Category Archives: ಇರ್ಷಾದ್

ಮುಸ್ಲಿಂ ಲೇಖಕರ ಸಂಘ – ಜಮಾತೇ ಇಸ್ಲಾಂ ಹಾಗೂ “ಮೂಲಭೂತವಾದ”

– ಇರ್ಷಾದ್

ಜಮಾತೇ ಇಸ್ಲಾಮೀ ಹಿಂದ್ ಸಂಘಟನೆಯ ಪರೋಕ್ಷ ಹಿಡಿತದಲ್ಲಿರುವ ಮುಸ್ಲಿಂ ಲೇಖಕರ ಸಂಘ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಪತ್ರಕರ್ತ ಪ್ರಗತಿಪರ ಚಿಂತಕ ಹಾಗೂ ನಮ್ಮ ಮಾರ್ಗದರ್ಶಕರಾಗಿರುವ ದಿನೇಶ್ ಅಮೀನ್ ಮಟ್ಟು ಅವರ ಭಾಷಣದ ನಿರೀಕ್ಷೆಗಳಲ್ಲಿ ಆರಂಭವಾದ ಚರ್ಚೆಯ ಹಿನ್ನಲೆಯಲ್ಲಿ ಈ ಲೇಖನ ಬರೆಯೋದು ಸಮಯೋಚಿತ ಎಂದನಿಸಿತು. ಜಮಾತೇ ಇಸ್ಲಾಮೀ ಹಿಂದ್ ಸಂಘಟನೆ ಮತ್ತು ಅದರ ಉದ್ದೇಶ ಹಾಗೂ ಆದರ್ಶಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಈ ಹಿಂದೆಯೂ ನಡೆದಿದೆ. jamatಜಾತ್ಯತೀತ ಭಾರತದಲ್ಲಿ ನಮ್ಮದು ಪ್ರಗತಿಪರ ಹಾಗೂ ವಿಶಾಲವಾದದಿಂದ ಕೂಡಿದ ಇಸ್ಲಾಂ ತತ್ವಾದರ್ಶದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯೆಂಬ ಹೆಸರಿನಲ್ಲಿ ಜಮಾತ್ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದೆ. ತಮ್ಮ ಕಾರ್ಯತಂತ್ರದಲ್ಲಿ ಅದು ಯಶಸ್ಸನ್ನೂ ಕಾಣುತ್ತಿದೆ. ಮುಸ್ಲಿಂ ಸಮಾಜದಲ್ಲಿ ಇಸ್ಲಾಂ ಸನಾತನವಾದವನ್ನು ಪ್ರತಿಪಾದಿಸುವ ಜಮಾತ್ ಹೊರವಲಯದಲ್ಲಿ ತಮ್ಮನ್ನು ಜ್ಯಾತ್ಯಾತೀತವಾದಿ ಹಾಗೂ ಪ್ರಗತಿಪರ ಎಂದು ಬಿಂಬಿಸಿಕೊಳ್ಳುತ್ತಿರುವ ರೀತಿ ನೀತಿಗಳ ಕುರಿತಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಚರ್ಚೆ ನಡೆಸಬೇಕಾದ ಅಗತ್ಯ ಇದೆ.

ಭಾರತೀಯ ಮುಸ್ಲಿಮರು ಶಾಂತಿ ಪ್ರಿಯರು. ಬಹುಸಂಸ್ಕೃತಿಗೆ ಒಗ್ಗಿಕೊಂಡು ಜೀವನ ನಡೆಸುವವರು ಎಂಬುವುದನ್ನು ನಾಡಿಗೆ ಸಾಬೀತು ಪಡಿಸಿದವರೇ ಸೂಫಿ ಸಂತರು. ಅರಬ್ ನಾಡಿನಲ್ಲಿ ಹುಟ್ಟಿದ ಇಸ್ಲಾಂ ಧರ್ಮವನ್ನು ಭಾರತಕ್ಕೆ ತಂದವರೇ ಈ ಸೂಫಿ ಸಂತರು. ಜನರ ನೋವು ನಲಿವುಗಳಿಗೆ ಸ್ಪಂದಿಸಿ ಅವರಲ್ಲಿ ತಾವೂ ಒಬ್ಬರಾಗಿ ಧರ್ಮದ ಸಾರವನ್ನು ಭಿತ್ತಿ ಎಲ್ಲಾ ಧರ್ಮ ತತ್ವಾದರ್ಶಕರುಗಳ ಜೊತೆಗೂಡಿ ಸಹಭಾಳ್ವೆ ನಡೆಸಿದವರು. ಬಾಬಾ ಬುಡನ್ ಗಿರಿ, ಬಂದೇ ನವಾಜ್, ಅಜ್ಮೀರ್ ಚಿಸ್ತಿ ಸೇರಿದಂತೆ ಭಾರತದಾದ್ಯಂತ ಇರುವ ಸಾಕಷ್ಟು ಸಂತರ ದರ್ಗಾಗಳು ಇಂದಿಗೂ ಬಹುಸಂಸ್ಕೃತಿಯ ಬೀಡಾಗಿವೆ. ಈ ದರ್ಗಾಗಳಿಗೆ ಮುಸ್ಲಿಮರು ಬರುತ್ತಾರೆ ಹಿಂದೂಗಳೂ ಬರುತ್ತಾರೆ. ಇದನ್ನು ಹಿಂದೂ ಮುಸ್ಲಿಂ ಎಂಬ ಪರಿಭಾಷೆಯಲ್ಲಿ ಕರೆಯೋದು ಸಮಂಜಸ ಅಲ್ಲ, ಯಾಕೆಂದರೆ ಇವರೆಲ್ಲಾ ಧರ್ಮ, ಜಾತಿಯ ಗಡಿಯನ್ನು ದಾಟಿ ನಿತ್ಯ ಜೀವನದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ತಮ್ಮ ಕಷ್ಟಗಳನ್ನು ಪರಿಹರಿಸಿದ ಎಂಬ ನಂಬಿಕೆ ಇಟ್ಟುಕೊಂಡು ಸಂತನ ಬಳಿಗೆ ಹೋಗಿ ಆತನನ್ನು ಗೌರವದಿಂದ ಕಾಣುತ್ತಾರೆ. ಬಹುಸಂಸ್ಕೃತಿಯ ದರ್ಗಾ ಪರಂಪರೆಯನ್ನು ಭಾರತೀಯ 90 ಶೇಕಡಕ್ಕಿಂತಲೂ ಅಧಿಕ ಮುಸ್ಲಿಮರು ಒಪ್ಪುತ್ತಾರೆ ಮತ್ತು ಅದನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ರಾಜ್ಯದ ವಿವಿಧ ಕಡೆಯಲ್ಲಿರುವ ದರ್ಗಾಗಳಿಗೆ ಭೇಟಿ ನೀಡುವಾಗ ನಮಗೆ ನೈಜ್ಯ ಜಾತ್ಯತೀತ ನಿಲುವಿನ ಅರಿವಾಗುತ್ತದೆ. ಎಲ್ಲಾ ಧರ್ಮ ಸಂಸ್ಕೃತಿಗಳ ಜನಸಾಮಾನ್ಯರು ಜೊತೆ ಜೊತೆಗೆ ಸೇರುವ ಹಾಗೂ ಸಂತನ ಸಮಾಧಿಯನ್ನು ಗೌರವಿಸುವ ಪದ್ದತಿ ನಮಗಲ್ಲಿ ಕಂಡುಬರುತ್ತದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿರುವ ಅನ್ನಿಗೇರಿ, ಮಾಲೂರು, ಚೌಡೇಶ್ವರಿ ದರ್ಗಾಗಳಿಗೆ ಇತ್ತೀಚೆಗೆ ನಾನು ಹಾಗೂ ಗೆಳೆಯರು ಭೇಟಿ ಕೊಟ್ಟಾಗ ನನಗೆ ನಿಜಕ್ಕೂ ಅಲ್ಲಿಯ ವಾತಾವರಣ ನೋಡಿ ಆಶ್ವರ್ಯವಾಯಿತು. ಎರಡೂ ಧರ್ಮ ಭಾಂಧವರು ನಡೆದುಕೊಳ್ಳುವ ಬಹುಸಂಸ್ಕೃತಿಯ Ajmer-Dargah-Sharifಬೀಡಿನಂತೆ ಅದು ಕಂಡುಬಂತು. ಈ ಎಲ್ಲಾ ದರ್ಗಾಗಳಲ್ಲಿ ಸಂತನ ಸಮಾಧಿಯನ್ನು ಗೌರವಿಸುವುರದ ಜೊತೆಗೆ ದರ್ಗಾದಲ್ಲಿರುವ ಚೌಡೇಶ್ವರಿ , ಭೂತನಾಥ ದೈವಗಳನ್ನು ಅಲ್ಲಿಗೆ ಆಗಮಿಸುವ ಹಿಂದೂ ಮುಸ್ಲಿಂ ಭಕ್ತರು ಗೌರವಿಸುತ್ತಾರೆ. ಇಲ್ಲಿ ನಮಗೆ ಗೋಚರವಾಗುತ್ತಿರುವ ಸತ್ಯ ಏನೆಂದರೆ, ಹಿಂದಿನ ಕಾಲದಲ್ಲಿ ಆ ಕ್ಷೇತ್ರದಲ್ಲಿದ್ದ ಭಾವೈಕ್ಯ . ಸೂಫಿ ಸಂತನ ಜೊತೆಯಲ್ಲಿ ಅನ್ಯ ಧರ್ಮೀಯ ಸಂತ, ಮಹಾತ್ಮರೂ ಜೊತೆ ಜೊತೆಯಾಗಿ ಸಹಬಾಳ್ವೆಯನ್ನು ನಡೆಸುತ್ತಿದ್ದರು ಎಂಬುವುದು. ಆದರೆ ಜಮಾತ್‌ ನಂತಹಾ ಸಂಘಟನೆಗಳು ಇಂಥಹಾ ಜಾತ್ಯತೀತತೆಯನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಅವರ ಪ್ರಕಾರ ಇದು ಗೊಡ್ಡು ಜಾತ್ಯಾತೀತತೆ. ಜಾತ್ಯತೀತತೆಯ ಪ್ರತೀಕವಾದ ದರ್ಗಾ ಸಂಸ್ಕೃತಿಯನ್ನು ನಾಶ ಮಾಡಲು ಪರಿಶುದ್ಧ ಇಸ್ಲಾಂಮಿನ ಹೆಸರಲ್ಲಿ ಮೌದೂದಿ ಇಸ್ಲಾಂ ಪ್ರತಿಪಾದಕರು ಪ್ರಯತ್ನ ಪಡುತ್ತಿರುವುದು ಇದೀಗ ಅಲ್ಲಲ್ಲಿ ಕಂಡುಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ದರ್ಗಾ ಸಂಸ್ಕೃತಿಯ ವಿರುದ್ಧ ಜಮಾತ್ ಸೇರಿದಂತೆ ಕೆಲವೊಂದು ಸಂಘಟನೆಗಳ ಹಿಂದಿನಿಂದಲೂ ಧ್ವನಿ ಎತ್ತುತ್ತಾ ಬಂದಿವೆ.

ಹಿಂದೂ ಪುರೋಹಿತವಾದ ವಿರುದ್ಧ ಹುಟ್ಟಿಕೊಂಡ ನಾಥ ಹಾಗೂ ದತ್ತ ಪಂಥಗಳನ್ನು ಹಿಂದೂ ಸನಾತನವಾದಿಗಳು ವಿರೋಧಿಸುವ ರೀತಿಯಲ್ಲೇ ಬಹುಸಂಸ್ಕೃತಿಯನ್ನು ಹಾಗೂ ಪ್ರಗತಿಪರ ಚಿಂತನೆಗಳ ಸಾರವನ್ನು ಬಿತ್ತುವ ಸೂಫಿ ಪಂಥವನ್ನು ಜಮಾತೇ ಇಸ್ಲಾಮ್ ಕಟುವಾಗಿ ಧಿಕ್ಕರಿಸುತ್ತಾ ಬಂದಿದೆ. ಸೂಫಿ ಸಾಹಿತ್ಯವನ್ನೂ ಮೌದೂದಿ ಸಿದ್ದಾಂತ ಖಂಡಿತಾ ಒಪ್ಪುವುದಿಲ್ಲ. ಭಾರತೀಯ ಮುಸ್ಲಿಂಮರಲ್ಲಿ ಅರಬ್ ಸಂಸ್ಕೃತಿಯ ಇಸ್ಲಾಮನ್ನು ಹೇರುವ ಪ್ರಯತ್ನ ಜಮಾತ್ ಹಾಗೂ ಅದರ ಸಹಭಾಗಿ ಸಂಘಟನೆಗಳು ನಿರಂತರ ಮಾಡಿಕೊಂಡು ಬರುತ್ತಿರುವುದು ತಿಳಿದಿರುವ ವಿಚಾರ. ಸ್ವತಂತ್ರ ಪೂರ್ವ ಭಾರತದಲ್ಲಿ ಇಂಥಹಾ ಬಹುಸಂಸ್ಕೃತಿಯನ್ನು ತಿರಸ್ಕರಿಸಿ ಪರಿಶುದ್ದ ಇಸ್ಲಾಂ ಕಲ್ಪನೆಯ ಹೆಸರಲ್ಲಿ ಮೌಲಾನಾ ಮೌದೂದಿಯವರು sio_mangaloreಜಮಾತ್ ಇಸ್ಲಾಮೀ ಸಿದ್ದಾಂತವನ್ನು ಹುಟ್ಟು ಹಾಕಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಮುಸ್ಲಿಂ ರಾಷ್ಟ್ರದ ಸ್ಥಾಪನೆಯ ನಿಲುವನ್ನು ಮೌದೂದಿ ಪ್ರತಿಪಾದಿಸಿರುವುದು ಉಲ್ಲೇಖನಾರ್ಹ. ನಂತರದಲ್ಲಿ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರದ ಪರಿಕಲ್ಪನೆಯೊಂದಿಗೆ ಸಾಗಿದರೆ ಇತ್ತ ಜಮಾತ್ ಇಸ್ಲಾಂ ರಾಷ್ಟ್ರದ ಪರಿಕಲ್ಪನೆಯನ್ನು ಹೊತ್ತು ಅದನ್ನು ಧಾರ್ಮಿಕ, ರಾಜಕೀಯ ಆಂದೋಲವನ್ನಾಗಿಸಿ ಭಾರತದಾದ್ಯಂತ ಪಸರಿಸುವ ಪ್ರಯತ್ನದಲ್ಲಿದೆ. ಮೌದೂದಿ ವಿಶ್ಲೇಷಿಸುವ ಜಮಾತೇ ಇಸ್ಲಾಮೀ ಚಿಂತನೆಯಲ್ಲಿ ಸೂಫಿಗಳಿಗೆ ಯಾವುದೇ ಸ್ಥಾನಮಾನ ಇಲ್ಲ. ಇವರ ಆಗಮನ ನಂತರ ದರ್ಗಾ ಸಂಸ್ಕೃತಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಜಮಾತ್ ಹೇಳುವ ಕಂದಾಚಾರ ದರ್ಗಾ ಸಂಸ್ಕೃತಿಯದಾಗಿದೆ. ದರ್ಗಾಗಗಳಲ್ಲಿ ಆಚರಿಸುವ ವಿಧಿ ವಿಧಾನಗಳನ್ನು ಜಮಾತ್ ಖಂಡಿಸುತ್ತಾ ಬಂದಿದೆ. ಅದು ನೈಜ್ಯ ಇಸ್ಲಾಮ್ ತತ್ವಾದರ್ಶಗಳಿಗೆ ವಿರೋಧವಾಗಿದೆ ಎಂಬುವುದು ಜಮಾತ್ ನಿಲುವು. ಈ ನಿಟ್ಟಿಲ್ಲಿ ಸೂಫಿ ಸಾಹಿತ್ಯವನ್ನು ಒಡೆಯಲು ಶಾಂತಿ ಪ್ರಕಾಶನ ಸಾಕಷ್ಟು ಸಾಹಿತ್ಯಗಳು ಪ್ರಮುಖ ಪಾತ್ರ ವಹಿಸಿದೆ. ತಮ್ಮದೇ ಆದ ಸಾಹಿತ್ಯದ ಮೂಲಕ ಜಮಾತೇ ಮೌದೂದಿ ಸಿದ್ದಾಂತವನ್ನು ಅದು ವ್ಯವಸ್ಥಿತವಾಗಿ ಪಸರಿಸುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಅದು ಮುಸ್ಲಿಂ ಲೇಖಕರ ಸಂಘದಂತಹಾ ಸಾಕಷ್ಟು ಸಾಹಿತ್ಯ ಸಂಘಟನೆಗಳನ್ನು ಭಾರತದಾದ್ಯಂತ ಹುಟ್ಟುಹಾಕಿದೆ. (ಜಮಾತ್ ಸಂಘಟನೆ ಮುಸ್ಲಿಂ ಲೇಖಕರ ಸಂಘ ತನ್ನದಲ್ಲಾ ಎಂದು ಹೇಳುತ್ತಿದ್ದರೂ ಮುಸ್ಲಿಂ ಲೇಖಕರ ಸಂಘವು ಜಮಾತ್ ಅಧೀನದಲ್ಲಿರುವುದು ಬಹಿರಂಗ ಗುಟ್ಟು ಎಂಬುವುದರಲ್ಲಿ ಸಂಶಯವಿಲ್ಲ.

ಒಂದೆಡೆಯಲ್ಲಿ ನೈಜ್ಯ ಜಾತ್ಯತೀತವಾದವನ್ನು ಬಿಂಬಿಸುವ ದರ್ಗಾ ಬಹುಸಂಸ್ಕೃತಿಯನ್ನು ಕಂದಾಚಾರ ಹಾಗೂ ಮೂಲ ಇಸ್ಲಾಂಗೆ ಸಲ್ಲದ ಸಂಸ್ಕೃತಿ ಎಂದು ವಿರೋಧಿಸುವ ಜಮಾತ್ ಸಂಘಟನೆ ಮುಸ್ಲಿಂ ವಿರುದ್ಧ ದ್ವೇಷವನ್ನು ಹರಡುವ ಹಿಂದುತ್ವವಾದಿ ಸಂಘಟನೆಗಳ jamat-mangaloreಕೆಲ ಮುಖಂಡರನ್ನು ತಮ್ಮ ಸಂಘಟನೆಯ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಮೂಲಕ ತನ್ನನ್ನು ಜಾತ್ಯತೀತವಾದಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಹಾಸ್ವಾಸ್ಪದ. ಹಿಂದೂ ಮೂಲಭೂತವಾದಕ್ಕೆ ಪ್ರತಿರೋಧವನ್ನು ವಿರೋಧಿಸುವುದು ಮಾತ್ರ ಪ್ರಗತಿಪರತೆ ಎಂದು ವ್ಯಾಖ್ಯಾನಿಸುವ ಜಮಾತ್ ಧರ್ಮ ಪಾಲನೆಯ ಆಚಾರ ವಿಚಾರಗಳ ಕುರಿತಾಗಿ ಅದರ ನಿಲುವು ಗಮನಿಸಿದಾಗ ಹಿಂದೂ ಸನಾತನವಾದಿ ಸಂಘಟನೆಗಳು ಹಾಗೂ ಜಮಾತ್ ನಡುವೆ ಯಾವುದೇ ವ್ಯತ್ಯಾಸವಿಲ್ಲದೇ ಇರುವುದು ಕಂಡುಬರುತ್ತದೆ. ಜಮಾತ್ ಅಧೀನದ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ನಾಲ್ಕು ಗೋಡೆಯೊಳಗಿದ್ದ ಮುಸ್ಲಿಂ ಮಹಿಳೆಯರನ್ನು ಪರ ಪುರುಷರೊಂದಿಗೆ ವೇದಿಕೆ ಹಂಚಿಕೊಳ್ಳುವಂತೆ ಮಾಡಿದ್ದೇವೆ ಇದು ನಮ್ಮ ಪ್ರಗತಿಪರತೆಗೆ ಸಾಕ್ಷಿ ಎಂದು ಹೇಳಿಕೊಳ್ಳುತ್ತಿರುವಾಗ ಇನ್ನೊಂದೆಡೆಯಲ್ಲಿ ಶಾಂತಿ ಪ್ರಕಾಶನದದಿಂದ ಪ್ರಕಟವಾದ ಪುಸ್ತಕಗಳಲ್ಲಿ ಮಹಿಳೆಯರನ್ನು ಮಾರುಕಟ್ಟೆಯಿಂದ ಪಾರ್ಲಿಮೆಂಟ್ ವರೆಗೂ ಜೊತೆ ಸೇರಲು ಅನುಮತಿ ನೀಡುವುದಿಲ್ಲ ಎಂದು ಬರೆಯುತ್ತಿದೆ. ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಜೊತೆ ಜಮಾತ್ ಮುಖಂಡರು ವೇದಿಕೆ ಹಂಚಿಕೊಂಡರೆ ಅದು ಮೆಚ್ಚತಕ್ಕಂತಹಾ ವಿಚಾರ ಮತ್ತು ಅದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಇನ್ನೊಂದೆಡೆ ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಸಂದರ್ಭದಲ್ಲಿ ಜಮಾತ್ ಮುಖಂಡರೊಬ್ಬರು ಮಾಧ್ಯಮಗಳಿಗೆ ಶಾಲೆಯಲ್ಲಿ ಬಾಲಕ ಬಾಲಕಿಯರ “ಕೋ-ಎಜುಕೇಷನ್” ಗೆ ವಿರೋಧ ವ್ಯಕ್ತಪಡಿಸುವ ಹೇಳಿಕೆಯನ್ನು ನೀಡುತ್ತಾರೆ.

ಇದೊಂದು ಉದಾಹರಣೆಯಷ್ಟೇ. ಜಮಾತೇ ಇಸ್ಲಾಮೀ ಹಿಂದ್ ಸಂಘಟನೆಯ ಇಂಥಹಾ ಸಾಕಷ್ಟು ನಿಲುವುಗಳು ಅದರ ಕಾರ್ಯತಂತ್ರವನ್ನು ಸಂಶಯದಿಂದ ನೋಡಲು ಕಾರಣವಾಗಿದೆ. ಬಹುಸಂಸ್ಕೃತಿಯ ಸೂಫಿಸಂ ಅನ್ನು ಕಂದಾಚಾರದ ಹೆಸರಲ್ಲಿ ತಿರಸ್ಕರಿಸಿ. ಮುಸ್ಲಿಂ ಪ್ರಗತಿಪರರನ್ನು ಶರೀಯತ್ ವಿರುದ್ಧ ಎಂಬ ನೆಪದಲ್ಲಿ ತಿರಸ್ಕರಿಸಿ, ಇತರ ಧರ್ಮಿಯರೊಂದಿಗೆ ವೇದಿಕೆ ಹಂಚಿ ಜಮಾತ್ ಸಿದ್ದಾಂತವನ್ನು ಪ್ರತಿಪಾದಿಸುವ ಮೂಲಕ ತನ್ನನ್ನು ಪ್ರಗತಿಪರ ಹಾಗೂ ನೈಜ್ಯ ಇಸ್ಲಾಂ ತತ್ವಾದರ್ಶಗಳನ್ನು ಪಾಲಿಸುವ ಸಂಘಟನೆಯೆಂದು ಬಿಂಬಿಸ ಹೊರಟಿರುವುದು ಸರಿಯಲ್ಲ. ಈ ಕಾರಣಕ್ಕಾಗಿಯೇ ಮುಸ್ಲಿಂ ಸಮುದಾಯದ ಬಹುತೇಕ ಜನರು ಜಮಾತ್‌ಗೆ ಸಾಥ್ ಕೊಟ್ಟಿಲ್ಲ ಎಂಬುವುದು ಉಲ್ಲೇಖನಾರ್ಹ ‍ಅಂಶ. ಜಮಾತ್ ಆರ್.ಎಸ್.ಎಸ್ ಸಂಘಟನೆಯ ರೀತಿಯಲ್ಲೇ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕತೆ ನಿಲುವುಗಳಲ್ಲಿ ನಂಬಿಕೆ ಇಟ್ಟಂತಹಾ ಸಂಘಟನೆ ಎಂಬುವುದರಲ್ಲಿ ಸಂಶಯವಿಲ್ಲ. jamathmlore-blogspotಆರ್.ಎಸ್.ಎಸ್ ತನ್ನ ಸಿದ್ದಾಂತವನ್ನು ಎಲ್ಲರ ಮುಂದೆ ಒಪ್ಪಿಕೊಂಡು ಕಾರ್ಯಾಚರಿಸುತ್ತಿದ್ದರೆ ಜಮಾತ್ ಅದಕ್ಕೆ ತೆರೆಮರೆಯಲ್ಲಿ ತನ್ನ ಸಿದ್ದಾಂತವನ್ನು ವಿವಿಧ ಆಯಾಮಗಳಲ್ಲಿ ಪಸರಿಸುತ್ತಿದೆ. ಈ ಕಾರಣಕ್ಕಾಗಿಯೇ ಮುಸ್ಲಿಂ ಲೇಖಕರ ಸಂಘದ ಕಾರ್ಯವೈಖರಿಯ ಕುರಿತು ಚರ್ಚೆ ಆರಂಭವಾಗಿದ್ದು. ಲೇಖಕರ ಸಂಘದ ಕೆಲವೊಂದು ಪದಾಧಿಕಾರಿಗಳು ಮುಸ್ಲಿಂ ಲೇಖಕರ ಸಂಘವು ಜಮಾತ್‌ಗೆ ಸೇರಿದ ಸಂಘಟನೆ ಅಲ್ಲ ಎಂದು ವಾದಿಸುತ್ತಿದ್ದರೂ ರಾಜ್ಯದ (ಮುಸ್ಲಿಂ) ಬರಹಗಾರರಿಗೆ, ಸಾಹಿತಿಗಳಿಗೆ, ಚಿಂತಕರಿಗೆ ಇದು ಗೊತ್ತಿರುವ ಬಹಿರಂಗ ಗುಟ್ಟು. ಸಂಘದ ಹುಟ್ಟಿಗೆ ಮೂಲ ಕಾರಣ ಜಮಾತ್ ಎಂಬುವುದನ್ನು ಜಮಾತೇ ಇಸ್ಲಾಂ ಸಂಘಟನೆಯು ಒಪ್ಪಿಕೊಳ್ಳದೇ ಇರುವುದು ವಿಪರ್ಯಾಸ. ಜಮಾತೇ ಇಸ್ಲಾಮೀ ಹಿಂದ್ ಮಂಗಳೂರು ಅದರ ಅಂತರ್ಜಾಲ ಪೇಜ್ ಒಂದಲ್ಲೂ ತನ್ನ ಸಹಭಾಗಿ ಸಂಘಟನೆಗಳ ಜೊತೆ ಮುಸ್ಲಿಮ್ ಲೇಖಕರ ಸಂಘದ ಹೆಸರನ್ನೂ ಸೇರಿಸಿಕೊಂಡಿದೆ. ಜಮಾತೇ ಇಸ್ಲಾಂ ಸಂಘಟನೆಯ ಕುರಿತು ನಮಗೆ ಯಾವುದೇ ಪೂರ್ವಾಗ್ರಹವಿಲ್ಲ. ಆದರೆ ಜಮಾತ್ ಮೂಲಭೂತವಾದಿ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮ ಹಾಗೂ ದಿನೇಶ್ ಅಮೀನ್ ಮಟ್ಟು ಭಾಷಣ

– ಇರ್ಷಾದ್

“ಮುಸ್ಲಿಮ್ ಲೇಖಕರ ಸಂಘ” ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಮುಸ್ಲಿಂ ಸಾಹಿತಿಗಳಿಗೆ ಸನ್ಮಾನ, ಜೊತೆಗೆ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆಗಮಿಸಿದ್ದರು. ಪ್ರಗತಿಪರ ಚಿಂತಕ, ಕೋಮುವಾದ ಮೂಲಭೂತವಾದ ವಿರೋಧಿ ಮನಸ್ಥಿತಿ ಹೊಂದಿರುವ ಹಾಗೂ ತಮ್ಮ ಮೊನಚಾದ ಬರಹಗಳಿಂದ ಜನರ ಹೃದಯ ಗೆದ್ದಿರುವ ದಿನೇಶ್ ಅಮೀನ್ ಮಟ್ಟು ಅವರ ಭಾಷಣದಲ್ಲಿ ಏನಿರಬಹುದು ಎಂಬ ಕುತೂಹಲದಿಂದ ನಾನೂ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಮೀನ್ ಮಟ್ಟು ಅವರ ಮಾತುಗಳ ಕುರಿತಾಗಿ ಹೇಳೋದಕ್ಕಿಂತ ಮೊದಲು ಕೆಲವೊಂದು ವಿಚಾರಗಳ dinesh-amin-mattu-2ಕುರಿತಾಗಿ ಹೇಳಲೇ ಬೇಕಾಗುತ್ತದೆ.

ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಾಹಿತ್ಯ ವಲಯದಲ್ಲಿ ಪ್ರಗತಿಪರ ಚಿಂತನೆ ಮಾಡುವ ಸಾಹಿತಿಗಳ ಬರಹಗಾರರ ದಂಡೇ ಇತ್ತು. ಬೊಳುವಾರು ಮುಹಮ್ಮದ್, ಫಕೀರ್ ಮುಹಮ್ಮದ್ ಕಟಪಾಡಿ, ಬಿ.ಎಮ್. ರಶೀದ್, ಸಾರಾ ಅಬೂಬಕ್ಕರ್, ಮುಂತಾದ ಪ್ರಗತಿಪರ ಬರಹಗಾರರು ಮುಸ್ಲಿಮ್ ಸಮಾಜದಲ್ಲಿರುವ ಮೂಲಭೂತವಾದತ್ವವನ್ನು ಖಂಡಿಸುವುದರ ಜೊತೆಗೆ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಮೇಲೆ ಬಹುಸಂಖ್ಯಾತ ಕೋಮುವಾದಿಗಳಿಂದ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಧ್ವನಿ ಎತ್ತಿದವರು. ಆದರೆ ಈ ಎಲ್ಲಾ ಪ್ರಗತಿಪರ ಲೇಖಕರು ಮುಸ್ಲಿಂ ಸಮುದಾಯಕ್ಕೆ ಲೇಖಕರಾಗಿ ಕಂಡುಬಂದಿಲ್ಲ. ಬದಲಾಗಿ ಇವರ ಪ್ರಗತಿಪರ ಚಿಂತನೆ ಮುಸ್ಲಿಂ ಸಮುದಾಯದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗತೊಡಗಿತು. ಪ್ರಸ್ತುತ ದಿನಗಳಲ್ಲಿ ಮುಸ್ಲಿಂ ಮಹಿಳೆಯರ ಪರಿಸ್ಥಿತಿ ಕುರಿತಾಗಿ ಧ್ವನಿ ಎತ್ತುವುದರ ಜೊತೆಗೆ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಿಯೂ ಧ್ವನಿ ಎತ್ತುತ್ತಿರುವ ಲೇಖಕಿಯರಾದ Sara-Abubakarಸಾರಾ ಅಬೂಬಕ್ಕರ್, ಕೆ.ಶರೀಫಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ ಹಾಗೂ ಜೊಹರಾ ನಿಸಾರ್ ಅಹಮ್ಮದ್ ಅಂತವರನ್ನು ಜಮಾತೇ ಇಸ್ಲಾಂಮೀ ಹಿಂದ್ ಸಿದ್ದಾಂತ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಅವರ ಪಾಲಿಗೆ ಇವರೆಲ್ಲಾ ಧರ್ಮವಿರೋಧಿಗಳು. ಯಾಕೆಂದರೆ ಇವರುಗಳು ಧರ್ಮ ವಿಧಿಸಿರುವ ಕಟ್ಟುಪಾಡುಗಳೊಳಗಿಲ್ಲ. ಮುಸ್ಲಿಮ್ ಸಮಾಜದಲ್ಲಿರುವ ಬಹುಪತ್ನಿತ್ವದ ದುರುಪಯೋಗ ಹಾಗೂ ಅದರಿಂದಾಗುತ್ತಿರುವ ಅನಾಹುತಗಳು, ಮುಸ್ಲಿಮ್ ಮಹಿಳೆಯರ ಪರಿಸ್ಥಿತಿ, ಧಾರ್ಮಿಕ ಕಟ್ಟುಪಾಡುಗಳು, ಕುರುಡು ನಂಬಿಕೆಗಳಿಂದಾಗುತ್ತಿರವ ಅನಾಹುತಗಳ ಕುರಿತಾಗಿ ಸಾಕಷ್ಟು ಲೇಖನಗಳನ್ನು ಬರೆದವರು ಹಾಗೂ ಈ ಕುರಿತು ಬೆಳಕು ಚೆಲ್ಲಿದವರು. ಆದರೆ ಈ ಎಲ್ಲಾ ವಿಚಾರವಾದಿಗಳ ಕುರಿತಾಗಿ ಮುಸ್ಲಿಂ ಲೇಖಕರ ಸಂಘದ ನಿಲುವೇನು ಎಂಬುವುದಂತೂ ಸ್ಪಷ್ಟ.

ಯಾಕೆಂದರೆ “ಮುಸ್ಲಿಮ್ ಲೇಖಕರ ಸಂಘ” ಮುಸ್ಲಿಮ್ ಧಾರ್ಮಿಕ ಸಂಘಟನೆ ಜಮಾತೆ ಇಸ್ಲಾಂಮೀ ಹಿಂದ್ ಸಂಘಟನೆಯ ಹಿನ್ನೆಲೆಯಲ್ಲಿ ಕಾರ್ಯಾಚರಿಸುವಂತಹಾ ಸಂಘವಾಗಿದೆ. ಜಮಾತೆ ಇಸ್ಲಾಂ ಸಂಘಟನೆ ಧಾರ್ಮಿಕ ಮೂಲಭೂತವಾದವನ್ನು ಮೈಗೂಡಿಸಿಕೊಂಡಿರುವ ಸಂಘಟನೆ. ಜೊತೆಗೆ ಇಸ್ಲಾಂ ರಾಷ್ಟ್ರವನ್ನು ಪ್ರತಿಪಾದಿಸುವ ಸಂಘಟನೆಯಾಗಿದೆ. ಇನ್ನು ಸಂಘದ ಕಾರ್ಯಕ್ರಮದಲ್ಲಿ ಸನ್ಮಾನಿತಗೊಂಡ ಲೇಖಕರು ಕೂಡಾ ಜಮಾತ್ ಇಸ್ಲಾಮೀ ಹಿಂದ್ ಕಾರ್ಯಕರ್ತರು. (ಮರಿಯಮ್ಮ ಇಸ್ಮಾಯಿಲ್ ಹಾಗೂ ಎಸ್. ಅಬ್ದುಲ್ ಕರೀಮ್ ದಾವಣಗೆರೆ) ಈ ಎಲ್ಲಾ ವಿಚಾರಗಳನ್ನು ನೋಡಿಕೊಂಡು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳಲ್ಲಿ ನನಗೆ ಸಹಜ ಕುತೂಹಲವಿತ್ತು. ಯಾಕೆಂದರೆ ಮಹಿಳಾ ಪರ, ಕೋಮುವಾದತ್ವ, ಮೂಲಭೂತವಾದತ್ವ ವಿರೋಧಿ, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಅಮೀನ್ ಮಟ್ಟು ಇಲ್ಲಿ ಸಾಕಷ್ಟು ವಿಚಾರಗಳ ಕುರಿತಾಗಿ ಮಾತನಾಡೋದಿತ್ತು. ಆದರೆ ಅವರು ಇಲ್ಲಿ ತಮ್ಮ ನೈಜ್ಯ ಜವಾಬ್ದಾರಿಯನ್ನು ಪೂರ್ಣಗೊಳಿಸಿಲ್ಲ ಎಂದನಿಸಿದೆ.

ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಬಂದಂತಹಾ ಬಹುತೇಕ ಜನರಿಗೆ ಅಮೀನ್ ಮಟ್ಟು ಅವರ ಬರವಣಿಗೆ ಪ್ರಿಯವಾದುದು. ಯಾಕೆಂದರೆ ಅವರು ಆರ್.ಎಸ್.ಎಸ್ ನ್ನು ಹಾಗೂ ಪಿ.ಎಫ್.ಐ ಯನ್ನೂ ಖಂಡಿಸುತ್ತಾರೆ. ಈ ಕಾರಣಕ್ಕಾಗಿ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದ ಆಯೋಜಕರಾದ ಜಮಾತೇ ಇಸ್ಲಾಂಮೀ ಹಿಂದ್ ಹಾಗೂ ಕಾರ್ಯಕ್ರಮದಲ್ಲಿದ್ದಂತಹಾ ಜಮಾತ್ ಕಾರ್ಯಕರ್ತರೂ ಆರ್.ಎಸ್.ಎಸ್ ಹಾಗೂ ಪಿ.ಎಫ್.ಐ ಖಂಡಿಸುತ್ತಾರೆ. ಆದರೆ ಇಸ್ಲಾಂ ಧಾರ್ಮಿಕ ಮೂಲಭೂತವಾದವನ್ನಲ್ಲ. ಅದಕ್ಕಾಗಿ ಈ ಸಂಘಕ್ಕೆ ಮುಸ್ಲಿಂ ತೀವ್ರವಾದ ಸಂಘಟನೆ PFI-eventಪಿ.ಎಫ್.ಐ ಜೊತೆ ಜೊತೆಗೆ ಮುಸ್ಲಿಂ ಪ್ರಗತಿಪರ ಲೇಖಕರಾದ ಸಾರಾ ಅಬೂಬಕ್ಕರ್, ಬೊಳುವಾರು ಮೋಹಮ್ಮದ್ ಕುಌ, ಮುಹಮ್ಮದ್ ಕಟಪಾಡಿ ಅಂತಹಾ ಸಾಹಿತಿಗಳು ಮುಸ್ಲಿಂ ಸಾಹಿತಿಗಳಾಗಿ ಕಂಡಿಲ್ಲ. (ಹಿಂದೂ) ಎಡಪಂಥೀಯವಾದ ಹಾಗೂ ಪ್ರಗತಿಪರ ಚಿಂತನೆಗಳನ್ನು ಒಪ್ಪುವ ಈ ಮನಸ್ಥಿತಿ (ಮುಸ್ಲಿಮ್) ಎಡಪಂಥೀಯವಾದವನ್ನು, ಪ್ರಗತಿಪರ ಚಿಂತನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬಹುಸಂಖ್ಯಾತ ಕೋಮುವಾದಿಗಳಿಂದ ದಬ್ಬಾಳಿಕೆ ಸಂದರ್ಭದಲ್ಲಿ ಜ್ಯಾತ್ಯಾತೀತರಾಗುವ ಈ ಮನಸ್ಥಿತಿ ಮುಸ್ಲಿಮ್ ಧಾರ್ಮಿಕ ವಿಚಾರಗಳು ಬಂದಾಗ ಪಕ್ಕಾ ಮೂಲಭೂತವಾದವನ್ನು ಪ್ರತಿನಿಧಿಸುತ್ತದೆ.

ಈ ಎಲ್ಲಾ ವಿಚಾರಗಳ ಕುರಿತಾಗಿ ಮಾಹಿತಿಯನ್ನು ಹೊಂದಿರುವ ದಿನೇಶ್ ಅಮೀನ್ ಮಟ್ಟು ಅವರು ಇಲ್ಲಿ ಮಾತನಾಡಬೇಕಾಗಿದ್ದು ಇಂಥಹಾ ವಿಚಾರಗಳನ್ನೇ. ಮುಸ್ಲಿಮ್ ಸಮುದಾಯದಲ್ಲಿರುವ ನ್ಯೂನತೆಗಳು, ಧರ್ಮದ ಹೆಸರಲ್ಲಿ ಹೇರಲ್ಪಡುತ್ತಿರುವ ಕಟ್ಟುಪಾಡುಗಳ ವಿರುದ್ಧ ಪ್ರಗತಿಪರ ನೆಲೆಯಲ್ಲಿ ಹೋರಾಟಗಳನ್ನು ನಡೆಸುವ ಹಾಗೂ ಧಾರ್ಮಿಕ ಮೂಲಭೂತವಾದತ್ವವನ್ನು ವಿರೋಧಿಸಿ ಬರವಣಿಗೆಗಳ ಮೂಲಕ ಧ್ವನಿ ಎತ್ತುವ ಮುಸ್ಲಿಂ ಲೇಖಕರ ಹೋರಾಟಗಾರರ ಪರಿಸ್ಥಿತಿ ಹೇಗಿದೆ? ಅವರನ್ನು ಮುಸ್ಲಿಂ ಸಮುದಾಯದ ಮೂಲಭೂತ ಮನಸ್ಥಿತಿಗಳು ನೋಡುತ್ತಿರುವ ದೃಷ್ಟಿಕೋನದಲ್ಲಿ ಆಗಬೇಕಾದ ಬದಲಾವಣೆಗಳು ಯಾವುವು ಎಂಬುವುದರ ಕುರಿತಾಗಿದೆ. ಮುಸ್ಲಿಂ ಲೇಖಕರ ಸಂಘದ ಬೆನ್ನೆಲುಬಾಗಿರುವ ಜಮಾತೇ ಇಸ್ಲಾಂಮೀ ಹಿಂದ್ ಧಾರ್ಮಿಕ ಸಂಘಟನೆ ಪ್ರಗತಿಪರ ಚಿಂತಕರು ಹಾಗೂ ಮಹಿಳಾ ಪ್ರಗತಿಪರತೆ ಕುರಿತಾಗಿ ತಳೆದಿರುವ ನಿಲುವುಗಳೇನು ಎಂಬುವುದರ ಕುರಿತಾಗಿರಬೇಕಿತ್ತು. ಮುಸ್ಲಿಂ ಪ್ರಗತಿಪರ ಲೇಖಕಿ ಸಾರಾ ಅಬೂಬಕ್ಕರ್ ಕುರಿತಾಗಿ ಜಮಾತ್ ಹೊಂದಿರುವ ನಿಲುವಿನ ಕುರಿತಾಗಿ ಸ್ಪಷ್ಟತೆ ಇರುವ ಅಮೀನ್ ಮಟ್ಟು ಅವರು ಕಾರ್ಯಕ್ರಮದ ಸಭಾಂಗಣದಲ್ಲಿ ತುಂಬಿದ ಸಾಹಿತ್ಯಾಭಿಮಾನಿಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರೇ ವಿನಹ ಜಮಾತ್ ನಂತಹಾ ಪ್ರಗತಿಪರ ಚಿಂತನೆಗಳ ವಿರೋಧಿ ಸಂಘಟನೆಯ ಕುರಿತಾಗಿ ಚಕಾರವೆತ್ತಿಲ್ಲ. ಈ ಹಿಂದೆ ಖ್ಯಾತ ಸಾಹಿತಿ ಹಾಗೂ ಬಂಡಾಯ ಬರಹಗಾರರಾದ devanurದೇವನೂರು ಜಮಾತೇ ಇಸ್ಲಾಂಮೀ ಹಿಂದ್ ಮುಸ್ಲಿಮ್ ರ ಆರ್.ಎಸ್.ಎಸ್ ಎಂಬ ಹೇಳಿಕೆಯನ್ನು ನಿಡಿದ್ದರು ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಮಟ್ಟು ಅವರು ತಮ್ಮ ಭಾಷಣದಲ್ಲಿ ಹಿಂದೂ ಸಂಘಟನೆಗಳು ಹಿಂದೂ ಸಮಾಜದಲ್ಲಿದ್ದ ಕೆಲವೊಂದು ಆಚರಣೆಗಳ ವಿರುದ್ಧ ಹೇಗೆ ಧ್ವನಿಎತ್ತಬೇಕು ಎಂದು ವಿವರಣೆ ನೀಡಿದರೆ ಹೊರತು ಮುಸ್ಲಿಂ ಧಾರ್ಮಿಕ ಸಂಘಟನೆಗಳ ಸಮಾಜ ತಿದ್ದುವ ಕಾರ್ಯಗಳ ಕುರಿತಾಗಿ ಎಳ್ಳಷ್ಟೂ ಮಾತನಾಡಿಲ್ಲ. ಅವರ ಮಾತುಗಳ ಪ್ರಕಾರ ಸಾಹಿತ್ಯ ಧ್ವನಿ ಇಲ್ಲದವರ ಧ್ವನಿಯಾಗಬೇಕು. ಜನರ ನೋವುಗಳನ್ನು ಹೊರಹಾಕುವಲ್ಲಿ ಸಾಹಿತ್ಯ ಪಾತ್ರದ ಕುರಿತಾಗಿ ಉಲ್ಲೇಖಿಸಿದರೂ, ಸಾಹಿತ್ಯವನ್ನು ಧಾರ್ಮಿಕ ಕಟ್ಟುಪಾಡಿನಲ್ಲಿಟ್ಟು ಧಾರ್ಮಿಕ ಸಾಹಿತ್ಯ ಮಾತ್ರ ನೈಜ್ಯ ಸಾಹಿತ್ಯ ಉಳಿದೆಲ್ಲಾ ಅಶ್ಲೀಲ ಸಾಹಿತ್ಯ ಎಂಬ ಮನಸ್ಥಿತಿ ಹೊಂದಿರುವವರ ಕುರಿತಾಗಿ ಮಾತನಾಡದೇ ಇರುವುದು ನಿಜಕ್ಕೂ ಬೇಸರ ತಂದಿದೆ. ಇನ್ನು ಹಿಂದೂ ಧರ್ಮದಲ್ಲಿ ಪ್ರಗತಿಪರ ಚಿಂತನೆಗಳಿಗೆ ಅವಕಾಶವಿದೆ ಹಾಗೂ ಇಸ್ಲಾಂ ಧರ್ಮದಲ್ಲಿ ಪ್ರಗತಿಪರ ಚಿಂತನೆಗೆ ಅವಕಾಶವಿಲ್ಲ ಎಂಬ ಮಾತನ್ನಾಡುವ ಸಂದರ್ಭದಲ್ಲಿ ಪ್ರಗತಿಪರ ಚಿಂತನೆಗೆ ಎಳ್ಳಷ್ಟೂ ಅವಕಾಶವನ್ನು ನೀಡದ ಧಾರ್ಮಿಕ ಸಂಘಟನೆ ಜಮಾತೇ ಇಸ್ಲಾಂಮೀ ಹಿಂದ್ ಹಾಗೂ ಅವರ ಅಧೀನದಲ್ಲಿರುವ ಮುಸ್ಲಿಂ ಲೇಖಕರ ಸಂಘದ ನಿಲುವಿನ ಕುರಿತಾಗಿ ಚಕಾರವೆತ್ತದೇ ಇರುವುದು ಆಶ್ವರ್ಯ ಉಂಟುಮಾಡಿದೆ. ದಿನೇಶ್ ಅಮೀನ್ ಮಟ್ಟು ಅವರ ಈ ನಡೆ ಅವರ ನಿಲುವುಗಳಿಂದ ಪ್ರೇರಿತರಾಗಿ ಅವರನ್ನು ಹಿಂಬಾಲಿಸುವ ಅದೆಷ್ಟೋ ಜನರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ.

ಮುಸ್ಲಿಂ ಸಮುದಾಯದಲ್ಲಿರುವ ಕೆಲವು ಶೋಷಕ ಮನಸ್ಥಿತಿಗಳ ವಿರುದ್ಧ ಧನಿಯೆತ್ತಬೇಕಿದೆ

– ಇರ್ಷಾದ್

ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಸೌಜನ್ಯ ನಗರಕ್ಕೆ ಸುದ್ದಿ ಮಾಡುವ ಉದ್ದೇಶದಿಂದ ಕೆಲ ಸಂಗಾತಿಗಳೊಂದಿಗೆ ಭೇಟಿ ಕೊಟ್ಟಿದ್ದೆ . ನಿವೇಶನ ರಹಿತ ಬಡವರು ಭಾರತೀಯ ಕಮ್ಯುನಿಷ್ಟ್ ಪಕ್ಷ ( ಮಾರ್ಕಿಸ್ಟ್ ) ನೇತೃತ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಜೋಪುಡಿಯನ್ನು ಕಟ್ಟಿಕೊಂಡು ಅಲ್ಲೇ ವಾಸ್ತವ್ಯ ಹೂಡಿ ಹೋರಾಟ ನಡೆಸುತ್ತಿದ್ದಾರೆ. ಹಾಗೆ ಸೌಜನ್ಯ ನಗರಕ್ಕೆ ಒಂದು ಸುತ್ತು ಹಾಕಿದಾಗ ನನ್ನ ಕಣ್ಣಿಗೆ ಇಬ್ಬರು ಮುಸ್ಲಿಂ ಮಹಿಳೆಯರು ತಮ್ಮ ಪುಟಾಣಿ ಮಕ್ಕಳ ಜೊತೆಯಲ್ಲಿ ಕಂಡರು. ನಿವೇಶನ ರಹಿತ ಸುಮಾರು 60 ಬಡವರು ಕಟ್ಟಿದ ಜೋಪಡಿಯ ಪೈಕಿ ಆ ಎರಡು ಜೋಪಡಿಗಳ ಸ್ಥಿತಿ ಶೋಚನೀಯವಾಗಿತ್ತು. ಉಡುವ ಸೀರೆಯೇ ಜೋಪಡಿಯ ಗೋಡೆಯಾಗಿತ್ತು. ಹಾಗೆ ಹತ್ತಿರ ಹೋಗಿ ಮಾತನಾಡಿಸಿದಾಗ ಆ ಮಹಿಳೆ ಭಾವುಕಳಾಗಿ ತನ್ನ ಕಥೆಯನ್ನು ಬಿಚ್ಚಿಡತೊಡಗಿದಳು. ಆಕೆಯ ಹೆಸರು ಜೊಹರಾ. ಕಡು ಬಡತನದಲ್ಲೇ ಹುಟ್ಟಿ ಬೆಳೆದವಳು. ವಯಸ್ಸಿಗೆ ಬಂದಾಗ ಸಹಜವಾಗಿ ಎಲ್ಲಾ ಹೆಣ್ಣು ಮಕ್ಕಳು Indian-Povertyಕಾಣುವ ಕನಸನ್ನು ಕಣ್ತುಂಬಾ ಕಂಡವಳು. ಬಡತನ, ವರದಕ್ಷಿಣೆಯ ಭೂತದ ನಡುವೆಯೂ ತಾನು ಕನಸಲ್ಲಿ ಕಂಡ ಇನಿಯನಿಗಾಗಿ ಕಾಯುತಿದ್ದ ಆಕೆಯನ್ನು ಅದಾಗಲೇ ಮದುವೆಯಾಗಿದ್ದ ಪುರುಷನೊಬ್ಬನ ಜೊತೆ ಮನೆ ಮಂದಿ ಮದುವೆಮಾಡಿಕೊಟ್ಟರು. ಜೊಹರಾಳನ್ನು ಮದುವೆಯಾದ ಆ ಪುಣ್ಯಾತ್ಮ ಆಕೆಗೆ ಎರಡು ಮಕ್ಕಳನ್ನು ಕರುಣಿಸಿ ಕಣ್ಮರೆಯಾದ. ಜೊಹರಾಳ ನೋವಿನ ಕಥೆಯನ್ನು ದೂರದಲ್ಲೇ ನಿಂತುಕೊಂಡು ಗಮನಿಸುತಿದ್ದ ಆಕೆಯ ಸಹೋದರಿ ನಸೀಮಾ ಬಾನು ಬಳಿ ಹೋಗಿ ಮಾತಿಗಿಳಿದಾಗ ಆಕೆಯದ್ದೂ ಇಂಥಹದ್ದೇ ಕಣ್ಣೀರ ಕಥೆ. ಅಕ್ಕನ ಪಾಡೇ ಆಕೆಯ ಜೀವನದಲ್ಲಿ ಕೂಡಾ. ಮದುವೆಯಾದ ಗಂಡ ನಸೀಮಾಳಿಗೂ ಎರಡು ಮಕ್ಕಳನ್ನು ಕರುಣಿಸಿ ಕಣ್ಮರೆಯಾಗಿದ್ದಾನೆ. ಇದೀಗ ಈ ಇಬ್ಬರೂ ಸಣ್ಣ ವಯಸ್ಸಿನ ಯುವತಿಯರು ಬಡತನದಲ್ಲೇ ಬದುಕುತ್ತಿದ್ದಾರೆ. ಗಂಡನಿಗಾಗಿ ಹುಡುಕಾಡಿ ಸುಸ್ತಾಗಿದ್ದಾರೆ. ಸಮಾಜಕ್ಕೆ ಅಂಜಿ ತಮ್ಮ ಆಸೆ ಆಕಾಂಕ್ಷೆಗಳನ್ನು ಒತ್ತಿಟ್ಟು ಪುಟ್ಟ ಮಕ್ಕಳ ಹೊಟ್ಟೆತುಂಬಿಸಲೂ ಕಷ್ಟಪಡುತಿದ್ದಾರೆ.

ಜೊಹರಾ ಹಾಗೂ ನಸೀಮಾ ಬಾನು ಕೇವಲ ಉದಾಹರಣೆಗಳಷ್ಟೇ. ಇಂಥಹಾ ನೂರಾರು ಮುಸ್ಲಿಂ ಹೆಣ್ಣುಮಕ್ಕಳ ಪರಿಸ್ಥಿತಿ ಇವರಿಗಿಂತ್ತ ಭಿನ್ನವೇನಿಲ್ಲಾ. ಇಸ್ಲಾಂ ಧರ್ಮ ಪುರುಷನಿಗೆ ನಾಲ್ಕು ಮದುವೆಯಾಗಲು ಅವಕಾಶ ನೀಡಿದೆ ಎಂಬ ಅವಕಾಶವನ್ನು ಅಸ್ತ್ರವಾಗಿಟ್ಟುಕೊಂಡು ಅನೇಕ ಹೆಣ್ಣುಬಾಕ ಪುರುಷರು ಬಡ ಮುಸ್ಲಿಂ ಹೆಣ್ಣುಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಬಡ ಹೆಣ್ಣುಮಕ್ಕಳನ್ನು ಮದುಯೆಯಾಗೋದು, ಮಕ್ಕಳನ್ನು ಕರುಣಿಸಿ ಕಣ್ಮರೆಯಾಗೋದು, ಕ್ಷುಲ್ಲಕ ಕಾರಣ ನೀಡಿ ತಲಾಕ್ ನೀಡುವುದು ಮಾಮೂಲಾಗಿದೆ. (ತಲಾಕ್ ನೀಡಲು ಕೆಲವೊಂದು ಕಠಿಣ ನಿಯಮಾವಳಿಗಳು ಇಸ್ಲಾಂ ಧರ್ಮದಲ್ಲಿದೆ ಆದರೆ ಅದರ ದುರುಪಯೋಗ ಹೆಚ್ಚಿನ ಸಂಧರ್ಭದಲ್ಲಿ ನಡೆಯುತ್ತಿದೆ.) ವರದಕ್ಷಿಣೆ, ಹುಟ್ಟು ಬಡತನ, ಮನೆಯಲ್ಲಿ ಐದಾರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಒಟ್ನಲ್ಲಿ ಹೆಣ್ಣು ಮದುವೆಯಾದಲ್ಲಿ ಸಾಕು ಎಂದು ಮದುವೆ ಮಾಡಿಸಿ ಕೊಡುತ್ತಾರೆ ಪೋಷಕರು. inidan-muslim-womanಆತನ ಹಿನ್ನೆಲೆ ಹೆಣ್ಣಿನ ಪೋಷಕರಿಗೆ ಅಗತ್ಯವಿಲ್ಲ, ಆತ ಎಲ್ಲಿಂದ ಬಂದ, ಏನು ಉದ್ಯೋಗ, ಆತನ ಚಾರಿತ್ರ ಎಂಥಹದ್ದು ಇದ್ಯಾವುದು ಮುಖ್ಯವಲ್ಲ. ವಯಸ್ಸಿಗೆ ಬಂದ ಹೆಣ್ಣು ಮಗಳು ಗಂಡನ ಮನೆಗೆ ಸೇರುವುದು ಈ ಬಡ ಪೋಷಕರಿಗೆ ಮುಖ್ಯವಾಗಿದೆ. ಇಂಥಹಾ ಅಸಹಾಯಕತೆಯನ್ನೇ ಬಳಸಿಕೊಂಡು ಬಡ ಮುಗ್ದ ಹೆಣ್ಣುಮಕ್ಕಳನ್ನು ಮದುವೆಯಾಗಿ ಮಕ್ಕಳನ್ನು ಕರುಣಿಸಿ ಮಾಯವಾಗುವ ಪುರುಷರ ಸಂಖ್ಯೆ ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯದ ಪ್ರಗತಿಪರ ಲೇಖಕರಾದ ಸಾರಾ ಅಬೂಬಕ್ಕರ್, ಕೆ.ಶರೀಫಾ ಬರೆದಂತಹಾ ಅನೇಕ ಪುಸ್ತಕಗಳಲ್ಲಿ, ಲೇಖನಗಳಲ್ಲಿ ತಲಾಕ್ ದುರ್ಬಳಕೆ ಹಾಗೂ ಬಹುಪತ್ನಿತ್ವದಿಂದಾಗಿ ಮುಸ್ಲಿಂ ಸಮುದಾಯದ ಬಡ ಮಹಿಳೆಯರು ಅನುಭವಿಸುತ್ತಿರುವ ನೋವಿನ ಕುರಿತಾಗಿ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಇದೊಂದು ರೀತಿಯ ಶೋಷಣೆಯಾದರೆ ಇನ್ನೊಂದು ಶೋಷಣೆ ನೋಡಿ.

ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಸರ್ಕಾರಿ ಶಾಲೆಯ ಮುಸ್ಲಿಂ ಹೆಣ್ಣು ಮಕ್ಕಳು ಸ್ಕೂಲ್ ಡೇ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಫತ್ವಾ ಹೊರಡಿಸಲಾಗಿತ್ತು. ಕೊಡಿಪ್ಪಾಡಿ ಮದರಸಾವೊಂದರ ಧಾರ್ಮಿಕ ಶಿಕ್ಷಕ ಈ ಅಲಿಖಿತ ಫತ್ವಾ ಹೊರಡಿಸಿದ್ದರು. ಯಾಕಾಗಿ ಹೆಣ್ಣು ಮಕ್ಕಳು ಡಾನ್ಸ್ ಮಾಡಬಾರದು ಎಂದು ಕೇಳಿದಾಗ “ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು ನೋಡುವುದು ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ನೋಡುವುದು ಹರಾಮ್. ಹೆಣ್ಣು 15 ತುಂಬಿದಾಗ ಆಕೆ ದೊಡ್ಡವಳಾಗುತ್ತಾಳೆ. ಆದ್ದರಿಂದ ನಾಟಕದಲ್ಲಿ ಭಾಗವಹಿಸುವುದು ಡಾನ್ಸ್ ಮಾಡುವುದು ಹರಾಮ್. ಜಿಲ್ಲಾದ್ಯಂತ ಸ್ಕೂಲ್ ಡೇ ಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದು ಹರಾಮ್. ನಮ್ಮ ಮದರಸಾದ ವಿದ್ಯಾರ್ಥಿಗಳನ್ನು ಸ್ಕೂಲ್ ಡೇ ಯಲ್ಲಿ ಡಾನ್ಸ್ ಮಾಡಬಾರದು ಎಂದು ಕಡ್ಡಾಯವಾಗಿ ಹೇಳಿದ್ದೇವೆ. ತಂದೆ ತಾಯಿಯಂದಿರು ಪ್ರೋತ್ಸಾಹ mosque-mangaloreಕೊಡಬಾರದು ಎಂದಿದ್ದೇವೆ. ಸಣ್ಣ ಮಕ್ಕಳೂ ಡಾನ್ಸ್ ಮಾಡಿದರೂ ದೊಡ್ಡ ಮಕ್ಕಳು ಡಾನ್ಸ್ ಮಾಡಿದ್ರೂ ಹರಾಮ್ ಹರಾಮೇ. ಸಣ್ಣದಲ್ಲೇ ಪ್ರೋತ್ಸಾಹ ಕೊಟ್ಟರೆ ಅವರು ದೊಡ್ಡರವಾದ ಮೇಲೂ ಅಂಥಹಾ ತಪ್ಪು ಮಾಡುತ್ತಾರೆ. ಇದು ಕಮಿಟಿಯ ತೀರ್ಮಾನ ಕೂಡಾ ಹೌದು” ಎಂದರು. ಇಷ್ಟೇ ಅಲ್ಲ, ಚೆಸ್ ಬಿಟ್ಟು ಇತರ ಆಟೋಟಗಳನ್ನು ಆಡುವುದು ನಿಷಿದ್ದ ಅಂದರು.

ಧಾರ್ಮಿಕ ಶಿಕ್ಷಕರ ಮಾತನ್ನು ಆಲಿಸಿದ ನಾವು ಶಾಲೆಗೆ ಹೋಗಿ 5 ನೇ ತರಗತಿಯ ಹೆಣ್ಣು ಮಗಳೊಬ್ಬಳಲ್ಲಿ ಮಾತನಾಡಿದಾಗ ಆಕೆಯ ಕಣ್ತಂಚಿನಲ್ಲಿ ಕಣ್ಣೀರಿತ್ತು. ಡಾನ್ಸ್ ಮಾಡಬೇಕು ಎಂದು ಆಸೆ ಇದ್ಯಾ ಪುಟ್ಟೀ ಅಂದಾಗ ’ಹೂಂ ಆಸೆ ಇದೆ ಆದ್ರೆ ಉಸ್ತಾದ್ (ಧಾರ್ಮಿಕ ಶಿಕ್ಷಕ) ಬೇಡ ಅಂದಿದ್ದಾರೆ. ಉಸ್ತಾದ್ ಮಾತು ಮೀರಬಾರದು ಎಂದು ಅಮ್ಮ ಅಪ್ಪ ಹೇಳಿದ್ದಾರೆ ಅದಕ್ಕಾಗಿ ಡಾನ್ಸ್ ಮಾಡಿಲ್ಲ’ ಎಂದು ಪುಟ್ಟ ಹೆಣ್ಣು ಮಗು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿತು. ಈ ಪುಟಾಣಿ ಹೆಣ್ಣು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿರುವ ಇತರ ಧರ್ಮೀಯ ಹೆಣ್ಣುಮಕ್ಕಳಿಗಿಂತ ಯಾವುದರಲ್ಲೂ ಕಡಿಮೆಯೇನಿಲ್ಲ. ಪ್ರತಿಭಾವಂತೆಯರಾಗಿದ್ದ ಆ ಹೆಣ್ಣು ಮಕ್ಕಳು ಧಾರ್ಮಿಕ ಗುರುವಿನ ಅಂಧಾ ಫತ್ವಾದಿಂದಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಮರೆಮಾಚಿ ಪ್ರೇಕ್ಷಕರ ಜೊತೆ ಕುಳಿತು ಸಹಪಾಠಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಖುಷಿಪಟ್ಟರು.

ಈ ಎರಡೂ ಪ್ರಕರಣಗಳನ್ನು ನೋಡಿದಾಗ ಇಲ್ಲಿ ಶೋಷಿತಳು ಹೆಣ್ಣು. ಧರ್ಮದ ಕಟ್ಟುಪಾಡುಗಳಿಗೆ ಒಳಗಾಗುವವಳು ಹೆಣ್ಣು. ಗಂಡಿನ ಆಸೆಬರುಕುತನಕ್ಕೆ ಬಲಿಯಾಗುವವಳು ಹೆಣ್ಣು. ಪ್ರತಿಭೆ, ಆಸೆ, ಅಭಿಲಾಶೆಗಳನ್ನು ವ್ಯಕ್ತಪಡಿಸಲಾಗದೆ ಧರ್ಮವಿಧಿಸಿದೆ ಎನ್ನಲಾಗುತ್ತಿರುವ ನಿರ್ಬಂಧಗಳೊಳಗೆ ಆಕೆ ಬಂಧಿಯಾಗುತ್ತಿದ್ದಾಳೆ. ಇಸ್ಲಾಂ ಧರ್ಮ ಖಂಡಿತವಾಗಿಯೂ ಹೆಣ್ಣಿಗೆ ಇತರ ಧರ್ಮಗಳಿಗಿಂತ ಹೆಚ್ಚಾಗಿ ಸ್ವಾತಂತ್ರವನ್ನು ಕಲ್ಪಿಸಿದೆ. ಆದರೆ ಇದು ಆಚರಣೆಯಲಿಲ್ಲ. ಧರ್ಮದ ಕೆಲವೊಂದು ಅವಕಾಶಗಳನ್ನು ಒಳಸಿಕೊಂಡು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳನ್ನು ಪುರುಷನ ಹದ್ದುಬಸ್ಥಿನಲ್ಲಿಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರಪಂಚ ಬದಲಾಗುತ್ತಿದ್ದರೂ ಮುಸ್ಲಿಂ ಸಮುದಾಯದ ಕೆಲವರ ಮನಸ್ಥಿತಿ ಇನ್ನೂ ಬದಲಾಗಲಿಲ್ಲ. ಹೆಣ್ಣು ಇವರ ಪಾಲಿಗೆ ಮನೆಯಲ್ಲಿರಬೇಕಾದ ವಸ್ತು. ಆಕೆ ಜೋರಾಗಿ ನಗಬಾರದು, ಸುಗಂಧ ದೃವ್ಯಗಳನ್ನು ಹಚ್ಚಿಕೊಳ್ಳಬಾರದು, ಗಂಡನ ಮಾತನ್ನು ಮೀರಿ ನಡೆಯಬಾರದು. ಈ ಮನಸ್ಥಿತಿಯೇ ಮುಸ್ಲಿಂ ಸಮುದಾಯದಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳನ್ನು ಇನ್ನೂ ಮನೆಯಿಂದ ಹೊರಗಡೆ ಕಾಣಿಸಿಕೊಳ್ಳದಂತೆ ಮಾಡಿದೆ. ಧರ್ಮ, ಸಂಸ್ಕೃತಿ ಆಚರಣೆ ಹೆಸರಲ್ಲಿ ಹೆಣ್ಣು ಮಕ್ಕಳ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? School_childrenದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವವರು ಮುಸ್ಲಿಂ ಸಮುದಾಯದ ಯುವಕರೇ ಹೆಚ್ಚು. ಇವರಿಗೆ ಅನ್ವಯವಾಗದ ಕಟ್ಟುಪಾಡುಗಳು ಹೆಣ್ಮಕ್ಕಳಿಗೆ ಮಾತ್ರ ಯಾಕೆ? ಪುಟಾಣಿ ಹೆಣ್ಣು ಮಕ್ಕಳ ನೃತ್ಯದಲ್ಲೂ ಅಶ್ಲೀಲತೆಯನ್ನು ಹುಡುಕುವುದು ಕ್ರೂರ ಮನಸ್ಥಿತಿ. ಅದೇ ರೀತಿ ಹಿಂದಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಜಾರಿಗೆ ಬಂದ ಬಹುಪತ್ನಿತ್ವವನ್ನು ಅಸ್ತ್ರವನ್ನಾಗಿಟ್ಟುಕೊಂಡು ಬಡ ಕುಟುಂಬದ ಅಸಾಯಕತೆಯನ್ನು ಬಳಸಿ ಒಂದಿಷ್ಟು ಹೆಣ್ಣು ಮಕ್ಕಳನ್ನು ಮದುವೆಯಾಗಿ ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡಿ ಅವರನ್ನು ಶೋಷಣೆ ಮಾಡುವುದು ಕೂಡಾ ಅಷ್ಟೇ ಕ್ರೂರತನ.

ಈ ಕುರಿತು ಮುಸ್ಲಿಂ ಸಮಾಜ ಹೋರಾಟ ನಡೆಸಬೇಕಾಗಿದೆ. ವಿಪರ್ಯಾಸವೆಂದರೆ ಮುಸ್ಲಿಂ ಸಮುದಾಯದಲ್ಲಿರುವ ಇಂಥಹಾ ಶೋಷಕ ಮನಸ್ಥಿತಿಗಳ ವಿರುದ್ಧ ಧ್ವನಿ ಎತ್ತುವ ಲೇಖಕಿ ಸಾರಾ ಅಬೂಬಕ್ಕರ್, ಕೆ. ಶೆರೀಫಾ, ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಜೊಹರಾ ನಿಸಾರ್ ಅಹಮ್ಮದ್, ಧರ್ಮ ವಿರೋಧಿಗಳಾಗಿ ಬಿಂಬಿತರಾಗುತ್ತಾರೆ. ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ. ಇದು ಸಲ್ಲ. ಬದಲಾಗಿ ಮುಸ್ಲಿಂ ಸಮುದಾಯದ ಸುಧಾರಣಾ ಸಂಘಟನೆಗಳು ಈ ಕುರಿತು ಚಿಂತಿಸಬೇಕಾಗಿದೆ. Sara-Abubakarಭಾರತದಲ್ಲಿ ಅಲ್ಪಸಂಖ್ಯಾತವಾಗಿರುವ ಮುಸ್ಲಿಂ ಸಮುದಾಯದ ಮೇಲೆ ಕೋಮುವಾದಿಗಳಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ನಿಜ. ಅದರ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಸಮುದಾಯದಲ್ಲಿ ಕೆಲ ಧಾರ್ಮಿಕ ಮೂಲಭೂತವಾದಿ ಹಾಗೂ ಅಜ್ಞಾನಿ ಮನಸ್ಥಿತಿಗಳಿಂದ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಮುಸ್ಲಿಂ ಸಮುದಾಯ ಜಾಗೃತಗೊಂಡು ಧ್ವನಿ ಎತ್ತಲೇಬೇಕಾಗ ಅವಶ್ಯಕತೆ ಇದೆ.