Category Archives: ಇರ್ಷಾದ್

ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ  ಮುಸ್ಲಿಮ್  ಡಿಸಿಯ  ಹೆಸರು ವಿವಾದ ಹಾಗೂ ಕರಾವಳಿಯ  ಕೋಮು ಸಾಮರಸ್ಯದ  ಇತಿಹಾಸ


-ಇರ್ಷಾದ್ ಉಪ್ಪಿನಂಗಡಿ


ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ  ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ  ಪತ್ರಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ  ಇಬ್ರಾಹಿಂ ಅವರ  ಹೆಸರನ್ನು  ಉಲ್ಲೇಖಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. “ಜಿಲ್ಲಾಧಿಕಾರಿ  ಎ.ಬಿ ಇಬ್ರಾಹಿಂ ಮುಸ್ಲಿಮ್  ಸಮುದಾಯದವರಾಗಿದ್ದು ಅವರ ಹೆಸರನ್ನುsri-mahalingeshwara-temple_1409380877 ಆಮಂತ್ರಣ ಪತ್ರಿಕೆಯಲ್ಲಿ  ಮುದ್ರಿಸಿರುವುದು ಹಿಂದೂಗಳ ಭಾವನೆ ಧಕ್ಕೆ ಉಂಟಾಗುತ್ತದೆ ಮಾತ್ರವಲ್ಲ ಇದು 1997ರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 7 ವಿಧಿಯ ಉಲ್ಲಂಘನೆ” ಎಂಬುವುದು ಸಂಘಪರಿವಾರದ ಸಂಘಟನೆಗಳ ವಾದ. ಇದರ ಮುಂದುವರಿದ ಭಾಗವಾಗಿ ಮಾಜಿ ಬಿಜೆಪಿ ಶಾಸಕಿ ಹಾಗೂ ಹಾಲಿ ಪುತ್ತೂರು ವಿಧಾನಸಭಾ ಕ್ಷೇತ್ರದ  ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿಯವರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ “ಮುಸ್ಲಿಮ್” ಜಿಲ್ಲಾಧಿಕಾರಿಯ  ಹೆಸರನ್ನು  ಆಮಂತ್ರಣ  ಪತ್ರಿಕೆಯಿಂದ ಕೈಬಿಟ್ಟು ಮರುಮುದ್ರಣ ಮಾಡಲು ಸೂಚಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಂಘಪರಿವಾರ ದೇವಸ್ಥಾನದ ಮುಂಭಾಗದ ಜಾತ್ರೆ ನಡೆಯುವ ಸ್ಥಳದಲ್ಲಿ ಹಿಂದೂಗಳ ಹೊರತಾಗಿ ಇತರ ಧರ್ಮೀಯರಿಗೆ ಅಂಗಡಿ ತೆರೆಯಲು ಅವಕಾಶ ನೀಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ಜಿಲ್ಲೆಯ ದಂಡಾಧಿಕಾರಿಯಾಗಿರುವರು ಜಿಲ್ಲಾಧಿಕಾರಿಗಳು. ಅವರು ಅಲಂಕರಿಸಿರೋ ಹುದ್ದೆ  ಧರ್ಮಾತೀತವಾದುದು. ಜಿಲ್ಲಾಧಿಕಾರಿಯನ್ನೇ ಧರ್ಮದ ಆಧಾರದಲ್ಲಿ ಪರಿಗಣಿಸುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಎಲ್ಲಿಗೆ ಬಂದು ತಲುಪುತ್ತಿದೆ ಎಂಬುವುದು ಸ್ಪಷ್ಟಗೊಳ್ಳುತ್ತಿದೆ. ಇಂದು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆರೆಯುತ್ತಿರುವ ಸಂಘಪರಿವಾರದ ಕೋಮುವಾದ ಹಾಗೂ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರೋ ಮುಸ್ಲಿಮ್ ibrahim-iasಕೋಮುವಾದ ಜಿಲ್ಲೆಯ ಜನರನ್ನು ಸಂಪೂರ್ಣವಾಗಿ ಧರ್ಮದ ಆಧಾರದಲ್ಲಿ  ಬೇರ್ಪಡಿಸುವ ಕಾರ್ಯದಲ್ಲಿ ನಿರತವಾಗಿವೆ. ದಕ್ಷಿಣ  ಕನ್ನಡ ಜಿಲ್ಲೆ ಒಂದು  ಕಾಲದಲ್ಲಿ ಧಾರ್ಮಿಕ ಸೌಹಾರ್ದತೆಗೆ  ಹೆಸರಾದ ಜಿಲ್ಲೆಯಾಗಿತ್ತು. ಇಂದು  ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಮ್ ಜಿಲ್ಲಾಧಿಕಾರಿಯ ಹೆಸರು ಉಲ್ಲೇಖವಾಗಿರುವುದಕ್ಕೆ ವಿವಾದ ಎಬ್ಬಿಸುವ ಕೋಮುವಾದಿಗಳು, ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ  ತೆರೆಯಬಾರದು ಎಂದು ಫರ್ಮಾನು  ಹೊರಡಿಸುವ ಸಂಘಪರಿವಾರಿಗಳು ಜಿಲ್ಲೆಯ  ಸಾಮರಸ್ಯ  ಇತಿಹಾಸದತ್ತ  ಒಮ್ಮೆ ಕಣ್ಣು ಹಾಯಿಸಬೇಕು. ದಕ್ಷಿಣ ಕನ್ನಡ  ಜಿಲ್ಲೆಯ ಮೂಲ  ಪೂಜಾ ಪದ್ಧತಿ ಭೂತಾರಾಧನೆ ಮತ್ತು ನಾಗಾರಾಧನೆ. ಈ ನಾಡಿಗೆ ವೈದಿಕ ಹಿಂದೂ ಧರ್ಮ ಕಾಲಿಟ್ಟ ತರುವಾಯ ಇಸ್ಲಾಮ್  ಧರ್ಮ ಅರಬ್  ವರ್ತಕರ ಮೂಲಕ ಇಲ್ಲಿಗೆ ಕಾಲಿಟ್ಟಿತು. ನಂತರ ಪೋರ್ಚುಗೀಸ್ ಪ್ರವಾಸಿ ವಾಸ್ಕೋಡಗಾಮನ ಆಗಮನದೊಂದಿಗೆ ಕ್ರೈಸ್ತ ಧರ್ಮ ಕೂಡಾ ತುಳುನಾಡನ್ನ ಪ್ರವೇಶಿಸಿತು. ಈ ನಾಡಿನ ಮೂಲಧರ್ಮಕ್ಕೆ  ಭಿನ್ನವಾದ ಎರಡೂ ಮತಗಳನ್ನ ಇಲ್ಲಿಯ ಮೂಲನಿವಾಸಿಗಳು ಸ್ವಾಗತಿಸಿ ಅವರನ್ನು ತಮ್ಮದಾಗಿಸಿಕೊಂಡರು. ಅದೇ  ರೀತಿ ಇಲ್ಲಿ ನೆಲೆವೂರಿದ ಅರಬ್ ಮುಸ್ಲಿಮರೂ, ಪೂರ್ಚ್ ಗೀಸ್ ಕ್ರೈಸ್ತರೂ ತಮ್ಮ ಧರ್ಮ, ಸಂಸ್ಕೃತಿಯನ್ನು ಕಟ್ಟಿ ಬೆಳೆಸುವುದರೊಂದಿಗೆ ಈ  ನಾಡಿನ ಜನ , ಸಂಸ್ಕೃತಿಯೊಂದಿಗೆ  ಬೆರೆತು ತುಳುವರಾದರು ಎಂಬುವುದನ್ನು ಇತಿಹಾಸ ತಿಳಿಸಿಕೊಡುತ್ತದೆ. ತುಳುನಾಡಿದ ಭೂತಕೋಲದ  ಪಾಡ್ದನಗಳಲ್ಲಿ ಮುಸ್ಲಿಮರು ಪ್ರಮುಖಪಾತ್ರಗಳಲ್ಲಿ ಮಿಂಚುತ್ತಾರೆ. ಜುಮಾದಿ ದೈವ ಪಾಡ್ದನ, ಸಿರಿ ಪಾಡ್ದನ ಹಾಗೂ ಅತ್ತಾವರ ದೈವಗಳ ಪಾಡ್ದನಗಳಲ್ಲಿ ಮುಸ್ಲಿಮ್ ಪಾತ್ರದಾರಿಗಳು ಕಂಡುಬರುತ್ತಾರೆ. ಮುಸ್ಲಿಮ್ ಮಂತ್ರವಾದಿ ಅಲಿಭೂತ, ಸಮುದ್ರ ಬೀಭತ್ಸದಿಂದ ರಕ್ಷಣೆ ಕೊಡುತ್ತಿದ್ದ ಬಬ್ಬರ್ಯ ಯಾನೆ ಬಪ್ಪ  ಬ್ಯಾರಿಯನ್ನ ತುಳುವರು  ದೈವೀ  ಪುರುಷರನ್ನಾಗಿ  ಆರಾಧನೆ ಮಾಡುವ ಸಂಸ್ಕೃತಿ  ಈ ತುಳುನಾಡಿದ್ದು.  ಉಡುಪಿ  ಮಠಗಳ ಪರ್ಯಾಯ ಉತ್ಸವಗಳಲ್ಲಿ ಮುಸ್ಲಿಮ್ ಕುಟುಂಬವೊಂದು ರಥ ಅಲಂಕರಿಸುವುದು, ಪ್ರಭಾವಳಿ ರಚಿಸುವುದು, ದುರುಸು ಬಾಣಗಳನ್ನು ಬಿಡುವುದೇ ಮೊದಲಾದ ಶತಮಾನಗಳಿಂದ ನಡೆದುಕೊಂಡ ಬಂದ ಸಂಪ್ರದಾಯಗಳು ಇಲ್ಲಿಯ ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಗಳಾಗಿವೆ.

ಜಿಲ್ಲೆಯನ್ನು ಕೆಳದಿರಾಜ ವೆಂಕಟಪ್ಪ ನಾಯಕ  ಆಳುತ್ತಿದ್ದಾಗ ಭುವನಗಿರಿ ದುರ್ಗವೆನ್ನುವಲ್ಲಿ ಮುಸ್ಲಿಮರಿಗೆ ಮಸೀದಿ ಕಟ್ಟಿಸಿಕೊಟ್ಟ. ಆತನ ಮೊಮ್ಮಗ  ವೀರಭದ್ರನಾಯಕ  ತಾವರೆಕೆರೆಯ ಮಸೀದಿಗೆ  ಎಡಹಳ್ಳಿ ಗ್ರಾಮವನ್ನು ದತ್ತು ನೀಡಿದನಂತೆ. ಕೆಳದಿರಾಣಿ ಚೆನ್ನಮ್ಮಾಜಿ ದಕ್ಷಿಣ ಕನ್ನಡ  ಜಿಲ್ಲೆಯ ಕಿನ್ನಿಕಂಬಳ ಹಾಗೂ  ಗಂಜಿ ಮಠವೆನ್ನುವಲ್ಲಿ  ಮುಸ್ಲಿಮ್ ಸೂಫಿ ಸಂತರಿಗೆ 101  ಎಕರೆ ಜಮೀನು ದಾನ  ನೀಡಿದ ಉಲ್ಲೇಖಗಳು ಇತಿಹಾಸದ ಪುಟ ತಿರುಗಿಸಿದಾಗ  ತಿಳಿದುಬರುತ್ತದೆ. ದಕ್ಷಿಣ ಕನ್ನಡ  ಜಿಲ್ಲೆ ಮೈಸೂರು ಅರಸರಾದ  ಹೈದರಾಲಿ ಹಾಗೂ ಟಿಪ್ಪು ಸುಲ್ತಾನದ ಆಡಳಿತದಲ್ಲಿದ್ದ  ಸಂದರ್ಭದಲ್ಲಿ ಹಿಂದೂ ಧರ್ಮೀಯರ ಆರಾಧನಾ ಕೇಂದ್ರಗಳಿಗೆ ಭೂಮಿ ಹಾಗೂ ಆರ್ಥಿಕ ಸಹಕಾರವನ್ನು ನೀಡಿರುವ ಅನೇಕ  ಉದಾಹರಣೆಗಳಿವೆ. ಟಿಪ್ಪು ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನಕ್ಕೆ ಮೂಡುಶೆಡ್ಡೆ ಗ್ರಾಮವನ್ನು ದತ್ತುವಾಗಿ ನೀಡಿ, ಅಲ್ಲಿಯ ಪೂಜಾ ವಿಧಿಗಳಿಗೆ ದಿನಕ್ಕೆ ನಾಲ್ಕು ರೂಪಾಯಿಯಂತೆ  ತಸ್ತಿಕ್  ನೀಡಿದ್ದ. ಗುರುಪುರದ ಲಿಂಗಾಯಿತ  ಮಠ , ಮಂಜೇಶ್ವರದ ಮದನಂತೇಶ್ವರ ದೇವಾಲಯ  ಹಾಗೂ ಬಂಟ್ವಾಳ ತಾಲೂಕಿನ ಶಂಬೂರು  ಎಂಬಲ್ಲಿ ಹಿಂದೂ ದೇವಾಲಯಗಳಿಗೆ ಭೂಮಿ ಹಾಗೂ  ಆರ್ಥಿಕ ಸಹಾಯ ನೀಡಿರುವ  ಅನೇಕ ಉಲ್ಲೇಖಗಳು ದಕ್ಷಿಣ ಕನ್ನಡ  ಜಿಲ್ಲಾಡಳಿತ ಪ್ರಕಟಿಸಿದ ಜಿಲ್ಲೆಯ  ಇತಿಹಾಸದ ಕುರಿತಾಗಿ ಬೆಳಕು  ಚೆಲ್ಲುವ  ಪುಸ್ತಕವೊಂದರಲ್ಲಿ ವಹಾಬ್ ದೊಡ್ಡಮನೆ  ಬರೆದಿರುವ  ಲೇಖನದಲ್ಲಿ ಇಂಥಹಾ ಸಾಮರಸ್ಯದ  ಅನೇಕ ಉಲ್ಲೇಖಗಳಿವೆ. ಬಹುಷಃ ಈ ಎಲ್ಲಾ  ವಿಚಾರಗಳು ಧರ್ಮದ  ಹೆಸರಲ್ಲಿ ಮನಸ್ಸನ್ನು  ಒಡೆಯೋ ಕೆಲಸದಲ್ಲಿ   ನಿರತರಾಗಿರುವ ಧರ್ಮರಕ್ಷಕರಿಗೆ  ತಿಳಿದಿರಲಿಕ್ಕಿಲ್ಲ. ಒಂದು ವೇಳೆ  ತಿಳಿದಿದ್ದರೂ ಇಂಥಹಾ  ಸಾಮರಸ್ಯವನ್ನು ಅವರು ಬಯಸೋದಿಲ್ಲ  ಎಂಬುವುದು  ಜಿಲ್ಲೆಯಯಲ್ಲಿ  ಪದೇ  ಪದೇ ನಡೆಯುತ್ತಿರುವ ಘಟನೆಗಳಿಂದ ಸಾಬೀತಾಗುತ್ತಾ   ಬಂದಿರುವ  ಸತ್ಯ.

ಇಂದಿಗೂ  ದಕ್ಷಿಣ  ಕನ್ನಡ  ಜಿಲ್ಲೆಯಲ್ಲಿ ಕೂಡುಬಾಳುವಿಕೆ ಹಾಗೂ  ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಅನೇಕ ಧಾರ್ಮಿಕ ಕೇಂದ್ರಗಳು  ನಮ್ಮ ಮುಂದಿವೆ. ಮಂಗಳೂರಿನ ಬೈಲು ಪೇಟೆಯೆಂಬಲ್ಲಿ  ಸೂಫಿ  ಸಂತರ ದರ್ಗಾವೊಂದಿದೆ. ಅದರ  ಹೆಸರು ಶೈಖ್ ಸೈಯದ್ ಮೆಹಮೂದ್  ಜಲಾಲುದ್ದೀನ್ ಮತ್ತು ಅಶೈಖ್  ಸೈಯದ್ ಹಯಾತ್ ವಲಿವುಲ್ಲಾಹಿ ದರ್ಗಾ. ಈ  ದರ್ಗಾದಲ್ಲಿರುವ ಸಂತ ಮೂಲತಃ  ಬಾಗ್ದಾದ್ ನಿಂದ ಬಂದು ಇಲ್ಲಿ ನೆಲೆನಿಂತವರು. ಸ್ಥಳೀಯರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆತು  ಅವರ ಮನಗೆದ್ದರು.20160121_130438 ಈ ಸೂಫಿ ಸಂತ ಕೊನೆಉಸಿರೆಳೆದ ನಂತರ ಬೈಲು ಪೇಟೆಯಲ್ಲೇ ಅವರನ್ನು ಸಮಾಧಿ ಮಾಡಲಾಯಿತು.  ನಂತರ ಗ್ರಾಮಸ್ಥರ ಪಾಲಿಗೆ ಪುಣ್ಯಪುರುಷರ ಈ ಸಮಾಧಿ ಪವಿತ್ರ ಸ್ಥಳವಾಗಿ ಮಾರ್ಪಟ್ಟಿತು. ಇಂದಿಗೂ ಈ ದರ್ಗಾಕ್ಕೆ ಮುಸ್ಲಿಮರಿಗಿಂತ ಅಧಿಕ ಸಂಖ್ಯೆಯಲ್ಲಿ ಹಿಂದೂಗಳೇ ಭೇಟಿನೀಡುತ್ತಾರೆ. ಈ ಗ್ರಾಮ  ಹಿಂದೂ ಕೃಷಿಕರು ತಾವು ಬೆಳೆದ ಮೊದಲ  ಬೆಳೆಯನ್ನು ಸಂತರ ದರ್ಗಾಕ್ಕೆ ತಂದು ಭಕ್ತಿಯಿಂದ ಅರ್ಪಿಸುತ್ತಾರೆ. ದರ್ಗಾದಲ್ಲಿ ಪೂಜೆ ಸಲ್ಲಿಸಿ ನಂತ್ರ  ತಾವು  ಬೆಳೆದ ಬೆಳೆಯನ್ನ ಮಾರಾಟ ಮಾಡುತ್ತಾರೆ. ಇಂದಿಗೂ ಈ ಪದ್ದತಿ ಇಲ್ಲಿ ಚಾಲ್ತಿಯಲ್ಲಿದೆ. ಈ ಗ್ರಾಮದ ಹಿಂದೂಗಳು ಇಲ್ಲಿರುವ ಸೂಫಿ ಸಂತರನ್ನು  “ಶೇಖರ್ ಪಂಡಿತೆರ್” ಎಂದು ಕರೆಯುತ್ತಾರೆ. “ಶೇಖರ್  ಪಂಡಿತೆರ್” ಕುರಿತಾಗಿ ಗ್ರಾಮದ  ಹಿಂದೂಗಳ ಮನಸ್ಸಿನಲ್ಲಿ   ಗೌರವ, ಭಕ್ತಿ.  ಪ್ರತಿ ವಾರ ದರ್ಗಾಕ್ಕೆ ಬೆಲ್ಲ, ಅಕ್ಕಿ ಕೊಡುವ ಪದ್ದತಿಯನ್ನು ಸ್ಥಳೀಯ ಹಿಂದೂಗಳು ಪಾಲಿಸಿಕೊಂಡು ಬರುತ್ತಿದ್ದಾರೆ. ಇನ್ನು  ಮೂರು  ವರ್ಷಕ್ಕೊಮ್ಮೆ ನಡೆಯುವ ಊರೂಸ್ ಸಮಾರಂಭವನ್ನೂ ಇಲ್ಲಿ ಹಿಂದೂ ಮುಸ್ಲಿಮರು ಜೊತೆಗೂಡಿ ಆಚರಿಸುತ್ತಾರೆ.  “ ಮಂಗಳೂರಿನಲ್ಲಿ  ಏನೇ ಗಲಾಟೆ  ಆದ್ರೂ  ನಮಗಿಲ್ಲಿ  ಯಾವ ಭಯವೂ ಇಲ್ಲ . ಈ ದರ್ಗಾದ ಬಳಿ ಇರೋದು ಕೇವಲ ಎರಡು ಮುಸ್ಲಿಮರ ಮನೆ .ಆದ್ರೂ ಸ್ಥಳೀಯ ಬಹುಸಂಖ್ಯಾತ ಹಿಂದೂಗಳಿಂದ ನಮಗ್ಯಾವ  ಭಯವೂ ಇಲ್ಲ. ನಾವೆಲ್ಲರೂ  ಜೊತೆಗಿದ್ದೇವೆ, ಅದಕ್ಕೆ ಶೇಖ್  ಸೈಯದ್ ಮೆಹಮೂದ್ ಜಲಾಲುದ್ದೀನ್ ಸಂತರ ದರ್ಗಾ  ಕಾರಣ” ಎನ್ನುತ್ತಾರೆ ಸ್ಥಳೀಯ ನಿವಾಸಿ  ಅಬ್ದುಲ್ ಖಾದರ್ . ಇಲ್ಲಿಗೆ  ಭೇಟಿ  ನೀಡಿದಾಗ ಗ್ರಾಮಸ್ಥರ ಮೂಲಕ ಮತ್ತೊಂದು  ಸೌಹಾರ್ದದ ಕಥೆ  ಕೇಳಲ್ಪಟ್ಟೆ. ಬೈಲು ಪೇಟೆಯ ಜುಮ್ಮಾ ಮಸೀದಿಯಲ್ಲಿ  ಧರ್ಮ ಗುರುವೊಬ್ಬರಿದ್ದರು. ದಿನಂಪ್ರತಿ ಐದು  ಹೊತ್ತಿನ ಅಜಾನ್ (ನಮಾಜಿಗೆ ಕರೆಯುವ )  ಕರೆಯನ್ನು ಇವರೇ  ನೀಡುತ್ತಿದ್ದರು. ಮಸೀದಿಯ ಅಲ್ಪ ಸನಿಹದಲ್ಲೇ ಜುಮಾದಿ ದೈವದ ಭಂಡಾರದ  ಮನೆಯಿದೆ. ಪ್ರತಿನಿತ್ಯ ಮಸೀದಿಯಯಲ್ಲಿ ಕೊಡುತ್ತಿರುವ  ಆಜಾನ್  ಕರೆ  ಪಕ್ಕದ  ಜುಮಾದಿ ದೈವದ   ಬಂಡಾರದ  ಮನೆಯ ಪೂಜಾರಿಗೂ  ಕೇಳುತಿತ್ತು. ಆದರೆ, ರಂಜಾನ್ ತಿಂಗಳ ಒಂದು ದಿನ ಮಸೀದಿಯ ಧರ್ಮಗುರು ಕೂಗುತ್ತಿದ್ದ ಆಜಾನ್ ಕರೆ ಎಂದಿನಂತಿರಲಿಲ್ಲ. ಅವರ ಧ್ವನಿ ತುಂಬಾನೇ ಕ್ಷೀಣವಾಗಿತ್ತು. ಇದರಿಂದ  ವಿಚಲಿತರಾದ ಜುಮಾದಿ ದೈವದ ಭಂಡಾರ ಮನೆಯ ಪುಜಾರಿ ಮಸೀದಿಗೆ ಹೋಗಿ ಧರ್ಮಗುರುವನ್ನು ವಿಚಾರಿಸಿದಾಗ, ಧರ್ಮಗುರು ರಂಜಾನ್ ಉಪವಾಸದಲ್ಲಿದ್ದು  ವೃತ ತೊರೆಯಲು ಅವರ ಬಳಿ  ಆಹಾರವಿಲ್ಲ ಎಂಬ ಸಂಗತಿ ತಿಳಿದುಬರುತ್ತದೆ. ಕೂಡಲೇ ಭಂಡಾರದ ಮನೆಗೆ ಬಂದ ಪೂಜಾರಿ ಜುಮಾದಿ ದೈವದ ಚಿನ್ನದ ನಾಲಗೆಯನ್ನು ಕೊಯ್ದು ಧರ್ಮಗುರುವಿಗೆ ನೀಡಿ ಅದನ್ನು ಸ್ಥಳೀಯ ದೋಂದಜ ಗುತ್ತಿನ ಮನೆಗೆ ಮಾರಿ ಉಪವಾಸ ತೊರೆಯಲು ಬೇಕಾದ ಆಹಾರ ಪದಾರ್ಥಗಳನ್ನು ತಂದುಕೊಳ್ಳುವಂತೆ ಸೂಚಿಸಿದರು. ನಂತರ ಊರ ಜನರಿಗೆ ಜುಮಾದಿ ದೈವದ ಚಿನ್ನದ  ನಾಲಗೆ ಕಾಣೆಯಾಗಿರುವ  ಸುದ್ದಿ ತಿಳಿಯಿತು.ಈ ಕುರಿತಾಗಿ ಭಂಡಾರದ ಮನೆಯ ಪೂಜಾರಿಯ  ಬಳಿ ಗ್ರಾಮಸ್ಥರು ವಿಚಾರಿಸಿದಾಗಲೂ ಪೂಜಾರಿಗೆ ಏನೂ  ತಿಳಿದಿರಲಿಲ್ಲ. ಕೆಲ ಹೊತ್ತಿನಲ್ಲೇ ಜುಮಾದಿ ದೈವ ಪೂಜಾರಿಗೆ ದರ್ಶನದಲ್ಲಿ  ಬಂದು ತಾನೇ ಮಸೀದಿಯ ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನ  ನೀಡಿದ್ದೇನೆಂದು ತಿಳಿಸಿತು. ಅಂದು ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನು ಕೊಯ್ದು ಕೊಟ್ಟಿದ್ದು ಪೂಜಾರಿಯಲ್ಲ  ಬದಲಾಗಿ ಪುಜಾರಿಯ ರೂಪವನ್ನು ತಾಳಿದ ಜುಮಾದಿ ದೈವ ಎಂಬುವುದು  ಇಲ್ಲಿನ ಎರಡೂ  ಸಮುದಾಯದ  ಗ್ರಾಮಸ್ಥರ ನಂಬಿಕೆ. ಇಂಥಹಾ ಹತ್ತಾರು ಧರ್ಮಮೀರಿದ ಮನುಷ್ಯ ಪ್ರೀತಿಯ ಕಥೆಗಳು ಇಲ್ಲಿ ಸಾಮಾನ್ಯ.

ಧಾರ್ಮಿಕ ಕೂಡುಬಾಳುವಿಕೆಗೆ ಸಾಕ್ಷಿಯಾಗಿರುವ ಮತ್ತೊಂದು ಕ್ಷೇತ್ರ ದಕ್ಷಿಣ  ಕನ್ನಡ ಜಿಲ್ಲೆಯ ಪಕ್ಕದ ಜಿಲ್ಲೆ ಕಾಸರಗೋಡಿನ ಉದ್ಯಾವರ ಅಸಯ್ಯದ್  ಶಹೀದ್  ದರ್ಗಾ ಹಾಗೂ ಮಾಡಾ ಅರಸು  ದೈವಗಳ ದೈವಸ್ಥಾನ. ಇತ್ತೀಚೆಗೆ ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿ  ಮಾರ್ಪಡುತ್ತಿರುವ ಈ ಗ್ರಾಮದಲ್ಲಿ ಹಿಂದೂ-ಮುಸ್ಲಿಮ್ ಭಾಂಧವ್ಯವನ್ನು  ಕಟ್ಟಿಬೆಳೆಸಿದ  ಕ್ಷೇತ್ರವಿದು. ಇಲ್ಲೊಂದು ಅಪರೂಪದ ಹಾಗೂ ವಿಶಿಷ್ಟ ಸಂಪ್ರದಾಯವಿದೆ. ವರ್ಷಂಪ್ರತಿ ಎಪ್ರಿಲ್ ತಿಂಗಳಲ್ಲಿ ಬಿಸು ಹಬ್ಬದ ಬಳಿಕ ಅಂದರೆ, ಎಪ್ರಿಲ್ 14 ಕ್ಕೆ ಮಾಡ ಅರಸು ದೈವಗಳ ಜಾತ್ರಾಮಹೋತ್ಸವ ನಡೆಯುತ್ತದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ ಅಥವಾ ಸಂತೆ ಇಡಬಾರದು ಎಂದು ಸಂಘಪರಿವಾರಿಗಳು ಫರ್ಮಾನು ಹೊರಡಿಸಿದ್ದಾರೋ ಅದಕ್ಕೆ ವಿರುದ್ಧ ಎಂಬುವಂತೆ  ಮಾಡಾ ಅರಸು ದೈವಗಳ  ಜಾತ್ರೆ ಆರಂಭಕ್ಕೂ ಮುನ್ನ  ಗ್ರಾಮದ  ಮುಸ್ಲಿಮರು ಅರಸು ದೈವಗಳ  ದೈವಸ್ಥಾನದ  ಆವರಣಕ್ಕೆ ಬಂದು ಸಂತೆ ಇಡುವ ಪದ್ದತಿ ಇಂದಿಗೂ ಇದೆ. ಊರ ಮುಸ್ಲಿಮ್  ಕುಟುಂಬ ವೀಳ್ಯದೆಳೆ ತೆಂಗಿನಕಾಯಿ  ಜೊತೆಗೆ ಬಂದು ಅರಸು ದೈವಗಳ  ಆರ್ಶೀರ್ವಾದ ಪಡೆದುಕೊಂಡು ಮೊದಲು ದೈವಸ್ಥಾನದ ಆವರಣದಲ್ಲಿ ಸಂತೆ  ನಡೆಸುತ್ತಾರೆ. ನಂತರ ಇತರರಿಗೂ ಸಂತೆ ನಡೆಸಲು  ಅವಕಾಶ ನೀಡಲಾಗುತ್ತದೆ.

ನಂತರ  ಗ್ರಾಮದ  ಮುಸ್ಲಿಮರನ್ನು ಅರಸು ದೈವಗಳ  ಜಾತ್ರೆಗೆ  ಆಹ್ವಾನಿಸಲು ದೈವಸ್ಥಾನದ  ಪ್ರಮುಖರು ಉದ್ಯಾವರ ಮಸೀದಿಗೆ ತೆರಳುತ್ತಾರೆ. ದರ್ಗಾದ ಮುಂದೆ  ಮಸೀದಿಯ ಜಮಾತ್ ಮುಖಂಡರಿಗೆ  ಜಾತ್ರೆಗೆ  ಆಹ್ವಾನ  ನೀಡುತ್ತಾರೆ. ಈ ಸಂಪ್ರದಾಯ ಹುಟ್ಟಲು ಒಂದು ಕಾರಣವಿದೆ. ಶತಮಾನಗಳ  ಹಿಂದೆ  ಈ ಗ್ರಾಮಕ್ಕೆ  ಬಂದ ಅರಸು ಸಹೋದರರಿಗೆ  ಉದ್ಯಾವರ ದರ್ಗಾದ  ಪುಣ್ಯ ಪುರುಷ  ಇದೇ  ಊರಲ್ಲಿ ನೆಲೆನಿಲ್ಲುವಂತೆ ವಿನಂತಿ ಮಾಡ್ತಾರೆ. ಅದರಂತೆ ಅರಸು  ಸಹೋದರರು ಈ ಗ್ರಾಮದಲ್ಲಿ ನೆಲೆನಿಲ್ತಾರೆ. ಗ್ರಾಮದ ಮುಸ್ಲಿಮ್ ಪುಣ್ಯ ಪುರುಷ  ಹಾಗೂ  ಅರಸು  ಸಹೋದರರ  ನಡುವೆ ಉತ್ತಮ ಭಾಂದವ್ಯವಿತ್ತು. ಈ ಪ್ರಕಾರ ಮುಸ್ಲಿಮ್ ಸಂತ  ಹಾಗೂ  ಅರಸು ಸಹೋದರರ ನಡುವೆ ಒಂದು ಒಪ್ಪಂದವಾಗುತ್ತದೆ. ಈ  ಪ್ರಕಾರ ಪ್ರತಿ ವರ್ಷ ನಡೆಯೋ ಉತ್ಸವಕ್ಕೆ  ಗ್ರಾಮದ ಮುಸ್ಲಿಮರು ಆಹ್ವಾನದ ಮೇರೆಗೆ ಬಂದು ಪಾಲ್ಗೊಳ್ಳಬೇಕು ಹಾಗೂ  ಊರೂಸ್ ಕಾರ್ಯಕ್ರಮಕ್ಕೆ ನಾಡಿನ ಹಿಂದೂಗಳು  ಭಾಗವಹಿಸಬೇಕೆಂದು. ಇದರಂತೆ  ಈ  ಸಂಪ್ರದಾಯ ಇಂದಿಗೂ ಆಚರಿಸಲ್ಪಡುತ್ತಾ  ಬಂದಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ವರ್ಷಂಪ್ರತಿ ಮಾಡ ಅರಸು ದೈವಗಳ 5 ದಿನಗಳ  ಜಾತ್ರೆ ಹಾಗೂ  ಎರಡು  ದಿನಗಳ  ಬಂಡಿ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಜಾತ್ರೆಗೆ  ಗ್ರಾಮದ 20160211_165540 ಮುಸ್ಲಿಮರು ಬರುತ್ತಾರೆ. ದೈವಸ್ಥಾನದ  ಅಂಗಳದಲ್ಲಿರೋ ಸಿಂಹಾಸನ  ಕಟ್ಟೆಯಲ್ಲಿ  ಬ್ರಾಹ್ಮಣರಿಗೆ ಹಾಗೂ ಮುಸ್ಲಿಮರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ  ಮುಸ್ಲಿಮರನ್ನು ಬಹಳ ಗೌರವದಿಂದ ನೋಡಿಕೊಳ್ಳಲಾಗುತ್ತಿದೆ. ಇನ್ನು 5 ವರ್ಷಕ್ಕೊಮ್ಮೆ ನಡೆಯೋ ದರ್ಗಾದ ಉರೂಸ್ ಗೂ ಇಲ್ಲಿಯ  ಗ್ರಾಮದ ಹಿಂದೂಗಳು ಹೊರೆಕಾಣಿಕೆಯನ್ನ ನೀಡ್ತಾರೆ. ಉರೂಸ್ ಗೆ  ಆಗಮಿಸಿದ ಎಲ್ಲಾ ಹಿಂದೂಗಳಿಗೆ ಊಟೋಪಚಾರ ಗೌರವಗಳನ್ನ ನೀಡಲಾಗುತ್ತೆ. ಮಾಡಾ ಅರಸು ದೈವಗಳ ದೈವಸ್ಥಾನ ನಿರ್ಮಾಣಕ್ಕೆ ಇಲ್ಲಿಯ ಮುಸ್ಲಿಮ್ ಜಮಾತ್ ವತಿಯಿಂದ 15,000  ಧನ ಸಹಾಯ  ನೀಡಲಾಗಿದೆ. ಈ ರೀತಿಯ ಧಾರ್ಮಿಕ ಸೌಹಾರ್ದತೆಯ ಕುರಿತಾಗಿ ಗ್ರಾಮದ ಎರಡೂ ಸಮುದಾಯಗಳ ಹಿರಿಯರಿಗೆ ಉತ್ತಮ ಅಭಿಪ್ರಾಯವಿದೆ. “ಈ ಗ್ರಾಮದಲ್ಲಿರೋ ಅರಸು ದೈವ ಹಾಗೂ ದರ್ಗಾದ ಶೇಖರು ಊರಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಇಂಥಹಾ ಸೌಹಾರ್ದತೆ ಉಳಿಯಬೇಕು ಬೆಳಿಯಬೇಕು. ಇದುವರೆಗೂ ನಾವೆಲ್ಲಾ ಈ ಸೌಹಾರ್ದ ಪರಂಪರೆಯನ್ನು ಉಳಿಸಿಕೊಂಡು  ಬಂದಿದ್ದೇವೆ, ಇದನ್ನು ಮುಂದುವರಿಸುವ  ಜಾವಾಬ್ದಾರಿ ಇಂದಿನ ಯುವ ಸಮೂಹದ್ದು”  ಎನ್ನುತ್ತಾರೆ ಅರಸು ದೈವದ ಮುಂಡತ್ತಾಯ  ದೇವರ  ಪಾತ್ರದಾರಿ ಮಂಜು ಬೆಲ್ಚಡ. “ನಾವು ಈ ರೀತಿಯ ಮತ ಸೌಹಾರ್ದತೆಯನ್ನು ಬಯಸ್ತೇವೆ. ಇದು ಹೀಗೆ ಮುಂದುವರಿಯಲಿ ಎಂದು ದೇವರಲ್ಲಿ  ಪ್ರಾರ್ಥನೆ ಮಾಡ್ತೇನೆ. ನಮ್ಮ ಮಕ್ಕಳನ್ನು ಅರಸು ದೈವಗಳ ಜಾತ್ರಾಮಹೋತ್ಸವಕ್ಕೆ ಕಲಿಸಿಕೊಡುತ್ತೇನೆ” ಎನ್ನುತ್ತಾರೆ ಗ್ರಾಮಸ್ಥ ಯು.ಕೆ ಮುಹಮ್ಮದ್.  ಉದ್ಯಾವರ-ಮಾಡ ಅರಸು ದೈವಗಳ ಸ್ಥಾನ ಹಾಗೂ ಅಸೈಯದ್ ಶೇಖ್ ದರ್ಗಾಗಳು ಈ ಗ್ರಾಮದಲ್ಲಿ ಮತಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ದಕ್ಷಿಣ ಕನ್ನಡ  ಜಿಲ್ಲೆಯ ಅಜಿಲಮೊಗೆರು  ಗ್ರಾಮದಲ್ಲಿರು  ಮುಸ್ಲಿಮ್ ಸಂತನ ಉರೂಸ್ ಕಾರ್ಯಕ್ರಮಕ್ಕೆ ಸ್ಥಳೀಯ  ಹಿಂದೂಗಳು ತುಪ್ಪ ಕೊಡುವುದು  ಹಾಗೂ ಆ ಗ್ರಾಮದ ದೇವಸ್ಥಾನದ  ಜಾತ್ರಾಮಹೋತ್ಸವಕ್ಕೆ ಮುಸ್ಲಿಮರು ಎಣ್ಣೆ ಕೊಡುವ  ಸಂಪ್ರದಾಯ ಆಚರಣೆಯಲ್ಲಿತ್ತು. ಉರೂಸ್ ಕಾರ್ಯಕ್ರಮಕ್ಕೆ ಊರ  ಹಿಂದೂಗಳೂ ಜಾತ್ರಾ ಮಹೋತ್ಸವಕ್ಕೆ ಗ್ರಾಮದ ಮುಸ್ಲಿಮರೂ ಹೋಗಿಬರುತ್ತಾ ಪರಸ್ಪರ ಸಹಕಾರ ನೀಡುತ್ತಾ ಸಾರಮಸ್ಯ ಸಾರುವ ಪದ್ದತಿ  ಇಂದಿಗೂ ಗ್ರಾಮದಲ್ಲಿ  ಕಾಣಸಿಗುತ್ತದೆ. ಇವತ್ತು ಮುಸ್ಲಿಮ್ ಜಿಲ್ಲಾಧಿಕಾರಿಯ  ಹೆಸರಿನಲ್ಲಿ ವಿವಾದಕ್ಕೆ ಕಾರಣವಾಗಿರುವ ಪುತ್ತೂರು ಮಹಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅಧಿಕ  ಸಂಖ್ಯೆಯ  ಮುಸ್ಲಿಮರು ಭಾಗವಹಿಸುತ್ತಿದ್ದರು. ಜಾತ್ರೆಗದ್ದೆಯಲ್ಲಿ ವ್ಯಾಪಾರ ಮಾಡುವವರೂ ಬಹುತೇಕ  ಮುಸ್ಲಿಮರೇ ಆಗಿದ್ದರು. ಜಾತ್ರೆಗೆ ಅಗತ್ಯವಿರುವ ಬಾಳೆಕಾಯಿ, ತೆಂಗಿನಕಾಯಿಯನ್ನು ಮುಸ್ಲಿಮ್ ವರ್ತಕರು ನೀಡುತ್ತಿದ್ದರು. ಇನ್ನು ಜಾತ್ರಾಮಹೋತ್ಸವದಲ್ಲಿ ಸುಡು ಮದ್ದು ಪ್ರದರ್ಶನ ಮಾಡುತ್ತಿದ್ದವನು ಬದಿಯಡ್ಕ ಮೂಲದ ಮುಸ್ಲಿಮ್ ಸುಡುಮದ್ದು  ವ್ಯಾಪಾರಿ. ಆದರೆ ಬಾಬರೀ  ಮಸೀದಿ  ಧ್ವಂಸ ಘಟನೆಯ ನಂತರ ಜಾತ್ರೆಗೆ ಬರುವ ಮುಸ್ಲಿಮರ ಸಂಖ್ಯೆ ಕಡಿಮೆಯಾಯಿತು. ಕೋಮುವಾದಿ  ಸಂಘಟನೆಗಳು ಅನ್ಯಧರ್ಮಿಯರು ಜಾತ್ರೆಗೆ ಬರದಂತೆ ಹಾಗೂ  ಜಾತ್ರೆಯಲ್ಲಿ ಮುಸ್ಲಿಮರು  ವ್ಯಾಪಾರ ನಡೆಸದಂತೆ ಫರ್ಮಾನು ಹೊರಡಿಸಿದರು. ಇವೆಲ್ಲದರ ನಡುವೆಯೂ ಇಂದಿಗೂ ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳ ದೇವಸ್ಥಾನಗಳ ವಾರ್ಷಿಕ ಮೇಳಗಳಲ್ಲಿ, ಭೂತಕೋಲ ಆಚರಣೆಗಳಲ್ಲಿ, ಕಾರ್ಕಳದ ಆತ್ತೂರ್ ಚರ್ಚ್ ಉತ್ಸವಗಳಲ್ಲಿ, ಸೈದಾನ್ ಬೀಬಿ ದರ್ಗಾ, ಉಳ್ಳಾಲ ಸೈಯದ್ ಮದನಿ ದರ್ಗಾಗಳ ಉರೂಸ್ ಗಳಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಕೂಡಿ ಆಚರಣೆ ಮಾಡೋ ಇಂಥಹಾ ಸಾಕಷ್ಟು ಉದಾಹರಣೆಗಳು  ಜಿಲ್ಲೆಯಲ್ಲಿ ಕಾಣಸಿಗುತ್ತದೆ. ಆದ್ರೆ  ಇಂದು ಎರಡೂ ಧರ್ಮಗಳ ಕೋಮುವಾದಿಗಳು ಮೂಲಭೂತವಾದಿಗಳು ಇಂಥಹಾ ಕೂಡುಬಾಳುವಿಕೆಯ ಸಂಸ್ಕೃತಿಗೆ ಕೊಳ್ಳಿ ಇಡುತ್ತಿದ್ದಾರೆ. ಈ ಮೂಲಕ  ಕರಾವಳಿಯಲ್ಲಿ  ಹಿಂದೂ ಮುಸ್ಲಿಮ್  ಸಮುದಾಯಗಳ ನಡುವೆ ಸೃಷ್ಟಿಯಾಗಿರುವ ಕಂದಕವನ್ನು ಇನ್ನಷ್ಟು ವಿಸ್ತರಿಸೋ  ದುರುದ್ದೇಶ ಇವರದ್ದು. ಜಿಲ್ಲೆಯ  ಜಿಲ್ಲಾಧಿಕಾರಿ ಮುಸ್ಲಿಮ್ ಸಮುದಾಯದವರೆಂಬ ಕಾರಣಕ್ಕಾಗಿ  ಜಾತ್ರೆಯ  ಆಮಂತ್ರಣ  ಪತ್ರದಿಂದ ಹೆಸರು ಕಿತ್ತುಹಾಕುವಂತೆ ಒತ್ತಾಯಿಸುವುದು, ಜಾತ್ರೆಗದ್ದೆಯಲ್ಲಿ ಮುಸ್ಲಿಮರು ಅಂಗಡಿ  ತೆರೆಯದಂತೆ ಫರ್ಮಾನು ಹೊರಡಿಸುತ್ತಿರುವುದು ಇದರ ಮುಂದುವರಿದ ಭಾಗವಷ್ಟೇ. ಕರಾವಳಿಯ ಸಾರಮಸ್ಯ ಬಯಸೋ ಜನಸಮುದಾಯ ಎಚ್ಚೆತ್ತುಕೊಂಡು ಮನಸ್ಸುಗಳನ್ನು ವಿಭಜಿಸೋ  ಸನಾತನವಾದಿಗಳ ಇಂಥಹಾ ಪ್ರಯತ್ನಗಳನ್ನು ಸೋಲಿಸಬೇಕಿದೆ.

ಮುಸ್ಲಿಮ್ ಸಮುದಾಯ ಹಾಗೂ ಉಮ್ಮರ್ ಖಾಲಿದ್ ಮತ್ತು ಶೆಹ್ಲಾ ರಶೀದ್ ರಂಥ ಪ್ರಗತಿಪರ ನಾಯಕತ್ವ


-ಇರ್ಷಾದ್ ಉಪ್ಪಿನಂಗಡಿ


“ನನ್ನ ಹೆಸರು ಉಮ್ಮರ್ ಖಾಲಿದ್. ಆದರೆ ನಾನು ಭಯೋತ್ಪಾದಕನಲ್ಲ. ಒಂದು ವಿಷಯವನ್ನು ನಾನಿಲ್ಲಿ ಹೇಳಲೇ ಬೇಕು. ನಾನು ಕಳೆದ ಆರು ವರ್ಷಗಳಿಂದ ಈ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿ ರಾಜಕಾರಣವನ್ನು ಮಾಡುತ್ತಾ ಬಂದಿದ್ದೇನೆ. ನಾನು ಇಲ್ಲಿಯವರೆಗೂ ನನ್ನನ್ನು ನಾನು ಮುಸ್ಲಿಮನೆಂದು ಅಂದುಕೊಂಡಿಲ್ಲ. ಈ ಸಮಾಜದಲ್ಲಿ ಮುಸ್ಲಿಮರು ಮಾತ್ರ ದಮನಕ್ಕೊಳಗಾಗಿಲ್ಲ. ದಲಿತರು, ಆದಿವಾಸಿಗಳು ಈ ಸಮಾಜದ ಶೋಷಿತರಾಗಿದ್ದಾರೆ. ಇವರೆಲ್ಲರ ಪರವಾಗಿ ಹೋರಾಟ ಮಾಡಿದ್ದೇನೆ. ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡಿದಷ್ಟೇ ಶೋಷಿತ ಮುಸ್ಲಿಮರ ಪರವಾಗಿ ಮಾತನಾಡಿದ್ದೇನೆ ”. ಸದ್ಯ ದೇಶದ್ರೋಹದ ಆರೋಪ ಹೊತ್ತು ಜೈಲು ಸೇರಿರುವ ಜೆ.ಎನ್.ಯು ವಿದ್ಯಾರ್ಥಿ ಮುಖಂಡ ಉಮ್ಮರ್ ಖಾಲಿದ್ ತನ್ನ ಶರಣಾಗತಿಗಿಂತ ಮೊದಲು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳಿವು. ಸಂಘಪರಿವಾರದ ಕೋಮುವಾದ ಹಾಗೂ ಅದಕ್ಕೆ ಪ್ರತಿಯಾಗಿ ಮುಸ್ಲಿಮ್ ಸಮಾಜದಲ್ಲಿ ಧಾರ್ಮಿಕ ಮೂಲಭೂತವಾದ ಆಳವಾಗಿ ಇಂದು ಬೇರೂರುತ್ತಿವೆ. ಒಂದು ಕಡೆಯಲ್ಲಿ ಬಹುಸಂಖ್ಯಾತ ಕೋಮುವಾದ ಮುಸ್ಲಿಮರಲ್ಲಿ ಅಭದ್ರತೆಯ ಭಾವವನ್ನು ಉಂಟುಮಾಡುತ್ತಿದ್ದರೆ ಇನ್ನೊಂದೆಡೆ ಇದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮುಸ್ಲಿಮ್ ಕೋಮುವಾದ ಸಮುದಾಯವನ್ನು ಮತ್ತಷ್ಟು ಅಭದ್ರತೆಗೆ ತಳ್ಳುತ್ತಿದೆ. ಪ್ರಸಕ್ತ ಈ ಸನ್ನಿವೇಶದಲ್ಲಿ ಮುಸ್ಲಿಮ್ ಸಮಾಜವನ್ನು ಪ್ರತಿನಿಧಿಸುವ ಉದಾರವಾದಿ ಮುಸ್ಲಿಮ್ ನಾಯಕರ ಅಗತ್ಯತೆಯ ಚರ್ಚೆಯನ್ನ ಹುಟ್ಟುಹಾಕಿದೆ. ಬಹುಷಃ ಜೆ.ಎನ್.ಯು ಕ್ರಾಂತಿ ಕನ್ನಯ್ಯನಂತಹಾ ದಮನಿತ ಸಮುದಾಯಗಳ ಪರ ಧ್ವನಿ ಎತ್ತುವ ಮನೋಭಾವದ ಯುವನಾಯಕನನ್ನು ದೇಶಕ್ಕೆ ಪರಿಚಯಿಸುವುದರ ಜೊತೆಗೆ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ಪ್ರಗತಿಪರ ಯುವ ಮುಸ್ಲಿಮ್ ವಿದ್ಯಾರ್ಥಿ ನಾಯಕತ್ವವನ್ನೂ ಪರಿಚಯಿಸಿದೆ.

ಉಮ್ಮರ್ ಖಾಲಿದ್ ಜೆ.ಎನ್.ಯು ಡೆಮೋಕ್ರಟಿಕ್ ಸ್ಟುಡೆಂಟ್ ಯೂನಿಯನ್ (DSU) ಎಂಬ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಮುಖಂಡ.Ummar_Khalid ಉಮ್ಮರ್ ಖಾಲಿದ್ ಕಳೆದ 6 ವರ್ಷಗಳಿಂದ ಜೆ.ಎನ್.ಯು ಕ್ಯಾಂಪಸ್ ನಲ್ಲಿ ಎಡ ಪ್ರಗತಿಪರ ಚಳುವಳಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು. ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಉಮ್ಮರ್ ಖಾಲಿದ್ ತಂದೆ ಜಮಾತೇ- ಇಸ್ಲಾಮೀ-ಹಿಂದ್ ಮುಸ್ಲಿಮ್ ಮೂಲಭೂತವಾದಿ ಸಂಘಟನೆಯ ಶೂರಾ ಕಮಿಟಿ ಸದಸ್ಯ. ಆದರೆ ತಂದೆಯ ಇಸ್ಲಾಮಿ ಮೂಲಭೂತವಾದಿ ಚಿಂತನೆಗೆ ವಿರುದ್ಧವಾಗಿ ಉದಾರವಾದಿ ಹಾಗೂ ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಂಡು ಬೆಳೆದವರು ಉಮ್ಮರ್ ಖಾಲಿದ್. “ಉಮ್ಮರ್ ಎಡಪಂಥೀಯ ಹಾಗೂ ಪ್ರಗತಿಪರ ವಿಚಾರಧಾರೆಗಳಿಂದ ಪ್ರಭಾವಿತವಾಗಿದ್ದ. ಮುಸ್ಲಿಮ್ ಸಮಾಜದಲ್ಲಿ ಬೇರೂರಿರುವ ಮೂಲಭೂತವಾದ, ಧಾರ್ಮಿಕ ಕಟ್ಟರ್ ವಾದ ಹಾಗೂ ಮಹಿಳಾ ಶೋಷಣೆಯನ್ನು ಖಂಡಿಸುತ್ತಿದ್ದ. ಇವುಗಳನ್ನೆಲ್ಲಾ ಪ್ರಶ್ನಿಸುವ ಮನೋಭಾವ ಆತನದ್ದಾಗಿತ್ತು. ಈ ಕಾರಣಕ್ಕಾಗಿ ನಮ್ಮ ನಡುವೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು” ಎನ್ನುತ್ತಾರೆ ಉಮ್ಮರ್ ಖಾಲಿದ್ ತಂದೆ ಸೈಯದ್ ಖಾಲಿದ್ ರಸೂಲ್ ಇಲ್ಯಾಸ್. ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ಉಮ್ಮರ್ ಖಾಲಿದ್ ಇಸ್ಲಾಮ್ ಧಾರ್ಮಿಕ ಕಟ್ಟರ್ ವಾದದ ವಿರೋಧಿಸುತ್ತಾ ಶೋಷಿತ ಮುಸ್ಲಿಮರ ಪರವಾಗಿ ಧ್ವನಿ ಎತ್ತುತ್ತಿದ್ದರು. ಜೊತೆಗೆ ಜಾತಿವಾದ, ಮಹಿಳಾ ಶೋಷಣೆ, ಆದಿವಾಸಿ ಹಾಗೂ ದಲಿತರ ಮೇಲಾಗುತ್ತಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ದದ ಹೋರಾಟದಲ್ಲೂ ಉಮ್ಮರ್ ಮುಂಚೂಣಿಯಲ್ಲಿದ್ದರು.

ಇತ್ತೀಚೆಗೆ ಪ್ರಭಾವಿ ಮುಸ್ಲಿಮ್ ಧಾರ್ಮಿಕ ಮುಖಂಡರೊಬ್ಬರು ತಮ್ಮ ಭಾಷಣದಲ್ಲಿ ಮಹಿಳೆಯರ ಶಕ್ತಿ ಸಾಮರ್ಥ್ಯದ ಕುರಿತಾಗಿ ಕೇವಲವಾಗಿ ಮಾತನಾಡಿದ್ದರು. ಮಹಿಳೆ ಸ್ವತಂತ್ರವಾಗಿ ಹೋರಾಡಲು ಅಶಕ್ತಳು ಎಂದಿದ್ದರು. ಮುಸ್ಲಿಮ್ ಸಮಾಜದಲ್ಲಿ ಇಂದಿಗೂ ಮಹಿಳೆಯರನ್ನು ಈ ದೃಷ್ಟಿಕೋನದಲ್ಲಿ ನೋಡುವ ಧಾರ್ಮಿಕ ಪಂಡಿತರೇ ಅಧಿಕ. ಪರಿಣಾಮ ಸಮಾಜದ ಮುಖ್ಯವಾಹಿನಿಯಲ್ಲಿ ಮುಸ್ಲಿಮ್ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ನಗಣ್ಯ. ಈ ಸಂಧರ್ಭದಲ್ಲಿ ನಮ್ಮ ಕಣ್ಣ ಮುಂದೆ ಬರುವ ದಿಟ್ಟ ಯುವ ನಾಯಕಿ ಶ್ರೀನಗರ ಮೂಲದ ಶೆಹ್ಲಾ ರಶೀದ್. ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿದಾಗ ಅದನ್ನು ವಿರೋಧಿಸಿ ನಡೆದ ಬೃಹತ್ ಹೋರಾಟಕ್ಕೆ ನಾಯಕತ್ವವನ್ನು ನೀಡಿದವರು ಶೆಹ್ಲಾ ರಶೀದ್. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷೆಯಾಗಿರುವ ಶೆಹ್ಲಾ ರಶೀದ್ ಎಡ-ಪ್ರಗತಿಪರ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿ ಮುಂದಾಳು. ಮಧ್ಯಮ ವರ್ಗದ ಕಾಶ್ಮೀರಿ ಕುಟುಂಬದಲ್ಲಿ ಹುಟ್ಟಿ ಬೆಳೆದು ಜೆ.ಎನ್.ಯುನ AISA ಎಡ ವಿದ್ಯಾರ್ಥಿ ಚಳುವಳಿಯಲ್ಲಿ ತನ್ನನ್ನು ಗುರುತಿಸಿಕೊಂಡು ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ ನಾಯಕಿ. ಜೆ.ಎನ್.ಯು ಹೋರಾಟದ ಸಂದರ್ಭದಲ್ಲಿ ಕ್ಯಾಂಪಸ್ ನ ಮೂರು ಸಾವಿರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈಕೆ ಮಾಡಿದ ಭಾಷಣ ಹಾಗೂ ಆ ಹೋರಾಟಕ್ಕೆ ನೀಡಿದ ನಾಯಕತ್ವ ನಿಜಕ್ಕೂ ಶೆಹ್ಲಾ ರಶೀದ್ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಪ್ರಗತಿಪರ ಚಿಂತನೆಗಳೊಂದಿಗೆ ತನ್ನ ಸಮುದಾಯದೊಳಗಿನ ಮೂಲಭೂತವಾದ, ಮುಸ್ಲಿಮ್ ಮಹಿಳೆಯರ ತವಕ – ತಲ್ಲಣಗಳನ್ನು ಪ್ರಶ್ನಿಸುವುದರ ಜೊತೆಗೆ ತನ್ನ ಸಮುದಾಯದ ಶೋಷಿತ ಜನರ ಪರವಾಗಿ ದನಿಯಾಗುತ್ತಿರುವ ಈಕೆಯ ನಾಯಕತ್ವ ಮುಸ್ಲಿಮ್ ಮಹಿಳೆಯರಿಗೆ ಮಾದರಿ.

ಬಹುಷಃ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ರಂತಹಾ ಯುವ ನಾಯಕರ ಕುರಿತಾಗಿ ಮುಸ್ಲಿಮ್ ಯುವ ಸಮೂಹದಲ್ಲಿ ಹೊಸShehla_Rashid ಚರ್ಚೆ ಹುಟ್ಟಬೇಕಿತ್ತು. ವಿಪರ್ಯಾಸವೆಂದರೆ ಮುಸ್ಲಿಮ್ ಯುವ ಸಮೂಹಕ್ಕೆ ಇಂಥಹ ಪ್ರಗತಿಪರ ಧೋರಣೆಯ ಮುಖಂಡರು ಹೀರೋ ಆಗಿ ಗುರುತಿಸಲ್ಪಡುವುದಿಲ್ಲ. ಬದಲಾಗಿ ಧಾರ್ಮಿಕ ಮೂಲಭೂತವಾದಿ, ಕೋಮುವಾದಿ ರಾಜಕಾರಣವನ್ನು ಪ್ರತಿನಿಧಿಸುವ ಉವೈಸಿ ಸಹೋದರರಂತಹ ನಾಯಕರು ಮುಸ್ಲಿಮ್ ಸಮಾಜದ ಬಹುತೇಕ ಯುವ ಮನಸ್ಸುಗಳ ಪಾಲಿಗೆ ಹೀರೋ ಆಗಿ ನೆಲೆ ನಿಲ್ಲುತ್ತಿದ್ದಾರೆ. ಉಮ್ಮರ್ ಖಾಲಿದ್ ಹಾಗೂ ಶೈಲಾ ರಶೀದ್ ಶೋಷಿತ ಮುಸ್ಲಿಮರ ಪರವಾಗಿ ಧ್ವನಿ ಎತ್ತಿದರೂ ಮುಸ್ಲಿಮ್ ಸಮಾಜದ ಮೂಲಭೂತವಾದಿಗಳು ಇವರ ನಾಯಕತ್ವವನ್ನು ಒಪ್ಪಲು ತಯಾರಿಲ್ಲ. ಕಾರಣ, ಇವರ ಪ್ರಗತಿಪರ ಧೋರಣೆ. ಸಂಘಪರಿವಾರದ ಕೋಮುವಾದದ ಜೊತೆಗೆ ಮುಸ್ಲಿಮ್ ಸಮಾಜದ ಮೂಲಭೂತವಾದವನ್ನು ಪ್ರಶ್ನಿಸುತ್ತಿರುವ ಇವರುಗಳ ನಡೆಯೇ ಈ ಬಿನ್ನಾಭಿಪ್ರಾಯಕ್ಕೆ ಕಾರಣ. “ಉಮ್ಮರ್ ಖಾಲಿದ್ ಚಿಂತನೆಯ ಕುರಿತಾಗಿ ಧಾರ್ಮಿಕ ಬಿನ್ನಾಭಿಪ್ರಾಯಗಳಿವೆ. ಅವರ ಸಾಮಾಜಿಕ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಮುಸ್ಲಿಮ್ ಮೂಲಭೂತವಾದ, ಕೋಮುವಾದದ ಕುರಿತಾದ ಅವರ ನಿಲುವಿನಲ್ಲಿ ನಮಗೆ ಸಹಮತ ಕಂಡುಬಂದಲ್ಲಿ ಮಾತ್ರ ಅಂಥವರ ನಾಯಕತ್ವವನ್ನು ನಾವು ಒಪ್ಪುತ್ತೇವೆ” ಎನ್ನುತ್ತಾರೆ ಜಮಾತೇ- ಇಸ್ಲಾಮೀ-ಹಿಂದ್ ಸಂಘಟನೆಯ ಯುವ ಮುಖಂಡ ಶಬ್ಬೀರ್ ಅಹಮ್ಮದ್.

ಭಾರತದಲ್ಲಿ ಸಂಘಪರಿವಾರದ ಕೋಮುವಾದದಿಂದ ಅಭದ್ರತೆಯಲ್ಲಿ ಬದುಕುತ್ತಿರುವ ಶೋಷಿತ ಮುಸ್ಲಿಮ್ ವರ್ಗದ ಪ್ರತಿನಿಧಿಗಳಾಗಿ ಮುಸ್ಲಿಮ್ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಹಾಗೂ ಅದರ ನಾಯಕರು ಹೊರಹೊಮ್ಮುತ್ತಿದ್ದಾರೆ. ಸಮುದಾಯದ ರಕ್ಷಣೆ ಹಾಗೂ ಸಬಲೀಕರಣದ ಪರವಾಗಿ ಧ್ವನಿ ಎತ್ತುತ್ತಿರುವ ಮೂಲಭೂತವಾದಿ ಸಂಘಟನೆಗಳು ಸಮುದಾಯದ ಯುವ ಮನಸ್ಸುಗಳಲ್ಲಿ ಧಾರ್ಮಿಕ ಕಟ್ಟರ್ ವಾದವನ್ನು ಬಿತ್ತುತ್ತಿವೆ. ಪರಿಣಾಮ ಶೋಷಿತ ಮುಸ್ಲಿಮರ, ಬಡವರ, ದಮನಿತರ, ಶೋಷಿತರ, ಮಹಿಳೆ, ಆದಿವಾಸಿ ಹಾಗೂ ದಲಿತರ ಪರವಾಗಿ ಆಡುವ ಉದಾರವಾದಿ ಮುಸ್ಲಿಮ್ ನಾಯಕರ ಮಾತುಗಳಿಗಿಂತ ಸಂಘಪರಿವಾರದ ಪರಿಭಾಷೆಯಲ್ಲಿ ಮಾತನಾಡುವ ಕೋಮುವಾದಿ ಮುಸ್ಲಿಮ್ ನಾಯಕರ ಮಾತುಗಳು ಮುಸ್ಲಿಮ್ ಯುವಮನಸ್ಸುಗಳಿಗೆ ಹತ್ತಿರವಾಗುತ್ತಿವೆ.

“ಎಡಪಂಥೀಯ ಚಿಂತನೆ ಹಾಗೂ ಎಡ ಹೋರಾಟಗಾರರ ಕುರಿತಾಗಿ ಮುಸ್ಲಿಮ್ ಸಮುದಾಯದ ನಡುವೆ ಪೂರ್ವಾಗ್ರಹಗಳನ್ನು ಮೂಲಭೂತವಾದಿಗಳು ವ್ಯವಸ್ಥಿತವಾಗಿ ಸೃಷ್ಟಿ ಮಾಡುತ್ತಿದ್ದಾರೆ. ಈ ಕಾರಣಗಳಿಂದಾಗಿ ಬಡತನ, ಸಮಾನತೆ, ಸ್ತ್ರೀ ಸ್ವಾತಂತ್ಯ್ರ, ಕೋಮುವಾದ , ಮೂಲಭೂತವಾದದ ಕುರಿತಾಗಿ ಮಾತನಾಡುವ ಮುಸ್ಲಿಮ್ ಪ್ರಗತಿಪರ ಹೋರಾಟಗಾರರನ್ನು ಸ್ವೀಕರಿಸಲು ಮುಸ್ಲಿಮ್ ಸಮಾಜ ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆಗಳ ಪರಿಣಾಮವೇ ಎಡ ಚಿಂತನೆಯ ಧ್ವನಿಯಾಗಿರುವ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ಯುವ ವಿದ್ಯಾರ್ಥಿ ಮುಖಂಡರು ಮುಸ್ಲಿಮ್ ಯುವಕರ ಪಾಲಿಗೆ ಹೀರೋಗಳಾಗುವುದಿಲ್ಲ. ಇವರ ಹೋರಾಟ ಹಾಗೂ ನಾಯಕತ್ವದ ಕುರಿತಾಗಿ ಮುಸ್ಲಿಮ್ ಸಮಾಜದಲ್ಲಿ ಚರ್ಚೆ ಆಗೋದಿಲ್ಲ. ಬದಲಾಗಿ ಉವೈಸಿ ಸಹೋದರರಂತಹಾ ಕೋಮುವಾದಿ ನಾಯಕತ್ವ ಮುಸ್ಲಿಮ್ ಯುವ ಮನಸ್ಸುಗಳಲ್ಲಿ ಹೀರೋ ಸ್ಥಾನ ಪಡೆದುಕೊಳ್ಳುತ್ತಿರುವುದು ವಿಪರ್ಯಾಸ ಹಾಗೂ ಆತಂಕಕಾರಿ” ಎನ್ನುತ್ತಾರೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.

ಭಾರತೀಯ ಮುಸ್ಲಿಮರು ಸಂಘಪರಿವಾರದ ಕೋಮುವಾದಿಗಳನ್ನು ಕೋಮುವಾದದ ಪರಿಭಾಷೆಯಲ್ಲೇ ಮುಖಾಮುಖಿಯಾಗಲು ಹೊರಟಿದ್ದಾರೆ.Owaisi ಆದರೆ ಭಾರತದಲ್ಲಿ ಬಹುಸಂಖ್ಯಾತ ಕೋಮುವಾದವನ್ನು ಎದುರಿಸುವ ಬಗೆ ಇದಲ್ಲ. ಬದಲಾಗಿ ಇಲ್ಲಿಯ ಶೋಷಿತ ವರ್ಗಗಳು ಜೊತೆಗೂಡಿ ಚಳುವಳಿ ಕಟ್ಟಬೇಕಾದ ಅಗತ್ಯವಿದೆ. ಈ ಸಂಧರ್ಭದಲ್ಲಿ ಚಳುವಳಿಯ ನಾಯಕತ್ವ ಮುಸ್ಲಿಮ್ ಕೋಮುವಾದಿಗಳ ಪಾಲಾದರೆ ಕೋಮುವಾದದ ವಿರುದ್ದದ ಹೋರಾಟ ಅರ್ಥ ಕಳೆದುಕೊಳ್ಳುತ್ತದೆ. ಒಂದು ವರ್ಗದ ಕೋಮುವಾದದ ವಿರುದ್ಧದ ಹೋರಾಟ ಮತ್ತೊಂದು ಕೋಮುವಾದಿಗಳ ಹುಟ್ಟಿಗೆ ಕಾರಣವಾಗಬಾರದು. ಇಂದು ಮುಸ್ಲಿಮ್ ಸಮುದಾಯದ ಬೆಳವಣಿಗೆಯನ್ನು ಗಮನಿಸುತ್ತಿದ್ದರೆ ಮೂಲಭೂತವಾದ, ಧಾರ್ಮಿಕ ಕಟ್ಟರ್ ವಾದ ಸಮುದಾಯದ ಯುವ ಸಮೂಹದದೊಳಗೆ ಹೇಗೆ ಬೆರೂರುತ್ತಿದೆ ಎಂಬುವುದು ಸ್ಪಷ್ಟಗೊಳ್ಳುತ್ತದೆ. ಇದು ಆತಂಕಕಾರಿ ವಿಚಾರವೂ ಹೌದು. ಶೋಷಿತ ಮುಸ್ಲಿಮರ ಪರ ನಡೆಸುತ್ತಿರುವ ಮುಸ್ಲಿಮ್ ಸಮುದಾಯದ ಹೋರಾಟಕ್ಕೆ ಸಮುದಾಯದ ಉದಾರವಾದಿಗಳ ಹಾಗೂ ಪ್ರಗತಿಪರರ ನಾಯಕತ್ವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದೊಳಗಿನಿಂದ ಉದಾರವಾದಿ, ಪ್ರಗತಿಪರ ನೆಲೆಯಲ್ಲಿ ಚಿಂತಿಸುವ ನೂರಾರು ಯುವ ಮುಂದಾಳುಗಳು ಬೆಳೆದು ಬರಬೇಕಿದೆ. ದೇಶದಲ್ಲಿ ಕ್ರಾಂತಿಯ ತಂಗಾಳಿ ಎಬ್ಬಿಸಿದ ಉಮ್ಮರ್ ಖಾಲಿದ್ ಹಾಗೂ ಶೆಹ್ಲಾ ರಶೀದ್ ನಂತಹಾ ವಿದ್ಯಾರ್ಥಿ ಮುಖಂಡರು ಮುಸ್ಲಿಮ್ ಯುವ ಸಮೂಹಕ್ಕೂ ಸ್ಪೂರ್ತಿಯಾಗಲಿ. ಯುವ ನಾಯಕರನ್ನು ಈ ನಾಡಿಗೆ ನೀಡಿದ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು.

ಸಾಮಾಜಿಕ ಜಾಲತಾಣ ಹಾಗೂ ಮುಸ್ಲಿಮ್ ಮಹಿಳೆಯರ ಪ್ರಾತಿನಿಧ್ಯ


-ಇರ್ಷಾದ್ ಉಪ್ಪಿನಂಗಡಿ


ಅಲ್ಲಾರಿ, ನಿಮ್ಮ ಮುಸ್ಲಿಮ್ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ಆಕ್ಟ್ವೀವ್ ಆಗಿ ಗುರುತಿಸಿಕೊಳ್ತಾರೆ, ಆದ್ರೆ ಮುಸ್ಲಿಮ್ ಮಹಿಳೆಯರು ಇಲ್ಲಿ ಯಾಕೆ ಕಾಣಿಸಿಕೊಳ್ತಿಲ್ಲ?  ನನ್ನ ಜೊತೆ ಮಾತನಾಡುವ ಅನೇಕ ಸ್ನೇಹಿತರು ನನ್ನಲ್ಲಿ ಕೇಳುವ ಸಹಜ ಪ್ರೆಶ್ನೆ. ಹೌದಲ್ವಾ, ಅಂತinidan-muslim-woman ಕುತೂಹಲಕ್ಕಾಗಿ ನಾನು ನನ್ನ ಫೇಸ್ ಬುಕ್ ಖಾತೆಯಲ್ಲಿ ಎಷ್ಟು ಮುಸ್ಲಿಮ್ ಮಹಿಳೆಯರು ಸ್ನೇಹಿತರಾಗಿದ್ದಾರೆ ಎಂದು ಚೆಕ್ ಮಾಡಿದೆ. ನನ್ನ ಸುಮಾರು ಮೂರು ಸಾವಿರ ಸ್ನೇಹಿತರ ಪೈಕಿ ಮುಸ್ಲಿಮ್ ಮಹಿಳೆಯರ ಸಂಖ್ಯೆ ಕೇವಲ ಆರು! ಈ ಪೈಕಿ ಎಷ್ಟು ಖಾತೆಗಳು ಅಸಲಿ ಅಥವಾ ಎಷ್ಟು ಖಾತೆಗಳು ನಕಲಿ ಎಂಬುವುದನ್ನು ನನಗೆ ಇದುವರೆಗೂ ಕಂಡುಹಿಡಿಯೋದಕ್ಕೆ ಸಾಧ್ಯವಾಗಿಲ್ಲ. ಕಾರಣ, ಖಾತೆ ಹೊಂದಿದವರ ಪ್ರೊಫೈಲ್ ಫೋಟೋವಾಗಲಿ ಇತರ ಮಾಹಿತಿಗಳಾಗಲಿ ಅಲ್ಲಿಲ್ಲ. ಆದ್ರೆ ನನ್ನ ಫೇಸ್ ಬುಕ್ ಖಾತೆಯ ಸ್ನೇಹಿತರಲ್ಲಿ ಇತರ ಧರ್ಮೀಯ ಮಹಿಳೆಯರ ಸಂಖ್ಯೆ ಬರೋಬ್ಬರಿ 400 ಕ್ಕೂ ಅಧಿಕ!

ಹಿಂಗ್ಯಾಕೆ ಅಂತ ನೀವು ತಲೆಕೆಡೆಸಿಕೊಂಡಿರಬಹುದು. ಆದ್ರೆ ನನಗೆ ಇದ್ರಲ್ಲಿ ಆಶ್ವರ್ಯ ಏನೂ ಅನ್ನಿಸೋದಿಲ್ಲ. ಬದಲಾಗಿ ಖೇಧ ಅನ್ನಿಸುತ್ತದೆ. ಕೆಲವು ತಿಂಗಳ ಹಿಂದೆ ಒಬ್ಬರು ಮುಸ್ಲಿಮ್ ಮಹಿಳೆ ನನ್ನ ಫೇಸ್ ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಲುಹಿಸಿದ್ದರು. ಅವರ ಹೆಸರು ಉಮ್ಮು ರವೂಫ್ ರಹೀನಾ. ಅವರ ಮುಖಪುಟವನ್ನು ಗಮನಿಸಿದಾಗ ನನಗೆ ತುಂಬಾನೆ ಆಶ್ವರ್ಯವಾಯಿತು. ನನ್ನ ಫೇಸ್ ಬುಕ್ 6 ಮುಸ್ಲಿಮ್ ಗೆಳತಿಯರ ಪೈಕಿ ಇವರೊಬ್ಬರೇ ತಮ್ಮ ಪ್ರೊಫೈಲ್ ಫೋಟೋವನ್ನು ಹಾಕಿದ್ದರು. ಅವರ ಎಫ್.ಬಿ ವಾಲ್ ನೋಡ್ತಾ ಹೋದಂತೆ ಸಾಕಷ್ಟು ಪ್ರಗತಿಪರ ಬರಹಗಳು ಅಲ್ಲಿ ಕಂಡುಬಂದವು. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಮೂಲಭೂತವಾದ, ಕೋಮುವಾದ, ಮಹಿಳಾ ಶೋಷಣೆಯ ವಿರುದ್ಧ ಧೈರ್ಯವಾಗಿ, ಲಾಜಿಕ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ರಹೀನಾ. ಕುತೂಹಲಕಾರಿ ವಿಚಾರವೆಂದರೆ ಇವರ ಸ್ಟೇಟಸ್ಗೆ ಬರುತ್ತಿರುವ ಕಾಮೆಂಟ್ಗಳು ಮಾತ್ರ ಅಸಹನೀಯ.

ಅಲ್ಲಿರುವ ಮುಸ್ಲಿಮ್ ಯುವಕರ ಬಹುತೇಕ ಕಾಮೆಂಟ್ಗಳು ರಹೀನಾ ತಮ್ಮ ಪ್ರೊಫೈಲ್ನಲ್ಲಿ ಫೋಟೋ ಹಾಕಿದಕ್ಕಾಗಿ. ಜೊತೆಗೆ ಅವರ ಪ್ರಗತಿಪರ ಲಾಜಿಕ್ ಅಭಿಪ್ರಾಯಗಳಿಗೆ ಉತ್ತರ ನೀಡಲು ಸಾಧ್ಯವಾಗದಾಗ ಕೋಪದಿಂದ ಅವರ ಮೇಲೆ ಮುಗಿಬೀಳುತ್ತಿದ್ದರು. ಬಹುತೇಕ ಕಾಮೆಂಟ್ಗಳ ಒತ್ತಾಯ ಒಂದೇ ಮುಸ್ಲಿಮ್ ಮಹಿಳೆಯಾಗಿ ಫೇಸ್ ಬುಕ್ ಪ್ರೊಫೈಲ್ನಲ್ಲಿ ನಿನ್ನ ಫೋಟೋ ಹಾಕಿರೋದು ಧರ್ಮ ಬಾಹಿರ  ಎಂದು. ಫೋಟೋ ಹಾಕಿರೋದು ಅಲ್ಲದೆ ಧರ್ಮದ ಬಗ್ಗೆ ಮೂಲಭೂತವಾದದ ಕುರಿತಾಗಿ ಪ್ರಶ್ನಿಸಿದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂಬ ಬೆದರಿಕೆಗಳು. ಹೀಗೆ ರಹೀನಾ ಮೇಲೆ ಮುಗಿಬಿದ್ದ ಯುವಕರ ಪ್ರೋಫೈಲ್ಗಳನ್ನು ನಾನು ಕುತೂಹಲಕ್ಕಾಗಿ  ಗಮನಿಸುತ್ತಿದ್ದೆ. ಅಬ್ಬಬ್ಬಾ,  ಅದೆಷ್ಟು ಅಂದ ಚೆಂದದ ಫೋಟೋಗಳು, ನಿಂತು ಕುಂತು, ಬೈಕ್ ಮೇಲೆ ಕೂತು, ಕಾರ್ ಮುಂದೆ ನಿಂತು ಬೇರೆ, ಹೀಗೆ ಭಿನ್ನ ವಿಭಿನ್ನ ಪೋಸುಗಳಿಂದ ಕೂಡಿದ ಪೋಟೋಗಳು ಅಲ್ಲಿ ರಾರಾಜಿಸುತ್ತಿದ್ದವು. ಇದಕ್ಕೆಲ್ಲಾ ನಿನ್ನ ಧರ್ಮ ಅನುಮತಿ ಕೊಡುತ್ತಾ ಎಂದು ಪ್ರಶ್ನಿಸಿದರೆ ಅವರಲ್ಲಿ ಉತ್ತರವೇ ಇಲ್ಲ. ಮುಸ್ಲಿಮ್ ಮಹಿಳೆಯೊಬ್ಬಳು ಹೀಗೆ ಬಹಿರಂಗವಾಗಿ ಪ್ರೆಶ್ನೆ ಮಾಡ್ತಿದ್ದಾರಲ್ಲಾ ಅಂತ ನಾನು ಖುಷಿ ಪಟ್ರೆ, ಕೊನೆಗೊಂದು ದಿನ ರಹೀನಾ ಫೇಸ್ ಬುಕ್ ಎಕೌಂಟ್ ಇದ್ದಕ್ಕಿದಂತೆ ನಾಪತ್ತೆಯಾಗೋದಾ!

ಮುಸ್ಲಿಮ್ ಮಹಿಳೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೀವು ಮಿಂಚಿದಾಗ ಆದಂತಹಾ ಅನುಭವಗಳೇನು ಎಂದು ರಹೀನರಲ್ಲಿ ಮಾತನಾಡಿದಾಗ  ನನ್ನ ಇನ್ ಬಾಕ್ಸ್ ಗೆ ಕೆಟ್ಟ ಕೆಟ್ಟ ಬೆದರಿಕೆಯ ಮೆಸೇಜ್ಗಳು ಬರುತ್ತಿದ್ದವು. ಫೋಟೋ ಯಾಕೆ ಹಾಕ್ತಿಯಾ ಅಂತ ಮುಗಿಬೀಳುತ್ತಿದ್ದರು. ಹೀಗೆ ಫೋಟೋ ಹಾಕೋದು, ಧರ್ಮದ ಬಗ್ಗೆ ಪ್ರಶ್ನಿಸೋದನ್ನು ಮುಂದುವರಿಸಿದ್ರೆ ಪರಿಣಾಮ ನೆಟ್ಟಗಿರೋದಿಲ್ಲ, ಮಹಿಳೆ ಹೇಗಿರಬೇಕು ಹಾಗೆಯೇ ಇರಬೇಕೆಂಬ ಬೆದರಿಕೆ ಕರೆಗಳೂ ಸಾಮಾನ್ಯವಾಗಿದ್ದವು. ಅನಿವಾರ್ಯವಾಗಿ ಖಾತೆಯ ಪ್ರೊಫೈಲ್ನಿಂದ ನನ್ನ ಪೋಟೋವನ್ನು ಡಿಲಿಟ್ ಮಾಡಬೇಕಾಗಿ ಬಂತು.  ಕೊನೆಗೊಂದು ದಿನ ನನ್ನ ಫೇಸ್ ಬುಕ್ ಖಾತೆ ಇದ್ದಕಿದ್ದಂತೆ ಬ್ಲಾಕ್ ಆಗೋಯ್ತು.

ರಹೀನಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ  ಸನ್ಮಾರ್ಗ ವಾರ ಪತ್ರಿಕೆಗೆ ಲೇಖನಗಳನ್ನುsocial_media ಬರೆದು ಕಳುಹಿಸುತ್ತಿದ್ದರು. ಜಮಾತೇ ಇಸ್ಲಾಮಿ ಹಿಂದ್ ಎಂಬ ಮುಸ್ಲಿಂ ಸಂಘಟನೆಯ ಅಧೀನದಲ್ಲಿರುವ ವಾರ ಪತ್ರಿಕೆಯಿದು. ಆರಂಭದಲ್ಲಿ ಇವರು ಬರೆದ ಲೇಖನಗಳು ಸನ್ಮಾರ್ಗದಲ್ಲಿ ಪ್ರಕಟವಾಗುತಿತ್ತು. ಆದರೆ ಯಾವಾಗ ರಹೀನಾ ಧರ್ಮದ ಹುಳುಕುಗಳನ್ನು ಬಹಿರಂಗವಾಗಿ ಪ್ರಶ್ನಿಸಲು ಶುರುಮಾಡಿದ್ರೋ, ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ವಿರೋಧ ವ್ಯಕ್ತವಾಗತೊಡಗಿದ್ವೋ, ಪ್ರಗತಿಪರ ಎಂದು ಬಿಂಬಿಸಿಕೊಳ್ಳೋ ಪ್ರಯತ್ನ ಮಾಡುತ್ತಿರುವ ಜಮಾತೇ ಇಸ್ಲಾಮೀಯ ವಾರ ಪತ್ರಿಕೆ ಸನ್ಮಾರ್ಗದಲ್ಲಿ ರಹೀನಾ ಲೇಖನ ಪ್ರಕಟನೆಗೆ ಅವಕಾಶ ನಿರಾಕರಿಸಲಾಯಿತು. ಇನ್ನು ದಲಿತ ಪರ, ಅಲ್ಪಸಂಖ್ಯಾತರ ಪರ, ಅಭಿವ್ಯಕ್ತಿಯ ಪರ ಹಾಗೂ ಮಹಿಳಾ ಪರ ಧ್ವನಿ ಎಂದು ಬಿಂಬಿಸಿಕೊಳ್ಳುವ ಕನ್ನಡ ದಿನಪತ್ರಿಕೆಯೊಂದರಲ್ಲೂ ರಹೀನಾ ಕೆಲಸ ಕಳೆದುಕೊಳ್ಳಬೇಕಾಯಿತು.

ಜೋಹಾ ಕಬೀರ್. ಎಂಜಿನಿಯರ್ ಪಧವೀಧರೆ ಮುಸ್ಲಿಮ್ ಯುವತಿ. ಈಕೆಯ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಖಾತೆಹೊಂದಲು, ತನ್ನ ಪ್ರೋಫೈಲ್ನಲ್ಲಿ  ಭಾವಚಿತ್ರ ಹಾಕಿಕೊಳ್ಳಲು ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇವರಿಗೆ ಪೋಷಕರ-ಪತಿಯ ವಿರೋಧವೇನಿಲ್ಲ. ಆದರೆ  ಸಾಮಾಜಿಕ ಜಾಲತಾಣಗಳಲ್ಲಿರುವ ಮುಸ್ಲಿಮ್ ಯುವಕರಿಗೆ ಸಮುದಾಯದ ಹೆಣ್ಣುಮಕ್ಕಳ ಮೇಲೆ ಎಲ್ಲಿಲ್ಲದ ಕಾಳಜಿ! ಪ್ರೋಫೈಲ್ ಫೋಟೋ ಹಾಕಿದಕ್ಕಾಗಿಯೇ ಇವರಿಗೂ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ. ಒತ್ತಡ ಹೆಚ್ಚಾಗಿ ಇವರೂ ತಮ್ಮ ಪ್ರೋಫೈಲ್ ಪೋಟೋವನ್ನು ಕಿತ್ತುಹಾಕಬೇಕಾಗಿ ಬಂತು. ಇನ್ನು ತನ್ನ ಪತಿಯ ಜೊತೆ ಮದುವೆ ದಿನದ ಪೋಟೋವನ್ನು ಫೇಸ್ ಬುಕ್ ಖಾತೆಯಲ್ಲಿ ಹಾಕಿದಾಗ ಅದಕ್ಕೂ ವಿರೋಧ. ತನ್ನ ಪತಿಯ ಜೊತೆ ನಿಂತ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಸ್ವಾತಂತ್ಯ್ರವೂ ನನಗಿಲ್ಲ. ನನ್ನಂತೆಯೇ ಅನೇಕ ಗೆಳತಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಾರೆ, ಆದರೆ ಅದಕ್ಕೆ ಎದುರಾಗುತ್ತಿರುವ ವಿರೋಧ ನಮ್ಮೆನ್ನೆಲ್ಲಾ ಸೋಷಿಯಲ್ ಮಿಡಿಯಾಗಳಿಂದ ದೂರ ಉಳಿದುಕೊಳ್ಳುವಂತೆ ಮಾಡಿದೆ ಅಂತಿದ್ದಾರೆ ಜೋಹಾ ಕಬೀರ್. ಜೋಹಾರದ್ದೇ ಕಥೆ ಆಕೆಯ ಇತರ ಮುಸ್ಲಿಮ್ ಗೆಳತಿಯರದ್ದು.

ನಾಲ್ಕು ವರ್ಷಗಳ ಹಿಂದೆ ಮುಬೀನಾ (ಹೆಸರು ಬದಲಾಯಿಸಲಾಗಿದೆ) ಎಂಬ  ವೈದ್ಯಕೀಯ ಶಿಕ್ಷಣ ಓದುತ್ತಿದ್ದUpload-Facebook-photo ಮುಸ್ಲಿಮ್ ಯುವತಿ ಫೇಸ್ ಬುಕ್ ನಲ್ಲಿ ತುಂಬಾ ಆಕ್ವೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರೊಫೈಲ್ ನಲ್ಲಿ ತಮ್ಮ ಪೋಟೋವನ್ನು ಹಾಕಿಕೊಂಡಿದ್ದರು. ಮುಕ್ತವಾಗಿ ಮೂಲಭೂತವಾದ, ನೈತಿಕ ಪೊಲೀಸ್ ಗಿರಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುತ್ತಿದ್ದರು. ಆದ್ರೆ ಕೆಲವೇ ದಿನಗಳಲ್ಲಿ ಮೂಲಭೂತವಾದಿಗಳ ಕೆಂಗಣ್ಣಿಗೆ ಅವರು  ಗುರಿಯಾಗಬೇಕಾಯಿತು. ಇಷ್ಟಾದರೂ, ಸಾಮಾಜಿಕ ಜಾಲತಾಣಗಳ ಬೆದರಿಕೆಗೆ ಜಗ್ಗದ ಮುಬೀನಾ ಮನೆಗೆ ಮೂಲಭೂತವಾದಿ ಪುಂಡರ ಗುಂಪು ಹೋಗಿ ಎಚ್ಚರಿಕೆ ನೀಡಿ ಫೇಸ್ ಬುಕ್ ಖಾತೆಯನ್ನೇ ಸ್ಥಗಿತಗೊಳಿಸಿಬಿಟ್ಟರು ಅಂತಾರೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ. ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲ ತಾಣಗಳಲ್ಲೂ ತುಂಬಾನೇ ಆಕ್ಟೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿರುವ ವ್ಯಕ್ತಿ. ವರ್ಷದ ಹಿಂದೆ ಅವರು ಪತ್ನಿ ಶಬಾನಾ ಜೊತೆಗಿದ್ದ ಪೋಟೋವನ್ನು ಫೇಸ್ ಬುಕ್ ನಲ್ಲಿ  ಹಾಕೊಂಡಿದ್ದರು. ತಮಾಷೆಯಂದ್ರೆ ಮುಸ್ಲಿಮ್ ಮೂಲಭೂತವಾದಿ ಹುಡುಗರು ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನು ಮೀರಿ ಮುಸ್ಲಿಮ್ ಹೆಣ್ಣುಮಕ್ಕಳು ಸೋಷಿಯಲ್ ಮೀಡಿಯಾಗಳಲ್ಲಿ ಮುಂದುವರಿದರೆ, ಅವರ ಹೆಸರಲ್ಲಿ ಫೇಕ್ ಖಾತೆಗಳನ್ನು ತೆರೆದು ಅಶ್ಲೀಲ ವಿಡಿಯೋಗಳನ್ನು ಟ್ಯಾಗ್ ಮಾಡಲಾಗುತ್ತದೆ. ಅಥವಾ ಕೆಟ್ಟ ಮೆಸೇಜ್ಗಳನ್ನು ಹರಿಯಬಿಡಲಾಗುತ್ತದೆ. ಇಂಥಹಾ ಅನೇಕ ಕೀಳುಮಟ್ಟದ ಕಿರುಕುಳದ ಅನುಭವಗಳು ಈ ಮೇಲಿನ ಎಲ್ಲಾ ಮಹಿಳೆಯರಿಗಾಗಿದೆ. ಈ ಮೂಲಕ ಸಾಮಾಜಿಕ ಜಾಲ ತಾಣಗಳಿಂದ ಅವರನ್ನು ಹೊರದಬ್ಬುವ ಪ್ರಯತ್ನವನ್ನು ಮೂಲಭೂತವಾದಿಗಳು ಮಾಡ್ತಿದ್ದಾರೆ. ಇನ್ನೊಂದೆಡೆ ಹಿಂದೂ ಪರ ಸಂಘಟನೆಗಳು ಲವ್ ಜಿಹಾದ್ ಭಯಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿರುವ ಹಿಂದೂ ಹೆಣ್ಣುಮಕ್ಕಳನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿರುವುದು ಕೂಡಾ ಗಮನಿಸಬೇಕಾದ ವಿಚಾರ.

ಈ ಹಿಂದೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ವಿದ್ಯಾಬ್ಯಾಸ ಪಡೆಯಲೂ ಅವಕಾಶವಿರಲಿಲ್ಲ. ಸಾರಾ ಅಬೂಬಕ್ಕರ್ ಅಂತಹಾ ಅನೇಕ ದಿಟ್ಟ ಮಹಿಳೆಯರ ಹೋರಾಟದ ಫಲವೆಂಬುವಂತೆ ಇಂದು ಮುಸ್ಲಿಮ್ ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಏನೂ ಸಾಧನೆ ಮಾಡಬೇಕಾದ್ರೂ ಅದು ಬುರ್ಖಾದೊಳಗಡೆಗೆ ಮಾತ್ರ ಸೀಮಿತ ಎಂಬ ವಾದದಲ್ಲಿ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಮೀರಿ ಕೆಲವೊಂದು ಮುಸ್ಲಿಮ್ ಮಹಿಳೆಯರು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಅಭಿವ್ಯಕ್ತಿಯ ಹಕ್ಕನ್ನು ಪಡೆದುಕೊಳ್ಳುವ ಪ್ರಯತ್ನ ಅಲ್ಲೊಂದು ಇಲ್ಲೊಂದರಂತೆ ನಡೆಯುತ್ತಿದೆ. ಧರ್ಮದ ಹೆಸರಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುವುದನ್ನು ಮುಸ್ಲಿಮ್ ಸಮಾಜದ ಪ್ರಜ್ಞಾವಂತರು ಗಮನಿಸಬೇಕಿದೆ.

ಮತಾಂಧ ಶಕ್ತಿಗಳಿಂದ ಅಪರಾಧಿ ಹಾಗೂ ಅಪರಾಧಗಳ ವಿಜ್ರಂಭಣೆ ಹಾಗೂ ಸಂತ್ರಸ್ತರ ಕ್ಷಮೆ


-ಇರ್ಷಾದ್ ಉಪ್ಪಿನಂಗಡಿ


ಪೊಲೀಸ್ ಬಂದೋಬಸ್ತಿನಲ್ಲಿ ನಗುಮುಖದಲ್ಲಿ ಕಾಣಿಸಿಕೊಳ್ಳುವ ಇವರೆಲ್ಲಾ 2010 ಜುಲೈ 4 ರಂದು ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಅಧ್ಯಾಪಕರೊಬ್ಬರPFI_Activists ಕೈ ಕಡಿದ ಪ್ರಕರಣದ ಪ್ರಮುಖ ಆರೋಪಿಗಳು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಮತಾಂಧ ದುಷ್ಕರ್ಮಿಗಳು ಅಧ್ಯಾಪಕ ಜೆ.ಜೆ ಜೋಸೆಫ್ ಎಂಬುವವರ ಮನೆಗೆ ನುಗ್ಗಿ ಅವರ ಬಲಕೈ ಕಡಿದು ಅಟ್ಟಹಾಸ ಮೆರೆದಿದ್ದರು. ಈ ಪ್ರಕರಣ ದೇಶದಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ನ್ಯಾಯಾಲಯ ಪ್ರಕರಣದ ಪ್ರಮುಖ ಆರೋಪಿಗಳಾದ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಮುಸ್ಲಿಮ್ ಮೂಲಭೂತವಾಧಿ ಸಂಘಟನೆಯ 13 ಕಾರ್ಯಕರ್ತರನ್ನು ದೋಷಿಗಳೆಂದು ತೀರ್ಪು ನೀಡಿ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಎರ್ನಾಕುಳಂ ನ್ಯಾಯಾಲಯ ನೀಡಿದ ತೀರ್ಪಿನ ನಂತರ ಕೋರ್ಟ್ ಆವರಣದಿಂದ ಹೊರಬರುತ್ತಿರುವ ಆಪರಾಧಿಗಳ ಮುಖಭಾವ ಗಮನಿಸಿದಾಗ ಅವರ ಮುಖದಲ್ಲಿ ಎಳ್ಳಷ್ಟೂ ಪಶ್ಚಾತಾಪವಿರಲಿಲ್ಲ. ಬದಲಾಗಿ ಅವರು ಅತ್ಯಂತ ಖುಷಿಯಲ್ಲಿರುವಂತೆ ಕಂಡುಬರುತ್ತಿದ್ದರು. ತಮ್ಮ ಕೃತ್ಯದ ಕುರಿತಾಗಿ ಹೆಮ್ಮೆಪಟ್ಟುಕೊಳ್ಳುವಂತಿತ್ತು ಅವರ ಮುಖಭಾವ. ಇದನ್ನೇ ಹೋಲುವ ಮತ್ತೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೋಡಿಕರೆ ಮನೋಜ್ ಎಂಬ ಕೊಲೆ ಆರೋಪಿ , ಕೋಮುಗಲಭೆ ಸೇರಿದಂತೆ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ಕೋಡಿಕರೆ ಮನೋಜ್ ಎಂಬ ಕುಖ್ಯಾತ ಪಾತಕಿಯನ್ನು ಮಂಗಳೂರು ಪೊಲೀಸರು ಗೂಂಡಾ ಕಾಯಿದೆ ಅನ್ವಯ ಬಂಧಿಸಿದ್ದರು. ಕೆಲ ದಿನಗಳ ಹಿಂದೆ ಜೈಲಿಂದ ಬಿಡುಗಡೆಗೊಂಡ ಕೋಡಿಕೆರೆ ಮನೋಜ್ ಎಂಬಾತನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೂ ಹಾರ ಹಾಕಿ ಜಯಘೋಷ ಕೂಗಿ ಸ್ವಾಗತಿಸಿದ್ದರು.

ಈ ಎರಡೂ ಅಮಾನವೀಯ ನಿದರ್ಶನಗಳು ಬಹಳಷ್ಟು ಸಂದೇಶಗಳನ್ನು ಸಮಾಜಕ್ಕೆ ರವಾನಿಸುತ್ತವೆ. ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವುದು ಧರ್ಮದ ಹೆಸರಲ್ಲಿ ಅಪರಾಧ ಎಸಗುತ್ತಿರುವವರ ಹಾಗೂ ಅಂಥಹಾ ಅಪರಾಧಿಗಳನ್ನು ಬೆಂಬಲಿಸುವ ಜನರ ಹಾಗೂ ಕೋಮುವಾದಿ ಸಂಘಟನೆಗಳ ಅಪಾಯಕಾರಿ ಮನಸ್ಥಿತಿ. ಶಾಂತಿ, ಸಹಬಾಳ್ವೆಯನ್ನು ಸಾರಬೇಕಾದ ಧರ್ಮದ ತಿರುಳನ್ನು ತಿರುಚಿ ತಮ್ಮ ಕೈವಶಮಾಡಿಕೊಂಡಿರುವ ಧಾರ್ಮಿಕ ಮೂಲಭೂತವಾದಿಗಳು ಇಂದು ಧರ್ಮ ನಿಂದನೆ, ಧರ್ಮ ರಕ್ಷಣೆಯ ಹೆಸರಲ್ಲಿ ಹಲ್ಲೆ, ಹತ್ಯೆ, ಹಿಂಸೆ ಹಾಗೂ ಅಭಿವ್ಯಕ್ತಿಯನ್ನು ಹರಣ ಮಾಡುವ ಮೂಲಕ ಕ್ರೌರ್ಯತೆಯನ್ನು ಮೆರೆಸುತ್ತಿದ್ದಾರೆ. ಇದಕ್ಕಾಗಿ ಬಳಕೆಗೊಳ್ಳುತ್ತಿರುವ ಯುವಕರ ಮನಸ್ಸಿನಲ್ಲಿ ತಾವು ಎಸಗುತ್ತಿರುವ ಅಪರಾಧ ಕೃತ್ಯದ ಕುರಿತಾಗಿ ಹೆಮ್ಮೆಪಟ್ಟುಕೊಳ್ಳುವಂತಹ ಮನಸ್ಥಿತಿಯನ್ನು ಸೃಷ್ಟಿಸುವಲ್ಲಿ ಸಫಲರಾಗುತ್ತಿದ್ದಾರೆ ಎಂಬುವುದು ಆತಂಕಕಾರಿ ಬೆಳವಣಿಗೆ.

ಇಲ್ಲಿ ಇಂಥಹ ಜೀವವಿರೋಧಿ ಕ್ರೂರ ಮನಸ್ಥಿತಿ ಹುಟ್ಟಲು ಕಾರಣ ತಾನು ನಂಬಿರುವ ಧರ್ಮದ ಕುರಿತಾದ ಅಜ್ಷಾನ ಹಾಗೂ ಅಂಧಾಭಿಮಾನ.hindu_jagarana_vedike ಇಂದಿನ ದಿನಗಳಲ್ಲಿ ಕೋಮುವಾದ, ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸುವವರು, ಧರ್ಮ ಸಂಸ್ಕತಿಯ ಕುರಿತಾಗಿ ವಿಮರ್ಶೆ ಮಾಡುವವರು, ದೇವರ ಹೆಸರಲ್ಲಿ ನಡೆಯುವ ಕ್ರೌರ್ಯವನ್ನು ಪ್ರಶ್ನಿಸುವವರ ಮೇಲೆ ದಾಳಿ ಹೆಚ್ಚಾಗುತ್ತಿವೆ. ಇದಕ್ಕಿಂತಲೂ ಅಪಾಯಕಾರಿಯೆಂದರೆ ಹಲ್ಲೆ ಅಥವಾ ಹತ್ಯೆಯಂಥಹಾ ಅಪರಾಧ ಕೃತ್ಯ ಎಸಗಿದ ಅಪರಾಧಿಗಳನ್ನು ವೈಭವೀಕರಿಸುವ ಕಾರ್ಯ ನಡೆಯುತ್ತಿರುವುದಾಗಿದೆ. ಮಂಗಳೂರಿನಲ್ಲಿ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ದಾಳಿ ನಡೆಸಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ-ಯುವತಿಯರ ಮೇಲೆ ದಾಳಿ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳನ್ನು ಹಿಂದೂಪರ ಸಂಘಟನೆಯ ಮುಖಂಡರು ಮೆರವಣಿಗೆ ನಡೆಸಿ ಅವರನ್ನು ಸನ್ಮಾನಿಸುವ ಮೂಲಕ ಅವರ ಕೃತ್ಯಕ್ಕೆ ಪ್ರೋತ್ಸಾಹ ತುಂಬಿದ್ದರು. ಕೋಮುಗಲಭೆಯಂತಹ ಕೃತ್ಯಗಳಲ್ಲಿ ಪಾಲ್ಗೊಂಡು ಜೈಲು ಸೇರಿ ಬಿಡುಗಡೆಗೊಂಡ ಆರೋಪಿಗಳನ್ನೂ ಮೆರವಣಿಗೆ ಮೂಲಕ ಕರೆದೊಯ್ದು ಅವರಿಗೆ ಸನ್ಮಾನ ಮಾಡುವ ಮೂಲಕ ಆಪರಾಧಿಗಳಿಗೆ ತಮ್ಮ ಅಪರಾಧದ ಕೃತ್ಯದ ಕುರಿತಾಗಿ ಹೆಮ್ಮೆಪಡುವಂತೆ ಮಾಡುತ್ತಿರುವುದು ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗುತ್ತವೆ.

ಪರಿಣಾಮ ಧರ್ಮದ ಹೆಸರಲ್ಲಿ ಯಾವುದೇ ಕೃತ್ಯವನ್ನು ಒಬ್ಬ ಎಸಗಿದರೂ ಆತ ತನ್ನ ಕೃತ್ಯಕ್ಕೆ ಪಶ್ವಾತಾಪ ಪಟ್ಟುಕೊಳ್ಳುವುದಿಲ್ಲ. ಬದಲಾಗಿ ಹೆಮ್ಮೆಪಟ್ಟುಕೊಳ್ಳುತ್ತಾನೆ ಹಾಗೂ ಸಮರ್ಥಿಸುತ್ತಾನೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟು ಕೊಂದ ನಾಥುರಾಮ್ ಗೋಡ್ಸೆ ತನ್ನ ಕೃತ್ಯದ ಕುರಿತಾಗಿ ಯಾವುದೇ ರೀತಿಯ ಪಶ್ವಾತಾಪ ಪಟ್ಟಿರಲಿಲ್ಲ. ಬದಲಾಗಿ ಆತ ತನ್ನ ಬಗ್ಗೆ ಹೆಮ್ಮೆ ಪಟ್ಟುಕೊಂಡ. ಆತನ ಪ್ರಕಾರ ಗಾಂಧಿ ಹಿಂದೂ ವಿರೋಧಿಯಾಗಿದ್ದರು. ಹಿಂದುತ್ವದ ಅಮಲು ಗೋಡ್ಸೆಯನ್ನು ಕಟುಕನನ್ನಾಗಿಸಿತ್ತು. ಗೋಡ್ಸೆಯನ್ನು ಕಟುಕನನ್ನಾಗಿ ಪರಿವರ್ತಿಸಿದ ಜನರೇ ಇಂದು ಗೋಡ್ಸೆ ಪ್ರತಿಮೆ ಸ್ಥಾಪಿಸಲು ಮುಂದಾಗುವ ಮೂಲಕ ಇನ್ನಷ್ಟು ಗಾಂಧಿಗಳ ಹತ್ಯೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಅಂಧಶೃದ್ದೆಯ ವಿರುದ್ಧ ಧ್ವನಿ ಎತ್ತಿದ ಪ್ರಗತಿಪರ ಚಿಂತಕ ನರೇಂದ್ರ ದಾಬ್ಲೋಲ್ಕರ್ ಅವರನ್ನು 2013 ಆಗಸ್ಟ್ 20ರಂದು ಪುಣೆಯಲ್ಲಿ ಹತ್ಯೆಮಾಡಲಾಯಿತು. ಮೂಲಭೂತವಾದಿಗಳ ವಿರುದ್ಧ ಧ್ವನಿ ಎತ್ತಿದ ಮಹಾರಾಷ್ಟ್ರದ ಸಿಪಿಐ ಮುಖಂಡ ಗೋವಿಂದ್ ಪನ್ಸಾರೆ ಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು.ಮುಸ್ಲಿಮ್ ಮೂಲಭೂತವಾದ ವಿರುದ್ಧ ಧ್ವನಿ ಎತ್ತಿದ ಪಾಕಿಸ್ಥಾನದ ಸಬೀನ್ ಮೆಹಮೂದ್ ಅವರನ್ನೂ ಗುಂಡಿಕ್ಕಿ ಕೊಲ್ಲಲಾಯಿತು. ಬಾಂಗ್ಲಾದೇಶದ ಹುಮಾಯೂನ್ ಹಸನ್, ಸಂಶು ರಹಮಾನ್, ಅಭಿಜಿತ್ ರಾಯ್ ಕೂಡಾ ಇವರ ಸಾಲಿಗೆ ಸೇರಲ್ಪಟ್ಟರು. ತೀಸ್ತಾ ಸೆಟಲ್ವಾಡ್, ಸಲ್ಮಾನ್ ರಶ್ದಿ, ತಸ್ರೀನಾ ನಸ್ರಿನ್, ಪ್ರೋ. ಭಗವಾನ್ ಸೇರಿದಂತ್ತೆ ಅನೇಕ ಮಾನವತಾವಾದಿಗಳು, ಪ್ರಗತಿಪರ ಚಿಂತಕರು ಇದೇ ಮತಾಂಧರಿಂದ ಜೀವಬೆದರಿಕೆ ಎದುರಿಸುತ್ತಿದ್ದಾರೆ. ಕಾರಣ ಇವರೆಲ್ಲಾ ಜೀವಪರತೆ, ಮಾನವ ಬಂಧುತ್ವ, ಅಭಿವ್ಯಕ್ತಿಯನ್ನು ಎತ್ತಿಹಿಡಿದು ಧಾರ್ಮಿಕ ಮೂಲಭೂತವಾದ, ಕೋಮುವಾದ, ಮೌಢ್ಯತೆಯನ್ನು ವಿರೋಧಿಸಿದರು ಎಂಬುದಕ್ಕಾಗಿ.

ಮಾನವೀಯತೆಯನ್ನು ಸಾರುವ ಈ ಪ್ರತಿನಿಧಿಗಳನ್ನು ಧರ್ಮದ ಹೆಸರಲ್ಲಿ ಹತ್ಯೆ ಮಾಡಿದ ಹಾಗೂ ದೌರ್ಜನ್ಯ ಎಸಗಿ ಕ್ರೌರ್ಯವನ್ನುMKGandhi ಮೆರೆಸುತ್ತಿರುವ ಈ ಮತಾಂಧರ ಮನಸ್ಸಿನಲ್ಲಿ ಕ್ಷಮೆಗೆ ಬದಲಾಗಿ ದ್ವೇಷ ತುಂಬಿಸಲಾಗುತ್ತಿದೆ ಹಾಗೂ ಅದನ್ನು ವಿಜ್ರಂಭಿಸಲಾಗುತ್ತಿದೆ. ಪ್ರವಾದಿ ಮುಹಮ್ಮದರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಕಾರಣಕ್ಕಾಗಿ ಮತಾಂಧರಿಂದ ತನ್ನ ಬಲಗೈ ಕಳೆದುಕೊಂಡ ಪ್ರಾಧ್ಯಾಪಕ ಜೆ.ಜೆ ಜೋಸೆಫ್ ಹಾಗೂ ಅವರ ಕುಟುಂಬ ಈ ಕೃತ್ಯ ಎಸಗಿದ ಆರೋಪಿಗಳನ್ನು ನಾವು ಕ್ಷಮಿಸುತ್ತೇವೆ ಎನ್ನುವಾಗ “ಒಬ್ಬ ಮುಸ್ಲಿಮನು ಅಕ್ರಮವಾಗಿ ಇನ್ನೊಬ್ಬನ ರಕ್ತ ಹರಿಸದವರೆಗೆ ಅವನು ಧರ್ಮದಲ್ಲಿ ವಿಶಾಲತೆ ಮತ್ತು ಉನ್ನತಿ ಹೊಂದುತ್ತಿರುವನು” ಎಂಬ ಪ್ರವಾದಿಯವರ ಶಾಂತಿಯ ವಚನ ನೆನಪಾಗುತ್ತದೆ. ಬಹುಷಃ ಪ್ರವಾದಿಯ ಈ ವಚನವನ್ನು ದುಷ್ಕರ್ಮಿಗಳಿಗಿಂತ ಚೆನ್ನಾಗಿ ಅರಿತುಕೊಂಡಿರುವ ಜೆ.ಜೆ ಜೋಸೆಫ್ ಹಾಗೂ ಕುಟುಂಬ ವರ್ಗ ಜೀವಪರವಾಗಿ ಕಾಣಿಸಿಕೊಳ್ಳುತ್ತಾರೆ. ಮತಾಂತರದ ಆರೋಪ ಹೊರಿಸಿ 1999ರ ಇಸವಿಯಲ್ಲಿ ಓರಿಸ್ಸಾದಲ್ಲಿ ಆಸ್ಟ್ರೇಲಿಯಾದ ಮಿಷನರಿ ಗ್ರಾಹಮ್ ಸ್ಟೇನ್ಸ್ ಹಾಗೂ ಆತನ ಇಬ್ಬರು ಮಕ್ಕಳನ್ನು ಜೀವಂತ ದಹಿಸಿದ ಭಜರಂಗದಳದ ಸಂಘಟನೆಯ ಕಾರ್ಯಕರ್ತ ದಾರಾ ಸಿಂಗ್ ಹಾಗೂ ಆತನ 12 ಸಹಚರರಿಗೆ ಸಿ.ಬಿ.ಐ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದಾಗ ಹತ್ಯೆಗೊಳಗಾದ ಗ್ರಾಹಮ್ ಅವರ ವಿಧವೆ ಪತ್ನಿ ಗ್ಲಾಡೇಸ್ ಸ್ಟೇನ್ಸ್ ತನ್ನ ಗಂಡ ಹಾಗೂ ಮಕ್ಕಳನ್ನು ಕೊಂದ ಆಪರಾಧಿಗಳನ್ನು ನಾನು ಕ್ಷಮಿಸಿದ್ದೇನೆ ಎಂಬ ಹೇಳಿಕೆಯನ್ನು ಗಮನಿಸಿದಾಗ ಹಿಂದುತ್ವವಾದಿ ದಾರಾ ಸಿಂಗ್ ಗಿಂತ ಹೆಚ್ಚಾಗಿ ಹಿಂದೂ ಧರ್ಮದ ಶಾಂತಿಯ ತಿರುಳನ್ನು ಅರಿತ ಗ್ಲಾಡೇಸ್ ಸ್ಟೇನ್ಸ್ ಮಾನವತಾವಾಧಿಯಾಗಿ ಕಾಣಿಸಿಕೊಳ್ಳುತ್ತಾರೆ. ಧರ್ಮದ ಹೆಸರಲ್ಲಿ ತಮ್ಮ ಅಪರಾಧವನ್ನು ವಿಜ್ರಂಭಿಸುತ್ತಿರುವ ಮತಾಂಧ ಶಕ್ತಿಗಳಿಂದ ದೌರ್ಜನ್ಯಕ್ಕೊಳಗಾದರೂ ದೌರ್ಜನ್ಯ ಎಸಗಿದವರನ್ನು ಕ್ಷಮಿಸುವ ಮೂಲಕ ಜೀವಪರ ಸಂದೇಶ ಸಾರುವ ಇವರಿಂದ ಮತಾಂಧರು ಪ್ರೀತಿ, ಮಾನವೀಯತೆಯ ಪಾಠ ಕಲಿಯಬೇಕಾಗಿದೆ.

.

“ ಮೈ ಚಾಯ್ಸ್ ” ಹಾಗೂ ಪುರುಷ ಪ್ರಧಾನ ಸಮಾಜದ ಮನಸ್ಥಿತಿ


-ಇರ್ಷಾದ್ ಉಪ್ಪಿನಂಗಡಿ


ಮಹಿಳೆಯರು ಹಾಗೂ ಅವರ ಆಯ್ಕೆಯನ್ನು ಗೌರವಿಸಬೇಕು ಎಂಬ ಸಂದೇಶವನ್ನು ಹೊಂದಿದೆ ಎನ್ನಲಾಗುತ್ತಿರುವ ಹೋಮಿ ಅದ್ಜಾನಿಯಾ ನಿರ್ಮಿಸಿರುವ ಮೈ ಚಾಯ್ಸ್ ಕಿರು ಚಿತ್ರ ದೇಶದಾಧ್ಯಂತ ಬಾರೀ ಸುದ್ದಿಗೆ ಕಾರಣವಾಗುತ್ತಿದೆ. ’ಹೆಣ್ಣು ಮನೆಯ ಆವರಣ ದಾಟಿ ಹೋಗಬಾರದು, ಮನೆ ದಾಟಿ Deepika_MyChoice_Feminism_3ಹೋದರೂ ಲಜ್ಜೆಯಿಂದ ವರ್ತಿಸಿ ತನ್ನ ಧರ್ಮ ಹಾಗೂ ಸಂಸ್ಕೃತಿಯ ಚೌಕಟ್ಟಿನಲ್ಲಿರಬೇಕು. ಮನೆ, ಕುಟುಂಬ, ಸಮಾಜದ ಮರ್ಯಾದೆಗೆ ಧಕ್ಕೆ ತರುವಂತೆ ವರ್ತಿಸಬಾರದ’ ಎಂಬ ಪುರುಷ ಪ್ರಧಾನ ವ್ಯವಸ್ಥೆಯ ಕಟ್ಟುಪಾಡುಗಳನ್ನು ಮೀರಿ ಸ್ವಾತಂತ್ರ ಬಯಸುವ ಎಜುಕೇಟೆಡ್ ಮಾಡರ್ನ್ ಆಗಿ ರೂಪುಗೊಳ್ಳುತ್ತಿರುವ ಹೊಸ ತಲೆಮಾರಿನ, ಹೊಸ ಚಿಂತನೆಯ ಯುವಜನಾಂಗದ ವಲಯದಲ್ಲಿ “ಮೈ ಚಾಯ್ಸ್”  ವೈರಲ್ ಆಗಿ ಹರಡುತ್ತಿದೆ. ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದ ಕುರಿತಾಗಿ ಇತ್ತೀಚೆಗೆ ಬಿಡುಗಡೆಗೊಂಡು ಇಂಡಿಯಾದಲ್ಲಿ ಪ್ರಸಾರಕ್ಕೆ ನಿಷೇಧ ಹೇರಲ್ಪಟ್ಟ “ಇಂಡಿಯಾಸ್ ಡಾಟರ್” ಎಂಬ ಸಾಕ್ಷ್ಯ ಚಿತ್ರದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಆತನ ಪರ ವಕೀಲ ಹೆಣ್ಣನ್ನು ಅತೀ ಬೆಳೆಬಾಳುವ ಆಭರಣ ವಜ್ರಕ್ಕೆ ಹೋಲಿಕೆ ಮಾಡುವ ಮೂಲಕ ಆಕೆಯನ್ನು ಹೇಗೆ ತನ್ನ ಅಂಕೆಯಲ್ಲಿಟ್ಟು ನಿಯಂತ್ರಿಸಬೇಕು ಎಂಬ ವಿತಂಡವಾದ ಹಾಗೂ ಭಾರತದ ಅಧಿಕ ಸಂಖ್ಯೆಯ ಪುರುಷರು ಬಹುತೇಕ ಅದೇ ಮನಸ್ಥಿತಿಯವರಾಗಿದ್ದಾರೆ ಎಂಬ ವಾದ ವಿವಾದಗಳ ಬೆನ್ನಲ್ಲೇ ಹೆಣ್ಣಿನ ಸ್ವಾತಂತ್ರ ಹಾಗೂ ಆಯ್ಕೆಯಯನ್ನು ಗೌರವಿಸಿ ಎಂದು ಸಾರುವ “ಮೈ ಚಾಯ್ಸ್” ಕಿರು ಚಿತ್ರ ಹೆಣ್ಣಿನ ಸಬಲೀಕರಣದ ಕುರಿತಾಗಿ ಬೆಳಕು ಚೆಲ್ಲುವ ಆಳವಾದ ಯಾವುದೇ ಸಂದೇಶ ಅದರಲ್ಲಿ ಇಲ್ಲದಿದ್ದರೂ ಪುರುಷ ಪ್ರಧಾನ ಸಮಾಜದ ಅಡಿಯಾಳುತನಕ್ಕೆ ಒಳಗೊಳ್ಳದೆ ತನ್ನ ಅಸ್ಥಿತ್ವ ಹಾಗೂ ತನ್ನ ಆಯ್ಕೆ, ಅಭಿವ್ಯಕ್ತಿಯನ್ನು ಹೆಚ್ಚು ಒತ್ತನ್ನು ನೀಡುವ ಹೊಸ ತಲೆಮಾರಿನ, ಹೊಸ ಚಿಂತನೆ ಸ್ತ್ರೀ ಸಮಾಜಕ್ಕೆ ಕೇಳುವ ಪ್ರೆಶ್ನೆಯಾಗುತ್ತದೆ “ಮೈ ಚಾಯ್ಸ್”.  ಈ ನಿಟ್ಟಿನಲ್ಲಿ ಹೊಸ ತಲೆಮಾರಿನ ಚಿಂತನೆಯನ್ನಿಟ್ಟುಕೊಂಡು ಹೆಣ್ಣಿನ ಸ್ವಾತಂತ್ರದ  ಕುರಿತಾಗಿ ಚರ್ಚೆ ನಡೆಯಬೇಕಾಗಿದೆ.

ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಒಂದಿಷ್ಟು ಹೊಸ ತಲೆಮಾರಿನ ಯುವಕ-ಯುವತಿಯರು “ ಕಿಸ್  ಆಫ್ ಲವ್” ಪ್ರತಿಭಟನೆಯನ್ನುMy-Choice-Deepika-Padukone_2  ಹಮ್ಮಿಕೊಂಡಾಗ ಸಂಪ್ರದಾಯಿಕ ಸಮಾಜದಲ್ಲಿ ಭಾರೀ ವಿರೋಧ ಎದುರಾಗಿತ್ತು. ಅನೇಕ ಜನರು “ಏನಪ್ಪಾ ಆ ಗಂಡು ಮಕ್ಕಳಿಗೆ ಬುದ್ದಿ ಇಲ್ಲ ಬಿಡಿ. ಆದ್ರೆ ಈ ಹೆಣ್ಣುಮಕ್ಕಳಿಗೆ ಬುದ್ದಿ ಬೇಡ್ವಾ? ಪಬ್ಲಿಕ್ ಆಗಿ ಹೀಗಾ ನಡೆದುಕೊಳ್ಳುವುದು ? ಇವತ್ತಿನ ಈ ಹೆಣ್ಣು ಮಕ್ಕಳಿಗೆ ಹಿಂದಿನ ಹೆಣ್ಣುಮಕ್ಕಳಿಗಿದ್ದ ಮಾನ ಮರ್ಯಾದೆ ಏನೂ ಇಲ್ಲಪ್ಪಾ.. “ಎನ್ನುತ್ತಿದ್ದರು. ಹೌದು ಹೆಣ್ಣೆಂದರೆ ಹೀಗೆ ಇರಬೇಕು ಎಂಬ ಕಲ್ಪನೆ ನಮ್ಮ ಸಮಾಜದಲ್ಲಿದೆ. ಹೆಣ್ಣು ಹುಟ್ಟಿ ಆಕೆಗೆ 10 ವರ್ಷ ವಯಸ್ಸಾಗುತ್ತಿರುವಾಗಲೇ ಆಕೆಯ ಮೇಲೆ ಮನೆ, ಕುಟುಂಬ, ಸಮಾಜ ಒಂದೊಂದೇ ನಿಯಂತ್ರಣಗಳನ್ನು ಹೇರಲು ಆರಂಭಿಸುತ್ತದೆ. ಯಾವ ಆಟಿಕೆಗಳಲ್ಲಿ ಹೆಣ್ಣು ಮಗು ಆಟವಾಡಬೇಕೆಂಬ ಆಯ್ಕೆಯನ್ನು ಪೋಷಕರು ನಿರ್ಧರಿಸುವುದರಿಂದ ಆರಂಭವಾಗಿ, ಮನೆಯಿಂದ ಹೊರ ಕಾಲಿಡಬೇಕಾದರೆ ಹೇಗಿರಬೇಕು, ತನ್ನ ವಸ್ತ್ರ ಧಾರಣೆಯಲ್ಲಿ ಹೇಗೆ ಮಾರ್ಪಾಡು ಮಾಡಿಕೊಳ್ಳಬೇಕು, ನಡವಳಿಕೆಯ ರೀತಿ ನೀತಿ ಹೇಗಿರಬೇಕು, ಮನೆಯಲ್ಲಿ ಹೇಗಿರಬೇಕು, ಶಾಲಾ ಕಾಲೇಜುಗಳಲ್ಲಿ ಹೇಗಿರಬೇಕು, ಯಾವಾಗ ಮದುವೆಯಾಗಬೇಕು, ಮದುವೆಯಾದ ನಂತರ ಗಂಡನ ಮನೆಯಲ್ಲಿ ಹೇಗಿರಬೇಕು ಈ ಎಲ್ಲದರ ಕುರಿತಾದ ಆಕೆಯ ಆಯ್ಕೆಯನ್ನು ನಿರ್ಧರಿಸುತ್ತಿರುವುದು ಆಕೆಯ ಮನೆಮಂದಿ, ಆಕೆಯ ಧರ್ಮ ಹಾಗೂ ಸಂಸ್ಕೃತಿಯ ವಕ್ತಾರರಾಗಿರುವ ಪುರುಷ ಪ್ರಧಾನ ವ್ಯವಸ್ಥೆ. ಹೀಗೆ ತಾನು ಹೇಗೆ ಜೀವಿಸಬೇಕೆಂಬ ಆಕೆಯ ಆಯ್ಕೆ ಮಾಡುವ ಸ್ವಾತಂತ್ರವನ್ನು ಹೆಣ್ಣು ತನ್ನ ಎಳೆ ವಯಸ್ಸಿನಿಂದಲೇ ಕಳೆದುಕೊಂಡಿರುತ್ತಾಳೆ.

ಪ್ರಸ್ತುತ ಸಮಾಜದಲ್ಲಿ ಹೆಣ್ಣೆದಂರೆ ಕಣ್ಣಮುಂದೆ ಬರುವುದು ಪುರುಷನ ದಾಹ ತೀರಿಸುವ ಸೌಂದರ್ಯದ ಪ್ರತೀಕವಾದವಳು. ಕನ್ನಡಿ ಮುಂದೆ ನಿಂತು ತನ್ನ ಸೌಂದರ್ಯಕ್ಕೆ ಅಧಿಕ ಸಮಯ ವ್ಯರ್ಥ ಮಾಡುವಾಕೆ. ಗಂಡನ ಬೇಕು ಬೇಡ, ಮನೆ ಮಂದಿಗೆ ಅಡುಗೆ ಮಾಡಿ ಬಡಿಸಿ ಆವರ ಹಸಿವಿನ ದಾಹ ತೀರಿಸುವಾಕೆ. ನೆರೆ ಮನೆಯವರ ಜೊತೆ ಜಾಡಿ ತರಲೆಗಳನ್ನು ಮಾಡಿ, ಪರ ಸ್ತ್ರೀಯ ಜೀವನ ನೋಡಿ ಅಸೂಯೆ ಪಟ್ಟು, ಗಂಡನನ್ನು ನಿತ್ಯ ಪೀಡಿಸುವ, ಪುರುಷರ ನಡುವೆ ಪರಸ್ಪರ ಕಾಳಗಕ್ಕೆ ಕಾರಣವಾಗುವವಳು. ಪುರುಷನಾದವನ ದಬ್ಬಾಳಿಕೆಗೆ ಎದುರುತ್ತರ ನೀಡದೆ ಗಂಡ, ಮಕ್ಕಳು ಸಂಸಾರವೇ ನನ್ನ ಜೀವನ ಎಂದು ಬದುಕುವಾಕೆ. ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದಕ್ಕೆ ಗಂಡ ದುಡಿದ ಸಂಬಳವನ್ನು ಬೇಕಾಬಿಟ್ಟಿ ಶಾಪಿಂಗ್ ಮಾಡಿ, ಉತ್ತಮ ವಸ್ತ್ರಗಳನ್ನು ಧರಿಸಿ ಚಿನ್ನಾಭರಣವನ್ನು ತೊಟ್ಟು ಇತರರಿಗೆ ತನ್ನ ಅಂದ ಚೆಂದವನ್ನು ಪ್ರದರ್ಶಿಸಿ ಇದುವೇ ನನ್ನ ಪಾಲಿನ ಜೀವನ ಎಂದು ತಿಳಿದಿರುವಾಕೆ. ಇಂದಿಗೂ ನಮ್ಮ ಸಮಾಜದ ಸಾಕಷ್ಟು ಪುರುಷರು ಹೆಣ್ಣು ಅಂದರೆ ಇಷ್ಟೇ ಹಾಗೂ ಹೀಗೆ ಇದ್ದರೆ ಚೆಂದ ಎಂದು ಬಯಸುತ್ತಾರೆ ಎಂಬುವುದಂತೂ ಸತ್ಯ. ಇದಕ್ಕೆ ಪೂರಕವಾಗಿ ಹೆಣ್ಣು ಕೂಡಾ ತಾನು ಹೀಗೆ ಇದ್ದರೆ ಚೆಂದ ಎಂಬ ಭಾವನೆಯನ್ನು ಮೈಗೂಡಿಸಿಕೊಂಡಿರುವುದು ಹೆಣ್ಣಿನ ಈ ಪರಿಸ್ಥಿತಿಗೆ ಕಾರಣ.

ಹೆಣ್ಣಿನ ಕುರಿತಾಗಿ ವ್ಯವಸ್ಥೆಯ ಈ ಮನಸ್ಥಿತಿಗೆ ಮೂಲ ಕಾರಣ ಪುರುಷಪ್ರಧಾನ ವ್ಯವಸ್ಥೆಯ ಹಿಡಿತದಲ್ಲಿರುವ ಧರ್ಮ ಹಾಗೂ ಅದು Ancient_Womenಹುಟ್ಟು ಹಾಕಿದ ಸಂಸ್ಕೃತಿಯೂ ಕಾರಣವಾಗುತ್ತದೆ. ಆಧುನಿಕ ಹೆಣ್ಣು ಸ್ವಾತಂತ್ರವನ್ನು ಬಯಸುವಾಗ ಸಂಪ್ರದಾಯವಾದಿಗಳು ಹೆಣ್ಣನ್ನು ಮಣಿಸಲು ಅಸ್ತ್ರವನ್ನಾಗಿ ಧರ್ಮವನ್ನೇ ಬಳಸುತ್ತಿದ್ದಾರೆ. ಧರ್ಮ , ಪುರಾಣಗಳಲ್ಲಿ ಬರುವ ಸನ್ನಿವೇಶಗಳಲ್ಲಿ ಸ್ತ್ರೀಯರ ಬಗ್ಗೆ ಅಂದಿನ ಸಮಾಜಕ್ಕಿದ್ದ ಕಲ್ಪನೆಗಳು ಸ್ಪಷ್ಟಗೊಳ್ಳುತ್ತದೆ. ರಾಮಾಯಣದಲ್ಲಿ ಹೆಣ್ಣಿನ ಕುರಿತಾಗಿ ರಾಮರಾಜ್ಯದ ನೀತಿಯ ಪ್ರಕಾರ  “ಸ್ತ್ರೀಯರ ವಿಷಯದಲ್ಲಿ ಜಾಗರೂಕನಾಗಿರಬೇಕು, ಅವರನ್ನೆಂದೂ ನಂಬಬಾರದು, ರಹಸ್ಯ ಹೇಳಬಾರದು. ಪರಪುರುಷನನ್ನು ನೋಡುವುದಕ್ಕೆ, ಮಾತನಾಡುವುದಕ್ಕೆ ಅವಕಾಶವಿಲ್ಲದಂತೆ ಅಂತಃಪುರದಲ್ಲಿ ಕಟ್ಟುನಿಟ್ಟಿನ ಏರ್ಪಾಡು  ಮಾಡಬೇಕು. ( ಅ.100 ಶ್ಲೊ: 58 ) . “ಭಾಗ್ಯಶಾಲಿನಿ ತಾಯಿ ನೀನು. ಗಂಡನೊಂದಿಗೆ ಅರಣ್ಯಕ್ಕೆ ಬಂದಿದ್ದೀಯ. ನಿನ್ನ ಪತಿ ಭಕ್ತಿ ಮೆಚ್ಚತಕ್ಕದ್ದು. ಗಂಡ ಬಡವನಾದರೂ ಶ್ರೀಮಂತನಾದರೂ, ಸ್ತ್ರೀ ಲೋಲನಾದರೂ, ಅವನೇ ಹೆಣ್ಣಿಗೆ ದೈವ. ಕಾಮುಕರಾದ ಸ್ತ್ರೀಯರಿಗೆ ಧರ್ಮ ತಿಳಿಯುವುದಿಲ್ಲ. ಅವರಿಗೆ ಇಹದಲ್ಲಿ ಅಪಕೀರ್ತಿಯಷ್ಟೇ ಅಲ್ಲ ಪರದಲ್ಲಿ ನರಕವೂ ಪ್ರಾಪ್ತಿಯಾಗುತ್ತದೆ. ರಾಮ ಪರಿವಾರ ಅತ್ರಿ ಮುನಿ ಆಶ್ರಮದಲ್ಲಿ ಸತಿ ಅನಸೂಯಳನ್ನು ದರ್ಶನ ಮಾಡುವಾಗ ಸೀತೆಯನ್ನು ಉದ್ದೇಶಿಸಿ ಅನಸೂಯ ಹೇಳುವ ಮಾತಿದು  (ಆಯೋಧ್ಯಾ ಕಾಂಡ ಅ.116, ಶ್ಲೊ: 10.14 )

ಇನ್ನು ಇಸ್ಲಾಮ್ ಧರ್ಮ ಸ್ತ್ರೀಯ ಕುರಿತಾದ ನಿಲುವುಗಳು ಕೂಡಾ ಇದನ್ನೇ ಸ್ಪಷ್ಟಪಡಿಸುತ್ತದೆ  “ನಿಮ್ಮಮನೆಗಳಲ್ಲೇ ಇದ್ದುಕೊಳ್ಳಿರಿ. ಗತಕಾಲದ ಅಜ್ಞಾನ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬೇಡಿರಿ” ( ಪವಿತ್ರ ಕುರ್ ಆನ್ 33:33 ),“ಮಹಿಳೆ ಬುದ್ದಿ ಮತ್ತು ಧರ್ಮ ಎರಡೂ ವಿಧದಲ್ಲಿburkha sielence ದುರ್ಬಲರಾಗಿರುತ್ತಾರೆ” ( ಬುಖಾರಿ ) “ನಿಮ್ಮ ಸ್ರೀಯರಿಂದ ಆಜ್ಞೋಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ.” ಪವಿತ್ರ ಕುರ್ ಆನ್ ( 4:34 ). ಹೀಗೆ ಪುರುಷಪ್ರಧಾನ ಸಮಾಜ ಹೆಣ್ಣನ್ನು ಹೇಗೆ ನಿಯಂತ್ರಿಸಬೇಕೆಂಬುವುದನ್ನು ಧರ್ಮಗಳು ಭೋಧಿಸುತ್ತವೆ. ಇದನ್ನು ಮೀರಿ ಆಕೆ ತನ್ನ ಆಯ್ಕೆ, ಅಭಿವ್ಯಕ್ತಿ, ಸ್ವಾತಂತ್ರದ ಕುರಿತು ಧ್ವನಿ ಎತ್ತಿದರೆ ಆಕೆ ಧರ್ಮ ವಿರೋಧಿ ಅಥವಾ ಸಂಪ್ರದಾಯ ಮುರಿದ ಹೆಣ್ಣಾಗಿ ಮಾರ್ಪಡುತ್ತಾಳೆ. ಸಮಾಜ ವಿಧಿಸಿದ ಈ ಕಟ್ಟಲೆಗಳನ್ನು ಮೀರಿ ಹೆಣ್ಣು ಹೊಸಿಲ ದಾಟಿದಾಗ ಸಂಪ್ರದಾಯವಾದಿಗಳಿಂದ ಹಲ್ಲೆ, ಹೋಂ ಸ್ಟೇ ದಾಳಿ, ಪಬ್ ದಾಳಿಗಳಂತಹಾ ನೈತಿಕ ಪೊಲೀಸ್ ಗಿರಿಗಳು, ಮಲಾಲ, ಗೀತಾ ಪ್ರಲ್ಹಾದ್ ಗೆ ಎದುರಾದ ದುಸ್ಥಿತಿ ಇನ್ನೂ ಮಿತಿಮೀರಿದರೆ ಸಾಮೂಹಿಕ ಅತ್ಯಾಚಾರ ಎಸಗಿ ಸಂಸ್ಕೃತಿಯ ಎಲ್ಲೆಯನ್ನು ಮೀರಿದ ಹೆಣ್ಣನ್ನು ನಿಯಂತ್ರಿಸುತ್ತಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಆದರೆ ಇದನೆನಲ್ಲಾ ಮೀರಿ ಮಹಿಳೆ ಬೆಳೆಯುತ್ತಿದ್ದಾಳೆ, ಪುರುಷನಿಗೆ ಸಮಾನ ಎಂದು ಸಾಧಿಸಿ ತೋರಿಸುತ್ತಿದ್ದಾಳೆ, ಪುರುಷ ಕಾರ್ಯ ನಿರ್ವಹಿಸುವ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಇರುವಿಕೆಯನ್ನು ತೋರಿಸಿದ್ದಾಳೆ. ಗಂಡ ಹೊಡೆದರೆ ನಾನೇಕೆ ಕಟ್ಟಿಕೊಂಡಿರಬೇಕು? ನನ್ನನ್ನು ಮದುವೆಯಾದ ಪುರುಷ ಪರ ಸ್ತ್ರೀಯೊಂದಿಗೆ ಮಲಗಿದರೆ ಅದನ್ನು ನಾನ್ಯಾಕೆ ಸಹಿಸಿಕೊಳ್ಳಬೇಕು?  ಪುರುಷ ಮದುವೆಯಾದರೂ ಅನ್ಯ ಸ್ತ್ರೀಯೊಂದಿಗೆ ಸಂದಂಧವಿಡುವುದು ಸಮಾಜಕ್ಕೆ ದೊಡ್ಡ ಅಪರಾದ ಅಲ್ಲವೆಂದಾದರೆ ಹೆಣ್ಣು ಏಕೆ ವಿವಾಹಬಾಹಿರ ಸಂಬಂಧವಿಟ್ಟುಕೊಳ್ಳಬಾರದು?  ಗಂಡ ನಾಲ್ಕು ಮದುವೆಯಾಗುವುದಾದರೆ ನಾನ್ಯಾಕೆ ಆತನನ್ನು  ಒಪ್ಪಿಕೊಳ್ಳಬೇಕು? ಪುರುಷ ಮಧ್ಯ ಸೇವಿಸಬಹುದಾದರೆ ನಾನ್ಯಾಕೆ ಸೇವಿಸಬಾರದು?rape-illustration  ಮನೆ ಕೆಲಸ ಸ್ತ್ರೀಗೆ ಮಾತ್ರ ಯಾಕೆ ಮೀಸಲು ಪುರುಷನೇಕೆ ಮಾಡಬಾರದು? ನಾನು ಯಾವ ವಸ್ತ್ರವನ್ನು ಧರಿಸಬೇಕು, ನನ್ನ ನಡವಳಿಕೆ ಹೇಗಿರಬೇಕು? ಯಾಕೆ ನಾನು ಪರ್ದಾದೊಳಗೆ ಬಂಧಿಯಾಗಿರಬೇಕು? ಇವೆಲ್ಲವನ್ನು ತೀರ್ಮಾನಿಸಲು ಪುರುಷ ಯಾರು?  ಇಂಥಹಾ ಪ್ರಶ್ನೆಗಳನ್ನು ಕೇಳುವ ಹೊಸ ಪೀಳಿಗೆ ಹೆಚ್ಚಾಗುತ್ತಿದೆ. ಧರ್ಮ, ಸಂಪ್ರದಾಯದ ಹೆಸರಲ್ಲಿ ತನ್ನ ಮೇಲೆ ನಡೆಯುವ ಶೋಷಣೆಗಳನ್ನು ಆಧುನಿಕ ಸ್ತ್ರೀ ಪ್ರಶ್ನಿಸಲು ಆರಂಭಿಸಿದ್ದಾಳೆ. ಇದನ್ನು ಒಪ್ಪುವ ಹೊಸ ಚಿಂತನೆಯ ಪುರುಷ ಸಮಾಜವೂ ಸೃಷ್ಟಿಯಾಗುತ್ತಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಹಿಳೆ ಆಧುನಿಕ ಸ್ತ್ರೀ ಬಹಿರಂಗವಾಗಿ ಕೇಳುವ ಪ್ರೆಶ್ನೆಗಳನ್ನು ಪುರುಷ ಪ್ರಧಾನ ಸಮಾಜಕ್ಕೆ ಕೇಳುವ ವಾತಾವರಣ ನಿರ್ಮಾಣವಾಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಮನೆಯಲ್ಲಿ ಹೆಂಡತಿಗೆ ಗಂಡ ಏನಾದರೂ ಅಡುಗೆ ಹಾಗೂ ಮನೆ ಕೆಲಸದಲ್ಲಿ ಸಹಕಾರ ನೀಡಿದರೆ ಆತ ನೆರಮನೆಯ ಮಹಿಳೆಯರಿಗೆ ತಮಾಷೆಯ ವಸ್ತುವಾಗುತ್ತಾನೆ. ಯಾಕೆಂದರೆ ಗಂಡ ಮಕ್ಕಳ ಸೇವೆ ಮಾಡೋದೇ ನನ್ನ ಜೀವನ ಎಂಬ ಮನೋಭಾವ ಆಕೆಯಲ್ಲಿ ಬಲವಾಗಿ ಬೇರೂರಿದೆ. ಇಂಥಹಾ ಮನಸ್ಥಿತಿ ಹೆಣ್ಣಿನಲ್ಲಿ ಬದಲಾಗದೆ ಇದ್ದಲ್ಲಿ ಆಕೆ ಈ ಪುರುಷ ಪ್ರಧಾನ ಸಮಾಜದಿಂದ ಇನ್ನಷ್ಟು ಶೋಷಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ. ಇನ್ನು ಸಮೂಹ ಮಾಧ್ಯಮಗಳಲ್ಲೂ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಿನಿಮಾ, ಧಾರವಾಹಿಗಳಲ್ಲಿ ಹೆಣ್ಣನ್ನು ಬಿಂಬಿಸುವ ರೀತಿಯಲ್ಲೂ ಬದಲಾವಣೆಯಾಗಬೇಕು. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ಪ್ರಸಿದ್ದ ಧಾರವಾಹಿಯೊಂದರ ನಟನ ಕುರಿತಾಗಿ ಪತ್ರಿಕೆಯೊಂದರಲ್ಲಿ ವರದಿ ಪ್ರಸಾರವಾಗಿತ್ತು. ಧಾರವಾಹಿಯಲ್ಲಿ ನಟ ಹೆಣ್ಣನ್ನು ಪೀಡಿಸುವ ಪಾತ್ರವನ್ನು ನಟನ ಮಹಿಳಾ ಅಭಿಮಾನಿಗಳು ಇಷ್ಟಪಡುತ್ತಾರೆ ಹಾಗೂ ಮೆಚ್ಚುಗೆಯನ್ನು ಸೂಚಿಸುತ್ತಾರೆ ಎಂದು ನಟನೇ ಪತ್ರಿಕಾ ಸಂದರ್ಶನದಲ್ಲಿ ಆಶ್ವರ್ಯಪಡುತ್ತಾನೆ. ಕೆಲ ಮಹಿಳೆಯರ ಇಂಥಹಾ ಮನಸ್ಥಿತಿಯೇ ಇಂದು ಮಾಧ್ಯಮಗಳಿಗೆ ಬಂಡವಾಳವಾಗುತ್ತಿವೆ.

ಸ್ವಾಮಿ ವಿವೇಕಾನಂದ ಒಂದು ಮಾತು ಹೇಳುತ್ತಾರೆ “ಅದೇಕೆ ಈ ದೇಶದಲ್ಲಿ ಸ್ತ್ರೀಪುರುಷರಲ್ಲಿ ಇಷ್ಟೊಂದು ಭೇಧವಿದೆಯೋ ಆ ದೇವನೇ ಬಲ್ಲ. ಸ್ಮೃತಿ ಮುಂತಾದವುಗಳನ್ನು ಬರೆಯುವುದು, ಕಠಿಣವಾದ ನಿಯಮಗಳಿಂದ ಅವರನ್ನು ಬಂಧಕ್ಕೀಡು ಮಾಡುವುದು, ಗಂಡಸರು ಹೆಂಗಸರನ್ನು ಕೇವಲ ಮಕ್ಕಳನ್ನು ಹೆರುವ ಯಂತ್ರವನ್ನಾಗಿ ಮಾರ್ಪಡಿಸಿದ್ದಾರೆ. ಯಾವ ದೇಶ , ಯಾವ ಜನಾಂಗ ಸ್ತ್ರೀಯರಿಗೆ ಗೌರವ ಕೊಟ್ಟಿಲ್ಲವೋ ಅದು ಖಂಡಿತವಾಗಿಯೂ ಕೀರ್ತಿ ಪಡೆದಿಲ್ಲ; ಮುಂದೆ ಪಡೆಯುವುದೂ ಇಲ್ಲ.”