Category Archives: ನಕ್ಸಲ್ ಕಥನ

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-6)


– ಡಾ.ಎನ್. ಜಗದೀಶ್ ಕೊಪ್ಪ  


 

ಪ್ರಯೋಗ ಮತ್ತು ಸಿದ್ಧಾಂತ ಹಾಗೂ ಸಮಕಾಲೀನ ಸಮಸ್ಯೆಗಳ ವಿಶ್ಲೇಷಣೆ ಜೊತೆ ಜೊತೆಗೆ ಸ್ವಯಂ ವಿಮರ್ಶೆಯನ್ನು ಗುರಿಯಾಗಿಟ್ಟುಕೊಂಡು ರಚಿತವಾದ ನೂತನ ಪಕ್ಷವನ್ನು ಪಕ್ಷದ ಫೈರ್ ಬ್ರಾಂಡ್ ನಾಯಕನೆಂದೇ ಹೆಸರಾಗಿದ್ದ ಕನುಸನ್ಯಾಲ್ ನೇತೃತ್ವದಲ್ಲಿ ಘೋಷಿಸಲಾಯಿತು. ಪಕ್ಷದ ಕಾರ್ಯಕರ್ತರ ಮೊದಲ ರ್‍ಯಾಲಿಯನ್ನು 1969 ರ ಮೇ ಒಂದನೇ ತಾರೀಖು ಕೊಲ್ಕತ್ತ ನಗರದಲ್ಲಿ ಆಯೋಜಿಸಲಾಗಿತ್ತು. ಮಾವೋತ್ಸೆ ತುಂಗನ ವಿಚಾರಧಾರೆಗಳಿಂದ ಪ್ರಣೀತವಾಗಿದ್ದ ನೂತನ ಕಮ್ಯೂನಿಷ್ಟ್ ಪಕ್ಷ, ಇನ್ನು ಮುಂದೆ ಭಾರತದಲ್ಲಿ ಹೊಸ ಸೂರ್ಯ ಮತ್ತು ಚಂದ್ರ ಉದಯಿಸಲಿದ್ದಾರೆ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿತ್ತು. ದುರಂತವೆಂದರೆ, ಪಕ್ಷದ ಮೊದಲ ರ್‍ಯಾಲಿ ಗಲಭೆಯಲ್ಲಿ ಆರಂಭಗೊಂಡು, ಹಿಂಸಾಚಾರದ ನಡುವೆ ಮುಕ್ತಾಯಗೊಂಡಿತು. ಪಕ್ಷದ ಕಾರ್ಯಕರ್ತರು ಮತ್ತು ಆಡಳಿತಾರೂಢ ಪಕ್ಷಗಳಾದ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಕಾರ್ಯಕರ್ತರು ರ್‍ಯಾಲಿಯ ಮೇಲೆ ಕಲ್ಲು ಇಟ್ಟಿಗೆ ಮತ್ತು ಪೆಟ್ರೊಲ್ ಬಾಂಬ್ ತೂರುವುದರ ಮೂಲಕ ಹೊಸ ಪಕ್ಷದ ರ್‍ಯಾಲಿಯನ್ನು ವಿಘ್ನಗೊಳಿಸಿದರು. ಗಲಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇವರಲ್ಲಿ ಐವತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾದವು.

ಹೀಗೆ ಹಿಂಸೆಯಲ್ಲಿ ಆರಂಭಗೊಂಡ ನೂತನ ಕಮ್ಯೂನಿಷ್ಟ್ ಪಕ್ಷದ ನಾಯಕರ ನಡುವೆಯೂ ಹಲವು ಬಗೆಯ ಭಿನ್ನಾಭಿಪ್ರಾಯಗಳು ಆರಂಭದಿಂದಲೂ ಇದ್ದವು. ಇವೆಲ್ಲವೂ ಈ ಸಂದರ್ಭದಲ್ಲಿ ಸ್ಪೋಟಗೊಂಡವು. ಹಲವು ಟ್ರೇಡ್ ಯೂನಿಯನ್ ಸಂಘಟನೆಗಳ ನಾಯಕನಾಗಿದ್ದ ಪರಿಮಳ್‌ದಾಸ್ ಗುಪ್ತಾರವರನ್ನು ಯಾವೊಂದು ಸಂದರ್ಭದಲ್ಲೂ ಪಕ್ಷ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಗೆರಿಲ್ಲಾ ಯುದ್ದ ತಂತ್ರಕ್ಕೆ ದಾಸ್ ಗುಪ್ತಾ ಆಕ್ಷೇಪ ವ್ಯಕ್ತಪಡಿಸಿದರು. ಚೆಗೇವಾರನ ಈ ಗೆರಿಲ್ಲಾ ಯುದ್ಧ ತಂತ್ರ ಎಲ್ಲಾ ರಾಷ್ಡ್ರಗಳಿಗೆ ಅನ್ವಯವಾಗುವುದಿಲ್ಲ ಎಂಬುದು ಗುಪ್ತಾರವರ ನಿಲುವಾಗಿತ್ತು.  ಭಾರತದಂತಹ ಸಂದರ್ಭದಲ್ಲಿ ಗುಡ್ಡಗಾಡು ಇರುವ ಪ್ರದೇಶಗಳನ್ನು ಹೊರತು ಪಡಿಸಿದರೆ, ಬೇರೆಲ್ಲೂ ಇದು ಯಶಸ್ವಿಯಾಗುವುದಿಲ್ಲ ಎಂಬುದು ಹಲವು ನಾಯಕರ ನಂಬಿಕೆಯಾಗಿತ್ತು.

ಕೊಲ್ಕತ್ತ ನಗರದಲ್ಲಿ ನಡೆದ ರ್‍ಯಾಲಿಯ ಅಧ್ಯಕ್ಷತೆವಹಿಸಿದ್ದ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಅಸಿತ್‌ಸೇನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ನನ್ನನ್ನು ಸಂಪೂರ್ಣವಾಗಿ ಕತ್ತಲಲ್ಲಿ ಇಟ್ಟಿತು ಎಂದು ಆರೋಪಿಸಿದರು. ಹೀಗೆ ಹಲವು ಭಿನ್ನಾಭಿಪ್ರಾಯಗಳ ನಡುವೆ ತೀವ್ರಗಾಮಿ ಧೋರಣೆಗಳನ್ನು ಹೊಂದಿದ ನೂತನ ಪಕ್ಷ ಕೊನೆಗೂ ಅಸ್ತಿತ್ವ ತಾಳಿತು.

ಚಾರುಮುಜಂದಾರ್‌ನ ಬೆಂಕಿಯುಂಡೆಯಂತಹ ಮಾತುಗಳು ಪಕ್ಷಕ್ಕೆ ಹಲವಾರು ಬಿಸಿರಕ್ತದ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. 1971 ರ ವೇಳೆಗೆ ಈಶಾನ್ಯ ಭಾರತದ ರಾಜ್ಯಗಳು, ಗೋವಾ, ಪಾಂಡಿಚೇರಿ, ಅಂಡಮಾನ್ ನಿಕೋಬಾರ್, ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ. ದೇಶದ ಬಹುತೇಕ ರಾಜ್ಯಗಳಲ್ಲಿ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ನೆಲೆಯೂರಿತು. ವರ್ಗ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿರುವ ಧನಧಾಹಿ ಶ್ರೀಮಂತರು ಮತ್ತು ಜಮೀನ್ದಾರರ ಬಿಸಿ ನೆತ್ತರಿನಲ್ಲಿ ಕೈ ಅದ್ದದೆ ಇರುವ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತನಾಗಿ ಇರಲು ಅನರ್ಹ ಎಂಬ ಚಾರು ಮುಜಂದಾರನ ವಿವಾದಾತ್ಮಕ ಹೇಳಿಕೆ ಹಲವು ಆಕ್ಷಪೇಣೆಗಳ ನಡುವೆಯೂ ಕಾರ್ಯಕರ್ತರಿಗೆ ಸ್ಪೂರ್ತಿಯ ಮಾತಾಗಿ ಪರಿಣಮಿಸಿತು.

ಆಂಧ್ರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ  ಕೃಷಿಕರನ್ನು ಮತ್ತು ಕೂಲಿಗಾರರನ್ನು ಶೋಷಿಸಿಕೊಂಡು ಬಂದಿದ್ದ ಜಮೀನ್ದಾರರು, ಮಾವೋವಾದಿ ಕಮ್ಯೂನಿಷ್ಟರ ಹಿಂಸೆ ಮತ್ತು ಭಯಕ್ಕೆ ಹೆದರಿ ಇರುವ ಆಸ್ತಿಯನ್ನು ಬಿಟ್ಟು ನಗರಗಳಿಗೆ ಪಲಾಯನಗೈದರು. ಅವರ ಗೂಂಡಾಪಡೆ ಹೇಳಹೆಸರಿಲ್ಲದಂತೆ ನಾಶವಾಯಿತು. ಮಾವೋವಾದಿಗಳು ಶಾಖೆ ತೆರದ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ, ವರ್ಗವ್ಯವಸ್ಥೆ, ಇದ್ದಕ್ಕಿದ್ದಂತೆ ಕರಗತೊಡಗಿತು. ಶತಮಾನಗಳ ಕಾಲ ವ್ಯವಸ್ಥೆಯ ಕಪಿಮುಷ್ಟಿಯ ಕೈಯಲ್ಲಿ ನಲುಗಿ ಹೋಗಿದ್ದ ಬಡವರು, ಶ್ರಮಿಕರು, ನೆಮ್ಮದಿಯ ಬದುಕು ಕಟ್ಟಿಕೊಂಡು ಬದುಕಲು ಸಾಧ್ಯವಾಯಿತು. ಇಂತಹ ವಾತಾವರಣ ಪರೋಕ್ಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಮಾವೋವಾದಿಗಳ ಬಗ್ಗೆ  ರೈತರು, ಕೂಲಿಕಾರ್ಮಿಕರು, ಆದಿವಾಸಿಗಳು, ಅನುಕಂಪ. ಪ್ರೀತಿ ಹುಟ್ಟಲು ಕಾರಣವಾಯಿತು.

ಹಳ್ಳಿಗಳಲ್ಲಿ ಅಧಿಕ ಬಡ್ಡಿಗೆ ಹಣ ನೀಡಿ, ಬಡವರನ್ನು ಶೋಷಿಸುತ್ತಿದ್ದ ಲೇವಾದೇವಿಗಾರರು, ಪೊಲೀಸ್ ಮಾಹಿತಿದಾರರನ್ನು  ಹಿಡಿದು ಗಲ್ಲಿಗೇರಿಸುವ ಮೂಲಕ ಒಂದು ರೀತಿಯಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಮಾವೋವಾದಿಗಳು ನಿರ್ಮಿಸಿದರು. ಘೋಷಿತ ಯದ್ಧದಲ್ಲಿ ಶಾಸ್ತಸ್ತ್ರಗಳು ಅತ್ಯಗತ್ಯ ಎಂಬ ಮಾವೋನ ಮಾತುಗಳನ್ನು ಅಕ್ಷರಶಃ ಪ್ರಯೋಗಕ್ಕೆ ಇಳಿಸಿದರು. ಅಲ್ಲದೆ, ಬಿಲ್ಲು, ಬಾಣ, ಭರ್ಜಿ ಮುಂತಾದ ಸಾಂಪ್ರದಾಯಿಕ ಆಯುಧಗಳನ್ನು ತೈಜಿಸಿ, ಬಂದೂಕುಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಭಾರತ ಸರ್ಕಾರವೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಇವರು ಹೊಸ ಸವಾಲೊಂದನ್ನು ಒಡ್ಡಿದರು.

ಚಾರು ಮುಜಂದಾರ್ ನೇತೃತ್ವದ ಹೋರಾಟವನ್ನು ಚೀನಾದ ಕಮ್ಯುನಿಷ್ಟ್ ಪಕ್ಷದ ಮುಖವಾಣಿ ಪತ್ರಿಕೆಯಾದ “ದ ಲಿಬರೇಷನ್” ಪತ್ರಿಕೆ ಮುಕ್ತ ಕಂಠದಿಂದ ಹೊಗಳುವುವುದರ ಮತ್ತಷ್ಟು ಹುರಿದುಂಬಿಸಿತು. ಚಾರು ಮುಜಂದಾರ್ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಗೆರಿಲ್ಲಾ ಯುದ್ಧತಂತ್ರಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸಿದನು. ಭೂರಹಿತ ಬಡ ಗೇಣಿದಾರರು, ಕೃಷಿಕೂಲಿ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಸಂಘಟನೆಗೆ ಚಾರು ಮತ್ತು ಅವನ ಸಂಗಡಿಗರು ಮುಂದಾದರು.

ಭೂಮಾಲೀಕರ ದಬ್ಬಾಳಿಕೆ ಅತಿಯಾಗಿದ್ದ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಗೆ ನಿರೀಕ್ಷೆ ಮೀರಿ ಒಲವು ವ್ಯಕ್ತವಾಯಿತು. ಇದಕ್ಕಾಗಿ ನಾಲ್ಕು ಅಂಶದ ಕಾರ್ಯಕ್ರಮವನ್ನು ರೂಪಿಸಲಾಯಿತು. ಅವುಗಳೆಂದರೆ.

  1. ಭೂಮಾಲೀಕರ ಒಡೆತನ ಮತ್ತು ದಬ್ಬಾಳಿಕೆ ಇರುವ ಪ್ರದೇಶಗಳನ್ನು ಮುಕ್ತಗೊಳಿಸಿ, ಅವುಗಳನ್ನು ಸಣ್ಣ ಹಿಡುವಳಿದಾರರ ಸುಪರ್ದಿಗೆವಹಿಸುವುದು.
  2. ಕೆಂಪು ಭಯೋತ್ಪಾದನೆ ಮೂಲಕ (ಹಿಂಸೆ) ಜಮೀನ್ದಾರರನ್ನು ಮಣಿಸಿ, ನೆಮ್ಮದಿಯ ವಾತಾವರಣ ಸೃಷ್ಟಿ ಮಾಡುವುದು.
  3. ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಚಳವಳಿಯ ನಾಯಕತ್ವವನ್ನು ಮಾವೋವಾದಿ ಕಮ್ಯುನಿಷ್ಟ್ ಪಕ್ಷದ ನಾಯಕರಿಂದ ಸ್ಥಳೀಯ ರೈತರು ಮತ್ತು ಕೂಲಿ ಕಾರ್ಮಿಕರಿಗೆ ವರ್ಗಾಯಿಸುವುದು.
  4. ಜನಸಾಮಾನ್ಯನನ್ನು, ಜಮೀನ್ದಾರರು, ಬಡ್ಡಿ ವ್ಯಾಪಾರದ ಲೇವಾದೇವಿದಾರರು ಇವರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಭಯದಿಂದ ಮುಕ್ತರಾಗಿ ಬದುಕುವಂತೆ ಪ್ರೇರೇಪಿಸುವುದು.

ಚಾರು ಮತ್ತು ಸಂಗಡಿಗರ ಈ ಕಾರ್ಯಚರಣೆ ಕೆಲವು ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತಾದರೂ, ಅದೊಂದು ಸಾಮಾಜಿಕ ಚಳವಳಿಯಾಗಿ ಎಲ್ಲ ವರ್ಗವನ್ನು ಒಳಗೊಳ್ಳುವಲ್ಲಿ ವಿಫಲವಾಯಿತು. ಒಂದು ವರ್ಷದ ನಂತರ ಸ್ವತಃ ಚಾರು ಮುಜಂದಾರ್ ಇದನ್ನು ಒಪ್ಪಿಕೊಂಡನು. ಮಾವೋತ್ಸೆ ತುಂಗನ ವಿಚಾರಗಳನ್ನು ಅನಕ್ಷರಸ್ತ ಕೂಲಿಕಾರ್ಮಿಕರಿಗೆ ಆದಿವಾಸಿಗಳಿಗೆ ತಲುಪಿಸುವಲ್ಲಿ ಪಕ್ಷ ಸೋತಿದೆ ಎಂದು ಸ್ವಷ್ಟೀಕರಣ ನೀಡಿದನು. 1970 ರ ಮೇ ತಿಂಗಳಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾರತ ಸರ್ಕಾರದ ನೀತಿ ಹಾಗೂ ಧೋರಣೆಗಳನ್ನು ಖಂಡಿಸಿ, ಭಾರತವು ಗಳಿಸಿರುವುದು ನಾಚಿಕೆಗೇಡಿನ ಸ್ವಾತಂತ್ರ್ಯಎಂದು ಬಣ್ಣಿಸಿ. ಹೊಸ ಸ್ವಾತಂತ್ರ್ಯವನ್ನು ಗಳಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಹೊಸದಾಗಿ ಕೆಲವು ರಾಜಕೀಯ ಗುರಿಗಳನ್ನು ಸೇರಿಸಲಾಯಿತು. ಇದಕ್ಕಾಗಿ ಪ್ರಜಾಸಮರ (peoples War) ಯುದ್ಧ ಘೋಷಿಸಲಾಯಿತು. ಪಕ್ಷದ ಈ ತೀರ್ಮಾನ ಹಲವು ನಾಯಕರಿಗೆ ಒಪ್ಪಿಗೆಯಾಗಲಿಲ್ಲ. ಇವರುಗಳನ್ನು ಹಲವು ಗೊಡ್ಡು ವಿಚಾರಗಳಿಗೆ ಜೋತುಬಿದ್ದ ಕೇಂದ್ರೀಕೃತ ವ್ಯಕ್ತಿಗಳು ಎಂದು ಟೀಕಿಸಿದ ಚಾರು ಮುಜಂದಾರ್, ಸಮಾಜದಲ್ಲಿ ತಾಂಡವವಾಡುತ್ತಿರುವ ವರ್ಗವ್ಯವಸ್ಥೆಯ ವಿರುದ್ಧ ಹೋರಾಟವನ್ನು ಎಲ್ಲಾ ನೆಲೆಗಳಿಗೆ ವಿಸ್ತರಿಸಬೇಕೆಂದು ಕಾರ್ಯಕರ್ತರಿಗೆ ಕರೆನೀಡಿದ. ಅವನ ಸಂದೇಶ, ಮುಂದಿನ ದಿನಗಳಲ್ಲಿ  ಆಂಧ್ರ, ಶ್ರೀಕಾಕುಳಂ, ಪಶ್ಚಿಮ ಬಂಗಾಳದ, ದೇಬ್ರ ಮತ್ತು ಗೋಪಿಬಲ್ಲಬಪುರ ಜಿಲ್ಲೆ, ಬಿಹಾರದ ಮುರ್ಶರಾಯ್ ಜಿಲ್ಲೆ, ಉತ್ತರಪ್ರದೇಶದ ಲಕ್ಷ್ಮೀಪುರ ಜಿಲ್ಲೆಯ ಪುಲಿಯ ಎಂಬಲ್ಲಿ ಅಗ್ನಿಪರ್ವತದಂತೆ ಸ್ಪೋಟಗೊಂಡಿತು.

(ಮುಂದುವರೆಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-5)


– ಡಾ.ಎನ್.ಜಗದೀಶ್ ಕೊಪ್ಪ


 

ಅನಿರೀಕ್ಷಿತವಾಗಿ ಜರುಗಿದ ನಕ್ಸಲ್‌ಬಾರಿ ಹಿಂಸಾಚಾರದ ಘಟನೆ ಕಮ್ಯೂನಿಷ್ಟ್ ಪಕ್ಷವನ್ನು ತನ್ನ ಸಿದ್ಧಾಂತ ಹಾಗೂ ಪ್ರಣಾಳಿಕೆ ಕುರಿತಾದ ವಿಷಯಗಳ ಬಗೆಗಿನ ಆತ್ಮಾವಲೋಕನಕ್ಕೆ ಪ್ರೇರೇಪಿಸಿತು. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷಕ್ಕೆ ಸರ್ಕಾರ ರಚಿಸಲು ಸ್ಪಷ್ಟ ಬಹುಮತ ಬಾರದ ಕಾರಣ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷಕ್ಕೆ ತನ್ನ ನಿಜವಾದ ನಿಲುವುಗಳನ್ನು ಮನವರಿಕೆ ಮಾಡಿಕೊಡುವ ಜವಬ್ದಾರಿ ಕೂಡ ಕಮ್ಯೂನಿಷ್ಟ್ ಪಕ್ಷದ ಮೇಲೆ ಇತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಹಿಂಸಾಚಾರ ಕುರಿತಂತೆ ಪಕ್ಷದ ಕಾರ್ಯಕರ್ತರಲ್ಲಿ ಹಲವು ಅನುಮಾನಗಳು, ಗೊಂದಲಗಳು ಸೃಷ್ಟಿಯಾಗ ತೊಡಗಿದವು. ಈ ಎಲ್ಲಾ ಗೊಂದಲಗಳಿಂದ ಹೊರಬಂದು ಪಕ್ಷದ ಭವಿಷ್ಯದ ನಿಲುವುಗಳನ್ನು ಸ್ಪಷ್ಟಪಡಿಸಬೇಕಾದ ಅನಿವಾರ್ಯ ಸ್ಥಿತಿಗೆ ನಾಯಕರು ಸಿಲುಕಿದರು ಏಕೆಂದರೆ, ಪಕ್ಷದ ಕಾರ್ಯಕರ್ತರ ಮೇಲೆ ನಾಯಕತ್ವದ ಹಿಡಿತವಿಲ್ಲ ಎಂಬುದನ್ನು ಈ ಘಟನೆ ಅನಾವರಣಗೊಳಿಸಿತ್ತು. ಜೊತೆಗೆ ಡಾರ್ಜಲಿಂಗ್ ಜಿಲ್ಲೆ ಮತ್ತು ಸಿಲಿಗುರಿ ಪ್ರಾಂತ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದು ಮೈತ್ರಿ ಸರ್ಕಾರದ ಅಸಮರ್ಥತೆಯನ್ನು ಸಹ ಎತ್ತಿ ತೋರಿಸಿತ್ತು.

ಪಕ್ಷದಲ್ಲಿ ಶಿಸ್ತು ಹಾಗೂ ತತ್ವ ಸಿದ್ಧಾಂತಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 1967 ರ ಆಗಸ್ಟ್ 17 ಮತ್ತು 18 ರಂದು ಪಕ್ಷದ ಕಾರ್ಯಕಾರಿಣಿ ಸಭೆಯನ್ನು ತಮಿಳುನಾಡಿನ ಮಧುರೈ ನಗರದಲ್ಲಿ ಕರೆಯಲಾಯಿತು. ಪಕ್ಷದಲ್ಲಿ ಬಾಹ್ಯಶಕ್ತಿಗಳು ಮಧ್ಯಪ್ರವೇಶ ಮಾಡಿ ಕಾರ್ಯಕರ್ತರನ್ನು ಹಾದಿ ತಪ್ಪಿಸುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಅಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಲವು ನಾಯಕರಿಂದ ಒತ್ತಾಯ ಕೇಳಿ ಬಂದ ಹಿನ್ನಲೆಯಲ್ಲಿ ಸಭೆ ಕರೆಯಲಾಯಿತು. ಕೇಂದ್ರ ಸಮಿತಿಯ ಸಭೆಯಲ್ಲಿ, ಪಕ್ಷದ ಕೆಲವರು, ಬಾಹ್ಯ ರಾಷ್ಟ್ರಗಳ (ಚೀನಾ) ಪ್ರೇರಣೆಗಳಿಂದ ಪಕ್ಷವನ್ನು, ಹಾಗೂ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುತ್ತಿರುವ ಬಗ್ಗೆ ಗಂಭೀರವಾಗಿ ಚರ್ಚಿಸಿ, ಭಾರತದ ಕಮ್ಯೂನಿಷ್ಟ್ ಪಕ್ಷಕ್ಕೆ ಯಾವುದೇ ಹೊರಗಿನ ರಾಷ್ಟ್ರಗಳ ಮಾರ್ಗದರ್ಶನ ಬೇಕಾಗಿಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು.

ಪಕ್ಷದ ಭವಿಷ್ಯದ ದೃಷ್ಟಿಯಿಂದ ಮುಂದೆ ಪಕ್ಷದ ಆಂತರೀಕ ವಿಷಯಗಳಲ್ಲಿ ನೇರ ಪ್ರವೇಶಿಸಿ, ಸಲಹೆ ನೀಡುವ ಅಧಿಕಾರವನ್ನು ಸಹ ಪಕ್ಷದ ಕೇಂದ್ರ ಸಮಿತಿಗೆ ನೀಡಲಾಯಿತು. 1960 ರ ದಶಕದ ಕಮ್ಯೂನಿಷ್ಟ್ ಪಕ್ಷದಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಚೀನಾ ಮತ್ತು ಸೋವಿಯತ್ ರಷ್ಯಾ ಕಮ್ಯೂನಿಷ್ಟ್ ವಿಚಾರಧಾರೆಗಳು ಲಗ್ಗೆ ಇಟ್ಟ ಪರಿಣಾಮ ಈ ರೀತಿಯ ಗೊಂದಲಗಳು ಸಾಮಾನ್ಯವಾಗಿದ್ದವು. ಅಂತಿಮವಾಗಿ 1968 ರ ಏಪ್ರಿಲ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚೀನಾ ಮಾದರಿಯ ಹೋರಾಟವನ್ನು ಕೈಬಿಡಲು ನಿರ್ಧರಿಸಲಾಯಿತು.

ಪಕ್ಷದ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ ಚಾರು ಮುಜಂದಾರ್ ಇದು ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಮತ್ತೇ ಸಾಮಾನ್ಯ ಸ್ಥಿತಿಗೆ ಎಳೆದೊಯ್ಯುವ ನಿರ್ಧಾರ ಎಂದು ಆರೋಪಿಸಿದನು. ಇಂತಹ ಸ್ಥಿತಿಯಲ್ಲಿ ಅಸಮಾನತೆಯನ್ನು ಬಿತ್ತಿ ಪೋಷಿಸುತ್ತಿರುವ ಸರ್ಕಾರಗಳು ಮತ್ತು ದುಷ್ಟಶಕ್ತಿಗಳ ವಿರುದ್ಧ ಯುದ್ಧ ಅನಿವಾರ್ಯ ಎಂದು ಪ್ರತಿಪಾದಿಸಿದ ಚಾರು ಮತ್ತು ಅವನ ಗೆಳೆಯರು ಮಾರ್ಕ್ಸ್‌‍ವಾದದ ಕಮ್ಯುನಿಷ್ಟ್ ಪಕ್ಷವನ್ನು ತೈಜಿಸಲು ನಿರ್ಧರಿಸಿದರು. ಅಮೇರಿಕಾದ ಬಂಡವಾಳ ನೀತಿಯನ್ನು ಪರೋಕ್ಷವಾಗಿ ಅಪ್ಪಿಕೊಂಡು ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವ ಸೋವಿಯತ್ ರಷ್ಯಾದ ಕಮ್ಯೂನಿಷ್ಟ್ ಪ್ರಣಾಳಿಕೆಯನ್ನು ಸಹ ತಿರಸ್ಕರಿಸಿದರು.

ತಾವು ಈಗ ಅನುಸರಿಸಬೇಕಾದ ತೀವ್ರಗಾಮಿ ಧೋರಣೆಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಅವುಗಳೆಂದರೆ:

  1. ಎಲ್ಲಾ ಹಂತದಲ್ಲೂ ಹೋರಾಟವನ್ನು ತೀವ್ರಗೊಳಿಸುವುದು, ನಕ್ಷಲ್‌ಬಾರಿ ಮಾದರಿಯ ಹೋರಾಟಕ್ಕೆ ರೈತರು ಮತ್ತು ಆದಿವಾಸಿಗಳನ್ನು ಸಜ್ಜುಗೊಳಿಸುವುದು.
  2. ಪ್ರತಿ ಹಳ್ಳಿಯಲ್ಲಿ ತೀವ್ರಗಾಮಿ ಮನೋಭಾವದ ಯುವಕರ ಪಡೆಯನ್ನು ಹುಟ್ಟು ಹಾಕಿ, ರೈತರು, ಕೃಷಿಕೂಲಿ ಕಾರ್ಮಿಕರು, ವ್ಯವಸಾಯ ಕ್ಷೇತ್ರದಲ್ಲಿ ಅನುಭವಿಸುತ್ತಿರುವ ಬವಣೆಗಳನ್ನು ಹೋಗಲಾಡಿಸುವುದು.
  3. ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಯ ಜೊತೆಗೆ ಮಾವೋತ್ಸೆ ತುಂಗನ ವಿಚಾರಗಳನ್ನು ಪಕ್ಷದ ಸಂಘಟನೆಯಲ್ಲಿ ಅಳವಡಿಸಿಕೊಂಡು, ಭಾರತದ ಸಂದರ್ಭಕ್ಕೆ ಅನುಗುಣವಾಗಿ ಕೆಲವು ಮಾರ್ಪಾಡು ಮಾಡಿಕೊಂಡು ಇವುಗಳ ಹಾದಿಯಲ್ಲಿ ಕಟ್ಟುನಿಟ್ಟಾಗಿ ನಡೆಯುವುದು.

ಇವುಗಳನ್ನು  ಆಚರಣೆಗೆ ತರುವ ನಿಟ್ಟಿನಲ್ಲಿ 1968 ಅಂತ್ಯದ ವೇಳೆಗೆ ಕೊಲ್ಕತ್ತ ನಗರದಲ್ಲಿ ಎಲ್ಲಾ ಉಗ್ರ ಕಮ್ಯೂನಿಷ್ಟ್ ವಾದಿಗಳ ಸಭೆಯನ್ನು ಗುಪ್ತವಾಗಿ ಕರೆಯಲಾಗಿತ್ತು. ಕ್ರಾಂತಿಕಾರಕ ವಿಚಾರಗಳನ್ನು ಆಚರಣೆಗೆ ತರಲು ಅಖಿಲ ಭಾರತ ಮಟ್ಟದಲ್ಲಿ ಒಂದು ಸಮನ್ವಯ ಸಮಿತಿಯನ್ನು ಸಹ ರಚಿಸಲಾಯಿತು. ಸಭೆಯ ನಂತರ ಚಾರು ಮುಜಂದಾರ್ ಮಾವೋ ವಿಚಾರಧಾರೆಯ ಅಡಿಯಲ್ಲಿ ಭಾರತದಲ್ಲಿ ಪ್ರಜಾಸತ್ತಾತ್ಮಕವಾದ ಕ್ರಾಂತಿಕಾರಕ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸಲಾಗುವುದು ಎಂದು ಘೊಷಿಸಿದನು. ಕೊಲ್ಕತ್ತ ಸಭೆಯ ನಿರ್ಣಯಕ್ಕೆ ಆಂಧ್ರದ ನಾಯಕ ನಾಗಿರೆಡ್ಡಿ ಕೆಲವು ಆಕ್ಷೇಪ ಎತ್ತಿದನು. ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಘಟನೆಯನ್ನು ಒಳಗೊಳ್ಳದ ಯಾವುದೇ ಹೋರಾಟಕ್ಕೆ ಜಯ ಸಿಗಲಾರದು ಎಂಬುದು ಆಂಧ್ರ ನಾಯಕರ ಅಭಿಪ್ರಾಯವಾಗಿತ್ತು. ನೂತನ ಪಕ್ಷದ ಸಂಘಟನೆಯ ಗೊಂದಲ ಹೀಗೆ ಮುಂದುವರಿದಾಗ, 1969 ರ ಫೆಬ್ರವರಿಯಲ್ಲಿ ಸಭೆ ಸೇರಿದ ನಾಯಕರು, ಪಕ್ಷದ ಸಮನ್ವಯ ಸಮಿತಿಯ ನಿಷ್ಕ್ರೀಯತೆಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದರು. ಇದೇ ವೇಳೆಗೆ ಚೀನಾ ಸರ್ಕಾರ ಹಾಗೂ ಅಲಿನ್ಲ ಕಮ್ಯೂನಿಷ್ಟ್ ಪಕ್ಷ  ಭಾರತದ ಎಡಪಂಥೀಯ ಪಕ್ಷದ ಆಂತರೀಕ ವಿಷಯಗಳಿಗೆ ತಲೆ ಹಾಕಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದವು. ಈ ಅವಕಾಶವನ್ನು ಬಳಸಿಕೊಂಡು ಭಾರತದಲ್ಲಿ ಮಾರ್ಕ್ಸ್ ವಿಚಾರಧಾರೆಗೆ ಪರ್ಯಾಯವಾಗಿ ಮತ್ತೊಂದು ಸಂಘಟನೆ ಅತ್ಯಾವಶ್ಯಕ ಎಂಬ ಬೀಜವನ್ನು ಇಲ್ಲಿನ ಉಗ್ರಗಾಮಿ ನಾಯಕರ ತಲೆಯೊಳಕ್ಕೆ ಚೀನಾ ಬಿತ್ತನೆ ಮಾಡಿತು. ಜೊತೆಗೆ ಸಂಘಟನೆಗೆ ಅವಶ್ಯಕವಾದ ಹಣ, ಶಸ್ರಾಸ್ತ್ರ ಪೂರೈಸುವ ಭರವಸೆ ನೀಡಿತು. ಅಂದಿನ ಶ್ರೀಲಂಕಾದ ಕಮ್ಯೂನಿಷ್ಟ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯನಾದ ಷಣ್ಮುಗದಾಸ್‌ನನ್ನು ನೇಪಾಳ ಮೂಲಕ ಚೀನಾಕ್ಕೆ ಕರೆಸಿಕೊಂಡ ಅಲ್ಲಿನ ಸರ್ಕಾರ ಆತನ ಮೂಲಕ ಎಲ್ಲಾ ಸಂದೇಶಗಳನ್ನು ಭಾರತದ ಉಗ್ರಗಾಮಿ ನಾಯಕರಿಗೆ ರವಾನಿಸಿತು.

ಇದರಿಂದ ಪ್ರೇರಣೆಗೊಂಡ ಇಲ್ಲಿನ ನಾಯಕರು 1969 ರ ಏಪ್ರಿಲ್ 22 ರಂದು ಲೆನಿನ್‌ನ ಶತಮಾನೋತ್ಸವ ಜನ್ಮದಿನಾಚರಣೆಯಂದು ಹೊಸ ಪಕ್ಷದ ಅಸ್ತಿತ್ವವನ್ನು ಘೋಷಿಸಿದರು. ಪಕ್ಷಕ್ಕೆ ಕಮ್ಯೂನಿಷ್ಟ್ ಪಾರ್ಟಿ (ಮಾರ್ಕ್ಸ್ ಮತ್ತು ಲೆನಿನ್) ಬಣ ಎಂದು ಹೆಸರಿಸಲಾಯ್ತು. ಪಕ್ಷವನ್ನು ಹುಟ್ಟು ಹಾಕುವುದರ ಜೊತೆಗೆ ಕ್ರಾಂತಿಕಾರಕ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಲಾಯಿತು. ಭಾರತ ದೇಶ ಅರೆ ವಸಾಹತುಶಾಯಿ ಮತ್ತು ಅರೆ ದಬ್ಬಾಳಿಕೆಯ ವ್ಯವಸ್ಥೆಯಲ್ಲಿ ನರಳುತ್ತಿದೆ, ಇಲ್ಲಿ ಅಧಿಕಾರಿಗಳು ಮತ್ತು ಭೂಮಾಲೀಕರು, ಬಂಡವಾಳಶಾಹಿಗಳ ಕೈಗೊಂಬೆಯಾಗಿ ವರ್ತಿಸುತ್ತಾ ಬಡಜನತೆಯನ್ನು ಶೋಷಿಸುತ್ತಿದ್ದಾರೆ. ಇಲ್ಲಿ ಈ ವ್ಯವಸ್ಥೆಗೆ ಭಾರತ ಸರ್ಕಾರ ಅಮೇರಿಕಾದ ಬಂಡವಾಳ ನೀತಿಯನ್ನು ಮತ್ತು ಸೋವಿಯತ್ ರಷ್ಯಾದ ಅರೆಬೆಂದ ಸಮಾಜವಾದ ನೀತಿಯನ್ನು ಅನುಸರಿಸುತ್ತಿರುವುದೇ ಈ ದುರಂತಕ್ಕೆ ಕಾರಣ ಎಂದು ಪ್ರಣಾಳಿಕೆಯಲ್ಲಿ ಇಲ್ಲಿನ ವ್ಯವಸ್ಥೆಯನ್ನು ಕಟು ವಿಮರ್ಶೆಗೆ ಒಳಪಡಿಸಲಾಗಿತ್ತು. ಭಾರತದ ದುಡಿಯುವ ವರ್ಗ ಮತ್ತು ರೈತರ ದಯನೀಯವಾದ ಈ ಸ್ಥಿತಿಯಲ್ಲಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ಅತ್ಯಗತ್ಯ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಬಲವಾಗಿ ಪ್ರತಿಪಾದಿಸಲಾಗಿತ್ತು.

ಸರ್ಕಾರದ ವಿರುದ್ಧ ವ್ಯವಸ್ಥಿತ ಹೋರಾಟಕ್ಕೆ ಗೆರಿಲ್ಲಾ ಯುದ್ಧವೊಂದೇ ಅನಿವಾರ್ಯ ಮಾರ್ಗ ಎಂದು ತಿಳಿಸಿ ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ರೈತರು, ಕೂಲಿಕಾರ್ಮಿಕರು, ಮತ್ತು ಆದಿವಾಸಿಗಳನ್ನು ಸಂಘಟಿಸಿ ಹೋರಾಟಕ್ಕೆ ಸಿದ್ಧವಾಗಬೇಕೆಂದು ಪಕ್ಷ ಕರೆ ನೀಡಿತ್ತು. ಪಕ್ಷದ ಸಂಘಟನೆಯನ್ನು ಅತ್ಯಂತ ಗೋಪ್ಯವಾಗಿ ಮಾಡಬೇಕೆಂದು ಹಾಗೂ ಯಾವ ಕಾರಣಕ್ಕೂ ಸಂಘಟನೆಯಲ್ಲಿ ನಿರತರಾದ ನಾಯಕರ ಮಾಹಿತಿಯನ್ನು ವಿಶೇಷವಾಗಿ ವ್ಯಯಕ್ತಿಕ ಮಾಹಿತಿಯನ್ನು ಪಕ್ಷದ ಕಾರ್ಯಕತ್ರಿಗೂ ತಿಳಿಸಬಾರದೆಂದು ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಲಾಯಿತು. ಈ ಕಾರಣಕ್ಕಾಗಿ ಈ ಹಿಂದೆ ಸಿಲಿಗುರಿ ಪ್ರಾಂತ್ಯದಲ್ಲಿ ಕಿಸಾನ್‌ಸಭಾ ಘಟಕಗಳನ್ನು ಸಂಘಟಿಸಿದ ಮಾದರಿಯನ್ನು ಅಂದರೆ, ಬಹಿರಂಗಸಭೆ ಕೈಬಿಟ್ಟು, ಪ್ರತಿಯೊಬ್ಬ ವ್ಯಕ್ತಿಯ ಜೊತೆ ಮಾತುಕತೆ ಮತ್ತು ಸಂಧಾನದ  ಪಕ್ಷವನ್ನು ತಳಮಟ್ಟದಿಂದ ಕಟ್ಟಲು ನಾಯಕರು ನಿರ್ಧರಿಸಿದರು. ಇದು ಭಾರತದ ರಾಜಕೀಯ ಇತಿಹಾಸದ ಎಡಪಂಥೀಯ ವಿಚಾರ ಧಾರೆಗಳ ಸಮಾನ ಮನಸ್ಕ ವ್ಯಕ್ತಿಗಳಲ್ಲಿ ಗೊಂದಲ, ಜಿಜ್ಙಾಸೆ ಮೂಡಿಸಿ, ತಮ್ಮ ಮುಂದಿನ ಮಾರ್ಗ ಯಾವುದು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತು.

(ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 4)


– ಡಾ.ಎನ್.ಜಗದೀಶ್ ಕೊಪ್ಪ


 

ನಕ್ಸಲ್‌ಬಾರಿ ಪ್ರತಿಭಟನೆಯ ಯಶಸ್ವಿನ ಬಗ್ಗೆ ಚಳವಳಿಗಾರರಾಗಲಿ ಅಥವಾ ಈ ಹಿಂಸಾಚಾರ ಮತ್ತು ಚಳವಳಿಯನ್ನು ಹತ್ತಿಕ್ಕಿದ ಬಗ್ಗೆ ಪಶ್ಚಿಮ ಬಂಗಾಳದ ಸರ್ಕಾರವಾಗಲಿ ಉಭಯ ಬಣಗಳು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ, ಈ ಘಟನೆ ಸರ್ಕಾರ ಮತ್ತು ಪ್ರತಿಭಟನಾಗಾರರಿಗೆ ಪರೋಕ್ಷವಾಗಿ ಹಲವಾರು ಎಚ್ಚರಿಕೆಯ ಪಾಠಗಳನ್ನು ಕಲಿಸಿಕೊಟ್ಟಿತು.

ಯಾವುದೇ ಒಂದು ಚಳವಳಿಯನ್ನು ಪ್ರಲೋಭನೆ ಮತ್ತು ಆಮಿಷದ ಮೂಲಕ ಹುಟ್ಟು ಹಾಕುವುದು ಅತಿಸುಲಭ ಆದರೆ, ಅದನ್ನು ನಿಯಂತ್ರಿಸುವ ನೈತಿಕತೆ ಮತ್ತು ತಾಕತ್ತು ಈ ಎರಡುಗುಣಗಳು ನಾಯಕನಿಗಿರಬೇಕು. ಭಾರತದ ಸಂದರ್ಭದಲ್ಲಿ ಅಂತಹ ತಾಕತ್ತು ಮಹಾತ್ಮಗಾಂಧಿಗೆ ಇತ್ತು. ಅವರು ಎಷ್ಟೋಬಾರಿ ಭಾರತ ಸ್ವಾತಂತ್ರ್ಯ ಚಳವಳಿ ದಿಕ್ಕು ತಪ್ಪಿದಾಗಲೆಲ್ಲಾ ಇಡೀ ಚಳವಳಿಯನ್ನು ಸ್ಥಗಿತಗೊಳಿಸಿದ್ದರು. ಇದಕ್ಕೆ ಚೌರಿಚೌರ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಮತ್ತು ಪೊಲೀಸರ ಹತ್ಯಾಕಾಂಡದ ಘಟನೆ ನಮ್ಮೆದುರು ಸಾಕ್ಷಿಯಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇರುವ, ಸಮುದಾಯದ ನೋವನ್ನು ತನ್ನ ವ್ಯಯಕ್ತಿಕ ನೋವೆಂಬಂತೆ ಪರಿಭಾವಿಸುವ ವ್ಯಕ್ತಿಗಳು ಮಾತ್ರ ನಾಯಕತ್ವದ ಗುಣ ಹೊಂದಿರುತ್ತಾರೆ. ಅಂತಹ ಗುಣ ಈ ನೆಲದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣರವರಿಗೆ ಇತ್ತು.

ಇಂತಹ ಯಾವುದೇ ಗುಣಗಳು ಕಿಸಾನ್‌ಸಭಾ ಮೂಲಕ ರೈತರು ಮತ್ತು ಗೇಣಿದಾರರು, ಹಾಗೂ ಕೃಷಿ ಕೂಲಿಕಾರ್ಮಿಕರ ಬಗ್ಗೆ ಧ್ವನಿ ಎತ್ತಿದ ಚಾರು ಮುಜುಂದಾರ್ ಅಥವಾ ಕನು ಸನ್ಯಾಲ್‌ಗೆ ಇರಲಿಲ್ಲ. ಇಂತಹ ದೂರದೃಷ್ಟಿಕೋನದ ಕೊರತೆ ಒಂದು ಜನಪರ ಚಳವಳಿಯಾಗಬೇಕಿದ್ದ ಮಹತ್ವದ ಘಟನೆಯನ್ನು ಹಿಂಸೆಯ ಹಾದಿಗೆ ನೂಕಿಬಿಟ್ಟಿತು. ಗಾಂಧಿಯ ವಿಚಾರ ಧಾರೆಯ ಬಗ್ಗೆ ಅಪನಂಬಿಕೆ ಹೊಂದಿದ್ದ ಈ ಎಡಪಂಥೀಯ ನಾಯಕರಿಗೆ ತಮ್ಮದೇ ಪಶ್ಚಿಮ ಬಂಗಾಳದಲ್ಲಿ 1860 ರ ದಶಕದಲ್ಲಿ ರೈತರು ನಡೆಸಿದ ನೀಲಿ ಕ್ರಾಂತಿಯಾದರೂ ಮಾದರಿಯಾಗಬೇಕಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯ ಕಂಪನಿ ಮತ್ತು ಪ್ಲಾಂಟರ್‌ಗಳ ವಿರುದ್ಧ ಸ್ಥಳೀಯ ಗೇಣಿದಾರ ರೈತರು ನಡೆಸಿದ ಕಾನೂನು ಬದ್ಧ, ಹಾಗೂ ಅಹಿಂಸಾತ್ಮಕ ಹೋರಾಟವನ್ನು ಮಾವೋವಾದಿ ಬೆಂಬಲಿಗರು ಅವಲೋಕಿಸಬೇಕಿತ್ತು. ಏಕೆಂದರೆ, ಅಣುಬಾಂಬ್‌ಗಿಂತ ಅಹಿಂಸೆ ಎಂಬ ಅಸ್ತ್ರ ಹೆಚ್ಚು ಪರಿಣಾಮಕಾರಿ ಎಂಬುದನ್ನು ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟ ಈ ನೆಲದಲ್ಲಿ ಯಾರೂ ಹಿಂಸೆಯನ್ನು ಪ್ರತಿಪಾದಿಸಲಾರರು, ಅಥವಾ ಬೆಂಬಲಿಸಲಾರರು.

ಭಾರತೀಯ ಮುಗ್ದ ರೈತರನ್ನು ನಿರಂತರವಾಗಿ ಶೋಷಿಸಿಕೊಂಡ ಬಂದ ಇತಿಹಾಸ ಇಂದು ನಿನ್ನೆಯದಲ್ಲ, ಅದಕ್ಕೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷರ ವಸಾಹತು ಶಾಹಿಯ ಆಡಳಿತ, ಅವರ ಭೂಕಂದಾಯ ಪದ್ಧತಿ, ಆರ್ಥಿಕ ನೀತಿಗಳು ಇವೆಲ್ಲವೂ ರೈತರ ರಕ್ತವನ್ನು ಹೀರಿವೆ. ಅನಕ್ಷರತೆ, ಸಂಘಟನೆಯ ಕೊರತೆ ಇಂತಹ ಶೋಷಣೆಗೆ ಪರೋಕ್ಷವಾಗಿ ಕಾರಣವಾದವು. 1859-60 ರಲ್ಲಿ ಪಶ್ಚಿಮ ಬಂಗಾಳದ ರೈತರು ನೀಲಿ ಬೆಳೆಯ ವಿರುದ್ಧ ಬಂಡಾಯವೆದ್ದ ಘಟನೆ ಭಾರತದ ಇತಿಹಾಸದಲ್ಲಿ ಪ್ರಥಮ ರೈತರ ಬಂಡಾಯವೆಂದು ಕರೆಯಬಹುದು. ಈಸ್ಷ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಬಹುತೇಕ ಪ್ಲಾಂಟರ್‌ಗಳು ಯರೋಪಿಯನ್ನರೇ ಆಗಿದ್ದರು. ತಮ್ಮ ತಾಯ್ನಾಡಿನ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಗೇಣಿದಾರರನ್ನು ನೀಲಿ ಬೆಳೆ ಬೆಳೆಯುವಂತೆ ಒತ್ತಾಯಿಸುತ್ತಿದ್ದರು. ರೈತರು, ತಮ್ಮ ಕುಟುಂಬದ ಆಹಾರಕ್ಕಾಗಿ ಭತ್ತ ಬೆಳೆಯಲು ಆಸ್ಪದ ನೀಡದೆ ಕಿರುಕುಳ ನೀಡುತ್ತಿದ್ದರು. ರೈತರು ಕಷ್ಟ ಪಟ್ಟು ಬೆಳೆದ ನೀಲಿ ಬೆಳೆಗೆ ಅತ್ಯಂತ ಕಡಿಮೆ ಬೆಲೆಯನ್ನ ನೀಡಲಾಗುತಿತ್ತು. ಪ್ಲಾಂಟರ್‌ಗಳ ಆದೇಶವನ್ನು ಧಿಕ್ಕರಿಸಿದ ರೈತರನ್ನು ತಮ್ಮ ಮನೆಗಳಲ್ಲಿ ಕೂಡಿ ಕಾಕಿ ಚಾಟಿ ಏಟಿನ ಶಿಕ್ಷೆ ನೀಡಲಾಗುತ್ತಿತ್ತು. ಇದಕ್ಕಾಗಿ ಪ್ರತಿಯೊಬ್ಬ ಬ್ರಿಟಿಷ್ ಪ್ರಜೆಯ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಿದ್ದವು ಇವುಗಳನ್ನು ವಿಪ್ಟಿಂಗ್‌ಹೌಸ್ ಎಂದು ಕರೆಯಲಾಗುತ್ತಿತ್ತು. ಚಾಟಿ ಏಟು ಹೊಡೆಯಲು ಭಾರತೀಯ ಗುಲಾಮರನ್ನು ನೇಮಕ ಮಾಡಲಾಗಿತ್ತು ಪ್ರತಿ ಒಂದು ಏಟಿಗೆ ಒಂದಾಣೆಯನ್ನು (ಒಂದು ರೂಪಾಯಿಗೆ ಹದಿನಾರು ಆಣೆ) ಏಟು ತಿನ್ನುವ ರೈತನೇ ಭರಿಸಬೇಕಾಗಿತ್ತು.

ಇಂತಹ ಕ್ರೂರ ಅಮಾನವೀಯ ಶೋಷಣೆಯನ್ನು ಸಹಿಸಲಾರದೆ, ರೈತರು ಸಣ್ಣ ಪ್ರಮಾಣದ ಗುಂಪುಗಳ ಮೂಲಕ ಪ್ರತಿಭಟಿಸಲು ಮುಂದಾದರು. ಇದೇ ಸಮಯಕ್ಕೆ ಸರಿಯಾಗಿ ಕಲರೋವ ಜಿಲ್ಲೆಯ ಜಿಲ್ಲಾಧಿಕಾರಿ ರೈತರ ಪರವಾಗಿ ಆದೇಶವನ್ನು ಹೊರಡಿಸಿ, ಗೇಣಿ ಪಡೆದ ಭೂಮಿಯನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಲು ರೈತರು ಸ್ವತಂತ್ರರು ಹಾಗೂ ತಮಗಿಷ್ಟ ಬಂದ ಬೆಳೆ ತೆಗೆಯುವುದು ಅವರ ವ್ಯಯಕ್ತಿಕ ಹಕ್ಕು ಎಂದು ಘೋಷಿಸಿದನು. ಇದು ರೈತರಿಗೆ ನೂರು ಆನೆಯ ಬಲ ತಂದುಕೊಟ್ಟಿತು. ದಿಗಂಬರ ವಿಶ್ವಾಸ್ ಮತ್ತು ವಿಷ್ಣು ವಿಶ್ವಾಸ್ ಎಂಬ ವಿದ್ಯಾವಂತ ರೈತರ ನೇತೃತ್ವದಲ್ಲಿ ದೊಡ್ಡ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಇದರಿಂದ ಆತಂಕಗೊಂಡ ಪ್ಲಾಂಟರ್‌ಗಳು ತಮ್ಮ ಭೂಮಿಯ ಗೇಣಿ ದರ ಹೆಚ್ಚಿಸುವುದರ ಮೂಲಕ ರೈತರನ್ನು ಮಣಿಸಲು ಯತ್ನಿಸದರು. ಒಗ್ಗೂಡಿದ ರೈತರು ಗೇಣಿ ಕೊಡುವುದಿರಲಿ, ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸಿದರು. ಸಂಪೂರ್ಣವಾಗಿ ನೀಲಿ ಬೆಳೆ ತೆಗೆಯುವುದನ್ನು ನಿಲ್ಲಿಸಿ ತಮಗೆ ಬೇಕಾದ ಆಹಾರ ಬೆಳೆಗಳ ಕೃಷಿಯಲ್ಲಿ ತೊಡಗಿಕೊಂಡರು. ಅನಿವಾರ್ಯವಾಗಿ ಕಚ್ಚಾ ವಸ್ತುಗಳಿಲ್ಲದೆ ಪಶ್ಚಿಮ ಬಂಗಾಳದ ಎಲ್ಲಾ ಕಂಪನಿಗಳು ಮುಚ್ಚತೊಡಗಿದವು. ಈ ಆಂದೋಲನದ ಮತ್ತೊಂದು ವೈಶಿಷ್ಟತೆಯೆಂದರೆ, ಮುಗ್ಧ ರೈತರ ಬಂಡಾಯಕ್ಕೆ ಬಂಗಾಲದ ಎಲ್ಲಾ ವಿದ್ಯಾವಂತರು, ಬುದ್ಧಿಜೀವಿಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿದರು. ಇವರೆಲ್ಲರೂ ಬಂಗಾಳದಾದ್ಯಂತ ಸಭೆ ನಡೆಸಿ ರೈತರ ಜ್ವಲಂತ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಸಮಾಜ ಮತ್ತು ಸರ್ಕಾರದ ಗಮನ ಸೆಳೆದರು. ಹರೀಶ್ಚಂದ್ರ ಮುಖರ್ಜಿಯವರ ‘ “ಹಿಂದೂ ದೇಶ ಭಕ್ತ” ಎಂಬ ಪತ್ರಿಕೆ ಹಾಗೂ “ಧೀನ ಬಂಧು ಮಿತ್ರ” ಅವರ “ನೀಲಿ ದರ್ಪಣ” ಎಂಬ ನಾಟಕ ಜನಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು ಕೊನೆಗೆ ಎಚ್ಚೆತ್ತುಕೊಂಡ ಸರ್ಕಾರ ಒಂದು ಆಯೋಗವನ್ನು ರಚಿಸಿ ರೈತರ ಸಮಸ್ಯೆ ಪರಿಹರಿಸಲು ಮುಂದಾಯಿತು.

ಇಂತಹ ಒಂದು ಅನನ್ಯವಾದ ಅಪೂರ್ವ ಇತಿಹಾಸವಿದ್ದ ಬಂಗಾಳದ ನೆಲದಲ್ಲಿ ರೈತರ, ಕೃಷಿ ಕೂಲಿಕಾರ್ಮಿಕರ ನೆಪದಲ್ಲಿ ರಕ್ತ ಸಿಕ್ತ ಇತಿಹಾಸದ ಅಧ್ಯಾಯ ಆರಂಭಗೊಂಡಿದ್ದು ನೋವಿನ ಹಾಗೂ ವಿಷಾದಕರ ಸಂಗತಿ. ನಕ್ಸಲ್‌ಬಾರಿಯ ಹಿಂಸಾತ್ಮಕ ಹೋರಾಟ ಪಶ್ಚಿಮ ಬಂಗಾಳ ಸೇರಿದಂತೆ ಆಂಧ್ರಪ್ರದೇಶದಲ್ಲಿ ಹಲವು ಮಹತ್ವದ ಬದಲಾವಣೆಗೆ ಕಾರಣವಾಯಿತು. ಅವುಗಳಲ್ಲಿ ಕನು ಸನ್ಯಾಲ್ ಸಮರ್ಥಿಸಿಕೊಂಡ ಪ್ರಮುಖವಾದ ಅಂಶಗಳೆಂದರೆ.

  1. ವಂಶಪಾರಂಪರ್ಯವಾಗಿ ಬೀಡು ಬಿಟ್ಟಿದ್ದ ಪಾಳೇಗಾರತನದ ಅಡಿಪಾಯ ಬಿರುಕು ಬಿಟ್ಟಿತು.
  2. ಜಮೀನ್ದಾರರ ಮನೆಯಲ್ಲಿದ್ದ ರೈತರ ಒಪ್ಪಂದ ಪತ್ರಗಳೆಲ್ಲಾ ನಾಶವಾದವು.
  3.  ಅನೈತಿಕತೆಯ ಮಾರ್ಗದಲ್ಲಿ ಶ್ರೀಮಂತ ಜಮೀನ್ದಾರರು ಮತ್ತು ಬಡ ರೈತರ ನಡುವೆ ಏರ್ಪಟ್ಟಿದ್ದ ಒಪ್ಪಂದಗಳನ್ನು ಶೂನ್ಯ ಎಂದು ಘೋಷಿಸಲಾಯಿತು.
  4. ಹಳ್ಳಿಗಳಲ್ಲಿ ಜಮೀನ್ದಾರರು ಪೋಷಿಸಿಕೊಂಡು ಬಂದಿದ್ದ ಅಮಾನವೀಯ ಮುಖದ ಎಲ್ಲಾ ಕಾನೂನು, ಕಟ್ಟಳೆಗಳನ್ನು ರದ್ದು ಪಡಿಸಲಾಯಿತು.
  5. ಮುಕ್ತವಾಗಿ ನಡೆದ ವಿಚಾರಣೆಯಲ್ಲಿ ಶೋಷಣೆ ಮಾಡುತ್ತಿದ್ದ ಜಮೀನ್ದಾರರನ್ನು ಕಠಿಣವಾಗಿ ಶಿಕ್ಷೆಗೆ ಒಳಪಡಿಸಲಾಯಿತು.
  6. ಜಮೀನ್ದಾರರೊಂದಿಗೆ ಬೆಳೆದು ಬಂದಿದ್ದ ಗೂಂಡಾ ಪಡೆ ಸಂಪೂರ್ಣನಾಶವಾಯಿತು.
  7. ಕೇವಲ ಬಿಲ್ಲು ಬಾಣಗಳೋಂದಿಗೆ ಸೆಣಸಾಡುತ್ತಿದ್ದ ಪ್ರತಿಭಟನಾನಿರತ ರೈತರಿಗೆ ಜಮೀನ್ದಾರರ ಮನೆಯಲ್ಲಿ ಅಪಹರಿಸಿ ತಂದ ಬಂದೂಕಗಳು ಹೊಸ ಆಯುಧಗಳಾದವು.
  8. ಜಮೀನ್ದಾರರ ಬಗ್ಗೆ ರೈತರಿಗೆ ಇದ್ದ ಭಯ ಭೀತಿ ಕಾಣದಾದವು.
  9. ರಾತ್ರಿ ವೇಳೆ  ಹಳ್ಳಗಳನ್ನು ಕಾಯಲು ರೈತರು, ಕಾರ್ಮಿಕರು ಮತ್ತು ಆದಿವಾಸಿಗಳಿಂದ ಕೂಡಿದ ಗಸ್ತು ಪಡೆಯೊಂದು ಸೃಷ್ಟಿಸಲಾಯಿತು.
  10. ಕಿಸಾನ್‌ಸಭಾ ಸಂಘಟನೆಯೊಳಗೆ ಕ್ರಾಂತಿಕಾರಿ ತಂಡವೊಂದನ್ನು ಹುಟ್ಟು ಹಾಕಲಾಯಿತು.

ಈ ಹೊರಾಟ ಕುರಿತಂತೆ ನಕ್ಸಲ್ ಚರಿತ್ರೆಯ ಸಂಪುಟಗಳನ್ನೇ ಬರೆದಿರುವ ಬಂಗಾಳಿ ಲೇಖಕ ಸಮರ್‌ಸೇನ್ ಬಣ್ಣಿಸುವುದು ಹೀಗೆ: ನಕ್ಸಲ್‌ಬಾರಿಯ ಪ್ರತಿಭಟನೆ ಎಡಪಂಥೀಯ ತತ್ವ ಸಿದ್ಧಾಂತಗಳಲ್ಲಿ ಹುದುಗಿಹೋಗಿದ್ದ ಹಲವು ಕ್ರಾಂತಿಕಾರಿ ಅಂಶಗಳನ್ನು ರೈತರ ಬಂಡಾಯದ ಮೂಲಕ ಹೊರಹಾಕಿದೆ. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ ಇದ್ದ ಅಂತರವನ್ನು ಇದು ಕಡಿಮೆ ಮಾಡಿತು. ತೆಲಂಗಾಣ ರೈತರ ಹೋರಾಟ ಕೂಡ ಇದಕ್ಕೆ ಪೂರಕವಾಗಿ ಪರಿಣಮಿಸಿತು. ಹಿಂಸೆಯ ಮೂಲಕ ಶೋಷಣೆ ಕೂಪಕ್ಕೆ ತಳ್ಳಲ್ಪಟ್ಟಿದ್ದ ಎಲ್ಲಾ ಶೋಷಿತರು ತಮ್ಮ ತಮ್ಮ ನಿಜವಾದ ಸ್ಥಾನಮಾನಗಳನ್ನು ಗುರುತಿಸಿಕೊಂಡರು. ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ, ಮತ್ತು ಹೋರಾಟದ ಮೂಲಕ ಅವರು ಮತ್ತಷ್ಟು ಸದೃಢರಾದರು.

ಸಮರ್ ಸೇನ್‌ರವರ ಅತಿ ರಂಜಿತವಾದ ಈ ಹೇಳಿಕೆ ವಾಸ್ತವಾಂಶಗಳಿಂದ ಕೂಡಿಲ್ಲ ಎಂಬುದು ಮೇಲು ನೋಟಕ್ಕೆ ಕಂಡು ಬರುತ್ತದೆ. ಏಕೆಂದರೆ, ಒಂದು ಪಕ್ಷದ ಸಿದ್ಧಾಂತದ ಚೌಕಟ್ಟಿನಲ್ಲಿ ನಡೆಯಬೇಕಾದ ಹೋರಾಟದ ಲಕ್ಷಣಗಳನ್ನು ನಕ್ಸಲ್‌ಬಾರಿಯ ಹೋರಾಟ ಒಳಗೊಂಡಿರಲಿಲ್ಲ. ಜೊತೆಗೆ ಅದು ಸಿಲಿಗುರಿ ಪ್ರಾಂತ್ಯದ ಎಲ್ಲಾ ಸಮೂಹದ ಚಳವಳಿಯಾಗಿರಲಿಲ್ಲ. ಎಲ್ಲಾ ವರ್ಗದ ಭಾವನೆಗಳನ್ನು ಕ್ರೋಢೀಕರಿಸುವಲ್ಲಿ ಹೋರಾಟ ವಿಫಲವಾಯಿತು. ಜಮೀನ್ದಾರರ ಶೋಷಣೆಯ ಬಗ್ಗೆ ನ್ಯಾಯ ಪಡೆಯಲು ಪರ್ಯಾಯ ಮಾರ್ಗಗಳಿದ್ದರೂ ಕೂಡ ಕಾನೂನನ್ನು ಸ್ವತಃ ರೈತರು, ಆದಿವಾಸಿಗಳು ಕೈಗೆತ್ತಿಕೊಂಡಿದ್ದು ಪ್ರಜಾಪ್ರಭುತ್ವ ಸರ್ಕಾರದ ವ್ಯವಸ್ಥೆಯಲ್ಲಿ ಒಪ್ಪುವಂತಹ ಸಂಗತಿಗಳಲ್ಲ. 1919 ರಿಂದ ಭಾರತದಲ್ಲಿ ಬೇರು ಬಿಟ್ಟು, ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳ ಅಡಿಯಲ್ಲಿ ಸಾಗಿದ್ದ ಕಮ್ಯೂನಿಷ್ಟ್ ಪಕ್ಷಕ್ಕೆ ಚೀನಾದ ಮಾವೋತ್ಸೆ ತುಂಗನ ಉಗ್ರವಾದಿ ನಿಲುವುಗಳು ಜೀರ್ಣಿಸಿಕೊಳ್ಳಲು ಕಷ್ಟವಾಯಿತು. ಇದನ್ನು ಮಾವೋನ ಮಾತುಗಳಲ್ಲಿ ಹೇಳಬಹುದಾದರೆ, ನಮ್ಮ ಕಾಲುಗಳಿಗೆ ತಕ್ಕಂತೆ ಪಾದರಕ್ಷೆಗಳು ಇರಬೇಕೆ ಹೊರತು, ಪಾದರಕ್ಷೆ ಅಳತೆಗೆ ನಮ್ಮ ಕಾಲಿನ ಪಾದಗಳನ್ನು ಕತ್ತರಿಸಿಕೊಳ್ಳಬಾರದು. ನಕ್ಸಲ್‌ಬಾರಿಯ ಘಟನೆಯಲ್ಲಿ ಆದದ್ದು ಕೂಡ ಇದೇ ಸಂಗತಿ.

(ಮುಂದುವರೆಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-3)


– ಡಾ.ಎನ್.ಜಗದೀಶ್ ಕೊಪ್ಪ


 

ಬರ್ದಾನ್ ಜಿಲ್ಲೆಯ ಸಮಾವೇಶದಿಂದ ಸಿಲಿಗುರಿಗೆ ಹಿಂತಿರುಗಿದ ಚಾರು ಮುಜಂದಾರ್ ಮತ್ತು ಅವನ ಸಂಗಡಿಗರು, ತಾವು ಕಮ್ಯೂನಿಷ್ಟ್ ಪಕ್ಷದ ಮುಂದೆ ಇರಿಸಿದ್ದ ಪ್ರಸ್ತಾವನೆಗಳನ್ನು ಕಾರ್ಯರೂಪಕ್ಕೆ ತರಲು ತಕ್ಷಣವೇ ಮುಂದಾದರು. ಇದೊಂದು ರೀತಿಯಲ್ಲಿ ಎಲ್ಲಾ ಅಸಮಾನತೆ, ದೌರ್ಜನ್ಯಗಳ ವಿರುದ್ಧ ಯುದ್ಧ ಘೋಷಿಸುವ ಮನಸ್ಥಿತಿಯಲ್ಲಿ ಇದ್ದಂತೆ ತೋರುತ್ತಿತ್ತು.

ಚಾರು ಯೋಜಿಸಿದ್ದ ಕನಸಿನ ರೂಪುರೇಷೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್, ಮುಂದಾಗಿ ಸಿಲಿಗುರಿ ಪ್ರಾಂತ್ಯದಲ್ಲಿ ಆದಿವಾಸಿಗಳನ್ನು ಸಂಘಟಿಸತೊಡಗಿದರು. ಜಂಗಲ್ ಸಂತಾಲ್ ಮೂಲತಃ ಸಂತಾಲ್ ಬುಡಕಟ್ಟು ಜನಾಂಗದಿಂದ ಬಂದವನಾದ್ದರಿಂದ ಸಂಘಟಿಸುವ ಕೆಲಸ ಅವನಿಗೆ ಕಷ್ಟವೆನಿಸಲಿಲ್ಲ. ಏಕೆಂದರೆ, ಜಮೀನ್ದಾರರ ಬಳಿ ಇರುವ ಹೆಚ್ಚುವರಿ ಭೂಮಿ ಹಾಗೂ ಸರ್ಕಾರ ಶ್ರೀಮಂತ ಜಮೀನ್ದಾರರಿಂದ ವಶಪಡಿಸಿಕೊಂಡಿರುವ ಭೂಮಿ ಈ ನೆಲದ ಭೂಹೀನರಿಗೆ ಸಲ್ಲಬೇಕು ಎಂಬ ಈ ಮೂವರ ಘೋಷಣೆ ಆದಿವಾಸಿಗಳನ್ನು ಸಮ್ಮೋಹನಗೊಳಿಸಿತು.

ಕಿಸಾನ್‌ಸಭಾ ಸಂಘಟನೆಗೆ ಸದಸ್ಯರಾಗ ಬಯಸುವವರು, ನಾಲ್ಕಾಣೆ (25ಪೈಸೆ) ನೀಡಿ ಸದಸ್ಯತ್ವ ಪಡೆಯಬೇಕಿತ್ತು. ಕಾಡಿನ ನಡುವೆ ಭೂಮಿಯ ಬಗ್ಗೆಯಾಗಲಿ, ಬೇಸಾಯದ ಬಗ್ಗೆಯಾಗಲಿ ಎಂದೂ ಕನಸು ಕಾಣದೆ ಬದುಕಿದ್ದ ಸಂತಾಲ್ ಮತ್ತು ರಾಜ್ಬನ್ಸಿ ಎಂಬ ಬುಡಕಟ್ಟು ಜನಾಂಗಕ್ಕೆ ಕಣ್ಣಮುಂದೆ ಬೃಹತ್ತಾದ ಆಶಾಗೋಪುರ ನಿರ್ಮಾಣವಾಗತೊಡಗಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಸದಸ್ಯರ ಸಂಖ್ಯೆ 40 ಸಾವಿರ ಮುಟ್ಟಿತು. ಈ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೇಸ್ ಮತ್ತು ಕಮ್ಯುನಿಷ್ಟ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ತನ್ನ ರಾಜ್ಯದ ಉತ್ತರ ಭಾಗದಲ್ಲಿ ಆದಿವಾಸಿಗಳು, ಜಮೀನ್ದಾರರ ವಿರುದ್ಧ ಸಂಘಟಿತರಾಗುತ್ತಿದ್ದಾರೆ ಎಂಬ ಸುಳಿವು ಸರ್ಕಾರಕ್ಕೆ ಇತ್ತಾದರೂ ಅನಿರೀಕ್ಷಿತ ಕ್ರಾಂತಿಯ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ.

1967 ರ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಸಂಘಟಿತರಾದ ಆದಿವಾಸಿ ರೈತರು, ಮತ್ತು ಕಾರ್ಮಿಕರು ತಮ್ಮ ಬಿಲ್ಲು ಬಾಣಗಳೊಂದಿಗೆ ಜಮೀನ್ದಾರರ ಮನೆಗೆ ದಾಳಿ ಇಟ್ಟು ಅವರ ಮನೆಯಲ್ಲಿದ್ದ ಭೂದಾಖಲೆಗಳು. ದವಸಧಾನ್ಯ ಮತ್ತು ಬಂದೂಕಗಳನ್ನು ವಶಪಡಿಸಿಕೊಂಡರು. ಶ್ರೀಮಂತರ ಮನೆಯಲ್ಲಿ ವಶಪಡಿಸಿಕೊಂಡಿದ್ದ ಅಪಾರ ಪ್ರಮಾಣದ ಭತ್ತ ಹಾಗೂ ಇತರೆ ದವಸಧಾನ್ಯಗಳನ್ನು ಎಲ್ಲರೂ ಸಮನಾಗಿ ಹಂಚಿಕೊಂಡು ಉಳಿದುದ್ದನ್ನು ಕಿಸಾನ್ ಸಂಘಟನೆಯ ಸದಸ್ಯರಲ್ಲದವರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಿದರು. ಮೂರು ತಿಂಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ದಾಳಿಗಳು ನಡೆದವು. ಈ ಎಲ್ಲಾ ದಾಳಿಗಳು ಚಾರು ಮುಜಂದಾರ್ ರೂಪಿಸಿದ್ದ ಮಾದರಿಯಲ್ಲಿ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್ ನೇತೃತ್ವದಲ್ಲಿ ನಡೆದವು. ಈ ಅನಿರೀಕ್ಷಿತ ಪ್ರತಿಭಟನೆ ಮತ್ತು ದಾಳಿಯಿಂದ ಕಂಗಾಲಾದ ಸಿಲಿಗುರಿ ಜಿಲ್ಲಾಡಳಿತ ಸರ್ಕಾರದ ಮಾರ್ಗದರ್ಶನಕ್ಕಾಗಿ ಕೊಲ್ಕತ್ತಾದತ್ತ ಮುಖ ಮಾಡಿಕುಳಿತುಬಿಟ್ಟಿತ್ತು.

ಹಿಂಸಾಚಾರ ಮತ್ತು ಪ್ರತಿಭಟನೆಗೆ ಕಾರಣರಾದವರನ್ನು ಬಂಧಿಸುವ ಸ್ಥೈರ್ಯ ಜಿಲ್ಲಾಡಳಿತಕ್ಕೆ ಇರಲಿಲ್ಲ. ಅಂತಿಮವಾಗಿ ಪಶ್ಚಿಮ ಬಂಗಾಳ ಸರ್ಕಾರ ಕಂದಾಯ ಇಲಾಖೆ ಸಚಿವ ಹರಿಕೃಷ್ಣಕೊನರ್‌ನನ್ನು ಸಿಲಿಗುರಿಗೆ ಕಳಿಸಿಕೊಟ್ಟಿತು. ಸರ್ಕಾರ ಮತ್ತು ಪ್ರತಿಭಟನಾಗಾರರ ನಡುವೆ ಹಲವು ಸುತ್ತಿನ ಸಂಧಾನದ ಮಾತುಕತೆಯ ನಂತರ ಮೇ 17 ರಂದು ಸುಕ್ನಾ ಅರಣ್ಯದ ಪ್ರದೇಶದ ಅತಿಥಿಗೃಹದಲ್ಲಿ ಸಚಿವನನ್ನು ಪ್ರತಿಭಟನಾಗಾರರ ಪರವಾಗಿ ಕನುಸನ್ಯಾಲ್ ಭೇಟಿಯಾಗುವುದು ಎಂಬ ಒಡಂಬಡಿಕೆಗೆ ಬರಲಾಯಿತು. ಇದಕ್ಕೂ ಮುನ್ನ ಎರಡು ಬಣಗಳ ನಡುವೆ ಹಲವು ಒಪ್ಪಂದಕ್ಕೆ ಬರಲಾಗಿತ್ತು. ಅವುಗಳಲ್ಲಿ ಸಂಧಾನದ ವೇಳೆ ಕಿಸಾನ್ ಸಭಾ ಘಟಕಗಳಿಂದ ಯಾವುದೇ ದಾಳಿ, ಲೂಟಿ, ಹಿಂಸಾಚಾರ ನಡೆಯಕೂಡದು, ಅದೇ ರೀತಿ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಕನುಸನ್ಯಾಲ್‌ನನ್ನು ಬಂಧಿಸಕೂಡದು. ಎಂಬ ಅಂಶಗಳು ಮುಖ್ಯವಾಗಿದ್ದವು.

ಕನುಸನ್ಯಾಲ್ ಬಂಗಾಳದ ಕಂದಾಯ ಸಚಿವನನ್ನು ಭೇಟಿಯಾದಾಗ, ಸರ್ಕಾರದ ಪರವಾಗಿ, ವಿಷಯಗಳನ್ನು ಪ್ರಸ್ತಾಪಿಸಿದ ಸಚಿವ ಹರೆಕೃಷ್ಣಕೊನರ್, ನಿಗದಿತ ದಿನದೊಳಗೆ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಕನುಸನ್ಯಾಲ್ ಮತ್ತು ಜಂಗಲ್ ಸಂತಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಶರಣಾಗಬೇಕು ಮತ್ತು ಪೊಲೀಸ್ ನೀಡುವ ಪಟ್ಟಿಯಲ್ಲಿ ಹೆಸರಿರುವ ಆದಿವಾಸಿ ಮುಖಂಡರನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟ. ತಕ್ಷಣಕ್ಕೆ ಇವುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕನುಸನ್ಯಾಲ್ ಸಂಗಡಿಗರೊಂದಿಗೆ ಈ ಕುರಿತು ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿ ಸಂಧಾನದ ಸಭೆಯಿಂದ ಎದ್ದು ಬಂದ.

ನಂತರ ಚಾರು ಮುಜುಂದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಬೇಡಿಕೆಗಳಿಗೆ ಕಿಸಾನ್‌ಸಭಾ ನಾಯಕರಿಂದ ಮತ್ತು ಕಾರ್ಯಕರ್ತರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರದ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು. ಶರಣಾಗತಿಗೆ ಸರ್ಕಾರ ನೀಡಿದ್ದ ಎರಡು ದಿನಗಳ ಗಡುವು ಮುಕ್ತಾಯಗೊಂಡ ಹಿನ್ನಲೆಯಲ್ಲಿ , ಸಿಲಿಗುರಿಯ ಜಿಲ್ಲಾಡಳಿತ ಹೆಚ್ಚುವರಿ ಪೊಲೀಸ್ ಪಡೆಗಳ ನೆರವಿನಿಂದ ನಕ್ಸಲ್‌ಬಾರಿ ಹಳ್ಳಿಯ ಮೇಲೆ ದಾಳಿ ಮಾಡಿ ನಾಯಕರನ್ನು ಬಂಧಿಸಲು ಮುಂದಾಯಿತು.

ಮೇ 23 ರಂದು ಪೊಲೀಸ್ ಅಧಿಕಾರಿ ಸೊನಮ್‌ವಾಂಗಡಿ ನೇತೃತ್ವದ ತಂಡ ಹಳ್ಳಿಗೆ ಆಗಮಿಸುತ್ತಿದೆ ಎಂಬ ಸುಳಿವು ದೊರೆತ ಕೂಡಲೇ ಹಳ್ಳಿಯ ಗಂಡಸರು ತಮ್ಮ ಬಿಲ್ಲು ಬಾಣಗಳ ಸಹಿತ ಹಳ್ಳಿಯನ್ನು ತೊರೆದು ಪಕ್ಕದ ಗುಡ್ಡ ಗಾಡಿನ ಪೊದೆಗಳಲ್ಲಿ ಅವಿತು ಕುಳಿತರು. ಹಳ್ಳಿಯಲ್ಲಿ ಯಾವೊಬ್ಬ ಪುರುಷನೂ ಇಲ್ಲದ್ದನ್ನು ಮನಗಂಡ ಅಧಿಕಾರಿ ವಾಂಗಡಿ ನಕ್ಸಲ್‌ಬಾರಿಯ ಬೀದಿಯಲ್ಲಿ ನಿಂತು, ಮಹಿಳೆಯರಿಗೆ, ನಿಮ್ಮ ಗಂಡಂದಿರನ್ನು ಶರಣಾಗಲು ಮನವೊಲಿಸಿ, ಇಲ್ಲದಿದ್ದರೆ, ನಿಮ್ಮನ್ನು ಬಂಧಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾಗಲೇ ದೂರದ ಪೊದೆಯ ಮರೆಯಿಂದ ತೂರಿ ಬಂದ ಮೂರು ವಿಷಪೂರಿತ ಬಾಣಗಳು ಅವನ ದೇಹವನ್ನು ಹೊಕ್ಕವು ಕ್ಷಣಾರ್ಧದಲ್ಲಿ ಆತ ಸ್ಥಳದಲ್ಲೇ ಕುಸಿದು ಮೃತಪಟ್ಟ. ತಮ್ಮ ಹೆಂಗಸರನ್ನು ಪೊಲೀಸರು ಎಳೆದೊಯ್ಯುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಮತ್ತು ತಿಳುವಳಿಕೆಯಿಂದ ಆದಿವಾಸಿಗಳು ಸೊನಮ್‌ವಾಂಗಡಿಯ ಮೇಲೆ ಬಾಣ ಪ್ರಯೋಗ ಮಾಡಿದ್ದರು.

ಸ್ಥಳೀಯರ ದಾಳಿಯಿಂದ ಬೆಚ್ಚಿಬಿದ್ದ ಪೊಲೀಸರು ಮತ್ತಷ್ಟು ಹೆಚ್ಚುವರಿ ಪಡೆಯನ್ನು ಕರೆಸಿಕೊಂಡು ಮಾರನೇದಿನ ಮತ್ತೇ ನಕ್ಸಲ್‌ಬಾರಿ ಹಳ್ಳಿ ಮೇಲೆ ಮುಗಿಬಿದ್ದರು. ಆ ದಿನ ನಕ್ಸಲ್‌ಬಾರಿ ಎಂಬ ಪುಟ್ಟ ಹಳ್ಳಿ ಅಕ್ಷರಶಃ ರಣರಂಗವಾಗಿ ಹೋಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 1500 ಪೊಲೀಸರು ಇಡೀ ಹಳ್ಳಿಯನ್ನು ನಾಲ್ಕು ದಿಕ್ಕಿನಿಂದ ಸುತ್ತುವರಿದು ಗ್ರಾಮದೊಳಕ್ಕೆ ಪ್ರವೇಶ ಮಾಡಿದಾಗ, ಸ್ಥಳೀಯ ಆದಿವಾಸಿ ಜನಗಳ ಬಿಲ್ಲಿನ ಬಾಣಗಳನ್ನು ಎದುರಿಸಲಾರದೆ. ಗುಂಡು ಹಾರಿಸಿದಾಗ ಹತ್ತು ಮಂದಿ ಬಲಿಯಾದರು ಇವರಲ್ಲಿ ಆರು ಮಂದಿ ಆದಿವಾಸಿ ಮಹಿಳೆಯರು ಸೇರಿದ್ದರು. ಈ ಘಟನೆಯಿಂದ ಆ ಕ್ಷಣಕ್ಕೆ ನಕ್ಸಲ್‌ಬಾರಿಯಲ್ಲಿ ಪ್ರತಿಭಟನೆ ತಣ್ಣಗಾದರೂ ಪ್ರತಿಭಟನೆಯ ಕಿಚ್ಚು ಇತರೆಡೆ ಆವರಿಸಿತು.

ನೂರೈವತ್ತು ಸಂತಾಲ್ ಆದಿವಾಸಿಗಳ ಗುಂಪು ಜೂನ್ 10 ರಂದು ನಕ್ಸಲ್‌ಬಾರಿ ಸಮೀಪದ ಖಾರಿಬಾರಿ ಎಂಬ ಹಳ್ಳಿಯಲ್ಲಿ ನಾಗೆನ್ ರಾಯ್‌ಚೌಧುರಿ ಎಂಬ ಜಮೀನ್ದಾರನ ಮನೆಗೆ ನುಗ್ಗಿ ಭತ್ತದ ಚೀಲಗಳು, ಜೋಡುನಳಿಕೆಯ ಬಂದೂಕ, ಮತ್ತು ಆಭರಣಗಳನ್ನು ದೋಚಿತು. ಈ ಗುಂಪಿನ ಎಲ್ಲಾ ಸದಸ್ಯರು ತಮ್ಮ ಕೈಯಲ್ಲಿ ಆಯುಧ ಮತ್ತು ಕೆಂಪು ಬಾವುಟ ಹಿಡಿದು ವ್ಯವಸ್ಥಿತವಾಗಿ ದಾಳಿ ನಡೆಸಿದ್ದರು. ಜೊತೆಗೆ ನಾಗೆನ್ ರಾಯ್‌ಚೌಧುರಿಯನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದರು. ಅಲ್ಲಿ ಕನುಸನ್ಯಾಲ್ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯತ್ ಸಭೆಯಲ್ಲಿ ಜಮೀನ್ದಾರ ಚೌಧುರಿ ಆವರೆಗೆ ನಡೆಸಿದ್ದ ಮಹಿಳೆಯರ ಮೇಲಿನ ಆತ್ಯಾಚಾರ, ಬಡವರ ಶೋಷಣೆ, ದಬ್ಬಾಳಿಕೆ ಈ ಕುರಿತಂತೆ ವಿಚಾರಣೆ ನಡೆಸಿ, ಆತನಿಗೆ ಮರಣದಂಡನೆ ವಿಧಿಸಲಾಯಿತು. ಅಲ್ಲದೆ, ಸಾರ್ವಜನಿಕವಾಗಿ ಆತನನ್ನು ನೇಣು ಹಾಕಲಾಯಿತು. ಇದೇ ದಿನ ಮತ್ತೊಂದು ಗುಂಪು ಬರಮನಿಜೋಟೆ ಎಂಬ ಹಳ್ಳಿಯ ಜೈನಂದನ್ ಸಿಂಗ್ ಎಂಬ ಜಮೀನ್ದಾರನ ಮನೆಯ ಮೇಲೆ ದಾಳಿ ನಡೆಸಿ, ದವಸ, ಧಾನ್ಯಗಳ ಜೊತೆಗೆ ಬಂದೂಕ ಹಾಗೂ 25 ಸುತ್ತುಗಳಿಗೆ ಬೇಕಾಗುವಷ್ಟು ಮದ್ದುಗುಂಡುಗಳನ್ನು ದೋಚಿತು.

ಸಿಡಿದೆದ್ದ ಆದಿವಾಸಿಗಳು, ಮತ್ತು ರೈತರು ಮತ್ತು ಕೂಲಿಕಾರ್ಮಿಕರ ದಾಳಿ, ಹತ್ಯೆ, ಹಿಂಸಾಚಾರ ಇವುಗಳಿಂದ  ಆಘಾತಕ್ಕೊಳಗಾದ ಬಂಗಾಳ ಸರ್ಕಾರ ತನ್ನ ಇತರೆ ಚಟುವಟಿಕೆಗಳನ್ನು ಬದಿಗೊತ್ತಿ ಹಲವು ತಿಂಗಳುಗಳ ಕಾಲ ಪ್ರತಿಭಟನೆಯನ್ನು ಹತೋಟಿಗೆ ತರಲು ಶ್ರಮಿಸಿತು. ರಾಜ್ಯದ ನಾನಾ ಭಾಗಗಳಿಂದ ಪೋಲೀಸ್ ತುಕಡಿಗಳನ್ನು ಸಿಲಿಗುರಿ ಜಿಲ್ಲೆಗೆ ರವಾನಿಸಿ 700 ಕ್ಕೂ ಹೆಚ್ಚು ಮಂದಿ ಚಳವಳಿಗಾರರನ್ನು ಬಂಧಿಸುವುದರ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲಾಯಿತು. ಆಗಸ್ಟ್ 10ರ ವೇಳೆಗೆ ಜಂಗಲ್‌ಸಂತಾಲ್ ಮತ್ತು ಕನುಸನ್ಯಾಲ್ ಇವರ ಬಂಧನದೊಂದಿಗೆ ಸಿಲಿಗುರಿಯ ರೈತರು ಮತ್ತು ಕೃಷಿಕೂಲಿ ಕಾರ್ಮಿಕರ ಪ್ರತಿಭಟನೆಯ ಮೊದಲ ಅಧ್ಯಾಯ ಪೂರ್ಣಗೊಂಡಿತು. ಚಳವಳಿಯನ್ನು ಮುಂದುವರಿಸುವ ದೃಷ್ಟಿಯಿಂದ ಆದಿವಾಸಿ ನಾಯಕ ಜಂಗಲ್‍ಸಂತಾಲ್ ಎರಡು ದಿನಗಳ ಅನ್ನ ನೀರು ಇಲ್ಲದೆ, ಪೊಲೀಸರ ಕಣ್ತಪ್ಪಿಸಿ ಕಾಡಿನೆಲ್ಲೆಡೆ ಅಲೆದಾಡಿ ಕೊನೆಗೆ ಶರಣಾಗತನಾಗಿದ್ದ. ನಕ್ಸಲ್‍ಬಾರಿಯ ಈ ಹೋರಾಟ ಅಂದಿನ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

(ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-2)


– ಡಾ.ಎನ್.ಜಗದೀಶ್ ಕೊಪ್ಪ


ಕಮ್ಯೂನಿಷ್ಟ್ ವಿಚಾರಧಾರೆಯಲ್ಲಿ ತಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಂಡಿದ್ದ ಚಾರು ಮುಜಂದಾರ್, ಕನು ಸನ್ಯಾಲ್ ಗೆಳೆಯರಾದ ಮೇಲೆ ಕೃಷಿ ಕೂಲಿಕಾರ್ಮಿಕರ ಹೋರಾಟಕ್ಕೆ ಹೊಸರೂಪ ಕೊಡಲು ನಿರ್ಧರಿಸಿದರು. ಹತ್ತಾರು ವರ್ಷ ಕೇವಲ ಪ್ರತಿಭಟನೆ ಮತ್ತು ಪೊಲೀಸರ ಬಂಧನದಿಂದ ದುಡಿಯುವ ವರ್ಗಕ್ಕೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಮನಗಂಡ ಈ ಇಬ್ಬರು ಗೆಳೆಯರು ನೇರಕಾರ್ಯಾಚರಣೆ (Direct Action) ನಡೆಸಲು ತೀರ್ಮಾನಿಸಿದರು. ಚಾರು ಪ್ರತಿಭಟನೆ ಮತ್ತು ಹೋರಾಟಗಳಿಗೆ ಯೋಜನೆ ರೂಪಿಸುವಲ್ಲಿ ಪರಿಣಿತನಾದರೆ, ಕನುಸನ್ಯಾಲ್  ಸಂಘಟನೆಗೆ ಜನರನ್ನು ಒಗ್ಗೂಡಿಸುವ ವಿಷಯದಲ್ಲಿ ಅದ್ಭುತ ಕ್ರಿಯಾಶೀಲ ವ್ಯಕ್ತಿಯಾಗಿದ್ದ. ಹಾಗಾಗಿ ಈ ಎರಡು ಪ್ರತಿಭೆಗಳ ಸಂಗಮ ಕೃಷಿಕರ ಮತ್ತು ಕೃಷಿಕೂಲಿ ಕಾರ್ಮಿಕರ ಹೋರಾಟಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿತು.  ಮೂಲಭೂತವಾಗಿ ಈ ಹೋರಾಟ ಹಿಂಸೆಯನ್ನು ಒಳಗೊಳ್ಳುವ ಆಲೋಚನೆಯಿಂದ ಕೂಡಿರಲಿಲ್ಲ. ಆದರೆ, ನಕ್ಸಲ್‍ಬಾರಿ ಹಳ್ಳಿಯ ಪ್ರಥಮ ಪ್ರತಿಭಟನೆ ಒಂದು ಕೆಟ್ಟ ಗಳಿಗೆಯಲ್ಲಿ ಅನಿರೀಕ್ಷಿತವಾಗಿ ತೆಗೆದುಕೊಂಡ ತಿರುವಿನಿಂದಾಗಿ ಇವರೆಲ್ಲರನ್ನು ಹಿಂಸೆಯ ಹಾದಿಯಲ್ಲಿ ಶಾಶ್ವತವಾಗಿ ನಡೆಯುವಂತೆ ಮಾಡಿದ್ದು ಭಾರತದ ಸಾಮಾಜಿಕ ಹೋರಾಟಗಳ ದುರಂತದ ಅಧ್ಯಾಯಗಳಲ್ಲಿ ಒಂದು.

1967 ರ ಮಾರ್ಚ್ ಮೂರರಂದು, ಲಪ, ಸಂಗು, ರೈತ ಎಂಬ ಮೂವರು ಸಣ್ಣ ಹಿಡುವಳಿದಾರರು ನೂರೈವತ್ತುಕ್ಕೂ ಹೆಚ್ಚು ಮಂದಿ ಇದ್ದ ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದಿಂದ ನಕ್ಸಲ್‍ಬಾರಿಯ ಜಮೀನುದಾರನ ಮನೆಗೆ ಬಿಲ್ಲು, ಬಾಣ, ಭರ್ಜಿ ಮುಂತಾದ ಆಯುಧಗಳೊಂದಿಗೆ ದಾಳಿ ಇಟ್ಟು ಮುನ್ನೂರು ಭತ್ತದ ಚೀಲಗಳನ್ನು ಹೊತ್ತೊಯ್ದು ಎಲ್ಲರೂ ಸಮನಾಗಿ ಹಂಚಿಕೊಂಡರು. ಈ ಸಣ್ಣ ಘಟನೆ ಕಮ್ಯೂನಿಷ್ಟ್ ಚಳವಳಿಗೆ ಭಾರತದಲ್ಲಿ ಪ್ರಥಮಬಾರಿಗೆ ಹೊಸ ಆಯಾಮ ನೀಡಿತು.

ನಕ್ಸಲ್‍ಬಾರಿ ಹಳ್ಳಿಯಲ್ಲಿ ನಡೆದ ರೈತರ ಪ್ರತಿಭಟನೆ ಕಮ್ಯೂನಿಷ್ಟ್ ಪಕ್ಷಕ್ಕೆ ವಿನೂತನವಾಗಿ ಕಂಡರೂ ಇದಕ್ಕೂ ಮೊದಲು ಪಕ್ಷದ ಕಾರ್ಯಕರ್ತರು  ರೈತರ ಪರವಾಗಿ ಧ್ವನಿಯೆತ್ತಿದ್ದರು. ಪಶ್ಚಿಮ ಬಂಗಾಳದ ದಿನಜಪುರ್ ಮತ್ತು ರಂಗ್ಪುರ್ ಜಿಲ್ಲೆಗಳಲ್ಲಿ ಜಮೀನುದಾರರು ಗೇಣಿದಾರರಿಗೆ ಬೇಳೆಯುವ ಫಸಲಿನಲ್ಲಿ ಅರ್ಧದಷ್ಟು ಪಾಲು ಕೊಡಬೇಕೆಂದು ಒತ್ತಾಯಿಸಿ ನಡೆಸಿದ ಹೋರಾಟ, ಬಂಗಾಳದ ಉತ್ತರ ಭಾಗದಿಂದ ದಕ್ಷಿಣದ 24 ಪರಗಣ ಜಿಲ್ಲೆಯವರೆಗೆ ಹಬ್ಬಿತ್ತು. ಇದಕ್ಕಾಗಿ ಕಮ್ಯೂನಿಷ್ಟ್ ಪಕ್ಷದಲ್ಲಿ ಕಿಸಾನ್‍ಸಭಾ ಎಂಬ ಘಟಕವನ್ನು ರಚಿಸಿಕೊಂಡು ಕಾರ್ಯಕರ್ತರು 1946 ರಿಂದ ಸತತ ಹೋರಾಟ ನಡೆಸುತ್ತಾ ಬಂದಿದ್ದರು.

ನೆರೆಯ ಆಂಧ್ರ ಪ್ರದೇಶದಲ್ಲಿಯೂ ಕೂಡ ತೆಲಂಗಾಣ ಪ್ರಾಂತ್ಯದಲ್ಲಿ ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದೊಂದಿಗೆ ನಿಜಾಮನ ಶೋಷಣೆಯ ವಿರುದ್ಧ ಸ್ಥಳೀಯ ರೈತರು ದಂಗೆಯೆದ್ದರು. ನಿಜಾಮನ ಆಳ್ವಿಕೆ ಹಾಗೂ ಅವನ ಆಡಳಿತದ ಅರಾಜಕತೆಯಿಂದ ಬೇಸತ್ತ ಅಲ್ಲಿನ ಜನತೆ 1946 ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಕಾಡ್ಗಿಚ್ಚು ಆ ಪ್ರಾಂತ್ಯದ ಮೂರು ಸಾವಿರ ಹಳ್ಳಿಗಳಿಗೆ ಹರಡಿ ಪ್ರತಿಯೊಂದು ಹಳ್ಳಿಯೂ ಸ್ವಯಂ ಸ್ವತಂತ್ರ ಘಟಕದಂತೆ ನಡೆಯಲು ಪ್ರಾರಂಭಿಸಿದವು. ಕೇವಲ ಎರಡು ವರ್ಷಗಳ ಅವಧಿಯಲ್ಲಿ, ಸ್ವಾತಂತ್ರ್ಯಾನಂತರದ ಭಾರತದ ಸೇನೆ ಆಂಧ್ರಪ್ರದೇಶಕ್ಕೆ ಧಾವಿಸಿ ಬಂದು, ಹೈದರಾಬಾದ್ ಪ್ರಾಂತ್ಯವನ್ನು ನಿಜಾಮನಿಂದ ಕಿತ್ತುಕೊಳ್ಳುವವರೆಗೂ ನಾಲ್ಕುಸಾವಿರ ಮಂದಿ ರೈತರು ನಿಜಾಮನ ದಬ್ಬಾಳಿಕೆಯಲ್ಲಿ ಹೋರಾಟದ ಹೆಸರಿನಲ್ಲಿ ಮೃತಪಟ್ಟಿದ್ದರು. (ಹೈದರಾಬಾದ್ ನಿಜಾಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕನಂತರ ಹೈದರಾಬಾದ್ ಅನ್ನು ವಿಲೀನಗೊಳಿಸಲು ನಿರಾಕರಿಸಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದ್ದನು).

ಕಮ್ಯೂನಿಷ್ಟ್ ಪಕ್ಷದ ಅಂಗವಾದ ಕಿಸಾನ್‍ಸಭಾ ಘಟಕದ ಹೋರಾಟಕ್ಕೆ ನಿಜವಾದ ಹೊಸ ಆಯಾಮ ತಂದುಕೊಟ್ಟವರು ನಕ್ಸಲ್‍ಬಾರಿ ಗ್ರಾಮದ ರೈತರು ಮತ್ತು ಕೃಷಿಕೂಲಿ ಕಾರ್ಮಿಕರು. ಇವರಿಗೆ ಆಧಾರವಾಗಿ ನಿಂತವರು, ಚಾರು ಮುಜಂದಾರ್, ಕನುಸನ್ಯಾಲ್, ಮತ್ತು ಸ್ಥಳೀಯ ಆದಿವಾಸಿ ನಾಯಕ ಜಂಗಲ್ ಸಂತಾಲ್ ಎಂಬಾತ. ನಕ್ಸಲ್‍ಬಾರಿ ಘಟನೆ ಮೇಲು ನೋಟಕ್ಕೆ ಒಂದು ಸಣ್ಣ ಘಟನೆಯಂತೆ ಕಂಡು ಬಂದರೂ ಅದು ಕಮ್ಯೂನಿಷ್ಟ್ ಪಕ್ಷ ತಾನು ನಂಬಿಕೊಂಡು ಬಂದಿದ್ದ ವಿಚಾರ ಮತ್ತು ತಾತ್ವಿಕ ಸಿದ್ಧಾಂತಕ್ಕೆ ಅತಿ ದೊಡ್ಡ ಸವಾಲನ್ನು ಎಸೆದಿತ್ತು. ಅದು ಅನಿರೀಕ್ಷಿತವಾಗಿ ಸ್ಪೋಟಗೊಂಡರೂ ಸಹ ಅದರ ಹಿನ್ನಲೆಯಲ್ಲಿ ಅನೇಕ ರೈತರ, ಸಿಟ್ಟು, ಸಂಕಟ ಮತ್ತು ನೋವು ಹಿಂಸಾಚಾರದ ಮೂಲಕ ವ್ಯಕ್ತವಾಗಿತ್ತು.

ಇದಕ್ಕೆ ಭಾರತ ಸರ್ಕಾರ 1955 ರಲ್ಲಿ ಜಾರಿಗೆ ತಂದ ಭೂಮಿತಿ ಕಾಯ್ದೆ ಕೂಡ ಪರೋಕ್ಷವಾಗಿ ಕಾರಣವಾಗಿತ್ತು. ಪ್ರತಿಯೊಬ್ಬ ವ್ಯಕ್ತಿ 15 ಎಕರೆ ಕೃಷಿಭೂಮಿ, 25 ಎಕರೆ ಕೃಷಿಗೆ ಯೋಗ್ಯವಲ್ಲದ ಭೂಮಿ ಮತ್ತು ಮನೆ ಹಾಗೂ ಇನ್ನಿತರೆ ಬಳಕೆಗಾಗಿ 5 ಎಕರೆ, ಈಗೆ ಒಟ್ಟು 45 ಎಕರೆಯನ್ನು ಮಾತ್ರ ಹೊಂದಬಹುದಾಗಿತ್ತು. ಆದರೆ, ಪಶ್ಚಿಮ ಬಂಗಾಳ, ಆಂಧ್ರ ಸೇರಿದಂತೆ ದೇಶಾದ್ಯಂತ ಅನೇಕ ಜಮೀನುದಾರರು ಸಾವಿರಾರು ಎಕರೆ ಭೂಮಿ ಹೊಂದಿದ್ದರು. ಸರ್ಕಾರದ ಕಣ್ಣು ಒರೆಸುವ ಸಲುವಾಗಿ ತಮ್ಮ ಭೂಮಿಯನ್ನು ಮುಗ್ದ ರೈತರ ಹೆಸರಿಗೆ ವರ್ಗಾಯಿಸಿ, ಅವುಗಳ ದಾಖಲೆ ಪತ್ರಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರು. ಭೂಮಿಯ ಒಡೆಯರಾಗಿದ್ದರೂ ಕೂಡ ರೈತರು ಜಮೀನ್ದಾರರಿಗೆ ಹಾಗೂ ಅವರು ಸಾಕಿಕೊಂಡಿದ್ದ ಗೂಂಡಗಳಿಗೆ ಹೆದರಿ ಗೇಣಿದಾರರಾಗಿ ದುಡಿಯುತ್ತಾ ತಾವು ಬೆಳೆದ ಫಸಲಿನ ಮುಕ್ಕಾಲು ಪಾಲು ಅವರಿಗೆ ನೀಡಿ, ಉಳಿದ ಕಾಲು ಪಾಲನ್ನು ತಾವು ಅನುಭವಿಸುತ್ತಿದ್ದರು.

ಈ ಅಸಮಾನತೆಯ ವಿರುದ್ಧ ನಕ್ಸಲ್‍ಬಾರಿ ಪ್ರದೇಶದಲ್ಲಿ ಸಣ್ಣ ಹಿಡುವಳಿದಾರರು, ಗೇಣಿದಾರರು ಮತ್ತು ಕೃಷಿ ಕೂಲಿಕಾರ್ಮಿಕರ ಪರವಾಗಿ ಕಿಸಾನ್‍ಸಭಾ ಸಂಘಟನೆ 1959 ರಲ್ಲಿ ಪ್ರಥಮ ಬಾರಿಗೆ ಪ್ರತಿಭಟನೆಯ ಬಾವುಟ ಹಾರಿಸಿತ್ತು. ಆದರೆ, ಈ ಹೋರಾಟ 1962 ರವರೆಗೆ ಮುಂದುವರಿದು ಕೆಲವು ನಾಯಕರ ಬಂಧನದೊಂದಿಗೆ ವಿಫಲತೆಯನ್ನು ಅನುಭವಿಸಿತು. ಇಂತಹ ಸೋಲಿನ ಹಿನ್ನಲೆಯಲ್ಲಿ ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಙಾಸೆ ಮೂಡಿಸಿತು. ಪಕ್ಷದ ನಾಯಕರಲ್ಲಿ ಕೆಲವರಿಗೆ ರೈತರ ಸಮಸ್ಯೆಗಳಿಗೆ ಸೈದ್ಧಾಂತಿಕ ನೆಲೆಗಟ್ಟಿನ ಹೋರಾಟದಲ್ಲಿ ಪರಿಹಾರ ಕಂಡುಕೊಳ್ಳುವ ಹಂಬಲವಿತ್ತು. ಆದರೆ, ಈ ಸೌಮ್ಯವಾದಿಗಳ ನಿರ್ಧಾರ ಕೆಲವು ತೀವ್ರವಾದಿ ಮನಸ್ಸಿನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಒಪ್ಪಿಗೆಯಾಗಲಿಲ್ಲ. ಇವರಲ್ಲಿ ಚಾರು ಮತ್ತು ಕನುಸನ್ಯಾಲ್, ನಾಗಭೂಷಣ್ ಪಟ್ನಾಯಕ್, ಕೊಂಡಪಲ್ಲಿ ಸೀತಾರಾಮಯ್ಯ ಪ್ರಮುಖರು.

1966 ರ ಅಕ್ಟೋಬರ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಬರ್ದಾನ್ ಜಿಲ್ಲೆಯ ಸಟ್‍ಗಚಿಯ ಎಂಬಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಿತು. ಅವರೆಗೂ ಮಾರ್ಕ್ಸ್ ಹಾಗೂ ಲೆನಿನ್ ವಿಚಾರಧಾರೆಯನ್ನು ಅನುಕರಿಸಿಕೊಂಡು ಬಂದಿದ್ದ ಪಕ್ಷಕ್ಕೆ ಹೊಸದಾಗಿ ಚೀನಾದ ಮಾವೋತ್ಸೆ ತುಂಗನ ಕ್ರಾಂತಿಕಾರಕ ವಿಚಾರಗಳನ್ನು ಅಳವಡಿಸಿಕೊಳ್ಳುವ ಸಂದಿಗ್ದತೆ ಎದುರಾಯಿತು. ಈ ಸಮಾವೇಶಕ್ಕೆ ಸಿಲುಗುರಿ ಪ್ರಾಂತ್ಯದಿಂದ ಚಾರು ಮುಜಂದಾರ್, ಕನುಸನ್ಯಾಲ್, ಜಂಗಲ್ ಸಂತಲ್ ಸೇರಿದಂತೆ ಎಂಟು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಇವರೆಲ್ಲರೂ 1965 ರ ಏಪ್ರಿಲ್ ತಿಂಗಳಿನಲ್ಲಿ ಮುದ್ರಿಸಿದ್ದ ಕರಪತ್ರವೊಂದನ್ನು ಜೊತೆಯಲ್ಲಿ ತಂದಿದ್ದರು. ಕರಪತ್ರದಲ್ಲಿ ರೈತರು, ಗೇಣಿದಾರರು ಮುಂದೆ ಬಂದು ಬಲತ್ಕಾರವಾಗಿ ಜಮೀನ್ದಾರರಿಂದ ಭೂಮಿಯನ್ನು ಕಿತ್ತುಕೊಳ್ಳಲು ಕರೆನೀಡಲಾಗಿತ್ತು. ಅಲ್ಲದೆ, ಸಮಾವೇಶಕ್ಕೆ ಮುನ್ನ ಎರಡು ತಿಂಗಳ ಮುಂಚೆ ಅಂದರೆ, ಆಗಸ್ಟ್ ತಿಂಗಳಿನಲ್ಲಿ ಮುದ್ರಿಸಲಾಗಿದ್ದ ಕರಪತ್ರವನ್ನು ಸಹಾ ಸಿಲಿಗುರಿ ಪ್ರಾಂತ್ಯದ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಹಂಚಿದರು.

ಕರಪತ್ರದಲ್ಲಿ ಹಳ್ಳಿಗಳಲ್ಲಿ ವಾಸವಾಗಿರುವ ರೈತರು ಹಾಗೂ ಕೃಷಿಕೂಲಿ ಕಾರ್ಮಿಕರು ಸಂಘಟಿತರಾಗಲು ಕರೆ ನೀಡಲಾಗಿತ್ತು, ಎರಡನೇದಾಗಿ ದುರಂಕಾರದ ಜಮೀನ್ದಾರರು, ಮತ್ತು ಅವರ ಗೂಂಡಾ ಪಡೆಯನ್ನು ಸಮರ್ಥವಾಗಿ ಎದುರಿಸಲು ಬಿಲ್ಲು, ಬಾಣಗಳಿಂದ ಸಿದ್ಧರಾಗಲು ವಿನಂತಿಸಿಕೊಳ್ಳಲಾಗಿತ್ತು, ಮೂರನೇದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬಡವರು ಮತ್ತು ಕೂಲಿಕಾರರು, ಅಸಹಾಯಕ ಗೇಣಿದಾರರು ನೆಮ್ಮದಿಯಿಂದ ಬದುಕಬೇಕಾದರೆ, ಕೊಬ್ಬಿದ ಜಮೀನ್ದಾರರನ್ನು ಮಟ್ಟ ಹಾಕುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಇದೇ ವಿಚಾರಗಳನ್ನು ಪಕ್ಷದ ಸಮಾವೇಶದಲ್ಲಿ ಚಾರು ಮತ್ತು ಅವನ ಸಂಗಡಿಗರು ಬಲವಾಗಿ ಸಮರ್ಥಿಸಿಕೊಂಡು, ಪಕ್ಷ ಶೀಮಂತ ಜಮೀನ್ದಾರರ ಬಗ್ಗೆ ಕಠಿಣ ನಿಲುವು ತಳೆಯಬೇಕೆಂದು ಆಗ್ರಹಸಿದರು. ಕಮ್ಯೂನಿಷ್ಟ್ ಪಕ್ಷದ ಧುರೀಣರು ಚಾರು ಮತ್ತು ಅವನ ಸಂಗಡಿಗರು ಎತ್ತಿದ ಪ್ರಶ್ನೆಗಳಿಗೆ ಯಾವುದೇ ಸಮಜಾಯಿಸಿ ನೀಡಲು ಸಾಧ್ಯವಾಗದೇ ಮೌನಕ್ಕೆ ಶರಣಾದರು. ಇದು ಪರೋಕ್ಷವಾಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ತಾವು ನಂಬಿಕೊಂಡು ಬಂದಿದ್ದ ತಾತ್ವಿಕ ಸಿದ್ಧಾಂತಗಳಿಗಾಗಿ ಅಂಟಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಒಟ್ಟಾರೆ, 1966 ರ ಈ ಸಮಾವೇಶ, ಕಮ್ಯೂನಿಷ್ಟ್ ಸಿದ್ಧಾಂತಗಳ ಸಂಘರ್ಷದಿಂದಾಗಿ ಹೋಳಾಗುವ ಸ್ಥಿತಿ ತಲುಪಿತು. ಕೆಲವರು ಮಾರ್ಕ್ಸ್ ಮತ್ತು ಲೆನಿನ್ ಸಿದ್ಧಾಂತಕ್ಕೆ ಅಂಟಿಕೊಂಡರೆ, ಮತ್ತೇ ಕೆಲವರು ತೀವ್ರಗಾಮಿ ಎನಿಸಿದ ಮಾವೋನ ವಿಚಾರಗಳಿಂದ ಪ್ರೇರಿತರಾಗಿ ಮಾವೋನನ್ನು ಆರಾಧಿಸತೊಡಗಿದರು.

(ಮುಂದುವರಿಯುವುದು)