Category Archives: ಎಸ್.ಬಿ.ಜೋಗುರ

ರಾಜ್ಯದ ಬೆನ್ನ ಮೇಲೆ ಬರೆ ಎಳೆದ ಮಳೆರಾಯ..!


– ಡಾ.ಎಸ್.ಬಿ. ಜೋಗುರ


ನಮ್ಮ ರೈತರಲ್ಲಿ ಕೊನೆಗೂ ಮುಗಿಲು ನೋಡುವ ಭರವಸೆ ಹೊರಟುಹೋಯಿತು. ಮೋಡ ಗರಿಗರಿಯಾಗಿ ಕರಿಗಟ್ಟುವದನ್ನು ನೋಡನೋಡುತ್ತಲೇ ಮಳೆಗಾಲ ಮುಗಿದು ಹೋದಂತಾಯಿತು. ಎಲ್ಲೆಲ್ಲೂ ಬೇಸಿಗೆ ಮಳೆಗಾಲವನ್ನು ಅತಿಕ್ರಮಿಸಿರುವ ಅನುಭವವಾಗುತ್ತಿದೆ. ಆರಂಭದಲ್ಲಿ ಮೋಡ ಹೆಪ್ಪುಗಟ್ಟುವ ವಾತಾವರಣವಾದರೂ ಇತ್ತು ಈಗೀಗ ಎಲ್ಲವೂ ತೊಳೆದು ಶುಭ್ರವಾದಂತಿದೆ. ಮಳೆ ಬರುವ ಭರವಸೆಯೇ ಮಂಗ ಮಾಯವಾಗಿದೆ. ಮಳೆಗಾಲದ ಅನುಭವವನ್ನು ತಂದು ಕೊಡದ ರೀತಿಯಲ್ಲಿ ಈ ಬಾರಿಯ ಮಳೆಗಾಲ ಮೆಲ್ಲಗೆ ಸರಿಯುತ್ತಿದೆ. ಮುಂಗಾರಿನ ಪೀಕು ಕೈಗೆ ಬರುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅದಾಗಲೇ ಉತ್ತರ ಕರ್ನಾಟಕದ ಜನ ಈ ಬರದ ಬವಣೆಗೆ ಹೆದರಿ ಗುಳೆ ಹೋಗುತ್ತಿದ್ದಾರೆ. ದುಡಿಯಲಾಗದ ಮತ್ತು ತೀರಾ ವಯಸ್ಸಾದವರನ್ನು rural-karnataka-2ಊರಲ್ಲಿಯೇ ಬಿಟ್ಟು ಕೂಸು, ಕುನ್ನಿಗಳನ್ನು ಕಟ್ಟಿಕೊಂಡು ಊರು ತೊರೆಯುತ್ತಿದ್ದಾರೆ. ಜಾನುವಾರಗಳನ್ನು ಕೇಳುವವರಿಲ್ಲದೇ ಬಂದ ದುಡ್ಡಿಗೆ ಮಾರಿ ನಡೆದಿದ್ದಾರೆ. ಸಾಲ ಮಾಡಿ ತಂದು ಭೂಮಿಯ ಬಾಯಿಗೆ ಸುರಿದ ಬೀಜವೂ ಮರಳಿ ದಕ್ಕದ ಸ್ಥಿತಿಯಲ್ಲಿ ರೈತರಿದ್ದಾರೆ.

ರಾಜ್ಯದ ದಕ್ಷಿಣ ಭಾಗಕ್ಕಿಂತಲೂ ಕಡಿಮೆ ಪ್ರಮಾಣದ ಮಳೆ ಉತ್ತರ ಕರ್ನಾಟಕದಲ್ಲಾಗಿದೆ. ಈಗಾಗಲೇ ರಾಜ್ಯದ 126 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಯಾಗಿದೆ. ಮಿಕ್ಕ ಐವತ್ತು ತಾಲೂಕುಗಳ ಸ್ಥಿತಿಯೂ ಅಷ್ಟೇನು ಸುಖಕರವಿಲ್ಲ. ಆಹಾರಧಾನ್ಯಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ. ತೀರಾ ಅವಶ್ಯಕ ತರಕಾರಿಯಾಗಿರುವ ಈರುಳ್ಳಿಯ ದರವಂತೂ ನೂರರ ಆಸು ಪಾಸು ಹರಿದಾಡುತ್ತಿದೆ. ಅದರ ಬದಲಾಗಿ ಈರುಳ್ಳಿಯ ಪೇಸ್ಟ್ ಬಳಸಿ ಎಂದು ಸಲಹೆ ಕೊಡುವವರ ಪ್ರಮಾಣವೂ ಹೆಚ್ಚುತ್ತಿದೆ. ಹಿಂದೊಮ್ಮೆ ಹೀಗೆಯೇ ಈರುಳ್ಳಿಯ ದರ ಗಗನಕ್ಕೆ ತಲುಪಿದಾಗ ಆಗ ಕೇಂದ್ರ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು ಈರುಳ್ಳಿಯ ಬದಲಾಗಿ ಸೇಬು ಹಣ್ಣನ್ನು ಸೇವಿಸಲು ಕರೆನೀಡಿರುವದಿತ್ತು. ಆಗ ಸೇಬು ಹಣ್ಣಿನ ದರ ಈರುಳ್ಳಿಗಿಂತಲೂ ಕಡಿಮೆಯಿತ್ತು. rural-indiaನೀರಿಗಿಂತಲೂ ಬೀಯರ್ ದರ ಕಡಿಮೆ ಇದೆ ಎಂದಾಗ ಅದನ್ನು ನೀರಿಗೆ ಪರ್ಯಾಯವಾಗಿ ಕುಡಿದು ಇರಲು ಸಾಧ್ಯವಿದೆಯೇ..? ಈರುಳ್ಳಿಯ ಸ್ಥಾನವನ್ನು ಅದು ಮಾತ್ರ ತುಂಬಬಲ್ಲದೇ ಹೊರತು ಅದೇ ಜಾತಿಗೆ ಸೇರುವ ಬಳ್ಳೊಳ್ಳಿಯಿಂದಲೂ ಅದು ಸಾಧ್ಯವಿಲ್ಲ. ಕೇವಲ ಈರುಳ್ಳಿ ಮಾತ್ರವಲ್ಲ, ಇನ್ನೊಂದು ತಿಂಗಳಲ್ಲಿ ಬಹುತೇಕವಾಗಿ ಎಲ್ಲ ಆಹಾರ ಪದಾರ್ಥಗಳ ಬೆಲೆ ನಿಲುಕದ ಎತ್ತರ ತಲುಪುವದಂತೂ ಗ್ಯಾರಂಟಿ. ಇಲ್ಲಿ ಯಾವುದೇ ಕೃಷಿ ಪದಾರ್ಥಗಳ ದರ ಎಷ್ಟೇ ಹೆಚ್ಚಳವಾದರೂ ಅದರ ಲಾಭ ರೈತನನ್ನು ತಲುಪುವದಂತೂ ಸಾಧ್ಯವಿಲ್ಲ. ಕೊನೆಗೂ ಮಧ್ಯವರ್ತಿಗಳು ಮತ್ತು ಸಗಟು ಮಾರಾಟದಾರರೇ ಉದ್ದಾರವಾಗುವವರು.

ಮಳೆಯ ಪ್ರಮಾಣ ಈ ಬಾರಿ ತೀರಾ ಕಡಿಮೆಯಾಗಿದೆ. ಕರಾವಳಿ ತೀರದ ಜಿಲ್ಲೆಗಳಲ್ಲಿಯೂ ಈ ಬಾರಿ ಬರಗಾಲದ ಛಾಯೆ ತೋರುತ್ತಿದೆ. ಅಲ್ಲಿಯೂ ಕೆಲ ತಾಲೂಕುಗಳಲ್ಲಿ ಈಗಾಗಲೇ ಮಳೆಯ ಪ್ರಮಾಣ ವರ್ಷಕ್ಕಿಂತಲೂ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಂತೂ ಬಹುತೇಕ ಕಡೆಗಳಲ್ಲಿ ಅದರಲ್ಲೂ ಕೃಷಿಯನ್ನೇ ಪ್ರಧಾನವಾಗಿಸಿಕೊಂಡ ತಾಲೂಕುಗಳು ಅದಾಗಲೇ ಬರದ ಬವಣೆಗೆ ಸಿಲುಕಿವೆ. ಮಳೆಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಶುರುವಾಗಿ ತಿಂಗಳೇ ಕಳೆಯಲು ಬಂತು. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟ, ಕಲಬುರಗಿ, ಯಾದಗಿರ, ಗದಗ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಹಾವೇರಿ, ಧಾರವಾಡ, ರಾಯಚೂರ ಮುಂತಾದವುಗಳು ಅದಾಗಲೇ ಬರದ ಬವಣೆಗೆ ಸಿಲುಕಿರುವದಿದೆ. byahatti-nargund-kalasa-banduriಇನ್ನೊಂದೆಡೆ ಮಹದಾಯಿ ನದಿ ನೀರಿನ ವಿಷಯವಾಗಿ ಹೋರಾಟವೂ ನಡೆದಿದೆ. ಇಡೀ ಉತ್ತರ ಕರ್ನಾಟಕ ಒಂದೆಡೆ ಬರಗಾಲ ಇನ್ನೊಂದೆಡೆ ಕಳಸಾ ಬಂಡೂರಿ ನದಿ ಜೋಡಣೆಯ ವಿಷಯವಾಗಿ ಪ್ರತಿನಿತ್ಯ ಬಂದ್ ಮತ್ತು ಹರತಾಳದ ಸ್ಥಿತಿಯನ್ನು ಅನುಭವಿಸುತ್ತಿದೆ. ರಾಜ್ಯದಿಂದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ನಿಯೋಗವನ್ನು ಕೊಂಡೊಯ್ದಿದ್ದರೂ ಪ್ರಧಾನಿಯವರೊಂದಿಗಿನ ಮಾತುಕತೆಗಳು ಅಷ್ಟೊಂದು ಫಲಪ್ರದವಾದಂತಿಲ್ಲ ಪರಿಣಾಮವಾಗಿ ಹೋರಾಟದ ಕಾವು ಇನ್ನಷ್ಟು ತೀವ್ರವಾಗಿದೆ.

ಒಂದೆಡೆ ಬರದ ಬಿಸಿ, ಇನ್ನೊಂದೆಡೆ ನದಿ ನೀರಿನ ಹೋರಾಟದ ತೀವ್ರತೆ ಇವೆರಡರ ನಡುವೆ ಉತ್ತರ ಕರ್ನಾಟಕ ಕೊತಕೊತ ಕುದಿಯುವಂಥ ಸ್ಥಿತಿಯಲ್ಲಿದೆ.ಈ ಬಗೆಯ ವಾತಾವರಣದ ನಡುವೆ ನಮ್ಮ ರಾಜಕಾರಣಿಗಳು ತಮ್ಮ ತಮ್ಮ ಸಣ್ಣ ಪುಟ್ಟ ರಾಜಕೀಯ ಹಿತಾಸಕ್ತಿಯನ್ನು ಬದಿಗಿಟ್ಟು, ಪಕ್ಷಭೇದವನ್ನು ಮರೆತು ಸಮೈಕ್ಯರಾಗಿ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವ ಅಗತ್ಯವಿದೆ. ನೆರೆಯ ಗೋವಾ ಸರಕಾರ ಮಹದಾಯಿ ನದಿ ನೀರಿನ ವಿಷಯವಾಗಿ ತನ್ನ ಅದೇ ಹಳೆಯ ರಾಗವನ್ನೇ ಹಾಡುತ್ತಿದೆ. ಎಲ್ಲ ರೀತಿಯಿಂದಲೂ ಸದ್ಯದ ಆಡಳಿತರೂಢ ಸರಕಾರಕ್ಕೆ ಈ ಬಾರಿಯ ಬರಗಾಲ ಮತ್ತು ಈ ನದಿ ನೀರಿನ ಹೋರಾಟಗಳೆರಡೂ ನುಂಗಲಾರದ ತುತ್ತಾಗಿವೆ. ಬರಗಾಲ ನಿರ್ವಹಣೆ ಮತ್ತು ಈಗಾಗಲೇ ತೀವ್ರವಾಗಿ ನಡೆಯುತ್ತಿರುವ ಮಹದಾಯಿ ನದಿ ನೀರಿನ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುವವಲ್ಲಿಯೇ ಆಡಳಿತರೂಢ ಸರಕಾರದ ಯಶಸ್ಸು ಅಡಗಿದೆ.

ರಾಜ್ಯದಲ್ಲಿಯ ಬರಗಾಲದ ಸ್ಥಿತಿಯನ್ನು ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರಿಗೆ ವಿವರಿಸಿದ್ದಾರೆ. ಸುಮಾರು 10 ಸಾವಿರ ಕೋಟಿ ರೂಪಾಯಿಯ ಅಂದಾಜು ನಷ್ಟದ ಮೊತ್ತವನ್ನು ನೀಡಿರುವದಿದೆ. ಕೇಂದ್ರ ಸರಕಾರ ಕೇಳಿದಷ್ಟು ಪರಿಹಾರವಂತೂ ನೀಡಲು ಸಾಧ್ಯವಿಲ್ಲ. ಕೇಂದ್ರದ ಬರ ಅಧ್ಯಯನ ತಂಡಗಳ ಸಮೀಕ್ಷೆಯ ಮೇಲೆ ಕೊಡಮಾಡುವ ಮೊತ್ತದ ಪ್ರಮಾಣ ನಿಂತಿದೆ. ಈಗಾಗಲೇ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಕೆಲೆವೆಡೆ ವಿಧ್ಯುತ್ ಉತ್ಪಾದನೆಗೂ ತೊಂದರೆಯಾಗಲಿದೆ ಅದನ್ನು ಗಮನದಲ್ಲಿರಿಸಿಕೊಂಡೇ ಈಗಾಗಲೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. kalasa-banduriಸುಮಾರು 60 ಪ್ರತಿಶತದಷ್ಟು ಸಣ್ಣ ಪ್ರಮಾಣದ ನೀರಿನ ಮೂಲಗಳು ಬತ್ತತೊಡಗಿವೆ. ಪರಿಣಾಮವಾಗಿ ಕುಡಿಯುವ ನೀರಿಗಾಗಿಯೂ ಹಾಹಾಕಾರ ಆರಂಭವಾಗುವ ದಿನಗಳು ದೂರಿಲ್ಲ. ಬಿತ್ತನೆ ಮಾಡಿರುವ ಒಟ್ಟು ಪ್ರದೇಶದಲ್ಲಿ ಅರ್ಧದಷ್ಟು ಅದಾಗಲೇ ಬಿಲ್ಕುಲ್ ಏನೂ ಬೆಳೆ ಬರುವದಿಲ್ಲ ಎನ್ನುವ ಸ್ಥಿತಿ ತಲುಪಿ ಆಗಿದೆ. ಇನ್ನೊಂದರ್ಧ ಜೀವ ಹಿಡಿದು ಹನಿ ಹನಿ ನೀರಿಗಾಗಿಯೂ ಪರಿತಪಿಸಿ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಒಣ ಬೇಸಾಯವನ್ನು ಅವಲಂಬಿಸಿ, ಮಳೆಯನ್ನೇ ನೆಚ್ಚಿಕೊಂಡಿರುವ ರೈತರಂತೂ ಕಂಗಾಲಾಗಿದ್ದಾರೆ. ಈಗಾಗಲೇ ಸರಣಿ ರೂಪದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳಿಗೆ ಈ ಬರಗಾಲ ಇನ್ನಷ್ಟು ಚಾಲನೆ ಕೊಡದಿರಲಿ. ಅವರ ಬದುಕಿನಲ್ಲಿ ಭರವಸೆ ಮೂಡುವಂಥಾ ಹತ್ತಾರು ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಒಟ್ಟಂದವನ್ನು ಮಸಿ ನುಂಗಿತು ಎನ್ನುವ ಮಾತಿನಂತೆ ಸರಕಾರದ ಇಲ್ಲಿಯವರೆಗಿನ ಸಾಧನೆಗಳನ್ನು ಈ ಬರಗಾಲ ಮಸಿಯಾಗಿ ಮರೆಸಿಬಿಡುವಂತಾಗಬಾರದು ಎನ್ನುವದಾದರೆ ಈಗಿನಿಂದಲೇ ಸರಕಾರ ಜಾಗೃತವಾಗಿ ಬರ ಪರಿಹಾರ ಕಾಮಗಾರಿಯ ಕಾರ್ಯಕ್ರಮಗಳನ್ನು ಆದಷ್ಟು ಬೇಗನೇ ಚಾಲನೆಗೊಳಿಸಬೇಕು. ಇದೊಂದು ಆಹ್ವಾನವಾಗಿ ಸ್ವೀಕರಿಸಿ ಸರಕಾರ ಮತ್ತು ಜನತೆ ಕೈಗೂಡಿಸಿ ಬರಗಾಲದ ಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕು.

ಅಗಷ್ಟ ತಿಂಗಳು ಕಳೆಯಲು ಬಂದರೂ ಯಾವ ಜಿಲ್ಲೆಗಳಲ್ಲೂ ಸಾಕಷ್ಟು ಮಳೆಯಾಗಿಲ್ಲ. ರಾಜ್ಯದ ಯಾವ ನದಿಗಳೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. droughtಕೃಷಿ ಕಾರ್ಯಗಳು ದೂರ, ಕುಡಿಯಲು ನೀರು ಸಿಕ್ಕರೂ ಸಾಕು ಎನ್ನುವಂತಹ ಸ್ಥಿತಿ ಬರ ಪೀಡಿತ ತಾಲೂಕುಗಳಲ್ಲಿದೆ. ನೀರಿಗಾಗಿ ದಿನವಿಡೀ ಟ್ಯಾಂಕರ್‌ಗಳಿಗಾಗಿ ಕಾದು ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ನಿಸರ್ಗ ಮುನಿಸಿಕೊಂಡರೆ ಎಷ್ಟೆಲ್ಲಾ ವೈಪರೀತ್ಯಗಳು ಮತ್ತು ಮಾರಕ ಪರಿಣಾಮಗಳು ಸಾಧ್ಯ ಎನ್ನುವುದನ್ನು ಅನೇಕ ಬಾರಿ ಹೀಗೆ ಮತ್ತೆ ಮತ್ತೆ ಅನಾವೃಷ್ಟಿಯ ಮೂಲಕ ತೋರಿಸಿಕೊಟ್ಟರೂ ನಾವು ಪಾಠ ಕಲಿತಿಲ್ಲ. ಬರಗಾಲದ ವಿಷಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ವ್ಯವಸ್ಥಿತವಾಗಿ ನಿರ್ವಹಿಸಲ್ಪಟ್ಟರೆ ಅರ್ಧ ಸಮಸ್ಯೆಗಳನ್ನು ನಿಯಂತ್ರಿಸಿದಂತೆ. ಆ ದಿಸೆಯಲ್ಲಿ ಸರಕಾರ ಮತ್ತು ನಾವೆಲ್ಲರೂ ಸನ್ನದ್ಧರಾಗಬೇಕಿದೆ.

ನಿಮ್ಮ ದುಬಾರಿ ಕಾರು, ಬೈಕಿಗಿಂತ ಜೀವ ಅಮೂಲ್ಯ..


– ಡಾ.ಎಸ್.ಬಿ. ಜೋಗುರ


ನಾನು ಚಿಕ್ಕವನಾಗಿದ್ದಾಗ ಮನೆಯಿಂದ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗಲು ಅಪ್ಪನಿಂದ ಸೈಕಲ್ ಬಾಡಿಗೆಗಾಗಿ ದುಡ್ಡು ಕೇಳುತ್ತಿದ್ದೆ. ಆಗ ಅ ಬಾಡಿಗೆ ಘಂಟೆಗೆ ಎಂಟಾಣೆ. ಕಿಸೆಯಿಂದ ಐವತ್ತು ಪೈಸೆ ತೆಗೆದುಕೊಡುತ್ತಲೇ ಅಪ್ಪ ತುಸು ಸಿಟ್ಟಿನಿಂದ ಸಾವಕಾಶ ಹೋಗು ಅದು ಸೈಕಲ್ ಅಲ್ಲ, ಸಾಯೋಕಾಲ ಅಂತಿದ್ದ. ಅದು ಯಾಕೆ ಹಾಗೆ ಅಂತಿದ್ದ ಅನ್ನೋದು ನಾವು ಬೆಳೀತಾ ಹೋದ ಹಾಗೆ ಗೊತ್ತಾಯಿತು. ಹುಂಬತನದ ಚಾಲನೆ ಎಷ್ಟು ಅಪಾಯಕಾರಿ ಎನ್ನುವುದು ನನ್ನ ಜೊತೆಗಿರುವ ಸ್ನೇಹಿತರುಗಳೇ ಕೈಕಾಲು ಮುರಿದುಕೊಂಡಾಗ, ಜೀವ ಕಳೆದುಕೊಂಡಾಗ ನಮ್ಮಪ್ಪ ಹೇಳುತ್ತಿದ್ದimages ಮಾತು ಅದೆಷ್ಟು ಸತ್ಯವಾಗಿತ್ತು ಎಂದು ಈಗಲೂ ನನಗೆ ಅನಿಸುವದಿದೆ. ನಮ್ಮ ಮಕ್ಕಳಿಗೆ ಅದೇ ಮಾತನ್ನು ನಾವೀಗ ರಿಪೀಟ್ ಮಾಡಿ ಬೈಕ್ ಸ್ಪೀಡ್ ಓಡಿಸಬೇಡಪ್ಪಾ ಟ್ರಾಫಿಕ್ ತುಂಬಾ ಇರುತ್ತದೆ ಎಂದಾಗ ಅವನು ನೆಪಕ್ಕೆ ಹುಂ ಎಂದು ಮತ್ತೆ ತನ್ನದೇ ಗತಿಯಲ್ಲಿ ಅದನ್ನು ಓಡಿಸಿಕೊಂಡು ಹೋಗುತ್ತಾನೆ. ಈಗ ಜಮಾನಾ ತುಂಬಾ ಸ್ಪೀಡ್ ಆಗಿದೆ. ನನಗೆ ನೌಕರಿ ಬಂದ ಮೇಲೆಯೂ ಆರು ತಿಂಗಳು ನಾನು ಸೈಕಲ್ ಮೇಲೆ ಕಾಲೇಜಿಗೆ ಹೋಗಿರುವದಿದೆ. ಆ ನಂತರ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟರ್ ನಂತರ ಈಗ ನಾನು ಓಡಿಸುತ್ತಿರುವ ಬೈಕ್ ಕೊಂಡಿರುವದು. ಈಗಿನ ಸಂತಾನ ಹಾಗಲ್ಲ ಇನ್ನೂ ಮೀಸೆ ಮೂಡುವ ಮೂದಲೇ ಎಲ್ಲವನ್ನು ಮಾಡಿ ಮುಗಿಸುವ ಆತುರಗಾರರಾಗಿರುವ ಪರಿಣಾಮವೇ ಹೆಚ್ಚೆಚ್ಚು ಅನಾಹುತಗಳು ಜರುಗುತ್ತಿವೆ. ಈಗಿನ ಯುವಕರು ಇನ್ನೂ ಓದುವ ಅವಧಿಯಲ್ಲಿ ಬೈಕು, ಕಾರು ಹತ್ತಬೆಕೆನ್ನುವವರು. ಕೆಲ ಬಾರಿ ಯುವಕರು ಬೈಕ್ ಓಡಿಸುವದನ್ನು ಕಂಡಾಗ ತುಂಬಾ ಸಿಟ್ಟು ಬರುತ್ತದೆ ಅದರ ಬೆನ್ನಲ್ಲೇ ಕನಿಕರವೂ ಬರುತ್ತದೆ. ಸಿಟ್ಟಿಗೆ ಕಾರಣ ಅವರು ಹಾವು ಹೊರಳಾಡುವಂತೆ ಅದನ್ನು ಯರ್ರಾಬಿರ್ರಿ ಓಡಿಸಿ, ಎಲ್ಲೋ ಒಂದೆಡೆ ಹೊಡೆದು ತಮಗೋ ಇಲ್ಲಾ ಗುದ್ದಿಸಿಕೊಂಡವನಿಗೋ ಭಯಂಕರ ಪ್ರಮಾಣದ ಹಾನಿ ಉಂಟು ಮಾಡಿ, ಕೆಲವೊಮ್ಮೆ ಜೀವಹಾನಿಗೂ ಕಾರಣವಾಗುವ ರೀತಿಯ ಬಗ್ಗೆ ನನಗೆ ಅಪಾರವಾದ ಸಿಟ್ಟಿದೆ. ಇನ್ನು ಕನಿಕರ ಯಾಕೆಂದರೆ ಇರೋದೇ ಒಂದೋ ಹೆಚ್ಚೆಂದರೆ ಎರಡು ಮಕ್ಕಳಿರೋ ಕಾಲದಲ್ಲಿ ಸಿನೇಮಾ ಶೂಟಿಂಗಲ್ಲಿ ತೊಡಗಿರುವ ಹಾಗೆ, ಇಲ್ಲವೇ ರೇಸಲ್ಲಿ ಭಾಗವಹಿಸಿರುವವರ ಹಾಗೆ ಬೈಕ್ ಓಡಿಸಿ ಅನಾಹುತ ಮಾಡಿಕೊಂಡು ಹೆತ್ತವರನ್ನು ಜೀವನ ಪರ್ಯಂತ ನರಳಿಸುವದಿದೆಯಲ್ಲ, ಆ ಬಗ್ಗೆ ಕನಿಕರವಿದೆ. ನಗರ ಪ್ರದೇಶಗಳಲ್ಲಿಯೂ ಇವರು ಓಡಿಸುವ ಬೈಕ್ ವೇಗದ ಮಿತಿಗೆ ಒಳಪಟ್ಟ್ತಿರುವದಿಲ್ಲ. ತಲೆಯ ಮೇಲೆ ಹೆಲ್ಮೆಟ್ ಕೂಡಾ ಇರುವದಿಲ್ಲ. ಹಾಗಿರುವಾಗಲೂ ಪೋಲಿಸರ ಎದುರಲ್ಲೇ ಇವರು ರಾಜಾರೋಷವಾಗಿ ಭಂವ್ ಎಂದು ಓಡಿಸಿಕೊಂಡು ಹೋಗುವ ರೀತಿಗೆ ಅನೇಕ ಬಾರಿ ನಾನೇ ಬೆಚ್ಚಿ ಬಿದ್ದಿರುವೆ. ಇನ್ನು ಅತ್ಯಂತ ವಿಕಾರವಾಗಿರುವ ಹಾರ್ನ್ ಹಾಕಿಸಿ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಖಾಸ್ ಆಗಿ ಹುಡುಗಿಯರಿರುವ ಜಾಗೆಯಲ್ಲಿ ಅದನ್ನು ಹಾರ್ನ್ ಮಾಡುತ್ತಾ ಸಾಗುವ ಕ್ರಮವಂತೂ ಇನ್ನಷ್ಟು ವಿಕೃತ. ಇಂಥಾ ಅಸಂಬದ್ಧವಾಗಿರುವ ಹಾರ್ನ್ ಇರುವ ವಾಹನಗಳನ್ನು ಕೂಡಲೇ ಸೀಜ್ ಮಾಡುವಂಥಾ ಕ್ರಮಗಳು ಜರುಗಬೇಕು. ಇನ್ನೊಂದು ಸಂಗತಿ ನಿಮಗೆ ತಿಳಿದಿರಬಹುದು. ನಮ್ಮ ದೇಶದಲ್ಲಿ ಅತೀ ಹೆಚ್ಚು ನಡೆಯುವ ಅಪಘಾತಗಳಲ್ಲಿ ಈ ಬೈಕ್ ಗಳದ್ದೇ ಸಿಂಹಪಾಲು, ಅದರ ನಂತರ ಕಾರುಗಳದ್ದು. ನಾವು ಓಡಿಸುವ ವಾಹನ ಹೇಳೀ ಕೇಳೀ ಒಂದು ಯಂತ್ರ ಅದಕ್ಕೆ ಯಾವುದೇ ಬಗೆಯ ಸೆಟಿಮೆಂಟ್ ಗಳಿರುವದಿಲ್ಲ. ಆದರೆ ಅದನ್ನು ಕೊಡಿಸಿದವರಿಗೆ, ಹೆತ್ತವರಿಗೆ ನಿಮ್ಮ ಬಗ್ಗೆ ಅಪಾರವಾದ ಕಾಳಜಿಗಳಿವೆ, ಕನಸುಗಳಿವೆ, ಭರವಸೆಗಳಿವೆ. ಅವೆಲ್ಲವುಗಳನ್ನು ಥ್ರಿಲ್ ಗಾಗಿ ಬಲಿಕೊಟ್ಟು ನೀವು ಬಲಿಯಾಗಬೇಡಿ. ತಾಳ್ಮೆಯಿರದ ಯಾವುದೇ ಸವಾರಿ ಸುಖಕರವಲ್ಲ. ಒಂದೇ ಒಂದು ನಿಮಿಷದ ನಿಧಾನ ನಿಮ್ಮ ಜೀವವನ್ನು ಕಾಯಿಬಲ್ಲದು ಎನ್ನುವ ಎಚ್ಚರದ ನಡುವೆ ವಾಹನವನ್ನು ಚಲಿಸಬೇಕು.

ನಮ್ಮ ದೇಶದಲ್ಲಿ ನಡೆಯುವ ರಸ್ತೆ ಅಪಘಾತಗಳ ಬಗೆಗಿನ ಅಂಕಿ ಅಂಶಗಳನ್ನು ನೋಡಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. 2013 ರ ವರ್ಷ, ಕೇವಲ ಆ ಒಂದೇ ವರ್ಷದಲ್ಲಿ  1,37,000 ಜನ ರಸ್ತೆ ಅಪಘಾತದಲ್ಲಿ ಸತ್ತಿರುವದಿದೆ. ಈ ಪ್ರಮಾಣ ಯಾವುದೇ ಮಾಹಾಯುದ್ಧದಲ್ಲಿ ಮಡಿದವರ ಸಂಖ್ಯೆಗಿಂತಲೂ ಜಾಸ್ತಿಯೆಂಬುದು. ಪ್ರತಿನಿತ್ಯ ಸುಮಾರು 16 ಮಕ್ಕಳು ಈ ರಸ್ತೆ ಅಪಘಾತಕ್ಕೆ ಅಕಾಲಿಕ ಸಾವನ್ನಪ್ಪುತ್ತಾರೆ. ದೆಹಲಿಯಲ್ಲಿ ಪ್ರತಿನಿತ್ಯ ರಸ್ತೆ ಅಪಘಾತದಲ್ಲಿ ಐದು ಸಾವುಗಳು ಸಂಭವಿಸುತ್ತವೆ. ಭಾರತದಲ್ಲಿ ಪ್ರತಿ ನಿಮಿಷಕ್ಕೆ ಒಂದು ರಸ್ತೆ ಅಪಘಾತದ ಸಾವು ಸಂಭವಿಸುತ್ತದೆ. ಕುಡಿದು ಗಾಡಿ ಓಡಿಸುವದೇ ಮುಖ್ಯ ಕಾರಣವಾಗಿದೆ ಎನ್ನಲಾಗುತ್ತದೆ. ಪ್ರತಿ ಘಂಟೆಗೆ ನಮ್ಮ ದೇಶದಲ್ಲಿ 16 ಜನರು ಈ ಭೀಕರ ರಸ್ತೆ ಅಪಘಾತದಲ್ಲಿ ಮರಣ ಹೊಂದುವದಿದೆ. ಈ ಎಲ್ಲ ಬಗೆಯ ಒಟ್ಟು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳದ್ದೇ 25 ಪ್ರತಿಶತ ಪಾಲಿದೆ. ಪ್ರತಿನಿತ್ಯ 20 ವರ್ಷ ವಯೋಮಿತಿಯ ಒಳಗಿನ 14 ಮಕ್ಕಳು ಈ ರಸ್ತೆ ಅಪಘಾತದಲ್ಲಿ ಅಸುನೀಗುತ್ತವೆ. ದಿನಾಲು ಹೆಚ್ಚೂ ಕಡಿಮೆsklar-accident 1214 ರಷ್ಟು ರಸ್ತೆ ಅಪಘಾತಗಳು ಜರಗುತ್ತವೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಜರಗುವ ನಗರಗಳನ್ನು ಹೀಗೆ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪ್ರಥಮ ಸ್ಥಾನದಲ್ಲಿ ದೆಹಲಿ ನಗರ ನಂತರ ಚೆನೈ, ಜೈಪುರ, ಬೆಂಗಳೂರು, ಮುಂಬೈ, ಕಾನಪುರ, ಲಖನೌ, ಆಗ್ರಾ, ಹೈದರಾಬಾದ, ಪುಣೆ ಎಂದು ಹತ್ತು ಪ್ರಮುಖ ನಗರಗಳನ್ನು ಪಟ್ಟಿ ಮಾಡಲಾಗಿದೆ. ಎಡಬದಿಯಿಂದ ಓವರ ಟೇಕ್ ಮಾಡುವುದು, ಡಿಮ್- ಡಿಪ್ ಮಾಡದೇ ಗಾಡಿ ಓಡಿಸುವದು, ಹೆಚ್ಚು ಪ್ರತಿಫಲನ ಇರುವ ಬಲ್ಬುಗಳನ್ನು ಕಾನೂನಿನ ನಿಯಮ ಉಲ್ಲಂಘಿಸಿ ಬಳಸುವುದು ಇವುಗಳ ಜೊತೆಯಲ್ಲಿ ವಾಹನ ಚಲಿಸುವಾಗ ಮೊಬೈಲಿನಲ್ಲಿ ಮಾತನಾಡುತ್ತಾ, ಏನನ್ನೋ ತಿನ್ನುತ್ತಾ, ಕುಡಿಯುತ್ತಾ ಓಡಿಸುವದರಿಂದಾಗಿಯೂ ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳು ಜರುಗುತ್ತಿವೆ. ಜೊತೆಗೆ ಯರ್ರಾಬಿರ್ರಿಯಾಗಿ ಬೈಕ್ ಓಡಿಸುವವರ ಪ್ರಮಾಣ ಈಗಂತೂ ಹೆಚ್ಚಾಗಿ ಕಂಡು ಬರುತ್ತದೆ ಅದರ ಜೊತೆಗೆ ಶಾಸನಬದ್ಧವಾಗಿ ಓಡಿಸೋ ವಯಸ್ಸು ಬಾರದಿದ್ದರೂ ಅಪ್ಪನ ಬೈಕ್ ಹತ್ತಿ ಸಿಕ್ಕಾಪಟ್ಟೆ ವೇಗದಿಂದ ಓಡಿಸುವ ವಾಯುಪುತ್ರರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲವನ್ನು ಸಂಬಧಿಸಿದವರು ಕಟ್ಟು ನಿಟ್ಟಾಗಿ ನಿಯಂತ್ರಿಸಬೇಕು. ಕಾರುಗಳ ವೇಗವನ್ನು ಕ್ಯಾಮರಾ ಮೂಲಕ ಸೆರೆಹಿಡಿದು ಶಿಕ್ಷೆ ವಿಧಿಸುವಂತೆ, ನಗರ ಪ್ರದೇಶಗಳಲ್ಲಿ ಬೈಕುಗಳ ವೇಗದ ಮಿತಿಮೀರಿದರೆ ಶಿಕ್ಷೆ ಕಡ್ಡಾಯ ಮಾಡುವ ಜರೂರತ್ತಿದೆ. ಈ ಪಡ್ಡೆ ಹುಡುಗರ ಹುಂಬತನದ ಸವಾರಿಯ ನಡುವೆ ವಯಸ್ಸಾದವರು, ಮಹಿಳೆಯರು, ಮಕ್ಕಳು ನೆಮ್ಮದಿಯಿಂದ ತಿರುಗಾಡುವಂತಿಲ್ಲ. ಇವರೇನೋ ಗುದ್ದಿ ಹೋಗುತ್ತಾರೆ, ಪಾಪ ತೊಂದರೆ ಅನುಭವಿಸುವವರು ಬೇರೆಯೇ ಆಗಿರುತ್ತಾರೆ. ಈ ಬಗ್ಗೆ ಟ್ರಾಫಿಕ್ ಪೋಲಿಸರು ತುಂಬಾ ಜಾಗೃತರಾಗಿ ಕಾರ್ಯನಿರ್ವಹಿಸಬೇಕಿದೆ. ನಿಮ್ಮದೇ ನಜರಲಿ ತಲೆಯ ಮೇಲೆ ಹೆಲ್ಮೆಟ್ ಇಲ್ಲದೇ ಭಂವ್ ಎಂದು ಸ್ಪೀಡ್ ಲಿಮಿಟ್ ಮೀರಿ ಧಿಮಾಕಿನಿಂದ ಗಾಡಿ ಓಡಿಸಿಕೊಂಡು ಹೋಗುವಂಥಾ ಯುವಕರನ್ನು ನೀವು ತಕ್ಷಣ ಹಿಡಿದು ಶಿಕ್ಷೆ ಕೊಡಿ. ಆಗ ಅವನಂಥಾ ಹತ್ತಾರು ಜನ ಪಾಠ ಕಲಿಯುತ್ತಾರೆ. ಅದು ಯಾವುದೇ ವಾಹನವಿರಲಿ ಡ್ರೈವಿಂಗ್ ಮಾಡುವಾಗ ತುಂಬಾ ಜಗೃತವಾಗಿರಬೇಕು. ಬೇಕಾ ಬಿಟ್ಟಿಯಾಗಿ ಓಡಿಸುವದು, ತೀರಾ ವೇಗವಾಗಿ ಓಡಿಸುವದು, ನಿಯಂತ್ರಣ ಮೀರಿ ಓಡಿಸುವದು ಯಾರಿಗೂ ಹಿತಕರವಲ್ಲ. ನಿಮ್ಮ ಕಾರು, ಬೈಕು ಎಷ್ಟೇ ಬೆಲೆ ಬಾಳುವದಾಗಿರಲಿ ಆದರೆ ನಿಮ್ಮ ಜೀವ ಮಾತ್ರ ಅವೆಲ್ಲವುಗಳಿಗಿಂತಲೂ ಅಮೂಲ್ಯ ಎನ್ನುವ ಸತ್ಯವನ್ನು ಮರೆಯಬೇಡಿ.

ಹಸಿದ ಹೊಟ್ಟೆ ಅನ್ನವನ್ನು ಮಾತ್ರ ಹುಡುಕುತ್ತದೆ


– ಡಾ.ಎಸ್.ಬಿ. ಜೋಗುರ 


“ಅನ್ನ ಭಾಗ್ಯ” ಯೋಜನೆಯ ಬಗ್ಗೆ ಅನೇಕ ಹೊಟ್ಟೆ ತುಂಬಿದವರು ಮಾತನಾಡಿದ್ದಾಯಿತು. ಹಾಗೆಯೇ ಜನ ಸೋಮಾರಿಗಳಾಗುತ್ತಾರೆ ಎನ್ನುವ ಕಳಕಳಿಯನ್ನೂ ತೋರಿದ್ದಾಯಿತು. ಸೋಮಾರಿಗಳಾಗಿದ್ದವರು ಎಲ್ಲ ಭಾಗ್ಯಗಳನ್ನು ಮೀರಿಯೂ ಸೋಮಾರಿಗಳಾಗಿರುತ್ತಾರೆ. ನಿರಂತರವಾಗಿ ದುಡಿಯುವವರು ಎಲ್ಲ ವರ್ಗಗಳಲ್ಲಿ ಇರುವ ಹಾಗೆ, ಎಲ್ಲ ಸಂದರ್ಭಗಳಲ್ಲಿಯೂ ಸೋಮಾರಿಗಳಾಗಿ ಬದುಕುವವರು ಕೂಡಾ ಎಲ್ಲ ವರ್ಗಗಳಲ್ಲಿ ಇದ್ದೇ ಇದ್ದಾರೆ. ಈ ಎರಡೂ ಬಗೆಯ ಜನ ಸಮೂಹಗಳು ಸರ್ಕಾರದ ಯಾವುದೇ ಸೌಲಭ್ಯಗಳಿಗೆ ಸೀಮಿತವಾಗಿಲ್ಲ. ಚರಿತ್ರೆಯುದ್ಧಕ್ಕೂ ಆಹಾರ ಧಾನ್ಯಗಳ ಬೆಲೆ ಮತ್ತು ಪೂರೈಕೆ ಅನೇಕ ಬಗೆಯ ನಾಗರಿಕ ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿರುವ ಸತ್ಯವನ್ನು ನಾವಾರೂ ಮರೆಯಬಾರದು. 18 ನೇ ಶತಮಾನದಲ್ಲಿ ಜರುಗಿದ ಮ್ಯಾಡ್ರಿಡ್ ಹಿಂಸೆ, ಪ್ರೆಂಚ್ ಕದನಗಳು ಆಹಾರದ ಹಾಹಾಕಾರವನ್ನೇ ಆಧರಿಸಿದ್ದವು. ರೋಮ್ ಮತ್ತು ಈಜಿಪ್ತಗಳಲ್ಲಿಯೂ ಈ ಬ್ರೆಡ್ ಗಾಗಿ ಹೋರಾಟಗಳು ನಡೆದಿವೆ. ಆಹಾರದ ಕೊರತೆ ಮತ್ತು ಬೆಲೆ ಏರಿಕೆ ಹಿಂಸೆಗೆ ಎಡೆ ಮಾಡಿಕೊಟ್ಟಿರುವದಿದೆ. 2008 ರ ಸಂದರ್ಭದಲ್ಲಿ ಆಹಾರಕ್ಕಾಗಿ ಕದನಗಳು, ಹಿಂಸೆಗಳು ಬಾಂಗ್ಲಾದೇಶದಲ್ಲಿ, ಹೈತಿಯಲ್ಲಿ ಇಂಡೋನೇಶಿಯಾದಲ್ಲಿ, ಉಜಬೆಕಿಸ್ಥಾನದಲ್ಲಿ, ಬೊಲಿವಿಯಾದಲ್ಲಿ, ಮೊಜಾಂಬಿಕ್ ಮತ್ತು ಕೆಮರೂನ್ ದಲ್ಲಿ ಜರುಗಿರುವದನ್ನು ಮರೆಯುವದಾದರೂ ಹೇಗೆ..? ಆಗ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವದಿದೆ. india-poverty-hungerಆಹಾರಧಾನ್ಯಗಳ ಬೆಲೆಗಳು ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ಪ್ರಭಾವಿಸುವ, ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಜಾಗೃತವಾಗಿ ಆಹಾರದ ಬೆಲೆಗಳನ್ನು ಕಡಿಮೆ ಮಾಡುವಲ್ಲಿ, ನಿಯಂತ್ರಿಸುವಲ್ಲಿ ಹರಸಾಹಸ ಮಾಡುತ್ತಲಿವೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಜುಟ್ಟಕ್ಕೆ ಮಲ್ಲಿಗೆ ಹೂ ಎನ್ನುವ ಮಾತು ಸಾರ್ವತ್ರಿಕವಲ್ಲ. ಹಸಿದವನ ಮುಂದೆ ಅನ್ನವನ್ನಿಡಬೇಕೇ ಹೊರತು ವೇದಾಂತವನ್ನಲ್ಲ ಎನ್ನುವ ಮಾತು ಮಾತ್ರ ಸಾರ್ವತ್ರಿಕ.

2008 ರ ಮೇ ತಿಂಗಳಲ್ಲಿ ರೋಮ್ ದಲ್ಲಿ ಜರುಗಿದ ವಿಶ್ವ ಆಹಾರ ಸಮ್ಮೇಳನದಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ನಾಯಕರು ತಮ್ಮಲ್ಲಿಯ ಆಹಾರ ಸಮಸ್ಯೆಯನ್ನು ಕುರಿತು ಮಾತನಾಡಿದರು. ಎಲ್ಲರಿಗಿಂತಲೂ ವಿಶಿಷ್ಟವಾದ ರೀತಿಯಲ್ಲಿ ಮತ್ತು ಗಮನ ಸೆಳೆಯುವ ಹಾಗೆ ಮಾತನಾಡಿದವರು ಜಿಂಬ್ವಾಬೆಯ ಅಧ್ಯಕ್ಷ ಮುಗಾಬೆ. ತನ್ನ ಜನರ ಹಸಿವು ಮತ್ತು ಅಲ್ಲಿಯ ಆಹಾರ ಸಮಸ್ಯೆಯ ಬಗ್ಗೆ ವಸ್ತುನಿಷ್ಟವಾಗಿ ಮಾತನಾಡಿ ಇಡೀ ವಿಶ್ವದ ಗಮನ ಸೆಳೆದರು. ಭಾರತ ಮತ್ತು ಚೈನಾದಂತ ರಾಷ್ಟ್ರಗಳು ತಮ್ಮ ದೇಶಕ್ಕೆ ಬೇಕಾಗಬಹುದಾದ ಆಹಾರವನ್ನು ಉತ್ಪಾದಿಸುವಲ್ಲಿ ಸಮರ್ಥರಾಗುವ ಜೊತೆಯಲ್ಲಿ ಸ್ವಾವಲಂಬನೆಯನ್ನೂ ಸಾಧಿಸಿಕೊಂಡವು. ಅಂದ ಮಾತ್ರಕ್ಕೆ ಭಾರತ ಮತ್ತು ಚೈನಾಗಳಲ್ಲಿ ಹಸಿವು, ಬಡತನ ಇಲ್ಲವೆಂದಲ್ಲ. ಒಂದು ದೇಶದ ರಾಜಕೀಯ ಸುಭದ್ರತೆಯಲ್ಲಿ ಆಹಾರ ಉತ್ಪಾದನೆಗಳ ಬೆಲೆ ಇಳಿಕೆ ಇಲ್ಲವೇ ಬಡವರಿಗಾಗಿ ಈ ಬಗೆಯ ಯೋಜನೆಗಳು ತೀರಾ ಅವಶ್ಯಕ. ಇನ್ನು ಅನ್ನಭಾಗ್ಯ ಎನ್ನುವುದು ಯಾವುದೋ ಒಂದು ಐಷಾರಾಮಿ ಯೋಜನೆಗೆ ಸಂಬಂಧಿಸಿಲ್ಲ. ಸರಕಾರ ಒಂದೊಮ್ಮೆ ಬಡವರಿಗೆ ಒಂದಷ್ಟು ಮೈಸೂರ ಸ್ಯಾಂಡಲ್ ಸೋಪ್ ಉಚಿತವಾಗಿ ಕೊಡುತ್ತಿದ್ದರೆ ಅಪಸ್ವರ ಎತ್ತಬಹುದು, ರೇಷ್ಮೆ ಸೀರೆ ಕೊಡುತ್ತಿದ್ದರೆ ಆಗಲೂ ಅಪಸ್ವರ ಎತ್ತಬಹುದು ಅನ್ನ Streetchildrenಎನ್ನುವುದು ಪಾಪಿ ಪೇಟ್ ಕಾ ಸವಾಲಿಗೆ ಸಂಬಂಧಿಸಿದೆ. ನಮ್ಮಲ್ಲಿ ಇಂದಿಗೂ ಅಪೌಷ್ಟಿಕತೆಯಿಂದ ಸಾಯುವ ಮಕ್ಕಳ ಪ್ರಮಾಣ ಕಡಿಮೆಯಿಲ್ಲ. ಅಪೌಷ್ಟಿಕತೆ ಎನ್ನುವುದು ಆಹಾರದ ಕೊರತೆಯಿಂದ ಉಧ್ಬವವಾಗಬಹುದಾದ ಸಮಸ್ಯೆ.

ಅಪೌಷ್ಟಿಕತೆಯಲ್ಲಿ ಇಡಿಯಾಗಿ ಎರಡು ಪ್ರಕಾರಗಳಿವೆ ಒಂದನೆಯದು ಪ್ರೋಟೀನ್ ಎನರ್ಜಿ ಮ್ಯಾಲ್‌ನ್ಯುಟ್ರಿಶನ್ ಅಂದರೆ ಸೇವಿಸುವ ಕ್ಯಾಲೊರಿ ಮತ್ತು ಪ್ರೋಟಿನ್ ಕೊರತೆಯಿಂದಾಗಿ ಸೃಷ್ಟಿಯಾಗುವ ಅಪೌಷ್ಟಿಕತೆ. ಇನ್ನೊಂದು ಮೈಕ್ರೊನ್ಯುಟ್ರಿಯಂಟ್ ಡೆಫಿಸಿಯನ್ಸಿ ಅಂದರೆ ವಿಟಾಮಿನ್ ಮತ್ತು ಮಿನರಲ್ ಗಳ ಕೊರತೆಯಿಂದ ಉದ್ಭವವಾಗುವ ಅಪೌಷ್ಟಿಕತೆ. ಮೊದಲನೆಯದು ಶರೀರದ ಬೆಳವಣಿಗೆಯಲ್ಲಿ ಬಹಳ ಮುಖ್ಯ ಅದರ ಕೊರತೆಯುಂಟಾದರೆ ಶರೀರ ಕೃಷವಾಗತೊಡಗುತ್ತದೆ ಅದು ಬೇರೆ ಬೇರೆ ತೊಂದರೆಗಳಿಗೂ ಕಾರಣವಾಗುತ್ತದೆ. ಸಂಯುಕ್ತರಾಷ್ಟ್ರ ಸಂಘದ ವರದಿಯಂತೆ 2012-2014 ರ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಸುಮಾರು 805 ಮಿಲಿಯನ್ ಜನತೆ ಈ ಬಗೆಯ ಅಪೌಷ್ಟಿಕತೆಯ ಕೊರತೆಯಿಂದ ಬಳಲುವವರಿದ್ದಾರೆ. ಪ್ರತಿ 9 ಜನರಲ್ಲಿ ಒಬ್ಬಾತ ಆಹಾರ ಕೊರತೆಯಿಂದ ಬಳಲುವವನಿದ್ದಾನೆ. ಈ 805 ಮಿಲಿಯನ್ ಜನಸಂಖ್ಯೆಯಲ್ಲಿ 790 ಮಿಲಿಯನ್ ಜನರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಯೇ ಇದ್ದಾರೆ. ಸಬ್ ಸಹರಾನ್ ಆಫ್ರಿಕಾ ಮತ್ತು ಆಫ್ರಿಕಾ, ಏಶ್ಯಾ ಅದರಲ್ಲೂ ದಕ್ಷಿಣ ಏಷ್ಯಾದ ಭಾಗಗಳಲ್ಲಿ ಆಹಾರದ ಕೊರತೆ ತೀವ್ರವಾಗಿದೆ. 2012 ರ ಸಂದರ್ಭದಲ್ಲಿ ಜಾಗತಿಕ ಹಸಿವಿನ ಸೂಚ್ಯಾಂಕ ಮಾಡಿದ ಸಮೀಕ್ಷೆಯಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗಮನಹರಿಸಿ ಅದು ಅಧ್ಯಯನ ಮಾಡಿತ್ತು. ಒಂದನೆಯದು ಸತ್ವಭರಿತ ಆಹಾರದ ಕೊರತೆಯ ಜನಸಮೂಹದ ಪ್ರಮಾಣ, ಎರಡನೆಯದು ಶಿಶುವಿನ ಮ್ರಣ ಪ್ರಮಾಣ, ಮೂರನೇಯದು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ. cooked-riceಈ ಮೂರು ಸಂಗತಿಗಳನ್ನು ಆದರಿಸಿ ಮಾಡಲಾದ ಸಮೀಕ್ಷೆಯ ಪ್ರಕಾರ 79 ರಾಷ್ಟ್ರಗಳ ಪೈಕಿ ಭಾರತ 65 ನೇ ಸ್ಥಾನದಲ್ಲಿರುವ ಬಗ್ಗೆ ವರದಿಯಾಗಿದೆ. 2008 ರ ಸಂದರ್ಭದಲ್ಲಿ ಭಾರತೀಯ ರಾಜ್ಯಗಳ ಹಸಿವಿನ ಸೂಚ್ಯಾಂಕದ ಪ್ರಕಾರ ದೇಶದ ಬೇರೆ ಬೇರೆ ರಾಜ್ಯಗಳ ಸ್ಥಿತಿ ಬೇರೆ ಬೇರೆಯಾಗಿದೆ. ದೇಶದ ಸುಮಾರು 12 ರಾಜ್ಯಗಳು ಆಹಾರದ ವಿಷಯವಾಗಿ ಸಂಕಷ್ಟದಲ್ಲಿವೆ. ಅದರಲ್ಲೂ ಮಧ್ಯಪ್ರದೇಶ ತೀರ ಗಂಭೀರವಾದ ಸ್ಥಿತಿಯಲ್ಲಿದೆ ಎಂದು ವರದಿ ಆಗಿರುವದಿದೆ. ಸತ್ವಭರಿತ ಆಹಾರ ಮತ್ತು ಅಭಿವೃದ್ಧಿ ಸೂಚ್ಯಾಂಕದ ವಿಷಯದಲ್ಲಿ ದೇಶದ 12 ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಅದರಲ್ಲಿ ಹತ್ತು ರಾಜ್ಯಗಳ ಶ್ರೇಣಿ ಹೀಗಿದೆ. ಮೊದಲ ಸ್ಥಾನದಲ್ಲಿ ಕೇರಳ, ಎರಡನೆಯ ಸ್ಥಾನ ಹರಿಯಾಣಾ, ಮೂರನೇಯ ಸ್ಥಾನ ತಮಿಳುನಾಡು, ನಾಲ್ಕನೇಯ ಸ್ಥಾನದಲ್ಲಿ ಗುಜರಾತ, ಐದನೇಯ ಸ್ಥಾನದಲ್ಲಿ ಮಹಾರಾಷ್ಟ್ರ, ಆರನೇಯ ಸ್ಥಾನದಲ್ಲಿ ಕರ್ನಾಟಕ, ಏಳನೇ ಸ್ಥಾನದಲ್ಲಿ ಆಂದ್ರಪ್ರದೇಶ, ಎಂಟನೆಯ ಸ್ಥಾನದಲ್ಲಿ ಆಸ್ಸಾಂ, ಒಂಬತ್ತನೇಯ ಸ್ಥಾನದಲ್ಲಿ ಓಡಿಸಾ ಹತ್ತನೇಯ ಸ್ಥಾನದಲ್ಲಿ ರಾಜಸ್ಥಾನ ಇತ್ತು. ಆದರೆ ಯುನಿಸೆಫ್ನ ರಾಪಿಡ್ ಸರ್ವೆ ಆಫ್ ಚಿಲ್ಡ್ರನ್ ಎನ್ನುವ ಸಂಸ್ಥೆ ದೇಶವ್ಯಾಪಿ ಕೈಗೊಂಡ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 2013-14 ರಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಈಗಲೂ ಸುಮರು 53 ಪ್ರತಿಶತ 5 ವರ್ಷದಳಗೊಳ ಹೆಣ್ಣು ಮಕ್ಕಳು ಕಡಿಮೆ ತೂಕದವರಾಗಿದ್ದಾರೆ. ಉತ್ತರಪ್ರದೇಶದಲ್ಲಿ ಸುಮರು 50 ಪ್ರತಿಶತ ಮಕ್ಕಳ ಬೆಳವಣಿಗೆ ಕೃಶವಾಗಿದೆ ಎನ್ನುವ ಅಂಶವನ್ನು ಹೊರಹಾಕಿದೆ ಜೊತೆಗೆ ಗ್ರಮೀಣ ಭಾಗಗಳಲ್ಲಿ ನಗರ ಪ್ರದೇಶಗಳಿಗಿಂತಲೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪ್ರಮಾಣ ಹೆಚ್ಚಿಗಿದೆ. ಗ್ರಾಮೀಣ ಭಾಗಗಳಲ್ಲಿ ಸುಮಾರು 42 ಪ್ರತಿಶತ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುವವರಿದ್ದಾರೆ.

ಆಹಾರದ ವಿಷಯವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಮೂರು ರೀತಿಯ ಸಮೂಹಗಳನ್ನು ಗುರುತಿಸಿರುವದಿದೆ ಒಂದನೆಯದಾಗಿhunger04-061 ವರ್ಷವಿಡೀ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದಿರುವ ಕುಟುಂಬಗಳು, ಎರಡನೆಯದಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ತೊಂದರೆಯನ್ನು ಎದುರಿಸುವ ಕುಟುಂಬಗಳು, ಮೂರನೆಯದು ವರ್ಷದುದ್ದಕ್ಕೂ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದದೇ ಇರುವವರು. ಇನ್ನು ಈ ಮೇಲಿನ ಮೂರು ಪ್ರಕಾರಗಳು ದೇಶದ ಉದ್ದಗಲಕ್ಕೂ ಕಂಡು ಬರುವ ಸಮೂಹಗಳು. ಮೊದಲನೆಯ ಸಮೂಹಗಳಿಗೆ ಈ ಆಹಾರ ಸುಭದ್ರತೆಯ ಪ್ರಶ್ನೆಯೇ ಬರುವದಿಲ್ಲ. ಇನ್ನು ಎರಡನೆಯವರಿಗೆ ಸಂಕಟ ಬಂದಾಗ ವೆಂಕಟರಮಣ. ನಿಜವಾಗಿಯೂ ಆಹಾರದ ಸುಭದ್ರತೆ ಮತ್ತು ಹಕ್ಕಿನ ಪ್ರಶ್ನೆ ಇದ್ದದ್ದೇ ಮೂರನೇಯ ಜನಸಮೂಹದವರಿಗಾಗಿ. ಇವರು ಹಸಿವು ಮತ್ತು ಕೊರತೆಗಳ ನಡುವೆಯೇ ದಿನದೂಡುವವರು. ಎರಡನೆಯ ಮತ್ತು ಮೂರನೇಯ ಪ್ರರೂಪದ ಕುಟುಂಬದ ವಿಷಯಗಳ ಪ್ರಶ್ನೆ ಬಂದರೆ ವರ್ಷದ ಕೆಲವು ತಿಂಗಳುಗಳಲ್ಲಿ ಆಹಾರ ಧಾನ್ಯಗಳ ಕೊರತೆಯ ವಿಷಯವಾಗಿ ಪಶ್ಚಿಮ ಬಂಗಾಲ ಮೊದಲ ಸ್ಥಾನದಲ್ಲಿದ್ದರೆ, ವರ್ಷವಿಡೀ ಆಹಾರ ಧಾನ್ಯಗಳ ಕೊರತೆ ಎದುರಿಸುವ ರಾಜ್ಯಗಳ ಸಾಲಲ್ಲಿ ಆಸ್ಸಾಂ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪೌಷ್ಟಿಕತೆಯ ಕೊರತೆ ಮತ್ತು ಕಡಿಮೆ ತೂಕದ ಮಕ್ಕಳ ವಿಷಯವಾಗಿ ಮಾತನಾಡುವದಾದರೆ ಭಾರತದಲ್ಲಿ 217 ಮಿಲಿಯನ ಜನಸಂಖ್ಯೆ ಹೆಚ್ಚೂ ಕಡಿಮೆ ಇಂಡೊನೇಷಿಯಾದ ಒಟ್ಟು ಜನಸಂಖೆಯಷ್ಟು ಜನ ನಮ್ಮಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವ ಬಗ್ಗೆ ಸಮೀಕ್ಷೆಯಲ್ಲಿ ವರದಿಯಾಗಿದೆ. ಹಸಿರು ಕ್ರಾಂತಿಗಿಂತಲೂ ಮೊದಲು ದೇಶದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಜನ ಅಪಾರವಾಗಿ ಸಾಯುತ್ತಿದ್ದರು. ಆಗ ಮರಣ ಪ್ರಮಾಣ ಸಹಜವಾಗಿ ಹೆಚ್ಚಾಗುತ್ತಿತ್ತು. ಈಗ ಅಂಥ ಬರಗಾಲಗಳಿಲ್ಲ. ಆದರೆ ಈ ಬಗೆಯ ಸತ್ವಭರಿತ ಆಹಾರದ ಕೊರತೆಯಿಂದಾಗಿ ಸಾಯುವವರ ಪ್ರಮಾಣ ಆಗಿನ ಬರಗಾಲಗಳಿಗಿಂತಲೂ ಹೆಚ್ಚಾಗಿದೆ. child-labourಇದನ್ನು ಗಮನದಲ್ಲಿಟ್ಟುಕೊಂಡೇ ಜನೆವರಿ 2011 ರ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ರವರು ‘ನಮ್ಮಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಎನ್ನುವದು ರಾಷ್ಟ್ರ ತಲೆತಗ್ಗಿಸುವಂತಿದೆ’ ಎಂದಿದ್ದರು.

ಹಾಗೆ ನೋಡಿದರೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಇರಲಿ ಇಲ್ಲವೇ ಅನ್ನ ಭಾಗ್ಯ ಯೋಜನೆ ಇರಲಿ ನಮಗಿಂತಲೂ ಮೊದಲು ಆರಂಭಿಸಿದವರು ನೆರೆಯ ತಮಿಳುನಾಡು. ನಮ್ಮಲ್ಲಿ ಈಗ ಆಹಾರ ಉತ್ಪಾದನೆಯ ಕೊರತೆಯಿಲ್ಲ. ಸಾಕಷ್ಟು ಆಹಾರಧಾನ್ಯವನ್ನು ಸಂಗ್ರಹಿಸಿಡಲಾಗದೇ ಹಾಳಾಗುವದನ್ನು ನಾವೇ ನೋಡಿದ್ದೇವೆ. ಹುಳ ಹಿಡಿದು ಹಾಳಾಗಿ ತಿಪ್ಪೆ ಸೇರುವ ಬದಲು ಬಡ ಜನತೆಯ ಹೊಟ್ಟೆ ಸೇರುವದರಲ್ಲಿಯೇ ಒಂದರ್ಥವಿದೆ ಎನಿಸುವದಿಲ್ಲವೆ..? ಸಾಕಷ್ಟು ನಿರರ್ಥಕವಾದ ಕಾರಣಗಳಿಗಾಗಿ ಕೊಟಿಗಟ್ಟಲೆ ದುಡ್ಡು ಸುರಿಯುವಾಗ, ನಮ್ಮದೇ ಬಡ ಜನರಿಗೆ ಅನ್ನವನ್ನು ನೀಡುವ ಯೋಜನೆ ಅದು ಹೇಗೆ ವ್ಯರ್ಥವಾಗಿ ಕಂಡಿತೊ ಗೊತ್ತಿಲ್ಲ. ಕೆಲ ಬಾರಿಯಾದರೂ ನಾವು ರಾಜಕೀಯದಿಂದ ದೂರ ನಿಂತು ಯೋಚಿಸುವ, ಮಾತನಾಡುವ ಅಗತ್ಯವಿದೆ ಎನಿಸುವದರಲ್ಲಿಯೇ ನಮ್ಮ ಸಾಕ್ಷರತೆಗೆ ಬೆಲೆಯಿದೆ.

ಒಕ್ಕಲು ಮಗ ಬಿಕ್ಕದಂತೆ ಕಾಯಬೇಕು


– ಡಾ.ಎಸ್.ಬಿ. ಜೋಗುರ


ಭಾರತದ ಕೃಷಿಯಲ್ಲಿ 1990 ರ ದಶಕದ ನಂತರ ಸಾಕಷ್ಟು ಸ್ಥಿತ್ಯಂತರಗಳು ಉಂಟಾದವು. ಮುಖ್ಯವಾಗಿ ಆರ್ಥಿಕ ಉದಾರೀಕರಣದ ಹಿನ್ನೆಲೆಯಲ್ಲಿ ಆರಂಭವಾದ ಬದಲಾವಣೆಗಳು ನಮ್ಮ ಕೃಷಿಯ ಮೇಲೂ ಪ್ರಭಾವ ಬೀರಿದವು. ತೊಡಗಿಸಿರುವ ಹಣಕ್ಕಿಂತಲೂ ಕಡಿಮೆ ಆದಾಯ, ಸಾಲ, ಒಕ್ಕಲುತನ ಮಾಡಲು ತಗಲುವ ಖರ್ಚು ವೆಚ್ಚ, ಕೃಷಿ ಸಾಲ ಸೌಲಭ್ಯಗಳ ಅಸಮರ್ಪಕ ವಿತರಣೆ, ಮಾರುಕಟ್ಟೆಯ ಅಹಿತಕರ ವಾತಾವರಣ, ದುರ್ಬರವಾದ ಖಾಸಗಿ ಬದುಕು ಮುಂತಾವುಗಳು ಸಂಯುಕ್ತವಾಗಿ ರೈತನ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿವೆ. ಸೂಕ್ತ ಸಮಯಕ್ಕೆ ಸಿಗಬೇಕಾಗದ ನೆರವು ಕೂಡಾ ಆತನಿಗೆ ಒದಗದ ಕಾರಣ ಆತ್ಮಹತ್ಯೆಯಂಥಾ ತೀರ್ಮಾನವನ್ನು farmers-suicideಆತ ತೆಗೆದುಕೊಳ್ಳುತ್ತಿದ್ದಾನೆ. ಆತ್ಮಹತ್ಯೆ ಯಾವುದೇ ಸಮಸ್ಯೆಗಾಗಲೀ, ಯಾರಿಗೇ ಆಗಲೀ ಪರಿಹಾರವಂತೂ ಆಗುವದಿಲ್ಲ. ಕರ್ನಾಟಕದಲ್ಲಿ ಕಳೆದ ಕೆಲ ವರ್ಷಗಳಿಂದ ಈ ಕಬ್ಬು ಬೆಳೆದ ರೈತರ ಸ್ಥಿತಿ ಮಾತ್ರ ಮತ್ತೆ ಮತ್ತೆ ಅನೇಕ ಬಗೆಯ ಸಂದಿಗ್ಧಗಳನ್ನು ಸೃಷ್ಟಿ ಮಾಡುತ್ತಿದೆ. ಸರಕಾರ ಯಾವುದೇ ಇರಲಿ ರೈತರ ಸಮಸ್ಯೆಗಳು ಮಾತ್ರ ನಿರಂತರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವದಂತೂ ಹೌದು. ಒಕ್ಕಲುತನದಲ್ಲಿ ಯಾವ ಸುಖವೂ ಇಲ್ಲ ಎನ್ನುವ ಮತು ನಾನು ಹುಟ್ಟಿದಾಗಿನಿಂದಲೂ ಕೇಳುತ್ತಲೇ ಬೆಳೆದಿರುವೆ. ಬರುವ ಇಳುವರಿ ಬರೀ ಲಾಗೋಡಿಗೂ [ಕೃಷಿ ಖರ್ಚು ವೆಚ್ಚ] ಸಾಲುವದಿಲ್ಲ ಎನ್ನುವ ಮಾತು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರಿಗೆಲ್ಲರಿಗೂ ತಿಳಿದಿದೆ. ಒಂದು ಕ್ವಿಂಟಲ್ ಹತ್ತಿ ಬೆಳೆಯಲು ಒಬ್ಬ ರೈತ 6000 ರೂಪಾಯಿ ಖರ್ಚು ಮಾಡಿದರೆ, ಅವನಿಗೆ ಇಳುವರಿ ಬಂದ ಮೇಲೆ ಒಂದು ಕ್ವಿಂಟಲ್ ಗೆ 4000 ರೂಪಾಯಿ ದರ ನಿಗದಿ ಮಾಡಿದರೆ ಆತನ ಮನಸ್ಥಿತಿ ಏನಾಗಬೇಡ..? ಬೇರೆ ಬೇರೆ ಮೂಲಗಳಿಲ್ಲದೇ ಕೇವಲ ಕೃಷಿ ಇಳುವರಿಯನ್ನೇ ಅವಲಂಬಿಸಿರುವ ರೈತ ಸಹಜವಾಗಿ ತನ್ನ ಕುಟುಂಬದ ಇತರೆ ಖರ್ಚು ವೆಚ್ಚಗಳಿಗಾಗಿ ಸಾಲ ಮಾಡುವುದು ಸಾಮಾನ್ಯ ಸ್ಥಿತಿ. ಇದ್ದಕ್ಕಿದ್ದಂತೆ ಬಂದೆರಗುವ ಬರಗಾಲ, ಇಳುವರಿ ಬಂದಾಗ ಉಂಟಾಗುವ ಬೆಲೆ ಕುಸಿತ, ಅವೈಜ್ಞಾನಿಕವಾದ ಬೆಂಬಲ ಬೆಲೆ, ಸಾಲಗಾರರ ಕಿರಕಿರಿ ಈ ಮುಂತಾದ ಕಾರಣಗಳಿಂದಾಗಿ ರೈತ ಆತ್ಮಹತ್ಯೆಯಂಥಾ ತೀರ್ಮಾನ ತೆಗೆದುಕೊಳ್ಳುವದಿದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ಮಹಾರಾಷ್ಟ್ರದಲ್ಲಿ ಜರುಗುವದಿದೆ. ಅದಕ್ಕಿರುವ ಕಾರಣಗಳು ಮಾತ್ರ ಸಾರ್ವತ್ರಿಕ. 2014 ರಲ್ಲಿ ಜರುಗಿದ ಒಟ್ಟು 1109 ರೈತರ ಆತ್ಮಹತ್ಯೆಗಳಲ್ಲಿ ಸುಮಾರು 986 ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲಿಯೆ ಜರುಗಿರುವದಿತ್ತು. ಅದರ ನಂತರದ ಸ್ಥಾನವನ್ನು ಆಂಧ್ರಪ್ರದೇಶ ಮತ್ತು ಜಾರ್ಖಂಡ ರಾಜ್ಯಗಳು ಪ್ರತಿನಿಧಿಸುವದಿತ್ತು. ಈ ಬಗೆಯ ಸಂಗತಿಗಳ ಪಟ್ಟಿಯಲ್ಲಿ ರಾಜ್ಯವೊಂದರ ಹೆಸರು ಇಲ್ಲದಿರುವದೇ ಉಚಿತ. ಆದರೆ ಈಗೀಗ ಕರ್ನಾಟÀಕದಲ್ಲಿ ರೈತರ ಆತ್ಮಹತ್ಯೆಗಳು ಸುದ್ಧಿಯಾಗುತ್ತಿವೆ. farmer-land-acquisition-2ಈ ವರ್ಷದ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಅನೇಕ ರೈತರು ಸರಣಿ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದು ಹೀಗೇ ಮುಂದುವರೆದರೆ ಕರ್ನಾಟಕ ಮಹಾರಾಷ್ಟ್ರವನ್ನು ಈ ವಿಷಯವಾಗಿ ಹಿಂದಿಕ್ಕಬಹುದು. ರೈತರಲ್ಲಿ ಈ ಆತ್ಮಹತ್ಯೆ ಎನ್ನುವುದು ಸಮೂಹಸನ್ನಿಯಾಗಿ ಮಾರ್ಪಡುವಂತೆ ತೋರುತ್ತಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಕಾಲಿಕ ನೆರವಿನ ಅಗತ್ಯವಿದೆ. ನಮ್ಮ ದೇಶದಲ್ಲಿ 2012 ರಲ್ಲಿ ಒಟ್ಟು 1246 ರೈತರ ಆತ್ಮಹತ್ಯೆಯ ಪ್ರಕರಣಗಳು ವರದಿಯಾದರೆ, 2013 ರಲ್ಲಿ 879 ಆತ್ಮಹತ್ಯೆಗಳು ವರದಿಯಾಗಿದ್ದವು. ನೆರೆಯ ರಾಜ್ಯಗಳೊಂದಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ಹಿಂದೆಂದಿಗಿಂತಲೂ ಕಡಿಮೆಯೇ.. ಆದರೆ ಈಗಿನ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ರಾಜ್ಯ ಸರಕಾರ ಎಚ್ಚರ ವಹಿಸುವ ಅಗತ್ಯವಿದೆ.

1990 ರ ದಶಕದ ನಂತರ ಆರಂಭವಾದ ಆರ್ಥಿಕ ಸುಧಾರಣೆಯ ನೀತಿಗಳು ಮತ್ತು ಜಾಗತೀಕರಣದ ಹಾವಳಿಯೂ ತೀವ್ರವಾಗಿ ಕೃಷಿ ಮತ್ತು ಅದರ ಉತ್ಪಾದನೆಗಳ ಮೇಲೆ ಪ್ರಭಾವ ಬೀರಲು ಆರಂಭಿಸಿದವು. ಮುಕ್ತ ಮಾರುಕಟ್ಟೆಯ ಹೆಸರಲ್ಲಿ ರೈತರ ಬೆಳೆಗೆ ಯೋಗ್ಯ ದರ ದೊರೆಯದ ಸ್ಥಿತಿ ನಿರ್ಮಾಣವಾಯಿತು. ಆಂಧ್ರಪ್ರದೇಶದಲ್ಲಂತೂ ಈ ಮಾತು ಬಹುತೇಕ ಸತ್ಯ. ಆಂದ್ರದ ನೆಲ್ಲೂರು ಭಾಗದಲ್ಲಿ ಬಹುತೇಕ ಕೃಷಿಕರು ವಾಣಿಜ್ಯ ಬೆಳೆಯನ್ನು ಬೆಳೆಯುವ ಭರಾಟೆಗೆ ಇಳಿದರು ಆ ಬೆಳೆಗೆ ಪೂರಕವಾಗಿ ನಿಲ್ಲಬಹುದಾದ ದುಬಾರಿ ಬೆಲೆಯ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಅವರ ನಿರೀಕ್ಷೆಗೆ ತಕ್ಕಂತೆ ಇಳುವರಿ ಬಂತಾದರೂ ಸೂಕ್ತವಾದ ಬೆಲೆ ಬಾರದ ಸ್ಥಿತಿ ನಿರ್ಮಾಣವಾಯಿತು. ಆರ್ಥಿಕ ಸುಧಾರೀಕರಣ ಎನ್ನುವುದು ರೈತರ ಪಾಲಿಗೆ ವರವಾಗದೇ ಶಾಪವಾಗಿ ಪರಿಣಮಿಸಿತು. ಪಂಜಾಬ, ಮಹಾರಾಷ್ಟ್ರ, ಆಂದ್ರಪ್ರದೇಶ,ಕರ್ನಾಟಕ ಮುಂತಾದ ಕಡೆಗಳಲ್ಲಿ ಕೇಳಿ ಬರುವ ರೈತರ ಆತ್ಮಹತ್ಯೆಯ ಹಿಂದಿನ ಕಾರಣ ಹೆಚ್ಚು ಖರ್ಚು, ಹೆಚ್ಚು ಇಳುವರಿ ಆದರೆ ಕಡಿಮೆ ಆದಾಯವೇ ಆಗಿದೆ. ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳ ಮಾಲಿಕರು ಬಾಕಿ ಹಣವನ್ನು ನೀಡದೇ ಸತಾಯಿಸುತ್ತಿರುವದು ರೈತರು ಅನುಭವಿಸುತ್ತಿರುವ ಇತರೆ ಸಮಸ್ಯೆಗಳ ಜೊತೆಯಲ್ಲಿ ಒಂದು ವಿಶಿಷ್ಟ ಸಮಸ್ಯೆ.ಉಳ್ಳವರ ಬಳಿ ಯಪ್ಪಾ farmersಯಣ್ಣಾ ಅಂದು ಸಾಲ ಪಡೆದು ಕಬ್ಬು ಬೆಳೆದು ಅದನ್ನು ಜ್ವಾಕಿ ಜತ್ತನ ಮಾಡಿ ಬೆಳೆದ ಇಳುವರಿಯನ್ನು ಸಕ್ಕರೆ ಕಾರ್ಖಾನೆಗಳಿಗೆ ಸುರುಹಿದರೆ ಹಣವೇ ಕೊಡದ ಸ್ಥಿತಿ ಇರುವಾಗ ಮಾಡಿದ ಖರ್ಚಿಗೆ ಎಲ್ಲಿಂದ ಸುರಿಯುವದು..? ಆ ರೈತನನ್ನು ಅವಲಂಬಿಸಿ ಒಂದು ಕುಟುಂಬವೇ ಇದೆ ಅವರ ಖರ್ಚು ವೆಚ್ಚಗಳಿಗೆ ಆತ ಮತ್ತೆ ಸಾಲ ಮಾಡಬೇಕು. ಒಟ್ಟಿನಲ್ಲಿ ಸಾಲದ ಸಹವಾಸದಲ್ಲಿ ಅವನನ್ನು ಇಟ್ಟು ವೇದಿಕೆಗಳಲ್ಲಿ ‘ಉಳುವಾ ಯೋಗಿಯ ನೋಡಲ್ಲಿ’ ಎಂದು ಹಾಡುವುದೇ ದೊಡ್ಡ ಮುಜುಗರ ಎನಿಸುವದಿಲ್ಲವೆ..? ಒಬ್ಬ ರೈತ ತಾನೇ ಕಷ್ಟ ಪಟ್ಟು ಬೆಳೆದ ಕಬ್ಬಿನ ಪಡಕ್ಕೆ ಬೆಂಕಿ ಇಡುವ ಮಟ್ಟದ ಕಠೋರ ಮನ:ಸ್ಥಿತಿಯನ್ನು ತಲುಪುತ್ತಾನೆ ಎಂದರೆ ಅವನ ಪಡಪಾಟಲು ಹೇಗಿರಬಹುದು..? ರೈತರಿಗೆ ಕೃಷಿ ಸಾಂಸ್ಥಿಕ ಮೂಲಗಳಿಂದ ಹಣÀಕಾಸಿನ ನೆರವನ್ನು ಸಕಾಲದಲ್ಲಿ ಒದಗಿಸುವದು ಮಾತ್ರ ಸಾಲದು ಅದರ ಜೊತೆಯಲ್ಲಿಯೇ ಕೃಷಿ ಎನ್ನುವುದು ಒಂದು ಲಾಭದಾಯಕ ಉದ್ಯೋಗ ಎನ್ನುವ ಖಾತ್ರಿ ಮನ:ಸ್ಥಿತಿಯನ್ನು ರೂಪಿಸುವಂತಾಗಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆಯುವದಿದೆ ಎನ್ನುವದನ್ನು ಗಮನದಲ್ಲಿರಿಸಿಕೊಂಡು ಆಳುವ ಪಕ್ಷಗಳು ಮತ್ತು ವಿರೋಧಿ ಪಕ್ಷಗಳು ಒಂದು ತಾತ್ಕಾಲಿಕ ತಾಲೀಮು ಮಾಡಿಕೊಂಡು ರೈತರ ಸಂಕಷ್ಟಗಳ ಬಗ್ಗೆ ಯೋಚಿಸದೇ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಶಾಶ್ವತವಾದ ಯೋಜನೆಯನ್ನು ರೂಪಿಸಿ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ರೈತನನ್ನು, rural-karnataka-2ಅವನ ಬದುಕು ಮತ್ತು ವೃತ್ತಿಯನ್ನು ರಾಜಕೀಯ ಸಂಗತಿಗಳಿಗೆ ಸಿಲುಕಿಸಿದೇ ಒಂದು ಪ್ರಾಮಾಣಿಕವಾದ ಕಳಕಳಿಯಿಂದ ರೈತನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಒಂದು ನೈತಿಕ ಇಚ್ಛಾ ಶಕ್ತಿಯನ್ನು ಮೆರೆಯುವ ಅವಶ್ಯಕತೆಯಿದೆ.

ಕೃಷಿಯನ್ನು ಸಾಧ್ಯವಾದಷ್ಟು ನೈಸರ್ಗಿಕ ಅವಲಂಬನೆಯಿಂದ ವಿಚಲಿತಗೊಳಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯಗಳು ತಮ್ಮಲ್ಲಿಯ ನೀರನ್ನು ಅತ್ಯಂತ ವೈಜ್ಞಾನಿಕವಾಗಿ ಬಳಸಿಕೊಳ್ಳುವ, ಕೃಷಿಗೆ ಪೂರಕವಾಗಿ ವಿನಿಯೋಗವಾಗುವ ಹಾಗೆ ಕ್ರಮ ಕೈಗೊಳ್ಳಬೇಕು. ಇನ್ನು ಕೃಷಿಗೆ ಕೆಲ ಸಾಂಸ್ಥಿಕ ಮೂಲಗಳಿಂದ ಸಾಲವನ್ನು ಒದಗಿಸುವಾಗ ದೊಡ್ಡ ರೈತರು ಮತ್ತು ಸಣ್ಣ ರೈತರ ನಡುವೆ ತಾರತಮ್ಯ ಎಸಗದೇ ಎಲ್ಲ ಬಡ ರೈತರಿಗೂ ಸಾಂಸ್ಥಿಕ ಮೂಲಗಳ ಸಾಲವನ್ನು ಸಮನಾಗಿ ಒದಗಿಸುವಲ್ಲಿ ನೆರವಾಗÀಬೇಕು. ಜೊತೆಗೆ ಸಾಲ ನೀಡಿದ ಕಾರಣಕ್ಕೆ ಸರಿಯಗಿ ಬಳಕೆ ಯಾಗುವಂತೆ ನಿಗಾ ವಹಿಸಬೇಕು. ಬೆಳೆ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರೈತರಿಗೆ ಕೃಷಿ ಇಲಾಖೆಯ ಮೂಲಕ ಇಲ್ಲವೇ ಸಂಬಂಧಿಸಿದ ಇಲಾಖೆಯ ಮೂಲಕ ತಿಳುವಳಿಕೆಯನ್ನು ನೀಡಬೇಕು. rural-indiaಸಣ್ಣ ಹಿಡುವಳಿದಾರರು ಕೂಡಾ ಲಾಭದಾಯಕ ಕೃಷಿಯಲ್ಲಿ ತೊಡಗಲು ಅನುಕೂಲವಾಗುವ ಹಾಗೆ ನೆರವು ನೀಡಬೇಕು. ರೈತರಿಗೆ ಕೃಷಿಗೆ ಪೂರಕವಾಗಿರುವ ಇತರೆ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸುವ ಕೌಶಲ್ಯಗಳನ್ನು ಕಲಿಸಬೇಕು. ಬರಗಾಲದ ಸಂದರ್ಭದಲ್ಲಿ ಆ ಬಗೆಯ ವಿದ್ಯೆ ಅವರ ಕುಟುಂಬವನ್ನು ಸಲಹುವಂತಾಗಬೇಕು. ತೊಂದರೆಗೆ ಸಿಲುಕಿದ ರೈತರನ್ನು ಗುರುತಿಸಿ ಅವರು ಆತ್ಮ ಹತ್ಯೆ ಮಾಡಿಕೊಂಡ ನಂತರ ಪರಿಹಾರ ಕೊಡುವ ಬದಲಾಗಿ ಆತ ಇನ್ನೂ ಬದುಕಿರುವಾಗಲೇ ಆತ ಸಮಸ್ಯೆಯ ಸುಳಿಯಿಂದ ಹೊರಬರುವಲ್ಲಿ ನೆರವಾಗಬೇಕು. ಈ ಸಂಗತಿಗಳ ಜೊತೆಯಲ್ಲಿ ಕೆಲವು ಸಂಘ-ಸಂಸ್ಥೆಗಳು ಬರಗಾಲದ ಸಂದರ್ಭದಲ್ಲಿ ಆ ಭಾಗದ ರೈತರ ಕುಟುಂಬಗಳಿಗೆ ನೆರವಾಗುವ ಮೂಲಕ ಅವರ ಮನೋಸ್ಥೈರ್ಯವನ್ನು ವೃದ್ಧಿಸಬೇಕು. ಹೀಗೆ ರೈತರ ಬಗೆಗಿನ ಒಂದಷ್ಟು ಪ್ರಾಮಾಣಿಕ ಕಳಕಳಿಯಿಂದ ಈ ಬಗೆಯ ಆತ್ಮಹತ್ಯೆಗಳನ್ನು ನಾವು ತಡೆಯಬಹುದಾಗಿದೆ. ಒಕ್ಕಲು ಮಗ ಬಿಕ್ಕದಂತೆ ಕಾಯುವ ಹೊಣೆಗಾರಿಕೆ ಸರಕಾರದ ಮೇಲಿರುವಂತೆ ಸಮಾಜದ ಪ್ರತಿಯೊಂದು ಸಂಘ-ಸಂಸ್ಥೆಯ ಮೇಲೂ ಇದೆ.

ಆಮ್ ಆದ್ಮಿಗೆ ನೂರು ದಿನ ತುಂಬಿತು


– ಡಾ.ಎಸ್.ಬಿ. ಜೋಗುರ


ಅನೇಕ ಬಗೆಯ ಗುದಮುರಗೆಗಳ ನಡುವೆಯೇ ಆಮ್ ಆದ್ಮಿ ಪಾರ್ಟಿ ನೂರು ದಿನಗಳನ್ನು ಪೂರ್ಣಗೊಳಿಸಿತು. ದೆಹಲಿಯ ಚುನಾವಣೆಯ ಸಂದರ್ಭದಲ್ಲಿ ನಾನು ದೆಹಲಿಯಲ್ಲಿಯೇ ಇದ್ದೆ. ಯಾರನ್ನು ಕೇಳಿದರೂ ‘ಇಸ್ ಬಾರ್ ಕೇಜ್ರಿವಾಲಾ’ ಅನ್ನುವವರು. ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನ ಯುವಕರು ಕೂಡಾ ಸಮೂಹ ಸನ್ನಿಗೊಳಗಾದವರಂತೆ ಕೇಜ್ರಿವಾಲಾ ಬಗ್ಗೆ ಮಾತನಾಡುವದಿತ್ತು. ನಾನು ಹತ್ತಿಳಿದ ಹತ್ತಾರು ರಿಕ್ಷಾವಾಲಗಳನ್ನು ಹೀಗೇ ಇಲೆಕ್ಷನ್ ಬಗ್ಗೆ ಕೇಳಿದರೆ ಅವರೂ ಕೂಡಾ ಬಹುತೇಕವಾಗಿ ‘ಕೇಜ್ರಿವಾಲಾ ಹೀ ಆಯೇಗಾ’ ಎನ್ನುತ್ತಿದ್ದರು. ಫ಼ಲಿತಾಂಶ ಹೊರಬಂದ ಸಂದರ್ಭದಲ್ಲಿಯೂ ನಾನು ಅಲ್ಲಿಯೇ ಇದ್ದೆ. feb142015kejriwalಎಲ್ಲವೂ ಜನರಾಡಿಕೊಂಡಂತೆಯೇ ಆಗಿತ್ತು. ಅಪಾರ ಪ್ರಮಾಣದ ಜನಮನ್ನಣೆಯ ನಡುವೆ ಕೇಜ್ರಿವಾಲಾ ಮತ್ತೊಮ್ಮೆ ದೆಹಲಿಯ ಮುಖ್ಯ ಮಂತ್ರಿಯಾಗಿದ್ದರು. ನಂತರದ ದಿನಗಳನ್ನು ಕೂಡಾ ನಾನು ಗಮನಿಸಿದ್ದೇನೆ. ಕೇಜ್ರಿವಾಲಾ ಆಗಾಗ ಪ್ರಜಸತ್ತಾತ್ಮಕ ವ್ಯವಸ್ಥೆಯೊಳಗಣ ಸರ್ವಾಧಿಕಾರಿಯಂತೆ ಭಾಸವಾಗುವುರ ಜೊತೆಗೆ ತುಸು ಆತುರವಾದಿಯೂ ಎನಿಸುವದಿದೆ. ಪಕ್ಷದ ಗೆಲುವಿನಲ್ಲಿ ಅವನಷ್ಟೇ ಶ್ರಮ ಮತ್ತು ಪ್ರಯತ್ನವನ್ನು ಹಾಕಿದ್ದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ ಭೂಷಣ ಮತ್ತು ತನ್ನ ಪಕ್ಷದ ಇಅತರರೊಂದಿಗಿನ ನಡುವಳಿಕೆ ಮತ್ತು ತೀರ್ಮಾನಗಳು ದೆಹಲಿಯ ಜನತೆ ಮುಖ್ಯಮಂತ್ರಿ ಕೇಜ್ರಿವಾಲಾ ಸ್ವಭಾವದ ಬಗ್ಗೆ ಮತ್ತೊಮ್ಮೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದವು.

ಕೇಜ್ರಿವಾಲಾ ರಾಜಕಾರಣಕ್ಕೆ ಹಾಗೇ ಸುಮ್ಮನೆ ಎಂಟ್ರಿ ಹೊಡೆದವರಲ್ಲ. ಅದರ ಹಿಂದೆ ಸಾಕಷ್ಟು ತಾಲೀಮಿದೆ. ೧೯೫೯ ರಲ್ಲಿ ತೆರೆಗೆ ಬಂದ ಪೈಗಾಮ್ ಸಿನೇಮಾದ ’ಇನ್ಸಾನ್ ಕಾ ಇನ್ಸಾನ್ ಸೆ ಹೋ ಬೈಚಾರಾ’ ಎನ್ನುವ ಹಾಡನ್ನು ಹೇಳುವ ಮೂಲಕ ಮೊದಲ ಬಾರಿ ಮುಖ್ಯಮಂತ್ರಿಯ ಹುದ್ದೆಯ ಶಪಥವನ್ನು ಸ್ವೀಕರಿಸಿರುವದಿತ್ತು. ಮುಂಚಿನಿಂದಲೂ ಭ್ರಷ್ಟಾಚಾರದ ಬಗ್ಗೆ ಚಳುವಳಿಯನ್ನು ರೂಪಿಸಿ, ಸಂಘಟನೆಯನ್ನು ಹುಟ್ಟು ಹಾಕಿ ಸದಾ ಚಟುವಟಿಕೆಯಲ್ಲಿರುತ್ತಿದ್ದ ಕೇಜ್ರಿವಾಲಾ ಖುದ್ದಾಗಿ ಗಿಡ ಹತ್ತಿ ಬ್ಯಾನರ್ ಬಿಗಿಯುವ, ಗೋಡೆಗೆ ಪೋಸ್ಟರ್ ಹಚ್ಚುತಾ ಸಾಗುವ ಕೆಲಸಗಳನ್ನು ಕೂಡಾ ಪಕ್ಷ ಕಟ್ಟುವಷ್ಟೇ ಖುಷಿಯಿಂದ ಮಾಡಿರುವದಿದೆ. ೨೦೦೬ ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಅರ್ಥವತ್ತಾಗಿ ಜಾರಿಗೊಳಿಸುವಲ್ಲಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಅವನಿಗೆ ಸುಮಾರು ೫೦ ಸಾವಿರ ಡಾಲರ್ ಮೊತ್ತದ ರಾಮನ್ ಮ್ಯಾಗ್ಸಸ್ಸೇ ಪ್ರಶಸ್ತಿ ಲಭಿಸಿತು. ಅಲ್ಲಿಂದ ಜೋರಾಗಿ ಶುರುವಾದ ಕೇಜ್ರಿವಾಲಾ ಸಂಘಟನೆ ಆ ಬಹುಮಾನದ ಮೊತ್ತವನ್ನು ಸಂಘಟನೆಯ ಕಾರ್ಯ ಚಟುವಟಿಕೆಗಾಗಿಯೇ ಬಳಸಿಕೊಂಡಿರುವದಿದೆ. ೨೦೧೦ ರ ಸಂದರ್ಭದಲ್ಲಿ ಕಾಮನವೆಲ್ತ್ ಕ್ರೀಡೆಗಳನ್ನು ಸಂಘಟಿಸುವಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಹೋರಾಟ ಆರಂಭಿಸಿದ ಕೇಜ್ರಿವಾಲ್ ಸುಮಾರು ೭೦ ಸಾವಿರ ಕೋಟಿ ರೂಪಾಯಿ ಅಪರಾತಪರಾ ಆಗಿದೆ ಎನ್ನುವ ಆರೋಪದ ಮೇಲೆ ಅದಕ್ಕೆ ಕಾರಣರಾದ ಪ್ರಮುಖರ ಮೇಲೆ ಎಫ಼್.ಆಯ್.ಆರ್. ದಾಖಲಿಸುವವರೆಗೂ ಬಿಟ್ಟಿರಲಿಲ್ಲ. ಅಲ್ಲಿಂದ ಆರಂಭವಾದ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಹಾಗೇ ಮುಂದುವರೆಯಿತು. ಜನಲೋಕಪಾಲ್ ಮಸೂದೆಯನ್ನು ಮಂಡಿಸಬೇಕೆಂದು ಒತ್ತಾಯಿಸಿ ಅಣ್ಣಾ ಹಜಾರೆ ಜೊತೆಗೆ ಉಪವಾಸ ಚಳುವಳಿಯನ್ನು ಕೈಗೊಂಡ ಕೇಜ್ರಿವಾಲಾ ಒಂದು ಸರಿಯಾದ ರಾಜಕೀಯ ಅಖಾಡಾ ರೂಪಿಸಿಕೊಳ್ಳುವ ಮೂಲಕ, ನವಂಬರ್ ೨೦೧೨ ರಲ್ಲಿ ಆಮ್ ಆದ್ಮಿ ಎನ್ನುವ ಪಕ್ಷದ ಹುಟ್ಟಿಗೆ ಕಾರಣನಾಗಿ ಅದರ ಜನುಮದಾತನೆನಿಸಿಕೊಂಡ. ಪ್ರಥಮ ಬಾರಿಗೆ ಆತ ದೆಹಲಿಯ ಮುಖ್ಯಮಂತ್ರಿಯಾಗಿ arvind-kejriwalಅಧಿಕಾರ ಸ್ವೀಕರಿಸುವ ವೇಳೆ ಹಾಡಿದ ಆ ಹಾಡು ದೆಹಲಿಯ ಅನೇಕ ಮುಸ್ಲಿಂ ಸಮುದಾಯಗಳ ಹೃದಯವನ್ನು ಗೆಲ್ಲುವಲ್ಲಿ ಸಾಕಾಗಿತ್ತು. ಅವರ ಬಗೆಗಿನ ಪೂರ್ವಾಗ್ರಹಗಳ ನಡುವೆ ಹಾಗೆ ಮೂಡಿಬಂದ ಪೈಗಾಮ್ ಚಿತ್ರದ ಹಾಡು ಮುಸ್ಲಿಂ ರ ಪಾಲಿಗೆ ಒಂದು ಆಶಾಕಿರಣವಾಗಿ ತೋರಿದ್ದರಲ್ಲಿ ತಪ್ಪಿಲ್ಲ.ಸಬಾ ನಖ್ವಿ ಎನ್ನುವವರು ಬರೆದ ’ಕ್ಯಾಪಿಟಲ್ ಕಾಂಕ್ವೆಸ್ಟ್’ ಎನ್ನುವದರಲಿ ಈ ಸಂಗತಿಯನ್ನು ಪ್ರಸ್ತಾಪಿಸಿರುವದೂ ಇದೆ. ಸಬಾ ಆ ಕೃತಿಯನ್ನು ರಚಿಸುವಾಗ ದೆಹಲಿಯ ಸ್ಲಮ್ ಒಂದರಲ್ಲಿ ವಾಸವಾಗಿರುವ ಮೊಹ್ಮದ್ ಇನ್ಸಾಫ಼್ ಎನ್ನುವವರನ್ನು ಭೇಟಿಯಾಗಿ ಮಾತನಾಡಿಸಿದಾಗ ಆತ ತುಂಬಾ ಭರವಸೆಯನ್ನು ಈ ಆಮ್ ಆದ್ಮಿ ಪಕ್ಷದ ಬಗ್ಗೆ ಇಟ್ಟುಕೊಂಡದ್ದು ತಿಳಿದು ಬಂತು. ಮೊದಲ ಬಾರಿ ಕೇವಲ ೨೮ ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಬೆಂಬಲದಿಂದ ಸರಕಾರ ರಚಿಸಿದ್ದ ಆಮ್ ಆದ್ಮಿ ಪಕ್ಷ ಆಗಲೇ ಜನತೆಯ ಮುಂದೆ ಸಾಕಷ್ಟು ಆಶ್ವಾಸನೆಗಳನ್ನು ಇಟ್ಟಿರುವದಿತ್ತು. ಮುಖ್ಯವಾಗಿ ದೆಹಲಿಯ ಜನತೆ ಅನುಭವಿಸುತ್ತಿದ್ದ ನೀರು ಮತ್ತು ವಿದ್ಯುತ್ ವಲಯಕ್ಕೆ ಸಂಬಂಧಿಸಿದವುಗಳು. ನಂತರದ ದಿನಗಳಲ್ಲಿ ಗ್ಯಾಸ್ ಹಗರಣಕ್ಕೆ ಸಂಬಂಧಿಸಿ ಕಾರ್ಪೋರೇಟ್ ವಲಯದ ದಿಗ್ಗಜರಾದ ಮುಖೇಶ ಅಂಬಾನಿ ಮತ್ತು ಆಗಿನ ಪೆಟ್ರೊಲಿಯಂ ಖಾತೆ ಸಚಿವ ವೀರಪ್ಪ ಮೋಯ್ಲಿ ಯವರ ಮೇಲೆ ಎಫ಼್.ಆಯ್.ಆರ್. ದಾಖಲಿಸಿದ್ದೇ ಕೇಜ್ರಿವಾಲಾ ಸರಕಾರ ಇಕ್ಕಟ್ಟಿಗೆ ಸಿಲುಕುವಂತಾಯಿತು. ಕೇವಲ ೪೯ ದಿನಗಳಲ್ಲಿ ಅಧಿಕಾರವನ್ನು ಬಿಟ್ಟು ತೆರಳಿದ ಕೇಜ್ರಿವಾಲಾ ನಿರ್ಧಾರ ಆಗಲೂ ತರಾತುರಿಯ ನಿರ್ಧಾರ ಎಂದು ಕೆಲ ಮಾಧ್ಯಮಗಳು ವರ್ಣಿಸಿದ್ದವು. ಕೇಜ್ರಿವಾಲಾರನ್ನು ಕೆಲವು ಮಾಧ್ಯಮಗಳು ಮುಂಗೋಪಿ ಎಂದೂ, ಅರಾಜಕತೆಯನ್ನು ಮೈಗೂಡಿಸಿಕೊಂಡವನೆಂದೂ ಟೀಕಿಸಿರುವದಿತ್ತು.ಈ ಬಗೆಯ ಟೀಕೆಗಳನ್ನು ಮೀರಿಯೂ ಕೇಜ್ರಿವಾಲಾ ದೆಹಲಿಯ ಬಡಜನರ ಸಲುವಾಗಿ ಕೊರೆಯುವ ಛಳಿಯಲ್ಲೂ ಒಬ್ಬ ಸಾಮಾನ್ಯನಂತೆ ಹೋರಾಟ ಮಾಡಿರುವದಿತ್ತು. ದೆಹಲಿಯಲ್ಲಿ ಮನೆಯಿಲ್ಲದವರಿಗಾಗಿ ಹೋರಾಟ ಮಾಡಿದ ಕೇಜ್ರಿವಾಲಾ ಮುಂದಿನ ಚುನಾವಣೆಯಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಜಯಭೇರಿ ಭಾರಿಸುವ ಭರವಸೆ ಬಹುಷ: ಕೇಜ್ರಿವಾಲಾಗೂ ಇರಲಿಕ್ಕಿಲ್ಲ.

ಎರಡನೆಯ ಬಾರಿ ದೆಹಲಿಯ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೇ ಮಾತು ಕೊಟ್ಟಂತೆ ದರದಲ್ಲಿ ನೀರು ಮತ್ತು ವಿದ್ಯುತ್ kejriwal_aap_pti_rallyವಿಷಯದಲ್ಲಿ ಆ ಪಕ್ಷ ನಡೆದುಕೊಂಡಿದೆ ಆದರೆ ಮಾಡಬೇಕಾದ ಕೆಲಸಗಳು ಇನ್ನೂ ಬೇಕಾದಷ್ಟಿವೆ. ದೆಹಲಿಯ ಬಡ ಜನತೆ ಮಾತ್ರ ಚುನಾವಣೆಯ ಸಂದರ್ಭದಲ್ಲಿ ತಮ್ಮ ನೆತ್ತಿಗೊಂದು ಸೂರು ಕೊಡುವ ಬಗ್ಗೆ ಮಾತನಾಡಿರುವ ಕೇಜ್ರಿವಾಲಾರ ಮೇಲಿನ ನಂಬುಗೆಯನ್ನು ಇನ್ನೂ ಕಳೆದುಕೊಂಡಿಲ್ಲ. ಪಕ್ಷದೊಳಗಿನ ಆಂತರಿಕ ಕಿತ್ತಾಟ, ಅಧಿಕಾರಶಾಹಿಯ ಜೊತೆಗಿನ ಗುದ್ದಾಟಗಳನ್ನು ನೋಡಿ ಜನಸಾಮಾನ್ಯನಿಗೂ ಆಗಾಗ ಬೇಸರ ಬಂದಿರುವದಿದೆ. ಹಿಂದೆ ಹೀಗೆ ಮಾಡಿಯೇ ರಾಜೀನಾಮೆಯನ್ನು ತೆರುವ ಪ್ರಸಂಗ ತಂದುಕೊಂಡಿರುವ ಕೇಜ್ರಿವಾಲಾ ಮತ್ತೆ ದುಡುಕಿ ಅಂಥಾ ತಪ್ಪುಗಳನ್ನು ಮಾಡದೇ ದೆಹಲಿಯ ಜನತೆ ಮಿಕ್ಕೆಲ್ಲ ರಾಜಕೀಯ ಪಕ್ಷಗಳಿಗಿಂತಲೂ ಆಮ್ ಆದ್ಮಿ ಮಾತ್ರ ತಮ್ಮ ಪಾಲಿಗೆ ಒಳ್ಳೆಯದು ಎನ್ನುವಂತೆ ಭಾರಿ ಬಹುಮತದಿಂದ ಆರಿಸಿ ತಂದಿರುವದಿದೆ ಅವರ ಭರವಸೆಯನ್ನು ಉಳಿಸಿಕೊಳ್ಳುವದು ಮಾತ್ರವಲ್ಲದೇ ಭವಿಷ್ಯದಲ್ಲಿ ಯಾವುದಾದರೂ ಪ್ರಾದೇಶಿಕ ಪಕ್ಷಗಳು ಒಳ್ಳೆಯ ಧೋರಣೆಯೊಂದಿಗೆ ಮುಂದೆ ಬಂದಾಗ ಆಮ್ ಆದ್ಮಿಗೆ ಸಿಕ್ಕ ಪ್ರೋತ್ಸಾಹ ಮತ್ತು ಬೆಂಬಲ ಸಿಗುವಂತಾಗಬೇಕಾದರೆ ಅತ್ಯಂತ ಅರ್ಥಪೂರ್ಣವಾಗಿ ಅಧಿಕಾರವನ್ನು ಚಲಾಯಿಸಿ ತೋರಿಸಬೇಕಿದೆ. ದೇಶದ ಇತರೆ ರಾಜಕೀಯ ಪಕ್ಷಗಳು ಅಲ್ಲಿ ನೋಡಿ ಆಮ್ ಆದ್ಮಿ ಹೇಗೆ ಮಾಡುತ್ತಿದೆ ಎಂದು ಪೊಜಿಟಿವ್ ಕಾರಣಗಳಿಗಾಗಿ ಕೇಜ್ರಿವಾಲಾರನ್ನು ತೋರಿಸುವಂತಾಗಬೇಕು ಅಂದಾಗ ಮಾತ್ರ ಜನರ ವಿಶ್ವಾಸವನ್ನು ಉಳಿಸಿಕೊಂಡಂತಾಗುತ್ತದೆ. ಹೀಗೆ ನೂರು ದಿನಗಳಾಗುವುದು.. ಒಂದು ವರ್ಷ ತುಂಬುವುದು.. ಮುಖ್ಯವಲ್ಲ, ಮುಖ್ಯ ಏನೆಂದರೆ ಆ ಅವಧಿಯಲ್ಲಿ ಆ ಪಕ್ಷ ಮಾಡಿರುವ ಸಾಧನೆಗಳೇನು..? ಎನ್ನುವದಾಗಿರುತ್ತದೆ.