Category Archives: ಆನಂದ ಪ್ರಸಾದ್

ರಾಹುಲ್ ಗಾಂಧಿ : ಅರೆಮನಸಿನ ನಾಯಕತ್ವ ಹಾನಿಕಾರಕ

– ಆನಂದ ಪ್ರಸಾದ್

ಕಾಂಗ್ರೆಸ್ಸಿಗರ ನಿರೀಕ್ಷೆಯಂತೆ ರಾಹುಲ್ ಗಾಂಧಿಗೆ ಪಕ್ಷದಲ್ಲಿ ಉಪಾಧ್ಯಕ್ಷರ ಹುದ್ಧೆ ನೀಡಲಾಗಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಗಳನ್ನು ರಾಹುಲ್ ನೇತೃತ್ವದಲ್ಲಿ ಎದುರಿಸಲು ಜೈಪುರ ಚಿಂತನ ಶಿಬಿರದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಅಂತೂ ಇಂತೂ ಒಲ್ಲದ ಮನಸ್ಸಿನಿಂದ ರಾಹುಲ್ ಗಾಂಧಿ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಂಡಿರುವಂತೆ ಕಂಡುಬರುತ್ತದೆ. ಇದು ಒಲ್ಲದ ಗಂಡಿಗೆ ಬಲವಂತದ ಮದುವೆ ಮಾಡಿದಂತೆ ಕಾಣುತ್ತದೆ. ಸ್ವಯಂ ಸ್ಫೂರ್ತಿ ಹಾಗೂ ಉತ್ಸಾಹ ಇಲ್ಲದಿದ್ದರೆ ನೇತೃತ್ವ ಯಶಸ್ವಿಯಾಗಲಾರದು. ಅಂಥ ಸ್ಪೂರ್ತಿ ಹಾಗೂ ಪಕ್ಷವನ್ನು ಮುನ್ನಡೆಸುವ ಉತ್ಸಾಹ ರಾಹುಲರಲ್ಲಿ ಇದುವರೆಗೆ ಕಂಡುಬಂದಿಲ್ಲ. ಅಧಿಕಾರ ಎಂಬುದು ವಿಷವಿದ್ದಂತೆ ಎಂದು ತನ್ನ ತಾಯಿ ಸೋನಿಯಾರ ಮಾತನ್ನು ಚಿಂತನ ಶಿಬಿರದ ತನ್ನ ಭಾಷಣದಲ್ಲಿ ರಾಹುಲ್ ಉಲ್ಲೇಖಿಸಿದರು. ಇದು ನಿಜವೂ ಹೌದು. ಅಧಿಕಾರವನ್ನು ಸರಿಯಾಗಿ ವಿವೇಚನೆಯಿಂದ ಬಳಸದೆ ಇದ್ದರೆ ಅದುವೇ ವಿಷವಾಗಿ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುತ್ತದೆ. Sonia-Rahulಇದಕ್ಕೆ ರಾಜೀವ ಗಾಂಧಿ ಹಾಗೂ ಇಂದಿರಾ ಗಾಂಧಿಯವರೇ ಸ್ಪಷ್ಟ ನಿದರ್ಶನ. ದೇಶವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ಇರುವ ಹುದ್ಧೆಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಜೀವಕ್ಕೇ ಮುಳುವಾಗಬಹುದು ಎಂಬುದು ಇವರ ವಿಷಯದಲ್ಲಿ ಸತ್ಯವೆಂದು ಕಂಡುಬರುತ್ತದೆ. ರಾಜಕೀಯವಾಗಿ ರಾಹುಲ್ ಮುಗ್ಧರು. ಹೀಗಾಗಿ ಇವರು ದಿಟ್ಟ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಹಿನ್ನಡೆ ಅನುಭವಿಸಲಿದೆ.

ರಾಜೀವ ಗಾಂಧಿಯವರೂ ಅನುಭವವಿಲ್ಲದೆ ಏಕಾಏಕಿ ಪ್ರಧಾನಮಂತ್ರಿಯಂಥ ಉನ್ನತ ಹುದ್ಧೆಯನ್ನು ಏರಿದವರು. ಅವರು ಆರಂಭದಲ್ಲಿ ದೇಶಕ್ಕೆ ಒಳಿತನ್ನು ಮಾಡಬೇಕೆಂಬ ಪ್ರಾಮಾಣಿಕ ಕಾಳಜಿಯನ್ನು ಹೊಂದಿದ್ದರು. ಆದರೆ ಅವರಿಗೆ ಸಲಹೆಗಳನ್ನು ನೀಡುವವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣರಾದರು. ಉದಾಹರಣೆಗೆ ಶಾಬಾನು ಪ್ರಕರಣದಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲು ತೆಗೆದುಕೊಂಡ ನಿರ್ಧಾರ, ಅಯೋಧ್ಯೆಯ ವಿವಾದಿತ ಕಟ್ಟಡದ ಬೀಗ ತೆಗೆಸಿ ಹಿಂದೂಗಳನ್ನು ಓಲೈಸಲು ತೆಗೆದುಕೊಂಡ ನಿರ್ಧಾರ ಇಂಥ ನಿರ್ಧಾರಗಳು ಅಡ್ಡಹಾದಿಯ ರಾಜಕೀಯ ನಿರ್ಧಾರಗಳಾಗಿದ್ದು ಇದು ಅವರ ಸುತ್ತ ಇದ್ದ ಕುಟಿಲ ಸಲಹೆಗಾರರು ನೀಡಿದ ಸಲಹೆಗಳ ಕಾರಣದಿಂದ ತೆಗೆದುಕೊಂಡವು ಎಂಬುದರಲ್ಲಿ ಸಂದೇಹವಿಲ್ಲ. ನೇರ ಹಾದಿಯಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡು ಜನಪರ, ಅಭಿವೃದ್ಧಿಪರ ರಾಜಕೀಯಕ್ಕೆ ಒತ್ತು ಕೊಟ್ಟಿದ್ದರೆ ಓಲೈಕೆ ರಾಜಕೀಯ ಮಾಡುವ ಅಗತ್ಯವೇ ಕಾಂಗ್ರೆಸ್ಸಿಗೆ ಬರುತ್ತಿರಲಿಲ್ಲ. ಇಂಥ ಸರಳ ವಿಷಯಗಳೂ ಕಾಂಗ್ರೆಸ್ಸಿಗರಿಗೆ ಅರ್ಥವಾಗದಿರುವ ಕಾರಣ ಅವರು ಜಾತಿ ರಾಜಕೀಯ, ಅಲ್ಪಸಂಖ್ಯಾತರ ಓಲೈಕೆ ರಾಜಕೀಯ, ಬಹುಸಂಖ್ಯಾತರ ಓಲೈಕೆ ರಾಜಕೀಯ ಹೀಗೆ ನಾನಾ ವಿಧದ ಕುಟಿಲ ತಂತ್ರಗಳ ಮೊರೆ ಹೋಗುವ ಕೆಟ್ಟ ಪ್ರವೃತ್ತಿ ಬೆಳೆದಿದೆ. ಇದರಿಂದ ಹೊರಬರದ ಹೊರತು ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ.

ರಾಹುಲ ಗಾಂಧಿಯವರಿಗೆ ಆಡಳಿತಾತ್ಮಕ ಅನುಭವ ಹೆಚ್ಚೇನೂ ಇಲ್ಲದಿರುವ ಕಾರಣ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಭವ ಕಡಿಮೆ.rahul-hubli ಕಾಂಗ್ರೆಸ್ ಪಕ್ಷದ ಪ್ರಧಾನ ಸಮಸ್ಯೆಯೇ ಭ್ರಷ್ಟಾಚಾರದ ವಿರುದ್ಧ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೆ ಇರುವುದು. ಪಕ್ಷದಲ್ಲಿ ಹಲವು ಭ್ರಷ್ಟರು ಭದ್ರವಾಗಿ ಬೇರೂರಿದ್ದು ಇವರೆಲ್ಲಾ ಭ್ರಷ್ಟಾಚಾರದ ವಿರುದ್ಧ ಪಕ್ಷ ದಿಟ್ಟ ನಿರ್ಧಾರ ತೆಗೆದುಕೊಳ್ಳದಂತೆ ಪಕ್ಷದ ಉನ್ನತ ನಾಯಕತ್ವವನ್ನು ದಾರಿ ತಪ್ಪಿಸುತ್ತಿರುವಂತೆ ಕಾಣುತ್ತದೆ. ಪಕ್ಷದ ಒಳಗೆಯೇ ಇರುವ ಭ್ರಷ್ಟರ ವಿರುದ್ಧ ರಾಹುಲ ಗಾಂಧಿ ಕ್ರಮ ಕೈಗೊಳ್ಳುವ ಧೈರ್ಯ ತೋರಿಸಿದರೆ ಪಕ್ಷದ ಬಗ್ಗೆ ಜನತೆಯಲ್ಲಿ ಒಳ್ಳೆಯ ಅಭಿಪ್ರಾಯ ಮೂಡಬಹುದು. ಇಲ್ಲದೆ ಹೋದರೆ ಪಕ್ಷವು ಜನತೆಯ ವಿಶ್ವಾಸ ಗಳಿಸಿಕೊಳ್ಳುವುದು ಮರೀಚಿಕೆಯಾಗಬಹುದು. ರಾಹುಲ ಗಾಂಧಿ ಪೂರ್ಣ ಮನಸ್ಸಿನಿಂದ ಪಕ್ಷವನ್ನು ಮುನ್ನಡೆಸುವ ಇಚ್ಚಾಶಕ್ತಿ ತೋರಿಸದೆ ಹೋದರೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರಾಮಾಣಿಕರೂ, ಚಿಂತನಶೀಲರೂ, ಸಂವೇದನಾಶೀಲರೂ ಆದ ಲೇಖಕರು ಅಥವಾ ವಿಜ್ಞಾನಿಗಳ ಸಲಹೆ ಪಡೆಯುವುದರಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಬಚಾವಾಗಬಹುದು.

ಕಾಂಗ್ರೆಸ್ ಪಕ್ಷದ ಬಗ್ಗೆ ನಮಗೆ ಎಷ್ಟೇ ಭಿನ್ನಾಭಿಪ್ರಾಯ, ಅಸಹನೆ, ತಿರಸ್ಕರ ಇದ್ದರೂ ಇದು ದೇಶವ್ಯಾಪಿ ಸಂಘಟನೆ ಹಾಗೂ ದೀರ್ಘ ಇತಿಹಾಸ ಹೊಂದಿರುವ ಕಾರಣ ಪಕ್ಷದ ನಾಯಕತ್ವವನ್ನು ಸಾಧ್ಯವಾದಷ್ಟೂ ಸರಿದಾರಿಯಲ್ಲಿ ಹೋಗುವಂತೆ ಪ್ರೇರೇಪಿಸುವ ಅಗತ್ಯ ಇದೆ. ಇಲ್ಲದೆ ಹೋದರೆ ದೇಶದಲ್ಲಿ ಮೂಲಭೂತವಾದಿಗಳ ಕೈ ಮೇಲಾಗುವ ಸಾಧ್ಯತೆ ಕಂಡುಬರುತ್ತದೆ. ಹೀಗಾಗಿ ಪಕ್ಷವು ಒಂದು ಕುಟುಂಬದ ಹಿಡಿತದಲ್ಲಿ ಇದ್ದರೂ ದೇಶದಲ್ಲಿ ಗಾಂಧಿ, ನೆಹರೂ ಅವರು ಹೊಂದಿದ್ದ ಪ್ರಗತಿಪರ ಚಿಂತನೆಗಳು ಪಕ್ಷದಲ್ಲಿ ಅಲ್ಪ ಮಟ್ಟದಲ್ಲಾದರೂ ಉಳಿದುಕೊಂಡಿವೆ ಬೇರೆ ಪ್ರಗತಿಪರ ಚಿಂತನೆಯ ರಾಜಕೀಯ ಪಕ್ಷಗಳು ಬೆಳೆಯುವ ಸಂಭಾವ್ಯತೆ ದೇಶದಲ್ಲಿ ಕಡಿಮೆ ಇರುವ ಕಾರಣ ಕಾಂಗ್ರೆಸ್ ಪಕ್ಷವನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಬೇಕಾದ ಅಗತ್ಯ ಇಂದು ಇದೆ.

ಕಾಂಗ್ರೆಸ್ ಸೇವಾದಳವನ್ನು ಬೇರುಮಟ್ಟದಿಂದ ಬೆಳೆಸಿ ದೇಶದ ಚಿಂತನೆ ನಡೆಸುವ ಪ್ರವೃತ್ತಿಯನ್ನು ಕಾರ್ಯಕರ್ತರಲ್ಲಿ ಬೆಳೆಸಬೇಕಾದ ಅಗತ್ಯ ಇದೆ. rahul_priyanka_soniaಇಲ್ಲದೆ ಹೋದರೆ ಮೂಲಭೂತವಾದಿ ದೇಶಭಕ್ತರ ಕೈ ಮೇಲಾಗುವ ಸಂಭವ ಇದೆ. ಕಾಂಗ್ರೆಸ್ಸಿನ ಉನ್ನತ ನಾಯಕತ್ವ ಜನರ ಜೊತೆ ನೇರ ಸಂಪರ್ಕ ಹೊಂದಲು ಸೂಕ್ತ ವೆಬ್‌ಸೈಟನ್ನು ರೂಪಿಸಬೇಕಾದ ಅಗತ್ಯ ಇಂದಿನ ಇಂಟರ್ನೆಟ್ ಯುಗದಲ್ಲಿ ಅತ್ಯಂತ ಅಗತ್ಯವಿದೆ. ಮಧ್ಯಮವರ್ಗದ ಹಾಗೂ ಯುವಜನರ ಅಭಿಪ್ರಾಯ ತಿಳಿದುಕೊಳ್ಳಲು ಇದು ಅತೀ ಅಗತ್ಯ. ಮಧ್ಯಮವರ್ಗದ ಯುವಜನತೆಯಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ತೀವ್ರವಾದ ಬೇಸರ ಹಾಗೂ ಸಿಟ್ಟು ಇರುವುದು ಇಂಟರ್ನೆಟ್ ಜಗತ್ತನ್ನು ಅವಲೋಕಿಸಿದರೆ ತಿಳಿಯುತ್ತದೆ. ಇಂಟರ್ನೆಟ್ಟಿನಲ್ಲಿ ಕಾಂಗ್ರೆಸ್ ಬಗ್ಗೆ ಯಾವುದೇ ಲೇಖನ ಪ್ರಕಟವಾದರೂ ತೀಕ್ಷ್ಣವಾದ ವಿರೋಧ ಅಭಿಪ್ರಾಯ ಮಧ್ಯಮವರ್ಗದ ಯುವಜನತೆಯಿಂದ ಪ್ರಕಟವಾಗುವುದು ಕಂಡುಬರುತ್ತದೆ. ಪಕ್ಷವು ತನ್ನನ್ನು ತಾನು ತಿದ್ದಿಕೊಳ್ಳಬೇಕಾದ ತುರ್ತು ಅಗತ್ಯ ಇದೆ ಎಂಬುದು ಇದರಿಂದ ಕಂಡುಬರುತ್ತದೆ. ರಾಹುಲ ಗಾಂಧಿ ಮಧ್ಯ ವಯಸ್ಸಿನ ಯುವ ಎಂದು ಹೇಳಬಹುದಾದ ರಾಜಕಾರಣಿಯಾದರೂ ಅಧುನಿಕ ತಂತ್ರಜ್ಞಾನವನ್ನು ಅದರಲ್ಲೂ ಇಂಟರ್ನೆಟ್ ಜಗತ್ತಿನಲ್ಲಿ ತನ್ನದೇ ಆದ ಅಸ್ತಿತ್ವವನ್ನು ತೋರಿಸುವ ಯಾವುದೇ ವ್ಯವಸ್ಥೆ ಹೊಂದಿಲ್ಲ. ಒಬ್ಬ ನಾಯಕನಾದವನು ಇಂಥ ನಿರ್ಲಕ್ಷ್ಯ ತೋರಿದರೆ ಆತನು ಜನಪರವಾಗಿ ಬೆಳೆಯುವ ಸಾಧ್ಯತೆ ಇಲ್ಲ.

ದೇಶದಲ್ಲಿ ಮೂಲಭೂತವಾದ ಹೆಚ್ಚುತ್ತಾ ಇದೆ. ಇದಕ್ಕೆ ಕಾರಣ ಪ್ರಗತಿಪರ ರಾಜಕೀಯ ಶಕ್ತಿಗಳು ಮೂಲಭೂತವಾದಿಗಳೊಂದಿಗೆ ರಾಜಿಯಾಗಿರುವುದು. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ದೊಡ್ಡ ಬಾಯಿಯ ಮೂಲಭೂತವಾದಿಗಳು ಮೇಲುಗೈ ಪಡೆಯುತ್ತಿದ್ದಾರೆ. ಅರಾಜಕ ಪರಿಸ್ಥಿತಿಗಳಲ್ಲಿ ಸರ್ವಾಧಿಕಾರಿ ಮನೋಭಾವದ ಮೂಲಭೂತವಾದ ಬೇಗನೆ ಮೇಲುಗೈ ಪಡೆಯುತ್ತದೆ. ಕಾಂಗ್ರೆಸ್ ಪಕ್ಷವು ದಿಟ್ಟ ಹಾಗೂ ಚಿಂತನಶೀಲ ನಾಯಕತ್ವವಿಲ್ಲದೆ ಅರಾಜಕ ಪರಿಸ್ಥಿತಿಯನ್ನು ತಲುಪಿದೆ. ಇದರ ಜೊತೆಗೆ ಭ್ರಷ್ಟಾಚಾರವನ್ನು ನಿಯಂತ್ರಿಸದ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿ ಪರ್ಯಾಯ ಧಾರ್ಮಿಕ ಮೂಲಭೂತವಾದಿಗಳು ಮಾತ್ರ ಎಂಬ ಸ್ಥಿತಿ ಇರುವುದು ದೇಶಕ್ಕೆ ಒಳ್ಳೆಯದಲ್ಲ. ಒಮ್ಮೆ ದೇಶವು ಹುಸಿ ದೇಶಭಕ್ತರ ಮೂಲಭೂತವಾದಕ್ಕೆ ಸಿಲುಕಿದರೆ ಅದರಿಂದ ಹೊರಬರುವುದು ಅತ್ಯಂತ ಕಠಿಣ ಆಗಲಿದೆ. ಪಾಕಿಸ್ತಾನವೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಹೀಗಾಗಿ ದೇಶವು ಮೂಲಭೂತವಾದಿಗಳ ತೆಕ್ಕೆಗೆ ಬೀಳದಂತೆ ದೇಶವ್ಯಾಪಿ ಜಾಗೃತಿ ಮೂಡಿಸಬೇಕಾದ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಮೇಲೆ ಇದೆ. ಆದರೆ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಕಾರಣ ಮುಂಬರುವ ದಿನಗಳು ಭಾರತದ ಪಾಲಿಗೆ ಇನ್ನಷ್ಟು ಕರಾಳವಾಗುವ ಸಂಭವವೇ ಕಂಡುಬರುತ್ತಿದೆ. ಹುಸಿ ದೇಶಭಕ್ತರ ಅಟ್ಟಹಾಸ ಮೇರೆ ಮೀರುತ್ತಿದೆ. ಇಂಥ ಹುಸಿ ದೇಶಭಕ್ತರ ಕೈಯಿಂದ ದೇಶವನ್ನು ರಕ್ಷಿಸಲು ಮಾಧ್ಯಮಗಳು ಮುಂದಾಗಬೇಕಾದ ಅಗತ್ಯ ಇದೆ.

ಆಮ್ ಆದ್ಮಿ ಪಕ್ಷ – ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಾಕಿರಣ

– ಆನಂದ ಪ್ರಸಾದ್

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅರವಿಂದ್ ಕೇಜರಿವಾಲ್  ನೇತೃತ್ವದ ತಂಡ ನವೆಂಬರ್ 26ರಂದು ಆಮ್ ಆದ್ಮಿ ಹೆಸರಿನ ರಾಜಕೀಯ ಪಕ್ಷವನ್ನು ಹುಟ್ಟುಹಾಕಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಈ ಪಕ್ಷವು ಈವರೆಗಿನ ಭಾರತದ ರಾಜಕೀಯ ಪಕ್ಷಗಳಲ್ಲಿ ಕಂಡುಬರದ ಕೆಲವು ಮಹತ್ವದ ಪ್ರಜಾಸತ್ತಾತ್ಮಕ ಅಂಶಗಳನ್ನು ಒಳಗೊಂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲಿ ಮಹತ್ತರ ಪಾತ್ರವಹಿಸುವ ಲಕ್ಷಣಗಳನ್ನು ಹೊಂದಿರುವಂತೆ ಕಾಣುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಸೂಕ್ತವೆನಿಸುವ ಅಭ್ಯರ್ಥಿಗಳ ಹೆಸರನ್ನ ಜನರೇ ಸೂಚಿಸಬಹುದು. ಪಕ್ಷದ ವತಿಯಿಂದ ನಿಲ್ಲಬಯಸುವ ಎಲ್ಲ ಅಭ್ಯರ್ಥಿಗಳು ಉಮೇದುವಾರಿಕೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಈ ಅರ್ಜಿಯಲ್ಲಿ ಅಭ್ಯರ್ಥಿಯ ಹಾಗೂ ಕುಟುಂಬದ ಸಂಪೂರ್ಣ ಆದಾಯ ಮೂಲ ಹಾಗೂ ಸಂಪತ್ತಿನ ವಿವರ, ಅಭ್ಯರ್ಥಿ ಯಾವುದಾದರೂ ಕ್ರಿಮಿನಲ್ ಕೇಸನ್ನು ಹಿಂದೆ ಅಥವಾ ಪ್ರಸಕ್ತ ಎದುರಿಸುತ್ತಿದ್ದಾನೆಯೋ ಎಂಬ ಬಗ್ಗೆ ಹಾಗೂ ಅಭ್ಯರ್ಥಿಯ ಪ್ರಸಕ್ತ ಹಾಗೂ ಹಿಂದಿನ ಸಮಾಜಸೇವಾ ಕಾರ್ಯಗಳ ವಿವರವನ್ನು ಕಡ್ಡಾಯವಾಗಿ ನೀಡಬೇಕಾಗಿರುತ್ತದೆ. ಬಂದ ಎಲ್ಲಾ ಅರ್ಜಿಗಳನ್ನು  ವಿಧಾನಸಭೆ ಚುನಾವಣೆಗಾದರೆ ರಾಜ್ಯ ಕಾರ್ಯಕಾರಿ ಸಮಿತಿಗೆ ಹಾಗೂ ಲೋಕಸಭಾ ಚುನಾವಣೆಗಾದರೆ ಕೇಂದ್ರ ಕಾರ್ಯಕಾರಿ ಸಮಿತಿಗೆ ಪರಿಶೀಲನೆಗೆ ಕೊಡಲಾಗುತ್ತದೆ.  ಸಮಿತಿಗಳು ಇದನ್ನು ವಿವರವಾಗಿ ಪರಿಶೀಲಿಸಿ ವಿವರಗಳ ಸತ್ಯಾಸತ್ಯತೆಯನ್ನು ತಿಳಿಯುವ ಕಾರ್ಯ ಮಾಡುತ್ತದೆ. ಪರಿಶೀಲನೆಯ ವೇಳೆ ಪ್ರಧಾನವಾಗಿ ಅಭ್ಯರ್ಥಿಯು ಸಲ್ಲಿಸಿದ ವಿವರಗಳು ಹಾಗೂ ಅಭ್ಯರ್ಥಿಯ ಬಗ್ಗೆ ಜನತೆಯ ಅಭಿಪ್ರಾಯ ಏನು ಎಂಬ ಬಗ್ಗೆ ಪರಿಶೀಲಿಸಲಾಗುವುದು. ಅಭ್ಯರ್ಥಿಯ ಹಾಗೂ ಆತನ ಕುಟುಂಬದ ಆದಾಯ ಮೂಲದ ಬಗ್ಗೆ ಜನರ ಅಭಿಪ್ರಾಯ ತಿಳಿಯಲಾಗುವುದು ಹಾಗೂ ಅಭ್ಯರ್ಥಿಯ ಮೇಲೆ ಯಾವುದಾದರೂ ಭ್ರಷ್ಟಾಚಾರದ ಅಪಾದನೆಗಳು ಇವೆಯೋ ಎಂಬ ಬಗ್ಗೆ ಜನರಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ಅಭ್ಯರ್ಥಿಯು ಹಿಂದೆ ಯಾವುದಾದರೂ ಮೂಲಭೂತವಾದಿ ಚಟುವಟಿಕೆಗಳಲ್ಲಿ ತೊಡಗಿದ್ದನೇ ಹಾಗೂ ಮೂಲಭೂತವಾದಿ ಸಿದ್ಧಾಂತಗಳ ಬೆಂಬಲಿಗನೇ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಅದೇ ರೀತಿ ಅಭ್ಯರ್ಥಿ ಎಲ್ಲ ಮತ, ಧರ್ಮ, ಜಾತಿಗಳನ್ನು, ಪಂಗಡಗಳನ್ನು ಗೌರವಿಸುವ ಗುಣ ಹೊಂದಿರುವನೇ ಎಂಬ ಬಗ್ಗೆಯೂ ಪರಿಶೀಲಿಸಿ ಸಮರ್ಪಕ ಗುಣ ಹೊಂದಿರದ ಅಭ್ಯರ್ಥಿಗಳನ್ನು ತಿರಸ್ಕರಿಸಿ ಉಳಿದ ಅಭ್ಯರ್ಥಿಗಳ ಪಟ್ಟಿ ಹಾಗೂ ಅವರ ವಿವರಗಳನ್ನು ಪಾರ್ಟಿ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ಹೀಗೆ ಪ್ರಕಟಿಸಿದ  ಅಭ್ಯರ್ಥಿಯ ಬಗ್ಗೆ ಜನತೆಯು ಪರಿಶೀಲಿಸಿ ಏನಾದರೂ ದೂರುಗಳಿದ್ದಲ್ಲಿ ಪಾರ್ಟಿ ವೆಬ್‍ಸೈಟಿನಲ್ಲಿ ಅಥವಾ ಪಾರ್ಟಿಯ ಸ್ಥಳೀಯ ಕಚೇರಿಯಲ್ಲಿ ಆಧಾರ ಸಹಿತ ದಾಖಲಿಸಬಹುದು. ಈ ರೀತಿ ಜನತೆಯಿಂದ ಅಭ್ಯರ್ಥಿಗಳ ವಿರುದ್ಧ ಬಂದ ದೂರುಗಳನ್ನು ಆಯ್ಕೆ ಸಮಿತಿಯ ಮುಂದೆ ಇಟ್ಟು ಅವರು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ದೂರುಗಳು ಸರಿಯೆಂದು ಕಂಡುಬಂದರೆ ಸಂಬಂಧಿತ ಅಭ್ಯರ್ಥಿಯನ್ನು ತಿರಸ್ಕರಿಸಿ ಉಳಿದ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ತಯಾರಿಸಲಾಗುವುದು. ನಂತರ ಸಂಬಂಧಿತ ಅಭ್ಯರ್ಥಿಗಳನ್ನು ಒಂದು ದಿನದ ಸಮಾವೇಶಕ್ಕೆ ಕರೆದು ಅಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಚುನಾವಣೆಯ ಮೂಲಕ ಒಂದು ಚುನಾವಣಾ ಕ್ಷೇತ್ರಕ್ಕೆ ಪಕ್ಷದ ಸ್ಪರ್ಧಿಯನ್ನು ಅಂತಿಮವಾಗಿ ಆರಿಸಲಾಗುವುದು. ಈ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದು ಬೇಡದ, ಕೆಟ್ಟ ದಾಖಲೆಗಳಿರುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲದಂತೆ ತಡೆಯುವ ಒಂದು ಅವಕಾಶವನ್ನು ಜನರಿಗೆ ನೀಡುವುದು. ಇಂಥ ಆಯ್ಕೆ ಪ್ರಕ್ರಿಯೆ ಸದ್ಯಕ್ಕೆ ಯಾವುದೇ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳಲ್ಲಿ ಇಲ್ಲ. ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳನ್ನು ಆರಂಭದ ಹಂತದಲ್ಲಿಯೇ ಸೋಸುವ ಈ ಪ್ರಕ್ರಿಯೆಯಿಂದ ಅನಪೇಕ್ಷಿತ, ಭ್ರಷ್ಟ, ಕ್ರಿಮಿನಲ್ ಹಿನ್ನೆಲೆಯ, ಜಾತಿವಾದಿ, ಕೋಮುವಾದಿ, ಮೂಲಭೂತವಾದಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸದಂತೆ ದೂರ ಇಡುವುದು. ಇದರಿಂದ ಶಾಸನ ಸಭೆಗಳಿಗೆ ಯೋಗ್ಯ ವ್ಯಕ್ತಿಗಳು ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ.

ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವುದು ಪಕ್ಷದ ಪ್ರಧಾನ ಗುರಿಯಾಗಿದೆ. ಪಕ್ಷದಲ್ಲಿ ವಂಶಪಾರಂಪರ್ಯವನ್ನು ತಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಯಾವುದೇ ಹೈಕಮಾಂಡ್ ಎಂಬ ವ್ಯವಸ್ಥೆ ಇಲ್ಲ. ಒಂದೇ ಕುಟುಂಬದ ಎರಡು ವ್ಯಕ್ತಿಗಳು ಚುನಾವಣೆಗೆ ನಿಲ್ಲದಂತೆ ನಿಯಮ ರೂಪಿಸಿರುವುದು ಇಂಥ ಉತ್ತಮ ಅಂಶವಾಗಿದೆ. ಆಮ್ ಆದ್ಮಿ ಪಕ್ಷವು ಕೆಂಪು ದೀಪದ ಗೂಟದ ಕಾರು, ಚುನಾಯಿತ ಪ್ರತಿನಿಧಿಗಳಿಗೆ ಭದ್ರತಾ ವ್ಯವಸ್ಥೆ, ವೈಭವೋಪೇತ ಬಂಗಲೆಗಳಲ್ಲಿ ವಾಸ ಮೊದಲಾದ ಆಡಂಬರ, ಐಶಾರಾಮಗಳನ್ನು ನಿರಾಕರಿಸುತ್ತೇನೆ ಎಂದು ತನ್ನ ಅಭ್ಯರ್ಥಿಗಳಿಂದ ಚುನಾವಣೆಗೆ ಸ್ಪರ್ಧಿಸುವ ಹಂತದಲ್ಲೇ ಲಿಖಿತ ಒಪ್ಪಿಗೆ ಪಡೆದುಕೊಳ್ಳುವ ವ್ಯವಸ್ಥೆ ಹೊಂದಿರುವ ಕಾರಣ ಜನಪ್ರತಿನಿಧಿಗಳ ಭೋಗ ಜೀವನಕ್ಕೆ ಕಡಿವಾಣ ಹಾಕುವ ಉತ್ತಮ ವ್ಯವಸ್ಥೆ ಹೊಂದಿದೆ. ಪಕ್ಷವು ಮತದಾನದ ವೇಳೆ ಚುನಾವಣೆಗೆ ನಿಂತವರಲ್ಲಿ ಯೋಗ್ಯ ಅಭ್ಯರ್ಥಿ ಇಲ್ಲದೆ ಇದ್ದರೆ ಯಾರಿಗೂ ಮತ ನೀಡದಿರುವ ಹಾಗೂ ಯೋಗ್ಯ ಅಭ್ಯರ್ಥಿ ಇಲ್ಲ ಎಂಬ ಆಯ್ಕೆಯನ್ನು ಮತದಾರರಿಗೆ ನೀಡಲು ಯೋಜಿಸಿದೆ. ಈ ರೀತಿ ಒಂದು ಕ್ಷೇತ್ರದಲ್ಲಿ 50% ಹೆಚ್ಚಿನ ‘ಯಾರಿಗೂ ಇಲ್ಲ’ ಮತಗಳು ಚಲಾವಣೆ ಆದರೆ ಆ ಕ್ಷೇತ್ರದಲ್ಲಿ ಪ್ರಸಕ್ತ ನಿಂತ ಎಲ್ಲ ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಪುನಃ ನಡೆಯುವ ಚುನಾವಣೆಗೆ ಸ್ಪರ್ಧಿಸಲಾಗದಂತೆ ಚುನಾವಣಾ ತಿದ್ದುಪಡಿ ತರಲು ಆಸಕ್ತಿ ಹೊಂದಿದೆ. ಇದರಿಂದ ಯೋಗ್ಯ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಆರಿಸಿ ಸಂಸತ್ತಿಗೆ ಹಾಗೂ ವಿಧಾನಸಭೆಗಳಿಗೆ ಹೋಗಲು ಸಾಧ್ಯವಾಗಲಿದೆ. ಅದೇ ರೀತಿ ಚುನಾಯಿತ ಪ್ರತಿನಿಧಿಗಳು ಜನತೆಗೆ ಸ್ಪಂದಿಸದೇ ಇದ್ದರೆ ಅಂಥವರನ್ನು ವಾಪಾಸ್ ಕರೆಸಿಕೊಂಡು ಪುನಃ ಚುನಾವಣೆ ನಡೆಸಿ ಯೋಗ್ಯರನ್ನು ಆರಿಸುವ ಅವಕಾಶವನ್ನು ಜನರಿಗೆ ನೀಡಲು ಅವಕಾಶವಾಗುವ ವ್ಯವಸ್ಥೆ ಜಾರಿಗೆ ತರಲು ತನ್ನ ಪಕ್ಷದಲ್ಲಿ ಒಲವು ತೋರಿಸಿದೆ. ಇಂಥ ವ್ಯವಸ್ಥೆ ಮಾಡಿದರೆ ಜನ ಕೆಲಸ ಮಾಡದ ಹಾಗೂ ಜನತೆಗೆ ಸ್ಪಂದಿಸದ ಪ್ರತಿನಿಧಿಗಳನ್ನು 5 ವರ್ಷ ಸಹಿಸಿಕೊಂಡು ಇರಬೇಕಾಗಿಲ್ಲ.  ಅದೇ ರೀತಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳಲ್ಲಿ ಸುಧಾರಣೆ ತರುವ ಉದ್ಧೇಶ ಹೊಂದಿದೆ. ಜನರಿಗೆ ಅನುಕೂಲಕರವಲ್ಲದ, ಜನರಿಗೆ ಕಿರುಕುಳ ಕೊಡುವ ಕಾನೂನುಗಳನ್ನು ತೆಗೆದು ಹಾಕುವ ಹಾಗೂ ಜನರಿಗೆ ಅವಶ್ಯಕವಾದ ಕಾನೂನುಗಳನ್ನು ರೂಪಿಸುವ ವ್ಯವಸ್ಥೆ ಮಾಡಲಿದೆ. ಪಕ್ಷದ ಒಳಗೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಆಂತರಿಕ ಲೋಕಪಾಲ್ ವ್ಯವಸ್ಥೆ ಹೊಂದಿರುವುದರಿಂದ ಇದು ಪಕ್ಷವು ನೈತಿಕ ಅಧಃಪತನ ಹೊಂದದಂತೆ ರಕ್ಷಣೆ ನೀಡಲಿದೆ. ಇಂಥ ಒಂದು ವ್ಯವಸ್ಥೆಯೂ ಪ್ರಜಾಪ್ರಭುತ್ವವನ್ನು ಬಲಪಡಿಸುವುದರಲ್ಲಿ ಸಂದೇಹವಿಲ್ಲ.ಪಕ್ಷದ ಬಗ್ಗೆ ಜನರು ಸೂಕ್ತ ಸಲಹೆ ಸೂಚನೆಗಳನ್ನು ಕೊಡಲು, ಪ್ರಶ್ನೆಗಳಿದ್ದರೆ ಕೇಳಲು, ಯಾವುದಾದರೂ ದಾಖಲೆಗಳಿದ್ದರೆ ಅದನ್ನು ಪಕ್ಷದ ಗಮನಕ್ಕೆ ತರಲು ಪಕ್ಷದ ವೆಬ್ ಸೈಟಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ದೇಶಾದ್ಯಂತ ಹಾಗೋ ವಿಶ್ವದ ಯಾವುದೇ ಭಾಗದಿಂದಲಾದರೂ ಜನರು ಪಕ್ಷ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಗಮನ ಸೆಳೆಯಬಹುದು. ಆಮ್ ಆದ್ಮಿ ಪಕ್ಷವು ಈ ರೀತಿ ಬೇರೆ ಪಕ್ಷಗಳಲ್ಲಿ ಇಲ್ಲದ ಮಹತ್ವದ ಅಂಶಗಳನ್ನು ಹೊಂದಿರುವುದು ಮತ್ತು ಕಾಲ ಕಾಲಕ್ಕೆ ಅವಶ್ಯಕವಾದ ಸುಧಾರಣೆಗಳನ್ನು ಪಕ್ಷದಲ್ಲಿ ತರಲು ಒಲವು ಹೊಂದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಅಂಶವಾಗಿದೆ. ಆಮ್ ಆದ್ಮಿ ಪಕ್ಷವು ಚುನಾವಣೆಗಳಲ್ಲಿ ಸ್ಪರ್ಧಿಸಲು ಹಾಗೂ ಪಕ್ಷದ ಚಟುವಟಿಕೆಗಳನ್ನು ನಡೆಸಲು ಬೇಕಾಗುವ ಹಣವನ್ನು ಪಾರದರ್ಶಕವಾಗಿ ಜನರಿಂದಲೇ ಸಂಗ್ರಹಿಸಲಿದೆ. ಸಂಗ್ರಹಿಸಿದ ಹಣ ಹಾಗೂ ಖರ್ಚುವೆಚ್ಚಗಳನ್ನು ಪಾರ್ಟಿ ವೆಬ್‌ಸೈಟಿನಲ್ಲಿ ಪ್ರಕಟಿಸುವ ಹಾಗೂ ಎಲ್ಲರೂ ನೋಡಲು ಅವಕಾಶ ಕಲ್ಪಿಸಿದೆ. ಪಕ್ಷಕ್ಕೆ ದೇಣಿಗೆ ಕೊಡುವವರ ಹಿನ್ನೆಲೆಯನ್ನು ಗಮನಿಸಿ ಮೋಸದ, ಭ್ರಷ್ಟಾಚಾರದ ಹಣವನ್ನು ಸ್ವೀಕರಿಸದೆ ಇರುವ ಮಹತ್ವದ ಅಂಶವನ್ನು ಪಕ್ಷ ಹೊಂದಿರುವುದು ಉತ್ತಮ ಆಲೋಚನೆಯಾಗಿದೆ.

ಅರವಿಂದ ಕೇಜರಿವಾಲ್ ಖರಗಪುರ ಐಐಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪಧವೀಧರ. ಆರಂಭದಲ್ಲಿ  ಜಮ್‍‌ಷೆಡ್ಪುರದ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡಿದ ಕೇಜರಿವಾಲ್ 1992 ರಲ್ಲಿ ಅದನ್ನು ತೊರೆದು ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಪಾಸು ಮಾಡಿ ಭಾರತೀಯ ರೆವೆನ್ಯೂ ಸೇವೆಯನ್ನು ಸೇರಿದರು. 2006ರಲ್ಲಿ ಆದಾಯ ತೆರಿಗೆ ಇಲಾಖೆಯ ಜಾಯಿಂಟ್ ಕಮಿಷನರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದರು. ಮದರ್ ತೆರೇಸಾ ಮಿಷನರೀಸ್ ಆಫ್ ಚ್ಯಾರಿಟಿ, ರಾಮಕೃಷ್ಣ ಮಿಶನ್, ನೆಹರೂ ಯುವ ಕೇಂದ್ರ ಮೊದಲಾದವುಗಳ ಜೊತೆ ಸಮಾಜ ಸೇವೆಯಲ್ಲಿಯೂ ಕೆಲ ಕಾಲ ತೊಡಗಿಸಿಕೊಂಡಿದ್ದರು. 2006ರಲ್ಲಿ ಉದಯೋನ್ಮುಖ ನಾಯಕತ್ವಕ್ಕಾಗಿ ಪ್ರತಿಷ್ಠಿತ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿಯ ಹಣವನ್ನು ಬಳಸಿ ಅವರು ಪಬ್ಲಿಕ್ ಕಾಸ್ ಫೌಂಡೇಶನ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು. ಅರುಣಾ ರಾಯ್ ಜೊತೆ ಸೇರಿ ಮಾಹಿತಿ ಹಕ್ಕು ಕಾಯಿದೆಗಾಗಿ ಕೆಲಸ ಮಾಡಿದರು. ತದನಂತರ ಜನಲೋಕಪಾಲ್ ಕಾಯಿದೆ ಜಾರಿಗಾಗಿ ಚಳುವಳಿಯಲ್ಲಿ ಅಣ್ಣಾ ಹಜಾರೆ ಜೊತೆಗೂಡಿ ಹೋರಾಡಿದರು. ಪ್ರಸಕ್ತ ಸರ್ಕಾರಗಳು ಹಾಗೂ ಪ್ರಸಕ್ತ ರಾಜಕೀಯ ವ್ಯವಸ್ಥೆಯು ಚಳುವಳಿಗಳಿಗೆ ಮಣಿಯದಿರುವುದನ್ನು ಮನಗಂಡು ರಾಜಕೀಯ ಹೋರಾಟದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನತೆಯ ಆಶೋತ್ತರಗಳ ಪರವಾಗಿ ಕೆಲಸ ಮಾಡುವ ವ್ಯವಸ್ಥೆಯಾಗಿ ಪರಿವರ್ತಿಸುವ ಕನಸಿನೊಂದಿಗೆ ರಾಜಕೀಯ ರಂಗಕ್ಕೆ ಇಳಿದಿದ್ದಾರೆ. ಇದನ್ನು ಅವಶ್ಯವಾಗಿ ಸ್ವಾತಂತ್ರ್ಯಾನಂತರ ರೂಪಿಸಬೇಕಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಪ್ರತಿಭಾವಂತರು ರಾಜಕೀಯ ರಂಗವನ್ನು ಪ್ರವೇಶಿಸದೇ ಇರುವ ಕಾರಣ ದೇಶದ ರಾಜಕೀಯ ರಂಗ ಕಲುಷಿತಗೊಂಡಿದೆ. ಪ್ರಸಕ್ತ ದೇಶದ ಬಹುತೇಕ ಪ್ರತಿಭಾವಂತರು ಉನ್ನತ ವಿದ್ಯಾಭ್ಯಾಸ ಪಡೆದು ವಿದೇಶಗಳಿಗೆ ತೆರಳಿ ಹಣ ಮಾಡುವ ಹಾಗೂ ಭೋಗಜೀವನದಲ್ಲಿ ಮುಳುಗುವ ಅಥವಾ ದೇಶದಲ್ಲಿ ಇದ್ದುಕೊಂಡೇ ಇನ್ನಷ್ಟು, ಮತ್ತಷ್ಟು ಹಣ ಮಾಡುವ ಹುಚ್ಚಿನಲ್ಲಿಯೇ ಮುಳುಗಿರುವ ಕಾರಣ ದೇಶದ ಬಗ್ಗೆ ಚಿಂತನೆ ನಡೆಸುವವರು ವಿರಳವಾಗಿರುವುದೇ ನಮ್ಮ ವ್ಯವಸ್ಥೆಯ ಅಧಃಪತನಕ್ಕೆ ಕಾರಣವಾಗಿದೆ. ಇಂಥ ಹಿನ್ನೆಲೆಯಲ್ಲಿ ಕೇಜರಿವಾಲ್ ಹಾಗೂ ಸಂಗಡಿಗರು ಹೊಸ ಚಿಂತನೆಯೊಂದಿಗೆ ರಾಜಕೀಯಕ್ಕೆ ಇಳಿದಿರುವುದು ಸ್ವಾಗತಾರ್ಹ. ಇಂಥ ಚಿಂತನೆ ಸ್ವಾತಂತ್ರ್ಯಾನಂತರ ಇದೀಗ ಪ್ರಥಮ ಬಾರಿಗೆ ದೇಶದಲ್ಲಿ ಕಂಡುಬರುತ್ತಾ ಇದೆ. 1975ರ ತುರ್ತು ಪರಿಸ್ಥಿತಿಯಲ್ಲಿ ಹುಟ್ಟಿಕೊಂಡ ಜೆಪಿಯವರ ಸಂಪೂರ್ಣ ಕ್ರಾಂತಿಯು ರಾಜಕೀಯದಲ್ಲಿ ಧರ್ಮವನ್ನು ಬೆರೆಸುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವ ಕೇಸರಿ ಶಕ್ತಿಗಳನ್ನು ಜೊತೆಗೆ ಸೇರಿಸಿಕೊಂಡ ಕಾರಣ ವಿಫಲವಾಯಿತು. ಧರ್ಮವನ್ನು ಹಾಗೂ ಮೂಲಭೂತವಾದವನ್ನು ರಾಜಕೀಯದ ಜೊತೆ ಬೆರೆಸುವ ಶಕ್ತಿಗಳು ದೇಶದ ರಾಜಕೀಯ ತೀವ್ರ ಹದಗೆಡಲು ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಲು ಪ್ರಧಾನ ಕಾರಣವಾಗಿವೆ. ಇಂಥ ಮೂಲಭೂತವಾದಿ, ಪ್ರತಿಗಾಮಿ ಶಕ್ತಿಗಳು ಮೇಲುಗೈ ಪಡೆದರೆ ಪಾಕಿಸ್ತಾನದಲ್ಲಿ ಉಂಟಾದಂತೆ ಸರ್ವಾಧಿಕಾರ ಹಾಗೂ ಫ್ಯಾಸಿಸಂ ದೇಶದಲ್ಲಿ ವ್ಯಾಪಿಸಬಹುದು. ಈ ಹಿನ್ನೆಲೆಯಲ್ಲಿ ಎಲ್ಲ ಚಿಂತಕರೂ ಧರ್ಮ ಹಾಗೂ ಮೂಲಭೂತವಾದಗಳನ್ನು ರಾಜಕೀಯದಲ್ಲಿ ಬೆರೆಸುವುದನ್ನು ವಿರೋಧಿಸುತ್ತಾರೆ. ಕೇಜರಿವಾಲ್ ಹಾಗೂ ಸಂಗಡಿಗರು ಮೂಲಭೂತವಾದಿ ಸಿದ್ಧಾಂತಗಳನ್ನು ಹೊಂದಿರುವ ಶಕ್ತಿಗಳನ್ನು ದೂರ ಇಡಲು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಹಂತದಲ್ಲಿಯೇ ಸೂಕ್ತ ಜಾಲರಿಯನ್ನು ರೂಪಿಸಿರುವುದು ಅತೀ ಅಗತ್ಯವಾದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾದ ಅತ್ಯುತ್ತಮವಾದ ಉಪಾಯವಾಗಿದೆ.

ಕೇಜರಿವಾಲರು ಅಧಿಕಾರದ ಆಸೆಗಾಗಿ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿ ಲೋಕಪಾಲಕ್ಕಾಗಿ ನಡೆದ ಆಂದೋಲನವನ್ನು ಒಡೆದುಹಾಕಿದ್ದಾರೆ ಎಂದು ಅಣ್ಣಾ ಹಜಾರೆ ಆಪಾದಿಸುತ್ತಿರುವುದು ಸಮಂಜಸವೆಂದು ಕಂಡು ಬರುವುದಿಲ್ಲ. ಅಣ್ಣ ಹಜಾರೆ ಮತ್ತು ಅವರ ಕೆಲವು ಹಿಂಬಾಲಕರು ಧಾರ್ಮಿಕ ಮೂಲಭೂತವಾದಿ ಶಕ್ತಿಗಳ ಕಡೆಗೆ ಒಲವು ಹೊಂದಿರುವುದೇ ಚಳುವಳಿ ಒಡೆಯಲು ಪ್ರಧಾನ ಕಾರಣವಾಗಿ ಕಂಡುಬರುತ್ತದೆ. ದೇಶದಲ್ಲಿ ಮೋದಿ ನೇತೃತ್ವದಲ್ಲಿ ಮೂಲಭೂತವಾದಿ ಶಕ್ತಿಗಳನ್ನು ಅಧಿಕಾರಕ್ಕೆ ತರಬೇಕೆಂಬ ಹಂಬಲವನ್ನು ರಾಜಕೀಯವಾಗಿ ಮುಗ್ಢರಾದ ಅಣ್ಣಾ ಹಜಾರೆಯವರಲ್ಲಿ ಕೆಲವರು ತುಂಬಿರುವಂತೆ ಕಾಣುತ್ತದೆ. ಹೀಗಾಗಿ ಕೇಜರಿವಾಲ್ ಅಧಿಕಾರದ ಆಸೆಯಿಂದ ರಾಜಕೀಯಕ್ಕೆ ಧುಮುಕಿದ್ದಾರೆ ಎಂದು ಯಾರೋ ಅಣ್ಣಾ ಹಜಾರೆ ಮೂಲಕ ಹೇಳಿಸುತ್ತಿರುವಂತೆ ಕಂಡುಬರುತ್ತದೆ. ಕೇಜರಿವಾಲರ ಹಿನ್ನೆಲೆ, ಚಿಂತನೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂಬ ತುಡಿತ ನೋಡುವಾಗ ಅವರಲ್ಲಿ ಅಧಿಕಾರದ ಆಸೆ ಇದೆ ಎಂದು ಕಂಡು ಬರುವುದಿಲ್ಲ.

ಕಾಂಗ್ರೆಸ್ ವಿರುದ್ಧ ಕೇಜರಿವಾಲರು ಭ್ರಷ್ಟಾಚಾರದ ಅಪಾದನೆ ಮಾಡಿದಾಗ, ಗಡ್ಕರಿ ವಿರುದ್ಧ ಭ್ರಷ್ಟಾಚಾರದ ಆಪಾದನೆ  ಮಾಡಿದಾಗ ಕೇಜರಿವಾಲ್ ಜೊತೆಗಿದ್ದ ಮಾಧ್ಯಮಗಳು ಅವರು ಮೋದಿಯ ವಿರುದ್ಧ ಭ್ರಷ್ಟಾಚಾರದ ಆಪಾದನೆ ಮಾಡಿದಾಗ ಕೇಜರಿವಾಲರಿಂದ ದೂರ ನಿಂತವು. ಇದು ಮಾಧ್ಯಮಗಳು ಯಾವ ರೀತಿ  ಮೂಲಭೂತವಾದಿ ಉನ್ಮಾದವನ್ನು ಬೆಂಬಲಿಸುವ ಹುನ್ನಾರ ಹೊಂದಿವೆ ಎಂಬುದನ್ನು ತೋರಿಸುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಮೋದಿಯುಗದ ಧಾರ್ಮಿಕ ಉನ್ಮಾದವನ್ನು ದೇಶಾದ್ಯಂತ ಹಬ್ಬಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಫ್ಯಾಸಿಸ್ಟ್ ವ್ಯವಸ್ಥೆಯಾಗಿ ಮಾರ್ಪಡಿಸಲು ದೇಶದ ಇಲೆಕ್ಟ್ರಾನಿಕ್ ಮಾಧ್ಯಮಗಳು ಮುಂಚೂಣಿಯಲ್ಲಿ ನಿಂತಿರುವುದನ್ನು ಇದು ತೋರಿಸುತ್ತದೆ. ಮೋದಿ ಪ್ರಧಾನಿಯಾದರೆ ಸಿಬಿಐ ಸ್ವತಂತ್ರವಾಗುವ ಅಥವಾ ಸಶಕ್ತ ಲೋಕಪಾಲ್ ವ್ಯವಸ್ಥೆ ಬರುವ ಸಾಧ್ಯತೆ ಇಲ್ಲ.  ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಧರ್ಮದ ಹೆಸರಿನಲ್ಲಿ ಹಿಂಸಾಕಾಂಡ ಹುಟ್ಟುಹಾಕಿದ, ಹಾಕುತ್ತಿರುವ ಮೂಲಭೂತವಾದಿ ಶಕ್ತಿಗಳು ಜೈಲಿಗೆ ಹೋಗಬೇಕಾಗಿ ಬರುವುದರಲ್ಲಿ ಸಂದೇಹವಿಲ್ಲ. ಸಂವಿಧಾನ ಪ್ರಕಾರ ಸಿಬಿಐ ಕಾರ್ಯನಿರ್ವಹಿಸಿದರೆ ಧಾರ್ಮಿಕ ಉನ್ಮಾದ ಹಬ್ಬಿಸಿ ಇಂದು ಮಹಾನಾಯಕರೆಂದು ಮಾಧ್ಯಮಗಳಿಂದ ಕರೆಸಿಕೊಳ್ಳುವ ಹೆಚ್ಚಿನ ಕೇಸರಿ ನಾಯಕರು ಜೈಲಿಗೆ ಹೋಗಬೇಕಾಗಿ ಬರಬಹುದು. ಹೀಗಾಗಿ ಕೇಸರಿ ನೇತೃತ್ವದ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಿಬಿಐ ಸ್ವತಂತ್ರ ಸಂಸ್ಥೆಯಾದೀತು ಎಂದು ಯಾರಾದರೂ ಭಾವಿಸಿದರೆ ಅದು ಅಸಂಭವನೀಯ ಎಂದು ಮೇಲ್ನೋಟಕ್ಕೇ ಕಂಡುಬರುತ್ತದೆ.ದೇಶದಲ್ಲಿ ಇಂದು ಚಳುವಳಿಗಳ ಮೂಲಕ ಜನರಿಗೆ ಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತರುವಷ್ಟು ಆಡಳಿತ ನಡೆಸುವವರು ಸಂವೇದನಾಶೀಲರಾಗಿಲ್ಲ. ಹೀಗಾಗಿ ಕೇಜರಿವಾಲರು ಆರಿಸಿಕೊಂಡಿರುವ ಮಾರ್ಗ ಸರಿಯಾಗಿದೆ. ಜನರು ಎಚ್ಚೆತ್ತುಕೊಂಡರೆ ಈ ಮಾರ್ಗದಲ್ಲಿ ಬದಲಾವಣೆ ತರುವುದು ಸಾಧ್ಯ. ನಮ್ಮ ಜನರಲ್ಲಿಯೂ ಕೂಡ ಭ್ರಷ್ಟಾಚಾರವನ್ನು ಬೆಂಬಲಿಸುವವರ ಸಂಖ್ಯೆ ದೊಡ್ಡದಾಗಿಯೇ ಇದೆ. ನಕಲಿ ಪಡಿತರ ಚೀಟಿ, ನಕಲಿ ಅಡುಗೆ ಅನಿಲ ಖಾತೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಇರುವುದು ಇದನ್ನೇ ಸೂಚಿಸುತ್ತದೆ.  ನಕಲಿ ಪಡಿತರ ಚೀಟಿ, ನಕಲಿ ಅಡುಗೆ ಅನಿಲ ಖಾತೆ ಹೊಂದಲು ಯಾರೂ ಒತ್ತಾಯ ಮಾಡುವ ಪರಿಸ್ಥಿತಿ ಇಲ್ಲ ಅಥವಾ ಅಂಥ ಅನಿವಾರ್ಯತೆ ಇಲ್ಲದಿರುವಾಗಲೂ ಜನ ಇಂಥದನ್ನು ಮಾಡುತ್ತಾರೆ ಎಂದರೆ ನಮ್ಮ ಜನರಲ್ಲಿ ಭ್ರಷ್ಟ ವ್ಯವಸ್ಥೆಯನ್ನು ಇಷ್ಟಪಡುವವರು ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ ಎಂದು ಹೇಳಬಹುದು. ಹೀಗಾಗಿ ಕೇಜರಿವಾಲರು ರಾಜಕೀಯವಾಗಿ ಯಶಸ್ವಿಯಾಗುವ ಸಂಭವನೀಯತೆ ನಿಕಟ ಭವಿಷ್ಯದಲ್ಲಿ ಇಲ್ಲದೆ ಹೋಗಬಹುದಾದರೂ ಇಂಥ ಒಂದು ಧ್ಯೇಯವನ್ನು ನಿರಂತರ ಮುಂದುವರಿಸಿಕೊಂಡು ಹೋದರೆ ನಿಧಾನವಾಗಿಯಾದರೂ ಯಶಸ್ವಿಯಾಗಲು ಸಾಧ್ಯ.  ಚಳುವಳಿಗಳಿಗೆ ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ನಿರಂತರವಾಗಿ ಹೋಗಲು ಜನತೆಗೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಿಂದಲೂ ಕೇಜರಿವಾಲರು ರಾಜಕೀಯಕ್ಕೆ ಇಳಿದಿರುವುದು ಸಮರ್ಪಕವಾದ ಮಾರ್ಗವೇ ಆಗಿದೆ. ಈ ಮಾರ್ಗದಲ್ಲಿ ಬದಲಾವಣೆ ತರಬೇಕಾದರೆ ಜನರು ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ನಿರಂತರ ಚಳುವಳಿ, ಧರಣಿ ಎಂದು ಅಲೆಯಬೇಕಾಗಿಲ್ಲ. ಅವರು ಮಾಡಬೇಕಾಗಿರುವುದು ಯೋಗ್ಯ ಪಕ್ಷಕ್ಕೆ ಹಾಗೂ ಯೋಗ್ಯ ಅಭ್ಯರ್ಥಿಗಳಿಗೆ ಮತ ನೀಡುವ ಒಂದು ಸರಳ ಕೆಲಸ ಮಾತ್ರ. ಇನ್ನೊಂದು ನಿಟ್ಟಿನಿಂದಲೂ ರಾಜಕೀಯ ವ್ಯವಸ್ಥೆಯ ಮೂಲಕ ಒಳಗಿನಿಂದಲೇ ಬದಲಾವಣೆ ತರಲು ಜನರ ಮುಂದೆ ತೆರಳುವುದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಮಾರ್ಗವೂ ಹೌದು. ಇದು ಪ್ರಜಾಪ್ರಭುತ್ವದ ಆರೋಗ್ಯವನ್ನು ಕಾಪಾಡಲು ಅಗತ್ಯವೂ ಹೌದು. ಚಳುವಳಿ ಎಂದು ಕೆಲವು ಗುಂಪುಗಳು ತಮಗೆ ಬೇಕಾದ ವಿಷಯಗಳನ್ನು ಎತ್ತಿಕೊಂಡು ಸಂಸತ್ತಿನ ಮೇಲೆ ಒತ್ತಡ ಹೇರುತ್ತಾ ಹೋದರೆ ಮುಂದೆ ಜಾತ್ಯತೀತ ಸಂವಿಧಾನವನ್ನು ಕೇಸರಿ ಸಂವಿಧಾನವಾಗಿ ಪರಿವರ್ತನೆ ಮಾಡಬೇಕು ಎಂದು ಕೆಲವರ ಬೇಡಿಕೆ ಚಳುವಳಿ ಬರಬಹುದು. ಈಗ ಇರುವ ವ್ಯವಸ್ಥೆಯಲ್ಲಿ ಇಂಥ ಬೇಡಿಕೆಯನ್ನು 2/3 ಬಹುಮತ ಇಲ್ಲದೆ ಪಾಸು ಮಾಡಿಕೊಳ್ಳುವುದು ಅಸಾಧ್ಯ. ಸಂಸತ್ತಿನ ಮೇಲೆ ಹೊರಗಿನಿಂದ ಒತ್ತಡ ಹಾಕಿ ಕೆಲವು ಗುಂಪುಗಳು ಚಳುವಳಿ ಮಾಡಿ ಬೇಡಿಕೆ ಈಡೇರಿಸಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮರ್ಪಕವಾದ ಮಾರ್ಗವೂ ಅಲ್ಲ.

ಕೇಜರಿವಾಲರ ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿದರೆ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಬೇಕೆಂಬ ತುಡಿತದೊಂದಿಗೆ ಹುಟ್ಟಿಕೊಂಡ ಇನ್ನೊಂದು ಪಕ್ಷ ಜಯಪ್ರಕಾಶ್ ನಾರಾಯಣರ ಲೋಕಸತ್ತಾ ಪಕ್ಷವಾಗಿದೆ. ಈ ಪಕ್ಷವು 2006ರಲ್ಲಿಯೇ ಉದಯವಾಗಿದ್ದರೂ ಇದರ ಬಗ್ಗೆ ಮಾಧ್ಯಮಗಳು ಗಮನವನ್ನೇ ಹರಿಸಿಲ್ಲ. ಹೀಗಾಗಿ ಇದರ ಬಗ್ಗೆ ಇಷ್ಟರವರೆಗೆ ಯಾರಿಗೂ ತಿಳುವಳಿಕೆ ಇರಲಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಕೇಜರಿವಾಲರ ಪಕ್ಷಕ್ಕೆ ತಕ್ಕಷ್ಟು ಪ್ರಚಾರ ಸಿಕ್ಕಿದೆ. ಇದು ಕೇಜರಿವಾಲರು ಆರಿಸಿಕೊಂಡ ಉಪಾಯಗಳಿಂದ ಇರಬಹುದು. ಲೋಕಸತ್ತಾ ಪಕ್ಷದ ಧ್ಯೇಯಗಳೂ ಆಮ್ ಆದ್ಮಿ ಪಕ್ಷದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕಾರಾತ್ಮಕ ಮೂಲಭೂತ ಬದಲಾವಣೆ ತಂದು ಜನರ ಕೈಗೆ ಅಧಿಕಾರ ನೀಡುವುದೇ ಆಗಿದೆ. ಹೀಗಾಗಿ ಈ ಎರಡೂ ಪಕ್ಷಗಳು ಜೊತೆಗೂಡಿ ಕೆಲಸ ಮಾಡುವುದು ಒಳ್ಳೆಯದು.

ಬಂಡವಾಳಶಾಹಿ ಪ್ರಭುತ್ವವಾಗಿ ಮಾರ್ಪಟ್ಟ ಪ್ರಜಾಪ್ರಭುತ್ವ ವ್ಯವಸ್ಥೆ

– ಆನಂದ ಪ್ರಸಾದ್

ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ವ್ಯವಸ್ಥೆಯಾಗಿರದೆ ಬಂಡವಾಳಶಾಹಿಗಳಿಂದ, ಬಂಡವಾಳಶಾಹಿಗಳಿಗಾಗಿ, ಬಂಡವಾಳಶಾಹಿಗಳೇ ನಡೆಸುವ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ.  ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳು ನೀಡುವ ದೇಣಿಗೆಗಳಿಂದ ಸಮೃದ್ಧವಾಗಿ ಬೆಳೆದು ಪ್ರಜೆಗಳ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾ ಮೆರೆಯಲು ಆರಂಭಿಸಿವೆ.  ಹೀಗಾಗಿ ಅಧಿಕಾರದಲ್ಲಿರುವ ಯಾವುದೇ ಪಕ್ಷಕ್ಕೂ ಸಿದ್ಧಾಂತ, ದೇಶದ ಹಿತಾಸಕ್ತಿ, ಪ್ರಜೆಗಳ ಹಿತಾಸಕ್ತಿ ಮುಖ್ಯವಾಗುವುದಿಲ್ಲ.  ತಮಗೆ ಯಾರು ಹೆಚ್ಚು ದೇಣಿಗೆಗಳನ್ನು ನೀಡುತ್ತಾರೋ ಅವರ ಹಿತ ಕಾಯುವ ದಲ್ಲಾಳಿಗಳಾಗಿ ರಾಜಕೀಯ ಪಕ್ಷಗಳು ಮಾರ್ಪಾಟಾಗಿವೆ.  ರಾಜಕೀಯ ಪಕ್ಷಗಳಿಗೆ ಬಂಡವಾಳಶಾಹಿಗಳು ನೀಡುವ ಹಣ ದೇಣಿಗೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರೂ ಅದು ನಿಜವಾಗಿ ತಮ್ಮ ಪರವಾಗಿ ಸರ್ಕಾರದ ನಿಯಮಗಳನ್ನು ರೂಪಿಸಿಕೊಳ್ಳಲು ಬಂಡವಾಳಶಾಹಿಗಳು ಕೊಡುವ ಲಂಚವೇ ಆಗಿದೆ.  ಈ ರೀತಿಯ ಲಂಚವೇ ಇಡೀ ಚುನಾವಣಾ ವ್ಯವಸ್ಥೆಯನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಮಣ್ಣುಪಾಲು ಮಾಡುತ್ತಿದೆ.  ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಜವಾದ ಅರ್ಥದಲ್ಲಿ ಜಾರಿಗೆ ತರುವಂತಾಗಲು ರಾಜಕೀಯ ಪಕ್ಷಗಳಿಗೆ ದೇಣಿಗೆ ಎಂಬ ಹೆಸರಿನಲ್ಲಿ ನೀಡುವ ಲಂಚವನ್ನು ನಿಲ್ಲಿಸುವ ಕುರಿತು ಜನಾಭಿಪ್ರಾಯ ರೂಪುಗೊಳ್ಳಬೇಕಾಗಿದೆ.

ಚುನಾವಣೆಗಳಲ್ಲಿ ಹಣದ ಪ್ರಭಾವವನ್ನು ತಡೆಯಲು ಸರ್ಕಾರವೇ ಚುನಾವಣಾ ವೆಚ್ಚಗಳನ್ನು ಭರಿಸುವಂತಾಗಬೇಕೆಂಬ ಮಾತು ಕೆಲವು ವಲಯಗಳಿಂದ ಕೇಳಿ ಬರುತ್ತಿದೆ.  ಆದರೆ ಇದನ್ನು ಜಾರಿ ಮಾಡುವುದು ಯಾವ ಮಾನದಂಡದ ಆಧಾರದ ಮೇಲೆ ಎಂಬುದು ಸ್ಪಷ್ಟವಾಗಿಲ್ಲ.  ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮಾತ್ರ ಇದನ್ನು ಅಳವಡಿಸಿದರೆ ಪಕ್ಷೇತರರಾಗಿ ಸ್ಪರ್ಧಿಸುವವರಿಗೆ ಚುನಾವಣಾ ವೆಚ್ಚ ಭರಿಸುವುದು ಹೇಗೆ ಎಂಬ ಪ್ರಶ್ನೆಯೂ ಇದೆ.  ಹೀಗೆ ಮಾಡಿದರೆ ಪಕ್ಷೇತರರ ಚುನಾವಣಾ ಸ್ಪರ್ಧೆಯ ಅವಕಾಶವನ್ನು ಮತ್ತು ಗೆಲ್ಲುವ ಅವಕಾಶವನ್ನು ಕುಂಠಿತಗೊಳಿಸಿದಂತೆ ಆಗಬಹುದು.  ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳೇ ಉದ್ಯಮಿಗಳೂ, ಬಂಡವಾಳಶಾಹಿಗಳೂ ಆಗಿ ರೂಪುಗೊಳ್ಳುವ ಹೊಸ ಪರಂಪರೆ ಶುರುವಾಗಿದೆ.  ಇದರಿಂದಾಗಿ ಇಂಥ ಉದ್ಯಮಿ ಹಾಗೂ ರಾಜಕಾರಣಿ ತನ್ನ ಬಂಡವಾಳವನ್ನು ಚುನಾವಣೆಗಳಲ್ಲಿ ಬಳಸಿ ಗೆಲ್ಲುವ ವಿಕಾರ ಪ್ರವೃತ್ತಿ ಬೆಳೆಯುತ್ತಿದೆ.  ಇಂಥ ಬಂಡವಾಳಶಾಹಿ ಉದ್ಯಮಿಗಳು ಮತ್ತು ಅವರ ಪಕ್ಷ ಚುನಾವಣೆಗಳಲ್ಲಿ ಸತತವಾಗಿ ಗೆಲ್ಲುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತೆ ರಾಜಪ್ರಭುತ್ವದ ರೀತಿಯ ಆಡಳಿತಕ್ಕೆ ದೂಡುತ್ತಿದೆ.  ಇಂಥ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿರುವುದರ ವಿರುದ್ಧ ಜನ ಜಾಗೃತಿ ಮೂಡಿಸುವ ಕುರಿತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಪ್ರಯತ್ನಿಸಬೇಕಾಗಿದೆ.

ಬಂಡವಾಳಶಾಹಿಗಳು ನಡೆಸುವ ಉದ್ಯಮಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ವಿನಾಯತಿ ನೀಡಲಾಗುತ್ತಿದೆ.  ಆದರೆ ಜನಸಾಮಾನ್ಯರಿಗೆ ನೀಡುವ ಅಡುಗೆ ಅನಿಲ ಸಬ್ಸಿಡಿಯನ್ನು, ಡೀಸೆಲಿಗೆ ನೀಡುವ ಸಬ್ಸಿಡಿಯನ್ನು, ಬಡವರಿಗೆ ನೀಡುವ ಕಡಿಮೆ ದರದ ಆಹಾರ ಧಾನ್ಯಗಳನ್ನು, ರೈತರಿಗೆ ನೀಡುವ ರಸಗೊಬ್ಬರ ಇತ್ಯಾದಿ ಸಬ್ಸಿಡಿಗಳನ್ನೂ ತೆಗೆದುಹಾಕಬೇಕೆಂದು ಬಂಡವಾಳಗಾರರ ಲಾಬಿ ಸರ್ಕಾರವನ್ನು ಮಣಿಸುತ್ತದೆ.  ನೈಸರ್ಗಿಕ ಸಂಪನ್ಮೂಲಗಳನ್ನು ಮೂರು ಕಾಸಿಗೆ ಬಂಡವಾಳಶಾಹಿಗಳಿಗೆ ನೀಡುವ ಸರ್ಕಾರದ ನಿರ್ಧಾರದ ಹಿಂದೆ ಪಕ್ಷದ ನಿಧಿಗೆ ಅವರು ನೀಡುವ ಕೋಟ್ಯಂತರ ದೇಣಿಗೆ ಕೆಲಸ ಮಾಡುತ್ತದೆ.  ಪ್ರಜಾಪ್ರಭುತ್ವ ಸರ್ಕಾರ ಇಂಥ ಅಧರ್ಮ ಹಾಗೂ ಅನ್ಯಾಯಗಳಿಗೆ ಮಣಿಯಬೇಕಾಗಿಲ್ಲ.  ಆದರೆ ನಮ್ಮದು ಬಂಡವಾಳಶಾಹಿಗಳು ರಾಜಕಾರಣಿಗಳ ಹಿಂದೆ ನಿಂತು ನಡೆಸುವ ಪ್ರಜಾಪ್ರಭುತ್ವದ ಮುಖವಾಡ ಹೊತ್ತ ವ್ಯವಸ್ಥೆಯಾಗಿರುವುದರಿಂದ ಇಲ್ಲಿ ಜನತೆಯ ಧ್ವನಿಗೆ ಯಾವುದೇ ಬೆಲೆಯಿಲ್ಲ.

ಭೋಪಾಲ್ ವಿಷಾನಿಲ ದುರಂತದಲ್ಲಿ ಸಂತ್ರಸ್ತರಾದ ಲಕ್ಷಾಂತರ ಜನರಿಗೆ ನ್ಯಾಯ ಸಿಗದೇ ಇರಲು ಬಂಡವಾಳಶಾಹಿ ಪ್ರಭುತ್ವವೇ ಕಾರಣವಾಗಿದೆ.  ಅಂಬಾನಿಯಂಥ ಉದ್ಯಮಪತಿಗಳು ರಾಜಕೀಯ ಪಕ್ಷಗಳು ತನ್ನ ಕಿಸೆಯ ಒಳಗೆ ಇವೆ ಎಂದು ಅಹಂಕಾರದ ಹೇಳಿಕೆ ನೀಡಲೂ ಅವರು ರಾಜಕೀಯ ಪಕ್ಷಗಳಿಗೆ ದೇಣಿಗೆಯ ಹೆಸರಿನಲ್ಲಿ ನೀಡುವ ಲಂಚವೇ ಕಾರಣ.  ಹೀಗಾಗಿ ರಾಜಕೀಯ ಪಕ್ಷಗಳು ಉದ್ಯಮಿಗಳಿಂದ ದೇಣಿಗೆ ಪಡೆಯುವ ಪರಂಪರೆಯನ್ನು ನಿಷೇಧಿಸಬೇಕಾದ ಅಗತ್ಯ ಇದೆ.  ರಾಜಕೀಯ ಪಕ್ಷಗಳು ಜನತೆಯ ದೇಣಿಗೆಯಿಂದ ಮಾತ್ರ ಬೆಳೆಯುವಂತೆ ಆಗಬೇಕು ಮತ್ತು ಅದರ ಸಂಪೂರ್ಣ ಲೆಕ್ಕಪತ್ರ ಸಾರ್ವಜನಿಕರಿಗೆ ಲಭ್ಯವಿರಬೇಕು.  ಇಂದು ದೇಶದಲ್ಲಿ ಅಸ್ತಿತ್ವದಲ್ಲಿ ಇರುವ ಎಲ್ಲ ಪಕ್ಷಗಳು ರಾಷ್ಟ್ರೀಯ ಪಕ್ಷಗಳೇ ಇರಲಿ, ಪ್ರಾದೇಶಿಕ ಪಕ್ಷಗಳೇ ಇರಲಿ ಉದ್ಯಮಿಗಳಿಂದ ದೇಣಿಗೆ ಹೆಸರಿನ ಲಂಚ ಸ್ವೀಕರಿಸಿಯೇ ಚುನಾವಣೆಗೆ ನಿಲ್ಲುವ ವ್ಯವಸ್ಥೆ ಇರುವಾಗ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ತರಲು ಸಾಧ್ಯವೇ ಇಲ್ಲ.

ಇಂದು ಉದ್ಯಮಿಗಳೇ ಸರ್ಕಾರದಲ್ಲಿ ಮಂತ್ರಿಗಳಾಗಿ ತಮಗೆ ಬೇಕಾದಂತೆ ನೀತಿ ನಿಯಮಗಳನ್ನು ರೂಪಿಸುತ್ತಾ ಉದ್ಯಮದ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ.  ಇದನ್ನು ತಪ್ಪಿಸಲು ರಾಜಕೀಯ ಪಕ್ಷಗಳಲ್ಲಿ ಹಾಗೂ ಸರ್ಕಾರದಲ್ಲಿ ದೊಡ್ಡ ಉದ್ಯಮಿಗಳು ಪಾಲುಗೊಳ್ಳದಂತೆ  ಜನಾಭಿಪ್ರಾಯ ರೂಪುಗೊಂಡು ದೊಡ್ಡ ಉದ್ಯಮಿಗಳು ಸರ್ಕಾರದಲ್ಲಾಗಲೀ, ರಾಜಕೀಯ ಪಕ್ಷಗಳಲ್ಲಾಗಲೀ ಸೇರಲಾಗದಂತೆ  ಕಾನೂನು ರೂಪಿಸಬೇಕಾದ ಅಗತ್ಯ ಇದೆ.  ಇಲ್ಲದೆ ಹೋದರೆ ಪ್ರಜಾಪ್ರಭುತ್ವ ನಾಶವಾಗಿ ಉಳ್ಳವರ, ಬಂಡವಾಳಶಾಹಿಗಳ ಪ್ರಭುತ್ವ ಮೇಲುಗೈ ಸಾಧಿಸುವುದು ಖಚಿತ.  ರಾಜಕೀಯ ಪಕ್ಷಗಳಿಗೆ ಉದ್ಯಮಿಗಳ, ಶ್ರೀಮಂತರ ದೇಣಿಗೆ ಹೆಸರಿನ ಲಂಚವನ್ನು ಪಡೆಯದೇ ಜನತೆಯ ಸಣ್ಣ ಪ್ರಮಾಣದ ದೇಣಿಗೆಯ ಹಣದಿಂದ ಮಾತ್ರ ರಾಜಕೀಯ ಪಕ್ಷಗಳು ಕಾರ್ಯನಿರ್ವಹಿಸುವಂತೆ ಆಗಬೇಕು.  ದೊಡ್ಡ ಉದ್ಯಮಿಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಲಂಚ ಪಡೆಯುವುದನ್ನು ನಿಷೇಧಿಸುವ ಕಾನೂನು ರೂಪುಗೊಳ್ಳಬೇಕು.  ಕಪ್ಪು ಹಣದ ರೂಪದಲ್ಲಿಯೋ ಅಥವಾ ಬಿಳಿ ಹಣದ ರೂಪದಲ್ಲಿಯೋ ಉದ್ಯಮಿಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಲಂಚ ಪಡೆದರೆ ದೇಣಿಗೆ ಹೆಸರಿನ ಲಂಚ ಕೊಟ್ಟ ಉದ್ಯಮಿಗಳು ಮತ್ತು ಪಡೆದ ರಾಜಕೀಯ ಪಕ್ಷಗಳಿಗೆ ಶಿಕ್ಷೆ ಆಗುವಂತೆ ಕಾನೂನು ರಚನೆಗೊಳ್ಳಬೇಕಾದ  ಅಗತ್ಯ ಇದೆ.  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾದರೆ ಇಂಥ ಕಾನೂನುಗಳು ಅಗತ್ಯ.

ಬಂಡವಾಳಶಾಹಿಗಳ ದೇಣಿಗೆ ಇಲ್ಲದೆ ರಾಜಕೀಯ ಪಕ್ಷ ನಡೆಸುವುದು ಹಾಗೂ ಚುನಾವಣೆ ಎದುರಿಸುವುದನ್ನು ರಾಜಕೀಯ ಪಕ್ಷಗಳಿಗೆ ಕಡ್ಡಾಯಪಡಿಸುವ ಕಾನೂನು ಅಗತ್ಯ ಇದೆ.  ರಾಜಕೀಯ ಪಕ್ಷಗಳು ದುಂದುವೆಚ್ಚದ ಸಮಾವೇಶಗಳನ್ನು ಏರ್ಪಡಿಸುವ ಹಾಗೂ ಜನರನ್ನು ಪಕ್ಷದ ವತಿಯಿಂದ ಹಣ ಕೊಟ್ಟು ಸಾರಿಗೆ ವ್ಯವಸ್ಥೆ ಮಾಡಿ ಸಮಾವೇಶಗಳಿಗೆ ಬರಿಸುವ, ಮತದಾರರಿಗೆ ವಿವಿಧ ಆಮಿಷಗಳ ಕೊಡುಗೆ ನೀಡುವ, ಅದ್ಧೂರಿ ಕಛೇರಿಗಳನ್ನು ತೆರೆಯುವ ಪ್ರವೃತ್ತಿಯನ್ನು ನಿಲ್ಲಿಸಿದರೆ ರಾಜಕೀಯ ಪಕ್ಷಗಳನ್ನು ಬಂಡವಾಳಶಾಹಿಗಳ ದೇಣಿಗೆಯ ಹೆಸರಿನ ಲಂಚ ಇಲ್ಲದೆ ಕಾರ್ಯಕರ್ತರ, ಜನಸಾಮಾನ್ಯರ ದೇಣಿಗೆಯಿಂದಲೇ ನಿರ್ವಹಿಸುವುದು ಸಾಧ್ಯವಿದೆ.  ಸೇವಾ ಮನೋಭಾವ ಇರುವ, ಜೀವನೋಪಾಯಕ್ಕೆ ಬೇರೆ ಸಾಮಾನ್ಯ ಮಧ್ಯಮ ವರ್ಗದ ಆದಾಯಮೂಲ ಇರುವವರು ಮಾತ್ರವೇ ರಾಜಕೀಯಕ್ಕೆ ಬಂದರೆ ರಾಜಕೀಯ ಪಕ್ಷಗಳನ್ನು ನಿರ್ವಹಿಸುವುದು ಕಷ್ಟವೇನೂ ಆಗಲಾರದು.  ಉದಾಹರಣೆಗೆ ಸಣ್ಣ ಉದ್ಯಮ, ವ್ಯಾಪಾರ ಇದ್ದು ಉದ್ಯೋಗಿಗಳ ಮೂಲಕ ಆಗಾಗ ಮೇಲ್ವಿಚಾರಣೆ ಮಾಡುವ ಮೂಲಕ ಸಂಸ್ಥೆ ನಡೆಸಲು ಸಾಧ್ಯ ಇರುವವರು; ಗಂಡ ಹಾಗೂ ಹೆಂಡತಿ ಇಬ್ಬರಲ್ಲಿ ಒಬ್ಬರು ದೃಢವಾದ ಉದ್ಯೋಗದಲ್ಲಿದ್ದರೆ ಇನ್ನೊಬ್ಬರು ರಾಜಕೀಯಕ್ಕೆ ಇಳಿಯಲು ಸಾಧ್ಯವಿದೆ.  ಅದೇ ರೀತಿ ಬಾಡಿಗೆಗೆ ನೀಡುವ ಕಟ್ಟಡ, ಮನೆ, ಅಪಾರ್ಟ್ ಮೆಂಟ್, ವಾಣಿಜ್ಯ ಸಮುಚ್ಛಯ ಇರುವವರಿಗೆ ನಿಗದಿತ ಆದಾಯ ಮೂಲ ಇರುವ ಕಾರಣ ಮತ್ತು ಅವರಿಗೆ ಜೀವನೋಪಾಯಕ್ಕೆ ಬೇರೆ ಕೆಲಸ ಬೇಕಾಗಿಲ್ಲದೆ ಇರುವುದರಿಂದ ರಾಜಕೀಯ ಪಕ್ಷಗಳಲ್ಲಿ ತೊಡಗಿಸಿಕೊಂಡು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ.  ಉದ್ಯೋಗ ನಿವೃತ್ತಿ ಪಡೆದಿರುವವರಲ್ಲಿ ಉಳಿತಾಯದ ಹಣ ಇರುವುದರಿಂದ ಹಾಗೂ ನಿವೃತ್ತಿವೇತನ ಬರುವುದರಿಂದ ಅಂಥವರೂ ರಾಜಕೀಯ ಪಕ್ಷಗಳಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಳ್ಳಲು ಸಾಧ್ಯವಿದೆ.

ರಾಹುಲ್ ಗಾಂಧಿ ಭವಿಷ್ಯದ ನಾಯಕರಾಬಗಲ್ಲರೇ?

– ಆನಂದ ಪ್ರಸಾದ್

ಕಾಂಗ್ರೆಸ್ ಪಕ್ಷವು ಭವಿಷ್ಯದ ನಾಯಕನಿಗಾಗಿ ರಾಹುಲ್ ಗಾಂಧಿಯೆಡೆಗೆ ಕಳೆದ ಕೆಲವು ವರ್ಷಗಳಿಂದ ನೋಡುತ್ತಿದೆ.  ಆದರೆ ರಾಹುಲ್ ಗಾಂಧಿ ನಾಯಕನಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿರುವುದು ಕಂಡುಬರುತ್ತಿಲ್ಲ.  42 ವರ್ಷ ವಯಸ್ಸಿನ ರಾಹುಲರಲ್ಲಿ ನಾಯಕತ್ವದ ಲಕ್ಷಣಗಳು ಇದ್ದಲ್ಲಿ ಈಗಾಗಲೇ ಕಂಡು ಬರಬೇಕಾಗಿತ್ತು.  ಕೇವಲ ವಂಶ ಪಾರಂಪರ್ಯದಿಂದ ನಾಯಕತ್ವದ ಲಕ್ಷಣಗಳು ಬರಲಾರವು.  ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸೊತ್ತಿಗೆಯಂತೆ ವಂಶ ಪಾರಂಪರ್ಯವಾಗಿ ನಾಯಕತ್ವದ ಪಟ್ಟ ಸಿಗಲಾರದು.  ಅದು ಸಿಕ್ಕುವುದಿದ್ದರೆ ಈಗಾಗಲೇ ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಬಲದಿಂದಲೇ ಸರಕಾರ ರಚಿಸುವ ಮಟ್ಟಕ್ಕೆ ಬರಬೇಕಾಗಿತ್ತು.

ಕಾಂಗ್ರೆಸ್ ಪಕ್ಷದಲ್ಲಿ ಒಂದು ಕುಟುಂಬಕ್ಕೆ ನಿಷ್ಠೆ ತೋರುವ ಪರಂಪರೆ ಸ್ವಾತಂತ್ರ್ಯಾನಂತರದ ಕಾಲದಲ್ಲಿ ನಡೆದುಕೊಂಡು ಬಂದಿದೆ.  ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದವರು ನೆಹರೂ ಕುಟುಂಬದ ಸದಸ್ಯರೇ ಆಗಿದ್ದಾರೆ.  ಇಂದಿರಾ ಕಾಂಗ್ರೆಸ್ ರಚನೆಯಾದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಹಾಗೂ ಅವರ ಮಕ್ಕಳ ಮಾತೇ ಅಂತಿಮ ಎಂಬ ಪರಂಪರೆ ಇದೆ.  ಇಂಥ ಅನುಕೂಲ ಸನ್ನಿವೇಶ ಇದ್ದರೂ ಕಾಂಗ್ರೆಸ್ ಪಕ್ಷವು ದೇಶವನ್ನು ಸಮರ್ಪಕವಾಗಿ ಕಟ್ಟುವಲ್ಲಿ ಸೋತಿದೆ.  ದೇಶದ ಪ್ರಧಾನ ಸಮಸ್ಯೆಗಳ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡರೆ ಅದನ್ನು ವಿರೋಧಿಸುವ ಧ್ವನಿ ಕಾಂಗ್ರೆಸ್ ಪಕ್ಷದಲ್ಲಿ ಏಳದಂಥ ವಾತಾವರಣ ಇದ್ದಾಗ್ಯೂ ಇಂದಿರಾ ಗಾಂಧಿಯಾಗಲೀ, ರಾಜೀವ ಗಾಂಧಿಯಾಗಲೀ, ಸೋನಿಯಾ ಗಾಂಧಿಯಾಗಲೀ ದಿಟ್ಟ ನಿಲುವನ್ನು ತೆಗೆದುಕೊಳ್ಳಲಿಲ್ಲ.  ಭ್ರಷ್ಟಾಚಾರ ದೇಶದ ಪ್ರಧಾನ ಸಮಸ್ಯೆಯಾಗಿದ್ದರೂ ಅದನ್ನು ಹಗುರವಾಗಿ ಕಂಡವರು ಇಂದಿರಾ ಗಾಂಧಿ.  ಭ್ರಷ್ಟಾಚಾರವನ್ನು ಗಂಭೀರವಾಗಿ ತೆಗೆದುಕೊಂಡು ಅದರ ನಿಯಂತ್ರಣಕ್ಕೆ ಲೋಕಪಾಲದಂಥ ಬಲಿಷ್ಠ ವ್ಯವಸ್ಥೆಯನ್ನು ರೂಪಿಸುವುದು ಇಂದಿರಾ ಗಾಂಧಿಗಾಗಲೀ, ರಾಜೀವ ಗಾಂಧಿಗಾಗಲೀ ಅಸಂಭಾವ್ಯವೇನೂ ಆಗಿರಲಿಲ್ಲ.  ದೇಶದ ಬಗ್ಗೆ ಸಮರ್ಪಕ ಮುನ್ನೋಟ ಅವರಲ್ಲಿ ಇರಲಿಲ್ಲ.  ಇದ್ದಿದ್ದರೆ ಇದನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕಾಗಿತ್ತು.  ರಾಜೀವ ಗಾಂಧಿಯವರಂತೂ ಇಂದಿರಾ ಹತ್ಯೆಯ ನಂತರ ನಡೆದ ಚುನಾವಣೆಗಳಲ್ಲಿ 2/3 ಬಹುಮತ ಪಡೆದಿದ್ದು ಲೋಕಪಾಲ ವ್ಯವಸ್ಥೆಯನ್ನು ಸಂಸತ್ತಿನಲ್ಲಿ ಪಾಸು ಮಾಡಿಸಿಕೊಳ್ಳುವ ಸುವರ್ಣಾವಕಾಶ ಇತ್ತು.  ಓರ್ವ ಉತ್ತಮ ನಾಯಕ ಇಂಥ ಬಹುಮತ ಇದ್ದಿದ್ದರೆ ಮೊದಲು ಮಾಡಬೇಕಾದ ಕೆಲಸ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಲಿಷ್ಠ ಲೋಕಪಾಲ ವ್ಯವಸ್ಥೆ ರೂಪಿಸುವುದು.  ಹೀಗಾಗಿ ರಾಜೀವರು ಓರ್ವ ಮುತ್ಸದ್ಧಿ ನಾಯಕರಾಗಿರಲಿಲ್ಲ ಎಂಬುದು ಕಂಡುಬರುತ್ತದೆ.  ಶ್ರೀಲಂಕಾದ ಆಂತರಿಕ ಸಮಸ್ಯೆಯಲ್ಲಿ ಮೂಗು ತೋರಿಸಿದ್ದು ರಾಜೀವ ಗಾಂಧಿಯವರು ಮಾಡಿದ ಇನ್ನೊಂದು ದೊಡ್ಡ ತಪ್ಪು.  ಈ ತಪ್ಪು ಅಂತಿಮವಾಗಿ ಅವರ ಪ್ರಾಣವನ್ನೇ ಬಲಿ ತೆಗೆದುಕೊಂಡಿತು.  ಇಂಥದೇ ತಪ್ಪನ್ನು ಇಂದಿರಾಗಾಂಧಿಯವರು ಭಿಂದ್ರನ್ವಾಲೆಯಂಥವರನ್ನು ಬೆಳೆಸುವಲ್ಲಿಯೂ ಮಾಡಿ ಅದು ಕೂಡ ಅವರ ಬಲಿ ಪಡೆಯುವಲ್ಲಿಗೆ ಮುಟ್ಟಿತು.

ಓರ್ವ ಮುತ್ಸದ್ಧಿ ನಾಯಕನು ತಾನೇ ಪರಿಸ್ಥಿತಿಯ ಅವಲೋಕನ ಮಾಡಿ ಸ್ವತಂತ್ರವಾಗಿ ಚಿಂತಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವವನಾಗಿರುತ್ತಾನೆ.  ಸೋನಿಯಾ ಗಾಂಧಿಯವರ ವಿಚಾರದಲ್ಲಿ ಇದು ಕಂಡು ಬರುತ್ತಿಲ್ಲ.  ತಮ್ಮ ರಾಜಕೀಯ ಕಾರ್ಯದರ್ಶಿಗಳು ಕೊಡುವ ಸಲಹೆಗಳ ಮೂಲಕ ತೀರ್ಮಾನಗಳನ್ನು ತೆಗೆದುಕೊಳ್ಳುವವರು ಓರ್ವ ಮುತ್ಸದ್ಧಿ ನಾಯಕನಾಗಲು ಸಾಧ್ಯವೇ ಇಲ್ಲ.  ಇದುವೇ ಕಾಂಗ್ರೆಸ್ ಪಕ್ಷದ ಇಂದಿನ ಹಾಗೂ ಹಿಂದಿನ ದೊಡ್ಡ ಸಮಸ್ಯೆಯಾಗಿದೆ.  ಕಾಂಗ್ರೆಸ್ ಪಕ್ಷವು ತನ್ನ ಹಿಂದಿನ ಜನಪ್ರಿಯತೆಯನ್ನು ಕಳೆದುಕೊಂಡಿದೆ.  ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರ ನಿರ್ಧಾರಗಳೇ ಕಾರಣವಾಗಿವೆ.  ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲಾಗದವರು ಪಕ್ಷವನ್ನು ಮುನ್ನಡೆಸುತ್ತಿರುವುದೇ ಇದಕ್ಕೆ ಕಾರಣ.  ರಾಹುಲಗಾಂಧಿಯವರ ನಡೆನುಡಿಗಳನ್ನು ನೋಡುವಾಗ ಅವರಿಗೆ ದೇಶವನ್ನು ಮುನ್ನಡೆಸುವ ಆಸಕ್ತಿಯಾಗಲೀ, ಮುನ್ನೋಟವಾಗಲೀ  ಇರುವಂತೆ ಕಾಣುವುದಿಲ್ಲ.  ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವೂ ಅವರಲ್ಲಿ ಇರುವಂತೆ ಕಾಣುವುದಿಲ್ಲ.  ಅಂಥ ಸಾಮರ್ಥ್ಯ ಇದ್ದಿದ್ದರೆ ಅದು 42 ವರ್ಷಗಳ ವಯಸ್ಸನ್ನು ತಲುಪಿರುವ ಅವರಲ್ಲಿ ಈಗಾಗಲೇ ಪ್ರಕಟವಾಗಬೇಕಾಗಿತ್ತು.  ರಾಜಕುಮಾರನಂತೆ ಇಂದು ಜನರೊಡನೆ ಬೆರೆಯದೆ, ಜನರ ಸಮಸ್ಯೆಗಳಿಗೆ ಕಿವಿಗೊಡದೆ, ಅವರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬಂದು ಒಮ್ಮೆ ಮುಖ ತೋರಿಸಿ ಹೋಗುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ.  ಸಾಧ್ಯವಿದ್ದಿದ್ದರೆ ಕಾಂಗ್ರೆಸ್ ಬಹುಮತ ಪಡೆಯಬೇಕಾಗಿತ್ತು.

ದೇಶದ ಮುನ್ನಡೆಯ ಬಗ್ಗೆಯಾಗಲೀ, ದೇಶದ ಪ್ರಧಾನ ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯಾಗಲೀ ರಾಹುಲ ಗಾಂಧಿ ಎಲ್ಲೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಂಡುಬರುವುದಿಲ್ಲ.  ದೇಶವನ್ನು ಮುನ್ನಡೆಸುವ ಬಗ್ಗೆ ತನ್ನ ಕನಸುಗಳೇನು ಎಂಬ ಬಗ್ಗೆಯೂ ರಾಹುಲರು ಎಲ್ಲಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಂಡುಬರುವುದಿಲ್ಲ.  ಇಂದಿನ ಇಂಟರ್ನೆಟ್ ಯುಗದಲ್ಲಿ ದೇಶದ ಜನರ ಜೊತೆ ನೇರವಾಗಿ ಸಂಪರ್ಕ ಏರ್ಪಡಿಸಿಕೊಳ್ಳಲು, ಜನರ ಅಭಿಪ್ರಾಯ, ಅನಿಸಿಕೆ ಅರಿತುಕೊಳ್ಳಲು, ಅವರ ಸಲಹೆಸೂಚನೆ ಪಡೆದುಕೊಳ್ಳಲು ಒಂದು ವೆಬ್ಸೈಟ್ ಆಗಲೀ, ಟ್ವಿಟ್ಟರ್, ಫೇಸ್ಬುಕ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿಯಾಗಲೀ ರಾಹುಲ್ ಉಪಸ್ಥಿತಿ ಕಂಡುಬರುವುದಿಲ್ಲ.  ಇದನ್ನೆಲ್ಲಾ ನೋಡುವಾಗ ರಾಹುಲ್ ಗಾಂಧಿಗೆ ನಾಯಕನಾಗುವ, ದೇಶವನ್ನು ಮುನ್ನಡೆಸುವ ಇಚ್ಛೆ ಇಲ್ಲ. ಯಾರದೋ ಒತ್ತಾಯಕ್ಕೆ ಅವರು ರಾಜಕೀಯಕ್ಕೆ ಬಂದಂತೆ ಕಾಣುತ್ತದೆ.  ಹೀಗಾಗಿ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದೆ ಒತ್ತಾಯಕ್ಕೆ ರಾಜಕೀಯಕ್ಕೆ ಬರುವ ಬದಲು ಸುಮ್ಮನೆ ತನ್ನ ಪಾಡಿಗೆ ಇದ್ದು ಅರ್ಹರು ಯಾರಾದರೂ ಇದ್ದರೆ ಅವರನ್ನು ಪಕ್ಷವನ್ನು ಮುನ್ನಡೆಸಲು ಬಿಡುವುದು ಒಳ್ಳೆಯದು.  ಇದರಿಂದ ದೇಶಕ್ಕೆ ಮುಂದೆ ಒಳ್ಳೆಯದಾಗಬಹುದು.  ವಂಶ ಪಾರಂಪರ್ಯ ಆಡಳಿತ ಕಾಂಗ್ರೆಸ್ ಪಕ್ಷದಿಂದ ತೊಲಗಬಹುದು ಅಥವಾ ಕಾಂಗ್ರೆಸ್ ಪಕ್ಷವೇ ತುಂಡು ತುಂಡಾಗಿ ಬೇರೆ ಪ್ರಜಾಸತ್ತಾತ್ಮಕ ಪಕ್ಷಗಳು ಉದಯವಾಗಿ ದೇಶವು ತನ್ನ ಸಮಸ್ಯೆಗಳಿಂದ ಬಿಡಿಸಿಕೊಳ್ಳುವ ನಾಯಕತ್ವ ನೀಡುವ ಜನ ಬರಬಹುದು.  ಹೀಗಾಗಿ ದೇಶವನ್ನು ಮುತ್ಸದ್ಧಿತನದಿಂದ ಮುನ್ನಡೆಸುವ ಆಸಕ್ತಿ, ಅಭಿರುಚಿ, ವಿಶಾಲ ಮನೋಭಾವ, ಕನಸುಗಳು ಇಲ್ಲದಿದ್ದರೆ ರಾಹುಲಗಾಂಧಿಯವರು ರಾಜಕೀಯದಿಂದ ಹೊರಗೆ ನಿಂತರೆ ದೇಶಕ್ಕೆ ಒಳ್ಳೆಯದು.  ಒಂದು ವೇಳೆ ದೇಶವನ್ನು ಮುನ್ನಡೆಸುವ ನಿಜವಾದ ಆಸಕ್ತಿ, ಕನಸು, ವಿಶಾಲ ಮನೋಭಾವ ಇದ್ದರೆ ಅದನ್ನು ತೋರಿಸಲು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿ ದೇಶಕ್ಕೆ ಒಳಿತನ್ನು ಉಂಟುಮಾಡಬಲ್ಲ ಲೋಕಪಾಲ ಮಸೂದೆ, ಕಪ್ಪು ಹಣ ವಾಪಸಾತಿ, ಕಪ್ಪು ಹಣ ನಿಯಂತ್ರಣ, ರಾಜಕೀಯ ಹಸ್ತಕ್ಷೇಪವಿಲ್ಲದ ಸ್ವತಂತ್ರ ತನಿಖಾ ಸಂಸ್ಥೆ ರಚನೆ, ನ್ಯಾಯಾಂಗ ಹಾಗೂ ಚುನಾವಣಾ ಸುಧಾರಣೆಗಳ ಬಗ್ಗೆ ತನ್ನ ದೃಢ ನಿಲುವನ್ನು ತೋರಿಸುವ ಬದ್ಧತೆ ತೋರಿಸಬೇಕಾದ ಅಗತ್ಯ ಇದೆ.

ಇಂಧನ ಸ್ವಾವಲಂಬನೆಗೆ ಹೊಂಗೆ ಮರ

– ಆನಂದ ಪ್ರಸಾದ್

ಹೊಂಗೆ ಮರ (Pongamia pinnata) ಭಾರತಾದ್ಯಂತ ಬೆಳೆಯಬಲ್ಲ ಒಂದು ಮರವಾಗಿದ್ದು ಇಂಧನ ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಅರಣ್ಯೀಕರಣ, ಸಾವಯವ ಕೃಷಿಗೆ ಪೂರಕವಾದ ಮರವಾಗಿ ಕಂಡುಬರುತ್ತದೆ. ಹೊಂಗೆ ಮರವು ನೆಟ್ಟ ನಾಲ್ಕೈದು ವರ್ಷಗಳಲ್ಲಿ ಇಳುವರಿಯನ್ನು ಕೊಡಲು ಆರಂಭಿಸುತ್ತದೆ.  ಹತ್ತು ವರ್ಷಗಳ ನಂತರ ಒಂದು ಮರವು 10ರಿಂದ 100 ಕೆಜಿ ಬೀಜವನ್ನು ಕೊಡಬಲ್ಲದು. ಈ ಮರದ ಬೇರುಗಳು 10 ಮೀಟರ್ ಅಳಕ್ಕೂ ಇಳಿದು ನೀರನ್ನು ಪಡೆಯಬಲ್ಲುದಾದುದರಿಂದ ಒಣಪ್ರದೇಶಗಳಲ್ಲೂ ಬೆಳೆಯಬಲ್ಲದು. ಉತ್ತಮವಾಗಿ ಬೆಳವಣಿಗೆಯಾದ  ಹತ್ತು ಹೊಂಗೆ ಮರಗಳಿಂದ ನೆಟ್ಟ ಹತ್ತು ವರ್ಷದ ನಂತರ ವಾರ್ಷಿಕ 400 ಲೀಟರ್ ಎಣ್ಣೆ, 1200 ಕೆಜಿ ಹಿಂಡಿ, 2500 ಕೆಜಿ ಸಾವಯವ ಬಯೋಮಾಸ್ ಗೊಬ್ಬರ ದೊರಕಬಲ್ಲದು. ಒಂದು ಗ್ರಾಮದಲ್ಲಿ ಕೃಷಿಗೆ ಬಳಸದ ಒಣ ಪ್ರದೇಶ/ಬೀಳು ಭೂಮಿಯಲ್ಲಿ ಹೊಂಗೆ ಮರಗಳನ್ನು ಬೆಳೆಸಿ ಅದರಿಂದ ಲಭ್ಯವಾಗುವ ಬೀಜಗಳಿಂದ ಎಣ್ಣೆಯನ್ನು ಸ್ಥಳೀಯವಾಗಿಯೇ ತೆಗೆದು ಡೀಸೆಲ್ ಜನರೇಟರ್ ಬಳಸಿ ವಿದ್ಯುತ್ ತಯಾರಿಸಿ ಗ್ರಾಮೀಣ ನೀರಾವರಿ, ಮನೆ ಉಪಯೋಗಕ್ಕೆ ವಿದ್ಯುತ್ ಪಡೆಯಲು ಸಾಧ್ಯವಿದೆ ಅಥವಾ ಗ್ರಾಮೀಣರು ಹೊಂದಿರುವ ಡೀಸೆಲ್ ವಾಹನಗಳಿಗೆ ಇಂಧನವಾಗಿ ಬಳಸಬಹುದು, ಟ್ರಾಕ್ಟರ್ ಇತ್ಯಾದಿಗಳಲ್ಲೂ ಇಂಧನವಾಗಿ ಬಳಸಿ ಸ್ವಾವಲಂಬನೆಯನ್ನು ಸಾಧಿಸಬಹುದು.

ಹೊಂಗೆ ಮರವು ಬರನಿರೋಧಕವಾಗಿದ್ದು ವ್ಯವಸಾಯಕ್ಕೆ ಬಳಸದ ಒಣ ಬೀಳು ಭೂಮಿಯಲ್ಲೂ ಬೆಳೆಯಬಲ್ಲುದಾದುದರಿಂದ ಇದನ್ನು ಅಂಥ ಪ್ರದೇಶಗಳಲ್ಲಿ ಬೆಳೆಸಿ ರೈತರು ತಮ್ಮ ಇಂಧನ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಇದು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿ ಬೆಳೆಯುವುದರಿಂದ ಇಂಗಾಲದ ಡೈ ಆಕ್ಸೈಡ್ ಹೆಚ್ಚಳದಿಂದ ಉಂಟಾಗುವ ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಸಹಾಯಕ. ಹೊಂಗೆಯ ಎಣ್ಣೆಯನ್ನೇ ಡೀಸೆಲ್ ವಾಹನಗಳಲ್ಲಿ, ಪಂಪುಗಳಲ್ಲಿ, ವಿದ್ಯುಜ್ಜನಕ, ಟ್ರ್ಯಾಕ್ಟರ್‌ಗಳಲ್ಲಿ ಬಳಸುವುದರಿಂದ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಅನ್ನು ಪಳೆಯುಳಿಕೆ ಇಂಧನ ಉಪಯೋಗಿಸಿದಾಗ ಆಗುವಂತೆ ಹೆಚ್ಚುವರಿಯಾಗಿ ಸೇರಿಸುವುದನ್ನು ನಿವಾರಿಸಿದಂತೆ ಆಗುತ್ತದೆ. ಕರ್ನಾಟಕದಲ್ಲಿ ವ್ಯವಸಾಯಕ್ಕೆ ಬಳಸದ ಲಕ್ಷಾಂತರ ಎಕರೆಗಳ ಪಾಳು ಭೂಮಿ ಇದೆ. ಇಲ್ಲೆಲ್ಲಾ ಹೊಂಗೆಯನ್ನು ಬೆಳೆಸಿ ಕೃಷಿಕರ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ. ಹೊಂಗೆ ಮರವು ಲೆಗ್ಯೂಮ್ ಜಾತಿಗೆ ಸೇರಿದ ಮರವಾದುದರಿಂದ ಇದರ ಬೇರುಗಳಲ್ಲಿ ಸಾರಜನಕ ಸ್ಥಿರೀಕರಿಸುವ ಗಂಟುಗಳು ಇರುವ ಕಾರಣ ನೆಲದ ಫಲವತ್ತತೆಯನ್ನು ಹೆಚ್ಚಿಸಲು ಸಹಾಯಕ. ಇದರ ಬೇರುಗಳು ಇತರ ಬೆಳೆಗಳೊಂದಿಗೆ ಸ್ಪರ್ಧಿಸುವುದಿಲ್ಲವಾದ ಕಾರಣ ಇದನ್ನು ಹೊಲಗಳ ಬದಿಯಲ್ಲಿಯೂ ಬೆಳೆಸಬಹುದು. ಈ ಮರವು 100 ವರ್ಷಗಳವರೆಗೆ ಬದುಕುವುದರಿಂದ ದೀರ್ಘ ಕಾಲ ಫಸಲನ್ನು ಪಡೆಯಬಹುದು.  ಕೃಷಿಕರಿಗೆ ಇಂಧನ ಸ್ವಾವಲಂಬನೆಗೆ ಸಹಾಯಕವಾಗಬಲ್ಲ ಹೊಂಗೆ ಮರವನ್ನು ರಾಜ್ಯದ ಎಲ್ಲೆಡೆ ಬೆಳೆಸುವ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಹೊಂಗೆ ಮರದ ಹೆಚ್ಚು ಇಳುವರಿ ಕೊಡುವ ಬೀಜ ಹಾಗೂ ಸಸಿಗಳನ್ನು ಒದಗಿಸಲು ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ವಿಶ್ವ ವಿದ್ಯಾನಿಲಯಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಮುಖ್ಯ ಪಾತ್ರ ವಹಿಸಬಹುದಾಗಿದೆ.

ದಾಂಡೇಲಿಯ ಫೆರ್ರೋಅಲ್ಲೋಯ್ ಕಾರ್ಖಾನೆಯ ಒಂದು ಮೆಗಾವ್ಯಾಟ್ ಸಾಮರ್ಥ್ಯದ ಐದು ಡೀಸೆಲ್ ವಿದ್ದ್ಯುಜ್ಜನಕಗಳನ್ನು ಹೊಂಗೆ ಎಣ್ಣೆಯಿಂದಲೇ ನಡೆಯುವಂತೆ ಬದಲಾಯಿಸಿ 2001ರಲ್ಲಿ 7,60,000 ಕಿಲೋವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗಿದೆ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ ಅವರ ಹೊಂಗೆ ಎಣ್ಣೆಯನ್ನು ಇಂಧನವಾಗಿ ಬಳಸುವ ಕುರಿತಾದ ಪ್ರಯೋಗಗಳಿಂದ ಪ್ರೇರಿತವಾಗಿತ್ತು. ಇವರೇ ಕಗ್ಗನಹಳ್ಳಿಯಲ್ಲಿ 63 ಕೆ.ವಿ.ಎ. ಸಾಮರ್ಥ್ಯದ ಎರಡು ವಿದ್ದ್ಯುಜ್ಜನಕಗಳನ್ನು ಸ್ಥಳೀಯವಾಗಿ ಬೆಳೆದ ಹೊಂಗೆ ಬೀಜದ ಎಣ್ಣೆಯಿಂದಲೇ ನಡೆಸಿ 440 ವೋಲ್ಟಿನ ಪ್ರತ್ಯೇಕ ಗ್ರಿಡ್ದನ್ನು ಸ್ಥಾಪಿಸಿ 40 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 20 ಬೋರುವೆಲ್ಲುಗಳನ್ನು ಕೊರೆಯಿಸಿ ಇದೇ ವಿದ್ಯುತ್ತಿನಿಂದ ನೀರಾವರಿ ವ್ಯವಸ್ಥೆಯನ್ನು ಮಾಡಿ ತೋರಿಸಿದ್ದಾರೆ. ಇಂಥ ಪ್ರಯೋಗಗಳನ್ನು ರಾಜ್ಯದ ಎಲ್ಲೆಡೆ ಮಾಡಬೇಕಾದ ಅಗತ್ಯ ಇದೆ. ಇದರಿಂದ ವಿದ್ಯುತ್ತಿಗೆ ಕೃಷಿ ವಲಯದಿಂದ ಇರುವ ಬೇಡಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯ.