– ಆನಂದ ಪ್ರಸಾದ್
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಕಳೆದ ಒಂದು ದಶಕದಿಂದ ಕರ್ನಾಟಕವು ಅತಂತ್ರ ವಿಧಾನಸಭೆಯನ್ನು ಹೊಂದಿ ಬಹಳಷ್ಟು ತೊಂದರೆಯನ್ನು ಅನುಭವಿಸಿದೆ. ಹೀಗಾಗಿ ಅತಂತ್ರ ವಿಧಾನಸಭೆಯನ್ನು ತಂದರೆ ಮತ್ತೆ ರಾಜಕೀಯ ಸಮಯಸಾಧಕತನ ಹಾಗೂ ಚೌಕಾಸಿ ರಾಜಕೀಯ ಮೇಲುಗೈ ಪಡೆದು ರಾಜ್ಯದ ಹಿತಾಸಕ್ತಿ ಮೂಲೆಗುಂಪಾಗುವುದು ನಿಶ್ಚಿತ. ಹಾಗಾಗಿ ಇದನ್ನು ತಡೆಗಟ್ಟಬೇಕಾದರೆ ಸ್ಥಿರ ವಿಧಾನಸಭೆಯನ್ನು ರೂಪಿಸುವ ರೀತಿಯಲ್ಲಿ ಜನ ಮತದಾನ ಮಾಡಬೇಕಾದುದುದು ಅನಿವಾರ್ಯ. ಸದ್ಯದ ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆಯಬಹುದು ಎಂಬ ಸೂಚನೆಯನ್ನು ನೀಡಿವೆಯಾದರೂ ಇದರಿಂದ ಮೈಮರೆತು ಮುಸುಕಿನ ಗುದ್ದಾಟಕ್ಕೆ ಕಾಂಗ್ರೆಸ್ಸಿಗರು ಇಳಿದರೆ ಫಲಿತಾಂಶ ಅತಂತ್ರವಾಗಬಹುದು. ಕಾಂಗ್ರೆಸ್ ಜಯಗಳಿಸಿದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬುದು ನಿರ್ಧರಿತವಾಗಿಲ್ಲ. ಕಾಂಗ್ರೆಸ್ಸಿನ ಒಮ್ಮತದ ಕೊರತೆಯಿಂದ ಹಾಗೂ ಕಚ್ಚಾಟ ಅತಿರೇಕಕ್ಕೆ ಹೋಗುವುದನ್ನು ತಡೆಯುವ ಉಪಾಯವಾಗಿ ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗುವುದು ನಡೆದುಬಂದಿರುವ ಸಂಪ್ರದಾಯ. ಹೀಗಾಗಿ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಣಯಿಸುವುದು ಹೈಕಮಾಂಡ್.
ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಹುದ್ಧೆಗೆ ಪ್ರಧಾನ ಆಕಾಂಕ್ಷಿಗಳು ಸಿದ್ಧರಾಮಯ್ಯ, ಪರಮೇಶ್ವರ್ ಹಾಗೂ ಖರ್ಗೆ ಮೂವರು ಇದ್ದಾರೆ. ಇವರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳಿತಾಗಬಹುದು. ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪಗಳಿಲ್ಲದ, ಸೋಗಲಾಡಿತನವಿಲ್ಲದ, ನೇರ, ನಿಷ್ಠುರ ನಡೆನುಡಿಯ, ಕುಟುಂಬ ಸದಸ್ಯರು ರಾಜಕೀಯ ಹಾಗೂ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ನೀಡಿರದ ಸಮಾಜವಾದಿ ಹಿನ್ನೆಲೆಯೇ ಸಿದ್ಧರಾಮಯ್ಯನವರ ಧನಾತ್ಮಕ ಅಂಶ. ಆಡಳಿತಾತ್ಮಕವಾಗಿಯೂ ಅಧಿಕಾರಿಗಳ ಮೇಲೆ ಬಿಗಿಯಾದ ಹಿಡಿತ ಸಾಧಿಸುವ ಸಾಮರ್ಥ್ಯ ಇವರಿಗೆ ಇದೆ. ಹೀಗಾಗಿ ಇವರು ಮುಖ್ಯಮಂತ್ರಿಯಾದರೆ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಆದರೆ ಕಾಂಗ್ರೆಸ್ಸಿನ ಒಳಸುಳಿಗಳು ಇವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತವೆಯೋ ಎಂಬುದು ಯಕ್ಷಪ್ರಶ್ನೆಯಾಗಿ ಉಳಿಯುತ್ತದೆ.
ಮಲ್ಲಿಕಾರ್ಜುನ ಖರ್ಗೆಯೂ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಇವರು ತಮ್ಮ ಪುತ್ರನನ್ನು ರಾಜಕೀಯದಲ್ಲಿ ತೊಡಗಿಸಿದ ಆರೋಪ ಹೊಂದಿದ್ದಾರೆ ಹಾಗೂ ಇವರ ಪುತ್ರ ಪಕ್ಷದಲ್ಲಿ ಹಸ್ತಕ್ಷೇಪ ನಡೆಸುವ ಹಾಗೂ ಇತರರನ್ನು ಮೂಲೆಗುಂಪು ಮಾಡುವ ವ್ಯಕ್ತಿತ್ವ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಖರ್ಗೆಯವರು ವಿಚಾರಶೀಲ, ಕಂದಾಚಾರಗಳಿಗೆ ಮಹತ್ವ ಕೊಡದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇವರಿಗೂ ಆಡಳಿತದಲ್ಲಿ ಹಿಡಿತ ಸಾಧಿಸುವ ಕಲೆ ಕರಗತವಾಗಿದೆ. ಹಾಗಾಗಿ ಇವರು ಮುಖ್ಯಮಂತ್ರಿಯಾದರೂ ಸರಾಸರಿ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಇವರ ಮಾತುಗಾರಿಕೆ ಮಾತ್ರ ಆಕರ್ಷಕವಾಗಿಲ್ಲ ಮತ್ತು ಬಹಳ ನಿಧಾನವಾಗಿ ಬಾವಿಯ ಆಳದಿಂದ ಮಾತಾಡಿದಂತೆ ಇವರ ಮಾತುಗಳು ಕಂಡುಬರುತ್ತವೆ.
ಇನ್ನೊಬ್ಬ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಜಿ. ಪರಮೇಶ್ವರ್. ಇವರು ಕೂಡ ಕಾಂಗ್ರೆಸ್ಸಿನಲ್ಲಿ ದೀರ್ಘ ರಾಜಕೀಯ ಅನುಭವ ಹೊಂದಿದವರೇ. ಭ್ರಷ್ಟಾಚಾರದ ಆರೋಪಗಳು ಇವರ ಮೇಲೆಯೂ ಕೇಳಿಬಂದಿಲ್ಲ. ಹಾಗೆಯೇ ಕುಟುಂಬದ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿದ ಆರೋಪಗಳು ಇವರ ಮೇಲೆಯೂ ಕೇಳಿಬಂದಿಲ್ಲ. ಹಾಗಾಗಿ ಇವರು ಮುಖ್ಯಮಂತ್ರಿಯಾದರೂ ಸಾಮಾನ್ಯ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಒಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಇವರು ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಹುದ್ಧೆ, ರಾಜ್ಯಪಾಲ ಹುದ್ಧೆ ಹೀಗೆ ಉನ್ನತ ಸ್ಥಾನಗಳನ್ನು ಏರಿರುವುದರಿಂದ ಹಾಗೂ ವಯಸ್ಸೂ ಆಗಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದು ಯೋಗ್ಯವಲ್ಲ ಹಾಗೂ ಜನರೂ ಅದನ್ನು ಮೆಚ್ಚುವುದಿಲ್ಲ. ಹೀಗಾಗಿ ಅವರು ರಾಜಕೀಯದಿಂದ ನಿವೃತ್ತಿಯಾಗುವುದು ಸೌಜನ್ಯದ ಹಾಗೂ ಸಜ್ಜನಿಕೆಯ ನಡವಳಿಕೆ ಆದೀತು.
ಕಾಂಗ್ರೆಸ್ಸಿನ ಪ್ರಧಾನ ಮುಖ್ಯಮಂತ್ರಿ ಆಕಾಂಕ್ಷಿಗಳು ಹೈಕಮಾಂಡ್ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಒಬ್ಬರ ಕಾಲನ್ನು ಒಬ್ಬರು ಎಳೆಯದೆ, ಭಿನ್ನಮತ ತೋರದೆ ಸಿಕ್ಕಿದ ಹುದ್ಧೆಯಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿರುವುದು ರಾಜ್ಯದ ಇಂದಿನ ಅತೀ ಅಗತ್ಯಗಳಲ್ಲೊಂದು. ಇಲ್ಲದೆ ಹೋದರೆ ರಾಜ್ಯದ ಜನ ಮತ್ತೆ ಅತಂತ್ರ ವಿಧಾನಸಭೆಯಂಥ ಪರಿಣಾಮಗಳನ್ನೇ ನೀಡಬಹುದು. ಕಾಂಗ್ರೆಸ್ಸಿಗರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಹಾಗೂ ಚುನಾವಣಾಪೂರ್ವ ಸಮೀಕ್ಷೆಗಳ ಅಭಿಪ್ರಾಯದಿಂದ ಮೈಮರೆತು ಕಚ್ಚಾಟದಲ್ಲಿ ತೊಡಗಿದರೆ ರಾಜ್ಯದ ಜನ ಮತ್ತೆ ಅತಂತ್ರ ಫಲಿತಾಂಶ ನೀಡುವ ಸಾಧ್ಯತೆ ದಟ್ಟವಾಗಿದೆ. ಜನರ ಅಭಿಪ್ರಾಯವನ್ನು ಕಡೆಗಣಿಸಿದರೆ, ತಮ್ಮನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂಬ ಅಹಂಕಾರದಿಂದ ನಡೆದುಕೊಂಡರೆ ಅತಂತ್ರ ವಿಧಾನಸಭೆಯ ಫಲಿತಾಂಶವೇ ಬಂದೀತು. ಸ್ಥಳೀಯ ಸಂಸ್ಥೆ ಚುನಾವಣಾ ವಿಜಯವನ್ನು ಕಾಂಗ್ರೆಸ್ಸಿಗರು ಅಲ್ಲಲ್ಲಿ ಅದ್ಧೂರಿಯಾಗಿ ಆಚರಿಸಿದುದು ಕಂಡುಬಂದಿದೆ. ಇಂಥ ಆಚರಣೆಗಳ ಅಗತ್ಯವಿಲ್ಲ. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ದೊಡ್ಡ ದೊಡ್ಡ ಬ್ಯಾನರುಗಳನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಕಿರುವುದು ಕೂಡ ಕಂಡುಬರುತ್ತದೆ. ಇಂಥ ತೋರಿಕೆ ಹಾಗೂ ಆಡಂಬರದ ಅಗತ್ಯ ಇಲ್ಲ. ಇಂಥವುಗಳನ್ನು ತಡೆದು ಜನರಿಗಾಗಿ ಕೆಲಸ ಮಾಡುವುದನ್ನು ಪ್ರವೃತ್ತಿಯನ್ನು ಕಾಂಗ್ರೆಸ್ಸಿಗರು ಬೆಳೆಸಿಕೊಳ್ಳುವುದು ಅಗತ್ಯ.