Category Archives: ಇರ್ಷಾದ್

ಹರಿಯುತ್ತಿರುವ  ರಕ್ತಕ್ಕೆ ಸಾಕ್ಷಿಯಾಗುತ್ತಿದೆ ಈ ಗೋಮಾತೆ……..


-ಇರ್ಷಾದ್


ಆ ಯುವಕನ  ಹೆಸರು ಅಬ್ದುಲ್ ಸಮೀರ್. ವಯಸ್ಸು 32. ಮದುವೆಯಾಗಿ ಐವರು  ಮಕ್ಕಳ ತಂದೆ. ಮಂಗಳೂರಿನಿಂದ ಕೇರಳದ ಕಣ್ಣೂರಿಗೆ  ಮೀನು ವ್ಯಾಪಾರ  ಮಾಡಿ ಜೀವನ ಸಾಗಿಸುತ್ತಿದ್ದ ಕಾಸರಗೋಡು ನಿವಾಸಿ ಅಬ್ದುಲ್  ಸಮೀರ್ ಇಂದು ಅಕ್ಷರಷಃ ಕೋಮ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವಚ್ಚವವಾಗಿ ಮಲಗಿದ್ದಾನೆ. ಈತನ ಈ ದಾರುಣ ಸ್ಥಿತಿ ಕಂಡು ಅಸಾಹಯಕರಾಗಿ ಪೋಷಕರು, ಹೆಂಡತಿ ಮಕ್ಕಳು ನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ. ಕಡುಬಡವರಾದ ಅಬ್ದುಲ್ ಸಮೀರ್  ಕುಟುಂಬ ಈಗಾಗಲೇ ಸುಮಾರು 3 ಲಕ್ಷ ರೂಪಾಯಿಯನ್ನು ಚಿಕಿತ್ಸೆಗಾಗಿ ವ್ಯಯ ಮಾಡಿದೆ. ಇಷ್ಟಾದರೂ ಗಂಬೀರವಾಗಿ  ಗಾಯಗೊಂಡಿರುವ ಅಬ್ದುಲ್ ಸುಧಾರಿಸಿಲ್ಲ.

ಅಂದಹಾಗೆ ಈತನ ಈ ಪರಿಸ್ಥಿತಿಗೆ ಕಾರಣರಾದವರು ಮಂಗಳೂರಿನ ಗೋರಕ್ಷಣೆಯ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಮತಾಂಧರು. go sagata_1ದಿನಾಂಕ 24-8-2014 ರಂದು ಅಬ್ದುಲ್  ಸಮೀರ್ ಹಾಗೂ ಇನ್ನಿಬ್ಬರು ದನ ವ್ಯಾಪಾರಿಗಳು ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಿಂದ 14 ದನಗಳನ್ನು  ಖರೀದಿ ಮಾಡಿ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಸುಮಾರು 30 ರಿಂದ 40 ಜನರನ್ನು ಒಳಗೊಂಡ ಹಿಂದೂಪರ ಸಂಘಟನೆಗಳ ತಂಡ ರಾತ್ರಿ ಸುಮಾರು 10.30 ಘಂಟೆಗೆ ಮಂಗಳೂರಿನ ಪಂಪ್ ವೆಲ್ ಎಂಬಲ್ಲಿ ಜಾನುವಾರು ಸಾಗಾಟ ವಾಹನವನ್ನು ಅಡ್ಡಗಟ್ಟಿದ್ದರು. ವಾಹನದಲ್ಲಿದ್ದ ಚಾಲಕ ಅಬ್ದುಲ್ ಸಮೀರ್, ಫಯಾಜ್ ಹಾಗೂ ಶೌಕತ್ ಎಂಬುವವರಿಗೆ ಹಿಗ್ಗಾಮುಗ್ಗಾ ಥಳಿಸಿದರು. ಚಾಲಕ ಅಬ್ದುಲ್ ಸಮೀರ್ ಅವರ ಹೊಡೆತಕ್ಕೆ  ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಎಲ್ಲಾ  ಆದ ನಂತರದಲ್ಲಿ ಸ್ಥಳಕ್ಕೆ ಬಂದ ಮಂಗಳೂರು ಗ್ರಾಮಾಂತರ ಪೊಲೀಸರು ಗಾಯಗೊಂಡ ದನದ ವ್ಯಾಪಾರಿಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರು. 14 ದಿನ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಸಮೀರ್ ಇನ್ನೂ ಕೋಮಾ ಸ್ಥಿತಿಯಿಂದ  ಸಂಪೂರ್ಣವಾಗಿ ಹೊರಬಂದಿಲ್ಲ. ಪುತ್ರನ  ಚಿಕಿತ್ಸೆಗಾಗಿ  ಅಬ್ದುಲ್  ಸಮೀರ್  ತಂದೆ  ಶೇಕ್ ಅಲೀ ತಮ್ಮ  ಪುತ್ರಿಯ ಮೈಮೇಲಿದ್ದ ಚಿನ್ನಾಭರಣವನ್ನು ಅಡವಿಟ್ಟು  ಈಗಾಗಲೇ  150000 ದುಡ್ಡು ಆಸ್ಪತ್ರೆಗೆ ಪಾವತಿ  ಮಾಡಿದ್ದಾರೆ, ಇನ್ನೂ  120000  ಹಣವನ್ನು ಪಾವತಿ  ಮಾಡಬೇಕಾಗಿದೆ.  ವೈದ್ಯರು  ಜೀವಕ್ಕೆ ಅಪಾಯವಿಲ್ಲ ಎಂದರೂ ಮತ್ತೆ ಸಮೀರ್ ಹಿಂದಿನಂತಾಗುವ ಯಾವುದೇ ಭರವಸೆಯನ್ನು ನೀಡಿಲ್ಲ. ಸಮೀರ್ ಕನಿಷ್ಠ ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳುಗಳ  ಕಾಲಾವಕಾಶ ಬೇಕಾಗಬಹುದು.

ಇದು ಅಬ್ದುಲ್ ಸಮೀರ್ ಒಬ್ಬನ ವ್ಯಥೆ ಮಾತ್ರವಲ್ಲ. ಕರಾವಳಿಯ ಅವಳಿ  ಜಿಲ್ಲೆಯಗಳಲ್ಲಿ ಇದು ಸಾಮಾನ್ಯವಾಗುತ್ತಿದೆ. ಕರಾವಳಿ ಭಾಗದಲ್ಲಿ ಗೋಮಾತೆಯು ತನ್ನ  ಕಣ್ಣ ಮುಂದೆ ಹರಿದ ಸಾಕಷ್ಟು ನೆತ್ತರಿಗೆ ಸಾಕ್ಷಿಯಾಗಿದ್ದಾಳೆ. ಗೋ ಮಾತೆಯ ರಕ್ಷಣೆಯ ಹೆಸರಲ್ಲಿ  ಸ್ವಘೋಷಿತ ಗೋರಕ್ಷಕರು ಕಾನೂನು ಕೈಗೆತ್ತಿಕೊಂಡು ಸಿಕ್ಕಿದ್ದೇ ಅವಕಾಶ go sagata_2ಎಂಬಂತೆ ದನದ ವ್ಯಾಪಾರಿಗಳ ಮೇಲೆ ಮಾರಣಾಂತಿಕ ಹಲ್ಲೆ  ನಡೆಸಿ  ಕ್ರೌರ್ಯ  ಮೆರೆಯುತ್ತಿದ್ದಾರೆ. ಇವರ  ಪಾಲಿಗೆ ಗೋ ಕಳ್ಳರು, ಅಕ್ರಮ ದನ ಸಾಗಾಟಕರು, ಪರವಾನಿಗೆ ಹೊಂದಿರುವ ಜಾನುವಾರು ವ್ಯಾಪಾರಿಗಳು, ಎಲ್ಲರೂ ಒಂದೇ. ಒಮ್ಮೆ ತಮ್ಮ ಕೈಗೆ  ಸಿಕ್ಕಿಬಿದ್ದರೆ ಸಾಕು. ಗೋಮಾತೆಯ ರಕ್ಷಣೆಯ ಹೆಸರಲ್ಲಿ ಕ್ರೌರ್ಯದ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ಈ ಮತಾಂಧರು ಅಂದು ಆದಿ ಉಡುಪಿಯಲ್ಲಿ ದನದ  ವ್ಯಾಪಾರಿ ಅಪ್ಪ –ಮಗನನ್ನು ಹಿಂಸಿಸಿ ಬೆತ್ತಲೆ ಮಾಡಿದ್ದರು. ಅದೇ ಮನಸ್ಥಿತಿಯ ಮತಾಂಧರು ಇಂದು ದನ ಸಾಗಾಟ ವಾಹನ ಚಾಲಕ ಅಬ್ದುಲ್ ಸಮೀರ್‌ನನ್ನು ಜೀವಚ್ಚವವನ್ನಾಗಿಸಿದರು. ಧರ್ಮದ ಹೆಸರಲ್ಲಿ ಅಮಾನವೀಯತೆ ಮೆರೆದಾಡುವ ಈ ಮತಾಂಧರು ಮೊದಲು ತಮ್ಮದೇ ಧರ್ಮ ಹಾಗೂ ಅದರ ಸದಾಶಯಗಳಿಗೆ ಧ್ವನಿಯಾದ ಆದರ್ಶ ಪುರುಷರುಗಳನ್ನು ತಿಳಿದುಕೊಳ್ಳಬೇಕು. ಇಂದು ಧರ್ಮಗಳ  ನಡುವೆ ವಿಷಬೀಜವನ್ನು ಬಿತ್ತಿ ಸಾವು ನೋವಿಗೆ ಕಾರಣವಾಗುತ್ತಿರುವ ಗೋ ರಕ್ಷಕರು ಗೋವಿನ ಕುರಿತಾಗಿ  ಹಿಂದೂ ಧರ್ಮಗ್ರಂಥಗಳು  ಹಾಗೂ  ಸ್ವಾಮೀ  ವಿವೇಕಾನಂದ,  ಭಗತ್ ಸಿಂಗ್  ಮೊದಲಾದರು  ಏನು ಹೇಳಿದ್ದಾರೆ ಎಂಬುವುದನ್ನು ಮೊದಲು  ತಿಳಿದುಕೊಳ್ಳಬೇಕಾಗಿದೆ.

ಸ್ವಾಮೀ ವಿವೇಕಾನಂದರು ಹೇಳುತ್ತಾರೆ “ಭಾರತದಲ್ಲಿ ಸನ್ಯಾಸಿ, ರಾಜ, ಅಥವಾ ಶ್ರೇಷ್ಟ ವ್ಯಕ್ತಿಯೊಬ್ಬನು ಮನೆಗೆ ಬಂದರೆ ಅವನ ಔತಣಕ್ಕಾಗಿ ಅತ್ಯುತ್ತಮವಾದ ಎತ್ತನ್ನು ಕೊಲ್ಲುತ್ತಿದ್ದರು ಎಂಬುವುದನ್ನು ನಾವು ವೇದದಲ್ಲಿ ಓದಿದ್ದೇವೆ. ಆದರೆ ಕಾಲ ಕ್ರಮೇಣ ನಮ್ಮದು ಕೃಷಿ ಪ್ರಾಧಾನ್ಯ ಜೀವನವಾಗಿದ್ದರಿಂದ ಅತ್ಯುತ್ತಮ ಎತ್ತುಗಳನ್ನು ಕೊಂದರೆ ಕ್ರಮೇಣ ದನದ ಕುಲವೇ ನಾಶವಾಗುವುದೆಂದು swami-vivekananda-1ತಿಳಿದು ಗೋಹತ್ಯೆ ಮಹಾ ಪಾಪವೆಂದು ಪರಿಗಣಿಸಲು ಪ್ರಾರಂಭಿಸಿದರು. ಪಂಜಾಬಿನ ಹಲವು ಗ್ರಾಮಗಳಲ್ಲಿ ಹಂದಿಯನ್ನು ತಿನ್ನುವವರನ್ನು ಹಿಂದೂಗಳೆಂದು ಪರಿಗಣಿಸುವುದೇ ಇಲ್ಲ.” ( ವಿವೇಕಾನಂದರ  ಕೃತಿ ಶ್ರೇಣಿ 5-129 )

ಸ್ವಾಮಿ ವಿವೇಕಾನಂದ ಗೋರಕ್ಷಿಣಿ ಸಭೆಯ ಪ್ರಚಾರಕನೊಂದಿಗೆ ಚರ್ಚೆ ನಡೆಸುವ ಈ ಸನ್ನಿವೇಶ ಗೋ ರಕ್ಷಣೆಯ ಹೆಸರಲ್ಲಿ ಮನುಷ್ಯ ಮನುಷ್ಯನ  ರಕ್ತ ಹೀರುವ ಮನಸ್ಥಿತಿಗೆ ಸುಲಭ ರೀತಿಯಲ್ಲಿ ಅರ್ಥವಾಗುವ ಪಾಠದಂತಿದೆ.

ಸ್ವಾಮೀವಿವೇಕಾನಂದ ಗೋರಕ್ಷಿಣಿ ಸಭೆಯ ಪ್ರಚಾರಕನೊಂದಿಗೆ ಮಾತನಾಡುತ್ತಾ-

ಸ್ವಾಮೀಜಿ: ನಿಮ್ಮ  ಉದ್ದೇಶವೇನು ?

ಪ್ರಚಾರಕ : ನಮ್ಮ ದೇಶದ ಗೋ ಮಾತೆಯನ್ನು ಕಟುಕರ ಕೈಯಿಂದ ತಪ್ಪಿಸಿ ಕಾಪಾಡುತ್ತಿದ್ದೇವೆ. ಅಲ್ಲಲ್ಲಿ ದೊಡ್ಡಿಗಳು ಸ್ಥಾಪಿಸಲ್ಪಟ್ಟಿವೆ. ಅವುಗಳಲ್ಲಿ ಕಾಯಿಲೆಯ, ಕೈಲಾಗದ ಮತ್ತು ಕಟುಕರಿಂದ ಕೊಂಡು ತಂದ ಗೋ ಮಾತೆಯನ್ನು  ರಕ್ಷಿಸುತ್ತೇವೆ.

ಸ್ವಾಮೀಜಿ : ಇದು ಬಹಳ  ಒಳ್ಳೆಯ  ಕೆಲಸ; ತಮ್ಮ ಸಂಪಾದನೆಯ  ಮಾರ್ಗ ?

ಪ್ರಚಾರಕ: ದಯಾಪರರಾದ ತಮ್ಮಂಥವರು ಏನಾದರೂ ಕೊಡುತ್ತಾರೆಯಲ್ಲ, ಅದರಿಂದಲೇ ಸಭೆಯ ಈ ಕಾರ್ಯ ನಡೆಯುವುದು.

ಸ್ವಾಮೀಜಿ: ನಿಮ್ಮ ಹತ್ತಿರ  ಮೂಲಧನ ಎಷ್ಟು  ರೂಪಾಯಿ ಇದೆ?

ಪ್ರಚಾರಕ: ಮಾರವಾಡಿ ವರ್ತಕರು ಈ ಕಾರ್ಯಕ್ಕೆ ಒಳ್ಳೆಯ ಪೋಷಕರಾಗಿದ್ದಾರೆ. ಅವರು ಈ ಸತ್ಕಾರ್ಯಕ್ಕೆ ಬಹುದ್ರವ್ಯವನ್ನು ಕೊಟ್ಟಿದ್ದಾರೆ.

ಸ್ವಾಮೀಜಿ: ಹಿಂದೂಸ್ಥಾನದಲ್ಲಿ ಭಯಂಕರ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ  ಸಭೆ ಈ ದುರ್ಭಿಕ್ಷ ಕಾಲದಲ್ಲಿ ಏನಾದರೂ ಸಹಾಯ  ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನು?

ಪ್ರಚಾರಕ: ನಾವು ದುರ್ಭಿಕ್ಷ ಮೊದಲಾದುವುಗಳಲ್ಲಿ ಸಹಾಯ ಮಾಡುವುದಿಲ್ಲ . ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ: ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿರಲು, ಕೈಯಲ್ಲಾಗುತ್ತಿದ್ದರೂ ಇಂಥ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ತೋರುವುದಿಲ್ಲವೇ?

ಪ್ರಚಾರಕ:  ಇಲ್ಲ, ಜನರ ಕರ್ಮಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯರಲ್ಲಿ ಸಹಾನುಭೂತಿಯನ್ನು ತೋರದೆ, ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂದು ನೋಡಿಯೂ ಅವರ ಜೀವವನ್ನು ಉಳಿಸುವುದಕ್ಕಾಗಿ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ. ಅವುಗಳಿಂದ ಸಮಾಜಕ್ಕೆ ಹೆಚ್ಚು ಉಪಕಾರವಾಗುತ್ತದೆಂದು ನಾನು ನಂಬುವುದಿಲ್ಲ. ಕರ್ಮಫಲದಿಂದ ಜನರು ಸಾಯುತ್ತಾರೆ. ಹೀಗೆ ಕರ್ಮದ ನೆವವನ್ನು ಹೇಳುವುದಾದರೆ ಜಗತ್ತಿನ ಯಾವ ವಿಷಯದಲ್ಲೂ ಕೆಲಸ ಮಾಡುವುದೇ ನಿಷ್ಪ್ರಯೋಜಕವೆಂದು ಒಟ್ಟಿಗೆನಿಶ್ಚಯಿಸಬಹುದು. ತಮ್ಮ ಪಶುರಕ್ಷಣೆಯ  ಕೆಲಸವೂ ಆ  ಮೇಲೆ ನಡೆಯುದಿಲ್ಲ.ಈ ಕೆಲಸದ ವಿಚಾರದಲ್ಲಿಯೂ ಗೋಮಾತೆಗಳು ತಮ್ಮ  ತಮ್ಮ ಕರ್ಮಫಲದಿಂದಲೇ ಕಟುಕರ ಕೈಗೆ ಹೋಗುತ್ತವೆ ಮತ್ತು  ಸಾಯುತ್ತವೆ. ಆದ್ದರಿಂದ ಅದಕ್ಕೆ ನಾವು ಏನೂ ಮಾಡಬೇಕಾದ ಅವಶ್ಯಕತೆಯಿಲ್ಲ  ಎಂದು  ಹೇಳಬಹುದು.

ಪ್ರಚಾರಕ: ತಾವು ಹೇಳುತ್ತಿರುವುದು ಸರಿ. ಆದರೆ ಹಸು ನಮಗೆ ‘ತಾಯಿ’ ಎಂದು ಶಾಸ್ತ್ರ  ಹೇಳುತ್ತದೆ.

ಸ್ವಾಮೀಜಿ: ಹಸು ತಮ್ಮ ತಾಯಿ ಎಂಬುವುದನ್ನು ನಾನು ವಿಲಕ್ಷಣವಾಗಿ ಅರ್ಥಮಾಡಿಕೊಂಡಿದ್ದೇನೆ- ಇಲ್ಲದಿದ್ದಲ್ಲಿ ಇಂಥ ಧನ್ಯರಾದ ಪುತ್ರರನ್ನೆಲ್ಲಾ ಇನ್ನು ಯಾರು ಹೆತ್ತಾರು?  (ವಿವೇಕಾನಂದ ಬಹುಮುಖಿ ಚಿಂತಕ ಪುಟ 43-44 )

ಇಷ್ಟೇ  ಅಲ್ಲ, ಹಿಂದೂ  ಧರ್ಮದ  ಧರ್ಮಶಾಶ್ತ್ರ  ಮನುಸ್ಮೃತಿಯಲ್ಲಿ ಗೋವಿನ ಕುರಿತು  ಅನೇಕ ಉಲ್ಲೇಖಗಳಿವೆ ಮನುಸ್ಮೃತಿ ಪ್ರಕಾರ-

ಚರಣಾಮನ್ನಮಚರಾ ದಂಷ್ಟ್ರಿಣಾಮಪ್ಯದಂಷ್ಟ್ರಿಣ:
ಅಹಾಸ್ತಾಶ್ಚ ಸಹಸ್ತಾನಾಂ ಶೂರಾಣಂ ಚೈವ ಭೀರವ:  ( ಮನುಸ್ಮೃತಿ 5:29)

ಅಂದರೆ ಚಲಿಸುವ ಪಶು ಪ್ರಾಣಿಗಳಿಗೆ ಚಲಿಸದಿರುವ ಹುಲ್ಲು- ಸಸ್ಯಗಳು ಆಹಾರಗಳು, ಕೋರೆ ದಾಡೆಗಳಿರುವ ಸಿಂಹ-ಹುಲಿಗಳಿಗೆ ಕೋರೆ ದಾಡೆಗಳಿರದ ಜಿಂಕೆ  ಇತ್ಯಾದಿಗಳು ಆಹಾರಗಳು, ಕೈಗಳಿರುವ ಮನುಷ್ಯರಿಗೆ ಕೈಗಳಿಲ್ಲದ ಪಶು ಪ್ರಾಣಿಗಳು ಆಹಾರಗಳು. ಹಾಗೂ  ಶೂರವಾದ, ಕ್ರೋರವಾದ ಪ್ರಾಣಿಗಳಿಗೆ ಸಾಧುವಾದ –ಭೀರುವಾದ ಪ್ರಾಣಿಗಳು  ಆಹಾರಗಳು.

ನಾತ್ತಾ ದುಷ್ಯತ್ಯದನ್ನಾದ್ಯಾನ್ಟ್ರಾನೋಹನ್ಯಹನ್ಯಪಿ
ಧಾತ್ರೈವ ಸೃಷ್ಟಾಹ್ಯಾದ್ಯಾಶ್ಚ  ಪ್ರಾಣಿನೋತ್ತಾರ  ಏವ ಚ (ಮನುಸ್ಮೃತಿ  5:30)

ಅಂದರೆ, “ಪ್ರತಿದಿನವೂ ತಿನ್ನಲಿಕ್ಕೆ ಯೋಗ್ಯವಾದ ಪ್ರಾಣಿಗಳನ್ನೇ ಕೊಂದು ತಿಂದರೆ ಅದು ಅಪರಾಧವಲ್ಲ. ಏಕೆಂದರೆ ತಿನ್ನುವವರನ್ನು ಪ್ರಾಣಿಗಳನ್ನು ಭಗವಂತನೇ ಸೃಷ್ಟಿ ಮಾಡಿದ್ದಾನೆ.” ಇನ್ನು ಯಜ್ಞ ಯಾಗಾಧಿಗಳಲ್ಲೂ ಪಶುವಧೆಯನ್ನು ಮಾಡಲಾಗುತ್ತಿತ್ತು ಎಂಬುವುದಕ್ಕೂ ಮನುಸ್ಮೃತಿಯಲ್ಲಿ  ಉಲ್ಲೇಖಗಳಿವೆ. ಯಜ್ಞಸ್ಯ ಭೂತ್ಯೈ ಸರ್ವಸ್ಯ ತಸ್ಮಾದ್ಯಜ್ಞೆ  ವಧೋವಧ (ಮನುಸ್ಮೃತಿ 5:39) ಯಜ್ಞಗಳಿಗೆಂದೇ ಪರಮಾತ್ಮನು ಈ ಪಶುಗಳನ್ನು ಸೃಷ್ಟಿ ಮಾಡಿದ್ದಾನೆ. ಈ ಎಲ್ಲವೂ ಯಜ್ಞದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ಞದಲ್ಲಿ ಮಾಡುವ ಪಶುವಧೆಯು  ಪಾಪಕರವಲ್ಲ”

ಗೋವಿನ ಕುರಿತಾದ ಧರ್ಮಗ್ರಂಥಗಳು, ಮಹಾನ್ ದಾರ್ಶನಿಕರು ಈ ವಿಚಾರಗಳನ್ನು ಇಂದು ಅರ್ಥೈಸಿಕೊಳ್ಳಲು ಮತಾಂಧರು ತಯಾರಿಲ್ಲ. ಯಾಕೆಂದರೆ ಅದನ್ನುSiddaramaiah ಪಾಲಿಸಿದರೆ ಮತಾಂಧರ ಉದ್ದೇಶ ಈಡೇರುವುದಿಲ್ಲ. ಪರಿಣಾಮ ಕರಾವಳಿಯಲ್ಲಿ ಗೋವಿನ ಹೆಸರಲ್ಲಿ ನೆತ್ತರು ಹರಿಯುತ್ತಿದೆ. ಇನ್ನೊಂದೆಡೆ ಈ ಮೂಕಪ್ರಾಣಿಯನ್ನು ಮಾರಾಟಕ್ಕಾಗಿ ಸಾಗಿಸುವ ರೀತಿಯೂ  ಅಮಾನವೀಯ. ಆ ಮೂಕ ಪ್ರಾಣಿಯ  ವೇದನೆ ಕಟುಕರ  ಎದೆಗೆ ನಾಟುತ್ತಿಲ್ಲ. ಇದಕ್ಕೆ  ಪರೋಕ್ಷವಾಗಿ  ಕಾರಣ ಗೋ ರಕ್ಷಕ ವೇಷದಲ್ಲಿರುವ ಮತಾಂಧರು ಎಂದರೆ ತಪ್ಪಾಗಲಾರದು. ಇವರ ಉಪಟಳ ಒಂದೆಡೆಯಾದರೆ  ವ್ಯಾಪಾರಿಯ ವ್ಯವಹಾರಿಕ ದೃಷ್ಠಿಕೋನವೂ ಈ ಪರಿಸ್ಥಿತಿಗೆ ಕಾರಣ. ರಾಜ್ಯದಲ್ಲಿ ಮತ್ತೆ  ಅಧಿಕಾರಕ್ಕೆ  ಬಂದ  ಕಾಂಗ್ರೆಸ್  ಸರ್ಕಾರದ ದಕ್ಷಿಣ  ಕನ್ನಡ ಜಿಲ್ಲೆಯ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿ ಮಾಧ್ಯಮದ ಮುಂದೆ  ನೀಡಿದ ಮೊದಲ ಹೇಳಿಕೆ “ನೈತಿಕ ಪೊಲೀಸ್ ಗಿರಿಯನ್ನು ನಮ್ಮ  ಸರ್ಕಾರ  ಯಾವತ್ತೂ  ಸಹಿಸೋದಿಲ್ಲ. ಎಲ್ಲಿ  ನೈತಿಕ ಪೊಲೀಸ್ ಗಿರಿ ನಡೆಯುತ್ತದೋ  ಆ ವ್ಯಾಪ್ತಿಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದಕ್ಕೆ ಹೊಣೆಯಾಗಿರುತ್ತಾರೆ.” ಮುಖ್ಯಮಂತ್ರಿ  ಸಿದ್ದರಾಮಯ್ಯ ಕೂಡಾ ಪದೇ ಪದೇ  ಇಂಥಹಾ  ಹೇಳಿಕೆಯನ್ನೇ ನೀಡುತ್ತಿರುತ್ತಾರೆ. ಆದರೆ ಇವರುಗಳ  ಹೇಳಿಕೆ  ಬರೀ ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ಕಾಂಗ್ರೆಸ್  ಸರ್ಕಾರ ಅಧಿಕಾರಕ್ಕೆ ಬಂದ  ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಭಯ ಕೋಮುಗಳ ನೈತಿಕ ಪೊಲೀಸರು ಬಾಲ ಮುದುಡಿ ಕೂತಿಲ್ಲ. ಗೋ ಸಾಗಾಟ ತಡೆ ಹೆಸರಲ್ಲಿ ಕಾನೂನು  ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ದಿನೇ  ದಿನೇ  ಹೆಚ್ಚಾಗುತ್ತಿದೆ ಕೆಲವೊಂದು  ಬಹಿರಂಗಗೊಳ್ಳುತ್ತದೆ  ಇನ್ನೂ  ಕೆಲವೂ ಅಲ್ಲೇ  ಮುಚ್ಚಿಹೋಗುತ್ತಿವೆ. ಹೀಗೆ ಗೋವಿನ ರಕ್ಷಣೆಯ ಹೆಸರಲ್ಲಿ ಅಂದು ಹಾಜಪ್ಪ ಹಸನಬ್ಬ ಇಂದು ಅಬ್ದುಲ್ ಸಮೀರ್ ಇನ್ನು ನಾಳೆ ಮತ್ತೊಬ್ಬ ಹೀಗೆ ಅವಮಾನಕ್ಕೊಳಗಾಗಿ, ಏಟು ತಿನ್ನುತ್ತಿದ್ದರೆ, ಗೋರಕ್ಷಣೆಯ ಹುಮ್ಮಸ್ಸಿನಿಂದ ಒಂದಿಷ್ಟು ಧರ್ಮದ ಅಮಲು ತುಂಬಲ್ಪಟ್ಟ ಹಿಂದುಳಿದ ವರ್ಗಗಳ ಯುವಕರು ಜೈಲು ಸೇರುತ್ತಾರೆ. ಬಹುಷಃ  ಇದು ಹೀಗೆ ಮುಂದುವರಿಯುತ್ತಲೇ ಹೋಗುತ್ತದೆ.

ವೀರ ಭಗತ್‌ಸಿಂಗ್  ಹೇಳುತ್ತಾರೆ “ ಅರಳಿಮರದ ರೆಂಬೆಯೊಂದನ್ನು ಯಾರೋ ಮುರಿದರೆಂದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿಬಿಡುತ್ತದೆ.Bhagat-Singh ಮುಹಮ್ಮದೀಯರ ಕಾಗದದ ಪ್ರತಿಮೆ ತಾಜಿಯಾದ ಮೂಲೆಯೊಂದು ಮುಕ್ಕಾಗಿ ಬಿಟ್ಟಿತೂ ಅಲ್ಲಾಹುವಿಗೆ ಕೆಂಡದಂಥ ಕೋಪಬಂದುಬಿಡುತ್ತದೆ; ಅವನು  ಕಾಫಿರ ಹಿಂದುಗಳ ರಕ್ತದ ಹೊರತು ಇನ್ಯಾರಿಂದಲೂ ಸಮಾಧಾನಗೊಳ್ಳನು. ಇಲ್ಲಿ ಪವಿತ್ರ ಪಶುಗಳ ಹೆಸರಲ್ಲಿ ಮನುಷ್ಯರು ಒಬ್ಬರೊಬ್ಬರ ತಲೆ  ಒಡೆದುಕೊಳ್ಳುತ್ತಿದ್ದಾರೆ. ನಮ್ಮ ದೃಷ್ಟಿ ಧಾರ್ಮಿಕ ರಾಷ್ಟ್ರೀಯತೆಯಿಂದ ಮಸುಕಾಗಿದೆ”

 ಕರಾವಳಿಯಲ್ಲಿ  ನಿನ್ನ ರಕ್ಷಣೆಯ ಹೆಸರಲ್ಲಿ ಇನ್ನೆಷ್ಟು ಪ್ರಮಾಣದ  ರಕ್ತ ಹರಿಸುತ್ತಾರೂ  ಈ ಮತಾಂಧರು, ಓ ಗೋಮಾತೆಯೇ?

ಬುರ್ಖಾದೊಳಗಿನ ಅವಳ ಮೌನಕ್ಕೆ ಧ್ವನಿಯಾದಾಗ…


-ಇರ್ಷಾದ್


 

 

 

“ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಂಗಳೂರಿನಲ್ಲಿ  ’ಬಾಡೂಟದ ಜೊತೆಗೆ ಗಾಂಧೀ ಜಯಂತಿ’ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡುತ್ತಾbasheer-book-release-dinesh-1 “ ಬುರ್ಖಾ ಬೇಕೋ ಬೇಡವೋ ಎಂದು 25 ರಿಂದ 30 ವರ್ಷದೊಳಗಿನ ಮುಸ್ಲಿಮ್ ಮಹಿಳೆಯರ ರಹಸ್ಯ ಮತದಾನ ಮಾಡಿದ್ದಲ್ಲಿ ಬಹುಸಂಖ್ಯಾತ ಮಹಿಳೆಯರು ಬುರ್ಖಾ ಬೇಡ ಎನ್ನಬಹುದು. ಪಾಪ ಬಹಿರಂಗವಾಗಿ ಅವರಿಗೆ ಬುರ್ಖಾವನ್ನು ವಿರೋಧಿಸಲು ಧೈರ್ಯವಿಲ್ಲದಿರಬಹುದು” ಅಂದಿದ್ದಾರೆ. ಅಮೀನ್ ಮಟ್ಟು ಅವರ ಈ ಮಾತುಗಳನ್ನು ದಿನಪತ್ರಿಕೆಗಳಲ್ಲಿ ಓದಿದಾಗ ನನ್ನ ಒಳ ಮನಸ್ಸಿನ ಮೂಲೆಯಲ್ಲಿ ಆಸೆಯೊಂದು ಚಿಗುರಿತು. ಬುರ್ಖಾ ಬೇಕೋ ಬೇಡವೋ ಎಂಬ ರಹಸ್ಯ ಮತದಾನದಲ್ಲಿ ನನ್ನ ಮತವನ್ನು ಹಾಕುವ ಹಂಬಲ ಮನದಲ್ಲಿ ಮೂಡಿತು. ತಕ್ಷಣ ಮನೆಯ ತೆರದಿದ್ದ ಕಪಾಟಿನ್ನು ನೋಡಿದಾಗ ಅಲ್ಲಿ ತೂಗು ಹಾಕಿದ್ದ ಕಪ್ಪು ಬಣ್ಣದ ಬುರ್ಖಾ ನನ್ನನ್ನೇ ದಿಟ್ಟಿಸುವಂತೆ ನನಗೆ ಭಾಸವಾಯಿತು. ಎರಡು ತಿಂಗಳ ಹಿಂದೆಯಷ್ಟೇ ಉಪವಾಸ ಹಿಡಿದು ಈದ್ ಉಲ್ ಫಿತರ್ ಹಬ್ಬ ಆಚರಿಸಿದ್ದೆವು. ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬಕ್ಕೆ ಮಂಗಳೂರಿನ ಪೇಟೆಗೆ ಹೊಸ ಬಟ್ಟೆ ಖರೀದಿ ಮಾಡಲು ಅಪ್ಪ ಅಮ್ಮನ ಜೊತೆ ಹೋಗಿದ್ದೆ. ನನ್ನ ತಮ್ಮನಿಗಿಂತ ಹೆಚ್ಚು ಬೆಳೆಬಾಳುವ ಸಲ್ವಾರ್ ನನಗೆ ಖರೀದಿಸಲು ಅಪ್ಪ ಅಮ್ಮ ಮುಂದಾದರು. ಅವರ ಪ್ರೀತಿಯ ಮಗಳು ಚೆನ್ನಾಗಿ ಕಾಣಬೇಕು, ಖುಷಿಯಾಗಿ ಇರಬೇಕು ಎಂಬ ಬಯಕೆ ಅವರದ್ದು. ನಾನು ಹೇಳಿದೆ ಅಮ್ಮಾ ನನಗೆ ಈ ಬೆಳೆಬಾಳುವ ಸಲ್ವಾರ್ ಗಿಂತ ಬೇರೆ ಬಣ್ಣದ ಬುರ್ಖಾ ಖರೀದಿಸಿ ಕೊಡು. ಈ ಸುಡು ಬಿಸಿಲಿಗೆ ಕಪ್ಪು ಬಣ್ಣದ ಬುರ್ಖಾ ತೊಟ್ಟು ಸಾಕಾಗಿದೆ. ಅಮ್ಮ ನನ್ನ ಮುಖವನ್ನು ನೋಡಿ ಒಮ್ಮ ನಕ್ಕು ಸುಮ್ಮನಾದರು. ಆಮ್ಮನ ಆ ನಗುವಿನಲ್ಲಿ ಎಲ್ಲ ಅರ್ಥವೂ ತುಂಬಿಕೊಂಡಿತ್ತು. ನಾನು ಸುಮ್ಮನಾದೆ.

ಮರುದಿನ ಮನೆಯಲ್ಲಿ ಹಬ್ಬ. ತನ್ನ ಸಹೋದರ ರಿಜ್ವಾನ್ ಗೆ ಸಂಭ್ರವೋ ಸಂಭ್ರಮ. ಹೊಸ ಬಟ್ಟೆ ತೊಟ್ಟು ಎಲ್ಲಾ ಗೆಳೆಯರಿಗೂ ತೋರಿಸಿ ಸ್ನೇಹಿತರ ಹೊಗಳಿಕೆಯಿಂದ ಗಾಳಿಯಲ್ಲಿ ಹಾರಾಡುತ್ತಿದ್ದ. burka-girlsಅಮ್ಮ ಅಪ್ಪ ಖರೀದಿಸಿ ಕೊಟ್ಟ ಸಲ್ವಾರನ್ನು ನಾನು ತೊಟ್ಟು ನನ್ನ ಸ್ನೇಹಿತೆಯರಿಗೆ ತೋರಿಸಿ ಅವನಷ್ಟೇ ಸಂಭ್ರಮ ಪಡಬೇಕು ಎಂದು ನನ್ನ ಮನಸ್ಸೂ ಹಂಬಲಿಸುತಿತ್ತು. ಅಯ್ಯೋ ಅದು ಸಾಧ್ಯಾನಾ? ಮನೆಯ ಹೊರಗಡೆ ಹಾಗೆಲ್ಲಾ ಕಾಲಿಡುವ ಹಾಗಿಲ್ಲ ನಾನು. ಒಂದು ವೇಳೆ ಕಾಲಿಡುವುದಾದರೆ ಮತ್ತದೇ ಹಳೇ ಕಪ್ಪು ಬುರ್ಖಾ ಧರಿಸಬೇಕು. ಸ್ನೇಹಿತೆಯ ಮನೆಗೆ ಹೋದರೂ ಅಲ್ಲೂ ನೆಂಟರು. ಅವರ ಮುಂದೆ ಬುರ್ಖಾ ತೆಗೆಯುವಂತಿಲ್ಲ. ಮನೆಯ ಒಳಗಿನ ಕೋಣೆಗೆ ಹೋಗಿ ಬುರ್ಖಾ ತೆಗೆದು ನಾನು ಧರಿಸಿದ ಹೊಸ ಬಟ್ಟೆಯನ್ನು ಸ್ನೇಹಿತೆಗೆ ತೋರಿಸಿ ಖುಷಿ ಪಡುವುದಕ್ಕಿಂದ ನನ್ನನ್ನು ನಾನೇ ಕನ್ನಡಿ ಮುಂದೆ ನಿಂತು ನೋಡಿ ಖುಷಿ ಪಟ್ಟೆ. ಇನ್ನೇನು ಮುಂದಿನ ತಿಂಗಳು ಕಾಲೇಜಿನಲ್ಲಿ ನಡೆಯಲಿರುವ ಕಾಲೇಜ್ ಡೇ ಕಾರ್ಯಕ್ರಮದಲ್ಲಾದರೂ ಈ ಹೊಸ ಬಟ್ಟೆ ಧರಿಸಿ ಖುಷಿ ಪಡಬೇಕು ಎಂದೆನಿಸಿ ಸುಮ್ಮನಾದೆ. ಆದರೆ ಕಾಲೇಜ್ ಡೇ ಕಾರ್ಯಕ್ರಮದಲ್ಲಿ ಮನೆಯಿಂದ ಹೊರಡುವಾಗಲೇ ಅಮ್ಮ ಅಪ್ಪನ ಎಚ್ಚರಿಕೆಯ ಸಂದೇಶ. ಮತ್ತೆ ಈ ಕಪ್ಪು ಬುರ್ಖಾ ವನ್ನು ದ್ವೇಷಿಸುವಂತಾಯಿತು. “ರಜಿಯಾ ಕಾಲೇಜಿನಲ್ಲಿ ಬುರ್ಖಾ ಇಲ್ಲದೆ ತಿರುಗಾಡಬೇಡ ಮತ್ತೆ ಯಾರಾದರೂ ನೋಡಿದರೆ ನಿಮ್ಮ ಮಗಳೇಕೆ ಹಿಂದೂ ಹುಡುಗಿಯರ ತರ ಎಂದು ನನ್ನನ್ನು ಬೈತಾರೆ” ಎಂದು ಎಚ್ಚರಿಸಿದರು ಅಪ್ಪ. ಕಾಲೇಜು ಡೇ ಗೆ ಬೇಡದ ಮನಸ್ಸಿನಲ್ಲಿ ಹಬ್ಬದ ಬೆಳೆಬಾಳುವ ಬಟ್ಟೆಯನ್ನು ಒಳಗೆ ಧರಿಸಿಕೊಂಡು ಅದರ ಮೇಲೆ ಕಪ್ಪು ಬುರ್ಖಾ ಧರಿಸಿಕೊಂಡು ಹೋದೆ. ಎಲ್ಲಾ ನನ್ನ ಇತರ ಧರ್ಮದ ಸ್ನೇಹಿತೆಯರು ಹೊಸ ಹೊಸ ಬಟ್ಟೆಯನ್ನು ಧರಿಸಿ ಅತ್ತಿತ್ತ ಓಡಾಡುತ್ತಿದ್ದರು. ನಾನು ಮಾತ್ರ ಕಪ್ಪು ಬುರ್ಖಾದಲ್ಲೇ ಬಂಧಿಯಾಗಿದ್ದೆ. ಅಬ್ಬಾ ಸಾಕು ಈ ಬುರ್ಖಾ ಸಹವಾಸ ಎಂದು ಬುರ್ಖಾ ತೆಗೆದು ಬಿಡಬೇಕು ಎನ್ನುವಷ್ಟರಲ್ಲಿ ನನ್ನಂತೆಯೇ ಆಸೆಯನ್ನು ಹತ್ತಿಕ್ಕಲಾರದೆ ಬುರ್ಖಾ ತೆಗೆದು ಇತರ ಹೆಣ್ಣುಮಕ್ಕಳ ಜೊತೆ ತಿರುಗಾಡುತ್ತಿದ್ದ ಆಯಿಷಾಳಿಗೆ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ತೊಟ್ಟು ಸ್ಟೈಲ್ ಆಗಿ ಬೈಕಲ್ಲಿ ಸುತ್ತಾಡುತ್ತಿರುವ ಮುಸ್ಲಿಮ್ ಹುಡುಗರು ಬೈಯುತ್ತಿದ್ದರು. “ಏನೇ ನೀನು ಮುಸ್ಲಿಮ್ ಅಲ್ವಾ? ಬುರ್ಖಾ ಹಾಕಲು ನಿನಗೇಕೆ ಸಂಕಟ” ಪಾಪ ಅವರ ಬೈಗುಳಕ್ಕೆ ಭಯಗೊಂಡ ಆಯಿಷಾ ಮತ್ತೆ ಬುರ್ಖಾ ತೊಟ್ಟು ನನ್ನ ಪಕ್ಕದಲ್ಲೇ ಕುಳಿತುಕೊಂಡಳು.

ಅಷ್ಟಕ್ಕೆ ನನಗೆ ದಿನೇಶ್ ಅಮೀನ್ ಮಟ್ಟು ಹೇಳಿದ ಮತ್ತೊಂದು ಮಾತು ನೆನಪಾಯಿತು. ಸಾಕಷ್ಟು ಮುಸ್ಲಿಮ್ ಸಿನಿಮಾ ನಟಿಯರು ಬುರ್ಖಾನೇ ಧರಿಸುವುದಿಲ್ಲ. taslima-nasreenಬಾಂಗ್ಲಾ ದೇಶದ ದಿಟ್ಟ ಮಹಿಳೆ ಶೇಖ್ ಹಸೀನಾ ಯಾವತ್ತೂ ಬುರ್ಖಾ ಧರಿಸಿಲ್ಲ, ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನೆಜೀರ್ ಬುಟ್ಟೂ ಬುರ್ಖಾ ಧರಸಲೇ ಇಲ್ಲ. ಹೌದಲ್ವಾ ಎಂದು ಯೋಚಿಸಲಾರಂಭಿಸಿದಾಗ ಬುರ್ಖಾ ಬೇಡ ಎಂದ ಇನ್ನು ಕೆಲವು ಮುಸ್ಲಿಮ್ ಮಹಿಳೆಯರು ನನ್ನ ಕಣ್ಣ ಮುಂದೆ ಸುಳಿದಾಡಲಾರಂಭಿಸಿದರು. ಮುಸ್ಲಿಮ್ ಪುರೋಹಿತಶಾಹಿ, ಮೂಲಭೂತವಾದ ಧಿಕ್ಕರಿಸಿದ ಸಾರಾ ಅಬೂಬಕ್ಕರ್, ತಸ್ಲೀಮಾ ನಸ್ರೀನಾ, ಶರೀಫಾ, ಜೊಹರಾ ನಿಸಾರ್ ಹೀಗೆ ಹತ್ತು ಹಲವು ಮಹಿಳೆಯರು ಬುರ್ಖಾ ಪದ್ದತಿಯ ವಿರುದ್ದ ಧ್ವನಿ ಎತ್ತಿದಕ್ಕಾಗಿ ಅವರು ಅನುಭವಿಸಿದ ನೋವುಗಳು, ಅವಮಾನಗಳು, ಅಡ್ಡಿ ಆತಂಕಗಳು ಹಾಗೆ ಕಣ್ಣ ಮುಂದೆ ಸುಳಿದಾಡಿದವು. ಈ ಸುಳಿದಾಟದಲ್ಲಿ ಸಾರಾ ಅಬೂಬಕ್ಕರ್ ಅವರ ’ಚಪ್ಪಲಿಗಳು’ ಪುಸ್ತಕದ ಪ್ರತಿಯೊಂದು ಪ್ಯಾರಾ ನೆನಪಾಗತೊಡಗಿತು. ಅದು ಭಯಾನಕ ಎಂದನಿಸಿತು. ಇದರ ನಡುವೆ ಬುರ್ಖಾ ಮಹಿಳೆಯನ್ನು ಅತ್ಯಾಚಾರದಂತಹಾ ದೌರ್ಜನ್ಯದಿಂದ ತಡೆಯುತ್ತದೆ ಎಂಬ ಪುರುಷ ಪ್ರಧಾನ ಸಮಾಜದ ಗರ್ವದ ಮಾತುಗಳು ನನ್ನನ್ನು ಇರಿಯತೊಡಗಿದವು. ಸ್ವಾಮೀ, ಅತ್ಯಾಚಾರಿಗೆ ಬುರ್ಖಾ ತೊಟ್ಟ ಹೆಣ್ಣಾದರೇನು? ಬುರ್ಖಾ ತೊಡದ ಹೆಣ್ಣಾದರೇನು? ಆತನ ಕಣ್ಣಿಗೆ ಎಲ್ಲ ಹೆಣ್ಣು ನಗ್ನವಾಗಿಯೇ ಕಾಣುತ್ತಾಳೆ. ಆ ಕಾರಣಕ್ಕಾಗಿ ನನಗೆ ಬುರ್ಖಾ ತೊಡಿಸಬೇಡಿ. ಬದಲಾಗಿ ಎಲ್ಲಾ ಸ್ತ್ರೀಯರಲ್ಲೂ ನಗ್ನತೆಯನ್ನು ಕಾಣುವ ಅವನ ಕಣ್ಣುಗಳಿಗೆ ಬುರ್ಖಾ ತೊಡಿಸಿ ಎಂದೆ. ಅದಕ್ಕೆ ಯಾರಲ್ಲೂ ಉತ್ತರವಿರಲಿಲ್ಲ. ಬಹುಷಃ ಬುರ್ಖಾದೊಳಗಿನ ನನ್ನ ಮಾತು ಅವರಿಗೆ ಕೇಳಿಸಿರಲಿಕ್ಕಿಲ್ಲ. ಮತ್ತೆ ನಾನು ಕಪ್ಪು ಬುರ್ಖಾವನ್ನು ದಿಟ್ಟಿಸಿ ನೋಡಿ ಸುಮ್ಮನಾದೆ.

ಆಯ್ಯೋ, ಬುರ್ಖಾ ಧರಿಸದಿದ್ದರೆ ನನ್ನನ್ನು ನೋಡುವ ದೃಷ್ಟಿಕೋನ ಒಂದಾದರೆ ಬುರ್ಖಾ ಧರಿಸಿದ ನನ್ನಂತಹಾ ಹೆಣ್ಣುಮಗಳನ್ನು ನೋಡುವ ದೃಷ್ಟಿಕೋನ ಬೇರೆಯದ್ದೇ. ಬುರ್ಖಾ sara abubakarತೊಟ್ಟು ಕಾಲೇಜಿಗೆ ಹೋದರೆ ಕಲವರು ನೋಡುವ ರೀತಿಯೇ ಬೇರೆ. ಪ್ರಚಂಚದ ಯಾವ ಮೂಲೆಯಲ್ಲಾದರೂ ಬಾಂಬ್ ಸ್ಟೋಟವಾದರೆ ಎಲ್ಲರ ಕಣ್ಣಿನ ನೋಟ ನನ್ನತ್ತ ಸುಳಿಯುತ್ತಿರುತ್ತದೆ. ಒಂದು ದಿನ ಕಾಲೇಜಿನ ಮೇಷ್ಟ್ರು ಇದ್ಯಾವುದಮ್ಮಾ ಹಳೆಯ ವೇಷ, ಕಾಲೇಜಿಗೆ ಬರುವಾಗ ಬುರ್ಖಾ ಧರಿಸಬೇಡ ಎಂದರು. ಈ ವಿಚಾರ ಮನೆಗೆ ಗೊತ್ತಾಗಿ, ಅಬ್ಬಾ ಮನೆಯಲ್ಲಿ ಕೊಲಾಹಲ ಎದ್ದುಬಿಟ್ಟಿತು. ದೂರದ ಪ್ರಾನ್ಸ್ ನಲ್ಲಿ ಬುರ್ಖಾ ಧರಿಸಲು ಅಲ್ಲಿಯ ಸರ್ಕಾರ ಅನುಮತಿ ನೀಡದಕ್ಕಾಗಿ ಅಲ್ಲಿಯ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. “ನೀನು ಅಷ್ಟೇ ಬುರ್ಖಾ ಹಾಕಿ ಕಾಲೇಜಿಗೆ ಹೋಗೋದು ಬೇಡವಾದರೆ ನೀನು ಶಿಕ್ಷಣ ಮುಂದುವರಿಸುವುದೇ ಬೇಡ” ಎಂದ ನನ್ನ ಸಹೋದರ ರಿಜ್ವಾನ್. ನನ್ನ ಅಸಹನೆ ಮೀರಿ ಹೋಗಿತ್ತು, ಲೋ, ರಿಜ್ವಾನ್ ಇಸ್ಲಾಮ್ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಧರ್ಮದ ಮಹಿಳೆಯರಿಗೂ ಕಡ್ಡಾಯ ಬುರ್ಖಾ ಧರಿಸಬೇಕೆಂದು ಅಲ್ಲಿಯ ಸರ್ಕಾರ ಆದೇಶ ಮಾಡಿರುವಾಗ ಪ್ರಾನ್ಸ್ ನಲ್ಲಿ ಬುರ್ಖಾ ನಿಶೇಧದ ಕುರಿತಾಗಿ ಮಾತನಾಡುವ ನೈತಿಕತೆ ನಿನಗೆಲ್ಲಿದೆ ಎಂದು. ಮತ್ತೆ ಕಪ್ಪು ಬುರ್ಖಾವನ್ನು ದಿಟ್ಟಿಸುತ್ತಾ ಸುಮ್ಮನಾದೆ.

ಇಲ್ಲ! ದಿನೇಶ್ ಅಮೀನ್ ಮಟ್ಟು ಅವರೇ, ನೀವು ರಹಸ್ಯ ಮತದಾನ ಮಾಡಿದರೂ ಮುಸ್ಲಿಮ್ ಮಹಿಳೆಯರು ಬುರ್ಖಾ ಬೇಡ ಅನ್ನೋದಿಲ್ಲ. ಯಾಕೆಂದರೆ ಅವರು greenಅದಕ್ಕೆ ಒಗ್ಗಿಕೊಂಡು ಹೋಗಿದ್ದಾರೆ. ಬುರ್ಖಾದೊಳಗೇ ಪ್ರಪಂಚವನ್ನು ನೋಡುವುದನ್ನು ಅವರು ಕಂಡುಕೊಂಡಿದ್ದಾರೆ. 7 ನೇ ತರಗತಿಗೆ ಕಾಲಿಡುತ್ತಿದ್ದಂತೆ ಅಮ್ಮಾ ನನಗೆ ಬುರ್ಖಾ ತೊಡಿಸು ಎಂದು ಮಗಳೇ ಒತ್ತಾಯಿಸುತ್ತಾಳೆ. ಸಮಾಜ, ಧರ್ಮ ಆ ಎಳೆ ಮನಸ್ಸನ್ನು ಆ ರೀತಿಯಲ್ಲಿ ಬದಲಾವಣೆ ಮಾಡಿದೆ. ಮನೆಯ ಮಗ ಧರ್ಮ ಮೀರಿ ಯಾವ ರೀತಿಯ ವಸ್ತ್ರನೂ ಧರಿಸಬಹುದು, ಆದರೆ ನಾನು ಮಾತ್ರ ಧರ್ಮದ ಇಂಚು ಇಂಚುಗಳನ್ನೂ ಪಾಲಿಸಬೇಕು. ಇದನ್ನು ಪ್ರಶ್ನಿಸಿದರೆ ಅಪ್ಪ ಪದೇ ಪದೇ ಧರ್ಮದ ಈ ಶ್ಲೋಕಗಳನ್ನು ನೆನಪಿಸುತ್ತಿರುತ್ತಾರೆ. “ನಿಮ್ಮಮನೆಗಳಲ್ಲೇ ಇದ್ದುಕೊಳ್ಳಿರಿ. ಗತಕಾಲದ ಅಜ್ಞಾನ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬೇಡಿರಿ” ( ಪವಿತ್ರ ಕುರ್ ಆನ್ 33:33 ), “ಮಹಿಳೆ ಬುದ್ದಿ ಮತ್ತು ಧರ್ಮ ಎರಡೂ ವಿಧದಲ್ಲಿ ದುರ್ಬಲರಾಗಿರುತ್ತಾರೆ” ( ಬುಖಾರಿ ) “ನಿಮ್ಮ ಸ್ರೀಯರಿಂದ ಆಜ್ಞೋಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ.” ಪವಿತ್ರ ಕುರ್ ಆನ್ ( 4:34 ). ಇವುಗಳನ್ನು ಅಪ್ಪನ ಬಾಯಿಂದ ಕೇಳುತ್ತಿದ್ದಂತೆ ನಾನು ಮತ್ತೆ ಸುಮ್ಮನಾದೆ. ನನ್ನಂತೆ ಲಕ್ಷಾಂತರ ಮಂದಿ ಹೀಗೆ ಮೌನಿಗಳಾಗಿದ್ದಾರೆ.

ನಾವೇ ಹೀಗಿರುವಾಗ, ದಿನೇಶ್ ಅಮೀನ್ ಮಟ್ಟು ನೀವ್ಯಾಕೆ ಸುಮ್ಮನೆ ನಿಷ್ಠುರರಾಗುತ್ತೀರಾ ಎಂದನಿಸುತ್ತದೆ. ಅದರ ಜೊತೆಗೆ ನನ್ನ ಮೌನಕ್ಕೆ ಧ್ವನಿಯಾದಿರಲ್ಲಾ ಎಂಬburkha sielence ಸಂತಸವೂ ಆಗುತ್ತಿದೆ. ಅಂದು ಕೆಟ್ಟ ಉದ್ದೇಶಕ್ಕಾಗಿ ಬುರ್ಖಾ ಬ್ಯಾನ್ ಮಾಡಲು ಹೊರಟ ಸಂಘಪರಿವಾರದ ನಿಲುವನ್ನು ನೀವು, ಮಂಗಳೂರಿನಲ್ಲಿ ನವೀನ್ ಸೂರಿಂಜೆ ಹಾಗೂ ಸಮಾನ ಮನಸ್ಕ ಪತ್ರಕರ್ತರು ವಿರೋಧಿಸಿದಾಗ ನಮ್ಮವರಿಗೆಲ್ಲಾ ನೀವು ನಮ್ಮೊಳಗಿನವರಾಗಿ ಕಂಡಿರಿ. ಆದರೆ ಇಂದು ಒಳ್ಳೆಯ ಉದ್ದೇಶಕ್ಕಾಗಿ ಮೌನಿಯಾಗಿರುವ ನನ್ನ ಮನದೊಳಗಿನ ಧ್ವನಿಗೆ ಧ್ವನಿಯಾಗುತ್ತಿರುವ ಕೆಲವೇ ಕೆಲವರಲ್ಲಿ ಒಂದು ಧ್ವನಿಯಾಗಿ ಸೇರಿಕೊಂಡ ನೀವು ನಮ್ಮವರಿಗೆಲ್ಲಾ ಇಸ್ಲಾಮ್ ವಿರೋಧಿಯಾಗಿ ಕಾಣುತ್ತಿದ್ದೀರಿ. ನೀವು ನಿಮ್ಮ ಧರ್ಮದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಬಗ್ಗೆ ಧ್ವನಿ ಎತ್ತಿದ್ದಾಗ ನಿಮ್ಮ ವಿರುದ್ಧ ಆ ವರ್ಗದ ಜನರು ಮುಗಿಬಿದ್ದಾಗ ನನ್ನ ಧರ್ಮದ ಮೂಲಭೂತವಾದಿಗಳು ನಿಮ್ಮನ್ನು ಜ್ಯಾತ್ಯಾತೀತ ಮನೋಭಾವದ ಉತ್ತಮ ವ್ಯಕ್ತಿಯಂತೆ ಕಂಡರು. ಆದರೆ ಇಂದು ನೀವು ನನ್ನ ಧರ್ಮದ ಬುರ್ಖಾ, ಮೂಲಭೂತವಾದದ ಕುರಿತಾಗಿ ಧ್ವನಿ ಎತ್ತಿದಕ್ಕಾಗಿ ಅಂದು ನಿಮ್ಮನ್ನು ಬೆಂಬಲಿಸಿದ ನನ್ನವರು ಇಂದು ನಿಮ್ಮ ಮೇಲೆ ಮುಗಿಬೀಳುತ್ತಿದ್ದಾರೆ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ನಿಮಗೆ ಬೆಂಬಲವನ್ನು ಸೂಚಿಸಲು ನನ್ನಂತಹಾ ಸಾವಿರಾರು ಧ್ವನಿಗಳು ನಿಮ್ಮೊಂದಿಗಿದೆ. ಆದರೆ ಏನು ಮಾಡೋಣ, ನನ್ನಂತಹಾ ಮಹಿಳೆಯರ ಮೌನಿ ಧ್ವನಿಗಳು ಯಾರಿಗೂ ಕೇಳಿಸುತಿಲ್ಲವಲ್ಲ”

“ಧರ್ಮ ಭ್ರಷ್ಟರಾದವರು ….”


-ಇರ್ಷಾದ್


 

 

 

ಈ ನಾಡಿನ ಸಾಕ್ಷಿಪ್ರಜ್ಞೆ  ನಮ್ಮೆಲ್ಲರ  ಮೇಷ್ಟ್ರು ಯು.ಆರ್. ಅನಂತಮೂರ್ತಿ ವಿಧಿವಶರಾದ ವಾರ್ತೆ ಮಾಧ್ಯಮಗಳಲ್ಲಿ ಬಿತ್ತರವಾಗುತಿದ್ದಂತೆ  ಮಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ
anathamurthy-death-crackers ಸಂಘಪರಿವಾರದ  ಕಾರ್ಯಕರ್ತರು ಪಟಾಕಿ  ಸಿಡಿಸಿ ಸಂಭ್ರಮಿಸಿ ವಿಕೃತಿ  ಮೆರೆದರು. ನಮ್ಮೆಲ್ಲರ ಧ್ವನಿಯಾಗಿದ್ದ  ಸಾಹಿತಿ ಯು. ಆರ್. ಅನಂತಮೂರ್ತಿ ಅವರ ಮೇಲಿನ ಕೋಪಕ್ಕೆ ಕಾರಣ ಅವರು ಸನಾತನವಾದಿಗಳನ್ನು ವಿರೋಧಿಸುತ್ತಿದ್ದರು ಎಂಬುದು. ಅವರು ಪುರೋಹಿತಶಾಯಿಯನ್ನು ತಿರಸ್ಕರಿಸಿದ್ದರು. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹೊಲಸು ಕಾರ್ಯಗಳನ್ನು ಖಂಡಿಸುತಿದ್ದರು. ಸಹಜವಾಗಿಯೇ ಅವರು ಸಂಘಪರಿವಾರ, ಪುರೋಹಿತಶಾಹಿ ವರ್ಗ ಹಾಗೂ ಸನಾತನವಾದಿಗಳ ಪಾಲಿಗೆ ಧರ್ಮಭ್ರಷ್ಟರಾದರು. ತಮ್ಮ ನೇರ ನಿಷ್ಠುರ ನಡೆಯಿಂದ ಅನ್ಯಾಯವನ್ನು, ತಪ್ಪನ್ನು ಎತ್ತಿತೋರಿಸಿದಕ್ಕಾಗಿ ಧರ್ಮದ ಗುತ್ತಿಗೆದಾರರು ಅವರನ್ನು ಹಿಂದೂ ಧರ್ಮವಿರೋಧಿಯನ್ನಾಗಿ  ಚಿತ್ರಿಸಿದರು. ಇದರ ಪರಿಣಾಮ ಯು.ಆರ್. ಅನಂತಮೂರ್ತಿ ಸಾವನ್ನು ಪಟಾಕಿ  ಸಿಡಿಸಿ  ಸಂಭ್ರಮಿಸಿ ತಮ್ಮ  ಕಲ್ಮಶಕಾರಿ ವಿಕೃತ  ಮನಸ್ಸನ್ನು ಖುಷಿಪಡಿಸಿದರು. ಇದು ಡಾ. ಯು.ಆರ್ ಅನಂತ ಮೂರ್ತಿ ಒಬ್ಬರಿಗೆ ಮಾತ್ರ  ಸೀಮಿತವಾಗಿಲ್ಲ. ಸತಾತನವಾದಿಗಳ, ಮೂಲಭೂತವಾದಿಗಳ, ಸಂಪ್ರದಾಯವಾದಿಗಳ ಹಾಗೂ ಧರ್ಮವನ್ನು  “ಗುತ್ತಿಗೆ”  ಪಡೆದುಕೊಂಡವರ ವಿರುದ್ಧ  ಯಾರು ಧ್ವನಿ ಎತ್ತುತ್ತಾರೋ ಅವರೆಲ್ಲರೂ ಒಂದೋ ದೇಶ ಬಿಡಬೇಕು ಅಥವಾ ನಿತ್ಯ ಹೀಗಳಿಕೆ, ಅವಮಾನ ಅಥವಾ ಜೀವ ಬೆದರಿಕೆಗಳ ನಡುವೆ ಬದುಕು ಸಾಗಿಸಬೇಕು. ಇಂತಹ ಹಲವು ಸಾಕ್ಷಿಪ್ರಜ್ಞೆಗಳ ಉದಾಹರಣೆಗಳು ನಮ್ಮೊಂದಿಗಿವೆ.

1848 ರಲ್ಲಿ ಪುಣೆಯಲ್ಲಿಪುರೋಹಿತಶಾಹಿ ವ್ಯವಸ್ಥೆಯನ್ನು ಧಿಕ್ಕರಿಸಿ ದಲಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಜ್ಯೋತಿಬಾsavithri bai pule ಫುಲೆ ಹಾಗೂ ಸಾವಿತ್ರಿ ಬಾಯಿ ಫುಲೆ ದಂಪತಿಗಳು ಮುಂದಾದಾಗ ಸನಾತನವಾದಿಗಳಿಗೆ ಫುಲೆ ದಂಪತಿಗಳು ಧರ್ಮಭ್ರಷ್ಟರಂತೆ ಕಂಡರು. ಈ ದಂಪತಿಗಳು ಸನಾತನವಾದಿಗಳಿಂದ  ಬಹಿಷ್ಕಾರಕ್ಕೂ ಒಳಗಾದರು. ಆದರೆ ಇದ್ಯಾವುದಕ್ಕೂ ಜಗ್ಗದೆ ಸಾವಿತ್ರಿ ಬಾಯಿ ಫುಲೆಯವರು ದಲಿತ ಹೆಣ್ಣು ಮಕ್ಕಳಿಗೆ ಪಾಠ  ಕಲಿಸಲು  ಶಾಲೆಗೆ ಹೋಗುವ ಸಂದರ್ಭದಲ್ಲಿ ನಿತ್ಯ ಅವಮಾನ, ಹೀಗಳಿಕೆಗೆ  ಗುರಿಯಾಗುತ್ತಿದ್ದರು. ಅವರ ಮೇಲೆ ಹೊಲಸು, ಕೆಸರು, ಕಲ್ಲುಗಳನ್ನು  ಎಸೆಯುತ್ತಿದ್ದರು ಸನಾತನ ಸಂಪ್ರದಾಯವಾದಿಗಳು ತಮ್ಮ ತಮ್ಮ  ವಿಕೃತಿ ಮೆರೆದಿದ್ದರು.

ಪಾಕಿಸ್ಥಾನದ  ಸರ್ವಾಧಿಕಾರಿ  ರಾಷ್ಟ್ರಾಧ್ಯಕ್ಷ ಜಿಯಾ-ಉಲ್ –ಹಕ್  ಸರ್ಕಾರದಲ್ಲಿ ರಾಜತಾಂತ್ರಿಕ ಹುದ್ದೆ  ಪಡೆದ ಮೊದಲ ಮಹಿಳೆಯಾಗಿದ್ದ ಆಸ್ಮಾ ಬಾರ್ಲಸ್.  ಇವರನ್ನು ಜಿಯಾ-ಉಲ್ –ಹಕ್ ನೌಕರಿಯಿಂದ  ಕಿತ್ತೆಸೆದರು. ಅಲ್ಲದೆ ಕೆಲ ಸಮಯದಲ್ಲೇ ಪಾಕಿಸ್ಥಾನದಿಂದ ಇವರನ್ನು ಹೊರಗಟ್ಟಲಾಯಿತು. ‘ದಿ ಮುಸ್ಲಿಮ್’  ಎಂಬ ಪ್ರಮುಖ ಪತ್ರಿಕೆಯ ಉಪಸಂಪಾದಕರಾಗಿದ್ದ, ಸ್ತ್ರೀವಾದಿ ವಿದ್ವಾಂಸರೆಂದು ಪ್ರಸಿದ್ದಿಪಡೆದಿದ್ದ  ಆಸ್ಮಾ ಬಾರ್ಲಸ್  ಅವರನ್ನು ಪಾಕಿಸ್ಥಾನದಿಂದ  ಹೊರಗಟ್ಟಲು ಕಾರಣ ಅವರು ಇಸ್ಲಾಂ ಧರ್ಮದ  ನ್ಯಾಯ  ಶಾಸ್ತ್ರ ಶರಿಯಾ  ವಿರುದ್ಧ ಧ್ವನಿ ಎತ್ತಿದರು asma balrlasಎಂಬ  ಕಾರಣಕ್ಕಾಗಿ. ಸ್ತ್ರೀ  ದ್ವೇಷ  ಹಾಗೂ ಕಾಮುಕತೆಗಳಿಗೆ ಹೆಸರುವಾಸಿಯಾದ ಅಬ್ಬಾಸಿದ್ದರ ಕಾಲದಲ್ಲಿ ಇಸ್ಲಾಮೀ ಕಾನೂನು ಪಂಡಿತರಿಂದ ರಚಿತವಾದ  ಶರಿಯಾ ಪುರಷ ಪಕ್ಷಪಾತಿ ಮತ್ತು ಸ್ತ್ರೀ ವಿರೋಧಿಯಾಗಿದೆ ಎಂಬ ವಾದವನ್ನು ಅಸ್ಮಾ ಮಂಡಿಸಿದ್ದರು. ಶರಿಯಾ  ಕಾನೂನು  ವ್ಯವಸ್ಥೆಯ ಅತ್ಯುಗ್ರ  ಶಿಕ್ಷೆ ಅಪರಾಧಿಯನ್ನು ಕಲ್ಲು ಹೊಡೆದು ಸಾಯಿಸುವುದು. “ಇದು  ನ್ಯಾಯ  ವಿರೋಧಿ  ಕಾನೂನು ಹಾಗೂ  ಕುರುಆನ್ ಉಲ್ಲಂಘನೆ. ಕುರ್ ಆನ್ ಯಾವುದೇ ರೀತಿಯ  ಅಪರಾಧಕ್ಕೂ  ಈ ರೀತಿ  ಶಿಕ್ಷೆಯನ್ನು  ನೀಡುವುದನ್ನು ಒಪ್ಪುವುದಿಲ್ಲ”  ಎಂದು  ಆಸ್ಮಾ  ಬಾರ್ಲಸ್ ಒತ್ತಿ ಹೇಳಿದ್ದರು. ಆಸ್ಮಾ  ಅವರ ನಡೆ ಪಾಕಿಸ್ಥಾನದ ಮೂಲಭೂತವಾದಿಗಳಿಗೆ ಧರ್ಮ ವಿರೋಧಿಯಾಗಿ ಕಾಣಿಸಿತು. ಪರಿಪೂರ್ಣ ಇಸ್ಲಾಂ ವ್ಯವಸ್ಥೆಯನ್ನು  ಜಾರಿಗೆ  ತರಲು ಹೊರಟ ಪಾಕಿಸ್ಥಾನಿ ಮೂಲಭೂತವಾದಿಗಳು ಆಸ್ಮಾ  ವಾದವನ್ನು  ಇಸ್ಲಾಂ  ವಿರೋಧಿ ಎಂದು ಖಂಡಿಸಿ ಪಾಕಿಸ್ಥಾನದಿಂದ ಅವರನ್ನು  ಹೊರಗಟ್ಟಿದರು.  ಆಸ್ಮಾ  ಪಾಕಿಸ್ಥಾನಿಗಳ  ಪಾಲಿಗೆ ಧರ್ಮಭ್ರಷ್ಟರಾದರು.

ಲಜ್ಜಾ ಕಾದಂದಬರಿ  ಮೂಲಕ ಪ್ರಸಿದ್ದಿ ಪಡೆದ  ಲೇಖಕಿ  ತಸ್ಲೀಮಾ  ನಸ್ರೀನಾ. ಬಾಂಗ್ಲಾದೇಶದ  ಬಹುಸಂಖ್ಯಾತ ಮುಸ್ಲಿಮ್ ಮೂಲಭೂತವಾದಿಗಳ taslima-nasreenಧೋರಣೆ, ಅಲ್ಲಿಯ ಅಲ್ಪಸಂಖ್ಯಾತ  ಹಿಂದೂಗಳ ಮೇಲೆ  ನಡೆಯುತ್ತಿರುವ ದಬ್ಬಾಳಿಗೆ ವಿರುದ್ಧ  ಧ್ವನಿ ಎತ್ತಿದರು.  ಲೇಖನಿಯ ಮೂಲಕ ಧರ್ಮದ  ಹೆಸರಲ್ಲಾಗುವ ಶೋಷಣೆಯನ್ನು ಖಂಡಿಸಿದರು. ಕೆಲವೇ  ಸಮಯದಲ್ಲಿ  ಬಾಂಗ್ಲಾ ಮುಸ್ಲಿಮ್ ಮುಲ್ಲಾಗಳ  ಪಾಲಿಗೆ ತಸ್ಲೀಮಾ ನಸ್ರೀನಾ ಧರ್ಮವಿರೋಧಿ  ಹೆಣ್ಣಾಗಿ ಕಾಣಲಾರಂಭಿಸಿದಳು. ಆಕೆಯ  ವಿರುದ್ಧ ಕೆಲ ಇಸ್ಲಾಮ್ ತೀವೃವಾದಿ ಸಂಘಟನೆಗಳು ಕೊಲೆಯ ಪತ್ವಾ ಹೊರಡಿಸಿದವು. ತನ್ನ ಹುಟ್ಟೂರು ಬಾಂಗ್ಲಾದೇಶದಿಂದಲೇ ತಸ್ಲೀಮಾರನ್ನು ಧರ್ಮಭ್ರಷ್ಟೆಯೆಂಬ ಹಣೆಪಟ್ಟಿಯೊಂದಿಗೆ ಹೊರಗಟ್ಟಲಾಯಿತು.

ಮಂಗಳೂರಿನಲ್ಲಿ ಇಂತಹ ಹಲವು ನಿದರ್ಶನಗಳು ಸಿಗುತ್ತವೆ.  ಸಂಘಪರಿವಾರದ  ಕೋಮುವಾದ, ನೈತಿಕ ಪೊಲೀಸ್ ಗಿರಿ  ವಿರುದ್ಧ  ಧ್ವನಿ ಎತ್ತಿ, ಕೋಮುವಾದಿಗಳ  suresh bakrabailಅಟ್ಟಹಾಸವನ್ನು ಹೊರ ಜಗತ್ತಿಗೆ  ಅನಾವರಣಗೊಳಿಸುತ್ತಿರುವ ಲೇಖಕ  ಸುರೇಶ್  ಭಟ್ ಬಾಕ್ರಬೈಲ್ ಸಂಘಪರಿವಾರದ ಕೋಮುವಾದಿ ಕೃತ್ಯಗಳನ್ನು ವಿರೋಧಿಸಿದಕ್ಕಾಗಿ ಧರ್ಮಭ್ರಷ್ಟರಾಗಬೇಕಾಯಿತು. ಇತ್ತೀಚೆಗೆ  ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವ ವೇಳೆಯಲ್ಲಿ  ಸಂಘಪರಿವಾರದ ಕಿಡಿಗೇಡಿಗಳು  ಅವರ ಮುಖಕ್ಕೆ ಸೆಗಣಿ ಎರಚಿ  ತಮ್ಮ  ವಿಕೃತಿ ಮೆರೆದಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್‌  ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಅವರ  ಮೇಲೂ ಕೂಡಾ ಸಂಘಪರಿವಾರದ ಕುಕೃತ್ಯಗಳ  ವಿರುದ್ಧ  ಧ್ವನಿ ಎತ್ತಿದಕ್ಕಾಗಿ ಸೆಗಣಿ ಎರಚಿ ಹಲ್ಲೆ ನಡೆಸಿ ಸಂಘಪರಿವಾರಿಗಳು ತಮ್ಮ ಅಸಹನೆಯನ್ನು ತೀರಿಸಿಕೊಂಡರು.

’ಚಪ್ಪಲಿಗಳು’ ಕೃತಿಯ ಮೂಲಕ ಮಂಗಳೂರಿನ ಮುಸ್ಲಿಮ್  ಮೂಲಭೂತವಾದಿಗಳ ಕೆಂಗಣ್ಣಿಗೆ  sara abubakarಗುರಿಯಾದವರು  ಲೇಖಕಿ  ಸಾರಾ ಅಬೂಬಕ್ಕರ್. ಮುಸ್ಲಿಮ್ ಸಮಾಜದ ಹೆಣ್ಣಿನ ಸ್ಥಿತಿ ಗತಿ, ಇಸ್ಲಾಮ್ ಪುರುಷ ಪ್ರಧಾನ ಸಮಾಜದಲ್ಲಿ ಮುಸ್ಲಿಮ್ ಮಹಿಳೆಯಗಿರುವ ಸ್ವಾತಂತ್ರ, ತಲಾಕ್ ದುರುಪಯೋಗದ  ಕುರಿತಾಗಿ ಧ್ವನಿ ಎತ್ತಿದವರು ಸಾರಾ ಅಬೂಬಕ್ಕರ್. ಇಸ್ಲಾಮ್  ಧರ್ಮದ ಮೌಲ್ಯಗಳ ವಿರುದ್ಧ ಮಾತನಾಡುತಿದ್ದಾರೆ ಎಂಬ ಕಾರಣಕ್ಕಾಗಿ ಮುಸ್ಲಿಮ್ ಮೂಲಭೂತವಾದಿಗಳು ಸಾರಾ ಅಬೂಬಕ್ಕರ್ ಅವರನ್ನೂ ಬಿಟ್ಟಿಲ್ಲ. ಮುಸ್ಲಿಮ್ ಮೂಲಭೂತವಾದಿಗಳ ಪಾಲಿಗೆ  ಸಾರಾ ಅಬೂಬಕ್ಕರ್ ಒಬ್ಬ ಧರ್ಮಭ್ರಷ್ಟೆ ಮಹಿಳೆಯಾಗಿ  ಕಂಡರು. ಅವರ ಮೇಲೂ ದೈಹಿಕ ಹಲ್ಲೆ ನಡೆದವು. ಇವರ ಜೊತೆಗೆ ಕರಾವಳಿಯಲ್ಲಿ ಮುಸ್ಲಿಮ್ ಮೂಲಭೂತವಾದ, ಮೌಢ್ಯತೆಯ ವಿರುದ್ಧ ಮಾತನಾಡಿದ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞ  ಅವರನ್ನೂ ಬಿಟ್ಟಿಲ್ಲ ಮೂಲಭೂತವಾದಿyogish master ವಿಕೃತ ಸಂತೋಷಿಗಳು.  ಅವರ ಮೇಲೆಯೂ  ಕಲ್ಲೆಸೆದರು. ಜೀವ ಬೆದರಿಕೆಗಳನ್ನು ಒಡ್ಡಿದ್ದರು.

 ಪುರೋಹಿತಶಾಹಿತ್ವವನ್ನು ವಿರೋಧಿಸಿ  ಸಾಮಾಜಿಕ ತಾಣದಲ್ಲಿ ತಮ್ಮ ಅಭಿಪ್ರಾಯವನ್ನು  ವ್ಯಕ್ತಪಡಿಸಿದಕ್ಕಾಗಿ ಜನಪರ ಹೋರಾಟಗಾರ್ತಿ ಪ್ರಭಾ ಅವರನ್ನು ಪುರೋಹಿತಶಾಹಿಯ ವಕ್ತಾರನೊಬ್ಬ ಜುಟ್ಟು ಹಿಡಿದು ಅತ್ಯಾಚಾರ ಎಸಗಲು ಕರೆ ನೀಡಿದ್ದನು. ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಸ್ವಾಮಿ ವಿವೇಕಾನಂದರ ಕುರಿತಾಗಿ  ಅಂಕಣ  ಬರೆದಾಗಲೂ, ಕಾದಂಬರಿಕಾರ ಯೋಗೀಶ್  ಮಾಸ್ಟರ್ ಡುಂಡಿ  ಕೃತಿ  ಬರೆದಾಗಲೂ ಇದೇ ಮನಸ್ಥಿತಿಗಳಿಂದ ವಿರೋಧ, ಬೆದರಿಕೆಗಳನ್ನು  ಎದುರಿಸಬೇಕಾಯಿತು. ಸಂಸ್ಕೃತಿಯ ಹೆಸರಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಅಟ್ಟಹಾಸ ಮೆರೆದ ಅನೈತಿಕ  ಪೊಲೀಸರ  ವಿಕೃತಿಯನ್ನು  ಮಾಧ್ಯಮದಲ್ಲಿ  ವರದಿ  ಮಾಡಿದಕ್ಕಾಗಿ ಪತ್ರಕರ್ತ ನವೀನ್ ಸೂರಿಂಜೆ ಕೂಡಾ ಧರ್ಮಭ್ರಷ್ಟರಾದರು.

ಹೀಗೆ  ಪಟ್ಟಿ ಮಾಡಿದರೆ  ಇಂಥಹಾ  ನೂರಾರು  ಧರ್ಮಭ್ರಷ್ಟರು ನಮ್ಮ ಕಣ್ಣ ಮುಂದೆ ಬರುತ್ತಾರೆ. ಇವರೆಲ್ಲಾ ಮಾಡಿದ ತಪ್ಪುಗಳು ತಮ್ಮ ತಮ್ಮprabha belavangala ಧರ್ಮದ, ಪುರೋಹಿತಶಾಹಿಯ ಹಾಗೂ ಮೂಲಭೂತವಾದದ ವಿರುದ್ಧ ಜನ ಸಾಮಾನ್ಯರ, ಶೋಷಿತರ, ಮಹಿಳೆಯರ ಧ್ವನಿಯಾಗಿ ಕೆಚ್ಚೆದೆಯಿಂದ ನಿಂತಿದ್ದು ಮಾತ್ರವಲ್ಲದೆ ತಮ್ಮ ಅಭಿಪ್ರಾಯಗಳನ್ನು ಯಾವುದೇ ಮುಲಾಜಿಗೆ ಒಳಗಾಗದೆ ಅಭಿವ್ಯಕ್ತಿಪಡಿಸಿದ್ದು. ಪರಿಣಾಮ ಸನಾತನಿವಾದಿಗಳ, ಮೂಲಭೂತವಾದಿಗಳ ಪಾಲಿಗೆ  ಶತ್ರುಗಳಾಗಿ ಬಿಂಬಿತರಾದರು. ಸಮಾಜದಲ್ಲಿರುವ ಯಾವುದೇ ಧರ್ಮದ ಅಥವಾ ಸಂಪ್ರಾಯದವಾದದ ಕೊಳಕುಗಳ ವಿರುದ್ಧ ಧ್ವನಿ ಎತ್ತತ್ತಿರುವವರು ಹೀಗೆ ಬೆದರಿಕೆ, ಹೀಗಳಿಕೆಗಳಿಗೆ  ಒಳಗಾಗುತ್ತಾ ಬಂದಿದ್ದಾರೆ. ಪುಲೆ ದಂಪತಿಗೆ ಕೊಳಕು ಎಸೆದ ಮನಸ್ಥಿತಿಗಳೇ ಇಂದು ಡಾ. ಯು.ಆರ್. ಅನಂತಮೂರ್ತಿ ಸಾವನ್ನು  ಪಟಾಕಿ  ಸಿಡಿಸಿ  ಸಂಭ್ರಮಿಸಿದೆ. ಮಹಾತ್ಮಗಾಂಧಿಯವರಿಗೂ  ಗುಂಡಿಕ್ಕಿ ಅವರ  ಸಾವನ್ನು ಸಂಭ್ರಮಿಸಿದೆ. ಅಂಬೇಡ್ಕರ್ ಸಾವನ್ನೂ ಸಂಭ್ರಮಿಸಿದ್ದಾರೆ. ಈ ಕೊಳಕು ಮನಸ್ಥಿತಿಗಳ ವಿರುದ್ಧ ಧ್ವನಿ ಎತ್ತುವ ಇನ್ನಷ್ಟು ಸಾವುಗಳು  ಸಂಭವಿಸುವಾಗಲೂ  ಅವರು  ಸಂಭ್ರಮಿಸುತ್ತಲೇ  ಇರುತ್ತಾರೆ. ಯಾಕೆಂದರೆ ಈ ಹುತಾತ್ಮ ಸಾಕ್ಷಿಪ್ರಜ್ಞೆಗಳ ವಾದವನ್ನು ವೈಚಾರಿಕವಾಗಿ ಎದುರಿಸಲು ಸಾಧ್ಯವಾಗದೆ ಸೋತಾಗ ಅವರ ಅಸಹನೆಯನ್ನು ಈ ಮೂಲಕವಾದರೂ ತೋರ್ಪಡಿಸಿ ವಿಕೃತ ತೃಪ್ತಿಯನ್ನು  ಪಡೆದುಕೊಳ್ಳುತ್ತಾರೆ.  ಇದು  ಒಂದು  ಸಮುದಾಯ, ಮತ,  ಧರ್ಮಕ್ಕೆ  ಮಾತ್ರ  ಸೀಮಿತವಾಗಿಲ್ಲ. ಎಲ್ಲಾ ಮತ ಧರ್ಮಗಳ  ಸನಾತನಿಗಳ, ಮೂಲಭೂತವಾದಿಗಳ  ಮನಸ್ಥಿತಿಯಲ್ಲಿananthamurthy ಯಾವುದೇ  ವ್ಯತ್ಯಾಸ ಕಾಣೋದಿಲ್ಲ. ಈ ಕೊಳಕು ಮನಸ್ಥಿತಿಗಳ ವಿರುದ್ಧ  ಧ್ವನಿ ಎತ್ತುವವರು ಶಾಶ್ವತ ಧರ್ಮಭ್ರಷ್ಟರಾಗುತ್ತಾರೆ. ಇಂಥಹಾ ಧರ್ಮಭ್ರಷ್ಟರ ಪಾಲಿಗೆ ಇನ್ನಷ್ಟು  ಧ್ವನಿಗಳು  ಜೊತೆ ಗೂಡಬೇಕಾದ ಅನಿವಾರ್ಯತೆ  ಇದೆ. ಅದಕ್ಕೆ ಫೈಜ್  ಹೀಗಂದಿರಬೇಕು……

ಕಸಿದುಕೊಂಡರೇನು ಲೇಖನಿ ಕಾಗದವ
ಅದ್ದುಕೊಂಡಿದ್ದೇನೆ ಬೆರಳುಗಳನ್ನು ಎದೆಯ ರಕ್ತದಲಿ
ಬೀಗ ಹಾಕಿದರೇನು ನಾಲಗೆಗೆ
ಇಟ್ಟಿದ್ದೇನೆ ನಾಲಗೆಯನ್ನು ಸರಪಳಿಯ ಕೊಂಡಿ ಕೊಂಡಿಯಲಿ.

ಹಿಂದೂ ನೈತಿಕ ಪೋಲಿಸರ ಬೆನ್ನು ತಟ್ಟಿದ ಮುಸ್ಲಿಮ್ ಮೂಲಭೂತವಾದಿಗಳು


-ಇರ್ಷಾದ್


 

 

 

“ ಚೆಡ್ಡಿಗಳು  ಆ ಮುಸ್ಲಿಂ ಜೋಡಿಗೆ ಹೊಡೆದದ್ದು ಒಳ್ಳೆಯದಾಯಿತು, ಬಿಡಿ.  ಬುರ್ಖಾ  ತೊಡದೆ ಹುಡುಗನ ಜೊತೆ ತಿರುಗಾಡಿದ ಆಕೆಗೆ ಎರಡೇಟು  ನೀಡಿ ಒಳ್ಳೆ ಕೆಲಸ  ಮಾಡಿದರು ”. ಇದು ದಕ್ಷಿಣ  ಕನ್ನಡ  ಜಿಲ್ಲೆಯ ಉಜಿರೆಯಲ್ಲಿ ಸಂಘಪರಿವಾರದ ನೈತಿಕ ಪೊಲೀಸರು ಮುಸ್ಲಿಮ್ ಸಮುದಾಯದ ಜೋಡಿಗೆ ಭಿನ್ನ ಕೋಮಿನ ಪ್ರೇಮಿಗಳೆಂದು ಅಪಾರ್ಥ ಮಾಡಿಕೊಂಡು  ಹಲ್ಲೆ ನಡೆಸಿದ ಅಮಾನವೀಯ ಘಟನೆಯ  ನಂತರ ಕೆಲ ಮುಸ್ಲಿಮ್  ಮೂಲಭೂತವಾದಿ ಗುಂಪುಗಳಿಂದ ಸಂಘಪರಿವಾರದ ಅನೈತಿಕ  ಪೊಲೀಸರಿಗೆ  ಸಿಕ್ಕಿದ  ಶಹಬ್ಬಾಸ್  ಗಿರಿ. ಕರಾವಳಿಯಲ್ಲಿ ಮುಸ್ಲಿಂ ಹುಡುಗ- ಹಿಂದೂ  ಯುವತಿಯ  ಜೊತೆ ಕಾಣ ಸಿಕ್ಕರೆ  ಸಂಘಪರಿವಾರದ ನೈತಿಕ ಪೊಲೀಸರು  ಹಲ್ಲೆ ನಡೆಸುತ್ತಾರೆ. ಮುಸ್ಲಿಂ ಯುವತಿ ಹಿಂದೂ ಯುವಕನ ಜೊತೆ ತಿರುಗಾಡಿದರೆ ಮುಸ್ಲಿಂ ಮೂಲಭೂತವಾದಿ ನೈತಿಕ ಪೊಲೀಸರು ಅವರ ಮೇಲೆ ಮುಗಿಬೀಳುತ್ತಾರೆ. ಇದು ಕರಾವಳಿಯಲ್ಲಿ  ಸಾಮಾನ್ಯ. ಆದರೆ  ಕೆಲವೊಮ್ಮೆ ನೈತಿಕ ಪೊಲೀಸರ ಯಡವಟ್ಟಿನಿಂದಾಗಿ ಸ್ವಧರ್ಮದ ಜೋಡಿಗಳೂ ಏಟು ತಿನ್ನಬೇಕಾಗುತ್ತದೆ.

ಎರಡು  ತಿಂಗಳ ಹಿಂದೆ  ಉತ್ತರ ಭಾರತ ಮೂಲದ ವಿವಾಹ ನಿಶ್ಚಿತ  ಮುಸ್ಲಿಂ ಜೋಡಿಯ ಮೇಲೆ ಮಂಗಳೂರಿನ ಸುರತ್ಕಲ್ ಎಂಬಲ್ಲಿ ಹಿಂದೂಪರ  ಸಂಘಟನೆಗಳ images1ಕಾರ್ಯಕರ್ತರೆನ್ನಲಾದ  ಗುಂಪು ಹಲ್ಲೆ ನಡೆಸಿತ್ತು. ಅಲ್ಲೂ ಮುಸ್ಲಿಮ್ ಯುವಕನ ಜೊತೆಗಿದ್ದ ಮಸ್ಲಿಮ್ ಯುವತಿ ಬುರ್ಖಾ  ಧರಿಸಿರಲಿಲ್ಲ. ಈ ಕಾರಣದಿಂದ ತಪ್ಪಾಗಿ ಅರ್ಥೈಸಿಕೊಂಡ ನೈತಿಕ ಪೊಲೀಸರು ಅವರ ಮೇಲೆ ಹಲ್ಲೆ  ನಡೆಸಿದ್ದರು.  ದಿನಾಂಕ  16 -7-14  ಬುಧವಾರದಂದು  ಚಿಕ್ಕಮಗಳೂರಿನ ಮುಸ್ಲಿಂ ಯುವಕ ಹಾಗೂ ಉಡುಪಿಯ ಮುಸ್ಲಿಂ ಯುವತಿ ದಕ್ಷಿಣ  ಕನ್ನಡ  ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಗೆ ಬಂದಿದ್ದರು. ಈ ಜೋಡಿಗೆ ವಿವಾಹ ನಿಶ್ಚಿತಾರ್ಥವೂ  ಆಗಿತ್ತು. ಯುವತಿಯ  ಸಹೋದರಿಯ  ಕಾಲೇಜು ಸೇರ್ಪಡೆ ವಿಚಾರವಾಗಿ ಈ ಮುಸ್ಲಿಂ  ಜೋಡಿ ಬೆಳ್ತಂಗಡಿಗೆ ಬಂದಿತ್ತು. ಬೆಳ್ತಗಂಗಡಿ ತಾಲೂಕಿನ ಉಜಿರೆಯಲ್ಲಿ  ಜೊತೆಗೆ  ತಿರುಗಾಡುತ್ತಿದ್ದ  ಯುವಕ –ಯುವತಿ  ಸಂಘಪರಿವಾರದ  ನೈತಿಕ ಪೊಲೀಸರ ಕಣ್ಣಿಗೆ  ಬಿದ್ದರು. ತಕ್ಷಣ  ಧರ್ಮಪ್ರೆಜ್ಞೆಯಿಂದ  ಜಾಗೃತಗೊಂಡ  ಯುವಕರ  ತಂಡ  ಅವರನ್ನು  ಗಮನಿಸತೊಡಗಿತು. ಯುವಕ ಮೊದಲ ನೋಟಕ್ಕೆ  ಮುಸ್ಲಿಂ ಸಮುದಾಯಕ್ಕೆ  ಸೇರಿದವನೆಂದು ಖಾತ್ರಿ ಮಾಡಿಕೊಂಡ ಅವರು ಆತನ ಜೊತೆಗಿದ್ದ ಯುವತಿ ಹಿಂದೂ  ಎಂದು ನಿರ್ಧರಿಸಿಬಿಟ್ಟರು. ಯಾಕೆಂದರೆ  ಆಕೆ ಇಸ್ಲಾಂ ಧಾರ್ಮಿಕ ಶೈಲಿಯ ಬುರ್ಖಾ ಧರಿಸಿರಲಿಲ್ಲ. ತಕ್ಷಣವೇ  “ಹಿಂದೂ ಯುವತಿಯ ಜೊತೆಗೆ  ಸುತ್ತಾಡುತ್ತೀಯಾ  ಬ್ಯಾರಿ” ಎಂದು ಜೋಡಿ ಕಡೆ ಮುನ್ನುಗ್ಗಿದ ನೈತಿಕ ಪೊಲೀಸರ  ತಂಡ ಅವರಿಗೆ ಹಿಗ್ಗಾ ಮುಗ್ಗಾ ಥಳಿಸಿತು. ಏನು  ನಡೆಯುತ್ತಿದೆ  ಎಂದು  ಅರಿಯದ ಆ ಮುಗ್ದ  ಜೋಡಿ  ಸಾವರಿಸಿಕೊಂಡು  ನಾವಿಬ್ಬರೂ ಮುಸ್ಲಿಂ ಸಮುದಾಯಕ್ಕೆ  ಸೇರಿದವರು ನಮಗೆ ಹೊಡೀಬೇಡಿ  ಎಂದು ಪರಿ ಪರಿಯಾಗಿ ಬೇಡಿಕೊಂಡರು. ಅಷ್ಟಕ್ಕೂ  ಸುಮ್ಮನಾಗದ ನೈತಿಕ ಪೊಲೀಸರಿಗೆ ತಮ್ಮ ಗುರುತು ಚೀಟಿಯನ್ನೂ  ತೋರಿಸಿದರು. ಇಷ್ಟಕ್ಕೂ ಸಂಘಪರಿವಾರದ  ನೈತಿಕ  ಪೊಲೀಸರಿಗೆ ನಂಬಿಕೆ ಬರಲಿಲ್ಲ  ಕಾರಣ  ಆಕೆ  ಬುರ್ಖಾ  ಧರಿಸಿರಲಿಲ್ಲ.

ಈ  ವಿಚಾರ  ಎಲ್ಲಾ ಮಾಧ್ಯಮಗಳಲ್ಲೂ  ಪ್ರಸಾರ  ಆದ  ನಂತರ ಸಂಘಪರಿವಾರದ  ನೈತಿಕ  ಪೊಲೀಸರಿಗೆ  ತಮ್ಮ  ಯಡವಟ್ಟಿನ ಅರಿವಾಯಿತು. ಇದು  ಇನ್ನೇನು ತಿರುವು  ಪಡೆದುಕೊಳ್ಳುತ್ತಾ  ಎಂಬ ಕುತೂಹಲದಲ್ಲಿದ್ದ ಸಂಘಪರಿವಾರದ ನೈತಿಕ ಪೊಲೀಸರಿಗೆ ಮತ್ತೊಂದು  ಅಚ್ಚರಿ  ಕಾದಿತ್ತು. ಅದೇನೆಂದರೆ ಅನೇಕ  ಮುಸ್ಲಿಂ  ಮೂಲಭೂತವಾಧಿಗಳು  ಸಂಘಪರಿವಾರದ  ನೈತಿಕ ಪೊಲೀಸರ  ಅಮಾನವೀಯ  ಕೃತ್ಯವನ್ನು ಬೆಂಬಲಿಸಿದರು ಸಮರ್ಥಿಸಿದರು. ಬೆನ್ನುತಟ್ಟಿದರು ! ಕರಾವಳಿ ಭಾಗದಲ್ಲಿ ಹಿಂದೂಪರ  ಸಂಘಟನೆಗಳು  ನಡೆಸುತ್ತಿರುವ ವಿವಿಧ  ರೀತಿಯ  ನೈತಿಕ  ಪೊಲೀಸ್  ಗಿರಿಯಿಂದ ನಾನಾ  ರೀತಿಯ  ತೊಂದರೆಗಳನ್ನು  ಅನುಭವಿಸುತ್ತಿರುವ ಮುಸ್ಲಿಂ  ಸಮುದಾಯದ ಯುವಕರು ಉಜಿರೆಯಲ್ಲಿ ನೈತಿಕ ಪೊಲೀಸರು  ಮುಸ್ಲಿಂ  ಜೋಡಿಯ ಮೇಲೆ ಹಲ್ಲೆ ನಡೆಸಿ ಅಮಾನವೀಯ  ಪ್ರದರ್ಶನ  ಮಾಡಿದಾಗ ಅದನ್ನು ಸಮರ್ಥಿಸುತ್ತಿರುವ ಮನಸ್ಥಿತಿ ನೋಡಿ ನನಗೆ  ಆಶ್ವರ್ಯವೇನೂ ಆಗಿಲ್ಲ. ಬದಲಾಗಿ ಆ  ಮುಸ್ಲಿಂ ಯುವತಿಯ ಅಸಾಹಯಕ ಸ್ಥಿತಿ  ನೋಡಿ ಮರುಕ ಹುಟ್ಟಿತು.

ಇಸ್ಲಾಂ  ಧರ್ಮದಲ್ಲಿ ಪರ್ದಾ  ಒಂದು ಸಂಪ್ರದಾಯ. ಅಂದ  ಮಾತ್ರಕ್ಕೆ ಅದಕ್ಕೆಇಸ್ಲಾಂ  ಧರ್ಮದಲ್ಲಿ  ಯಾವುದೇ ಬಲವಂತವಿಲ್ಲ.  ಹೆಚ್ಚಿನ  ಮುಸ್ಲಿಂ  ಸಮುದಾಯದ  imagesಮಹಿಳೆಯರು  ಬುರ್ಖಾ  ಧರಿಸುತ್ತಾರೆ.  ಇನ್ನು ಅನೇಕರು ಧರಿಸುವುದಿಲ್ಲ. ಆದರೆ ಬುರ್ಖಾ ವಿಚಾರ ಉಭಯ  ಧರ್ಮದ ಮೂಲಭೂತವಾದಿಗಳು ತಮ್ಮ  ಬೇಳೆ ಬೇಯಿಸಲಿಕ್ಕೋಸ್ಕರ  ಬಳಸುತ್ತಿರುವುದರಿಂದ ಪ್ರಸ್ತುತ ದಿನಗಳಲ್ಲಿ  ಮುಸ್ಲಿಂ ಮಹಿಳೆ  ಬುರ್ಖಾ ವಿಚಾರದಲ್ಲಿ ಮಾನಸಿಕ ಕಿರುಕುಳ  ಅನುಭವಿಸುವಂತಾಗಿದೆ.  ಒಂದೆಡೆ ಶಾಲಾ ಕಾಲೇಜುಗಳಲ್ಲಿ  ಮುಸ್ಲಿಂ  ಯುವತಿಯರು ಬುರ್ಖಾ ಅಥವಾ ಸ್ಕಾರ್ಫ್ ಧರಿಸುವುದನ್ನು ಏಕರೂಪದ  ಸಮವಸ್ತ್ರದ ವಿಚಾರದಲ್ಲಿ ವಿರೋಧಿಸಲಾಗುತ್ತದೆ. ಇಂಥಹಾ ವಿರೋಧದ  ನಡುವೆಯೂ  ಬುರ್ಖಾವನ್ನು  ಧರಿಸುವ ಮುಸ್ಲಿಂ ಹೆಣ್ಣನ್ನು  ಸಮಾಜ  ನೋಡುವ ದೃಷ್ಟಿಕೋನವೇ  ಬೇರೆ. ದೇಶದ ಯಾವುದೇ ಮೂಲೆಯಲ್ಲಿ  ಬಾಂಬ್ ಸ್ಟೋಟವಾದಲ್ಲಿ  ಮುಸ್ಲಿಂ  ಗಡ್ಡಧಾರಿಗಳು ಸಮಾಜದ  ಸಂಶಯಕ್ಕೆ  ಕಾರಣರಾಗುತ್ತಾರೋ  ಅದೇ  ರೀತಿ ಬುರ್ಖಾ ಧರಿಸಿದ  ಹೆಣ್ಣನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ. ಇದು  ಒಂದೆಡೆಯಾದರೆ ಬುರ್ಕಾವನ್ನು ತಿರಸ್ಕರಿಸಿ ಸಾಮಾನ್ಯ  ಮಹಿಳೆಯರಂತೆ  ಸಮಾಜದಲ್ಲಿ ಕಂಡುಬರುವ ಮುಸ್ಲಿಂ  ಹೆಣ್ಣಿನ  ಪರಿಸ್ಥಿತಿಯಂತೂ  ಗಂಭೀರ. ಆಕೆಯನ್ನು  ಮುಸ್ಲಿಂ  ಸಮಾಜ ನೋಡುವ ದೃಷ್ಟಿಕೋನವೇ ಬೇರೆ. ಮುಸ್ಲಿಂ  ಸಮುದಾಯದ  ಜನರ ಕಣ್ಣಲ್ಲಿ ಆಕೆ ಧರ್ಮ ಭ್ರಷ್ಟೆಯಾಗಿ ಕಂಡುಬರುತ್ತಾಳೆ. ನಿತ್ಯ ಆಕೆಗೆ ಮೂದಳಿಕೆ ತಪ್ಪಿದ್ದಲ್ಲ. ನಿತ್ಯ  ಅವಮಾನ ನೋವುಗಳನ್ನು ಸಹಿಸಿಕೊಂಡ  ಮುಸ್ಲಿಂ ಮಹಿಳೆಯರು ನಮ್ಮಸಮಾಜದಲ್ಲಿದ್ದಾರೆ. ಇನ್ನು ಕೆಲವರು ಕೆಲವರು  ತನ್ನದೇ  ಸಮಾಜದ ಮೂಲಭೂತವಾದಿಗಳ ಕೆಂಗಣ್ಣಿನಿಂದ ಪಾರಾಗಲು ಮತ್ತೆ ಪರ್ದಾ ಕಡೆ ಮುಖಮಾಡಿದ್ದಾರೆ.

ವಿಪರ್ಯಾಸವೆಂದರೆ  ಇಲ್ಲಿ  ಮುಸ್ಲಿಮ್ ಮಹಿಳೆ  ಪರ್ದಾ  ಧರಿಸಬೇಕೋ  ಬೇಡವೋ  ಎಂಬುವುದನ್ನು ಇಲ್ಲಿನ ಮುಸ್ಲಿಂ  ಮೂಲಭೂತವಾದಿಗಳು ಹಾಗೂ ಹಿಂದೂ ಮೂಲಭೂತವಾದಿಗಳು ನಿರ್ಧರಿವಂತಾಗಿದೆ. ಬುರ್ಖಾ ತೊಟ್ಟರೂ ಆಕೆಗೆ ಅವಮಾನ ಬುರ್ಕಾ ತೆಗೆದರೂ ಅವಮಾನ ಎಂಬುವಂತಹಾimages3 ಪರಿಸ್ಥಿತಿ ಕರಾವಳಿ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ಇನ್ನೂ  ವಿಪರ್ಯಾಸದ  ಸಂಗತಿಯೆಂದರೆ ಪರ್ದಾತೊಟ್ಟ ಮುಸ್ಲಿಂ  ಮಹಿಳೆಯರನ್ನು  ಅವಮಾನ  ಮಾಡುತ್ತಿದ್ದ  ಶಾಲಾ  ಕಾಲೇಜುಗಳಲ್ಲಿ ಬುರ್ಖಾ ವಿವಾದ ಬಂದಾಗ ಬುರ್ಖಾ ಧರಿಸಬಾರದು  ಎಂದು ತಾಕೀತು ಮಾಡುತ್ತಿದ್ದ ಸಂಘಪರಿವಾರದ ಯುವಕರು ಸಾಮಾಜಿಕ ತಾಣಗಳಲ್ಲಿ ಮುಸ್ಲಿಂ  ಯುವತಿಯರು ಬುರ್ಖಾ ಧರಿಸಿಯೇ ಪ್ರಿಯಕರನ ಜೊತೆ  ಸುತ್ತಾಡಿ ಎನ್ನುತ್ತಿದ್ದಾರೆ. ಇಷ್ಟೇ ಅಲ್ಲ ಹಿಂದೂ ಪರ  ಸಂಘಟನೆಯ ಮುಖಂಡನೊಬ್ಬ  ಪತ್ರಿಕಾಗೋಷ್ಠಿಯಲ್ಲಿ ಉಜಿರೆಯಲ್ಲಿ  ನಡೆದ ನೈತಿಕ ಪೊಲೀಸ್  ಗಿರಿ ಘಟನೆಯ ನೀಡಿದ  ಹೇಳಿಕೆ ಅಶ್ಚರ್ಯಕರವಾಗಿದೆ.  ರಂಜಾನ್  ತಿಂಗಳಲ್ಲಿ ಒಬ್ಬ ಮುಸ್ಲಿಂ ಯುವತಿಯಾಗಿ ಬುರ್ಖಾ  ಧರಿಸದೆ ಸಾರ್ವಜನಿಕವಾಗಿ ತಿರುಗುವುದು  ಸರಿಯಲ್ಲ  ಎಂಬುದು ಆತನ ಅಭಿಪ್ರಾಯ. ಮುಸ್ಲಿಂ  ಮಹಿಳೆಯರ ಪರ್ದಾ ಧರಿಸುವಿಕೆ ಹಾಗೂ ಧಾರ್ಮಿಕ  ಸಂಸ್ಕೃತಿ  ಕಟ್ಟುಪಾಡುಗಳನ್ನು ಮೀರಿ ಹೋಗದಂತೆ ನೋಡಿಕೊಳ್ಳುವ ಗುತ್ತಿಗೆ ಇದುವರೆಗೂ ಮುಸ್ಲಿಮ್ ಮೂಲಭೂತವಾದಿಗಳ ಕೈಯಲ್ಲಿತ್ತು. ಇದೀಗ ಹಿಂದೂ ಮೂಲಭೂತವಾದಿಗಳೂ ಹಿಂದೂ ಯುವತಿಯರ ಸಂಸ್ಕೃತಿ ರಕ್ಷಣೆಯ ಹೊಣೆಯ ಜೊತೆಗೆ ಮುಸ್ಲಿಮ್  ಹೆಣ್ಣುಮಕ್ಕಳ ರಕ್ಷಣೆಯ ಹೆಚ್ಚುವರಿ  ಹೊಣೆಯನ್ನು  ಹೊತ್ತುಕೊಂಡಂತಿದೆ.

ಧರ್ಮ ರಕ್ಷಕರ ಮದುವೆ ಫತ್ವಾ!


-ಇರ್ಷಾದ್


 

 

 

ಮಂಗಳೂರು ಮೂಲದ ಮಾಧ್ಯಮ ಪ್ರಕಾಶನದ ಕನ್ನಡ ವಾರ ಪತ್ರಿಕೆ ಮೊಯಿಲಾಂಜಿಯನ್ನು ಓದಿದ್ದೆ. ಸ್ನೇಹಿತರೊಬ್ಬರು ಕರೆ ಮಾಡಿ ಮೊಯಿಲಾಂಜಿ ವಾರಪತ್ರಿಕೆಯನ್ನು ಓದುವಂತೆ ಹೇಳಿದ್ದರು. ಅದರಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಂಝ ಸಖಾಫಿ ಒಂದು ಲೇಖನವನ್ನು ಬರೆದಿದ್ದರು. ಅದು ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭದ ಕುರಿತಾದ ಲೇಖನವಾಗಿತ್ತು. ಅದರಲ್ಲೊಂದು ಕುತೂಹಲದ ಅಂಶ ನನ್ನ ಕಣ್ಣಿಗೆ ಬಿತ್ತು. ಅದನ್ನು ಓದುತ್ತಾ ಹೋದಂತೆ ನನ್ನ ಕುತೂಹಲ ಕೂಡಾ ಹೆಚ್ಚಾಗತೊಡಗಿತು. ”ಬೇಕಲ್ ಇಮ್ದಾದುದ್ದೀನ್ ಇಸ್ಲಾಮ್ ಕಮಿಟಿ ಕಾಸರಗೋಡು 2013 ರ ತುರ್ತು ಸಭೆಯಲ್ಲಿ ಕೈಗೊಂಡ ನಿರ್ಣಯಗಳಿವು” ಎಂಬ ತಲೆಬರಹದಲ್ಲಿ ಮುಸ್ಲಿಂ ಸಮುದಾಯದಲ್ಲಿ ಮದುವೆ ಸಮಾರಂಭ ಹೇಗೆ ನಡೆಯಬೇಕು, ಅದನ್ನು ಮುರಿದರೆ ಶಿಕ್ಷೆ ಏನು ಎಂಬ ಅಂಶಗಳನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು.

  1. ವರ ಮತ್ತು ಕುಟುಂಬದವರು ಸೇರಿ ಹೆಣ್ಣು ನೋಡುವ ಕಾರ್ಯಕ್ರಮ ನಡೆಯುವಾಗ ವರ ಮತ್ತು ಮಹಿಳೆಯರ ಹೊರತಾಗಿ ಅನ್ಯರು moilanjali_1ಭಾಗವಹಿಸುದನ್ನು ನಿಷೇಧಿಸಲಾಗಿದೆ.
  2. ವಿಡಿಯೋ, ಕ್ಯಾಮರಾ, ಪತ್ರಿಕೆಗಳಲ್ಲಿ ವಧುವಿನ ಭಾವಚಿತ್ರ, ವಿಡಿಯೋ ಜಾಹೀರಾತುಗಳಲ್ಲಿ ವದುವಿನ ಭಾವಚಿತ್ರ ನೀಡುವುದನ್ನು ನಿಷೇಧಿಸಲಾಗಿದೆ.
  3. ಗಾನ ಮೇಳ, ಡ್ಯಾನ್ಸ್ ಗಳನ್ನು ನಿಷೇಧಿಸಲಾಗಿದೆ ಮತ್ತು ಈ ನಿಷೇದವು ಮದುವೆಯ ಹಾಲ್ ಗಳಿಗೂ ಅನ್ವಯವಾಗುವುದು.
  4. ಕಪಾಟು ಕೊಂಡೊಯ್ಯುವುದನ್ನು, ಮದರಂಗಿ ಮದುವೆಯನ್ನೂ ನಿಶೇಧಿಸಲಾಗಿದೆ.
  5. ವಿವಾಹ ಕಾರ್ಯಕ್ರಮದ ಅಂಗವಾಗಿ ವರನ ಜೊತೆ ವಧುವಿನ ಮನೆಗೆ ಹೋಗುವವರು ರಸ್ತೆ ತಡೆ ಉಂಟಾಗದಂತೆ ಸಾಗುವುದನ್ನು, ಪಾದಾಚಾರಿಗಳಿಗೆ ಜೀವಭಯ ಉಂಟಾಗದಂತೆ ನಿರ್ಲಕ್ಷ ಮತ್ತು ಭಾರೀ ಸದ್ದು ಗದ್ದಲದೊಂದಿಗೆ ಬೈಕ್ ರಾಲಿ ಹೋಗುವುದನ್ನು ನಿಷೇಧಿಸಲಾಗಿದೆ. ವೇಷ ಬದಲಿಸುವುದು, ಪಟಾಕಿ ಸಿಡಿಸುವುದು, ಕಲರ್ ಸ್ಪ್ರೇ, ವಧುವಿನ ಕೋಣೆಗಳಿಗೆ ಹಾನಿ ಉಂಟುಮಾಡುವುದು, ವರನ ಯಾ ವಧುವಿನ ಮನೆಯವರೊಂದಿಗೆ ಹಣ ಕೇಳುವುದು, ವಾಹನಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ಸೀಟುಗಳನ್ನು ಸಜ್ಜುಗೊಳಿಸಿ ಪ್ರದರ್ಶನಗಳನ್ನು ನಡೆಸುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ.
  6.  ಸಭ್ಯತೆಯ ಮಿತಿ ಮೇರೆಗಳನ್ನು ಮೀರಿದ , ಆಶ್ಲೀಲವನ್ನು ನೇರ ಯಾ ಪರೋಕ್ಷವಾಗಿ ಬಿಂಬಿಸುವ ಹಾಡುಗಳನ್ನು ದಾರಿಯಲ್ಲಿ ಯಾ ವಧು ಗೃಹದಲ್ಲಿ ಹಾಡುವುದು ನಿಷೇಧಿಸಲಾಗಿದೆ.
  7.  ಮದುವೆ ಮುಗಿದ ರಾತ್ರಿ ವಧು ಗೃಹದಲ್ಲಿ ತಂಗಲು ಹೋಗುವ ವರನೊಂದಿಗೆ ಸ್ನೇಹಿತರು ಜೊತೆ ಸೇರುವುದನ್ನು ನಿಷೇಧಿಸಲಾಗಿದೆ.

ಮೇಲಿನ ಕಾರ್ಯಕ್ರಮಗಳನ್ನು ಉಲ್ಲಂಘಿಸಿದಲ್ಲಿ ವಿಧಿಸಲಾಗುವ ಶಿಕ್ಷೆ :

ವಿವಾಹ ನಿಶ್ವಯ ವೇಳೆ ಮೇಲಿನ ನಿಯಮಗಳನ್ನು ಉಲ್ಲಂಘಿಸಿದರೆ ಖಾಝಿ, ಖತೀಬ್ , ಇಮಾಮ್ ( ಧರ್ಮಗುರುಗಳು) ರನ್ನು ಆ ಮನೆಗೆ ಕಲುಹಿಸಲಾಗುವುದಿಲ್ಲ. ವಿವಾಹ ದಿನದಂದು ನಿಯಮಗಳನ್ನು ಉಲ್ಲಂಘಿಸಿದರೆ ಅವರನ್ನು ಎರಡು ವರ್ಷಗಳ ಕಾಲ ಬಹಿಷ್ಕಾರ ಮಾಡಲಾಗುವುದು ಮತ್ತು ಧಾರ್ಮಿಕ ಶಿಕ್ಷಣ, ಮಯ್ಯತ್ ಪರಿಪಾಲನೆ ( ಶವ ಸಂಸ್ಕಾರ) ಹೊರತಾಗಿ ಆಡಳಿತ ಸಮಿತಿ ಮೂಲಕ ಲಭ್ಯವಾಗುವ ಎಲ್ಲಾ ಕೊಡುಗೆಗಳನ್ನು ತಡೆಹಿಡಿಯಲಾಗುವುದು.

ನಿರುತ್ಸಾಹಗೊಳಿಸಬೇಕಾದ ಕಾರ್ಯಗಳು

  1. ವರದಕ್ಷಿಣೆ ಪಡೆಯುವುದು ಮತ್ತು ಕೊಡುವುದನ್ನು ನಿರುತ್ಸಾಹಗೊಳಿಸುವುದು.
  2. ವರನು ವಧುವಿಗೆ ಹೂ ಮಾಲೆ ಹಾಕುವ ಕಾರ್ಯಕ್ರಮ ಹಾಗೂ ವಿವಾಹ ನಿಶ್ಚಿತ ಕಾರ್ಯಕ್ರಮದಲ್ಲಿ ಅನಗತ್ಯವಾಗಿ ಸ್ತ್ರೀ ಪುರುಷರು ಒಟ್ಟು ಸೇರುವುದನ್ನು ಉಪೇಕ್ಷಿಸುವುದು.
  3. ಮದುವೆಯ ಮುನ್ನಾ ದಿನ ಅನಗತ್ಯವಾಗಿ ಸತ್ಕಾರವೇರ್ಪಡಿಸುದನ್ನು ಕೈ ಬಿಡುವುದು
  4. ವಿವಾಹದ ಮರುದಿನ ಅಥವಾ ನಂತರದಲ್ಲಿ ಮದುಮಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗುವ ಕಾರ್ಯಕ್ರಮವನ್ನು ತಂದೆ ತಾಯಂದಿರು ಯಾ ನಿಕಟ ಸಂಬಂಧಿಕರಿಗೆ ಮಾತ್ರ ಸೀಮಿತಗೊಳಿಸಿ ಸರಳವಾಗಿ ನಡೆಸುವುದು.
  5. ನಿಕಾಹ್ ಗೆ ಮುನ್ನ ನಿಶ್ವಿತ ವಧುವಿಗೆ ಮೊಬೈಲ್ ಕೊಡುವುದನ್ನು ಉಪೇಕ್ಷಿಸುವುದು.

ಇದು ಕಾಸರಗೋಡಿನ ಬೇಕಲ್ ಮಸೀದಿ ವ್ಯಾಪ್ತಿಗೆ ಒಳಪಡುವ ಮುಸ್ಲಿಮ್ ಸಮುದಾಯ ಜನರು ಕಡ್ಡಾಯವಾಗಿ ತಮ್ಮ ವಿವಾಹ ಸಂಧರ್ಭದಲ್ಲಿ ಪಾಲಿಸಬೇಕಾದ ನಿಯಮಗಳು. moilanjali_2ಕಳೆದ ಒಂದು ವರ್ಷಗಳಿಂದ ಈ ಫತ್ವಾ ( ಅಭಿಪ್ರಾಯ) ಜಾರಿಯಲ್ಲಿದೆ. ಇದರ ಕೆಲವೊಂದು ವಿಚಾರಗಳಲ್ಲಿ ನನಗೆ ಸಮ್ಮತಿಯಿದೆ. ಮದುವೆ ಸಮಾರಂಭಗಳನ್ನು ವೈಭವದಿಂದ ಮಾಡುವುದು, ಬೇಕಾ ಬಿಟ್ಟೆ ಖರ್ಚು ಮಾಡಿ ಐಶಾರಾಮಿತನವನ್ನು ತೋರಿಸುವುದು, ಮದುವೆಯ ಸಂಧರ್ಭದಲ್ಲಿ ವಾಹನಗಳಲ್ಲಿ ಹೋಗುವಾಗ ಜನಸಾಮಾನ್ಯರಿಗೆ ಕಿರಿ ಕಿರಿ ಉಂಟುಮಾಡುವಂತದ್ದು ನಿಜಕ್ಕೂ ತಪ್ಪು. ಸಾಮಾನ್ಯವಾಗಿ ಯುವಕರಲ್ಲಿ ಇಂಥಹ ನಡತೆ ಕಂಡುಬರುತ್ತದೆ. ಇದನ್ನು ಫತ್ವಾ ಹೊರಡಿಸುವ ಮೂಲಕ ತಡೆಯಲು ಸಾಧ್ಯವಿಲ್ಲ. ಬದಲಾಗಿ ಯುವಕರಿಗೆ ತಿಳುವಳಿಕೆ ನೀಡುವುದರ ಮೂಲಕ ಅಥವಾ ಕಾನೂನಿನ ಎಚ್ಚರಿಕೆ ನೀಡುವ ಮೂಲಕ ಇವುಗಳನ್ನು ನಿಯಂತ್ರಿಸಲು ಸಾಧ್ಯ. ಆದರೆ ಬಿ.ಐ.ಐ.ಸಿ ಮಹಾಸಭೆಯಲ್ಲಿ ತೆಗೆದುಕೊಂಡ ಇತರ ನಿರ್ಣಯಗಳು ಅಪಾಯಕಾರಿ. ಜೊತೆಗೆ ಅವುಗಳನ್ನು ಮುರಿದರೆ ಬಹಿಷ್ಕಾರ ಹಾಕುವಂತಹ ರೀತಿ ನಿರ್ಣಯಗಳನ್ನು ಕೈಗೊಂಡ ಜನರಿಗೆ ಭಾರತದ ಸಂವಿಧಾನದ ಕುರಿತಾದ ಅರಿವು ಇದೆಯಾ ಎಂಬ ಪ್ರೆಶ್ನೆ ಉದ್ಭವವಾಗುತ್ತದೆ.

ಇಸ್ಲಾಂನಲ್ಲಿ ಮದುವೆ ಸಮಾರಂಭಕ್ಕೆ ಅದರದ್ದೇ ಆದ ನಿಯಮಗಳಿಗೆ. ಸಹಜವಾಗಿ ಭಾರತೀಯ moilanjali_3ಮುಸ್ಲಿಮರು ಅವುಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಅವುಗಳ ಜೊತೆಗೆ ಸ್ಥಳೀಯ ಸಂಸ್ಕೃತಿಗಳು, ಆಚಾರ ವಿಚಾರಗಳು ಭಾರತೀಯ ಮುಸ್ಲಿಮರ ಮುದುವೆಗಳಲ್ಲಿ ಸಹಜವಾಗಿಯೇ ಕಂಡುಬರುತ್ತವೆ. ಮದುವೆಯ ಮುನ್ನ ದಿನದ ಮದರಂಗಿ ಕಾರ್ಯಕ್ರಮ, ಮದುವೆಯ ರಾತ್ರಿ ವಧುವಿನ ಮನೆಗೆ ಹೋಗುವಾಗ ವರನ ಜೊತೆ ಸ್ನೇಹಿತರು ತೆರಳಿ ವಧುನಿನ ಮನೆಯಲ್ಲಿ ನಡೆಯುವ ಸತ್ಕಾರ ಕೂಟದಲ್ಲಿ ಭಾಗವಹಿಸುವಂತಹದ್ದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಸ್ಕೃತಿ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲಾ ಮದುವೆಗಳಲ್ಲಿ ವಿಡಿಯೋ ಚಿತ್ರೀಕರಣ ಕಾಮನ್ ಆಗಿ ಬಿಟ್ಟಿದೆ. ವಿದೇಶದಲ್ಲಿ ಮನೆಯ ಯುವಕರು ಉದ್ಯೋಗದಲ್ಲಿರುವುದರಿಂದ ಅವರಿಗೆ ಮನೆಯ ಮದುವೆ ನೋಡುವ ಆಸೆ ಕೂಡಾ ಇರುತ್ತದೆ. ಇದರಿಂದ ವಿಡಿಯೋ ಚಿತ್ರೀಕರಣ ಮಾಡುವುದು ಮದುವೆ ನಡೆಸುವ ಕುಟುಂಬಕ್ಕೆ ಬಿಟ್ಟಿದ್ದು. ಮದುವೆಯ ವಿಡಿಯೋ ಚಿತ್ರೀಕರಣ ಮಾಡಬಾದರು ಎಂದು ಇಸ್ಲಾಂ ಧರ್ಮದ ಧರ್ಮ ಗ್ರಂಥಗಳು ಎಲ್ಲಿ ಹೇಳಿವೆ ಎಂಬುವುದಂತೂ ನಾ ಕಾಣೆ. ಇನ್ನು ಎಲ್ಲಾ ಧರ್ಮದ ಸಂಸ್ಕೃತಿಯನ್ನು ಪಾಲಿಸುವ ಜನರ ಮದುವೆ ಸಮಾರಂಭದಲ್ಲಿ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಕುವುದು ಸಾಮಾನ್ಯ. ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮುದುವೆ ಸಮಾರಂಭಗಳು ಇದಕ್ಕೆ ಹೊರತಾಗಿಲ್ಲ. ಆದರೆ ಧರ್ಮದ ಹೆಸರಲ್ಲಿ ಸಂಸ್ಕೃತಿಯ ಹೆಸರಲ್ಲಿ ಜನರ ಸ್ಥಳೀಯ ಆಚಾರ ವಿಚಾರಗಳು ಹಾಗೂ ಅವರ ಸಂಭ್ರಮದ ಕ್ಷಣಗಳನ್ನು ಕಿತ್ತುಕೊಳ್ಳ ಹೊರಟಿರುವುದು ಆಕ್ಷೇಪಾರ್ಹ.

ಸೌದಿ ಆರೇಬಿಯಾದ ಸಂಸ್ಕೃತಿಯನ್ನು ಪರಿಶುದ್ಧ ಇಸ್ಲಾಮ್ ಎಂಬ ಹೆಸರಿನಲ್ಲಿ ಭಾರತೀಯ ಮುಸ್ಲಿಮರ ಮೇಲೆ ಹೇರಲು ಪ್ರಯತ್ನವನ್ನು ಮೊದಲು molanjali_5ಆರಂಭಿಸಿದ್ದು ಮೌದೂದಿ ಸಿದ್ದಾಂತವಾದಿಗಳು. ಅರಬ್ ರಾಷ್ಟ್ರಗಳಲ್ಲಿ ಪಾಲಿಸುವ ಆಚಾರ ವಿಚಾರಗಳು, ರೀತಿ ರಿವಾಜುಗಳನ್ನು ಇಲ್ಲಿಯ ಮುಸ್ಲಿಮರೂ ಪಾಲಿಸಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ದೇವರಿಗೆ ಮಾಡುವ ಪೂಜೆ ಪುರಸ್ಕಾರ (ನಮಾಜ್ ಹಾಗೂ ಇತರ ಧಾರ್ಮಿಕ ಕಾರ್ಯ) ದರ್ಗಾಗಳಿಗೆ ಜನಸಾಮಾನ್ಯರು ನಡೆದುಕೊಳ್ಳುವ ಪದ್ದತಿ, ಮುಸ್ಲಿಮ್ ಸಮುದಾಯದ ಪುರಷ ಮಹಿಳೆಯರ ವೇಷ ಭೂಷಣ, ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಿಶುದ್ದತೆಯ ಹೆಸರಿಸಲ್ಲಿ ತಮ್ಮದೇ ಆದ ಸಿದ್ದಾಂತಗಳನ್ನು ಪ್ರಚುರ ಪಡಿಸಿ ಅದನ್ನೇ ಪರಿಶುದ್ದ ಇಸ್ಲಾಮ್ ಎಂದು ವಾದಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ನೂತನವಾದಿಗಳೆಂದು ಕರೆಸಿಕೊಳ್ಳುವ ಇತರ ಇಸ್ಲಾಂ ಸಿದ್ದಾಂತವಾದಿಗಳು ಈ ವಾದಗಳಿಗೆ ಇನ್ನಷ್ಟು ಬಲ ನೀಡಲು ಆರಂಭಿಸಿದರು. ಇದೀಗ ಇಂಥಹ ಮೂಲಭೂತವಾದವನ್ನು ವಿರೋಧಿಸುತ್ತಾ ಸೂಫಿ ವಿಚಾರಧಾರೆಯಲ್ಲಿ ನಂಬಿಕೆಯಿಟ್ಟು ಅದನ್ನು ಪಾಲಿಸುತ್ತಾ ಬಂದಿರುವ ಸುನ್ನಿ ಪಂಡಿತರು ಮೌದೂದಿ ವಿಚಾರಧಾರೆಗಳನ್ನು ತಾವೂ ಒಪ್ಪಿಕೊಳ್ಳ ಹೊರಟಿರುವುದು ವಿಷಾದನೀಯ. ಅರಬ್ ಸಂಸ್ಕೃತಿಯನ್ನು ಪಾಲಿಸುವುದರೆ ಮಾತ್ರ ಅದು ಪರಿಶುದ್ದ ಇಸ್ಲಾಮ್ ಎಂಬುವುದು ಸರಿಯಲ್ಲ. ಆಯಾ ಪ್ರದೇಶಕ್ಕೆ ತಕ್ಕಂತೆ ಧರ್ಮದೊಂದಿಗೆ ಸ್ಥಳೀಯ ಸಂಸ್ಕೃತಿ ಸೇರಿಕೊಳ್ಳತ್ತದೆ. ಅದೇ ರೀತಿ ಕರಾವಳಿ ಭಾಗದ ಮುಸ್ಲಿಮ್ ಸಮುದಾಯದ ಜನರ ಮದುವೆ ಕಾರ್ಯಕ್ರಮದಲ್ಲಿ ಧರ್ಮದ ಕಾರ ಕಡ್ಡಾಯವಾಗಿರುವ ನಿಕಾಹ್ ಒಳಗೊಂಡತೆ ಸ್ಥಳೀಯ ಸಂಸ್ಕೃತಿಯಿಂದ ಪ್ರಭಾವಿತವಾದ ಮದರಂಗಿ , ತಾಳ (ಮದುಮಗಳ ಮನೆಯಲ್ಲಿ ಮದುವೆ ದಿನ ರಾತ್ರಿ ನಡೆಯುವ ಔತಣ ಕೂಟ), ಬೀಟ್ ಕಾರ್ಯಕ್ರಮ (ವರ ವಧುವಿಗೆ ಹೂ ಹಾರ ಹಾಕುವ ಕಾರ್ಯಕ್ರಮ ) ಒಳಗೊಂಡಿದೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕಗಳ ಮುಸ್ಲಿಮ್ ಸಮುದಾಯದ ಜನರ ಮದುವೆ ಕಾರ್ಯಕ್ರಮಗಳಲ್ಲಿ ಅಲ್ಲಿನ ಸಂಸ್ಕೃತಿಗಳು ಒಳಗೊಂಡಿರುತ್ತದೆ. ಈ ಆಚರಣೆಗಳು ಅತಿರೇಕ ಹಾಗೂ ಅಸಭ್ಯ ಎಂಬ ಕಾರಣ ನೀಡಿ ನಿಷೇಧ ಮಾಡಲು ಮುಂದಾಗಿರುವುದು ಅತಿರೇಕದ ಪರಮಾರಧಿ. ಇಸ್ಲಾಂ ಧರ್ಮ ವಿಶಾಲವಾದ ಧರ್ಮ. ಧರ್ಮದಲ್ಲಿ ಯಾವುದೂ ಬಲವಂತವಿಲ್ಲ ಎಂದು ಪವಿತ್ರ ಗ್ರಂಥ ಕುರುಆನ್ ಹೇಳುತ್ತದೆ. ಆದರೆ ಅದಕ್ಕೆ ತದ್ವಿರುದ್ದವಾಗಿ ಇಂದು ಮೂಲಭೂತವಾದಿಗಳು ಧರ್ಮ ಜಾಗೃತಿಯ ಹೆಸರಲ್ಲಿ ಜನಸಾಮಾನ್ಯರ ಸ್ವಾತಂತ್ರ ಕಿತ್ತುಕೊಳ್ಳಲು ಇವರಿಗೆ ಧರ್ಮದ ರಕ್ಷಣೆಯ ಗುತ್ತಿಗೆ ಕೊಟ್ಟವರು ಯಾರು?

ಸಂಸ್ಥೆ ಹೊರಡಿಸಿದ ಫತ್ವಾ ಕುರಿತಾಗಿ ಅಧ್ಯಯನ ಮಾಡಲು ನಾವು ಫತ್ವಾ ಜಾರಿಯಲ್ಲಿರುವ ಕಾಸರಗೋಡು ಬೇಕಲ್ ಮಸೀದಿಗೆ ಹೋಗಿದ್ದೆವು. ಸ್ಥಳೀಯರ ಪ್ರಕಾರ ಫತ್ವಾ ಪಾಲಿಸದ ಒಂದು ಕುಟುಂಬವನ್ನು ಬಹಿಷ್ಕಾರ ಹಾಕಲಾಗಿತ್ತು. ಕೊನೆಗೆ ಫತ್ವಾ ಪಾಲಿಸದ ತಪ್ಪಿಗಾಗಿ ಕ್ಷಮೆ ಕೇಳಿದಕ್ಕಾಗಿ ಬಹಿಷ್ಕಾರ ತೆರವು ಮಾಡಲಾಗಿದೆ. ವಿಪರ್ಯಾಸವೆಂದರೆ ಬಿ.ಐ.ಐ.ಸಿ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ 7 ವಿಚಾರಗಳು ಕಡ್ಡಾಯವಾಗಿ ಪಾಲಿಸಬೇಕಾಗಿವೆ. ಅದನ್ನು ಮುರಿದರೆ ಬಹಿಷ್ಕಾರದ ಶಿಕ್ಷೆ ಇದೆ. ಆದರೆ ಈ 7 ವಿಚಾರಗಳಲ್ಲಿ ವರದಕ್ಷಿಣೆ ಪಡೆಯುದನ್ನು ಕಡ್ಡಾಯ ನಿಷೇಧಮಾಡದೇ ಇರುವುದು ಆಶ್ವರ್ಯಕರ. ಫತ್ವಾದಲ್ಲಿ ವರದಕ್ಷಿಣೆ ನಿರುತ್ಸಾಹಗೊಳಿಸಬೇಕಾದ ವಿಷಯವಾಗಷ್ಟೇ ಸೇರ್ಪಡೆಯಾಗಿದೆ ಹೊರತು ವರದಕ್ಷಿಣೆಗೆ ಕಡ್ಡಾಯ ನಿಷೇಧವಿಲ್ಲ. ವರದಕ್ಷಿಣೆಯಂತಹ ಸಾಮಾಜಿಕ ಪಿಡುಗು ಮುಸ್ಲಿಮ್ ಸಮುದಾಯವನ್ನು ತೀಕ್ಷವಾಗಿ ಕಾಡುತ್ತಿರುವಂತಹ ಪಿಡುಗಾಗಿದೆ. ಅದೆಷ್ಟೋ ಹೆಣ್ಣು ಮಕ್ಕಳ ಹೆತ್ತವರು ವರದಕ್ಷಿಣೆಯ ಉಪಟಳದಿಂದಾಗಿ ಭಿಕ್ಷೆ ಬೇಡುವ ಸ್ಥಿತಿ ತಲುಪಿದ್ದಾರೆ. ಇದೇ ರೀತಿ ಇಸ್ಲಾಂ ಧರ್ಮ ನೀಡಿರುವ ಬಹುಪತ್ನಿತ್ವ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಇಚ್ಚೆ ಬಂದಂತೆ ಮದುವೆಯಾಗಿ ಆಕೆಯೊಡನೆ ಕೆಲವು ದಿನ ಸಂಸಾರ ನಡೆಸಿ ಕುಲಕ್ಷ ಕಾರಣಕ್ಕಾಗಿ ತಲಾಕ್ ಕೊಟ್ಟು ಸುಮ್ಮನಾಗುವ ಮಹಾಪುರುಷರು ನಮ್ಮ ಸಮಾಜದಲ್ಲಿದ್ದಾರೆ. ಇದರಿಂದ ಅದೆಷ್ಟೋ ಬಡ ಹೆಣ್ಣುಮಕ್ಕಳು ಕಣ್ಣೀರು ಸುರಿಸುತ್ತಿದ್ದಾರೆ. ಇವುಗಳನ್ನು ಹತೋಟಿಗೆ ತರುವ ಕಾರ್ಯವನ್ನು ಮುಸ್ಲಿಮ್ ಸಮುದಾಯದ ಜಾಗ್ರತ ಜನರು ಮಾಡಬೇಕಾಗಿದೆ. ಬದಲಾಗಿ ಮುಸ್ಲಿಮ್ ಸಮುದಾಯದ ಜನರಲ್ಲಿ ಪರಿಶುದ್ದತೆಯ ಹೆಸರಲ್ಲಿ ಅವರ ಮೇಲೆ ಅರಬ್ ಸಂಸ್ಕೃತಿಯನ್ನು ಹೇರುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿರುವುದು ಜೊತೆಗೆ ಅದನ್ನು ಪಾಲಿಸದೇ ಹೋದಲ್ಲಿ ಬಹಿಷ್ಕಾರವನ್ನು ಹಾಕುವ ಮೂಲಕ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವುದು ತೀರಾ ಅಪಾಯಕಾರಿ. ಇಂಥಹ ಮನಸ್ಥಿತಿಗಳ ವಿರುದ್ಧ ಮುಸ್ಲಿಮ್ ಸಮುದಾಯದ ಜನರು ಜಾಗೃತಗೊಳ್ಳಬೇಕಾಗಿದೆ.