Category Archives: ಚಿದಂಬರ ಬೈಕಂಪಾಡಿ

ಗೆದ್ದ ರಾಹುಲ್ ಮುಗ್ಗರಿಸಿದ ಪ್ರತಿಪಕ್ಷಗಳು


– ಚಿದಂಬರ ಬೈಕಂಪಾಡಿ


 

ಸದಾ ಮೌನವಾಗಿರುವ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮೌನ ಮುರಿಯುವಂತೆ ಮಾಡುವುದು ಯಾರಿಗೆ ಸಾಧ್ಯವೆನ್ನುವುದು ಈಗ ಜಗತ್ತಿಗೇ ಗೊತ್ತಾಗಿದೆ. ಯಾಕೆಂದರೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಡಾ.ಸಿಂಗ್ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ನಂಬರ್ 2 ನಾಯಕ rahul-gandhiರಾಹುಲ್ ಗಾಂಧಿ ಕಳಂಕಿತರನ್ನು ರಕ್ಷಿಸುವ ಕೇಂದ್ರ ಸರ್ಕಾರದ ತರಾತುರಿ ಅಧ್ಯಾದೇಶವನ್ನು ಹರಿದು ಹಾಕಲು ಲಾಯಕ್ಕು ಎಂದದ್ದೇ ತಡ ಮೌನ ಮುರಿದು ಹೇಳಿಕೆ ನೀಡಿದ್ದಾರೆ.

ನಿಜ, ಕೇಂದ್ರದ ಯುಪಿಎ ಸರ್ಕಾರ ಕಳಂಕಿತರನ್ನು ರಕ್ಷಿಸಲು ಮುಂದಾಗಿದ್ದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. ಸುಪ್ರಿಂಕೋರ್ಟ್ ಕ್ರಿಮಿನಲ್ ಜನಪ್ರತಿನಿಧಿಗಳನ್ನು ಸಂಸತ್ತು ಮತ್ತು ಶಾಸನ ಸಭೆಗಳಿಂದ ಹೊರಗಿಡಲು ಕೈಗೊಂಡ ಪ್ರಮುಖ ತೀರ್ಮಾನದ ತೀರ್ಪು ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಆದರೆ ಅದು ಹೆಚ್ಚು ದಿನ ಕಾವನ್ನು ಉಳಿಸಿಕೊಳ್ಳಲಿಲ್ಲ. ಸುಪ್ರಿಂಕೋರ್ಟ್ ತೆಗೆದುಕೊಂಡ ಐತಿಹಾಸಿಕ ನಿಲುವಿಗೆ ಪ್ರತಿಯಾಗಿ ಕೇಂದ್ರ ಯುಪಿಎ ಸರ್ಕಾರ ಅಷ್ಟೇ ತರಾತುರಿಯಾಗಿ ಅಧ್ಯಾದೇಶ ಹೊರಡಿಸಿ ಕ್ರಿಮಿನಲ್ ಹಿನ್ನೆಲೆಯ ಪ್ರತಿನಿಧಿಗಳು ಮತ್ತೆ ಅಖಾಡದಲ್ಲಿ ಉಳಿಯುವಂಥ ಚಾಣಾಕ್ಷ ನಡೆಗೆ ಮುಂದಾಯಿತು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧ್ಯಾದೇಶಕ್ಕೆ ಸಹಿ ಹಾಕಬಾರದು ಎನ್ನುವ ನಿಲುವು ಸಾರ್ವತ್ರಿಕವಾಗಿ ಜನ ಸಾಮಾನ್ಯರದ್ದಾಗಿತ್ತು. ಆದರೆ ಅವರು ಸಹಿ ಹಾಕುತ್ತಿದ್ದರೋ, ಇಲ್ಲವೋ ಎನ್ನುವುದು ಈಗ ಅಪ್ರಸ್ತುತ. ಯಾಕೆಂದರೆ ಅಧ್ಯಾದೇಶವನ್ನೇ ಯುಪಿಎ ಸರ್ಕಾರ ಹಿಂದಕ್ಕೆ ಪಡೆಯಲು ನಿರ್ಧರಿಸಿ ಆಗಿದೆ. ರಾಷ್ಟ್ರಪತಿಗಳು ನಿಜಕ್ಕೂ ಒತ್ತಡಕ್ಕೆ ಒಳಗಾಗುತ್ತಿದ್ದರು ಒಂದು ವೇಳೆ ಸರ್ಕಾರ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯಲು ಮನಸ್ಸು ಮಾಡದೇ ಇದ್ದಿದ್ದರೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಈಗ ಪ್ರತಿಪಕ್ಷಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿ ಪ್ರತಿಕ್ರಿಯೆಸುತ್ತಿವೆ ರಾಹುಲ್ ಚೀರಾಡಿದ ಮೇಲೆ. ಅಧ್ಯಾದೇಶ ಹಿಂದಕ್ಕೆ ಪಡೆಯುವಂತೆ ಮಾಡಿದ್ದು ಪ್ರತಿಪಕ್ಷಗಳಲ್ಲ ರಾಹುಲ್. ಆಡಳಿತ ಪಕ್ಷದಲ್ಲಿದ್ದರೂ ಪ್ರತಿಪಕ್ಷದ ನಾಯಕರಂತೆ ರಾಹುಲ್ ಕೆಲಸ ಮಾಡಿದರು ಎನ್ನುವುದು ಪ್ರತಿಕ್ಷಗಳ ಟೀಕೆಯೂ ಆಗಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ಪ್ರತಿಪಕ್ಷಗಳು ಅಷ್ಟೇನೂ ಗಂಭೀರವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದವು ಎನ್ನುವಂತಿಲ್ಲ. ಇದಕ್ಕೆ ಕಾರಣ ಸರಳ ಅವರು ಸನ್ಯಾಸಿಗಳಲ್ಲ,Rahul_Gandhi_Ajay_Maken ಅವರಿಗೂ ಅಧಿಕಾರ ಬೇಕು. ಕ್ರಿಮಿನಲ್ ಹಿನ್ನೆಲೆ ಎನ್ನುವುದು ಈಗಿನ ರಾಜಕೀಯಕ್ಕೆ ತೀರಾ ಅಗತ್ಯವಾದ ಮತ್ತು ಹೆಚ್ಚು ಫಲ ತಂದುಕೊಡಬಲ್ಲ ಅರ್ಹತೆ ಎನ್ನುವಂತಾಗಿದೆ. ಕ್ರಿಮಿನಲ್ ಕೇಸುಗಳಿಲ್ಲದ ರಾಜಕಾರಣಿಗಳ ಸಂಖ್ಯೆ ತೀರಾ ವಿರಳ ಎನ್ನುವುದಕ್ಕಿಂತಲೂ ಕ್ರಿಮಿನಲ್ ಕೇಸಿಲ್ಲದವರು ರಾಜಕೀಯಕ್ಕೆ ನಾಲಾಯಕ್ಕು ಎನ್ನುವಂಥ ಭಾವನೆ ನೆಲೆಗೊಂಡಿದೆ. ಆದ್ದರಿಂದಲೇ ಬಿಜೆಪಿ ಸಹಿತ, ಈ ದೇಶದ ಎಲ್ಲಾ ವಿರೋಧಪಕ್ಷಗಳು ಯುಪಿಎ ತರಾತುರಿಯಲ್ಲಿ ತಂದ ಅಧ್ಯಾದೇಶವನ್ನು ಬಹಿರಂಗವಾಗಿ ವಿರೋಧಿಸುವಂಥ ಮನಸ್ಥಿತಿಗೆ ಬರಲಾಗಲಿಲ್ಲ.

ತೋರಿಕೆಗೆ ಲಾಲು ಪ್ರಸಾದ್ ಯಾದವ್ ಮೇಲೆ ಸುಪ್ರೀಂಕೋರ್ಟ್ ತೀರ್ಪು ಮುಳುವಾಗಲಿದೆ ಎನ್ನುವ ಭಾವನೆ ಹುಟ್ಟು ಹಾಕಲಾಯಿತೇ ಹೊರತು ಪ್ರತಿಪಕ್ಷಗಳು ತಮ್ಮಲ್ಲೂ ಇರಬಹುದಾದ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಪರೋಕ್ಷವಾಗಿ ಯುಪಿಎ ಜೊತೆಗೆ ಕೈಜೋಡಿಸಿದ್ದವು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಬಲವಾಗಿ ವಿರೋಧಿಸುತ್ತಿದ್ದಂಥ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಅವರೂ ಕೂಡಾ ಸುಪ್ರೀಂಕೋರ್ಟ್ ತೀರ್ಪಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ಮೌನಕ್ಕೆ ಶರಣಾಗಿದ್ದರು. ಪ್ರಧಾನಿಯದ್ದು ನಿರಂತರ ಮೌನ, ಇವರದು ಅನಿರೀಕ್ಷಿತ ಮೌನ. ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಮತ್ತು ರಾಹುಲ್ ಮಾತಿಗಷ್ಟೇ ಮಣೆ-ಮನ್ನಣೆ ಎನ್ನುವುದು ಗೊತ್ತಿರುವುದರಿಂದ ಮತ್ತೆ ಮತ್ತೆ ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ.

ಈ ದೇಶದಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಯುಪಿಎ ಸರ್ಕಾರದ ಅಧ್ಯಾದೇಶವನ್ನು ಬಹಿರಂಗವಾಗಿ, ಖಡಾಖಂಡಿತವಾಗಿ ವಿರೋಧಿಸುವಂಥ ಎದೆಗಾರಿಕೆ ತೋರಿಸಲ್ಲಿಲ್ಲ ಎನುವುದು ಎಷ್ಟು ಸತ್ಯವೋ ಸುಪ್ರೀಂಕೋರ್ಟ್ ತೀರ್ಪನ್ನು ಆತ್ಮಪೂರ್ವಕವಾಗಿ ಸ್ವಾಗತಿಸಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಮಾಧ್ಯಮಗಳು ಕೂಡಾ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಕಟಿಸಿ ಗಮನ ಸೆಳೆದವು, ಯುಪಿಎ ಸರ್ಕಾರ ಹೊರಡಿಸಿದ ಅಧ್ಯಾದೇಶವನ್ನು ವ್ಯಾಪಕವಾಗಿ ಪ್ರಚಾರ ಮಾಡಿದವು. ರಾಹುಲ್ ಗಾಂಧಿ ಈ ಅಧ್ಯಾದೇಶವನ್ನು ಹರಿದು ಬಿಸಾಡಿ ಎನ್ನುವ ತನಕವೂ ಕೇವಲ ಒಂದು ಸುದ್ದಿಯಾಗಿ ನೋಡಿದ ಮಾಧ್ಯಮಗಳು ಈಗ ತಾವೂ ಎಡವಟ್ಟು ಮಾಡಿದೆವು ಎನ್ನುವ ಮನಸ್ಥಿತಿಗೆ ಬಂದಿವೆ.

ರಾಹುಲ್ ಗಾಂಧಿ ಅಧ್ಯಾದೇಶವನ್ನು ವಿರೋಧಿಸಿರುವುದು ಅದನ್ನು ಕಸದ ಬುಟಿಗೆ ಹಾಕಿಸಿರುವುದು ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಒಂದು ಪ್ರಬಲ ರಾಜಕೀಯ ತಂತ್ರಗಾರಿಕೆಯ ನಡೆ ಎನ್ನುವುದನ್ನು ಯಾರೇ ಆದರೂ ಒಪ್ಪಿಕೊಳ್ಳಲೇ ಬೇಕು. ರಾಜಕಾರಣದಲ್ಲಿ ಸಕ್ರಿಯರಾಗಿರುವ advani-sushma-jaitleyರಾಹುಲ್ ಗಾಂಧಿ ಅವರಿಂದ ರಾಜಕೀಯ ನಡೆಗಳನ್ನು ನಿರೀಕ್ಷೆ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದಾದರೆ ಅವರು ಅರಿವಿದ್ದೇ ಅಧ್ಯಾದೇಶದ ಬಗ್ಗೆ ಮೌನ ವಹಿಸಿರಬಹುದು, ಈಗ ಉದ್ದೇಶಪೂರ್ವಕವಾಗಿ ಅದನ್ನು ವಿರೋಧಿಸಿರಬಹುದು. ವಾಸ್ತವ ಈ ಅಧ್ಯಾದೇಶದಿಂದ ರಾಜಕೀಯದಲ್ಲಿರುವವರಿಗೆ ನಡುಕವಾಗಿರುವುದು ಮತ್ತು ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿರುವುದು.

ಪ್ರತಿಪಕ್ಷಗಳು ಮಾಡಬೇಕಿದ್ದ ಕೆಲಸವನ್ನು ತಮ್ಮ ಸರ್ಕಾರದ ಮುಂಚೂಣಿಯಲ್ಲಿರುವ ನಾಯಕ ರಾಹುಲ್ ಗಾಂಧಿ ಮಾಡಿದ್ದಾರೆ ಎನ್ನುವುದಾದರೆ ಅದು ಅವರ ಮುಂದಿನ ರಾಜಕೀಯದ ನಡೆಗೆ ದಿಕ್ಸೂಚಿ. ರಾಹುಲ್ ಗಾಂಧಿ ತಮ್ಮ ಪಕ್ಷದ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರಬಹುದು, ಆದರೆ ಮತದಾರರ ಮನಗೆದ್ದಿದ್ದಾರೆ, ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾದ ಸನ್ನಿವೇಶವಿತ್ತು. ರಾಹುಲ್ ಗಾಂಧಿ ಗುಟುರು ಹಾಕಿರುವುದರಿಂದ ಅಂಥವರಿಗೆ ಹಿನ್ನಡೆಯಾಗಿದೆ. ಆದರೆ ಈಗ ರಾಜಕೀಯದಲ್ಲಿ ಹೊಸರಕ್ತದ ಹರಿವಿಗೆ ಅವಕಾಶ ಸಿಕ್ಕಿದರೂ ಸಿಗಬಹುದು ಎನ್ನುವ ಆಶಾಭಾವನೆ ಮೂಡುತ್ತಿದೆ.

ಸುಪ್ರೀಂಕೋರ್ಟ್ ತೀರ್ಪು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಬಲ ಅಸ್ತ್ರವಾಗುತ್ತಿತ್ತು ಬಳಸಿಕೊಂಡಿದ್ದರೆ, ಆದರೆ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿಬಿಟ್ಟವು. ಕಾಂಗ್ರೆಸ್ ಯುವರಾಜ ಈಗ ಚಾಲಾಕಿತನ ತೋರಿಸಿ ಸಂಚಲನ ಉಂಟು ಮಾಡಿದ್ದಾರೆ. ಈಗ ಉಂಟಾಗಿರುವ ಸಂಚಲನ ಯುಪಿಎ ಸರ್ಕಾರಕ್ಕಿಂತಲೂ ಪ್ರತಿಪಕ್ಷಗಳಿಗೆ ಆತಂಕ ತಂದಿದೆ. ಒಂದು ವೇಳೆ ಸುಪ್ರೀಂ ತೀರ್ಪು ಸುಪ್ರೀಂ ಆಗಿಯೇ ಮುಂದಿನ ಚುನಾವಣೆಯಲ್ಲಿ ಚಾಲ್ತಿಯಲ್ಲಿದ್ದರೆ ರಾಹುಲ್ ಹೀರೋ ಆಗುವುದನ್ನು ಅಷ್ಟು ಸುಲಭವಾಗಿ ತಪ್ಪಿಸಲಾಗದು.

ನಿಡ್ಡೋಡಿ ಯೋಜನೆಗೆ ಸಿಂಧ್ಯಾ ಬ್ರೇಕ್

– ಚಿದಂಬರ ಬೈಕಂಪಾಡಿ

ನಿಡ್ಡೋಡಿ ಪ್ರಸ್ತಾವಿತ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಜನ ಮಾಡುತ್ತಿರುವ ಹೋರಾಟಕ್ಕೆ ಜಯ ಸಿಕ್ಕಿದೆ ಅಂದುಕೊಳ್ಳಬೇಕಾಗಿಲ್ಲ ತಕ್ಷಣಕ್ಕೆ ಆದರೆ ಜಯದ ನಿರೀಕ್ಷೆ ಇಟ್ಟುಕೊಳ್ಳುವುದಕ್ಕೆ ಕಾರಣಗಲಿವೆ. ಕೇಂದ್ರ ಇಂಧನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ಇಂಥ ಭರವಸೆ ನೀಡಿದ್ದಾರೆನ್ನುವ ಸುದ್ದಿ ಇಂದು ಮಾಧ್ಯಮಗಳಲ್ಲಿ ಹರಿದಾಡಿರುವುದರಿಂದ ಇಂಥಾ ಆಶಾವಾದ ಹುಟ್ಟಿಕೊಳ್ಳಲು ಕಾರಣವಾಗಿದೆ.

ಮಾಧ್ಯಮದಲ್ಲಿ ಬಂದಿರುವ ಸುದ್ದಿಯನ್ನು ಗಣನೆಗೆ ತೆಗೆದುಕೊಂಡರೆ ‘ಜನರಿಗೆ ಬೇಡವಾದರೆ ಯೋಜನೆ ಕೈಗೊಳ್ಳುವುದಿಲ್ಲ, ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲಾಗುವುದು’. ಮೊದಲು ಸಚಿವರು ಈ ಕೆಲಸ ಮಾಡಲಿ. ಯುವ ಸಚಿವ ಸಿಂಧ್ಯಾ ಅವರು ಆಡಿರುವ ಮಾತಿನಲ್ಲಿ ಬೇಸರವಿದೆ. ಇದಕ್ಕೆ ಹೊಣೆ ಪ್ರತಿಭಟನೆ ಮಾಡುತ್ತಿರುವ ಜನರಲ್ಲ.

ನಿಡ್ಡೋಡಿಯಲ್ಲಿ ಯೋಜನೆ ಸ್ಥಾಪಿಸಲು ಸ್ವಾಧೀನ ಪಡಿಸಿಕೊಳ್ಳುವ ಭೂಮಿಯನ್ನು ಸಚಿವರು ಖುದ್ದು ನೋಡಿದರೆ ಅಲ್ಲಿ ಯೋಜನೆ ಮಾಡಲು ಶಿಫಾರಸು ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. save-niddodiಯಾಕೆಂದರೆ ಆ ಪರಿಸರವೇ ಅಂಥ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಹಚ್ಚ ಹಸಿರಿನಿಂದ ನಳನಳಿಸುವ ಭತ್ತ, ತೆಂಗು, ಕಂಗು, ಬಾಳೆ ತೋಟಗಳು, ಜುಳು ಜುಳು ಹರಿಯುವ ನೀರಿನ ತೊರೆಗಳನ್ನು ನಾಶಮಾಡಿ ದೇಶಕ್ಕೆ ಬೆಳಕು ಕೊಡಲು ಮುಂದಾಗಿದ್ದವರು ಯಾರಿರಬಹುದು ಎನ್ನುವ ಕುತೂಹಲ ಅವರಿಗೂ ಬರಬಹುದು.

ಯಾರೋ ಮಾಡಿದ ಯೋಜನೆ ಜನೋಪಯೋಗಿಯಾದರೆ ಅದರ ಕ್ರೆಡಿಟ್ ತನ್ನದೇ ಎನ್ನುವ ರಾಜಕಾರಣಿಗಳು ನಿಡ್ಡೋಡಿ ಯೋಜನೆಗೆ ತಾವೇ ಮೂಲಪುರುಷ ಎಂದು ಎದೆತಟ್ಟಿ ಹೇಳಿಕೊಳ್ಳಲು ಯಾಕೆ ಮುಂದೆ ಬರುವುದಿಲ್ಲ?
ನವಮಂಗಳೂರು ಬಂದರು, ಹೆದ್ದಾರಿ, ಕೊಂಕಣ ರೈಲ್ವೇ ಯೋಜನೆಯನ್ನು ತಮ್ಮ ಸಾಧನೆಯೆಂದು ಹೇಳಿಕೊಳ್ಳಲು ಅದೆಂಥಾ ಉತ್ಸಾಹ ರಾಜಕಾರಣಿಗಳಿಗೆ. ಕೇಂದ್ರ ಸರ್ಕಾರದ ನಿಡ್ಡೋಡಿ ಯೋಜನೆ ಜನಪರವಾಗಿದ್ದರೆ ಅದರ ಕೀರ್ತಿಗಾಗಿ ಎಷ್ಟೆಲ್ಲ ಜನ ಬಾವುಟ ನೆಟ್ಟು ತಮ್ಮ ಪ್ರತಿಮೆ ಸ್ಥಾಪಿಸಿಕೊಳ್ಳಲು ಬಯಸುತ್ತಿದ್ದರು ಅನ್ನಿಸುವುದಿಲ್ಲವೇ?

ಈಗ ಅವರು ಮೌನವಾಗಿದ್ದಾರೆ, ಯಾಕೆಂದರೆ ಜನರಿಗೆ ಮೂಲಪುರುಷರ ಮಾಹಿತಿ ಗೊತ್ತಾದರೆ ತಮ್ಮ ಭವಿಷ್ಯವೇ ಕಮರಿಹೋಗಬಹುದು ಎನ್ನುವ ಭಯ ಕಾಡದಿರದು. ಆದರೆ ನಿಡ್ಡೋಡಿ ಯೋಜನೆ ಕೇಂದ್ರದಲ್ಲಿ ಕುಳಿತವರಿಗೆ ಕನಸಿಗೆ ಗೋಚರಿಸಲು ಸಾಧ್ಯವಿಲ್ಲ. ಇಂಥ ಯೋಜನೆಗೆ ಭೂಮಿಯನ್ನು ಗುರುತಿಸಿ ಶಿಫಾರಸು ಮಾಡಿರಲೇ ಬೇಕು. ಬಹುಕಾಲದ ಅಧ್ಯಯನದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸಾಕಷ್ಟು ಹೋಂವರ್ಕ್ ಮಾಡಿಯೇ ಕೇಂದ್ರಕ್ಕೆ ಈ ಯೋಜನೆ ಕಳುಹಿಸಲಾಗಿದೆ. ತಮ್ಮ ಕಾಲಬುಡದಲ್ಲೇ ಇಂಥ ಘನಘೋರ ಜನವಿರೋಧಿ ಯೋಜನೆ ಅಸ್ತಿತ್ವಕ್ಕೆ ಬರುತ್ತಿರುವುದನ್ನು ಗುರುತಿಸಲಾಗದಂಥ ದಡ್ಡರೂ ನಮ್ಮವರು ಎನ್ನುವುದು ಜೀರ್ಣಿಸಿಕೊಳ್ಳಲಾಗದ ಸತ್ಯ.

ಅಂದಹಾಗೆ ನಿಡ್ಡೋಡಿ ಯೋಜನೆ ರದ್ಧಾದ ಘೋಷಣೆ ಹೊರಬಿದ್ದರೆ ಅದರ ಕ್ರೆಡಿಟ್ ತೆಗೆದುಕೊಳ್ಳಲು, ಮೈಲೇಜ್‌ಗಾಗಿ ರಾಜಕಾರಣಿಗಳು ಮುಂದಾಗುವ ಅಪಾಯವೂ ಇದೆ. ಒಂದು ರಾಜಕೀಯ ಪಕ್ಷದ ಹೋರಾಟ ಇದಾಗಿರಲಿಲ್ಲ. ಎಲ್ಲ ಪಕ್ಷದವರು ಮುಕ್ತವಾಗಿ ಮಾತನಾಡಿದ್ದಾರೆ. ಆದ್ದರಿಂದ ಇದೊಂದು ಜನವಿರೋಧಿ ಯೋಜನೆ, ಜನರ ಪ್ರಯತ್ನದಿಂದ ಇಲ್ಲಿಂದ ತೊಲಗಿತು ಅಂದುಕೊಳ್ಳುವುದು ಸೂಕ್ತವಲ್ಲವೇ?

ನಿಡ್ಡೋಡಿ : ಬದುಕುವ ಹಕ್ಕು ಬೇಕು, ಪರಿಹಾರ ಬೇಡ


– ಚಿದಂಬರ ಬೈಕಂಪಾಡಿ


 

ಕರಾವಳಿಯ ಜನ ನಿಜಕ್ಕೂ ಬೆಚ್ಚಿಬೀಳುವಂಥ ಸ್ಥಿತಿ ನಿರ್ಮಾಣವಾಗಿದೆ. ನಿಡ್ಡೋಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಜನರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುತ್ತದೆ ಎನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಯಾಕೆಂದರೆ ನಂದಿಕೂರು ಸ್ಥಾವರದ ಸುತ್ತಮುತ್ತಲಿನ ಹಳ್ಳಿಗಳನ್ನು ಒಂದು ಸುತ್ತು ಹಾಕಿಬಂದರೆ ಉದ್ದೇಶಿತ ನಿಡ್ಡೋಡಿ ಸ್ಥಾವರ ಉಂಟುಮಾಡಬಹುದಾದ ಗಂಭೀರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬಹುದು. fly_ashಒಂದು ಕಾಲದಲ್ಲಿ ನಂದಿಕೂರು ಪರಿಸರದ ಹಳ್ಳಿಗಳಲ್ಲಿ ಮರಗಿಡಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದವು. ಈಗ ನೋಡಿದರೆ ಆ ಹಸಿರು ಗಿಡಗಳು ತಮ್ಮ ನಿಜ ಬಣ್ಣವನ್ನೇ ಕಳೆದುಕೊಂಡು ಕಂದು ಬಣ್ಣಕ್ಕೆ ತಿರುಗಿವೆ. ಅಲ್ಲಿನ ಹೂವುಗಳ ಮೇಲೆ ಕಣ್ಣಾಡಿಸಿದರೆ ಸಾಕು ಈ ಸ್ಥಾವರದ ಹಾರು ಬೂದಿ ಮಾಡಿರುವ ಅವಾಂತರದ ಅರಿವಾಗುತ್ತದೆ.

ಉಷ್ಣ ವಿದ್ಯುತ್ ಸ್ಥಾವರದ ಬಹುಮುಖ್ಯ ಸಮಸ್ಯೆ ಹಾರು ಬೂದಿ ಎನ್ನುವುದನ್ನು ಆಗ ಆ ಸ್ಥಾವರದ ಅಧಿಕಾರಿಗಳು ಅದೆಷ್ಟು ನಾಜೂಕಾಗಿ ನಿರಾಕರಿಸಿದ್ದರೆಂದರೆ ಅತ್ಯಾಧುನಿಕ ತಾಂತ್ರಿಕತೆ ಅಳವಡಿಸುತಿರುವುದರಿಂದ ಹಾರು ಬೂದಿ ಯಾವುದೇ ಕಾರಣಕ್ಕೂ ಸಮಸ್ಯೆ ಮಾಡುವುದಿಲ್ಲವೆಂದಿದ್ದರು. ಯಾರೂ ಕೇಳಿರದ ತಾಂತ್ರಿಕತೆಯನ್ನು ಉದಾಹರಿಸಿ ಒಂದಷ್ಟು ಸಿಡಿಗಳ ಮೂಲಕ ತಮಗೆ ಅನುಕೂಲವಾಗುವಮ್ಥ ದೃಶ್ಯ ತೋರಿಸಿ ಕಾಮೆಂಟರಿ ಹೇಳಿ ಹಾರು ಬೂದಿಯನ್ನು ತಮ್ಮ ಮಾತುಗಳಿಂದಲೇ ನಿವಾರಿಸಿಕೊಂಡಿದ್ದರು. ಈಗ ನಂದಿಕೂರು ಪರಿಸರದ ಚಿಕ್ಕ ಮಕ್ಕಳಿಗೂ ಅರಿವಾಗುತ್ತಿದೆ ಹಾರು ಬೂದಿ ಮಾಡಿರುವ ಘೋರ ಪರಿಣಾಮಗಳು.

ಹಾರು ಬೂದಿಯಿಂದ ಇಟ್ಟಿಗೆ, ಸಿಮೆಂಟ್, ಡಾಮರ ಗೆ ಬಳಕೆ, ರಸ್ತೆ ನಿರ್ಮಾಣ ಹೀಗೆ ಅನೇಕ ಉತ್ಪನ್ನಗಳಿಗಾಗಿ ಬಳಕೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ನಿಜ ಆ ಹಾರು ಬೂದಿಯನ್ನು ಅವರು ಬಳಕೆ ಮಾಡಿಕೊಳ್ಳುತ್ತಿರಬಹುದು, ಆದರೆ ಹಾರು ಬೂದಿ ಮಾಡುತ್ತಿರುವ ಮಾಲಿನ್ಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಜಲಚರಗಳಿಗೆ ತ್ಯಾಜ್ಯ ನೀರಿನಿಂದ ಯಾವುದೇ ಪರಿಣಾಮವಾಗುವುದಿಲ್ಲವೆಂದಿದ್ದರು. ಹಾಗಾದರೆ ಈ ಮಾತನ್ನು ಎಷ್ಟ್ರಮಟ್ಟಿಗೆ ನಂಬಬೇಕು. fly-ash-pollutionಸಮುದ್ರಕ್ಕೆ ಬಿಡಲಾಗುತ್ತಿರುವ ತ್ಯಾಜ್ಯ ನೀರಿನ ಪರಿಣಾಮಗಳನ್ನು ಅಧ್ಯಯನ ಮಾಡುವ ಅಥವಾ ಆ ನೀರನ್ನು ಮಾನಿಟರಿಂಗ್ ಮಾಡುವ ಯಾವ ವ್ಯವಸ್ಥೆಯಿದೆ ? ಎನ್ನುವುದು ಭವಿಷ್ಯದಲ್ಲಿ ಕೇಳುವಂಥ ಸ್ಥಿತಿ ಬರಲಿದೆ. ಬಾಹ್ಯವಾಗಿ ನಂದಿಕೂರು ಸ್ಥಾವರ ಮಾಡುತ್ತಿರುವ ಪರಿಣಾಮಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮತ್ತೊಂದು ಕೊಕ್ಕಡದಂಥ (ಎಂಡೋಸಲ್ಫಾನ್) ಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ. ಆಗ ಸರ್ಕಾರ ಅಂಥ ಸಂಕಷ್ಟಕ್ಕೆ ಒಳಗಾಗುವ ಜನರಿಗಾಗಿ ಒಂದಷ್ಟು ಪ್ಯಾಕೇಜ್ ಪ್ರಕಟಿಸಿ ಕೈತೊಳೆದುಕೊಳ್ಳಬಹುದು. ಆದರೆ ಆ ಹೊತ್ತಿಗೆ ಈಗ ಇರುವ ಹಿರಿಯರು ಇರುವುದಿಲ್ಲ. ಹೊಸ ತಲೆಮಾರಿನ ಜನ ಈ ಸ್ಥಾವರ ನಿರ್ಮಾಣಕ್ಕೆ ಕಾರಣರಾದ ಹಿರಿಯರನ್ನು ಶಪಿಸದಿರಲಾರರು ಎನ್ನುವಂತಿಲ್ಲ.

ಈಗ ಸ್ಥಾಪನೆಯಾಗಲು ಹವಣಿಸುತ್ತಿರುವ ನಿಡ್ಡೋಡಿ ಸ್ಥಾವರದ ಬಗ್ಗೆಯೂ ಒಂದಷ್ಟು ಚಿಂತನೆ ಮಾಡುವುದು ಬುದ್ಧಿವಂತಿಕೆಯಾಗಲಿದೆ. ನಂದಿಕೂರು 1200 ಮೆ.ವಾ. ಆಗಿದ್ದರೆ ನಿಡ್ಡೋಡಿ 4 ಸಾವಿರ ಮೆ.ವಾ ಸಾಮರ್ಥ್ಯದ್ದು. ಎಂ.ಆರ್.ಪಿ.ಎಲ್ ನಿಂದಾಗಿ ಪಣಂಬೂರು, ಸುರತ್ಕಲ್, ಕಾಟಿಪಳ್ಳ, ಮುಕ್ಕ, ಹಳೆಯಂಗಡಿ ಜನ ಚಿಂತಿತರಾಗಿದ್ದರೆ ಮೂಲ್ಕಿ, ಪಡುಬಿದ್ರಿ, ಬೆಳ್ಮಣ್, ನಿಟ್ಟೆ ಜನ ನಂದಿಕೂರು ಸ್ಥಾವರದಿಂದ ಸಂಕಟ ಅನುಭವಿಸುತ್ತಿದ್ದರೆ. ಉದ್ದೇಶಿತ ನಿಡ್ಡೋಡಿ ಸ್ಥಾವರ ಬಂದರೆ ಮಂಗಳೂರು, ಮೂಡುಬಿದ್ರೆ ಸಹಿತ ಕಾರ್ಕಳದವರೆಗೂ ಜನ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಡಾ.ಬಿ.ಎ.ವಿವೇಕ ರೈ ಈ ನಾಡಿನ ಹಿರಿಯ ಜಾನಪದ ವಿದ್ವಾಂಸ ಹಾಗೂ ಗ್ರಾಮೀಣ ಬದುಕನ್ನು ಹೆಚ್ಚು ಹತ್ತಿರದಿಂದ ಅಧ್ಯಯನ ಮಾಡಿದವರು. ಅವರು ನಿಡ್ಡೋಡಿ ಪರಿಸರದಲ್ಲಿ ಸುತ್ತು ಹಾಕಿ ಬಂದು ಹಾರು ಬೂದಿಯ ಬಗ್ಗೆ ವ್ಯಕ್ತಪಡಿಸಿರುವ ಆತಂಕಗಳು ಕಡೆಗಣಿಸುವಂಥವುಗಳಲ್ಲ. ಹರಿಸಿನಿಂದ ಕಂಗೊಳಿಸುತ್ತಿರುವ ಭತ್ತದ ಪೈರುಗಳನ್ನು ನೋಡಿದರೆ ದಿಲ್ಲಿಯಲ್ಲಿ ಕುಳಿತು ಈ ಯೋಜನೆಗೆ ಸಮ್ಮತಿಸಿದವರು ನಿಜಕ್ಕೂ ಮನುಷ್ಯರಾಗಿರಲು ಸಾಧ್ಯವೇ ? ಎನ್ನುವ ಪ್ರಶ್ನೆ ಮೂಡುತ್ತದೆ. ಮೂರು ಬೆಳೆ ಬೆಳೆಯುವ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಂಡು ಪರಿಹಾರ ಧನ, ವಾಸ್ತವಕ್ಕೆಂದು ಮನೆ ನಿವೇಶನ, ಮನೆಗೊಂದು ಉದ್ಯೋಗ, ಕೆಲಸ ಬೇಡವೆಂದಾದರೆ 5 ಲಕ್ಷ ರೂಪಾಯಿ ಏಕಗಂಟಿನ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತದೆ. ಸಿಕ್ಕ ಪರಿಹಾರ ಖರ್ಚು ಮಾಡಲು ಬಾರ್ ತೆರೆದು, ಮೋಜು ಮಸ್ತಿಗೆ ಅವಕಾಶ ಕಲ್ಪಿಸಿಕೊಟ್ಟು ಕೈಖಾಲಿ ಮಾಡಿಕೊಳ್ಳಲು ಸಾಧ್ಯ ಎನ್ನುವುದನ್ನು ಬಿಟ್ಟರೆ ಬೇರೇನೂ ಸಾಧ್ಯವಿಲ್ಲ.

ಈಗ ಅಲ್ಲಿ ಹರಿಯುವ ತೊರೆಗಳಾಗಲೀ, ನೀರಿನಿಂದ ತುಂಬಿ ತುಳುಕುತ್ತಿರುವ ಕೆರೆ, ಬಾವಿಗಳಾಗಲೀ ಇರಲು ಸಾಧ್ಯವಿಲ್ಲ. save-niddodiಬಾನಾಡಿಗಳು ನಿಮ್ಮ ಕಣ್ಣಿಗೆ ಕಾಣಿಸಲಾರವು, ದನ-ಕರುಗಳ ದನಿ ಕೇಳಿಸವು. ಈಗಾಗಲು ಸಾಧ್ಯವಿಲ್ಲ ಎನ್ನುವವರಿಗೆ ನಂದಿಕೂರು ಪರಿಸರದಲ್ಲಿ ಗುಬ್ಬಚ್ಚಿಗಳಿವೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ. ರಾಜಕಾರಣಿಗಳು ನಿಡ್ಡೋಡಿ ಸ್ಥಾವರದ ಬಗ್ಗೆ ನಿಖರವಾಗಿ ಮಾತನಾಡಲು ಹಿಂಜರಿಯುತ್ತಾರೆ. ಆಡಳಿತ ಪಕ್ಷದವರಿಗೆ ಮುಜುಗರವಾಗಿದ್ದರೆ, ವಿರೋಧ ಪಕ್ಷಗಳಿಗೆ ಈ ಯೋಜನೆ ಬ್ರಹ್ಮಾಸ್ತ್ರವಾಗಿದೆ. ಇದೇ ಒಂದು ಅವಕಾಶವೆಂದು ಕೆಲವರು ಸಂಘಟನೆಗೆ ಬೆಂಬಲ, ಪರವಾದ ಹೇಳಿಕೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ರಾಜಕೀಯ ರಹಿತವಾಗಿ ಇದನ್ನು ವಿರೋಧಿಸಬೇಕು ಎನ್ನುವುದು ವೈಯಕ್ತಿಕವಾದ ಅನಿಸಿಕೆ. ಹಾಗೆ ನೋಡಿದರೆ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರು ಅತ್ಯಂತ ಗಟ್ಟಿಯಾಗಿಯೇ ಈ ಯೋಜನೆಯನ್ನು ವಿರೋಧಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವುದು ಮೆಚ್ಚುವಂಥ ನಿಲುವು. ಸರ್ಕಾರ ತಮ್ಮ ಪಕ್ಷದ್ದೇ ಆಗಿದ್ದರು ಜನವಿರೋಧಿಯಾದ ಯೋಜನೆ ಬೇಕಾಗಿಲ್ಲ ಎನ್ನುವ ಅವರ ನಿಲುವನ್ನು ಬೆಂಬಲಿಸುವುದು ಈಗಿನ ಅನಿವಾರ್ಯತೆ ಕೂಡಾ.

ನಿಡ್ಡೋಡಿ ವಿದ್ಯುತ್ ಸ್ಥಾವರ ಕರಾವಳಿಗೆ ಅನಿವಾರ್ಯವಲ್ಲ. ಕರಾವಳಿಯಲ್ಲಿ ತಯಾರಾಗುವ ವಿದ್ಯುತ್ ಕರಾವಳಿಗೇ ಮೀಸಲು ಎನ್ನುವ ವಾದವೂ ಬೇಕಾಗಿಲ್ಲ. ಇಂಥಾ ವಾದಗಳನ್ನು ಹಿಂದೆಯೂ ಮಂಡಿಸಿದ್ದರು ಅತಿ ಬುದ್ಧಿವಂತರು.

ದೇಶಕ್ಕೆ ವಿದ್ಯುತ್ ಸಮಸ್ಯೆ ಇದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಹಾಗೆಯೇ ಕರಾವಳಿಯನ್ನು ತ್ಯಾಜ್ಯದ ತಿಪ್ಪಿಗುಂಡಿ ಮಾಡಿ ವಿದ್ಯುತ್ ಸ್ಥಾವರ ಸ್ಥಾಪಿಸುವುದಕ್ಕೆ ಜನರು ಅವಕಾಶ ಕೊಡಬೇಕೆನ್ನುವ ಕಟ್ಟು ಪಾಡಿಲ್ಲ. ನಮ್ಮ ಭೂಮಿ, ನಮ್ಮ ಜಲ, ನಮ್ಮ ಜೀವಚರಗಳು ಈ ಮಣ್ಣಲ್ಲಿ ಬದುಕುವ ಕನಸು ಕಟ್ಟಿಕೊಂಡಿವೆ. ತಲೆ ತಲೆಮಾರುಗಳಿಂದ ಆರಾಧಿಸಿಕೊಂಡು ಬರುತ್ತಿರುವ ಮಠ, ಮಂದಿರಗಳು, ಭೂತಾರಾಧನೆ, ನಾಗಬನಗಳಿವೆ. ಇವುಗಳನ್ನು ನಾಶಮಾಡಿ ಬೆಳಕು ಹರಿಸುವ ಅಗತ್ಯವಿಲ್ಲ. ಅಲ್ಲಲ್ಲಿ ಗೋರಿ ನಿರ್ಮಿಸಿ ಹಣತೆಗಳನ್ನು ಹಚ್ಚಿಡುವಂತೆ ಮಾಡುವ ದುಸ್ಸಾಹಸಕ್ಕೆ ಮುಂದಾಗುವುದು ಬೇಡ.

ನಮಗೆ ಬದುಕುವ ಹಕ್ಕು ಬೇಕು, ಪರಿಹಾರ ಬೇಡ ಎನ್ನುವುದು ಈ ಯೋಜನೆ ವಿರೋಧಿಸುವ ಧ್ಯೇಯ ವಾಕ್ಯವಾಗಬೇಕು. ಜನ ಮೌನ ಮುರಿಯುವುದಕ್ಕೆ ಕಾಲ ಪಕ್ವಗೊಂಡಿದೆ.

ನಿಡ್ಡೋಡಿ ವಿದ್ಯುತ್ ಸ್ಥಾವರ ಯಾಕೆ ಬೇಡ ?


– ಚಿದಂಬರ ಬೈಕಂಪಾಡಿ


 

ನೆಲದ ಮೇಲೆ ಅಂಗಾತ ಮಲಗಿದ ಇಪ್ಪತ್ತರ ಜೀವ ಅತ್ತ ಮಗುವೂ ಅಲ್ಲ, ಇತ್ತ ಯುವಕನೂ ಅಲ್ಲ. ತೆವಳುತ್ತಾ ಮನೆಯೊಳಗೇ ಕಾಲ ಕಳೆಯುವ ಮತ್ತೊಂದು ಜೀವ. ಸುಂದರ ಯುವತಿಯ ಕೈಹಿಡಿಯಲು ಯುವಕರು ಮುಂದೆ ಬರುವುದಿಲ್ಲ, ಆ ಊರಿನ ಯುವಕರಿಗೆ ಹೆಣ್ಣು ಕೊಡಲು ಹೊರಗಿನವರು ಇಚ್ಛೆಪಡುವುದಿಲ್ಲ. ಹುಟ್ಟುವ ಮಕ್ಕಳು ಅಂಗವೈಕಲ್ಯದಿಂದ ಕೂಡಿದ್ದರೆ, ಮದುವೆ ಆದರೂ ಹೆಣ್ಣು ಗರ್ಭ ಧರಿಸುವುದಿಲ್ಲ. ಇಂಥ ವೈರುಧ್ಯಗಳಿಂದ ನಲುಗುತ್ತಿರುವ ಕೊಕ್ಕಡದ ಹೆಸರು ಕೇಳಿದರೆ ಮೈಜುಮ್ಮೆನ್ನುತ್ತದೆ. ಕಾರಣ ಮಹಾಮಾರಿ ಏಡ್ಸ್ ಅಲ್ಲ ಅದಕ್ಕಿಂತಲೂ ಭೀಕರವಾದ ಎಂಡೋಸಲ್ಫಾನ್ ಈ ಭಾಗದಲ್ಲಿ ಮಾಡಿರುವ ಪರಿಣಾಮ.

ನವಮಂಗಳೂರು ಬಂದರು ನಿರ್ಮಾಣಕ್ಕೆ ಫಲವತ್ತಾದ ಭೂಮಿ ಕೊಟ್ಟು mangalore-oil-refineryಕಾಟಿಪಳ್ಳ-ಕೃಷ್ಣಾಪುರ ಪುನರ್ವಸತಿ ಕೇಂದ್ರದಲ್ಲಿ ಕೇವಲ ಹನ್ನೆರಡೂವರೆ ಸೆಂಟ್ಸ್ ನಿವೇಶನದಲ್ಲಿ ಮನೆಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಉದ್ಯೋಗ ಮಾಡುತ್ತಿರುವ ಅನ್ನದಾತನ ಬದುಕು ಬವಣೆ ಅಧ್ಯಯನ ಯೋಗ್ಯ.

ಮಂಗಳೂರು ತೈಲಾಗಾರ ನಿರ್ಮಾಣಕ್ಕೆ ಭೂಸ್ವಾಧೀನವಾಗಿ ಈಗ ಚೇಳಾರಿನಲ್ಲಿ ಏದುಸಿರು ಬಿಡುತ್ತಿರುವ ನಿರ್ವಸಿತರು, ಎಂಎಸ್‌ಇಝಡ್ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡವರು ಸಿಂಗಾಪುರದಂಥ ಪುನರ್ವಸತಿ ನಗರಿಯಲ್ಲಿ ಬದುಕುತ್ತಿದ್ದಾರೆ.

ಪಡುಬಿದ್ರಿ ನಂದಿಕೂರು ವಿದ್ಯುತ್ ಸ್ಥಾವರದ ಸುಮಾರು 30 ಕಿ.ಮೀ ಸುತ್ತಳತೆಯಲ್ಲಿ ಹಸಿರು ಗಿಡಗಳು ನಳನಳಿಸುವುದಿಲ್ಲ. mangalore-pollutionಯಾಕೆಂದರೆ ಹಾರು ಬೂದಿಯ ಪ್ರಭಾವ. ಈ ಮೇಲಿನ ಎಲ್ಲವೂ ಪರಿಸರಕ್ಕೆ ಹಾನಿ ಮಾಡುತ್ತಿರುವಂಥವು ಮತ್ತು ಮನುಷ್ಯರು ಮನುಷ್ಯರಾಗಿ ಬದುಕಲು ಅವಕಾಶ ಮಾಡಿಕೊಡದ ಕೈಗಾರಿಕೆಗಳು. ಭೂಮಿಗೆ ಪರ್ಯಾಯವಾಗಿ ಹಣಕೊಟ್ಟಿವೆ, ಆದರೆ ಬದುಕು ಕಿತ್ತುಕೊಂಡಿವೆ. ಹತ್ತಾರು ಎಕರೆ ಭೂಮಿಯ ಒಡೆಯನಾಗಿದ್ದ ಜಮೀನ್ದಾರ ಈ ಕೈಗಾರಿಕೆಗಳ ಸ್ಥಾಪನೆಯಿಂದ ಬೀದಿಗೆ ಬಿದ್ದಿದ್ದಾನೆ.

ಈಗ ನಿಡ್ಡೋಡಿ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಜನ ನಿರ್ವಸಿತರಾಗುವುದು, ಫಲವತ್ತಾದ ಭೂಮಿಯನ್ನು ಬಿಟ್ಟುಕೊಟ್ಟು ಹಣದ ಥೈಲಿ ಹಿಡಿದಿಕೊಂಡು ಬಾರು, ಮೋಜು ಮಸ್ತಿಯಲ್ಲಿ ಕಾಲಕಳೆದು ಬಿಕಾರಿಯಾಗುವ ಕಾಲ ಸನ್ನಿಹಿತವಾಗುತ್ತಿದೆ.

ಯಾವುದೇ ಸರ್ಕಾರವಾದರೂ ಸರಿ ಜನಸ್ನೇಹಿ, ಪರಿಸರ ಸ್ನೇಹಿ, ಸಹ್ಯ ಕೈಗಾರಿಕೆಯನ್ನು ಸ್ಥಾಪಿಸುತ್ತದೆ ಎಂದು mangalore-pollution-at-seaನಿರೀಕ್ಷೆಮಾಡುವುದು ಜನರ ಸಾಮಾನ್ಯ ಗ್ರಹಿಕೆ ಹೊರತು ವಾಸ್ತವ ಅಲ್ಲ ಎನ್ನುವುದಕ್ಕೆ ಮೇಲಿನ ಎಲ್ಲವೂ ಉದಾಹರಣೆಗಳು.

ಕಡಂದಲೆ, ಕೊಜೆಂಟ್ರಿಕ್ಸ್ ಎರಡೂ ಉದಾಹರಣೆ ಮೂಲಕ ಹಾನಿಕಾರಕ ಕೈಗಾರಿಕೆಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಜನ ಹೆಮ್ಮೆ ಪಟ್ಟುಕೊಂಡರೂ ನಂದಿಕೂರು ಸ್ಥಾವರ ಕೊಜೆಂಟ್ರಿಕ್ಸ್ ಗಿಂತ ಭಿನ್ನ ಹೇಗೆಂದು ಸಮರ್ಥನೆ ಕೊಡಲು ಸಾಧ್ಯವೇ?

ಎಂಆರ್‌ಪಿಎಲ್ ತ್ಯಾಜ್ಯ ನೀರು ಹರಿಸುವ ಕೊಳವೆ ಅಳವಡಿಸುವ ಸಂದರ್ಭದಲ್ಲಿ ನಡೆದ ಗೋಲಿಬಾರ್ ನೆನಪಿಸಿಕೊಂಡರೆ ಒಂದು ಹೋರಾಟ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವೆಂದು ಭ್ರಮೆ ತರಿಸಿತೇ ಹೊರತು ಪರೋಕ್ಷವಾಗಿ ಜನರನ್ನು ಸರ್ಕಾರ ಮೋಸಗೊಳಿಸಿತು ಎನ್ನುವುದೇ ಸೂಕ್ತ.

ಗೋಲಿಬಾರ್ ವೇಳೆ ಹೋರಾಟದಲ್ಲಿ ಭಾಗವಹಿಸಿಯೋ, ಆಕಸ್ಮಿಕವಾಗಿಯೋ ಆ ಸಂದರ್ಭದಲ್ಲಿ ಗಾಯಗೊಂಡವರಿಗೆ ಪರಿಹಾರ, ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಪ್ರಯೋಜನ ಆಗಿಲ್ಲ. ನೆಲ-ಜಲ ನಮ್ಮದು. ಇಲ್ಲಿ ತಯಾರಾಗುವ ಪೆಟ್ರೋಲ್ ಕಡಿಮೆ ದರದಲ್ಲಿ ಬಳಕೆ ಮಾಡುವ ಭಾಗ್ಯ ರಾಜಧಾನಿ ದೆಹಲಿ ಜನಕ್ಕೆ. ಇಲ್ಲಿ ಉದ್ಯೋಗಕ್ಕೆ ಆಯ್ಕೆಯಲ್ಲೂ ಅವರದ್ದೇ ಮಾನದಂಡ, ಅವರದ್ದೇ ಜನ, ಎಲ್ಲರೂ ಭಾರತೀಯರು ಎನ್ನುವ ಸಮಾಧಾನದ ಮಾತು.

ನಾವು ನವಮಂಗಳೂರು ಬಂದರು ನಿರ್ಮಾಣವಾದ ಮೇಲೂ ಪಾಠ ಕಲಿಯಲಿಲ್ಲ. ಪುನರ್ವಸತಿ ಕೇಂದ್ರದ ಅಭಿವೃದ್ಧಿಗೆ ಬಂದರಿನ ಲಾಭದಲ್ಲಿ ಬಿಡಿಗಾಸೂ ಇಲ್ಲ, ಆದರೆ ಭೂಸ್ವಾಧೀನ ಮಾಡುವ ವೇಳೆ ಮಾಡಿಕೊಂಡ ನಿರ್ಣಯಗಳನ್ನು ಬೈಕಂಪಾಡಿ ಪಟೇಲ್ ಶ್ರೀನಿವಾಸ ರಾವ್ ಅವರನ್ನು ಸಂಪರ್ಕಿಸಿ ಪಡೆದುಕೊಳ್ಳಿ.

ಎಂಆರ್‌ಪಿಎಲ್ ವಿರುದ್ಧ ಹೋರಾಟ ಮಾಡಿದಾಗ ಜನರನ್ನು ಬಗ್ಗು ಬಡಿಯಲು ಅನುಸರಿಸಿದ ತಂತ್ರ ಒಡೆದು ಆಳುವ ನೀತಿ. ಒಕ್ಕಲೆಬ್ಬಿಸುವ ಸಾಮರ್ಥ್ಯವಿದ್ದವರಿಗೆ ಎಲ್ಲಾ ರೀತಿಯ ಗುತ್ತಿಗೆ ಕಾಣಿಕೆ.

ನಂದಿಕೂರು ಸ್ಥಾವರದ ವಿರುದ್ಧ ಹೋರಾಟ citizens-protest-niddodi-mangaloreಶುರುವಾದಾಗ ಧುತ್ತನೆ ಪ್ರತ್ಯಕ್ಷವಾದ ಪರ್ಯಾಯ ಹೋರಾಟ ಸಮಿತಿ, ಪರಿಸರಕ್ಕೆ ಹಾನಿಯಾಗುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುವ ಘೋಷಣೆ- ಚಪ್ಪಾಳೆ ಗಿಟ್ಟಿಸುವಂಥ ಭಾಷಣ. ಈಗ ಅವರೆಲ್ಲಿದ್ದಾರೆ? ಅವರೊಂದಿಗೆ ಕಾಣಿಸಿಕೊಂಡಿದ್ದ ನಂದಿಕೂರಿನ ಮುಖಗಳೆಲ್ಲಿವೆ?

ಇಷ್ಟೆಲ್ಲಾ ಹೇಳಿದ ಮೇಲೂ ನಿಡ್ಡೋಡಿ ಸ್ಥಾವರವನ್ನು ಸಮರ್ಥಿಸಿಕೊಳ್ಳುವವರಿದ್ದರೆ ಅದು ಅವರ ಜಾಣತನ ಎನ್ನುತ್ತೇನೆ. 1200 ಮೆ.ವಾ ಸಾಮರ್ಥ್ಯದ ನಂದಿಕೂರು ಸ್ಥಾವರದ ಅನಾಹುತವನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುತ್ತಿರುವಾಗ 4000 ಮೆ.ವಾ ಸಾಮರ್ಥ್ಯದ ಸ್ಥಾವರವನ್ನು ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮವನ್ನು ಊಹೆಮಾಡಿಕೊಳ್ಳುವುದು ಕಷ್ಟವಲ್ಲ.

ಕರಾವಳಿ ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶ ಅತೀ ಸೂಕ್ಷ್ಮ ಎನ್ನುವ ಪರಿಣತರ ವರದಿಯನ್ನು ನಿರಾಕರಿಸುವಂತಿಲ್ಲ. ಸರ್ಕಾರಿ ಪ್ರಾಯೋಜಿತ, ಕಂಪೆನಿ ಕೃಪಾಪೋಷಿತ ಪರಿಣತರ ಅಥವಾ ಢೋಂಗಿ ಪರಿಸರವಾದಿ ಪರಿಣತರ ಮಾತಿನಲ್ಲಿ ಜನ ವಿಶ್ವಾಸವಿಡುವಂತಿಲ್ಲ.

ಧಾರಣಾ ಶಕ್ತಿ ಅಧ್ಯಯನ ಮಾಡುವ ತನಕ ಯಾವುದೇ ಕೈಗಾರಿಕೆಗಳಿಗೆ ಕರಾವಳಿಯಲ್ಲಿ ಅವಕಾಶವಿಲ್ಲ ಎನ್ನುವ ಒಂದಂಶ ಅಜೆಂಡಾ ಮಾತ್ರ ಹೋರಾಟ ಸಮಿತಿಯ ಮುಂಚೂಣಿಯಲ್ಲಿರಬೇಕು ಹೊರತು ಅದು ಅಪಾಯಕಾರಿಯೋ, ಅಲ್ಲವೋ ಎನ್ನುವುದು ಈಗ ಮುಖ್ಯವಲ್ಲ ಎನ್ನುವುದೇ ಜನರ ಬೇಡಿಕೆಯಾಗಬೇಕು.

ಕರಾವಳಿಯಲ್ಲಿ ಸ್ಥಾಪನೆಯಾಗಿರುವ ಮತ್ತು ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳೆಲ್ಲವೂ ರಾಸಾಯನಿಕ ಆಧಾರಿತ ಮತ್ತು ಕಲ್ಲಿದ್ದಲು ಆಧಾರಿತ. ಹಾಗಾದರೆ ಕರಾವಳಿ ತ್ಯಾಜ್ಯದ ತಿಪ್ಪೇಗುಂಡಿಯೇ?

ಧಾರಾಳವಾಗಿ ಉದ್ಯೋಗ ನೀಡುತ್ತಿದ ಎಂಡಿಎಲ್ ಯಾರ್ಡನ್ನು save-niddodiಇಲ್ಲಿನ ರಾಜಕಾರಣಿಗಳು ಮುಂಬೈಗೆ ಸ್ಥಳಾಂತರಿಸಲು ಸಮ್ಮತಿಸಿದ್ದೇಕೆ? ನೆಲ, ಜಲ, ವಾಯು ಮಾರ್ಗದ ಅನುಕೂಲವಿರುವ ಕರಾವಳಿಯಲ್ಲಿ ಪರಿಸರಕ್ಕೆ ಹಾನಿಯಾಗದಂಥ ಆಟೋಮೊಬೈಲ್ ಉದ್ದಿಮೆ ಸ್ಥಾಪಿಸಿದ್ದರೆ ಸಹಸ್ರಾರು ಜನರಿಗೆ ಉದ್ಯೋಗ ಸಿಗುತ್ತಿರಲಿಲ್ಲವೇ? ಕರಾವಳಿಯಲ್ಲೂ ಖರ್ಗೆಯವರು ರೈಲ್ವೇ ಕೋಚ್ ನಿರ್ಮಾಣ ಕಾರ್ಖಾನೆ ಸ್ಥಾಪಿಸಲು ಮುಂದಾಗಬಾರದೇ? ಈ ಪ್ರಶ್ನೆಗಳನ್ನು ನಿಡ್ಡೋಡಿಗೆ ಓಡೋಡಿ ಬರುವ ರಾಜಕಾರಣಿಗಳಿಗೆ ಕೇಳಿ. ಮಠ ಪೀಠಾಧೀಶರು, ರಾಜಕಾರಣಿಗಳು ಸಾರಥ್ಯ ವಹಿಸಿಕೊಳ್ಳುವ ಹೋರಾಟದಲ್ಲಿ ಯಾರೂ ನಂಬಿಕೆ ಇಟ್ಟುಕೊಳ್ಳುವಂತಿಲ್ಲ.

ಮಠ-ಪೀಠಾಧಿಗಳಿಂದ, ಜಾತಿ, ಧರ್ಮಗಳ ನೆಲೆಯಿಂದ ಮತ್ತು ರಾಜಕೀಯ ಪಕ್ಷಗಳ ಸೆರಗಿನ ಮರೆಯಿಂದ ಹೊರತಾದ ಹೋರಾಟವಾಗಬೇಕು. ಅಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಹಿರಿ ತಲೆಯಿಂದ ಹಿಡಿದು ಅಲ್ಲೇ ಬದುಕುವ ಕನಸು ಕಟ್ಟಿಕೊಂಡು ಹುಟ್ಟಿರುವ ಹಸುಗೂಸಿನ ತನಕ ಜನರಿಗಾಗಿ, ಜನರ ಹೋರಾಟವಾಗಬೇಕು. ಅದು ಆಗಲಿ ಎನ್ನುವ ಆಶಯ ನನ್ನದು.

ಯುದ್ಧಭೂಮಿಯಲ್ಲಿ ಶಸ್ತ್ರತ್ಯಾಗ ಮಾಡಿದ ದಂಡನಾಯಕ

– ಚಿದಂಬರ ಬೈಕಂಪಾಡಿ

ಬಿಜೆಪಿಯ ಎಲ್ಲಾ ಹುದ್ದೆಗಳಿಗೆ ಎಲ್.ಕೆ.ಅಡ್ವಾಣಿ ಅವರ ರಾಜೀನಾಮೆ ಸೋಮವಾರದ ದೊಡ್ಡ ಸುದ್ದಿ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆರು ದಶಕಗಳ ಅಡ್ವಾಣಿ ಅವರ ರಾಜಕೀಯವನ್ನು , ರಾಜಕಾರಣಿಗಳನ್ನು ಬಹಳ ಹತ್ತಿರದಿಂದ ಗಮನಿಸುತ್ತಿರುವ ಮಾಧ್ಯಮ ಮಂದಿಯ ಪೈಕಿ ಬಹಳ ಮಂದಿ ಈಗ ಸಕ್ರಿಯರಲ್ಲ. ಅಷ್ಟೊಂದು ಸುದೀರ್ಘ ಅವಧಿಯ ರಾಜಕೀಯ ಒಳನೋಟ ಹೊಂದಿರುವ ಅಡ್ವಾಣಿ ಏಕಾಏಕಿ ರಾಜೀನಾಮೆ ಕೊಟ್ಟಿರುವುದು Advaniಮಾಧ್ಯಗಳಿಗೆ ಬ್ರೇಕಿಂಗ್ ನ್ಯೂಸ್ ಹೊರತು ಅವರ ಪಕ್ಷದಲ್ಲಿ ಅವರನ್ನು ಹತ್ತಿರದಿಂದ ನೋಡುತ್ತಿದ್ದವರಿಗೆ ಅಂಥದ್ದೇನೂ ಶಾಕಿಂಗ್ ನ್ಯೂಸ್ ಅಲ್ಲ. ಆ ಕೆಲಸವನ್ನು ಅಡ್ವಾಣಿ ಬಹಳ ಹಿಂದೆಯೇ ಮಾಡಬೇಕಾಗಿತ್ತು ಎನ್ನುವವರೇ ಹೆಚ್ಚು. ಎಂಟು ವರ್ಷಗಳ ಅವಧಿಯಲ್ಲಿ ಅಡ್ವಾಣಿಯವರು ಮೂರು ಸಲ ರಾಜೀನಾಮೆ ಕೊಟ್ಟಿರುವುದರಿಂದ ಮನವೊಲಿಕೆಗೆ ಅವಕಾಶವಿದೆ ಎನ್ನುವ ವಿಶ್ವಾಸವೂ ಇದೆ.

ಅಡ್ವಾಣಿ ಅವರ ರಾಜೀನಾಮೆ ನಿರ್ಧಾರ ಅವರ ಸ್ವಂತದ್ದು ಅಂದುಕೊಂಡರೂ, ಅದು ಸರಿಯೆಂದು ಹೇಳಬಹುದಾದರೂ ಅವರಂಥ ಹಿರಿಯರು ರಾಜೀನಾಮೆ ಕೊಡಲು ಆಯ್ಕೆ ಮಾಡಿಕೊಂಡ ಸಂದರ್ಭ ಸೂಕ್ತವಲ್ಲ ಎನ್ನುವುದು. ಅವರು ಎತ್ತಿರುವ ಮೂಲಭೂತ ಪ್ರಶ್ನೆಯೂ ಕೂಡಾ ಹಳೆತಲೆಮಾರಿನವರಿಗೆ ಸರಿಯೆಂದು ಕಂಡು ಬಂದರೂ ಈಗಿನ ಪೀಳಿಗೆಗೆ ರುಚಿಸುವುದಿಲ್ಲ.

ನರೇಂದ್ರ ಮೋದಿ ಅವರನ್ನು ತಮ್ಮ ಆಕ್ಷೇಪಣೆಯ ಹೊರತಾಗಿಯೂ ಸರ್ವಸಮ್ಮತವಾಗಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅಡ್ವಾಣಿ ಅವರ ಈ ನಿರ್ಧಾರಕ್ಕೆ ಕಾರಣವೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಹಾಗೆಂದು ಮೋದಿ ಅವರಿಗೆ ಯಾವುದೇ ಹುದ್ದೆಯನ್ನೇ ಕೊಡಬಾರದೆಂದು ಅವರು ವಾದಿಸಿರಲಿಲ್ಲ.
ರಾಜಕೀಯದಲ್ಲಿ ಪಕ್ಷ ವ್ಯಕ್ತಿಕೇಂದ್ರೀಕೃತವಾಗುವುದು ಅಪಾಯಕಾರಿ. ಯಾವುದೇ ಸಂದರ್ಭದಲ್ಲೂ ಹೀಗಾಗಬಾರದು. ಈ ಮಾತು ಸ್ವತ: ಅಡ್ವಾಣಿಯವರಿಗೂ ಅನ್ವಯಿಸುತ್ತದೆ. ಅಲ್ಲವೆಂದಾದರೆ ಅಡ್ವಾಣಿ ತಾವು ವಹಿಸಿಕೊಂಡಿದ್ದ ಹುದ್ದೆಗಳಿಗೆ ರಾಜೀನಾಮೆ ಕೊಟ್ಟ ಕೂಡಲೇ ಬಿಜೆಪಿ ನಾಯಕರು ಇಷ್ಟೊಂದು ಘಾಸಿಗೊಳ್ಳುವ ಅಗತ್ಯವೇನಿತ್ತು?. ಅಡ್ವಾಣಿ ನಿರ್ಗಮಿಸಿದರೆ ಆ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಬಹುದು ಎನ್ನುವ ಹಲವು ಆಯ್ಕೆಗಳು ಬಿಜೆಪಿಯಲ್ಲಿರಬೇಕಿತ್ತು, ಆದರೆ ಅಲ್ಲಿ ಇಲ್ಲ. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಅವರನ್ನು ಹೊರತು ಪಡಿಸಿದರೆ ಬಹುದೊಡ್ಡ ನಿರ್ವಾತ ಬಿಜೆಪಿಯಲ್ಲಿದೆ. ಯಾವ ಕಾರಣಕ್ಕೆ ಇಂಥ ನಿರ್ವಾತ ಉಂಟಾಗಿದೆ ಅಂದರೆ ಬಿಜೆಪಿ ಕೆಲವೇ ಕೆಲವು ವ್ಯಕ್ತಿಕೇಂದ್ರೀಕೃತವಾಗಿ ಬೆಳೆಯಿತು ಎನ್ನಬಹುದು ಅಥವಾ ನಿರ್ಧಾರಗಳು ಕೆಲವೇ ವ್ಯಕ್ತಿಗಳ ಮೂಲಕ ಆದವು, ಅವುಗಳೇ ಮುಂದೆ ಪಕ್ಷದ ನಿರ್ಧಾರಗಳೆನಿಸಿದವು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಇಂಥ ನಿರ್ವಾತವನ್ನು ಅಡ್ವಾಣಿಯವರು ಗುರುತಿಸಿದ್ದಾರೆ. ಅದನ್ನು ತುಂಬಬಲ್ಲವರು ಎನ್ನುವ ಕಾರಣಕ್ಕಾಗಿಯೇ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ಉಮಾಭಾರತಿ ಹೀಗೆ ಕನಿಷ್ಠ ೨೫ ಮಂದಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದ್ದಾರೆ. ಇವರು ಎಂದೂ ಅಡ್ವಾಣಿಯವರ ಮಾತನ್ನು ಮೀರಿದವರಲ್ಲ. ಗೋಧ್ರಾ ಘಟನೆ ನಡೆದ ಮೇಲೆ ಮೋದಿ ಅಧಿಕಾರಕ್ಕೆ ಕುತ್ತು ಬರುವಂಥ ಸಂದರ್ಭದಲ್ಲೂ ಇದೇ ಉಕ್ಕಿನಮನುಷ್ಯ ಬೆಂಬಲಕ್ಕೆ ನಿಂತು ಅಧಿಕಾರದಲ್ಲಿ ಉಳಿಸಿದ್ದವರು ಎನ್ನುವುದನ್ನು ಮರೆಯುವುದಾದರೂ ಹೇಗೆ?. ಆದರೆ ಶಿಷ್ಯನೇ ಬಿಜೆಪಿಯ ನಿರ್ವಾತ ತುಂಬುವಂಥ ಸಂದರ್ಭದಲ್ಲಿ ಅಡ್ವಾಣಿಗೆ ಬೇಸರ ಯಾಕೆ ? ಎನ್ನುವ ಪ್ರಶ್ನೆಯೂ ಮೂಡುತ್ತದೆ.
ಅಡ್ವಾಣಿ ಅನೇಕ ಸಂದರ್ಭಗಳಲ್ಲಿ ಎಡವಿದ್ದಾರೆ. ಹಾಗೆ ಎಡವಿದ್ದೆಲ್ಲವೂ ತಮ್ಮ ಶಿಷ್ಯರ ಕಾರಣಕ್ಕೆ. ಉಮಾಭಾರತಿ, ವಸುಂದರರಾಜೇ, ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ, ನಿತಿನ್ ಗಡ್ಕರಿ ನಿಯೋಜನೆ ಹೀಗೆ ಹಲವು ಘಟನೆಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. Narendra_Modiಸ್ವತ: ಗುಜರಾತ್‌ನಲ್ಲೂ ಅಡ್ವಾಣಿ ಬಿಜೆಪಿಯ ಹಿರಿಯ ನಾಯಕರೆಂಬ ಗೌರವ ಇದೆಯಾದರೂ ತಮ್ಮ ನಾಯಕ ನರೇಂದ್ರ ಮೋದಿ ಎಂದು ಅಲ್ಲಿನ ಬಿಜೆಪಿ ಮಂದಿ ಭಾವಿಸಿರುವುದಕ್ಕೆ ಹೊಣೆ ಯಾರು?. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ನಿರೀಕ್ಷೆಯಿಟ್ಟುಕೊಳ್ಳದೆ ಮೋದಿ ಜಯಭೇರಿ ಭಾರಿಸಿರುವುದನ್ನು ಹೇಗೆ ವ್ಯಾಖ್ಯಾನಿಸಬೇಕು?. ಒಂದೇ ಮಾತಲ್ಲಿ ಹೇಳುವುದಿದ್ದರೆ ನರೇಂದ್ರ ಮೋದಿ ತಮ್ಮದೇ ಇಮೇಜ್ ಬೆಳೆಸಿಕೊಂಡು ಬಿಜೆಪಿಗೆ ಬಲ ಕೊಡುತ್ತಿದ್ದಾರೆ. ಇಲ್ಲೂ ನರೇಂದ್ರ ಮೋದಿ ವ್ಯಕ್ತಿ ಕೇಂದ್ರೀಕೃತವಾಗಿ ಬೆಳೆದುನಿಂತಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ಧಾರಗಳು ಗುಜರಾತ್‌ಗೆ ಅನ್ವಯಿಸಲಾರವು. ಮೋದಿ ಹೇಳುವುದೇ ಅಲ್ಲಿ ಅಂತಿಮ ಹೊರತು ಹೈಕಮಾಂಡ್ ನಿರ್ಧಾರ ಬೇಕಾಗಿಲ್ಲ, ಮೋದಿಗೆ ಮೋದಿಯೇ ಹೈಕಮಾಂಡ್. ಇದು ಅಡ್ವಾಣಿಯವರನ್ನು ಘಾಸಿಗೊಳಿಸಿದೆ. ಇದಕ್ಕೇ ಅಡ್ವಾಣಿ ಸಾಮೂಹಿಕ ನಾಯಕತ್ವ ಬೇಕೆಂದು ಪ್ರತಿಪಾದಿಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ.

ಅಡ್ವಾಣಿ ತಮ್ಮ ಅನುಭವ, ರಾಜಕೀಯ ಚಾಲಾಕಿತನವನ್ನು ಶಿಷ್ಯರಿಗೆ ಕಲಿಸಿ ಸೂತ್ರಧಾರನಂತೆ ಕಾರ್ಯನಿರ್ವಹಿಸಬಾರದಿತ್ತೇ ? ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಆದರೆ ಇದಕ್ಕೆ ಕಾಲಪಕ್ವ ಆಗಿಲ್ಲ ಎನ್ನುವುದನ್ನು ನಿರಾಕರಿಸುವಂತಿಲ್ಲ. ಅಡ್ವಾಣಿಯವರು ಬಿಜೆಪಿಯ ಎಲ್ಲಾ ಮಹತ್ವದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರೂ ಎನ್‌ಡಿಎ ಕಾರ್ಯಾಧ್ಯಕ್ಷ ಹುದ್ದೆಯನ್ನು ತ್ಯಜಿಸಿಲ್ಲ ಎನ್ನುವುದನ್ನು ಗಮನಿಸಬೇಕು. ಎನ್‌ಡಿಎ ಮಿತ್ರಪಕ್ಷಗಳು ಅಡ್ವಾಣಿಯವರನ್ನು ಬೆಂಬಲಿಸುವಷ್ಟು ಸುಲಭವಾಗಿ ಬಿಜೆಪಿಯ ಬೇರೆ ಯಾವ ನಾಯಕರನ್ನು ಬೆಂಬಲಿಸುವುದಿಲ್ಲ. ಇದಕ್ಕೆ ಶರದ್ ಯಾದವ್ ನೀಡಿರುವ ಪ್ರತಿಕ್ರಿಯೆಯನ್ನು ಉದಾಹರಿಸಬಹುದು.

ಅಡ್ವಾಣಿಯವರು ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ನೋವಿದೆ, ಹತಾಶೆಯಿದೆ, ಅಪಾರವಾದ ಸಿಟ್ಟಿದೆ, ವೈರಾಗ್ಯವಿದೆ. ಬಿಜೆಪಿಯಲ್ಲಿ ವ್ಯಕ್ತಿಗಳಷ್ಟೇ ಬೆಳೆಯುತ್ತಿದ್ದಾರೆ ಪಕ್ಷ ಬೆಳೆಸುತ್ತಿಲ್ಲ ಎನ್ನುವ ನೋವಿನ ಎಳೆಗಳನ್ನು ಅಡ್ವಾಣಿಯವರ ಪತ್ರದಲ್ಲಿ ಗುರುತಿಸಬಹುದು. ವ್ಯಕ್ತಿಯ ಇಮೇಜ್ ಪಕ್ಷಕ್ಕೆ ಮತಗಳನ್ನು ತಂದುಕೊಡುವುದಿಲ್ಲ, ಪಕ್ಷದ ಇಮೇಜ್ ಮತಪೆಟ್ಟಿಗೆ ತುಂಬುತ್ತದೆ. ಅಡ್ವಾಣಿಯವರ ಈ ಮಾತುಗಳನ್ನು ಎಲ್ಲಾ ರಾಜಕೀಯ ಪಕ್ಷಗಲಿಗೂ ಅನ್ವಯಿಸುತ್ತದೆ. 750px-BJP-flag.svg[1]ಆದರೆ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮರುಕ್ಷಣದಲ್ಲಿ ಅಡ್ವಾಣಿಯವರು ವೈರಾಗ್ಯ ಆವಾಹಿಸಿಕೊಂಡದ್ದು ಮಾತ್ರ ಸರಿಯಾದ ನಡೆಯಲ್ಲ.

ಮೋದಿ ಇಮೇಜ್ ಬೆಳೆಸಿಕೊಂಡು ಬಿಜೆಪಿಯ ನಾಯಕತ್ವವನ್ನು ನೇಪತ್ಯಕ್ಕೆ ಸರಿಯುವಂತೆ ಮಾಡುತ್ತಿದ್ದಾರೆ ಎನ್ನುವ ಆತಂಕ ಅಡ್ವಾಣಿಯವರನ್ನು ಕಾಡಿರುವುದು ಸಹಜ. ಆದರೆ ಇದಕ್ಕೆ ಅಡ್ವಾಣಿಯೂ ಹೊಣೆಗಾರರು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪಕ್ಷ ಮುಖ್ಯ, ವ್ಯಕ್ತಿ ಮುಖ್ಯವಲ್ಲ ಎನ್ನುವ ಅಂಶವನ್ನು ಪ್ರತಿಪಾದಿಸುತ್ತಲೇ ಬಂದವರಿಗೆ ವ್ಯಕ್ತಿಗೆ ಅಂಕುಶ ಹಾಕಬೇಕೆನ್ನುವುದು ಮರೆತದ್ದಾದರೂ ಹೇಗೆ?

ಈಗ ಬಿಜೆಪಿ ಕವಲು ದಾರಿಯಲ್ಲಿದೆ. ಎರಡು ಬಳಗಳ ನಡುವೆ ಕಮಲದ ದಳಗಳು ಅರಳಬೇಕಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣೆಯ ಬಾಗಿಲಲ್ಲಿ ನಿಂತಿರುವ ಈ ಕಾಲಘಟ್ಟದಲ್ಲಿ ಅಡ್ವಾಣಿ ಶಸ್ತ್ರತ್ಯಾಗ ಮಾಡಿರುವ ದಂಡನಾಯಕ. ಯುದ್ಧ ಭೂಮಿಯಲ್ಲಿ ದಂಡನಾಯಕ ಹಿಂದೆ ಸರಿಯುತ್ತಿರುವುದರಿಂದ ಸಹಜವಾಗಿಯೇ ಆತಂಕ ಸೈನಿಕರಲ್ಲಿ. ಆತಂಕವನ್ನು ಮೆಟ್ಟಿನಿಂತು ಸೈನಿಕರು ಮುನ್ನುಗ್ಗುತ್ತಾರೆಂದು ಭಾವಿಸಬಹುದು, ಆದರೆ ಹಾಗೆ ಆಗುವುದಿಲ್ಲ ಮತ್ತು ದಂಡನಾಯಕನಿಲ್ಲದೆ ಸೈನಿಕರು ಮುಂದುವರಿದರೆ ಏನಾಗಬಹುದೆನ್ನುವ ಅರಿವಿದೆ. ಇದಕ್ಕೆ ತನ್ನ ಗುರುವನ್ನು ಅರಿತಿರುವ ಶಿಷ್ಯನೇ ತಾನು ಮಾಡಿದ ತಪ್ಪುಗಳೇನೆಂದು ಕೇಳಬೇಕಾಗಿದೆ. ಅಂಥ ಕೇಳುವ ಮನಸ್ಸು ಮೋದಿಗೆ ಬರಬೇಕಾಗಿದೆ, ಕೇಳಿಸಿಕೊಳ್ಳುವಂಥ ತಾಳ್ಮೆ ಅಡ್ವಾಣಿಗೂ ಬೇಕಾಗಿದೆ. ಇದು ಸಾಧ್ಯವೇ?, ಎಷ್ಟೇ ಆದರೂ ರಾಜಕೀಯವಾದ್ದರಿಂದ ಅಸಾಧ್ಯ ಯಾವುದೂ ಅಲ್ಲ ಎನ್ನುವುದು ಇತಿಹಾಸ ಹೇಳಿರುವ ಪಾಠ.