Category Archives: ಎಸ್.ಬಿ.ಜೋಗುರ

‘ಆಮ ಆದ್ಮಿ’ಯ ಗೆಲುವಿನ ಗುಟ್ಟೆನು..?


– ಡಾ.ಎಸ್.ಬಿ. ಜೋಗುರ


ಈಚೆಗೆ ನಡೆದ ದೆಹಲಿಯ ಚುನಾವಣೆ ಮತ್ತು ಫ಼ಲಿತಾಂಶದ ಸಂದರ್ಭದಲ್ಲಿ ನಾನು ದೆಹಲಿಯಲ್ಲಿದ್ದೆ. ದೆಹಲಿ ಸಿಟಿಯಲ್ಲಿ ಸಂಚರಿಸುವಾಗ ನನಗೆ ಅಲ್ಲಲ್ಲಿ ಸಿಗುವ ರಿಕ್ಷಾವಾಲಾಗಳು, ಡಬ್ಬಾ ಅಂಗಡಿಗಳ ಮುಂದಿರುವ ಜನರೊಂದಿಗೆ ಹಾಗೇ ಹರಟುತ್ತಾ ‘ಕ್ಯಾ ಹೈ ದಿಲ್ಲಿ ಇಲೆಕ್ಷನ್ ಕಾ ಹಾಲ್’ ಅಂತಿದ್ದೆ. ಅದಕ್ಕವರು ‘ಪೂಛನಾ ಕ್ಯಾ ಹೈಜೀ ಕೇಜ್ರಿವಾಲಾ ಹೀ ಆಯೇಗಾ’ ಎಂದು ತುಂಬಾ ಕಾನ್ಫಿಡಂಟ್ ಆಗಿ ಹೇಳುವವರು. ಚುನಾವಣೆ ಹತ್ತಿರವಾಗುತ್ತಿರುವಂತೆ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಇನ್ನಷ್ಟು ಹೆಚ್ಚಾಗುತ್ತಾ ನಡೆಯಿತು. cyclerickshaw-delhiಕೇವಲ ನಮ್ಮ ದೇಶ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಜನಸಮಾನ್ಯರದೇ ಬಹುದೊಡ್ಡ ಪಾಲು ಅವರು ಬಯಸಿದರೆ ಇಷ್ಟಪಡುವ ವ್ಯಕ್ತಿಯನ್ನು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಂಶಯವೇ ಇಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ನಗರಗಳ ಚುನಾವಣಾ ಫ಼ಲಿತಾಂಶ ಜನಸಾಮಾನ್ಯ ನಿರೀಕ್ಷಿಸುವಂತೆ ಸಾಧ್ಯವಾಗುತ್ತಿದೆ. ಜಾಗತೀಕರಣದ ಸಂದರ್ಭದಲ್ಲಿ ರಾಜಕೀಯ ಸ್ಥಿತ್ಯಂತರಗಳು ಮಧ್ಯಮ ವರ್ಗದವರ, ಜನಸಾಮಾನ್ಯನ ಮೂಲಕ ನಿರ್ಧರಿತವಾಗುತ್ತಿರುವದು ವಿಶ್ವದ ಅನೇಕ ಕಡೆಗಳಲ್ಲಿ ಎದ್ದು ತೋರುತ್ತಿದೆ. ಯಾವುದೇ ಒಂದು ರಾಜಕೀಯ ಪಕ್ಷ ಕೆಲವೇ ಕೆಲವು ಶ್ರೀಮಂತ ದೊರೆಗಳ ಖುಷಿಗಾಗಿ ಅಧಿಕಾರ ಚಲಾಯಿಸುತ್ತವೆ ಎನ್ನುವದಾದರೆ ಅದರ ಆಯುಷ್ಯ ದೀರ್ಘವಾಗಿರುವದಿಲ್ಲ ಎಂದರ್ಥ. ದೆಹಲಿಯಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಪಕ್ಷ ಜನಸಾಮಾನ್ಯನ ಮಾನಸಿಕ ಸ್ತರಗಳನ್ನು ಅರಿಯದೇ ಬರೀ ಭಾಷಣದ ಮೂಲಕವೇ ಎಲ್ಲವನ್ನು ಸಾಧ್ಯಮಾಡಬಹುದೆನ್ನುವ ಭ್ರಮೆಯನ್ನು ದೆಹಲಿಯ ಮತದಾರ ಛಿದ್ರಛಿದ್ರವಾಗಿ ಒಡೆದಿರುವದಿದೆ. ಯಾವ ಪಕ್ಷವೂ ನಿರೀಕ್ಷಿಸದ ರೀತಿಯಲ್ಲಿ ಫ಼ಲಿತಾಂಶವನ್ನು ಗಳಿಸಿದ ಆಮ ಆದ್ಮಿ ಪಕ್ಷ ಜನಸಾಮಾನ್ಯನಂತೆಯೇ ಯೋಚಿಸುವ, ಮಾತನಾಡುವ, ಕನಸು ಕಾಣುವ ಮೂಲಕವೇ ಅಧಿಕಾರದ ಗದ್ದುಗೆಯೇರಿದ್ದು ಮಾತ್ರವಲ್ಲದೇ ದೈನಂದಿನ ಅಗತ್ಯಗಳಾದ ವಿದ್ಯುತ್, ಕುಡಿಯುವ ನೀರು ಮುಂತಾದವುಗಳನ್ನು ಮಾತು ತಪ್ಪದ ಮಕ್ಕಳಂತೆ ಈಡೇರಿಸಿದ್ದಾರೆ. ವಿಶ್ವದ ಬಹುತೇಕ ಕಡೆಗಳಲ್ಲಿ ಈ ನಗರ ಪ್ರದೇಶಗಳಲ್ಲಿ ವಾಸಿಸುವ ಬಹುತೇಕ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ತಮ್ಮ ಜನನಾಯಕರಿಂದ ಅರಮನೆ, ಮೃಷ್ಟಾನ್ನ ಭೋಜನವನ್ನು ಕೇಳುವದಿಲ್ಲ. ತೀರಾ ಸಾಮಾನ್ಯ ದೈನಂದಿನ ಜೀವನ ನಿರ್ವಹಣೆಗೆ ಅಗತ್ಯವಿರುವ ಉದ್ಯೋಗ, ವಸತಿ, ಕುಡಿಯುವ ನೀರು ಮುಂತಾದವುಗಳನ್ನೇ ಕೇಳುತ್ತಾರೆ. ಜೊತೆಗೆ ವರ್ಷದಿಂದ feb142015kejriwalವರ್ಷಕ್ಕೆ ತೀವ್ರ ಪ್ರಮಾಣದಲ್ಲಿ ಹೊರನೋಟಕ್ಕೆ ನಿಚ್ಚಳವಾಗಿ ತೋರುವ ನಗರ ಜೀವನದಲ್ಲಿಯ ಅಸಮಾನತೆಗಳಿಂದ ಉಧ್ಬವವಾಗಬಹುದಾದ ಅತೃಪ್ತಿಯ ಪರಿಣಾಮವೂ ಈ ಬಗೆಯ ಫ಼ಲಿತಾಂಶವನ್ನು ಕೊಡಬಲ್ಲದು.

ಕಳೆದ ಎರಡೂವರೆ ದಶಕಗಳಿಂದಲೂ ಜಾಗತೀಕರಣದ ಪ್ರಭಾವ ವಿಶ್ವದ ಆರ್ಥಿಕ ಮತ್ತು ಸಾಮಾಜಿಕ ಸಂಗತಿಗಳ ಮೇಲೆ ಉಂಟಾಗುತ್ತಿರುವ ಹಾಗೆಯೇ ರಾಜಕೀಯ ವಿದ್ಯಮಾನಗಳ ಮೇಲೆಯೂ ಅದು ತನ್ನ ಪ್ರಭಾವವನ್ನು ಬೀರುತ್ತಿದೆ. ಈಚೆಗೆ ಬ್ರಾಝಿಲ್ ಲ್ಲಿ ನಡೆದ ಚುನಾವಣೆ, ಗ್ರೀಸ್ ನಲ್ಲಿ ನಡೆದ ರಾಜಕೀಯ ವಿದ್ಯಮಾನ, ಹಾಂಗ್ ಕಾಂಗ್ ನಲ್ಲಿ ನಡೆದ ರಾಜಕೀಯ ಪ್ರತಿಭಟನೆ ಹುಸಿ ಭರವಸೆಗಳನ್ನು ನೀಡಿದ ರಾಜಕೀಯ ನೇತಾರರು ಕೇವಲ ಶ್ರೀಮಂತರ ಪ್ರೀತಿ ಪಾತ್ರರಾಗುವದನ್ನು ಸಹಿಸದೇ ಜನ ವಿಶ್ವದಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡತೊಡಗಿದ್ದಾರೆ ಇಲ್ಲವೇ ರಾಜಕೀಯ ಅಧಿಕಾರವನ್ನೇ ಬದಲಾಯಿಸಿದ್ದಾರೆ. ನ್ಯುಯಾರ್ಕ್ ಮತ್ತು ಲಾಸ್ ಎಂಜೆಲ್ಸ್ ನಂಥಾ ಪಟ್ಟಣಗಳೂ ಇದಕ್ಕೆ ಹೊರತಾಗಿಲ್ಲ. ಎರಡು ದಶಕಗಳ ಮೊದಲಿನ ಜನಸಾಮಾನ್ಯ ಅಮೇರಿಕೆಯ ಮಾತ್ರವಲ್ಲ ಯಾವುದೇ ರಾಷ್ಟ್ರದ ಅಧ್ಯಕ್ಷ, ಪ್ರಧಾನಿ ಬಂದು ಹೋದರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಮೇರಿಕೆಯ ಅಧ್ಯಕ್ಷ ಓಬಾಮಾ ಬರೀ ಬಂದ ವಿಷಯ ಮಾತ್ರವಲ್ಲ, ಆತ ಮಾತನಾಡಿದ್ದು, ಪ್ರಧಾನಿಯ ಜೊತೆಗಿನ ಸಂಭಾಷಣೆ ಎಲ್ಲವನ್ನು ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ನೋಡುವುದು, ಕೇಳುವುದು, ಓದುವುದು ಮಾತ್ರವಲ್ಲದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ತನ್ನ ಹಕ್ಕುಗಳು, ಅಧಿಕಾರಗಳೇನು..? ಎನ್ನುವದನ್ನು ಯೋಚಿಸುವಷ್ಟು ಸಮರ್ಥತೆಯನ್ನು ಈ ಜಾಗತೀಕರಣದ ವಿದ್ಯಮಾನಗಳೇ ಅವರಿಗೆ ತಂದು ಕೊಟ್ಟಿರುವದಿದೆ. ಹೀಗಾಗಿ ಈಗಾಗಲೇ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಸುಮ್ ಸುಮ್ನೆ ಪಾರಿಜಾತ ಪುಷ್ಪವನ್ನೇ ಮತದಾರನ ಕೈಗಿಡುವ ಮಾತಾಡದಿರುವದೇ ಕ್ಷೇಮ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಅತಿ ಮುಖ್ಯ ಕಾರಣ ಆ ಪಕ್ಷದ ನೇತಾರನ ಗ್ರಹಿಕೆಗಳು, ಮಾತುಗಳು, ಭರವಸೆಗಳು. ಪಕ್ಕಾ ಸಾಮಾನ್ಯ ಮನುಷ್ಯನಾಗಿಯೇ ಚುನಾವಣೆ ಎದುರಿಸಿದ ಕೇಜ್ರಿವಾಲ್ ಸಮೂಹ ಅಪಾರ ಪ್ರಮಾಣದ ಗೆಲುವನ್ನು ಪಡೆಯುವಲ್ಲಿ ಜನಮಾನಸವನ್ನು ಅರಿಯುವಲ್ಲಿ ಸಫ಼ಲರಾದದ್ದೇ ಕಾರಣ. ಬಣ್ಣದ ಮಾತು ಮತ್ತು ಹುಸಿ ಭರವಸೆಗಳನ್ನು ಹೇಗೆ ಜನಸಾಮಾನ್ಯ ಇಷ್ಟಪಡುವದಿಲ್ಲವೋ ಅದೇ ರೀತಿಯಲ್ಲಿ ತೀರಾ ಸಣ್ಣ ಕಾರಣಗಳನ್ನು ಮುಂದೆ ಮಾಡಿ ಒಳಜಗಳಗಳನ್ನು ಹುಟ್ಟು ಹಾಕಿಕೊಳ್ಳುವ ಪಕ್ಷಗಳನ್ನು ಕೂಡಾ ಸಹಿಸುವದಿಲ್ಲ. ಯಾಕೆಂದರೆ ಅಧಿಕಾರವನ್ನು ಕೊಟ್ಟಾಗಲೂ ಮಾಡಲಾಗದವರು ಮತ್ತೊಮ್ಮೆ ತಮ್ಮನ್ನು ಆರಿಸುವರೆಂಬ ಕನಸನ್ನು ಮರೆತುಬಿಡುವದೇ ಕ್ಷೇಮ. ಅದರಲ್ಲೂ ನಗರ ಪ್ರದೇಶಗಳಲ್ಲಿಯ ಮತದಾರ ತೀರಾ ಜಾಗೃತ ಹೀಗಾಗಿ ರಾಜಕೀಯ ಎನ್ನುವುದು ಮುಂಚಿನಂತೆ ದುಡ್ಡಿದ್ದವರ ಅಖಾಡಾ ಎನ್ನುವ ಮಾತು ತುಸು ಮಂಕಾಗುತ್ತಿದೆ. ಭಾರತದ ನಗರಗಳಲ್ಲಿ ಇಂದು ಸುಮಾರು ೩೨ ಪ್ರತಿಶತ ಜನರು ವಾಸವಾಗಿದ್ದಾರೆ. ಇವರಲ್ಲಿ ಕೆಲವೇ ಕೆಲವರು ಮಾತ್ರ ಎಲ್ಲ ಬಗೆಯ ಸೌಲಭ್ಯಗಳನ್ನು ಹೊಂದಿದವರಾಗಿ ಬದುಕು ಸಾಗಿಸುತ್ತಿದ್ದಾರೆ. ಈ ಕೆಲವೇ ಕೆಲವರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ದಿಮೆದಾರರು. ಮಿಕ್ಕವರು ಅನೇಕ ಬಗೆಯ ಸೌಲಭ್ಯವಂಚಿತರಾಗಿ ಬದುಕುವ ಜೊತೆ ಜೊತೆಗೆ ಅಸ್ಥಿತ್ವದಲ್ಲಿರುವ ಅಸಮಾನತೆಗಳ ಬಗ್ಗೆ ಒಂದು ಬಗೆಯ ಸಿಟ್ಟನ್ನು ಕಾಪಾಡಿಕೊಂಡು ಬರುವುದು ಮಾತ್ರವಲ್ಲದೇ ಅದನ್ನು ಕೇವಲ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಹಾಗೆ ಮಾಡದೇ ಈ ಬಗೆಯ ಚುನಾವಣೆಗಳಲ್ಲಿ ಪ್ರದರ್ಶಿಸುತ್ತಾರೆ ಅದರ ಪರಿಣಾಮವಾಗಿಯೇ ಆಮ್ ಆದ್ಮಿ ಪಕ್ಷದಂತಹ ರಾಜಕೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ಸಾಧ್ಯವಾಗುತ್ತದೆ. ದೇಶದ ಬಹುದೊಡ್ಡ ಪ್ರಮಾಣದಲ್ಲಿರುವ ಜನಸಾಮಾನ್ಯನನ್ನು ಮರೆತು ರಾಜಕೀಯ ಮಾಡಲಾಗದು ಹಾಗೆ ಮಾಡ ಹೋದರೆ ವೈಫ಼ಲ್ಯ ಖಾತ್ರಿ. ಮೊನ್ನೆಯಷ್ಟೆ ಮಂಡನೆಯಾದ ಕೇಂದ್ರ ರೈಲು ಬಜೆಟ್ ಸಂದರ್ಭದಲ್ಲಿ ಆಮ ಆದ್ಮಿ ಪಕ್ಷ ಬಜೆಟ್ ಗೆ ಪ್ರತಿಕ್ರಿಯಿಸುವಾಗಲೂ ಜನಸಾಮಾನ್ಯನನ್ನು ಮರೆಯಲಿಲ್ಲ. ಆಗ ಅದು ‘ಈ ಬಜೆಟ್ ಸಾಮಾನ್ಯನ ಪಾಲಿಗೆ ಖಾಲಿ ಚೀಲವಿದ್ದಂತೆ’ ಎಂದಿತು. ಈ ಬಗೆಯ ತಾತ್ವಿಕ ಆಲೋಚನೆ ದೆಹಲಿ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಕೆಲಸ ಮಾಡಿದೆ. ಸದ್ಯದ ಮಟ್ಟಿಗೆ ಆಮ್ ಆದ್ಮಿ ಮಾತು ಕೊಟ್ಟಂತೆ ವಿದ್ಯುತ್ ದರ ಇಳಿಸಿದೆ, ಉಚಿತ ಕುಡಿಯುವ ನೀರನ್ನೂ ಒದಗಿಸಿದೆ. ಸುಂದರವಾಗಿ ಮಣ ಮಾತಾಡುವವರಿಗಿಂತಲೂ ಹೀಗೆ ದೈನಂದಿನ ಅಗತ್ಯತೆಗಳನ್ನು ಗಮನಹರಿಸುವ ಜನನಾಯಕರೇ ಮೇಲು ಎಂದೆನಿಸುತ್ತದೆ.

ಇದು ಖರೆ ಖರೆ ಕಲಿಯುಗ..!


– ಡಾ.ಎಸ್.ಬಿ. ಜೋಗುರ


 

ಅದೊಂದು ಕಾಲವಿತ್ತು ಅಲ್ಲಿ ‘ಲೈಂಗಿಕತೆ’ ಮತ್ತು ‘ಪಾಪ’ ಎನ್ನುವ ಪರಿಕಲ್ಪನೆಗಳನ್ನು ಅವಳಿ ಜವಳಿ ಶಿಶುಗಳಂತೆ ಪರಿಗಣಿಸುತ್ತಿದ್ದರು. ನಾನು ಹೇಳುತ್ತಿರುವುದು ತೀರಾ ಪ್ರಾಚೀನ ಕಾಲದ ಹಕೀಕತ್ ಅಲ್ಲ, 19 ನೇ ಶತಮಾನದ ಆರಂಭವನ್ನು ಕುರಿತು. ಆಗ ಚರ್ಚುಗಳು ಪಶ್ಚಿಮದ ರಾಷ್ಟ್ರಗಳಲ್ಲಿಯ ಎಲ್ಲ ನಡಾವಳಿಯನ್ನು ಕರಾರುವಕ್ಕಾಗಿ ನಿಯಂತ್ರಿಸುತ್ತಿದ್ದ ಸಂದರ್ಭದಲ್ಲಿ ಲೈಂಗಿಕತೆಯ ಬಗ್ಗೆ ಮಾತನಾಡುವವನನ್ನು ಮತ್ತು ಬರೆಯುವವನನ್ನು ಒಬ್ಬ ನಾಸ್ತಿಕವಾದಿಯನ್ನು ದಿಟ್ಟಿಸುವ ಮಟ್ಟದಲ್ಲಿಯೇ ಕೆಂಗಣ್ಣಿನಿಂದ ಕೆಕ್ಕರಿಸಿ ಕುಕ್ಕುತ್ತಿದ್ದರು. ತೀರಾ ಸಾಮಾನ್ಯನಂತೂ ಆ ಬಗ್ಗೆ ಮಾತನಾಡುವುದು ದೂರ, ಕೇಳುವುದು ಕೂಡಾ ಮಹಾ ಪಾಪ..! ಎಂದು ಭಾವಿಸುತ್ತಿದ್ದ ಸಂದರ್ಭವದು. ಆ ದಿನಮಾನಗಳಲ್ಲಿಯೂ ಸಮಾಜದ ಕೆಂಗಣ್ಣಿನ ಕಾವನ್ನೂ ಲೆಕ್ಕಿಸದೇ ಅದರಲ್ಲಿ ಛಳಿ ಕಾಯಿಸಿಕೊಂಡವರೂ ಇದ್ದರು. ಅಂಥವರ ಸಾಲಲ್ಲಿ ಅಗ್ರಗಣ್ಯನಾದವನು ಇಂಗ್ಲಂಡದ ಬಹುದೊಡ್ಡ ಚಿಂತಕ ಬರ್ಟಂಡ್ ರಸಲ್.. ಆ ಕಾಲದಲ್ಲಿ ಅಂದರೆ 1929 ರಲ್ಲಿ ‘ಮ್ಯಾರೇಜ್ ಆಂಡ್ ಮಾರಲ್ಸ್’ ಎನ್ನುವ ಕೃತಿಯನ್ನು ಬರೆದು ಅಪಾರ ಜನಮನ್ನಣೆಯನ್ನು ಗಳಿಸುವ ಜೊತೆಗೆ abstract-painting-sexಲೈಂಗಿಕತೆಯ ಬಗ್ಗೆ ಹೀಗೆ ಇಷ್ಟೊಂದು ಮುಕ್ತವಾಗಿ ಬರೆಯಬಹುದೇ..? ಎನ್ನುವ ಪ್ರಶ್ನೆ ಮತ್ತು ಚರ್ಚೆ ಹುಟ್ಟಲು ಕಾರಣನಾದ. ಆತ ರಸ್ತೆಯಲ್ಲಿ ಹೋಗುವಾಗ ಕೆಲ ಕರ್ಮಠರು ಅವನೆಡೆಗೆ ಕೈ ಮಾಡಿ ನೋಡಲ್ಲಿ ‘ನಾಯಿ’ ಹೋಗುತ್ತಿದೆ ಎನ್ನುತ್ತಿದ್ದರು ಎನ್ನುವದನ್ನು ಸ್ವತ: ರಸಲ್ ಖುದ್ದಾಗಿ ಬರೆದುಕೊಂಡಿರುವದಿದೆ. ವಾಸ್ತವ ಏನೆಂದರೆ ರಸಲ್ ಆಗ ಲೈಂಗಿಕ ವಿಷಯವಾಗಿ ಬರೆದದ್ದು ಕೇವಲ ಒಂದು ಪ್ರತಿಶತ ಆದರೆ ಜನಸಾಮಾನ್ಯ ಮಾತ್ರ ಅದನ್ನೇ ತೊಂಬತ್ತು ಪ್ರತಿಶತ ಎಂದು ಭಾವಿಸಿರುವದಿತ್ತು. ರಸಲ್ ಗೆ 1950 ರ ಸಂದರ್ಭದಲ್ಲಿ ನೋಬೆಲ್ ಪ್ರಶಸ್ತಿ ಬಂದಾಗ ಅನೇಕರು ಇಂಥಾ ಪಶುವಿಗೂ ಪ್ರಶಸ್ತಿಯೇ..? ಎಂದು ಹುಬ್ಬೇರಿಸಿರುವದಿತ್ತು. ಲೈಂಗಿಕತೆಯ ವಿಷಯದ ಬಗ್ಗೆ ಬರೆಯುವುದು ಮಾತನಾಡುವುದು ತಪ್ಪು ಎನ್ನುವ ವಿಚಾರ ಲೈಂಗಿಕತೆ ಎನ್ನುವುದು ಒಂದು ;ಸಿನ್’ ಎನ್ನುವ ಪ್ರಜ್ಞೆ ಆಗ ಹೆಚ್ಚೆಚ್ಚು ವ್ಯಾಪಕವಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಈಗ ಕಾಲ ಸಿಕ್ಕಾಪಟ್ಟೆ ಬದಲಾಗಿದೆ. ಎಷ್ಟು ಬದಲಾಗಿದೆ ಎಂದರೆ ಲೈಂಗಿಕತೆ ಎನ್ನುವುದು ಒಂದು ಕಮಾಡಿಟಿ ಆಗಿ ಬಿಟ್ಟಿದೆ. ‘ಡರ್ಟಿ ಪಿಕ್ಚರ್’ ಎನ್ನುವ ಹೆಸರಿನ ಸಿನೇಮಾಗಳು ಕೂಡಾ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಗೆಲ್ಲುತ್ತಿವೆ. ಟಿ.ವಿ.ಯೊಳಗಿನ ಸುಗಂಧ ದ್ರವ್ಯದ ಜಾಹೀರಾತುಗಳಷ್ಟೇ ಸಾಕು, ಮತ್ಯಾವ ನೀಲಿ ಚಿತ್ರಗಳನ್ನೂ ನೋಡುವ ಅವಶ್ಯಕತೆಯಿಲ್ಲ. ಬೀದಿ ಬೀದಿಗಳಲ್ಲಿ ಕಿಸ್ ಮಸ್ತಿಗೆ ಅವಕಾಶಕೊಡಿ ಎನ್ನುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಾಕಾಷ್ಟೆ ಅನಾವರಣಗೊಳ್ಳುತ್ತಿದೆ. ಇಂಥವನ್ನೇ ಬದಲಾವಣೆ ಎನ್ನುವದಾದರೆ ಕಿಸ್ ನಂತರದ ಹಂತಕ್ಕೆ ಇಳಿಯುವ ದಿನಗಳು ದೂರಿಲ್ಲ ಎನಿಸುತ್ತದೆ. ಒಂದು ಕಾಲ ನಮ್ಮನ್ನು ಹೇಗೆ ಪ್ರಭಾವಿಸುತ್ತದೆ ಎನ್ನಲಿಕ್ಕೆ ಇವೆಲ್ಲವೂ ಸಾಕ್ಷಿಗಳೇ.. ನಾವು ಚಿಕ್ಕವರಿದ್ದಾಗ ತಂದೆಯ ಎದುರು ನಿಂತು ತೀರಾ ಮಿನಿಮಮ್ ಬೇಡಿಕೆಗಳನ್ನು ಸಲ್ಲಿಸಲೂ ಹಿಂದೇಟು ಹಾಕುತ್ತಿದ್ದೆವು. ಅಶ್ಲೀಲ ಮಾತು, ProtectingChildrenfromSexTraffickingಸಿನೇಮಾ ಆಗ ಅಸಾಧ್ಯ. ಈಗ ಮೊಬೈಲ್ ಅನ್ನೋ ಇಂಚು ಪರದೆಯಲ್ಲಿ ಬೆರಳ ತುದಿಯಲ್ಲೇ ನೀಲಿ ಚಿತ್ರಗಳು ಓಡಾಡುತ್ತವೆ. ಈಗಿನ ಬಾಲಿವುಡ್ ಸಿನೇಮಾಗಳಂತೂ ಪೂರ್ತಿ ಮಸಾಲಾ ಮಯ. ಸಿನೇಮಾ ಬಿಟ್ಟು ಹೊರಬಂದರೆ ಮನಸು ನೆಟ್ಟಗಿರುತ್ತದೆ ಎನ್ನುವ ಗ್ಯಾರಂಟಿ ಕೊಡದಷ್ಟು ಅಶ್ಲೀಲ ದೃಶ್ಯಗಳು. ಇನ್ನು ನಮ್ಮ ಮನೆಗಳಲ್ಲಿರುವ ಕಿರುತೆರೆಯ ಪರಾಕ್ರಮ ಸಾಧಾರಣವಲ್ಲ. ಒಂದು ಉದಾಹರಣೆ ನೋಡಿ, ಅದೊಂದು ಚಾಕಲೇಟ್ ಜಾಹೀರಾತು. ತಂದೆಯಾದವನು ಮಗಳ ಜೊತೆಗೆ ಜಾಗಿಂಗ್ ಮಾಡುವ ಸನ್ನಿವೇಶವದು. ತಂದೆ ಮಗಳಿಗೆ ತಾನು ಇನ್ನೂ ಒಂದು ಸುತ್ತು ಹಾಕುತ್ತೇನೆ ಎಂದಾಗ ಮಗಳು ತೀರಾ ಖುಷಿಯಾಗಿ ಆಯ್ತು ಎನ್ನುತ್ತಾಳೆ. ಅಪ್ಪ ಆ ಕಡೆ ಹೋದದ್ದೇ ಈ ಹುಡುಗಿ ಸಿಳ್ಳು ಹೊಡೆದು ತನ್ನ ಬಾಯ್ ಫ಼್ರೆಂಡ್ ನನ್ನು ಕೂಗುತ್ತಾಳೆ. ಅಂದರೆ ಅಪ್ಪನಿಗೆ ಮಗಳಾದವಳು ಮೋಸ ಮಾಡುವದು ಕೂಡಾ ಒಂದು ಕಿಲಾಡಿತನವೇ ಎನ್ನುವಂತೆ ಜಾಹೀರಾತು ರೂಪಿಸಿರುವ ಮನ:ಸ್ಥಿತಿಯ ಅರಿವಾಗದೇ ಇರದು. ಇಂಥಾ ಒಂದೇ ಎರಡೇ.. ಇಡೀ ನಮ್ಮ ಸಾಮಾಜಿಕ ಪರಿಸರವೇ ವಿಕ್ಷಿಪ್ತವಾದ ಅನುಭವ ಬರುವಂತಿದೆ.

ಈ ನಡುವೆ ಮನುಷ್ಯ ಸಂಬಂಧಗಳು ಅದರಲ್ಲೂ ಗಂಡ-ಹೆಂಡತಿ, ತಂದೆ-ಮಗಳು, ಅಣ್ಣ ತಂಗಿ, ಚಿಕ್ಕಪ್ಪ, ದೊಡ್ಡಪ್ಪ ಇಂಥಾ ಸಂಬಂಧಗಳು ಮನುಷ್ಯ ಸಮಾಜಕ್ಕೆ ಶ್ರೇಷ್ಟತೆಯನ್ನು ತಂದು ಕೊಟ್ಟಂತವುಗಳು. ಈಗೀಗ ಆ ಸಂಬಂಧಗಳಲ್ಲಿಯ ಬಿಗಿತನವೂ ಜಿಗಿ ಸಾಯುತ್ತಿರುವ ಲಕ್ಷಣಗಳು ತೋರುತ್ತಿವೆ. ಪರಿಣಾಮವಾಗಿ ಅತ್ಯಾಚಾರ ಎನ್ನುವುದು ಯೋಚಿಸದಷ್ಟು, ಮಾತನಾಡದಷ್ಟು ರೇಜಿಗೆಯ ವಿಷಯವಾಗಿ ಪರಿಣಮಿಸಿದೆ. ಯಾಕೆಂದರೆ ನಮ್ಮ ಆಲೋಚನೆ ಮತ್ತು ಮಾತಿನ ವೇಗವನ್ನು ಮೀರಿ ಅದು ಜರುಗುತ್ತಿರುತ್ತದೆ. ನಮ್ಮ ಮಾತು ಮುಗಿಯುವದರೊಳಗೆ ಮತ್ತಷ್ಟು ಅತ್ಯಾಚಾರಗಳು ಘಟಿಸಿ ಒಂದು ಬಗೆಯ ವಿಷಣ್ಣತೆಯ ಭಾವ ಆವರಿಸಿಬಿಡುತ್ತದೆ. ಬೇಲಿಯೇ ಎದ್ದು ಹೊಲ ಮೇಯುವಂತೆ, ತಾಯಿಯ ಮೊಲೆ ಹಾಲು ನಂಜಾಗುವಂತೆ, ಬಿತ್ತಿದ ಬೀಜವನ್ನು ಭೂಮಿಯೇ ನಿಗಟುವಂತೆ.. ಎನ್ನುವ ಮಾತುಗಳು ಕಲಿಯುಗದಲ್ಲಿ ಖರೆ ಖರೆಯಾಗತೊಡಗಿವೆ. ಈಚೆಗೆ ದೆಹಲಿಯ ಪೋಲಿಸರು ದೆಹಲಿಯ ಹೈಕೋರ್ಟಿಗೆ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಕೇವಲ ದೆಹಲಿಯಲ್ಲಿ ಮಾತ್ರ ಜರುಗಿದ ಅತ್ಯಾಚಾರದ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಒದಗಿಸಿತು. ಆ ಅಂಕಿ ಅಂಶಗಳನ್ನು ಗಮನಿಸಿದರೆ ಯಾರಿಗಾದರೂ ಶಾಕ್ ಆಗುವಂತಿದೆ. ಈ ವರ್ಷದ [2014] ಆರಂಭದ ಹತ್ತು ತಿಂಗಳ ಅವಧಿಯಲ್ಲಿ ಜರುಗಿದ ಅತ್ಯಾಚಾರಗಳ ಸಂಖ್ಯೆ 1704. ಇದಕ್ಕಿಂತಲೂ ಭಯಂಕರವಾದ ಮಾಹಿತಿ ಇನ್ನೊಂದಿದೆ. ಈ ಬಗೆಯ ಒಟ್ಟು ಅತ್ಯಾಚಾರಗಳಲ್ಲಿ ಸುಮಾರು 215 ಅತ್ಯಾಚಾರದ ಪ್ರಕರಣಗಳು ಅಗಮ್ಯಗಮನ [Incest Relations] ಸಂಬಂಧಗಳಲ್ಲಿಯೇ ಜರುಗಿರುವದಿದೆ. ಅಂದರೆ ಮನೆಯೊಳಗೆ, ನೆರೆಹೊರೆಯಲ್ಲಿ, ಸ್ನೇಹಿತರೆನಿಸಿಕೊಂಡವರು, ಸಹೋದರ ಸಂಬಂಧಗಳಲ್ಲಿ ಈ ಬಗೆಯ ಅತ್ಯಾಚಾರದ ಪ್ರಕರಣಗಳು ಜರುಗಿವೆ. ಈ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚು ಅತ್ಯಾಚಾರಗಳು ಜರುಗಿದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. ಅತ್ಯಂತ ಶ್ರೇಷ್ಟ ಎಂದು ಕರೆಯಿಸಿಕೊಳ್ಳುವ ಮನುಷ್ಯ ಸಂಬಂಧಗಳು ಕೂಡಾ ಇಂದು ಅರ್ಥ ಕಳೆದುಕೊಳ್ಳುತ್ತಿವೆ ಎನ್ನುವ ಸಂಗತಿ ಆ ಮೂಲಕ ಮನದಟ್ಟಾಗುತ್ತದೆ. ಈ ಬಗೆಯ ಅಗಮ್ಯಗಮನ ಸಂಬಂಧಗಳಲ್ಲಿ ಅತ್ಯಂತ ಬೇಸರದ ಸಂಗತಿಯೆಂದರೆ ತಂದೆ ಎನಿಸಿಕೊಳ್ಳುವ child-rapeಪ್ರಾಣಿಯಿಂದಲೇ ಅತ್ಯಚಾರಕ್ಕೆ ಒಳಗಾದ ಪ್ರಕರಣಗಳು ಸುಮಾರು 43 ರಷ್ಟಿವೆ. ಅಂಕಲ್ ಎಂದು ಕರೆಯಿಸಿಕೊಳ್ಳುತ್ತ, ಚಿಕ್ಕಪ್ಪ ಎಂದು ಗುರುತಿಸಿಕೊಂಡವರಿಂದ ಜರುಗಿದ ಅತ್ಯಾಚಾರದ ಪ್ರಕರಣಗಳು ಸುಮಾರು 36 ರಷ್ಟಿವೆ. ಸಹೋದರ ಸಂಬಂಧಗಳಲ್ಲಿ ಜರುಗಿದ ಅತ್ಯಾಚಾರದ ಪ್ರಕರಣಗಳ ಸಂಖ್ಯೆ 27, ಮಲತಂದೆ ಎನಿಸಿಕೊಂಡವನು ನಡೆಯಿಸಿದ ಅತ್ಯಾಚಾರದ ಪ್ರಮಾಣ 23 ಇನ್ನು ನೆರೆಹೊರೆಯವರು ಮತ್ತು ಕುಟುಂಬದ ಸ್ನೇಹಿತರು ಎನ್ನುವ ರಿಯಾಯತಿ ಪಡೆದು ಅತ್ಯಾಚಾರ ಎಸಗಿದವರ ಸಂಖ್ಯೆ 83. ಇನ್ನೊಂದು ವಿಷಾದದ ಸಂಗತಿಯೆಂದರೆ ಅಮಾಯಕ ಮುಗ್ದ ಮಕ್ಕಳನ್ನು ತಮ್ಮ ಕಾಮಪಿಪಾಸೆಗೆ ಬಳಸಿಕೊಳ್ಳುವ ಈ ದುರುಳರ ಮನ;ಸ್ಥಿತಿ ಒಂದರ್ಥದಲ್ಲಿ ವಿಕೃತವಾದುದೇ ಹೌದು. ಈ ಬಗೆಯ 1704 ಅತ್ಯಾಚಾರದ ಪ್ರಕರಣಗಳಲ್ಲಿ ಕೇವಲ 2 ವರ್ಷ ವಯೋಮಾನದ ಕೆಳಗಿನ ಮಕ್ಕಳು ನಾಲ್ಕು ಜನರಿದ್ದಾರೆ. 2-7 ವರ್ಷ ವಯೋಮಿತಿಯ ಮಕ್ಕಳು 115 ರಷ್ಟಿದ್ದಾರೆ. 7-12 ವರ್ಷ ವಯೋಮಿತಿಯ ಒಳಗಿನ ಸುಮಾರು 127 ಮಕ್ಕಳಿದ್ದಾರೆ. ಇವೆಲ್ಲ ಅಂಕಿ ಅಂಶಗಳು ಮನುಷ್ಯನಲ್ಲಿಯ ಮೃಗಾಲಯವನ್ನು ಪರಿಚಯಿಸುವ ಜೊತೆಗೆ, ಮನುಷ್ಯ ಸಂಬಂಧಗಳು ಯಾವ ರೀತಿಯ ಅನರ್ಥ ಮಾರ್ಗದಲ್ಲಿ ಹೊರಳುತ್ತಿವೆ ಎನ್ನುವ ಬಗ್ಗೆ ಮನದಟ್ಟಾಗುತ್ತದೆ.

ಈ ಬಗೆಯ ಅಗಮ್ಯಗಮನ ಸಂಬಂಧ ಇಂದು ನೆನ್ನೆಯದಲ್ಲ, ತೀರಾ ಪ್ರಾಚೀನ ಕಾಲದಿಂದಲೂ ಇವೆಯಾದರೂ ಈ ಪ್ರಮಾಣದಲ್ಲಿ ಹಿಂದೆಂದೂ ಇರಲಿಲ್ಲ. The_Bulgarian_rapeಎಲ್ಲೋ ಒಂದೋ ಎರಡೋ ಪ್ರತಿಶತದಲ್ಲಿ ಈ ಬಗೆಯ ಅಗಮ್ಯಗಮನ ಸಂಬಂಧಗಳು ಬೆಳಕು ಕಾಣುವದಿತ್ತು. ಅದೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಬಗೆಯ ಅತ್ಯಾಚಾರದ ಪ್ರಕರಣಗಳು ಹೆಚ್ಚಿದ್ದವು. ಈಗ ನಮ್ಮಲ್ಲಿ ಅವರನ್ನು ಮೀರಿಸುವ ಹಾಗೆ ಒಟ್ಟು ಪ್ರಮಾಣದಲ್ಲಿ ಸುಮಾರು 20 ಪ್ರತಿಶತದಷ್ಟು ಈ ಬಗೆಯ ಅಗಮ್ಯಗಮನ ಸಂಬಂದಗಳು ದಾಖಲಾಗುತ್ತಿರುವದನ್ನು ಗಮನಿಸಿದರೆ ಮನುಷ್ಯ ಸಂಬಂಧಗಳ ಬಗ್ಗೆ ಖಾಳಜಿ ಮತ್ತು ಗೌರವ ಇರುವ ಯಾರಿಗೇ ಆದರೂ ತಾತ್ಸಾರವಾಗುತ್ತದೆ.ದು ಕೇವಲ ರಾಜಧಾನಿಗೆ ಸಂಬಂಧ ಪಟ್ಟಂತೆ ಮಾತ್ರ ಎನ್ನುವದನ್ನೂ ನಾವು ಮರೆಯುವಂತಿಲ್ಲ. ಯಾವುದೇ ಬಗೆಯ ಅತ್ಯಾಚಾರಗಳಿರಲಿ ಅವು ಪೂರ್ಣ ಪ್ರಮಾಣದಲ್ಲಿ ಪೋಲಿಸ್ ಸ್ಟೇಷನ್ ಮೇಟ್ಟಿಲೇರಿ ದಾಖಲಾಗುವದಿಲ್ಲ. ಇನ್ನು ಅಗಮ್ಯಗಮನ ಸಂಬಂಧಗಳಲ್ಲಿ ಜರುಗುವ ಅತ್ಯಾಚಾರಗಳು ಬೆಳಕಿಗೆ ಬರುವುದೇ ತೀರಾ ಕಡಿಮೆ. ಹೀಗಿರುವಾಗಲೂ 215 ಪ್ರಕರಣಗಳು ಈ ಬಗೆಯ ಅಗಮ್ಯಗಮನ ಸಂಬಂಧಗಳಲ್ಲಿ ದಾಖಲಾಗಿರುವುದು ಬೆಚ್ಚಿ ಬೀಳಿಸುವಂತಹ ಸಂಗತಿ. ದೆಹಲಿ ಪೋಲಿಸರು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಹಿಂದೆಂದಿಗಿಂತಲೂ ವಸ್ತುನಿಷ್ಟವಾಗಿ ದಾಖಲಿಸುತ್ತಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿ ಪೋಲಿಸ್ ಸ್ಟೇಷನ್ ಗೆ ಬರಬೇಕೆಂದೆನೂ ಇಲ್ಲ, ಮಹಿಳಾ ಪೋಲಿಸರೇ ಸಮವಸ್ತ್ರ ಧರಿಸದೇ ಅವರ ಬಳಿ ತೆರಳಿ ವಿವರವಾದ ಮಾಹಿತಿ ಪಡೆಯುವದಿದೆ. ಹೀಗೆ ಮಾಡುವ ಮೂಲಕ ಪೋಲಿಸ್ ಇಲಾಖೆಯನ್ನು ಜನಸ್ನೇಹಿ ವ್ಯವಸ್ಥೆಯನ್ನಾಗಿ ರೂಪಿಸುವತ್ತ ಯತ್ನಿಸಲಾಗುತ್ತಿದೆ.

ಎಲ್ಲ ಜೀವಿಗಳಲ್ಲಿ ಮಾನವ ಜೀವಿ ಶ್ರೇಷ್ಟ ಅದಕ್ಕೆ ಕಾರಣ ಆತ ರೂಪಿಸಿಕೊಂಡ ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆ. ಇನ್ನು ಈ ಸಾಮಾಜಿಕ ವ್ಯವಸ್ಥೆಗೆ ಜೀವ ಮತ್ತು ಮೌಲ್ಯ ಬಂದದ್ದೇ ಮನುಷ್ಯ ಸಂಬಂಧಗಳಿಂದಾಗಿ. ಇಂಥಾ ಸಾಮಾಜಿಕ ಸಂಬಂಧಗಳನ್ನು ಧಿಕ್ಕರಿಸಿ ವ್ಯವಹರಿಸುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಅತಿ ಮುಖ್ಯವಾದ ಕಾರಣ ನೈತಿಕ ಅಧ:ಪತನ ಮತ್ತು ಬದಲಾಗುತ್ತಿರುವ ಸಾಮಾಜಿಕ ಜೀವನ. ಸಂಬಂಧಗಳಲ್ಲಿಯ ಸತ್ವ ಮತ್ತು ಶಕ್ತಿಯನ್ನು ಕುರಿತು ಯೋಚಿಸುವ ಮತ್ತು ಅದನ್ನು ಮನದಟ್ಟು ಮಾಡಿಸುವ ಪರಿಸರದ ಕೊರತೆಯೂ ಹೀಗೆಲ್ಲಾ ಆಗಲು ಮುಖ್ಯ ಕಾರಣ. ಮನುಷ್ಯ ಸಂಬಂಧಗಳು ಮಾರ್ಗ ಬದಲಿಸುತ್ತಿವೆ. ಅದರ ಪರಿಣಾಮವಾಗಿ ಮಾನವನಲ್ಲಿಯೇ ಪಶುಸದೃಶವಾದ ವರ್ತನೆಗಳು ಮತ್ತೆ ಮತ್ತೆ ಗೋಚರವಾಗತೊಡಗಿವೆ. ಸರಿ ತಪ್ಪುಗಳ ಬಗ್ಗೆ ಪಾಠ ಹೇಳಿಕೊಡುವ ನೆಲದಲ್ಲಿಯೇ ಅತ್ಯಾಚಾರಗಳು ಜರುಗುತ್ತಿವೆ. ಒಳ್ಳೆಯ ಸಂಸ್ಕಾರವನ್ನು ಹೇಳಿಕೊಡಬೇಕಾದ ಕುಟುಂಬದಲ್ಲಿಯೇ ಈ ಬಗೆಯ ಘಟನೆಗಳು ನಡೆಯುತ್ತಿರುವದು ವಿಷಾದನೀಯ. rape-illustrationಮಕ್ಕಳು ತಪ್ಪು ಮಾಡಿದಾಗ ಪಾಲಕರು ಬುದ್ದಿ ಮಾತನ್ನು ಹೇಳುವುದು ವಾಡಿಕೆ. ಇನ್ನು ಪಾಲಕರೇ ತಪ್ಪು ಮಾಡಿದರೆ..? ಇಲ್ಲಿ ಜರುಗಿದ ಅತ್ಯಾಚಾರಗಳಲ್ಲಿ ಸುಮಾರು 43 ರಷ್ಟು ಅಪರಾಧಿಗಳು ತಂದೆಯ ಸ್ಥಾನದಲ್ಲಿದ್ದವರು. ಅವರಲ್ಲಿ 23 ರಷ್ಟು ಜನ 50 ವರ್ಷದ ಗಡಿ ದಾಟಿದವರು. ಇವೆಲ್ಲವನ್ನು ನೋಡಿದಾಗ ನಮ್ಮ ಸಾಮಾಜಿಕ ವ್ಯವಸ್ಥೆ ಬದಲಾವಣೆ ಹೊಂದುತ್ತಿರುವ ರೀತಿ ಮಾತ್ರ ನೆಟ್ಟಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅತ್ಯಂತ ಅಸಹ್ಯ ಮತ್ತು ತುಚ್ಚ ಎನ್ನಬಹುದಾದ ಈ ಅಗಮ್ಯಗಮನ ಸಂಬಂಧಗಳನ್ನು ಸಹಿಸಿಕೊಳ್ಳುವಷ್ಟು ನಮ್ಮ ಸಮಾಜ ಉದಾರವಾಗುವ ಅವಶ್ಯಕತೆಯಿಲ್ಲ ಎನಿಸುತ್ತದೆ.

ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಹುಡುಗಿಯರನ್ನು ಚುಡಾಯಿಸುವ ಖಯಾಲಿಯ ಹುಡುಗರನ್ನು ಹರಿಯಾಣದ ರೋಹ್ಟಕ್ ನಲ್ಲಿ ಮತ್ತು ನಮ್ಮದೇ ನಾಡಿನ ಮೈಸೂರಿನಲ್ಲಿ ಆ ಟೀಜಿಂಗ್ ಗೆ ಒಳಗಾದ ಹುಡುಗಿಯರೇ ಖುದ್ದಾಗಿ ಕಪಾಳ ಮೋಕ್ಷ ಮಾಡಿ ಮೆಚ್ಚುಗೆ ಬಹುಮಾನ ಪಡೆದ ಸುದ್ದಿಗಳು ಬರುತ್ತಿವೆ. ಇದು ನಿಜವಾಗಿಯೂ ಒಳ್ಳೆಯ ಬೆಳವಣಿಗೆಯೇ.. ಹೀಗೆ ಮತ್ತೆ ಮತ್ತೆ ಇಂಥಾ ತದಕುವ ಸುದ್ಧಿಗಳು ಬಯಲಾಗಬೇಕಿದೆ. ಅವರ ತಂಟೆಗೆ ಹೋಗುವುದೇ ಬೇಡ ಎನ್ನುವಂತಾಗುವವರೆಗೆ ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗುವುದಿಲ್ಲ.

ಜಾತಿವ್ಯವಸ್ಥೆಯ ಸಂಕೀರ್ಣ ರೂಪಗಳು


– ಡಾ.ಎಸ್.ಬಿ. ಜೋಗುರ


 

ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೇರು ಬಿಟ್ಟಿರುವ ಈ ಜಾತಿಪದ್ಧತಿಯನ್ನು ಒಂದು ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯೆಂದು ಅಧ್ಯಯನ ಮಾಡುವ ನಿಟ್ಟಿನಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ವಲಯಗಳಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿವೆಯಾದರೂ ಪ್ರಯತ್ನ ಸಾಲದು. ಜಾತಿ ಪದ್ಧತಿ ಎನ್ನುವುದು ಒಂದು ಶತಮಾನದಿಂದ ಇನ್ನೊಂದು ಶತಮಾನಕ್ಕೆ ಹೊಸ ಬಗೆಯ ಸ್ಥಿತ್ಯಂತರಗಳನ್ನು ಕಂಡುಕೊಳ್ಳುತ್ತಲೇ ಮುಂದೆ ಸಾಗಿದೆ. ನಾವು ಕೆಲವು ದಶಕಗಳ ಹಿಂದೆ ಈಗಿರುವ ಜಾತಿಯಾಧಾರಿತ ಸಂಘಟನೆಗಳು ಮತ್ತು ಅದಕ್ಕೊಬ್ಬ ಮಠಾಧೀಶನನ್ನು ಕಾಣಲಾಗುತ್ತಿರಲಿಲ್ಲ. ಇದನ್ನೇ ಕೆಲವು ಸೋ ಕಾಲ್ಡ್ ಸಾಹಿತಿಗಳು.. ಬುದ್ಧಿಜೀವಿಗಳು ಈ ಬಗೆಯ ಜಾತಿಯ ಸಂಘಟನೆ ಒಂದು ದೇಶದ ಸಾಂಸ್ಕೃತಿಕ ಬಹುತ್ವಕ್ಕೆ ತೀರಾ ಮುಖ್ಯ ಎಂದು ಪ್ರತಿಪಾದಿಸಿದರು. ಹಾಗೆ ಹೇಳುವ ಮೂಲಕ ಅವರೂ ಕೂಡಾ ಪರೋಕ್ಷವಾಗಿ ಜಾತಿ ಒಂದು ಅನಿವಾರ್ಯವಾದ ಸಂಸ್ಥೆ ಎನ್ನುವದನ್ನು ಒಪ್ಪಿಕೊಂಡರು. ತೀರಾ ಪ್ರಾಚೀನ ಕಾಲದಲ್ಲಿ ಅಂದರೆ ವೇದಗಳ ಕಾಲದಲ್ಲಿ ಜಾತಿಯ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ. ವೇದಗಳ ನಂತರದ ಕಾಲದಲ್ಲಿ ಮಾತ್ರ ಈ ಅಸ್ಪ್ರಶ್ಯತೆ ಮತ್ತು ಜಾತಿಯ ಬಗೆಗಿನ ಪ್ರಸ್ತಾಪಗಳು ದೊರೆಯುತ್ತವೆ. ಜನಸಾಮಾನ್ಯರು ಇಂದಿಗೂ ವರ್ಣ ವ್ಯವಸ್ಥೆಯನ್ನೇ ಜಾತಿಯೊಂದಿಗೆ ಕಲಬೆರಕೆ ಮಾಡಿ ಮಾತನಾಡುವದಿದೆ. ಆದರೆ ಸಮಾಜಶಾಸ್ತ್ರೀಯ ಅಧ್ಯಯನಗಳ ಹಿನ್ನೆಲೆಯಲ್ಲಿ ನೋಡಿದಾಗ ವರ್ಣಗಳೇ ಬೇರೆ, caste-systemಜಾತಿಯೇ ಬೇರೆ. ವರ್ಣಗಳು ಕ್ರಮೇಣವಾಗಿ ಕಾಲಾನುಗತಿಕವಾಗಿ ಜಾತಿಪದ್ಧತಿಯ ಹುಟ್ಟಿಗೆ ಕಾರಣವಾಗಿರಬಹುದು, ಆದರೆ ವರ್ಣಗಳೇ ಜಾತಿಗಳಲ್ಲ. ವೇದಗಳ ಆರಂಭದ ಕಾಲದಲ್ಲಿ ಅದರಲ್ಲೂ ಋಗ್ವೇದದ ಪುರುಷಸೂಕ್ತದಲ್ಲಿ ಬರುವ ವಿವರಣೆಯಂತೆ ಬ್ರಾಹ್ಮಣ ಬ್ರಹ್ಮನ ಬಾಹುಗಳಿಂದ ಜನಿಸಿದರು, ಕ್ಷತ್ರಿಯರು ಬ್ರಹ್ಮನ ತೋಳುಗಳಿಂದ, ವೈಶ್ಯರು ಬ್ರಹ್ಮನ ತೊಡೆಯಿಂದ ಶೂದ್ರರು ಬ್ರಹ್ಮನ ಪಾದಗಳಿಂದ ಜನಿಸಿದರು ಎನ್ನುವ ಬಗ್ಗೆ ಶ್ಲೋಕಗಳು ದೊರೆಯುತ್ತವೆ. ಅಂದರೆ ವರ್ಣಗಳು ಸೃಷ್ಟಿಕರ್ತನಾದ ಬ್ರಹ್ಮನ ಕೊಡುಗೆ ಎಂದು ನಂಬಲಾಗುತ್ತದೆ. ಮುಖದಿಂದ, ತೋಳುಗಳಿಂದ ಜನನ ಅಸಾಧ್ಯ; ಅದನ್ನು ಕೇವಲ ಆಯಾ ವರ್ಣಗಳು ಮಾಡುವ ಕೆಲಸವನ್ನು ಸಂಕೇತಿಸುವ ನಿಟ್ಟಿನಲ್ಲಿ ಸೂಚಿತ ಪದಗಳು. ಬ್ರಹ್ಮನ ಮುಖದಿಂದ ಅಂದರೆ ಬ್ರಾಹ್ಮಣರು ವೇದಗಳ ಅಧ್ಯಯನ, ಮಂತ್ರ ಪಠಣ, ರಾಜನಿಗೆ ಮಾರ್ಗದರ್ಶನ ಮುಂತಾದವುಗಳನ್ನು ಮಾಡಬೇಕು. ಕ್ಷತ್ರಿಯ ತೋಳುಗಳಿಂದ ಅಂದರೆ ಪರಾಕ್ರಮದ ಸಂಕೇತ ರಾಜ್ಯವನ್ನು ರಕ್ಷಿಸುವ ಜೊತೆಗೆ ಜನರ ವಿತ್ ಜೀವಿತಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಇನ್ನು ವೈಶ್ಯನಾದವನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚಾರ ಮಾಡಿ ವ್ಯಾಪಾರ ವಹಿವಾಟುಗಳನ್ನು ಮಾಡುವ ಕಾರಣಕ್ಕೆ ಅವನು ತೊಡೆಯಿಂದ ಜನಿಸಿದವನು ಎನ್ನುವ ಸಂಕೇತವಿದೆ. ಇನ್ನು ಶೂದ್ರರು ಈ ಮೇಲಿನ ಮೂರು ವರ್ಣಗಳ ಸೇವೆಯನ್ನು ಮಾಡಬೇಕು ಎನ್ನುವ ಅರ್ಥದಲ್ಲಿ ಅವರು ಪಾದಗಳಿಂದ ಜನಿಸಿದವರು ಎನ್ನುವ ಸಂಕೇತವಿದೆ. ಹಾಗೆ ನೋಡಿದರೆ ಈ ವರ್ಣ ವ್ಯವಸ್ಯೆಯಲ್ಲಿ ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟನ್ನು ಆಧರಿಸಿರದೇ ಆತನ ಗುಣ ಮತ್ತು ಕರ್ಮಗಳನ್ನು ಆಧರಿಸಿದ್ದವು. ಗೀತೆಯಲ್ಲಿ ಕೃಷ್ಣ ಹೇಳುವ ಹಾಗೆ ಚಾತುರ್ವರ್ಣ ಮಯಾಸೃಷ್ಟಿ ಗುಣಕರ್ಮ ವಿಭಾಗಶ:, ಅಂದರೆ ಚತುರ್ವರ್ಣಗಳನ್ನು ಗುಣ ಮತ್ತು ಕರ್ಮಗಳನ್ನು ಆಧರಿಸಿ ವಿಂಗಡಿಸಲಾಗಿದೆಯೇ ಹೊರತು ಹುಟ್ಟನಲ್ಲ. ಇಲ್ಲಿ ಬ್ರಾಹ್ಮಣನ ಮಗ ಬ್ರಾಹ್ಮಣನೇ ಆಗಬೇಕೆಂದಿರಲಿಲ್ಲ. ಆತನಿಗೆ ವಿದ್ಯೆ ಅನುವಾಗದಿದ್ದರೆ ಆತ ಶೂದ್ರನಾಗಬೇಕಿತ್ತು, ವ್ಯಾಪಾರಿ ಸೂತ್ರಗಳನ್ನು ನಿರ್ವಹಿಸಲಾಗದವನು ಶೂರ ಪರಾಕ್ರಮಿ ಆಗಿದ್ದರೆ ಕ್ಷತ್ರಿಯನಾಗುತ್ತಿದ್ದ. ಇವಾವವೂ ನೀಗದಿರುವವನು ಶೂದ್ರನಾಗಿರುತ್ತಿದ್ದ ಎನ್ನುವ ವಿವರಣೆಗಳೂ ಇವೆ. ಆ ಮೂಲಕ ವರ್ಣ ವ್ಯವಸ್ಥೆ ಒಂದು ಸಾಮಾಜಿಕ ವ್ಯವಸ್ಥೆಯ ನಿರ್ವಹಣಾ ಸೂತ್ರವಾಗಿತ್ತೇ ಹೊರತು ಅಲ್ಲಿ ನಾಲ್ಕು ವರ್ಣಗಳಲ್ಲಿ ಯಾವುದೇ ಬಗೆಯ ತಾರತಮ್ಯಗಳಿರಲಿಲ್ಲ ಎಂದು ಹೇಳಲಾಗುತ್ತದೆ. ಹೀಗೆ ಹೇಳುವಾಗಲೇ ಆಶ್ರಮಗಳಲ್ಲಿ ಮೊದಲನೆಯದಾದ ಬ್ರಹ್ಮಚರ್ಯಾಶ್ರಮದಲ್ಲಿ ಶಿಕ್ಷಣಕ್ಕಾಗಿ ತೆರಳುವಾಗ ಕೇವಲ ಮೂರು ವರ್ಣಗಳ ಸಂತಾನಕ್ಕೆ ಮಾತ್ರ ಅಲ್ಲಿ ಪ್ರವೇಶವಿರುವ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. ನಾಲ್ಕನೇಯ ವರ್ಣ ಶೂದ್ರರಿಗೆ ಶಿಕ್ಷಣಕ್ಕಾಗಿ ಗುರುಕುಲದಲ್ಲಿ ಪ್ರವೇಶವಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದೇನೇ ಇರಲಿ ವರ್ಣ ವ್ಯವಸ್ಥೆಯೇ ಭವಿಷ್ಯತ್ತಿನಲ್ಲಿ ಜಾತಿ ವ್ಯವಸ್ಥೆಗೆ ಜನ್ಮ ನೀಡಿರುವದಂತೂ ನಿಜ. ಅದರ ಜೊತೆಗೆ ಇತರೇ ಸಂಗತಿಗಳು ಕೂಡಾ ಕೆಲಸ ಮಾಡಿವೆ. ವರ್ಣ ವ್ಯವಸ್ಥೆಯಲ್ಲಿ ಕೇವಲ ನಾಲ್ಕು ಪ್ರಕಾರಗಳು ಅವು ಇಡೀ ದೇಶದಾದ್ಯಂತ ಸರ್ವವ್ಯಾಪಕವಾಗಿ ಗುರುತಿಸಿಕೊಂಡವುಗಳು. ಜಾತಿಯ ವಿಷಯವಾಗಿ ಹಾಗೆ ಹೇಳಲಾದೀತೇ..? ಸುಮಾರು ೩೦೦೦ ಕ್ಕಿಂತಲೂ ಅಧಿಕ ಜಾತಿ-ಉಪಜಾತಿಗಳು ನಮ್ಮಲ್ಲಿವೆ. ಇಲ್ಲಿರುವ ಏಣಿಶ್ರೇಣಿಯಲ್ಲಿ ಮೇಲಿನ ಮತ್ತು ಕೆಳಗಿನ ಸ್ಥಾನಮಾನಗಳು ಸ್ಥಿರವಾದವುಗಳು, ಅಲ್ಲಿ ಯಾವುದೇ ರೀತಿಯ ಬದಲಾವಣೆಗೆ ಅವಕಾಶವಿಲ್ಲ. ಇನ್ನೇನಾದರೂ ಅಲ್ಪ ಸ್ವಲ್ಪ ಬದಲಾವಣೆಗಳಾದರೆ ಏಣಿಶ್ರೇಣಿಯ ಮಧ್ಯ ಭಾಗದಲ್ಲಿ ಬರುವ ಜಾತಿಗಳಲ್ಲಿ ಮಾತ್ರ. ಅದು ಕೂಡಾ ಕೇವಲ ಅವರೊಂದಿಗೆ ಬೆರೆಯುವ, ಊಟ ಮಾಡುವ, ಕೊಡು ತೆಗೆದುಕೊಳ್ಳುವ ವ್ಯವಹಾರಗಳ ಬಗ್ಗೆ ಮಾತ್ರ.

ಜಾತಿ ಪದ್ಧತಿ ಎನ್ನುವುದು ಇರಬಾರದು ಎಂದು ಪ್ರತಿಪಾದಿಸುವವರು ಇರುವಂತೆ ಅದು ಇರಬೇಕು ಎಂದು ಪ್ರತಿಪಾದಿಸುವವರೂ ಇದ್ದಾರೆ. ಇಲ್ಲಿ ಜಾತಿಪದ್ಧತಿಯನ್ನು ಲಾಭಸೂಚಕ ವಿಷಯವಾಗಿ ಬಳಸಿಕೊಳ್ಳುವವರಿಗೆ ಅದು ಬೇಕು. ಅದರಿಂದ ದಿನಾಲು ಯಾತನೆ ಮತ್ತು ಕಿರಕಿರಿಯನ್ನು ಅನುಭವಿಸುವವರಿಗೆ ಅದು ಬೇಕಾಗಿಲ್ಲ. ಇನ್ನು ಕೆಲವು ಮಡಿವಂತ ಮನಸುಗಳಿಗೆ ಮತ್ತು ಪ್ರತಿಗಾಮಿಗಳಿಗೆ ಅದೊಂದು ಪವಿತ್ರವಾದ ಸಂಸ್ಥೆ. ಅವರು ಬೇಕಾದರೆ ತಮ್ಮ ಜೀವವನ್ನೇ ಬಿಟ್ಟಾರು ಆದರೆ ಜಾತಿಯನ್ನು ಬಿಡುವದಿಲ್ಲ. ಒಟ್ಟು ನಿಸರ್ಗದಲ್ಲಿಯೇ ಮೂಲಭೂತವಾಗಿ ಅಸಮಾನತೆಗಳಿವೆ. ಭೂಮಿಯ ಮೇಲೆ ಯಾವುದು ಒಂದೇ ರೀತಿಯಲ್ಲಿದೆ ಹೇಳಿ..? ಬೆಟ್ಟ-ಗುಡ್ಡ, ನದಿ, ಸರೋವರ, ಗಿಡ ಮರಗಳು ಇಲ್ಲೂ ಅಸಮಾನತೆಗಳಿಲ್ಲವೇ..? ಹಾಗಾಗಿ ಜಾತಿಯೂ ಇರಲಿ ಬಿಡಿ ಎನ್ನುವವರಿಗೆ ನಿಸರ್ಗದಲ್ಲಿಯ ಅಸಮಾನತೆಗೂ ಮತ್ತು ಮಾನವ ರೂಪಿಸಿಕೊಂಡ ಅಸಮಾನತೆಯ ನಡುವಿನ ವ್ಯತ್ಯಾಸಗಳಲ್ಲಿ ಒಂದು ಸ್ಪಷ್ಟವಾದ ಅಂತರವನ್ನು ನಾವು ಗುರುತಿಸಬೇಕಿದೆ. ನಿಸರ್ಗದಲ್ಲಿ ಮಾನವನ ಸಮಾಜದಲ್ಲಿರುವಂತೆ ಶುದ್ಧ-ಅಶುದ್ಧ, ಮಡಿ-ಮೈಲಿಗೆ, ಸ್ಪೃಶ್ಯ-ಅಸ್ಪೃಶ್ಯ ಎನ್ನುವ ಭಾವನೆಗಳು ಇಲ್ಲ. ಜಾತಿ ಹುಟ್ಟಿಸಿರುವ ಈ ಬಗೆಯ ಅಸಮಾನತೆಗಳು ಅಂತರಗಳು ಸಾಮಾಜಿಕ ಐಕ್ಯತೆಗೆ ನೇರವಾಗಿ ಗಂಡಾಂತರಕಾರಿಯಾಗಿ ಕೆಲಸ ಮಾಡುತ್ತವೆ. ಹಾಗಾಗಿಯೇ ಅನೇಕ ಸಮಾಜಶಾಸ್ತ್ರಜ್ಞರು ಜಾತಿಯನ್ನು ಕುರಿತು ಅದರ ಸ್ವರೂಪದ ಬಗ್ಗೆ ಚರ್ಚಿಸುವಾಗ ಇದು ಭಾರತೀಯ ಸಮಾಜದ ಹೋಳು-ಹೋಳಾದ ಭಾಗ ಎಂದು ಹೇಳುವದಿದೆ. ಜಾತಿ-ಜಾತಿಯ ನಡುವೆ ನಿರ್ಮಿಸಲಾಗುವ ಗೋಡೆಗಳು ತನ್ನ ತನ್ನ ಜಾತಿಯ ಶ್ರೇಷ್ಟತೆಯನ್ನು ಸಾರುವ ಜೊತೆಗೆ ಪ್ರತ್ಯೇಕತೆಯನ್ನೂ ಸಾರುತ್ತದೆ. ಇದು ಹೆಚ್ಚು ಅಪಾಯಕಾರಿ. ಸಾಂಸ್ಕೃತಿಕ ಬಹುತ್ವ ಸರಿ ಆದರೆ ಅದು ಅಖಂಡವಾಗಿರಬೇಕಲ್ಲವೇ..? ತುಂಡು ತುಂಡಾದಷ್ಟು ಸಾಮಾಜಿಕ ಐಕ್ಯತೆಗೆ ಅಪಾಯ ಬಂದೊದಗುತ್ತದೆ. ಈಗ ನಮ್ಮಲ್ಲಿ ಜಾತಿಯ ಹಿನ್ನೆಲೆಯಲ್ಲಿ ನಡೆಯುವ ಗಲಭೆಗಳು, ಹಿಂಸೆಗಳು, ಅತ್ಯಾಚಾರಗಳು, ತಾರತಮ್ಯಗಳನ್ನು ಗಮನಿಸಿದಾಗ ಈ ಮಾತು ಮನದಟ್ಟಾಗಬಹುದು.

ಇನ್ನು ಈ ಜಾತಿ ಮತ್ತು ಅಸ್ಪೃಶ್ಯತೆಯನ್ನು ಅಧ್ಯಯನ ಮಾಡುವವರು ಅತಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳನ್ನು ಹೆಚ್ಚೆಚ್ಚು ಗಮನಿಸಬೇಕಾಗುತ್ತದೆ. ಯಾಕೆಂದರೆ ನಗರ ಪ್ರದೇಶದ ಹೊರ ಬದುಕನ್ನು ಗಮನಿಸಿ, ಈಗ ಜಾತಿ ಪದ್ಧತಿ ಅಷ್ಟಾಗಿ ಇಲ್ಲ ಬದಲಾಗಿದೆ ಎನ್ನುವ ಶರಾ ಎಳೆಯುವ ಅಪಾಯಗಳಿವೆ. ನಗರ ಬದುಕಿನ ಸಂಕೀರ್ಣತೆ ಜಾತಿಯ ಉಪಸ್ಥಿತಿಯನ್ನು ವ್ಯವಹಾರಿಕವಾದ ಕಾರಣಗಳಿಗಾಗಿ ನಗಣ್ಯವಾಗಿಸಿಕೊಂಡಿದೆ. ಹಾಗಾಗಿ ಸಾರ್ವಜನಿಕ ವಲಯಗಳಲ್ಲಿ ನಿಮಗೆ ಅದರ ರಗಳೆ ಅಷ್ಟಾಗಿ ಬಾಧಿಸುವದಿಲ್ಲ. ಅಲ್ಲಿಯೂ ಆಯಾ ಜಾತಿಗಳ ಸಂಘಟನೆಗಳಿವೆ, ಕಲ್ಯಾಣ ಮಂಟಪಗಳಿವೆ, ವಿದ್ಯಾರ್ಥಿ ನಿಲಯಗಳಿವೆ. caste-clashesಇವೆಲ್ಲವನ್ನು ಗಮನಿಸಿದಾಗ ನಗರದ ಖಾಸಗಿ ಬದುಕಿನಲ್ಲಿ ಜಾತಿಯ ಪ್ರಭಾವ ಗಾಢವಾಗಿ ಇದ್ದೇ ಇದೆ. ಇನ್ನು ಒಳ-ಹೊರಗಿನ ಎರಡೂ ವಲಯಗಳನ್ನು ಅಪಾರವಾಗಿ ಬಾಧಿಸುವ ಜಾತಿಯನ್ನು ನೀವು ಗ್ರಹಿಸಬೇಕಿದ್ದರೆ ಭಾರತದ ಹಳ್ಳಿಗಳನ್ನು ನಾವು ನೋಡಬೇಕು. ದೇಶದ ಬೇರೆ ಬೇರೆ ಭಾಗಗಳ ಗ್ರಾಮಗಳು ಬೇರೆ ಬೇರೆ ರೀತಿಯಲ್ಲಿ ಈ ಜಾತಿ ಮತ್ತು ಅಸ್ಪ್ರಶ್ಯತೆಯ ಮೂಲಕ ಬೂದಿ ಮುಚ್ಚಿದ ಕೆಂಡದುಂಡೆಗಳಾಗಿ ಉಳಿದಿವೆ. ಬಿಹಾರ ರಾಜ್ಯವಂತೂ ಆ ದಿಸೆಯಲ್ಲಿ ಅಗ್ರಗಣ್ಯ. ದಕ್ಷಿಣದ ಭಾಗಗಳಾದ ಕೇರಳ, ತಮಿಳುನಾಡು, ಕರ್ನಾಟಕಗಳ ಗ್ರಾಮಗಳಲ್ಲಿ ಇಂದಿಗೂ ಪರಿಸ್ಥಿತಿ ಅಷ್ಟೆನೂ ಸುಧಾರಣೆಯಾದಂತಿಲ್ಲ. ಕೆಲ ದಶಕಗಳ ಹಿಂದೆ ನೇರವಾಗಿ ಹಳ್ಳಿಗಳಲ್ಲಿ ಜಾತೀಯತೆ ಎದ್ದು ತೋರುತ್ತಿತ್ತು. ಇಂದು ಅಲ್ಲಿಯ ಕೆಳಜಾತಿಗಳು ಸುಶಿಕ್ಷಿತರಾಗಿರುವದರಿಂದ ಅಲ್ಲಿಯ ಜಾತಿಯೊಳಗಿನ ನಡುವಳಿಕೆಗಳಲ್ಲಿ ಬದಲಾವಣೆಗಳಾಗಿವೆ ಅದರ ಪರಿಣಾಮವಾಗಿ ಮೇಲಿನ ಮತ್ತು ಕೆಳಗಿನ ಜಾತಿಗಳ ನಡುವೆ ಒಂದು ಬಗೆಯ ಶೀತಲ ಸಮರ ಆರಂಭವಾಗಿದೆ. ಅಸ್ಪ್ರಶ್ಯ ಜಾತಿಗಳು ತಲೆ ತಲಾಂತರದಿಂದಲೂ ಮಾಡಿಕೊಂಡು ಬಂದ ಲಾಭವಿಲ್ಲದ ಜಾತಿಯಾಧಾರಿತ ವೃತ್ತಿಗಳನ್ನೇ ಮಾಡಬೇಕೆಂಬ ಒತ್ತಡವನ್ನು ಈಗಿನ ಪೀಳಿಗೆಯ ಮೇಲೆ ಹೇರುವ ಸ್ಥಿತಿಯಿಲ್ಲ. ಆದರೆ ಊಟೋಪಚಾರ, ಬೆರೆಯುವಿಕೆ, ವಿವಾಹ ಮುಂತಾದ ವಿಷಯಗಳಲ್ಲಿ ಈಗಲೂ ಅದೇ ಜಡತ್ವ ಗ್ರಾಮೀಣ ಪ್ರದೇಶದ ಜಾತಿ ಪದ್ಧತಿಯಲ್ಲಿದೆ. ನಾನು ಚಿಕ್ಕವನಿದ್ದಾಗ ನೋಡಿರುವದಿದೆ. ಮನೆಗೆ ಯಾರಾದರೂ ಅಸ್ಪೃಶ್ಯರು ನೀರು ಕೇಳಿ ಬಂದರೆ ತಂಬಿಗೆಯಿಂದ ನೀರನ್ನು ಎತ್ತಿ ಹಾಕುವದಿತ್ತು. ಇವತ್ತಿಗೂ ಕೆಲ ಗ್ರಾಮಗಳಲ್ಲಿ ಕೆಳ ಸ್ತರಗಳಿಗೆ ಹೊಟೇಲಲ್ಲಿ ಚಾ ಕುಡಿಯುವ ಲೋಟವನ್ನೇ ಪ್ರತ್ಯೇಕವಾಗಿಟ್ಟಿರುವದಿದೆ. caste-system2ಯಾವುದಾದರೂ ಜಮೀನ್ದಾರನ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದರೆ ಅವನದೇ ಒಂದು ಊಟದ ತಟ್ಟೆ ಪ್ರತ್ಯೇಕವಾಗಿರುವದನ್ನು ಈಗಲೂ ಗ್ರಾಮೀಣ ಭಾಗಗಳಲ್ಲಿ ಗಮನಿಸಬಹುದು. ಲೋಹಿಯಾರಂಥಾ ಚಿಂತಕರು ಜಾತಿಪದ್ಧತಿಯ ನಿರ್ಮೂಲನೆಯಲ್ಲಿ ಸಹಪಂಕ್ತಿ ಭೋಜನ ಮತ್ತು ಅಂತರಜಾತಿಯ ಮದುವೆಗಳನ್ನು ಸಲಹೆ ಮಾಡಿದರು. ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕೇಳಿಬರುವ ಮರ್ಯಾದೆ ಹತ್ಯೆಗಳಿಗೆ ಉತ್ತರವೇನು..? ಜಾತಿಪದ್ಧತಿಯಲ್ಲಿ ಒಟ್ಟಾರೆಯಾಗಿ ಬದಲಾವಣೆಗಳು ಆಗುತ್ತಿಲ್ಲ ಎಂದಲ್ಲ, ಸಮಾಜಶಾಸ್ತ್ರಜ್ಞ ಜಿ.ಕೆ.ಕಾರಂತ ಎನ್ನುವವರು ಬೆಂಗಳೂರಿನ ಸಮೀಪವಿರುವ ಕೆಲವು ಹಳ್ಳಿಗಳನ್ನು [೧೯೮೧] ಅಧ್ಯಯನ ಮಾಡುವಾಗ ಕೆಳಜಾತಿಗಳು ತಯಾರಿಸುವ ಅಡುಗೆಯನ್ನು ಊಟ ಮಾಡುತ್ತೀರಾ..? ಎನ್ನುವ ಪ್ರಶ್ನೆಗೆ ಉತ್ತರವಾಗಿ ಅನೇಕ ಯುವಕರು ತಪ್ಪೇನಿದೆ..? ಅವರು ಸ್ವಚ್ಚವಾಗಿ ತಯಾರಿಸಿದರೆ ನಾವು ಸ್ವೀಕರಿಸುತ್ತೇವೆ ಎಂದಿರುವದನ್ನು ಅವರು ನೆನಪು ಮಾಡಿ ಕೊಟ್ಟಿರುವದಿದೆ. ರಾಜಪುರ ಎನ್ನುವ ಹಳ್ಳಿಯನ್ನು ಅಧ್ಯಯನ ಮಾಡುವಾಗ ಅಲ್ಲಿಯ ಅಸ್ಪ್ರಶ್ಯ ಜಾತಿಗಳು ಪ್ರಧಾನ ಜಾತಿಯಾದ ಒಕ್ಕಲಿಗ ಜಾತಿಯ ಜನರಿಗೆ ಮದ್ಯ ವಿತರಿಸುವ ಕೆಲಸ ಮಾಡುತ್ತಿದ್ದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗೆ ಸಣ್ಣ ಪುಟ್ಟ ಬದಲಾವಣೆಗಳು ಜರಗುತ್ತಿವೆ ಎನ್ನುವ ಬಗ್ಗೆ ಕಾರಂತರು ಸಾಕ್ಷೀಕರಿಸಿದ್ದಾರೆ. ಅದೇ ರೀತಿಯಲ್ಲಿ ಮೈಸೂರಿನ ಸಮೀಪ ಇರುವ ರಾಮಪುರ ಹಳ್ಳಿಯನ್ನು ಅಧ್ಯಯನ ಮಾಡುವ ವೇಳೆಯಲ್ಲಿಯೂ ಎಮ್.ಎನ್.ಶ್ರೀನಿವಾಸರೂ ಈ ಬಗೆಯ ಸಣ್ಣ ಪುಟ್ಟ ಪರಿವರ್ತನೆಗಳನ್ನು ಕಂಡುಕೊಂಡಿರುವದಿದೆ. ಈ ಬಗೆಯ ಬದಲಾವಣೆಗಳು ಜರುಗುತ್ತಿವೆ ಎನ್ನುವಾಗಲೇ ಅದರ ಇನ್ನೊಂದು ಮಗ್ಗಲು ಮತ್ತಷ್ಟು ಜಟಿಲವಾಗುತ್ತಿರುತ್ತದೆ.

ಹೆಸರಾಯಿತು ಕರ್ನಾಟಕ.. ಉಸಿರಾಗಲಿಲ್ಲ ಕನ್ನಡ..!


– ಡಾ.ಎಸ್.ಬಿ. ಜೋಗುರ


 

 

ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಾಪದಂ ವಸು
ಧಾವಲಯವಿಲೀನ ವಿಶದ ವಿಷಯ ವಿಶೇಷಂ

ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ವಿಸ್ತರಿಸಿತ್ತು ಎನ್ನುವುದನ್ನು ಕವಿ ನೃಪತುಂಗ ವರ್ಣಿಸಿರುವ ಹಾಗೆ ಚಾರಿತ್ರಿಕವಾಗಿ ಮಾತನಾಡುವದಾದರೆ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂದ್ರಪ್ರದೇಶ ಮುಂತಾದ ರಾಜ್ಯಗಳ ಗಡಿ ಭಾಗಗಳಲ್ಲಿ ಕನ್ನಡದ ಸೀಮೆಗಳಿರುವುದು ವಿಧಿತವಾಗುತ್ತದೆ. ಅದರ ಪರಿಣಾಮವಾಗಿಯೇ ನಾವು ಇವತ್ತಿನವರೆಗೂ ಕನ್ನಡ ಭಾಷೆಯನ್ನು ಗಟ್ಟಿಯಾಗಿ ಬೆಳೆಸುವ ಬಗ್ಗೆ ಆಲೋಚಿಸುವ, ಮಾತನಾಡುವ ಸ್ಥಿತಿ ಎದುರಾಗಿದೆ. ಕರ್ನಾಟಕದ ಏಕೀಕರಣದ ಸಂದರ್ಭದಿಂದಲೂ ಒಂದಿಲ್ಲಾ ಒಂದು ರೀತಿಯ ಅಪಸ್ವರಗಳು ನಾಡಿನ ಏಕೀಕರಣದ ಬಗ್ಗೆ ಮತ್ತು ಮೈಸೂರು ರಾಜ್ಯ ಇದ್ದದ್ದು ಕರ್ನಾಟಕವಾಗಿ ಮರು ನಾಮಕರಣಗೊಳ್ಳುವವರೆಗಿನ ಬೆಳವಣಿಗೆಗಳು ಮಾತ್ರವಲ್ಲದೇ, ಸದ್ಯದ ಜಾಗತೀಕರಣದ ಸಂದರ್ಭದಲ್ಲಿಯೂ ನಾವು ನಾಡ Karnataka mapನುಡಿಯ ಸಂರಕ್ಷಣೆ ಬಗ್ಗೆ ಆಲೋಚಿಸಬೇಕಾಗಿದೆ. ನವಂಬರ್ ೧-೧೯೫೬ ರ ಸಂದರ್ಭದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯ ಎನ್ನುವ ಹೆಸರಿನಲ್ಲಿ ಕನ್ನಡ ರಾಜ್ಯ ಉದಯವಾಯಿತು. ಆ ಸಂದರ್ಭದಲ್ಲಿ ಕನ್ನಡದ ಕಟ್ಟಾಳು ಎಂದೇ ಕರೆಯಿಸಿಕೊಳ್ಳುತ್ತಿದ್ದ ಕೃಷ್ಣ ಕುಮಾರ ಕಲ್ಲೂರ ಅವರು ಪಾಟೀಲ ಪುಟ್ಟಪ್ಪನವರಿಗೆ ಒಂದು ಪತ್ರ ಬರೆದಿದ್ದರು [ ಸಮಗ್ರ ಪಾಪು ಪ್ರಪಂಚ- ಸಂಪುಟ ೩ ಪುಟ ೨೧೩] ‘ಕರ್ನಾಟಕ ಎನ್ನುವ ಹೆಸರಿಲ್ಲದ, ಹಂಪೆಯು ರಾಜಧಾನಿಯಲ್ಲದ, ಈ ರಾಜ್ಯವು ನನಗೆ ಕರ್ನಾಟಕವೇ ಅಲ್ಲ. ಎಲ್ಲಿಯೋ ನಿಮ್ಮಂಥ ಕೆಲವರು, ಪಂಡರೀಕನಿಗೋಸುಗ ಪರಿತಪಿಸುವ ಮಹಾಶ್ವೇತೆಯಂತೆ, ಕರ್ನಾಟಕ ಎಂದು ಬಡಬಡಿಸುತ್ತ ಕುಳಿತಿದ್ದೀರಿ’ ಎಂದು ಬರೆದಿದ್ದರು. ಈ ಬಗೆಯ ಅಸಮಾಧಾನ ಅನೇಕರಲ್ಲಿ ಇದ್ದ ಕಾರಣದಿಂದಲೇ ೧೯೭೩ ರ ಸಂದರ್ಭದಲ್ಲಿ “ಕರ್ನಾಟಕ” ಎಂದು ಮರು ನಾಮಕರಣವಾಯಿತು. ಆ ನಾಮಕಾರಣಕ್ಕಾಗಿ ದಾವಣಗೇರಿಯ ಕೆ.ಎಮ್.ರುದ್ರಪ್ಪನಂಥವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೂ ಅದರ ಕೊಡುಗೆ ಸಂದದ್ದು ಆಗಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರಿಗೆ. ಕರ್ನಾಟಕ ಎಂಬ ಹೆಸರಿನ ಬಗ್ಗೆ ಅಷ್ಟಕ್ಕಷ್ಟೇ ಮನಸಿದ್ದ ದೇವರಾಜ ಅರಸರಿಗೆ ಆ ಕ್ರೆಡಿಟ್ ಹೋದ ಬಗ್ಗೆಯೂ ಪಾಟೀಲ ಪುಟ್ಟಪ್ಪ ತಮ್ಮ ಕೃತಿಯಲ್ಲಿ ವಿಷಾದ ವ್ಯಕ್ತ ಪಡಿಸಿರುವದಿದೆ. ಕರ್ನಾಟಕದ ಏಕೀಕರಣ ಚಳುವಳಿ ಜರುಗಿ ಆರು ದಶಕಗಳಾದರೂ ಇಂದಿಗೂ ನಾವು ಕನ್ನಡದ ಸ್ಥಿತಿ ಗತಿಯ ಬಗ್ಗೆ ಮತ್ತು ಕನ್ನಡ ನಾಡು-ನುಡಿಯ ಬಲಸಂವರ್ಧನೆಯ ಬಗೆಗಿನ ಮಾತುಗಳು ಕೇಳಿ ಬರುತ್ತಿವೆ ಎನ್ನುವುದೇ ಬಹು ದೊಡ್ಡ ವಿಪರ್ಯಾಸ. ಯಾವ ಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಬಲಗೊಳ್ಳಬೇಕೋ ಅದು ಸಾಧ್ಯವಾಗುತ್ತಿಲ್ಲ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಲ್ಲವೇ ಗಡಿ ಭಾಗಗಳಲ್ಲಿ ಕುತ್ತು ಬರಲಿದೆ ಎಂದಾಗ ಒಂದಷ್ಟು ಕನ್ನಡದ ಕಟ್ಟಾಳುಗಳು ಮಾತಾಡುವುದು, ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟರೆ ಮಿಕ್ಕಂತೆ ಮತ್ತೆ ಕನ್ನಡದ ಅಳಿವು ಉಳಿವಿನ ಪ್ರಶ್ನೆ ಮತ್ತು ಚರ್ಚೆ ಮತ್ತೊಂದು ರಾಜ್ಯೋತ್ಸವದ ಸಂದರ್ಭದಲ್ಲಿಯೇ.. ಅಷ್ಟಕ್ಕೂ ನಮ್ಮ ನೆಲದ ಭಾಷೆಯ ಬಗ್ಗೆ, ಅದರ ಸಂರಕ್ಷಣೆಯ ಬಗೆಗೆ ತನ್ನದೇ ನೆಲದಲ್ಲಿ ಹೀಗೆ ಉಳಿವು, ಬಲ ಸಂವರ್ಧನೆಯ ಬಗ್ಗೆ ಮಾತಾಡಬಂದದ್ದು ಕನ್ನಡ ಭಾಷೆಯ ಬಹುದೊಡ್ದ ವ್ಯಂಗ್ಯವೂ ಹೌದು. ಶಾಸ್ತ್ರೀಯ ಸ್ಥಾನಮಾನ ಸಿಕ್ಕನಂತರ ಭಯಂಕರ ಬದಲಾವಣೆಗಳಾಗುತ್ತವೆ. ಒಂದು ಹೊಸ ಬಗೆಯ ಪುಷ್ಟಿ ಕನ್ನಡ ಭಾಷೆಗೆ ದೊರೆಯುತ್ತದೆ ಎನ್ನುವ ಮಾತುಗಳೀಗ ಕನ್ನಡ ಭಾಷೆ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದೆ ಎನ್ನುವಂತಾಗಿದೆ. ಯಾವುದೇ ಒಂದು ಪ್ರಾದೇಶಿಕ ಭಾಷೆ ಬಲಗೊಳ್ಳುವುದು ಅದರ ದೈನಂದಿನ ವ್ಯವಹಾರಿಕ ಬಳಕೆಯ ಮಹತ್ವದ ಮೂಲಕವೇ ಹೊರತು ಭಾಷಣಗಳ ಮೂಲಕ..ಘೋಷಣೆಗಳ ಮೂಲಕವಲ್ಲ.

ಕನ್ನಡಕ್ಕೆ ಆಧುನಿಕ ಸಂದರ್ಭಲ್ಲಿ ಇನ್ನಷ್ಟು ತೊಡಕುಗಳು ಎದುರಾದಂತಿವೆ. ಜಾಗತೀಕರಣದ ಸಂದರ್ಭದಲ್ಲಿ ಈ ಪ್ರಾದೇಶಿಕ ಭಾಷೆಗಳು ಕೇವಲ ಅವರವರ ಮನೆಗೆ ಮಾತ್ರ ಸೀಮಿತವಾಗಿ ಉಳಿಯುವ ಸ್ಥಿತಿ ಬಂದೊದಗಿದೆ. ಜಾಗತೀಕರಣ ಆಂಗ್ಲ ಭಾಷೆ ಬಲ್ಲವರನ್ನು ಮಾತ್ರ ಎತ್ತಿಕೊಳ್ಳುತ್ತದೆ ಎನ್ನುವದನ್ನು ಮತ್ತೆ ಮತ್ತೆ ಎತ್ತಿ ಹೇಳಲಾಗುತ್ತದೆ. ಜೊತೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದ ಮಿತಿಗಳಿವೆ ಎನ್ನುವ ಮೂಲಕ ಪರೊಕ್ಷವಾಗಿ ಈ ಭಾಷೆಯನ್ನು ಮನೆಯ ಹೊರಗಡೆ ಬೆಳೆಸುವ ಯತ್ನಗಳು ಅಷ್ಟಾಗಿ ನಡೆಯುತ್ತಿಲ್ಲ. ಇನ್ನು ಕಾನ್ವೆಂಟ್ ಶಿಕ್ಷಣ ಪಡೆಯುವ ಒಂದು ದೊಡ್ಡ ತಲೆಮಾರಿಗೆ ಕನ್ನಡದ ಬಗ್ಗೆ ಅಲರ್ಜಿ. ಅವರಿಗೆ ನಾಲ್ಕು ಕನ್ನಡ ಲೇಖಕರ ಹೆಸರುಗಳ ಬಗ್ಗೆಯಾಗಲೀ, ಅವರ ಕೃತಿಗಳ ಬಗ್ಗೆಯಾಗಲೀ ತಿಳಿದಿಲ್ಲ. ಅವರು ಕನ್ನಡದಲ್ಲಿ ಮಾತಾಡುವುದೇ ಕನಿಷ್ಟ ಎಂದು ತಿಳಿದವರು.

ನಗರ ಪ್ರದೇಶಗಳಲ್ಲಿ ದೈಹಿಕ ಪರಿಶ್ರಮದ ವ್ಯವಹಾರಗಳನ್ನು ಅವಲಂಬಿಸಿರುವವನು ಕೂಡಾ ಆಂಗ್ಲ ಭಾಷೆಯಲ್ಲಿ ವ್ಯವಹರಿಸುವ ಅಗತ್ಯವಿದೆಯೇ..? Flag_of_Karnatakaಅಷ್ಟಕ್ಕೂ ಅವನು ವ್ಯವಹರಿಸುತ್ತಿರುವುದು ತನ್ನದೇ ನೆಲದ ಜನರೊಡನೆ ಎನ್ನುವುದನ್ನು ಮರೆಯುವಂತಿಲ್ಲ. ಇನ್ನು ಕೆಲ ಕಡೆಗಳಲ್ಲಿ ನಮ್ಮ ಪ್ರಾದೇಶಿಕತೆಯ ಒಳಗಡೆಯೇ ಜನ್ಮ ಪಡೆದ ತೀರಾ ಸಣ್ಣ ಪುಟ್ಟ ಸ್ಥಳೀಯ ಭಾಷೆಗಳು ಕೂಡಾ ಕನ್ನಡ ಭಾಷೆಗೆ ತಕ್ಕ ಮಟ್ಟಿಗೆ ತೊಡಕಾಗಿವೆ.. ಆಗುತ್ತಿವೆ. ಉದಾಹರಣೆಗೆ ಮಂಗಳೂರು ಭಾಗದಲ್ಲಾದರೆ ತುಳು ಮತ್ತು ಕೊಂಕಣಿ, ಕಾರವಾರದಲ್ಲಿ ಕೊಂಕಣಿ, ಬೆಳಗಾವಿಯಲ್ಲಿ ಮರಾಠಿ, ಗುಲಬರ್ಗಾ ಮತ್ತು ಬಿಜಾಪುರ ಭಾಗದಲ್ಲಿ ಉರ್ದು, ಬಳ್ಳಾರಿಯಲ್ಲಿ ತೆಲುಗು, ಬೆಂಗಳೂರಲ್ಲಿ ನೆರೆಯ ರಾಜ್ಯದ ತಮಿಳು, ತೆಲುಗು ಹೀಗೆ ಇತರೆ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡುವ ಮೂಲಕ ಅದರ ಬೆಳವಣಿಗೆಯನ್ನು ಇನ್ನಷ್ಟು ಕುಂಠಿತಗೊಳಿಸಲಾಗುತ್ತಿದೆ. ಈ ನಮ್ಮದೇ ನೆಲದ ಸಣ್ಣ ಪುಟ್ಟ ಭಾಷೆಗಳಾದ ಕೊಂಕಣಿ, ತುಳು, ಕೊಡವ ಮುಂತಾದ ಭಾಷೆಗಳನ್ನು ಉಳಿಸಿಕೊಂಡು ಕನ್ನಡವನ್ನು ಬೆಳೆಸುವ ಬಗ್ಗೆ ಯೊಚಿಸಬೇಕಾಗಿದೆ. ೧೮೯೦ ರ ಸಂದರ್ಭದಲ್ಲಿ ಕನ್ನಡಕ್ಕಾಗಿಯೇ ಕೈ-ಮೈ ಎತ್ತಲು ಜನ್ಮ ತಳೆದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಅಂದಿನಿಂದ ಇಂದಿನವರೆಗೂ ಕನ್ನಡ ನಾಡು-ನುಡಿಯ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸುತ್ತ ಬಂದಿದೆ. ಅದು ಹುಟ್ಟುವದಕ್ಕಿಂತಾ ಎರಡು ದಶಕಗಳ ಮುಂಚೆಯೇ ಡೆಪ್ಯುಟಿ ಚನ್ನಬಸಪ್ಪನಂಥವರು ಕನ್ನಡದ ಶ್ರೇಯೋಭಿವೃದ್ಧಿಗಾಗಿ ಕಂಕಣ ಕಟ್ಟಿದ್ದರು. ಹುಯಿಲಗೋಳ ನಾರಾಯಣರಾವ, ಆಲೂರ ವೆಂಕಟರಾಯ, ಅಂದಾನಪ್ಪ ದೊಡ್ದಮೇಟಿ, ಅದರಗುಂಚಿ ಶಂಕರಗೌಡ, ರಾ.ಹ.ದೇಶಪಾಂಡೆ ಮುಂತಾದವರು ನಾಡು ನುಡಿಗಾಗಿ ಹಗಲಿರುಳು ಶ್ರಮಿಸಿದವರು.

ಕನ್ನಡ ಭಾಷೆ ಶಿಕ್ಷಣ ಮತ್ತು ಉದ್ಯೋಗದ ಭಾಷೆಯಾಗಬೇಕೆನ್ನುವ ಕೂಗು ಇಂದು ನೆನ್ನೆಯದಲ್ಲ. ೧೯೩೯ ರ ಸಂದರ್ಭದಲ್ಲಿ ಅಂದಿನ ವಿದ್ಯಾಂಮತ್ರಿಗಳಾಗಿದ್ದ ಡಾ ಸುಬ್ಬರಾಯ ಅವರು ಮಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಭಾಗವಾಹಿಸಿ ಮಾತನಾಡುತ್ತಾ ‘ಸ್ಥಳೀಯ ಭಾಷೆಯೇ ಶಿಕ್ಷಣ ಭಾಷೆಯಾಗಬೇಕು. ದಕ್ಷಿಣ ಕನ್ನಡದ ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಶಿಕ್ಷಣ ಭಾಷೆಯಾಗಿ ಸ್ವೀಕರಿಸಬೇಕು. ಈ ನಿಯiಕ್ಕೆ ತಾತ್ಕಾಲಿಕವಾಗಿ ಅಪವಾದಗಳನ್ನು ತರಬಹುದಾಗಿದ್ದರೂ ಇಂದಲ್ಲದಿದ್ದರೆ ನಾಳೆ ಕನ್ನಡವನ್ನು ಒಪ್ಪಿಕೊಳ್ಳಲು ಸಕಲರೂ ಸಿದ್ಧರಿರಬೇಕು’ ಎಂದು ಕರಾರುವಕ್ಕಾಗಿ ಮಾತನಾಡಿದ್ದರು [ಕಡೆಂಗೋಡ್ಲು ಲೇಖನಗಳು -ಪು ೩೬೨] ನಾವು ಅತಿ ಮುಖ್ಯವಾಗಿ ವಾಸ್ತವದಲ್ಲಿ ನಿಂತು ಕನ್ನಡವನ್ನು ಕಟ್ಟುವ ಬಗ್ಗೆ ಆಲೋಚಿಸಬೇಕಿದೆ. ಕನ್ನಡ ಎನ್ನುವುದು ಉದ್ಯೋಗದ ಭಾಷೆಯಾಗಬೇಕು.ನಾಡಿನ ಯಾವುದೇ ಇಲಾಖೆಯ ಹುದ್ದೆಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಪ್ರಥಮ ಪ್ರಾಶಸ್ತ್ಯ ಕೊಡುವಂತಾಗಬೇಕು. ಒಂದು ಭಾಷೆ ಕೇವಲ ಸೆಂಟಿಮೆಂಟಲ್ ಆಗಿ ಬೆಳೆಸಲು ನೋಡುವುದು ಆ ಭಾಷೆಯ ಜಡತ್ವಕ್ಕೆ ಕಾರಣವಾಗಬಹುದಾದ ಸಾಧ್ಯತೆಗಳಿವೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಡಾ.ಪಾಟೇಲ ಪುಟ್ಟಪ್ಪ ಜೂನ್ ೧೧-೧೯೮೬ ರ ಸಂದರ್ಭದಲ್ಲಿಯೇ ನಾನು ಮೇಲೆ ಚರ್ಚಿಸಿದ ಭಾಷೆ ಮತ್ತು ಉದ್ಯೋಗದ ವಿಷಯವಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಪತ್ರ ಬರೆದಿರುವದಿz. ಅದರ ಒಕ್ಕಣಿಕೆ ಹೀಗಿತ್ತು [ ಕನ್ನಡ ಕಾವಲು-ಸಂ ಡಾ.ಗುರುಲಿಂಗ ಕಾಪಸೆ ಪು-೯]

ಪ್ರಿಯ ಶ್ರೀ ರಾಮಕೃಷ್ಣ ಹೆಗಡೆಯವರಿಗೆ,

ಸಪ್ರೇಮ ವಂದನೆಗಳು.

ಆಡಳಿತದಲ್ಲಿ ಕನ್ನಡವನ್ನು ತರಬೇಕೆಂದು ಸರ್ಕಾರ ಉದ್ದೇಶಪಟ್ಟು ಆದೇಶಗಳನ್ನು ಹೊರಡಿಸಿದೆ.ಆದರೆ ಇದಕ್ಕೆ ಅನುಗುಣವಾಗಿ ಕೈಗೊಳ್ಳಬೇಕಾದ ಅನೇಕ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಇನ್ನೂ ಬಾಕಿ ಉಳಿದಿದೆ. ಸರ್ಕಾರದ ನೇಮಕಾತಿ ಸಮಿತಿಗಳ ಮೂಲಕ ಎಲ್ಲಾ ಇಲಾಖೆಗಳಿಗೆ ಜನರನ್ನು ಆಯ್ಕೆ ಮಾಡಲಾಗುತ್ತಿದೆ. ಈರೀತಿ ಆಯ್ಕೆಯಾಗುವ ಜನರು ಕನ್ನಡ ಜ್ಞಾನವನ್ನು ಹೊಂದಿರಲೇಬೆಕೆಂಬ ನಿಬಂಧನೆ ಏನೂ ಇಲ್ಲ. ಈ ನೇಮಕಾತಿ ನಿಯಮಗಳಲ್ಲಿ ಈಕುರಿತು ನೀವು ಸೂಕ್ತ ಬದಲಾವಣೆಗಳನ್ನು ಮಾಡಿ ಕನ್ನಡದ ಜ್ಞಾನವು ಅತ್ಯಗತ್ಯವಾಗಿ ಇರಲೇಬೇಕೆಂದು ನೀವು ಅವುಗಳನ್ನು ಮಾರ್ಪಡಿಸಬೇಕು. ಇದು ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಗೂ ಅನ್ವಯವಾಗಬೇಕು. ನೀವು ಈ ವಿಷಯವನ್ನು ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ಮಾಡಿ ಸಂಬಂಧಪಟ್ಟ ನೇಮಕಾತಿ ಸಮಿತಿಗಳಿಗೆ ಕೂಡಲೇ ಸೂಕ್ತ ತಿದ್ದುಪಡಿ ಮಾಡುವದರ ಕುರಿತು ಕ್ರಮ ಕೈಗೊಳ್ಳಬೇಕು. ಇದು ಯಾವುದೇ ಕಾರಣದಿಂದಲೂ ವಿಳಂಬ ಆಗಕೂಡದೆಂದು ನಾನು ನಿಮ್ಮನ್ನು ಪುನ: ಒತ್ತಾಯ ಮಾಡುತ್ತಿದ್ದೇನೆ.

ಪ್ರೀತಿ ಗೌರವಾದರಗಳೊಂದಿಗೆ
ನಿಮ್ಮವ
ಪಾಟೀಲ ಪುಟ್ಟಪ್ಪ

ಇಂಥಾ ಸಾವಿರಾರು ಪತ್ರಗಳನ್ನು ಕನ್ನಡದ ವಿಷಯವಾಗಿ ಪಾಪು ಬರೆದಿದ್ದಾರೆ. ೧೯೮೨ ರ ಸಂದರ್ಭದಲ್ಲಿ ಆರಂಭವಾದ ಗೋಕಾಕ ಚಳುವಳಿಯಂತೂ ಕನ್ನಡದ ಬಗೆಗಿನ ಅಭಿಮಾನದ ಮರುಹುಟ್ಟಿಗೆ ಕಾರಣವಾಯಿತು. ಕನ್ನಡದ ಧೀಮಂತ ಕವಿಗಳು, ಸಾಹಿತಿಗಳು, ಸಂಘಟನೆಗಳು, Kavi_kannadaಕ್ರಿಯಾ ಸಮಿತಿಗಳು, ಪ್ರಾಧಿಕಾರಗಳು ನಿರಂತರವಾಗಿ ಕನ್ನಡವನ್ನು ಬೆಳೆಸುವಲ್ಲಿ ಪ್ರಯತ್ನಿಸುತ್ತಿರುವರಾದರೂ ಮತ್ತೂ ಪ್ರಯತ್ನ ಸಾಲದು ಎನ್ನುವ ಭಾವ ಬರುವಂತಾಗಲು ಕಾರಣ ತಳಮಟ್ಟದ ಯತ್ನಗಳ ಕೊರತೆಯೇ ಆಗಿದೆ. ಕನ್ನಡ ಭಾಷೆ ಸಾವಿರಾರು ವರ್ಷಗಳ ಚರಿತ್ರೆಯನ್ನು ಹೊಂದಿದ್ದರೂ ಅದು ಬಲಗೊಳ್ಳಲು ಆ ಭಾಷೆಯನ್ನು ಮಾತನಾಡುವ ಜನರಿಗೆ ದೊರಕಬೇಕಾದ ಭಾಷೀಕರಣದ ದೀಕ್ಷೆ ಅಚ್ಚುಕಟ್ಟಾಗಿ ಜರುಗದಿರುವದು ಕೂಡಾ ಅದಕ್ಕೆ ಇನ್ನೊಂದು ಕಾರಣ. ಯಾವುದೇ ಒಂದು ಭಾಷೆ ಜನಾಸಮುದಾಯದ ದೈನಂದಿನ ಅಗತ್ಯವಾಗಿ ಪರಿಣಮಿಸಿದರೆ ಮಾತ್ರ ಅದು ಬಲಗೊಳ್ಳಲು ಸಾಧ್ಯ, ಇಲ್ಲದಿದ್ದರೆ ಕೇವಲ ಆ ಹೊತ್ತಿನ ಒಂದು ಅಗತ್ಯವಾಗಿ ವಾರ್ಷಿಕ ದಿನಾಚರಣೆಯ ಚರ್ಚೆಯ ಭಾಗವಾಗಿ ಉಳಿಯುವ ಸಾಧ್ಯತೆಯಿದೆ. ಆ ದಿಸೆಯಲ್ಲಿ ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಮಹತ್ತರವಾದ ಕೆಲಸಗಳನ್ನು ಮಾಡಿದಂತಿಲ್ಲ. ಜಾತ್ರೆಗಳ ರೂಪದಲ್ಲಿ ಸಮ್ಮೇಳನ ಸಂಘಟಿಸುವದನ್ನು ಹೊರತು ಪಡಿಸಿದರೆ ನಾಡು-ನುಡಿಗಾಗಿ ಒಂದು ಚಾರಿತ್ರಿಕವಾಗಿ ಗುರುತಿಸಬಹುದಾದ ಕೆಲಸಗಳನ್ನು ಮಾಡಿದ್ದು ತೀರಾ ಅಪರೂಪವೇನೋ..? ಕನ್ನಡ ಭಾಷೆ ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಅನೇಕ ಬಗೆಯ ಸವಾಲುಗಳಿಗೆ ಒಡ್ಡಿಕೊಳ್ಳುತ್ತಲೇ ಬೆಳೆಯುವ, ಗಟ್ಟಿಗೊಳ್ಳುವ ದಿಶೆಯತ್ತ ಹೆಜ್ಜೆಹಾಕಬೇಕಿದೆ. ಅತಿ ಮುಖ್ಯವಾಗಿ ಕಲಿಕಾ ಮಧ್ಯಮವೊಂದು ವ್ಯಾಪಕವಾಗಿ ಕನ್ನಡ ಮಾಧ್ಯಮವಾಗಿಬಿಟ್ಟರೆ ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಾತಿನಿಧಿಕ ಸಂಸ್ಥೆಗಳಿಗೆ ಟಾನಿಕ್ ನ ಅವಶ್ಯಕತೆಯಿಲ್ಲ.

ಕೃತಿ ಚೌರ್ಯ ಮತ್ತು ಬೂಸಾ ಸಾಹಿತ್ಯ


– ಡಾ.ಎಸ್.ಬಿ. ಜೋಗುರ


 

 

ಮನುಷ್ಯ ತನ್ನ ಕ್ರಿಯಾಶೀಲತೆ ಬತ್ತತೊಡಗಿದೊಡನೆ ತನ್ನ ತಂಗಳ ವಿಚಾರ ಮತ್ತು ಸಾಧನೆಗಳನ್ನೇ ಮೆಲುಕು ಹಾಕಿ ಸುಖ ಅನುಭವಿಸತೊಡಗುತ್ತಾನೆ. ನಿಜವಾಗಿಯೂ ಕ್ರಿಯಾಶೀಲ ಸಾಮರ್ಥ್ಯ ಇರುವವನು ಎಂದೂ ಅವಕಾಶಗಳಿಗಾಗಿ ಮಾಡಬಾರದ್ದನ್ನೆಲ್ಲಾ ಮಾಡುವದಿಲ್ಲ. ಖುದ್ದಾಗಿ ತಾನೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಕೆಲವರಂತೂ ತಮ್ಮಲ್ಲಿಲ್ಲದ ಕ್ರಿಯಾಶೀಲತೆಯನ್ನು ಇದೆ ಎಂದು ತೋರಿಸುವ ಯತ್ನದಲ್ಲಿ Plagiarism-checkerಅನೇಕ ಬಗೆಯ ಛದ್ಮವೇಷಗಳನ್ನು ಧರಿಸುತ್ತಾರೆ. ಅವಕಾಶಗಳಿಗಾಗಿ ಪೀಡಿಸುತ್ತಾರೆ, ಬೇರೆಯವರ ಅವಕಾಶಗಳನ್ನು ಕಸಿಯುತ್ತಾರೆ, ನನಗೆ ದಕ್ಕದ್ದು ಅವರಿಗೂ ದಕ್ಕುವುದು ಬೇಡ ಎನ್ನುವ ನಿಟ್ಟಿನಲ್ಲಿ ಹಿತ್ತಾಳೆ ಕಿವಿಗಳಿಗೆ ಹತ್ತಿರವಾಗಿ ತೂತು ಕೊರೆಯುವ ಯತ್ನ ಮಾಡುತ್ತಾರೆ. ಕೊನೆಗೂ ಹಾಗೂ ಹೀಗೂ ಮಾಡಿ ತಾನೂ ಒಬ್ಬ ಕವಿ, ನಾಟಕಕಾರ, ಕತೆಗಾರ, ಪ್ರಬಂಧಕಾರ ಎಂದು ಸ್ವಘೋಷಿಸಿಕೊಂಡು ಬಿಡುತ್ತಾನೆ. ಅಲ್ಲಿಗೆ ಸಮ್ಮೇಳನದ ಗೋಷ್ಟಿಗಳಲ್ಲಿ, ದಸರಾ ಸಮ್ಮೇಳನದಲ್ಲಿ ತನಗೂ ಒಂದು ಖುರ್ಚಿ ಇರುವಂತೆ ಮಾಡಬಾರದ ಕಟಿಬಿಟಿ ಮಾಡುತ್ತಾನೆ. ಕೊನೆಗೂ ಅವನು ಓದಿದ ಪದ್ಯ ಅರ್ಧ ಗಂಡು ಅರ್ಧ ಹೆಣ್ಣು. ಕೆಲ ಬಾರಿ ಅದು ನೀವೆಂದೂ ಕೇಳಿರದ ಒಂದು ಅಜ್ಞಾತ ಲಿಂಗವೂ ಆಗಿಬಿಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದನ್ನೆಲ್ಲಾ ಬರೆಯಲು ಕಾರಣವಿಷ್ಟೆ. ಈಗೀಗ ಸಾಹಿತ್ಯ ಮತ್ತು ಮಾಧ್ಯಮಗಳ ವಲಯದಲ್ಲಿ ಚಿತ್ರ ವಿಚಿತ್ರವಾದ ಓರೆ ಕೋರೆಗಳು ತೋರತೊಡಗಿವೆ. ಕೆಲವು ಪತ್ರಿಕೆಗಳಂತೂ ಅವನು ತಮ್ಮ ಪ್ರಾದೇಶಿಕತೆಯವನು, ಜಾತಿಯವನು, ಊರವನು[ಳು], ಬೇಕಾದವರು, ಆತ್ಮೀಯರು ಇಲ್ಲವೇ ಯಾರೋ ಒಬ್ಬ ಉದ್ದಾಮ ಸಾಹಿತಿ ಮುದ್ದಾಮ್  ಶಿಫಾರಸು ಮಾಡಿದ ಕಾರಣಕ್ಕೆ ಪ್ರಕಟಿಸಲಾಗುವ ಭಯಂಕರ ಬರಹಗಳಿಗೂ ಬರವಿಲ್ಲ. ಮೊನ್ನೆ ನಾಡಿನ ಖ್ಯಾತ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕದಲ್ಲಿ ಕೃತಿ ಚೌರ್ಯ ಮಾಡಿದ ಕವನವೊಂದು ಮೆಚ್ಚುಗೆ ಪಡೆದ ಬಗ್ಗೆ ಆ ಕವಿತೆಯ ಮೂಲ ಜನುಮದಾತ ಮನ ನೊಂದು ಫೇಸಬುಕ್ ಲ್ಲಿ ತನ್ನ ಅಳಲನ್ನು ತೋಡಿಕೊಂಡ. ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಸಾಹಿತಿ ಗಿರೀಶ ಕಾರ್ನಾಡರೂ ಕೂಡಾ ತಮ್ಮ ‘ನಾಗಮಂಡಲ’ ನಾಟಕದಲ್ಲಿ ಗೋಪಾಲ ವಾಜಪೇಯಿಯವರ ಹಾಡೊಂದನ್ನು ಅವರ ಹೆಸರಿಲ್ಲದೇ ಬಳಸಿಕೊಂಡು ರಾದ್ಧಾಂತವಾಗಿದ್ದು ಘಟನೆ ಕೋರ್ಟ್ ಕಟಕಟೆ ಹತ್ತುವವರೆಗೂ ಹೋಗಿದ್ದಿತ್ತು ಎನ್ನುವದನ್ನು ಪತ್ರಿಕೆಯೊಂದು ಸವಿವರವಾಗಿ ಆ ಬಗ್ಗೆ ಲೇಖನವನ್ನೇ ಪ್ರಕಟಿಸಿದೆ. ಹೀಗಿರುವಾಗ ಕೆಲ ಪುಡಿ ಬರಹಗಾರರು ಕೃತಿ ಚೌರ್ಯ ಮಾಡಿರುವುದು, ಮಾಡುತ್ತಿರುವುದು ಸಹಜ ಎನ್ನೋಣವೇ?

ಈಗೀಗ ಸಾಹಿತ್ಯಕ ವಲಯದಲ್ಲಿ ಪಕ್ಕಾ ರಾಜಕೀಯ ಪರಿಸರ ನಿರ್ಮಾಣವಾಗಿದೆ. ಇಲ್ಲಿರುವ ಗುಂಪುಗಾರಿಕೆಯಂತೂ ಹೇಸಿಕೆ ಹುಟ್ಟಿಸುತ್ತದೆ. ಬೆಂಗಳೂರಲ್ಲಿಯ ಕೆಲ ಪ್ರಚಂಡ ಪಂಡಿತರು ಆಯಕಟ್ಟಿನ ಸ್ಥಾನದಲ್ಲಿ ಕುಳಿತು ಯಾರು ಬರೆಯುತ್ತಿದ್ದಾರೆ ಏನು ಬರೆಯುತ್ತಿದ್ದಾರೆ ಎನ್ನುವುದನ್ನು ಓದದೇ, ಪ್ರತಿಕ್ರಿಯಿಸದೇ ಅವರ ಬರಹಗಳು ಪ್ರಕಟವಾಗದ Awards-for-moneyಹಾಗೆ ತಾಮ್ರದಕಿವಿಗಳಿಗೆ ತೂತು ಕೊರೆಯುವದೇ ಅವರ ಕ್ರಿಯಾಶೀಲತೆಯಾಗಿದೆ. ಪ್ರಶಸ್ತಿಗಾಗಿ ಲಾಬಿ ಮಾಡುವುದು, ತಮ್ಮ ಪ್ರದೇಶ, ಜಿಲ್ಲೆ, ತಾಲೂಕಿನ ಪರಿಸರದ ವಾಸನೆಯ ಮೂಲಕವೇ ಅವರನ್ನು ಮೇಲೆತ್ತುವದು ಇನ್ನೊಬ್ಬನನ್ನು ಉದ್ದೇಶಪೂರ್ವಕವಾಗಿಯೇ ತುಳಿಯುವದು ಇಂಥಾ ಅರಿಷ್ಟ ಗುಣಗಳನ್ನು ಬಿಟ್ಟು ಗಟ್ಟಿಯಾಗಿ ಕುಳಿತು ಓದು ಬರಹ ಮಾಡಿದ್ದರೆ ಅವನಿಂದ ನಾಡು ನುಡಿಗೆ ಒಂದಷ್ಟು ಉತ್ತಮ ಸಾಹಿತ್ಯವಾದರೂ ದಕ್ಕುತ್ತಿತ್ತು. ಇಂದು ಪ್ರಶಸ್ತಿಯ ಮೊತ್ತ ನಿಮಗೇ ನೀಡುತ್ತೇವೆ ಆದರೆ ಪ್ರಶಸ್ತಿ ಮಾತ್ರ ನನ್ನ ಮಗಳಿಗೆ ಕೊಡಿ, ಮಗನಿಗೆ ಕೊಡಿ ಇಲ್ಲವೇ ನನಗೇ ಕೊಡಿ ಎಂದು ದುಂಬಾಲು ಬೀಳುವ ಮೂಲಕ ಹಿಂಬಾಗಿಲಿನಿಂದ ಪ್ರಶಸ್ತಿ ಪಡೆದು ಸಾಹಿತ್ಯಕ ವಲಯದಲ್ಲಿ ಅನೇಕ ಸಮರ್ಥರ ಸಮಾಧಿ ಮೇಲೆ ವಿರಾಜಮಾನರಾಗುವ ಇಂಥಾ ಖಳರಿಂದಾಗಿಯೇ ಸಾಹಿತ್ಯದಲ್ಲಿ ಖೂಳ ಸಂಸ್ಕೃತಿ ಆರಂಭವಾಗಿದೆ. ಈಚೆಗೆ ಒಂದು ಸಣ್ಣ ಪ್ರಶಸ್ತಿಗಾಗಿ ಆ ಸ್ಪರ್ಧೆಯ ನಿರ್ಣಾಯಕರು ಯಾರು ಎನ್ನುವುದನ್ನು ಅದು ಹೇಗೋ ತಿಳಿದುಕೊಂಡು ಅವರ ಬೆನ್ನಿಗೆ ಬಿದ್ದದ್ದು ಕೂಡಾ ಫೇಸ್ ಬುಕ್ ಲ್ಲಿ ಬಯಲಾಗಿತ್ತು. ಹೀಗೆ ಮಾಡಿ ಪ್ರಶಸ್ತಿ ಪಡೆಯುವ ಅವಶ್ಯಕತೆ ಇದೆಯೇ? ಹೀಗೆ ಮಾಡುವುದರಿಂದ ಗಟ್ಟಿ-ಪೊಳ್ಳುಗಳ ಅಂತರ ಸ್ಪಷ್ಟವಾಗದೇ ಮತ್ತೆ ಬೂಸಾ ಸಾಹಿತ್ಯ ಮೆರೆಯುವ ಸಾಧ್ಯತೆಯೂ ಇದೆ.

ಈಚೆಗೆ ಕವಿಗೋಷ್ಟಿಯ ಸಂಘಟಕರೊಬ್ಬರು ಅಕಾಡೆಮಿಯಿಂದ ನಡೆಯುವ ಕವಿಗೋಷ್ಟಿಗೆ ನಿಮ್ಮ ಹೆಸರನ್ನು ಸೂಚಿಸಲಾಗಿದೆ ಪಾಲ್ಗೊಳ್ಳುತ್ತೀರಾ ಎಂದು ನನ್ನನ್ನು ಕೇಳಿದರು. ಆಗ ನಾನು ಸಂಘಟಕರಿಗೆ ಧನ್ಯವಾದಗಳನ್ನು ಹೇಳುತ್ತಾ ತಪ್ಪು ತಿಳಿಯಬೇಡಿ. ನನಗಿಂತಲೂ ಅದೆಷ್ಟೋ ಉತ್ತಮವಾಗಿ ಪದ್ಯ ಬರೆಯುವ ಕವಿಗಳಿದ್ದಾರೆ. ಅವರ ಅವಕಾಶವನ್ನು ನಾನು ಕಸಿಯಲು ತಯಾರಿಲ್ಲ. ನಾನು ಕಾವ್ಯ ಕೃಷಿ ಅಷ್ಟಾಗಿ ಮಾಡಿದವನಲ್ಲ. ಹೀಗಾಗಿ ನಿಜವಾದ ಕವಿಗಳಿಗೆ ಅವಕಾಶ ಕೊಡಿ ಅಂದೆ. ಅವರಿಗೂ ತುಂಬಾ ಖುಷಿಯಾಯಿತು.ಆದರೆ ನನ್ನ ಸ್ನೇಹಿತನೊಬ್ಬ ನನ್ನನ್ನು ಉಡಾಫೆ ಮಾಡಿ ಈ ಬಗೆಯ ಔದಾರ್ಯ ಈಗಿನ ಸಂದರ್ಭದಲ್ಲಿ ಸರಿಯಲ್ಲ. ಮಹತ್ತರವಾದ ಕವಿತೆಗಳನ್ನು ಬರೆಯದಿದ್ದರೂ ದುಂಬಾಲು ಬಿದ್ದು ಟಿ.ಎ., ಡಿ.ಎ. ಗಾಗಿ ಮೈಸೂರು ದಸರಾ ಕವಿಗೋಷ್ಟಿಯಲ್ಲಿ ಭಾಗವಹಿಸಿ ಅಸಹ್ಯ ಪದ್ಯ ಓದಿ ಬರುತ್ತಾರೆ. ನಿಮಗಿನ್ನೂ ವಾಸ್ತವ ತಿಳಿದಿಲ್ಲ ಎಂದು ನಕ್ಕ. ಇರಬಹುದು ಆದರೆ ನನ್ನ ಮನಸು ಸ್ಪಷ್ಟವಾಗಿ ನೀನು ಉತ್ತಮ ಕವಿಯಲ್ಲ ಎಂದು ಹೇಳುತ್ತಿರುವಾಗಲೂ ಮನಸಿಗೆ ವಿರುದ್ಧವಾಗಿ ನಾಲ್ಕು ಸಾಲುಗಳನ್ನು ಗೀಚಿ, ಓದಿ ನಾನೂ ಕವಿ ಎಂದು ಕರೆದುಕೊಳ್ಳಲು ಮನಸು ಒಪ್ಪುವದಿಲ್ಲ ಎಂದೆ. ಯಾವುದೇ ಬಗೆಯ ವಾಮಮಾರ್ಗಗಳನ್ನು ಅನುಸರಿಸಿ ಬೆಳೆದರೂ ಒಂದು ಹಂತದಲ್ಲಿ ಬೂಸಾ ಎನ್ನುವುದು ಬೆತ್ತಲಾಗುವುದು ಗ್ಯಾರಂಟಿ. ನನಗಿಂತಲೂ ಇಲ್ಲವೇ ನನ್ನಷ್ಟೇ ಸಮರ್ಥನಾಗಿರುವವನ ಹಕ್ಕು ಕಸಿಯುವದೇ ಜಾಣತನ ಎಂದು ಬಗೆದರೆ ಅಂತ ಜಾಣತನ ನನಗೆ ಬೇಕಿಲ್ಲ ಎಂದು ಖಂಡಿತವಾಗಿ ಹೇಳಿದೆ.

ಸಾಹಿತ್ಯಕ ವಲಯದಲ್ಲಿ ಒಬ್ಬ ಕತೆಗಾರನನ್ನು ಇನ್ನೊಬ್ಬ ಕತೆಗಾರ ಸಹಿಸುವುದಿಲ್ಲ. ಒಬ್ಬ ಕವಿ ಇನ್ನೊಬ್ಬ ಕವಿಯನ್ನು ಸಹಿಸುವುದಿಲ್ಲ. ಒಬ್ಬರನ್ನೊಬ್ಬರು ಪ್ರೇರಣೆಯನ್ನಾಗಿ ಸ್ವೀಕರಿಸುವ ಮೂಲಕ ಕೃಷಿ ಮಾಡುವ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ. ವಿಮರ್ಶೆಗಳಿರಲಿ, nobel_awardಆದರೆ ಅನಾರೋಗ್ಯಕರ ವಾದ ಸ್ಪರ್ಧೆಯ ಮನ:ಸ್ಥಿತಿ ಬೇಡ. ಹತ್ತು ಕತೆಗಳು ಒಂದು ಪತ್ರಿಕೆಗೆ ಬಂದಾಗ ಅವುಗಳಲ್ಲಿ ಯಾವುದು ತುಂಬಾ ಗಟ್ಟಿಯಾಗಿದೆಯೋ ಅದು ಪ್ರಕಟವಾಗಲಿ. ಅದನ್ನು ಬಿಟ್ಟು ಅವರು ತನ್ನ ಜಿಲ್ಲೆಯವರು, ಜಾತಿಯವರು, ಪರಿಚಯದವರು ಎನ್ನುವ ಕಾರಣಗಳೇ ಮುಂದಾಗಿ ನೀವು ಆ ಕತೆಯನ್ನು ಎತ್ತಿಕೊಳ್ಳುವಿರಾದರೆ ನಿಮಗೆ ಗೊತ್ತಿದ್ದೂ ಗೊತ್ತಿದ್ದೂ ಮಿಕ್ಕ ಒಂಬತ್ತು ಜನರಿಗೆ ನೀವು ಅನ್ಯಾಯ ಮಾಡಿದಂತೆ. ಹಾಗಾಗಬಾರದು. ಅದು ಮುಂಬರುವ ತಲೆಮಾರುಗಳಿಗೆ ಬೂಸಾ ಸಾಹಿತ್ಯವನ್ನೇ ಗಟ್ಟಿ ಎಂದು ಹೇಳಿಕೊಟ್ಟಂತಾಗುತ್ತದೆ. ಫ್ರಾನ್ಸ್ ರಾಷ್ಟ್ರ ಗಾತ್ರದಲ್ಲಿ ತೀರಾ ಚಿಕ್ಕದು. ಅದು ಸುಮಾರು ಇಲ್ಲಿಯವರೆಗೆ ಹದಿನೈದು ನೋಬೆಲ್ ಪ್ರಶಸ್ತಿಗಳನ್ನು ಪಡೆದಿದೆ. ನೋಬೆಲ್ ಪ್ರಶಸ್ತಿ ಆರಂಭವಾದ ವರ್ಷ 1901. ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ಪಡೆದ ದೇಶ ಫ್ರಾನ್ಸ್. ಮೊದಲ ನೊಬೆಲ್ ಪಡೆದವನ ಹೆಸರು ಸಲ್ಲಿ ಪ್ರಧೋಮ್. ಇನ್ನು ಈ ನೊಬೆಲ್ ಪ್ರಶಸ್ತಿಯ ಮೊತ್ತ ಈಗ ಬರೊಬ್ಬರಿ 6 ಕೋಟಿ 60 ಲಕ್ಷ ರೊಪಾಯಿ. ಈಚೆಗೆ ಸಾಹಿತ್ಯಕ್ಕಾಗಿ ನೋಬೆಲ್ ಪಡೆದ ಫೆಟ್ರಿಕ್ ಮೋದಿಲಿನೊ ಅತ್ಯಂತ ಯತಾರ್ಥವಾಗಿ ಸಾಹಿತ್ಯ ಕೃಷಿ ಮಾಡಿದವನು. ಆತ ಬರೆದ ಯಾವ ಕೃತಿಯೂ 170 ಪುಟಗಳನ್ನು ದಾಟುವದಿಲ್ಲ. ಫ್ರಾನ್ಸ್ ಮಹಿಳಾ ವಿಮೋಚನೆಯಲ್ಲಿ, ರೋಮ್ಯಾಂಟಿಸಿಜಂ ಕಾವ್ಯದಲ್ಲಿ ಕೂಡಾ ಅಗಾಧವಾದ ಕೊಡುಗೆಯನ್ನು ನೀಡಿದೆ. ನಮ್ಮಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳಿಗೆ ಕೊರತೆಯಿಲ್ಲ. ಆದರೆ ಅವುಗಳನ್ನು ನಿರ್ಣಯಿಸುವ ಸಂಗತಿಗಳು ಮಾತ್ರ ಇವತ್ತಿಗೂ ಜಾತಿ, ಪ್ರಾದೇಶಿಕತೆ, ಧರ್ಮ, ಸ್ವಜನಪಕ್ಷಪಾತಗಳಾಗಿರುವದರಿಂದ ತೀರಾ ಅಪರೂಪಕ್ಕೆ ಯೋಗ್ಯರಾದವರಿಗೆ ಸ್ಥಾನಮಾನಗಳು ಲಭ್ಯವಾಗುತ್ತವೆ.