Category Archives: ಆನಂದ ಪ್ರಸಾದ್

ಸಲಿಂಗ ಕಾಮ – ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ

– ಆನಂದ ಪ್ರಸಾದ್

ಸರ್ವೋಚ್ಛ ನ್ಯಾಯಾಲಯವು ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ ಅಲ್ಲವೆಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿ ಒಂದು ಶತಮಾನ ಹಿಂದಕ್ಕೆ ದೇಶವನ್ನು ಕೊಂಡೊಯ್ಯುವ ತೀರ್ಪು ನೀಡಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡುವಾಗ ಸಮಕಾಲೀನ ಜ್ಞಾನವನ್ನು ಕಡೆಗಣಿಸಿರುವುದು ಆಘಾತಕಾರಿ ಬೆಳವಣಿಗೆ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನವು ಖಚಿತಪಡಿಸಿದ ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯೂ ಹೌದು. homosexual-symbolಈ ತೀರ್ಪು ನೀಡಿದ ನ್ಯಾಯಾಧೀಶರು ಸನಾತನವಾದಿ ಮನೋಸ್ಥಿತಿಯ ನ್ಯಾಯಾಧೀಶರೆಂದು ತೀರ್ಪಿನಿಂದ ಕಂಡುಬರುತ್ತದೆ. ನ್ಯಾಯಾಧೀಶರು ಪ್ರಗತಿಶೀಲ ಮನೋಭಾವದವರಾಗಿದ್ದಿದ್ದರೆ ಇಂದಿನ ಸಮಕಾಲೀನ ಜ್ಞಾನವನ್ನು ಆಧರಿಸಿ ತೀರ್ಪು ನೀಡುತ್ತಿದ್ದರು. ನ್ಯಾಯವೂ ಕೂಡ ನ್ಯಾಯಾಧೀಶರ ವೈಯಕ್ತಿಕ ಮನೋಭಾವವನ್ನು ಹೊಂದಿಕೊಂಡು ನೀಡಲ್ಪಡುತ್ತದೆ. ಸಂವಿಧಾನವು ನೀಡಿದ ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಿಕೊಂಡು ಸಂವಿಧಾನದ ಐಪಿಸಿ 377ನೇ ವಿಧಿ ಇಂದಿನ ಸಮಕಾಲೀನ ಜ್ಞಾನದ ಹಿನ್ನೆಲೆಯಲ್ಲಿ ಅಪ್ರಸ್ತುತ ಎಂದು ಸರ್ವೋಚ್ಛ ನ್ಯಾಯಾಲಯವು ಅದನ್ನು ರದ್ದು ಪಡಿಸಿದ್ದರೆ ಯಾರಿಗೂ ಏನೂ ಮಾಡಲು ಸಾಧ್ಯವಿರಲಿಲ್ಲ, ಏಕೆಂದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪೇ ಅಂತಿಮ. ಹೀಗಿರುವಾಗ ಸರ್ವೋಚ್ಛ ನ್ಯಾಯಾಲಯವು ಪ್ರತಿಗಾಮಿ ತೀರ್ಪನ್ನು ನೀಡಿ ಮಾನವೀಯತೆ ಹಾಗೂ ಉದಾರವಾದಿ ಪರಂಪರೆಗೆ ಕೊಡಲಿ ಏಟು ಹಾಕಿದೆ. ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ಐಪಿಸಿ 377ನೇ ವಿಧಿಯನ್ನು ಪರಾಮರ್ಶಿಸುವ ಹೊಣೆಯನ್ನು ಸಂಸತ್ತಿನ ಮೇಲೆ ಜಾರಿಸಿ ತಾನು ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಭಾರತದಲ್ಲಿ ಧಾರ್ಮಿಕ ಪಟ್ಟಭದ್ರ ಹಿತಾಸಕ್ತ ಸನಾತನವಾದಿ ಗುಂಪುಗಳು ಎಲ್ಲ ಧರ್ಮಗಳಲ್ಲೂ ತುಂಬಿಕೊಂಡಿರುವುದರಿಂದ ಇಂಥ ವಿಷಯದಲ್ಲಿ ಸಂಸತ್ತು ಕೂಡ ಕ್ರಮ ಕೈಗೊಳ್ಳುವುದು ಕಷ್ಟವೇ. ಸನಾತನವಾದಿಗಳ ವಿರೋಧವನ್ನು ಕಟ್ಟಿಕೊಳ್ಳಲು Hyakinthos-paintingರಾಜಕೀಯ ಪಕ್ಷಗಳು ಹಿಂಜರಿಯುವ ಸನ್ನಿವೇಶ ಭಾರತದಲ್ಲಿ ಇರುವಾಗ ಸಂಸತ್ತು ಈ ಬಗ್ಗೆ ಕ್ರಮ ಕೈಗೊಂಡು ಐಪಿಸಿ 377ನೇ ವಿಧಿಯನ್ನು ರದ್ದುಪಡಿಸುವ ಅಥವಾ ತಿದ್ದುಪಡಿ ತರಲು ಹಿಂಜರಿಯುವ ಸ್ಥಿತಿ ಕಂಡುಬರುತ್ತಾ ಇದೆ. ಇದಕ್ಕೆ ಪೂರಕವಾಗಿ ಭಾರತೀಯ ಜನತಾ ಪಕ್ಷವು ತಾನು ಸಲಿಂಗಕಾಮ ಅಪರಾಧ ಎಂಬ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಹಾಗೂ ಇದರ ವಿರುದ್ಧವಾಗಿ ಸಂವಿಧಾನದ ಐಪಿಸಿ 377ನೇ ವಿಧಿಯನ್ನು ರದ್ದುಪಡಿಸುವುದನ್ನು ವಿರೋಧಿಸುತ್ತೇನೆ ಎಂದು ಹೇಳಿ ತಾನು ಎಂಥ ಪ್ರತಿಗಾಮಿ ಮನೋಭಾವದ ಪಕ್ಷ ಎಂಬುದನ್ನು ತೋರಿಸಿಕೊಂಡಿದೆ.

ಸಲಿಂಗಕಾಮವು ನಿಸರ್ಗಕ್ಕೆ ವಿರೋಧ ಎಂಬುದು ಸನಾತನವಾದಿಗಳ ಹಾಗೂ ಶಾಸ್ತ್ರಾಂಧ ಜನರ ವಾದ. ಸಲಿಂಗಕಾಮಿಗಳನ್ನು ನಿಸರ್ಗವೇ ಸೃಷ್ಟಿಸಿದ್ದು ಆಗಿರುವಾಗ ಇದು ನಿಸರ್ಗಕ್ಕೆ ವಿರೋಧ ಹೇಗಾಗುತ್ತದೆ? ನಿಸರ್ಗ ವಿರೋಧ ಆಗಬೇಕಾದರೆ ಸಲಿಂಗಕಾಮಿಗಳನ್ನು ವಿಜ್ಞಾನಿಗಳು ಪ್ರಯೋಗಶಾಲೆಯಲ್ಲಿ ಕೃತಕವಾಗಿ ಸೃಷ್ಟಿಸಿರಬೇಕು. ಆದರೆ ಸಲಿಂಗಕಾಮಿಗಳನ್ನು ವಿಜ್ಞಾನಿಗಳು ವಂಶವಾಹಿ ತಂತ್ರಜ್ಞಾನದ (genetical engineering) ಮೂಲಕ ಕೃತಕವಾಗಿ ಸೃಷ್ಟಿಸಿದ್ದು ಅಲ್ಲ. ಹೀಗಿರುವಾಗ ಇದು ನಿಸರ್ಗಕ್ಕೆ ವಿರೋಧವಾದದ್ದು ಎಂಬುದು ಅರ್ಥಹೀನ. ಸಲಿಂಗಕಾಮವೆಂಬುದು ಪ್ರಧಾನವಾಗಿ ವಂಶವಾಹಿಗಳ ಮೂಲಕ ನಿರ್ಧರಿತವಾಗುತ್ತದೆ ಎಂದು ವಿಜ್ಞಾನ ಹಾಗೂ ವೈದ್ಯಕೀಯ ಲೋಕ ಸ್ಪಷ್ಟಪಡಿಸಿದೆ ಹಾಗೂ ಇದನ್ನು ಚಿಕಿತ್ಸೆಯ ಮೂಲಕ ಬದಲಾಯಿಸಲು ಸಾಧ್ಯವಿಲ್ಲವೆಂದೂ ಹೇಳಿದೆ. ಸಲಿಂಗಕಾಮವು ನಿಸರ್ಗದ್ದೇ ಒಂದು ವೈವಿಧ್ಯ. ಹಾಗಾಗಿ ಇದನ್ನು ಅಪರಾಧವಾಗಿ ಕಾಣುವುದು ಅಮಾನವೀಯ ಹಾಗೂ ಸಂವಿಧಾನವು ನೀಡಿದ ವ್ಯಕ್ತಿಸ್ವಾತಂತ್ರ್ಯದ ಉಲ್ಲಂಘನೆಯೂ ಹೌದು. ಸಲಿಂಗಕಾಮಿಗಳು ಸೇರಿದರೆ ಸಂತಾನೋತ್ಪತ್ತಿ ಆಗುವುದಿಲ್ಲ. ಗಂಡು ಹಾಗೂ ಹೆಣ್ಣು ಕೂಡುವುದು ಸಂತಾನೋತ್ಪತ್ತಿಗೆ ಆಗಿದ್ದರೆ ಮಾತ್ರ ಅದು ಧರ್ಮಸಮ್ಮತ ಎಂಬ ವಾದವನ್ನು ಮಾಡುವವರೂ ಇದ್ದಾರೆ. ಇವರ ವಾದ ನೋಡಿದರೆ ಗಂಡು ಹೆಣ್ಣುಗಳು ಸಂತಾನೋತ್ಪತ್ತಿಗೆ ಮಾತ್ರ ಕೂಡಬೇಕು ಎಂದಾದರೆ ಮಕ್ಕಳಾದ ನಂತರವೂ ಮನುಷ್ಯರು ಲೈಂಗಿಕ ಕ್ರಿಯೆ ನಡೆಸುವುದಿಲ್ಲವೇ? ಮನುಷ್ಯನಲ್ಲಿ ಲೈಂಗಿಕತೆ ಸಂತಾನೋತ್ಪತ್ತಿಯನ್ನು ಮೀರಿ ಬೇರೆ ಉದ್ಧೇಶಗಳನ್ನೂ ಹೊಂದಿದೆ. ಬರಿಯ ಸಂತಾನೋತ್ಪತ್ತಿಗೆ ಮಾತ್ರ ಲೈಂಗಿಕತೆ ಸೀಮಿತ ಎಂದಾಗಿದ್ದರೆanimal_homosexual_behavior ಮನುಷ್ಯರಲ್ಲಿ ಗಂಡು ಹೆಣ್ಣುಗಳು ಎಲ್ಲ ಕಾಲದಲ್ಲೂ ಕೂಡುವುದನ್ನು ನಿಸರ್ಗವು ಸಾಧ್ಯ ಮಾಡುತ್ತಿರಲಿಲ್ಲ. ಹೆಚ್ಚಿನ ಪ್ರಾಣಿಗಳಲ್ಲಿ ಬೆದೆಯ ಕಾಲ ಎಂದು ಇದೆ. ಆ ಕಾಲದಲ್ಲಿ ಮಾತ್ರ ಗಂಡು ಹೆಣ್ಣುಗಳು ಪ್ರಾಣಿಗಳಲ್ಲಿ ಕೂಡಲು ಸಾಧ್ಯ. ಮನುಷ್ಯರಲ್ಲಿ ಇಂಥ ಬೆದೆಯ ಕಾಲ ಎಂದು ಇಲ್ಲ. ಮನುಷ್ಯರಲ್ಲಿ ಎಲ್ಲಾ ಕಾಲದಲ್ಲೂ ಗಂಡು ಹೆಣ್ಣುಗಳು ಕೂಡಬಹುದು. ಮನುಷ್ಯರಲ್ಲಿ ಲೈಂಗಿಕತೆ ಮನೋರಂಜನೆಯಾಗಿಯೂ, ಸುಖಪಡುವ ಸಾಧನವಾಗಿಯೂ ಬಳಕೆಯಾಗುತ್ತದೆ ಮತ್ತು ಇದನ್ನು ನಿಸರ್ಗವೇ ಮಾನವನಲ್ಲಿ ರೂಪಿಸಿದೆ. ಹೀಗಿರುವಾಗ ಅಲ್ಪಸಂಖ್ಯಾತರಾದ ಸಲಿಂಗಕಾಮಿಗಳು ಸುಖ ಪಡಬಾರದು, ಬಹುಸಂಖ್ಯಾತರಾದ ಭಿನ್ನಲಿಂಗಿ ಮಾನವರು ಮಾತ್ರ ಸುಖಪಡಬೇಕು ಎಂಬುದು ನ್ಯಾಯವಾಗುತ್ತದೆಯೇ ಎಂದು ನ್ಯಾಯಾಧೀಶರು ತೀರ್ಪು ನೀಡುವ ಮುನ್ನ ಯೋಚಿಸಬೇಕಾಗಿತ್ತು. ಅದೇ ರೀತಿ ಬಹುಸಂಖ್ಯಾತ ಭಿನ್ನಲಿಂಗಿ ಮಾನವರು ಹೇಳಿದಂತೆ ಅಲ್ಪಸಂಖ್ಯಾತ ಸಲಿಂಗಕಾಮಿಗಳು ಕೇಳಬೇಕು ಎಂಬುದು ಹಿಟ್ಲರ್ ಹಾಗೂ ಸ್ಟಾಲಿನ್ ತರಹದ ಸರ್ವಾಧಿಕಾರವಾಗುವುದಿಲ್ಲವೇ ಎಂದು ಸನಾತನವಾದಿಗಳು ಯೋಚಿಸಬೇಕಾದ ಅಗತ್ಯ ಇದೆ.

ಸಲಿಂಗಕಾಮವು ಮನುಷ್ಯರಲ್ಲಿ ಮಾತ್ರ ಇದೆಯೆಂದು ಕೆಲವು ಸನಾತನವಾದಿಗಳು ತಪ್ಪು ತಿಳಿದಿದ್ದಾರೆ. ಸಲಿಂಗಕಾಮವು ಹಲವಾರು ಪ್ರಾಣಿಗಳಲ್ಲಿಯೂ ಇದೆ ಎಂದು ವಿಜ್ಞಾನ ಹೇಳುತ್ತದೆ. ಹೋಮೋಸೆಕ್ಶುವಾಲಿಟಿ ಎಂದು ಹಾಕಿದರೆ ವಿಕಿಪೀಡಿಯದಲ್ಲಿ ಸಲಿಂಗಕಾಮದ ಸಮಗ್ರ ವಿವರಗಳು ಲಭಿಸುತ್ತವೆ. ಈ ಬಗ್ಗೆ ಸನಾತನವಾದಿಗಳು ಒಮ್ಮೆ ನೋಡುವುದು ಉತ್ತಮ. ಸಲಿಂಗಕಾಮದಿಂದ ಸಮಾಜದ ನೈತಿಕತೆ ಸರ್ವನಾಶವಾಗುತ್ತದೆ ಎಂಬ ಗುಲ್ಲನ್ನೂ ಸನಾತನವಾದಿಗಳು ಎಬ್ಬಿಸುತ್ತಿದ್ದಾರೆ. ಇದೊಂದು ಹುರುಳಿಲ್ಲದ ವಾದ. ಯಾರು ತಮ್ಮ ವಂಶವಾಹಿಗಳ (genes) ಮೂಲಕ ಸಲಿಂಗಕಾಮಿಗಳಾಗುವ ಸಾಧ್ಯತೆಯನ್ನು ಪಡೆದಿದ್ದಾರೆಯೋ lgbt-pride-parade-in-chennaiಅವರು ಮಾತ್ರ ಸಲಿಂಗಕಾಮದಲ್ಲಿ ಸುಖವನ್ನು ಕಾಣಲು ಸಾಧ್ಯ. ಉಳಿದಂತೆ ಭಿನ್ನಲಿಂಗಿಗಳು ಗಂಡು ಹೆಣ್ಣುಗಳ ಮಿಲನದಿಂದ ಪಡೆಯುವ ಸುಖವನ್ನು ಸಲಿಂಗಕಾಮದಿಂದ ಪಡೆಯಲು ಸಾಧ್ಯವೇ ಇಲ್ಲ. ಹೀಗಾಗಿ ಇಡೀ ಸಮಾಜದ ನೈತಿಕತೆಯೇ ಸಲಿಂಗಕಾಮದಿಂದ ಸರ್ವನಾಶವಾಗಿಹೋಗುತ್ತದೆ ಎಂಬ ಸನಾತನವಾದಿಗಳ ಆತಂಕಕ್ಕೆ ಕಾರಣವಿಲ್ಲ. ಅದೇ ರೀತಿ ಸಲಿಂಗಕಾಮದಿಂದ ಮಾನವ ಕುಲವೇ ನಾಶವಾದೀತು ಎಂಬ ಹಾಹಾಕಾರವೂ ಹುರುಳಿಲ್ಲದ್ದು. ಸಲಿಂಗಕಾಮಿಗಳ ಸಂಖ್ಯೆ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಇಲ್ಲ. ಅಂದಾಜು ಪ್ರಕಾರ ಅದು 10ರಿಂದ 15%ಕ್ಕಿಂತ ಹೆಚ್ಚು ಇಲ್ಲ. ಹೀಗಾಗಿ ಮಾನವ ಜನಾಂಗ ನಾಶವಾಗುವ ಯಾವ ಅಪಾಯವೂ ಇಲ್ಲ. ಸಲಿಂಗಕಾಮ ಅಪರಾಧ ಎಂಬ ವಸಾಹತುಶಾಹೀ ಕಾಲದ ಕಾನೂನು ಇಂದಿನ ವೈಜ್ಞಾನಿಕ ಜ್ಞಾನದ ಹಿನ್ನೆಲೆಯಲ್ಲಿ ಅರ್ಥಹೀನ ಹಾಗೂ ಕಾಲಬಾಹಿರ ಎಂಬುದನ್ನು ಸಮಾಜವು ಅರ್ಥಮಾಡಿಕೊಂಡು ಸಲಿಂಗಕಾಮಿಗಳು ಕೂಡ ಘನತೆಯಿಂದ ಬದುಕುವ ಅವಕಾಶ ಮಾಡಿಕೊಡಬೇಕಾದದ್ದು ಧರ್ಮ. ಅದು ಶಿಕ್ಷಾರ್ಹ ಅಪರಾಧ ಎಂದು ಹೇಳುವುದು ಅಮಾನವೀಯ ಹಾಗೂ ಹಿಟ್ಲರ್‌ಶಾಹಿ ಮನೋಸ್ಥಿತಿ. ಇದನ್ನು ಎಲ್ಲ ಧರ್ಮಗಳ ಸನಾತನವಾದಿಗಳು ತಿಳಿದುಕೊಳ್ಳಬೇಕಾಗಿದೆ. ಅದೇ ರೀತಿ ಎಲ್ಲ ರಾಜಕೀಯ ಪಕ್ಷಗಳೂ ಈ ಕುರಿತು ಉದಾರವಾದಿ ನಿಲುವನ್ನು ತಳೆಯುವುದು ಮಾನವೀಯತೆಯ ಲಕ್ಷಣ ಆದೀತು.

ಆಮ್ ಆದ್ಮಿ ಪಕ್ಷ ವ್ಯವಸ್ಥೆ ಬದಲಾವಣೆಯ ಹರಿಕಾರ ಆಗಲಿ

– ಆನಂದ ಪ್ರಸಾದ್

ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿದುದನ್ನು ನೋಡಿ ಪರಂಪರಾಗತ ರಾಜಕಾರಣಿಗಳು ಬೆಚ್ಚಿಬಿದ್ದಿದ್ದಾರೆ. ಈ ಪಕ್ಷವೆಲ್ಲಿಯಾದರೂ ಇದೇ ರೀತಿ ದೇಶಾದ್ಯಂತ ಬೆಳೆದರೆ ತಮ್ಮ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆಯಾಗುವುದೋ ಎಂಬ ಗಾಬರಿಯಿಂದ ಸಂಸತ್ತಿನಲ್ಲಿ ಲೋಕಪಾಲ್ ಮಸೂದೆಯನ್ನು ಅದು ದುರ್ಬಲವಾಗಿದ್ದರೂ ತರಾತುರಿಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದ್ದಾರೆ. ಈ ತರಾತುರಿಗೆ ಕಾರಣ ಅಣ್ಣಾ ಹಜಾರೆಯವರ anna-hazareಉಪವಾಸ ಸತ್ಯಾಗ್ರಹವೇನೂ ಅಲ್ಲ. ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹ ಇದಕ್ಕೆ ಕಾರಣವೆಂದಾದರೆ ಈ ಮಸೂದೆ ಎರಡು ವರ್ಷಗಳ ಹಿಂದೆಯೇ ಪಾಸಾಗಬೇಕಿತ್ತು. ಎರಡು ವರ್ಷಗಳ ಹಿಂದೆ ಉಪವಾಸ ಸತ್ಯಾಗ್ರಹ ಮಾಡಿದ ನಂತರ ಅಣ್ಣಾ ಹಜಾರೆಯವರೂ ಉಪವಾಸ ಕುಳಿತುಕೊಳ್ಳದೆ ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಮಸೂದೆಯನ್ನು ಪಾಸು ಮಾಡುವಂತೆ ಉಪವಾಸ ಕುಳಿತುಕೊಂಡದ್ದು ಕಾಕತಾಳೀಯ ಇರಲಾರದು. ಅಣ್ಣಾ ಹಜಾರೆಯವರ ರಾಜಕೀಯ ನಿಲುವು ನೋಡಿದಾಗ ಅವರು ಬಿಜೆಪಿ ಹಾಗೂ ಸಂಘ ಪರಿವಾರದ ಸಿದ್ಧಾಂತಗಳಿಗೆ ಹತ್ತಿರವಿರುವುದು ಕಂಡುಬರುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಫಲವಾಗಿ ದೇಶಾದ್ಯಂತ ಎದ್ದ ಜನಜಾಗೃತಿಯ ಫಲ ಬಿಜೆಪಿ ಪಕ್ಷಕ್ಕೆ ದೊರಕಲಿ ಎಂಬ ಒಳ ಆಶಯ ಅಣ್ಣಾ ಅವರಲ್ಲಿ ಹಾಗೂ ಅವರ ಸಂಗಡಿಗರಾದ ಕೆಲವರಲ್ಲಿ ಇರುವಂತೆ ಕಾಣುತ್ತದೆ. ಹೀಗಾಗಿಯೇ ಅರವಿಂದ ಕೇಜ್ರಿವಾಲ್ ಪ್ರತ್ಯೇಕ ಪಕ್ಷ ಸ್ಥಾಪಿಸಿ ರಾಜಕೀಯ ಹೋರಾಟದ ನಿರ್ಧಾರ ತೆಗೆದುಕೊಂಡಾಗ ಅದನ್ನು ಬೆಂಬಲಿಸಲು ಹಜಾರೆ ನಿರಾಕರಿಸಿದುದು ಹಾಗೂ ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ ಎಂದಿರುವಾಗ ಭ್ರಷ್ಟಾಚಾರ ವಿರೋಧಿ ಹೋರಾಟದ ಸಮಯದಲ್ಲಿ ಸಂಗ್ರಹವಾದ ನಿಧಿಯನ್ನು ಕೇಜ್ರಿವಾಲ್ ಚುನಾವಣೆಗೆ ಬಳಸುತ್ತಿದ್ದಾರೆಯೋ ಎಂಬ ಗೊಂದಲವನ್ನು ಸೃಷ್ಟಿಸಿ ಜನತೆಯಲ್ಲಿ anna-kejriwalಕೇಜ್ರಿವಾಲ್ ಹಾಗೂ ಸಂಗಡಿಗರ ಬಗ್ಗೆ ಅಪನಂಬಿಕೆಯನ್ನು ಹುಟ್ಟು ಹಾಕಿದ್ದು ಕೂಡ ಇದೇ ಉದ್ಧೇಶದಿಂದ ಇರಬಹುದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟದ ಫಲ ಆಮ್ ಆದ್ಮಿ ಪಕ್ಷವು ಎಲ್ಲಿ ತನ್ನಿಂದ ಕಿತ್ತುಕೊಳ್ಳುವುದೋ ಎಂಬ ಭೀತಿಯಿಂದಲೇ ಬಿಜೆಪಿಯವರು ಅಣ್ಣಾ ಹಜಾರೆಗೆ ಕೇಜ್ರಿವಾಲ್ ಬೆನ್ನಿಗೆ ಚೂರಿ ಹಾಕಿದರು, ವಿಶ್ವಾಸ ದ್ರೋಹ ಮಾಡಿದರು ಎಂಬಂಥ ಅಪ್ರಪ್ರಚಾರದಲ್ಲಿ ತೊಡಗಿದರು. ಈ ಎಲ್ಲಾ ಅಪಪ್ರಚಾರದ ಹೊರತಾಗಿಯೂ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿತು.

ಕೇಜ್ರಿವಾಲ್ ಹಾಗೂ ಸಂಗಡಿಗರು ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವುದು ಭಾರತದ ಪಾಲಿಗೆ ಒಂದು ಒಳ್ಳೆಯ ನಿರ್ಧಾರವಾಗಿದೆ. ಇಂದು ದೇಶಕ್ಕೆ ಪರ್ಯಾಯ ರಾಜಕೀಯದ ಅಗತ್ಯವಿದೆ. ರಾಜಕೀಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರದೇ ಹೋದರೆ ಭಾರತದಲ್ಲಿ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಪಕ್ಷಗಳಿಗೆ ಕ್ರಾಂತಿಕಾರಕ ಬದಲಾವಣೆ ತರುವುದು ಬೇಡವಾಗಿದೆ. ಅಂಥ ಬದಲಾವಣೆ ತರುವ ಮನಸ್ಸಿದ್ದರೆ ಈಗ ಇರುವ ಲೋಕಸಭೆ ಹಾಗೂ ರಾಜ್ಯಸಭೆಗಳೇ ಸೂಕ್ತ ಕಾನೂನುಗಳನ್ನು ಈಗಲೇ ಮಾಡುವುದು ಸಾಧ್ಯವಿದೆ. ಅದನ್ನೆಂದಾದರೋ ಅವುಗಳು ಮಾಡಿವೆಯೇ? ಇಲ್ಲ. ಪ್ರತಿಯೊಂದು ವಿಷಯಕ್ಕೂ ಜನರು ನಿರಂತರ ಒತ್ತಡ ಹಾಕಿದರೆ ಮಾತ್ರ ಕಾನೂನು ಮಾಡುವುದು ಎಂದಾದರೆ ಜನಪ್ರತಿನಿಧಿಗಳ ಅಗತ್ಯ ಏನು? aam-admi-partyರಾಜಪ್ರಭುತ್ವವನ್ನೇ ಮುಂದುವರಿಸಬಹುದಿತ್ತಲ್ಲವೇ? ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಾ ಬಂದಿದೆ. ದೇಶಕ್ಕೆ ಇಂದು ಪ್ರಾಮಾಣಿಕ, ಜವಾಬ್ದಾರಿಯುತ, ಉದಾರವಾದಿ ನಾಯಕತ್ವದ ಅಗತ್ಯ ಇದೆ. ಇದನ್ನು ಆಮ್ ಆದ್ಮಿ ಪಕ್ಷವು ನೀಡುವ ಹಾಗೂ ಉಳಿದೆಲ್ಲ ಪಕ್ಷಗಳಿಗಿಂತ ತಾನು ಭಿನ್ನ ಎಂದು ತೋರಿಸುವ ಅಗತ್ಯ ಇದೆ. ಆಮ್ ಆದ್ಮಿ ಪಕ್ಷದ ಇದುವರೆಗಿನ ನಿಲುವನ್ನು ನೋಡಿದರೆ ಅದು ಉಳಿದ ಪಕ್ಷಗಳಿಗಿಂತ ಭಿನ್ನ ಎಂದು ತೋರಿಸಿಕೊಂಡಿದೆ. ಪಕ್ಷ ಕಟ್ಟಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಹಣವನ್ನು ಜನರ ದೇಣಿಗೆಯಿಂದಲೇ ಪ್ರಾಮಾಣಿಕವಾಗಿ ಪಡೆದು ಅದನ್ನು ತನ್ನ ವೆಬ್ ಸೈಟಿನಲ್ಲಿ ಹಾಕಿ ಪಾರದರ್ಶಕತೆಯನ್ನು ಮೆರೆದಿದೆ. ಮತಗಳಿಗಾಗಿ ಹಣ, ಹೆಂಡ, ಇನ್ನಿತರ ಆಮಿಷಗಳನ್ನು ಮತದಾರರಿಗೆ ಒಡ್ಡಿಲ್ಲ. ಜಾತಿ ಹಾಗೂ ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಅಧಿಕಾರವು ತನ್ನ ಕೈಗೆಟಕುವ ಹತ್ತಿರ ಇದ್ದರೂ ಉನ್ನತ ನೈತಿಕ ಧೈರ್ಯವನ್ನು ತೋರಿಸಿ ಅನೈತಿಕ ರಾಜಕೀಯ ಮಾಡುವುದಿಲ್ಲ ಎಂದು ನಡೆದಂತೆ ನುಡಿದಿದೆ. ದೆಹಲಿ ಚುನಾವಣೆಗೂ ಮೊದಲು ಪೂರ್ಣ ಬಹುಮತ ಪಡೆಯದೇ ಇದ್ದ ಪಕ್ಷದಲ್ಲಿ ತಾನು ಯಾರಿಗೂ ಬೆಂಬಲ ಕೊಡುವುದಿಲ್ಲ ಹಾಗೂ ಯಾರಿಂದಲೂ ಬೆಂಬಲ ಪಡೆಯುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಬಾಹ್ಯ ಬೆಂಬಲ ಕೊಡಲು ಮುಂದೆ ಬಂದಿದ್ದರೂ ಸರಕಾರ ರಚಿಸಬೇಕೋ ಬೇಡವೋ ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ಮಾಡಿದರೂ ಟೀಕೆ ತಪ್ಪಿದ್ದಲ್ಲ, ಸರ್ಕಾರ ಮಾಡದಿದ್ದರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬ ಟೀಕೆಯೂ ತಪ್ಪಿದ್ದಲ್ಲ. ಇದೀಗ ಈ ಕುರಿತು ದೆಹಲಿಯ ಜನತೆಯನ್ನೇ ಕೇಳಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ದಿಟ್ಟ ನಿಲುವು ತೆಗೆದುಕೊಂಡಿರುವುದು ಅತ್ಯಂತ ಪಕ್ವ, ಪ್ರಬುದ್ಧ ನಿಲುವು ಎಂದೇ ಹೇಳಬೇಕಾಗುತ್ತದೆ. ಇದರಿಂದಾಗಿಯೂ ಇದು ಉಳಿದ ಪಕ್ಷಗಳಿಗಿಂತ ಸಂಪೂರ್ಣ ಭಿನ್ನ ಎಂದು ಕಂಡುಬರುತ್ತದೆ. ಪರಿವರ್ತನೆಯ ಹಾದಿಯಲ್ಲಿ ಒಮ್ಮೆ ಅರಾಜಕ ಪರಿಸ್ಥಿತಿ ತಲೆದೋರುತ್ತದೆ. ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ಬದಲಾವಣೆ ಆಗುವಾಗ ಇದು ಅನಿವಾರ್ಯ. ಉದಾಹರಣೆಗೆ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾವಣೆ ಹೊಂದುವಾಗ ಗೊಂದಲ, ಅರಾಜಕ ಪರಿಸ್ಥಿತಿ ತಲೆದೋರುತ್ತದೆ. ಇದರಿಂದ ವಿಚಲಿತರಾಗಬೇಕಾಗಿಲ್ಲ. ಊಳಿಗಮಾನ್ಯ ವ್ಯವಸ್ಥೆಯಿಂದ ಸಮತಾವಾದಿ ವ್ಯವಸ್ಥೆಗೆ ರಷ್ಯ ಬದಲಾಗುವ ವೇಳೆಯಲ್ಲಿ ಕೆಲವು ವರ್ಷಗಳವರೆಗೆ ಅರಾಜಕ ಪರಿಸ್ಥಿತಿ ಇತ್ತು. ಹೀಗೆಯೇ ಇದೀಗ ದೆಹಲಿಯಲ್ಲಿ ಪಾರಂಪರಿಕ ಭ್ರಷ್ಟ ಪಕ್ಷಗಳ ವ್ಯವಸ್ಥೆಯಿಂದ ನೈತಿಕ ಹಾಗೂ ಮೌಲ್ಯಾಧಾರಿತ ವ್ಯವಸ್ಥೆಗೆ ಬದಲಾಗುವ ಈ ಸಂಧಿ ಕಾಲದಲ್ಲಿ ದೆಹಲಿಯಲ್ಲಿ ಸ್ವಲ್ಪ ಸಮಯ ರಾಷ್ಟ್ರಪತಿ ಆಳ್ವಿಕೆ ಬಂದರೆ ಅದನ್ನು ಜನತೆಯ ಮೇಲಿನ ಹೊರೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದರೆ ಇದನ್ನು ಸಹಿಸಿಕೊಳ್ಳಬೇಕಾಗುತ್ತದೆ. ರಾಷ್ಟ್ರಪತಿ ಆಳ್ವಿಕೆ ಎಂದರೆ ಅರಾಜಕ ಪರಿಸ್ಥಿತಿಯೇನೂ ಉಂಟಾಗುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಸ್ವಲ್ಪ ವಿಳಂಬ ಆಗಬಹುದು ಅಷ್ಟೇ.

ಆಮ್ ಆದ್ಮಿ ಪಕ್ಷವು ಭಾರತಾದ್ಯಂತ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಬೇಕಾದ ಅಗತ್ಯ ಇಂದು ಇದೆ. ಸಮಾನ ಮನಸ್ಕ ರಾಜಕೀಯ ಪಕ್ಷಗಳ ಜೊತೆ ಈ ನಿಟ್ಟಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಲೋಕಪಾಲ್ ಸಂಸ್ಥೆಯ ಸ್ಥಾಪನೆ ಆಗುವ ಕಾರಣ ಪಕ್ಷದ ಬೆಳವಣಿಗೆ ದೆಹಲಿಗೆ ಸೀಮಿತ ಆಗಲಾರದು. ಉನ್ನತ ರಾಜಕೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಪರ್ಯಾಯ ರಾಷ್ಟ್ರೀಯ ಪಕ್ಷವೊಂದರ ಅಗತ್ಯ ಇಂದು ಈ ದೇಶಕ್ಕೆ ಇದೆ. ಅದನ್ನು ಆಮ್ ಆದ್ಮಿ ಪಕ್ಷವು ತುಂಬುವ ಸಂಭವ ಇದೆ ಮತ್ತು ಇದನ್ನು ದೇಶಾದ್ಯಂತ ಬೆಳೆಸಲು ಸಮಾಜದ ಎಲ್ಲಾ ವರ್ಗಗಳ ಜನ ಮುಂದೆ ಬಂದರೆ ಇದು ಅಸಾಧ್ಯವೇನೂ ಅಲ್ಲ. ಇದು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಕೇಜ್ರಿವಾಲರು ಅಣ್ಣಾ ಹಜಾರೆಯವರನ್ನು ಗುರುವೆಂದು ತಿಳಿದುಕೊಳ್ಳಬೇಕಾದ ಅಗತ್ಯ ಇಲ್ಲ ಮತ್ತು ಅವರು ಅಣ್ಣಾ ಅವರ ಬೆಂಬಲ ಇಲ್ಲದೆಯೂ ತನ್ನ ಸ್ವಂತ ಪ್ರತಿಭೆಯಿಂದಲೇ ಬೆಳೆಯಬಲ್ಲರು. arvind-kejriwal-campaigningಗುರು-ಶಿಷ್ಯ ಎಂಬ ಪರಿಕಲ್ಪನೆ ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ ಮತ್ತು ಅದು ಬೇಕಾಗಿಯೂ ಇಲ್ಲ. ಅಣ್ಣಾ ಹಜಾರೆಯವರು ವೈಜ್ಞಾನಿಕ ಮನೋಭಾವ ಇಲ್ಲದ ಹಳೆಯ ತಲೆಮಾರಿನ ವ್ಯಕ್ತಿ ಆದ ಕಾರಣ ಅವರ ಬೆಂಬಲ ಇಂದಿನ ತಲೆಮಾರಿನ ಪ್ರಜಾಪ್ರಭುತ್ವ, ಸಮಾನತೆ, ವೈಚಾರಿಕ ಮನೋಭಾವ, ಉದಾರವಾದಿ ವ್ಯಕ್ತಿತ್ವ ಹೊಂದಿರುವ ಕೇಜ್ರಿವಾಲ್ ಹಾಗೂ ಸಂಗಡಿಗರಿಗೆ ದೊರೆಯಲಾರದು. ಹೀಗಾಗಿ ಅವರು ಅಣ್ಣಾ ಅವರನ್ನು ಗುರು ಎಂದು ಹೇಳಿಕೊಳ್ಳುವುದು, ಅವರ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುವುದು ವ್ಯರ್ಥ. ಹಾದಿಗಳು ಬೇರೆ ಬೇರೆಯಾದ ಕಾರಣ ಕೇಜ್ರಿವಾಲ್ ಹಾಗೂ ಸಂಗಡಿಗರು ತಮ್ಮ ಸ್ವಂತ ಪ್ರತಿಭೆಯಿಂದಲೇ ಬೆಳೆಯುವುದು ಉತ್ತಮ ಹಾಗೂ ಅಂಥ ಪ್ರತಿಭೆ ಹಾಗೂ ಮುನ್ನೋಟ ಅವರಲ್ಲಿ ಇದೆ. ಯಾವುದೇ ಕಾರಣಕ್ಕೂ ಕೇಜ್ರಿವಾಲ್ ಹಿಂಜರಿಯಬೇಕಾದ ಅಗತ್ಯ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡೂ ಪಕ್ಷಗಳಲ್ಲಿಯೂ ಸನಾತನವಾದಿ, ಪುರೋಹಿತಶಾಹಿ, ಯಥಾಸ್ಥಿತಿವಾದಿ, ಪಟ್ಟಭದ್ರ ಹಿತಾಸಕ್ತಿಗಳು ನೆಲೆಯೂರಿರುವ ಕಾರಣ ಭಾರತವು ಸರಿಯಾದ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲ. ಭಾರತವನ್ನು ಮುನ್ನಡೆಸಲು ಆಧುನಿಕ ನಿಲುವಿನ ಪ್ರತಿಭಾವಂತರು ಕೇಜ್ರಿವಾಲ್ ಹಾಗೂ ಸಂಗಡಿಗರ ಜೊತೆ ರಾಜಕೀಯಕ್ಕೆ ಇಳಿಯಬೇಕಾದ ಅಗತ್ಯ ಇದೆ.

ಕೇಜ್ರಿವಾಲ್ ಅವರಲ್ಲಿ ಇರುವ ದೃಢತೆ, ಚಿಂತನೆ ನೋಡುವಾಗ ಭಗತ್ ಸಿಂಗ್, ಸುಭಾಷಚಂದ್ರ ಬೋಸ್ ಅವರ ಹೋಲಿಕೆ ಕಂಡುಬರುತ್ತದೆ. ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನ ಇದ್ದರೆ ಜನ ಜಾತಿ, ಮತ, ಧರ್ಮ ಭೇದ ಮರೆತು; ಕೆಳವರ್ಗ, ಮಧ್ಯಮ ವರ್ಗ, ಶ್ರೀಮಂತ ವರ್ಗ ಎಂಬ ಭೇದವಿಲ್ಲದೆ ಬೆಂಬಲಿಸುತ್ತಾರೆ ಮತ್ತು ಮೆಚ್ಚುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಇದಕ್ಕೊಂದು ಉತ್ತಮ ಉದಾಹರಣೆ. ಆಮ್ ಆದ್ಮಿ ಪಕ್ಷವು ಪ್ರಾಮಾಣಿಕ, ಜವಾಬ್ದಾರಿಯುತ ಜನರನ್ನು ಗುರುತಿಸಿ ಬೆಳೆಸುವ ಕಾರ್ಯ ಮಾಡಬೇಕು. ಪಕ್ಷದಲ್ಲಿ ಎರಡನೆಯ ಹಾಗೂ ಮೂರನೆಯ ಪೀಳಿಗೆಯ ನಾಯಕರನ್ನು ತಯಾರು ಮಾಡಬೇಕು. ಕೇಜ್ರಿವಾಲ್ ನಂತರ ಯಾರು ಎಂಬ ಪ್ರಶ್ನೆ ಎಂದೂ ಬರಬಾರದು. ವಂಶಪಾರಂಪರ್ಯ ರಾಜಕೀಯಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ನಿಯಮವನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸಲು ಅಗತ್ಯವಾಗಿ ಬೇಕಾಗಿತ್ತು. ಒಬ್ಬನೇ ವ್ಯಕ್ತಿ ನಿರಂತರವಾಗಿ ಪದೇ ಪದೇ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಆಗಬಾರದು. ಹೀಗೆ ಒಬ್ಬನೇ ಮತ್ತೆ ಮತ್ತೆ ಮುಖ್ಯ ಮಂತ್ರಿ ಅಥವಾ ಪ್ರಧಾನ ಮಂತ್ರಿ ಆಗುವುದು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು. ಉದಾಹರಣೆಗೆ ಜೀವಂತ ಇರುವವರೆಗೋ ನೆಹರೂ ಅವರೇ ಪ್ರಧಾನ ಮಂತ್ರಿ ಆಗಿದ್ದದ್ದು, ಇಂದಿರಾ ಗಾಂಧಿಯೂ ಜೀವಂತ ಇದ್ದಷ್ಟು ದಿನ ಕಾಂಗ್ರೆಸ್ಸಿನಿಂದ ಪ್ರಧಾನ ಮಂತ್ರಿಯಾಗಿದ್ದದ್ದು. ಇದು ಪ್ರಜಾಪ್ರಭುತ್ವವಲ್ಲ, ರಾಜಪ್ರಭುತ್ವದ ಇನ್ನೊಂದು ಅವತಾರವಷ್ಟೇ. ಈ ರೋಗ ಕಾಂಗ್ರೆಸ್ಸಿಗೆ ಮಾತ್ರ ಸೀಮಿತವಲ್ಲ ಬಿಜೆಪಿ, ಸಮಾಜವಾದಿ, ಅಣ್ಣಾಡಿಎಂಕೆ, ಡಿಎಂಕೆ, ಟಿಡಿಪಿ, ಬಿಜು ಜನತಾದಳ, ಜಾತ್ಯಾತೀತ ಜನತಾದಳ ಹೀಗೆ ಎಲ್ಲ ಪಕ್ಷಗಳನ್ನೂ ಆವರಿಸಿಕೊಂಡಿದೆ. ಬಿಜೆಪಿಯಲ್ಲಿಯೂ ನರೇಂದ್ರ ಮೋದಿಯೇ ನಾಲ್ಕನೆಯ ಸಲ ಮುಖ್ಯಮಂತ್ರಿಯಾಗಿರುವುದು ಕೂಡ ನೈಜ ಪ್ರಜಾಪ್ರಭುತ್ವವಲ್ಲ. ಅದೇ ರೀತಿ ಎಡ ಪಕ್ಷಗಳಲ್ಲಿ ಜ್ಯೋತಿ ಬಸು ಐದು ಸಲ ಮುಖ್ಯಮಂತ್ರಿ ಆಗಿದ್ದು ಕೂಡ. ಒಬ್ಬನೇ ಸಾಯುವವರೆಗೆ ಅಧಿಕಾರಕ್ಕೆ ಅಂಟಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಯೋಗ್ಯವಲ್ಲ. ಹೆಚ್ಚೆಂದರೆ ಒಬ್ಬನಿಗೆ ಎರಡು ಅವಕಾಶಗಳಷ್ಟೇ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಲು ಇರಬೇಕು. ಅದಕ್ಕಿಂತಲೂ ಹೆಚ್ಚು ಬಾರಿ ಒಬ್ಬನೇ ಅಧಿಕಾರ ಸ್ಥಾನಕ್ಕೆ ಏರುವುದು ಕೂಡ ರಾಜಪ್ರಭುತ್ವದ ಮುಂದುವರಿಕೆಯಾಗುತ್ತದೆ. ಇದು ಸರ್ವಾಧಿಕಾರಿ ಹಾಗೂ ವಂಶವಾಹೀ ಅಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಒಬ್ಬನೇ ಒಂದು ಪಕ್ಷದಿಂದ ಎರಡಕ್ಕಿಂತ ಹೆಚ್ಚು ಬಾರಿ ಮುಖ್ಯ ಮಂತ್ರಿಯೋ, ಪ್ರಧಾನ ಮಂತ್ರಿಯೋ ಆಗದಂತೆ ಪಕ್ಷಗಳು ನಿಯಮ ರೂಪಿಸುವ ಅಗತ್ಯ ಇದೆ. ಅದೇ ರೀತಿ ಪಕ್ಷದ ಅಧ್ಯಕ್ಷರ ವಿಚಾರದಲ್ಲಿಯೂ ಕೂಡ ನಿಯಮ ಮಾಡಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವ ಬೆಳೆಯಲು ಸಾಧ್ಯ.

ಲೋಕಪಾಲ್ ಸಂಸ್ಥೆ ಸ್ಥಾಪನೆ ಆಗುವ ಕಾರಣ ಭ್ರಷ್ಟಾಚಾರ ಸ್ವಲ್ಪ ನಿಯಂತ್ರಣಕ್ಕೆ ಬರಬಹುದು ಆದರೆ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನ ಅಧಿಕಾರಕ್ಕೆ ಬರುವ ಪರಿಸ್ಥಿತಿ ರೂಪುಗೊಳ್ಳುವವರೆಗೆ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು. ಉದಾಹರಣೆಗೆ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಆದರೆ ಭ್ರಷ್ಟಾಚಾರ ನಿಯಂತ್ರಣ ಆಗಿದೆಯೇ? corruption-india-democracyಇಲ್ಲವೆಂದೇ ಹೇಳಬೇಕಾಗುತ್ತದೆ. ವಿಜಯಕರ್ನಾಟಕ ಪತ್ರಿಕೆಯಲ್ಲಿ ಬರುವ ‘ಲಂಚ ಪ್ರಪಂಚ’ ಎಂಬ ಅಂಕಣದಲ್ಲಿ ಪ್ರಕಟವಾಗುವ ಬರಹಗಳನ್ನು ನೋಡಿದರೆ ಲೋಕಾಯುಕ್ತ ಸಂಸ್ಥೆ ನಿಷ್ಪ್ರಯೋಜಕ ಎಂಬ ಭಾವನೆ ಬರುವುದಿಲ್ಲವೇ? ಎಲ್ಲಿಯವರೆಗೆ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನರು ಅಧಿಕಾರ ಸ್ಥಾನಕ್ಕೆ ಬರುವ ಪರಿಸ್ಥಿತಿ ರೂಪುಗೊಳ್ಳುವು ದಿಲ್ಲವೋ ಅಲ್ಲಿಯವರೆಗೆ ನೂರು ಲೋಕಾಯುಕ್ತಗಳು, ನೂರು ಲೋಕಪಾಲಗಳು ಬಂದರೂ ಪರಿಸ್ಥಿತಿಯಲ್ಲಿ ಸುಧಾರಣೆ ಆಗುವ ಲಕ್ಷಣ ಕಾಣುವುದಿಲ್ಲ. ಬಿಜೆಪಿ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ, ಕಾಂಗ್ರೆಸ್ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ, ಜೆಡಿಎಸ್ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ. ಕ್ರಾಂತಿಕಾರಕ ಪ್ರಜಾಸತ್ತಾತ್ಮಕ ಬದಲಾವಣೆಗಳನ್ನು ವ್ಯವಸ್ಥೆಯಲ್ಲಿ ತರದಿದ್ದರೆ ಹೀಗೇ ಆಗುವುದು, ಯಾರು ಅಧಿಕಾರಕ್ಕೆ ಬಂದರೂ ವ್ಯವಸ್ಥೆ ಬದಲಾವಣೆ ಆಗುವುದಿಲ್ಲ. ನ್ಯಾಯಾಂಗ ಸುಧಾರಣೆ, ಚುನಾವಣಾ ಸುಧಾರಣೆ, ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು, ಮತದಾನದಲ್ಲಿ ‘ಯಾರಿಗೂ ಇಲ್ಲ’ (NOTA) ಎಂಬ ಮತ ನೀಡುವ ಅವಕಾಶ ಹಾಗೂ ಹಾಗೆ ಯಾರಿಗೂ ಇಲ್ಲ ಎಂಬ ಮತಗಳ ಸಂಖ್ಯೆ ಗೆದ್ದ ಅಭ್ಯರ್ಥಿಯ ಮತಗಳಿಗಿಂತ ಹೆಚ್ಚಾದರೆ ಅಲ್ಲಿ ಪುನಃ ಮತದಾನ ನಡೆಸುವ ವ್ಯವಸ್ಥೆ ಮೊದಲಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕ್ರಾಂತಿಕಾರಕ ಚಿಂತನೆಗಳನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಬೇರೆ ಯಾವ ರಾಜಕೀಯ ಪಕ್ಷಗಳಲ್ಲಿಯೂ ಇಂಥ ಕ್ರಾಂತಿಕಾರಕ ಚಿಂತನೆ ಕಂಡುಬರುವುದಿಲ್ಲ. ಈ ನಿಟ್ಟಿನಿಂದಲೂ ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವಾಗಿ ಬೆಳೆಸುವ ಅಗತ್ಯ ಇದೆ.

ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಜನಲೋಕಪಾಲ್ ಮಸೂದೆಗಳ ನಡುವಿನ ಪ್ರಮುಖ ವ್ಯತ್ಯಾಸಗಳು

– ಆನಂದ ಪ್ರಸಾದ್

ಕೇಂದ್ರ ಸರ್ಕಾರವು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಉತ್ತಮ ಸಾಧನೆ ಮಾಡಿರುವುದನ್ನು ನೋಡಿ ಗಾಬರಿಯಾಗಿ ದುರ್ಬಲ ಲೋಕಪಾಲ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ತರಾತುರಿಯಲ್ಲಿ ಮುಂದಾಗಿದೆ. ಇದಕ್ಕೆ ವಿಪಕ್ಷ ಬಿಜೆಪಿಯೂ ಗಾಬರಿಯಿಂದ ಚರ್ಚೆ ಇಲ್ಲದೆ ಒಪ್ಪಿಕೊಳ್ಳುವ ಇಂಗಿತ ತೋರಿಸಿದೆ. ಈ ದುರ್ಬಲ ಮಸೂದೆಯನ್ನುanna-kejriwal ಹಿಂದೆ ಬಲಿಷ್ಠ ಲೋಕಪಾಲ ಮಸೂದೆಗಾಗಿ ಪಟ್ಟು ಹಿಡಿದಿದ್ದ ಅಣ್ಣಾ ಹಜಾರೆಯವರೂ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲಿಗೆ ಹಲ್ಲಿಲ್ಲದ ಹಾವನ್ನು ಸೃಷ್ಟಿಸಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿದ್ದು ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಅಣ್ಣಾ ಅವರನ್ನು ದುರ್ಬಲ ಮಸೂದೆಗೆ ಕೆಲವು ಸ್ಥಾಪಿತ ಹಿತಾಸಕ್ತರು ದಾರಿ ತಪ್ಪಿಸಿ ಒಪ್ಪಿಸಿದ್ದಾರೆ ಎಂದೂ ಮತ್ತು ಇದನ್ನು ತಾವು ವಿರೋಧಿಸುವುದಾಗಿಯೂ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ವೆಬ್‌ಸೈಟಿನಲ್ಲಿ ಕೇಜ್ರಿವಾಲ್ ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಈ ಹಿಂದೆ ಅಣ್ಣಾ ನೇತೃತ್ವದ ಜನಲೋಕಪಾಲ್ ಚಳುವಳಿ ಸಿದ್ಧಪಡಿಸಿದ ಜನಲೋಕಪಾಲ್ ಮಸೂದೆಯ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳು ಇಂತಿವೆ:

  1. ಲೋಕಪಾಲರ ನೇಮಕ: ಸರ್ಕಾರೀ ಮಸೂದೆಯ ಪ್ರಕಾರ ಲೋಕಪಾಲರನ್ನು ನೇಮಿಸಲು 5 ಸದಸ್ಯರ ಸಮಿತಿ ಇರುತ್ತದೆ. ಅವರೆಂದರೆ ಪ್ರಧಾನಿ, ವಿರೋಧ ಪಕ್ಷದ ನಾಯಕ, ಲೋಕಸಭೆಯ ಸ್ಪೀಕರ್, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ, ಹಾಗೂ ಈ ನಾಲ್ವರು ಸೂಚಿಸುವ ಒಬ್ಬ ವಿದ್ವಾಂಸರು/ನ್ಯಾಯಾಧೀಶರು/ವಕೀಲರು ಅಥವಾ ತೀರ್ಪುಗಾರರು. ಜನಲೋಕಪಾಲ ಮಸೂದೆಯ ಪ್ರಕಾರ ಲೋಕಪಾಲರನ್ನು ನೇಮಿಸಲು 7 ಜನರ ಸಮಿತಿ ಇರುತ್ತದೆ. ಅವರ್ಯಾರೆಂದರೆ 2 ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು, 2 ಉಚ್ಛ ನ್ಯಾಯಾಲಯದ ನ್ಯಾಯಾಧೀಶರು; ಸಿಎಜಿ, ಸಿವಿಸಿ, ಸಿಇಸಿ (ಮುಖ್ಯ ಚುನಾವಣಾ ಆಯುಕ್ತ) ಸೂಚಿಸಿದ ತಲಾ ಒಬ್ಬ ಸದಸ್ಯ; ಪ್ರಧಾನ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ. ಸರ್ಕಾರೀ ಮಸೂದೆಯ ಪ್ರಕಾರ ಇರುವ ಸಮಿತಿಯಲ್ಲಿ ರಾಜಕಾರಣಿಗಳೇ ಹೆಚ್ಚಿರುವ ಕಾರಣ ನಿಷ್ಪಕ್ಷಪಾತ ನೇಮಕ ಸಾಧ್ಯವಾಗಲಾರದು.
  2. ಲೋಕಪಾಲರನ್ನು ತೆಗೆದುಹಾಕುವುದು: ಸರ್ಕಾರೀ ಮಸೂದೆ ಪ್ರಕಾರ ಲೋಕಪಾಲರನ್ನು ತೆಗೆದುಹಾಕಲು ಒಂದೋ ಆಳುವ ಸರ್ಕಾರ ಅಥವಾ 100 ಜನ ಲೋಕಸಭಾ ಸದಸ್ಯರು ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಲು ಮಾತ್ರ ಅವಕಾಶ ಇದೆ. ಜನಲೋಕಪಾಲ್ ಮಸೂದೆ ಪ್ರಕಾರ ಯಾವುದೇ ನಾಗರಿಕನೂ ಸರ್ವೋಚ್ಛ ನ್ಯಾಯಾಲಯಕ್ಕೆ ದೂರು ನೀಡುವ ಮೂಲಕ ಲೋಕಪಾಲದ ಸದಸ್ಯರನ್ನು ತೆಗೆದುಹಾಕಲು ದೂರು ಕೊಡಬಹುದು. ಸರ್ಕಾರೀ ಮಸೂದೆಯ ಪ್ರಕಾರ ಲೋಕಪಾಲರನ್ನು ತೆಗೆದು ಹಾಕಲು ದೂರು ನೀಡುವ ಅಧಿಕಾರ ಆಳುವ ಸರ್ಕಾರ ಹಾಗೂ ರಾಜಕಾರಣಿಗಳ ಬಳಿ ಮಾತ್ರವೇ ಇರುವುದರಿಂದ ಲೋಕಪಾಲದ ದಕ್ಷತೆ ಹಾಗೂ ಸ್ವಾತಂತ್ರ್ಯದ ಮೇಲೆ ಗಂಭೀರ ಲೋಪ ಉಂಟಾಗಬಹುದು.
  3. ತನಿಖಾ ದಳ: ಸರ್ಕಾರೀ ಮಸೂದೆ ಪ್ರಕಾರ ಲೋಕಪಾಲಕ್ಕೆ ಬರುವ ದೂರುಗಳ ವಿಚಾರಣೆಯನ್ನು ಕೈಗೊಳ್ಳಲು ಸರ್ಕಾರೀ ಅಧೀನದಲ್ಲಿರುವ ಸಿಬಿಐ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಯನ್ನು ಅವಲಂಬಿಸಬೇಕು. ಸಿಬಿಐ ಅಧಿಕಾರಿಗಳ ನೇಮಕ, ವರ್ಗಾವಣೆ ಹಾಗೂ ನಿವೃತ್ತಿಯ ನಂತರದ ಸೇವೆಗಳಿಗೆ ನೇಮಕ ಮಾಡುವ ಅಧಿಕಾರ ಸಂಪೂರ್ಣವಾಗಿ ಸರ್ಕಾರ ಹಾಗೂ ರಾಜಕಾರಣಿಗಳ ಬಳಿ ಇರುವ ಕಾರಣ ಸಿಬಿಐ ಸಂಸ್ಥೆಯ ಹಿಡಿತ ಸರ್ಕಾರದ ಬಳಿಯೇ ಇರಲಿದ್ದು ತನಿಖಾ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಗಂಭೀರ ಹಾನಿಯಾಗುತ್ತಿರುತ್ತದೆ (ಈಗ ಆಗುತ್ತಿರುವಂತೆ). ಜನಲೋಕಪಾಲ್ ಮಸೂದೆ ಪ್ರಕಾರ ಸಿಬಿಐ ತನಿಖಾ ಸಂಸ್ಥೆಯ ಆಡಳಿತಾತ್ಮಕ ನಿಯಂತ್ರಣವು ಲೋಕಪಾಲದ ಅಡಿಯಲ್ಲಿ ಇರುತ್ತದೆ ಮತ್ತು ಸರ್ಕಾರದಿಂದ ಸ್ವತಂತ್ರವಾಗಿರುತ್ತದೆ.
  4. ವಿಷಲ್ ಬ್ಲೋವರ್ ರಕ್ಷಣೆ: ಸರ್ಕಾರೀ ಮಸೂದೆ ಪ್ರಕಾರ ವಿಷಲ್ ಬ್ಲೋವರ್ಗಳಿಗೆ (ಅಂದರೆ ಜನಜಾಗೃತಿಗಾಗಿ ಕೆಲಸ ಮಾಡುವ ಮಾಹಿತಿ ಹಕ್ಕು ಕಾರ್ಯಕರ್ತರು ಇತ್ಯಾದಿ ಜನರಿಗೆ) ರಕ್ಷಣೆ ನೀಡುವ ಯಾವುದೇ ವಿಚಾರ ಇಲ್ಲ. ಜನಲೋಕಪಾಲ್ ಮಸೂದೆಯಲ್ಲಿ ವಿಷಲ್ ಬ್ಲೋವರ್‌ಗಳಿಗೆ ರಕ್ಷಣೆ ನೀಡುವ ವ್ಯವಸ್ಥೆ ಇರುತ್ತದೆ.
  5. ಸಿಟಿಜೆನ್ ಚಾರ್ಟರ್: ಸರ್ಕಾರೀ ಮಸೂದೆ ಪ್ರಕಾರ ಇಂಥ ಯಾವುದೇ ವ್ಯವಸ್ಥೆ ಇಲ್ಲ (ಸಿಟಿಜನ್ ಚಾರ್ಟರ್ ಎಂದರೆ ನಾಗರಿಕರಿಗೆ ಅವಶ್ಯವಿರುವ ಸರ್ಕಾರೀ ಸೇವೆಗಳನ್ನು ಮಾಡಿಕೊಡಲು ಕಾಲಾವಧಿ ನಿಗದಿಪಡಿಸುವುದು ಮತ್ತು ಆ ಕಾಲಾವಧಿಯೊಳಗೆ ಕೆಲಸ ಮಾಡಿಕೊಡದಿದ್ದರೆ ದಂಡ ವಿಧಿಸುವ ಅವಕಾಶ). ಜನಲೋಕಪಾಲ್ ಮಸೂದೆಯ ಪ್ರಕಾರ ಸಿಟಿಜನ್ ಚಾರ್ಟರ್ ಅನ್ನು ಲೋಕಪಾಲದೊಳಗೆ ಸೇರಿಸಲಾಗುತ್ತದೆ.
  6. ರಾಜ್ಯಗಳಲ್ಲಿ ಲೋಕಾಯುಕ್ತಗಳನ್ನು ರೂಪಿಸುವುದು: ಸರಕಾರೀ ಲೋಕಪಾಲದ ಪ್ರಕಾರ ಇದನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗುತ್ತದೆ. ಜನಲೋಕಪಾಲ್ ಮಸೂದೆ ಪ್ರಕಾರ ಲೋಕಪಾಲ್ ವ್ಯವಸ್ಥೆಯನ್ನು ಕೇಂದ್ರದಲ್ಲಿ ರೂಪಿಸಿದಂತೆಯೇ ರಾಜ್ಯಗಳಲ್ಲಿ ಅದೇ ಮಾದರಿಯಲ್ಲಿ ಲೋಕಾಯುಕ್ತಗಳನ್ನು ರೂಪಿಸಬೇಕು.
  7. ಸುಳ್ಳು ದೂರುಗಳು: ಸರ್ಕಾರೀ ಮಸೂದೆ ಪ್ರಕಾರ ಸುಳ್ಳು ದೂರು ಅಥವಾ ದೂರುಗಳು ಸಾಬೀತಾಗದ ಪಕ್ಷದಲ್ಲಿ ದೂರುದಾರರನ್ನು ಒಂದು ವರ್ಷದ ಅವಧಿಗೆ ಸೆರೆಮನೆಗೆ ತಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ನೀಡಲಾಗುತ್ತದೆ (ಇದರಿಂದಾಗಿ ಪ್ರಾಮಾಣಿಕ ದೂರುದಾರರೂ ಲೋಕಪಾಲಕ್ಕೆ ದೂರು ನೀಡಲು ಹಿಂಜರಿಯುವ ಸಂಭವ ಇದೆ). ಜನಲೋಕಪಾಲ ಮಸೂದೆ ಪ್ರಕಾರ ಸುಳ್ಳು ದೂರು ಅಥವಾ ದೂರುಗಳು ಸಾಬೀತಾಗದ ಪಕ್ಷದಲ್ಲಿ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆಯನ್ನು ದೂರುದಾರರಿಗೆ ವಿಧಿಸಬಹುದು, ಆದರೆ ಜೈಲು ಶಿಕ್ಷೆ ಇಲ್ಲ.
  8. ಲೋಕಪಾಲದ ಮಿತಿ: ಸರ್ಕಾರೀ ಲೋಕಪಾಲ್ ಪ್ರಕಾರ ನ್ಯಾಯಾಂಗ ಹಾಗೂ ಜನಪ್ರತಿನಿಧಿಗಳನ್ನು ಅವರ ಸದನದ ಒಳಗಿನ ಮತ ಹಾಗೂ ಮಾತುಗಳ ವಿಷಯದಲ್ಲಿ ಲೋಕಪಾಲದಿಂದ ಹೊರಗಿಡಲಾಗುತ್ತದೆ. ಜನಲೋಕಪಾಲದ ಪ್ರಕಾರ ಎಲ್ಲಾ ಸರ್ಕಾರೀ ಸೇವಕರನ್ನು, ಜನಪ್ರತಿನಿಧಿಗಳನ್ನು ಹಾಗೂ ನ್ಯಾಯಾಂಗದ ನ್ಯಾಯಾಧೀಶರನ್ನೂ ಲೋಕಪಾಲದ ವ್ಯಾಪ್ತಿಗೆ ತರಲಾಗುತ್ತದೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆ – ದೇಶಕ್ಕೆ ಹೊಸ ಸಂದೇಶ ನೀಡುವಲ್ಲಿ ಯಶಸ್ವಿ

– ಆನಂದ ಪ್ರಸಾದ್

ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಹಿನ್ನೆಲೆಯೇನೂ ಇಲ್ಲದ ಆಮ್ ಆದ್ಮಿ ಪಕ್ಷವು ಮೊದಲ ಬಾರಿಗೆ ಸ್ಪರ್ಧಿಸಿ 70 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಗೆದ್ದು 30% ಮತಗಳನ್ನು ಪಡೆದು ಎರಡನೆಯ ಸ್ಥಾನದಲ್ಲಿ ನಿಂತಿರುವುದು ಒಂದು ಅತ್ಯುತ್ತಮ ಸಾಧನೆ ಎನ್ನಲು ಅಡ್ಡಿ ಇಲ್ಲ. ಇದು ಏಕೆ ಮುಖ್ಯ ಸಾಧನೆಯಾಗುತ್ತದೆ ಎಂದರೆ ಇಲ್ಲಿ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಹಣವನ್ನು ಜನತೆಯ ದೇಣಿಗೆಯಿಂದಲೇ ಅತ್ಯಂತ ನ್ಯಾಯಯುತ ಮಾರ್ಗದಿಂದಲೇ ಪಾರದರ್ಶಕವಾಗಿ ಪಡೆಯಲಾಗಿದೆ ಹಾಗೂ ಚುನಾವಣಾ ಆಯೋಗದ ಮಿತಿಯೊಳಗೇ AAP Launchಚುನಾವಣಾ ಖರ್ಚುಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಇಂಥ ಸಾಧನೆಯನ್ನು ಆಮ್ ಆದ್ಮಿ ಪಕ್ಷವು ಮಾಡಿದೆ. ಎಲ್ಲಿಯೂ ಮತದಾರರಿಗೆ ಹಣ, ಹೆಂಡ, ಇನ್ನಿತರ ಆಮಿಷಗಳನ್ನು ಒಡ್ಡಿ ಮತ ಖರೀದಿಸದೆಯೂ ಇಂಥ ಸಾಧನೆ ಮಾಡಿರುವುದು ಮರುಭೂಮಿಯ ನಡುವಿನ ಓಯಸಿಸ್ನಂತೆ ಭಾರತದ ಪ್ರಜ್ಞಾವಂತರೆಲ್ಲರೂ ಸಮಾಧಾನ ಪಡುವ ವಿಷಯವಾಗಿದೆ. ಆಮ್ ಆದ್ಮಿ ಪಕ್ಷವು ಬಿಜೆಪಿಯಂತೆ ಧರ್ಮ ಹಾಗೂ ದೇವರ ವಿಷಯದಲ್ಲಿ ಅಮಾಯಕ ಜನತೆಯನ್ನು ಕೆರಳಿಸಿ ತನ್ಮೂಲಕ ಅದರ ದುರ್ಲಾಭವನ್ನು ರಾಜಕೀಯವಾಗಿ ಪಡೆದುಕೊಂಡು ಬೆಳೆಯುವ ಕುಟಿಲ ನೀತಿಯನ್ನು ಅಳವಡಿಸಿಕೊಳ್ಳದೆ ಈ ಸಾಧನೆಯನ್ನು ಮಾಡಿದೆ. ಇದಕ್ಕಾಗಿಯೂ ಆಮ್ ಆದ್ಮಿ ಪಕ್ಷದ ಸಾಧನೆ ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ. ಬಿಜೆಪಿ ಪಕ್ಷವು ಅಮಾಯಕ ಜನರನ್ನು ಧರ್ಮ ಹಾಗೂ ದೇವರ ಹೆಸರಿನಲ್ಲಿ ಕೆರಳಿಸಿ ಅವರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗಿ ಬಾಬ್ರಿ ಮಸೀದಿಯನ್ನು ಕಾನೂನನ್ನು ಕೈಗೆ ತೆಗೆದುಕೊಂಡು ಉರುಳಿಸಿ ಆಗ ಉಂಟಾದ ಮಹಾ ರಕ್ತಪಾತದ ರಾಜಕೀಯ ಲಾಭವನ್ನು ಪಡೆದುಕೊಂಡು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಂಥ ರಕ್ತಪಾತದ ಹಿನ್ನೆಲೆ ಇಲ್ಲದೆಯೂ ಬಲಿಷ್ಠ ರಾಜಕೀಯ ಪಕ್ಷಗಳ ಎದುರು ನಿಂತು ಆಮ್ ಆದ್ಮಿ ಪಕ್ಷವು ಮೊದಲ ಪ್ರಯತ್ನದಲ್ಲಿಯೇ ಗಮನಾರ್ಹ ಯಶಸ್ಸನ್ನು ಸಾಧಿಸಿರುವುದು ಭಾರತದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬುದರ ಮುನ್ಸೂಚನೆಯಾಗಿದೆ. ಇದಕ್ಕಾಗಿಯೂ ಈ ಯಶಸ್ಸು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ ಯಶಸ್ಸನ್ನು ಕಾಣಲು ವಿಫಲವಾದಾಗ ಬದಲಾವಣೆಗೆ ರಾಜಕೀಯ ರಂಗಕ್ಕೆ ನೇರವಾಗಿ ಇಳಿಯುವ ಅನಿವಾರ್ಯತೆ ಕೇಜ್ರಿವಾಲ್ ಅವರಿಗೆ ಎದುರಾಯಿತು. ಈ ವಿಷಯದಲ್ಲಿ ಅಣ್ಣಾ ಹಜಾರೆಯವರ ಸಹಕಾರ kejriwal_aap_pti_rallyಕೇಜ್ರಿವಾಲರಿಗೆ ದೊರೆಯದಿದ್ದರೂ ಅವರು ಇದನ್ನು ಸವಾಲಾಗಿ ತೆಗೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಮಾಧ್ಯಮಗಳೂ ಕೂಡ ರಾಜಕೀಯ ಹೋರಾಟದ ಹಾದಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅದು ಪ್ರತಿಪಾದಿಸಿದ ಸ್ವಚ್ಛ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ಯಾವುದೇ ಬೆಂಬಲ ಕೊಡಲಿಲ್ಲ. ದೈತ್ಯ ಬಂಡವಾಳಶಾಹೀ ಸಂಸ್ಥೆಗಳ ಸಹಕಾರ ಪಡೆದು ಅಬ್ಬರದ ಪ್ರಚಾರ ನಡೆಸಿದ ಮೋದಿಯ ಮಹಾ ಅಲೆಯಿದೆಯೆಂದು ಹೇಳಲಾಗಿದ್ದರೂ ದೆಹಲಿಯಲ್ಲಿ ಮಾಧ್ಯಮಗಳ ಸಹಕಾರವಿಲ್ಲದೆಯೂ ಆಮ್ ಆದ್ಮಿ ಪಕ್ಷ ಸಾಧಿಸಿದ ಈ ಯಶಸ್ಸು ಇಡೀ ದೇಶಕ್ಕೆ ನಿಧಾನವಾಗಿ ಹಬ್ಬಿದರೆ ಭಾರತದ ಭವಿಷ್ಯವು ಬದಲಾಗಲಿರುವುದು ಖಚಿತ.

ಇದೀಗ ದೆಹಲಿಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವಾಗ ಆಮ್ ಆದ್ಮಿ ಪಕ್ಷವು ಬಿಜೆಪಿಯ ಜೊತೆಗೂಡಿ ಸರ್ಕಾರ ರಚಿಸಬೇಕೆಂದು ಕೆಲವು ಮಾಧ್ಯಮಗಳು ಆಮ್ ಆದ್ಮಿ ಪಕ್ಷಕ್ಕೆ ಒತ್ತಡ ಹಾಕುತ್ತಿವೆ. ಆದರೆ ಈ ಒತ್ತಡಕ್ಕೆ ಆಮ್ ಆದ್ಮಿ ಪಕ್ಷವು ಮಣಿಯದಿರಲು ನಿರ್ಧರಿಸಿರುವುದು ಒಂದು ಒಳ್ಳೆಯ ನಿರ್ಧಾರವಾಗಿದೆ. ಇಂಥ ನಿರ್ಧಾರಕ್ಕೆ ಬಂದು ಕೋಮುವಾದಿ ಹಿನ್ನೆಲೆ ಇರುವ ಪ್ರತಿಗಾಮಿ ರಾಜಕೀಯ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಆಮ್ ಆದ್ಮಿ ಪಕ್ಷದ ಬೆಳವಣಿಗೆಗೆ ತೊಂದರೆಯಾಗಲಿರುವುದು ಖಚಿತ. ಸಂಘ ಪರಿವಾರದ ಹಿಡಿತದಲ್ಲಿ ಇರುವ ಹಾಗೂ ಸಂಘ ಪರಿವಾರ ನಿರ್ದೇಶಿತ ಬಿಜೆಪಿಯ ರಾಜಕೀಯ ಚಟುವಟಿಕೆಗಳು ಆಮ್ ಆದ್ಮಿ ಪಕ್ಷದ ಉದಾರ ಹಾಗೂ ಜಾತ್ಯತೀತ ನಿಲುವಿಗೆ ವಿರೋಧವಾಗಿದ್ದು ಇದರಿಂದ ಆಮ್ ಆದ್ಮಿ ಪಕ್ಷ ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು. ಹೀಗಾಗಿ ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಚಾರಿತ್ರಿಕ ಪ್ರಮಾದವಾದೀತು. ಪ್ರತಿಗಾಮಿ ಕಾರ್ಯಸೂಚಿ ಹೊಂದಿರುವ ಬಿಜೆಪಿಯ ಪೂರ್ವಾವತಾರವಾಗಿದ್ದ ಜನಸಂಘದ ಜೊತೆ ಜನತಾ ಪರಿವಾರ ಹೊಂದಾಣಿಕೆ ಮಾಡಿ ವಿಫಲವಾದ ಇತಿಹಾಸವೇ ಇದೆ. aap-kejriwal-yogendra-yadavಹೀಗಾಗಿ ಬಿಜೆಪಿ ಜೊತೆ ಕೈಜೋಡಿಸದಿರುವ ಆಮ್ ಆದ್ಮಿ ಪಕ್ಷದ ನಿಲುವು ಅತ್ಯಂತ ವಿವೇಚನೆಯಿಂದ ಕೂಡಿದೆ ಎಂದೇ ಹೇಳಬೇಕಾಗುತ್ತದೆ. ಬಿಜೆಪಿ ಆಮ್ ಆದ್ಮಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪರೋಕ್ಷವಾಗಿ ಕಿರಣ್ ಬೇಡಿಯ ಮಧ್ಯಸ್ಥಿಕೆಯ ಮೂಲಕ ಪ್ರಯತ್ನಿಸಿತು. ಆದರೆ ಬದಲಾವಣೆಗಾಗಿ ರಾಜಕೀಯಕ್ಕೆ ಇಳಿದ ಆಮ್ ಆದ್ಮಿ ಪಕ್ಷ ಇಂಥ ಹೊಂದಾಣಿಕೆಗೆ ನಿರಾಕರಿಸಿರುವುದು ಸಮಂಜಸವಾಗಿಯೇ ಇದೆ. ಇದಕ್ಕೂ ಮೊದಲು ಚುನಾವಣಾ ಫಲಿತಾಂಶ ಬರುವ ಮುನ್ನಾ ದಿನವೇ ಆಮ್ ಆದ್ಮಿ ಪಕ್ಷದ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತೆಂದು ಆಮ್ ಆದ್ಮಿ ಪಕ್ಷ ಹೇಳಿದೆ, ಆದರೆ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ಬದ್ಧರಾದ ಅವರನ್ನು ಸೆಳೆಯಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಇಂಥ ನೈತಿಕ ಹಾಗೂ ಮೌಲ್ಯಾಧಾರಿತ ದೃಢತೆ ಇದ್ದಾಗ ಮಾತ್ರ ಏನಾದರೂ ಬದಲಾವಣೆ ಮಾಡಿ ತೋರಿಸಲು ಸಾಧ್ಯ. ಹೀಗಾಗಿಯೇ ಬಿಜೆಪಿಯು ಬೇರೆ ಕಡೆಗಳಲ್ಲಿ ಕುದುರೆ ವ್ಯಾಪಾರ ಹಾಗೂ ‘ಆಪರೇಶನ್ ಕಮಲ’ ಎಂಬ ರಾಜಕೀಯ ಅನೈತಿಕತೆಯನ್ನು ಪ್ರೋತ್ಸಾಹಿಸಿದ ಇತಿಹಾಸ ದೆಹಲಿಯಲ್ಲಿ ತಾನು ಸರ್ಕಾರ ರಚಿಸುವುದಿಲ್ಲ ಹಾಗೂ ಕುದುರೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಹೀಗೆ ಹೇಳುವ ಅನಿವಾರ್ಯತೆಗೆ ಸಿಲುಕಲು ಕಾರಣವಾಗಿರುವುದು ಆಮ್ ಆದ್ಮಿ ಪಕ್ಷದ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯದ ದೃಢ ನಿಲುವು. ಕುದುರೆ ವ್ಯಾಪಾರಕ್ಕೆ ಆಮ್ ಆದ್ಮಿ ಪಕ್ಷದ ಗೆದ್ದ ಅಭ್ಯರ್ಥಿಗಳು ಬಗ್ಗುವುದಿಲ್ಲ ಎಂದಾದ ನಂತರ ವಿಷಯಾಧಾರಿತ ಮೈತ್ರಿಯ ಮಾತನ್ನು ಬಿಜೆಪಿ ಪರೋಕ್ಷವಾಗಿ ಕಿರಣ್ ಬೇಡಿಯ ಮೂಲಕ ತೇಲಿ ಬಿಟ್ಟಿದೆ. ಇದಕ್ಕೆ ಕಾರಣವೂ ಇದೆ. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ದೆಹಲಿಯಿಂದ ಹೊರಗೆ ನಗರ ಪ್ರದೇಶಗಳಲ್ಲಿ ಆಮ್ ಆದ್ಮಿ ಪಕ್ಷವು ಸ್ಪರ್ಧಿಸಿದರೆ ದೆಹಲಿಯಲ್ಲಿ ಆದಂತೆ ಮತದಾರರಿಗೆ ಮೂರನೆಯ ಪರ್ಯಾಯವೊಂದು ದೊರಕಿ ಮೋದಿಗೆ ಬರುವ ಮತಗಳಿಗೆ ಪೆಟ್ಟು ಬೀಳಬಹುದು ಎಂಬ ಚಿಂತೆಯೇ ಇಂಥ ಮೈತ್ರಿಯ ಮಾತು ಆಡಲು ಕಾರಣ. ಆದರೆ ಪ್ರತಿಭಾವಂತರೂ, ಚಿಂತನಶೀಲರೂ, ರಾಜಕೀಯದಲ್ಲಿ ಸಂದರ್ಭಕ್ಕೆ ತಕ್ಕ ದೃಢ ನಿರ್ಧಾರ ತೆಗೆದುಕೊಳ್ಳುವ ವಿವೇಕ ಹೊಂದಿರುವ ಕೇಜ್ರಿವಾಲರು ಇಂಥ ಮೈತ್ರಿಯನ್ನು ತಳ್ಳಿಹಾಕಿದ್ದಾರೆ. ರಕ್ತಪಾತ ಹಾಗೂ ಧಾರ್ಮಿಕ ವಿಷಯಗಳಲ್ಲಿ ಜನರನ್ನು ಕೆರಳಿಸಿಯೇ ದೇಶದಲ್ಲಿ ಕ್ಷಿಪ್ರವಾಗಿ ಬೆಳೆದ ಪ್ರತಿಗಾಮಿ ರಾಜಕೀಯ ಪಕ್ಷವಾದ ಬಿಜೆಪಿಯ ಕಳಂಕಿತ ಹಾಗೂ ಭ್ರಷ್ಟ ಇತಿಹಾಸದ ಅರಿವು ಇರುವ ಕೇಜ್ರಿವಾಲರು ಕಾಂಗ್ರೆಸ್ಸನ್ನು ದೂರ ಇರಿಸಿದಂತೆ ಬಿಜೆಪಿಯನ್ನು ದೂರ ಇರಿಸುವ ನಿರ್ಧಾರ ಮಾಡಿ ಗಟ್ಟಿ ನಿಲುವು ತಳೆದಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಹಾಗೂ ಮೌಲ್ಯಾಧಾರಿತ ನೈತಿಕ ರಾಜಕೀಯವನ್ನು ಬೆಳೆಸುವ ದೃಷ್ಟಿಯಿಂದ ಅತ್ಯಂತ ಸೂಕ್ತವೇ ಆಗಿದೆ.

ಬಿಜೆಪಿ ಪಕ್ಷ ಹಾಗೂ ಅದರ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಬ್ಬರೂ ಕೇಜ್ರಿವಾಲ್ anna-kejriwalಅಣ್ಣಾ ಹಜಾರೆಯವರಿಗೆ ಬೆನ್ನಿಗೆ ಚೂರಿ ಹಾಕಿ ನಂಬಿಕೆದ್ರೋಹ ಮಾಡಿದ್ದಾರೆ ಎಂದು ಅಪಪ್ರಚಾರದಲ್ಲಿ ತೊಡಗಿರುವುದು ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ತಮಗೆ ನಿರಾಯಾಸವಾಗಿ ದೊರೆಯಬಹುದಾದ ನಗರಗಳ ಮಧ್ಯಮ ವರ್ಗಗಳ ಮತ ಆಮ್ ಆದ್ಮಿ ಪಕ್ಷಕ್ಕೆ ಹೋಗಬಹುದು ಎಂಬ ಭೀತಿಯಿಂದಲೇ ಎಂಬುದು ಕಂಡುಬರುತ್ತದೆ. ಅಣ್ಣಾ ಹಜಾರೆಯವರಿಗೆ ಕೇಜ್ರಿವಾಲ್ ದ್ರೋಹ ಬಗೆದಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂಬುದು ದೆಹಲಿ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ. ಅಣ್ಣಾ ಅವರ ಸತ್ಯಾಗ್ರಹದ ಹಾದಿ ವಿಫಲವಾದ ನಂತರವಷ್ಟೇ ಕೇಜ್ರಿವಾಲ್ ರಾಜಕೀಯ ಹೋರಾಟದ ನಿರ್ಣಯ ತೆಗೆದುಕೊಂಡಿರುವ ಕಾರಣ ಕೇಜ್ರಿವಾಲ್ ಅಣ್ಣಾ ಹಜಾರೆಗೆ ಮೋಸ ಮಾಡಿದರು ಎಂಬ ಮಾತು ಅರ್ಥಹೀನ ಹಾಗೂ ರಾಜಕೀಯ ದುರುದ್ಧೇಶದಿಂದ ಕೂಡಿದೆ ಎಂಬುದು ಕಂಡುಬರುತ್ತದೆ. ಅಣ್ಣಾ ಹಜಾರೆಯವರು ಪಕ್ಷರಹಿತ ರಾಜಕೀಯದ ಮಾತಾಡುತ್ತಾರೆ ಆದರೆ ಅದು ಸಾಧ್ಯವಾಗದು. ಪಕ್ಷರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ದೇಶದಲ್ಲಿಯೂ ಇಲ್ಲ. ಅಣ್ಣಾ ಹಜಾರೆಯವರಿಗೆ ಸ್ಪಷ್ಟವಾದ ರಾಜಕೀಯ ಚಿಂತನೆ ಇಲ್ಲ. ಪಕ್ಷ ರಾಜಕೀಯ ಸಂವಿಧಾನಬಾಹಿರ ಎಂಬ ಅಣ್ಣಾ ಹಜಾರೆ ಮಾತಿನಲ್ಲಿ ಹುರುಳಿಲ್ಲ ಏಕೆಂದರೆ ಸ್ವತಃ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರೇ ರಾಜಕೀಯ ಪಕ್ಷ ಕಟ್ಟಿದ್ದರು. ಅಧ್ಯಕ್ಷೀಯ ಪದ್ಧತಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ರಾಜಕೀಯ ಪಕ್ಷಗಳು ಇರುತ್ತವೆ. ಪಕ್ಷರಹಿತ ವ್ಯವಸ್ಥೆ ಇದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ ಆಗುವುದಿಲ್ಲ, ಅದು ರಾಜಪ್ರಭುತ್ವವಷ್ಟೇ ಆದೀತು. ಸಮಾನ ಚಿಂತನೆ, ಕಾರ್ಯಕ್ರಮ ಇರುವವರು ಒಟ್ಟಿಗೆ ಸೇರಿ ಜನರನ್ನು ಸಂಘಟಿಸಿ ಕೆಲಸ ಮಾಡಲು ರಾಜಕೀಯ ಪಕ್ಷಗಳು ಇರಲೇಬೇಕಾಗುತ್ತದೆ. ಪಕ್ಷ ರಹಿತ ರಾಜಕೀಯ ವ್ಯವಸ್ಥೆ ಕಟ್ಟುವುದು ಸಾಧ್ಯವಿಲ್ಲ. ಹೀಗಾಗಿ ಹಜಾರೆಯವರ ಚಿಂತನೆಗಳು ಎಡಬಿಡಂಗಿ ಚಿಂತನೆಗಳಲ್ಲದೆ ಬೇರೇನೂ ಅಲ್ಲ. ಅಣ್ಣಾ ಹಾಗೂ ಇತರರು ರಾಜಕೀಯ ಪಕ್ಷ ಕಟ್ಟಿ ಹೋರಾಡುವ ಪ್ರಯತ್ನಕ್ಕೆ ಬೆಂಬಲ ಕೊಟ್ಟಿದ್ದರೆ ದೆಹಲಿಯಲ್ಲಿ ಮೂರನೇ ಎರಡು ಬಹುಮತ ಪಡೆಯಲು ಸಾಧ್ಯವಿತ್ತು. ಅಣ್ಣಾ ಹಾಗೂ ಇತರರ ಅಸಹಕಾರದಿಂದ ಅಂಥ ಸುವರ್ಣ ಅವಕಾಶವೊಂದು ಕಳೆದುಹೋಯಿತು ಎಂದರೆ ತಪ್ಪಾಗಲಾರದು.

ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹದಿಂದ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ anna-hazareಮೂಡಿದರೂ ಆಳುವ ಪಟ್ಟಭದ್ರ ಹಿತಾಸಕ್ತಿಗಳು ಉಪವಾಸ ಸತ್ಯಾಗ್ರಹವನ್ನು ಕುಟಿಲ ತಂತ್ರಗಳ ಮೂಲಕ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಒಂದೋ ಅವರು ಆಶ್ವಾಸನೆ ನೀಡಿ ಕಾಲಹರಣ ಮಾಡುತ್ತಾರೆ ಅಥವಾ ಕಣ್ಣೊರೆಸುವ ದುರ್ಬಲ ಹಾಗೂ ಹಲ್ಲು ಕಿತ್ತ ಹಾವಿನಂಥ ಮಸೂದೆಯನ್ನು ತಂದು ಹೋರಾಟವನ್ನು ಶಮನಗೊಳಿಸುತ್ತಾರೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವವರನ್ನು ಬಲತ್ಕಾರವಾಗಿ ಆಸ್ಪತ್ರೆಗೆ ಸೇರಿಸಿ ನಳಿಕೆಯ ಮೂಲಕ ಆಹಾರ ನೀಡಿ ಕೊನೆಗೊಳಿಸುತ್ತಾರೆ. ಸರಕಾರ ಹೀಗೆ ಮಾಡಿದರೆ ಉಪವಾಸ ಸತ್ಯಾಗ್ರಹ ತನ್ನ ಗುರಿ ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ಉತ್ತಮ ಹಾಗೂ ಸಶಕ್ತ ಕಾಯಿದೆ ತರಬೇಕಾದರೆ ರಾಜಕೀಯ ವ್ಯವಸ್ಥೆಯ ಒಳಗೆ ಇಳಿದು ಸಂಸತ್ತಿಗೆ ಜನರಿಂದ ಆಯ್ಕೆಯಾಗಿ ಹೋಗಿ ಶಾಸನಗಳನ್ನು ರೂಪಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದ ಹಾದಿ. ಇದು ಅಣ್ಣಾ ಹಜಾರೆ ಹಾಗೂ ಇತರರಿಗೆ ಅರ್ಥವಾಗದೆ ಇರುವುದು ಶೋಚನೀಯ.

ಕೇಜ್ರಿವಾಲ್ ಹಾಗೂ ಸಂಗಡಿಗರು ರೂಪಿಸಿದ ಆಮ್ ಆದ್ಮಿ ಪಕ್ಷ ಬೇರೆ ರಾಜಕೀಯ ಪಕ್ಷಗಳಲ್ಲಿ ಇಲ್ಲದ ಆಂತರಿಕ ಲೋಕಪಾಲ್ ವ್ಯವಸ್ಥೆಯನ್ನು ಹೊಂದಿರುವುದು ಪಕ್ಷದ ಒಳಗಿನ ವ್ಯಕ್ತಿಗಳು ತಪ್ಪು ಮಾಡುವುದನ್ನು ತಡೆಯಲು ಒಂದು ಉತ್ತಮ ವ್ಯವಸ್ಥೆಯಾಗಿದೆ. ಈ ಆಂತರಿಕ ಲೋಕಪಾಲಕ್ಕೆ ನಿಷ್ಪಕ್ಷಪಾತ ಹಾಗೂ ನ್ಯಾಯವನ್ನು ಎತ್ತಿ ಹಿಡಿಯುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಪಕ್ಷದ ಒಳಗೆ ತಪ್ಪುಗಳು ಆಗುವುದನ್ನು ಸಾಕಷ್ಟು ತಡೆಗಟ್ಟಬಹುದು. ಅಧಿಕಾರಕ್ಕೆ ಬಂದ ನಂತರ ರಾಜಕೀಯ ಧುರೀಣರು ತಪ್ಪು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಧಿಕಾರ ಬಂದ ನಂತರ ಸರಳವಾಗಿದ್ದ ಜನರು ವೈಭೋಗದ ಜೀವನಕ್ಕೆ ಮರುಳಾಗಿ ಬೂರ್ಜ್ವಾ ಆಗಿ ಪರಿವರ್ತನೆಯಾಗುವುದನ್ನು ನಾವು ಸಾಕಷ್ಟು ಕಾಣುತ್ತಿದ್ದೇವೆ. ಅತ್ಯಂತ ತತ್ವಬದ್ಧ ಜನರೂ ಒಮ್ಮೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಇತರ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳಲ್ಲಿ ಇರುವಂತೆಯೇ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತಿ, ಕೋಮುಗಳ ಓಲೈಕೆ, ಸಿದ್ಧಾಂತಗಳನ್ನು ಗಾಳಿಗೆ ತೂರುವುದನ್ನು ಮಾಡುವುದನ್ನು ತಡೆಯಲು ಇಂಥ ಆಂತರಿಕ ಲೋಕಪಾಲ್ ವ್ಯವಸ್ಥೆ ಕಡಿವಾಣ ಹಾಕಬಲ್ಲದು. ಈ ನಿಟ್ಟಿನಲ್ಲಿ arvind-kejriwal-campaigningಆಮ್ ಆದ್ಮಿ ಪಕ್ಷ ಇತರ ಪಕ್ಷಗಳಿಗಿಂತ ಭಿನ್ನ ಎಂದು ಕಂಡುಬರುತ್ತದೆ. ಅಲ್ಲದೆ ಚುನಾವಣೆ ಎದುರಿಸಲು ಹಾಗೂ ಪಕ್ಷ ಕಟ್ಟಲು ಜನರಿಂದಲೇ ಹನಿಗೂಡಿ ಹಳ್ಳ ಎಂಬ ರೀತಿಯಲ್ಲಿ ನ್ಯಾಯಯುತ ಮಾರ್ಗದಲ್ಲಿ ದೇಣಿಗೆ ಪಡೆಯುವ ಮತ್ತು ಅದನ್ನು ಪಾರದರ್ಶಕವಾಗಿ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸುವ ಮೂಲಕ ಇದು ತಾನು ಭಿನ್ನ ಎಂದು ತೋರಿಸಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳಿಂದ ಗುಪ್ತ ಶರತ್ತುಗಳಿಗೆ ಮಣಿದು ಪಡೆಯುವ ಹಣವೇ ಎಲ್ಲ ಭ್ರಷ್ಟಾಚಾರಗಳ ತಾಯಿಯಾಗಿರುವ ಕಾರಣ ಅದನ್ನು ನಿವಾರಿಸಿದ ಆಮ್ ಆದ್ಮಿ ಪಕ್ಷ ದೇಶಕ್ಕೆ ಒಳಿತು ಮಾಡುವ ಸಾಧ್ಯತೆ ಸ್ಪಷ್ಟವಾಗಿ ಕಂಡುಬರುತ್ತದೆ. ಇದು ಮಾತ್ರವಲ್ಲದೆ ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು, ಯೋಗ್ಯ ಅಭ್ಯರ್ಥಿಗಳು ಕಣದಲ್ಲಿ ಇಲ್ಲದೆ ಇದ್ದರೆ ‘ಯಾರಿಗೂ ಇಲ್ಲ’ ಎಂಬ ಮತವನ್ನು ನೀಡುವ ಹಾಗೂ ಹಾಗೆ ಯಾರಿಗೂ ಇಲ್ಲ ಎಂಬ ಮತಗಳು ಗೆದ್ದ ಅಭ್ಯರ್ಥಿಯು ಪಡೆದ ಮತಗಳಿಗಿಂತ ಹೆಚ್ಚಾದರೆ ಪುನಃ ಚುನಾವಣೆ ನಡೆಸುವ ವ್ಯವಸ್ಥೆ, ನ್ಯಾಯಾಂಗ ಸುಧಾರಣೆ, ಚುನಾವಣಾ ಸುಧಾರಣೆ ಇತ್ಯಾದಿ ಕ್ರಾಂತಿಕಾರಕ ಸುಧಾರಣೆಗಳನ್ನು ತರುವ ಬದ್ಧತೆಯನ್ನು ತೋರಿಸುವ ಮಾತನ್ನು ಹೇಳುತ್ತಿದೆ. ಇವೆಲ್ಲಾ ಜಾರಿಗೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಕ್ರಾಂತಿಕಾರಕವಾಗಿ ಸುಧಾರಣೆಯಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಈ ಪಕ್ಷವನ್ನು ದೇಶಾದ್ಯಂತ ಯುವಜನ ಬೆಳೆಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ.

ಜನ ಅಧ್ಯಾತ್ಮ ಎಂದು ತಮ್ಮ ಸ್ವಾರ್ಥ ಸಾಧನೆಯ ವೈಯಕ್ತಿಕ ನಿರರ್ಥಕ ಹಾದಿಯಲ್ಲಿ ಹೋಗುವ ಬದಲು ದೇಶದ ಹಾಗೂ ಜನರ ಪರಿಸ್ಥಿತಿ ಸುಧಾರಣೆಗೆ ತೊಡಗುವುದು ಹೆಚ್ಚು ಸಾರ್ಥಕ ಹಾದಿಯಾಗಿದೆ. ದೇವರು ದಿಂಡರು ಎಂದು ದೇವಸ್ಥಾನಗಳಿಗೆ ಕಾಣಿಕೆ ಹಾಕುವ ಬದಲು ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸುವ ಸಲುವಾಗಿ ಆಮ್ ಆದ್ಮಿಯಂಥ ಪಕ್ಷಗಳಿಗೆ ದೇಣಿಗೆ ನೀಡುವುದರಲ್ಲಿ ದೇಶದ ಹಿತ ಹಾಗೂ ಜನಸಾಮಾನ್ಯರ ಹಿತ ಅಡಗಿದೆ. Arvind_Kejriwal_party_launchವಿದೇಶಗಳಿಗೆ ಹೋಗಿ ಕೋಟ್ಯಂತರ ಹಣ ಗಳಿಸಿರುವ ಭಾರತೀಯರು ಇದೀಗ ಭಾರತಕ್ಕೆ ಮರಳಿ ದೇಶಸೇವೆಗೆ ಸಜ್ಜಾಗಬೇಕಾಗಿದೆ. ವಿದೇಶಗಳಿಗೆ ಹೋಗಿ ಹತ್ತಾರು ವರ್ಷ ದುಡಿದು ಕೋಟಿಗಟ್ಟಲೆ ಸಂಪಾದಿಸಿದ ಹಣವನ್ನು ಇಲ್ಲಿ ಬ್ಯಾಂಕುಗಳಲ್ಲಿ ನಿಗದಿತ ಠೇವಣಿ ಇರಿಸಿ ಅದರ ಬಡ್ಡಿಯಿಂದಲೇ ಉತ್ತಮ ಮಧ್ಯಮ ವರ್ಗದ ಜೀವನ ತೆಗೆಯಲು ಹಾಗೂ ತಮ್ಮ ಸಮಯವನ್ನು ದೇಶಸೇವೆಗೆ ಮೀಸಲಿಡಲು ಅನಿವಾಸಿ ಭಾರತೀಯರಿಗೆ ಸಾಧ್ಯವಿದೆ. ಈ ರೀತಿ ವಿದೇಶಗಳಿಂದ ಆದರ್ಶವಾದಿ ಭಾರತೀಯರನ್ನು ಭಾರತದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ಪ್ರೇರೇಪಿಸಿದರೆ ಪಕ್ಷದ ಯಶಸ್ವೀ ಬೆಳವಣಿಗೆಗೆ ಸಹಾಯವಾಗಬಹುದು. ಇದು ಇಂದು ಆಗಬೇಕಾಗಿರುವ ಕಾರ್ಯ.

ಭಾರತದ ಮಾಧ್ಯಮಗಳು ಯಾವುದೇ ಆದರ್ಶ ಹಾಗೂ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯವನ್ನು ದೇಶದಲ್ಲಿ ಬೆಳೆಸುವಲ್ಲಿ ಮುಂದೆ ಬರುವುದಿಲ್ಲ ಹಾಗೂ ಹಾಗೆ ನಿಸ್ವಾರ್ಥವಾಗಿ ಮುಂದೆ ಬರುವವರಿಗೂ ಪ್ರೋತ್ಸಾಹ ನೀಡುವುದಿಲ್ಲ ಎಂಬುದು ಆಮ್ ಆದ್ಮಿ ಪಕ್ಷದ ವಿಷಯದಲ್ಲಿ ನಿಜವಾಗಿದೆ. ಹೀಗಾಗಿ ಇಂದು ಹೊಸ ಆದರ್ಶ ಹಾಗೂ ಮೌಲ್ಯಾಧಾರಿತ ರಾಜಕೀಯ ಪಕ್ಷವನ್ನು ದೇಶಾಧ್ಯಂತ ಕಟ್ಟುವುದು ಬಹಳ ಸಮಯವನ್ನು ಹಾಗೂ ಶ್ರಮವನ್ನು ಬೇಡುತ್ತದೆ. ಮಾಧ್ಯಮಗಳ ಅಸಹಕಾರದ ನಡುವೆಯೂ ಇಂಥ ಒಂದು ಕಾರ್ಯ ಸಾಧ್ಯ ಎಂದು ಆಮ್ ಆದ್ಮಿ ಪಕ್ಷ ಮಾಡಿ ತೋರಿಸಿದೆ. ಆಮ್ ಆದ್ಮಿ ಪಕ್ಷದ ಈ ಸಾಧನೆಯ ಹಾದಿಯಲ್ಲಿ ಅಂತರ್ಜಾಲ ಮಾಧ್ಯಮವು ಜನರ ಸಂಪರ್ಕ ಸೇತುವಾಗಿ ಮಹತ್ವದ ಕಾಣಿಕೆ ನೀಡಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ದೈತ್ಯ ದೃಶ್ಯಮಾಧ್ಯಮಗಳ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಅಂತರ್ಜಾಲ ಮಾಧ್ಯಮವು ಆಮ್ ಆದ್ಮಿ ಪಕ್ಷಕ್ಕೆ ಬಹಳಷ್ಟು ನೆರವಾಗಿದೆ. ಅಂತರ್ಜಾಲ ಇಲ್ಲದೆ ಹೋಗಿದ್ದರೆ ಪಟ್ಟಭದ್ರ ಹಿತಾಸಕ್ತಿ ಉಳ್ಳ ಬಂಡವಾಳಗಾರರು ಹಾಗೂ ರಾಜಕೀಯ ಶಕ್ತಿಗಳು ದೈತ್ಯ ದೃಶ್ಯ ಮಾಧ್ಯಮಗಳಲ್ಲಿ ನಡೆಸುವ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಹೊಸ ರಾಜಕೀಯ ವ್ಯವಸ್ಥೆಯನ್ನು ಕಟ್ಟುವಲ್ಲಿಯೂ ಅಂತರ್ಜಾಲ ಮಾಧ್ಯಮ ಬಹಳ ಪ್ರಮುಖ ಪಾತ್ರ ವಹಿಸುವುದು ಖಚಿತ. ಆಮ್ ಆದ್ಮಿ ಪಕ್ಷವು ಸಾಧಿಸಲು ಅಸಾಧ್ಯವಾದ arvind-kejriwal-delhi-electionsಆಶ್ವಾಸನೆಗಳನ್ನು ನೀಡಲು ಹೋಗಲೇಬಾರದು. ಹೀಗೆ ಮಾಡಿದರೆ ಅದರ ವಿಶ್ವಾಸಾರ್ಹತೆಗೆ ಧಕ್ಕೆಯಾದೀತು. ಜನರಿಗೆ ಹೆಚ್ಚಿನ ಆಶ್ವಾಸನೆ ಬೇಕಾಗಿಲ್ಲ. ಜನರಿಗೆ ಬೇಕಾಗಿರುವುದು ಪ್ರಾಮಾಣಿಕ ಆಡಳಿತ ನೀಡುವ ವಿಶ್ವಾಸಾರ್ಹ ಜನ. ಅಷ್ಟನ್ನು ನೀಡಿದರೂ ಸಾಕು, ಕಾರ್ಯಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡಬೇಕಾದ ಅಗತ್ಯ ಇಲ್ಲ.

ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಇದುವರೆಗೆ ಭಾರತದಲ್ಲಿ ರೂಪುಗೊಂಡ ಪಕ್ಷಗಳಲ್ಲೇ ಉತ್ತಮವಾದ ಪಕ್ಷ ಎಂಬುದು ಅದರ ನಿಲುವುಗಳನ್ನು ನೋಡಿದರೆ ತಿಳಿಯುತ್ತದೆ. ಹೀಗಿದ್ದರೂ ಅದರ ಧ್ಯೆಯೋದ್ಧೇಶಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಮ್ಮ ಪ್ರಧಾನ ವಾಹಿನಿಯ ಮಾಧ್ಯಮಗಳು ಮಾಡಿಲ್ಲ, ಮಾಡುತ್ತಿಲ್ಲ. ಇದೇಕೆ ಹೀಗೆ? ಮಾಧ್ಯಮ ಕ್ಷೇತ್ರದ ತರುಣ್ ತೇಜಪಾಲ್ ತನ್ನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಹೊರಗೆ ಬಂದಾಗ ಮಾಧ್ಯಮ ಕ್ಷೇತ್ರವನ್ನೂ ಒಳಗೊಂಡು ಎಲ್ಲ ಕ್ಷೇತ್ರಗಳ ಜನರೂ ಈ ಅತ್ಯಾಚಾರವನ್ನು ಖಂಡಿಸಿದರು. ಆದರೆ ಮಾಧ್ಯಮಗಳು ದಿನನಿತ್ಯ ಮೌಲ್ಯಗಳ ಮೇಲೆ ಎಸಗುತ್ತಿರುವ ಅತ್ಯಾಚಾರದ ಬಗ್ಗೆ ಯಾರೂ ಏಕೆ ಚಕಾರ ಎತ್ತುತ್ತಿಲ್ಲ. ಏಕೆ ಹೀಗೆ? ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯವನ್ನು ದೇಶದಲ್ಲಿ ಬೆಳೆಸಲು ಆಮ್ ಆದ್ಮಿ ಪಕ್ಷ ಅಪಾರ ಶ್ರಮ ಹಾಕಿ ದುಡಿಯುತ್ತಿರುವಾಗ ದೃಶ್ಯ ಮಾಧ್ಯಮಗಳು ಆಮ್ ಆದ್ಮಿ ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಕೊಂಡದ್ದೂ ಕಂಡುಬಂತು. ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿಯುತ್ತಿರುವ ಆಮ್ ಆದ್ಮಿ ಪಕ್ಷದ ಮೇಲೆ ಅಪಪ್ರಚಾರ ಮಾಡುವುದು ಮಾಧ್ಯಮ ಕ್ಷೇತ್ರದ ಮೌಲ್ಯಗಳ ಮೇಲೆ ನಡೆಸಿದ ಅತ್ಯಾಚಾರವಲ್ಲವೇ ಎಂಬ ಬಗ್ಗೆ ಮಾಧ್ಯಮಗಳ ಮಂದಿ ಯೋಚಿಸದಿದ್ದರೆ ಇನ್ನು ಯಾರು ಯೋಚಿಸಬೇಕು? ಮಾಧ್ಯಮ ಕ್ಷೇತ್ರದ ದೊರೆಗಳು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇಂದು ಇದೆ. ಮೋದಿಗೆ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ದೊರಕಿದ ಪ್ರಚಾರದ ನೂರರಲ್ಲಿ ಒಂದು ಪಾಲು ಕೂಡ ಆಮ್ ಆದ್ಮಿ ಪಕ್ಷಕ್ಕೆ ದೊರೆಯಲಿಲ್ಲ. ಇದೂ ಕೂಡ ಮಾಧ್ಯಮ ಕ್ಷೇತ್ರದ ಮಂದಿ ಮೌಲ್ಯಗಳ ಮೇಲೆ ಮಾಡುತ್ತಿರುವ ಅತ್ಯಾಚಾರವೇ ಸರಿ. ಇದರ ಬಗ್ಗೆಯೂ ಮಾಧ್ಯಮಗಳಲ್ಲಿ ಚರ್ಚೆ ಆಗಲಿ.

ದೆಹಲಿಯಲ್ಲಿ ಮೌಲ್ಯಾಧಾರಿತ ರಾಜಕೀಯದ ಸತ್ವಪರೀಕ್ಷೆ

– ಆನಂದ ಪ್ರಸಾದ್

ದೆಹಲಿಯಲ್ಲಿ ಡಿಸೆಂಬರ್ 4 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೌಲ್ಯಾಧಾರಿತ ರಾಜಕೀಯಕ್ಕಾಗಿ ಜನ್ಮ ತಳೆದ ಆಮ್ ಆದ್ಮಿ ಪಕ್ಷವು ಮೊದಲನೆಯ ಬಾರಿಗೆ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೂ ಸ್ಪರ್ಧಿಸುತ್ತಿದೆ. ಬಲಿಷ್ಠ ಲೋಕಪಾಲ್ ಮಸೂದೆಯ ಜಾರಿಗೆ ಆಂದೋಲನ ನಡೆಸಿದ ಅಣ್ಣಾ ಅವರ ಹೋರಾಟದ ತಂಡದಲ್ಲಿ ಪ್ರಧಾನ ಆಧಾರಸ್ಥಂಭವಾಗಿದ್ದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ AAP-manifesto-PTIಮೊದಲಾದವರು ಅಂದೋಲನದ ಮೂಲಕ ನಡೆಸಿದ ಭ್ರಷ್ಟಾಚಾರ ವಿರೋಧಿ ಹೋರಾಟ ಗುರಿ ತಲುಪಲು ವಿಫಲವಾದಾಗ ಹಾಗೂ ಸರ್ಕಾರವು ಹೋರಾಟಕ್ಕೆ ಸಮರ್ಪಕವಾಗಿ ಸ್ಪಂದಿಸದೇ ಇರುವ ಕಾರಣ ರಾಜಕೀಯ ಹೋರಾಟದ ನಿರ್ಧಾರ ತೆಗೆದುಕೊಂಡು ಆಮ್ ಆದ್ಮಿ ಪಕ್ಷವನ್ನು ಕಟ್ಟಿದ್ದು ಅದು ಈಗ ಪ್ರಥಮ ಹೆಜ್ಜೆಯಾಗಿ ದೆಹಲಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಈ ಪಕ್ಷವು ಬಹಳ ದೊಡ್ಡ ಕ್ರಾಂತಿಕಾರಿ ಹೆಜ್ಜೆಯಾಗಿ ಜನರಿಂದಲೇ ಚುನಾವಣೆಗೆ ಸ್ಪರ್ಧಿಸಲು ಬೇಕಾಗುವ ಹಣವನ್ನು ಪಾರದರ್ಶಕವಾಗಿ ಪಡೆದುಕೊಂಡಿದೆ. ಚುನಾವಣಾ ವೆಚ್ಚ ಹಾಗೂ ಪಕ್ಷ ಕಟ್ಟುವ ವೆಚ್ಚವಾಗಿ 20 ಕೋಟಿ ರೂಪಾಯಿಗಳನ್ನು ಜನರ ದೇಣಿಗೆಯಿಂದಲೇ ಸಂಗ್ರಹಿಸುವ ಗುರಿಯನ್ನು ಪಕ್ಷ ಹಾಕಿಕೊಂಡಿತ್ತು. ಈ ಗುರಿಯನ್ನು ಪಕ್ಷವು ತಲುಪಿದ್ದು ಇದೀಗ ಪಕ್ಷವು ಹಣಸಂಗ್ರಹವನ್ನು ನಿಲ್ಲಿಸಿದೆ. ಪಕ್ಷವು ಪಡೆದ ಹಣದಲ್ಲಿ 14 ಕೋಟಿ ರೂಪಾಯಿ ಭಾರತದ ವಿವಿಧ ಭಾಗಗಳ ಜನರು ನೀಡಿದ್ದರೆ 2.17 ಕೋಟಿ ರೂಪಾಯಿ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಹಾಂಗ್‌ಕಾಂಗ್ ಅನಿವಾಸಿ ಭಾರತೀಯರು 1. 1 4 ಕೋಟಿ, ಯುನೈಟೆಡ್ ಅರಬ್ ಎಮಿರೇಟ್ಸ್ ಅನಿವಾಸಿ ಭಾರತೀಯರು 62 ಲಕ್ಷ, ಸಿಂಗಾಪುರದ ಅನಿವಾಸಿ ಭಾರತೀಯರು 58 ಲಕ್ಷ, ಇಂಗ್ಲೆಂಡ್ ಅನಿವಾಸಿ ಭಾರತೀಯರು 38 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದು ಈ ಎಲ್ಲ ವಿವರಗಳನ್ನೂ ಪಕ್ಷದ ವೆಬ್ ಸೈಟಿನಲ್ಲಿ ಸಾರ್ವಜನಿಕರು ವೀಕ್ಷಿಸಬಹುದು. ಇದು ಭಾರತದಲ್ಲಿ ಇದುವರೆಗೆ ನಡೆದ ಅತ್ಯಂತ ಪಾರದರ್ಶಕವಾದ ಪಕ್ಷಕ್ಕೆ ನಿಧಿ ಜನರಿಂದಲೇ ಪಡೆದಿರುವ ನೈತಿಕ ರಾಜಕೀಯದ ಹೆಜ್ಜೆಯಾಗಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸಮಾಜವಾದಿ ಶಾಂತವೇರಿ ಗೋಪಾಲಗೌಡರಿಗೆ ಚುನಾವಣೆಗೆ ಸ್ಪರ್ಧಿಸಲು ಜನರೇ ಹಣ ನೀಡಿದ್ದರು. ಹೀಗಾಗಿಯೇ ಅವರು ಜನರ ಪರವಾಗಿ ವಿಧಾನಸಭೆಯಲ್ಲಿ ಪ್ರಬಲವಾಗಿ ಮತ್ತು ಜನಪರವಾಗಿ ಹೋರಾಡಲು ಸಾಧ್ಯವಾಯಿತು. kejriwal_aap_pti_rallyಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಜನರ ಪಾಲುದಾರಿಕೆ ಅತಿ ಮುಖ್ಯ. ಜನರಿಂದಲೇ ಯಾವುದೇ ಅನೈತಿಕ ಶರತ್ತುಗಳಿಲ್ಲದೆ ಒಂದು ಪಕ್ಷವು ಹಣ ಪಡೆದು ಸ್ಪರ್ಧಿಸಿ ಗೆದ್ದಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಧಾರಿಸಲು ಬೇಕಾದ ಆನೆಬಲ ಸಿಗುತ್ತದೆ. ಬಂಡವಾಳಶಾಹಿಗಳಿಂದ ಗುಪ್ತ ಶರತ್ತುಗಳಿಗೆ ಮಣಿದು ಪಡೆದ ಹಣ , ವಿವಿಧ ಲಾಬಿಗಳ ಮೂಲಕ ರಾಜಕೀಯ ನಾಯಕರು ಪಡೆದ ಹಣ (ಉದಾಹರಣೆಗೆ ಅಬಕಾರಿ ಲಾಬಿ, ಗ್ರಾನೈಟ್ ಲಾಬಿ, ಅಕ್ರಮ ಗಣಿ ಲಾಬಿ, ಕ್ಯಾಪಿಟೇಶನ್ ಲಾಬಿ, ಸಕ್ಕರೆ ಕಾರ್ಖಾನೆಗಳ ಲಾಬಿ ಇತ್ಯಾದಿ) , ಅಧಿಕಾರಿಗಳು ಜನರಿಂದ ಲಂಚವಾಗಿ ಸುಲಿದ ಹಣದಲ್ಲಿ ರಾಜಕೀಯ ನಾಯಕರು ಪಾಲು ಪಡೆದು ಪಕ್ಷದ ವೆಚ್ಚ ಭರಿಸುವ ಹಣ ಮೊದಲಾದ ಅನೈತಿಕ ಮಾರ್ಗಗಳಿಂದ ಪಡೆದ ಹಣದ ಮೂಲಕ ರಾಜಕೀಯ ನಡೆಸುವ ಪಕ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷವು ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯದೆಡೆಗೆ ಇಟ್ಟಿರುವ ಈ ಹೆಜ್ಜೆ ಅತ್ಯಂತ ಮಹತ್ವಪೂರ್ಣವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಳಷ್ಟು ಮೇಲ್ಮಟ್ಟಕ್ಕೆ ಎತ್ತುವ ಸಂಭವ ಸ್ಪಷ್ಟವಾಗಿ ಕಂಡುಬರುತ್ತದೆ.

ದೆಹಲಿ ವಿಧಾನಸಭಾ ಚುನಾವಣೆಗಳ ವಿವಿಧ ಚುನಾವಣಾಪೂರ್ವ ಸಮೀಕ್ಷೆಗಳು ವಿವಿಧ ರೀತಿಯ ಫಲಿತಾಂಶವನ್ನು ನೀಡಿವೆ. ಆಮ್ ಆದ್ಮಿ ಪಕ್ಷವು ಸಿಸ್ರೋ ಅಸೋಸಿಯೇಟ್ಸ್ ಜೊತೆಗೂಡಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ Arvind_Kejriwal_party_launchಆಮ್ ಆದ್ಮಿ ಪಕ್ಷವು 32% ಮತಗಳನ್ನು ಪಡೆಯುವ ಸಾಧ್ಯತೆಯನ್ನು ಹೇಳಿದೆ. ಸಿಎನ್ನೆನ್-ಐಬಿಎನ್, ದ ವೀಕ್ ಪತ್ರಿಕೆ, ಸಿಎಸ್ಡಿಎಸ್ ಜಂಟಿಯಾಗಿ ಅಕ್ಟೋಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 28% ಮತ ಪಡೆಯುವ ಸಂಭವ ಇದೆ. ಹಿಂದೂಸ್ತಾನ್ ಟೈಮ್ಸ್ – ಸಿ ಫೋರ್ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 20% ಮತಗಳನ್ನು ಪಡೆಯುವ ಸಂಭವವಿದೆ. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 16% ಮತಗಳನ್ನು ಪಡೆಯುವ ಸಂಭವವಿದೆ. ಎಬಿಪಿ ನ್ಯೂಸ್ – ಏಸಿ ನೀಲ್ಸನ್ ಜಂಟಿಯಾಗಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 15% ಮತಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಇವುಗಳಲ್ಲಿ ಆಮ್ ಆದ್ಮಿ ಪಕ್ಷ -ಸಿಸ್ರೋ ಅಸೋಸಿಯೇಟ್ಸ್ ಜೊತೆಗೂಡಿ ನಡೆಸಿದ ಸಮೀಕ್ಷೆ ಹೆಚ್ಚು ವ್ಯಾಪಕ ಹಾಗೂ ವೈಜ್ಞಾನಿಕ ಸಮೀಕ್ಷೆಯಾಗಿದ್ದು ಖ್ಯಾತ ಚುನಾವಣಾ ವಿಶ್ಲೇಷಕ ಹಾಗೂ ಪಕ್ಷದ ಪ್ರಮುಖ ನೇತಾರರೂ ಆದ ಯೋಗೇಂದ್ರ ಯಾದವ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ನಡೆಸಿದ ಸಮೀಕ್ಷೆಯ ಸಂಪೂರ್ಣ ವಿವರವು ಆಮ್ ಆದ್ಮಿ ಪಕ್ಷದ ವೆಬ್ ಸೈಟಿನಲ್ಲಿ ಸಾರ್ವಜನಿಕರಿಗೆ ನೋಡಲು ಲಭ್ಯವಿದೆ. ಇವುಗಳಲ್ಲಿ ಕಡಿಮೆ ಪ್ರತಿಶತ ಮತ ಗಳಿಸಬಹುದಾದ 15% ಅನ್ನು ತೆಗೆದುಕೊಂಡರೂ ಪ್ರಥಮವಾಗಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಸಾಧನೆ ಉತ್ತಮವಾಗಿ ಮೂಡಿಬರುವ ಸಂಭವ ಇದೆ. ಆಮ್ ಆದ್ಮಿ ಪಕ್ಷವು ಗೆಲ್ಲಬಹುದಾದ ವಿಧಾನಸಭಾ ಸಂಖ್ಯೆಯ ಲೆಕ್ಕದಲ್ಲಿ ಹೇಳುವುದಾದರೆ ಇಂಡಿಯಾ ಟುಡೇ- ಒಆರ್ಜಿ ನವೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 6 ವಿಧಾನಸಭಾ ಸ್ಥಾನಗಳಲ್ಲಿ ಗೆಲ್ಲಬಹುದು. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಪಕ್ಷವು 7 ಸ್ಥಾನಗಳನ್ನು ಗೆಲ್ಲಬಹುದು. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 7ರಿಂದ 12 ಸ್ಥಾನ ಗೆಲ್ಲಬಹುದು. ಎಬಿಪಿ ನ್ಯೂಸ್ – ಏಸಿ ನೀಲ್ಸನ್ ಜಂಟಿಯಾಗಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 18 ಸ್ಥಾನ ಗೆಲ್ಲಬಹುದು. ಸಿಎನ್ನೆನ್-ಐಬಿಎನ್, ದ ವೀಕ್ ಪತ್ರಿಕೆ, ಸಿಎಸ್ಡಿಎಸ್ ಜಂಟಿಯಾಗಿ ಅಕ್ಟೋಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 19ರಿಂದ 25 ಸ್ಥಾನ ಗೆಲ್ಲಬಹುದು. ಟೈಮ್ಸ್ ನೌ – ಸಿ ವೋಟರ್ ನವೆಂಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 18 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಆಮ್ ಆದ್ಮಿ-ಸಿಸ್ರೋ ಅಸೋಸಿಯೇಟ್ಸ್ ಕೈಗೊಂಡ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷವು ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆಯನ್ನು ವೆಬ್‌ಸೈಟಿನಲ್ಲಿ ನಮೂದಿಸಿಲ್ಲ.

ಆಮ್ ಆದ್ಮಿ ಎಷ್ಟೇ ಮತ ಪ್ರತಿಶತ ಹಾಗೂ ಸ್ಥಾನಗಳನ್ನು ಪಡೆದರೂ ಅದು ಪ್ರಥಮವಾಗಿ ಸ್ಪರ್ಧಿಸುತ್ತಿರುವ ಕಾರಣ ಅದು ಉತ್ತಮ ಸಾಧನೆಯೇ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಪಕ್ಷದ ನರೇಂದ್ರ ಮೋದಿಯ ಒಂದೊಂದು ರ್‍ಯಾಲಿಗೆ ಖರ್ಚು ಮಾಡುವ 15-20 ಕೋಟಿ ರೂಪಾಯಿ ಹಣದಲ್ಲಿ ಆಮ್ ಆದ್ಮಿ ಪಕ್ಷವು ಇಡೀ ದೆಹಲಿ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ ಎಂಬುದು ಬಹಳ ಮುಖ್ಯ ಅಂಶ. anna-kejriwalಅಣ್ಣಾ ಅವರಿಂದ ಬೇರ್ಪಟ್ಟು ಕೇಜ್ರೀವಾಲ್ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರ ತೆಗೆದುಕೊಂಡ ನಂತರ ಕೇಜ್ರೀವಾಲರನ್ನಾಗಲೀ, ಅವರ ನೂತನ ಪಕ್ಷವನ್ನಾಗಲೀ, ಅದು ಎತ್ತಿ ಹಿಡಿಯಲು ಹೊರಟಿರುವ ಸಾರ್ವಕಾಲಿಕ ಮೌಲ್ಯಗಳನ್ನಾಗಲೀ ಮಾಧ್ಯಮಗಳು ಕಡೆಗಣಿಸಿರುವ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು 6 ಸ್ಥಾನಗಳನ್ನು ಪಡೆದರೂ ಉತ್ತಮ ಸಾಧನೆಯೇ ಆಗುತ್ತದೆ. ತಮ್ಮ ಹಾದಿಗಳು ಬೇರ್ಪಟ್ಟ ನಂತರ ಅಣ್ಣಾ ಹಜಾರೆಯವರು ಕೂಡ ಆಮ್ ಆದ್ಮಿ ಪಕ್ಷದ ಬಗ್ಗೆ ಹಾಗೂ ಕೇಜ್ರೀವಾಲಾರ ಬಗ್ಗೆ ಅತ್ಯಂತ ಕಠಿಣವಾಗಿ ವರ್ತಿಸುತ್ತಿರುವುದು ಕಂಡುಬರುತ್ತಿದ್ದು ಇದರಿಂದ ಅಣ್ಣಾ ಹಜಾರೆಯವರು ಸಣ್ಣವರಾಗುತ್ತಿದ್ದಾರೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೇಜ್ರೀವಾಲ್ ಹಾಗೂ ಸಂಗಡಿಗರು ಪಕ್ಷ ಕಟ್ಟಲು, ಚುನಾವಣೆಗೆ ಸ್ಪರ್ಧಿಸಲು ಅತ್ಯಂತ ಕಠಿಣ ಪರಿಶ್ರಮ ಪಡುತ್ತಿರುವುದು ಶ್ಲಾಘನೀಯ. ನಮ್ಮ ದೇಶದ ರಾಜಕೀಯಕ್ಕೆ ಇಂದು ಇಂಥ ಪ್ರತಿಭಾವಂತರ ಅಗತ್ಯ ಇದೆ. ಬಿಜೆಪಿಯ ಸುಷ್ಮಾ ಸ್ವರಾಜ್ ಅವರು ಆಮ್ ಆದ್ಮಿ ಪಕ್ಷದ ಹೆಸರನ್ನು ಅಮೀರ್ ಆದ್ಮಿ ಪಾರ್ಟಿ (ಶ್ರೀಮಂತ ಜನರ ಪಕ್ಷ) ಎಂದು ಬದಲಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಆಮ್ ಆದ್ಮಿ ಪಕ್ಷದ ಕೆಲವು ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳಲ್ಲಿ ತಮ್ಮ ನಿಜವಾದ ವಿವರಗಳನ್ನು ನೀಡಿದ್ದು ಇರಬಹುದು. ಉಳಿದ ಪಕ್ಷಗಳ ಅಭ್ಯರ್ಥಿಗಳಂತೆ ಸುಳ್ಳು ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಅವರು ನೀಡಿರಲಾರರು. ಹೀಗಾಗಿ ಪಕ್ಷದಲ್ಲಿ ಕೆಲವರು ಕೋಟ್ಯಾಧೀಶರೆಂದು ಕಂಡು ಬರಬಹುದು. ಕೋಟ್ಯಾಧೀಶರಿಗೆ ಜೀವನೋಪಾಯಕ್ಕೆ ಬೇಕಾದ ಗಟ್ಟಿಯಾದ ಆದಾಯ ಮೂಲ ಇರುವ ಕಾರಣ ಅವರು ಚುನಾವಣೆಗೆ ಸ್ಪರ್ಧಿಸುವುದು ಒಳ್ಳೆಯದೇ, ಆದರೆ ಅವರು ತಮ್ಮ ಶಾಸಕ ಸ್ಥಾನವನ್ನು ತಮ್ಮ ಉದ್ಯಮ ಅಥವಾ ಆಸ್ತಿಪಾಸ್ತಿ ಬೆಳೆಸಿಕೊಳ್ಳಲು ಬಳಸಬಾರದು ಅಷ್ಟೇ. ಜೀವನೋಪಾಯಕ್ಕೆ ದಿನನಿತ್ಯ ದುಡಿದೇ ಹಣ ಗಳಿಸಬೇಕಾದವರು ಚುನಾವಣೆಗೆ ಸ್ಪರ್ಧಿಸುವುದು ಕಷ್ಟವೇ. ಹೀಗಾಗಿ ಜನತೆಗೆ ಹಾಗೂ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ಮನೋಭಾವ ಇರುವ ಶ್ರೀಮಂತರು ಚುನಾವಣೆಗೆ ಸ್ಪರ್ಧಿಸುವುದನ್ನು ಸ್ವಾಗತಿಸಬೇಕು. ಇದನ್ನು ವ್ಯಂಗ್ಯ ಮಾಡಬೇಕಾದ ಅಗತ್ಯ ಇಲ್ಲ ಎಂದು ಸುಷ್ಮಾ ಸ್ವರಾಜ್ ಅವರಂಥ ನಾಯಕರಿಗೆ ಹೇಳಬೇಕಾಗಿದೆ.

ಆಮ್ ಆದ್ಮಿ ಪಕ್ಷವು ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಂದ ಹೆಚ್ಚೆಂದರೆ ಐದಾರು ಕೋಟಿ ರೂಪಾಯಿಗಳ ದೇಣಿಗೆ ಪಡೆದಿರಬಹುದು, ಅದೂ ಪಾರದರ್ಶಕವಾಗಿ, ಅದನ್ನು ಅದು ತನ್ನ ವೆಬ್‌ಸೈಟಿನಲ್ಲಿ ಸ್ಪಷ್ಟವಾಗಿ ತೋರಿಸಿದೆ. AAP-websiteಆಮ್ ಆದ್ಮಿ ಪಕ್ಷದ ವ್ಯವಹಾರಗಳು ತೆರೆದ ಪುಸ್ತಕದಂತೆ ಇರುವಾಗ ಅದು ಪಡೆದ ಅನಿವಾಸಿ ಭಾರತೀಯರ ಹಣದ ಬಗ್ಗೆ ತನಿಖೆ ನಡೆಸುವುದು ನಿಜಕ್ಕೂ ದೊಡ್ಡ ಕುಚೋದ್ಯ. ಇಂಥ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಸುಮ್ಮನೆ ತಗಾದೆ ತೆಗೆಯುವುದು ನೀಚತನವಲ್ಲದೆ ಮತ್ತೇನೂ ಅಲ್ಲ ಎನ್ನದೆ ವಿಧಿಯಿಲ್ಲ. ಇತ್ತೀಚೆಗೆ ಅಣ್ಣಾ ಹಜಾರೆಯವರನ್ನು ಕೇಜ್ರೀವಾಲ್ ವಿರುದ್ಧ ಎತ್ತಿ ಕಟ್ಟಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವಂತೆ ಕಂಡುಬರುತ್ತದೆ. ಮುಖ್ಯವಾಗಿ ಅಣ್ಣಾ ಹೆಸರನ್ನು ಕೇಜ್ರಿವಾಲ್ ಚುನಾವಣೆಗೆ ಹಾಗೂ ಪಕ್ಷ ಕಟ್ಟಲು ಬಳಸುತ್ತಿದ್ದಾರೆ ಎಂದು, ಅಣ್ಣಾ ಹಜಾರೆ ಹೋರಾಟದ ಸಮಯದಲ್ಲಿ ಸಂಗ್ರಹವಾದ ಹಣವನ್ನು ಕೇಜ್ರೀವಾಲ್ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವುದು ಇತ್ಯಾದಿ ಅಪಪ್ರಚಾರವೂ ನಡೆಯುತ್ತಿದೆ ಮತ್ತು ಇದಕ್ಕೆ ಕೇಜ್ರಿವಾಲ್ ಪಕ್ಷದ ವೆಬ್ ಸೈಟಿನಲ್ಲಿ ಹಾಗೂ ಪತ್ರಿಕಾಗೋಷ್ಠಿ ನಡೆಸಿ ಇಂಥ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಬೇಕಾದರೆ, ಆರೋಗ್ಯಕರವಾಗಿ ಬೆಳೆಯಬೇಕಾದರೆ ಆಮ್ ಆದ್ಮಿ ಪಕ್ಷವನ್ನು ಹಾಗೂ ಅದು ಎತ್ತಿ ಹಿಡಿಯುತ್ತಿರುವ ಮೌಲ್ಯಗಳನ್ನು ಗೆಲ್ಲಿಸುವುದು ಅಗತ್ಯ. ಹೀಗಾಗಿ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವು ಗೆದ್ದು ಸರ್ಕಾರ ರಚಿಸುವ ಸಾಮರ್ಥ್ಯ ಪಡೆದರೆ ಭಾರತದ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಅದು ಕಾರಣವಾಗಬಹುದು. ಅಲ್ಲಿ ಅದು ಗೆಲುವನ್ನು ಸಾಧಿಸಿದರೆ ಆ ಪಕ್ಷವನ್ನು ಮತ್ತು ಅದು ಪ್ರತಿನಿಧಿಸುವ ಮೌಲ್ಯಾಧಾರಿತ ರಾಜಕೀಯವನ್ನು ದೇಶಾದ್ಯಂತ ಬೆಳೆಸಲು, ವಿಸ್ತರಿಸಲು ಪ್ರೋತ್ಸಾಹ ದೊರೆಯಲಿರುವುದು ಖಚಿತ. ಹೀಗಾಗಿ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವಂತೆ ದೇಶದ ಪ್ರಖ್ಯಾತ ಚಿಂತಕರು, ವಿಜ್ಞಾನಿಗಳು, ಸಮಾಜ ಸುಧಾರಕರು, ಸಮಾಜ ಸೇವಕರು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಜನರನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯ.