Category Archives: ಇರ್ಷಾದ್

ಸ್ನೇಹಕ್ಕೆ ಅಡ್ಡಿಯಾಗದ ಧರ್ಮ ಭವಿಷ್ಯಕ್ಕೆ ಮುಳ್ಳಾಯಿತು!


-ಇರ್ಷಾದ್ ಉಪ್ಪಿನಂಗಡಿ


ಈ ವಿದ್ಯಾರ್ಥಿಯ ಹೆಸರು ಮುಹಮ್ಮದ್ ಸ್ವಾಲಿ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ಪದವಿ ಶಿಕ್ಷಣMoralPol_Mangalore_1 ಪಡೆದುಕೊಳ್ಳುತ್ತಿರುವ ಮುಹಮ್ಮದ್ ಸ್ವಾಲಿ ಇಂದು ತಾನು ಓದುತ್ತಿರುವ ಕಾಲೇಜು, ಮನೆ ಹಾಗೂ ತನ್ನೂರಿನಿಂದಲೇ ದೂರವಿರುವಂತಹ ಪರಿಸ್ಥಿತಿಯಲ್ಲಿದ್ದಾನೆ. ಮುಹಮ್ಮದ್ ಸ್ವಾಲಿ ತಾನು ಓದುತ್ತಿರುವ ಕಾಲೇಜಿನಲ್ಲಿ ತನ್ನ ಸಹಪಾಠಿ ಅನ್ಯಧರ್ಮೀಯ ವಿದ್ಯಾರ್ಥಿನಿಯರೊಂದಿಗೆ ತೆಗೆಸಿಕೊಂಡ ಪೋಟೋ ಇಂದು ಈತನ ಭವಿಷ್ಯಕ್ಕೆ ಮುಳುವಾಗಿ ಮಾರ್ಪಟ್ಟಿದೆ. ಸ್ವಾಲಿ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ಬಿ.ಸಿ.ಎ ಪದವಿ ಓದುತ್ತಿದ್ದಾನೆ. ಇತ್ತೀಚೆಗೆ ಕಾಲೇಜು ತರಗತಿಯಲ್ಲಿ ತನ್ನ ಸಹಪಾಠಿ ಸ್ನೇಹಿತೆಯರೊಂದಿಗೆ ತಮಾಷೆಗಾಗಿ ಅವರ ತೊಡೆಗಳಲ್ಲಿ ಮಲಗಿಕೊಂಡ ರೀತಿಯಲ್ಲಿ ಪೋಟೋ ತೆಗೆಸಿಕೊಂಡಿದ್ದ. ಈ ಪೋಟೋವನ್ನು ಯಾರೋ ಕಿಡಿಕೇಡಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವ್ಯಾಟ್ಸ್ ಆಫ್ ಗಳಲ್ಲಿ ಹರಿಯಬಿಟ್ಟಿದ್ದರು.

ಹಿಂದೂ ವಿದ್ಯಾರ್ಥಿನಿಯರ ಜೊತೆ ಮುಸ್ಲಿಮ್ ಯುವಕ ಈ ರೀತಿಯಾಗಿ ತೆಗೆಸಿಕೊಂಡ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಜಿಲ್ಲೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಹುಯಿಲೆಬ್ಬಿಸುತ್ತಾ ಭಿನ್ನ ಕೋಮಿನ ಯುವಕ- ಯುವತಿ ಜೊತೆಗಿದ್ದರೆ ಅವರನ್ನು ನೈತಿಕ ಪೊಲೀಸ್ ಗಿರಿಯ ಹೆಸರಲ್ಲಿ ಹಿಂಸಿಸುವ ಹಿಂದೂಪರ ಸಂಘಟನೆಗಳ ಯುವಕರಂತೂ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಚ್ಯ ಶಬ್ಧಗಳ ಮೂಲಕ ತಮ್ಮ ದಾಳಿಯನ್ನು ಶುರುಹಚ್ಚಿಕೊಂಡಿದ್ದರು. ಪೋಟೋ ಬಹಿರಂಗವಾಗಿ ವಿವಾದ ಎಬ್ಬಿಸಿದ ಬೆನ್ನಲ್ಲೇ ನೈತಿಕ ಪೊಲೀಸರು ಎಚ್ಚೆತ್ತುಕೊಂಡು ಪೋಟೋದ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದ ಮುಹಮ್ಮದ್ ಸ್ವಾಲಿ ಸ್ನೇಹಿತ ರಿಯಾಜ್ ಎಂಬಾತನನ್ನು ಆತನ ಮನೆ ಸುರತ್ಕಲ್ ನಿಂದ ಉಪಾಯವಾಗಿ ಅಪಹರಿಸಿ ಹಿಗ್ಗಾ ಮುಗ್ಗಾ ಥಳಿಸಿ ತಮ್ಮ ಕೋಪವನ್ನು ತೀರಿಸಿಕೊಂಡರು. ಇದಿಷ್ಟೇ ಸಾಲದೆಂಬುವುದಕ್ಕೆ ಇನ್ನೊಂದು ಕಡೆಯಲ್ಲಿ ಪೋಟೋದಲ್ಲಿ ಕಾಣಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳಿಗೆ ಬಲಿಯಾಗುತ್ತಿರುವ ಯುವಕ-ಯುವತಿಯ ಪಾಡು MoralPol_Mangalore_2ಹೇಗಿರುತ್ತದೆ ಎಂಬುವುದಕ್ಕೆ ಒಂದು ಸಣ್ಣ ಉದಾಹರಣೆಯಷ್ಟೇ. 2014 ಹಾಗೂ 2015 ಫೆಬ್ರವರಿ 1 ರ ವರೆಗೆ ಜಿಲ್ಲೆಯಲ್ಲಿ ಮಾದ್ಯಮಗಳಲ್ಲಿ ವರದಿಯಾದ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಸಂಖ್ಯೆ ಒಟ್ಟು 37. ಇವುಗಳ ಪೈಕಿ ಹಿಂದೂಪರ ಸಂಘಟನೆಗಳು ನಡೆಸಿದ ನೈತಿಕ ಪೊಲೀಸ್ ಗಿರಿಯ ಸಂಖ್ಯೆ 30 ಹಾಗೂ ಮುಸ್ಲಿಮ್ ಪರ ಸಂಘಟನೆಗಳು ನಡೆಸಿದ ನೈತಿಕ ಪೊಲೀಸ್ ಗಿರಿಯ ಸಂಖ್ಯೆ 7. ಇವು ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳಷ್ಟೇ. ಇವುಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ನೈತಿಕ ಪೊಲೀಸರು ನಡೆಸುತ್ತಿರುವ ಅನೈತಿಕ ಪೊಲೀಸ್ ಗಿರಿಯಿಂದಾಗಿ ಬಲಿಪಶುಗಳಾದ ಯುವಕ –ಯುವತಿಯರು ಒಂದು ಕಡೆಯಲ್ಲಿ ಹಲ್ಲೆಗೊಳಗಾಗಿ ಇನ್ನೊಂದು ಕಡೆಯಲ್ಲಿ ತಮಗಾದ ಅವಮಾನವನ್ನು ಸಹಿಸಿಕೊಳ್ಳಲಾಗದೆ ಸಮಾಜದ ಮುಂದೆ ತನ್ನ ಮುಖತೋರಿಸಿಕೊಳ್ಳಲಾಗದೆ ಇತ್ತ ಮನೆಯಲ್ಲೂ ಮೂದಳಿಕೆ ಅವಮಾನವನ್ನು ಸಹಿಸಿಕೊಂಡು ಬದುಕಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ.

ಅಷ್ಟಕ್ಕೂ ಇಲ್ಲಿ ಮುಹಮ್ಮದ್ ಸ್ವಾಲಿ ಮಾಡಿದ ತಪ್ಪಾದರೂ ಏನು? ಸಹಜವಾಗಿ ಇಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಯುವಕ-ಯುವತಿಯರು ಸಾಕಷ್ಟು ಆತ್ಮೀಯರಾಗಿರುತ್ತಾರೆ. ಕಾಲೇಜು ವಠಾರದಲ್ಲಿ ಸಹಪಾಠಿಗಳು ಧರ್ಮಬೇಧವಿಲ್ಲದೆ ಬೆರೆಯುವುದು ಸಹಜ ಪ್ರಕ್ರಿಯೆ. ಕಾಲೇಜು ಶೈಕ್ಷಣಿಕ ಪ್ರವಾಸ ಹೋಗುವ ಸಂಧರ್ಭಗಳಿರಬಹುದು ಅಥವಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿಕೊಂಡು ಹುಟ್ಟುಹಬ್ಬ ಪಾರ್ಟಿಗಳನ್ನು ಮಾಡೋದಿರಬಹುದು ಅಥವಾ ತರಗತಿ ಸ್ನೇಹಿತರೆಲ್ಲಾ ಸೇರಿಕೊಂಡು ಟ್ರಕ್ಕಿಂಗ್ ಹೋಗೋದಿರಬಹುದು ಈ ಎಲ್ಲಾ ಸಂಧರ್ಭಗಳಲ್ಲೂ ಎಲ್ಲರೂ ಪರಸ್ಪರ ಸ್ನೇಹದಿಂದ ಬೆರೆಯೋದು, ಜೊತೆ ನಿಂತಿಕೊಂಡು ಪೋಟೋ ತೆಗೆಸಿಕೊಳ್ಳುವುದು ಹಾಡುವುದು, ಕುಣಿಯುವುದು ಇವೆಲ್ಲಾ ಕಾಲೇಜು ಶಿಕ್ಷಣದ ಅನುಭವಗಳಲ್ಲೊಂದು. ಇಂಥಹ್ ಹುಡುಗಾಟಿಕೆಯ ಸಹಜ ಪ್ರಕ್ರಿಯೆ ಇಲ್ಲೂ ಆಗಿರುವಂತಹದ್ದು. ಇಲ್ಲಿ ಮುಹಮ್ಮದ್ ಸ್ವಾಲಿ ಮಾಡಿದ ತಪ್ಪು ಅನ್ಯಧರ್ಮೀಯ ಸಹಪಾಠಿ ಸ್ನೇಹಿತೆಯರ ತೊಡೆಗಳಲ್ಲಿ ಮಲಗಿಕೊಂಡು ಪೋಟೋ ತೆಗೆಸಿಕೊಂಡಿದ್ದು.

ಮುಹಮ್ಮದ್ ಸ್ವಾಲಿ ಸ್ನೇಹಿತ ನೈತಿಕ ಪೊಲೀಸರಿಂದ ಹಲ್ಲೆಗೊಳಗಾದ ರಿಯಾಜ್ ಹೇಳುವ ಪ್ರಕಾರ ಪೋಟೋದಲ್ಲಿ ಕಾಣಿಸಿಕೊಂಡMoralPol_Mangalore_3 ಹುಡುಗಿಯರು ಹಾಗೂ ಮುಹಮ್ಮದ್ ಸ್ವಾಲಿ ಮತ್ತು ರಿತೇಶ್ ಎಂಬ ಹುಡುಗ ಇವರೆಲ್ಲರೂ ತುಂಬಾನೇ ಆತ್ಮೀಯ ಸ್ನೇಹಿತರು. ಜೊತೆಗೆ ಊಟಮಾಡುವುದು, ಕಾಲೇಜು ಕಾರ್ಯಕ್ರಮಗಳಲ್ಲಿ ಜೊತೆಜೊತೆಗೆ ಭಾಗವಹಿಸುವುದು, ಹರಟೆ ಹೊಡೆಯುವುದು, ಪರಸ್ಪರ ಹುಟ್ಟುಹಬ್ಬದ ಪಾರ್ಟಿಗಳನ್ನು ಆಚರಿಸುವುದು, ತಮಾಷೆ ಮಾಡಿಕೊಂಡು ಆತ್ಮೀಯತೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಬರುತ್ತಿದ್ದರು. ಈ ಹುಡುಗ-ಹುಡುಗಿಯರ ನಡುವಿನ ಸ್ನೇಹಕ್ಕೆ ಎಂದಿಗೂ ಧರ್ಮ ಅಡ್ಡಿಯಾಗಲಿಲ್ಲ. ಇನ್ನು ಈ ವಿದ್ಯಾರ್ಥಿಗಳ ಕುರಿತಾಗಿ ಆ ಕಾಲೇಜಿನ ಪ್ರಾಂಶುಪಾಲರೂ ಉತ್ತಮ ಮಾತನ್ನಾಡುತ್ತಾರೆ. ಆದರೆ ತಮಾಷೆಗಾಗಿ ಸ್ನೇಹಿತರು ತೆಗೆಸಿಕೊಂಡ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಧರ್ಮದ ಅಮಲು ತುಂಬಿಸಿಕೊಂಡ ಧರ್ಮರಕ್ಷಕರ ಕಣ್ಣಿಗೆ ಬಿದ್ದಾಗ ಈ ಪೋಟೋ ಅಶ್ಲೀಲವಾಗಿ ಗೋಚರಿಸಿತು. ಹೆಣ್ಮಕ್ಕಳ ತೊಡೆಯಲ್ಲಿ ಮಲಗಿಕೊಂಡ ಈ ಪೋಟೋ ಹೆಣ್ಮಕ್ಕಳ ಪೋಷಕರಿಗೂ ಅಶ್ಲೀಲಾಗಿ ಕಂಡಿಲ್ಲ, ಗಂಡು ಮಕ್ಕಳ ಪೋಷಕರಿಗೂ ಅಶ್ಲೀಲವಾಗಿ ಕಂಡಿಲ್ಲ. ಆದರೆ ಧರ್ಮರಕ್ಷಕರಿಗೆ ಅಶ್ಲೀಲವಾಗಿ ಕಂಡಿರುವುದು ವಿಪರ್ಯಾಸ. ಪರಿಣಾಮ ಪೋಟೋದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಗಳು ಇಂದು ಮನೆಯಿಂದ ಹೊರಗಡೆ ಕಾಲಿಡದಂತಹ ಪರಿಸ್ಥಿತಿಯಲ್ಲಿದ್ದಾರೆ. ಮುಹಮ್ಮದ್ ಸ್ವಾಲಿ ನೈತಿಕ ಪೊಲೀಸರು ಹಲ್ಲೆ ನಡೆಸುವ ಭಯದಿಂದ ಮಂಗಳೂರಿನ ಸುರತ್ಕಲ್ ಸಮೀಪವಿರುವ ತನ್ನ ಮನೆಯಲ್ಲಿರದೆ ಬೇರೆ ಕಡೆ ಆಶ್ರಯ ಪಡುತ್ತಿದ್ದಾನೆ. ಮುಹಮ್ಮದ್ ಸ್ವಾಲಿಯ ಮನೆಯವರು ಭಯದ ವಾತಾವರಣದಲ್ಲಿ ಜೀವಿಸುವಂತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ನೇಹವನ್ನೂ ಧರ್ಮದ ಕನ್ನಡಿ ಧರಸಿಕೊಂಡು ನೋಡುತ್ತಿರುವುದರಿಂದ ಯುವಕ –ಯುವತಿ ಸ್ನೇಹಿತರೂ ಪರಸ್ಪರ ಭೇಟಿಯಾಗಿ ಮಾತನಾಡಲಾಗದ ಪರಿಸ್ಥಿತಿ ಇದೆ. ಜನವರಿ 24 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ನೈತಿಕ ಪೊಲೀಸ್ ಘಟನೆ ನಡೆದಿತ್ತು. ಕುಂದಾಪುರದ ಮಹಿಳೆಯೊಬ್ಬರು ಕಲ್ಲಡ್ಕದಲ್ಲಿರುವ ತನ್ನ ಮುಸ್ಲಿಮ್ ಸ್ನೇಹಿತೆಗೆ ಹೆರಿಗೆಯಾದಾಗ ಬಾಣಂತಿಯನ್ನು ಹಾಗೂ ಆಕೆಯ ಮಗುವನ್ನು ನೋಡಿ ಆರೋಗ್ಯ ವಿಚಾರಿಸಿಕೊಂಡು ಹೋಗಲು ಕಲ್ಲಡ್ಕಕ್ಕೆ ಬಂದಿದ್ದಳು. ಮಹಿಳೆಯ ಮುಸ್ಲಿಮ್ ಸ್ನೇಹಿತೆಯ ಪತಿ ಬಸ್ ನಿಲ್ದಾಣಕ್ಕೆ ಬಂದು ಮಹಿಳೆಯನ್ನು ತನ್ನ ಕಾರಿನಲ್ಲಿ ಕೂರಿಸಿ ಮನೆಗೆ ಕರೆದುಕೊಂಡು ಹೋಗುವ ಸಂಧರ್ಭದಲ್ಲಿ ಮುಸ್ಲಿಮ್ ಪುರುಷನ ಕಾರಿನಲ್ಲಿ ಹಿಂದೂ ಮಹಿಳೆಯಿದ್ದದನ್ನು ಅಪಾರ್ಥ ಮಾಡಿಕೊಂಡ ನೈತಿಕ ಪೊಲೀಸರು ಅವರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಹಿಂದೂ ಮಹಿಳೆ ತನ್ನ ಮುಸ್ಲಿಮ್ ಸ್ನೇಹಿತೆ ಹಾಗೂ ಆಕೆಯ ಮಗುವನ್ನು ನೋಡೋದಕ್ಕೆ ಬಂದಿರುವ ಸತ್ಯ ತಿಳಿದು ಆಕೆಯನ್ನು ಮುಸ್ಲಿಮ್ ಸ್ನೇಹಿತೆಯ ಮನೆಗೆ ಹೋಗೋದಕ್ಕೆ ಅವಕಾಶ ಕಲ್ಪಿಸಲಾಯಿತು.

ಇನ್ನು ಹಿಂದೂ ಸಂಘಟನೆಗಳಿಗೆ ಪರ್ಯಾಯವೆಂಬುವಂತೆ ಮುಸ್ಲಿಮ್ ಸಂಘಟನೆಗಳೂ ತಮ್ಮ ಧರ್ಮದ ಹೆಣ್ಮಕ್ಕಳMoralPol_Mangalore_4 ರಕ್ಷಣೆಯ ಹೊಣೆಹೊತ್ತುಕೊಂಡವರಂತೆ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಬಂಟ್ವಾಳ ತಾಲೂಕಿನ ನಿವಾಸಿ ಮುಸ್ಲಿಮ್ ಮಹಿಳಾ ವಕೀಲೆಯೊಬ್ಬರನ್ನು ಆಕೆಯ ಸಹಪಾಠಿ ಹಿಂದೂ ಧರ್ಮೀಯ ವಕೀಲರೊಬ್ಬರು ಬಸ್ ನಿಲ್ದಾಣಕ್ಕೆ ಬೈಕ್ ನಲ್ಲಿ ಡ್ರಾಪ್ ನೀಡಿದರು ಎಂಬ ಕಾರಣಕ್ಕಾಗಿ ಆಕೆಯನ್ನು ಹಿಂಬಾಳಿಸಿದ ಮುಸ್ಲಿಮ್ ನೈತಿಕ ಪೊಲೀಸರು ಆ ಮಹಿಳೆಯ ಮನೆವರೆಗೂ ಹೋಗಿ ತರಾಟೆಗೆ ತೆಗೆದುಕೊಂಡ್ಡಿದ್ದರು. ಆದರೆ ಆಕೆಯ ಮನೆ ಮಂದಿ ನೈತಿಕ ಪೊಲೀಸರ ವಿರುದ್ಧ ತಿರುಗಿ ಬಿದ್ದಾಗ ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲವೆಂದು ಕಾಲ್ಕಿತ್ತರು. ಇದು ಜಿಲ್ಲೆಯ ನೈತಿಕ ಪೊಲೀಸರ ಉಪಟಳದಿಂದಾಗಿ ಆಗುತ್ತಿರುವ ಅವಾಂತರಗಳಿಗೆ ಸಾಕ್ಷಿ. ಜಿಲ್ಲೆಯಲ್ಲಿ ನಡೆಯುತ್ತಿರುವ ಅನೇಕ ನೈತಿಕ ಪೊಲೀಸ್ ಗಿರಿ ಘಟನೆಗಳು ಪೊಲೀಸ್ ಠಾಣೆಯ ಮೆಟ್ಟಿಲೇರೋದೆ ಇಲ್ಲ. ಅನೇಕ ಘಟನೆಗಳಲ್ಲಿ ಪೊಲೀಸರು ನೈತಿಕ ಪೊಲೀಸರಿಂದ ಹಲ್ಲೆಗೊಳಗಾದ ಜೋಡಿಯನ್ನು ರಕ್ಷಿಸಿ ಬುದ್ದಿವಾದ ಹೇಳಿ ಬಿಟ್ಟುಬಿಡುತ್ತಾರೆ ಹೊರತುಪಡಿಸಿ ದೂರು ದಾಖಲು ಮಾಡಿಕೊಳ್ಳುವುದಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ದಾಳಿಗೊಳಗಾದ ಸಂತ್ರಸ್ತರು ಮರ್ಯಾದೆಗೆ ಅಂಜಿ ದೂರು ನೀಡಲೂ ಮುಂದಾಗುವುದಿಲ್ಲ. ಇವು ಜಿಲ್ಲೆಯ ನೈತಿಕ ಪೊಲೀಸರಿಗೆ ವರದಾನವಾಗಿ ಮಾರ್ಪಡುತ್ತಿವೆ.

ಪ್ರಸ್ತುತ ಪೋಟೋ ಪ್ರಕರಣದ ನೈತಿಕ ಪೊಲೀಸ್ ಗಿರಿಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆಯಾಗಿ ಕರಾವಳಿಯಲ್ಲಿ ಎರಡೂ ಧರ್ಮದ ನೈತಿಕ ಪೊಲೀಸರ ಕಾಟದಿಂದಾಗಿ ಒಂದು ಧರ್ಮದ ಯುವಕ ಅಥವಾ ಯುವತಿ ಮತ್ತೊಂದು ಧರ್ಮದ ಯುವಕ ಅಥವಾ ಯುವತಿಯ ಜೊತೆ ಮಾತನಾಡುವುದಕ್ಕೆ ಹಿಂದೂ ಮುಂದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಹಮ್ಮದ್ ಸ್ವಾಲಿ ಹಾಗೂ ಗೆಳೆಯರ ಪ್ರಕರಣದಲ್ಲೂ ಇದೇ ಆಗಿದ್ದು. ಪರಸ್ಪರ ಆತ್ಮೀಯ ಸ್ನೇಹಿತರಾದ ಈ ಯುವಕ-ಯುವತಿಯರ ಸ್ನೇಹಕ್ಕೆ ಯಾವತ್ತೂ ಅಡ್ಡಿಯಾಗದ ಧರ್ಮ ಇಂದು ನೈತಿಕ ಪೊಲೀಸರಿಂದಾಗಿ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳ್ಳಾಗಿ ಪರಿಣಮಿಸುತ್ತಿರುವುದು ವಿಪರ್ಯಾಸ.

ಜನನುಡಿ 2014 : ಒಂದು ವರದಿ

– ವಸಂತ ಕಡೇಕಾರ್

“ಕೋಮುವಾದಿ ಗಾಢಾಂಧಕಾರದ ಸುರಂಗದ ಕೊನೆಯಲ್ಲೊಂದು ಬೆಳಕಿನ ಕಿಂಡಿ, ಜನನುಡಿ” – ದಿನೇಶ್ ಅಮಿನ್ ಮಟ್ಟು

ಇವು ದಿನೇಶ ಅಮಿನ್ ಮಟ್ಟು ಅವರು ಡಿಸೆಂಬರ್ 13-14ರಂದು ಮಂಗಳೂರಿನಲ್ಲಿ ನಡೆದ ಜನನುಡಿ ಸಮಾವೇಶದ “ಸಮಕಾಲೀನ ಸವಾಲುಗಳು – ಐಕ್ಯತೆಯ ಅಗತ್ಯತೆ’ ಬಗೆಗಿನ ಗೋಷ್ಟಿಯಲ್ಲಿ ಅಧ್ಯಕ್ಷೀಯ ಭಾಷಣದ ಕೊನೆಯಲ್ಲಿ ಆಡಿದ ಮಾತುಗಳು. dinesh-amin-umapathiತಾರ್ಕಿಕವಾಗಿ ತಣ್ಣಗೆ ವಿಚಾರ ಮಂಡಿಸುವ ದಿನೇಶ್ ಇಂತಹ ‘ಅತಿಶಯೋಕ್ತಿ’ಯಂತೆ ಕಾಣುವ ಮಾತುಗಳನ್ನು ಸಾಮಾನ್ಯವಾಗಿ ಆಡುವುದಿಲ್ಲವಲ್ಲ ಎಂದು ಬಹಳ ಜನರಿಗೆ (ಅದರಲ್ಲೂ ಜನನುಡಿ ಸಮಾವೇಶದಲ್ಲಿ ಭಾಗವಹಿಸದೆ ಇದ್ದವರಿಗೆ) ಆಶ್ಚರ್ಯವಾಗಬಹುದು. ಎರಡೂ ದಿನ ಭಾಗವಹಿಸಿದ ಬಹುಪಾಲು ಜನರಿಗೆ ಮಾತ್ರ ಇದು ಎರಡು ದಿನದ ಸಮಾವೇಶದ ‘ಕ್ಲೈಮಾಕ್ಸ್’ ಮತ್ತು ಸಾರಾಂಶವಾಗಿ ಕಂಡಿತು..

ಇದಕ್ಕೆ ಸಮಾವೇಶದ ಹಿಂದಿನ ಕೆಲವು ದಿನಗಳಲ್ಲಿ ಸಂಘ ಗ್ಯಾಂಗ್ ನಮ್ಮೆಲ್ಲರ ಮೇಲೆ ಹರಿಯಬಿಟ್ಟ ಕೋಮುವಾದಿ-ಫ್ಯಾಸಿಸ್ಟ್ ಗಾಢಾಂಧಕಾರ ಸೃಷ್ಟಿಸುವ ಪ್ರಚೋದನಕಾರಿ ಹುನ್ನಾರಗಳೂ (ಭಗವದ್ಗೀತೆ ರಾಷ್ಟ್ರೀಯ ಗ್ರಂಥ, ಘರ್ ವಾಪಸಿ, ಮತಾಂತರ, ಚುನಾವಣಾ ಪ್ರಚಾರದಲ್ಲಿ ರಾಮಜಾದೆ-ಹರಾಮ್ ಜಾದೆ, ರಾಷ್ಟ್ರೀಯ ಪ್ರೊಫೆಸರ್ ಭೈರಪ್ಪ, ಸಂಸ್ಕೃತ ಹೇರಿಕೆ ಇತ್ಯಾದಿ) ಮತ್ತು ಅವುಗಳ ಬಗ್ಗೆ ನಡೆದ ಚರ್ಚೆಗಳೂ ಕಾರಣವಾಗಿರಬಹುದು. ಕಳೆದ ಬಾರಿ ‘ಆಳ್ವಾಸ್ ನುಡಿಸಿರಿ’ಗೆ ಪ್ರತಿಭಟನೆಯಾಗಿ ಜನಪರ ಪರ್ಯಾಯವಾಗಿ ತಳಮಟ್ಟದಿಂದ ಹುಟ್ಟಿಕೊಂಡ ಜನನುಡಿ, ಹಲವು ಇಂತಹ ಪ್ರತಿಭಟನಾ ವೇದಿಕೆಗಳಂತೆ ‘ಒನ್ ಟೈಮ್ ವಂಡರ್’ ಆಗಿಲ್ಲ. ಎರಡನೇ ವರ್ಷಕ್ಕೆ ಇನ್ನೂ ಹೆಚ್ಚಿನ ಬಲ, ಕಸುವು, ಧೃಢತೆ, ಆತ್ಮವಿಶ್ವಾಸ ಮತ್ತು ಐಕ್ಯತೆಯೊಂದಿಗೆ ಕಾಲಿಟ್ಟಿರುವುದು ಇಂತಹ ಉತ್ಸಾಹ ಮತ್ತು ಭರವಸೆಯ ವಾತಾವರಣಕ್ಕೆ ಕಾರಣವಾಗಿರಬೇಕು.

ಎರಡನೇ ಸಮಾವೇಶದ ಮುನ್ನಡೆ

ಪಾಲ್ಗೊಂಡವರ ಸಂಖ್ಯೆ ಸುಮಾರು ಇಮ್ಮಡಿಯಾದ್ದು ಮಾತ್ರವಲ್ಲದೆ ದೊಡ್ಡ ಸಂಖ್ಯೆಯಲ್ಲಿ ಯುವಜನರ ಪಾಲ್ಗೊಳ್ಳುವಿಕೆ, jananudi-2014ಎರಡು ದಿನದ ಉದ್ದಕ್ಕೂ ಎಲ್ಲಾ ಗೋಷ್ಟಿಗಳಲ್ಲೂ ಸಭಾಂಗಣ ತುಂಬಿತ್ತಲ್ಲದೆ ನಡೆದ ಬಿಚ್ಚುಮನಸ್ಸಿನ ಪ್ರಬುದ್ಧ ಚರ್ಚೆ – ಈ ಎಲ್ಲವೂ ಸ್ಫೂರ್ತಿದಾಯಕವಾಗಿತ್ತು. ಮುಂದಿನ ವರ್ಷ ಕನಿಷ್ಟ ನಾಲ್ಕು ವಲಯವಾರು ಜನನುಡಿ ಸಮಾವೇಶಗಳನ್ನು ಸಂಘಟಿಸಿ ಇನ್ನಷ್ಟು ಪ್ರಗತಿಪರ ಸಂಘಟನೆಗಳನ್ನು ಒಳಗೊಳ್ಳಬೇಕು, ಇನ್ನಷ್ಟು ಜನರನ್ನು ತಲುಪಬೇಕು ಎಂಬ ಉತ್ಸಾಹ, ದೃಢನಿಶ್ಚಯ ಕಂಡುಬಂತು.

ಜನನುಡಿ-2013ರಲ್ಲೂ ಇದ್ದ ಕರಾವಳಿಯ ತಲ್ಲಣಗಳು, ಕವಿಗೋಷ್ಟಿ ಅಲ್ಲದೆ, ಇನ್ನೂ ಹಲವು ಹೊಸ ವಿಷಯಗಳ ಬಗ್ಗೆ ಗೋಷ್ಟಿಗಳು jananudi-2014-5ಇದ್ದಿದ್ದು ಈ ಬಾರಿಯ ವಿಶೇಷವಾಗಿತ್ತು. “ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ ಸಾಹಿತ್ಯ”, ‘ಶ್ರೇಣೀಕೃತ ಜಾತಿ ವ್ಯವಸ್ಥೆಯ ಹೊಸರೂಪ ಹಾಗೂ ದಲಿತ ಮಹಿಳಾ ಸಂವೇದನೆ’, “ಸಾಮಾಜಿಕ ಜಾಲತಾಣದ ಸವಾಲುಗಳು” ಮತ್ತು “ಸಮಕಾಲೀನ ಸವಾಲುಗಳು-ಐಕ್ಯತೆಯ ಅಗತ್ಯತೆ” ಇಂತಹ ಗೋಷ್ಟಿಗಳಾಗಿದ್ದವು. ಸಮಾರಂಭ, ಸಮಾರೋಪ ಅಲ್ಲದೆ ಮೇಲೆ ಹೇಳಿದ ಗೋಷ್ಟಿಗಳಲ್ಲಿ ಹಲವು ವಿಷಯಗಳ ಬಗ್ಗೆ (ಕೆಲವು ಬಾರಿ ಬಿಸಿ ಬಿಸಿ) ವಾಗ್ವಾದ, ಸಂವಾದ ನಡೆಯಿತು. ದೇಶೀ ಕಪ್ಪು ಹಣ ಹೊರಗೆಳೆಯುವ ಅಗತ್ಯತೆ, ಕಪ್ಪುಹಣ ಚಲಾವಣೆಗೆ ಅದ್ದೂರಿ ಸಾಹಿತ್ಯ ಮೇಳ-ಸಾಂಸ್ಕೃತಿಕ ಜಂಭೂರಿ ಉತ್ಸವಗಳನ್ನು ನಡೆಸುವುದು, ಸಂವಿಧಾನ ಬಿಟ್ಟರೆ ಬೇರೇ ಯಾವುದೇ ರಾಷ್ಟ್ರೀಯ ಗ್ರಂಥ ಆಗುವ ಅಸಾಧ್ಯತೆ, ಪುರೋಹಿತಶಾಹಿಯ ವಿರುದ್ಧ ದನಿಎತ್ತಿದವರ ಕೊಲೆ-ದಮನದ ಚರಿತ್ರೆ, ಇವುಗಳ ಬಗ್ಗೆ ಉದ್ಘಾಟನಾ ಸಮಾರಂಭದಲ್ಲೇ ಚರ್ಚೆ ಆರಂಭವಾಯಿತು.

ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ

“ಕಾರ್ಪೊರೆಟ್ ಮೌಲ್ಯಗಳ ಮುಖಾಮುಖಿಯಲ್ಲಿ ಸಾಹಿತ್ಯ”, ಗೋಷ್ಟಿಯಲ್ಲಿ ಎರಡು ಭಿನ್ನವಾದ ಅಭಿಪ್ರಾಯಗಳನ್ನು ಮಂಡಿಸಲಾಯಿತು. jananudi-2014-2ಕಾರ್ಪೊರೆಟ್ ಮತ್ತು ಸಾಹಿತ್ಯವನ್ನು ಎದುರುಬದಿರು ಮಾಡುವುದು ಕಷ್ಟ. ಎರಡೂ ನಮ್ಮದಲ್ಲ. ಎಲ್ಲದಕ್ಕೂ ಬೆಲೆ ಕಟ್ಟುವ, ಚರಿತ್ರೆಯನ್ನು ನಮ್ಮಿಂದ ಬೇರ್ಪಡಿಸುವ, ಬಹುತ್ವ ನಾಶ ಮಾಡಿ ಏಕತ್ವ ಸ್ಥಾಪಿಸುವ ಕಾರ್ಪೊರೆಟ್ ಮೌಲ್ಯಗಳನ್ನು ನಿರಾಕರಿಸಿ ಬರಿಯ ಪ್ರತಿಭಟನಾ ನೆಲೆಗಳನ್ನು ಬಿಟ್ಟು ಆತ್ಮಸ್ಥೈರ್ಯದ ಸಾಂಸ್ಕೃತಿಕ ಅಭಿವ್ಯಕ್ತಿಯ ಸ್ವಾಯತ್ತ ನೆಲೆಯನ್ನು ಕಂಡುಕೊಳ್ಳುವುದು ಪ್ರತಿಪಾದಿತವಾದ ಒಂದು ಅಭಿಪ್ರಾಯ. ಕಾರ್ಪೊರೆಟ್ ಮತ್ತು ಸಾಹಿತ್ಯ ಎರಡನ್ನು ಸಮಾನವಾಗಿ ಟೀಕಿಸುವುದು ಸರಿಯಲ್ಲ. ಕಾರ್ಪೊರೆಟ್ ಬರಿಯ ಬೆಲೆ ಕಟ್ಟುತ್ತದೆ. ಸಾಹಿತ್ಯ ಮೌಲ್ಯಗಳನ್ನು ಸೃಷ್ಟಿಸುತ್ತದೆ. ಸಾಹಿತ್ಯ ಡಿಕನ್ಸ್ಟ್ರಕ್ಟ್ ಮಾಡುತ್ತದೆ. ಕಾರ್ಪೊರೆಟ್ ರಿಕನ್ಸ್ಟ್ರಕ್ಟ್ ಮಾಡುತ್ತದೆ. ಸಾಹಿತ್ಯ ಸಮುದಾಯದಲ್ಲಿ ನೆಲೆಗೊಂಡ ವಿವೇಕದ ಮಾದರಿಗಳ ಮೌಲ್ಯಮಾಪನ ಮಾಡುತ್ತದೆ. ಕಾರ್ಪೊರೆಟ್ ಅನಿವಾರ್ಯ ಅನಿಷ್ಟ ಎಂಬುದನ್ನು ತಿರಸ್ಕರಿಸಬೇಕು. ಇದು ಪ್ರತಿಪಾದಿತವಾದ ಇನ್ನೊಂದು ಅಭಿಪ್ರಾಯ. ಇವರೆಡರ ಬಗ್ಗೆ ಹಾಗೂ ಸಾಹಿತ್ಯ ಮತ್ತು ಕಾರ್ಪೊರೆಟ್ ಮೌಲ್ಯಗಳೆಂದರೇನು ಎನ್ನುವ ಬಗ್ಗೆ ಸಹ ಸಾಕಷ್ಟು ಚರ್ಚೆ ಆಯಿತು. ಡಾ.ನಟರಾಜ ಬೂದಾಳ್ ಮತ್ತು ಡಾ. ಮಲ್ಲಿಕಾರ್ಜುನ ಮೇಟಿ ಈ ಗೋಷ್ಟಿಯಲ್ಲಿ ವಿಷಯ ಮಂಡನೆ ಮಾಡಿದರು.

ಕರಾವಳಿಯಲ್ಲೇ ಏಕೀ ಉಗ್ರ ಕೋಮುವಾದ?

”ಶ್ರೇಣೀಕೃತ ಜಾತಿ ವ್ಯವಸ್ಥೆಯ ಹೊಸರೂಪ ಹಾಗೂ ದಲಿತ ಮಹಿಳಾ ಸಂವೇದನೆ’ ಅತ್ಯಂತ ಹೆಚ್ಚು ಬಿಸಿ-ಬಿಸಿ ಚರ್ಚೆ ನಡೆದ ಗೋಷ್ಟಿಯಾಗಿತ್ತು.jananudi-2014-6 ಹೈದರಾಬಾದ್ ಮತ್ತು ಕರಾವಳಿ ಕರ್ನಾಟಕ ಎರಡರಲ್ಲೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದರೂ ಕೋಮುವಾದಿ ಹಿಂಸಾಚಾರ-ದಂಗೆಗಳು ಮತ್ತು ಕೋಮುವಾದೀಕರಣದಲ್ಲಿ ಭಾರೀ ವ್ಯತ್ಯಾಸಕ್ಕೆ ಏನು ಕಾರಣವೆನ್ನುವುದು ಚರ್ಚೆಯ ವಿಷಯವಾಗಿತ್ತು. ಅನುಭಾವಿ ಸೂಫಿಸಂ ಮತ್ತು ಅವೈದಿಕ ಪರಂಪರೆಯ ಲಿಂಗಾಯತ ಮಠಗಳ ಪ್ರಾಬಲ್ಯ ಇದಕ್ಕೆ ಕಾರಣವೆಂದು ಒಂದು ವಾದ. ಆದರೆ ಕರಾವಳಿಯಲ್ಲೂ ಅವೈದಿಕ ಪರಂಪರೆಯ ಬುಡಕಟ್ಟು ಸಂಸ್ಕೃತಿ ಇದ್ದು, ಬರೇ ಅದೊಂದೇ ಕೋಮುವಾದದ ದಾಳಿ ತಡೆಯಲಾಗದು ಎನ್ನುವುದು ಇನ್ನೊಂದು ವಾದವಾಗಿತ್ತು. ಕರಾವಳಿಯಲ್ಲಿ ಮುಸ್ಲಿಮರು ಆರ್ಥಿಕವಾಗಿ ಪ್ರಬಲ ಕೋಮು ಆಗಿದ್ದು, ಶಿಕ್ಷಣ, ಬಂಡವಾಳಶಾಹಿ ಬೆಳೆದಿದ್ದು, ಬುಡಕಟ್ಟು ಸಂಸ್ಕೃತಿಯ ಆಚರಣೆಗಳನ್ನು ಪ್ರವೇಶಿಸಿ ವೈದಿಕೀಕರಿಸಿ ಅದನ್ನು ಕೋಮುವಾದಿಕರಣಕ್ಕೆ ಸಾಂಸ್ಕೃತಿಕ ರಾಜಕಾರಣಕ್ಕೆ ಬಳಸಿಕೊಂಡದ್ದು, ಪೇಜಾವರ ಸ್ವಾಮಿಜಿಯಂಥವರ ಬೆಂಬಲದಿಂದ 1960ರ ದಶಕದಲ್ಲೇ ಕೋಮುವಾದಿ ಪ್ರಯೋಗಶಾಲೆಯಾಗಿ ಈ ಪ್ರದೇಶದ ಆಯ್ಕೆ, ಇತ್ಯಾದಿ ಕಾರಣವಾಗಿರಬಹುದು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪರಾಭವ ಗಮನಿಸಿದರೆ ಕೋಮುವಾದೀಕರಣ ಜನಮಾನಸವನ್ನು ಪೂರ್ತಿಯಾಗಿ ಹಿಡಿದಿದೆ ಎಂದೂ ಹೇಳುವಂತಿಲ್ಲ.

ಈಗ ಕೆಂದ್ರ ಸರಕಾರದಲ್ಲಿ ಅಧಿಕಾರ ಹಿಡಿದಿರುವುದು, ವಿಧಾನಸಭೆ-ಲೋಕಸಭೆ ಎರಡರಲ್ಲೂ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿರುವುದು jananudi-2014-7ಕೆಲವು ಲಿಂಗಾಯತ ಮಠಗಳು ವಿಶ್ವ ಹಿಂದೂ ಪರಿಷತ್ತಿಗೆ ಬೆಂಬಲ ನೀಡುತ್ತಿರುವುದನ್ನು ಗಮನಿಸಿದರೆ, ಹೈದರಾಬಾದ್ ಕರ್ನಾಟಕ ಸೇರಿದಂತೆ ಯಾವ ಪ್ರದೇಶವೂ ಕೋಮುವಾದೀಕರಣದ ಅಪಾಯದಿಂದ ಮುಕ್ತವಾಗಿಲ್ಲ. ಧರ್ಮಸ್ಥಳ ಮತ್ತು ಆಳ್ವಾಸ್ ನುಡಿಸಿರಿ ಎರಡಕ್ಕೂ ರಾಜ್ಯದಾದ್ಯಂತದಿಂದ ಜನ-ಧನ ಹರಿದು ಬರುತ್ತಿರುವುದು ಕೋಮುವಾದೀಕರಣದ ಅಪಾಯ ಇಡೀ ರಾಜ್ಯಕ್ಕೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಜಾತಿ ಜತೆ ಸ್ವಲ್ಪ ಮಟ್ಟಿಗೆ ತಳುಕು ಹಾಕಿಕೊಂಡಿದ್ದ ‘ವೃತ್ತಿಕೌಶಲ್ಯ’ವನ್ನೂ ಬಂಡವಾಳಶಾಹಿ ನುಂಗಿ ಹಾಕಿರುವುದು; ಮಹಿಳಾ ವಿಮೋಚನಾ ಚಳುವಳಿ ಮೇಲು ವರ್ಗ-ಜಾತಿ ಮತ್ತು ಕೆಳವರ್ಗ-ಜಾತಿಯ ಮಹಿಳೆಯ ಸಮಸ್ಯೆಗಳ ವ್ಯತ್ಯಾಸ ಗುರುತಿಸದಿರುವುದು: ಜಾತಿ, ಧರ್ಮ, ಲಿಂಗ ಎಂಬ ಮೂರೂ ತಾರತಮ್ಯ ಎದುರಿಸುವುದರಿಂದ ಅತ್ಯಂತ ಹೆಚ್ಚು ದಮನಿತ ದಲಿತ ಮಹಿಳೆಯ ಮೇಲಾಗುವ ಸತತ ಭೀಕರ ದೌರ್ಜನ್ಯಗಳು ನಿರ್ಭಯ ಪ್ರಕರಣದಂತೆ ಪ್ರತಿಸ್ಪಂದನೆ ಪಡೆಯದಿರುವುದು; ಜಾತಿ ತಾರತಮ್ಯ-ಅಸ್ಪೃಶ್ಯತೆಗಳ ಸಾರ ಬದಲಾಗದೆ ರೂಪಗಳು ಮಾತ್ರ ಬದಲಾಗಿರುವುದು;- ಇತ್ಯಾದಿಗಳ ಬಗೆಗೂ ಪ್ರಸ್ತಾಪ ಬಂತು. ದೇವು ಪತ್ತಾರ್ ಮತ್ತು ಗೌರಿ ವಿಷಯ ಮಂಡನೆ ಮಾಡಿದರು. ಡಾ.ಎಚ್.ಎಸ್.ಅನುಪಮ ಅಧ್ಯಕ್ಷತೆ ವಹಿಸಿದ್ದರು.

ಮೊದಲ ದಿನ ಸಂಜೆ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿತ್ತು. ಆ ದಿನಗಳು ಖ್ಯಾತಿಯ ಸಿನಿಮಾ ನಟ ಚೇತನ್ ಅವರ ಅನುಭವಗಳ jananudi-2014-3ಬಗ್ಗೆ ಮಾತನಾಡಿದರು. ಪಿಚ್ಚಳ್ಳಿಯವರು ಅಧ್ಯಕ್ಷೀಯ ಮಾತುಗಳನ್ನು ಹೇಳಿದ್ದಲ್ಲದೆ ತತ್ವಪದಗಳನ್ನೂ ಹಾಡಿದರು. ಆಟ ಮಾಟ ಧಾರವಾಡ ತಂಡ ಗಿರೀಶ್ ಕಾರ್ನಾಡ್ ಅವರ ತಲೆದಂಡ ನಾಟಕ ಪ್ರದರ್ಶಿಸಿತು.

ಸಾಮಾಜಿಕ ಮಾಧ್ಯಮದ ಸವಾಲುಗಳು

ಸಾಮಾಜಿಕ ಮಾಧ್ಯಮ ಜನಪ್ರಿಯವಾಗುತ್ತಿರುವುದು ಮತ್ತು ಅದು ಕೋಮುವಾದಿ ವಿಷ ಹರಡಲು ಪ್ರಗತಿಪರರ ವಿರುದ್ಧ ನಿಂದನೆ, ಭಯೋತ್ಪಾದನೆಗೆ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ , “ಸಾಮಾಜಿಕ ಜಾಲತಾಣದ ಸವಾಲುಗಳು” ಬಗೆಗಿನ ಗೋಷ್ಟಿಯನ್ನೂ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಹಮ್ಮಿಕೊಂಡಿರುವ ಕಾಂಗ್ರೆಸ್-ಮುಕ್ತ ಭಾರತಕ್ಕಾಗಿ ಸಾಮಾಜಿಕ ಮಾಧ್ಯಮ ಯೋಜನೆ ಪ್ರಜಾಪ್ರಭುತ್ವ-ಮುಕ್ತ ಭಾರತದತ್ತ ಹೋಗುವ ಅಪಾಯ; ಪ್ರಗತಿಪರ ಸಂಘಟನೆಗಳು, ಚಳುವಳಿಗಳು ವ್ಯಕ್ತಿಗಳು ಈ ದಾಳಿಯನ್ನು ಸಂಘಟಿತವಾಗಿ ಎದುರಿಸುವ ಮತ್ತು ಸೆಕ್ಯುಲರ್ ಪ್ರಗತಿಪರ ಮೌಲ್ಯಗಳ ಪ್ರಸಾರಕ್ಕೆ ಬಳಸುವ ತುರ್ತು ಅಗತ್ಯತೆ; ‘ಮುಖ್ಯವಾಹಿನಿ’ ಮಾಧ್ಯಮ’ಗಳಲ್ಲಿ ಅಭಿವ್ಯಕ್ತಿ ವಂಚಿತರಿಗೆ ದಲಿತ ಇತ್ಯಾದಿ ಜನವಿಬಾಗಗಳಿಗೆ ಸಾಮಾಜಿಕ ಮಾಧ್ಯಮ ಒದಗಿಸುವ ಅವಕಾಶ; jananudi-2014-9ನೈಜ ಮತ್ತು ಹುಸಿ ಅಂಬೇಡ್ಕರ್ ವಾದಿಗಳನ್ನು ಗುರುತಿಸುವ ಸವಾಲು; ಅಕ್ಷರ-ಬದ್ಧತೆ (ಫೇಸ್ ಬುಕ್ ಕಲಿಗಳು) ಮತ್ತು ಚಳುವಳಿ-ಬದ್ಧತೆ ನಡುವಿನ ಕಂದಕ; ಫೇಸ್-ಬುಕ್ ಅಸ್ಪೃಶ್ಯತೆ; ಫೇಕ್ ಅಕೌಂಟುಗಳ, ಪ್ರೊಮೊಟೆಡ್ ಲೈಕುಗಳ, ‘ಕಲ್ಪಿತ ಜನಪ್ರಿಯತೆ’ಯಿಂದ ನೈಜ ಜನಪ್ರಿಯತೆಯ ಉತ್ಪಾದನೆ; ಅಸಹನೆ, ಹಿರೊಯಿಸಂಗಳನ್ನು ಹಿಗ್ಗಿಸಿ ಪ್ರಜಾಪ್ರಭುತ್ವ ಮತ್ತು ಸಾಂಘಿಕ ಶಕ್ತಿಯನ್ನು ಕುಗ್ಗಿಸುವ ಅಪಾಯ – ಇತ್ಯಾದಿಗಳನ್ನು ವಿಷಯ ಮಂಡನೆ ಮತ್ತು ಚರ್ಚೆ ಒಳಗೊಂಡಿತ್ತು. ಪ್ರಭಾ ಬೆಳವಂಗಲ, ನಾಗರಾಜ್ ಹೆತ್ತೂರ್, ಅರುಣ ಜೋಳದ ಕೂಡ್ಲಿಗಿ ವಿಷಯ ಮಂಡನೆ ಮಾಡಿದರು. ಶಶಿಧರ ಹೆಮ್ಮಾಡಿ ಗೋಷ್ಟಿಯ ನಿರ್ವಹಣೆ ಮಾಡಿದರು.

ಕರಾವಳಿ ತಲ್ಲಣಗಳು

‘ಕರಾವಳಿಯ ತಲ್ಲಣಗಳು’ ಗೋಷ್ಟಿ ಈಗ ಎಲ್ಲರನ್ನೂ ಕಾಡುತ್ತಿರುವ ಕೋಮುವಾದೀಕರಣ ಅಲ್ಲದೆ ಅಭಿವೃದ್ಧಿಯ ಪ್ರಶ್ನೆಗಳನ್ನೂ ಒಳಗೊಂಡಿತ್ತು. ಕರಾವಳಿಯ ಬದುಕಿನ ಆಧಾರವಾಗಿದ್ದ ಕೃಷಿಯ ನಾಶ; (ಅವೈದಿಕ) ದೇವರುಗಳ ‘ಮತಾಂತರ’ (ವೈದಿಕೀಕರಣ); ಪ್ರಮುಖ ಒಬಿಸಿ ಸಮುದಾಯಗಳ ವ್ಯವಸ್ಥಿತ ಕೋಮುವಾಧೀಕರಣ; ಹೊರರಾಜ್ಯ-ಹೊರದೇಶಗಳ ಮೇಲೆ ಆಧಾರಿತ ಆರ್ಥಿಕ; ಹೊರರಾಜ್ಯ-ಹೊರದೇಶಗಳ ಉದ್ಯೋಗ ಮಾರುಕಟ್ಟೆ jananudi-2014-8ಏರುಪೇರು ಆಧಾಗ ಸಹಾಯಕ್ಕೆ ಬಾರದ ಸರಕಾರಗಳು, ಸ್ಥಳೀಯ ಉದ್ಯೋಗ ಸೃಷ್ಟಿಸದ ಕೈಗಾರಿಕೆಗಳು;ಒಂದಕ್ಕೊಂದು ಪೂರಕವಾಗುವ ಎರಡೂ ಮೂಲಭೂತವಾದಗಳ ಅಪಾಯ;ಯಾವುದೇ ನಿಜವಾದ ಪ್ರಶ್ನೆಗಳನ್ನು ಎತ್ತಿಕೊಳ್ಳದೆ ಸಾಂಸ್ಕೃತಿಕ ರಾಜಕಾರಣದಿಂದಲೇ ರಾಜಕೀಯ ಬೆಂಬಲ ಗಳಿಸಿ ಉಳಿಸಿಕೊಳ್ಳುವ ಮತೀಯ ಶಕ್ತಿಗಳು; ನಿಜವಾದ ಪ್ರಶ್ನೆಗಳನ್ನು ಎತ್ತಿಕೊಂಡು ಹೋರಾಟ ಮಾಡಿಯೂ ರಾಜಕೀಯ ಬೆಂಬಲ ಗಳಿಸಿ ಉಳಿಸಿಕೊಳ್ಳುವಲ್ಲಿ ಸೋತಿರುವ ಪ್ರಗತಿಪರ ಶಕ್ತಿಗಳು; ಸೆಕ್ಯುಲರ್ ಸಾಂಸ್ಕೃತಿಕ ರಾಜಕಾರಣ ಮಾಡುವ ಅನಿವಾರ್ಯತೆ; ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಜೋಯ್ಡಾ (ಉತ್ತರ ಕನ್ನಡ)ದ ವಿಶಿಷ್ಟ ಸಮಸ್ಯೆಗಳು ದೂರದ ಬೆಂಗಳೂರಿಗೆ ಕೇಳಿಸದಿರುವುದು; – ಇತ್ಯಾದಿಗಳನ್ನು ವಿಷಯ ಮಂಡನೆ ಮತ್ತು ಚರ್ಚೆ ಒಳಗೊಂಡಿತ್ತು. ಡಾ. ಜಯಪ್ರಕಾಶ ಶೆಟ್ಟಿ, ಸುಬ್ರತೊ ಮಂಡಲ್ ಮತ್ತು ಮುನೀರ್ ಕಾಟಿಪಳ್ಳ ವಿಷಯ ಮಂಡನೆ ಮಾಡಿದರು. ವಿಷ್ಣು ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಜಾಗತೀಕರಣ ಮತ್ತು ಕೋಮುವಾದ ಪ್ರಮುಖ ಸಮಕಾಲೀನ ಸವಾಲು ಎಂದು jananudi-2014-1“ಸಮಕಾಲೀನ ಸವಾಲುಗಳು ಮತ್ತು ಐಕ್ಯತೆಯ ಅಗತ್ಯತೆ’ ಗೋಷ್ಟಿಯಲ್ಲಿ ಗುರುತಿಸಲಾಯಿತು. ಜಾಗತೀಕರಣದ ಸಣ್ಣ ಮತ್ತು ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳು ಕುಂಠಿತವಾಗುತ್ತಿರುವುದು ಅಥವಾ ಮುಚ್ಚಿ ಹೋಗುತ್ತಿರುವುದು, ಅದರಿಂದಾಗಿ ಮೀಸಲಾತಿಯ ಅವಕಾಶಗಳು ಇಲ್ಲವಾಗುತ್ತಿರುವುದು, ಖಾಸಗಿ ಉದ್ಯಮಗಳಲ್ಲಿ ಮೀಸಲಾತಿಯ ನೀತಿಯನ್ನು 200 ಉದ್ಯಮಗಳಲ್ಲಿ 198 ವಿರೋಧಿಸಿರುವುದು, ರಾಜ್ಯ ಸರಕಾರಗಳಿಗೆ ಖಾಸಗಿ ಕಂಪನಿಗಳ ‘ಬೆದರಿಕೆ’, ಬಿಜೆಪಿಯ ಕೋಮುವಾದಿ ಚುನಾವಣಾ ಪ್ರಚಾರ ಬಯಲು ಮಾಡದ ಮಾಧ್ಯಮಗಳು, ಬಿಜೆಪಿಯ ಪಿಆರ್ ಏಜೆನ್ಸಿಗಳಿಗೆ ಶರಣಾದ ಮಾಧ್ಯಮಗಳು, ದೇಶವನ್ನೆಲ್ಲಾ ಜೈಲು ಮಾಡಿದ ತುರ್ತು ಪರಿಸ್ಥಿತಿ ಮರುಕಳಿಸುವ ಮತ್ತು ಈ ಬಾರಿ ಜೈಲಿನ ಕೀಲಿ ಕೈ ಸ್ಥಳೀಯ ಕೋಮುವಾದಿ ಕಟುಕರ ಕೈಲಿ ಇರುವ ಅಪಾಯ – ಇತ್ಯಾದಿಗಳ ಬಗೆಗೆ ಪ್ರಸ್ತಾಪ ಬಂತು. ಡಾ. ಎಲ್.ಹನುಮಂತಯ್ಯಮತ್ತು ಡಿ.ಉಮಾಪತಿ ವಿಷಯ ಮಂಡನೆ ಮಾಡಿದರು. ದಿನೇಶ್ ಅಮಿನ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು.

ನಿಜವಾದ ಶತ್ರುಗಳ ಅನಾವರಣ ಮಾಡುವುದು ಜನನುಡಿಯ ಪ್ರಮುಖ ಕೆಲಸ

ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ದಿನೇಶ್ ಆರ್ಥಿಕ ಉದಾರೀಕರಣ ಮತ್ತು ಕೋಮುವಾದೀಕರಣದ ಬಗ್ಗೆ ಯುವಕರನ್ನು ಎಚ್ಚರಿಸುವುದು ಜನನುಡಿಯ ಪ್ರಮುಖ ಜವಾಬ್ದಾರಿ ಎಂದರು. ಕಳೆದ ಎರಡು ದಶಕಗಳಲ್ಲಿ ಅವರು ಈ ಜಗತ್ತಿಗೆ ಕಣ್ಣು ತೆರೆಯುತ್ತಿದ್ದಂತೆ ನಡೆದ ಈ ಪ್ರಮುಖ ವಿದ್ಯಮಾನಗಳ ಅದರಲ್ಲೂ jananudi-2014-4ರೂಪ ವಿನ್ಯಾಸಗಳಲ್ಲಿ ಬದಲಾಗುತ್ತಿರುವ ಕೋಮುವಾದ ಹಾಕುವ ಹಲವು ವೇಷಗಳ ಮುಖವಾಡಗಳನ್ನು ಬಯಲು ಮಾಡಬೇಕು. ಬಿಜೆಪಿಯ ಸಾಂಸ್ಕೃತಿಕ ರಾಜಕಾರಣದ ಅಪಾಯ ಮತ್ತು ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೆಕ್ಯುಲರ್ ಪ್ರಗತಿಪರರು ಸೋತಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು ಸೆಕ್ಯುಲರ್ ಸಾಂಸ್ಕೃತಿಕ ರಾಜಕಾರಣ ಮಾಡಬೇಕು. ಜನನುಡಿ ಒಂದು ಸೆಕ್ಯುಲರ್ ಮತ್ತು ಪ್ರಗತಿಪರ ಚಳುವಳಿಗಳ ಸಂಘಟನೆಗಳ ವ್ಯಕ್ತಿಗಳ ವೇದಿಕೆ. ಜನರ ನಿಜವಾದ ಶತ್ರುಗಳನ್ನು ಜನತೆಯ ಮುಂದೆಅನಾವರಣ ಮಾಡುವುದು ಜನನುಡಿಯ ಪ್ರಮುಖ ಕೆಲಸವಾಗಬೇಕು. ಇದಕ್ಕಾಗಿ ಇಲ್ಲಿರುವವರೆಲ್ಲ ತಮ್ಮ ಭಿನ್ನಾಭಿಪ್ರಾಯ ಮರೆತು ಐಕ್ಯತೆ ಸಾಧಿಸಬೇಕು. ನಮ್ಮ ದೇಶದ ವರ್ತಮಾನ ಅಧ್ಯಯನ ಮಾಡಬೇಕು. ಅದಕ್ಕಾಗಿ ಗಾಂಧಿ, ಅಂಬೇಡ್ಕರ್, ಲೊಹಿಯಾ, ಮಾರ್ಕ್ಸ್ ಓದಬೇಕು ಎಂದು ಜನನುಡಿಯ ಯುವ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಸಮಾರೋಪದಲ್ಲಿ ಕೆ.ನೀಲಾ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯ ಮಂಡಿಸಿ ಅದನ್ನು ಸರ್ವಾನಮತದಿಂದ ಅಂಗೀಕರಿಸಲಾಯಿತು. ಡಾ. ಜಿ. ರಾಮಕೃಷ್ಣ, ಪ್ರೊ. ಆರ್.ಕೆ.ಹುಡಗಿ ಮತ್ತು ಡಾ. ಮೀನಾಕ್ಷಿ ಬಾಳಿ ಮಾತನಾಡಿದರು.

ಜನನುಡಿ ಎರಡನೇ ಸಮಾವೇಶ ಎಲ್ಲಾ ಅಂಶಗಳಲ್ಲೂ ಪ್ರಗತಿ ಸಾಧಿಸಿದ್ದರೂ, ಕರ್ನಾಟಕವನ್ನು ಬಾಧಿಸುವ ಇನ್ನೂ ಹಲವು ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದಿತ್ತು. ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯವನ್ನು ಸರಕಾರಕ್ಕೆ ಕೊಟ್ಟು ಆ ಬಗ್ಗೆ ಫಾಲೋ-ಅಪ್ ಮಾಡಲಾಗುವುದಂತೆ. ಸಮಾವೇಶದ ಮುಂದುವರಿಕೆಯಾಗಿ ಇನ್ನೂಇಂತಹ ಕೆಲವು ನಿರ್ದಿಷ್ಟ ಕಾರ್ಯಾಚರಣೆಗಳ ಕಾರ್ಯಕ್ರಮ ಹಾಕಿಕೊಳ್ಳಬಹುದಿತ್ತು. ಚಳುವಳಿಗಳ ಐಕ್ಯತೆ ಮುಂದಿರುವ ಸವಾಲುಗಳ ಬಗ್ಗೆ ಒತ್ತು ಆ ಬಗೆಗಿನ ಗೋಷ್ಟಿಯಲ್ಲಿ ಸಾಲದಾಯಿತು.

***

ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಆಗ್ರಹಿಸುವ ನಿರ್ಣಯದ ಪ್ರಮುಖ ಅಂಶಗಳು:

  • ಕರಾವಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿ ಕೋಮುವಾದಿ ಶಕ್ತಿಗಳಿಗೆ ಬೆಂಬಲವಾಗಿ ನಿಂತವರನ್ನು ಕಡ್ಡಾಯವಾಗಿ ಕರಾವಳಿಯಿಂದ ಹೊರಹಾಕಬೇಕು
  • ಐಕ್ಯತೆ-ಸಾಮರಸ್ಯ ಬೆಸೆಯುವ ಕೆಲಸ ಚಟುವಟಿಕೆಗಳನ್ನು ಸರಕಾರ ವಿವಿಧ ಿಲಾಖೆಗಳ ಮೂಲಕ ಹಮ್ಮಿಕೊಳ್ಳಬೇಕು
  • ‘ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಯುವಜನರ ಮೇಲೆ ದಾಳಿ ನಡೆಸುವ ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು
  • ಕೋಮುವಾದವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಕೋಮುವಾದಿ ಹಿನ್ನೆಲೆ ಇರುವ ಸಂಘ ಸಂಸ್ಥೆ, ವ್ಯಕ್ತಿ–ಶಕ್ತಿಗಳು ನಡೆಸುವ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇ ಶಗಳಿಗೆ ಸರ್ಕಾರ ಅನುದಾನ ಕೊಡಬಾರದು ಮತ್ತು ಸರಕಾರದ ಪ್ರತಿನಿಧಿಗಳು ಭಾಗವಹಿಸಬಾರದು
  • ದೇವಮಾನವರು, ಮಠಾಧಿಪತಿಗಳು, ಧರ್ಮಾಧಿಕಾರಿಗಳು ನಡೆಸುವ ಸಾಹಿತ್ಯ ಸಮ್ಮೇಳನ, ಸರ್ವ ಧರ್ಮ ಸಮ್ಮೇಳನ, ಸಮಾಜ ಸೇವಾ ಚಟುವಟಿಕೆಗಳಿಗೆ ಸರ್ಕಾರ ಅನುದಾನ ನೀಡಬಾರದು

***

ಜನನುಡಿ-2014ರಲ್ಲಿ ಕೇಳಿ ಬಂದ ನುಡಿಗಳು

“ಬಡವರ ಬದುಕು ಉರಿಯಲ್ಲಿರುವಾಗ ‘ನುಡಿ’ ಎಂದರೆ ‘ಸಿರಿ’ ಎಂದು ಭಾವಿಸುವುದು ಶೋಷಣೆಯ ಘೋಷಣೆಯಾಗಿದೆ. ಬಂಡವಾಳಶಾಹಿಗಳು ತಮ್ಮ ಅವ್ಯವಹಾರಗಳ ಕಳಂಕ ಮುಚ್ಚಿ ಹಾಕಲು, ರಾಜಕೀಯ ಸ್ಥಾನಮಾನ-ಪ್ರತಿಷ್ಟೆ ಸಾಂಸ್ಥಿಕ ಬಲ ಗಟ್ಟಿಗೊಳಿಸಲು ಸಾಹಿತ್ಯ-ಸಾಂಸ್ಕೃತಿಕ ವಲಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ.” – ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ

***

“ಬಂಡವಾಳಶಾಹಿ ವಸ್ತುಗಳನ್ನು ಮಾತ್ರವಲ್ಲ ವಿಚಾರಗಳನ್ನೂ ಉತ್ಪಾದಿಸುತ್ತದೆ. ಕಾರ್ಪೊರೆಟ್ ವಲಯ ಸಾಹಿತ್ಯ ಮತ್ತು ಶಿಕ್ಷಣವನ್ನು ಹಿಡಿದಿಟ್ಟುಕೊಂಡಿದೆ. ಸಾಹಿತಿಗಳನ್ನು ‘ಮೈಲಿಗೆ’ ಮಾಡಲು ಸಾಹಿತ್ಯ ಉತ್ಸವ ನಡೆಯುತ್ತಿದೆ. ..ಇಸಂ ಚಳುವಳಿ ಬೇಡವೆನ್ನುವರು, ಎಡ-ಬಲ ಎರಡೂ ಅಲ್ಲ, ಮಧ್ಯಮ ಎನ್ನುವವರು ಬಲದ ಬಾಲವೇ ಆಗಿದ್ದಾರೆ.” – ಕೆ.ನೀಲಾ

***

“ಹಸಿವು, ಅಪಮಾನ, ಸಾಮಾಜಿಕ ತಾರತಮ್ಯ ಇರುವಾಗ ನುಡಿ ಸಿರಿ ಹೇಗಾಗುತ್ತದೆ?..1981ರಲ್ಲಿ ಪೇಜಾವರ ಸ್ವಾಮಿ ಮೀನಾಕ್ಷಿಪುರಂನಲ್ಲಿ ಇಸ್ಲಾಮಿಗೆ ಮತಾಂತರವಾದವರನ್ನು ವಾಪಾಸು ಕರೆಸುತ್ತೇನೆಂದು ಹೊರಟಾಗ, ಅವರನ್ನು ‘ಯಾವ ಜಾತಿಗೆ ಸೇರಿಸುತ್ತೀರಿ ? ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ.” -ಮಾವಳ್ಳಿ ಶಂಕರ್

***

“ಕರಾವಳಿಯಲ್ಲಿ ಇಂದು ಉಸಿರುಗಟ್ಟಿಸುವ ವಾತಾವರಣ ಇದೆ. ಇಲ್ಲಿ ಕಂಬಳಕ್ಕೆ ಹೇರಿದ ನಿಷೇಧ ಮಡೆಸ್ನಾನಕ್ಕೆ ಇಲ್ಲ. ಉಳಾಯಿಬೆಟ್ಟುವಿನ ಘಟನೆ ಸಂಬಂಧ ಪತ್ರಿಕೆಯೊಂದು 300 ಮುಸ್ಲಿಮರು ಆಕ್ರಮಣ ಮಾಡಿದರು ಎಂದು ವರದಿ ಮಾಡಿರುವುದು ಪತ್ರಕರ್ತರ ಮನಸ್ಸು ಎಷ್ಟು ಮಲಿನವಾಗಿದೆ ಎಂಬುದನ್ನು ತೋರಿಸುತ್ತದೆ. 60ವರ್ಷಗಳ ಹಿಂದೆ ಇಡೀ ಜಿಲ್ಲೆಯಲ್ಲಿ ನಾನೊಬ್ಬಳೇ ಮುಸ್ಲಿಂ ಹುಡುಗಿ ಶಾಲೆಗೆ ಹೋಗುತ್ತಿದ್ದಾಗ ಆಕ್ಷೇಪಿಸಿದವರಿಗೆ ನನ್ನ ತಂದೆ ದಿಟ್ಟ ಉತ್ತರ ಕೊಟ್ಟಿದ್ದರು. ಇಂದು ಶಾಲೆಗೆ ಹೋಗುವ ಮುಸ್ಲಿಂಹೆಣ್ಣು ಮಕ್ಕಳಿಗೆ ರಕ್ಷಣಾ ಪಡೆ ಬೇಡ. ನಾವಿದ್ದೇವೆ ಎಂದು ತಂದೆ-ತಾಯಿ ಹೇಳಲು ಸಾಧ್ಯವಾಗುತ್ತಿಲ್ಲ. ಇಂದು ಜನ ಹಿಂದೂಗಳಾಗಿ, ಮುಸ್ಲಿಮರಾಗಿ ಬದುಕುತ್ತಿದ್ದಾರೆ. ಮನುಷ್ಯರಾಗಿ ಬದುಕುತ್ತಿಲ್ಲ.” -ಸಾರಾ ಅಬೂಬಕ್ಕರ್

ಚಿತ್ರಕೃಪೆ: ಐವನ್ ಡಿಸಿಲ್ವ

ಅಭದ್ರತೆಯಿಂದ ಸೃಷ್ಟಿಯಾದ ಮುಸ್ಲಿಮ್ ಪ್ರತಿರೋಧ ಹಾಗೂ ಮುಸ್ಲಿಮ್ ಮೂಲಭೂತವಾದ


-ಇರ್ಷಾದ್ ಉಪ್ಪಿನಂಗಡಿ


 

ಮಂಗಳೂರಿನಲ್ಲಿ ಅಭಿಮತ ಸಂಘಟನೆಯ ವತಿಯಿಂದ ನಡೆದ ಜನನುಡಿ ಸಾಹಿತ್ಯ ಸಮಾವೇಶದಲ್ಲಿ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು “ಸಮಕಾಲಿನ ಸವಾಲುಗಳು ಹಾಗೂ ಐಕ್ಯತೆಯ ಅಗತ್ಯತೆ” ವಿಚಾರಗೋಷ್ಠಿಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ “ಬಹುಸಂಖ್ಯಾತರೆಂಬ ಅಹಮ್ಮಿನಿಂದ ಹಿಂದೂ ಕೋಮುವಾದ ಸೃಷ್ಟಿಯಾದರೆ ಮುಸ್ಲಿಮ್ dinesh-amin-umapathiಕೋಮುವಾದ ಅಭದ್ರತೆಯಿಂದ ಸೃಷ್ಟಿಯಾಗಿದೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ದಿನೇಶ್ ಅಮೀನ್ ಮಟ್ಟು ಅವರ ಈ ಅಭಿಪ್ರಾಯವನ್ನು ಕರಾವಳಿ ಭಾಗದ ಒಬ್ಬ ಮುಸಲ್ಮಾನನಾಗಿ, ಸಂಘಪರಿವಾರದ ಮಿತಿಮೀರಿದ ಕೋಮುವಾದಿಗಳಿಂದ ಕರಾವಳಿ ಭಾಗದ ಮುಸ್ಲಿಮರು ಎದುರಿಸಿದ ಹಾಗೂ ಎದುರಿಸುತ್ತಿರುವ ಅನ್ಯಾಯ, ಆತಂಕ, ಅಪಾಯದ ತಕ್ಕಮಟ್ಟಿನ ಅರಿವಿದ್ದುಕೊಂಡು ಹೇಳೋದಾದರೆ ದಿನೇಶ್ ಅಮೀನ್ ಮಟ್ಟು ಅವರ ಮಾತನ್ನು ಒಂದು ದೃಷ್ಟಿಕೋನದಲ್ಲಿ ನಾನು ಒಪ್ಪಿಕೊಳ್ಳುತ್ತೇನೆ. ಬಹುಸಂಖ್ಯಾತ ಸಂಘಪರಿವಾರದ ವ್ಯವಸ್ಥಿತ ಷಡ್ಯಂತರದ ಭಾಗವಾಗಿ ನಡೆದ ಬಾಬರೀ ಮಸೀದಿ ಧ್ವಂಸದ ನಂತರದ ದಿನಗಳಲ್ಲಿ ದೇಶದ ಅಲ್ಪಸಂಖ್ಯಾತರಾಗಿರುವ ಮುಸ್ಲಿಮ್ ಸಮುದಾಯದಲ್ಲಿ ಅಭದ್ರತಾ ಭಾವನೆ ಹೆಚ್ಚಾಗತೊಡಗಿದ್ದಂತೂ ನಿಜ. ಇದರ ನಂತರ 2002 ರಲ್ಲಿ ಗುಜರಾತ್ ಗಲಭೆಯಲ್ಲಿ ನಡೆದ ನರ ಹತ್ಯೆ, ಮುಸ್ಲಿಮರ ಮಾರಣ ಹೋಮ ದೇಶದ ಮುಸ್ಲಿಮ್ ಸಮಾಜವನ್ನು ಮತ್ತಷ್ಟು ಅಭದ್ರತೆ, ಆಂತಕಕ್ಕೆ ದೂಡಲು ಕಾರಣವಾಯಿತು.

ನಾನು ವಿದ್ಯಾರ್ಥಿಯಾಗಿದ್ದಾಗ ನಾನು ಸೇರಿದಂತೆ ನಮ್ಮ ಮುಸ್ಲಿಮ್ ಗೆಳೆಯರು ಕಾಲೇಜು ಕ್ಯಾಂಪಸ್ ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಭಯದಿಂದಲೇ ನಡೆದಾಡುತ್ತಿದ್ದೆವು. ಕೈಗೆ ಕೆಂಪು ನೂಲು ಕಟ್ಟಿ ಹಣೆಗೆ ಉದ್ದನೆಯ ನಾಮ ಹಾಕಿದವರನ್ನು ಕಂಡರೆ ನಮಗೆ ಭಯ ಆಗುತ್ತಿತ್ತು. ಆ ಸಂದರ್ಭಗಳಲ್ಲಿ ನಾವು ಮುಸ್ಲಿಮರಲ್ಲೂ ತಮ್ಮ ಆತ್ಮರಕ್ಷಣೆಗಾಗಿ ಯಾವುದಾದರೂ ಸಂಘಟನೆ ಬರಲಿ ಎಂದು ಮಾತನಾಡುಕೊಳ್ಳುತ್ತಿದ್ದೆವು. inidan-muslim-womanಇದು ನಾನೂ ಒಳಗೊಂಡತೆ ಕರಾವಳಿ ಭಾಗದ ಸಾಕಷ್ಟು ಯುವ ಮನಸ್ಸುಗಳ ನಿರೀಕ್ಷೆಯಾಗಿತ್ತು. ಈ ಆತಂಕದ ನಡುವೆಯೂ ಕರಾವಳಿ ಭಾಗದ ಬಹುತೇಕ ಯುವಕರು ಕೋಮುವಾದಿಗಳಾಗಿರಲಿಲ್ಲ. ಧಾರ್ಮಿಕತೆಯೂ ಈ ಯುವಕರಲ್ಲಿ ಇರಲಿಲ್ಲ. ಇವರೆಲ್ಲಾ ಮಸೀದಿಯ ಕಡೆ ಮುಖಮಾಡುತಿರುತ್ತಿದ್ದುದೇ ಅಪರೂಪಕ್ಕೊಮ್ಮೆ. ಸುಮಾರು ಹತ್ತು ವರ್ಷಗಳ ಹಿಂದೆ ಮಸೀದಿಗೆ ಪ್ರತಿನಿತ್ಯ ಆಜಾನ್ ಕರೆ ಆಗುವಾಗ ಯಾರಾದರೂ ಯುವಕ ಮಸೀದಿಗೆ ನಮಾಜ್ ಮಾಡಲೆಂದು ಹೋಗುತ್ತಿದ್ದರೆ ಆತನನ್ನು ಆತನ ಇತರ ಸ್ನೇಹಿತರು ಗೇಲಿ ಮಾಡುತ್ತಿದ್ದದ್ದನ್ನೂ ನಾನು ಕಣ್ಣಾರೆ ಕಂಡಿದ್ದೆ. ಆದರೆ ಬರಬರುತ್ತಾ ಈ ಚಿತ್ರಣ ಬದಲಾಗತೊಡಗಿದ್ದನ್ನು ಸೂಕ್ಷವಾಗಿ ಗಮನಿಸುತ್ತಾ ಹೋದಾಗ, ಮಸೀದಿಗೆ ಹೋಗುತ್ತಿರುವ ಆ ಯುವಕನನ್ನು ತಮಾಷೆ ಮಾಡುತ್ತಿದ್ದ ಆತನ ಮುಸ್ಲಿಮ್ ಸ್ನೇಹಿತರು ಪ್ರತಿನಿತ್ಯ ಬೆಳಿಗ್ಗೆ 5 ಘಂಟೆಗೆ ಎದ್ದು ಮಸೀದಿಯ ಮುಂಜಾನೆಯ ನಮಾಜ್‌ಗೆ ಸರದಿಯ ಮುಂದಿನ ಸಾಲಲ್ಲಿ ನಿಂತು ನಮಾಜ್ ಮಾಡತೊಡಗಿದರು. ದೇವರು, ಧರ್ಮ, ಆಚಾರ ವಿಚಾರ, ಮುಸ್ಲಿಮ್ ಸಮುದಾಯದ ಪರಿಸ್ಥಿತಿ ಇಂಥಹಾ ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳತೊಡಗಿದರು. ಯಾವತ್ತೂ ಗೆಳೆಯರು ಸೇರಿಕೊಂಡು ಇನ್ನಿತರ ವಿಚಾರಗಳ ಕುರಿತಾಗಿ ಹರಟೆ ಹೊಡೆಯುತ್ತಿದ್ದರೆ ನಂತರದ ದಿನಗಳಲ್ಲಿ ಅಲ್ಲಿ ಅನ್ಯಾಯಕ್ಕೆ ಪ್ರತಿಯಾಗಿ ಪ್ರತಿಕಾರ, ಅದಕ್ಕಾಗಿ ತಮ್ಮಲ್ಲಿ ಆಗಬೇಕಾದ ಧಾರ್ಮಿಕ ಬದಲಾವಣೆ ಈ ವಿಚಾರಗಳ ಕುರಿತಾಗಿ ಮಾತನಾಡಗೊಡಗಿದರು. ಇಂಥಹಾ ಬದಲಾವಣೆ ಕಾರಣ ಏನೆಂದು ಆತನಲ್ಲಿ ಕೇಳಿದರೆ ಆತನ ಈ ಬದಲಾವಣೆಗೆ ಕಾರಣ ಹಿಂದೂ ಕೋಮುವಾದದ ಹೊಡೆತ. ಸಂಘಪರಿವಾರದ ಆತಂಕ, ಭಯ. ಅಲ್ಪಸಂಖ್ಯಾತನಾಗಿ ತನ್ನ ಮೇಲೆ ಒಂದಲ್ಲಾ ಒಂದು ಕಾರಣದಿಂದ ನನ್ನ ಮೇಲೆ ಸಂಘಪರಿವಾರದಿಂದ ಅನ್ಯಾಯದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ದೌರ್ಜನ್ಯವಾಗಬಹುದು ಎಂಬ ಆತಂಕ ಹಾಗೂ ಅಭದ್ರತೆಯ ಭಾವನೆ. ಪರಿಣಾಮ ಇದು ಸಿಮಿ , ಕೆ.ಎಫ್.ಡಿ ಅಥವಾ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಂತಹಾ ಮುಸ್ಲಿಮ್ ಪ್ರತಿರೋಧಿ ಮೂಲಭೂತವಾದಿ ಗುಂಪುಗಳ ಹುಟ್ಟಿಗೆ ಕಾರಣವಾಗಿರುವುದು ಗಮನಾರ್ಹ ಅಂಶ.

ಇಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಹೇಳಿದಂತೆ ಅಭದ್ರತೆ ಮುಸ್ಲಿಮ್ ಸಮಾಜದಲ್ಲಿ ಮೂಲಭೂತವಾದದ ಹುಟ್ಟಿಗೆ ಕಾರಣವಾಯಿತು ನಿಜ. ಆದರೆ ಭಾರತದಲ್ಲಿ ಮುಸ್ಲಿಮ್ ಸಮಾಜದಲ್ಲಿರುವ ಅಭದ್ರತೆ ಕೇವಲ ಪ್ರತಿರೋಧದ ಮೂಲಭೂತವಾದದ ಹುಟ್ಟಿಗೆ ಕಾರಣವಾಯಿತೇ ಹೊರತು ಮುಸ್ಲಿಮ್ ಸಮಾಜದಲ್ಲಿರುವ ಅಘೋಷಿತ ಮೂಲಭೂತವಾದದ ಹುಟ್ಟಿಗೆ ಕಾರಣವಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವುದು jamat-mangaloreಕ್ರಿಯೆಗೆ ಪ್ರತಿಕೃಯೆ ಕೊಡುವಂತಹಾ ಮೂಲಭೂತವಾದಿಗಳಿಗಿಂತ ಅಪಾಯಕಾರಿಯಾಗಿರುವುದು ನೂತನವಾದಿಗಳ ರೂಪದಲ್ಲಿ ಮುಸ್ಲಿಮ್ ಸಮಾಜದಲ್ಲಿ ಪರಿಪೂರ್ಣ ಇಸ್ಲಾಮ್ ಜಾರಿಗೆ ತರಲು ಕೆಲಸ ಮಾಡುತ್ತಿರುವಂತಹಾ ಮೂಲಭೂತವಾದ. ಭಾರತದಲ್ಲಿ ಸಂಘಪರಿವಾರ ಇಲ್ಲಿಯ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಸುವಂತಹಾ ದಾಳಿಯನ್ನು ಎದುರಿಸಲು ಹುಟ್ಟಿದಂತಹಾ ಸಂಘಟನೆಗಳ ಪ್ರತಿರೋಧದ ಮನಸ್ಥಿತಿಗಿಂತ ಅಪಾಯಕಾರಿಯಾಗಿರುವುದು ಪೂರ್ಣ ಇಸ್ಲಾಮ್ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿರುವ, ಶರಿಯಾ ಕಾನೂನು ಪ್ರಪಂಚದಾಧ್ಯಂತ ಜಾರಿಯಾಗಬೇಕೆಂದು ಬಯಸುವ ಅಂತರಾಷ್ಷ್ರೀಯ ಮಟ್ಟದಲ್ಲಿ ಮುಸ್ಲಿಮ್ ಸಹೋದರತ್ವಕ್ಕೆ ಒತ್ತು ನೀಡುವ ವಹಾಬಿಸಂ, ಜಮಾತೇ ಇಸ್ಲಾಮೀ, ಅಹ್ಲೇ ಹದೀಸ್, ತಬ್ಲೀಗ್ ಜಮಾತ್ ನಂತಹಾ ಮೂಲಭೂತವಾದಿ ಮನಸ್ಥಿತಿ.

1950 ರಲ್ಲಿ ಹುಟ್ಟಿದ ಮೌದೂದಿ ಚಿಂತನೆಯ ಜಮಾತೇ ಇಸ್ಲಾಮಿ ಚಳುವಳಿಯನ್ನು ಸುಮಾರು ಹದಿನೈದು ವರ್ಷಗಳ ವರ್ಷಗಳ ಹಿಂದಿನ ವರೆಗೂ ಮುಸ್ಲಿಮ್ ಸಮಾಜ ಒಪ್ಪಿಕೊಂಡಿರಲಿಲ್ಲ. ಮುಸ್ಲಿಮ್ ಸಮಾಜದ ಜನರು ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದ ಧಾರ್ಮಿಕ ಆಚರಣೆಯಲ್ಲಿ ಪ್ರಾದೇಶಿಕ ಸಂಸ್ಕೃತಿಯ ಮಿಲನವಿತ್ತು. ಇಸ್ಲಾಮ್ ಹಾಗೂ ಇತರ ಧರ್ಮಗಳ ನಡುವಿನ ಸೌಹಾರ್ದದ ಕೊಂಡಿಯಂತಿದ್ದ ದರ್ಗಾ ಸಂಸ್ಕೃತಿಯ ಪರ ಒಲವು ಮುಸ್ಲಿಮ್ ಸಮಾಜದಲ್ಲಿ ಹೇರಳವಾಗಿತ್ತು. ತಮ್ಮದೇ ಆದ ರೀತಿಯಲ್ಲಿ ಅವರು ಧರ್ಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಮುಸ್ಲಿಮ್ ಸಮಾಜದಲ್ಲಿ ಬೇರೂರಲು ಪ್ರಯತ್ನಿಸುತ್ತಿದ್ದ ಜಮಾತೇ ಇಸ್ಲಾಮೀ ಮೂಲಭೂತವಾದಿಗಳು ಮುಸ್ಲಿಮ್ ಸಮಾಜಕ್ಕೆ ಅಸ್ಪೃಶ್ಯರಂತಿದ್ದರು. ಯಾಕೆಂದರೆ ಜಮಾತ್ ದರ್ಗಾಸಂಸ್ಕೃತಿಯನ್ನು ಒಪ್ಪುತ್ತಿರಲಿಲ್ಲ. ಕಾರಣ ಅದು ಪರಿಪೂರ್ಣ ಇಸ್ಲಾಮ್ ಮಾದರಿ ಅಲ್ಲ ಎಂಬ ವಾದವನ್ನು ಮಾಡುತ್ತಿದ್ದರು. ಹಿಂದೂ-ಮುಸ್ಲಿಮ್ ಜೊತೆಗೂಡುವಿಕೆಗೆ ಕಾರಣವಾದ ದರ್ಗಾ ಸಂಸ್ಕೃತಿಯ ಸೌಹಾರ್ದತೆ ನಿಜವಾದ ಸೌಹಾರ್ದತೆ ಅಲ್ಲ ಎಂಬುವುದಾಗಿದೆ ಜಮಾತ್ ವಾದ. ಭಾರತೀಯ ಮುಸ್ಲಿಮರು ಅನುಸರಿಸುತ್ತಾ ಬಂದಿರುವ ಧಾರ್ಮಿಕತೆಯನ್ನು ಜಮಾತ್ ಒಪ್ಪುತ್ತಿರಲಿಲ್ಲ. ಅದಕ್ಕೆ ಬದಲಾಗಿ ಮೌದೂದಿ ಸಿದ್ದಾಂತದ ಇಸ್ಲಾಮ್ ಮಾತ್ರ ನಿಜವಾದ ಇಸ್ಲಾಮ್ ಎಂಬ ವಾದ ಇವರದ್ದಾಗಿತ್ತು. ಇವರು ಶರೀಯಾ ಕಾನೂನೇ ಎಲ್ಲದಕ್ಕೂ ಪರಿಹಾರ ಎನ್ನುವವರು. ಪ್ರಪಂಚದಲ್ಲಿ ಸಂಪೂರ್ಣ ಪರಿಪೂರ್ಣ ಇಸ್ಲಾಮ್ ಧರ್ಮ ನೆಲೆಗೊಳ್ಳಬೇಕು ಎಂದು ಬಯಸುವವರು. ಸಂಘಪರಿವಾರ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಾ ಬಂದಂತಹಾ ಸಂಧರ್ಭದಲ್ಲೂ ಅದಕ್ಕೆ ಪ್ರತಿರೋಧದ ಬದಲಾಗಿ ಸಂಘಪರಿವಾರದ ಜನರಿಗೆ ಇಸ್ಲಾಮ್ ಭೋಧನೆ ಮಾಡಿ ಅವರನ್ನು ಮುಸ್ಲಿಮ್ ಆಗಿ jamatಪರಿವರ್ತನೆ ಮಾಡಬೇಕು ಎಂಬ ವಾದವನ್ನು ಮಂಡಿಸುವವರು. ಈ ರೀತಿಯ ಮೂಲಭೂತವಾದಿ ಹಿನ್ನೆಲೆ ಹೊಂದಿರುವ ಜಮಾತೇ ಇಸ್ಲಾಮೀ ಯಂತಹಾ ಸಂಘಟನೆ ಸಂಘಪರಿವಾರ ಸಾಮಾನ್ಯ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಿದಾಗ ಅವರ ಪರವಾಗಿ ನಿಲ್ಲುತ್ತಿರಲಿಲ್ಲ. ಜೊತೆಗೆ ಇಂಥಹಾ ಸಂದರ್ಭದಲ್ಲಿ ಅಸಂಘಟಿತ ಮುಸ್ಲಿಮರು ತೋರಿಸುತ್ತಿದ್ದ ಪ್ರತಿರೋಧವನ್ನೂ ಒಪ್ಪುತ್ತಿರಲಿಲ್ಲ. ಬದಲಾಗಿ ಸಂಘಪರಿವಾರದ ದೌರ್ಜನ್ಯಕ್ಕೆ ಪ್ರತಿರೋಧ ವ್ಯಕ್ತಪಡಿಸುವುದರ ಬದಲಾಗಿ ಮುಸ್ಲಿಮರು ಧಾರ್ಮಿಕವಾಗಿ ಪೂರ್ಣ ಪ್ರಮಾಣದ ಇಸ್ಲಾಮ್ ಒಪ್ಪಿಕೊಳ್ಳಬೇಕು ಎಂಬ ನಿಲುವನ್ನು ಹೊಂದಿದೆ.

ಇವರ ಕಾರ್ಯಕ್ರಮಗಳಿಗೆ ಪ್ರಖರ ಹಿಂದುತ್ವವಾದಿಗಳನ್ನೂ ಆಹ್ವಾನಿಸುತ್ತಾರೆ. ಪೇಜಾವರ ಸ್ವಾಮಿಯಂತಹಾ ಬ್ರಾಹ್ಮಣ್ಯತೆಯ ಪ್ರತಿಪಾದಕರನ್ನೂ ಆಹ್ವಾನಿಸುತ್ತಾರೆ. ದೇವರು, ಧರ್ಮದಲ್ಲಿ ಹೆಚ್ಚಾಗಿ ನಂಬಿಕೆ ಇಡದಂತಹಾ, ಹಿಂದುತ್ವ ವಿಚಾರಧಾರೆಗಳಿಗೆ ವಿರೋಧಿಯಾಗಿರುವಂತಹಾ ಪ್ರಗತಿಪರ ಚಿಂತಕರನ್ನೂ ಹಾಗೂ ಇನ್ನಿತರ ಎಡಪಂಥೀಯ ಚಿಂತಕರನ್ನೂ ಆಹ್ವಾನಿಸುತ್ತಾರೆ. ಇವರ ಈ ಆಹ್ವಾನದ ಹಿಂದಿನ ಉದ್ದೇಶ ಒಂದು ತಮ್ಮ ಮೌದೂದಿ ಸಿದ್ದಾಂತದ ಪ್ರಚಾರವಾದರೆ ಇನ್ನೊಂದೆಡೆಯಲ್ಲಿ ತಮ್ಮ ಮೂಲ ಸಿದ್ದಾಂತವನ್ನು ಮರೆಮಾಚುವುದಾಗಿದೆ. ಸ್ವತಹಃ ಶರಿಯಾ ಆಧಾರಿತ ಇಸ್ಲಾಮ್ ರಾಷ್ಟ್ರ ನಿರ್ಮಾಣದ ಒಳ ಅಜೆಂಡಾವನ್ನು ಮರೆಮಾಚಿ ಹಿಂದುತ್ವವಾದಿಗಳ ದಾಳಿಗೆ ಪ್ರತಿರೋಧಿಯಾಗಿ ಹುಟ್ಟಿಕೊಂಡಿರುವ ಮುಸ್ಲಿಮ್ ಸಂಘಟನೆಗಳನ್ನು ಮೂಲಭೂತವಾದಿ ಸಂಘಟನೆಗಳಂತ್ತೆ ಚಿತ್ರಿಸಿ devanurತಾನು ಮುಸ್ಲಿಮ್ ಸಮಾಜದ ಸಾಮಾಜಿಕ ಪರಿವರ್ತನೆಗೆ ಹುಟ್ಟಿಕೊಂಡ ಸಂಘಟನೆ ಎಂದು ಬಿಂಬಿಸಿ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದೆ. ಈ ಒಳಮರ್ಮವನ್ನು ಅರಿತ ಹಿರಿಯ ಸಾಹಿತಿ ದೇವನೂರು ಮಹಾದೇವ ’ಜಮಾತ್ ಮುಸ್ಲಿಮರ ಆರ್.ಎಸ್.ಎಸ್’ ಎಂದು ಕರೆದಿದ್ದರು. ಆರ್.ಎಸ್.ಎಸ್ ಸಂಘಟನೆ ಹೇಗೆ ಹಿಂದುತ್ವದ ಹೆಸರಲ್ಲಿ ಮನುಸ್ಮೃತಿ ಆಧಾರಿತ ಬ್ರಾಹ್ಮಣ್ಯ ಸಮಾಜವನ್ನು ಕಟ್ಟ ಹೊರಟಿದೆಯೋ ಅದೇ ರೀತಿಯಲ್ಲಿ ಜಮಾತ್ ನಂತಹಾ ಮೂಲಭೂತವಾದಿಗಳು ಮಾಡಹೊರಟಿರುವುದು ಅದನ್ನೇ. ಅದಕ್ಕಾಗಿ ಬಾಂಗ್ಲಾ ಮಾದರಿಯಲ್ಲಿ ಅಗತ್ಯ ಸಂಧರ್ಭದಲ್ಲಿ ಶಶ್ತ್ರಾಸ್ತವನ್ನೂ ಬಳಸಿಕೊಂಡು ತನ್ನ ಉದ್ದೇಶ ಈಡೇರಿಸುತ್ತದೆ ಎಂಬುವುದೇ ಅಪಾಯಕಾರಿ.

ಇದೇ ಮಾದರಿಯಲ್ಲಿ ಅಹ್ಲೇ ಅದೀಸ್, ಸಲಫೀ, ತಬ್ಲೀಗ್ ಜಮಾತ್ ನಂತಹಾ ಮೂಲಭೂತವಾದಿಗಳು ಕೆಲಸ ಮಾಡುತ್ತಿದ್ದಾರೆ. ನಾನು ಈ ಹಿಂದೆ ಬೆಂಗಳೂರಿನಲ್ಲಿದ್ದ ಸಂದರ್ಭದಲ್ಲಿ ನನ್ನ ಸ್ನೇಹಿತರಾದ ಸಲಫಿ ಮಿತ್ರರ ವರ್ತನೆಯನ್ನು ಗಮನಿಸುತ್ತಿದ್ದಾಗ ಅಲ್ಲಿ ನನಗೆ ಮತ್ತೊಂದು ಮೂಲಭೂತವಾದದ ಅರಿವಾಯಿತು. ಕರಾವಳಿಯ ಕೋಮುಗಲಭೆಗಳ ಕುರಿತಾಗಿ ನಾವು ಚರ್ಚೆ ಮಾಡುತ್ತಿದ್ದಾಗ ಅವರೆಲ್ಲಾ ಇಲ್ಲಿ ಹುಟ್ಟಿಕೊಂಡಿರುವ ಮುಸ್ಲಿಮ್ ಪ್ರತಿರೋಧವನ್ನು ಖಂಡಾತುಂಡವಾಗಿ ವಿರೋಧಿಸುತ್ತಿದ್ದರು. ಈ ರೀತಿಯ ಪ್ರತಿರೋಧವೇ ಪ್ರಪಂಚಕ್ಕೆ ಇಸ್ಲಾಮ್ ಪ್ರಚಾರಕ್ಕೆ ತಡೆಯೆಂಬುವುದು ಅವರ ವಾದವಾಗಿತ್ತು. ಆದರೆ ಇವರೂ ಪೂರ್ಣ ಪ್ರಮಾಣದ ಇಸ್ಲಾಮ್ ಜಾರಿಗೆ ಬರಬೇಕು ಎಂಬ ನಿಲುವುಳ್ಳವರಾಗಿದ್ದರು. ಪ್ರತಿಯೊಬ್ಬ ಮುಸ್ಲಿಮನಲ್ಲಿ jamate-mangaloreಅವರ ನಿಲುವಿನ ವಹಾಬಿ ಇಸ್ಲಾಮಿನ ಪ್ರತಿರೂಪ ಕಾಣಬೇಕೆಂದು ಬಯಸುವವರಾಗಿದ್ದರು. ತಮ್ಮ ಮುಂದೆ ಮಾತನಾಡಲು ಸಿಕ್ಕ ಹಿಂದೂ ಅಥವಾ ಇತರ ಧರ್ಮೀಯರಿಗೆ ಅಬ್ಬಬ್ಬಾ ಎನ್ನುವಷ್ಟು ವಹಾಬಿಸಂ ಪ್ರಭಾವಿತ ಇಸ್ಲಾಮ್ ಧರ್ಮದ ಕುರಿತಾಗಿ ಭೋಧನೆ ಮಾಡಿ ಅವರ ಮನಪರಿವರ್ತನೆ ಮಾಡಲು ಪ್ರಯತ್ನಿಸುವ ಇವರು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ತಮ್ಮ ತಮ್ಮ ಕಚೇರಿಗಳಲ್ಲಿ ನೀಡುತ್ತಿದ್ದ ಸಿಹಿತಿಂಡಿ ಪೊಟ್ಟಣಗಳನ್ನೂ ಸ್ವೀಕಾರ ಮಾಡುತ್ತಿರಲಿಲ್ಲ. ಕಾರಣ ಮೂರ್ತಿ ಪೂಜಾ ಆರಾಧಕರ ಹಬ್ಬಗಳಿಗೆ ಶುಭಾಶಯವನ್ನು ಕೋರುವುದು ಹಬ್ಬದ ಉಡುಗೊರೆಗಳನ್ನು ಪಡೆದುಕೊಳ್ಳುವುದು ಶಿರ್ಕ್ (ಅಧಾರ್ಮಿಕ) ಎಂಬ ಕಾರಣಕ್ಕಾಗಿ. ಇಷ್ಟೇ ಅಲ್ಲ ಈ ಮೂಲಭೂತವಾದಿಗಳು ದರ್ಗಾ ಸಂಸ್ಕತಿಯನ್ನು ಕಟುವಾಗಿ ವಿರೋಧಿಸುತ್ತಾರೆ. ಕಾರಣ ಅಲ್ಲಿ ಧಾರ್ಮಿಕ ಆಚರಣೆಯಲ್ಲಿ ಎಲ್ಲಾ ಧರ್ಮಗಳ ಸಹಭಾಗಿತ್ವ ಇದೆ ಹಾಗೂ ಇತರ ಧರ್ಮಗಳ ಧಾರ್ಮಿಕ ಆಚರಣೆಯ ಪ್ರಭಾವವಿದೆ ಎಂಬುವುದಕ್ಕಾಗಿ. ಈ ಕಾರಣದಿಂದಲೇ ಬಾಬಾ ಬುಡನ್ ಗಿರಿ ವಿವಾದದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ನಿಲುವಿಗೆ ಸಲಫಿವಾದಿಗಳ ಬೆಂಬಲವಾಗಿತ್ತು. ಈ ಮೂಲಭೂತವಾದಿಗಳ ಅನುಯಾಯಿಗಳ ಕೆಲವೊಂದು ನಿಲುವುಗಳನ್ನು ನೋಡಿದರೆ ನಿಮಗೂ ಆಶ್ವರ್ಯವಾಗಬಹುದು. ಸಾಮಾನ್ಯ ಮುಸ್ಲಿಮರನ್ನು ಇಸ್ಲಾಮ್ ಅನುಯಾಯಿಗಳು ಎಂದು ಈ ಮೂಲಭೂತವಾದಿಗಳು ಒಪ್ಪುವುದಿಲ್ಲ. ಇವರ ಪ್ರಕಾರ ಸಾಮಾನ್ಯ ರೀತಿಯಲ್ಲಿ ಧರ್ಮಾಚರಣೆ ಮಾಡುವ ಮುಸ್ಲಿಮರು ಕಾಫಿರ್ ಗಳೆಂದು ಅವರನ್ನು ಮರಳಿ ಪೂರ್ಣ ಇಸ್ಲಾಮ್ ಗೆ ಕರೆತರಬೇಕೆಂಬ ವಾದವನ್ನು ಮಾಡುತ್ತಾರೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಸಲಫಿ ಮುಖಂಡರೊಬ್ಬರು ಸಲಫಿ ವಿಚಾರಗಳ ಕುರಿತಾದ ಚರ್ಚೆಯ ಸಂದರ್ಭದಲ್ಲಿ ತನ್ನ ಹೆತ್ತವರನ್ನೇ ’ಕಾಫಿರ್ ಆಗಿ ಮೃತಪಟ್ಟರು’ ಎಂದು ಅಭಿಪ್ರಾಯಪಟ್ಟಿದ್ದರು. ಯಾಕೆಂದರೆ ಅವರು ಸಾಯುವ ಮೊದಲು ಪೂರ್ಣ ಇಸ್ಲಾಮ್ ಅಡಿಸ್ಥಾನದಲ್ಲಿ ಧರ್ಮಾಚರಣೆ ಮಾಡಿಲ್ಲ ಎಂಬ ಕಾರಣಕ್ಕಾಗಿ. ಇದರ ಜೊತೆಗೆ ಸಲಫಿ ವಾದಿಗಳು ಅಂತರಾಷ್ಟ್ರೀಯ ಮುಸ್ಲಿಮ್ ಸಹೋದರತೆಯಲ್ಲಿ ಒಲವನ್ನು ಹೊಂದಿದವರು ಬಹುತ್ವದ ಪ್ರತೀಕವಾಗಿರುವ ದರ್ಗಾಗಳನ್ನು ಒಡೆದು ಹಾಕಬೇಕೆಂದೂ ಹೇಳುವ ಇವರು ಸೂಫಿ ಚಿಂತನೆಯ ಕಟುವಿರೋಧಿಗಳು. PFI-eventಈ ಮೂಲಭೂತವಾದಿಗಳ ಆಗಮನದ ನಂತರವೇ ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಖಾ ಧರಿಸುವ ಮಾದರಿಯಲ್ಲಿ ಇನ್ನಷ್ಟು ಬಿಗಿ ಬದಲಾವಣೆಗಳು ಬಂದವು. ಮನೆಗಳಲ್ಲಿ ಟಿವಿ ನೋಡುವುದು ಕೂಡಾ ಧರ್ಮವಿರೋಧಿ ಎಂಬ ವಾದವನ್ನು ಮಂಡಿಸುವ ಸಲಫೀ ಅನುಯಾಯಿಗಳಿದ್ದಾರೆ. ಇವರಂತೆಯೇ ತಬ್ಲೀಗ್ ಜಮಾತ್ ವಹಾಬಿ ಚಳುವಳಿಗಳ ಜೊತೆಗೆ ಗುರುತಿಸಿಕೊಂಡಿರುವ ಇನ್ನಿತರ ಮೂಲಭೂತವಾದಿಗಳು ಹೆಡೆಯೆತ್ತದೆ ಮಲಗಿರುವ ಹಾವುಗಳು. ತಮ್ಮನ್ನು ನೂತನವಾದಿಗಳು, ಆಧುನಿಕವಾದಿಗಳಂತೆ ಬಿಂಬಿಸುತ್ತಾ ಸಮಾಜದಲ್ಲಿ ಸೌಮ್ಯವಾದಿಗಳಂತೆ, ಮುಸ್ಲಿಮ್ ಸಮಾಜದ ಸುಧಾರಕರೆಂದು ಬಿಂಬಿತರಾಗುತ್ತಿದ್ದಾರೆ. ಈ ಪೂರ್ಣ ಪ್ರಮಾಣದ ಇಸ್ಲಾಮ್ ವಹಾಬಿಸಂ ಇಸ್ಲಾಮ್ ಸಮಾಜದೊಳಗಡೆ ನುಸುಳಿಸಿದ ನಂತರವೇ ಇಸ್ಲಾಮ್ ರಾಷ್ಷ್ರಗಳಲ್ಲಿ ಅಂತರಾಷ್ಷ್ರೀಯ ಸಹೋದರತ್ವ ಅಂಜೆಡಾವನ್ನು ಹೊಂದಿರುವ ಇಸ್ಲಾಮಿಕ್ ಭಯೋತ್ಪಾದನೆ ಹುಟ್ಟಿಗೆ ಕಾರಣವಾಯಿತು.

ಬಹುಸಂಖ್ಯಾತ ಕೋಮುವಾದದ ದಾಳಿಯ ವಿರುದ್ಧ ಸಂಘಟಿತವಾದಂತಹಾ ಭಾರತೀಯ ಅಲ್ಪಸಂಖ್ಯಾತರ ಪ್ರತಿರೋಧ, ಇಸ್ರೇಲಿ ದೌರ್ಜನ್ಯದ ವಿರುದ್ಧ ನಡೆಯುತ್ತಿರುವ ಹಮಾಸ್ ಹೋರಾಟ, ಅಮೇರಿಕಾ ಸಾಮ್ರಾಜ್ಯಶಾಹಿಗಳ ಯುದ್ದ ನೀತಿಯ ವಿರುದ್ಧದ ಇರಾಕಿನ ಕೆಲ ಗುಂಪುಗಳ ಪ್ರತಿರೋಧಕ್ಕೂ, ಪಾಕಿಸ್ಥಾನ, ಬಾಂಗ್ಲಾದೇಶ, ಸಿರಿಯಾ ಸೇರಿದಂತೆ ಕೆಲವೊಂದು ಮುಸ್ಲಿಮ್ ರಾಷ್ಷ್ರಗಳಲ್ಲಿ ಶರಿಯಾ ಆಧಾರಿತ ರಾಷ್ಟ್ರ ನಿರ್ಮಾಣ ಆಗಬೇಕು, ದೇಶದ ಆಡಳಿತ ಧಾರ್ಮಿಕತೆಯ ನೆಲೆಗಟ್ಟಿನಲ್ಲೇ ಇರಬೇಕು ಎಂದು ಶಶ್ತ್ರಾಸ್ತ್ರ ಎತ್ತಿ ರಕ್ತ ಹರಿಸುವ ಮೂತಭೂತವಾದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಈ ರೀತಿಯ ಮೂಲಭೂತವಾದ ಪಾಕಿಸ್ತಾನದಂತಹಾ ಮುಸ್ಲಿಮ್ ರಾಷ್ಷ್ರದಲ್ಲಿ ಕಂದಮ್ಮಗಳನ್ನು ಕೊಂದು ರಕ್ತದೋಕುಳಿ ಹರಿಸಿದ ತಾಲಿಬಾನ್ ಭಯೋತ್ಪಾದಕರನ್ನು ಹುಟ್ಟುಹಾಕುತ್ತದೆ. ಈ ಮೂಲಭೂತವಾದ ಅಭದ್ರತೆಯಿಂದ ಸೃಷ್ಟಿಯಾದುದಲ್ಲ. ಬದಲಾಗಿ ಜನಸಾಮಾನ್ಯರನ್ನು Hindu Samajotsavಅಭದ್ರತೆಯತ್ತ ದೂಡುತ್ತಿದೆ. ಇನ್ನೂಂದು ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ ಸಂಘಪರಿವಾರದ ಪ್ರತಿರೋಧಕ್ಕಾಗಿ ಹುಟ್ಟಿಕೊಂಡಿರುವ ಸಂಘಟನೆಗಳಲ್ಲೂ ಈ ರೀತಿಯ ವಹಾಬಿ, ಜಮಾತ್, ಅಹ್ಲೇ ಹದೀಸ್ ಸಿದ್ದಾಂತವಾದಿಗಳ ಮೂಲಭೂತವಾದ ನುಸುಳಿಕೊಂಡು ಅಲ್ಲೂ ಪ್ರತಿರೋಧದ ಸ್ವರೂಪಗಳಲ್ಲಿ ಬದಲಾವಣೆಯಾಗುತ್ತಿರುವುದನ್ನು ನಾವು ಅಂದಾಜಿಸಬಹುದಾಗಿದೆ. ಇದು ಮತ್ತಷ್ಟು ಅಪಾಯಕಾರಿ. ಭಾರತದಲ್ಲಿ ಅಭದ್ರತೆಯಿಂದ ಹುಟ್ಟಿದ ಪ್ರತಿರೋಧಿ ಮೂಲಭೂತವಾದ ಸ್ವರೂಪದಲ್ಲೂ ಬದಲಾವಣೆಯಾಗುತ್ತಿದೆ. ಸಂಘಪರಿವಾರಕ್ಕೆ ಪ್ರತಿರೋಧಿಯಾಗಿ ಹುಟ್ಟಿದ ಮೂಲಭೂತವಾದಿ ಸಂಘಟನೆ ಎನ್.ಡಿ.ಎಫ್ ಸೇರಿದವರು ಎನ್ನಲಾದ ಕಾರ್ಯಕರ್ತರು ಕೇರಳದಲ್ಲಿ ಅಧ್ಯಾಪಕನೊಬ್ಬ ಪ್ರವಾದಿ ಮುಹಮ್ಮದ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕಾಗಿ ಕೈ ಕಡಿಯುತ್ತಾರೆ (ಇದು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ನೈಜ್ಯ ಆಶಯಕ್ಕೆ ವಿರೋಧವಾದ ಕ್ರಿಯೆ.) ಹೆಣ್ಮಕ್ಕಳ ಬುರ್ಖಾ ವಿಚಾರ ಬಂದಾಗಲೂ ಈ ಮನಸ್ಥಿತಿಯ ಜನರು ಪ್ರತಿಕ್ರಿಯಿಸುವ ರೀತಿ ಅಷ್ಟೇ ತೀವ್ರವಾಗಿರುತ್ತದೆ. ಇನ್ನು ಮುಸ್ಲಿಮ್ ಪ್ರಗತಿಪರ ಚಿಂತನೆಯ ಸಾಹಿತಿಗಳಾದ ತಸ್ಲೀಮಾ ನಸ್ರೀನಾ, ಸಾರಾ ಅಬೂಬಕ್ಕರ್, ಬೊಳುವಾರು ರಂತವರನ್ನು ಇಸ್ಲಾಮ್ ವಿರೋಧಿಗಳಂತ್ತೆ ಸಮುದಾಯದೊಳಗೆ ಚಿತ್ರಿಸುತ್ತಿರುವರು ಇದೇ ಮನಸ್ಥಿತಿಯ ಮೂಲಭೂತವಾದಿಗಳು.

ಸಂಘಪರಿವಾರಕ್ಕೆ ಪ್ರತಿರೋಧ ವ್ಯಕ್ತಪಡಿಸುವುದರ ಜೊತೆಗೆ ಧರ್ಮಾಂಧತೆ ಕೂಡಾ ಈ ಮೂಲಭೂತವಾದಿಗಳಲ್ಲಿ ತೀವ್ರಗೊಳ್ಳುತ್ತಿರುವುದಕ್ಕೆ ಅಭದ್ರತೆ ಕಾರಣವಲ್ಲ ಎಂಬುವುದಂತೂ ಸ್ಪಷ್ಟ. ಈ ನಿಟ್ಟಿನಲ್ಲಿ ಮುಸ್ಲಿಮ್ ಮೂಲಭೂತವಾದವನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ನಮ್ಮ ಮುಂದಿದೆ.

ಒಟ್ಟಿನಲ್ಲಿ ಭಾರತದಲ್ಲಿ ಜನಸಾಮಾನ್ಯರು ನಂಬಿಕೆ ಇಟ್ಟುಕೊಂಡಿರುವ ಇಸ್ಲಾಮ್ ಧರ್ಮ ಯಾವತ್ತೂ ಧರ್ಮಾಂಧತೆಯ ಹಾದಿಯನ್ನು ತುಳಿದಿಲ್ಲ. ತನ್ನ ಧರ್ಮವನ್ನು ಅನುಸರಿಸುವುದರ ಜೊತೆಗೆ ಇತರ ಧರ್ಮದ ಜೊತೆ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದೆ. ಇಂಥಹಾ ಸಂಧರ್ಭದಲ್ಲಿ ಸಂಘಪರಿವಾರದ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಅಟ್ಟಹಾಸವನ್ನು ಭಾರತೀಯ ಮುಸ್ಲಿಮರು ಹಾಗೂ ಇಲ್ಲಿಯ ಜ್ಯಾತ್ಯತೀತ ಶಕ್ತಿಗಳು ಒಟ್ಟಾಗಿ ಜ್ಯಾತ್ಯತೀತ ರೀತಿಯಲ್ಲಿ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಸಮಾಜ ಹಾಗೂ ಇತರ ಸಮಾಜದ ಪ್ರಗತಿಪರರು ಹಿಂದೂ ಕೋಮುವಾದವನ್ನು ಖಂಡಿಸುವುದರ ಜೊತೆಗೆ ಇಸ್ಲಾಮ್ ಸಮಾಜದೊಳಗೆ ಪರಿಪೂರ್ಣ ಇಸ್ಲಾಮ್ ಹೆಸರಲ್ಲಿ ನುಸುಳುತ್ತಿರುವ ಮೂಲಭೂತವಾದ ವಿರುದ್ಧ ಧ್ವನಿ ಎತ್ತಲೇಬೇಕಾಗ ಅಗತ್ಯ ಇದೆ.

ಬೆತ್ತಲಾದ ಮತಾಂಧ ಹಲ್ಲೆಕೋರ ‘ಮಲಿಕ್ ’


-ಇರ್ಷಾದ್ ಉಪ್ಪಿನಂಗಡಿ


 

 

‘ಮುಸ್ಲಿಮ್ ಮಹಿಳೆಯಾಗಿ ತುಂಡುಡುಗೆ ಧರಿಸಿದ್ದು ತಪ್ಪು’ ಎಂಬ ಕಾರಣಕ್ಕಾಗಿ ಬಾಲಿವುಡ್ ನಟಿ ಹಾಗೂ ರೂಪದರ್ಶಿ ಗೌಹರ್ ಖಾನ್ ಮೇಲೆ ಮುಂಬೈನಲ್ಲಿ ನಡೆಯುತ್ತಿದ್ದ ರಿಯಾಲಿಟಿ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಮ್ ಪ್ರೇಕ್ಷಕನೊಬ್ಬ ಹಲ್ಲೆ ನಡೆಸಿ ಮತಾಂಧತೆಯನ್ನು ಮೆರೆದಿರುವ ಘಟನೆ ಮುಸ್ಲಿಮ್ ಸಮಾಜದಲ್ಲಿ ಬುರ್ಖಾ ತೊಡದ ಮಹಿಳೆಯರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ‘ಧರ್ಮದಲ್ಲಿ ಯಾವುದೇ ಬಲವಂತವಿಲ್ಲ’ ಎಂಬುವುದನ್ನು ಜಗತ್ತಿಗೆ ಕಲಿಸಿಕೊಟ್ಟ Gauhar-slappedಧರ್ಮ ಇಸ್ಲಾಮ್. ಆ ಧರ್ಮದ ಹೆಸರಲ್ಲಿ ಮತಾಂಧ ಮುಹಮ್ಮದ್ ಅಕಿಲ್ ಮಲಿಕ್ ಮುಂಬೈನಲ್ಲಿ ಗೌಹಾರ್ ಖಾನ್ ಮೇಲೆ ‘ಅನ್ ಇಸ್ಲಾಮಿಕ್’ ಮಾದರಿಯ ವಸ್ತ್ರ ಧರಿಸಿದ್ದಾಳೆ ಎಂಬ ಕಾರಣವನ್ನು ಮುಂದಿಟ್ಟು ನಡೆಸಿರುವ ಹಲ್ಲೆ ಅಮಾನವೀಯ ಹಾಗೂ ಖಂಡನಾರ್ಹ. ಇಸ್ಲಾಮ್ ಧರ್ಮದಲ್ಲಿ ಮಹಿಳೆ ಪರ್ದಾ ಅಥವಾ ಬುರ್ಖಾ ಧರಿಸುವುದು ಒಂದು ಸಂಪ್ರದಾಯ. ಆದರೆ ಬುರ್ಖಾ ಧರಿಸುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಇಸ್ಲಾಮ್ ಧರ್ಮದಲ್ಲಿ ಕಡ್ಡಾಯ ವಸ್ತ್ರ ಸಂಹಿತೆಯನ್ನು ಪಾಲನೆ ಮಾಡುವ ಮಹಿಳೆಯರ ಜೊತೆ ಜೊತೆಗೆ ತಮಗಿಷ್ಟವಾದ ವಸ್ತ್ರವನ್ನು ಧರಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಕಷ್ಟು ಮುಸ್ಲಿಮ್ ಮಹಿಳೆಯರಿದ್ದಾರೆ. ಬಾಲಿವುಡ್ ನಲ್ಲೂ ಮಿಂಚಿದ ಮುಸ್ಲಿಮ್ ಮಹಿಳೆಯರು ನಮ್ಮ ಕಣ್ಣ ಮುಂದಿದ್ದಾರೆ. ಆದರೆ ಇಂದು ಬೆಳೆಯುತ್ತಿರುವ ಹಿಂದೂ, ಮುಸ್ಲಿಮ್ ಮೂಲಭೂತವಾದಿ ಸ್ಂಘಟನೆಗಳು ಗೌಹಾರ್ ಖಾನ್ ಅಥವಾ ದೀಪಿಕಾ ಪಡುಕೋಣೆಯಂತಹಾ ಸ್ತ್ರೀಯರು ಯಾವ ರೀತಿಯ ವಸ್ತ್ರ ಧರಿಸಬೇಕು, ಯಾವ ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ನಿರ್ಧರಿಸುವ ಗುತ್ತಿಗೆ ಪಡೆದುಕೊಂಡತಿದೆ.

ಇದು ಕೇವಲ ಗೌಹಾರ್ ಖಾನ್ ಒಬ್ಬಳದ್ದೇ ವ್ಯಥೆ ಅಲ್ಲ. ಈ ಮೂಲಭೂತವಾಧಿ ಮತಾಂಧರ ಅನೈತಿಕ ಪೊಲೀಸರ ಕಣ್ಣಿಗೆ ನಿತ್ಯ ಗುರಿಯಾಗುತ್ತಿರುವ ಇಂಥಹಾ ಸಾಕಷ್ಟು ಮಹಿಳೆಯರಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಮಂಗಳೂರಿನ ಮುಸ್ಲಿಮ್ ಮಹಿಳೆ ಉಮ್ಮು ರಹೀಫ್ ರಹೀನ ಎಂಬುವವರು ತಮ್ಮ ಪೋಟೋವನ್ನು ಹಾಕಿದ್ದ ಕಾರಣಕ್ಕಾಗಿ ಮುಸ್ಲಿಮ್ ಮೂಲಭೂತವಾಧಿಗಳು ಆ ಮಹಿಳೆಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಈ ರೀತಿ ಪರ ಪುರುಷರಿಗೆ ತಮ್ಮ ಮುಖವನ್ನು ತೋರಿಸಲು ಅವಕಾಶ ನೀಡುವುದು ಅಧಾರ್ಮಿಕ ಎಂದು ಅವರ ವಿರುದ್ಧ ಮುಗಿಬಿದ್ದಿದ್ದರು. ಹೀಗೆ ಮಹಿಳೆ ಪೇಸ್ ಬುಕ್ ನಲ್ಲಿ ತಮ್ಮ ಪೋಟೋ ಹಾಕಿದ್ದಾರೆ ಎಂಬ ಕಾರಣಕ್ಕಾಗಿ ಅವರ ಮೇಲೆ ಮುಗಿಬಿದ್ದ ಇದೇ ಮತಾಂಧ ಯುವಕರು ತಮ್ಮ ಪೇಸ್ ಬುಕ್ ಮುಖಪುಟದಲ್ಲಿ ವಿವಿಧ ಭಂಗಿಗಳಲ್ಲಿ ಹತ್ತಾರು ಪೋಟೋಗಳನ್ನು ಹಾಕಿ ನೂರಾರು ಲೈಕ್ ಗಳನ್ನು ಕಾಮೆಂಟ್ ಗಳನ್ನು ಪಡೆದುಕೊಂಡಿದ್ದರು. ಹಾಗೆ ನೋಡಿದ್ದಲ್ಲಿ ಇಸ್ಲಾಮ್ ಧರ್ಮದಲ್ಲಿ ಪೋಟೋ ತೆಗೆಯುವುದು ಹಾಗೂ ಅದನ್ನು ಇಟ್ಟುಕೊಳ್ಳುವುದೇ ನಿಷಿದ್ದ. ಮುಸ್ಲಿಮ್ ಹಿರಿಯ ಧಾರ್ಮಿಕ ಪಂಡಿತರು ಇತ್ತೀಚಿನವರೆಗೂ ಸಭೆ ಸಮಾರಂಭಗಳಲ್ಲಿ ತಮ್ಮ ಪೋಟೋಗಳನ್ನು ತೆಗೆಯೋದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇಂದು ಅಂತಹ ಧಾರ್ಮಿಕ ಕಟ್ಟಲೆಯಿಂದ ಮುಸ್ಲಿಮ್ ಪುರುಷರು ಬದಲಾಗಿದ್ದಾರೆ. ಆದರೆ ಇದೇ ರೀತಿಯಲ್ಲಿ ಮಹಿಳೆಯರು ಬದಲಾವಣೆ ಬಯಸೋದನ್ನು ಮಾತ್ರ ಈ ಮೂಲಭೂತವಾಧಿ ಮನಸ್ಸುಗಳು ಸಹಿಸೋದಿಲ್ಲ.

ಕೆಲ ತಿಂಗಳ ಹಿಂದೆ ನಾನೊಂದು ವರದಿ ಮಾಡಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯೊಂದರಲ್ಲಿ ಪುಟಾಣಿ ಮುಸ್ಲಿಮ್ ಹೆಣ್ಣು ಮಕ್ಕಳು ಶಾಲಾ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡಬಾರದು ಎಂದು ಗ್ರಾಮದ ಮದರಸಾದ ಧಾರ್ಮಿಕ ಮುಖ್ಯ ಶಿಕ್ಷಕರೊಬ್ಬರು ಫತ್ವಾ ( ಅಭಿಪ್ರಾಯ) ಹೊರಡಿಸಿದ್ದರು. muslim-womanಯಾಕೆ ಮಕ್ಕಳು ಡ್ಯಾನ್ಸ್ ಮಾಡಬಾರದು ಎಂದು ಆ ಧಾರ್ಮಿಕ ಶಿಕ್ಷಕರಲ್ಲಿ ಕೇಳಿದ್ರೆ, ಅದು ಅಶ್ಲೀಲ ಹಾಗೂ ಧರ್ಮ ವಿರೋಧಿ ಎಂದಿದ್ದರು. ಆದರೆ ಪಾಪ ಆ ಹೆಣ್ಮಕ್ಕಳಲ್ಲಿ ಈ ಕುರಿತು ವಿಚಾರಿಸಿದಾಗ ಅವರು ಆಸೆಗಣ್ಣಿನಿಂದ ನಮಗೆ ಡ್ಯಾನ್ಸ್ ಮಾಡೋದಕ್ಕೆ ಇಷ್ಟ ಇದೆ ಆದರೆ ಮದರಸಾದ ಧಾರ್ಮಿಕ ಶಿಕ್ಷಕರು ಬೇಡ ಅಂದಿದ್ದಾರೆ ಎಂದು ಕಣ್ಣೀರು ಹಾಕಿದ್ರು. ಇಲ್ಲೂ ಧಾರ್ಮಿಕ ಕಟ್ಟಲೆಗಳು ಕೇವಲ ಹೆಣ್ಣಿಗೆ ಮಾತ್ರ ಸೀಮಿತ. ಮಂಗಳೂರಿನ ಅನೇಕ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೂಡಾ ಬಹುತೇಕ ಹೆಣ್ಮಕ್ಕಳು 8, 9 ನೇ ತರಗತಿಯ ನಂತರ ಶಾಲಾ, ಕಾಲೇಜು ವಾರ್ಷಿಕೋತ್ಸವದಲ್ಲಿ ನೃತ್ಯ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆತ್ತವರು ಅವಕಾಶ ನೀಡುವುದಿಲ್ಲ. ಆದರೆ ಅದೇ ಶಾಲೆಗಳಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಮುಸ್ಲಿಮ್ ಹುಡುಗರು ಮುಂಚೂಣಿಯಲ್ಲಿರುತ್ತಾರೆ.

ಧರ್ಮ ಸಂಸ್ಕೃತಿಯ ಹೆಸರಲ್ಲಿ ಹೆಣ್ಣಿನ ನಿಯಂತ್ರಣ ಕೇವಲ ಮುಸ್ಲಿಮ್ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಮಾಡಬಾರದು ಎಂದು ಫತ್ವಾ ಹೊರಡಿಸಿದರೋ , ಮುಸ್ಲಿಮ್ ಮಹಿಳೆ ಪೇಸ್ ಬುಕ್ ನಲ್ಲಿ ಪೋಟೋ ಹಾಕಿದಕ್ಕಾಗಿ ಅವರ ಮೇಲೆ ಮುಗಿಬಿದ್ದರೋ ಅಲ್ಲೇ ಹಿಂದೂ ಯುವಕ –ಯುವತಿಯರು ಪಬ್ ಹೋದದಕ್ಕಾಗಿ ಪಬ್ ಮೇಲೆ ದಾಳಿ ನಡೆಸಿ ಅವರ ಮೇಲೆ ಹಲ್ಲೆ ನಡೆಸಲಾಯಿತು, ಹೋಂ ಸ್ಟೇನಲ್ಲಿ ಹುಟ್ಟುಹಬ್ಬದ ಆಚರಣೆ ಮಾಡಿದಕ್ಕಾಗಿ ಅವರ ಮೇಲೂ ಹಲ್ಲೆ ನಡೆಸಲಾಯಿತು.

“ಮಹಿಳೆ ಬುರ್ಖಾ ಧರಿಸಿ, ಲಜ್ಜೆಯಿಂದ ವರ್ತಿಸಿ ತನ್ನ ಪುರಷನ ಹಿಡಿತದೊಳಗೆ ಇರಬೇಕೇ ಹೊರತು, ಪೇಟೆಯ ವ್ಯಾಪಾರಿ, ಕಛೇರಿಯ ಗುಮಾಸ್ತೆ, ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಸೈನ್ಯದ ಸಿಪಾಯಿಯಾಗುವುದು ಆಕೆಯ ಸ್ಥಾನಮಾನವಲ್ಲ. ಬದಲಾಗಿ ಆಕೆಯ ನೈಜ್ಯ ಕಾರ್ಯಕ್ಷೇತ್ರ ಆಕೆಯ ಮನೆಯಾಗಿರಬೇಕು” ಎಂದು ಬಯಸುವ ಮತಾಂಧ ಮುಹಮ್ಮದ್ ಅಕಿಲ್  ಹಾಗೂ ಅದೇ ರೀತಿಯಲ್ಲಿ “ಮಹಿಳೆ ಅಚ್ಚ ಭಾರತೀಯ ನಾರಿಯ ರೀತಿಯಲ್ಲಿರಬೇಕು ಸ್ಕರ್ಟ್ ಪ್ಯಾಂಟು ಧರಿಸದಂತೆ ನಿಷೇಧ ಹೇರಬೇಕು. ಹೆಣ್ಣುಮಕ್ಕಳು ಶಾಲೆಯಲ್ಲಿ ಮೊಬೈಲ್ ಬಳಸದಂತೆ ನೋಡಬೇಕು. ಚಲನಚಿತ್ರಗಳಲ್ಲಿ ಮೈ ಕಾಣುವ ತುಂಡುಡುಗೆ ತೊಟ್ಟು ಐಟಮ್ ಹಾಡುಗಳಲ್ಲಿ ನರ್ತಿಸುವ ಮಹಿಳೆಯರೆಲ್ಲಾ ವೇಶ್ಯೆಯರು. ಇವರೆಲ್ಲಾ ಸಮಾಜವನ್ನು ಕುಲಗೆಡಿಸುತ್ತಾರೆ” ಎನ್ನುವ ಹಿಂದೂ ಮಹಾಸಭಾದ ಕಾರ್ಯದರ್ಶಿ ನವೀನ್ ತ್ಯಾಗಿ ಮನಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ಎರಡೂ ಮೂಲಭೂತವಾದ ಅನಾದಿ ಕಾಲದಿಂದಲೂ ಹೆಣ್ಣನ್ನು ಶೋಷಣೆ ಮಾಡಿಕೊಂಡೇ ಬಂದಿದೆ. ಆಕೆಯನ್ನು ಕೇವಲ ಮಕ್ಕಳನ್ನು ಹಡೆಯುವ ಯಂತ್ರದಂತೆ ಪರಿಗಣಿಸಿದೆ. ಧರ್ಮ, ಸಂಸ್ಕೃತಿಯ ಹೆಸರಲ್ಲಿ ಆಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡೇ ಬಂದಿದೆ. ಆದರೆ ಇಲ್ಲಿ ಆನೆ ನಡೆದದ್ದೇ ದಾರಿಯೆಂಬುವಂತೆ ಪುರುಷ ಮಾಡಿದ್ದೇ ಧರ್ಮ ಆಡಿದ್ದೇ ಸಂಸ್ಕೃತಿ. ಯಾವಾಗ ಪುರುಷ ಪ್ರಧಾನ ಸಂಸ್ಕೃತಿ, ಧರ್ಮದ ಹಿಡಿತದಿಂದ ತಪ್ಪಿಸಿಕೊಂಡು ಹೊರಪ್ರಪಂಚಕ್ಕೆ ಕಾಲಿಟ್ಟ ಹೆಣ್ಣು ತನಗಿಷ್ಟ ಬಂದ ಉಡುಗೆ ತೊಡುತ್ತಾಳೋ, ತನಗಿಷ್ಟವಾದ ಸಂಗಾತಿಯ ಜೊತೆ ಪಬ್ ಗಳಿಗೆ ಹೋಗುತ್ತಾಳೋ ತನ್ನ ಸುಂದರವಾದ ಪೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕುತ್ತಾಳೋ, ಧರ್ಮ, ಸಂಸ್ಕೃತಿಯನ್ನು ಬದಿಗಿಟ್ಟು ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಾಳೋ ಆವಾಗ ಅದನ್ನು ಸಹಿಸಿಕೊಳ್ಳಲಾಗದ ಮುಹಮ್ಮದ್ ಅಕಿಲ್ ಮಲಿಕ್, ನವೀನ್ ತ್ಯಾಗಿ ಯಂತಹಾ ಮನಸ್ಥಿತಿಯ ಜನ ಮತ್ತೆ ಧರ್ಮ, ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಆಕೆಯ ಮೇಲೆ ದೌರ್ಜನ್ಯ ಎಸಗುತ್ತಾರೆ.

ಧಾರ್ಮಿಕ ಚೌಕಟ್ಟನ್ನು ಪಾಲಿಸಿ, ತಗ್ಗಿ ಬಗ್ಗಿ ನಡೆದ ಹೆಣ್ಣಿನ ಮೇಲೆನೂ ಪುರುಷ ಕಾಮುಕ ಕಣ್ಣುಗಳು ಮುಗಿಬಿದ್ದು ಅತ್ಯಾಚಾರ ನಡೆಸಿ ದೌರ್ಜನ್ಯ ಎಸಗಿ ಅದರಲ್ಲೂ ಹೆಣ್ಣಿನಲ್ಲೇ20090124pub4 ತಪ್ಪನ್ನು ಹುಡುಕಿದ ಇದೇ ಪುರುಷ ಪ್ರಧಾನ ಸಮಾಜ ಹೆಣ್ಣಿನ ವಸ್ತ್ರ ಸಂಹಿತೆಯ ಹೆಸರಲ್ಲಿ ಹಲ್ಲೆ ನಡೆಸಿ ಇನ್ನೊಂದು ರೀತಿಯ ದೌರ್ಜನ್ಯ ಎಸಗುತ್ತಾ ಬಂದಿದೆ. ಒಂದು ಮೂಲಭೂತವಾದ ಪಬ್, ಹೋಂ ಸ್ಟೇಗಳಿಗೆ ಯುವತಿಯರು ಹೋಗಬಾರದು, ತುಂಡುಡುಗೆ ಧರಿಸಬಾರದು ಎಂಬ ಉಪದೇಶ ನೀಡಿ ಅದನ್ನು ಪಾಲಿಸದವರ ಮೇಲೆ ಮುಗಿಬಿದ್ದರೆ ಇಲ್ಲಿ ಇನ್ನೊಂದು ಮೂಲಭೂತವಾಧ ಹೆಣ್ಮಕ್ಕಳು ನೃತ್ಯ ಮಾಡಬಾರದು, ಕಡ್ಡಾಯ ಬುರ್ಖಾ ಧರಿಸಬೇಕು, ಅನ್ಯ ಪುರುಷನ ಜೊತೆ ಸುತ್ತಾಡಬಾರದು ಎಂಬ ಫರ್ಮಾನನ್ನು ಹೊರಡಿಸಿದೆ. ಅದನ್ನು ಯಾರು ಪಾಲಿಸುತ್ತಿಲ್ಲವೋ ಅಂಥಹವರ ಮೇಲೆ ಧರ್ಮ, ಸಂಸ್ಕೃತಿಯ ಹೆಸರಲ್ಲಿ ದೌರ್ಜನ್ಯಗಳು ನಡೆಯುತ್ತವೆ. ಸದ್ಯ ಇಲ್ಲಿ ನನಗೆ ಕಾಣುವ ಅಪಾಯವೆಂದರೆ ಇಂಥಹಾ ಹಲ್ಲೆಗಳು ಟ್ರೆಂಡ್ ಆಗಿ ಮಾರ್ಪಡುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹಾಗೂ ನಾಗರಿಕ ಸಮಾಜ ಇಂಥಹಾ ನೀಚ ಮತಾಂಧರ ಕೃತ್ಯದ ವಿರುದ್ಧ ಪ್ರತಿಭಟಿಸಬೇಕಾಗಿದೆ. ಇದರ ಜೊತೆ ಜೊತೆಗೆ ಹೇಗೆ ಬೀದಿ ಕಾಮುಕರಿಗೆ ಹರಿಯಾಣದ ಸಹೋದರಿಯರು ಥಳಿಸಿ ತಕ್ಕ ಪಾಠ ಕಲಿಸಿದರೋ ಅದೇ ರೀತಿಯಲ್ಲಿ  ವಸ್ತ್ರ ಸಂಹಿತೆ, ಆಚಾರ ವಿಚಾರ ಹೇಗಿರಬೇಕೆಂದು ನಿರ್ಧರಿಸುವ ಈ ಅನೈತಿಕ ಪೊಲೀಸರಿಗೆ ತಕ್ಕ ಪ್ರತ್ಯುತ್ತರ ನೀಡಲು ಸ್ತ್ರೀ ಸಮಾಜ ಮುಂದಾಗಬೇಕಾಗಿದೆ. ಇಲ್ಲದಿದ್ದಲ್ಲಿ ಇನ್ನಷ್ಟು ಗೌಹಾರ್ ಖಾನ್ ಗಳು ಮಹಮ್ಮದ್ ಮಲಿಕ್ ಹಾಗೂ ನವೀನ್ ತ್ಯಾಗಿಯಂತಹಾ ಸಂಸ್ಕೃತಿ ರಕ್ಷಕರಿಂದ ದೌರ್ಜನ್ಯಕ್ಕೊಳಗಾಗುತ್ತಲೇ ಇರಬೇಕಾದ ಪರಿಸ್ಥಿತಿ ಮುಂದುವರಿಯತ್ತದೆ.

ನೈತಿಕ ಪೊಲೀಸ್ ಗಿರಿ ವರ್ಸಸ್ ಕಿಸ್ ಆಫ್ ಲವ್ ಹಾಗೂ ಭಾರತೀಯ ಸಂಸ್ಕೃತಿ


-ಇರ್ಷಾದ್


 

ಕೇರಳದ ಕೊಚ್ಚಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಅನೈತಿಕ ಪೊಲೀಸ್ ಗಿರಿKissOfLove ಕೃತ್ಯವನ್ನು ವಿರೋಧಿಸಿ ನಡೆದ “ಕಿಸ್ ಆಫ್ ಲವ್” ಚಳುವಳಿ ನೈತಿಕ ಪೊಲೀಸ್ ಗಿರಿ ವಿರುದ್ಧದ ದೇಶ ವಿದೇಶದಾದ್ಯಂತ ಭಾರೀ ಗಮನ ಸೆಳೆದಂತಹಾ ವಿಶಿಷ್ಟ ಪ್ರತಿಭಟನೆ. ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದೇ ಭಾರತೀಯ “ಸಂಸ್ಕೃತಿ”ಗೆ ವಿರುದ್ಧ ಎಂದು ವಿರೋಧಿಸುವ ಮನೋಭಾವ ಹೊಂದಿರುವ ನಮ್ಮ ಸಮಾಜದಲ್ಲಿ ಹುಡುಗ-ಹುಡುಗಿ, ಹುಡುಗಿ-ಹುಡುಗಿ ಅಥವಾ ಹುಡುಗ-ಹುಡುಗ ಬಹಿರಂಗವಾಗಿ ಪರಸ್ಪರ ಚುಂಬನ ನೀಡುವ ಮೂಲಕ ನೈತಿಕ ಪೊಲೀಸ್ ಗಿರಿ ಕೃತ್ಯವನ್ನು ವಿರೋಧಿಸುವ ಕಿಸ್ಸಿಂಗ್ ಪ್ರತಿಭಟನೆ ಸಹಜವಾಗಿ “ಭಾರತೀಯ ಸಂಸ್ಕೃತಿ” ಪಾಲಕರ ಕೆಂಗಣ್ಣಿನ ವಿರೋಧಕ್ಕೆ ಕಾರಣವಾಗಿದೆ. ಕೇರಳದಲ್ಲಿ ಸ್ವತಹಃ ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ನಡೆಸಿದ್ದ ಹಿಂದೂಪರ ಸಂಘಟನೆಗಳ ಜೊತೆಗೆ ಮುಸ್ಲಿಮ್ ಸಂಘಟನೆಗಳು, ರಾಜಕೀಯ ಪಕ್ಷಗಳು, ಇನ್ನಿತರ “ಸಂಸ್ಕೃತಿ” ರಕ್ಷಕರು ಪರಸ್ಪರ ತಮ್ಮೊಳಗಿನ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ತಮ್ಮೆಲ್ಲರ ಸಮಾನ ಪುರೋಗಾಮಿ ಆಶಯಕ್ಕೆ ವಿರುದ್ದವಾದ “ಕಿಸ್ ಆಫ್ ಲವ್” ಹೋರಾಟದ ವಿರುದ್ದ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದವು.

ಕೇರಳದಲ್ಲಿ ನಡೆದ ಕಿಸ್ ಆಫ್ ಲವ್ ಪ್ರತಿಭಟನೆ ಭಾರೀ ಚರ್ಚೆಗೆ ಕಾರಣವಾಗುತ್ತಿರುವ ಬೆನ್ನಲ್ಲೇ 2008 ರಲ್ಲಿ ಮಂಗಳೂರಿನಲ್ಲಿ ಶ್ರೀ ರಾಮ ಸೇನೆ ನಡೆಸಿದ ಪಬ್ ದಾಳಿ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಪಿಂಕ್ ಚಡ್ಡಿ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ರಚಿಕಾ ತನೇಜಾ ಎಂಬ ಮಾನವ ಹಕ್ಕು ಹೋರಾಟಗಾರ್ತಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯನ್ನು ಖಂಡಿಸಿ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ನಡೆಸಲು ಮುಂದಾಗಿರುವುದು ಇದೀಗ ಕರ್ನಾಟಕದ ಸಂಸ್ಕೃತಿ ರಕ್ಷಕರನ್ನು ರೊಚ್ಚಿಗೆಬ್ಬಿಸಿಬಿಟ್ಟಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ “ಕಿಸ್ ಆಫ್ ಲವ್” ಹೋರಾಟಕ್ಕೆ ವ್ಯಕ್ತವಾಗುತ್ತಿರುವ ಆಕ್ರೋಶ ಭರಿತ ವಿರೋಧಗಳೇ ಇದಕ್ಕೆ ಸಾಕ್ಷಿಯಾಗಿವೆ.

ಕಿಸ್ ಆಫ್ ಲವ್ ಅಥವಾ ಸಾರ್ವಜನಿಕ ಚುಂಬನ ಪ್ರತಿಭಟನೆ ಎಷ್ಟರ ಮಟ್ಟಿಗೆ ಸರಿ ಅಥವಾ ನೈತಿಕ ಪೊಲೀಸ್ ಗಿರಿ ಹೋರಾಟಕ್ಕೆ ಪರಿಣಾಮಕಾರಿ ಎಂಬುವುದರ ಕುರಿತಾಗಿ ಚರ್ಚಿಸುವುದಕ್ಕಿಂತ ಮೊದಲಾಗಿ ಈ ರೀತಿಯ ಪ್ರತಿಭಟನೆಗೆ ಕಾರಣವಾದ ನೈತಿಕ ಪೊಲೀಸ್ ಗಿರಿ ಕೃತ್ಯಗಳನ್ನು ಮೊದಲು ಖಂಡಿಸಬೇಕಾಗಿದೆ. ಮಂಗಳೂರನ್ನು ರಾಷ್ಟ್ರೀಯ mangalore_moral1ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದು ಇಲ್ಲಿಯ “ಸುಸಂಸ್ಕೃತ” ಜನರು ಹುಡುಗ-ಹುಡುಗಿಯರು ಪಬ್ ನಲ್ಲಿ ಇದ್ದಂತಹಾ ಸಂಧರ್ಭದಲ್ಲಿ ದಾಳಿ ನಡೆಸಿ ಅವರ ಮೇಲೆ ಹಲ್ಲೆಗೈದು ಅಮಾನುಷ ಮೆರೆದ 2009 ರ ಪಬ್ ದಾಳಿ ಪ್ರಕರಣ. ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಸೇರಿಕೊಂಡು ಮಂಗಳೂರಿನ ಪಡೀಲ್ ಎಂಬಲ್ಲಿರುವ ಹೋಂ ಸ್ಟೇ ಒಂದರಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ನಡೆಸುತ್ತಿದ್ದ ವೇಳೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಯುವಕ-ಯುವತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ತಮ್ಮ ವಿಕೃತ ತೋರಿಸಿದ 2012 ಹೋಂ ಸ್ಟೇ ದಾಳಿ. ಇವೆರಡು ರಾಷ್ಟ್ರ-ಅಂತರಾಷ್ಷ್ರೀಯ ಮಟ್ಟದದಲ್ಲಿ ಗಮನ ಸೆಳೆದ ನೈತಿಕ ಪೊಲೀಸ್ ಗಿರಿ ಪ್ರಕರಣಗಳಾದರೆ ಕರಾವಳಿ ಜಿಲ್ಲೆಗಳಲ್ಲಿ ಹಿಂದೂ- ಮುಸ್ಲಿಮ್ ಉಭಯ ಕೋಮುಗಳ ನೈತಿಕ ಪೊಲೀಸರು ಧರ್ಮ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಭಿನ್ನ ಕೋಮಿನ ಯುವಕ-ಯುವತಿಯರು ಜೊತೆಗೆ ಮಾತನಾಡಿದಾಗ, ನಡೆದಾಡಿದಾಗ, ಐಸ್ ಕ್ರೀಂ ಪಾರ್ಲರ್ ನಲ್ಲಿ ಕುಳಿತಿದ್ದಾಗ, ಬೈಕಿನಲ್ಲಿ ಸುತ್ತಾಡುತ್ತಿರುವಾಗ, ಭಿನ್ನ ಕೋಮುಗಳ ವಿದ್ಯಾರ್ಥಿಗಳು ಕಾಲೇಜು ಪ್ರವಾಸ ಹೋಗುತ್ತಿರುವಾಗ ಅವರನ್ನು ಧರ್ಮ-ಸಂಸ್ಕೃತಿKissOfLove_3 ರಕ್ಷಣೆಯ ಹೆಸರಲ್ಲಿ ತಡೆದು ಹಲ್ಲೆ ನಡೆಸಿ ಧರ್ಮ ರಕ್ಷಣೆ ನಡೆಸಿದ ಹುಮ್ಮಸ್ಸಿನಲ್ಲಿ ಬೀಗುವ ನೈತಿಕ ಪೊಲೀಸ್ ಗಿರಿ ದಿನ ಲೆಕ್ಕದಲ್ಲಿ ನಡೆಯುತ್ತಿವೆ. ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ 17 ನೈತಿಕ ಪೊಲೀಸ್ ಗಿರಿ ಪ್ರಕರಣಗಳು ದಾಖಲಾದಲ್ಲಿ ಕಳೆದ ವರ್ಷ 11 ಪ್ರಕರಣಗಳು ದಾಖಲಾಗಿವೆ. ನೈತಿಕ ಪೊಲೀಸ್ ಗಿರಿ ಘಟನೆಗಳು ವಿರುದ್ಧ ಮಂಗಳೂರಿನ ಪ್ರಗತಿಪರ ಸಂಘಟನೆಗಳು ಹೋರಾಟಗಾರರು ಸಾಕಷ್ಟು ಪ್ರತಿಭಟನೆಗಳನ್ನು ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಇಷ್ಟಾದರೂ ಉಭಯ ಕೋಮುಗಳ ನೈತಿಕ ಪೊಲೀಸರ ಅಟ್ಟಹಾಸ ಕಡಿಮೆಯಾಗಿಲ್ಲ.

ನೈತಿಕ ಪೊಲೀಸರ ಕಾಟದಿಂದಾಗಿ ಕರಾವಳಿ ಭಾಗದಲ್ಲಿ ಭಿನ್ನ ಕೋಮಿನ ಯುವಕ-ಯುವತಿಯರು ಸಾರ್ವಜನಿಕವಾಗಿ ಪರಸ್ಪರ ಮಾತನಾಡಲೂ ಭಯಪಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸ್ಕೃತಿ ಹೆಸರಲ್ಲಿ ಪಬ್ ಗಳಲ್ಲೋ, ಹೋಂ ಸ್ಟೇಗಳಲ್ಲೋ, ಹೊಟೇಲ್ ಗಳಲ್ಲೋ, ಬೀಚ್ ಗಳಲ್ಲೋ ಎರಡು ಮನಸ್ಸಗಳ ನಡುವಿನ ಗೆಳೆತನ, ಭಾಂಧವ್ಯ, ಪ್ರೀತಿಯನ್ನು ಸಾರ್ವಜನಿಕವಾಗಿ ಕಸಿದು ಅವರನ್ನು ಹಿಂಸಿಸಿ ಅವಮಾನಪಡಿಸುವ ಮಾನವ ಸಂಬಂಧಗಳ ವಿರೋಧಿ ನೈತಿಕ ಪೊಲೀಸಗಿರಿ ವಿರೋಧಿಸಿ ಪ್ರೀತಿಯ ಪ್ರತೀಕವಾಗಿರುವ ಚುಂಬನವನ್ನು ಆಚರಿಸುವ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದರಲ್ಲಿ ತಪ್ಪೇನಿದೆ?

ಬೇಲೂರು –ಹಳೆಬೀಡು – ಅಜೆಂತಾ- ಎಲ್ಲೂರಗಳಲ್ಲಿರುವ ವಿವಿಧ ಭಂಗಿಯ ನಗ್ನ ವಿಗ್ರಹಗಳನ್ನು KissOfLove_1ಸಾರ್ವಜನಿಕರು ವೀಕ್ಷಣೆ ಮಾಡುವುದಿಲ್ಲವೇ? ಇಸ್ಲಾಮ್ ಧರ್ಮದದ ಸಂಪ್ರದಾಯದ ಪ್ರಕಾರ ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ ಕೈಕುಲುಕಿ, ಆಲಂಗಿಸಿ ಎರಡೂ ಕೆನ್ನೆಗಳಿಗೆ ಚುಂಬನ ಮಾಡುವ ಸಂಪ್ರದಾಯವಿಲ್ಲವೇ? ಇವುಗಳು ಸಾರ್ವಜನಿಕವಾಗಿ ನಡೆಯುವುದಿಲ್ಲವೇ? ಚುಂಬನವನ್ನು ಕೇವಲ ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟು ಅದನ್ನು ಪ್ರೀತಿಯ ಸಂಕೇತವಾಗಿ ನೋಡಬೇಕಾಗಿದೆ. ಇಲ್ಲಿ ಕೆಲವು ವ್ಯಕ್ತಿಗಳು ಪರಸ್ಪರ ಸಮ್ಮತಿಯಿಂದ ನೈತಿಕ ಪೊಲೀಸ್ ಗಿರಿಯಂತಹಾ ಪ್ರೇಮಿಗಳ ವಿರೋಧಿ ಹಾಗೂ ಕಾನೂನು ಬಾಹಿರ ಕೃತ್ಯವನ್ನು ವಿರೋಧಿಸಿ “ಕಿಸ್ ಆಫ್ ಲವ್” ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ಅವರ ಅಭಿವ್ಯಕ್ತಿ ಸ್ವಾತಂತ್ರ. ತಮ್ಮ ಪ್ರೀತಿಯ ಪ್ರತೀಕವಾದ ಚುಂಬನದ ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಪಡಿಸುವುದರಿಂದ ಯಾರಿಗೆ ಏನು ಸಮಸ್ಯೆ ? ಈ ರೀತಿಯ ಪ್ರತಿಭಟನೆ ಅದ್ಯಾಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟುಮಾಡುತ್ತದೆ ? ಅದ್ಯಾಗೆ ಸುಸಂಸ್ಕೃತರ ನೆಮ್ಮದಿಯನ್ನು ಕೆಡಿಸುತ್ತದೆ? ಬದಲಾಗಿ ಇಲ್ಲಿ ಜನಸಮಾನ್ಯರ, ಸುಸಂಸ್ಕೃತರ ನೆಮ್ಮದಿಯನ್ನು ಕೆಡಿಸುತ್ತಿರುವುದು ನೈತಿಕ ಪೊಲೀಸ್ ಗಿರಿ. ನೈತಿಕ ಪೊಲೀಸರ ಕಾಟದಿಂದಾಗಿ ಸಹೋದರ-ಸಹೋದರಿಯರೂ ಜೊತೆಜೊತೆಯಾಗಿ ಸುತ್ತಾಡಿದಾಗಲೂ ಅನುಮಾನದಿಂದ ಹಿಡಿದು ಹಲ್ಲೆ ನಡೆಸಿದ ಅನೇಕ ಘಟನೆಗಳೂ ಕರಾವಳಿ ಭಾಗದಲ್ಲಿ ನಡೆದಿವೆ.

ಇನ್ನು ಸಾರ್ವಜನಿಕವಾಗಿ ಈ ರೀತಿ ಚುಂಬನಗಳನ್ನು ಮಾಡುವುದರ ಮೂಲಕ ಪ್ರತಿಭಟಿಸುವುದು ಅತ್ಯಾಚಾರಗಳಿಗೆ ಎಡೆಮಾಡಿ ಕೊಡುತ್ತಿವೆ ಎಂಬ ವಾದದಲ್ಲಿ ಪುರುಷ ಪ್ರಧಾನ ಮನಸ್ಥಿತಿಯ ಅಂಶಗಳು ಅಡಕವಾಗಿವೆ. ಹೆಣ್ಣಿನ ದೇಹ ಪುರುಷನ ಆಸ್ತಿ ಎಂಬ ಪುರುಷ ಪ್ರಧಾನ ಮನಸ್ಥಿತಿ ಇಂದು ಅತ್ಯಾಚಾರಕ್ಕೆ ಪ್ರಮುಖವಾದ ಪ್ರೇರಣೆ. ಹೆಣ್ಣಿನ ದೇಹ ಪುರುಷನ ಹಕ್ಕು ಎಂಬ ಮನಸ್ಥಿತಿಗೆ ವಿರುದ್ಧವಾಗಿ ಹೆಣ್ಣು- ಗಂಡು ಪರಸ್ಪರ ಸಮಾನರು ಎಂಬ ಪರಿಕಲ್ಪನೆ ಹಾಗೂ ಪರಸ್ಪರರ ನಡುವಿನ ಪ್ರೀತಿ ವಾತ್ಸಲ್ಯದ ಸಂಕೇತವಾಗಿದೆ “ಕಿಸ್ ಆಫ್ ಲವ್”. ಸಾರ್ವಜನಿಕವಾಗಿ ಪ್ರತಿಭಟನೆಯ ಸಂಕೇತವಾಗಿ ಗಂಡು ಹೆಣ್ಣು ಚುಂಬಿಸುವುದು ಅತ್ಯಾಚಾರಕ್ಕೆ ಪ್ರೇರಣೆಯೆಂದಾದರೆ ದೇಶದಾದ್ಯಂತ ಅನೇಕ ಹಳ್ಳಿಗಳಲ್ಲಿ ಬಯಲು ಶೌಚಾಲಯಗಳಲ್ಲಿ ಮಹಿಳೆಯರು ಶೌಚ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ನಿಮಗೆ ಅಸಹ್ಯ ಹುಟ್ಟುದಿಲ್ಲವೇ? ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದ ಬದೌನಲ್ಲಿ ಬಯಲು ಶೌಚಾಲಯಕ್ಕೆ ಶೌಚ ಮಾಡಲು ಹೋದ ಇಬ್ಬರುgollarahatti ಯುವತಿಯರ ಮೇಲೆ ಅತ್ಯಾಚಾರ ನಡೆದಿತ್ತು ಎಂಬುವುದು ಗಮನಾರ್ಹ ಸಂಗತಿ. ಇನ್ನೊಂದೆಡೆಯಲ್ಲಿ ಸಾರ್ವಜನಿಕ ಚುಂಬನದಂತಹಾ ವಿದೇಶಿ ಆಚರಣೆಗಳಿಂದ ನಮ್ಮ ಸಂಸ್ಕೃತಿ ನಾಶ ಆಗುತ್ತದೆ ಎಂದು ಬೊಬ್ಬಿಡುವ ಸಂಸ್ಕೃತಿ ರಕ್ಷಕರು, ನಮ್ಮ ಸಮಾಜದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ದತಿಗಳಾದ ಅಜಲು ಪದ್ದತಿ, ದೇವದಾಸಿ ಪದ್ದತಿ, ಮಹಿಳೆಯರು ಅರೆ ಬೆತ್ತಲೆ ಸೇವೆ ನಡೆಸುವಂತಹಾ ಪದ್ದತಿ, ದಲಿತರನ್ನು ಪರಸ್ಪದ ಹೊಡೆದಾಡಿಸುವಂತಹಾ ಅಂಕ- ಅಂಡೋಡಿ ಪದ್ದತಿ, ಬಾಣಂತಿ ಹಾಗೂ ಮುಟ್ಟಾದಂತಹಾ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗಿಡುವ ಪದ್ದತಿ, ದಲಿತರಿಗೆ, ಮಹಿಳೆಯರಿಗೆ ದೇವಸ್ಥಾನ, ಮಸೀದಿ ಪ್ರವೇಶ ನೀಡದಂತಹಾ ಪದ್ದತಿ ಹಾಗೂ ಧೋರಣೆಗಳು, ಮೊಹರಂ ಆಚರಣೆಯ ಸಂಧರ್ಭದಲ್ಲಿ ಮೈಯಲ್ಲಿ ರಕ್ತ ಬರುವಂತೆ ಹೊಡೆದುಕೊಳ್ಳುವ ಸ್ವಯಂ ದಂಡನಾ ಪದ್ದತಿ, ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಇತರ ಸಮುದಾಯದವರನ್ನು ಉರುಳಾಡಿಸುವಂತಹಾ ಮಡೆ ಮಡೆ ಸ್ನಾನ ಪದ್ದತಿ, ಧರ್ಮ ಸಂಸ್ಕೃತಿಯ ಹೆಸರಲ್ಲಿ ಮಹಿಳೆಯರನ್ನು ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆಗೆ, ಧಾರ್ಮಿಕಟ್ಟುಪಾಡುಗಳಿಗೆ ಒಳಪಡಿಸಿ ಅವಮಾನಿಸುವಂತಹಾ ಪದ್ದತಿಗಳು, ಆಚರಣೆಗಳು, ಧೋರಣೆಗಳು ನಮ್ಮ ಸುಸಂಸ್ಕೃತ ಸಂಸ್ಕೃತಿಯ ಪ್ರತೀಕವೇ?

ನೈತಿಕ ಪೊಲೀಸ್ ಗಿರಿಯ ವಿರುದ್ಧವಾಗಿ ಕರ್ನಾಟಕದಲ್ಲಿ ನಡೆಸಲು ಉದ್ದೇಶಿಸಿರುವ ಕಿಸ್ ಆಫ್ ಲವ್ ಪ್ರತಿಭಟನೆಯನ್ನು ತಡೆಯಲು ಮುಂದಾಗಿರುವ ಹಿಂದೂ ಪರ ಸಂಘಟನೆಗಳಿಗೆ ತಮ್ಮ ಸಂಘಪರಿವಾರದ ಹಿನ್ನೆಲೆಯಿಂದ ಬಂದಿರುವ ಬಿಜೆಪಿ ಪಕ್ಷದ ಮಾಜಿ ಸಚಿವರೊಬ್ಬರು ರಾಜ್ಯದಲ್ಲಿ ಪ್ರಸಿದ್ದಿಯಾಗಿರುವುದೇ ಕಿಸ್ಸಿಂಗ್ ಪ್ರಕರಣದಿಂದ ಎಂಬುದು ತಿಳಿದಿಲ್ಲವೇ!?. ರಾಜ್ಯದ ರಾಜಕೀಯ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಬರದ ಕುರಿತಾಗಿ ಚರ್ಚೆ ನಡೆಯುತ್ತಿದ್ದ ಸಂಧರ್ಭದಲ್ಲಿ ಹೆಣ್ಣು- ಗಂಡಿನ ಕಾಮಕೇಲಿಯನ್ನು ನೋಡುತ್ತಾ ಆನಂದಪಡುತ್ತಿದ್ದಾಗ ನಮ್ಮ ಸಂಸ್ಕೃತಿ ರಕ್ಷಣೆಗೆ ನೀವೇಕೆ ಮುಂದಾಗಲಿಲ್ಲ ? ಇದೀಗ ನೈತಿಕ ಪೊಲೀಸ್ ಗಿರಿಯನ್ನು ಸಹಿಸಲಾಗದೆ ಸಾರ್ವಜನಿಕ ಚುಂಬನದ ಮೂಲಕ ತಮ್ಮ ಪ್ರತಿಭಟನೆಯನ್ನು ಅಭಿವ್ಯಕ್ತಿಪಡಿಸುವಾಗ ಅದನ್ನು ಸಂಸ್ಕೃತಿ ರಕ್ಷಣೆ ಹೆಸರಲ್ಲಿ ತಡೆಯುವ ನೈತಿಕತೆ ನಿಮಗೆಲ್ಲಿದೆ?. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಪಬ್ ದಾಳಿ ರೂವಾರಿ ಹಾಗೂ ಹೆಣ್ಣು-ಗಂಡಿನ ನಡುವಿನ ಪ್ರೀತಿ – ಪ್ರೇಮವನ್ನು ಲವ್ ಜಿಹಾದ್ ಹೆಸರಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯದಲ್ಲಿ ನಿರತರಾಗಿರುವ ಶ್ರೀ ರಾಮ ಸೇನೆ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರ “ಕಿಸ್ ಆಫ್ ಲವ್” ವಿರೋಧಿ ನೀತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲ ಮುಸ್ಲಿಮ್ ಮೂಲಭೂತವಾದಿ ಯುವಕರೂ ಬೆಂಬಲವಾಗಿ ನಿಂತಿರುವುದು ಕೇರಳ ಮಾದರಿಯಲ್ಲಿ ಕರ್ನಾಟದಲ್ಲೂ ಉಭಯ-ಧರ್ಮಗಳ ಮೂಲಭೂತವಾದಿಗಳು ನೈತಿಕ ಪೊಲೀಸ್ ಗಿರಿಯ ವಿರುದ್ಧದ “ಕಿಸ್ ಆಫ್ ಲವ್” ವಿರೋಧಿಸಲು ಜೊತೆಯಾಗಿದ್ದಾರೆ.

ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಲು “ಕಿಸ್ ಆಫ್ ಲವ್” ಪ್ರತಿಭಟನೆಯ ಮಾರ್ಗದ ಆಯ್ಕೆ ಕುರಿತಾಗಿ ನೈತಿಕ ಪೊಲೀಸ್ ಗಿರಿ ವಿರೋಧಿ ಹೋರಾಟಗಾರರಲ್ಲೂ ಭಿನ್ನಾಭಿಪ್ರಾಯವಿದೆ. ನೈತಿಕ ಪೊಲೀಸರ ಸ್ವರ್ಗವಾದ ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ವಿರುದ್ಧ ಜನಪರ ಎಡ ಹಾಗೂ ಪ್ರಗತಿಪರ ಸಂಘಟನೆಗಳಿಂದ ಸಾಕಷ್ಟು ಹೋರಾಟಗಳು ನಡೆದಿದೆ ಹಾಗೂ ನಡೆಯುತ್ತಾ ಬರುತ್ತಿವೆ. ಡಿ.ವೈ.ಎಫ್ .ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ಸೇರಿದಂತೆ ಅನೇಕ ಹೋರಾಟಗಾರರು ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯ ವಿರುದ್ಧ ಸಾಕಷ್ಟು ಜನಪರ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಮಂಗಳೂರಿನಲ್ಲಿ 2012 ರಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ಹೋಂಸ್ಟೇ ದಾಳಿ ನೈತಿಕ ಪೊಲೀಸ್ ಗಿರಿಯನ್ನು ವರದಿ ಮಾಡಿದಕ್ಕಾಗಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಯಿತು. ಆದ್ದರಿಂದ ನೈತಿಕ ಪೊಲೀಸ್ ಗಿರಿಯ ವಿರುದ್ಧ ರಾಜ್ಯದ ಅನೇಕ ಕಡೆಗಳಲ್ಲಿ ಚಳುವಳಿಯ ರೂಪದಲ್ಲಿ ನಡೆದಂತಹಾ ಹೋರಾಟದಲ್ಲಿ “ಕಿಸ್ ಆಫ್ ಲವ್” ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಶ್ರೀಮಂತ ವರ್ಗದ ಯುವಸಮೂಹದ ಪಾತ್ರ ನಗಣ್ಯ ಎಂಬುವುದು ಗಮನಾರ್ಹ ಅಂಶ. ಚುಂಬನ ಪ್ರತಿರೋಧ ಚಳುವಳಿಯ ಸಂಘಟಕರು, ಭಾಗಿಗಳು ಮುಕ್ತ ಮಾರುಕಟ್ಟೆಯ ಫಲಾನುಭವಿಗಳು, ದಿಢೀರ್ ಶ್ರೀಮಂತಿಕೆ ಪಡೆದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ತಮ್ಮ ಮುಕ್ತ ಸ್ವಾತಂತ್ರಕ್ಕೆ ಅಡ್ಡಿಯಾದಾಗ ಆತಂಕಿತರಾಗಿ ಅವರು ಪ್ರತಿಭಟಿಸುವುದು ಸಹಜ. ಆದರೆ ಚುಂಬನ ಚಳುವಳಿಗಿಂತಲೂ ನೈತಿಕ ಪೊಲೀಸ್ ಗಿರಿಯಯನ್ನು ತಡೆಯಲು ಸಂಘಟಿತ, ಕಠಿಣವಾದ ಹಾದಿಯ ದೀರ್ಘಾವಧಿ ಹೋರಾಟಗಳಿಂದ ಮಾತ್ರ ಸಾಧ್ಯ ಎಂಬ ವಾದವನ್ನು ಕೂಡಾ ಒಪ್ಪಬೇಕಾಗುತ್ತದೆ.

ಅದೇನೇ ಇದ್ದರೂ ನಮ್ಮ ರಾಜ್ಯದ ಪ್ರಜ್ಞಾವಂತ ಜನಸಮೂಹ ಒಟ್ಟಾಗಿ ಇಲ್ಲಿ ಮಾಡಬೇಕಾದ ಕೆಲಸ “ಕಿಸ್ ಆಫ್ ಲವ್” ನಂತಹಾ ಪ್ರತಿಭಟನೆಯನ್ನು KissOfLove_2 ತಡೆಯೋದರ ಬದಲಾಗಿ ಇಂಥಹಾ ಪ್ರತಿಭಟನೆಯ ಅನಿವಾರ್ಯತೆಗೆ ಕಾರಣವಾಗಿರುವ ಅಮಾನವೀಯ ನೈತಿಕ ಪೊಲೀಸ್ ಗಿರಿಯನ್ನು ತಡೆಯಬೇಕಾಗಿದೆ. ಅದರ ಜೊತೆಗೆ “ಕಿಸ್ ಆಫ್   ಲವ್” ಮಾತ್ರ ನೈತಿಕ ಪೊಲೀಸ್ ಗಿರಿಯ ವಿರುದ್ಧ ನಡೆಯುವ ಮಾದರಿ ಹೋರಾಟವಲ್ಲ. ಬದಲಾಗಿ ಜನಸಾಮಾನ್ಯರು, ಪ್ರಗತಿಪರರು ಸಂಘಟಿತ, ಪ್ರಬಲ ಚಳುವಳಿಯ ರೂಪದಲ್ಲಿ ಹೋರಾಟಗಳನ್ನು ಇನ್ನಷ್ಟು ತೀವೃಗೊಳಿಸಿ ಅಮಾನವೀಯ ನೈತಿಕ ಪೊಲೀಸ್ ನೈತಿಕ ಪೊಲೀಸ್   ಗಿರಿಯ ವಿರುದ್ಧ ಸೆಟೆದುನಿಲ್ಲಲೇಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.