Category Archives: ರವಿ ಕೃಷ್ಣಾರೆಡ್ಡಿ

ಕೇಜ್ರಿ ಕ್ರಾಂತಿ 2.0 : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

ಯುವ ಪತ್ರಕರ್ತ ಪ್ರಶಾಂತ್ ಹುಲ್ಕೋಡುprashant-hulkodu ನಮ್ಮ ವರ್ತಮಾನ.ಕಾಮ್ ಓದುಗರಿಗೆ ಪರಿಚಿತರು. ಈ ವರ್ಷದ ಅರಂಭದಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಎರಡು ವಾರ ಇದ್ದ ಅವರು ನಿಯಮಿತವಾಗಿ ಆಗ ವರ್ತಮಾನ.ಕಾಮ್‌ಗೆ ಬರೆದರು. ಆ ಚುನಾವಣೆಯ ಬಗ್ಗೆ ನಮ್ಮ ಕನ್ನಡದ ಯಾವ ಮಾಧ್ಯಮಗಳಲ್ಲೂ ಪ್ರಕಟವಾಗದೇ ಇದ್ದ ಮಾಹಿತಿಗಳನ್ನು ಆ ಲೇಖನಗಳು ನಮ್ಮ ಓದುಗರಿಗೆ ಒದಗಿಸಿದವು. ಬಹಳ ಮೆಚ್ಚುಗೆ ಪಡೆದ ಲೇಖನಗಳವು.

ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ನಂತರ ಈ ಯುವ ಪತ್ರಕರ್ತ ಮಿತ್ರ “ಕೇಜ್ರಿ ಕ್ರಾಂತಿ 2.0” ಎಂಬ ಸಾಕಷ್ಟು ದೀರ್ಘವಾದ ಪುಸ್ತಕವನ್ನೇ ಬರೆದಿದ್ದಾರೆ. ಅಣ್ಣಾ ಹಜಾರೆ ಹೋರಾಟದಿಂದ ಆರಂಭವಾಗಿ, ಆಮ್ ಆದ್ಮಿ ಪಕ್ಷದ ಉದಯ, ಅದು ಎದುರಿಸಿದ ಮೂರು ಚುನಾವಣೆಗಳು, ಆಂತರಿಕ ಮತ್ತು ಬಾಹ್ಯ ಸವಾಲುಗಳು, ಇತ್ಯಾದಿಗಳನ್ನು ಇಟ್ಟುಕೊಂಡು ಇಲ್ಲಿಯವರೆಗೆ ಹೊರಗೆ ಎಲ್ಲೂ ದಾಖಲಾಗದ ಪಕ್ಷದ ಮತ್ತು ಅದರ ಮುಖಂಡರ ಅನೇಕ ಆಂತರಿಕ kejri-kranti-2.0-invitationವಿಚಾರಗಳು ಮತ್ತು ವಿವರಗಳನ್ನು ಈ ಪುಸ್ತಕದಲ್ಲಿ ಪ್ರಶಾಂತ್ ದಾಖಲಿಸಿದ್ದಾರೆ. ನಮ್ಮ “ಮೌಲ್ಯಾಗ್ರಹ ಪ್ರಕಾಶನ”ದಿಂದ ಇದು ಪ್ರಕವಾಗುತ್ತಿದೆ. ಕನ್ನಡಕ್ಕೆ ಬಹಳ ಅಪರೂಪದ ಪುಸ್ತಕ ಇದು ಎನ್ನುವ ಹೆಮ್ಮೆಯ ಭಾವನೆ ನನ್ನದು.

ಈ ಪುಸ್ತಕ ಅಧಿಕೃತವಾಗಿ ನಾಡಿದ್ದು ಶುಕ್ರವಾರ ಸಂಜೆ 5:30 ಕ್ಕೆ ಫ್ರೀಡಂ ಪಾರ್ಕಿನಲ್ಲಿರುವ ಓವಲ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ನಮ್ಮೆಲ್ಲಾ ವರ್ತಮಾನ ಬಳಗದ ಪರವಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ಕಾರ್ಯಕ್ರಮದ ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ.

ನಿಮ್ಮ ಬರುವಿನ ನಿರೀಕ್ಷೆಯಲ್ಲಿ,
ರವಿ


kejri-kranti-2.0-coverpage

ಡಿಕೆ ರವಿ ಪ್ರಕರಣ : ಕಾಲಿಗೆ ಗುಂಡು ಕಟ್ಟಿಕೊಂಡು ನೀರಿಗಿಳಿದವರ ಪ್ರಲಾಪಗಳು…


– ರವಿ 


ಒಂದು ಅಸಹಜ ಸಾವಾಗಿದೆ. ಅದು ಆತ್ಮಹತ್ಯೆಯೊ ಕೊಲೆಯೋ? ಸತ್ಯ ಕೆಲವರಿಗಷ್ಟೇ ಗೊತ್ತು. ಜನಸಾಮಾನ್ಯರು ಕೊಲೆ ಎಂದು ಸಂಶಯ ಪಡುತ್ತಿದ್ದಾರೆ, ಯಾಕೆಂದರೆ ಸತ್ತ ವ್ಯಕ್ತಿ ದಕ್ಷನಾಗಿದ್ದ, ಪ್ರಾಮಾಣಿಕನಾಗಿದ್ದ, ಮತ್ತು ಪಟ್ಟಭದ್ರರನ್ನು ಎದುರು ಹಾಕಿಕೊಂಡಿದ್ದ. ಇದೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿತ್ತು, ಮತ್ತು ಮಾಧ್ಯಮಗಳುDKRavi_Kolar_PG ಹಾಗೆಯೇ ಜನಾಭಿಪ್ರಾಯ ರೂಪಿಸಿದ್ದವು. ಆತ್ಮಹತ್ಯೆ ಆಗಿದ್ದರೂ ಆತ ಕೇವಲ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿರಲಾರ, ಯಾರೋ ಆತನನ್ನು ಅಂತಹ ಒಂದು ಪರಿಸ್ಥಿತಿಗೆ ದೂಡಿರಬಹುದು. ಹಾಗಿದ್ದರೆ ಅವರು ಯಾರು? ಇನ್ನು ಅದು ಕೇವಲ ವೈಯಕ್ತಿಕ ಕಾರಣಗಳಿಗೆ ಆಗಿರುವ ಆತ್ಮಹತ್ಯೆ ಆದರೆ ಏನದು ವೈಯಕ್ತಿಕ ವಿಚಾರ? ಕೊಲೆಯೋ, ಪ್ರಚೋದಿತ ಅತ್ಮಹತ್ಯೆಯೋ, ಸರಳ ಆತ್ಮಹತ್ಯೆಯೋ? ಮೂರನೆಯ ಕಾರಣದಿಂದ ಆಗಿದ್ದರೆ ಜನ ಬೇಸರ ವ್ಯಕ್ತಪಡಿಸಿ ಸುಮ್ಮನಾಗುತ್ತಾರೆ. ಮೊದಲೆರಡು ಕಾರಣದಿಂದ ಅಗಿದ್ದಾದಲ್ಲಿ ಅದು ಅವರಿಗೆ ವ್ಯವಸ್ಥೆಯ ಮೇಲೆ ಸಿಟ್ಟು ತರಿಸುತ್ತದೆ, ಅವಿಶ್ವಾಸ ಮೂಡಿಸುತ್ತದೆ, ಭ್ರಷ್ಟರ ಕಬಂಧ ಬಾಹುಗಳು ಎಲ್ಲಿಯವರೆಗೂ ಚಾಚಿರುವ ಪರಿ ನೋಡಿ ಬೆಚ್ಚಿ ಬೀಳುತ್ತಾರೆ.

ಇಂತಹ ಸಂಶಯದ ಸಮಯದಲ್ಲಿ ಸರ್ಕಾರಗಳು ತಮ್ಮ ಮೇಲೆ ಜನರ ವಿಶ್ವಾಸ ಬೆಳೆಯುವ ರೀತಿಯಲ್ಲಿ ನಡೆದುಕೊಳ್ಳಬೇಕು.

ಆದರೆ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೊದಲ ದಿನದಿಂದಲೂ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಹಾಳುಮಾಡಿಕೊಳ್ಳುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಲೇ ಬಂತು. ಅದನ್ನು ಸರಿಪಡಿಸಲು ಅಧಿಕಾರವಾಗಲಿ, ಶಕ್ತಿಯಾಗಲಿ ಇಲ್ಲದ ಕೆಲವು ಸರ್ಕಾದ ಪರ ವಕ್ತಾರರು ಈಗ ತಮ್ಮ ಸರ್ಕಾರದ ಮತ್ತು ಪಕ್ಷದ ತಪ್ಪಿಗೆ ಬೇರೆಯವರ ಮೇಲೆ ಆರೋಪ, ಅವಿಶ್ವಾಸ, ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಅಯೋಗ್ಯತೆಗೆ, ತಪ್ಪಿಗೆ ಇನ್ನೊಬ್ಬರು ಊರುಗೋಲಾಗಬೇಕೆಂದು ಬಯಸುತ್ತಿದ್ದಾರೆ. ದೇಶದಲ್ಲಿ ಉಳಿದಿರುವ ಕಾಂಗ್ರೆಸ್ ಆಡಳಿತದ ದೊಡ್ಡ ರಾಜ್ಯ ಇದೊಂದೇ, ಇದನ್ನು ದುರ್ಬಲಗೊಳಿಸಬೇಡಿ ಎಂದು ಬೇಡುತ್ತಿದ್ದಾರೆ. ರಾಷ್ಟ್ರದಲ್ಲಿ ಅಮಿತ್ ಶಾ ಮತ್ತು ಮೋದಿಯನ್ನು ಎದುರುಗೊಳ್ಳುವುದು ಎಂದರೆ ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳುವುದು ಎನ್ನುವ “ಅಂತಿಮ ಸತ್ಯ”ಕ್ಕೆ ಇವರು ಶರಣಾಗಿಬಿಟ್ಟಿದ್ದಾರೆ. ನಿಜವೇ?

ವೈಯಕ್ತಿಕವಾಗಿ ನನಗೆ ಸಿದ್ಧರಾಮಯ್ಯನವರ ಬಗ್ಗೆ ಗೌರವವಿದೆ. ಅದನ್ನು ಹಲವು ವೇದಿಕೆಗಳಲ್ಲಿ ಬಹಿರಂಗವಾಗಿ ಹೇಳಿದ್ದೇನೆ. dkravi-kolar-dalitsಅದೇ ರೀತಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಲೇ ಬಂದಿದ್ದೇನೆ. (ಅವರಿಗೆ ನನ್ನ ಪರಿಚಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಂಡೂರಿನ ವಿಚಾರಕ್ಕೊಮ್ಮೆ ಮತ್ತು ಹಾರೋಹಳ್ಳಿಯ ವಿಚಾರಕ್ಕೊಮ್ಮೆ ಅವರ ಬಳಿ ಮಾತನಾದಲು ಎಚ್.ಎಸ್.ದೊರೆಸ್ವಾಮಿಯವರು ನನ್ನನ್ನೂ ಕರೆದೊಯ್ದಿದ್ದರು. ಆದರೆ, ಅವರಿಗೆ ನನ್ನನ್ನು ಪರಿಚಯಿಸಿದ ನೆನಪಿಲ್ಲ. ಈ ಮನುಷ್ಯನಿಗೆ ಕಾಳಜಿಗಳಿರುವುದು ನಿಜ.) ಅದರೆ ಅವರು ನಾನು ನಿರೀಕ್ಷಿಸಿದಷ್ಟು ಮತ್ತು ನಿರೀಕ್ಷಿಸಿದ್ದನ್ನು ಮಾಡುತ್ತಿದ್ದಾರೆ ಎಂದು ಹೇಳಲಾರೆ. ಹಲವು ಒಳ್ಳೆಯ ತೀರ್ಮಾನಗಳನ್ನು (ಕೆಪಿಎಸ್‌ಸಿ, ಮಂಡೂರು, ಹಲವು ಜನಪರ ಯೋಜನೆಗಳು ಮತ್ತು ಭಾಗ್ಯಗಳು, ಇತ್ಯಾದಿ) ಕೈಗೊಂಡಿದ್ದಾರೆ. ಹಾಗೆಯೆ ಹಲವು ಕೆಟ್ಟ (ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಮಹದೇವಪ್ಪ, ರೋಷನ್ ಬೇಗ್, ದೇಶಪಾಂಡೆ ಯಂತಹ ಭ್ರಷ್ಟ ಮಂತ್ರಿಗಳ ರಕ್ಷಣೆ, ಕೆಪಿಎಸ್‌ಸಿ ಹಗರಣವನ್ನು ನಿಭಾಯಿಸಿದ ರೀತಿ, ಅರ್ಕಾವತಿ ಪ್ರಕರಣ ಮತ್ತು ಗಣಿ ಲೈಸನ್ಸ್ ನೀಡಿಕೆಯಲ್ಲಿಯ ಸಂಶಯಗಳು, ಲೋಕಾಯುಕ್ತವನ್ನು ಬಲಹೀನ ಮಾಡಲು ಹೋಗಿದ್ದು, ಅಧಿಕಾರಿಗಳ ನೇಮಕಾತಿಯಲ್ಲಿ ಲೋಪಗಳು, ಸರ್ಕಾರದಲ್ಲಿ ಮುಂದುವರಿದ ಮತ್ತು ಹೆಚ್ಚಿದ ಭ್ರಷ್ಟತೆ, ಇತ್ಯಾದಿ) ತೀರ್ಮಾನಗಳನ್ನೂ ತೆಗೆದುಕೊಂಡಿದ್ದಾರೆ. ಆದರೆ, ಇವರು ತಾವು ಮಾಡುತ್ತಿರುವ ತಪ್ಪಿಗಿಂತ ಹೆಚ್ಚಾಗಿ ತಮ್ಮ ಆಪ್ತರ ತಪ್ಪುಗಳನ್ನು ಪೋಷಿಸುತ್ತಿದ್ದಾರೆ. ಹಾಗೆಂದು ಜನರೂ ಭಾವಿಸುತ್ತಿದ್ದಾರೆ. ಇದಕ್ಕೆ ಸಿದ್ಧರಾಮಯ್ಯನವರೇ ಹೊಣೆಯೇ ಹೊರತು ಬೇರೆಯವರಲ್ಲ.

ಡಿಕೆ ರವಿ ಪ್ರಕರಣಕ್ಕೆ ವಾಪಸು ಬರುವುದಾದರೆ, ಈಗಾಗಲೆ ಈ ತನಿಖೆಯನ್ನು ಸಿಐಡಿ ಯವರು ನಡೆಸುತ್ತಿದ್ದಾರೆ. ಅದರೆ ರಾಜ್ಯದ ಬಹುತೇಕ ಜನ ಸಿಬಿಐ ಬೇಕು ಎಂದರು. ಯಾಕೆಂದರೆ ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ಮಾಫಿಯಾಗಳ, ಸರ್ಕಾರದ ಕೆಲವು ಮಂತ್ರಿಗಳ, ಆಡಳಿತ ಪಕ್ಷದ ಕೆಲವು ಶಾಸಕರ ಪಾತ್ರ ಇರಬಹುದು ಎಂಬ ಗುಮಾನಿ ಜನರಿಗೆ ಬಂತು. ಅದರಲ್ಲಿ ಕೆಲವು ಗುಮಾನಿಗಳನ್ನು ಮಾಧ್ಯಮದ ಒಂದು ವರ್ಗ ಹಬ್ಬಿಸಿದ್ದೇ ಆಗಿರಬಹುದು. ಅದನ್ನು ಎಂದಿನಂತೆ ಈ ಸರ್ಕಾರ ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಿಭಾಯಿಸಲು ಸೋತೂ ಹೋಯಿತು. (ರಾಜ್ಯದ ಆಡಳಿತ ನಡೆಸುವವರು ಕೇವಲ ಸರ್ಕಾರವನ್ನು ಭ್ರಷ್ಟತೆಯಿಂದ ಮುಕ್ತವಾಗಿಡುವ ಕೆಲಸ ಮಾಡಿದರಷ್ಟೇ ಸಾಲದು; ಸಮಾಜವನ್ನು ಕೆಲವು ಭ್ರಷ್ಟತೆಗಳಿಂದ ಮುಕ್ತ ಮಾಡುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಅದಕ್ಕೆ ತೊಡರುಗಾಲುಗಳು ಸಹಜ. ಸರ್ಕಾರದ ಮೌಲ್ಯಗಳು ಜನರ ಮೌಲ್ಯಗಳಾಗದಿದ್ದಲ್ಲಿ ಸರ್ಕಾರಕ್ಕೆ ಜನಬೆಂಬಲ ಕ್ಷೀಣಿಸುತ್ತದೆ. ತನ್ನ ಮೌಲ್ಯಗಳನ್ನು ಅಪಮೌಲ್ಯಗಳನ್ನಾಗಿ ತಿರುಚಿ ವರದಿ ಮಾಡುವ ಮಾಧ್ಯಮಗಳ ಕೆಲವು ಭ್ರಷ್ಟರನ್ನು ಗೊತ್ತಿದ್ದೂ ಈ ಸರ್ಕಾರ ಪೋಷಿಸುತ್ತಾ ಬಂದಿದೆ. ಅವರ ಅಕ್ರಮಗಳಲ್ಲಿ ತಾನೂ ಪಾಲು ಪಡೆದುಕೊಂಡಿದೆ. ಅಂತಹವರನ್ನೇ ಆರಿಸಿ ತನ್ನ ಸಲಹೆಗಾರರನ್ನಾಗಿಯೂ ಮಾಡಿಕೊಳ್ಳುತ್ತದೆ. dkravi-cm-siddharamaiahತಾನೇ ನೈತಿಕವಾಗಿ ಶುದ್ಧವಾಗಿರದ ಮನುಷ್ಯ ಬೇರೆಯವರನ್ನು ಶುದ್ಧ ಮಾಡುವುದು ಕಠಿಣ ಸವಾಲು.)

ಎಂದಿನಂತೆ ಜನಾಭಿಪ್ರಾಯದ ವಾಸನೆ ಹಿಡಿದ ವಿರೋಧ ಪಕ್ಷಗಳು, ಈ ಸಾವಿನಲ್ಲಿಯ ಸಂಶಯಗಳು ಸರ್ಕಾರದ ಮಂತ್ರಿಗಳ ತನಕವೂ ಹೋಗಬಹುದು ಎಂದು ಗೊತ್ತಾದಾಗ ಸರ್ಕಾರವನ್ನು ಮುಜುಗರಪಡಿಸುವ ಕಾರಣಕ್ಕೆ ಸಿಬಿಐ ತನಿಖೆ ಆಗಲೇಬೇಕು ಎಂದು ಧರಣಿ ಕೂತವು. ಆದರೆ ಸರ್ಕಾರ ಸಿಬಿಐ ಸಾಧ್ಯವೇ ಇಲ್ಲ ಎಂದಿತು. ಅದು ಸಹಜ. ಆದರೆ ಅದು ಪಟ್ಟು ಹಿಡಿದ ರೀತಿ, ಕೊಟ್ಟ ಕಾರಣಗಳು, ತೇಲಿಬಿಟ್ಟ ಮಾತುಗಳು, ಸಾಕ್ಷ್ಯಗಳನ್ನು ಕಳ್ಳತನದಲ್ಲಿ ಸೋರಿಕೆ ಮಾಡಿದ ರೀತಿ, ಕೆಲವು ಮಾಧ್ಯಮಗಳಲ್ಲಿ ನೆಟ್ಟಿಸಿದ ಸುದ್ದಿಗಳು, ಇವೆಲ್ಲವೂ ಸರ್ಕಾರದ ಬಗ್ಗೆ ಅವಿಶ್ವಾಸವನ್ನು ಬೆಳೆಸುತ್ತಲೇ ಹೋದವು. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಬಳಸಬೇಕಾಗಿ ಬಂದಿದೆ.

ಈ ಸರ್ಕಾರದ ಅತಿ ಅದಕ್ಷ ಮಂತ್ರಿಗಳಲ್ಲಿ ಗೃಹಮಂತ್ರಿ ಕೆ.ಜೆ. ಜಾರ್ಜ್ ಸಹ ಒಬ್ಬರು. ಅವರ ಮೇಲೆ ಭ್ರಷ್ಟಾಚಾರದ ನೇರ ಅರೋಪಗಳಿಲ್ಲದಿದ್ದರೂ ದಕ್ಷತೆಯಿಂದ ಕೆಲಸ ಮಾಡಿ ತೋರಿಸಿದ್ದನ್ನು ಈ ರಾಜ್ಯದ ಜನತೆ ಕಂಡಿಲ್ಲ. ಹಾಗೆಯೇ ಅವರೊಬ್ಬ ರಾಜಕೀಯಕ್ಕೆ ಬಂದನಂತರ ಹೆಚ್ಚು ಶ್ರೀಮಂತರಾಗಿರುವವರು ಎಂಬ ಭಾವನೆಯೂ ಇದೆ. ಅವರ ಖಾತೆಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಗಂಭೀರವಾಗಿ ಎಡವಿ ಜನರ ಮುಂದೆ ನಗೆಪಾಟಲಿಗೀಡಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಜನತೆಯ ವಿಶ್ವಾಸ ಕಳೆದುಕೊಂಡ ಮಂತ್ರಿಯನ್ನು ತನ್ನ ಸಂಪುಟದಲ್ಲಿಟ್ಟುಕೊಳ್ಳುವ ಮುಖ್ಯಮಂತ್ರಿ ಸಹಜವಾಗಿ ತಾವೂ ಆ ವಿಶ್ವಾಸದ ಕೊರತೆಯನ್ನು ಎದುರಿಸುತ್ತಾರೆ. ಇನ್ನು ಡಿಕೆ ಶಿವಕುಮಾರ್ ಎನ್ನುವ ಇನ್ನೊಬ್ಬ ಮಂತ್ರಿಯ ಬಗ್ಗೆ ಹೇಳುವುದೇ ಬೇಡ. ಸುಮಾರು ಒಂದು ದಶಕದ ಅವಧಿಯಲ್ಲಿ ಸಹಸ್ರಾರು ಕೋಟಿ ರೂಗಳ ಒಡೆಯರಾಗಿದ್ದಾರೆ ಅವರು. ಬಹುಶಃ ಇಪ್ಪತ್ತೈದರ ವಯಸ್ಸಿಗೆಲ್ಲ ಜನಪ್ರತಿನಿಧಿಯಾಗಿ ಆಯ್ಕೆಯಾದ ಇವರು ಅಲ್ಲಿಂದ ಇಲ್ಲಿಯತನಕ ಜನಪ್ರತಿನಿಧಿಯಾಗಿಯೇ ಮುಂದುವರೆದಿದ್ದಾರೆ. ಎಲ್ಲಿಯೂ ಬ್ರೇಕ್ ಇಲ್ಲ. ಆದರೂ ಹೇಳಿಕೊಳ್ಳುವುದು “ತಾನೊಬ್ಬ ಬ್ಯುಸಿನೆಸ್ ಮ್ಯಾನ್” ಎಂದು. ಧಂಧೆ ಮಾಡುವ ಜನ ಧಂಧೆ ಮಾಡಬೇಕೆ ಹೊರತು ಸಂಪುಟದಲ್ಲಿರಬಾರದು. ಇಟ್ಟುಕೊಂಡವರ್ಯಾರು, ಸಹಿಸಿಕೊಂಡವರ್ಯಾರು? ಡಿಕೆ ರವಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಜನರ ರೊಚ್ಚು ಡಿಕೆ ಶಿವಕುಮಾರರ ಮೇಲೆ ತಿರುಗಿತ್ತು ಮತ್ತು ಅವರನ್ನು ಅಲ್ಲಿ ಸೇರಿದ್ದ ಜನ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಮಾಧ್ಯಮ ಮಿತ್ರರು ಹೇಳುತ್ತಾರೆ. ಆ ಉಗಿತದ ಅಂತಿಮ ನಿಲ್ದಾಣ ಮುಖ್ಯಮಂತ್ರಿಯ ಹೆಗಲು. ಹೀಗೆ ಇನ್ನೂ ಹಲವು ಭ್ರಷ್ಟ-ಕಳಂಕಿತ ಮಂತ್ರಿಗಳ ಪಟ್ಟಿ ಕೊಡಬಹುದು. ಇನ್ನು ಅದಕ್ಷ ಮಂತ್ರಿಗಳ ಪಟ್ಟಿಯಂತೂ ಬಹಳ ದೊಡ್ಡದಿದೆ. ತನ್ನ ಸಂಪುಟದಲ್ಲಿರುವ ಒಳ್ಳೆಯ ಸಚಿವರ ಕೆಲಸದ ಕ್ರೆಡಿಟ್ ಮುಖ್ಯಮಂತ್ರಿಗಳಿಗೆ ಸಲ್ಲುವುದು ಅಪರೂಪ. ಅದರೆ ಅದಕ್ಷ ಮತ್ತು ಭ್ರಷ್ಟ ಸಚಿವರ ಕಳಂಕಗಳು ಅವರು ಸಂಪುಟದಲ್ಲಿರುವ ತನಕ ಮುಖ್ಯಮಂತ್ರಿಗಳಿಗೇ ಅಂಟಿಕೊಳ್ಳುತ್ತಿರುತ್ತದೆ. ಈ ಮುಖ್ಯಮಂತ್ರಿ ಕಾಲಿಗೆ ಗುಂಡುಕಲ್ಲುಗಳನ್ನು ಕಟ್ಟಿಕೊಂಡು ಆಳದ ಹೊಳೆಯಲ್ಲಿ ಈಜಲು ಇಳಿದಿದ್ದಾರೆ. ಬಹುತೇಕ ಸಂದರ್ಭದಲ್ಲಿ ಅದು ಅವರದೇ ಆಯ್ಕೆ ಅಗಿದೆ. ಅದು ಅವರ ಆಯ್ಕೆ ಅಲ್ಲ, ಅದು ಹೇರಿಕೆ ಎಂದು ಹೇಳುವವರು ಆತ್ಮದ್ರೋಹ ಮಾಡಿಕೊಳ್ಳುತ್ತಿದ್ದಾರೆ.

ಸರ್ಕಾರದಲ್ಲಿರುವ ಕೆಲವರು ಮತ್ತವರ ಬೆಂಬಲಿಗರು ಕಳೆದ ಎರಡು ಮೂರು ದಿನಗಳಿಂದ ಡಿಕೆ ರವಿಯ ಸಾವು ಸಂಪೂರ್ಣವಾಗಿ ವೈಯಕ್ತಿಕ ನೆಲೆಯದ್ದು ಎಂದು ಹೇಳುತ್ತಿದ್ದಾರೆ ಮತ್ತು ಸಿಬಿಐ ತನಿಖೆ ಬೇಡ ಎನ್ನುತ್ತಿದ್ದಾರೆ. ಸಿಬಿಐಗೆ ಕೊಟ್ಟರೆ ಸಿಐಡಿ ಪೋಲಿಸರ ಸ್ಥೈರ್ಯ ಕುಗ್ಗುತ್ತದೆ ಎನ್ನುವ ಮಾತೂ ಅಡುತ್ತಿದ್ದಾರೆ. ಮತ್ತು ಅದೇ ಸಂದರ್ಭದಲ್ಲಿ ಬಿಜೆಪಿಯವರು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸಂಚಕಾರ ತರುತ್ತಾರೆ ಎನ್ನುವ ಭಯಾತಂಕಗಳನ್ನೂ ತೋಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಿಐಡಿ ಪೋಲಿಸರ ಸ್ಥೈರ್ಯ ಕುಗ್ಗುತ್ತದೆ ಎನ್ನುವ ಮಾತಂತೂ ದುರ್ಬಲ ವಾದ. ಎಷ್ಟು ನಿಷ್ಪಕ್ಷಪಾತ ಸಿಐಡಿ ತನಿಖಾ ವರದಿಗಳನ್ನು ಈ ಸರ್ಕಾರ ಒಪ್ಪಿಕೊಂಡಿದೆ ಮತ್ತು ಎಷ್ಟು ತನಿಖೆಗಳಲ್ಲಿ ಮಂತ್ರಿ-ಮುಖ್ಯಮಂತ್ರಿಗಳು ಪ್ರಭಾವ ಬೀರದೆ ಅವರ ಸ್ಥೈರ್ಯ ಮತ್ತು ಪ್ರಾಮಾಣಿಕತೆ ಹೆಚ್ಚಿಸಿದ್ದಾರೆ? ಎಷ್ಟು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಈ ಸರ್ಕಾರ ಉತ್ತೇಜಿಸಿದೆ ಮತ್ತು ಎಷ್ಟು ಭ್ರಷ್ಟ ಮತ್ತು ಅದಕ್ಷ ಅಧಿಕಾರಿಗಳನ್ನು ಈ ಸರ್ಕಾರ ಶಿಕ್ಷಿಸಿದೆ ಅಥವ ಸರಿದಾರಿಗೆ ತಂದಿದೆ?

ಇವರ ಏಕೈಕ ಭಯ ಇರುವುದು ಸಿಬಿಐ ತನಿಖೆಗೆ ಕೊಟ್ಟರೆ ಬಿಜೆಪಿಯವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದು. dkravi-parents-siddharamaiahಮೊಟ್ಟಮೊದಲಿಗೆ ಅಂತಹ ಭಯಕ್ಕೆ ಕಾರಣಕರ್ತರು ಯಾರು? ಕೇಂದ್ರದಲ್ಲಿ ಇತ್ತೀಚೆಗೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನವರೇ ತಾನೆ? ಕೇಂದ್ರ ಸರ್ಕಾರದ ಆಡಳಿತ ಪಕ್ಷ ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳದಂತೆ ಕಾನೂನು ತನ್ನಿ ಎಂದು ಕಾಂಗ್ರೆಸ್ ಮೇಲೆ ಇಡೀ ದೇಶದಲ್ಲಿ ಎಷ್ಟು ಒತ್ತಡ ಇರಲಿಲ್ಲ? ಆ ಬೇಡಿಕೆ ಕೆಟ್ಟ ಬೇಡಿಕೆ ಆಗಿತ್ತೆ? ಜನವಿರೋಧಿ ಆಗಿತ್ತೆ? ಅಪ್ರಜಾಸತ್ತಾತ್ಮಕ ಆಗಿತ್ತೇ? ಅನೈತಿಕವಾದದ್ದಾಗಿತ್ತೆ? ಆಗಿಲ್ಲದಿದ್ದಲ್ಲಿ ಯಾಕೆ ಮಾಡಲಿಲ್ಲ? ನೀವು ಮಾತ್ರ ಅದರ ದುರುಪಯೋಗದ ಉಪಯೋಗ ಪಡೆಯಬೇಕು. ಬೇರೆಯವರು ಅದನ್ನೇ ಪಡೆಯಲು ಹೋದಾಗ ಅಗ ನಿಮಗೆ ಭೂತಕಾಲದ ನಿಮ್ಮ ಅಕೃತ್ಯಗಳು ಮತ್ತು ಜವಾಬ್ದಾರಿಹೀನತೆ ಮರೆತುಹೋದವೇ? ಹೋಗಲಿ, ನಿಮ್ಮ ಪಕ್ಷದ ಕೇಂದ್ರದ ನಾಯಕರ ವಿಚಾರ ಬೇಡ. ಇಲ್ಲಿ ರಾಜ್ಯದಲ್ಲಿ ನೀವು ಸ್ವತಂತ್ರ ತನಿಖಾ ಸಂಸ್ಥೆಯನ್ನೇನಾದರೂ ಕಟ್ಟಲು ಮುಂದಾಗಿದ್ದೀರಾ? ಇದೇ ಸಿದ್ಧರಾಮಯ್ಯನವರು ಈಗ ಅಷ್ಟಿಷ್ಟು ಸ್ವತಂತ್ರವಾಗಿರುವ ಲೋಕಾಯುಕ್ತ ಸಂಸ್ಥೆಯನ್ನೇ ಬಲಹೀನ ಮಾಡುವ ನೀಚಕೃತ್ಯಕ್ಕೆ ಮುಂದಾಗಿದ್ದರು. ನೀವೆಂದಾದರೂ ಪ್ರಬಲ, ಬಲಿಷ್ಟ, ಸ್ವತಂತ್ರ, ಪ್ರಜಾಸತ್ತಾತ್ಮಕ, ಸಂವಿಧಾನಾತ್ಮಕ ಸಂಸ್ಥೆಗಳನ್ನು ಕಟ್ಟಲಾಗಲಿ, ಬಲಗೊಳಿಸಲಾಗಲಿ ಮುಂದಾಗಿದ್ದೀರಾ? ನೀವು ದಾರಿ ತೋರಿಸಿದ್ದರೆ, ಇನ್ನೊಬ್ಬರ ಅನೈತಿಕತೆ ಮತ್ತು ಅಕ್ರಮಗಳನ್ನು ಎತ್ತಿ ತೋರಿಸುವ ನೈತಿಕತೆ ಇರುತ್ತಿತ್ತು. ಜನ ನಿಮ್ಮ ಮಾತುಗಳನ್ನು ವಿನಾಕಾರಣ ಸಂಶಯಪಡದೆ ನಂಬುತ್ತಿದ್ದರು. ನಿಮ್ಮ ವಿಶ್ವಾಸಾರ್ಹತೆ ಕುಗ್ಗಲು ಕಾರಣ ಯಾರು?

ಇನ್ನು ಬಿಜೆಪಿಯವರು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂತಲೇ ಇಟ್ಟುಕೊಳ್ಳೋಣ. ಹೇಗೆ? ನೀವು ತಪ್ಪೇ ಮಾಡಿಲ್ಲ ಎನ್ನುತ್ತಿದ್ದೀರಿ. ಹಾಗಿದ್ದಲ್ಲಿ ಯಾವ ರೀತಿಯ ದುರುಪಯೋಗ ಆಗಬಹುದು? ಕೆಜೆ ಜಾರ್ಜ್‌ರನ್ನು, ಡಿಕೆ ಶಿವಕುಮಾರರನ್ನು, ಕೊನೆಗೆ ಮುಖ್ಯಮಂತ್ರಿಯನ್ನೂ ಸಮನ್ ಮಾಡಬಹುದು ಎನ್ನುವುದಲ್ಲವೇ ನಿಮ್ಮ ಭಯ? ಹಾಗಿದ್ದಲ್ಲಿ, ಡಿಕೆ ರವಿ ತಾನು ಮುಖ್ಯಮಂತ್ರಿಯ ಅಧೀನದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ಕಮಿಷನರ್ ಅಗಿದ್ದಾಗ ಕೆಜೆ ಜಾರ್ಚ್‌ರಿಗೆ ಸಂಬಂಧಿಸಿದ ಕಂಪನಿಯ ಮೇಲೆ ದಾಳಿ ಮಾಡಿದ್ದು ನಿಜ ತಾನೆ? ಆ ದಾಳಿಯ ಮೊದಲು ಅಥವ ನಂತರ ಜಾರ್ಜ್‌ರವರು ರವಿಯ ಮೇಲೆ ಅಕ್ರಮ ಒತ್ತಡಗಳನ್ನು ತರದೇ ಇದ್ದಲ್ಲಿ ಭಯ ಏಕೆ? ಅವರು ಹಾಗೆ ಮಾಡಿದ್ದೇ ಆದಲ್ಲಿ ಅವರಿಗೆ ಶಿಕ್ಷೆಯಾಗಬೇಕೆ ಬೇಡವೆ? ಇದೇ ಪ್ರಶ್ನೆಯನ್ನು ನಾವು ಡಿಕೆ ಶಿವಕುಮಾರರ ವಿಚಾರಕ್ಕೂ ಕೇಳಬಹುದು. ಇನ್ನು ತನ್ನ ಅಧೀನ ಅಧಿಕಾರಿಯಾಗಿದ್ದ ಮನುಷ್ಯ ಅಸಹಜ ಸಾವು ಅಪ್ಪಿದಾಗ ಮೇಲಧಿಕಾರಿಗಳನ್ನೂ ವಿಚಾರಣೆ ಮಾಡುವುದು ಸಹಜ ಪ್ರಕ್ರಿಯೆ. ಹಾಗಾಗಿ ಮುಖ್ಯಮಂತ್ರಿಯನ್ನೂ ಈ ಕಾರಣಕ್ಕೆ ಕರೆದು ವಿಚಾರಣೆ ಮಾಡಿದರೆ ಅದನ್ನು ತಪ್ಪೆಂದು ಭಾವಿಸಬಾರದು. ಸಿಐಡಿ ಸಂಸ್ಥೆಯು ಸ್ವತಂತ್ರವಾಗಿದ್ದ ಪಕ್ಷದಲ್ಲಿ ಅದು ಈಗಾಗಲೆ ಮುಖ್ಯಮಂತ್ರಿಯವರ ಹೇಳಿಕೆಯನ್ನೂ ಪಡೆಯುತ್ತಿತ್ತು. ಪಡೆಯದೇ ಇದ್ದರೆ, ನೀವು ನ್ಯಾಯಪಕ್ಷಪಾತಿಯಾಗಿದ್ದಲ್ಲಿ ಅದನ್ನು ಒತ್ತಾಯಿಸುತ್ತೀರಿ ಸಹ. ನಮ್ಮ ಫ್ಯೂಡಲ್ ವ್ಯವಸ್ಥೆಯ ಅಧಿಕಾರದ ಮದದಿಂದಲೋ, ಅಥವ ದುರುಪಯೋಗದಿಂದಲೋ, ಅಥವ ತನಿಖಾಧಿಕಾರಿಗಳಿಗೇ ಸ್ವತಃ ಧೈರ್ಯ ಇರದೇ ಇರುವುದರಿಂದಲೋ ಇಲ್ಲಿ ಆ ಸಹಜ ಪ್ರಕ್ರಿಯೆ ಸಾಧ್ಯವಾಗಿಲ್ಲ. ಮಾಡಬೇಕಾದ ಕೆಲಸವನ್ನು ಸಿಬಿಐ ಮಾಡಿದರೆ ಅದನ್ನು ದುರುಪಯೋಗ ಎಂದೇಕೆ ಹೇಳಬೇಕು? (ಇನ್ನು ಡಿಕೆ ರವಿಯವರನ್ನು ಕೋಲಾರದಿಂದ ಬೆಂಗಳೂರಿಗೆ ಅವಧಿಗೆ ಮುಂಚೆಯೇ ವರ್ಗ ಮಾಡಲು ಇದ್ದ ಕಾರಣಗಳೇನು, ಆಯಾಮಗಳೇನು ಎನ್ನುವುದೂ ಬಯಲಾಗಬೇಕು. ಅವರು ವರ್ಗಾವಣೆ ಅಗುವುದಕ್ಕೆ ಮೊದಲು ಮತ್ತು ಸಾಯುವ ಮೊದಲು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅವರು ಕೈಗೆ ತೆಗೆದುಕೊಂಡಿದ್ದ ಕೆಲಸಗಳೇನು ಎನ್ನುವುದೂ ಅ ವಿಚಾರಣೆಯಲ್ಲಿ ದಾಖಲಾಗಬೇಕು. ಇವೆಲ್ಲವೂ ಸೋಮವಾರ ಬಹಿರಂಗವಾಗಲಿರುವ ಸಿಐಡಿಯ ಪ್ರಾಥಮಿಕ ತನಿಖಾವರದಿಯಲ್ಲಿ ಇರುತ್ತದೆಯೇ? ಇಲ್ಲವೇ ಇಲ್ಲ. ಅದರೆ ಸಿಬಿಐ ಇದನ್ನು ಮಾಡುತ್ತದೆ ಎನ್ನುವ ವಿಶ್ವಾಸ ನನಗಿದೆ.)

ಇನ್ನು ಇದೇ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ಉಸ್ತುವಾರಿಯಲ್ಲಿ ಬಹಳ ನೀಚವೂ, ಅನೈತಿಕವೂ, ಅಕ್ರಮವೂ, ಗಂಭೀರವೂ ಆದ ಲೋಪವೊಂದನ್ನು ಎಸಗಲಾಗಿದೆ. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಸತ್ತ ವ್ಯಕ್ತಿಯ ಫೋನ್ ಕರೆಗಳ ವಿವರಗಳನ್ನು ಮತ್ತು ಫೋನ್ ಹಾಗೂ ವಾಟ್ಸ್ಯಾಪ್ ಸಂದೇಶಗಳ ಪ್ರತಿಯನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ತಲುಪಿಸಲಾಗಿದೆ ಎಂಬ ಮಾಹಿತಿ ಇದೆ. ಕೆಲವು ಪತ್ರಕರ್ತರು ಅದರಲ್ಲಿಯ ಕೆಲವು ಭಾಗಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಕೆಲವು ಪತ್ರಿಕೆಗಳೂ ಪ್ರಕಟಿಸಿವೆ. ಇವೆಲ್ಲಾ ಯಾಕಾಗಿ? ಯಾಕಾಗಿ ಇದನ್ನು ಬಹಿರಂಗ ಪಡಿಸುತ್ತಿದ್ದೀರಾ? ಸತ್ತಿರುವ ಮನುಷ್ಯ ನೀವೆಂದುಕೊಂಡಷ್ಟು ದೊಡ್ಡ ಮನುಷ್ಯ ಅಲ್ಲ, ಹಾಗಾಗಿ ಸಿಐಡಿ ತನಿಖೆ ಸಾಕು, ಸಿಬಿಐ ಬೇಕಾಗಿಲ್ಲ ಎಂದಲ್ಲವೇ ನಿಮ್ಮ ವಾದ? ಆ ಮನುಷ್ಯ ಸತ್ತಿದ್ದು ವೈಯಕ್ತಿಕ ಕಾರಣಕ್ಕೆ ಎಂದು ಕೆಲವರು ಈಗಾಗಲೆ ಷರಾ ಬರೆದುಬಿಟಿದ್ದಾರೆ. ಅದನ್ನು ಹೇಳುವುದಕ್ಕೆ ಮೊದಲು ನೀವು ಫೋರೆನ್ಸಿಕ್ ರಿಪೋರ್ಟ್ ನೋಡಿರುತ್ತೀರಿ ಎಂದು ಭಾವಿಸುತ್ತೇನೆ. ಯಾಕೆಂದರೆ ಎಲ್ಲಕ್ಕಿಂತ ಮೊದಲು ನಾವು ಪ್ರಾಥಮಿಕವಾಗಿ ಪರಿಗಣಿಸಬೇಕಾದ ವಿವರಗಳು ಅದರಲ್ಲಿರುತ್ತವೆ. ಹಾಗಿದ್ದಲ್ಲಿ ಅದು ನಿಮಗೆ ಸಿಕ್ಕಿದೆಯೇ? ಹೇಗೆ ಸಿಕ್ಕಿತು? ಅಥವ ಅದರಲ್ಲಿ ಇದೇ ಇರುತ್ತದೆ ಎಂದು ನಿಮಗೆ ಹೇಗೆ ಗೊತ್ತು? ನೀವೇ ಬರೆಸಿದ್ದೀರಾ? ಇಂತಹ ಪ್ರಶ್ನೆಗಳು ಎದ್ದಾಗ ನಿಮ್ಮ ವಿಶ್ವಾಸಾರ್ಹತೆ ಕುಗ್ಗುತ್ತದೆ ಎನ್ನುವ ಕಲ್ಪನೆಯಾದರೂ ಈ ಪತ್ರಕರ್ತ ಮಿತ್ರರಿಗೆ ಇದೆಯೇ? ಯಾರಿಗಾಗಿ ಇವರು ತಮ್ಮ ವೈಯಕ್ತಿಕ ಗೌರವ ಮತ್ತು ನಂಬಿಕೆಯನ್ನು ಪಣಕ್ಕೊಡ್ಡುತ್ತಿದ್ದಾರೆ? ಜಾರ್ಜ್, ಡಿಕೆ ಶಿವಕುಮಾರ್, ಸಿದ್ಧರಾಮಯ್ಯ,??? (ಇನ್ನು ಮುಖ್ಯಮಂತ್ರಿಗಳು ಪೊಸ್ಟ್‌ಮಾರ್ಟಮ್ ವರದಿಯನ್ನು ಮಾರ್ಪಡಿಸಲು ಹೆಣವನ್ನು ನೋಡುವ ನೆಪದಲ್ಲಿ ವಿಕ್ಟೋರಿಯ ಆಸ್ಪತೆಗೆ ಹೋಗಿದ್ದರು ಎನ್ನುವ ಮಾತನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಅತ್ಯಂತ ಬಾಲಿಶ, ಬೇಜವಬ್ದಾರಿಯ, ಕೀಳು ಅಭಿರುಚಿಯ ಮಾತು. ಎಂತೆಂತಹ ಅನರ್ಹರು, ಅಪ್ರಬುದ್ಧರು, ಅಯೋಗ್ಯರು, ಭ್ರಷ್ಟರು, ಕ್ರಿಮಿನಲ್‌ಗಳು ನಮ್ಮ ಮುಖ್ಯಮಂತ್ರಿಗಳಾಗಿದ್ದರು ಎಂದರೆ, ಈಗ ಕರ್ನಾಟದಲ್ಲಿ ಜೀವಂತ ಇರುವ ಎಂಟು ಮಾಜಿ ಮುಖ್ಯಮಂತ್ರಿಗಳ ಪಟ್ಟಿ ನೋಡಿದರೆ ಸಾಕು; ಗಾಬರಿಯಾಗುತ್ತದೆ, ದುಸ್ವಪ್ನದಂತೆ ಕಾಣಿಸುತ್ತದೆ.)

ಇದೇ ಸಂದರ್ಭದಲ್ಲಿ ಕೆಲವರು ಈ ಇಡೀ ಪ್ರಕರಣವನ್ನು ಆರೆಸ್ಸೆಸ್ ಮತ್ತು ಬಿಜೆಪಿಯವರು ಅಂತರ್ಜಾಲದಲ್ಲಿ ಮತ್ತು ಎಸ್ಸೆಮ್ಮೆಸ್‌ಗಳಲ್ಲಿ ಸುಳ್ಳು ಸುದ್ಧಿಗಳನ್ನು ಹಬ್ಬಿಸುವ ಮೂಲಕ ಉದ್ಧೀಪಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವವರಲ್ಲಿ ಬಹುತೇಕರು ಕಾಂಗ್ರೆಸ್ಸಿಗರು ಮತ್ತವರ ಬೆಂಬಲಿಗರು. ಅವರಿಗೆ ನನ್ನ ಒಂದು ಪ್ರಶ್ನೆ, ಇಂತಹ ಒಂದು ದಾಳಿಯನ್ನು ಎದುರಿಸಲು ನಿಮ್ಮ ಸಿದ್ಧತೆಗಳೇನು? ನಿಮ್ಮ ಹೋರಾಟವನ್ನು ಅನ್ಯರು ಬಂದು ನಿಮಗಾಗಿ ಏಕೆ ಮಾಡಬೇಕು? ಇಂತಹ ದೈನೇಸಿ ಸ್ಥಿತಿಗೆ ಕಾರಣಗಳೇನು? ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಕನಿಷ್ಟ ಎಂದರೂ ಹತ್ತಾರು ಸಾವಿರ ರೂಪಾಯಿ ಜಾಹಿರಾತು ಕೊಟ್ಟು ನಿಮ್ಮದೇ ಪಕ್ಷದ ಈ ರಾಜ್ಯದ ಪರಮಭ್ರಷ್ಟ ಸಚಿವರೊಬ್ಬರು ಕ್ರಿಯಾಶೀಲರಾಗಿರುವುದು ನಿಮಗೆ ಗೊತ್ತಿಲ್ಲವೇ? ಅವರು ಅಲ್ಲಿ ಎಂದಾದರೂ ಪಕ್ಷವನ್ನಾಗಲಿ ಸರ್ಕಾರವನ್ನಾಗಲಿ ಸಮರ್ಥಿಸಿದ್ದನ್ನು ನೋಡಿದ್ದೀರಾ? ನಿಮ್ಮ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗದೇ ಇರುವುದಕ್ಕೆ ಕಾರಣಗಳೇನು? ನಿಮ್ಮ ಸರ್ಕಾರದ ಎಡವಟ್ಟು ಕೆಲಸಗಳನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವುದು ಎಷ್ಟೊಂದು ಹಿಂಸೆಯ ಕೆಲಸ ಎಂದು ನಿಮಗೆ ಗೊತ್ತಿದೆಯೆ? (ಇದು ಕೆಲವರಿಗೆ ಗೊತ್ತಿದೆ. ಗೊತ್ತಿರಬೇಕಾದವರಿಗೆ ಗೊತ್ತಿಲ್ಲ.)

ಹೀಗೆ ಇಲ್ಲಿಯ ಕಾಂಗ್ರೆಸ್‍ನವರು ಮತ್ತು ಅವರ ಸರ್ಕಾರ ಕಾಲಿಗೆ ಗುಂಡುಕಲ್ಲುಗಳನ್ನು ಕಟ್ಟಿಕೊಂಡು ಹೊಳೆ ದಾಟುವ ಧೈರ್ಯದಲ್ಲಿ ತುಂಬಿದ ಹೊಳೆಗೆ ಹಾರಿದ್ದಾರೆ. ಉಸಿರುಕಟ್ಟುವ ಮುನ್ನ ಅವರು ಅವುಗಳಿಂದ ಕಳಚಿಕೊಂಡು ಮೇಲೆ ಬಂದರೆ ಉಳಿಯುತ್ತಾರೆ. ಇಲ್ಲದಿದ್ದಲ್ಲಿ ಅವರನ್ನು ಯಾರೂ ಕಾಪಾಡಲಾರರು. ಮತ್ತು ಇಂತಹ ಮೂರ್ಖರ ಅಗತ್ಯ ಈ ರಾಜ್ಯದ ಜನತೆಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮೂರ್ಖರನ್ನು, ಭ್ರಷ್ಟರನ್ನು, ಅದಕ್ಷರನ್ನು, ಕ್ರಿಮಿನಲ್‌ಗಳನ್ನು ಜನ ಹೊಳೆಗೆ ಎಸೆಯುತ್ತಾರೆ, ಇಲ್ಲವೆ ಕಲ್ಲುಕಟ್ಟಿಕೊಂಡು ಹೊಳೆಗೆ ಇಳಿದವರನ್ನು ಅಲ್ಲಿಯೇ ಸಾಯಲು ಬಿಡುತ್ತಾರೆ. ಅಂತಹವರ ಬಗ್ಗೆ ಕನಿಕರದ ಅಗತ್ಯ ಇಲ್ಲ.

ಆದರೆ, ಈಗಲೂ ನಾನು ಸಿದ್ಧರಾಮಯ್ಯನವರ ಪರ ಆಶಾವಾದಿಯಾಗಿದ್ದೇನೆ. ಅವರಿಗೆ ಮತ್ತು ಅವರ ಪಕ್ಷಕ್ಕೆ ಇನ್ನೂ ಮೂರು ವರ್ಷಗಳ ಅವಧಿ ಇದೆ. ಸಿದ್ಧರಾಮಯ್ಯನವರು ಆ ಮೂರು ವರ್ಷದ ಅವಧಿ ಪೂರೈಸುತ್ತಾರೋ ಇಲ್ಲವೋ ಎನ್ನುವುದು ಕಾಂಗ್ರೆಸ್‌ಗೆ ಬಿಟ್ಟದ್ದು. ಆದರೆ ಮೂರು ವರ್ಷಗಳ ಒಳಗೆಯೇ ಇಲ್ಲಿ ಕಾಂಗ್ರೆಸ್ ಸರ್ಕಾರ ಹೋದರ ಅದು ಖಡಾಖಂಡಿತವಾಗಿ ಸ್ವಯಂಕೃತಾಪರಾಧ. ಆ ಪಕ್ಷದ ಬಗ್ಗೆ ನನಗೆ ನಂಬಿಕೆಯಿಲ್ಲ. ಸಿದ್ಧರಾಮಯ್ಯನವರು ಇನ್ನು ಬಹುಶಃ ಇದಕ್ಕಿಂತ ದೊಡ್ಡ ಹುದ್ದೆಗೆ ಏರಲಾರರು. ಹಾಗಾಗಿ ಇರುವಷ್ಟು ದಿನಗಳ ಕಾಲವಾದರೂ ನಾವು ಅವರ ಪರ ಸದ್ಭಾವನೆ ಉಳಿಸಿಕೊಳ್ಳುವಂತೆ ನಡೆದುಕೊಳ್ಳುವುದು ಸಿದ್ಧರಾಮಯ್ಯನವರಿಗೆ ಬಿಟ್ಟದ್ದು. ಇದನ್ನು ಅವರ ಹಿತೈಷಿಗಳು ಮತ್ತು ಸಲಹೆಕಾರರು ಅವರಿಗೆ ಮುಟ್ಟಿಸುತ್ತಾರೆ ಎನ್ನುವ ಕ್ಷೀಣ ವಿಶ್ವಾಸ ನನ್ನದು.

“ಜನ ನುಡಿ – 2014” – ಮಂಗಳೂರಿನಲ್ಲಿ ಇದೇ ಶನಿವಾರ – ಭಾನುವಾರ…

ಸ್ನೇಹಿತರೇ,

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ “ಜನ ನುಡಿ” ಎಂಬ ಕಾರ್ಯಕ್ರಮ ನಡೆದಿದ್ದು, ಅದರ ಚಾರಿತ್ರಿಕ ಹಿನ್ನೆಲೆ ಮತ್ತು ಅದರ ಅಗತ್ಯದ ಬಗ್ಗೆ ತಮಗೆಲ್ಲ ತಿಳಿದಿದೆ ಎಂದು ಭಾವಿಸುತ್ತೇನೆ. (ಇಲ್ಲವಾದಲ್ಲಿ ನೀವು “ಜನ ನುಡಿ” ಪದವನ್ನು ನಮ್ಮ ಸರ್ಚ್ ಬಾಕ್ಸ್‌ನಲ್ಲಿ ಹಾಕಿ ಹುಡುಕಿದರೆ ಸಿಗುತ್ತದೆ. ಕಳೆದ ಬಾರಿಯ ಜನ ನುಡಿಯ ಕಾರ್ಯಕ್ರಮದ ಆಯೋಜನೆಯ ಹಿನ್ನೆಲೆಯಲ್ಲಿ ಬರೆದಿದ್ದ ಒಂದು ಟಿಪ್ಪಣಿ ಇಲ್ಲಿದೆ.)

ಈಗ ಜನ ನುಡಿಯ ಎರಡನೇ ವರ್ಷದ ಕಾರ್ಯಕ್ರಮವನ್ನು ಇದೇ ಶನಿವಾರ ಮತ್ತು ಭಾನುವಾರ (ಡಿಸೆಂಬರ್ 13-14, 2014) ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತಮಾನ.ಕಾಮ್ ಬಳಗ ನೈತಿಕ ಬೆಂಬಲ ಕೊಡುತ್ತಿದೆ ಮತ್ತು ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ನಮ್ಮ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ನೀವುಗಳೂ ಸಹ ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ. ಕಾರ್ಯಕ್ರಮದ ಪೂರ್ಣ ವಿವರಗಳ ಆಹ್ವಾನ ಪತ್ರವನ್ನು ಕೆಳಗೆ ಲಗತ್ತಿಸಲಾಗಿದೆ.

ನಮಸ್ಕಾರ,
ರವಿ,
ವರ್ತಮಾನ.ಕಾಮ್

jananudi-2014-1
jananudi-2014-2
jananudi-2014-3
jananudi-2014-4

ಎರಡನೇ “ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ


– ರವಿ


ವರ್ತಮಾನ.ಕಾಮ್ ಪ್ರಿಯ ಓದುಗರೇ,

ಇದೇ ಡಿಸೆಂಬರ್ 6 ಮತ್ತು 7 (ಶನಿವಾರ ಮತ್ತು ಭಾನುವಾರ) ದಂದು ಜನ ಸಂಗ್ರಾಮ ಪರಿಷತ್ ವತಿಯಿಂದ ರಾಣೆಬೆನ್ನೂರಿನಲ್ಲಿ jsp-ranebennur-announcement2ಎಸ್.ಆರ್.ಹಿರೇಮಠರ ನೇತೃತ್ವದಲ್ಲಿ 2ನೇ “ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಣೆಬೆನ್ನೂರಿನಲ್ಲಿರುವ ಸಮಾಜ ಪರಿವರ್ತನ ಸಮುದಾಯದ “ಪರಿವರ್ತನ ಸದನ”ದಲ್ಲಿ ಈ ಶಿಬಿರ ನಡೆಯಲಿದೆ. ಪ್ರಜಾಪ್ರಭುತ್ವ, ಭಾರತ ಮತ್ತು ಕರ್ನಾಟಕದ ಇತಿಹಾಸ, ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳು, ಸಾಂಸ್ಕೃತಿಕ ಬಂಡಾಯ, ಚಳವಳಿಗಳು, ಸಾಹಿತ್ಯದಲ್ಲಿ ಬಂಡಾಯ, ಜಾಗತಿಕ ತಾಪಮಾನ, ಮಾಹಿತಿ ಹಕ್ಕು ಮತ್ತು ತರಬೇತಿ, ಹಾಡು, ಆಟ, ಪಾಠ; ಹೀಗೆ ಅನೇಕ ವಿಷಯಗಳ ಬಗ್ಗೆ ಎಸ್.ಆರ್.ಹಿರೇಮಠರ ಆದಿಯಾಗಿ ಹಲವಾರು ಹೋರಾಟಗಾರರು, ಪ್ರಾಧ್ಯಾಪಕರು, ಲೇಖಕರು, ಹಾಡುಗಾರರು, ನಡೆಸಿಕೊಡಲಿದ್ದಾರೆ. ವೃಂದಚರ್ಚೆ ಮತ್ತಿತರ ಸಂವಾದಗಳ ಮೂಲಕ ಎಲ್ಲಾ ಶಿಬಿರಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವ್ಯವಸ್ಥೆ ಇದೆ.

ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ. ಕೇವಲ ಮಾಹಿತಿ ಅಷ್ಟೇ ಅಲ್ಲ, ತಮ್ಮ ಊರು-ನಗರಗಳಲ್ಲಿ ಮುಂದಕ್ಕೆ ಹೇಗೆ ಶಿಬಿರಾರ್ಥಿಗಳು ಜನಪರ ಕಾರ್ಯಕ್ರಮಗಳನ್ನು, ಹೋರಾಟಗಳನ್ನು ರೂಪಿಸಬಹುದು, ನಾಯಕತ್ವ ವಹಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಹಾಗೆಯೇ, ಶಿಬಿರ ಮುಗಿದ ನಂತರವೂ ಆಯೋಜಕರು ಶಿಬಿರಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಸಹಕಾರ ಮತ್ತು ಮಾರ್ಗದರ್ಶನ hiremath-jsp-workshopನೀಡುತ್ತಿರುತ್ತಾರೆ.

ಡಿಸೆಂಬರ್ 6, ಶನಿವಾರ ಬೆಳಗ್ಗೆ ಹತ್ತರ ಸುಮಾರಿಗೆ ಆರಂಭವಾಗುವ ಶಿಬಿರ ಭಾನುವಾರ ಸಂಜೆ ಐದರ ತನಕ ನಡೆಯಲಿದೆ. ರಾಣೆಬೆನ್ನೂರು ಒಂದು ರೀತಿಯಲ್ಲಿ ಇಡೀ ರಾಜ್ಯಕ್ಕೆ ಕೇಂದ್ರ ಸ್ಥಾನದಲ್ಲಿದೆ. (ದಾವಣಗೆರೆಯಿಂದ ಮುವ್ವತ್ತು ಕಿ.ಮೀ. ಉತ್ತರಕ್ಕಿದೆ.) ರಾಜ್ಯದ ಬಹುತೇಕ ಭಾಗಗಳಿಂದ ನಾಲ್ಕೈದು ಗಂಟೆಗಳಲ್ಲಿ ಬಸ್ಸಿನಲ್ಲಿ ತಲುಪಬಹುದು. ಉತ್ತಮ ರೈಲು ಸಂಪರ್ಕವೂ ಇದೆ. ಶನಿವಾರ ರಾತ್ರಿ ವಸತಿ ಸೌಕರ್ಯವೂ ಇರುತ್ತದೆ. ಶನಿವಾರ ಬೆಳಗ್ಗೆಯಿಂದ ಭಾನುವಾರದ ಸಂಜೆಯ ತನಕ ಊಟ-ತಿಂಡಿ-ಚಹಾ ವ್ಯವಸ್ಥೆ ಇರುತ್ತದೆ. ಇವೆಲ್ಲವಕ್ಕೂ ಸೇರಿ ಶಿಬಿರ ಶುಲ್ಕ ಎಂದು ರೂ.500 ಇರುತ್ತದೆ.

ಶಿಬಿರದಲ್ಲಿ, ಎಸ್.ಆರ್.ಹಿರೇಮಠ್, ಪರಿಸರವಾದಿ ಯತಿರಾಜು, ಜನಸಂಗ್ರಾಮ ಪರಿಷತ್‌ನ ಕಾರ್ಯದರ್ಶಿ ದೀಪಕ್ ನಾಗರಾಜ್, ಸಂಘಟನೆಯ ಶಾಂತಲಾ ದಾಮ್ಲೆ, ತುಮಕೂರಿನ ಸಿಜ್ಞಾ ಎಂಬ ಯುವನಾಯಕತ್ವ ಶಿಬಿರಗಳನ್ನು ಆಯೋಜಿಸುವ ಸಂಸ್ಥೆಯ ಸಿಜ್ಞಾ ಸಿಂಧು ಸ್ವಾಮಿ, ನಾನು, ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಬರಲಿದ್ದಾರೆ.

ಹೆಚ್ಚಿನ ವಿವರಗಳಿಗೆ ಪ್ರಕಾಶ್ ಹೂಗಾರ್ ಅವರನ್ನು 8867186343 ರಲ್ಲಿ ಸಂಪರ್ಕಿಸಿ.

ನಮ್ಮ ವರ್ತಮಾನ.ಕಾಮ್ ಅನ್ನು ನಿಯಮಿತವಾಗಿ ಓದುವ ಮತ್ತು ಬೆಂಬಲಿಸುವ ಯುವ ಪ್ರಜ್ಞಾವಂತರೂ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಮತ್ತು ರಹನಾತ್ಮಕವಾಗಿ ಪಾಲ್ಗೊಳ್ಳಲು ಬೇಕಾದ ಪೂರ್ವಸಿದ್ಧತೆ, ಪರಿಚಯ, ಅವಕಾಶಗಳನ್ನು ಈ ಶಿಬಿರ ಒದಗಿಸುತ್ತದೆ ಎಂದು jsp-ranebennur-announcement1ಭಾವಿಸುತ್ತೇನೆ.

ನಮಸ್ಕಾರ,
ರವಿ

[ಮೊದಲ ಶಿಬಿರದ ಸಂದರ್ಭದಲ್ಲಿ ಬರೆದಿದ್ದ ಟಿಪ್ಪಣಿ: ರಾಣೆಬೆನ್ನೂರಿನಲ್ಲಿ “ಯುವಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ]

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿರುದ್ಧ ಇರುವ ಆರೋಪಗಳು


– ರವಿ ಕೃಷ್ಣಾರೆಡ್ಡಿ


[29-09-2014 ರಂದು ಆಮ್ ಆದ್ಮಿ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾಟಿಪ್ಪಣಿಯ ಪರಿಷ್ಕೃತ ರೂಪ ಈ ಲೇಖನ.]

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಕೆ.ಎಲ್.ಮಂಜುನಾಥರ ವಿರುದ್ಧ ಹಲವು ಆರೋಪಗಳಿದ್ದು, ಈ ವಿಚಾರವಾಗಿ ವಿಚಾರಣೆ ನಡೆಸಬೇಕು ಮತ್ತು ವಾಗ್ಧಂಡನೆಗೆ ಮುಂದಾಗಬೇಕು ಎಂದು ಪಂಜಾಬ್‌ ರಾಜ್ಯದ ನಾಲ್ಕು ಆಮ್ ಆದಿ ಪಕ್ಷದ ಸಂಸದರು ಅದಕ್ಕೆ ಬೇಕಾದ ಸಹಿಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೆಂದು ಸುದ್ದಿ ಹೊರಬಂದ ನಂತರ ರಾಜ್ಯದ ಹಲವು ಪ್ರಭಾವಿ ರಾಜಕಾರಣಿಗಳು ಮತ್ತು ವಕೀಲರು ಪತ್ರಿಕಾಗೋಷ್ಟಿ ನಡೆಸಿ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪಗಳನ್ನು ಮಾಡಿ, ನ್ಯಾಯಮೂರ್ತಿ ಮಂಜುನಾಥರನ್ನು ಸಮರ್ಥಿಸಿಕೊಂಡರು. ಅದರೆ, ಕೆ.ಎಲ್.ಮಂಜುನಾಥರ ವಿರುದ್ಧ ಇರುವ ಆರೋಪಗಳಾದರೂ ಎಂತಹವು?chaitra-saledead-1

ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ವಿರುದ್ಧ ಆರೋಪಗಳಲ್ಲಿ ಪ್ರಮುಖವಾದುದು ಅವರು ಫೆಬ್ರವರಿ 9, 2004 ರಲ್ಲಿ ತಮ್ಮ ಅವಲಂಬಿಯಾಗಿದ್ದ ಮತ್ತು ಆಗ ಇಪ್ಪತ್ತು ವರ್ಷ ವಯಸ್ಸಿನವರಾಗಿದ್ದ ಅವರ ಮಗಳು ಕೆ.ಎಮ್.ಚೈತ್ರ ಎನ್ನುವವರ ಹೆಸರಿನಲ್ಲಿ ಅಕ್ರಮವಾಗಿ, (both illegally and out of turn) ವಯ್ಯಾಲಿಕಾವಲ್ ಸೊಸೈಟಿಯಿಂದ ಸೈಟು ಪಡೆದಿರುತ್ತಾರೆ ಎನ್ನುವುದು. ಆ ಸಮಯದಲ್ಲಿ ಕೆ.ಎಮ್.ಚೈತ್ರರವರು ವಯ್ಯಾಲಿಕಾವಲ್ ಸೊಸೈಟಿಯಲ್ಲಿ ಸದಸ್ಯರಾಗಿರುವುದಿಲ್ಲ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ಸಹಸದಸ್ಯರಿಗೆ ಸೈಟು ಕೊಡುವುದೂ ಕಾನೂನುಬಾಹಿರ. ಇದರ ಜೊತೆಗೆ, ಅವರು ತಮಗಾಗಲಿ ತಮ್ಮ ಕುಟುಂಬಸದಸ್ಯರಿಗಾಗಲಿ ಬೆಂಗಳೂರು ನಗರದಲ್ಲಿ ಯಾವುದೇ ಗೃಹಸಂಬಂಧಿ ಆಸ್ತಿ ಇಲ್ಲ ಎನ್ನುವ ಪ್ರಮಾಣಪತ್ರವನ್ನು ಕಾನೂನಿನ ಪ್ರಕಾರ ಸಲ್ಲಿಸಬೇಕಿದ್ದರೂ ಆ ಸೊಸೈಟಿಯವರು ಅವರಿಗೆ ಅದರಿಂದ ವಿನಾಯಿತಿ ಕೊಟ್ಟಿರುತ್ತಾರೆ ಎನ್ನುವ ಮಾಹಿತಿ ಇದೆ.

ನಂತರದ ದಿನಗಳಲ್ಲಿ ವಯ್ಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯೆ ಒಂದು ಮೊಕದ್ದಮೆ ಹೈಕೋರ್ಟಿನಲ್ಲಿ ದಾಖಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ತೀರ್ಪನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರವರು ದಿನಾಂಕ 5-7-2005 ರಂದು ನೀಡುತ್ತಾರೆ. ತಮ್ಮ ಅವಲಂಬಿತ ಮಗಳಿಗೆ ಸದರಿ ಸೊಸೈಟಿಯಿಂದ ಸೈಟು ಪಡೆದಿರುವ ಕಾರಣಕ್ಕಾಗಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರು ಆ ಸೊಸೈಟಿಗೆ ಸಂಬಂಧಿಸಿದ ವಿಚಾರಣೆಯಿಂದ ನ್ಯಾಯಾಂಗ ಶುದ್ಧತೆಯನ್ನು ಕಾಪಾಡುವ ನೈತಿಕ ಕಾರಣಕ್ಕಾಗಿ ಮತ್ತು ಹಿತಾಸಕ್ತಿ ಸಂಘರ್ಷದ ಕಾರಣಕ್ಕಾಗಿಯೂ (conflict of interest) ಹಿಂದೆಸರಿಯುವುದು ಅತ್ಯವಶ್ಯಕವಾಗಿತ್ತು. ಅವರು ಹಾಗೆ ಮಾಡದೆ ನ್ಯಾಯಾಂಗದ chaitra-saledead-2ನಿಷ್ಪಕ್ಷಪಾತತನವನ್ನು ಎತ್ತಿಹಿಡಿಯಲಿಲ್ಲ ಎನ್ನುವುದು ಪ್ರಮುಖ ಆರೋಪ.

ಇದೊಂದೇ ಪ್ರಕರಣದಲ್ಲಿ ತಮ್ಮ ಅವಲಂಬಿತ ಮಗಳ ಹೆಸರಿನಲ್ಲಿ ಸೈಟು ಪಡೆಯುವುದೇ ಅಲ್ಲದೆ, ಸೈಟು ಕೊಟ್ಟ ಸೊಸೈಟಿಯ ಮೊಕದ್ದಮೆಯನ್ನು ತಾವೇ ನ್ಯಾಯಮೂರ್ತಿಯಾಗಿ ನಿಭಾಯಿಸುವುದು ಮತ್ತು ತೀರ್ಪು ನೀಡಿರುವುದು ಅನೈತಿಕ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಇದರ ಜೊತೆಗೆ ವಯ್ಯಾಲಿಕಾವಲ್ ಸೊಸೈಟಿಯ ಬಡಾವಣೆಯನ್ನು ಅಭಿವೃದ್ಧಿಪಡಿಸಿದ್ದ ಲಕ್ಷ್ಮಣ್ ಎನ್ನುವವರು ಪಾಲುದಾರರಾಗಿದ್ದ “ಶ್ರೀ ಶಕ್ತಿ ಬ್ಯುಲ್ಡರ್ಸ್” ಗೆ ಸಂಬಂಧಿಸಿದ ಕೇಸನ್ನು ನ್ಯಾಯಮೂರ್ತಿ  ಕೆ.ಎಲ್.ಮಂಜುನಾಥರವರು 19-09-2003 ರಂದು ವಿಲೇವಾರಿ ಮಾಡಿರುತ್ತಾರೆ. ಇದೇ ಶ್ರೀ ಶಕ್ತಿ ಬ್ಯುಲ್ಡರ್ಸ್‌ರವರು ಅಭಿವೃದ್ಧಿ ಪಡಿಸಿದ ವೈಯಾಲಿಕಾವಲ್ ಸೊಸೈಟಿಯವರ ಬಡಾವಣೆಯಲ್ಲಿ ನ್ಯಾ.ಮಂಜುನಾಥರ ಮಗಳಿಗೆ ಸೈಟು ಹಂಚಿಕೆಯಾಗುತ್ತದೆ (9-2-2004). ಮತ್ತು ನಂತರ ವೈಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯೆ ನಡೆಯುತ್ತಿದ್ದ ದಾವೆಯನ್ನು ನ್ಯಾ.ಮಂಜುನಾಥರು (5-7-2005) ವಿಲೇವಾರಿ ಮಾಡುತ್ತಾರೆ. ಇದೇ ಸೊಸೈಟಿಗೆ ಸಂಬಂಧಿಸಿದ ಇನ್ನೂ ಕೆಲವು ಮೊಕದ್ದಮೆಗಳ ವಿಲೇವಾರಿಯನ್ನೂ ಸದರಿ ನ್ಯಾಯಮೂರ್ತಿಗಳು ನಂತರದ ದಿನಗಳಲ್ಲಿ ಮಾಡುತ್ತಾರೆ (17-01-2007, 20-07-2010).

ಇನ್ನೊಂದು ಪ್ರಕರಣ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ಕ್ಕೆ ಸಂಬಂಧಿಸಿದ್ದು. ಈ ಬಡಾವಣೆಯನ್ನು ಅಭಿವೃದ್ಧಿ ಪಡಿಸಿದ್ದು ಸಹ ಮೇಲೆ ಉಲ್ಲೇಖಿಸಿರುವ ಲಕ್ಷ್ಮಣ್‌ರ ಪಾಲುದಾರಿಕೆಯ ಶ್ರೀ ಶಕ್ತಿ ಬ್ಯುಲ್ಡರ್ಸ್.jd-agreement-1 ಸಹಕಾರ ಸಂಘ ತನ್ನ ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶ್ರೀ ಶಕ್ತಿ ಬ್ಯುಲ್ಡರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತದೆ ಮತ್ತು ಬಡಾವಣೆ ನಿರ್ಮಾಣಕ್ಕಾಗಿ ಶ್ರೀ ಶಕ್ತಿ ಬ್ಯುಲ್ಡರ್ಸ್‌ಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಆದರೆ ಹಣ ಬಿಡುಗಡೆ ಮಾಡುವಾಗ ಕಾನೂನಿನ ಪ್ರಕಾರ ಮೂಲದಲ್ಲಿಯೇ ತೆರಿಗೆ ಹಿಡಿದುಕೊಳ್ಳಬೇಕಿತ್ತು ಎಂದು ಆದಾಯ ತೆರಿಗೆ ಇಲಾಖೆಯವರು ಮೊಕದ್ದಮೆ ದಾಖಲಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಮೊಕದ್ದಮೆಯನ್ನು ಹೈಕೋರ್ಟಿನ ದ್ವಿಸದಸ್ಯ ಪೀಠ 10-03-2010 ರಂದು ವಿಲೇವಾರಿ ಮಾಡುತ್ತದೆ. ನ್ಯಾ.ಕೆ.ಎಲ್.ಮಂಜುನಾಥ್ ಆ ದ್ವಿಸದಸ್ಯ ಪೀಠದಲ್ಲಿದ್ದ ಒಬ್ಬ ನ್ಯಾಯಮೂರ್ತಿಯೂ ಆಗಿರುತ್ತಾರೆ.

ಇನ್ನು ಭೂಕಬಳಿಕೆಗೆ ಸಂಬಂಧಿಸಿದಂತೆ 2007 ರಲ್ಲಿ ಎ.ಟಿ.ರಾಮಸ್ವಾಮಿಯವರು ಜಂಟಿಸದನ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಆ ವರದಿಯಲ್ಲಿ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ಕ್ಕೆ ಸಂಬಂಧಿಸಿದ ಅಧ್ಯಾಯವೇ ಇದೆ. ಕಾನೂನಿನ ಪ್ರಕಾರ ಹೈಕೋರ್ಟಿನ ಮತ್ತು ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು (ಹಾಲಿ, ನಿವೃತ್ತ, ವರ್ಗಾವಣೆಯಾಗಿರುವ ಎಲ್ಲರೂ) ಸರ್ಕಾರಿ ನೌಕರರಲ್ಲ ಮತ್ತು ಅವರು ಯಾವುದೇ ಕಾರಣಕ್ಕೂ ಮೇಲಿನ ಸಹಕಾರಿ ಸಂಘದಲ್ಲಿ ಸದಸ್ಯರಾಗಲು ಅವಕಾಶವಿಲ್ಲ. ಆದರೂ ಸಹ 84 ನ್ಯಾಯಾಧೀಶರು (75 ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು 9 ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು) ಈ ಸಹಕಾರ ಸಂಘದಿಂದ ನಿಯಮಬಾಹಿರವಾಗಿ ಸೈಟುಗಳನ್ನು ಪಡೆದಿದ್ದಾರೆ ಎಂದು ವರದಿ ಹೇಳುತ್ತದೆ. ಅಷ್ಟೇ ಅಲ್ಲ, ಬಿಡಿಎ ಇಂದಾಗಲಿ, ಯಾವುದಾದರು ಸಹಕಾರಿ ನಿರ್ಮಾಣ ಸಂಸ್ಥೆಯಿಂದಾಗಲಿ ಸೈಟು ಪಡೆದುಕೊಳ್ಳುವವರು ತಮ್ಮ ಹೆಸರಲ್ಲಾಗಲಿ ಅಥವ ಅವಲಂಬಿತ ಕುಟುಂಬದ ಸದಸ್ಯರ ಹೆಸರಿನಲ್ಲಾಗಲಿ ನಗರದಲ್ಲಿ ಯಾವುದೇ ಸೈಟು ಅಥವ ಮನೆಯನ್ನು ಹೊಂದಿರಬಾರದು ಮತ್ತು ಹಾಗೆಂದು ಪ್ರಮಾಣಪತ್ರ ಕೊಡಬೇಕಾಗುತ್ತದೆ. ಆದರೆ, ಸಹಕಾರಿ ಸಂಘದಲ್ಲಿ ಸೈಟು ಪಡೆದ ಯಾವೊಬ್ಬ ನ್ಯಾಯಮೂರ್ತಿಯೂ jd-agreement-2ಹಾಗೆಂದು ಪ್ರಮಾಣಪತ್ರ ನೀಡಿಲ್ಲ ಮತ್ತು ಅನೇಕರಿಗೆ ಹಲವಾರು ಸೈಟು ಆಸ್ತಿಗಳಿದ್ದರೂ ಇಲ್ಲಿಯೂ ಅವರು ಸೈಟು ಪಡೆದಿದ್ದಾರೆ ಎನ್ನಲಾಗಿದೆ. ಎಲ್ಲರಿಗೂ ತಿಳಿದಿರುವಂತೆ ಮಾಜಿ ಲೋಕಾಯುಕ್ತ ಶಿವರಾಜ್ ಪಾಟೀಲರು ಇದೇ ವಿಷಯಕ್ಕೆ ವಿವಾದಕ್ಕೀಡಾಗಿ ತಮ್ಮ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದಲ್ಲದೆ, ವೈಯಾಲಿಕಾವಲ್ ಸೊಸೈಟಿಯಿಂದ ಪಡೆದಿದ್ದ ತಮ್ಮ ಹೆಂಡತಿಯ ಹೆಸರಿನಲ್ಲಿದ್ದ ನಿವೇಶನವನ್ನು ವಾಪಸು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂದಹಾಗೆ, ರಾಮಸ್ವಾಮಿಯವರ ವರದಿಯಲ್ಲಿ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ದಿಂದ ನಿವೇಶನ ಪಡೆದಿರುವ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ಹೆಸರೂ ಇದೆ.

ಇದೇ ಸಮಯದಲ್ಲಿ ಕರ್ನಾಟಕ ಹೈಕೋರ್ಟಿನ ಅನೇಕ ನ್ಯಾಯಮೂರ್ತಿಗಳು ಹೈಕೋರ್ಟಿನ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ (http://karnatakajudiciary.kar.nic.in/judgesAssets&Liabilities.asp). ಆದರೆ ಆ ಪಟ್ಟಿಯಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ಹೆಸರನ್ನು ಕ್ಲಿಕ್ ಮಾಡಿದರೆ ಖಾಲಿ ಪುಟ ಮಾತ್ರ ತೆರೆಯುತ್ತದೆ (http://karnatakajudiciary.kar.nic.in/judgesAssets&Liabilities/klmj.pdf). ರಾಜ್ಯ ಹೈಕೋರ್ಟ್‌ನ ಒಟ್ಟು 32 ನ್ಯಾಯಮೂರ್ತಿಗಳಲ್ಲಿ klmanjunath-judicialsocieity16 ನ್ಯಾಯಮೂರ್ತಿಗಳು ಮಾತ್ರ ಆಸ್ತಿ ಘೋಷಣೆ ಮಾಡಿದ್ದು ಸರಿಯಾಗಿ ಅರ್ಧ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿಲ್ಲ ಮತ್ತು ಅವರಲ್ಲಿ ನ್ಯಾ. ಕೆ.ಎಲ್.ಮಂಜುನಾಥರೂ ಒಬ್ಬರು (29-09-2014 ರಂದು ವೆಬ್‍‌ಸೈಟ್‌ನಲ್ಲಿ ಇದ್ದ ಮಾಹಿತಿ ಪ್ರಕಾರ).

ಹಾಗೆಯೇ, ಇಲ್ಲಿ ಪ್ರಸ್ತಾಪಿಸಿರುವ ಅನೇಕ ವಿಚಾರಗಳು ಕಳೆದ ಎರಡು-ಮೂರು ವರ್ಷಗಳಲ್ಲಿ ಈಗಾಗಲೆ ಅನೇಕ ಮಾಧ್ಯಮಗಳಲ್ಲಿ ಪ್ರಸ್ತಾಪಿತವಾಗಿವೆ.

ಇಂದು ನ್ಯಾಯಾಂಗದ ಸ್ವಾತಂತ್ರ್ಯ, ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಎತ್ತಿಹಿಡಿಯುವುದು ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ. ಜಾಮೀನಿಗಾಗಿ ಲಂಚ ಪಡೆಯುವ ನ್ಯಾಯಮೂರ್ತಿಗಳು ಬಂಧನಕ್ಕೊಳಗಾಗಿದ್ದು ಜನಮಾನಸದಲ್ಲಿ ಇನ್ನೂ ಹಚ್ಚಹಸಿರಾಗಿದೆ. ಹಲವು ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪಗಳಿವೆ. ನಿವೃತ್ತರಾಗುತ್ತಿದ್ದಂತೆಯೇ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಆಯ್ಕೆ ಮಾಡುವ ವಿಚಾರವಾಗಿಯೂ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ನ್ಯಾಯಾಂಗ ಸುಧಾರಣೆಗಳ ತುರ್ತು ಅಗತ್ಯವನ್ನು ಎಲ್ಲರೂ ಪ್ರತಿಪಾದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ನಿಷ್ಪಕ್ಷಪಾತ ಮತ್ತು ಯೋಗ್ಯ ವ್ಯಕ್ತಿಗಳು ನ್ಯಾಯಮೂರ್ತಿಗಳಾಗಿರಬೇಕು, ಮತ್ತು ವಿವಾದಾಸ್ಪದ ವ್ಯಕ್ತಿಗಳನ್ನು ನ್ಯಾಯಾಂಗದಿಂದ ಹೊರಗಿಡಬೇಕು ಮತ್ತು ಆ ಕ್ಷೇತ್ರವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕುಎನ್ನುವ ನಿಟ್ಟಿನಲ್ಲಿ ಸುಧಾರಣೆಗಳಿಗಾಗಿ ಚಿಂತನೆ ಮತ್ತು ಹೋರಾಟ ನಡೆಸಬೇಕಿದೆ.
klmanjunath-sreeshakthibuilders

klm-judicialsociety