Category Archives: ಇರ್ಷಾದ್

ಎ.ಎನ್.ಎಫ್ ನಿಂದ ಕಬೀರ್ ಹತ್ಯೆ ಹಾಗೂ ದಿಕ್ಕು ತಪ್ಪುತ್ತಿರುವ ಹೋರಾಟ


-ಇರ್ಷಾದ್


 

 

 

ಎಪ್ರಿಲ್ 19ರಂದು ಚಿಕ್ಕಮಗಳೂರಿನ ಶೃಂಗೇರಿ ಕೆರೆಕಟ್ಟೆ ತನಿಕೋಡು ತಪಾಸಣಾ ಕೇಂದ್ರದಲ್ಲಿ ನಕ್ಸಲ್ ಎಂಬ ಶಂಕೆಗೆAnti-Naxal-Force ಅಮಾಯಕ ಜೀವವೊಂದು ಬಲಿಯಾಯಿತು. ಮಂಗಳೂರಿನ ಕಾಟಿಪಳ್ಳ ನಿವಾಸಿ ಕಬೀರ್ ಎದೆಯನ್ನು ನಕ್ಸಲ್ ನಿಗೃಹ ದಳದ ಸಿಬಂದಿಯ ಬಂದೂಕಿನ ಗುಂಡು ಸೀಳಿತ್ತು. ಕಬೀರ್ ಸಾವು ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಒಂದರ ಹಿಂದೆ ಒಂದರಂತೆ ಕಬೀರ್ ಸಾವಿಗೆ ನ್ಯಾಯ ಕೋರಿ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಪ್ರಭುತ್ವದ ದಬ್ಬಾಳಿಕೆ, ಬಡ ಆದಿವಾಸಿಗಳ ಮೇಲಿನ ದೌರ್ಜನ್ಯ ವಿರುದ್ಧ ದಂಗೆ ಎದ್ದು ಹೋರಾಟ ನಡೆಸುತ್ತಿರುವ ಶಕ್ತಿಗಳನ್ನು ಹುಟ್ಟಡಗಿಸುವ ಮನಸ್ಥಿತಿಯ ಬಂದೂಕಿನ ನಳಿಕೆಯಿಂದ ಹೊರ ಬಂದ ಗುಂಡಿನ ವಿರುದ್ಧ ನಡೆಯಬೇಕಾಗಿದ್ದ ಹೋರಾಟ ದಿಕ್ಕು ತಪ್ಪುತ್ತಿದೆ ಎಂದನಿಸುತ್ತಿದೆ. ಜಾತಿ ಧರ್ಮದ ಹೊರತಾಗಿ, ಪ್ರಭುತ್ವದ ಧೋರಣೆಯ ವಿರುದ್ಧ ಧ್ವನಿ ಎತ್ತುತ್ತಾ ಹೋರಾಟಕ್ಕಿಳಿದಿರುವ ನಕ್ಸಲರ ದಮನದ ಹೆಸರಲ್ಲಿ ನಡೆದ ಕಬೀರ್ ಹತ್ಯೆಯನ್ನು ಧರ್ಮದ ಬೇಲಿ ಕಟ್ಟಿ ಅದರ ನೆಲೆಗಟ್ಟಿನಲ್ಲಿ ನ್ಯಾಯ ಕೋರಿ ಹೋರಾಟ ನಡೆಯುತ್ತಿರುವುದು ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವಂತಿದೆ.

ಜಾನುವಾರು ಸಾಗಾಟ ಸಂಧರ್ಭದಲ್ಲಿ ಗೋ ಮಾತೆ ಸಂರಕ್ಷಣೆ ಹೆಸರಲ್ಲಿ ಸಂಘ ಪರಿವಾರದ ಧರ್ಮಾಂಧರು ನಡೆಸುವ ದೌರ್ಜನ್ಯಕ್ಕೂ, ಪ್ರಭುತ್ವ ಬಡ ಜನರ ಮೇಲೆ, ಆದಿವಾಸಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೇಳುವ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ದಮನಕಾರಿ ನೀತಿಗೂ ವ್ಯತ್ಯಾಸಗಳಿವೆ. ಕರ್ನಾಟದ ಪಶ್ವಿಮ ಘಟ್ಟದಲ್ಲಿ ನಕ್ಸಲ್ ಸಮಸ್ಯೆಯನ್ನು ಹತ್ತಿಕ್ಕಲು ಕಾರ್ಯಾಚರಣೆಗಿಳಿದಿರುವ ನಕ್ಸಲ್ ನಿಗ್ರಹ ಪಡೆಯ ಶಂಕೆಗೆ ಬಲಿಯಾಗಿರುವುದು ಕಬೀರ್ ಮಾತ್ರ ಅಲ್ಲ. ಇಂಥಹಾ ಹತ್ತಾರು ಕಬೀರರು ಈಗಾಗಲೇ ಪಶ್ವಿಮ ಘಟ್ಟದ ಅರಣ್ಯಗಳಲ್ಲಿ ನೆತ್ತರು ಸುರಿಸಿದ್ದಾರೆ. ಪ್ರಭುತ್ವದ ದಮನಕಾರಿ ನೀತಿಗೆ ಬಲಿಯಾದ ಅಮಾಯಕರಲ್ಲಿ ಇದೀಗ ಕಬೀರ್ ಕೂಡಾ ಒಬ್ಬ.

ನಕ್ಸಲ್ ನಿಗೃಹ ಪಡೆ ಹಾಗೂ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ

ಪಶ್ವಿಮ ಘಟ್ಟದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಜಾರಿಗೆ ಬಂದ ದಿನದಿಂದ ಈ ಭಾಗದಲ್ಲಿರುವ ಆದಿವಾಸಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕಾಡಿನ ಮಕ್ಕಳನ್ನು ಕಾಡಿಂದ ಹೊರದಬ್ಬುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ. ಒಂದೆಡೆ ಪ್ರಭುತ್ವ ಬಲಪ್ರದರ್ಶನದಿಂದ ಈ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದರೆ ಇನ್ನೊಂದೆಡೆ ವಿದೇಶಿ ಹಣಕಾಸುVittal Malekudiya ನೆರವಿನಿಂದ ಕಾರ್ಯಾಚರಿಸುತ್ತಿರುವ ಸ್ವಯಂ ಸೇವಾ ಸಂಘಗಳು ಆದಿವಾಸಿಗಳನ್ನು ಕಾಡಿಂದ ಹೊರ ಹಾಕಲು ಪ್ರಯತ್ನಪಡುತ್ತಿವೆ. ಆನಾದಿ ಕಾಲದಿಂದ ಅರಣ್ಯದಲ್ಲೇ ನೆಲೆಕಂಡಿರುವ ಆದಿವಾಸಿ ಕುಟುಂಬಗಳು ಯಾವಾಗ ಪ್ರಭುತ್ವದ ಧೋರಣೆಯನ್ನು ವಿರೋಧಿಸಲಿಕ್ಕೆ ಆರಂಭಿಸಿದವೋ ಅಲ್ಲಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ಆರಂಭವಾಗಿದೆ. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಲ್ಲಿ ವಾಸವಾಗಿರುವ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ ಹಾಗೂ ಸ್ಥಳೀಯ ಕೆಲ ಯುವಕರು ಪ್ರಭುತ್ವದ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಇವರು ಹೇಳುವ ಪ್ರಕಾರ ಕೆಲ ವರ್ಷಗಳ ಹಿಂದೆ ಪ್ರತಿ ಶನಿವಾರ ಗ್ರಾಮದ ಜನರು ನಾರಾವಿ ಪೇಟೆಗೆ ಬಂದು ದಿನಬಳಕೆಯ ಸಾಮಾಗ್ರಿಗಳನ್ನು ಕೊಂಡ್ಯೊಯುವ ಸಂಧರ್ಭದಲ್ಲಿ ಎ.ಎನ್.ಎಫ್ ನಿಂದ ನಿರಂತರ ದಬ್ಬಾಳಿಕೆ ಇವರ ಮೇಲೆ ನಡೆಯುತ್ತಿತ್ತು. ಅಗತ್ಯಕ್ಕಿಂತ ಹೆಚ್ಚಾಗಿ ಧವಸ ಧಾನ್ಯಗಳನ್ನು ಖರೀದಿಸಿದಲ್ಲಿ ನಕ್ಸಲರಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಶಂಕೆಯಲ್ಲಿ ಎ.ಎನ್.ಎಫ್ ಸಿಬಂದಿಗಳು ಕಿರುಕುಳ ನೀಡುತ್ತಿದ್ದರು. ರಾತ್ರೋ ರಾತ್ರಿ ಮನೆಗಳಿಗೆ ನುಗ್ಗುವುದು, ನಕ್ಸಲರ ಬೆಂಬಲಿಗರು ಎಂಬ ಶಂಕೆಯಲ್ಲಿ ಸ್ಥಳೀಯ ಯುವಕರನ್ನು ಕಸ್ಟಡಿಯಲ್ಲಿ ಕೂಡಿ ಹಾಕಿ ಹಿಂಸೆ ನೀಡುವುದು ಇಲ್ಲಿ ಮಾಮೂಲಾಗಿತ್ತು. ಕುತ್ಲೂರು ನಿವಾಸಿಗಳಾದ ಪೂವಪ್ಪ ಮಲೆಕುಡಿಯ, ಲಿಂಗಣ್ಣ ಮಲೆ ಕುಡಿಯ , ವಿಠಲ್ ಮಲೆ ಕುಡಿಯ , ಶಶಿಧರ್ ಮಲೆ ಕುಡಿಯ ಎ.ಎನ್.ಎಫ್ ದೌರ್ಜನ್ಯದ ಬಲಿಪಶುಗಳು. ನಕ್ಸಲರ ಜೊತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಕಾರಣಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ವಿಠಲ್ ಮಲೆಕುಡಿಯ ಮನೆಗೆ ನುಗ್ಗಿದ ಎ.ಎನ್.ಎಫ್ ವಿಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಎಂಬಿಬ್ಬರನ್ನು 2012 ಮಾರ್ಚ್ 3 ರಂದು ಬಂಧಿಸಿದ್ದರು. ಇವರ ಮನೆಯಲ್ಲಿ ಶೋಧ ಮಾಡಿದಾಗ ಶಂಕಿತ ನಕ್ಸಲ್ ಎಂಬುವುದಕ್ಕೆ ಸಿಕ್ಕಿದ ಸಾಕ್ಷಿ ಚಾ ಹುಡಿ, ಸಕ್ಕರೆ, ಪೇಪರ್ ಕಟ್ಟಿಂಗ್ಸ್, ಮಕ್ಕಳು ಆಟವಾಡುವ ಬೈನಾಕ್ಯುಲರ್ !

ಶಂಕೆಗೆ ಬಲಿಯಾದ ಜೀವಗಳು

ಇವರಷ್ಟೇ ಅಲ್ಲ,  ನಕ್ಸಲ್ ನಿಗ್ರಹ ದಳದ ಶಂಕೆಗೆ ಕರ್ನಾಟಕದಲ್ಲಿ ಅಮಾಯಕ ಜೀವಗಳು ಬೆಲೆ ತೆತ್ತಿವೆ.

  •  2003 ನವಂಬರ್ 17- ಉಡುಪಿ ಜಿಲ್ಲೆಯ ಈದು ಗ್ರಾಮದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಾಜಿಮಾ -ಪಾರ್ವತಿ ಹತ್ಯೆ
  •  2005 ಜೂನ್ – ಉಡುಪಿ ಜಿಲ್ಲೆಯ ದೇವರ ಬಾಳು ಎನ್ ಕೌಂಟರ್ ನಲ್ಲಿ ಅಜಿತ್ ಕುಸುಬಿ – ಉಮೇಶ್ ಹತ್ಯೆ
  • 2006 ಡಿಸೆಂಬರ್ – ಶೃಂಗೇರಿ –ಕೆಸುಮುಡಿಯಲ್ಲಿ ನಾರಾವಿಯ ದಿನಕರ್ ಹತ್ಯೆ
  •  2007 ಜುಲೈ 10 – ಚಿಕ್ಕಮಗಳೂರು ಜಿಲ್ಲೆಯ ಮೆಣಸಿನ ಹಾಡ್ಯ ದಲ್ಲಿ ಒಬ್ಬ ಶಂಕಿತ ನಕ್ಸಲ್ ಹಾಗೂ ನಾಲ್ವರು ಆಮಾಯಕ ಆದಿವಾಸಿಗಳ ಹತ್ಯೆ.
  •  2008 ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಶಂಕಿತ ನಕ್ಸಲ್ ಮನೋಹರ್ ಹತ್ಯೆ .
  •  2010 ಮಾರ್ಚ್ 1 – ಕಾರ್ಕಳ ಅಂಡಾರು ಗ್ರಾಮಪಂಚಾಯತ್ ವ್ಯಾಪ್ತಿಯಯಲ್ಲಿ ಕುತ್ಲೂರು ಗ್ರಾಮದ ನಿವಾಸಿ ವಸಂತ್ ಹತ್ಯೆ
  •  2012- ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಚೇರು ಅರಣ್ಯ ಪ್ರದೇಶದಲ್ಲಿ ಶಂಕಿತ ನಕ್ಸಲ್ ಯಲ್ಲಪ್ಪ ಹತ್ಯೆ.
  •  2014 ಎಪ್ರಿಲ್ 19- ನಕ್ಸಲ್ ಶಂಕೆಯಲ್ಲಿ ಕಬೀರ್ ಹತ್ಯೆ.

ನಕ್ಸಲ್ ನಿಗ್ರಹ ಪಡೆ ನಡೆಸಿದ ಈ ಎಲ್ಲಾ ಹತ್ಯೆಗಳು ಶಂಕೆಯ ಆಧಾರದಲ್ಲಿ ನಡೆದ ಹತ್ಯೆಗಳಾಗಿವೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.  ವ್ಯಕ್ತಿಯೊಬ್ಬ ನಕ್ಸಲ್ ಎಂದು ಸಂಶಯ ಬಂದರೆ ಸಾಕು, ಆತನ ಬಂಧನಕ್ಕಿಂತ ಹತ್ಯೆ ಮಾಡಿ ಕೈತೊಳೆದುಬಿಡುವುದೇ ಲೇಸು ಎಂಬುವಂತಿದೆ ಎ.ಎನ್.ಎಫ್ ಕಾರ್ಯವೈಖರಿ. ಕಳೆದ 10 ವರ್ಷಗಳಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಎಲ್ಲಾ ಹತ್ಯೆಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುವಂತಹದ್ದು, ಹತ್ಯಗೀಡಾದ ಶಂಕಿತ ನಕ್ಸಲರನ್ನು ತೀರಾ ಹತ್ತಿರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂಬ ಆರೋಪವನ್ನು ಸತ್ಯಶೋಧನಾ ಸಮಿತಿಗಳು ಮಾಡುತ್ತಿವೆ. ಕಬೀರ್ ಹತ್ಯೆಯಲ್ಲೂ ಇಂಥಹ ಅನೇಕ ಅನುಮಾನಗಳು, ಪ್ರಶ್ನೆಗಳು ಕಾಡುತ್ತಿವೆ.

  • ನಕ್ಸಲ್ ಎಂಬ ಅನುಮಾನ ಬಂದ ಕೂಡಲೇ ಎದೆಗೆ ಗುರಿಯಿಟ್ಟು ಹತ್ಯೆ ಮಾಡುವ ಅವಷ್ಯಕತೆ ಏನಿತ್ತು?
  • ಯಾವುದೇ ದಾಳಿ ನಡೆಯದೇ ಇದ್ದರೂ ಪ್ರತಿದಾಳಿ ನಡೆಸುವಂತಹ ಅಧಿಕಾರ ಎ.ಎನ್.ಎಫ್ ಗೆ ಇದೆಯಾ?
  • ವ್ಯವಸ್ಥೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು, ಆದಿವಾಸಿಗಳು, ದಲಿತರು, ಹಿಂದುಳಿದವರು, ಬಡವರ ಕುರಿತಾದ ಪ್ರಭುತ್ವದ ಧೋರಣೆಗೆ ಎ.ಎನ್.ಎಫ್ ಗುಂಡಿನ ದಾಳಿ ಸಾಕ್ಷಿಯಾಗಿದೆಯೇ?
  •  ಪೊಲೀಸ್ ವ್ಯವಸ್ಥೆಯಲ್ಲಿರುವ ಮತಾಂಧ ಮನಸ್ಥಿತಿ ಕಬೀರ್ ಹತ್ಯೆಗೆ ಪ್ರೆರಣೆ ನೀಡಿತೇ ?
  •  ರಾಷ್ಟ್ರೀಯ ಹೆದ್ದಾರಿಯಲ್ಲೇ ಅನುಮಾನದಿಂದ ಅಮಾಯಕನನ್ನು ನಕ್ಸಲ್ ಹೆಸರಲ್ಲಿ ಹತ್ಯೆಗೈದ ಎ.ಎನ್.ಎಫ್ ದಟ್ಟ ಅರಣ್ಯದಲ್ಲಿ ನಕ್ಸಲ್ ನಿಗೃಹದ ಹೆಸರಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಹೇಗಿರಬಹುದು?

ಕಬೀರ್ ಹತ್ಯೆ ಇಂಥಹ ಹತ್ತು ಹಲವಾರು ಪ್ರೆಶ್ನೆಗಳು, ಅನುಮಾನಗಳು ಎ.ಎನ್.ಎಫ್ ಕಾರ್ಯವೈಖರಿಯ ಕುರಿತಾಗಿ ಹುಟ್ಟುಹಾಕಿದೆ. ಪಶ್ವಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸುವಲ್ಲಿ ಎ.ಎನ್.ಎಫ್ ಅಗತ್ಯ. ಆದರೆ ನಕ್ಸಲ್ ನಿಗ್ರಹದ ಹೆಸರಲ್ಲಿ ಅಮಾಯಕರ ನೆತ್ತರು ಹರಿಸುವ ಕಾಯಕದಲ್ಲಿ ತೊಡಗಿಕೊಂಡರೆ ನಕ್ಸಲ್ ನಿಯಂತ್ರಣ ಸಾಧ್ಯಾನಾ?

ಕಬೀರ್ ಹತ್ಯೆ ದಿಕ್ಕು ತಪ್ಪುತ್ತಿರುವ ಹೋರಾಟ

ಪಶ್ವಿಮ ಘಟ್ಟದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಹತ್ಯಾಕಾಂಡದ ಸರದಿಗೆ ಎಪ್ರಿಲ್ 19 ರಂದು ಶೃಂಗೇರಿಯ ಕೆರೆಕಟ್ಟೆ ತನಿಕೋಡು ಚೆಕ್ ಪೋಸ್ಟ್ ನಲ್ಲಿ ನಡೆದ ಕಬೀರ್ ಹತ್ಯೆ ಮತ್ತೊಂದು ಸೇರ್ಪಡೆಯಷ್ಟೇ. ವಿಪರ್ಯಾಸವೆಂದರೆ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾದ ಹೋರಾಟ ಎಲ್ಲೋ ದಾರಿ ತಪ್ಪುತ್ತಿದೆ ಎಂದನಿಸುತ್ತಿದೆ. ಹೋರಾಟಕ್ಕೆ ಧರ್ಮದ “ ಫ್ರೇಮ್ ” ಕೊಡುವ ಕಾರ್ಯ ನಡೆಯುತ್ತಿದೆ. ಎ.ಎನ್.ಎಫ್ ನಿಂದ ಕಬೀರ್ ಹತ್ಯೆಯ ನಂತರ ನಡೆದ ತೀರಾ ಅಮಾನವೀಯ ಘಟನಾವಳಿಗಳು ಕಬೀರ್ ಹತ್ಯೆಯ ಹೋರಾಟವನ್ನು ಧರ್ಮದ ಫ್ರೇಮ್ ನೊಳಕ್ಕೆ ತಳ್ಳಿ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾಗಿದ್ದ ಹೋರಾಟವನ್ನು ದಿಕ್ಕು ತಪ್ಪುವಂತೆ ಮಾಡಲಾಗುತ್ತಿದೆ.

ಪಶ್ವಿಮ ಘಟ್ಟದಲ್ಲಿ ಇದುವರೆಗೂ ಎ.ಎನ್.ಎಫ್ ದೌರ್ಜನ್ಯಕ್ಕೆ ಒಳಗಾದರು ಕೇವಲ ಮುಸ್ಲಿಮರಲ್ಲ, ಹಿಂದುಗಳಲ್ಲKabeer_ANF ಬದಲಾಗಿ ಇದನ್ನು ಮೀರಿ ನಿಂತ ಬಡವರು, ಆದಿವಾಸಿಗಳು, ಸಾಮಾಜಿಕ ಕಾರ್ಯಕರ್ತರು. ಪ್ರಭುತ್ವದ ಜನವಿರೋಧಿ ಯೋಜನೆಗಳಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಆನೆ ಕಾರಿಡಾರ್ , ಪುಷ್ಪಗಿರಿ ವನ್ಯಧಾಮ ಮೊದಲಾದವುಗಳು ಈ ಭಾಗದ ಹಿಂದುಗಳು, ದಲಿತರು, ಮುಸ್ಲಿಮರು, ಆದಿವಾಸಿಗಳು ಎಲ್ಲರ ಜೀವನವನ್ನು ಕಸಿದುಕೊಳ್ಳುವ ಯೋಜನೆಗಳಾಗಿದೆ. ಇಂತಹ ಯೋಜನೆಗಳಿಂದಾಗಿ ಈಗಾಗಲೇ ಅರಣ್ಯವಾಸಿಗಳು ನಾನಾ ರೀತಿಯಲ್ಲಿ ದೌಜನ್ಯಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಇನ್ನಷ್ಟು ಯೋಜನೆಗಳು ಜಾರಿಗೆ ಬಂದಲ್ಲಿ ಎಲ್ಲಾ ಧರ್ಮ, ಸಂಸ್ಕೃತಿಗಳ ಬಡ ಜನರು ತಮ್ಮ ಮನೆ ಮಠ ಆಸ್ತಿ, ನೆಲೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರದ ಇಂಥಹ ಯೋಜನೆಗಳನ್ನು ವಿರೋಧಿಸಿಯೇ ಈ ಭಾಗದಲ್ಲಿ ಚಳುವಳಿಗಳು ಹಟ್ಟುಕೊಂಡಿದ್ದು. ವಿರೋಧದ ಧ್ವನಿಗಳನ್ನು ಶಸ್ತ್ರದ ಮೂಲಕ ದಮನ ಮಾಡುವ ಉದ್ದೇಶದಿಂದ ಎ.ಎನ್.ಎಫ್ ಜನ್ಮ ತಾಳಿದೆ. ಪರಿಣಾಮ ಸಾಕಷ್ಟು ರಕ್ತ ಪಾತಗಳು ಪಶ್ವಿಮ ಘಟ್ಟದ ದಟ್ಟಾರಣ್ಯದಲ್ಲಿ ನಡೆಯುತ್ತಿವೆ. ಪ್ರಭುತ್ವದ ಇಂಥಹ ಮನಸ್ಥಿತಿಯೇ ಕಬೀರ್ ಹತ್ಯೆಗೆ ಕಾರಣವಾಗಿರುವುದು. ಯಾರನ್ನೂ ನಕ್ಸಲ್ ಎಂಬ ಶಂಕೆಯ ಹೆಸರಲ್ಲಿ ಗುಂಡಿಕ್ಕಿ ಕೊಲ್ಲುವುದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಸಮ್ಮತ ಹಾಗೂ ಅನಿವಾರ್ಯ ಎಂಬ ಭಾವನೆ ಪ್ರಭುತ್ವದ ಆದೇಶ ಪಾಲಕರಿಗಿದ್ದಂತಿದೆ. ಇಂಥಹ ಮನಸ್ಥಿತಿಯ ವಿರುದ್ಧ ಎಲ್ಲಾ ಜನಸಾಮಾನ್ಯರು ಹೋರಾಟ ನಡೆಸಬೇಕಾಗಿದೆ. ಕಬೀರ್ ಒಬ್ಬ ಮುಸ್ಲಿಮ್ ದನದ ವ್ಯಾಪಾರಿ ಎಂಬ ಕಾರಣಕ್ಕಾಗಿ ಆತನ ಹತ್ಯೆಯನ್ನು ಸಮರ್ಥಿಸುವುದು ತೀರಾ ಅಮಾನವೀಯ. ಅದೇ ರೀತಿ ಮುಸ್ಲಿಂ ಯುವಕನ ಹತ್ಯೆ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಧರ್ಮದ ಲೇಪನ ಕೊಟ್ಟು ಹೋರಾಟ ಮಾಡುವುದು ಸಮ್ಮತವಲ್ಲ.

ಮನುಷ್ಯನ ರಕ್ತ ಚೆಲ್ಲಿದಕ್ಕೆ ಪಾರಿತೋಷಕ ಕೊಡುವ ಅಮಾನವೀಯತೆ ಬೇಡ

‘ಸ್ವಾಮಿ ವಿವೇಕಾನಂದ ಸಮಾಜಮುಖಿ ಚಿಂತಕ’ ಪುಸ್ತಕದ 43 ನೇ ಪುಟದಲ್ಲಿ ದಾಖಲಾದಂತೆ ಗೋ ರಕ್ಷಣಾ ಸಭೆಯ ಪ್ರಚಾರಕರೊಂದಿಗೆ ಮಾತನಾಡುತ್ತಾ ಸ್ವಾಮಿ ವಿವೇಕಾನಂದ ಹೀಗನ್ನುತ್ತಾರೆ. “ಮಧ್ಯ ಹಿಂದೂಸ್ಥಾನದಲ್ಲಿ ಭಯಂಕರವಾದ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ ಸಭೆ ದುರ್ಭೀಕ್ಷ ಕಾಲದಲ್ಲಿ ಏನಾದರೂ ಸಹಾಯ ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನೋ?”

ಪ್ರಚಾರಕ: ನಾವು ದುರ್ಭೀಕ್ಷ ಮೊದಲಾಲಾದವುಗಳಿಗೆ ಸಹಾಯ ಮಾಡುವುದಿಲ್ಲ. ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ :ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷ ಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿದ್ದಾರೆ, ಕೈಯಲ್ಲಾಗುತ್ತಿದ್ದರೂ ಇಂಥಹ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ಅನ್ನಿಸುವುದಿಲ್ಲವೇ ?

ಪ್ರಚಾರಕ : ಇಲ್ಲ; ಕರ್ಮ ಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯನಲ್ಲಿ ಸಹಾನುಭೂತಿಯನ್ನು ತೋರದೆ ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿತ್ತಿರುವುದನ್ನು ನೋಡಿಯೂ ಅವರ ಜೀವವನ್ನು ಉಳಿಸಲಿಕ್ಕೆ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ.

ಇಂಥಹ ಮಹಾನ್ ಸಂತ ಜನ್ಮ ತಾಳಿದ ಈ ನಾಡಿನಲ್ಲಿ ಎ.ಎನ್.ಎಫ್ ನಿಂದ ಹತ್ಯೆಗೀಡಾದ ಯುವಕ ಕಬೀರ್ ಗೋ ಸಾಗಾಟ ಮಾಡಿದ ಎಂಬ ಕಾರಣಕ್ಕಾಗಿ ಆತನ ಸಾವನ್ನು ಸಮರ್ಥಿಸಿಕೊಳ್ಳುವುದು, ಕಬೀರ್ ಸಾವಿಗೆ ಕಾರಣಕರ್ತನಾದ ಎ.ಎನ್.ಎಫ್ ಸಿಬಂಧಿಗೆ ಪಾರಿತೋಷಕಗಳನ್ನು ಘೋಷಣೆ ಮಾಡುವುದು ಅಮಾನವೀಯ ಅಲ್ಲವೇ? ಸ್ವಾಮಿ ವಿವೇಕಾನಂದರ ತತ್ವಾದರ್ಶದಲ್ಲಿ ಯಾರು ನಂಬಿಕೆ ಇಡುತ್ತಾರೋ ಅಂಥವರು ‘ಹತ್ಯೆಗೆ ಬಹುಮಾನ ಕೊಡುವ’ ನೀಚ ಮನಸ್ಥಿತಿಯನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ಎ.ಎನ್.ಎಫ್ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಆದಿವಾಸಿಗಳು ಮುಸ್ಲಿಮರಲ್ಲ. ಇವರಲ್ಲಿ ಅನೇಕರು ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಂಬಿಕೆ ಇಟ್ಟುಕೊಂಡವರು. ಕಬೀರ್ ಹತ್ಯೆಯನ್ನು ಅಭಿನಂದಿಸುವ ಹಿಂದೂ ಪರ ಸಂಘಟನೆಗಳು ಆದಿವಾಸಿಗಳ ಮೇಲಿನ ದಬ್ಬಾಳಿಕೆಗೆ ಪಾರಿತೋಷಕ ಕೊಡುತ್ತಾರೆಯೇ? ( ವಾಸ್ತವದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲಿನ ಪ್ರಭುತ್ವದ ದೌರ್ಜನ್ಯಕ್ಕೆ ಬೆಂಬಲವಾಗಿ ನಿಂತವರು ಈ ಧರ್ಮ ರಕ್ಷಕರು) ಕಬೀರ್ ಹತ್ಯೆಯನ್ನು ಹಿಂದೂ – ಮುಸ್ಲಿಂ ಸಂಘಟನೆಗಳು ಧರ್ಮದ ಆಧಾರದಲ್ಲಿ ವಿಭಜಿಸ ಹೊರಟಿರುವುದು ಪ್ರಭುತ್ವದ ಆದೇಶ ಪಾಲಕರಿಗೆ ಇನ್ನಷ್ಟು ಬಲ ಬಂದತಾಗಿದೆ. ಶಂಕೆಯ ಆಧಾರದಲ್ಲಿ ನಡೆದ ಅಮಾಯಕರ ಹತ್ಯೆಯನ್ನು ನಾಗರಿಕ ಸಮಾಜ ವಿರೋಧಿಸಬೇಕಾಗಿದೆ. ಇಂದು ಕಬೀರ್ ನಾಳೆ ಸುರೇಶ್ ನಾಡಿದ್ದು ಜೋಕಬ್ ಹೀಗೆ ಆಡಳಿತ ವರ್ಗದ ದಮನಕಾರಿ ನೀತಿಗೆ ಬಲಿಯಾಗುತ್ತಲೇ ಇರಬೇಕಾಗುತ್ತದೆ. ಕಬೀರ್ ಹತ್ಯೆ ವಿರುದ್ಧ ಧ್ವನಿ ಎತ್ತುವ ನೆಪದಲ್ಲಿ ಮುಸ್ಲಿಮ್ ಮತೀಯ ಸಂಘಟನೆಗಳು ಹೋರಾಟವನ್ನು ಧಾರ್ಮಿಕ ಚೌಕಟ್ಟಿಗೆ ಸೀಮಿತಗೊಳಿಸುವುದು ಹಾಗೂ ಕಬೀರ್ ಹತ್ಯೆ ಒಬ್ಬ ಮುಸ್ಲಿಮ್ ಯುವಕನ ಹತ್ಯೆ ಎಂಬ ಕಾರಣಕ್ಕಾಗಿ ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಇವೆರಡು ತೀರಾ ಅಪಾಯಕಾರಿ.

ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ


– ಡಾ. ಅಶೋಕ್ ಕೆ.ಆರ್.


 

ವರುಷದ ಹಿಂದಿನಿಂದಲೇ ಪ್ರಾರಂಭವಾಗಿದ್ದ ಚುನಾವಣಾ ತಯಾರಿಗಳು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ವೇಗೋತ್ಕರ್ಷಕ್ಕೊಳಗಾಗಿವೆ. ಚುನಾವಣಾ ತಯಾರಿಗಳು ಆರಂಭಗೊಂಡ ದಿನದಿಂದಲೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ‘ಸಮರ’ ಎಂದೇ ಬಿಂಬಿಸಲಾಗುತ್ತಿದೆ. ಚುನಾವಣೆ ಘೋಷಣೆಯಾದ ನಂತರದಲ್ಲೂ ವಿಷಯಾಧಾರಿತ ಚರ್ಚೆಗಳು ಮುನ್ನೆಲೆಗೆ ಬರದಿರುವುದು ನಮ್ಮ ಪ್ರಜಾಪ್ರಭುತ್ವ ಹಿಡಿಯುತ್ತಿರುವ ಜಾಡನ್ನು ತೋರುತ್ತಿದೆಯೇ? ಈಗಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಭಾಷಣಗಳಲ್ಲಿ ಕಾಂಗ್ರೆಸ್ ಮತ್ತದರ ನಾಯಕರ ಬಗೆಗಿನ ಅವಹೇಳನಕಾರಿ ಮಾತುಗಳು ಮತ್ತು ಕಾಂಗ್ರೆಸ್ಸಿಗರ ಭಾಷಣಗಳಲ್ಲಿ ನರೇಂದ್ರ ಮೋದಿ ಬಗೆಗಿನ ವ್ಯಂಗ್ಯಮಿಶ್ರಿತ ಕೆಲವೊಮ್ಮೆ ಅಸಂಬದ್ಧ ಮಾತುಗಳೇ ವಿಜೃಂಭಿಸುತ್ತಿದೆಯೇ ಹೊರತು ಅಧಿಕಾರಕ್ಕೆ ಬಂದರೆ ತಾವು ನೀಡಬಹುದಾದ ಆಡಳಿತದ ಮಾದರಿಯ ಬಗೆಗಿನ ವಿಚಾರಗಳು ಚರ್ಚೆಗೊಳಪಡುತ್ತಲೇ ಇಲ್ಲ. ಇವತ್ತಿನ ಚುನಾವಣಾ ಮಾದರಿಯು ಪ್ರಜಾಪ್ರಭುತ್ವದ ಅಣಕವಾಡುತ್ತಿದೆ.

ಪ್ರಜೆಗಳಿಂದ ಆಯ್ದು ಬಂದ ನೇತಾರ ಅವರನ್ನು ಮುನ್ನಡೆಸುವವನಾದಾಗ ಪ್ರಜಾಪ್ರಭುತ್ವದ ನಿಜ ಅರ್ಥ ಸಾರ್ಥಕವಾಗುತ್ತದೆ. ಆದರೆ ಈಗಿನ ಪ್ರಜಾಪ್ರಭುತ್ವ ಪ್ರಜೆಗಳಿಂದ ಆರಿಸಿ ಬಂದಮೇಲೆ ಪ್ರಜೆಗಳ ಮೇಲೆ ಪ್ರಭುತ್ವ ಸಾಧಿಸುವುದಷ್ಟೇ ಆಗಿ ಹೋಗುತ್ತಿದೆ. ಈ ರೀತಿಯ ಸಿನಿಕತನವೂ ತಾತ್ಕಾಲಿಕವೆ? ಪ್ರತಿ ಬಾರಿಯ ಚುನಾವಣೆಯ ಸಂದರ್ಭದಲ್ಲೂ ಹಿಂದಿನ ಚುನಾವಣೆಯ ಸಂದರ್ಭ ಈಗಿನದಕ್ಕಿಂತ ಉತ್ತಮವಾಗಿತ್ತು ಎಂಬ ಭಾವ ಮೂಡಿಸುತ್ತದೆಯಾ? ಪ್ರತಿ ಬಾರಿ ಹೊಸತೊಂದು ಆಶಯದೊಂದಿಗೆ ಹೊಸ ಸರಕಾರಕ್ಕೆ1 ಅವಕಾಶ ಕೊಟ್ಟ ನಂತರ ಕೆಲವೇ ತಿಂಗಳುಗಳಲ್ಲಿ ಅಥವಾ ವರ್ಷ ಕಳೆಯುವಷ್ಟರಲ್ಲಿ ‘ಅಯ್ಯೋ ಹೋದ ಸರಕಾರವೇ ಪರವಾಗಿರಲಿಲ್ಲ’ ಎಂಬ ಭಾವನೆ ಮೂಡಲಾರಂಭಿಸುತ್ತದೆ! ಹತ್ತು ವರುಷದ ಮನಮೋಹನಸಿಂಗ್ ಆಡಳಿತದಿಂದ ಬೇಸತ್ತ ಜನ ಅಟಲ್ ಬಿಹಾರಿ ವಾಜಪೇಯಿಯ ಗುಣಗಾನ ಮಾಡುತ್ತಾರೆ. ಅಟಲ್ ಆಡಾಳಿತಾವಧಿಯಲ್ಲಿ ನಡೆದ ಹಗರಣಗಳು ನರಸಿಂಹ ರಾವ್ ಅವರೇ ವಾಸಿ ಕಣ್ರೀ ಎಂಬಂತೆ ಮಾಡಿಬಿಡುತ್ತವೆ! ಸಮ್ಮಿಶ್ರ ಸರಕಾರಗಳಿಂದ ಬೇಸತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಆರಿಸಿದ ನಂತರ ಬಿಜೆಪಿಯ ಆಡಳಿತ ವೈಖರಿಯಿಂದ ಸುಸ್ತೆದ್ದು ‘ಕಾಂಗ್ರೆಸ್ಸೇ ವಾಸಿ’ ಎಂದು ಬಿಜೆಪಿಯನ್ನು ಸೋಲಿಸುತ್ತಾರೆ ಜನ. ಇನ್ನು ಕೆಲವು ದಿನಗಳಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ತನ್ನ ದೌರ್ಬಲ್ಯ, ನಿಷ್ಕ್ರಿಯತೆಗಳಿಂದ ಹಳೆಯ ಸರಕಾರವೇ ಒಳ್ಳೆಯದಿತ್ತು ಎಂಬ ಭಾವ ಮೂಡಿಸಿದರೆ ಅಚ್ಚರಿಪಡಬೇಕಿಲ್ಲ! ನಮ್ಮ ನಿರೀಕ್ಷೆಗೆ ತಕ್ಕಂತೆ ಸರಕಾರಗಳು ಕಾರ್ಯನಿರ್ವಹಿಸಲು ವಿಫಲವಾದಾಗ ಈಗಾಗಲೇ ಸೋತು ಮೂಲೆಯಲ್ಲಿರುವ ಕಳೆದ ಬಾರಿ ಆಡಳಿತ ನಡೆಸಿದ ಪಕ್ಷದ ಬಗೆಗೆ ಮೃದು ದೋರಣೆ ತಳೆದುಬಿಡಲಾಗುತ್ತದೆ. ಬಹುಶಃ ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಎಂದು ಎಷ್ಟೇ ದೊಡ್ಡ ದನಿಯಲ್ಲಿ ಕೂಗುತ್ತಿದ್ದರೂ ಯು.ಪಿ.ಎ 2ರ ಆಡಳಿತ ಜನರಲ್ಲಿ ಬೇಸರ ಮೂಡಿಸಿದೆ ಮತ್ತು ಬೇಸರ ಅಟಲ್ ನೇತೃತ್ವದ ಎನ್.ಡಿ.ಎ ವಾಸಿಯಿತ್ತು ಎನ್ನುವಂತೆ ಮಾಡುತ್ತಿರುವುದು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ 2009ರ ಚುನಾವಣೆಯಲ್ಲಿ ಎನ್.ಡಿ.ಎ ಉತ್ತಮ ಎಂಬ ಚರ್ಚೆಗಳು ನಡೆದಿರಲಿಲ್ಲ, ಕಾರಣ ಯು.ಪಿ.ಎ ತನ್ನ ಮೊದಲ ಆಡಳಿತಾವಧಿಯಲ್ಲಿ ಹೆಚ್ಚಿನ ಹಗರಣಗಳನ್ನೇನೂ ಮಾಡಿಕೊಂಡಿರಲಿಲ್ಲ. ಹಗರಣಗಳು, ಜಾಗತೀಕರಣಕ್ಕೆ ಒಡ್ಡಿಕೊಂಡ ಪರಿಣಾಮವಾಗಿ ಆರ್ಥಿಕ ಶಿಸ್ತು ದೇಶದ ಆಡಳಿತದ ಕೈಹಿಡಿತದಿಂದ ತಪ್ಪಿಸಿಕೊಂಡು ಜನರನ್ನು ಬವಳಿಕೆಗೆ ಒಳಪಡಿಸಿದ ರೀತಿ ಮತ್ತು ವರ್ಷದಿಂದ ವರ್ಷಕ್ಕೆ ತನ್ನ ಹಿಡಿತವನ್ನು ಬಲಗೊಳಿಸುಕೊಳ್ಳುತ್ತಲೇ ಸಾಗುತ್ತಿರುವ ಭ್ರಷ್ಟಾಚಾರ ಯು.ಪಿ.ಎಯನ್ನು 2014ರ ಚುನಾವಣೆಯಲ್ಲಿ ಸೋಲುವಂತೆ ಮಾಡುವುದು ಹೆಚ್ಚು ಕಡಿಮೆ ನಿಶ್ಚಯವಾಗಿದೆ.

ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸ್ವಯಂಕೃತ ತಪ್ಪುಗಳಿಂದ ಮತ್ತು ಮೋದಿ ಅಲೆಯಿಂದ ಸೋಲನುಭವಿಸುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಬಹುತೇಕ ಜನರಿಗೂ ಅದೇ ಭಾವನೆಯಿದೆ. ಆದರೆ ಕಾಂಗ್ರೆಸ್ಸನ್ನು ಕಡೆಗಣಿಸಿ ಉಳಿದ ಪಕ್ಷಗಳು ಚುನಾವಣೆ ತಯ್ಯಾರಿ ಮಾಡಿದರೆ ಮತ್ತೆ ಕಾಂಗ್ರೆಸ್ ಅನಿರೀಕ್ಷಿತ ಅಘಾತ ನೀಡಿಬಿಡಬಹುದು. ಈಗಿನ ಬಿ.ಜೆ.ಪಿ ಕೇವಲ ಒಬ್ಬ ವ್ಯಕ್ತಿಯ ಖ್ಯಾತಿಯ ಮೇಲೆ ಚುನಾವಣೆ ಎದುರಿಸಲು ಸನ್ನದ್ಧವಾಗಿದ್ದರೆ 2004ರಲ್ಲಿ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ‘ಇಂಡಿಯಾ ಶೈನಿಂಗ್’ ಎಂಬ ಘೋಷ ವಾಕ್ಯದೊಂದಿಗೆ ಈಗಿನದಕ್ಕಿಂತಲೂ ಹೆಚ್ಚಿನ ಅಬ್ಬರದೊಂದಿಗೆ ಪ್ರಚಾರವಾರಂಭಿಸಿತ್ತು. ಮಾಧ್ಯಮಗಳಲ್ಲೂ ‘ಇಂಡಿಯಾ ಶೈನಿಂಗ್’ನದ್ದೇ ಮಾತು. ಜನರಲ್ಲೂ ಅದೇ ಮಾತು. ಮಾತುಗಳ ಹಿಂದಿನ ಮೌನದಲ್ಲಿ ಹರಿಯುವ ವಿಚಾರಗಳ ಬಗ್ಗೆ ಪ್ರಚಾರದಬ್ಬರದಲ್ಲಿ ಯಾರೂ ಗಮನಹರಿಸದ ಕಾರಣ ಯಾವ ಹೆಚ್ಚಿನ ಪ್ರಚಾರವನ್ನೂ ಮಾಡದೆ ಮಾಧ್ಯಮಕ್ಕೆ ಪ್ರಿಯರೂ ಆಗದೆ ಕಾಂಗ್ರೆಸ್ ಎಲ್ಲರಿಗೂ ಅಚ್ಚರಿ ನೀಡುವ ರೀತಿಯಲ್ಲಿ ಗೆದ್ದು ಬಂದಿತ್ತು. 2009ರ ಚುನಾವಣೆಯಲ್ಲಿ ಸಹಿತ ಎನ್.ಡಿ.ಎ ಅಧಿಕಾರವಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವಾದರೂ ಕೊನೆಗೆ ಮತ್ತೆ ಗೆದ್ದು ಬಂದಿದ್ದು ಯು.ಪಿ.ಎ! ಎಲ್ಲೋ ಒಂದೆಡೆ ಜನರ ಮನಸ್ಥಿತಿಯನ್ನು ಅರಿಯಲು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ವಿಫಲವಾಗುತ್ತಿವೆಯಾ?

ಜನರ ಮನಸ್ಥಿತಿ ಅರಿಯುವುದಕ್ಕಿಂತ ಹೆಚ್ಚಾಗಿ ಜನರ ಯೋಚನಾ ಲಹರಿಯನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸುವ ಕಾರ್ಯದಲ್ಲಿ ಇಂದಿನ ರಾಜಕೀಯ ಪಕ್ಷಗಳ ನೇತಾರರು ನಿರತರಾಗಿದ್ದಾರೆ. ಈ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಖರೀದಿಸುತ್ತಾರೆ, ಮಾಧ್ಯಮಗಳ ಮಾಲೀಕತ್ವ ವಹಿಸುತ್ತಾರೆ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೋಗುತ್ತಿರುವ ಭ್ರಷ್ಟಾಚಾರವನ್ನು ಬಳಸಿಕೊಳ್ಳುತ್ತ ತಮ್ಮ ಪರವಾಗಿರುವ ವರದಿಗಳಷ್ಟೇ ಪ್ರಸಾರವಾಗುವಂತೆ ಮಾಡಿಬಿಡುತ್ತಾರೆ. 2014ರ ಚುನಾವಣೆಯ ಬಗೆಗೆ ಅನೇಕ ವಾಹಿನಿಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಬಿ.ಜೆ.ಪಿ ಏಕಾಂಗಿಯಾಗಲ್ಲದಿದ್ದರೂ ತನ್ನ ನೇತೃತ್ವದ ಎನ್.ಡಿ.ಎ ಮುಖಾಂತರ ಸರಕಾರ ನಿರ್ಮಿಸಲು ಅಗತ್ಯವಾದ ಸ್ಥಾನಗಳ ಸಮೀಪಕ್ಕೆ ಬರುತ್ತದೆ. ಎನ್.ಡಿ.ಎ ನಂತರದ ಸ್ಥಾನದಲ್ಲಿ ಇತರರು (ತೃತೀಯ ರಂಗ) ಬಂದರೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ನೂರರ ಹತ್ತಿರತ್ತಿರ ಬಂದರೆ ಅದೇ ಪುಣ್ಯ ಎಂಬ ಅಂಶ ಬಹುತೇಕ ವಾಹಿನಿಗಳ ಚುನಾವಣಾ ಸಮೀಕ್ಷೆಯ ಅಭಿಪ್ರಾಯ. ಈ ಸಮೀಕ್ಷೆಗಳ ಆಧಾರದ ಮೇಲೆ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಾರಂಭವಾಗಿತ್ತು. ಚರ್ಚೆಗಳು ಮತ್ತಷ್ಟು ಮುಂದುವರೆಯುತ್ತಿದ್ದವೋ ಏನೋ ನ್ಯೂಸ್ ಎಕ್ಸ್ ಪ್ರೆಸ್ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಮೀಕ್ಷೆಗಳನ್ನು ಹಣ ನೀಡುವ ಅಭ್ಯರ್ಥಿ – ಪಕ್ಷಗಳ ಅನುಕೂಲಕ್ಕೆ ತಿರುಚಲಾಗುತ್ತದೆ ಎಂಬ ಸಂಗತಿ ಹೊರಬಂದ ನಂತರ ಸಮೀಕ್ಷೆಗಳ ಬಗೆಗಿನ ಚರ್ಚೆಗಳು ಮಾಯವಾಗಿಬಿಟ್ಟಿವೆ! ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಮಾಧ್ಯಮಗಳ ಸಮೀಕ್ಷೆಗಳು ವಿಫಲವಾದುದಕ್ಕೂ ಇದೇ ಕಾರಣವಿರಬಹುದಾ?

ಚುನಾವಣೆಯ ಸಂದರ್ಭಗಳಲ್ಲಿ ಕಳೆದೊಂದು ದಶಕದಿಂದ ಹೆಚ್ಚು ಚರ್ಚೆಗೊಳಗಾಗುತ್ತಿರುವುದು “ಪೇಯ್ಡ್ ನ್ಯೂಸ್” ಎಂಬ ಅನಿಷ್ಟ ಸಂಪ್ರದಾಯ. ಹಣದಿಂದpaid-news ಮಾಧ್ಯಮಗಳ ಮುಖಪುಟವನ್ನು, ವಾಹಿನಿಗಳ ಸಮಯವನ್ನೇ ಖರೀದಿಸುವ ಸಂಪ್ರದಾಯ. ಪೇಯ್ಡ್ ನ್ಯೂಸನ್ನು ತಡೆಯಲು ಚುನಾವಣಾ ಆಯೋಗ ಕಾಳಜಿ ವಹಿಸುತ್ತಿದ್ದರೂ ಮತ್ತೊಂದು ಮಗದೊಂದು ಹೊಸ ಹೊಸ ರೂಪದಲ್ಲಿ ಪೇಯ್ಡ್ ನ್ಯೂಸ್ ಕಾಣಿಸಿಕೊಳ್ಳುತ್ತಲೇ ಇದೆ. ಇತ್ತೀಚೆಗಷ್ಟೇ ಪ್ರಜಾವಾಣಿಯಲ್ಲಿ ಧಾರವಾಡ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ತಮ್ಮ ಹಿಂಬಾಲಕರ ಮೂಲಕ ಅಲ್ಲಿನ ಸ್ಥಳೀಯ ಪತ್ರಕರ್ತರಿಗೆ ಉಡುಗೊರೆಗಳನ್ನು ನೀಡಿದ ವಿಚಾರ ಬಹಿರಂಗವಾಗಿತ್ತು. ‘ಜೋಶಿಯವರ ಪರವಾಗಿ ಬರೆಯಿರಿ, ಅದು ಸಾಧ್ಯವಾಗದಿದ್ದಲ್ಲಿ ಕಡೇ ಪಕ್ಷ ವಿರುದ್ಧ ವಿಚಾರಗಳನ್ನು ಬರೆಯಬೇಡಿ’ ಎಂಬುದವರ ಬೇಡಿಕೆಯಾಗಿತ್ತು! ಚುನಾವಣೆ ಸಂದರ್ಭದಲ್ಲಿ ಪತ್ರಕರ್ತರು ಲಕ್ಷಗಟ್ಟಲೆ ಹಣ ಮಾಡುವುದು ಈಗ ತೀರ ರಹಸ್ಯ ಸಂಗತಿಯಾಗೇನೂ ಉಳಿದಿಲ್ಲ. ಈ ರೀತಿಯ ಭ್ರಷ್ಟಾಚಾರವನ್ನೂ ತಡೆಗಟ್ಟಬಹುದೇನೋ. ಆದರೆ ರಾಜಕಾರಣಿಗಳೇ ವಾಹಿನಿಗಳ ಮಾಲೀಕರಾದ ಸಂದರ್ಭದಲ್ಲಿ ಪೇಯ್ಡ್ ನ್ಯೂಸ್ ಪಡೆಯುವ ಆಯಾಮವೇ ಬೇರೆ. ಕರ್ನಾಟಕದಲ್ಲಿ ಇದಕ್ಕೆ ಮೊದಲ ಉದಾಹರಣೆ ವಿಜಯ ಕರ್ನಾಟಕ ಪತ್ರಿಕೆ. ವಿಜಯ ಕರ್ನಾಟಕದ ಮಾಲೀಕತ್ವವನ್ನು ಹೊಂದಿದ್ದ ಸಂದರ್ಭದಲ್ಲಿ ವಿಜಯ ಸಂಕೇಶ್ವರ್ ಅವರದೇ ಪಕ್ಷವನ್ನೂ ಕಟ್ಟಿದ್ದರು. ಚುನಾವಣೆಯ ಸಮಯದಲ್ಲಿ ಇಡೀ ವಿಜಯ ಕರ್ನಾಟಕದ ತುಂಬಾ ಅವರ ಪಕ್ಷದ ಅಭ್ಯರ್ಥಿಗಳದೇ ಸುದ್ದಿ! ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಪಕ್ಷಕ್ಕೆ ಇವರ ಪಕ್ಷದವರದೇ ಪ್ರಬಲ ಪೈಪೋಟಿ! ಇಷ್ಟೆಲ್ಲ ಅಬ್ಬರದ ನಂತರವೂ ಅವರ ಪಕ್ಷ ಗೆಲುವು ಕಂಡಿದ್ದು ಕೆಲವೇ ಕೆಲವು ಸ್ಥಾನಗಳಲ್ಲಿ ಮಾತ್ರ. ಇತ್ತೀಚಿನ ಉದಾಹರಣೆಯಾಗಿ ಕಸ್ತೂರಿ, ಜನಶ್ರೀ ಮತ್ತು ಸುವರ್ಣ ವಾಹಿನಿಯನ್ನು ಗಮನಿಸಬಹುದು. ಕಸ್ತೂರಿಯಲ್ಲಿ ಸತತವಾಗಿ ಜೆ.ಡಿ.ಎಸ್ ಮುಖಂಡರ ವರಿಷ್ಟರ ಭಾಷಣಗಳ ಪ್ರಸಾರವಾಗುತ್ತದೆ. ಜನಶ್ರೀ ವಾಹಿನಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ಸಿನ ಪರವಾಗಿ ಹೆಚ್ಚಿನ ಸುದ್ದಿಗಳನ್ನು ಪ್ರಸಾರ ಮಾಡುತಿತ್ತು. ಕಳೆದೊಂದು ವಾರದಿಂದ ಸುವರ್ಣದಲ್ಲಿ ‘ಆಧಾರ್’ ಕಾರ್ಡ್ ವಿರುದ್ಧವಾಗಿ ಅಭಿಯಾನವೇ ನಡೆಯುತ್ತಿದೆ. ದೇಶದ ಹಣ ಪೋಲಾಗುವ ಬಗ್ಗೆ ಕ್ರೋಧಗೊಂಡು ಈ ಅಭಿಯಾನ ನಡೆಸಿದ್ದರೆ ಬೆಂಬಲಿಸಬಹುದಿತ್ತೇನೋ. ಆದರೆ ಈ ಅಭಿಯಾನ ನಡೆಯುತ್ತಿರುವುದು ಆಧಾರ್ ಸಂಸ್ಥೆಯ ಮಾಜಿ ಮುಖ್ಯಸ್ಥ ನಂದನ್ ನಿಲೇಕಿಣಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾರಣದಿಂದ! ಮತ್ತು ಸುವರ್ಣ ವಾಹಿನಿ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿದೆ. ಮತ್ತವರು ಬಿಜೆಪಿಯ ಬೆಂಬಲಿಗರೆಂಬುದು ‘ಆಧಾರ್’ ವಿರುದ್ಧದ ಇಡೀ ಅಭಿಯಾನವನ್ನೇ ಅನುಮಾನದಿಂದ ನೋಡುವಂತೆ ಮಾಡಿಬಿಡುತ್ತದೆ. ಈ ರೀತಿಯ ಸುದ್ದಿ ಪ್ರಸಾರಗಳೂ ಕೂಡ ಪೇಯ್ಡ್ ನ್ಯೂಸಿನ ಅಡಿಯಲ್ಲಿ ಬರಬೇಕಲ್ಲವೇ?

ತೀರ ಜಯಪ್ರಕಾಶ ನಾರಾಯಣರ ಚಳುವಳಿಗೆ ಹೋಲಿಸುವುದಕ್ಕಾಗದಿದ್ದರೂ ಅರವಿಂದ ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ ಪಕ್ಷ’ ದೇಶದಲ್ಲಿ ಮೂಡಿಸಿದ ಸಂಚಲನ ದೊಡ್ಡದು. ’ಅರವಿಂದ ಕೇಜ್ರಿವಾಲ್ ಮತ್ತವರ ಪಕ್ಷಕ್ಕೆ ಸೈದ್ಧಾಂತಿಕ ತಳಹದಿಯೇ ಇಲ್ಲ, ದೆಹಲಿಯಲ್ಲಿ ಆಡಳಿತ ನಡೆಸುವ ಅವಕಾಶ ಸಿಕ್ಕರೂ kejriwal_aap_pti_rallyಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗದ ಹೇಡಿ, ಅರಾಜಕತೆ ಸೃಷ್ಟಿಸುವ ಪ್ರತಿಭಟನೆಗಳನ್ನು ನಡೆಸುವುದರಲ್ಲಷ್ಟೇ ತೃಪ್ತ, ಕೇಜ್ರಿವಾಲ ಅಲ್ಲ ಕ್ರೇಜಿವಾಲ, ಅವರ ಪಕ್ಷಕ್ಕೆ ಒಂದು ನಿರ್ದಿಷ್ಟ ಉದ್ದೇಶ ಗುರಿ ಇಲ್ಲ, ಎಎಪಿ ಕಾಂಗ್ರೆಸ್ಸಿನ ಬಿ ಟೀಮ್, ಕಂಡವರನ್ನೆಲ್ಲ ಕಚ್ಚುವ ಅಭ್ಯಾಸ ಅರವಿಂದರಿಗೆ….’ ಇನ್ನೂ ಅನೇಕಾನೇಕ ಹೇಳಿಕೆಗಳು ಆಮ್ ಆದ್ಮಿ ಪಕ್ಷದ ಬಗ್ಗೆ ಕೇಳಿಬರುತ್ತಿದೆ. ಅಂದಹಾಗೆ ಆಮ್ ಆದ್ಮಿ ಪಕ್ಷ ಇನ್ನೂ ಬಾಲ್ಯಾವಸ್ಥೆಯಲ್ಲಿದೆ! ತೀರ ಇತ್ತೀಚೆಗೆ ಬಂದ ಒಂದು ಹೊಸ ರಾಜಕೀಯ ಪಕ್ಷದ ಬಗ್ಗೆ ದಶಕಗಳಿಂದ ರಾಜಕೀಯವನ್ನೇ ಅರೆದು ಕುಡಿಯುತ್ತಿರುವ ಪಕ್ಷಗಳ್ಯಾಕೆ ಇಷ್ಟೊಂದು ಮಾತನಾಡುತ್ತಿವೆ? ‘ಈ ಕಾಂಗ್ರೆಸ್ಸಿನವರು ಎಲ್ಲಿ ಹೋದರೂ ಮೋದಿ ಮೋದಿ ಅಂತ ಮಾತನಾಡುತ್ತಾರೆ. ಅಷ್ಟೇ ಸಾಕಲ್ಲವೇ ಮೋದಿ ಎಷ್ಟು ಖ್ಯಾತಿ ಹೊಂದಿದ್ದಾರೆ ಎಂದು ತಿಳಿಸಲು’ ಎಂದು ನಗುತ್ತಿದ್ದ ಬಿಜೆಪಿ ಮತ್ತದರ ಪ್ರಧಾನಿ ಅಭ್ಯರ್ಥಿ ನರೇಂದ್ರೆ ಮೋದಿ ಈಗ ಹೋದಬಂದಲ್ಲೆಲ್ಲ ಅರವಿಂದ್ ಕೇಜ್ರಿವಾಲರ ಬಗ್ಗೆ ಮಾತನಾಡುತ್ತಿದ್ದಾರೆ! ದೆಹಲಿಯಲ್ಲಿ ಒಂದಷ್ಟು ಸ್ಥಾನಗಳನ್ನಷ್ಟೇ ಗೆದ್ದಿದ್ದ ಆಮ್ ಆದ್ಮಿ ಪಕ್ಷದ ಬಗ್ಗೆ ಮತ್ತು ಅರವಿಂದ್ ಕೇಜ್ರಿವಾಲರ ಬಗ್ಗೆ ಇಷ್ಟೊಂದು ಭಯವ್ಯಾಕೆ? ತಮ್ಮೆಲ್ಲಾ ತಿಕ್ಕಲುತನ, ಅಪ್ರಬುದ್ಧ ನಿರ್ಧಾರಗಳ ನಡುವೆಯೂ ಅರವಿಂದ್ ಕೇಜ್ರಿವಾಲ್ ತಮ್ಮ ಅಮಾಯಕತೆಯನ್ನು ಕಳೆದುಕೊಂಡಿಲ್ಲ. ಅವರ ಅಮಾಯಕತೆಯೇ ಯಾವ ಅಂಜಿಕೆಯೂ ಇಲ್ಲದೆ ಸತ್ಯವನ್ನು ಹೇಳಿಸಿಬಿಡುತ್ತಿದೆ. ಎಲ್ಲ ಸತ್ಯಗಳಿಗೂ ಸಾಕ್ಷ್ಯಗಳನ್ನೊದಗಿಸುವುದು ಅಸಾಧ್ಯ ಎಂಬ ಸಂಗತಿ ಗೊತ್ತಿದ್ದರೂ ಸತ್ಯವನ್ನು ನಿರ್ಬಿಡೆಯಿಂದ ಹೇಳುವುದಕ್ಕೆ ಹಿಂಜರಿಯುತ್ತಿಲ್ಲ. ಮತ್ತು ಆ ಸತ್ಯಕ್ಕೆ ಉಳಿದ ಪಕ್ಷಗಳು ಭಯಭೀತರಾಗುತ್ತಿದ್ದಾವೆ! ಎಲ್ಲಿಯವರೆಗೆ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರೋ ಅಲ್ಲಿಯವರೆಗೆ ಬಿ.ಜೆ.ಪಿ, ಅದರ ಅಂಗಸಂಸ್ಥೆಗಳು ಮತ್ತು ಬಿ.ಜೆ.ಪಿ ಬೆಂಬಲಿಗರು ಕೇಜ್ರಿವಾಲರನ್ನು ಬೆಂಬಲಿಸುತ್ತಿದ್ದರು. ಇದಕ್ಕೆ ಕಾರಣ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಆ ಪ್ರತಿಭಟನೆ ಕೇಂದ್ರೀಕ್ರತವಾಗಿತ್ತು. ಆಮ್ ಆದ್ಮಿ ಪಕ್ಷ ಕಟ್ಟುವಾಗಲೂ ಅವರ ಬೆಂಬಲ ಮುಂದುವರೆದಿತ್ತು. ದೆಹಲಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮತಗಳನ್ನು ಆಮ್ ಆದ್ಮಿ ಪಕ್ಷ ಸೆಳೆದುಕೊಂಡು ತಮಗೆ ಬಹುಮತ ದೊರೆಯುವುದು ನಿಶ್ಚಿತ ಎಂಬ ನಿರ್ಣಯಕ್ಕೆ ಬಂದಿತ್ತು ಬಿ.ಜೆ.ಪಿ. ಆದರೆ ಯಾವಾಗ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಸಿನ ಮತಗಳ ಜೊತೆಜೊತೆಗೆ ಬಿ.ಜೆ.ಪಿಯ ಮತಗಳನ್ನೂ ಸೆಳೆಯಲಾರಂಭಿಸಿತೋ ಬಿ.ಜೆ.ಪಿ ಮತ್ತದರ ಬೆಂಬಲಿಗರ ಪ್ರೀತಿ ಕಡಿಮೆಯಾಯಿತು. ಉದ್ದಿಮೆಗಳು ಪಕ್ಷಗಳನ್ನು ಮತ್ತು ಪಕ್ಷಗಳ ಸರಕಾರಗಳನ್ನು ನಿಯಂತ್ರಿಸುವ ಬಗೆಯನ್ನು ಘಂಟಾಘೋಷವಾಗಿ ಸಾರುತ್ತ ನರೇಂದ್ರ ಮೋದಿ ಕೂಡ ಅದಾನಿ ಅಂಬಾನಿಗಳ ಕೈಗೊಂಬೆ ಎಂಬ ಕಟುಸತ್ಯವನ್ನು ತಿಳಿಸಲಾರಂಭಿಸಿದ ಮೇಲೆ ಅರವಿಂದ ಕೇಜ್ರಿವಾಲರ ಬಗೆಗಿನ ಅಪಸ್ವರಗಳು ಹೆಚ್ಚುತ್ತಾ ಸಾಗಿದವು. ಉದ್ಯಮಪತಿಗಳನ್ನು ಎದುರಿಹಾಕಿಕೊಂಡು ಎಷ್ಟರ ಮಟ್ಟಿಗೆ ಮುಂದುವರೆಯಬಲ್ಲರು ಕೇಜ್ರಿವಾಲ್?

ಪ್ರಜಾಪ್ರಭುತ್ವದ ಆರೋಗ್ಯ ಸುಧಾರಿಸಲು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ತರಹದ ಪಕ್ಷಗಳು ಅವಶ್ಯಕವಾದರೂ ಎಷ್ಟರ ಮಟ್ಟಿಗೆ ಅವರು ಸುಧಾರಣೆ ತರಲು ಸಾಧ್ಯ ಎಂದು ಗಮನಿಸಿದರೆ ಈಗಲೇ ನಿರಾಶೆಯಾಗಿಬಿಡುತ್ತದೆ. ತಮ್ಮದಿನ್ನೂ ಹೊಸ ಪಕ್ಷ, ಪ್ರತಿಭಟನೆ, ಭಾಷಣಗಳ ಜೊತೆಜೊತೆಗೆ ಪಕ್ಷ ಸಂಘಟನೆಗೂ ಒತ್ತು ಕೊಡಬೇಕು ಎಂಬ ವಿಚಾರ ಮರೆತುಬಿಟ್ಟಿದ್ದಾರೆ. ಆತುರಾತುರದಲ್ಲಿ ಸಾಧ್ಯವಾದಷ್ಟೂ ಕಡೆ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಆತುರದ ಕಾರಣದಿಂದ ಉಳಿದ ರಾಜಕೀಯ ಪಕ್ಷಗಳು ಮಾಡುವಂತೆ ಸಿನಿಮಾದವರಿಗೆ ಟಿಕೇಟು ಕೊಟ್ಟಿದ್ದಾರೆ. ಟಿಕೇಟು ನೀಡಲು ಅವರು ಸಿನಿಮಾದವರು ಎಂಬುದಷ್ಟೇ ಮಾನದಂಡ. ಸಿನಿಮಾ ಕ್ಷೇತ್ರದವರಿಗೆ ಟಿಕೇಟು ಹಂಚಲು ಬಹುತೇಕ ಎಲ್ಲ ಪಕ್ಷಗಳೂ ತುದಿಗಾಲಲ್ಲಿ ನಿಂತಿವೆ. ಸಿನಿಮಾದ ನಂತರ ಹೆಚ್ಚು ಪ್ರಚಾರ ಪಡೆಯುವ ಕ್ರಿಕೆಟ್ ಆಟಗಾರರನ್ನೂ ಚುನಾವಣಾ ಅಖಾಡಕ್ಕೆ ಇಳಿಸಲಾಗಿದೆ. ವಿವಿಧ ಕ್ಷೇತ್ರದವರು ರಾಜಕೀಯಕ್ಕೆ ಬರುವುದು ಉತ್ತಮ ಸಂಗತಿಯೇನೋ ಹೌದು. ಆದರೆ ಭಾರತದಲ್ಲಿ ಸಿನಿಮಾ – ಕ್ರಿಕೆಟ್ಟಿನಲ್ಲಿ ಪಡೆದ ಖ್ಯಾತಿಯಿಂದ ರಾಜಕೀಯಕ್ಕೆ ಪ್ರವೇಶ ಮಾಡಿರುವವರಲ್ಲಿ ಎಷ್ಟು ಜನ ಸಾಮಾಜಿಕ ಮನೋಭಾವದಿಂದ ಕೆಲಸ ನಿರ್ವಹಿಸಿದ್ದಾರೆ ಎಂದು ಗಮನಿಸಿದರೆ ನಿರಾಶೆಯಾಗುವುದೇ ಹೆಚ್ಚು.

ಮೋದಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲರ ಗದ್ದಲದಲ್ಲಿ ಮುಖ್ಯವಾಹಿನಿಗಳು ಬಹುಶಃ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ತೃತೀಯ ರಂಗದ ಶಕ್ತಿಯನ್ನು. ರಾಷ್ಟ್ರೀಯ ಪಕ್ಷಗಳು ಎಂಬ ಪದವೇ ಬಹಳಷ್ಟು ರಾಜ್ಯಗಳಲ್ಲಿ ಸವಕಲಾಗಿ ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ರಾಷ್ಟ್ರೀಯ ಪಕ್ಷಗಳು ಉಸಿರಾಡುವಂತಹ ಪರಿಸ್ಥಿತಿ ಇದೆ. ಹರ್ ಹರ್ ಮೋದಿ, ಘರ್ ಘರ್ ಮೋದಿ ಎಂದರಚುತ್ತಾ ಇನ್ನೂ ಅನೇಕಾನೇಕ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಲೇವಡಿ ಮಾಡುತ್ತಿರುವ “ಮೋದಿ ಬ್ರಿಗೇಡ್”ಗೆ ಕೂಡ ಸತ್ಯದ ಅರಿವಿದೆ. ಎಷ್ಟೇ ಮೋದಿ ಅಲೆ ಎಂದಬ್ಬರಿಸಿದರೂ ಕೊನೆಗೆ ರಾಜ್ಯಗಳ ‘ಸಣ್ಣ’ ಪಕ್ಷಗಳ ನೆರವಿಲ್ಲದೆ ಬಿಜೆಪಿ ಕೂಡ ಅಧಿಕಾರಕ್ಕೆ ಬರಲಾರದು, ಮೋದಿ ಪ್ರಧಾನಿಯಾಗಲಾರರು ಎಂದು. ತೃತೀಯ ರಂಗಕ್ಕೆ ಚಾಲನೆ ನೀಡುವ ಪ್ರಯತ್ನ ನಡೆಯಿತಾದರೂ ಹತ್ತಾರು ಪಕ್ಷಗಳಲ್ಲಿ ಅನೇಕರು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗಿರುವುದರಿಂದ ಚುನಾವಣಾ ಪೂರ್ವ ಹೊಂದಾಣಿಕೆ ಎಂಬುದು ಇನ್ನೂ ಸಾಧ್ಯವಾಗಿಲ್ಲ. ಬಿ.ಜೆ.ಪಿ, ಕಾಂಗ್ರೆಸ್ಸಿನಂತಹ ಪಕ್ಷದೊಳಗೇ ಟಿಕೇಟ್ ಹಂಚಿಕೆಯ ಸಂದರ್ಭದಲ್ಲಿ ಅಸಮಾಧಾನ ಭುಗಿಲೆದ್ದು ಪಕ್ಷಾಂತರ ಮಾಡುವವರು, ಪಕ್ಷೇತರರಾಗಿ ಸ್ಪರ್ಧಿಸುವವರ ಸಂಖೈ ಹೆಚ್ಚಿರುವಾಗ ಪ್ರಾದೇಶಿಕ ಪಕ್ಷಗಳ ನಡುವಿನ ಕಿತ್ತಾಟಗಳು ಅನಿರೀಕ್ಷಿತವೇನಲ್ಲ. ಇನ್ನೆರಡು ತಿಂಗಳಿನಲ್ಲಿ ಹದಿನಾರನೇ ಲೋಕಸಭೆಯ ಚುಕ್ಕಾಣಿ ಹಿಡಿಯುವವರಾರು ಎಂಬುದು ನಿಕ್ಕಿಯಾಗುತ್ತದೆ. ಮಾಧ್ಯಮಗಳ ಸಮೀಕ್ಷೆಗಳು, ನಮ್ಮ ವೈಯಕ್ತಿಕ ಅಭಿಪ್ರಾಯಗಳು, ಪೇಯ್ಡ್ ನ್ಯೂಸುಗಳೆಲ್ಲ ಏನೇ ಹೇಳಿದರೂ ಕೊನೆಗೆ ಚುನಾವಣೆಯ ದಿನ ಮತ ಹಾಕುವವನ ಮನಸ್ಥಿತಿಯ ಮೇಲೆ ರಾಜಕೀಯ ಪಕ್ಷಗಳ ರಾಜಕಾರಣಿಗಳ ಭವಿಷ್ಯ ನಿರ್ಧರಿತವಾಗುತ್ತದೆ. ಯಾರೇ ಅಧಿಕಾರಕ್ಕೆ ಬಂದರೂ ವರುಷ ಕಳೆಯುವದರೊಳಗೆ ‘ಅಯ್ಯೋ ನಮ್ಮ ಮನಮೋಹನಸಿಂಗೇ ವಾಸಿಯಿದ್ದ ಕಣ್ರೀ. ಇದೇನ್ರೀ ಇವರದು ಇಂತಹ ಕರ್ಮ’ ಎನ್ನುವ ಪರಿಸ್ಥಿತಿ ಬಾರದಿರಲಿ ಎಂದು ಆಶಿಸೋಣ.

ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಹರಿಯುವ ಕಣ್ಣೀರಿಗೆ ಕೊನೆ ಇಲ್ಲವೇ?


-ಇರ್ಷಾದ್


 

 

 

“ ನನ್ನ ಕುರಿತು ಅತೀ ಕೆಟ್ಟ ಶಬ್ಧಗಳ ಬಳಕೆ ಮಾಡಿ ಅವಮಾನ ಮಾಡಿದ್ದಾರೆ. ಮಹಿಳೆಯೆಂದುmodannana-tamma ನೋಡದೇ 30 ರಷ್ಟು ಯುವಕರ ಗುಂಪು ನನ್ನನ್ನು ಸುತ್ತುವರಿದು ಹೀನವಾಗಿ ನಿಂದಿಸಿದ್ದಾರೆ. ನನ್ನ ಸೀರೆಯನ್ನು ಎಳೆಯೋದಕ್ಕೆ ಮುಂದಾಗಿದ್ದಾರೆ. ಈ ಎಲ್ಲಾ ಯುವಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಕೆಲ ಯುವಕರು ಹಿಂದೂ ಪರ ಸಂಘಟನೆಯೊಂದರ ಸದಸ್ಯರು. ಅನ್ಯಾಯವಾದ ನನಗೆ ದಯಮಾಡಿ ನ್ಯಾಯ ಕೊಡಿಸಿ” ಹೀಗನ್ನುತ್ತಾ ಕಣ್ಣೀರು ಸುರಿಸುತ್ತಾ ತನ್ನ ಮನದಾಳದ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದು ಮಂಗಳೂರು ಮಹಾನಗರ ಪಾಲಿಕೆಯ ಕುಳಾಯಿ ವಾರ್ಡ್ ನ ಸದಸ್ಯೆ ಪ್ರತಿಭಾ ಕುಳಾಯಿ. ಅದೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಸಮ್ಮುಖದಲ್ಲಿ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ.

ದಕ್ಷಿಣ ಕನ್ನಡ ಜಿಲ್ಲೆಯ ಅನೈತಿಕ ಪೊಲೀಸರಿಗೆ ಇಂಥಹಾ ನೂರಾರು ಹೆಣ್ಣುಮಕ್ಕಳ ಕಣ್ಣೀರ ಸುರಿಸಿದ “ಹೆಗ್ಗಳಿಕೆ” ಯ ಇತಿಹಾಸವಿದೆ. ಪ್ರತಿಭಾ ಕುಳಾಯಿ ಕಣ್ಣೀರಿಟ್ಟ ಹಾಗೆ ಸಾಕಷ್ಟು ಅಮಾಯಕ ಯುವತಿಯರು, ಮಹಿಳೆಯರು ಸಂಸ್ಕೃತಿ ರಕ್ಷಕರ ಕೆಂಗಣ್ಣಿಗೆ ಸಿಲುಕಿ ಕಣ್ಣೀರಿಟ್ಟಿದ್ದಾರೆ. ಸುಶಿಕ್ಷಿತ ಮಹಿಳೆಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿ ಪ್ರತಿಭಾ ಕುಳಾಯಿ ಮಾಧ್ಯಮದ ಮುಂದೆ ಬಂದು ತನ್ನ ಅಳಲನ್ನು ತೋಡಿಕೊಂಡು ನ್ಯಾಯ ಕೊಡಿಸಿ ಎಂದು ಕೇಳುವ ಧೈರ್ಯವನ್ನು ತೋರಿಸಿದ್ದಾರೆ. ಆದರೆ ಈ ನೈತಿಕ ಪೊಲೀಸರ ಗುಂಡಾಗಿರಿಗೆ ಬಲಿಯಾಗಿ ಅದೆಷ್ಟೋ ಕಾಲೇಜು ವಿದ್ಯಾರ್ಥಿನಿಯರು, ಅಮಾಯಕ ಮಹಿಳೆಯರು ಮಾನ ಮಾರ್ಯಾದೆಗೆ ಅಂಜಿ ಮನೆಯಲ್ಲೇ ಕುಳಿತು ನಿತ್ಯ ಕಣ್ಣೀರಿಟ್ಟಿದ್ದಾರೆ ಹಾಗೂ ಕಣ್ಣೀರಿಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸರ ಕೆಂಗಣ್ಣಿಗೆ ಬಿದ್ದು ಅಸಹಾಯಕ ಹೆಣ್ಮಕ್ಕಳು ಕಣ್ಣೀರಿಟ್ಟಿದ್ದು ದೇಶಕ್ಕೆ ಗೊತ್ತಾಗಿರುವುದು 2008 ರಲ್ಲಿ ನಡೆದ ಪಬ್New ದಾಳಿ ಸಂಧರ್ಭದಲ್ಲಿ. ಹಿಂದೂ ಸಂಘಟನೆಯ ಕಾರ್ಯಕರ್ತರು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ದಾಳಿ ಮಾಡಿದ್ದರು. ಪಬ್ ಒಳಗಡೆ ಇದ್ದ ಯುವಕ –ಯುವತಿಯರನ್ನು ಎಳೆದಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದರು. ಅವಮಾನಕ್ಕೀಡಾದ ಯುವತಿಯರು ಕಣ್ಣೀರು ಸುರಿಸುತ್ತಾ ಎದ್ದು ಬಿದ್ದು ನೈತಿಕ ಪೊಲೀಸರಿಂದ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನ ಪಡುತ್ತಿದ್ದರು. ನೈತಿಕ ಪೊಲೀಸರ ದಾಳಿಗೆ ಸುಸ್ತಾಗಿ ಅತ್ತ ಅವಮಾನವನ್ನೂ ಸಹಿಸಿಕೊಳ್ಳಲಾಗದೇ ಇತ್ತ ಅನ್ಯಾಯವನ್ನು ಪ್ರತಿಭಟಿಸಲಾಗದೆ ಕಣ್ಣೀರು ಸುರಿಸಿ ಅಷ್ಟಕ್ಕೆ ಸುಮ್ಮನಾದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಣಿನ ಕಣ್ಣೀರು ಅಷ್ಟಕ್ಕೆ ನಿಲ್ಲಲಿಲ್ಲ. ನಂತರದಲ್ಲಿ ಮತ್ತೊಮ್ಮೆ ಕರಾವಳಿಯ ಹೆಣ್ಣಿನ ಕಣ್ಣೀರನ್ನು ದೇಶ ನೋಡಿದ್ದು 2012 ರಲ್ಲಿ ನಡೆದ ಹೋಂ ಸ್ಟೇ ದಾಳಿಯ ಸಂಧರ್ಭದಲ್ಲಿ. ಪತ್ರಕರ್ತ ನವೀನ್ ಸೂರಿಂಜೆಯ mangalore_moral1ಕ್ಯಾಮರಾ ಕಣ್ಣಿನಲ್ಲಿ ಅಮಾಯಕ ಹೆಣ್ಣುಮಕ್ಕಳ ಕಣ್ಣೀರು ಸೆರೆಯಾಗಿತ್ತು. ಸ್ನೇಹಿತನೊಬ್ಬನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಬಂದಿದ್ದ ಕೆಲವು ಯುವತಿಯರನ್ನು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಮತ್ತೆ ನೈತಿಕ ಪೊಲೀಸರು ಕಾಡಿದ್ದರು. ಅಲ್ಲಿದ್ದ ಹೆಣ್ಮಕ್ಕಳ ಮೇಲೆ ರಾಕ್ಷಸೀಯ ವರ್ತನೆ ತೋರಿಸಿ ಮನಬಂದಂತೆ ಥಳಿಸಿ ಮಾನಭಂಗ ಮಾಡಿದ್ದರು. ಸಂತಸದ ಪಾರ್ಟಿಗೆ ಆಗಮಿಸಿದ್ದ ಹೆಣ್ಮಕ್ಕಳ ಕಣ್ಣಿನಲ್ಲಿ ಹರಿಯುತ್ತಿದ್ದ ಕಣ್ಣೀರ ಕೋಡಿಯನ್ನು ನಾಗರಿಕ ಸಮಾಜ ನೋಡಿತ್ತು. ಅಲ್ಲಿಯೂ ಹೆಣ್ಣು ಅಸಹಾಯಕಲಾಗಿದ್ದಳು. ಸಮಾಜದ ಮುಂದೆ ಬಂದು ತಮ್ಮ ಮೇಲೆ ಅಮಾನುಷವಾಗಿ ವರ್ತಿಸಿದ ರಾಕ್ಷಸರ ವಿರುದ್ಧ ಸೆಟೆದು ನಿಲ್ಲಲು ಆಕೆಗೆ ಸಾಧ್ಯವಾಗಲಿಲ್ಲ. ಅವಮಾನದ ಕಣ್ಣೀರೇ ಆಕೆಯ ಪಾಲಿಗೆ ಅಂತಿಮವಾಯಿತು. ಈ ಎಲ್ಲಾ ಸಂಧರ್ಭಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೈತಿಕ ಪೊಲೀಸರ ದಾಳಿ ಒಳಗಾಗಿ ಹೆಣ್ಣು ಸುರಿಸಿದ ಅವಮಾನದ ಕಣ್ಣೀರನ್ನು ದೇಶ ನೋಡಿತು. ನಾಗರಿಕ ಸಮಾಜ ಪ್ರತಿಭಟಿಸಿತು. ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿತ್ತು. ಆದರೂ ವ್ಯವಸ್ಥೆಯ ವೈಫಲ್ಯದಿಂದ ಅಸಹಾಯಕರಾದ ಹೆಣ್ಮಕ್ಕಳ ಕಣ್ಣೀರನ್ನು ದೇಶದ ಜನರ ಮುಂದಿಟ್ಟ ತಪ್ಪಿಗೆ ಪತ್ರಕರ್ತ ನವೀನ್ ಸೂರಿಂಜೆ 4 ತಿಂಗಳುಗಳ ಕಾಲ ಜೈಲಲ್ಲಿ ಕೊಳೆಯುವಂತಾಯಿತು.

ಇವುಗಳು ನಾವು ನೀವು ಕಂಡ ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಮಕ್ಕಳ ಕಣ್ಣೀರಾಗಿವೆ. ಹೀಗೆ ನಿತ್ಯ ಇಂಥಹಾ ಸಾಕಷ್ಟು ಅಮಾಯಕ ಹೆಣ್ಮಕ್ಕಳು ಉಭಯ ಧರ್ಮಗಳ ಸಂಘಟನೆಗಳ ನೈತಿಕ ಪೊಲೀಸರ ಕಾಟಕ್ಕೆ ಬಲಿಯಾಗಿ ಕಣ್ಣೀರನ್ನು ಸುರಿಸುತ್ತಲೇ ಇದ್ದಾರೆ.

  • ಒಂದು ವರ್ಷದ ಹಿಂದೆ ಮಂಗಳೂರಿನ ಬಜ್ಪೆಯಲ್ಲಿ ಹಿಂದು ಯುವಕನೊಬ್ಬನ ಜೊತೆಯಲ್ಲಿ ಮುಸ್ಲಿಂ ಯುವತಿಯೊಬ್ಬಳು ಕಾರಲ್ಲಿ ತಿರುಗಾಡಿದನ್ನು ಕಂಡು ಮುಸ್ಲಿಂ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಯುವಕರ ಗುಂಪು ಜೋಡಿಗಳ ಮೇಲೆ ಮುಗಿಬಿದ್ದಿತ್ತು. ಹಲ್ಲೆಯನ್ನೂ ನಡೆಸಿತ್ತು. ಆ ಸಂಧರ್ಭದಲ್ಲೂ ಅವಮಾನಕ್ಕೆ ಒಳಗಾದ ಮುಸ್ಲಿಂ ಯುವತಿ ಕಣ್ಣೀರಿಟ್ಟಿದ್ದಳು. ಕೈಮುಗಿದು ಅತ್ತು ಗೋಗರಿದಿದ್ದಳು ಆ ಕತ್ತಲಲ್ಲಿ ಅವಳ ಕಣ್ಣೀರು ಯಾರಿಗೂ ಕಾಣಲಿಲ್ಲ.
  • ಸುರತ್ಕಲ್ ಬೀಚ್ ನಲ್ಲಿ ಮುಸ್ಲಿಂ ಯುವಕನೊಬ್ಬನ ಜೊತೆ ಹಿಂದೂ ಯುವತಿಯೊಬ್ಬಳು ಸುತ್ತಾಡುತ್ತಿದ್ದಿದ್ದನ್ನು ಕಂಡ ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಯುವಕರು ದಾಳಿ ಮಾಡಿದ್ದರು. ಅಲ್ಲಿಯೂ ಇದೇ ಪರಿಸ್ಥಿತಿ. ಧರ್ಮ ರಕ್ಷಣೆಯ ಹೆಸರಲ್ಲಿ ಅವಮಾನಕ್ಕೊಳಗಾದ ಹೆಣ್ಣು ಅಲ್ಲಿಯೂ ಕಣ್ಣೀರಿಟ್ಟಿದ್ದಳು ಸಮುದ್ರ ಗಾಳಿಯ ಹೊಡೆತಕ್ಕೆ ಆಕೆಯ ಕಣ್ಣೀರು ಅಲ್ಲೇ ಆರಿ ಹೋಗಿತ್ತು.
  • ಮಂಗಳೂರಿನ ಸುರತ್ಕಲ್ ನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳು ತಾನು ಮದುವೆಯಾಗಲಿರುವ ತನ್ನದೇ ಕೋಮಿನ ಯುವಕನ ಜೊತೆಯಲ್ಲಿದ್ದಾಗ ಅವರ ಮೇಲೂ ನೈತಿಕ ಪೊಲೀಸರ ಕಣ್ಣು ಬಿದ್ದಿತ್ತು. ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಗುಂಪು ಅವರ ಮೇಲೆ ಮುಗಿಬಿದ್ದಿತ್ತು. ಎಲ್ಲರ ಮುಂದೆ ಅವಮಾನಕ್ಕೀಡಾದ ಯುವತಿ ಕಣ್ಣೀರು ಸುರಿಸುತ್ತಿದ್ದಳು. ಪಾಪ ಬಡವರಾದ ದೂರದ ಜಾರ್ಖಂಡ್ ಯುವತಿಯ ಕಣ್ಣೀರು ಜಿಲ್ಲೆಯ ಪೊಲೀಸರಿಗೆ ಕಣ್ಣೀರಾಗಿ ಕಾಣಲೇ ಇಲ್ಲ.
  • ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಮುಸ್ಲಿಂ ಮಹಿಳೆಯೊಬ್ಬಳಿಗೆ ಸಹಾಯಮಾಡುವ ನೆಪದಲ್ಲಿ ಸಲುಗೆಯಿಂದಿದ್ದಾರೆ ಎಂಬ ಕಾರಣವನ್ನಿಟ್ಟು ಸ್ಥಳೀಯ ಪತ್ರಕರ್ತ ವಿ.ಟಿ ಪ್ರಸಾದ್ ಮೇಲೆ ಮುಸ್ಲಿಂ ಸಂಘಟನೆಯೊಂದಕ್ಕೆ ಸೇರಿದ ಯುವಕರ ಗುಂಪು ಹಲ್ಲೆ ನಡೆಸಿತ್ತು. ವಿ.ಟಿ ಪ್ರಸಾದ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಲ್ಪಟ್ಟ ಮುಸ್ಲಿಂ ಮಹಿಳೆಗೆ ಹಲ್ಲೆಕೋರರು ಧರ್ಮದ ಜಾಗೃತಿಯ ಹೆಸರಲ್ಲಿ ಅವಮಾನ ಮಾಡಿದ್ದರು. ಅಲ್ಲಿಯೂ ಆ ಬಡಪಾಯಿ ಮಹಿಳೆ ಕಣ್ಣೀರು ಸುರಿಸಿದ್ದಳು. ಪಾಪ ಆಕೆ ಧರಿಸಿದ ಬುರ್ಖಾ ಪರದೆಯ ಒಳಗಿನ ಕಣ್ಣುಗಳಿಂದ ಸುರಿಯುತ್ತಿದ್ದ ಕಣ್ಣೀರು ಹೊರ ಜಗತ್ತಿಗೆ ಕಾಣಲೇ ಇಲ್ಲ.

ಇವುಗಳು ಕೆಲವೊಂದು ಉದಾಹರಣೆಗಳಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗೆ ನಿತ್ಯ ಮಹಿಳೆ ಕಣ್ಣೀರು ಸುರಿಯುತ್ತಲೇ ಇದ್ದಾಳೆ. ಈ ಕಣ್ಣೀರು ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಇನ್ನು ಕೆಲವು ಪ್ರಕರಣಗಳು ಹೊರ ಪ್ರಪಂಚದ ಗಮನಕ್ಕೆ ಬಾರದೇ ಮುಚ್ಚಿಹೋಗುತ್ತವೆ. ನೈತಿಕ ಪೊಲೀಸ್ ಗಿರಿ ಪದ್ದತಿಯನ್ನು ಹಿಂದೂ ಪರ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸಿದವು. ಅದನ್ನು ಮುಸ್ಲಿಂ ಪರ ಸಂಘಟನೆಗಳು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿವೆ. ಏಟಿಗೆ ಇದಿರೇಟು ಎಂಬ ಮಾದರಿಯಲ್ಲಿ ಉಭಯ ಕೋಮುಗಳ ಸಂಘಟನೆಗಳು ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಯನ್ನು ಮಾಡುತ್ತಾ ಬರುತ್ತಿವೆ. ಇದಕ್ಕೆ ಬಲಿಯಾಗುತ್ತಿರುವವರು ಉಭಯ ಧರ್ಮಗಳ ಅಮಾಯಕ ಯುವಕ –ಯುವತಿಯರು. ಮಾರ್ಚ್ 31 ರಂದು ಮಂಗಳೂರಿನ ಸುರತ್ಕಲ್ ಕೋಡಿಕೆರೆಯಲ್ಲಿ ಮಹಿಳಾ ಕಾರ್ಪೋರೇಟರ್ ಮೇಲೆ ನಡೆದದ್ದು ಇಂಥಹಾ ನೈತಿಕ ಪೊಲೀಸರ ದಾಳಿಯೇ.

ಪಾಲಿಕೆ ಸದಸ್ಯೆ ಪ್ರತಿಭಾ ಮೇಲಿನ ಅಕ್ರಮಣಕ್ಕೆ ಕಾರಣ ಅವರು ಸಂಸ್ಕೃತಿಯ ಚೌಟಕ್ಕಿನ unnamedಎಲ್ಲೆ ಮೀರಿದ್ದಾರೆ ಎಂಬ ನೈತಿಕ ಪೊಲೀಸರ ಸಂಶಯ. ಇದುವೇ ಇವರ ನಿದ್ದೆಗೆಡಲು ಪ್ರಮುಖ ಕಾರಣವಾಗಿರುವುದು. ಪ್ರತಿಭಾ ಕುಳಾಯಿ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂಧರ್ಭದಲ್ಲಿ ಅವರನ್ನು ಅಡ್ಡಗಟ್ಟಿದ ತಂಡ ಅವರನ್ನು ತರಾಟೆಗೆ ತೆಗೆದುಕೊಂಡ ಸಂಧರ್ಭದಲ್ಲಿ ನಿಂದಿಸಿದ ರೀತಿ, ಅದಕ್ಕಾಗಿ ಬಳಸಿದ ಪದಗಳು ಇದನ್ನು ಸಾಬೀತುಪಡಿಸುತ್ತವೆ. ವಿಪರ್ಯಾಸವೆಂದರೆ ಮಹಿಳಾ ಜನಪ್ರತಿನಿಧಿಯ ಮೇಲೆ ದೌರ್ಜನ್ಯ ನಡೆಸಿದವರನ್ನು ಬಂಧಿಸಲು ತಮ್ಮ ಕ್ಷೇತ್ರದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವ ಬದಲಾಗಿ ಆ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಪ್ರತಿಭಾ ಅವರ ಜೊತೆ ಮಾಧ್ಯಮದ ಮುಂದೆ ಬಂದು ಹಲ್ಲೆಕೋರನ್ನು ಬಂಧಿಸಿ ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸುವಂತೆ ಕೇಳಿಕೊಳ್ಳುವುದರ ಹಾಸ್ಯಾಸ್ಪದ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿಯ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ನಡೆದಿತ್ತು. ಇದು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡುಮಾಡಿತ್ತು. ಜಿಲ್ಲೆಯಲ್ಲಿ ನಡೆಯುತ್ತಿದ್ದ ನೈತಿಕ ಪೊಲೀಸ್ ಗಿರಿಯನ್ನೇ ಪ್ರಮುಖ ಚುನಾವಣಾ ವಿಚಾರವನ್ನಾಗಿಸಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣಾ ಕಣಕ್ಕಿಳಿದಿತ್ತು. ಅದರಲ್ಲಿ ಯಶಸ್ಸನ್ನೂ ಗಿಟ್ಟಿಸಿಕೊಂಡಿತ್ತು. ಸರ್ಕಾರ ರಚನೆಯಾದ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ರಮನಾಥ್ ರೈ , ಆರೋಗ್ಯ ಸಚಿವ ಯು.ಟಿ ಖಾದರ್ ಸೇರಿದಂತೆ ಅನೇಕ ಮುಖಂಡರು ನೈತಿಕ ಪೊಲೀಸ್ ಗಿರಿಯ ಕಡಿವಾಣವೇ ನಮ್ಮ ಗುರಿ ಎಂದರು. ಆದರೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಬಿಜೆಪಿ ಆಡಳಿತ ಅವಧಿಯಲ್ಲಿ ಪ್ರಮುಖ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಕಾರ್ಯ ಆಗಿತ್ತು. ಆದರೆ ಇದೀಗ ಕಾಂಗ್ರೆಸ್ ಆಡಳಿತದಲ್ಲಿ ಎಲ್ಲೆ ಮೀರುತ್ತಿರುವ ನೈತಿಕ ಪೊಲೀಸ್ ಗಿರಿಯ ಆರೋಪಿಗಳನ್ನು ಕನಿಷ್ಠ ಪಕ್ಷ ಬಂಧಿಸುವ ಕಾರ್ಯವೂ ನಡೆಯದೇ ಇರುವುದು ವಿಪರ್ಯಾಸ. ಆಡಳಿತ ಯಂತ್ರದ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ ಇಲ್ಲಿ ಎದ್ದು ಕಾಣುತ್ತಿದೆ. ಹೀಗೆ ನೈತಿಕ ಪೊಲೀಸರ ಅಟ್ಟಹಾಸಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಈ ಜಿಲ್ಲೆಯ ಇನ್ನೆಷ್ಟು ಅಮಾಯಕ ಹೆಣ್ಮಕ್ಕಳು ಕಣ್ಣೀರು ಸುರಿಸಬೇಕಾಗಿ ಬರುತ್ತೋ ?

ಚುನಾವಣೆ ಪತ್ರಕರ್ತರಿಗೆ ಸುಗ್ಗಿಯ ಕಾಲವೇ?


-ಇರ್ಷಾದ್


 

ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ1625744_654886284570859_1165903399_n ಜೋಷಿ ‘ಚುನಾವಣೆಯ ಸಂಧರ್ಭದಲ್ಲಿ ತಮ್ಮ ಬಗ್ಗೆ ಮೃದು ಧೋರಣೆ ತಾಳುವಂತೆ ಮಾಧ್ಯಮದವರನ್ನು ಓಲೈಸಲು’ ತಮ್ಮ ನೆಚ್ಚಿನ ಬಂಟ ಈರೇಶ ಅಂಚಟಗೇರಿ ಮೂಲಕ ಪತ್ರಕರ್ತರಿಗೆ ಸುಮಾರು 2000 ರೂಪಾಯಿ ಮೌಲ್ಯದ ಒಂದು ಟೈಟಾನ್ ಕಂಪನಿಯ ವಾಚ್ ಹಾಗೂ ಅಂದಾಜು 2000 ಬೆಲೆ ಬಾಳುವ ಸಿಯಾ ರಾಮ್ಸ್ ಮಿನಿಯೇಚರ್ ಕಂಪೆನಿಯ ಶರ್ಟ್ ಮತ್ತು ಪ್ಯಾಂಟ್ ಪೀಸ್ ಇರುವ ಬ್ಯಾಗ್ ನ್ನು ಧಾರವಾಡದ ಮಾಧ್ಯಮ ಕಚೇರಿಗಳಿಗೆ ತಲುಪಿಸಿರುವ ಕುರಿತು ಪ್ರಜಾವಾಣಿ (25 ಮಾರ್ಚ್ 2014 ) ಯಲ್ಲಿ ವರದಿ ಪ್ರಕಟವಾಗಿದೆ. ಆದರೆ ಪ್ರಜಾವಾಣಿಯ ಪ್ರತಿನಿಧಿ ಮನೋಜ್ ಕುಮಾರ್ ಗುದ್ದಿ ಅವುಗಳನ್ನು ಪಡೆಯದೇ ವಾಪಾಸು ಕಳುಹಿಸಿ ವ್ರತ್ತಿ ಧರ್ಮ ಮೆರೆದಿದ್ದಾರೆ. ಅದೇ ದಿನದ  ಪ್ರಜಾವಾಣಿ ಪತ್ರಿಕೆಯಲ್ಲಿ ಅಂತಹದ್ದೇ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಔತಣ ಕೂಟ ಆಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದಾಗ ಔತಣ ಕೂಟಕ್ಕೆ ಆಗಮಿಸಿದ್ದ ಪತ್ರಕರ್ತರು ಹಾಗೂ ಆಯೋಜಕರು ಎದ್ದೂ ಬಿದ್ದು ಪರಾರಿಯಾಗಿದ್ದರು. ಕೆಲ ಪತ್ರಕರ್ತರು ಅರ್ಧಕ್ಕೇ ಊಟ ನಿಲ್ಲಿಸಿ ಕೈಯನ್ನೂ ತೊಳೆಯದೆ ಓಡಿಹೋಗಿದ್ದರಂತೆ!

paid-newsಈ ಎರಡೂ ಸುದ್ದಿಗಳು ಇಂದಿನ ಪತ್ರಿಕೋದ್ಯಮದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ರಾಜಕಾರಣಿಗಳ ಆಮಿಷಗಳಿಗೆ ಬಲಿಯಾಗದೆ ತನ್ನ ವೃತ್ತಿ ಧರ್ಮವನ್ನುಪಾಲಿಸುವ ಪತ್ರಕರ್ತರು ಒಂದೆಡೆಯಾದರೆ, ಪ್ರೆಸ್ ಮೀಟ್ ಹೆಸರಿನಲ್ಲಿ ಗುಂಡು ತುಂಡು ಪಾರ್ಟಿಗಳಿಗೆ ಹೋಗಿ  ರಾಜಕಾರಣಿಗಳು ಕೊಡುವ ಉಡುಗೊರೆಗಳನ್ನು ಅಥವಾ ನೋಟಿನ ಕಂತೆಗಳನ್ನು ಸ್ವೀಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಪತ್ರಕರ್ತರು ಅನೇಕರಿದ್ದಾರೆ. ಪ್ರತಿ ನಿತ್ಯ ದಿನ ಪತ್ರಿಕೆಗಳ ಪುಟ ತಿರುಗಿಸಿದಾಗ, ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ಗಳನ್ನು ಗಮನಿಸಿದಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಸುದ್ದಿಗಳು ರಾರಾಜಿಸುತ್ತಲೇ  ಇರುತ್ತವೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರು ಮತದಾರರನ್ನು ಓಲೈಕೆ ಮಾಡಲು ಹಂಚುವ ನೂರು, ಸಾವಿರ ರೂಪಾಯಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರಯಾಗುತ್ತಿವೆ. ಅಕ್ರಮ ಹಣ ಸಾಗಾಟ, ಮತದಾರರಿಗೆ ಸೀರೆ ಹಂಚುವುದು, ಬಾಡೂಟ ನೀಡುವ ಸುದ್ದಿಗಳು ನಿರಂತರವಾಗಿ ಬರುತ್ತಲೇ ಇವೆ. ವಿಪರ್ಯಾಸವೆಂದರೆ ಇವುಗಳನೆಲ್ಲಾ ಸುದ್ದಿ ಮಾಡುವ ಪತ್ರಕರ್ತರಿಗೇ ರಾಜಕಾರಣಿಗಳು ಅಮಿಷವೊಡ್ಡುವ ಸುದ್ದಿಗಳು ಒಂದೆರಡು ಮಾಧ್ಯಮಗಳಲ್ಲಿ ಮಾತ್ರ ಸುದ್ದಿಯಾಗುತ್ತವೆ. ಇತರ ಮಾಧ್ಯಮಗಳಿಗೆ ಇದು ಸುದ್ದಿ ಎಂದು ಅನ್ನಿಸುವುದಿಲ್ಲ. ಹಿರಿಯ ಪತ್ರಕರ್ತರೊಬ್ಬರು ಹೀಗನ್ನುತ್ತಿದ್ದರು “ ಚುನಾವಣೆ ಬಂತ್ತೆಂದರೆ ಸಾಕು, ಕೆಲ ಪತ್ರಕರ್ತರಿಗಂತೂ ಇದು ಸುಗ್ಗಿಯ ಕಾಲ. ಚುನಾವಣೆಯ ಸಂದರ್ಭದಲ್ಲಿ ಅವರ ಪಾಲಿಗೆ ಉತ್ತಮ ಮಳೆ ಬೆಳೆ ಎರಡೂ ಆಗುತ್ತದೆ”.

ಪತ್ರಕರ್ತರಿಗೆ ಅಮಿಷಗಳನ್ನೊಡ್ಡಿ ತಮ್ಮ ಪರ ಸುದ್ದಿ ಮಾಡುವಂತೆ ನೋಡಿಕೊಳ್ಳುವುದು, ಅದಕ್ಕಾಗಿ ಅವರನ್ನುuntitled ಓಲೈಸಲು ದುಬಾರಿ ಗಿಫ್ಟ್ ಗಳನ್ನು ಕೊಡುವುದು, prajavaniprajavaniಗುಂಡು ತುಂಡು ಪಾರ್ಟಿಗಳನ್ನು ಏರ್ಪಡಿಸುವುದು, ಪ್ಯಾಕೇಜ್ ಗಳನ್ನು ನೀಡಿ ತಮ್ಮ ಪರ ಸುದ್ದಿ ಪ್ರಸಾರವಾಗುವಂತೆ ನೋಡಿಕೊಳ್ಳುವುದು, ಅದು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಪಕ್ಷ ತನ್ನ ವಿರೋಧವಾಗಿ ಸುದ್ದಿ ಪ್ರಸಾರ ಆಗದಂತೆ ಪತ್ರಕರರ್ತರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಇಂದು ನಿನ್ನೆಯದಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸತೀಶ್ ಸೈಲ್ ನೀಡಿದ ದುಡ್ಡನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವ್ಯತ್ಯಾಸ ಉಂಟಾಗಿ ಮಾತಿಗೆ ಮಾತು ಬೆಳೆದು ದೃಶ್ಯ ಮಾಧ್ಯಮದ ಕೆಲ ವರದಿಗಾರರು ಪರಸ್ಪರ ಹೊಡೆದಾಟ ನಡೆಸಿದ ಘಟನೆ ಕೂಡಾ ನಡೆದಿತ್ತು. ಹಾಸನದಲ್ಲಿ ಪತ್ರಕರ್ತರ ಸಂಘ ಪಕ್ಷವೊಂದರಿಂದ ಸುದ್ದಿ ಮಾಡಲು ಪ್ಯಾಕೇಜ್ ಪಡೆದ ಆರೋಪದ ಸುದ್ದಿ ಬಯಲಾಗಿ ಅದನ್ನು ಪ್ರಶ್ಮಿಸಿದ ದಿ ಹಿಂದೂ ಪತ್ರಿಕೆಯ ವರದಿಗಾರ ಸತೀಶ್ ಶಿಲೆ ಅವರನ್ನು ಸಂಘದಿಂದ ಹೊರಗಿಟ್ಟ ಪ್ರಕರಣ ಪತ್ರಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇವಿಷ್ಟೇ ಅಲ್ಲದೆ ಪತ್ರಕರ್ತರು ತಮ್ಮ ವೃತ್ತಿಗೆ ಅವಮಾನಕಾರಿಯಾಗಿ ನಡೆದ ಇಂಥಹ ಸಾಕಷ್ಟು ನಿದರ್ಶನಗಳಿವೆ.

ಚುನಾವಣಾ ಸಂದರ್ಭಗಳಲ್ಲಿ ರಾಜಕಾರಣಿಗಳ ಆಪ್ತ ಸಹಾಯಕರ ಬಳಿ ಒಂದು ಲಿಸ್ಟೇ ಇರುತ್ತದೆ. ಯಾವ ಪತ್ರಿಕೆಯ ಪತ್ರಕರ್ತನಿಗೆ ಎಷ್ಟು ಹಣ ನೀಡಿದ್ದೇವೆ, ಯಾವ ಟಿ.ವಿಯ ವರದಿಗಾರನಿಗೆ ಎಷ್ಟು ನೀಡಬೇಕು ಎಂಬುವುದನ್ನು ಆ ಪಟ್ಟಿಯಲ್ಲಿ ಬರೆದಿಡುತ್ತಾರೆ. ಕೆಲವರು ಇವರ ಅಮಿಷಕ್ಕೆ ಬಲಿಯಾದರೆ ಇನ್ನು ಕೆಲವರು ಅದನ್ನು ತಿರಸ್ಕರಿಸಿ ತಮ್ಮತನವನ್ನು ಉಳಿಸಿಕೊಳ್ಳುತ್ತಾರೆ. ಚುನಾವಣೆಗೆ ಸಂಬಂಧಿಸಿದಂತೆ ಸಂದರ್ಶನಗಳನ್ನು ಮಾಡಲು ರಾಜಕಾರಣಿಗಳ ಬಳಿ ಹೋದಾಗ ಕಾಫಿ ಕುಡಿಯೋದಕ್ಕೆ ಇರಲಿ ಎಂದು ಕಿಸೆಗೆ ಕೈಹಾಕಿ ಒಂದಿಷ್ಟು ಹಣವನ್ನು ನೀಡುವಂತಹ ಸಾಕಷ್ಟು ಮುಜುಗರದ ಪರಿಸ್ಥಿತಿ ಅನೇಕ ಪತ್ರಕರ್ತ ಮಿತ್ರರಿಗೆ ಎದುರಾಗಿದ್ದಿರಬಹುದು. ಇದಕ್ಕೆ ರಾಜಕಾರಣಿಗಳನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಅವರ ಈ ರೀತಿಯ ನಡವಳಿಕೆಗೆ ಕೆಲ ಪತ್ರಕರ್ತರೂ ಕಾರಣರಾಗಿರುತ್ತಾರೆ.

ಪತ್ರಕರ್ತರು ಮಾಡುತ್ತಿರುವ ಭ್ರಷ್ಟಾಚಾರವನ್ನು ಬಹಿರಂಗವಾಗಿ ಖಂಡಿಸಿದ ಸಾಕಷ್ಟು ಪತ್ರಕರ್ತರು ನಮ್ಮಲ್ಲಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯ ಸಂಧರ್ಭದಲ್ಲಿ ನೀಡುತ್ತಿದ್ದ ಉಡುಗೊರೆಯನ್ನು ತಿರಸ್ಕರಿಸುವುದರ ಜೊತೆಗೆ ಬಹಿರಂಗವಾಗಿ ಗಿಫ್ಟ್ ಕೊಡುವ ಸಂಸ್ಕೃತಿಯನ್ನು ವಿರೋಧಿಸಿದ ಪತ್ರಕರ್ತರಾದ ನವೀನ್ ಸೂರಿಂಜೆ, ಅನೀಶಾ ಸೇಟ್ ಹಾಗೂ ಅವರ ಸಂಗಡಿಗರು, ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ವೇಳೆಯಲ್ಲಿ ಪತ್ರಕರ್ತರಿಗೆ ಔತಣ ಕೂಟ ಏರ್ಪಡಿಸಿದಕ್ಕೆ ಹೋಗದೇ ಇದ್ದದ್ದು ಮಾತ್ರವಲ್ಲದೆ ಔತಣ ಕೂಟದ ಮೇಲೆ ನಡೆದ ಚುನಾವಣಾಧಿಕಾರಿಗಳ ದಾಳಿಯನ್ನು ಸುದ್ದಿಯನ್ನಾಗಿ ಜನರ ಮುಂದಿಟ್ಟ ಪತ್ರಕರ್ತ ರಾಹುಲ್ ಬೆಳಗಲಿ (ಇತರ ಮಾಧ್ಯಮಗಳಲ್ಲಿ ಈ ಸುದ್ದಿ, ಸುದ್ದಿಯಾಗಿ ಪ್ರಕಟಗೊಂಡಿರುವುದು ನನ್ನ ಗಮನಕ್ಕಂತೂ ಬಂದಿಲ್ಲ), ಧಾರವಾಡದಲ್ಲಿ ಪ್ರಹ್ಲಾದ್ ಜೋಷಿ ಕೊಟ್ಟ ಉಡುಗೊರೆಯನ್ನು ವಾಪಾಸ್ ಮಾಡಿದ್ದಲ್ಲದೆ ಅದನ್ನು ಸುದ್ದಿ ಮಾಡುವುದರ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸಿದ ಮನೋಜ್ ಕುಮಾರ್ ಗುದ್ದಿ ಮೊದಲಾದ ಅನೇಕ ಹಿರಿಯ ಹಾಗೂ ಯುವ ಪತ್ರಕರ್ತರು ನಮ್ಮ ಜೊತೆಗಿದ್ದಾರೆ. ಇಂಥಹ ಪತ್ರಕರ್ತರ ಅಗತ್ಯ ಹಾಗೂ ಅನಿವಾರ್ಯತೆ ಈ ಕ್ಷೇತ್ರಕ್ಕಿದೆ. ಕೆಲ ತಿಂಗಳ ಹಿಂದೆ ಹಿರಿಯ ಪತ್ರಕರ್ತರಾದ ಕೃಷ್ಣ ರಾಜ ಎಮ್. ಮಂಜುನಾಥ್ ಅವರು ಮಾಧ್ಯಮ ವಲಯದ ಭ್ರಷ್ಟರ ಬೆತ್ತಲು ಅಭಿಯಾನಯನ್ನು ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಆ ಸಂಧರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು ನಡೆಸುತ್ತಿರುವ ಭ್ರಷ್ಟಾಚಾರಗಳ ಕುರಿತಾಗಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು.

ಇದೀಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ಮತದಾರರನ್ನು ಓಲೈಸುವ ರೀತಿಯಲ್ಲಿಯೇ ಪತ್ರಕರ್ತರನ್ನು ಓಲೈಸುವ ಪ್ರಯತ್ನ ನಡೆಯುತ್ತಿದೆ. ಮತದಾರರ ಖರೀದಿಯನ್ನು ತಡೆಗಟ್ಟಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿದೆ. ಆದರೆ ಪತ್ರಕರ್ತರ ಖರೀದಿಯು ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣಿಗೆ ಬೀಳೋದೇ ಇಲ್ಲ. ಈ ನಿಟ್ಟಿನಲ್ಲಿ Election-Commission-Of-Indiaಚುನಾವಣಾ ಆಯೋಗ ಕೆಳಕಂಡಂತೆ  ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ನಮ್ಮ ಆಗ್ರಹವೂ ಆಗಿದೆ.

  • ರಾಜಕೀಯ ಸಭೆ ಸಮಾರಂಭಗಳ ಮೇಲೆ ತನ್ನ ಹದ್ದಿನ ಕಣ್ಣಿಟ್ಟ ರೀತಿಯಲ್ಲೇ ರಾಜಕಾರಣಿಗಳು ನಡೆಸುವ ಪತ್ರಿಕಾಗೋಷ್ಠಿಗಳ ಮೇಲೂ ನಿಗಾ ವಹಿಸಬೇಕಾಗಿದೆ. ಅದರ ಸಂಪೂರ್ಣ ಚಿತ್ರೀಕರಣ ನಡೆಸಬೇಕಾಗಿದೆ.
  • ಪತ್ರಿಕಾಗೋಷ್ಠಿಗೆ ವ್ಯಯಿಸುವ ಮೊತ್ತಕ್ಕೆ ಕಡಿವಾಣ ಹಾಕಬೇಕಾಗಿದೆ.
  • ಪತ್ರಿಕಾಗೋಷ್ಠಿಯ ಹೆಸರಲ್ಲಿ ರಾತ್ರಿ ವೇಳೆಯಲ್ಲಿ ನಡೆಯುವ ಗುಂಡು ತುಂಡು ಪಾರ್ಟಿಯ ಮೇಲೆ ನಿಗಾ ಇಡಬೇಕಾಗಿದೆ.
  • ಪತ್ರಕರ್ತರಿಗೆ ಹಣದ ಹಾಗೂ ಉಡುಗೊರೆಗಳ ಆಮಿಷ ನೀಡುವ ಜನಪ್ರತಿನಿಧಿಗಳು, ಅದನ್ನು ಪಡೆಯುವ ಪತ್ರಕರ್ತರ ವಿರುದ್ಧ ನೀತಿ ಸಂಹಿತೆಯ ಉಲ್ಲಂಘನೆಯ ಅಡಿಯಲ್ಲಿ ದೂರು ದಾಖಲಿಸಬೇಕು.

ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ಮೌಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹಳ ಪ್ರಮುಖವಾದುದು. ಆಯೋಗದ ನೀತಿ ಸಂಹಿತೆಗಿಂತ ಪತ್ರಕರ್ತರು ತಮಗೆ ತಾವೇ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಬೇಕು. ದೆಹಲಿ ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರೀವಾಲ್ ಮಾಧ್ಯಮಗಳ ಕುರಿತಾಗಿ ಇತ್ತೀಚೆಗೆ ನೀಡಿದ ಹೇಳಿಕೆ ಎಲ್ಲಾ ಮಾಧ್ಯಮಗಳಲ್ಲಿ ಅತಿರೇಕ ಹಾಗೂ ಬೇಜಾವಾಬ್ದಾರಿಯುತ ಹೇಳಿಕೆ ಎಂದು ಟೀಕೆಗೆ ಕಾರಣವಾಗಿತ್ತು. ವಾಸ್ತವವಾಗಿ ಇಂದಿನ ಪತ್ರಿಕಾ ರಂಗದ ಹಾಗೂ ಕೆಲ ಪತ್ರಕರ್ತರ ಪರಿಸ್ಥಿತಿಯನ್ನು ಗಮನಿಸಿದಾಗ ಅವರ ಮಾತಿನ ಗಂಭೀರತೆಯನ್ನು ಸಾರಾಸಗಟವಾಗಿ ತಿರಸ್ಕರಿಸುವ ಹಾಗಿಲ್ಲ ಎಂಬುವುದು ನನ್ನ ಅಭಿಪ್ರಾಯ.

ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿವೆಯೇ?

– ತೇಜ ಸಚಿನ್ ಪೂಜಾರಿ

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ teja-sachin-poojaryಭಾಗವಹಿಸಿದ ಹಿನ್ನೆಲೆಯಲ್ಲಿ ನವೀನ್ ಸೂರಿಂಜೆ ಹಾಗೂ ಇರ್ಷಾದ್ ಅವರು ಸಹಜವಾದ ಹಲವು ಪ್ರಶ್ನೆಗಳನ್ನು ವರ್ತಮಾನದ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಸಾಕಷ್ಟೂ ಪ್ರತಿಕಿಯೆಗಳೂ ವ್ಯಕ್ತವಾಗಿವೆ. ಚರ್ಚೆಯೂ ನಡೆಯುತ್ತಿದೆ. (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ.) ಆದರೆ “ಜಾಸ್ತಿ ಎಳೆದರೆ ಮೂಲ ಉದ್ದೇಶವೇ ಮರೆಯಾಗುವ ಸಾಧ್ಯತೆ ಇರುತ್ತದೆ” ಎಂಬ ಆತಂಕ ವ್ಯಕ್ತಪಡಿಸುತ್ತಲೇ ಅಕ್ಷತಾ ಹುಂಚದಕಟ್ಟೆ ಬರೆದ ಲೇಖನ ಮುಂದಕ್ಕೆ ಎಳೆಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಮಟ್ಟು ಅವರು ಪ್ರಸ್ತುತ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರ ಕುರಿತು ನವೀನ್ ವ್ಯಕ್ತಪಡಿಸಿದ್ದ ಆತಂಕಗಳನ್ನು ಅವರ ವೈಯಕ್ತಿಕ ಅಸಮಧಾನವೆಂಬಂತೆ ಅಕ್ಷತಾ ಹುಂಚದಕಟ್ಟೆ ಗ್ರಹಿಸಿದ್ದಾರೆ. ಅದು ತಪ್ಪು. ನವೀನ್ ಅಥವಾ ಇರ್ಷಾದ್ ಅಭಿವ್ಯಕ್ತಿಸಿದ ವಿಚಾರಗಳು ಕೇವಲ ಅವರದ್ದಷ್ಟೇ ಅಲ್ಲ; ಕೋಮುವಾದ ಹಾಗೂ ಮೂಲಭೂತವಾದದಂತಹ ಸಮಸ್ಯಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿರುವ ಕರಾವಳಿಯ ಹಲವು ಯುವ ಸಾಮಾಜಿಕ ಕಾರ್‍ಯಕರ್ತರ ಅಭಿಪ್ರಾಯವೂ ಆಗಿದೆ. ಸಮೂಹದ ಯೋಚನೆಗೆ ನವೀನ್ ಧ್ವನಿಯಾಗಿದ್ದಾರೆ ಆಷ್ಟೇ. ಹಾಗಿದ್ದೂ ನವೀನ್ ಒಬ್ಬರನ್ನೇ ಕಟಕಟೆಯಲ್ಲಿ ನಿಲ್ಲಿಸುವುದು ಬೌದ್ಧಿಕ ಅಪರಾಧ.

ಅಕ್ಷತಾ ಹುಂಚದಕಟ್ಟೆ ಅವರು ಮುಂದುವರಿದು, “ಒಬ್ರಿಗೆ ಸಾಕು ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ ಅನಿಸಿದರೆnaveen-shetty ಅದಕ್ಕೂ ಅವಕಾಶವಿರಬೇಕು ಮತ್ತು ಇನ್ನೊಬ್ರಿಗೆ ನಾನು ಹೇಳುವುದೇನೋ ಉಳಿದಿದೆ ಅನ್ನಿಸಿದರೆ ಅದಕ್ಕೂ ಅವಕಾಶವಿರಬೇಕು” ಅಂದಿದ್ದಾರೆ. ಹೇಳುವ ಹಾಗೂ ಹೇಳದಿರುವ ಸ್ವಾತಂತ್ರ್ಯ ಖಂಡಿತಾ ಎಲ್ಲರಿಗೂ ಅದೆ. ಆದರೆ ಅಕ್ಷತಾ ಹುಂಚದಕಟ್ಟೆ ಅವರ ವಿಚಾರ, ಮಾತು ಅಥವಾ ಮೌನದ ಅಭಿವ್ಯಕ್ತಿಗಳಿಗೆ ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನೇ ಪ್ರಶ್ನಿಸುವಂತಿದೆ. ನುಡಿದಾತ ಅಥವಾ ನುಡಿಯಲಿರುವಾತ ಬಯಸುತ್ತಾನೋ ಇಲ್ಲವೋ (ಅಥವಾ ಭಾಗಿಯಾಗುತ್ತಾನೋ ಇಲ್ಲವೋ) ಆತನ ಮಾತುಗಳು ಮುಂದಿನ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತವೆ. ಅದು ಅನಿವಾರ್ಯ ಕೂಡಾ. ಇಲ್ಲದೆ ಹೋದಲಿ, ಕೃತಿಯೊಂದನ್ನು ರಚಿಸಿ “ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ”’ ಎಂಬಂತೆ ಸಮ್ಮನಿದ್ದು ಬಿಡುವ ಭೈರಪ್ಪ ಅವರನ್ನೇ ಮತ್ತೆ ಮತ್ತೆ ಎಳೆತಂದು ಅವರು ಎಂದೋ ’ಹೇಳಿಯಾದ’, (ಕವಲೋ ಅವರಣವೋ) ಮಾತುಗಳನ್ನೇ ಮತ್ತೆ ಮತ್ತೆ ಕೆದಕಿ ಚರ್ಚಿಸುವುದಾದರೂ ಯಾತಕ್ಕೆ? ಸಮೂಹದಲ್ಲಿ ನುಡಿ ಹಾಗೂ ನಡೆ ಇವೆರಡೂ ಕ್ರಿಯೆಗಳು ತಮಗೆ ಎದುರಾಗುವ ಅಷ್ಟೂ ಪ್ರತಿಕ್ರಿಯೆಗಳಿಗೆ ಗೌರವ ಸಲ್ಲಿಸುವುದು ಅ ಸಮೂಹದ ಆರೋಗ್ಯ ಹಾಗೂ ಜೀವಂತಿಕೆಗೆ ಅತ್ಯಂತ ಮೂಲಭೂತವಾಗಿರುತ್ತದೆ. ಚರ್ಚೆಯಲ್ಲಿ ಮಟ್ಟು ಅವರು ಭಾಗವಹಿಸುತ್ತಾರೋ ಇಲ್ಲವೋ ಇಲ್ಲಿ ಅದು ಅಪ್ರಸ್ತುತ. ಚರ್ಚೆ ಮಟ್ಟು ಸರ್ ಹಾಗೂ ನವೀನ್ ಇಬ್ಬರನ್ನೂ ಮೀರಿ ಬೆಳೆಯಬೇಕು. ಬೆಳೆಯುತ್ತದೆ ಕೂಡಾ.Mohammad Irshad

ನವೀನ್ ಪ್ರಸ್ತಾಪಿಸಿದ ವಿಚಾರ ಮಟ್ಟು ಅವರು ಮುಸ್ಲೀಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದು ಸರಿಯೋ ತಪ್ಪೋ ಎಂಬ ತಕ್ಕಡಿ ನಿರ್ಣಯಕ್ಕೆ ಸೀಮಿತವಾದದ್ದಲ್ಲ. ಅದು ಕೋಮುವಾದ ಹಾಗೂ ಮೂಲಭೂತವಾದದಂತಹ ವಿಚಾರಗಳಲ್ಲಿ ಬೌದ್ಧಿಕ ವರ್ಗ ತೋರುತ್ತಿರುವ ನಡವಳಿಕೆಗೆ ಸಂಬಂದಿಸಿದ್ದಾಗಿದೆ. ಅಲ್ಲಿ ಕಂಡುಬರುತ್ತಿರುವ ತರತಮ ಪ್ರಜ್ಞೆಯ ಕುರಿತಾದದ್ದಾಗಿದೆ.

ಮೂಲಭೂತವಾದ ಹಾಗೂ ಕೋಮುವಾದ ಇಂದಿನ ಬಹುದೊಡ್ಡ ಸವಾಲು. ಧರ್ಮಗಳನ್ನಾಶ್ರಯಿಸಿ ಬೆಳೆಯುತ್ತಿರುವ ಮೂಲಭೂತವಾದ ಒಂದೆಡೆ ಅನ್ಯ ಕೋಮಿನ ಜೊತೆಗೆ ಹಿಂಸಾರೂಪದ ಬೀದಿ ಸಂಘರ್ಷಗಳಿಗೆ, ಇನ್ನೊಂದೆಡೆ ಆಂತರಿಕ ನೆಲೆಯಲ್ಲಿ ಧರ್ಮದೊಳಗೇ ಇರುವಂತಹ ದುರ್ಬಲರ ಪೀಡನೆಗೆ ಕಾರಣವಾಗಿದೆ. ಹಿಂದೂ ಹಾಗೂ ಮುಸ್ಲಿಮ್ ಇವೆರಡೂ ಧಾರ್ಮಿಕ ಗುಂಪುಗಳಲ್ಲಿ ಇಂತಹ ಮೂಲಭೂತವಾದಿ ಪ್ರವೃತ್ತಿಗಳು ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಕರಾವಳಿ ತೀರದಲ್ಲಂತೂ ಅದರ ವಿರಾಟ್ ರೂಪದ ಪ್ರದರ್ಶನ ಗಳಿಗೆಲೆಕ್ಕದಲ್ಲಿ ನಡೆಯುತ್ತಿದೆ. ಆಯಾ ಧರ್ಮಗಳಲ್ಲಿರುವ ನಿರ್ದಿಷ್ಟ ಗುಂಪುಗಳು ತಮ್ಮ ತಮ್ಮ ಮತಗಳಲ್ಲಿ ಮೂಲಭೂತವಾದಿ ಚಳವಳಿಗಳನ್ನು ಮುನ್ನಡೆಸುತ್ತಿರುವ ವಿಚಾರ ತೀರಾ ದುರ್ಬೀನು ಹಾಕಿಯೇ ನೋಡಬೇಕಾದ ಸತ್ಯವಲ್ಲ. ಅವುಗಳ ರಹಸ್ಯ ಕಾರ್ಯಸೂಚಿಗಳೂ ಕೂಡಾ ಅಷ್ಟೇ ಸ್ಪಷ್ಟ.

ಆದಾಗ್ಯೂ ಅಂತಹ ಮೂಲಭೂತವಾದೀ ಚಳವಳಿಯನ್ನು ಎದುರಿಸುವ, ಅದನ್ನು ಪ್ರಸರಿಸುತ್ತಿರುವ ಗುಂಪುಗಳನ್ನುdinesh-amin-mattu-2 ವಿರೋಧಿಸುವ ಕ್ರಮದಲ್ಲಿ ಮಾತ್ರವೇ ಬಹಳ ಸಮಸ್ಯೆಗಳಿವೆ. ಹಿಂದೂ ಮೂಲಭೂತವಾದದ ಜೊತೆಗೆ ನಿಂತು ಮುಸ್ಲಿಮ್ ಮೂಲಭೂತವಾದವನ್ನು ಖಂಡಿಸುವುದು ಎಷ್ಟರಮಟ್ಟಿಗೆ ಅಸಂಗತವೋ ಮುಸ್ಲಿಮ್ ಮೂಲಭೂತವಾದೀ ವೇದಿಕೆಯಲ್ಲಿ ಆಸೀನರಾಗಿ ಹಿಂದೂ ಕೋಮುವಾದವನ್ನು ಟೀಕಿಸುವುದು ಕೂಡಾ ಅಷ್ಟೇ ಅಸಹಜ. ಒಂದರ ಜೊತೆಗಿನ ಸಾಹಚರ್ಯ ಇನ್ನೊಂದರ ಕಡೆಗಿನ ಟೀಕೆಯನ್ನು ಅಪಮೌಲ್ಯಗೊಳಿಸುತ್ತದೆ. ಆದರೆ ದುರಾದೃಷ್ಟವಶಾತ್ ಇಂತಹ ಬೇಜವಾಬ್ದಾರಿ ನಡವಳಿಕೆಗಳು ನಮ್ಮ ಪ್ರಗತಿಪರ ವರ್ಗದಲ್ಲಿ ಥರೇವಾರಿ ಕಾಣಿಸಿಕೊಳ್ಳುತ್ತಿವೆ. ನವೀನ್ ಅಥವಾ ಇರ್ಷಾದ್ ಪ್ರತಿನಿಧಿಸುವ ಆತಂಕ ಇದೇ ಆಗಿದೆ.

ಹಿಂದೂ ಮೂಲಭೂತವಾದವನ್ನು ತಿರಸ್ಕರಿಸಲು ಬೌದ್ಧಿಕ ವಲಯ ಸ್ಪಷ್ಟವಾದ ಒಂದು ವೇದಿಕೆಯನ್ನು ಈಗಾಗಲೇ ಸಿದ್ಧಗೊಳಿಸಿದೆ. ಅದರ ಅಷ್ಟೂ ಆಯಾಮಗಳನ್ನು ಗುರುತಿಸಿ ಅದಕ್ಕೆ ಸೈದ್ಧಾಂತಿಕ ವಿರೋಧದ ನೆಲೆಗಳನ್ನು ಗಟ್ಟಿಗೊಳಿಸಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆಚರಣೆ ಹೀಗೇ ಎಲ್ಲೆಲ್ಲಿ ಮೂಲಭೂತವಾದದ ಸುಳಿವು ಕಾಣಿಸಿಕೊಳ್ಳುತ್ತಿದೆಯೋ ಅಲ್ಲೆಲ್ಲಾ ಅದನ್ನು ಖಂಡಿಸುವ ಕ್ರಿಯೆಗಳು akshatha-hunchadakatteಅಟೋಮ್ಯಾಟಿಕ್ ಅನ್ನಿಸುವಂತೆ ನಡೆಯುತ್ತಿವೆ. ’ಸಂಘ ಪರಿವಾರ’ ಪರಿಕಲ್ಪನೆಯ ಅಡಿಯಲ್ಲಿ ಹಿಂದೂ ಮೂಲಭೂತವಾದವನ್ನು ಸಮಗ್ರವಾಗಿ ಹಿಡಿದಿಡುವ, ಅದಕ್ಕೆ ಪ್ರತಿಕ್ರಿಯಿಸುವ ನೆಲೆಯನ್ನು ಬುದ್ಧಿಜೀವಿ ವರ್ಗ ಸಾಧಿಸಿದೆ. ಇದು ತುರ್ತು ಅನಿವಾರ್ಯವಾಗಿದ್ದ ಬೆಳವಣಿಗೆ. ಅದರಲ್ಲಿ ನಮ್ಮ ಪ್ರಗತಿಪರ ಗುಂಪುಗಳು ಯಶಸ್ಸು ಕಂಡಿವೆ.

ಆದರೆ ಇಂತಹದ್ದೇ ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿದೆಯೇ? ಸಮಸ್ಯೆ ಇರುವುದು ಇಲ್ಲೇ. ನಮ್ಮ ಬೌದ್ಧಿಕ ವರ್ಗ ಮುಸ್ಲಿಮ್ ಸಮುದಾಯದಲ್ಲಿ ಮೂಲಭೂತದದ ಬೀಜಗಳನ್ನು ಬಿತ್ತುತ್ತಿರುವ ಗುಂಪುಗಳು ಅಥವಾ ಸಂಘಟನೆಗಳ ಬಗ್ಗೆ ಸ್ಪಷ್ಟತೆಯನ್ನು ಇನ್ನೂ ಹೊಂದಿಲ್ಲ. ಅದು ಮುಸ್ಲಿಮ್ ಮೂಲಭೂತವಾದವನ್ನು ಪರಸ್ಪರ ತಿಳಿಯದ ಯಾರೋ ವ್ಯಕ್ತಿಗಳು ಅಥವಾ ಅದೆಲ್ಲಿಂದಲೋ ಬಂದ ಅಲೆಯೊಂದು ಸೃಷ್ಟಿಸಿದ ವಿದ್ಯಮಾನವೆಂಬಂತೆ ಗ್ರಹಿಸುತ್ತಿದೆ. ಹೀಗಾಗಿ ಮೂಲಭೂತವಾದದ ಪ್ರಸರಣಕ್ಕೆ ಸಂಘಟನೆಗಳ ಮಟ್ಟದಲ್ಲಿ ನಡೆಯುತ್ತಿರುವ ವ್ಯವಸ್ಥಿತವಾದ ಪಿತೂರಿಗಳನ್ನು ಒಪ್ಪುವ ಮನಸ್ಥಿತಿಯಲ್ಲಿ ಅದು ಇಲ್ಲ.

ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ವರೂಪದ ಸಮಾಜಗಳಲ್ಲಿ ಅಲ್ಪಸಂಖ್ಯಾತ ಗುಂಪುಗಳ ಮೂಲಭೂತ ಆಚರಣೆಗಳಿಗೆಯೇ ಹಲವು ಅಡ್ಡಿಗಳಿರುತ್ತವೆ. ಇನ್ನೊಂದು ಸಾಂಸ್ಕೃತಿಕ ಅಸ್ಮಿತೆಯ ಬಗೆಗಿನ ಅರಿವಿನ ಕೊರತೆ ಅಥವಾ ಪುರೋಗಾಮಿ ಆಧುನಿಕ ವಿಚಾರಧಾರೆಗಳ ಪ್ರಸರಣದ ಕೊರತೆ ಅಂತಹ ಅಡ್ಡಿಗಳನ್ನು ಸೃಷ್ಟಿಸುತ್ತವೆ. ಇಂತಹ ಸನ್ನಿವೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಸಾಧನೆಯ ನಿಟ್ಟಿನಲ್ಲಿ ಆಯಾ ಸಮಾಜದ ಪ್ರಗತಿಪರ ವರ್ಗಗಳು ಅಲ್ಪಸಂಖ್ಯಾತ ಸಮುದಾಯಗಳೊಳಗಿನ ಗುಂಪುಗಳ ಜೊತೆಗೆ ನಿಲ್ಲುವುದು ಅವಶ್ಯವಾಗಿರುತ್ತದೆ. ಹಾಗೇ ಬೆಂಬಲ ಪಡೆದುಕೊಳ್ಳುವ ಗುಂಪುಗಳು ಬಹುಮಟ್ಟಿಗೆ ಸಂಪ್ರದಾಯ ಶರಣ ವರ್ಗಗಳೇ ಆಗಿರುತ್ತವೆ. jamate-mangaloreಬೌದ್ಧಿಕ ವರ್ಗದ ನೆಲೆಯಲ್ಲಿ ಇದು ಆರಂಭಿಕ ಸ್ವರೂಪದ ಕ್ರಿಯಾಶೀಲತೆಯಾಗಿರುತ್ತದೆ. ಹಾಗೆಯೇ ತರುವಾಯದ ಹಂತದಲ್ಲಿ ಸಮಾಜದ ಬುದ್ಧಿಜೀವಿ ವಲಯ ಅಲ್ಪಸಂಖ್ಯಾತ ಸಮುದಾಯಗಳ ಪ್ರಗತಿಪರ ಗುಂಪುಗಳ ಜೊತೆಗೆ ಗುರುತಿಸಿಕೊಳ್ಳುವುದು ಅದರ ಆರಂಭಿಕ ಸ್ವರೂಪದ ಕ್ರಿಯಾಶೀಲತೆಯ ತಾತ್ವಿಕ ಮುಂದುವರಿಕೆಯಾಗಿರುತ್ತದೆ. ಇಲ್ಲದೆ ಹೋದಲ್ಲಿ ಆರಂಭದಲ್ಲಿ ಬೆಂಬಲ ಪಡೆದುಕೊಳ್ಳುವ ಸಂಪ್ರದಾಯ ಶರಣ ಗುಂಪುಗಳು ಕ್ರಮೇಣ ಒಳಗೂ ಹೊರಗೂ ಘಾತಕವಾಗಿ ಬೆಳೆಯುತ್ತವೆ.

ಆದರೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂದಿಸಿದಂತೆ ಅಂತಹ ಎರಡನೆಯ ಹಂತದ ಕ್ರಿಯಾಶೀಲತೆಯು ನಮ್ಮ ಬೌದ್ಧಿಕ ವಲಯದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತಿದೆಯೇ? ಇಲ್ಲ ಅನ್ನುವುದೇ ನಮ್ಮ ಸಾಮಾಜಿಕ ಸಂದರ್ಭದ ದೊಡ್ಡ ದುರ್ದೈವ. ಹೀಗಾಗಿ ಮುಸ್ಲಿಮ್ ಮೂಲಭೂತವಾದೀ ಗುಂಪುಗಳ ಜೊತೆಗೆ ಅದು ಮತ್ತೆ ಮತ್ತೆ ಅಸೋಸಿಯೇಟ್ ಆಗುತ್ತಿದೆ. ಒಂದು ಗುಂಪಿನ ಮೂಲಭೂತವಾದವನ್ನು ಅಪ್ಪಿಕೊಂಡು ಇನ್ನೊಂದು ಗುಂಪಿನ ಮೂಲಭೂತವಾದವನ್ನು ರಿಜೆಕ್ಟ್ ಮಾಡುವ ಅತಿರೇಕದ ನಡೆಗಳನ್ನು ಅದು ಅನುಸರಿಸುತ್ತಿದೆ.

ಇಂತಹ ದ್ವಂಧ್ವ ನಿಲುವುಗಳು ತಳಮಟ್ಟದಲ್ಲಿ ಕ್ರಿಯಾಶೀಲವಾಗಿರುವ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಬಹುಸಂಖ್ಯಾತ ಸಮಾಜದ ಮೂಲಭೂತವಾದವನ್ನು ಶ್ರೀಸಾಮಾನ್ಯರ ಮಟ್ಟದಲ್ಲಿ ಎದುರಿಸಲು ಪ್ರಯತ್ನಿಸುವ ಅವರು ಜನರ ನಡುವೆ ವಿಶ್ವಾಸದ ಕೊರತೆಯನ್ನು ಅನುಭವಿಸುತ್ತಾರೆ. ಹೀಗೆ, ವಿಚಾರವಾದಿ, ಪ್ರಗತಿಪರ, ಸೆಕ್ಯುಲರಿಸ್ಟ್ ಅಥವಾ ಬುದ್ಧಿಜೀವಿ ಮೊದಲಾದ ಐಡೆಂಟಿಟಿಗಳು ಗೌರವ ಕಳೆದುಕೊಳ್ಳುವಲ್ಲಿ, ಮುಲಭೂತವಾದದ ಸ್ಥಾನದಲ್ಲಿ ಅವುಗಳೇ ಟೀಕೆಗಳಿಗೆ ಗುರಿಯಾಗುತ್ತಿರುವುದರಲ್ಲಿ ಇತರೆ ಅಂಶಗಳ ಜೊತೆಗೆ ನಮ್ಮ ಬೌದ್ಧಿಕ ವಲಯದ ಪಾತ್ರವೂ ಇದೆ.

ನವೀನ್ ಹಾಗೂ ಅವರ ಸಂಗಾತಿಗಳು ಪ್ರಸ್ತಾಪಿಸುತ್ತಿರುವ ವಿಚಾರ, ಎದುರಿಸುತ್ತಿರುವ ಸಮಸ್ಯೆ ಇದೇ ಆಗಿದೆ. ಮೂಲಭೂತವಾದದಲ್ಲಿ ಒಳ್ಳೆಯ ಅಥವಾ ಕೆಟ್ಟ ಮೂಲಭೂತವಾದಗಳು, ಅಪಾಯಕಾರಿ ಅಥವಾ ನಿರುಪದ್ರವಿ, ಜಸ್ಟಿಫೈಡ್ ಅಥವಾ ಅನ್ ಜಸ್ಟಿಫೈಡ್ ಮೂಲಭೂತವಾದಗಳು ಹೀಗೆ ವಿಂಗಡನೆ ಮಾಡುವಂತದ್ದು ನಿಜಕ್ಕೂ ಅಘಾತಕಾರಿ ಬೆಳವಣಿಗೆ. ಅಷ್ಟೂ ಮೂಲಭೂತವಾದಿ ಚಳುವಳಿಗಳನ್ನು ಏಕಪ್ರಕಾರದ ಅಸ್ಖಲಿತ ತತ್ವ ನಿಷ್ಠೆಯಿಂದ ಎದುರಿಸಬೇಕಾಗಿದೆ. ಇದು ಸದ್ಯದ ಅನಿವಾರ್ಯತೆ ಕೂಡಾ.