Category Archives: ಮಹಾದೇವ ಹಡಪದ

ನ್ಯಾಯವು ಅನ್ಯಾಯ, ಅನ್ಯಾಯವೇ ನ್ಯಾಯ

-ಮಹದೇವ ಹಡಪದ ಸಾಲಾಪೂರ

ಭಾರತದಲ್ಲಿ ಶಿಕ್ಷೆಯನ್ನು ಕೊಡಬೇಕಾದವರು ಮತ್ತು ಕೊಡಿಸಬೇಕಾದವರು ಮಧ್ಯವರ್ತಿಗಳಂತೆ ದಲ್ಲಾಳಿಗಳಾಗಿರುತ್ತಾರೆ. ಅನ್ಯಾಯ, ವಂಚನೆ, ಮೋಸ, ಕ್ರೌರ್ಯ, ಸುಲಿಗೆಗಳೆಲ್ಲವನ್ನು ಇಂಥ ದಲ್ಲಾಳಿಗಳು ಮುಚ್ಚಿ ಹಾಕುವ ಸಲುವಾಗಿ ಹೊಂದಾಣಿಕೆಯ ಸೂತ್ರವೊಂದನ್ನು ಮುಂದಿಟ್ಟುಕೊಂಡು ವ್ಯಾಜ್ಯಗಳನ್ನು ಅಳಿಸಿ ಹಾಕಿಬಿಡುತ್ತಾರೆ. ನಮ್ಮ ಹಳ್ಳಿ ಕಡೆಗೆ ಹೀಗೆ ವ್ಯವಹರಿಸಲು ಮುಂದಾಗುವ ಮಹಾಶಯರನ್ನು ನರಿಬುದ್ಧಿ ಚತುರರೆಂದು, ನರಿಮನಿ ವಕೀಲರೆಂದು ಗುರುತಿಸಲ್ಪಡುತ್ತಾರೆ. ಆದರೆ ಹಾಕಿರುವ ಬೇಲಿಯೇ ಒಬ್ಬರ ಪರವಾಗಿ ನಿಂತು ಇನ್ನೊಬ್ಬರನ್ನು ಪರಿಹಾರದ ಖೆಡ್ಡಾಕ್ಕೆ ಕೆಡವಿ ಅನ್ಯಾಯದ ಪರ ಸಬೂಬು ಹೇಳುವಂತ ಘಟನೆಗಳು ಎಲ್ಲ ವ್ಯಾಜ್ಯಗಳ ಮೂಲದಲ್ಲಿ ನಡೆದಿರುತ್ತದೆ ಅನ್ನುವುದು ಮುಸುಕಿನೊಳಗಿನ ಮಾತು. ಬಲಿಷ್ಠರ ಬೆನ್ನು ಕಾಯುವ ಇಂಥ ಸಮೂಹಗಳ ದೈವಾಧಾರಿತ ನ್ಯಾಯಮಂಡಳಿಗಳು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಾದ ಮೇಲೆ ನ್ಯಾಯ ಕೇಳಿ ಸರಕಾರದ ಕಡತಗಳಲ್ಲಿ ಅನ್ಯಾಯಗಳು ದಾಖಲುಗೊಳ್ಳುತ್ತವೆ. ಹಾಗೆ ದಾಖಲಾಗುವ ಸಂದರ್ಭದಲ್ಲೂ ಲಾಬಿಗಳು ನಡೆಯುವ ಕಾರಣದಿಂದ ಎಷ್ಟೋ ತಕರಾರುಗಳನ್ನ ಪೋಲಿಸರೇ ತಳ್ಳಿ ಹಾಕಿಬಿಡುವ ಸಂಗತಿಗಳು ದಾಖಲಾಗದ ಭಾರತದ ಇತಿಹಾಸದಲ್ಲಿ ನಡೆದು ಹೋಗಿವೆ.

ಈ ಹಳ್ಳಿಗಳ ಹೊಟ್ಟೆಯನ್ನು ಬಗೆದರೆ ಅದೆಷ್ಟು ಅತ್ಯಾಚಾರಗಳು ಮಾನ ಮರ್ಯಾದೆಯ ಹೆಸರಲ್ಲಿ ಗಪ್ಪುಗಾರಾಗಿಲ್ಲ…? ಕಾಣೆಯಾಗಿದ್ದಾರೆ, ಆತ್ಮಹತ್ಯೆ ಎಂಬ ಹೆಸರಿನಲ್ಲಿ ಅದೇಸೊಂದು ಮರ್ಯಾದೆ ಹತ್ಯೆಗಳು ನಡೆದಿಲ್ಲ…? ಇಂಥಪ್ಪ ಕಥನಗಳು ಗೊತ್ತಿದ್ದರೂ ಸಂಸ್ಕೃತಿಯ ಹೆಸರಿನಲ್ಲಿ ಭಾರತದ ಪರ ವಕಾಲತ್ತು ವಹಿಸಿ ಮಾತನಾಡುವ ಮೂರ್ಖರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿರುತ್ತಾರೆ.

ನ್ಯಾಯ ಕಟ್ಟೆ, ಮಠದ ಅಂಗಳ, ಗ್ರಾಮ ಚಾವಡಿ, ಪಂಚಾಯತ್ ಕಟ್ಟೆಯಿಂದ ಹೊರಬಿದ್ದ ಗ್ರಾಮಭಾರತದ ಜನ ಈಗ ಪ್ರಜ್ಞಾವಂತರಾಗಿದ್ದು ಎಲ್ಲ sowjanya-rape-murderವ್ಯಾಜ್ಯಗಳನ್ನ ಕೋರ್ಟು ಕಟಕಟೆಗೆ ಎಳೆದು ತಂದು ನ್ಯಾಯ ಕೇಳಲು ಮುಂದಾಗುತ್ತಿದ್ದಾರೆ. ಆದರೆ ಪೋಲೀಸರು ಇವತ್ತಿನ ದಿನಮಾನದಲ್ಲಿ ಉಳ್ಳವರ, ಅನ್ಯಾಯದ ಪರವಹಿಸಿ ವ್ಯಾಜ್ಯಗಳನ್ನು ಬಗೆಹರಿಸುವ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿರುವುದಕ್ಕೆ ಈ ದಲ್ಲಾಳಿಗಳು ಕುಮ್ಮಕ್ಕು ಕೊಡುತ್ತಿದ್ದಾರೆ. ಎರಡು ಕೋಮಿನ, ಜಾತಿ-ಜನಾಂಗಗಳ, ಊರುಗಳ, ಪಂಗಡಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳಗಳಾದಾಗ ಸಾಮಾಜಿಕ ವಾತಾವರಣವನ್ನು ತಿಳಿಗೊಳಿಸಲು ಇಂಥ ಹೊಂದಾಣಿಕೆಗಳು ನಡೆಯುತ್ತವಲ್ಲ ಅದು ಉತ್ತಮವಾದ ಯೋಚನೆ ಅನ್ನಬಹುದು. ಆದರೆ ಅತ್ಯಾಚಾರಕ್ಕೊಳಗಾದವಳು, ಅನ್ಯಾಯಕ್ಕೊಳಗಾದ ವ್ಯಕ್ತಿ, ನ್ಯಾಯ ಕೊಡಿಸಿ ಎಂದು ಠಾಣೆಗೆ ಬಂದರೆ ಅಂಥವರ ಮೂಗಿಗೆ ತುಪ್ಪ ಸವರಿ ಇಡೀ ಪ್ರಕರಣವನ್ನು ಇಲ್ಲವಾಗಿಸುವ ನೀಚತನ ಅಸಹ್ಯ ಹುಟ್ಟಿಸುವಂತದ್ದು. ಇದು ಪ್ರಜಾಪ್ರಭುತ್ವದ ಆಂತರ್ಯವನ್ನು ಸಡಿಲುಗೊಳಿಸುತ್ತದೆ. ತುಂಬು ಗರ್ಭಿಣಿಯಾದ ಬೆಕ್ಕು ಎಳೆಂಟು ಮರಿಗಳಿಗೆ ಜನ್ಮಕೊಟ್ಟ ತಕ್ಷಣದಲ್ಲಿಯೇ ಮೂರು ನಾಲ್ಕು ಮರಿಗಳನ್ನು ತಾನೇ ತಿಂದು ಸದೃಢವಾಗುವ ಹಾಗೆ ವ್ಯವಸ್ಥೆಯನ್ನು ಒಳಗೊಳಗೆ ನುಂಗಿಹಾಕುವ ಈ ಕೆಟ್ಟ ಚಾಳಿಯೂ ಭಾರತದಿಂದ ಪ್ರಚೋದಿತವಾಗಿ ಉಳಿದುಕೊಂಡು ಬಂದಿದೆ ಹೊರತು ಪಾಶ್ಚಾತ್ಯದಿಂದ ಬಂದುದಲ್ಲ. ವ್ಯವಸ್ಥೆ ಹೊಸಕಿದ ಒಂದೆರಡು ಘಟನೆಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

1) ಹದಿನೈದು ವರ್ಷದ ಹಿಂದೆ ದೆಹಲಿ ಅತ್ಯಾಚಾರಕ್ಕಿಂತಲೂ ಘೋರವಾದ ಅತ್ಯಾಚಾರವೊಂದು ತಾಲ್ಲೂಕು ಕೇಂದ್ರದಿಂದ ಇಪ್ಪತ್ತೈದು ಕಿ.ಮೀ. ದೂರದ ಒಂದು ಹಳ್ಳಿಯಲ್ಲಿ ನಡೆದು ಹೋಗಿತ್ತು. ನಾಲ್ಕೈದು ಜನರ ಗುಂಪು ಒಂದು ವಾರಕಾಲ ಬಿಟ್ಟುಬಿಡದೆ ನಿರಂತರ ಘಾಸಿಗೊಳಿಸಿದ್ದರು. ಅವಳ ಸಹಾಯಕ್ಕೆ ಪ್ರಿಯಕರನೂ ಇರಲಿಲ್ಲ, ತಾಯ್ತಂದೆಯರೂ ಬರಲಿಲ್ಲ. ಮಗಳು ಕಾಣೆಯಾಗಿದ್ದಾಳೆಂದು ಪೋಲಿಸರಲ್ಲಿ ದೂರು ಕೊಟ್ಟಾದ ಮೇಲೆ ಆಕೆಯನ್ನ ಊರ ಹೊರಗೆ ಬಿಸಾಡಿಯೂ ಹೋಗಿರಲಿಲ್ಲ. ಯಾರದೋ ಜೊತೆ ಓಡಿ ಹೋಗಿದ್ದಾಳೆಂದು ಊರವರೆಲ್ಲ ಮಾತಾಡುತ್ತಿದ್ದಾಗ ಆಕೆ ಗೌಡರ ಕಬ್ಬಿನ ತೋಟದ ನಡುವೆ ಮೈ-ಮನ ಸೋತು ಗಂಡಸಿನ ಕ್ರೌರ್ಯಕ್ಕೆ ಶರಣಾಗಿ ಒರಗಿದ್ದಳು. ನಾನು ಕಂಡಂತೆ ಆ ಹುಡುಗಿ ಮೈತುಂಬ ಬಟ್ಟೆ ತೊಟ್ಟು, ಅಣ್ಣ, ಚಿಕ್ಕಪ್ಪ, ದೊಡಪ್ಪ ಎಂದು ನೀತಿ ಹಿಡಿದು ಮಾತಾಡುವುದರಲ್ಲಿ ಎಂದೂ ದಾರಿ ತಪ್ಪಿರಲಿಲ್ಲ. ಕುರಿ ಕಾಯುವ ಹುಡುಗನೊಬ್ಬ ಈ ನಾಲ್ಕೈದು ಜನ ಆ ಕಬ್ಬಿನ ಗದ್ದೆಗೆ ಹೋಗಿಬರುತ್ತಿರುವುದನ್ನು ನೋಡಿ ನೋಡಿ, ಆ ಜಾಗ ಪತ್ತೆ ಹಚ್ಚಿ ಊರವರಿಗೆ ಸುದ್ದಿ ಮುಟ್ಟಿಸಿದ ಮೇಲೆ ಊರೆಲ್ಲ ಗುಲ್ಲೆದ್ದಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕ ನಂತರ ಆಕೆ ಬದುಕಿ ಬಂದಿದ್ದಳು. ಆದರೆ ಊರಿನ ದೈವ ಮತ್ತು ಪೋಲೀಸರ ಎದುರಿನಲ್ಲಿ ಪರಿಹಾರದ ರೂಪದ ಹೊಂದಾಣಿಕೆ ಸೂತ್ರಕ್ಕೆ ಒಪ್ಪಿಕೊಂಡ ಆ ಅಪರಾಧಿಗಳು ಆ ಪ್ರಕರಣದಿಂದ ನುಣುಚಿಕೊಂಡಿದ್ದರು. ಆಕೆ ತೀರ್ಮಾನ ಯಾರಿಗೂ ಬೇಕಿರಲಿಲ್ಲ. ಅವರು ಈಡುಗಂಟಾಗಿ ನೀಡಿದ್ದ ಹಣಕ್ಕೆ ಅವಳು ಬಲಿಪಶುವಾಗಿದ್ದಳು. ಮುಂದಿನ ಕಥೆಯಲ್ಲಿ ಅವಳೇ ಸತ್ತಳೋ… ಯಾರಾದರೂ ಹೊಡೆದು ಉರುಲು ಹಾಕಿದರೋ… ಆಕೆ ಹೆಣವಾಗಿ ಹಗ್ಗಕ್ಕೆ ಶರಣಾಗಿದ್ದಳು. ಆ ಎಲ್ಲ ಪುಢಾರಿಗಳಲ್ಲಿ ಕೆಲವರು ಈಗ ಊರಿನಲ್ಲಿ ಓಣಿ ಮೆಂಬರ್ರುಗಳಾಗಿ ಸುಖವಾಗಿದ್ದಾರೆ. ದೆಹಲಿ ಅತ್ಯಾಚಾರವನ್ನು ಚಡ್ಡಿಗಳ ರೀತಿಯಲ್ಲಿಯೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂಥ ಇವರು ಗೋಡ್ಸೆ ಭಕ್ತ/ಪ್ರಿಯ ದೇಶಪ್ರೇಮಿಗಳಂತೆ ಪೋಸು ಕೊಡುತ್ತಿರುವುದು ಇಂಡಿಯಾದ ವರ್ಚಸ್ಸಾಗಿದೆ.

2) ನಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ತೀವ್ರ ಉಬ್ಬಸವಾಗಿ ಉಸಿರೇ ನಿಂತು ಹೋದಂತಾಗಲು ನಾನು ನನ್ನೊಂದಿಗೆ ಇಬ್ಬರು ವಿದ್ಯಾರ್ಥಿ ಮಿತ್ರರ ಸಹಾಯದಿಂದ ಹೊಸದುರ್ಗದ ಸರಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದೆವು. ಆಗ ರಾತ್ರಿ 11:40. ಆದ್ದರಿಂದ ಹೊಸದುರ್ಗದ ಪ್ರಮುಖ ರಸ್ತೆಗಳು ಸ್ತಬ್ಧವಾಗಿ ನಿದ್ದೆ ಹೋದಂತಿದ್ದವು. ಆ ಹುಡುಗಿಗೆ ಆಕ್ಸಿಜೆನ್ ಹಾಕಿ ಬೆಡ್‍ರೆಸ್ಟ್ ಮಾಡಲು ಬಿಟ್ಟು ಹೊರ ಹೋದ ಶ್ರೀಧರ್ ಡಾಕ್ಟರ್ ತರಾತುರಿಯಲ್ಲಿ ಡ್ರಿಪ್ ಹಾಕಲು ಹಿಂದೆ ಮುಂದೆ ಓಡಾಡುತ್ತಿದ್ದರು. ಏನದು ಎಂದು ತಿರುಗಿ ನೋಡುವುದರೊಳಗೆ ಸರಿಸುಮಾರು ಮುವ್ವತ್ತೈದು ವರ್ಷದ ಹೆಂಗಸೊಬ್ಬಳನ್ನು ಐದಾರು ಜನ ಗಂಡಸರೊಂದಿಗೆ ಕರೆದುಕೊಂಡು ಬಂದು ಹಾಸಿಗೆ ಮೇಲೆ ಮಲಗಿಸಿದರು. ಬೆನ್ನಲ್ಲೆ ಮೂರು ಜನ ಗಂಡಸರೊಂದಿಗೆ ಪೋಲೀಸ ವ್ಯಾನೂ ಬಂದಿತ್ತು.

ಗಡಸು ಧ್ವನಿಯಲ್ಲಿ ಅವರನ್ನು ವಿಚಾರಿಸುತ್ತಿದ್ದ ಕ್ರಮದಿಂದಲೇ ಆ ಮೂವರು ಕಾಮುಕರು ಆಕೆಯ ಮೇಲೆ ಎರಗಿದ್ದರೆಂಬುದು ತಿಳಿಯುತ್ತಿತ್ತು. ಆ ಕ್ರೂರಿಗಳ ಬಗ್ಗೆ ಆಕೆಯ ಮನೆಯವರು ಆಕ್ರೋಶಭರಿತರಾದ್ದರಿಂದ ಅಪರಾಧಿಗಳನ್ನು ಕೂಡಲೆ ಠಾಣೆಗೆ ಕರೆದೊಯ್ಯಲಾಯಿತು. ತಡರಾತ್ರಿಯಾದ್ದರಿಂದ ವಿದ್ಯಾರ್ಥಿನಿಯನ್ನ ಮತ್ತವಳ ಜೊತೆಗೆ ಇಬ್ಬರನ್ನು ಅಲ್ಲಿಯೇ ಬಿಟ್ಟು ಉಳಿದ ನಾವೆಲ್ಲ ತಿರುಗಿ ಹಳ್ಳಿಗೆ ಹೊರಟೆವು. ಆ ದಿನದ ನಿದ್ದೆಯನ್ನ ಆ ಹೆಂಗಸಿನ ದೈನೇಸಿ ಸ್ಥಿತಿ ಕದ್ದಿದ್ದ ಕಾರಣಕ್ಕೆ ದೆಹಲಿ ಅತ್ಯಾಚಾರ, ಹಾಸನ, ಚಿಕ್ಕಮಗಳೂರು, ಕುಂದಾಪೂರ, ಬೆಂಗಳೂರು ಹೀಗೆ ಕಳೆದ ಹದಿನೈದು ದಿನದಿಂದ ಸುದ್ದಿಯಾಗುತ್ತಲಿರುವ ಎಲ್ಲ ಘಟನೆಗಳು ಮತ್ತೆ ನೆನಪಾಗುತ್ತಲಿದ್ದವು. ಆದರೆ ಮರುದಿನ ನಾನು ಕೇಳಿದ ಸುದ್ದಿ ಇಡೀ ಪ್ರಕರಣವನ್ನು ಮುಚ್ಚಿಹಾಕಿತ್ತು. ರಾತ್ರಿ ಸಂಭವಿಸಿದ ಆ ಅತ್ಯಾಚಾರ ಬೆಳಗಾಗುತ್ತಲೆ ಹಣಕಾಸಿನ ಹೊಂದಾಣಿಕೆಯಲ್ಲಿ ಮುಕ್ತಾಯವಾಗಿತ್ತು.

ಇದು ಈ ಭಾರತದ ತಮಸ್ಸಿನಲ್ಲಿ ಜರುಗಿರುವ ದುರಂತ ಕಥನಗಳ ಒಂದೆರಡು ಸಣ್ಣ ಉದಾಹರಣೆಗಳು. ನ್ಯಾಯಾಂಗದಲ್ಲಿನ ಕೆಲವು ಅನ್ಯಾಯಗಳ ಕುರಿತಾಗಿ ಬ್ರೆಖ್ಟ್ ಒಂದಂಕಿನ ಸುಂದರವಾದ “ಎಕ್ಸಪ್ಷನ್ ಆ್ಯಂಡ್ ದಿ ರೂಲ್” ಎಂಬ ನಾಟಕವೊಂದನ್ನು ಬರೆದಿದ್ದಾರೆ. The_Bulgarian_rapeಏನೂ ತಪ್ಪು ಮಾಡದಿರುವ ಕೂಲಿಯಾಳಿನ ವಿರುದ್ಧವೇ ತೀರ್ಪನ್ನು ಕೊಟ್ಟು ಬಿಡುವ ಆ ಸಂದರ್ಭ ಮೇಲುನೋಟಕ್ಕೆ ಅನ್ಯಾಯ ಅನ್ನಿಸಿದರೂ ಕೊಲೆಯಾಗುವ ಮುಂಚೆ ಕೂಲಿಯಾಳು ಸಂಶಯ, ಗುಮಾನಿಗಳಿಗೆ ಆಸ್ಪದ ಕೊಡುವ ರೀತಿಯಲ್ಲಿ ನಡೆದುಕೊಂಡದ್ದು ಉಳ್ಳವನ ಪರವಾಗಿ ವಾದ ಗೆಲ್ಲಲು ಕಾರಣವಾಗಿಬಿಡುವ ಸಾಮಾಜಿಕ ವ್ಯಂಗ್ಯ ನಾಟಕದಲ್ಲಿದೆ. ಅಂತೆಯೇ ನಮ್ಮಲ್ಲಿನ ಈ ಒಳ ಒಪ್ಪಂದದ ಸೂತ್ರಗಳು ನ್ಯಾಯಾಲಯದ ಮೆಟ್ಟಿಲೇರಲಿಕ್ಕೆ ಬಿಡದಿರುವುದು ನ್ಯಾಯಾಂಗವನ್ನು ಅವಮಾನಿಸಿದಂತಹ ನೀಚತನದ ಕೆಲಸವಾಗುತ್ತದೆ. ಇಂಥ ವ್ಯವಸ್ಥೆಯ ವಿರುದ್ಧ ಹೋರಾಡಿದಾಗ ಪ್ರಬಲ ಕಾನೂನುಗಳು ಒಂದಷ್ಟು ಜನರ ಬದುಕಿಗೆ ಸಹಾಯವಾಗಬಹುದು.

ದಿಕ್ಕೆಟ್ಟಿರುವ ಈ ಹೊತ್ತಿನಲ್ಲಿ ಜಗತ್ತಿನ ಅಂಕೆ ಹಿಡಿದವರ್‍ಯಾರು?

– ಮಹದೇವ ಹಡಪದ

ಚಳವಳಿಗಳು ಸತ್ತಿವೆಯೇ, ಮೊಟಕಾಗಿವೆಯೇ, ಸೊರಗಿವೆಯೇ, ಅಥವಾ ಇಂದಿನ ಈ ಕಾಲಗರ್ಭದಲ್ಲಿ ಎಲ್ಲ ರೀತಿಯಿಂದಲೂ ಅಸಮತೆಗಳಿದ್ದರೂ ಸಮಾನತೆ ಬಂದಿದೆ ಎಂದು ಭಾವಿಸಿಕೊಂಡು ಮನುಷ್ಯ ತೆಪ್ಪಗಾಗಿದ್ದಾನೆಯೇ? ಚಳವಳಿಗಳ ಸಾಂಘಿಕ ಶಕ್ತಿ, ಆಲೋಚನಾ ಕ್ರಮಗಳು ಬದಲಾಗಿವೆಯೇ? ಇರುವ ವ್ಯವಸ್ಥೆ ಹೇಗಿದೆಯೋ ಹಾಗೇ ಇರುವಾಗ ಜಗತ್ತು ಬದಲಾಗಿದೆ ಎಂಬ ಭ್ರಮೆ ಆಂತರಿಕ ಶತ್ರುವಾಗಿ ಪ್ರವೇಶ ಪಡೆದ ರೀತಿ ಯಾವ ಬಗೆಯದು? ಚಳವಳಿಗಳು ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಹಿಮ್ಮುಖವಾದವೇನು? ಅಧಿಕಾರದ ದಾಹ ಸಾಮಾನ್ಯ ಕಾರ್‍ಯಕರ್ತನಲ್ಲೂ ಆಸೆಯ ಬೀಜ ಬಿತ್ತಿದವೋ?

ರಾಶಿ ಮಾಡುವ ರೈತ ಕಾಳುಗಳಲ್ಲಿನ ಕಸ-ಕಡ್ಡಿ ತೆಗೆಯಲು ಗಾಳಿಗೆ ರಾಶಿ ತೂರುತ್ತಾನೆ. ಆ ತೂರುವ ಕ್ರಿಯೆಗೆ ಒಂದೇ ದಿಕ್ಕಿಗೆ ಚಲಿಸುವ ಗಾಳಿ ಬರಬೇಕು. ಆಗ ಮಾತ್ರ ಹೊಟ್ಟು-ಕಾಳು ಬೇರೆ ಬೇರೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಆತ ದಿನಗಟ್ಟಲೇ ಗಂಟೆಗಟ್ಟಲೇ ಗಾಳಿಗೆದುರಾಗಿ ಕಾಯುತ್ತಾನೆ. ಸುತ್ತ ನಾಲ್ಕೂ ಕಡೆಗೆ ಬೀಸುವ ಹುಂಡಗಾಳಿಗೆ ಮೊರ ಹಿಡಿದು ತೂರಲು ಸಾಧ್ಯವಿಲ್ಲ ಹೇಗೋ ಹಾಗೇ… ಈ ಗೋಳೀಕರಣದ ವಿವಿಧ ಮಜಲಿನ ಮೈ-ಮಾಟಗಳಲ್ಲಿ ಹುಂಡಗಾಳಿಯ ಪರಿಣಾಮದಿಂದಾಗಿ ಸಾಮಾಜಿಕ ಸ್ವಾಸ್ತ್ಯ ಬಯಸುವ ಚಳವಳಿಗಳ ಅಸ್ತಿತ್ವವೂ ಗೊಂದಲಗೊಂಡಿದೆಯೇನೋ ಅನ್ನಿಸುತ್ತಿದೆ. ಚಳವಳಿಗಳ ಅಸ್ತಿತ್ವ ಒತ್ತಟ್ಟಿಗಿರಲಿ, ಅಧಿಕಾರದ ದಾರ್ಷ್ಟ್ಯ, ದುರಾಡಳಿತ, ಮತಾಂಧ ಯೋಜನೆಗಳನ್ನು, ಪಟ್ಟಭದ್ರ ಹಿತಾಸಕ್ತಿಗಳನ್ನು ಪ್ರಶ್ನಿಸುವ, ಧಿಕ್ಕರಿಸುವ ವೈಚಾರಿಕ ಮನಸ್ಸುಗಳು ಕೂಡ ಜಾಣಕುರುಡನ್ನು ಅಭಿನಯಿಸುತ್ತಿರುವುದು ಅಸಹ್ಯಕರವಾಗಿದೆ.

ಈಗ ನಾಡು-ನುಡಿ, ಸಂಸ್ಕೃತಿಗಳ ಕುರಿತಾಗಿ ಬೃಹತ್ತಾದ ಉತ್ಸವಗಳನ್ನು ಶಿಕ್ಷಣ ಸಂಸ್ಥೆಗಳು, ಮಠಗಳು, ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದಾರೆ. ಅಲ್ಲೆಲ್ಲ ಚಳವಳಿಗಳು, ಸಾಮಾಜಿಕ ಸಮಸ್ಯೆಗಳನ್ನಲ್ಲದೆ ಮನುಷ್ಯನ ಬದುಕಿನ ತೀವ್ರತೆಯ ಕುರಿತಾಗಿ ದೀರ್ಘ ಚರ್ಚೆಗಳು, ಭಾಷಣಗಳು, ಠರಾವುಗಳು. ಹೀಗೆ ಮಾತಿನಲ್ಲೇ ಸಮಸ್ಯೆಗಳನ್ನು ಸೃಷ್ಟಿಸಿ ಪರಿಹಾರವನ್ನೂ ಕೊಟ್ಟುಬಿಡುವ ತಂತ್ರಗಾರಿಕೆಯೂ ಹುಂಡಗಾಳಿಗೆ ತೂರಿಬಿಡುವ ಕ್ರಿಯೆ ಆಗಿಬಿಟ್ಟಿದೆ. ಶಿವನ ಬೆವರ ಹನಿಯಿಂದ ಉದ್ಭವಿಸಿದ ವೀರಭದ್ರ,,, ದಕ್ಷಬ್ರಹ್ಮನ ಯಜ್ಞದ ಅಗ್ನಿ ನಾಶ ಮಾಡುವುದರೊಂದಿಗೆ ಆರಂಭವಾಗುವ ಪ್ರತಿಕ್ರಿಯಾತ್ಮಕ ಅಭಿಯಾನ ಇಂದಿನ ಕಾಲಘಟ್ಟದಲ್ಲಿ ಸಂಪೂರ್ಣ ನಿಂತೇ ಹೋಗಿದೆ ಅಂದರೆ, ಒಳಗೊಳ್ಳುವಿಕೆಯ ಕುಟಿಲ ನೀತಿಗೆ ಶಿವನ ಸಂಸ್ಕೃತಿ ಬಲಿಯಾಗಿದೆ ಅನ್ನುವುದು ನಿಶ್ಚಿತ. ಸಾಮಾಜಿಕ ವಾತಾವರಣದಲ್ಲಿ ಸಮಾನತೆ ಮಂತ್ರ ಒಂದು ಬೂಟಾಟಿಕೆಯ ತಂತ್ರವಾಗಿದೆ. ಸೋದರತೆಯೆಂಬುದು ಕೇವಲ ದೇಶಪ್ರೇಮದಲ್ಲಿ ಒಂದಾಗುವ, ಧರ್ಮಪ್ರೀತಿಯಲ್ಲಿ ಬೆಸೆದುಕೊಳ್ಳುವ ಹುಚ್ಚುಕಲ್ಪನೆಯ ಆದರ್ಶವಾಗಿ ಉಳಿದಿರುವಾಗ, ಭಾರತದಲ್ಲಿನ ಹಿಂದುಳಿದ ವರ್ಗದವರಿಗೆ ಪುರಾಣಗಳ, ದೇವದೇವರ ನಡುವಿನ ವ್ಯತ್ಯಾಸ ಉನ್ಮತ್ತ ಭಕ್ತಿಯ ಪರಾಕಾಷ್ಠೆ ಆಗಿದೆ. ಬ್ರಾಹ್ಮಣ್ಯದ (ಬ್ರಾಹ್ಮಣ್ಯ ಎಂಬುದು ಜಾತಿಯಲ್ಲ) ಕುಹಕ ನೀತಿ ಹುಟ್ಟುಹಾಕಿರುವ ಆದರ್ಶ ರಾಜ್ಯವೇ ಮಹಾತ್ಮರುಗಳ ಕನಸಿನ ರಾಜ್ಯ ಕಲ್ಪನೆಯೂ ಆಗಿದೆ. ಅಲ್ಲಿ ಈ ಯಾವ ಜನತಂತ್ರದ ಆಡಳಿತ, ಸುವ್ಯವಸ್ಥಿತ ಕಾನೂನು ಬೇಕಾಗುವುದಿಲ್ಲ. ಇವರ ಕಾಯ್ದೆಗಳನ್ನು ಮಾನ್ಯ ಮಾಡುವ ಸಚಿವಾಲಯಗಳು ಅಂದ್ರೆ ಮಠಗಳು.

ಇಂದು ಸಮಾಜ ಅನ್ನೋದು ಜಾತಿಯನ್ನಾಧರಿಸಿದ ಒಂದು ಕೋಮಿನ ಸಂಘಟನೆಯಾಗಿದೆ. ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ದಲಿತ ಸಮಾಜ, ಕುರುಬ ಸಮಾಜ, ಮುಸ್ಲಿಮ್ ಸಮಾಜ ಎಂಬ ವರ್ಗೀಕರಣಗಳು ಜನತಂತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಳಸಿಕೊಳ್ಳುತ್ತಿರುವ ಉಪಾಯಗಳಾಗಿವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮತ್ತೆ ಮತ್ತೆ ಪ್ರಾದೇಶಿಕ ಪಕ್ಷಗಳು ನೆಲಕಚ್ಚುತ್ತಿರುವುದಕ್ಕೆ ಈ ವರ್ಗೀಕರಣವೇ ಕಾರಣವಿರಬಹುದು. ಚಳವಳಿಗಳು ಹುಟ್ಟುಹಾಕಿದ್ದ ರಾಜಕೀಯ ತೀವ್ರತೆಯನ್ನು ಅರ್ಥೈಸಿಕೊಳ್ಳಬೇಕಾದ ಹೊತ್ತಿನಲ್ಲಿಯೇ ಜಾತಿಯಾಧಾರಿತ ಸಮಾಜ ಕಲ್ಪನೆಗಳು ನಾಯಕತ್ವದ ಗೊಂದಲವನ್ನೆಬ್ಬಿಸಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಚಳವಳಿಯ ಪ್ರಜ್ಞೆಗಳನ್ನು ನಾಶಗೊಳಿಸುತ್ತಿವೆ.

ಚಳವಳಿಗಳು ರೂಪಿಸಿದ್ದ ಪ್ರಜ್ಞೆ – ಜಾತಿ ಪ್ರಜ್ಞೆಯಾಗಿ ಬೆಳೆದಂತೆ ಮನುಷ್ಯ ನಿರ್ಮಿತ ಮೌಲ್ಯಗಳು ಹೆಚ್ಚು ಸಂಕೀರ್ಣಗೊಂಡವು. ಜ್ಞಾನದ ಆಕರಗಳು ಅಕ್ಷರವಂತರ ಕೈಗೆ ಸುಲಭದಲ್ಲಿ ಸಿಗುವಂತಾದ ಮೇಲೆ ಶೋಷಣೆಯ ರೂಪಗಳು ಹೊಸ ಮುಖವಾಡಗಳೊಂದಿಗೆ ಪ್ರತ್ಯಕ್ಷವಾದವು. ಅಂಬೇಡ್ಕರ್, ಲೋಹಿಯಾ ಮತ್ತು ಮಾರ್ಕ್ಸ, ಈ ಮೂವರ ಆಲೋಚನೆಗಳ ಪರಿಣಾಮದಿಂದಾಗಿ ಭಾರತದ ನಾಗರೀಕ ಸಮಾಜದಲ್ಲಿ ಮಹತ್ವದ ತಿರುವುಗಳನ್ನು ಕಾಣಲು ಸಾಧ್ಯವಾಯಿತು. ಮಾನವೀಯ ಹಕ್ಕುಗಳ ಹೋರಾಟದ ಪರ್ವ ಸ್ವಾತಂತ್ರ್ಯಪೂರ್ವದಲ್ಲಿಯೇ ಅಲ್ಲಲ್ಲಿ ಕೆಲ ನಾಯಕರುಗಳ, ಉದಾತ್ತ ರಾಜರುಗಳ, ಸಂತರ, ಸಮಾಜಸುಧಾರಕರ ನೇತೃತ್ವದಲ್ಲಿ ಆರಂಭವಾದರೂ, ಚಳವಳಿಯಾಗಿ ರೂಪಗೊಂಡದ್ದು ಈ ಮೂರು ಜನರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಒಳನೋಟದ ತೀಕ್ಷ್ಣ ದೃಷ್ಟಿಕೋನದಲ್ಲಿಯೇ ಅನ್ನಬಹುದು. ಈ ಸಾಧ್ಯತೆಯನ್ನು ಮನಗಂಡ ನಂತರವೇ ಸ್ವಾತಂತ್ರ್ಯದ ಕುರಿತಾದ ಭ್ರಮೆಗಳು ಹಕ್ಕಿನ, ಹಕ್ಕು ಚಲಾವಣೆಯ, ಸಮಾಜ ಬದಲಾವಣೆಯ ಮತ್ತು ಅಭಿವೃದ್ಧಿಯ ಕುರಿತಾದ ಆಶಯಗಳಾಗಿ ಪರಿವರ್ತನೆಯಾದವು.

ಸ್ವಾತಂತ್ರ್ಯದ ಸುಳ್ಳಾಟವು ಸತ್ಯವಾಗುತ್ತ ಹೊರಟ ಹಾದಿಯಲ್ಲಿಯೇ ಸತ್ಯದ ಸಮರ್ಥಕರು ಗ್ರಾಮೀಣವಾಸಿಗಳನ್ನು ನೀವೇ ಹೆಚ್ಚು ಸುಖವಾಗಿರುವವರು ಎಂದು ನಂಬಿಸಲು ಪ್ರಯತ್ನಿಸಿದರು. ಹಳ್ಳಿಗಳ ಅಂತಃಸತ್ವವೇ ಭಾರತದ ಭವ್ಯ ಪರಂಪರೆಯೆಂದು ನಿರೂಪಿಸಲು ಪ್ರಯತ್ನಿಸಿದರು. ಅಲ್ಲಿನ ನ್ಯಾಯಾಲಯಗಳನ್ನು, ವರ್ಗವ್ಯವಸ್ಥೆಯನ್ನು, ಊರು-ಕೇರಿಗಳನ್ನು ಹೇಗಿವೆಯೋ ಹಾಗೆಯೇ ಉಳಿಸಿಕೊಳ್ಳಲು ಹವಣಿಸುವ ಸನಾತನ ಸಂಸ್ಕೃತಿ ಆರಾಧಕರು ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಹಂಬಲಿಸಿದರು. ತಂತ್ರಕ್ಕೆ ಪ್ರತಿ ತಂತ್ರ ಹಾಕುವ ಮನಸುಗಳು ಈ ದೇಶದ ಹುಚ್ಚು ಭಾವನಾವಾದ ಮತ್ತು ಹುಚ್ಚುಚ್ಚು ಆಧ್ಯಾತ್ಮವಾದಗಳೆರಡನ್ನೂ ಒಂದರೊಡನೊಂದನ್ನು ಹೊಸೆಯಲು ಪ್ರಾರಂಭಿಸಿದರು, (ಇವತ್ತು ಬಾಬಾಸಾಹೇಬರನ್ನು ಮೂರ್ತೀಕರಿಸುತ್ತಿರುವ ದಲಿತ ಸಮುದಾಯಗಳಲ್ಲಿ ಈ ಮೇಲಿನ ಉನ್ಮತ್ತ ವಾದಗಳೆರಡೂ ಇಲ್ಲವೆಂಬುದನ್ನೂ ಮತ್ತು ಆತ್ಮಸ್ಥೈರ್ಯದ ಸಂಕೇತವಾಗಿ ಮಾತ್ರ ಡಾ|| ಅಂಬೇಡ್ಕರ್‌ರು ಇದ್ದಾರೆಂಬುದನ್ನು ವ್ಯಾಕುಲಗೊಳ್ಳುತ್ತಿರುವ ಪ್ರಗತಿಶೀಲ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕು.) ಆ ಹೊಸೆಯುವ ಕ್ರಮದಲ್ಲಿ ಸಣ್ಣಪುಟ್ಟ ಅಸ್ತಿತ್ವಗಳೆಲ್ಲ ಭಾರತೀಯ ಆಧುನಿಕ ದರ್ಶನಗಳಾಗಿ ಉಳಿದುಕೊಳ್ಳಬೇಕಿತ್ತು. ಆದರೆ ಭಾರತೀಯತೆ ಎಂಬ ಭಾವನಾವಾದವೂ ಆಧ್ಯಾತ್ಮವಾದವೂ ಏಕಮುಖಿ ಸಂಸ್ಕೃತಿಯಾಗಿ ರೂಪುಗೊಳ್ಳುವ ಧಾವಂತದಲ್ಲಿ ಸಾವಿರಾರು ತೊರೆಗಳನ್ನು ಅಖಂಡ ಹಿಂದುತ್ವದಲ್ಲಿ ವಿಲೀನಗೊಳಿಸಿಕೊಂಡಿತು.

ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ರೂಪಗೊಳ್ಳುತ್ತಿರುವ ಸನಾತನಿಗಳ ಹೊಸ ಅವತಾರಗಳನ್ನು, ಸಂಪ್ರದಾಯ, ಪರಂಪರೆಗಳ ವಕ್ತಾರರಂತೆ ವಹಿಸಿಕೊಂಡು ಹೋಗುತ್ತಿದ್ದ ನೈತಿಕ ಪೋಲಿಸರನ್ನು ಬೆತ್ತಲೆಗೊಳಿಸಿದ್ದ ಒಬ್ಬ ವರದಿಗಾರನನ್ನು ಜೈಲು ಸೇರಿಸುವ ಹುಂಬುತನ ಪ್ರದರ್ಶಿಸಿರುವ ಪೋಲಿಸ್ ವ್ಯವಸ್ಥೆಯೂ ಡೊನೇಶನ್ ದೊರೆಗಳ, ಮೂಲಭೂತಿಗಳ, ಧರ್ಮಾಂಧರ ಕೈ ದಾಳವಾಗಿ ನಡೆದುಕೊಂಡಿದ್ದು ಪ್ರಜಾತಂತ್ರದಲ್ಲಿನ ವ್ಯಂಗ್ಯವನ್ನು ತೋರಿಸುತ್ತದೆ. ಹೋಮಸ್ಟೇ ದಾಳಿಯ ಕುರಿತಾಗಿ ವರದಿ ಮಾಡಿದ ಸರಳ ಕಾರಣಕ್ಕಾಗಿ ನವೀನ ಸೂರಿಂಜೆಯಂಥ ದಿಟ್ಟ ಪತ್ರಕರ್ತನನ್ನು ಬಂದಿಸಲಾರರು, ಆ ಕಪ್ಪು ಕನ್ನಡಕದ ಗಿಣಿರಾಮನ ವೈಚಾರಿಕ ವಾಗ್ದಾಳಿಗೆ ತಡಯೊಡ್ಡಲು ಜಾಮೀನು ರಹಿತ ವಾರೆಂಟಗಾಗಿ ಕರಾವಳಿ ಜಿಲ್ಲೆಯ ಬಿಳಿ ಆನೆಗಳೆಲ್ಲವೂ ಶ್ರಮವಹಿಸಿರುವ ಅನುಮಾನವೂ ಇದೆ. ಆ ನೆಲದ ಬಗ್ಗೆ ಮೋಹ ಇಟ್ಟುಕೊಂಡವರು, ಅಯ್ಯೋ ಹೀಗಾಗುತ್ತಿದೆ ನನ್ನ ತವರು ಎಂದು ಅಲವತ್ತುಕೊಳ್ಳುವವರು ಗಳಗಳನೇ ಅತ್ತುಬಿಟ್ಟರೆ ಮೈಯಲ್ಲ ದುರಹಂಕಾರ ತುಂಬಿಕೊಂಡಿರುವ ಮೃದು ಮನಸಿನ ಆಸಾಮಿಗಳು ಕ್ಷಣಹೊತ್ತು ತಲ್ಲಣಿಸಿ ಅದಕ್ಕೂ ನಮ್ಮಲ್ಲೊಂದು ಬೇರುಂಟೆಂದು, ಹೊಸ ವರಸೆಯೊಂದಿಗೆ ಕೋಮು ಸಂಘಟನೆಯ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆ ಉತ್ಸವಗಳ ಅಂತರಾಳದಲ್ಲಿ ಕಾವು ಕುಳಿತಿರುವ ಹಕ್ಕಿಯ ಉದ್ಧೇಶ ಬದಲಾದರೂ ಮೊಟ್ಟೆಯಿಂದ ಮೂಡಿಬರುವ ಶಿಶುವಿನ ರೂಪ ಭಯಂಕರವಾಗಿರುತ್ತದೆ.

ಅಮೀರ ಖಾನ ನಿಮಿತ್ತ ಮಾತ್ರ…

– ಮಹಾದೇವ ಹಡಪದ

ಮಧ್ಯಮವರ್ಗೀಯವೆಂದು ಕೆಲವರಿಗೆ ಅನ್ನಿಸುತ್ತಿರುವ ಸತ್ಯಮೇವ ಜಯತೆ ಕಾರ್ಯಕ್ರಮದ ತಯಾರಿ ಹಂತವನ್ನು ಹೇಳಿಕೊಳ್ಳುತ್ತಲೇ ಲೊಳಲೊಟ್ಟೆ ನಿಲುವಿನ ಹೇಳಿಕೆಗಳನ್ನು ಅಮೀರ ಖಾನ ಬಗ್ಗೆ ಮಾತಾಡುತ್ತಿರುವುದು ಬೇಸರದ ಸಂಗತಿ. ನಾಟಕ ಮಾಡಿಸುವಾಗಲೂ ನಿರ್ದೇಶಕನೊಬ್ಬ ನಟನೊಂದಿಗೆ ತುಂಬ ಸೂಕ್ಷ್ಮವಾಗಿ ಕೆಲಸ ಮಾಡಲು ಹೆಣಗುತ್ತಾನೆ. ಅರೆ! ಸುಳ್ಳಸುಳ್ಳೆ ಮಾಡುವುದಕ್ಕೇಕೆ ಇಷ್ಟೊಂದು ತಾಲೀಮು ಎನ್ನುವ ನಟರು ಇಲ್ಲಿ ಸಿಗುತ್ತಾರೆ. ಆದರೆ ಒಂದು ತೆರನಾದ ಸಿನಿಮೀಯ ಅಳುವು ಆ ಪಾತ್ರದ ಆಳವನ್ನು ತೆರೆದಿಡಲು ಸಾಧ್ಯವಾಗಲಾರದು. ಅದನ್ನು ಮೀರುವ ಎಷ್ಟೋ ನೋವುಗಳು ಆ ಪಾತ್ರದ ಆ ಕ್ಷಣದ ನೋವಿನ ಮಡುವಿನಲ್ಲಿ ಸ್ಫೋಟಗೊಳ್ಳಲಿ ಎನ್ನುವ ಬಯಕೆಯಿಂದ ಅಳುವನ್ನು ಮೊಟಕುಗೊಳಿಸಲಾಗುತ್ತದೆ. ಭಾವವನ್ನು ಒತ್ತಿಡಲಾಗುತ್ತದೆ. ಅದರ ತಯಾರಿಯಲ್ಲಿ ನಾಟಕದವರೂ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಮಾಡುತ್ತಿರುತ್ತಾರೆ ಹೊರತು ನಾವು ಮಾಡಿದ್ದನ್ನೆ ನೀವು ನೋಡಿ ಎನ್ನುವ ಧಮಕಿಯಿಂದಲ್ಲ. ಆಗೆಲ್ಲ ನಿರ್ದೇಶಕ ಒಬ್ಬ ನಟನೊಡನೆ ಸಾಕಷ್ಟು ಹೊತ್ತು ಕಳೆಯಬೇಕಾಗುತ್ತದೆ. ಹಾಗೇಯೇ ಅಮೀರ ಖಾನ ಹೇಗೆಲ್ಲ ತಾಂತ್ರಿಕವಾಗಿ ತನ್ನ ಕಾರ್ಯಕ್ರಮ ರೂಪಿಸುತ್ತಾನೆ ಹೆಂಗೆ ತನ್ನ ಮಧ್ಯಮವರ್ಗೀಯ ಪ್ರೇಕ್ಷಕರನ್ನೆಲ್ಲ ಮರುಳುಗೊಳಿಸುತ್ತಾನೆಂದು ಇನ್ನೊಬ್ಬ ಜನಪ್ರಿಯ ಕಲಾ ಉತ್ಪಾದಕ ಒಂದು ಗುಣಾತ್ಮಕ ಕಾರ್ಯಕ್ರಮದ ರೂಪವನ್ನು ಒಡೆದು ನೋಡಲು ಪ್ರಯತ್ನಿಸುತ್ತಲಿರುತ್ತಾನೆ. ಆತನ ಉದ್ಧೇಶವೂ ತನ್ನ ತಾ ರಕ್ಷಿಸಿಕೊಳ್ಳುವುದಾಗಿರುತ್ತದೆ. ಮತ್ತು ಜನಮಾನಸವನ್ನು ತನ್ನ ಅಳಬುರಕ, ದ್ವೇಷಾಸೂಯೇ ಪ್ರಧಾನವಾದ ಕಥನವನ್ನೆ ಜಪಿಸುವಂತೆ ಪ್ರೇರೆಪಿಸುವುದಾಗಿರುತ್ತದೆ.

ಅರಿಸ್ಟಾಟಲ್ ಒಂದು ಕಡೆ, ರುದ್ರನಾಟಕದ ಕ್ರಿಯೆಯ ಜೀವಾತ್ಮದ ಸ್ವರೂಪವನ್ನು ಹೀಗೆ ಹೇಳುತ್ತಾರೆ:

“ವಸ್ತುವಿನ ಗುರಿಯು ಯಾವುದಾದರೂ ಇರಲಿ, ಅದನ್ನು ಸಾಧಿಸಲು ವಸ್ತುವು ಮೊದಲು ಸಿದ್ಧವಾಗಬೇಕು. ಹಾಗೆ ಸಿದ್ಧವಾಗುವುದು ಕೂಡ ಗುರಿಯನ್ನು ಸಾಧಿಸಲು ಅನುಕೂಲವಾದ ರೂಪದಲ್ಲಿ ಸಿದ್ಧವಾಗಬೇಕು. ಈ ಅನುಕೂಲ ರೂಪದ ಪ್ರಥಮ ಆವಿರ್ಭಾವ, ಆದ್ಯ ಅವತಾರವೇ ಅದರ ಆತ್ಮ. ಇದು ವಸ್ತುವಿನ ಪ್ರತ್ಯೇಕ ಅಂಗಗಳಲ್ಲಿರುವುದಿಲ್ಲ, ಆ ಅಂಗಗಳೆಲ್ಲವೂ ಒಂದು ಕ್ರಮದಲ್ಲಿ ಸಂಯೋಗವಾಗಿರುವ ಅದರ ರಚನೆಯಲ್ಲಿರುತ್ತದೆ. ಏಕೆಂದರೆ ಈ ಅಂಗಗಳಲ್ಲಿ ಕೆಲವು ನ್ಯೂನಾತಿರೇಕಗಳಿದ್ದರೂ ಉದ್ಧೇಶವನ್ನು ಸಂಪೂರ್ಣವಾಗಲ್ಲದಿದ್ದರೂ ಅಂಶತಃ ಸಾಧಿಸಬಹುದು. ಆದರೆ ರಚನೆಯಲ್ಲಿ ದೋಷವಿದ್ದರೆ ಅದು ಸಾಧ್ಯವೇ ಇಲ್ಲ.”

ಹೀಗೆ ವಿಮರ್ಶಾ ದೃಷ್ಟಿಯಿಂದ ನೋಡಿದಾಗ ಸತ್ಯಮೇವ ಜಯತೇ ಯಾವ ತಾಂತ್ರಿಕ ಮಾರ್ಗೋಪಾಯದಿಂದ ತಯಾರಾದರೂ ಅದು ಆಗು ಮಾಡುವ ಮತ್ತು ಅದರೊಳಗಿನ ಅಂತರ್ಬೋಧೆಯೇ ಮುಖ್ಯವಾಗುತ್ತದೆ. ಅದು ಮಾತ್ರ ಸಾಕು ಆ ಕಾರ್ಯಕ್ರಮದ ಪ್ರೇಕ್ಷಕನಿಗೆ. ಅದರಾಚೆಗಿನ ಸತ್ಯಶೋಧನೆ ಹುಸಿಯಾಗಿ ಎಲ್ಲೋ ಕಳೆದು ಹೋಗಿಬಿಡುತ್ತದೆ. ಆ ವಿಷಯದ ಸ್ಪಷ್ಟತೆ, ನಿಖರವಾದ ವಸ್ತುನಿರೂಪಣೆ, ಅದು ಆಗುಮಾಡುವ ಪರಿಣಾಮ, ಸಾಧ್ಯಾಸಾಧ್ಯತೆಗಳೆಲ್ಲದರ ನಡುವೆ ಒಂದು ಮಿತಿ ಇಲ್ಲೂ ಸೀಮಿತ ಚೌಕಟ್ಟನ್ನು ಹಾಕಿ ಕೊಟ್ಟಿರುತ್ತದೆ. ಜಾಗತಿಕ ಮಾರುಕಟ್ಟೆಯ ಪ್ರಚಾರಪ್ರಿಯತೆಗಳೂ ಕೂಡ ಈ ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಮಿಸಿರಬಹುದಾದ ಸಾಧ್ಯತೆಗಳು ಇದ್ದೆ ಇರುತ್ತವೆ. ಹಾಗಾಗಿ ಒಂದು ಕನಸು-ಆಶಯದ ಮಾರ್ಗದಲ್ಲಿ ವ್ಯಕ್ತಗೊಳ್ಳುವಾಗ ಗಲಬಲಿಗಳು ಆಗಿರುತ್ತವೆ ಮತ್ತು ಅದು ಒಟ್ಟು ಕಾರ್ಯಕ್ರಮದ ಮಿತಿಯೂ ಆಗಿರುತ್ತದೆ.

ಒಂದಷ್ಟು ಗುಂಪುಗಳು ಸಾರ್ವಜನಿಕ ಜಾಲತಾಣಗಳಲ್ಲಿ ಮೀಸಲಾತಿ ಕುರಿತಾಗಿ ಎಡಬಿಡಂಗಿ ದೃಶ್ಯಗಳನ್ನು ಅಪಲೋಡ್ ಮಾಡುತ್ತಲೇ ಇರುತ್ತಾರೆ. ಆ ಕುರಿತಾಗಿ ಒಂದು ಚರ್ಚೆ ನಡೆದದ್ದೇ ಆದರೆ ಅವರ ಆಕ್ರೋಶಕ್ಕೆ ಕಡಿವಾಣ ಹಾಕಬಹುದು. ಇಲ್ಲವೇ ಅದೊಂದು ಸಮಕಾಲೀನ ಜಾನಪದ ಅಭಿವ್ಯಕ್ತಿಯೆಂದು ಓಸರಿಸಿ ಅದೊಂದು ಮೌಢ್ಯ ಆಚರಣೆಯನ್ನು ಅಚ್ಚುಕಟ್ಟಾಗಿ ಆಚರಿಸಿಕೊಳ್ಳಲೆಂದು ಅವರ ಪಾಡಿಗೆ ಅವರನ್ನು ಬಿಟ್ಟು, ತೀರ ಹಳ್ಳಿಗಳಲ್ಲಿ ಇಂದಿಗೂ ಹೊಗೆಯಾಡುತ್ತಿರುವ ಜಾತಿ ಜಡತೆಯನ್ನು ಕಿತ್ತು ಹಾಕಲು ಶ್ರಮಿಸಬೇಕಾದ್ದು ಮುಖ್ಯ ಆಗಬೇಕಾದ ಕೆಲಸ. ನೌಕರಿಯಲ್ಲಿರುವ ಹಿಂದುಳಿದ ವರ್ಗದವರ ಬಗ್ಗೆ ಅನುಮಾನಗಳು ಮೂಡುತ್ತಿವೆ. ಹಳ್ಳಿ ಭಾಗದಲ್ಲಿ ನಿರಂತರ ಶೋಷಣೆ ಜಾರಿಯಲ್ಲಿರುವಾಗ ಇಂದು ಜಾತೀಯತೆ ನಿರ್ಮೂಲನೆ ಆಗಿದೆ ಎಂದು ಭ್ರಮಿಸಿಕೊಂಡು ಬದುಕುವ ಹೀನ ಜಾಯಮಾನದ ಶ್ರೇಷ್ಠತೆಯ ವ್ಯಸನ ಆವರಿಸಿರುವುದು ಸುಳ್ಳಲ್ಲ. ಈ ಹಳ್ಳಿಗಾಡಿನ ಅಪ್ಪ-ಅಮ್ಮಂದಿರು ಇದು ನಮ್ಮ ಕರ್ಮ ಎನ್ನುವಂತೆ ಬದುಕಿರುವಾಗ ಆ ವಿಷವರ್ತುಲದಿಂದ ಓದಿ ತಿಳಿದವರು ಹೊಳೆ ದಾಟಿದ ಮೇಲೆ ಬದಲಾವಣೆ ಆಯಿತೆಂದು ಬಗೆದರೋ ಏನೋ.. ಒಟ್ಟು ಸಾಮಾಜಿಕ ರಚನೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆಗುವುದನ್ನು ತಮ್ಮ ತುಷ್ಟಿಗುಣಕ್ಕೆ ಅನ್ವಯಿಸಿಕೊಂಡು ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಬಂಡವಾಳದಾರರು ಜನಜೀವನದ ಒಟ್ಟು ಆಶಯಗಳನ್ನು ರೂಪಿಸುತ್ತಿರುವಾಗ ಸತ್ಯಮೇವ ಜಯತೇ ಎಂಬಂಥ ಕಾರ್ಯಕ್ರಮಗಳು ಯಾವ ಮಾದರಿಯಲ್ಲಿದ್ದರೂ ಒಂದು ಸಂಚಲನ ಸುರುವಿಗೆ ನಾಂದಿ ಹಾಡಬಲ್ಲವು.

ಸತ್ಯಮೇವ ಜಯತೇ ಕಾರ್ಯಕ್ರಮ ಯಾವ ಕೆಲಸಗಳನ್ನು ಗುರುತಿಸಲಿ ಗುರುತಿಸದೇ ಇರಲಿ ತನ್ನ ಅಂತಃಸತ್ವದಲ್ಲಿ ಕರುಣಾರ್ದ್ರ ಕತೆಯೊಂದನ್ನು ನಿರೂಪಿಸಲು ತೊಡಗಿರುವುದೇ ಮಹತ್ವದ ಹೆಜ್ಜೆ. ಇವತ್ತಿನ ಇಂಡಿಯಾದ ಸಂದರ್ಭದಲ್ಲಿನ ವಿಷಾದಕರ ಸತ್ಯಗಳ ಜೊತೆಗೆ ರಾಜಿಯಾಗುತ್ತಲೇ ಹಲಕೆಲವು ತೇಪೆ ಹಚ್ಚುವ ಕಾರ್ಯಕ್ರಮಗಳನ್ನು ಭಾರಿ ಯೋಜನೆಗಳೆಂಬಂತೆ ಪ್ರತಿಬಿಂಬಿಸುತ್ತಿರುವ ಒಂದು ವರ್ಗ, ಪ್ರಗತಿಯ ವಿಲಕ್ಷಣ ರೂಪಗಳನ್ನು ಹುಚ್ಚುಹುಚ್ಚಾಗಿ ಸಂಭ್ರಮಿಸುತ್ತಿದೆ. ಸಮಾಜದ ಚಾರಿತ್ರಿಕ ಚಲನೆಯನ್ನು ವರ್ಲಿ ಚಿತ್ರದ ರೇಖೆಗಳಂತೆ ಸರಳವಾಗಿ ಗುರುತಿಸುತ್ತ, ಸಮಾಜವಿಜ್ಞಾನದ ಹೊಸ ವಿಘಟನೆಯನ್ನು ಹೊಸದೊಂದು ವ್ಯಾಖ್ಯಾನದಂತೆ ರೂಪಿಸುವ ಮೇಲ್ಮಧ್ಯಮ ವರ್ಗದವರಿಗೆ ಆ ಸರಳ ರೇಖೆಗಳ ಮಾಂತ್ರಿಕ ಚಲನೆಯ ಶಕ್ತಿ ಅರ್ಥವಾಗದಿರುವುದು ನಿಜಕ್ಕೂ ದುರಂತದ ಸಂಗತಿ. ಕಲೆಯ ಅಭಿವ್ಯಕ್ತಿಯ ಸ್ವರೂಪದಲ್ಲಿ ಸದಾ ಆಧುನಿಕತೆ ಪ್ರವೇಶ ಪಡೆಯುತ್ತಿರುತ್ತದೆ. ಕಾಲದೇಶದ ತುರ್ತಿನೊಂದಿಗೆ ಕಲಾಮಾರ್ಗಗಳು ಮಾರ್ಪಾಟಾಗುವ ಗಳಿಗೆಯಲ್ಲಿ ಸಮಾಜದ ಸ್ಪಷ್ಟ ಚಿತ್ರಣ ವ್ಯಕ್ತವಾಗದೆ ಬರಿ ಕೌಶಲವೇ ಮುಖ್ಯ ಎನ್ನಿಸಿದಾಗ, ಅದರಲ್ಲಿ ಬೆನ್ನೆಲುಬಿನ ಸ್ಥಿರತೆ ಅನುಮಾನ ಹುಟ್ಟಿಸುತ್ತದೆ. ಹಾಗೆ ಅನುಮಾನ ಹುಟ್ಟಿಸಲು ಎರಡು ಮಾರ್ಗಗಳು ಇಂದು ಪ್ರೇರಣೆ ಕೊಡುತ್ತಿವೆ. ಒಂದು ನಗರ ಜೀವನದ ಹುಸಿ ಆದರ್ಶದ ಕನಸು, ಮತ್ತೊಂದು ವ್ಯವಸ್ಥಿತವಾಗಿ ರಾಜಕೀಯ ಅಜಂಡಾಗಳನ್ನು ಇರುವ ಸೀಮಿತ ಕೃತಿಗಳಲ್ಲಿ ಹುಡುಕುವ ಹಪಹಪಿ. ಈ ಕಾರಣಗಳಿಂದಾಗಿಯೇ ವೈಭವೀಕರಿಸುವ ಸ್ವಕೀಯತೆ ನಮ್ಮನ್ನು ನಿಜವಾದ ಕಲಾಮಾರ್ಗದೊಂದಿಗೆ ದಿಕ್ಕು ತಪ್ಪಿಸುತ್ತಲೇ ಇರುತ್ತದೆ. ಆದಷ್ಟು ಜಾಗರೂಕರಾಗಿ ಆಯ್ಕೆ ಮಾಡಿಕೊಳ್ಳುವ ವಸ್ತುವಿಷಯಗಳು ಕೂಡ ನಮ್ಮನ್ನು ಕಪ್ಪು-ಬಿಳಿ ಗೆರೆಗಳ ನಡುವೆ ತಂದು ನಿಲ್ಲಸಿ ಬಿಡುವ ಆತಂಕದ ಸಂದರ್ಭಗಳು ಬಂದೊದಗುತ್ತವೆ. ಆಗೆಲ್ಲ ಒಂದು ತೆರನಾದ ಜಿಗುಪ್ಸಾಭಾವ ನಮ್ಮನ್ನ ಆಕ್ರಮಿಸಿ ಜಗತ್ತ ಶೂನ್ಯದ ತತ್ವಕ್ಕೆ ಕಟಿಬದ್ಧರನ್ನಾಗಿಸಿಬಿಡುತ್ತದೆ. ಹಾಗಾಗಿ ಇವತ್ತಿನ ದುರ್ದೆಸೆಯಲ್ಲಿ ಕಲಾಮಾಧ್ಯಮಗಳೂ ಈ ಒಂದು ವರ್ಗವನ್ನು ಉದಾಸೀನ ಮಾಡಿದೆ ಎಂದೇ ಹೇಳಬಹುದಾಗಿದೆ. ಆ ವರ್ಗದ ಕುರಿತಾಗಿ ಕಲಾ ಮಾಧ್ಯಮಗಳು ಕೆಲಸ ಮಾಡುವುದೇ ಅಪರೂಪ ಅಂಥದರಲ್ಲಿ ಅಮೀರ ಖಾನ ತನ್ನ ತಾಂತ್ರಿಕ ಮಿತಿಯೊಳಗೆ ಕಾರ್ಯಕ್ರಮದ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿಕೊಂಡು ಪ್ರಯತ್ನಿಸಿರುವುದು ಸ್ತುತ್ಯಾರ್ಹ.