Category Archives: ಭಾರತಿ ದೇವಿ

ಗಾಂಧಿ ಜಯಂತಿ ಕಥಾಸ್ಪರ್ಧೆ 2015 : ತೀರ್ಪುಗಾರರ ಮಾತು

– ಭಾರತೀದೇವಿ.ಪಿ

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ವರ್ತಮಾನ ನಡೆಸುವ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದ ಒಟ್ಟು 23 ಕತೆಗಳನ್ನು ಓದುವಾಗ ನನಗೆ ತೀವ್ರವಾಗಿ ಕಾಡಿದ್ದು ಕತೆಗಳ ಕುರಿತಾದ ನಮ್ಮ ಪೂರ್ವಗ್ರಹೀತಗಳು ಯಾವ ಯಾವ ಬಗೆಯಲ್ಲಿ ನಮ್ಮ ಪ್ರಜ್ಞೆಯಲ್ಲಿ ಬೇರೂರಿಬಿಟ್ಟಿವೆ ಮತ್ತು ಆ ಜಾಡಿನಲ್ಲಿ ಕತೆಗಾರ ಹೇಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂಬ ಸಂಗತಿಗಳು. ಕಾರಂತ, ತೇಜಸ್ವಿ, ಕುಂ.ವೀ, ವೈದೇಹಿ ಮೊದಲಾದವರ ಕಥಾಹಂದರಗಳು ಸರಳೀಕರಣಗೊಂಡು ಇಲ್ಲಿನ ಹಲವು ಕತೆಗಳಲ್ಲಿ ಕಾಣಿಸಿಕೊಂಡಿವೆ.

ಅನುಭವಗಳ ದಟ್ಟತೆ ಇದ್ದ ಮಾತ್ರಕ್ಕೆ ಒಂದು ನೆರೇಷನ್ ಕತೆಯಾಗಿಬಿಡುತ್ತದೆಯೇ? ಕತೆಯೆಂದ ಕೂಡಲೇ ವರ್ತಮಾನಕ್ಕೆ ಮುಖಾಮುಖಿಯಾಗುವುದಕ್ಕಿಂತ ಹೆಚ್ಚಾಗಿ ಬಾಲ್ಯದ, ಗ್ರಾಮ್ಯ ಜಗತ್ತಿಗೆ ಉತ್ಸಾಹದಿಂದ ಹೊರಳುವುದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ವಿಶಿಷ್ಟ ಸೊಗಡಿನ ಭಾಷೆಯಿದ್ದ ಮಾತ್ರಕ್ಕೆ ಕತೆ ಶ್ರೀಮಂತವಾಗಿಬಿಡುತ್ತದೆಯೇ? ಪೂರ್ವನಿರ್ಧರಿತ ವಿಷಯಗಳನ್ನು gandhi-katha-spardge-2015ತಿಳಿಯಪಡಿಸುವುದಕ್ಕೆ ಕತೆಯ ಹಂದರವನ್ನು ಹೆಣೆಯುವುದು ಕತೆಯ ಸಾಧ್ಯತೆಯನ್ನೇ ಕುಂಠಿತಗೊಳಿಸುವುದಿಲ್ಲವೇ? ಐಡಿಯಾಲಜಿಯನ್ನು ತಿಳಿಯಪಡಿಸುವುದಕ್ಕೆ ಹೆಣೆಯುವ ಕತೆಯ ಆವರಣ ಸೃಜನಶೀಲ ಬರಹದ ಸೀಮೆಗಳನ್ನು ನಿರ್ಬಂಧಿಸುವುದಿಲ್ಲವೇ?

ಹೀಗೆ ನೋಡಿದಾಗ ಕತೆಯ ಕಸುಬುಗಾರಿಕೆ ಸಿದ್ಧಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಹೆಣೆದ ಕತೆಗಳಿಗಿಂತ ತುಸು ಒರಟು, ಹಸಿ ಎನಿಸಿದರೂ ಬದುಕಿನ ಅನಂತ ಸಾಧ್ಯತೆಗಳ ಕಿಟಕಿಯನ್ನು ತೆರೆದೇ ಇರಿಸಿಕೊಂಡ ಕತೆಗಳು ಆಪ್ತವಾಗುತ್ತವೆ. ಕತೆಯನ್ನು ಹೇಳುವ ಪ್ರಕ್ರಿಯೆಯಲ್ಲೇ ಕತೆ ಮತ್ತು ಕತೆಗಾರ ಜೊತೆಜೊತೆಗೇ ತಮಗೇ ಅರಿಯದ ಬದುಕಿನ ಅಜ್ಞಾತಗಳನ್ನು ತಟ್ಟುತ್ತಾ ಸಾಗುವ ಕ್ರಿಯೆ ಎಲ್ಲೆಲ್ಲಿ ಕಾಣುತ್ತದೋ ಅಂತಹ ಕತೆಗಳು ಓದುಗನಿಗೂ ಬದುಕಿನ ಸಂಕೀರ್ಣತೆಯ ದರ್ಶನ ಮಾಡಿಸುತ್ತವೆ. ಅವು ಪ್ರಾದೇಶಿಕತೆ, ವ್ಯಕ್ತಿ, ತತ್ವಗಳ ಮೇರೆ ಮೀರಿ ಎಲ್ಲರ ಕತೆಗಳೂ ಆಗಿಬಿಡುತ್ತವೆ. ಈ ದಿಕ್ಕಿನಲ್ಲಿ ಇಲ್ಲಿನ ಕೆಲವು ಕತೆಗಳು ಇವೆ.

ಸ್ಪರ್ಧೆಗೆ ಬಂದಿರುವ ಒಟ್ಟು 23 ಕತೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದ ಕತೆ ಶಾಂತಿ.ಕೆ.ಎ ಅವರ ‘ಪಯಣ’. ಬದುಕಿನ ಸಂಕೀರ್ಣತೆ ಸಮಾಜದ ಸೀಮಿತ ನೈತಿಕ ಸೀಮೆಗಳನ್ನು ಮೀರಿದ್ದು. ಯಾವ ತೀರ್ಮಾನ, ಪಶ್ಚಾತ್ತಾಪ ಅಥವಾ ಹಲುಬುವಿಕೆಗಳಿಲ್ಲದೆ ಬದುಕಿನ ವರ್ತಮಾನವನ್ನು ತೀವ್ರವಾಗಿ ಅನುಭವಿಸುವ ಬಗೆ ಈ ಕತೆಯಲ್ಲಿ ಮೂಡಿದೆ. ಇದು ಒಂದು ಬಗೆಯ ಎಚ್ಚರದ ಕನಸು. ಇದನ್ನು ಕಥನವಾಗಿಸುವ ಪ್ರಕ್ರಿಯೆಯಲ್ಲಿ ಅವರ ಭಾಷಾ ಬಳಕೆಯ ಸೂಕ್ಷ್ಮತೆ ಮತ್ತು ಎಚ್ಚರ ವಿಶಿಷ್ಟವಾಗಿದೆ.

ಎರಡನೇ ಬಹುಮಾನ ಗಳಿಸಿದ ಹನುಮಂತ ಹಾಲಿಗೇರಿ ಅವರ ‘ಹಾಳು ಸುಡುಗಾಡ ಬದುಕು’ ಕತೆ ವಿವರಗಳ ಮೂಲಕ ಅನುಭವವನ್ನು ತೀವ್ರವಾಗಿ ಕಟ್ಟಿಕೊಡುತ್ತದೆ.  ಬದುಕು ಮತ್ತು ಧರ್ಮಗಳ ಅಸ್ತಿತ್ವದ ಹೊಯ್ದಾಟದಲ್ಲಿ ಹೆಣ ಸುಡುವ ಕಾಯಕ ನಡೆಸುವ ದರಿಯಜ್ಜನಂಥವರ ಬದುಕು ಚಿಂದಿಯಾಗುವುದನ್ನು ಕತೆ ಪರಿಣಾಮಕಾರಿಯಾಗಿ ಹೇಳುತ್ತದೆ. ಹೆಚ್ಚು ಸಂಕೀರ್ಣತೆಗೆ ವಾಲದೇ ದಟ್ಟ ವಿವರಗಳೇ ಈ ಕತೆಯ ಶಕ್ತಿಯಾಗಿದೆ.

ಮೂರನೇ ಬಹುಮಾನ ಗಳಿಸಿದ ಸಂವರ್ಥ ಸಾಹಿಲ್ ಅವರ ಕತೆ ‘ಮನ್ವಂತರ’ ಹಲವು ನೆಲೆಗಳಲ್ಲಿ ಬದುಕಿನ ಚಲನೆಯ ಗತಿಗೆ ಸೂಕ್ಷ್ಮವಾಗಿ ಪ್ರತಿಕ್ರಯಿಸುತ್ತದೆ. ಹಿಂದಿನ ತಲೆಮಾರಿನ ಜೀವ ಬದಲಾದ ಗತಿಗೆ ಸ್ಪಂದಿಸುತ್ತಾ, ಜೊತೆಗಿರುವವರ ಬಗ್ಗೆ ವಿಮರ್ಶಾತ್ಮಕವಾಗಿ ಇರುತ್ತಲೇ ಕೆಲವೊಂದು ವಿಚಾರಗಳಲ್ಲಿ ಹಳೆಯ ಜಾಡನ್ನು ಬಿಡದೆ ಒದ್ದಾಡುವ ಬಗೆಯನ್ನು ಸಂವರ್ಥ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇವರ ಜೊತೆ ಇವರಂತೆಯೇ ಭಿನ್ನ ಭಿನ್ನ ಗತಿಯಲ್ಲಿ ಸ್ಥಿತ್ಯಂತರಗಳಿಗೆ ಒಡ್ಡಿಕೊಳ್ಳುವ ಹಿರಿಯ, ಯುವ ಜೀವಗಳಿವೆ. ಈ ತೊಳಲಾಟಗಳನ್ನು, ಚಲನೆಯನ್ನು ದಾಖಲಿಸುವಲ್ಲಿ ಭಾಷೆಯ ಬಳಕೆ ಇನ್ನಷ್ಟು ಸೂಕ್ಷ್ಮವಾಗಿದ್ದರೆ ಕತೆಗೆ ವಿಸ್ತಾರವಾದ ಆಯಾಮ ದೊರೆಯುತ್ತಿತ್ತು. ಪಾತ್ರಗಳ ಸರಳೀಕರಣವಾಗುವುದು ತಪ್ಪುತ್ತಿತ್ತು.

ಮಹಾಂತೇಶ ನವಲ್‍ಕಲ್ ಅವರ ‘ಪಾಕಿಸ್ತಾನದಿಂದ ಪತ್ರ’ ದೇಶ ಇಬ್ಭಾಗವಾದಾಗ ಮನಸ್ಸುಗಳೂ ಒಡೆಯುತ್ತಾ ಹೇಗೆ ಸಹಜ ಮನುಷ್ಯ ಸಂಬಂಧಗಳ ಬಗೆಗೂ ಸಂವೇದನೆ ಕಳೆದುಕೊಂಡಿವೆ ಎಂಬುದನ್ನು ಹೇಳುತ್ತದೆ. ಮನಮುಟ್ಟುವಂತೆ ಕತೆಯ ನಿರೂಪಣೆ ಇದ್ದರೂ ಅದು ಕಾಣದ ದಾರಿಗಳನ್ನು ತಡಕುವ ಯತ್ನ ಮಾಡುವುದಿಲ್ಲ.

ಸ್ವಾಲಿಹ್ ತೋಡಾರ್ ಅವರ ‘ಉಡುಗೊರೆ’ ಹೊಟ್ಟೆಪಾಡಿಗಾಗಿ ಪರದೇಶದಲ್ಲಿ ಏನೆಲ್ಲ ಪಾಡು ಪಡುವ ಪುಡಿಮೋನು ಅರಬ್ ದೇಶಗಳ ಆಂತರಿಕ ಸಂಘರ್ಷಗಳಿಂದ ಬದುಕುವ ದಾರಿ ಕಳೆದುಕೊಂಡು ಊರಲ್ಲೂ ನೆಲೆ ಕಾಣದೆ ನಲುಗುವ ಕತೆ. ಧರ್ಮ, ಸ್ವಾರ್ಥಗಳ ಮೇಲಾಟದಲ್ಲಿ ಪುಡಿಮೋನುವಿನಂತಹ ಬಡವರ ಬದುಕು ಮೂರಾಬಟ್ಟೆಯಾಗುವುದು, ಪುಡಿಮೋನು ಉಳ್ಳವರನ್ನು ಅನುಕರಿಸ ಹೋಗಿ ಕೈಲಿದ್ದ ಅಲ್ಪಸ್ವಲ್ಪವನ್ನೂ ಕಳೆದುಕೊಳ್ಳುವುದು ಇವೆಲ್ಲವೂ ಓದುವಾಗ ವಿಷಾದ ಮೂಡಿಸುತ್ತದೆ. ಈ ಕತೆ ಓದುವಾಗ ಹಲವು ಕತೆಗಳ ನೆರಳು ಕಾಣುವುದು ಸುಳ್ಳಲ್ಲ.

ಇವು ಒಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ಇಲ್ಲಿನ ಕತೆಗಳನ್ನು ಓದಿದಾಗ ನನಗನಿಸಿದ ಸಂಗತಿಗಳು. ಕತೆಗಳ ಬಗ್ಗೆ ಹಿಂದೆಂದಿಗಿಂತ ಹೆಚ್ಚು ತಲೆಕೆಡಿಸಿಕೊಳ್ಳಲು ಕಾರಣವಾದ ಹಾಗೂ ವಿಭಿನ್ನ ಅನುಭವಗಳಿಗೆ ಒಡ್ಡಿಕೊಳ್ಳುವ ಅವಕಾಶವನ್ನು ಕತೆಗಳ ಓದಿನ ಮೂಲಕ ನೀಡಿದ ಎಲ್ಲ ಕತೆಗಾರರಿಗೆ ನಾನು ಆಭಾರಿ.

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015″ರ ಫಲಿತಾಂಶ

ಆತ್ಮೀಯರೇ,

ಎಲ್ಲರಿಗೂ 2015ರ “ಗಾಂಧಿ ಜಯಂತಿ”ಯ ಶುಭಾಶಯಗಳು.

ವರ್ತಮಾನ ಬಳಗ ಆಯೋಜಿಸಿದ್ದ ಈ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಸುಮಾರು 25 ಕತೆಗಳು gandhi-katha-spardge-2015ಬಂದಿದ್ದವು; ಅದರಲ್ಲಿ ಒಂದೆರಡು ಕತೆಗಳು ಇಲ್ಲಿ ಫಲಿತಾಂಶ ಪ್ರಕಟಣೆಗೆ ಮೊದಲೇ ಬೇರೆ ಕಡೆ ಪ್ರಕಟವಾದದ್ದು ನಮ್ಮ ಗಮನಕ್ಕೆ ಬಂದಿದ್ದರಿಂದ ಅವನ್ನು ಪರಿಗಣಿಸಲಾಗಿಲ್ಲ. ಈ ಸಾರಿಯ ತೀರ್ಪುಗಾರರು ಕವಿ, ಲೇಖಕಿ, ಮತ್ತು ಪ್ರಾಧ್ಯಾಪಕಿ ಭಾರತೀದೇವಿ.ಪಿ. ಈ ಜವಾಬ್ದಾರಿಯನ್ನು ನಿಭಾಯಿಸಲು ಒಪ್ಪಿಕೊಂಡ ಅವರಿಗೆ ವರ್ತಮಾನ ಬಳಗ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಅವರು ಆಯ್ಕೆ ಮಾಡಿರುವ ಉತ್ತಮ ಕತೆಗಳು ಹೀಗಿವೆ:

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ಕಥಾ ಸ್ಪರ್ಧೆಗೆ ತಮ್ಮ ಕತೆಗಳನ್ನು ಆಸಕ್ತಿಯಿಂದ ಕಳುಹಿಸಿ, ಈ ಕಥಾಸ್ಪರ್ಧೆಯನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಇಷ್ಟರಲ್ಲಿಯೇ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್

ಯಾರು ಕಳೆ..ಯಾವುದು ಬೆಳೆ..?

– ಭಾರತೀ ದೇವಿ.ಪಿ

ಜನರ ನಿಜವಾದ ಸಮಸ್ಯೆಗೆ ಉತ್ತರ ನೀಡುವುದು ಧರ್ಮದಿಂದ ಸಾಧ್ಯವೇ?

ಆಗ್ರಾದಲ್ಲಿ ಹಿಂದೂ ಸಂಘಟನೆ ‘ಘರ್ ವಾಪಸಿ’ ಎನ್ನುವ ಹೆಸರಿನಲ್ಲಿ ಬಡಜನರ ಅಸಹಾಯಕತೆಯನ್ನು ತಮ್ಮ ಧರ್ಮದ ಬೇಳೆ Agra Conversionಬೇಯಿಸಿಕೊಳ್ಳಲು ಬಳಸಿದ್ದು ದೊಡ್ಡ ಸುದ್ದಿಯಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ, ರೇಷನ್ ಕಾರ್ಡ್ ಗಾಗಿ ಅಥವಾ ಜೀವನೋಪಾಯಕ್ಕಾಗಿ ಮತವನ್ನೇ ಬದಲಾಯಿಸಲು ಒಂದುವೇಳೆ ಜನ ಸಿದ್ಧರಿರುವುದೇ ಆದಲ್ಲಿ, ಆ ಜನ ಅದರ ಮೂಲಕ ಮೌನವಾಗಿ ಸಾರುತ್ತಿರುವ ಸತ್ಯಕ್ಕೆ ನಮ್ಮ ಒಳಗಿವಿಗಳನ್ನು ತೆರೆದುಕೊಳ್ಳಬೇಕಾಗಿದೆ. ಇಲ್ಲಿ ಇವರು ಸಾರುತ್ತಿರುವ ಮಹತ್ವದ ವಿಚಾರ “ಮತಕ್ಕಿಂತ ಬದುಕು ಮುಖ್ಯ”. ಆದರೆ ಹೊಟ್ಟೆಬಟ್ಟೆಯ ಅಗತ್ಯಗಳನ್ನು ಮೀರಿ ದುರ್ವರ್ತನೆಗಳಿಗೆ ಇಳಿದ ಜನಕ್ಕೆ ತಮ್ಮ ಸೋದರರ ಬದುಕಿನ ಅಸಹಾಯಕತೆ ರಾಜಕೀಯವಾಗಿ, ಧಾರ್ಮಿಕವಾಗಿ ದಾಳದಂತೆ ಕಂಡದ್ದು ಮನುಕುಲದ ವಿಕೃತತೆಗೆ ಸಾಕ್ಷಿ.

ಇಂಥದ್ದೇ ಇನ್ನೊಂದು ಸಂಗತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. (ವಿ.ಕ. 01-02-2015) ಭಾರತೀಯ ಕ್ರೈಸ್ತರ ಒಕ್ಕೂಟ ವೇದಿಕೆಯ ಅಧ್ಯಕ್ಷ ಟಿ.ಜೆ.ಅಬ್ರಹಾಂ ಅವರು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಘರ್ ವಾಪಸಿಯನ್ನು ಸ್ವಾಗತಿಸುತ್ತಾ ಇದರಿಂದ ಕ್ರೈಸ್ತ ಧರ್ಮದ ಕಳೆ ನಿರ್ಮೂಲನೆ ಆಗಲಿ ಎಂದಿದ್ದಾರೆ. ಇವರು ‘ಕಳೆ’ ಎಂದಿರುವುದು ಬಡತನ,ಅಸ್ಪೃಶ್ಯತೆ ಒಡ್ಡಿದ ಅಸಹಾಯಕತೆಯಿಂದ ಕ್ರೈಸ್ತ ಧರ್ಮಕ್ಕೆ ಬಂದ ಜನರನ್ನು. vijaykarnataka-feb0115“ಯಾರು ಪಡಿತರ ಚೀಟಿ, ಆಧಾರ್ ಕಾರ್ಡ್, ಬೇಳೆ, ಹಾಲಿನ ಪುಡಿಗಾಗಿ ಧರ್ಮಗಳನ್ನು ಬದಲಿಸುತ್ತಾರೋ ಅಂಥವರ ಅಗತ್ಯತೆ ಕ್ರೈಸ್ತ ಧರ್ಮಕ್ಕೆ ಇಲ್ಲ. ಅವರು ಬೆಳೆಯಲ್ಲ, ಕಳೆ ಇದ್ದಂತೆ. ಅಂತಹ ಕಳೆಗಳನ್ನು ಕೀಳಬೇಕು ಎನ್ನುವಾಗಲೇ ಘರ್ ವಾಪಸಿ ಹೆಸರಿನಲ್ಲಿ ಕ್ರೈಸ್ತ ಧರ್ಮವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ” ಎಂದು ಪತ್ರಿಕಾಗೋಷ್ಟಿಯಲ್ಲಿ ನುಡಿದ ಇವರ ಮಾತುಗಳು ದಿಗಿಲು ಹುಟ್ಟಿಸುತ್ತವೆ. ದಯಾಮೂಲವಾಗಿ ಪಸರಿಸಿದ ಕ್ರೈಸ್ತಧರ್ಮದ ಧಾರ್ಮಿಕ ನಾಯಕ ಆಡಿರುವ ಈ ಮಾತುಗಳು ಧರ್ಮದ ಮೂಲ ಉದ್ದೇಶ ಉಳ್ಳವರನ್ನು ಪೋಷಿಸುವುದೇ ಆಗಿದೆ ಎಂಬುದನ್ನು ಶ್ರುತಪಡಿಸುವಂತಿವೆ.

ಧರ್ಮ ಮತ್ತು ಪ್ರಭುತ್ವ ಈ ಎರಡಕ್ಕೂ ಬಡವರು ‘ಕಳೆ’ಗಳಂತೆ ಕಾಣುತ್ತಿದ್ದಾರೆ ಎಂಬುದು ಕಳೆದ ಕೆಲವು ತಿಂಗಳುಗಳಿಂದ ತುಂಬಾ ಸ್ಪಷ್ಟವಾಗುತ್ತಿದೆ. ಇವರನ್ನು ಆಳಕ್ಕೆ ತಳ್ಳುವ ಈ ಧರ್ಮದ ಕೂಪಗಳು ಬೇರೆ ಬೇರೆ ಹೆಸರಿನಲ್ಲಿ ವಿಭಿನ್ನ ಮುಖಗಳಲ್ಲಿ ಕಾಣುತ್ತಿದ್ದರೂ ಜನರ ನಿಜವಾದ ಸಮಸ್ಯೆಗೆ ಉತ್ತರ ನೀಡುವುದು ಧರ್ಮದಿಂದ ಸಾಧ್ಯವೇ? ಎಂಬ ಪ್ರಶ್ನೆ ಎಲ್ಲರೂ ಮತ್ತೆ ಮತ್ತೆ ತಮ್ಮ ಸಾಮಾನ್ಯ ಜ್ಞಾನವನ್ನು ಅರಳಿಸಿಕೊಂಡು ಕೇಳಿಕೊಳ್ಳಬೇಕಾಗಿದೆ. ಕುವೆಂಪು ಹೇಳಿದSakshi Maharaj ‘ನೂರು ಮತದ ಹೊಟ್ಟತೂರಿ’ ಮನುಷ್ಯನಾಗಿ ಬದುಕುವ ಸಹಜತೆಗೆ ಮರಳಬೇಕಿದೆ. ಆಗ ಆಗ್ರಾದ ಬಡಜನ ತಮ್ಮ ಒಡಲ ಉರಿಯೊಳಗೆ ಹೊಳೆಯಿಸಿ ತೋರುತ್ತಿರುವ ದೊಡ್ಡ ಸತ್ಯ ಖಂಡಿತಾ ಎಲ್ಲರ ಅರಿವಿಗೆ ಬರುತ್ತದೆ.

ಲೈಂಗಿಕ ಶಿಕ್ಷಣ ಎಂಬ ವ್ಯಂಗ್ಯ ನಾಟಕ

ಭಾರತೀ ದೇವಿ. ಪಿ

ಒಂದೆಡೆ ಅತ್ಯಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಯೇ ಎಲ್ಲ ಕಡೆಗಳಲ್ಲೂ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಕೊಡುವುದರ ಬಗ್ಗೆ ಮಾತಾಡಲು ಶುರು ಮಾಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಬಿರುಸಿನಿಂದ ನಡೆಯುತ್ತಿವೆ. ಅನೇಕ ಸಂಘ ಸಂಸ್ಥೆಗಳು, ಇಲಾಖೆಗಳು ಈ ಹೊಣೆಯನ್ನು ಮುತುವರ್ಜಿಯಿಂದ ವಹಿಸಿಕೊಂಡು ಶಾಲಾ ಕಾಲೇಜುಗಳನ್ನು ಅರಸಿಕೊಂಡು ತಿರುಗಾಡುತ್ತಿವೆ. ಆದರೆ ಈ ಬಗೆಯ ಕಾರ್ಯಕ್ರಮಗಳ ಪೈಕಿ ಬಹುಪಾಲು ನಡೆಯುತ್ತಿರುವ ರೀತಿ ನೋಡಿದರೆ ನಗಬೇಕೋ ಅಳಬೇಕೋ ತಿಳಿಯದಂತಾಗಿದೆ.

ಇವು ಹೆಣ್ಣುಮಕ್ಕಳು ಯಾವ ಬಗೆಯ ಬಟ್ಟೆ ಹಾಕಿಕೊಳ್ಳಬೇಕು, sex-education-1ಎದುರಿಗೆ ಯಾರಾದರೂ ಬಂದಾಗ ಎಷ್ಟು ಸೆಂಟಿಮೀಟರ್ ನಗಬಹುದು, ಸಭ್ಯವರ್ತನೆ ಇವುಗಳ ಬಗ್ಗೆ ಉಪದೇಶ ನೀಡುವ ಅಧಿಕಾರಯುತ ಧ್ವನಿಯಲ್ಲಿ ಆರಂಭವಾಗುತ್ತವೆ. ಮೊದಲೇ ‘ಕಡುಪಾಪಂಗೈದು ಪೆಣ್ಣಾಗಿ ಸಂಭವಿಸಿ ಒಡಲಂ ಪೊರೆವುದೆದೆನ್ನೊಳಪರಾಧಮುಂಟು’ ಎಂದು ಕುಗ್ಗಿರುವ ಹಳ್ಳಿಯ ಹೆಣ್ಣು ಮಕ್ಕಳು ಇನ್ನಷ್ಟು ಮುದುರಿಕೊಂಡು ಕೂರುತ್ತಾರೆ. ನಿಮ್ಮ ಅಣ್ಣ, ತಮ್ಮ, ತಂದೆ, ಮಾವಂದಿರೇ ನಿಮ್ಮ ಮೇಲೆ ಅತ್ಯಾಚಾರವೆಸಗಬಹುದು ಹುಷಾರ್ ಎಂಬ ಬೆದರಿಕೆಯನ್ನೂ ನೀಡಲಾಗುತ್ತದೆ. ಮೊದಲೇ ಒಂದು ಪೆನ್ನು ತರಲೂ ಒಬ್ಬರೇ ಅಂಗಡಿಗೆ ಹೋಗುವ ಧೈರ್ಯ ತೋರದ ಈ ಹುಡುಗಿಯರು ಒಬ್ಬರೇ ಹೋದರೆ ಒಂದು ಕಷ್ಟ, ಜೊತೆಗೆ ಯಾರನ್ನಾದರೂ ಕರೆದುಕೊಂಡು ಹೋದರೆ ಇನ್ನೊಂದು ಕಷ್ಟ ಎಂದು ಗೊಂದಲಕ್ಕೊಳಗಾಗುತ್ತಾರೆ. ಒಬ್ಬೊಬ್ಬರೇ ಓಡಾಡುವಾಗ ಜಾಗ್ರತೆ ಎಂದಾಗ ಹಾಗಾದರೆ ಏನಪ್ಪಾ ಮಾಡುವುದು ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ನಮ್ಮ ವಿದ್ಯಾರ್ಥಿನಿಯರ ಮುಗ್ಧ ಮುಖವನ್ನು ಬಾಡಿಸಿರುವುದು ನಿತ್ಯ ಗಮನಕ್ಕೆ ಬರುತ್ತದೆ.

ಈ ಇಡೀ ಕಾರ್ಯಕ್ರಮ ನಡೆಯುತ್ತಿರುವಾಗ ಹುಡುಗಿಯರ ಪಕ್ಕದಲ್ಲೇ ಕುಳಿತ ಗಂಡು ಮಕ್ಕಳಿಗೆ ಇನ್ನೊಂದು ಬಗೆಯ ಮುಜುಗರ. ಅವರನ್ನು ಅಪರಾಧಿಗಳೆಂಬಂತೆ ಕಟಕಟೆಯಲ್ಲಿ ನಿಲ್ಲಿಸಿ ಮಾತಾಡುವ ರೀತಿಯಿಂದ ಅವರ ಸೂಕ್ಷ್ಮ ಮನಸ್ಸೂ ನೋಯುತ್ತದೆ. ನಾಳೆ ಬೆಳಗಾದೊಡನೆ ಈ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗಲು ನಿಂತಿರುವ ಬಲಿಪಶುಗಳೆಂದೂ ಈ ಗಂಡು ಮಕ್ಕಳು ಅವರ ಮೇಲೆ ಹಾರಲು ಸಿದ್ಧರಾಗಿರುವ ಮೃಗಗಳೆಂಬ ರೀತಿಯಲ್ಲಿ ಮಾತನಾಡುವ ಈ ಬಗೆಯ ಅರಿವು ಕಾರ್ಯಕ್ರಮ ಇದುವರೆಗೂ ನಮ್ಮಲ್ಲಿ ಬೆಳೆದುಬಂದ ಸೆಕ್ಸಿಸ್ಟ್ ಅಪ್ರೋಚ್ ಅನ್ನೇ ಗಟ್ಟಿಗೊಳಿಸುವಂತಿರುವುದು ವಿಪರ್ಯಾಸ.

ಇಡೀ ಕಾರ್ಯಕ್ರಮವೇ ಅತ್ಯಾಚಾರಕ್ಕೆ ಮೂಲ rape-illustrationಕಾರಣ ಹೆಣ್ಣುಮಕ್ಕಳು ಗಂಡಸರೆದುರಿಗೆ ಬಿಂಕದಿಂದ ಕುಣಿಯಲು ಹೋಗಿ ಅವರಿಗೆ ನೀಡುವ ಪ್ರಚೋದನೆ ಎಂಬಲ್ಲಿಗೆ ಬಂದು ನಿಲ್ಲುತ್ತದೆ.

ದೆಹಲಿಯಲ್ಲಿ ಪಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ಬಂದ ಪ್ರತಿಕ್ರಿಯೆಗಳನ್ನು ಗಮನಿಸಬೇಕು. ಅನೇಕ ಜನ ರಾತ್ರಿ ಅಷ್ಟು ಹೊತ್ತಿಗೆ ಅವಳು ತಿರುಗಾಡುವ ಅಗತ್ಯವೇನಿತ್ತು? ಎನ್ನುವ ಮೂಲಕ ಹೊತ್ತಾದ ಮೇಲೆ ಬೇಕಾದಂತೆ ತಿರುಗಾಡುವ ಮಹಿಳೆ ಅತ್ಯಾಚಾರಕ್ಕೊಳಗಾಗುವುದು ತೀರಾ ಸಹಜ, ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅದು ಎನ್ನುವ ಧ್ವನಿಯಲ್ಲಿ ಮಾತಾಡುತ್ತಿದ್ದರು. ಇನ್ನೊಂದು ಸಂಘಟನೆಯ ಮುಖ್ಯಸ್ಥರು ಮಹಿಳೆಯರು ಹೊರಗೆ ದುಡಿಯಲು ಹೋಗದೇ ಗೃಹಕೃತ್ಯದಲ್ಲಿ ತೊಡಗುವುದೇ ಭಾರತೀಯ ಸಂಸ್ಕೃತಿ ಶೋಭೆ ಎಂದರು.

ಇವರೆಲ್ಲ ಹೀಗೆ ಹೇಳುವುದರ ಮೂಲಕ ಸಾರ್ವಜನಿಕ ಸ್ಪೇಸ್ ಗಳಿಗೆ ಮಹಿಳೆಯರು ಬರದಂತೆ ಸೂಕ್ಷ್ಮ ನಿರ್ಬಂಧ ಹೇರುತ್ತಿದ್ದಾರೆ ಎಂಬುದನ್ನು ಮನಗಾಣಬೇಕು. ಒಂದು ಹೋಟೆಲ್, ಕಾಫಿ ಶಾಪ್, ಸಿನೆಮಾ ಥಿಯೇಟರ್, ಹರಟೆ ಹೊಡೆಯುವ ಜಾಗಗಳು , ದುಡಿಯುವ ತಾಣಗಳು ಮಹಿಳೆ ತನ್ನ ಮೇಲೆ ಆಪತ್ತನ್ನು ಎಳೆದುಕೊಳ್ಳುವ ಜಾಗಗಳು ಎಂದು ಬಿಂಬಿತವಾದಾಗ ಮನೆಯ ಗೋಡೆಗಳ ಆವರಣವೇ ಆಕೆಗೆ ಸುರಕ್ಷಿತ ಎಂಬ ಪರೋಕ್ಷ ಅಭಿಪ್ರಾಯ ಇಲ್ಲಿ ವ್ಯಕ್ತವಾಗುತ್ತದೆ. ಆದರೆ ಮನೆಯೊಳಗಣ ದೌರ್ಜನ್ಯಕ್ಕೆ ಮದ್ದು ಏನು ಎಂಬ ಪ್ರಶ್ನೆಗೆ ಇವರು ಮೌನ ತಾಳುತ್ತಾರೆ. ಅದೇ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಲು ಬರುವವರು ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಿಗೆ ವಿಚಲಿತರಾಗದಂತೆ ಧೈರ್ಯ ತುಂಬುವ ಬದಲು ಬದುಕಿನ ಪ್ರತಿಕ್ಷಣವೂ ಬೆದರುವಂತೆ ಮಾಡುತ್ತಾರೆ.

ಇದರ ಇನ್ನೊಂದು ಆಯಾಮ ಏನೆಂದರೆ ಹೆಣ್ಣುಮಕ್ಕಳಿಗೆ ಕರಾಟೆ, ಅತ್ಯಾಚಾರಿಯನ್ನು ಹಿಮ್ಮೆಟ್ಟಿಸುವುದು ಹೇಗೆ ಎಂದು ತರಬೇತಿ ನೀಡುವುದು. ಆತ್ಮರಕ್ಷಣೆಗಾಗಿ ಇವುಗಳನ್ನು ಕಲಿಯುವುದು ಒಳ್ಳೆಯದೇ. ಆದರೆ ಈ ಅಗ್ರೆಸಿವ್ ಅಪ್ರೋಚ್ ಮೂಲ ಸಮಸ್ಯೆಗಳನ್ನು ಅಡ್ರೆಸ್ ಮಾಡುವುದೇ ಇಲ್ಲ. ಹೊಡೆಯಿರಿ, ಬಡಿಯಿರಿ ಎನ್ನುವುದು ಆರಂಭದಲ್ಲಿ ಆತ್ಮರಕ್ಷಣೆಗೆ ಸರಿ, ಆದರೆ ಅದು ಮೇರೆ ಮೀರಿ ಸ್ವಹಿತಸಾಧನೆಗೆ ಬಳಕೆಯಾಗುವುದನ್ನೂ ತಡೆಯಲಾಗದು. ಇತ್ತೀಚೆಗೆ ರೊಹ್ಟಾಕ್ ಸೋದರಿಯರು ಹುಡುಗರಿಗೆ ಚಚ್ಚಿದ ಪ್ರಕರಣ ಇದಕ್ಕೆ ಹಿಡಿದ ಕನ್ನಡಿ. ಇನ್ನೊಂದು ದೃಷ್ಟಿಯಲ್ಲಿ ನೋಡಿದಾಗ ಇಲ್ಲೂ ಹೇಳಲಾಗುವ ವಿಚಾರ ಎಂದರೆ, ಅತ್ಯಾಚಾರಕ್ಕೆ ಒಳಗಾಗುವ ಪ್ರಸಂಗ ಸಹಜ, ನೀವು ನಿಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಕಲಿಯಬೇಕು ಎನ್ನುವುದಷ್ಟೆ.

ಜೊತೆಗೆ ಇವರು ‘ಅತ್ಯಾಚಾರಕ್ಕೆ ಒಳಗಾದಿರೆಂದರೆ ನಿಮ್ಮ ಬದುಕೇ ಹಾಳಾದಂತೆ, ಇದರಿಂದ ನೀವು ಜೀವನವಿಡೀ ಕಣ್ಣೀರು ಹಾಕುತ್ತಾ ಇರಬೇಕಾಗುತ್ತದೆ. sex-education-3ಇಂಥದ್ದನ್ನು ದೂರವಿರಿಸುವುದು ನಿಮ್ಮ ಕೈಯಲ್ಲಿದೆ’ ಎನ್ನುವ ಭರತವಾಕ್ಯದೊಂದಿಗೆ ಕಾರ್ಯಕ್ರಮ ಮುಗಿಸುತ್ತಾರೆ.

ನಿಜವಾಗಿ ನಡೆಯಬೇಕಾಗಿರುವುದು ‘ಯಾರೋ ಒಬ್ಬ ಅವನ ದೌರ್ಬಲ್ಯದಿಂದ ಅತ್ಯಾಚಾರವೆಸಗಿದರೆ ಅದಕ್ಕಾಗಿ ನೀವು ಕೊರಗುವ ಅಗತ್ಯವಿಲ್ಲ, ಅಲ್ಲಿಗೇ ನಿಮ್ಮ ಬದುಕು ಮುಗಿಯುವುದಿಲ್ಲ’ ಎಂಬ ಧೈರ್ಯ ತುಂಬುವ ಕೆಲಸ. ಅತ್ಯಾಚಾರ ಒಂದು ದೌರ್ಜನ್ಯದ ಪ್ರಕರಣ. ಮಾನಹಾನಿಯಾಗುವುದು ಅಥವಾ ಆಗಬೇಕಿರುವುದು ದೌರ್ಜನ್ಯ ನಡೆಸುವವರದ್ದು, ದೌರ್ಜನ್ಯಕ್ಕೆ ಒಳಗಾಗುವರದ್ದಲ್ಲ. ನಮ್ಮ ವ್ಯವಸ್ಥೆ ಅತ್ಯಾಚಾರಕ್ಕೆ ಒಳಗಾದವರನ್ನೇ ಕಳಂಕಿತರೆಂಬಂತೆ ಚಿತ್ರಿಸಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಕನ್ನಡದ ಅನೇಕ ಚಿತ್ರಗಳಲ್ಲಿ ನೀವು ನೋಡಿರಬಹುದು, ನಡುಬೀದಿಯಲ್ಲಿ ಬಲವಂತವಾಗಿ ಹುಡುಗಿಯೊಬ್ಬಳಿಗೆ ವಿಲನ್ ಒಬ್ಬ ಮುತ್ತು ಕೊಟ್ಟ ನಂತರದ ದೃಶ್ಯದಲ್ಲಿ ಆ ಹುಡುಗಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಆಕೆ ತನಗೇನೋ ಆಗಿದೆ ಎಂದು ಕೊರಗುವುದನ್ನು ಬಿಟ್ಟು ದೌರ್ಜನ್ಯ ಎಸಗಿದ ವ್ಯಕ್ತಿಗೆ ಶಿಕ್ಷೆಯಾಗುವಂತೆ ಧೈರ್ಯದಿಂದ ದೂರು ನೀಡಬೇಕು. ನಮ್ಮ ಸಮಾಜ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ನೋಡುವ ದೃಷ್ಟಿಕೋನವೇ ಬದಲಾಗಬೇಕು.

ನಮ್ಮ ಸಾರ್ವಜನಿಕ ಸ್ಥಳಗಳಿಗೆ ಮಹಿಳೆಯರಿಗೆ ನಿರ್ಬಂಧ ಹೇರಿ ಅತ್ಯಾಚಾರ ತಡೆಗಟ್ಟುವ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ರಕ್ಷಣೆ ದೊರೆಯುವಂತೆ ಮಾಡಬೇಕಾಗಿದೆ. sex-education-2ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ದೇಹದ ಬದಲಾವಣೆಗಳ ಬಗೆಗೆ ಸರಿಯಾಗಿ ತಿಳಿಯುವ ಅವಕಾಶ ಇಲ್ಲದ ಮಕ್ಕಳು ಮೊಬೈಲ್, ಇಂಟರ್ ನೆಟ್ ಗಳಿಂದ ವಿಕೃತದಾರಿಯಲ್ಲಿ ಅದನ್ನು ಅರಿಯುವ ಮೊದಲು ಅವರೊಂದಿಗೆ ಹಿರಿಯರು ಮುಕ್ತವಾಗಿ ಮಾತಾಡಬೇಕಿದೆ. ಗಂಡು ಹೆಣ್ಣಿನ ಸಹಜ ಸಂಬಂಧದ ಬಗ್ಗೆ ಸಮಾಜದಲ್ಲಿ ಆರೋಗ್ಯಕರ ನಿಲುವು ಮೂಡಿಸಬೇಕಾಗಿದೆ.

ಹೆಣ್ಣು ಕೇವಲ ದೇಹ ಅಲ್ಲ, ಅವಳೊಬ್ಬ ವ್ಯಕ್ತಿ ಎನ್ನುವ ಪರಿಕಲ್ಪನೆ ನಮ್ಮ ಸಂಸ್ಕೃತಿಯ ಭಾಗ ಆಗಿಲ್ಲ ಎಂಬುದೇ ಸಮಸ್ಯೆಯ ಮೂಲ. ಹೆಣ್ಣನ್ನು ಎರಡನೆ ದರ್ಜೆ ಪ್ರಜೆಯಾಗಿ ನೋಡುವ ಸಂಸ್ಕೃತಿಯನ್ನು ಮತ್ತೆ ಮುನ್ನೆಲೆಗೆ ತಂದರೆ ಆಗುವ ಅಪಾಯಗಳ ದೃಷ್ಟಾಂತ ನಮ್ಮ ಮುಂದಿದೆ. ಹೀಗಾಗಿ ಸಂಸ್ಕೃತಿ ರಕ್ಷಕರು ಮತ್ತು ಲೈಂಗಿಕ ಶಿಕ್ಷಣ ನೀಡಲು ಹೊರಟ ಸ್ವಘೋಷಿತ ಪರಿಣತರು ಒಂದು ಕ್ಷಣ ಯೋಚಿಸಿ ಮುಂದುವರಿಯದಿದ್ದರೆ ಯಾವ ಮನೋಭಾವ ಇಂದು ಹುಡುಗರನ್ನು ಅತ್ಯಾಚಾರಿಗಳನ್ನಾಗಿಸುತ್ತಿದೆಯೋ ಅದೇ ಮನಸ್ಥಿತಿಯನ್ನು ಪೋಷಿಸುವ ಕೆಲಸವನ್ನೇ ಮಾಡಿದಂತಾಗುತ್ತದೆ.

 

ವಸ್ತ್ರ ಸಂಹಿತೆ ಎಂಬ ಎರಡು ಅಲಗಿನ ಕತ್ತಿ

– ಭಾರತೀ ದೇವಿ. ಪಿ

ನಮ್ಮ ದೇಶದಲ್ಲಿ ವಸ್ತ್ರ ಸಂಹಿತೆಯ ವಿಷಯ ಬಂದಾಗಲೆಲ್ಲ ಅದು ಯಾವಾಗಲೂ ಎರಡು ಅತಿಯಾದ ವಾದಗಳಿಗೆ ಹೋಗಿ ನಿಲ್ಲುತ್ತದೆ. ಎಲ್ಲರೂ ಒಂದೇ ಎಂಬ ಭಾವನೆ ಉಂಟುಮಾಡುವಲ್ಲಿ, ಶಿಸ್ತು ಮೂಡಿಸುವಲ್ಲಿ ಒಂದೇ ಬಗೆಯ ಬಟ್ಟೆ ಎಂಬ ತಿಳುವಳಿಕೆ ನಮ್ಮಲ್ಲಿ ಎಲ್ಲೆಡೆ ಕಾಣಬರುವ ಸಮಾಚಾರ. ಇದು ಪ್ರಜಾಪ್ರಭುತ್ವೀಯ ನೆಲೆಯದು. ಆದರೆ ಅದರಾಚೆಗೆ ವಯಸ್ಸಿನಲ್ಲಿ ಒಂದು ಹಂತ ದಾಟಿದ ಮಕ್ಕಳ ಮೇಲೆ, ಕೆಲಸದ ಸ್ಥಳದಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಇಂತಹುದೇ ಬಟ್ಟೆ ಧರಿಸಬೇಕೆಂದು ಹೇರುವುದು ಇಂದು ಸಂಸ್ಕೃತಿಯ ಹೆಸರಿನಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇಲ್ಲಿ ಸಮಾನ ಭಾವನೆ ಮೂಡಿಸಬೇಕು ಎನ್ನುವುದಕ್ಕಿಂತ  ಹೆಚ್ಚಾಗಿ ’ಇಂಥವರಿಗೆ ಪಾಠ ಕಲಿಸಬೇಕು’ ಎಂದು ಕತ್ತಿ ಹಿರಿದ ಸಂಸ್ಕೃತಿಯ ಪೊಲೀಸರ ದರ್ಬಾರು ಹೆಚ್ಚು.

ಇಂತಹ ಜನಗಳಿಗೆ ಸಂಸ್ಕೃತಿ ಎನ್ನುವುದು ನಿಂತ ನೀರಲ್ಲ, ಸದಾ ಬದಲಾವಣೆಗೆ ಒಡ್ಡಿಕೊಳ್ಳುತ್ತಾ ಚಲನಶೀಲವಾಗಿರುವುದು ಎಂಬ ತಿಳುವಳಿಕೆ ಇಲ್ಲ. ಸಾವಿರ ವರ್ಷಗಳ ಹಿಂದೆ ಇದ್ದಂತೆ ಇಂದು ನಾವಿಲ್ಲ. ಇವರ್‍ಯಾರೂ ಇಂದು ಬಸ್, ಮೊಬೈಲ್ ಫೋನ್, ಕಂಪ್ಯೂಟರ್ ಬಳಸದಿರಲಾರರು. ಸಂಸ್ಕೃತಿ ಎಂಬುದು ಕೇವಲ ಆಹಾರ, ಉಡುಗೆ ತೊಡುಗೆ, ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ್ದಲ್ಲ. ಇಡೀ ಜೀವನಶೈಲಿಗೆ ಸಂಬಂಧಿಸಿದ್ದು ಎಂಬ ಅರಿವಿಲ್ಲದಾಗ ಇಂತಹ ದುಡುಕುಗಳು ಉಂಟಾಗುತ್ತವೆ. ಅಲ್ಲದೆ, ಪಂಚೆ ಉಡುವುದು, ಸೀರೆ ತೊಡುವುದು ಮಾತ್ರ ಸಂಸ್ಕೃತಿಯಲ್ಲ, ಇನ್ನೂ ಹಲವು ಬಗೆಯ ಉಡುಗೆ ತೊಡುಗೆಗಳೂ ಇವೆ ಎಂಬ ಬಹುತ್ವದ ಕಲ್ಪನೆ ಇದ್ದಾಗಲೂ ಈ ಬಗೆಯ ಕೂಗು ಕೇಳಿಬರುವುದಿಲ್ಲ.

ಆದರೆ ಒಂದು ವಿಚಾರ ನೀವು ಗಮನಿಸಿ, ವಸ್ತ್ರ ಸಂಹಿತೆಯ ಆಯುಧ ಬಹುತೇಕ ಸಂದರ್ಭದಲ್ಲಿ ಪ್ರಯೋಗವಾಗುವುದು ಹೆಣ್ಣಿನ ಮೇಲೆ ಮತ್ತು ಅದು ಪ್ರಯೋಗವಾಗುವುದು ಸಂಸ್ಕೃತಿಯ ಹೆಸರಿನಲ್ಲಿ. ಹೆಣ್ಣುಮಕ್ಕಳು ಪ್ಯಾಂಟ್ ಶರ್ಟು ಧರಿಸಬಾರದು, ಪಬ್‌ಗೆ ಹೋಗಬಾರದು, ರಾತ್ರಿ ಒಬ್ಬಳೇ ತಿರುಗಬಾರದು… ಹೀಗೆ ಇದು ಮುಂದುವರೆಯುತ್ತದೆ. ಇದನ್ನು ಪ್ರಶ್ನಿಸಿದಾಗಲೆಲ್ಲ ’ಹಾಗಿದ್ದರೆ ಹೆಣ್ಣುಮಕ್ಕಳು ಗಂಡುಮಕ್ಕಳಂತೆ ಕುಡಿದರೆ, ಪ್ಯಾಂಟು ಹಾಕಿದರೆ ಸಮಾನತೆಯೇ?’ ಎಂಬ ಸವಾಲು ಸಿದ್ಧವಿರುತ್ತದೆ. ಇದರರ್ಥ ಹೆಣ್ಣುಮಕ್ಕಳೂ ಹಾಗೆ ಮಾಡಲೇಬೇಕೆಂದಲ್ಲ. ಬಯಸಿದ ಬಟ್ಟೆ ಹಾಕುವುದು, ಬೇಕಿದ್ದನ್ನು ಸೇವಿಸುವುದು ಅವರವರ ಖುಷಿಗೆ ಬಿಟ್ಟ ವಿಚಾರ. ಆದರೆ ಈ ಸಂಸ್ಕೃತಿಯ ಹೆಸರಿನ ಬೇಲಿ ಸದಾ ಯಾಕೆ ಹೆಣ್ಣುಮಕ್ಕಳ ಸುತ್ತಲೇ ಕಟ್ಟಲಾಗುತ್ತದೆ ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ಒಂದೊಮ್ಮೆ ಗಂಡಸರಂತೆ ಹೆಣ್ಣೂ ಇಂಥವುಗಳಿಗೆ ಒಳಗಾದರೆ ಈಕೆಯ ಬಗ್ಗೆ ಮಾತ್ರ ಯಾಕೆ ಇಂತಹ ವರ್ತನೆ ಕಾಣುತ್ತದೆ? ನಮ್ಮ ಸ್ತ್ರೀಯರು ಹಾಳಾದರೆ ಸಂಸ್ಕೃತಿ ಹಾಳಾಗುತ್ತದೆ, ಹೆಣ್ಣು ಸರಿಯಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಹೇಳುವ ಮಂದಿ ತಮ್ಮ ಜವಾಬ್ದಾರಿಯನ್ನು ಹೆಣ್ಣುಮಕ್ಕಳನ್ನು ಕಾಯುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆಯೇ? ಎಂಬ ಪ್ರಶ್ನೆಯೂ ಏಳುತ್ತದೆ. ಹೆಣ್ಣು ಸಂಸ್ಕೃತಿಯನ್ನು ಸಿಕ್ಕಿಸುವ ಗೂಟವಾಗಿ ಕಾಣುತ್ತಾಳೆ.

ಇತ್ತೀಚೆಗೆ ವಸ್ತ್ರ ಸಂಹಿತೆ ಬಗ್ಗೆ ಹೆಚ್ಚಿನ ಕೂಗು ಕೇಳಿಬರುತ್ತಿರುವುದಕ್ಕೆ ಹಿನ್ನೆಲೆಯಾಗಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಇವತ್ತಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೋಡೆಗಳನ್ನು ದಾಟಿ ಹೊರಬಂದಿದ್ದಾರೆ. ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಅನೇಕ ಮೂಲಭೂತವಾದಿಗಳಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಬಹುಶಃ ಈ ಪ್ರಕ್ರಿಯೆಯನ್ನು ಹಿಂದಕ್ಕೊಯ್ಯುವುದಂತೂ ಸಾಧ್ಯವಿಲ್ಲ. ಆದರೆ ನಿಧಾನಗೊಳಿಸುವ ರೀತಿಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಅಡ್ಡಗಾಲು ಹಾಕುವುದನ್ನು ಕಾಣುತ್ತೇವೆ. ಇಂದು ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೂ ಈ ಮನೋಭಾವವೇ ಕಾರಣವಾಗಿದೆ ಎನಿಸುತ್ತದೆ.

ಅಲ್ಲದೆ, ಹಿಂದಿನಿಂದಲೂ ನಾಗರಿಕವೆನಿಸಿಕೊಂಡ ಸಮಾಜಗಳಲ್ಲಿ ಹೆಣ್ಣಿನ ದೇಹ ಅದು ಸದಾ ಮುಚ್ಚಿಡಬೇಕಾದದ್ದು ಎಂಬ ಭಾವನೆ ಇದೆ. ಆದರೆ ಗಂಡಿನ ದೇಹದ ಬಗ್ಗೆ ಈ ಭಾವನೆ ಇಲ್ಲ. ಇಂದಿಗೂ ಬುಡಕಟ್ಟು ಜನಾಂಗಗಳ ಹೆಣ್ಣುಮಕ್ಕಳು ತಮ್ಮ ದೇಹದ ಬಗ್ಗೆ ನಮ್ಮಷ್ಟು ಚಿಂತಿತರಲ್ಲ. ಎಂದು ಹೆಣ್ಣೊಬ್ಬಳ ದೇಹ ಒಬ್ಬನ ಆಸ್ತಿ ಎಂಬ ಕಲ್ಪನೆ ಮೂಡಿತೋ ಆಗ ಅದು ಕಾಪಿಟ್ಟುಕೊಳ್ಳಬೇಕಾದ, ಅನ್ಯರ ಕಣ್ಣಿಗೆ ಬೀಳಬಾರದಾದ ವಸ್ತು ಎಂಬ ತಿಳುವಳಿಕೆ ಮೂಡಿತು. ಪರ್ದಾ, ಬುರ್ಖಾ ಇದರ ತೀರಾ ಮುಂದುವರಿದ ಹಂತಗಳು ಅಷ್ಟೆ.

ಅತ್ಯಾಚಾರದ ಬಗ್ಗೆ ಮಾತು ಬಂದಾಗಲೆಲ್ಲ ಸದಾ ಕೇಳಿಬರುವ ಒಂದು ಮಾತು ’ಹುಡುಗಿಯರು ಅಂತಹ ಬಟ್ಟೆ ಧರಿಸಿದರೆ ಹುಡುಗರ ಮನಸ್ಸು ಕೆಡದಿರುತ್ತದೆಯೇ? ಹುಡುಗಿಯೇ ಸರಿ ಇಲ್ಲ, ಅದಕ್ಕೆ ಹಾಗಾಗಿದೆ’. ಆದರೆ ಗಮನಿಸಿದರೆ, ಕಟ್ಟಡ ಕಾರ್ಮಿಕನ ಮಗಳು, ಶಾಲೆಗೆ ಒಂಟಿಯಾಗಿ ಹೋಗುವ ಹುಡುಗಿ ಅಥವಾ ಏನೂ ಅರಿಯದ ಮೂರು ತಿಂಗಳ ಹಸುಳೆಯ ಮೇಲೆ ಎರಗುವ ಜನರಿರುವಾಗ ಅವರನ್ನು ಹುಡುಗಿಯರ ಯಾವ ಅಶ್ಲೀಲ ಭಂಗಿ ಕೆರಳಿಸಿರುವುದು ಸಾಧ್ಯ? ಮೂರು ತಿಂಗಳ ಹಸುಳೆ ಏನು ಮಾಡಬಲ್ಲದು? ಇಲ್ಲಿ ಮದ್ದು ಅರೆಯಬೇಕಾದದ್ದು ಹೆಣ್ಣನ್ನು ಒಂದು ಭೋಗದ ವಸ್ತುವಾಗಿ ನೋಡುವ ಮನಸ್ಸುಗಳಿಗೆ, ಕಣ್ಣುಗಳಿಗೆ ಹೊರತು ಹೆಣ್ಣುಮಕ್ಕಳ ನಡವಳಿಕೆಯನ್ನು ನಿರ್ಬಂಧಿಸುವುದು ಸರಿಯಾದ ದಾರಿಯಲ್ಲ.

ನಮ್ಮ ಸಮಾಜದಲ್ಲಿ ಗಂಡು ಹೆಣ್ಣುಗಳು ಪರಸ್ಪರರ ದೇಹದ ಬಗ್ಗೆ ತಿಳಿಯುವುದಕ್ಕೆ ಆರೋಗ್ಯಕರವಾದ ದಾರಿಗಳು ಇಲ್ಲ. ಅದರ ಕುರಿತು ಮಾತಾಡುವುದು ನಿಷಿದ್ಧ. ಅವರು ಯಾವುದೋ ಮೂರನೇ ದರ್ಜಿ ಪುಸ್ತಕವೋದಿ, ಸಿನೆಮಾ ನೋಡಿ ತಲೆತುಂಬಾ ವಿಚಿತ್ರವಾದ ಕಲ್ಪನೆ ಇಟ್ಟುಕೊಂಡಿರುತ್ತಾರೆ. ಹೀಗಾದಾಗಲೇ ಹೆಣ್ಣಿನ ದೇಹವನ್ನು ಅದಿರುವಂತೆಯೇ ಸಹಜವಾಗಿ ನೋಡುವುದು ಇವರಿಗೆ ಸಾಧ್ಯವಾಗುವುದಿಲ್ಲ, ಮನಸ್ಸಿನಲ್ಲಿ ವಿಕಾರಗಳು ಹುಟ್ಟುತ್ತವೆ. ಇದಕ್ಕೆ ಇಬ್ಬರಲ್ಲೂ ಸರಿಯಾದ ತಿಳುವಳಿಕೆ ನೀಡುವುದು ಮುಖ್ಯವೇ ಹೊರತು ಕಟ್ಟಿಹಾಕುವುದಲ್ಲ.

ಸಂಸ್ಕೃತಿಯ ಬಗ್ಗೆ ನಮಗೆ ಗೌರವವಿದೆ. ಆದರೆ ದಮನಿಸುವ ಸಂಸ್ಕೃತಿಯ ಬಗ್ಗೆ ಅಲ್ಲ. ಹೆಣ್ಣಿನ ಸಮಾನತೆಯ ಬಗ್ಗೆ ಕಿಂಚಿತ್ತೂ ಅರಿವಿರದೆ ಮನೆಯಲ್ಲಿ ಇನ್ನೂ ಹೆಣ್ಣು ‘ಸರ್ವಿಸ್ ಪ್ರೊವೈಡರ್’ ಆಗಿರಬೇಕೆಂದು ಬಯಸುತ್ತಾ, ಗೃಹಿಣೀ ಧರ್ಮದ ಬಗ್ಗೆ ಹೊಗಳುತ್ತಾ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಎಲ್ಲರಿಗಿರುವ ಹಕ್ಕು, ಬಾಧ್ಯತೆಗಳನ್ನು ಮರೆತು ಮಾತಾಡುವ ಜನರ ‘ಸಂಸ್ಕೃತಿ’ ಇಂದಿನ ಸಂದರ್ಭದಲ್ಲಿ ಆರೋಗ್ಯಕರವಲ್ಲ.