Category Archives: ಜಗದೀಶ್ ಕೊಪ್ಪ

ಜೀವನದಿಗಳ ಸಾವಿನ ಕಥನ – 1

ಡಾ.ಎನ್. ಜಗದೀಶ್ ಕೊಪ್ಪ

ಇದು ಜೀವನದಿಗಳ ಸಾವಿನ ಕಥನವಷ್ಟೇ ಅಲ್ಲ, ಮನುಕುಲದ ಅವಸಾನದ ಕಥನ ಕೂಡ ಹೌದು. ಒಬ್ಬನ ಹಿತಕ್ಕಾಗಿ ಹಲವರ ಬದುಕನ್ನು ಬಲಿಕೊಡುವ ವಿಕೃತ ದುರಂತಗಾಥೆ. ಯಾವ ಜಾಗದಲ್ಲಿ ಮನುಕುಲದ ನಾಗರೀಕತೆ ಜನ್ಮತಾಳಿತೋ, ಅದೇ ಜಾಗದಲ್ಲಿ ಸಂಸ್ಕೃತಿ ಅವಸಾನಗೊಳ್ಳುತ್ತಿರುವ ನೋವಿನ ಕಥೆ.

ಹರಿಯುವ ನೀರಿಗೆಲ್ಲಾ ಗಂಗೆಯೆಂದು ಹೆಸರಿಟ್ಟು ಪೂಜಿಸಿದ ಈ ನೆಲದಲ್ಲಿ ಮಾತೃ ಸ್ವರೂಪದ ನದಿ ಎಂಬಾಕೆಯ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಹಂತ-ಹಂತವಾಗಿ ನಡೆಯುತ್ತಿರುವ ಅತ್ಯಾಚಾರ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಪೃಥ್ವಿಯ ಎಲ್ಲೆಡೆ ಇತಿಹಾಸದುದ್ದಕ್ಕೂ ನಿರಂತರವಾಗಿ ಅಡೆ ತಡೆಯಿಲ್ಲದೆ ಸಾಗಿದ ಅವಿರತ ಅನಾಚಾರ.

ಮನುಷ್ಯನ ಜ್ಞಾನ ವಿಕಾಸವಾದಂತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಪ್ರಯೋಗಗಳು ಯಶಸ್ವಿಯಾದಂತೆ, ಆಧುನಿಕ ಜಗತ್ತಿನ ಮಾನವನಲ್ಲಿ ಪ್ರಕೃತಿಯನ್ನು ಮಣಿಸಬೇಕೆಂಬ ಅಹಂಕಾರ ತಲೆ ಎತ್ತಿದೆ. ಇದರ ಫಲವಾಗಿ ನಿಸರ್ಗದ ಕೊಡುಗೆಗಳ ಜೊತೆಜೊತೆಯಲ್ಲಿ ಪ್ರಕೃತಿ ವಿಕೋಪಗಳನ್ನೂ ಅವನು ಅನುಭವಿಸಬೇಕಾಗಿದೆ.

ನಾವು ಈ ಭೂಮಿಯ ಒಡೆಯರಲ್ಲ, ಕೇವಲ ವಾರಸುದಾರರು ಮಾತ್ರ. ಅದನ್ನು ರಕ್ಷಿಸಿ ಮುಂದಿನ ತಲೆಮಾರಿಗೂ ಉಳಿಸಬೇಕಾದದ್ದು ನಮ್ಮ ಹೊಣೆ ಎಂಬ ಪ್ರಜ್ಞೆ ವಿಸ್ಮೃತಿಗೆ ಜಾರಿರುವುದೇ ಪರಿಸರದ ದುರಂತಕ್ಕೆ ಮೂಲ ಕಾರಣವಾಗಿದೆ.

ನಾಗರೀಕ ಸಮಾಜದಲ್ಲಿ ಹೆಚ್ಚಿದ ಅನುಭೋಗ ಪ್ರವೃತ್ತಿ ಪರಿಸರದ ಮೇಲಿನ ಪೈಶಾಚಿಕ ದಾಳಿಗೆ ಮೂಲವಾಗಿದ್ದು,  ಕಳೆದ 20 ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆಗಿದ್ದ ನಷ್ಟದಷ್ಟು ಪ್ರಮಾಣ ಈಗ ಕೇವಲ 50 ವರ್ಷಗಳಲ್ಲಿ ಜರುಗಿದೆ.

ಮನುಷ್ಯ ಕಾಲಿಟ್ಟ ಜಾಗ ಅದು ಅರಣ್ಯವಿರಲಿ, ಪರ್ವತವಿರಲಿ, ನದಿಯಿರಲಿ ಸುರಕ್ಷಿತವಾಗಿಲ್ಲ. ಮನುಕುಲದ ವಾರಸುದಾರರೆಂದು ಹೇಳಿಕೊಳ್ಳುವ ನಾವು ಕಾಲಿಟ್ಟ ಸ್ಥಳಗಳಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯಲಾರದು ಎಂಬ ವಾಸ್ತವಿಕ ಕಟು ಸತ್ಯವನ್ನು ನೆನಪಿಗೆ ತಂದುಕೊಳ್ಳಲಾಗದಷ್ಟು ಅಹಂಕಾರದ ಅಟ್ಟಕ್ಕೆ ದೂಡಲ್ಪಟ್ಟಿದ್ದೇವೆ.

ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು, ಬದುಕುವ ಪರಿಸರ ಎಲ್ಲವನ್ನೂ ವಿಷಮಯಗೊಳಿಸಿ, ಭೂಮಿಯನ್ನು ಸುಡುಗಾಡನ್ನಾಗಿ ಮಾಡಿ ನಾಗರೀಕತೆಯ ಸೋಗಿನಲ್ಲಿ ಅನಾಗರೀಕತೆಯ ಬದುಕು ನಡೆಸುತ್ತಿದ್ದೇವೆ.

ಈ ಭೂಮಿಯ ಮೇಲೆ ಪ್ರಾಣಿಗಳ ಜೊತೆ ಜೊತೆಯಲ್ಲಿ ಮನುಷ್ಯ ಜೀವಿ ಅಸ್ತಿತ್ವಕ್ಕೆ ಬಂದಿದ್ದು 20 ಸಾವಿರ ವರ್ಷಗಳ ಹಿಂದೆ. ಪ್ರಾರಂಭಿಕ ದಿನಗಳಲ್ಲಿ ಪ್ರಾಣಿಯಂತೆ ಬದುಕಿದ್ದ ಆತನ ಮೆದುಳೊಳಗೆ ವಿವೇಚನೆ ಮೂಡಿ, ಪ್ರಕೃತಿಯ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸುವ ಬುದ್ಧಿ ಮೊಳೆತದ್ದು ಕೇವಲ 10 ಸಾವಿರವರ್ಷಗಳ ಹಿಂದೆ. ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿ, ಗುಡುಗು-ಸಿಡಿಲು, ಮಳೆ-ಗಾಳಿಗೆ ಅಂಜಿ ಗುಹೆಗಳಲ್ಲಿ ವಾಸವಾಗಿದ್ದ ಅವನ ಕೈಗೆ ಕಬ್ಬಿಣದ ಲೋಹ ಯಾವಾಗ ಆಯುಧವಾಗಿ ದೊರೆಯಿತೊ, ಅಂದೇ ನಾಗರೀಕತೆಯ ಅಧ್ಯಾಯ  ಕೂಡ ಪ್ರಾರಂಭವಾಯಿತು.

ಶಿಲಾಯುಗದಿಂದ ಲೋಹಯುಗಕ್ಕೆ ಸ್ಥಿತ್ಯಂತರಗೊಂಡ ಮಾನವನ ಬದುಕಿನಲ್ಲಿ ನಾಗರೀಕತೆಯ ಬೀಜ ಮೊಳಕೆಯೊಡೆದದ್ದೇ ತಡ, ತನ್ನ ಜೊತೆಯಲ್ಲಿ ಬದುಕಿದ್ದ ಸಾಧು ಪ್ರಾಣಿಗಳನ್ನು ಪಳಗಿಸಿ, ಗೆಡ್ಡೆ-ಗೆಣಸುಗಳನ್ನು ಆರಿಸುವ ಬದುಕಿಗೆ ವಿದಾಯ ಹೇಳಿ, ತಾನಿದ್ದ ಜಾಗದಲ್ಲೇ ಉತ್ತಿ, ಬಿತ್ತಿ ಬೆಳೆಯಬಾರದೇಕೆ ಎಂಬ ಪ್ರಶ್ನೆಯ ಮಿಂಚು ಅವನ ತಲೆಯೊಳಗೆ ಸುಳಿದಾಗ ಪ್ರಕೃತಿಯ ಮೇಲಿನ ದಾಳಿಯ ಮೊದಲ ಅಧ್ಯಾಯಕ್ಕೆ ನಾಂದಿಯಾಯಿತು.

ಜಗತ್ತಿನ ಯಾವುದೇ ನಾಗರೀಕತೆಯ ಹುಟ್ಟು ಮತ್ತು ಅವಸಾನಗಳ ಇತಿಹಾಸವನ್ನು ಅವಲೋಕಿಸಿದಾಗ ಎಲ್ಲವೂ ನದಿ ತೀರದಲ್ಲಿಯೇ ಜನಿಸಿ, ಅಲ್ಲೇ ಅವಸಾನಗೊಂಡಿವೆ. ಹಾಗಾಗಿ ನದಿಗಳೆಂದರೆ ಕೇವಲ ನೀರಿನ ಮೂಲವಲ್ಲ, ಅವು ಮನುಕುಲದ ಹುಟ್ಟು-ಸಾವಿನ ತೊಟ್ಟಿಲುಗಳು ಕೂಡ ಹೌದು.

ಐದು ಸಾವಿರ ವರ್ಷಗಳ ಹಿಂದೆ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ತೀರದಲ್ಲಿ ಹುಟ್ಟಿದ ಮೆಸಪೊಟೋಮಿಯಾ ನಾಗರೀಕತೆ, ಈಜಿಪ್ಟ್‌ನ ನೈಲ್ ನದಿ ಬಳಿ ಜನಿಸಿದ ಈಜಿಪ್ಟ್ ನಾಗರೀಕತೆ, ದಕ್ಷಿಣ ಅಮೆರಿಕದ ಇಂಕಾ ಮತ್ತು ಮಾಯಾ ನಾಗರೀಕತೆ, ಗ್ರೀಕ್‌ನ ರೋಮ್ ನಾಗರೀಕತೆ, ಭಾರತದ ಸಿಂಧೂ ನದಿ ತೀರದ ಹರಪ್ಪ, ಮೆಹಂಜೋದಾರೊ ನಾಗರೀಕತೆ ಇವುಗಳ ಮೂಲ ಬೇರುಗಳು ಜಗತ್ತಿನ ಹಲವಾರು ನದಿಗಳಲ್ಲಿ ಅಡಕವಾಗಿದೆ. ಮನುಷ್ಯ ಸಂಸ್ಕೃತಿಯ ಜನನಕ್ಕೆ ಕಾರಣವಾದ ಇದೇ ಜೀವ ನದಿಗಳು ಅವನ ಸಂಸ್ಕೃತಿ ಮತ್ತು ನಾಗರೀಕತೆಯ ಅವಸಾನಕ್ಕೂ ಕಾರಣವಾಗಿವೆ. ಈ ಸಂದರ್ಭದಲ್ಲಿ ಲೆವಿಸ್ ಮಮ್‌ಪೆಡ್ ಎಂಬ ಲೇಖಕ ತನ್ನ “ಟೆಕ್ನಿಕ್ ಅಂಡ್ ಸಿವಿಲೈಜೇಷನ್” ಕೃತಿಯಲ್ಲಿ “ಕಬ್ಬಿಣ ಮತ್ತು ಕಲ್ಲಿದ್ದಲಿನ ಆವಿಷ್ಕಾರ ನಾಗರೀಕತೆ ವಿಕಾಸ ಮತ್ತು ವಿನಾಶಕ್ಕೆ ಕಾರಣಮಯ” ಎನ್ನುವ ಮಾತು ಇಲ್ಲಿ ಪ್ರಸ್ತುತ.

ಹುಟ್ಟು, ವಿನಾಶ, ಮರುಹುಟ್ಟುಗಳ ಹೋರಾಟದಲ್ಲಿ ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲಿನ ಅವಲಂಬನೆ ಮತ್ತು ಅದರ ದುರ್ಬಳಕೆ ಕೂಡ ಹೆಚ್ಚಾಯಿತು. ಪ್ರಕೃತಿಯ ಒಂದು ಭಾಗವಾಗಿಯೇ ಬದುಕಿದ ನಮ್ಮ ಮೂಲನಿವಾಸಿಗಳು, ಪರಿಸರಕ್ಕೆ ಧಕ್ಕೆಯಾಗದ ರೀತಿ ಬದುಕಿದ್ದರು. ಇಂದಿಗೂ ಕೂಡ ಅರಣ್ಯವಾಸಿಗಳಲ್ಲಿ ಇಂತಹ ಸಂಸ್ಕೃತಿಯನ್ನು ನಾವು ನೋಡಬಹುದು. ಅವರು ಒಂದು ಮರ ಕಡಿಯುವ ಮುನ್ನ ಅದಕ್ಕೆ ಪ್ರತಿಯಾಗಿ ಎರಡು ಸಸಿ ನೆಡುವ ಸಂಸ್ಕೃತಿ ಹಾಗೂ ಬೇಸಾಯ ಮಾಡಿದ ಭೂಮಿಯನ್ನು ಹಲವಾರು ವರ್ಷ ತೊರೆದು ಬೇರೆಡೆ ಬೇಸಾಯ ಮಾಡುವ ಕ್ರಮವನ್ನು ನಾವು ಆದಿವಾಸಿಗಳ ಬದುಕಿನಲ್ಲಿ ಇಂದೂ ಸಹ ಕಾಣಬಹುದಾಗಿದೆ. ಪ್ರಕೃತಿಯ ಕುರಿತಾದ ಈ ಜ್ಞಾನ ಪರಂಪರೆಯನ್ನು ಅವರಿಗೆ ಯಾರೂ ಧಾರೆ ಎರೆಯಲಿಲ್ಲ. ಪರಿಸರದ ಮಕ್ಕಳಂತೆ ಬದುಕಿದ ಅವರ ಎದೆಯೊಳಗೆ ಈ ಜ್ಞಾನ ತಾನಾಗಿಯೇ ಮೊಳೆತದ್ದು. ಈ ನೆಲದ ನಿಜ ಮಕ್ಕಳನ್ನು ನಾಗರೀಕ ಸೋಗಿನ ನಾವು “ಅನಾಗರೀಕರೆಂದು” ಕರೆಯುವ ಪ್ರವೃತ್ತಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಗ್ರೀಕ್ ದಾರ್ಶನಿಕ ಸಾಕ್ರೆಟೀಸ್ “ಪ್ರಕೃತಿ ಜೀವ ಸಂಕುಲಗಳನ್ನು ಪೋಷಿಸಿಕೊಂಡು ಬಂದಿರುವುದು ಮಾನವನ ಒಳಿತಿಗಾಗಿ ಇದರ ದುರುಪಯೋಗ ಸಲ್ಲದು” ಎಂದಿದ್ದ.

ಎಲ್ಲವೂ ತನ್ನ ಕಾಲಡಿಯಲ್ಲಿರಬೇಕು ಎಂಬ ಭ್ರಮೆಯನ್ನು ಬೆನ್ನತ್ತಿರುವ ಮನುಕುಲ ತಾನು ಸವೆಸಿದ ಹಾದಿಯನ್ನು, ನಡೆದ ಹೆಜ್ಜೆ ಗುರುತುಗಳನ್ನು ಹಿಂತಿರುಗಿ ನೋಡಲಾರದ ಸೊಕ್ಕನ್ನು ಬೆಳೆಸಿಕೊಂಡಿದೆ.

ಲೇಖಕರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ಸ್ ತಮ್ಮ “ಹ್ಯೂಮನಿಟಿ ಅಂಡ್ ನೇಚರ್” ಕೃತಿಯಲ್ಲಿ 15ನೇ ಶತಮಾನದಲ್ಲಿ ಉದ್ಭವವಾದ ಊಳಿಗಮಾನ್ಯ ಪದ್ಧತಿ ಮತ್ತು 17ನೇ ಶತಮಾನದಲ್ಲಿ ಜನ್ಮತಾಳಿದ ಬಂಡವಾಳಶಾಹಿ ಯುಗದಿಂದ ಪರಿಸರದ ದುರ್ಬಳಕೆಗೆ ದಾರಿಯಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರಾನ್ಸಿಸ್ ಬೇಕನ್ ಎಂಬಾತ “ಪ್ರಕೃತಿಯನ್ನು ಮಣಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವುದು ಮಾನವನ ಕರ್ತವ್ಯ. ಇದರಲ್ಲಿ ಅವನ ಭವಿಷ್ಯ ಅಡಗಿದೆ. ಮಾನವನ ಅಭ್ಯದಯಕ್ಕಾಗಿ ಪ್ರಕೃತಿಯನ್ನು ಪಳಗಿಸುವುದು ತಪ್ಪಲ್ಲ” ಎಂದು ವಾದಿಸಿದ್ದಾನೆ.

ಇಂತಹ ಅಪಕ್ವ ಪಾಶ್ಚಿಮಾತ್ಯ ಚಿಂತನೆಯ ಧಾರೆಗಳನ್ನು ನಿರಾಕರಿಸಿದ್ದ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ “ಯೂರೋಪಿಯನ್ನರು ಯಾವ ನೆಲವನ್ನು ಮೆಟ್ಟಲಿ, ಸಾವು ಆ ನೆಲವನ್ನು, ಆ ನೆಲದ ಪರಿಸರವನ್ನು ಮತ್ತು ಅಲ್ಲಿನ ಮೂಲನಿವಾಸಿಗಳನ್ನು ಬೆನ್ನಟ್ಟುತ್ತದೆ” ಎಂದು ಮಾರ್ಮಿಕವಾಗಿ ನುಡಿದಿದ್ದಾನೆ.

ಮನುಕುಲದ ಇಂತಹ ನಿರಂತರ ದಾಳಿಯ ಚರಿತ್ರೆಯನ್ನು ಅವಲೋಕಿಸಿರುವ ಇತಿಹಾಸ ತಜ್ಞ ಎಲಿಂಗ್‌ಟನ್ ಮನುಕುಲದ ಐದು ಶತಮಾನಗಳನ್ನು “ಸಾಮ್ರಾಜ್ಯಶಾಹಿ, ವಸಹಾತುಶಾಹಿ, ಕೈಗಾರಿಕಾಶಾಹಿ, ಬಂಡವಾಳಶಾಹಿ, ಜನಾಂಗಶಾಹಿ ಯುಗ” ಎಂದು ವಿಂಗಡಿಸಿದ್ದು, ಈಗ ಮನುಕುಲ ಹಾಗೂ ಪರಿಸರದ ಉಳಿವಿಗಾಗಿ ಪರಿಸರಶಾಹಿ ಯುಗ ರೂಪುಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾನೆ.

ಪಾಶ್ಚಿಮಾತ್ಯ ಪ್ರೇರಿತ ಅಭಿವೃದ್ಧಿ ಹಾಗೂ ಆರ್ಥಿಕ ಸಿದ್ಧಾಂತಗಳು ಇದೀಗ ಮನುಕುಲವನ್ನು ಭೋಗದ ಹುಚ್ಚುಕುದುರಯನ್ನೇರುವಂತೆ ಮಾಡಿವೆ. ಎಲ್ಲವನ್ನೂ ವ್ಯಾಪಾರದ ಸರಕುಗಳಂತೆ ನೋಡುವ ನಮ್ಮ ಆರ್ಥಿಕ ತಪ್ಪು ಪರಿಕಲ್ಪನೆಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ಪ್ರಕೃತಿ ಮೇಲಿನ ಪೈಶಾಚಿಕ ದಾಳಿ ವರ್ತಮಾನದ ಜಗತ್ತನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ.

(ಮುಂದುವರಿಯುವುದು)

ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಸ್ನೇಹಿತರೆ,

ಹೇಳಬೇಕಾದ ಎಲ್ಲವನ್ನೂ ಈ ಕೆಳಗಿರುವ ಡಾ. ಜಗದೀಶ್ ಕೊಪ್ಪರವರ ಮುನ್ನುಡಿಯೇ ಹೇಳುತ್ತಿದೆ. ಈ ಲೇಖನ ಸರಣಿ ಇನ್ನು ಮುಂದೆ ಪ್ರತಿ ಭಾನುವಾರ “ವರ್ತಮಾನ”ದಲ್ಲಿ ಪ್ರಕಟವಾಗಲಿದೆ. ನಾಳೆ ಮೊದಲ ಕಂತು. ಜಗದೀಶ್‌ರವರು “ವರ್ತಮಾನ”ದ ಪ್ರಯತ್ನಕ್ಕೆ ಕೊಡುತ್ತಿರುವ ಬೆಂಬಲವನ್ನು ಶ್ಲಾಘಿಸುತ್ತ, ಈ ಲೇಖನ ಸರಣಿ ನಮ್ಮೆಲ್ಲರ ಅರಿವನ್ನು ವಿಸ್ತರಿಸಲಿ ಎಂದು ಆಶಿಸುತ್ತೇನೆ.

ರವಿ ಕೃಷ್ಣಾ ರೆಡ್ಡಿ


ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಹರಿಯುವ ನೀರಿಗೆ ಗಂಗೆಯೆಂದು ಕೈಯೆತ್ತಿ ಮುಗಿದವರ ನೆಲದ ಸಂಸ್ಕೃತಿಯಿಂದ ಬಂದ ನನ್ನಂತಹವನಿಗೆ ಇಂದಿನ ಅಭಿವೃದ್ಧಿಯ ಅಂಧಯುಗದಲ್ಲಿ ಇಲ್ಲಿನ ಗಾಳಿ, ನೀರು ಮಾರಾಟದ ಸರಕಾಗಿ ಬಿಕರಿಯಾಗುತ್ತಿರುವುದು ನೋವಿನ ಸಂಗತಿ.

ಜಗತ್ತಿನ ಜೀವನದಿಗಳನ್ನು ಅಣೆಕಟ್ಟುಗಳ ಹೆಸರಿನಲ್ಲಿ ಕೊಂದು ಹಾಕುತ್ತಿರುವ ಕಥನವೇ ಈ ” ಜೀವನದಿಗಳ ಸಾವಿನ ಕಥನ”. ಎಂಟು ವರ್ಷಗಳ ಹಿಂದೆ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಮಾಡುತಿದ್ದ ಸಮಯದಲ್ಲಿ ಸಿಕ್ಕ ಮಾಹಿತಿಯನ್ನು ನಿಮ್ಮೆದುರು ಅನಾವರಣಗೊಳಿಸುತಿದ್ದೇನೆ.

ಈ ಸಂದರ್ಭದಲ್ಲಿ ಪೆಟ್ರಿಕ್ ಮೆಕ್ಕಲಿಯವರ “ಸೈಲೆನ್ಸ್‌ಡ್ ರಿವರ್‍ಸ್” (ಸ್ಥಬ್ದವಾದ ನದಿಗಳು) ಹಾಗೂ ಮೌಡೆ ಬಾರ್‍ಲೋ ಅವರ “ಬ್ಲೂ ಕವನೆಂಟ್” (ನೀಲಿ ಒಂಪ್ಪಂಧ) ಮತ್ತು “ಬ್ಲೂ ಗೋಲ್ಡ್” (ನೀಲಿ ಚಿನ್ನ) ಕೃತಿಗಳಿಂದ ಪ್ರೇರಣೆ ಪಡೆದು ಈ ಲೇಖನ ಮಾಲೆ ರಚಿಸಿದ್ದೇನೆ.

ಈ ಲೇಖನ ಮಾಲೆಯ ಬಗ್ಗೆ ನಿಮ್ಮ ತಕರಾರುಗಳು ಏನೇ ಇರಲಿ, ನದಿಗಳ ಬಗ್ಗೆ, ನೀರಿನ ಬಗ್ಗೆ ನಿಮ್ಮ ಆಲೋಚನಾ ಕ್ರಮ ಬದಲಾದರೆ, ನನ್ನ ಶ್ರಮ ಸಾರ್ಥಕ.

ಡಾ.ಎನ್.ಜಗದೀಶ ಕೊಪ್ಪ
ಧಾರವಾಡ

ವರ್ತಮಾನದ ಕವಿ ಫೈಜ್ ಅಹ್ಮದ್ ಫೈಜ್

ಭಾರತ ಉಪಖಂಡದ ಆಧುನಿಕ ಉರ್ದು  ಸಾಹಿತ್ಯದ ಪಿತಾಮಹ ಎನಿಸಿದ ಕವಿ, ಲೇಖಕ, ಪತ್ರಕರ್ತ ಫೈಯಾಜ್ ಅಹಮದ್ರವರ ಶತಮಾನತ್ಸೋವ ವರ್ಷ ಇದು. ಆದರೆ, ತಾನೇ ಹುಟ್ಟು ಹಾಕಿದ ಭಯೋತ್ಪಾದನೆಯ ಸುಳಿಯೊಳಗೆ ಸಿಲುಕಿ ನಲುಗಿರುವ ಪಾಕಿಸ್ತಾನಕ್ಕಾಗಲಿ ಅಥವಾ ಹಲವು ಹಗರಣಗಳ ಕೆಸರಿನೊಳಗೆ ಮುಳುಗಿ ಏಳುತ್ತಿರುವ ಭಾರತಕ್ಕಾಗಲಿ ಈ ಕವಿಯ ಸ್ಮರಣೆ ಮಾಡುವಷ್ಟು ವ್ಯವಧಾನವಿಲ್ಲ. ಆದರೂ ಫೈಯಾಜ್ ಉರ್ದು ಸಾಹಿತ್ಯ ಪ್ರಿಯರ ಎದೆಯಲ್ಲಿ ಹಸಿರಾಗಿದ್ದಾರೆ.

ವಿಭಜನೆ ಪೂರ್ವ ಭಾರತದ ಉರ್ದು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯ್ಯಾಡಿಸಿ, ಉರ್ದು ಸಾಹಿತ್ಯಕ್ಕೆ ಆಧುನಿಕತೆಯ ಸ್ಪರ್ಶ ತಂದುಕೊಟ್ಟ ಫೈಜ್ ಅಹಮದ್ ನಿಜ ಜೀವನದಲ್ಲಿ ಹುಟ್ಟು ಹೋರಾಟಗಾರ. ಎಡಪಂಥೀಯ ಚಿಂತನೆಗಳ ಮೂಲಕ ಗಝಲ್ ಪ್ರಕಾರದಲ್ಲಿ ನಿಂತ ನೀರಾಗಿದ್ದ ಕಾವ್ಯಕ್ಕೆ ಹೊಸ ಮಜಲನ್ನು ನೀಡಿದವರು. ಹೆಣ್ಣಿನ ಸೌಂದರ್ಯ, ಅವಳ ಕಣ್ಣು, ತುಟಿ, ಸೊಂಟ ಮುಂಗುರುಳು ಹಾಗೂ ಬೆಳದಿಂಗಳು ಮತ್ತು ಮಧುರಸ ಇವುಗಳ ಸುತ್ತ ಗಿರಕಿ ಹೊಡೆಯುತಿದ್ದ ಉರ್ದು ಕಾವ್ಯಕ್ಕೆ ನಾವು ಯೋಚಿಸಬಹುದಾದ ವರ್ತಮಾನದ ಬೇಗುದಿಗಳಿವೆ ಎಂದು ತೋರಿಸಿಕೊಟ್ಟ ಮಹಾನ್ ಕವಿ ಫೈಜ್.

1930 ರ ದಶಕದಲ್ಲಿ ಪ್ರಗತಿಪರ ಲೇಖಕರ ಸಂಘವನ್ನು ಹುಟ್ಟು ಹಾಕಿದ ಉರ್ದು ಸಾಹಿತ್ಯದ ಮಹನೀಯರಲ್ಲಿ ಇವರು ಒಬ್ಬರು. 1911ರಲ್ಲಿ ಪಾಕಿಸ್ತಾನದ ಸಿಯಾಲ್ಕೋಟ್ ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ಉತ್ತಮ ಪಂಡಿತರಿಂದ ಸಾಂಪ್ರದಾಯಿಕ ಉರ್ದು ಶಿಕ್ಷಣ ಪಡೆದರು. ಇವರ ತಂದೆ ಅಂದಿನ ಆಪ್ಘಾನಿಸ್ತಾನದ ದೊರೆಗೆ ಮುಖ್ಯ ಕಾರ್ಯದರ್ಶಿಯಾಗಿದ್ದರು. ಮುಂದೆ ಅದೇ ನಗರದ ಸ್ಕಾಟಿಶ್ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಣ ಪಡೆದು, ಮುರ್ರೆ ಕಾಲೇಜಿನಲ್ಲಿ ಪದವಿ ಹಾಗು ಲಾಹೋರ್ನ  ಸರಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು, ಕೆಲವು ಕಾಲ ಅಮೃತಸರದ ಕಾಲೇಜಿನಲ್ಲಿ  ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ 1941ರಲ್ಲಿ ಲಾಹೋರ್ಗೆ  ತೆರಳಿ ಸ್ಥಳೀಯ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಲಾಹೋರ್ನಲ್ಲಿ ಇದ್ದಾಗಲೇ ಇವರ ಪ್ರಥಮ ಕವನ ಸಂಕಲನ ನಕ್ಷ್ಪರ್ಯಾದಿ ಪ್ರಕಟವಾಯಿತು. ಉರ್ದು ಸಾಹಿತ್ಯದಲ್ಲಿ ಸಾಂಪ್ರದಾಯಕವಾಗಿ ಕಾವ್ಯದ ವಸ್ತು ಪ್ರೀತಿ, ಪ್ರೇಮ ಇದ್ದ ಸಂಧರ್ಭದಲ್ಲಿ ಕಾವ್ಯಕ್ಕೆ ಹೊಸ ಪ್ರತಿಮೆ, ರೂಪಕ, ವಸ್ತುಗಳನ್ನು ನೀಡಿದ ಕೀರ್ತಿ ಇವರದು. ಇವರ ಕಾವ್ಯದಲ್ಲಿ ಹೊಸದಾಗಿ ಮೂಡಿಬಂದ ಪ್ರತಿಭಟನೆ, ನೊಂದವರ ನೋವು ಇವರಿಗೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತು. ಉರ್ದು ಸಾಹಿತ್ಯದಲ್ಲಿ ಆವರೆಗೆ ಇದ್ದ ಪ್ರಾಸ, ಪುರಾಣ ವಸ್ತುಗಳನ್ನು ತ್ಯಜಿಸಿ ಕ್ರಾಂತಿಯನ್ನು ಪರಿಚಯಿಸಿದ ಫಯಾಜ್ ಪ್ರಗತಿಪರ ಕಾವ್ಯದಲ್ಲಿ ಕಟು ವಾಸ್ತವಗಳು ಇರಬೇಕೆ ಹೊರತು ಭ್ರಮೆ, ಕನಸು, ಕನವರಿಕೆಗಳಲ್ಲ ಎಂದು ಪ್ರತಿಪಾದಿಸಿದವರು.

ಆಧುನಿಕ ಉರ್ದು ಸಾಹಿತ್ಯ ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನು ಇಟ್ಟುಕೊಂಡಿದ್ದ ಪಯಾಜ್ ಅಹಮದ್ ತಮ್ಮ ಜೀವಿತಾವಧಿಯಲ್ಲಿ 18 ಕವನ ಸಂಕಲನ, ಮತ್ತು 12ಕ್ಕೂ ಮಿಗಿಲಾದ ಗದ್ಯ ಕೃತಿಗಳನ್ನು ರಚಿಸಿದರು. ಇವರ ಗದ್ಯಕೃತಿಗಳೆಲ್ಲವೂ ಉರ್ದು ಸಾಹಿತ್ಯ ಕುರಿತ ಚಿಂತನೆಗಳೇ ಆಗಿರುವುದು ವಿಶೇಷ. ಸಾಹಿತ್ಯದ ಪ್ರಶ್ನೆಗಳು ಸಾಹಿತ್ಯ ಮತ್ತು ಅಸ್ತಿತ್ವ ಕಾವ್ಯ ಮತ್ತು ಪ್ರಜ್ಞೆ ಲೇಖಕ ನೀನೆಲ್ಲಿ ನಿಂತಿದ್ದೀಯಾ? ಗಝಲ್ ಭವಿಷ್ಯ ಒಂದು ಚಿಂತನೆ ಕಾವ್ಯ ಮತ್ತು ಪ್ರಜಾಪ್ರಭುತ್ವ ಸಾಹಿತ್ಯ ಮತ್ತು ಸಂಸ್ಕೃತಿ ಸಾಹಿತ್ಯ ಮತ್ತು ಲೇಖಕ ಸೌಂದರ್ಯ ಮತ್ತು ಪರಿಕಲ್ಪನೆ ಮುಂತಾದ ಕೃತಿಗಳನ್ನು ಇಂಗ್ಲೀಷ್ ಮತ್ತು ಉರ್ದು ಭಾಷೆಗಳಲ್ಲಿ ರಚಿಸುವುದರ ಮೂಲಕ ಆಧುನಿಕ ಉರ್ದು ಸಾಹಿತ್ಯ ಲೋಕಕ್ಕೆ ಹೊಸ ಲೇಖಕರನ್ನು ಕವಿಗಳನ್ನು ನೀಡಿದ ಕೀರ್ತಿ ಇವರದು. ಹಾಗಾಗಿ ಇವರನ್ನ ಆಧುನಿಕ ಉರ್ದುಸಾಹಿತ್ಯದ ಪಿತಾಮಹ ಎಂದೇ ಇಂದಿಗೂ ಗೌರವಿಸಲಾಗುತ್ತಿದೆ.

ಸಾಹಿತ್ಯ ಚಟುವಟಿಕೆಯ ಜೊತೆಗೆ ಅಪ್ಪಟ ಸ್ವಾತಂತ್ರ್ಯ ಪ್ರೇಮಿಯಾಗಿದ್ದ ಫೈಜ್ರವರು ಬ್ರಿಟೀಷರಿಂದ ಅಖಂಡ ಭಾರತದ ಬಿಡುಗಡೆಗಾಗಿ ಹಂಬಲಿಸಿದವರು. ಈ ಕಾರಣಕ್ಕಾಗಿ  ತಮ್ಮ ಹುದ್ದೆಯನ್ನು ತ್ಯಜಿಸಿ ಎರಡನೇ ಮಹಾಯುದ್ಧದಲ್ಲಿ ಬ್ರಿಟೀಷ್ ಸೇನೆಯಲ್ಲಿ ಎರಡು ವರ್ಷಗಳ ಕಾಲ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸಿದರು.

1947ರಲ್ಲಿ ಅವರು ಹಂಬಲಿಸಿದ್ದ ಸ್ವಾತಂತ್ರ್ಯ ಭಾರತಕ್ಕೆ ಸಿಕ್ಕಿತು. ಆದರೆ ಅದು ಅವರು ಕನಸಿದ್ದ ಸ್ವಾತಂತ್ರ್ಯವಾಗಿರಲಿಲ್ಲ. ವಿಭಜನೆಯ ಹೆಸರಿನಲ್ಲಿ ಭಾರತ ಮತ್ತು ಪಾಕ್ ಎರಡು ರಾಷ್ಟ್ರಗಳಾಗಿ ಉದಯಿಸಿದ್ದು ಅವರಿಗೆ ಅಪಾರ ನೋವನ್ನುಂಟುಮಾಡಿತ್ತು. ಈ ಸಂದರ್ಭದಲ್ಲಿ ಅವರೇ ಬರೆದ

ನಾನು ಕನಸಿದ ಈ ಮುಸುಕಿನ ಮುಂಜಾವು ಇದಲ್ಲ
ನಾನು ಯಾವುದರ ನಿರೀಕ್ಷೆಯಲ್ಲಿದ್ದೆನೊ ಆ ನಿರೀಕ್ಷೆಯೂ ಇದಲ್ಲ

ಎಂಬ ಕಾವ್ಯ ಇಂದಿಗೂ ಪ್ರಸಿದ್ಧವಾಗಿದೆ.

ಆ ಕಾಲಘಟ್ಟದ ವಿಭಜನೆಯ ನೋವು ಎಲ್ಲ ಲೇಖಕರ ಎದೆಯ ಮೇಲೆ ಬರೆ ಎಳೆದ ಮಾಯದ ಗಾಯದಂತಿದೆ. ಫೈಜ್ರವರ ಕವಿತೆಗಳೂ ಸೇರಿದಂತೆ, ಗುಲ್ಜಾರ್ ಬರೆದ

ಆ ಕೋಮು ದಳ್ಳುರಿಯಲ್ಲಿ
ಅಳಿಸಿ ಹಾಕಿದ್ದು ಮನುಷ್ಯರನ್ನಲ್ಲ
ಕೇವಲ ಹೆಸರುಗಳನ್ನು ಮಾತ್ರ
ಅವರು ತರಿದು ಹಾಕಿದ್ದು ತಲೆಗಳನ್ನಲ್ಲ
ಕೇವಲ ಟೊಪ್ಪಿಗಳನ್ನು ಮಾತ್ರ

ಅಕಸ್ಮಾತ್ತಾಗಿ ಟೊಪ್ಪಿಯೊಳಗೆ ತಲೆಗಳಿದ್ದವು ಅಷ್ಟೆ ಎಂಬ ಕವಿತೆಯೊಂದಿಗೆ ಖುಷವಂತ್ ಸಿಂಗ್ ರ “ಟ್ರೈನ್ ಟು ಪಾಕಿಸ್ತಾನ್” ಕಾದಂಬರಿ, ಭೀಷ್ಮಸಾಹನಿಯವರ ತಮಸ್ ಕಾದಂಬರಿ ಹಾಗೂ ಯಾವ ಓದುಗನೂ ಕಟು ವಾಸ್ತವವನ್ನು ಜೀರ್ಣಿಸಿಕೊಳ್ಳಲಾಗದಷ್ಟು ಮಟ್ಟದಲ್ಲಿ ಸಾದತ್ ಹಸನ್ ಮಾಂಟೊ ಬರೆದ ಕತೆಗಳು ವಿಭಜನೆಯ ನೋವಿಗೆ ಸಾಕ್ಷಿಯಾಗಿವೆ. ಈ ಎಲ್ಲಾ ಲೇಕಕರು ವಿಭಜನೆಯ ಸಂದರ್ಭದಲ್ಲಿ ಸಂಭವಿಸಿದ ಹಿಂಸೆಯಲ್ಲಿ ಹರಿದ ಬಿಸಿ ನೆತ್ತರಿನೊಳಗೆ ತಮ್ಮ ಲೇಖನಿಯನ್ನು ಅದ್ದಿ ಈ ಸಾಹಿತ್ಯ ಸೃಷ್ಟಿಸಿದ್ದಾರೇನೊ ಎಂಬ ಭಾವನೆ ಮೂಡುತ್ತದೆ.

ಸ್ವಾತಂತ್ರ್ಯ ನಂತರ ಕರಾಚಿಯಲ್ಲಿ ನೆಲೆಸಿದ ಫಯಾಜ್ರವರು ಪಾಕಿಸ್ತಾನ್ ಟೈಮ್ಸ್ ಎಂಬ ಇಂಗ್ಲೀಷ್ ಪತ್ರಿಕೆಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಆ ನಂತರ 1962ರಲ್ಲಿ ಪಾಕಿಸ್ತಾನದ ಸಾಂಸ್ಕೃತಿಕ ರಾಯಭಾರಿಯಾಗಿ ಲಂಡನ್ನಲ್ಲೂ ಕೂಡ ಸೇವೆ ಸಲ್ಲಿಸಿದರು. ಜಾತಿ ಧರ್ಮದ ಗಡಿ ರೇಖೆಗಳನ್ನು ದಾಟಿದ್ದ ಫೈಜ್ ಬ್ರಿಟೀಷ್ ಮಹಿಳೆಯೊಬ್ಬಳನ್ನು ವಿವಾಹವಾಗಿದ್ದರು. ಕಟ್ಟಾ ಎಡಪಂಥೀಯರಾಗಿದ್ದ ಫಯಾಜ್ ಅಹಮದ್ ಸೂಫಿ ಸಂತರನ್ನು ಹಾಗೂ ಸೂಫಿ ತತ್ವಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಜಗತ್ತಿನಲ್ಲಿ ನಿಜವಾದ ಕಾಮ್ರೇಡ್ಗಳೆಂದರೆ ಸೂಫಿ ಸಂತರು ಎಂಬುದು ಅವರ ನಂಬಿಕೆಯಾಗಿತ್ತು.

ಸ್ವಾತಂತ್ರ್ಯಾನಂತರ ಸರಕಾರದ ವಿರುದ್ಧ ಪಿತೂರಿ ನಡೆಸಿದರು ಎಂಬ ಆಪಾದೆನೆಯಿಂದ 4 ವರ್ಷಗಳ ಕಾಲ ಜೈಲು ವಾಸವನ್ನೂ ಕೂಡ ಅನುಭವಿಸಿದರು. ಮನುಷ್ಯನ ಮುಕ್ತ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯದ ಬಗ್ಗೆ ಪ್ರತಿಪಾದಿಸುತ್ತಿದ್ದ ಈ ಮಹಾನ್ ಕವಿ ಫೈಜ್ ಬರೆದ

ಕಸಿದುಕೊಂಡರೇನು ನನ್ನ ಲೇಖನಿ ಮತ್ತು ಕಾಗದ
ಅದ್ದಿಕೊಂಡಿದ್ದೇನೆ ಬೆರಳುಗಳನ್ನು
ನನ್ನೆದೆಯ ಬಿಸಿ ರಕ್ತದಲ್ಲಿ
ನಾಲಿಗೆಗೆ ಬೀಗ ಹಾಕಿ ಬಾಯಿ ಹೊಲಿದರೇನು
ಇಟ್ಟಿದ್ದೇನೆ ಪ್ರತಿಯೊಂದು ಸರಪಳಿಯ ಕೊಂಡಿಯಲ್ಲಿ
ಮಾತನಾಡುವ ನಾಲಿಗೆಗಳನ್ನು

ಈ ಕವಿತೆ ಅವರ ಪ್ರಖರ ಚಿಂತನೆಗೆ, ಆಧುನಿಕ ಮನೋಭಾವಕ್ಕೆ ಹಿಡಿದ ಕನ್ನಡಿಯಂತಿದೆ. ಇಂತಹ ಮಹಾನ್ ಕವಿ 1984ರಲ್ಲಿ ಇಲ್ಲವಾದರೂ, ನಮ್ಮ ನಡುವೆ ಕಾವ್ಯದ ಮೂಲಕ ಜೀವಂತವಾಗಿದ್ದಾರೆ.

-ಡಾ.ಎನ್.ಜಗದೀಶ್ ಕೊಪ್ಪ

Karnataka High Court

ನಿಂತ ನೀರಾಗಿ ಕೊಳೆತವರು

ಕಳೆದ ವಾರ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಭವಿಸಿದ ಆಘಾತಕಾರಿ ಸಂಗತಿ ಯಾವುದೇ ಕನ್ನಡ ಮಾಧ್ಯಮಗಳಲ್ಲಿ ಸುದ್ಧಿಯಾಗಲಿಲ್ಲ. ಆದರೆ, ಎಲ್ಲಾ ಇಂಗ್ಲೀಷ್ ಪತ್ರಿಕೆಗಳು ಇದನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಜೊತೆಗೆ ಸಂಪಾದಕೀಯ ಬರೆದು ಆತಂಕ ವ್ಯಕ್ತಪಡಿಸಿದವು.

ಕರ್ನಾಟಕದಲ್ಲಿ ಖಾಲಿ ಇರುವ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡುವ ಉದ್ದೇಶದಿಂದ ರಾಜ್ಯ ಹೈಕೋರ್ಟ್, ಏಳು ವರ್ಷ ಸೇವೆ ಸಲ್ಲಿಸಿರುವ ವಕೀಲರಿಗಾಗಿ ಅರ್ಹತೆ ಪರೀಕ್ಷೆಯೊಂದನ್ನು ಕಳೆದ ವಾರ ಏರ್ಪಡಿಸಿತ್ತು. 518 ಮಂದಿ ವಕೀಲರು ಪಾಲ್ಗೊಂಡಿದ್ದ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಒಬ್ಬ ವಕೀಲ ಮಾತ್ರ. ಉಳಿದ 517 ಮಂದಿ ವಿಫಲರಾಗಿರುವುದು ಇವರ ವಕೀಲಿ ವೃತ್ತಿ ಬಗೆಗಿನ ಬದ್ಧತೆ ಮತ್ತು ಅಧ್ಯಯನದ ಕೊರತೆಯನ್ನು ಅನಾವರಣಗೊಳಿಸಿದೆ.

ಈ ಕುರಿತಂತೆ ಆತಂಕ ವ್ಯಕ್ತಪಡಿಸಿರುವ ಬಹುತೇಕ ಸುದ್ದಿ ಮಾಧ್ಯಮಗಳು, ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ಕಾಲೇಜು ಇರುವ ಬೆಂಗಳೂರಿನಲ್ಲಿ ಇಂತಹ ಸಂಗತಿ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸುವುದರ ಜೊತೆಗೆ, ಇಂದಿಗೂ ಭಾರತದ ಅನೇಕ ಕೆಳಹಂತದ ನ್ಯಾಯಾಲಯಗಳಲ್ಲಿ ಸಂಕ್ಷಿಪ್ತವಾಗಿ ತೀರ್ಪು ಬರೆಯಲಾರದ ನ್ಯಾಯಾಧೀಶರುಗಳಿದ್ದಾರೆ ಎಂದು ವ್ಯಂಗ್ಯವಾಡಿವೆ.

ಇಂದು ಕಾನೂನು ಜ್ಞಾನಶಿಸ್ತುಗಳಲ್ಲಿ ಒಂದಾಗಿದ್ದು ಹಲವು ಶಾಖೆಗಳಾಗಿ ಕವಲೊಡೆದಿದೆ. ಕಾನೂನು ಪದವಿಯ ಸಂದರ್ಭದಲ್ಲಿ ಹನ್ನೆರಡಕ್ಕೂ ಮೇಲ್ಪಟ್ಟ ವಿವಿಧ ವಿಷಯಗಳ ಕಾನೂನನ್ನು ಅಧ್ಯಯನ ಮಾಡುವುದು ಕಡ್ಡಾಯ. ಪದವಿಯ ನಂತರ ಯಾವುದೇ ವ್ಯಕ್ತಿ ವೃತ್ತಿಯ ಸಂದರ್ಭದಲ್ಲಿ ತನಗೆ ಇಷ್ಟವಾದ ಕಾನೂನು ಶಾಖೆಯೊಂದನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಇದು ಕಾನೂನು ಪರಿಣಿತಿಯಲ್ಲಿ ಅವಶ್ಯ ಕೂಡ ಹೌದು. ಹಾಗಾಗಿ ಇಂದು ನಾವು ಎಲ್ಲೆಡೆ ಕ್ರಿಮಿನಲ್ ಲಾ, ಸಿವಿಲ್ ಲಾ, ಕಂಪನಿ ಲಾ, ಅಂತಾರಾಷ್ಟ್ರೀಯ ಕಾನೂನು, ಹಿಂದೂ ಕಾನೂನು ಹೀಗೆ ಈ ವಿಷಯಗಳಲ್ಲಿ ಪರಿಣಿತ ಹಾಗೂ ತಜ್ಞ ವಕೀಲರನ್ನು ನಾವು ಕಾಣುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಪರಿವರ್ತನಾ ಮತ್ತು ಚಲನಶೀಲವಾದ ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೆ ಒಳಗಾಗುತ್ತಿರುವ ಕಾನೂನುಗಳ ಬಗ್ಗೆ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡವರು ಅಧ್ಯಯನ ಮಾಡುವುದು ಅಗತ್ಯ.ವಿಲ್ಲ ಎಂದು ಭಾವಿಸುವುದು ಅವಿವೇಕತನದ ಪರಮಾವಧಿಯಾಗುತ್ತದೆ.

ವರ್ತಮಾನದ ವಕೀಲಿ ವೃತ್ತಿ ಆಶಾದಾಯಕ ವೃತ್ತಿಯಾಗಿಲ್ಲ. ಆದರೂ ಕಾನೂನು ಅಧ್ಯಯನಕ್ಕೆ ಯುವ ಜನಾಂಗ ಆಸಕ್ತಿ ತೋರುತ್ತಿದ್ದು, ಪದವಿಯ ನಂತರ ಸ್ವತಂತ್ರ ವೃತ್ತಿಗಿಂತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊರೆಯುತ್ತಿರುವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ದಶಕಗಳ ಹಿಂದೆ ಕಾನೂನು ಪದವಿ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ವಕೀಲರಿಗೆ ವೃತ್ತಿ ಮತ್ತು ಅದರ ಘನತೆಗಿಂತ ಸಂಘಟನೆ ಮತ್ತು ರಾಜಕೀಯ ಮುಖ್ಯವಾಗಿದೆ.

Karnataka High Court

Karnataka High Court

ಕರ್ನಾಟಕದಲ್ಲಿ ಇಂದು ವಕೀಲರ ಸಂಘ, ವಕೀಲರ ಪರಿಷತ್ ಹೀಗೆ ಹಲವು ಬಣಗಳು ಹುಟ್ಟಿಕೊಂಡು ಇವುಗಳ ಚುನಾವಣೆ ಮತ್ತು ಚುನಾವಣೆಯ ಸಂದರ್ಭದಲ್ಲಿ ವಕೀಲರ ವರ್ತನೆ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆ ಇಲ್ಲ. ತಮ್ಮ ವೃತ್ತಿಯ ಘನತೆ ತೊರೆದು ರಾಜಕೀಯ ಪಕ್ಷಗಳೊಂದಿಗೆ ಹಲವು ವಕೀಲರು ಗುರುತಿಸಿಕೊಂಡಿದ್ದರೆ, ಮತ್ತಷ್ಟು ವಕೀಲರು ಯಾವ ಅಳುಕೂ ಇಲ್ಲದೆ ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿ ಬೀದಿಗಿಳಿದು ಪ್ರತಿಭಟಿಸುವುದು, ರಸ್ತೆತಡೆ ಮಾಡುವುದನ್ನು ನಾವು ಕಾಣುತ್ತಿದ್ದೇವೆ.

ಇವರೆಲ್ಲರೂ ಒಮ್ಮೆ ತಮ್ಮ ಅರ್ಹತೆಯ ಬಗ್ಗೆ ತಮ್ಮ ತಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳುವುದು ಒಳಿತು. ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡ ಪ್ರತಿ ಮೂರು ವರ್ಷಕ್ಕೊಮ್ಮೆ ಇವರಿಗೆಲ್ಲಾ ಕಡ್ಡಾಯವಾಗಿ ಪರೀಕ್ಷೆ ನಡೆಸಿ ವಕೀಲಿ ವೃತ್ತಿಗೆ ಅನುಮತಿ ನೀಡುವುದನ್ನು ಚಾಲನೆಗೆ ತಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಒಂದಿಷ್ಟು ಸುಧಾರಣೆ ಕಾಣಬಹುದು. ಇಂತಹ ದುರ್ಗತಿ ಕೇವಲ ವಕೀಲ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ.

ಕಳೆದ ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಖಾಸಗಿ ಚಾನಲ್ ಒಂದು ನಮ್ಮ ಸರಕಾರಿ ಶಾಲಾ ಶಿಕ್ಷಕರಿಗೆ, ಸ್ವತಂತ್ರ ಬಂದು ಎಷ್ಟು ವರ್ಷಗಳಾದವು?, ಮಹಾತ್ಮಗಾಂಧಿಯ ಪೂರ್ಣ ಹೆಸರೇನು?, ನೆಹರು ಪುತ್ರಿ ಯಾರು?, ಜಲಿಯನ್ ವಾಲಾಬಾಗ್ ಎಲ್ಲಿದೆ? ಎಂಬ ಪ್ರಶ್ನೆಗಳನ್ನು 50ಕ್ಕೂ ಹೆಚ್ಚು ಶಿಕ್ಷಕರ ಎದುರು ಇಟ್ಟಿತ್ತು. ಇವುಗಳಿಗೆ ಒಂದಿಬ್ಬರು ಹೊರತುಪಡಿಸಿದರೆ ಉಳಿದವರೆಲ್ಲಾ ಕ್ಯಾಮೆರಾ ಎದುರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದರು. ಇವರೆಲ್ಲಾ ನಮ್ಮ ಸಮಾಜದ ಭಾಗವಾಗಿರುವುದು ವರ್ತಮಾನದ ದುರಂತಗಳಲ್ಲಿ ಒಂದು.

– ಡಾ.ಎನ್.ಜಗದೀಶ್ ಕೊಪ್ಪ