Category Archives: ರೂಪ ಹಾಸನ

“ಅತ್ಯಾಚಾರವೆಂಬ ಕ್ರೌರ್ಯವನೆದುರಿಸುತ್ತಾ..”


– ರೂಪ ಹಾಸನ


 

ಭಾರತದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಲೈಂಗಿಕ ದೌರ್ಜನ್ಯ, ಪ್ರತಿ 20 ನಿಮಿಷಕ್ಕೆ ಒಂದು ಅತ್ಯಾಚಾರ, ಪ್ರತಿ 150 ನಿಮಿಷಕ್ಕೆ 16 ವರ್ಷದೊಳಗಿನ ಒಂದು ಅಪ್ರಾಪ್ತ ಹೆಣ್ಣುಮಗುವಿನ rape-illustrationಅತ್ಯಾಚಾರ ನಡೆಯುತ್ತಿದೆ. 10 ವರ್ಷದ ಕೆಳಗಿನ ಒಂದು ಹೆಣ್ಣು ಮಗು ಪ್ರತಿ 13 ಗಂಟೆಗೊಮ್ಮೆ ಹಾಗೂ 10 ಹೆಣ್ಣುಮಕ್ಕಳಲ್ಲಿ ಒಂದು ಹೆಣ್ಣುಮಗು ಯಾವಾಗ ಬೇಕಾದರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದೆ ಎಂದು ಭಾರತೀಯ ಮಹಿಳಾ ಅಧ್ಯಯನ ಸಮೀಕ್ಷೆ ತಿಳಿಸುತ್ತದೆ. ಈ ವರದಿಯನ್ನು ಓದಿದಾಗ ನಮ್ಮ ಸುತ್ತಲೂ ಎಂಥಹ ನರಕವಿದೆ ಎಂದು ಹೇಸಿಗೆಯಾಗುತ್ತದೆ. ಸುದ್ದಿಯಾಗುವವು ಕೆಲವು ಮಾತ್ರ. ಸುದ್ದಿಯಾದ ಆನಂತರದ ಪರಿಣಾಮ ಎದುರಿಸಲಾಗದೇ ಮರ್ಯಾದೆಗೆ ಅಂಜಿ ಇಂತಹ ಹಲವು ಪ್ರಕರಣಗಳು ದನಿ ಕಳೆದುಕೊಳ್ಳುತ್ತವೆ. ಆದರೆ ಅವು ಒಳಗೇ ಉಸಿರಾಡುತ್ತಿರುತ್ತವೆ. ಮತ್ತು ನಿತ್ಯ ಮೈ-ಮನ ಮುದುರಿಕೊಳ್ಳುತ್ತಾ ಬದುಕು ಕಮರಿಸಿಕೊಳ್ಳುತ್ತಿರುತ್ತವೆ. ಇಷ್ಟೊಂದು ಪ್ರಮಾಣದಲ್ಲಿ ಅತ್ಯಾಚಾರಗಳು ನಡೆಯುತ್ತಿವೆ ಎಂದಾದರೆ ಎಷ್ಟೊಂದು ‘ಅಮಾನವೀಯ, ಪೈಶಾಚಿಕ’ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ, ನಿತ್ಯ ಸೃಷ್ಟಿಯಾಗುತ್ತಿದ್ದಾರೆ ಎಂದು ಆತಂಕವಾಗುತ್ತದೆ. ಮತ್ತೆ ಇದರ ಹೊಣೆಗಾರಿಕೆ ಸಮಾಜದ ಮೇಲೆಯೇ.

ಎರಡು ದಶಕದ ಹಿಂದೆ ಜಾಗತೀಕರಣದೊಂದಿಗೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಮಾರುಕಟ್ಟೆಯು ಹೆಣ್ಣಿನ ದೇಹವನ್ನೇ ‘ಸರಕ’ನ್ನಾಗಿ ವಿಜೃಂಭಿಸಲು ನಮ್ಮ ಮಾಧ್ಯಮಗಳನ್ನು ಯಶಸ್ವಿಯಾಗಿ ಅನುವುಗೊಳಿಸಿದೆ. ಅದರ ಪ್ರಭಾವದಿಂದಾಗಿ, ಹೆಣ್ಣಿನ ದೇಹದ ಮೇಲೆ ‘ಪ್ರಭುತ್ವ’ ಸ್ಥಾಪಿಸಲು, ಅದನ್ನು ‘ಉಪಯೋಗಿಸಿಕೊಳ್ಳಲು’ ಅನೇಕ ಅನೈತಿಕ ಮಾರ್ಗಗಳನ್ನು ನಮ್ಮ ಪುರುಷ ಪ್ರಧಾನ ವ್ಯವಸ್ಥೆ, ತನ್ನ ಮೂಗಿನ ನೇರಕ್ಕೆ ರೂಪಿಸಿಕೊಳ್ಳುತ್ತಿದೆ. ಯಾವ ಹೆಣ್ಣು ಮಗಳು ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ದೌರ್ಜನ್ಯಕ್ಕೆ ಒಳಗಾಗಬಹುದಾದಂಥ ಸ್ಥಿತಿ ಇಂದು ನಿರ್ಮಾಣವಾಗಿರುವುದಕ್ಕೆ ಹೆಣ್ಣಿನ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಬಲಾತ್ಕಾರದ ಜೊತೆಗೆ ಕಣ್ಮರೆ, ಮಾರಾಟದ ಪ್ರಮಾಣದ ಸೂಚಿ ದಿನದಿಂದ ದಿನಕ್ಕೆ ಏರುತ್ತಿರುವುದೇ ಸಾಕ್ಷಿಯಾಗಿದೆ. ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ ಅಧ್ಯಯನ ವರದಿ ನಾವೆಷ್ಟು ಅಸುರಕ್ಷಿತವಾಗಿದ್ದೇವೆ ಎಂಬುದಕ್ಕೆ ಕೈಗನ್ನಡಿಯಾಗಿದೆ. ದೇಶದಾದ್ಯಂತ ಶೇಕಡ 80ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಕಾದಿರುವುದು ಏನನ್ನು ಸೂಚಿಸುತ್ತದೆ? ಮಹಿಳೆ ಘನತೆಯಿಂದ ಬದುಕುವ ಯಾವ ಆರೋಗ್ಯಕರ ವಾತಾವರಣವೂ ಇಲ್ಲಿ ಇಲ್ಲ ಎಂಬುದನ್ನೇ ಅಲ್ಲವೇ? ನಮಗೆ ಸಿಕ್ಕುವ ವರದಿಗಳು ದಾಖಲಾಗುವ ಪ್ರಮಾಣವನ್ನು ಅವಲಂಬಿಸಿದ್ದು. ಮರ್ಯಾದೆಗೆ ಅಂಜಿ, ಸಮಾಜಕ್ಕೆ ಹೆದರಿ ಇನ್ನೂ ದಾಖಲಾಗಲು ಸಾಧ್ಯವೇ ಆಗಿಲ್ಲದ ಅಸಂಖ್ಯಾತ ಲೈಂಗಿಕ ದೌರ್ಜನ್ಯದ ಪ್ರಮಾಣವನ್ನು ನೆನೆದು ಉಸಿರು ಕಟ್ಟಿ, ಜೀವ ನಡುಗುತ್ತದೆ.

ನಮ್ಮ ರಾಜ್ಯದಲ್ಲಿ ಕಳೆದ 2013ರಿಂದ ಹಿಂದಿನ ಐದು ವರ್ಷಗಳಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 2798. ಆದರೆ ಶಿಕ್ಷೆ ಆಗಿದ್ದು ಮಾತ್ರ ಕೇವಲ 123 ಮಂದಿಗೆ! child-rape-indiaಅತ್ಯಾಚಾರಕ್ಕೊಳಗಾದ ಮಹಿಳೆಯರು ದೂರು ನೀಡಿದರೂ ನಂತರ ಜೀವ ಬೆದರಿಕೆ ಒತ್ತಡ ತಂತ್ರಕ್ಕೆ ಸಿಲುಕಿ ಕೇಸು ಹಿಂಪಡೆಯುವುದು ನಡೆಯುತ್ತಿದೆ. ಹಣ ಜಾತಿ ಧರ್ಮ ರಾಜಕೀಯ ಪ್ರಭುತ್ವದ ಒತ್ತಡಗಳೂ ಬಹಳಷ್ಟು ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಿಬಿಡುತ್ತದೆ. ಕೆಲವು ಪ್ರಕರಣಗಳಲ್ಲಿ ಸಾಕ್ಷಿದಾರರಿಂದ ಸುಳ್ಳು ಹೇಳಿಕೆ ಕೊಡಿಸುವುದರಿಂದಲೂ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 31915 ಪ್ರಕರಣಗಳು ದಾಖಲಾಗಿವೆ! ಈ ಪ್ರಮಾಣದ ಪ್ರಕರಣಗಳ ದಾಖಲು ನಮ್ಮ ಮಹಿಳೆಯರಿಗಿರುವ ಸುರಕ್ಷತೆಯ ಮಾನದಂಡಗಳಾಗಿ ನಮಗೆ ಕಾಣುತ್ತವೆ. ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯರು, ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವಂಥಹ, ಆತ್ಮಾಘಾತಕ್ಕೆ ಒಳಗಾಗಿ ಜೀವನ ಪೂರ್ತಿ ನರಳುವಂತಹ, ಸಮಾಜದ ಕಾಕದೃಷ್ಟಿಯಿಂದ ಚಿತ್ರಹಿಂಸೆ ಅನುಭವಿಸುವಂತಹ ಸ್ಥಿತಿಯನ್ನು ನಮ್ಮ ಕಣ್ಣೆದುರಿಗೇ ನೋಡುತ್ತಿರುವಾಗ ಮಹಿಳೆಗೆ ತನ್ನ ದೇಹದ ಮೇಲಿನ ಹಕ್ಕೇ ಇಲ್ಲದಿರುವಾಗ ಘನತೆಯ ಬದುಕಿನ ಕಲ್ಪನೆ, ಅಭಿವೃದ್ಧಿ ಸಾಧ್ಯವೇ? ಎಂಬ ಉತ್ತರವಿಲ್ಲದ ಪ್ರಶ್ನೆ ಕಂಗೆಡಿಸುತ್ತದೆ.

ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಪರಿಹಾರವನ್ನು ನೀಡುವ ಅಥವಾ ಸಾಮಾಜಿಕ ಭದ್ರತೆ ಕೊಡುವ, ಪುನರ್ವಸತಿ ಕಲ್ಪಿಸುವ ಯಾವುದೇ ಸಮರ್ಪಕ ವ್ಯವಸ್ಥೆ ನಮ್ಮಲ್ಲಿ ಇಲ್ಲದಿರುವುದರಿಂದ ಪ್ರಕರಣದಲ್ಲಿ ನೊಂದ ಬಹುಪಾಲು ಮಹಿಳೆಯರು ತಮ್ಮ ಹಕ್ಕನ್ನು ಪ್ರತಿಪಾದಿಸಲಾಗುವುದೇ ಇಲ್ಲ. ಅವರ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಸ್ಥಾನಮಾನಗಳು ಮಹಿಳೆಯ ಹೋರಾಟದ ಕೆಚ್ಚನ್ನು ನಿರ್ಧರಿಸುವುದರಿಂದಾಗಿ ಬಹಳಷ್ಟು ಮಹಿಳಾ ದೌರ್ಜನ್ಯದ ಪ್ರಕರಣಗಳು ಸದ್ದಿಲ್ಲದೇ ಮುಚ್ಚಿಹೋಗುತ್ತಿವೆ. ಮತ್ತು ನಮ್ಮ ಅನಾರೋಗ್ಯಕರವಾದ ಸಮಾಜದಲ್ಲಿ ಹೆಣ್ಣಿನ ಶೀಲ, ಕೌಮಾರ್ಯ, ಪಾತಿವ್ರತ್ಯದ ಕುರಿತು ಇರುವ ವಿಪರೀತದ ಕಲ್ಪನೆಗಳು ಅವಳನ್ನು ನ್ಯಾಯ ಸ್ಥಾನದವರೆಗೆ ಹೋಗುವುದನ್ನು ತಡೆದು, ಪ್ರಕರಣ ಗೋಪ್ಯವಾಗಿಯೇ ಸತ್ತು ಹೋಗುವಂತೆ ಮಾಡುತ್ತದೆ. ಹೆಣ್ಣಿನ ದೇಹದ ಮೇಲಿನ ಇಂತಹ ಯಾವುದೇ ದಾಳಿಯಿಂದ, ಮುದುಡಿಹೋಗುವ, ಆಘಾತಕ್ಕೊಳಗಾಗುವ ಅವಳ ಮನಸ್ಸು ಮತ್ತು ಬುದ್ಧಿಯನ್ನು ಮತ್ತೆ ಯಥಾಸ್ಥಿತಿಗೆ ತರುವುದಕ್ಕೇ ಅವಳ ಸಮಯ, ಶ್ರಮಗಳು ವಿನಿಯೋಗವಾಗುವಾಗ ಅವಳ ಬದುಕು ಚಲನಶೀಲತೆಯನ್ನು ಕಂಡುಕೊಳ್ಳಲು ಸಾಧ್ಯವೇ? ಅವಳ ಹಕ್ಕನ್ನು ಸಮರ್ಥವಾಗಿ ಚಲಾಯಿಸಲು ಸಾಧ್ಯವೇ?

ನಮ್ಮ ಸರ್ಕಾರ ಇನ್ನಾದರೂ ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಫಾಸ್ಟ್ child-rapeಟ್ರಾಕ್ ಕೋರ್ಟ್ ಗಳನ್ನು ಸ್ಥಾಪಿಸಿ ಅಪರಾಧಿಗಳಿಗೆ ಕಾನೂನುರೀತ್ಯ ಶಿಕ್ಷೆ ನೀಡುವಂತಾಗಬೇಕಿದೆ. ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಯಾವುದೇ ಕುಂದಿಲ್ಲದೇ ಜಾರಿಗೊಳಿಸುವ ಕೆಲಸವಾಗಬೇಕು. ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಿರುವ ಅಶ್ಲೀಲ ವೆಬ್ಸೈಟ್ ಗಳನ್ನು ಕೂಡಲೇ ನಿರ್ಬಂಧಿಸಬೇಕು. ಅಶ್ಲೀಲ ಸಿನಿಮಾ, ಜಾಹಿರಾತು ಹಾಗೂ ಇತರ ಅಶ್ಲೀಲ ಕಾರ್ಯಕ್ರಮಗಳ ತಡೆಗೆ ಸಂಬಂಧಿಸಿದಂತೆ ಈಗಾಗಲೇ ಇರುವ ನೀತಿ ನಿಯಮಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಜೊತೆಗೆ ಸೆನ್ಸಾರ್ ಸಮಿತಿ ಯಾವುದೇ ಮುಲಾಜಿಲ್ಲದೇ ಸೂಕ್ತ ನೀತಿಗಳನ್ನು ಅಳವಡಿಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ, ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಗಳನ್ನು ಸ್ಥಾಪಿಸಬೇಕು.

ಸದ್ಯ ಬದಲಾಗಿರುವ ನಮ್ಮ ಮಹಿಳಾಪರ ಕಾನೂನುಗಳ ಪ್ರಕಾರ ಅತ್ಯಾಚಾರ ಪ್ರಕರಣಗಳು IndiaRapeನ್ಯಾಯಾಲಯದ ಮೆಟ್ಟಿಲೇರಿದಾಗ ವಕೀಲರು ಹಾಕುವ ಸವಾಲು, ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಎಷ್ಟೋ ಬಾರಿ ಉತ್ತರಿಸಲು ಸಾಧ್ಯವಾಗದೇ, ಪುರುಷ ನ್ಯಾಯಾಧೀಶರ ಮುಂದೆ ತಾನು ಅನುಭವಿಸಿದ ಹಿಂಸೆಯನ್ನು ಹೇಳಿಕೊಳ್ಳಲಾಗದೇ ಅತ್ಯಾಚಾರಕ್ಕೊಳಗಾದ ಮಹಿಳೆಯರ ಬಹಳಷ್ಟು ಕೇಸುಗಳು ಬಿದ್ದುಹೋಗುತ್ತವೆ. ಇದೇ ಕಾರಣಕ್ಕೆ ಸಿ ಆರ್ ಪಿ ಸಿ ಯ 21ನೇ ಕಲಮಿಗೆ ತಿದ್ದುಪಡಿ ಮಾಡಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಅತ್ಯಾಚಾರ ಪ್ರಕರಣಗಳನ್ನು ಮಹಿಳಾ ನ್ಯಾಯಾಧೀಶರೇ ವಿಚಾರಣೆ ನಡೆಸಬೇಕು ಎನ್ನುತ್ತದೆ ಈ ತಿದ್ದುಪಡಿ. ಇವೆಲ್ಲವೂ ಮಹಿಳೆಯ ದೇಹ ಮತ್ತು ಅವಳ ವ್ಯಕ್ತಿತ್ವದ ಘನತೆಯ ದೃಷ್ಟಿಯಿಂದ ಸ್ವಾಗತಾರ್ಹವಾದುವೇ ಆಗಿವೆ. ಜೊತೆಗೇ ಅತ್ಯಾಚಾರ ಪ್ರಕರಣಗಳನ್ನು ನಡೆಸುವ ವಕೀಲರೂ ಕೂಡ ಮಹಿಳೆಯರೇ ಆಗಿದ್ದರೆ ಇನ್ನಷ್ಟು ಅನುಕೂಲವಾಗುವ ಸಾಧ್ಯತೆಗಳಿರುತ್ತದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿಯೇ ಅನೇಕ ಅತ್ಯಾಚಾರದ ಪ್ರಕರಣಗಳು ಮುಚ್ಚಿ ಹೋಗುವುದರಿಂದ ಅದಕ್ಕೆ ಸ್ಪಷ್ಟ ಮಾರ್ಗದರ್ಶನ ಸೂತ್ರಗಳನ್ನು ಸರ್ಕಾರ ತಕ್ಷಣವೇ ಜಾರಿಗೊಳಿಸಬೇಕಿದೆ. ಅದರ ಕೆಲ ಮುಖ್ಯ ಟಿಪ್ಪಣಿಗಳು ಈ ರೀತಿಯಾಗಿವೆ.

  1. ಅತ್ಯಾಚಾರದಂತಹ ಪ್ರಕರಣದಲ್ಲಿ ಕಾನೂನುಬದ್ಧ ವೈದ್ಯಕೀಯ ಗರ್ಭಪಾತ[ಎಮ್.ಟಿ.ಪಿ] ಮಾಡಿಸಲು ಸಂತ್ರಸ್ತೆ ಮನವಿ ಮಾಡಿಕೊಂಡಾಗ ವೈದ್ಯಕೀಯ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಲು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೆ ಲಿಖಿತ ಸೂಚನೆ ನೀಡಬೇಕು. ಈ ಕುರಿತು ಮಾರ್ಗಸೂಚಿ ನೀಡಬೇಕು.
  2. ಅಪ್ರಾಪ್ತ ಹೆಣ್ಣುಮಕ್ಕಳ ಮೇಲಾಗುವ ಯಾವುದೇ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳ ಮಾಹಿತಿ, ಯಾವ, ಯಾರ ಮೂಲಕವೇ ಲಭ್ಯವಾದರೂ ಪೊಲೀಸ್ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಬೇಕು. ಬಾಲಕಿಯ ಪರವಾಗಿ ಕುಟುಂಬದವರು ದೂರು ನೀಡಬೇಕೆಂದು ಹೇಳಬಾರದು. ಪ್ರಕರಣ ದಾಖಲಾದರಷ್ಟೇ ವಿಚಾರಣೆ ನಡೆಸುವುದು ಎಂಬ ಸಬೂಬು ಹೇಳುತ್ತಿರುವುದರಿಂದ ಮಕ್ಕಳ ಪ್ರಕರಣಗಳು ನ್ಯಾಯ ಕಾಣದೇ ಮುಚ್ಚಿ ಹೋಗುತ್ತಿವೆ.
  3. ಮಹಿಳೆ ಮತ್ತು ಮಕ್ಕಳಿಗಾಗಿ ನಡೆಯುತ್ತಿರುವ ಯಾವುದೇ ವಸತಿಯುತ ಶಾಲೆ, ಅನಾಥಾಶ್ರಮ, ಪೇಯಿಂಗ್ ಗೆಸ್ಟ್ ವ್ಯವಸ್ಥೆಗಳನ್ನು ನೋಂದವಣಿ ಮಾಡುವ ಕೆಲಸ Court-Indianತುರ್ತಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಆಗಬೇಕು. ನಿಯಮಿತವಾಗಿ ನಿಗಾ ಇಡುವ, ವರ್ಷಕ್ಕೊಮ್ಮೆ ಪುನರ್ ನವೀಕರಿಸುವ ವ್ಯವಸ್ಥೆಯೂ ಆಗಬೇಕು. ನಿಗದಿತ ಅವಧಿಯಲ್ಲಿ ದಾಖಲಾಗದ್ದವನ್ನು ಮಟ್ಟುಗೋಲು ಹಾಕಿಕೊಳ್ಳಬೇಕು. ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ತಕ್ಷಣ ಪೊಲೀಸರಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು.
  4. ಮಹಿಳೆಯರ ಮತ್ತು ಅಪ್ರಾಪ್ತ ಮಕ್ಕಳ ಯಾವುದೇ ಲೈಂಗಿಕ ದೌರ್ಜನ್ಯದ ಪ್ರಕರಣ ಪೊಲೀಸ್ ಇಲಾಖೆಯ ಮೆಟ್ಟಿಲೇರಿದರೆ ಅದನ್ನು ವಿಶೇಷ ಮುತುವರ್ಜಿ ವಹಿಸಿ ತಕ್ಷಣವೇ ತನಿಖೆ ಪ್ರಾರಂಭಿಸಿ, ಇತ್ಯರ್ಥಗೊಳಿಸಬೇಕು.
  5. ಅತ್ಯಾಚಾರದಂತಹ ಪ್ರಕರಣಗಳ ತನಿಖೆ ಮಾಡುವಾಗ ಅನುಸರಿಸಬೇಕಾದ ಸುಧಾರಿತ ಕ್ರಮಗಳ [ಸುಪ್ರೀಂಕೋರ್ಟ್ ಆದೇಶದಂತೆ] ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವ ಅವಶ್ಯಕತೆಯಿದೆ. ವೈದ್ಯರು, ಪೊಲೀಸ್ ಅಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿ ಮತ್ತು ಇದರಡಿ ಬರುವ ಎಲ್ಲಾ ಸಮಿತಿಗಳಿಗೂ ತರಬೇತಿ ಅಗತ್ಯ.
  6. ಅತ್ಯಾಚಾರ ಪ್ರಕರಣಗಳಲ್ಲಿ ಪರೀಕ್ಷೆಗಾಗಿ ಈಗಲೂ ಕಾನೂನುಬಾಹಿರವಾದ ಎರಡು ಬೆರಳು ಪರೀಕ್ಷೆ [ಟೂ ಫಿಂಗರ್ ಟೆಸ್ಟ್] ನಡೆಯುತ್ತಿದೆ. ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಹೀಗೆ ಪರೀಕ್ಷಿಸುವ ವೈದ್ಯರಿಗೆ ಶಿಕ್ಷೆಯಾಗಬೇಕು.
  7. ಅತ್ಯಾಚಾರಿಯನ್ನು ನಿಗದಿತ ಸಮಯದೊಳಗೆ ಹಿಡಿಯಲು ಕಾಲಾವಧಿಯನ್ನು ಸ್ಪಷ್ಟಗೊಳಿಸಬೇಕು. ಹಿಡಿಯದಿದ್ದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಾರ್ಹರನ್ನಾಗಿಸಬೇಕು. ಇದಾಗದಿದ್ದಕ್ಕೆ ಪ್ರಕರಣಗಳು ಬೇರೆ ಬೇರೆ ಆಮಿಷ, ಒತ್ತಡ, ಜಾತಿ, ರಾಜಕೀಯ, ಪ್ರಭಾವಗಳಿಂದಾಗಿ ಮುಚ್ಚಿಹೋಗುತ್ತಿವೆ.
  8. ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ವೈದ್ಯಕೀಯ ಪರೀಕ್ಷಾ ವರದಿ[ಡಿಎನ್ಎ ಟೆಸ್ಟ್ ರಿಪೋರ್ಟ್] ವಿಧಿವಿಜ್ಞಾನ ಪ್ರಯೋಗಾಲಯದಿಂದ ಬರುವುದು ವರ್ಷಗಟ್ಟಲೆ ಹಿಡಿಯುತ್ತಿರುವುದರಿಂದ ಅತ್ಯಾಚಾರ ಮೊಕದ್ದಮೆಗಳ ಶೀಘ್ರ ಇತ್ಯರ್ಥವಾಗುತ್ತಿಲ್ಲ. ಹೀಗಾಗಿ ಸಾಧ್ಯವಾದಷ್ಟೂ ಜಿಲ್ಲೆಗೊಂದು ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಬೇಕು. ಸಾಧ್ಯವಾದಷ್ಟೂ ತಿಂಗಳೊಳಗೆ ವರದಿ ಬರುವಂತೆ ಮಾಡಬೇಕು.
  9. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಜೊತೆಗೆ ವಿಚಾರಣೆಯ ಸಂದರ್ಭದಲ್ಲಿ ಪೊಲೀಸ್ ಮತ್ತು ವೈದ್ಯ ಸಿಬ್ಬಂದಿ ಅಸಭ್ಯವಾಗಿ, ಅನಾಗರಿಕವಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ಅತ್ಯಾಚಾರಗೊಳಿಸುವಂತಹ ಕೆಲಸವಾಗುತ್ತಿದೆ. ಹೀಗಾಗಿ ಅವರಿಗೆ ಮಹಿಳಾ ಹಾಗೂ ಮಕ್ಕಳ ಸ್ನೇಹಿ ಸಂವೇದನಾಶೀಲತೆಯ ನಿರಂತರ ತರಬೇತಿಯಾಗಬೇಕಿದೆ.
  10.  ಯಾವುದೇ ವಸತಿಯುತ ಶಾಲೆಗಳಲ್ಲಿ, ಮುಖ್ಯವಾಗಿ ಅಂಗವಿಕಲ ಮಕ್ಕಳ ವಸತಿಯುತ ಶಾಲೆಗಳಲ್ಲಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ, ಮಹಿಳೆಯರೇ ಇರುವುದು ಸೂಕ್ತ. ಇಲ್ಲಿ ಬಹು ಪ್ರಮಾಣದಲ್ಲಿ ಹೆಣ್ಣು ಮಕ್ಕಳು ದುರ್ಬಳಕೆಯಾಗುತ್ತಿದ್ದಾರೆ. ಈ ಕುರಿತು ಸಿಬ್ಬಂದಿಯ ಆಯ್ಕೆಯಲ್ಲಿಯೇ ಸ್ಪಷ್ಟ ಹಾಗೂ ನಿರ್ದಿಷ್ಟ ಮಾರ್ಗಸೂಚಿ ನಿಗದಿಗೊಳಿಸಬೇಕು.

ಜೊತೆಗೆ ಅತ್ಯಾಚಾರ ಪ್ರಕರಣಗಳ ಪೂರ್ವಾಪರಗಳನ್ನು ಎತ್ತಿ ಹಿಡಿದು ತೋರುವುದಕ್ಕಿಂತ ಹೆಣ್ಣುಮಕ್ಕಳ ಮೇಲಾಗುವ ಆನಂತರದ ಪರಿಣಾಮಗಳ ಹೃದಯ ವಿದ್ರಾವಕ ಸ್ಥಿತಿಯ ವರದಿಗಳಿಗೆ ಮಾಧ್ಯಮಗಳು ಹೆಚ್ಚಿನ ಗಮನಹರಿಸುವಂತೆ ನಾವು ಮಾಡಬೇಕಿದೆ. ಅವು ಬಹು ಸೂಕ್ಷ್ಮ ರೀತಿಯಲ್ಲಿ ಮಾನವೀಯ ನೆಲೆಗಳಲ್ಲಿ ದಾಖಲಾಗಬೇಕು. ಜೊತೆಗೆ ಅತ್ಯಾಚಾರ ಪ್ರಕರಣಗಳಲ್ಲಿ ನೀಡುವ ಶಿಕ್ಷೆಯ ಕುರಿತೂ ಕಾಲ ಕಾಲಕ್ಕೆ ಸುದ್ದಿ ಮೂಡಿಬರಬೇಕು. ಆಗಲಾದರೂ ವಿಕೃತ ವ್ಯಕ್ತಿಗಳ ಮೇಲೆ ಇವು ಪರಿಣಾಮ ಬೀರಿ ಮನಃಪರಿವರ್ತನೆಗೆ ಕಾರಣವಾಗಬಹುದು.

ಸೆಕ್ಸ್ ಕುರಿತು ಮುಕ್ತವಾಗಿ ಯೋಚಿಸುವ, ನಡೆದುಕೊಳ್ಳುವ ಪ್ರಕ್ರಿಯೆಗಳು ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೂಡ ಕೌಮಾರ್ಯ, ಶೀಲದ ಕುರಿತು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ವಿಪರೀತದ ಕಲ್ಪನೆಗಳು ಇನ್ನೂ ಜೀವಂತವಾಗಿವೆ. ಅತ್ಯಾಚಾರಕ್ಕೊಳಗಾಗಿ ಸುದ್ದಿಯಾದ ಹೆಣ್ಣುಮಕ್ಕಳ ಬದುಕು ಅಸಹನೀಯವಾಗಿ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತ್ತೆ ಕೆಲವರು ಖಿನ್ನತೆಗೆ, ತೀವ್ರ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗಿ ನರಳುತ್ತಿದ್ದಾರೆ. ಕಾನೂನು ತನ್ನ ಪ್ರಕ್ರಿಯೆ ಪೂರೈಸಲು ದೀರ್ಘ ಸಮಯ ಬೇಕಿರುವುದರಿಂದ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೇ, ನ್ಯಾಯ ಸಿಗದಿದ್ದಾಗ ಬೀದಿಗೆ ಬಿದ್ದ ಹೆಣ್ಣು ಮಗು ಮಾನಸಿಕವಾಗಿ ಛಿದ್ರವಾಗಿ ಹೋಗುತ್ತದೆ. ನ್ಯಾಯಕ್ಕಾಗಿ ಕಾಯುವ ಹಂತದಲ್ಲಿನ ಮಾನಸಿಕ ಹಿಂಸೆ, ಸಮಾಜದ ಹೀನ ವರ್ತನೆ ವರ್ಣನೆಗೂ ನಿಲುಕದಂತಹುದು.

ಆದರೆ ಮುಖ್ಯವಾಗಿ ಎಲ್ಲ ರೀತಿಯ ದೌರ್ಜನ್ಯವನ್ನು ಪ್ರಶ್ನಿಸುವ ದಿಟ್ಟತನ ನಮ್ಮ ಹೆಣ್ಣುಮಕ್ಕಳಿಗೆ ಬರಬೇಕು. ಕಾನೂನುಗಳ ಸಮಗ್ರ ಅರಿವಿರಬೇಕು. ಅನಿವಾರ್ಯವಾದಾಗ ಅದನ್ನು stop-rapes-bombayಬಳಸಿಕೊಳ್ಳುವ ಆತ್ಮವಿಶ್ವಾಸವಿರಬೇಕು. ಅತ್ಯಾಚಾರಕ್ಕೊಳಗಾಗಿ ದೈಹಿಕ-ಮಾನಸಿಕ ಆಘಾತಕ್ಕೀಡಾದರೂ ಆತ್ಮಹತ್ಯೆಯಂತಾ ಕ್ಷುದ್ರ ತೀರ್ಮಾನವನ್ನು ಎಂದಿಗೂ ತೆಗೆದುಕೊಳ್ಳದೇ ದಿಟ್ಟತನದಿಂದ ಬದುಕನ್ನು ಎದುರಿಸಲು ಆ ಹೆಣ್ಣುಮಕ್ಕಳನ್ನು ತಯಾರು ಮಾಡುವುದು ಹೇಗೆ ಎನ್ನುವುದು ಇನ್ನೊಂದು ಮುಖ್ಯವಾದ ಸವಾಲು. ಹಾಗೇ ಅಪರಾಧಿಗೆ ಕಠಿಣ ಶಿಕ್ಷೆ ಆದಾಗ ಅಪರಾಧ ಮಾಡುವವರಲ್ಲಿ ಭಯ ಮೂಡುತ್ತದೆ. ಸಮುದಾಯದ ಒಳಿತಿಗಾಗಿ ವೈಯಕ್ತಿಕ ಬದುಕು ಒಂದಿಷ್ಟು ಸಮಾಜದೆದುರು ತೆರೆದುಕೊಂಡರೂ ಸರಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕೇಸು ದಾಖಲು ಮಾಡಬೇಕು. ನಮ್ಮ ನಿಷ್ಠುರ ಸಮಾಜದ, ಹೆಣ್ಣಿನ ಶೀಲದ ಕುರಿತ ಕಠಿಣ ಪರಿಕಲ್ಪನೆಯನ್ನು ಆಧುನಿಕತೆಗೆ ತಕ್ಕಂತೆ ಸೂಕ್ಷ್ಮವಾಗಿ ಮಾರ್ಪಡಿಸಿಕೊಳ್ಳಬೇಕಿರುವುದು ಇಂದಿನ ತುರ್ತು. ಮದುವೆಯೇ ಅಂತಿಮ ಗುರಿಯೆಂಬ ಭ್ರಮೆಯಿಂದ ನಮ್ಮ ಹೆಣ್ಣುಮಕ್ಕಳನ್ನು ಹೊರತಂದು ಅವರಿಗೆ ತಮ್ಮತನದ ಅರಿವು, ವಿಶಾಲ ಪರಿಧಿಯ ಜಾಗೃತಿ ಮೂಡಿಸಬೇಕಿರುವುದು ಎಲ್ಲಕ್ಕಿಂತ ಮುಖ್ಯವಾದುದು.

ಹೆಣ್ಣುಮಕ್ಕಳ ನಾಪತ್ತೆ ಎಂಬ ಮಾಯಾಜಾಲ


– ರೂಪ ಹಾಸನ


14 ವರ್ಷದ ಆ ಬಾಲೆ ತನ್ನ ಟ್ಯೂಷನ್ ಮುಗಿಸಿ ಸಂಜೆಯ ಮಬ್ಬುಗತ್ತಲಿನಲ್ಲಿ ಮನೆಗೆ ಮರಳುತ್ತಿರುವಾಗ, ಹೆಂಗಸೊಬ್ಬಳು ಹತ್ತಿರ ಬಂದು ಯಾವುದೋ ಚೀಟಿ ತೋರಿಸಿ, ವಿಳಾಸ ಕೇಳುವಂತೆ ನಟಿಸಿದ್ದೊಂದೇ ಗೊತ್ತು. ಮತ್ತೆ ಮೈಮೇಲೆ ಎಚ್ಚರವೇ ಇಲ್ಲ. ಅರೆ ಮಂಪರಿನ ಎಚ್ಚರಾದಾಗ ರೈಲಿನಲ್ಲಿ ಎಲ್ಲಿಗೋ ಪ್ರಯಾಣಿಸುತ್ತಿರುವುದು, ಮಧ್ಯರಾತ್ರಿ ಮೀರಿ ಹೋಗಿರುವುದು ತಾನು ಸೀಟಿನ ಕೆಳಗಡೆ ಮಲಗಿಸಲ್ಪಟ್ಟಿರುವುದು ಅವಳ ಗಮನಕ್ಕೆ ಬಂದಿದೆ. ನಿಧಾನಕ್ಕೆ ಎಚ್ಚೆತ್ತು ಸಹಪ್ರಯಾಣಿಕರ ಗಮನ ಸೆಳೆದು ಅವರು ಈ ಹುಡುಗಿಯನ್ನು ವಿಚಾರಿಸುತ್ತಿರುವಾಗಲೇ ಇವಳನ್ನು ಕದ್ದು ತಂದಿದ್ದ ಹೆಂಗಸು ರೈಲು ನಿಂತ ಮುಂದಿನ ಸ್ಟೇಷನ್‌ನಲ್ಲಿ ಇಳಿದು ಹೋಗಿದ್ದಾಳೆ. ಅಂತೂ ಹೇಗೋ ಈ ಹುಡುಗಿ ಮನೆ ಸೇರಿದಳಾದರೂ ಪೊಲೀಸ್‌ಗೆ ದೂರು ನೀಡಿದ್ದರೆ ಆ ಹೆಂಗಸು ಸಿಕ್ಕಿ ಹಾಕಿಕೊಳ್ಳಬಹುದಾದ, ಅವಳ ಹಿಂದೆ ಇರಬಹುದಾದ ಜಾಲವನ್ನು ಪತ್ತೆ ಹಚ್ಚುವ ಎಲ್ಲ ಸಾಧ್ಯತೆಗಳಿದ್ದೂ ಬಾಲ ನ್ಯಾಯಮಂಡಳಿಗೆ ದೂರು ನೀಡಿ, ProtectingChildrenfromSexTraffickingಅವರು ಅದನ್ನು ಗಂಭೀರವಾಗಿ ಪರಿಗಣಿಸದೇ ಕೆಲದಿನಗಳಲ್ಲೇ ಕೇಸನ್ನು ಮುಚ್ಚಿಹಾಕಿದರು. ಹಾಗಿದ್ದರೆ ನ್ಯಾಯ ಎಲ್ಲಿದೆ?

ಹಳ್ಳಿಯೊಂದರ 15 ವರ್ಷ ವಯಸ್ಸಿನ ಹುಡುಗಿಯನ್ನು ಬಲವಂತದಿಂದ ನಗರದ ಪ್ರತಿಷ್ಠಿತರೊಬ್ಬರ ಮನೆಯಲ್ಲಿ ಅಪ್ಪ ಮನೆಗೆಲಸಕ್ಕೆ ಸೇರಿಸಿದ್ದಾನೆ. ಆ ಮನೆಗೆ ಬಂದ ಬಂಧುವೊಬ್ಬ ಈ ಹುಡುಗಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದ ನೆಪ ಹೇಳಿ ತನ್ನೊಂದಿಗೆ ಕರೆದುಕೊಂಡು ಹೋಗಿ, ಕೇಳಿದವರಿಗೆ ಅವಳಿಗೆ ಬುದ್ಧಿ ಸರಿಯಿಲ್ಲವೆಂದು ನಾಟಕವಾಡಿ ಅವಳ ತೀವ್ರ ವಿರೋಧದ ನಡುವೆಯೂ ಗೆಳೆಯರೊಂದಿಗೆ ಸೇರಿ ದೆಹಲಿಯ ವೇಶ್ಯಾವಾಟಿಕೆಯೊಂದಕ್ಕೆ 50,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಬೇರೊಂದು ಪ್ರಕರಣದಲ್ಲಿ ಕಣ್ಮರೆಯಾದ ಹುಡುಗಿಯನ್ನು ಹುಡುಕುತ್ತಾ ದೆಹಲಿಗೆ ಬಂದ ಕರ್ನಾಟಕ ಪೊಲೀಸರಿಗೆ ಇವಳೊಂದಿಗೇ ಇನ್ನೂ ನಾಲ್ವರು ಕಣ್ಮರೆಯಾದ ಹುಡುಗಿಯರೂ ವೇಶ್ಯಾವಾಟಿಕೆಯ ಅಡ್ಡದಲ್ಲಿ ಸಿಕ್ಕಿ ಅವರನ್ನೂ ವಾಪಸ್ ಕರೆತಂದಿದ್ದಾರೆ. ತಾಯಿ ಮಾನಸಿಕ ಅಸ್ವಸ್ಥೆ, ತಂದೆ ಕಾಮುಕ ತನ್ನನ್ನು ಬಹಳಷ್ಟು ಬಾರಿ ಲೈಂಗಿಕವಾಗಿ ಹಿಂಸಿಸಿದ್ದಾನೆ ತಾನು ಮನೆಗೆ ವಾಪಸಾಗುವುದಿಲ್ಲವೆಂದ ಹುಡುಗಿಗೆ, ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ದೊರೆತಿದೆ. ದೆಹಲಿಯಿಂದ ಬರುವಾಗಲೇ ಬಸಿರಾಗಿದ್ದ ಈ ಹುಡುಗಿಯ ಇಷ್ಟದಂತೆ ಗರ್ಭ ತೆಗೆಸಿ ಮುಂದಿನ ಓದಿಗೆ ಅನುಕೂಲ ಮಾಡಿಕೊಡಲಾಗಿದೆ. ಕದ್ದವರು, ಮಾರಾಟ ಮಾಡಿದವರು, ಇವಳನ್ನು ಉಪಯೋಗಿಸಿಕೊಂಡು ದಂಧೆ ನಡೆಸಿದವರು ನೆಮ್ಮದಿಯಾಗಿ ತಮ್ಮ ಕೆಲಸಗಳನ್ನು ಮುಂದುವರೆಸಿದ್ದಾರೆ! ಎಲ್ಲವೂ ಕನ್ನಡಿಯಲ್ಲಿ ಕಾಣುವಷ್ಟು ನಿಚ್ಚಳವಾಗಿ ಗೋಚರಿಸುತ್ತಿದ್ದರೂ ತಪ್ಪಿತಸ್ಥರು ಸಿಕ್ಕಿಬಿದ್ದಿಲ್ಲ. ಶಿಕ್ಷೆಯೂ ಇಲ್ಲ. ಎಲ್ಲವೂ ಯಥಾಸ್ಥಿತಿ ಮುಂದುವರೆದಿದೆ. ಆದರೆ ಜೀವನಪರ್ಯಂತ ಓಡಿಹೋಗಿದ್ದವಳು, ವೇಶ್ಯಾವಾಟಿಕೆ ಮಾಡಿದವಳು, ಅವಿವಾಹಿತೆಯಾಗಿಯೂ ಬಸಿರಾದವಳೆಂಬ ಶಾಶ್ವತ ಹಣೆಪಟ್ಟಿ ಈ ಹುಡುಗಿಯ ಪಾಲಿಗೆ. ಅಪರಾಧಿಗಳೇಕೆ ಮತ್ತು ಹೇಗೆ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ?

ಹೋಮ್ ನರ್ಸ್ ಸೇವಾ ಸಂಸ್ಥೆಯೊಂದಕ್ಕೆ ತರಬೇತಿಗಾಗಿ ಸೇರಿದ ಓರ್ವ 20 ರ ಹರೆಯದ ಯುವತಿ ತನ್ನ ಗೆಳತಿಯರ ಸಮೇತವಾಗಿ ಹೆಣ್ಣುಮಕ್ಕಳ ಅಕ್ರಮ ಮಾರಾಟ ಜಾಲಕ್ಕೆ ಸಿಕ್ಕಿ, ತಾನೊಬ್ಬಳು ಮಾತ್ರ ಹೇಗೋ ಅದರಿಂದ ತಪ್ಪಿಸಿಕೊಂಡು ವಾಪಸ್ ಊರಿಗೆ ಬಂದು ಅಲ್ಲಿಯೇ ಚಿಕ್ಕದೊಂದು ಕೆಲಸಕ್ಕೆ ಸೇರಿದ್ದಾಳೆ. ಸಮಾಜದ ಕುಹಕ ದೃಷ್ಟಿಯಿಂದ ನಿತ್ಯ ನರಕ ಅನುಭವಿಸುತ್ತಿದ್ದಾಳೆ. ಎಲ್ಲಿಹೋಗಿದ್ದಳೋ, ಏನೇನಾಗಿತ್ತೋ ಎಂಬ ಸಂಶಯದಿಂದ ಇವಳನ್ನು ಮದುವೆಯಾಗಲು ಯಾರೊಬ್ಬರೂ ಮುಂದೆ ಬಂದಿಲ್ಲ. ಈ ಪ್ರಕರಣ ಕುರಿತು ಪೊಲೀಸ್ ಕೇಸು ದಾಖಲಾಗಿದ್ದರೂ, child-rapeಮಾರಾಟ ಜಾಲದ ಯಾವ ಸುಳುಹುಗಳೂ ಸಿಗದೇ ಮುಚ್ಚಿಹೋಗಿದೆ. ತಪ್ಪು ಯಾರದ್ದು? ಯಾರಿಗೆ ಶಿಕ್ಷೆ?

ಜಾನಪದ ಹೆಣ್ಣೊಬ್ಬಳು ಹೊಟ್ಟೆಯ ಈ ಕಿಚ್ಚು/ ಮುಟ್ಟಲಾಗದ ಬೆಂಕಿ/ ನನ್ನ ಸಿಟ್ಟೋಗಿ ತಟ್ಟಲಿ/ ಆ ಪರಶಿವನ ಮಡದಿಗೆ ಎನ್ನುತ್ತಾಳೆ. ತನ್ನ ಅರ್ಧಂಗಿಗೇ ನೋವಾದಾಗಲಾದರೂ ಹೆಣ್ಣುಜೀವದ ಸಂಕಟವನ್ನು ಶಿವ ಅರ್ಥ ಮಾಡಿಕೊಂಡಾನೇ? ಎಂಬ ಹಲುಬುವಿಕೆ ಅವಳದ್ದು. ಹೆಂಗಳೆಯರು ನಾವಂತೂ, ನಮ್ಮದೇ ಹೆಣ್ಣು ಸಂಕುಲದ ದಾರುಣ ನೋವನ್ನು ನೋಡುವಾಗಲೆಲ್ಲಾ, ಸಂಕಟದಿಂದ ಅವರ ಮನೆ ಹೆಣ್ಣುಮಕ್ಕಳಿಗೇ ಹೀಗೆಲ್ಲ ಆಗಿದ್ದರೆ, ಹೀಗೇ ಸುಮ್ಮನೆ ಇರ್‍ತಿದ್ದರಾ? ಎಂದು ಪುರುಷ ಪ್ರಭುತ್ವಕ್ಕೆ ಮನಸಿನಾಳದಲ್ಲೇ ಶಾಪ ಹಾಕುತ್ತಿರುತ್ತೇವೆ! ಆದರೆ ತನ್ನದೇ ಅರ್ಧಭಾಗವಾಗಿರುವ ಹೆಣ್ಣುಜೀವದ ನೋವನ್ನು ಅರ್ಥಮಾಡಿಕೊಳ್ಳುವ, ಅದಕ್ಕಾಗಿ ತುಡಿಯುವ ಸಂವೇದನೆಯನ್ನು ನಮ್ಮ ಸುತ್ತಲಿನ ಪುರುಷ ಪ್ರಪಂಚ ರೂಢಿಸಿಕೊಳ್ಳಬಾರದೇ? ಇದು ಸದಾ ನಮ್ಮನ್ನು ಕಾಡುತ್ತಲೇ ಇದೆ.

ಹೆಣ್ಣುಜೀವದ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳ ಜೊತೆಗೇ ರಾಜ್ಯದಲ್ಲಿ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಆತಂಕ ಹುಟ್ಟಿಸುವಷ್ಟು ಮಿತಿಮೀರಿದೆ. ಪ್ರತಿದಿನ ಪತ್ರಿಕೆಯ ಸ್ಥಳೀಯ ಪುಟಗಳಲ್ಲಿ ಒಂದಲ್ಲಾ ಒಂದು ಹೆಣ್ಣುಮಕ್ಕಳ ನಾಪತ್ತೆಗೆ ಸಂಬಂಧಿಸಿದ ಸುದ್ದಿ ಈಗ ಮಾಮೂಲಿಯಾಗಿಬಿಟ್ಟಿದೆ. ರಾಜ್ಯದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ 2009 ರಿಂದ 2011 ರವರೆಗೆ ದಾಖಲಾದ ನಾಪತ್ತೆಯಾದ ಹೆಣ್ಣುಮಕ್ಕಳು 14,989. rape-illustrationನಾವಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮರ್ಯಾದೆಗೆ ಅಂಜಿ ದಾಖಲಾಗದವು ಇದರ ದುಪ್ಪಟ್ಟೋ ಮೂರುಪಟ್ಟೋ ಇದ್ದರೂ ಅಚ್ಚರಿಪಡಬೇಕಿಲ್ಲ. ಆದರೆ ದಾಖಲಾದವುಗಳಲ್ಲೇ ಪತ್ತೆಯಾಗದೇ ಉಳಿದ ಹೆಣ್ಣುಮಕ್ಕಳು 8039! ಜೊತೆಗೆ 2012 ರಲ್ಲಿ ನಾಪತ್ತೆಯಾದವರು 8084! ಇವರೆಲ್ಲಾ ಏನಾದರು? ಎಲ್ಲಿ ಹೋಗುತ್ತಾರೆ? ನಾಪತ್ತೆಯಾಗುವುದು ಎಂದರೆ ಏನು? ತಾವಾಗೆಯೇ ನಾಪತ್ತೆಯಾಗಿಬಿಡುತ್ತಾರೆಯೇ? ಅಥವಾ ಕಾಣದ ಕೈಗಳು ಅವರನ್ನು ನಾಪತ್ತೆ ಮಾಡಿಬಿಡುತ್ತವೆಯೇ? ಅವರನ್ನು ಕಾಳಜಿಯಿಂದ ಹುಡುಕುವ ಕೆಲಸವಾಗುತ್ತಿಲ್ಲ ಯಾಕೆ? ಈ ಪ್ರಮಾಣದಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿದ್ದರೂ ಅದು ನಮ್ಮ ವ್ಯವಸ್ಥೆಯ ಕರುಳನ್ನು ಅಳ್ಳಾಡಿಸುತ್ತಿಲ್ಲವೇಕೆ?

ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾರ್ಮಿಕ ಇಲಾಖೆ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಬಾಲ ನ್ಯಾಯ ಮಂಡಳಿ, ಮಹಿಳೆ ಮತ್ತು ಮಕ್ಕಳ ಪರ ಹಲವು ಸರ್ಕಾರಿ ಆಯೋಗಗಳು, ಸಮಿತಿಗಳು…… ಇಂತಹ ಹತ್ತು ಹಲವು ವ್ಯವಸ್ಥೆಗಳು ಪ್ರಕರಣಗಳನ್ನು ನೇರವಾಗಿ ನಿರ್ವಹಿಸುತ್ತಿದ್ದರೂ ಹೆಣ್ಣುಮಕ್ಕಳ ನಾಪತ್ತೆ ನಿಯಂತ್ರಣಕ್ಕೆ ಬರದೇ ಅದಕ್ಕಾಗಿ ಪ್ರತ್ಯೇಕವಾದ ಯಾವ ಗಂಭೀರ ಕ್ರಮವನ್ನೂ, ಕಾರ್ಯಯೋಜನೆಯನ್ನೂ ತೆಗೆದುಕೊಳ್ಳುತ್ತಿಲ್ಲವೆಂದರೆ ಹೆಣ್ಣುಮಕ್ಕಳನ್ನು ರಕ್ಷಿಸುವವರಾರು?

ಮಹಿಳೆಯರ ಕಳ್ಳಸಾಗಾಣಿಕೆಯ ಹಿಂದಿರುವ ಸತ್ಯಸಂಗತಿಗಳನ್ನು ಅರಿಯಲು ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಡೆಸಿದ ಅಧ್ಯಯನದಿಂದ ಹಲವಾರು ಬೆಚ್ಚಿಬೀಳುವಂತಹ ಅಂಶಗಳು ಹೊರಬಿದ್ದಿವೆ. ಕಳ್ಳಸಾಗಾಣಿಕೆ ಜಾಲಕ್ಕೆ ಸಿಕ್ಕಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟವರಲ್ಲಿ ಶೇಕಡಾ 60.6 ರಷ್ಟು ಮಂದಿ ಬಾಲ್ಯವಿವಾಹವಾದವರೇ! ಕಳ್ಳಸಾಗಾಣಿಕೆಯ ವ್ಯವಹಾರದಲ್ಲಿ ನಿರತರಾದ ದಲ್ಲಾಳಿಗಳು ಮಹಿಳೆಯರನ್ನು ಹೆಚ್ಚಾಗಿ ಒಳ್ಳೆಯ ಕೆಲಸದ ಭರವಸೆ ನೀಡಿಯೇ ಬಲಿಪಶು ಮಾಡುತ್ತಿದ್ದಾರೆ. ಪ್ರೀತಿ ಅಥವಾ ಮದುವೆಯ ಭರವಸೆ ನೀಡಿ ಈ ಜಾಲಕ್ಕೆ ಕೆಡಹುವುದು ಶೇಕಡಾ 20 ಮಾತ್ರ! ವಂಚನೆಗೊಳಗಾದವರಲ್ಲಿ ತಳವರ್ಗದವರೇ ಹೆಚ್ಚಿದ್ದು, ಶೇಕಡಾ 70 ರಷ್ಟು ಮಹಿಳೆಯರು ತಳಸಮುದಾಯದವರು!

ಜಾಗತಿಕವಾಗಿ ಮಹಿಳೆಯರ ಮತ್ತು ಮಕ್ಕಳ ಮಾರಾಟದಲ್ಲಿ ಭಾರತವು ಪ್ರಮುಖ ತಾಣವಾಗಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. human_trafficking90 ರ ದಶಕದಿಂದ ಎಲ್ಲಾ ಸರ್ಕಾರಗಳು ಜಾರಿಗೊಳಿಸಿದ ಜಾಗತೀಕರಣದ ನೀತಿಗಳು ಮಹಿಳೆಯರ ಮತ್ತು ಮಕ್ಕಳ ಮಾರಾಟ ಅತಿ ಹೆಚ್ಚು ಬೆಳೆಯಲು ಕಾರಣವಾಗಿದೆ. 2010 ರ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ವರದಿಯಂತೆಯೇ ಸದ್ಯ 25 ಲಕ್ಷ ಮಹಿಳೆಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ. ಆದರೆ ಮಾನವ ಹಕ್ಕುಗಳ ವಾಚ್‌ನ ವರದಿಯಂತೆ ಇದುವರೆಗೆ ಅಂದಾಜು 150 ಲಕ್ಷ (ಒಂದೂವರೆ ಕೋಟಿ) ಭಾರತದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ! ಹೆಣ್ಣುಮಕ್ಕಳ ಅಕ್ರಮ ಮಾರಾಟವೆಂಬುದು ಈಗ ಸೀಮಿತ ಚೌಕಟ್ಟುಗಳನ್ನು ದಾಟಿ, ರಾಜ್ಯ-ಅಂತರ್‌ರಾಜ್ಯ ಮಿತಿಗಳನ್ನು ಮೀರಿ ರಾಷ್ಟ್ರ ಹಾಗೂ ಜಾಗತಿಕ ವಿದ್ಯಮಾನವಾಗಿ ಸದ್ದಿಲ್ಲದೇ ಬೆಳೆದು ನಿಂತಿದೆ.

ನಾಪತ್ತೆಯಾದ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಅಡ್ಡಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಣಿಕಾ ಜಾಲವನ್ನು ಭೇದಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಎಲ್ಲವೂ ಗೊತ್ತಿದ್ದೂ ಹೆಣ್ಣುಮಕ್ಕಳನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿದೆಯೇ? ಹೆಣ್ಣಿನ ದೇಹವನ್ನು ವಸ್ತುವನ್ನಾಗಿಸಿಕೊಂಡು ವ್ಯಾಪಾರದ ಆಟವಾಡುತ್ತಿರುವವರಿಗೆ ನಾಪತ್ತೆಯಾದ ಹೆಣ್ಣುಮಕ್ಕಳೇ ಬಂಡವಾಳ ಹೂಡಿಕೆಯಾಗಿ ಬಳಕೆಯಾಗುತ್ತಿದ್ದಾರೆ. ಅದರಿಂದ ಕೋಟಿಗಟ್ಟಲೆ ಆದಾಯ ದೊರಕುತ್ತಿದೆ! ಇದು ಕೇವಲ ಮಹಿಳಾ ಹಕ್ಕಿನ ವಿಷಯವಲ್ಲ, ಮನುಷ್ಯತ್ವದ ಕಟ್ಟಕಡೆಯ ಮಜಲು ಎಂದು ಸರ್ಕಾರಕ್ಕೆ ಹೃದಯ ದ್ರವಿಸುವಂತೆ ಹೇಗೆ ಅರ್ಥಮಾಡಿಸುವುದು?

ಕಳೆದ 2012 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ತಂಡ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸರಾಸರಿ 200-300 ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 70 ರಷ್ಟು ಇನ್ನೂ ಬಾಲ್ಯದಾಟದವರು ಎನ್ನುವುದು ಆತಂಕಕಾರಿಯಾಗಿದೆ. ರಾಜ್ಯ ಮಹಿಳಾ ಆಯೋಗವೂ ಕಳೆದ ವರ್ಷ ಈ ವರದಿಯನ್ನಾಧರಿಸಿ- ಶೇಕಡಾ 36 ರಷ್ಟು ಹೆಣ್ಣುಮಕ್ಕಳು ಪ್ರೀತಿ, ಪ್ರೇಮ ಪ್ರಕರಣಗಳಿಗಾಗಿ ಓಡಿ ಹೋಗುತ್ತಾರೆ ಎಂದು ಒತ್ತಿ ಹೇಳಿದೆ. ಹಾಗಿದ್ದರೆ ಅವರೊಂದಿಗೆ ಇಷ್ಟೇ ಪ್ರಮಾಣದ ವಯಸ್ಕ ಪುರುಷರೂ ನಾಪತ್ತೆಯಾಗಬೇಕಿತ್ತಲ್ಲ? ಈ ಬಗ್ಗೆ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳನ್ನು ಅಭ್ಯಸಿಸಿದಾಗ ಹಾಗೆ ನಾಪತ್ತೆಯಾದ ಪುರುಷರ ಪ್ರಮಾಣ ಶೇಕಡಾ 5 ರೊಳಗೇ ಇದೆ! ಇದರಲ್ಲೂ ಪ್ರೀತಿ ಪ್ರೇಮಕ್ಕಿಂತಾ ಬೇರೆ ವೈಯಕ್ತಿಕ ಕಾರಣಗಳೇ ಮುಖ್ಯವಾಗಿವೆ. ಹಾಗಿದ್ದರೆ ನಮ್ಮ ಹೆಣ್ಣುಮಕ್ಕಳು ಯಾರನ್ನು ಪ್ರೀತಿಸಿ ಓಡಿ ಹೋಗುತ್ತಿದ್ದಾರೆ? ನಮ್ಮ ಹೆಣ್ಣುಮಕ್ಕಳೇನು ಮೀರಾ, ಅಕ್ಕಮಹಾದೇವಿ, ಆಂಡಾಳ್‌ರಂತೆ ಸಂತಭಕ್ತೆಯರೇ? ಇದು ಏನನ್ನು ಸೂಚಿಸುತ್ತದೇ? ಹೆಣ್ಣುಮಕ್ಕಳ ವ್ಯವಸ್ಥಿತವಾದ ಮಾರಾಟ ಜಾಲವನ್ನು ನಿಗೂಢ ಕೈಗಳು ವ್ಯವಸ್ಥಿತವಾಗಿ ನಿರಾತಂಕವಾಗಿ ನಡೆಸುತ್ತಿವೆ ಎಂದಲ್ಲವೇ? ಪ್ರೀತಿಸಿ ಮನೆ ಬಿಟ್ಟು ಹೋಗುತ್ತಿರುವ ಹೆಣ್ಣುಮಕ್ಕಳು ಇಲ್ಲವೇ ಇಲ್ಲವೆಂದಲ್ಲ. ಆದರೆ ಪ್ರೀತಿಯ ಹಿಂದೆ ಬಿದ್ದು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದರೆ ಅವರನ್ನು ಪತ್ತೆ ಹಚ್ಚುವುದು ಕಷ್ಟವಾದರೂ ಸಾಧ್ಯ. ಆದ್ದರಿಂದ ಹೆಣ್ಣುಮಕ್ಕಳು ಶಾಶ್ವತವಾಗಿ ಕಾಣೆಯಾಗುವುದರ ಹಿಂದೆ ಮೋಸದ ಮಾಯಾ ಜಾಲ ಹರಡಿ ನಿಂತಿರುತ್ತದೆ ಎಂಬುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರಲ್ಲವೇ?

ಈ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಣೆಕೆಯೆಂಬ ಕ್ರೂರ ವ್ಯವಹಾರ ನಿಯಂತ್ರಣಕ್ಕೆ ಇನ್ನಾದರೂ ಸರ್ಕಾರದ ಉನ್ನತ ಹಂತದಲ್ಲಿ ಸಮಗ್ರವಾದ ಕಾರ್ಯಯೋಜನೆ ಅತ್ಯಂತ ತುರ್ತಾಗಿ ಆಗಬೇಕಿದೆ. ಇದಕ್ಕೆ ಸಂಬಂಧಿತವಾದ ಎಲ್ಲಾ ಇಲಾಖೆಗಳು, ಸರ್ಕಾರಿ ಸಮಿತಿಗಳೂ ಹಾಗೂ ಸ್ವಯಂಸೇವಾ ಸಂಸ್ಥೆಗಳು ಸಂಘಟಿತವಾಗಿ, ಪರಸ್ಪರ ಪೂರಕವಾಗಿ ಈ ಕೆಲಸದಲ್ಲಿ ತೊಡಗಿಕೊಳ್ಳಬೇಕಿದೆ. ಈ ವಿಷಯದ ಗಂಭೀರತೆಗೆ ತಕ್ಕ ಸಶಕ್ತವಾದ ಕಾನೂನುಗಳು ಇಲ್ಲದಿರುವುದು, ಇದ್ದರೂ ಅದರೊಳಗಿನ ನುಸುಳುಗಳು, ಜತೆಗೆ ನ್ಯಾಯದಾನದ ವಿಳಂಬ ಹಾಗೂ ಕಾನೂನು ಜಾರಿಯಲ್ಲೂ ವಿಳಂಬ, ಹೀಗಾಗಿ ಈ ಅಕ್ರಮ ವ್ಯವಹಾರ ಎಗ್ಗಿಲ್ಲದೇ ನಡೆಯುತ್ತಿವೆ. ಅದಕ್ಕಾಗಿ ತ್ವರಿತಗತಿಯ ನ್ಯಾಯಾಲಯಗಳಲ್ಲಿ ತಕ್ಷಣವೇ ನ್ಯಾಯ ನೀಡುವ ವ್ಯವಸ್ಥೆಯಾಗಬೇಕು. ಜೊತೆಗೇ ಇಂದಿನ ಅವಶ್ಯಕತೆಗನುಗುಣವಾಗಿ ಕಾನೂನು ತಿದ್ದುಪಡಿಯೂ ಆಗಬೇಕಿದೆ.

30 ಮೇ 2005 ರಲ್ಲಿ ಕರ್ನಾಟಕ ಸರ್ಕಾರದಿಂದ, ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹೆಣ್ಣುಮಕ್ಕಳ ಮಾರಾಟ ತಡೆ ಸಮಿತಿಗಳನ್ನು ರಚಿಸಲು ಆದೇಶ ಜಾರಿಯಾಯ್ತು. ಅದು ಯಶಸ್ವಿಯಾಗಿ ಜಾರಿಯಾಗಲಿಲ್ಲವೆಂದು ಮತ್ತೆ 28 ಮೇ 2007 ರಲ್ಲಿ, ಚುನಾಯಿತ ಪ್ರತಿನಿಧಿಗಳ ಮುಖಂಡತ್ವದಲ್ಲಿ ಈ ಸಮಿತಿಗಳನ್ನು ಪುನರ್ ರಚಿಸಬೇಕೆಂಬ ಆದೇಶ ಜಾರಿಯಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ child-traffickingಈ ಸಮಿತಿಯ ಸಭೆ ಸೇರಿ ಕಾರ್ಯಯೋಜನೆಯ ಸಿದ್ಧತೆ ಹಾಗೂ ಆದ ಕೆಲಸಗಳ ಪರಾಮರ್ಶೆ ಮಾಡಬೇಕೆಂದು ಆದೇಶದಲ್ಲಿ ಒತ್ತಿಹೇಳಲಾಗಿತ್ತು. ಆದರೆ ಬಹಳಷ್ಟು ಕಡೆಗಳಲ್ಲಿ ಇಂತಹ ಸಮಿತಿ ರೂಪುಗೊಂಡಿಲ್ಲ. ರೂಪುಗೊಂಡ ಸಮಿತಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬುದು ದುಃಖಕರ. ಈ ಸಮಿತಿ 10 ಜನ ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಡ್ಡಾಯವಾಗಿ ಒಬ್ಬ ಪೊಲೀಸ್ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಜೊತೆಗೆ 10 ಜನ ಜವಾಬ್ದಾರಿಯುತ ಸಾರ್ವಜನಿಕರನ್ನೊಳಗೊಂಡು [5 ಮಂದಿ ಪುರುಷರು, 5 ಮಂದಿ ಮಹಿಳೆಯರು] ಮೂಲಮಟ್ಟದಲ್ಲಿ ಪುನರ್ ರಚಿತವಾಗಬೇಕು. ಈ ಕಣ್ಗಾವಲು ಸಮಿತಿ ಕನಿಷ್ಠ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸಾರ್ವಜನಿಕರನ್ನೊಳಗೊಂಡಾಗ ಮಾತ್ರ ಸಮಿತಿ ನಿಗದಿತವಾಗಿ ಸೇರಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪೊಲೀಸ್ ಇಲಾಖೆಯಲ್ಲೇ ಇಂತಹ ನಾಪತ್ತೆ ಪ್ರಕರಣಗಳನ್ನು ಶೀಘ್ರವಾಗಿ ವ್ಯವಹರಿಸಲು ಪ್ರತ್ಯೇಕ ಸೆಲ್ ಒಂದನ್ನು ರಚಿಸುವ ತುರ್ತು ಕೂಡ ಹೆಚ್ಚಾಗಿದೆ. ಈ ಕುರಿತು ಸರ್ಕಾರದ ಉನ್ನತಮಟ್ಟದಲ್ಲಿ ಕಾರ್ಯಯೋಜನೆಯೊಂದು ರೂಪುಗೊಂಡು, ಅದರ ಅನುಷ್ಠಾನಕ್ಕಾಗಿ ಬಿಗಿ ಕ್ರಮಗಳನ್ನು ಜಾರಿಗೊಳಿಸಬೇಕು.

ಇದರ ಜೊತೆಗೇ ಹದಿಹರೆಯದ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಲೈಂಗಿಕ ಶಿಕ್ಷಣ ಮತ್ತು ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಜೀವನ ಕೌಶಲ್ಯಗಳ ಕುರಿತು ತರಬೇತಿ, ಮಾನವ ಕಳ್ಳಸಾಗಾಣಿಕೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಅಷ್ಟೇ ಮುಖ್ಯವಾಗಿದೆ.

ನಾಪತ್ತೆಯಾಗಿ ಮತ್ತೆ ಪತ್ತೆಯಾದ ಹೆಣ್ಣುಮಕ್ಕಳಿಗೆ ಗೌರವಯುತ ಪುನರ್ವಸತಿ ನಿರ್ಮಿಸುವ ಕುರಿತು, ಅವರ ಸಹಜ ಹಕ್ಕುಗಳನ್ನು ದೊರಕಿಸಿಕೊಡುವ ಕುರಿತು ಸರ್ಕಾರ ವಿಶೇಷವಾಗಿಯೇ ಯೋಚಿಸಬೇಕಿದೆ. ಅವರು ಮತ್ತೆ ಇಂತಹ ಅಕ್ರಮ ಮಾರಾಟ ಜಾಲಕ್ಕೆ ಬೀಳದಂತೆ ತಡೆಯುವ ಪ್ರಯತ್ನಗಳೂ ಆಗಬೇಕಿದೆ. ವಾಪಸಾದ ಹೆಣ್ಣುಮಕ್ಕಳು ಹೇಗೆ ನಾಪತ್ತೆಯಾದರು? ಇಷ್ಟು ಕಾಲ ಎಲ್ಲಿದ್ದರು? ಯಾವ ಕೆಲಸದಲ್ಲಿದ್ದರು? ಅಲ್ಲಿನ ವ್ಯವಸ್ಥೆ ಮತ್ತು ವ್ಯವಹಾರಗಳು ಯಾವ ರೀತಿಯದಾಗಿತ್ತು ಎಂಬುದರ ಕೂಲಂಕಷ ಸಮೀಕ್ಷೆಗಳಾಗಿ ಅದರ ಆಧಾರದ ಮೇಲೆ ಕಾರ್ಯಯೋಜನೆಯನ್ನು ಸಿಧ್ಧಗೊಳಿಸಬೇಕು. ಇಂತಹ ಸಮೀಕ್ಷೆಯಿಂದ ಮಾತ್ರ ನಾಪತ್ತೆ ಹಿಂದಿರುವ ವೈಯಕ್ತಿಕ ಕಾರಣಗಳು, ಕೌಟುಂಬಿಕ, ಆರ್ಥಿಕ, ಸಾಮಾಜಿಕ ಕಾರಣಗಳು ಪತ್ತೆಯಾಗಿ ಅವುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಲು ಹಾಗೂ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತವೆ. ಇಲ್ಲಿ ನಮಗೆ ಬೇಕಾಗಿರುವುದು, ಬೇಡುತ್ತಿರುವುದು-ನಮ್ಮ ಮನೆಯ ಹೆಣ್ಣುಮಗಳೇ ನಾಪತ್ತೆಯಾಗಿದ್ದರೆ….. ಎಷ್ಟು ತೀವ್ರವಾಗಿ ಸ್ಪಂದಿಸುತ್ತಿದ್ದೆವೋ, ಅಂತಹುದೇ ತೀವ್ರತೆಯನ್ನು ಪ್ರಭುತ್ವದಿಂದಲೂ, ಆಡಳಿತಶಾಹಿಯಿಂದಲೂ ನಾವು ನಿರೀಕ್ಷಿಸಬಹುದೇ?

ಹೆಣ್ಣಿನ ದೇಹಮಾರಾಟವೆಂಬ ವೃತ್ತಿ


– ರೂಪ ಹಾಸನ


ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿದಂತೆ ಇದುವರೆಗೆ ಧಾರ್ಮಿಕ ಕಟ್ಟು ಪಾಡುಗಳ ಸಂಕೋಲೆಯೊಳಗೆ ನಿಕೃಷ್ಟವಾಗಿ ನರಳುತ್ತಿದ್ದ ಹೆಣ್ಣು ದೇಹ, ಇಂದು ಶೋಷಣೆಯ ಅನೇಕ ಹೊಸ ರೂಪಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಹೊರಟಿರುವುದಕ್ಕಿಂಥಾ ಘೋರ ದುರಂತ ಮತ್ತಿನ್ನೇನಿದೆ? ಇಂದು ದೇವದಾಸಿ ಪದ್ಧತಿ, ಬಸವಿ, ಬೆತ್ತಲೆ ಸೇವೆ, ಜೋಗತಿಯಂಥಾ ಅನಿಷ್ಟ ಪದ್ಧತಿಗಳು yellamma-neem-leaves-devadasiನಿಧಾನಕ್ಕೆ ಕಡಿಮೆಯಾಗುತ್ತಿವೆ ಎನ್ನುತ್ತಿರುವಾಗಲೇ, ಅದರ ಅವಳಿ ರೂಪವಾಗಿ ವೇಶ್ಯಾವಾಟಿಕೆಯ ಜಾಲ ವಿಸ್ತೃತವಾಗಿ ನಗರ-ಪಟ್ಟಣವೆನ್ನದೇ ವ್ಯಾಪಕವಾಗಿ ಹಬ್ಬುತ್ತಿದೆ.

ದೇಶದಲ್ಲಿರುವ ಲೈಂಗಿಕ ವೃತ್ತಿ ನಿರತರ ಸಮೀಕ್ಷೆ ನಡೆಸಲು ಇತ್ತೀಚೆಗೆ ಸುಪ್ರೀಮ್ ಕೋರ್ಟ್ ಸಮಿತಿ ರಚಿಸಿರುವುದು ಅತ್ಯಂತ ಸ್ವಾಗತಾರ್ಹವಾದ ವಿಚಾರ. ಈ ಸಮಿತಿ ಲೈಂಗಿಕ ವೃತ್ತಿನಿರತರ ಪರ್ಯಾಯ ಉದ್ಯೋಗ, ಜೀವನಮಟ್ಟ ಸುಧಾರಣೆ, ಪುನರ್ವಸತಿ, ಮಾನವ ಕಳ್ಳಸಾಗಾಣಿಕೆ ತಡೆ ಸೇರಿದಂತೆ ಹಲವು ಉದ್ದೇಶಗಳನ್ನಿಟ್ಟುಕೊಂಡು ಸ್ಥಾಪಿತವಾಗಿದೆ. ಆದರೆ ವೇಶ್ಯಾವೃತ್ತಿಯ ಕಬಂಧ ಬಾಹುಗಳು ಅತ್ಯಂತ ಸೂಕ್ಷ್ಮ ಎಳೆಗಳ ಮೇಲೆ ನಿಂತಿರುವುದರಿಂದ ಇದಕ್ಕೆ ಅಷ್ಟೇ ಸೂಕ್ಷ್ಮ ತಯಾರಿ, ಕಾರ್ಯಯೋಜನೆ ಮತ್ತು ಹಿನ್ನೆಲೆಯನ್ನು ಎಳೆಎಳೆಯಾಗಿ ಅಭ್ಯಸಿಸುವ ಅವಶ್ಯಕತೆಯಿದೆ. ಇದೊಂದು ಅತ್ಯಂತ ಸಂಕೀರ್ಣವಾದ ಸಮಸ್ಯೆಯಾಗಿದ್ದು ಇದರ ಹಿಂದೆ ಧಾರ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಎಲ್ಲಕ್ಕೂ ಮುಖ್ಯವಾಗಿ ಮಾನಸಿಕ ಸೂಕ್ಷ್ಮತೆಗಳು ತಳುಕು ಹಾಕಿಕೊಂಡಿವೆ.

ಹೀಗಾಗಿ ಈ ಸಮೀಕ್ಷೆ ಕೇವಲ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸುವ ಕೆಲಸವಾಗದೇ, ಅವರಿಗೆ ವೃತ್ತಿ ಗೌರವ, ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಿ, ಅವರ ಮಕ್ಕಳು ಈ ವೃತ್ತಿಗಿಳಿಯದಂತೆ ನೋಡಿಕೊಂಡು ಅವರಿಗೆ ಬೇರೆ ಕೆಲಸದ ಭದ್ರತೆ ದೊರೆಯುವಂತಾಗಬೇಕು. ಈಗಾಗಲೇ ಸುಪ್ರೀಮ್ ಕೋರ್ಟ್ ತಿಳಿಸಿರುವಂತೆ ಪುನರ್ವಸತಿ ಅವಳ ಆಯ್ಕೆಯೇ ಆಗಿರಬೇಕು. ಆದರೆ ಲೈಂಗಿಕವೃತ್ತಿಯನ್ನು ಮೀರಿ ಹೊಸದಾದ ಬದುಕು ಕಟ್ಟಿಕೊಳ್ಳುವಂತಾಗಲು ಸಮಾಜ, ಸರ್ಕಾರ, ಖಾಸಗಿ ಸಂಸ್ಥೆಗಳು, ನ್ಯಾಯಾಲಯಗಳೂ ಅವಳ ಸಹಾಯಕ್ಕೆ, ಸಹಕಾರಕ್ಕೆ ಬರಬೇಕು

ಈಗಾಗಲೇ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ವಿವರಣೆಯಂತೆ ಸಧ್ಯಕ್ಕೆ ದೇಶದಲ್ಲಿ 13 ಲಕ್ಷ ‘ದಾಖಲಾದ’ ಲೈಂಗಿಕ ಕಾರ್ಯಕರ್ತೆಯರಿದ್ದಾರೆಂದು ಭಾರತ ಸರ್ಕಾರ ವಿವರಣೆ ನೀಡಿದೆ. ಇದರಲ್ಲಿ ಶೇಕಡ 40 ರಷ್ಟು ಅಪ್ರಾಪ್ತ ಹೆಣ್ಣುಮಕ್ಕಳು! ‘ದಾಖಲಾಗದೇ’ ಹೊರಗುಳಿದವರ ಸಂಖ್ಯೆ ಇದರ ಮೂರರಷ್ಟಿದೆ ಎಂಬ ಅಂದಾಜಿದೆ. ಇದರಲ್ಲಿ ಕಾಲ್‌ಗರ್ಲ್‌ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರಿಕರಣದ ಲೇಬಲ್ ಇಲ್ಲದ ‘rape-illustrationಸಭ್ಯ-ನಾಗರಿಕ’ ವ್ಯಭಿಚಾರವೂ ಸೇರುತ್ತದೆ. ಇವರಲ್ಲಿ ಹೆಚ್ಚಿನವರು ಬಡ ಕುಟುಂಬಗಳಿಂದ ಬಂದವರು. ‘ನಮ್ಮ ಆರ್ಥಿಕ ಅವಶ್ಯಕತೆಗಳು ಬೇರೆ ರೀತಿಯಲ್ಲಿ ಪೂರೈಕೆಯಾದರೆ ನಾವು ಖಂಡಿತಾ ಈ ವೃತ್ತಿಯನ್ನು ಬಿಡುತ್ತೇವೆ’ ಎನ್ನುತ್ತಾರವರು. ಈ ದಾಖಲೆಗೆ ಒಳಪಡದ ಇನ್ನೂ ಬೃಹತ್ ಮೊತ್ತ ಹೊರಗೇ ಇರುವುದೂ ನಿರ್ವಿವಾದ. ದಾಖಲಾದವರು ಬಡತನದ ದಳ್ಳುರಿಗೆ, ಅಸಹಾಯಕತೆಗೆ, ಅನಿವಾರ್ಯತೆಗೆ, ಆಕಸ್ಮಿಕಕ್ಕೆ, ಮೋಸಕ್ಕೆ, ವಂಚನೆಯ ಜಾಲಕ್ಕೆ ಸಿಕ್ಕಿ ಈ ವೃತ್ತಿಗಿಳಿಯುತ್ತಿದ್ದಾರೆಯೇ ಹೊರತು ವೇಶ್ಯಾವಾಟಿಕೆ ಅವರ ಆಯ್ಕೆ ಅಲ್ಲ ಎಂಬುದನ್ನು ನಮ್ಮ ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ. ಮಹಿಳೆಯರು ಬೇರೆ ದಾರಿಯಿಲ್ಲದೇ ಅಸಹಾಯಕರಾಗಿ ವೇಶ್ಯಾವಾಟಿಕೆಗೆ ಇಳಿಯಬೇಕಾಗಿ ಬಂದಿರುವುದು, ನಮ್ಮ ರೋಗಿಷ್ಟ ಸಮಾಜದ ದ್ಯೋತಕವಲ್ಲದೇ ಮತ್ತಿನ್ನೇನು?

ಎಳೆಯ ಬಾಲೆಯರನ್ನು, ಹದಿಹರೆಯದವರನ್ನು, ಮಹಿಳೆಯರನ್ನು ಅಪಹರಿಸಿ ಅವರನ್ನು ಅವರ ದೇಹ ಸಂಬಂಧಿ ವ್ಯಾಪಾರಗಳಲ್ಲಿ ತೊಡಗಿಸುವ ದಂಧೆ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ಈ ದಂಧೆಗೆ ಇಂತಹುದೇ ಎಂದು ನಿರ್ದಿಷ್ಟ ಹೆಸರಿಲ್ಲ. ಇದಕ್ಕೆ ಸೇವೆ, ಮನೆಗೆಲಸ, ಪಬ್, ಬಾರ್, ಡಾನ್ಸ್‌ಬಾರ್, ಮಸಾಜ್‌ಪಾರ್ಲರ್, ಪ್ರವಾಸೋದ್ಯಮ ಇತ್ಯಾದಿಗಳ ಮುಖವಾಡವಿದ್ದರೂ ಕೊನೆಗಿದು ವೇಶ್ಯಾವಾಟಿಕೆಯ ದಂಧೆ! ಬೇರೆ ಬೇರೆ ಹೆಸರಿದ್ದರೂ ಸೇವೆಯ ಸ್ವರೂಪ ಮಾತ್ರ ಲೈಂಗಿಕ ಸೇವೆ! ಭಾರತದ ಆರು ಮಹಾನಗರಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಬಾಲೆಯರು ವೇಶ್ಯಾವಾಟಿಕೆಯಲ್ಲಿ ತೊಡಗಬೇಕಾಗಿ ಬಂದಿರುವುದು ನಮ್ಮ ಕಾನೂನು, ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯೂ ಆಗಿದೆ. ಹೀಗಾಗೇ ವಿಶ್ವದಲ್ಲಿ ಮೂರನೆ ಅತಿ ಹೆಚ್ಚು ವ್ಯಾಪಾರಿ ವಹಿವಾಟನ್ನು ಹೊಂದಿರುವ ದಂಧೆ ಎಂದರೆ ಸೆಕ್ಸ್ ದಂಧೆ! [ಮೊದಲನೆಯದು ಮಾರಕಾಸ್ತ್ರ, ಎರಡನೆಯದು ಮಾದಕದ್ರವ್ಯ.] ಈ ಆದ್ಯತೆಗಳೇ ಮನುಷ್ಯ ಸಂಕುಲ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯಾಗಿದೆ. ನಾವು ‘ಮಾನವ ಹಕ್ಕುಗಳ ರಕ್ಷಣೆ’ಯ ಬಗ್ಗೆ ಹೆಣ್ಣನ್ನು ಪಕ್ಕಕ್ಕಿಟ್ಟು, ಗಂಟಲು ಹರಿಯುವಂತೆ ಭಾಷಣ ಮಾಡುತ್ತಿದ್ದೇವೆ. ಹೆಣ್ಣುಮಕ್ಕಳ ದೇಹ ಸದ್ದಿಲ್ಲದೇ ಬಿಕರಿಗೆ ಬಿದ್ದಿದೆ!

ಒಂದೆಡೆ ವೇಶ್ಯಾವಾಟಿಕೆ ಕಾನೂನುಬಾಹಿರವಾದರೂ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೇ ನಡೆಯುತ್ತಿರುವ ಅಡ್ಡಾಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಮಿತಿಮೀರಿ ಏರುತ್ತಿದೆ. Transexual, transgenders and Aravani gay men in Tamil Nadu, Indiaವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಕಾಂಡೊಂಗಳ ವಿತರಣೆ, ಹೆಚ್‌ಐವಿ, ಏಡ್ಸ್, ಇತರ ಲೈಂಗಿಕ ಗುಪ್ತ ರೋಗಗಳ ಕುರಿತು ತಿಳಿವಳಿಕೆ ನೀಡಿ ಸಮಾಜಕ್ಕೆ ಈ ಸೋಂಕು ಹರಡದಂತೆ ‘ಸುರಕ್ಷಿತ ಲೈಂಗಿಕತೆ’ಯ ಪಾಠ ಕಲಿಸಲು ಕರ್ನಾಟಕದಲ್ಲಿ ಇತ್ತೀಚಿನ 4-5 ವರ್ಷಗಳಿಂದ ಜಿಲ್ಲಾ ಆರೋಗ್ಯ ಇಲಾಖೆಯಡಿ ಇವರನ್ನು ದಾಖಲಿಸಿಕೊಳ್ಳಲಾಗುತ್ತಿದೆ! ಸರ್ಕಾರದ ದಾಖಲಿಸುವ ಈ ಕ್ರಮವೇ ಪ್ರಶ್ನಾರ್ಹವಾದುದು! ಹಾಗಿದ್ದರೆ, ಹೆಣ್ಣಿನ ಲೈಂಗಿಕ ಜೀತವೇ ನಮ್ಮ ಸಭ್ಯ ಸಮಾಜ ಬಯಸುತ್ತಿರುವ ಮಹಿಳೆಯ ದೇಹ ಕೇಂದ್ರಿತ ಹಕ್ಕನ್ನಾಧರಿಸಿದ ಅಭಿವೃದ್ಧಿಯೇ? ಎಂಬ ಪ್ರಶ್ನೆ ನಮ್ಮನ್ನು ಕಾಡದಿರದು.

ಈ ಲೈಂಗಿಕವೃತ್ತಿನಿರತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಮಿತಿಮೀರಿದ ಪ್ರಮಾಣದಲ್ಲಿ ಏರುತ್ತಿದ್ದು, ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳಿಗೂ ಇವರ ಸಂಖ್ಯೆಯ ಹೆಚ್ಚಳಕ್ಕೂ ಖಂಡಿತಾ ನೇರವಾದ ಸಮೀಕರಣವಿದೆಯೆಂಬುದು ಗುಟ್ಟೇನಲ್ಲ! ಬಡ ಕುಟುಂಬಗಳ ವಲಸೆಯು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದ್ದು ಆ ಸಂದರ್ಭದಲ್ಲೇ ಅನೇಕ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ, ಕದ್ದೊಯ್ಯುವಿಕೆಗೆ ತುತ್ತಾಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಪೊಲೀಸರಲ್ಲಿ ದಾಖಲಿಸುವದಕ್ಕಾಗಲಿ, ಕಾನೂನುರೀತ್ಯ ಹೋರಾಟ ಮಾಡಲಾಗಲಿ ಇವರಿಗೆ ವ್ಯವಧಾನವೂ ಇಲ್ಲ, ತಿಳಿವಳಿಕೆಯೂ ಇಲ್ಲ, ಜೊತೆಗೆ ಆರ್ಥಿಕ ಸಬಲತೆಯೂ ಇಲ್ಲ. ಇವರು ಕಾನೂನುಬದ್ಧವಲ್ಲದ ಮೈ ಮಾರಿಕೊಳ್ಳುವ ಇಂತಹ ವೃತ್ತಿಯಲ್ಲಿ ತೊಡಗಿಕೊಳ್ಳುವ ಮೂಲಕ ಸಂಘಟಿತರಾಗಲೂ ಸಾಧ್ಯವಾಗದೇ, ಅದರಲ್ಲೂ ವಯಸ್ಸಾಗುತ್ತಾ ಸಾಗಿದಂತೆ ಈ ವೃತ್ತಿಯಲ್ಲಿ ಮುಂದುವರೆಯಲಾಗದಿದ್ದಾಗ ಅವರು ಕಸಕ್ಕಿಂತಾ ಕಡೆಯಾಗಿಬಿಡುತ್ತಾರೆ. Prostitutionಹಾಗೆಂದು ಇದನ್ನು ವೃತ್ತಿಯಾಗಿ ಪರಿಗಣಿಸಬೇಕೆಂಬುದು ಈ ಮಾತುಗಳ ಆಶಯವಲ್ಲ. ಅದರದು ಬೇರೆಯದೇ ಚರ್ಚೆ. ಎಲ್ಲಿಯವರೆಗೆ ಹೆಣ್ಣಿಗೆ ತನ್ನ ದೇಹ, ಮನಸ್ಸು, ಹಾಗೂ ಬುದ್ಧಿ ಅತ್ಯಂತ ವಿಶಿಷ್ಟವಾದುದು ಮತ್ತು ಅತ್ಯಮೂಲ್ಯವಾದುದು ಎಂಬ ನಂಬಿಕೆ ಬರುವುದಿಲ್ಲವೋ, ತನ್ನ ವ್ಯಕ್ತಿತ್ವದ ಘನತೆಗಾಗಿ ಯಾವುದೇ ಕೀಳು ಕೆಲಸಕ್ಕೆ ಇಳಿಯುವುದಿಲ್ಲ ಎಂಬ ದೃಢತೆ ಬರುವುದಿಲ್ಲವೋ ಅಲ್ಲಿಯವರೆಗೆ ಮಹಿಳೆ ಮತ್ತೆ ಮತ್ತೆ ಶೋಷಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ ಎಂಬುದು ನಿರ್ವಿವಾದ.

ಲೈಂಗಿಕ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ದುಡಿಯುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೆಲವು ಎನ್‌ಜಿಒಗಳು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸುತ್ತಿವೆ. ‘ನನ್ನ ದೇಹ ನನ್ನ ಹಕ್ಕು’ ಎಂಬ ಕಲ್ಪನೆಯನ್ನು ಬಿತ್ತುತ್ತಿವೆ. ಈಗಾಗಲೇ ಹೆಣ್ಣುಮಕ್ಕಳ ಅಕ್ರಮ ಮಾರಾಟದ ದಂಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು, ವ್ಯಾಪಕವಾಗಿರುವ ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ಎತ್ತಿ ತೋರುತ್ತಿವೆ. ಅದರಲ್ಲೂ ತನ್ನ ದೇಹವನ್ನು ಗೌರವಿಸಿಕೊಳ್ಳುವ ಯಾವ ಹೆಣ್ಣು, ಅದು ಮಾರಾಟದ ಸರಕಾಗಬೇಕು ಎಂದು ಬಯಸುತ್ತಾಳೆ? ಬಯಸುವುದೇ ಆದರೆ ಅದಕ್ಕೆ ಕಾರಣ ಅವಳನ್ನು ಹಾಗೆ ರೂಪಿಸಿದ ವ್ಯವಸ್ಥೆಯದೇ ಹೊರತು ಹೆಣ್ಣಿನದಲ್ಲ ಅಲ್ಲವೇ? ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಸಾಧ್ಯತೆಗಳ ಕುರಿತು ಉನ್ನತ ಆರೋಗ್ಯ ಅಧಿಕಾರಿಯೊಡನೆ ಚರ್ಚಿಸುತ್ತಿದ್ದಾಗ, “ಎಲ್ಲಿಯವರೆಗೆ ‘ಡಿಮ್ಯಾಂಡ್’ ಇರುತ್ತದೋ ಅಲ್ಲಿಯವರೆಗೆ ಸಪ್ಲೈ ಇರಲೇಬೇಕು” ಎನ್ನುತ್ತಾ ಪುನರ್ವಸತಿ ಎಂಬ ಪರಿಕಲ್ಪನೆಯನ್ನೇ ಅಲ್ಲಗಳೆದುಬಿಟ್ಟರು! ಇದು ನಮ್ಮ ವ್ಯವಸ್ಥೆಯ ರಕ್ಷಣೆಯ ನೀತಿಗೊಂದು ಉದಾಹರಣೆ! ಹಾಗಿದ್ದರೆ ಮಹಿಳಾ ಹಕ್ಕುಗಳ ಗತಿಯೇನು?

ಹೆಣ್ಣು ಮಕ್ಕಳ ಕಣ್ಮರೆ ಕುರಿತ ನಮ್ಮದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೆಣ್ಣುಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಅವರನ್ನು “ಹದ್ದುಬಸ್ತಿನಲ್ಲಿಡುವುದು” ಮಾತ್ರ ಅವರ ಮೇಲಿನ ಎಲ್ಲ ರೀತಿಯ ದೌರ್ಜನ್ಯ ತಡೆಗೆ ಪರಿಹಾರ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟರು! ‘ಗಂಡ ಹೆಂಡತಿಗೆ ಎರಡೇಟು ಕೊಡುವುದು ವೈವಾಹಿಕ ಬದುಕಿನಲ್ಲಿ ಸಾಮಾನ್ಯ, ಅದು ದೌರ್ಜನ್ಯವಲ್ಲ’ ಎಂದು ನಮ್ಮ ಕಾರವಾರದ ತ್ವರಿತ ನ್ಯಾಯಾಲಯವೊಂದು ಮೊನ್ನೆಯಷ್ಟೇ ಆದೇಶದಲ್ಲಿ ಉಲ್ಲೇಖಿಸಿದೆ! ‘ಭೂಗತ ಜಗತ್ತಿನ ಮುಖಂಡರೂ ಮಹಿಳೆಯರನ್ನು ಗೌರವದಿಂದ ಕಾಣಲು ಬಯಸುತ್ತಾರೆ. ಗೌರವಯುತ ಮಹಿಳೆ ಮೇಲೆ ಅತ್ಯಾಚಾರ ನಡೆಯುವುದಿಲ್ಲ.’ ಇದು ದೆಹಲಿ ಸಾಮೂಹಿಕ ಅತ್ಯಾಚಾರದ ಪಾತಕಿಗಳ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಮನೋಹರಲಾಲ್ ಶರ್ಮಾ ಅವರ ಹೇಳಿಕೆ. ಇಂತಹ ಅಸೂಕ್ಷ್ಮ ಹೇಳಿಕೆಗಳು, prostitution_time_coverಯಾರ್‍ಯಾರಿಂದಲೋ! ಅದಿನ್ನೆಷ್ಟೋ! ಖಾಪ್ ಪಂಚಾಯಿತಿ, ಮತೀಯವಾದಿ ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರ ಹೇಳಿಕೆಗಳಿಗೂ, ಇವುಗಳಿಗೂ ಹೆಚ್ಚು ವ್ಯತ್ಯಾಸವೇನಾದರೂ ಇದೆಯೇ? ಅವರಂತೂ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧರಾಗಿಲ್ಲದವರು, ಹೆಣ್ಣಿನ ಹಕ್ಕುಗಳ ಬಗ್ಗೆ ತಿಳಿವಳಿಕೆ ಇಲ್ಲದವರು, ವಸ್ತುಸ್ಥಿತಿಯನ್ನು ವೈಚಾರಿಕವಾಗಿ ವಿವೇಚಿಸಲರಿಯದ ಮೂರ್ಖರು ಎಂದು ನಿರ್ಲಕ್ಷಿಸಿ ಪಕ್ಕಕ್ಕಿಟ್ಟುಬಿಡಬಹುದು. ಆದರೆ……..

ಇಂದು ಕಾನೂನು, ಪೊಲೀಸ್, ಆರೋಗ್ಯ……ಹೀಗೆ ರಕ್ಷಣೆ ನೀಡಬೇಕಾದ, ಹೆಣ್ಣಿನ ಹಕ್ಕನ್ನು ಗೌರವಿಸಬೇಕಾದ ಎಲ್ಲ ವ್ಯವಸ್ಥೆಗಳೂ ಯಥಾಸ್ಥಿತಿಯನ್ನು ನಾಜೂಕಾಗಿ ಕಾಯ್ದುಕೊಳ್ಳುತ್ತಾ, ಒಂದೆಡೆ ಮಹಿಳೆಯ ಹಕ್ಕುಗಳನ್ನು ಗಾಳಿಗೆ ತೂರಿ ಹೆಣ್ಣನ್ನು ಸರಕೆಂಬಂತೆ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತಾ, ಇನ್ನೊಂದೆಡೆ ಅವಳಿಗೆ ನೈತಿಕತೆಯ ಬೋಧೆ ನೀಡುತ್ತಾ, ಮತ್ತೊಂದೆಡೆ ಅವಳನ್ನು ಉದ್ಧರಿಸುವ, ರಕ್ಷಿಸುವ ನಾಟಕವಾಡುತ್ತಿರುವಾಗ, ಈ ವ್ಯವಸ್ಥೆಯ ಕಣ್ಣು ತೆರೆಸುವುದು ಹೇಗೆ? ‘ಮಹಿಳಾ ಸ್ನೇಹಿ’ ಹಾಗೂ ‘ಲಿಂಗ ಸೂಕ್ಷ್ಮತೆ’ಯ ಎಚ್ಚರವನ್ನು ಸಮಾಜ ಕಲಿತುಕೊಳ್ಳುವ ಮೂಲಕ ಮಾತ್ರ ಮಹಿಳೆಯ ಹಕ್ಕನ್ನಾಧರಿಸಿದ, ಮಹಿಳಾ ಸಮಾನತೆಯ ಕನಸಿನೆಡೆಗೆ ಮೊದಲ ಹೆಜ್ಜೆಯನ್ನು ಇಡಲು ಸಾಧ್ಯ ಎಂದು ನಂಬಿರುವ ಎಚ್ಚೆತ್ತ ಹೆಣ್ಣುಮಕ್ಕಳಿಂದು, ಮೊದಲಿಗೇ ಸಂವಿಧಾನಬದ್ಧವಾದ ಆಶಯಗಳಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ನಮ್ಮ ನ್ಯಾಯಾಂಗಕ್ಕೆ, ಮಾಧ್ಯಮಕ್ಕೆ, ಸರ್ಕಾರಿ ಆಡಳಿತ ಯಂತ್ರಕ್ಕೆ ಈ ಪಾಠವನ್ನು ಹೇಳಿಕೊಡಬೇಕಾಗಿ ಬಂದಿರುವುದನ್ನು ಯಾವ ಕರ್ಮವೆನ್ನೋಣ? ನಾವು ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಪಡೆದಿರುವ ಪ್ರಜಾಪ್ರಭುತ್ವವಾದಿ ದೇಶದಲ್ಲಿರುವ ಪ್ರಜೆಗಳೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತಿದೆ! ಇಂತಹುದ್ದೊಂದು ವ್ಯವಸ್ಥೆಯ ಬಗ್ಗೆ ಹೆಣ್ಣುಮಕ್ಕಳು ಸಂಪೂರ್ಣವಾಗಿ ‘ನಂಬಿಕೆ’ ಕಳೆದುಕೊಳ್ಳುವ ಮೊದಲು ಸಮಾಜ ಎಚ್ಚೆತ್ತುಕೊಳ್ಳುವುದೇ? ಎಂದು ಕಾದು ನೋಡಬೇಕಿದೆ.

ಕಂದಮ್ಮ ಸಮಾಧಾನದ ಉಸಿರುಬಿಟ್ಟಿದ್ದಾಳೆ

– ರೂಪ ಹಾಸನ

ತಂದೆಯೆಂಬುವವನ ಭ್ರೂಣ ಒಡಲಲ್ಲಿ ಹೊತ್ತವಳ ಕಥೆ” ಎಂಬ ನನ್ನ ಲೇಖನ ವರ್ತಮಾನದಲ್ಲಿ ನೋಡಿ ಹಲವರು ಇಲ್ಲಿ ಮಾತ್ರವಲ್ಲದೇ ಮೈಲ್ ಮತ್ತು ದೂರವಾಣಿಯ ಮೂಲಕವೂ ಸ್ಪಂದಿಸಿದ್ದಾರೆ. ನಿಮ್ಮೆಲ್ಲರ ಕಾಳಜಿಗೂ ಧನ್ಯವಾದಗಳ ಜೊತೆಗೆ ಮುಂದಿನ ಬೆಳವಣಿಗೆಯನ್ನು ಹೇಳುವುದು ನನ್ನ ಕರ್ತವ್ಯವಾಗಿದೆ.

ವಿಷಯದ ತೀವ್ರತೆಯನ್ನು ಗಮನಿಸಿ ದಿ “ಹಿಂದು” ಪತ್ರಿಕೆಯ ಹಾಸನದ ವರದಿಗಾರರಾದ ಸತೀಶ್ ಹಾಗೂ “ಪ್ರಜಾವಾಣಿ” ವರದಿಗಾರರಾದ ಉದಯ್ ಅವರು ತಮ್ಮ ಪತ್ರಿಕೆಗಳಲ್ಲಿ child-abuseವರ್ತಮಾನದಲ್ಲಿ ನನ್ನ ಲೇಖನ ಪ್ರಕಟವಾಗುವ ಎರಡು ದಿನ ಮೊದಲೇ, ಈ ವಿಷಯವನ್ನು ರಾಜ್ಯ ವಾರ್ತೆಯಾಗಿ ಪ್ರಕಟಿಸಿದ್ದರು. ಅದನ್ನು ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಆದ ಪ್ರೊ.ರವಿವರ್ಮ ಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಉಮಾಶ್ರಿಯವರ ಗಮನಕ್ಕೆ ತಂದಿದ್ದೆ. ರವಿವರ್ಮ ಕುಮಾರ್ ಅವರು ಇದಕ್ಕಿರುವ ಕಾನೂನು ಪರಿಹಾರವನ್ನು ತಿಳಿಸಿದರು. ಸಚಿವರು ತಕ್ಷಣವೇ ಸ್ಪಂದಿಸಿ ಈ ಹೆಣ್ಣು ಮಗುವಿನ ಗರ್ಭಪಾತ ಮಾಡಿಸಲು ಬೇಕಿರುವ ಅಗತ್ಯ ಕ್ರಮಗಳನ್ನು ಹಾಸನ ಜಿಲ್ಲಾಧಿಕಾರಿ, ಪೊಲೀಸ್ ಸೂಪರಿಂಟೆಂಡ್ ಮುಂತಾದವರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿದರು. ಹೀಗಾಗಿ ನೆನ್ನೆ ಆ ಹುಡುಗಿಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನೆಲ್ಲಾ ಮಾಡಲಾಗಿದೆ. ಇಂದು ಅವಳಿಗೆ ಇಷ್ಟವಿಲ್ಲದ ಈ ಗರ್ಭವನ್ನು ತೆಗೆಯಲಾಗುತ್ತದೆ. ಕೊನೆಗೂ ಸಮಯ ಮೀರುವ ಮೊದಲೇ ಎಲ್ಲ ಇಲಾಖೆಗಳ ಅಧಿಕಾರಿಗಳ ಅಂತಃಕರಣದ ಕಣ್ಣು ತೆರೆದಿರುವುದರಿಂದ ಆ ಕಂದಮ್ಮ ಈಗಷ್ಟೇ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾಳೆ.

ಇಂಥಹ ವಿಶೇಷ ಪ್ರಕರಣಗಳಲ್ಲಿ ಸರಿಯಾದ ಕಾನೂನು ಮಾರ್ಗಸೂಚಿ ಇಲ್ಲದಿರುವುದರಿಂದ ಅದಕ್ಕೂ ತಕ್ಷಣವೇ ಸಚಿವರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅದರ ಕೆಲವು ಪತ್ರಿಕಾ ಹೇಳಿಕೆಗಳ ಕಟಿಂಗ್ ಜೊತೆಗಿರಿಸಿದ್ದೇನೆ. ಇಲ್ಲಿ ಮಾತ್ರವಲ್ಲದೇ ಹಾಸನದ ಜನತಾ ಮಾಧ್ಯಮ ದಿನಪತ್ರಿಕೆಯಲ್ಲೂ ನನ್ನ ಲೇಖನ ಪ್ರಕಟವಾಗಿತ್ತು. ಹಾಸನದ ಹಾಗೂ ರಾಜ್ಯಾದ್ಯಂತದ ನನ್ನ ಹಲವಾರು ಗೆಳೆಯ ಗೆಳತಿಯರು ಮಾನವೀಯ ಸ್ಪಂದನೆಯ ಜೊತೆಗೆ, ನೈತಿಕ ಬೆಂಬಲವನ್ನು ನೀಡಿದ್ದಾರೆ. ಕೆಲವು ಮಿತ್ರರು ಕಾನೂನು ಸಲಹೆಗಾಗಿ ನುರಿತ ವಕೀಲರ ದೂರವಾಣಿ ಸಂಖ್ಯೆಯನ್ನೂ ನೀಡಿದ್ದಾರೆ. ಅವರೆಲ್ಲರ ಒತ್ತಾಸೆ ಒಳಿತಿನ ಬಗೆಗಿನ ನನ್ನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಲ್ಲರಿಗೂ ಮತ್ತೊಮ್ಮೆ ವಂದನೆಗಳು.

 

ವಿಜಯ ಕರ್ನಾಟಕ :

Baalaki athyaachaara- neravu-vijaykarnataka

ವಿಜಯವಾಣಿ :

athyacharakkolagada balakige neravu-vijayavani

ತಂದೆಯೆಂಬುವವನ ಭ್ರೂಣ ಒಡಲಲ್ಲಿ ಹೊತ್ತವಳ ಕಥೆ


– ರೂಪ ಹಾಸನ


 

ಅವಳು ಕುಗ್ರಾಮವೊಂದರ 15 ವರ್ಷಗಳ ಎಳೆಯ ಬಾಲೆ. 9ನೇ ತರಗತಿಯನ್ನು ಒಳ್ಳೆಯ ಅಂಕಗಳಿಂದ ಪಾಸು ಮಾಡಿದ್ದಾಳೆ. ಎಲ್ಲವೂ ಸರಿ ಇದ್ದಿದ್ದರೆ ಈ ವರ್ಷ 10ನೇ ತರಗತಿಗೆ ಹೋಗಬೇಕಿತ್ತು. ಆದರದು ಸಾಧ್ಯವಾಗಿಲ್ಲ. ಕಾರಣ ಅಪ್ಪನೆಂಬುವವನು ಕರುಣಿಸಿದ ಗರ್ಭವನ್ನು ಅನಿವಾರ್ಯವಾಗಿ ಹೊರಬೇಕಾಗಿ ಬಂದಿರುವ ದಾರುಣತೆ. ಕಂಠಪೂರ್ತಿ ಕುಡಿದು ಬಂದು, ಯಾರಿಗಾದರೂ ಹೇಳಿದರೆ ಕುಡುಗೋಲಿನಿಂದ ಕೊಚ್ಚುವುದಾಗಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದವನಿಂದ ಬಸಿರಾಗಬಹುದೆಂಬ ತಿಳಿವಳಿಕೆಯೂ ಇಲ್ಲದಷ್ಟು ಮುಗ್ಧೆ ಈ ಹುಡುಗಿ.

ಒಂದಿಷ್ಟು ದೈಹಿಕ ಬದಲಾವಣೆಗಳಾಗುವವರೆಗೂ ತಾಯಿಗೂ ಅನುಮಾನ ಬಂದಿಲ್ಲ. ಆ ನಂತರವಷ್ಟೇ ಎಚ್ಚೆತ್ತು ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಮಗಳು 4 ತಿಂಗಳ ಬಸಿರೆಂಬುದುchild-rape ಗೊತ್ತಾಗಿ ನೇರ ಪೊಲೀಸ್ ಠಾಣೆಗೆ ಕರೆದೊಯ್ದು ಕೇಸು ದಾಖಲಿಸಿದ್ದಾಳೆ. ಅಲ್ಲಿಯವರೆಗೂ ಅಪ್ಪನ ಕುಕೃತ್ಯವನ್ನು ಎಲ್ಲರಿಂದ ಮುಚ್ಚಿಟ್ಟಿದ್ದ ಬಾಲೆ ಪೊಲೀಸರ ಎದುರು ಅನಿವಾರ್ಯವಾಗಿ ಸತ್ಯ ಬಿಚ್ಚಿಟ್ಟಿದ್ದಾಳೆ. ಅಪ್ಪನೀಗ ಪೊಲೀಸರ ಅತಿಥಿ. ಅವನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾನೆ. ಆದರೆ ತನ್ನದೇನೂ ತಪ್ಪಿಲ್ಲದೆಯೂ ತಂದೆಯೆಂಬ ಕಾಮುಕ ಕರುಣಿಸಿದ ಬಸಿರು ಹೊತ್ತು ಸಮಾಜದೆದುರು ತಲೆ ತಗ್ಗಿಸಿ ನಿಂತಿರುವ ಕಂದಮ್ಮನ ಸಂಕಟ ಕೇಳುವವರಾರು?

18 ವರ್ಷದೊಳಗೆ ಇಂತಹ ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳಿಗಾಗಿಯೇ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲನ್ಯಾಯಮಂಡಳಿ, ಮಕ್ಕಳ ಕಲ್ಯಾಣ ಸಮಿತಿಗಳಿವೆ. ಆದರೆ ಅವರದೇನಿದ್ದರೂ ನ್ಯಾಯದಾನವಾಗುವವರೆಗೆ ಮಕ್ಕಳಿಗೆ ರಕ್ಷಣೆ ಒದಗಿಸುವುದು, ಪೋಷಣೆ ಮಾಡುವುದಷ್ಟೇ ಕೆಲಸ. ಇನ್ನೂ ಹೆಚ್ಚಿನ ಕಾನೂನುರೀತ್ಯ ಯಾವುದೇ ಅಧಿಕಾರವಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರು ಬಾಲಕಿಯನ್ನು ಹೆರಿಗೆಯಾಗುವವರೆಗೂ ಜೋಪಾನ ಮಾಡುವ ಜವಾಬ್ದಾರಿಗೆ ಬದ್ಧರಾಗುತ್ತಾರೆ. ಆನಂತರ ಮಗುವನ್ನು ಪಡೆದು, ಬೇರೆಯವರಿಗೆ ದತ್ತು ಕೊಡುವ ಸೀಮಿತ ಪರಿಧಿಯೊಳಗೆ ಮಾತ್ರ ಅವರ ಯೋಚನೆ ಮತ್ತು ಕೆಲಸಗಳಿರುತ್ತದೆ.

ಈ ಹುಡುಗಿಯೇ ಒಂದು ಮಗು. ಆಗಲೇ ಇನ್ನೊಂದು ಮಗುವನ್ನು ಹೊರುವ, ಹೆರುವ ಸಾಮರ್ಥ್ಯವಿದೆಯೇ ಎಂಬುದು ಬೇರೆಯದೇ ಪ್ರಶ್ನೆ. ಆದರೆ ಇಡೀ ವ್ಯವಸ್ಥೆ ಗಮನಿಸದಿರುವ ಒಂದು ಸೂಕ್ಷ್ಮ ಸಂಗತಿಯೆಂದರೆ, ಆ ಮಗುವನ್ನು ಹೊತ್ತು, ಹೆತ್ತ ನಂತರ ಆ ಹುಡುಗಿಯನ್ನು ಈ ಸಮಾಜ ಹೇಗೆ ನೋಡುತ್ತದೆ? ಅಥವಾ ಇವಳಿಗೆ ಹುಟ್ಟುವ ಮಗುವನ್ನು ಏನೆಂದು ಗೇಲಿ ಮಾಡುತ್ತದೆ? ತಂದೆಯ ಪಾಪವನ್ನು ಹೆತ್ತ ಈ ಬಾಲೆಯ ಮನಸ್ಸಿನ ಮೇಲಾಗುವ ಪರಿಣಾಮವೇನು? ತಂದೆಯಿಂದ ಹುಟ್ಟಿದ ಮಗು ಎಲ್ಲ ರೀತಿಯಿಂದಲೂ ಆರೋಗ್ಯವಾಗಿರುವುದು ಸಾಧ್ಯವೇ? ಮುಂದಿನ ಅವಳ ಓದು ಮತ್ತು ಭವಿಷ್ಯದ ಗತಿ ಏನು? ಒಟ್ಟಾರೆ ನಮ್ಮ ಸಂಪ್ರದಾಯಸ್ಥ ಹಳ್ಳಿಗಳಲ್ಲಿ ಇಂಥಹದೊಂದು ಸಂಕಟವನ್ನು ಎದುರಿಸಿ ಮಗುವನ್ನು ಹೆತ್ತ ಚಿಕ್ಕ ಹುಡುಗಿಯೊಬ್ಬಳು ಬದುಕುವ ಬಗೆ ಹೇಗೆ? ಇಂತಹ ಸೂಕ್ಷ್ಮತೆಗಳ ಜೊತೆಗೆ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾಗಬೇಕಾಗಿರುವ ಮಗುವನ್ನು ಕೇಂದ್ರದಲ್ಲಿರಿಸಿಕೊಂಡು ಯೋಚಿಸುವ ಸಂವೇದನಾಶೀಲತೆ ನಮ್ಮ ವ್ಯವಸ್ಥೆಗೆ, ಇಂತಹ ಮಗುವಿನೊಂದಿಗೆ ವ್ಯವಹರಿಸಬೇಕಾದ ಇಲಾಖೆಗಳಿಗೆ ಬಂದಿಲ್ಲದಿರುವುದು ನಮ್ಮ ಮಕ್ಕಳ ಪಾಲಿನ ಬಹು ದೊಡ್ಡ ದುರಂತವೆನ್ನದೇ ಬೇರೇನೆನ್ನೋಣ?

ಹೀಗೆಂದೇ ಪಾಪದ ಬಸಿರನ್ನು ತೆಗೆಯಿರೆಂದು ಹುಡುಗಿ ಮತ್ತು ಹುಡುಗಿಯ ತಾಯಿ ಸಂಕಟದಿಂದ ಎಲ್ಲರೆದುರು ಕೈ ಜೋಡಿಸಿ ಬೇಡಿಕೊಳ್ಳುತ್ತಿದ್ದರೂ ‘ಗರ್ಭಪಾತ ಮಾಡಿಸಿಕೊಂಡರೆ ಸಾಕ್ಷ್ಯನಾಶವಾಗುತ್ತದೆ’, ‘ಯಾವುದೇ ರೀತಿಯ ಗರ್ಭಪಾತ ಕಾನೂನುಬಾಹಿರ’, ‘3 ತಿಂಗಳ ನಂತರ ಯಾವುದೇ ರೀತಿಯಲ್ಲೂ ಗರ್ಭಪಾತ ಮಾಡುವಂತಿಲ್ಲ’ ಎಂಬ ಮಾತುಗಳನ್ನು ಕಾನೂನುಬದ್ಧವಾಗಿ, ಇಂತಹ ವಿಶೇಷ ಪ್ರಕರಣಗಳಲ್ಲಿ ಯಾವ ರೀತಿಯ ಪರ್ಯಾಯಗಳಿವೆ ಎಂದರಿಯದ, ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳು ಮತ್ತು ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿಗಳು ಈ ತಾಯಿ ಮಗಳಿಗೆ ಹೇಳಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಆದರೆ ಸುಪ್ರೀಮ್ ಕೋರ್ಟಿನ ಮಾರ್ಗದರ್ಶಿ ಸೂತ್ರದಂತೆ, ಅತ್ಯಾಚಾರದಂತಹ ವಿಶೇಷ ಪ್ರಕರಣಗಳಲ್ಲಿ ಕಾನೂನುಬದ್ಧ ಗರ್ಭಪಾತವನ್ನು ಮಾಡಲು 20 ವಾರಗಳವರೆಗೆ ಸಮಯಾವಕಾಶವಿರುತ್ತದೆ. ಆರೋಗ್ಯ ಸಂಶೋಧನಾ ಇಲಾಖೆಯ ಮಾರ್ಗದರ್ಶಿ ಸೂತ್ರವೂ ಇದನ್ನೇ ಒತ್ತಿ ಹೇಳುತ್ತದೆ. ಇದಕ್ಕೆ ಇಬ್ಬರು ತಜ್ಞ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರು, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ಕೂಲಂಕಷವಾಗಿ ಪರೀಕ್ಷಿಸಿ ಒಪ್ಪಿಗೆ ನೀಡಬೇಕು. ಮತ್ತು ಕೇಸಿನ ಸಾಕ್ಷ್ಯಕ್ಕೆ ಬೇಕಾಗುವ ವೈದ್ಯಕೀಯ ಮಾದರಿಗಳನ್ನು ಸಂಗ್ರಹಿಸಿಟ್ಟುಕೊಂಡು ವೈದ್ಯರು ಗರ್ಭಪಾತವನ್ನು ಮಾಡಬಹುದೆಂದು ಮಾರ್ಗದರ್ಶಿ ಸೂತ್ರ ಹೇಳುತ್ತದೆ.

ಯಾವುದೇ ರೀತಿಯ ಈ ಬಗೆಯ ವಿಶೇಷ ಕಾನೂನುಬದ್ಧ ಗರ್ಭಪಾತಕ್ಕೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಒಪ್ಪಿಗೆ, ಅವಳು ಅಪ್ರಾಪ್ತೆಯಾಗಿದ್ದರೆ ಪೋಷಕರ ಒಪ್ಪಿಗೆ ಬೇಕಾಗುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಗರ್ಭಪಾತಕ್ಕಾಗಿ ಕಾಯುತ್ತಿದ್ದಾಳೆ. ತಾಯಿಗೂ ಬಸಿರು ಕಳೆದರೆ ಸಾಕು. ಮುಂದೆ ಹೇಗೋ ಬದುಕುತ್ತೇವೆ ಎಂಬ ಮನೋಭಾವವಿದೆ. ಆದರೆ ವೈದ್ಯರು ಪೊಲೀಸ್ ಇಲಾಖೆಯ ಅನುಮತಿ ಪಡೆದು ಬಂದರೆ ಮಾತ್ರ ಗರ್ಭಪಾತ ಮಾಡುವುದಾಗಿ ಹೇಳುತ್ತಿದ್ದಾರೆ. ಏಕೆಂದರೆ ಈ ಹಿಂದೆ ಇಂತಹ ಘಟನೆ ನಡೆದ ಸಂದರ್ಭದಲ್ಲಿ ವೈದ್ಯರು ಗರ್ಭಪಾತ ಮಾಡಿದಾಗ ಸಾಕ್ಷ್ಯ ನಾಶ ಮಾಡಿದ್ದೀರಿ ಎಂದು ವೈದ್ಯರಿಗೇ ನೊಟೀಸ್ ನೀಡಿದ್ದರಂತೆ. ಅದಕ್ಕೆ ಈ ಬಾರಿ ಅವರ ಅನುಮತಿ ಇದ್ದರೆ ಮಾತ್ರ ನಾವು ಗರ್ಭಪಾತ ಮಾಡುತ್ತೇವೆನ್ನುತ್ತಾರೆ ವೈದ್ಯರು.

ಆದರೆ ಪೊಲೀಸರು ಮಾತ್ರ ‘ಗರ್ಭಪಾತ ಕಾನೂನು ಪ್ರಕಾರ ಅಪರಾಧ. ಹೀಗಾಗಿ ನಾವು ಅನುಮತಿ ನೀಡಲಾಗುವುದಿಲ್ಲ. ಹುಡುಗಿಯ ಗರ್ಭಪಾತಕ್ಕೂ ನಮಗೂ ಸಂಬಂಧವೂ ಇಲ್ಲ. ಹುಡುಗಿrape-illustration ಮತ್ತು ಅವಳ ಪೋಷಕರ ಅನುಮತಿ ಇದ್ದರೆ ಗರ್ಭಪಾತ ಮಾಡಿಸಬಹುದು. ನಮ್ಮ ಅಭ್ಯಂತರವೇನಿಲ್ಲ’ ಎನ್ನುತ್ತಾರೆ. ಹಾಗಿದ್ದರೆ ಬೇಕಾದಂತಹ ಸಾಕ್ಷ್ಯಗಳ ವೈದ್ಯಕೀಯ ಮಾದರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮನವಿಯನ್ನು ಯಾರು ನೀಡಬೇಕು? ಇದಕ್ಕೆ ಆರೋಗ್ಯ ಇಲಾಖೆಗಾಗಲೀ, ಪೊಲೀಸ್ ಇಲಾಖೆಗಾಗಲಿ ಯಾವುದೇ ಮಾರ್ಗದರ್ಶಿ ಸೂತ್ರವಿಲ್ಲವೇ? ಈ ಹಿಂದೆ ಎಲ್ಲಿಯೂ ಇಂತಹ ಘಟನೆಗಳು ನಡೆದೇ ಇಲ್ಲವೇ? ಆಗಲೂ ಹೆಣ್ಣುಮಗುವಿನ ಬಸಿರನ್ನು ಸಾಕ್ಷ್ಯಕ್ಕಾಗಿ ಹಾಗೆಯೇ ಉಳಿಸಿಕೊಂಡಿದ್ದರೆ? ಎಂಬ ಪ್ರಶ್ನೆಗಳು ಹಾಗೇ ಉಳಿದಿದೆ. ಕನಿಷ್ಠಪಕ್ಷ ಅಮಾಯಕ ಹುಡುಗಿಯ ಭವಿಷ್ಯದ ಹಿತದೃಷ್ಟಿಯಿಂದ ಸಾಕ್ಷ್ಯದ ಮಾದರಿಗಳನ್ನು ಸಂಗ್ರಹಿಸಿಟ್ಟುಕೊಂಡು ಬೇಕಾದಂತಹಾ ವೈದ್ಯಕೀಯ ಕ್ರಮವನ್ನು ಜರುಗಿಸಬಹುದು ಎಂದಷ್ಟಾದರೂ ಪೊಲೀಸ್ ಇಲಾಖೆ ಅನುಮತಿ ಪತ್ರ ನೀಡಬಹುದಲ್ಲವೇ? ಅಥವಾ ಆರೋಗ್ಯ ಇಲಾಖೆಯೇ ಸಾಕ್ಷ್ಯವನ್ನು ಸಂಗ್ರಹಿಸಿಟ್ಟುಕೊಂಡು ಗರ್ಭಪಾತ ಮಾಡಬಹುದಲ್ಲವೇ?

ಯಾರಿಗೂ, ಯಾವ ಇಲಾಖೆಗೂ ಈ ಅಸಹಾಯಕ ಹೆಣ್ಣುಮಗುವಿನ, ಅವಳ ಪಾಪದ ಗರ್ಭ ತೆಗೆಸುವ ಜವಾಬ್ದಾರಿಯನ್ನು ಹೊರಲು ಮನಸ್ಸಿಲ್ಲವೆಂದಾದರೆ ಆ ಹುಡುಗಿಯ ಗತಿಯೇನು? ನಾವೀಗ 21ನೆಯ ಶತಮಾನದಲ್ಲಿದ್ದೇವೆ. ವೈದ್ಯಕೀಯ ಮತ್ತು ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆ ಮಾಡಿದ್ದೇವೆ. ಸಾಕ್ಷ್ಯಗಳ ವೈದ್ಯಕೀಯ ಮಾದರಿ ಸಂಗ್ರಹಿಸಿಡಲು ಬೇಕಾದಂತಹ ವ್ಯವಸ್ಥೆ ಹಾಸನದಲ್ಲಿ ಇದೆ. ವೈದ್ಯಕೀಯ ಕಾಲೇಜು ಕೂಡ ಇದೆ. ಇಷ್ಟೆಲ್ಲಾ ಇದ್ದೂ ಕೇವಲ ಅಪ್ಪ ಮಾಡಿದ ಹೀನ ಕೆಲಸಕ್ಕೆ ಸಾಕ್ಷಿಯೊದಗಿಸಲು ಈ ಹೆಣ್ಣುಮಗುವಿನ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತೇವೆಂದರೆ ನಮ್ಮನ್ನು ಮನುಷ್ಯರೆಂದು ಹೇಗೆ ಕರೆದುಕೊಳ್ಳುವುದು?

ಆದರೆ ಇಷ್ಟೆಲ್ಲಾ ಗೋಜಲು, ಗೊಂದಲಗಳ ಮಧ್ಯೆ ಮತ್ತೆ ಒಂದು ವಾರ ಕಳೆದು ಹೋಗಿದೆ. ಆ ಹುಡುಗಿಯ ಗರ್ಭಕ್ಕೆ 5ತಿಂಗಳು ಕಳೆದು ಹೋದರೆ, ಗರ್ಭಪಾತ ಮಾಡಿಸುವುದು ಕಾನೂನು ರೀತಿಯೂ ಸಾಧ್ಯವಿಲ್ಲ ಮತ್ತು ಹುಡುಗಿಯ ಆರೋಗ್ಯದ ಹಿತದೃಷ್ಟಿಯಿಂದಲೂ ಸಾಧ್ಯವಿಲ್ಲ. ಹೀಗಾಗಿ ಈಗಿನ್ನೂ ಪ್ರೌಢಾವಸ್ಥೆಗೆ ಕಾಲಿಡುತ್ತಿರುವ, ವಿದ್ಯಾಭ್ಯಾಸದಲ್ಲಿ ಎಸ್ಸೆಸೆಲ್ಸಿಯಂತಹ ಮಹತ್ವದ ಘಟ್ಟವನ್ನು ತಲುಪುತ್ತಿರುವ, ಕಾನೂನಿನ ದೃಷ್ಟಿಯಿಂದ ಇನ್ನೂ ಮಗುವೆಂದೇ ಪರಿಗಣಿಸಲ್ಪಟ್ಟಿರುವ ಈ ಮಗುವಿಗೇ ತಂದೆಯೆನ್ನುವ ಕಾಮುಕ ಕರುಣಿಸಿರುವ ಇನ್ನೊಂದು ಮಗುವನ್ನು ಹೆರುವಂತಹ ಅಮಾನವೀಯ ಶಾಪ ಖಂಡಿತಾ ಬೇಡ. ನಮ್ಮ ಮಕ್ಕಳಿಗೇ ಹೀಗಾಗಿದ್ದರೆ ಏನು ಮಾಡುತ್ತಿದ್ದೆವು ಎಂದು ಸಂಬಂಧಪಟ್ಟವರೆಲ್ಲಾ ಆತ್ಮಾವಲೋಕನ ಮಾಡಿಕೊಂಡರೆ ಸಮಸ್ಯೆಗೆ ಪರಿಹಾರ ನಮ್ಮ ಅಂತಃಕರಣಕ್ಕೆ ತಾನಾಗಿಯೇ ಹೊಳೆಯುತ್ತದೆ.