Category Archives: ಇರ್ಷಾದ್

ಹೌದು, ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ


-ಇರ್ಷಾದ್ ಉಪ್ಪಿನಂಗಡಿ


 

ಜನನುಡಿ ಸಾಹಿತ್ಯ ಸಮಾವೇಶದಲ್ಲಿ ಮುಸ್ಲಿಮ್-ದಲಿತ-ಹಿಂದುಳಿದ ವರ್ಗಗಳ ಐಕ್ಯತೆ: ಸವಾಲುಗಳ ಸಾಧ್ಯತೆ ವಿಚಾರಗೋಷ್ಠಿಯಲ್ಲಿrahamath-tarikere ಹಿರಿಯ ಚಿಂತಕ ಪ್ರೊ.ರೆಹಮತ್ ತರೀಕೆರೆ ಮಾತನಾಡುತ್ತಾ ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಅಗತ್ಯವಿದೆ ಎಂದಿದ್ದಾರೆ. ಖಂಡಿತವಾಗಿಯೂ ದಾರಿತಪ್ಪುತ್ತಿರುವ ಮುಸ್ಲಿಮ್ ಸಮುದಾಯಕ್ಕೆ ಸರಿದಾರಿತೋರಿಸಲು ಒಬ್ಬ ಅಂಬೇಡ್ಕರ್ ಮುಸ್ಲಿಮ್ ಸಮುದಾಯದಿಂದಲೇ ಹುಟ್ಟಿಬರಬೇಕಿದೆ. ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಯಾಕೆ ಬೇಕು ಎಂಬ ವಿಚಾರ ಚರ್ಚೆಗೊಳಪಡಿಸುವುದರ ಮೊದಲು ಮುಸ್ಲಿಮ್ ಸಮುದಾಯದ ಕುರಿತಾಗಿ ಡಾ. ಅಂಬೇಡ್ಕರ್ ಅವರಿದ್ದ ದೃಷ್ಟಿಕೋನ ಏನಾಗಿತ್ತು ಎಂಬುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಅದನ್ನು ತಣಿಸಿದ್ದು ಆನಂದ್ ತೇಲ್ತುಂಬ್ಡೆ ಅವರ ಅಂಬೇಡ್ಕರ್ ಮತ್ತು ಮುಸ್ಲಿಮರು ಪುಸ್ತಕ. (ಕನ್ನಡಕ್ಕೆ: ಬಿ ಗಂಗಾಧರ್ ಮೂರ್ತಿ) ಮುಸ್ಲಿಮರ ವಿರುದ್ಧ ಭಾರತೀಯ ಸಮಾಜವನ್ನು ಎತ್ತಿಕಟ್ಟುವ ಸಂಘಪರಿವಾರದ ಹುನ್ನಾರವನ್ನು ಡಾ.ಬಿ ಆರ್ ಅಂಬೇಡ್ಕರ್ ವಿರೋಧಿಸುವುದರ ಜೊತೆಗೆ ಮುಸ್ಲಿಮ್ ಸಮುದಾಯದಲ್ಲಿರುವ ಅತಿಧಾರ್ಮಿಕತೆ ಹಾಗೂ ಮಹಿಳಾ ಶೋಷಣೆಯನ್ನು ಖಂಡಿಸಿದ್ದರು. ಭಾರತೀಯ ಮುಸ್ಲಿಮ್ ಸಮುದಾಯದ ಸಾಮಾಜಿಕ ಜೀವನದ ಜೊತೆಗೆ ರಾಜಕೀಯ ಜೀವನವೂ ಚಲನಶೀಲತೆಯನ್ನು ಕಳೆದುಕೊಂಡಿದೆ. ಮುಸ್ಲಿಮ್ ಸಮುದಾಯದ ಜನರ ಪ್ರಧಾನ ಆಸಕ್ತಿ ಧರ್ಮವೇ ಹೊರತು ರಾಜಕಾರಣವಲ್ಲ. ಮುಸ್ಲಿಮ್ ಸಮಾಜದಲ್ಲಿರುವ ಪಿಡುಗುಗಳನ್ನು ತೊಡೆದು ಹಾಕಲು ಯಾವ ಪ್ರಮಾಣದಲ್ಲಿ ಸುಧಾರಣಾ ಚಳುವಳಿಗಳು ನಡೆಯಬೇಕಿತ್ತೂ ಆ ಪ್ರಮಾಣದಲ್ಲಿ ಆಗಿಲ್ಲ ಎಂಬುವುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು.

ಇನ್ನು ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಯಾಕೆ ಬೇಕು ಎಂಬ ವಿಚಾರಕ್ಕೆ ಬರೋಣ. 1984 ರಲ್ಲಿ ತನ್ನ ಪತಿಯಿಂದ ತಲಾಕ್Young_Ambedkar ನೀಡಲ್ಪಟ್ಟ ಒಂಟಿ ಮಹಿಳೆಯೊಬ್ಬಳು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಸಂದರ್ಭದಲ್ಲಿ ಭಾರತೀಯ ಮುಸ್ಲಿಮ್ ಸಮಾಜದ ಧಾರ್ಮಿಕ ಸಂಘಟನೆಗಳು ಶರೀಯತ್ ಮೇಲೆ ದಾಳಿ ನಡೆಯುತ್ತಿದೆ ಎಂದು ಬೊಬ್ಬಿಟ್ಟು ಕೋಲಾಹಲ ಎಬ್ಬಿಸಿ ಕೊನೆಗೂ ಗೆದ್ದು ಎದೆಯುಬ್ಬಿಸಿದಾಗ ಧರ್ಮ, ಶಾಸ್ತ್ರೀಯ ಗ್ರಂಥದ ನ್ಯಾಯ ಕಟ್ಟಲೆಗಿಂತ ಮಹಿಳೆಯೊಬ್ಬಳ ಬದುಕು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ಅಬ್ಬರಿಸಿದ ಸಮಾಜಕ್ಕೆ ತಿಳಿಹೇಳಲೊಬ್ಬರು ಅಂಬೇಡ್ಕರ್ ಬೇಕಿತ್ತು. ಒಂದೇ ಉಸಿರಿಗೆ ಮೂರು ತಲಾಕ್ ಹೇಳುವ ಪದ್ದತಿ ಸ್ವತಃ ಇಸ್ಲಾಮ್ ಧರ್ಮದಲ್ಲಿ ಇಲ್ಲದಿದ್ದರೂ ಕೇಂದ್ರ ಸರ್ಕಾರ ತ್ರಿತಲಾಕ್ ನಿಷೇಧದ ಮಾತೆತ್ತಿದಾಗ ಧಾರ್ಮಿಕ ಹಕ್ಕಿನ ಮೇಲಿನ ದಾಳಿ ಎಂದು ಸಾಲು ಸಾಲು ಸಮಾವೇಶ ನಡೆಯುತ್ತದೆ. ಮುಸ್ಲಿಮ್ ಸಮಾಜದ ಮುಖ್ಯವಾಹಿನಿಯಿಂದ ಮಹಿಳೆಯರನ್ನು ಸಂಪೂರ್ಣವಾಗಿ ದೂರವಿಡಲಾಗಿದೆ. ಧಾರ್ಮಿಕ ಸ್ಥಾನಮಾನದಿಂದ ಸಂಪೂರ್ಣ ವಂಚಿತರಾಗಿರುವುದು ಒಂದು ಕಡೆಯಾದರೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಮುಸ್ಲಿಮ್ ಮಹಿಳೆಯರನ್ನು ವೇದಿಕೆಗಳಲ್ಲಿ ಕುಳಿತುಕೊಳ್ಳಲು ಅವಕಾಶ ನಿಡುವುದು ಸರಿಯೋ ತಪ್ಪೋ ಎಂಬುವುದು ಸಮುದಾಯದಲ್ಲಿ ಬಹುಚರ್ಚಿತ ವಿಷಯಗಳಲ್ಲೊಂದು. ಹೆಣ್ಣುಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು ಎಂಬ ಚಿಂತನೆ ಮುಸ್ಲಿಮ್ ಸಮುದಾಯಕ್ಕೆ ಬಂದಿದ್ದು ಇತ್ತೀಚೆಗೆ. ಆದರೆ ವಿದ್ಯಾಭ್ಯಾಸ ಪಡೆದ ಹೆಣ್ಣುಮಕ್ಕಳು ಸಮಾಜದಲ್ಲಿ ಸೂಕ್ತ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ  ಮುಸ್ಲಿಮ್ ಮಹಿಳಾ ಸಮಾತನೆಯ ಬಗ್ಗೆ ಅರಿವು ಮೂಡಿಸಲೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ.

ಮುಸ್ಲಿಮ್ ಸಮಾಜದ ಆರ್ಥಿಕ ಸಾಮಾಜಿಕ ಶೋಚನೀಯ ಪರಿಸ್ಥಿತಿಯ ಕುರಿತಾಗಿ ಜಸ್ಟೀಸ್ ಸಾಚಾರ್ ವಿಸ್ಕೃತ ವರದಿಯೊಂದನ್ನು ಸಲ್ಲಿಸಿದ್ದಾರೆ. ಈ ವರದಿಯನ್ನು ಜಾರಿಯಾದಲ್ಲಿ ಮುಸ್ಲಿಮ್ ಸಮಾಜದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಂದಿಷ್ಟು ಬದಲಾವಣೆಗಳು ಖಂಡಿತಾ ಸಾಧ್ಯ. ಆದರೆ ಮುಸ್ಲಿಮ್ ಸಮುದಾಯದ ಬಹುಸಂಖ್ಯಾತ ವರ್ಗ ಇದರ ಕುರಿತಾಗಿ ತಲೆಕೆಡಿಸಿಕೊಂಡೇ ಇಲ್ಲ. ಅದೇ ಸಂದರ್ಭದಲ್ಲಿ ತ್ರಿ ತಲಾಕ್ ಹಾಗೂ  ಶರೀಯತ್ ಸಂರಕ್ಷಣೆಯ ವಿಚಾರ ಮುಸ್ಲಿಮ್ ಸಮಾಜದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಾಲು ಸಾಲು ಪ್ರತಿಭಟನೆಗಳೂ ನಡೆಯುತ್ತವೆ.

ಯುವಸಮುದಾಯದಲ್ಲಿ ಅತಿಧಾರ್ಮಿಕತೆ ಹೆಚ್ಚಾಗುತ್ತಿದೆ. ಕ್ರಿಕೆಟಿಗ ಮೊಹಮ್ಮದ್ ಶಫಿ  ಬುರ್ಖಾ ಧರಿಸದ ತನ್ನ ಪತ್ನಿಯೊಂದಿಗಿದ್ದ ಪೋಟೋ ಸಾಮಾಜಿಕ burkaಜಾಲತಾಣಗಳಲ್ಲಿ ಬಹುಚರ್ಚಿತ ವಿಷಯವಾಗುತ್ತದೆ. ಇನ್ನೂ ಕುತೂಹಲಕಾರಿಯಾಗಿ ಕಂಡುಬಂದಿದ್ದು ಕರಾವಳಿಯ ಸಚಿವರೊಬ್ಬರ ಇಸ್ಲಾಮ್ ಧಾರ್ಮಿಕ ಗ್ರಂಥ ಕುರಾನ್ ಕಂಠಪಾಠ ಮಾಡಿದ ಮಗಳನ್ನು ತಂದೆ ( ವುಜೂ) ಅಂಗಶುದ್ದಿ ಮಾಡದೇ ಮುಟ್ಟಬಹುದಾ ಎಂಬ ಚರ್ಚೆ. ಮುಸ್ಲಿಮ್ ಸಮಾಜದಲ್ಲಿ ಯಾವುದು ಪ್ರಾಮುಖ್ಯತೆ ಪಡೆಯಬೇಕಾಗಿರುವ ವಿಚಾರವಾಗಿದೆಯೋ ಅದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿಲ್ಲ. ಬದಲಾಗಿ ಕೆಲಸಕ್ಕೆ ಬಾರದ ವಿಚಾರಗಳೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಯುವ ಸಮಾಜ ಅದರಲ್ಲೂ ಸುಶಿಕ್ಷಿತ ಯುವ ಸಮೂಹವೂ ಸ್ವರ್ಗ ನರಕ ಹಾಗೂ ಪರಲೋಕದ ಬಗ್ಗೆಯೇ ಹೆಚ್ಚೆಚ್ಚು ಚಿಂತಿಸುವಷ್ಟರ ಮಟ್ಟಿಗೆ ತಲುಪಿದೆ ಮುಸ್ಲಿಮರ ಸ್ಥಿತಿ. ಇವೆಲ್ಲದರ ಬಗ್ಗೆ ತಿಳುವಳಿಕೆ ಮೂಡಿಸಿ ವೈಚಾರಿಕತೆಯ ಅರಿವನ್ನು ಸಮಾಜಕ್ಕೆ ಮೂಡಿಸುವ ನಿಟ್ಟಿನಲ್ಲಿ ಅಂಬೇಡ್ಕರೊಬ್ಬರು ಮುಸ್ಲಿಮ್ ಸಮುದಾಯಕ್ಕೆ ಬೇಕಾಗಿದ್ದಾರೆ.

ರಾಜಕೀಯ ಸುಧಾರಣೆಯಂತಹ ವಿಷಯದಲ್ಲಿ ಮುಸ್ಲಿಮ್ ನಾಯಕತ್ವವು ಭಾರತದ ಹಲವಾರು ಪ್ರಾಂತ್ಯಗಳಲ್ಲಿ ತೋರಿಸುವ ಅವೈಚಾರಿಕ ಪ್ರತಿಕ್ರಿಯೆಯಿಂದಾಗಿ ಭಾರತೀಯ ಮುಸ್ಲಿಮ್ ಸಮುದಾಯದಲ್ಲಿ ರಾಜಕೀಯ ಜಡತ್ವ ಕಾಣಿಸಿಕೊಂಡಿದೆ. ಮುಸ್ಲಿಮ್ muslims460ರಾಜಕಾರಣಿಕರು ತಮ್ಮ ರಾಜಕಾರಣಕ್ಕೆ ಧಾರ್ಮಿಕೇತರ ಸಂಗತಿಗಳನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ ಎಂಬುವುದು ಅಂಬೆಡ್ಕರ್ ಅಭಿಪ್ರಾಯವಾಗಿತ್ತು. ಇದು ಸತ್ಯ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮುಸ್ಲಿಮ್ ಸಮುದಾಯದ ನಾಯಕತ್ವ ಧಾರ್ಮಿಕೇತರ ಸಂಗತಿಗಿಂತ ಧಾರ್ಮಿಕ ಸಂಗತಿಯನ್ನೇ ಪ್ರಮುಖವಾಗಿಟ್ಟುಕೊಂಡು ಓಟ್ ಬ್ಯಾಂಕ್ ರಾಜಕೀಯ ನಡೆಸುತ್ತಿವೆ. ಧಾರ್ಮಿಕ ಮೂಲಭೂತವಾದಿಗಳ ಕೈಯಲ್ಲೋ ಅಥವಾ ಮುಸ್ಲಿಮ್ ಕಾರ್ಡ್ ಬಳಸಿಕೊಂಡು ಸ್ವಹಿತ ಕಾಪಾಡಿಕೊಳ್ಳುವ ರಾಜಕಾರಣಿಗಳ ಕೈಯಲ್ಲಿ ಮುಸ್ಲಿಮ್ ಸಮುದಾಯದ ನಾಯಕತ್ವವಿದೆ. ಇದರ ಪರಿಣಾಮವಾಗಿಯೇ ಸಾಚಾರ್ ವರದಿ ಜಾರಿಗಿಂತ ಶರೀಯತ್ ಸಂರಕ್ಷಣೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡುವುದಾದರೆ ಮುಸ್ಲಿಮ್ ಸಮುದಾಯಕ್ಕೆ ವೈಚಾರಿಕತೆಯನ್ನು ಬಿತ್ತುವ ಉದಾರವಾದಿ ನಾಯಕತ್ವದ ಅಗತ್ಯತೆ ತೀರಾ ಇದೆ. ಸಂಘಪರಿವಾರದ ಕುತಂತ್ರಕ್ಕೆ ಉತ್ತರ ಕೊಡಲು ಹೋಗಿ ಉಗ್ರವಾದದತ್ತ ಮುಖಮಾಡುತ್ತಿರುವ ಯುವಕರನ್ನು ಸರಿದಾರಿಗೆ ತಂದು ಸಾಂವಿಧಾನಿಕ ಮಾರ್ಗದಲ್ಲಿ ಹೋರಾಟ ನಡೆಸಲು ಸಮುದಾಯದ ನಾಯಕತ್ವ  ವಹಿಸಿಕೊಳ್ಳಲೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ.

ತ್ರಿತಲಾಕ್ ನಿಷೇಧ, ಇಸ್ಲಾಮ್ ಹಾಗೂ ಸುಧಾರಣೆ


-ಇರ್ಷಾದ್ ಉಪ್ಪಿನಂಗಡಿ


 

1984ರಲ್ಲಿ ನಡೆದ ಶಾಬಾನು ಪ್ರಕರಣ ದೇಶದಾದ್ಯಂತ ಸಂಚಲನವನ್ನೇ ಮೂಡಿಸಿತ್ತು. ತನ್ನ 60 ವರ್ಷದ ಇಳಿ ವಯಸ್ಸಿನಲ್ಲಿ ಪತಿಯಿಂದ ತಲಾಕ್ ನೀಡಲ್ಪಟ್ಟ ಒಂಟಿinidan-muslim-woman ಮಹಿಳೆಯೊಬ್ಬಳು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಪ್ರಕರಣವಿದು. ಇಂದೋರಿನ ಶಾಬಾನುವಿಗೆ ಆಕೆಯ ಪತಿ ಅಹಮ್ಮದ್ ಖಾನ್ ತಲಾಕ್ ಕೊಟ್ಟಿದ್ದ. ಅಹಮ್ಮದ್ ಖಾನ್ ತಲಾಕ್ ನೀಡಿ ಮತ್ತೊಂದು ಮದುವೆಯಾಗಿ ಬದುಕುಕಟ್ಟಿಕೊಂಡಿದ್ದ. ಆದರೆ ಪತಿಯ ನಿರ್ಧಾರದಿಂದ ಶಾಬಾನು ದಿಕ್ಕುತೋಚದೆ ಕಂಗಾಲಾದ್ದರು. ಶಾಬಾನು ಕ್ರಿಮಿನಲ್ ಪ್ರೊಸೀಜರ್ ಕೋಡ್ 125ನೇ ವಿಧಿಯಂತೆ ಜೀವನಾಂಶಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆರಂಭದಲ್ಲಿ ಕೆಳ ನ್ಯಾಯಾಲ 85 ರೂಪಾಯಿ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿತ್ತು. ಜೀವನಾಂಶದಲ್ಲಿ ಹೆಚ್ಚಳ ಕೋರಿ ಮೇಲಿನ ನ್ಯಾಯಾಲಯಕ್ಕೆ ಅಪೀಲು ಮಾಡಿದ ಶಾಬಾನುಗೆ 185 ರೂಪಾಯಿ ಜೀವನಾಂಶ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗತೊಡಗಿತ್ತು. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇಸ್ಲಾಮಿಕ್ ನಿಯಮಗಳ ಪ್ರಕಾರ ಜೀವನಾಂಶಕ್ಕೆ ಅವಕಾಶ ಇಲ್ಲದ ಕಾರಣ ಶಾಬಾನುಗೆ ಜೀವನಾಂಶ ನೀಡಬಾರದೆಂದು ಪತಿ ಅಹಮ್ಮದ್ ಖಾನ್ ಬೆಂಬಲಕ್ಕೆ ನಿಂತಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದವು. ಶಾಬಾನೂ ವಿರುದ್ಧನೂ ಇದು ಮುಂದುವರಿಯಿತು. ಈ ನಡುವೆ ಮುಸ್ಲಿಮ್ ಮಹಿಳೆಯರ ಜೀವನಾಂಶವನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರ ಗಡಿಯಾರದ ಮುಳ್ಳುಗಳನ್ನು ಹಿಂದಕ್ಕೆ ತಿರುಗಿಸಿದಂತೆ ಎಂಬ ಪ್ರಗತಿಪರ ಚಿಂತಕರ ಅಭಿಪ್ರಾಯಗಳ ನಡುವೆಯೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜೀವನಾಂಶವನ್ನು ರದ್ದುಗೊಳಿಸುವಲ್ಲಿ ಮುಸ್ಲಿಮ್ ಸಂಘಟನೆಗಳು ಯಶಸ್ವಿಯಾದವು. ಇಂದಿಗೂ ಶಾಬಾನು ಪ್ರಕರಣ ಮುಸ್ಲಿಮ್ ಸಮಾಜದಲ್ಲಿ ಮಹಿಳೆಯರ ಅಸಹಾಯಕತೆ ಹಾಗೂ ಪುರುಷ ಪ್ರಾಬಲ್ಯದ ಸಂಕೇತವಾಗಿ ನಮ್ಮ ಮುಂದಿದೆ.

ಇದೀಗ ಮತ್ತೊಮ್ಮೆ ತ್ರಿವಳಿ ತಲಾಕ್ ವಿಚಾರ ಚರ್ಚೆಗೆ ಬಂದಿದೆ. “ತ್ರಿತಲಾಕ್” ನಿಷೇಧ ಸಂಬಂಧ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ಸಲ್ಲಿಸಿರುವ ಅಫಿದವಿತ್ ದೇಶಾದ್ಯಂತ ಪರ ವಿರೋಧ ವಾದ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಮ್ ಸಮಾಜದ ಧಾರ್ಮಿಕ ಮುಖಂಡರು, ಕೇಂದ್ರ ಸರ್ಕಾರ ಮುಸ್ಲಿಮರ ಧಾರ್ಮಿಕ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿದೆ ಎಂದು ಗುಲ್ಲೆಬ್ಬಿಸಲು ಆರಂಭಿಸಿದ್ದಾರೆ. ಈ ಕುರಿತಾಗಿ ಮಾಧ್ಯಮಗಳಲ್ಲೂ ಚರ್ಚೆ ನಡೆದಾಗ ಮಾಧ್ಯಮ ಪೂರ್ವಾಗ್ರಹಪೀಡಿತವಾಗಿ ನಡೆದುಕೊಳ್ಳುತ್ತಿದೆ ಎಂದು ಮಾಧ್ಯಮಗಳ ವಿರುದ್ಧವೂ ಮಾತಿನ ದಾಳಿ ನಡೆಸುತ್ತಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ “ತ್ರಿತಲಾಕ್”  ಹಾಗೂ ಸಮಾನ ನಾಗರಿಕ ಸಂಹಿತೆಯನ್ನ ಜಾರಿಗೆ ತರುವ ನೈತಿಕತೆ ಇದೆಯೋ ಇಲ್ಲವೋ ಎಂಬುವುದು ಮತ್ತೊಂದು ಚರ್ಚಾವಿಚಾರ. ಅವುಗಳೇನೇ ಇದ್ದರೂ ಇಲ್ಲಿ ನಾವು ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಚಾರ ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧವಾಗಿ ನಡೆಯಬೇಕಾದ ಸುಧಾರಣಾ ಕ್ರಾಂತಿಯ ಕುರಿತಾಗಿ.

ತ್ರಿತಲಾಕ್ ಕುರಿತಾಗಿ ಕುರಾನ್ ಏನು ಹೇಳುತ್ತದೆ?

ಇಸ್ಲಾಮ್ ಧರ್ಮದಲ್ಲಿ ಏಕಕಾಲಕ್ಕೆ ತ್ರಿತಲಾಕ್ ಅವಕಾಶ ಇದೆಯಾ ಎಂಬುವುದು ನಾವು ಗಮನಿಸಬೇಕಾದ ಪ್ರಮುಖ ಅಂಶ. ಇಸ್ಲಾಮ್ ಪ್ರಕಾರMuslim-women-mosque, ವಿವಾಹ ವಿಚ್ಚೇದನ ಆಗಬೇಕಾದರೆ ಪತಿ ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಹೇಳಬೇಕು. ಅಂದರೆ ಪ್ರತಿ ತಲಾಕ್ ನಡುವೆ ನಿರ್ದಿಷ್ಟ ಕಾಲವಕಾಶವಿದೆ. ಈ ಕಾಲಾವಕಾಶದಲ್ಲಿ ಪತಿ-ಪತ್ನಿ ದೈಹಿಕವಾಗಿ ಕೂಡಿದ ಪಕ್ಷದಲ್ಲಿ ತಲಾಕ್ ಅನೂರ್ಜಿತಗೊಳ್ಳುತ್ತದೆ. ಆದರೆ, ಒಂದೇ ಬಾರಿ ಮೂರು ತಲಾಕ್  ಹೇಳುವ ಪದ್ಧತಿ, ತ್ರಿತಲಾಕ್ ಕುರಿತಾಗಿ ಕುರಾನ್ ನಲ್ಲಿ ಯಾವುದೇ ಉಲ್ಲೇಖವಿಲ್ಲ. ತಲಾಖ್ ಕುರಿತಾಗಿ ಕುರಾನ್ ನಲ್ಲಿ ಈ ರೀತಿ ಹೇಳಲಾಗಿದೆ. “ಸಂದೇಶವಾಹಕರೇ, ನೀವು ಸ್ತ್ರೀಯರಿಗೆ ತಲಾಕ್ ಕೊಡುವಾಗ ಅವರಿಗೆ ಇದ್ದತ್ ಗಾಗಿ ತಲಾಕ್ ಕೊಡಿರಿ. ಇದ್ದತ್ತಿನ ಕಾಲಾವಧಿಗಳನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮ ಪ್ರಭುವಾದ ಅಲ್ಲಾಹನ ಬಗ್ಗೆ ಭಯ ಇರಲಿ. ಇದ್ದತ್ತಿನ ಕಾಲಾವಧಿಯಲ್ಲಿ ಅವರು ಯಾವುದೇ ಅಶ್ಲೀಲ ಕಾರ್ಯವೆಸಗದೇ ಇದ್ದಲ್ಲಿ ನೀವು ಅವರನ್ನು ಅವರ ಮನೆಯಿಂದ ಹೊರಹಾಕಬಾರದು ಮತ್ತು ಅಂಥವರು ತಾವಾಗಿಯೇ ಹೊರಟು ಹೋಗಬಾರದು. ಅಲ್ಲಾಹನು ನಿಶ್ವಯಿಸಿದ ಮೇರೆಗಳಿವು. ಅಲ್ಲಾಹನ ಮೇರೆಗಳನ್ನು ಮೀರಿದವನು ತನ್ನ ಮೇಲೆ ತಾನೇ ಅಕ್ರಮವೆಸಗುವನು. ಪ್ರಾಯಶಃ ಇದಾದ ಬಳಿಕ ಅಲ್ಲಾಹನು ಯಾವುದಾರದೂ ದಾರಿಯನ್ನು ಉಂಟುಮಾಡಲೂಬಹುದು. ನಿಮಗೆ ಅರಿಯದು” – ಕುರಾನ್, ಸೂರಾ 65 (ಅತ್ತಕಾಲ್) ಆಯತ್ 1. ಇನ್ನು ಕುರಾನ್ ಸೂರಾ 4 “ಅನ್ನಿಸಾದ” ಆಯತ್ 35 ರಲ್ಲಿ ತಲಾಕ್ ಕುರಿತಾದ ಉಲ್ಲೇಖ ಹೀಗಿದೆ. “ಪತಿ ಪತ್ನಿಯರ ಸಂಬಂಧ ಕೆಡುವುದೆಂದು ನಿಮಗೆ ಆತಂಕವಾದಲ್ಲಿ ಒಬ್ಬ ಮಧ್ಯಸ್ಥನನ್ನು ಪುರುಷನ ಕಡೆಯಿಂದಲೂ, ಒಬ್ಬನನ್ನು ಸ್ತ್ರೀಯ ಕಡೆಯಿಂದಲೂ ನಿಯುಕ್ತಿಗೊಳಿಸಿರಿ. ಅವರಿಬ್ಬರೂ ಸುಧಾರಿಸಲು ಬಯಸಿದರೆ ಅಲ್ಲಾಹ್ ಅವರ ನಡುವೆ ಸಾಮರಸ್ಯದ ಹಾದಿಯನ್ನು ತೆರೆಯುವನು. ನಿಶ್ವಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ”.

ಪತಿ ಪತ್ನಿ ಸಂಬಂಧ ನಡುವೆ ಬಿರುಕು ಉಂಟಾದಲ್ಲಿ ವಿಚ್ಚೇದನ ಪಡೆಯಲು ಯಾರ ವಿರೋಧವೂ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ವಿಚ್ಚೇದನtalaq-whatsapp ಅಗತ್ಯ ಕೂಡಾ. ಆದರೆ ವಿಚ್ಚೇದನಕ್ಕೆ ನೀತಿ ನಿಯಮಗಳು ಬೇಕು. ಯಾವುದೇ ಒಂದು ಕಾಲದಲ್ಲಿ ಜಾರಿಗೆ ಬಂದ ನಿಯಮಗಳು ಇವತ್ತಿಗೂ ಅನ್ವಯವಾಗಬೇಕು ಎಂಬ ವಾದ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ. ಕುರಾನ್ ನಲ್ಲಿ ಒಂದೇ ಬಾರಿಗೆ ಮೂರು ತಲಾಕ್ ನೀಡುವ ಉಲ್ಲೇಖಗಳಿಲ್ಲದಿದ್ದರೂ ಅದೆಷ್ಟೋ ತಲಾಕ್‍ಗಳು ಇದೇ ರೀತಿಯಲ್ಲಿ ನಡೆಯುತ್ತಿವೆ. ಸಿಟ್ಟಿನ ಭರದಲ್ಲೂ ಒಂದೇ ಬಾರಿಗೆ ಮೂರು ತಲಾಕ್ ನೀಡಿರುವ ಪ್ರಕರಣಗಳಿವೆ. ಇಂದಿನ ಆಧುನಿಕ ಸವಲತ್ತುಗಳನ್ನು ಬಳಸಿಕೊಂಡು ವಾಟ್ಸ್ಯಾಪ್, ಇಮೇಲ್‍ಗಳ ಮೂಲಕವೂ ತಲಾಕ್ ನೀಡಲಾಗುತ್ತಿದೆ. ಇಸ್ಲಾಮ್ ಧರ್ಮದಲ್ಲಿ ಈ ರೀತಿಯ ತಲಾಕ್ ಪದ್ದತಿಗೆ ಅವಕಾಶ ಇಲ್ಲ ಎಂದಾದಲ್ಲಿ ಈ ಪದ್ದತಿ ಮತ್ಯಾಕೆ ಜಾರಿಯಲ್ಲಿದೆ. “ತ್ರಿತಲಾಕ್” ನಿಷೇಧ ಧಾರ್ಮಿಕ ಹಕ್ಕುಗಳ ಮೇಲಿನ ದಾಳಿ ಎನ್ನುವವರು ತಲಾಕ್ ಒಳಗಾದ ಮಹಿಳೆಯರ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವೇಕೆ? ಇಂದು ತಲಾಕ್ ಪ್ರಕರಣಗಳು ನ್ಯಾಯಪಂಚಾಯತಿಕೆ ನಡೆಸುವ ಮೂಲಕವೂ ನಡೆಯುತ್ತಿವೆ. ಸ್ಥಳೀಯ ಗೂಂಡಾಗಳೂ ತಲಾಕ್ ಪ್ರಕರಣದ ಪಂಚಾಯತಿಕೆ ನಡೆಸುತ್ತಾರೆ. ಇಲ್ಲಿ ಅನೇಕರಿಗೆ ಅತ್ತ ಧಾರ್ಮಿಕ ಕಾನೂನಿನ ಮಾಹಿತಿಯೂ ಇರುವುದಿಲ್ಲ ಇತ್ತ ದೇಶದ ಸಂವಿಧಾನ, ಕಾನೂನು ಕಟ್ಟಲೆಗಳ ಕುರಿತಾಗಿಯೂ ತಿಳುವಳಿಕೆಯೂ ಇರುವುದಿಲ್ಲ. ಇಲ್ಲಿ ಹಣ ಹಾಗೂ ತೋಳ್ಬಲ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಹೀಗಿರುವಾಗ ಮುಸ್ಲಿಮರ ವಿವಾಹ ವಿಚ್ಚೇದನ ಯಾಕೆ ಭಾರತೀಯ ಸಂವಿಧಾನದ ಕಾನೂನಿನಡಿಯಲ್ಲಿ ನಡೆಯಬಾರದು?

ಇಲ್ಲಿ ಕೇವಲ ಒಂದೇ ಬಾರಿಗೆ ಮೂರು ತಲಾಕ್ ಹೇಳುವ ತ್ರಿವಳಿ ತಲಾಕ್ ಒಂದೇ ವಿಚಾರ ಅಲ್ಲ. ತಲಾಕ್‍ಗೆ ಒಳಗಾದ ಪತ್ನಿಯburka ಮುಂದಿನ ಜೀವನ ನಿರ್ವಹಣೆಯ ಕುರಿತಾಗಿ ಚಿಂತಿಸಬೇಕಲ್ಲವೇ? ಸುನ್ನಿ ಹಾಗೂ ಶಿಯಾ ಪಂಗಡಗಳಲ್ಲಿ ತಲಾಕ್ ನೀಡಿದ ನಂತರ ಹೆಂಡತಿಯ ಖರ್ಚಿಗೆ ಗಂಡ ಜವಾಬ್ದಾರನಾಗಿರುವುದಿಲ್ಲ. ತಾಯಿಯ ಎದೆಹಾಲು ಬಿಡಿಸುವವರೆಗೆ ಮಕ್ಕಳನ್ನು ನೋಡಿಕೊಳ್ಳುವ ವೆಚ್ಚವನ್ನು ಗಂಡ ಭರಿಸಬೇಕಾಗುತ್ತದೆ. ಹೀಗಾದಲ್ಲಿ ವಿಚ್ಚೇದಿತ ಮಹಿಳೆಯ  ಮುಂದಿನ ಜೀವನದ ಗತಿಯೇನು? ಬಹುತೇಕ ಗ್ರಾಮೀಣ ಹಾಗೂ ನಗರ ಭಾಗಗಳಲ್ಲೂ ಮುಸ್ಲಿಮ್ ಮಹಿಳೆಯರಿಗೆ ಇಂದಿಗೂ ಉದ್ಯೋಗಕ್ಕೆ ಹೋಗಲು ಅವಕಾಶವಿಲ್ಲ. ಆರ್ಥಿಕವಾಗಿ ಪತಿಯನ್ನೋ ಅಥವಾ ತಂದೆಯನ್ನೂ ಆಕೆ ಅವಲಂಬಿಸಿರುತ್ತಾಳೆ. ಇಂತಹಾ ಸಂದರ್ಭದಲ್ಲಿ ವಿಚ್ಚೇದಿತಳಾದ ಮಹಿಳೆಗೆ ಸ್ವತಂತ್ರ ಜೀವನ ನಿರ್ವಹಣೆ ಹೇಗೆ ಸಾಧ್ಯ.

ಇದು ಒಂದು ಕಡೆಯಾದರೆ ಮುಸ್ಲಿಮ್ ಮಹಿಳೆಗೆ ಗಂಡನಿಂದ ವಿಚ್ಚೇದನ ಪಡೆಯಲು ಅವಕಾಶವಿರುವ ಖುಲಾ ಹಕ್ಕು ವಿಚಾರಕ್ಕೆ ಬರೋಣ. ಇಲ್ಲಿ ಪತಿ ಪತ್ನಿಗೆ ತಲಾಕ್ ಕೊಡುವಷ್ಟು ಸುಲಭವಾಗಿ ಪತ್ನಿ ಪತಿಗೆ ಖುಲಾ ಕೊಡಲು ಸಾಧ್ಯವಿಲ್ಲ ಎಂಬುವುದು ಗಮನಾರ್ಹ. ಇಲ್ಲಿ ಖುಲಾವನ್ನು ಹೆಣ್ಣು ಗಂಡನಿಂದ ಖರೀದಿಸಬೇಕಿದೆ. ಮದುವೆಯ ಸಂದರ್ಭದಲ್ಲಿ ಪತಿ ಕೊಟ್ಟ ಮಹರ್ ಮೊತ್ತವನ್ನು ಹಿಂತಿರುಗಿಸಬೇಕಿದೆ. ಹೀಗಾದಲ್ಲಿ ಮಾತ್ರ ಖುಲಾ ಸಿಗುತ್ತದೆ. ಇಲ್ಲಿ ಮಹಿಳೆ ತನ್ನ ಪತಿಯಿಂದ ಬಿಡುಗಡೆಗಾಗಿ ಆತನಿಂದ ಕಾಡಿ ಬೇಡಿ ಖುಲಾ ಪಡೆಯಬೇಕು. ಕೊನೆಗೂ ಖುಲಾ ಪಡೆಯಬೇಕಾದಲ್ಲಿ ಪತಿಯೇ ತಲಾಕ್ ನೀಡಬೇಕು ಹೊರತು ಪತ್ನಿ ಪತಿಗೆ ತಲಾಕ್ ನೀಡುವ ಅಧಿಕಾರ ಇಲ್ಲ. ಇಲ್ಲಿ ಪತಿಗೆ ಪತ್ನಿ ಬೇಡವಾದಲ್ಲಿ ತಲಾಕ್ ನೀಡುವ ಪದ್ದತಿ ಸರಳವಾಗಿದ್ದರೆ ಪತ್ನಿಗೆ ಪತಿ ಬೇಡವಾದಲ್ಲಿ ಖುಲಾ ನೀಡುವ ಪದ್ದತಿಯನ್ನು ಜಟಿಲಗೊಳಿಸಲಾಗಿದೆ. ಇದನ್ನು ಮಹಿಳಾ ಶೋಷಣೆ ಎಂದು ಕರೆಯದೆ ಮತ್ತೇನನ್ನಲು ಸಾಧ್ಯವೇ?

ಇಸ್ಲಾಮ್ ಮತ್ತು ಸುಧಾರಣೆ

ಪ್ರವಾದಿ ಮುಹಮ್ಮದ್ ಪೈಗಂಬರರ ಕಾಲದಲ್ಲಿ ಅರಬ್ ದೇಶದಲ್ಲಿ ಗುಲಾಮ ವ್ಯಾಪಾರಕ್ಕೆ ಅನುಮತಿ ಇತ್ತು. ಕುರಾನ್ ಕೂಡಾ ಅನುಮತಿ ನೀಡಿತ್ತುburkha sielence. ಇಂದು ಗುಲಾಮಗಿರಿ ಪದ್ದತಿ ದೊಡ್ಡ ಪಾತಕ. ಧರ್ಮದಲ್ಲಿ ಅನುಮತಿ ಇದೆ ಎಂದು ಮತ್ತೆ ಗುಲಾಮಗಿರಿ ಪದ್ದತಿಯನ್ನು ಆಚರಿಸಲು ಸಾಧ್ಯಾವೇ? ಅಂತಹ ಅನಾಗರಿಕ ಪದ್ದತಿಯನ್ನು ಒಪ್ಪಿಕೊಳ್ಳಲು ಖಂಡಿತಾ ಅಸಾಧ್ಯ. ಮನುಷ್ಯ ಘನತೆ ಎತ್ತಿಹಿಡಿಯುವ ಚಿಂತನೆಗಳು ಮೊಳಕೆಯೊಡೆಯುತ್ತಿದ್ದಂತೆ ಗುಲಾಮಗಿರಿಯಂತಹ ಅಮಾನವೀಯ ಪದ್ದತಿಗಳು ನಾಶವಾದವು. ಹೀಗೆ ಸುಧಾರಣೆಗಳು ಬದಲಾವಣೆಗೆ ಅವಕಾಶ ಕಲ್ಪಿಸುತ್ತವೆ. ಇಸ್ಲಾಮ್ ಧರ್ಮ ಎಂದರೆ ಸುಧಾರಣೆಗೆ ಅವಕಾಶ ಇಲ್ಲದ ಧರ್ಮ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಮುಸ್ಲಿಮ್ ಧಾರ್ಮಿಕ ಮುಖಂಡರು ಹಾಗೂ “ಧರ್ಮದ ಗುತ್ತಿಗೆ” ಪಡೆದುಕೊಂಡ ಮೂಲಭೂತವಾದಿಗಳು ವರ್ತಿಸುತ್ತಿದ್ದಾರೆ. ಅರಬ್ ದೇಶದಲ್ಲಿ ಇಸ್ಲಾಮ್ ಧರ್ಮದ ಆರಂಭವೇ ಸುಧಾರಣೆಯಿಂದಾಯಿತು. ಆ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದರು ಸಾಕಷ್ಟು ಸುಧಾರಣೆಗಳಿಗೆ ನಾಂದಿಹಾಡಿದರು. ಇಂತಹಾ ಸುಧಾರಣೆಗಳು ನಿಂತ ನೀರಾಗಬಾರದು ಅದು ಸದಾ ಹರಿಯುತ್ತಲೇ ಇರಬೇಕು. ವಿಪರ್ಯಾಸವೆಂದರೆ ಮುಸ್ಲಿಮ್ ಧಾರ್ಮಿಕ ಪಂಡಿತರು ಇಸ್ಲಾಮ್ ಧರ್ಮವನ್ನು ನಿಂತ ನೀರಾಗಿಸುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ. ಧರ್ಮದೊಳಗೆ ಸುಧಾರಣೆಯ ಚಿಂತನೆಗಳು ಮೊಳಕೆಯೊಡೆದಲ್ಲಿ ಅದನ್ನು ಧರ್ಮವಿರೋಧಿ ಎಂದು ಚಿವುಟಿ ಹಾಕುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಸ್ಲಾಮ್ ಪವಿತ್ರ ಗ್ರಂಥ ಕುರಾನ್‍ನಲ್ಲಿ ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡಿದ್ದರೂ ಮುಸ್ಲಿಮ್ ಮಹಿಳೆಯ ಪಾಲಿಗೆ ಅದು ದೂರದ ಮಾತಾಗಿತ್ತು. ಮಹಿಳೆ ಶಾಲೆಯ ಮೆಟ್ಟಿಲನ್ನೇರಲು ಸಾಕಷ್ಟು ಶ್ರಮಪಡಬೇಕಾಯಿತು. ಕೇವಲ ಮುಸ್ಲಿಮ್ ಸಮಾಜ ಮಾತ್ರವಲ್ಲ, ಇತರ ಧರ್ಮಗಳ ಪುರುಷ ಪ್ರಧಾನ ವ್ಯವಸ್ಥೆಯೂ ಸ್ತ್ರೀಯರನ್ನು ನಿಕೃಷ್ಟವಾಗಿ ನೋಡಿಕೊಂಡಿವೆ. ಅಲ್ಲೂ ಮಹಿಳಾ ವಿರೋಧಿಯಾದ, ಮನುಷ್ಯ ಘನತೆಗೆ ವಿರುದ್ಧವಾದ ಸಾಕಷ್ಟು ಆಚರಣೆ ಪದ್ದತಿಗಳು ಚಾಲ್ತಿಯಲ್ಲಿವೆ. ಆದರೆ ಸುಧಾರಣೆಗಳಿಗೆ ಓಗೊಡುವ ಮನಸ್ಸುಗಳ ಸಂಖ್ಯೆ ವೃದ್ದಿಗೊಳ್ಳುತ್ತಿರುವುದರಿಂದ ಸ್ಥಿತಿಗತಿ ಬದಲಾಗುತ್ತಿದೆ. ಸತಿಸಹಗಮನ ಪದ್ದತಿಯನ್ನು ಮನುವಾದಿಗಳು ಸಂಸ್ಕೃತಿ ಎಂದು ಕೊಂಡಾಡಿದಾಗ ಅದು ಅಮಾನವೀಯತೆ ಎಂದು ಸಾರುವ ಮೂಲಕ ಸತಿ ಪದ್ದತಿಯ ವಿರುದ್ಧದ ಆಂದೋಲನಕ್ಕೆ ರಾಜಾರಾಮ್ ಮೋಹನ್ ರಾಯ್ ನಾಂದಿಹಾಡಿದರು. ಅದೇ ರೀತಿ ಅಂಡೇಡ್ಕರ್, ಫುಲೆ ದಂಪತಿ, ನಾರಾಯಣ ಗುರು ಹೀಗೆ ಹತ್ತು ಹಲವಾರು ಸುಧಾರಕರು ಈ ಮಣ್ಣಿನಲ್ಲಿ ಸುಧಾರಣೆಯ ಬೀಜ ಬಿತ್ತಿದರು. ಅವರೆಲ್ಲರನ್ನೂ ಮನುವಾದಿಗಳು ಇಂದಿಗೂ ದ್ವೇಷ ಅಸೂಹೆಯಿಂದ ಕಂಡರೂ ಸುಧಾರಣೆಯ ಗಾಳಿಗೆ ಬೇಲಿ ಹಾಕಲು ಮನುವಾದಿಗಳಿಂದ ಸಾಧ್ಯವಾಗಿಲ್ಲ.

ಆದರೆ ಮುಸ್ಲಿಮ್ ಸಮಾಜದಲ್ಲಿ ಚಿಂತಕರು, ಸುಧಾರಣಾವಾಧಿಗಳು ಸುಧಾರಣೆಯ ಮಾತುಗಳನ್ನಾಡಿದಲ್ಲಿ, ಇಸ್ಲಾಮ್ ಧರ್ಮದ ರೀತಿ ನೀತಿ ಕಾನೂನುSupreme Court ಕಟ್ಟಲೆಗಳು ಅಂದಿಗೂ ಇಂದಿಗೂ ಎಂದಿಗೂ ಅನ್ವಯವಾಗುವಂತಹದ್ದು, ಈ ನಿಟ್ಟಿನಲ್ಲಿ ಸುಧಾರಣೆ ಅನಗತ್ಯ ಎಂಬ ವಾದಗಳು ಪ್ರತಿಪಾದನೆಯಾಗುತ್ತವೆ. ಈ ವಾದಗಳ ಮೊದಲ ಬಲಿಪಶು ಮಹಿಳೆಯೇ ಆಗಿರುತ್ತಾಳೆ. ಮುಸ್ಲಿಮ್ ಸಮಾಜದಲ್ಲಿ ಹಲಾಲ ಪದ್ದತಿಯೊಂದಿದೆ. ಹಲಾಲಾ ಎಂದರೆ ಪತ್ನಿಗೆ ತಲಾಕ್ ನೀಡಿದ ಪತಿಗೆ ಮತ್ತೆ ಆಕೆಯನ್ನೇ ಮರುಮದುವೆಯಾಗಬೇಕೆಂದು ಅನ್ನಿಸಿದ್ದಲ್ಲಿ ಪತ್ನಿಯ ಒಪ್ಪಿಗೆ ಇದ್ದರೆ ಮರುಮದುವೆಗೆ ಅವಕಾಶವಿದೆ. ಆದರೆ ಇಲ್ಲಿ ವಿಚ್ಚೇದನಗೊಂಡ ಪತಿ ಪತ್ನಿ ಮತ್ತೆ ಮರುಮದುವೆಯಾಗಬೇಕಾದರೆ ಒಂದು ನಿಯಮವಿದೆ; ಅದೇ ಹಲಾಲ. ಅಂದರೆ ಮರುಮದುವೆಗೆ ಮುನ್ನ ಆಕೆಗೆ ಒಂದು ದಿನದ ಮಟ್ಟಿಗೆ ಮತ್ತೊಬ್ಬನ ಜೊತೆ ಮದುವೆ ಮಾಡಿಕೊಳ್ಳಬೇಕು. ನಂತರ ಆತನಿಂದ ತಲಾಕ್ ಪಡೆದು ಇದ್ದತ್ ಅವಧಿಯನ್ನು ಪೂರ್ಣಗೊಳಿಸಬೇಕು. ಬಳಿಕ ಆಕೆಯನ್ನು ಮರುಮದುವೆಮಾಡಿಕೊಳ್ಳುವ ಅವಕಾಶ ಇದೆ. ಇಲ್ಲಿ ಪತಿ ತನ್ನ ಪತ್ನಿಗೆ ತಲಾಕ್ ಕೊಟ್ಟು ಬಳಿಕ ತಪ್ಪಿನ ಅರಿವಾಗಿ ಮತ್ತೆ ಮರುಮದುವೆಯಾಗಬೇಕಾದಲ್ಲಿ ಶಿಕ್ಷೆ ಅನುಭವಿಸಬೇಕಾಗಿ ಬರುವುದು ಮಹಿಳೆಗೆ. ಒಂದು ದಿನದ ಮಟ್ಟಿಗೆ ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದಾದರೆ ಅದು ಆ ಮಹಿಳೆಯ ಮನಸ್ಸಿನ ಮೇಲೆ ಎಷ್ಟೊಂದು ಗಾಢವಾದ ಪರಿಣಾಮ ಬೀರಬಹುದು ಎಂದು ಕನಿಷ್ಠ ಆಲೋಚನೆ ಮುಸ್ಲಿಮ್ ಸಮಾಜದ ಧಾರ್ಮಿಕ ಪಂಡಿತರು ಮಾಡಿದಲ್ಲಿ ಈ ಆಚರಣೆ ಜಾರಿಯಲ್ಲಿರುತಿತ್ತೇ? ಇಂದಿಗೂ ಕೆಲವೆಡೆ ಈ ಹಲಾಲಾ ಪದ್ದತಿ ಜಾರಿಯಲ್ಲಿದೆ. ಅಸಲಿಗೆ ಈ ರೀತಿಯ ಹಲಾಲಾ ಪದ್ದತಿ ಇಸ್ಲಾಮ್ ಧರ್ಮದಲ್ಲಿ ಜಾರಿಯಲ್ಲಿರಲಿಲ್ಲ. ಆದರೂ ಮುಸ್ಲಿಮರಲ್ಲಿ ಆಚರಣೆಯಲ್ಲಿತ್ತು. ಈ ಕುರಿತಾಗಿ ಮುಸ್ಲಿಮ್ ಧರ್ಮದ ಚಿಂತಕರು ಧ್ವನಿ ಎತ್ತಿದಾಗ ಮತ್ತದೇ ಧರ್ಮವಿರೋಧಿಗಳ ಪಟ್ಟ. ಇಲ್ಲಿ ತ್ರಿತಲಾಕ್ ಇರಬಹುದು, ಹಲಾಲ ಪದ್ದತಿಯಿರಬಹುದು, ಬಹುಪತ್ನಿತ್ವ ಇರಬಹುದು, ಒಂದು ಕಾಲದಲ್ಲಿ ಆಚರಣೆಯಲ್ಲಿತ್ತು ಎಂಬ ಸಬೂಬು ನೀಡಿ ಇಂದಿಗೂ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುವುದು ಸರಿಯಲ್ಲ. ಸಮಾಜ, ಚಿಂತನೆಗಳು ಕಾಲಕ್ಕೆ ತಕ್ಕಹಾಗೆ ಬದಲಾಗುತ್ತವೆ. ಇದರ ಜೊತೆಜೊತೆಯಲ್ಲೇ ಮನುಷ್ಯ ಘನತೆಗೆ ಕುಂದು ತರುವಂತಹ, ಒಂದು ವರ್ಗವನ್ನು ಶೋಷಣೆ ಮಾಡುವಂತಹ, ಜೀವ ವಿರೋಧಿ, ಪ್ರಗತಿ ವಿರೋಧಿ ಆಚರಣೆಗಳು, ಕಾನೂನುಗಳು, ಚಿಂತನೆಗಳು ಬದಲಾಗಬೇಕಿದೆ. ಬದಲಾವಣೆ ಸಾಧ್ಯವಾಗದೇ ಇದ್ದಲ್ಲಿ ಈ ನೆಲದ ಕಾನೂನು ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದರ ಮೂಲಕ ಬದಲಾವಣೆಯನ್ನು ಚಲಾವಣೆಗೆ ತರಬೇಕಿದೆ. ಈಗಾಗಲೇ ಮುಸ್ಲಿಮ್ ಮಹಿಳೆಯರು ತ್ರಿತಲಾಕ್ ಕುರಿತಾದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ವಾದವನ್ನು ಪ್ರತಿಭಟಿಸುತ್ತಿದ್ದಾರೆ. ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ಇಂತಹ ಪದ್ದತಿಯ ವಿರುದ್ಧದ ಹೋರಾಟಕ್ಕೆ ಎಲ್ಲಾ ಸಮುದಾಯಗಳ ಪ್ರಗತಿಪರ, ಸುಧಾರಣಾವಾದಿ ಚಿಂತಕರು ಹಾಗೂ ಸ್ತ್ರೀವಾದಿಗಳು ಜೊತೆಸೇರಬೇಕಿದೆ. ಕೊನೆಯದಾಗಿ ಒಂದು ವಿಚಾರ. ಇಸ್ಲಾಮ್‍ನಲ್ಲಿ ಬದಲಾವಣೆ ಸಾಧ್ಯವೇ ಇಲ್ಲ ಎಂದು ವಾದ ಮಾಡುವ ಮುಸ್ಲಿಮರು “ವಾಸ್ತವದಲ್ಲಿ  ಒಂದು ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸುವುದಿಲ್ಲ”, ಕುರಾನ್  ನಲ್ಲಿರುವ ಈ ಶ್ಲೋಕವನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ.

 

ಸ್ವರ್ಗ ಹಾಗೂ ನರಕದ ಕಲ್ಪನೆ ಮತ್ತು ರಮ್ಯಾ ಹೇಳಿಕೆ


-ಇರ್ಷಾದ್ ಉಪ್ಪಿನಂಗಡಿ


 

ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ಪಾಕಿಸ್ತಾನ ನರಕ ಎಂಬ ಹೇಳಿಕೆಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ನರಕವಲ್ಲ ಅಲ್ಲೂ ನಮ್ಮಂತಹಾ ಒಳ್ಳೆಯ ಮನಸ್ಸಿನ ಜನರಿದ್ದಾರೆ ಎಂಬ ಮಾಜಿ ಸಂಸದೆ ನಟಿ ರಮ್ಯಾ ನೀಡಿದ ಹೇಳಿಕೆ ಸದ್ಯ ವಿವಾದದ ಕೇಂದ್ರ ಬಿಂದು. ಪಾಕಿಸ್ತಾನದ ಜನರ ಪರವಾಗಿ ರಮ್ಯಾ ನೀಡಿದ ಹೇಳಿಕೆ ಇಂದು ಅವರನ್ನು “ದೇಶದ್ರೋಹಿ” ಪಟ್ಟಕ್ಕೆ ಏರಿಸಿದೆ.

ಹೇಳಿಕೆಗಳನ್ನು ಖಂಡಿಸಿ ಅಲ್ಲಲ್ಲಿ ಸಂಘಪರಿವಾರದ ಪ್ರತಿಭಟನೆಗಳನ್ನು ನಡೆಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಮ್ಯಾramya-siddaramaiah ವಿರುದ್ಧ ಕೀಳು ಮಟ್ಟದ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಭಕ್ತರ ವಲಯ. ಅಷ್ಟಕ್ಕೂ ಪಾಕಿಸ್ತಾನದ ಭಾರತದ ಶತ್ರು ರಾಷ್ಟ್ರವಾಗಿರಹುದು. ಎರಡೂ ದೇಶಗಳ ನಡುವೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿರಬಹುದು. ಇದು ಎರಡೂ ದೇಶಗಳ ನಡುವಿನ ರಾಜಕೀಯ ಸಂಘರ್ಷ. ಆದರೆ ಅಲ್ಲೂ ಜನಪರ, ಜೀವಪರ ಜ್ಯಾತ್ಯಾತೀತ ಮನಸ್ಸುಗಳಿವೆ. ತಮ್ಮ ಹಾಡಿನ ಮೂಲಕ ಜನರ ಮನಸ್ಸಿನಲ್ಲಿ ಶಾಂತಿ, ಪ್ರೀತಿಯನ್ನು ಬಿತ್ತುವ ಆಬಿದಾ ಪರ್ವೀನ್ , ನುಸ್ರತ್ ಫತೇ ಅಲಿಖಾನ್, ಗುಲಾಮ್ ಅಲಿ ಹಾಗೂ ಇತ್ತೀಚೆಗೆ ಉಗ್ರರ ಕೈಯಿಂದ ಹತರಾದ ಅಜ್ಮದ್ ಸಾಬ್ರಿಯಂತಹಾ ಸೂಫಿ ಗಾಯಕರನ್ನು ಶತ್ರುಗಳಾಗಿ ಕಾಣಲು ಸಾಧ್ಯವೇ ?

ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇ. 2 ರಷ್ಟಿರುವ ಅಲ್ಪಸಂಖ್ಯಾತ ಹಿಂದೂಗಳು ಹಾಗೂ ಕ್ರೈಸ್ತರು ಹಾಗೂ ಮಹಿಳಾ ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿರುವ ಅಸ್ಮಾ ಜಹಾಂಗೀರ್, ಅನ್ಸಾರ್ ಬರ್ನಿ, ಮಲಾಲ ಯೂಸುಫ್ ಝೈನಿ ಹಾಗೂ ಇತ್ತೀಚೆಗೆ ಮೂಲಭೂತವಾದಿಗಳಿಂದ ಹತ್ಯೆಗೊಳಗಾದ ಸಬೀನ್ ಮೆಹಮೂದ್ ರಂತಹಾ ನೂರಾರು ಹೋರಾಟಗಳನ್ನು ತಿರಸ್ಕರಿಸಲು ಸಾಧ್ಯವೇ ? ಆದರೆ ಪಾಕಿಸ್ತಾನದಲ್ಲಿ ಬೆಳೆದು ನಿಂತ ಮುಸ್ಲಿಮ್ ಮೂಲಭೂತವಾದಿ ಶಕ್ತಿಗಳು ಆ ದೇಶವನ್ನು ನರಕ ಮಾಡಲು ಹೊರಟಿವೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಅಭಿವ್ಯಕ್ತಿಯ ಹರಣವಾಗುತ್ತಿವೆ. ಮೂಲಭೂತವಾದಿಗಳ ವಿರುದ್ಧ ಧ್ವನಿ ಎತ್ತುವ ಪ್ರಗತಿಪರ, ಜ್ಯಾತ್ಯಾತೀತ ಹೋರಾಟಗಾರರನ್ನು ಸಂಗೀತಗಾರರನ್ನು ಹತ್ಯೆಮಾಡಲಾಗುತ್ತಿದೆ. ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರ ಮೇಲೂ ದೌರ್ಜನ್ಯಗಳು, ಉಗ್ರವಾದಿ ಚಟುವಟಿಕೆಗಳು ಪಾಕಿಸ್ತಾನದಲ್ಲಿ ಮಿತಿಮೀರುತ್ತಿವೆ ಎಂಬುವುದು ಆತಂಕಕಾರಿ ವಿಚಾರ.

ಇದು ಕೇವಲ ಪಾಕಿಸ್ತಾನದ ಸಮಸ್ಯೆ ಮಾತ್ರವಲ್ಲ. ಭಾರತದಲ್ಲೂ ಇಂತಹದ್ದೇ ಸನ್ನಿವೇಶವನ್ನು ಇಲ್ಲಿರುವ ಮತಾಂಧ ಶಕ್ತಿಗಳು ಸೃಷ್ಟಿಸುತ್ತಿವೆ. ಪಾಕಿಸ್ತಾನ ನರಕವಾದರೆ ಭಾರತ ಸ್ವರ್ಗವೇ ಎಂಬ ಪ್ರೆಶ್ನೆಗೆ ನಮ್ಮ ಮುಂದೆ ನಡೆಯುವ ನೂರಾರು ನಿದರ್ಶನಗಳು ಉತ್ತರವಾಗಿವೆ. ಪ್ರತಿದೇಶದಲ್ಲೂ ಉಳ್ಳವರ ಪಾಲಿಗೆ ಖಂಡಿತಾ ಸ್ವರ್ಗವಿದೆ. ಆ ದೇಶದಲ್ಲಿ ನರಕದ ಪರಿಸ್ಥಿತಿಯನ್ನು ಅನುಭವಿಸುವವರು ಅಲ್ಲಿರುವ ಬಡವರು, ನಿರ್ಗತಿಕರು, ಶೋಷಿತರು ಹಾಗೂ ದುರ್ಬಲರು.

ಅಷ್ಟಕ್ಕೂ ನಮ್ಮ ಭವ್ಯ ಭಾರತ ಸ್ವರ್ಗಾನಾ..? ಹೌದು ಖಂಡಿತಾ ಸ್ವರ್ಗ. ಅದು ಯಾರ ಪಾಲಿಗೆ ಅಂದರೆ. ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಧನಿಗಳINDIA-BHOPAL-POLLUTION-ACCIDENT-25YRS ಪಾಲಿಗಷ್ಟೇ. ಬದಲಾಗಿ ಒಡಿಸ್ಸಾದ ದಾನಾ ಸಿಂಗ್ ಮಾಝಿ ಪಾಲಿಗಲ್ಲ. ಊನಾದ ದಲಿತರ ಪಾಲಿಗೂ ಅಲ್ಲ. ಮಜಾಫರನಗರದ ಮುಸ್ಲಿಮರ ಪಾಲಿಗೂ ಅಲ್ಲ. ಕಂದಮಾಲಿನ ಕ್ರೈಸ್ತರ ಪಾಲಿಗೂ ಅಲ್ಲ. ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಘಟನೆ ಸದ್ಯ ಭವ್ಯ ಭಾರತದ ನರಕದ ಬದುಕನ್ನು ನಮ್ಮ ಮುಂದೆ ತೆರೆದಿಟ್ಟಿದೆ. ದಾನಾ ಸಿಂಗ್ ಮಾಝಿ ಎಂಬ ಬಡ ವ್ಯಕ್ತಿ, ಕ್ಷಯ ರೋಗದಿಂದ ಬಳಲಿ ಸಾವನ್ನಪ್ಪಿದ ತನ್ನ ಪತ್ನಿಯ ಶವವನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಲು ವಾಹನವನ್ನು ನೀಡಲು ಸರ್ಕಾರಿ ಆಸ್ಪತ್ರೆ ನಿರಾಕರಿಸಿತ್ತು. ಪರಿಣಾಮ ಹೆಂಡತಿಯ ಶವವನ್ನು ಹೆಗಲಲ್ಲೇ ಹೊತ್ತು 10 ಕಿಲೋ ಮೀಟರ್ ನಡೆದುಕೊಂಡು ಊರಿನತ್ತ ತೆರಳುವ ದೃಶ್ಯ ಸ್ವರ್ಗದಲ್ಲಿ ಕಾಣಲು ಸಾಧ್ಯವೇ ? ಸತ್ತ ತಾಯಿಯ ಹೆಣವನ್ನು ಹೊತ್ತುಕೊಂಡು ಹೋಗುವ ತಂದೆ ಜೊತೆಯಲ್ಲಿ ಕಣ್ಣೀರಿಡುತ್ತಾ ನಡೆಯುತ್ತಿದ್ದ ದಾನಾ ಸಿಂಗ್ ಮಾಝಿ ಮಗಳಲ್ಲಿ ಸ್ವರ್ಗ ಯಾವುದು ನರಕ ಯಾವುದು ಎಂದು ಕೇಳಿದ್ರೆ ಸ್ಪಷ್ಟ ಉತ್ತರ ಎಲ್ಲರಿಗೂ ಸಿಗಬಹುದು. ಮಾಯಾ ನಗರಿ ಮುಂಬಯಿನಲ್ಲಿರುವ ಧಾರಾವಿ ಸ್ಲಮ್ ಬಗ್ಗೆ ನಿಮಗೂ ತಿಳಿದಿರಬಹುದು. ಭವ್ಯ ಮುಂಬಯಿ ನಗರದ ಮಧ್ಯ ಭಾಗದಲ್ಲೇ ಇರುವ ಈ ಸ್ಲಮ್ ಏಷ್ಯಾದಲ್ಲೇ ಅತೀ ದೊಡ್ಡ ಸ್ಲಮ್ ಎಂಬ “ಹೆಗ್ಗಳಿಕೆಯನ್ನು” ಪಡೆದುಕೊಂಡಿದೆ. ಈ ಸ್ಲಮ್ ಇರುವುದು ನಮ್ಮ ಭವ್ಯ ಭಾರತದಲ್ಲೇ ಅಲ್ಲವೇ ? ಸ್ಲಮ್ ನಲ್ಲಿ ಜೀವನ ನಡೆಸುತ್ತಿರುವ ನಿವಾಸಿಗಳಲ್ಲಿ ಹೋಗಿ ನೀವು ಸ್ವರ್ಗದಲ್ಲಿ ಬದುಕುತ್ತೀದ್ದೀರಾ ಅಥವಾ ನರಕದಲ್ಲಾ ಎಂದು ಪ್ರಶ್ನಿಸಿದರೆ ಬಹುಷಃ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ಗೂ ಉತ್ತರ ಸಿಗಬಹುದೇನೋ !.

ಇಂದಿಗೂ ಬಡವರು , ಆದಿವಾಸಿಗಳು ಕನಿಷ್ಠ ಮೂಲಸೌಕರ್ಯವಿಲ್ಲದೆ ನರಕದಂತಹಾ ಬದುಕನ್ನೇ ಸಾಗಿಸುತ್ತಿದ್ದಾರೆ. ಇದು ಒಂದೆಡೆಯಾದರೆ Kalburgiಇನ್ನೊಂದೆಡೆ ಮತಾಂಧರು ಸೃಷ್ಟಿಸಿದ ನರಕ ಅತ್ಯಂತ ಭಯಾನಕವಾದುದು. ಗುಜರಾತ್ ಹತ್ಯಾಕಾಂಡ, ಸಿಖ್ ಹತ್ಯಾಕಾಂಡ, ಮತಾಂತರದ ಆರೋಪದಲ್ಲಿ ನಡೆದ ಓಡಿಸ್ಸಾ ಕಂದಮಾಲ್ ಹತ್ಯಾಕಾಂಡ, ಮುಝಫರ್ ನಗರ್, ಖೈರ್ಲಾಂಜಿ ಹಾಗೂ ಕಂಬಾಲಪಳ್ಳಿಯಲ್ಲಿ ಹತ್ಯಾಕಾಂಡಗಳಲ್ಲಿ ಕಾಣುವ ಭೀಕರತೆಗಳು ಸ್ವರ್ಗದ ಕಲ್ಪನೆಯಲ್ಲಿ ಖಂಡಿತಾ ಕಾಣೋದಕ್ಕೆ ಸಿಗುವುದಿಲ್ಲ. ಈ ಕರಾಳ ಅನುಭವಗಳನ್ನು ಅನುಭವಿಸಿದ ಜನರಲ್ಲಿ ಹೋಗಿ ವಿಚಾರಿಸಿದರೆ ಅವರು ಅನುಭವಿಸಿದ ನರಕದ ಬದುಕಿನ ದರ್ಶನವಾಗಬಹುದು. ಪಾಕಿಸ್ತಾನದ ಮೂಲಭೂತವಾದಿಗಳು ನಡೆಸುವ ಕೃತ್ಯದಂತೆ ನಮ್ಮ ದೇಶದಲ್ಲೂ ನಡೆದ ವಿಚಾರವಾದಿಗಳ ಹತ್ಯೆ ಏನನ್ನು ಸೂಚಿಸುತ್ತದೆ. ದಾಭೋಲ್ಕರ್, ಪನ್ಸಾರೆ ಹಾಗೂ ಡಾ.ಕಲಬುರ್ಗಿಯವರ ಹತ್ಯೆಗಳನ್ನು ನಡೆಸೋ ಮೂಲಕ ಭಾರತವನ್ನು ನರಕವನ್ನಾಗಿ ಮಾಡಲು ಹೊರಟಿಲ್ಲವೇ ನಮ್ಮ ದೇಶದ ಕೋಮುವಾದಿಗಳು.

ಇನ್ನು ಮಂಗಳೂರಿನ ವಿಚಾರಕ್ಕೆ ಬರೋಣ. ಖಾಸಗಿ ವಾಹಿನಿಯೊಂದಕ್ಕೆ ನಟಿ ರಮ್ಯಾ ನೀಡಿದ ಸಂದರ್ಶನದಲ್ಲಿ ಮಂಗಳೂರಿನಲ್ಲೂ ನರಕ ಇದೆ ಎಂಬ ಹೇಳಿಕೆ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಗುರುವಾರ ಮಂಗಳೂರಿನಲ್ಲಿ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ರಮ್ಯಾ ಬಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರಿವಾರದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಮುಂದುವರಿದು ರಮ್ಯಾ ಪ್ರಯಾಣಿಸುತ್ತಿದ್ದ ಕಾರಿಗೂ ಮೊಟ್ಟೆ ಎಸೆದದ್ದು ಅಲ್ಲದೆ ಮಂಗಳೂರಿನ ಕದ್ರಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ವೇದಿಕೆಯತ್ತ ಮೊಟ್ಟೆ ಎಸೆದು “ಪೌರುಷ” ಪ್ರದರ್ಶಿಸಿದ್ದರು.

ನಟಿ ರಮ್ಯಾ ಯಾವ ಅರ್ಥದಲ್ಲಿ ಮಂಗಳೂರಿನಲ್ಲಿ ನರಕ ಇದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಮಂಗಳೂರು ಒಂದು ವರ್ಗದ ಜನರ ಪಾಲಿಗೆ ಖಂಡಿತವಾಗಿಯೂ ನರಕ. ಒಂದು ಭಾಗದಲ್ಲಿ ಪಶ್ವಿಮ ಘಟ್ಟದ ಹಚ್ಚ ಹಸುರಿನ ಸುಂದರ ಪ್ರದೇಶ, ಇನ್ನೊಂದೆಡೆ ಕಡಲ ತೀರದ ವೈಭವ. ಜೊತೆಗೆ ಮಂಗಳೂರು ಕಲೆ ಸಂಸ್ಕೃತಿ ತಿಂಡಿತಿನಿಸುಗಳಲ್ಲಿ ಪ್ರಸಿದ್ದಿ ಪಡೆದ ಜಿಲ್ಲೆ. ಹೀಗೆ ನೋಡಲು ಸ್ವರ್ಗದಂತಿರುವ ಈ ಜಿಲ್ಲೆಯನ್ನು ಇಲ್ಲಿಯ ಹಿಂದೂ ಮುಸ್ಲಿಮ್ ಮತಾಂಧರು ನರಕ ಮಾಡಲು ಹೊರಟಿದ್ದಾರೆ. ಅದರಲ್ಲಿ ಯಶಸ್ಸನ್ನೂ ಕಾಣುತ್ತಿದ್ದಾರೆ.

ಕಲ್ಲಡ್ಕದಲ್ಲಿ ಹಿಂದೂ ಹುಡುಗಿ ಹಾಗೂ ಮುಸ್ಲಿಮ್ ಹುಡುಗಿ ಜೊತೆಯಲ್ಲಿ ನಡೆದಾಡುವುದೂ ತಪ್ಪು. ಅವರನ್ನು ಸುತ್ತುವರಿಸಿದು ಪ್ರಶ್ನಿಸಿ ಮತಾಂಧರುmangalore_moral1 ನೈತಿಕ ಪೊಲೀಸ್ ಗಿರಿ ನಡೆಸುತ್ತಾರೆ. ಹಿಂದೂ ಯುವತಿಯ ಜೊತೆ ಕಾರಲ್ಲಿ ಪ್ರಯಾಣಿಸಿದ ಎಂಬ ಕಾರಣಕ್ಕಾಗಿ ಮಂಗಳೂರಿನ ಅತ್ತಾವರದಲ್ಲಿ ಯುವಕನೊಬ್ಬನ ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸುತ್ತಾರೆ. ಮುಸ್ಲಿಮ್ ಯುವತಿಯ ಜೊತೆ ಮಾತನಾಡಿದ ಎಂಬ ಕಾರಣಕ್ಕಾಗಿ ಪತ್ರಕರ್ತನೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಯುವಕ ಯುವತಿಯರು ಹುಟ್ಟುಹಬ್ಬದ ಪಾರ್ಟಿ ಆಚರಣೆ ಮಾಡಿದಾಗಲೂ ದಾಳಿ ನಡೆಸಿ ಸುಸಂಸ್ಕೃತಿಯ ಪ್ರದರ್ಶನ ಮಾಡ್ತಾರೆ. ದನ ಸಾಗಾಟ ಮಾಡಿದ್ದಾರೆಂಬ ಆರೋಪ ಹೊರಿಸಿ ಆದಿ ಉಡುಪಿಯಲ್ಲಿ ಹಾಜಬ್ಬ ಹಸನಬ್ಬರನ್ನು ಬೆತ್ತಲೆಗೊಳಿಸಿ ಅಮಾನವೀಯತೆಯನ್ನ ಮೆರೆಯುತ್ತಾರೆ. ದನ ಸಾಗಾಟದ ಆರೋಪದಲ್ಲಿ ಮನಬಂದಂತೆ ಹಲ್ಲೆ ನಡೆಸಿ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡುತ್ತಾರೆ. ಸಾಯುವ ಸಂಧರ್ಭದಲ್ಲಿ ಕುಡಿಯಲು ಸ್ವಲ್ಪ ನೀರು ಕೇಳಿದಾಗಲೂ ಕರುಣೆ ತೋರದೆ ಮನುಷ್ಯತ್ವವನ್ನೇ ಮರೆಯುವ ಇಂಥಹಾ ಘಟನೆಗಳು ಖಂಡಿತಾ ಸ್ವರ್ಗದ ಕಲ್ಪನೆಯಲ್ಲಿ ಕಾಣಲು ಸಾಧ್ಯವಿಲ್ಲ. ಇವುಗಳು ಮತಾಂಧರು ಮಂಗಳೂರನ್ನು ಹೇಗೆ ನರಕವನ್ನಾಗಿ ಪರಿವರ್ತಿಸಿದ್ದಾರೆ ಎಂಬುವುದರ ಉದಾಹರಣೆಗಳಷ್ಟೇ.. ಸ್ವರ್ಗವೆಂದರೆ ಅಲ್ಲಿ ಯಾವ ಭಯವೂ ಇಲ್ಲವಂತೆ. ವಿಪರ್ಯಾಸವೆಂದರೆ ಮಂಗಳೂರಿನಲ್ಲಿ ಭಯದಲ್ಲೇ ಜೀವನ ನಡೆಸುವಂತಾ ನರಕದ ಬದುಕನ್ನು ಇಲ್ಲಿಯ ಮತಾಂಧರು ಸೃಷ್ಟಿಮಾಡ್ತಿದ್ದಾರೆ.

ಮತಾಂಧರು ಸೃಷ್ಟಿಸುತ್ತಿರುವ ನರಕ ಒಂದೆಡೆಯಾದರೆ. ಮಂಗಳೂರಿನಲ್ಲಿ ಕಂಡುಬರುತ್ತಿರುವಂತಹಾ ಆರ್ಥಿಕ ಅಸಮಾನತೆಯ ವ್ಯಾಪಕತೆ ಇಲ್ಲಿ ನರಕದ ಇರುವಿಕೆಯತ್ತಲೇ ಬೊಟ್ಟುಮಾಡಿ ತೋರಿಸುತ್ತಿದೆ. ಆರ್ಥಿಕ ಬೆಳೆವಣಿಗೆಯಲ್ಲಿ ಶಿಕ್ಷಣ ಆರೋಗ್ಯ, ಬ್ಯಾಂಕಿಂಗ್, ಬೃಹತ್ ಕೈಗಾರಿಕೆ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳು ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ದಿ ಕಂಡಿದೆ. ಆದರೆ ಈ ಅಭಿವೃದ್ದಿಯ ಫಲ ಸಮಾನವಾಗಿ ಹಂಚಿಕೆಯಾಗಿದೆಯೇ ? ಮಂಗಳೂರಿನಲ್ಲಿ ಈ ಅಭಿವೃದ್ಧಿಯ ಫಲಗಳನ್ನುಂಡ ಸಮುದಾಯಗಳಾವುವು ? ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಪಾರ ಸಂಪನ್ಮೂಲಗಳನ್ನು ಸೃಷ್ಟಿಸುತ್ತಿರುವ ಈ ಕ್ಷೇತ್ರಗಳಲ್ಲಿ ಹಿಂದುಳಿದವರ, ದಲಿತರ, ಕೊರಗರ, ಮಲೆಕುಡಿಯರ ಹಾಗೂ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಎಷ್ಟಿದೆ? ಈ ಕ್ಷೇತ್ರಗಳಲ್ಲಿ ನಿರ್ವಾಹಕ ಹುದ್ದೆ ಮತ್ತು ಕೂಲಿಕಾರ ಹುದ್ದೆಗಳ ಸಾಮಾಜಿಕ ಸಂರಚನೆ ಯಾವ ರೂಪದಲ್ಲಿದೆ? ಮಂಗಳೂರಿನಲ್ಲಿ ಬೇಕಾದಷ್ಟು ಹೈಟೆಕ್ ಮಲ್ಟೀ ಸ್ಪೆಶಾಲಿಟಿ ಆಸ್ಪತ್ರೆಗಳಿವೆ. ರಾಜ್ಯದ ವಿವಿಧ ಮೂಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಹಣ ಚೆಲ್ಲಲು ತಾಕತ್ತಿದ್ದರಿಗೆ ಇಲ್ಲಿಯ ಆಸ್ಪತ್ರೆಗಳಲ್ಲಿ ಯೋಗ್ಯ ರೀತಿಯ ಚಿಕಿತ್ಸೆಯೂ ದೊರಕುತ್ತದೆ. ಆದ್ರೆ ಬಡವನ ಪಾಲಿಗಂತ್ತೂ ಇದು ದೂರದ ಮಾತು.

ಇದೇ ಮಂಗಳೂರಿನಲ್ಲಿ ಬಡ ರೋಗಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಲ್ಲಿ ಆಸ್ಪತ್ರೆಯ ದುಬಾರಿ ಬಿಲ್ ಪಾವತಿಸಲಾಗದೆ ಹೆಣವನ್ನುMRPL ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡುವಂತಹಾ ಪರಿಸ್ಥಿತಿಯೂ ಇಲ್ಲಿದೆ. ಹೆಣ ಪಡೆದುಕೊಳ್ಳಲೂ ಸಾಲಕ್ಕೆ ಮೋರೆ ಹೋಗುವ ಬಡವನಲ್ಲಿ ಕೇಳಿದ್ರೆ ಮಂಗಳೂರಿನ ವೈದ್ಯಕೀಯ ದಂಧೆಯ ನರಕ ದರ್ಶನವನ್ನು ನಿಮ್ಮ ಕಣ್ಣ ಮುಂದೆ ಕಟ್ಟಿಕೊಡಬಹುದು. ಇದರ ಜೊತೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೂ ಮಂಗಳೂರಿನಲ್ಲಿ ಕೊರತೆಯಿಲ್ಲ. ಸಮಾಜ ಸೇವೆಯ ಮುಖವಾಡ ತೊಟ್ಟು ಶಿಕ್ಷಣವನ್ನ ದಂಧೆ ಮಾಡುವ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಯಂತೆ ಮಂಗಳೂರಿನಲ್ಲಿ ತಲೆಎತ್ತುತ್ತಿವೆ. ಮಗುವಿಗೆ ಎಲ್.ಕೆ.ಜಿ ಶಿಕ್ಷಣ ಕೊಡಿಸಲು ಲಕ್ಷ ಲಕ್ಷ ರೂಪಾಯಿ ಡೊನೇಷನ್ ಕೊಡಬೇಕಾದ ಪರಿಸ್ಥಿತಿ ಇಲ್ಲಿಯ ಪೋಷಕರದ್ದು. ಇನ್ನು ಮಂಗಳೂರಿನಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ ಆದ್ರೆ ಈ ಜಿಲ್ಲೆಯ ಬಡವನೊಬ್ಬನ ಮಗ ಅಥವಾ ಮಗಳು ಡಾಕ್ಟರ್ ಆಗಬೇಕು ಎಂಬ ಕನಸು ಅವನಲ್ಲಿ ನರಕದ ಅನುಭವವನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ.

ಇನ್ನು ಅಭಿವೃದ್ದಿಯ ಪಥದತ್ತ ದಾಪುಗಾಲಿಡುತ್ತಿರುವ ಮಂಗಳೂರಿನ ಧಾರಣಾ ಸಾರರ್ಥ್ಯವನ್ನು ಮೀರಿ ಕೈಗಾರಿಕೆಗಳು ಹಾಗೂ ಸುಸ್ತಿರವಲ್ಲದ ಆರ್ಥಿಕ ಚಟುವಟಿಕೆಗಳು ಕಾಲಿಡುತ್ತಿವೆ. ಮಂಗಳೂರು ಒಂದು ಸೂಕ್ಷ್ಮ ಪರಿಸರ ವಲಯ. ಆದರೆ ಅಂಕೆ ಮೀರಿದ ಹಾಗೂ ಪರಿಸರದ ನಿಯಮಾವಳಿಗಳನ್ನು ಗಾಳಿಗೆ ತೂರುವ ಆರ್ಥಿಕ ಅಭಿವೃದ್ಧಿ ಮಂಗಳೂರಿನ ಸೂಕ್ಷ್ಮ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಂಗಳೂರಿನಲ್ಲಿ ಸ್ವರ್ಗ ನಿರ್ಮಿಸುತ್ತೇವೆ ಎಂಬ ಭ್ರಮೆಯನ್ನು ಸೃಷ್ಟಿಸಿ ಮಂಗಳೂರಿಗೆ ಕಾಲಿಟ್ಟ ಎಸ್.ಇ.ಜೆಡ್, ಎಮ್.ಆರ್.ಪಿ.ಎಲ್ ಕೈಗಾರಿಕೆಗಳು ಸೃಷ್ಟಿಸಿದ ಸ್ವರ್ಗ ಹೇಗಿದೆ ಎಂಬುವುದನ್ನು ತಿಳಿಯಬೇಕಾದರೆ ಒಂದುಬಾರಿ ಮಂಗಳೂರಿನ ಜೋಕಟ್ಟೆ ಪರಿಸರಕ್ಕೆ ಭೇಟಿ ಕೊಡಬೇಕು. ಸ್ವರ್ಗದಲ್ಲಿ ಸಿಗುವ ಶುದ್ಧಜಲವಂತೂ ಇಲ್ಲಿ ಹುಡುಕಿದರೂ ಸಿಗುವುದಿಲ್ಲ ಬಿಡಿ. ಏರುತ್ತಿರುವ ಬಿಸಿ ವಾತಾವರಣ, ಮೂಗುಮುಚ್ಚೋ ಕೆಟ್ಟ ವಾಸನೆ ಹಾಗೂ ಕೋಕ್ ಸಲ್ಫರ್ ಹಾರುಬೂದಿಗಳು ಇಲ್ಲಿಯ ವಾತಾವರಣವನ್ನು ಅಕ್ಷರಸಃ ನರಕವನ್ನಾಗಿಸಿದೆ.

ಇದೀಗ ಮತ್ತೆ ಎಮ್.ಆರ್.ಪಿ.ಎಲ್ ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ 1050 ಎಕರೆ ಭೂಮಿಯ ಬೇಡಿಕೆ ಇಟ್ಟಿದೆ. ಇದು ಜಾರಿಯಾದಲ್ಲಿ ಸ್ವರ್ಗದ ಉದ್ಯಾನವನಗಳಂತಿರುವ ಪೆರ್ಮುದೆ, ಕುತ್ತೆತ್ತೂರು ಗ್ರಾಮಗಳ ಜನರೂ ನರಕವಾಸಿಗಳಾಗಿ ಜೀವಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಜೊತೆಗೆ ಪಶ್ವಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುವ ಎತ್ತಿನಹೊಳೆ ಯೋಜನೆಯೂ ಚುರುಕುಪಡೆದುಕೊಳ್ಳುತ್ತಿದೆ.

ಆದರೆ ಇದ್ಯಾವುದರ ಬಗ್ಗೆ ಯೂ ತಲೆಕೆಡಿಸಿಕೊಳ್ಳದ ಮತಾಂಧ ಸಂಘಟನೆಗಳು ಇದೀಗ ಮಂಗಳೂರಿನಲ್ಲೂ ನರಕವಿದೆ ಎಂದು ನಟಿ ರಮ್ಯಾ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ಮೊಟ್ಟೆ ಬಿಸಾಡುತ್ತಿದ್ದಾರೆ. ರಮ್ಯಾಳಿಗೆ ಮೊಟ್ಟೆ ಬಿಸಾಡಿದ ಯುವಕರೇ ನಿಮ್ಮ ತಂದೆ –ತಾಯಂದಿರ ಬಳಿ ಹೋಗಿ ಒಮ್ಮೆ ವಿಚಾರಿಸಿ ಮಂಗಳೂರು ನಿಮ್ಮ ಪಾಲಿಗೆ ಸ್ವರ್ಗವೇ ಎಂದು ? ಬಹುಷಃ ನಿಮಗೂ ಉತ್ತರ ಸಿಗಬಹುದು.

ಆಂದಹಾಗೆ, ಮಂಗಳೂರು ಹಾಗೂ ಕಾಸರಗೋಡು ಗಡಿ ಭಾಗದಲ್ಲಿ ಒಂದು ಊರಿದೆ. ಆ ಊರಿನ ಹೆಸರೇ ಸ್ವರ್ಗ. ಊರ ಹೆಸರು ನೋಡಿ ಅಲ್ಲಿಗೆendosulfan-250 ಭೇಟಿ ಕೊಟ್ಟರೆ ಆ ಗ್ರಾಮದ ನರಕ ಸದೃಶ್ಯ ಬದುಕಿನ ಅರಿವು ನಿಮಗಾಗುತ್ತದೆ. ಗ್ರಾಮದ ಜನರು ಎಂಡೋಸಲ್ಪಾನ್ ಕೀಟನಾಶಕ ಸಿಂಪಡನೆಯ ಪರಿಣಾಮ ಅನುಭವಿಸುತ್ತಿರುವ ಕರಾಳ ಅನುಭವ ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಊರಿನ ಬಹುತೇಕ ಮನೆಗಳಲ್ಲಿ ಎಂಡೋ ಪೀಡಿತ ಮಕ್ಕಳು ನಿಮಗೆ ಕಾಣಲು ಸಾಧ್ಯ. ಅಸಲಿಗೆ ಈ ಸ್ವರ್ಗ ಎಂಬ ಊರು ಅಲ್ಲಿನ ಗ್ರಾಮಸ್ಥರ ಪಾಲಿಗೆ ನಿಜಕ್ಕೂ ನರಕ. ಆದ್ದರಿಂದ ಮಂಗಳೂರಿನಲ್ಲೂ ನರಕವಿದೆ ಎಂದು ನಟಿ ರಮ್ಯಾ ನೀಡಿದ್ದಾರೆಂಬ ಹೇಳಿಕೆಯಲ್ಲಿ ಖಂಡಿತಾ ತಪ್ಪಿಲ್ಲ. ಸುಂದರ ಜಿಲ್ಲೆಯನ್ನು ನರಕ ಮಾಡಲು ಹೊರಟಿರುವ ಈ ಎಲ್ಲಾ ದುಷ್ಟ ಶಕ್ತಿಗಳನ್ನು ಹೇಗೆ ಸೋಲಿಸಬಹುದೆಂಬುವುದು ನಮ್ಮ ಮುಂದಿರುವ ಸವಾಲು.

ಡಾ.ಝಾಕಿರ್ ನಾಯ್ಕ್ ಮತ್ತು ಸ್ವಧರ್ಮ ಶ್ರೇಷ್ಠತಾ ವ್ಯಸನ


-ಇರ್ಷಾದ್ ಉಪ್ಪಿನಂಗಡಿ


 

ವಿವಾದಿತ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಜಾಕಿರ್ ನಾಯ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ನಾಯ್ಕ್ ಕುರಿತಾಗಿ ಚರ್ಚೆಗಳು ನಡಿಯುತ್ತಿವೆ. ಝಾಕಿರ್ ನಾಯ್ಕ್ ಮತ್ತೆ ವಿವಾದದ ಕೇಂದ್ರ ಬಿಂದುವಾಗಲು ಕಾರಣ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿ. 25 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ರೂವಾರಿಗಳು ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳಿಂದ ಪ್ರಭಾವಿತಗೊಂಡಿದ್ದರು ಎಂಬ ಮಾಹಿತಿ. ಪರಿಣಾಮ ತನಿಖಾ ಸಂಸ್ಥೆಗಳು ಝಾಕಿರ್ ನಾಯ್ಕ್ ದೇಶ ವಿದೇಶಗಳಲ್ಲಿ ಮಾಡಿರುವ ಧರ್ಮ ಪ್ರಚಾರ ಭಾಷಣಗಳ ತನಿಖೆಗೂ ಮುಂದಾಗಿವೆ. ಮಾಧ್ಯಮಗಳು “ಬ್ಯಾನ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಮೂಲಕ ಕ್ಯಾಂಪೇನ್ ನಡೆಸುತ್ತಿವೆ. ಇನ್ನೊಂದೆಡೆ ಝಾಕಿರ್ ನಾಯ್ಕ್ ಅಭಿಮಾನಿಗಳ “ಐ ಆಮ್ ವಿಥ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಕ್ಯಾಂಪೇನ್ ಕೂಡಾ ಜೋರಾಗಿದೆ. ಹಾಗಾದರೆ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳೇನು? ಯುವ ಮನಸ್ಸುಗಳಲ್ಲಿ ಕ್ರೌರ್ಯವನ್ನು ತುಂಬುವಷ್ಟು ವಿಷಪೂರಿತವಾಗಿವೆಯಾ ನಾಯ್ಕ್ ಚಿಂತನೆಗಳು? ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿಯೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕಿದೆ.

ಯಾರು ಈ ಡಾ. ಝಾಕಿರ್ ನಾಯ್ಕ್?

ಪೀಸ್ ಟಿವಿ ಎಂಬ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ವಾಹಿನಿಯನ್ನು ವೀಕ್ಷಿಸುತ್ತಿರುವ ಎಲ್ಲರಿಗೂ ಡಾ. ಝಾಕಿರ್ ನಾಯ್ಕ್ ಚಿರಪರಿಚಿತ. dr zhakir naikತಲೆಗೊಂದು ಟೊಪ್ಪಿ, ಮೀಸೆಯನ್ನು ಕತ್ತರಿಸಿ ಗಡ್ಡ ಬಿಟ್ಟು ಸೂಟ್ ಧರಿಸಿ ವಿದ್ಯುತ್ ಅಲಂಕಾರಗಳಿಂದ ಕೂಡಿರುವ ಜಗಮಗಿಸುವ ಸೆಟ್ ನಲ್ಲಿ ನಿಂತು ಸಾವಿರಾರು ಜನರ ಮುಂದೆ ಧರ್ಮಪ್ರವಚನ ನೀಡುತ್ತಾ ಇಸ್ಲಾಮ್ ಧರ್ಮದ ಪ್ರಚಾರ ಮಾಡುತ್ತಾರೆ. ಸಭಿಕರು ಇಸ್ಲಾಮ್ ಕುರಿತಾಗಿ ಕೇಳುವ ಪ್ರೆಶ್ನೆಗಳಿಗೆ ಕುರುಆನ್ ಹಾಗೂ ಹದೀಸ್ ಗಳನ್ನು ಮುಂದಿಟ್ಟುಕೊಂಡು ತನ್ನದೇ ಆದ ರೀತಿಯಲ್ಲಿ ಉತ್ತರವನ್ನು ಕೊಡುವ ಚಾಣಾಕ್ಷ ಮಾತುಗಾರ ಡಾ. ಝಾಕಿರ್ ನಾಯ್ಕ್. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸ್ಥಾಪಕರಾಗಿರುವ ಝಾಕಿರ್ ನಾಯ್ಕ್ ಧರ್ಮ ಪ್ರಚಾರ ಕಾರ್ಯಕ್ರಮಕ್ಕೆ ಬರುವವರು ಕೇವಲ ಮುಸ್ಲಿಮರಷ್ಟೇ ಅಲ್ಲ, ಹಿಂದೂ ಕ್ರೈಸ್ತ ಸಮುದಾಯದವರೂ ಬರುತ್ತಾರೆ. ಇಸ್ಲಾಮ್ ಕುರಿತಾಗಿ ತಮ್ಮ ಪ್ರೆಶ್ನೆಗಳನ್ನು ಡಾ. ನಾಯ್ಕ್ ಮುಂದಿಡುತ್ತಾರೆ. ಹೀಗೆ ಪ್ರೆಶ್ನೆ ಕೇಳುತ್ತಾ ಚರ್ಚೆ ನಡೆಸುತ್ತಾ ನೂರಾರು ಮಂದಿ ಇಸ್ಲಾಮ್ ಧರ್ಮವನ್ನು ಬಹಿರಂಗವಾಗಿಯೇ ಸ್ವೀಕಾರ ಮಾಡುತ್ತಾರೆ. ಪೀಸ್ ಟಿವಿ ಮೂಲಕ ಜನಜನಿತವಾಗಿರುವ ಡಾ.ಜಾಕಿರ್ ನಾಯ್ಕ್ ಗೆ ದೇಶ ವಿದೇಶಗಳಾದ್ಯಂತ ಅಭಿಮಾನಿಗಳಿದ್ದಾರೆ. ಡಾ. ಝಾಕಿರ್ ನಾಯ್ಕ್ ಇದುವರೆಗೂ ಪ್ರಪಂಚದಾದ್ಯಂತ 4000 ಕ್ಕೂ ಅಧಿಕ ಧಾರ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಅವೆಲ್ಲವೂ ಪೀಸ್ ಟಿವಿ ಮೂಲಕ ಪ್ರಸಾರವಾಗುತ್ತವೆ. ಕೆಲವು ದೇಶಗಳಲ್ಲಿ ಇವರು ಧರ್ಮ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಹಾಗೂ ಇವರ ಭಾಷಣಗಳನ್ನು ಪ್ರಸಾರ ಮಾಡುವ ಪೀಸ್ ಟಿವಿ ವಾಹಿನಿಗೂ ನಿಷೇಧವಿದೆ. ಗಮನಾರ್ಹವಾದ ಸಂಗತಿ ಏನೆಂದರೆ ಮುಸ್ಲಿಮ್ ಯುವ ಸಮೂಹ ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳತ್ತ ಇತ್ತೀಚೆಗೆ ಹೆಚ್ಚಾಗಿ ವಾಲುತ್ತಿವೆ. ಮನೆ ಮನೆಗಳಲ್ಲಿ ಟಿವಿ ಮೂಲಕ ಇವರ ಧಾರ್ಮಿಕ ವಿಚಾರಧಾರೆಗಳನ್ನು ವೀಕ್ಷಿಸುವವರಲ್ಲಿ ಯುವ ಸಮೂಹದ್ದೇ ಅಧಿಕ ಪಾಲು.

ಡಾ. ಜಾಕಿರ್ ನಾಯ್ಕ್ ಹಾಗೂ ಧರ್ಮ ಶ್ರೇಷ್ಠತಾ ವ್ಯಸನ

ಡಾ. ಜಾಕಿರ್ ನಾಯ್ಕ್ ವಹಾಬಿ ಇಸ್ಲಾಮ್ ಪ್ರತಿಪಾದಕ. 18 ನೇ ಶತಮಾನದಲ್ಲಿ ಅರೇಬಿಯಾದಲ್ಲಿ ಅಬ್ದುಲ್ ವಹಾಬ್ ಎಂಬುವವರು ಈ ಪಂಥವನ್ನು ಹುಟ್ಟುಹಾಕಿದರು. ಭಾರತೀಯ ಮುಸ್ಲಿಮರು ಪಾಲಿಸಿಕೊಂಡು ಬಂದ ಸೂಫೀ ಪರಂಪರೆಯ ಇಸ್ಲಾಮ್ ಧರ್ಮವನ್ನು ಈ ವಹಾಬಿ ಸಿದ್ದಾಂತವಾದಿಗಳು ಒಪ್ಪುವುದಿಲ್ಲ. ಕಾರಣ ಭಾರತೀಯ ಮುಸ್ಲಿಮರು ಪಾಲಿಸುವ ಇಸ್ಲಾಮ್ “ಅಶುದ್ಧಿಯಾಗಿದೆ” ಹಾಗೂ ಸೂಫಿ ವಿಚಾರಧಾರೆಗಳಿಂದ ಪ್ರಭಾವಿತವಾಗಿ ಇತರ ಧರ್ಮಗಳ ಸಂಸ್ಕೃತಿ ಹಾಗೂ ಆಚರಣೆಗಳನ್ನೂ ಇಸ್ಲಾಮ್ ಧರ್ಮದಲ್ಲಿ ಅಳವಡಿಸಿಕೊಂಡಿವೆ. ಇದು ಧರ್ಮ ನಿಷಿದ್ಧ ಕಾರ್ಯ ಎಂಬುವುದು ವಹಾಬಿ ಮೂಲಭೂತವಾದಿಗಳ ವಾದ. ಈ ಕಾರಣಕ್ಕಾಗಿ ಧರ್ಮದ ಪರಿಶುದ್ದೀಕರಣದ ಹೆಸರಲ್ಲಿ ಸೌದಿ ಅರೇಬಿಯಾದ ಕಟ್ಟರ್ ವಹಾಬಿ ಚಿಂತನೆಯನ್ನು ನೈಜ್ಯ ಇಸ್ಲಾಮ್ ಎಂದು ಬಿಂಬಿಸಲು ಇವರು ಹೊರಟಿದ್ದಾರೆ. ಡಾ. ಜಾಕಿರ್ ನಾಯ್ಕ್ ಮಾಡುತ್ತಿರುವುದು ಈ ಕಾರ್ಯವನ್ನೇ. ಪರಿಶುದ್ದ ಇಸ್ಲಾಮ್ ಹೆಸರಿನಲ್ಲಿ ವಹಾಬಿ ಮೂಲಭೂತವಾದ ಸಿದ್ದಾಂತವನ್ನು ವಿಶ್ವದಾದ್ಯಂತ ಪ್ರಚುರ ಪಡಿಸುವುದು ನಾಯ್ಕ್ ನೇತ್ವತ್ವದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯ ಪ್ರಮುಖ ಉದ್ದೇಶ. ಇವರ ಧಾರ್ಮಿಕ ಪ್ರವಚನಗಳನ್ನು ಆಲಿಸಿದಾಗ ಅವರಲ್ಲಿರುವ ಧರ್ಮ ಶ್ರೇಷ್ಠತಾ ವ್ಯಸನ ಎದ್ದು ಕಾಣುತ್ತದೆ. ಇಸ್ಲಾಮ್ ಧರ್ಮ ಹೊರತುಪಡಿಸಿ ಇತರ ಎಲ್ಲಾ ಧರ್ಮಗಳು ನ್ಯೂನ್ಯತೆಯಿಂದ ಕೂಡಿದೆ ಎಂಬ ವಾದ ಇವರ ಮತಪ್ರವಚನಗಳಲ್ಲಿ ಪದೇ ಪದೇ ಉಲ್ಲೇಖವಾಗುತ್ತದೆ. ತಾನು ಪಾಲಿಸುತ್ತಿರುವ ಧರ್ಮವನ್ನು ಸಮರ್ಥಿಸುತ್ತಾ ಹಾಗೂ ಅದರ ಶ್ರೇಷ್ಠತೆಯನ್ನು ಸಾರುತ್ತಾ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮನೋಭಾವ ಯಾವ ಧರ್ಮದಲ್ಲೇ ಇರಲಿ ಅದು ತೀರಾ ಅಪಾಯಕಾರಿ.

ಇತರ ಧರ್ಮಗಳ ಬಗ್ಗೆ ವಿಮರ್ಶಿಸುವುದು ಖಂಡಿತಾ ತಪ್ಪಲ್ಲ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಅಥವಾ ಇನ್ನಾವುದೇ ಧರ್ಮದ ಅನುಯಾಯಿಗಳುdr zhakir naik_1 ಪರಸ್ಪರ ಎಲ್ಲಾ ಧರ್ಮಗಳ ಕುರಿತಾಗಿ ಚರ್ಚೆ ನಡೆಸಲು ಹಾಗೂ ವಿಮರ್ಶಿಸಲು ಅವಕಾಶವಿದೆ, ಇರಬೇಕು ಕೂಡಾ. ಆದರೆ ಇದು ವೈಜ್ಞಾನಿಕ ನೆಲೆಯಲ್ಲಿರಬೇಕು. ಹಾಗಲ್ಲದೆ, ತನ್ನ ಧರ್ಮದ ಶ್ರೇಷ್ಠತೆಯನ್ನು ಸಾರುವ ಭರದಲ್ಲಿ ಮತ್ತೊಂದು ಧರ್ಮದ ಅಸ್ತಿತ್ವವನ್ನೇ ನಿರಾಕರಿಸಿಸುವುದು ಹಾಗೂ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು ಮಾತ್ರ ಅತಿರೇಕದ ನಡವಳಿಕೆ. ಡಾ. ಝಾಕಿರ್ ನಾಯ್ಕ್ ಬಹುತೇಕ ವಾದಗಳಲ್ಲೂ ಪರಧರ್ಮ ಅಸಹಿಷ್ಠುತಾ ಮನೋಭಾವ ಹೊಂದಿರುವುದು ಎದ್ದು ಕಾಣುತ್ತಿದೆ. ಇದು ಕೇವಲ ಝಾಕಿರ್ ನಾಯ್ಕ್ ರಲ್ಲಿ ಮಾತ್ರವಲ್ಲ ಅವರ ವಿಚಾರಧಾರೆಗಳನ್ನು ಪಾಲಿಸುವ ಸಿದ್ದಾಂತವಾದಿಗಳಲ್ಲೂ ಕಂಡುಬರುತ್ತದೆ. ಡಾ. ಝಾಕಿರ್ ನಾಯ್ಕ್ ಅವರ ಚಿಂತನೆಯನ್ನು ಪ್ರಚಾರ ಪಡಿಸುವ ಸಲಫೀ, ಅಹ್ಲೆಹದೀಸ್ ಸಿದ್ದಾಂತವಾದಿಗಳಲ್ಲಿ ಚರ್ಚೆ ನಡೆಸಿದರೆ ಅವರಲ್ಲಿ ಪರಧರ್ಮ ಅಸಹಿಷ್ಠುತಾ ಮನೋಭಾವ ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ನಾವು ಕಾಣಬಹುದು. ಇಸ್ಲಾಮ್ ಧರ್ಮವನ್ನು ಹೊರತುಪಡಿಸಿ ಇನ್ನೊಂದು ಧರ್ಮದ ಅಸ್ತಿತ್ವವನ್ನೇ ಇವರು ಒಪ್ಪಲು ತಯಾರಿಲ್ಲ.

“ಬಹುಸಂಸ್ಕೃತಿ, ಕೂಡುಕೊಳ್ಳುವಿಕೆ ಮುಸ್ಲಿಮರ ಪಾಲಿಗೆ ಧರ್ಮ ನಿಷಿದ್ಧ. ನೈಜ್ಯ ಮುಸಲ್ಮಾನನೊಬ್ಬ ಹಿಂದೂಗಳ ಹಬ್ಬಹರಿದಿನಗಳಲ್ಲಿ ಭಾಗವಹಿಸಲಾರ, ಅವರು ಕೊಡುವ ಹಬ್ಬದೂಟವನ್ನೂ ಸ್ವೀಕರಿಸುವುದು ಧರ್ಮಬಾಹಿರ” ಎನ್ನುತ್ತಾರೆ ಮಂಗಳೂರಿನ ಸಲಫಿ ಮೂಮೆಂಟ್ ಮುಖಂಡರೊಬ್ಬರು. ಧರ್ಮಾಂಧತೆಯ ನಶೆಯಲ್ಲಿ ಮುಳುಗಿರುವ ಬಹುತೇಕ ಯುವಕರು ವಾದ ಮಾಡುವವಾಗ ಬಳಸುವುದು ಡಾ. ಝಾಕಿರ್ ನಾಯ್ಕ್ ಬಳಸೋ ಮೆಟೀರಿಯಲ್ ಗಳನ್ನೇ. ಬಹುಸಂಸ್ಕೃತಿ ವಿರೋಧಿ ಮನೋಭಾವ ಹಾಗೂ ಸ್ವಧರ್ಮ ಶ್ರೇಷ್ಠತಾ ವ್ಯಸನ ಯುವಮನಸ್ಸುಗಳಲ್ಲಿ ಆಳವಾಗಿ ಬೆರೂರುತ್ತಿರುವುದಕ್ಕೆ ಡಾ.ನಾಯ್ಕ್ ಕೊಡುಗೆ ತುಂಬಾನೇ ಇದೆ. ಇನ್ನೂ ಅಪಾಯಕಾರಿಯಾದ ಸಂಗತಿ ಏನಂದರೆ ಝಾಕಿರ್ ನಾಯ್ಕ್ ಮುಸ್ಲಿಮ್ ಯುವಮನಸ್ಸುಗಳಲ್ಲಿ ಸರ್ವಶ್ರೇಷ್ಠ ಮುಸ್ಲಿಮ್ ಧರ್ಮಗುರುವಾಗಿ ಸ್ಥಾನಪಡೆದುಕೊಳ್ಳುತ್ತಿರುವುದು. ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳಿಗೆ ಭಿನ್ನವಾದ ಚಿಂತನೆಗಳು ಇಸ್ಲಾಮ್ ಧರ್ಮದಲ್ಲಿದ್ದರೂ ಅಲ್ಲದೆ ಅವರು ಪ್ರಚುರಪಡಿಸುವ ವಹಾಬಿ ಮೂಲಭೂತವಾದಿ ಚಿಂತನೆಗೆ ಮುಸ್ಲಿಮ್ ಸಮೂಹದಲ್ಲಿ ವಿರೋಧವಿದ್ದರೂ ಇಂದಿನ ಯುವಕರ ಪಾಲಿಗೆ ಡಾ. ಝಾಕಿರ್ ನಾಯ್ಕ್ ಪ್ರಮುಖ ಮುಸ್ಲಿಮ್ ಧಾರ್ಮಿಕ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.

ಇತ್ತೀಚೆಗೆ ಕೆಲ ಮುಸ್ಲಿಮ್ ಯುವಕರಂತೂ ಅತಿಧಾರ್ಮಿಕತೆಯ ಗುಲಾಮರಾಗುತ್ತಿದ್ದಾರೆ. ಧಾರ್ಮಿಕತೆಯ ಗುಂಗಿನಲ್ಲೇ ದಿನದ ಅಧಿಕ ಸಮಯವನ್ನು ಕಳೆಯುವ ಸುಶಿಕ್ಷಿತ ಮುಸ್ಲಿಮ್ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ವಯೋಸಹಜ ನಡವಳಿಕೆಗೆ ಬದಲಾಗಿ ಪರಲೋಕ ಸ್ವರ್ಗ ನರಕಗಳ ಕುರಿತಾದ ವಿಚಾರಗಳಲ್ಲಿ ಅತಿಯಾಗಿ ತಲೆಕೆಡಿಸಿಕೊಳ್ಳುತ್ತಾರೆ. ಸಂಗೀತ, ಕಲೆ, ಸಿನಿಮಾಗಳ ವಿರುದ್ಧವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಲ್ಲದೆ ಇಂತಹಾ ಮನಸ್ಥಿತಿ ಹೊಂದಿರುವ ಯುವಕರು ಲೌಕಿಕ ಜೀವನದ ಕುರಿತಾಗಿ ತಾತ್ಸಾರ ಮನೋಭಾವ ಹೊಂದಿರುತ್ತಾರೆ. ಈ ಲೌಕಿಕ ಜೀವನವಿರುವುದೇ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಲು; ನಮ್ಮ ಬದುಕು ಏನಿದ್ದರೂ ಪರಲೋಕದಲ್ಲ ಎಂಬ ನಂಬಿಕೆ ಅತಿಯಾಗಿ ಧರ್ಮಪಾಲನೆ ಹಾಗೂ ಧರ್ಮರಕ್ಷಣೆಯೇ ಈ ಯುವಕರ ಜೀವನದ ಪರಮ ಗುರಿಯಾಗುತ್ತಿದೆ. ನನ್ನ ಸ್ನೇಹಿತನೊಬ್ಬ ಮಧ್ಯಾಹ್ಮದ ನಮಾಜ್ ಮಾಡಲು ಕಚೇರಿಯಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕಾಗಿ ಸಿಕ್ಕಿದ್ದ ಉತ್ತಮ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದ. ಐಸೀಸ್ ಗೆ ಸೇರಿದ್ದಾರೆಂದು ಶಂಕಿಸಲ್ಪಡುತ್ತಿರುವ ಕೇರಳದ ಯುವಕರ ಪೋಷಕರೊಬ್ಬರು ತನ್ನ ಮಗನ ಅತಿಧಾರ್ಮಿಕತೆಯ ಬಗ್ಗೆ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ನಿಜಕ್ಕೂ ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಆ ಯುವಕನ ಅತಿಧಾರ್ಮಿಕತೆ ಎಷ್ಟಿತ್ತೆಂದರೆ ತನ್ನ ತಂದೆಯನ್ನೇ “ಕಾಫಿರ್ ” ಎಂದು ಕರೆದಿದ್ದ. ಶರಿಯಾ ಕಾನೂನು ಜಾರಿಗಾಗಿ ಹೋರಾಡುತ್ತೇನೆ ಎಂದಿದ್ದನಂತೆ. ತನ್ನ ಹೋರಾಟದ ಮೂಲಕ ಸ್ವರ್ಗ ಪಡೆಯುತ್ತೇನೆ ಎನ್ನುತ್ತಿದ್ದನಂತೆ. ಈ ರೀತಿಯಲ್ಲಿ ಅತಿಧಾರ್ಮಿಕತೆಯತ್ತ ವಾಲುತ್ತಿರುವ ಯುವಮನಸ್ಸುಗಳ ಮೇಲೆ ಡಾ.ಝಾಕಿರ್ ನಾಯ್ಕ್ ಪ್ರಭಾವ ಬಹಳಷ್ಟಿದೆ. ಅತಿಧಾರ್ಮಿಕತೆ ಮಿತಿಮೀರಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬುವುದು ಇಂದು ನಾವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಂತಹಾ ನೆರೆ ರಾಷ್ಟ್ರಗಳಲ್ಲಿ ಕಾಣಸಿಗುತ್ತದೆ.

ಕೇಂದ್ರ ಸರ್ಕಾರದ ಕಣ್ಣು ಕೇವಲ ಡಾ. ಝಾಕಿರ್ ನಾಯ್ಕ್ ವಿರುದ್ಧ ಯಾಕೆ ?

ಬಾಂಗ್ಲಾದೇಶದಲ್ಲಿ ನಡೆದ ಭಯೋತ್ಪಾಧನಾ ಕೃತ್ಯದ ನಂತರ ಡಾ. ಝಾಕಿರ್ ನಾಯ್ಕ್ ಮೇಲೆ ನಿಗಾ ಇಡಲು ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.gujarat_violence_1 ಆದರೆ ಡಾ. ಝಾಕಿರ್ ನಾಯ್ಕ್ ಎಂಬ ಇಸ್ಲಾಮ್ ಮೂಲಭೂತವಾದಿ ಧಾರ್ಮಿಕ ಮುಖಂಡನನ್ನು ಮಾತ್ರ ನಿಯಂತ್ರಿಸಿದರೆ ಸಾಕೇ? ಹಿಂದುತ್ವದ ಹೆಸರಲ್ಲಿ ಅಮಾಯಕರ ರಕ್ತ ಹರಿಸಲು ಪ್ರೇರೇಪಿಸುವ ಫ್ಯಾಸಿಸ್ಟ್ ಕೋಮುವಾದಿಗಳ ಬಾಯಿಗೆ ಬೀಗ ಹಾಕುವವರು ಯಾರು? ಬಾಂಗ್ಲಾದ ಇಸ್ಲಾಮಿಕ್ ಭಯೋತ್ಪಾದಕರು ಡಾ. ಝಾಕಿರ್ ನಾಯ್ಕ್ ರಿಂದ ಪ್ರಭಾವಿತರಾದರೆ ಹಿಂದುತ್ವದ ಹೆಸರಲ್ಲಿ ಅಮಾಯಕ ಮುಸ್ಲಿಮರ ರಕ್ತ ಹರಿಸುವವರಿಗೆ ಅಥವಾ ದಾಬೋಳ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಮಾಡಿದ ಹಿಂದುತ್ವ ಭಯೋತ್ಪಾದಕರಿಗೆ ಸಾದ್ವಿ ಪ್ರಾಗ್ಯ, ಮಾಯಾ ಕೊಡ್ನಾನಿ, ಪ್ರವೀಣ್ ತೊಗಾಡಿಯಾ, ಸ್ವಾದ್ವಿ ಪ್ರಾಚಿ, ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥರಂತಹಾ ಹಿಂದೂ ಮೂಲಭೂತವಾದಿಗಳು ಆದರ್ಶಪ್ರಾಯರಾಗಿದ್ದಾರೆ. ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಪ್ರಚೋದನೆಯಿಂದ ಕೂಡಿದ ಹೇಳಿಕೆಯನ್ನು ನೀಡುತ್ತಾ ಮುಝಾಫರ್ ನಗರ್, ದಾದ್ರಿಯಂತಹಾ ಹತ್ತಾರು ಅಮಾನುಷ ಘಟನೆಗಳಿಗೆ ಕಾರಣರಾದವರಲ್ಲವೇ ಇವರು. ಡಾ. ನಾಯ್ಕ್ ರಂತೆ ಧರ್ಮ ಶ್ರೇಷ್ಠತಾ ವ್ಯಸನ ಪ್ರಖರ ಹಿಂದುತ್ವವಾದಿಗಳಲ್ಲೂ ಹೆಚ್ಚಾಗುತ್ತಿದೆ. ಈ ಕೋಮುವಾದಿಗಳ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುವುದು ಪ್ರಶ್ನಾರ್ಹ ಸಂಗತಿ.

ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದ ಹಾಗೂ ಕೋಮುವಾದ ಮನುಕುಲಕ್ಕೆ ಅಪಾಯಕಾರಿ. ಕೇವಲ ಒಬ್ಬ ವ್ಯಕ್ತಿಯ ವಿರುದ್ಧ ಕ್ರಮಕೈಗೊಂಡರೆ ಸಾಲದು. ಬದಲಾವಣೆಯಾಗಬೇಕಾಗಿರೋದು ಜನರ ಮನಸ್ಸಿನಲ್ಲಿ. ಈ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯೋನ್ಮುಖರಾಗಬೇಕಿದೆ. ಧಾರ್ಮಿಕತೆಗೆ ವಿರೋಧವಿಲ್ಲ. ಆದರೆ ಅತಿ ಧಾರ್ಮಿಕತೆ ಯಾವತ್ತೂ ಅಪಾಯಕಾರಿ. ಸಂವಿಧಾನದ ಪ್ರಕಾರ ಎಲ್ಲರಿಗೂ ತಮ್ಮ ತಮ್ಮ ವಿಚಾರಧಾರೆಗಳನ್ನು ವ್ಯಕ್ತಪಡಿಸಲು ಹಾಗೂ ಪ್ರಚುರಪಡಿಸಲು ಹಕ್ಕಿದೆ. ಆದರೆ ಸದ್ಯ ನಮಗೆಲ್ಲಾ ಬೇಕಾಗಿರೋದು ಡಾ. ಝಾಕಿರ್ ನಾಯ್ಕ್ ಪ್ರಚಾರ ಪಡಿಸುವ ಇಸ್ಲಾಂ ಮೂಲಭೂತವಾದಿ ಸಿದ್ದಾಂತವಲ್ಲ ಅಥವಾ ಸಂಘಪರಿವಾರದ ಫ್ಯಾಶಿಸ್ಟ್ ಕೋಮುವಾದಿ ಸಿದ್ದಾಂತವದ ಪ್ರಚಾರವಲ್ಲ. ಬದಲಾಗಿ ಅಗತ್ಯವಿರೋದು ಮಾನವೀಯತೆ ಹಾಗೂ ಜೀವಪರ ವಿಚಾರಗಳನ್ನು ಯುವಮನಸ್ಸಿನೊಳಗೆ ಬಿತ್ತುವ ವಿಚಾರಾಧಾರೆಗಳು. ಒಡೆದುಹೋಗುತ್ತಿರುವ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕಿರುವುದು ಇಂದಿನ ಜರೂರತ್ತು.

ಕೊನೆಗೊಂದು ಮಾತು ಹೇಳಲೇ ಬೇಕು. ಬಾಂಗ್ಲಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಉಗ್ರರು ಕುರಾನ್ ಪಠಿಸಲು ಬಾರದವರ ಕತ್ತುಸೀಳಿ ಹತ್ಯೆ ಮಾಡಿದ್ದರು. ಈ ಸಂದರ್ಭದಲ್ಲಿ ತನ್ನ ಗೆಳತಿ ತರುಷಿ ಜೊತೆಗಿದ್ದ ಮುಸ್ಲಿಮ್ ಯುವಕ ಫರಾಜ್ ಹುಸೇನ್ ಗೆ ಮುಸ್ಲಿಮ್ ಎಂಬ ಕಾರಣಕ್ಕಾಗಿ ಉಗ್ರರು ಜೀವದಾನವನ್ನು ನೀಡಿದ್ದರು. ಆದರೆ ಅದನ್ನ ತಿರಸ್ಕರಿಸಿ ಹುಸೇನ್ ಗೆಳತಿಯೊಡನೆ ತನ್ನ ಪ್ರಾಣತೆತ್ತ. ಈತನ ಪ್ರಾಣವನ್ನು ಕಸಿದುಕೊಂಡ ಉಗ್ರರಿಗೆ ಡಾ.ಝಾಕಿರ್ ನಾಯ್ಕ್ ಮಾದರಿಯಾದರೆ ನಮಗೆ ಮಾದರಿಯಾಗಬೇಕಾಗಿರುವುದು ಧರ್ಮಾಂಧರನ್ನು ಧಿಕ್ಕರಿಸಿ ಮಾನವಧರ್ಮವನ್ನು ಎತ್ತಿಹಿಡಿದ ನೈಜ್ಯ ಮುಸ್ಲಿಮ್ ಫರಾಜ್ ಹುಸೇನ್.

ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆ ಹಾಗೂ  ಸಂತ್ರಸ್ತರ ಗೋಳು


-ಇರ್ಷಾದ್ ಉಪ್ಪಿನಂಗಡಿ


“ನನಗೆ ನಾಲ್ಕು ಎಕರೆ ಕೃಷಿ ಇದೆ. ಕೃಷಿ ನನ್ನ ಪಾಲಿನ ದೇವರು. ಕಷ್ಟ ಪಟ್ಟು ತನ್ನ ಮಕ್ಕಳಂತೆ ಈ ಜಮೀನಿನಲ್ಲಿ ಮರಗಿಡಗಳನ್ನು  ನೆಟ್ಟು ಬೆಳೆಸಿದ್ದೇನೆ. ಇದೀಗ ಕೈಗಾರಿಕೆಗಂತ ನನ್ನ ಭೂಮಿಯನ್ನ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಜೀವ ಹೋದರೂ ನನ್ನMRPL ಜಮೀನನ್ನು ಕಂಪನಿಗೆ ಬಿಟ್ಟು ಕೊಡುವುದಿಲ್ಲ. ನನ್ನ ಬದುಕನ್ನು ಉಳಿಸಿಕೊಳ್ಳಲು ಅದ್ಯಾವ ರೀತಿಯ ಹೋರಾಟಕ್ಕೂ ನಾನು ತಯಾರಿದ್ದೀನಿ” ಹೀಗೆ ಆಕ್ರೋಶ ಭರಿತ ದುಖಃದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡವರ ಹೆಸರು ಮೊಂತಿ ಡಿಸೋಜಾ. ಮಂಗಳೂರಿನ ಪೆರ್ಮುದೆ ನಿವಾಸಿಯಾಗಿರುವ ಮೊಂತಿ ಡಿಸೋಜಾಗೆ 78 ವರ್ಷ. ನಡೆಯಲು ಆಧಾರಕ್ಕಾಗಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಬೆಳೆದು ನಿಂತ ಪೈರು, ಹಚ್ಚ ಹಸಿರಾಗಿರುವ ತೋಟವನ್ನು ತೋರಿಸುತ್ತಾ ಕಂಪನಿಯವರು ಕೇಳ್ತಾರಂತಾ ಇದನ್ನೆಲ್ಲಾ ಬಿಟ್ಟುಕೊಟ್ಟು ನಾನು ಎಲ್ಲಿಗೆ ಹೋಗಲಿ ಅಂದಾಗ ಅವರ ಕಣ್ಣಲ್ಲಿ ಕಣ್ಣೀರು ತೊಟ್ಟಿಕ್ಕುತಿತ್ತು. ಹತ್ತು ವರ್ಷದ ಹಿಂದೆ ಕೂಡಾ ಮೊಂತಿ ಡಿಸೋಜಾರಿಗೆ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ರಾಜ್ಯ ಸರ್ಕಾರ ರೈತರ ಕೃಷಿ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿತ್ತು. ಭಾರೀ ಹೋರಾಟ ನಡೆಸಿ ಮೊಂತಿ ಡಿಸೋಜಾ ತನ್ನ ಕೃಷಿ ಭೂಮಿಯನ್ನ ಉಳಿಸಿಕೊಂಡಿದ್ದರು. ಒಲಿದುಕೊಂಡ ಭೂಮಿಯಲ್ಲಿ ಕೃಷಿ ಅಭಿವೃದ್ದಿಗೊಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಏನಂತೆ, ಇದೀಗ ಮತ್ತೆ ಎಂ.ಆರ್.ಪಿ.ಎಲ್  ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ ಸಾವಿರಾರು ಎಕರೆ ಭೂಸ್ವಾಧೀನಕ್ಕೆ ಮುಂದಾಗಿದೆ. ಪರಿಣಾಮ ಭೂಸ್ವಾಧೀನದ ಭೂತ ಮೊಂತಿಬಾಯಿಯವರನ್ನು ಮತ್ತೊಮ್ಮೆ ಕಾಡಲಾರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಎಂ.ಆರ್.ಪಿ.ಎಲ್ ಕಾಲಿಟ್ಟಾಗಿನಿಂದಲೂ ಅದು ಸ್ಥಳೀಯರ ನಿದ್ದೆಗೆಡೆಸಿದೆ. 2006 ರಲ್ಲಿ ಎಂ.ಆರ್.ಪಿ.ಎಲ್wiliyam disoza ನೇತ್ರತ್ವ ಹಾಗೂ ಪಾಲುಗಾರಿಕೆಯಲ್ಲಿ ರೂಪು ತಳೆದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ರಾಜ್ಯ ಸರ್ಕಾರ ಈಗಾಗಲೇ 2017 ಎಕರೆ ಜಮೀನನ್ನು ರೈತರಿಂದ ಕಿತ್ತು ಕೊಟ್ಟಿದೆ. ಈ ಪೈಕಿ ಎಸ್.ಇ.ಜೆಡ್ ನೊಳಗೆ ವಿವಿಧ ಘಟಕಗಳ ಸ್ಥಾಪನೆಗಾಗಿ ಬಳಕೆಯಾಗಿರುವುದು ಕೇವಲ 717 ಎಕರೆ. ಉಳಿದ 1300 ಎಕರೆ ಜಮೀನು ಖಾಲಿ ಇದ್ದರೂ ತೃಪ್ತಿಗೊಳ್ಳದ ಎಂ.ಆರ್.ಪಿ.ಎಲ್ ಇದೀಗ ಮತ್ತೆ ಮಂಗಳೂರು ತಾಲೂಕಿನ ತೂಕೂರು, ಬೈಕಂಪಾಡಿ, ತಣ್ಣೀರುಬಾವಿ, ಕಳವಾರು, ಬಾಳ, ಜೋಕಟ್ಟೆ, ಪೆರ್ಮುದೆ, ಕುತ್ತೆತ್ತೂರು, ಸೂರಿಂಜೆ ಹಾಗೂ ದೇಲಂತಬೆಟ್ಟು ಗ್ರಾಮಗಳ ಸುಮಾರು 1050 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಡುವಂತೆ ಕರ್ನಾಟಕ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಅಲ್ಲದೆ ಮುಂದಿನ ಹಂತದಲ್ಲಿ 3000 ಎಕರೆಗೂ ಮೀರಿದ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳುವ ಗುರಿ ಎಮ್.ಆರ್.ಪಿ.ಎಲ್ ನದ್ದು. ಸರ್ಕಾರವೂ ಕಂಪನಿಯ ಈ ಎಲ್ಲಾ ಬೇಡಿಕೆಗೆ ಅಸ್ತು ಅಂದಿದೆ. ಪರಿಣಾಮ ಜನರು ತಾವು ಶ್ರಮಪಟ್ಟು ಬೆಳೆಸಿದ ಕೃಷಿ, ಜಮೀನು, ಮನೆ ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪೆರ್ಮುದೆ, ಕುತ್ತೆತ್ತೂರು ಗ್ರಾಮ ಮಂಗಳೂರು ನಗರದಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಈ ಗ್ರಾಮದ ಜನಸಂಖ್ಯೆ ಸುಮಾರುpermude-sez-3 6000. ಗ್ರಾಮದ ಶೇ. 75 ರಷ್ಟು ಜನರು ಕೃಷಿಕರು. ಭತ್ತ, ಅಡಿಕೆ, ತೆಂಗು, ಬಾಳೆ, ತರಕಾರಿ ಇಲ್ಲಿಯ ಪ್ರಮುಖ ಕೃಷಿ. 2006 ರಲ್ಲಿ ಎಸ್.ಇ.ಜೆಡ್ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಹಾಗೂ ದೇಲಂತ ಬೆಟ್ಟು ಗ್ರಾಮಗಳು ಒಳಗೊಂಡಿದ್ದವು. ಆದರೆ ಬಲವಂತದ ಭೂಸ್ವಾಧೀನದ ವಿರುದ್ಧವಾಗಿ ನಡೆದ ತೀವ್ರ ಹೋರಾಟದ ಹಿನ್ನೆಲೆಯಲ್ಲಿ 2011 ರಲ್ಲಿ ಭೂಸ್ವಾಧೀನದಿಂದ ಈ ಗ್ರಾಮಗಳನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಎಮ್.ಆರ್.ಪಿ.ಎಲ್ ನಾಲ್ಕನೇ ಹಂತಕ್ಕಾಗಿ ಭೂಸ್ವಾಧೀನದ ಪ್ರಕ್ರಿಯೆ ಚುರುಕು ಪಡೆಯುತ್ತಿರುವಂತೆ ಈ ಗ್ರಾಮದ ಜನರು ಆತಂಕಿತರಾಗಿದ್ದಾರೆ.

ವಿಲಿಯಂ ಡಿಸೋಜಾ ಕುತ್ತೆತ್ತೂರಿನ ನಿವಾಸಿ. ನಮ್ಮನ್ನು ಬರಮಾಡಿಕೊಂಡು ಕುತ್ತೆತ್ತೂರಿನ ಹಚ್ಚ ಹಸಿರಾದ ವಾತಾವರಣವನ್ನು ತೋರಿಸಲು ತಮ್ಮ ಜೀಪ್ ನಲ್ಲಿ ಕರೆದೊಯ್ದರು. ವಿಲಿಯಂ ಡಿಸೋಜಾರಿಗೆ 15 ಎಕರೆ ಜಮೀನಿದೆ. ಇವರ ಜಮೀನಿನಲ್ಲೊಮ್ಮೆ ನಿಂತು ಎಲ್ಲಿ ಕಣ್ಣು ಹಾಯಿಸಿದರೂ ಸಮೃದ್ದವಾಗಿ ಬೆಳೆದು ನಿಂತ ಕೃಷಿತೋಟ ನಮ್ಮನ್ನು ಸೆಳೆಯುತ್ತದೆ. ಪುಟ್ಟ ಮನೆ, ಹೆಂಡತಿ ಇಬ್ಬರು ಮಕ್ಕಳ ಜೊತೆ ನೆಮ್ಮದಿಯ ಪರಿಸರದಲ್ಲಿ ಜೀವನ ನಡೆಸುತ್ತಿರುವ ವಿಲಿಯಂಗೆ ಇದೀಗ ಎಲ್ಲವನ್ನೂ ಕಳೆದುಕೊಳ್ಳುತ್ತೇನೆಂಬ ಆತಂಕ. “ನಾನು ನನ್ನ ಸ್ವಂತ ಜಮೀನನ್ನು ಮಾರಿ ಬಿಟ್ಟು ಎಂ.ಆರ್.ಪಿ.ಎಲ್ ಕೂಲಿಯಾಳಾಗಲು ತಯಾರಿಲ್ಲ. ಮೈಮುರಿದು ಗದ್ದೆ ತೋಟ ಬೆಳೆಸಿದ್ದೇನೆ. ಉತ್ತಮ ಆದಾಯಗಳಿಸಿ ಯಾರ ಹಂಗಿಲ್ಲದೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಇದೀಗ ಎಮ್.ಆರ್.ಪಿ.ಎಲ್ ಕಂಪನಿ ನನ್ನ ಜಮೀನಿಗೆ ಕನ್ನ ಹಾಕ್ತಿದೆ. ನನ್ನನ್ನು ಕೊಂದರೂ ನನ್ನ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ” ಅಂತಿದ್ದಾರೆ ವಿಲಿಯಂ. ವಿಲಿಯಂ ಡಿಸೋಜಾ ಎಂ.ಆರ್.ಪಿ.ಎಲ್ ಭೂಸ್ವಾಧೀನದಿಂದ ರೈತರ ಕೃಷಿ ಭೂಮಿಯನ್ನ ಸಂರಕ್ಷಿಸಲು ಹುಟ್ಟಿಕೊಂಡ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷರು. ಗ್ರಾಮದ ಮನೆಮನೆಗಳನ್ನು ಸುತ್ತಿಕೊಂಡು ಭೂಸ್ವಾಧೀನದ ವಿರುದ್ಧ ಹೋರಾಟಕ್ಕೆ ಧುಮುಕುವಂತೆ ರೈತರನ್ನು ಸಂಘಟಿಸುವವರಲ್ಲಿ ಇವರೂ ಒಬ್ಬರಾಗಿದ್ದಾರೆ.

ಇದು ಕೇವಲ ಮೊಂತಿ ಡಿಸೋಜಾ, ವಿಲಿಯಂ ಡಿಸೋಜಾರಂತಹ ಕೃಷಿಕರ ಆತಂಕ ಮಾತ್ರವಲ್ಲ. ಪೆರ್ಮುದೆ, ಕುತ್ತೆತ್ತೂರು ಗ್ರಾಮದpermude-sez ಎಲ್ಲಾ ಕೃಷಿಕರ ಆತಂಕ ಕೂಡಾ ಹೌದು. ಕುತ್ತೆತ್ತೂರಿನ ನಾಗೇಶ್ ಎಂಬುವವರಿಗೆ 6 ಎಕರೆ ಜಮೀನಿದೆ. ಇವರ ತೋಟ ವರ್ಷವಿಡೀ ಹಸಿರಿನಿಂದ ಕಂಗೊಳಿಸುತ್ತೆ. ಎಲ್ಲಾ ರೀತಿಯ ಬೇಸಾಯವನ್ನು ತನ್ನ ಫಲವತ್ತಾದ ಭೂಮಿಯಲ್ಲಿ ನಾಗೇಶ್ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಕೃಷಿ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿದ್ದು ಅವರ ಮನೆ ದೈವದ ಸ್ಥಾನ. “ಕೃಷಿ ದೈವದೇವರುಗಳನ್ನು ಬಿಟ್ಟು ಇಲ್ಲಿಂದ ಹೊರಹೋಗೋದಕ್ಕಿಂತ ಹೋರಾಡಿ ಸಾಯೋದೇ ಲೇಸು” ಅನ್ನುತ್ತಾರೆ ನಾಗೇಶ್. ಇವರಂತೆ ಪೆರ್ಮುದೆಯ ನಿವಾಸಿ ರಾಘವೇಂದ್ರ. ಇವರು ವೃತ್ತಿಯಲ್ಲಿ ಅರ್ಚಕರು. ತೋಟದ ನಡುವಿನ ಮನೆಗೆ ಅವರನ್ನ ಮಾತನಾಡಿಸಲೆಂದು ಹೋದಾಗ ಮಾವಿನ ರಸದಿಂದ ತಯಾರಿಸಿದ ರುಚಿಯಾದ ತಿಂಡಿಯನ್ನು ನಮಗೆ ಸವಿಯಲು ನೀಡಿ ಇದು ನಿಮ್ಮ ಸಿಟಿಯಲ್ಲಿ ಸಿಗುತ್ತಾ ಮಾರಾಯರೇ ಎಂದು ನಗುತ್ತಾ ಮಾತಿಗಿಳಿದರು. “ನಾವೇನು ಕೈಗಾರಿಕೆಗಳ ವಿರೋಧಿಗಳಲ್ಲ ಆದ್ರೆ ಇವರಿಗೆ ಕೃಷಿ ಭೂಮಿಯೇ ಯಾಕೆ ಬೇಕು? ಎಮ್.ಆರ್.ಪಿ.ಎಲ್ ನಂತಹಾ ಕೈಗಾರಿಕೆ ಇಲ್ಲಿಗೆ ಬಂದ ನಂತರ ಇಲ್ಲಿನ ಪರಿಸರ, ಜೀವವೈವಿದ್ಯ ನಾಶವಾಗುತ್ತಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಮೀರಿ  ಕೈಗಾರಿಕೆ ಬೆಳೆಯುತ್ತಿದೆ” ಎನ್ನುತ್ತಾ ತಮ್ಮ ತೋಟದ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ಎರಡೂವರೆ ಎಕರೆ ಜಮೀನಿನಲ್ಲಿ ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ರಾಘವೇಂದ್ರ ಬೆಳೆಸಿದ್ದಾರೆ. ಉತ್ತಮ ಪರಿಹಾರ ಸಿಗುತ್ತಲ್ಲಾ, ಕೈತುಂಬಾ ಹಣ ಸಿಗುತ್ತಲ್ವಾ ಮತ್ತೆ ನೀವು ಯಾಕೆ ಎಮ್.ಆರ್.ಪಿ.ಎಲ್ ಗೆ ಭೂಮಿ ಕೊಡುವುದಿಲ್ಲಾ ಎಂಬ ಪ್ರಶ್ನೆಗೆ “ಈ ಹಿಂದೆ ಹಣದ ದುರಾಸೆಗೆ ಬಿದ್ದು ಭೂಮಿ ಕೊಟ್ಟವರ ದುಸ್ಥಿತಿಯನ್ನ ಕಣ್ಣಾರೆ ಕಂಡಿದ್ದೇವೆ. ನಾವು ಅದನ್ನು ಅನುಭವಿಸಲು ಸಾಧ್ಯವಿಲ್ಲ. ನಮ್ಮ ಕೃಷಿ ಭೂಮಿಯಲ್ಲಿ ನಮ್ಮ ಭಾವನೆಗಳಿವೆ, ಇಲ್ಲಿ ನಮಗೆ ನೆಮ್ಮದಿಯಿದೆ ನಮ್ಮ ಬದುಕನ್ನು ಬಲವಂತವಾಗಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ” ಎನ್ನುತ್ತಾ ಮಾತು ಮುಗಿಸುವಾಗ ಅರ್ಚಕರ ಕಣ್ಣು ಕೆಂಪಾಗಿತ್ತು.

ಹೀಗೆ ಪೆರ್ಮುದೆ, ಕುತ್ತೆತ್ತೂರು ಗ್ರಾಮದಲ್ಲಿ ಮಾತಿಗೆ ಸಿಕ್ಕ ಬಹುತೇಕ ರೈತರ ಅಭಿಪ್ರಾಯ ಒಂದೇ ಆಗಿತ್ತು. ಯಾವುದೇ ಕಾರಣಕ್ಕೂVidya ಕಂಪನಿಗೆ ನಮ್ಮ ಕೃಷಿ ಭೂಮಿಯನ್ನು ನೀಡುವುದಿಲ್ಲವೆಂಬುವುದಾಗಿದೆ. ರೈತರ ವಿರೋಧದ ನಡುವೆಯೂ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ಎಮ್.ಆರ್.ಪಿ.ಎಲ್ ವಿರುದ್ಧ ಇವರೆಲ್ಲಾ ಸಂಘಟಿತರಾಗುತಿದ್ದಾರೆ. ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನೇತ್ರತ್ವದಲ್ಲಿ ತಮ್ಮ ನೆಲ ಜನ ಉಳಿಸಿಕೊಳ್ಳಲು ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದಾರೆ. “ನಮಗೆ ರೈತರ ಕೃಷಿ ಭೂಮಿ ಹಾಗೂ ಅವರ ಬದುಕು ಇಲ್ಲಿಯ ಪರಿಸರ ಮುಖ್ಯವಾಗಿವೆಯೇ ಹೊರತು ಎಮ್.ಆರ್.ಪಿ.ಎಲ್ ನಂತಹ ಕಂಪನಿಯಲ್ಲ. ಖಾಲಿ ಬಿದ್ದಿರುವ ಹೆಚ್ಚುವರಿ ಭೂಮಿ ಎಮ್.ಆರ್.ಪಿ.ಎಲ್ ಬಳಿ ಇದ್ದರೂ ಮತ್ತೆ ಮತ್ತೆ ಭೂಸ್ವಾಧೀನಕ್ಕೆ ಮುಂದಾಗೋ ಉದ್ದೇಶವೇನು” ಎಂದು ಪ್ರಶ್ನಿಸುತ್ತಾರೆ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಮೂಲಕ ಈ ಭಾಗದ ರೈತರ ಹೋರಾಟಕ್ಕೆ ಮುಂದಾಳತ್ವವನ್ನು ನೀಡುತ್ತಿರುವ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್. “ಭೂಮಿ ಕೊಡಲೊಪ್ಪದ ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ. ಈ ಹಿಂದೆ ಎಸ್.ಇ.ಜೆಡ್ ಗಾಗಿ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಂಡಾಗ ಅದರ ವಿರುದ್ಧ ಹೋರಾಟ ನಡೆಸಿ ಭೂಮಿ ಉಳಿಸಿಕೊಂಡಿದ್ದೇವೆ. ಇದೀಗ ಮತ್ತೊಂದು ಹಂತದ ಹೋರಾಟ ಶುರುವಾಗಿದೆ” ಅನ್ನುತ್ತಾರೆ ವಿದ್ಯಾ ದಿನಕರ್.

ಪೆರ್ಮುದೆ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲೂ ಭೂಸ್ವಾಧೀನ ಪ್ರಕ್ರಿಯೆಗೆ ಆಕ್ಷೇಪಣೆ ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇಷ್ಟಾಗಿಯೂ ಜನರಿಗೆ ಹಾಗೂ ಸ್ಥಳೀಯ ಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೆ ಗುಪ್ತವಾಗಿ ಭೂಸ್ವಾಧೀನದ ಪ್ರಕ್ರಿಯೆಗೆ ಎಮ್.ಆರ್.ಪಿ.ಎಲ್ ಮುಂದಾಗುತ್ತಿರುವುದು ಆತಂಕಕಾರಿ ವಿಚಾರ ಎಂಬುವುದು ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಾ ಅಭಿಪ್ರಾಯ. ಇಷ್ಟೆಲ್ಲಾ ಪ್ರಬಲ ವಿರೋಧಗಳ ನಡುವೆಯೂ ಎಮ್.ಆರ್.ಪಿ.ಎಲ್ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಹಿಂಭಾಗಿಲ ಮೂಲಕ ಪ್ರಯತ್ನ ನಡೆಸುತ್ತಿದೆ. ಊರಿನ ಜನರಿಗೂ, ಸ್ಥಳೀಯ ಗ್ರಾಮಪಂಚಾಯತ್ ಗೂ ಯಾವುದೇ ಮಾಹಿತಿ ನೀಡದೆ ಗ್ರಾಮದ ಸರ್ವೇ ಕಾರ್ಯ ನಡೆಸಲು ಎಮ್.ಆರ್.ಪಿ.ಎಲ್ ಸಿಬಂಧಿ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಸರ್ವೇ ನಡೆಸಲು ಬಂದ ಸಿಬ್ಬಂದಿಯನ್ನ ಬೆನ್ನಟ್ಟಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಕಂಪನಿ ಹಾಗೂ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಸ್ಥಳೀಯರನ್ನು ಚೂಬಿಟ್ಟು ರೈತರಿಗೆ ಅಮಿಷ ಒಡ್ಡುವ ಕೆಲಸದಲ್ಲೂ ಕಂಪನಿ ನಿರತವಾಗಿದೆ.

ದೈತ್ಯ ಕಂಪನಿಯ ದುರಾಸೆಯ ಭೂಬೇಡಿಕೆ ವಿರುದ್ಧದ ಹೋರಾಟ ಕೇವಲ ಪೆರ್ಮುದೆ ಕುತ್ತೆತ್ತೂರು ಗ್ರಾಮದ ಜನರಿಗಷ್ಟೇ ಸೀಮಿತವಾಗಬಾರದು. ಕಾರಣ ಎಮ್,ಆರ್.ಪಿ.ಎಲ್ ಭೂಬೇಡಿಕೆ ಅಷ್ಟು ಸುಲಭವಾಗಿ ತಣಿಯುವಂತಹದಲ್ಲ. ಇಂದು ಪೆರ್ಮುದೆ, ಕುತ್ತೆತ್ತೂರು ಗ್ರಾಮಸ್ಥರು ಎದುರಿಸುತ್ತಿರುವ ಆತಂಕ, ಅತಂತ್ರತೆ ಮುಂದಿನ ದಿನಗಳಲ್ಲಿ ಮಂಗಳೂರಿನ ಸುತ್ತಮುತ್ತಲ ಹಳ್ಳಿಯ ಜನರದ್ದಾಗಬಹುದು. ಈ ನಿಟ್ಟಿನಲ್ಲಿ ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆಯ ವಿರುದ್ಧದ ರೈತ ಹೋರಾಟಕ್ಕೆ ಕೈಜೋಡಿಸಬೇಕಿದೆ. ಇಲ್ಲವಾದಲ್ಲಿ ಕೈಗಾರೀಕರಣ ಎಂಬ ಹೆಸರಿನ ಬುಲ್ಡೋಜರ್ ಬಾಯಿಗೆ ಮತ್ತಷ್ಟು ರೈತ ಸಮುದಾಯ ಬಲಿಯಾಗೋದಂತೂ ನಿಶ್ಚಿತ.