Category Archives: ತೇಜ ಸಚಿನ್ ಪೂಜಾರಿ

ಮಂಗಳೂರಿನಲ್ಲಿ ಸದ್ಯಕ್ಕೆ ನಡೆಯುತ್ತಿರುವುದು “ಆತ್ಮಹತ್ಯೆ”

– ತೇಜ ಸಚಿನ್ ಪೂಜಾರಿ

ಮಂಗಳೂರು ಮತ್ತೆ ಸುದ್ದಿಯಲ್ಲಿದೆ. ಕೋಮುವಾದ, ಮೋರಲ್ ಪೋಲಿಸಿಂಗ್, ಮಡೆಸ್ನಾನ, ಹೀಗೆ ನಾನಾ ನೇತ್ಯಾತ್ಮಕ ಕಾರಣಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಾರ್ತೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುತ್ತಿದೆ.

ಹಾಗೆ ನೋಡಿದಲ್ಲಿ ನಮ್ಮೂರಲ್ಲಿ ಸದ್ಯಕ್ಕೆ ನಡೆಯುತ್ತಿರುವುದು “ಆತ್ಮಹತ್ಯೆ”. ಇಲ್ಲಿ ನಮ್ಮನ್ನು ನಾವೇ ಸುಟ್ಟುಕ್ಕೊಳ್ಳುತ್ತಿದ್ದೇವೆ. ನಮ್ಮ ಹಿರೀಕರು ವಿಕಸಿಸಿದ ಸಾಮರಸ್ಯದ, ಸಹಿಷ್ಣುತೆಯ ಬಳುವಳಿಯನ್ನು ತ್ಯಜಿಸಿ ಅಹಂಕಾರದ ಹಾಗೂ ಅಧಃಪತನದ ಹಾದಿಯನ್ನು ಅನುಸರಿಸುತ್ತಿದ್ದೇವೆ. ಧರ್ಮ ಸಂಸ್ಕೃತಿಗಳ ಪಾಳೇಗಾರರ ಪಿತೂರಿಯ ದನಿಗಳಿಗೆ ಕಿವಿಯಾಗಿ ನಮಗೆ ನಾವೇ ಹಾನಿ ಮಾಡಿಕೊಳ್ಳುತ್ತಿದ್ದೇವೆ. ನಮ್ಮದೇ ನೆಲದಲ್ಲಿ ಸಾವಿರಾರು ವರ್ಷಗಳಲ್ಲಿ ಅರಳಿದ ಸಾಂಸ್ಕೃತಿಕ ವೈವಿಧ್ಯತೆಯನ್ನು ನಾಶಮಾಡಿ ಯಾವುದೋ ಅನ್ಯಾಯದ ವ್ಯವಸ್ಥೆಯು ಹೇರುತ್ತಿರುವ ಏಕತ್ವದ ವ್ಯವಸ್ಥೆಯೊಳಗೆ ಸ್ವಯಂ ಬಂಧಿಯಾಗುತ್ತಿದ್ದೇವೆ. kambala-mangaloreತುಳುವ, ಬ್ಯಾರಿ, ಕ್ರೈಸ್ತ, ಜೈನ, ಹೀಗೆ ಪ್ರತಿಯೊಬ್ಬ ಜನಾಂಗವೂ ತಲ ತಲಾಂತರದಿಂದ ಇಲ್ಲೇ ಇದ್ದು ಇಲ್ಲಿಗೇ ವಿಶೇಷವಾದ ಸಾಂಸ್ಕೃತಿಕ ಅಂಶಗಳನ್ನು ಬೆಳೆಸಿಕೊಂಡಿವೆ. ಆದರೆ ಅವೆಲ್ಲವನ್ನೂ ಆಯಾ ಧರ್ಮಗಳ ಹೊರಗಿನ ಸಾಂಸ್ಥಿಕ ಯಜಮಾನಿಕೆಯ ಕೈಗೆ ಒಪ್ಪಿಸುತ್ತಿದ್ದೇವೆ. ಹಾಗೆ ಮಾಡುತ್ತಾ ನಮ್ಮ ದುರ್ವಿಧಿಯನ್ನು ನಾವೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ನಮ್ಮ ವರ್ತಮಾನ ಹಾಗೂ ಭವಿತವ್ಯಗಳನ್ನು ಕೇವಲ ಹಿಂಸೆಯ ಅಧ್ಯಾಯಗಳನ್ನಾಗಿ ರೂಪಿಸುತ್ತಿದ್ದೇವೆ. ಮುಂದಿನ ಪೀಳಿಗೆಗೆ ಸಮರ ಸನ್ನಾಹದ, ಉಸಿರುಗಟ್ಟುವ ಭವಿಷ್ಯವೊಂದನ್ನು ನಿರ್ಮಿಸಿ ಕೊಡುತ್ತಿದ್ದೇವೆ. ತುಳು, ಬ್ಯಾರಿ ಹಾಗೂ ಕೊಂಕಣಿ ಭಾಷೆಗಳ ಇಂಪು ಒಂದೆಡೆ ಕೇಳಿಸದಂತಹ ಪ್ರತ್ಯೇಕತೆಯ ಅನಾಹುತಕಾರಿ ಸನ್ನಿವೇಶವನ್ನು ಕಟ್ಟುತ್ತಿದ್ದೇವೆ. “ಪ್ರಕ್ಷುಬ್ದ”, “ಗಲಭೆಪೀಡಿತ”, “ಅತಿ ಸೂಕ್ಷ್ಮ” ಇವೇ ಮೊದಲಾದ ವಿಶೇಷಣಗಳನ್ನು ನಮ್ಮ ಊರಿಗೇ ನಾವೇ ಗಳಿಸಿ ಕೊಟ್ಟು ಕೊರಳ ಕುಣಿಕೆಯನ್ನು ಬಿಗಿಗೊಳಿಸುತ್ತಿದ್ದೇವೆ.

***

ಪ್ರಸ್ತುತ ಮಂಗಳೂರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥೈಸುವಲ್ಲಿ ಇಲ್ಲಿಯ ಆರ್ಥಿಕ ಅಭಿವೃಧ್ಧಿಯ ಸ್ವರೂಪದ ಅಧ್ಯಯನ ಅವಶ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಭೌತಿಕ ನೆಲೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಇಲ್ಲಿ ಆರ್ಥಿಕ ಮೂಲಸೌಕರ್ಯಗಳು ಸಾಕಷ್ಟು ಬೆಳೆದಿವೆ. ಸಮುದ್ರ ತೀರ, ಮಳೆ, ಶಿಕ್ಷಣ, ಹಣಕಾಸು ಸಂಸ್ಥೆಗಳು, ಇವೇ ಮೊದಲಾದ ಪ್ರೇರಕ ಅಂಶಗಳು ವಿವಿಧ Industrial_Mangaloreಉದ್ಯಮಗಳ ಏಳಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿವೆ. ಹೀಗಾಗಿ ಸಹಜವಾಗಿಯೇ ಮಂಗಳೂರು ಆರ್ಥಿಕ ಪ್ರಗತಿಯ ಹಾದಿಯಲ್ಲಿದೆ. ಆದರೆ, ದುರಾದೃಷ್ಟವಶಾತ್ ಸದ್ಯದ ಜಗತ್ತಿನಲ್ಲಿ ಪ್ರತಿಪಾದನೆಯಾಗುತ್ತಿರುವ ಅಭಿವೃದ್ಧಿ ಪರಿಕಲ್ಪನೆಯ ಅಂತರ್ಯದಲ್ಲೇ ಹಲವು ಸಮಸ್ಯೆಗಳಿವೆ. ಅದು ಸಮಾನ ಹಾಗೂ ಸಾರ್ವತ್ರಿಕ ಏಳಿಗೆಗೆ ಕಾರಣವಾಗದೆ ಕೇವಲ ಅಸಮತೆಗಳನ್ನು ಸೃಷ್ಟಿಸುತ್ತಿದೆ. ಉಳ್ಳವರು ಹಾಗೂ ಇಲ್ಲದವರ ನಡುವಿನ ಭೇದವನ್ನು ಇನ್ನಷ್ಟು ವಿಸ್ತರಿಸಿ ಅದನ್ನು ಸಾಂಸ್ಥೀಕರಿಸುತ್ತಿದೆ. ಮಂಗಳೂರಿನಲ್ಲಿ ಇಂತಹ ಪ್ರವೃತ್ತಿಗಳು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿವೆ. ಶ್ರೀಮಂತರು ಆರ್ಥಿಕ ಪ್ರಗತಿಯ ಭರಪೂರ ಲಾಭ ಪಡೆದುಕೊಂಡು ಇನ್ನಷ್ಟು ಸಿರಿವಂತರಾಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಬಡವರು ಸಮರ್ಪಕ ನೆರವಿನ ಕೊರತೆಯಿಂದ ವೇಗದ ಜಗತ್ತಿನಲ್ಲಿ ಸ್ಪರ್ಧಿಸಲಾಗದೆ ಸೋತು ಮತ್ತಷ್ಟು ದಾರಿದ್ರ್ಯಕ್ಕೆ ತಳ್ಳಲ್ಪಡುತ್ತಿದ್ದಾರೆ. ಅಭಿವೃದ್ಧಿಯ ಇವೆರಡೂ ದ್ವಂದ್ವಗಳು ಮಂಗಳೂರಿನಲ್ಲಿ ಜೊತೆ ಜೊತೆಯಾಗಿಯೇ ಅಸ್ತಿತ್ವದಲ್ಲಿವೆ. ಹೀಗಾಗಿ, ದೃಗ್ಗೋಚರ ಆರ್ಥಿಕ ಅಸಮಾನತೆಗಳು ಬಡವರ್ಗಗಳಲ್ಲಿ ಅಸಮಧಾನವನ್ನು ಸೃಷ್ಟಿಸುತ್ತಿವೆ. ಅವರಲ್ಲಿ ಸುಪ್ತವಾದ ಅಸಹನೆಯು ಸಂಚಿತಗೊಳ್ಳುತ್ತಿದೆ.

ಸಾಮಾನ್ಯವಾಗಿ ಇಂತಹ ಮನೋನಿರ್ಮಿತಿಯು ಕ್ರಾಂತಿಕಾರಿ ಬದಲಾವಣೆಗೆ ಪೂರಕವಾದ ವೇದಿಕೆಯನ್ನು ಒದಗಿಸುತ್ತದೆ. udupi-mangaloreಆದರೆ ಮಂಗಳೂರಿನಲ್ಲಿ ಬಡವರ ಬೇಗುದಿ ಬಳಕೆಯಾಗುತ್ತಿರುವ ರೀತಿಯೇ ಭಿನ್ನವಾಗಿದೆ. ಇಲ್ಲಿ ಅದನ್ನು ದುಡಿಸಿಕೊಳ್ಳುತ್ತಿರುವುದು ದರ್ಪಿಷ್ಟ ಪ್ರತಿಗಾಮಿ ಸಾಂಸ್ಕ್ರತಿಕ ಯಜಮಾನಿಕೆ. ಬಡವರ ಅಸಮಧಾನ, ಸಿಟ್ಟು ಹಾಗೂ ಆಕ್ರೋಶದ ಸುಪ್ತಭಾವನೆಗಳನ್ನು ಮೇಲ್ವರ್ಗದ ಕೋಮುವಾದಿಗಳು ಹಾಗೂ ಪ್ರತಿಗಾಮಿಗಳು ಜಾತಿ, ಧರ್ಮ ಹಾಗೂ ಸಂಸ್ಕೃತಿಯ ನೆಲೆಯಲ್ಲಿ ಹಿಂಸೆಯಾಗಿ ಪರಿವರ್ತಿಸುತ್ತಿದ್ದಾರೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಸಹನೆಗೆ ಒಂದು ನಿಯಂತ್ರಿತ ಔಟ್ಲೆಟ್ ಒದಗಿಸುತ್ತಿದ್ದಾರೆ. ಹೀಗಾಗಿಯೇ ಶ್ರೀಮಂತಿಕೆ ಅಥವಾ ಹೊಸದಾದ ಆರ್ಥಿಕ ಸ್ಥಾನಮಾನವನ್ನು ಪ್ರತಿನಿಧಿಸುತ್ತಿರುವ ಅಮ್ನೇಶಿಯಾ, ಹೋಂಸ್ಟೇಯಂತಹ ತಾಣಗಳು ಮತ್ತೆ ಮತ್ತೆ ದಾಳಿಗೊಳಗಾಗುತ್ತಿವೆ. ಮತ್ತು ದಾಳಿಕೋರರು ಬಹುತೇಕ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡಿರುವ, ಕೂಲಿಕೆಲಸಗಳಿಗೆ ಹೋಗುವ, ಡ್ರೈವರ್ ಕಂಡಕ್ಟರ್ ಮೊದಲಾದ ಸಣ್ಣ ಆದಾಯದ ಕೆಲಸಗಳನ್ನು ಮಾಡುತ್ತಿರುವ ಬಡ ಹಾಗೂ ಕೆಳ ಮಧ್ಯಮ ವರ್ಗಕ್ಕೆ ಸೇರಿದವರೇ ಆಗಿರುತ್ತಾರೆ. ಇದು ಇನ್ನೊಂದು ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ವೈಫಲ್ಯವನ್ನೂ ಸಂಕೇತಿಸುತ್ತದೆ.

***

ಆಧುನಿಕ ಜಗತ್ತಿನ ಬದುಕಿನಲ್ಲಿ ಮಧ್ಯಮ ವರ್ಗ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಪ್ರೆಂಚ್ ಕ್ರಾಂತಿಯಿಂದ ಹಿಡಿದು ಹಿಂದಿನವರೆಗೆ ಸಮಾಜದ ಹಲವು ಬದಲಾವಣೆಗೆ ಅದು ಕಾರಣವಾಗಿದೆ. ನಮ್ಮ ದೇಶದ ಇತಿಹಾಸದಲ್ಲೂ ಮಧ್ಯಮ ವರ್ಗವು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ವಿಚಾರ ನಮಗೆಲ್ಲಾ ತಿಳಿದಿದೆ. ಆದರೆ ಮಧ್ಯಮ ವರ್ಗ ಸಹಜವಾಗಿಯೇ ಬಹಳ ವೊಲಟೈಲ್ ಆಗಿರುತ್ತದೆ. ಸೃಷ್ಟಿ ಹಾಗೂ ಲಯ ಇವೆರಡನ್ನೂ ಒಡಲಲ್ಲಿಟ್ಟುಕೋಂಡೇ ಅದು ವ್ಯವಹರಿಸುತ್ತದೆ. ಅಂತೆಯೇ ಸ್ವಾತಂತ್ರ್ಯ ಆಂದೋಲನದ ಜತೆಜತೆಗೇ ಅದು ಕೋಮುವಾದವನ್ನೂ ಕೂಡಾ ಬೆಳೆಸಿದ್ದನ್ನು ನಾವು ಕಂಡಿದ್ದೇವೆ. ಹೀಗಾಗಿಯೇ ಸ್ವಾತಂತ್ರ್ಯ ಸಾಧನೆ ಹಾಗೂ ದೇಶ ವಿಭಜನೆ, ಇವೆರಡೂ ಮಧ್ಯಮ ವರ್ಗದ ಕೃತ್ಯಗಳು ಎಂಬುದಾಗಿ ಹಲವು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಮಧ್ಯಮ ವರ್ಗದ ಅನಾಹುತಕಾರಿ ಗುಣಗಳು ಸ್ವಾತಂತ್ರ್ಯೋತ್ತರ ಭಾರತದಲಲ್ಲಿ ಇನ್ನಷ್ಟು ವಿಸ್ತರಿಸಿದ್ದನ್ನು ನಾವು ಕಾಣುತ್ತಿದ್ದೇವೆ. ಐತಿಹಾಸಿಕ ಹಾಗೂ ತಾತ್ವಿಕ ನೆಲೆಯಲ್ಲಿ ನೋಡಿದಾಗ ತಕ್ಕ ಮಟ್ಟಿನ ಜಾತ್ಯಾತೀತತೆ ಮತ್ತು ಅನ್ಯತೆಗೆ ಗೌರವ- ಇವು ಮಧ್ಯಮ ವರ್ಗದ ಮೂಲಭೂತ ಮೌಲ್ಯಗಳಾಗಿರುತ್ತವೆ. ಆದರೆ ನಮ್ಮ ಇಂದಿನ ಮಧ್ಯಮ ವರ್ಗ ಅಂತಹ ತತ್ವಗಳಿಗೆ ವ್ಯತಿರಿಕ್ತವಾಗಿ ಆಘಾತಕಾರಿ ನೆಲೆಯಲ್ಲಿ ಬೆಳೆಯುತ್ತಿದೆ. ಅತಿ ರಾಷ್ಟ್ರೀಯತೆ, ಕೋಮುವಾದ, ನಿರಂಕುಶತೆ ಮೊದಲಾದ ಅಪಸವ್ಯಗಳನ್ನು ಪೋಷಿಸುತ್ತಾ ಮುನ್ನಡೆಯುತ್ತಿದೆ. ಗುಜರಾತ್‌ನಲ್ಲಿ ಮಧ್ಯಮ ವರ್ಗದ ಸ್ವರೂಪವನ್ನು ಚರ್ಚಿಸುತ್ತಾ ಚಿಂತಕ ಆಶಿಶ್ ನಂದಿಯವರು “ಸದ್ಯ ಮಧ್ಯಮ ವರ್ಗವನ್ನು ಪ್ರವೇಶಿಸುತ್ತಿರುವ ಜನರು ಮಧ್ಯಮ ವರ್ಗದ ಯಾವುದೇ ಮೌಲ್ಯಗಳನ್ನು ಹೊಂದಿರುವುದಿಲ್ಲ. ಬದಲಿಗೆ ಅವರು ಕೇವಲ ಮಧ್ಯಮ ವರ್ಗದ ಆದಾಯವನ್ನು ಹೊಂದಿರುತ್ತಾರೆ; ಮಧ್ಯಮ ವರ್ಗದ ಕೊಳ್ಳುಬಾಕತನವನ್ನು ಹೊಂದಿರುತ್ತಾರೆ.” ಎಂದು ವಿಶ್ಲೇಷಿಸಿದ್ದರು. Indian_Middle_Classಇದು ಕೇವಲ ಗುಜರಾತ್ ಮಾತ್ರವಲ್ಲದೆ ಇಡೀ ಭಾರತದ ಮಧ್ಯಮ ವರ್ಗದ ಸ್ವರೂಪವೂ ಆಗಿದೆ.

ಮಂಗಳೂರಿನಲ್ಲಿ ಕೂಡಾ ಇಂತಹದ್ದೇ ಸ್ವರೂಪದ ಬಲಿಷ್ಟ ಮಧ್ಯಮವರ್ಗವೊಂದು ಅಸ್ತಿತ್ವದಲ್ಲಿದೆ. ಅದು ತಮ್ಮ ಶ್ರೀಮಂತಿಕೆಯ ಫಲವಾಗಿ ಸಾಮಾಜಿಕ ಶ್ರೇಣೀಕರಣದಲ್ಲಿ ನಿಧಾನವಾಗಿ ಮೇಲೇರುತ್ತಿದೆ. ಮುಖ್ಯವಾಹಿನಿಯ ಧರ್ಮಗಳ ಯಜಮಾನಿಕೆಯೂ ಕೂಡಾ ಇಂತಹ ಹೊಸ ಸಮೃದ್ಧ ವರ್ಗಗಳ ಆಗಮನವನ್ನು ಸ್ವಾಗತಿಸುತ್ತಿದೆ. ಹೀಗಾಗಿ ತಮ್ಮ ಹೊಸದಾದ ಆರ್ಥಿಕ ಸ್ಥಾನಮಾನಗಳನ್ನು ಒಪ್ಪುತ್ತಾ ತಮಗೆ ವಿಶೇಷ ಗೌರವವನ್ನು ನೀಡುತ್ತಿರುವ ಮುಖ್ಯವಾಹಿನಿಯ ಧರ್ಮಗಳ ಕಡೆಗೆ ಅವರ ನಿಷ್ಟೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಅದರ ರಕ್ಷಣೆಯ ನೂತನ ಚಾಂಪಿಯನ್‌ಗಳಾಗಲು ಮೇಲ್ ಮಧ್ಯಮ ವರ್ಗವು ಹೊರಟಿದೆ. ಪುರೋಹಿತಶಾಹಿಯ ಜತೆಗಿನ ಸಾಹಚರ್ಯ ಅವರಿಗೆ ಇನ್ನಷ್ಟು ಹುರುಪು ನಿಡುತ್ತಿದೆ. ಕರಾವಳಿಯಲ್ಲಿ ಆಗಾಗ್ಗೆ ನಡೆಯುತ್ತಿರುವ ಜೀರ್ಣೋದ್ಧಾರ, ನಾಗಮಂಡಲ, ಸಮಾಜೋತ್ಸವಗಳು ಇಂತಹದ್ದೇ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತವೆ. ಧಾರ್ಮಿಕ ಗೌರವ ಹಾಗೂ ಸ್ವೀಕರಣೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅದು ಧರ್ಮದ ಆಚರಣೆ, ಭೋಧನೆ ಹಾಗೂ ರಕ್ಷಣೆಯ ಕಾರ್ಯತಂತ್ರದಲ್ಲಿ ಮತ್ತಷ್ಟು ಕರ್ಮಠವಾಗುತ್ತಿದೆ.

***

ಮಂಗಳೂರು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ತ್ರಪ್ತಿಕರ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. Alvas-Campusದೊಡ್ಡ ಸಂಖ್ಯೆಯಲ್ಲಿ ವಿವಿಧ ಶಿಸ್ತುಗಳನ್ನು ಭೋಧಿಸುವ ಶಿಕ್ಷಣ ಸಂಸ್ಥೆಗಳಿವೆ. ಆದಾಗ್ಯೂ ಕರಾವಳಿಯ ಶೈಕ್ಷಣಿಕ ಸಾಧನೆ ಅದರ ಸಾಮಾಜಿಕ ನಡಾವಳಿಯಲ್ಲಿ ಪ್ರತಿಫಲಿತವಾಗುತ್ತಿಲ್ಲ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ, ಮಂಗಳೂರು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಮಿತಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ನಮ್ಮ ಶೈಕ್ಷಣಿಕ ಸಂರಚನೆಯು ಬೌದ್ಧಿಕತೆಯ ಪ್ರಚೋದನೆಗೆ ಪ್ರಾಶಸ್ತ್ಯ ನೀಡದೆ ಕೇವಲ ಮಾಹಿತಿ ಜ್ಞಾನದ ಪ್ರಸರಣಕ್ಕೆ ಮಹತ್ವ ನೀಡುತ್ತದೆ. ಬೌದ್ಧಿಕತೆಯು ಚಿಂತನಾಶೀಲ ವೈಚಾರಿಕತೆಯನ್ನು ದಯಪಾಲಿಸುತ್ತದೆ. ಅದು ಪ್ರಶ್ನಾ ಮನೋಧರ್ಮವನ್ನು ಉದ್ದೀಪನ ಮಾಡುತ್ತದೆ. ಮಾಹಿತಿ ಜ್ಞಾನ ಕೇವಲ “ಯಥಾವತ್ ಸ್ವೀಕರಣೆ”ಯ ಆಯಾಮವನ್ನು ಹೊಂದಿರುತ್ತದೆ. ಹೀಗಾಗಯೇ ನಮ್ಮಲ್ಲಿ ಮಹಾ ಸುಳ್ಳಿನ ಕಂತೆಗಳಾದ ಕೋಮು ಭಾಷಣಗಳು ಅಥವಾ ಅವೈಜ್ಞಾನಿಕ ಮೌಡ್ಯ ಆಚರಣೆಗಳು ಯಾವುದೇ ಪ್ರಶ್ನೆಯಿಲ್ಲದೆ ಸ್ವೀಕರಣೆಯಾಗುತ್ತಿವೆ. ಮಡೆಸ್ನಾನ, ಬುರ್ಖಾದಂತಹ ಪದ್ದತಿಗಳು ಸಾಕ್ಷಾತ್ ಪೀಡಿತರಿಂದಲೇ ಸಮರ್ಥನೆಗೊಳ್ಳುತ್ತಿವೆ.

ಎರಡನೆಯದ್ದಾಗಿ, ಕರಾವಳಿಯ ಶೈಕ್ಷಣಿಕ ರಂಗವು ಅಲ್ಲಿಯ ಧಾರ್ಮಿಕ ಯಜಮಾನಿಕೆಯ ಕಪಿಮುಷ್ಟಿಯಲ್ಲಿದೆ. ದೇಗುಲ, ಪ್ರಾರ್ಥನಾ ಮಂದಿರಗಳು, ಧಾರ್ಮಿಕ ಸಂಸ್ಥಾಪನೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಧಾರ್ಮಿಕೇತರ ನೆಲೆಯಲ್ಲಿ ನಡೆಯುತ್ತಿರುವ ಸಂಸ್ಥೆಗಳೂ ಕೂಡಾ ಸಾಂಸ್ಕ್ರತಿಕ ಯಜಮಾನಿಕೆಯ ಸ್ಪಷ್ಟ ನಿಯಂತ್ರಣದಲ್ಲಿವೆ. ಇಂತಹ ಎಕ್ಸ್‌ಕ್ಲೂಸಿವ್ ಶಿಕ್ಷಣ ವ್ಯವಸ್ಥೆಯಲ್ಲಿ ವೈಚಾರಿಕತೆ, ಪ್ರಗತಿಶೀಲತೆಯಂತಹ ಉನ್ನತಿಗಳನ್ನು ಅಪೇಕ್ಷಿಸುವುದು ಅಸಾಧ್ಯ. ಶಿಕ್ಷಣ, ವ್ಯಕ್ತಿತ್ವ ರೂಪಣೆಯ ಮೂಲಭೂತ ಅಂಶ. ಹಿಗಾಗಿ ಅದನ್ನೇ ನಿಯಂತ್ರಣದಲ್ಲಿಟ್ಟುಕೊಂಡು ಸಾಂಸ್ಕೃತಿಕ ಮೂಲಭೂತವಾದವು ಮುನ್ನಡೆಯುತ್ತಿದೆ.

***

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇರುವ ಕರಾವಳಿ ಪ್ರಾಂತ್ಯವನ್ನು ವಿವಿಧ ಸಾಂಸ್ಕ್ರತಿಕ ಕೂಟಗಳ ದರ್ಪಿಷ್ಟ ಯಜಮಾನಿಕೆಯು ಅಂಕೆಯಲ್ಲಿ ಹಿಡಿದುಕೊಳ್ಳಲು ಹವಣಿಸುತ್ತಿದೆ. ಧರ್ಮ, ಸಂಸ್ಕೃತಿ, ಕಲೆ, ಶಿಕ್ಷಣ ಹೀಗೆ ಸಾಂಸ್ಕ್ರತಿಕ ಬದುಕಿನ ಅಷ್ಟೂ ಕ್ಷೇತ್ರಗಳನ್ನು ಅದು ವ್ಯಾಪಿಸಿಕೊಂಡಿದೆ. ಹೀಗಾಗಿಯೇ ಮಠಮಂದಿರಗಳು ಇಲ್ಲಿಯ ಜನರ ಬದುಕಿನಲ್ಲಿ ಕೇಂದ್ರಸ್ಥಾನವನ್ನು ಪಡೆಯುತ್ತಿವೆ. ಮೂಲಭೂತವಾದಿ ಸ್ವರೂಪವನ್ನು ಹೊಂದಿರುವ ಯಜಮಾನಿಕೆಯು ಉಗ್ರ ಅಸಹಿಷ್ಣು ವ್ಯವಸ್ಥೆಯನ್ನು ನಿರ್ಮಿಸಲು ಯತ್ನಿಸುತ್ತಿದೆ. ವೈವಿಧ್ಯತೆಯನ್ನು ಕೆಡವಿ ಹಾಕಿ ಏಕತತ್ವವನ್ನು ಸ್ಥಾಪಿಸ ಹೊರಟಿದೆ. ತನ್ನದೇ ಅನುಕೂಲಕ್ಕೆ mangalore-attackತಕ್ಕಂತೆ ರೂಪಿತವಾದ ಶಾಸ್ತ್ರ ಪರಂಪರೆಯನ್ನು ಸಂವಿಧಾನಕ್ಕೆ ಪರ್ಯಾಯವಾಗಿ ಪ್ರಚುರ ಪಡಿಸುತ್ತಿದೆ. ಅಂತರ್ಜಾತಿ-ಅಂತರ್ಮತೀಯ ವಿವಾಹ ಆಥವಾ ಸಾಹಚರ್ಯಗಳ ವಿರೋಧ, ಮೋರಲ್ ಪೋಲಿಸಿಂಗ್‌ನಂತಹ ಪೃವ್ರತ್ತಿಗಳು, ದಬ್ಬಾಳಿಕೆಯ ಯಜಮಾನಿಕೆಗಳು, ಕರಾವಳಿಯಲ್ಲಿ ರೂಪಿಸಿದ ವ್ಯವಸ್ಥೆಯು ಬಲಗೊಂಡದ್ದನ್ನು ಸಂಕೇತಿಸುತ್ತದೆ. ಸಿರಿವಂತಿಕೆ, ಪ್ರಭುತ್ವ, ಹಾಗೂ ಮಾಧ್ಯಮದ ಜೊತೆಗಿನ ಅದರ ಕೂಡಾಟ ಅಪಾಯದ ಸಾಧ್ಯತೆಗಳನ್ನು ಇಮ್ಮಡಿಗೊಳಿಸಿದೆ. ಸಮಾವೇಶ ಹಾಗೂ ಸಂಸ್ಥೆಗಳನ್ನು ಸಂಘಟಿಸುವ ಮೂಲಕ ಜನಾನುರಾಗಿ ನೆಲೆಯನ್ನು ಪಡೆದುಕೊಳ್ಳುವ ಪ್ರಯತ್ನವನ್ನೂ ಕೂಡಾ ಅದು ಮಾಡುತ್ತಿದೆ. ತಾನು ಹಿನ್ನೆಲೆಯಲ್ಲಿದ್ದುಕೊಂಡೇ ಬಡ ಯುವಕರನ್ನು ದಾಳವಾಗಿ ಪ್ರಯೋಗಿಸುವ ಕಲೆಯನ್ನು ಅದು ಕರಗತ ಮಾಡಿಕೊಂಡಿದೆ.

ಕರಾವಳಿಯ ವಾತವರಣವನ್ನು ಕೆಡಿಸುವಲ್ಲಿ ವ್ಯವಸ್ಥೆ ಹಾಗೂ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ. ಸರಕಾರಗಳ ವೈಫಲ್ಯದಿಂದಾಗಿ ನಮ್ಮ ವ್ಯವಸ್ಥೆಯನ್ನು ರೂಪಿಸಿರುವ ಸಂವಿಧಾನದ ಆಶಯಗಳು ವಾಸ್ತವದಲ್ಲಿ ಅನುಷ್ಠಾನಕ್ಕೆ ಬರದೆ ಹಾಗೆಯೇ ಉಳಿದುಕೊಂಡಿವೆ. ದಬ್ಬಾಳಿಕೆಯ ಯಾಜಮಾನ್ಯದ ವಿರುದ್ಧ ಬಂಡಾಯದ ದನಿಯೆತ್ತಿದವರನ್ನೇ ಹತ್ತಿಕ್ಕುವ ಪ್ರಯತ್ನಗಳನ್ನು ಪ್ರಭುತ್ವವು ಮಾಡುತ್ತಲಿದೆ. Mutalik-in-Mangaloreಮಾಧ್ಯಮಗಳು ಟಿಆರ್‌ಪಿ ಸಾಧನೆಗೈಯುವ ಸಲುವಾಗಿ ಮಿಥ್ಯೆಗಳು ಹಾಗೂ ಮೌಢ್ಯಗಳನ್ನು ಪ್ರಸರಿಸುತ್ತಿವೆ. ಟಿವಿ ವಾಹಿನಿಗಳ ಚರ್ಚಾಕೂಟಗಳಲ್ಲಿ ಪ್ರಮೋದ್ ಮುತಾಲಿಕ್‌ರಂತಹ ಮತೀಯ ಅತಿರೇಕವಾದಿಗಳೇ ವಿಜೃಂಭಿಸುತ್ತಿದ್ದಾರೆ. ಅವರ ಉದ್ರೇಕಕಾರಿ ಮಾತುಗಳೇ ನಮ್ಮ ಮಾಧ್ಯಮಗಳ ಬಂಡವಾಳವಾಗಿದೆ. ಪ್ರಗತಿಪರ ಸಂಘಟನೆಗಳು ಇಂತಹ ಪ್ರವೃತ್ತಿಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಿವೆಯಾದರೂ ಕೆಲವು ಬುದ್ದಿಜೀವಿ ಗುಂಪುಗಳು ಪ್ರತಿಭಟನೆಗೆ ಮೂಲಭೂತವಾದಿಗಳಷ್ಟೇ ಉಗ್ರತೆಯ ಮಾರ್ಗವನ್ನು ಅನುಸರಿಸುತ್ತಿವೆ. ಶ್ರೀಸಾಮಾನ್ಯರು ಪ್ರಾಮಾಣಿಕವಾಗಿ ಅನುಸರಿಸುತ್ತಾ ಬಂದಿರುವ ಧರ್ಮ ಸಂಸ್ಕೃತಿಗಳನ್ನೇ ಅವಮಾನಿಸುವ ಮಾತುಗಳನ್ನಾಡುತ್ತಿವೆ. ಇಂತಹ ಕೃತ್ಯಗಳು ಒಟ್ಟಾರೆ ಬುದ್ದಿಜೀವಿ ವರ್ಗದ ಮೆಲೆ ಜನಸಮೂಹದ ವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತಿವೆ.

ಇವೆಲ್ಲದರ ಪರಿಣಾಮವೆಂಬಂತೆ ಇಂದು ಕರಾವಳಿಯ ದೌರ್ಭಾಗ್ಯವು ಇಮ್ಮಡಿಗೊಂಡಿದೆ.

ಗಲ್ಲಿಗೇರಿಸಿಬಿಟ್ಟರೆ ಅತ್ಯಾಚಾರಗಳು ನಿಂತುಬಿಡುತ್ತವೆಯೇ? ಪರಿಹಾರಗಳೇನು?

ತೇಜ ಸಚಿನ್ ಪೂಜಾರಿ

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಯುವತಿಯೊಬ್ಬಳ ಮಾನಭಂಗ ಪ್ರಕರಣವು ಜನಮಾನಸದಲ್ಲಿ ಆಕ್ರೋಶಭರಿತ ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಪ್ರಜಾಪ್ರಭುತ್ವದ ಹೃದಯಭಾಗದಲ್ಲೇ ನಡೆದ ನಿರ್ದಯ ಅತ್ಯಾಚಾರವು ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳಿಗೆ ಕನ್ನಡಿ ಹಿಡಿಯುತ್ತದೆ. ಅತ್ಯಾಚಾರ ಘಟನೆಯು ಸಹಜವಾಗಿಯೇ ಯುವಸಮುದಾಯವನ್ನು ಕೆರಳಿಸಿದೆ. ದೆಹಲಿಯೂ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ-ಧರಣಿಗಳು ನಡೆಯುತ್ತಿವೆ. ಮಹಿಳಾ ಸಂಘಟನೆಗಳು ಏಕಸ್ವರದಲ್ಲಿ ಸ್ತ್ರೀ ಸುರಕ್ಷತೆಯ ಖಾತರಿಗೆ ಸರಕಾರಿ ವ್ಯವಸ್ಥೆಯನ್ನು ಒತ್ತಾಯಿಸುತ್ತಿವೆ. rape-illustrationಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಯ ಇಂತಹ ಚಟುವಟಿಕೆಗಳು ಉತ್ತಮ ಬೆಳವಣಿಗೆಗಳೇ ಆಗಿವೆ. ಆದರೆ ಇದೇ ವೇಳೆಗೆ ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಅತ್ಯಾಚಾರದಂತಹ ಅನಾಗರಿಕ ಹಾಗೂ ಪೈಶಾಚಿಕ ಕೃತ್ಯಗಳನ್ನು ತಡೆಯಲು, ಮರಣದಂಡನೆಯಂತಹ, ಅಷ್ಟೇ ಅನಾಗರಿಕ ಶಿಕ್ಷೆಯ ಜಾರಿಗೆ ಒತ್ತಾಯಿಸುತ್ತಿವೆ. ಘಟನಾ ಕ್ಷಣದ ಭಾವುಕತೆಯು ಸಹಜವಾಗಿಯೇ ಅಂತಹ ಬೇಡಿಕೆಗಳನ್ನು ಅಪೇಕ್ಷಿಸುತ್ತದೆ. ಆದರೆ ವಸ್ತುನಿಷ್ಠವಾದ ಅಧ್ಯಯನಗಳು ಅತ್ಯಾಚಾರದಂತಹ ಅಫರಾಧಗಳ ನಿಯಂತ್ರಣದಲ್ಲಿ ಮರಣದಂಡನೆ ಶಿಕ್ಷೆಯ ಸಾಫಲ್ಯವನ್ನು ಪ್ರಶ್ನಿಸುತ್ತವೆ.

ಇಂತಹ ವಿವೇಚನಾರಹಿತ ಬೇಡಿಕೆಗಳ ಹಿನ್ನೆಲೆಯಲ್ಲಿ ಹಲವು ನಾಗರಿಕ ಹಕ್ಕು ಸಂಘಟನೆಗಳು ಗಲ್ಲು ಶಿಕ್ಷೆಯ ಮುಂದುವರಿಕೆ ಹಾಗೂ ವಿಸ್ತರಣೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಮಹಿಳೆಯರ ಶ್ರೇಯಸ್ಸಿಗೆ ಪ್ರಾಮಾಣಿಕವಾಗಿ ದುಡಿಯುತ್ತಿರುವ ವಿವಿಧ ಮಹಿಳಾ ಒಕ್ಕೂಟಗಳು ಕೂಡಾ ಅತ್ಯಾಚಾರ ತಡೆಯಯಲು ಮರಣದಂಡನೆ ಒಂದು ಪರಿಹಾರ ಎಂಬ ವಾದವನ್ನು ತಳ್ಳಿ ಹಾಕಿವೆ. ಇವೆಲ್ಲಾ ಬೆಳವಣಿಗೆಗಳು ಮರಣದಂಡನೆ ಶಿಕ್ಷೆಯ ಒಟ್ಟಾರೆ ಆಶಯ ಹಾಗೂ ಸಾಫಲ್ಯ ಕುರಿತಾದ ಚರ್ಚೆ ಹಾಗೂ ಅಧ್ಯಯನಗಳಿಗೆ ಅವಕಾಶ ಮಾಡಿಕೊಟ್ಟಿವೆ.

***

ಮರಣದಂಡನೆ ಶಿಕ್ಷೆಯನ್ನು ಶೈಕ್ಷಣಿಕ ಹಾಗೂ ಆರ್ಥಿಕ ನೆಲೆಯಲ್ಲಿ ಮುಂದುವರೆದಿರುವ ರಾಷ್ಟ್ರಗಳು ರದ್ದುಪಡಿಸಿವೆ. ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಹಾಗೂ ಅಮೇರಿಕಾ ಮಾತ್ರವೇ ಇದಕ್ಕೆ ಹೊರತಾಗಿವೆ. ಐರೋಪ್ಯ ಒಕ್ಕೂಟವು ಮರಣದಂಡನೆ ಶಿಕ್ಷೆಯನ್ನು ನಿಷೇದಿಸಬೇಕೆಂದು ತನ್ನ ಸದಸ್ಯ ರಾಷ್ಟ್ರಗಳಿಗೆ ಕಟ್ಟಪ್ಪಣೆ ವಿಧಿಸಿದೆ. ಸಿಂಗಾಪುರ, ತೈವಾನ್, ಇಂಡೋನೇಷಿಯದಂತಹ ದೇಶಗಳು ಗಲ್ಲು ಶಿಕ್ಷೆಯ ಜಾರಿ ಕುರಿತಂತೆ ಸ್ವಯಂ ನಿಯಂತ್ರಣವನ್ನು ಹೇರಿಕೊಂಡಿವೆ. ನಮ್ಮಲ್ಲೂ ಕೂಡಾ ಸರ್ವೋಚ್ಚ ನ್ಯಾಯಾಲಯದ ಮುತುವರ್ಜಿಯ ಫಲವಾಗಿ ಕೇವಲ “ಅಪರೂಪದಲ್ಲಿ ಅಪರೂಪ”ದ ಪ್ರಕರಣಗಳಲ್ಲಿ ಮಾತ್ರವೇ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ. ಉಳಿದಂತೆ ಅಮೇರಿಕಾ ಹಾಗೂ ಚೀನಾ ದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸುತ್ತಿವೆ.

“ಭಯಸೃಷ್ಟಿ” ಗಲ್ಲು ಶಿಕ್ಷೆಯ ಹಿನ್ನಲೆಯಲ್ಲಿ ಇರುವ ಸಾಮಾನ್ಯ ತರ್ಕವಾಗಿದೆ. ಅಂದರೆ ಕಠಿಣ ಶಿಕ್ಷೆಯ ಬೆದರಿಕೆಯನ್ನು ಒಡ್ಡುವ ಮೂಲಕ ಜನರನ್ನು ಅಂತಹ ಅಫರಾಧ ಕೃತ್ಯಗಳಲ್ಲಿ ತೊಡಗದಂತೆ ತಡೆಯುವುದಾಗಿದೆ. ಆದರೆ ಇಂತಹ ಬೆದರುಬೊಂಬೆ ತಂತ್ರದ ಸಾಫಲ್ಯವನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸಿದಾಗ ಮರಣದಂಡನೆಯ ಭಯ ಅಫರಾದೀ ದುಷ್ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿರುವ ಅಂಶವು ಸ್ಪಷ್ಟವಾಗಿ ಗೋಚರಿಸುತ್ತದೆ. ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿರುವ ಐರೋಪ್ಯ ಸಮುದಾಯದ ರಾಷ್ಟ್ರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ಕಠಿಣ ಪ್ರತೀಕಾರಾತ್ಮಕ ಶಿಕ್ಷೆಗಳಿರುವ ಭಾರತ ಹಾಗೂ ಗಲ್ಪ್ ದೇಶಗಳಲ್ಲಿ ದಾಖಲಾಗುತ್ತಿವೆ. ಮರಣದಂಡನೆಯ ಭೀತಿಯಿಂದ ಅಮೇರಿಕಾದಲ್ಲಿ ಗುಂಡಿನ ದಾಳಿಗಳು ನಿಂತಿವೆಯೆ? ಕ್ರೈಮ್ ದಾಖಲೆಗಳ ಪ್ರಕಾರ ಭಾರತದಲ್ಲಿ 1992 ನಂತರ ಹತ್ಯಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಇದೇ ಕಾಲಾವಧಿಯಲ್ಲಿ ಮರಣದಂಡನೆ ಪ್ರಕರಣಗಳೂ ಕೂಡಾ ಸರ್ವೋಚ್ಚ ನ್ಯಾಯಾಲಯದ ರೂಲಿಂಗ್ ಫಲವಾಗಿ ಕಡಿಮೆಯಾಗುತ್ತಿವೆ. 1995ರ ತರುವಾಯ ಭಾರತದಲ್ಲಿ ಕೇವಲ ಕೆಲವು ಗಲ್ಲು ಶಿಕ್ಷೆಗಳು ಜಾರಿಯಾಗಿವೆ. hang-ropeಹೀಗಾಗಿ ತೊಂಭತ್ತರ ದಶಕದ ನಂತರದಲ್ಲಿ ನಮ್ಮ ದೇಶದಲ್ಲಿ ಕಡಿಮೆಯಾಗುತ್ತಿರುವ ಹತ್ಯಾ ಪ್ರಕರಣಗಳಿಗೆ ಕಾರಣಗಳನ್ನು ಅದೇ ಅವಧಿಯಲ್ಲಿ ಕಂಡುಬಂದ ಆರ್ಥಿಕ ಪ್ರಗತಿಯಲ್ಲಿ ಕಾನೂನು ತಜ್ಞರು ಹುಡುಕಿದ್ದಾರೆ.

ನ್ಯಾಯಾಡಳಿತೆಯ ವೈಫಲ್ಯ ಕೂಡಾ ಹಲವು ಚಿಂತಕರನ್ನು ಮರಣದಂಡನೆ ಶಿಕ್ಷೆಗೆ ವಿರೋಧ ವ್ಯಕ್ತಪಡಿಸುವಂತೆ ಮಾಡಿದೆ. ನ್ಯಾಯಾಧೀಶ, ತನಿಖಾ ಸಂಸ್ಥೆ ಹಾಗೂ ಪ್ರಾಸಿಕ್ಯೂಷನ್‌ಗಳ ತಪ್ಪು ನಡೆಗಳು ಶಿಕ್ಷೆಯ ಸ್ವರೂಪವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ಅಮೇರಿಕಾದ ಅಪರಾಧ ತನಿಖಾ ಪ್ರಕ್ರಿಯೆಯಲ್ಲಿ ಡಿಎನ್ಎ ಬೆರಳಚ್ಚು ತಂತ್ರಜ್ಞಾನ ಜಾರಿಗೆ ಬಂದ ತರುವಾಯದಲ್ಲಿ (1990) ಸಾಂಪ್ರದಾಯಿಕ ತನಿಖೆ ಪ್ರಕ್ರಿಯೆಯಲ್ಲಿ ಆರೋಪ ಸಾಬೀತಾಗಿದ್ದ ಸುಮಾರು 300 ಆರೋಪಿಗಳು ದೋಷಮುಕ್ತಗೊಂಡಿದ್ದಾರೆ. ಅದರಲ್ಲಿ ಸುಮಾರು 17 ಪ್ರಕರಣಗಳು ಮರಣದಂಡನೆಯ ಶಿಕ್ಷೆಗೆ ಸಂಬಂಧಿಸಿದ್ದವು. ಇಂತಹ ಸುಳ್ಳು ಸಾಕ್ಷ, ಒತ್ತಾಯದ ತಪ್ಪೊಪ್ಪಿಗೆ ಹಾಗೂ ದೋಷಪೂರಿತ ಪೊರೆನ್ಸಿಕ್ ಮೊದಲಾದ ಕೊರತೆಗಳು ಕಾರಣಿಸುವ ಮರಣದಂಡನೆಯಂತಹ ಶಿಕ್ಷೆಗಳು ಅನಾಹುತಕಾರಿಯಾಗಿರುತ್ತವೆ. ಭಾರತದ ಸರ್ವೋಚ್ಚ ನ್ಯಾಯಾಲಯವೇ ಹದಿಮೂರು ಆರೋಪಿಗಳಿಗೆ ತಪ್ಪಾಗಿ, ಅಂದರೆ ಸುಪ್ರೀಂ ಕೋರ್ಟ್‌ನ ರೂಲಿಂಗನ್ನು ಮೀರಿ, ಗಲ್ಲು ಶಿಕ್ಷೆ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಅವರಿಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಹಲವು ನಿವೃತ್ತ ನ್ಯಾಯಾಧೀಶರುಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಇವುಗಳ ಜೊತೆಗೆ, ಸಮಾಜೋ ಆರ್ಥಿಕ ಅಂಶಗಳ ಅಧ್ಯಯನಗಳು ಕೂಡಾ ಮರಣದಂಡನೆ ಶಿಕ್ಷೆಯ ವಿಶ್ಲೇಷಣೆಯಲ್ಲಿ ಬಹಳ ಮಹತ್ವವನ್ನು ಪಡೆಯುತ್ತದೆ. ಇತಿಹಾಸದುದ್ದಕ್ಕೂ ನಿರ್ಗತಿಕ, ಬಡ ಹಾಗೂ ದುರ್ಬಲ ಜನಾಂಗಗಳೇ ರಾಜ್ಯವು ನೀಡುವ ಶಿಕ್ಷೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗಿವೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಸಮಾಜೋ ಆರ್ಥಿಕ ಪ್ರಕ್ಷುಬ್ಧತೆಗಳು ವ್ಯಕ್ತಿಯನ್ನು ಸುಲಭವಾಗಿ ಅಪರಾಧ ಕೃತ್ಯಗಳತ್ತ ತಳ್ಳುತ್ತವೆ. ಹಸಿವು ಹಾಗೂ ಅಜ್ಞಾನ ಸಹಜವಾಗಿಯೇ ತರ್ಕದ ನೆರವನ್ನು ಪಡೆಯುವುದಿಲ್ಲ. ಹಿಗಾಗಿಯೇ ಕಸಬ್‌ನಂತಹ ಬಲಿಪಶುಗಳು ಇನ್ಯಾರದ್ದೋ ಹಿಂಸೆಯ ಆಟದಲ್ಲಿ ದಾಳವಾಗುತ್ತಾರೆ: ಮತ್ತು ರಾಜ್ಯವು ನೀಡುವ ಅಷ್ಟೂ ಶಿಕ್ಷೆಗಳಿಗೆ ಪಾತ್ರರಾಗುತ್ತಾರೆ. ಸೂತ್ರಧಾರ ಮಾತ್ರ ರಾಜ್ಯದ, ಸಮಾಜದ ಪೋಷಣೆಯಲ್ಲಿ ನಿಶ್ಚಿಂತನಾಗಿರುತ್ತಾನೆ. ಎರಡನೆಯದಾಗಿ, ತಮ್ಮ ಮೇಲಣ ಆರೋಪಗಳನ್ನು ಅಲ್ಲಗೆಳೆಯಲು ನಿರ್ಗತಿಕರಲ್ಲಿ ಸಂಪನ್ಮೂಲಗಳ ಕೊರತೆಯಿರುತ್ತದೆ. ಮನು ಶರ್ಮಾನಂತಹ ಹೈಪ್ರೊಫೈಲ್ ಆರೋಪಿಗಳ ರಕ್ಷಣೆಗೆ ಜೇಠ್ಮಲಾನಿಗಳಂತಹ ಘನ ವಕೀಲರ ದಂಡೇ ಇರುತ್ತದೆ. ಅದರೆ ಬಡ ಆರೋಪಿಗಳು ಸರಿಯಾದ ಡಿಫೆನ್ಸಿನ ಕೊರತೆಯಿಂದಾಗಿ ಅವರು ನಿರಪರಾಧಿಗಳಾಗಿದ್ದ ಪಕ್ಷದಲ್ಲಿ ಕೂಡಾ ಅಪರಾಧಿಗಳಾಗಿ ದೋಷಿತರಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಮರಣದಂಡನೆಯ ವಿಕಾಸವೂ ಕೂಡಾ ಆಯಾ ಯುಗದ ಮೌಲ್ಯಗಳನ್ನು ಅನುಸರಿಸಿಯೇ ನಡೆದಿದೆ. ಪ್ರಾಚೀನ ಹಾಗೂ ಮಧ್ಯಯಗದಲ್ಲಿ “ಬಹು ಯಾತನೆಯಿಂದ ಕೂಡಿದ ಸಾವು” ಮರಣದಂಡನೆಯ ತತ್ವವಾಗಿತ್ತು. ಹೀಗಾಗಿಯೇ ಅಂತ್ಯಕಾಲದಲ್ಲಿ ಅತೀವ ವೇದನೆಯನ್ನುಂಟು ಮಾಡುವ ಶಿಕ್ಷೆಗಳಾದ ಶಿಲುಬೆಗೇರಿಸುವುದು, ಸಮುದ್ರಕ್ಕೆ ತಳ್ಳುವುದು, ಅಂಗ ಛೇದನ, ಪ್ರಾಣಿಗಳಿಗೆ ಆಹಾರವಾಗಿ ನೀಡುವುದು ಇವೇ ಮೊದಲಾದವುಗಳನ್ನು ವಿವಿಧ ನಾಗರಿಕತೆಗಳು ಅನುಸರಿಸುತ್ತಿದ್ದವು. ಮುಂದೆ ಆಧುನಿಕ ಕಾಲಘಟ್ಟದಲ್ಲಿ ಪ್ರೆಂಚ್ ಕ್ರಾಂತಿಯ ತರುವಾಯ “ಯಾತನಾ ರಹಿತ ಜೀವ ಹರಣ” ಶಿಕ್ಷೆಗೆ ಹಲವು ದೇಶಗಳು ಮನಸ್ಸು ಮಾಡಿದವು. ಮಾನವತೆಯ ಬೌದ್ದಿಕತೆಯಲ್ಲಿ ಕಂಡುಬಂದ ಬೆಳವಣಿಗೆಗಳು ಅಂತಹ ಬದಲಾವಣೆಗೆ ಕಾರಣವಾಗಿದ್ದವು. ಹೀಗಾಗಿಯೇ ಗಿಲೊಟಿನ್ ಯಂತ್ರ, ಗಲ್ಲು, ವಿಷಕಾರಿ ಇಂಜೆಕ್ಷನ್ ಹಾಗೂ ಇಲೆಕ್ಟ್ರಿಕ್ ಕುರ್ಚಿಗಳು ಬಳಕೆಗೆ ಬಂದವು. ಅಂದಿನಿಂದ ಇಂದಿನವರೆಗೆ ನಮ್ಮ ಬೌದ್ಧಿಕತೆಯಲ್ಲಿ ಹಲವು ಅಭೂತಪೂರ್ವ ಉನ್ನತಿಗಳು ದಾಖಲಾಗಿವೆ. “ನಾಗರಿಕತೆ”ಯ ಅರ್ಥವೂ ಬಹುವಾಗಿ ವಿಸ್ತರಿಸಲ್ಪಟ್ಟಿದೆ. ಇಂತಹ ಪರಿವೇಶದಲ್ಲಿ ಮರಣದಂಡನೆ ಶಿಕ್ಷೆಯ ನಿಷೇಧ ಅದರ ವಿಕಾಸ ಹಾದಿಯ ಸಹಜ ತಾತ್ವಿಕ ಬೆಳವಣಿಗೆಯಾಗಿರುತ್ತದೆ.

ಅಪರಾಧವನ್ನು ನಾವು ಗ್ರಹಿಸುವ ರೀತಿಯಲ್ಲೂ ಭಿನ್ನತೆಗಳಿವೆ ಎಂಬ ಅಂಶ ಇಲ್ಲಿ ಉಲ್ಲೇಖನೀಯ. ಸರಬ್ಜಿತ್ ಸಿಂಗ್‌ಗೆ ಪಾಕಿಸ್ತಾನದಲ್ಲಿ ನೀಡಿರುವ ಶಿಕ್ಷೆಯನ್ನು ಮಾಫಿ ಮಾಡಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅದೇ ನಾವು ಅಪ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಸರಬ್ಜಿತ್ ಸಿಂಗ್ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಂದು ಪಾಕ್ ಹೇಳುತ್ತಿದೆ. ಜೊತೆಗೆ ಈಗಾಗಲೇ ಪಾಕ್ ಸೆರೆವಾಸದಿಂದ ಹೊರಬಂದು ಭಾರತ ಪ್ರವೇಶಿಸಿರುವ ಇನ್ನಿಬ್ಬರು ಕೈದಿಗಳು ತಾವು ರಾ ಗೂಡಾಚರರಾಗಿದ್ದ ವಿಚಾರವನ್ನು ಇಲ್ಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಅನ್ಸಾರ್ ಬರ್ನಿಯಂತಹ ಪಾಕ್ ಮಾನವ ಹಕ್ಕು ಹೋರಾಟಗಾರರು ಸರಬ್ಜಿತ್ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ. ಇದು “ಕಟ್ಟುವ” ನೆಲೆ. ನಮ್ಮಲ್ಲೂ ವಿವಿಧ ಆರೋಪಗಳ ಅಡಿಯಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ರಾಜೀವ ಹಂತಕರು ಹಾಗೂ ಬಲ್ವಂತ್ ಸಿಂಗ್ ರೊಜನಾ ಅವರ ಮರಣದಂಡನೆ ರದ್ದತಿ ಕೋರಿ ಕ್ರಮವಾಗಿ ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಲ್ಲಿ ನಡೆದ ಒತ್ತಾಯದ ಅಭಿವ್ಯಕ್ತಿಗಳನ್ನು ನಾವು ಕಂಡಿದ್ದೇವೆ. ಅಲ್ಲದೆ ಸೈನಿಕರು ನಡೆಸುವ ಅತ್ಯಾಚಾರ ಕೊಲೆಗಳನ್ನು ಒಪ್ಪುತ್ತಾ ಅವರನ್ನು ಆರಾಧಿಸುವ ವರ್ಗಗಳೂ ನಮ್ಮಲ್ಲಿವೆ. ಹೀಗಾಗಿಯೇ ಮಣಿಪುರದ rape-and-murder-of-thangjam-manorama-protestsತಂಗಜಮ್ ಮನೋರಮಾ (2004) ಮತ್ತು ಕಾಶ್ಮೀರದ ಸೋಫಿಯಾದ ನೇಲೋಫರ್ ಹಾಗೂ ಅಸೀಯಾರ ಅತ್ಯಾಚಾರ ಹಾಗೂ ಹತ್ಯಾ ಪ್ರಕರಣಗಳು ಕಾಲಗರ್ಭದಲ್ಲಿ ಮೌನವಾಗಿ ಕುಳಿತಿವೆ. ಹಾಗೆಯೇ ಪ್ಯಾಲೆಸ್ತೈನಿನಲ್ಲಿ ತಮ್ಮ ದೇಶ ನಡೆಸುತ್ತಿರುವ ಅತ್ಯಾಚಾರಗಳನ್ನು ಸಮ್ಮತಿಸುವ ಇಸ್ರೇಲಿಗರಿದ್ದಾರೆ. ಇಂತಹ ಪೃವೃತ್ತಿಗಳು ನಮ್ಮೊಳಗೇ ಇರುವ ದೌರ್ಬಲ್ಯಗಳನ್ನು ಪ್ರತಿನಿಧಿಸುತ್ತವೆ. ಮರಣದಂಡನೆಯಂತಹ ಶಿಕ್ಷೆಗಳೂ ಕೂಡಾ ಇಂತಹದ್ದೇ ದೇಶ, ಜಾತಿ, ಜನಾಂಗ, ವೃತ್ತಿ ಮೊದಲಾದ ಮಾನದಂಡಗಳನ್ನು ಆಧರಿಸಿಯೇ ಸ್ವೀಕರಣೆ ಯಾ ನಿರಾಕರಣೆಯ ನೆಲೆಯನ್ನು ಪಡೆಯುತ್ತವೆ. ಇಂತಹ ಎಲ್ಲಾ ಮಿತಿಗಳನ್ನು ಮೀರಿ ವ್ಯಕ್ತಿ ಹಾಗೂ ರಾಜ್ಯ ಇವೆರಡರ ಹಿಂಸೆಗಳನ್ನೂ ಏಕಕಾಲಕ್ಕೆ ಧಿಕ್ಕರಿಸಿ ಸ್ವಚ್ಛ ಜೀವಪರ ಧೋರಣೆಯನ್ನು ರೂಡಿಸಿಕೊಂಡಾಗಲೇ ಮನುಕುಲದ ಶ್ರೇಯಸ್ಸು ಸಾಧಿತವಾಗುತ್ತದೆ.

***

ಮತ್ತೆ ಅತ್ಯಾಚಾರ ಪ್ರಕರಣಗಳತ್ತ ದೃಷ್ಠಿ ಹಾಯಿಸಿದಲ್ಲಿ ಸದ್ಯದ ಗಲ್ಲು ಶಿಕ್ಷೆಯ ಬೇಡಿಕೆಯು ತೀರಾ ಕ್ಷುಲ್ಲಕವಾಗಿ ಕಾಣುತ್ತದೆ. ಇದು ಪ್ರಸ್ತುತ ಸಮಸ್ಯೆಯ ಮೂಲ ಹಾಗೂ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆಯ ದಾರಿ ತಪ್ಪಿಸುತ್ತದೆ. ಇತ್ತೀಚೆಗೆ ಸಮಸ್ಯೆಗಳಿಗೆ ಕೇವಲ ವ್ಯವಸ್ಥಾತ್ಮಕ ನೆಲೆಯಲ್ಲಿ ಪರಿಹಾರಗಳನ್ನು ಹುಡುಕುವ ಪ್ರವೃತ್ತಿಗಳು ಹೆಚ್ಚುತ್ತಿವೆ. ‘ಭ್ರಷ್ಟಾಚಾರದ ನಿವಾರಣೆಗೆ ಜನಲೋಕಪಾಲ’, ‘ಅತ್ಯಾಚಾರ ತಡೆಗೆ ಗಲ್ಲು’ ಇಂತಹ ಏಕಸೂತ್ರದ ಸಿಸ್ಟಮಿಕ್ ಬದಲಾವಣೆಗಳೇ ಅಂತಿಮ ಪರಿಹಾರವೆಂಬಂತೆ ಪ್ರತಿಪಾದನೆಯಾಗುತ್ತಿವೆ. ಇಂತಹದ್ದೇ ಮನಃಸ್ಥಿತಿಗಳು ಇನ್ನೊಂದೆಡೆ ಅತ್ಯಾಚಾರ ತಡೆ ತಂತ್ರವಾಗಿ ಹೆಣ್ಣುಮಕ್ಕಳಿಗೆ ವಸ್ತ್ರಸಂಹಿತೆಯನ್ನು ಬೋಧಿಸುತ್ತಿವೆ.

ಮೊದಲ ಪರಿವರ್ತನೆ ಆಗಬೇಕಿರುವುದು ವ್ಯಕ್ತಿಯ ಮಟ್ಟದಲ್ಲೇ ಆಗಿದೆ. ಅತ್ಯಾಚಾರ ಪುರುಷನ ಆಹಂಕಾರದ, ದರ್ಪದ ಅಭಿವ್ಯಕ್ತಿಯೂ ಆಗಿದೆ. ಅಂತಹ ಹಿಂಸಾರತಿಯ ಭಾವನೆಗಳ ಜಾಗದಲ್ಲಿ ಸ್ತ್ರೀಯನ್ನು ಗೌರವಿಸುವ, ಆಕೆಯನ್ನು ಸಮಾನಳಾಗಿ ಕಾಣುವ ಚಿಂತನೆಗಳು ಹುಟ್ಟಿಕೊಳ್ಳಬೇಕಿದೆ. ಹೀಗಾದಲ್ಲಿ ಮಾತ್ರವೇ ಹೆಣ್ಣನ್ನು ಕೇವಲ ಭೋಗವಸ್ತುವಾಗಿ ಕಾಣುವ ಸಮಾಜದ ಮನೋಧರ್ಮದಲ್ಲಿ ಬದಲಾವಣೆ ಕಂಡುಬರುತ್ತದೆ. ಇದಕ್ಕೆ ಅವಶ್ಯವಿರುವುದು ಮುಕ್ತವಾದ ಸಾಮಾಜೀಕರಣ ಪ್ರಕ್ರಿಯೆ. ಪೃವೃತ್ತಿಗಳ ಸ್ಥಾನದಲ್ಲಿ ಸಂಸ್ಕ್ರತಿಯನ್ನು ಪ್ರತಿಷ್ಠಾಪಿಸುವ ಪ್ರಕ್ರಿಯೆಯಲ್ಲಿ ಧರ್ಮ ದಯನೀಯ ವೈಫಲ್ಯ ಕಂಡಿದೆ. ಹೀಗಾಗಿ ಸಾಮಾಜಿಕರಣದ ಹೊಸ ನೆಲೆಗಳ ಶೋಧ ನಡೆಯಬೇಕಿದೆ. ಮಾನವ ಹಕ್ಕುಗಳು, ಸಹಜ ನ್ಯಾಯ, ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ನೆಲೆಯಲ್ಲಿ ನವ ಸಾಮಾಜಿಕರಣವು ರೂಪುಗೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ನಡೆಯಬೇಕಿರುವುದು ಪೋಲಿಸು ಹಾಗೂ ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆಗಳು. ಆಗ ಮಾತ್ರವೇ ಅತ್ಯಾಚಾರದಂತಹ ಪಿಡುಗುಗಳಿಗೆ ಅಂತ್ಯ ಹಾಡಬಹುದಾಗಿದೆ.

ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯ

– ತೇಜ ಸಚಿನ್ ಪೂಜಾರಿ

ಸೃಷ್ಠಿ ಹಾಗೂ ಲಯ ಭರತಖಂಡದ ಸಾಂಸ್ಕ್ರತಿಕ ಬದುಕಿನ ಎರಡು ಮಹತ್ವದ ಪಾರಂಪರಿಕ ಪರಿಭಾಷೆಗಳಾಗಿವೆ. ಇವೆರಡೂ ಕಾರ್ಯಗಳಿಗೆ ಅಧಿಪತಿ ಸ್ಥಾನದಲ್ಲಿ ಪ್ರತ್ಯೇಕ ದೈವ ನಿಯಾಮಕರಿದ್ದಾರೆ. ಪ್ರತ್ಯೇಕತೆಯ ಅಂಶವು ಇಲ್ಲಿನ ತಾತ್ವಿಕ ಅವಶ್ಯಕತೆಯೂ ಆಗಿದೆ. ಯಾಕೆಂದರೆ, ಸೃಷ್ಠಿಕರ್ತ ಹಾಗೂ ಲಯಕರ್ತ ಒಬ್ಬನೇ ಆದಲ್ಲಿ ಕೆಡುಕನ್ನು ಯಾಕೆ ಸೃಷ್ಠಿಸಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಂತಹ ಕನಿಷ್ಠ ವೈಚಾರಿಕತೆಯ ಸಂಶಯ ಇಂದು ನಮ್ಮ ಕನ್ನಡ ವಾಹಿನಿಗಳ ಪ್ರಜ್ಞಾವಂತ ವೀಕ್ಷಕರಲ್ಲಿ ಸೃಷ್ಠಿಯಾಗುತ್ತಿದೆ. ಅವುಗಳು ಒಂದೆಡೆ ನಿತ್ಯಾನಂದ ರುಷಿಕುಮಾರರಂತಹ ಸ್ವಾಮಿಗಳ ಕಾಷಾಯ ವಸ್ತ್ರದ ಬಣ್ಣ ಬಯಲು ಮಾಡುತ್ತಿದ್ದರೆ ಇನ್ನೊಂದೆಡೆ ಅಂತಹದ್ದೇ ಕ್ರತ್ರಿಮ ಸ್ವಾಮೀಜಿಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿವೆ. ಅನ್ಯಾಯದ ಲಯಕರ್ತನ ಸೋಗಿನಲ್ಲೇ ನಡೆಯುತ್ತಿರುವ ಸೃಷ್ಠಿಕರ್ತನ ಕಾರ್ಯಾಚರಣೆಗೆ ಪ್ರಾತಃಕಾಲದ ಹೊತ್ತು ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಜೋತಿಷ್ಯ ಸಮಾಲೋಚನೆಯ ಕಾರ್ಯಕ್ರಮಗಳು ವೇದಿಕೆಯಾಗಿ ಬಳಕೆಯಾಗುತ್ತಿವೆ. ‘ಮಹರ್ಷಿ ದರ್ಪಣ’, ‘ಓಂಕಾರ ಮಾತುಕತೆ’, ‘ಪ್ರಣವಂ’, ‘ಆಯುಷ್ಮಾನ್ ಭವ’, ‘ರಾಶಿಫಲ’, ಮೊದಲಾದ  ಜ್ಯೋತಿಷಿ ಕಾರ್ಯಕ್ರಮಗಳು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯದ ಮಾಧ್ಯಮಗಳಾಗಿ ರೂಪುಗೊಳ್ಳುತ್ತಿವೆ.

***

“ಆತಂಕ” ಹಾಗೂ “ಬೆರಗು” ದೈವ ನಿರ್ಮಾಣ ಪ್ರಕ್ರಿಯೆಯ ಎರಡು ಪ್ರಮುಖ ಅಂಶಗಳು. “ಅಜ್ಞಾನ” ಅವುಗಳ ಕಾರ್ಯಾಚರಣೆಗೆ ವೇದಿಕೆ ಒದಗಿಸಿಕೊಡುತ್ತದೆ. ಹೀಗಾಗಿಯೇ ನಮ್ಮ ಹಿರೀಕರು ಗಾಳಿ, ಅಗ್ನಿ, ಬೆಳಕು, ಮಳೆ ಇವೇ ಮೊದಲಾದ ಸಹಜ ಪ್ರಾಕೃತಿಕ ಅಂಶಗಳ ಮರ್ಮ ಅರಿಯಲಾಗದೆ ಬೆರಗು ಪಟ್ಟು ಕ್ರಮೇಣ ಆತಂಕಿತರಾಗಿ ಅವುಗಳಿಗೆ ಅತಿಮಾನುಷ ದೈವಸ್ವರೂಪವನ್ನು ನೀಡಿದ್ದರು. ಇದು ಶತಶತಮಾನಗಳ ಹಿಂದಿನ ಕತೆ. ಆದರೆ ಇಂದೂ ಕೂಡಾ ಅದೇ ಅಂಶಗಳನ್ನು ಮುಂದಿಟ್ಟುಕೊಂಡು ಕನ್ನಡ ವಾಹಿನಿಗಳು ದೈವ ಸ್ವರೂಪಿ ಸ್ವಾಮೀಜಿಗಳನ್ನು ನಿರ್ಮಿಸ ಹೊರಟಿವೆ. ಇಲ್ಲಿ ಹೊಸ ಸೇರ್ಪಡೆ “ಪ್ರಲೋಭನೆ”ಯ ಅಂಶ. ನಮ್ಮ ಬೌಧ್ಧಿಕ ದಿವಾಳಿತನ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳು ಟೆಲಿವಿಷನ್ ಚಾನೆಲ್‌ಗಳ ಇಂತಹ ಅಸಹ್ಯ ಹಾಗೂ ಸಮಾಜ ವಿರೋಧಿ ಕಾರ್ಯತಂತ್ರಗಳಿಗೆ ಅವಕಾಶ ಮಾಡಿಕೊಡುತ್ತಿವೆ.

***

ಆತಂಕ ಭಾವನೆಯ ನಿರ್ದಿಷ್ಟ ಗುಣ ವಿಶೇಷತೆಗಳನ್ನು ಕನ್ನಡ ಟೆಲಿವಿಷನ್ ಚಾನಲ್‌ಗಳು ತಮ್ಮ ಕುತ್ಸ್ತಿತ ಉದ್ದೇಶಗಳ ಈಡೇರಿಕೆಗೆ ಬಳಸಿಕೊಳ್ಳುತ್ತಿವೆ. ಪ್ರಸಾರ ಮಾಧ್ಯಮ ಕ್ಷೇತ್ರದಲ್ಲಿ “ಆತಂಕ ಸನ್ನಿವೇಶ” ಮಾರುಕಟ್ಟೆ ಮೌಲ್ಯವನ್ನು ಹೊಂದಿರುತ್ತದೆ. ಮನೋವೈಜ್ಞಾನಿಕ ನೆಲೆಯಲ್ಲಿ ಜನರನ್ನು ಅತಿಮಾನುಷತೆಯತ್ತ ನೂಕಬಲ್ಲ ಶಕ್ತಿಯು ಕೂಡಾ ಆತಂಕ ಭಾವಕ್ಕಿದೆ. ಇದೇ ಹಿನ್ನೆಲೆಯಲ್ಲಿ ಆತಂಕ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಕನ್ನಡ ವಾಹಿನಿಗಳು ಕಾರ್ಯಾಚರಿಸುತ್ತಿವೆ. ನಾನಾ ನೆಲೆಯ ಹಾಗೂ ನಾನಾ ನಮೂನೆಯ ಬೀತಿ ಉಂಟುಮಾಡುವ ಸನ್ನಿವೇಶಗಳನ್ನು ಜನಮಾಸದಲ್ಲಿ ಸೃಷ್ಟಿಸಿ ಟಿ.ಆರ್.ಪಿ. ಸಾಧನೆಗೈಯಲು ಹೊಂಚುಹಾಕುತ್ತಿವೆ. ಒಂದೆಡೆ ನೆರೆ, ಬರ, ತ್ಸುನಾಮಿ, ಸೌರ ಮಾರುತಗಳು, ಸೂಪರ್‌ಮೂನ್, ಶುಕ್ರ ಸಂಕ್ರಮಣ, ಅಗ್ನಿಸ್ಪೋಟ ಮೊದಲಾದ ಸಹಜ ಪ್ರಾಕೃತಿಕ ವಿದ್ಯಮಾನಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿವೆ. ಇನ್ನೊಂದೆಡೆ ಮಹಾಪ್ರಳಯ, ಭೂಪಥ ಬದಲಾವಣೆ, ಮನುಕುಲದ ನಾಶ ಮೊದಲಾದ ಮಿಥ್ಯೆಗಳು ಹಾಗೂ ಅವೈಜ್ಞಾನಿಕ ಪಂಚಾಂಗಗಳು ಮತ್ತು ಗ್ರಹಗತಿ ಆಧಾರಿತ ಸುಳ್ಳಿನ ಕಂತೆಗಳನ್ನೇ ಸತ್ಯವೆಂಬತೆ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿವೆ. ಜೊತೆಗೆ ಸಹಜವಾಗಿಯೇ ಆತಂಕ ಪಡಬೇಕಾಗಿರುವ ಹವಾಮಾನ ಬದಲಾವಣೆಗಳಂತ ವೈಜ್ಞಾನಿಕ ವಿಚಾರಗಳ ಸುತ್ತ ಇನ್ನಷ್ಟು ಅನಾವಶ್ಯಕ ಹಾಗೂ ಅವೈಜ್ಞಾನಿಕ ಆತಂಕಗಳನ್ನು ಸೃಷ್ಟಿಸಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ಈ ಮೂರು ನಮೂನೆಯ ಕಾರ್ಯಕ್ರಮಗಳ ತತ್‌ಕ್ಷಣದ ಉದ್ದೇಶ ಒಂದೇ ಆಗಿದೆ . ಅದು, “ಆತಂಕ ನಿರ್ಮಾಣ”.

ಇವುಗಳ ಜೊತೆಗೆ, ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ಇನ್ನೂ ಕೆಲವು ಕಾರ್ಯಕ್ರಮಗಳು ಜನಮನದಲ್ಲಿ ಬೆರಗನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆಕರ್ಷಕ ನಿರೂಪಣ ತಂತ್ರಗಳನ್ನು ಹೊಂದಿರುವ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ, ತರ್ಕದ ಗೋಜಿಗೆ ಹೋಗದ ಸಾಮಾನ್ಯ ಪ್ರೇಕ್ಷಕ “ಹೀಗೂ ಉಂಟೆ?” ಎಂಬ ಬೆರಗಿಗೆ ಖಂಡಿತ ಒಳಗಾಗುತ್ತಾನೆ. ಎಲ್ಲೋ ಒಂದು ಮೂಲೆಯಲ್ಲಿ ಇರೋ ಸೀಮಿತ ವ್ಯಾಪ್ತಿಯ ಗುಡಿ ದೇಗುಲಗಳು, ಧರ್ಮ ಜೀವಿಗಳು ಮತ್ತು ಕಾಗೆ, ಗೂಬೆ, ಹಲ್ಲಿ , ಹದ್ದು, ನಂದಿ, ಎಮ್ಮೆ ಮೊದಲಾದ ಪ್ರಾಣಿ ಪಕ್ಷಿಗಳು, ಹಾಗೆಯೇ ದೆವ್ವ ಭೂತ ಪಿಶಾಚದಂತಹ ಭ್ರಮೆಗಳು ಹಾಗೂ ಅಮಾವಾಸ್ಯೆ ಹುಣ್ಣಿಮೆಯಂತ ದಿನ ವಿಶೇಷತೆಗಳು- ಇವುಗಳಿಗೆ ಜನಪದೀಯ ನಂಬುಗೆಗಳು ಆರೋಪಿಸಿರುವ ಅತೀಂದ್ರಿಯ ಶಕ್ತಿಗಳನ್ನೇ ಕೇಂದ್ರವಾಗಿಟ್ಟು ಪ್ರೇಕ್ಷಕ ಸಮೂಹದಲ್ಲಿ “ಅಚ್ಚರಿ” ಉಂಟುಮಾಡುವ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಜೊತೆಗೆ ಜನ್ಮ “ಜನ್ಮಾಂತರ” ಸರಪಳಿಯ ಸತ್ಯಗಳನ್ನು ಹೆಕ್ಕಿ ತೆಗಿಯುತ್ತಿರುವಂತೆ ಬಿಂಬಿಸಲ್ಪಡುವ ಸಮ್ಮೋಹನ ಆಧಾರಿತ ಕಾರ್ಯಕ್ರಮಗಳು, ರಹಸ್ಯ-ನಿಗೂಢ ವಿಚಾರಗಳು ಜನರ ಮನದಲ್ಲಿ ವಾರಗಟ್ಟಲೆ ಗುಂಯಿಗುಡುವಂತೆ ಮಾಡುತ್ತಿವೆ.

ಆತಂಕ ಹಾಗೂ ಬೆರಗು ಸೃಷ್ಟಿಯ ಕಾರ್ಯಕ್ರಮಗಳ ಜೊತೆಜೊತೆಗೆ ವೀಕ್ಷಕರಿಗೆ ಪ್ರಲೋಭನೆ ಒಡ್ಡುವ ಕೆಲಸವನ್ನು ಕೂಡಾ ಕನ್ನಡವಾಹಿನಿಗಳು ಮಾಡುತ್ತಿವೆ. ಈಗಾಗಲೇ ಆಸ್ತಿತ್ವದಲ್ಲಿರುವ ಧರ್ಮ ಹಾಗೂ ಶಕುನ ಪರಂಪರೆಗಳಿಂದ ಅವುಗಳು ಪ್ರಲೋಭನಾ ಸಾಮಾಗ್ರಿಗಳನ್ನು ಪಡೆದುಕೊಳ್ಳುತ್ತಿವೆ. ಪ್ರಲೋಭನೆಯ ಅಂಶವು ಸಾಮಾನ್ಯವಾಗಿ ಅಸುರಕ್ಷಿತ ಭಾವ ವಾತಾವರಣದಲ್ಲಿ ಕಾರ್ಯಾಚರಿಸುತ್ತದೆ. ಅಂತೆಯೇ, ಜಾಗತಿಕರಣದ ಹಿನ್ನೆಲೆಯಲ್ಲಿ ಇಂದು ಸೃಪ್ಟಿಯಾಗಿರುವ ಅಸ್ಥಿರತೆ ಹಿಂಸೆ ಹಾಗೂ ಮೌಲ್ಯ ಕ್ಷಯದಂತ ಅಧಃಪತನದ ಪರಿವೇಶಗಳು ಪ್ರಲೊಭನೆಗೆ ಅವಕಾಶವೀಯುತ್ತಿವೆ. ಕನ್ನಡ ವಾಹಿನಿಗಳು ಇಂತಹ ವಿಷಮ ಪರಿಸ್ಥಿತಿಗಳ ಭರಪೂರ ಲಾಭ ಪಡೆಯುತ್ತಿವೆ. ತೀರ್ಥಕ್ಷೇತ್ರ ಪ್ರಯಾಣ, ವಾಹನ ಹಾಗೂ ದೂರವಾಣಿ ಸಂಖ್ಯಾವಿಶೇಷಗಳು, ವಾಸ್ತು ಬದಲಾವಣೆಗಳು, ಮಂತ್ರ ತಂತ್ರಗಳ ಆಚರಣೆ ಮೊದಲಾದ ಅವೈಜ್ಞಾನಿಕ ಹಾಗೂ ಸಮೂಹ ಸನ್ನಿಯ ಆಯ್ಕೆಗಳನ್ನು ನೀಡುತ್ತಾ ಒಳಿತಾಗುವ ಪ್ರಲೋಭನೆಯನ್ನು ಒಡ್ಡುತ್ತಿವೆ.

***

ಹೀಗೆ, ಕನ್ನಡ ದೂರದರ್ಶನ ಚಾನೆಲ್‌ಗಳು ಆತಂಕ, ಬೆರಗು ಹಾಗೂ ಪ್ರಲೋಭನೆಯ ಸಂಕೀರ್ಣ ವಾತಾವರಣವೊಂದನ್ನು ಸೃಷ್ಠಿಸಿ ಅಲ್ಲಿ ಭಾವಿ ಸ್ವಾಮೀಜಿಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡುತ್ತಿವೆ. ಅಧ್ಯಾತ್ಮಿಕ ಜಿಜ್ಞಾಸೆಗಳು ಹಾಗೂ ಸಾಧನೆಗಳ ಮುಖಾಂತರ ಗುರುಸ್ಥಾನ ಸಂಪಾದನೆ ಮಾಡುವ ಪರಂಪರೆಯು ಇಂದು ನಮ್ಮಲ್ಲಿ ಇಲ್ಲವಾಗಿದೆ. ಅದರ ಸ್ಥಾನದಲ್ಲಿ ಕೇವಲ ಬಾಹ್ಯ ಸೌಂದರ್ಯದ ನೆಲೆಯಲ್ಲಿ ಸ್ವಾಮಿತ್ವದ ಪ್ರಭಾವಳಿಯನ್ನು ದಕ್ಕಿಸಿಕೊಳ್ಳುವ ಹುನ್ನಾರುಗಳು ನಡೆಯುತ್ತಿವೆ. ವೈಚಾರಿಕತೆಯ ಪ್ರವರ್ತರಾಗಬೇಕಿದ್ದ ನಮ್ಮ ಟೆಲಿವಿಷನ್ ಚಾನಲ್‌ಗಳು ಇಂತಹ ಕುತಂತ್ರಗಳಲ್ಲಿ ಸ್ವಯಂಸ್ಫೂರ್ತಿಯಿಂದ ಭಾಗಿಯಾಗಿರುತ್ತಿರುವುದು ಸದ್ಯದ ಸಾಮಾಜಿಕ ಸಂದರ್ಭದ ದುರ್ದೈವವಾಗಿದೆ.

ಆಕರ್ಷಕ ವೇದಿಕೆ, ಗಮನ ಸೆಳೆಯುವ ನಿರೂಪಣೆ ಹಾಗೂ ನಿಖರ ಸಂಬೋಧನೆ; ಇವು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯದ ತಂತ್ರ ವಿಶೇಷತೆಗಳಾಗಿವೆ. ಇವುಗಳು ಬಾಹ್ಯ ಸೌಂದರ್ಯದ ಬಹು ಸಾಮಾನ್ಯ ನೆಲೆಗಳನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯ ಸಮಾಲೋಚನಯ ಕಾರ್ಯಕ್ರಮಗಳು ನಡೆಯುವ ರಂಗಮಂಟಪಗಳು ವೀಕ್ಷಕರ ಮನದಲ್ಲಿ ಭಕ್ತಿಭಾವಗಳನ್ನು ಸೃಷ್ಟಿಸುವಂತಿರುತ್ತವೆ. ಅಲಂಕೃತ ಶಿವಲಿಂಗ, ಗಣೇಶ ಮೊದಲಾದ ವಿಗ್ರಹಗಳು, ಗುರುಪೀಠ ಸ್ವರೂಪಿ ಆಸನಗಳು ಹಾಗೂ ಓಂಕಾರದಂತಹ ಬೃಹತ್ ಜಿಹ್ನೆಗಳು ವೇದಿಕೆಯ ಮುಖ್ಯ ಆಕರ್ಷಣೆಗಳಾಗಿರುತ್ತವೆ. ಕಾರ್ಯಕ್ರಮಗಳ ಕೇಂದ್ರ ಬಿಂದುಗಳಾದ ಜ್ಯೋತಿಷಿಗಳು ಕೂಡಾ ಕಾರ್ಯಕ್ರಮದ ಉದ್ದಕ್ಕೂ ಪುಲ್ ಕಾಸ್ಟೂಮ್‌ನಲ್ಲೇ ಇರುತ್ತಾರೆ. ಎಲ್ಲರೂ ಫ್ಯಾಶನ್ ನಾಮದಾರಿಗಳೇ. ಅತ್ಯಾಧುನಿಕ ಕಂಪ್ಯೂಟರ್ ಹಾಗೂ ಪಾರಂಪರಿಕ ತಾಳೆಗರಿ ಇವೆರಡನ್ನೂ ಏಕಕಾಲಕ್ಕೆ ಬಳಸುವಂತಹ ಚಾತುರ್ಯವನ್ನು ಮೆರೆಯುತ್ತಾರೆ. ನಗರಗಳ ವೀಕ್ಷಕರಲ್ಲಿ ನಂಬಿಕೆಯನ್ನು ಉಂಟುಮಾಡಲು ಇವು ಎರಡೂ ಬಹಳ ಮುಖ್ಯವಾದ ಸಾಧನಗಳಾಗಿವೆ. ಜೊತೆಗೆ ದೂರವಾಣಿಯಂತಹ ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿ ವೀಕ್ಷಕರ ಜೊತೆಗೆ ಸಂಬಂಧಗಳನ್ನು ಸ್ಥಾಪಿಸುವ ಪ್ರಯತ್ನಗಳೂ ನಡೆಯುತ್ತವೆ. ಇಂತಹ ಗುರು-ಶಿಷ್ಯ, ಸ್ವಾಮಿ-ಅನುಯಾಯಿ ಸಂಬಂಧಗಳು ಆಯಾ ಜ್ಯೋತಿಷಿಗಳು ಮುಂದೆ ಪಡೆಯಲಿರುವ ಅವಸ್ಥೆಯಲ್ಲಿ ನೆರವಿಗೆ ಬರುತ್ತವೆ.

ಅಷ್ಟೂ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಿರೂಪಕರು ಸ್ತ್ರೀಯರೇ ಆಗಿದ್ದಾರೆ. ಎಲ್ಲಾ ವಾಹಿನಿಗಳು ಒಟ್ಟಾಗಿ ನಿರ್ಣಯಿಸಿವೆಯೋ ಏನೋ ಎಂಬಂತೆ ಭಾಸವಾಗುವ ಸಮವಸ್ತ್ರ ಸ್ವರೂಪಿ ವೇಷಭೂಷಣದೊಂದಿಗೇ ನಿರೂಪಕಿಯರು ಕಾರ್ಯಕ್ರಮಗಳಿಗಳಲ್ಲಿ ಹಾಜರಿರುತ್ತಾರೆ. ಜರತಾರಿ ಸೀರೆ, ಹಿಂದಕ್ಕೆ ಎಳೆದು ಕಟ್ಟಿದ ಕೂದಲು, ಮುಡಿಗೆ ಹೂವು, ಫಲಕದ ಸರ ಹಾಗೂ ಜುಮುಕಿ ಧರಿಸಿರುವ ಸಾಂಪ್ರದಾಯಿಕ ನಿಲುವು ಅವರದ್ದು. ಮಾತುಗಳೂ ಅಷ್ಟೇ ಆಕರ್ಷಕ.

ವಿಶಿಷ್ಟ ಸಂಭೋಧನಾ ತಂತ್ರಗಳು ಕೂಡಾ ಇಲ್ಲಿನ ಕಾರ್ಯಕ್ರಮಗಳ ವಿಶೇಷತೆಗಳಾಗಿವೆ. ಅಷ್ಟೂ ಕಾರ್ಯಕ್ರಮಗಳಲ್ಲಿ ಜ್ಯೋತಿಷಿಗಳನ್ನು ಸಂಬೋಧಿಸಲು “ಗುರೂಜಿ” ಎಂಬ ಪದ ಬಳಕೆಯಾಗುತ್ತಿದೆ. “ಗುರೂಜಿ” ಸಂಭೋಧನೆಗೆ ಇಲ್ಲಿ ವಿಶೇಷವಾದ ಹಿನ್ನೆಲೆ ಇದೆ. ಏಕೆಂದರೆ ಅಂತಹದ್ದೇ ಸ್ಥಾನ ವಿಶೇಷತೆಗಳನ್ನು ಪ್ರತಿನಿಧಿಸುತ್ತಿದ್ದ ಬಾಬಾ ಹಾಗೂ ಸ್ವಾಮಿಯಂತಹ ಪದಗಳು ಬ್ಲೇಡ್ ಮತ್ತು ಕಳ್ಳ ವಿಶೇಷಣಗಳಿಂದ ಕುಲಗೆಟ್ಟಿವೆ! ಮಾತ್ರವಲ್ಲದೆ, ಗುರೂಜಿ ಎಂಬ ಪದಕ್ಕೆ ಮಾರುಕಟ್ಟೆ ಮೌಲ್ಯವೂ ಇದೆ ಎಂಬ ಅಂಶ ಇಲ್ಲಿ ಉಲ್ಲೇಖನೀಯ. ಟೆಕ್‌ಗುರು, ಮಾನೇಜ್‌ಮೆಂಟ್ ಗುರು ಮೊದಲಾದ ಪರಿಭಾಷೆಗಳು ಇಂತಹ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತವೆ. ಹಿಗಾಗಿಯೇ ನಮ್ಮ ಟಿ.ವಿ. ಚಾನೆಲ್‌ಗಳು ಜ್ಯೋತಿಷಿಗಳನ್ನು ಗುರೂಜಿ ಎಂದೇ ಸಂಬೋಧಿಸುತ್ತವೆ ಮತ್ತು ವಿಕ್ಷಕರಿಗೂ ಹಾಗೇ ಮಾಡುವಂತೆ ಪ್ರಚೋದಿಸುತ್ತಿವೆ. ಉಳಿದಂತೆ ಪಾರಂಪರಿಕ ತೂಕದ ಪದಗಳಾದ ಮಹರ್ಷಿ, ಬ್ರಹ್ಮರ್ಷಿ ಮೊದಲಾದ ಪದಗಳನ್ನು ಕೂಡಾ ಅಲ್ಲಲ್ಲಿ ಬಳಸುತ್ತಿವೆ. ಇಂತಹ ಸಂಬೋಧನ ತಂತ್ರಗಳು ಆಯಾ ಸ್ವಾಮೀಜಿಗಳಿಗೆ ಒಂದು ವಿಶಿಷ್ಟವಾದ ಸ್ವಾಮಿತ್ವದ ಪ್ರಭಾವಳಿಯನ್ನು ದಯಪಾಲಿಸುತ್ತಿವೆ.

* * *

ಕನ್ನಡ ವಾಹಿನಿಗಳ ಇವಿಷ್ಟೂ ತಂತ್ರಗಳ ಸಫಲ ಕಾರ್ಯಚಾರಣೆಗೆ ವೇದಿಕೆಯನ್ನು ಒದಗಿಸುತ್ತಿರುವುದು ನಮ್ಮ ಬೌದ್ಧಿಕ ದಿವಾಳಿತನ ಹಾಗೂ ಕಾರ್ಪೊರೇಟ್ ಲಾಭಕೋರತನ. ಅಜ್ಞಾನದ ಆಧುನಿಕ ಸ್ವರೂಪವಾದ ಬೌದ್ಧಿಕ ದಾರಿದ್ರ್ಯವು ಸಮಾಜದಲ್ಲಿ ಮೌಢ್ಯಗಳ ರೂಪಣೆ ಹಾಗೂ ಪ್ರಸರಣ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುತ್ತಿದೆ. ಜ್ಞಾನ ಪರಿಕರಗಳ ಸುಲಭ ಲಭ್ಯತೆ ಮತ್ತು ಶಿಕ್ಷಣದ ನಿಕಟ ಸಾರ್ವತ್ರಿಕತೆಯಂತಹ ಪೂರಕ ಪರಿವೇಶಗಳಿದ್ದರೂ ಕೂಡ ನಮ್ಮ ನಗರಗಳ ಜನರು “ಹೀಗೂ ಉಂಟೆ?” ಎಂಬ ಪ್ರಶ್ನೆಯಾಚೆಗೆ ಯೋಚಿಸುವ ಪ್ರಯತ್ನ ಮಾಡುತ್ತಿಲ್ಲ . ಇಂತಹ ವೈಚಾರಿಕ ಕೊರತೆಗೆ ಜೊತೆಯಾಗಿರುವುದು ಕಾರ್ಪೊರೇಟ್ ಹಿತಾಸಕ್ತಿಗಳು. ಜ್ಯೋತಿಷ್ಯದಂತಹ ಕಾರ್ಯಕ್ರಮಗಳು ಸಮಾಜದಲ್ಲಿ “ಯಥಾಸ್ಥಿತಿ”ಯನ್ನು ಉಳಿಸಿಕೊಳ್ಳಲು ನೆರವಾಗುವುದರ ಜೊತೆಗೆ ಮಾರುಕಟ್ಟೆ ಆಧಾರಿತ ಜಾಹಿರಾತು ತಂತ್ರಗಳಿಗೂ ಅವಕಾಶ ನೀಡುತ್ತಿವೆ. ಹೀಗಾಗಿಯೇ ಕಾರ್ಪೊರೇಟ್ ಶಕ್ತಿಗಳು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯಕ್ರಮಗಳನ್ನು ತುಂಬು ಹೃದಯದಿಂದ ಪ್ರಾಯೋಜಿಸುತ್ತಿವೆ.

ಪತ್ರಿಕಾ ಸ್ವಾತ್ರಂತ್ರ್ಯ ಮತ್ತು ಪ್ರಜ್ಞಾವಂತ ಸಮಾಜ

– ತೇಜ ಸಚಿನ್ ಪೂಜಾರಿ

ನಮ್ಮ ಶಾಸಕ ಹಾಗೂ ಸಂಸದರಿಗೆ ಶಾಸನ ಸಭೆಗಳಿಗೆ ಸಂಬಂಧಪಟ್ಟ ಹಾಗೆ ಒಂದು ವಿಶೇಷ ಸಾಂವಿಧಾನಿಕ ಸವಲತ್ತು ಇದೆ. ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಅವರ ಒಟ್ಟಾರೆ ನಡವಳಿಕೆಯು ಹೊರಗಿನ ಕಾನೂನು ಹಾಗೂ ಪೋಲಿಸ್ ವ್ಯವಸ್ಥೆಯ ಸುಪರ್ದಿಗೆ ಬರುವುದಿಲ್ಲ. ಅಲ್ಲಿ ಸಭಾಧ್ಯಕ್ಷರೇ ಅಂತಿಮ ನ್ಯಾಯಾಧೀಶರು. ಶಾಸಕರು ನಿರ್ಭೀತ ಹಾಗೂ ನಿಷ್ಪಕ್ಷಪಾತ ಧೋರಣೆಯಿಂದ ಕಾರ್ಯನಿರ್ವಹಿಸಲು ಅನುವಾಗುವಂತೆ ನಮ್ಮ ಸಂವಿಧಾನ ನಿರ್ಮಾತೃಗಳು ಇಂತಹ ವ್ಯವಸ್ಥೆಯೊಂದನ್ನು ರೂಪಿಸಿದಾರೆ. ಇದು, ನಮ್ಮ ಪ್ರಜಾಪ್ರತಿನಿಧಿಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಸೂಕ್ತವಾದ ವೇದಿಕೆಯನ್ನು ಒದಗಿಸಿದೆ. ಹೊರಗಿನ ಪೋಲಿಸರು ಸದನದ ಒಳಗಿನ ಅವರ ಕೃತ್ಯಗಳಿಗೆ ಸಂಬಂಧ ಪಟ್ಟಹಾಗೆ ಮಾನನಷ್ಟ ಮೊಕದ್ಧಮೆ ಹಲ್ಲೆ ದರೋಡೆ ಮೊದಲಾದ ಪ್ರಕರಣಗಳನ್ನು ದಾಖಲಿಸುವುದು ಅಸಾದ್ಯ. ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಸ್ವಾತಂತ್ರ್ಯ ಮೂಲಭೂತ ಅವಶ್ಯಕತೆಯಾಗಿರುತ್ತದೆ. ಅಂತಹ ಸ್ವಾತಂತ್ರ್ಯದ ರಕ್ಷಣೆಯ ಹಕ್ಕನ್ನು ನಮ್ಮ ಘನ ಸಂವಿಧಾನವು ಶಾಸಕರಿಗೆ ನೀಡಿದೆ.

ಇದೇ ಚೌಕಟ್ಟಿನಲ್ಲಿ ಯೋಚಿಸಿದಾಗ ಪತ್ರಕರ್ತರು ಅನುಭವಿಸಬೇಕಾದ ವಿಪತ್ಪರಂಪರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಪತ್ರಕರ್ತರು ಕರ್ತವ್ಯ ನಿರ್ವಹಿಸುವುದು ಶಾಸನ ಸಭೆಯಂತಹ ಸರ್ವರಕ್ಷಿತ ವ್ಯವಸ್ಥೆಯಲ್ಲಿ ಅಲ್ಲ. ಅವರ ಕ್ರಿಯಾಶಿಲತೆಯ ವೇದಿಕೆ ಹೊರಗಿನ ಸಮಾಜವೇ ಆಗಿದೆ. ಹೀಗಾಗಿ ಅವರು ಕಾನೂನು ಹಾಗೂ ಪೋಲಿಸ್ ವ್ಯವಸ್ಥೆಯ ನೇರ ಸುಪರ್ದಿಯಲ್ಲಿ ಬರುತ್ತಾರೆ. ಇದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತದೆ. ಅವರ ನಿಷ್ಕಾಮ ಹಾಗೂ ನಿರ್ಭೀತ ಸೇವೆಗೆ ಮಿತಿಗಳನ್ನು ಹೇರುತ್ತದೆ.

ಪೋಲಿಸ್ ವ್ಯವಸ್ಥೆಯು ಸರಕಾರದ ಅಡಿಯಾಳು. ಹೀಗಾಗಿ ಆಯಾ ಸಂಧರ್ಭದಲ್ಲಿ ಆಡಳಿತ ಸೂತ್ರ ಹಿಡಿದಿರುವ ರಾಜಕೀಯ ಪಕ್ಷವು ಪ್ರತಿಪಾದಿಸುತ್ತಿರುವ ಒಟ್ಟು ಮೌಲ್ಯವ್ಯವಸ್ಥೆಯನ್ನು ಧಿಕ್ಕರಿಸುವುದು ಸಾಮಾನ್ಯ ಪತ್ರಕರ್ತನಿಗೆ ಕಷ್ಟಸಾಧ್ಯ. ಜೊತೆಗೆ ಆಡಳಿತ ಪಕ್ಷವೇ ಮಾತ್ರವಲ್ಲದೇ ಆಯಾ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿರುವ ಮತ್ತು ಸರ್ವಪಕ್ಷಗಳಿಂದಲೂ ಸಮಾನ ಗೌರವನ್ನು ಪಡೆಯುತ್ತಿರುವ ಸಾಂಸ್ಕೃತಿಕ ಯಾಜಮಾನ್ಯವನ್ನು ಎದುರು ಹಾಕಿಕೊಳ್ಳುವುದು ಕೂಡಾ ಬಂಧನವನ್ನು ಆಹ್ವಾನಿಸಿದಂತೆಯೆ ಆಗಿರುತ್ತದೆ. ಪತ್ರಕರ್ತ ನವೀನ್ ಸೂರಿಂಜೆ ಇಂತಹ ಇಬ್ಬಗೆಯ ವೈರತ್ವವನ್ನು ಏಕಕಾಲಕ್ಕೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ಅವರ ಜೈಲುಪರ್ವ ಮತ್ತೆ ಮತ್ತೆ ಮುಂದುವರಿಯುತ್ತಲೇ ಇದೆ.

***

ಪತ್ರಿಕಾ ಸ್ವಾತ್ರಂತ್ರ್ಯ ಇಂದು ಕೇವಲ ಘೋಷಣೆಯಾಗಿಯೇ ಉಳಿದಿದೆ. ಕನಸುಗಳು ಹಾಗೂ ಮೌಲ್ಯಗಳು ವಾಸ್ತವದಲ್ಲಿ ಅನುಷ್ಠಾನಕ್ಕೆ ಬಾರದೆ ಕೇವಲ ಆದರ್ಶ ಮಾತ್ರವೇ ಆಗಿ ಉಳಿಯುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ವೈಫಲ್ಯವಾಗಿದೆ. ಮೂಲಭೂತ ಹಕ್ಕುಗಳು, ಸಮಾನತೆ, ಜಾತಿ ನಿರ್ಮೂಲನೆ, ಸಮಾಜವಾದ ಇಂತಹ ಮೌಲ್ಯಗಳು ಇನ್ನೂ ನಿಲುಕದ ಊರಿನಾಚೆಗೇ ಇವೆ. ಹಾಗೆಯೆ “ಪತ್ರಿಕಾ ಸ್ವಾತ್ರಂತ್ರ್ಯ.”

ನವೀನ್ ಪತ್ರಿಕಾ ಸ್ವಾತ್ರಂತ್ರ್ಯದ ಮಿಥ್ಯೆಗೆ ಸಾಕ್ಷಿಯಾಗಿ ನಿಂತಿದ್ದಾರೆ. ಪತ್ರಕರ್ತರ ಸ್ವಾತಂತ್ರ್ಯವನ್ನೂ ಹಕ್ಕುಗಳನ್ನೂ ಉಳಿಸಬೇಕಾದವರು ಯಾರು ಎಂಬ ಅಂಶವೇ ಸದ್ಯಕ್ಕೆ ತಿಳಿಯುತ್ತಿಲ್ಲ. ಪೋಲಿಸರು ಹೋಂಸ್ಟೇ ದಾಳಿಕೋರರ ಮೇಲೆ ಹೊರಿಸಿದ ಅಷ್ಟೂ ಆರೋಪಗಳನ್ನು ನವೀನ್ ಸೂರಿಂಜಿಯವರ ಮೇಲೂ ದಾಖಲಿಸಿದ್ದಾರೆ. ದರೋಡೆ, ಅಕ್ರಮ ಪ್ರವೇಶದಂತಹ ಮೊಕದ್ಧಮೆಗಳು ಕೂಡಾ ಇವೆ. ಕ್ರಿಯಾಶೀಲ ಪತ್ರಕರ್ತನೊಬ್ಬನ ಮೇಲೆ ಇಂತಹ ಕಠಿಣ ಕೇಸುಗಳನ್ನು ದಾಖಲಿಸಿದರೆ ಆತ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು ಸಾದ್ಯವೇ? ದಾಳಿಮಾಡಲು ಹೋದವರನ್ನೂ ವರದಿಮಾಡಲು ಹೋದ ಪತ್ರಕರ್ತನ್ನೂ ಒಂದೇ ತಕ್ಕಡಿಯಲ್ಲಿ ನೋಡುವುದು ನ್ಯಾಯವೇ? ದುರಾದೃಷ್ಟವಶಾತ್, ವ್ಯವಸ್ಥೆ ನ್ಯಾಯ ಅನ್ಯಾಯ ಅಥವಾ ಧರ್ಮ-ಅರ್ಧಮದ ಮಿತಿಗಳನ್ನು ಮೀರಿಯೇ ಕಾರ್ಯನಿರ್ವಹಿಸುತ್ತದೆ. ಅಂತಹ ಮಹಿಷಾಸುರ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಉಸಿರುಗಟ್ಟಿ ನಲುಗುತ್ತಿರುವ ಹಾವಿನಂತೆ ಇರುವ ಪತ್ರಿಕಾಸ್ಯಾತಂತ್ರ್ಯದ ಕ್ಷೀಣ ದನಿಯಂತೆ ನವೀನ್ ಕಾಣಿಸುತ್ತಿದ್ದಾರೆ.

***

ನವೀನ್ ಪ್ರಕರಣದಲ್ಲೂ ಒಂದು ತಾತ್ವಿಕ ಪ್ರಶ್ನೆ ಇದೆ. ಅದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿಗೆ ಸಂಬಂಧಪಟ್ಟ ಪ್ರಶ್ನೆಯಾಗಿದೆ. ಅದು ದಾಳಿ ಯಾ ಹೊಡೆದಾಟದಂತಹ ಆಕಸ್ಮಿಕದ ಸಂಧರ್ಭಗಳಲ್ಲಿ ವರದಿಗಾರ ಯಾವ ರೀತಿ ವರ್ತಿಸಬೇಕು ಎಂಬ ಕುರಿತದ್ದಾಗಿದೆ. ಅಂತಹ ವಿಷಮ ಸಂಧರ್ಭದಲ್ಲಿ ಪತ್ರಕರ್ತ ಘಟನೆಯ ವರದಿ ಮಾತ್ರವೇ ಮಾಡುತ್ತಿರಬೇಕೇ ಅಥವಾ ಸಂಕಷ್ಟಕೀಡಾದವರ ನೆರವಿಗೆ ಹೋಗಬೇಕೇ ಎಂಬ ವಿಚಾರ. ಇದು ಪೂರ್ಣವಾಗಿ ಮೌಲ್ಯ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾಗಿದೆ. ಇದನ್ನು ಚರ್ಚಿಸಿ ಒಂದು ಮೌಲ್ಯವಾಗಿ ರೂಪಿಸಿಕೊಳ್ಳಬೇಕಾಗಿರುವುದು ಸಮಾಜವೇ ಹೊರತು ಕಾನೂನು ಅಥವಾ ಪೋಲಿಸ್ ವ್ಯವಸ್ಥೆಗಳಲ್ಲ್ಲ. ಪತ್ರಕರ್ತರ ವ್ಯಾಪಕತೆಯಿಂದಾಗಿ ಇಂತಹ ಪ್ರಕರಣಗಳು ಇಂದು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ ಮತ್ತು ಚರ್ಚೆಯಾಗುತ್ತಿವೆ. ವ್ಯವಸ್ಥೆಯು ವಾರಂಟ್-ಬಂಧನಗಳಂತಹ ತನ್ನೆಲ್ಲ ಅಹಂಕಾರ ಧೋರಣೆಯನ್ನು ಬಿಟ್ಟು ಸಾಮಾಜಿಕ ಚರ್ಚೆಗೆ ಅವಕಾಶ ಮಾಡಿಕೊಡುವುದು ಇಲ್ಲಿ ಅನಿವಾರ್ಯ.

***

ನವೀನ್ ಪ್ರತಿನಿಧಿಸುವ ಪತ್ರಿಕಾ ಸ್ಯತ್ರಂತ್ರ್ಯವನ್ನು ರಕ್ಷಿಸುವಲ್ಲಿ ಸಮಾಜದ ಜವಾಬ್ದಾರಿಯೂ ಇದೆ. ಆದರೆ ನಮ್ಮ ಸಮಾಜ ಇಲ್ಲೇ ಎಡವಿದೆ. ಬಂಧನದ ವಿರುದ್ದ ನಡೆಯಬೇಕಾಗಿದ್ದ ಹೋರಾಟ ಪ್ರತಿಭಟನೆಗಳು ಆರಂಭಗಳ ದಿನಗಳಿಗಷ್ಟೇ ಮೀಸಲಾದವು. ಇಂತಹ ಆರಂಭಶೂರತ್ವದ ವ್ಯಾಧಿಯು ಪತ್ರಕರ್ತರ ವಲಯಕ್ಕೂ ವ್ಯಾಪಿಸಿದೆ. ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಪತ್ರಿಕೆಗಳೂ, ಚಾನೆಲ್‌ಗಳೂ ಇದ್ದಾಗ್ಯೂ ಒಬ್ಬ ಪತ್ರಕರ್ತನನ್ನೂ, ಆತನ ಸ್ವಾತಂತ್ರ್ಯವನ್ನೂ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಅವರ ನಿರ್ವೀರ್ಯತೆಗೆ ಸಾಕ್ಷಿಯಾಗಿದೆ.

ಸಾಮಾಜಿಕ ಕ್ರಿಯಾಶಿಲತೆಗೆ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತ್ಯ ಹಾಗೂ ಬೌದ್ದಿಕ ವಲಯವೂ ಕೂಡಾ ನವೀನ್ ವಿಚಾರದಲ್ಲಿ ಮೌನಕ್ಕೆ ಶರಣಾಗಿ ಕುಳಿತಿದೆ. ಸಾಹಿತ್ಯಿಕ ಕೂಡುಗೆಗಳನ್ನೆಲ್ಲ ಬಿಟ್ಟು ನೋಡಿದಲ್ಲಿ ಒಬ್ಬ ಪುಂಡು ಕೋಮುವಾದಿಯಂತೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಡಾ| ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲು ರಾಜ್ಯಪಾಲರು ನಿರಾಕರಿಸಿದಾಗ ಅದನ್ನು ಪ್ರತಿಭಟಿಸುವ ಸಲುವಾಗಿಯೇ ಅನಂತಮೂರ್ತಿಯವರು ದೈಹಿಕ ಅನಾರೋಗ್ಯದ ನಡುವೆಯೂ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮಾವೇಶದಲ್ಲಿ ಭಾಗವಹಿಸಿದ್ದರು. ಮತ್ತು ರಾಜ್ಯಪಾಲರ ನಿಲುವನ್ನು ಕಠಿಣ ಮಾತುಗಳಿಂದ ಖಂಡಿಸಿದ್ದರು. ಆದರೆ ಅವರೂ ಸೇರಿದಂತೆ ಕನ್ನಡದ ಹಲವು ಸಾಹಿತ್ಯ ಪ್ರತಿಭೆಗಳು ನವೀನ್ ಬಂಧನದ ಕೆಲವೇ ದಿನಗಳಲ್ಲಿ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಅದೇ ಸಮಯದಲ್ಲಿ ಅಲ್ಲೇ ಮಂಗಳೂರಿನ ಜೈಲಿನಲ್ಲಿ ಕೊಳೆಯುತ್ತಿದ್ದ ಸಾಮಾಜಿಕ ಕಳಕಳಿಯ ಪತ್ರಕರ್ತ ನವೀನ್ ಸೂರಿಂಜೆಯ ಬಂಧನವನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡುವಂತಹ ದೊಡ್ಡಮನಸ್ಸನ್ನು ಕನ್ನಡದ ಯಾವ ಜ್ಞಾನಪೀಠವೂ ತೋರಲಿಲ್ಲ ಎಂಬುವುದು ನಮ್ಮ ಸಾಮಾಜಿಕ ಸಂಧರ್ಭದ ನಿರೀಕ್ಷತ ದುರ್ದೈವವಾಗಿದೆ! ಮೌಲಿಕ ಸಾಹಿತ್ಯದ ದೌರ್ಬಲ್ಯವೇ ಇದು. ಒಂದೋ ಅದು ವ್ಯವಸ್ಥೆಯ ಪಾದಸೇವೆ ಮಾಡುತ್ತಿರುತ್ತದೆ ಇಲ್ಲವೇ ಗಾಂಧಾರಿ ಸಿಂಡ್ರೋಮ್‌ನಿಂದ ಬಳಲುತ್ತಿರುತ್ತದೆ. ಅನಂತಮೂರ್ತಿಯವರು ತಮ್ಮ ನುಡಿಸಿರಿ ಭಾಷಣದಲ್ಲಿ ಇತ್ತೀಚಿಗೆ ತಾವು ದಕ್ಷಿಣ ಕನ್ನಡದವರೇ ಆದ ಸೇಡಿಯಾಪು ಕೃಷ್ಣಭಟ್ಟರ ಕೃತಿಗಳು ಓದುತ್ತಿದ್ದೇನೆ ಎಂದು ಹೇಳಿದ್ದಾರೆ. ಬಹುಶಃ ಅವರು ಅದೇ ದಿನಗಳಲ್ಲಿ ದಕ್ಷಿಣ ಕನ್ನಡದ ವಾರ್ತೆಗಳನ್ನು ಕೇಳಬೇಕಿತ್ತೋ ಏನೋ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲು ನವೀನ್ ಯಾವ ಕಾರ್ಪೊರೇಟ್ ಪತ್ರಕರ್ತನೂ ಅಲ್ಲ; ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರಲು ಠಾಕ್ರೆಯಂತಹ ರುದ್ರ ಭಯಂಕರನೂ ಅಲ್ಲ. ಒರ್ವ ಬಡಪಾಯಿ ಪತ್ರಕರ್ತನಷ್ಟೇ. ದೌರ್ಜನ್ಯದ ವ್ಯವಸ್ಥೆಯೊಂದರ ರೌರವ ಕ್ರೌರ್ಯಕ್ಕೆ ಕನ್ನಡಿ ಹಿಡಿದದ್ದಷ್ಟೇ ಅವರ ಅಪರಾದ. ಚಕ್ಕಳ ಹಾಕಿಸಿ ಮುಂದೆ ಕೂರಿಸಿಕೊಂಡು ತನ್ನನ್ನು ಧಿಕ್ಕರಿಸುವ ವ್ಯಕ್ತಿ ಹಾಗೂ ಸಂಘಟನೆಗಳನ್ನು ಹದಮಾಡುವ ಕಲೆ ವ್ಯವಸ್ಥೆಗೆ ಯಾವತ್ತೋ ಸಿದ್ದಿಸಿದೆ. ಅಂತಹ ಅಪಾಯಕ್ಕೆ ನವೀನ್ ಸಿಲುಕದಂತೆ ನೋಡಿಕೊಳ್ಳುವುದು ಕ್ರಿಯಾಶೀಲ ಸಮಾಜದ ಕರ್ತವ್ಯವಾಗಿದೆ.

ರಾಕ್ಷಸ ವಧೆಗೆ ದೈವಕ್ಕೆ ಜತೆಯಾಗುವವರು ತುಳುನಾಡಲ್ಲಿ ಯಾರೂ ಇಲ್ಲವೇ?

– ತೇಜ ಸಚಿನ್ ಪೂಜಾರಿ

ಬಾಲ್ಯದ ಒಂದು ನೆನಹು ಇತ್ತೀಚೆಗೆ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ನಮ್ಮ ಹಳ್ಳಿಗಳಲ್ಲಿ ವರ್ಷಂಪ್ರತಿ ಬಹು ಸಂಭ್ರಮದಿಂದ ನಡೆಯುತ್ತಿದ್ದ ದೇವಿ ಮಹಾತ್ಮೆ ಯಕ್ಷಗಾನವನ್ನು ವೀಕ್ಷಿಸಲು ನಾವು ಗೆಳೆಯೋರೋಪಾದಿಯಾಗಿ ತೆರಳುತ್ತಿದ್ದೆವು. ಇಡೀ ರಾತ್ರಿ ಜರುಗುತ್ತಿದ್ದ ಬಯಲಾಟದ ವೀಕ್ಷಣೆಯ ಸಲುವಾಗಿ ಊರಿನ ಅಷ್ಟೂ ಮಂದಿ ಅಲ್ಲಿ ಹಾಜರಿರುತ್ತಿದ್ದರು. ತುಳುವರಿಗೆ ದೇವಿ ಮಹಾತ್ಮೆ ಒಂದು ಮನೋರಂಜನೆಯಲ್ಲ. ಅದೊಂದು ಆರಾಧನೆ; ಒಂದು ಹರಕೆ. ಹೀಗಾಗಿ ತಮ್ಮೆಲ್ಲಾ ತುರ್ತುಗಳನ್ನು ಬದಿಗಿರಿಸಿ ನಮ್ಮವರು ಭಕ್ತಿಭಾವಗಳೊಂದಿಗೆ ಬಯಲಾಟಕ್ಕೆ ಹೋಗುತ್ತಿದ್ದರು. ನಮಗೂ ಸಂಭ್ರಮವೇ. ಹಾಗೆ, ಗೆಳೆಯರೆಲ್ಲಾ ಸೇರಿ ಪೋಕರಿತನಗಳನ್ನು ಮೆರೆದು, ಅಲ್ಲಿರುತ್ತಿದ್ದ ಪುಗ್ಗೆ ಚುರುಮುರಿ ಸಂತೆಗಳನ್ನು ಸುತ್ತಿ ಕೊನೆಗೆ ಅಮ್ಮನ ಮಡಿಲು ಸೇರುತಿದ್ದೆವು. ಅಷ್ಟೊತ್ತಿಗೆ ಆಟವೂ ಕೂಡಾ ರಂಗೇರಿ ಸಹೃದಯಿಗಳ ಮನದಲ್ಲಿ ರಸಭಾವಗಳು ಓಕುಳಿಯಾಡುತ್ತಿರುತ್ತಿದ್ದವು. ನಮಗೋ ನಿಧಾನವಾಗಿ ನಿದ್ದೆಯ ಸಪಳ. ಹಾಗೆಯೇ ತೂಕಡಿಸುತ್ತಿದ್ದ ನಮ್ಮನ್ನು ಮತ್ತೆ ಮತ್ತೆ ಎಬ್ಬಿಸಿ ಚಹಾ ಕುಡಿಸಿ ಎನೇನೋ ಸುಳ್ಳುಗಳನ್ನು ಹೇಳುತ್ತಾ ಅಮ್ಮಾ, “ನೋಡು ಈಗ ಸ್ವಲ್ಪ ಹೊತ್ತಲ್ಲೇ ಮಹಿಷಾಸುರ ಬರುತ್ತಾನೆ. ಅಲ್ಲಿವರೆಗೆ ನಿದ್ದೆ ಬೇಡ ಮಗೂ! ಮತ್ತೆ ಮನೆಗೆ ಹೋಗೋಣವಂತೆ,” ಅನ್ನುತ್ತಿದ್ದಳು. ಕೊನೆಗೂ ಮಹಿಷಾಸುರ ಬರುತಿದ್ದ. ಆಟದಲ್ಲಿ ಆತನೆ ಬರುವಿಕೆಯೇ ಒಂದು ವಿಶೇಷ. ಅದೆಲ್ಲೋ ದೂರದಿಂದ ವಿಕಾರವಾಗಿ ಬೊಬ್ಬಿರಿಯುತ್ತಾ, ಧೂಪದ ಪುಡಿಯನ್ನು ದೀವಿಟಿಗೆಯತ್ತ ಎಸೆದು ಬೆಂಕಿಯ ಉಂಡೆಗಳನ್ನು ಎಬ್ಬಿಸುತ್ತಾ ಬರುತಿದ್ದ ಆತ ಅಲ್ಲಿಯವರೆಗೆ ಶಾಂತವಾಗಿರುತಿದ್ದ ಸಭೆಯನ್ನು ಒಮ್ಮಗೆ ಅಲ್ಲೋಲ ಕಲ್ಲೋಲ ಮಾಡುತಿದ್ದ. ಆರ್ಭಟ, ರಣಕೇಕೆಗಳು, ವಾದ್ಯ ಹಿಮ್ಮೇಳಗಳ ವೇಗ, ಸಿಡಿಮದ್ದಗಳ ಸದ್ದು ನಮ್ಮನ್ನೆಲ್ಲಾ ಹೆದರಿಸುತಿದ್ದವು. ಅಂತೂ ಇಂತೂ ಹತ್ತಿಪ್ಪತ್ತು ನಿಮಿಷಗಳ ಕಾಲ ವಿಜೃಂಭಿಸಿ ನಿಧಾನವಾಗಿ ಮಹಿಷಾಸುರ ರಂಗಸ್ಥಳ ಪ್ರವೇಶಿಸುತಿದ್ದ. ಅದು ನಮ್ಮ ಪಾಲಿಗೆ ಯಕ್ಷಗಾನದ ಅಂತ್ಯ. ತರುವಾಯ ನಾವು ಅಪ್ಪ ಅಮ್ಮನ ಜೊತೆಗೆ ಮನೆಗೆ ಹಿಂತಿರುಗುತಿದ್ದೆವು. ನಮ್ಮ ಹಾಗೆಯೇ ಬಹುತೇಕ ಸಭಿಕರು “ಮಹಿಷಾಸುರ ರಂಗಸ್ಥಳ ಪ್ರವೇಶ”ದ ನಂತರ ಮನೆ ನಿದ್ದೆಯ ಮೊರೆ ಹೋಗುತಿದ್ದರು. ಇಂತಹ ಪ್ರವೃತ್ತಿಗಳು ಮತ್ತೆ ಮತ್ತೆ ಪುನಾರಾವರ್ತನೆಯಾಗುತ್ತಿದ್ದವು. ಶ್ರೀದೇವಿಯು ಮಹಿಷಾಸುರನನ್ನು ಎದುರಿಸುವ, ವಧಿಸುವ ಕಾರ್ಯದಲ್ಲಿ ಆಕೆಗೆ ಉಪಸ್ಥಿತಿಯ ಬೆಂಬಲ ನೀಡಲು ಅಲ್ಲಿರುತ್ತಿದ್ದುದು ಕೆಲವೇ ಕೆಲವು ಮಂದಿ. ನಮಗೋ ಮಹಿಷಾಸುರನ್ನು ಸ್ವಾಗತಿಸುವುದೊಂದೇ ಸಂಭ್ರಮ. ಮತ್ತೆ ಭರ್ಜರಿ ನಿದ್ದೆ.

ಮಂಗಳೂರಿನಲ್ಲಿ ಸದ್ಯ ನಡೆಯುತ್ತಿರುವುದು ಇದೇ. ನಮ್ಮವರು ತಮ್ಮ ಮನ ಮನೆಗಳಿಗೆ ಮಹಿಷಾಸುರನನ್ನು ಒಳಬಿಟ್ಟಿದ್ದಾರೆ. ಬಿಟ್ಟು ಮಲಗಿದ್ದಾರೆ. ರಾಕ್ಷಸ ವಧೆಗೆ ದೈವಕ್ಕೆ ಜತೆಯಾಗುವವರು ಯಾರೂ ಇಲ್ಲ. ಧರ್ಮಸಂಘರ್ಷಗಳು, ಕೋಮು ಜ್ವಾಲೆಗಳು, ಮೌಡ್ಯ ಆಚರಣೆಗಳು, ಜಾತಿ ದ್ವೇಷ-ದೌರ್ಜನ್ಯಗಳು, ಅಸಹಿಷ್ಣುತೆ-ಅಹಂಕಾರಗಳು ಹೀಗೆ ಒಂದೋ ಎರಡೋ! ನಾನಾ ನಮೂನೆಯ ರಕ್ಕಸ ಪ್ರವೃತ್ತಿಗಳು ತುಳುನಾಡನ್ನು ಪೂರ್ತಿಯಾಗಿ ಆವರಿಸಿವೆ. ನಮ್ಮದೋ ಗಾಡ ನಿದ್ದೆ. ಮಹಿಷಾಸುರನ ಅಟ್ಟಹಾಸ ನಡೆಯುತ್ತಲೇ ಇದೆ. ಆತನನ್ನು ಧಿಕ್ಕರಿಸ ಹೊರಟವರೇ ಬಂಧನಕ್ಕೊಳಗಾಗುತಿದ್ದಾರೆ. ಸಾಕ್ಷಾತ್ ದೈವವೇ ಆಘಾತಗೊಂಡಿದೆ!

ಘಟನೆ ಯಾ ಪ್ರವೃತ್ತಿಗಳಿಗೆ ವಿಮರ್ಷೆಯ ನೆಪದಲ್ಲಿ ಯಾವುದೋ ವ್ಯಕ್ತಿ ಅಥವಾ ಸಂಘಟನೆಯನ್ನು ದೂಷಿಸುವುದು ಸಾಮಾನ್ಯ. ಆ ಧರ್ಮದ ಈ ಧರ್ಮದ ಕೋಮುವಾದಿಗಳನ್ನೋ, ಸಂಸ್ಥೆ-ಫ್ರಂಟ್ಗಳನ್ನೋ ನಾವೂ ಟೀಕಿಸಿಯಾಗಿದೆ. ಆದಾಗ್ಯೂ ಅಸಹನೆ ನಿಂತಿಲ್ಲ, ಹಿಂಸೆಯೂ ನಿಂತಿಲ್ಲ. ನಿಲ್ಲುವುದೂ ಇಲ್ಲಾ. ಏಕೆಂದರೆ ರಾಕ್ಷಸನ ಪ್ರವೇಶವನ್ನು ಬೆರಗಿನಿಂದ ನೋಡಿದ ನಾವು ನಂತರದಲ್ಲಿ ಪೂರ್ತಿಯಾಗಿ ನಿಷ್ಕ್ರಿಯಯರಾಗಿದ್ದೆವೆ. ನಮ್ಮೂರಲ್ಲಿ ನಡೆಯುತ್ತಿರುವ ಅಷ್ಟೂ ಅಸಹ್ಯಗಳ ಹೊಣೆಯನ್ನು ನಾವೇ ಹೊರಬೇಕಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಹಿಂಸೆಯನ್ನು ವಿಶ್ಲೇಷಿಸುತ್ತಾ ನೋಮ್ ಚಾಮ್ಸ್ಕಿಯವರು ಒಂದೆಡೆ, “ಆತ್ಮಹತ್ಯಾ ಬಾಂಬರುಗಳು ಅಥವಾ ತುಪಾಕಿಗಳ ಸದ್ದುಗಳು ನನ್ನಲ್ಲಿ ಆತಂಕವನ್ನು ಉಂಟುಮಾಡುತಿಲ್ಲ. ಆದರೆ, ತನ್ನ ಮಗುವಿನ ಸೌಖ್ಯವನ್ನು ಬಯಸುವ ಸಹಜ ಪ್ರಾಮಾಣಿಕ ಹಾಗೂ ಹಿಂಸಾವಾದಿಯಲ್ಲದ ತಾಯೊಬ್ಬಳು, ತನ್ನ ಇದಿರ ಗುಂಪಿನ ಮಗುವಿನ ಹತ್ಯೆಗೆ ಒಳಗೊಳಗೆ ಸಮ್ಮತಿಸುತ್ತಾಳಲ್ಲ ಅದು ಆತಂಕವನ್ನುಂಟುಮಾಡುತ್ತದೆ” ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಇದು ಪ್ಯಾಲೆಸ್ತೇನಿ ಮಗುವಿನ ಸಾವನ್ನು ಸ್ವೀಕರಿಸುವ ಇಸ್ರೇಲಿ ತಾಯಿಗೂ, ಹಿಂದೂ ಯಾ ಮುಸಲ್ಮಾನ ಮಗುವಿನ ಹತ್ಯೆಗೆ ಸಮ್ಮತಿಸುವ ಹಿಂದೂ ಯಾ ಮುಸಲ್ಮಾನ ತಾಯಿಗೂ, ಸಮಾನವಾಗಿ ಒಪ್ಪುತ್ತದೆ. ಇದು ಅಸಹಿಷ್ಣು ವ್ಯವಸ್ಥೆಯನ್ನು ಕುರಿತಂತೆ ಸಾಮಾನ್ಯ ಪ್ರಜಾಸಮೂಹದಲ್ಲಿ ನೆಲೆಸಿರುವ ಒಂದು ಬಗೆಯ ಸ್ವೀಕರಣೆಯ ಭಾವವನ್ನು ಪ್ರತಿನಿಧಿಸುತ್ತದೆ. ಅಂತಹ ಒಂದು ಮೌನಸಮ್ಮತಿ ಅಥವಾ ನಿರ್ಲಿಪ್ತತೆಯ ನಿಲುವು ನಮ್ಮಲ್ಲೂ ಇದೆ. ಅದುವೇ ಮಹಿಷಾಸುರ ಸೃಷ್ಟಿಸೋ ಬೆಂಕಿಯುಂಡೆಗಳ ಮೂಲದ್ರವ್ಯವಾದ ಧೂಪದ ಪುಡಿ.

ಮಂಗಳೂರಿನ ಸದ್ಯದ ಸಂಕಟಗಳಿಗೆ ಒಂದು ನಿರ್ದಿಷ್ಟ ಗುಂಪು ಅಥವಾ ಓರ್ವ ವ್ಯಕ್ತಿ ಕಾರಣವೇ? ಅಷ್ಟಕ್ಕೂ ಅಸಹಿಷ್ಣು ಪ್ರವಚನಗಳಿಗೆ ಬಲಿ ಬೀಳಲು ಮಂಗಳೂರಿಗರು ಅಪ್ರಾಜ್ಞರೇ? ಹಿಂಸಾರತಿಯ ಬಾಹ್ಯ ಸಂಸ್ಕ್ರತಿಯೊಂದರ ಹೊಡೆತಕ್ಕೆ ಸಿಲುಕಲು ತುಳುವರಲ್ಲಿ ಸಹಿಷ್ಣು ಸಾಂಸ್ಕೃತಿಕ ಪರಂಪರೆಯೇ ಇಲ್ಲವೇ? ಇವೆಲ್ಲಾ ಪ್ರಶ್ನೆಗಳಿಗೂ ಸಿಗುವುದು ಕೇವಲ ನೇತ್ಯಾತ್ಮಕ ಉತ್ತರಗಳು. ನಮ್ಮಲ್ಲಿ ಒಳ್ಳೆಯ ಶಿಕ್ಷಣ ಇದೆ. ಜನರು ಪ್ರಾಜ್ಞರು. ನೆಲೆಸಿರುವ ಅಷ್ಟೂ ಸಮುದಾಯಗಳನ್ನು ಗೌರವಿಸುವ ಉಪಚರಿಸುವ ಸಹಿಷ್ಣು ಸಾಂಸ್ಕೃತಿಕ ಪರಂಪರೆಯೂ ಇದೆ. ಕ್ರಿಶ್ಚಿಯನ್ನರು ಬೆಳೆದು ಬ್ಯಾರಿಗಳಿಂದ ಮಾರಲ್ಪಟ್ಟು ಹಿಂದೂ ಮುಡಿಯಲ್ಲಿ ಘಮಿಸುವ ಮಲ್ಲಿಗೆಯ ಪರಿಮಳವಿದೆ. ಸಾಮರಸ್ಯದ ಬಲಿಷ್ಟ ನೆಲೆಗಟ್ಟಿದೆ. ತುಳು ಭಾಷೆಯ ಬಲೀಂದ್ರ ಪಾಡ್ದನದಲ್ಲಿ ಬರುವ ಕಥೆಯಲ್ಲಿ, ತಾನು ದಾನವಾಗಿ ನೀಡಲಿರುವ ಮೂರು ಹೆಜ್ಜೆ ಭೂಮಿಯನ್ನು ಏನು ಮಾಡುತ್ತೀಯ ಎಂದು ಬಲಿ ಚಕ್ರವರ್ತಿಯು ವಾಮನನ್ನು ಕೇಳಿದನಂತೆ. ಆಗ ವಾಮನನು,
“ದೇವೆರೆಗು ದೇವಾಲ್ಯೊ,
ದೈವೋಳೆಗು ಬದಿಮಾಡ,
ಬೆರ್ಮೆರೆಗು ಸಾನ,
ನಾಗೆರೆಗ್ ಬನ,
ಜೈನೆರೆ ಬಸ್ತಿ,
ಬ್ಯಾರಿಳೆ ಪಲ್ಲಿ,
ಕುಡುಂಬೆರೆ ಇಂಗ್ರೇಜಿ ಕಟ್ಟಾವ”
ಅನ್ನುತ್ತಾನೆ. (ದೇವರಿಗೆ ದೇವಾಲಯ, ನಾಗದೇವರಿಗೆ ಬನ, ಜೈನರಿಗೆ ಬಸದಿ, ಬ್ಯಾರಿಗಳಿಗೆ ಮಸೀದಿ ಹಾಗೂ ಕ್ರಿಶ್ಚಿಯನ್ನರಿಗೆ ಚರ್ಚುಗಳನ್ನು ಕಟ್ಟಿಸುತ್ತೇನೆ) ಇದು ತುಳುವರ ಸಾಂಸ್ಕೃತಿಕ ಶ್ರೀಮಂತಿಕೆಯ, ಸಾಮರಸ್ಯದ ಆಳವನ್ನು ಸಂಕೇತಿಸುತ್ತದೆ. ಹೀಗೆ ಶಿಕ್ಷಣ, ಪ್ರಜ್ಞೆ ಹಾಗೂ ಸಹಿಷ್ಣು-ಪರಂಪರೆಯ ಇಂತಹ ಬಲಿಷ್ಟ ಹಿನ್ನೆಲೆ ಇದ್ದರೂ ಮಂಗಳೂರಿನಲ್ಲಿ ಹಲವು ಅಸಹಜತೆಗಳು ಯಾಕೆ ನೆಲೆಸಿವೆ? ಇದಕ್ಕೆ ಉತ್ತರ ತುಳುವರ ನಿರ್ಲಿಪ್ತತೆ ಅಥವಾ ನಿಷ್ಕ್ರಿಯತೆ ಹಾಗೂ ಮಂಗಳೂರು ಪ್ರಾಂತ್ಯದಲ್ಲಿ ಸದ್ಯ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯ ಪ್ರವೃತ್ತಿಗಳಲ್ಲಿ ಇದೆ.

ಅನಾಹುತಗಳನ್ನು ಸೃಷ್ಟಿಸುವ ಎಷ್ಟೇ ಬಲಶಾಲಿ ಶಕ್ತಿಗಳಿರಲಿ, ಜಾಗರೂಕ ಜನರಿದ್ದಲ್ಲಿ ಅವುಗಳಿಗೆ ವೈಫಲ್ಯವೇ ಖಚಿತ ಸಂಗಾತಿ. ತುಳುವರ ಸದ್ಯದ ಅನಿವಾರ್ಯತೆ ಇದೇ ಆಗಿದೆ. ಅದು ಮಹಿಷಾಸುರನ ಪ್ರವೇಶದ ನಂತರವೂ ಇರುವ, ಉಳಿಯುವ “ಜಾಗರಣೆ”. ದುಷ್ಟತೆಯ ವಿರುದ್ಧ ಧಿಕ್ಕಾರದ ಕೂಗಿಗೆ ಮೂಡುವ ಜೈಕಾರ. ದೈವಕ್ಕೆ ಉಪಸ್ಥಿತಿಯ ಸಹಯೋಗ. ರಾಕ್ಷಸಿ ಪ್ರಜ್ಞೆಯೊಂದರ ವಿರುಧ್ಧ ನಡೆಯ ಹೊರಟ ಪತ್ರಕರ್ತ ನವೀನ್ ಸೂರಿಂಜೆ ಸದ್ಯ ಬಂಧನಕ್ಕೆ ಒಳಗಾಗಿದ್ದಾರೆ. ಇಂತಹ ಅನಾಚಾರಗಳನ್ನು ಎಸಗುತ್ತಿರುವ ಮಹಿಷಾಸುರನ ಅಟ್ಟಹಾಸವನ್ನು ನಾವಿಂದು ಕೊನೆಗೊಳಿಸುವ ಅವಶ್ಯಕತೆಯಿದೆ. ನಾವೇ ಮುಂದಡಿಯಿಟ್ಟು ಹೊರಟಲ್ಲಿ ದೈವವೂ ನಮಗೆ ಸಹಯೋಗ ನೀಡುತ್ತದೆ. ದೇವಿ ಮಹಾತ್ಮೆಗೆ ನಾವೇ ಶುಭ ಅಂತ್ಯವನ್ನು ಬರೆಯಬೇಕಿದೆ.