Category Archives: ಜಗದೀಶ್ ಕೊಪ್ಪ

ಮಾಧ್ಯಮಗಳು ಮತ್ತು ಭಾಷೆ

-ಡಾ. ಎನ್. ಜಗದೀಶ್ ಕೊಪ್ಪ

21 ನೇ ಶತಮಾನದಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮಗಳಾಗಿ ಮುಂಚೂಣಿಗೆ ಬಂದ ಪತ್ರಿಕೆ, ರೇಡಿಯೊ, ದೃಶ್ಯಮಾಧ್ಯಮ ಮತ್ತು ಅಂತರ್ಜಾಲ ಇವೆಲ್ಲವೂ ಇಂದಿನ ನಾಗರಿಕ ಜಗತ್ತಿನ ಅವಿಭಾಜ್ಯ ಅಂಗಗಳಾಗಿವೆ. ಮಾಹಿತಿ ತಂತ್ರಜ್ಞಾನದಲ್ಲಾದ ಕ್ಷಿಪ್ರ ಕ್ರಾಂತಿಯಿಂದ ಮಾಹಿತಿಯ ಮಹಾಪೂರ ಮನೆಬಾಗಿಲಿಗೆ ಮಾತ್ರವಲ್ಲ, ಬೆರಳ ತುದಿಗೆ ಬಂದು ಕುಳಿತಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವೆ ಸಂವಹನ ಸೇತುವೆಯಾಗಿ ಕಾರ್‍ಯ ನಿರ್ವಹಿಸುತಿದ್ದ ರೇಡಿಯೊ, ಮತ್ತು ಪತ್ರಿಕೆಗಳ ವ್ಯಾಪ್ತಿ ವಿಸ್ತಾರಗೊಂಡಿದ್ದು ದೃಶ್ಯ ಮಾಧ್ಯಮ ಕೂಡ ಪ್ರಭಾವಿ ಮಾಧ್ಯಮವಾಗಿ ರೂಪುಗೊಂಡಿದೆ.

ಮಾಧ್ಯಮಗಳ ಮುಖ್ಯ ಗುರಿಯೇ ಸಂಹವನವಾಗಿರುವಾಗ ಅಲ್ಲಿ ಭಾಷೆಗೆ ಮಹತ್ವದ ಸ್ಥಾನವಿದೆ. ಅದು ಪತ್ರಿಕೆಯಾಗಿರಬಹುದು ಅಥವಾ ರೇಡಿಯೊ ಇಲ್ಲವೆ ದೃಶ್ಯಮಾಧ್ಯಮದ ಭಾಷೆಯಾಗಿರಬಹುದು. ಭಾರತ ಅಥವಾ ಕರ್ನಾಟಕದಂತಹ ಬಹು ಸಂಸ್ಕೃತಿಯ ನೆಲದಲ್ಲಿ ಪ್ರತಿ 25 ಕಿಲೊಮೀಟರ್ ವ್ಯಾಪ್ತಿಗೆ ಭಾಷೆಯ ಪ್ರಭೇದ ಬದಲಾಗುವುದನ್ನು ನಾವು ಕಾಣಬಹುದು. ಉತ್ತರ ಕರ್ನಾಟಕ ಭಾಷೆ, ದಕ್ಷಿಣ ಕರ್ನಾಟಕದ ಭಾಷೆ, ಕರಾವಳಿ ತೀರದ ಭಾಷೆ ಹೀಗೆ ಇವೆಲ್ಲವು ಕನ್ನಡ ಭಾಷೆಯಾಗಿದ್ದರೂ, ಆಯಾ ಪ್ರಾದೇಶಿಕ ಭಾಷೆಯ ಮೇಲೆ ಸ್ಥಳೀಯ ಅನ್ಯ ಭಾಷೆಗಳ ಪ್ರಭಾವ ಇದ್ದೇ ಇರುತ್ತದೆ,
ಮುಂಬೈ ಕರ್ನಾಟಕದಲ್ಲಿ ಮರಾಠಿ, ಹೈದರಾಬಾದ್ ಕರ್ನಾಟಕದಲ್ಲಿ ಉರ್ದು, ಕೋಲಾರ-ಬಳ್ಳಾರಿ ಪ್ರದೇಶಗಳಲ್ಲಿ ತೆಲುಗು ಭಾಷೆಯ ಪ್ರಭಾವವಿದೆ,

ಎಲ್ಲರಿಗೂ ಎಲ್ಲ ಪ್ರದೇಶಗಳಿಗೆ ಅನ್ವಯವಾಗುವ ಹಾಗೆ ಭಾಷೆಯನ್ನು ಬಳಸಬೇಕಾದ ನೈತಿಕ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಪತ್ರಿಕೆಗಳಲ್ಲಿ ಬಳಸುವ ಭಾಷೆಯಲ್ಲಿ ಆಡು ಭಾಷೆಯನ್ನು ಯಥಾವತ್ತಾಗಿ ಬಳಸಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಶುದ್ಧ ಸಾಹಿತ್ಯ ಭಾಷೆಯನ್ನೂ ಬಳಸಲಾಗದು. ಅತ್ಯಂತ ಸರಳವಾದ ಎಲ್ಲಾ ವರ್ಗದ ಜನರಿಗೆ ತಲುಪುವ ಭಾಷೆ ಯಾವಾಗಲೂ ಪತ್ರಿಕೆಯ ಜೀವಾಳ. ಈ ಅಂಶವನ್ನು ಸ್ವಾತಂತ್ರ ಪೂರ್ವದಿಂದಲೂ ಪತ್ರಿಕೆಗಳು ಪಾಲಿಸುತ್ತಾ ಬಂದಿವೆ. ಏಕೆಂದರೆ ಭಾಷೆಯೆಂಬುದು ಕೇವಲ ಸಂವಹನ ಕಲೆಯಷ್ಟೇ ಅಲ್ಲ, ಅದು ಭಾವಗಳ ಅಭಿವ್ಯಕ್ತಿಯ ಪ್ರಾಣ. ಪತ್ರಕರ್ತರು ಕೇವಲ ಸುದ್ಧಿಯನ್ನಷ್ಟೇ ಜಗತ್ತಿಗೆ ತಲುಪಿಸುವುದಿಲ್ಲ, ಅದರ ಜೊತೆ ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪರೋಕ್ಷವಾಗಿ ತಳುಕು ಹಾಕಿಕೊಂಡಿದೆ. ಭಾಷೆಯ ಔಚಿತ್ಯ ಮೀರದೆ ಸಂವಹನ ಕಲೆಯಲ್ಲಿ ತೊಡಗಿಸಿಕೊಳ್ಳಬೇಕಾದ ಗುರುತರ ಹೊಣೆ ಪತ್ರಕರ್ತನ ಮೇಲಿದೆ.

ಕಳೆದ ಒಂದು ದಶಕದಲ್ಲಿ ಪತ್ರಿಕೆಗಳ ಭಾಷೆ ಮತ್ತು ತಲೆ ಬರಹಗಳನ್ನು ಗಮನಿಸಿದಾಗ ಪತ್ರಿಕೆಗಳಿಗೆ ಭಾಷೆಯ ಬಗ್ಗೆ ಇರುವ ಉದಾಸೀನತೆ ಎದ್ದು ಕಾಣುತ್ತದೆ. ತಲೆ ಬರಹಗಳು ಪ್ರಾಸಕ್ಕೆ, ಶಬ್ಧ ಚಮತ್ಕಾರಕ್ಕೆ ಜೋತು ಬಿದ್ದಿದ್ದು, ಇವೆಲ್ಲವೂ ಓದುಗರನ್ನು ಗೊಂದಲಕ್ಕೀಡು ಮಾಡುತ್ತಿವೆ.
ಈ ಸಂದರ್ಭದಲ್ಲಿ ಅಲ್ಲಮನ ವಚನದ ಸಾಲುಗಳು ನೆನಪಿಗೆ ಬರುತ್ತವೆ:

ಶಬ್ಧ ಸಂಭ್ರಮದಲ್ಲಿ ಹಿಂದುಗಾಣರು, ಮುಂದುಗಾಣರು
ತಮ್ಮ ತಾವರಿಯರು
ಇದು ಕಾರಣ ಮೂರುಲೋಕವೆಲ್ಲಾ
ಬರು ಸೂರೆವೋಯಿತ್ತು ಗುಹೇಶ್ವರಾ

ನಾವು ಬಳಸುವ ಭಾಷೆಗೆ ಘನತೆಯಷ್ಟೇ ಮುಖ್ಯವಲ್ಲ. ಅದು ಔಚಿತ್ಯದ ಎಲ್ಲೆಯನ್ನು ಮೀರಬಾರದು. ಆದರೆ, ನಮ್ಮ ಮಾಧ್ಯಮಗಳಿಗೆ ಈ ಬಗ್ಗೆ ಪರಿವೆಯೇ ಇಲ್ಲ. ಭಾಷೆಯ ಮತ್ತು ಸಂವಹನ ಕುರಿತಂತೆ ವಿಷಾದದಿಂದ ಹೇಳಬೇಕಾದ ಸಂಗತಿಯೆಂದರೆ, ಆಧುನಿಕ ತಂತ್ರಜ್ಞಾನದಿಂದಾಗಿ ಭಾಷೆಗೆ ಇದ್ದ ಸಾಮರ್ಥ್ಯ ನಶಿಸಿಹೋಗುತ್ತಿದೆ, ಭಾಷೆ ಇಂದು ಮಾಹಿತಿ ಹಂಚುವ ವಾಹಕವಾಗಿ ಮಾತ್ರ ಕಾರ್‍ಯನಿರ್ವಹಿಸುತ್ತಿದೆ. ಇದರಿಂದಾಗಿ ಮಾತಿನ ರೂಪಕ ಸಾಧ್ಯತೆಗಳು ಅಳಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಭಾಷೆ ಎಂಬುದು ತೀರ ಮೇಲ್ಪದರದ, ಮಹತ್ವವಲ್ಲದ ವಿವರಗಳಿಗೆ, ಸಂಗತಿಗಳಿಗೆ ಸೀಮಿತವಾಗುವ ಸಾಧ್ಯತೆಗಳು ಉಂಟು. ಇಂದಿನ ದೃಶ್ಯ ಮಾಧ್ಯಮಗಳಲ್ಲಿ ಘಟಿಸುತ್ತಿರುವುದು ಕೂಡ ಇದೆ.

ದೃಶ್ಯ ಮಾಧ್ಯಮದಲ್ಲಿ ಕನ್ನಡ ಭಾಷೆ ಬಳಸುತ್ತಿರುವವರನ್ನು ಗಮನಿಸಿದರೆ, ಇವರೆಲ್ಲಾ ತೇಜಸ್ವಿಯವರ ಕರ್ವಾಲೊ ಕಾದಂಬರಿಯಲ್ಲಿ ಬರುವ ಪ್ಯಾರನ ಸಂತತಿಯವರೆನೊ? ಎಂಬ ಸಂಶಯ ಮೂಡುತ್ತದೆ. ಕಾದಂಬರಿಯಲ್ಲಿ ನಾಯಕನ ಮನೆ ಆಳಾಗಿ ಕೆಲಸ ಮಾಡುವ ಪ್ಯಾರನಿಗೆ ನಾಯಕ ಹೇಳುತ್ತಾನೆ, “ಮರ ಹತ್ತಿ ನೋಡು ಜೇನು ನೊಣದ ಶಬ್ಧ ಎಲ್ಲಿಂದ ಬರುತ್ತಿದೆ,” ಎಂದು, ಮರ ಹತ್ತಿದ ಪ್ಯಾರ ಹೇಳುತ್ತಾನೆ, “ಕಾಣ್ತದೆ ಸಾರ್ ಆದರೆ ಕಾಣಕಿಲ್ಲ,” ಅಂತಾ. ಈ ಸಂದರ್ಭದಲ್ಲಿ ನಾಯಕ ಹೇಳುವುದು ಹೀಗೆ, “ಥೂ ನಿನ್ನ ಕನ್ನಡ ಭಾಷೇನ ಕುತ್ತಿಗೆ ಪಟ್ಟಿ ಹಿಡಿದು ದುಡಿಸಿಕೊಳ್ತಾ ಇರೋನು ನೀನೊಬ್ಬನೆ ನೋಡು,” ಎಂದು.

ಮಾಧ್ಯಮಗಳ ಮೂಲಕ ಇಡೀ ಜಗತ್ತನ್ನೇ ಬದಲಿಸಿ ಬಿಡಬಹುದೆಂಬ ಭ್ರಮೆಯಲ್ಲಿರುವ ಪತ್ರಕರ್ತ, ಮೊದಲು ಭಾಷೆಯ ಅಗಾಧತೆ ಮತ್ತು ಮಿತಿಯನ್ನು ಅರಿಯಬೇಕು. ಭಾಷೆ ಮತ್ತು ಮಾತಿನ ಇತಿ-ಮಿತಿ ಬಲ್ಲ ಅಲ್ಲಮ ತನ್ನ ವಚನದಲ್ಲಿ ಹೀಗೆ ಪ್ರಶ್ನಿಸುತ್ತಾನೆ:

ಘನತರದ ಚಿತ್ರ ಬರೆಯಬಹುದಲ್ಲದೆ
ಪ್ರಾಣದ ಚಿತ್ರವ ಬರೆಯಬಹುದೆ ಅಯ್ಯ ?

ನಾವು ಆನೆಯ ಚಿತ್ರ ಬರೆಯಬಹುದು ಅಷ್ಟೇ. ಮಾತಿನ ಮೂಲಕ ಅಥವಾ ಅಕ್ಷರದ ಮೂಲಕ ಅದರ ಪ್ರಾಣವ ಸೃಷ್ಟಿಸಲಾರೆವು. ಇಂತಹ ಎಚ್ಚರಿಕೆ ಇದ್ದಾಗ ಮಾತ್ರ ಭಾಷೆ ತನ್ನಷ್ಟಕೆ ತಾನು ವಿಸ್ತರಿಸುತ್ತಾ ಹೋಗುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ಪತ್ರಿಕೆಗಿಂತ ಆಕಾಶವಾಣಿ ಮತ್ತು ದೃಶ್ಯಮಾಧ್ಯಮಗಳು ತಾವು ಬಳಸುವ ಭಾಷೆಯಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಪತ್ರಿಕೆಗಳು ಕೇವಲ ಅಕ್ಷರ ಬಲ್ಲವರಿಗೆ ಸೀಮಿತವಾಗಿರುತ್ತವೆ. ಆದರೆ ಆಕಾಶವಾಣಿ ಹಾಗು ದೃಶ್ಯಮಾಧ್ಯಮಗಳು ಅನಕ್ಷರಸ್ತರಿಗೂ ತಲುಪಬಲ್ಲ ಮಾಧ್ಯಮಗಳು. ವಾಷಿಂಗ್ಟನ್‌ನಲ್ಲಿ  ಬಾಂಬ್ ಸ್ಪೋಟ ಎಂದರೆ ಅನಕ್ಷರಸ್ತ ಏನೆಂದು ಗ್ರಹಿಸಬೇಕು? ವಾಷಿಂಗ್ಟನ್ ಅಂದರೆ, ಮನೆಯೆ? ಕಾರೆ? ಅಥವಾ ಹಡಗೆ? ಇಂತಹ ಪ್ರಶ್ನೆಗಳು ಅನಕ್ಷರಸ್ತ ಕೇಳುಗ ಅಥವಾ ವೀಕ್ಷಕನಲ್ಲಿ ಏಳುವುದು ಸಹಜ. ವಾಷಿಂಗ್ಟನ್ ನಗರ ಎಂದು ಬಳಸವ ಎಚ್ಚರಿಕೆ ಈ ಮಾಧ್ಯಮಗಳಲ್ಲಿ ಇರಬೇಕು.ಈ ಕಾರಣಕ್ಕಾಗಿಯೇ ರೇಡಿಯೊ ಮತ್ತು ದೃಶ್ಯ ಮಾಧ್ಯವಗಳು ಸಾಧ್ಯವಾದಷ್ಟು ಸರಳ ಕನ್ನಡ ಭಾಷೆಯನ್ನು ಅಪೇಕ್ಷಿಸುತ್ತವೆ.

ಇನ್ನು ಮೆಟ್ರೋ ನಗರಗಳಲ್ಲಿ ನಾಯಿ ಕೊಡೆಯಂತೆ ತಲೆಯೆತ್ತಿರುವ ಎಫ್.ಎಂ. ಛಾನಲ್‌ಗಳು ಬಳಸುವ ಭಾಷೆಯ ಬಗ್ಗೆ ಒಂದು ಸಂಶೋಧನೆಯನ್ನು ಮಾಡಬಹುದು.ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ ಯುವಕ, ಯುವತಿಯರನ್ನು ಕರೆತಂದು, ಇವರ ಮಾತೃಭಾಷೆ ಕನ್ನಡವೆಂಬ ಏಕೈಕ ಕಾಣಕ್ಕೆ ರೇಡಿಯೊ ಜಾಕಿಗಳನ್ನಾಗಿ ಮಾಡಿದ್ದಾರೆ.ಇವರ ಬಾಯಲ್ಲಿ ಉದುರುವ ಕನ್ನಡದ ಆಣಿಮುತ್ತುಗಳನ್ನು ವರನಟ ಡಾ.ರಾಜಕುಮಾರ್ ಈಗ ಬದುಕಿದ್ದು ಕೇಳಿದ್ದರೆ, ಖಂಡಿತಾ ಆತ್ಮಹತ್ಯೆ ಮಾಡಿಕೊಳ್ಳುತಿದ್ದರು. ಇವರ ಕನ್ನಡ ಭಾಷೆಯ ನಡುವೆ ಇಂಗ್ಲೀಷ್ ನುಸುಳಿದ್ದರೆ ಸಹಿಸಬಹುದಿತ್ತು. ಆದರೆ ಇವರ ಕನ್ನಡ ಎಫ್.ಎಂ ಛಾನಲ್‌ಗಳಲ್ಲಿ ಇಂಗ್ಲೀಷ್ ಭಾಷೆಯದೇ ಪಾರುಪತ್ಯ.. ಇದು ನಮ್ಮ ಮಾಧ್ಯಮಗಳ ದುರಂತ.

ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ ಅದು ಇಂದಿನ ವಿಶ್ವದ ಪರಮ ಸೃಷ್ಟಿಗಳಲ್ಲಿ ಒಂದು. ಮಾನವ ತನ್ನ ಭಾವನೆಗಳ ಅಭಿವ್ಯಕ್ತಿಗೆ ಕಂಡುಕೊಂಡ ಅನನ್ಯ ಮಾರ್ಗ. ಭಾಷೆಗೆ ಬಡವ-ಬಲ್ಲಿದ ಎಂಬ ಬೇಧ ಭಾವ ಇಲ್ಲ, ಭಾಷೆ ಜಗತ್ತಿನ ಭೌತಿಕ ವಸ್ತುಗಳಂತೆ ನಾಶವಾಗುವಂತಹದಲ್ಲ. ಅದು ಮನುಷ್ಯ ಮತ್ತು ಸಂಸ್ಕೃತಿಯೊಂದಿಗೆ ವಿಕಾಸಗೊಳ್ಳುತ್ತಾ ಮುಂದುವರಿಯುವಂತಹದ್ದು. ಭಾಷೆ ಯಾವುದೇ ಆಗಿರಲಿ ಅದರ ಲಕ್ಷಣವೆಂದರೆ ಇತರೆ ಭಾಷೆಗಳನ್ನು ತನ್ನೊಳಗೆ ವಿಲೀನಗೊಳಿಸುತ್ತಾ, ತನ್ನಲ್ಲಿರುವ ಅಂಶಗಳನ್ನು ಇತರೆ ಭಾಷೆಗೆ ಧಾರೆ ಎರೆಯುತ್ತಾ ಹೋಗುತ್ತದೆ.

ವರ್ತಮಾವದ ನೋವಿನ ಸಂಗತಿಯೆಂದರೆ, ಇಂದು ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಪದವಿ ಕಾಲೇಜುಗಳಲ್ಲಿ ಮತ್ತು 15ಕ್ಕೂ ಹೆಚ್ಚು ವಿ.ವಿ. ಹಾಗೂ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಪತ್ರಿಕೋದ್ಯಮ ಬೋಧಿಸಲ್ಪಡುತ್ತಿದೆ. ಆದರೆ  ಮಾಧ್ಯಮಗಳಲ್ಲಿ ಭಾಷೆ ಬಳಕೆ  ಕುರಿತಂತೆ ಯಾವುದೇ ಪಠ್ಯಗಳಿಲ್ಲ. ಇಂಗ್ಲೀಷ್ ಭಾಷೆ ಬಳಕೆ ಕುರಿತಂತೆ ವ್ಯಾಕರಣ, ಶಬ್ಧದೋಷ ಕುರಿತು ಏನೆಲ್ಲಾ ಬೋಧನಾ ಮಾದರಿಗಳು ಇರುವಾಗ ಕನ್ನಡದಲ್ಲಿ ಏಕಿಲ್ಲ?  ಏಕೆಂದರೆ ಯಾರೂ ಯೋಚಿಸಲೇ ಇಲ್ಲ. ಜಾಗತೀಕರಣದ ಅವಸರದ ಇಂದಿನ ಯುಗದಲ್ಲಿ ಎಲ್ಲವೂ ಆ ಕ್ಷಣದಲ್ಲಿ ತಯಾರಾಗಿ ಉಣ ಬಡಿಸುವ ಆಹಾರದಂತಿದೆ.

ಭಾಷೆ ಬಳಕೆ ಕುರಿತಂತೆ ತಜ್ಣರಾದ ಡಾ. ಕೆ.ವಿ. ನಾರಾಯಣರವರ ಮಾತುಗಳು ಇಲ್ಲಿ ಪ್ರಸ್ತುತ. ಭಾಷೆ ಕುರಿತಂತೆ ಸಾಮಾನ್ಯ ಜನರ ಅರಿವಿನಲ್ಲಿ ಹಲವು ಕೊರತೆಗಳಿವೆ. ಇಂತಹ ಅಪಕಲ್ಪನೆಗಳು ವ್ಯಕ್ತಿಗತ ಹಂತದಿಂದ ಹಿಡಿದು ಸಾಮುದಾಯಿಕ ನೆಲೆಯಲ್ಲೂ ಕೂಡ ಇರುತ್ತದೆ. ಭಾಷೆಯ ಶುದ್ಧತೆಯ ಪರಿಕಲ್ಪನೆ ಎಂದರೆ, ಮಾತನಾಡುವಾಗ ಇಲ್ಲವೆ ಬರೆಯುವಾಗ ಅದರ ಶುದ್ಧ ರೂಪದಲ್ಲಿ ಬಳಸಬೇಕು ಎಂಬುದು ಎಲ್ಲಾ ಕಾಲದಲ್ಲೂ ಎದ್ದು ಕಾಣುವ ನಿಲುವು.

ಭಾಷೆ ಮತ್ತು ಸಂವಹನ ಕುರಿತು ಹೇಳುವುದಾದರೆ ಆಧುನಿಕ ತಂತ್ರ ಜ್ಞಾನದಿಂದಾಗಿ ಭಾಷೆಗೆ ಇದ್ದ ಸಾಮರ್ಥ್ಯ ನಶಿಸಿ ಹೋಗುತ್ತಿದೆ. ಭಾಷೆ ಇಂದು ಮಾಹಿತಿ ಹಂಚುವ ವಾಹಕವಾಗಿ ಬಳಕೆಯಾಗುತಿದ್ದು, ಮಾತಿನ ರೂಪಕದ ಸಾಧ್ಯತಗಳನ್ನು ನಾಶಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾಷೆ ತೀರ ಮೇಲು ಪದರದ, ಮಹತ್ವವಲ್ಲದ ಸಂಗತಿಗಳಿಗೆ ಸೀಮಿತವಾಗುತ್ತದೆ. ಇಂದು ಮಾಧ್ಯಮಗಳಲ್ಲಿ ಜರುಗುತ್ತಿರುವುದು ಇದೇ ದುರಂತ.

ಭಾಷೆ ಕುರಿತಂತೆ ಹೈದರಾಬಾದ್ ವಿಶ್ವ ವಿದ್ಯಾಲಯದ ಮಾಜಿ ಉಪ ಕುಲಪತಿ ಭ.ಕೃಷ್ಣಮೂರ್ತಿ ಹಲವು ಮಹತ್ವದ ಸಂಗತಿಗಳನ್ನ ಚರ್ಚಿಸಿದ್ದಾರೆ. ಅವು ಈ ಕೆಳಗಿನಂತಿವೆ:

  1. ನಾವು ಆದಿವಾಸಿ ಅಥವಾ ಅನಾಗರೀಕ ಎಂದು ಕರೆಯಬಹುದಾದ ಸಮಾಜಗಳಿವೆಯೇ ಹೊರತು ಯಾವುದೇ ಭಾಷೆಯನ್ನು ಅಪೂರ್ಣ ಎಂದು ಕರೆಯಲಾಗುವುದಿಲ್ಲ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಮನುಷ್ಯ ಜಾತಿಯಲ್ಲಿ ನಡೆಯುವ ಯಾವುದೇ ಸಂವಹನ ಕಾರ್ಯವನ್ನು ಯಶಸ್ವಿಯಾಗಿ ಮಾಡುವ ಅಗತ್ಯವಾದ ರಚನೆಯನ್ನು ಪಡೆದಿವೆ.
  2. ಭಾಷೆಯು ಒಂದು ಸಂವಹನ ಮಾಧ್ಯಮ ಮಾತ್ರವಲ್ಲ, ಅದೊಂದು ಸಾಂಸ್ಕೃತಿಕ ಸಂಸ್ಥೆ. ಅದು ತನ್ನನ್ನು ಬಳಸುವ ಜನರ ಸಾಮಾಜಿಕ, ಭಾವನಾತ್ಮಕ ಹಾಗು ಬೌದ್ಧಿಕ ಬದುಕಿನ ಅವಿಭಾಜ್ಯ ಅಂಗ.
  3. ಪ್ರತಿಯೊಂದು ಭಾಷೆ ಕೂಡ ಹೊಸ ಹೊಸ ಕ್ಷೇತ್ರಗಳಲ್ಲಿ ಸೂಕ್ತವಾದ ಸಾಂದರ್ಭಿಕ ಭಾಷೆಗಳನ್ನು ಬಳಸಿಕೊಳ್ಳಬಹುದು. ಅಂದರೆ, ಅಗತ್ಯವಾದ ಶೈಲಿ ಮತ್ತು ಪರಿಭಾಷೆಯನ್ನು ರೂಪಿಸಿಕೊಳ್ಳುವ ಶಕ್ತಿ ಭಾಷೆಗೆ ಇರುತ್ತದೆ.
  4. ಭಾಷೆಯೊಂದರ ಜೀವಂತತೆ ಮತ್ತು ಅಭಿವೃದ್ಧಿ, ಭಾಷೆಯನ್ನು ಎಷ್ಟು ವಿಭಿನ್ನ ಕ್ಷೇತ್ರಗಳಲ್ಲಿ ವ್ಯಾಪಕವಾಗಿ, ಪರಿಣಾಮಕಾರಿಯಾಗಿ ಬಳಸಲಾಯಿತು ಎಂಬುದರ ಮೇಲೆ ನಿರ್ಧಾರವಾಗುತ್ತದೆ.
  5. ಮಾತೃಭಾಷೆ ಹೊರತು ಪಡಿಸಿ ಜಗತ್ತಿನ ಯಾವ ದೇಶದಲ್ಲೂ ಕೇವಲ ವಿದೇಶಿ ಭಾಷೆಯೊಂದನ್ನು ಶಿಕ್ಷಣ ಮಾಧ್ಯಮವಾಗಿ ಹೊಂದಿದ್ದು ಆರ್ಥಿಕವಾಗಿ ಮತ್ತು  ಕೈಗಾರಿಕ ಪ್ರಗತಿ ಸಾಧಿಸಿರುವುದಕ್ಕೆ ಸಾಕ್ಷಿಗಳು ದೊರೆಯುವುದಿಲ್ಲ.

ದಶಕದ ಹಿಂದೆ ಮಾರ್ಷಲ್ ಮೆಕ್ಲು ಹಾನ್ ಹುಟ್ಟು ಹಾಕಿದ ಜಗತ್ತೇ ಒಂದು ಹಳ್ಳಿ ಎಂಬ ಪರಿಕಲ್ಪನೆಯಲ್ಲಿ ವಾಸ್ತವದ ಹೆಸರಿನಲ್ಲಿ ಭ್ರಮೆಗಳನ್ನು ಹುಟ್ಟು ಹಾಕುವ ಸ್ಥಿತಿಗೆ ಮಾಧ್ಯಮಗಳು ದೂಡಲ್ಪಟ್ಟಿವೆ. ಇವತ್ತಿನ ಮೊಬೈಲ್ ಹಾಗು ಅಂತರ್ಜಾಲಗಳಲ್ಲಿ ಹರಿದಾಡುತ್ತಿರುವ ಕ್ಷಿಪ್ರ ಸಂದೇಶಗಳಲ್ಲಿ ಇಂಗ್ಲೀಷ್ ಭಾಷೆ ಹೇಗೆ ಕೊಲೆಯಾಗುತ್ತಿದೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಸಾಕು.

ಮಾತಿನ ರೂಪವನ್ನು ಬರಹಕ್ಕಾಗಲಿ ಅಥವಾ ನಿರ್ಧಿಷ್ಟ ಭಾಷೆಯೊಂದರ ಸಾಹಿತ್ಯ ರಚನೆ ಮಾಡುವಾಗ ಈ ಪ್ರಕ್ರಿಯೆಯ ಹಿಂದೆ ಸೃಜನಶೀಲತೆ ಯಾವಾಗಲೂ ಕೆಲಸ ಮಾಡುತ್ತಿರುತ್ತದೆ. ಇಂತಹ ಪ್ರಜ್ಞೆಯೊಂದನ್ನು ಮರೆತರೆ, ಯಾವ ಪತ್ರಕರ್ತ ಅಥವಾ ಮಾಧ್ಯಮ ಬೆಳೆಯಲಾರದು. ಏಕೆಂದರೆ ವ್ಯಕ್ತಿ ಲೇಖಕನಾಗಿರಲಿ, ಕವಿಯಾಗಿರಲಿ, ಪತ್ರಕರ್ತನಾಗಿರಲಿ, ಭಾಷೆಯೊಂದನ್ನ ಸಂವಹನವಾಗಿ ಬಳಸುವುದರ ಜೊತೆಗೆ ಬೆಳೆಸುವುದು ಸಹ ಅವನ ಸಾಂಸ್ಕೃತಿಕ ಹೊಣೆಗಾರಿಯಾಗಿರುತ್ತದೆ.

ಪಾಟೀಲ ಪುಟ್ಟಪ್ಪನವರ ಬಾಲ ಲೀಲೆಗಳು

 – ಡಾ. ಎನ್. ಜಗದೀಶ್ ಕೊಪ್ಪ

ಹುಬ್ಬಳ್ಳಿ ಧಾರವಾಡ ನಗರಕ್ಕೆ ಬಂದು ದಶಕವೇ ಕಳೆದು ಹೋಯಿತು. ಇಲ್ಲಿಗೆ ಬಂದ ಮೇಲೆ ನನಗೆ ಜಿಗುಪ್ಸೆ ಮೂಡಿಸಿದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು, ವಾಮನ ಬೇಂದ್ರೆ. ಮತ್ತೊಬ್ಬರು ಪಾಟೀಲ ಪುಟ್ಟಪ್ಪ.

ಕನ್ನಡದ ಅನನ್ಯ ಕವಿ ಬೇಂದ್ರೆಯವರ ಸಾಹಿತ್ಯವನ್ನು ಯಾರಿಗೂ ಕೊಡದೆ, ಈ ತಲೆಮಾರಿಗೆ ಬೇಂದ್ರೆಯವರ ಕವಿತೆ ಸಿಗದ ಹಾಗೆ ನೋಡಿಕೊಂಡ ಅವಿವೇಕಿ ವಾಮನ ಬೇಂದ್ರೆ.  ಬೇಂದ್ರೆಯವರ ಕವಿತೆಗಳನ್ನ ಕಲಸು ಮೆಲೋಗರ ಮಾಡಿ, ಔದಂಬರ ಗಾಥೆ ಹೆಸರಿನಲ್ಲಿ ಬೇಂದ್ರೆ ಕುಟುಂಬದ ವಂಶವೃಕ್ಷ ಸಹಿತ ಪ್ರಕಟಿಸಿ ಅದನ್ನು ಮೈಸೂರು ಒಂಟಿ ಕೊಪ್ಪಲು ಪಂಚಾಗ ಮಾಡಿದ ಪುಣ್ಯ ಪುರುಷನೀತ, ಶತಮಾನದ ಕವಿತೆಗಳ ಸಂಕಲನಕ್ಕೂ ಸಹ  ಕವಿತೆ ಕೊಡಲಿಲ್ಲ. ಅಷ್ಟೇ ಅಲ್ಲ, ನನ್ನೆದುರಿಗೆ ಹಂಪಿ ವಿ.ವಿ. ಉಪಕುಲಪತಿಯಾಗಿದ್ದ ಎಂ.ಎಂ. ಕಲುಬುರ್ಗಿ ಹಾಗು ಮಲ್ಲೇಪುರಂ ವೆಂಕಟೇಶ್ ’ಸಮಗ್ರ ಕಾವ್ಯ ತರುತ್ತೇವೆ,’ ಎಂದು ಹೇಳಿ 5 ಲಕ್ಷ ಗೌರವ ಸಂಭಾವನೆ ನೀಡಲು ಹೋದಾಗ ತಿರಸ್ಕರಿಸಿದ ಮಹಾಶಯ ಈತ.

ಇನ್ನು ಪಾಪು ಹೆಸರಿನ ಪುಟ್ಟಪ್ಪನವರದೇ ಒಂದು ದೊಡ್ಡ ವೃತ್ತಾಂತ. 1967 ರಿಂದ ಧಾರವಾಡದ ಕನ್ನಡದ ಶಕ್ತಿ ಕೇಂದ್ರವಾದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದನ್ನು 1940 ರ ದಶಕದ ತಾಲ್ಲೂಕು ಕಚೇರಿಯಂತೆ ಮಾಡಿದ ಕೀರ್ತಿ ಇವರದು. 93 ವರ್ಷವಾಗಿದ್ದರೂ, ಇನ್ನೂ ಅಧಿಕಾರ ಬಿಟ್ಟು ಕೊಟ್ಟಿಲ್ಲ. ಜೊತೆಗೆ ಹಾವೇರಿಯಲ್ಲಿರುವ ವಿ.ಕೃ. ಗೋಕಾಕ್ ಟ್ರಸ್ಟ ನ ಅಧ್ಯಕ್ಷಗಿರಿ ಬೇರೆ. ಕಳೆದ 5 ವರ್ಷದಿಂದ  ಇದುವರೆಗೆ ಹಾವೇರಿಯಲ್ಲಿ ಸಭೆ ನಡೆದಿಲ್ಲ. ಸದಸ್ಯರು, ಸಂಸ್ಕೃತಿ ಇಲಾಖೆಯ ಅಧಿಕಾರಿ ಪುಟ್ಟಪ್ಪನವರ ಮನೆಗೇ ಬಂದು ಸಭೆ ನಡೆಸಿ ಹೋಗುತ್ತಾರೆ.

ಇಂತಹ ಚರಿತ್ರೆಯ ಪುಟ್ಟಪ್ಪ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ “ಚಂದ್ರಶೇಖರ ಕಂಬಾರ ಪ್ರಶಸ್ತಿಗೆ ಯೋಗ್ಯರಲ್ಲ, ಈ ಪ್ರಶಸ್ತಿ ಬೈರಪ್ಪನವರಿಗೆ ಬರಬೇಕಾಗಿತ್ತು,” ಎಂದಿದ್ದಾರೆ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಿರಲಿ ವಯಸ್ಸಾದ ನಂತರ ತೆರೆಯ ಹಿಂದಕ್ಕೆ ಸರಿದು ತಾನು ತನ್ನ ಜೀವಿತದಲ್ಲಿ ಸಂಪಾದಿಸಿದ ಘನತೆ, ಗೌರವಗಳನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ, ಆತನ ಚಟುವಟಿಕೆಗಳನ್ನು ಬಾಲ ಲೀಲೆಗಳು ಎಂದು ಸಮಾಜ ಗುರುತಿಸಿಬಿಡುತ್ತದೆ.

ಕಳೆದ ಎರಡು ವರ್ಷದ ಹಿಂದೆ ನನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿ ಎಂದು ಬಿ.ಜೆ,ಪಿ. ಸರ್ಕಾರದ ಬೆನ್ನು ಹತ್ತಿದ್ದರು. ಕಡೆಗೆ ಇವರ ಲೇಖನಗಳ ಪ್ರಕಟನೆಗೆ 50 ಲಕ್ಷ ರೂ ನೀಡಿ ಯಡಿಯೂರಪ್ಪ ಕೈ ತೊಳೆದುಕೊಂಡರು.

ಬಹುಶ: ಇವರ ಇಂತಹ ವರ್ತನೆಗಳನ್ನು ಮುಂಜಾಗ್ರತವಾಗಿ ಗ್ರಹಿಸಿ ನಮ್ಮ ಕನ್ನಡನಾಡು ಇವರಿಗೆ ಪಾಪು ಎಂದು ಹೆಸರಿಟ್ಟಿರಬೇಕು.

ಜೀವನದಿಗಳ ಸಾವಿನ ಕಥನ – 3

ಡಾ.ಎನ್. ಜಗದೀಶ್ ಕೊಪ್ಪ

ಪೃಥ್ವಿಯ ಮೇಲಿನ ಭೂವಿನ್ಯಾಸದಲ್ಲಿ ನದಿಗಳ ಪಾತ್ರ ಅನನ್ಯವಾದುದು. ಪರ್ವತಗಳ ಗಿರಿಶ್ರೇಣಿಯಲ್ಲಿ ಹುಟ್ಟಿ ಹರಿಯುವ ನದಿಗಳು, ಸಮುದ್ರ ಸೇರುವ ಮುನ್ನ, ತಾವು ಕ್ರಮಿಸುವ ಹಾದಿಯುದ್ದಕ್ಕೂ ತಮ್ಮ ಇಕ್ಕೆಲಗಳ ಭೂಮಿಯನ್ನು ಫಲವತ್ತಾಗಿಸುತ್ತಾ, ಸುತ್ತ ಮುತ್ತಲಿನ ಪ್ರದೇಶಗಳ ಅಂತರ್ಜಲವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

ನದಿಗಳು, ಮಂಜಿನಿಂದ ಆವೃತ್ತವಾಗಿರುವ ಹಿಮಾಲಯದಂತಹ ಪರ್ವತಶ್ರೇಣಿಗಳಲ್ಲಿ, ಬೇಸಿಗೆ ಕಾಲದಲ್ಲಿ ಹೆಚ್ಚಿನ ಒಳಹರಿವಿನಿಂದ ಪ್ರವಾಹದ ರೀತಿಯಲ್ಲಿ ಹರಿದರೆ, ಇತರೆ ಸಾಮಾನ್ಯ ದಿನಗಳಲ್ಲಿ ಸೂರ್ಯನ ಶಾಖಕ್ಕೆ ಕರಗುವ ಮಂಜುಗೆಡ್ಡೆಯಿಂದಾಗಿ ಸಹಜವಾಗಿ ಹರಿಯುತ್ತವೆ. ನದಿಪಾತ್ರದಲ್ಲಿ ಬೀಳುವ ಮಳೆ, ಹಳ್ಳ-ಕೊಳ್ಳಗಳಲ್ಲಿ ಜಿನುಗುವ ನೀರು ಇವೆಲ್ಲವನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುವ ಪ್ರಕ್ರಿಯೆ ನದಿಗೆ ಸಹಜವಾದುದು.

ಈ ನದಿಗಳಲ್ಲಿ ಹರಿಯುವ ನೀರು ಬರೀ ನೀರಷ್ಟೇ ಅಲ್ಲ, ಪರ್ವತ, ಗುಡ್ಡಗಾಡುಗಳ ಇಳಿಜಾರಿನಲ್ಲಿ ಹರಿಯುವ ನೀರು ಅನೇಕ ಗಿಡ-ಮೂಲಿಕೆಗಳನ್ನು ತೋಯಿಸಿ ಹರಿಯುವುದರಿಂದ ಈ ನೀರಿನಲ್ಲಿ ಅನೇಕ ಔಷದೀಯ ಅಂಶಗಳು, ಖನಿಜಾಂಶಗಳು ಮಿಳಿತವಾಗಿರುತ್ತವೆ. ಜೊತೆಗೆ ಈ ನೀರು ಸಿಹಿ ನೀರಾಗಿರುತ್ತದೆ.

ಇಂತಹ ಜೀವ ನದಿಗಳಿಗೆ ಅಣೆಕಟ್ಟು ನಿರ್ಮಿಸುವುದರ ಮೂಲಕ ಅವುಗಳ ಸಹಜ ಹರಿವಿಗೆ ಅಡೆ-ತಡೆ ನಿರ್ಮಿಸಿ ಮಣಿಸುವ ಪ್ರಯತ್ನಕ್ಕೆ 8 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.

ಮೆಸಪೊಟೋಮಿಯ ಈಶಾನ್ಯ ಭಾಗದ ಜಾರ್ಗೊಸ್ ಪರ್ವತಶ್ರೇಣಿಗಳ ತಪ್ಪಲಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಿಸಿ, ಕಾಲುವೆ ಮುಖಾಂತರ ನೀರು ಹರಿಸಿರುವುದು ಮೆಸಪಟೋಮಿಯಾ ನಾಗರೀಕತೆಯ ಪ್ರಾಚೀನ ಅವಶೇಷಗಳಿಂದ ದೃಢಪಟ್ಟಿದೆ.

ಸುಮಾರು 6500 ವರ್ಷಗಳ ಹಿಂದೆ ಸುಮೇರಿಯನ್ ಜನಾಂಗ ಟಿಗ್ರಿಸ್ ಮತ್ತು ಯುಪ್ರಟಿಸ್ ನದಿಗಳಿಗೆ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದ್ದರೂ ಕೂಡ, ಇದು ಪ್ರವಾಹ ನಿಯಂತ್ರಿಸಲು ಸುಮರಿಯನ್ನರು ಕಂಡುಕೊಂಡಿದ್ದ ಪ್ರಾಚೀನವಾದ ದೇಸಿ ತಂತ್ರಜ್ಞಾನ ಎಂದು ಇತಿಹಾಸತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಎರಡು ಕುರುಹುಗಳನ್ನು ಹೊರತುಪಡಿಸಿದರೆ, ಕ್ರಿ.ಪೂ.3500 ರಲ್ಲಿ ಈಗಿನ ಜೋರ್ಡಾನ್ ದೇಶದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಜಾವಾ ಎಂಬ ಪಟ್ಟಣಕ್ಕೆ ಕಾಲುವೆ ಮುಖಾಂತರ ನೀರು ಹರಿಸಲು ನದಿಯೊಂದಕ್ಕೆ 600 ಅಡಿಗಳ ಉದ್ದದ, ವಿಶಾಲವಾದ ಅಣೆಕಟ್ಟು ನಿರ್ಮಿಸಿರುವುದರ ಜೊತೆಗೆ, ನದಿಯುದ್ದಕ್ಕೂ 10 ಸಣ್ಣ ಸಣ್ಣ ಜಲಾಶಯಗಳನ್ನು ಸೃಷ್ಟಿ ಮಾಡಿರುವುದು ಕಂಡುಬಂದಿದೆ.

ಪ್ರಾಚೀನ ಇತಿಹಾಸದಲ್ಲಿ ಅತಿದೊಡ್ಡ ಅಣೆಕಟ್ಟಿನ ನಿರ್ಮಾಣವೆಂದರೆ, ಕ್ರಿ.ಪೂ. 2600 ರಲ್ಲಿ 14 ಮೀಟರ್ ಎತ್ತರ, 113 ಮೀಟರ್ ಉದ್ದದ ಅಣೆಕಟ್ಟು ಈಜಿಪ್ಟ್‌ನ ಕೈರೊ ನಗರದ ಬಳಿ ನಿರ್ಮಾಣಗೊಂಡಿರುವುದು. ಈಜಿಪ್ಟ್‌ನಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರೇ ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ ಎಂದು ಇತಿಹಾಸಕಾರರು ಊಹಿಸಿದ್ದಾರೆ. ಏಕೆಂದರೆ ಈಜಿಪ್ಟ್‌ನ ಮೊದಲ ಪಿರಮಿಡ್ ರಚಿತವಾದ ಕಾಲದಲ್ಲೇ ಈ ಅಣೆಕಟ್ಟು ನಿರ್ಮಾಣಗೊಂಡಿದೆ. 10 ವರ್ಷಕ್ಕೂ ಹೆಚ್ಚು ಕಾಲ ನಡೆದ ಈ ಅಣೆಕಟ್ಟಿನ ಕಾಮಗಾರಿಗೆ 17 ಸಾವಿರ ಬೃಹದಾಕಾರದ ಕತ್ತರಿಸಿಲ್ಪಟ್ಟ ಕಲ್ಲುಗಳನ್ನು ಬಳಸಲಾಗಿದೆ. ದುರಂತವೆಂದರೆ, ಈ ಅಣೆಕಟ್ಟಿನ ನಿರ್ಮಾಣಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಣೆಕಟ್ಟಿನ ಒಂದು ಭಾಗ ನೈಲ್ ನದಿಯ ಪ್ರವಾಹದಲ್ಲಿ ಕೊಚ್ಚಿಹೋಯಿತು. ಈ ಅಣೆಕಟ್ಟಿನ ನಿರ್ಮಾಣದ ಉದ್ದೇಶ ಕುಡಿಯುವ ನೀರಿಗಾಗಿ ಮಾತ್ರ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಧೃಡಪಟ್ಟಿದೆ. ಅಣೆಕಟ್ಟು ನಿರ್ಮಾಣಕ್ಕೆ ಮುನ್ನವೇ ನೈಲ್ ನದಿಯ ಪ್ರಾಂತ್ಯಗಳಲ್ಲಿ ಕೃಷಿ ಪದ್ಧತಿ ಆಚರಣೆಯಲ್ಲಿತ್ತು.

ಕ್ರಿ.ಪೂ. ಒಂದನೇ ಶತಮಾನಕ್ಕೆ ಮುನ್ನ ಮಧ್ಯಪ್ರಾಚ್ಯದ ಮೆಡಿಟೇರಿಯನ್ ಪ್ರದೇಶದಲ್ಲಿ ಕಲ್ಲು ಮತ್ತು ಅಗಾಧ ಪ್ರಮಾಣದ ಮಣ್ಣು ಬಳಸಿ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದೆ. ಇಂತಹದೇ ಕುರುಹುಗಳು ಚೀನಾ ಹಾಗೂ ಮಧ್ಯ ಅಮೆರಿಕಾ ದೇಶಗಳಲ್ಲೂ ಕಂಡುಬಂದಿದೆ.

ಅಣೆಕಟ್ಟುಗಳ ನಿರ್ಮಾಣದಲ್ಲಿ ಸುಧಾರಿತ ತಂತ್ರಜ್ಞಾನ ಪ್ರಥಮಬಾರಿಗೆ ರೋಮನ್ನರ ಯುಗದಲ್ಲಿ ಬಳಕೆಯಾಯಿತು. ಅಂದಿನ ಕಾಲದಲ್ಲಿ ರೋಮ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿದ್ದ ಸ್ಪೇನ್‌ನಲ್ಲಿ ರೋಮನ್ನರು ನಿರ್ಮಿಸಿದ್ದ ಅನೇಕ ಅಣೆಕಟ್ಟುಗಳು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದವು. 15 ನೇ ಶತಮಾನದಲ್ಲಿ ಅಲಿಕಾಂಟ್ ಬಳಿ ಕಲ್ಲಿನಿಂದ ನಿರ್ಮಿಸಿದ ಅಣೆಕಟ್ಟು ಸುಮಾರು 3 ಶತಮಾನಗಳ ಕಾಲ ಜಗತ್ತಿನ ಅತಿದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿತ್ತು.

ದಕ್ಷಿಣ ಏಷ್ಯಾ ಕೂಡ ಅಣೆಕಟ್ಟು ನಿರ್ಮಾಣ ಮತ್ತು ತಂತ್ರಜ್ಞಾನದ ಬಗ್ಗೆ ದೊಡ್ಡ ಇತಿಹಾಸವನ್ನು ಹೊಂದಿದೆ. ಕ್ರಿ.ಪೂ. 4ನೇ ಶತಮಾನದಲ್ಲಿ ಶ್ರೀಲಂಕಾದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ 34 ಮೀಟರ್ ಉದ್ದದ ಅಣೆಕಟ್ಟು ಆ ಕಾಲಕ್ಕೆ ಅತಿದೊಡ್ಡ ಅಣೆಕಟ್ಟಾಗಿತ್ತು. 12ನೇ ಶತಮಾನದ ಶ್ರೀಲಂಕಾದ ದೊರೆ ಪರಾಕ್ರಮಬಾಹು ಅವಧಿಯಲ್ಲಿ ಶ್ರೀಲಂಕಾದಲ್ಲಿ 15 ಮೀಟರ್ ಎತ್ತರದ ಸುಮಾರು 4 ಸಾವಿರ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತಿವೆ. ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕೃಷಿ ಬಳಕೆಗಾಗಿ ಲಂಕನ್ನರು ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಒಂದು ಅಣೆಕಟ್ಟು 15 ಮೀಟರ್ ಎತ್ತರ ಮತ್ತು 1.4 ಕಿ.ಮೀ. ಉದ್ದ ಇದ್ದ ಬಗ್ಗೆ ಸಮಾಜಶಾಸ್ತ್ರಜ್ಞ ಎಡ್ಮಂಡ್ ಲೀಚ್ ದಾಖಲಿಸಿದ್ದಾನೆ.

ಅಣೆಕಟ್ಟುಗಳ ನಿರ್ಮಾಣ ಮತ್ತು ತಂತ್ರಜ್ಞಾನ ಕೇವಲ ಕುಡಿಯುವ ನೀರು ಅಥವಾ ಕೃಷಿ ಬಳಕೆಗೆ ಸೀಮಿತವಾಗದೆ ಆಧುನಿಕ ಯುಗದ ಕೈಗಾರಿಗಳ ಸ್ಥಾಪನೆಗೆ ನಾಂದಿಯಾಯಿತು.

ಅಣೆಕಟ್ಟುಗಳ ಮೂಲಕ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ಇಳಿಜಾರಿನಲ್ಲಿ ನಿರ್ಮಿಸಿದ ಚಕ್ರಗಳ ಮೇಲೆ ಕೊಳವೆಗಳ ಮೂಲಕ ಹಾಯಿಸಿ, ತಿರುಗುವ ಚಕ್ರಗಳ ಮುಖಾಂತರ ಮೆಕ್ಕೆಜೋಳವನ್ನು ಹಿಟ್ಟು ಮಾಡುವ ಪದ್ಧತಿ ಈಜಿಪ್ಟ್, ರೋಮನ್, ಸುಮೇರಿಯನ್ನರ ಕಾಲದಲ್ಲಿ ಬಳಕೆಯಲ್ಲಿತ್ತು.

ಈ ತಂತ್ರಜ್ಙಾನವನ್ನೇ ಮೂಲವನ್ನಾಗಿಟ್ಟುಕೊಂಡು ಪ್ರಾನ್ಸ್ ಮೂಲದ ಟರ್ಬೈನ್ ಎಂಬ ಇಂಜಿನಿಯರ್ 1832ರಲ್ಲಿ ಯಂತ್ರವೊಂದನ್ನು ಆವಿಷ್ಕರಿಸಿ, ವಿದ್ಯುತ್ ಉತ್ಪಾದನೆಗೆ ತಳಹದಿ ಹಾಕಿದ. ಆತ ಕಂಡುಹಿಡಿದ ಯಂತ್ರಕ್ಕೆ ಅವನ ಹೆಸರನ್ನೇ ಇಡಲಾಯಿತು.

17ನೇ ಶತಮಾನದ ವೇಳೆಗೆ ಇಂಗ್ಲೆಂಡ್, ಜರ್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಅಣೆಕಟ್ಟುಗಳ ಕೆಳಭಾಗದಲ್ಲಿ ನಿರ್ಮಿಸಿದ ವಾಟರ್ ಮಿಲ್ ತಂತ್ರಜ್ಞಾನದಿಂದ ಕಬ್ಬಿಣ ಕುಟ್ಟುವುದು, ಜೋಳದ ಹಿಟ್ಟಿನ ತಯಾರಿಕೆ, ಕಾಗದ ಉತ್ಪಾದನೆಗೆ ಬೇಕಾದ ಪಲ್ಪ್ ತಯಾರಿಕೆ ಮುಂತಾದ ಕಾರ್ಯಗಳು ನಡೆಯುತ್ತಿದ್ದವು.

19ನೇ ಶತಮಾನದ ಪೂರ್ವದಲ್ಲಿ ಕೈಗಾರಿಕೆಗಳ ಬಳಕೆಗಾಗಿ 200 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. 20ನೇ ಶತಮಾನದ ಪ್ರಾರಂಭದವರೆಗೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟುಗಳಿಗೆ ಕಲ್ಲು, ಇಟ್ಟಿಗೆ, ಗಾರೆ ಬಳಸುತ್ತಿದ್ದರೂ ಕೂಡ, ಇವುಗಳ ನಿರ್ಮಾಣದ ವ್ಯವಸ್ಥೆಯಲ್ಲಿ ಯಾವುದೇ ವೈಜ್ಞಾನಿಕ ತಳಹದಿ ಇರುತ್ತಿರಲಿಲ್ಲ.

ಈ ದಿಶೆಯಲ್ಲಿ, ಅಲ್ಲಿಯತನಕ ನಿರ್ಮಿಸಲಾಗಿದ್ದ ಅಣೆಕಟ್ಟುಗಳ ಸಫಲತೆ-ವಿಫಲತೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ, 1930 ರಲ್ಲಿ ಪ್ರಥಮವಾಗಿ ನದಿಯ ನೀರಿನ ಹರಿವು, ಅಣೆಕಟ್ಟು ನಿರ್ಮಿಸುವ ಸ್ಥಳದ ಮಣ್ಣಿನ ಪರೀಕ್ಷೆ, ಭೂಗರ್ಭದಲ್ಲಿನ ಕಲ್ಲುಗಳು, ಅಣೆಕಟ್ಟಿನ ನೀರಿನ ಸಂಗ್ರಹ ಹಾಗೂ ಅದರ ಒತ್ತಡದಿಂದಾಗುವ ಭೂಗರ್ಭದಲ್ಲಾಗುವ ಪರಿವರ್ತನೆ ಮುಂತಾದವುಗಳ ಕುರಿತು ಅಧ್ಯಯನ ನಡೆಸಲಾಯಿತು. ಇಂತಹ ವೈಜ್ಞಾನಿಕ ಹಾಗೂ ಕೂಲಂಕುಷ ಅಧ್ಯಯನಗಳ ನಡುವೆ ಕೂಡ ಅಣೆಕಟ್ಟುಗಳ ದುರಂತ ಸಾಮಾನ್ಯವಾಗಿತ್ತು. ಪ್ರತಿ 10 ಅಣೆಕಟ್ಟುಗಳಲ್ಲಿ ಒಂದು ಅಣೆಕಟ್ಟು ದುರಂತದಲ್ಲಿ ಪರ್ಯಾವಸಾನಗೊಳ್ಳುತ್ತಿತ್ತು.

ಪ್ರಾನ್ಸ್‌ನ ಇಂಜಿನಿಯರ್ ಟರ್ಬೈನ್ ಆವಿಷ್ಕರಿಸಿದ ವಿದ್ಯುತ್ ಯಂತ್ರದಿಂದಾಗಿ ಜಲ ವಿದ್ಯುತ್‌ಗೆ ಭಾರಿ ಬೇಡಿಕೆ ಉಂಟಾದ ಕಾರಣ ಅಮೆರಿಕಾ, ಯೂರೋಪ್ ಖಂಡಗಳಲ್ಲಿ ಸಾಕಷ್ಟು ಅಣೆಕಟ್ಟುಗಳು ನಿರ್ಮಾಣವಾದವು. 1900ರಲ್ಲಿ 30ರಷ್ಟಿದ್ದ ಅಣೆಕಟ್ಟುಗಳ ಸಂಖ್ಯೆ 1930ರ ವೇಳೆಗೆ 200ಕ್ಕೆ ತಲುಪಿತ್ತು.

ಅಮೆರಿಕಾದಲ್ಲಿ ವಿಶಾಲವಾದ ಬೃಹತ್ ಹುಲ್ಲುಗಾವಲು ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ಅಣೆಕಟ್ಟುಗಳ ನಿರ್ಮಾಣ ಪ್ರಾರಂಭವಾದರೂ, ನಂತರ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗುವಂತೆ, ಜಲ ವಿದ್ಯುತ್ ಯೋಜನೆಗೆ ಒತ್ತು ನೀಡಿ ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು.

ಅಮೆರಿಕಾ ಸರಕಾರ ಸೇನಾಪಡೆಯ ತಂತ್ರಜ್ಞರನ್ನು ಒಳಗೊಂಡ ತಂಡವೊಂದನ್ನು ರಚಿಸಿ, ಈ ತಂಡದ ಮೂಲಕ ಜಲ ವಿದ್ಯುತ್‌ಗಾಗಿ ಕಬ್ಬಿಣ-ಸಿಮೆಂಟ್ ಬಳಸಿ, 1930ರವರೆಗೆ 50 ಅಣೆಕಟ್ಟುಗಳನ್ನು ನಿರ್ಮಿಸಿ 1931 ರಲ್ಲಿ ಜಗತ್ತಿನ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಕೊಲರ್‍ಯಾಡೊ ನದಿಯ ಹೂವರ್ ಅಣೆಕಟ್ಟೆಯನ್ನು ನಿರ್ಮಾಣಮಾಡಿತು.

ಅಮೆರಿಕಾದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ಉತ್ಪಾದಿಸಿದ ಜಲ ವಿದ್ಯುತ್ ಕೈಗಾರಿಕಾ ಕ್ರಾಂತಿಗೆ ನಾಂದಿಯಾಗುವುದರ ಜೊತೆಗೆ, ವಿಶ್ವದ ಮಹಾ ಯುದ್ಧಕ್ಕೆ ಬೇಕಾದ ಯುದ್ಧ ಸಾಮಗ್ರಿ, ವಿಮಾನಗಳ ತಯಾರಿಕೆಗೂ ಸಹಕಾರಿಯಾಯಿತು. 1945ರವರೆಗೆ ಕಲ್ಲಿದ್ದಲು ಆಧಾರಿತ ಹಾಗೂ ಅಣು ವಿದ್ಯುತ್ ಪ್ರಾರಂಭವಾಗುವವರೆಗೆ ಅಮೆರಿಕ ಸರಕಾರ ವಿದ್ಯುತ್ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು 100ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿತ್ತು.

ರಷ್ಯಾ ಕೂಡ ಅಣೆಕಟ್ಟುಗಳ ನಿರ್ಮಾಣದಲ್ಲಿ ಹಿಂದೆ ಬಿದ್ದಿರಲಿಲ್ಲ. ಇಲ್ಲಿ ಅಣೆಕಟ್ಟುಗಳ ನಿರ್ಮಾಣದ ಗುರಿ ಜಲ ವಿದ್ಯುತ್‌ಗಿಂತ, ನದಿಗಳ ಹುಚ್ಚು ಪ್ರವಾಹವನ್ನು ನಿಯಂತ್ರಿಸುವುದೇ ಆಗಿತ್ತು.

ರಷ್ಯಾದ ಗೂಢಾಚಾರ ಸಂಸ್ಥೆ ಕೆ.ಜಿ.ಬಿ.ಯ ನಿಯಂತ್ರಣದಲ್ಲಿ ಡೈಪಿರ್ ನದಿಗೆ 1932ರಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ತಯಾರಿಕೆಗೆ ನಾಂದಿ ಹಾಡಿತು. 1970 ರವೇಳೆಗೆ ರಷ್ಯಾದಲ್ಲಿ ಬಹುತೇಕ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ, ಪ್ರವಾಹ ನಿಯಂತ್ರಣದೊಂದಿಗೆ 1 ಲಕ್ಷದ 20 ಸಾವಿರ ಚ.ಕಿ.ಮೀ. ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಯಿತು.

ಚಿತ್ರಗಳು : ವಿಕಿಪೀಡಿಯ

ಜೀವನದಿಗಳ ಸಾವಿನ ಕಥನ – 2

ಡಾ.ಎನ್. ಜಗದೀಶ್ ಕೊಪ್ಪ

ಪರಿಸರ ಕುರಿತಂತೆ ಅಪಾರ ಕಾಳಜಿ ಹೊಂದಿದ್ದ, ದುಡಿಯುವ ವರ್ಗದ ಆರಾಧ್ಯ ದೈವವಾಗಿದ್ದ ಚಿಂತಕ, ದಾರ್ಶನಿಕ ಕಾರ್ಲ್‌ಮಾರ್ಕ್ಸ್ ತನ್ನ “ಎಕನಾಮಿಕ್ ಅಂಡ್ ಪಿಲಾಸಫಿಕ್ ಮಾನ್ಯುಸ್ಕ್ರಿಪ್ಟ್” ಕೃತಿಯಲ್ಲಿ “ಮಾನವ ಪ್ರಕೃತಿಯೊಡನೆ ಜೀವಿಸುತ್ತಾನೆ. ಪ್ರಕೃತಿಯೆಂಬುದು ಅವನಲ್ಲಿ ಅಂತರ್ಗತವಾಗಿದೆ. ಅವನು ಈ ಭೂಮಿಯ ಮೇಲೆ ಬದುಕುಳಿಯಬೇಕಾದರೆ ಪ್ರಕೃತಿಯೊಡನೆ ನಿರಂತರವಾಗಿ ಸಂವಾದದಲ್ಲಿ ಇರಬೇಕು”, ಎಂದಿದ್ದ. ಮಾರ್ಕ್ಸ್‌ನ ಸಂಗಾತಿ ಏಂಗಲ್ಸ್ ಕೂಡ “ನಮ್ಮ ಬದುಕಿನ ಮೂಲಭೂತ ಅಗತ್ಯವಾದ ಭೂಮಿಯನ್ನು, ಅದರ ಕೊಡುಗೆಗಳನ್ನು ವ್ಯಾಪಾರದ ಸರಕನ್ನಾಗಿ ಮಾಡಿದ್ದೇ ಆದರೆ ಅಂದೇ ಮನುಕುಲದ ಅವನತಿ ಪ್ರಾರಂಭ” ಎಂದು ಎಚ್ಚರಿಸಿದ್ದ. ವಿಷಾದದ ಸಂಗತಿ ಎಂದರೆ ಈ ಮಹಾನ್ ದಾರ್ಶನಿಕರು ಎಚ್ಚರಿಸುವ ಮೊದಲೇ ಅವನತಿಯ ಅಧ್ಯಾಯ ಆರಂಭವಾಗಿತ್ತು.

ಕಳೆದ 50 ವರ್ಷಗಳ ಅವಧಿಯಲ್ಲಿ ಈ ಭೂಮಿಯ ಮೇಲಿನ ಅನೇಕ ಅಪರೂಪದ ಜೈವಿಕ ಸಂತತಿಗಳು ನಾಶವಾಗಿವೆ. ಸಾವಿರಾರು ಪ್ರಭೇಧಗಳು ವಿನಾಶದ ಅಂಚಿನಲ್ಲಿವೆ. ನಮ್ಮ ನದಿ, ಬೆಟ್ಟ, ಸರೋವರ ಇವೆಲ್ಲವೂ ತಮ್ಮ ನೈಜ ಸ್ವರೂಪವನ್ನು ಕಳೆದುಕೊಂಡು ವಿರೂಪಗೊಂಡಿವೆ. ಆಧುನಿಕ ಜಗತ್ತಿನ ಮೂಲ ಮಂತ್ರವಾದ “ಅಭಿವೃದ್ಧಿ” ಎಂಬ ರಕ್ಕಸನ ಬಾಯಿಗೆ ದಿನ ನಿತ್ಯದ ಆಹಾರವಾಗತೊಡಗಿವೆ.

ಅಷ್ಟೇ ಏಕೆ 40 ವರ್ಷಗಳ ಹಿಂದೆ ನನ್ನ ತಲೆಮಾರು ಬಾಲ್ಯದಲ್ಲಿ ಕಂಡ ತುಂಬೆ, ತುಳಸಿ, ಸಂಪಿಗೆ, ಜಾಜಿಮಲ್ಲಿಗೆ, ತಾವರೆ, ಬಣ್ಣ ಬಣ್ಣದ ಚಿಟ್ಟೆ – ಪತಂಗ, ದೇಸಿ ಸಂತತಿಯ ಹಸು, ಕರು, ಎಮ್ಮೆ, ನಮ್ಮ ನಾಟಿ ತಳಿಗಳ ಬಿತ್ತನೆ ಬೀಜಗಳು, ನಮ್ಮ ಹಬ್ಬ, ಹಸೆ, ಹಾಡು, ಇವೆಲ್ಲವೂ ಮರೆಯಾಗಿ ನಮ್ಮ ಸ್ಮೃತಿಯೆಂಬ ಕಪಾಟಿನೊಳಗೆ ಜೀವಂತವಿರುವ ಕನವರಿಕೆಗಳು ಮಾತ್ರವಾಗಿವೆ.

20 ಮತ್ತು 21 ನೇ ಶತಮಾನವೆಂದರೆ ಮನುಕುಲವೆಂಬುದು ಉನ್ಮಾದದಿಂದ ಪ್ರಕೃತಿಯ ಮೇಲೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಮತ್ತು ವಿಫಲತೆಗಳ ಯುಗ ಎಂಬಂತಾಗಿದೆ. ಇದಕ್ಕೆ ಇತ್ತೀಚಿನ ಸಾಕ್ಷಿ ಎಂದರೆ ಜಪಾನ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪ ಮತ್ತು ಸುನಾಮಿ.

ಪ್ರಕೃತಿಯಲ್ಲಿನ ಜೀವಜಾಲವೆಂಬುದು ಮಾನವನ ಪ್ರತಿಸ್ಪರ್ಧಿಯಲ್ಲ. ಅದರಲ್ಲಿ ಅವನೂ ಒಂದು ಭಾಗ ಎಂಬ ಈ ನೆಲದ ಮೂಲ ಸಂಸ್ಕೃತಿಯನ್ನು, ಕಾಳಜಿಯನ್ನು ಮರೆತ ಆಧುನಿಕ ಜಗತ್ತಿನ ನಾಗರೀಕತೆಗೆ ಕಬಳಿಕೆಯೊಂದೇ ಗುರಿಯಾಗಿದೆ. ಬದಲಾದ ನಮ್ಮ ಬದುಕಿನ ಕ್ರಮ ಹಾಗೂ ಚಿಂತನಾ ಲಹರಿಗಳಿಂದ ಜಗತ್ತಿನೆಲ್ಲೆಡೆ ಅಸ್ತಿತ್ವದಲ್ಲಿದ್ದ “ಅವಿಭಕ್ತ ಕುಟುಂಬ” ಪದ್ಧತಿ ಸಧ್ಯ ಛಿದ್ರಗೊಂಡಿದ್ದು, ಹೆಚ್ಚಿದ ಉಪಭೋಗ ಪ್ರಕೃತಿ ಮೇಲಿನ ದಾಳಿಗೆ ಪರೋಕ್ಷ ಕಾರಣವಾಗಿದೆ.

ಕೇವಲ ಅರ್ಧ ಶತಮಾನದ ಹಿಂದಿನ ಸಮಾಜದ ಕುಟುಂಬಗಳಲ್ಲಿ ಮೂಲಭೂತ ಬೇಡಿಕೆಗಳಾದ ಆಹಾರ, ನೀರು, ವಿದ್ಯುತ್, ಉರುವಲು ಮುಂತಾದ ಅಗತ್ಯತೆಗಳು ಮಿತಿಯಲ್ಲಿದ್ದವು. ಪ್ರಕೃತಿಯಿಂದ ಒಂದನ್ನು ಪಡೆದರೆ, ಅದೇ ಪ್ರಕೃತಿಗೆ ಹಿಂತಿರುಗಿ ಎರಡನ್ನು ನೀಡುವ ಪದ್ಧತಿ ನಮ್ಮ ಜನಪದರಲ್ಲಿ ಚಾಲ್ತಿಯಲ್ಲಿತ್ತು.

ಏಕ ಕುಟುಂಬ ಪದ್ಧತಿ ಜೊತೆಗೆ ಅಮೆರಿಕಾ ದೇಶ ಜಗತ್ತಿಗೆ ಕಲಿಸಿದ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಮನುಕುಲದ ಬೇಡಿಕೆಗಳಿಗೆ ಇತಿ-ಮಿತಿ ಇಲ್ಲದಂತಾಗಿದೆ.

ಜಗತ್ತಿನ ಜನ ಸಂಖ್ಯೆಯಲ್ಲಿ ಶೇ.4ರಷ್ಟು ಇರುವ ಅಮೆರಿಕಾದ ಜನತೆ, ನೈಸರ್ಗಿಕ ಕೊಡುಗೆಗಳಲ್ಲಿ ಶೇ.40ರಷ್ಟು ಪಾಲನ್ನು ಕಬಳಿಸುತ್ತಿದ್ದಾರೆ. ವಾತಾವರಣ ಕಲುಷಿತಗೊಳಿಸುವುದರಲ್ಲಿ ಅವರ ಪಾಲು ಶೇ.27ರಷ್ಟು. ಇಂತಹ ನಾಗರೀಕತೆಯ ಅತಿಲಾಲಸೆ, ವ್ಯಾಪಾರೀಕರಣಗೊಂಡ ಜಗತ್ತು, ಭೋಗ ಸಂಸ್ಕೃತಿ ಇವುಗಳಿಂದ ಪಕೃತಿ ನಲುಗಿ ಹೋಗಿದೆ.

ವರ್ತಮಾನದ ಜಗತ್ತಿನಲ್ಲಿ ದೊರೆಯುತ್ತಿರುವ 1.4 ಬಿಲಿಯನ್ ಕ್ಯೂಬಿಕ್ ಮೀಟರ್ ನೀರಿನಲ್ಲಿ ಶೇ 3ರಷ್ಟು ಮಾತ್ರ ಶುದ್ಧ ನೀರಾಗಿದೆ. ಶೇ.3ರಷ್ಟು ಪಾಲಿನ ಈ ನೀರಿನಲ್ಲಿ ಶೇ.77.2ರಷ್ಟು ಮಂಜುಗೆಡ್ಡೆರೂಪದಲ್ಲಿ, ಶೇ.0.35ರಷ್ಟು ಸರೋವರಗಳಲ್ಲಿ, ಶೇ.0.1ರಷ್ಟು ನದಿ-ಕೊಳ್ಳಗಳಲ್ಲಿ ನಮಗೆ ಲಭ್ಯವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನೀರಿನ ಅಭಾವ ಕಾಣಿಸಿಕೊಂಡದ್ದು 1980ರ ದಶಕದಲ್ಲಿ. ಕುಡಿಯುವ ನೀರಿನ ಮೂಲಗಳಾಗಿದ್ದ ನಮ್ಮ ನದಿಗಳು, ಜಲಾಶಯಗಳು ಅರಣ್ಯ ನಾಶ ಮತ್ತು ಅಕ್ರಮ ಗಣಿಗಾರಿಕೆಯಿಂದ ಕಲುಷಿತಗೊಂಡವು.

ನಮ್ಮ ಪೂರ್ವಿಕರು ಸಾಮಾನ್ಯವಾಗಿ ದೇಗುಲಗಳನ್ನು ನದಿತೀರಗಳಲ್ಲಿ ನಿರ್ಮಿಸಿ, ನದಿಗಳಿಗೆ ಅರ್ಪಿಸಿರುವುದನ್ನು ನಾವು ದೇಶದ ಎಲ್ಲೆಡೆ ಕಾಣಬಹುದು. ನಮ್ಮ ಪೂರ್ವಜರು ನದಿ ನೀರಿನ ಬಳಕೆ ಕುರಿತಂತೆ ನಿರ್ಮಿಸಿದ ದೇಸಿ ತಂತ್ರಜ್ಞಾನ ಇಂದಿನ ನೀರಾವರಿ ತಂತ್ರಜ್ಞಾನಕ್ಕೆ ಮೂಲವಾಗಿದೆ ಎಂದು ನೀರಾವರಿ ತಜ್ಞ ಅರ್ಥರ್ ಕಾಟನ್ 1874ರಲ್ಲಿ ದಾಖಲಿಸಿದ್ದಾನೆ. ನಮ್ಮ ದಕ್ಷಿಣ ಭಾರತದ ಕೃಷ್ಣ, ಕಾವೇರಿ ನದಿ ಪಾತ್ರಗಳಲ್ಲಿ ನಿರ್ಮಿಸಿದ ಕಿರು ಜಲಾಶಯ, ಅಣೆಕಟ್ಟುಗಳು ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪೂರಕವಾಗಿವೆ. ದೆಹಲಿ ಮೂಲದ “ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‌ವಿರಾನ್‌ಮೆಂಟ್” ಸಂಸ್ಥೆಯ ಸ್ಥಾಪಕ ದ.ಅನಿಲ್ ಅಗರ್‌ವಾಲ್ 90ರ ದಶಕದಲ್ಲಿ ಭಾರತದ ಪರಿಸರ ಕುರಿತಂತೆ “ಸಿಟಿಜನ್ ರಿಪೋರ್ಟ್ಸ್” ಸಮೀಕ್ಷಾ ವರದಿಗಳನ್ನು ಪ್ರಕಟಿಸಿದ್ದು ಇದೇ ಸಂದರ್ಭದಲ್ಲಿ “ಡೈಯಿಂಗ್ ವಿಸಡಮ್” ಹೆಸರಿನ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ನಮ್ಮ ದಕ್ಷಿಣ ಭಾರತದ ರಾಜ್ಯಗಳಲ್ಲಿನ ನೀರಾವರಿ ಪದ್ಧತಿ, ಕೆರೆ-ಕಟ್ಟೆ, ಕಾಲುವೆಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಇದ್ದು ಓದುಗರಲ್ಲಿ ವಿಸ್ಮಯ ಮೂಡಿಸುತ್ತದೆ. ಅಂದಿನ ವಿಜಯನಗರದ ಸಾಮಂತರು, ತಮಿಳುನಾಡಿನ ಚೋಳರು, ಪಾಂಡ್ಯರು ಮುಂತಾದವರ ಆಳ್ವಿಕೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗಾಗಿ ಬಳಸುವ ನೀರು ಇವುಗಳ ಕುರಿತಂತೆ ಅಳವಡಿಸಿಕೊಂಡಿದ್ದ ದೇಸಿ ತಂತ್ರಜ್ಞಾನ ಇಂದಿಗೂ ಮಾದರಿಯಾಗಿದೆ.

ಆಧುನಿಕ ಯುಗದ ನದಿಗಳೆಂದರೆ ನಮ್ಮೆಲ್ಲರ ಮಲ-ಮೂತ್ರಗಳನ್ನು, ನಗರ, ಪಟ್ಟಣಗಳಿಂದ ಹೊರಹಾಕುವ ತ್ಯಾಜ್ಯ ವಸ್ತುಗಳನ್ನು ಸಮುದ್ರಕ್ಕೆ ಸಾಗಿಸುವ ವಾಹಕಗಳು ಎಂಬಂತಾಗಿವೆ. ನದಿಯೆಂದರೆ ಅದು ಕೇವಲ ನೀರಿನ ಹರಿವಲ್ಲ. ಅದಕ್ಕೆ ಅದರದೇ ಆದ ಮಾತೃತ್ವ ಗುಣವಿದೆ. ನದಿನೀರಿಗೆ ವಿಷವನ್ನಾದರೂ ಬೆರೆಸಿ, ಅಮೃತವನ್ನಾದರೂ ಬೆರೆಸಿ ಅದೆಲ್ಲವನ್ನೂ ತನ್ನದಗಿಸಿಕೊಳ್ಳುವ ಗುಣ ನದಿಯ ಒಡಲೊಳಗೆ ಅಂತರ್ಗತವಾಗಿದೆ. ನದಿಯ ನೀರಿನ ಮೇಲೆ ಹಣತೆ ಹಚ್ಚಿಟ್ಟು ತೇಲಿ ಬಿಟ್ಟಾಗ ನದಿ ಸಂಭ್ರಮಿಸುವುದಿಲ್ಲ. ಅದೇ ರೀತಿ ಉರಿವ ಕೊಳ್ಳಿಯ ಜೊತೆ ಅರೆಬೆಂದ ಶವಗಳನ್ನು ನದಿಗೆ ಎಸೆದಾಗ ಅದು ಬೇಸರಗೊಳ್ಳುವುದಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಿಕರು “ನದಿಗೆ ನೆನಪಿನ ಹಂಗಿಲ್ಲ” ಎಂದಿದ್ದರು. ನದಿಗಳು ಮನುಕುಲದೊಂದಿಗೆ ಥಳಕು ಹಾಕಿಕೊಂಡು ಮನುಷ್ಯನ ಜೊತೆ ಅವಿನಾಭಾವ ಸಂಬಂಧ ಇರುವುದರಿಂದಲೇ ಮಾನವ ಜನಾಂಗಕ್ಕೆ ನದಿಯೆಂದರೆ ಅದು ಮಾತೃ ಸ್ವರೂಪಿಣಿ ಎಂಬ ಪರಿಕಲ್ಪನೆ ಮೂಡಿತು.

ಜಗತ್ತಿನ ಯಾವುದೇ ಪುರಾಣವಿರಲಿ, ಮಹಾಕಾವ್ಯವಿರಲಿ ಅಲ್ಲಿ ನದಿಗಳ ಪಾತ್ರ ಇದ್ದೇ ಇರುತ್ತದೆ. ಡೋನಾಲ್ಡ್ ವರ್ನರ್ ಎಂಬ ಲೇಖಕ ತನ್ನ “ರಿವರ್‍ಸ್ ಆಫ್ ಎಂಪೈರ್” ಕೃತಿಯಲ್ಲಿ ನದಿ ಅಥವಾ ನೀರಿನ ಇತಿಹಾಸವಿಲ್ಲದೆ ಯಾವುದೇ ಮನುಕುಲದ ಇತಿಹಾಸ ಪೂರ್ಣವಾಗಲಾರದು ಎಂದಿದ್ದಾನೆ.

ಜಗತ್ತಿನ ಪ್ರ-ಪ್ರಥಮ ಮಹಾಕಾವ್ಯ ಎನಿಸಿಕೊಂಡ ಮೆಸಪೊಟೋಮಿಯಾ ನಾಗರೀಕತೆಯಲ್ಲಿ ಸೃಷ್ಟಿಯಾಗಿ ಹಲವಾರು ಶತಮಾನಗಳ ಕಾಲ ಮಣ್ಣಿನ ಹಲಗೆಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಬಂದ “ಗಿಲ್ಗಮೇಶನ ಮಹಾಕಾವ್ಯ” ದಲ್ಲಿ ನದಿಗಳ ಪ್ರವಾಹ ಪ್ರಧಾನ ಅಂಶವಾಗಿ ಮೂಡಿಬಂದಿದೆ. ಭಾರತದ ಗಂಗಾನದಿ, ಈಜಿಪ್ಟ್‌ನ ನೈಲ್‌ನದಿ, ರಷ್ಯಾದ ಓಲ್ಗಾ, ದಕ್ಷಿಣ ಅಮೆರಿಕಾದ ಅಮೆಜಾನ್, ಚೀನಾದ ಹಳದಿನದಿ, ಇಥಿಯೋಪಿಯಾದ ಐನಾಸ್ ಹೀಗೆ ನದಿ ಪಾತ್ರಗಳಲ್ಲಿನ ಜನಜೀವನ, ಸಂಸ್ಕೃತಿ, ಸಾಮ್ರಾಜ್ಯಗಳ ಉದಯ-ಪತನ, ಐತಿಹ್ಯ ಪುರಾಣ, ಸಾಂಸ್ಕೃತಿಕ ಆಚರಣೆ ಎಲ್ಲವುಗಳೂ ನದಿಗಳ ಇತಿಹಾಸದ ಜೊತೆ ಮಿಳಿತಗೊಂಡಿವೆ.

20ನೇ ಶತಮಾನದ ಆದಿಯಿಂದ ಬೃಹತ್ ಅಣೆಕಟ್ಟುಗಳ ನೆಪದಲ್ಲಿ ನದಿಗಳನ್ನು ಮಣಿಸಿ, ಅವುಗಳ ಸಹಜ ಹರಿವಿಗೆ ತಡೆಯೊಡ್ಡಿ ಸಾವಿಗೆ ಕಾರಣೀಭೂತನಾದ ಆಧುನಿಕ ಯುಗದ ನವ ನಾಗರೀಕನಿಗೆ ನಮ್ಮ ಪೂರ್ವಿಕರ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಗಮನಿಸುವ ತಾಳ್ಮೆ ಮತ್ತು ವಿವೇಚನೆ ಇಲ್ಲ. ಅವನ ಪಾಲಿಗೆ ಇದು ಅರ್ಥಹೀನ ಸಂಗತಿ. ಒಬ್ಬನ ಹಿತಕ್ಕೆ ಹತ್ತು ಜನರ ಹಿತವನ್ನು ಬಲಿಕೊಡುವ ಇಂದಿನ ವ್ಯವಸ್ಥೆಯಲ್ಲಿ ಇತಿಹಾಸ ಕುರಿತ ಕಾಳಜಿ, ಪರಿಸರದ ಬಗೆಗಿನ ಪ್ರೀತಿ ಯಾರಿಗೂ ಬೇಡವಾದ ಸಂಗತಿಗಳು.

(ಮುಂದುವರಿಯುವುದು)

(ಚಿತ್ರಕೃಪೆ : ವಿಕಿಪೀಡಿಯ)

Symptoms of acute HIV infection

ನಿಜ ಭಾರತದ ನೋವುಗಳು – ಕೈಗೆಟುಕದ ಜೀವರಕ್ಷಕ ಔಷಧಗಳು

ಜಾಗತೀಕರಣ ಕುರಿತಂತೆ ಬರಗೂರು ರಾಮಚಂದ್ರಪ್ಪ ಹೇಳಿರುವ ಜಾಗತೀಕರಣವೆಂಬುದು ಶಬ್ದವಿಲ್ಲದ ನಿಶ್ಯಬ್ಧ ಯುದ್ಧ ಎಂಬ ಮಾತು ನನಗೆ ಪದೇ, ಪದೇ ನೆನಪಿಗೆ ಬರುತ್ತದೆ. ಮುಕ್ತಮಾರುಕಟ್ಟೆಯ ನೆಪದಲ್ಲಿ ನಮ್ಮ ದೇಶದೊಳಕ್ಕೆ ನುಸುಳಿರುವ ಬಹುರಾಷ್ಟ್ರೀಯ ಕಂಪನಿಗಳು ಔಷದ ರಂಗದಲ್ಲಿ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲ ಜನಸಾಮಾನ್ಯರಿಗೆ ಇಂದಿಗೂ ಅರ್ಥವಾಗದ ಸಂಗತಿ.

Prescription Symbolಭಾರತದ ಬಗ್ಗೆ, ಇಲ್ಲಿನ ಬಡತನ, ಅಜ್ಞಾನದ ಬಗ್ಗೆ, ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ನಮ್ಮ ತಕರಾರುಗಳು ಏನೇ ಇರಲಿ, ಇಲ್ಲಿನ ಬಡವರಿಗೆ ಕೈಗೆಟುಕುವ ಅಗ್ಗದ ದರದಲ್ಲಿ ಜೀವರಕ್ಷಕ ಔಷಧಗಳನ್ನು ತಯಾರು ಮಾಡುತ್ತಿರುವುದು ಭಾರತದಲ್ಲಿ ಮಾತ್ರ. ಇದು ಈ ದೇಶದ ಹೆಗ್ಗಳಿಕೆ. ಇಲ್ಲಿ 15 ರೂಪಾಯಿಗೆ ಸಿಗುವ ಮಾತ್ರೆ ನೆರೆಯ ಪಾಕಿಸ್ತಾನದಲ್ಲಿ 45 ರೂಪಾಯಿ.  ಅಂದರೆ, ಮೂರು ಪಟ್ಟು ಅಧಿಕ. ಇನ್ನು ಯುರೋಪಿನಲ್ಲಿ ನೂರು ಪಟ್ಟು ಅಧಿಕ.

ಹಾಗಾಗಿ ನೆರೆಯ ಅರಬ್ ರಾಷ್ಟ್ರಗಳಿಂದ, ಪಾಕಿಸ್ತಾನದಿಂದ, ಇರಾಕ್, ಇರಾನ್‌ನಿಂದ ರೋಗಿಗಳು ಚಿಕಿತ್ಸೆಗಾಗಿ ಕೇರಳಕ್ಕೆ, ಯುರೋಪ್ ರಾಷ್ಟಗಳಿಂದ ಮುಂಬೈ, ದೆಹಲಿಗೆ ರೋಗಿಗಳು ಬರುತ್ತಿದ್ದಾರೆ. ನಮ್ಮ ನೆರೆಯ ಚಿಕ್ಕ ರಾಜ್ಯವಾದ ಕೇರಳದಲ್ಲಿ 500 ಕ್ಕೂ ಹೆಚ್ಚು ಸುಸಜ್ಜಿತ ಆಸ್ಪತ್ರೆಗಳಿವೆ. ಈ ಕಾರಣಕ್ಕಾಗಿ ಹೆಲ್ತ್ ಟೂರಿಸಂ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಏಜೆಂಟರು ಹುಟ್ಟಿಕೊಂಡು ಭಾರತಕ್ಕೆ ರೋಗಿಗಳನ್ನು ಕರೆತರುತ್ತಿದ್ದಾರೆ.

ಭಾರತದ ವೈದ್ಯಲೋಕದ ಹಾಗೂ ಔಷದ ವಲಯದ ಇಂತಹ ಅವಕಾಶಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ಕಲ್ಲು ಹಾಕಿದ್ದು ಔಷಧ ರಂಗದಲ್ಲಿ ಏಕಸ್ವಾಮ್ಯತೆ ಸಾಧಿಸಲು ಹೆಜ್ಜೆ ಇಟ್ಟಿವೆ. ಇದಕ್ಕೆ ಕಾರಣವಾದದ್ದು 2004 ರಲ್ಲಿ ನಡೆದ ಒಂದು ಘಟನೆ.

ದುಬಾರಿ ವೆಚ್ಚದ ಚಿಕಿತ್ಸೆಯ ಕಾರಣ ಏಡ್ಸ್ ರೋಗಿಗಳು ತೃತೀಯ ಜಗತ್ತಿನ ರಾಷ್ಟ್ರಗಳೂ ಸೇರಿದಂತೆ, ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಸಾಯುತ್ತಿರುವುದನ್ನು ಮನಗಂಡ ವಿಶ್ವ ವ್ಯಾಪಾರ ಸಂಘಟನೆ(W.T.O.) 2004 ರಲ್ಲಿ ತುರ್ತು ಸಭೆ ನಡೆಸಿ ಪೇಟೆಂಟ್ ಸ್ವಾಮ್ಯ ಕುರಿತಂತೆ ಇರುವ ಹಕ್ಕು ಮತ್ತು ಮಾನದಂಡಗಳನ್ನು ಸಡಿಲಿಸಿ, ತುರ್ತು ಸಂದರ್ಭದಲ್ಲಿ ಯಾವುದೇ ರಾಷ್ಟ್ರ ಪೇಟೆಂಟ್ ಹಂಗಿಲ್ಲದೆ ಔಷಧಗಳನ್ನು ತಯಾರಿಸಬಹುದು, ಜೊತೆಗೆ ಔಷದ ತಯಾರಿಕೆಗೆ ಸೌಕರ್ಯಗಳಿಲ್ಲದ ರಾಷ್ಟ್ರಗಳಿಗೆ ಸರಬರಾಜು ಮಾಡಬಹುದು ಎಂದು ಆದೇಶ ಹೊರಡಿಸಿತು.

ಅಲ್ಲಿಯವರೆಗೆ ಒಂದು ತಿಂಗಳಿಗಾಗುವ ಏಡ್ಸ್ ಔಷಧಿಯ ಕಿಟ್ ಒಂದನ್ನು 1 ಲಕ್ಷದ 20 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಕಂಪನಿಗಳಿಗೆ ಪೆಟ್ಟು ನೀಡಿದ ಭಾರತ ಕೇವಲ 8 ಸಾವಿರ ರೂಪಾಯಿಗೆ ಔಷಧ ಕಿಟ್ ಒದಗಿಸಲು ಪ್ರಾರಂಭಿಸಿತು. ವಿಶ್ವ ಸಂಸ್ಥೆಯ ಸಹಾಯ ನಿಧಿ, ಬಿಲ್ ಗೇಟ್ಸ್‌ನ ಫೌಂಡೇಷನ್ ಮುಂತಾದ ಸಂಸ್ಥೆಗಳು ಸಬ್ಸಿಡಿ ರೂಪದಲ್ಲಿ ಈ ಕಿಟ್‌ಗಳನ್ನು ಹಂಚಿದ್ದರಿಂದ ಬಡ ಏಡ್ಸ್ ರೋಗಿಗಳು ಚೇತರಿಸಿಕೊಳ್ಳಲು ಸಾಧ್ಯವಾಯಿತು.

ಇದರಿಂದ ವಿಚಲಿತಗೊಂಡ ಬಹುರಾಷ್ಟ್ರೀಯ ಕಂಪನಿಗಳು ಈಗ ಅಗ್ಗದ ಔಷಧ ತಯಾರು ಮಾಡುವ ಭಾರತಕ್ಕೆ ಲಗ್ಗೆ ಇಟ್ಟಿವೆ. ಮುಕ್ತ ಮಾರುಕಟ್ಟೆಯ ಈ ದಿನಗಳಲ್ಲಿ ನಮ್ಮ ಕೇಂದ್ರ ಸರಕಾರ ತೆಗೆದುಕೊಂಡ ಮೂರ್ಖತನದ ನಿರ್ಧಾರದಿಂದಾಗಿ ಬಡವರು ಅಗ್ಗದ ಜೀವ ರಕ್ಷಕ ಔಷಧಗಳಿಂದ ವಂಚಿತರಾಗಬೇಕಾಗಿದೆ.

ದೇಶದ ಹಲವು ಉದ್ಯಮ ವಲಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣದ ಬಗ್ಗೆ ಮಿತಿ ಹೇರಿರುವ ಕೇಂದ್ರ ಸರಕಾರ ಔಷಧ ರಂಗದಲ್ಲಿ ಶೇ.100 ರಷ್ಟು ಹೂಡಿಕೆಗೆ ಅವಕಾಶ ಕಲ್ಪಿಸಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಅಗ್ಗದ ದರದಲ್ಲಿ ಔಷಧ ತಯಾರು ಮಾಡುವ ಎಲ್ಲ ಕಂಪನಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. 2006 ರಿಂದ 2010 ರವರೆಗೆ ದೇಶದ ಬಹುತೇಕ ಕಂಪನಿಗಳು ವಿದೇಶಿ ಕಂಪನಿಗಳ ಪಾಲಾಗಿವೆ.

ದೇಶದ ಪ್ರಸಿದ್ಧ ಕಂಪನಿಗಳಾದ ಮ್ಯಾಟ್ರಿಕ್ ಲ್ಯಾಬ್ ಮೈಲಾನ್ ಕಂಪನಿಗೆ, ಡಾಬರ್ ಫಾರ್ಮ ಪ್ರೆಸ್ನಿಯಸ್ ಕಬಿ ಕಂಪನಿಗೆ, ರ್‍ಯಾನ್‌ಬಾಕ್ಸಿ ಲ್ಯಾಬ್ ಡೈಚಿ ಸ್ಯಾಂಕಿಯೊ ಕಂಪನಿಗೆ, ಶಾಂತಾ ಬಯೋಟೆಕ್ ಸ್ಯಾನೊಪಿ ಅವಂತಿಸ್ ಕಂಪನಿಗೆ, ಆರ್ಚಿಡ್ ಕೆಮಿಕಲ್ಸ್ ಹಾರ್ಸ್‌ಸಿರ ಕಂಪನಿಗೆ, ಪಿರಮಾಲ್ ಹೆಲ್ತ್‌ಕೇರ್ ಸಂಸ್ಥೆ ಅಬೋಟ್ ಕಂಪನಿಗೆ ಮಾರಾಟವಾಗಿವೆ. ಇದರ ಪರಿಣಾಮ ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಔಷಧಿಗಳ ದರ ಶೇ.25 ರಿಂದ ಶೆ.40ರವರೆಗೆ ದುಭಾರಿಯಾಗಿದೆ. ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಂತೆ ಜನಸಾಮಾನ್ಯರಿಗೆ ಔಷಧಗಳ ಬೆಲೆ ಏರಿಕೆ ತಕ್ಷಣ ಗೋಚರಿಸುವುದಿಲ್ಲ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳು ಬಡವರ ಸುಲಿಗೆಗೆ ಸದ್ದಾಗದಂತೆ ಮುಂದಾಗಿವೆ.

ಜಾಗತೀಕರಣದ ಮುದ್ದಿನ ಕೂಸುಗಳಾದ ಈ ಕಂಪನಿಗಳಿಗೆ ಯಾವಾಗಲೂ ಲಾಭವೇ ಮುಖ್ಯ ಗುರಿ. ಜಾಗತೀಕರಣದ ಮೂಲ ಮಂತ್ರವೇ ಲಾಭಕೋರತನವಾಗಿದೆ. ಬಡವರು ನಿರ್ನಾಮವಾದರೆ ಬಡತನ ನಿವಾರಣೆಯಾಗುತ್ತದೆ ಎಂಬುದು ಇದರ ನಂಬಿಕೆ. ಒಂದರ್ಥದಲ್ಲಿ ಇದು ನಿಜವೂ ಹೌದು. ಬಡವರೇ ಇಲ್ಲವಾದ ಮೇಲೆ ಬಡತನದ ಪ್ರಶ್ನೆ ಎಲ್ಲಿಯದು?

ಇನ್ನೊಂದು ಆಘಾತಕಾರಿ ಸಂಗತಿಯೆಂದರೆ ಬಡರಾಷ್ಟ್ರಗಳ ಏಡ್ಸ್ ರೋಗಿಗಳಿಗೆ ಅಗ್ಗದ ಔಷಧ ತಯಾರು ಮಾಡುತ್ತಿರುವ ಭಾರತ ಸರಕಾರದ ವಿರುದ್ಧ ಏಡ್ಸ್ ಔಷಧಿಗೆ ಪೇಟೆಂಟ್ ಹೊಂದಿರುವ ಸ್ವಿಟ್ಜರ್‌ಲೆಂಡ್ ಮೂಲದ ನೋವರ್ಟಿಸ್ ಎಂಬ ಸಂಸ್ಥೆ ಮೊಕದ್ದಮೆ ದಾಖಲಿಸಿದೆ. 2006 ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾದಾಗ ನ್ಯಾಯಾಲಯ ಈ ಕಂಪನಿಯ ಅರ್ಜಿಯನ್ನು ವಜಾ ಮಾಡಿತ್ತು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಇದೇ 6-9-2001 ರ ಮಂಗಳವಾರದಿಂದ ವಿಚಾರಣೆ ಪ್ರಾರಂಭವಾಗಿದೆ.

Symptoms of acute HIV infection
ಒಂದು ವೇಳೆ ಸುಪ್ರೀಂ ಕೋರ್ಟ್ ಕಂಪನಿಯ ಪೇಟೆಂಟ್ ಹಕ್ಕನ್ನು ಎತ್ತಿ ಹಿಡಿದರೆ ಜಗತ್ತಿನಾದ್ಯಂತ ಶೇ.80 ರಷ್ಟು ಏಡ್ಸ್ ರೋಗಿಗಳು, ಶೆ.92 ರಷ್ಟು ಹೆಚ್.ಐ.ವಿ. ಪೀಡಿತ ಮಕ್ಕಳ ಬದುಕು ಅಂಧಕಾರದಲ್ಲಿ ಮುಳುಗಿಹೋಗುತ್ತದೆ. ಇಂತಹ ಅಮಾಯಕರ, ಅಸಹಾಯಕರ ಸಾವಿಗೆ ನಾವೆಲ್ಲಾ ಮೂಕ ಸಾಕ್ಷಿಯಾಗ ಬೇಕಾಗುತ್ತದೆ. ಏಕೆಂದರೆ ಈ ನತದೃಷ್ಟರ ಪಾಲಿಗೆ ದುಬಾರಿ ಔಷಧಕ್ಕಿಂತ ಸಾವೇ ಲೇಸು.

ಡಾ. ಎನ್.  ಜಗದೀಶ ಕೊಪ್ಪ

(ಚಿತ್ರಕೃಪೆ: ವಿಕಿಪೀಡಿಯ)