Category Archives: ಪ್ರಸಾದ್ ರಕ್ಷಿದಿ

ರಾಮರಾಜ್ಯ ಮತ್ತು ಗ್ರಾಮಸ್ವರಾಜ್ಯ

– ಪ್ರಸಾದ್ ರಕ್ಷಿದಿ

ಕರ್ನಾಟಕದಲ್ಲೀಗ ರಾಮರಾಜ್ಯ ತರುವವರು ಅಧಿಕಾರಕ್ಕೆ ಬಂದು ಐದನೇ ವರ್ಷ. ರಾಮರಾಜ್ಯದವರ ಆಳ್ವಿಕೆಯಲ್ಲಿ ಗ್ರಾಮರಾಜ್ಯ ಎಲ್ಲಿಗೆ ತಲಪಿದೆ ಎಂಬುದಕ್ಕೆ ನಮ್ಮೂರೊಂದು ಸಣ್ಣ ಉದಾಹರಣೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಪಂಚಾಯತ್ ಏಳು ಗ್ರಾಮಗಳು ಸೇರಿರುವ ಒಂದು ಗ್ರೂಪ್ ಪಂಚಾಯತ್. ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ಚುನಾವಣೆ ನಡೆದಾಗ ಹದಿಮೂರು ಜನ ಸದಸ್ಯರಿರುವ ಈ ಪಂಚಾಯತಿಗೆ ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿಯಿಂದ ಸುಮಾರಾಗಿ ಸಮಾನ ಸಂಖ್ಯೆಯ ಸದಸ್ಯರು ಆರಿಸಿ ಬಂದಿದ್ದರು. ಈ ಹಿಂದೆಲ್ಲಾ ಪಂಚಾಯತ್ ಚುನಾವಣೆಯೆಂದರೆ ತಿಂಗಳುಗಟ್ಟಲೆ ಕಾಲ ಹಳ್ಳಿಗಳು ಬಿಗುವಿನಲ್ಲಿರುತ್ತಿದ್ದರಿಂದ ಈ ಬಾರಿ ನಮ್ಮೂರಿನ ಮಟ್ಟಿಗಾದರೂ ಜಗಳ ಬೇಡವೆಂದು ಊರಿನ ಹಿರಿಯರು ಹಾಗೂ ರಾಜಕೀಯ ಕಾರ್ಯಕರ್ತರೂ ಸೇರಿ ಒಮ್ಮತದಿಂದ ಅಧ್ಯಕ್ಷ-ಉಪಾಧ್ಯಕ್ಷರನ್ನು ಆರಿಸಿದೆವು. ಉನ್ನತ ಶಿಕ್ಷಣ ಪಡೆದ ನಿವೃತ್ತ ಸೈನಿಕರೊಬ್ಬರು ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಬಂದಾಗ ನಾವೆಲ್ಲ ನಮ್ಮ ಗ್ರಾಮರಾಜ್ಯ ರಾಮರಾಜ್ಯವಾಗುವ ದಿನವನ್ನು ಕಾಯುತ್ತ ಕುಳಿತಿದ್ದೆವು.

ಆಕಾಶ ಕಾಣುತ್ತಿರುವ ಮೀಟಿಂಗ್ ಹಾಲ್

ನಮ್ಮ ತಾಲ್ಲೂಕಿನಲ್ಲಿ ಹೇಮಾವತಿ ನದಿಹರಿಯುವುದರಿಂದ ಅನೇಕ ಪಂಚಾಯತ್‍ಗಳಿಗೆ ನದಿಮರಳಿನ ಟೆಂಡರ್ ಹಣ ಬರುತ್ತದೆ. ಈಗ ಟೆಂಡರ್ ನಿಂತಿದ್ದರೂ ಎರಡು ವರ್ಷದ ಹಿಂದೆ ನಮ್ಮ ಪಂಚಾಯತಿಗೆ ಬಂದ ಮರಳಿನ ವರಮಾನವೇ ಸುಮಾರು ಮೂವತ್ತೇಳು ಲಕ್ಷ ರೂಪಾಯಿಗಳು! (ನಮ್ಮ ಪಂಚಾಯತ್‌ನ ಗಡಿಯಲ್ಲೇ ಹೇಮಾವತಿ ನದಿ ಹರಿಯುತ್ತದೆ.) ಇನ್ನು ರಾಜ್ಯ ಕೇಂದ್ರ ಸರ್ಕಾರಗಳ ಬೇರೆ ಬೇರೆ ಯೋಜನೆಗಳ ಮೊತ್ತ ಸೇರಿದರೆ ಕೋಟಿಯನ್ನು ದಾಟುತ್ತಿತ್ತು.

ಆ ನಂತರ ಎಲ್ಲರೂ ರಾಜ್ಯ ರಾಜಕೀಯದ ನಿತ್ಯಪ್ರಹಸನವನ್ನು ಕೇಂದ್ರದ ರಾಮಲೀಲಾವನ್ನೂ ಟಿವಿಯಲ್ಲಿ ರೋಚಕವಾಗಿ ನೋಡುತ್ತಾ ಮೈಮರೆತದ್ದರಿಂದ ಗ್ರಾಮಪಂಚಾಯತಿಯನ್ನು ಮರೆತುಬಿಟ್ಟಿದ್ದರು. ಒಂದು ವರ್ಷ ಕಳೆಯುವಷ್ಟರಲ್ಲಿ ಪಂಚಾಯತಿಯಲ್ಲಿ ಬಡವರಿಗೆ ಏನೂ ಸಿಗುತ್ತಿಲ್ಲ, ಕುಡಿಯಲು ನೀರೂ ಇಲ್ಲ, ಪಂಚಾಯತ್ ದುಡ್ಡೆಲ್ಲಾ ಖಾಲಿಯಾಗಿದೆ ಎಂಬ ದೂರು ಪ್ರಾರಂಭವಾಯಿತು. ನಮ್ಮೂರಿನ ಅತ್ಯುತ್ಸಾಹಿ ಯುವಕರೊಬ್ಬರು, ಇದಕ್ಕೆಲ್ಲ ಕೊನೆ ಹಾಡುತ್ತೇನೆಂದು ಮಾಹಿತಿ ಹಕ್ಕು ಕಾಯಿದೆ ಪ್ರಕಾರ ದಾಖಲೆಗಳನ್ನು ತೆಗೆದರು. ಅದರ ಪ್ರಕಾರ ಪಂಚಾಯಿತಿಯ ಎಲ್ಲ ಯೋಜನೆಗಳಲ್ಲೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೇ ಕಾಣುತ್ತಿತ್ತು. ಉದ್ಯೋಗ ಖಾತ್ರಿ ಯೋಜನೆಯಂತೂ ಅವ್ಯವಹಾರ ಖಾತ್ರಿ ಯೋಜನೆಯಾಗಿತ್ತು. ಮರಳಿನ ಹಣ ನೀರಿನಂತೆ ಇಂಗಿಹೋಗಿತ್ತು. ಅವ್ಯವಹಾರಗಳ ಬಗ್ಗೆ ಒಂದು ಪತ್ರಿಕಾ ಗೋಷ್ಟಿಯೂ ನಡೆಯಿತು. ಎಂಟು ದಿನಗಳಕಾಲ ನಿರಂತರ ಸುದ್ದಿ ಮಾಡುತ್ತೇನೆಂದು ಹೊರಟ ಸುದ್ದಿವೀರರು ಎರಡನೇ ದಿನಕ್ಕೆ ತೆಪ್ಪಗಾದರು. ತೆರೆಮರೆಯಲ್ಲಿ ರಾಜೀ ಸಂಧಾನಗಳು ನಡೆದವು. ಪತ್ರಕರ್ತರ ಪೆನ್ನಿನಲ್ಲಿ ಇಂಕು ಖಾಲಿಯಾಯಿತು. ಜಿಲ್ಲಾಪಂಚಾಯತಿಗೆ ನೀಡಿದ ದೂರು ಕಡತ ವಿಲೇವಾರಿಯಾಯಿತು. ಲೋಕಾಯುಕ್ತಕ್ಕೆ ಹೋಗುತ್ತೇನೆಂದು ಹೊರಟ ಕೆಲವರು ತಣ್ಣಗೇ ಕುಳಿತರು.

ಹಾಳುಬಿದ್ದಂತಿರುವ ಪಂಚಾಯತ್ ಕಛೇರಿ

ಅಷ್ಟರಲ್ಲಿ ರಾಜ್ಯದಲ್ಲಿ ಯಡಿಯೂರಪ್ಪನವರು ಹೋಗಿ ಸದಾನಂದಗೌಡರ ಸರ್ಕಾರ ಬಂತು. ಸಕಲೇಶಪುರದಲ್ಲಿ ಸದಾನಂದ ಗೌಡರ ಕಾರ್ಯಕ್ರಮವಿತ್ತು. ಆದಿನ ಹೇಗೋ ಮುಖ್ಯಮಂತ್ರಿಗಳ ಭೇಟಿಯ ಅವಕಾಶ ಪಡೆದ ಗ್ರಾಮಸ್ಥರು, ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ದೂರು ನೀಡಿ ಎಲ್ಲ ಮಾಹಿತಿಗಳ ಕಡತವನ್ನು ಒಪ್ಪಿಸಿದರು. ಮುಖ್ಯಮಂತ್ರಿಗಳು ವೀರಾವೇಶದಿಂದ ಇಂತಹ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ, ಕೂಡಲೇ ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿ ಹೋದರು.

ಅಲ್ಲಿಂದ ಮುಂದೆ, ದೂರುನೀಡಿದವರು ಗೇಲಿಗೊಳಗಾಗಿ ನಮ್ಮ ಪಂಚಾಯತ್‌ನಲ್ಲಿ ಓಡಾಡುವುದೇ ಕಠಿಣವಾಗಿಬಿಟ್ಟತು. ಕಡತ ಎಲ್ಲಿಗೆ ಹೋಯಿತೋ ತಿಳಿಯದು.

ಈಗ ಕೆಲವು ದಿನಗಳ ಹಿಂದೆ ಮನೆಸಿಕ್ಕದಿರುವ ಬಡವನೊಬ್ಬ ಪಂಚಾಯತ್ ಸದಸ್ಯನೊಬ್ಬನಿಗೆ ವಾಚಾಮಗೋಚರವಾಗಿ ಬೈದದ್ದರಿಂದ ಅವನಿಗೆ ಅಸಾಧ್ಯ ಸಿಟ್ಟುಬಂದು ಟಿವಿಯಲ್ಲಿ ಬರುತ್ತಿದ್ದ ರೋಚಕ ಸುದ್ದಿಗಳನ್ನೆಲ್ಲ ಬದಿಗಿಟ್ಟು, ಪಂಚಾಯ್ತಿ ಕಛೇರಿಗೆ ಹೋಗಿ ತನಗೆ ತಿಳಿದಷ್ಟು ಮಾಹಿತಿ ಕಲೆಹಾಕಿದ ನಂತರ ಅದು ಹೇಗೊ ಕೆಲವು ಸದಸ್ಯರುಗಳನ್ನು ಹಿಡಿದುತಂದ. ಎಲ್ಲರೂ ಸೇರಿ ಪಂಚಾಯತ್ ಅವ್ಯವಹಾರಗಳ ತನಿಖೆಯಾಗಬೇಕೆಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರುಕೊಟ್ಟರು. ಗ್ರಾಮ ಪಂಚಾಯತಿಯ ಸದಸ್ಯರು ಹೇಳಿದಾಕ್ಷಣ ತನಿಖೆ ನಡೆಸಲು ಬರುವುದಿಲ್ಲ, ನೀವು ನಿರ್ದಿಷ್ಟವಾದ ಪ್ರಕರಣಗಳಿದ್ದರೆ ತಿಳಿಸಿ, ಎಂದು ತಾಲ್ಲೂಕು ಪಂಚಾಯತಿಯ ಖಾವಂದರು ಅಪ್ಪಣೆ ಕೊಡಿಸಿದರು. ನಂತರ ಗ್ರಾಮದ ಹಲವರು ಹಿರಿಯರೂ ಸೇರಿ ಒತ್ತಡ ತಂದದ್ದರಿಂದ, ಇಡೀ ಪಂಚಾಯತ್ ತನಿಖೆ ಅವಸರದಲ್ಲಿ ಸಾಧ್ಯವಿಲ್ಲ, ಕೆಲವು ನಿರ್ದಿಷ್ಟ ಪ್ರಕರಣಗಳ ಬಗ್ಗೆ ಮಾತ್ರ ತನಿಖೆ ನಡೆಸುವುದೆಂದು ತೀರ್ಮಾನವಾಗಿ ಒಬ್ಬ ತನಿಖಾಧಿಕಾರಿಯನ್ನು ನೇಮಿಸಿದರು.

ದೂರಿನ ತನಿಖೆ ನಡೆಯುತ್ತಿರುವದು

ನಮ್ಮ ಗ್ರಾಮ ಪಂಚಾಯತ್ ದಟ್ಟ ಮಲೆನಾಡಿನ ಪ್ರದೇಶದಲ್ಲಿರುವುದರಿಂದ ಇಲ್ಲಿ ಮನೆಗಳನ್ನೂ ಮನುಷ್ಯರನ್ನೂ ಹುಡುಕಿಯೇ ಗುರುತಿಸಬೇಕಾಗುತ್ತದೆ. ಆದ್ದರಿಂದ ಕೊನೆಗೆ ಪಂಚಾಯತ್‌ನ ಒಂದು ಗ್ರಾಮದ, ಒಂದು ವಾರ್ಡನ ಹತ್ತು ಆಶ್ರಯ ಯೋಜನೆ ಮನೆಗಳ ಬಗ್ಗೆ ಹಾಗೂ ನಿರ್ಮಲಗ್ರಾಮ ಯೋಜನೆಯ ಐವತ್ತೊಂದು ಶೌಚಾಲಯಗಳ ಬಗ್ಗೆ ಮಾತ್ರ ತನಿಖೆ ನಡೆಯಿತು. ಇವೆಲ್ಲ ಕಾಮಗಾರಿ ಪೂರ್ಣಗೊಂಡ ಬಿಲ್ ಪಾವತಿಯಾದಂತಹವುಗಳು. ತನಿಖೆ ನಡೆದಾಗ ಐವತ್ತೊಂದು ಶೌಚಾಲಯಗಳ ಪೈಕಿ ಎರಡು ಮಾತ್ರ ಅಸ್ತಿತ್ವದಲ್ಲಿ ಇದ್ದವು! ಉಳಿದ ನಲುವತ್ತೊಂಬತ್ತು ಶೌಚಾಲಯಗಳು ದಾಖಲೆಗಳಲ್ಲಿ ಮಾತ್ರ ಇದ್ದವು. ಅಷ್ಟಕ್ಕೂ ಕೃತಕ ದಾಖಲೆ ಸೃಷ್ಟಿಲಾಗಿತ್ತು. ಕಾಫಿ ಪ್ಲಾಂಟರುಗಳ ಹೆಸರಿನಲ್ಲೂ ಶೌಚಾಲಯ ಮಂಜೂರಾಗಿ, ನಕಲಿ ಸಹಿ ಬಳಸಿ ಹಣ ಪಡೆಯಲಾಗಿದೆ. ಹತ್ತು ವರ್ಷದ ಹಿಂದೆ ಸತ್ತು ಹೋಗಿರುವ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ಸಹಿ ಮಾಡಿದ್ದಾರೆ! ಇನ್ನು ಆಶ್ರಯ ಯೋಜನೆಯ ಮನೆಗಳ ಪೈಕಿ ಹತ್ತನ್ನು ಮಾತ್ರ ಪರಿಶೀಲಿಸಿದರೆ ಹತ್ತೂ ಮನೆಗಳು ಇಲ್ಲವೇ ಇಲ್ಲ. ಒಂದೆರಡು ತಳಕಟ್ಟು ಮಾತ್ರ ಮಾಡಲಾಗಿದೆ. ದಾಖಲೆಯಲ್ಲಿ ಎಲ್ಲವೂ ಪೂರ್ಣಗೊಂಡು ಹಣ ಪಡೆಯಲಾಗಿದೆ.. ಸಿಕ್ಕಿದ ಒಂದಿಬ್ಬರು ಫಲಾನುಭವಿಗಳ ಸಹಿಯನ್ನೂ ನಕಲಿ ಮಾಡಲಾಗಿತ್ತು.

ಕೆಲವು ದಿನಗಳಿಂದ ಸರಿಯಾಗಿ ಕುಡಿಯಲು ನೀರಿಲ್ಲ. ನಲ್ಲಿಪೈಪುಗಳು ಕಿತ್ತುಹೋಗಿವೆ. ಪಂಚಾಯತ್ ಕಛೇರಿ ತಿಪ್ಪೆ ಗುಂಡಿಯಾಗಿದೆ. ಮೋಟಾರುಗಳು ಸುಟ್ಟು ಕುಳಿತಿವೆ. ಲಕ್ಷಾಂತರ ರೂ ರಿಪೇರಿ ಬಿಲ್ ಪಾವತಿಯಾಗಿದೆ. ಮನೆಯಿಲ್ಲದವರು ಪ್ಲಾಸ್ಟಿಕ್ ಗುಡಿಸಲಿನಲ್ಲೇ ಇದ್ದಾರೆ.

ಹಿಂದೆ ಗ್ರಾಮ ಪಂಚಾಯತಿಗೆ ಬರುತ್ತಿದ್ದ ಹಣ ಕಡಿಮೆಯಿತ್ತು. ಆದರೂ ಕೆಲವು ವರ್ಷಗಳಿಂದ ನಮ್ಮ ಪಂಚಾಯತ್ (ಅನೇಕ ಜಗಳಗಳಿದ್ದರೂ) ಒಳ್ಳೆಯ ಗ್ರಾಮ ಪಂಚಾಯತ್ ಎಂದು ಹೆಸರು ಗಳಿಸಿತ್ತು. ಈಗ ಜಗಳ ಕಡಿಮೆಯಾಗಿದೆ. ಹಣ ಹರಿದುಬಂದಿದೆ, ಬಂದ ಹಾಗೇ ಹರಿದು ಹೋಗಿದೆ. ಹಿರಿಯರ ಗಾದೆ ಮಾತು ನೆನಪಾಗುತ್ತಿದೆ: ಅಕ್ಕಿ ತಿನ್ನೋನ ಓಡ್ಸುದ್ರೆ ಭತ್ತ ತಿನ್ನೋನೆ ತಗಲಾಕ್ಕಂಡ.

ಅರ್ದಕ್ಕೇ ನಿಂತಿರುವ ಹೊಸ ಕಟ್ಟಡ (ಕಳಪೆ ಕಾಮಗಾರಿ)

ಈ ತನಿಖೆಯ ಫಲಶ್ರುತಿಯ ಬಗ್ಗೆಯೂ ಯಾರಿಗೂ ಅಂತಹ ಭರವಸೆಯೇನೂ ಇಲ್ಲ. ಈ ಹಿಂದೆ ಬಾವಿ ಕಾಣೆಯಾದ ಕತೆ ಕೇಳಿದ್ದೆವು ಇನ್ನು ಮುಂದೆ ಊರೇ ಕಾಣೆಯಾಗಬಹುದು. ಜನ ಟಿ.ವಿ ಮುಂದೆ ಕುಳಿತು ಅಣ್ಣಾಹಜಾರೆ-ಕೇಜ್ರಿವಾಲರ ಹೋರಾಟವನ್ನು ನೋಡಿ ಆನಂದಿಸುತ್ತಿದ್ದಾರೆ.

ಇಂದು ಒಂದು ಗ್ರಾಮಪಂಚಾಯತಿಯ ಕತೆಯಲ್ಲ — ನಿಜ ಸಂಗತಿ. ಎಲ್ಲ ಗ್ರಾಮಪಂಚಾಯತಿಗಳೂ ಹೆಚ್ಚೂ ಕಡಿಮೆ ಹೀಗೇ ಇವೆ.

ಕರಾವಳಿಯಲ್ಲಿ ಗೋಸಂರಕ್ಷಣೆ ಮತ್ತು ದೇಶಸೇವೆ

 -ಪ್ರಸಾದ್ ರಕ್ಷಿದಿ

*ಒಂದು*

ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡಿನ ಒಂದು ಹಳ್ಳಿ. ಮುಖ್ಯರಸ್ತೆಯ ಬದಿಯಲ್ಲಿ ಒಂದು ಬಸ್ ಸ್ಟಾಪ್. ಕತ್ತಲಾವರಿಸುವ ಹೊತ್ತು. ತಾಲೂಕು ಕೇಂದ್ರದಿಂದ ಆ ಮಾರ್ಗವಾಗಿ ಸಾಗುವ ಆ ದಿನದ ಕೊನೆಯ ಬಸ್ ಬಂದು ನಿಲ್ಲುತ್ತದೆ. ಸುಮಾರು ಇಪ್ಪತ್ತು ವಯಸ್ಸಿನ ಕುರುಚಲು ಗಡ್ಡದ ತರುಣನೊಬ್ಬ ಕಪ್ಪು ಬಣ್ಣದ ಬ್ಯಾಗೊಂದನ್ನು ಹೆಗಲಿಗೆ ನೇತುಹಾಕಿಕೊಂಡು ಬಸ್ಸಿನಿಂದ ಇಳಿಯತ್ತಾನೆ. ಆ ಊರಿಗೆ ಅಪರಿಚಿತನಂತೆ ಕಾಣುವ ಆತ ಯಾರನ್ನೋ ಹುಡುಕುವವನಂತೆ ಅತ್ತಿತ್ತ ನೋಡುತ್ತ ಬಸ್ಸ್‌ಸ್ಟಾಪ್‌ನಲ್ಲಿ ನಿಲ್ಲುತ್ತಾನೆ. ಒಂದೆರಡು ಕ್ಷಣಗಳಲ್ಲಿ ನಾಲ್ಕಾರು ಜನರ ಗುಂಪೊಂದು ಅವನತ್ತ ಬರುತ್ತದೆ. ಅವರಲ್ಲೊಬ್ಬ ದಾಂಡಿಗನಿದ್ದಾನೆ. ಎಲ್ಲರೂ ಆಗಂತುಕ ತರುಣನನ್ನು ಸುತ್ತುವರಿದು ನಿಲ್ಲುತ್ತಾರೆ.

ದಾಂಡಿಗ: ಏಯ್ ..ಯಾರು ನೀನು..?

ತರುಣ: ನಾನು… ಇಲ್ಲಿ ..ಫ್ರೆಂಡ್ ಮನೆಗೆ ಬಂದಿದ್ದೇನೆ.

ದಾಂಡಿಗ: ಯಾರವನು ನಿನ್ನ ಗೆಳೆಯ..

ತರುಣ: ಅದು.. ಅವರು ನನ್ನ ಫ್ರೆಂಡಿನ ಫ್ರೆಂಡು. ನನ್ನನ್ನು ಕರೆದೊಯ್ಯಲು ಇಲ್ಲಿಗೆ ಈಗ ಬರ್ಬೇಕಿತ್ತು, ನಾನು ಕಾಯ್ತಿದ್ದೇನೆ.

ದಾಂಡಿಗ: ಇಲ್ಲಿ ಎಲ್ಲರೂ ಹಾಗೇ ಬರುವುದು, ನಿನ್ನ ಹೆಸರೇನು? ಯಾರವನು ನಿನ್ನ ಫ್ರೆಂಡು ಅವ್ನ ಹೆಸರೇನು?

ತರುಣ: (ಗಾಬರಿಯಾಗಿದ್ದಾನೆ) ಅವ್ನ ಹೆಸರು ಕೃಷ್ಣ ಅಲ್ಲ ಹಾಗೇನೋ ಹೆಸರು..ಸರೀ ಗೊತ್ತಿಲ್ಲ,,

ಇನ್ನೊಬ್ಬ: (ದಾಂಡಿಗನನ್ನುದ್ದೇಶಿಸಿ) ಅಣ್ಣ ..ಪಾಪ ಇವನಿಗೆ ಫ್ರೆಂಡಿನ ಹೆಸರೂ ಗೊತ್ತಿಲ್ಲ… ಪಾಪ ತೊಟ್ಟಿಲ ಮಗು…!

ತರುಣ: ಸ್ವಲ್ಪ ನಿಲ್ಲಿ ಅವರೇ ಬರಬಹುದು ಈಗ, ನಾನು ರೀಸರ್ಚ್ ಸ್ಟೂಡೆಂಟು..

ದಾಂಡಿಗ: ಅವರು ಅಂದ್ರೆ ಯಾರೂ .. ನಿನ್ನ ತಂಡದವರೋ.. ಎಲ್ಲ ಕಳ್ಳರು, ದೇಶದ್ರೋಹಿಗಳು. ಎಲ್ಲಿ ನಿನ್ನ ಚೀಲ ತೆಗಿ.. ಯಾರವ ನಿನ್ನ ಫ್ರೆಂಡು ಬೇಗ ಬೊಗಳು..

ತರುಣ: (ಇನ್ನೂ ಗಾಬರಿಯಿಂದ) ನಿಲ್ಲಿ ಫೋನ್ ಮಾಡ್ತೇನೆ.. ಅಯ್ಯೊ ಇಲ್ಲಿ ರೇಂಜಿಲ್ಲ… (ಅಷ್ಟರಲ್ಲಿ ಒಬ್ಬ ಮೊಬೈಲ್ ಕಿತ್ತುಕೊಳ್ಳುತ್ತಾನೆ, ತರುಣ ಪ್ರತಿಭಟಿಸುತ್ತಿದ್ದಂತೆ ಎಲ್ಲರೂ ಸೇರಿ ಅವನಿಗೆ ಹೊಡೆಯತ್ತಾರೆ. ತರುಣ ಕುಸಿದು ಬಸ್ಟಾಪಿನಲ್ಲಿ ಕೂರುತ್ತಾನೆ, ಕತ್ತಲಾಗಿದೆ. ಅಷ್ಟರಲ್ಲಿ ಸ್ಕೂಟರೊಂದು ಬರುತ್ತದೆ. ಅದರಲ್ಲಿ ಬಂದ ವ್ಯಕ್ತಿ ಯಾರನ್ನೋ ಹುಡುಕುತ್ತಾನೆ.)

ಗುಂಪಿನವನೊಬ್ಬ: (ಸ್ಕೂಟರಿನವನ ಗುರುತು ಹಿಡಿದು) ಏನು ಕೇಶವಣ್ಣ?

ಕೇಶವ: ನನ್ನ ಫ್ರೆಂಡೊಬ್ಬರು ಅವರ ಕಡೆಯ ಸ್ಟೂಡೆಂಟ್ ಒಬ್ಬರನ್ನು ಕಳಿಸ್ತೇನೆ ಅಂತ ಹೇಳಿದ್ರು ,ಬಸ್ ಹೋಗಿರ್ಬೇಕು. ನಾನು ಬರುವಾಗ ಸ್ವಲ್ಪ ತಡವಾಯ್ತು..

ಮತ್ತೊಬ್ಬ: ಇಲ್ಲಿ ಒಬ್ಬ ಇದ್ದಾನೆ ಇವನೋ ನೋಡಿ.

ಕೇಶವ:  (ಕೇಶವ ತರುಣನನ್ನು ನೋಡುತ್ತಾನೆ, ಅವನ ಬಟ್ಟೆ ಹರಿದಿದೆ ಮುಖಕ್ಕೆಲ್ಲ ಪೆಟ್ಟಾಗಿದೆ.) ಅಯ್ಯಯ್ಯೋ ಹೌದು ಇವರೇ… ಇದೆಲ್ಲ ಏನು..

ದಾಂಡಿಗ: ಏನಿಲ್ಲ ಕೇಶವಣ್ಣ, ಅವ ಕೇಳಿದ್ದಕ್ಕೆ ಒಂದಕ್ಕೂ ಸರಿಯಾಗಿ ಉತ್ತರ ಕೊಡ್ಲಿಲ್ಲ.. ಕಳ್ಳ ಕಳ್ಳನ ಹಾಗೆ ಆಡಿದ, ಹುಡುಗ್ರು ಒಂದೆರಡು ಏಟು ಕೊಟ್ಟರು ಅಷ್ಟೆ.. ನಮಗೇನುಗೊತ್ತು? ಅವನಿಗೆ ಬಾಯಿರಲಿಲ್ಲವೋ..

ತರುಣ: ನೋಡಿ ನನಗೆ ಸರಿಯಾಗಿ ಮಾತಾಡೋಕೆ ಇವರು..

ದಾಂಡಿಗ: ಹ್ಞೂಂ  ಸಾಕು.. ಇನ್ನೀಗ ಹೊರಡಿ..

ಕೇಶವ: (ತರುಣನಿಗೆ ಸುಮ್ಮನಿರುವಂತೆ ಕಣ್ಣಲ್ಲೇ ಸೂಚಿಸುತ್ತಾನೆ). ತಪ್ಪೆಲ್ಲಾ ನನ್ನದೇ. ನಾನು ಸರಿಯಾದ ಸಮಯಕ್ಕೆ ಬರ್ಬೇಕಿತ್ತು.. ಆದರೂ ನೀವು.. ಹೀಗೆ..

ದಾಂಡಿಗ : ಕೇಶವಣ್ಣ ನೀವು ಬೇಸರ ಮಾಡುವುದು ಬೇಡ..ನಿಮ್ಮ ಫ್ರೆಂಡಿಗೆ ಹೇಳಿ. ಅಂದ ಹಾಗೆ ಎಚ್ಚರ….. ಹ್ಞಾಂ.  ಇದನ್ನೇ ಒಂದು ದೊಡ್ಡ ವಿಷಯ ಅಂತ ಸುದ್ದಿ ಮಾಡ್ಬೇಡಿ. ದೇಶರಕ್ಷಣೆ ಅಂದರೆ ಸುಲಭದ ಮಾತಲ್ಲ…  ಹ್ಞೂಂ.. ಎಲ್ಲ ಹೊರಡಿ….

***

*ಎರಡು*

ರೈತರೊಬ್ಬರ ಮನೆ ಹಸುವೊಂದನ್ನು ಕೊಳ್ಳಲು ಗಿರಾಕಿಯೊಬ್ಬ ಬಂದಿದ್ದಾನೆ. ಹಸುವನ್ನು ನೋಡಿ ಮಾತಾಡಿ ವ್ಯಾಪಾರ ಕುದುರಿದೆ. ರೈತರು ಹಸುವನ್ನು ಎಂಟು ಸಾವಿರಕ್ಕಿಂತ ಕಡಿಮೆಗೆ ಕೊಡಲು ಒಪ್ಪುತ್ತಿಲ್ಲ.

ಗಿರಾಕಿ: ನೀವು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು. ನನಗೆ ಮನೆ ತಲಪುವಾಗ ಅದಕ್ಕೆ ಹತ್ತು ಸಾವಿರ ಬೀಳುತ್ತೆ.

ರೈತ:  ನೋಡಿ ನನಗೆ ಮಾರಬೇಕೆಂದೇನೂ ಇರಲಿಲ್ಲ. ನೋಡಿಕೊಳ್ಳಲು ಜನ ಇಲ್ಲ ಕೊಟ್ಟಿಗೆಯಲ್ಲಿ ಜಾಗ ಇಲ್ಲ.  ಅದಕ್ಕೆ ಕೊಡ್ತಾ ಇದ್ದೇನೆ. ಇಲ್ಲದಿದ್ದರೆ ಇಂಥಾ ಹಸುವನ್ನು ಹತ್ತು ಸಾವಿರಕ್ಕೆ ಕಮ್ಮಿ ನಾನು ಬಿಡುವವನೇ ಅಲ್ಲ.. ನಿಮಗೆ ಇಲ್ಲಿಂದ ಹದಿನೈದು ಕಿ.ಮೀ. ದೂರ ಇರವುದು. ಅದಕ್ಕೆಷ್ಟು ಖರ್ಚು ಬಂದೀತು?

ಗಿರಾಕಿ: ಸ್ವಾಮಿ ನಿಮಗೆ ಗೊತ್ತಿದ್ದೂ ಕೇಳುತ್ತೀರಿ ಈಗ ಹಸು ಸಾಗಣೆಗೆ ಕಷ್ಟ ಎಷ್ಟುಂಟು, ಪಂಚಾಯಿತಿಯಿಂದ ಒಪ್ಪಿಗೆ ಪತ್ರಬೇಕು, ಗೋಸಂರಕ್ಷಣೆಯವರನ್ನು ಕಾಣಬೇಕು, ಅವರು ಒಪ್ಪಬೇಕು. ಆಮೇಲೆ ವಾಹನದವರು, ಅವರಂತೂ ದನ ಸಾಗಿಸುವುದು ಅಂದರೆ ಸುಲಭದಲ್ಲಿ ಬರುವುದೇ ಇಲ್ಲ. ಇನ್ನು ಹೆಚ್ಚಿನ ಬಾಡಿಗೆ ವಾಹನಗಳೆಲ್ಲ ಇರುವುದು ಬ್ಯಾರಿಗಳದ್ದು, ಅವರಂತೂ ನಮಗ್ಯಾಕೆ ಇಲ್ಲದ ಉಸಾಬರಿ ಎಂದು ಹೆಚ್ಚಿಗೆ ಬಾಡಿಗೆ ಕೊಡುತ್ತೇನೆಂದರೂ ಹಸು ಸಾಗಿಸಲು ಬರುವುದಿಲ್ಲ. ಹಾಗಾಗಿ ಬಹಳ ಕಷ್ಟ.. ಸ್ವಾಮಿ

ರೈತ: ಅದಕ್ಕೆಲ್ಲ ನೀವು ಹೆದರ ಬೇಕಾಗಿಲ್ಲ, ನಿಮ್ಮ ಮನೆವರೆಗೆ ನಾನೇ ಬರುತ್ತೇನೆ, ಯಾರು ಏನು ಮಾಡ್ತಾರೆ?

ಗಿರಾಕಿ: ನೀವು ದೊಡ್ಡವರು, ನಿಮ್ಮನ್ನು ಹೇಗೆ ನಾನು ಕರೆಯಲಿ? ಆದರೆ ನೀವೇ ಜೊತೆಯಲ್ಲಿ ಬಂದರೆ ಒಳ್ಳೆಯದೇ ಆಯ್ತ..

ರೈತ: ಸರಿ ಹಾಗಾದರೆ ಹಸುವಿಗೆ ಹತ್ತು ಸಾವಿರ ಕೊಡ್ತೀರೋ?

ಗಿರಾಕಿ: ಸ್ವಾಮೀ ನೀವೇ ಮನೆವರೆಗೆ ಸಾಗಿಸಿಕೊಟ್ಟರೆ ಐನೂರು ಹೆಚ್ಚಿಗೆ ಸೇರಿಸಿ ಕೊಡ್ತೇನೆ. ಹೇಗೂ ಅವರಿವರಿಗೆ ಕೊಡುವ ಹಣ..

(ಪಂಚಾಯತ್ ಪರವಾನಿಗೆಯನ್ನು ಪಡೆದು ರೈತರು ಬಾಡಿಗೆ ವಾಹನ ಮಾತಾಡಿ ಸ್ವತಃ ಹಸುವಿನೊಂದಿಗೆ ಪ್ರಯಾಣಮಾಡಿ ಹದಿನೈದು ಕಿ.ಮೀ. ದೂರದ ಗಿರಾಕಿಯ ಮನೆಗೆ ತಲಪಿಸಿ ಬಂದರು.)

***

 *ಮೂರು*

(ಸಂಜೆ ರೈತರ ಮನೆಯ ಲ್ಯಾಂಡ್ ಫೋನು ರಿಂಗಾಯಿತು..ರೈತರು ಫೋನೆತ್ತಿದರು..)

ಹಲೋ.. ನಮಸ್ಕಾರ ನಾನು ಗೋರಕ್ಷಕದಳದ ಅಧ್ಯಕ್ಷ ಮಾತಾಡ್ತಾ ಇರೋದು…

ರೈತ: ನಮಸ್ಕಾರ…

ಗೋರಕ್ಷಕ : ಏನಿಲ್ಲಾ ಹೀಗೇ.. ನೀವು ನಿನ್ನೆ ಒಂದು ಹಸು ಮಾರಾಟ ಮಾಡಿದ್ರಂತೆ..

ರೈತ: ಮಾರಾಟ ಹೌದು ಅದು ನಿಜವಾದ ಅರ್ಥದಲ್ಲಿ ಮಾರಾಟ ಅಲ್ಲ.. ತುಂಬಾ ಕಡಿಮೆಗೆ ಕೊಟ್ಟೆ.. ಸಾಕುವುದಕ್ಕೆ ಕಷ್ಟ ಆಗ್ತಿತ್ತು. ಹಾಲು ಸ್ವಲ್ಪ ಕಡಿಮೆ ಆಗ್ತಾ ಇತ್ತು.

ಗೋರಕ್ಷಕ: ನೀವು ಕಡಿಮೆಗೆ ಕೊಡುವುದಾಗಿದ್ರೆ ಅದರ ಬದಲಿಗೆ ಮಠಕ್ಕೋ ಗೋಶಾಲೆಗೋ ಕೊಡಬಹುದಾಗಿತ್ತು. ನಿಮಗೇನು ಅದು ದೊಡ್ಡ ಹಣ ಅಲ್ಲ, ಅಲ್ಲದೇ ಪುಣ್ಯದ ಕೆಲಸ, ನೀವೇ ಹೋಗಿ ಗಿರಾಕಿಯ ಮನೆಗೆ ತಲುಪಿಸಿ ಬಂದಿರಂತೆ?

ರೈತ:  ಹೌದು  ಅವರಿಗೆ ಸಾಗಿಸಲು ಧೈರ್ಯವೇ ಇಲ್ಲ. ಹಾಗಾಗಿ ನಾನೇ ಹೋಗಬೇಕಾಯ್ತು.

ಗೋಕರಕ್ಷಕ: ನಿಮ್ಮ ಮುನ್ನೆಚ್ಚರಿಕೆ ಮೆಚ್ಚುವಂಥಾದ್ದೇ.. ಇರಲಿ … ಅಲ್ಲ ಕೆಲವುಸಾರಿ ಹೆಸರು ಸುಳ್ಳುಹೇಳಿಕೊಂಡು ಬ್ಯಾರಿಗಳು ವ್ಯಾಪಾರಕ್ಕೆ ಬರ್ತಾರೆ. ಅಲ್ಲ ನೀವು ಅಂತವರಿಗೆಲ್ಲ ಕೊಡುವವರಲ್ಲ ನಮಗೆ ಗೊತ್ತು. ಆದರೂ ಎಚ್ಚರಿಕೆಗೆ ಹೇಳಿದ್ದು.

ರೈತ: ಅದು ಹಾಗಲ್ಲ, ಈಗ ವಾಹನದವರೂ ಸಾಗಿಸಲು ಒಪ್ಪುತ್ತಿಲ್ಲ.

ಗೋರಕ್ಷಕ: ಹೌದು ಈಗ ನಾವು ಎಚ್ಚರಗೊಂಡಿದ್ದೇವೆ. ನಮ್ಮ ಕಣ್ಣು ತಪ್ಪಿಸುವುದು ಸುಲಭವಲ್ಲ. ಈಗ ನೀವೇ ಹೋದಿರಲ್ಲ ಆ ವ್ಯಾನಿನವನೂ ನನಗೆ ಮುಂಚಿತವಾಗಿ ಫೋನ್ ಮಾಡಿ ಒಪ್ಪಿಗೆ ಪಡೆದಿದ್ದ, ನೀವು ಎಂಟು ಸಾವಿರದ ಐನೂರಕ್ಕೆ ಕೊಟ್ಟದ್ದಲ್ಲವೋ ಹಸುವನ್ನು ..ಹ..ಹಹ್ಹ…ಹ್ಹಾ…

ರೈತ: ನಿಮಗೆ ಎಲ್ಲ ವಿವರ ಗೊತ್ತುಂಟು…

ಗೋರಕ್ಷಕ: ನಾವು ಹಾಗೇ ಸ್ವಾಮಿ, ರಕ್ಷಣೆ ಅಂದರೆ ಸುಲಭದ ಮಾತೇ..? ಅದಿರಲಿ, ನಾನೀಗ ಫೋನ್ ಮಾಡಿದ್ದು ಯಾಕಂದ್ರೆ ನಿಮ್ಮಲ್ಲಿ ಇನ್ನೂ ಒಂದೆರಡು ಮುದಿ ಹಸುಗಳು ಇದೆಯಲ್ಲ, ನಾವೀಗ ನಮ್ಮ ತಾಲೂಕಿನಿಂದ ಎಲ್ಲ ಮುದಿ ಜಾನುವಾರನ್ನೂ ಗೋಶಾಲೆಗಳಿಗೆ ಕಳಿಸುತ್ತಿದ್ದೇವೆ. ಈಗಾಗಲೇ ನಮ್ಮ ಕರಾವಳಿಯ ಗೋಶಾಲೆಗಳೆಲ್ಲ ಭರ್ತಿಯಾಗಿವೆ, ಹಾಗಾಗಿ ನಾವೀಗ ಘಟ್ಟದ ಮೇಲಿನ ಗೋಶಾಲೆಗಳಿಗೆ ಕಳಿಸುತ್ತಿದ್ದೇವೆ. ನೋಡಿ ರಾಮಣ್ಣ ಗೌಡ್ರಲ್ಲಿ ಎರಡು ಉಂಟು, ಪಟೇಲ್ರು ಒಂದು ಹೋರಿ ಕೊಡುತ್ತಿದ್ದಾರೆ, ಸೀನಪ್ಪಣ್ಣನಲ್ಲಿಂದ ಮೂರು ಹೀಗೆ.. ನೀವೇ ವಿಚಾರಿಸಿಕೊಳ್ಳಿ.. ಘಟ್ಟದ ಗೋಶಾಲೆ ಆದ್ರಿಂದ ಸ್ವಲ್ಪ ಸಾಗಾಣಿಕೆ ಖರ್ಚು ನೀವೂ ಕೊಡ್ಬೇಕು. ಒಂದು ಜಾನುವಾರಿಗೆ ಐನೂರು ಕೊಡಿ ಸಾಕು. ಇಲ್ಲೇ ಆಗಿದ್ರೆ ನಾವೇ ಕೈಯಿಂದ ಹಾಕ್ತಿದ್ದೆವು. ಮುಂದಿನ ವಾರ ಲಾರಿ ಬರುವ ಮುಂಚೆ ಫೋನ್ ಮಾಡ್ತೇನೆ. ಇನ್ನು ಯಾವುದನ್ನೂ ಮಾರುವ ಯೋಚನೆ ಇಲ್ವಲ್ಲ ನಿಮಗೆ.. ಹಾಗೆ  ..ಮಾರಿದರೂ ನಮ್ಮ ಹುಡುಗರೇ ಸಾಗಿಸಬೇಕಲ್ಲಾ… ಹಹ್ಹಹ್ಹಾ…… ನಿಮ್ಮಲ್ಲಿಂದ ಎರಡು ಹಸು ಅಂತ ಬರ್ಕೊಂಡಿದ್ದೇನೆ…

ನಮಸ್ಕಾರ…

***

*ನಾಲ್ಕು*

ಮುಂದಿನ ಒಂದು ವಾರದಲ್ಲಿ ರೈತರ ಮನೆಯಂಗಳದಲ್ಲಿ ಗೋರಕ್ಷಕದಳದವರ ಲಾರಿಬಂದು ನಿಂತಿತು. ರೈತರು ಎರಡು ಮುದಿಹಸುಗಳನ್ನೂ ಲಾರಿಗೆ ಹತ್ತಿಸಿ ಒಂದುಸಾವಿರ ರೂಪಾಯಿ ಸಾಗಾಣಿಕೆ ಖರ್ಚು ನೀಡಿದರು. ಲಾರಿ ಡ್ರೈವರ್ ಹದಿನೈದು ವರ್ಷಗಳ ಹಿಂದೆ ಅವರದೇ ಊರಿನಲ್ಲಿ ಕೂಲಿ ಮಾಡುತ್ತಿದ್ದ ತನಿಯಪ್ಪನ ಮಗ ಸುಂದರ. ಅವನೇ ಗುರುತು ಹಿಡಿದು ರೈತರನ್ನು ಮಾತಾಡಿಸಿದ. ಲಾರಿಯಲ್ಲಿ ಆಗಲೇ ನಾಲ್ಕೈದು ಜಾನುವಾರುಗಳಿದ್ದವು. ಎಲ್ಲವನ್ನೂ ತುಂಬಿಕೊಂಡು ಲಾರಿ ಮುಖ್ಯ ರಸ್ತೆಯನ್ನು ಹಾದು ಹೈವೇಯತ್ತ ಚಲಿಸಿತು. ನಾಲ್ಕಾರು ಜನ ರೈತರು ಪುಣ್ಯ ಕಟ್ಟಿಕೊಂಡೆವೆಂದೋ ಮುದಿ ಹಸುಗಳನ್ನು ವಿಲೇವಾರಿಯಾದವೆಂದೋ ಹಗುರಾದರು.

ತಿಂಗಳ ನಂತರ ಪೇಟೆಯ ಹೋಟೆಲಿನಲ್ಲಿ ಕಾಫಿ ಕುಡಿಯುವಾಗ ರೈತರಿಗೆ ಲಾರಿ ಚಾಲಕ ಸುಂದರ ಕಾಣಸಿಕ್ಕಿದ. ತಮ್ಮೂರ ಹುಡುಗನೆಂಬ ಪ್ರೀತಿಯಿಂದ ರೈತರು ಮಾತಾಡಿಸಿದರು. ಅವತ್ತು ಯಾವ ಗೋಶಾಲೆಗೆ ಹಸುಗಳನ್ನು ಬಿಟ್ಟಿರಿ ಎಂದು ವಿಚಾರಿಸಿದರು. ಅದಕ್ಕೆ ಸುಂದರ ಕೊಟ್ಟ ಉತ್ತರ ಹೀಗಿತ್ತು. “ಅದು ನಾನು ಖಾಯಂ ಓಡಿಸುವ ಲಾರಿ ಅಲ್ಲಣ್ಣ.. ನಾನು ಅವತ್ತು ಟೆಂಪರರಿ, ಕೇರಳ ಗಡಿವರೆಗೆ ಮಾತ್ರ ನಾನು ಓಡಿಸಿದೆ. ನಂತರ ಡ್ರೈವರ್ ಬದಲಾದರು.ನನಗೆ ಒಂದು ಸಾವಿರ ಕೊಟ್ಟರು. ನಾನು ಬಸ್ಸಿನಲ್ಲಿ ವಾಪಸ್ ಬಂದೆ. ಯಾರಿಗೂ ಹೇಳ್ಬೇಡಿ.. ಬಡವ ಬದುಕ್ಬೇಕು…”

*** 

[ಇದು ಕತೆಯಲ್ಲ, ನಾಟಕದ ದೃಶ್ಯಗಳೂ. ಅಲ್ಲ ನಮ್ಮ ಕರಾವಳಿ ಜಿಲ್ಲೆಗಳಲ್ಲಿ ನಡೆಯತ್ತಿರುವ ನಿಜ ಘಟನೆಗಳನ್ನು ಆಧರಿಸಿದ ಸಂಗತಿಗಳು.]

ಮಲೆನಾಡಿನಲ್ಲಿ ರೈತ ಚಳವಳಿ


-ಪ್ರಸಾದ್ ರಕ್ಷಿದಿ   


[ಇದು ಎನ್.ಎಸ್ ಶಂಕರ್ ಅವರ “ದಲಿತ ರೈತ ಚಳವಳಿಗಳು” ಲೇಖನಕ್ಕೆ ಪೂರಕವಾಗಿ ಒಂದಷ್ಟು ಮಾಹಿತಿ. ಪ್ರಸಾದ್ ರಕ್ಷಿದಿಯವರ “ಬೆಳ್ಳೇಕೆರೆ ಹಳ್ಳಿ ಥೇಟರ್” ಪುಸ್ತಕದ ಒಂದು ಭಾಗ.]

ರೈತ ಸಂಘ ಪ್ರಬಲವಾಗಿದ್ದ  ಸಮಯದಲ್ಲಿ ತಮಗೆ ಅನ್ಯಾಯವಾಗಿದೆಯೆಂದು ಯಾರಾದರೂ ಸಂಘಕ್ಕೆ ದೂರು ಕೊಟ್ಟರೆ ಸಂಬಂಧ ಪಟ್ಟವರಿಗೆ ತೀರ್ಮಾನಕ್ಕಾಗಿ ಸಂಘದ ಪಂಚಾಯ್ತಿಗೆ ಬರಬೇಕೆಂದು ನೋಟಿಸ್ ಕಳುಹಿಸುತ್ತಿದ್ದೆವು. ಸಂಘ ಬಲವಾಗಿದ್ದಲ್ಲಿ ನೋಟಿಸ್ ಪಡೆದವರು ತಕರಾರಿಲ್ಲದೆ ಪಂಚಾಯ್ತಿಗೆ ಬರುತ್ತಿದ್ದರು. ಸಂಘ ಬಲವಾಗಿಲ್ಲದ ಕಡೆಗಳಲ್ಲಿ ಕೆಲವರು ಈ ನೋಟಿಸುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಅಂಥ ಕಡೆಗಳಲ್ಲಿ ಸಾಕಷ್ಟು ಘರ್ಷಣೆಗಳೂ ಆದವು.

ಸ್ವಂತಕ್ಕೆ ಮರ ಕೊಯ್ದುಕೊಳ್ಳಲು ಯಾರೂ ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆಯುವ ಅಗತ್ಯವಿಲ್ಲವೆಂದೂ ರೈತರು ಸ್ವಂತ ಉಪಯೋಗಕ್ಕೆ ಯಾರ ಅನುಮತಿಗೂ ಕಾಯದೆ ತಮ್ಮ ಜಮೀನಿನಲ್ಲಿ ಬೆಳೆದ ಮರವನ್ನು ಕೊಯ್ದು ಕೊಳ್ಳಬಹುದೆಂದೂ ರೈತಸಂಘ ಪ್ರಚಾರ ಮಾಡಿತ್ತು. ರೈತ ಸಂಘ ಬಲವಾಗಿದ್ದಲ್ಲಿ ನಮಗೇಕೆ ಕಷ್ಟ ಎಂದು ಅರಣ್ಯ ಇಲಾಖೆಯವರು ಆ ಕಡೆ ತಲೆ ಹಾಕಲೂ ಇಲ್ಲ ಆದರೆ ಇನ್ನು ಕೆಲವರು ಅತೀ ಬುದ್ಧಿವಂತರು ರೈತ ಸಂಘಕ್ಕೂ ಅರ್ಜಿ ಸಲ್ಲಿಸಿದರು. ಗುಟ್ಟಾಗಿ ಅರಣ್ಯ ಇಲಾಖೆಯವರಿಗೂ ಕಾಣಿಕೆ ಒಪ್ಪಿಸಿದರು. ಹೀಗೆ ಎರಡೂ ಕಡೆ ಒಳ್ಳೆಯವರಾದರು.!  ಅರಣ್ಯ ಇಲಾಖೆಯವರು ರೈತ ಸಂಘದಿಂದಾಗಿ ದೇಶದ ಅರಣ್ಯವೆಲ್ಲಾ ನಾಶವಾಯ್ತೆಂದೂ, ರೈತ ಸಂಘದವರು ನಮ್ಮನ್ನು ಹಳ್ಳಿಗಳಿಗೆ ಕಾಲಿಡಲೂ ಬಿಡುತ್ತಿಲ್ಲವೆಂದೂ ಪ್ರಚಾರ ಮಾಡುತ್ತಾ ಒಳಗಿಂದೊಳಗೇ ಹಣ ಪಡೆಯುತ್ತಾ ಕುಳಿತರು. ಇದೇ ಸಂದರ್ಭವೆಂದು ಕಳ್ಳ ನಾಟಾ ಮಾಡುವವರು ಸರ್ಕಾರಿ ಜಾಗದಲ್ಲಿ ಸಾಕಷ್ಟು ಮರಗಳನ್ನು ಬೋಳಿಸಿದರು. ಒಟ್ಟು ಎಲ್ಲಾ ಗೊಂದಲವಾಯ್ತು.

ನಮ್ಮ ಬೆಳ್ಳೇಕೆರೆಯ ಸುತ್ತಮುತ್ತ ಅನೇಕ ತೋಟಗಳ ಕಾರ್ಮಿಕರಿಂದ ಮಾಲೀಕರ ವಿರುದ್ಧ ದೂರುಗಳು ಬರತೊಡಗಿದವು. ಹೆಚ್ಚಿನ ದೂರುಗಳೆಲ್ಲ ಸಂಬಳದ ತಕರಾರುಗಳು ಇಲ್ಲವೇ ಮಾಲೀಕರ ದಬ್ಬಾಳಿಕೆಯ ಬಗ್ಗೆ ಇರುತ್ತಿದ್ದವು. ದೂರಿನಲ್ಲಿ ನಿಜಾಂಶ ಕಂಡುಬಂದರೆ  ಅದನ್ನು ಕಾರ್ಮಿಕ ಕಾನೂನಿಗೆ ಅನುಗುಣವಾಗಿಯೇ ತೀರ್ಮಾನ ಮಾಡುತ್ತಿದ್ದೆವು. ಈ ಕಾರ್ಮಿಕ ಕಾನೂನುಗಳು ಕೂಲಿ ಕೆಲಸಗಾರರಿಗೆ ಪೂರ್ಣವಾಗಿ ನ್ಯಾಯವನ್ನು ಒದಗಿಸಲಾರವೆಂಬ ಅರಿವು ನಮಗಿದ್ದರೂ, ನಾವು ಕಾನೂನಿನ ಮಿತಿಯನ್ನು ಮೀರುವಂತಿರಲಿಲ್ಲ. ಕೆಲವು ತೋಟ, ಮಾಲೀಕರು- ಕಾರ್ಮಿಕ ಕಾನೂನನ್ನೇ ಒಪ್ಪಲು ತಯಾರಿರಲ್ಲದಂತಹ ಪರಿಸ್ಥಿತಿಯಲ್ಲಿ ಅವರನ್ನು ನಾವು ಕಾನೂನಿನ ಚೌಕಟ್ಟಿನೊಳಗೆ ತರಲು ಕೂಡಾ ರೈತ ಸಂಘಟನೆಯ ಬಲ ಬೇಕಾಗುತ್ತಿತ್ತು. ಆದರೆ ರೈತ ಸಂಘದಲ್ಲಿದ್ದ ಅನೇಕರಿಗೆ ಈ ಕಾನೂನುಗಳ ಅರಿವಿರಲಿಲ್ಲವಷ್ಟೇ ಅಲ್ಲ, ಈ ಕಾನೂನುಗಳೇ ರೈತ ವಿರೋಧಿಯಾದವು ಎಂದು ನಂಬಿದವರಿದ್ದರು!  ಆದ್ದರಿಂದ ನಾವು ಈ ತೋಟಗಳ ಮಾಲೀಕರು ನಮ್ಮ ಮೇಲೆ ಪೋಲೀಸು ಕಂಪ್ಲೇಂಟು ಕೊಡದಂತೆ ನಮ್ಮ ಮಿತಿಯೊಳಗೇ ಏನಾದರೂ ಮಾಡಬೇಕಿತ್ತು. ಇಲ್ಲವೇ ಬಲವಾದ ಸಂಘಟನೆಯ ಮೂಲಕ ದೀರ್ಘ ಕಾಲದ ಹೋರಾಟಕ್ಕೆ ಅಣಿಯಾಗಬೇಕಿತ್ತು. ಈ ಎಲ್ಲಾ ಮಿತಿಗಳೊಳಗೇ ನಾವು ಹಲವು ಕಡೆಗಳಲ್ಲಿ ತೀರ್ಮಾನಗಳನ್ನು ಮಾಡಿದೆವು.

ಇವುಗಳಲ್ಲೆಲ್ಲಾ ಸಾಮಾನ್ಯವಾಗಿ ನಾಗರಾಜ್- ಮುರಳೀಧರ್, ಅಶೋಕ, ಮುಳ್ಳಯ್ಯ ನಾವುಗಳೆಲ್ಲಾ ಇರುತ್ತಿದ್ದೆವು. ಇದರಿಂದಾಗಿ ನಾವು ಕೆಲವು ತೋಟಗಳ ಮಾಲೀಕರ ವಿರೋಧ ಕಟ್ಟಿಕೊಳ್ಳ ಬೇಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಒಂದು ತೋಟದಲ್ಲಿ ರೈಟರ್ ಒಬ್ಬ ಟಿಂಬರ್ ವ್ಯಾಪಾರಿಯೊಡನೆ ಸೇರಿ ತನ್ನ ಮಾಲೀಕರನ್ನೇ ಹೆದರಿಸಿ ಸಾಕಷ್ಟು ಮರಗಳನ್ನು ಕದ್ದು ಮಾರುವ ಹುನ್ನಾರ ಮಾಡಿದ್ದ. ಆ ರೈಟರ್‌ನ ಮಗನೊಬ್ಬ ಎಲ್ಲಾ ದುಶ್ಚಟಗಳನ್ನು ಬೆಳೆಸಿಕೊಂಡಿದ್ದು ಹಣಕ್ಕಾಗಿ ದಾರಿಯಲ್ಲಿ ನಿಂತು ಅದೇ ತೋಟದ ಕೆಲಸಗಾರರನ್ನು ಬೆದರಿಸಿ ಹಣ ಕೀಳುತ್ತಿದ್ದ. ತೋಟದ ಮಾಲೀಕರು ಪೋಲಿಸ್ ಕಂಪ್ಲೇಂಟ್ ಕೊಡಲು ಹೋದರೆ ಪೋಲೀಸರು ಈಗೆಲ್ಲ ರೈತ ಸಂಘದವರದ್ದೇ ದರ್ಬಾರು ನೀವು ಅವರಿಗೆ ಹೇಳಿ ಎಂದರಂತೆ!  ಈ ತಂದೆ ಮಕ್ಕಳ ಉಪಟಳ ತಾಳಲಾರದೆ ಸೋತು ಮಾಲೀಕರೇ ನಮ್ಮಲ್ಲಿಗೆ ದೂರು ಕೊಡಲು ಬಂದರು. ನಾವೆಲ್ಲ ಹೋಗಿ ವಿಚಾರಿಸಿದಾಗ ಮಾಲೀಕರ ದೂರು ನಿಜವೆಂದು ತಿಳಿಯಿತು. ಅಷ್ಟೆಲ್ಲ ಮಾಡಿಯೂ ಆ ತಂದೆ – ಮಕ್ಕಳು ನಮಗೆ ರೈತ ಸಂಘದವರ ಬೆಂಬಲವಿದೆಯೆಂದೂ ಹೇಳಿಕೊಂಡಿದ್ದರು! ರೈಟರ್ ಮತ್ತು ಅವನ ಮಗನಿಂದ  ಮುಚ್ಚಳಿಕೆ ಬರೆಸಿಕೊಂಡು ಅವರನ್ನೆಲ್ಲಾ ಅಲ್ಲಿಂದ ಓಡಿಸಿದೆವು.

ಗುಂಡೂರಾಯರ ಸರ್ಕಾರವಿದ್ದಾಗ ಬಲಗೊಳ್ಳುತ್ತಾ ಹೋದ ರೈತಸಂಘ, ಗುಂಡೂರಾವ್ ಸರ್ಕಾರವನ್ನು ಅಧಿಕಾರದಿಂದ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಆದರೆ ಹೆಗಡೆ ಸರ್ಕಾರ ಬಂದ ನಂತರ ರೈತ ಸಂಘ ದುರ್ಬಲವಾಗುತ್ತಾ ಹೋಯಿತು. ನಮ್ಮಲ್ಲಿ  ರೈತ ಸಂಘದ ಪ್ರಬಲ ಸಮರ್ಥಕರಾಗಿದ್ದವರೆಲ್ಲ ಹೆಚ್ಚಿನವರು ಹಳ್ಳಿಗಳ ಸಣ್ಣ ರೈತರೇ. ಕಾಫಿ ವಲಯದ ಹೆಚ್ಚಿನ ಪ್ಲಾಂಟರುಗಳೆಲ್ಲ ರೈತ ಸಂಘದ ವಿರೋಧವೇ ಇದ್ದರು. ತೋಟ ಕಾರ್ಮಿಕರಲ್ಲೂ ರೈತಸಂಘದ ಬಗ್ಗೆ ಅಂಥಾ ಒಲವೇನೂ ಇರಲಿಲ್ಲ. ರೈತ ಸಂಘವೆಂದರೆ ಜಮೀನಿದ್ದವರ ಸಂಘವೆಂದೇ ಅವರು ತಿಳಿದಿದ್ದರು. ಅದಲ್ಲದೆ ರೈತ ಸಂಘಕ್ಕೆ ಮಲೆನಾಡಿನಲ್ಲಿ ಭೂ ರಹಿತ ಕೂಲಿ ಕಾರ್ಮಿಕರ- ದಲಿತರ ಬೆಂಬಲ ಕೂಡಾ ಅಷ್ಟಾಗಿ ದೊರಕಲೇ ಇಲ್ಲ. ಇದಕ್ಕೆ ರೈತ ಸಂಘದ ಸೈದ್ಧಾಂತಿಕ ನೆಲೆಗಟ್ಟಿನ ದೌರ್ಬಲ್ಯವೇ ಕಾರಣವಾಗಿತ್ತು. ನಮ್ಮಲ್ಲಿನಂತಹ ಕೆಲವು ಶಾಖೆಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ರೈತ ಸಂಘದ ಸದಸ್ಯರು ಕೂಲಿ ಕಾರ್ಮಿಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿರಲಿ, ಏಕ ಪಕ್ಷೀಯವಾಗಿ ಕೃಷಿ ಕೂಲಿಯನ್ನು ಇಳಿಸುವಂತಹ ಕ್ರಮಕ್ಕೂ ಮುಂದಾಗಿದ್ದರು. ಇದರೊಂದಿಗೆ ರೈತ ಸಂಘದ ನಗರ – ಹಳ್ಳಿ ವಿಭಜನೆ ಕೂಡಾ ಸ್ಪಷ್ಟತೆಯನ್ನು ಪಡೆದುಕೊಳ್ಳದೆ ನಗರಗಳ ಕೆಳವರ್ಗದ ಜನರ ಬೆಂಬಲ ಕೂಡಾ ರೈತ ಸಂಘಕ್ಕೆ ಸಿಗದೇ ಹೋಯಿತು. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರೈತ ಸಂಘದಲ್ಲಿದ್ದ ಅನೇಕರು ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅಲ್ಲದೆ ಸರ್ಕಾರ ಕೂಡಾ ರೈತ ಸಂಘವನ್ನು ಒಂದೆಡೆ ಪೋಲಿಸ್ ಬಲದಿಂದ ತುಳಿಯುತ್ತಾ ಇನ್ನೊಂದೆಡೆ ಓಲೈಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿ ಬಿಟ್ಟಿತು. ಅದಕ್ಕೆ ಸರಿಯಾಗಿ ಪಂಚಾಯತ್ ಚುನಾವಣೆ ಮಟ್ಟದಲ್ಲಿ ಪ್ರಯತ್ನಿಸದೆ ಏಕಾಏಕಿ ಪಾರ್ಲಿಮೆಂಟಿಗೇ ಅಭ್ಯರ್ಥಿಗಳನ್ನು ಹಾಕುವಂತಹ ಆತುರದ ನಿರ್ಧಾರವನ್ನು ರೈತ ಸಂಘ ಮಾಡಿತು. ಈ ಎಲ್ಲಾ ಕಾರಣಗಳಿಂದ ಅನೇಕರು ರೈತ ಸಂಘದಿಂದ  ದೂರವಾಗಿ ಅನೇಕ ಪಕ್ಷಗಳಲ್ಲಿ ಹಂಚಿಹೋದರು. ಹೆಚ್ಚಿನವರು ಜನತಾದಳಕ್ಕೆ ಹೋದರು. ಈ ಎಲ್ಲಾ ಕಾರಣಗಳಿಂದ ಮಲೆನಾಡಿನ ಕಾಫಿ ವಲಯದಲ್ಲಿ ರೈತ ಸಂಘ ನಾಮಾವಶೇಷವಾಗಿ ಹೋಯಿತು.

ನಮ್ಮ ಪರಿಸರ – ನೆಲ ಜಲ : 3


-ಪ್ರಸಾದ್ ರಕ್ಷಿದಿ


ನಮ್ಮ ಪರಿಸರ – ನೆಲ ಜಲ : 1
ನಮ್ಮ ಪರಿಸರ – ನೆಲ ಜಲ : 2

ಕೃಷಿಯ ಜೊತೆಯಲ್ಲಿ ಇತರ ಪರ್ಯಾಯ ದುಡಿಮೆಗೆ ಅವಕಾಶಗಳೇ ಇಲ್ಲ. ಅಥವಾ ಇದ್ದರೂ ಅವೂ ಕೂಡಾ ಲಾಭದಾಯಕವಲ್ಲ. ಮಲೆನಾಡಿನ ವಿಚಾರವನ್ನೇ ಹೇಳುವುದಾದರೆ ಇಲ್ಲಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಅಡಿಕೆ, ಮೆಣಸು, ಬಾಳೆ, ಭತ್ತ, ಕಿತ್ತಳೆ ಯಾವುದೂ ಕೂಡಾ ಲಾಭದಾಯಕವಾಗಿಲ್ಲ. ಕೆಲವು ಸಾರಿ ಲಾಭದಾಯಕವಾದಂತೆ ಕಂಡರೂ ಇಂದಿನ ಊಹೆಗೂ ಮೀರಿದ ಬೆಲೆ ಏರಿಳಿತಗಳಿಂದಾಗಿ ಸಣ್ಣ ಮತ್ತು ಮಧ್ಯಮ ಕೃಷಿಕರು ಅದರ ಲಾಭವನ್ನು ಪಡೆಯಲಾಗುತ್ತಿಲ್ಲ. (ಉದಾ; ವೆನಿಲ್ಲಾ, ಕಾಫಿ, ಏಲಕ್ಕಿ ಬೆಲೆಗಳ ಏರಿಳಿತವನ್ನು ನೋಡಿ) ಬೇರೆ ಯಾವುದೇ ಉದ್ಯಮವಿಲ್ಲದ ದೊಡ್ಡ ಬೆಳೆಗಾರರೂ ಸಹ ಸಾಲದಲ್ಲಿ ಮುಳುಗಿರುವಾಗ, ಬ್ಯಾಂಕ್ ಸಾಲ ಸಿಗದ ಅಥವಾ ಈಗಾಗಲೇ ಸಾಲ ಪಡೆದು ಸುಸ್ತಿದಾರನಾಗಿರುವ ಸಣ್ಣ ಕೃಷಿಕರಿಗೆ ಉಳಿದಿರುವುದು ಮರ ಕಡಿದು ಮಾರುವುದೋ ಇಲ್ಲವೇ ಕಳ್ಳಬಟ್ಟಿ ದಂಧೆಗೆ ಇಳಿಯುವುದೋ ಇತ್ಯಾದಿ ಕಾನೂನು ಬಾಹಿರ ಕೃತ್ಯಗಳು ಮಾತ್ರ. ಹೀಗಾಗಿ ಹಳ್ಳಿಗಳಲ್ಲಿ ಊರೆಲ್ಲಾ ಪುಢಾರಿಗಿರಿ ಮಾಡುತ್ತ ಇಂಥದೇ ಕೃತ್ಯಗಳಲ್ಲಿ ಮುಳುಗಿ ರಾಜಕಾರಣಿಗಳ ಹಿಂದೆ ಸುತ್ತುತ್ತಿರುವ ಯುವಕರ ದಂಡೇ ಸಿದ್ಧವಾಗುತ್ತಿದೆ.

ಈಗ ಮತೊಮ್ಮೆ ಜಾಗತೀಕರಣದ ವಿಷಯಕ್ಕೆ ಬರೋಣ. ಭೂಸುಧಾರಣಾ ಕಾನೂನಿನಿಂದಾಗಿ ನಮ್ಮ ಹಿಡುವಳಿಗಳೆಲ್ಲಾ ಚಿಕ್ಕದಾಗಿ ಯಾವುದೇ ವೈಜ್ಞಾನಿಕ(?) ಕೃಷಿಗೆ ಅನುಕೂಲವಾಗುತ್ತಿಲ್ಲ ಇದರಿಂದಾಗಿ ಕೃಷಿಯಲ್ಲಿನ ಪ್ರಗತಿಗೂ ಅಡ್ಡಿಯಾಗಿದೆ, ಎಂಬ ವಾದವೊಂದು ಇತ್ತೀಚೆಗೆ ಪ್ರಚಾರಕ್ಕೆ ಬರುತ್ತಿದೆ.. ನಮ್ಮ ಮಾಜಿ ಪ್ರಧಾನಿಯೊಬ್ಬರು ಇದೇ ಅಭಿಪ್ರಾಯದ ಮಾತನ್ನಾಡಿದ್ದಾರೆ. ಜಾಗತೀಕರಣದ ಸಮರ್ಥಕರಂತೂ ಮೊದಲಿನಿಂದಲೂ ಈ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ನಮ್ಮಲ್ಲಿನ ಭೂಸುಧಾರಣೆಯನ್ನು ನೋಡುವುದಾದರೆ, ಇದು ಭಾರತದಾದ್ಯಂತ ಏಕಪ್ರಕಾರವಾಗಿ ನಡೆದಿಲ್ಲ. ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಸ್ವಲ್ಪಮಟ್ಟಿಗೆ ಜಾರಿಯಾಗಿದೆ ಅಷ್ಟೆ. ಇನ್ನಿತರ ಅನೇಕ ರಾಜ್ಯಗಳಲ್ಲಿ ಹಳೆಯ ಜಮೀನ್ದಾರಿ ಪದ್ಧತಿಯೇ ಮುಂದುವರೆದಿದೆ. ಆಧುನಿಕ ಮಾರುಕಟ್ಟೆ ಸಂಸ್ಕೃತಿಯೂ ಈ ಜಮೀನ್ದಾರಿ (ಪಾಳೇಗಾರಿ) ಪದ್ಧತಿಯನ್ನು ಇಷ್ಟಪಡುವುದಿಲ್ಲ ಎನ್ನುವುದು ಬೇರೆಯೇ ವಿಷಯ.

ಜಾಗತೀಕರಣದ ಹಿನ್ನೆಲೆಯಲ್ಲಿ ಕೃಷಿ ಭೂಮಿಯ ಗಾತ್ರದ ಬಗೆಗಿನ ಮೇಲಿನ ಅಭಿಪ್ರಾಯವನ್ನು ಗಮನಿಸಿದರೆ, ಇದರ ಹಿಂದೆ ದೊಡ್ಡ ಉದ್ದಿಮೆದಾರರ-ಮಾರುಕಟ್ಟೆ ಉತ್ಪಾದಕರ ಹುನ್ನಾರವೇ ಕಾಣಿಸುತ್ತದೆ. ಕೃಷಿಯಲ್ಲಿ ಆಧುನಿಕ ದೊಡ್ಡ ಯಂತ್ರಗಳು ಜೊತೆಗೆ ಕಂಪ್ಯೂಟರ್ ನಿಂದ ರೋಬೋತನಕ ಎಲ್ಲವನ್ನೂ ಬಳಕೆ ಮಾಡಲು ಸಾಧ್ಯವಾಗಬೇಕಾದರೆ, ಮತ್ತು ಕೃಷಿಯಿಂದ ಉತ್ಪಾದನೆ ಆಗಬೇಕಾದರೆ, ಕೃಷಿ ಹಿಡುವಳಿಗಳು ದೊಡ್ಡದಾದಷ್ಟೂ ಒಳ್ಳೆಯದು. ಇವರಿಗೆ ಒಂದು ಜೊತೆ ಎತ್ತಿನ ರೈತನಿಗಿಂತ ಟ್ರ್ಯಾಕ್ಟರ್ ಮುಂತಾದ ಯಂತ್ರೋಪಕರಣಗಳನ್ನು ಇಟ್ಟುಕೊಳ್ಳಬಲ್ಲ ದೊಡ್ಡ ಹಿಡುವಳಿದಾರನೇ ಪ್ರೀತಿಪಾತ್ರ. ದೊಡ್ಡ ಪ್ರಮಾಣದ ನಿಯಂತ್ರಿತ ಉತ್ಪಾದನೆಯಿಂದ ಅಂತಾರಾಷ್ಟ್ರೀಯ ಗುಣಮಟ್ಟಗಳಿಗೆ ಸರಿಯಾಗಿ ನಾವು ಕೂಡಾ ನಮ್ಮ ಕೃಷಿ ಉತ್ಪನ್ನಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಬಹುದೆಂದು(?) ಇವರ ವಾದವಾಗಿದೆ.

ಮೊದಲನೆಯದಾಗಿ ಅಧಿಕ ಉತ್ಪಾದನೆಯಿಂದ ರೈತನ ಸಮಸ್ಯೆ ಬಗೆಹರಿಯುವುದಿಲ್ಲವೆಂದು ನಮಗೆ ಈಗಾಗಲೇ ಅನುಭವಕ್ಕೆ ಬಂದ ವಿಷಯವಾಗಿದೆ. ಅಧಿಕ ಉತ್ಪಾದನೆಯಾಗುತ್ತಿದ್ದಾಗಲೂ ವಿಯೆಟ್ನಾಮ್ ನ ಕಾಫಿ ಬೆಳೆಗಾರರ ಹಾಗೂ ನಮ್ಮಲ್ಲಿನ ಕಬ್ಬು ಬೆಳೆಗಾರರ ಪರಿಸ್ಥಿತಿ ಏನಾಯಿತೆಂಬ ವಿಚಾರ ನಮ್ಮ ಕಣ್ಣೆದುರೇ ಇದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯೆನ್ನುವುದು ಮುಂದುವರೆದ ದೇಶಗಳ ಮಾರುಕಟ್ಟೆಯಾಗಿದ್ದು, ಅವರು ಹೇಳುವ ಗುಣಮಟ್ಟಗಳು, ಮಾನದಂಡಗಳು ಇವೆಲ್ಲ ಅವರ ಮೂಗಿನ ನೇರಕ್ಕೆ ಇರುವಂತಹವುಗಳು. ಮತ್ತು ಅವರು ಎಲ್ಲೆಲ್ಲಿ ಮೂಗು ಹಾಯಿಸಬಲ್ಲರೋ ಅಲ್ಲೆಲ್ಲಾ ಜಾರಿಗೊಳಿಸಲು ಸಾಧ್ಯವಾಗುವಂತೆ ತಯಾರಾದಂತಹವುಗಳು. ಈ ಮಾನದಂಡಗಳು ಕೂಡಾ ಅವರ ಮರ್ಜಿಗೆ ತಕ್ಕಂತೆ ಬದಲಾಗುತ್ತಿರುತ್ತವೆ.

ಇದಕ್ಕೊಂದು ಸ್ಪಷ್ಟ ಉದಾಹರಣೆಯೆಂದರೆ ನಮ್ಮ ಕಾಫಿ ಮಾರುಕಟ್ಟೆ. ಭಾರತದ ಕಾಫಿಯಂತೂ ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವಂತಹ ಬೆಳೆ. ಇತ್ತೀಚೆಗೆ ಕಾಫಿಯ ಗುಣಮಟ್ಟವನ್ನು ಸುಧಾರಿಸುವ, ಅದನ್ನು ಅಂತಾರಾಷ್ಟ್ರೀಯ ಬೇಡಿಕೆಗಳಿಗೆ ಅನುಗುಣವಾಗಿ ಕಾಫಿ ಉತ್ಪಾದಿಸುವ- ಸಂಸ್ಕರಿಸುವ ಅಗತ್ಯವನ್ನು ಪದೇ ಪದೇ ಹೇಳಲಾಗುತ್ತಿದೆ. (ದೇಸಿ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಸಿಗುವ ಕಾಫಿಪುಢಿಯ ಗುಣಮಟ್ಟಕ್ಕೂ ಈ ಮೇಲೆ ಹೇಳಿದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೂ ಯಾವದೇ ಸಂಬಂಧವಿಲ್ಲ-ಗಮನಿಸಿ)

ಈ ಸಂದರ್ಭದಲ್ಲಿ ನಮ್ಮ ಕೃಷಿಕರು ಮತ್ತು ವ್ಯಾಪಾರಿಗಳ ದುರ್ಬುದ್ಧಿಯನ್ನು ಹೇಳದಿದ್ದರೆ ಅಪಚಾರವಾದೀತು. ಬೆಲೆ ಏರಿದಾಗೆಲ್ಲ ಕಾಫಿಗೆ ಕಸಕಡ್ಡಿ, ಮೆಣಸಿಗೆ ಪಪ್ಪಾಯಿ ಬೀಜ ಇತ್ಯಾದಿಗಳನ್ನು ಕಲಬೆರಕೆ ಮಾಡುವ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ವಂಚನೆಗಿಳಿಯುವ ಮೂಲಕ ಕೆಟ್ಟಹೆಸರು ಪಡೆಯುವ ನಮ್ಮವರು, ಅಂತಾರಾಷ್ಟ್ರೀಯ ಕುತಂತ್ರಗಳನ್ನು ವಿರೋಧಿಸುವ ಶಕ್ತಿಯನ್ನೂ-ನೈತಿಕಹಕ್ಕನ್ನೂ ಕಳೆದುಕೊಂಡು ಬಿಡುತ್ತಾರೆ. ಮತ್ತು ಈ ಪೀಡೆಗಳನ್ನು ಮುಂದುವರಿದ ದೇಶಗಳ ಬಲಿಷ್ಟರು ತಮ್ಮ ವ್ಯಾಪಾರೀ ಮಾನದಂಡಗಳನ್ನು ಸಮರ್ಥಿಸಿಕೊಳ್ಳಲು ಚೆನ್ನಾಗಿ ಬಳಸಿಕೊಳ್ಳುತ್ತಾರೆ.

ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಪಡೆಯಲು ಕಾಫಿಯನ್ನು ಬೆಳೆಯುವ ಹಂತದಲ್ಲೇ ಅನೇಕ ರೀತಿಯ ತಯಾರಿ ನಡೆಸಬೇಕಾಗುತ್ತದೆ. ಇದಕ್ಕಾಗಿಯೇ ಹಲವು ರೀತಿಯ Plant conditioner ,Foliar spray ಗಳು ಗಳು ಬಂದಿವೆ. ಕಾಫಿಬೀಜಗಳ ಗಾತ್ರ ಹೆಚ್ಚಿಸಲು ಅವುಗಳಲ್ಲಿ ಏಕರೂಪತೆ ತರಲು ಹೀಗೆ ಏನೇನೋ ಕಸರತ್ತುಗಳನ್ನು ಹೇಳುವ ತಜ್ಞರೆನಿಸಿಕೊಂಡವರ ಪಡೆಯೇ ಇದೆ. ಅವರು ಹೇಳುವ ರೀತಿಯ ಸಂಸ್ಕರಣೆಗಾಗಿ ಇದೀಗ ಕಾಫಿ ಹಣ್ಣನ್ನು ಸಾಂಪ್ರದಾಯಿಕವಾದ ಎರಡು ಬಾರಿಯ ಕೊಯ್ಲಿಗೆ ಬದಲಾಗಿ ಮೂರು ನಾಲ್ಕು ಬಾರಿ ಕೊಯ್ಲು ಮಾಡಬೇಕಾಗುತ್ತದೆ. ಹಣ್ಣನ್ನು ಪಲ್ಪಿಂಗ್ ಹಂತದಲ್ಲೇ ಗಾತ್ರಕ್ಕೆ ತಕ್ಕಂತೆ ಪ್ರತ್ಯೇಕಿಸಬೇಕಾಗುತ್ತದೆ. (ಈಗ ಅದಕ್ಕೂ ವಿಷೇಷ ಯಂತ್ರಗಳು ಆಮದಾಗಿ ಬಂದಿವೆ ಮತ್ತು ಇನ್ನಷ್ಟು ಭಾರಿ ಬಂಡವಾಳವನ್ನು ಬೇಡುತ್ತಿವೆ).

ಪಲ್ಪಿಂಗ್ ನಂತರ ಕಾಫಿ ಬೀಜಗಳನ್ನು ಹುದುಗು ಹಾಕಿ ನಂತರ ತೊಳೆದು ವಿಶೇಷ ರೀತಿಯಿಂದ ಒಣಗಿಸಿ ಹೊಸ ಗೋಣಿ ಚೀಲಗಳಲ್ಲಿ ತುಂಬಿ ಸಂಸ್ಕರಣಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಇಷ್ಟಾಗುವಾಗ ಕಾಫಿಯ ಉತ್ಪಾದನಾ ವೆಚ್ಚ ಸಾಕಷ್ಟು ಏರಿರುತ್ತದೆ. ಈ ಕಾಫಿ ಸಂಸ್ಕರಣಾ ಕೇಂದ್ರದಲ್ಲಿ ಹಲವು ಹಂತಗಳನ್ನು ಹಾದು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪುತ್ತದೆ. ಅಲ್ಲಿ ಕಪ್ ಟೇಸ್ಟರುಗಳೆಂಬ ದೇವತಾ ಸ್ವರೂಪಿಗಳು ಈ ಕಾಫಿಯ ಕಷಾಯವನ್ನು ಕುಡಿದು ನೆಕ್ಕಿ ಚಪ್ಪರಿಸಿ ಅದರ ಹಣೆಬರಹವನ್ನು ನಿರ್ಧರಿಸುತ್ತಾರೆ. ಅಲ್ಲಿ ಆಯ್ಕೆಯಾದರೆ, ಆ ಮಾಲಿಗೆ ವಿಶೇಷ ಬೆಲೆ ದೊರೆಯುತ್ತದೆ. ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಚಾರ ದೊರೆಯುತ್ತದೆ. ಆಯ್ಕೆಯಾಗದ ಉಳಿದ ಮಾಲನ್ನು ಕಡಿಮೆ ಬೆಲೆಗೆ ಕೊಳ್ಳಲಾಗುತ್ತದೆ. ಅದ್ದರಿಂದ ಇಡೀ ಕಾಫಿ ಉದ್ಯಮವನ್ನು ಗಣನೆಗೆ ತೆಗೆದುಕೊಂಡರೆ, ಬರುವ ಆದಾಯ ಒಟ್ಟಾರೆಯಾಗಿ ಮೊದಲಿಗಿಂತ ಕಡಿಮೆಯಾಗುತ್ತದೆ. (ಇದಕ್ಕಾಗಿ ಪಡುವ ಹೆಚ್ಚಿನ ಶ್ರಮ ಮತ್ತು ಖರ್ಚನ್ನು ಗಮನಿಸಿ) ಜೊತೆಗೆ ಬೆಳೆಗಾರ ನಿರಂತರ ಒತ್ತಡದಲ್ಲೇ ಇರುತ್ತಾನೆ.

ಈ ಮಾರುಕಟ್ಟೆಯೂ ಹಾಗೇ, ಈ ವರ್ಷ ಚೆನ್ನಾಗಿ ತೊಳೆದು ಒಣಗಿಸಿದ ಕಾಫಿ ಒಳ್ಳೆಯ ಬೆಲೆ ಪಡೆದರೆ, ಇನ್ನೊಂದು ಬಾರಿ ಪಲ್ಪಿಂಗ್ನ ನಂತರ ಅಂಟನ್ನು ತೊಳೆಯದೆ ಹಾಗೇ ಒಣಗಿಸಿದ ಕಾಫಿ ಬೇಕು ಎನ್ನುತ್ತಾರೆ. ಅದೇಕೆಂದು ಕೇಳಿದರೆ, ಈ ಬಾರಿ ಮಾರುಕಟ್ಟೆಯ ಒಲವು ಹಾಗೂ ಬೇಡಿಕೆ ಹಾಗಿದೆ ಎನ್ನುತ್ತಾರೆ ನಮ್ಮ ಕಪ್ ಟೇಸ್ಟರ್ ಮಹಾಶಯರುಗಳು. ಬೆಳೆಗಾರ ಸಾಕಷ್ಟು ಹಣ ಖರ್ಚುಮಾಡಿ ಕಳೆದಬಾರಿಯಷ್ಟೇ ನವೀಕರಿಸಿದ ಯಂತ್ರಗಳ ಕಥೆಯನ್ನು ಯಾರೂ ಕೇಳುವುದಿಲ್ಲ.

ಇದುವರೆಗೂ ನಮ್ಮ ಸ್ಥಳೀಯ ವರ್ಕ್ ಶಾಪ್ ಗಳೇ  ಕಾಫಿ ಹಣ್ಣಿನ ಪಲ್ಪಿಂಗ್ಗೆ ಸಂಬಂಧಪಟ್ಟ ಹೆಚ್ಚಿನ ಎಲ್ಲಾ ಯಂತ್ರೋಪಕರಣಗಳನ್ನು ಸ್ಥಳೀಯವಾಗಿಯೇ ತಯಾರಿಸಿಕೊಡುತ್ತಿದ್ದವು. ಈಗ ಅದೂ ಕೂಡಾ ಅಂತಾರಾಷ್ಟ್ರೀಯ ಗುಣಮಟ್ಟದ ಹೆಸರಿನಲ್ಲಿ ಆಮದಾಗುತ್ತಿವೆ. ಇನ್ನು ಕಾಫಿ ಬೆಳೆಯುವಾಗ ಗುಣಮಟ್ಟ ಸುಧಾರಣೆಗೆಂದು ಬಳಸಲಾಗುವ Soil condtioner,  Foliar spray,  wetting agent ಗಳು ಮುಂತಾದವೆಲ್ಲ ಮುಂದುವರೆದ ದೇಶಗಳಲ್ಲಿ ತಯಾರಾದವು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಪಡೆಯವ ಆಸೆಗೆ ಬಿದ್ದ ಕೃಷಿಕ  ತಾನು ಗಳಿಸಬಲ್ಲ ಹೆಚ್ಚುವರಿ ಲಾಭವನ್ನು ಮತ್ತೆ ವಿದೇಶಿ ವಸ್ತುಗಳಿಗೆ ಸುರಿಯ ಬೇಕಾದ ಅನಿವಾರ್ಯತೆಗೆ ಬಿದ್ದಿದ್ದಾನೆ.

ಈ ಕಪ್ ಟೇಸ್ಟಿಂಗ್ ಅನ್ನುವುದು, ವೈಯಕ್ತಿಕ ರುಚಿ ನಿರ್ಧಾರವಾಗಿದ್ದು ಪೂರ್ಣವಾಗಿ ವೈಜ್ಞಾನಿಕವೆನ್ನಲು ಸಾಧ್ಯವಿಲ್ಲ. ವಿಶ್ವದಲ್ಲಿ ಕಾಫಿ ಬೆಳೆಯುವುದೆಲ್ಲಾ (ಹೆಚ್ಚಿನ ಕೃಷಿ ಉತ್ಪನ್ನಗಳೆಲ್ಲವೂ) ಹಿಂದುಳಿದ ದೇಶಗಳಲ್ಲಿ. ಆದರೆ ಬಳಕೆದಾರರೆಲ್ಲ ಮುಂದುವರೆದ ದೇಶಗಳು. ಈ ದೇಶಗಳಿಗೆ ನಮ್ಮ ಉತ್ಪನ್ನಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಂಡುಕೊಳ್ಳುವುದಷ್ಟೇ ಗುರಿ. ಅದಕ್ಕಾಗಿಯೇ ಇಷ್ಟೆಲ್ಲಾ ಹುನ್ನಾರಗಳನ್ನು ನಡೆಸುತ್ತಾರೆ. ಈ ತಂತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ ಕೃಷಿಕನ ಮಟ್ಟಿಗೆ ದೇಶದ ಒಳಗೂ ಕೂಡಾ ಬಳಕೆಯಾಗುತ್ತಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಗುಣಮಟ್ಟ ನಿಯಂತ್ರಣ ಮುಂತಾದವುಗಳು ಅಭಿವೃದ್ಧಿಶೀಲ ದೇಶಗಳಿಗೆ ತೊಡಿಸುವ ಮೂಗುದಾರ ಅಷ್ಟೆ.

ಅಧಿಕ ಉತ್ಪಾದನೆಯ ಮಂತ್ರ ಜಪಿಸುವುದು, ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲದರ ಮೇಲೆ ಮೂಗಿಗೆ ತುಪ್ಪ ಸವರಿದಂತೆ ಒಟ್ಟು ಉತ್ಪನ್ನದ ಸ್ವಲ್ಪಭಾಗಕ್ಕೆ ವಿಶೇಷ ಬೆಲೆ ನೀಡಿ, ಉಳಿದದ್ದನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಳ್ಳುವುದು, ಇದರಿಂದ ಬೆಳೆಗಾರ ಗಳಿಸಿದ ಅಲ್ಪಸ್ವಲ್ಪ ಹೆಚ್ಚವರಿ ಹಣವನ್ನು ಯಂತ್ರೋದ್ಯಮದ ಮೂಲಕ ತಮ್ಮಲ್ಲಿಗೇ ಬರುವಂತೆ ಮಾಡುವುದು, ಇದೆಲ್ಲಕ್ಕಿಂತ ಅಧಿಕ ಉತ್ಪಾದನೆಯಿಂದ ಬೆಳೆಗಾರ ಮಾರುಕಟ್ಟೆಯಲ್ಲಿ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣ  ಮಾಡಿ ಯಾವಾಗಲೂ ಕೊಳ್ಳುವವರ ಮರ್ಜಿಯನ್ನೇ ಕಾಯಬೇಕಾದ ಸ್ಥಿತಿಯಲ್ಲಿಡುವುದು, ಇವುಗಳೆಲ್ಲಾ ಅವರ ಉದ್ದೇಶವಾಗಿದೆ.

ಮುಂದುವರೆದ ದೇಶಗಳಿಂದ ನಮ್ಮಲ್ಲಿಗೆ ಆಮದಾಗುವ ಹಲವಾರು ಔಷಧಿಗಳು, ಕ್ರಿಮಿನಾಶಕಗಳು, ತಳುಕಿನ ಐಷಾರಾಮೀ ಸಾಮಗ್ರಿಗಳು, ಅಷ್ಟೇಕೆ ಅಲ್ಲಿನ ಸಾವಯವ ಗೊಬ್ಬರಗಳು ಕೂಡಾ ಅಲ್ಲೇ ನಿಷೇಧಿಸಲ್ಪಟ್ಟವುಗಳು. ಅವುಗಳನ್ನು ಹಿಂದುಳಿದ ದೇಶಗಳಿಗೆ ಸಹಾಯದ- ದಾನದ ಹೆಸರಲ್ಲಿ ಸಾಗಹಾಕುವಾಗ ಇಲ್ಲದಿರುವ ನೈತಿಕತೆ-ಗುಣಮಟ್ಟ ಕಾಳಜಿ, ಅವರಲ್ಲಿಗೆ ಆಮದಾಗುವ ಹಿಂದುಳಿದ ದೇಶಗಳ ವಸ್ತುಗಳ ಬಗ್ಗೆ ಪ್ರತ್ಯಕ್ಷವಾಗಿಬಿಡುತ್ತದೆ. ಯಾವುದೋ ಒಂದು ಸಾರಿ ಕಳುಹಿಸಿದ ವಸ್ತುವಿನಲ್ಲಿ ಕಲಬೆರಲಕೆ ಕಂಡುಬಂದರೂ ಸಹ (ಕಲಬೆರಕೆ ಸರಿಯೆಂದು ನನ್ನ ವಾದವಲ್ಲ) ಇಡೀ ದೇಶದ ಉತ್ಪನ್ನವನ್ನೇ ತಿರಸ್ಕರಿಸುವ ಬೆದರಿಕೆ ಹಾಕುವ  ಅಂತಾರಾಷ್ಟ್ರೀಯ ಮಾರುಕಟ್ಟೆ ಮುಂದುವರಿದ ದೇಶಗಳ ಹಾನಿಕಾರಕ ವಸ್ತುಗಳ ಬಗ್ಗೆ ದಿವ್ಯಮೌನ ವಹಿಸುತ್ತದೆ. ತೆಂಗಿನೆಣ್ಣೆಯಲ್ಲಿ ಕ್ಯಾನ್ಸರ್ ಕಾರಕ ಗುಣವಿರುವುದನ್ನು ಸಂಶೋಧನೆ ಮಾಡುವ ಇವರು, ಕ್ರಿಮಿನಾಶಕವಾಗಿರುವ ಪೆಪ್ಸಿ- ಕೋಕಾಕೋಲಾಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಹಾಲಿನ ಪುಡಿಯಲ್ಲಿ ಡಿ.ಡಿ.ಟಿ. ಪತ್ತೆಹಚ್ಚುವ ಇವರು ಆ ಡಿ.ಡಿ.ಟಿ.ಯನ್ನು ಪ್ರಪಂಚಕ್ಕೆಲ್ಲಾ ಹಂಚಿದ್ದರು ತಾವೇ ಎನ್ನುವುದನ್ನು ಮರೆಯುತ್ತಾರೆ!.

ಇತ್ತೀಚಿನ ಇನ್ನು ಕೆಲವು ಬೆಳವಣಿಗೆಗಳನ್ನು ಗಮನಿಸಿ. ನೂರೈವತ್ತು ರೂಗಳಿಗೆ ಒಂದು ಟೀ ಶರ್ಟು ದೊರೆಯುತ್ತದೆಂದು ನಾವು ಖುಷಿ ಪಡುತ್ತಿರುವಾಗಲೇ, ಸಣ್ಣ ಊರುಗಳ- ಹಳ್ಳಿಗಳ ಟೈಲರ್ಗಳು ಅಂಗಡಿ ಮುಚ್ಚುತ್ತಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಗರಾಜ್ಗಳು ಕೆಲಸವಿಲ್ಲದೆ ಒದ್ದಾಡುತ್ತಿವೆ. ಸಣ್ಣ ಹಿಡುವಳಿಯ ರೈತರು ಜಮೀನನ್ನು ಮಾರಿ ನಗರ ಸೇರುವ ಧಾವಂತದಲ್ಲಿದಾರೆ.  ಹಲವು ಪ್ಲಾಂಟೇಷನ್ ಕಂಪೆನಿಗಳು ನಿರಂತರವಾಗಿ ತೋಟಗಳ ವಿಸ್ತರಣಾ ಖರೀದಿಯಲ್ಲಿ ತೊಡಗಿವೆ. ಈ ಸಂಗತಿಗಳಲ್ಲಾ ಏನನ್ನು ಸೂಚಿಸುತ್ತವೆ? ನಮ್ಮ ಕೃಷಿ ಭೂಮಿ ಪರಭಾರೆ ಕಾನೂನು ಮತ್ತು ಭೂಮಿತಿ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಿದಲ್ಲಿ ಏನಾಗಬಹುದು? ಯೋಚಿಸಿ.

ಗುಣಮಟ್ಟದ ಹೆಸರಿನಲ್ಲಿ ಇವರು ಸೂಚಿಸುವ ಒತ್ತಾಯಿಸುವ ಕೃಷಿ ಪದ್ಧತಿಗಳು ಇನ್ನೂ ವಿಚಿತ್ರವಾಗಿವೆ. ಮತ್ತೊಮ್ಮೆ ಕಾಫಿಯದ್ದೇ ಉದಾಹರಣೆ ನೀಡುವುದಾದರೆ, ಕಾಫಿ ಒಣಗಿಸುವ ಕಣದ ಸುತ್ತಲೂ ನೀಲಗಿರಿ ಮರಗಳಿರಬಾರದು, ಮೆಣಸಿನ ಬಳ್ಳಿಗಳಿರಬಾರದು, ಕಾಫಿ ಒಣಗಿಸುವ ಕಣಕ್ಕೆ ಸೆಗಣಿಸಾರಿಸಬಾರದು ಇತ್ಯಾದಿ ಪ್ರತಿಬಂಧಗಳಿವೆ. (ಕಾಫಿಯ ಇಡಿಯ ಹಣ್ಣನ್ನು ನೇರವಾಗಿ ಒಣಗಿಸುವಾಗ ಮಾತ್ರ ಸೆಗಣಿ ಸಾರಿಸಿದ ಕಣವನ್ನು ಬಳಸುತ್ತಾರೆ. ಪಲ್ಪಿಂಗ್ ಮಾಡಿದ ಕಾಫಿಯನ್ನು ಯಾರೂ ಸೆಗಣಿಸಾರಿಸಿದ ಕಣದಲ್ಲಿ ಒಣಗಿಸುವದಿಲ್ಲ) ನಾವು ಸಾವಿರಾರು ವರ್ಷಗಳಿಂದ ಸೆಗಣಿ ಸಾರಿಸಿದ ಕಣದಲ್ಲೇ ಆಹಾರ ಧಾನ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಒಣಗಿಸುತ್ತಿದ್ದೇವೆ. ಸೆಗಣಿಯಿಂದಾಗಿ ಕಾಫಿಗೆ ಕೆಟ್ಟ ವಾಸನೆ ಬರುತ್ತದೆಂದು ದೂರುವ ಇವರು ಯಂತ್ರಗಳಲ್ಲಿ ಬಳಕೆಯಾಗುವ ಪೈಂಟ್ಗಳ ಬಗ್ಗೆಯಾಗಲೀ ಒಟ್ಟು ಉದ್ಯಮದಲ್ಲಿ ಬಳಕೆಯಾಗುವ ಇತರ ರಾಸಾಯನಿಕಗಳ ಬಗ್ಗೆಯಾಗಲೀ ಮಾತನಾಡುವುದಿಲ್ಲ.

ಈಗಾಗಲೇ ಅಕ್ಕಿಯಲ್ಲಿ- ಅಕ್ಕಿಯ ಗಾತ್ರ, ಉದ್ದ, ಬಣ್ಣಗಳ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದೆ ಇಂತಿತಹ ಕಂಪೆನಿಗಳು ಒದಗಿಸಿದ ನೀರಿನಿಂದ ಬೆಳೆದ ಇಂತಿಂತಹ ಬೆಳೆಗಳು ಮಾತ್ರ ಪರಿಶುದ್ಧವಾದವು ಎಂದು ಪ್ರಮಾಣ ಪತ್ರ ನೀಡುವ ದಿನಗಳೂ ಬರಲಿವೆ. ಆದ್ದರಿಂದ ಜಾಗತೀಕರಣವೆಂದರೆ ಮುಂದುವರಿದ ದೇಶಗಳ ಇನ್ನಷ್ಟು ಸಬಲೀಕರಣವಲ್ಲದೆ ಇನ್ನೇನೂ ಅಲ್ಲ. ನಾವು ಅಲ್ಲೊಂದು ಇಲ್ಲೊಂದು ಕ್ಷೇತ್ರದಲ್ಲಿ   ಇವರೊಂದಿಗೆ  ಸ್ಪರ್ಧಿಸುತ್ತಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳುತ್ತಾ, ನಮ್ಮ ಬೆನ್ನನ್ನೇ ನಾವು ತಟ್ಟಿಕೊಳ್ಳುತ್ತಾ ಕುಳಿತಿದ್ದೇವೆ ಅಷ್ಟೆ!

ಇವೆಲ್ಲವನ್ನೂ ಮೀರಿ ನಾವು ಕೆಲವು ಕ್ಷೇತ್ರಗಳಲ್ಲಿ ಅಥವಾ ಕೆಲವು ವಸ್ತುಗಳ ಉತ್ಪಾದನೆಯಲ್ಲಿ ಮುಂದುವರಿದ ದೇಶಗಳೊಂದಿಗೆ ಸ್ಪರ್ಧೆಗೆ ಇಳಿದೆವೆಂದರೆ, ಆಗ ಇನ್ನೂ ಕೆಲವು ಅಸ್ತ್ರಗಳು ಹೊರ ಬರುತ್ತವೆ. ಕೆಲವು ವಸ್ತುಗಳ ತಯಾರಿಕೆಯಲ್ಲಿ ಬಾಲ ಕಾರ್ಮಿಕರ ದುಡಿಮೆಯಿದೆ ಎಂದೂ ಇನ್ನು ಕೆಲವು ಉತ್ಪನ್ನಗಳು ಪ್ರಾಣಿ ಹಿಂಸೆಯಿಂದ ಕೂಡಿದ್ದೆಂದೂ ನಿಷೇಧಕ್ಕೆ ಒಳಗಾಗುತ್ತವೆ. ಅನೇಕ ಹಿಂದುಳಿದ ದೇಶಗಳಲ್ಲಿ ಇಂದು ಮಕ್ಕಳ ದುಡಿಮೆ ಅನಿವಾರ್ಯ ಅಗತ್ಯವೆನ್ನುವುದನ್ನು ಮರೆಯದಿರೋಣ. ದುಡಿಯದಿದ್ದಲ್ಲಿ ಅವರ ಹೊಟ್ಟೆಪಾಡಿಗೆ ಗತಿಯೇ ಇಲ್ಲದಿರುವ ಪರಿಸ್ಥಿತಿ ಅನೇಕ ದೇಶಗಳಲ್ಲಿ ಇದೆ. ಅವರು ದುಡಿದೂ ವಂಚನೆಗೊಳಗಾಗದಿರುವ-ದುಡಿಯುತ್ತ ಸ್ವಲ್ಪ ಮಟ್ಟಿಗಾದರೂ ವಿದ್ಯೆ ಕಲಿಯುವ ಬೇರೆ ಮಾರ್ಗಗಳತ್ತ ನಾವು ಯೋಚಿಸಬೇಕಾಗಿದೆ. ಅದನ್ನು ಬಿಟ್ಟು ದುಡಿಯುವ ಮಕ್ಕಳ ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸದೆ ದುಡಿಮೆಯಿಂದ ಹೊರಗಿಡುವುದೆಂದರೆ ಅವರನ್ನು ಹಸಿವಿನತ್ತ ದೂಡುವುದೇ ಆಗಿದೆ. ಇನ್ನು ಪ್ರಾಣಿ ಹಿಂಸೆಯ ಬಗ್ಗೆ ಹೇಳುವುದಾದರೆ  ಯಾವುದೇ ಜಾತಿಯ ಪ್ರಾಣಿಗೆ  ಸಾಂಕ್ರಾಮಿಕ ರೋಗವೊಂದು ಬಂದಿದೆಯೆಂದರೆ ಅದರ ಕುಲವನ್ನೇ ಗುಂಡಿಟ್ಟು ಸಾಯಿಸಿಬಿಡುವ ದೇಶಗಳು- ಪ್ರಾಣಿಹಿಂಸೆಯ ಮಾತನಾಡುತ್ತವೆ!

ಇವೆಲ್ಲವೂ ತಿಳಿದಿದ್ದರೂ ಸಹ ಈ ಮುಂದುವರಿದ ದೇಶಗಳು  ಸಹಾಯದ ಹೆಸರಿನಲ್ಲೋ ಇನ್ನಾವುದೇ ರೀತಿಯಲ್ಲೋ ನಮ್ಮಲ್ಲಿಗೆ ಕಳಹಿಸುವ ಯಾವುದೇ ವಸ್ತುವನ್ನು ಅದು ಎಷ್ಟೇ ಹಾನಿಕಾರಕವಾಗಿದ್ದರೂ ಅದನ್ನು ನಿಷೇಧಿಸುವ ಧೈರ್ಯವನ್ನಾಗಲೀ, ಪ್ರಾಮಾಣಿಕತೆಯನ್ನಾಗಲೀ ಯಾವುದೇ ಹಿಂದುಳಿದ-ಅಭಿವೃದ್ಧಿಶೀಲ ದೇಶಗಳು ತೋರುವುದಿಲ್ಲ. ಯಾಕೆಂದರೆ ಈ ದೇಶಗಳ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳೇ ಇದಕ್ಕೆ ಅವಕಾಶ ನೀಡುವುದಿಲ್ಲ.

ಜಾಗತೀಕರಣದ ಸಮರ್ಥಕರು ಕೊಡುವ ಇನ್ನೊಂದು ಉದಾಹರಣೆಯೆಂದರೆ ದಕ್ಷಿಣಕೊರಿಯಾದ ಪ್ರಗತಿ ಹಾಗೂ ಚೀನಾದ ಉದಾರೀಕರಣ ಇತ್ಯಾದಿ, ಇದು ನಿಜವಿರಬಹುದು. ನಾಳೆ ನಾವು ಕೂಡಾ ಮುಂದುವರಿದ ದೇಶವಾಗಿಬಿಡಬಹುದು. ಆಗಲೂ ಜಗತ್ತಿನ ಇನ್ನಷ್ಟು ದೇಶಗಳಲ್ಲಿ ಬಡತನ ತಾಂಡವವಾಡುತ್ತಿರುತ್ತದೆ. ಮತ್ತು ಹಾಗೆಯೇ ಮುಂದುವರೆಯುತ್ತದೆ. ನಾವು ಮಾತ್ರ  ಗುಂಪು ಬದಲಾಯಿಸಿ ಈಚೆ ಗುಂಪಿಗೆ ಬಂದಿರುತ್ತೇವೆ ಅಷ್ಟೆ. ಜಾಗತೀಕರಣದ ಈ ವ್ಯವಸ್ಥೆಯಲ್ಲಿ ಕೆಲವು ದೇಶಗಳನ್ನು ಬಿಟ್ಟು ಉಳಿದವುಗಳು ನಿರಂತರ ಶೋಷಣೆಗೆ ಒಳಗಾಗುತ್ತಲೇ ಇರುತ್ತವೆ.

ಈಗಾಗಲೇ ಅನೇಕ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಕಂಪೆನಿಗಳು ವಿಧ್ಯುತ್ ಉತ್ಪಾದನೆ ಮುಂತಾದ ಯೋಜನೆಗಳ ನೆಪಗಳಲ್ಲಿ ನಮ್ಮ ಅರಣ್ಯಗಳ, ನದಿಗಳ ಮೇಲೆ ಹಕ್ಕುಗಳನ್ನು ಸ್ಥಾಪಿಸತೊಡಗಿವೆ. ಈ ರೀತಿಯ ಎಲ್ಲ ಯೋಜನೆಗಳಿಗೆ ಪಕ್ಷ ಬೇಧವಿಲ್ಲದೆ ನಮ್ಮ ಎಲ್ಲ ಸರ್ಕಾರಗಳು ಅತ್ಯುತ್ಸಾಹ ತೋರುತ್ತಿವೆ.

ಹೀಗಿರುವಾಗ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದೆಯೆಂದು ನಾವು ನಂಬಿಕೊಂಡರೆ ನಮ್ಮ ದಡ್ಡತನವಷ್ಟೆ. ಇದೂ ಕೂಡಾ ಅಂತರಾಷ್ಟ್ರೀಯ ಮಟ್ಟದ ಹುನ್ನಾರದ ಭಾಗ. ಇದರ ಅಂಗವಾಗಿ ಭಾರತ  ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸಾವಯವ ಕೃಷಿಯ ಬೊಬ್ಬೆಯಲ್ಲಿ ತೊಡಗಿವೆ ಅಷ್ಟೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೈಟೆಕ್ ಸಾವಯವ ಕೃಷಿ ಮೇಳವನ್ನು ಗಮನಿಸಿ, ಈ ಬಗ್ಗೆ ವರದಿ ಮಾಡಿದ ಹಲವು ಪತ್ರಿಕೆಗಳು ಭಾರತದ ಸಾವಯವ ಕೃಷಿಗೆ ಸಿದ್ಧತೆ- ಸಾವಯವ ಕೃಷಿ ಮೇಳ ಎಂದು ದೊಡ್ಡದಾಗಿ ಬರೆದವು. ಅವು ವರದಿ ಮಾಡಿದ ರೀತಿ ಭಾರತ ದೇಶಕ್ಕೆ ಸಾವಯವ ಕೃಷಿ ಅನ್ನುವ ಸಂಗತಿಯೇ ಹೊಸತೇನೋ ಅನ್ನುವಂತಿತ್ತು. ಅದೃಷ್ಟವಷಾತ್ ಕೆಲವು ಪತ್ರಿಕೆಗಳು ಈ ಮೇಳದ ವಿರುದ್ಧವಾಗಿದ್ದ ಅನೇಕ ಕೃಷಿಕರ ಅಭಿಪ್ರಾಯಗಳನ್ನೂ ಪ್ರಕಟಿಸಿದ್ದವು.

ಈ ಸರ್ಕಾರ  ಸಾವಯವ ಕೃಷಿ ಪ್ರಚಾರದ ಹಿಂದೆ ಬೆಕ್ಕಿನಂತೆ ಹೊಂಚುಹಾಕುತ್ತ ನಿಂತಿದೆ, ಬಯೋಟೆಕ್ನಾಲಜಿ ಉದ್ದಿಮೆದಾರರ ಗುಂಪು! ಈ ದೃಷ್ಟಿಯಿಂದಲೇ ಈ ‘ಸಾವಯವ ಕೃಷಿ’ ಎನ್ನುವುದು ಈಗ ಆಧುನಿಕ ಕೃಷಿಗಿಂತಲೂ ಅಪಾಯಕಾರಿಯಾಗಿ ಕಾಣುತ್ತಿರುವುದು.

ಈ ಸಂದರ್ಭದಲ್ಲಿ ನಮ್ಮ ನೆಲ,ಜಲ-ಪರಿಸರಗಳನ್ನು ಉಳಿಸಿಕೊಳ್ಳುವ  ಬಗ್ಗೆ ಮಾತನಾಡುವಾಗ ಇರಬೇಕಾದ ಎಚ್ಚರ, ಮತ್ತು ಅದನ್ನು ಕಾರ್ಯಗತಗೊಳಿಸಬೇಕಾದ ಸಾಧ್ಯತೆಗಳು ಹಾಗೂ ಆ ನಿಟ್ಟಿನ ಪ್ರಯತ್ನಗಳು ವೈಯಕ್ತಿಕವಾಗಿರುವುದಂತೂ ಸಾಧ್ಯವೇ ಇಲ್ಲ. ಸಾಂಘಿಕ- ಸಾಂಸ್ಥಿಕ ಹಾಗೂ ಜಾಗತಿಕ ಮಟ್ಟದ ಅರಿವು-ಎಚ್ಚರಗಳಿಂದ ಯೋಚಿಸಿ ಕಾರ್ಯಕ್ರಮಗಳನ್ನು ಯೋಜಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ   Think globally act locally  ಎಂಬ ಮಾತಿಗೆ ಬದಲಾಗಿ Think locally act globally  ಇರಬಹುದೇನೋ?

ನಮ್ಮ ಕೃಷಿಕರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ಅಂದರೆ ಅನ್ನ, ವಸತಿ, ವಸ್ತ್ರ, ವಿದ್ಯೆಗಳಂತಹ ಮೂಲಭೂತ ಅಗತ್ಯಗಳ ಜೊತೆಗೆ ಆಧುನಿಕ ವಿಜ್ಞಾನದ ಕೊಡುಗೆಗಳ ಕನಿಷ್ಟ ಬಳಕೆಯೂ ಸೇರಿದಂತೆ, ಈಗ ನಾವು ಅನುಭವಿಸುತ್ತಿರುವ ವಾಹನ ಸೌಕರ್ಯ, ವಿದ್ಯುತ್, ಕನಿಷ್ಟ ವೈದ್ಯಕೀಯ ಸೌಲಭ್ಯಗಳು, ಟಿ.ವಿ., ಕಂಪ್ಯೂಟರ್, ಫೋನು ಇವುಗಳನ್ನು ನಿರಾಕರಿಸದೆ, ನಮ್ಮ ಪರಿಸರವನ್ನು ಸಂರಕ್ಷಿಸುವ ಚಿಂತನೆ ಮಾಡಬೇಕಾಗುತ್ತದೆ. ಮತ್ತು ಈ ಕನಿಷ್ಟ ಸೌಲಭ್ಯಗಳನ್ನು ಹೊಂದಲು ಕೃಷಿಕ-ಕೃಷಿ ಕೂಲಿಗಾರ ಸೇರಿದಂತೆ, ಸಾಮಾನ್ಯನೊಬ್ಬನಿಗೆ ಇರಬೇಕಾದ ಆದಾಯ ಮತ್ತು ಅದನ್ನು ಗಳಿಸಬಹುದಾದ ರೀತಿಯ ಬಗ್ಗೆಯೂ ಯೋಚಿಸ ಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ತುಂಬ ಪ್ರಚಾರಕ್ಕೆ ಬರುತ್ತಿರುವ ಸುಭಾಷ್ ಪಾಳೇಕರ್ ಮತ್ತು ಅಂತಹವರ ಚಿಂತನೆಗಳು ಕೆಲಮಟ್ಟಿಗೆ ಮಾರ್ಗಸೂಚಿಯಾಗಬಲ್ಲದು. ಕನಿಷ್ಟ ಖರ್ಚಿನಲ್ಲಿ ಮಾಡಬಹುದಾದ ಕೃಷಿ, ಮತ್ತು ಎಲ್ಲವನ್ನೂ ನಿರಾಕರಿಸದೆ ಬದುಕಬಹುದಾದ ಸಾಧ್ಯತೆಯನ್ನು ಸಮೀಕರಿಸಿ ಮಾಡಬಹುದಾದ ಯಾವುದೇ ಕೃಷಿ ಆಧಾರಿತ ಉದ್ಯಮ- ಉದ್ಯೋಗಗಳ ಶೋಧನೆ ಅಗತ್ಯವಾಗಿದೆ. ( ಪಾಳೇಕರ್ ಅವರ ಕೃಷಿವಿಧಾನಗಳ ಬಗ್ಗೆ ಅದರಲ್ಲಿ ಮುಖ್ಯವಾಗಿ ರೋಗ ನಿಯಂತ್ರಣ ಮತ್ತು ಕೀಟನಾಶಕಗಳ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ) ಇದಕ್ಕೆ ಬರೀ ಕೃಷಿ ವಲಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ಸಾಧ್ಯವಾಗಲಾರದು.a

ನಮ್ಮ ಎಲ್ಲ ಉದ್ಯೋಗಗಳ ತಳಹದಿಯಾದ ಕೃಷಿಯನ್ನು ಮೂಲವಾಗಿಟ್ಟುಕೊಂಡು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಉದ್ಯಮಗಳು, ವಿದ್ಯಾಭ್ಯಾಸ, ಹೀಗೆ ಎಲ್ಲವನ್ನೂ ಒಳಗೊಂಡ ಪರ್ಯಾಯ ಸಂಸ್ಕೃತಿಯನ್ನು ಕಟ್ಟುವುದು ಅನಿವಾರ್ಯ. ಇಡೀ ಪ್ರಪಂಚವನ್ನು ಮಾರುಕಟ್ಟೆಯನ್ನಾಗಿ ನೋಡುವ, ಭೂಮಿಯಿರುವುದೇ ಮನುಷ್ಯನ ಉಪಯೋಗಕ್ಕಾಗಿ ಎಂದು ಯೋಚಿಸುವ ಮುಂದುವರಿದ ದೇಶಗಳ ಉದ್ದಿಮೆದಾರರು, ವ್ಯಾಪಾರಿಗಳು (ಮುಂದುವರಿದ ದೇಶಗಳಲ್ಲೂ ರೈತರು ಕೆಲಮಟ್ಟಿಗೆ ಬೇರೆಯೇ ಆಗಿ ಉಳಿದಿದ್ದಾರೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳಿವೆ.) ಅವರ ಮಾರುಕಟ್ಟೆ ವಿಸ್ತರಣೆ ಯೋಜನೆಯ ಅಂಗವಾಗಿಯೇ ಅವರ ಕ್ರೀಡೆಗಳು, ಸಂಗೀತ, ನೃತ್ಯ, ಕಲೆ, ಭಾಷೆ, ಜೀವನಶೈಲಿ ಎಲ್ಲವೂ ಇತರರಿಗಿಂತ ಉತ್ತಮವಾದದ್ದು ಮತ್ತು ಇತರರಿಗೆ ಅನುಕರಣೆಗೆ ಯೋಗ್ಯವಾದದ್ದೆಂದು ವಿಶ್ವಾದ್ಯಂತ ಭ್ರಮೆ ಹುಟ್ಟಿಸುತ್ತಿರುವಾಗ- ನಾವು ನಿಜವಾದ ಜಾಗತೀಕರಣಕ್ಕೆ ಸಿದ್ಧವಾಗುವುದು ಅಗತ್ಯ.

ನಮ್ಮ ಎಲ್ಲ ದೇಶ ಜನಾಂಗಗಳ ಸಾಮಾಜಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ  ಭಿನ್ನತೆಗಳನ್ನು ಉಳಿಸಿಕೊಂಡೂ ಪರ್ಯಾಯ ಕೃಷಿ ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಉದ್ಯಮ, ವಿದ್ಯೆ ಹೀಗೆ ಎಲ್ಲವನ್ನೂ ಒಳಗೊಂಡ ಸಂಸ್ಕೃತಿಯೊಂದನ್ನು ಕಟ್ಟುತ್ತಾ ಅದನ್ನು ಜಾಗತೀಕರಿಸುತ್ತಾ ಹೋಗುವ ಮೂಲಕ ನಮ್ಮ ನೆಲ, ಜಲ, ಆಕಾಶಗಳನ್ನು ಉಳಿಸಿಕೊಳ್ಳಲು ಸಾಧ್ಯವಾದೀತು.

ಕೊಸರು : ಈಗ ಹಸು ಸಾಕುವುದು ಲಾಭದಾಯಕವಲ್ಲವೆಂದು ಅನೇಕರು ಸ್ವಾನುಭವದಿಂದ ಬರೆಯುತ್ತಿದ್ದಾರೆ. ಅದನ್ನು ಲಾಭದಾಯಕವಾಗಿಸಲು ಸಾಧ್ಯವೆಂದು ಕೂಡಾ ಅನೇಕರ ಸಲಹೆ ಸೂಚನೆಗಳು ಅದಕ್ಕೆ ಪರ-ವಿರೋಧಗಳೂ ನಮ್ಮ ಹಲವಾರು ಪತ್ರಿಕೆಗಳಲ್ಲಿ ಬರುತ್ತಿವೆ. ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಂತೂ ಮಿಶ್ರತಳಿ ಹಸುಗಳ ಸಾಕಣೆ ಲಾಭದಾಯಕವಲ್ಲವೆಂಬುದು ನನ್ನ ಅನುಭವ ಕೂಡಾ. ಎಂಭತ್ತರ ದಶಕದಲ್ಲಿ ನಮ್ಮ ಸಕಲೇಶಪುರ ತಾಲ್ಲೂಕಿನಲ್ಲಿ ಸುಮಾರು ಒಂದೂವರೆ ಸಾವಿರ ಮಿಶ್ರತಳಿ ಹಸುಗಳಿದ್ದವು. ಈಗ 2006ನೇ ಇಸವಿಯ ವೇಳೆಗೆ ಅವುಗಳ ಸಂಖ್ಯೆ ಐನೂರನ್ನು ಮೀರುವುದಿಲ್ಲ. ಎಮ್ಮೆಗಳಂತೂ ಮಲೆನಾಡಿನಿಂದ ಸಂಪೂರ್ಣವಾಗಿ ಮಾಯವಾಗುತ್ತಿವೆ. ಈಗ ಹಳ್ಳಿಗಳು ಕೂಡಾ ಹೆಚ್ಚಾಗಿ ಪ್ಯಾಕೆಟ್ ಹಾಲನ್ನು ಅವಲಂಭಿಸಿವೆ.

ಇತ್ತೀಚೆಗೆ ಕೃಷಿ ಪತ್ರಿಕೆಯೊಂದರಲ್ಲಿ  ‘ಕಡಿಮೆ ಹಾಲಿನ ತಳಿಗಳೇ ರೈತರಿಗೆ ಹೆಚ್ಚು ಅನುಕೂಲವಾದ’ದ್ದೆಂದು   ಕೃಷಿಕರೊಬ್ಬರು ಅಭಿಪ್ರಾಯಪಟ್ಟಿದ್ದರು. ನಮ್ಮ ಪೂರ್ವಿಕರು ಬಯಸಿದ್ದು-ಮಾಡಿದ್ದು ಇದನ್ನೇ. ನಮ್ಮ ನಾಟಿ ತಳಿಗಳಾದ ಮಲೆನಾಡು ಗಿಡ್ಡ ಮತ್ತು ಹಳ್ಳಿಕಾರ್-ಅಮೃತಮಹಲ್ ತಳಿಗಳನ್ನು ನೋಡಿ ಇವು ಯಾವುದೇ ರೋಗವಿಲ್ಲದೆ, ಕಾಡು ಹುಲ್ಲು ತೋಡು ನೀರನಲ್ಲಿ ಬದುಕಿ ಮನೆಯ ಅಗತ್ಯಕ್ಕೆ ತಕ್ಕಷ್ಟು ಹಾಲನ್ನು ಕೊಡುತ್ತಿದ್ದವು. ಸಾಕಷ್ಟು ಗೊಬ್ಬರವೂ ಸಿಗುವುದರೊಂದಿಗೆ ಎತ್ತುಗಳು ಎಲ್ಲ ಕೆಲಸಕ್ಕೂ ಬರುತ್ತಿದ್ದವು. ದಿನವೊಂದಕ್ಕೆ ಮೂವತ್ತು ಕಿ.ಮೀ. ದೂರ ಗಾಡಿ ಎಳೆಯುವ ಎತ್ತುಗಳ ಅದ್ಭುತ ಕಾರ್ಯಕ್ಷಮತೆಯನ್ನು ನೋಡಿ! ಸ್ವಲ್ಪ ಹೆಚ್ಚು ಹಾಲು ಕೊಟ್ಟೂ ಹೊರೆಯಾಗದ ಸಿಂಧಿ, ದೇವಣಿ ಹಸುಗಳನ್ನು ಗಮನಿಸಿ, ಈ ತಳಿಗಳೆಲ್ಲ ನಮ್ಮ ಆರ್ಥಿಕತೆಗೆ, ಅನುಕೂಲಕ್ಕೆ ತಕ್ಕಂತೆ ನೂರಾರು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಅಬಿವೃದ್ಧಿಯಾಗಿದ್ದವು.

ಇದೊಂದು ಉದಾಹರಣೆ ಮಾತ್ರ. ಹೀಗೆ ನೋಡುತ್ತಾ ಹೋದಲ್ಲಿ ನಮ್ಮ ಪಾರಂಪರಿಕ ಜ್ಞಾನದ ಅದ್ಭುತ ಸಂಗತಿಗಳು ನಮ್ಮ ಆಹಾರ, ವಸ್ತ್ರ, ಔಷಧ ಹೀಗೇ ಅನೇಕ ವಿಷಯಗಳಲ್ಲಿ ದೊರೆಯುತ್ತವೆ.

(ಮುಗಿಯಿತು.)

ನಮ್ಮ ಪರಿಸರ – ನೆಲ ಜಲ : 2

– ಪ್ರಸಾದ್ ರಕ್ಷಿದಿ

ನಮ್ಮ ಪರಿಸರ – ನೆಲ ಜಲ : 1

ಈ ಮೊದಲಿನ ಎರಡು ಸಂಗತಿಗಳು ಪೂರ್ವ ಪಶ್ಚಿಮ ತುದಿಗಳಾದರೆ, ಇನ್ನೊಂದು ನಾವೀಗ ಹೆಚ್ಚಾಗ ರೂಪಿಸಿಕೊಂಡಿರುವ ಆಧುನಿಕ ಕೃಷಿ. ಸಾಕಷ್ಟು ರಸಗೊಬ್ಬರ, ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು, ಹೆಚ್ಚು ನೀರು, ತರಹೇವಾರಿ ಕೃಷಿವಿಷಗಳನ್ನೆಲ್ಲ ಬಳಸಿ ಬೆಳೆಯುವ, ಸಾಕಷ್ಟು ಯಂತ್ರೋಪಕರಣಗಳನ್ನು ಉಪಯೋಗಿಸಲು ಅವಕಾಶವಿರುವ ಕೃಷಿಯೇ ಈ ಆಧುನಿಕ ಕೃಷಿ.

ಆಧುನಿಕ ಕೃಷಿಯ ಸಮರ್ಥಕರು ನೀಡುವ ಅತಿ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ಆಹಾರ ಪರಿಸ್ಥಿತಿ. ಸುಮಾರು ಎಪ್ಪತ್ತರ ದಶಕದವರೆಗೂ ಭಾರತದ ಆಹಾರ ಮಂತ್ರಿಯೆಂದರೆ ಭಿಕ್ಷಾನ್ನ ಮಂತ್ರಿಯೆಂದೇ ಪ್ರಖ್ಯಾತ!. ಆಗ ಅಮೆರಿಕಾ ಕೊಟ್ಟರೆ ಮಾತ್ರ ನಮಗೆ ಅನ್ನ ಎಂಬ ಪರಿಸ್ಥಿತಿ, ”ಆದರೆ ಈಗ ನೋಡಿ ನಾವು ಆಹಾರವನ್ನು ರಫ್ತು ಮಾಡುತ್ತಿದ್ದೇವೆ.  ಜನಸಂಖ್ಯೆಯ ಅಗಾಧ ಏರಿಕೆಯ ಜೊತೆಯಲ್ಲೇ ಆಹಾರ ದಾಸ್ತಾನು ಕೂಡಾ ಅದೇ ಪ್ರಮಾಣದಲ್ಲಿ ಹೆಚ್ಚಿದೆ …” ಇತ್ಯಾದಿ. ಇದು ಅಂಕಿ ಅಂಶಗಳ ಮತ್ತು ಆಹಾರದ ಲಭ್ಯತೆಯ ಮಟ್ಟದಲ್ಲಿ ಖಂಡಿತ ನಿಜ. ಆದರೆ ಇದಕ್ಕೆ ಆಧುನಿಕ ಕೃಷಿ ಪದ್ಧತಿ ಒಂದೇ ಕಾರಣವಲ್ಲ. ಇತ್ತೀಚಿನ ವರ್ಷಗಳಲ್ಲಿ ಆದ ನಮ್ಮ ಅನೇಕ ಹೊಸ ನೀರಾವರಿ ಯೋಜನೆಗಳು ಮತ್ತು ಅದರಿಂದಾದ ಕೃಷಿ ಭೂಮಿಯ ವಿಸ್ತರಣೆ, ಹಾಗೂ ನಾವು ಹೊಸದಾಗಿ ಕೃಷಿಗೆ ಒಳಪಡಿಸಿದ ಅರಣ್ಯ ಭೂಮಿಯ ಪ್ರಮಾಣ ಇವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿದರಷ್ಟೇ ಸರಿಯಾದ ಚಿತ್ರಣ ದೊರೆತೀತು. ಈ ಆಧುನಿಕ ಕೃಷಿಯನ್ನೇ ವೈಜ್ಞಾನಿಕವೆಂದು ನಂಬಿಕೊಂಡವರಿಂದ ಈ ಸಮೀಕ್ಷೆ- ಅಧ್ಯಯನಗಳು ನಡೆದಲ್ಲಿ ಯಾವುದೇ ಪ್ರಯೋಜನವಿಲ್ಲ. ಇತ್ತೀಚೆಗೆ ನಮ್ಮ ಹತ್ತಿರದ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರಿಗೆ ಅವರ ಸಂಶೋಧನೆಯ ಕೆಲವು ಲೇಖನಗಳನ್ನು ಪ್ರಕಟಿಸಲು ಅವರ ನಿರ್ದೇಶನಾಲಯದಿಂದ ಅನುಮತಿ ಸಿಗಲಿಲ್ಲ. ಯಾಕೆಂದರೆ ಅವರ ಸಂಶೋಧನೆಯ ಫಲಶ್ರುತಿ, ಸರ್ಕಾರ ಪ್ರಚಾರ ಮಾಡುತ್ತಿದ್ದ ವಿಷಯಗಳ ಹಾಗೂ ಕೆಲವು ಕಂಪೆನಿಗಳ ಹಿತಾಸಕ್ತಿಯ ವಿರುದ್ಧವಾಗಿತ್ತು. ಅವರ ಅಭಿಪ್ರಾಯ ಹೀಗಿತ್ತು  “ಈಗ ನಮ್ಮ ಮುಂದಿರುವುದು ಕೆಲವು ಕೃಷಿ ಪದ್ಧತಿಗಳು,  ಸಾಂಪ್ರದಾಯಿಕ ಕೃಷಿ, ಸಾವಯವ ಕೃಷಿ,  ಮತ್ತು ಆಧುನಿಕ ಕೃಷಿ ಇತ್ಯಾದಿ… ವೈಜ್ಷಾನಿಕ ಕೃಷಿ ಎನ್ನುವುದು ನಾವಿನ್ನು ಕಂಡುಕೊಳ್ಳಬೇಕಾದ ಮತ್ತು ನಿರಂತರ ಹುಡುಕಾಟದಲ್ಲಿರಬೇಕಾದ ಮಾರ್ಗ ಅಷ್ಟೆ” ಎಂದು. ಈ ನಿರಂತರ ಹುಡುಕಾಟದ ಕ್ರಿಯೆ ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗಬೇಕಾದ ವಿಷಯ. ಅದಲ್ಲದೆ ಆ ವಿಜ್ಞಾನಿ ಮತ್ತೂ ಮುಂದುವರಿದ”  ಆಧುನಿಕ ಕೃಷಿಯೆನ್ನುವುದು ದೊಡ್ಡ ಪ್ರಮಾಣದ ಕೃಷಿಗೆ ಅನುಕೂಲಕರವಾಗಿದೆ, ಯಾಕೆಂದರೆ ಯಂತ್ರಗಳು, ನೀರಾವರಿ, ಸುಧಾರಿತ ಬೀಜಗಳು, ಹಾಗೇ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ-ಕೀಟನಾಶಕ, ಕಳೆನಾಶಕ ಮುಂತಾದವುಗಳ ಬಳಕೆ ಇದಕ್ಕೆ ಬೇಕಾಗುವ ದೊಡ್ಡ ಪ್ರಮಾಣದ ಭಂಡವಾಳ ಹೂಡಿಕೆ ಎಲ್ಲವನ್ನೂ ಒಳಗೊಂಡು ಕೈಗಾರಿಕೆ ಆಧಾರಿತ ಕೃಷಿಯಾಗಿದೆ” ಎಂದರು. ಈ ಎಲ್ಲ ಕಾರಣಗಳಿಗಾಗಿಯೇ ಈ ಆಧುನಿಕ ಕೃಷಿ ನಮ್ಮನ್ನಾಳುವವರಿಗೂ ಅತ್ಯಂತ ಆಪ್ಯಾಯಮಾನವಾದದ್ದಾಗಿದೆ.

ಇದೀಗ ಇನ್ನೊಂದು ಮಧ್ಯಮ ಮಾರ್ಗವಾದ ‘ಸಾವಯವ ಕೃಷಿ’ಗೆ ಬರೋಣ. ಈಗ ಸರ್ಕಾರವೇ  ಸಾವಯವ ಕೃಷಿಯ ಬಗ್ಗೆ ಆಸಕ್ತಿ ತೋರಿದೆಯೆಂದರೆ, ಸರ್ಕಾರಕ್ಕೆ ಈ ಆಧುನಿಕ ಕೃಷಿಯ ಅನಾಹುತಗಳು ಅರ್ಥವಾಗಿ ಸಾವಯವ ಕೃಷಿಯ ಪ್ರತಿಪಾದಕನಾಗಿದೆ ಎಂದುಕೊಂಡರೆ  ಅದು ನಮ್ಮ ದಡ್ಡತನವಷ್ಟೆ. ಯಾವುದೇ ಸರ್ಕಾರಕ್ಕೂ ಯಾವಾಗಲೂ ಬೃಹತ್ ಯೋಜನೆಗಳೇ ಅಚ್ಚುಮೆಚ್ಚು. ಯೋಜನೆಗಳ ಗಾತ್ರ ಹಿರಿದಾದಷ್ಟೂ ಆಳುವವರ ಹಿತವೂ ದೊಡ್ಡ ಪ್ರಮಾಣದಲ್ಲಿ ರಕ್ಷಣೆಯಾಗುತ್ತದೆ. ಇದಕ್ಕೆ ಆಧುನಿಕ ಹಾಗೂ ಹೈಟೆಕ್ ಕೃಷಿಯ ದೊಡ್ಡ ಕಂಪೆನಿಗಳೇ ಸೂಕ್ತವಾದದ್ದು. ಹೀಗಿದ್ದೂ ಸರ್ಕಾರ ಈಗೇಕೆ ಸಾವಯವದ ಧ್ವನಿಯೆತ್ತಿದೆ? ವೈಯಕ್ತಿಕ ಮಟ್ಟದಲ್ಲಿ ಈ ರೀತಿ ಯೋಚಿಸುವ ಕೆಲವರು ಶಾಸಕರೋ ಮಂತ್ರಿಗಳೋ ಇರಬಹುದು, ಆದರೆ ಒಟ್ಟೂ ಆಡಳಿತ ಯಂತ್ರ ಯಾವತ್ತೂ ದೊಡ್ಡ ಪ್ರಮಾಣದ ಆಧುನಿಕ ಕೃಷಿಯ ಪರವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ಕೃಷಿಗೆ ಮತ್ತು ಪರ್ಯಾಯ ಆರೋಗ್ಯ ಪದ್ಧತಿಗೆ ಸಿಗುತ್ತಿರುವ ಪ್ರಚಾರ ಜೊತೆಗೆ ಅಂತಾರಾಷ್ಟ್ರೀಯಮಟ್ಟದಲ್ಲೂ ಈ ಬಗ್ಗೆ ಮೂಡುತ್ತಿರುವ ಜಾಗೃತಿ ಹಾಗೂ ನಮ್ಮಲ್ಲೂ ಕೃಷಿಕರಲ್ಲಿ ಹಾಗೂ ಸಮಾಜದ ಅನೇಕ ವಲಯಗಳಲ್ಲಿ ಹೆಚ್ಚುತ್ತಿರುವ ತಿಳುವಳಿಕೆ, ಇವೆಲ್ಲವುಗಳಿಂದ ಸರ್ಕಾರದ ಮೇಲೆ ಬೀಳುತ್ತಿರುವ ಒತ್ತಡದಿಂದಾಗಿ  ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ ಯಷ್ಟೆ

ಇರಲಿ, ಸರ್ಕಾರ ಉದ್ದೇಶ ಒಳ್ಳೆಯದೆಂದೇ ಇಟ್ಟುಕೊಳ್ಳೋಣ. ಸರ್ಕಾರ ಹೇಳುವಂತಹ ಅಥವಾ ನಾವು ಅಂದುಕೊಂಡಿರುವಂತಹ ಸಾವಯವ ಕೃಷಿ ಅಂದರೇನು? ರಾಸಾಯನಿಕ ವಸ್ತುಗಳನ್ನು ಅಂದರೆ ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳನ್ನು ಉಪಯೋಗಿಸದೆ, ಹಟ್ಟಿಗೊಬ್ಬರ- ಸಸ್ಯಜನ್ಯ ಕೀಟನಾಶಕಗಳು, ಸಾವಯವಗೊಬ್ಬರ ಇತ್ಯಾದಿಗಳನ್ನು ಮಾತ್ರ ಬಳಸಿ ಆದಷ್ಟೂ ಸ್ಥಳೀಯವಾಗಿ ಲಭ್ಯವಾಗುವ ಸಾವಯವ ತ್ಯಾಜ್ಯವಸ್ತುಗಳನ್ನು ಉಪಯೋಗಿಸಿ ಮಾಡುವ ಕೃಷಿ. (ರಾಸಾಯನಿಕಗಳೇ ಆಗಿರುವ ಸುಣ್ಣ, ಬೊಡೊ ಮಿಶ್ರಣ ಇವುಗಳ ಬಳಕೆ  ಇಲ್ಲಿ ನಿಷಿದ್ಧವಲ್ಲ ಕೆಲವರು ರಂಜಕಯುಕ್ತ ಗೊಬ್ಬರವಾದ ರಾಕ್ ಫಾಸ್ಫೇಟಿಗೂ ಅದು ಕಲ್ಲಿನ ಪುಡಿಯೆಂದು ವಿನಾಯಿತಿ ನೀಡಿದ್ದಾರೆ) ಇದರೊಂದಿಗೆ ಇತರ ಪೂರಕ ಚಟುವಟಿಕೆಗಳನ್ನು ಅಂದರೆ ಹೈನುಗಾರಿಕೆ, ಕೋಳಿಸಾಕಣೆ ಇತ್ಯಾದಿಗಳನ್ನು ಮಾಡಿದರೆ ಇನ್ನೂ ಒಳ್ಳೆಯದು. ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿಗಳು ಇದಕ್ಕೆ ಹೆಚ್ಚು ಅನುಕೂಲದ್ದಾಗಿರುತ್ತವೆ.

ಹೀಗಿರುವಾಗ ಸಣ್ಣ ಮತ್ತು ಮಧ್ಯಮ ಕೃಷಿಕರು ಒಂದೆರಡು ದನಕರುಗಳನ್ನು ಜೊತೆಯಲ್ಲಿ ಕುರಿಕೋಳಿಗಳನ್ನು ಸಾಕುತ್ತ ಸಾವಯವ ಗೊಬ್ಬರ ತಯಾರಿಸಿ ಉಪಯೋಗಿಸುತ್ತಾ, ಅತಿ ಕಡಿಮೆ ರಾಸಾಯನಿಕ ಅಥವಾ ರಾಸಾಯನಿಕರಹಿತ ಕೃಷಿ ಮಾಡುತ್ತಾ ತಾನೂ ಆರೋಗ್ಯವಂತನಾಗಿ- ಭೂಮಿ ಮತ್ತು ಸಮಾಜದ ಎಲ್ಲರ ಆರೋಗ್ಯವನ್ನು ಕಾಪಾಡುತ್ತ ಸುಖವಾಗಿ ಇರಬಹುದಾಗಿತ್ತಲ್ಲವೇ?.  ಆದರೆ ನಾವೆಂದುಕೊಂಡಂತೆ ಪರಿಸ್ಥಿತಿ ಅಷ್ಟು ಸರಳವಾಗಿ ಖಂಡಿತ ಇಲ್ಲ. ಒಂದೆಡೆ ಪರಿಸರ ಪ್ರಿಯರು, ಕೃಷಿಪಂಡಿತರುಗಳು, ಭಾನುವಾರದ ಕೃಷಿಕರು, ಹವ್ಯಾಸಿ ಕೃಷಿಕರು, ಹಾಗೂ ಅನೇಕ ಸಂಘಟನೆಗಳು-ಸಹಜಕೃಷಿ, ಸಾವಯವ ಕೃಷಿ, ನೆಲಜಲ ಸಂರಕ್ಷಣೆ ಮುಂತಾದುವುಗಳ ಬಗ್ಗೆ ನಡೆಸುವ ಕಾರ್ಯಕ್ರಮಗಳು, ವಿಚಾರಸಂಕಿರಣಗಳು, ಚಳುವಳಿಗಳು, ಜೊತೆಗೆ ಹಲವು ಕೃಷಿಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿರು ಲೇಖನಗಳು, ಇವೆಲ್ಲವುಗಳಿಂದ ಸಾವಯವ ಕೃಷಿಗೆ ಸಿಕ್ಕಿದ ಪ್ರಚಾರದಿಂದಾಗಿ, ಸಾವಯವ ಪರಿಸರ ಸ್ನೇಹಿವಸ್ತುಗಳ ದೊಡ್ಡ ಉತ್ಪಾದಕರುಗಳೇ ಹುಟ್ಟಿಕೊಂಡಿದ್ದಾರೆ. ಇವರುಗಳು ಮುದ್ರಿಸಿ ಹಂಚುತ್ತಿರುವ ಕರಪತ್ರಗಳು ಯಾವುದೇ ದೊಡ್ಡ ರಾಸಾಯನಿಕ ಕಂಪೆನಿಗಳ ಪ್ರಚಾರ ಸಾಮಗ್ರಿಯನ್ನೂ ನಾಚಿಸುವಂತಿದೆ. ರಾಸಾಯನಿಕ ವಸ್ತುಗಳಿಗೆ ಹೋಲಿಸಿದರೆ ಇವುಗಳ ಬೆಲೆಯೂ ದುಬಾರಿಯಾಗಿದೆ. ಈ ವಿಚಾರ ಆಯರ್ವೆದ ಔಷಧಿಗಳಂತಹ ವೈದ್ಯಕೀಯ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಸದ್ಯಕ್ಕಂತೂ ಇವುಗಳಲ್ಲಿ ಯಾವುದು ನಿಜವಾದ ಸಾವಯವ ಅಥವಾ ಪರಿಸರ ಸ್ನೇಹಿ ಎಂದು ನಿರ್ಧರಿಸಲು ಯಾವುದೇ ಮಾನದಂಡವೂ ಇಲ್ಲ. ವೈಯಕ್ತಿಕ ಪರಿಚಯ, ಅನುಭವ ನಂಬಿಕೆಗಳನ್ನಾಧರಿಸಿ ಇವುಗಳನ್ನು ಕೊಳ್ಳಬೇಕಷ್ಟೆ.

ಈ ಬಗ್ಗೆ ನಡೆಯುವ ಚರ್ಚೆ, ಸಭೆ, ವಿಚಾರ ಸಂಕಿರಣಗಳನ್ನು ಗಮನಿಸಿದರೆ ಅಲ್ಲಿ ಮತ್ತೆ ಮತ್ತೆ ಅದೇ ತಜ್ಞರುಗಳು ಅದೇ ಜನರು ಇರುತ್ತಾರೆ. ಉದಾಹರಣೆಗೆ ನಮ್ಮ ಜನ ಕೃಷಿಯ ವಸ್ತುಗಳು ಮಾರುಕಟ್ಟೆಯಲ್ಲಿ ಇತರ ಉತ್ಪನ್ನಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಬೇಕೆಂದು ‘ಫುಕುವೋಕಾ’ ಹೇಳುತ್ತಾರೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಸಹಜ-ಸಾವಯವಗಳಂತಹ ಯಾವ ಪದ್ಧತಿಯ ಉತ್ಪನ್ನಗಳು ಕೂಡಾ ಬೆಲೆಯಲ್ಲಿ ಇತರ ಉತ್ಪನ್ನಗಳೊಂದಿಗೆ ಸ್ಪರ್ದಿಸಲಾರವು. ಒಂದುವೇಳೆ ಇವುಗಳೆಲ್ಲವನ್ನೂ ಮೀರಿ ಸಾವಯವ ಕೃಷಿ ಮಾಡುವ ಉಮೇದಿನಲ್ಲಿರುವ ಕೃಷಿಕ ಹೊರಗಿನಿಂದ ಕೋಳಿಗೊಬ್ಬರವನ್ನೋ ಕೊಟ್ಟಿಗೆ ಗೊಬ್ಬರವನ್ನೋ ಖರೀದಿಸಿ ಉಪಯೋಗಿಸಬಯಸಿದರೆ ಇಂದು ಅದರಲ್ಲಿ ಬೆರೆತಿರುವ ರಾಸಾಯನಿಕಗಳು ಮತ್ತು ಹನುಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ. ಯಾಕೆಂದರೆ ಹಾಲು, ಮೊಟ್ಟೆ ಮಾಂಸದ ಅಧಿಕ ಇಳುವರಿಗಾಗಿ ಈ ಪ್ರಾಣಿಗಳಿಗೆ ತಿನ್ನಿಸಿದ ಆಹಾರ, ಕೊಡುವ ಔಷಧಿ-ಇಂಜೆಕ್ಷನ್ ಗಳನ್ನು ನೋಡಿದರೆ ಗಾಬರಿಯಾಗುವಂತಿದೆ. ಇತ್ತೀಚೆಗೆ ಆ್ಯಂತೋರಿಯಂ ಬೆಳೆ ಆರಂಭಿಸಿದ ಕೃಷಿಕರೊಬ್ಬರು ಕೋಳಿಗೊಬ್ಬರ ಬಳಸಿ ಅದರಿಂದಾಗಿ ಸಾವಿರಾರು ಗಿಡಗಳನ್ನು ಕಳೆದುಕೊಂಡರು. ಪರೀಕ್ಷಿಸಿದಾಗ ಅವರು ಬಳಸಿದ ಕೋಳಿ ಗೊಬ್ಬರವೇ ಸೋಂಕಿನಿಂದ ವಿಷಮಯವಾಗಿತ್ತು. ಉಳಿದ ಗಿಡಗಳನ್ನು ಉಳಿಸಿಕೊಳ್ಳಲು ಮತ್ತೊಂದಷ್ಟು ವಿಷನಿವಾರಕಗಳನ್ನು ಸುರಿಯುವುದು ಅನಿವಾರ್ಯವಾಯ್ತು.

ನಾನು ಇದನ್ನೆಲ್ಲಾ ಮತ್ತೆ ಮತ್ತೆ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಕೃಷಿ ವಿಷಮಯವಾಗುತ್ತ ಹೋದಂತೆ ನೆಲಜಲಗಳೂ ಜೊತೆಯಲ್ಲಿ ವಾತಾವರಣವೂ ವಿಷಮಯವಾಗತ್ತ ಹೋಗುತ್ತದೆ. ಇದಕ್ಕೆ ಪರಿಹಾರ ಕಂಡುಹಿಡಿಯಲು ಸಮಗ್ರವಾದ, ಅಂದರೆ ನಮ್ಮ ಕೃಷಿಪದ್ಧತಿಗಳು, ಕೈಗಾರಿಕೋಧ್ಯಮಗಳು, ನಮ್ಮ ಸಾಮಾಜಿಕ- ಸಾಂಸ್ಕೃತಿಕ ಸಂಬಂಧಗಳು ಇವುಗಳನ್ನೆಲ್ಲ ಗಮನಿಸಿ ರೂಪಿಸಲಾಗುವ ನೀತಿಯೊಂದು ಇಡೀ ಜಗತ್ತಿಗೇ ಅನ್ವಯವಾಗುವಂತೆ ಇರದಿದ್ದರೆ, ಅಥವಾ ಪ್ರತಿಯೊಂದು ಸಮಸ್ಯೆಯನ್ನೂ ಪ್ರತ್ಯೇಕವಾಗಿ ಪರಿಗಣಿಸಿ ಪರಿಹಾರ ಹುಡುಕಲು ಪ್ರಯತ್ನಿಸಿದರೆ ಹುತ್ತವ ಬಡಿದಷ್ಟೇ ಫಲ ದೊರೆತೀತು.

ನಮ್ಮಲ್ಲಿ ಕೇಂದ್ರ- ರಾಜ್ಯಗಳೆರಡರಲ್ಲೂ ಪರಿಸರ ಇಲಾಖೆ ಇದೆ, ಮಂತ್ರಿಗಳೂ ಇದ್ದಾರೆ. ಆ ಇಲಾಖೆಯ ಅಡಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದೆ. ಅದಕ್ಕಷ್ಟು ಆಡಳಿತಯಂತ್ರ ಸಿಬ್ಬಂದಿ ಎಲ್ಲವೂ ಇವೆ. ಈ ಇಲಾಖೆ ಮಾಲಿನ್ಯ ನಿಯಂತ್ರಣಕ್ಕಿಂತ ಸುದ್ದಿ ಮಾಡಿದ್ದೇ ಹೆಚ್ಚು. ನಮ್ಮ ಮಲೆನಾಡಿನ ಮಟ್ಟಿಗೆ ಅದೂ ಕಾಫಿ ಬೆಳೆಯುವ ಪ್ರದೇಶದಲ್ಲಿ ಕಾಫಿ ಪಲ್ಪರ್ ನೀರಿನ ಬಗ್ಗೆ ಇವರು ಸುದ್ದಿ ಮಾಡಿದಷ್ಟು ಬೇರಾವುದೇ ಕೈಗಾರಿಕಾ ಮಾಲಿನ್ಯದ ಬಗ್ಗೆ ಮಾಡಿದ್ದಿಲ್ಲ. ಕಾಫಿ ಹಣ್ಣಿನ ಸಂಸ್ಕರಣೆ ಅಂದರೆ ಪಲ್ಪಿಂಗ್ ಮಾಡುವಾಗ ಬರುವ ತ್ಯಾಜ್ಯ ನೀರನ್ನು ನೇರವಾಗಿ ಹೊಳೆಗಳಿಗೆ ಬಿಡುವುದರಿಂದ ಹೊಳೆನೀರು ಕಲುಷಿತವಾಗುತ್ತದೆ. ಕೊಳೆತನೀರಿನ ವಾಸನೆಯುಂಟಾಗುವುದಲ್ಲದೆ ಜಲಚರಗಳು ಸಾಯುತ್ತವೆ. ಜನ ಜಾನುವಾರುಗಳು ಕುಡಿಯಲು ಆ ನೀರು ಯೋಗ್ಯವಾಗಿರುವುದಿಲ್ಲ. ಇದನ್ನು ನಿಲ್ಲಿಸಬೇಕೆಂದು ಜನರೇ ಅನೇಕ ಸಾರಿ ಪ್ರತಿಭಟನೆಯನ್ನೂ ಮಾಡಿದ್ದಾರೆ-ಮಾಡುತ್ತಿದ್ದಾರೆ. ಈ ನೀರನ್ನು ಹೊಳೆಗೆ ಬಿಡದಂತೆ ತಡೆಯಬೇಕಾದ್ದು ಸರ್ವಥಾ ಯೋಗ್ಯವಾದ ಕೆಲಸ. ಆದರೆ ಈ ನೀರಿನ ಮರುಬಳಕೆಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ತಯಾರಿಸಿರುವ ಯೋಜನೆಗಳು ತುಂಬ ದುಬಾರಿಯಾದವು. ಇಂದಿನ ಕಾಫಿ ಬೆಳೆ ಮತ್ತು ಬೆಲೆಗಳ ಪರಿಸ್ಥಿತಿಯಲ್ಲಿ ಈ ನೀರು ಸಂಸ್ಕರಣಾ ವಿಧಾನವನ್ನು ಅನುಸರಿಸುವುದು ದೊಡ್ಡ ಬೆಳೆಗಾರರಿಗೂ ಕಷ್ಟ.

ಆದರೆ ಈಗ ಹೆಚ್ಚಿನ ಎಲ್ಲಾ ಬೆಳೆಗಾರರೂ ಸಮಸ್ಯೆಯನ್ನು ಅರ್ಥಮಾಡಿಕೊಂಡು ಈ ತ್ಯಾಜ್ಯ ನೀರನ್ನು ದೊಡ್ಡ ದೊಡ್ಡ ಇಂಗುಗುಂಡಿಗಳನ್ನು ಮಾಡಿ ಸಂಗ್ರಹಿಸಿಟ್ಟು ನಂತರ ತೋಟಕ್ಕೆ ಗೊಬ್ಬರವಾಗಿ ಬಳಸುತ್ತಿದ್ದಾರೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಈ ತ್ಯಾಜ್ಯ ನೀರಿನಲ್ಲಿ ಯಾವುದೇ ರಾಸಾಯನಿಕ ವಸ್ತುಗಳು ಇರುವುದಿಲ್ಲ. ಶುದ್ಧ ಸಾವಯವ ಪದಾರ್ಥಗಳಾದ ಕಾಫಿ ಹಣ್ಣಿನ ಅಂಟು ಮತ್ತು ಸಿಪ್ಪೆ ಮಾತ್ರ ಇರುತ್ತದೆ. ಈ ತ್ಯಾಜ್ಯ ನೀರಿನ ಸಂಸ್ಕರಣೆಗೆ ದುಬಾರಿಯಲ್ಲದ ಸರಳವಿಧಾನವೊಂದನ್ನು ಕಂಡುಹಿಡಿಯಬೇಕಾದ ಅಗತ್ಯವಿದೆ. ಆದರೆ ಕೃಷಿವಿಷಗಳಿಂದ ಆಗುತ್ತಿರುವ ನೆಲ ಜಲ ಮಾಲಿನ್ಯವನ್ನು ತಡೆಯಲು ಯಾವುದೇ ಪ್ರಯತ್ನವನ್ನು ಮಾಡದೆ, ಎಂತಹದೇ ಘನಘೋರ ವಿಷವನ್ನೂ ಮಾರಾಟ ಮಾಡುತ್ತಿದ್ದರೂ ಅದರಿಂದ ಪರಿಸರಕ್ಕಾಗುವ ಹಾನಿಯ ಬಗ್ಗೆ ತುಟಿಬಿಚ್ಚದ ಈ ಪರಿಸರ ಮಾಲಿನ್ಯ ನಿಂತ್ರಣ ಮಂಡಳಿ ಅಧಿಕಾರಿಗಳು, ಕಾಫಿ ತೋಟಗಳಿಗೆ ಬಂದು ಪಲ್ಪಿಂಗ್ ತ್ಯಾಜ್ಯ ನೀರನ್ನು ಬೇರಡೆಗೆ ಹರಿಯದಂತೆ ಸಂಗ್ರಹಿಸಿ ಇಟ್ಟಿದ್ದರೂ ಸಹ ಅದರಿಂದ ವಾಸನೆ ಬರುತ್ತಿದೆ- ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದೆಲ್ಲ ಹೆದರಿಸಬಲ್ಲರು. ಪಲ್ಪಿಂಗ್ ಯೂನಿಟ್ ನ ಯಂತ್ರಗಳನ್ನು ಮುಟ್ಟುಗೋಲು ಹಾಕಿ ವಶಪಡಿಸಿಕೊಳ್ಳುವ ಅಧಿಕಾರ ಈ ಅಧಿಕಾರಿಗಳಿಗೆ ಇರುವುದರಿಂದ ಅನೇಕ ಕಾಫಿ ಬೆಳೆಗಾರರು ಇವರೊಂದಿಗೆ ಹೊಂದಾಣಿಕೆಗೆ ಮೊರೆ ಹೋಗಿದ್ದಾರೆ.

ಕಾಫಿ ಬೆಳೆಯಲ್ಲೇ ಬಳಕೆಯಾಗುವ ಕೃಷಿವಿಷಗಳ ವಿಚಾರ ಹೇಳುವುದಾದರೆ ರೋಬಸ್ಟಾ ಕಾಫಿ ನೂರಕ್ಕೆ ನೂರರಷ್ಟು ವಿಷಮುಕ್ತವಾಗಿದೆ. ರಾಸಾಯನಿಕ ಗೊಬ್ಬರದ ಬಳಕೆಯನ್ನು ಬಿಟ್ಟರೆ ಇದು ಸಂಪೂರ್ಣ ಸಾವಯವ ಕೃಷಿಯೇ ಸರಿ. ಅರೇಬಿಕಾ ಕಾಫಿ ಬೆಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಷ ಬಳಕೆಯಾಗುತ್ತದೆ. ಕಾಫಿ ಬೆಳೆಯೊಂದಿಗೆ ಹೋಲಿಸಿದಲ್ಲಿ  ಟೀ ಯಂತಹ ಇತರ ಪ್ಲಾಂಟೇಷನ್ ಬೆಳೆಗಳಿಗೆ ಬಳಸುವ ವಿಷದಪ್ರಮಾಣ ಅಪಾರ.(ರೋಬಸ್ಟಾ ಕಾಫಿ ಬೆಳೆಗೆ ಇತ್ತೀಚೆಗೆ ‘ಬೆರಿ ಬೋರರ್’ ಎಂಬ ಕಾಯಿಕೊರಕ ಕೀಟವೊಂದು ಅಪಾರ ಹಾನಿಮಾಡುತ್ತಿದ್ದು ಈಗ ಅದರ ನಿಯಂತ್ರಣಕ್ಕಾಗಿ  ಕೆಲವೆಡೆ ವಿಷ ಬಳಸಲು ಪ್ರಾರಂಭಿಸಿದ್ದಾರೆ)

ಇನ್ನು ಹೈಟೆಕ್ ಕೃಷಿಯ ಹೆಸರಲ್ಲಿ ಬರುವ Growth promoter ಗಳು Plant harmone ಗಳು, Soil conditionerಗಳು, Foliar sprayಗಳು, weedicideಗಳು ಇವುಗಳಲ್ಲೆಲ್ಲಾ ಇರುವ ವಸ್ತುಗಳೇನು? ಇವುಗಳ ಧೀರ್ಘಕಾಲದ ಬಳಕೆಯಿಂದ ಆಗುವ ಪರಿಣಾಮಗಳೇನು? ಇತ್ಯಾದಿಗಳಬಗ್ಗೆ ನಮ್ಮಲ್ಲಿ ಯಾವದೇ ಮಾಹಿತಿಯೂ ಇಲ್ಲದೆ, ಅದನ್ನು ತಯಾರಿಸಿದ ಕಂಪೆನಿಗಳು ಹೇಳಿದ್ದನ್ನೇ ನಂಬಿಕೊಂಡು ನಾವು ಕೂತಿದ್ದೇವೆ. ನಮ್ಮ ಪರಿಸರ-ಆರೋಗ್ಯ ಇಲಾಖೆಗಳಂತೂ ಈ ಕಂಪೆನಿಗಳ ವಿರುದ್ಧ ಚಕಾರವನ್ನೂ ಎತ್ತಲಾರವು ಯಾಕೆಂದರೆ ಈ ಕಂಪೆನಿಗಳು ಸರ್ಕಾರಗಳಿಗಿಂತ ದೊಡ್ಡವು!!

ಅರುವತ್ತರ ದಶಕದಲ್ಲಿ ಕೊಡಗಿನ ಕಾಫಿ ತೋಟಗಳಲ್ಲಿ Gormex ಎಂಬ ಕಳೆನಾಶಕವನ್ನು ವ್ಯಾಪಕವಾಗಿ ಉಪಯೋಗಿಸಿದರು. ಕೇವಲ ಒಂದು ವರ್ಷದಲ್ಲೇ ಕಾಫಿ ಗಿಡಗಳು ಒಣಗಲಾರಂಭಿಸಿದವು. ಇದಕ್ಕೆ ಅವರು ಉಪಯೋಗಿಸಿದ ಕಳೆನಾಶಕವೇ ಕಾರಣವೆಂದು ಗೊತ್ತಾಗುವಷ್ಟರಲ್ಲಿ ಕಾಫಿ ತೋಟಗಳಿಗೆ ಅಪಾರ ಹಾನಿಯಾಗಿತ್ತು. ಕಾಫಿ ತೋಟಗಳಿಗಾದ ಹಾನಿಯ ಅಂದಾಜು ಲೆಕ್ಕವೇನೋ ಸಿಕ್ಕಿತು. ಆದರೆ ಒಟ್ಟು ಪರಿಸರದ ಮೇಲೆ ಆದ ಪರಿಣಾಮವೇನು? ಯಾರಿಗೂ ತಿಳಿಯಲಿಲ್ಲ. ಆ ಕಳೆನಾಶಕವನ್ನು ತಯಾರಿಸಿದ-ವಿತರಿಸಿದ ಕಂಪೆನಿಗಳೂ ಶಿಕ್ಷೆಗೊಳಗಾಗಲಿಲ್ಲ. ಈಗ ನಮ್ಮ ಕಣ್ಣೆದುರಿಗೇ ‘ಎಂಡೋಸಲ್ಫಾನ್’ ಎಂಬ ಕೀಟನಾಶಕದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಪ್ರಚಾರ ನಡೆದಿದ್ದರೂ ಅದನ್ನು ತಯಾರಿಸುವ ಕಂಪೆನಿಯ ಕೂದಲೂ ಕೊಂಕಿಲ್ಲ!

ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುತ್ತ-ನಿಯಂತ್ರಿಸುತ್ತ ನಗರ ಪ್ರದೇಶಗಳಲ್ಲಿ ಸುದ್ದಿ ಮಾಡುತ್ತಿರುವ ನಮ್ಮ ಸರ್ಕಾರಿ  ಅಧಿಕಾರಿಗಳು,  ಬಡ ಮೀನು ಮಾರಾಟಗಾರರಿಂದ ಸಣ್ಣ ವ್ಯಾಪಾರಿಗಳಿಂದ ಪ್ಲಾಸ್ಟಿಕ್ ಚೀಲಗಳನ್ನು ಕಿತ್ತು ದಂಡ ಹಾಕುತ್ತ ಸುದ್ಧಿ ಶೂರರಾಗುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಖಂಡಿತ ಬೇಕು. ಆದರೆ ಇವರು ಅದನ್ನು ತಯಾರಿಕಾ ಹಂತದಲ್ಲೇಕೆ ನಿಷೇಧಿಸುತ್ತಿಲ್ಲ? ಅದರೊಂದಿಗೆ ಅದಕ್ಕಿಂತಲೂ ಮುಖ್ಯವಾದ ಮತ್ತು ಹೆಚ್ಚು ಅಪಾಯಕಾರಿಯಾದ ಇತರೆ ಮಾಲಿನ್ಯಗಳ ಬಗ್ಗೆ ಈ ಅಧಿಕಾರಿಗಳೇಕೆ ಕ್ರಮ ಕೈಗೊಳ್ಳುತ್ತಿಲ್ಲ?

ಯಾಕೆಂದರೆ ಈ ರೀತಿಯ ಅಧ್ವಾನಗಳಿಗೆ ಅಧಿಕಾರಿಗಳು ಮಾತ್ರವೇ ಕಾರಣರಲ್ಲ. ಆಡಳಿತಗಾರರಲ್ಲಾಗಲೀ ನೀತಿ ನಿರೂಪಕರಾದ ನಮ್ಮ ಜನ ಪ್ರತಿನಿಧಿಗಳಲ್ಲಾಗಲೀ ಯಾವುದೇ ಖಚಿತ ನೀತಿಯಾಗಲೀ ಸಮಗ್ರ ದೃಷ್ಟಿಕೋನವಾಗಲೀ ಇರುವುದು ವಿರಳ. ಯಾವುದೇ ವಿಷಯದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಜನರಿಂದ ಪ್ರತಿರೋಧ ಬಂದರೆ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ,  ಸರ್ಕಾರ ಎಚ್ಚರವಾಗುತ್ತದೆ. ಆದರೆ ಏನು ಮಾಡಬೇಕೆಂದು ಸ್ಪಷ್ಟತೆಯಾಗಲಿ ಅಥವಾ ಅದಕ್ಕೆ ತಕ್ಕ ಸಿದ್ದತೆಯಾಗಲಿ ಇಲ್ಲದಿರುವುದರಿಂದ ತುರ್ತಾಗಿ ಯಾರಾದರೂ ಐ.ಎ.ಎಸ್ ಅಧಿಕಾರಿಗಳೋ ಇನ್ನಿತರರೋ ಈ ಬಗ್ಗೆ ಒಂದು ಕಾರ್ಯಕ್ರಮವನ್ನು ರೂಪಿಸುತ್ತಾರೆ.  ಆ ಕಾರ್ಯಕ್ರಮಕ್ಕಾಗಿ ಒಂದಷ್ಟು ಹಣ ಮಂಜೂರಾಗುತ್ತದೆ. ಅಷ್ಟರಲ್ಲೇ ಆ ಕಾರ್ಯಕ್ರಮದಿಂದ ಲಾಭಪಡೆದವರು ದೊಡ್ಡ ಪ್ರಚಾರವನ್ನು, ಲಾಭ ದೊರೆಯದವರೋ, ಅಥವಾ ವಿರೋಧ ಪಕ್ಷದವರೋ ಅವ್ಯಾಹತ ಟೀಕೆಯನ್ನು  ಪ್ರಾರಂಭಿಸುತ್ತಾರೆ. ಸ್ವಲ್ಪ ಸಮಯದಲ್ಲೇ ಸರ್ಕಾರ ಇಂತಹದೇ ಇನ್ನೊಂದು ಕಾರ್ಯಕ್ರಮವನ್ನು ಪ್ರಾರಂಭಿಸಿರುತ್ತದೆ. ಆ ವೇಳೆಗಾಗಲೇ ಹಳೆಯ ಕಾರ್ಯಕ್ರಮವನ್ನು ಜನರು ಮರೆತಿರುತ್ತಾರೆ. ಉದಾ: ದಶಕಗಳಿಂದ ನಡೆಯುತ್ತಿರುವ ನಮ್ಮ ರಾಷ್ಟ್ರೀಯ ಸಾಕ್ಷರತಾ ಆಂದೋಲನವನ್ನು ನೆನಪಿಸಿಕೊಳ್ಳಿ.

ಕೃಷಿಯಲ್ಲಿ ಯಾವುದೇ ಹೊಸ ಬದಲಾವಣೆಯನ್ನು ಮಾಡುವುದು ಅಥವಾ ಹೊಸ ವಸ್ತುವನ್ನು ಬಳಕೆಮಾಡುವುದನ್ನು ಆರಂಭಿಸುವುದಾದರೆ, (ಇದು ಪ್ರಕೃತಿಯ ಎಲ್ಲ ಜೀವರಾಶಿಗಳ ವಿಚಾರದಲ್ಲು ಅನ್ವಯವಾಗುತ್ತದೆ) ಅದಕ್ಕೆ ಹಲವು ವರ್ಷಗಳ ತಾಳ್ಮೆಯ ಅಧ್ಯಯನ, ಪ್ರಯೋಗ ಮತ್ತು ವಸ್ತುನಿಷ್ಟ ಮೌಲ್ಯಮಾಪನದ ಅಗತ್ಯವಿದೆ. ಬಹುವಾರ್ಷಿಕ ಬೆಳೆಗಳ ವಿಚಾರದಲ್ಲಂತೂ ಇದು ಹೆಚ್ಚು ಅಗತ್ಯ. ಯಾಕೆಂದರೆ ಬಹುವಾರ್ಷಿಕ ಬೆಳೆಗಳ ಮೇಲೇನಾದರೂ ಪ್ರತಿಕೂಲ ಪರಿಣಾಮವಾದರೆ ಸರಿಪಡಿಸಿಕೊಳ್ಳಲು ವರ್ಷಗಳೇ ಬೇಕು. ಆದ್ದರಿಂದ ಈ ಕಂಪೆನಿಗಳು ಮತ್ತವರ ಮಾರಾಟಗಾರರು ಹೇಳಿದ್ದನ್ನೇ ನಂಬಿಕೊಂಡು ಕೂರದೆ, ಯಾವುದೇ ಹೊಸ ಪದ್ಧತಿಯನ್ನೋ, ಹೊಸವಸ್ತುನ್ನೋ ಬಳಸುವುದು ಅನಿವಾರ್ಯವಾದಾಗ ಇಲ್ಲವೇ ಹೊಸ ಪ್ರಯೋಗ ಮಾಡುವಾಗ ಸಣ್ಣ ಪ್ರಮಾಣದಲ್ಲಿ-ಸಣ್ಣಪ್ರದೇಶದಲ್ಲಿ ಪ್ರಯೋಗಮಾಡಿ ನೋಡುವುದು ಒಳ್ಳೆಯದು.

ನಮ್ಮ ಜಿಲ್ಲೆಯ ದೊಡ್ಡ ಕಾಫಿ ತೋಟವೊಂದರ ಮ್ಯಾನೇಜರ್ ಒಬ್ಬರು ವಿದೇಶಕ್ಕೆ- ಕಾಫಿಬೆಳೆಯುವ ದೇಶಗಳಿಗೆ ಹೋದರು. ವರ್ಷವಿಡೀ ಮಳೆಬೀಳುವ ಹೆಚ್ಚುಕಾಲ ಮೋಡದ ವಾತಾವರಣವಿರುವ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾ ದೇಶಗಳ ಕೆಲವು ಭಾಗಗಳಲ್ಲಿ  ಕಾಫಿಯನ್ನು ನೆರಳಿಲ್ಲದೆ ಬಯಲಿನಲ್ಲಿ ಬೆಳೆಯುತ್ತಾರೆ. ಅದನ್ನು ನೋಡಿದ ಮ್ಯಾನೇಜರ್ ಸಾಹೇಬರು ಇಲ್ಲಿ ಬಂದು ‘ಕಾಫಿಗೆ ನೆರಳಿನ ಅಗತ್ಯವೇ ಇಲ್ಲ. ಮರಗಳನ್ನೆಲ್ಲಾ ಕಡಿಸಿದರೆ ತೋಟ ನಿರ್ವಹಣೆಯ ಖರ್ಚುನಲ್ಲಿ ಎಷ್ಟೋ ಉಳಿತಾಯವಾಗುತ್ತದೆ’ ಎಂದು ವರ್ಷದಲ್ಲಿ 4-5 ತಿಂಗಳು ಮಾತ್ರವೇ ಮಳೆ ಬೀಳುವ ನಮ್ಮ ಈ ಪ್ರದೇಶದಲ್ಲಿನ ತೋಟದ ಮರಗಳನ್ನೆಲ್ಲಾ ಕಡಿಸಿದರು! ತೋಟ ಸಂಪೂರ್ಣವಾಗಿ ನಾಶವಾಯ್ತು. ಮತ್ತೊಮ್ಮೆ ನೆರಳು ಮರಗಳನ್ನು ನೆಟ್ಟು ಬೆಳೆಸಿ ಹಲವು ವರ್ಷಗಳ ನಂತರ ಈಗ ಅಲ್ಲಿ  ತೋಟ ಎಬ್ಬಿಸಿದ್ದಾರೆ. ಭಾರತದ ಕಾಫಿ ತೋಟಗಳ ಚರಿತ್ರೆಯನ್ನವರು ಸ್ವಲ್ಪ ಅಭ್ಯಾಸ ಮಾಡಿದ್ದರೆ, ಈ ಹಿಂದೆಯೇ ಕೊಡಗಿನಲ್ಲಿ ಅಂದರೆ ಈ ಶತಮಾನದ ಆದಿಭಾಗದಲ್ಲೇ ಕೆಲವರು ಬ್ರಿಟಿಷ್ ಕಾಫಿ ಬೆಳೆಗಾರರು ಈ ಪ್ರಯೋಗ ಮಾಡಿ ಕೈ ಸುಟ್ಟುಕೊಂಡದ್ದು ತಿಳಿಯುತ್ತಿತ್ತು.

ಹೀಗೆ ನಮ್ಮ ಹಿರಿಯರು ಇಷ್ಟು ವರ್ಷಗಳಿಂದ ಏನೇನು ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ, ಈ ಪದ್ಧತಿಗಳು ಯಾಕೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ? ಎಂದೆಲ್ಲಾ ಯೋಚಿಸದೆ ನಮ್ಮ ಪಾರಂಪರಿಕ ಜ್ಞಾನವನ್ನೆಲ್ಲಾ ಕಡೆಗಣಿಸಿ ನಮ್ಮ ಹಿರಿಯರಿಗೆಲ್ಲ ಬುದ್ಧಿಯೇ ಇರಲಿಲ್ಲವೆಂದುಕೊಂಡು ಏನೇನೋ ಮಾಡಹೊರಟರೆ ಅನಾಹುತ ತಪ್ಪಿದ್ದಲ್ಲ. ನನ್ನ ಅನುಮಾನ ನಿಜವಾಗುತ್ತಿದೆ. ಸರ್ಕಾರ ಸಾವಯವ ಕೃಷಿ ಅಭಿವೃದ್ಧಿಗಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಿ ಪ್ರತಿ ಜಿಲ್ಲೆಗೊಂದು ಸಂಘಟನೆ ಅಥವಾ ವ್ಯಕ್ತಿಗಳಿಗೆ ಇದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ವಹಿಸಲಿದೆಯೆಂದು ಸುದ್ದಿ ಬಂದಿದೆ. ಈ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಆಯ್ಕೆಗೆ ಸರ್ಕಾರ  ಯಾವ ಮಾನದಂಡ ಬಳಸಿದೆಯೆಂದು ಗೊತ್ತಿಲ್ಲ. ಈ ಸಂಸ್ಥೆ ಅಥವಾ ವ್ಯಕ್ತಿಗಳು ಸುಮಾರು ಐದು ನೂರು ಎಕರೆ ವಿಸ್ತೀರ್ಣ ಕೃಷಿಭೂಮಿ ಇರುವಂತಹ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಸಾವಯವ ಕೃಷಿಗೆ ಒಳಪಡಿಸಿ ಅಧ್ಯಯನ, ಪ್ರಚಾರ ಇತ್ಯಾದಿಗಳಲ್ಲಿ ತೊಡಗುವುದು ಈ ಯೋಜನೆಯ ಉದ್ದೇಶ. ಈ ತಲೆಕೆಳಗಾದ ಯೋಜನೆಗೆ ಸಲಹೆ ನೀಡಿದವರು ಯಾರೋ ತಿಳಿಯದು.

ಸರ್ಕಾರ ನಿಜವಾದ ಕಾಳಜಿ ಇದ್ದರೆ ಈ ರೀತಿ ಪ್ರತಿಜಿಲ್ಲೆಯಲ್ಲೂ ಪ್ರಯೋಗ ನಡೆಸಬೇಕಾದ್ದು ಸಾವಯವ ಕೃಷಿಯ ಬಗ್ಗೆ ಅಲ್ಲ. ಒಂದಷ್ಟು ಜನ ವಿಜ್ಞಾನಿಗಳು, ಪರಿಸರ ತಜ್ಞರು,  ಆರ್ಥಿಕತಜ್ಞರು,  ಆಡಳಿತಗಾರರು,  ಜೊತೆಗೆ ಖಡ್ಡಾಯವಾಗಿ ಕೆಲವರು ಪಾರಂಪರಿಕ ಕೃಷಿಕರು ಇವರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ, ಆ ಸಮಿತಿಯ ಉಸ್ತುವಾರಿಯಲ್ಲಿ ಆಧುನಿಕ ಕೃಷಿಯಬಗ್ಗೆ,  ಅದರ ಒಳಸುರಿಗಳ ಬಗ್ಗೆ ವಸ್ತು ನಿಷ್ಟವಾದ ಅಧ್ಯಯನಮಾಡಿ ಮೌಲ್ಯಮಾಪನ ನಡೆಸಿ, ಹೊಸತಳಿಗಳು ಕೃಷಿವಿಷಗಳು ಇನ್ನಿತರ ಯಾವುದೇ ಒಳಸುರಿಗಳಿಗೆ ಸಾವಯವ ಪರ್ಯಾಯಗಳನ್ನು ಹುಡುಕಬೇಕು. ಇನ್ನೊಂದು ಮುಖ್ಯವಾದ ವಿಚಾರವೆಂದರೆ ಈಗ ಸಾವಯವ, ಪರಿಸರಸ್ನೇಹಿ,  ಆಯುರ್ವೇದ , ಇತ್ಯಾದಿ ಹೆಸರುಗಳಲ್ಲಿ ಬರುತ್ತಿರುವ ವಸ್ತುಗಳ ಬಗ್ಗೆಯೂ ಮೌಲ್ಯಮಾಪನ ನಡೆಸಿ ಅದರ ಗುಣಾವಗುಣಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದೇ ವಸ್ತುವಿನ ಬಗ್ಗೆ ನಡೆಸಿದ ಪ್ರಯೋಗಗಳಲ್ಲಿ ಭಿನ್ನವಾದ ಅಭಿಪ್ರಾಯಗಳಿದ್ದರೆ, ಇನ್ನೂ ಹೆಚ್ಚಿನ ಪ್ರಯೋಗಕ್ಕೆ ಒಳಪಡಿಸಬೇಕು. ಈ ಎಲ್ಲ ಪ್ರಯೋಗಳ ವಿವರಗಳು ಕೃಷಿಕರಿಗೆ ಲಭ್ಯವಗಾಬೇಕು. ಈ ಪ್ರಕ್ರಿಯೆ ನಿರಂತರವಾಗಿದ್ದು ಆಧುನಿಕ ಜ್ಞಾನವನ್ನು ಪಾರಂಪರಿಕ ಜ್ಞಾನದೊಂದಿಗೆ ಮೇಳೈಸಿ ನಮ್ಮ ಕೃಷಿ ಪದ್ಧತಿಗಳಿಂದ ಪರಿಸರದ ಮೇಲಾಗುವ ಹಾನಿಯನ್ನು ಕನಿಷ್ಟ ಮಟ್ಟಕ್ಕಿಳಿಸುವ ಪ್ರಯತ್ನ ನಿರಂತರವಾಗಬೇಕು.

ಈ ಕಾರ್ಯದಲ್ಲಿ ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು ಇದರೊಂದಿಗೆ ಸೇರಿ ಕೆಲಸ ಮಾಡಿ ಸರಿಯಾದ ಮಾಹಿತಿ ನೀಡುವಂತೆ ಸಾರ್ವಜನಿಕರು ಸರ್ಕಾರ  ಮೇಲೆ ಮತ್ತು ಈ ವಿಜ್ಞಾನ ಕೇಂದ್ರಗಳ ಮೇಲೆ ಒತ್ತಡ ತರಬೇಕು. ಈ ರೀತಿಯಲ್ಲಿ ಸಂಶೋಧನಾ ಕೇಂದ್ರಗಳನ್ನೊಗೊಂಡ ಸಮಿತಿಯಿಂದ ಮೌಲ್ಯಮಾಪನವಾಗದ ಯಾವುದೇ ಹೊಸ ವಸ್ತುವನ್ನು ಮಾರಾಟಕ್ಕೆ-ಬಳಕೆಗೆ ತರಬಾರದು. ಅನಂತರವೂ ಬಳಕೆಯ ಸಂದರ್ಭದಲ್ಲಿ ಏನಾದರೂ ತೊಂದರೆ ಕಂಡು ಬಂದರೆ ಅದನ್ನು ತಯಾರಿಸಿದ ಕಂಪೆನಿ ಮತ್ತು ಮೌಲ್ಯಮಾಪನ ಮಾಡಿದ ಸಂಸ್ಥೆಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು. ಹಾಗಾದಲ್ಲಿ ಭೂಮಿಗೆ ವಿಷವುಣಿಸುವ ಪ್ರಮಾಣ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದೀತು.

ಸರ್ಕಾರ ಈಗ ಮಾಡುತ್ತಿರುವ ಯೋಜನೆ ಕೇವಲ ‘ಶೋಕೇಸ್’ನಲ್ಲಿಟ್ಟ ಸಾವಯವ ಕೃಷಿ ಆದೀತು. ನಗರ ಮಧ್ಯದ  ರೆಸಾರ್ಟ್ ಳಲ್ಲಿ ಹಾಕಿದ ಹಳ್ಳಿಯ ಸೆಟ್ನಂತೆ ಅಥವಾ ಇತ್ತೀಚೆಗೆ ಕೃಷಿಮೇಳಗಳಲ್ಲಿ ಕಾಣಸಿಗುವ ‘ಭತ್ತಕುಟ್ಟವುದು,  ಮೊರದಲ್ಲಿ ಕೇರುವುದು, ರಾಟಾಳ ಯಂತ್ರದಲ್ಲಿ ಮರಗೆಲಸ’ ಇತ್ಯಾದಿಗಳನ್ನೊಳಗೊಂಡು ‘ಜಾತ್ರೆಸ್ಟಾಲ್’ಗಳಂತೆ ಕಂಗೊಳಿಸಿ ಮತ್ತೊಂದಷ್ಟು  ಸರ್ಕಾರಿ ಪರಿಸರ ಪ್ರಿಯರನ್ನು ಹುಟ್ಟುಹಾಕಲು ನೆರವಾದೀತು.

ಈ ಯೋಜನೆಗೆ ಅಥವಾ ಯಾವುದೇ ಯೋಜನೆಗೆ ಆರ್ಥಿಕ ತಜ್ಞರುಗಳ ಅಗತ್ಯವನ್ನು ಹೇಳಿದೆ. ಆರ್ಥಿಕತಜ್ಞರೆಂದರೆ ನಮಗೆ ಈ ಕೆಲಸಕ್ಕೆ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಆರ್ಥಿಕ ತಜ್ಞರ ಅಗತ್ಯವೇನೂ ಇಲ್ಲ. ಆದರೆ ಯಾವುದೇ ಬೆಳೆಯಲ್ಲೂ ಕನಿಷ್ಟ ಖರ್ಚಿನೊಂದಿಗೆ ಪಡೆಯಬಹುದಾದ ಬೆಳೆಗಳು, ಅದರಿಂದ ಸಿಗಬಹುದಾದ ಕನಿಷ್ಟ ಲಾಭದ ಸರಳ ಲೆಕ್ಕಾಚಾರವನ್ನು ಮಾಡಬಲ್ಲವರ ಅಗತ್ಯ ಖಂಡಿತ ಇದೆ. ನಮ್ಮ ಕೃಷಿ ಆರ್ಥಿಕತೆಯಲ್ಲಿ 10-15 ವರ್ಷಗಳಷ್ಟು ಧೀರ್ಘಕಾಲದ ಅನುಭವಗಳಿಂದ ವಾರ್ಷಿಕ ಎಕರೆವಾರು ಸರಾಸರಿ ಆದಾಯ,  ಒಂದು ಸಣ್ಣ ಕುಟುಂಬಕ್ಕೆ ಸಾಧಾರಣ ಮಟ್ಟದ ಜೀವನ ನಡೆಸಲು ಅಗತ್ಯವಾಗುವ ಆದಾಯದ ಪ್ರಮಾಣ, ಇದನ್ನೆಲ್ಲ ಗಮನಿಸಿ ಮಾಡಬಹುದಾದ ಕೃಷಿ ಮತ್ತು ಅದಕ್ಕೆ ಅಗತ್ಯವಾದ ಹಿಡುವಳಿಯ ಗಾತ್ರ ಇವುಗಳನ್ನೆಲ್ಲ ಅಂದಾಜು ಮಾಡಬಲ್ಲವರಿರಬೇಕು. ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದು. ಈ ರೀತಿಯ ಲೆಕ್ಕಾಚಾರಗಳನ್ನು ಮಾಡಬಲ್ಲ ಜನರು ಖಂಡಿತವಾಗಿ ನಮ್ಮ ನಡುವೆಯೇ ಇದ್ದಾರೆ. ಆದರೆ ಈ ಎಲ್ಲ ಕೆಲಸಗಳನ್ನು ಯಾವುದೇ ಸರ್ಕಾರ ಮಾಡೀತೆಂದು ನಿರೀಕ್ಷಿಸುವುದೇ ನಮ್ಮ ಮೂರ್ಖತನವಿರಬಹುದು!

ನಮ್ಮ ಕೃಷಿ ಉದ್ದಿಮೆದಾರರು, ಅಂದರೆ ಇವರು ನಿಜವಾದ ರೈತರಲ್ಲ- ಕೃಷಿಯನ್ನು ಒಂದು ಉದ್ದಿಮೆಯನ್ನಾಗಿ ನಡೆಸುವವರು. ಇವರಲ್ಲಿ ದೊಡ್ಡ ಕಾಫಿ, ಟೀ, ರಬ್ಬರ್ ಬೆಳೆಗಾರರು, ದೊಡ್ಡ ಪ್ರಮಾಣದ ಬೀಜ ಉತ್ಪಾದಕರು. ನೂರಾರು ಎಕರೆ ಕಬ್ಬು, ಹತ್ತಿ, ಬೆಳೆಯುವವರು, ಹೈಟೆಕ್ ಕೃಷಿಯ ಫಲ ಪುಷ್ಪ ಬೆಳೆಯುವವರು ಇದ್ದಾರೆ. ಇವರು ಹೂಡುವ ಭಂಡವಾಳವೂ ಕೋಟಿಗಳ ಲೆಕ್ಕದಲ್ಲಿರುತ್ತದೆ. ಇವರು ಕೃಷಿಯನ್ನು ಉದ್ದಿಮೆಯೆಂದೇ ಪರಿಗಣಿಸಿ  ಮ್ಯಾನೇಜ್ ಮೆಂಟ್ ಶಿಸ್ತಿಗೆ ಅಳವಡಿಸಿ ಶುದ್ಧ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಸಮರ್ಥವಾಗಿ ನಡೆಸಲು ಪ್ರಯತ್ನಿಸುತ್ತಾ ಇರುವುದರಿಂದ, ಕಡಿಮೆ ಮಾನವ ಶ್ರಮದ ಬಳಕೆ- ಹೆಚ್ಚು ಯಾಂತ್ರೀಕರಣದ ಕಡೆಗೇ ಒಲವುಳ್ಳವರಾಗಿರುತ್ತಾರೆ.

ಆದ್ದರಿಂದ ಈ ದೊಡ್ಡ ಕೃಷಿ ಉದ್ಯಮಿಗಳು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪರಿಸರದ ಬಗ್ಗೆ, ನೆಲ-ಜಲಗಳ ಬಗ್ಗೆ ಕಾಳಜಿಯನ್ನು ಅದೂ ಕೂಡಾ ಹೊರಗಿನ ಒತ್ತಡಗಳಿಗೆ ಮಣಿದು ವಹಿಸುತ್ತಾರೆಯೇ ವಿನಃ ಸ್ವಯಂ ಸ್ಪೂರ್ತಿಯಿಂದಲ್ಲ.  ವಿಪರ್ಯಾಸವೆಂದರೆ ಅನೇಕ ಬಾರಿ ಪ್ರತಿಷ್ಟಿತ ಕ್ಲಬ್ ನಲ್ಲಿ ಪರಿಸರ ಸಂರಕ್ಷಣೆಯಬಗ್ಗೆ ನಡೆಯುವ ಸಭೆ- ವಿಚಾರಸಂಕಿರಣಗಳಿಗೆ ಇವರಲ್ಲಿ ಕೆಲವರು ಪ್ರಾಯೋಜಕರೂ ಆಗಿರುತ್ತಾರೆ! ಈ ಕೃಷಿ ಉದ್ಯಮಿಗಳಲ್ಲಿ ಹೆಚ್ಚಿನವರಿಗೆ ಬೇರೆ ಅನೇಕ ಉದ್ಯಮಗಳಿವೆ. ಇವರಿಗೆ ಕೃಷಿ ಇವರ ಒಟ್ಟು ವ್ಯವಹಾರಗಳ ಒಂದು ಭಾಗ ಮಾತ್ರವಾಗಿದ್ದು ಕೃಷಿಯಿಂದಲೇ ಬದುಕಬೇಕಾದ ಅನಿವಾರ್ಯತೆಯಲ್ಲಿ ಇವರು ಇಲ್ಲ.

ಆದರೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ಮತ್ತು ಮಧ್ಯಮ ಕೃಷಿಕರು ಹಾಗೂ ಕೃಷಿ ಕೂಲಿಗಾರರ ಪರಿಸ್ಥಿತಿಯೇ ಬೇರೆ. ಇವತ್ತು ಮೆಣಸಿನಕಾಯಿಯನ್ನೋ ತರಕಾರಿಯನ್ನೋ ಬೆಳೆಯುತ್ತಿರುವ ರೈತನನ್ನು ನೋಡಿದಾಗ ಕೊಂಡು ತಿನ್ನುವವನೇ ಸುಖಿ ಎನ್ನಿಸಿದರೆ ಆಶ್ಚರ್ಯವಿಲ್ಲ. ಹೀಗಾಗಿ ರೈತರು ಅದು ಸಾಂಪ್ರದಾಯಿಕವೋ, ಸಾವಯವವೋ, ಇಲ್ಲ ಆಧುನಿಕವೋ ಇತ್ಯಾದಿಗಳ ಗೋಜಿಗೆ ಹೋಗದೆ ಎಲ್ಲಿ ಕಾಸು ಸಿಗುತ್ತದೆಯೋ ಅಲ್ಲಿಗೆ, ಅದು ಶುಂಠಿಯೋ ಬಜೆಯೋ ಅರಶಿನವೋ ಅಥವಾ ಅವನಿಗೆ ಸಂಬಂಧವೇ ಇಲ್ಲದ ಇನ್ನೇನೋ ಬೆಳೆಯೋ ಯಾವುದೇ ಆಗಲಿ, ಎಂಥ ಘನಘೋರ ವಿಷವಾಗಲಿ ತಂದು ಸುರಿದು ಬೆಳೆ ಬೆಳೆಯಲು ಮುನ್ನುಗ್ಗುತ್ತಾರೆ. ಅದಕ್ಕಾಗಿ ನಾಳಿನ ಚಿಂತೆ ಮರೆತು ಮನೆಯನ್ನೋ, ಜಮೀನನ್ನೋ, ಇದ್ದರೆ ಇದ್ದ ಚಿನ್ನವನ್ನೋ ಅಡವಿಟ್ಟು ಲೇವಾದೇವಿಗಾರರಿಂದ ಅಧಿಕ ಬಡ್ಡಿಯ ಸಾಲ ಪಡೆದು ಕೃಷಿಗಿಳಿಯುತ್ತಾರೆ. ಏನಾದರೂ ಹೆಚ್ಚು ಕಮ್ಮಿಯಾದಲ್ಲಿ ಹೇಗೂ ಕೃಷಿಗೆ ತಂದ ವಿಷವಂತೂ ಇದ್ದೇ ಇದೆ ಕುಡಿಯಲು!

(ಮುಂದುವರೆಯುವುದು)

(ಚಿತ್ರಕೃಪೆ: ವಿಕಿಪೀಡಿಯ)

ನಮ್ಮ ಪರಿಸರ – ನೆಲ ಜಲ : 1