Category Archives: ಜೀವಿ

ಸಂಭ್ರಮದ ಬದಲಿಗೆ, ಅವಮಾನ ಕರುಣಿಸುವ ಜಾತ್ರೆಗಳು

 – ಜೀವಿ
ನಾನಾಗ ಹೈಸ್ಕೂಲ್ ವಿದ್ಯಾರ್ಥಿ, ಹಬ್ಬ-ಜಾತ್ರೆಯಲ್ಲಿ ಅನ್ನ ಮತ್ತು ದೋಸೆ ಕಾಣುತ್ತಿದ್ದ ಕಾರಣ ಊರಿನಲ್ಲಿ ಸಾವಾದರೂ ಮನಸಲ್ಲೆ ಸಂಭ್ರಮಿಸಿ ೧೧ ದಿನ ಏಣಿಸಿದ್ದುಂಟು. ಯಾಕೆಂದರೆ ೧೧ ದಿನಕ್ಕೆ ಸರಿಯಾಗಿ ತಿಥಿ ಕಾರ್ಯ ಏರ್ಪಡಿಸುವ ಗ್ಯಾರಂಟಿ ಇತ್ತು. ಅಂದಾದರೂ ಅನ್ನ ಕಾಣಬಹುದು ಎಂಬುದು ನನ್ನ ಲೆಕ್ಕಾಚಾರ. ಮಳೆ ಮುಗಿಲು ಸೇರಿದ್ದ ಕಾರಣಕ್ಕೆ ಆ ವರ್ಷ ರಾಗಿ ಬೆಳೆ ಕೂಡ ಕೈಗೂಡಿರtimthumbಲಿಲ್ಲ. ಹಾಗಾಗಿ ಅರೆಹೊಟ್ಟೆಯಲ್ಲೆ ಜೀವನ ಮುಂದುವರಿದಿತ್ತು. ‘ಕಾಲಾಡಿ ಹೊರಟರೆ ಕನ್ನೆ ಸೊಪ್ಪಿಗೆ ಬರವೇ?’ ಎಂಬುದು ಅವ್ವ ಆಗಾಗ ಹೇಳುತ್ತಿದ್ದ ಮಾತು. ದಿನವಿಡೀ ಸುತ್ತಾಡಿ ಕನ್ನೆ ಸೊಪ್ಪು ಸೆರಗು ತುಂಬಿಸಿಕೊಂಡು ಬಂದು ಬೇಸಿದರೆ ಬೊಗಸೆ ಸೊಪ್ಪು ಹಿಡಿಯಷ್ಟಾಗುತ್ತಿತ್ತು. ಅದನ್ನೆ ತಿಂದು ನೀರು ಕುಡಿದು ಶಾಲೆಗೆ ಹೋಗುತ್ತಿದ್ದೆ.

ಮಾರ್ಚ್ಗೆ ಮುನ್ನವೇ ಬಿದ್ದ ಮಳೆಯಿಂದ ಅಣ್ಣ ಮತ್ತೊಂದು ಹೊಸ ಕನಸು ಹೊತ್ತು ನೇಗಿಲು ಹಿಡಿದು ಹೊಲಕ್ಕೆ ಹೋಗಿದ್ದ. ಶಾಲೆಗೆ ಹೋಗುವ ದಾರಿಯಲ್ಲಿ ಅವ್ವ ಬೇಸಿಕೊಟ್ಟ ಕನ್ನೆಸೊಪ್ಪಿನಲ್ಲಿ ನನ್ನ ಪಾಲು ಅಲ್ಲೆ ತಿಂದು ಅಣ್ಣನಿಗೆ ತಲುಪಿಸಿ ಹೋಗುತ್ತಿದ್ದೆ. ಮುಂದಿನ ವರ್ಷ ನಾನು ಕಾಲೇಜು ಮೆಟ್ಟಿಲು ಹತ್ತೇ ತೀರುತ್ತೇನೆ ಎಂಬ ಅಚಲ ನಂಬಿಕೆ ಅಣ್ಣನಿಗಿತ್ತು. ಹಾಗಾಗಿ ನನ್ನ ಮೇಲೆ ಇನ್ನಿಲ್ಲದ ಕಾಳಜಿ. ಊರಿನ ಹೊಲಗೇರಿಯಲ್ಲಿ ಕಾಲೇಜು ಮೆಟ್ಟಿಲೇರುವ ಮೊದಲ ವ್ಯಕ್ತಿ ನಾನಾಗಿದ್ದೆ. ಅವ್ವ ಕೊಟ್ಟ ಸೊಪ್ಪಿನಲ್ಲಿ ಒಂದೆರಡು ತುತ್ತು ಮಾತ್ರ ಎತ್ತಿಕೊಳ್ಳುತ್ತಿದ್ದ ಅಣ್ಣ, ಉಳಿದಿದ್ದನ್ನು ನನಗೇ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದ. ಹೊಟ್ಟೆ ಹಸಿವಾದರೆ ವಿದ್ಯೆ ತಲೆಗೆ ಹತ್ತುವುದಿಲ್ಲ. ನೀನು ಕಾಲೇಜು ಮೆಟ್ಟಿಲೇರಿ ಸರ್ಕಾರಿ ನೌಕರಿ ಹಿಡಿದರೆ ಮುಂದೆ ಎಲ್ಲರೂ ಹೊಟ್ಟೆ ತುಂಬ ಊಟ ಮಾಡಬಹುದು ಎಂಬುದು ಅಣ್ಣನ ವಾದ. ಹಾಗೆ ದಿನ ಕಳೆದು ಕಾಲೇಜಿಗೆ ಹೋಗುವ ಕನಸೂ ಕೈಗೂಡಿತು.

ಊರಿನಲ್ಲಿ ಕುಳುವಾಡಿಕೆ ಜೀವಂತವಾಗಿತ್ತು. ತುತ್ತಿನ ಚೀಲ ತುಂಬಿಸಿಕೊಳ್ಳುವ ಜೊತೆಗೆ ಊರಿನ ಕೆಲಸ ಮಾಡಲೇಬೇಕಿತ್ತು. ಮೇಲ್ವರ್ಗದ ಆಣತಿ ಮೀರುವಂತಿರಲಿಲ್ಲ. ಹಬ್ಬ-ಜಾತ್ರೆ ನೆನದು ತಿಂಗಳಿಗೆ ಮೊದಲೇ ಸಂಭ್ರಮಿಸುತ್ತಿದ್ದ ನನಗೆ ಆ ವರ್ಷದ ಜಾತ್ರೆ ಅಸಹ್ಯ ಎನಿಸಿತು. ಏಳು ಹಳ್ಳಿ ಸೇರಿ ಮಾಡುವ ಜಾತ್ರೆಗೆ ನನ್ನೂರಿನಿಂದ ಸಿಂಗರಿಸಿದ ಬಂಡಿಯೊಂದಿಗೆ ಹೋಗಿ ಉಡಸಲಮ್ಮನ ಗುಡಿ ಮುಂದಿನ ಕೆಂಡದ ರಾಶಿಯಲ್ಲಿ ಕಾಲಾಡಿ ಬರುವುದು ಹಿಂದಿನಿಂದ ನಡೆದು ಬಂದಿರುವ ಆಚರಣೆ. ಹೊರಡುವ ಮುನ್ನ ಊರ ಮುಂದಿನ ಗುಡಿಯ ಎದುರು ಬಂಡಿಗೆ ಪೂಜೆ-ಪುನಸ್ಕಾರ ಮಾಡಿ ಹೊರಡಲಾಗುತ್ತದೆ. ಆ ಸಂದರ್ಭದಲ್ಲಿ ಬಂಡಿಗೆ ಹೋತವನ್ನು ಬಲಿಕೊಡುವುದು ಸಂಪ್ರದಾಯ. ಪೂಜೆ-ಪುನಸ್ಕಾರವೆಲ್ಲ ಮೇಲ್ವರ್ಗಕ್ಕೆ ಬಿಟ್ಟದ್ದು. ಹೋತವನ್ನು ಕಡಿಯುವ ಕೆಲಸ ದಲಿತದ್ದು. ಜಾತ್ರೆ ಸಂಭ್ರಮದಲ್ಲಿ ಎಲ್ಲರೂ ತೇಲಿದ್ದರು. ಹೋತ ಬಲಿಯಾಗುವುದನ್ನು ನೋಡಲು ಎಲ್ಲರೂ ಸೇರಿದ್ದರು. ಒಂದೇ ಹೊಡೆತಕ್ಕೆ ಹೋತನ ರುಂಡ-ಮುಂಡ ಬೇರೆಯಾಗಬೇಕು. ಅದು ಸಾಧ್ಯವಾಗದಿದ್ದರೆ ಮೇಲ್ವರ್ಗದವರ ಕಾಲು ನನ್ನ ದೊಡ್ಡಪ್ಪ-ಚಿಕ್ಕಪ್ಪಂದಿರ ಎದೆಗೆ ಜಾಡಿಸುತ್ತಿದ್ದವು. ಹಾಗಾಗಿ ಹೋತನ ಕಡಿಯಲು ಎಲ್ಲರಿಗೂ ಹಿಂಜರಿಕೆ ಇತ್ತು. ಆದರೆ ಯಾರದರೊಬ್ಬರು ಕಡಿಯಲೇ ಬೇಕಿತ್ತು. ಎಲ್ಲರೂ ಸೇರಿ ಮೇಲ್ನೋಟಕ್ಕೆ ಬಲಶಾಲಿಯಂತೆ ಕಂಡ ಕರಿಯನಿಗೆ ಆ ಕೆಲಸ ನಿಯೋಜಿಸಿದರು. ಒಲ್ಲದ ಮನಸ್ಸಿನಲ್ಲೆ ಕರಿಯ ಒಪ್ಪಿಕೊಂಡ.

ಪೂಜೆ ಪುನಸ್ಕಾರವೆಲ್ಲ ಮುಗಿದು ಹೋತನನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದರು. ಅಲ್ಲೆ ಇದ್ದ ಕಲ್ಲೊಂದಕ್ಕೆ ಕತ್ತಿ ಮಸೆದು ತಂದ ಕರಿಯ, ಹೋತನ ಮುಂದೆ ಬಂದು ನಿಂತ. ಮಾಂಸಹಾರಿಗಳಲ್ಲದ ಮೇಲ್ವರ್ಗದವರು ಪಂಚೆ ಮೇಲೆತ್ತಿ ಕಟ್ಟಿ ನಿಂತರು. ಕರಿಯನ ಬಲದ ಮೇಲೆ ನಂಬಿಕೆ ಇದ್ದರೂ ಕತ್ತಿಯ ಮೊಣಚು ಸರಿಯಾಗಿ ಕುತ್ತಿಗೆ ತುಂಡು ಮಾಡದಿದ್ದರೆ ಅವನಿಗೆ ಆಗಲಿರುವ ಶಾಸ್ತಿಯನ್ನು ಮನದಲ್ಲೆ ನೆನಪಿಸಿಕೊಂಡ ದಲಿತರು ಜೀವ ಬಿಗಿ ಹಿಡಿದು ನಿಂತಿದ್ದರು. ಮನಸಲ್ಲೇ ಹತ್ತಾರು ದೇವರು ನೆನದ ಕರಿಯ ತನ್ನ ಬಲವನ್ನೆಲ್ಲ ಒಂದು ಮಾಡಿಕೊಂಡು ಹೋತದ ಕುತ್ತಿಗೆಯ ಮೇಲೆ ಏಟು ಕೊಟ್ಟೇಬಿಟ್ಟ. ಮುಂದಿನ ಸಾಲಿನಲ್ಲೆ ನಿಂತಿದ್ದ ನಾನು ಕೂಡ ಒಂದೇ ಏಟಿಗೆ ಕುತ್ತಿಗೆ ತುಂಡಾಗಲಿ ಎಂದು ದೇವರಿಗೆ ಕೈಮುಗಿದು ಕಣ್ಮುಚ್ಚಿಕೊಂಡೆ. ಕಣ್ಬಿಟ್ಟು ನೋಡಿದರೆ ಎಲ್ಲವೂ ಉಲ್ಟಾ ಹೊಡೆದಿತ್ತು. ಒಂದೇ ಏಟಿಗೆ ಹೋತದ ರುಂಡ-ಮುಂಡ ಬೇರೆಯಾಗಲಿಲ್ಲ. ಅದಕ್ಕೆಂದೆ ಕಾದು ನಿಂತಿದ್ದ ಮೇಲ್ವರ್ಗದ ನಾಲ್ಕೈದು ಮಂದಿ ಕರಿಯನ ಎದೆ ಮತ್ತು ಕುಂಡಿಗೆ ಜಾಡಿಸಿ ಒದೆಯುತ್ತಿದ್ದರು. ಒದೆತಕ್ಕೆ ಸಿಲುಕಿ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಕರಿಯ, ಹೋತದ ರಕ್ತದೊಂದಿಗೆ ಬೆರೆತು ಹೋಗಿದ್ದ. ನಾಲ್ಕೈದು ಮಂದಿ ಒದೆಯುತ್ತಿದ್ದರೂ ತುಂಡಾಗದೆ ಉಳಿದಿದ್ದ ಭಾಗವನ್ನು ಬೇರ್ಪಡಿಸಲು ಹರಸಾಹಸ ಮುಂದುವರಿಸಿದ್ದ. ‘ನನ್ನ ಮಕ್ಳಾ, ಮಂಕ್ರಿ ಬಾಡ್ ತಿಂತೀರಿ ಒಂದೇ ಏಟಿbeaten-to-deathಗೆ ಹೋತನ್ ಕತ್ತು ಕತ್ರಸಕ್ಕೆ ಆಗಲ್ವಾ? ಒದಿರ್ಲಾ.. ಹಾಕ್ಲಾ ಹೊಲಿ ನನ್ ಮಗಂಗೆ’ ಎಂದು ಸುತ್ತ ನಿಂತಿದ್ದ ಮೇಲ್ವರ್ಗದವರು ಒದೆಯುತ್ತಿದ್ದವರಿಗೆ ಪ್ರಚೋದನೆ ನೀಡಿದರು. ಹೇಗೋ ಹೋತನ ತಲೆ ಮತ್ತು ದೇಹ ಬೇರಾದವು. ನಂತರ ಒದೆಯುವುದು ನಿಂತಿತು. ಮೇಲೆದ್ದ ಕರಿಯನ ಮುಖದಲ್ಲಿ ರಕ್ತ ಅಂಟಿಕೊಂಡಿತ್ತು. ಒಂದು ತಿಂಗಳ ಹಿಂದಷ್ಟೆ ಕರಿಯ ಪಕ್ಕದೂರಿನ ಹೆಣ್ಣು ತಂದು ಮದುವೆಯಾಗಿದ್ದ. ಆಕೆ ಸೇರಿದಂತೆ ಅವರ ಸಂಬಂಧಿಕರು ಅಲ್ಲೆ ಇದ್ದರು. ತನ್ನ ಗಂಡನಿಗೆ ಆದ ಅವಮಾನ ತಡೆಯಲಾರದೆ ಅಕೆ ಕಣ್ಣೀರಿಟ್ಟು ಮನೆಯತ್ತ ಓಡಿದಳು. ಎಲ್ಲರೂ ಸಂಭ್ರದಿಂದ ಜಾತ್ರೆಯತ್ತ ಹೆಜ್ಜೆ ಹಾಕಿದರೆ, ಕರಿಯ ಅವಮಾನ ಸಹಿಸಲು ಸಾಧ್ಯವಾಗದೆ ಜಾತ್ರೆ ಕಡೆ ಮುಖ ಮಾಡಲಿಲ್ಲ.

ಈ ರೀತಿ ಅವಮಾನ ನನ್ನವರಿಗೆ ಮಾಮೂಲಾಗಿತ್ತು. ಆದರೆ ಅದೇಕೋ ಕರಿಯನ ಎದೆ ಮೇಲೆ ಕಾಲಿಟ್ಟ ಮೇಲ್ವರ್ಗದ ದಾಷ್ಟ್ಯ ನನ್ನ ಮನಸ್ಸನ್ನೂ ತೀವ್ರವಾಗಿ ಘಾಸಿಗೊಳಿಸಿತು. ಮುಂದಿನ ವರ್ಷ ಇದಕ್ಕೊಂದು ಇತಿಶ್ರೀ ಹಾಡಲೇಬೇಕೆಂದು ನಿರ್ಧರಿಸಿದೆ. ದಿನ ಕಳೆದು ಜಾತ್ರೆ ದಿನ ಮತ್ತೊಮ್ಮೆ ಬಂದೆ ಬಿಟ್ಟಿತು. ಆ ದಿನ ಹೋತವನ್ನು ಕಡಿಯಲು ಕರಿಯ ಒಪ್ಪಲಿಲ್ಲ. ದಲಿತರಲ್ಲಿ ಹಿರಿಯರೆಲ್ಲ ಸೇರಿ ಒಬ್ಬರನ್ನು ಆ ಕೆಲಸಕ್ಕೆ ನೇಮಿಸಬೇಕಿತ್ತು. ಮನಸಲ್ಲೆ ಒಂದು ನಿರ್ಣಯ ಕೈಗೊಂಡ ನಾನು, ಕತ್ತಿ ಎತ್ತಿಕೊಂಡೆ. ಆದರೆ ಅದಕ್ಕೆ ಅವ್ವ-ಅಪ್ಪ ಸೇರಿ ಯಾರೊಬ್ಬರೂ ಒಪ್ಪಲಿಲ್ಲ. ಕಾಲೇಜಿಗೆ ಹೋಗುವ ಹುಡುಗ ಮೇಲ್ವರ್ಗದವರು ಒದೆಯುವುದನ್ನು ನಾವು ನೋಡಲಾರೆವು ಎಂದರು. ಆದರೆ ಇಲ್ಲ ಈ ಬಾರಿ ನನಗೆ ಅವಕಾಶ ಕೊಡಿ ಎಂದು ಬೇಡಿಕೊಂಡೆ. ಆಗಲಿ ಎಂದು ಎಲ್ಲರೂ ಒಪ್ಪಿಕೊಂಡರು.

ಕತ್ತಿ ಮಸೆದು ಹೋತನ ಮುಂದೆ ನಿಂತು ಯಾವ ದೇವರನ್ನು ಬೇಡದೆ ಮನದಲ್ಲೆ ಒಂದು ನಿರ್ಧಾರ ಮಾಡಿಕೊಂಡೆ. ಮೇಲ್ವರ್ಗದವರು ನನ್ನ ಪಕ್ಕಕ್ಕೆ ಬಂದು ನಿಂತು ಪಂಚೆ ಮೇಲೆತ್ತಿ ಕಟ್ಟಿಕೊಂಡರು. ಒಂದೇ ಏಟಿಗೆ ಹೋತ ಬಲಿಯಾಗದಿದ್ದರೆ ಕತ್ತಿಯನ್ನು ನನ್ನ ಮೇಲೆ ಕಾಲೆತ್ತಿದವರತ್ತ ತಿರಿಗಿಸಲು ಮನಸನ್ನು ಸಜ್ಜು ಮಾಡಿಕೊಂಡೆ. ನಂತರ ಆಗುವ ಪರಿಣಾಮ ಗೊತ್ತಿದ್ದರೂ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಕತ್ತಿಯನ್ನು ಮೇಲಿತ್ತಿ ಹೋತನ ಕುತ್ತಿಗೆಗೆ ಕೊಟ್ಟೆ. ಅದ್ಯಾವ ದುರಾದೃಷ್ಟವೋ ಒಂದೇ ಏಟಿಗೆ ರುಂಡ-ಮುಂಡ ಬೇರಾತು. ನಾನು ಮನದಲ್ಲಿ ಮಾಡಿಕೊಂಡಿದ್ದ ನಿರ್ಣಯವನ್ನು ನಂತರ ಪ್ರಕಟಿಸಿದೆ. ನಿಮ್ಮ ದರ್ಪದ ಕಾಲುಗಳನ್ನು ನನ್ನವರ ಮೇಲೆತ್ತಿದರೆ ಕತ್ತಿ ಏಟು ಬೀಳಲಿವೆ ಎಂದು ಹೇಳಿದೆ. ಈಗಲೂ ಹೋತವನ್ನು ಕಡಿದು ಬಂಡಿ ಮುನ್ನಡೆಸುವ ಪದ್ದತಿ ಇದೆ. ಆದರೆ ಅಂದಿನಿಂದ ನನ್ನವರ ಮೇಲೆ ಕಾಲೆತ್ತುವ ದುಸ್ಸಾಹಸ ಮಾಡಿಲ್ಲ.

ಅನ್ನ ಹಾಕಿದ ‘ತಪ್ಪಿ’ಗೆ ದಂಡ ಕಟ್ಟಿದವರು!

– ಜೀವಿ

ಅದೊಂದು ಪುಟ್ಟ ಗ್ರಾಮ. 350 ಕುಟುಂಬ ವಾಸವಿರುವ ಹಳ್ಳಿ. ಅದರಲ್ಲಿ 25 ಕುಟುಂಬ ದಲಿತರದ್ದು, ಉಳಿದವರು ಮೇಲ್ಜಾತಿಯವರು. ದಲಿತರಿಗೆ ಊರಿನ ದೇಗುಲ ಮತ್ತು ಮೇಲ್ಜಾತಿಯವರ ಮನೆಗಳಿಗೆ ಪ್ರವೇಶ ನಿಷೇಧ ಇದ್ದೇ ಇತ್ತು. ಪಾತ್ರೆ-ಪಗಡೆ ಮುಟ್ಟುವಂತಿರಲಿಲ್ಲ. ಮೇಲ್ಜಾತಿಯವರು ಬಳಸುತ್ತಿದ್ದ ಬಾವಿ ನೀರು ಕೂಡ ದಲಿತರ ಬಾಯಾರಿಕೆ ನೀಗಿಸುತ್ತಿರಲಿಲ್ಲ. ದಲಿತ ಕೇರಿಯ ದೇವರಾಜ ಎಸ್‌ಎಸ್‌ಎಲ್‌ಸಿಯನ್ನು ಎರಡು-ಮೂರು ಕಂತಿನಲ್ಲಿ ಪಾಸು ಮಾಡಿದ್ದ. ಕೇರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಾಲೇಜು ಮೆಟ್ಟಿಲು ಏರಿದ್ದ ಕೀರ್ತಿ ಅವನದಾಗಿತ್ತು. ಪಟ್ಟಣಕ್ಕೆ ಒಟ್ಟಾಗಿ ಕಾಲೇಜಿಗೆ ಹೋಗುತ್ತಿದ್ದ ಕಾರಣ ಅದೇ dalit_pantherಊರಿನ ಮೇಲ್ವರ್ಗದ ಪುಟ್ಟನಂಜ, ದೊರೆ ಮತ್ತು ಶನೇಶ ಜೊತೆ ಸ್ನೇಹ ಬೆಳೆದಿತ್ತು. ಊರಿನಲ್ಲಿ ಅಸ್ಪಶ್ಯತೆ ಆಚರಣೆ ಇದ್ದರೂ ಅದನ್ನೂ ಮೀರಿ ಈ ಮೂವರ ಸ್ನೇಹ ಬೆಳೆದಿತ್ತು. ಪುಟ್ಟನಂಜ, ದೊರೆ ಮತ್ತು ಶನೇಶ ದಲಿತ ಯುವಕ ದೇವರಾಜನ ಮನೆಗೆ ಆಗಾಗ ಬಂದು ಹೋಗುವುದು ಸಾಮಾನ್ಯವಾಗಿತ್ತು.

ಅದೊಂದು ದಿನ ದಲಿತ ಕೇರಿಯಲ್ಲ್ಲಿ ಸಂಭ್ರಮ ಮನೆ ಮಾಡಿತ್ತು. ಗುಂಡಯ್ಯನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಸಂಭ್ರಮ ದಲಿತ ಕೇರಿಯ 25 ಮನೆಯಲ್ಲೂ ಪಾಲು ಪಡೆದಿತ್ತು. ಮಗು ಹುಟ್ಟಿದ ಜಾತಕ ಫಲ ತಿಳಿದು ಅದಕ್ಕೊಂದು ಹೆಸರಿಡಲು ನಿರ್ಧರಿಸಿದ ಗುಂಡಯ್ಯ, ಮರುದಿನ ಹೊತ್ತು ಮೂಡುವ ಮುನ್ನ ಪಕ್ಕದೂರಿನ ಅಯ್ನರ್ ಮನೆ ಬಾಗಿಲಲ್ಲಿ ಕುಳಿತ. ಮಗು ಹುಟ್ಟಿದ ದಿನ, ಗಳಿಗೆ ಎಲ್ಲವನ್ನು ನೋಡಿದ ಅಯ್ನರು ಶನಿವಾರ ದಿನದಂದು ಮಗುವಿಗೆ ರೂಪ ಅಂತ ಹೆಸರಿಡಲು ಆಜ್ಞೆ ಮಾಡಿದರು.

ಮುಂದಿನ ಶನಿವಾರ ಬಂದೇ ಬಿಟ್ಟಿತು, ಹೊತ್ತು ಇಳಿಯಲು ಆರಂಭಿಸುತ್ತಿದ್ದಂತೆ ಮನೆಯ ಮುಂದೆ ಒಲೆ ಹಾಕಿ ಅಡುಗೆ ತಯಾರಿಯಲ್ಲಿ ಗಂಡಸರು ತೊಡಗಿದರು. ಮಹಿಳೆಯರು ಮಕ್ಕಳು ಗುಂಡಯ್ಯನ ಮನೆ ಸೇರಿದರು. ಸೋಬಾನೆ ಪದಗಳು ಸಾಲು ಕಟ್ಟಿ ಬಂದವು. ಕಂಚಿನ ತಟ್ಟೆಯಲ್ಲಿದ್ದ ಸೇರು ಬೆಣ್ಣೆ ಉಂಡೆ ಮಗುವಿನ ಮೂತಿ ಸೇರುತ್ತಿತ್ತು. ಅದು ಖಾಲಿ ಆಗುವ ಹೊತ್ತಿಗೆ ಮಗುವಿನ ಮುಖದ ರೂಪ ಬದಲಾಗಿತ್ತು. ಆದರೆ ರೂಪ ಎಂಬ ಹೆಸರು ನಾಮಕರಣಗೊಂಡಿತ್ತು. ಕೇರಿಯಲ್ಲಿ ಸ್ವಲ್ಪ ದೊಡ್ಡದು ಎನ್ನುವಂತಿದ್ದ ದೇವರಾಜನ ಮನೆಯಲ್ಲಿ ಎಲ್ಲರು ಊಟಕ್ಕೆ ಕುಳಿತರು. ಹೆಂಗಸು-ಮಕ್ಕಳ ಊಟ ಮುಗಿದು ಕೊನೆಯದಾಗಿ ಊರಿನ ಹಿರಿಯರು, ಯುವಕರು ಊಟಕ್ಕೆ ಕುಳಿತರು.

ಅಷ್ಟೊತ್ತಿಗೆ ಅಲ್ಲಿಗೆ ಪುಟ್ಟನಂಜ, ದೊರೆ ಮತ್ತು ಶನೇಶ ಬಂದರು. ಆಗಾಗ ದೇವರಾಜನ ಮನೆಗೆ ಮೂವರು ಸ್ನೇಹಿತರು ಬಂದು ಹೋಗುತ್ತಿದ್ದರಿಂದ ಅದರಲ್ಲಿ ವಿಶೇಷ ಏನು ಇರಲಿಲ್ಲ. ಊಟದ ಸಮಯಕ್ಕೆ ಬಂದ ಕಾರಣಕ್ಕೆ ಬನ್ನಿ ಗೌಡ್ರೆ ಊಟ ಮಾಡಿ ಎಂದು ಸೌಜನ್ಯಕ್ಕೆ ಕೆಲವರು ಯುವಕರು ಕರೆದರು. ಹೊಲೆರ ಮನೆಲಿ ಅವರು ಊಟ ಮಾಡಕಿಲ್ಲ, ಸುಮ್ನೆ ಊಟ ಮಾಡಿ ಎಂದು ಹಿರಿಯರು ಗಧರಿಸಿದರು.

ಮೇಲ್ಜಾತಿಯ ಮೂವರು ಕಾಲೇಜು ಮೆಟ್ಟಿಲೇರಿದ್ದರಿಂದ ಒಂದಿಷ್ಟು ತಿಳುವಳಿಕೆ ಉಳ್ಳವರಂತೆ ಮಾತನಾಡಿ, ಊಟ ಮಾಡಿದರೆ ತಪ್ಪೇನು ಇಲ್ಲ, ನೀವು ಬಡಿಸಿದರೆ ಊಟ ಮಾಡಲು ನಾವು ಸಿದ್ದ ಎಂದರು. ಅವರೇ ಊಟ ಮಾಡ್ತೀವಿ ಅಂದ್ಮೇಲೆ ನಮ್ದೇನು ತಕರಾರು ಎಂದುಕೊಂಡು ಬನ್ನಿ ಸ್ವಾಮಿ ಎಂದು ಕೈನೀರು ಕೊಟ್ಟು ಊಟ ಬಡಿಸೇ ಬಿಟ್ಟರು. ದೇವರಾಜನನ್ನು ನೋಡಲು ಬಂದ ಮೂವರು ಮೇಲ್ಜಾತಿ ದಲಿತ ಕೇರಿಯ ಮನೇಲಿ ಮೊದಲ ಬಾರಿಗೆ ಊಟ ಮಾಡಿ ತಮ್ಮ ಮನೆ ಸೇರಿಕೊಂಡರು. ಈ ವಿಷಯವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದ ದಲಿತರು ತಮ್ಮಷ್ಟಕ್ಕೆ ತಾವು ಸುಮ್ಮನಾದರು.

ದಲಿತ ಕೇರಿಯ ಲಕ್ಕಜ್ಜನ ಮಗ ಸ್ವಾಮಿಗೆ ಆಗಿನ್ನು ಮೀಸೆ ಚಿಗುರುತ್ತಿದ್ದ ಕಾಲ. ಅಂಗನವಾಡಿಯಲ್ಲೆ ಓದು ನಿಲ್ಲಿಸಿದ್ದ ಸ್ವಾಮಿ, ಗೌಡರ ಮನೆ dalit_panther2ಜೀತಕ್ಕೆ ಸೇರಿ ಸದ್ಯ ಮುಕ್ತಿ ಹೊಂದಿ ಕೂಲಿ ಕೆಲಸ ಮಾಡಿಕೊಂಡಿದ್ದ. ಏತ ನೀರಾವರಿ ಯೋಜನೆಯ ಕಾಲುವೆ ತೆಗೆಯುವ ಕೆಲಸ ಊರಿನ ಜನರ ಕೂಲಿಗೆ ಆಧಾರವಾಗಿತ್ತು. ಕೆಲಸಕ್ಕೆ ರಜೆ ಇದ್ದ ವೇಳೆ ಮೇಲ್ಜಾತಿಯ ಡೊಳ್ಳಪ್ಪನ ಜೊತೆ ಕುರಿ ಮೇಯಿಸಲು ಬೆಟ್ಟಕ್ಕೆ ಹೋಗುತ್ತಿದ್ದ. ನಾಮಕರಣ ಕಾರ್ಯ ಮುಗಿದು ಮೂರ‌್ನಾಲ್ಕು ದಿನ ಕಳೆದಿತ್ತು. ಬೆಟ್ಟದಲ್ಲಿ ಕುರಿಗಳ ಜೊತೆ ಸುತ್ತಾಡಿ ಬಳಲಿದ್ದ ಸ್ವಾಮಿ, ಡೊಳ್ಳಪ್ಪನ ಟಿಫನ್ ಬಾಕ್ಸ್‌ನಲ್ಲಿ ತಂದಿದ್ದ ನೀರು ಕೇಳಿದ.

ಟಿಫನ್ ಬಾಕ್ಸ್‌ನಲ್ಲಿ ಮೊದಲೇ ನೀರು ಕಡಿಮೆ ಇತ್ತು. ಬಾಕ್ಸ್ ಓಪನ್ ಮಾಡಿದ ಡೊಳ್ಳಪ್ಪ ಎರಡೂ ಕೈ ಹಿಡಿ ಎಂದ, ಬಾಕ್ಸ್ ಸ್ವಾಮಿ ದೇಹಕ್ಕೆ ಸೋಕದಂತೆ ಮೇಲಿಂದಲೇ ನೀರನ್ನು ಕೈಗೆ ಹನಿಕಿಸಿದ. ಅದರಲ್ಲಿ ಸ್ವಲ್ಪ ಕೆಳಕ್ಕೆ ಬಿದ್ದು ಒಂದೆರಡು ತೊಟ್ಟನ್ನು ಮಾತ್ರ ಸ್ವಾಮಿ ನಾಲಿಗೆ ಹೀರಿ ಕೊಂಡಿತು. ಬಾಯಾರಿ ಬೆಂಡಾಗಿದ್ದ ಸ್ವಾಮಿ, ನನ್ನ ಕೈಗೆ ಬಾಕ್ಸ್ ಕೊಟ್ಟಿದ್ದರೆ ಒಂದೆರಡು ಗುಟುಕು ನೀರಾದರೂ ಕುಡಿಯುತ್ತಿದ್ದೆ ಎಂದ. ಡೊಳ್ಳಪ್ಪನ ಕೋಪ ನೆತ್ತಿಗೇರಿತು ಓ..ಹೋ.. ನಿಮ್ದು ಜಾಸ್ತಿ ಆಯ್ತು, ಯಾಕೆ,,,? ಮನೆಗೆ ಬಂದ್ಬಿಡು, ಒಳಗ್ ಕರೆದು ಹಿಟ್ ಇಕ್ತೀನಿ. ನನ್ನ ಮಕ್ಳಾ ಜಾಸ್ತಿ ಆಯ್ತು ನಿಮ್ದು ಎಂದು ಸಿಡಿಮಿಡಿಗೊಂಡ.

ಅಯ್ಯ ಶಿವನೆ ನೀರ್ ಕೇಳಿದ್ದಕ್ಕೆ ಇಷ್ಟ್ಯಾಕ್ ಸಿಟ್ಟಾಗ್ತಿ ರಾಜಣ್ಣ, ಬಾಕ್ಸ್ ಮುಟ್ಟಿದ್ರೆ ಏನಾಪ್ಪ ಆಯ್ತದೆ. ಮೊನ್ನ ನಮ್ ಗುಂಡಯ್ಯನ ಮನೆ ನಾಮಕರಣದಲ್ಲಿ ಪುಟ್ನಂಜ, ಶನೇಶ ಊಟನೇ ಮಾಡಿದ್ರು. ಅವರಿಗೇನಾಗಿದೆ? ಚೆನ್ನಾಗೇ ಅವ್ರೆ ಎಂದ ಸ್ವಾಮಿ.

ಎಲ್ಲೋ ಕುರಿಮಂದೆ ಕಡೆ ಗಮನ ಇಟ್ಟಿದ್ದ ಡೊಳ್ಳಪ್ಪ, ಒಮ್ಮೆಲೆ ತಿರುಗಿ ಏನು!? ಪುಟ್ನಂಜ ಗುಂಡನ ಮನೆ ಕಾರ್ಯದಲ್ಲಿ ಊಟ ಮಾಡಿದ್ನಾ? ಎಂದು ಗಂಭೀರವಾಗಿ ಕೇಳಿದ. ಪಿಸುಮಾತಿನಲ್ಲಿ ಸ್ವಾಮಿಯನ್ನು ಹತ್ತಿರಕ್ಕೆ ಕರೆದು ಅಂದು ನಡೆದ ಊಟದ ಪ್ರಸಂಗವನ್ನು ಕೇಳಿಕೊಂಡ. ಇದರಿಂದಾಗುವ ಅನಾಹುತ ಅರಿಯದ ಸ್ವಾಮಿ ಎಲ್ಲವನ್ನು ಕಡ್ಡಿಲಿ ಬರೆದಂತೆ ಹೇಳಿಬಿಟ್ಟ.

ಸಂಜೆ ಕುರಿಗಳನ್ನು ಕೊಟ್ಟಿಗೆಗೆ ಮುಟ್ಟಿಸಿ ಊರ ಮುಂದಿನ ಬಸವಣ್ಣನ ಗುಡಿ ಮುಂದೆ ಡೊಳ್ಳಪ್ಪ ಬಂದು ಕುಳಿತ. ಅಲ್ಲಿ ಕುಳಿತಿದ್ದ ಊರಿನ ಒಂದಿಬ್ಬರು ಹಿರಿಯರ ಕಿವಿಗೆ ಹೊಲೆರ ಮನೆಲಿ ಮೇಲ್ಜಾತಿಯ ಹುಡುಗರು ಊಟ ಮಾಡಿದ ವಿಷಯವನ್ನು ಊದಿದ. ನಾಳೆ ಬೆಳಕು ಹರಿದು ಸೂರ್ಯ ಮುಳುಗುವ ಹೊತ್ತಿಗೆ ಊರಿನ ಎಲ್ಲ ಮೇಲ್ಜಾತಿಯವರ ಕಿವಿಗೂ ವಿಷಯ ಬಿತ್ತು.

ಮರುದಿನ ರಾತ್ರಿ ಬಸವಣ್ಣನ ಗುಡಿ ಮುಂದೆ ಪಂಚಾಯ್ತಿ ಸೇರಿಕೊಂಡಿತು. ಕರೀರ‌್ಲಾ ಹೊಲಿ ನನ್ನ ಮಕ್ಕಳ್ನಾ ಎಂದು ಹುಕ್ಕುಂ ಕೂಡ ಆಯಿತು. ಅಷ್ಟೊತ್ತಿಗಾಗಲೇ ಊಟದ ವಿಷಯ ಎಲ್ಲರಿಗೂ ಗೊತ್ತಾಗಿ ಕೆಂಡ ಕಾರುತ್ತಿರುವ ವಿಷಯ ದಲಿತರಿಗೂ ತಿಳಿದಿತ್ತು. ರಾತ್ರಿ ಪಂಚಾಯ್ತಿ ಇರುವ ವಿಷಯ ತಿಳಿದು ಕೆಲವರು ಊರು ಖಾಲಿ ಮಾಡುವ ಮಾತನಾಡಿದ್ದರು. ಆದರೆ ಎಲ್ಲೇ ಹೋದರೂ ನಾಳೆ ಊರಿಗೆ ಬರಲೇಬೇಕು. ಬಂದ ನಂತರವೂ ಇವರು ಬಿಡುವ ಜನ ಅಲ್ಲ ಎಂದು ಧೈರ್ಯ ಮಾಡಿ ಪಂಚಾಯ್ತಿ ಮುಂದೆ ಹಾಜರಾದರು.

ಪಂಚಾಯ್ತಿ ಹಿರಿಯ ಕರಿಗೌಡ, ರಂಗಪ್ಪಣ್ಣ ಸೇರಿದಂತೆ ಎಲ್ಲರೂ ಜಮಾಯಿಸಿದ್ದರು. ಅಪರಾಧಿ ಸ್ಥಾನದಲ್ಲಿ ದಲಿತರು ಕೂಡ ಕೈಕಟ್ಟಿ ನಿಂತಿದ್ದರು. ಕರೀರ‌್ಲಾ ಆ ಗುಂಡನ್ನ ಎಂದು ಕರೀಗೌಡ ಆಜ್ಞೆ ಮಾಡಿದ. ಎಲ್ಲೋ ಮರೆಯಲ್ಲಿ ನಿಂತಿದ್ದ ಗುಂಡಯ್ಯ ನಿಂತಲ್ಲೇ ಗೌಡ್ರೇ ಇಲ್ಲೇ ಇದ್ದೀನಿ ಎಂದು ಮೆಲು ಧ್ವನಿಯಲ್ಲಿ ಹೇಳಿದ. ಅಲ್ಲೇನ್ಲಾ ಮಾಡ್ತಿದ್ದೀಯಾ ಸಂಪ್ಲಲ್ಲಿ, ಬಾರ‌್ಲಾ ಮುಂದ್ಕೆ ಎಂದು ಕರೀಗೌಡ ಗದರಿಸಿದ ಕೂಡಲೇ ಒಂದು ಹೆಜ್ಜೆ ಮುಂದೆ ಬಂದು ನಿಂತ ಗುಂಡಯ್ಯ, ಹೇಳಿ ಗೌಡ್ರೆ? ಎಂದು ಮತ್ತದೆ ಮೆಲುಧ್ವನಿಯಲ್ಲೇ ಕೇಳಿದ.

ಯಾಕ್ಲಾ ಉಸ್ರು ನಿಂತೋಯ್ತ? ನಮ್ ಹುಡುಗ್ರಗೆ ಊಟ ಇಕ್ಕಾಬೇಕಾದ್ರೆ ಬುದ್ದಿ ಸತ್ತೋಗಿತ್ತಾ?, ಎಂದು ಕೂತಲ್ಲೇ ಕೂಗಾಡಿದ. ಮುಂದೆ ಕುಳಿತಿದ್ದ ಕೆಲ ಮೇಲ್ಜಾತಿ ಯುವಕರು ಹಿಡಿದು ಕಂಬಕ್ಕೆ ಕಟ್ಟಿ ನಾಲ್ಕು ಕೊಟ್ರೆ ಸರಿ ಹೊಯ್ತರೆ, ಬಾಲ ಈಗ್ಲೇ ಕತ್ತರಿಸ್ಬೇಕು, ಇಲ್ದಿದ್ರೆ ಜಾತಿ ಕೆಡಿಸೊ ಕೆಲ್ಸ ಮಾಡ್ತಲೇ ಇರ‌್ತಾರೆ ಎಂದು ಸಲಹೆ ಕೊಟ್ಟರು.

ಮಾಡಬಾರದ ತಪ್ಪು ಮಾಡಿದವರ ರೀತಿಯಲ್ಲಿ ಕೈಕಟ್ಟಿ ತಲೆ ಬಗ್ಗಿಸಿ ನಿಂತಿದ್ದ ದಲಿತರು, ಇಂದು ವಾಪಸ್ ಮನೆಗೆ ಹೋಗುವುದು ಸಾಧ್ಯವಿಲ್ಲ ಎಂದು ಮನದಲ್ಲೇ ಅಂದುಕೊಂಡರು. ಮೇಲ್ಜಾತಿ ಹುಡುಗರನ್ನ ಹೊಲಗೇರಿಗೆ ಕರ‌್ಕೊಂಡ್ ಹೋಗಿದ್ಯಾರು?, ಊಟಕ್ಕೆ ಕರದಿದ್ಯಾರು?, ಎಲೆ ಕೊಟ್ಟಿದ್ಯಾರು? ಕೈನೀರು ಕೊಟ್ಟಿದ್ಯಾರು?, ಮುದ್ದೆ ಇಕ್ಕಿದ್ಯಾರು?, ಸಾರು ಬಿಟ್ಟಿದ್ಯಾರು?, ಎಲೆ ಎತ್ತಿದ್ಯಾರು? ಎಲ್ಲರು ಮುಂದೆ ಬಂದು ನಿಲ್ಲಬೇಕು ಎಂದು ಕರೀಗೌಡ ಆಜ್ಞೆ ಮಾಡಿದ. ಸಾಲಾಗಿ ಬಂದು ನಿಂತ ದಲಿತರು, ಎನ್ ಮಾಡ್ಬೇಕು ಎಂಬುದು ತಿಳಿಯದೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಮೇಲ್ಜಾತಿ ಹುಡುಗರ ಸ್ನೇಹ ಮಾಡಿದ್ದ ದೇವರಾಜನ ಮೇಲೆ ಎಲ್ಲರು ಕೆಂಗಣ್ಣು ಬೀರಿದರು.

ನೋಡು ಹೆಂಗ್ ನಿಂತವ್ರೆ, ನಮ್ ಹುಡುಗ್ರಿಗೆ ಉಣ್ಣಕ್ ಇಕ್ಕಿ, ಜಾತಿ ಕೆಡ್ಸಿ, ಈಗ ಏನು ಗೊತ್ತಿಲ್ಲದ ಮಳ್ ನನ್ ಮಕ್ಳು ತರ ನಿಂತವ್ರೆ ಎಂದ ಕರೀಗೌಡ, ಈ ಸಂದರ್ಭದಲ್ಲಿ ’ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎಂಬಂತೆ ಇದ್ದವರೆಲ್ಲಾ ಹೀನಾಮಾನವಾಗಿ ನಿಂದಿಸಿದರು.

ದಲಿತರ ಮನೆಯ ಮಹಿಳೆಯರು, ಮಕ್ಕಳು, ಮುದುಕರು-ಮೋಟರು ಎಲ್ಲರೂ ಗುಡಿಯ ಹಿಂಭಾಗದ ಮೂಲೆಯ ಮರೆಯಲ್ಲೇ ಅಸಹಾಯಕರಾಗಿ ನಿಂತಿದ್ದರು. ಮಹಿಳೆಯರು ಸೀರೆ ಸೆರಗು ಬಾಯಿಗೆ ಕೊಟ್ಟು ಗಳಗಳನೆ ಕಣ್ಣೀರು ಸುರಿಸುತ್ತಿದ್ದರು. ನಮ್ಮದು ತಪ್ಪಾಯ್ತು ಗೌಡ್ರೆ, ಇನ್ಮುಂದೆ ಜಲ್ಮ ಕೂಯ್ದ್ರು ಇಂತಾ ಕೆಲಸ ಮಾಡಕಿಲ್ಲ. ಮಾಡಿರೊ ತಪ್ಪಿಗೆ ನೀವ್ ಕೊಟ್ಟಿದ್ ಶಿಕ್ಷೆ ಅನುಭವಿಸ್ತೀವಿ, ಇದೊಂದ್ ಸರಿ ಕ್ಷಮಿಸಿಬಿಡಿ ಗೌಡ್ರೆ ಎಂದು ಗುಂಡಯ್ಯ ಬೇಡಿಕೊಂಡ.

ನಮ್ ಮನೆ ಹುಡುಗ್ರಗೆ ಊಟ ಇಕ್ಕಿ ಊರು-ಹೊಲಗೇರಿ ಒಂದ್ ಮಾಡೋಕ್ ಹೊಂಟವ್ರೆ, ಈ ನನ್ ಮಕ್ಳಾ ಹಿಂಗೆ ಬಿಟ್ರೆ ನಾಳೆ ನಮ್ ಮನೆ ಹೆಣ್ ಕೇಳ್ತರೆ. ದಂಡ ಹಾಕಿ ಊರಿಂದ ಹೊರಿಕಾಕ್ಬೇಕು ಎಂದು ಜನರ ನಡುವಿಂದ ಒಬ್ಬ ಸಲಹೆ ಕೊಟ್ಟ. ದಂಡ ಹಾಕ್ದೆ ಬಿಡಾಕ್ ಆಯ್ತದ್, ಎಂದು ಪಂಚಾಯ್ತಿದಾರರೇ ಗುಟ್ಟಾಗಿ ಮಾತನಾಡಿಕೊಂಡು ತೀರ್ಪು ಪ್ರಕಟಿಸಿದರು. ಜಾತಿ ಕೆಡಿಸುವ ಕೆಲಸ ಮಾಡಿರುವ ಪ್ರತಿಯೊಬ್ಬರೂ ತಲಾ 1000 ದಂಡ ಕಟ್ಟಬೇಕು. ಅದು ನಿಂತ ಸ್ಥಳದಲ್ಲೇ, ಎಂದು ಆದೇಶ ನೀಡಿದರು. ಅಲ್ಲದೇ ಊರಿನ ಯಾವುದೇ ಅಂಗಡಿಯಲ್ಲಿ ಬೀಡಿ-ಬೆಂಕಿಪಟ್ಟಣದ ಆದಿಯಾಗಿ ಏನನ್ನೂ ಕೊಡಬಾರದು ಎಂದು ಫಾರ್ಮಾನು ಹೊರಡಿಸಿದರು.

ದಲಿತರ ಎದೆ ದಸಕ್ ಎಂದಂತಾಯ್ತು. 1000 ರೂ. ದಂಡ ಕಟ್ಟಲು ಭೂಮಾಲೀಕನ ಮನೇಲಿ ಕನಿಷ್ಠ 2 ವರ್ಷ ಜೀತ ಮಾಡ್ಬೇಕು. ಹೊತ್ತಿನ ಊಟಕ್ಕೇ ಗತಿ ಇಲ್ಲದ ಸ್ಥಿತಿಯಲ್ಲಿ ನಿಂತ ಸ್ಥಳದಲ್ಲೆ 1000 ರೂ. ದಂಡ ಪಾವತಿಸುವುದು dalit_panther1ಅಸಾಧ್ಯದ ಮಾತು.

ಅದಗಲೇ ಜೀತಕ್ಕೆ ಸೇರಿಕೊಂಡಿದ್ದ ದಲಿತರ ಮಾಲೀಕರು ಕೂಡ ಅಲ್ಲೇ ಇದ್ದರು. ಅವರ ಕಾಲಿಗೆ ಬಿದ್ದು ನನ್ನನ್ನು ಕಾಪಾಡಿ ಎಂದು ಕೆಲವರು ಬೇಡಿಕೊಂಡರು. ಮತ್ತೆ ಕೆಲವರು ತಮ್ಮ ಮನೆಯ ದನಕರುಗಳನ್ನು ಹಿಡಿದು ತಂದು ಅಲ್ಲೇ ಮೇರ್ಲ್ವದವರಿಗೆ ಒಪ್ಪಿಸಿದರು. ದಲಿತ ಮಹಿಳೆಯರ ಕಿವಿ-ಮೂಗಿನಲ್ಲಿದ್ದ ಒಡವೆಗಳನ್ನು ಬಿಚ್ಚಿಕೊಟ್ಟರು. ಹೀಗೆ ಒಬ್ಬರು ಒಂದೊಂದು ರೀತಿಯಲ್ಲಿ ನಿಂತಲ್ಲೇ ದಂಡ ಕಟ್ಟಿದರು. ದನ-ಕರುಗಳು, ಒಡವೆ ಏನೇನು ಇಲ್ಲದ ಇನ್ನೂ ಕೆಲವರು ನಾನು ಮತ್ತು ನನ್ನ ಮಗ ಜೀತಕ್ಕೆ ಸೇರ‌್ತೀವಿ ಎಂದು ಕೆಲ ಭೂ ಮಾಲೀಕರ ಬಳಿ ಹಲುಬಿದರು. ಆದರೆ ಮೇಲ್ವರ್ಗದ ಯುವಕರಿಗೆ ಊಟ ಹಾಕಿದ ತಪ್ಪಿಗೆ ಊರಿನಿಂದ ಬಹಿಷ್ಕಾರಕ್ಕೆ ಒಳಗಾಗಿರುವ ಕಾರಣಕ್ಕೆ ಜೀತಕ್ಕೆ ಸೇರಿಸಿಕೊಳ್ಳಲು ಸಹ ಒಪ್ಪಲಿಲ್ಲ. ಅಪರಾಧಿ ಸ್ಥಾನದಲ್ಲಿ ಇಲ್ಲದ ದಲಿತರು ಕೂಡ ದನಕರುಗಳನ್ನು ಮೇಲ್ವರ್ಗದವರಿಗೆ ಒಪ್ಪಿಸಿ ದಂಡದ ಹಣ ಪಾವತಿ ಮಾಡಿ ಸದ್ಯದ ಸೆರೆ ಬಿಡಿಸಿಕೊಂಡರು.

ದಂಡದ ಹಣದಲ್ಲೇ ದಲಿತ ಕೇರಿಯಲ್ಲಿ ಊಟ ಮಾಡಿ ಜಾತಿ ಕೆಡಿಸಿಕೊಂಡಿದ್ದ ಹುಡುಗರಿಗೆ ಹಣ ಕೊಡಲಾಯಿತು. ಧರ್ಮಸ್ಥಳಕ್ಕೆ ಹೋಗಿ ಹೊಳೇಲಿ ಸ್ನಾನ ಮಾಡಿ ಪೂಜೆ ಮಾಡಿಸಿ ಮೈಲಿಗೆ ತೊಳೆದುಕೊಂಡು ಬನ್ನಿ ಎಂದು ಪಂಚಾಯ್ತಿ ಪ್ರಮುಖರು ಆದೇಶ ನೀಡಿದರು.

ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ ಹೊಲೇರಿಗೆ ಬುದ್ದಿ ಕಲಿಸಿದ್ವಿ ಎಂದು ಮೇಲ್ವರ್ಗದವರು ಬೀಗಿಕೊಂಡು ಮನೆ ಸೇರಿಕೊಂಡರೆ, ಊಟ ಹಾಕಿದ ತಪ್ಪಿಗೆ ಶಿಕ್ಷೆ ಪಡೆದು ಕಣ್ಣಲ್ಲಿ ನೀರು, ಎದೆಯಲ್ಲಿ ದುಃಖ ತುಂಬಿಕೊಂಡ ದಲಿತರು ತಮ್ಮ ಕೇರಿಯತ್ತ ಹೆಜ್ಜೆ ಹಾಕಿದರು.

(ದಂಡ ಮತ್ತು ಬಹಿಷ್ಕಾರದ ನಂತರ ಏನಾಯಿತು? ಅಂದಿನ ಪ್ರಭಾವಿ ಸಚಿವರು ಮಾಡಿದ್ದೇನು? ಮುಂದಿನ ಭಾಗದಲ್ಲಿ.)

ಬಾಡಿಗೆ ಮನೆ ಖಾಲಿ ಇದೆ, ಆದರೆ ಅದು ‘ಎಲ್ಲರಿಗಲ್ಲ’!!

– ಜೀವಿ.

ಮನೆ ಖಾಲಿ ಇದೆ ಎಂಬ ಬೋರ್ಡ್ ಬೀದಿ ಬೀದಿಗಳಲ್ಲಿ ನೇತಾಡುತ್ತಿವೆ. ಆದರೆ ಆದರಲ್ಲಿ ಬಹುತೇಕ ಮನೆಗಳಲ್ಲಿ ವಾಸಿಸಲು ದಲಿತರು ಅನರ್ಹರು!

ಹೌದು, ಇದು ಕಟುಸತ್ಯ. ಆದರೆ ಸುಳ್ಳು, ಈ ಪರಿಸ್ಥಿತಿ ಈಗ ಇಲ್ಲ ಎಂದು ವಾದಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ನಾನೊಬ್ಬ ದಲಿತ ಎಂದು ಹೇಳಿಕೊಂಡು ಬಾಡಿಗೆ ಮನೆ ಪಡೆಯದು ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗೇ ಗೊತ್ತು. ’ಎಷ್ಟೇ ಒಳ್ಳೆಯವರಾದರೂ ಹೊಲೆ-ಮಾದಿಗರಿಗೆ ಮನೆ ಕೊಡುವುದಿಲ್ಲ’ ಎಂದು ಕಡ್ಡಿ ತುಂಡಾದಂತೆ ಮಾಲೀಕರು ಹೇಳಿದಾಗ ಕಣ್ಣಲ್ಲಿ ನೀರು ತುಂಬಿಕೊಂಡರೂ, ಅವರಿಗೆ ಗೊತ್ತಾಗದಂತೆ ತಲೆ ತಗ್ಗಿಸಿ ವಾಪಸ್ ಬರದೆ ಬೇರೆ ದಾರಿ ಇಲ್ಲ.

ಸ್ವತಃ ನಾನು ಕಂಡು ಅನುಭವಿಸಿದ ಉದಾಹರಣೆ ಇಲ್ಲಿದೆ. ನಾನಾಗ ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ. ಹಾಸ್ಟೆಲ್‌ನಲ್ಲಿ ಹಾಸ್ಟೆಲ್ ಜೀವನದ ಏಳನೇ ವರ್ಷ. ನನ್ನ ಭಾವ ಸರ್ಕಾರಿ ಕಾಲೇಜಿನಲ್ಲಿ ಅಟೆಂಡರ್ ಆಗಿದ್ದಾರೆ. ಅಕ್ಕ ಮತ್ತು ಮೂರು ಮಕ್ಕಳು ಸೇರಿ ಐದು ಮಂದಿಯ ಕುಟುಂಬ. ರಿಂಗ್ ರಸ್ತೆ ಬಳಿಯ ಮನೆಯೊಂದರಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆ ಮನೆಯ ಮಾಲೀಕರು OLYMPUS DIGITAL CAMERAಕೂಡ ದಲಿತರೇ ಆಗಿದ್ದರು. ಅಡುಗೆ ಮನೆ, ಬಚ್ಚಲು ಮತ್ತು ಟಾಯ್ಲೆಟ್ ಅಟ್ಯಾಚ್ ಇರುವ ಹಾಗು ಒಂದು ಬೆಡ್ ರೂಮ್ ಕೂಡ ಇರದ ಸಣ್ಣ ಮನೆ. ಮೂರ‌್ನಾಲ್ಕು ವರ್ಷದ ಅದೇ ಮನೆಯಲ್ಲಿ ಜೀವನ ಸಾಗಿತ್ತು. ಬಾಡಿಗೆ ಹೆಚ್ಚಳದ ವಿಚಾರಕ್ಕೆ ಮಾಲೀಕರ ನಡುವೆ ಸಣ್ಣದೊಂದು ಮನಸ್ತಾಪ ಏರ್ಪಟ್ಟಿತ್ತು.

ಹೆಚ್ಚು ಕಡಿಮೆ ನಾಲ್ಕು ವರ್ಷ ಆಗಿದ್ದರಿಂದ ಬೇರೆ ಮನೆ ಹುಡುಕುವ ಆಲೋಚನೆಯನ್ನು ಭಾವ ಮಾಡಿದ್ದರು. ಹುಡುಕಾಟ ಮುಂದುವರೆದಿತ್ತು, ಎಷ್ಟೋ ದಿನಗಳ ನಂತರ ಭಾವನ ಸ್ನೇಹಿತರೊಬ್ಬರು ಪಕ್ಕದ ಬಡಾವಣೆಯಲ್ಲಿ ಮನೆಯೊಂದನ್ನು ಹುಡುಕಿಕೊಟ್ಟರು. ನಾಲ್ಕು ಮನೆಗಳು ಸಾಲಾಗಿರುವ ಹೆಂಚಿನ ಮನೆ, ಅದರಲ್ಲಿ ಒಂದು ಮಾತ್ರ ಖಾಲಿ ಇತ್ತು. ಉಳಿದ ಮೂರು ಮನೆ ಭರ್ತಿಯಾಗಿದ್ದವು. ಒಂದರಲ್ಲಿ ಮನೆ ಮಾಲೀಕರು ಕೂಡ ವಾಸವಿದ್ದರು.

ಅಕ್ಕಳನ್ನು ಕರೆದೊಯ್ದು ಮನೆ ನೋಡಿಕೊಂಡ ಬಂದ ಭಾವ, ಒಪ್ಪಂದದ ಮಾತುಕತೆಗೆ ತಮ್ಮ ಸ್ನೇಹಿತನೊಂದಿಗೆ ತೆರಳಿದರು.
’ಜಾತಿ ವಿಚಾರ ಹೇಳಿದ್ದೀಯ’ ಎಂದು ಭಾವ ತನ್ನ ಸ್ನೇಹಿತನ ಕಿವಿಯಲ್ಲಿ ಕೇಳಿದರು. ’ಓನರ್ ತುಂಬಾ ಒಳ್ಳೆಯವರು ನನಗೆ ಸಾಕಷ್ಟು ವರ್ಷದಿಂದ ಗೊತ್ತಿರುವವವರು. ಜಾತಿಬೇಧ ಮಾಡುವ ಜನ ಅಲ್ಲ ನೀನು ಸುಮ್ಮನಿರು’ ಎಂದು ಭಾವನ ಸ್ನೇಹಿತ ಹೇಳಿದವರೇ ಮಾಸಿಕ ಬಾಡಿಗೆ ಫಿಕ್ಸ್ ಮಾಡಿಸಿ ಅಡ್ವಾನ್ಸ್ ಕೊಡಿಸಿದರು.

ನಂತರದ ಭಾನುವಾರ ಮನೆ ಶಿಫ್ಟ್ ಮಾಡುವ ದಿನ ನಿಗದಿಯಾಯಿತು. ಎರಡು ದಿನ ಮುನ್ನವೇ ಗಂಟು ಮೂಟೆ ಕಟ್ಟುವ ಕೆಲಸದಲ್ಲಿ ಅಕ್ಕ ನಿರತಳಾಗಿದ್ದಳು. ಭಾನುವಾರ ಬಂದೇ ಬಿಟ್ಟಿತು, ನಾನು ಕೂಡ ಮೂವರು ಸ್ನೇಹಿತರೊಂದಿಗೆ ಹೋಗಿದ್ದೆ.
ಸಾಮಾನು-ಸರಂಜಾಮುಗಳನ್ನು ಮೂಟೆ ಕಟ್ಟಿ ಗಾಡಿಯೊಂದರಲ್ಲಿ ತುಂಬಿಕೊಂಡು ಹೊಸ ಮನೆ ತಲುಪಿದೆವು. ಅಕ್ಕ ಸಡಗರದಿಂದ ಹೊಸ ಮನೆಯಲ್ಲಿ ಹಾಲು ಉಕ್ಕಿಸುವ ಪೂಜೆ ಮಾಡಲು ಸಜ್ಜಾದಳು. ನಾಲ್ಕು ಮನೆಗೆ ಒಂದೇ ಸಂಪಿನಿಂದ(ಟ್ಯಾಂಕ್) ನೀರು ಪಡೆಯಬೇಕಿತ್ತು. ನೀರು ತಂದು ಮನೆ ತೊಳೆದು, ಸಿಂಗಾರ ಮಾಡುವ ಕೆಲಸದಲ್ಲಿ ಅಕ್ಕ ಮತ್ತು ನಾನು ನಿರತರಾದೆವು.
ನೀರು ತರಲು ಹೋದ ಸಂದರ್ಭದಲ್ಲೇ ಅಕ್ಕನಿಗೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಹಿಳೆ ಪರಿಚ ಮಾಡಿಕೊಂಡರು. ’ಇದಕ್ಕೂ ಮೊದಲು ಎಲ್ಲಿ ವಾಸಿವಿದ್ದಿರಿ?, ನಿಮ್ಮ ಎಜಮಾನ್ರು ಕೆಲಸ ಏನು? ಎಂದು ಪ್ರಶ್ನೆ ಮಾಡಿದ ಆ ಮಹಿಳೆ, ಕೊನೆಯದಾಗಿ ಜಾತಿ ಕೇಳುವುದನ್ನು ಮರೆಯಲಿಲ್ಲ. ಎಲ್ಲವನ್ನು ನೇರವಾಗಿ ಉತ್ತರಿಸಿದ ಅಕ್ಕ, ಜಾತಿ ವಿಷಯ ಬಂದಾಗ ಕೊಂಚ ಮುಜುಗರದಿಂದ ಸಣ್ಣ ಧ್ವನಿಯಲ್ಲಿ ’ಎಸ್ಸಿ’ ಎಂದು ಉತ್ತರ ಕೊಟ್ಟಳು.

ಮನೆಯೊಳಗೆ ಬಂದೊಡನೆ ಭಾವನ ಬಳಿ ವಿಷಯ ಹೇಳಿದಳು. ’ನೀನೇನು ಸುಳ್ಳು ಹೇಳಿಲ್ಲ ತಾನೇ, ಒಂದು ಬಾರಿ ಜಾತಿ ಸುಳ್ಳು ಹೇಳಿದರೆ, ಅದನ್ನು ಮರೆಮಾಚಲು ನೂರು ಸುಳ್ಳು ಹೇಳಬೇಕಾಗುತ್ತದೆ’ ಎಂದು ಭಾವ ಎಚ್ಚರಿಸಿದರು. ಅದಕ್ಕೆ ಅಕ್ಕ, ಇಲ್ಲ ನಾನು ನಿಜ ಹೇಳಿದ್ದೀನಿ ಎಂದಳು.

ಅಕ್ಕ ಸ್ಟವ್ ಹಚ್ಚಿ, ಹಾಲು ಉಕ್ಕಿಸಿ ಸಕ್ಕರೆ ಬೆರೆಸಿ ಎಲ್ಲರಿಗು ಕೊಟ್ಟಳು. ಹಾಲು ಕುಡಿದ ನಂತರ ವಸ್ತುಗಳನ್ನು ಜೋಡಿಸಲು ನಾನು ಮrentತ್ತು ನನ್ನ ಸ್ನೇಹಿತರು ತಯಾರಾದೆವು. ಅಷ್ಟರಲ್ಲಿ ಮನೆಯ ಮಾಲೀಕರ ಪತ್ನಿ ಒಳ ಬಂದಳು.

ಸ್ವಲ್ಪ ತಡಿಯಪ್ಪ, ಚೀಲಗಳನ್ನು ಬಿಚ್ಚಬೇಡ ಎಂದು ಆಜ್ಞೆ ಮಾಡಿದರು. ನಾನು ಭಾವನ ಮುಖ ನೋಡಿದೆ. ’ಯಾಕೆ ಮೇಡಂ, ಏನಾಯ್ತು’ ಎಂದು ಭಾವ ಗೌರವದಿಂದಲೇ ಪ್ರಶ್ನೆ ಮಾಡಿದರು. ಅದಕ್ಕೆ ದರ್ಪದಿಂದ ಉತ್ತರ ನೀಡಿದ ಮನೆಯ ಮಾಲೀಕನ ಪತ್ನಿ, ’ನಿಮಗೆ ಈ ಮನೆ ಕೊಡಲ್ಲ, ಬೇರೆ ಮನೆ ನೋಡ್ಕೊಳ್ಳಿ, ನೀವು ಹೊಲೆರಂತೆ’ ಎಂದು ಮರು ಪ್ರಶ್ನೆ ಮಾಡಿದರು.
ಹೌದು, ಎಂದು ಉತ್ತರ ನೀಡಿ ಸಮಾಜಾಯಿಷಿ ನೀಡಲು ಭಾವ ಪ್ರಯತ್ನ ಮಾಡಿದರು. ಅದಕ್ಕೆ ಅವಕಾಶ ನೀಡದ ಆಕೆ ’ಅಲ್ಲರಿ ಮನೆ ಬಾಡಿಗೆಗೆ ಪಡೆಯುವ ಮುನ್ನ ಜಾತಿ ವಿಷಯ ಹೇಳಬೇಕು ಅಂತ ಗೊತ್ತಾಗಲ್ವ?, ಸುಳ್ಳು ಹೇಳಿಕೊಂಡು ಮನೆ ಸೇರಿಕೊಳ್ತೀರಲ್ಲ, ನಾಚಿಕೆ ಆಗಲ್ವಾ? ಎಂದು ಗಧರಿಸಿದರು. ಮಾಡಬಾರದ ಅಪರಾಧ ಮಾಡಿಬಿಟ್ಟಿದ್ದೇವೆ ಎಂಬಂತೆ ಬಾಯಿಗೆ ಬಂದಂತೆ ನಿಂದಿಸಿಬಿಟ್ಟಳು.

ಮನೆ ಮಾಲೀಕನ ಪತ್ನಿಯ ಈ ಆಕ್ರೋಶದಿಂದ ತತ್ತಿಸಿಸಿ ಹೋದ ಭಾವ ಅಪರಾಧಿಯಂತೆ ತಲೆ ತಗ್ಗಿಸಿದರು. ಅಕ್ಕನ ಕಣ್ಣಲ್ಲಿ ಅದಾಗಲೇ ನೀರು ಧಾರಾಕಾರವಾಗಿ ಹರಿದಿತ್ತು.
’ಮೊದಲೇ ಜಾತಿ ವಿಷಯ ಹೇಳಬೇಕು ತಾನೇ? ಈಗ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಬೇರೆ ಮನೆ ನೋಡಿಕೊಳ್ಳಿ, ಇಲ್ಲಿ ಜಾಗ ಇಲ್ಲ’ ಎಂದು ಮುಲಾಜಿಲ್ಲದೆ ಹೇಳಿ ಹೋದಳು. ಅಕ್ಕ ಬಿಕ್ಕಿ-ಬಿಕ್ಕಿ ಅಳಲಾರಂಭಿಸಿದಳು, ಆಗ ತಾನೆ ಹಾಲು ಕುಡಿದು ನಿಂತಿದ್ದ ನಾನು ಹಾಗು ನನ್ನ ಸ್ನೇಹಿತರ ಕಣ್ಣುಗಳಲ್ಲೂ ನೀರು ತುಂಬಿಕೊಂಡವು.

ಮುಂದೆ ಏನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಅಷ್ಟೆರಲ್ಲಿ ಆ ಮಹಿಳೆ ಮತ್ತೆ ಬಂದವಳೆ ಅಡ್ವಾನ್ಸ್ ಹಣ ವಾಪಸ್ ಕೊಟ್ಟಳು. ’ಮೇಡಂ ಯಜಮಾನ್ರು ಮನೆಲಿ ಇಲ್ವಾ’ ಎಂದು ಭಾವ ಕೇಳಿದರು, ’ಇದ್ದಾರೆ ಅವರೇ ಅಡ್ವಾನ್ಸ್ ವಾಪಸ್ ಕೊಟ್ಟಿರೊದು. ಅವರಿಗೆ ಹೇಳಲು ಮುಜುಗರವಂತೆ, ಅದಕ್ಕೆ ನಾನೇ ಹೇಳ್ತಿದ್ದೀನಿ. ಅವರ ಒಪ್ಪಿದರೂ, ನಾನು ಒಪ್ಪುವುದಿಲ್ಲ. ನಾಲ್ಕು ಮನೆಗೆ ಕುಡಿಯುವ ನೀರಿಗೆ ಒಂದೇ ಒಂದು ಟ್ಯಾಂಕ್ ಇದೆ. ನಿಮ್ಮ ಮನೆ ಬಿಂದಿಗೆ ಹಾಕಿ ನೀರು ಮಗೆದುಕೊಂಡ ಟ್ಯಾಂಕ್‌ನಲ್ಲೇ ನಾವೂ ನೀರು ತಗೊಳೊಕೆ ಆಗುತ್ತಾ?’ ಎಂದು ಪ್ರಶ್ನೆ ಮಾಡಿದರು. ಬಾಡಿಗೆ ಇರುವವರು ಕೂಡ ಒಪ್ಪುವುದಿಲ್ಲ. ಈಗಲೇ ಖಾಲಿ ಮಾಡಿ ಎಂದುಬಿಟ್ಟಳು.’ ಇದರಿಂದಾಗಿ ಮನೆಯ ಮಾಲೀಕರೊಂದಿಗೆ ಮಾತನಾಡಬಹುದು ಎಂದುಕೊಂಡಿದ್ದ ಭಾವನ ಭರವಸೆ ಇಂಗಿ ಹೋಯಿತು. ’ಒಂದು ವಾರ ಕಾಲಾವಕಾಶ ಕೊಡಿ ಬೇರೆ ಮನೆ ನೋಡಿಕೊಳ್ಳುತ್ತೇವೆ’ ಎಂದು ಭಾವ ಅಂಗಲಾಚಿದರು. ಆದಕ್ಕೂ ಸಮ್ಮತಿಸದ ಮಹಿಳೆ, ’ಈಗಲೇ ಜಾಗ ಖಾಲಿ ಮಾಡಬೇಕು’ ಎಂದು ಆಜ್ಞೆ ಮಾಡಿಬಿಟ್ಟಳು.

ಅಕ್ಕ ಜೋರಾಗಿಯೇ ಅಳುವುದಕ್ಕೆ ಶುರು ಮಾಡಿದಳು. ಅಳು ಬಂದರೂ ನುಂಗಿಕೊಂಡ ಭಾವ ಮತ್ತು ನಾನು ಸಮಾಧಾನಪಡಿಸಿದೆವು. ಈಗ ಖಾಲಿ ಮಾಡಿಕೊಂಡು ಬಂದಿರುವ ಮನೆಗೆ ಮತ್ತೆ ವಾಪಸ್ ಹೋಗುವುದು ಅಸಾಧ್ಯದ ಮಾತು. ಮುಂದೇನು ಮಾಡಬೇಕು ಎಂಬುದು ತಿಳಿಯಲಿಲ್ಲ. ಓನರ್ ತುಂಬಾ ಒಳ್ಳೆಯವರು ಎಂದು ಹೇಳಿದ್ದ ಸ್ನೇಹಿತನನ್ನು ನೆನೆದು ಭಾವ ಶಪಿಸಿದರು.

ಆ ತನಕ ಸುಮ್ಮನಿದ್ದ ನನ್ನ ಸ್ನೇಹಿತರು, ’ಅಕ್ಕ ಅಳೋದು ನಿಲ್ಲಿಸಿ, ಬೇರೆ ಮನೆ ಹುಡುಕೊಣ’ ಎಂದು ಸಮಾಧಾನ ಮಾಡಿದರು. ಭಾವನದೆ ಒಂದು ಸೈಕಲ್ ಇತ್ತು. ಅದನ್ನು ಹತ್ತಿ ಹಾಸ್ಟೆಲ್‌ಗೆ ಹೋದ ಸ್ನೇಹಿತನೊಬ್ಬ, ನಾಲ್ಕೈದು ಮಂದಿ ಗೆಳೆಯರಿಗೆ ನಡೆದ ವಿಷಯ ತಿಳಿಸಿದ. ಮತ್ತೆ ಐದು ಮಂದಿಯನ್ನು ಹಾಸ್ಟೆಲ್‌ನಿಂದ ಕರೆತಂದ.
ಎಲ್ಲರು ಬೀದಿ-ಬೀದಿ ಸುತ್ತಿ ಮನೆಗಾಗಿ ಹುಡುಕಾಟ ಶುರು ಮಾಡಿದೆವು. ಹೋಗುವ ಮುನ್ನ ಭಾವ ’ಜಾತಿ ವಿಷಯ ಮೊದಲೇ ಹೇಳಬೇಕು’ ಎಂದು ಸೂಚನೆ ನೀಡಿದ್ದರು.

ಸಂಜೆ 5 ಗಂಟೆಯಾದರೂ ಖಾಲಿ ಇರುವ ಒಂದು ಮನೆಯೂ ಸಿಗಲಿಲ್ಲ. ಎಲ್ಲರು ಒಬ್ಬೊಬ್ಬರಾಗಿ ವಾಪಸ್ ಬಂದು ನಿಂತಿವು. ಇನ್ನು ಒಂದಿಬ್ಬರು ಮಾತ್ರ ಬರಬೇಕಿತ್ತು. ಅವರು ಕೂಡ ಪೇಚು ಮೋರೆಯಲ್ಲೇ ಬಂದರು. ಅದರಲ್ಲೊಬ್ಬ ಪಕ್ಕದ ಬೀದಿಯಲ್ಲಿ ಹಾಳು ಮನೆಯಂತಿರುವ ಸಣ್ಣದೊಂದು ಶೆಡ್ ಇದೆ ಎಂದು ಹೇಳಿದ.

ನಾನು ಮತ್ತು ಉಳಿದ ಸ್ನೇಹಿತರು ಹೋಗಿ ನೋಡಿದೆವು. ನಾಲ್ಕೈದು ವರ್ಷದಿಂದ ಆ ಶೆಡ್‌ನಂತ ಮನೆಯಲ್ಲಿ ಯಾರು ವಾಸ ಮಾಡಿರಲಿಲ್ಲ. ಪಾಳು ಬಿದ್ದಂತೆ ಇತ್ತು. ಮನೆ ನೋಡಿದ ಭಾವ, ಬೇರೆ ದಾರಿ ಇಲ್ಲ. ಸದ್ಯಕ್ಕೆ ಇದೇ ಮನೆಯಲ್ಲಿ ಇರೋಣ ಎಂದು ನಿರ್ಧಾರ ಮಾಡಿದರು. ವಿಧಿ ಇಲ್ಲದೆ ಅಕ್ಕ ಕೂಡ ಇಪ್ಪಿಕೊಂಡಳು. ಮೇಲ್ಜಾತಿಯವರ ಕೊಟ್ಟಿಗೆಯಲ್ಲಿ ಉಂಡು-ಮಲಗಿ ಅಭ್ಯಾಸ ಇದ್ದ ಕಾರಣದಿಂದ ಈ ಮನೆಯಲ್ಲಿ ವಾಸ ಮಾಡುವುದು ಅಷ್ಟೇನು ಕಷ್ಟ ಎನ್ನಿಸಲಿಲ್ಲ.

ಓನರ್ ಜೊತೆ ಮಾತನಾಡಿದೆವು, ಯಾವ ಜಾತಿಗಾದ್ರು ಕೊಡುತ್ತೇವೆ. ಆದರೆ, ಆ ಮನೆ ವಾಸ ಮಾಡಲು ಯೋಗ್ಯವಾಗಿಲ್ಲ ಬೇಡ ಎಂದರು. ಆದರೂ ಪರವಾಗಿಲ್ಲ, ಸದ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ ಮನವೊಲಿಸಿದೆವು. ಬೇರೆ ಮನೆ ಸಿಗುವ ತನಕ ಮಾತ್ರ ಇರುತ್ತೇವೆ, ಅವಕಾಶ ಮಾಡಿಕೊಡಿ ಎಂದು ಭಾವ ಮನವಿ ಮಾಡಿದರು.

’ಅಡ್ವಾನ್ಸ್ ಏನು ಬೇಡ, ಈ ಮನೆಯನ್ನು ಬಾಡಿಗೆಗೆ ಕೊಡುವ ಆಲೋಚನೆ ಇರಲಿಲ್ಲ. ಪಾಪ ತೊಂದರೆಲಿ ಇದ್ದೀರಿ ನಿಮಗೆ ಬೇರೆ ಮನೆ ಸಿಗುವ ತನಕ ಇಲ್ಲೇ ಇರಿ, ಒಂದಿಷ್ಟು ಬಾಡಿಗೆ ಅಂತ ಕೊಡಿ ಸಾಕು’ ಎಂದು ಮಾಲೀಕರು ಒಪ್ಪಿಗೆ ಸೂಚಿಸಿದರು. ಬೀದಿಯಲ್ಲಿ ಬಿದ್ದಿದ್ದಾಗ ಮನೆ ಕೊಟ್ಟ ಮಾಲೀಕರಿಗೆ ಎಲ್ಲರು ಕೃತಜ್ಞತೆ ಸಲ್ಲಿಸಿದೆವು. ಬಂದಿದ್ದ ಎಲ್ಲಾ ಸ್ನೇಹಿತರು ಸೇರಿ ಸಾಮಾನು-ಸರಂಜಾಮು ಹೊತ್ತು ತಂದೆವು. ಎಲ್ಲರು ಸೇರಿ ಪುಟ್ಟ ಮನೆಯನ್ನು ಕ್ಲೀನ್ ಮಾಡಿದೆವು. ಅಕ್ಕ ಮತ್ತೊಮ್ಮೆ ಹಾಲು ಉಕ್ಕಿಸುವ ಪೂಜೆ ಮಾಡಿದಳು. ಬಂದಿದ್ದ ಎಲ್ಲ ಸ್ನೇಹಿತರಿಗೂ ಪಾಯಿಸ ಮಾಡಿ ಊಟಕ್ಕೆ ಬಡಿಸಿದಳು.

ಕಷ್ಟದಲ್ಲಿ ಆಶ್ರಯ ನೀಡಿದ ಕಾರಣಕ್ಕೆ ಅದೇ ಮನೆಯಲ್ಲಿ ಸಾಕಷ್ಟು ದಿನ ಜೀವನ ಮಾಡಿದರು. ಈಗ ಮೊದಲೇ ಜಾತಿ ತಿಳಿಸಿ ಬೇರೊಂದು ಮನೆಯಲ್ಲಿ ವಾಸವಿದ್ದಾರೆ. ಮನೆ ಹುಡುಕುವ ಸಂದರ್ಭದಲ್ಲಿ ಆ ದಿನ ನೆನಪಿಗೆ ಬರೆದ ಉಳಿಯುವುದಿಲ್ಲ. ಹಾಗಿಯೇ ಮೊದಲು ಜಾತಿ ತಿಳಿಸಿ ಮಾಲೀಕರು ಒಪ್ಪಿದರೆ ಮಾತ್ರ ಮನೆ ಕೊಡಿ ಎಂದು ಕೇಳುವುದನ್ನು ನಾನು ಮರೆಯುವುದಿಲ್ಲ.

ದಲಿತರಿಗೆ ಮೇಲ್ಜಾತಿಯವರು ಮನೆ ಸಿಗುತ್ತಿಲ್ಲ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುವುದನ್ನೂ ಸಹಿಸದೆ ’ಹಾಗದರೆ ದಲಿತರೆಲ್ಲ ಈಗ ಬೀದಿಯಲ್ಲಿದ್ದಾರಯೇ?’ ಎಂದು ಪ್ರಶ್ನೆ ಕೇಳುವ ಜನ ಇದ್ದಾರೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಎಸ್ಸಿ ಎಂಬ ಪದ ಕೇಳಿದ ಕೂಡಲೇ ಮುಖ ಸಿಂಡರಿಸಿಕೊಂಡು ನಮ್ಮನ್ನು ಅಪರಾಧಿಯಂತೆ ನೋಡುವ ಮನೆ ಮಾಲೀಕರು ಸಾಕಷ್ಟಿದ್ದಾರೆ. ಈಗ್ಗೆ ಆರು ತಿಂಗಳ ಹಿಂದೆ ನಾನು ಬಾಡಿಗೆ ಮನೆ ಬದಲಿಸುವ ಸಂದರ್ಭ ಬಂದಾಗ ಮೊದಲೆ ಜಾತಿ ಹೇಳಿದ ಕಾರಣಕ್ಕೆ ನಾಲ್ಕು ಮನೆಯ ಒಪ್ಪಂದ ಮುರಿದು ಹೋದವು. ಕೊನೆಗೂ ಸ್ವಜಾತಿಯವರದೇ ಮನೆಯಲ್ಲಿ ಬಾಡಿಗೆ ಇದ್ದೇನೆ. ಇದೇ ಕಾರಣಕ್ಕೆ ಹಲವರು ಜಾತಿ ಸುಳ್ಳು ಹೇಳಿಕೊಂಡು ಬಾಡಿಗೆ ಮನೆ ಪಡೆದು ಜೀವನ ನಡೆಸುತ್ತಿದ್ದಾರೆ. ನಿಜ ಜಾತಿ ಗೊತ್ತಾದ ನಂತರ ಮುಜುಗರ ಅನುಭವಿಸುತ್ತಿದ್ದಾರೆ. ಹಾಗಾಗಿ ದಲಿತರು ಬಾಡಿಗೆ ಮನೆ ಪಡೆಯುವುದು ಅಷ್ಟು ಸುಲಭವಲ್ಲ.

ಚಿತ್ರಗಳು: ಸಾಂದರ್ಭಿಕ