Category Archives: ಪರಶುರಾಮ್ ಕಲಾಲ್

ವಕೀಲರು, ಪತ್ರಕರ್ತರು ಮತ್ತು ಫ್ಯಾಂಟಮ್ ಭೂತ


– ಪರಶುರಾಮ ಕಲಾಲ್


 

ಮಾಧ್ಯಮಗಳು ಮತ್ತು ವಕೀಲರ ನಡುವೆ ನಡೆದ ಯುದ್ಧವನ್ನು ನಾವು ಎಲ್ಲರೂ ನೋಡಿದ್ದೇವೆ. ನೋಡಿದ್ದೇವೆ ಏನು ಬಂತು ರೇಸಿಗೆಯಾಗುವಷ್ಟು ದೃಶ್ಯಮಾಧ್ಯಮಗಳು ಉಣ ಬಡಿಸಿವೆ. ವಕೀಲರದು ಸರಿಯೇ ? ಮಾಧ್ಯಮದ್ದು ಸರಿಯೇ ಈ ಪ್ರಶ್ನೆಯನ್ನು ನಾವು ಹಾಕಿಕೊಳ್ಳುವುದಕ್ಕಿಂತ ಇದು ಯಾಕೇ ನಡೆಯಿತು ? ಏನು ಸಮಸ್ಯೆ ಇದಕ್ಕೆ ಕಾರಣ ಎಂದು ಎಲ್ಲರೂ ಯೋಚಿಸಬೇಕಿದೆ.

ಈ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಕುಸಿದ ಸಂದರ್ಭದಲ್ಲಿ ನ್ಯಾಯಾಂಗ ಒಂದಿಷ್ಟು ಮಾನವಂತ ಕೆಲಸ ಮಾಡಿತು ಎನ್ನುವದನ್ನು ಒಪ್ಪುವ ಒಂದು ವರ್ಗ ಇದೆ. ಚರ್ಚೆಯನ್ನು ಇಲ್ಲಿಂದಲೇ ಆರಂಭಿಸೋಣ. ಅಣ್ಣಾ ಹಜಾರೆ ಭೃಷ್ಠಾಚಾರದ ವಿರುದ್ಧ ಹೋರಾಟದವರೆಗೆ ಇದನ್ನು ಎಳೆದುಕೊಂಡು ಹೋಗಬಹುದು. ಗಣಿ ಹಗರಣ ಕುರಿತಂತೆ ಆಂಧ್ರ ಹಾಗೂ ಕರ್ನಾಟಕದಲ್ಲಿ  ಸಿಬಿಐ ತನಿಖೆ ನಡೆಸುತ್ತಿರುವುದು. ಯಡಿಯೂರಪ್ಪ ಗಣಿ ಕಪ್ಪ ಪಡೆದ ಪ್ರಕರಣದ ಬಗ್ಗೆಯೂ ಸಿಬಿಐ ತನಿಖೆ ನಡೆಸಲು ಸಾಧ್ಯವೇ ವರದಿ ನೀಡಲು ಸಿಇಸಿ (ಕೇಂದ್ರ ಉನ್ನತಾಧಿಕಾರಿಗಳ ತಂಡ) ಸೂಚಿಸಿದೆ. ಇಲ್ಲಿ ಮಾಧ್ಯಮಗಳಿಗಿಂತ ನ್ಯಾಯಾಂಗ ಇಡೀ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯಾಂಗವೆಂದರೆ ನ್ಯಾಯಾಧೀಶರು ಮಾತ್ರವಲ್ಲ, ಅಲ್ಲಿ ವಕೀಲರು ಇರುತ್ತಾರೆ. ಅವರ ಪಾತ್ರವೂ ಸಹ ಬಹಳ ಮುಖ್ಯ.

ಮತ್ತೊಂದು; ನಾವು ದೃಶ್ಯ ಮಾಧ್ಯಮಗಳ ಕಡೆ ನೋಡೋಣ. ದೃಶ್ಯಮಾಧ್ಯಮಗಳು ಸುದ್ದಿ ಮಾಧ್ಯಮವಾಗಿ ಬಂದ ಮೇಲೆ ರೋಚಕ ಸುದ್ದಿಗಳಿಗೆ ಹೆಚ್ಚು ಗಮನ ಕೊಟ್ಟವು. ಮತ್ತೊಂದು ಕಡೆ ಇವೇ ನ್ಯಾಯಾಲಯಗಳಾಗಿ ಕೆಲಸ ಮಾಡ ತೊಡಗಿದವು. ಆರೋಪಿಗಳನ್ನು ಆರೋಪಿಗಳೆಂದು ಕರೆಯದೇ ಈ ಕೃತ್ಯವೆಸಗಿದ ಪಾತಕಿಗಳು, ದುಷ್ಟರು, ಖೂಳರು ಎಂದೇ ಚಿತ್ರಿಸಿದವು. ಎಷ್ಟೋ ಸಾರಿ ಇವರೇ ನ್ಯಾಯಾಧೀಶರಾಗಿ ತೀರ್ಪು ನೀಡಿದ ರೀತಿಯಲ್ಲಿ ವರದಿ ಮಾಡಿದ್ದು ಇದೆ. ಇದು ಸಾಲದು ಎಂಬಂತೆ ಚಿತ್ರನಟಿಯರನ್ನು ಕುಳ್ಳರಿಸಿ, ಕುಟುಂಬ ನ್ಯಾಯಾಲಯವನ್ನು ತೆರೆದು ಗಂಡ-ಹೆಂಡತಿ ಜಗಳ ಬಿಡಿಸುವ ನ್ಯಾಯಾಧೀಶರ ಪಾತ್ರ ನೀಡಿದರು. ಜನರಿಗೆ ಮನರಂಜನೆ ನೀಡುತ್ತಾ ಕೆಳ ಮಧ್ಯಮವರ್ಗದವರ ಬದುಕು ಬೀದಿಪಾಲಾಗಿಸಿ, ಎಷ್ಟೋ ಪ್ರಕರಣಗಳಲ್ಲಿ ನೇರವಾಗಿ ಹೊಡೆದಾಡಿಸುವ ದೃಶ್ಯಗಳನ್ನು ಸಹ ಲೈವ್ ಆಗಿಯೇ ಬಿತ್ತರಿಸಿದವು. ಈಗ ಕುಟುಂಬ ಜಗಳವಿರಲಿ, ಏನೋ ಸಮಸ್ಯೆ ಇರಲಿ ಎಲ್ಲರೂ ಈ ದೃಶ್ಯಮಾಧ್ಯಮಗಳ ಬಾಗಿಲು ತಟ್ಟುವಂತೆ ಮಾಡಿ ಬಿಟ್ಟಿವೆ. ಯಾರಿಗೂ ನಾವು ಹೆದುರುವುದಿಲ್ಲ. ನಾವು ಮಾಧ್ಯಮದವರು. ಏನು ಬೇಕಾದರೂ ಮಾಡುತ್ತೇವೆ ಎಂಬ ದುಸ್ಸಾಹಸದ ಮಾತುಗಳನ್ನು ಆಡಿದವು.

ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವ ವಕೀಲರೂ ಇದೇ ದುಸ್ಸಾಹಸದ ಮಾತುಗಳನ್ನು ಖಾಸಗಿಯಾಗಿ ಆಡುತ್ತಾರೆ. ಆಡಿಕೊಳ್ಳಲಿ ಬಿಡಿ. ಎಷ್ಟೇ ಆಗಲಿ, ಅದು ಅವರ ಖಾಸಗಿ ಮಾತು ಎನ್ನಬಹುದು. ದೃಶ್ಯ ಮಾಧ್ಯಮದವರು, ಮುದ್ರಣ ಮಾಧ್ಯಮದವರು ಇದೇ ಮಾತನ್ನು ಆಡಿದಾಗ ಭಯ ಆವರಿಸುತ್ತೆ . ಯಾಕೆಂದರೆ ಅದು ಸಾರ್ವಜನಿಕವಾಗಿ ಆಡಿ ಬಿಟ್ಟಾಗ. ಖಾಸಗಿಯಾಗಿ ಏನೋ ಬೇಕಾದರೂ ಹೇಳಿಕೊಳ್ಳಲಿ, ಆದರೆ ಅದನ್ನು ಪತ್ರಿಕೆಗಳಲ್ಲಿ ಬರೆದು, ದೃಶ್ಯಮಾಧ್ಯಮದಲ್ಲಿ ಆಡಿ ತೋರಿಸಿದಾಗ ಇವರೆಲ್ಲಾ ಏನು ಮಾಡುತ್ತಿದ್ದಾರೆ ? ಏನು ಮಾಡಬೇಕು ಎಂದುಕೊಂಡಿದ್ದಾರೆ ? ವಕೀಲರು ಹಾಗೂ ಮುಖ್ಯವಾಗಿ ದೃಶ್ಯ ಮಾಧ್ಯಮದವರು ಇವರಿಬ್ಬರಿಗೆ ಸುಪ್ರಮಸಿ ಸಮಸ್ಯೆ ಕಾಡುತ್ತಿದೆ. ಇದು ಒಂದು ರೀತಿಯ ಫ್ಯಾಂಟಮ್ ಭೂತ ಆವರಿಸಿಕೊಂಡಿದೆ. ನಾವೇ ಸೂಪರ್ ಮ್ಯಾನ್ ಎನ್ನುವ ಎರಡು ಸೂಪರ್ ಮ್ಯಾನ್‌ಗಳ ನಡುವೆ ನಡೆಯುತ್ತಿರುವ ಯುದ್ಧವಿದು. ಇದಕ್ಕಿಂತ ಬೇರೇನೂ ಇದರ ಹಿಂದೆ ಇಲ್ಲ.

ಇದಕ್ಕೆ ಮುದ್ರಣ ಮಾಧ್ಯಮವೂ ಕೈಗೊಡಿಸಿದೆ. ಮುದ್ರಣ ಮಾಧ್ಯಮವೂ ಈಗ ರೋಚಕ ಸುದ್ದಿಗೆ, ಟ್ಯಾಬ್ಲಾಯ್ಡ್  ಭಾಷೆಗೆ ಒಳಗಾಗಿರುವ ಹೊತ್ತಿನಲ್ಲಿ ಅದನ್ನೇ ದೊಡ್ಡ ತನಿಖೆ ವರದಿ ಎಂದು ಬಿಂಬಿಸಿಕೊಳ್ಳುತ್ತಿರುವಾಗ ಅವರು ಬೆಂಬಲಿಸಲೇಬೇಕು. ಬೆಂಬಲಿಸಿದ್ದಾರೆ. ಅವರು ಯುದ್ಧವನ್ನು ಘೋಷಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್  ಕೋರ್ಟ್ ಆವರಣ ಬಿಟ್ಟು ದೃಶ್ಯಮಾಧ್ಯಮದ ಕಣ್ಣು ಬೇರೆ ಕಡೆ ಹೋಗಲೇ ಇಲ್ಲ. ಇಡೀ ದಿನ ಕರ್ನಾಟಕವೇ  ಹತ್ತಿ ಉರಿಯುತ್ತಿದೆ ಎಂಬ ಚಿತ್ರಣವನ್ನು ನೀಡಿದರು. ರೆಡ್ಡಿಯನ್ನು ಅದುವರೆಗೆ ಹೊಸ ಬಟ್ಟೆ, ಧರಿಸಿದ್ದರು. ಇಡ್ಲಿ ತಿಂದರು, ಕಾಫಿ ಕುಡಿದರು ಎಂದೆಲ್ಲಾ ವರ್ಣಿಸುತ್ತಿದ್ದ  ದೃಶ್ಯ ಮಾಧ್ಯಮಗಳು ರೆಡ್ಡಿಯನ್ನು ಕೈ ಬಿಟ್ಟು ಬಿಟ್ಟರು. ಇದು ರೆಡ್ಡಿ ಗ್ಯಾಂಗ್ಗೂ, ಸರ್ಕಾರಕ್ಕೂ  ಸ್ವಲ್ಪ ಖುಷಿಯ ವಿಷಯ. ಈ ಘಟನೆಯಾಗದಿದ್ದರೆ ಗಣಿ ಹಗರಣದಲ್ಲಿ ಯಾರಿರಬಹುದು ಎಂದು ಎಲ್ಲರ ಹೆಸರನ್ನು ಇರಬಹುದು ಎಂದು ಹೇಳಲಾಗುತ್ತಿದೆ ಎಂದು ಅವರೇ ತೀರ್ಪು  ನೀಡಿ ಬಿಡುತ್ತಿದ್ದರು.

ಕೊನೆ ಗುಟುಕು : ಒಬ್ಬ ಪೊಲೀಸ್ ಪೇದೆ ಮಹದೇವಯ್ಯ ವಕೀಲರ ಕಲ್ಲು ತೂರಾಟದಿಂದ ಗಾಯಗೊಂಡು ಸರಿಯಾದ ಚಿಕಿತ್ಸೆ ಸಿಗದೇ ಸತ್ತು ಹೋಗಿ ಬಿಟ್ಟ ಎಂದೇ ಬಹುತೇಕ ದೃಶ್ಯ ಮಾಧ್ಯಮಗಳು ಹೇಳಿಯೇ ಬಿಟ್ಟವು. ಅದು ಸುಳ್ಳಾಗಿತ್ತು. ಸುಳ್ಳಾಗಿದ್ದರ ಬಗ್ಗೆ ಯಾವ ಕ್ಷಮೆಯನ್ನೂ ಕೇಳದೇ ಇರುವುದನ್ನು ನೋಡಿದರೆ ಇದು ನಿರ್ಲಜ್ಜೆಯ  ಪರಮಾವಧಿ ಎನ್ನದೇ ಬೇರೆ ಪದವೇ ಇಲ್ಲ.

ಹೊಸ ಪತ್ರಿಕೆಯ ಸುತ್ತಮುತ್ತ..


– ಪರಶುರಾಮ ಕಲಾಲ್    


ವಿಜಯ ಸಂಕೇಶ್ವರರ ಹೊಸ ಪತ್ರಿಕೆ ರಂಗಕ್ಕಿಳಿಯಲು ದಿನಗಣನೆ ಆರಂಭವಾಗಿವೆ. ಪತ್ರಿಕೆ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಜಿಲ್ಲಾ ವರದಿಗಾರರು, ಸುದ್ದಿ ಸಂಪಾದಕರು, ಉಪ ಸಂಪಾದಕರು ಎಲ್ಲರೂ ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಸುದ್ದಿ ಕಳಿಸುವುದು. ತಿದ್ದುವುದು. ಪೇಜು ಸಿದ್ಧಪಡಿಸುವುದು ಎಲ್ಲಾ ನಡೆಯುತ್ತಿದೆ. ತಾವು ರೂಪಿಸಿದ ಪತ್ರಿಕೆಯನ್ನು ತಾವೇ ನೋಡಿಕೊಂಡು ಡೆಸ್ಕಿನಲ್ಲಿರುವವರು ಸಂತೋಷ ಪಡುತ್ತಿದ್ದಾರೆ.

ಜಿಲ್ಲಾ ವರದಿಗಾರರು, ಹಿರಿಯ ವರದಿಗಾರರು ಯುದ್ಧ ಎದುರಿಸಲು ಸಜ್ಜಾಗಿ ಸೇನಾನಿಗಳಂತೆ ಪೆನ್ನು ಚಾಚಿಯೇ ಕುಳಿತುಕೊಂಡಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ ಪತ್ರಿಕೆಗಳನ್ನು ಹೇಗೆ ಎದುರಿಸಬೇಕೆಂದು ಯೋಜಿಸಲಾಗಿದೆ. ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ ಬರೆಯುವ ‘ಬೆತ್ತಲೆ ಜಗತ್ತು’ ರೀತಿಯಲ್ಲಿ ಹೊಸ ದಿಗಂತ ಪತ್ರಿಕೆಯಲ್ಲಿ ‘ಮೇರಾ ಭಾರತ್ ಮಹಾನ್’ ಎಂಬ ಅಂಕಣ ಬರೆಯುತ್ತಿದ್ದ ರವೀಂದ್ರ ದೇಶಮುಖ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿರಿಯ ಉಪ ಸಂಪಾದಕ ಸ್ಥಾನ ನೀಡಲಾಗಿದ್ದು, ಪ್ರತಿವಾರ ಅಂಕಣ ಹಾಗೂ ಸಂಪಾದಕೀಯ ಬರೆಯುವ ಕೆಲಸ ಒಪ್ಪಿಸಿದ್ದಾರೆ. ಆರೆಸೆಸ್ಸ್ ಪತ್ರಿಕೆಯಲ್ಲಿ ಬರುವ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಿ ‘ಮೇರಾ ಭಾರತ್ ಮಹಾನ್’ ಎಂದು ತಮ್ಮ ಬೈಲೈನ್ ಹಾಕಿಕೊಳ್ಳುತ್ತಿದ್ದರು ರವೀಂದ್ರ ದೇಶಮುಖ್. ಈಗ ಸ್ವತಂತ್ರವಾಗಿ ಮತ್ತೊಂದು ಬೆತ್ತಲೆ ಜಗತ್ತು ಅವರು ಅನಾವರಣ ಮಾಡಬೇಕಿದೆ.

ವಿಜಯ ಕರ್ನಾಟಕ ಮಾತ್ರ ಬರಲಿರುವ ಹೊಸ ಪತ್ರಿಕೆಯನ್ನು ಎದುರಿಸಲು ಸಜ್ಜಾಗಿ, ಕೋಟೆಯನ್ನು ಭದ್ರ ಪಡಿಸಿಕೊಳ್ಳುವ ಕೆಲಸ ನಡೆಸಿದೆ. ಯುವ ಘರ್ಜನೆ ಎನ್ನುವುದು ಅದರ ಅಂತಹ ಒಂದು ಪ್ರಯತ್ನದ ಭಾಗ. ಪ್ರಜಾವಾಣಿಯು ಇಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳದಿದ್ದರೂ ಆಪಾಯ ಎದುರಿಸಲು ಅದು ಪ್ರಯತ್ನ ಮಾಡುತ್ತಿದೆ. ಸಾಪ್ತಾಹಿಕ ಪುರವಣಿ ಜೊತೆ ದೇಶಕಾಲದ ಜೊತೆಗೆ ನೀಡುತ್ತಿದ್ದ ಸಾಹಿತ್ಯ ಪುರವಣಿಯನ್ನು ಈಗ ತಾನೇ ನಿರ್ವಹಿಸುತ್ತಾ ಉಳಿಸಿಕೊಂಡಿದೆ. ಯುವಜನರಿಗಾಗಿ ಕಾಮನ ಬಿಲ್ಲು ಎಂಬ ಸಣ್ಣ ಪುರವಣಿಯನ್ನು ಹೊರ ತರುತ್ತಿದೆ. ಕನ್ನಡ ಪ್ರಭದ ಸ್ಥಿತಿಯಂತೂ ಶೋಚನೀಯವಾಗಿದೆ. ಅದರ ಪ್ರಸಾರ ಸಂಖ್ಯೆ ಕುಸಿಯುತ್ತಿದೆ. ‘ನೋಡುತ್ತಾ ಇರಿ, ಏನೋ ಮಾಡುತ್ತೇವೆ’ ಅಂತಾ ಎಂದು ಸಂಪಾದಕ ವಿಶ್ವೇಶ್ವರ ಭಟ್ರು, ಹಾವಾಡಿಗರು ತಮ್ಮ ತೆರೆಯದ ಬುಟ್ಟಿ ತೋರಿಸಿ “ಧರ್ಮಸ್ಥಳದಿಂದ ಹಿಡಿದುಕೊಂಡು ಬಂದಿರುವ ಹಾವು ಇದೆ, ತೋರಿಸುತ್ತೇವೆ” ಎಂದು ಆಟದಲ್ಲಿ ಹೇಳುತ್ತಾ ಕೊನೆಗೂ ಹಾವು ತೋರಿಸುವುದಿಲ್ಲ, ಹಾಗೇ ಆಗಿ ಬಿಟ್ಟಿದೆ ಅವರ ಹೇಳಿಕೆ.

ಉದಯವಾಣಿ, ಸಂಯುಕ್ತ ಕರ್ನಾಟಕ  ತಮ್ಮ ಲೇಔಟ್ ಚೇಂಜ್ ಮಾಡಿಕೊಂಡಿದ್ದು ಬಿಟ್ಟರೆ ಉಳಿದಂತೆ ಆದರ ಪ್ರಯತ್ನ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಈಗ್ಗೆ 12 ವರ್ಷದ ಹಿಂದೆ ವಿಜಯ ಕರ್ನಾಟಕದಲ್ಲಿ ಹುಟ್ಟಿದಾಗ ಏನಿತ್ತು ಪರಿಸ್ಥಿತಿ. ಇವತ್ತಿನ ಪರಿಸ್ಥಿತಿ ಏನಿದೆ ಎನ್ನುವುದು ಪರಿಶೀಲಿಸುವುದು ಇಲ್ಲಿ ಬಹಳ ಮುಖ್ಯ ಸಂಗತಿಯಾಗಿದೆ. ಪ್ರಜಾವಾಣಿ ಕನ್ನಡದ ಅತ್ಯಂತ ಜನಪ್ರಿಯ ದಿನ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ಹೊಂದಿ, ನಂದಿಯಂತೆ ವಿರಾಜಮಾನವಾಗಿತ್ತು. ಕನ್ನಡ ಪ್ರಭ ಎರಡನೇಯ ಸ್ಥಾನದಲ್ಲಿತ್ತು. ಉದಯವಾಣಿ, ಸಂಯುಕ್ತ ಕರ್ನಾಟಕ ಬೆಂಗಳೂರಿನಲ್ಲಿ ಕಚೇರಿ, ಎಡಿಷನ್ ಹೊಂದಿದ್ದರೂ ಅವು ಪ್ರಾದೇಶಿಕ ಪತ್ರಿಕೆಗಳಾಗಿಯೇ ಇದ್ದವು.

ಪ್ರಜಾವಾಣಿಯ ಏಜೆನ್ಸಿ ತೆಗೆದುಕೊಳ್ಳುವುದು ಎಂದರೆ ಪೆಟ್ರೂಲ್ ಬಂಕ್ ಪಡೆಯುವಂತೆ ಕಷ್ಟ ಪಡಬೇಕಿತ್ತು. ಅಷ್ಟು ಡಿಮ್ಯಾಂಡ್ ಆಗ. ಕನ್ನಡ ಪ್ರಭದ ಏಜೆಂಟ್ರು ಹತ್ತು ಪತ್ರಿಕೆ ಹೆಚ್ಚು ಮಾಡಲು ಹರ ಸಾಹಸ ಮಾಡಬೇಕಿತ್ತು. ಆಗ ಕನ್ನಡ ಪ್ರಭದ ಪ್ರಸರಣ ವಿಭಾಗದವರು ಪತ್ರಿಕೆ ಸಂಖ್ಯೆ ಹೆಚ್ಚಿಸಬೇಡಿ, ಇದ್ದಷ್ಟೇ ಮುಂದುವರೆಸಿಕೊಂಡು ಹೋಗಿ ಎಂದು ಹೇಳುತ್ತಿದ್ದರು. ಕಳೆದ 20 ವರ್ಷದಲ್ಲಿ ಕನ್ನಡ ಓದುಗರ ಸಂಖ್ಯೆ ಹೆಚ್ಚಿದೆ. ಅವರನ್ನು ತಲುಪಬೇಕೆಂಬ ಉದ್ದೇಶ ಯಾರಲ್ಲೂ ಇರಲಿಲ್ಲ. ಯಾಕೆಂದರೆ ಪ್ರಸರಣ ಹೆಚ್ಚಾದರೆ ಲಾಭವಿಲ್ಲ. ಬದಲು ನಷ್ಠವೇ ಹೆಚ್ಚು ಎಂಬ ಲೆಕ್ಕಾಚಾರ ಎಲ್ಲರದ್ದೂ ಆಗಿತ್ತು. ಬೆಲೆ ಏರಿಕೆ ನಡೆಯುತ್ತಾ ಹೋಗುತ್ತಿರುವ ಲೆಕ್ಕದಲ್ಲಿ ಹೋದರೆ ಇವತ್ತು ಕನ್ನಡ ದಿನ ಪತ್ರಿಕೆಗಳ ಬೆಲೆಯು 8 ರೂ. ಮುಟ್ಟಬೇಕಿತ್ತು.

ಇಂತಹ ಸಂದರ್ಭದಲ್ಲಿಯೇ ವಿಜಯ ಕರ್ನಾಟಕ ಕಾಲಿಟ್ಟಿತು. ಎಲ್ಲಾ ಕಡೆ ಎಡಿಷನ್ ಮಾಡುವ ಮೂಲಕ ಎಲ್ಲರಿಗೂ ಪತ್ರಿಕೆ ಮುಟ್ಟಿಸುವ ಕೆಲಸ ಆರಂಭಿಸಿತು. ಹಳ್ಳಿಗಳಲ್ಲಿ ಬೆಳಿಗ್ಗೆ 10, 11ಕ್ಕೆ ಸಿಗುತ್ತಿದ್ದ ಪ್ರಜಾವಾಣಿಯ ಬದಲು ಬೆಳಿಗ್ಗೆ 6ಕ್ಕೆಲ್ಲಾ ಸಿಗುವಂತಾಯಿತು. ಪತ್ರಿಕೆ ಏಜೆನ್ಸಿ ಅನ್ನುವುದು ಇಷ್ಟು ಸುಲಭ ಎನ್ನುವುದನ್ನು ತೋರಿಸಿ ಬಿಟ್ಟರು. ಹಳ್ಳಿ ಹಳ್ಳಿಗೂ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಒಂದು ಊರಿನಲ್ಲಿ ಎಷ್ಟು ಬೇಕು ಅಷ್ಟು ಏಜೆನ್ಸಿ ಕೊಡುವ ಮೂಲಕ ಪತ್ರಿಕೆ ಪ್ರಸರಣವನ್ನು ವಿಸ್ತರಿಸಿಬಿಟ್ಟರು. ದರ ಸಮರವನ್ನು ಸಾರಿ ಬಿಟ್ಟರು. ಉಳಿದ ಪತ್ರಿಕೆಗಳು ಎಚ್ಚೆತ್ತುಕೊಂಡು ಪ್ರಸರಣ ವಿಸ್ತರಿಸುವ ಪ್ರಯತ್ನಗಳ ನಡುವೆ ವಿಜಯಕರ್ನಾಟಕ ನಂಬರ್ ವನ್ ಆಗಿಯೇ ಬಿಟ್ಟಿತು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ತ್ರಿವಳಿ ಮಂತ್ರವನ್ನು ಜಪಿಸಲಾರಂಭಿಸಲಾಯಿತೋ ಆಗ ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಪಡೆಯಲು ಎಬಿಸಿ ಎನ್ನುವ ಪ್ರಸರಣ ಸಂಖ್ಯೆಯ ಪಟ್ಟಿ ಮುಖ್ಯವಾಗಿ ಹೊಯಿತು. ಪತ್ರಿಕೆಗಳ ಸರಕಾಗಲು ತುದಿಗಾಲಿನ ಮೇಲೆ ನಿಂತವು. ಈಗಾಗಿ ಪತ್ರಿಕೆಗೆ ಮೌಲಿಕ ಓದುಗರಗಿಂತ ಗ್ರಾಹಕ ಓದುಗರು ಮುಖ್ಯವಾದರು. ಅಥವಾ ಓದುಗರನ್ನು ಗ್ರಾಹಕರನ್ನಾಗಿ ಮಾಡಲು ಪೈಪೋಟಿಗೆ ಇಳಿಯಬೇಕಾಯಿತು. ವಿಜಯ ಕರ್ನಾಟಕ ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಈಗ ಎಲ್ಲಾ ದಿನ ಪತ್ರಿಕೆಗಳು ಎಡಿಷನ್ ಮಾಡಿ, ತಮ್ಮ ಪತ್ರಿಕೆಯ ವಿಸ್ತರಣೆ ಕೆಲಸಕ್ಕೆ ಕೈ ಹಾಕಿವೆ. ಪ್ರಜಾವಾಣಿ ಎಡಿಷನ್ ಮಾಡಿ, ಏಜೆನ್ಸಿಯ ಬಿಗಿ ನೀತಿ ಸಡಿಲಿಸಿ, ಅದು ಹಳ್ಳಿ ಹಳ್ಳಿಗೂ ಏಜೆನ್ಸಿಯನ್ನು ನೀಡಿ ಪ್ರಸರಣಕ್ಕೆ ಅದ್ಯತೆ ನೀಡುತ್ತಿದೆ. ಇದೇ ಸಾಲಿನಲ್ಲಿ ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ನಡೆಸಿವೆ. ಇವುಗಳ ಜೊತೆಗೆ ಈಗ ಹೊಸ ದಿಗಂತವೂ ಸೇರಿಕೊಂಡಿದೆ.

ಮುಖ ಪುಟದಲ್ಲಿ ಪದಗಳ ಜೊತೆ ಆಟ, ಅದೇ ದೊಡ್ಡದು ಎನ್ನುವ ರೀತಿಯ ವಿಜೃಂಭಣೆ, ಟ್ಯಾಬ್ಲೊಯಿಡ್ ಪತ್ರಿಕೆಗಳ ಭಾಷೆ ಬಳುಸುವುದು, ಇಂತಹ ಸರ್ಕಸ್ ನಡೆಸುವ ಮೂಲಕ ಸಂಪಾದಕರು ಎನ್ನುವವರು ಈಗ ಸರ್ಕಸ್ ಕಂಪನಿಯ ಮ್ಯಾನೇಜರ್ ಆಗಿ ಬಿಟ್ಟಿದ್ದಾರೆ. ಅದೇ ಸಂಪಾದಕರ ಚಹರೆ ಹಾಗೂ ಮಾನದಂಡವಾಗಿ ಬಿಟ್ಟಿದೆ. ಪತ್ರಿಕೆಯನ್ನು ಅಗ್ಗದ ಸರಕಾಗಿ ಮಾರಾಟ ಮಾಡಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಇಂತಹ ವಾತಾವರಣದಲ್ಲಿ ಹೊಸ ಪತ್ರಿಕೆ ವಿಜಯ ವಾಣಿಯ ನಡಿಗೆ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಎಲ್ಲರೂ ಈಗ ಓಡುತ್ತಿದ್ದಾರೆ. ಈ ಓಟದ ಸಾಲಿನಲ್ಲಿ ವಿಜಯವಾಣಿ ಸೇರಿಕೊಳ್ಳಬೇಕಾಗಿದೆ. ಅನ್ಯಮಾರ್ಗವೇ ಇಲ್ಲ.

ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ನಾಡು


– ಪರಶುರಾಮ ಕಲಾಲ್


 

ಅದೊಂದು ಪವಿತ್ರ ಸ್ಥಳ. ರಾಜ್ಯದ ನೀತಿ, ನಿಯಮಗಳನ್ನು ರೂಪಿಸುವ ಪ್ರಜಾಪ್ರಭುತ್ವದ ಅಧುನಿಕ ದೇವಾಲಯ. ಅಲ್ಲಿಗೆ ಶಾಸಕರಾಗಿ ತೆರಳುವವರು ಮೊದಲ ವಿಧಾನ ಸಭಾಂಗಣ ಪ್ರವೇಶಿಸುವಾಗ ಬಾಗಿಲಿಗೆ ಕೈ ಮುಗಿದು ಹೋಗುತ್ತಾರೆ. ಅವರ ಕಣ್ಣು ಮುಂದೆ ಕೆಂಗಲ್ ಹನುಮಂತಯ್ಯ, ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ದೇವರಾಜ ಅರಸು ಮುಂತಾದ ಮಹನೀಯರು ನೆನಪಾಗುತ್ತಾರೆ ಕಣ್ಣು ಮಂಜಾಗುತ್ತದೆ.

ಈಗ ಕಣ್ಣು ಮಂಜಾಗುವ ಸಮಯ ನಮ್ಮದು. ಒಳಗೆ ಕುಳಿತವರು ಕಣ್ಣು ನೀಲಿಯಾಗಿ ಬಿಟ್ಟಿದೆ.

ಕಿಂಗ್ ಲಿಯರ್ ನಾಟಕದಲ್ಲಿ ಲಿಯರ್ ಮಹಾರಾಜ ಸಂಕಷ್ಟಕ್ಕೆ ಸಿಗುವ ಆಪಾಯ ಕಂಡು ಕೊಂಡ ಲಿಯರ್‌ನ ಆತ್ಮಸಾಕ್ಷಿಯಂತಿರುವ ಕೆಂಟ್ ಏನನ್ನೂ ಮಾಡಲಾಗದ ಸ್ಥಿತಿ ಮುಟ್ಟಿದಾಗ ಒಂದು ಮಾತು ಹೇಳುತ್ತಾನೆ. “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ಈ ನಾಡೇ ಇನ್ನೂ ನಮಗೆ ಮಾದರಿ.” ನಮ್ಮ ಸ್ಥಿತಿಯು ಹಾಗೇ ಆಗಿದೆ. ಮಾದರಿಗಳೇ ಇಲ್ಲ ಈಗ. ಯಾರನ್ನು ಮಾದರಿ ಎನ್ನುತ್ತೇವೆಯೋ ಅವರು ಮಾಯವಾಗುತ್ತಾರೆ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್‌ಗಳ ಕಾಲ ಅಲ್ಲವೇ ಇದು. ಶೂನ್ಯ ಅವರಿಸಿದಾಗ ಇವರೇ ನಾಯಕರಾಗಿ ಮಕ್ಕಳ ಮುಂದೆ ಕಾಣಿಸುತ್ತಾರೆ. ಎಲ್ಲವೂ ರೋಬ್‌ಮಯ.

*

ಅಲ್ಲಿ ಕಕ್ಕ ಮಾಡಬಾರದು ಅದು ಪವಿತ್ರ ಸ್ಥಳ ಎಂದಿರುತ್ತದೆ. ಅಲ್ಲಿ ಕಕ್ಕ ಮಾಡುತ್ತಾರೆ. ಅದು ಕಕ್ಕವೇ ಅಲ್ಲ ಎಂದು ವಾದಿಸುತ್ತಾರೆ. ಕಕ್ಕ ಹೌದು ಅಲ್ಲವೋ ಎಂದು ಪರೀಕ್ಷೆ ನಡೆಸಲು ಫೊರೆನಿಕ್ಸ್ ಲ್ಯಾಬ್‌ಗೆ ಕಳಿಸಿಕೊಡುತ್ತಾರೆ. ವಾಸನೆ ನೋಡಿದ ಯಾರೇ ಆದರೂ ಅದು ಕಕ್ಕ ಎಂದೇ ಹೇಳುತ್ತಾರೆ.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕಲ್ಲ ಎಂದು ಮೂಗು ಮುಚ್ಚಿಕೊಂಡೆ ಹೇಳುತ್ತಾರಲ್ಲ ಏನನ್ನಬೇಕು ಇವರಿಗೆ. ನಾನು ಇವರಿಗೆ ಹೇಳುವುದು ಇಷ್ಟೇ, “ಸ್ವಲ್ಪ ತಿಂದು ನೋಡಿ ಬಿಡಿ, ಸ್ವಾಮಿ.”

*

ನಮ್ಮ ಸಂವಿಧಾನದಲ್ಲಿ ಶಾಸಕಾಂಗ ದೊಡ್ಡದು. ಶಾಸಕರಾಗಿ ಆಯ್ಕೆಯಾಗುವ ಜನ ಪ್ರತಿನಿಧಿಗಳು ಆಯಾ ಪಕ್ಷದ ಬಲಾಬಲಗಳ ಮೇಲೆ ಶಾಸಕಾಂಗದ ಸಭೆ ಸೇರಿ ನಾಯಕನನ್ನು ಆಯ್ಕೆ ಮಾಡುತ್ತದೆ. ಆಡಳಿತ ಪಕ್ಷಕ್ಕೆ ಸೇರಿದವರಾದರೆ ಆತ ಮುಖ್ಯಮಂತ್ರಿಯಾಗುತ್ತಾನೆ. ರಾಜ್ಯದ ಬೇರೆ ಬೇರೆ ಕ್ಷೇತ್ರಗಳ ಕುರಿತಂತೆ ಆಡಳಿತ ನಡೆಸಲು ತನ್ನ ವಿವೇಚನೆಯಂತೆ ಸಚಿವರನ್ನು ಆಯ್ಕೆ ಮಾಡುತ್ತಾನೆ. ಇಲ್ಲಿ ಮುಖ್ಯಮಂತ್ರಿಯಾಗಲಿ ಅಥವಾ ಸಚಿವರಾಗಲಿ ಎಲ್ಲರೂ ಮೂಲಭೂತವಾಗಿ ಶಾಸಕರೇ, ಶಾಸನ ಸಭೆಯ ಸದಸ್ಯರುಗಳೇ. ಶಾಸಕರಾದವರು ಹೆಚ್ಚುವರಿ ಕೆಲಸವಾಗಿ ಮುಖ್ಯಮಂತ್ರಿ, ಮಂತ್ರಿಯಾಗುತ್ತಾರೆ. ಶಾಸನ ಸಭೆಯಲ್ಲಿ ಅಗೌರವ ಸೂಚಿಸುವವರು ಯಾರೇ ಆಗಲಿ, ಅವರನ್ನು ಸದನದಿಂದ ಹೊರ ಹಾಕುವ, ಅಮಾನತ್ತು ಮಾಡುವ ಅಧಿಕಾರವನ್ನು ಸಭಾಪತಿ ಪಡೆದಿರುತ್ತಾರೆ. ಅವರು ಪಕ್ಷಾತೀತವಾಗಿ, ಸಂವಿಧಾನದ ಮೂಲ ಉದ್ದೇಶವನ್ನು ಕಾಪಾಡಲು ಪ್ರಮಾಣವಚನ ಪಡೆದುಕೊಂಡು ಎತ್ತರದ ಸ್ಥಾನ ಅಲಂಕರಿಸಿದವರು. ಶಾಸನ ಸಭೆಯಲ್ಲಿ ಯಾರೇ ಅಸಭ್ಯವಾಗಿ ವರ್ತಿಸಿದರೂ ಅವರ ಮೇಲೆ ಕ್ರಮ ಕೈಗೊಳ್ಳಲೇಬೇಕು. ಇಲ್ಲಿ ಪಕ್ಷದ ಹಿತಾಸಕ್ತಿ ನೋಡುವಂತಿಲ್ಲ.

ಸಚಿವರಾದವರು ಅಕ್ಷೇಪಾರ್ಹ ವಿಡಿಯೋ ವೀಕ್ಷಿಸಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಹೆಚ್ಚುವರಿ ಕೆಲಸಗಳನ್ನು ಮಾಡುವುದನ್ನು ಕೈ ಬಿಟ್ಟಂತೆ ಆಗುತ್ತದೆ ಹೊರತು ಅದು ನೈತಿಕತೆ ಆಗುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಸಚಿವ ಸ್ಥಾನಕ್ಕೆ ಕೊಟ್ಟಿದ್ದಾರಲ್ಲ ಎಂದು ವಾದಿಸುವುದು ಅನೈತಿಕವಾಗುತ್ತದೆ.

*

ಲಜ್ಜೆ, ನಾಚಿಕೆ ಕಳೆದುಕೊಂಡು ವಾದಿಸಲು ಆರಂಭಿಸಿದರೆ ಅಂತಹ ಲಜ್ಜೆಗೆಟ್ಟ, ನಾಚಿಕೆ ಕಳೆದುಕೊಂಡ ಸಮಾಜದಲ್ಲಿ ಜೀವಿಸುತ್ತಿರುವ ಬಗ್ಗೆ ವಾಕರಿಕೆ ಬರುತ್ತದೆ. ನಾನು ಮೊದಲೇ ಹೇಳಿದಂತೆ ಕೆಂಟ್ ಹೇಳುವ “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ಈ ನಾಡೇ ಇನ್ನೂ ನಮಗೆ ಮಾದರಿ,” ಮಾತು ನೆನಪಾಗುತ್ತದೆ.

ವಿಶ್ರಾಂತ ಕುಲಪತಿ ಡಾ.ಮುರಿಗೆಪ್ಪರವರಿಗೆ ಕೆಲವು ಪ್ರಶ್ನೆಗಳು…


– ಪರಶುರಾಮ ಕಲಾಲ್


ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಒಂದುವರ್ಷ ಹೆಚ್ಚುವರಿಯಾಗಿ ರಾಜ್ಯಪಾಲರಿಂದ ಅವಕಾಶ ಪಡೆದು, ಒಟ್ಟು ನಾಲ್ಕು ವರ್ಷ ಅವಧಿಪೂರ್ಣಗೊಳಿಸಿ, ಡಾ.ಎ. ಮುರಿಗೆಪ್ಪ ಈಗ ವಿಶ್ರಾಂತ ಕುಲಪತಿಗಳಾಗಿದ್ದಾರೆ. ಪ್ರಭಾರಿ ಕುಲಪತಿಯಾಗಿ ಡಾ.ಹಿ.ಚಿ.ಬೋರಲಿಂಗಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.

ಡಾ.ಹಿ.ಚಿ.ಬೋರಲಿಂಗಯ್ಯ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು, ಅವರ ಮೇಲೆ ತನಿಖೆ ನಡೆಸಬೇಕೆಂದು ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ಈ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಈಗ ಪ್ರಭಾರಿ ಕುಲಪತಿಗಳಾಗಿಯೇ ಡಾ.ಹಿ.ಚಿ.ಬೋರಲಿಂಗಯ್ಯ ಕೆಲಸ ನಿರ್ವಹಿಸಬೇಕಿದೆ. ಇದು ಆಡಳಿತಾತ್ಮಕವಾಗಿ ಎಷ್ಟು ಸರಿ ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.

ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಬುಧವಾರ ಕನ್ನಡ ವಿವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಸಂಕಷ್ಟದ ದಿನಗಳನ್ನು ಹೀಗೆ ನೆನಪಿಸಿಕೊಂಡಿದ್ದಾರೆ:

  1. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ವಿಜಯನಗರ ಪುನಃಶ್ಚೇತನ ಟ್ರಸ್ಟ್‌ಗೆ ಥೀಮ್ ಪಾರ್ಕ್‌ಗಾಗಿ ನೀಡಲು ನನ್ನನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದರು ಎಂದಿದ್ದಾರೆ. ಥೀಮ್ ಪಾರ್ಕ್ ಅನ್ನು ಕನ್ನಡ ವಿವಿ ಪಕ್ಕ ಮಾಡುತ್ತೇವೆ. ಕನ್ನಡ ವಿವಿಯ 80 ಏಕರೆಯಲ್ಲಿ ರಿಸರ್ಚ್ ಸೆಂಟರ್ ಬಿಲ್ಡಿಂಗ್ ಕಟ್ಟಿ ಕನ್ನಡ ವಿವಿ.ಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿ ಆ ಮೇಲೆ ಈ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು. ದಾರಿ ತಪ್ಪಿಸಿದರು.
  2. ಯು.ಆರ್. ಅನಂತಮೂರ್ತಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದಾಗ, “ಅವರಿಗೆ ಯಾಕೆ ನಾಡೋಜ ಗೌರವ ಪದವಿ ನೀಡುತ್ತೀರಿ. ಅದನ್ನು ಕೈ ಬಿಡಿ, ಬೇರೆಯವರನ್ನು ಆಯ್ಕೆ ಮಾಡಿ, ಇಲ್ಲವಾದರೆ ನುಡಿಹಬ್ಬದಲ್ಲಿ ಗಲಾಟೆ ಮಾಡಿಸಬೇಕಾಗುತ್ತದೆ,” ಎಂದು ಸಚಿವರಾದ ಜಿ.ಜನಾರ್ಧನ ರೆಡ್ಡಿ, ಬಿ.ಶ್ರೀರಾಮುಲು, ಶಾಸಕ ಆನಂದ್ ಸಿಂಗ್ ಒತ್ತಾಯಿಸಿದರು. ಅವರಿಗೆ ಸಮರ್ಪಕ ಉತ್ತರ ಹೇಳಿ ನಿಭಾಯಿಸಿದೆ.
  3. ನಾಡೋಜ ಗೌರವ ಪದವಿಯನ್ನು ತಾವು ಸೂಚಿಸಿದವರಿಗೆ ಕೊಡಬೇಕೆಂದು ರಾಜ್ಯಪಾಲ ಹಂಸರಾಜ ಭಾರದ್ವಾಜ, ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಬೇರೆ ಬೇರೆ ಹೆಸರನ್ನು ಸೂಚಿಸಿದರು. ಅದನ್ನು ಪರಿಗಣಿಸಲಿಲ್ಲ. ಇದರಿಂದ ಕುಲಾಧಿಪತಿಯಾಗಿದ್ದ ರಾಜ್ಯಪಾಲರು, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನುಡಿಹಬ್ಬ ಘಟಿಕೋತ್ಸವಕ್ಕೆ ಬರಲಿಲ್ಲ.
  4. ಸಿಂಡಿಕೇಟ್ ಸದಸ್ಯರಾದವರಿಗೆ ದೂರದೃಷ್ಠಿ ಇರಬೇಕು. ಕನಸು ಇರಬೇಕು. ಅದು ಇಲ್ಲದವರು ಸದಸ್ಯರಾದರೆ ಸಮಸ್ಯೆ ಸೃಷ್ಠಿಯಾಗುತ್ತದೆ. (ಹೀಗೆ ಹೇಳುವ ಮೂಲಕ ಸಿಂಡಿಕೇಟ್ ಸದಸ್ಯರ ಆಯ್ಕೆ ಸರಿ ಇರಲಿಲ್ಲ ಎಂದು ಹೇಳಿದಂತಾಯಿತು. ಅಲ್ಲವೆ?)

ಈ ಸಂದರ್ಭಗಳಲ್ಲಿ ಕುಲಪತಿಗಳಾಗಿ ಡಾ.ಎ.ಮುರಿಗೆಪ್ಪ ಯಾವ ರೀತಿ ದಿಟ್ಟಕ್ರಮ ಕೈಗೊಂಡರು?
ಯಾಕೆ ಈ ಕುರಿತಂತೆ ತಮ್ಮ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿಲ್ಲ?
ಎಲ್ಲರನ್ನೂ ಸರಿದೂಗಿಸುವ ಪ್ರಯತ್ನ ನಡೆಸುವ ಅಗತ್ಯ ಏನಿತ್ತು? ಇದು ಸರಿಯಾದ ಕ್ರಮವೇ?

ಇಂತಹ ಪ್ರಶ್ನೆಗಳು ಬರುವುದು ಸಹಜ. ಕಠಿಣವಾಗಿಯೇ ನಡೆದುಕೊಂಡೆ ಎಂದೇ ಈಗ ಡಾ.ಎ.ಮುರಿಗೆಪ್ಪ ಹೇಳುತ್ತಾರೆ. ಕನ್ನಡ ವಿವಿಯ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದವರು, ಅವರೂ ಏನನ್ನೂ ಮಾಡಲಿಲ್ಲ, ಎಲ್ಲದಕ್ಕೂ ಬೆಂಡಾದರು ಎಂದೇ ಹೇಳುತ್ತಾರೆ.

ಕನ್ನಡ ವಿವಿ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಮೊಟ್ಟ ಮೊದಲು ಕುವೆಂಪು ಅವರಿಗೆ ಮರಣೋತ್ತರವಾಗಿ ಕೊಡುವ ಮೂಲಕ ಆರಂಭವಾಯಿತು. ಕನ್ನಡ ನಾಡು, ನುಡಿಗೆ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ಕೊಡಬೇಕೆನ್ನುವುದು ಇದರ ಉದ್ದೇಶವಾಗಿತ್ತು. ಇದು ಬರುತ್ತಾ ಹಿಗ್ಗಿಸಿಕೊಂಡು ಏರುತ್ತಾ ಹೋಗಿ ರಾಜ್ಯೋತ್ಸವ ಪ್ರಶಸ್ತಿಯಂತೆ ಅಗ್ಗವಾಗಿ ಬಿಟ್ಟಿತು. ಜಾತಿ, ಪ್ರದೇಶವಾರು ಗುರುತಿಸಲು ಆರಂಭವಾಯಿತು. ನಾ ಎಂಬ ಡೋಜು ಹೆಚ್ಚಾದವರಿಗೆ ಈ ನಾಡೋಜ ಎಂಬ ಅನ್ವರ್ಥನಾಮಕ್ಕೆ ತಿರುಗಿ ಬಿಟ್ಟಿತು. ಹೀಗಾಗಿ ಕಳೆದ ವರ್ಷ ಯೋಗಪಟು ಒಬ್ಬರಿಗೆ ನಾಡೋಜ ದೊರೆಯಿತು. ಜ್ಯೋತಿಷಿಗಳಿಗೆ ಮುಂದಿನ ವರ್ಷ ಕೊಟ್ಟರೂ ಕೊಡಬಹುದು ಎನ್ನುವಲ್ಲಿಗೆ ಬಂದಿದೆ.

ಈ ಗೌರವ ಪದವಿಗೆ ಗೌರವ ಸಿಗುವಂತೆ ಮಾಡಬೇಕಿದೆ.

ಕನ್ನಡ ವಿವಿ ಕುಲಪತಿಗಳಾಗಲು ದೊಡ್ಡ ಲಾಬಿಯೇ ಪ್ರಾರಂಭಗೊಂಡಿದೆ. ಈಗಾಗಲೇ 14 ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಯುಜಿಸಿ ಒಬ್ಬ ಸದಸ್ಯರ ಹೆಸರನ್ನು ಸೂಚಿಸಿಲ್ಲವಾದ್ದರಿಂದ ಇನ್ನೂ ಆಯ್ಕೆ ಸಮಿತಿ ಪೂರ್ಣಗೊಂಡಿಲ್ಲ. ಸಮಿತಿ ರಚನೆಯಾದ ಮೇಲೆ ಅರ್ಜಿ ಸಲ್ಲಿಸುವ ಇನ್ನಷ್ಟು ಅಕಾಂಕ್ಷಿಗಳು ಇದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಈಗ ಸಂಕಷ್ಟದಲ್ಲಿದೆ. ಜಡವಾಗಿದೆ. ಅಲ್ಲಿ ಗುಂಪುಗಾರಿಕೆಗೆ ಹೆಚ್ಚಾಗಿ ಪರಸ್ಪರ ಟೀಕೆ, ಅಪಸ್ಪರಗಳು ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕನ್ನಡ ವಿವಿಯನ್ನು ಸಾಂಸ್ಕೃತಿಕವಾಗಿ, ಸಂಶೋಧನಾತ್ಮಕವಾಗಿ, ಆಡಳಿತಾತ್ಮಕವಾಗಿ ಮುನ್ನೆಡೆಸುವ ಛಾತಿ ಇರುವವರು ಕುಲಪತಿಗಳಾಗಿ ಬರಬೇಕಿದೆ. ಕನ್ನಡ ವಿವಿ.ಗೆ ಹೊಸ ಸ್ವರೂಪ ಕೊಟ್ಟ ಮೊದಲಿನ ಉತ್ಸಾಹ, ಕನ್ನಡ ನಾಡು-ನುಡಿ ಕಟ್ಟುವ ಕೆಲಸ ಆರಂಭವಾಗಬೇಕಿದೆ. ಇದನ್ನು ಮಾಡಬೇಕಾದವರು ಯಾರು? ಇದು ಪ್ರಶ್ನೆಯಾಗಿಯೇ ಇದೆ.

ತಲೆದಂಡ ಪಡೆದ ಮಾಧ್ಯಮ


– ಪರಶುರಾಮ ಕಲಾಲ್


ಅಂತೂ ಮೂವರು ಸಚಿವರ ತಲೆದಂಡವನ್ನು ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವೆಂದು ಬಣ್ಣಿತವಾಗುವ ಪತ್ರಿಕಾ/ಟಿವಿ ಮಾಧ್ಯಮ ಬಲಿ ತೆಗೆದುಕೊಂಡಿದೆ.

ಸಮರ್ಥ ವಿರೋಧ ಪಕ್ಷವಾಗಿ ಮಾಧ್ಯಮ ಈ ವಿಷಯದಲ್ಲಿ ಕಾರ್ಯನಿರ್ವಹಿಸಿದೆ. ದೃಶ್ಯಮಾಧ್ಯಮದ ಈ ಕಾರ್ಯಕ್ಕೆ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡದೇ ದಿನ ಪತ್ರಿಕೆಗಳು ಸಹ ಸರಿಯಾಗಿ ಸಾಥ್ ನೀಡಿ, ಬೆಂಬಲಿಸಿವೆ. ಕಳೆದ ಎರಡುದಿನಗಳಿಂದ ನಡೆದ ಈ ಹೋರಾಟ ಯಶಸ್ವಿಯಾಯಿತು ಎಂದೇ ಹೇಳಬೇಕು.

ನಾಚಿಕೆ ಕಳೆದುಕೊಂಡ ವ್ಯವಸ್ಥೆಯಲ್ಲಿ ಜೀವಿಸುವುದು ತುಂಬಾ ಅತ್ಯಂತ ನೋವು, ಬೇಸರದ ಸಂಗತಿ. ಇಂತಹ ಸಂದರ್ಭದಲ್ಲಿಯೂ ಇದೊಂದು ಆಶಾಕಿರಣವಾಗಿ ಮೂಡಿ ಬಂದಿದೆ.

ಮಾಧ್ಯಮದ ಮೇಲೆ ರೇಗಾಡುವ ಸರ್ಕಾರದ ಅತಿರಥಮಹಾರಥರು ತಮ್ಮೊಳಗೆ ಆಪಾರ ಕೋಪ, ತಾಪಗಳಿದ್ದರೂ ಏನೋ ಮಾಡಲಾರದ ಸ್ಥಿತಿ ಮುಟ್ಟಿದ್ದರು.

ಶೀಲ, ಚಾರಿತ್ರ್ಯದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಸಂಘ, ಪರಿವಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಎಂದಿನಂತೆ ದಿವ್ಯ ಮೌನವಹಿಸಿದೆ. ನರಗುಂದದಲ್ಲಿ ಮೂವರು ಸಚಿವರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘ ಪರಿವಾರಕ್ಕೆ ಸೇರಿದ ಸದಸ್ಯನೊಬ್ಬ ಮಾಧ್ಯಮದ ಎದುರು ಹೇಳಿದ್ದು ನನಗೆ ಇಲ್ಲಿ ಮುಖ್ಯ ಎನ್ನಿಸುತ್ತಿದೆ. ಧೀಮಂತ ಹೋರಾಟಗಾರ ಜಗನ್ನಾಥರಾವ್ ಜೋಷಿಯ ಸ್ಮಾರಕವನ್ನು ಅಭಿವೃದ್ಧಿ ಪಡಿಸುತ್ತೇನೆಂದು ಮಾತು ಕೊಟ್ಟ ಬಿಜೆಪಿ ಸರ್ಕಾರವೂ ಈಗ ಇಂತಹ ಅನೈತಿಕ ಚಟುವಟಿಕೆಯಲ್ಲಿ ತೊಡಗಿದೆ. ಇವರಿಗೆ ಯಾವ ಮೌಲ್ಯವೂ ಇಲ್ಲ.

ಆರ್.ಎಸ್.ಎಸ್. ಬಗ್ಗೆ ಗೊತ್ತಿರುವವರಿಗೆ ಜಗನ್ನಾಥ ರಾವ್ ಜೋಷಿಯ ಬಗ್ಗೆ ಗೊತ್ತಿರುತ್ತದೆ. ಸಂಘದ ಬೈಠಕ್‌ನಲ್ಲಿ ಭಾಗವಹಿಸಿ, ಸಂಘದ ದೀಕ್ಷೆ ಪಡೆದು ರಾಷ್ಟ್ರಭಕ್ತಿ ಪ್ರದರ್ಶಿಸುವ ಯುವಕರು  ಭ್ರಮನಿರಸನ ಹೊಂದಲು ಇನ್ನೇನೂ ಬೇಕು. ಸಂಘ ಪರಿವಾರ ಈ ಘಟನೆಯ ಬಗ್ಗೆ ದಿವ್ಯಮೌನ ವಹಿಸಲು ಇದು ಒಂದು ಕಾರಣವಾಗಿದೆ. ಯುವಕರನ್ನು ಬಡಿದೆಬ್ಬಿಸಬಹುದು, ಆದರೆ ಕುಳಿತುಕೊಳ್ಳಲು ಹೇಳಲು ಅದಕ್ಕೆ ಆಗದ ಸ್ಥಿತಿಯಲ್ಲಿ ಅದರ ನಾಯಕತ್ವವಿದೆ. ಅದರ ಹಿಡಿತ ಸರ್ಕಾರದ ಮೇಲೆ ಇದೆ. ಆದರೆ ಅದು ಹೇಳುವ ಶೀಲ, ಚಾರಿತ್ರ್ಯವೇ ಹರಣವಾಗುತ್ತಿದ್ದರೆ ಅದನ್ನು ತಿದ್ದುವುದು ಅದಕ್ಕೆ ಸಾಧ್ಯವಿಲ್ಲ. ಅಧಿಕಾರದ ಮುಂದೆ ಅದು ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಇಂತಹ ಹೊಂದಾಣಿಕೆಯನ್ನು ಅದು ಮಾಡಿಕೊಳ್ಳುತ್ತಲೇ ಬಂದಿದೆ.

ನಮ್ಮ ಮಾಧ್ಯಮಗಳು ಈಗ ಎಚ್ಚೆತ್ತುಕೊಂಡಿವೆ. ಒಂದಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿವೆ. ಇದೇ ರೀತಿ ಮುಂದಿನ ದಿನಗಳಲ್ಲೂ ನಡೆದುಕೊಂಡರೆ ಕರ್ನಾಟಕದ ರಾಜಕಾರಣವನ್ನು ಒಂದು ತಹಬಂದಿಗೆ ತರಲು ಸಾಧ್ಯವಾಗುತ್ತದೆ ಎಂಬ ಭರವಸೆಗೆ ಈ ಮೂವರು ಸಚಿವರ ತಲೆದಂಡ ಒಂದು ದಿಕ್ಸೂಚಿಯಾಗಿದೆ.