Category Archives: ಚಿದಂಬರ ಬೈಕಂಪಾಡಿ

ರಾಜಕೀಯ ಪಕ್ಷಗಳಿಗೆ ಕೊಪ್ಪಳದ ಫಲಿತಾಂಶ ಕೊಟ್ಟ ಸಂದೇಶ

-ಚಿದಂಬರ ಬೈಕಂಪಾಡಿ

ಕೊಪ್ಪಳ ವಿಧಾನ ಸಭೆಯ ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಬೀಗುತ್ತಿದೆ, ಕಾಂಗ್ರೆಸ್ ತನ್ನ ಸೋಲನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಲೇಬೇಕಾಗಿದೆ. ಜೆಡಿಎಸ್ ಇಲ್ಲಿ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವಂತೆ ಪ್ರತಿಕ್ರಿಯೆಸಿದೆ. ಇಲ್ಲಿ ಕರಡಿ ಸಂಗಣ್ಣ ಗೆದ್ದಿರುವುದಕ್ಕೆ ಬಿಜೆಪಿ ಮನೆಯೊಳಗೆ ಹಲವು ಮಂದಿ ತಾವೇ ಕಾರಣವೆಂದು ಹೇಳಿಕೊಳ್ಳುತ್ತಿದ್ದಾರೆ. ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಗೆಲುವೆಂದು ಬಣ್ಣಿಸುವ ಜಾಣ್ಮೆಯನ್ನೂ ತೋರಿಸಿದ್ದಾರೆ.

ಕೊಪ್ಪಳ ಉಪಚುನಾವಣೆಯನ್ನು ಬಿಜೆಪಿಗೆ ಗೆಲ್ಲಲೇ ಬೇಕಾಗಿತ್ತು, ಯಾಕೆಂದರೆ ಅಧಿಕಾರದಲ್ಲಿರುವ ಪಕ್ಷ. ಚುನಾವಣೆಗೂ ಮೊದಲು ಬಿಜೆಪಿಯೊಳಗೆ ಕೊಪ್ಪಳ ಉಪಚುನಾವಣೆ ನಾಯಕತ್ವ ಯಾರ ಹೆಗಲಿಗೆ ಎನ್ನುವುದು ವಿವಾದಕ್ಕೆ ಕಾರಣವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ, ಮುಖ್ಯಮಂತ್ರಿ ಸದಾನಂದ ಗೌಡರ ನಡುವೆ ಆಂತರಿಕ ಯುದ್ಧವೇ ನಡೆದಿತ್ತು. ಆದರೆ ತಮ್ಮೊಳಗಿನ ವೈಮನಸ್ಸನ್ನು ತಾವೇ ಬಗೆಹರಿಸಿಕೊಂಡು ಕೊಪ್ಪಳ ಗೆಲುವಿಗೆ ಮುಂದಾದರು.

ಕೊಪ್ಪಳ ಉಪಚುನಾವಣೆ ಫಲಿತಾಂಶವನ್ನು ಬಿಜೆಪಿ ತನ್ನ ಸ್ವಸಾಮರ್ಥ್ಯವೆಂದು ಭ್ರಮೆಪಟ್ಟುಕೊಳ್ಳಬಾರದು. ಹಾಗೆಯೇ ಕಾಂಗ್ರೆಸ್ ಇಲ್ಲಿನ ಸೋಲನ್ನು ಸುಲಭವಾಗಿ ಮರೆಯಬಾರದು. ಜೆಡಿಎಸ್ ನಿರ್ಲಿಪ್ತವಾಗಿ ಕುಳಿತುಕೊಳ್ಳುವಂತಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಕೊಪ್ಪಳದಲ್ಲಿ ಸಮರ್ಥವಾಗಿ ಹೋರಾಟ ಮಾಡಲಾಗದೆ ಸೊರಗಿತು. ಹಣಬಲ, ಹೆಂಡದ ಬಲದಿಂದ ಬಿಜೆಪಿ ಗೆಲುವು ಸಾಧಿಸಿತು ಎಂದು ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಹೇಳಿರುವುದು ತಾನು ಹಣ ಚೆಲ್ಲಲಿಲ್ಲ ಎನ್ನುವ ಅರ್ಥ ಕೊಡುತ್ತದೆ ಹೊರತು ವಾಸ್ತವ ಅದಲ್ಲ.

ಕರಡಿ ಸಂಗಣ್ಣ ಅವರನ್ನು ಅಲ್ಲಿನ ಮತದಾರರು ಮತ್ತೊಮ್ಮೆ ವಿಧಾನ ಸಭೆಗೆ ಕಳುಹಿಸಿ ಹಿಟ್ನಾಳ್, ಪ್ರದೀಪ್ ಗೌಡರನ್ನು ಕೈಬಿಟ್ಟಿರುವುದಕ್ಕೆ ಸಂಗಣ್ಣ ಅವರ ಮೇಲಿನ ವಿಶ್ವಾಸವೂ ಕಾರಣವಿರಬಹುದು. ಹಾಗೆಯೇ ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಚುನಾವಣೆ ಗೆಲ್ಲುವುದನ್ನೇ ಮರೆತು ಬಿಟ್ಟಿರುವುದು ಕೂಡಾ ಸಂಗಣ್ಣ ನಗೆಬೀರಲು ಕಾರಣ. ಸಹಜವಾಗಿಯೇ ಬಿಜೆಪಿಗೆ ಗೆಲ್ಲುವ ಎಲ್ಲಾ ಅನುಕೂಲತೆಗಳು ಇದ್ದವು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ಸಮರ್ಥ ನಾಯಕತ್ವದ ಮೂಲಕ ಜನಮನ ಗೆಲ್ಲಲು ವಿಫಲವಾಗಿದೆ. ಎಲ್ಲಾವರ್ಗದ ಜನ  ಒಪ್ಪುವ ನಾಯಕತ್ವ ಕಾಂಗ್ರೆಸ್ ಪಕ್ಷದಲ್ಲಿಲ್ಲ ಎನ್ನುವುದು ಈ ಉಪಚುನಾವಣೆಯ ಮೂಲಕ ಅನಾವರಣಗೊಂಡಿದೆ.

ಯಡಿಯೂರಪ್ಪ ಮಾಜಿಯಾಗಿದ್ದರೂ ಹಾಲಿಯಷ್ಟೇ ಪವರ್ಫುಲ್ ಎನ್ನುವ ಸಂದೇಶವನ್ನು ಬಿಜೆಪಿ ಹೈಕಮಾಂಡ್ಗೆ ರವಾನಿಸಿದ್ದಾರೆ. ಕನರ್ಾಟಕದಲ್ಲಿ ಯಡಿಯೂರಪ್ಪರನ್ನು ಹೊರಗಿಟ್ಟು ಬಿಜೆಪಿ ರಾಜಕೀಯ ಮಾಡುವಂತಿಲ್ಲ ಎನ್ನುವುದನ್ನು ಕೊಪ್ಪಳದ ಗೆಲುವು ನಿರೂಪಿಸಿದೆ. ಮುಖ್ಯಮಂತ್ರಿ ಸದಾನಂದ ಗೌಡರು ಇಲ್ಲಿಯ ಗೆಲುವನ್ನು ಬಿಜೆಪಿ ಸಕರ್ಾರದ ಹೆಗಲಿಗೆ ಹಾಕಿ ಬುದ್ಧಿವಂತಿಕೆ ತೋರಿಸಿದ್ದಾರೆ.

ಜೆಡಿಎಸ್ನ ಪರಮೋಚ್ಛನಾಯಕ ದೊಡ್ಡ ಗೌಡರು ಕೊಪ್ಪಳದ ಫಲಿತಾಂಶವನ್ನು ಮೊದಲೇ ಊಹಿಸಿದವರಂತೆ ದೂರವೇ ಉಳಿದುಕೊಂಡು ತಮ್ಮ ಚಾಣಾಕ್ಷತೆಯನ್ನು ಪ್ರದಶರ್ಿಸಿದ್ದಾರೆ. ಕೊಪ್ಪಳ ಸಂಗಣ್ಣ ಅವರ ಕರ್ಮಭೂಮಿ ಎನ್ನುವ ಕಾರಣಕ್ಕೆ ದೇವೇಗೌಡರು ಸುಮ್ಮನಾದರೆಂದು ಭಾವಿಸುವಂತಿಲ್ಲ ಅಥವಾ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಗೆಲ್ಲುವ ಕಸುಬುಗಾರಿಕೆ ಗೊತ್ತಿಲ್ಲರಲಿಲ್ಲ ಅಂದುಕೊಳ್ಳುವಂತಿಲ್ಲ. ಕಾಂಗ್ರೆಸ್ ಪಕ್ಷ ಸರಣಿ ಸೋಲು ಅನುಭವಿಸಿತ್ತಿದ್ದರೂ ಆ ಪಕ್ಷದವರು ಜೆಡಿಎಸ್ ಜೊತೆ ಕೈಜೋಡಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಪಾಠ ಕಲಿಸಲು ಗೌಡರು ಈ ನಡೆ ಅನುಸರಿಸಿದ್ದಾರೆ.

ಬಿಜೆಪಿಯನ್ನು ಕಾಂಗ್ರೆಸ್, ಜೆಡಿಎಸ್ ಸಮಾನ ದೂರದಲ್ಲಿಟ್ಟು ರಾಜಕೀಯ ಮಾಡುತ್ತಿವೆ. ಅಂತೆಯೇ ಬಿಜೆಪಿ ಕೊಡಾ ಈ ಪಕ್ಷಗಳನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ನಂಬಿ ರಾಜಕೀಯ ಮಾಡುತ್ತಿದೆ. ಬಿಜೆಪಿಯೊಳಗಿನ ಆಂತರಿಕ ಕಲಹದ ಲಾಭ ಪಡೆಯುವುದು ಕಾಂಗ್ರೆಸ್ ಮತ್ತು ಜೆಡಿಎಸ್ನ ಉದ್ದೇಶವಾಗಿರಬಹುದು. ಆದರೆ ಈ ಪಕ್ಷಗಳಿಗೆ ಬಿಜೆಪಿಯೊಳಗೆ ಅದೆಷ್ಟೇ ಕಿತ್ತಾಟವಿದ್ದರೂ ಚುನಾವಣೆ ಕಾಲದಲ್ಲಿ ಪಕ್ಷವನ್ನು ಮುಂದಿಟ್ಟುಕೊಂಡು ನಾಯಕರು ಮತಯಾಚಿಸುತ್ತಾರೆ ಎನ್ನುವ ಅರಿವು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಗೊತ್ತಿದೆ. ಆದರೂ ಒಣಪ್ರತಿಷ್ಟೆ ವಿಶೇಷವಾಗಿ ಕಾಂಗ್ರೆಸ್ ನಾಯಕರನ್ನು ಆವರಿಸಿಬಿಡುತ್ತದೆ, ಆದ್ದರಿಂದಲೇ ಈ ಪಕ್ಷದ ನಾಯಕರು ತಮ್ಮತಮ್ಮೊಳಗೇ ಸ್ವಯಂ ನಾಯಕತ್ವವನ್ನು ಆವಾಹಿಸಿಕೊಂಡು ಓಡಾಡುತ್ತಿರುತ್ತಾರೆ.

ಕೆಪಿಸಿಸಿ ನಾಯಕರಾದವರಿಗೆ ಮಾತ್ರ ಚುನಾವಣೆ ಗೆಲ್ಲಿಸುವ ಜವಾಬ್ದಾರಿ ಎನ್ನುವಂತೆ ಈ ಪಕ್ಷದ ಉಳಿದ ನಾಯಕರು ವರ್ತಿಸುವುದರಿಂದ ಚುನಾವಣೆ ಕಣದಲ್ಲಿ ಹಿನ್ನಡೆಯಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಕುವುದು ಸುಲಭದ ಕೆಲಸವಲ್ಲ ಎನ್ನುವುದನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮನವರಿಕೆ ಮಾಡಿಕೊಳ್ಳಲು ಕೊಪ್ಪಳ ಉಪಚುನಾವಣೆ ಫಲಿತಾಂಶ ಅವಲೋಕಿಸಬೇಕಾಗಿದೆ. ಅಲ್ಲಿನ ಮತದಾರರ ಅಂಕೆ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿಗೆ ಸುಮಾರು ಅರ್ಧದಷ್ಟು ಮತದಾರರು ವಿರೋಧವಿರುವುದು ಗೋಚರಿಸುತ್ತದೆ. ಕರಡಿ ಸಂಗಣ್ಣ ಅವರನ್ನು 60,405 ಮಂದಿ ಬೆಂಬಲಿಸಿದ್ದಾರೆ. ಕಾಂಗ್ರೆಸ್  ಅಭ್ಯರ್ಥಿ ಬಸವರಾಜ್ ಹಿಟ್ನಾಳ್ ಪರ 47,917 ಮಂದಿ ಮತ ಚಲಾಯಿಸಿದ್ದಾರೆ. ಪರಾಜಿತ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡರನ್ನು 20,719 ಮಂದಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಒಟ್ಟು ಮತಗಳು ಗೆದ್ದ ಅಭ್ಯರ್ಥಿಗಿಂತಲೂ ಹೆಚ್ಚು. ಈ ಲೆಕ್ಕಾಚಾರ ಬಿಜೆಪಿಗೂ ಮುಂದಿನ ನಡೆ ಹೇಗಿಡಬೇಕೆನ್ನುವುದಕ್ಕೆ ದಿಕ್ಸೂಚಿಯಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಯೋಚಿಸಿದರೆ ಬಿಜೆಪಿ ಮುನ್ನಡೆಗೆ ಕಾರಣಗಳು ಅರ್ಥವಾಗಿಬಿಡುತ್ತವೆ. ಚುನಾವಣೋತ್ತರ ಮೈತ್ರಿಯ ಅನಿವಾರ್ಯತೆಯನ್ನು ಕೊಪ್ಪಳ ಉಪಚುನಾವಣೆ ಈ ಪಕ್ಷಗಳ ಮುಂದಿಟ್ಟಿದೆ. ಹಾಗೆಯೇ ಬಿಜೆಪಿ ಆಂತರಿಕ ಕಿತ್ತಾಟಗಳಿಂದ ನಲುಗಿದರೆ ಭವಿಷ್ಯ ಏನಾಗಬಹುದು ? ಎನ್ನುವ ಒಳಮರ್ಮವನ್ನು ಅರಿತುಕೊಳ್ಳಲು ಅವಕಾಶವಾಗಿದೆ.

ಮುಂದಿನ ಸಾರ್ವತ್ರಿಕ ಚುನಾವಣೆಗೆ ಎಲ್ಲಾ ಪಕ್ಷಗಳು ತಾಲೀಮು ನಡೆಸಬೇಕಾಗಿರುವುದರಿಂದ ತಾವು ಯಾವ ಸ್ತರದಲ್ಲಿದ್ದೇವೆ ಎನ್ನುವುದನ್ನು ನೋಡಿಕೊಳ್ಳಲು ಇದು ಸಕಾಲ. ಗುಜರಾತ್ ಮಾದರಿ ಅಭಿವೃದ್ಧಿ ಮಾಡುವ ಕನಸು ಬಿತ್ತಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಬಿಜೆಪಿ ಸಾರಥಿಯಾಗಿ ಕರ್ನಾಟಕವನ್ನು ಮುನ್ನಡೆಸಲು ಕೊಪ್ಪಳ ಉಪಚುನಾವಣೆ ಫಲಿತಾಂಶ ಪ್ರೇರಣೆಯಾಗಿದೆ. ಅಂತೆಯೇ ಕಾಂಗ್ರೆಸ್, ಜೆಡಿಎಸ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುನ್ನುಡಿಯಾಗಿದೆ.

Anna_Hazare

ಅಣ್ಣಾ… ನಿನ್ನ ಉಪವಾಸ ಮಲಿನ ಮನಸ್ಸುಗಳನ್ನು ತಿಳಿಗೊಳಿಸಲಿ.

– ಚಿದಂಬರ ಬೈಕಂಪಾಡಿ

ಅಂದು ಬದುಕಿಗೆ ವಿದಾಯ ಹೇಳಲು ಕಾಗದ ಬರೆದಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದ ಅಣ್ಣಾ ಹಜಾರೆ ಅನೇಕ ದಶಕಗಳಿಂದ ನಖ ಶಿಖಾಂತ ಹರಡಿಕೊಂಡಿರುವ ಭ್ರಷ್ಟಾಚಾರದ ಬೇರನ್ನು ಕೀಳಲು ಪಣತೊಟ್ಟದ್ದು ಐತಿಹಾಸಿಕ ಘಟನೆ. ಹದಿಮೂರು ದಿನಗಳ ಕಾಲ ರಾಮಲೀಲಾ ಮೈದಾನದಲ್ಲಿ ಉಪವಾಸ ಮಾಡಿದ ಅಣ್ಣಾ ಚರಿತ್ರೆಯ ಪುಟಗಳಲ್ಲಿ ದಾಖಲಾಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಪರಮಾಧಿಕಾರ ಹೊಂದಿದೆ, ಅಂಥ ಸಂಸತ್ತನ್ನೇ ನಡುಗಿಸಿದವರು ಅಣ್ಣಾ ಎಂದು ಅವರನ್ನು ಸುತ್ತುವರಿದಿದ್ದವರು ಬೆನ್ನುತಟ್ಟಿಕೊಳ್ಳಬಹುದು. ಸಂವಿಧಾನಿಕ ಸಂಸ್ಥೆಯ ಗಡಿದಾಟಿ ಹೋಗುವುದು ಕೂಡಾ ಐತಿಹಾಸಿಕ ಘಟನೆ, ಅಂಥ ಯತ್ನ ನಡೆದದ್ದು ಮಾತ್ರ ವಿಷಾದನೀಯ.

ಹಳ್ಳಿಗಾಡಿನ ಅಣ್ಣಾ ದಿಲ್ಲಿವಾಲಾಗಳು ತಡಬಡಾಯಿಸುವಂತೆ ಮಾಡಿದರು ನಿಜ, ಅಣ್ಣಾ ಅವರ ಹೋರಾಟಕ್ಕೆ ಮಂಡಿಯೂರಿದ ಸರ್ಕಾರ ಕೂಡಾ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ. ಆದರೆ ಈ ದಾಖಲೆ ಋಣಾತ್ಮಕ ಸಂದೇಶವನ್ನು ರವಾನಿಸುತ್ತದೆ ಎನ್ನುವುದನ್ನು ಮರೆಯಬಾರದು. ಒಂದು ವಿಮಾನ ಅಪಹರಣ ಮಾಡಿ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟುಕೊಂಡು ಬೇಡಿಕೆಗಳ ಈಡೇರಿಕೆಗಾಗಿ ಆಡಳಿತ ವ್ಯವಸ್ಥೆಯನ್ನು ಮಂಡಿಯೂರುವಂತೆ ಮಾಡುವ ಕ್ರಮಕ್ಕಿಂತ ಭಿನ್ನವಾದುದು ರಾಮಲೀಲಾ ಮೈದಾನದ ಸತ್ಯಾಗ್ರಹ ಎಂದು ಅನೇಕರಿಗೆ ಅನ್ನಿಸಿದರೆ ತಪ್ಪಲ್ಲ.

ಕಾಂಗ್ರೆಸ್ ಪಕ್ಷದ ಭವಿಷ್ಯದ ಕುಡಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅಣ್ಣಾ ಅವರ ಸತ್ಯಾಗ್ರಹವನ್ನು ಕಟುವಾಗಿ ಟೀಕಿಸಿದ್ದು ಒಂದು ವರ್ಗವನ್ನು ಸಿಟ್ಟಿಗೇಳಿಸಿತು. ‘ಬೆವಕೂಫ್ ’ ಎನ್ನುವ ದಾಟಿಯಲ್ಲಿ ರಾಮಲೀಲಾ ಮೈದಾನದಿಂದ ಬುದ್ಧಿವಂತರು ಕಿರುಚಿಕೊಂಡಾಗ ಸ್ವತ: ಅಣ್ಣಾ ಅವರು ಕೇಳಿಸಿಕೊಂಡಿದ್ದರೆ ಕ್ಷಮೆಯಾಚಿಸುತ್ತಿದ್ದರೇನೋ ?. ಯಾಕೆಂದರೆ ಇಳಿವಯಸ್ಸಿನ ಅಣ್ಣಾ ಪ್ರಧಾನಿಯರ ಬಗ್ಗೆ ಆಡಿದ ಮಾತಿಗೆ ಮನನೊಂದುಕೊಂಡರು. ಸಂಸತ್ತಿನ ಹೊರಗಿರುವವರ ಹಟಮಾರಿತನದ ಬೇಡಿಕೆಗಳನ್ನು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಥ ಬೇಡಿಕೆಗಳು ಮಂಡನೆಯಾಗಲು ಅನುವಾಗುತ್ತದೆ ಎನ್ನುವ ರಾಹುಲ್ ಧ್ವನಿ ತಳ್ಳಿಹಾಕುವಂತಿಲ್ಲ.

ಭ್ರಷ್ಟಾಚಾರಿಗಳ ಕುತ್ತಿಗೆಗೆ ಕುಣಿಕೆ ಹಾಕಲು ಅಗತ್ಯವಾದ ಹಗ್ಗಹೊಸೆಯಲು ಸಂಸತ್ತು ಒಪ್ಪಿಕೊಂಡಿತು ನಿಜ, ಆದರೆ ಇಂಥ ಹಗ್ಗ ಹೊಸೆಯುವವರಲ್ಲಿ  ಲಾಲೂ, ಪಾಸ್ವಾನ್, ಅಮರ್ ಸಿಂಗ್ ಮುಂತಾದವರು ಕೈಜೋಡಿಸುತ್ತಾರೆ ಎಂದಾದಾಗ ಒಂದಷ್ಟು ಸಂಶಯಗಳು ಮೂಡುವುದು ಸಹಜ. ಯಾಕೆಂದರೆ ಇಂಥವರು ಬಿಳಿ ದಿರಿಸು ತೊಟ್ಟು ಹೊಳೆದರೂ ಅವರ ಮೈಮೇಲಿನ ಕಲೆಗಳು ಮಾತ್ರ ಮರೆಯಾಗುವುದಿಲ್ಲ. ಜನರ ನೆನಪುಗಳು ಬಹುಕಾಲ ಬಾಳುವಂಥವಲ್ಲ ಅಂದುಕೊಂಡರೂ ಇವರನ್ನು ಮೆತ್ತಿಕೊಂಡಿರುವ ಹಗರಣಗಳು ಮರೆತುಬಿಡುವಂಥವಲ್ಲ.

ಅಣ್ಣಾ ಟೀಮಿನ ಸಚ್ಚಾರಿತ್ರ್ಯರ ನಡುವೆಯೇ ಪ್ರಶ್ನಿಸಲು ಅರ್ಹರ ಮುಖಗಳಿರುವುದೂ ಸತ್ಯ. ಒಂದು ಕಾಲದಲ್ಲಿ ಜನರಿಂದ ಮೆಚ್ಚುಗೆ ಗಳಿಸಿದವರು ಸ್ವಯಂಸೇವೆಯ ಹೆಸರಲ್ಲಿ ಸುಂದರವಾದ ಬದುಕು ಸವೆಸಿದರೆ ಅದನ್ನು ಉದಾರವಾಗಿ ಕಾಣಲು ಸಾಧ್ಯವೇ?. ಭಾರತದ ಹಳ್ಳಿಯ ಜನರ ಜೋಲು ಮುಖ, ಕೊಳಚೆ, ಜೋಪಡಿಯ ಮುಗ್ಧ ಮಕ್ಕಳನ್ನು ಸಾಗರದಾಚೆ ತೋರಿಸಿ ಬದುಕುವ ಈ ನೆಲದ ಜೀವಗಳ ಬಗ್ಗೆ ಕನಿಕರ ಪಡಬೇಕಲ್ಲವೇ?.

ಇದೆಲ್ಲವನ್ನು ಬದಿಗಿಟ್ಟು ಅಣ್ಣಾ ಸೂತ್ರಗಳನ್ನು ಒಪ್ಪಿಕೊಂಡ ಮಾತ್ರಕ್ಕೇ ದೇಶ, ರಾಜ್ಯ, ಜಿಲ್ಲಾಮಟ್ಟದಲ್ಲಿಹಾಸುಹೊಕ್ಕಾಗಿ ಹೆಣೆದುಕೊಂಡಿರುವ ಭ್ರಷ್ಟಾಚಾರದ ಸುಕ್ಕುಗಳು ಬಿಡಿಸಿಕೊಳ್ಳುತ್ತವೆ ಎಂದಾಗಲೀ, ಹಳ್ಳಿಯ ಪಂಚಾಯಿತಿ ಕಚೇರಿಯ ಗುಮಾಸ್ತ ಮಿಸ್ಟರ್ ಕ್ಲೀನ್ ಆಗಿಬಿಡುತ್ತಾನೆ ಅಂದುಕೊಳ್ಳುವಂತಿಲ್ಲ. ಒಂದಷ್ಟು ಮಂದಿ ರಾಮಲೀಲಾ ಮೈದಾನದಲ್ಲಿ ಟಿವಿ ಕ್ಯಾಮರಾಗಳ ಮುಂದೆ ಪ್ರಮಾಣ ಮಾಡಿದ ಮಾತ್ರಕ್ಕೆ ಭ್ರಷ್ಟಾಚಾರ ಸಾರಾಸಗಟಾಗಿ ಅಳಿಸಿಹೋಗುತ್ತದೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.

Anna_Hazare

Anna_Hazare

ಭೂಮಿ ನೋಂದಾವಣೆ ಮಾಡುವ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚಗುಳಿತನ ಇಲ್ಲವೇ ಇಲ್ಲವೆಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವೇ?. ಈ ಕಚೇರಿಗಳನ್ನು ಲಂಚಮುಕ್ತವನ್ನಾಗಿಸಲು ಕಾನೂನುಗಳಿಂದ ಸಾಧ್ಯವೇ ?. ಅಣ್ಣಾ ತಂಡ ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಲಂಚ ಯಾವ ಸ್ವರೂಪದಲ್ಲಿ ಸಂದಾಯವಾಗಬೇಕೋ ಸಂದಾಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಕಚೇರಿ, ಲೋಕೋಪಯೋಗಿ, ಕೃಷಿ, ಅರಣ್ಯ, ತೆರಿಗೆ, ಶಿಕ್ಷಣ ಹೀಗೆ ಸರ್ಕಾರದ ಕಚೇರಿಗಳು ಭ್ರಷ್ಟಾಚಾರದ ಕೊಂಪೆಗಳಾಗಿವೆ ಎಂದು ಹೆಸರು ಕೂಗಿ ಕರೆಯಬೇಕೇ?. ಲೋಕಾಯುಕ್ತ, ಲೋಕಪಾಲ ಅಥವಾ ಅಣ್ಣಾ ತಂಡದ್ದೇ ಕಾನೂನು ಬಂದರೂ ಭ್ರಷ್ಟ ಕೈಗಳು ಶುದ್ಧವಾಗುವುದಿಲ್ಲ. ಯಾಕೆಂದರೆ ಇಲ್ಲಿ ಕೆಲಸ ಮಾಡುವ ಮನಸ್ಸುಗಳು ಭ್ರಷ್ಟವಾಗಿಬಿಟ್ಟಿವೆ ಅನ್ನಿಸುವುದಿಲ್ಲವೇ?. ಕೈಗಳನ್ನು ನಿಯಂತ್ರಿಸುವ ಮನಸ್ಸುಗಳೇ ಮಲಿನವಾಗಿರುವುದರಿಂದ ಅಲ್ಲಿಂದ ರವಾನೆಯಾಗುವ ಸಂದೇಶಗಳೇನು?.

ಮುಗ್ಧ ಅಣ್ಣಾ ಕೊಟ್ಟ ಭ್ರಷ್ಟಾಚಾರ ನಿಯಂತ್ರಣ ಸಂದೇಶವನ್ನು ಅರ್ಥೈಸುವಲ್ಲೂ ಶಾಸಕಾಂಗದೊಳಗೆ ಕೆಲಸ ಮಾಡುವ ಕೆಲವು ಮನಸ್ಸುಗಳು ಎಡವಿದವು. ಸಂಸತ್ತನ್ನೇ ಹೈಜಾಕ್ ಮಾಡುವ ತಂತ್ರವೆಂದು ಟೀಕಿಸಿದ್ದು ಸ್ವಲ್ಪಮಟ್ಟಿಗೆ ಸತ್ಯಕ್ಕೆ ಹತ್ತಿರವಾದರೂ ಸಂಸತ್ತಿನೊಳಗೆ ನಡೆದುಕೊಳ್ಳುವ ನಡವಳಿಕೆಗಳೂ ಕೆಲವೊಮ್ಮೆ ಸಂಯಮದ, ನಡವಳಿಕೆಯ ಗೆರೆ ದಾಟಿರುವುದೂ ನಿಜ. ಓಟಿಗಾಗಿ ನೋಟು, ಚುನಾಯಿತ ಜನಪ್ರತಿನಿಧಿಗಳು ಕುದುರೆಗಳಂತೆ ಬಿಕರಿಯಾಗುವುದು, ಆಮಿಷಗಳಿಗೆ ಬಲಿಯಾಗಿ ಬಟ್ಟೆ ಬದಲಿಸಿದಷ್ಟೇ ಸುಲಭವಾಗಿ ಪಕ್ಷಾಂತರ ಮಾಡುವುದು ಕೂಡಾ ಭ್ರಷ್ಟಾಚಾರದಷ್ಟೇ ಅನಿಷ್ಟವಾದುದು ಎಂದರೆ ಯಾರೂ ಸಿಟ್ಟಾಗಬೇಡಿ.

ಅಸಾಮಾನ್ಯ ಕಳ್ಳನನ್ನು ಹಿಡಿಯಲು ಕಳ್ಳನಿಂದ ಮಾತ್ರ ಸಾಧ್ಯ. ಅಸಾಮಾನ್ಯ ಕಳ್ಳನ ಕಳವಿನ ತಂತ್ರಗಳು ಸಾಮಾನ್ಯ ಕಳ್ಳನಿಗೆ ಮಾತ್ರ ಗೊತ್ತಿರಲು ಸಾಧ್ಯ ಹೊರತು ಕಳ್ಳನಲ್ಲದಿದ್ದವನಿಗೆ ಗೊತ್ತಿರಲು ಅಸಾಧ್ಯ. ಭ್ರಷ್ಟಾಚಾರವನ್ನು ಹತ್ತಿಕ್ಕಲು ಅಣ್ಣಾ ಹಜಾರೆ ಉಪವಾಸ ಮಾಡಿ ಮಸೂದೆ ಜಾರಿಗೆ ಒತ್ತಾಯಿಸಿದ್ದು ಇತಿಹಾಸದ ಒಂದು ಪುಟವಾಗಿ ಪ್ರಸ್ತುತವಾಗುತ್ತದೆ ನಿಜ, ಆದರೆ ಭ್ರಷ್ಟಾಚಾರ ಅಳಿಸಿ ಹಾಕುವುದು ಹಜಾರ್ ಅಣ್ಣಾಗಳು ಉಪವಾಸ ಮಾಡಿದ ಮಾತ್ರಕ್ಕೇ ಸಾಧ್ಯವಿಲ್ಲ. ಯಾಕೆಂದರೆ ಭ್ರಷ್ಟಾಚಾರದಿಂದಲೇ ಕೋಟ್ಯಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗೆ ಕಾಯಿದೆ-ಕಾನೂನುಗಳು ನೆಪವಾಗಬಹುದೇ ಹೊರತು ಪರಿಹಾರ ಕೊಡಲಾರವು. ಹಳ್ಳಿಯ ಸಾಮಾನ್ಯನಿಂದ ಹಿಡಿದು ದಿಲ್ಲಿಯ ಅಸಾಮಾನ್ಯನವರೆಗೆ; ಹಳ್ಳಿಯ ಪುಟ್ಟ ಪಂಚಾಯಿತಿಯಿಂದ ಸಂಸತ್ತಿನೊಳಗೆ ಕುಳಿತುಕೊಳ್ಳುವವರತನಕ; ಹಳ್ಳಿಯ ಮರದ ಕೆಳಗೆ ಕುಳಿತು ಕಾಲಕಳೆಯುವವರಿಂದ ಹಿಡಿದು ರಾಮಲೀಲಾ ಮೈದಾನದಲ್ಲಿ ನಿಂತು ಮಾತನಾಡಬಲ್ಲವರತನಕ ಮನಸ್ಸುಗಳು ತಿಳಿಯಾಗಬೇಕು. ಭ್ರಷ್ಟ ಕೈಗಳಿಗಿಂತಲೂ ಮಲಿನಗೊಂಡಿರುವ ಮನಸ್ಸುಗಳು ಅಪಾಯಕಾರಿ.

ಅಣ್ಣಾ ನಿರ್ಮಲ ಮನಸ್ಸಿನಿಂದ ಮಾಡಿದ ಉಪವಾಸದಿಂದ ಅವರ ದೇಹ ದಣಿಯಿತು, ಸರ್ಕಾರ ಮಣಿಯಿತು ನಿಜ. ಇದಿಷ್ಟೇ ಅಣ್ಣಾ ಅವರ ದೇಹದಂಡನೆಗೆ ಸಿಕ್ಕ ಪ್ರತಿಫಲ ಅಂದುಕೊಳ್ಳಬೇಕೇ?ಖಂಡಿತಕ್ಕೂ ಅಣ್ಣಾ ಮಾಡಿದ ಉಪವಾಸ ಸಾರ್ಥಕವಾಗಬೇಕಾದರೆ ಮಲಿನಗೊಂಡಿರುವ ಮನಸ್ಸುಗಳು ಪರಿಶುದ್ಧವಾಗಬೇಕು. ಅಂಥ ಮನಸ್ಸುಗಳು ಮೊಳಕೆಯೊಡೆಯಲು ರಾಮಲೀಲಾ ಮೈದಾನದಲ್ಲಿ ಅಣ್ಣಾ ಮಲಗಿ ಕಳೆದ ದಿನಗಳು ಪ್ರೇರಣೆಯಾಗಲಿ, ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)