Category Archives: ರೂಪ ಹಾಸನ

ಅಸಮಾನ ಶಿಕ್ಷಣವೆಂಬ ಹೆಣ್ಣುಮಕ್ಕಳ ಹಕ್ಕುನಾಶಕ


– ರೂಪ ಹಾಸನ


 

ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ಆದರೆ ಮಕ್ಕಳ ಮೇಲಿನ ದೌರ್ಜನ್ಯದ ವರದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಹೆಣ್ಣುಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ವ್ಯವಸ್ಥೆ ಅತ್ಯಂತ ಕ್ರೂರವಾಗಿ ಕಿತ್ತುಕೊಳ್ಳುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ನಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕಿರುವ ತಡೆಗೋಡೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜ ಆತ್ಮಾವಲೋಕನ ಮಾಡಿಕೊಳ್ಳುವುದೇ ಆ ಮಕ್ಕಳಿಗೆ ನಾವು ಕೊಡಬಹುದಾದ ಮಕ್ಕಳ ದಿನಾಚರಣೆಯ ಉಡುಗೊರೆ ಎಂದು ನಾನು ಭಾವಿಸಿದ್ದೇನೆ.

ಭಾರತದ ಸಂವಿಧಾನದ ಪ್ರಕಾರ ಸ್ತ್ರೀ ಪುರುಷರಿಬ್ಬರಿಗೂ ವಿದ್ಯಾಭ್ಯಾಸ, ಉದ್ಯೋಗದ ಸರಿಸಮಾನ ಅವಕಾಶ, ಹಕ್ಕುಗಳಿವೆ. ಆದರೆ ಹುಡುಗರ ವಿದ್ಯಾಭ್ಯಾಸ ಸಾಗಿದಷ್ಟು ಹೆಚ್ಚು ಹುಡುಗಿಯರ ವಿದ್ಯಾಭ್ಯಾಸ ಸಾಗಿಲ್ಲ. ಆ ಅಂತರ ಇಂದಿಗೂ ಹೆಚ್ಚಾಗಿಯೇ ಇದೆ. ಹೆಣ್ಣುಮಕ್ಕಳಿಗೆ ಓದಲು ಅವಕಾಶಗಳು ಮಿತವಾಗಿವೆ.School_children ಸಣ್ಣ ವಯಸ್ಸಿನಲ್ಲೇ ಹುಡುಗಿಯರಿಗೆ ಮದುವೆ ಮಾಡಿ, ಮುಂದೆ ಅವಳು ಕೇವಲ ಮಕ್ಕಳನ್ನು ಹಡೆದು, ಅವನ್ನು ಸಾಕಿ ಅದಕ್ಕಾಗೇ ಬದುಕನ್ನು ಮುಡುಪಾಗಿಡಬೇಕೆಂಬ ದೃಷ್ಟಿ ಇಂದಿಗೂ ಹೆಚ್ಚಿನ ಗ್ರಾಮೀಣ ಪ್ರದೇಶದಲ್ಲಿದೆ. ಜೊತೆಗೆ ಗಂಡು ಮಗ ಓದಿ ವಿದ್ಯಾಭ್ಯಾಸ ಪಡೆದು, ಕೆಲಸಕ್ಕೆ ಸೇರಿ ತಮ್ಮನ್ನು ಸಾಕುತ್ತಾನೆ. ಹೆಣ್ಣು ಮಗಳಾದರೆ ಮದುವೆಯಾಗಿ ಗಂಡನ ಮನೆಗೆ ಹೋಗುವವಳು. ಅವಳಿಗಾಗಿ ಮಾಡುವ ಖರ್ಚು ವ್ಯರ್ಥ ಎಂಬುದು ಹಲವರ ಭಾವನೆ. ಸದ್ಯಕ್ಕೆ ಭಾರತದಲ್ಲಿ ೨೦೦ ಮಿಲಿಯ ಅನಕ್ಷರಸ್ಥ ಹೆಣ್ಣು ಮಕ್ಕಳಿದ್ದಾರೆ. ಈ ಅಂಕಿ ಅಂಶ ನಮ್ಮ ಮಹಿಳೆಯರು ಶೈಕ್ಷಣಿಕ ಅಭಿವೃದ್ಧಿಯಿಂದ ಎಷ್ಟೊಂದು ದೂರದಲ್ಲಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.

ಹೆಣ್ಣುಮಕ್ಕಳ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆ, ಸವಾಲುಗಳಿಗೆ ಶಿಕ್ಷಣ ಒಂದು ಪ್ರಬಲ ಅಸ್ತ್ರವಾಗಬಲ್ಲದು. ಆದರೆ ಪ್ರಸ್ತುತ ಭಾರತದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಕುರಿತು ದೃಷ್ಟಿ ಹರಿಸಿದರೆ ಗಾಬರಿ ಹುಟ್ಟಿಸುವಂಥಾ ಅಂಕಿ-ಅಂಶಗಳು ಕಣ್ಣಿಗೆ ಬೀಳುತ್ತವೆ. ೨೦೧೧ನೇ ಇಸವಿಯ ಅಂಕಿ ಅಂಶಗಳಂತೆ ಪುರುಷರ ವಿದ್ಯಾಭ್ಯಾಸ ಪ್ರಮಾಣ ೭೫% ರಷ್ಟಿದ್ದರೆ, ಅದೇ ಸಮಯದಲ್ಲಿ ಮಹಿಳೆಯರ ವಿದ್ಯಾಭ್ಯಾಸದ ಪ್ರಮಾಣ ೬೫.೪೬%ರಷ್ಟಿದೆ. ೨೦೦೧ರ ಜನಗಣತಿಯಂತೆ ಮಹಿಳೆಯರ ವಿದ್ಯಾಭ್ಯಾಸ ಪ್ರಮಾಣ ೫೩.೬೩% ರಷ್ಟಿದ್ದು ಕಳೆದ ಹತ್ತು ವರ್ಷಗಳಲ್ಲಿ ಅವರ ವಿದ್ಯಾಭ್ಯಾಸ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಬದಲಾವಣೆ ಆಗದಿರುವುದು ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಕುರಿತು ಇರುವ ಅವಜ್ಞೆಯ ಸೂಚಕವಾಗಿದೆ.

ನಗರ ಪ್ರದೇಶದ ೬೫% ಹೆಣ್ಣುಮಕ್ಕಳು ಶಿಕ್ಷಿತರಾಗಿದ್ದರೆ, ಗ್ರಾಮೀಣ ಪ್ರದೇಶದ ೪೬% ಹೆಣ್ಣುಮಕ್ಕಳು ಶಿಕ್ಷಿತರಾಗಿದ್ದಾರೆ ಅಷ್ಟೇ. ಶೇಕಡಾ ೬೦ರಷ್ಟು ಅಕ್ಷರಸ್ಥ ಮಹಿಳೆಯರು ಕೇವಲ ಪ್ರಾಥಮಿಕ ಶಿಕ್ಷಣ ಅಥವಾ ಅದಕ್ಕಿಂಥಾ ಕಡಿಮೆ ವಿದ್ಯಾಭ್ಯಾಸ ಪಡೆದಿದ್ದಾರೆ. ಇದರಲ್ಲಿ ೧೩% ಹೆಣ್ಣುಮಕ್ಕಳು ಮಾತ್ರ ಪ್ರೌಢಶಿಕ್ಷಣಕ್ಕಿಂತಾ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದಾರೆಂದರೆ ಅವರಿನ್ನೂ ಸಾಮಾಜಿಕ ಪಾಲ್ಗೊಳ್ಳುವಿಕೆಯಲ್ಲಿ ಯಾವ ಹಂತದಲ್ಲಿದ್ದಾರೆಂದು ಯೋಚಿಸಬಹುದಾಗಿದೆ. ಹಾಗೆ ಸಾಕ್ಷರತೆಯ ಪ್ರಮಾಣವನ್ನು ಅಳೆಯಲು ಯಾವುದೇ ನಿರ್ದಿಷ್ಟ ಮಾನದಂಡಗಳೂ ಇಲ್ಲದಿರುವುದರಿಂದ ಸಹಿ ಮಾಡಲು ಬರುವವರೆಲ್ಲಾ ಸಾಕ್ಷರರೆಂದೇ ಪರಿಗಣಿಸಲಾಗುತ್ತಿದೆ! ಕನಿಷ್ಟ ಪ್ರೌಢಶಾಲೆಯ ಹಂತದವರೆಗಿನ ವಿದ್ಯಾಭ್ಯಾಸವನ್ನಾದರೂ ಗಣನೆಗೆ ತೆಗೆದುಕೊಳ್ಳುವುದಾದರೆ ಈಗ ದಾಖಲಾಗಿರುವ ಪ್ರಮಾಣದಲ್ಲಿ ಅರ್ಧದಷ್ಟೂ ಸಾಕ್ಷರ ಮಹಿಳೆಯರು ನಮಗೆ ಸಿಕ್ಕುವುದಿಲ್ಲ ಎನ್ನುವುದು ವಾಸ್ತವ ಸತ್ಯ!

ಜೊತೆಗೆ ತಳ ಸಮುದಾಯದ ಹೆಣ್ಣುಮಕ್ಕಳಂತೂ ಶಿಕ್ಷಣದಿಂದ ಇನ್ನೂ ಬಹಳಷ್ಟು ದೂರದಲ್ಲಿಯೇ ಇದ್ದಾರೆ. ಇಂದಿಗೂ ಇಂತಹ ೩೧% ಹೆಣ್ಣುಮಕ್ಕಳು ಮಾತ್ರ ಶಿಕ್ಷಣ ಪಡೆದಿದ್ದಾರೆ ಎಂಬುದೇ ಪ್ರಗತಿಯ ಹಾದಿಯಲ್ಲಿರುವ ಭಾರತಕ್ಕೆ ನಾಚಿಕೆಗೇಡಿನ ವಿಷಯವಾಗಬೇಕಿದೆ. ಕರ್ನಾಟಕ ಸರ್ಕಾರ ವರ್ಷಗಳ ಕೆಳಗೆ ೩೦೦೦ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಬಡ ಮತ್ತು ತಳಸಮುದಾಯದ ಹೆಣ್ಣುಮಕ್ಕಳು ಶಾಶ್ವತವಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಮುಂದೆ ಇರುವ ಶಾಲೆಗಳಿಗೇ ಹೆಣ್ಣು ಮಕ್ಕಳನ್ನು ಕಳಿಸಲು ಮೀನಮೇಷ ಎಣಿಸುವ ಪೋಷಕರು ದೂರದ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ತಯಾರಾಗುವುದು ದೂರದ ಮಾತೇ ಸರಿ. ಹೀಗಾಗೆ ನಮ್ಮ ದಲಿತ ಹಾಗೂ ಮಹಿಳಾಪರ ಹೋರಾಟಗಾರರು, ಸಂಘಟನೆಗಳು-ಚಳುವಳಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಸಂವಿಧಾನಾತ್ಮಕವಾಗಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದ್ದರೂ, ೨೦೦೯ರ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಈಗ ಕನಿಷ್ಟ ೧೪ರ ವಯಸ್ಸಿನವರೆಗಿನ ಶಿಕ್ಷಣ ಉಚಿತ ಮತ್ತು ಕಡ್ಡಾಯವಾಗಿದ್ದರೂ ಕಲಿಯಲು ಶಾಲೆಗೆ ಹೋಗುವ ಸಮಯದಲ್ಲಿ ಮನೆಗೆಲಸಕ್ಕೆ, ಹೊರಗಿನ ಕೆಲಸಕ್ಕೆ ಮಗಳು ಜೊತೆ ನೀಡಿದರೆ ಕೆಲಸವೂ ಹಗುರ, ಹಣವನ್ನೂ ಸಂಪಾದಿಸಬಹುದೆಂಬ children-of-Indiaಯೋಜನೆ ಹಲವರದು. ಕುಟುಂಬದಲ್ಲಿ ಆರ್ಥಿಕವಾಗಿ ಹೆಚ್ಚಿನ ಹೊರೆ ಬೀಳುತ್ತಿದ್ದರೆ ಅದಕ್ಕೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಕತ್ತರಿ ಹಾಕಿ ಗಂಡುಮಕ್ಕಳನ್ನು ಓದಲು ಕಳಿಸುವ ಸಂಪ್ರದಾಯ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಶಿಕ್ಷಣದಿಂದ ವಂಚಿತರಾದ ಅತಿ ಹೆಚ್ಚು ಕೂಲಿಕಾರ್ಮಿಕ ಹೆಣ್ಣುಮಕ್ಕಳು ವಿಶ್ವದಲ್ಲೇ ಅತಿ ಹೆಚ್ಚಾಗಿ ಇರುವುದು, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಇಂದು ಭಾರತದಲ್ಲಿ ನಿರುದ್ಯೋಗಿ ಅಶಿಕ್ಷಿತ ಹುಡುಗಿಯರ ಸಂಖ್ಯೆ ನಾಲ್ಕು ಕೋಟಿ ಎಂದು ಒಂದು ಅಧ್ಯಯನ ತಿಳಿಸುತ್ತದೆ. ಗಂಡೊಂದು ಕಲಿತರೆ ಅದು ಅವನ ವಿದ್ಯಾಭ್ಯಾಸ ಮಾತ್ರ. ಆದರೆ ಹೆಣ್ಣು ವಿದ್ಯಾವಂತಳಾದರೆ ಇಡೀ ಕುಟುಂಬವೇ ಸಾಕ್ಷರವಾಗುತ್ತದೆ ಎಂದು ಗಾಂಧೀಜಿ ಹೇಳುತ್ತಿದ್ದ ಮಾತು ಸತ್ಯವಾಗಲು ಇನ್ನೂ ಎಷ್ಟು ವರ್ಷಗಳು ಕಾಯಬೇಕೋ?

ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರ ಉಚ್ಛ ನ್ಯಾಯಾಲಯದ ಆದೇಶದಂತೆ ಶಾಲೆಯಿಂದ ಹೊರಗಿರುವ ೭-೧೪ವರ್ಷ ವಯಸ್ಸಿನ ಮಕ್ಕಳ ಸಮೀಕ್ಷೆಯನ್ನು ಮತ್ತೊಮ್ಮೆ ಮಾಡಿದೆ, ಅದರಲ್ಲಿ ನಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವ ಅನೇಕ ಅಂಕಿಅಂಶಗಳು ದಾಖಲಾಗಿವೆ. ಶಾಲೆ ದೂರವಿರುವುದರಿಂದ ೨೮೩೨ ಹುಡುಗಿಯರು, ತಮ್ಮದೇ ಮನೆಗೆಲಸದಲ್ಲಿ ತೊಡಗಿರುವುದರಿಂದ ೧೪೬೭೧ ಬಾಲೆಯರು, ದುಡಿಮೆಯಲ್ಲಿ ತೊಡಗಿರುವುದರಿಂದ ೫೧೧ ಹೆಣ್ಣುಮಕ್ಕಳು, ಬೇರೆ ಕೆಲಸದಲ್ಲಿ ತೊಡಗಿರುವುದರಿಂದ ೨೮೭೩ ಹುಡುಗಿಯರು, ಬಾಲ್ಯವಿವಾಹವಾದ ಕಾರಣಕ್ಕೆ ೧೩೬೫ ಬಾಲೆಯರು, ಮೈನೆರೆದ ಕಾರಣಕ್ಕೆ ೫೨೩೮, ಹೆಣ್ಣುಮಗುವಿಗೆ ಸಂಬಂಧಿಸಿದ ಇತರೆ ಕಾರಣಗಳಿಗಾಗಿ ೨೮೫೮, ಅನಾಕರ್ಷಕ ಶಾಲಾ ವಾತಾವರಣದ ಕಾರಣಕ್ಕೆ ೭೮, ವಲಸೆಯ ಕಾರಣಕ್ಕೆ ೧೪೨೭೬, ಶಿಕ್ಷಕರ ಹೆದರಿಕೆಯಿಂದ ೬೨, ಮನೆ ಬಿಟ್ಟು ಓಡಿ ಹೋದ ಕಾರಣಕ್ಕೆ ೮೮, ಬೀದಿಯಲ್ಲಿ ಚಿಂದಿ ಆಯುವ ಕಾರಣದಿಂದ ೧೧೪ ಮಕ್ಕಳು, ಅಂಗವೈಕಲ್ಯದಿಂದ ೧೫೦೮ ಮಕ್ಕಳು, ಸಾವಿನ ಕಾರಣಕ್ಕೆ ೮೨೪ ಮತ್ತು ಬೇರೆ ಕಾರಣಗಳಿಗಾಗಿ ೩೬೫೭೧ ಹೆಣ್ಣಮಕ್ಕಳು ಶಾಲೆ ತೊರೆದಿರುವುದು ತಿಳಿಯುತ್ತದೆ. ಅಂದರೆ ಒಟ್ಟು ಸುಮಾರು ೮೩,೮೬೯ ಹೆಣ್ಣುಮಕ್ಕಳು ಈ ಎಲ್ಲಾ ವಿವಿಧ ಕಾರಣಗಳಿಗಾಗಿ ಶಾಲೆ ತೊರೆದಿರುವುದು ತಿಳಿಯುತ್ತದೆ. ಇದರಲ್ಲಿ ಹೆಚ್ಚಿನ ಹೆಣ್ಣುಮಕ್ಕಳು ತಳಸಮುದಾಯದವರು ಹಾಗೂ ಹಿಂದುಳಿದ ವರ್ಗಗಳವರೇ ಆಗಿದ್ದಾರೆ ಎಂಬುದು ವಿಪರ್ಯಾಸ.

ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ಸಮಗ್ರವಾಗಿ ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ತಕ್ಷಣವೇ ಸರ್ಕಾರ ಮುಂದಾಗಬೇಕು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಮಗ್ರ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಎಲ್ಲವೂ ಒಟ್ಟಾಗಿ ಸೇರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಮನಃಪೂರ್ವಕವಾಗಿ ಶ್ರಮಿಸಬೇಕಿದೆ. ಆಗ ಮಾತ್ರ ಹೆಣ್ಣುಮಕ್ಕಳ ಶೈಕ್ಷಣಿಕ ಹಕ್ಕಿನ ಸಾಕಾರವಾಗಲು ಸಾಧ್ಯವಿದೆ.

ಹೆಣ್ಣುಮಕ್ಕಳಿಗೂ ಸಮಾನ ವಿದ್ಯಾಭ್ಯಾಸ ನೀಡುವ ನೆಲೆಯಲ್ಲಿ ಸರ್ಕಾರದ ಪ್ರಯತ್ನಗಳೇನೋ ನಿರಂತರವಾಗಿ ಸಾಗಿವೆ. ಹೆಣ್ಣುಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮನವೊಲಿಸಲು ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಉಚಿತ ಊಟ, ಪುಸ್ತಕದ ಜೊತೆಗೆ, ಸೈಕಲ್ ವಿತರಿಸಲಾಗುತ್ತಿದೆ. ಅದರ ಜೊತೆಗೆ ಒಂದನೇ ತರಗತಿಯ ಹೆಣ್ಣುಮಕ್ಕಳ ದಿನವೊಂದರ ಹಾಜರಾತಿಗೆ ೨ರೂಪಾಯಿಗಳನ್ನು ನೀಡುವ ಯೋಜನೆಯೂ ಸರ್ಕಾರದಿಂದ ಜಾರಿಯಾಗಿದೆ. ಅದರ ಫಲವಾಗಿ ಹೆಣ್ಣುಮಕ್ಕಳು ಹೆಚ್ಚಾಗಿ ಶಾಲೆಗಳೆಡೆಗೆ ಮುಖಮಾಡಬಹುದೆಂಬ ಆಶಾಭಾವನೆ ಇದೆ. ಆದರೆ ಇದರ ಹೊರತಾಗಿಯೂ ಹೆಣ್ಣುಮಕ್ಕಳ ಸೂಕ್ಷ್ಮ ಸಮಸ್ಯೆಗಳನ್ನು ಗುರುತಿಸಿ ಹೆಚ್ಚು ಸಮರ್ಥವಾದ ಯೋಜನೆಗಳನ್ನು ಸರ್ಕಾರ ರೂಪಿಸಬೇಕಿದೆ.

ಭಾರತದಂತಾ ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ, ಭೌಗೋಳಿಕ, ರಾಜಕೀಯ ಕಾರಣಗಳ ಜೊತೆಗೆ child-marriage-indiaಗೊಡ್ಡು ಸಂಪ್ರದಾಯ, ವಿವಾಹ, ಆಚರಣೆ, ಕಂದಾಚಾರಗಳು ಮತ್ತು ಅವರನ್ನು ದುಡಿಮೆಯ ಯಂತ್ರಗಳೆಂದು ಭಾವಿಸಿರುವುದೂ ಕಾರಣವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಪ್ರಮಾಣ ಕಡಿಮೆ ಇರುವುದಕ್ಕೆ ಅನೇಕ ಕಾರಣಗಳಿವೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಓದಿನೊಂದಿಗೆ ನಿತ್ಯದ ಬಿಡುವಿಲ್ಲದ ಕೆಲಸದಲ್ಲಿಯೂ ತೊಡಗಿಕೊಳ್ಳಬೇಕು. ಪೌಷ್ಟಿಕ ಆಹಾರದ ಕೊರತೆಯೊಂದಿಗೆ ಹೊಲಗದ್ದೆ, ಕಸಮುಸುರೆ, ಕೊಟ್ಟಿಗೆ ಕೆಲಸಗಳಲ್ಲಿ ಭಾಗಿಯಾಗುತ್ತಲೇ ಶಾಲೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಾಗ ಆಯಾಸ, ಒತ್ತಡಗಳಾಗುವುದು ಸಹಜ. ಇದನ್ನೂ ಮೀರಿ ವಿದ್ಯಾಭ್ಯಾಸವನ್ನು ಮುಂದುವರೆಸಿದರೂ ಶಾಲೆಗಳು ಹತ್ತಿರವಿದ್ದಾಗ ನಿರಾತಂಕವಾಗಿ ಕಳುಹಿಸುವ ಪೋಷಕರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಕ್ಕದ ಊರಿಗೆ ಕಳಿಸಬೇಕಾದಾಗ ಸುರಕ್ಷತೆಯ ದೃಷ್ಟಿಯಿಂದ ಹೆದರುತ್ತಾರೆ. ಬೆಳೆದ ಹೆಣ್ಣುಮಕ್ಕಳ ಶೀಲ ರಕ್ಷಣೆ ಸಧ್ಯದ ಸಮಾಜದಲ್ಲಿ ಪೋಷಕರನ್ನು ಕಾಡುವ ಗಂಭೀರ ವಿಷಯ. ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳ ಶೀಲದ ಪರಿಕಲ್ಪನೆ ಅವರು ಮುಕ್ತವಾಗಿ ಸಮಾಜದಲ್ಲಿ ಬೆರೆಯದ, ಬೆಳೆಯದ ಒಂದು ಚೌಕಟ್ಟನ್ನು ಹಾಕಿಬಿಟ್ಟಿದೆ. ಅದೊಂದು ಆತಂಕ ನೆಪವಾಗಿ ಹೆಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಗ್ರಾಮೀಣ ಪ್ರದೇಶದ ಜನರಿಗೆ ರಿಸ್ಕ್ ಎನ್ನಿಸಿದೆ. ಇಲ್ಲೆಲ್ಲಾ ಹೆಣ್ಣುಮಕ್ಕಳು ತಮಗೇ ಅರಿವಿಲ್ಲದೇ ತಮ್ಮ ಶೈಕ್ಷಣಿಕ ಹಕ್ಕನ್ನು ಕಳೆದುಕೊಳ್ಳುತ್ತಿರುತ್ತಾರೆ. ಅವರಿಗೆ ನಿಜಕ್ಕೂ ತಮಗಾಗಿ ಇಂತಹದೊಂದು ಹಕ್ಕಿರುವ ಅರಿವೂ ಇಲ್ಲ.

ಮಹಿಳೆಯನ್ನು ಒಂದು ಆಸ್ತಿಯನ್ನಾಗಿ ಪರಿಗಣಿಸುವ ಪರಿಪಾಠದಿಂದಾಗಿ ಅವಳನ್ನು ಸಂರಕ್ಷಿಸುವ ಕೆಲಸದ ಮುಖಾಂತರ ಅವಳ ಶೀಲವನ್ನು ಜೋಪಾನ ಮಾಡುವ ಕೆಲಸ ತಲೆತಲಾಂತರದಿಂದ ನಡೆಯುತ್ತಾ ಬಂದಿದೆ. ಎಲ್ಲಿಯವರೆಗೆ ಪಾತಿವ್ರತ್ಯದ, ಕೌಮಾರ್ಯದ, ಶೀಲದ ಕಲ್ಪನೆಗಳು ನಮ್ಮ ಸಮಾಜವನ್ನು ಬಿಟ್ಟು ಹೋಗುವುದಿಲ್ಲವೋ ಅಲ್ಲಿಯವರೆಗೆ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣವಿರಲಿ, ಮೂಲಭೂತ ಶಿಕ್ಷಣವನ್ನೂ ಸಮರ್ಪಕವಾಗಿ ನೀಡಲು ಸಾಧ್ಯವಾಗದ ಜೊತೆಗೆ ಮಹಿಳೆಯ ಸಬಲೀಕರಣ ತಳಮಟ್ಟದಿಂದ ಸಾಧ್ಯವಾಗುವುದಿಲ್ಲ. ಹಾಗೂ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳೂ ಕೂಡ ಹೆಣ್ಣುಮಕ್ಕಳ ಶಿಕ್ಷಣದ ತೊಡಕಿನಲ್ಲಿ ಗಮನಾರ್ಹವಾದ ಸಮಸ್ಯೆಯಾಗಿದೆ. ಜೊತೆಗೆ ಇದೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಹು ಮುಖ್ಯವಾದ ತಡೆಗೋಡೆಯೂ ಹೌದು.

ಇಂದಿಗೂ ಬಹುಜನರ ದೃಷ್ಟಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣವೆಂದರೆ ಮದುವೆಯಾಗುವವರೆಗೆ ಹೊತ್ತು ಕಳೆಯುವ ಸಾಧನ ಎಂಬಂತಾ ಭಾವನೆ ಇದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಋತುಮತಿಯಾದ ನಂತರ ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸುವ ಪೋಷಕರೂ ಇದ್ದಾರೆ. ಹಬ್ಬ ಹರಿದಿನಗಳಲ್ಲಿ, ಮಾಸಿಕ ಸ್ರಾವದ ದಿನಗಳಲ್ಲಿ, ಮನೆಯಲ್ಲಿ ಹೆಚ್ಚಿನ ಕೆಲಸಗಳಿದ್ದಾಗ, ಹೆಣ್ಣುಮಕ್ಕಳು ಶಾಲೆಗೆ ಹೋಗದೇ ಉಳಿದು ಬಿಡುತ್ತಾರೆ. ಕುಟುಂಬದಲ್ಲಿ ಹೆಚ್ಚಿನ ಮಕ್ಕಳಿದ್ದ ಸಂದರ್ಭದಲ್ಲಿ ಹೆಚ್ಚಿನ ಹೊರೆ ಅನಿವಾರ್ಯವಾಗಿ ಸ್ವಲ್ಪ ದೊಡ್ಡ ಹೆಣ್ಣುಮಕ್ಕಳ ಮೇಲೇ ಬೀಳುವುದರಿಂದ ಹಾಗೂ ಪಕ್ಕದ ಹಳ್ಳಿಗಳಿಗೆ ಓದಲು ಹೋಗಬೇಕಾದಾಗ ಆಗುವ ತೊಂದರೆ-ಆಯಾಸದಿಂದ, ಬಸ್ ಸೌಕರ್ಯಗಳು ಇಲ್ಲದಿದ್ದಾಗ, ಶಾಲೆಗೆ ಹೋಗುವ ದಾರಿಯಲ್ಲಿ ಸುರಕ್ಷತೆ ಇಲ್ಲದಿದ್ದಾಗ ಕೂಡ ಹೆಣ್ಣುಮಕ್ಕಳ ವಿದ್ಯಾಭ್ಯಾಸ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ. ಎಷ್ಟು ಓದಿದರೇನು ಅಡಿಗೆ ಮಾಡಿಕೊಂಡಿರೋದು ತಾನೇ? ಎಂಬ ಉದಾಸೀನವು ಇರುತ್ತದೆ. ಇಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಮಹತ್ವವನ್ನು ನಿರಂತರವಾಗಿ ತಿಳಿಹೇಳಿ ಪೋಷಕರ ಮನ ಒಲಿಸಬೇಕಾಗುತ್ತದೆ.

ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮುಖ್ಯ ಹಿನ್ನಡೆ ಎಂದು ಭಾವಿಸಲಾಗಿದೆ. ಇದೊಂದು ಅತ್ಯಂತ ಅನಿವಾರ್ಯವಾದ ಮತ್ತು ಸೂಕ್ಷ್ಮವಾದ ವಿಚಾರವಾಗಿರುವುದರಿಂದ ಇದನ್ನು ಯಾರೊಂದಿಗೂ ಚರ್ಚಿಸುವುದನ್ನೂ ಗ್ರಾಮೀಣ ಪ್ರದೇಶದ ಮಹಿಳೆಯರು ಇಷ್ಟ ಪಡುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಡಿ ದರ್ಜೆ ನೌಕರರು ಇಲ್ಲದಿರುವುದರಿಂದ ಶೌಚಾಲಯ ಶುದ್ಧಿಯಿಂದ ಹಿಡಿದು ಶಾಲೆಯ ಕಸ ಗುಡಿಸಿ ಒರೆಸುವುದನ್ನೂ ಮಕ್ಕಳಿಂದಲೇ ಮಾಡಿಸುವುದು, ಸರ್ಕಾರಿ ಶಾಲೆಯಿಂದ ಮಕ್ಕಳು ದೂರಾಗುವುದಕ್ಕೆ ಒಂದು ಕಾರಣ. ಜೊತೆಗೆ ಮಹಿಳಾ ಶಿಕ್ಷಕರ ಕೊರತೆಯೂ ಹೆಣ್ಣುಮಕ್ಕಳ ಶಿಕ್ಷಣದ ಆಸಕ್ತಿಯನ್ನು ಪೋಷಕರಲ್ಲಿ ಕಡಿಮೆ ಮಾಡುತ್ತದೆ. ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ೨೯% ಮಹಿಳಾ ಶಿಕ್ಷಕರು ಹಾಗೂ ಪ್ರೌಢ ಶಿಕ್ಷಣದ ಹಂತದಲ್ಲಿ ಕೇವಲ ೨೨% ಮಹಿಳಾ ಶಿಕ್ಷಕರಿರುವುದೂ ಪರೋಕ್ಷವಾಗಿ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತದೆ. ಈ ಯಾವ ಸಮಸ್ಯೆಗಳೂ ಗಂಡು ಮಕ್ಕಳನ್ನು ಕಾಡದೇ ಇರುವುದರಿಂದ ಅವರ ಶಿಕ್ಷಣ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಸರ್ಕಾರದ ವತಿಯಿಂದ ಗ್ರಾಮಾಂತರ ಪ್ರದೇಶದ ಹೆಣ್ಣುಮಕ್ಕಳಿಗಾಗಿ ಶಿಕ್ಷಣದ ಸೌಲಭ್ಯ ದೊರಕುವಂತೆ ಮಾಡಲು ಪ್ರತಿ ಹಳ್ಳಿಯಲ್ಲಿಯೂ schoolಶಾಲೆಗಳನ್ನು ತೆರೆಯಬೇಕು. ಇದು ಸಾಧ್ಯವಾಗದಿದ್ದರೆ ಉಚಿತ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಬೇಕು. ಅವರ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಕೆಲವು ಹಳ್ಳಿಗಳನ್ನು ಒಳಗೊಂಡಂತೆ ಕಾಲೇಜು ಶಿಕ್ಷಣ ವ್ಯವಸ್ಥೆ, ವೃತ್ತಿ ತರಬೇತಿ ಕೇಂದ್ರಗಳು, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯಬೇಕು. ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಕರ್ಯವಿರುವ ವಿದ್ಯಾರ್ಥಿನಿಲಯಗಳನ್ನು ದೊಡ್ಡ ಪ್ರಮಾಣದಲ್ಲಿ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಒದಗಿಸಬೇಕು. ಹೆಣ್ಣುಮಕ್ಕಳ ಶಿಕ್ಷಣವೆಂದರೆ ಅವಶ್ಯಕ ಮೂಲ ಶಿಕ್ಷಣ ಮಾತ್ರವಲ್ಲ. ಅವರು ಸಂಪೂರ್ಣವಾಗಿ ಸ್ವಾವಲಂಬಿಗಳಾಗುವ ನೆಲೆಯಲ್ಲಿ ಎಲ್ಲ ರೀತಿಯ ಅನುಕೂಲವನ್ನೂ ಸರ್ಕಾರ ಮಾಡಿಕೊಡಬೇಕು. ಅದಕ್ಕಾಗಿ ನಿಗದಿತ ವಿದ್ಯಾಭ್ಯಾಸದ ನಂತರ ವೃತ್ತಿ ಶಿಕ್ಷಣ ಪಡೆಯಲು ಅನುಕೂಲವಾಗುವಂತಹಾ ಸಾದ್ಯತೆಗಳನ್ನು ಸರ್ಕಾರ ರೂಪಿಸಬೇಕು. ಆಗ ಮಾತ್ರ ಆರ್ಥಿಕ ದಾಸ್ಯವನ್ನು ಮೀರಿ ಆತ್ಮ ಸ್ವಾತಂತ್ರ್ಯದ ಸಿದ್ಧಿಯೆಡೆಗೆ ಸಾಗಲು ನಮ್ಮ ಹೆಣ್ಣುಮಕ್ಕಳಿಗೆ ಸಾಧ್ಯವಾಗುತ್ತದೆ.

ಇಂದು ಕಾಲ ವೇಗವಾಗಿ ಓಡುತ್ತಿದೆ. ಜೊತೆಗೆ ಅದು ಇಂದು ಸ್ಪರ್ಧಾತ್ಮಕವಾಗಿದೆ. ಅದಕ್ಕೆ ತಕ್ಕಂತೆ ನಮ್ಮ ಹೆಣ್ಣುಮಕ್ಕಳು ಅದರ ಮಹತ್ವವನ್ನು ಅರಿತು ನಡೆಯಬೇಕಿದೆ. ಶಿಕ್ಷಣದ ಹಕ್ಕು ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ, ಛಲ, ಧೈರ್ಯವನ್ನು ತುಂಬುವುದರೊಂದಿಗೆ ಬದುಕನ್ನು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ಎದುರಿಸುವ ಮನೋಸ್ಥೈರ್ಯವನ್ನು ನೀಡಬೇಕಿದೆ. ಅಂತಹ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಿದೆ. ಉನ್ನತ ವ್ಯಾಸಂಗ ಮಾಡಿದ ನಮ್ಮ ಅನೇಕ ಮಹಿಳೆಯರು ಇಂದಿಗೂ ಮೂಢನಂಬಿಕೆಗಳ ದಾಸರೂ, ಕಂದಾಚಾರಿಗಳೂ ಗೊಡ್ಡು ಸಂಪ್ರದಾಯಸ್ಥರು ಆಗಿರುತ್ತಾರೆ. ಹಾಗಿದ್ದರೆ ನಮ್ಮ ಶಿಕ್ಷಣ ನಮಗೆ ನೀಡುತ್ತಿರುವುದಾದರೂ ಏನನ್ನು? ಎಂಬ ಪ್ರಶ್ನೆ ಏಳುತ್ತದೆ.

ಶಿಕ್ಷಣ ಜ್ಞಾನದ ಪರಿಧಿಯನ್ನು ವಿಸ್ತರಿಸುವುದರೊಂದಿಗೆ ಅರಿವಿನ ಬಾಗಿಲನ್ನು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಿಸಬೇಕು. ಹೆಣ್ಣುಮಕ್ಕಳು ವೈಚಾರಿಕವಾಗಿ, ಚೌಕಟ್ಟುಗಳಿಂದ ಮುಕ್ತವಾಗಿ ಚಿಂತಿಸುವ ನೆಲೆಯಲ್ಲಿ ನಮ್ಮನ್ನು ತಯಾರು ಮಾಡಬೇಕು. ಮಹಿಳಾ ಸಬಲೀಕರಣದ ಮೊದಲ ಮೆಟ್ಟಿಲು, ಸ್ವಾವಲಂಬನೆಯ ಮೊದಲ ಹೆಜ್ಜೆ ಹೆಣ್ಣುಮಕ್ಕಳ ಶಿಕ್ಷಣವಾಗಿರುವುದರಿಂದ ಭವಿಷ್ಯದಲ್ಲಿ ದೃಢತೆಯನ್ನು ಬಯಸುವ ಹೆಣ್ಣುಮಕ್ಕಳೆಲ್ಲರಿಗೂ ಇದು ಅತ್ಯಂತ ಅವಶ್ಯಕ. ಈ ತಿಳಿವನ್ನು ಪ್ರತಿ ಹೆಣ್ಣು ಮಗುವಿನಲ್ಲೂ ಮೂಡಿಸಬೇಕಿರುವುದೇ ಇಂದಿನ ತುರ್ತು. ಯಾವಾಗ ಈ ಅರಿವು ಒಳಗಿನಿಂದಲೇ ಅವರಲ್ಲಿ ಮೂಡಿ ಬಂದು ಮಾನಸಿಕ ಹಾಗೂ ಬೌದ್ಧಿಕವಾಗಿ ಸಬಲರಾಗುತ್ತಾರೋ ಆಗ ಮಹಿಳೆಯರ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕೆ ಪರಿಪೂರ್ಣವಾದ ಅರ್ಥ ಬರುತ್ತದೆ. ಅದು ಸಾಧ್ಯವಾಗುವುದು ಗುಣಾತ್ಮಕ, ವೈಚಾರಿಕ ಶಿಕ್ಷಣದಿಂದ ಮಾತ್ರ. ಇಂತಹ ಶೈಕ್ಷಣಿಕ ಹಕ್ಕು ನಮ್ಮ ಹೆಣ್ಣುಮಕ್ಕಳಿಗೆ ದೊರಕಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಅವರು ಈ ದೇಶದ ಆಸ್ತಿಯಾಗಿ ಹೊರಹೊಮ್ಮುತ್ತಾರೆ.

ಲೈಂಗಿಕ ಜೀತ- ಅಪರಾಧಿ ಯಾರು?


– ರೂಪ ಹಾಸನ


 

“ವೇಶ್ಯಾವಾಟಿಕೆ ಇನ್ನು ಮುಂದೆ ಕಾನೂನು ಪ್ರಕಾರ ತಪ್ಪಿಲ್ಲ ಅಂತ ಮಾಡಾರಂತೆ, ಅದಕ್ಕೆ ಇನ್ನಿಲ್ಲದ ಮರ್ವಾದೆ ತಂದು ಕೊಟ್ಟಾರಂತೆ. ಹಂಗಾದ್ರೆ ಆ ದೊಡ್ಡವರ ಮನೆ ಹೆಣ್ಣುಮಕ್ಕಳನ್ನೂ ನಮ್ಮ ಈ ಕೆಲಸಕ್ಕೆ ಕಳಸ್ತಾರಂತೇನ? ನಾವೇನೋ ಇವತ್ತಲ್ಲ ನಾಳೆ ನಮ್ಮ ಈ ಕಷ್ಟ ತೀರಿ ಇದರಿಂದ ಬಿಡುಗಡೆ ಹೊಂದ್ಬಹುದು ಅಂದ್ಕಂಡಿದ್ವಿ. ಈಗ ನೋಡಿದ್ರೆ ನಾವೆಲ್ಲಾ ಇಲ್ಲೆ ಶಾಶ್ವತವಾಗಿರೋ ಹಂಗೆ ಮಾಡ್ಬಿಡ್ತಾರಾ?” ಎಂದು ‘ಅವಳು’ ಕೇಳುತ್ತಿದ್ದಳು. ಕಡು ಬಡತನದಿಂದ 15 ವರ್ಷವಾಗಿದ್ದಾಗಲೇ ಸ್ವಂತ ತಂದೆಯೇ ವೇಶ್ಯಾವಾಟಿಕೆಗೆ ನೂಕಿದ್ದ. ಅದರಿಂದ ಪಾರಾಗಿ ಹೊರಬರಲು ವಿದ್ಯಾಭ್ಯಾಸವೂ ಇಲ್ಲದೇ, ಯಾವ ವೃತ್ತಿ ಕೌಶಲವೂ ಇಲ್ಲದೇ, ಸುತ್ತಮುತ್ತ ತನಗೆ ಸಾಧ್ಯವಾಗುವಂತಾ ಕೆಲಸವನ್ನೂ ಕಾಣದೇ ಅನಿವಾರ್ಯವಾಗಿ ಲೈಂಗಿಕ ಜೀತದಲ್ಲೇ ಮುಂದುವರೆಯುವಂತೆ ಮಾಡಿರುವ ಅವಳ ಇಂತಹ ಸ್ಥಿತಿಗೆ ಯಾರನ್ನು ಶಿಕ್ಷಿಸೋಣ? 67ವರ್ಷ ಕಳೆದಿರುವ ಸ್ವತಂತ್ರ ಭಾರತದಲ್ಲಿ ಬಡತನ, ನಿರಕ್ಷರತೆ, ನಿರುದ್ಯೋಗದಂತಹ ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಮೂಲಮಟ್ಟದಿಂದ ನಿರ್ಮೂಲನೆಗೊಳಿಸಲು ಅಸಮರ್ಥವಾದ ಸರ್ಕಾರಗಳನ್ನೇ? ಹೆಣ್ಣನ್ನು ಇಂತಹ ಲೈಂಗಿಕ ಜೀತಕ್ಕಿಳಿಸಿ ಅದರ ಯಥಾಸ್ಥಿತಿ ಮುಂದುವರಿಕೆಗೆ ಸಜ್ಜುಗೊಂಡಿರುವ ವ್ಯವಸ್ಥೆಯನ್ನೇ?

ಇದು ಮತ್ತೊಬ್ಬಳ ಕಥೆ. ಅವಳ 14 ವರ್ಷದ ಮಗಳು ನಾಪತ್ತೆಯಾಗಿದ್ದಳು. prostitution-indiaಪೊಲೀಸರಿಗೆ ದೂರನ್ನು ಕೊಟ್ಟಿದ್ದರೂ ಪತ್ತೆಯಾಗಿರಲಿಲ್ಲ. ಅವಳು “ನಾನಂತೂ ಆಕಸ್ಮಿಕವಾಗಿ ವೇಶ್ಯಾವಾಟಿಕೆಯ ಜಾಲಕ್ಕೆ ಬಿದ್ದು ನರಳುತ್ತಿದ್ದೇನೆ. ನನ್ನ ಮಗಳನ್ನ ಮಾತ್ರ ಈ ಪಾಪ ಕೂಪಕ್ಕೆ ಎಳೀಬೇಡಿ ಎಂದು ಕೈ ಮುಗಿದು ಬೇಡಿಕೊಂಡೆ. ಆದರೂ ಆ ಪಾಪಿಗಳು…..” ಎಂದು ಗೋಳಾಡುತ್ತಿದ್ದಳು. ತನ್ನ ಮಗಳು ತನ್ನಂತಾಗಬಾರದೆಂದು ಅವಳನ್ನು ಹದ್ದಿನಂತೆ ಕಾಯುತ್ತಾ ವಿದ್ಯಾಭ್ಯಾಸ ಕೊಡಿಸುತ್ತಿದ್ದರೂ ಈ ಅಮಾನುಷ ಜಾಲ ಅವಳನ್ನು ಸೆಳೆದುಕೊಂಡೇಬಿಟ್ಟಿತು. ಕೆಲ ವರ್ಷಗಳ ನಂತರ ಯಾವುದೋ ಸುಳಿವು ಸಿಕ್ಕು ದೊಡ್ಡ ನಗರದ ವೇಶ್ಯಾಗೃಹವೊಂದರಲ್ಲಿ ಅವಳು ಪತ್ತೆಯಾಗಿದ್ದಳು. ಆದರೆ ಅಷ್ಟರಲ್ಲಾಗಲೇ ತೀವ್ರ ಏಡ್ಸ್ ಪೀಡಿತಳಾಗಿದ್ದರಿಂದ ತಾಯಿಯೊಂದಿಗೆ ವಾಪಸ್ ತನ್ನ ಮನೆಗೆ ಬರಲು ಒಪ್ಪಿರಲಿಲ್ಲ. ವಿಲವಿಲ ಒದ್ದಾಡುವ ಒಂಟಿ ಬಾಳು ಈ ತಾಯಿಗೆ. ಇದು ಈ ಜಾಲಕ್ಕೆ ಬಿದ್ದಿದ್ದ ಇಂಥದೇ ಮತ್ತೊಬ್ಬ ತಾಯಿಯ ಕಥೆ. ತನ್ನಂಥ ಜೀವಿಗಳ, ಅವರ ಮಕ್ಕಳ ಒಳಿತಿಗಾಗಿ ಕೈಲಾದಮಟ್ಟಿಗೆ ಆಸರೆ ನೀಡುತ್ತಿದ್ದಾಳೆ “ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಅದು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ! ಮನಸ್ಸನ್ನ ಕೊಂದುಕೊಂಡು, ದುಡ್ಡುಕೊಟ್ಟವರೊಂದಿಗೆ, ಅವರ ಮರ್ಜಿಗೆ ತಕ್ಕಂತೆ ದಿನವೂ ಸುಖ ನೀಡಬೇಕೆಂದರೆ ಸಂತೋಷದ ಕೆಲಸನಾ? ನಾವೇನು ಯಂತ್ರಗಳ? ಮನುಷ್ಯರಲ್ಲವಾ? ಹೊಟ್ಟೆ ತುಂಬುವಷ್ಟು ದುಡಿದು ಹಣ ಸಂಪಾದಿಸಲು ಬೇರೆ ವ್ಯವಸ್ಥೆ ಮಾಡಿಕೊಟ್ಟರೆ ಬಡತನದ ಕಾರಣಕ್ಕೆ ಇಲ್ಲಿಗೆ ಬಂದಿರುವ ಅರ್ಧಕ್ಕಿಂತ ಹೆಚ್ಚಿನವರು ವೇಶ್ಯಾವಾಟಿಕೆ ಬಿಡುತ್ತಾರೆ” ಎನ್ನುತ್ತಾಳೆ.

ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಬೇಕೆ ಬೇಡವೇ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.Prostitution ಆದರೆ ನಮ್ಮ ದೇಶದಲ್ಲಿ ಒಬ್ಬ ಮಹಿಳೆ ಗೌಪ್ಯವಾಗಿ ತನ್ನ ದೇಹದ ಮೂಲಕ ಕಾಮಸುಖವನ್ನು ಹಣಕ್ಕಾಗಿ ಮಾರಾಟ ಮಾಡುವುದು ಅಪರಾಧ ಅಲ್ಲವೇ ಅಲ್ಲ! ಆದರೆ ಅದಕ್ಕೆ ಸಂಬಂಧಿಸಿದ ವಾಣಿಜ್ಯೀಕೃತ ಚಟುವಟಿಕೆಗಳಾದ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಪ್ರಚಾರ ಮಾಡುವುದು, ಮಾರಾಟಕ್ಕೆ ಅಡ್ಡದಾರಿಗಳನ್ನು ಹಿಡಿಯುವುದು, ವೇಶ್ಯಾಗೃಹಗಳನ್ನು ಸ್ಥಾಪಿಸುವುದು ಮತ್ತು ನಡೆಸುವುದು, ಹಾಗೂ ಇದಕ್ಕಾಗಿ ಮಧ್ಯಸ್ಥಿಕೆ ವ್ಯವಹಾರ ಮಾಡುವುದು, ಅಪ್ರಾಪ್ತ ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳುವುದು, ಯಾರನ್ನಾದರೂ ಈ ವೃತ್ತಿಗೆ ಬಲವಂತದಿಂದ ತಳ್ಳುವುದು ಹಾಗೂ ಸಲಿಂಗಕಾಮದಲ್ಲಿ ತೊಡಗುವುದು ಮಾತ್ರ ಅಪರಾಧವಾಗಿದೆ. ಈ ಅಪರಾಧಗಳು ಈಗಾಗಲೇ ಎಗ್ಗಿಲ್ಲದೇ ಎಲ್ಲ ಊರುಗಳಲ್ಲಿಯೂ ನಡೆಯುತ್ತಿರುವುದು ಒಂದು ರೀತಿ ಎಲ್ಲರಿಗೂ ಗೊತ್ತಿರುವ ಗುಟ್ಟು! ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಈ ಅಪರಾಧಕ್ಕಾಗಿ ಚಿಕ್ಕಪುಟ್ಟವರು ಸಿಕ್ಕುಬಿದ್ದು ಬಂಧನಕ್ಕೊಳಗಾಗುತ್ತಾರೆಯೇ ವಿನಃ ಹೆಚ್ಚಿನ ಬಾರಿ ಕಾನೂನು ಅನುಷ್ಟಾನಕರಿಂದ ಮಾಫಿಗಳು, ನಿರ್ಲಕ್ಷ್ಯಗಳು, ಒಳ ಒಪ್ಪಂದಗಳು, ರಾಜೀಸೂತ್ರಗಳು, ಮಧ್ಯಸ್ಥಿಕೆ, ಕಪ್ಪಕಾಣಿಕೆ ಅಥವಾ ದೇಹಸುಖ ಸಂದಾಯಗಳಿಂದಲೇ ಬಹುತೇಕ ಈ ಅಪರಾಧಗಳು ಮುಚ್ಚಿಹೋಗುತ್ತವೆ! ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ಆದರೆ ಅದನ್ನು ನಿಯಂತ್ರಿಸದಿರುವುದರಿಂದ, ಹಸಿವಿಗೆ ಒಂದು ವೃತ್ತಿ, ಒಂದು ಕೆಲಸ, ಇರಲು ಒಂದು ನೆರಳು ಇಲ್ಲದ ಈ ಸಮಾಜದಲ್ಲಿ ಹೆಣ್ಣು ಅಸಹಾಯಕ ಸ್ಥಿತಿಗೆ ತಳ್ಳಲ್ಪಟ್ಟು ಈ ರೋಗಗ್ರಸ್ತ ಸಮಾಜ ನಿರ್ಮಾಣಗೊಳ್ಳುತ್ತಿದೆ ಎಂದು ನಾವು ಮೊದಲು ಅರಿತುಕೊಳ್ಳ ಬೇಕಾಗಿದೆ. ಇಲ್ಲಿ ನಿಂತು ನಾವು ಸಮಸ್ಯೆಗೆ ಮುಖಾಮುಖಿಯಾಗಬೇಕಾಗಿದೆ. ಜತೆಗೆ ನಮ್ಮ ನ್ಯಾಯಾಸ್ಥಾನಗಳು ನೀಡಿರುವ ಯಾವುದೇ ತೀರ್ಪು ಇದನ್ನು ‘ವೃತ್ತಿ’ ಎಂದು ಪರಿಗಣಿಸಿಲ್ಲ. ಬದಲಿಗೆ ಅದನ್ನು ‘ಲೈಂಗಿಕ ಜೀತ’ವೆಂದು ಪ್ರತಿಪಾದಿಸಿವೆ! ವೇಶ್ಯಾವಾಟಿಕೆಯಲ್ಲಿ ಅನಿವಾರ್ಯವಾಗಿ ತೊಡಗುವ ಮಹಿಳೆ-ಮಕ್ಕಳ ಪರವಾಗಿಯೇ ಶಾಸನ ಮತ್ತು ಕಾನೂನುಗಳು ರೂಪಿತವಾಗಿವೆ. ಇದನ್ನು ವಾಣಿಜ್ಯೀಕರಣಗೊಳಿಸುವ ಚಟುವಟಿಕೆಯಲ್ಲಿ ತೊಡಗಿರುವ ಪುರುಷ-ಮಹಿಳೆ ಇಬ್ಬರನ್ನೂ ಅಪರಾಧಿಗಳೆಂದು ಪರಿಗಣಿಸಿದೆ. ಹಾಗಿದ್ದರೆ ದಾರಿ ತಪ್ಪಿರುವುದೆಲ್ಲಿ? ಅದನ್ನು ಪರಿಣಾಮಕಾರಿಯಾಗಿ, ಸರಿಯಾಗಿ ಮತ್ತು ಕಠಿಣವಾಗಿ ಅನುಷ್ಠಾನಗೊಳಿಸುವಲ್ಲಿ!

ಲೈಂಗಿಕ ಜೀತಗಾರರಿಗೆ ತಲೆಹಿಡುಕರಿಂದ, ರೌಡಿಗಳಿಂದ, ಪೊಲೀಸರಿಂದ ದೌರ್ಜನ್ಯವಾಗುತ್ತಿದೆ ಎಂಬುದು ಒಂದು ವಾದ. ತಲೆಹಿಡುಕರನ್ನು, ರೌಡಿಗಳನ್ನು ಪೊಲೀಸರು ನಿಯಂತ್ರಿಸಬೇಕು. ಕೆಲ ಪೊಲೀಸರಿಂದಾಗುತ್ತಿರುವ ದೌರ್ಜನ್ಯವನ್ನು ಸರಿಪಡಿಸಲು ಪೊಲೀಸ್ ಇಲಾಖೆಯ ತಳ ಹಂತಕ್ಕೆ ಸರಿಯಾದ ಕಾನೂನಿನ ಅರಿವು ನೀಡಬೇಕು. ಮತ್ತು ಅವರೇ ಭ್ರಷ್ಟರಾಗಿ, ಅಧಿಕಾರವನ್ನು ದುರುಪಯೋಗಿಸಿ, ಕಳ್ಳನುಸುಳುಗಳನ್ನು ಮನ ಬಂದಂತೆ ಉಪಯೋಗಿಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಕ್ರಮವನ್ನು ಇಲಾಖೆಯ ಮೇಲಾಧಿಕಾರಿಗಳು ತೆಗೆದುಕೊಳ್ಳಬೇಕು. ಇದಲ್ಲವೇ ಆಗಬೇಕಾದದ್ದು? ಅದರ ಬದಲಿಗೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಮೂಲರೋಗವನ್ನು ಹಾಗೇ ಬಿಟ್ಟು ಮೇಲ್ ಜ್ವರಕ್ಕೆ ಚಿಕಿತ್ಸೆ ನೀಡಿದಂತಾಗುತ್ತದೆ!

ಈಗ ವ್ಯಾಪಕವಾಗಿ ಹಬ್ಬುತ್ತಿರುವ ಹೆಚ್ಐವಿ, ಏಡ್ಸ್ ನಂತಹ ಮಾರಕ ರೋಗಗಳು KSAPSವಾಣಿಜ್ಯೀಕೃತ ವೇಶ್ಯಾವಾಟಿಕೆಯ, ಅನೈಸರ್ಗಿಕ ಲೈಂಗಿಕತೆಯ ಬಹು ದೊಡ್ಡ ಬಳುವಳಿ. ಇದನ್ನು ಮೂಲದಲ್ಲಿ ಚಿವುಟಿ ಹಾಕದೆ ಈಗ ಸರ್ಕಾರವೇ ತನ್ನ ಅಂಗ ಸಂಸ್ಥೆಯಾದ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ಮೂಲಕ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಓಎನ್ ಜಿ ಓಗಳ ಸಹಕಾರದೊಂದಿಗೆ ವಿಸ್ತ್ರತಜಾಲವನ್ನು ಹೊಂದಿ, ಸಮುದಾಯ ಆಧಾರಿತ ಸಂಘಟನೆಗಳ ಮೂಲಕ, ಸಹಭಾಗಿ ಲೈಂಗಿಕ ಜೀತಗಾರರ ಮೂಲಕ ವೇಶ್ಯಾವಾಟಿಕೆಯಲ್ಲಿ ತೊಡಗಿರುವವರನ್ನು ಹುಡುಕಿ ನೋಂದಣಿ ಮಾಡಿಸಿ, ಅವರಿಗೆ ಕಾಂಡೋಮ್ ವಿತರಣೆ, ರಕ್ತ ಮತ್ತು ನಿಯಮಿತ ಆರೋಗ್ಯ ತಪಾಸಣೆ, ಆಪ್ತಸಮಾಲೋಚನೆ, ಇದಕ್ಕೆ ಸಂಬಂಧಿಸಿದ ಏಡ್ಸ್, ಹೆಚ್ಐವಿ, ಇನ್ನಿತರ ಗುಪ್ತ ರೋಗಗಳ ನಿರ್ವಹಣೆಯ ತರಬೇತಿ ಮತ್ತು ಚಿಕಿತ್ಸೆ ನೀಡುವ ಮೂಲಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತಾ ‘ಸುರಕ್ಷಿತ ಲೈಂಗಿಕತೆಗೆ’ ಮಾತ್ರ ಸಹಕಾರಿಯಾಗಿವೆ. ಈ ಎಲ್ಲಾ ವ್ಯವಸ್ಥೆಗಾಗಿಯೇ ಬಜೆಟ್ ನಲ್ಲಿ ಲಕ್ಷಾಂತರ ರೂಪಾಯಿಗಳ ಹಣವನ್ನೂ ಸರ್ಕಾರಗಳು ಪ್ರತ್ಯೇಕವಾಗಿ ತೆಗೆದಿರಿಸುತ್ತಿವೆ. ರೋಗಗಳ ನಿಯಂತ್ರಣದ ಹೆಸರಿನಲ್ಲಿ ಸದ್ದಿಲ್ಲದೇ ಬೇಡಿಕೆ ಮತ್ತು ಪೂರೈಕೆಗಳನ್ನೂ ನಿರ್ವಹಿಸಲಾಗುತ್ತಿದೆ! ಹೀಗೆಂದೇ ವೇಶ್ಯಾವಾಟಿಕೆಗೆ ಬೀಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ರೋಗ ನಿಯಂತ್ರಣದ ಹೆಸರಿನ ಜಾಲವೂ ವಿಸ್ತ್ರತವಾಗುತ್ತಿದೆ!

ಕರ್ನಾಟಕದಲ್ಲಿ ಸದ್ಯ 2.50ಲಕ್ಷಕ್ಕೂ ಅಧಿಕ ಹೆಚ್ಐವಿ ಪೀಡಿತರಿದ್ದಾರೆ. 1998-2013ರವರೆಗೆ 29000 ರೋಗಿಗಳೂ ಮೃತಪಟ್ಟಿದ್ದಾರೆ! ಸೋಂಕಿನ ವ್ಯಾಪಕತೆ, ಪೀಡಿತರು ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೇ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ! ಕರ್ನಾಟಕದಲ್ಲಿ ಇದೇ ನವೆಂಬರ್ 2012ರವರೆಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ತೀವ್ರ ಅಪಾಯದ ಗುಂಪಿನಲ್ಲಿ ನೋಂದಣಿಯಾದ ಲೈಂಗಿಕ ಜೀತಗಾರ್ತಿಯರು 79169. ಸಲಿಂಗಕಾಮಿ ಪುರುಷ ಲೈಂಗಿಕ ಜೀತಗಾರರ ಸಂಖ್ಯೆ 25244. ಲೈಂಗಿಕ ಜೀತಗಾರ್ತಿಯರಲ್ಲಿ ಹೆಚ್ಚಿನವರು ತಳಸಮುದಾಯದವರು ಮತ್ತು ಹಿಂದುಳಿದ ಜಾತಿ-ಮತ, ವರ್ಗದವರೆಂಬುದು ಅಧ್ಯಯನದಿಂದ ತಿಳಿಯುತ್ತದೆ. ಅದಕ್ಕೆ ಉದಾಹರಣೆಯಾಗಿ ಒಂದು ಜಿಲ್ಲೆಯ ಅಂಕಿಅಂಶವನ್ನು ನೋಡುವುದಾದರೆ, 2791 ಲೈಂಗಿಕ ಜೀತಗಾರ್ತಿಯರಲ್ಲಿ 599-ಪರಿಶಿಷ್ಟ ಜಾತಿ, 698-ಪರಿಶಿಷ್ಟ ವರ್ಗ, 799-ಹಿಂದುಳಿದ ಜಾತಿ, 696- ಇತರರು [ಇತರರಲ್ಲಿ ಅಲ್ಪಸಂಖ್ಯಾತ ಕೋಮಿನವರೇ ಅಧಿಕ]. ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಎಲ್ಲಾ ಜಿಲ್ಲೆಗಳಲ್ಲೂ ಇರಬಹುದು. ಆರ್ಥಿಕ, ಸಾಮಾಜಿಕವಾಗಿ ಅಂಚಿಗೆ ಒತ್ತರಿಸಲ್ಪಟ್ಟಿರುವ ಹೆಣ್ಣುಮಕ್ಕಳು ಈ ಪ್ರಮಾಣದಲ್ಲಿ ಲೈಂಗಿಕ ಜೀತಕ್ಕೆ ಬಿದ್ದಿರುವುದಕ್ಕೆ ಕಾರಣ ನಮ್ಮ ಸರ್ಕಾರಗಳು ಈ ಹೆಣ್ಣುಮಕ್ಕಳಿಗೆ ಆರ್ಥಿಕ ಭದ್ರತೆಯಿರುವ ಸೂಕ್ತ ಉದ್ಯೋಗವನ್ನು ಇದುವರೆಗೆ ಕೊಟ್ಟೇ ಇಲ್ಲದಿರುವುದು. ಬದಲಿಗೆ ಲೈಂಗಿಕ ಜೀತವನ್ನೇ ಶಾಶ್ವತ ಉದ್ಯೋಗವಾಗಿ ಅವರಿಗೆ ದಯಪಾಲಿಸುತ್ತಿದೆ! ಅಪರಾಧ ಯಾರದ್ದು? ಸರ್ಕಾರದ ಬಳಿ ಇಷ್ಟೆಲ್ಲಾ ಅಪರಾಧೀಕರಣಗಳ ದಾಖಲೆಗಳಿದ್ದಾಗಲೂ ನಿಯಂತ್ರಣವೇಕೆ ಸಾಧ್ಯವಾಗುತ್ತಿಲ್ಲ?

ನೋಂದಣಿಯಾಗುವ ಹೆಚ್ಚಿನವರು ಸಹಜವಾಗಿಯೇ ‘ಸುರಕ್ಷಿತ ಲೈಂಗಿಕತೆಗೆ’ ಅನುಕೂಲ ಮತ್ತು ಅರಿವು ಇಲ್ಲದ, ಬಡತನದ ಕಾರಣಕ್ಕಾಗಿಯೇ ಈ ದಂಧೆಯಲ್ಲಿ ಮುಳುಗಿರುವವರು. ನಮ್ಮ ಕಾಳಜಿ ಇರಬೇಕಾದ್ದೂ ಬಡತನ, ಅನಕ್ಷರತೆ, ನಿರುದ್ಯೋಗ, ಪ್ರೀತಿ-ಕೆಲಸದ ಆಕರ್ಷಣೆಯಿಂದ ಮೋಸಕ್ಕೆ ಒಳಗಾಗಿ, ಇನ್ನಿತರೇ ದಾರುಣ ಕೌಟುಂಬಿಕ ಸಾಮಾಜಿಕ ಕಾರಣಕ್ಕೆ ಅಂಚಿಗೆ ಒತ್ತರಿಸಲ್ಪಟ್ಟು ವೇಶ್ಯಾವಾಟಿಕೆಯೆಂಬ ಜಾಲದೊಳಗೆ ಬಿದ್ದಿರುವ, ಬೀಳುತ್ತಿರುವ ಮಕ್ಕಳು ಮತ್ತು ಮಹಿಳೆಯರ ಕುರಿತಾದದ್ದು ಮಾತ್ರವೇ ಆಗಿದ್ದಾಗ ಈ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಆರ್ಥಿಕ-ಸಾಮಾಜಿಕ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅದು ಬಿಟ್ಟು ವಾಣಿಜ್ಯೀಕೃತ ಲೈಂಗಿಕ ಚಟುವಟಿಕೆಗೆ ಸರ್ಕಾರದಿಂದ ಕಾನೂನಾತ್ಮಕ ಪರವಾನಗಿ ನೀಡಿದರೆ ಇವರೆಲ್ಲಾ ಶಾಶ್ವತವಾಗಿ ಈ ಲೈಂಗಿಕಜೀತದ ನರಕಕ್ಕೆ ಎಸೆಯಲ್ಪಡುತ್ತಾರೆ!

ಯಾವ ನೋಂದಣಿ ಪ್ರಕ್ರಿಯೆಯೊಳಗೂ ‘ದಾಖಲಾಗದೇ’ ಹೊರಗುಳಿದವರ ಸಂಖ್ಯೆ sex-sellsಇದರ ಎರಡರಷ್ಟೋ ಮೂರರಷ್ಟೋ! ಜತೆಗೆ, ಕಾಲ್ ಗರ್ಲ್ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರಿಕರಣದ ಲೇಬಲ್ ಇಲ್ಲದ ‘ಸಭ್ಯ-ನಾಗರಿಕ’ ವ್ಯಭಿಚಾರವೂ ಸೇರುತ್ತದೆ. ಶೋಕಿಗಾಗಿ, ಮೋಜಿಗಾಗಿ, ವೈಭವೋಪೇತ ಜೀವನದ ಆಕರ್ಷಣೆಗಾಗಿ, ಸುಲಭದ ಹಣ ಗಳಿಕೆಗಾಗಿ, ವೈಯಕ್ತಿಕ ಸಂತೋಷಕ್ಕಾಗಿ ಇವರು ತಾವಾಗಿಯೇ ಇದನ್ನು ಆಯ್ದುಕೊಳ್ಳುತ್ತಿದ್ದಾರೆ. ಸಭ್ಯ ಸಂಬಂಧಗಳ ಸೋಗಿನಲ್ಲಿಯೇ ವೇಶ್ಯಾಗೃಹಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿದ್ದು, ವೇಶ್ಯಾವಾಟಿಕೆ ವ್ಯಾಪಕವಾಗಿ ಹಬ್ಬುತ್ತಿದೆ. ಜಾಗತೀಕರಣವೆಂಬ ಮಾರುಕಟ್ಟೆ ಕೇಂದ್ರಿತ ಅಭಿವೃದ್ಧಿ ಹೆಣ್ಣಿನ ದೇಹವನ್ನು ಮಾಧ್ಯಮದ ಮೂಲಕ ಸರಕಾಗಿ ವಿಜೃಂಭಿಸುವ ಜೊತೆಗೆ ಲೈಂಗಿಕತೆಯನ್ನು ವಿಕೃತವಾಗಿ ಪ್ರಚೋದಿಸಲಾರಂಭಿಸಿದ ನಂತರ ಈ ಜಾಲಕ್ಕೆ ತಳ್ಳಲ್ಪಡುವವರ ಮತ್ತು ತಾವಾಗೆಯೇ ವೇಶ್ಯಾವಾಟಿಕೆಯನ್ನು ಆಯ್ದುಕೊಳ್ಳುವವರ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿದೆ. ವಾಣಿಜ್ಯೀಕೃತ ವೇಶ್ಯಾವಾಟಿಕೆ ಮತ್ತು ಕಾಮಪ್ರಚೋದಕಗಳ ದೊಡ್ಡ ಮಾಫಿಯಾವೇ ಯಾರ ಅಂಕೆಯೂ ಇಲ್ಲದೇ ಬೆಳೆದು ನಿಂತಿರುವಾಗ ಕಡಿವಾಣ ಹಾಕಬೇಕಾದ್ದು ಯಾರಿಗೆ?

2010ರ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವರದಿಯಂತೆ ಆವರೆಗೆ 30ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದರು. ಈಗದರ ಸಂಖ್ಯೆ ದುಪ್ಪಟ್ಟಾಗಿರುವ ಸಾಧ್ಯತೆಗಳಿವೆ! ಆದರೆ ವಿಶ್ವಸಂಸ್ಥೆಯ ‘ಮಾನವಹಕ್ಕುಗಳ ವಾಚ್’ನ ವರದಿಯಂತೆ ಇದುವರೆಗೆ ಭಾರತದ ಸುಮಾರು 150ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ! ಇದರಲ್ಲಿ 40%ಗಿಂತ ಹೆಚ್ಚಿನವರು ಅಪ್ರಾಪ್ತ ಹೆಣ್ಣುಮಕ್ಕಳೇ! ಊರಿನ ಗಲ್ಲಿಗಳಲ್ಲಿ ಬಿಕರಿಯಾಗುತ್ತಿರುವ ನಮ್ಮ ಮಕ್ಕಳನ್ನು ರಕ್ಷಿಸುವವರಾರು? ಆ ಅಸಹಾಯಕ ಮಕ್ಕಳ ಸಂಕಟದ ಮೊರೆ ಏಕೆ ಯಾರ ಕಿವಿಗೂ ಬೀಳುತ್ತಿಲ್ಲ? ಮಾನವಹಕ್ಕುಗಳ ಬಗೆಗೆ ಗಂಟಲು ಹರಿಯುವಂತೆ ಬೊಬ್ಬೆ ಹೊಡೆಯಲಾಗುತ್ತಿದೆ. ಹೆಣ್ಣು ಈ ಹಕ್ಕುಗಳ ವ್ಯಾಪ್ತಿಯಲ್ಲಿ ಬರುವುದೇ ಇಲ್ಲವೇ?- ನಾವು ಸಂಕಟದಿಂದ ಕೇಳಬೇಕಾಗಿದೆ.

ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದೆಂದರೆ ವೇಶ್ಯಾಗೃಹಗಳು, ತಲೆಹಿಡುಕರು ಮತ್ತು ಮಧ್ಯವರ್ತಿಗಳಿಗೆ ಸರ್ಕಾರದಿಂದ ಮುಕ್ತ ಲೈಸೆನ್ಸ್ ಸಿಕ್ಕು ಈಗ ಗೋಪ್ಯವಾಗಿ ನಡೆಯುತ್ತಿರುವ ಚಟುವಟಿಕೆಗಳೆಲ್ಲಾ ಬಹಿರಂಗವಾಗಿಯೇ ನಮ್ಮ ಸುತ್ತಮುತ್ತಲೇ, ರಾಜಾರೋಷವಾಗಿಯೇ ನಡೆಯುವುದರ ಜೊತೆಗೆ ವಾಣೀಜ್ಯೀಕೃತ ಲೈಂಗಿಕ ಚಟುವಟಿಕೆಗೆ ಕೆಂಪು ಹಾಸನ್ನು ಹಾಸಿ ಈ ಕೂಪದೊಳಗೆ ಮೋಸದಿಂದ ಮತ್ತು ಅನೈತಿಕತೆಯಿಂದ ಮಹಿಳೆ ಮತ್ತು ಮಕ್ಕಳನ್ನು ಬಲವಂತದಿಂದ ತಳ್ಳುವ, ಮತ್ತು ಹೆಣ್ಣುಮಕ್ಕಳ ಅಕ್ರಮ ಸಾಗಾಟದ ಸಾಧ್ಯತೆಗಳು ವಿಪರೀತ ಹೆಚ್ಚಾಗುತ್ತವೆ. ಏಡ್ಸ್ ನಂತಹ ಮಾರಕ ರೋಗ ಹದ್ದು ಮೀರಿ ವ್ಯಾಪಿಸುವ ಸಾಧ್ಯತೆಗಳೂ ಹೆಚ್ಚಬಹುದು. ಯುವಸಮೂಹದ ಮೇಲೆ ಅದರ ಕೆಟ್ಟ ಪ್ರಭಾವವೂ ಆಗುತ್ತದೆ. ಮರ್ಯಾದೆಗಂಜಿ ನೋಂದಣಿ ಮಾಡಿಕೊಳ್ಳದೇ ಉಳಿಯುವ ಹೆಚ್ಚಿನವರು ಅಕ್ರಮ ವ್ಯವಹಾರವನ್ನು ಮುಂದುವರೆಸಬಹುದು. ಇದರಿಂದುಂಟಾಗುವ ಅಪರಾಧಗಳ ನಿಯಂತ್ರಣಕ್ಕಾಗಿಯೇ ಪ್ರತ್ಯೇಕ ಪೊಲೀಸ್ ಠಾಣೆಗಳನ್ನೂ ಸ್ಥಾಪಿಸಬೇಕಾಗುತ್ತದೆ! ಬಡ ಮತ್ತು ಅತಿ ಹೆಚ್ಚಿನ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ, ನಮ್ಮ ಸಂಕೀರ್ಣ ಭ್ರಷ್ಟ ವ್ಯವಸ್ಥೆಯಲ್ಲಿ, ಅನೇಕ ನುಸುಳುಗಳಿರುವ ಸಾಧ್ಯತೆಗಳು ಹೆಚ್ಚಿರುವ ಸಂದರ್ಭದಲ್ಲಿ ಇದನ್ನು ಕಾನೂನುಬದ್ಧಗೊಳಿಸುವುದೆಂದರೆ ಗಲ್ಲಿಯ ಮಾರಿಯನ್ನು ಮನೆಯೊಳಗೆ ಬಿಟ್ಟುಕೊಂಡಂತೆಯೇ ಸರಿ!

ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದ ಬೇರೆ ದೇಶಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಹೇಗಿದೆ? ಈ ಕುರಿತೂ ವಿಸ್ತ್ರತ ಅಧ್ಯಯನಗಳಾಗಬೇಕಿದೆ. ನೆದರ್ಲ್ಯಾಂಡ್, ಜರ್ಮನಿ, ನ್ಯೂಜಿಲೆಂಡ್ ನಂತಹ ದೇಶಗಳಲ್ಲಿ ಹೆಣ್ಣುಮಕ್ಕಳ ಅಕ್ರಮ ಸಾಗಾಣಿಕೆ ಮತ್ತು ಮಾರಾಟ ಹೆಚ್ಚಿರುವುದನ್ನು ಅಧ್ಯಯನಗಳು ದಾಖಲಿಸಿವೆ. “ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸುವುದೆಂದರೆ ಅದನ್ನು ಪ್ರೋತ್ಸಾಹಿಸಿದಂತಲ್ಲ” ಎಂದು ನಾವೆಷ್ಟೇ ಹೇಳಿದರೂ ಜಾಗತೀಕರಣದ ವಿಕೃತಿಗಳು, ಸೆಕ್ಸ್ ಟೂರಿಸಂ ಇಂದು ಬಹಳಷ್ಟು ದೇಶಗಳ ಹೆಚ್ಚಿನ ಆದಾಯ ಮೂಲವಾಗಿರುವುದರಿಂದ ಹೆಣ್ಣನ್ನು ಭೋಗದವಸ್ತುವೆಂದೂ, ಸರಕೆಂದೂ ಭಾವಿಸಿ ಅವಳಿಗೆ ಸಂಬಂಧಿಸಿದ ಅಪಾಯಗಳನ್ನು ನಿರ್ಲಕ್ಷಿಸಿ ಸರ್ಕಾರಗಳೇ ನಡೆಸುವ ವೇಶ್ಯಾವಾಟಿಕೆಯಾಗಿ ಪರಿಣಮಿಸಿಬಿಡುತ್ತವೆ!

ಭಾರತದಲ್ಲೂ ವೇಶ್ಯಾವಾಟಿಕೆಯನ್ನು ವಿಸ್ತ್ರತವಾಗಿ ಬೆಳೆಸುವ, sex workerಮಧ್ಯಸ್ಥಿಕೆ ಮಾಡುವ ಉದ್ದೇಶದಿಂದಲೇ ಹುಟ್ಟಿಕೊಂಡಿರುವ ಕೆಲ ಸಾಂಸ್ಥಿಕ ವ್ಯವಸ್ಥೆಗಳು, ಲೈಂಗಿಕ ಜೀತವನ್ನೇ ‘ವೃತ್ತಿ’ ಎಂದೂ, ಇವರನ್ನು ಲೈಂಗಿಕ ಕಾರ್ಮಿಕರೆಂದೂ, ಸಮಾಜ ಒಪ್ಪಿತವೆಂಬಂತೆ ಬಿಂಬಿಸುತ್ತಿವೆ. ಇದೇ ಸಂಸ್ಥೆಯವರೋ, ಲೈಂಗಿಕ ಜೀತಗಾರರೋ, ಮಧ್ಯವರ್ತಿಗಳೋ ತಮ್ಮ ಮಕ್ಕಳಿಗೆ ಮಾತ್ರ ಈ ‘ಘನವಾದ’ ವೃತ್ತಿ ಬೇಡವೆನ್ನುತ್ತಾರೆ! ಹಾಗಿದ್ದರೆ ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವುದಲ್ಲವೇ ಲೈಂಗಿಕ ಜೀತವೆಂಬುದು? ಲೈಂಗಿಕಜೀತವನ್ನು ಕಾನೂನುಬದ್ಧಗೊಳಿಸಿ ಅವರನ್ನು ಮುಖ್ಯವಾಹಿನಿಗೆ ತರಬೇಕೆಂದು ಯೋಚಿಸುತ್ತಿರುವವರು ಅವರ ಪುನರ್ವಸತಿಗಾಗಲಿ, ಅವರ ಆರ್ಥಿಕ-ಸಾಮಾಜಿಕ ಜೀವನ ಸುಧಾರಣೆಗಾಗಲಿ ಏಕೆ ಯೋಚಿಸುತ್ತಿಲ್ಲ? ದೇವದಾಸಿ, ಜೋಗಿಣಿ, ಬಸವಿ ಪದ್ಧತಿ, ಮಾನವಹಕ್ಕುಗಳ ಉಲ್ಲಂಘನೆಯೆಂದು ಅದನ್ನು ನಿರ್ಬಂಧಿಸಿ ಪುನರ್ವಸತಿ ಮಾಡಲಾಗುತ್ತಿದೆ. ಅದೇ ಪಿಡುಗಿನ ಮುಂದುವರಿಕೆಯಂತಿರುವ ಇದಕ್ಕೂ, ಅದೇ ನೀತಿ ಅನ್ವಯಿಸಬೇಕು.

ದಶಕಗಳಿಂದ ವೇಶ್ಯಾವಾಟಿಕೆ ಕುರಿತು ನಮ್ಮ ನ್ಯಾಯಪೀಠಗಳು ನೀಡಿದ ತೀರ್ಪುಗಳೆಲ್ಲವೂ, “ಬಾಲೆಯರು, ಹೆಣ್ಣುಮಕ್ಕಳನ್ನು ಈ ರೀತಿಯ ಜೀತಕ್ಕೆ ಬಲವಂತದಿಂದಲೋ, ಪ್ರಚೋದಿಸಿಯೋ, ಆರ್ಥಿಕ ಸಂಕಷ್ಟದ ಕಾರಣಕ್ಕೋ ತಳ್ಳುವ ಮೂಲಕ ಅವರನ್ನು ನಿರಂತರ ಅತ್ಯಾಚಾರಕ್ಕೆ Supreme Courtಗುರಿಮಾಡಿದಂತಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗದು” ಎನ್ನುತ್ತಾ ಕೆಲವು ಮಾರ್ಗದರ್ಶಿ ಸೂತ್ರಗಳನ್ನೂ ಕೊಟ್ಟಿತ್ತು. ಅವು-

  1. ವೇಶ್ಯಾವಾಟಿಕೆಯ ನಿಯಂತ್ರಣ ಮತ್ತು ನಿರ್ಮೂಲನೆಗೆ ಬೇರೆಯದೇ ಆದ ಸಮಿತಿಯೊಂದನ್ನು ನೇಮಿಸಬೇಕು.ಇದರಲ್ಲಿ ಸಮಾಜಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಸಮಾಜವಿಜ್ಞಾನಿಗಳು, ಅಪರಾಧಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು, ಮಹಿಳಾ ಸಂಘಟನೆಯ ಮುಖ್ಯಸ್ಥರು, ಮಕ್ಕಳ ಕಲ್ಯಾಣ ಸಮಿತಿ, ಸಾಮಾಜಿಕ ಸ್ವಯಂಸೇವಾ ಸಂಘಟನೆಗಳ ಮುಖ್ಯಸ್ಥರು ಮುಂತಾದ ಪ್ರಮುಖರು ಇರಬೇಕು.
  2. ಈ ಸಮಿತಿ ನೀಡುವ ಎಲ್ಲಾ ಶಿಫಾರಸ್ಸುಗಳನ್ನೂ ಚಾಚೂತಪ್ಪದೇ ಅನುಷ್ಠಾನಗೊಳಿಸಬೇಕು.
  3. ಬಡತನ, ನಿರುದ್ಯೋಗದ ಕಾರಣಕ್ಕೆ ಅನಿವಾರ್ಯವಾಗಿ ವೇಶ್ಯಾವಾಟಿಕೆಗಿಳಿಯುತ್ತಿರುವವರಿಗಾಗಿ ಪರಿಣಾಮಕಾರಿ ಪುನರ್ವಸತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಈ ಕೆಲಸದಿಂದ ದೊರೆಯುತ್ತಿದ್ದಕ್ಕಿಂತಾ ಹೆಚ್ಚಿನ ಆರ್ಥಿಕ ಅನುಕೂಲಕ್ಕೆ ಯೋಜನೆಗಳನ್ನು ರೂಪಿಸಬೇಕು.
  4. ಈ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿ ಅದರ ನಿಗ್ರಹಕ್ಕೆ, ತಲೆಹಿಡುಕರ, ಮಧ್ಯವರ್ತಿಗಳ, ವೇಶ್ಯಾಗೃಹಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಅನುಷ್ಠಾನದ ಎಲ್ಲಾ ಅಧಿಕಾರಶಾಹಿಯೂ ತಕ್ಷಣದ ಮತ್ತು ಸಶಕ್ತ ಕ್ರಮಗಳನ್ನು ಕೈಗೊಳ್ಳಬೇಕು.
  5. ಮಕ್ಕಳನ್ನು ಮತ್ತು ಅಪ್ರಾಪ್ತರನ್ನು ಬಳಸಿಕೊಳ್ಳುವ ವೇಶ್ಯಾವಾಟಿಕೆ ಸಂಪೂರ್ಣ ನಿರ್ಮೂಲನೆಯಾಗಬೇಕು.
  6. ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಈ ಲೈಂಗಿಕಜೀತದ ಸುಳಿಗೆ ಸಿಕ್ಕ ಅಪ್ರಾಪ್ತ ಮಕ್ಕಳನ್ನು ರಕ್ಷಿಸಿ, ಅವರಿಗೆ ಆರೈಕೆ, ಪೋಷಣೆ, ರಕ್ಷಣೆ, ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಲೈಂಗಿಕ ಜೀತಗಾರ್ತಿಯರ ಮಕ್ಕಳು ಈ ಕೂಪಕ್ಕೆ ಬೀಳದಂತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
  7. ಸಾಕಷ್ಟು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಅಲ್ಲಿ ವೈದ್ಯರು, ಮನೋವೈದ್ಯರು, ಸಾಮಾಜಿಕ ಕಾರ್ಯಕರ್ತರು ಇವರೊಂದಿಗೆ ಒಡನಾಡಬೇಕು.
  8. ಈ ಸಂಬಂಧ ಇರುವ ಕಾನೂನು, ವೇಶ್ಯಾವಾಟಿಕೆಯ ಅಪರಾಧೀಕರಣವನ್ನು ನಿರೂಪಿಸಲು ಸಾಕ್ಷೀಕರಿಸಲು ಶಕ್ತವಾಗಿಲ್ಲದಿದ್ದರೆ ಅದಕ್ಕೆ ತಿದ್ದುಪಡಿ ತರಬೇಕು. ಅವಶ್ಯಕವೆನಿಸಿದರೆ ಹೊಸ ಕಾನೂನು ರೂಪಿಸಬೇಕು.
  9. ಜೋಗಿಣಿ, ದೇವದಾಸಿ, ಬಸವಿ ಪದ್ಧತಿಗಳ ಬೇರುಮಟ್ಟದ ನಿರ್ಮೂಲನೆಗೆ ಕ್ರಮಕೈಗೊಳ್ಳಬೇಕು.

ಈ ಮಾರ್ಗದರ್ಶಿ ಸೂತ್ರಗಳು ದಶಕಗಳಿಂದ ಅನುಷ್ಠಾನಗೊಳ್ಳದೇ, ನಿರ್ಲಕ್ಷ್ಯಕ್ಕೊಳಗಾಗಿ ಕಡತದಲ್ಲೇ ಕುಳಿತಿವೆ! ಸರ್ಕಾರಗಳು ಪುನರ್ವಸತಿಗಾಗಿ ‘ಉಜ್ವಲಾ’ ‘ಸ್ವಾಧಾರ’ದಂತಾ ಕೆಲವು ಯೋಜನೆಗಳನ್ನೇನೋ ಹಾಕಿಕೊಂಡಿತು. ಆದರೆ ಸರಿಯಾದ ಅನುಷ್ಠಾನವಾಗಲೇ ಇಲ್ಲ. ವೇಶ್ಯಾವಾಟಿಕೆಯ ಸಮಸ್ಯೆಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸರ್ಕಾರಗಳು ಮುಂದೆ ಬರಲಿಲ್ಲ. ಇದರ ಪೂರ್ಣ ಆಳ ಅಧ್ಯಯನ ಮಾಡಿ ಯಾವ ರೀತಿಯ ಕಾನೂನನ್ನೂ ಮತ್ತು ಪುನರ್ವಸತಿಗಳನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದು ಮುಂದಾಲೋಚಿಸಲಿಲ್ಲ. ಕರ್ನಾಟಕದಲ್ಲೂ ಅವರಿಗೆ ಕೌಶಲ್ಯ ತರಬೇತಿ ನೀಡಿ, ವ್ಯಾಪಾರಕ್ಕಾಗಿ 20,000 ಸಾಲನೀಡುವ ಯೋಜನೆ ಇತ್ತೀಚೆಗೆ ರೂಪುಗೊಂಡಿದೆ. ಆದರೆ ಅದೂ ಪರಿಣಾಮಕಾರಿಯಲ್ಲವಾದ್ದರಿಂದ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ.

ವೇಶ್ಯಾವಾಟಿಕೆ ಹಿಂದೆ ಇರುವ ಬೇರೆ ಬೇರೆ ಆಯಾಮಗಳನ್ನು, ಪುನರ್ವಸತಿ ಸಾಧ್ಯತೆಗಳನ್ನು, ವಿಭಿನ್ನ ಜಾತಿ-ವರ್ಗಕ್ಕೆ ಸೇರಿದ ಲೈಂಗಿಕ ಜೀತಗಾರರನ್ನೂ ವಿಸ್ತ್ರತ ಅಧ್ಯಯನಕ್ಕೊಳಪಡಿಸಿ, ಗಣತಿ ಮಾಡಿ ಪುನರ್ವಸತಿ ವಿಧಾನಗಳನ್ನು ನಿರ್ಧರಿಸಬೇಕಾಗಿದೆ. ಮತ್ತು ವಾಣಿಜ್ಯೀಕೃತ ಲೈಂಗಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ. ಖಾಸಗಿ ಒಪ್ಪಿತ ನೆಲೆಯ ಲೈಂಗಿಕ ಸುಖದ ಮಾರಾಟ ಮತ್ತು ಪುನರ್ವಸತಿಯ ಆಯ್ಕೆಯನ್ನು ಸುಪ್ರೀಂಕೋರ್ಟ್ ಮಹಿಳೆಯ ನಿರ್ಧಾರಕ್ಕೆ ಬಿಟ್ಟಿದೆ. ಅದನ್ನು ಗೌರವಿಸುತ್ತಲೇ ಮನೋವೈಜ್ಞಾನಿಕ ನೆಲೆಯ ಪ್ರಾಕೃತಿಕ ಹಾಗೂ ಜೈವಿಕ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡಿ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ವೇಶ್ಯಾವಾಟಿಕೆಯ ನಿರ್ಬಂಧದ ನೆಲೆಯಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ 1989, ಮಹಿಳೆಯ ವಿರುದ್ಧದ ತಾರತಮ್ಯದ ಒಡಂಬಡಿಕೆ 1979, ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆಯ ವಿರುದ್ಧದ ಒಡಂಬಡಿಕೆ 2000, ಮಹಿಳೆ ಮತ್ತು ಮಕ್ಕಳ ವೇಶ್ಯಾವಾಟಿಕೆಯ ವಿರುದ್ಧದ ಸಾರ್ಕ್ ಸಮ್ಮೇಳನದ ಒಪ್ಪಂದ, ಅಂತರಾಷ್ಟ್ರೀಯ ಕಾನೂನಾತ್ಮಕ ಒಪ್ಪಂದ, ಏಡ್ಸ್ ತಡೆ ಕುರಿತು ವಿಶ್ವ ಆರೋಗ್ಯಸಂಸ್ಥೆಯೊಂದಿಗಿನ ಒಪ್ಪಂದಗಳನ್ನು ನಮ್ಮ ಸರ್ಕಾರಗಳು ಮುಲಾಜಿಲ್ಲದೇ ಉಲ್ಲಂಘಿಸುತ್ತಾ ಬಂದಿವೆ! ಮತ್ತು ಭಾರತ ಸಂವಿಧಾನದ ಕಲಂ21 ಹೇಳುವಂತಾ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆಯ ಮತ್ತು ಕಲಂ23ರ ಮಾನವ ದುರ್ವ್ಯವಹಾರ ಮತ್ತು ಬಲಾತ್ಕಾರದ ದುಡಿಮೆಯ ನಿಷೇಧಕ್ಕೂ, ಸಮಾನತೆಯ ಆಶಯಕ್ಕೂ ವೇಶ್ಯಾವಾಟಿಕೆ ವಿರುದ್ಧವಾಗಿದೆ!

ವೇಶ್ಯಾವಾಟಿಕೆಯನ್ನು ಸಬಲ ಕಾನೂನು ರೂಪಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ನಿಯಂತ್ರಿಸುವ ಜೊತೆಗೇ ಸೂಕ್ತ ಪುನರ್ವಸತಿಯನ್ನೂ ಮಾಡದಿದ್ದರೆ ಹೆಣ್ಣುಮಕ್ಕಳು ಇನ್ನಷ್ಟು ದಾರುಣ ಸ್ಥಿತಿಯನ್ನು ತಲುಪಿಬಿಡುತ್ತಾರೆ. ನಮ್ಮ ಸಾಮಾಜಿಕ ವ್ಯವಸ್ಥೆ ಮತ್ತಷ್ಟು ರೋಗಿಷ್ಠವಾಗುತ್ತದೆ. ಈಗಲಾದರೂ ಕಡತದಲ್ಲಿರುವ ಸುಪ್ರೀಂ ಕೋರ್ಟ್ ನಿರ್ದೇಶನಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ವೇಶ್ಯಾವಾಟಿಕೆ ನಿಗ್ರಹದ ಜವಾಬ್ದಾರಿಯನ್ನು ಸರ್ಕಾರಗಳು ವಹಿಸಿಕೊಂಡು ಅಪರಾಧಿ ಯಾರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.


ಪ್ರಜಾವಾಣಿ ದಿನಪತ್ರಿಕೆಯ ‘ಸಂಗತ’ ಅಂಕಣದಲ್ಲಿ ಸಪ್ಟೆಂಬರ್ ೩೦ ರಂದು ಪ್ರಕಟವಾದ ‘ಲೈಂಗಿಕ ಜೀತ -ಅಪರಾಧಿ ಯಾರು?’ ಎಂಬ ಲೇಖನದ ಪೂರ್ಣಪಾಠ.


ಸಾಮಾಜೀಕರಣಗೊಳ್ಳದ ಲೈಂಗಿಕತೆಯ ಸವಾಲು


– ರೂಪ ಹಾಸನ


 

ನಮ್ಮ ಜೀವವಿಕಸನ ಪ್ರಕ್ರಿಯೆಯಲ್ಲಿ ಎಷ್ಟೋ Stages in human evolutionಶತಮಾನಗಳ ಕಾಲ ಹೆಣ್ಣು- ಗಂಡುಜೀವಿಗಳ ಪ್ರತ್ಯೇಕತೆಯಿಲ್ಲದೆ ಒಂದೇ ಜೀವಿಯಿಂದಲೇ ಸಂತಾನೋತ್ಪತ್ತಿ ಮತ್ತು ವಂಶಾಭಿವೃದ್ಧಿ ನಡೆಯುತ್ತಿತ್ತಂತೆ. ಆದರೆ ಆಗ ಒಂದೇ ಬಗೆಯ ವರ್ಣತಂತು[ಜೀನ್]ಗಳಿರುವ ಜೀವಿಗಳು ಉತ್ಪತ್ತಿಯಾಗಿ, ಅವುಗಳ ಆರೋಗ್ಯದ ಗುಣಮಟ್ಟ, ಬದುಕುವ ಸಾಮರ್ಥ್ಯ ಅಷ್ಟಾಗಿ ಇರಲಿಲ್ಲವಾದ ಕಾರಣವಾಗಿ ಎಷ್ಟೋ ಕಾಲದ ನಂತರ ಈ ಕೊರತೆಯನ್ನು ತುಂಬಲು ಜೀವವಿಕಸನದ ಹಾದಿಯ ಮಧ್ಯದಲ್ಲಿ ಹೆಣ್ಣು-ಗಂಡುಜೀವಿಗಳ ಸೃಷ್ಟಿಯಾಯಿತು, ಲೈಂಗಿಕ ಕ್ರಿಯೆಯ ಮೂಲಕ ಹುಟ್ಟುವ ಜೀವಿಗಳ ವೈವಿಧ್ಯತೆ ಮತ್ತು ಆಯಸ್ಸು ಹೆಚ್ಚಿತು. ಆದರೆ ಇಂದು ಅದರ ಜೊತೆಗೇ ಕಾಮವು ಜಟಿಲಗೊಳ್ಳುತ್ತಾ ಹೋಗಿ ವಿಕೃತ ರೂಪವನ್ನು ಪಡೆದು ಕ್ರೂರವಾಗಿ ನಮ್ಮ ಸುತ್ತ ಕುಣಿಯುತ್ತಿದೆ.

ಇಂದು ಜಗತ್ತಿನ ಮೂರನೇ ಅತಿ ಹೆಚ್ಚಿನ ಲಾಭದಾಯಕ ಉದ್ದಿಮೆ ಸೆಕ್ಸೋದ್ಯಮವಾಗಿದೆ. ಜೊತೆಗೆ ವಿಸ್ತ್ರತವೂ, ಕಡಿವಾಣವಿಲ್ಲದ್ದೂ ಆದ ಹೆಣ್ಣುಮಕ್ಕಳ ಮಾರಾಟ ಜಾಲ, sex-sellsಹೆಣ್ಣುಮಕ್ಕಳ ಮೇಲಿನ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು, ಹದಿಹರೆಯದವರ ಮುಕ್ತಕಾಮ ತಂದೊಡ್ಡುತ್ತಿರುವ ಆಧುನಿಕ ಸಾಮಾಜಿಕ ಸಮಸ್ಯೆಗಳು, ಅನೈತಿಕ ಸಂಬಂಧಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳ ಹೆಚ್ಚಳ, ಎಗ್ಗಿಲ್ಲದೇ ನಡೆಯುತ್ತಿರುವ ಅವಿವಾಹಿತ ಹೆಣ್ಣುಮಕ್ಕಳ ಗರ್ಭಪಾತಗಳು, ಅತಿ ಹೆಚ್ಚು ಮಾರಾಟವಾಗುತ್ತಿರುವ ಸಂತಾನನಿರೋಧಕ ಸಾಮಗ್ರಿಗಳು, ಹೆಚ್ಚುತ್ತಿರುವ ಹೆಚ್ಐವಿ, ಏಡ್ಸ್, ಗನ್ಹೋರಿಯಾ ಮುಂತಾದ ಭೀಕರ ಲೈಂಗಿಕ ಗುಪ್ತರೋಗಗಳು……. ಹೀಗೆ ಸೆಕ್ಸ್ ಕೇಂದ್ರೀಕರಿಸಿರುವ ಸಾಮಾಜಿಕ ಸಮಸ್ಯೆಗಳ ಸಾಗರವೇ ಎದುರಾಗಿ ಸಮಾಜ ಆತಂಕದಲ್ಲಿ ತಲ್ಲಣಿಸುವಂತಾಗಿದೆ.

ನಮ್ಮ ಇಂದಿನ ಭಾರತದಲ್ಲಿಯಷ್ಟೇ ಅಲ್ಲ ವಿಶ್ವದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೂ ಲೈಂಗಿಕತೆಯ ವೈಪರೀತ್ಯದಿಂದ ಉಂಟಾಗುತ್ತಿರುವ ವಿಕೃತ ಪ್ರಕರಣಗಳು ಹೆಚ್ಚಾಗುತ್ತಿರುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಇವು ಹಿಂದೆಯೂ ಇತ್ತು. ಈಗ ಕಾನೂನಿನ ಅರಿವು ಹೆಚ್ಚಾಗಿ, ದಾಖಲಾಗುವ ಪ್ರಮಾಣ ಜಾಸ್ತಿಯಾಗಿದೆಯಷ್ಟೇ ಎಂಬುದೊಂದು ಮಾತೂ, ‘ಇವೆಲ್ಲ ಇಲ್ಲಿ ಅತ್ಯಂತ ಸಹಜ’ ಎಂಬ ದನಿಯಲ್ಲಿ ಕೇಳಿಬರುತ್ತಿರುತ್ತದೆ. ಹಿಂದೆಯೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದುದು ನಿಜ. ಹಾಗೇ ಇಂದು ಅವುಗಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗಿರುವುದರ ಜೊತೆಗೆ ಅವು ಘಟಿಸುತ್ತಿರುವ ಪ್ರಮಾಣ ಹೆಚ್ಚಾಗಿರುವುದೂ ಅಷ್ಟೇ ನಿಜ.

ಜಾಗತೀಕರಣವೆಂಬ ಮಾರುಕಟ್ಟೆ ಕೇಂದ್ರಿತ ಅಭಿವೃದ್ಧಿ ಹೆಸರಿನ ಬಿರುಗಾಳಿ ಹೆಣ್ಣಿನ ದೇಹವನ್ನು ಸರಕಾಗಿ ವಿಜೃಂಭಿಸುವ ಜೊತೆಗೆ ಲೈಂಗಿಕತೆಯನ್ನು ವಿಕೃತವಾಗಿ ಪ್ರಚೋದಿಸಲಾರಂಭಿಸಿದ ಈ ಎರಡು-ಮೂರು ದಶಕಗಳಿಂದ ಸಭ್ಯತೆಯ ಹೆಸರಿನೊಳಗೆ ಸಾಮಾಜಿಕ ಚೌಕಟ್ಟಿನಲ್ಲಿದ್ದ ಲೈಂಗಿಕತೆ ಲಂಗುಲಗಾಮಿಲ್ಲದಂತಾಗಿದೆ. ಅದರಲ್ಲೂ ಕೆಲ ದೃಶ್ಯ ಮಾಧ್ಯಮದ ವಿಕೃತ ಛಾನೆಲ್ಲುಗಳು, ಅಂಕೆಯಿಲ್ಲದ ಅಶ್ಲೀಲ ವೆಬ್ಸೈಟ್ ಗಳು, ಸಿನಿಮಾ, ಲೈವ್ ಶೋಗಳು, ಯಾರು ಯಾವಾಗ ಬೇಕಾದರೂ ಎಲ್ಲೆಂದರಲ್ಲಿ ಇವುಗಳನ್ನು ನೋಡಬಲ್ಲ ಸಾಧ್ಯತೆಗಳಿರುವ ಮೊಬೈಲ್ ಗಳು ಕೀಳು ಅಭಿರುಚಿಯನ್ನು ನಿರ್ಮಾಣ ಮಾಡುತ್ತಾ ವೇಗದ ವಿಕೃತ ಸಾಮಾಜಿಕ ಬೆಳವಣಿಗೆಯಾಗಿ ನಮ್ಮನ್ನು ಅಪ್ಪಳಿಸುತ್ತಿದೆ.

ಇದಕ್ಕೆ ಕಾನೂನನ್ನು ಬಲಗೊಳಿಸುವುದು, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು, ಹೆಣ್ಣುಮಕ್ಕಳ ಚಲನಶೀಲತೆಯನ್ನು ನಿರ್ಬಂಧಿಸುವುದು, ಅವರಿಗೆ ಕರಾಟೆ ಕಲಿಸುವುದು, ವಸ್ತ್ರಸಂಹಿತೆ ಅಳವಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರ ಅಳವಡಿಸುವುದು, ಎಲ್ಲರನ್ನೂ ಅನುಮಾನದಿಂದ ನೋಡುವಂತೆ ತರಬೇತಿ ನೀಡುವುದು, ಹೆಣ್ಣುಮಕ್ಕಳ ರಕ್ಷಣೆಗಾಗಿ ಹಳ್ಳಿಹಳ್ಳಿಗಳಲ್ಲಿ ಕಾವಲುಪಡೆಗಳನ್ನು ನಿರ್ಮಿಸುವುದು…ಇವೆಲ್ಲವೂ ಹೊರ ರೂಪದ ತಕ್ಷಣದ ರಕ್ಷಣಾ ಸಿದ್ಧತೆಗಳಷ್ಟೇ. ಇದರಿಂದ ಸಮಸ್ಯೆಗೆ ಮೂಲರೂಪದ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲವೆನಿಸುತ್ತದೆ.

ನಿದ್ದೆ, ಹಸಿವು, ಮೈಥುನಗಳು ಮನುಷ್ಯನ ಮೂಲಭೂತವಾದ ಸಹಜ ಪ್ರವೃತ್ತಿಗಳು. ಆದರೆ ಇವುಗಳನ್ನು ಶಿಸ್ತುಬದ್ಧವಾದ ನಾಗರೀಕ ಪ್ರಪಂಚದsex-ratio ಸಾಮಾಜೀಕರಣಕ್ಕೆ ಬೇಕೆಂದಂತೆ ಹಂತ ಹಂತವಾಗಿ ಪಳಗಿಸುತ್ತಾ ಹೋಗುತ್ತೇವೆ. ಉದಾಹರಣೆಗೆ ಆಗಷ್ಟೇ ಜನಿಸಿರುವ ಮಗುವೊಂದು ಹೊಟ್ಟೆ ಹಸಿವಾದಾಗ ಹಾಲು ಬೇಕೆಂದು ಹಠ ಹಿಡಿಯುತ್ತದೆ. ಅದಕ್ಕೆ ಅಮ್ಮ ಯಾವ ಸ್ಥಿತಿಯಲ್ಲಿದ್ದಾಳೆ? ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ಒಂದೂ ಬೇಕಿಲ್ಲ. ಒಟ್ಟಿನಲ್ಲಿ ಅದಕ್ಕೆ ಹಾಲು ಬೇಕಷ್ಟೇ! ಅದನ್ನು ಅಮ್ಮನೇ ಕೊಡಬೇಕೆಂದೂ ಇಲ್ಲ! ಆದರೆ ದಿನ ಕಳೆದಂತೆ ನಿಧಾನಕ್ಕೆ ನಾವದಕ್ಕೆ ಹೊಟ್ಟೆ ತುಂಬಿಸುವುದಕ್ಕೆ ಒಂದು ಸಮಯಸೂಚಿಯನ್ನು ಸಿದ್ಧ ಮಾಡಿ ಅದರಂತೆ ಉಣಿಸುತ್ತಾ ಹೊಗುತ್ತೇವೆ. ಹಸಿವಾದಾಗಲೆಲ್ಲಾ ತಿನ್ನುವುದನ್ನು ಪಳಗಿಸಿ ನಿಗದಿತ ಸಮಯಕ್ಕೆ ಸರಿಯಾಗಿ ತಿನ್ನುವ ಸಾಮಾಜೀಕರಣಕ್ಕೆ ಒಳಪಡಿಸುತ್ತೇವೆ. ನಿದ್ದೆಗೂ ಇದೇ ತತ್ವ ಅಳವಡಿಕೆಯಾಗುತ್ತದೆ. ಆದರೆ ಉಣ್ಣುವ ಸಮಯವಲ್ಲದಿದ್ದಾಗಲೂ ವಿಧವಿಧದ ಭಕ್ಷ್ಯಗಳನ್ನು ಕಂಡಾಗ ನಾಲಿಗೆ ನೀರೂರುವ ಸಾಧ್ಯತೆಯಿರುತ್ತದೆ. ಹಸಿವು ಕೆರಳುತ್ತದೆ! ನಿದ್ದೆಗೆಂದೇ ನಿಯಮಿತ ಸಮಯವನ್ನು ರೂಢಿಸಿಕೊಂಡಿದ್ದಾಗಲೂ, ಅ ವೇಳೆಯಲ್ಲೂ ಅನುಕೂಲಕರ ಸಂದರ್ಭ, ಸುಖಮಯವಾದ ವಾತಾವರಣ ಸಿಕ್ಕರೆ ನಿದ್ದೆ ಓಡಿ ಬಂದು ಅಪ್ಪುತ್ತದೆ! ಅಂದರೆ ಇವುಗಳನ್ನು ಎಷ್ಟೇ ಪಳಗಿಸಿಟ್ಟುಕೊಂಡಿದ್ದರೂ ಸುಪ್ತಪ್ರಜ್ಞೆಯಲ್ಲಿ ಹೊಂಚು ಹಾಕುತ್ತಿದ್ದು ಸಮಯ, ಸಂದರ್ಭ, ಪರಿಸರ, ಪ್ರಚೋದನೆಗಳು ಸಿಕ್ಕಾಗ ಸಾಮಾಜೀಕರಣದ ಚೌಕಟ್ಟುಗಳನ್ನು ಮೀರಿ ಕಾಣಿಸಿಕೊಂಡುಬಿಡುತ್ತವೆ! ಅವುಗಳನ್ನು ಪ್ರಯತ್ನಪೂರ್ವಕವಾಗಿ ಗೆಲ್ಲುವ ಅನಿವಾರ್ಯತೆ ನಮಗಿರುತ್ತದೆ. ಆದರೆ ನಿದ್ದೆ, ಹಸಿವುಗಳೆರಡೂ ವ್ಯಕ್ತಿಯ ವೈಯಕ್ತಿಕ ನೆಲೆಯ ಪೂರೈಕೆಗಳಾದ್ದರಿಂದ ಅದರಿಂದ ಅಪರಾಧಗಳಾಗುವಂಥಹ ತೀವ್ರತೆರನಾದ ತೊಂದರೆಯೇನೂ ಸಮಾಜಕ್ಕಿಲ್ಲ.

ಆದರೆ ಕಾಮದ ತೃಪ್ತಿಯ ಸಾಂಗತ್ಯಕ್ಕೆ ಇನ್ನೊಂದು ವ್ಯಕ್ತಿಯ ಅವಶ್ಯಕತೆ ಇರುವುದರಿಂದ ಇಲ್ಲಿ ಆ ವ್ಯಕ್ತಿಯ ಇಷ್ಟ-ಒಪ್ಪಿಗೆಯ ಜೊತೆಗೆ, ಸಮಾಜದ ಆಯಾಕಾಲದ ನೈತಿಕತೆಯ ಮಿತಿಗಳಿಗೆ ಹಾಗೂ ಕಾನೂನಿನ ಕಟ್ಟುಪಾಡುಗಳಿಗೆ ಒಳಪಡುವುದು ಅನಿವಾರ್ಯವಾಗಿರುತ್ತದೆ. ಜೊತೆಗೆ ಮನುಷ್ಯರಲ್ಲಿ ಲೈಂಗಿಕ ಕ್ರಿಯೆ ಪ್ರಾಣಿಗಳಲ್ಲಿ ನಡೆಯುವಂತೆ ಕೇವಲ ಸಂತಾನಾಭಿವೃದ್ಧಿಗಾಗಿ ಮಾತ್ರ ನಡೆಯುವುದಲ್ಲ. ಇದು ದೇಹಗಳ ನಡುವೆ ನಡೆಯುವ ಯಾಂತ್ರಿಕ ಕ್ರಿಯೆಯೂ ಅಲ್ಲ. ಎರಡು ಮನಸುಗಳ ಪ್ರೀತಿಯ ಸಂಬಂಧದ ಮಿಲನವೂ ಆಗಿರುವುದರಿಂದ ಪರಸ್ಪರ ಘಾಸಿಯಾಗದಂತೆ, ಇದನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲವಾಗಿ ನಿರ್ವಹಿಸುವ ಕಲೆಗಾರಿಕೆಯನ್ನೂ ಭಾವನಾತ್ಮಕ ನೆಲೆಯಲ್ಲಿ ಅರಿತುಕೊಳ್ಳುವುದು ಅಥವಾ ರೂಢಿಸಿಕೊಳ್ಳುವುದೂ ಅವಶ್ಯಕ.

ಆದರೆ ಲೈಂಗಿಕತೆ ಹಾಗೂ ಪ್ರೀತಿಯ ಕುರಿತಾದ ನಮ್ಮ ಸಮಾಜದ ಮಡಿವಂತಿಕೆಯ ದೃಷ್ಟಿಕೋನದಿಂದಾಗಿ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಕಲಿಕೆಯನ್ನುsex-ed ಅಥವಾ ಅದನ್ನು ಪಳಗಿಸಲು ಬೇಕಾದ ತಿಳಿವಳಿಕೆ ನೀಡುವ ಕೆಲಸಗಳು ನಮ್ಮಲ್ಲಿ ಆಗುತ್ತಿರುವುದು ಅತ್ಯಂತ ಕಡಿಮೆ. ಈ ಕುರಿತು ನಮ್ಮ ಸಮಾಜದಲ್ಲಿ ಮುಕ್ತವಾಗಿ ಮಾತನಾಡುವುದೇ ಅಪರಾಧವೆನ್ನುವಂತೆ ಪರಿಗಣಿಸಲ್ಪಟ್ಟಿರುವಾಗ, ಮಗುವಿನ ಜನನದೊಂದಿಗೇ ಹುಟ್ಟುವ ಲೈಂಗಿಕತೆಯನ್ನು ಅದೊಂದು ಚರ್ಚಿಸಬಾರದ ಅಸಹ್ಯ ವಿಷಯವೆಂದು ಭಾವಿಸಿ ಮಕ್ಕಳಿಗೆ ಆ ಕುರಿತು ಏನನ್ನೂ ತಿಳುವಳಿಕೆ ನೀಡದೆ, ತನ್ನ ದೇಹದ ಲೈಂಗಿಕ ಅಂಗಾಂಗಗಳು, ಅದರ ನಿರ್ವಹಣೆ, ಬೆಳವಣಿಗೆ, ಕಾಮದ ಉದ್ದೇಶ, ಅದರ ನೈತಿಕ ಜವಾಬ್ದಾರಿಯ ಬಗೆಗೆ ಮಕ್ಕಳಿಗೆ ತಿಳಿಹೇಳದೇ ಉಳಿಯುವ ಪೋಷಕರೇ ಹೆಚ್ಚು. ಅದರಲ್ಲೂ ಹದಿಹರೆಯದಲ್ಲಿ ಲೈಂಗಿಕ ಆಕರ್ಷಣೆಗಳು ಅತ್ಯಂತ ಸಹಜವಾದುದೆಂಬುದನ್ನು ತಿಳಿಹೇಳುತ್ತಲೇ ಅದನ್ನು ಆರೋಗ್ಯಕರವಾಗಿ ನಿರ್ವಹಿಸುವ ಕುರಿತೂ ಇಂದು ಕಡ್ಡಾಯವಾಗಿ ಅರಿವು ಮೂಡಿಸುತ್ತಲೇ ಮಕ್ಕಳನ್ನು ಬೆಳೆಸುವ ಅನಿವಾರ್ಯತೆ ಇದೆ.

ಲೈಂಗಿಕ ಅಪರಾಧಗಳಲ್ಲಿ ತೊಡಗುತ್ತಿರುವ ಅಪ್ರಾಪ್ತರ ಸಂಖ್ಯೆ ಇಂದು ದಿಗಿಲು ಹುಟ್ಟಿಸುವಷ್ಟು ಏರಿದೆ. ಅವರ ಶಿಕ್ಷೆಗೆ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವ ಕುರಿತೂ ಗಂಭೀರ ProtectingChildrenfromSexTraffickingಚರ್ಚೆಳಾಗುತ್ತಿವೆ. ಆದರೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಅಪರಾಧಿಗಳಾಗಿ ಬಂಧಿಗಳಾಗಿರುವ ಹಲವು ಅಪ್ರಾಪ್ತರೊಡನೆ ನಾನು ಆಪ್ತಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಹೆಚ್ಚಿನವರು ಅಶ್ಲೀಲ ನೀಲಿ ಚಿತ್ರಗಳನ್ನು ನೋಡಿ ಪ್ರಚೋದನೆ ಪಡೆದಿದ್ದನ್ನು ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ಹಿರಿಯ ಗೆಳೆಯರ ಕುಮ್ಮಕ್ಕಿನಿಂದ, ಸಂದರ್ಭದ ಅನುಕೂಲ ಪಡೆದು ಅತ್ಯಾಚಾರದಲ್ಲಿ ಭಾಗಿಗಳಾಗಿರುವುದು ಕಂಡುಬರುತ್ತದೆ. ಮೂಲತಃ ಪ್ರಾಣಿವರ್ಗಕ್ಕೆ ಸೇರಿದ ಮನುಷ್ಯ ತನ್ನ ಲೈಂಗಿಕ ಕಾಮನೆಗಳನ್ನು ಸಾಮಾಜಿಕ ಶಿಸ್ತಿಗಾಗಿ ಹತ್ತಿಕ್ಕಿದ್ದರೂ ಸುಪ್ತಪ್ರಜ್ಞೆಯ ಆಳದಲ್ಲಿ ಎಲ್ಲೋ ಅಡಗಿರುವ ಅದು, ಅನುಕೂಲಕರ ಸಮಯ, ಸಂದರ್ಭ, ಪರಿಸರಗಳು, ಎಲ್ಲಕ್ಕಿಂಥಾ ಮುಖ್ಯವಾಗಿ ಪ್ರಚೋದನೆ ಸಿಕ್ಕರೆ ದಾಳಿ ಮಾಡಲು ಕಾಯುತ್ತಿರುತ್ತದೆ. ಹೀಗಾಗಿ ಇಂತಹ ಸಂದರ್ಭಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಬದಲಿಗೆ ಅದನ್ನು ನಿರ್ವಹಿಸುವ, ನಿಗ್ರಹಿಸುವ ಬಗೆಯನ್ನು ಪೋಷಕರು ಮತ್ತು ಶಿಕ್ಷಣ ವ್ಯವಸ್ಥೆ ಹೇಳಿಕೊಡದಿದ್ದರೆ ಇಂತಹ ಅಪರಾಧಗಳಿಂದ ಸಾಮಾಜಿಕ ಅಸಮತೋಲನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ಮನುಷ್ಯ ಸಹಜ ಪ್ರವೃತ್ತಿಯನ್ನು ಅತ್ಯಂತ ಸಹಜ ರೀತಿಯಲ್ಲಿ ನಿರ್ವಹಿಸಲು ಎರಡು ಬಗೆಯ ಕಾರ್ಯವಿಧಾನಗಳು ಮುಖ್ಯವೆನಿಸುತ್ತವೆ. ವ್ಯಕ್ತಿಯನ್ನು sex-educationಸಾಮಾಜೀಕರಣಗೊಳಿಸಲು ಬಾಲ್ಯದಿಂದಲೇ ಅಂದರೆ ವಿದ್ಯಾಭ್ಯಾಸದ ಭಾಗವಾಗಿ ಲೈಂಗಿಕ ಶಿಕ್ಷಣವನ್ನು, ಪರಸ್ಪರ ಗಂಡು-ಹೆಣ್ಣು ಸಮಾನತೆಯ ನೆಲೆಯಲ್ಲಿ ಪ್ರೀತಿಸುವಂತೆ ಮತ್ತು ಗೌರವಿಸಿಕೊಳ್ಳುವಂತೆ ಮನಸು-ಬುದ್ಧಿಗಳನ್ನು ಹದಗೊಳಿಸುವ ಆರೋಗ್ಯಕರ ಶಿಕ್ಷಣವನ್ನು ನೀಡುವುದು ಒಂದು ವಿಧಾನವಾದರೆ, ಮಾಧ್ಯಮದ ಮೂಲಕ ಲೈಂಗಿಕತೆಯನ್ನು ಅಶ್ಲೀಲವಾದ ರೀತಿಯಲ್ಲಿ ಪ್ರಚೋದನೆ ನೀಡಿ ಕೆರಳಿಸುತ್ತಿರುವುದನ್ನು ನಿರ್ಬಂಧಿಸುವುದು ಮತ್ತೊಂದು ವಿಧಾನ. ಈ ದಿಕ್ಕಲ್ಲಿ ಮನಃಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸಮಾಜವಿಜ್ಞಾನಿಗಳು ಮತ್ತಷ್ಟು ದಾರಿಗಳನ್ನು ಹುಡುಕ ಬೇಕಾಗಿದೆ.

ನಿರ್ಬಂಧದ ಒಡಲೊಳಗಿಂದ ರೂಪಕವಾಗರಳುವ ಕವಿತೆ


– ರೂಪ ಹಾಸನ


ಸೃಜನಶೀಲತೆಗೆ ಮೂಲವಾದ ಮನಸಿನೊಳಗೆ ಕವಿತೆಯೆಂಬ ಬೀಜ ಎಲ್ಲಿಂದ ಹೇಗೆ ಉದ್ಭವಿಸಿಬಿಡುತ್ತದೋ! ಅದಕ್ಕೆ ಯಾರ ನಿರ್ಬಂಧ? ಆದರೆ ಈಗ ನಾವು ಚರ್ಚಿಸುತ್ತಿರುವ ನಿರ್ಬಂಧ, ಬೀಜವೊಂದು ಯಾವುದೇ ಹಂಗಿಲ್ಲದೇ ಮನಸಿನೊಳಗೆ ಹುಟ್ಟಿ ಬಿಟ್ಟ ಕ್ಷಣದ ಬಗೆಗಿನದಲ್ಲ. ಅದು ಮೊಳೆಯುವ, ಚಿಗುರುವ, ಮರವಾಗುವಿನ ಪ್ರಕ್ರಿಯೆಯಲ್ಲಿನ ನಿರ್ಬಂಧದ ಕುರಿತಾದದ್ದು. ನಾವು ಸೃಜನಾತ್ಮಕವಾದುದನ್ನು ಬರೆಯುತ್ತಿರುವಾಗಲೂ ಹೊರಗಿನದೇನೋ ನಮ್ಮನ್ನು ನಿರ್ದೇಶಿಸುತ್ತಿದ್ದರೆ, ಅದಕ್ಕೆ ತಕ್ಕಂತೆ ನಾವು ಬರಹವನ್ನು ಸಿದ್ಧಗೊಳಿಸುತ್ತಿದ್ದರೆ, ಅದು ಸರಕು ತಯಾರಿ ಅಷ್ಟೇ! ಅಲ್ಲವೇ?

ಹೊರಗಿನ ನಿರ್ಬಂಧದ ಪ್ರಶ್ನೆಗೇ ಬಂದರೆ, ಸೃಜನಶೀಲ ಅಭಿವ್ಯಕ್ತಿಗೆ, ಹೆಣ್ಣಾಗಿರುವ ಕಾರಣಕ್ಕೇ ನಿರ್ಬಂಧವಿದೆಯೆ? woman-abstractಎಂಬ ಪ್ರಶ್ನೆಯೊಂದಿಗೇ ಅನೇಕ ಮರು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಪುರುಷಾಭಿವ್ಯಕ್ತಿಗೆ ಯಾವುದೇ ನಿರ್ಬಂಧವಿಲ್ಲವೇ? ಯಾವುದೇ ರೀತಿಯ ನಿರ್ಬಂಧವಿಲ್ಲದಿದ್ದಾಗ ಮಾತ್ರ ನಿಜವಾದ ಸೃಜನಶೀಲವಾದ ಬರವಣಿಗೆ ಸಾಧ್ಯವಾಗುತ್ತದೆಯೇ? ಮಹಿಳೆಗೆ ನಿರ್ಬಂಧವಿರುವುದು ಅಭಿವ್ಯಕ್ತಿಗೋ, ಅಭಿವ್ಯಕ್ತಿ ಕ್ರಮಕ್ಕೋ ಅಥವಾ ಭಾಷೆಗೋ? ಹೆಣ್ಣು-ಗಂಡು, ರಾಜಕೀಯ, ಜಾತಿ ಮತ ಧರ್ಮಗಳ ಮೂಗುದಾರವೋ? ಸ್ವಯಂ ನಿರ್ಬಂಧವೋ, ಸಾಮಾಜಿಕ ನಿರ್ಬಂಧವೋ? ಎಂಬ ಪ್ರಶ್ನೆಗಳು.

ಎಲ್ಲವನ್ನೂ ಮುಚ್ಚಿಟ್ಟು ಬೇಕಾದರೂ ಬರೆಯಬಹುದು, ಎಲ್ಲವನ್ನೂ ಬಿಚ್ಚಿಟ್ಟೂ ಬರೆಯಬಹುದು. ನೇರಾನೇರ ಖುಲಂಖುಲ್ಲ ಬಿಚ್ಚಿಟ್ಟಿದ್ದು ಶುಷ್ಕವಾದ ಯಥಾವತ್ ವರದಿಯಾಗಿಬಿಡಬಹುದು. ಅದನ್ನು ಯಾರೇಕೆ ಸಾಹಿತ್ಯವೆಂದು ಓದಬೇಕು? ಆದರೆ ಅದನ್ನೇ ಓದುಗರ ಕಲ್ಪನಾಶಕ್ತಿಗೆ ವಿಪುಲ ಅವಕಾಶ ನೀಡುತ್ತಾ, ರೂಪಕಾತ್ಮಕವಾಗಿ ಅಭಿವ್ಯಕ್ತಿಸುವಾಗ ಕಲೆಯಾಗಿಬಿಡುತ್ತದಲ್ಲ? ನಿಜವಾದ ಸೃಜನಶೀಲತೆ ಇರುವುದು ಇಲ್ಲೇ ಅಲ್ಲವೇ? ಹೊರಗಿನ ಭಾಷೆಯ ನಿರ್ಬಂಧವೆಲ್ಲವನ್ನೂ ಕಿತ್ತೊಗೆದು ಅನಿಸಿದ್ದನ್ನೆಲ್ಲಾ ಬರೆಯುವುದೂ, ಅದನ್ನೇ ದಿಟ್ಟತನವೆಂದು, ದಿಟವೆಂದು ವಿಜೃಂಭಿಸುವುದೂ ಕೂಡ ನೀನು ಹೀಗೇ ಬರೆಯಬೇಕು ಎಂದು ನಮ್ಮನ್ನು ಒಂದು ಮಿತಿಗಷ್ಟೇ ಕಟ್ಟಿಹಾಕಿದಂತಲ್ಲವೇ? ಸೃಜನಾತ್ಮಕ ಮನಸಿಗೆ ಇದೂ ಕೂಡ ಒಂದು ನಿರ್ಬಂಧವೇ ಅಲ್ಲವೇ? ಇಲ್ಲಿ ನಿರ್ಬಂಧವಿದೆ. ಇದನ್ನು ಮೀರಿದರೆ ಮಾತ್ರ ನೀನು ಬೋಲ್ಡ್. ಹಾಗೆ ಬರೆದಾಗ ಮಾತ್ರ ಅದು ಅತ್ಯುತ್ತಮ ಅಥವಾ ಡಿಫರೆಂಟ್ ಎಂದು ಒಂದು ಸಮೂಹ, ಬರಹಗಾರಳನ್ನು ನಿರ್ದೇಶಿಸುತ್ತಿರುವುದರ ಹಿಂದೆ, ಒತ್ತಾಯಿಸಿ ಬ್ರಾಂಡ್ ಮಾಡುತ್ತಿರುವುದರ ಹಿಂದೆ ಕೂಡ ಹಸಿಹಸಿಯಾಗಿ ರೋಚಕವಾಗಿ ಬಿಚ್ಚಿಡುವುದನ್ನು ಚಪ್ಪರಿಸುವ ಚಪಲವಿದೆಯೇ? ದಿಕ್ಕು ತಪ್ಪಿಸಿ ಪುರುಷ ಮಾರುಕಟ್ಟೆಗೆ ಬೇಕಾದಂತೆ ಸರಕು ತಯಾರಿಸುತ್ತಲೇ ಇರಲೆಂಬ ಹುನ್ನಾರವಿದೆಯೇ? ಈ ನಿರ್ದೇಶನವನ್ನೂ ಎಚ್ಚರಿಕೆಯಿಂದ ಮೀರುವ ಸವಾಲೂ ನಮ್ಮ ಸೃಜನಾತ್ಮಕತೆಗಿದೆ ಅಲ್ಲವೇ? ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧಕ್ಕಿಂತಾ ನಿರ್ದೇಶನ ಅತ್ಯಂತ ಅಪಾಯಕಾರಿಯೆಂದು ನನಗೆನಿಸುತ್ತದೆ.

ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಖಾಸಗಿವಲಯವಿರುತ್ತದೆ. ಅದನ್ನು ಬರವಣಿಗೆಯಲ್ಲಿ ಒಳಗೊಳ್ಳಬೇಕೆಂದರೂ ಅದು ವ್ಯಕ್ತಿಯ ವೈಯಕ್ತಿಕ ಮನಃಸ್ಥಿತಿಗೆ ಸಂಬಂಧಿಸಿದ್ದು. ಮತ್ತು ಅಭಿವ್ಯಕ್ತಿಯ ಕ್ರಮಕ್ಕೆ ಸಂಬಂಧಿಸಿದ್ದು. ಅದನ್ನು ನಿಭಾಯಿಸುವ ಚಾಕಚಕ್ಯತೆಯದ್ದು ಮಾತ್ರ ಸವಾಲು. ಬಿಸಾಕಿದ ಕಡೆ ಮೊಳಕೆಯೊಡೆಯುವ ಶಕ್ತಿ ಬೀಜಕ್ಕಿದ್ದರೆ, ಅದರ ಮೇಲೆ ಎಷ್ಟೇ ದೊಡ್ಡ ಬಂಡೆಯನ್ನು ಹೇರಿದ್ದರೂ ಅದರ ಪಕ್ಕದಲ್ಲೇ ಎಲ್ಲೋ ದಾರಿ ಮಾಡಿಕೊಂಡು ಬೀಜ ಮೊಳೆತುಬಿಡುತ್ತದಲ್ಲ! ಬೀಜದ ಸತ್ವದ ತಾಕತ್ತನ್ನು ಬಂಡೆಯ ಬೃಹತ್ತಿಗೆ ಎದುರಾಗಿಸಿ ಏಕೆ ಬೆದರಿಸಲಾಗುತ್ತಿದೆ?

ತನ್ನ ಅಸ್ಮಿತೆ, ಅನನ್ಯತೆಗಳ ಅರಿವಿರುವ ಸೂಕ್ಷ್ಮ ಸಂವೇದನೆಯ ಹೆಣ್ಣುಮಕ್ಕಳು ಇಂದಿಗೂ ಕಾವ್ಯವನ್ನೇ ಏಕೆ ಹೆಚ್ಚಾಗಿ woman-insightತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಆರಿಸಿಕೊಳ್ಳುತ್ತಿದ್ದಾರೆ? ಇಲ್ಲಿ ವಿಶಾಲವಾದ ಆಕಾಶವಿದೆ. ಜೊತೆಗೆ ಎದುರಿಗಿನವನಿಗೆ ಮೌನದ ಭಾಷೆ ಅರ್ಥವಾಗುವುದಾದರೆ, ಮೌನಕ್ಕೊಂದು ಅರ್ಥವಿರುತ್ತದೆ.

ಇನ್ನೊಂದು ಪಕ್ಕದಿಂದ ನೋಡಿದಾಗ ಅಭಿವ್ಯಕ್ತಿಯೆಂಬುದು ವೈಯಕ್ತಿಕ ತುರ್ತಿನ ದಾಖಲಷ್ಟೇ ಅಲ್ಲ. ಅದು ಒಟ್ಟು ಕಾಲದ ಚಲನೆಯ ಪ್ರತಿರೂಪವೂ ಹೌದು. ಅದರ ದಾಖಲೂ ಹೌದು. ಸಾಮಾಜಿಕ ನಿರ್ಬಂಧವಿರುವುದೇ ನಿಜವಾದರೆ, ಸ್ವಯಂ ನಿರ್ಬಂಧಗಳೂ ನಮ್ಮನ್ನು ಕಟ್ಟಿಹಾಕುತ್ತಿದ್ದರೆ, ಇಂದಿನ ಮುಕ್ತವಲ್ಲದ ಅಭಿವ್ಯಕ್ತಿ ಕ್ರಮವೂ ಅಧ್ಯಯನಕ್ಕೊಳಪಡಬೇಕಲ್ಲವೇ? ಆಗ ಅದರೊಳಗೂ ಇರುವ ಅಪಾರ ವೈವಿಧ್ಯಮಯ ಸೃಜನಶೀಲ ಅಭಿವ್ಯಕ್ತಿ ಒಳಗೊಳ್ಳುವಿಕೆ, ಹಾಗೂ ಹೆಣ್ಣು ಸೃಷ್ಟಿಸುವ ರೂಪಕ ಪ್ರತಿಮೆ ಸಂಕೇತಗಳು ವಿಶೇಷ ಅರ್ಥವನ್ನೇ ಕೊಡಲಾರಂಭಿಸುತ್ತವೆ.

ನಮ್ಮ ಸಮಾಜ ಮತ್ತು ಸಂಸ್ಕೃತಿ ಬಹುಪಾಲು ಪುರುಷ ಕೇಂದ್ರಿತ ಮತ್ತು ಪುರುಷ ನಿರ್ಮಿತವಾಗಿರುವುದರಿಂದ ಪುರುಷ ದೃಷ್ಟಿಕೋನದಿಂದ ರೂಪಿತವಾಗುವ ರೂಪಕಗಳ ಸುತ್ತಲೇ ಇದುವರೆಗಿನ ನಮ್ಮೆಲ್ಲ ಅಭಿವ್ಯಕ್ತಿಗಳು ಸುತ್ತುತ್ತಿದ್ದವು. ಆದರೆ ಇಂದಿನ ಹೆಣ್ಣು ಪ್ರಜ್ಞಾಪೂರ್ವಕವಾಗಿ ಪುರುಷ ದೃಷ್ಟಿಯ ಪೊರೆ ಇಲ್ಲದಂತಾ, ತನ್ನ ನೈಜವಾದ ಕಣ್ಣಿನಿಂದ ಪ್ರಪಂಚದ ಆಗುಹೋಗುಗಳನ್ನು ಅವಲೋಕಿಸಲು ಪ್ರಾರಂಭಿಸಿದ್ದಾಳೆ. ಇವತ್ತು ಹೆಣ್ಣು ಅಭಿವ್ಯಕ್ತಿಸುವ ಸಂವೇದನೆಗಳು ತೀವ್ರವೂ ವಿಸ್ತಾರವೂ ಆಳವೂ ಆಗುತ್ತಿದೆ. ಆದರೆ ನಮ್ಮ ಸುತ್ತಲ ಪ್ರಪಂಚ ಅಷ್ಟೇ ಮುಕ್ತವಾಗಿ, ತೀವ್ರವಾಗಿ ಹೆಣ್ಣಿನ ಬದಲಾದ ಈ ನೆಲೆಯಿಂದ ಅವಳನ್ನು ಅರ್ಥೈಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆಯೇ? ಬಹುಶಃ ಅಂತಹ ಪಕ್ವತೆ ಕಾಲಕ್ಕೇ ಇನ್ನೂ ಬಂದಿಲ್ಲವೇನೋ!

ಇವತ್ತಿಗೂ ಕೂಡ ರೂಪಕದ ಭಾಷೆಯಲ್ಲಿಯೇ ಅವಳ ಹೆಚ್ಚಿನ ಕವಿತೆಗಳು ಮಾತನಾಡುತ್ತವೆ. ಅದಕ್ಕಾಗಿ ವ್ಯಥೆಪಡಬೇಕಾಗಿಯೂ ಇಲ್ಲ. ಅವಳದ್ದೇ ಪ್ರಪಂಚದ ಎಷ್ಟೊಂದು ಹೊಚ್ಚ ಹೊಸ ರೂಪಕಗಳು ಅವಳಿಂದ ಸೃಷ್ಟಿಯಾಗುತ್ತಿವೆ! ಅವನ್ನು ಸರಿಯಾಗಿ ಒಡೆದು, ವಿಭಿನ್ನ ಅರ್ಥ ಸಾಧ್ಯತೆಯ ಕಡೆಗೆ, ವಿಸ್ತಾರಗಳೆಡೆಗೆ ಸೃಜನಶೀಲ ಬರಹವನ್ನು ದಾಟಿಸಿದರೆ ಮಾತ್ರ ಅವಳ ರಚನೆಗೇ ಒಂದು ವಿಶಿಷ್ಟ ಆಯಾಮ ದಕ್ಕಬಹುದೇನೋ?

ಅಸ್ಮಿತೆಯ ಅರಿವು ಮೂಡಿದಾಗ ಮಾತ್ರ ಪ್ರಶ್ನೆಗಳು ಏಳುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಅಸಮಾನತೆಯ ಅರಿವಾಗುತ್ತದೆ. woman-unchainedಆ ತೀವ್ರ ಉಸಿರುಗಟ್ಟುವಿಕೆ ಮತ್ತು ಚಡಪಡಿಕೆಯಲ್ಲಿ ಮಾತ್ರ ವಿಭಿನ್ನ ನೆಲೆಗಳೆಡೆಗಿನ ಶೋಧ, ಅದನ್ನು ವಿಸ್ತರಿಸಿ ವಿವರಿಸುವ ಸಾಧ್ಯತೆಗಳೆಡೆಗೆ ದೃಷ್ಟಿ ಹಾಯುತ್ತದೆ. ನಿರ್ಬಂಧದೊಳಗೇ ಪತರುಗುಟ್ಟುತ್ತಲೇ ಅದರಾಚೆಗೂ ಇರುವ ಅಭಿವ್ಯಕ್ತಿ ಸಾಧ್ಯತೆಗಳೆಡೆಗೆ ಪ್ರಯೋಗಶೀಲವಾಗಿರಲು ಸಾಧ್ಯವಲ್ಲವೇ? ಹೇಳಿಬಿಡುವ-ಹೇಳದಿರುವ ಉಭಯಸಂಕಟದ ಬೇಗೆಯಲ್ಲಿ ಬೇಯುತ್ತಾ ಕುದ್ದು ಕುದ್ದು ಹದವಾಗಿ ಹೊರಹೊಮ್ಮಿದಾಗ, ಅದರ ಫಲಿತ, ಓದುಗನ ಸಾಮಾನ್ಯ ನಿರೀಕ್ಷೆಗಿಂತಾ ಭಿನ್ನವಾಗಿರಬಹುದು. ಮತ್ತು ಅವು ಕಾವ್ಯದ ಸಿದ್ಧ ಮಾದರಿಯಲ್ಲಿ ಇಲ್ಲದೇ ಇರಬಹುದು. ಸಮಾಜ ಒಪ್ಪಿತವೂ ಅಲ್ಲದೇ ಇರಬಹುದು!

ಕಂಡುಕೊಂಡಿದ್ದನ್ನೆಲ್ಲಾ ಸಮರ್ಥವಾಗಿ ಅಭಿವ್ಯಕ್ತಿಸಲು ಸಾಧ್ಯವಾಗಿಲ್ಲ ಎಂಬ ಅತೃಪ್ತಿಯೂ ಇದ್ದೇ ಇರುತ್ತದೆ. ಅದು ನಮ್ಮ ಸಾಮರ್ಥ್ಯದ ಮಿತಿ ಇರಬಹುದು. ಹಾಗೇ ಅನುಭವವನ್ನು, ಅವು ದಕ್ಕಿದಂತೆ ಹಿಡಿದಿಡಲು ಸಾಧ್ಯವಾಗದ, ಭಾಷೆಯ ಮಿತಿಯೂ ಇರಬಹುದು. ಬದುಕಿನ ನಿಗೂಢತೆಯನ್ನು, ಜೀವ ರೂಪಗಳ ಅಸಮಾನತೆಯನ್ನು ಭಿನ್ನ ನೆಲೆಯಲ್ಲಿ ವಿವರಿಸಿಕೊಳ್ಳಲು ಸೃಜನಶೀಲ ಅಭಿವ್ಯಕ್ತಿ ಅನುವು ಮಾಡಿಕೊಟ್ಟು, ಸಮಾಜವನ್ನು ಒಂದು ಸಹ್ಯ ನೆಲೆಯಲ್ಲಿ ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗಿಸಿದರೆ, ಮಾನವೀಯ ಮೃದುತ್ವದೆಡೆಗೆ ಪಕ್ಕಾಗಲು ಸಾಧ್ಯವಾಗುವುದಾದರೆ ಅದಕ್ಕಿಂಥಾ ದೊಡ್ಡದು ಬೇರಿನ್ನೇನುಬೇಕು?

ನಿರ್ಬಂಧವಿಲ್ಲದೇ ಮನಸಿನೊಳಗೆ ಕವಿತೆ ಒಡಮೂಡುವ ರೀತಿಗೆ ಒಂದು ರೂಪಕ ಕಣ್ಣು ಕಟ್ಟಿ ನಿಂತಿದೆ. ಮೀನಿನ ಚಿತ್ರವೊಂದನ್ನು ಪುಟ್ಟ ಮಗು ತನ್ಮಯತೆಯಿಂದ ರಚಿಸುತ್ತಿದೆ. ಮನೆಗೆ ಬಂದವರಿಗೆ ತಾಯಿ ಹೇಳುತ್ತಾಳೆ, ‘ನಮ್ಮ ಪುಟ್ಟಿ ನೋಡಿ, ಮೀನಿನ ಥರಹ ಚಿತ್ರ ಬರೀತಿದ್ದಾಳೆ’ ಎಂದು. ಮಗು ಥಟ್ಟನೆ ಹೇಳುತ್ತದೆ. ‘ಮೀನಿನ ಥರಹ ಅಲ್ಲ. ಅದು ಮೀನೇ!’ ಬಹುಶಃ ಮುಗ್ಧತೆಗೆ ಮತ್ತು ಮೈಮರೆಯುವ ತನ್ಮಯತೆಗೆ ಮಾತ್ರ ತಾನು ಅಂದುಕೊಂಡಿದ್ದು ಮತ್ತು ಚಿತ್ರಿಸಿದ್ದರ ನಡುವಿನ ವ್ಯತ್ಯಾಸವಿಲ್ಲದೇ ಹೀಗೆ ಕಾಣಬಹುದೇನೋ!

ಮರುಸೃಷ್ಟಿಸಬಲ್ಲ ಚೈತನ್ಯಗಳು ಗಂಡಾಂತರದಲ್ಲಿ


– ರೂಪ ಹಾಸನ


“ಸಂಪನ್ಮೂಲದ ಅತಿಯಾದ ಬಳಕೆ, ಕಾಳ್ಗಿಚ್ಚು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಾದ ಭಾರತದ ಹಿಮಾಲಯ ಶ್ರೇಣಿ, ಪಶ್ಚಿಮಘಟ್ಟ ಶ್ರೇಣಿ, ಈಶಾನ್ಯ ಪ್ರದೇಶಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಸ್ಯ ಮತ್ತು ಜೀವ ಪ್ರಭೇದಗಳು ತೀವ್ರ ಅಪಾಯಕ್ಕೆ ಸಿಲುಕಿವೆ”…

…ಎಂದು ಮೊನ್ನೆ ಬಿಡುಗಡೆಯಾದ ನಮ್ಮ ಪರಿಸರ ಸಚಿವಾಲಯದ ವರದಿ ಎಚ್ಚರಿಕೆ ನೀಡಿದೆ. 45000 ಸಸ್ಯ ಪ್ರಭೇದಗಳು ಮತ್ತು 91000 ಜೀವಪ್ರಬೇಧಗಳ ತವರಾದ ಭಾರತದಲ್ಲಿ ಮುಂದಿನ ಒಂದೆರಡು ದಶಕಗಳಲ್ಲಿ ಅಪರೂಪದ ಹಲವು ಜೀವವೈವಿಧ್ಯಗಳು ಶಾಶ್ವತವಾಗಿ ನಾಶವಾಗಬಹುದೆಂದು ವರದಿ ಆತಂಕಿಸಿದೆ. ಹೀಗೇ ಮುಂದುವರೆದರೆ……. ಹತ್ತಿರದಲ್ಲೇ……. sabah-malaysia-pygmy-elephantsನಾಶವಾಗುವ ಸರದಿ ಮನುಷ್ಯನಿಗೂ ಬರಬಹುದೇನೋ? ಇದಕ್ಕೆಲ್ಲಾ ಕಾರಣರಾರು? ಯಾರೋ ಕಾಣದ ಲೋಕದವರಲ್ಲ……ನಾವೇ! ‘ಬೇಕು’ ರಾಕ್ಷಸರು!

ಯಾಕೋ ಮೊನ್ನೆಯಿಂದ ಮೈದಾಸನ ಕಥೆ ಮತ್ತೆ ಮತ್ತೆ ನೆನಪಾಗುತ್ತಿದೆ. ಅದು ನಿಮಗೂ ಗೊತ್ತಿರುವಂಥದ್ದೇ…. ಮತ್ತೊಮ್ಮೆ ನೆನಪಿಸುತ್ತಿದ್ದೇನಷ್ಟೇ. ಒಂದೂರಿನಲ್ಲಿ ಮೈದಾಸ ಎಂಬೊಬ್ಬ ರಾಜ ಇದ್ದನಂತೆ. ಅವನಿಗೆ ಚಿನ್ನದ ಬಗ್ಗೆ ಅತೀ ಆಸೆ. ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ಆ ರಾಜ್ಯದ ಖಜಾನೆಗಳಿಂದ ಚಿನ್ನ, ವಜ್ರ, ವೈಢೂರ್ಯಗಳನ್ನು ಕೊಳ್ಳೆ ಹೊಡೆದು ತಂದು ತನ್ನ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದ. ಹೀಗೆ ಯುದ್ಧ ಮಾಡಿ, ಕಷ್ಟಪಟ್ಟು ಚಿನ್ನ ಲೂಟಿ ಮಾಡುವ ಕಾಯಕದಿಂದ ಬೇಸತ್ತ ಮೈದಾಸ, ಕಠಿಣ ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡ. ದೇವರು ಪ್ರತ್ಯಕ್ಷನಾಗಿ ‘ನಿನಗೇನು ಬೇಕು ಕೇಳು’ ಎಂದಾಗ, ‘ನಾನು ಮುಟ್ಟಿದ್ದೆಲ್ಲಾ ಚಿನ್ನವಾಗುವಂತೆ ವರನೀಡು’ ಎಂದು ಕೇಳಿಕೊಂಡ. ದೇವರು ‘ತಥಾಸ್ತು’ ಎಂದ. ಮೈದಾಸ ಖುಷಿಯಿಂದ ಅರಮನೆಯ ಕಂಬ ಕಂಬಗಳನ್ನು ಮುಟ್ಟಿದ, ಅವೆಲ್ಲ ಚಿನ್ನವಾಗೋಯ್ತು, ಸುತ್ತಲಿನ ಗಿಡ, ಮರಗಳನ್ನ ಮುಟ್ಟಿದ ಅವೂ ಚಿನ್ನವಾಯ್ತು. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಊಟಕ್ಕೆ ಕುಳಿತು ಭಕ್ಷ್ಯಭೋಜ್ಯಗಳಿಗೆ ಕೈ ಹಾಕಿದ ಅದೂ ಚಿನ್ನವಾಯ್ತು. ಆಗವನಿಗೆ ಸ್ವಲ್ಪ ಗಾಬರಿ ಆಯ್ತು. ಅಲ್ಲಿಂದ ಎದ್ದು ಬರುತ್ತಿರುವಾಗ ಪ್ರೀತಿಯ ಮೊಮ್ಮಗ ಇವನ ಹತ್ತಿರ ಓಡಿ ಬಂದ. ಮೈದಾಸ ಅಕ್ಕರೆಯಿಂದ ಅವನನ್ನ ಎತ್ತಿಕೊಂಡ. ತಕ್ಷಣ ಅವನೂ ಚಿನ್ನವಾಗಿಬಿಟ್ಟ! ಮೈದಾಸನಿಗೆ ಈಗ ತಾನು ಮಾಡಿದ ಘೋರ ತಪ್ಪಿನ ಅರಿವಾಯ್ತು. ಅಷ್ಟರಲ್ಲಾಗಲೇ ಕಾಲ ಮೀರಿ ಹೋಗಿತ್ತು! destroying-natureಈ ಕಥೆ ಪ್ರಕೃತಿಯನ್ನು ಲೂಟಿ ಹೊಡೆದು ಅಭಿವೃದ್ಧಿಯ ಹೆಸರಿನಲ್ಲಿ ಮುಟ್ಟಿದ್ದೆಲ್ಲವನ್ನೂ ಕಾಂಕ್ರೀಟ್ ಮಾಡಲು ಬೆನ್ನು ಬಿದ್ದಿರುವ ನಮ್ಮ ದುರಾಸೆಗೆ ಹೆಚ್ಚು ಸಾಮ್ಯ ಹೊಂದುವಂತಿದೆ.

ವಿಜ್ಞಾನ-ತಂತ್ರಜ್ಞಾನದ ಹೆಸರಿನಲ್ಲಿ ಇವತ್ತು ಮಾನವ ಅನೇಕ ಪ್ರಗತಿ ಸಾಧಿಸಿದ್ದಾನೆ. ತನ್ನ ಪ್ರಚಂಡ ಬುದ್ಧಿಶಕ್ತಿಯಿಂದ ವಿನಾಶಕಾರಿ ಅಣ್ವಸ್ತ್ರಗಳನ್ನು, ರಾಕೆಟ್‌ಗಳನ್ನು, ಸಬ್‌ಮೆರಿನ್, ರೊಬಾಟ್, ಕಂಪ್ಯೂಟರ್ ಏನೆಲ್ಲಾ ಸೌಲಭ್ಯಗಳನ್ನು ಕಂಡು ಹಿಡಿದಿದ್ದಾನೆ. ನೆಲವನ್ನು ಬಗೆದು, ಬೇಕಾದ ಬೇಡದ ಎಷ್ಟೆಲ್ಲಾ, ಏನೆಲ್ಲಾ ಖನಿಜ ತನ್ನದಾಗಿಸಿಕೊಂಡಿದ್ದಾನೆ. ರಸಗೊಬ್ಬರ, ಕೀಟನಾಶಕವನ್ನು ಅಪಾರ ಪ್ರಮಾಣದಲ್ಲಿ ಬಳಸಿ ಮಿತಿಮೀರಿದ ಕೃಷಿ ಉತ್ಪನ್ನಗಳನ್ನು ಬೆಳೆಯುವ ಭರದಲ್ಲಿ ಭೂಮಿಯನ್ನು ಬರಡಾಗಿಸುತ್ತಿದ್ದಾನೆ. ಅವನ ಅಪಾರ ಸುಖಕ್ಕಾಗಿ ಬೃಹದಾಕಾರದ ಕಟ್ಟಡಗಳು, ಜಲಾಶಯಗಳು, ರಸ್ತೆ-ರೈಲು ಮಾರ್ಗಗಳು ನಿರ್ಮಾಣವಾಗುತ್ತಿವೆ. ನದಿ ಮೂಲ, ಬೆಟ್ಟ, ಗುಡ್ಡ, ಪರ್ವತ, ಕಾಡುಗಳನ್ನು ನಾಶ ಮಾಡಿ ನಗರಗಳು ಬೆಳೆಯುತ್ತಿವೆ. ಅರಣ್ಯದೊಳಗೆ ನಡೆಯುತ್ತಿರುವ ಅನೇಕ ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯಜೀವಿಗಳ ಸಹಜ ಬದುಕಿಗೆ ಧಕ್ಕೆಯಾಗಿ ಅವು ನಾಡಿನೊಳಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಮಾನವ ನಿರ್ಮಿತ ಹೊಲ ಗದ್ದೆ ತೋಟ ಬೆಳೆದು ನಿಂತ ಫಸಲನ್ನು ನಿಮಿಷಾರ್ಧದಲ್ಲಿ ಧ್ವಂಸ ಮಾಡುತ್ತಿವೆ. ತಮ್ಮ ವಾಸಸ್ಥಾನವನ್ನು ಮನುಷ್ಯ ಆಕ್ರಮಿಸಿಕೊಂಡರೆ ಅವುಗಳಾದರೂ ಏನು ಮಾಡಬೇಕು? ಎಲ್ಲಿ ಹೋಗಬೇಕು? ಅದರ ದಾಳಿಗೆ ಸಿಕ್ಕು ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಮಾನವನೂ ಕಾಡು ಪ್ರಾಣಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದು, ಅಥವಾ ಪುನರ್ವಸತಿಯ ಹೆಸರಿನಲ್ಲಿ ಅವುಗಳನ್ನು ಅನೈಸರ್ಗಿಕವಾಗಿ ಬಂಧಿಸಿಡುವ ದುಷ್ಟ ಕೆಲಸಗಳಲ್ಲಿ ತೊಡಗಿಕೊಂಡಿದ್ದಾನೆ.

ಅದಿರು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ದಂಧೆಯ ಹೆಸರಿನಲ್ಲಿ, ಜಲ ಯೋಜನೆ, ವಿದ್ಯುತ್ ಯೋಜನೆ, ಅಣೆಕಟ್ಟೆಗಳು, palm-oil-plantationಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಪ್ರಾಕೃತಿಕ ಸಂಪತ್ತೆಲ್ಲಾ ಎಡೆಬಿಡದೇ ಲೂಟಿಗೊಳ್ಳುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಈ ಪರಿಯ ಅತಿಯಾದ ಬಳಕೆ ಜೀವ ವೈವಿಧ್ಯ ಸರಪಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಕೃಷಿಭೂಮಿಯನ್ನು ವೇಗದಿಂದ ನಾಶ ಮಾಡಿ ಬೃಹತ್ ಕಾಂಕ್ರೀಟ್ ಕಾಡುಗಳನ್ನು ಕಟ್ಟಲಾಗುತ್ತಿದೆ. ತನ್ನ ಐಷರಾಮಿ ಬದುಕಿನ ಕನಸಿನಲ್ಲಿ ಎಲ್ಲವನ್ನೂ ಪಣಕ್ಕಿಟ್ಟು ತನ್ನ ಬೇಕುಗಳನ್ನು ಪೂರೈಸಲು ಮಾನವ ಹವಣಿಸುತ್ತಿದ್ದಾನೆ. ಈ ದುರಾಸೆಯಲ್ಲಿ ಮುಂದಿನ ಜನಾಂಗಕ್ಕೆ ಬದುಕಲು ಪ್ರಾಕೃತಿಕ ಸೌಲಭ್ಯಗಳನ್ನು ಉಳಿಸಿಡಬೇಕೆಂಬ ವಿವೇಚನೆಯನ್ನೇ ಅವನು ಕಳೆದುಕೊಂಡಿದ್ದಾನೆ. ತನ್ನೊಂದಿಗಿರುವ ಇತರ ಪ್ರಾಣಿ, ಪಕ್ಷಿ, ಕೀಟಗಳಿಗೂ ತನ್ನಂತೆಯೇ ಬದುಕಿ ಬಾಳುವ ಹಕ್ಕಿದೆ ಎಂಬುದನ್ನು ಮರೆತು ಅವುಗಳಿಗೆ ಬದುಕಲು ಅವಕಾಶ ಕೊಡದಂತೆ ನಾಶ ಮಾಡಿ ತಾನೇ ಸರ್ವಾಧಿಕಾರಿಯೆಂದು ಬೀಗುತ್ತಿದ್ದಾನೆ. ಪ್ರಕೃತಿ ಕೇಂದ್ರಿತವಾಗಿದ್ದ, ಎಂದರೆ ಮನುಷ್ಯನನ್ನೂ ಒಳಗೊಂಡು ಸಕಲ ಚರಾಚರಗಳ ಬದುಕನ್ನೂ ಗಣಿಸಿ ನಡೆಸುತ್ತಿದ್ದ ಸಹಜ ಸುಸ್ಥಿರ ಅಭಿವೃದ್ಧಿಯನ್ನು ಮರೆತು, ಮನುಷ್ಯ…… ಕೇವಲ ತನ್ನ ಸುಖವನ್ನಷ್ಟೇ ಕೇಂದ್ರವಾಗಿರಿಸಿಕೊಂಡು ತನ್ನ ಸ್ವಾರ್ಥ, ಸ್ವಹಿತಕ್ಕಾಗಿ ಪ್ರಕೃತಿಯನ್ನು ಕೊಳ್ಳೆಹೊಡೆದು ಮೆರೆಯುತ್ತಿದ್ದಾನೆ. ಪರಿಸರದ ಮೇಲಿನ ಇಂತಹ ನಿರಂತರ ಅತ್ಯಾಚಾರದಿಂದ ಪ್ರಕೃತಿಯ ಸಮತೋಲನ ತಪ್ಪಿ ಬರ, ಪ್ರವಾಹ, ಭೂಕಂಪ, ಹವಾಮಾನ ವೈಪರೀತ್ಯ, ಭೂಮಿಬಿಸಿಯಂತಾ ವಿಕೋಪಗಳು ಎಚ್ಚರಿಕೆಯ ಗಂಟೆಯಾಗಿ ಮನುಷ್ಯ ಸಂಕುಲವನ್ನು ಬಡಿಯುತ್ತಲೇ ಇವೆ. ಏನೆಲ್ಲಾ ಶುಷ್ಕವಸ್ತುಗಳನ್ನು ಸೃಷ್ಟಿಸಲು ಸಾಧ್ಯವಿದ್ದರೂ, Industrial_Mangaloreಜೀವ ಚೈತನ್ಯಗಳಾದ ಒಂದು ಹಿಡಿ ಮಣ್ಣು ಮತ್ತು ಒಂದು ಬೊಗಸೆ ನೀರನ್ನು ಸೃಷ್ಟಿಸಲಾಗದ ಮನುಷ್ಯನಿಗೆ ಮರುಸೃಷ್ಟಿಸುವ ಚೈತನ್ಯವಿರುವ ಪ್ರಕೃತಿಯನ್ನು ನಾಶಮಾಡಲು ಯಾವ ಹಕ್ಕಿದೆ?

ನಮ್ಮಿಂದ ನಮ್ಮೊಳಗೇ ಹುಟ್ಟಿ ಬೆಳೆದ ಈ ‘ಬೇಕು’ ರಾಕ್ಷಸನನ್ನು ಹದ್ದುಬಸ್ತಿನಲ್ಲಿಡಲು ನಮ್ಮಿಂದಲೇ ಸಾಧ್ಯವಾಗುತ್ತಿಲ್ಲವಲ್ಲ! ಈ ಬಗ್ಗೆ ಪೂರ್ತಿ ಕಾಲ ಮೀರಿ ಹೋಗುವ ಮೊದಲು ಈಗಲಾದರೂ ನಾವು ಯೋಚಿಸಬೇಕಲ್ಲವೇ? ಪ್ರಕೃತಿ ನಾಶದ ನಮ್ಮ ಅಭಿವೃದ್ಧಿ ಪರಿಕಲ್ಪನೆಯನ್ನು ಬದಲಾಯಿಸಿ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸಬಲ್ಲ ಅಭಿವೃದ್ಧಿಯೆಡೆಗೆ ಈಗಲಾದರೂ ನಾವು ಹೆಜ್ಜೆ ಹಾಕಬೇಕಲ್ಲವೇ? ಪ್ರಕೃತಿಯಲ್ಲಿರುವ ಯಾವುದೇ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಕಾಡು, ಎಲ್ಲವೂ ತನ್ನನ್ನು ಮರು ಸೃಸ್ಟಿಸಿಕೊಳ್ಳಬಲ್ಲ ಜೀವಂತಿಕೆ ಹಾಗೂ ಚೈತನ್ಯ ಉಳ್ಳಂತಹವು. ಅವುಗಳನ್ನೇ ನಾಶ ಮಾಡಿದರೆ ಮುಂದೆ ಪ್ರಕೃತಿಯಲ್ಲೇನುಳಿದೀತು? ಹಸಿರು ನಾಶದ ಇಂತಹುದೇ ಅಭಿವೃದ್ಧಿಯ ಬೆನ್ನು ಹತ್ತಿ ನಾವು ಓಡುತ್ತಿದ್ದರೆ ನಾಳೆ ನಮಗೆ ಅನ್ನ ಬೆಳೆದು ತಿನ್ನಲು ಭೂಮಿಯೇ ಇಲ್ಲದಂತಾಗಿ ಬರೀ ಮನುಷ್ಯ ನಿರ್ಮಿತ ಈ ಕಾಂಕ್ರೀಟ್ ಅನ್ನವನ್ನೇ ತಿನ್ನಬೇಕಾದೀತೇನೋ? ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮೈದಾಸನ ದುರಾಸೆಯೇ ಅವನಿಗೆ ಶಾಪವಾದಂತೆ ನಮಗೂ ನಮ್ಮ ಅತಿ ಆಸೆಯೇ ಶಾಪವಾಗಬಹುದು. ಮೈದಾಸನಂತೆಯೇ ನಮಗೂ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವೇ ಉಳಿಯದಂತಾದೀತು! ಮನುಷ್ಯ ಸಂತತಿ ಇತರ ಜೀವವೈವಿಧ್ಯಗಳೊಂದಿಗೇ ಈ ಭೂಮಿಯ ಮೇಲೆ ಕೆಲಕಾಲವಾದರೂ ನೆಮ್ಮದಿಯಿಂದ ಬದುಕುಳಿಯಲು, ‘ಪ್ರಕೃತಿ ನಮ್ಮ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವಷ್ಟಿದೆಯೇ ಹೊರತು ದುರಾಸೆಯನ್ನು ಪೂರೈಸುವಷ್ಟಲ್ಲ’ ಎಂದ ಮಹಾತ್ಮಾಗಾಂಧೀಜಿಯವರ ಮಾತು ಎಂದೆಂದಿಗೂ ನಮ್ಮನ್ನು ಎಚ್ಚರಿಸುತ್ತಲೇ ಇರಬೇಕಾಗಿದೆ.