Category Archives: ನಕ್ಸಲ್ ಕಥನ

“ಬಿಳಿಸಾಹೇಬನ ಭಾರತ” ಪುಸ್ತಕವಾಗಿ ಬರುತ್ತಿದೆ. ಅಭಿನಂದನೆಗಳು

ಆತ್ಮೀಯರೇ,

ನಿಮಗೆಲ್ಲರಿಗೂ ತಿಳಿದಿರಬಹುದು; 2011ರ ಡಿಸೆಂಬರ್‌ನಿಂದ 2012 ರ ಜುಲೈ ತನಕ, 29 ವಾರಗಳ ಕಾಲ, ನಮ್ಮ ಪ್ರೀತಿಯ ಲೇಖಕ ಜಗದೀಶ ಕೊಪ್ಪ ವರ್ತಮಾನ.ಕಾಮ್‌ನಲ್ಲಿ “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ)”ವನ್ನು ಬರೆದರು. ವರ್ತಮಾನ.ಕಾಮ್‌ನ ಆರಂಭದ ದಿನಗಳಲ್ಲಿ ಅನೇಕ ಸರಣಿ ಲೇಖನಗಳನ್ನಷ್ಟೇ ಅಲ್ಲದೆ, ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜಗದೀಶ ಕೊಪ್ಪರು ನಿರಂತರವಾಗಿ ಬರೆದು ನಮಗೆ ಬೆನ್ನೆಲುಬಾಗಿ ನಿಂತು, ವರ್ತಮಾನ.ಕಾಮ್ ಬೇರೂರಿ ನಿಲ್ಲಲು ನೆರವಾದವರು. ಬಿಳಿ ಸಾಹೇಬನ ಭಾರತ, ನಕ್ಸಲ್ ಕಥನ, ಜೀವನದಿಗಳ ಸಾವಿನ ಕಥನ; ಈ ಮೂರು ಸರಣಿ ಲೇಖನಗಳು ಅಪಾರ ಓದುಗರನ್ನು ಗಳಿಸಿದ್ದವು. ಇದರಲ್ಲಿ ಈಗಾಗಲೆ ’ಜೀವನದಿಗಳ ಸಾವಿನ ಕಥನ’ ಮತ್ತು “ನಕ್ಸಲ್ ಕಥನ”ಗಳು ಇನ್ನೊಂದಷ್ಟು ಲೇಖನ-ಮಾಹಿತಿಗಳ ಜೊತೆಗೆ “ಜೀವನದಿಗಳ ಸಾವಿನ ಕಥನ” ಮತ್ತು “ಎಂದೂ ಮುಗಿಯದ ಯುದ್ಧ”ಗಳಾಗಿ ಪುಸ್ತಕಗಳಾಗಿಯೂ ಹೊರಬಂದಿದೆ.

ಈಗ, “ಬಿಳಿ ಸಾಹೇಬನ ಭಾರತ”ವೂ ಪುಸ್ತಕವಾಗಿ ಬರುತ್ತಿದೆ. ಈ ಸಂದರ್ಭದಲ್ಲಿ ಲೇಖಕ ಜಗದೀಶ ಕೊಪ್ಪರಿಗೆ koppa-Invitation-biLisahebaವರ್ತಮಾನ ಬಳಗದ ಪರವಾಗಿ ಧನ್ಯವಾದ, ಕೃತಜ್ಞತೆ, ಮತ್ತು ಅಭಿನಂದನೆಗಳನ್ನು ತಿಳಿಸುತ್ತೇವೆ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇದೇ ಶನಿವಾರ ಸಂಜೆ 4:30ಕ್ಕೆ ಬೆಂಗಳೂರಿನಲ್ಲಿದೆ. ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ಭಾಗವಹಿಸಿ.

ವಿಶ್ವಾಸದೊಂದಿಗೆ,
ರವಿ ಕೃಷ್ಣಾರೆಡ್ಡಿ
ವರ್ತಮಾನ ಬಳಗ



jeevanadigaLa-koppa


eMdU-mugiyada-yudda-koppa


biLisaheba-koppa

ರೆಡ್ ಕಾರಿಡಾರಿನಲ್ಲಿ ಪ್ರಜಾಸತ್ತೆಯ ಹೂಗಳು

Naveen Soorinje


– ನವೀನ್ ಸೂರಿಂಜೆ


ದೇಶದ ಪ್ರಭುತ್ವ ಮತ್ತು 1947 ರ ಸ್ವಾತಂತ್ರ್ಯವನ್ನು ಒಪ್ಪದ ನಕ್ಸಲ್ ಬಾಧಿತ ಗ್ರಾಮ ಎಂದು ಸರಕಾರದಿಂದ ಗುರುತಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರು ಗ್ರಾಮದ ಕಾಡಿನಲ್ಲಿ ಪ್ರಥಮ ಬಾರಿಗೆ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಗಿದೆ. ನಕ್ಸಲ್ ವಿರೋಧಿ ಪಡೆ ಪೊಲೀಸರ ಕೋವಿನ ನಳಿಗೆಯಂಚಿನಲ್ಲಿ ಬದುಕು ಸಾಗಿಸುತ್ತಿರುವ kuthloor-malekudiya-tribeಕುತ್ಲೂರಿಗೆ 47 ರ ಸ್ವಾತಂತ್ರ್ಯ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೂ ಕೆಂಪು ದ್ವಜಗಳು ಹಾರಾಡಿದ ನೆಲದಲ್ಲಿ ಆದಿವಾಸಿಗಳ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ನಕ್ಸಲ್ ಬೆಂಬಲಿಗನೆಂಬ ಆರೋಪದಲ್ಲಿ ಜೈಲು ಸೇರಿ ಬಿಡುಗಡೆಯಾಗಿರುವ ಪತ್ರಿಕೋದ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯನಿಂದಾಗಿ ಇಂದು ಕುತ್ಲೂರಿನಲ್ಲಿ ರಾಷ್ಟ್ರಧ್ವಜ ಹಾರುವಂತಾಗಿದೆ.

ಕುತ್ಲೂರಿನಲ್ಲಿ ರಾಷ್ಟ್ರಧ್ವಜ ಹಾರುವುದು ಎಂದರೆ ಸುಲಭದ ಮಾತಲ್ಲ. ನಾವು ಪೇಟೆಯ ಮೈದಾನದಲ್ಲೋ, ಗ್ರಾಮದ ಗದ್ದೆಯಲ್ಲೋ ಕಂಬ ನೆಟ್ಟು ಧ್ವಜ ಹಾರಿಸಿ ಸಿಹಿ ಹಂಚಿದಷ್ಟು ಸುಲಭದ ಮಾತಲ್ಲ. ಅದಕ್ಕೊಂದು ಸುಧೀರ್ಘವಾದ ಸದ್ದಿಲ್ಲದ ಹೋರಾಟವಿದೆ. ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ನಕ್ಸಲ್ ಪೀಡಿತ ಪ್ರದೇಶವೆಂದು ಸರಕಾರ ಘೋಷಣೆ ಮಾಡಿದೆ. ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆ ಇದ್ದಿದ್ದನ್ನು ಅಲ್ಲಗಳೆಯುವಂತಿಲ್ಲ. ಕುತ್ಲೂರು ಗ್ರಾಮವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಪರಿವರ್ತಿಸಿದಾಗ ಮತ್ತು ಕಾಡುತ್ಪತ್ತಿಯನ್ನು ಸಂಗ್ರಹಿಸಿ ಬದುಕು ಸಾಗಿಸುತ್ತಿದ್ದ ಮಲೆಕುಡಿಯ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಹೆಚ್ಚಾದಾಗ ಇಲ್ಲಿನ ಯುವಕರು ನಕ್ಸಲ್ ಚಳುವಳಿಯತ್ತಾ ಆಕರ್ಷಿತರಾಗಿದ್ದುದು ಸುಳ್ಳಲ್ಲ. ಈ ಹಿನ್ನಲೆಯಲ್ಲಿ ಬಂದೂಕಿನ ಮೂಲಕ ಕ್ರಾಂತಿ ಮಾಡಬೇಕು ಮತ್ತು ಆದಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ನಕ್ಸಲ್ ಚಳುವಳಿ ಸೇರಿದ ಯುವಕರಲ್ಲಿ ದಿನಕರ್ ಎಂಬಾತ 2008 ರಲ್ಲಿ ಶೃಂಗೇರಿ ಬಳಿ ಪೊಲೀಸರ ಗುಂಡಿಗೆ ಬಲಿಯಾದ. ನಂತರ 2010 ರಲ್ಲಿ ಕುತ್ಲೂರಿನ ವಸಂತ ಪೊಲೀಸರ ಗುಂಡಿಗೆ ಹೆಣವಾದ. ಇದಾದ ನಂತರ ನಕ್ಸಲ್ ವಿರೋಧಿ ಪಡೆ ಪೊಲೀಸರು ಕುತ್ಲೂರಿನಲ್ಲಿ ಝುಂಡಾ ಊರಿದರು. ನಿತ್ಯ 500-600 ಪೊಲೀಸರು ಕುತ್ಲೂರಿನಲ್ಲಿ ಕೂಂಬಿಂಗ್ ನಡೆಸಲು ಶುರುವಿಟ್ಟುಕೊಂಡರು. ಆದಿವಾಸಿ ಯುವಕರು, ಮಹಿಳೆಯರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಲ್ಲದೆ ಮಾನಸಿಕವಾಗಿ ಪೀಡಿಸಿದರು. ಇದು ಇಲ್ಲಿನ ಆದಿವಾಸಿಗಳು ಪ್ರಭುತ್ವವನ್ನು ಮತ್ತಷ್ಟೂ ದ್ವೇಷಿಸಲು ಕಾರಣವಾಗಿ ನಕ್ಸಲ್ ಚಳುವಳಿಗೆ ಬೆಂಬಲ ನೀಡುವ ಮನಸ್ಥಿತಿ ಬೆಳೆಸಿತು.

ಕಾಡಿನಲ್ಲಿರುವ ಕುತ್ಲೂರು ಗ್ರಾಮದ ಆದಿವಾಸಿಗಳು ವಾರಕೊಮ್ಮೆ ತಾವು ಸಂಗ್ರಹಿಸಿದ ಕಾಡುತ್ಪತ್ತಿಯನ್ನು ಸಂತೆಯಲ್ಲಿ ಮಾರಿ, ಅಡುಗೆ Anti-Naxal-Forceಸಾಮಾನು ಕೊಂಡೊಯ್ಯಲು ಸಂತೆಗೆ ಬರುತ್ತಾರೆ. ಹೀಗೆ ವಾರಕ್ಕೊಮ್ಮೆ ಪೇಟೆಗೆ ಬರುವ ಮಲೆಕುಡಿಯರು ತಮ್ಮ ಮನೆಯ ಸದಸ್ಯರ ಸಂಖ್ಯೆಗಣುಗುಣವಾಗಿ ಪದಾರ್ಥಗಳನ್ನು ಖರೀದಿ ಮಾಡಬೇಕು. ಉದಾಹರಣೆಗೆ ಒಂದು ಕುಟುಂಬದಲ್ಲಿ ಮೂವರಿದ್ದರೆ ಮೂರು ಮೀನುಗಳನ್ನಷ್ಟೇ ಖರೀದಿ ಮಾಡಬೇಕು. ಎಂಟೋ ಹತ್ತೋ ಮೀನು ಖರೀದಿಸಿ ಮನೆಗೆ ಕೊಂಡೊಯ್ಯುವಂತಿಲ್ಲ. ಹಾಗೇನಾದರೂ ಕೊಂಡೊಯ್ದರೆ ಕಾಡಿನ ಮಧ್ಯೆ ಎಎನ್ಎಫ್ ಪೊಲೀಸರು ತಡೆದು ಪರಿಶೀಲನೆ ಮಾಡುವಾಗ ಸಿಕ್ಕಿಬಿದ್ದರೆ ಅಕ್ರಮವಾಗಿ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಾರೆ. “ಮೂರೇ ಜನ ಇದ್ದರೂ ಆರು ಜನರಿಗಾಗುವಷ್ಟು ಖರೀದಿ ಮಾಡಿದ್ದಿ ಎಂದರೆ ಅದು ನಕ್ಸಲರಿಗೆ ಪೂರೈಕೆ ಮಾಡುವ ಉದ್ದೇಶದಿಂದಲೇ ಇರಬೇಕು” ಎಂಬುದು ಪೊಲೀಸರ ವಾದವಾಗಿರುತ್ತದೆ. ಪೊಲೀಸರು ಮಾಡುವ ತನಿಖೆಯಾದರೂ ಎಂಥದ್ದು ? ಇದೇ ರೀತಿ ಕುಟುಂಬ ಸದಸ್ಯರ ಲೆಕ್ಕಕ್ಕಿಂತ ಜಾಸ್ತಿ ಖರೀದಿ ಮಾಡಿ ಕೊಂಡೊಯ್ಯುತ್ತಿದ್ದರು ಎಂಬ ಕಾರಣಕ್ಕಾಗಿ ಕುತ್ಲೂರಿನ ಪೂವಪ್ಪ ಮಲೆಕುಡಿಯನ್ನು ಬಂಧಿಸಿ ಮೂರು ದಿನ ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದ್ದರು. ನಂತರ ಪೂವಪ್ಪರನ್ನು ಮನೆಗೆ ಹೋಗೋ ದಾರಿಯಲ್ಲಿ ಬಿಟ್ಟಿದ್ದರು. ಈಗ ಪೂವಪ್ಪರಿಗೆ ನಡೆಯಲು ಮಾತ್ರ ಸಾಧ್ಯವಾಗುತ್ತದೆ. ಓಡಲು ಆಗೋದೆ ಇಲ್ಲ. ಪೂವಪ್ಪ ಓಡೋಕೆ ಸಾಧ್ಯವಾಗದ ರೀತಿಯಲ್ಲಿ ಮೊನಕಾಲಿಗೆ ಹೊಡೆದಿದ್ದರು.

ಕುತ್ಲೂರು ಗ್ರಾಮದಲ್ಲಿ 35 ಕುಟುಂಬಗಳು ವಾಸ ಮಾಡಿಕೊಂಡಿದ್ದವು. ಕುತ್ಲೂರನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿದ ನಂತರ ಸ್ವಯಂಪ್ರೇರಿತವಾಗಿ 14 10373489_336561873178407_7235343341327920427_nಕುಟುಂಬಗಳು ಒಕ್ಕಲೆದ್ದು ಹೋದವು. ಈಗ 21 ಕುಟುಂಬಗಳು ವಾಸ ಮಾಡುತ್ತಿವೆ. ಈ ಸ್ವಯಂಪ್ರೇರಿತ ಒಕ್ಕಲೇಳುವಿಕೆ ಎನ್ನುವುದು ತುಂಬಾನೇ ಸೂಪರ್ ಇದೆ. ಪಶ್ಚಿಮ ಘಟ್ಟದಲ್ಲಿ ಕೆಲವು ಎನ್ ಜಿ ಒ ಗಳು ಕಾರ್ಯಾಚರಣೆ ಮಾಡುತ್ತಿವೆ. ಹುಲಿ ಲೆಕ್ಕ ಮಾಡೋ ಎನ್ ಜಿ ಒ, ಹಾವು ಲೆಕ್ಕ ಮಾಡೋ ಎನ್ ಜಿ ಒ, ಚಿಟ್ಟೆ ಲೆಕ್ಕ ಮಾಡೋ ಎನ್ ಜಿ ಒ…. ಹೀಗೆ ಹಲವು ಎನ್ ಜಿ ಒ ಗಳು ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಲ್ಲಿ ವಿದೇಶಿ ಹಣದಲ್ಲಿ ಕೆಲಸ ಮಾಡುತ್ತಿದೆ. ಕಾಡಿನಂಚಿನಲ್ಲಿರುವ ಆದಿವಾಸಿಗಳು ಕಾಡು ಬೆಳೆಸುತ್ತಾರೆಯೇ ವಿನಃ ಕಾಡು ನಾಶ ಮಾಡುವುದಿಲ್ಲ ಎಂದು ಈ ಎನ್ ಜಿ ಒಗಳಿಗೆ ಗೊತ್ತಿದ್ದೂ ಆದಿವಾಸಿಗಳು ಕಾಡಿನಿಂದ ಒಕ್ಕಲೇಳಬೇಕು ಎಂದು ಈ ಎನ್ ಜಿ ಒ ಗಳು ಸರಕಾರದ ಜೊತೆ ಕೆಲಸ ಮಾಡುತ್ತದೆ. ಅದಕ್ಕಾಗಿ ಎಲ್ಲೆಲ್ಲೋ ಕಾಡಿನಿಂದ ಹೊರ ಬರೋ ಚಿರತೆ, ಹುಲಿ, ಕಾಳಿಂಗ ಸರ್ಪಗಳನ್ನು ಹಿಡಿದು ನೇರ ಕುತ್ಲೂರು ಆದಿವಾಸಿಗಳ ಮನೆ ಪರಿಸರದಲ್ಲಿ ಬಿಡಲು ಶುರು ಮಾಡಿದರು. ಇಲ್ಲಿಯವರೆಗೆ ಪಥ ಬಿಟ್ಟು ಸಂಚರಿಸದ ಹುಲಿ, ಚಿರತೆ, ಕಾಳಿಂಗ ಸರ್ಪಗಳು ಆದಿವಾಸಿಗಳ ಮನೆ ಪಕ್ಕ ಅಡ್ಡಾಡಲು ಶುರುವಿಟ್ಟುಕೊಂಡವು. ಮತ್ತೊಂದೆಡೆ ನಕ್ಸಲ್ ಕುಂಬಿಂಗ್ ಹೆಸರಲ್ಲಿ ನಿತ್ಯ ಆದಿವಾಸಿಗಳಿಗೆ ಕಿರುಕುಳ ನೀಡಲು ಶುರುವಿಟ್ಟುಕೊಂಡರು. ರಾತ್ರಿ ಹೊತ್ತು ಮನೆಗೆ ಬಂದೂಕುಧಾರಿ ನಕ್ಸಲರು ಬೇಟಿ ಕೊಡುವುದು. ಹಗಲೊತ್ತು ನಕ್ಸಲರನ್ನು ಮನೆಗೆ ಹುಡುಕಿಕೊಂಡು ಬರೋ ಶಸ್ತ್ರಾಸ್ತ್ರಧಾರಿ ಪೊಲೀಸರು. ಇದ್ಯಾವುದರ ಕಿರುಕುಳವೂ ಬೇಡ ಎಂದು ಸರಕಾರ ನೀಡಿದ್ದಷ್ಟು ಪರಿಹಾರ ತೆಗೆದುಕೊಂಡು ಹೊರಡಲು 14 ಕುಟುಂಬಗಳು ಸಿದ್ದವಾದವು. ಈ 14 ಕುಟುಂಬಗಳ ಪುನರ್ವಸತಿ ಮತ್ತು ಪರಿಹಾರ ನೀಡಿಕೆಗಾಗಿ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜು ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆ ನಡವಳಿಕೆಗಳನ್ನು ಗಮನಿಸಿದರೆ ನಿಮಗೆ ಆಶ್ಚರ್ಯವಾಗಬಹುದು.

ಜಿಲ್ಲಾಧಿಕಾರಿಗಳ ಕೋರ್ಟು ಹಾಲ್ ನಲ್ಲಿ 14 ಕುಟುಂಬಗಳ ಸಭೆ ನಡೆಸಲಾಗಿತ್ತು. ಒಂದು ಬದಿಯಲ್ಲಿ ಮಲೆಕುಡಿಯ ಕುಟುಂಬದ ಪ್ರಮುಖರು, ಮತ್ತೊಂದೆಡೆ ಕಂದಾಯ, ಪಿಡಬ್ಲ್ಯೂಡಿ, ತೋಟಗಾರಿಕೆ, ಕೃಷಿ, ಅರಣ್ಯ ಮತ್ತಿತರ ಅಧಿಕಾರಿಗಳು. ಮಧ್ಯದಲ್ಲಿ ಜಿಲ್ಲಾಧಿಕಾರಿಗಳು. ಸರದಿ ಪ್ರಕಾರ ಒಂದೊಂದೇ ಮನೆಯ ಪರಿಹಾರ ಕಡತಗಳನ್ನು ಕ್ಲೀಯರ್ ಮಾಡಲಾಗುತ್ತದೆ. ಉದಾಹರಣೆಗೆ ಬಾಬು ಮಲೆಕುಡಿಯನ ( ಕಲ್ಪಿತ ಹೆಸರು,ಸಂಖ್ಯೆಯನ್ನು ಉದಾಹರಣೆಗಾಗಿ ನೀಡಲಾಗಿದೆ) ಆಸ್ತಿ ಸರ್ವೆ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸುತ್ತಾರೆ. ಕಂದಾಯ ಅಧಿಕಾರಿ ಎದ್ದು ನಿಂತು ಬಾಬು ಮಲೆಕುಡಿಯನಿಗೆ ಮೂರು ಎಕರೆ ಆಸ್ತಿಯ ಪಹಣಿ ಇದ್ದು, ಸರಕಾರಿ ಮೌಲ್ಯಮಾಪನ ಪ್ರಕಾರ ಎಷ್ಟೋ ಲಕ್ಷಗಳಾಗುತ್ತದೆ ಎಂದು ಮಾಹಿತಿ ನೀಡುತ್ತಾನೆ. ನಂತರ ಪಿಡಬ್ಲ್ಯೂಡಿ ಅಧಿಕಾರಿ ಎದ್ದು ನಿಂತು ಬಾಬು ಮಲೆಕುಡಿಯನ ಮನೆ ಕಟ್ಟಡದ ಸರ್ವೆ ಮಾಡಿದ್ದು ಸರ್ವೆ ಪ್ರಕಾರ 1 ಲಕ್ಷ ನೀಡಬಹುದು ಎನ್ನುತ್ತಾನೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಪ್ರಕಾರ ಮೂರು ಎಕರೆಯಲ್ಲಿ ಬೆಳೆದಿರುವ ವಿವಿಧ ತೋಟಗಾರಿಕೆ, ವಾಣಿಜ್ಯ, ಕೃಷಿ ಬೆಳೆಯ ಪ್ರಕಾರ 10 ಲಕ್ಷ ಪರಿಹಾರ ನೀಡಬೇಕಾಗುತ್ತದೆ ಎಂದು ವರದಿ ನೀಡುತ್ತಾನೆ. ನಂತರ ಅರಣ್ಯ ಇಲಾಖೆಯವರು ಬಾಬು ಮಲೆಕುಡಿಯ ಮನೆ ಪರಿಸರದ ತನ್ನದೇ ಪಹಣಿಯಲ್ಲಿ ಬೆಳೆದಿರುವ ವಾಣಿಜ್ಯ ಮರಗಳ ಮೌಲ್ಯ 10 ಲಕ್ಷ ಎಂದು ವರದಿ ಸಲ್ಲಿಸುತ್ತಾನೆ. ಒಟ್ಟು ಬಾಬು ಮಲೆಕುಡಿಯನ ಮೂರು ಎಕರೆ ಅಧಿಕೃತ ಆಸ್ತಿಗೆ ಸರಕಾರದ ಪ್ರಕಾರ 25 ಲಕ್ಷ ರೂಪಾಯಿ ಮೌಲ್ಯ ಬರುತ್ತದೆ ಎಂದಿಟ್ಟುಕೊಳ್ಳಿ. ಇದನ್ನು ಜಿಲ್ಲಾಧಿಕಾರಿ ಘೋಷಣೆ ಮಾಡಿ ಬಾಬು ಮಲೆಕುಡಿಯನಲ್ಲಿ ಕೇಳುತ್ತಾರೆ “ನಾವು ನಿನ್ನನ್ನು ಬಲವಂತದಿಂದ ಒಕ್ಕಲೆಬ್ಬಿಸುತ್ತಿಲ್ಲ. ನಿನ್ನ ಆಸ್ತಿಯನ್ನು ಸರ್ವೆ ಮಾಡಲಾಗಿ ನಿನ್ನ ಆಸ್ತಿಯ ಸರಕಾರಿ ಮೌಲ್ಯ 25 ಲಕ್ಷ ರೂಪಾಯಿಯಾಗಿರುತ್ತದೆ. ಆದರೆ ಸರಕಾರದ ಯೋಜನೆಯ ಪ್ರಕಾರ ಪ್ರತೀ ಕುಟುಂಬಕ್ಕೆ ಪುನರ್ವಸತಿ ಪರಿಹಾರವಾಗಿ ನಾವು 10 ಲಕ್ಷವನ್ನಷ್ಟೇ ನೀಡಬಹುದು. ನೀನು ಸಿದ್ದನಿದ್ದೀ ತಾನೆ ?” ಎಂದು ಪ್ರಶ್ನಿಸುತ್ತಾರೆ. ಬಾಬು ಮಲೆಕುಡಿಯ ಕಣ್ಣು ತುಂಬಿಕೊಂಡು ತಲೆ ಅಲ್ಲಾಡಿಸುತ್ತಾನೆ. ಆತನಿಗೆ ಎಂಟು ಲಕ್ಷ ರೂಪಾಯಿಗಳನ್ನು ನೀಡಿ ಒಕ್ಕಲೆಬ್ಬಿಸುತ್ತೆ. ಹೀಗಿತ್ತು ಸರಕಾರದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪುನರ್ವಸತಿ ಕಾರ್ಯ.

ಅನಕ್ಷರಸ್ಥರೇ ತುಂಬಿರುವ ಕುತ್ಲೂರಿನಲ್ಲಿ 35 ಕುಟುಂಬಗಳೂ ಈ ರೀತಿ ಕಾಡಿನಿಂದ ಹೊರಬರಲು ಸಿದ್ದರಿದ್ದರು. ಆದರೆ ಅದಕ್ಕೆ ತಡೆಯಾಗಿದ್ದು ವಿಠಲ ಮಲೆಕುಡಿಯ. Vittal Malekudiyaವಿಠಲ ಮಲೆಕುಡಿಯ ಯಾವಾಗ ಪಿಯುಸಿ ಪಾಸಾದನೋ ಆಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತೋರಿಸಿದ ಹಾಳೆಗಳಿಗೆ ಸಹಿ ಹಾಕುವುದನ್ನು ಮಲೆಕುಡಿಯರು ನಿಲ್ಲಿಸಿಬಿಟ್ಟರು. ಅಷ್ಟರಲ್ಲಿ ವಿಠಲ ಮಲೆಕುಡಿಯನಿಗೆ ಮುನೀರ್ ಕಾಟಿಪಳ್ಳ ಪರಿಚಯವಾಯಿತು. ಮುನೀರ್ ಪರಿಚಯವಾದ ನಂತರ ವಿಠಲ ಮಲೆಕುಡಿಯ ಎಷ್ಟು ಬದಲಾದನೆಂದರೆ ಮಲೆಕುಡಿಯರು ಬೀದಿ ಹೋರಾಟವನ್ನು ಶುರು ಹಚ್ಚಿಕೊಂಡು 21 ಕುಟುಂಬಗಳನ್ನು ಉಳಿಸಲು ಹೋರಾಟ ನಡೆಸುವಲ್ಲಿಗೆ ಮುಟ್ಟಿದ. ಮುನೀರ್ ಕಾಟಿಪಳ್ಳ ಜೊತೆ ಸೇರಿ ಆತ ಅಷ್ಟೂ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಅರಿವು ಮತ್ತು ರಾಷ್ಟ್ರೀಯ ಉದ್ಯಾನವನ ಘೋಷಣೆಯ ಹಿಂದೆ ಇರುವ ಮಾಫಿಯಾವನ್ನು ಮನದಟ್ಟು ಮಾಡುವಲ್ಲಿ ಸಫಲನಾದ. ಇವೆಲ್ಲಕ್ಕಿಂತ ಮುಖ್ಯವಾಗಿ ಸರಕಾರ, ಪೊಲೀಸರಿಗಿಂತ ನಕ್ಸಲ್ ವಾದ ಎಷ್ಟೊಂದು ಅಪಾಯಕಾರಿ ಎಂಬುದನ್ನು ವಿಠಲ ಮಲೆಕುಡಿಯ ಮತ್ತು ಮುನೀರ್ ಕಾಟಿಪಳ್ಳ ನಕ್ಸಲ್ ಪೀಡಿತ ಗ್ರಾಮಸ್ಥರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ನಕ್ಸಲ್ ಪೀಡಿತ ಗ್ರಾಮಸ್ಥರು ತಮ್ಮ ಗ್ರಾಮದ ಅಭಿವೃದ್ದಿಗೆ ನಕ್ಸಲರ ಹೋರಾಟವನ್ನು ನಿರೀಕ್ಷಿಸದೆ ಬೀದಿಗಿಳಿದರು. ಬೀದಿ ಹೋರಾಟದ ಮೂಲಕ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡಿ ಹಕ್ಕುಗಳನ್ನು ಗಿಟ್ಟಿಸಿಕೊಳ್ಳುವ ಮಟ್ಟಕ್ಕೆ ಬಂದರು.

ನಕ್ಸಲ್ ಚಳುವಳಿಯನ್ನು ಹತ್ತಿಕ್ಕಿದ್ದ ವಿಠಲ್ ಮಲೆಕುಡಿಯ ಮತ್ತು ಮುನೀರ್ ಕಾಟಿಪಳ್ಳರ ಚಳುವಳಿಗೆ ಸರಕಾರ ಪ್ರೋತ್ಸಾಹಿಸಬೇಕಾಗಿತ್ತು. ಆದರೆ ನಕ್ಸಲ್ ಚಳುವಳಿ ಕುತ್ಲೂರಿನಲ್ಲಿ ನಿಂತಿದೆ ಎಂಬುದು ಸರಕಾರಕ್ಕೆ ಇಷ್ಟವಿಲ್ಲದ ಸಂಗತಿಯಾಗಿತ್ತು. ನಕ್ಸಲ್ ಚಳುವಳಿಯನ್ನು ಹತ್ತಿಕ್ಕಲು ಸರಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದರೂ ಅವೆಲ್ಲಾ ನಾಟಕಗಳಷ್ಟೇ. ಕಾಡಿನಲ್ಲಿರುವ ಮಲೆಕುಡಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಸರಕಾರ ನಕ್ಸಲ್ ಗುಮ್ಮನನ್ನು ಬಳಸುತ್ತಿದೆ. ಕಾಡಿನ ಮೂಲನಿವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು ಎಂಬ ಸುಪ್ರಿಂ ಕೋರ್ಟು ಆದೇಶ ಹೊರಡಿಸಿದ್ದ ಹಿನ್ನಲೆಯಲ್ಲಿ ಸರಕಾರ ಈ ತಂತ್ರಗಾರಿಕೆಯ ಮೊರೆ ಹೋಗಿದೆ. ಕುತ್ಲೂರು ಗ್ರಾಮಸ್ಥರು ಹೊರಗಿನ ಸಮಾಜದೊಂದಿಗೆ ಗುರುತಿಸಿಕೊಂಡರೆ ಅವರನ್ನು ನಕ್ಸಲ್ ಬೆಂಬಲಿಗರೆಂದು ಹಣೆಪಟ್ಟಿ ಕಟ್ಟೋದು ಕಷ್ಟ. ನಕ್ಸಲ್ ಹಣೆಪಟ್ಟಿ ಕಟ್ಟಿ ಕಿರುಕುಳ ನೀಡದೇ ಇದ್ದರೆ ಒಕ್ಕಲೆಬ್ಬಿಸೋದಾದ್ರೂ ಹೇಗೆ ? ಆದರೆ ಈಗ ವಿಠಲ ಮಲೆಕುಡಿಯ, ಮುನೀರ್ ಕಾಟಿಪಳ್ಳ ಸಂಪರ್ಕದಿಂದಾಗಿ ಬಹಿರಂಗ ಹೋರಾಟದ ಸಂಪರ್ಕ ಪಡೆದುಕೊಂಡಿದ್ದಾರೆ. ಅದಕ್ಕಾಗಿ ಎರಡು ವರ್ಷದ ಹಿಂದೆ ಮಾರ್ಚ್​ 2 ರಂದು ವಿಠಲ ಮಲೆಕುಡಿಯ ಮತ್ತು ಆತನ ತಂದೆಯನ್ನು ಪೊಲೀಸರು ನಕ್ಸಲರೆಂದು ಬಂಧಿಸುತ್ತಾರೆ. ದೇಶದ್ರೋಹದ ಕಾಯ್ದೆಯಡಿ ವಿಠಲ್ ಜೈಲು ಸೇರುತ್ತಾನೆ. ಒಬ್ಬ ನಕ್ಸಲ್ ಎಂದು ಬಂಧಿತ ವ್ಯಕ್ತಿ ವಿಠಲ್ ‌ನಿಂದ ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳೆಂದರೆ ಚಾಹ ಪುಡಿ, ಸಕ್ಕರೆ ಮತ್ತು ಆಟದ ಬೆನಾಕ್ಯೂಲರ್ ! ನಂತರ ಡಿವೈಎಫ್ಐ ಮತ್ತು ಎಡಪಂಥೀಯ ಸಂಘಟನೆಗಳು ವಿಠಲ್ ಮಲೆಕುಡಿಯ ಪರವಾಗಿ ದೊಡ್ಡದಾದ ಹೋರಾಟವೇ ನಡೆದಿರುವುದು ಈಗ ಇತಿಹಾಸ. ನಂತರ ವಿಠಲ್ ಮಲೆಕುಡಿಯ ಮತ್ತು ಆತನ ತಂದೆ ಜುಲೈ 5 ರಂದು ಬಿಡುಗಡೆಯಾಗುತ್ತಾರೆ. ಇದೊಂದು ದೊಡ್ಡ ಕಥೆ.

ಈಗ ವಿಠಲ ಮಲೆಕುಡಿಯ ಪತ್ರಿಕೋಧ್ಯಮ ಪದವಿಯನ್ನು ಪೂರ್ಣಗೊಳಿಸಿದ್ದಾನೆ. ಪ್ರಖ್ಯಾತ ಪತ್ರಿಕೆಯಲ್ಲಿ ಇಂಟರ್ನ್ ಶಿಪ್ ಮುಗಿಸಿದ್ದಾನೆ. ಅವೆಲ್ಲಕ್ಕಿಂತ ಮುಖ್ಯವಾಗಿ ನಾಲ್ಕು Vithal-malekudiyaತಿಂಗಳು ಜೈಲಿನ ಇಂಟರ್ನ್ ಶಿಪ್ ಮುಗಿಸಿದ್ದಾನೆ. ಎಲ್ಲಾ ಪತ್ರಕರ್ತರಿಗೂ ಜೈಲಿನಲ್ಲಿ ಇಂಟರ್ನ್ ಶಿಪ್ ಮಾಡೋ ಅವಕಾಶ ಸಿಗೋದಿಲ್ಲ. ಜೈಲಿನಲ್ಲಿ ಇಂಟರ್ನ್ ಶಿಪ್ ಮಾಡಿದ ಪತ್ರಕರ್ತ ಹೆಚ್ಚು ಹೆಚ್ಚು ಮಾನವ ಹಕ್ಕಿನ ಪರವಾಗಿ, ಜನಪರವಾಗಿ, ಬದುಕಿನ ಬಗ್ಗೆ, ವ್ಯವಸ್ಥೆಯ ಬಗ್ಗೆ ಬರೆಯಬಲ್ಲ ಎಂದು ನನ್ನ ಅನಿಸಿಕೆ. ಮೊನ್ನೆ ಆಗಸ್ಟ್ 15 ರಂದು ಪ್ರಥಮ ಬಾರಿಗೆ ದಟ್ಟ ಕಾಡಿನಲ್ಲಿ ವಾಸವಾಗಿರುವ ಮಲೆಕುಡಿಯ ಆದಿವಾಸಿಗಳು ವಿಠಲ ಮಲೆಕುಡಿಯನ ಪ್ರೇರಣೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡರು. ನಕ್ಸಲರು ನಡೆದಾಡಿದ ಕಾಡಿನ ರೆಡ್ ಕಾರಿಡಾರಿನಲ್ಲಿ ರಾಷ್ಟ್ರಧ್ವಜದ ಹೂಗಳು ಬಿದ್ದಿದ್ದವು. ಅದು ಪ್ರಜಾಸತ್ತಾತ್ಮಕ ಹೋರಾಟದ ಹೂಗಳು.

ಎ.ಎನ್.ಎಫ್ ನಿಂದ ಕಬೀರ್ ಹತ್ಯೆ ಹಾಗೂ ದಿಕ್ಕು ತಪ್ಪುತ್ತಿರುವ ಹೋರಾಟ


-ಇರ್ಷಾದ್


 

 

 

ಎಪ್ರಿಲ್ 19ರಂದು ಚಿಕ್ಕಮಗಳೂರಿನ ಶೃಂಗೇರಿ ಕೆರೆಕಟ್ಟೆ ತನಿಕೋಡು ತಪಾಸಣಾ ಕೇಂದ್ರದಲ್ಲಿ ನಕ್ಸಲ್ ಎಂಬ ಶಂಕೆಗೆAnti-Naxal-Force ಅಮಾಯಕ ಜೀವವೊಂದು ಬಲಿಯಾಯಿತು. ಮಂಗಳೂರಿನ ಕಾಟಿಪಳ್ಳ ನಿವಾಸಿ ಕಬೀರ್ ಎದೆಯನ್ನು ನಕ್ಸಲ್ ನಿಗೃಹ ದಳದ ಸಿಬಂದಿಯ ಬಂದೂಕಿನ ಗುಂಡು ಸೀಳಿತ್ತು. ಕಬೀರ್ ಸಾವು ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಒಂದರ ಹಿಂದೆ ಒಂದರಂತೆ ಕಬೀರ್ ಸಾವಿಗೆ ನ್ಯಾಯ ಕೋರಿ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಪ್ರಭುತ್ವದ ದಬ್ಬಾಳಿಕೆ, ಬಡ ಆದಿವಾಸಿಗಳ ಮೇಲಿನ ದೌರ್ಜನ್ಯ ವಿರುದ್ಧ ದಂಗೆ ಎದ್ದು ಹೋರಾಟ ನಡೆಸುತ್ತಿರುವ ಶಕ್ತಿಗಳನ್ನು ಹುಟ್ಟಡಗಿಸುವ ಮನಸ್ಥಿತಿಯ ಬಂದೂಕಿನ ನಳಿಕೆಯಿಂದ ಹೊರ ಬಂದ ಗುಂಡಿನ ವಿರುದ್ಧ ನಡೆಯಬೇಕಾಗಿದ್ದ ಹೋರಾಟ ದಿಕ್ಕು ತಪ್ಪುತ್ತಿದೆ ಎಂದನಿಸುತ್ತಿದೆ. ಜಾತಿ ಧರ್ಮದ ಹೊರತಾಗಿ, ಪ್ರಭುತ್ವದ ಧೋರಣೆಯ ವಿರುದ್ಧ ಧ್ವನಿ ಎತ್ತುತ್ತಾ ಹೋರಾಟಕ್ಕಿಳಿದಿರುವ ನಕ್ಸಲರ ದಮನದ ಹೆಸರಲ್ಲಿ ನಡೆದ ಕಬೀರ್ ಹತ್ಯೆಯನ್ನು ಧರ್ಮದ ಬೇಲಿ ಕಟ್ಟಿ ಅದರ ನೆಲೆಗಟ್ಟಿನಲ್ಲಿ ನ್ಯಾಯ ಕೋರಿ ಹೋರಾಟ ನಡೆಯುತ್ತಿರುವುದು ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವಂತಿದೆ.

ಜಾನುವಾರು ಸಾಗಾಟ ಸಂಧರ್ಭದಲ್ಲಿ ಗೋ ಮಾತೆ ಸಂರಕ್ಷಣೆ ಹೆಸರಲ್ಲಿ ಸಂಘ ಪರಿವಾರದ ಧರ್ಮಾಂಧರು ನಡೆಸುವ ದೌರ್ಜನ್ಯಕ್ಕೂ, ಪ್ರಭುತ್ವ ಬಡ ಜನರ ಮೇಲೆ, ಆದಿವಾಸಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೇಳುವ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ದಮನಕಾರಿ ನೀತಿಗೂ ವ್ಯತ್ಯಾಸಗಳಿವೆ. ಕರ್ನಾಟದ ಪಶ್ವಿಮ ಘಟ್ಟದಲ್ಲಿ ನಕ್ಸಲ್ ಸಮಸ್ಯೆಯನ್ನು ಹತ್ತಿಕ್ಕಲು ಕಾರ್ಯಾಚರಣೆಗಿಳಿದಿರುವ ನಕ್ಸಲ್ ನಿಗ್ರಹ ಪಡೆಯ ಶಂಕೆಗೆ ಬಲಿಯಾಗಿರುವುದು ಕಬೀರ್ ಮಾತ್ರ ಅಲ್ಲ. ಇಂಥಹಾ ಹತ್ತಾರು ಕಬೀರರು ಈಗಾಗಲೇ ಪಶ್ವಿಮ ಘಟ್ಟದ ಅರಣ್ಯಗಳಲ್ಲಿ ನೆತ್ತರು ಸುರಿಸಿದ್ದಾರೆ. ಪ್ರಭುತ್ವದ ದಮನಕಾರಿ ನೀತಿಗೆ ಬಲಿಯಾದ ಅಮಾಯಕರಲ್ಲಿ ಇದೀಗ ಕಬೀರ್ ಕೂಡಾ ಒಬ್ಬ.

ನಕ್ಸಲ್ ನಿಗೃಹ ಪಡೆ ಹಾಗೂ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ

ಪಶ್ವಿಮ ಘಟ್ಟದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಜಾರಿಗೆ ಬಂದ ದಿನದಿಂದ ಈ ಭಾಗದಲ್ಲಿರುವ ಆದಿವಾಸಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕಾಡಿನ ಮಕ್ಕಳನ್ನು ಕಾಡಿಂದ ಹೊರದಬ್ಬುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ. ಒಂದೆಡೆ ಪ್ರಭುತ್ವ ಬಲಪ್ರದರ್ಶನದಿಂದ ಈ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದರೆ ಇನ್ನೊಂದೆಡೆ ವಿದೇಶಿ ಹಣಕಾಸುVittal Malekudiya ನೆರವಿನಿಂದ ಕಾರ್ಯಾಚರಿಸುತ್ತಿರುವ ಸ್ವಯಂ ಸೇವಾ ಸಂಘಗಳು ಆದಿವಾಸಿಗಳನ್ನು ಕಾಡಿಂದ ಹೊರ ಹಾಕಲು ಪ್ರಯತ್ನಪಡುತ್ತಿವೆ. ಆನಾದಿ ಕಾಲದಿಂದ ಅರಣ್ಯದಲ್ಲೇ ನೆಲೆಕಂಡಿರುವ ಆದಿವಾಸಿ ಕುಟುಂಬಗಳು ಯಾವಾಗ ಪ್ರಭುತ್ವದ ಧೋರಣೆಯನ್ನು ವಿರೋಧಿಸಲಿಕ್ಕೆ ಆರಂಭಿಸಿದವೋ ಅಲ್ಲಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ಆರಂಭವಾಗಿದೆ. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಲ್ಲಿ ವಾಸವಾಗಿರುವ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ ಹಾಗೂ ಸ್ಥಳೀಯ ಕೆಲ ಯುವಕರು ಪ್ರಭುತ್ವದ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಇವರು ಹೇಳುವ ಪ್ರಕಾರ ಕೆಲ ವರ್ಷಗಳ ಹಿಂದೆ ಪ್ರತಿ ಶನಿವಾರ ಗ್ರಾಮದ ಜನರು ನಾರಾವಿ ಪೇಟೆಗೆ ಬಂದು ದಿನಬಳಕೆಯ ಸಾಮಾಗ್ರಿಗಳನ್ನು ಕೊಂಡ್ಯೊಯುವ ಸಂಧರ್ಭದಲ್ಲಿ ಎ.ಎನ್.ಎಫ್ ನಿಂದ ನಿರಂತರ ದಬ್ಬಾಳಿಕೆ ಇವರ ಮೇಲೆ ನಡೆಯುತ್ತಿತ್ತು. ಅಗತ್ಯಕ್ಕಿಂತ ಹೆಚ್ಚಾಗಿ ಧವಸ ಧಾನ್ಯಗಳನ್ನು ಖರೀದಿಸಿದಲ್ಲಿ ನಕ್ಸಲರಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಶಂಕೆಯಲ್ಲಿ ಎ.ಎನ್.ಎಫ್ ಸಿಬಂದಿಗಳು ಕಿರುಕುಳ ನೀಡುತ್ತಿದ್ದರು. ರಾತ್ರೋ ರಾತ್ರಿ ಮನೆಗಳಿಗೆ ನುಗ್ಗುವುದು, ನಕ್ಸಲರ ಬೆಂಬಲಿಗರು ಎಂಬ ಶಂಕೆಯಲ್ಲಿ ಸ್ಥಳೀಯ ಯುವಕರನ್ನು ಕಸ್ಟಡಿಯಲ್ಲಿ ಕೂಡಿ ಹಾಕಿ ಹಿಂಸೆ ನೀಡುವುದು ಇಲ್ಲಿ ಮಾಮೂಲಾಗಿತ್ತು. ಕುತ್ಲೂರು ನಿವಾಸಿಗಳಾದ ಪೂವಪ್ಪ ಮಲೆಕುಡಿಯ, ಲಿಂಗಣ್ಣ ಮಲೆ ಕುಡಿಯ , ವಿಠಲ್ ಮಲೆ ಕುಡಿಯ , ಶಶಿಧರ್ ಮಲೆ ಕುಡಿಯ ಎ.ಎನ್.ಎಫ್ ದೌರ್ಜನ್ಯದ ಬಲಿಪಶುಗಳು. ನಕ್ಸಲರ ಜೊತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಕಾರಣಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ವಿಠಲ್ ಮಲೆಕುಡಿಯ ಮನೆಗೆ ನುಗ್ಗಿದ ಎ.ಎನ್.ಎಫ್ ವಿಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಎಂಬಿಬ್ಬರನ್ನು 2012 ಮಾರ್ಚ್ 3 ರಂದು ಬಂಧಿಸಿದ್ದರು. ಇವರ ಮನೆಯಲ್ಲಿ ಶೋಧ ಮಾಡಿದಾಗ ಶಂಕಿತ ನಕ್ಸಲ್ ಎಂಬುವುದಕ್ಕೆ ಸಿಕ್ಕಿದ ಸಾಕ್ಷಿ ಚಾ ಹುಡಿ, ಸಕ್ಕರೆ, ಪೇಪರ್ ಕಟ್ಟಿಂಗ್ಸ್, ಮಕ್ಕಳು ಆಟವಾಡುವ ಬೈನಾಕ್ಯುಲರ್ !

ಶಂಕೆಗೆ ಬಲಿಯಾದ ಜೀವಗಳು

ಇವರಷ್ಟೇ ಅಲ್ಲ,  ನಕ್ಸಲ್ ನಿಗ್ರಹ ದಳದ ಶಂಕೆಗೆ ಕರ್ನಾಟಕದಲ್ಲಿ ಅಮಾಯಕ ಜೀವಗಳು ಬೆಲೆ ತೆತ್ತಿವೆ.

  •  2003 ನವಂಬರ್ 17- ಉಡುಪಿ ಜಿಲ್ಲೆಯ ಈದು ಗ್ರಾಮದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಾಜಿಮಾ -ಪಾರ್ವತಿ ಹತ್ಯೆ
  •  2005 ಜೂನ್ – ಉಡುಪಿ ಜಿಲ್ಲೆಯ ದೇವರ ಬಾಳು ಎನ್ ಕೌಂಟರ್ ನಲ್ಲಿ ಅಜಿತ್ ಕುಸುಬಿ – ಉಮೇಶ್ ಹತ್ಯೆ
  • 2006 ಡಿಸೆಂಬರ್ – ಶೃಂಗೇರಿ –ಕೆಸುಮುಡಿಯಲ್ಲಿ ನಾರಾವಿಯ ದಿನಕರ್ ಹತ್ಯೆ
  •  2007 ಜುಲೈ 10 – ಚಿಕ್ಕಮಗಳೂರು ಜಿಲ್ಲೆಯ ಮೆಣಸಿನ ಹಾಡ್ಯ ದಲ್ಲಿ ಒಬ್ಬ ಶಂಕಿತ ನಕ್ಸಲ್ ಹಾಗೂ ನಾಲ್ವರು ಆಮಾಯಕ ಆದಿವಾಸಿಗಳ ಹತ್ಯೆ.
  •  2008 ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಶಂಕಿತ ನಕ್ಸಲ್ ಮನೋಹರ್ ಹತ್ಯೆ .
  •  2010 ಮಾರ್ಚ್ 1 – ಕಾರ್ಕಳ ಅಂಡಾರು ಗ್ರಾಮಪಂಚಾಯತ್ ವ್ಯಾಪ್ತಿಯಯಲ್ಲಿ ಕುತ್ಲೂರು ಗ್ರಾಮದ ನಿವಾಸಿ ವಸಂತ್ ಹತ್ಯೆ
  •  2012- ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಚೇರು ಅರಣ್ಯ ಪ್ರದೇಶದಲ್ಲಿ ಶಂಕಿತ ನಕ್ಸಲ್ ಯಲ್ಲಪ್ಪ ಹತ್ಯೆ.
  •  2014 ಎಪ್ರಿಲ್ 19- ನಕ್ಸಲ್ ಶಂಕೆಯಲ್ಲಿ ಕಬೀರ್ ಹತ್ಯೆ.

ನಕ್ಸಲ್ ನಿಗ್ರಹ ಪಡೆ ನಡೆಸಿದ ಈ ಎಲ್ಲಾ ಹತ್ಯೆಗಳು ಶಂಕೆಯ ಆಧಾರದಲ್ಲಿ ನಡೆದ ಹತ್ಯೆಗಳಾಗಿವೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.  ವ್ಯಕ್ತಿಯೊಬ್ಬ ನಕ್ಸಲ್ ಎಂದು ಸಂಶಯ ಬಂದರೆ ಸಾಕು, ಆತನ ಬಂಧನಕ್ಕಿಂತ ಹತ್ಯೆ ಮಾಡಿ ಕೈತೊಳೆದುಬಿಡುವುದೇ ಲೇಸು ಎಂಬುವಂತಿದೆ ಎ.ಎನ್.ಎಫ್ ಕಾರ್ಯವೈಖರಿ. ಕಳೆದ 10 ವರ್ಷಗಳಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಎಲ್ಲಾ ಹತ್ಯೆಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುವಂತಹದ್ದು, ಹತ್ಯಗೀಡಾದ ಶಂಕಿತ ನಕ್ಸಲರನ್ನು ತೀರಾ ಹತ್ತಿರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂಬ ಆರೋಪವನ್ನು ಸತ್ಯಶೋಧನಾ ಸಮಿತಿಗಳು ಮಾಡುತ್ತಿವೆ. ಕಬೀರ್ ಹತ್ಯೆಯಲ್ಲೂ ಇಂಥಹ ಅನೇಕ ಅನುಮಾನಗಳು, ಪ್ರಶ್ನೆಗಳು ಕಾಡುತ್ತಿವೆ.

  • ನಕ್ಸಲ್ ಎಂಬ ಅನುಮಾನ ಬಂದ ಕೂಡಲೇ ಎದೆಗೆ ಗುರಿಯಿಟ್ಟು ಹತ್ಯೆ ಮಾಡುವ ಅವಷ್ಯಕತೆ ಏನಿತ್ತು?
  • ಯಾವುದೇ ದಾಳಿ ನಡೆಯದೇ ಇದ್ದರೂ ಪ್ರತಿದಾಳಿ ನಡೆಸುವಂತಹ ಅಧಿಕಾರ ಎ.ಎನ್.ಎಫ್ ಗೆ ಇದೆಯಾ?
  • ವ್ಯವಸ್ಥೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು, ಆದಿವಾಸಿಗಳು, ದಲಿತರು, ಹಿಂದುಳಿದವರು, ಬಡವರ ಕುರಿತಾದ ಪ್ರಭುತ್ವದ ಧೋರಣೆಗೆ ಎ.ಎನ್.ಎಫ್ ಗುಂಡಿನ ದಾಳಿ ಸಾಕ್ಷಿಯಾಗಿದೆಯೇ?
  •  ಪೊಲೀಸ್ ವ್ಯವಸ್ಥೆಯಲ್ಲಿರುವ ಮತಾಂಧ ಮನಸ್ಥಿತಿ ಕಬೀರ್ ಹತ್ಯೆಗೆ ಪ್ರೆರಣೆ ನೀಡಿತೇ ?
  •  ರಾಷ್ಟ್ರೀಯ ಹೆದ್ದಾರಿಯಲ್ಲೇ ಅನುಮಾನದಿಂದ ಅಮಾಯಕನನ್ನು ನಕ್ಸಲ್ ಹೆಸರಲ್ಲಿ ಹತ್ಯೆಗೈದ ಎ.ಎನ್.ಎಫ್ ದಟ್ಟ ಅರಣ್ಯದಲ್ಲಿ ನಕ್ಸಲ್ ನಿಗೃಹದ ಹೆಸರಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಹೇಗಿರಬಹುದು?

ಕಬೀರ್ ಹತ್ಯೆ ಇಂಥಹ ಹತ್ತು ಹಲವಾರು ಪ್ರೆಶ್ನೆಗಳು, ಅನುಮಾನಗಳು ಎ.ಎನ್.ಎಫ್ ಕಾರ್ಯವೈಖರಿಯ ಕುರಿತಾಗಿ ಹುಟ್ಟುಹಾಕಿದೆ. ಪಶ್ವಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸುವಲ್ಲಿ ಎ.ಎನ್.ಎಫ್ ಅಗತ್ಯ. ಆದರೆ ನಕ್ಸಲ್ ನಿಗ್ರಹದ ಹೆಸರಲ್ಲಿ ಅಮಾಯಕರ ನೆತ್ತರು ಹರಿಸುವ ಕಾಯಕದಲ್ಲಿ ತೊಡಗಿಕೊಂಡರೆ ನಕ್ಸಲ್ ನಿಯಂತ್ರಣ ಸಾಧ್ಯಾನಾ?

ಕಬೀರ್ ಹತ್ಯೆ ದಿಕ್ಕು ತಪ್ಪುತ್ತಿರುವ ಹೋರಾಟ

ಪಶ್ವಿಮ ಘಟ್ಟದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಹತ್ಯಾಕಾಂಡದ ಸರದಿಗೆ ಎಪ್ರಿಲ್ 19 ರಂದು ಶೃಂಗೇರಿಯ ಕೆರೆಕಟ್ಟೆ ತನಿಕೋಡು ಚೆಕ್ ಪೋಸ್ಟ್ ನಲ್ಲಿ ನಡೆದ ಕಬೀರ್ ಹತ್ಯೆ ಮತ್ತೊಂದು ಸೇರ್ಪಡೆಯಷ್ಟೇ. ವಿಪರ್ಯಾಸವೆಂದರೆ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾದ ಹೋರಾಟ ಎಲ್ಲೋ ದಾರಿ ತಪ್ಪುತ್ತಿದೆ ಎಂದನಿಸುತ್ತಿದೆ. ಹೋರಾಟಕ್ಕೆ ಧರ್ಮದ “ ಫ್ರೇಮ್ ” ಕೊಡುವ ಕಾರ್ಯ ನಡೆಯುತ್ತಿದೆ. ಎ.ಎನ್.ಎಫ್ ನಿಂದ ಕಬೀರ್ ಹತ್ಯೆಯ ನಂತರ ನಡೆದ ತೀರಾ ಅಮಾನವೀಯ ಘಟನಾವಳಿಗಳು ಕಬೀರ್ ಹತ್ಯೆಯ ಹೋರಾಟವನ್ನು ಧರ್ಮದ ಫ್ರೇಮ್ ನೊಳಕ್ಕೆ ತಳ್ಳಿ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾಗಿದ್ದ ಹೋರಾಟವನ್ನು ದಿಕ್ಕು ತಪ್ಪುವಂತೆ ಮಾಡಲಾಗುತ್ತಿದೆ.

ಪಶ್ವಿಮ ಘಟ್ಟದಲ್ಲಿ ಇದುವರೆಗೂ ಎ.ಎನ್.ಎಫ್ ದೌರ್ಜನ್ಯಕ್ಕೆ ಒಳಗಾದರು ಕೇವಲ ಮುಸ್ಲಿಮರಲ್ಲ, ಹಿಂದುಗಳಲ್ಲKabeer_ANF ಬದಲಾಗಿ ಇದನ್ನು ಮೀರಿ ನಿಂತ ಬಡವರು, ಆದಿವಾಸಿಗಳು, ಸಾಮಾಜಿಕ ಕಾರ್ಯಕರ್ತರು. ಪ್ರಭುತ್ವದ ಜನವಿರೋಧಿ ಯೋಜನೆಗಳಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಆನೆ ಕಾರಿಡಾರ್ , ಪುಷ್ಪಗಿರಿ ವನ್ಯಧಾಮ ಮೊದಲಾದವುಗಳು ಈ ಭಾಗದ ಹಿಂದುಗಳು, ದಲಿತರು, ಮುಸ್ಲಿಮರು, ಆದಿವಾಸಿಗಳು ಎಲ್ಲರ ಜೀವನವನ್ನು ಕಸಿದುಕೊಳ್ಳುವ ಯೋಜನೆಗಳಾಗಿದೆ. ಇಂತಹ ಯೋಜನೆಗಳಿಂದಾಗಿ ಈಗಾಗಲೇ ಅರಣ್ಯವಾಸಿಗಳು ನಾನಾ ರೀತಿಯಲ್ಲಿ ದೌಜನ್ಯಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಇನ್ನಷ್ಟು ಯೋಜನೆಗಳು ಜಾರಿಗೆ ಬಂದಲ್ಲಿ ಎಲ್ಲಾ ಧರ್ಮ, ಸಂಸ್ಕೃತಿಗಳ ಬಡ ಜನರು ತಮ್ಮ ಮನೆ ಮಠ ಆಸ್ತಿ, ನೆಲೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರದ ಇಂಥಹ ಯೋಜನೆಗಳನ್ನು ವಿರೋಧಿಸಿಯೇ ಈ ಭಾಗದಲ್ಲಿ ಚಳುವಳಿಗಳು ಹಟ್ಟುಕೊಂಡಿದ್ದು. ವಿರೋಧದ ಧ್ವನಿಗಳನ್ನು ಶಸ್ತ್ರದ ಮೂಲಕ ದಮನ ಮಾಡುವ ಉದ್ದೇಶದಿಂದ ಎ.ಎನ್.ಎಫ್ ಜನ್ಮ ತಾಳಿದೆ. ಪರಿಣಾಮ ಸಾಕಷ್ಟು ರಕ್ತ ಪಾತಗಳು ಪಶ್ವಿಮ ಘಟ್ಟದ ದಟ್ಟಾರಣ್ಯದಲ್ಲಿ ನಡೆಯುತ್ತಿವೆ. ಪ್ರಭುತ್ವದ ಇಂಥಹ ಮನಸ್ಥಿತಿಯೇ ಕಬೀರ್ ಹತ್ಯೆಗೆ ಕಾರಣವಾಗಿರುವುದು. ಯಾರನ್ನೂ ನಕ್ಸಲ್ ಎಂಬ ಶಂಕೆಯ ಹೆಸರಲ್ಲಿ ಗುಂಡಿಕ್ಕಿ ಕೊಲ್ಲುವುದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಸಮ್ಮತ ಹಾಗೂ ಅನಿವಾರ್ಯ ಎಂಬ ಭಾವನೆ ಪ್ರಭುತ್ವದ ಆದೇಶ ಪಾಲಕರಿಗಿದ್ದಂತಿದೆ. ಇಂಥಹ ಮನಸ್ಥಿತಿಯ ವಿರುದ್ಧ ಎಲ್ಲಾ ಜನಸಾಮಾನ್ಯರು ಹೋರಾಟ ನಡೆಸಬೇಕಾಗಿದೆ. ಕಬೀರ್ ಒಬ್ಬ ಮುಸ್ಲಿಮ್ ದನದ ವ್ಯಾಪಾರಿ ಎಂಬ ಕಾರಣಕ್ಕಾಗಿ ಆತನ ಹತ್ಯೆಯನ್ನು ಸಮರ್ಥಿಸುವುದು ತೀರಾ ಅಮಾನವೀಯ. ಅದೇ ರೀತಿ ಮುಸ್ಲಿಂ ಯುವಕನ ಹತ್ಯೆ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಧರ್ಮದ ಲೇಪನ ಕೊಟ್ಟು ಹೋರಾಟ ಮಾಡುವುದು ಸಮ್ಮತವಲ್ಲ.

ಮನುಷ್ಯನ ರಕ್ತ ಚೆಲ್ಲಿದಕ್ಕೆ ಪಾರಿತೋಷಕ ಕೊಡುವ ಅಮಾನವೀಯತೆ ಬೇಡ

‘ಸ್ವಾಮಿ ವಿವೇಕಾನಂದ ಸಮಾಜಮುಖಿ ಚಿಂತಕ’ ಪುಸ್ತಕದ 43 ನೇ ಪುಟದಲ್ಲಿ ದಾಖಲಾದಂತೆ ಗೋ ರಕ್ಷಣಾ ಸಭೆಯ ಪ್ರಚಾರಕರೊಂದಿಗೆ ಮಾತನಾಡುತ್ತಾ ಸ್ವಾಮಿ ವಿವೇಕಾನಂದ ಹೀಗನ್ನುತ್ತಾರೆ. “ಮಧ್ಯ ಹಿಂದೂಸ್ಥಾನದಲ್ಲಿ ಭಯಂಕರವಾದ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ ಸಭೆ ದುರ್ಭೀಕ್ಷ ಕಾಲದಲ್ಲಿ ಏನಾದರೂ ಸಹಾಯ ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನೋ?”

ಪ್ರಚಾರಕ: ನಾವು ದುರ್ಭೀಕ್ಷ ಮೊದಲಾಲಾದವುಗಳಿಗೆ ಸಹಾಯ ಮಾಡುವುದಿಲ್ಲ. ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ :ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷ ಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿದ್ದಾರೆ, ಕೈಯಲ್ಲಾಗುತ್ತಿದ್ದರೂ ಇಂಥಹ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ಅನ್ನಿಸುವುದಿಲ್ಲವೇ ?

ಪ್ರಚಾರಕ : ಇಲ್ಲ; ಕರ್ಮ ಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯನಲ್ಲಿ ಸಹಾನುಭೂತಿಯನ್ನು ತೋರದೆ ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿತ್ತಿರುವುದನ್ನು ನೋಡಿಯೂ ಅವರ ಜೀವವನ್ನು ಉಳಿಸಲಿಕ್ಕೆ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ.

ಇಂಥಹ ಮಹಾನ್ ಸಂತ ಜನ್ಮ ತಾಳಿದ ಈ ನಾಡಿನಲ್ಲಿ ಎ.ಎನ್.ಎಫ್ ನಿಂದ ಹತ್ಯೆಗೀಡಾದ ಯುವಕ ಕಬೀರ್ ಗೋ ಸಾಗಾಟ ಮಾಡಿದ ಎಂಬ ಕಾರಣಕ್ಕಾಗಿ ಆತನ ಸಾವನ್ನು ಸಮರ್ಥಿಸಿಕೊಳ್ಳುವುದು, ಕಬೀರ್ ಸಾವಿಗೆ ಕಾರಣಕರ್ತನಾದ ಎ.ಎನ್.ಎಫ್ ಸಿಬಂಧಿಗೆ ಪಾರಿತೋಷಕಗಳನ್ನು ಘೋಷಣೆ ಮಾಡುವುದು ಅಮಾನವೀಯ ಅಲ್ಲವೇ? ಸ್ವಾಮಿ ವಿವೇಕಾನಂದರ ತತ್ವಾದರ್ಶದಲ್ಲಿ ಯಾರು ನಂಬಿಕೆ ಇಡುತ್ತಾರೋ ಅಂಥವರು ‘ಹತ್ಯೆಗೆ ಬಹುಮಾನ ಕೊಡುವ’ ನೀಚ ಮನಸ್ಥಿತಿಯನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ಎ.ಎನ್.ಎಫ್ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಆದಿವಾಸಿಗಳು ಮುಸ್ಲಿಮರಲ್ಲ. ಇವರಲ್ಲಿ ಅನೇಕರು ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಂಬಿಕೆ ಇಟ್ಟುಕೊಂಡವರು. ಕಬೀರ್ ಹತ್ಯೆಯನ್ನು ಅಭಿನಂದಿಸುವ ಹಿಂದೂ ಪರ ಸಂಘಟನೆಗಳು ಆದಿವಾಸಿಗಳ ಮೇಲಿನ ದಬ್ಬಾಳಿಕೆಗೆ ಪಾರಿತೋಷಕ ಕೊಡುತ್ತಾರೆಯೇ? ( ವಾಸ್ತವದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲಿನ ಪ್ರಭುತ್ವದ ದೌರ್ಜನ್ಯಕ್ಕೆ ಬೆಂಬಲವಾಗಿ ನಿಂತವರು ಈ ಧರ್ಮ ರಕ್ಷಕರು) ಕಬೀರ್ ಹತ್ಯೆಯನ್ನು ಹಿಂದೂ – ಮುಸ್ಲಿಂ ಸಂಘಟನೆಗಳು ಧರ್ಮದ ಆಧಾರದಲ್ಲಿ ವಿಭಜಿಸ ಹೊರಟಿರುವುದು ಪ್ರಭುತ್ವದ ಆದೇಶ ಪಾಲಕರಿಗೆ ಇನ್ನಷ್ಟು ಬಲ ಬಂದತಾಗಿದೆ. ಶಂಕೆಯ ಆಧಾರದಲ್ಲಿ ನಡೆದ ಅಮಾಯಕರ ಹತ್ಯೆಯನ್ನು ನಾಗರಿಕ ಸಮಾಜ ವಿರೋಧಿಸಬೇಕಾಗಿದೆ. ಇಂದು ಕಬೀರ್ ನಾಳೆ ಸುರೇಶ್ ನಾಡಿದ್ದು ಜೋಕಬ್ ಹೀಗೆ ಆಡಳಿತ ವರ್ಗದ ದಮನಕಾರಿ ನೀತಿಗೆ ಬಲಿಯಾಗುತ್ತಲೇ ಇರಬೇಕಾಗುತ್ತದೆ. ಕಬೀರ್ ಹತ್ಯೆ ವಿರುದ್ಧ ಧ್ವನಿ ಎತ್ತುವ ನೆಪದಲ್ಲಿ ಮುಸ್ಲಿಮ್ ಮತೀಯ ಸಂಘಟನೆಗಳು ಹೋರಾಟವನ್ನು ಧಾರ್ಮಿಕ ಚೌಕಟ್ಟಿಗೆ ಸೀಮಿತಗೊಳಿಸುವುದು ಹಾಗೂ ಕಬೀರ್ ಹತ್ಯೆ ಒಬ್ಬ ಮುಸ್ಲಿಮ್ ಯುವಕನ ಹತ್ಯೆ ಎಂಬ ಕಾರಣಕ್ಕಾಗಿ ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಇವೆರಡು ತೀರಾ ಅಪಾಯಕಾರಿ.

ಕಬೀರ್ ಸಾವು ಮತ್ತು ಪ್ರಗತಿಪರರ ಮಾರ್ಗದರ್ಶನದ ಸರಕಾರ

Naveen Soorinje


– ನವೀನ್ ಸೂರಿಂಜೆ


 

ದನ ಸಾಗಾಟ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ನಕ್ಸಲ್ ನೆಪದಲ್ಲಿ ಪೊಲೀಸರು ಅಮಾಯಕ ಮುಸ್ಲಿಂ ಯುವಕನನ್ನು ಚಿಕ್ಕಮಗಳೂರಿನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಭಜರಂಗದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಂತೆ ಈ ಘಟನೆ ಕಂಡು ಬರುತ್ತಿದ್ದು ಸಮಗ್ರ ತನಿಖೆಯಾಗಬೇಕಿದೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಜರಂಗದಳದ ಕೆಲಸವನ್ನು ಪೊಲೀಸರೇ ನಿರ್ವಹಿಸುತ್ತಿದ್ದು,  ಈ ರೀತಿಯ ಹಲವಾರು ಘಟನೆಗಳ ಕುರಿತಂತೆ ಅಮೂಲಾಗ್ರವಾದ ತನಿಖೆ ಆಗಬೇಕಿದೆ. ಆದರೆ ತನಿಖೆ ನಡೆಸಲು ಆಗ್ರಹಿಸಬೇಕಾದ ನಮ್ಮ ”ಸಾಕ್ಷಿ ಪ್ರಜ್ಞೆ”ಗಳು ಕಾಂಗ್ರೆಸ್ ಸರಕಾರಕ್ಕೆ ಬಹುಪರಾಕ್ ಕೂಗುವಲ್ಲಿ ನಿರತವಾಗಿವೆ.

ದನವನ್ನು ಅಧಿಕೃತವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಗಟ್ಟಿದ ಹಿಂದುತ್ವವಾದಿ ಪೊಲೀಸರು ಕಬೀರ್ ನನ್ನು ಕೊಲೆ ಕಬೀರ್ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಗುಂಡೇಟಿಗೆ ಒಳಗಾಗಿ ಕೊಲೆಯಾದ ಕಬೀರ್ ನ ಕುಟುಂಬ ವಂಶಪರಂಪರ್ಯವಾಗಿ ದನದ ವ್ಯಾಪಾರವನ್ನು ನಡೆಸುತ್ತಿದೆ. ಇವರ ಮೇಲೆ ಈವರೆಗೆ ದನ ಕಳ್ಳತನದ ಆರೋಪವಿಲ್ಲ. ಮೂಲತಃ  ಜೋಕಟ್ಟೆಯ ಕಬೀರ್ ಕುಟುಂಬ ಇತ್ತೀಚೆಗಷ್ಟೇ ಸುರತ್ಕಲ್ ಸಮೀಪದ ಕೃಷ್ಣಾಪುರಕ್ಕೆ ತಮ್ಮ ನಿವಾಸವನ್ನು ಸ್ಥಳಾಂತರಿಸಿತ್ತು. ಅಧಿಕೃತ ದನದ ವ್ಯಾಪಾರವನ್ನು ಮಾಡುತ್ತಿದ್ದ ಕಬೀರ್ ಚುನಾವಣೆಯ ನೀತಿ ಸಂಹಿತೆ ಘೋಷಣೆಯ ನಂತರ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಅಧಿಕೃತ ದನದ ವ್ಯಾಪಾರವಾದರೂ ಕೂಡಾ ಅಲ್ಲಲ್ಲಿ ಚೆಕ್ಕಿಂಗ್ ಮಾಡುವ ಪೊಲೀಸರಿಗೆ ಮಾಮೂಲು ಕೊಟ್ಟು ಲಾಭವೇನೂ ಉಳಿಯುವುದಿಲ್ಲ ಎಂಬ ಕಾರಣಕ್ಕೆ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ನಿನ್ನೆ ಸಂಜೆಯವರೆಗೂ ಕೃಷ್ಣಾಪುರದಲ್ಲಿ ಕ್ರಿಕೆಟ್ ಆಡಿಕೊಂಡಿದ್ದ ಕಬೀರ್ ನಿನ್ನೆ ರಾತ್ರಿ ವ್ಯಾಪಾರಕ್ಕೆ ತೆರಳಿದ್ದ.

ತೀರ್ಥಹಳ್ಳಿಯಲ್ಲಿ ದನ ಖರೀದಿ ಮಾಡಿ, ಅಲ್ಲಿಂದ ಶ್ರಂಗೇರಿಗೆ ಬಂದ ಕಬೀರ್ ಇದ್ದಂತಹ ವ್ಯಾಪಾರಿ ತಂಡ ಶ್ರಂಗೇರಿಯಲ್ಲೂ ದನ ಖರೀದಿ ಮಾಡಿದೆ. ತೀರ್ಥ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಮಾಮೂಲು ನೀಡಿ ಚೀಟಿಯೊಂದನ್ನು ತೋರಿಸಿ ಶ್ರಂಗೇರಿಗೆ ಬಂದಿದ್ದಾರೆ. ಶ್ರಂಗೇರಿಯಲ್ಲೂ ಪೊಲೀಸರಿಗೆ ಮಾಮೂಲು ನೀಡಿ ಖರೀದಿಯ ಚೀಟಿ ತೋರಿಸಿ ಕಾರ್ಕಳ ಮಾರ್ಗವಾಗಿ ಬರುತ್ತಿದ್ದರು. ಆ ಸಂಧರ್ಭದಲ್ಲಿ ಮಾರ್ಗ ಮಧ್ಯೆ ಎಎನ್ಎಫ್ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸಿದ ಕಬೀರ್ ತಂಡ ಎಎನ್ಎಫ್ ಪೊಲೀಸರಿಗೆ ಮಾಮೂಲು ನೀಡಲು ಇಳಿದಿದ್ದಾರೆ. ವಾಹನದಲ್ಲಿ ದನ ಇರುವುದನ್ನು ಗುರುತಿಸಿದ ಪೊಲೀಸನೊಬ್ಬ ಹಿಂಬದಿಯಲ್ಲಿ ಕುಳಿತಿದ್ದ ಕಬೀರನನ್ನು ಇಳಿಯುವಂತೆ ಸೂಚಿಸಿದ್ದಾನೆ. ಕಬೀರ ವಾಹನದಿಂದ ಇಳಿದ ತಕ್ಷಣ ಗುಂಡಿನ ಶಬ್ದ ಕೇಳಿದೆ. ಗುಂಡಿನ ಶಬ್ದ ಕೇಳಿ ಮೂವರು ಪರಾರಿಯಾಗಿದ್ದಾರೆ. ಒಬ್ಬ ಪೊಲೀಸ್ ವಶವಾಗಿದ್ದಾನೆ. ಕಬೀರ ಶವವಾಗಿದ್ದಾನೆ

ಭಜರಂಗದಳ-ಪೊಲೀಸ್ ಜಂಟಿ ಕಾರ್ಯಾಚರಣೆ ?

ಈ ಗುಂಡು ಹಾರಾಟ ಮತ್ತು ಕಬೀರ್ ಸಾವಿನ ಹಿಂದೆ ಹಿಂದುತ್ವವಾದಿ ಸಂಘಟನೆಗಳು ಮತ್ತು ಪೊಲೀಸರ ನಂಟಿನ ವಾಸನೆ ಬರುತ್ತಿದೆ. 10246275_688721334522490_5291328350701068876_nಎಎನ್ಎಫ್ ಸಿಬ್ಬಂದಿಗಳು ವಾಹನ ನಿಲ್ಲಿಸಲು ಹೇಳಿದಾಗ ವಾಹನ ನಿಲ್ಲಿಸಿಲ್ಲ ಎಂಬ ವಾದ ಪೊಲೀಸರದ್ದು. ಮೂವರು ತಪ್ಪಿಸಿಕೊಂಡಿದ್ದು ವಾಹನ ನಿಲ್ಲಿಸಿದ್ದರಿಂದಲೇ ಸಾಧ್ಯವಾಗಿದೆ. ವಾಹನ ನಿಂತ ನಂತರವೂ ಗುಂಡು ಹಾರಿಸುವ ಅಗತ್ಯ ಇರಲಿಲ್ಲ. ಪರಾರಿಯಾಗುತ್ತಿದ್ದ ಆರೋಪಿಗಳ ಬಳಿ ಬಂದೂಕುಗಳು ಕಂಡು ಬಂದಲ್ಲಿ ಗುಂಡು ಹಾರಿಸಿದ್ದನ್ನು ಸಮರ್ಥಿಸಬಹುದಿತ್ತು. ಆದರೆ ಇಂತಹ ಯಾವ ಸಮರ್ಥನೆಗಳಿಗೂ ಇಲ್ಲಿ ಅವಕಾಶವಿಲ್ಲ. ಪೊಲೀಸರು ತಪ್ಪು ಕಲ್ಪನೆಗೆ ಒಳಗಾಗಿ ಶೂಟ್ ಮಾಡಿದರು ಎಂದಿಟ್ಟುಕೊಂಡರೂ ನಂತರ ನಡೆದ ವಿದ್ಯಾಮಾನಗಳು ತೀರಾ ಅಮಾನವೀಯವಾದುದ್ದು.

ಮಾಡದ ತಪ್ಪಿಗೆ ಸಾವನ್ನಪ್ಪಿದ ಹರೆಯದ ಯುವಕ ಕಬೀರ್ ನ ಸಾವಿನಿಂದ ಕಂಗಟ್ಟ ಕುಟುಂಬಕ್ಕೆ ಅವನ ಶವವನ್ನು ಕೊಂಡೊಯ್ಯಲು ಭರಂಗದಳದವರು ಅಡ್ಡಿಪಡಿಸಿದರು. ಕನಿಷ್ಠ ಶವ ಕೊಂಡೊಯ್ಯಲು ಬಂದ ದುಃಖತಪ್ತ ಕಟುಂಬದವರು ಎನ್ನುವ ಕನಿಕರವೂ ಇಲ್ಲದೆ ಶ್ರಂಗೇರಿ ಶವಾಗಾರದಲ್ಲಿರುವ ಶವವನ್ನು ಕೊಂಡೊಯ್ಯಲು ಮಂಗಳೂರಿನಿಂದ ಹೊರಟ ಹೆತ್ತವರ ವಾಹನವನ್ನು ಪುಡಿ ಮಾಡಲಾಯಿತು. ಇವೆಲ್ಲವನ್ನೂ ನೋಡಿದಾಗ ಭಜರಂಗದಳದ ಅಜೆಂಡಾದ ಭಾಗವಾಗಿಯೇ ಶೂಟೌಟ್ ನಡೆದಿರುವಂತೆ ಕಾಣುತ್ತಿದೆ.

ಹೆಚ್ಚುತ್ತಿರುವ ಮುಸ್ಲಿಂ-ದಲಿತ-ಮಹಿಳೆಯರ ಮೇಲಿನ ದಾಳಿ

ಕಾಂಗ್ರೆಸ್ ಸರಕಾರ ಬಂದ ನಂತರ ಮುಸ್ಲೀಮರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗಿವೆ. ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ನಡೆದ ನೈತಿಕ ಪೊಲೀಸ್ ಗಿರಿಗಿಂತಲೂ ಅಧಿಕ ನೈತಿಕ ಪೊಲೀಸ್ ಗಿರಿಗಳು ಕಳೆದ ಒಂದು ವರ್ಷದಲ್ಲಿ ನಡೆದಿವೆ. ಅಲ್ಪಂಖ್ಯಾತರ ಮೇಲೆ ದಾಳಿಗಳು ನಡೆದಿವೆ. ಇಷ್ಟೆಲ್ಲಾ ಆದರೂ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ದನಿಯೆತ್ತುತ್ತಿಲ್ಲ. ಕೇಳಿದರೆ “ಕಾನೂನು ಅದರ ಕ್ರಮ ಕೈಗೊಳ್ಳುತ್ತದೆ. ನಾವು ಅದರಲ್ಲಿ ಕೈ ಹಾಕುವುದಿಲ್ಲ” ಎನ್ನುತ್ತಾರೆ. ಈ ಮಾತು ಕೇಳಲು ಅಂದವಾಗಿದ್ದರೂ ಅಮಾನವೀಯವಾಗಿದೆ. ಈ ರೀತಿಯ ದೌರ್ಜನ್ಯ ಮತ್ತು ಸಂವೇದನಾ ರಹಿತ ಜನಪ್ರತಿನಿಧಿಗಳನ್ನು ವಿರೋಧಿಸಿಯೇ ಜನರು ಕಾಂಗ್ರೆಸ್ ಗೆ ಮತ ಹಾಕಿದ್ದು ಎಂಬುದನ್ನು ಸರಕಾರ ಮರೆತಂತಿದೆ.

ಒಂದೆಡೆ ಹೆಚ್ಚುತ್ತಿರುವ ನೈತಿಕ ಪೊಲೀಸ್ ಗಿರಿ ಮತ್ತೊಂದೆಡೆ ಭಜರಂಗಿಗಳ ಕೆಲಸವನ್ನು ಮಾಡುತ್ತಿರುವ ಪೊಲೀಸರು. ಮಂಗಳೂರಿನ ಹಲವಾರು ಪ್ರಕರಣಗಳನ್ನು ಅವಲೋಕಿಸಿದಾಗ  ಇವರು ಪೊಲೀಸರೋ ಭಜರಂಗಿಗಳೋ ಎಂಬ ಅನುಮಾನ ಮೂಡುವಂತಿದೆ. ಜನವರಿ-ಫೆಬ್ರವರಿ- ಮಾರ್ಚ್ ಈ ಮೂರು ತಿಂಗಳಲ್ಲಿ 15ಕ್ಕೂ ಅಧಿಕ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕರಾವಳಿಯಲ್ಲಿ ದಾಖಲಾಗಿದೆ. ಇನ್ನು ಪೊಲೀಸರು ಪ್ರಕರಣ ದಾಖಲಿಸದೆ ಪ್ರೇಮಿಗಳಿಗೇ ಎಚ್ಚರಿಕೆ ಕೊಟ್ಟು, ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸಿದ ಉದಾಹರಣೆಗಳು ಅವೆಷ್ಟೋ ಇವೆ. ಇದಲ್ಲದೆ ನಿರಾತಂಕವಾಗಿ ನಡೆಯುತ್ತಿರುವ ದೇವದಾಸಿ ಪದ್ದತಿ, ಸಿಡಿ ಆಚರಣೆ, ದಲಿತ ದೌರ್ಜನ್ಯ ಪ್ರಕರಣಗಳು… ಇವೆಲ್ಲದರ ಮಧ್ಯೆ ಮುಸ್ಲೀಮರ ಮೇಲಿನ ದಾಳಿ.

ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂಧರ್ಭ ನಾನು ನೂರಾರು ನೈತಿಕ ಪೊಲೀಸ್ ಗಿರಿ, ಅಲ್ಪಸಂಖ್ಯಾತರ ಮೇಲಿನ ದಾಳಿ, ದಲಿತರ ಮೇಲಿನ ದಾಳಿಯನ್ನು ಸುದ್ದಿ ಮಾಡಿದ್ದೆ. artists-campainingಆ ಸಂಧರ್ಭದಲ್ಲಿ ಸುಮಾರು 45 ಜನ ಕೋಮುವಾದಿ ಕಾರ್ಯಕರ್ತರು ಮಂಗಳೂರು ಜೈಲಿನಲ್ಲಿದ್ದರು. ಕೆಲವರು ಒಂದು ವರ್ಷಕ್ಕಿಂತಲೂ ಅಧಿಕ ಜೈಲುವಾಸವನ್ನು ಅನುಭವಿಸಿದರು. ನೀವು ನಂಬಲೇ ಬೇಕು. ಈಗ ಇಷ್ಟೆಲ್ಲಾ ದಾಳಿಯಾಗುತ್ತಿದ್ದರೂ ಒಬ್ಬನೇ ಒಬ್ಬ ಕೋಮುವಾದಿ ಮಂಗಳೂರು ಜೈಲಿನಲ್ಲಿ ಇಲ್ಲ. ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆಸಿದ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದ ಹಲವು ಕೋಮುವಾದಿಗಳ ಮೇಲೆ ಒಂದಕ್ಕಿಂತಹ ಅಧಿಕ ಕೊಲೆ ಪ್ರಕರಣಗಳಿವೆ. ಆದರೂ ಒಂದೋ ಬಂಧಿಸಿದ ಎರಡೇ ದಿನದಲ್ಲಿ ಜಾಮೀನು ದೊರೆಯುತ್ತದೆ. ಇಲ್ಲವೇ ಬಂಧನಕ್ಕೊಳಗಾಗುವ ಮೊದಲೇ ಜಾಮೀನು ದೊರೆಯುತ್ತದೆ. ಅಷ್ಟೊಂದು ಕಠಿಣ ಕ್ರಮಗಳನ್ನು ಕಾಂಗ್ರೆಸ್ ಸರಕಾರ ಕೈಗೊಂಡಿದೆ!!

”ಏನ್ ಸಾರ್ ನೀವು… ಆಡಳಿತಗಾರರ ಜೊತೆ ಸೇರ್ಕೊಂಡ್ರಲ್ಲಾ ” ಎಂದು ಕಾಂಗ್ರೆಸ್ ಸರಕಾರ ರಚನೆಯಾದ ಸಂಧರ್ಭ ಪ್ರಗತಿಪರರೊಬ್ಬರನ್ನು ಕೇಳಿದಾಗ ”ನೋಡ್ರಿ ಈ ಚಳುವಳಿಗಳನ್ನೇ ಮಾಡುತ್ತಾ ಕೂರುವುದಲ್ಲ. ಅವಕಾಶ ಸಿಕ್ಕಿದಾಗ ಆಡಳಿತಗಾರರ ಹತ್ತಿರ ಹೋಗಿ ವ್ಯವಸ್ಥೆಯನ್ನು ಸರಿ ಮಾಡುವ ಕೆಲಸ ಮಾಡಬೇಕು” ಎಂದಿದ್ದರು. ಈಗ ನಮ್ಮ ಬಹಳಷ್ಟು ಪ್ರಗತಿಪರರು ಆಡಳಿತಗಾರರ ಅಕ್ಕಪಕ್ಕ ಕಾಣಸಿಗುತ್ತಾರೆ. ಇದೇ ಧೈರ್ಯದಲ್ಲಿ ಪೊಲೀಸರು ಅಲ್ಪಸಂಖ್ಯಾತರು-ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಪ್ರೇಮಿಗಳ ಮೇಲೆ ದಾಳಿ ನಡೆಸಿದ ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸುತ್ತಾರೆ. ಅದೇ ಪ್ರಗತಿಪರರ ಧೈರ್ಯದಲ್ಲಿ ಇಂದು ನಮ್ಮ ಕಬೀರನನ್ನು ಕೊಂದು ಹಾಕಿದ್ದಾರೆ.

ಪ್ರಜಾ ಸಮರ – 19 (ನಕ್ಸಲ್ ಕಥನದ ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

ಅಧಿಕೃತವಾಗಿ 45 ವರ್ಷಗಳನ್ನು, ಅನಧಿಕೃತವಾಗಿ 50 ವರ್ಷಗಳನ್ನು ಪೂರೈಸಿರುವ ಭಾರತದ ನಕ್ಸಲ್ ಹೋರಾಟವನ್ನು 2013 ರ ಹೊಸ್ತಿಲಲ್ಲಿ ನಿಂತು ಪರಾಮರ್ಶಿಸಿದರೆ, ಸಂಭ್ರಮ ಪಡುವ ವಿಷಯಕ್ಕಿಂತ ಸಂಕಟ ಪಡುವ ಸಂಗತಿಗಳೆ ಹೆಚ್ಚಾಗಿವೆ.

2010 ರಲ್ಲಿ ಅಜಾದ್ ಅಲಿಯಾಸ್ ಚುರುಮುರಿ ರಾಜ್ ಕುಮಾರ್, 2011 ನವಂಬರ್ ತಿಂಗಳಿನಲ್ಲಿ ಕಿಶನ್ ಜಿ ಇವರ ಹತ್ಯೆಯಿಂದಾಗಿ ತೀವ್ರ ಹಿನ್ನಡೆ ಅನುಭವಿಸಬೇಕಾದ ನಕ್ಸಲ್ ಹೋರಾಟಕ್ಕೆ 2012 ರಲ್ಲಿ ಆರ್.ಕೆ. ಎಂದು ಜನಪ್ರಿಯವಾಗಿದ್ದ ರಾಮಕೃಷ್ಣ ಅವರ ಬಂಧನದಿಂದ ಚೇತರಿಸಿಕೊಳ್ಳಲಾಗದ ಪೆಟ್ಟು ಬಿದ್ದಿತು. ಮಾವೋವಾದಿ ನಕ್ಸಲ್ ಚಳುವಳಿಗೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣರಾಗಿದ್ದramakrishna-naxal-india ರಾಮಕೃಷ್ಣರನ್ನು ಕೊಲ್ಕತ್ತ ಪೊಲೀಸರು, ಆಂಧ್ರ ಪೊಲೀಸರ ನೆರವಿನಿಂದ ಕೊಲ್ಕತ್ತ ನಗರದಲ್ಲಿ ರಾಕೆಟ್ ಲಾಂಚರ್‌ಗಳಿಗೆ ಬೇಕಾದ ಬಿಡಿಭಾಗಗಳನ್ನು ವರ್ಕ್‌ಶಾಪ್ ಒಂದರಲ್ಲಿ ತಯಾರಿಸುತ್ತಿದ್ದ ವೇಳೆ ಬಂಧಿಸುವಲ್ಲಿ ಯಶಸ್ವಿಯಾದರು.

ಆಂಧ್ರದ ಕರೀಂನಗರ ಜಿಲ್ಲೆಯ ಹಳ್ಳಿಯಿಂದ ಬಂದಿದ್ದ ರಾಮಕೃಷ್ಣರು 1976 ರಲ್ಲಿ ವಾರಂಗಲ್‌ನ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಸಂಸ್ಥೆಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಪದವಿ ಪಡೆದು 1978 ರಲ್ಲಿ ಭೂಗತರಾಗುವ ಮೂಲಕ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು, ಕೊಲ್ಕತ್ತ. ಚೆನ್ನೈ ನಗರಗಳಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ಸಣ್ಣ ಕೈಗಾರಿಕೆಗಳಿಗೆ ಆದೇಶ ನೀಡಿ ತಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳುತ್ತಿದ್ದರು. ಹೀಗೆ ಬಿಡಿಭಾಗ ಸಂಗ್ರಹಿಸಲು ಕೊಲ್ಕತ್ತ ನಗರಕ್ಕೆ ತೆರಳಿದಾಗ, ಪೊಲೀಸರಿಂದ ಬಂಧಿತರಾದರು. ಈಗ ಗಣಪತಿಯವರನ್ನು ಹೊರತು ಪಡಿಸಿದರೆ ಸೈದ್ಧಾಂತಿಕ ಹಿನ್ನೆಲೆಯುಳ್ಳ ಒಬ್ಬ ಹಿರಿಯ ನಾಯಕನನ್ನು ನಕ್ಸಲ್ ಹೋರಾಟದಲ್ಲಿ ಹುಡುಕುವುದು ಕಷ್ಟವಾಗಿದೆ.

ಕಳೆದ ಒಂದು ದಶಕದಿಂದ ನಗರಗಳಿಂದ ಹೋರಾಟಗಳತ್ತ ಆಕರ್ಷಿತರಾಗಿ ಬರುತ್ತಿದ್ದ ವಿದ್ಯಾವಂತರ ಸಂಖ್ಯೆ ಸಂಪೂರ್ಣ ಸ್ಥಗಿತಗೊಡಿದೆ. ವ್ಯವಸ್ಥೆಯಯ ವಿರುದ್ದದ ಹೋರಾಟಕ್ಕೆ ಅರಣ್ಯಕ್ಕೆ ಹೋಗಿ ಬಂದೂಕ ಹಿಡಿಯಬೇಕೆಂಬುದು ಈಗಿನ ಯುವಜನತೆಗೆ ಸವಕಲು ಮಾದರಿಯಾಗಿದೆ. ಇದೆ ವೇಳೆಗೆ 2010 ರ ಮಾರ್ಚ್ 23 ರಂದು ನಕ್ಸಲ್ ಚಳುವಳಿಯ ಸಂಸ್ಥಾಪಕ ಹಾಗೂ ಚಾರು ಮುಜುಂದಾರ್ ಸಂಗಾತಿ ಕನು ಸನ್ಯಾಲ್ ತಮ್ಮ ವೃದ್ಧಾಪ್ಯದಲ್ಲಿ ತೀವ್ರ ಬಡತನ ಮತ್ತು ಹದಗೆಟ್ಟ ಆರೋಗ್ಯಕ್ಕೆ ಔಷಧಕೊಳ್ಳಲು ಹಣವಿಲ್ಲದ ಸ್ಥಿತಿಯಲ್ಲಿ ತಮ್ಮ ಮಗಳ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಗಿನ ತಲೆಮಾರಿಗೆ ಹೋರಾಟ ಕುರಿತು ಮರುಚಿಂತನೆಗೆ ಪ್ರೇರೇಪಿಸಿದೆ. 1980 ಮತ್ತು 1990 ರ ದಶಕದಲ್ಲಿ ನಕ್ಸಲ್ ಹೋರಾಟಕ್ಕೆ ಸೇರ್ಪಡೆಯಾದ ಅನಕ್ಷರಸ್ತ ಆದಿವಾಸಿ ಯುವಕರು ಈಗ ಚಳುವಳಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಮಾವೋವಾಗಲಿ, ಲೆನಿನ್ ಆಗಲಿ ಅಥವಾ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತಗಳ ಗಂಧ ಗಾಳಿ ತಿಳಿದಿಲ್ಲ. ಇಂತಹ ಕಾರಣಗಳಿಂದಾಗಿಯೆ ಸತ್ತು ಹೋಗಿರುವ ಯೋಧನ ಹೊಟ್ಟೆಯೊಳಗೆ ಸಿಡಿಮದ್ದನ್ನು ತುಂಬಿಸಿ ಇಡುವ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ.

ಒಂದು ನೆಮ್ಮದಿಯ ಸಂಗತಿಯೆಂದರೆ, ಇಡೀ ರಾಷ್ಟ್ರಾದ್ಯಂತ ನಕ್ಸಲರು ಮತ್ತು ಸರ್ಕಾರಗಳ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಹಿಂಸೆಯ ಪ್ರಮಾಣ ಇಳಿಮುಖವಾಗುತ್ತಿದೆ. ಜಾರ್ಖಂಡ್ ಮತ್ತು ಛತ್ತೀಸ್‌ ಗಡ್ ರಾಜ್ಯಗಳನ್ನು ಹೊರತುಪಡಿಸಿದರೆ, ಉಳಿದ ರಾಜ್ಯಗಳಲ್ಲಿ ಆಶಾಭಾವನೆ ಮೂಡುವಂತಿದೆ. pwg-naxalನಕ್ಸಲ್ ಚಳುವಳಿಯನ್ನು ಹುಟ್ಟುಹಾಕಿದ ಆಂಧ್ರಪ್ರದೇಶದಲ್ಲಿ ಕೇವಲ 13 ಸಾವುಗಳು ಸಂಭವಿಸಿವೆ. ಜಾರ್ಖಂಡ್ ನಲ್ಲಿ 160 ಸಾವು (2011 ರಲ್ಲಿ 182 ) ಛತ್ತೀಸ್‌ಗಡದಲ್ಲಿ 107 (2011 ರಲ್ಲಿ 204) ಬಿಹಾರದಲ್ಲಿ 43 ಸಾವು (2011 ರಲ್ಲಿ 63) ಪಶ್ಚಿಮ ಬಂಗಾಳದಲ್ಲಿ 6 ಸಾವು (2011 ರಲ್ಲಿ 45), ಹೀಗೆ ಭಾರತದಲ್ಲಿ 2011 ರಲ್ಲಿ 1760 ಪ್ರಕರಣಗಳು ನಡೆದು, 611 ನಾಗರೀಕರು ಮತ್ತು 99 ನಕ್ಸಲಿಯರು ಮೃತಪಟ್ಟಿದ್ದರೆ, 2012 ರ ವೇಳೆಗೆ 1365 ಪ್ರಕರಣಗಳು ದಾಖಲಾಗಿ 409 ನಾಗರೀಕರು ಮತ್ತು 74 ನಕ್ಸಲಿಯರು ಮೃತಪಟ್ಟಿದ್ದಾರೆ. ಒಟ್ಟಾರೆ ಸಕಾರ ಮತ್ತು ನಕ್ಸಲ್ ಸಂಘಟನೆಗಳಿಗೆ ಸಂಘರ್ಷ ಮತ್ತು ಹಿಂಸೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಮೂಡತೊಡಗಿದೆ.

ಭಾರತದ ನಕ್ಸಲ್ ಇತಿಹಾಸದಲ್ಲಿ ಪೊಲೀಸರತ್ತ, ಅಥವಾ ಸರ್ಕಾರಗಳತ್ತ, ಇಲ್ಲವೆ ನಕ್ಸಲ್ ಸಂಘಟನೆಗಳತ್ತ ಬೆರಳು ತೋರಿಸಿ ಆರೋಪ ಹೊರಿಸುವ ಮುನ್ನ ಉಭಯ ಬಣಗಳು ಎಲ್ಲಿ ಎಡವಿದವು ಎಂಬುದರತ್ತ ಗಮನಹರಿಸಿ ಹಿಂಸೆ ಮತ್ತು ಹೋರಾಟವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಯಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಮುಕ್ತ ಮನಸ್ಸಿನಿಂದ ಕೈ ಜೋಡಿಸಬೇಕಿದೆ. ಇತಿಹಾಸದ ಘಟನೆಗಳನ್ನು ಕೆದುಕುತ್ತಾ ಪರಸ್ಪರ ಆರೋಪ ಮಾಡಿ ಕಾಲ ಕಳೆಯುವ ಬದಲು, ಹಿಂಸೆ ಮುಕ್ತ ಜಗತ್ತಿನತ್ತ ನಾವು ಹೆಜ್ಜೆ ಹಾಕಬೇಕಿದೆ. ನಾವು ಸೃಷ್ಟಿಸ ಬೇಕಾದ ಸಮಾಜದಲ್ಲಿ ಹಿಂಸೆ, ಬಡತನ, ಅಪಮಾನ, ಶೋಷಣೆ, ದಲಿತರು, ಆದಿವಾಸಿಗಳು, ಮತ್ತು ಅಲ್ಪಸಂಖ್ಯಾತರು ಇವರೆಲ್ಲಾ ಭಯಮುಕ್ತರಾಗಿ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ನೈತಿಕ ಹೊಣೆ ಅಕ್ಷರ ಮತ್ತು ವಿದ್ಯೆಯನ್ನು ಬಲ್ಲ ನಮ್ಮೆಲ್ಲರ ಮೇಲಿದೆ. ವೈದ್ಯನೊಬ್ಬ ಖಾಯಿಲೆಯ ಮೂಲಕ್ಕೆ ಕೈ ಹಾಕುವಂತೆ ನಾವುಗಳು ಕೂಡ ಸಮಸ್ಯೆಗಳ ಬುಡಕ್ಕೆ ಕೈ ಹಾಕಬೇಕಿದೆ.

ಭಾರತದ ನಕ್ಸಲ್ ಹೋರಾಟದ ಇತಿಹಾಸವಾಗಲಿ ಅಥವಾ ಅದು ಹಿಡಿದ ಹಿಂಸೆಯ ಮಾರ್ಗ ಕುರಿತಂತೆ ನಮ್ಮಗಳ ಅಸಮಾಧಾನ ಏನೇ ಇರಲಿ, ಅವರುಗಳ ಹೋರಾಟದಲ್ಲಿ ಎಲ್ಲಿಯೂ ಸ್ವಾರ್ಥವೆಂಬುದು ಇರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇವೊತ್ತಿಗೂ ಮೂಕ ಪ್ರಾಣಿಗಳಂತೆ ಬದುಕುತ್ತಿರುವ ಆದಿವಾಸಿಗಳು, ಹಿಂದುಳಿದ ಬುಡಕಟ್ಟು ಜನಾಂಗಗಳ ನೆಮ್ಮದಿಯ ಬದುಕಿಗಾಗಿ ನಕ್ಸಲಿಸಂ ಹೆಸರಿನಲ್ಲಿ ಸಾವಿರಾರು ವಿದ್ಯಾವಂತ ಯುವಕರು ಪ್ರಾಣತೆತ್ತಿದ್ದಾರೆ. ಇವರ ಹೋರಾಟದ ಹಿಂದಿನ ಕಾಳಜಿಯನ್ನು ನಮ್ಮನ್ನಾಳುವ ಸರ್ಕಾರಗಳು ಅರಿಯುವ ಮನಸ್ಸು ಮಾಡಿದ್ದರೆ, ನಕ್ಸಲ್ ಸಂಘಟನೆಗಳು ಮತ್ತು ಸರ್ಕಾರಗಳ ನಡುವಿನ ಸಂಘರ್ಷಕ್ಕೆ ರಕ್ತದ ಕಲೆಗಳು ಅಂಟಿಕೊಳ್ಳುತ್ತಿರಲಿಲ್ಲ. ಸಂಘರ್ಷಕ್ಕೆ ಮೂಲ ಕಾರಣರಾದ ಭಾರತದ ಅರಣ್ಯವಾಸಿ ಆದಿವಾಸಿಗಳ ಬದುಕು ಹಸನಾಗಿದೆಯಾ? ಅದೂ ಇಲ್ಲ.

ನಮ್ಮ ನಡುವಿನ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರ ಗುಹಾ 2011 ರ ಲ್ಲಿ ಆಗಸ್ಟ್ ಹದಿನೈದರೆಂದು ದೆಹಲಿಯ ಹಿಂದೂಸ್ತಾನ್ naxalite24fo4ಟೈಮ್ಸ್ ಪತ್ರಿಕೆಗೆ “ಟ್ರೈಬಲ್ ಟ್ರ್ಯಾಜಿಡಿಸ್” ( ಆದಿವಾಸಿಗಳ ದುರಂತ) ಎಂಬ ವಿಶೇಷ ಲೇಖನ ಬರೆದಿದ್ದರು. ಭಾರತದ ಆದಿವಾಸಿಗಳ ಸಮಸ್ಯೆಯನ್ನು ನಿಖರವಾಗಿ ಗುರುತಿಸಿರುವ ಗುಹಾ ಅವರು, ರಾಜಕಾರಣಿಗಳ ಕಪಟ ನಾಟಕವನ್ನೂ ಸಹ ಅನಾವರಣಗೊಳಿಸಿದ್ದಾರೆ. 2010 ರ ಆಗಸ್ಟ್ ತಿಂಗಳಿನಲ್ಲಿ ಒರಿಸ್ಸಾದಲ್ಲಿ ಆದಿವಾಸಿಗಳನ್ನು ಭೇಟಿ ಅವರ ಸಮಸ್ಯೆಗಳನ್ನು ಆಲಿಸಿದ್ದ ರಾಹುಲ್ ಗಾಂಧಿ, ಇನ್ನುಮುಂದೆ ದೆಹಲಿಯಲ್ಲಿ ನಿಮ್ಮ ಪರವಾಗಿ ಸೈನಿಕನಂತೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ ಮರೆತು ಹೋದ ಪ್ರಸಂಗವನ್ನು ಪ್ರಸ್ತಾಪಿಸುತ್ತಾ, ಭಾರತದ ಬುಡಕಟ್ಟು ಅಥವಾ ಆದಿವಾಸಿಗಳ ಸಮಸ್ಯೆಯನ್ನು ಏಳು ಬಗೆಯಲ್ಲಿ ರಾಮಚಂದ್ರ ಗುಹಾ ಗುರುತಿಸಿದ್ದಾರೆ:

  1. ದಟ್ಟವಾದ ಅರಣ್ಯದಲ್ಲಿ ತಮ್ಮದೇ ಆದ ಸಂಸ್ಕೃತಿಯ ನೆರಳಿನಲ್ಲಿ ಮತ್ತು ಸಮೃದ್ಧಿಯಾದ ಖನಿಜ ಸಂಪತ್ತಿರುವ ಗುಡ್ಡಗಾಡು ಪ್ರದೇಶದಲ್ಲಿ ಬದುಕಿರುವ ಆದಿವಾಸಿಗಳು ಇಂದು ಅಭಿವೃದ್ಧಿಯ ನೆಪದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ, ಅಣೆಕಟ್ಟುಗಳ ನಿರ್ಮಾಣ, ಅರಣ್ಯದಲ್ಲಿ ನಿರಂತವಾಗಿ ನಡೆದಿರುವ ಮರಗಳ ಮಾರಣಹೋಮ ಇವೆಲ್ಲವೂ ಅವರನ್ನು ಆಧುನಿಕ ಅಭಿವೃದ್ಧಿ ಯೋಜನೆಗಳು ಅತಂತ್ರರನ್ನಾಗಿ ಮಾಡಿವೆ.
  2. ಭಾರತದಲ್ಲಿ ದಲಿತರಿಗೆ ದಿಕ್ಕುದೆಸೆಯಾಗಿ ಅಂಬೇಡ್ಕರ್ ಜನ್ಮತಾಳಿದ ಹಾಗೆ ಆದಿವಾಸಿಗಳಿಗೆ ಒಬ್ಬ ಅಂಬೇಡ್ಕರ್ ದೊರೆಯದಿರುವುದು ಅವರ ಈ ಶೋಚನೀಯ ಬದುಕಿಗೆ ಕಾರಣವಾಗಿದೆ.
  3. ಭಾರತದಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಹರಿದು ಹಂಚಿಹೋಗಿರುವ ಆದಿವಾಸಿಗಳು ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷಗಳಿಗೆ ದಲಿತರು ಅಥವಾ ಅಲ್ಪಸಂಖ್ಯಾತರ ಹಾಗೆ ಮತಬ್ಯಾಂಕ್‌ಗಳಾಗಿ ಕಾಣಲಿಲ್ಲ.
  4. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನಾಂಗಕ್ಕಾಗಿ ಮೀಸಲಿಟ್ಟ ಉದ್ಯೋಗಗಳು ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ವಿದ್ಯಾವಂತರ ಪಾಲಾದವು.
  5. ಆದಿವಾಸಿಗಳ ಪ್ರತಿನಿಧಿಯಂತೆ ಉನ್ನತ ಹುದ್ದೆಯಲ್ಲಿ ಮೇಲ್ಮಟ್ಟದ ಅದಿಕಾರಿಯಾಗಲಿ, ಅಥವಾ ಒಬ್ಬ ಜನಪ್ರತಿನಿಧಿಯಾಗಲಿ ಇಲ್ಲದಿರುವುದು, ಆದಿವಾಸಿಗಳ ಸಮಸ್ಯೆಗಳು ಈವರೆಗೆ ಸರ್ಕಾರಗಳ ಕಣ್ಣಿಗೆ ಗೋಚರವಾಗಿಲ್ಲ.
  6. ಆದಿವಾಸಿಗಳ ಬದುಕು ಪರಿಸರಕ್ಕೆ ಮಾರಕವಾಗದಂತೆ, ದೇಶಿ ಜ್ಞಾನಪರಂಪರೆಯಿಂದ ಕೂಡಿದ್ದು ಅವರುಗಳು ಕಾಪಾಡಿಕೊಂಡು ಬಂದಿರುವ ಜ್ಞಾನಶಿಸ್ತುಗಳನ್ನು ಸುಲಭವಾಗಿ ಆಧುನಿಕ ಬದುಕಿಗಾಗಲಿ, ತಂತ್ರಜ್ಞಾನಕ್ಕಾಗಲಿ ಅಳವಡಿಸಲು ಸಾಧ್ಯವಾಗಿಲ್ಲ.
  7. ಪಶ್ಚಿಮ ಬಂಗಾಳದ ಸಂತಾಲ್ ಭಾಷೆಯೊಂದನ್ನು ಹೊರತು ಪಡಿಸಿದರೆ ಆದಿವಾಸಿಗಳ ಮಾತೃಭಾಷೆಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಈ ಕಾರಣದಿಂದಾಗಿ ಆದಿವಾಸಿ ಮಕ್ಕಳು ಮಾತೃ ಭಾಷೆಯ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಸ್ವಾತಂತ್ರ್ಯ ಲಭಿಸಿ 66 ವರ್ಷಗಳಾದರೂ ಯಾವ ಪಕ್ಷಗಳಾಗಲಿ, ಸರ್ಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಇಲ್ಲವೆ ಯೋಜನೆಗಳನ್ನು ರೂಪಿಸಿದ್ದನ್ನು ನಾವುಗಳು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಿದ್ದರೆ ಈ ನತದೃಷ್ಟರು ಸಮಾಜದ ಮುಖ್ಯವಾಹಿನಿ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರು. ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾದಂತಿದೆ. ಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.

2003 ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರ್ಕಾರ ನಕ್ಸಲರ ಹಾವಳಿಯನ್ನು tribal-schools-educationತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ಧಿಯಲಿನ್ಲ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆ ಇವುಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು ಕೇಂದ್ರ ಸರ್ಕಾರ ಗ್ರಹಿಸಿತು. ಇದರಿಂದಾಗಿ ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. 2007 ರಲ್ಲಿ ಹತ್ತು ರಾಜ್ಯಗಳ 180 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿತ್ತು. 2012 ರ ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ ದೇಶಾದ್ಯಂತ 60 ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ ಮುಂದುವರಿಸಲು ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಶರ್ಮ ಮಧ್ಯಸ್ಥಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.

ಉದ್ಭವಿಸುವ ಸಮಸ್ಯೆಗಳಿಗೆ ಬಂದೂಕ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರ್ಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವುದಿಲ್ಲ. ನಕ್ಸಲ್ ಚಳುವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳುವುದನ್ನು ತಡೆಯಬೇಕು. ಇದಕ್ಕಿರುವ ಏಕೈಕ ಪರಿಹಾರ ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದ “ಜಲ್, ಜಂಗಲ್, ಜಮೀನ್” ಎಂಬ ಬೇಡಿಕೆಗಳು.

ಅರಣ್ಯದಲ್ಲಿ ಅತಂತ್ರರಾಗಿರುವ ಆದಿವಾಸಿಗಳ ನಿಸರ್ಗಮಯ ಸಹಜ ಬದುಕಿಗೆ ಅಡ್ಡಿಯಾಗದಂತೆ ಸರ್ಕಾರಗಳು ಕಾಳಜಿ ವಹಿಸಬೇಕು. ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಹಿಸಬೇಕು. (ಈಗಾಗಲೇ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಈ ಕುರಿತು ಸೃಷ್ಟನಿದರ್ಶನ ನೀಡಿದೆ.) ದಲ್ಲಾಳಿಗಳು ಮತ್ತು ಏಜೆಂಟರಿಂದ ಆದಿವಾಸಿಗಳು ಮೋಸ ಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಆ ಮೂಲಕ ಅರಣ್ಯ ಕಿರು ಉತ್ಪನ್ನಗಳಾದ ತೆಂಡು ಎಲೆ, ಜೇನು ತುಪ್ಪ, ಗಿಡಮೂಲಿಕೆ ಔಷಧಿಯ ಬೇರು ಮತ್ತು ಕಾಂಡಗಳು, ಬಿದರಿನ ಬೊಂಬು, ಸಂಗ್ರಹಿಸಿದ ಹಣ್ಣು ಹಂಪಲು ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಆರೋಗ್ಯ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಆದಿವಾಸಿಗಳ ಹಳ್ಳಿಗಳಿಗಲ್ಲಿ ಶಾಲೆ, ಆಸ್ಪತ್ರೆ ಇವುಗಳನ್ನು ತೆರೆಯುವುದರ ಮೂಲಕ ಎಲ್ಲಾ ಮಕ್ಕಳಿಗೆ ಈ ಸೌಲಭ್ಯ ದೊರೆಯುವಂತಾಗಬೇಕು. ಆದಿವಾಸಿ ಹಳ್ಳಿಗಳಿಗಳಲ್ಲಿ ಕುಡಿಯುವ ಶುದ್ದ ನೀರು ದೊರಕುವಂತಾಗಬೇಕು. ಯುವಕರಿಗೆ ವೃತ್ತಿ ಕೋರ್ಸುಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಆರಣ್ಯದಲ್ಲಿ ಆದಿವಾಸಿಗಳು ಬೇಸಾಯ ಮಾಡುತ್ತಿರುವ ಜಮೀನಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಮರು ಮಾರಾಟ ಅಥವಾ ಭೋಗ್ಯಕ್ಕೆ ಅವಕಾಶ ಇಲ್ಲದಂತೆ ನಿಬಂಧನೆಗಳನ್ನು ಹೇರಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೊದಲು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.

ಇಂತಹ ಮಾನವೀಯ ಮುಖವುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾತ್ರ ಸರ್ಕಾರಗಳಿಗೆ ನಕ್ಸಲ್ ಚಟುವಟಿಕೆಯನ್ನು ಚಿವುಟಿ ಹಾಕಲು ಸಾಧ್ಯ. ನಕ್ಸಲ್ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನೆಲದ ಬುದ್ಧಿಜೀವಿಗಳು ವಿಶೇಷವಾಗಿ ಎಡಪಂಥೀಯ ಪಕ್ಷಗಳ ಚಿಂತಕರ ಪಾತ್ರವಿದೆ. communist-photoಈ ಹಿಂದೆ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರೂ, ಭಾರತದ ಬಡವರು, ಬಡತನ, ಇಲ್ಲಿನ ವ್ಯವಸ್ಥೆಗಳ ವೈರುದ್ಯ, ಚಳವಳಿ ಮತ್ತು ಕಾರ್ಮಿಕರ ಬವಣೆ ಇವುಗಳ ಬಗ್ಗೆ ಅಪಾರ ಕಾಳಜಿ ಮತ್ತು ಒಳನೋಟಗಳನ್ನು ಹೊಂದಿದ್ದ ನಂಬೂದರಿಪಾಡ್, ಸುರ್ಜಿತ್ ಸಿಂಗ್, ಸುಂದರಯ್ಯ, ಜ್ಯೋತಿ ಬಸು ಇಂತಹ ನಾಯಕರು ಬೇಕಾಗಿದ್ದಾರೆ. ಕಮ್ಯುನಿಸ್ಟ್ ಪಕ್ಷದ ವೈಪಲ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬುದ್ದದೇವ್ ಭಟ್ಟಾಚಾರ್ಯ ನಡೆಸಿದ ಆಡಳಿತ ಮಾದರಿ ನಮ್ಮೆದುರು ಸಾಕ್ಷಿಯಾಗಿದೆ. ರೈತರು, ಕಾರ್ಮಿಕರ ಮಂತ್ರ ಜಪಿಸುತ್ತಾ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸಿಕೊಡಲು ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ರೈತರ ಮೇಲೆ ನಡೆಸಿದ ದೌರ್ಜನ್ಯಗಳು ನಮ್ಮ ಕಣ್ಣೆದುರು ಜೀವಂತವಾಗಿವೆ. ಈಗಿನ ಕಮ್ಯುನಿಸ್ಟ್ ಪಾಲಿಟ್ ಬ್ಯೂರೊದಲ್ಲಿ ಪ್ರಕಾಶ್ ಕಾರಟ್, ಸಿತಾರಾಮ್ ಯಚೂರಿ, ಬೃಂದಾ ಕಾರಟ್ ಮುಂತಾದ ಬದ್ಧತೆಯುಳ್ಳ ನಾಯಕರಿದ್ದರೂ ಸಹ ಕಮ್ಯುನಿಸ್ಟ್ ಕೇಂದ್ರ ಸಮಿತಿಯ ಸದಸ್ಯರು ಎಲೈಟ್ ಸಂಸ್ಕೃತಿಯ ಜನರಂತೆ ಚಿಂತಿಸುತ್ತಿದ್ದಾರೆ. ಉಳ್ಳವರ ಈ ಭಾರತದಲ್ಲಿ ನರಳುವವರ ಭಾರತವೂ ಕೂಡ ಇದೆ ಎಂಬುದನ್ನು ಅವರು ಮನಗಾಣಬೇಕಿದೆ.

ಒಂದು ಸಮಸ್ಯೆಯ ಪರಿಹಾರಕ್ಕೆ ಉಭಯ ಬಣಗಳ ನಡುವೆ ಸೌಹಾರ್ದಯುತ ಮಾತುಕತೆಗೆ ಸಿದ್ದಗೊಂಡಿರುವ ಮನಸ್ಸುಗಳು ಬೇಕು. ಸಮಸ್ಯೆಗಳನ್ನು ಬಗೆಹರಿಸಲು ಉಭಯಬಣಗಳ ನಡುವೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ನಿವೃತ್ತ ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖ್ಯಸ್ಥರು ಮತ್ತು ಸಮಾಜದ ವಿವಿಧ ವಲಯದ ಗಣ್ಯರು ನಮ್ಮ ನಡುವೆ ಇದ್ದಾರೆ. ಇಲ್ಲಿ ತುರ್ತಾಗಿ ಆಗಬೇಕಾಗಿರುವುದು ಎರಡು ಕಡೆಯಿಂದ ಸಿದ್ಧವಾಗಿರುವ ಮುಕ್ತ ಮನಸ್ಸುಗಳು ಮಾತ್ರ. ಇಂತಹ ಜ್ವಲಂತ ಸಮಸ್ಯೆಯನ್ನು ಹೀಗೆ ಬೆಳೆಯಲು ಬಿಟ್ಟರೆ ಈಗಾಗಲೇ ಅರ್ಧ ಶತಮಾನ ಕಳೆದಿರುವ ರಕ್ತ ಇತಿಹಾಸ ಕಥನ ಎಂದೆಂದೂ ಮುಗಿಯದ ಯುದ್ದವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಅಂತಹ ನೋವಿನ ಗಳಿಗೆಯಲ್ಲಿ ನಾವುಗಳು ಮೌನವಾಗಿ ಸಾಕ್ಷಿಗಳಾಗಬೇಕಾಗುತ್ತದೆ. ಅಂತಿಮವಾಗಿ ಇದು ಮಾನವೀಯತೆಗಾಗಿ ತುಡಿಯುವ ಮನಸ್ಸುಗಳ ಪಾಲಿಗೆ ಹಿಂಸಾತ್ಮಕವಾದ ಮತ್ತು ನರಕ ಸದೃಶ್ಯ ಜಗತ್ತು.


[ಕೊನೆಯ ಮಾತು :- ಪ್ರಿಯ ಓದುಗರೆ, ವರ್ತಮಾನ ಅಂತರ್ಜಾಲ ಪತ್ರಿಕೆಯಲ್ಲಿ ನಕ್ಸಲ್ ಕಥನದ ಸರಣಿ ಬರೆಯಲು ಅವಕಾಶ ಮಾಡಿಕೊಟ್ಟ ಪ್ರ್ರಿಯ ಮಿತ್ರ ರವಿ ಕೃಷ್ಣಾರೆಡ್ಡಿಯವರಿಗೆ ನನ್ನ ಧನ್ಯವಾದಗಳು. ಈ ಕಥನಕ್ಕೆ ಓದುಗ ಮಿತ್ರರು ತೋರಿದ ಪ್ರೀತಿ, ಪ್ರತಿಕ್ರಿಯೆ ಮತ್ತು ಆಸಕ್ತಿಯಿಂದಾಗಿ ನಾನು ಗಂಭೀರವಾಗಿ ಇಂತಹ ಅಧ್ಯಯನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ನಾನು ಕಳೆದ ಮುವ್ವತ್ತು ವರ್ಷಗಳಿಂದ ಹಲವು ಪ್ರಗತಿಪರ ಸಂಟನೆಗಳ ಜೊತೆ ಗುರುತಿಸಿಕೊಂಡಿದ್ದರೂ, ನಕ್ಸಲ್ ಚಳುವಳಿಯಿಂದ ಬಂದವನಲ್ಲ. ಕೆಲವು ರಾಜ್ಯಗಳಲ್ಲಿ ಪ್ರವಾಸ ಮಾಡಿ ಒರ್ವ ಪತ್ರಕರ್ತನಾಗಿ, ಸಂಶೋಧಕನಾಗಿ ನಡೆಸಿದ ಕ್ಷೇತ್ರ ಕಾರ್ಯ ಮತ್ತು ಮಾಜಿ ಹೋರಾಟಗಾರರ ಜೊತೆ ನಡೆಸಿದ ಚರ್ಚೆ ಮತ್ತು ಮಾತುಕತೆ, ಹಾಗೂ ಅವರು ನೀಡಿದ ಮಾಹಿತಿ ಮತ್ತು ಇತಿಹಾಸದ ದಾಖಲೆಗಳಿಂದ ಇಂತಹದ್ದೊಂದು ಸರಣಿ ಸಾಧ್ಯವಾಯಿತು. ನನ್ನ ಈ ಸರಣಿ ಕಥನದಲ್ಲಿ ಏನಾದರೂ ಕೊರತೆಯಿದ್ದರೆ, ಅಥವಾ ತಪ್ಪು ಮಾಹಿತಿಗಳಿದ್ದರೆ ನನ್ನ ಗಮನಕ್ಕೆ ತರಬೇಕಾಗಿ ವಿನಂತಿಸಿಕೊಳ್ಳತ್ತೇನೆ. ನನ್ನ ಇ-ಮೈಲ್ ವಿಳಾಸ : jagadishkoppa@gmail.com.

ಮುಂದಿ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನ ಪ್ರಸಿದ್ದ ಪ್ರಕಾಶನ ಸಂಸ್ಥೆಯಿಂದ “ಎಂದೂ ಮುಗಿಯದ ಯುದ್ದ” (ಭಾರತದ ನಕ್ಸಲ್ ಇತಿಹಾಸದ ಕಥನ) ಎಂಬ ಹೆಸರಿನಲ್ಲಿ ಪ್ರಕಟವಾಗುವ ಈ ಲೇಖನಗಳ ಸರಣಿಯ ಕೃತಿಯಲ್ಲಿ 1967 ರಿಂದ 1980 ರ ವರೆಗೆ ಜರುಗಿದ ಹೋರಾಟದ ಕಥನ ಮೊದಲ ಭಾಗದಲ್ಲಿ, ನಂತರ 1980 ರಿಂದ 2012 ರವರೆಗೆ ನಡೆದ ಹೋರಾಟ ಎರಡನೆ ಭಾಗದಲ್ಲಿ ಅಡಕವಾಗಿರುತ್ತದೆ. ಕೃತಿಯ ಕೊನೆಯ ಪುಟಗಳ ಅನುಬಂಧದ ವಿಭಾಗದಲ್ಲಿ ಈವರೆಗೆ ನಕ್ಸಲ್ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ನಕ್ಸಲ್ ಹುತಾತ್ಮ ನಾಯಕರ ವಿವರ ಮತ್ತು 1967 ರಿಂದ 2012 ರವರೆಗೆ ನಡೆದ ಪ್ರಮುಖ ಹಿಂಸಾಚಾರ ಘಟನೆಗಳು ಹಾಗೂ ನಕ್ಸಲ್ ಹೋರಾಟಕ್ಕಾಗಿ ಕಮ್ಯುನಿಸ್ಟ್ ಪಕ್ಷದಲ್ಲಿ ಹುಟ್ಟಿಕೊಂಡ ಸಂಘಟನೆಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆಸಕ್ತರು ಗಮನಿಸ ಬಹುದು. ಎಲ್ಲರಿಗೂ ನಮಸ್ಕಾರ. – ಡಾ. ಎನ್. ಜಗದೀಶ್ ಕೊಪ್ಪ]

(ಮುಗಿಯಿತು)