ಆಕ್ರಮಿಸಿಕೊಂಡಿದೆ. ಅಲ್ಪ ಸ್ವಲ್ಪ ಉಳಿದಿರುವ ನಾಗಾರಾಧನೆಯ ಮೂಲ ಸಂಸ್ಕೃತಿಯನ್ನು ಉಳಿಸುವುದು ಕರಾವಳಿಗರ ಜವಾಬ್ದಾರಿಯಾಗಿದೆ.

ಮಂಜೇಶ್ವರ ಭಾಗದಲ್ಲಿ ಈಗಲೂ ನಾಗಾರಾಧನೆಯೆಂದರೆ ದೈವರಾಧನೆಯ ರೀತಿಯದ್ದೇ ಆದ ಸರ್ಪ ಕೋಲ. ಮಾರ್ಚ್ ತಿಂಗಳ ವೇಳೆಯಲ್ಲಿ ಕರಾವಳಿಯಲ್ಲಿ ಭೂತ ಕೋಲ ನಡೆಯುವಂತೆ ಸರ್ಪಕೋಲ ನಡೆಯುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸರ್ಪಕೋಲ ಸಂಪೂರ್ಣ ನಶಿಸಿ ಹೋಗಿ ವೈದಿಕರ ಪೂಜಾವಿಧಾನಗಳು ಜಾರಿಯಲ್ಲಿದ್ದರೆ ಮಂಜೇಶ್ವರ ಭಾಗದಲ್ಲಿ ಇನ್ನೂ ಸರ್ಪಕೋಲ ಉಳಿದುಕೊಂಡಿದೆ. ಈ ಸರ್ಪಕೋಲವನ್ನು ಅಳಿವಿನಂಚಿನಲ್ಲಿರುವ ಸೂಕ್ಷ್ಮ ಕಿರು ಸಂಸ್ಕೃತಿ ಎಂದು ಘೋಷಿಸಿ ರಕ್ಷಿಸುವ ಕೆಲಸವನ್ನು ಮಾಡಬೇಕಿದೆ.

ಮಂಜೇಶ್ವರದ ಐಸ್ರಾಳ ಗುತ್ತು ನಾಗಬನ ಸೇರಿದಂತೆ ಕೆಲವೆಡೆಯಷ್ಟೇ ಈಗಲೂ ಸರ್ಪಕೋಲ ನಡೆಯುತ್ತಿದೆ. ನಲಿಕೆ ಜನಾಂಗದ ನಾಗನ ಪಾತ್ರಧಾರಿ ಸರ್ಪ ದೈವವನ್ನು ಮೈಮೇಲೆ ಅವಾಹಿಸಿಕೊಳ್ಳುತ್ತಾರೆ. ಸರ್ಪಕೋಲದಲ್ಲಿ ಇಬ್ಬರು ಪಾತ್ರಧಾರಿಗಳು ಇರುತ್ತಾರೆ. ಒಬ್ಬರು ಪಾತ್ರಧಾರಿ ಮತ್ತೊಬ್ಬರು ಮಂತ್ರವಾದಿ ಪಾತ್ರಧಾರಿ. ಸರ್ಪದೈವವನ್ನು ತನ್ನ ಮೈಮೇಲೆ ಆವಾಹಿಸಿಕೊಳ್ಳುವ ಪಾತ್ರಧಾರಿ ಅಡಕೆಯ ಹಾಳೆಯಲ್ಲಿ ರಚಿಸಿದ ಸರ್ಪದಹೆಡೆಯ ಮುಖವಾಡವನ್ನು ಹಲ್ಲಲ್ಲಿ ಕಚ್ಚಿಕೊಂಡು ಧರಿಸಿರುತ್ತಾನೆ. ಹಾವಿನಂತೆ ತೆವಲುತ್ತಾ, ಮಲಗುತ್ತಾ ನಿಧಾನಕ್ಕೆ ಸಂಚರಿಸುವ ಸರ್ಪ ಪಾತ್ರಧಾರಿಗೆ ಎಲೆಗಳನ್ನು ಎರಚುವ ಮೂಲಕ ಮಂತ್ರವಾದಿ ಕೋಪಗೊಳಿಸುತ್ತಾನೆ. ಇದೇ ರೀತಿ ಕೋಲಪೂರ್ತಿ ಸರ್ಪವನ್ನು ಸುಸ್ತುಗೊಳಿಸಿ ಮಂತ್ರಧಾರಿಯವ ವಶಪಡಿಸಿಕೊಳ್ಳುತ್ತಾನೆ. ಅಲ್ಲಿಗೆ ಊರಿಗೆ, ನಾಡಿನ ಜನರಿಗೆ ಅಥವಾ ಸರ್ಪಕೋಲ ನಡೆಸುವ ಕುಟುಂಬಕ್ಕೆ ಅಂಟಿದ ಸರ್ಪ ಕಂಟಕಗಳು ಪರಿಹಾರವಾಯ್ತು ಎಂದರ್ಥ.

ದಲಿತ ಸಮುದಾಯಗಳೇ ಪಾತ್ರಿಗಳಾಗಿ ನಡೆಸುತ್ತಿದ್ದ ಸರ್ಪಕೋಲವು ನಂತರದ ದಿನಗಳಲ್ಲಿ ಶೂದ್ರ, ದಲಿತರ ಉಳಿದ ಕಿರುಸಂಸ್ಕೃತಿಗಳ ರೀತಿಯಲ್ಲೇ ವೈದಿಕೀಕರಣಗೊಂಡಿತು. ಬ್ರಾಹ್ಮಣರ ವೈದ್ಯ ಎನ್ನುವ ಸಮುದಾಯ ಕರಾವಳಿಯಲ್ಲಿ ಈಗ ನಾಗಪಾತ್ರಿಯಾಗಿದೆ. ಕೋಟಿ ಕೋಟಿ ವೆಚ್ಚದಲ್ಲಿ ನಡೆಯುವ ನಾಗಮಂಡಲದ ಗುತ್ತಿಗೆಯನ್ನು ಇದೇ ನಾಗಪಾತ್ರಿಗಳು ತೆಗೆದುಕೊಳ್ಳುತ್ತಾರೆ. ಹೂ ಮತ್ತು ಹಣ್ಣುಗಳಿಂದ ಅಲಂಕೃತವಾದ ವೇದಿಕೆಯಲ್ಲಿ ಹತ್ತಾರು ಕ್ವಿಂಟಾಲ್ ಅಡಿಕೆ ಮರದ ಹೂವನ್ನು (ಪಿಂಗಾರ) ಬಳಕೆ ಮಾಡಿಕೊಂಡು ನಾಗನೃತ್ಯ ಮಾಡಲಾಗುತ್ತದೆ. ಇದು ಸರ್ಪಕೋಲದ ನಕಲು. ದಲಿತ ನಲಿಕೆ ಸಮುದಾಯದವರು ಮಾಡುವ ಸರ್ಪಕೋಲ ಬರಿಯ ಗದ್ದೆಯಲ್ಲಿ ಅಡಕೆ ಹಾಳೆಯಲ್ಲಿ ಮುಗಿದರೆ ಬ್ರಾಹ್ಮಣರು ನಡೆಸುವ ನಾಗಮಂಡಲಕ್ಕೆ ಕೋಟಿಕೋಟಿ ಸುರಿಯಲಾಗುತ್ತದೆ. ತುಳುನಾಡಿನ ಬುಡಕಟ್ಟುಗಳಾಗಿರುವ ದಲಿತರು, ಬಂಟರು, ಬಿಲ್ಲವರು ಮತ್ತಿತರ ಶೂದ್ರ ಜಾತಿಗಳು ದೇವರನ್ನು ನಂಬುತ್ತಿರಲಿಲ್ಲ. ಭೂತಗಳನ್ನು ಮಾತ್ರ ಆರಾಧಿಸುತ್ತಿದ್ದರು. ನಾಗ ಬಿರ್ಮೆರು ಇಲ್ಲಿನ ಮೂಲ ದೈವವಾಗಿತ್ತು. ಈಗ ಬಂಟರು ಬಿಲ್ಲವರು ಮುಂಬೈ ಮತ್ತು ವಿದೇಶದಲ್ಲಿ ಸಂಪಾದಿಸಿ ಹಣವನ್ನು ವೈದಿಕರ ನಾಗಮಂಡಲಕ್ಕೆ ವ್ಯಯ ಮಾಡುತ್ತಿದ್ದಾರೆ. ಸರ್ಪಕೋಲವನ್ನು ಮರೆತೇ ಬಿಟ್ಟಿದ್ದಾರೆ.

ನಾಗರ ಪಂಚಮಿಯಂದು ನಾಗನ ಕಲ್ಲಿಗೆ ಹಾಲು ಹುಯ್ಯುವ ಸಂಪ್ರದಾಯ ತುಳುನಾಡಿನ ಬುಡಕಟ್ಟಿನಲ್ಲಿ ಇರಲಿಲ್ಲ. ದೈವಗಳಿಗೆ ಹೇಗೆ ಹೂ ನೀರು ಇಡಲಾಗುತ್ತದೋ ಅದನ್ನೇ ನಾಗ ಬಿರ್ಮೆರೆ ಗುಡಿಗೂ ಮಾಡಲಾಗುತ್ತಿತ್ತು. ಈಗಲೂ ಹಲವು ನಾಗಬಿರ್ಮೆರೆ ಗುಡಿಯಲ್ಲಿ ನಾಗನನ್ನು ದೈವದ ರೀತಿಯಲ್ಲೇ ಆರಾಧನೆ ಮಾಡಲಾಗುತ್ತಿದೆ.

ಬಹುಶಃ ಶಂಕರಾಚಾರ್ಯರು, ಮದ್ವಾಚಾರ್ಯರ ವೈದಿಕ ಧರ್ಮ ಪ್ರಚಾರ ನಾಗನನ್ನು ದೇವರಾಗಿಸಿ, ಪೌರಾಣಿಕ ಕತೆಯ ಭಾಗವಾಗಿಸಿ ಸರ್ಪಕೋಲವನ್ನು ನಾಶ ಮಾಡಿತು. ಕುಕ್ಕೆ ಸುಬ್ರಹ್ಮಣ್ಯವನ್ನು ಕ್ಷೇತ್ರವನ್ನು ನಾಗನದೇವರ ಆದಿ ಕ್ಷೇತ್ರ ಎಂದು ಶಂಕರರು ಕರೆದರು. ಕುಕ್ಕೆ ಸುಬ್ರಹ್ಮಣ್ಯ ಮೂಲತಹ ಬುಡಕಟ್ಟು ಆದಿವಾಸಿಗಳಾದ ಮಲೆಕುಡಿಯರಿಗೆ ಸೇರಿದ್ದು. ಕುಮಾರಾಧಾರ ನದಿಯ ಅಂಚಿನ ಕಾಡಿನಲ್ಲಿ ವಾಸಿಸುತ್ತಿದ್ದ ಮಲೆಕುಡಿಯರು ಬಿದಿರಿನ ಕುಕ್ಕೆಯೊಳಗಡೆ ಕಲ್ಲನ್ನಿರಿಸಿ ನಾಗನ ಆರಾಧನೆ ಮಾಡುತ್ತಿದ್ದರು. ವೈದಿಕ ಧರ್ಮಪ್ರಚಾರಕ್ಕೆ ಬಂದ ಶಂಕರರು ಕುಕ್ಕೆಯ ನಾಗ ಪೂಜೆಯನ್ನು ಸ್ಮಾರ್ತ ಬ್ರಾಹ್ಮಣರಿಗೆ ವಹಿಸಿದರು. ಬ್ರಿಟೀಷರ ಕಾಲದಲ್ಲಿ ಮಾಧ್ವರು ಸ್ಮಾರ್ತರಿಂದ ಕುಕ್ಕೆಯ ಪೂಜೆಯನ್ನು ವಶಪಡಿಸಿಕೊಂಡರು. ಈಗಲೂ ಕುಕ್ಕೆ ಸುಬ್ರಹ್ಮಣ್ಯನ ರಥವನ್ನು ಮಲೆಕುಡಿಯರೇ ಕಾಡಿನಿಂದ ಬಿದಿರನ್ನು ಸಂಗ್ರಹಿಸಿ ಅವರೇ ಸಿದ್ದಗೊಳಿಸಬೇಕು. ಕುಕ್ಕೆಗೂ ಮಲೆಕುಡಿಯರಿಗೂ ಇರುವ ಸಂಬಂಧಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ರಥವೇ ಸಾಕ್ಷಿ.

ನಾಗ ದೈವಕ್ಕೆ ತುಳುನಾಡಿನಲ್ಲಿ ಆದಿ ಯಾವುದು ಅಂತ್ಯ ಯಾವುದು ಎಂಬುದೇ ಇಲ್ಲ. ಶಂಕರರು ಮೊದಲ ಬಾರಿಗೆ ಮೂಲನಿವಾಸಿಗಳಿಂದ ನಾಗನ ಪೂಜೆಯ ಹಕ್ಕನ್ನು ಕಿತ್ತುಕೊಂಡು, ಅದಕ್ಕೊಂದು ಮಡಿಮೈಲಿಗೆಯನ್ನು ನೀಡಿ ವೈದಿಕರಿಗೆ ಹಸ್ತಾಂತರಿಸಿದ ಕ್ಷೇತ್ರ ಕುಕ್ಕೆಯಾದ್ದರಿಂದ ಕುಕ್ಕೆ ಸುಬ್ರಹ್ಮಣ್ಯವನ್ನೇ ನಾಗದೇವರ ಆದಿಕ್ಷೇತ್ರ ಎಂದು ನಂಬಿಸಲಾಯ್ತು. ಕೆಲವು ಪಾಡ್ದನಗಳಲ್ಲಿ ಕಾಸರಗೋಡು, ಮಂಜೇಶ್ವರದ ಹಲವು ನಾಗಬನಗಳನ್ನು ಆದಿ ನಾಗಬನಗಳು ಎನ್ನಲಾಗುತ್ತದೆ. ಅಲ್ಲೆಲ್ಲ ಇನ್ನೂ ಸರ್ಪಕೋಲ ಚಾಲ್ತಿಯಲ್ಲಿದೆ.

ನಾಗರಪಂಚಮಿ, ನಾಗಮಂಡಲ, ಆಶ್ಲೇಷ ಬಲಿ ಪೂಜೆಗಳು ಕರಾವಳಿಯ ಮೂಲ ನಿವಾಸಿ ಶೂದ್ರರುಗಳದ್ದಲ್ಲ. ನಾಗಮಂಡಲದ ಜೊತೆಗೆ ಡಕ್ಕೆ ಬಲಿ ಪೂಜೆಯನ್ನೂ ಈಗ ಬ್ರಾಹ್ಮಣರೇ ಆಗಿರುವ ವೈದ್ಯ ಸಮುದಾಯ ನಡೆಸುತ್ತೆ. ಇದೂ ಕೂಡಾ ಶೂದ್ರರ ಒಂದು ಆಚರಣೆ. ಡಕ್ಕೆ ಬಲಿ ಎನ್ನುವುದು ವೈದಿಕೇತರ ಆಚರಣೆ. ಪಾಣರ ಎಂಬ ಬುಡಕಟ್ಟು ಸಮುದಾಯವು ಈ ಡಕ್ಕೆ ಬಲಿಯನ್ನು ನಿರ್ವಹಿಸಬೇಕು. ದೈವಗಳಿಗೆ ಡಕ್ಕೆ ಬಲಿ ಎಂದರೆ ಪ್ರಾಣಿ ಅಥವಾ ಕೊಳಿ ಬಲಿ ಕೊಡುವುದು ಎಂದು ಮೂಲ ಅರ್ಥ. ಆದರೆ ಅದನ್ನೂ ಬ್ರಹ್ಮಮಂಡಲ ಡಕ್ಕೆ ಬಲಿ ಎಂದು ವೈದಿಕೀಕರಣಗೊಳಿಸಲಾಯ್ತು. ದೈವಗಳನ್ನು ಆರಾಧನೆ ಮಾಡುತ್ತಿದ್ದ ಕರಾವಳಿಗರನ್ನು ವೈದಿಕ ಧರ್ಮದ ವಿಷ್ಣು ಮತ್ತು ಪುರಾಣಗಳತ್ತಾ ಮತಾಂತರ ಮಾಡುವುದು ಆಚಾರ್ಯದ್ವಯರಿಗೆ ಸುಲಭದ್ದಾಗಿರಲಿಲ್ಲ. ಅದಕ್ಕಾಗಿ ಅವರು ಕಂಡುಕೊಂಡಿದ್ದು ಇಲ್ಲಿನ ದೈವ, ನಾಗ ಬೆರ್ಮೆರನ್ನು ಪುರಾಣದ ಕತೆಗಳಿಗೆ ಜೋಡಿಸಿದ್ದು.

ಕಾಸರಗೋಡಿನ ನೆಟ್ಟನಿಗೆಯ ಗುಹೆಯೊಂದರಲ್ಲಿ 12 ವರ್ಷಗಳಿಗೊಮ್ಮೆ ನಾಗನ ಪೂಜೆ ನಡೆಯುತ್ತೆ. ಕಾಡಿನ ನಿವಾಸಿಗಳಾಗಿದ್ದ ದಲಿತ ಕಾಪಾಡರು ಈ ಪೂಜೆಯನ್ನು ಮಾಡಬೇಕು. ಕಾಪಾಡರು, ಬಾಕುಡರು ಈ ನೆಲದ ಮೂಲ ನಿವಾಸಿಗಳು. ಇಲ್ಲೂ ಬ್ರಾಹ್ಮಣರ ಪ್ರವೇಶವಾಗಿವಾಗಿದೆ. ಆದರೆ 12 ವರ್ಷಗಳಿಗೊಮ್ಮೆ ಗುಹೆಗೆ ಹೋಗುವುದರಿಂದ ಬ್ರಾಹ್ಮಣ ಅರ್ಚಕರಿಗೆ ವಿಷದ ನಿಜದ ನಾಗರ ಹಾವಿನ ಹೆದರಿಕೆ ಇರೋದರಿಂದ ಮೊದಲಿಗೆ ಕಾಪಾಡರನ್ನು ಗುಹೆಯೊಳಗೆ ಕಳುಹಿಸುತ್ತಾರೆ. 

ಈ ರೀತಿ ಕಾಪಾಡರನ್ನು ಗುಹೆಯೊಳಗೆ ಕಳುಹಿಸುವಾಗ ಅವರಿಗೆ ಉತ್ತರ ಕ್ರಿಯೆಯನ್ನೂ ಮಾಡಲಾಗುತ್ತದೆ. ಕಾಪಾಡರು ಗುಹೆಯೊಳಗೆ ಹೋಗಿ ವಾಪಸ್ಸು ಬಂದ ನಂತರ ಬ್ರಾಹ್ಮಣರು ಗುಹೆಯೊಳಗೆ ಹೋಗುತ್ತಾರೆ.

ಬಾಕುಡರು, ಕಾಪಾಡರು ಮುಂತಾದ ದಲಿತ ಶೂದ್ರರ ನೆಲದಲ್ಲಿ ನಡೆಯುವ ನಾಗ ಬೆರ್ಮೆರ ಆರಾಧನೆಗೂ ನಾಗರಪಂಚಮಿಯ ದಿನ ಹಾಲೆರೆಯುವ ವೈದಿಕ ಆಚರಣೆಗಳಿಗೂ ಸಂಬಂಧವಿಲ್ಲ. ಕರಾವಳಿ ಹಿಂದೂಗಳ ನಾಗಾರಾಧನೆಯನ್ನು ಉಳಿಸಬೇಕಾದರೆ ಅದನ್ನು ವೈದಿಕರ ಕಪಿಮುಷ್ಠಿಯಿಂದ ಹೊರತಂದು ಮತ್ತೆ ಸರ್ಪಕೋಲಗಳತ್ತಾ ಹೋಗಬೇಕಿದೆ.

ತ್ರಿಪುರಾದಲ್ಲಿ ಸಿಪಿಐಎಂ ಮತ್ತು ಬುಡಕಟ್ಟು ಪ್ರತ್ಯೇಕತಾವಾದಿಗಳ ಸಂಘರ್ಷ ! ಐಪಿಎಫ್ ಟಿ ನೆರಳಲ್ಲಿ ಬಿಜೆಪಿ !

                                                                                                                  – ನವೀನ್ ಸೂರಿಂಜೆ

 

ತಕರ್ಜಾಲಕ್ಕೆ ದಾರಿ ಎಂಬ ಬೋರ್ಡ್ ಕಾಣಿಸುತ್ತಿದ್ದಂತೆ ಮಿಲಿಟರಿ ಪಡೆ ಮರಳು ಮೂಟೆಯ ಹಿಂದೆ ಶಸ್ತ್ರಸಜ್ಜಿತರಾಗಿ ನಿಂತ ದೃಶ್ಯ ಕಾಣಿಸುತ್ತದೆ. ಯಾವುದೋ ದೇಶದ ಗಡಿ ಭಾಗಕ್ಕೆ ಬಂದಿದ್ದೇವೆಯೇನೊ ಅನ್ನಿಸುವಷ್ಟರ ಮಟ್ಟಿಗೆ ಇಲ್ಲಿ ಮಿಲಿಟರಿ ಆಡಳಿತವಿದೆ. AFSPA  ಸಶಸ್ತ್ರಕಾಯ್ದೆಯನ್ನು ತ್ರಿಪುರಾ ಸರಕಾರ ಹಿಂಪಡೆದ ಬಳಿಕವೂ ತಕರ್ಜಾಲಕ್ಕೆ ಮಿಲಿಟರಿ ಭದ್ರತೆ ಒದಗಿಸಲಾಗಿದೆ.

ನಾವು ತ್ರಿಪುರಾಕ್ಕೆ ಬಂದಿಳಿದ ಮರುದಿನವೇ ತಕರ್ಜಾಲದ ಅಮರೇಂದ್ರ ನಗರದಲ್ಲಿ ಗಲಭೆಯಾಗಿ ಸಿಪಿಐಎಂ ಕಚೇರಿ ದ್ವಂಸ ಮಾಡಲಾಗಿದೆ ಎಂಬ ಸುದ್ದಿ ದೊರಕಿತು. ನೇರ ತಕರ್ಜಾಲಕ್ಕೆ ತೆರಳಿದೆವು. ಕೃಷಿ ಮತ್ತು ಕಾಡನ್ನು ನಂಬಿಕೊಂಡ ಬುಡಕಟ್ಟುಗಳೇ ಇರುವ ಪ್ರದೇಶ ತಕರ್ಜಾಲ. ಇಲ್ಲಿ 41 ಸಾವಿರ ಮತದಾರರಿದ್ದಾರೆ. ಅದರಲ್ಲಿ ಶೇಕಡಾ 95 ರಷ್ಟು ಬುಡಕಟ್ಟು ಸಮುದಾಯ. ಉಳಿದಂತೆ 5 ಶೇಕಡಾ ಮುಸ್ಲೀಮರು ಮತ್ತು ಬೆಂಗಾಲಿಗಳು. 

ತ್ರಿಪುರಾ ಭಾರತದಿಂದ ಪ್ರತ್ಯೇಕವಾಗಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಬಾಂಗ್ಲಾದೇಶದಿಂದ ನಿರ್ವಹಣೆ ಮಾಡಲಾಗುತ್ತಿರುವ ಭಯೋತ್ಪಾದಕ ಸಂಘಟನೆಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎಟಿಟಿಎಫ್)  ತಕರ್ಜಾಲದಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಇದೇ ಕಾರಣದಿಂದ ಪ್ರತ್ಯೇಕ ತ್ರಿಪರ್ಲ್ಯಾಂಡ್ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಐಪಿಎಫ್ ಟಿ (ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ) ಕೂಡಾ ಬಲವಾಗಿ ನೆಲೆಯೂರಿದೆ. ಇದಲ್ಲದೆ ಐಎನ್ ಪಿಟಿ ( ಇಂಡಿಜಿನಿಯಸ್ ನ್ಯಾಶನಲಿಸ್ಟ್ ಪಾರ್ಟಿ ಆಫ್ ತ್ರಿಪುರಾ), ಟಿ ಎಸ್ ಪಿ ( ತ್ರಿಪರ್ಲ್ಯಾಂಡ್ ಸ್ಟೇಟ್ ಪಾರ್ಟಿ) ಕೂಡಾ ಅಸ್ತಿತ್ವದಲ್ಲಿದೆ. ಈ ರೀತಿ ಬುಡಕಟ್ಟು ಪ್ರದೇಶವೊಂದರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರತ್ಯೇಕತಾವಾದಿಗಳು ನೆಲೆಯೂರಲು ಸಿಪಿಐಎಂ ಪಾತ್ರ ಇಲ್ಲವೇ ಇಲ್ಲ ಎಂದರೆ ಸುಳ್ಳಾಗುತ್ತದೆ.

 

ತ್ರಿಪುರಾದಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯಗಳು ತಕರ್ಜಾಲದಲ್ಲಿ ಕಾಣಸಿಗುತ್ತಾರೆ. ದೆಬ್ಬರ್ಮಾ, ಜೊಮಾಟಿಯಾ, ಮಲ್ಸಾಮ್, ಕೈಪಂಗ್, ಮೊರಾಂಕಲ್, ರೂಪಾನಿ, ರಿಯಾಂಗ್, ಗಾರೋ, ಮುಂಡಾ, ಕೊಲಾಯ್, ರುವಾಟಿಯಾ ಬುಡಕಟ್ಟು ಸಮುದಾಯಗಳು ಇವೆ. ಈ ಎಲ್ಲಾ ಬುಡಕಟ್ಟು ಸಮುದಾಯದ ಮಧ್ಯೆ ಕೇಡರ್ ಬೇಸ್ಡ್ ಪೊಲಿಟಿಕ್ಸ್ ಮಾಡಿಕೊಂಡಿದ್ದ ಸಿಪಿಐಎಂ ಇತ್ತಿಚ್ಚಿನ ವರ್ಷಗಳಲ್ಲಿ ಈ ಬುಡಕಟ್ಟು ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪಗಳು ಇದೆ. ಹೆಚ್ಚಿನ ಬುಡಕಟ್ಟು ಹಾಡಿಗಳನ್ನು ನೋಡಿದಾಗ ಅದು ಡಾಳಾಗಿ ಕಾಣಿಸುತ್ತದೆ. ಶೌಚಾಲಯವೂ ಇಲ್ಲದ, ರಸ್ತೆಯೂ ಇಲ್ಲದ, ನೀರಿನ ಸಂಪರ್ಕವೂ ಇಲ್ಲದ ಬುಡಕಟ್ಟು ಕಾಲನಿಗಳೇ ಬಹುತೇಕ ಇವೆ. ನಮ್ಮನ್ನು ಸರಕಾರಗಳು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಧೋರಣೆ ಬರಲು ಇದು ಕಾರಣವಾಗಿದೆ.

 

 “ನಾನೂ ಹಿಂದೆ ಸಿಪಿಐಎಂ ಜೊತೆ ಇದೆ. ಮೂವತ್ತು ವರ್ಷಗಳಿಂದ ಸರಕಾರ ನಮಗಾಗಿ ಏನೇನೂ ಮಾಡಿಲ್ಲ. ನಮಗೆ ಸಿಪಿಐಎಂ ಕಲಿಸಿಕೊಟ್ಟ ಸಂಘರ್ಷದ ಮಾರ್ಗವನ್ನು ಸಿಪಿಐಎಂ ವಿರುದ್ದವೇ ಮಾಡಬೇಕಿದೆ” ಎನ್ನುತ್ತಾನೆ ಪ್ರಮೀಸ್ ದೆಬ್ಬರ್ಮಾ.
ತಕರ್ಜಾಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕತಾವಾದಿ ಐಪಿಎಫ್ ಟಿಯ ರಾಜ್ಯಾಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಸ್ಪರ್ಧೆ ಮಾಡುತ್ತಿದ್ದಾರೆ. ಆದ್ದರಿಂದ ಇದು ತ್ರಿಪುರಾ ಪ್ರತ್ಯೇಕತಾವಾದಿಗಳಿಗೆ ಪ್ರತಿಷ್ಟೆ ಮತ್ತು ಅಸ್ತಿತ್ವದ ಪ್ರಶ್ನೆ. ಇಲ್ಲಿ ನಿರಂತರವಾಗಿ ಗೆದ್ದು ಬರುತ್ತಿದ್ದ ಸಿಪಿಐಎಂನ ಹಾಲಿ ಶಾಸಕ ನಿರಂಜನ ದೆಬ್ಬರ್ಮಾಗೆ ಈ ಬಾರಿ ಸಿಪಿಐಎಂ ಟಿಕೆಟ್ ನೀಡಿಲ್ಲ. ನಿರಂಜನ್ ದೆಬ್ಬರ್ಮಾರ ಕಳಪೆ ಸಾಧನೆ, ಬುಡಕಟ್ಟುಗಳ ಮದ್ಯೆ ಸಂಘಟನೆ ಮಾಡದಿರುವುದು, ಬುಡಕಟ್ಟುಗಳ ಅಭಿವೃದ್ದಿಗೆ ಒತ್ತು ನೀಡದಿರುವುದು ನಿರಂಜನ್ ದೆಬ್ಬರ್ಮಾಗೆ ಟಿಕೆಟ್ ನಿರಾಕರಿಸಲು ಕಾರಣಗಳು. ಈ ಬಾರಿ ಸಿಪಿಐಎಂ ನಿಂದ ರಮೀಂದ್ರ ದೆಬ್ಬರ್ಮಾ ಸ್ಪರ್ಧೆ ನಡೆಸುತ್ತಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಾಂಗ್ರೆಸ್ ನಿಂದ ಸ್ಯಾಮ್ಸಂಗ್ ದೆಬ್ಬರ್ಮಾ, ಐಎನ್ ಪಿಟಿಯಿಂದ ಓಮಿಯಾ ಕುಮಾರ್ ದೆಬ್ಬರ್ಮಾ, ಟಿಎಸ್ ಪಿಯಿಂದ ಚಿತ್ತರಂಜನ್ ದೆಬ್ಬರ್ಮಾ ಕಣದಲ್ಲಿದ್ದಾರೆ. ಪ್ರತ್ಯೇಕತಾವಾದಿಗಳೇ ಆಗಿರುವ ಐಎನ್ ಪಿಟಿ ಮತ್ತು ಟಿಎಸ್ ಪಿ ಬುಡಕಟ್ಟುಗಳ ಮತ ಸೆಳೆದಷ್ಟೂ ಆಡಳಿತರೂಢ ಸಿಪಿಐಎಂಗೆ ಲಾಭವಾಗಲಿದೆ. ಇಲ್ಲದೇ ಇದ್ದಲ್ಲಿ ತಕರ್ಜಾಲದಲ್ಲಿ ಐಪಿಎಫ್ ಟಿ ರಾಜ್ಯಾಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಸುಲಭದಲ್ಲಿ ಗೆಲುವು ಸಾಧಿಸಲಿದ್ದಾರೆ.
ತಿಪುರಾದಲ್ಲಿ ತಕರ್ಜಾಲವೇ ಪ್ರತಿಷ್ಟೆಯ ಕಣವಾಗಿದೆ. ಇಡೀ ತ್ರಿಪುರಾದ ರಾಜಕೀಯ ಚಿತ್ರಣವನ್ನು ತಕರ್ಜಾಲ ನೀಡುತ್ತದೆ. ತ್ರಿಪುರಾದಲ್ಲಿ ಎದ್ದ ಪ್ರತ್ಯೇಕತಾವಾದಿಗಳ ಕೂಗು, ಸರಕಾರದ ಸ್ಪಂದನೆ, AFSPA ಕಾಯ್ದೆ, ಅಟಾನಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್ ನ ಕಾರ್ಯವೈಖರಿ ಮತ್ತು ಇವೆಲ್ಲದರ ಪರಿಣಾಮದ ಇಂದಿನ ತ್ರಿಪುರಾದ ಬದಲಾದ ರಾಜಕಾರಣವನ್ನು ಇದೊಂದೇ ಕ್ಷೇತ್ರದಲ್ಲಿ ನೋಡಿಬಿಡಬಹುದು.
ನಾವು ತಕರ್ಜಾಲ ವಿಧಾನಸಭಾ ಕ್ಷೇತ್ರದ ನಬಚಂದ್ರಪರ ಬುಡಕಟ್ಟು ಗ್ರಾಮಕ್ಕೆ ತೆರಳಿದೆವು. ಅಲ್ಲಿ ಫೆಬ್ರವರಿ 11 ರ ರವಿವಾರ ಸಿಪಿಐಎಂ ರ‌್ಯಾಲಿ ಆಯೋಜಿಸಿತ್ತು. ಬೂತ್ ಕಚೇರಿಯಿಂದ ಇನ್ನೇನು ರ‌್ಯಾಲಿ ಹೊರಡಬೇಕು ಅನ್ನುವಷ್ಟರಲ್ಲಿ ಕಲ್ಲು, ದೊಣ್ಣೆಗಳಿಂದ ಸಿಪಿಐಎಂ ಕಚೇರಿ ಮೇಲೆ ಐಪಿಎಫ್ ಟಿ ಕಾರ್ಯಕರ್ತರು ದಾಳಿ ನಡೆಸಿದರು. ನಾಲ್ಕು ಜನ ಸಿಪಿಐಎಂ ಕಾರ್ಯಕರ್ತರಿಗೆ ಗಾಯಗಳಾದವು. ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಐಪಿಎಫ್ ಟಿ ಕಾರ್ಯಕರ್ತರಿಗೂ ಗಾಯಗಳಾದವು.
ಸಿಪಿಐಎಂ ಕಚೇರಿಯ ಮೇಲೆ ದಾಳಿ ನಡೆಸಿದ ಐಪಿಎಫ್ ಟಿ ತಂಡದ ಪ್ರಮುಖನಾಗಿದ್ದ ಅರಬಿಂದೋ ದೆಬ್ಬರ್ಮಾರನ್ನು ಮಾತನಾಡಿಸಿದ್ವಿ. “ಇನ್ನೂ ಎಷ್ಟು ದಿನ ಅಂತ ನೋಡೋದು ? ದಾಳಿ ಮಾಡಿದ್ವಿ. ಇನ್ನೂ ಮಾಡ್ತೀವಿ. ಇನ್ನು  ಸುಮ್ಮನಿರೋಕೆ ಆಗಲ್ಲ” ಎಂದರು.

 

“ಸಿಪಿಐಎಂ ಅಭ್ಯರ್ಥಿಯೇ ನೇರವಾಗಿ ನಮ್ಮ ಐಪಿಎಫ್ ಟಿ ಕಚೇರಿ ಎದುರು ಬಂದು ಕಾರು ನಿಲ್ಲಿಸಿದ್ರು. ಕಾರಿನಿಂದ ಇಳಿದ ಸಿಪಿಐಎಂ ಕಾರ್ಯಕರ್ತರು ನೇರ ಕಚೇರಿಗೆ ನುಗ್ಗಿದ್ರು. ಕಚೇರಿಯಿಂದ ನಾವು ಹೊರಬರಲೂ ಸಾಧ್ಯವಾಗಲಿಲ್ಲ. ಇನ್ನಷ್ಟೂ ಜನ ಬಂದು ಐಪಿಎಫ್ ಟಿ ಕಚೇರಿ ದ್ವಂಸ ಮಾಡಿದ್ರು. ನಮ್ಮ ಕಚೇರಿ ದ್ವಂಸವಾದ ಬಳಿಕವಷ್ಟೇ ನಾವು ಸಿಪಿಐಎಂ ಕಚೇರಿಗೆ ದಾಳಿ ಮಾಡಿದ್ವಿ” ಎನ್ನುತ್ತಾರೆ ಶೊಮಂತೊ ದೆಬ್ಬರ್ಮಾ. ಪ್ರತ್ಯೇಕತಾವಾದಿ ಐಪಿಎಫ್ ಟಿ ಯಾವ ಪ್ರಚೋದನೆಯೂ ಇಲ್ಲದೆ ನಮ್ಮ‌ ಮೇಲೆ ದಾಳಿ ನಡೆಸಿತು. ಈ ಹಿಂದಿನಿಂದಲೂ ಉಗ್ರವಾದಿ ಚಟುವಟಿಕೆ ನಡೆಸುತ್ತಿರುವ ಐಪಿಎಫ್ ಟಿ ಗೆ ಈ ಬಾರಿ ಸಿಪಿಐಎಂ ಮೇಲೆ ದಾಳಿ ನಡೆಸಲೆಂದೇ ಬಿಜೆಪಿಯಿಂದ ಹಣ ಹರಿದು ಬಂದಿದೆ ಎನ್ನುತ್ತಾರೆ ಸ್ಥಳೀಯ ಸಿಪಿಐಎಂನ  ಧೀರೆಂದ್ರ ದೆಬ್ಬಾರ್ಮಾ.

 

ಐಪಿಎಫ್ ಟಿ ಪಕ್ಷವು ಬಿಜೆಪಿಯ ಮೈತ್ರಿಯೊಂದಿಗೆ 9 ಎಸ್ ಟಿ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಎನ್ ಪಿಟಿ ಪಕ್ಷವು ಕಾಂಗ್ರೆಸ್ ಮೈತ್ರಿಯಲ್ಲಿ ಸ್ಪರ್ಧೆ ನಡೆಸಿತ್ತು. ಈ ಬಾರಿ ಐಪಿಎಫ್ ಟಿ ಪಕ್ಷದ ಮೂಲಕ ತ್ರಿಪುರಾದ ಕಾಡಿನ  ಗ್ರಾಮಗಳಿಗೆ ಬಿಜೆಪಿ ಪ್ರವೇಶ ಮಾಡಿದೆ. ತ್ರಿಪುರಾದ ಬುಡಕಟ್ಟು ಮಕ್ಕಳು ಮೋದಿ ಮುಖವಾಡ ಧರಿಸಿ ಆಟವಾಡುವ ದೃಶ್ಯಗಳು ಗುಡ್ಡಗಾಡು ಬುಡಕಟ್ಟು ಕಾಲನಿಯಲ್ಲಿ ಕಾಣಸಿಗುತ್ತಿದೆ. ಇದು ಭವಿಷ್ಯದ ತ್ರಿಪುರಾದ ಸೂಚನೆಯೇ ಎಂಬ ಪ್ರಶ್ನೆಗಳು ಮೂಡುತ್ತವೆ.

 

(ಪತ್ರಕರ್ತ ನವೀನ್ ಸೂರಿಂಜೆ ಗೆಳೆಯರೊಂದಿಗೆ ಚುನಾವಣೆ ಸಮಯದಲ್ಲಿರುವ ತ್ರಿಪುರ ಪ್ರವಾಸದಲ್ಲಿದ್ದಾರೆ.)

‘ನಾವು ನಮ್ಮಲ್ಲಿ’ ಹೊತ್ತಿಗೆ ‘ವರ್ತಮಾನ’ಕ್ಕೆ ಮರುಹುಟ್ಟು

ಕೆಲ ವಾರಗಳ ಕಾಲ ತಾಂತ್ರಿಕ ತೊಂದರೆಗಳಿಂದ ವರ್ತಮಾನ ಚಾಲ್ತಿಯಲ್ಲಿರಲಿಲ್ಲ. ಈಗ ಮತ್ತೆ ತೆರೆ ಮೇಲೆ. ಆದರೆ ಮೊದಲಿನ ವಿನ್ಯಾಸ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹುರುಪಿನಿಂದ ಹೊಸ ರೂಪ ಪಡೆಯಲಿದೆ. ಇದೇ ಭಾನುವಾರ ಚಿತ್ರದುರ್ಗದಲ್ಲಿ ‘ನಾವು ನಮ್ಮಲ್ಲಿ’ ಕಾರ್ಯಕ್ರಮ. ‘ವರ್ತಮಾನ’ ತಾಣಕ್ಕೂ ‘ನಾವು ನಮ್ಮಲ್ಲಿ’ ಕಾರ್ಯಕ್ರಮಕ್ಕೂ ವಿಶೇಷ ನಂಟು. 2011 ರಲ್ಲಿ ಇದೇ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆದಿತ್ತು. ಆಗ ಮಾಧ್ಯಮ ಕುರಿತ ವಿಚಾರಗಳು ಚರ್ಚೆಯಾಗಿದ್ದವು. ‘ವರ್ತಮಾನ’ ಆರಂಭವಾಗಲು ಅಲ್ಲಿ ನಡೆದ ಚರ್ಚೆಗಳೂ ಕಾರಣ. ಆರು ವರ್ಷಗಳ ನಂತರ ಅದೇ ಕಾರ್ಯಕ್ರಮ ಮತ್ತೆ ಚಿತ್ರದುರ್ಗದಲ್ಲಿ ನಡೆಯುತ್ತಿದೆ.

ಈಗ ಇದೇ ಕಾರ್ಯಕ್ರಮದ ಹೊತ್ತಿಗೆ ತಾಂತ್ರಿಕ ಜಂಜಡಗಳಿಂದ ಹೊರಬಂದು ‘ವರ್ತಮಾನ’ವೂ ಮರುಹುಟ್ಟು ಪಡೆದಿದೆ.

ಒಂದು ದಿನದ ಕಾರ್ಯಕ್ರಮದಲ್ಲಿ ನಾಡಿನ ಹಿರಿಯರು, ಚಿಂತಕರು, ಬರಹಗಾರರು ಭಾಗವಹಿಸುತ್ತಿದ್ದಾರೆ. ‘ನಿರಂಕುಶಮತಿತ್ವದೆಡೆಗೆ’ – ಈ ಬಾರಿಯ ಥೀಮ್. ವಿವರಗಳಿಗೆ ಆಹ್ವಾನ ಪತ್ರಿಕೆಯನ್ನು ಗಮನಿಸಬಹುದು. ಕಾರ್ಯಕ್ರಮದ ಭಾಗವಾಗಿ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಅಜಿತ್ ಪಿಳ್ಳೈ ಅವರ ಬರಹಗಳ ಸಂಕಲನವೂ ಬಿಡುಗಡೆಯಾಗುತ್ತಿದೆ. ಪತ್ರಕರ್ತ ಸತೀಶ್ ಜಿ.ಟಿ. ಪಿಳ್ಳೈ ಅವರ ಬರಹಗಳನ್ನು ಕನ್ನಡಕ್ಕೆ ತಂದಿದ್ದಾರೆ. ವರ್ತಮಾನ ಬಳಗದ ಭಾಗವಾಗಿರುವ ಅಹರ್ನಿಶಿ ಪ್ರಕಾಶನ ಮತ್ತು ನಾವು ನಮ್ಮಲ್ಲಿ ಬಳಗ ಈ ಕೃತಿಯನ್ನು ಹೊರತರುತ್ತಿದ್ದಾರೆ. ವರ್ತಮಾನದ ಓದುಗರೆಲ್ಲಾ ಅಲ್ಲಿ ಸೇರೋಣ.

ನಾವು ನಮ್ಮಲ್ಲಿಯ ಬಗ್ಗೆ ಬಳಗದವರೇ ಹೇಳಿಕೊಂಡ ಮಾತುಗಳು ಇಲ್ಲಿವೆ:

ಕಳೆದ ಹದಿಮೂರು ವರ್ಷದಿಂದ ರಾಜ್ಯದ ವಿವಿಧ ಭಾಗಗಳ ಸಮಾನಾಸಕ್ತ ಸಂಗಾತಿಗಳು ಜೊತೆಗೂಡಿ `ನಾವುನಮ್ಮಲ್ಲಿ’ ಎನ್ನುವ ಮುಕ್ತ ಮಾತುಕತೆಯ ವೇದಿಕೆಯೊಂದನ್ನು ರೂಪಿಸಿಕೊಂಡಿದ್ದೇವೆ. ಹೊಸ ತಲೆಮಾರಿನ ಬರಹಗಾರರ ಕನಸು ಕಾಣ್ಕೆಗಳನ್ನು ಚರ್ಚಿಸುತ್ತಲೇ, ಆಯಾ ಕಾಲದ ಬಿಕ್ಕಟ್ಟುಗಳ ಜತೆ ವೈಚಾರಿಕ ಆಕೃತಿಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಈ ತನಕ ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯಂತಿರುವ ಹಿರಿಯರು ಮತ್ತು ಒಡನಾಡಿಗಳು *ನಾವು ನಮ್ಮಲ್ಲಿ* ವೇದಿಕೆಯಲ್ಲಿ ತಮ್ಮ ತಿಳಿವನ್ನು ಹಂಚಿಕೊಂಡಿದ್ದಾರೆ. ಹೊಸತಲೆಮಾರಿನ ಜತೆ ಸಂವಾದ ನಡೆಸಿದ್ದಾರೆ.

ನಾವು ನಮ್ಮಲ್ಲಿ ಎನ್ನುವುದೇ `ಇಲ್ಲಿ ಯಾರೂ ಮುಖ್ಯರಲ್ಲ ಮತ್ತು ಯಾರು ಅಮುಖ್ಯರೂ ಅಲ್ಲ’ ಎನ್ನುವ ನೆಲೆಯಿಂದ ಹುಟ್ಟಿರುವುದು. ಈ ನೆಲೆಯಲ್ಲಿ ಆರೋಗ್ಯಕರ ಸಮಾಜಕ್ಕಾಗಿ ತುಡಿಯುವ ಜೀವಪರ ಮನಸ್ಸುಗಳನ್ನು ಒಂದೆಡೆ ಸೇರಿಸುವುದು, ಚರ್ಚಿಸುವುದು, ಆ ಮೂಲಕ ಪರ್ಯಾಯಗಳಿಗೆ ಬೇಕಾದ ಹೊಳಹುಗಳನ್ನು ಪಡೆದು ನಮ್ಮ ಬರಹ ,ಚಳವಳಿ ತಿಳಿವುಗಳ ಸ್ಪಷ್ಟತೆ ಪಡೆಯುತ್ತಲೇ ಬದುಕನ್ನು ತಿದ್ದಿಕೊಳ್ಳುತ್ತಾ ಮುನ್ನಡೆಯುವುದು ನಮ್ಮ ಮುಖ್ಯ ಆಶಯವಾಗಿದೆ.

ಕುವೆಂಪು ನಮ್ಮ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ಕನ್ನಡದ ಚೈತನ್ಯ. ಅವರ ಬರಹ ಚಿಂತನೆಗಳನ್ನು ವರ್ತಮಾನದ ಕಣ್ಣೋಟದ ಮೂಲಕ ನೋಡುತ್ತಾ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಕೆಲಸ ನಿರಂತರವಾಗಿ ನಡೆದಿದೆ. ಇಂದು ಸೃಜನಶೀಲ ಅಭಿವ್ಯಕ್ತಿಯನ್ನು ನಿಯಂತ್ರಿಸುವ ಅಂಕುಶಗಳು ಬಲಗೊಳ್ಳುತ್ತಿವೆ. ಅಭಿವ್ಯಕ್ತಿಯನ್ನು ಉಸಿರುಕಟ್ಟಿಸುವ ಕಾಣುವ ಮತ್ತು ಕಾಣದ ಕೈಗಳು ಇನ್ನಷ್ಟು ಉದ್ದ ಚಾಚುತ್ತಿವೆ.

ಈ ಹಿನ್ನೆಲೆಯಲ್ಲಿ 2017 ರ ನಾವುನಮ್ಮಲ್ಲಿ ಕಾರ್ಯಕ್ರಮವನ್ನು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕುವೆಂಪು ಅವರು ಹೊಸ ತಲೆಮಾರಿಗೆ ಕೊಟ್ಟ ಕರೆಯನ್ನು ವರ್ತಮಾನದ ಕಣ್ಣೋಟದಲ್ಲಿ ನೋಡುವ ಪ್ರಯತ್ನವಾಗಿಸಬೇಕೆಂದು ಯೋಚಿಸಿದ್ದೇವೆ. ಹಾಗಾಗಿ 2017 ‘ನಾವು ನಮ್ಮಲ್ಲಿ’ಯ ಮುಖ್ಯ ನೆಲೆ `ನಿರಂಕುಶಮತಿತ್ವದೆಡೆಗೆ’ಎನ್ನುವುದಾಗಿದೆ.

ಈ ಬಾರಿ ಜುಲೈ 9, 2017 ರ ಭಾನುವಾರ ಚಿತ್ರದುರ್ಗದ ಕ್ರೀಡಾ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದ್ದೇವೆ.

‘ನಿರಂಕುಶಮತಿತ್ವದೆಡೆಗೆ’ ಸಂವಾದದಲ್ಲಿ ಕನ್ನಡ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕ ಕಾಲಾನುಕಾಲಕ್ಕೂ ತನ್ನ ಜೀವದ್ರವ್ಯವಾಗಿ ಪೊರೆಯುತ್ತಾ ಬಂದಿರುವ ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯದ ನೆಲೆಗಳು ಮತ್ತು ವಿವಿಧ ಆಯಾಮಗಳ ಕುರಿತು ಹಿರಿಯರೊಡನೆ ಮಾತುಕತೆ ಮತ್ತು ಚರ್ಚೆ ನಡೆಸುವುದರ ಜೊತೆಗೆ ಕಿರಿಯರು ತಮ್ಮ ಬರಹ ಬದುಕಿನ ಹಿನ್ನೆಲೆಯಲ್ಲಿ ಅಂಕುಶಗಳ ಮೀರುವ ಬಿಕ್ಕಟ್ಟಿನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಹೀಗೆ ಈ ಕಾರ್ಯಕ್ರಮವು ಎರಡು ತಲೆಮಾರುಗಳ ಮುಖಾಮುಖಿ ನೆಲೆಯಲ್ಲಿ ರೂಪಗೊಂಡಿದೆ.

ಸಂಗಾತಿಗಳೇ, ಆ ದಿನ ನೀವು ನಿಮ್ಮ ಪಾಲಿನ ಅಮೂಲ್ಯವಾದ ಒಂದು ದಿನವನ್ನು ನಮ್ಮ ಜತೆ ಕಳೆಯಬೇಕೆನ್ನುವುದು ನಮ್ಮ ಹಂಬಲ. ನೀವು ನಮ್ಮ ಜತೆಗಿದ್ದು ನಾವುನಮ್ಮಲ್ಲಿ ಬಳಗದ ಒಡನಾಡಿಗಳಾಗಿ ಬರುವ ನಾಳೆಗಳ ಕನಸು ಕಾಣ್ಕೆಗಳ ಜೊತೆಗಾರರಾಗುತ್ತೀರಿ ಎನ್ನುವ ನಂಬಿಕೆಯಿದೆ.

ನಿಮ್ಮ ಬರುವಿಕೆಯ ವಿಶ್ವಾಸದಲ್ಲಿ
ನಾವು ನಮ್ಮಲ್ಲಿ ಬಳಗ